Sunday 29 June 2014

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..





(ಚಿತ್ರ: ಪ್ಯಾಬ್ಲೋ ಪಿಕಾಸೋ)


ಓ ಕವಿತೆಯೇ,
ಕೊಡಗೆಂದರೆ ಕಿತ್ತಳೆ, ಕಾಫಿ
ಕರ್ನಾಟಕದ ಕಾಶ್ಮೀರ
ಕಾವೇರಿಯ ತವರು
ಕೊಡವರ ನಾಡು ದೇವರ ಕಾಡು
ಮಡಿಕೇರಿ ಮಂಜು ರಾಜಾ ಸೀಟು
ಕದನ ಕಲಿಗಳ ದಂಡು
ಎಂದೆಲ್ಲ ವರ್ಣಿಸಿದೆಯಲ್ಲವೇ?
ನಿಜ, ಆದರೆ
ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ ಕವಿತೆಯೇ
ಪರಾಂಬರಿಸು,
ಕೊಡಗಿನ ಬಯೋಡೇಟಾ ಬದಲಾಗಿದೆ..

ಕೊಡಗೆಂದರೆ
ಕಾಪಿಶೀಮಿಗೆ ಗುಳೆ ಬಂದ
ಬಯಲನಾಡಿನ ಕಂದು ತುಟಿಗಳು;
ಲೈನುಮನೆಯ ಜೀತಕ್ಕೆ ಹರಾಜಾದ
ಜೇನು ಕುರುಬರ ಕನಸುಗಳು;
ಬೈಲುಕುಪ್ಪೆ ಬೊನ್ಸಾಯ್‌ನಲ್ಲರಳಿದ
ಟಿಬೆಟ್ ಹೂಗಳ ಬೊಕೆ;
ಹುಲಿ ಹಾವಳಿ, ಆನೆ ಹಾವಳಿ,
ದಂತಕಳ್ಳರ ಹಾವಳಿ,
ಕನ್ನಡ, ಮಲೆಯಾಳಿ ಚಳಿ..

ಕೊಡವತಿಯೆಂದರೆ
ಹಿಮ್ಮುಖ ಸೀರೆ ನಿರಿಗೆ ಚಿಮ್ಮುವ ಸೊಬಗಿಯಷ್ಟೇ ಅಲ್ಲ
ಗಡಿಯಲಿರುವ ಮಡಿಕೇರಿ ಸಿಪಾಯಿಗಾಗಿ
‘ಸುಯ್ಯುತ್ತ ಮರುಗುತ್ತ ಬಸುರಂ ಹೊಸೆದು
ಕೊನೆವೆರಳ ಮುರಿದುಕೊಳುವ’
ಅಮ್ಮ, ಮಗಳು, ಹೆಂಡತಿ..
ಕಾಫಿಬೊಡ್ಡೆಗಳ ಗುಡ್ಡದಲ್ಲಿ
ತೊಡೆ ನಡುವೆ ರಕ್ತ ಹರಿಸಿದ ಪೋರಿ
ತಲಕಾವೇರಿಯಲಿ ಹುಟ್ಟಿ
ಭಾಗಮಂಡಲದಲ್ಲಿ ನೆರೆದು
ಹೊಗೆವ ಕಲ್ಲುಗಳ ನಡುವೆ ಮಡುವಾದ ಕನ್ನಿಕೆ  
ಗಗನದಿಂದ ಭರಚುಕ್ಕಿಯಾಗಿ ಧುಮುಕಿದರೂ
ಮತ್ತೆ ಕನ್ನಂಬಾಡಿಯಲ್ಲಿ
ಮತ್ತೆ ಮೆಟ್ಟೂರಿನಲ್ಲಿ
ಮತ್ತೆಮತ್ತೆ ಎಲ್ಲೆಲ್ಲೋ ಬಂದಿಯಾದ ಕಾವೇರಿ

ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ
ಎಚ್ಚರ, ಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.  
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ

ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ

ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್‌ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ

ಸುರನೋ ಅಸುರನೋ
ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.

ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು
ಜೀವಕಾರುಣ್ಯದ ಮೊಲೆಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..



(ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಿದ ಕವಿತೆ.)


 

Saturday 28 June 2014

ದೇವರ ಸ್ವಂತ ರಾಜ್ಯದೊಳಗೊಂದು ಸುತ್ತು..



ಮತ್ಸ್ಯಗಂಧಿಯರ ಪಾಡು 



ಕೇರಳ. ಆಹಾ! ಇದು ದೇವರ ರಾಜ್ಯವೇ ಇರಬೇಕು..

ಪ್ರತಿ ಸಾವಿರ ಗಂಡಿಗೆ ಸಾವಿರದ ಇಪ್ಪತ್ತು ಹೆಣ್ಣುಗಳಿರುವ ಅಪರೂಪದ ರಾಜ್ಯ. ಅರ್ಧ ಜನಸಂಖ್ಯೆಗಿಂತ ಹೆಚ್ಚು ಹೆಣ್ಣುಮಕ್ಕಳಿರುವುದರಿಂದ ಎಲ್ಲ ಕಡೆ ಎಲ್ಲ ವಯಸ್ಸಿನ ದುಡಿಯುವ ಮಹಿಳೆಯರು ಕಾಣುತ್ತಾರೆ. ಪೆಟ್ರೋಲ್ ಬಂಕ್‌ಗಳಲ್ಲಿ; ರಿಕ್ಷಾ-ಬಸ್-ದೋಣಿ ನಡೆಸುವವರಾಗಿ; ಸ್ಟೇಷನ್ ಮಾಸ್ತರಾಗಿ; ಮೀನು-ಹೂವು-ತರಕಾರಿ ಮಾರ್ಕೆಟ್ಟಿನ ಸಿಂಹಿಣಿಯರಾಗಿ; ಹೋಟೆಲ್-ಮಸಾಜ್ ಪಾರ್ಲರ್-ಅಂಗಡಿಗಳ ಮೆಲುಮಾತ ಲಲನೆಯರಾಗಿ; ಏರ್‌ಪೋರ್ಟ್-ರೈಲ್ವೆ ಸ್ಟೇಷನ್‌ಗಳ ಸ್ವಚ್ಛತಾ ಕೆಲಸಗಾರರಾಗಿ; ರಬ್ಬರ್, ಚಹಾ, ಏಲಕ್ಕಿ ತೋಟಗಳ ಕೂಲಿಗಳಾಗಿ - ಹೀಗೆ ಎಲ್ಲ ಕಡೆ ಮಹಿಳೆಯರ ದುಡಿಮೆ ಕಂಡುಬರುತ್ತದೆ. ಚಹಾ ಎಲೆ ಕೀಳುವ ಕೆಲಸದಲ್ಲಿ ಹೆಚ್ಚುಕಡಿಮೆ ಎಲ್ಲರೂ ಮಹಿಳೆಯರೇ.

ತೇಕ್ಕಡಿಯ ಆನೆ ಮಾವುತ ಹೇಳುತ್ತಿದ್ದ, ಆ ಕ್ಯಾಂಪಿನಲ್ಲಿರುವ ಎಲ್ಲ ಎಂದರೆ ಎಲ್ಲ ಆನೆಗಳೂ ಹೆಣ್ಣೇ ಅಂತೆ. ಗಂಡಾನೆಗೆ ಬೆದೆ ಬರುವುದರಿಂದ ಆರು ತಿಂಗಳು ಕೆಲಸ ಮಾಡಿದರೆ ಆರು ತಿಂಗಳು ವಿಶ್ರಾಂತಿ ಕೊಡಬೇಕಾಗುವುದೆಂದೂ, ಹೆಣ್ಣಾನೆಯಾದರೆ ಹೆಂಗಸರಂತೇ ಎಲ್ಲ ದುಡಿಮೆಗೂ ಎಲ್ಲ ಕಾಲಕ್ಕೂ ಒದಗುವುದೆಂದೂ; ಆನೆಯನ್ನೂ, ತಮ್ಮೂರ ಹೆಣ್ಣುಮಕ್ಕಳನ್ನೂ ಒಂದೇ ಉಸಿರಿನಲ್ಲಿ ಹೊಗಳಿದ. ನಿಜ, ದುಡಿಮೆ ಮಲಬಾರಿನ ಮಹಿಳೆಯರಿಗೆ ಹೊಸದಲ್ಲ. ಪ್ರತಿ ಮನೆಯ ಒಲೆಯನ್ನೂ ಬೆಚ್ಚಗಿಟ್ಟಿರುವ ಜೀವಗಳವು. ಇವತ್ತಿಗೂ ಮೀನು, ಹೂ, ತರಕಾರಿ ಮಾರುಕಟ್ಟೆಗಳಲ್ಲಿ ಹೆಣ್ಮಕ್ಕಳದೇ ರಾಜ್ಯಭಾರ. ಕೊಚ್ಚಿಯ ಜ್ಯೂ ಸಮುದಾಯದ ಮ್ಯೂಸಿಯಂನಲ್ಲಿ ಮೂರ್ನಾಲ್ಕು ಶತಮಾನ ಹಿಂದಿನ ಚಿತ್ರಗಳಿದ್ದವು. ಕೇರಳದ ಮಾರುಕಟ್ಟೆಗಳಲ್ಲಿ ನವಿಲು, ಮೀನು, ಅಕ್ಕಿರಾಶಿ, ಸಾಂಬಾರ ಪದಾರ್ಥವಿಟ್ಟುಕೊಂಡು ಕುಳಿತ ಮಹಿಳೆಯರ ಚಿತ್ರಣ ಅದರಲ್ಲಿದೆ. ಒಂದು ವಿಶೇಷ: ಚಿತ್ರಗಳಲ್ಲಿರುವವರು ತೆರೆದೆದೆಯ ಮಹಿಳೆಯರು. ಎದೆ ಮುಚ್ಚಿಕೊಳ್ಳದೇ ಬಿಡುಬೀಸಾಗಿ ಓಡಾಡುವ ಧೈರ್ಯವೇ ಅವರಿಗೆ ಎದೆಗಾರಿಕೆಯನ್ನೂ ಕೊಟ್ಟಿತೆ? ಕೊಚ್ಚಿ ಅರಮನೆಯ ಚಿತ್ರಗಳಲ್ಲಿ ರಾಜಮನೆತನದ ಹೆಣ್ಣುಮಕ್ಕಳೂ ಸೆರಗು ಹೊದೆಯದೆ ಸೀರೆಯುಟ್ಟಿದ್ದರು. ಈಗಲೂ ಒಂದು ಲುಂಗಿ ಮೇಲೊಂದು ಬ್ಲೌಸು ಧರಿಸಿದ ನಡುವಯಸ್ಸು ದಾಟಿದ ಮಹಿಳೆಯರು ಕಾಣಸಿಗುತ್ತಾರೆ.

ವಿದೇಶೀಯರಿಗೂ ಮಲಬಾರಿನ ಮಹಿಳೆಯರ ಮೇಲೆ ಆಕರ್ಷಣೆ. ಆದರೆ ಅದು ಅವರ ಶ್ರಮ ಸಾಮರ್ಥ್ಯದ ಕುರಿತಷ್ಟೇ ಅಲ್ಲ. ದಾಖಲೆಗಳ ಪ್ರಕಾರ ೧೪೯೮ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮೊದಲ ಸಮುದ್ರ ಮಾರ್ಗವನ್ನು ಕಂಡುಹಿಡಿದು ಮಲಬಾರಿಗೆ ಬಂದಾಗ ಅವನ ಜೊತೆ ಬಂದ ನಾವಿಕರನೇಕರು ವಾಪಸಾಗಲು ನಿರಾಕರಿಸಿದರು. ಸ್ಥಳೀಯ ರಾಜನ ಆಸ್ಥಾನದಲ್ಲಿ ನಿಯಮಿತ ಸಂಬಳ, ಗೌರವಾನ್ವಿತ ಕೆಲಸ, ಧಾರ್ಮಿಕ ಸ್ವಾತಂತ್ರಗಳಲ್ಲದೇ ಹಲವು ಆಮಿಷಗಳು ಅವರ ನಿರ್ಧಾರಕ್ಕೆ ಕಾರಣವಾಗಿದ್ದವು. ಇಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿತ್ತು. ‘ಇಟ್ಟುಕೊಳ್ಳುವುದು’ ಹಾಗೂ ಗುಲಾಮೀ ಪದ್ಧತಿ ನಿಷೇಧಗೊಂಡಿರಲಿಲ್ಲ. ಬೇಕಾದಷ್ಟು ಹೆಣ್ಣುಗಳನ್ನು ಅನುಭವಿಸುತ್ತ, ದಿನಗಟ್ಟಲೇ ಹಾಡುತ್ತ ಕುಣಿಯಲು, ಕುಡಿದು ಮತ್ತಿನಲ್ಲಿರಲು ಅವಕಾಶವಿರುವ ಭಾರತದ ತೀರಗಳು ತಪ್ಪು ಕಾರಣಗಳಿಗಾಗಿ ಮೊದಮೊದಲು ಅವರನ್ನು ಆಕರ್ಷಿಸಿರಬಹುದು. ಆದರೆ ಕ್ರಮೇಣ ಇಲ್ಲಿಯ ರೀತಿ ರಿವಾಜುಗಳನ್ನೇ ಕಲಿತು, ಇಲ್ಲಿನ ಹಿಂದೂ ಅಥವಾ ಮುಸ್ಲಿಮ್ ಹೆಣ್ಣುಗಳನ್ನೇ ಮದುವೆಯಾಗಿ, ಭಾರತೀಯರೇ ಆಗಿಹೋದವರ ಸಂಖ್ಯೆಯೂ ಕಡಿಮೆಯಲ್ಲ. ೧೫೧೦ರಲ್ಲಿ ಮಲಬಾರಿಗೆ ಬಂದಿಳಿದ ಆಲ್ಬುಕರ್ಕ್ ತನ್ನ ಸೇನೆಯನ್ನೆದುರಿಸಿ ಹತರಾದ ಮುಸಲ್ಮಾನ ಸೇನೆಯ ಯೋಧಪತ್ನಿಯರನ್ನು ಮದುವೆಯಾಗುವಂತೆ ತನ್ನ ಸೈನಿಕರನ್ನು ಹುರಿದುಂಬಿಸಿದ್ದ. ‘ಲಕ್ಷಣವಾಗಿದ್ದ ಬಿಳಿಯ ದೇವತೆ’ಯರನ್ನು ವಧುದಕ್ಷಿಣೆ ನೀಡಿ, ಕ್ರ್ರಿಶ್ಚಿಯನ್ನರಾಗಿ ಮತಾಂತರಗೊಳಿಸಿ, ಮದುವೆ ಮಾಡಿಕೊಳ್ಳಲಾಗಿತ್ತು. ಆದರೆ ಬಲವಂತದ ಈ ಕ್ರಿಯೆಯಿಂದ ಪೋರ್ಚುಗೀಸರಿಗೆ ಅವರು ಬಯಸಿದ ದೀರ್ಘಕಾಲೀನ ಲಾಭಗಳು ದೊರಕದೇ ಇದ್ದಿದ್ದು ಬೇರೆಯೇ ವಿಷಯ.

ಹೀಗೆ ‘ಫರಂಗಿ’ ಜನರನ್ನು ಆಕರ್ಷಿಸಿದ ತೆರೆದೆದೆಯವರು ರವಿಕೆ ತೊಟ್ಟಿದ್ದು ಯಾವಾಗ? ಏಕೆ? ಆಗಿದ್ದಿದ್ದು ಈಗಿನ ನೈತಿಕ ಪೊಲೀಸ್‌ಗಿರಿಯ ಉಲ್ಟಾ ಪರಿಸ್ಥಿತಿ. ರವಿಕೆಯಿಲ್ಲದ ಅಂದಿನ ಶ್ರಮಿಕ ತಳಸಮುದಾಯಗಳ ಹೆಣ್ಣುಮಕ್ಕಳು ರವಿಕೆ ಪಡೆದಿದ್ದೊಂದು ಹೋರಾಟ. ಅದು ಒಂದು ಶತಮಾನ ನಂತರದ ಅಬ್ರಾಹ್ಮಣ ಚಳುವಳಿಯ ಮೂಲವೂ ಆಗಿರಬಹುದು. ಆ ಮಹಿಳೆಯರು ರವಿಕೆ ಧರಿಸುವುದನ್ನು ಮೇಲ್ಜಾತಿ ಪುರುಷರು ಒಪ್ಪುತ್ತಿರಲಿಲ್ಲ. ಅವರು ಚಿನ್ನ, ಚಪ್ಪಲಿ ಹಾಕಿಕೊಳ್ಳುವಂತಿರಲಿಲ್ಲ. ಛತ್ರಿ ಬಳಸುವಂತಿರಲಿಲ್ಲ. ಹಾಲು ಕರೆಯುವಂತಿರಲಿಲ್ಲ, ಸೊಂಟದ ಮೇಲೆ ಕೊಡ ಹೊರುವಂತಿರಲಿಲ್ಲ. ಮೊಣಕಾಲತನಕವಷ್ಟೇ ತುಂಡು ಬಟ್ಟೆ ಉಡಬೇಕು. ಇದನ್ನೆಲ್ಲ ವಿರೋಧಿಸಿದ ಕೇರಳದ ಶಾಣಾರ್ (ನಾಡಾರ್) ಸಮುದಾಯವನ್ನು ಉದಾಹರಣೆಗೆ ನೋಡಬಹುದು. ಆ ಸಮುದಾಯದ ಹೆಣ್ಣುಮಕ್ಕಳು ತೆರೆದೆದೆಯವರಾಗಿದ್ದರು. ಮಿಷನರಿಗಳ ಪ್ರಭಾವದಿಂದ ಮೇಲ್ವಸ್ತ್ರ ಧರಿಸತೊಡಗಿದರು. ೧೮೨೨ರಲ್ಲಿ ಬದಲಾದ ಮಹಿಳೆಯರ ದಿರಿಸಿನ ಬಗೆಗೆ ನಾಯರ್ ಸಮುದಾಯದವರು ತಕರಾರೆತ್ತಿ ಅವರ ದಟ್ಟಿಗಳನ್ನು ಕಿತ್ತೆಳೆದು ಹರಿದುಹಾಕಿದರು. ಕೋರ್ಟಿನಲ್ಲಿ ಕೇಸು ನಡೆಯಿತು. ೧೮೨೯ರಲ್ಲಿ ತಿರುವಾಂಕೂರು ಆಡಳಿತವು ಆ ಮಹಿಳೆಯರು ಮೇಲುಡುಪು ಧರಿಸುವುದನ್ನು ನಿರ್ಬಂಧಿಸಿದರೂ ಹಿಂದೂ ಮತ್ತು ಕ್ರಿಶ್ಚಿಯನ್ ಶಾಣಾರ್ ಮಹಿಳೆಯರು ಮೇಲುಡುಪು ಧರಿಸಿತೊಡಗಿದರು. ಜೊತೆಗೆ ಮೇಲ್ಜಾತಿಯವರ ಮನೆಯಲ್ಲಿ ಪುಕ್ಕಟೆ ಕೆಲಸ ಮಾಡಲು ನಿರಾಕರಿಸಿದರು. ೧೮೫೯ರಲ್ಲಿ ಮಾರುಕಟ್ಟೆಯಲ್ಲಿ ಆ ಮಹಿಳೆಯರ ಮೇಲುವಸ್ತ್ರ ಕಿತ್ತು ಹರಿದು ಮತ್ತೆ ಗಲಭೆಯಾಯಿತು. ಕೊನೆಗೆ ಸರ್ಕಾರ ಅವರು ಮೇಲುಡುಪು ಹೊದ್ದುಕೊಳ್ಳಲು ಅನುಮತಿ ಕೊಟ್ಟರೂ ಮೇಲ್ಜಾತಿ ಮಹಿಳೆಯರಂತೆ ರವಿಕೆ ಧರಿಸುವುದನ್ನು ನಿರ್ಬಂಧಿಸಿತು.

ತಿರುವಾಂಕೂರು ಪ್ರಾಂತ್ಯದ ಶಾಣಾರ್ ಹೆಂಗಸರು ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೇಲೆ ಮಿಷನರಿಗಳು ಅವರಿಗೆಂದೇ ವಿಶೇಷ ಶೈಲಿಯ ಬ್ಲೌಸುಗಳನ್ನು ಹೊಲೆಸಿಕೊಟ್ಟರು. ಬೇರೆಯೇ ಆದ ಶೈಲಿ ಅವರಿಗೆ ಬೇರೆ ಐಡೆಂಟಿಟಿಯನ್ನು ಕೊಡಬಹುದೆಂದು ಮಿಷನರಿಗಳು ಭಾವಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ ಶಾಣಾರ್ ಹೆಂಗಸರು ಮೇಲ್ವರ್ಗದ ಮೋಪ್ಳಾ ಸ್ತ್ರೀಯರು ಹಾಗೂ ಸಿರಿಯನ್ ಕ್ರಿಶ್ಚಿಯನ್ನರು ಧರಿಸುವ ರೀತಿಯ ರವಿಕೆಯೇ ತಮಗೆ ಬೇಕೆಂದು ಪಟ್ಟುಹಿಡಿದು ಕುಳಿತರು. ತಮ್ಮ ‘ಮಾನ’ ಮುಚ್ಚಿಕೊಳ್ಳುವ ಅವಕಾಶ ಸಿಗುವುದು ಒತ್ತಟ್ಟಿಗಾದರೆ, ಮೇಲ್ಜಾತಿಗಳಿಗಿರುವ ‘ಅವಕಾಶ’ವೇ ತಮಗೂ ದೊರೆಯಲಿ ಎಂದು ಬಯಸಿದ್ದರು. ಶಾಣಾರ್ ಹೆಂಗಸರ ರವಿಕೆಯ ಬೇಡಿಕೆ ಮತಾಂತರದ ಉದ್ದೇಶಗಳಾಚೆಗೆ ವಿಸ್ತರಿಸಿಕೊಂಡಿತ್ತು.

ತನ್ನ ಎದೆಮುಚ್ಚಿಕೊಳ್ಳುವ ಬಟ್ಟೆ ತೊಟ್ಟುಕೊಳ್ಳಲೂ ಕಾನೂನಿನ ಅಪ್ಪಣೆಗೆ ಕಾಯಬೇಕೆ?! ಎದೆ, ಎದೆಗಾರಿಕೆ, ಅಕ್ಕಮಹಾದೇವಿ, ಮುಚ್ಚಿಟ್ಟುಕೊಳ್ಳುವುದು-ಬಯಲಾಗುವುದು ಏನಿದೆಲ್ಲ ಎಂದುಕೊಳ್ಳುತ್ತ ರವಿಕೆ ತೊಡದ ನಮ್ಮೂರ ಹಾಲಕ್ಕಿ ಹೆಣ್ಣುಮಕ್ಕಳ ವ್ಯಾಪಾರ ಕೌಶಲ್ಯ ಕಣ್ಣೆದುರು ಸುಳಿದು ಹೋಗುವಾಗ ಅಲಪ್ಪುರದ ಹಿನ್ನೀರಿನಲ್ಲಿ ದೋಣಿ ಲಂಗರು ಹಾಕಿ ನಿಂತಿತು. ಕೆಳಗಿಳಿದು ದಂಡೆಯ ಕಿರಿದಾದ ಏರಿಯ ಮೇಲೆ ನಡೆಯತೊಡಗಿದೆವು. ಬಲಶಾಲಿ ಗಂಡಸರು ಬಲೆಹಾಕುವ ಸಿದ್ಧತೆಯಲ್ಲಿದ್ದರೆ ಮಹಿಳೆಯರು ಕಪ್ಪೆಚಿಪ್ಪಿನ ಸಣ್ಣಗುಪ್ಪೆಯನ್ನು ಪಕ್ಕದಲ್ಲಿಟ್ಟುಕೊಂಡು ಗಾಳ ಇಳಿಬಿಟ್ಟು ಧ್ಯಾನಸ್ಥರಾಗಿ ಕುಳಿತಿದ್ದರು. ಲೈಸೆನ್ಸ್ ಸಂಖ್ಯೆ ಬರೆಯಲಾದ ನೀರಾ (ಟಾಡಿ) ಅಂಗಡಿ, ದೋಣಿಕಟ್ಟೆಯ ಬಳಿ ಗುಂಪಾಗಿ ಸೇರಿದ ಗಂಡಸರನ್ನು ಬಿಟ್ಟರೆ ಗಮನ ಸೆಳೆದವರೆಲ್ಲ ಮತ್ಸ್ಯಗಂಧಿಯರೇ. ಒಬ್ಬಾಕೆ ಕಲ್ಲಮೇಲೆ ಮೀನು ತಿಕ್ಕಿ ಚೊಕ್ಕ ಮಾಡುತ್ತಿದ್ದರೆ; ವಯಸ್ಸಾದ ಆ ಮಹಿಳೆ ತನ್ನ ಬಿಳಿಕೂದಲ ರಾಶಿಯನ್ನು ಮುಂದೆ ಇಳಿಬಿಟ್ಟು ತೊಳೆಯುತ್ತಿದ್ದರು. ಒಂದು ದೊಡ್ಡ ದೋಣಿಯನ್ನು ಇಬ್ಬರು ಹೆಣ್ಣುಮಕ್ಕಳು ಹುಟ್ಟುಹಾಕುತ್ತ ವೇಗವಾಗಿ ಎಲ್ಲಿಗೋ ಒಯ್ದರು. ಮತ್ತೊಂದು ಹುಲ್ಲುಹಸಿ ತುಂಬಿದ ಪಾತಿ ದೋಣಿಯನ್ನು ಇಳಿವಯಸ್ಸಿನ ಅಮ್ಮ ನಡೆಸಿ ತಂದು, ದೋಣಿಯನ್ನು ದಡದ ಮರಕ್ಕೆ ಕಟ್ಟಿ ಹುಲ್ಲನ್ನು ಒಳಸಾಗಿಸತೊಡಗಿದರು. ಕೆಲ ಹುಡುಗಿಯರು ಬಿಡಿಸಿದ ಮ್ಯಾಗಜೀನ್ ಕೈಲಿ ಹಿಡಿದು ನಡೆಯುತ್ತಲೇ ಓದುತ್ತ ಸಾಗಿದ್ದರು. ಎಲ್ಲರ ತಲೆಗೂದಲೂ ಇಳಿಬಿಸಿಲಿಗೆ ಮಿರಮಿರ ಮಿಂಚುತ್ತ ಈಗ ಎಣ್ಣೆಹನಿ ತೊಟ್ಟಿಕ್ಕುವುದೋ ಎಂಬ ಭಾಸ ಮೂಡಿಸುತ್ತಿತ್ತು.

ಈ ದೇವರ ರಾಜ್ಯದಲ್ಲಿ ಇನ್ನೂ ಒಂದು ವಿಶೇಷವಿದೆ: ಮಹಿಳಾ ಸಂಘ-ಸಂಸ್ಥೆ, ಫ್ಯಾಕ್ಟರಿಗಳಲ್ಲಿ ಬೆಳಿಗ್ಗೆ ಎಲ್ಲರೂ ಸೇರಿದ ಕೂಡಲೇ ಪಾಳಿಯ ಮೇಲೆ ದಿನಕ್ಕೊಬ್ಬರು ಅವತ್ತಿನ ನ್ಯೂಸ್ ಪೇಪರ್ ಓದುತ್ತಾರಂತೆ! ಎಲಎಲಾ ಮಲಬಾರಿನ ಮಹಿಳೆಯರೇ!!

ಆದರೆ,

ನಿತ್ಯ ಪೇಪರು ಓದಿದರೇನು? ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಮಹಿಳೆಯರಿದ್ದರೇನು? ದುಡಿಯುವ ವರ್ಗಗಳ ಸರ್ಕಾರವಿದ್ದರೇನು? ಕೇರಳ ಇನ್ನೂ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ. ಈಗಿನ ವಿಧಾನಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ೫% ದಾಟಿಲ್ಲ. ವರ್ಷದಿಂದ ವರ್ಷಕ್ಕೆ ರಾಜಕಾರಣದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ದಾರಿಯ ಎರಡೂ ಬದಿ ಹೆಜ್ಜೆಹೆಜ್ಜೆಗೆ ಸಂಘಟನೆಗಳ ಪೋಸ್ಟರುಗಳು ಕಂಡರೂ ಅದರಲ್ಲಿ ಬೆರಳೆಣಿಕೆಯಷ್ಟೂ ಮಹಿಳೆಯರಿರಲಿಲ್ಲ. ಶಬರಿಮಲೈಯಂಥ ದೇವಸ್ಥಾನದಲ್ಲಿ ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ. ಕೇರಳದ ನಾರಿಯರಿಗೆ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಪ್ರವೇಶಿಸಲು ಇನ್ನೂ ಸಾಧ್ಯವಾಗಿಲ್ಲ. ಕಥಕ್ಕಳಿ, ಕಲರಿಪಯಟ್ಟು ಎಂಬ ಸ್ಥಳೀಯ, ಅನನ್ಯ ಕಲಾ ಪ್ರಕಾರಗಳು ಇಂದಿಗೂ ಕೇವಲ ಪುರುಷಪಾರಮ್ಯದ ಕ್ಷೇತ್ರಗಳು. ಮೋಹಿನಿ ಅಟ್ಟಂ ಎಂಬ ಶೃಂಗಾರ ಪ್ರಧಾನ ನೃತ್ಯ ಪ್ರಕಾರವಷ್ಟೇ ಮಹಿಳೆಯರದು! ಮಣಗಟ್ಟಲೆ ಚಿನ್ನ ಹೇರಿಕೊಂಡ ಅಥವಾ ದುಬಾರಿ ಉಡುಪಿನ ರೂಪದರ್ಶಿಗಳಾಗಿ ದೊಡ್ಡ ಫ್ಲೆಕ್ಸಿ ಬೋರ್ಡುಗಳ ತುಂಬ ಎಲ್ಲೆಲ್ಲೂ ಚಂದದ ಮಹಿಳೆಯರು!! ಕೌಟುಂಬಿಕವಾಗಿ ಮಾತೃಪ್ರಧಾನ ಸಂಸ್ಕೃತಿಯ ನಾಡಿನಲ್ಲೂ ಸಾಮಾಜಿಕ ಸ್ತರಗಳಲ್ಲಿ ಪಿತೃಪ್ರಧಾನ ವ್ಯವಸ್ಥೆಯೇ ಅಂತರ್ಗತವಾಗಿರುವುದು, ಅಧಿಕಾರದಿಂದ ಮಹಿಳೆಯನ್ನು ದೂರವೇ ಇಟ್ಟಿರುವುದು ಗಮನಾರ್ಹ.

ದೇವರ ರಾಜ್ಯದಲ್ಲಿ ಲಿಂಗ ತಾರತಮ್ಯ..

***

ನಮ್ಮ ಕಾರಿನ ಮುಂದೆ ಒಂದು ಜೀಪು ಸಾಗುತ್ತಿತ್ತು. ಇಳಿಬಿಸಿಲಿನಲ್ಲಿ ಮೂವರು ಮಹಿಳೆಯರು ಬುಟ್ಟಿ ಕವುಚಿ ಹಾಕಿ ಕುಳಿತು ಮಾತುಕತೆಯಾಡುತ್ತಿದ್ದರು. ಕುಳಿತಿದ್ದು ಬಲೆಯ ರಾಶಿಯ ಮೇಲೆ, ಕವುಚಿದ್ದು ಮೀನು ಬುಟ್ಟಿಯೇ ಇರಬೇಕು. ಬಹುಶಃ ಒಳ್ಳೆಯ ವ್ಯಾಪಾರವಾಗಿರಬೇಕು. ಏಕೆಂದರೆ ಅವರ ಭಂಗಿಯ ನಿರಾಳತೆಯಲ್ಲಿ ಕೆಲಸ ಮುಗಿಸಿದ ನೆಮ್ಮದಿಯ ಸೂಚನೆಯಿತ್ತು. ಒಬ್ಬಾಕೆ ತುಂಬ ಗಂಭೀರವಾಗಿ ತನ್ನ ಬಾರೀಕು ಕೈಕಾಲುಗಳನ್ನು ನೆಲಮುಗಿಲುಗಳತ್ತ ತಿರುಗಿಸಿ, ತುಟಿ ಉದ್ದ ಮಾಡಿ ಏನೋ ಹೇಳುತ್ತಿದ್ದಳು. ಅವಳ ಹಾವಭಾವ, ಮಾತುಗಳನ್ನು ಉಳಿದಿಬ್ಬರು ತದೇಕವಾಗಿ ಗಮನಿಸುತ್ತಿದ್ದರು.

ಡ್ರೈವರನಿಗೆ ನಿಧಾನ ಅವರ ಹಿಂದೇ ಸಾಗಲು ಹೇಳಿದೆ.

ಏನು ಮಾತನಾಡುತ್ತಿದ್ದಿರಬಹುದು ಅವರು? ವ್ಯಾಪಾರದ ಕಷ್ಟನಷ್ಟಗಳ ಕುರಿತೇ? ದಾರಿಯ ಎರಡೂ ಬದಿ ಹರಡಿಕೊಂಡ ಚಹ ತೋಟಗಳ ಕುರಿತೇ? ನಮ್ಮನ್ನೇ ಬೆಂಬಲಿಸಿ ಎಂದು ಹೆಜ್ಜೆಗೊಂದರಂತೆ ಪೋಸ್ಟರ್‌ಗಳ ಮೂಲಕ ಕೇಳುವ ವಿವಿಧ ಕಾರ್ಮಿಕ ಯೂನಿಯನ್‌ಗಳ ಕುರಿತೇ? ತಮ್ಮ ಗಂಡಮಕ್ಕಳ ಕುರಿತೇ? ಮತ್ಸ್ಯಕ್ಷಾಮದ ಕುರಿತೇ? ಬೆನ್ನ ಮೇಲಿನ ಭಾರದ ಕುರಿತೆ?

ನನ್ನೆದುರಿಗೆ ಡ್ಯಾಶ್ ಬೋರ್ಡಿನಲ್ಲಿ ಮಡಚಿಕೊಂಡ ಮಲಯಾಳ ಮನೋರಮಾ ಪೇಪರ್ ಕುಳಿತಿತ್ತು. ತೆಗೆದು ಹರಡಿದರೆ ಅಂಕಿಸಂಖ್ಯೆ ಮತ್ತು ಇಂಗ್ಲಿಷ್ ಪದಗಳನ್ನು ಹೊರತುಪಡಿಸಿ ಏನೇನೂ ತಿಳಿಯಲಿಲ್ಲ. ಜಿಲೇಬಿಯಂತೆ, ಚಕ್ಕುಲಿಯಂತೆ ಸುರುಳಿಸುರುಳಿಯಾಗಿ ಅಚ್ಚಾದ ಸಾವಿರಾರು ಅಕ್ಷರಗಳಿದ್ದರೂ ಒಂದೇ ಒಂದು ಅಕ್ಷರ ಅರ್ಥವಾಗಲಿಲ್ಲ.

ಬೋಟ್ ಹೌಸಿನಲ್ಲಿ ಹೀಗೇ ಆಗಿತ್ತು. ಚುಕ್ಕಾಣಿ ಹಿಡಿದು ಕುಳಿತ ಹಿರಿಯನಿಗೆ ಏನನ್ನಾದರೂ ಹೇಳುವ ಉಮೇದು. ಆದರೆ ಅವರಿಗೆ ಮಲಯಾಳ ಬಿಟ್ಟರೆ ಕೊಂಚ ತಮಿಳು ಬರುತ್ತಿತ್ತು ಅಷ್ಟೆ. ನಮಗೆ ಅವೆರೆಡನ್ನು ಬಿಟ್ಟು ಉಳಿದ ದಕ್ಷಿಣದ ಭಾಷೆಗಳು ಅರ್ಥವಾಗುತ್ತವೆ. ಸುತ್ತಲೂ ಏಳುವ ನೀರಿನ ಅಲೆಗಳ ಸದ್ದಿನಂತೇ ಕೊಳಪಳ ಕೊಳಪಳ ಎಂದು ಶೃತಿಬದ್ಧವಾಗಿ ಏನನ್ನೋ ಹೇಳುತ್ತಿದ್ದರು. ಆದರೆ ದ್ರಾವಿಡ ಭಾಷೆಗಳಲ್ಲಿ ಅತಿ ಕಿರಿಯದಾದ ಹಾಗೂ ಹೇರಳವಾಗಿ ಸಂಸ್ಕೃತ ಪದಗಳನ್ನೊಳಗೊಂಡ ಮಲೆಯಾಳಂ ಯಾವ ಭಾವವನ್ನೂ ಹುಟ್ಟಿಸಲಿಲ್ಲ. ಹಿನ್ನೀರು ಕುರಿತು ಬೆಳೆಯುತ್ತಲೇ ಹೋದ ಸಂದೇಹಗಳಿಗೆ ಕೊನೆಗೆ ಗೂಗಲ್‌ನಲ್ಲಿ ಉತ್ತರ ಹುಡುಕುವಂತಾಯಿತು. ಸಾವಿರಾರು ವರ್ಷಗಳಿಂದ ದಾಟದ ದ್ವೀಪಗಳಾಗಿ ಉಳಿದ ಅಕ್ಕತಂಗಿಯರ ನಡುವೆ ಈಗ ಇಂಗ್ಲಿಷ್ ಸೇತುವೆ ನಿರ್ಮಾಣಗೊಂಡಿದ್ದು ಅದನ್ನು ನೆಚ್ಚುವುದು ಅನಿವಾರ್ಯವಾಯಿತು.

ಭಾಷೆ, ಎಷ್ಟು ವಿಚಿತ್ರ! ಈ ನೆಲದಲ್ಲಿ ಹುಟ್ಟಿದ ಕಾರಣಕ್ಕೇ ಇಂಥ ಬದುಕು ಬದುಕಬೇಕಾದ, ಈ ಭಾಷೆಯನಾಡಬೇಕಾದ ಇವರು. ಆ ನೆಲದಲ್ಲಿ ಹುಟ್ಟಿ ಆ ಭಾಷೆ ಆಡುವ ಕಾರಣಕ್ಕೇ ನಾನೆಂಬ ನಾನಾಗಿರುವ ನಾನು. ಭಾಷೆ ಹೇಗೆ ಬೆಸೆಯಬಲ್ಲದೋ ಹಾಗೇ ದಾಟಲಾಗದ ಕಂದಕವೂ ಆಗಬಹುದಲ್ಲವೆ?

ಅದೇನೋ ಸರಿ, ಈ ಪುಟ್ಟ ಕಿವಿ, ಮಿದುಳಿಗೆ ಏಕಾದರೂ ಅವರಾಡುವ ಮಾತೆಲ್ಲ ವಿವರವಾಗಿ ಅರ್ಥವಾಗಬೇಕು? ಮುಖಚಹರೆ, ಹಾವಭಾವ, ಪ್ರಯಾಣದ ಅನುಭವಗಳಿಂದ ಅಷ್ಟಿಷ್ಟು ಅರ್ಥವಾದರೆ ಸಾಲದೆ? ಅವರ ಮಾತು ಅರ್ಥವಾದರೂ ನಾನೇನು ಮಾಡಬಲ್ಲೆ?


ದೇವರೇ, ನಿನ್ನ ಮಕ್ಕಳ ರಕ್ಷಿಸಿಕೋ..


ಪ್ರವಾಸೋದ್ಯಮ ಕೇರಳ ಸರ್ಕಾರದ ಮುಖ್ಯ ಆದಾಯ ಮೂಲ. ದೇಶೀ-ವಿದೇಶೀ ಪ್ರವಾಸಿಗಳೆಲ್ಲ ದಂಡುದಂಡಾಗಿ ಕೇರಳಕ್ಕೆ ಬಂದಿಳಿಯುತ್ತಾರೆ. ದಂಡೆಗುಂಟ ಇರುವ ಮನೆಗಳೆದುರು ದೋಣಿಯಲ್ಲಿ, ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಮನೆಯೆದುರು ಪಾತ್ರೆ ತಿಕ್ಕುತ್ತ, ದೇವರ ಸಾಮಾನುಗಳಿಗೆ ಹುಳಿ ಹಚ್ಚುತ್ತ, ಮೀನು ಕತ್ತರಿಸುತ್ತ, ಮತ್ಯಾರದೋ ಜೊತೆ ಏರು ದನಿಯಲ್ಲಿ ಜಗಳಾಡುತ್ತ, ಹೇನು ಹೆಕ್ಕುತ್ತ ಕುಳಿತಿರುವಾಗ ಅಪರಿಚಿತ ನಾಡಿನ, ಭಾಷೆಯ ಜನ ಸುಳಿದಾಡಿದರೆ ಮುಜುಗರವಾಗುವುದು ಸಹಜ. ಆದರೆ ಕೇರಳೀಯರದು ಘನತೆಯ ನಡವಳಿಕೆ. ಭಾಷೆಯೊಂದು ತೊಡಕಾದರೂ ಅವರು ತಮ್ಮ ಊರುಕೇರಿಯೊಳಗೆ ಪರವೂರಿನವರ ಇರುವಿಕೆ ಬಗೆಗೆ ದುಷ್ಟ ಕುತೂಹಲ ತೋರದೇ ತಮ್ಮಷ್ಟಕ್ಕೆ ತಾವಿದ್ದು ಬಿಡುತ್ತಾರೆ. ಕಣ್ಣು ಕೂಡಿದರಷ್ಟೇ ಒಂದು ಕಿರುನಗೆ. ಹಾಗೆಂದು ಸ್ನೇಹಪರರಲ್ಲ ಎನ್ನುವಂತಿಲ್ಲ, ಅತಿ ಸಲುಗೆಯ ವ್ಯಾಪಾರೀ ಹಿತಾಸಕ್ತಿಯೂ ಇಲ್ಲ.

ಪುಟ್ಟ ದೋಣಿಮೇಲೆ ಹತ್ತಿಪ್ಪತ್ತು ಜನ ಒಟ್ಟಿಗೇ ಕೂತು ಸಾಗುತ್ತಿದ್ದೆವು. ಎರಡೂ ಕಡೆ ಪುಟ್ಟಪುಟ್ಟ ಮನೆಗಳು. ಎಲ್ಲ ಮನೆಗಳೆದುರೂ ಕಾಯಿಗಳಿಂದ ತೊನೆಯುವ ತೆಂಗು, ಮಾವಿನ ಮರಗಳು. ಹಿಂದೆ ಸುಗ್ಗಿಯ ಗದ್ದೆ ಬಯಲು. ನಮ್ಮ ದೋಣಿಯಲ್ಲಿದ್ದ ವಯಸ್ಸಾದ ವಿದೇಶೀ ಮಹಿಳೆಯೊಬ್ಬರು ತಮ್ಮ ಕೈಲಿ ನಾಣ್ಯ ಹಿಡಿದು ದಡದಲ್ಲಿದ್ದ ಮಕ್ಕಳನ್ನು ಕರೆಯತೊಡಗಿದರು. ಆಡುತ್ತ, ಮೀನು ಹಿಡಿಯುತ್ತ ತಮ್ಮ ಪಾಡಿಗೆ ತಾವಿದ್ದ ಮಕ್ಕಳು ಇವರು ಕರೆದದ್ದೇ ತಡ ದೋಣಿಯ ಹಿಂದೆ ಓಡೋಡಿ ಬರತೊಡಗಿದವು. ದೋಣಿಯಲ್ಲಿದ್ದ ನಮಗೆ ದಿಗಿಲು. ಆ ಮಕ್ಕಳಿಗೆ ಹಾಗೆ ದುಡ್ಡು ಕೊಡಬಾರದೆಂದು ಕೇಳಿಕೊಂಡೆವು. ಆಕೆ ಪೆನ್ಸಿಲ್, ಬುಕ್ ಎಂದೆಲ್ಲ ಹೇಳತೊಡಗಿದರು. ಕೊನೆಗೆ ಅವರು ಕಡುಬಡವ ಮಕ್ಕಳಲ್ಲವೆಂದೂ, ಉಂಡುಡಲು ತಕ್ಕ ಮಟ್ಟಿಗೆ ಇರುವವರೆಂದೂ, ಅರೆನಗ್ನತೆ ಅವರ ವೇಷವೆಂದೂ, ಹೀಗೆ ಕೊಡುವುದು ಮಕ್ಕಳಿಗೆ ಕೆಟ್ಟ ಅಭ್ಯಾಸವೊಂದನ್ನು ರೂಢಿಸುವುದರಿಂದ ಖಂಡಿತಾ ಕೊಡಬಾರದೆಂದು ಒತ್ತಾಯಿಸಿದೆವು. ಪಡೆಯುವವನ ಪಡೆಯಬೇಕಾದ ಅನಿವಾರ್ಯತೆಯನ್ನು ಕೊಡುವಿಕೆ ತಪ್ಪಿಸಬಲ್ಲುದಾದರೆ ಮಾತ್ರ ಅಂಥ ಕೊಡುವಿಕೆಗೆ ಅರ್ಥವಿದೆ. ಇಲ್ಲದಿದ್ದರೆ ಅದು ಅವರ ಆತ್ಮಘನತೆ ನಾಶ ಮಾಡುವ ಅಪಾಯಕಾರಿ ಕ್ರಿಯೆಯಾಗುತ್ತದೆ. ದೋಣಿಯಲ್ಲಿದ್ದ ಇತರರಿಗೆ ನಮ್ಮ ಅಪೀಲು ಅರ್ಥವಾಗಿ ಕೊಡಬಾರದೆಂದು ಆಕೆಯ ಬಳಿ ಹೇಳಿದರು.

ಈಜಿಪ್ಟ್‌ನ ನೈಲ್‌ಕ್ರೂಸ್ ದೃಶ್ಯ ಮೂಡಿಸಿದ ಗಾಯ ನಮ್ಮ ಕಣ್ಣಲ್ಲಿನ್ನೂ ಹಸಿಯಾಗಿತ್ತು. ನೈಲ್ ನದೀದಂಡೆಯಲ್ಲಿ ಆಡುವ ನುಬಿಯನ್ ಮಕ್ಕಳು ದೋಣಿ, ಹಡಗು ಕಂಡರೆ ಸಾಕು, ಹಿಂದೆಹಿಂದೆ ಓಡಿ ಬರುತ್ತಿದ್ದರು. ‘ಆಪಲ್, ಡಾಲರ್, ಪೌಂಡ್’ ಎಂದು ಕೂಗುತ್ತಾ ಹಡಗಿನಿಂದ ಬಿಸಾಡಬಹುದಾದ ಸಾಮಾನುಗಳಿಗಾಗಿ ಕೈಚಾಚುತ್ತ, ಬಿಸಾಡಿದ ವಸ್ತುಗಳಿಗೆ ಮುತ್ತಿಕೊಂಡು ಕಿತ್ತಾಡುತ್ತಿದ್ದವು. ಪ್ರವಾಸೋದ್ಯಮದಿಂದಾಗುವ ಅತಿಯಾದ ಎಕ್ಸ್‌ಪೋಷರ್ ಜನಸಾಮಾನ್ಯರನ್ನು ವ್ಯಾಪಾರಿಗಳಾಗಿಸಿ ಹಪಾಹಪಿಗೆ ದೂಡಬಹುದಾದ; ಅವರ ಖಾಸಗಿತನವನ್ನು ಅಪಹರಿಸಿ ಘನತೆ ನಾಶವಾಗಬಹುದಾದ ಅಪಾಯವಿರುತ್ತದೆ. ಇದಕ್ಕೆ ಉದಾಹರಣೆಯಾಗಿ ನಮ್ಮ ಸುತ್ತಲ ಹಲವಾರು ಪ್ರವಾಸಿ ಸ್ಥಳಗಳ ಜನರ ನಡವಳಿಕೆಗಳಿವೆ. ಅಂಥಲ್ಲಿ ವಾಸಿಸುತ್ತಿರುವ ಕಾರಣಕ್ಕೆ ಅಲ್ಲಿನ ಎಳೆಯ ಮಕ್ಕಳು ಆತ್ಮಗೌರವವನ್ನು ರೂಪುಗೊಳ್ಳುವುದರಲ್ಲೇ ಕಳೆದುಕೊಳ್ಳುವಂತಾದರೆ?

ದೇವರೇ, ಹಾಗಾಗದಂತೆ ನಿನ್ನ ರಾಜ್ಯದ ಮಕ್ಕಳನ್ನು ರಕ್ಷಿಸು..

ದೇವರ ಕಾಡು!

ಅದು ದೇವರ ರಾಜ್ಯವೇ ಇರಬೇಕು. ಓಹೋ! ಅದೆಷ್ಟು ದೇವದೇವತೆ ಸಂತ ಮಹಾನುಭಾವರು ಪೋಸ್ಟರುಗಳಾಗಿ, ಮೂರ್ತಿಗಳಾಗಿ, ಭಕ್ತಿಯ ಘೋಷಣೆಗಳಾಗಿ, ಭಜನೆಯ ಸಾಲುಗಳಾಗಿ, ಪ್ರಾರ್ಥನೆಯ ಕೂಗಾಗಿ ವಾತಾವರಣದಲ್ಲೆಲ್ಲ ಹರಡಿಕೊಂಡಿದ್ದಾರೆ!

ಹಿನ್ನೀರಿನಲ್ಲಿ ತೇಲುವಾಗ ಒಂದು ದಂಡೆಯಿಂದ ಶಿವನ ಭಜನೆಯೂ, ಮತ್ತೊಂದು ಕಡೆಯಿಂದ ಮಾತಾ ಅಮೃತಾನಂದಮಯಿ ಪ್ರಾರ್ಥನೆಯೂ, ಮೂರ್ನಾಲ್ಕು ದಿಕ್ಕುಗಳಿಂದ ಮಸೀದಿಯ ಪ್ರಾರ್ಥನಾ ಕರೆಯೂ ಒಮ್ಮೆಲೇ ಕೇಳತೊಡಗಿತು. ಗಂಟೆ, ಜಾಗಟೆ, ತಾರಕದ ಧ್ವನಿಗಳಲ್ಲಿ ಧರ್ಮಸಮನ್ವಯ ಮಾಡುವುದು ತ್ರಾಸದಾಯಕವೇ. ಅಂತೂ ಎಲ್ಲವೂ ಒಮ್ಮೆಲೇ ಸ್ಥಬ್ದವಾಗುವ ಹೊತ್ತಿಗೆ ದೂರದ ದೇವಾಲಯದೆದುರು ಕುದುರೆ ಮೇಲೆ ಕುಳಿತು ದುಷ್ಟನನ್ನು ಸಂಹರಿಸುತ್ತಿರುವ ಸಂತನ ಮೂರ್ತಿ(ಸೇಂಟ್ ಮೈಕೆಲ್?) ಅಸ್ಪಷ್ಟವಾಗಿ ಕಾಣಿಸಿತು. ರಸ್ತೆ ಪಕ್ಕದ ಪೋಸ್ಟರುಗಳಲ್ಲಿ ಚೆಗೆವಾರ, ಹ್ಯೂಗೋ ಚಾವೆಜ್, ಕ್ಯಾಸ್ಟ್ರೋ, ಸದ್ದಾಂ, ಅರಾಫತ್, ವಿವೇಕಾನಂದ, ಭಗತ್ ಸಿಂಗ್, ಮಾರ್ಕ್ಸ್, ಏಂಗೆಲ್ಸ್ .. .. ಬಹಳ ಜನ ರಾರಾಜಿಸುತ್ತಿದ್ದರು. ಒಂದು ಮದುವೆ ಪೋಸ್ಟರಿನಲ್ಲಿ ಹುಡುಗಹುಡುಗಿಯರ ಹಿನ್ನೆಲೆಯಲ್ಲಿ ದೊಡ್ಡದಾದ ಚೆಗೆವಾರನ ಚಿತ್ರ!

ಎಷ್ಟೊಂದು ದೇವರು ಗುದ್ದಾಡದೆ ಇಲ್ಲಿ ಪ್ರೀತಿಯಿಂದ ಬದುಕುತ್ತಿದ್ದಾರೆ! ಅವರು ಎಲ್ಲ ಕಡೆಯೂ ಏಕೆ ಹೀಗೇ ಇರಲಾರರು?

ಹಿನ್ನೀರೆಂಬ ವಿಸ್ಮಯ  



ಕೇರಳದ ಅರಬ್ಬಿ ಸಮುದ್ರ ತೀರಕ್ಕೆ ೧೫ ಕಿಲೋಮೀಟರಿನಷ್ಟು ಒಳಗೆ ಸಮಾನಾಂತರವಾಗಿ ಹರಡಿಕೊಂಡ ಹಿನ್ನೀರು ಕಾಲುವೆಗಳ ಜಾಲವಿದೆ. ಅದರಲ್ಲಿ ಐದು ದೊಡ್ಡ ಸರೋವರಗಳು ನಿರ್ಮಾಣವಾಗಿವೆ. ಈ ಸರೋವರಗಳನ್ನು ಮಾನವ ನಿರ್ಮಿತ ಹಾಗೂ ನೈಸರ್ಗಿಕ ಕಾಲುವೆಗಳು ಒಟ್ಟುಗೂಡಿಸಿವೆ. ಒಂಭೈನೂರು ಕಿಲೋಮೀಟರುಗಳಷ್ಟು ಉದ್ದದ ಹಿನ್ನೀರು ಕಾಲುವೆಗಳ ಈ ಜಾಲ ಕೇರಳದ ಒಳನಾಡು ಸಾರಿಗೆಗೆ, ಪ್ರವಾಸೋದ್ಯಮಕ್ಕೆ, ಇಕಾಲಜಿಯ ಉಳಿವಿಗೆ ದೊಡ್ಡ ಪಾಲು ಸಲ್ಲಿಸಿದೆ. ಮೂವತ್ತೆಂಟು ನದಿಗಳು ಸಮುದ್ರ ಸೇರುವ ಮುಖಜ ಭೂಮಿಯ ಸ್ಥಳದಲ್ಲಿ ನದಿ ಮತ್ತು ಸಮುದ್ರದ ಅಲೆಗಳು ಸೃಷ್ಟಿಸಿದ ನೂರಾರು ಸಣ್ಣಪುಟ್ಟ ದ್ವೀಪಗಳಿವೆ. ಅವು ಈ ಕಾಲುವೆಗಳಿಂದ ಸುತ್ತುವರೆದಿದ್ದರೆ ಮತ್ತೊಂದು ಕಡೆ ಒಳಗೆ ಫಲವತ್ತಾದ ಕಪ್ಪು ಭೂಮಿಯಿದೆ. ಎಷ್ಟೋ ಕಡೆ ಕೃಷಿಭೂಮಿ ಕಾಲುವೆಗಿಂತ ತಗ್ಗುಪ್ರದೇಶದಲ್ಲಿವೆ. ಮಳೆಗಾಲ ಗದ್ದೆಯಲ್ಲಿ ನೀರು ತುಂಬಿ, ಮನೆಗಳಿಗೂ ನೀರು ನುಗ್ಗಿ ಸರ್ಕಾರದ ಪುನರ್ವಸತಿ ಕೇಂದ್ರಗಳಿಗೆ ಜನ ಸ್ಥಳಾಂತರಗೊಳ್ಳುತ್ತಾರೆ ಎಂದು ತಿಳಿಯಿತು.

ಈ ನೀರ ಕಾಲುವೆಯ ಎರಡೂ ದಡಗಳಲ್ಲಿ ದಂಡೆಗುಂಟ ಸಾಲುಮನೆ. ಸಾಲು ಮನೆಗಳ ಉದ್ದುದ್ದದ ಬೀದಿಗಳೇ ಊರುಗಳು. ಪ್ರತಿ ಮನೆಯೆದುರಿನ ಮೆಟ್ಟಿಲು ನೀರಿನಲ್ಲಿ ಕೊನೆಯಾಗುತ್ತದೆ. ಆ ಮೆಟ್ಟಿಲ ಕಟ್ಟೆ ಮೇಲೆ ಸೋಪು, ಕಲ್ಲು, ಪಾತ್ರೆ ತಿಕ್ಕುವ ಗುಂಜು, ನೆನೆಸಿಟ್ಟ ಬಟ್ಟೆ ಇತ್ಯಾದಿ. ಪ್ರತಿ ಮನೆಯ ಎದುರು ಅವರವರ ಮನೆಯ ಪಾತಿ ದೋಣಿ.

ಅಲಪ್ಪುರಂ. ಅರುಂಧತಿ ರಾಯ್, ತಕಳಿ ಶಿವಶಂಕರ್ ಪಿಳ್ಳೈ ಅವರನ್ನು ಕೊಟ್ಟ ಹಿನ್ನೀರ ನಾಡು. ಎಂದೋ ನೋಡಿದ್ದ ಚೆಮ್ಮೀನ್ ಸಿನಿಮಾ, ಕರುತ್ತಮ್ಮ ನೆನಪಾದರು. ನೀರು ನೆಚ್ಚಿದ ಜನ, ನೀರ ಮೇಲಿನ ಬದುಕು. ದೊಡ್ಡ, ಸಣ್ಣ ಬೋಟು ಬಾರ್ಜುಗಳಲ್ಲಿ ಜನ ಓಡಾಡುತ್ತಲೇ ಇದ್ದರು. ಕಾಲು ಗಂಟೆಗೊಂದರಂತೆ ಬೋಟುಗಳು ಜನರನ್ನು ಹೊತ್ತು ಬರುತ್ತಿದ್ದವು. ನಾವಿಲ್ಲಿ ಬಸ್ಸು, ರಸ್ತೆಯನ್ನು ಬಳಸಿದಂತೆ ಅವರು ಜಲದಾರಿಯ ದೋಣಿ ಬಳಸುತ್ತಾರೆ. ೨೫೦ ಕಿಲೋಮೀಟರ್ ದೂರದ ನ್ಯಾಷನಲ್ ವಾಟರ್ ವೇ ನಂ. ೩ ಕೊಲ್ಲಂ (ಕ್ವಿಲಾನ್) - ಕೊಟ್ಟಪುರಂ ನಡುವೆ ಇದೆ. ಅಲಪ್ಪುರಂ-ಕೊಟ್ಟಾಯಂ-ಎರ್ನಾಕುಲಂ ನಡುವೆ ವೆಂಬನಾಡ್ ಸರೋವರವಿದೆ. ಇದು ಭಾರತದ ಅತಿ ಉದ್ದದ ಸರೋವರ. ಈ ಸರೋವರ ಸಮುದ್ರ ಸೇರುವಲ್ಲಿ ಕೊಚ್ಚಿ ನಗರವಿದೆ.

ಸಂಜೆಯಾಗುತ್ತಿತ್ತು. ನೀರಮೇಲಿನ ದೋಣಿಮನೆಯಲ್ಲಿ ತೇಲುತ್ತಿದ್ದೆವು. ದಂಡೆಯ ಮೀನು ಅಂಗಡಿಯಲ್ಲಿ ಇನ್ನೂ ಜೀವವಿದ್ದು ಕೈಕಾಲಾಡಿಸುವ ಏಡಿ ನನ್ನ ಉಳಿಸಿ ಎಂದು ಕೇಳಿಕೊಂಡಂತೆ ಭಾಸವಾಗಿ ಕಿಂಗ್ ಪ್ರಾನ್ ಮಾತ್ರ ಖರೀದಿಸಿ ತಂದಿದ್ದೆವು. ಕರಿಮೀನು ಫ್ರೈ ಮಸಾಲೆಯ ಗಮ ಗಾಳಿಯಲ್ಲಿ ತುಂಬಿತ್ತು. ನೀರ ನಡುವೆ ತೇಲುತ್ತ ಗಾಳಿಗೆ ಮುಖವೊಡ್ಡಿ ನಿಂತಿದ್ದರೂ ರೋಮರೋಮದಿಂದ ಬಸಿಯಲು ಬೆವರು ಹೊಂಚುಹಾಕುತ್ತಿತ್ತು. ದೋಣಿಮನೆಯ ಉಪ್ಪುಪ್ಪು ನೀರಿಗೆ ಮುಖ ತೊಳೆಯುವ ಮನಸ್ಸೂ ಆಗಲಿಲ್ಲ. ಕೈಲಿ ಬೆಂಡು ಹಿಡಿದು ಈಜು ಕಲಿಯುತ್ತಿದ್ದ ಎಳೆಪೋರನೊಬ್ಬ ತಕರಾರಿನ ದನಿಯಲ್ಲಿ ಅಪ್ಪನ ಕೋಲಿಗೆ ಉತ್ತರ ಕೊಡುತ್ತಿದ್ದ. ದೋಣಿಪಕ್ಕ ದಂಡೆಯ ಮೇಲಿನ ಬಾತುಗಳು ವಟ್ಟಗಂಟಲಿನಲ್ಲಿ ಕುಂಯ್ಞೋಮರ್ರೋ ಎಂದು ಕಿರುಚಿಕೊಳ್ಳುತ್ತಿದ್ದವು. ಅದರಾಚೆ ಮನೆಯವರು ಕೀರಲು ದನಿಯ ಆಕ್ರಂದನದ ಹೊರತಾಗಿಯೂ ಕೋಲಿನಲ್ಲಿ ತಿರುಗಿಸಿ ಮುರುಗಿಸಿ ಕಪ್ಪು ಜೀವಿಯೊಂದನ್ನು ಹೊಡೆಯುತ್ತಿದ್ದರು. ಕ್ಯಾಮೆರಾ ಝೂಮ್ ಹಾಕಿ ನೋಡಿದರೆ ಬಾವಲಿ!

ಮುಂದಿನ ಹುಟ್ಟುಹಬ್ಬಕ್ಕೆ ಸ್ಕೂಟಿ ಕೊಡಿಸಿರೆಂದು ಕೇಳುತ್ತಿರುವ ಮಗಳ ಪ್ರಕಾರ ಅಲ್ಲಿನ ಹುಡುಗರು ಹುಟ್ಟುಹಬ್ಬಕ್ಕೆ ‘ಸ್ಪೀಡ್ ಬೋಟ್’ ಡಿಮ್ಯಾಂಡ್ ಮಾಡುತ್ತಾರೆ. ಶಾಲೆ, ಆಸ್ಪತ್ರೆ ಎಲ್ಲಿಗೇ ಹೋಗಬೇಕಾದರೂ ರಾತ್ರಿ, ಹಗಲೆನ್ನದೇ, ಚಳಿಮಳೆಯೆನ್ನದೇ ಅವರು ದೋಣಿಯನ್ನವಲಂಬಿಸಿದ್ದಾರೆ. ಕಾಯಿಲೆ, ಹೆರಿಗೆ, ಇನ್ನಿತರ ಎಮರ್ಜೆನ್ಸಿಗಳ ಸಮಯದಲ್ಲಿ ಎಷ್ಟು ಅನಾನುಕೂಲವಲ್ಲವೆ? ಆದರೆ ಅವರಿಗಿದು ಅನಾನುಕೂಲವೆನಿಸಿರಲಿಕ್ಕಿಲ್ಲ. ಹಾಗಾಗಿದ್ದಲ್ಲಿ ಇಷ್ಟು ಜನ ಇಲ್ಲಿರುತ್ತಿರಲಿಲ್ಲ. ನಾವು ರಸ್ತೆಯನ್ನವಲಂಬಿಸಿದಂತೆಯೇ ಅವರು ಕಾಲುವೆಗಳನ್ನು ಅವಲಂಬಿಸಿರಬಹುದು. ಹಿನ್ನೀರ ದಡದಲ್ಲಿ ಹುಟ್ಟಿದ ಕಾರಣಕ್ಕೆ ಇಲ್ಲಿನ ಜನರ ಬದುಕಿನ ಲಯವೇ ಬೇರೆಯಾಗಿದೆ.  

ದಕ್ಷಿಣ ಭಾರತದ ರಾಜ್ಯಗಳು ಪಕ್ಕಪಕ್ಕವೇ ಇದ್ದರೂ ಅವುಗಳ ಭಾಷೆ, ಉಡುಪು, ಊಟೋಪಚಾರ, ಆದ್ಯತೆ, ಆಚರಣೆಗಳಲ್ಲಿ ಎಷ್ಟೊಂದು ವಿಭಿನ್ನತೆ, ಅನನ್ಯತೆ? ಈ ದೇವರ ರಾಜ್ಯದಲ್ಲಿರುವ ಪ್ರತಿಯೊಂದೂ - ಅಡವಿ, ಬೆಟ್ಟ, ಬಯಲು, ಚಹಾ ತೋಟ, ಮೀನು, ಸಮುದ್ರ ತೀರ, ಜಲಾಶಯ, ಪರಂಪರೆ, ಚಾರಿತ್ರಿಕ ಸ್ಥಳ, ಮಾನವ ಸಂಪನ್ಮೂಲ - ಇವೆಲ್ಲವೂ ನಮ್ಮಲ್ಲಿವೆ. ಆದರೂ ಪ್ರವಾಸೋದ್ಯಮಕ್ಕೆ ಏಕೆ ಪ್ರಾಮುಖ್ಯತೆಯಿಲ್ಲ? ಭೂಮಿಯ ಒಳಹೊರಗಿರುವ ಸಂಪತ್ತನ್ನೆಲ್ಲ ಎರಡೂ ಕೈಗಳಲ್ಲಿ ಬಾಚಿಬಾಚಿ ಕಬಳಿಸಿದ ಬಳಿಕವೇ ಪ್ರವಾಸೋದ್ಯಮಕ್ಕೆ ಗಮನ ಕೊಡುವವರೇ ನಾವು?

ಅಮಾವಾಸ್ಯೆಯ ಇರುಳು. ಮೋಡ ತುಂಬಿದ ಚಂದ್ರ ಚಿಕ್ಕೆಗಳಿಲ್ಲದ ಆಕಾಶ. ಆದರೂ ನೀರಿನಲ್ಲಿ ಇರುಳು ಪ್ರತಿಫಲಿಸುತ್ತಿತ್ತು. ರಾತ್ರಿ ಹತ್ತಾದರೂ ಜನರನ್ನು ಸಾಗಿಸುವ ಬೋಟು ಮಾರಿಗೊಂದರಂತೆ ಎರಡೂ ದಂಡೆಗಳ ದೋಣಿ ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿ, ಇಳಿಸಿ ಓಡಾಡುತ್ತಿತ್ತು. ಪ್ರತಿ ಬೋಟು ಎಬ್ಬಿಸಿದ ಅಲೆಯೂ ನಮ್ಮ ದೋಣಿಮನೆಯನ್ನು ಎಷ್ಟೋ ಹೊತ್ತಿನವರೆಗೆ ತೂಗುತ್ತಿತ್ತು. ಹಾಗೆಯೇ ತುಯ್ದಾಡುವ ತಹಬಂದಿಗೆ ಬರದ ಮನಸೂ..



Thursday 26 June 2014

ಒಂದು ಬೇಸಿಗೆ, ಒಂದಷ್ಟು ಪ್ರಶ್ನೆ: ತೇನೆಹಕ್ಕಿಗೆ ಸದಾ ತಳಮಳ..







ಬಿರುಬಿಸಿಲು ಬೆಳಗಿನ ಹತ್ತೂವರೆಗೇ ರಾಚುತ್ತಿತ್ತು. ದೆಹಲಿಯಿಂದ ಆಗ್ರಾಗೆ ಹೋಗಲು ದೇಶದಲ್ಲಿಯೇ ಅತಿದೊಡ್ಡ ಆರು ಲೇನುಗಳ ‘ಯಮುನಾ ಎಕ್ಸ್‌ಪ್ರೆಸ್‌ವೇ’ ಹಾದಿ ಹಿಡಿಯಲು ಹೊರಟಿದ್ದೆವು. ‘ಜಮುನಾ ಜಿ’ ಎಂದು ದೆಹಲಿಗರು ಕರೆಯುವ ಯಮುನಾ ನದಿಯೇ ಗಡಿ. ದೆಹಲಿ ಮುಗಿದು ಉತ್ತರಪ್ರದೇಶ ರಾಜ್ಯದ ನೋಯ್ಡಾ ಶುರುವಾಗುತ್ತದೆ. ಆದರೆ ಕ್ಷೀಣವಾಗಿ ಹರಿವ ಯಮುನೆಯನ್ನು ದಾಟಿದರೂ ದೆಹಲಿ ಪಟ್ಟಣವೇ ಮುಂದುವರಿದಂತೆ ಕಾಣುತ್ತಿದೆಯಲ್ಲ ಎಂದು ಅಚ್ಚರಿಪಡುವಾಗ ಉತ್ತರ ಪ್ರದೇಶ ಬಂತೆಂದು ಧುತ್ತನೆ ಎದುರಾದ ಪಾರ್ಕ್ ಮತ್ತು ಮೂರ್ತಿಗಳು ತಿಳಿಸಿಬಿಟ್ಟವು!

ಎತ್ತರದ ಕಾಂಪೌಂಡಿನ ಒಳಗೆ ವಿಶಾಲವಾದ ಪಾರ್ಕ್. ಒಂದಷ್ಟು ಕಂಚಿನ ಮೂರ್ತಿಗಳು, ಕಲ್ಲಿನ ಆನೆಗಳು. ನಡುವೆ ದೊಡ್ಡ ಕಾರಂಜಿ. ಒಳಪ್ರವೇಶಿಸಿದರೆ ಒಂದೇ ಒಂದು ನರಹುಳದ ಸುಳಿವಿಲ್ಲದೆ ನಿರ್ಜನವಾಗಿ ಬಿಸಿಲಿನಲ್ಲಿ ರಣಗುಡುವ ಪಾರ್ಕ್. ಯಮುನಾ ನದಿಯ ದಂಡೆಗುಂಟ ನಿರ್ಮಿಸಲಾದ ‘ದಲಿತ ಪ್ರೇರಣಾ ಸ್ಥಳ್’ ೩೩ ಎಕರೆ ವಿಸ್ತಾರವಿತ್ತು. ಹಸಿರು ಕಾಡಿಗಿಂತ ಮೂರ್ತಿಗಳ, ಸ್ತಂಭಗಳ ಕಾಡಿನಂತೆ ತೋರುವ ೮೨.೫ ಎಕರೆ ಜಾಗದಲ್ಲಿ ‘ರಾಷ್ಟ್ರೀಯ ದಲಿತ ಸ್ಮಾರಕ್’ ಹರಡಿಕೊಂಡಿತ್ತು. ನಡುಮಧ್ಯ ೩೦೦ ಅಡಿ ಎತ್ತರದ ಸ್ತಂಭ, ಅದರ ಮೇಲೆ ನಾಲ್ಕೂ ದಿಕ್ಕಿಗೆ ಕೆತ್ತಲ್ಪಟ್ಟ ಆನೆಯ ಮೂರ್ತಿಗಳು. ಕೆಳಗೆ ೧೮ ಅಡಿ ಎತ್ತರದ ೧೫ ಕಂಚಿನ ಮೂರ್ತಿಗಳು. ‘ಈ ನೆಲದ ಶೋಷಿತರ ಬದುಕನ್ನು ಆತ್ಮಸಮ್ಮಾನವಾಗಿ ಪರಿವರ್ತಿಸಲು ದುಡಿದವರ ಸ್ಮಾರಕ’ ಎಂದು ವರ್ಣಿಸಲಾದ ಜಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಕಾನ್ಶೀರಾಂ ಹಾಗೂ ಮಾಯಾವತಿ ಅವರ ಮೂರ್ತಿಗಳು ಎದುರಿಗೇ ಕಾಣಿಸಿದವು. ಈ ವರ್ತುಲದ ಹೊರಭಾಗದಲ್ಲಿ ಇಕ್ಕೆಲಗಳಲ್ಲೂ ೨೪ ಬೃಹತ್ ಆನೆಯ ಮೂರ್ತಿಗಳಿವೆ. ೭೦೦೦ ಮರಗಳನ್ನು ನೆಡಲಾಗಿದೆ. ರಾತ್ರಿಯೂ ಬೆಳಗುವಂತೆ ೩೦೦೦ ವಿಶೇಷ ಲೈಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ೨೦೧೧ರಲ್ಲಿ ಮಾಯಾವತಿ ಉದ್ಘಾಟಿಸಿದ್ದರೂ ನಿರ್ಮಾಣ ಕೆಲಸ ಪೂರ್ಣವಾಗದೇ ಸಾರ್ವಜನಿಕರ ಪ್ರವೇಶಕ್ಕೆ ಅದು ಮುಕ್ತವಾಗಿರಲಿಲ್ಲ. ೨೦೧೩ರಲ್ಲಿ ಅಖಿಲೇಶ್ ಯಾದವ್ ಮತ್ತೆ ಅದನ್ನು ಸ್ವಚ್ಛಗೊಳಿಸಿ, ತಮ್ಮ ಪಕ್ಷದ ಚಿಹ್ನೆಯಾದ ಸೈಕಲ್ ಅನ್ನು ೨೦೦ ಜನ ಬಡವರಿಗೆ (ದಲಿತರಿಗೆ) ವಿತರಿಸಿ ಸಾರ್ವಜನಿಕ ವೀಕ್ಷಣೆಗೆ ತೆರವುಗೊಳಿಸಿದ್ದಾರೆ.

ಇದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕನಸು. ಮಿನಾರು, ಮಹಲು, ಗೋರಿ, ಸ್ಮಾರಕಗಳು ಕಿಕ್ಕಿರಿದ ಉತ್ತರಭಾರತದಲ್ಲಿ ಅವುಗಳ ನಡುವೆ ತಮ್ಮದೂ ಇರಲಿ ಎಂದು ಜನನಾಯಕರು ಇಂಥ ಸ್ಮಾರಕಗಳ ನಿರ್ಮಾಣಕ್ಕೆ ಕೈಹಾಕಿದರೇ ಎಂಬ ಪ್ರಶ್ನೆಯೇಳುತ್ತಿರುವಾಗಲೇ ಬಹುಜನರಿರಬೇಕಾದ ಸ್ಥಳವು ಸೆಕ್ಯೂರಿಟಿ ಗಾರ್ಡ್ ಹೊರತುಪಡಿಸಿ ಜನರೇ ಇಲ್ಲದೇ ಭಣಗುಡುವುದು ವಿಪರ್ಯಾಸ ಎನಿಸತೊಡಗಿತು. ೬೮೫ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸ್ಮಾರಕ ಉತ್ತರಪ್ರದೇಶದ ‘ಬಹುಜನ’ರಲ್ಲಿ ಆತ್ಮವಿಶ್ವಾಸ ತುಂಬಿರುವ ಬಗ್ಗೆಯೂ ಅನುಮಾನ ಮೂಡಿತು. ಇನ್ನೂ ಕಣ್ಣಲ್ಲೇ ತೂಗುತ್ತಿದ್ದ ಬದಾವೂಂ ಸೋದರಿಯರ ಚಿತ್ರದಿಂದ ‘ದಲಿತ ಪ್ರೇರಣಾ ಸ್ಥಳ್’ ಮತ್ತಷ್ಟು ರಣಗುಡುವಂತೆ ತೋರತೊಡಗಿತು..





ಮಾವಿನಮರದಲ್ಲಿ ಕೇವಲ ಮಾವಿನಹಣ್ಣುಗಳಷ್ಟೇ ನೇತಾಡುವುದಿಲ್ಲ..

ದೇಶದ ಅತ್ಯಂತ ಬಡ, ಜನಭರಿತ ರಾಜ್ಯ ಉತ್ತರಪ್ರದೇಶ ೭೫ ಜಿಲ್ಲೆ, ೨೦ ಕೋಟಿ ಜನಸಂಖ್ಯೆ ಹೊಂದಿದೆ. ಹಾಗೆಯೇ ಉತ್ತರ ಪ್ರದೇಶ ಹಲವಾರು ಐತಿಹಾಸಿಕ, ಪೌರಾಣಿಕ, ಪ್ರವಾಸೀ, ಜಗತ್ಪ್ರಸಿದ್ಧ ತಾಣಗಳನ್ನು ಹೊಂದಿದೆ. ಅತಿ ಹೆಚ್ಚು ಅಪರಾಧ ಪ್ರಕರಣಗಳು ಸಂಭವಿಸುವ, ದೇಶದ ಸರಾಸರಿಗಿಂತ ಕಡಿಮೆ ಲಿಂಗಾನುಪಾತ (೯೦೮) ಹೊಂದಿರುವ ರಾಜ್ಯ ಅದು. ಹಾಗೆಯೇ ೨೦% ಜನಸಂಖ್ಯೆ ದಲಿತರಿರುವ, ಭಾರತದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯನ್ನು ಪಡೆದ ರಾಜ್ಯವೂ ಹೌದು. ಇಷ್ಟೆಲ್ಲ ಪೂರ್ವಪೀಠಿಕೆಗಳ ಹೊರತಾಗಿಯೂ ಆ ರಾಜ್ಯದಲ್ಲಿ ದಲಿತ ದೌರ್ಜನ್ಯ, ಜಾತಿದೌರ್ಜನ್ಯ ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಹೇಳದೇ ಇರಲಾಗುವುದಿಲ್ಲ. ಇತ್ತೀಚೆಗೆ ಆ ರಾಜ್ಯದಲ್ಲಿ ನಡೆದ ದಲಿತ ಸೋದರಿಯರ ಅತ್ಯಾಚಾರ-ಕೊಲೆ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಬದಾವೂಂ ಜಿಲ್ಲೆಯ ಕತ್ರಾ ಸಾದತ್‌ಗಂಜ್ ಹಳ್ಳಿಯಲ್ಲಿ ಮೇ ೨೭ರ ರಾತ್ರಿ ಇಬ್ಬರು ಸೋದರಸಂಬಂಧಿ ಹುಡುಗಿಯರು ತಮ್ಮೂರಿನ ಏಕೈಕ ಶೌಚಾಲಯವಾದ ಬಯಲ ಕಡೆಗೆ ಹೊರಟರು. ಹಾಗೆ ಹೊರಟವರು ಮತ್ತೆ ವಾಪಸು ಬರಲಿಲ್ಲ. ಸರಿ ರಾತ್ರಿಯಾದರೂ ಅವರು ಬರಲಿಲ್ಲವೆಂದು ಒಬ್ಬಾಕೆಯ ಅಪ್ಪ ಪೊಲೀಸ್ ಸ್ಟೇಷನ್ನಿಗೆ ದೂರು ಕೊಡಲು ಹೋದರೆ ಪೊಲೀಸರು ಅವನ ಕಪಾಳಕ್ಕೆ ಬಾರಿಸಿ ವಾಪಸು ಕಳಿಸಿದರು. ಅಂತೂ ಬೆಳಗಾಯಿತು. ಆ ಮಾವಿನ ಮರದಲ್ಲಿ ಕೇವಲ ಹಣ್ಣುಗಳಷ್ಟೇ ಅಲ್ಲ, ಇಬ್ಬರು ಹುಡುಗಿಯರ ಶವಗಳೂ ನೇತಾಡುತ್ತಿದ್ದವು. ಶೌಚಕ್ಕೆಂದು ಹೋದವರನ್ನು ಏಳು ಜನರ ಗುಂಪು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಹಿಂಸಿಸಿ ಕೊಂದು ಕೊನೆಗೆ ಮರಕ್ಕೆ ನೇತಾಡಿಸಿದ್ದರು.

ಒಟ್ಟಾದ ಜನ ಗದ್ದಲ ಎಬ್ಬಿಸಿ ಪೊಲೀಸ್ ಸ್ಟೇಷನ್ನಿಗೆ ಹೋದಮೇಲೆ ದೂರು ದಾಖಲಾಯಿತು.

ಅತ್ಯಂತ ಭೀಕರವಾದ ಈ ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದವರು ದಲಿತ ಬಾಲಕಿಯರು. ದೌರ್ಜನ್ಯ ಎಸಗಿದವರು ಯಾದವ ಸಮುದಾಯದವರು. ಯಾವ ಜಾತಿಯಾದರೇನು, ಅತ್ಯಾಚಾರವೆಂಬ ಗುನ್ನೆಯನ್ನಷ್ಟೇ ಪರಿಗಣಿಸಬೇಕೆಂದು ಕೆಲವರು ವಾದಿಸಬಹುದು. ಆದರೆ ಜಾತಿಗೂ, ದೌರ್ಜನ್ಯಕ್ಕೂ ನೇರ ಸಂಬಂಧವಿದೆ. ದೆಹಲಿಯ ನಿರ್ಭಯಾ ಸತ್ತಮೇಲೂ ಅವಳ ಗುರುತು ನಮಗೆ ಗೊತ್ತಾಗದೇ ಗುಪ್ತವಾಗಿಡಲ್ಪಟ್ಟಿದೆ; ಮುಂಬಯಿಯ ಜರ್ನಲಿಸ್ಟ್ ಹುಡುಗಿಯ ಹೆಸರು-ಗುರುತು ಯಾರಿಗೂ ತಿಳಿದಿಲ್ಲ; ಆದರೆ ಬಡಹಳ್ಳಿಯೊಂದರ ದಲಿತ ಹುಡುಗಿಯರಾದರೋ ನೇತಾಡುವ ಸ್ಥಿತಿಯಲ್ಲಿಯೇ ಟಿವಿ ಸ್ಕ್ರೀನ್, ಪತ್ರಿಕೆಗಳ ಮುಖಪುಟಗಳಲ್ಲಿ ಜಾಗ ಪಡೆದರು.

ಯಾದವರು ಆಳುವ ಜಾತಿಯಾಗಿರುವ ಉತ್ತರಪ್ರದೇಶದಲ್ಲಿ ಆ ಸಮುದಾಯಕ್ಕೆ ಈಗ ಎಲ್ಲಿಲ್ಲದ ಧೈರ್ಯ ಬಂದಿದೆ. ಆದರೆ ದಲಿತರ ಪಕ್ಷ ಆಳುವ ಪಕ್ಷವಾಗಿದ್ದಾಗ ದಲಿತರ ಆತ್ಮವಿಶ್ವಾಸ ಹೆಚ್ಚಿತೆಂದು ಹೇಳಬರುವುದಿಲ್ಲ. ದಲಿತರಿಗೆಂದೇ ಒಂದು ಪಕ್ಷ, ಅದರ ನಾಯಕಿಯೇ ಮುಖ್ಯಮಂತ್ರಿಯಾಗಿ ಇದ್ದಾಗಲೂ ಶೋಷಿತರು ನಿಸ್ಸಹಾಯಕರಾಗಿದ್ದರು. ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಅಧಿಕಾರದಲ್ಲಿ ಯಾರೇ ಇರಲಿ, ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಒಬ್ಬ ದಲಿತ ತಲೆಯೆತ್ತಿ ಆತ್ಮವಿಶ್ವಾಸದಲ್ಲಿ ನಡೆದರೆ, ಪ್ರಶ್ನೆ ಕೇಳಿದರೆ ಅವರನ್ನು ತುಳಿಯಲು ಪಾರಂಪರಿಕ ಪಾದಗಳು ಸಜ್ಜಾಗಿಯೇ ಇರುತ್ತವೆ. ಇದು ಭಾರತೀಯ ಜಾತಿಪದ್ಧತಿ ಎಂಬ ಕಟುವಾಸ್ತವ. ಆದರೆ ಮಾಯಾವತಿ ನಡೆಗಳ ಇತಿಮಿತಿಗಳೇನೇ ಇದ್ದರೂ ಆಕೆ ಬದಾಂವೋಂಗೆ ಬಂದು ಸಂತ್ರಸ್ತ ಕುಟುಂಬಗಳಿಗೆ ಪಕ್ಷದ ನಿಧಿಯಿಂದ ತಲಾ ಐದು ಲಕ್ಷ ಕೊಟ್ಟದ್ದು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ನೆರವಾಯಿತು; ಇಲ್ಲದಿದ್ದರೆ ತನಿಖೆ ಹಳ್ಳ ಹಿಡಿಯುತ್ತಿತ್ತು ಎನ್ನುವದನ್ನೂ ಅಲ್ಲಗಳೆಯುವಂತಿಲ್ಲ.

ಒಟ್ಟಾರೆ ದೇಶ ಜಾತಿವ್ಯವಸ್ಥೆಯ ಹಿಡಿತದಲ್ಲಿ ಈಗಲೂ ನಲುಗುತ್ತಿದೆ; ಅದರಲ್ಲೂ ಮಹಿಳೆ ಜಾತಿವ್ಯವಸ್ಥೆಯ ಬಲಿಪಶುವಾಗಿದ್ದಾಳೆ ಎನ್ನುವುದಕ್ಕೆ ಪುರಾವೆಯಾಗಿ ಹಲವಾರು ಪ್ರಕರಣಗಳು ಸಂಭವಿಸುತ್ತಿವೆ.

ಏನಿದು ಹೀಗೆ? ಏಕೆ ಹೀಗೆ?

ಎಷ್ಟು ಬರೆದರೂ, ಹೇಳಿದರೂ, ವಾದಿಸಿದರೂ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಲೇ ಇವೆ. ಬದಾವೂಂ ದುರ್ಘಟನೆ ನಡೆದ ಸುತ್ತಮುತ್ತ ಮತ್ತಷ್ಟು ಅಂಥ ವರದಿಗಳನ್ನು ಓದಿದೆವು. ಉತ್ತರ ಪ್ರದೇಶದಲ್ಲಿ ಜೂ. ೨೩ರಂದು ೭ ವರ್ಷದ ಹುಡುಗಿ ಶೌಚಕ್ಕೆಂದು ಹೊರಹೋದಾಗ ಗುಂಪು ಅತ್ಯಾಚಾರ ನಡೆಸಲಾಯಿತು. ಜೂ. ೨೨ರಂದು ಇಟಾವಾದಲ್ಲಿ ೧೫ ವರ್ಷದ ಹುಡುಗಿ ನೇಣುಹಾಕಿಕೊಂಡಳು. ಜಮೀನು ವಿವಾದದ ಕಾರಣಕ್ಕೆ ಇಟಾವಾ ಹುಡುಗಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಗುಂಪಿನ ವಿರುದ್ಧ ಅವಳು ದೂರು ಕೊಟ್ಟು ತಿರುಗಾಡಿದ್ದಳು. ಆದರೂ ಪೊಲೀಸರು ಬಂಧಿಸಲಿಲ್ಲ. ಆ ಗುಂಪು ಇವಳನ್ನೂ ಅತ್ಯಾಚಾರ ಮಾಡುವುದಾಗಿ ಹೆದರಿಸುತ್ತಲೇ ಇತ್ತು. ಅತ್ಯಾಚಾರಕ್ಕೊಳಗಾಗುವ ಭಯಕ್ಕೇ ಇಟಾವಾ ಹುಡುಗಿ ಆತ್ಮಹತ್ಯೆಗೆ ಶರಣಾದಳು. ಬದಾವೂಂ ಆಸುಪಾಸಿನಲ್ಲೇ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿ ನೇಣಿಗೇರಿಸಲಾಯಿತು. ಮಧ್ಯಪ್ರದೇಶದ ಭಿಲಾಯಿಖೇಡಾದಲ್ಲಿ ವಿವಾಹಿತ ಆದಿವಾಸಿ ಮಹಿಳೆಯ ಮೇಲೆ ಅವಳ ಗಂಡನೂ ಸೇರಿದಂತೆ ೧೦ ಜನ ಗುಂಪು ಅತ್ಯಾಚಾರ ನಡೆಸಿ ಅವಳ ಪುಟ್ಟ ಮಗನೆದುರು ಬತ್ತಲೆ ಮೆರವಣಿಗೆ ಮಾಡಿ, ಉಚ್ಚೆ ಕುಡಿಸಿದರು. ಅದಕ್ಕೆ ಕಾರಣ ಜಮೀನು ವಿವಾದ. ಹರ‍್ಯಾಣಾದ ಭಗಾನಾ ಹಳ್ಳಿಯ ೮೦ ಕುಟುಂಬಗಳು ತಮ್ಮ ಕೇರಿಯ ನಾಲ್ವರು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿ ರೈಲ್ವೆ ಹಳಿ ಪಕ್ಕ ಎಸೆದು ಹೋಗಿದ್ದಕ್ಕಾಗಿ ದೆಹಲಿಯ ಉರಿಯುವ ರಣಬಿಸಿಲಿನಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಮೇಘಾಲಯದ ಸಶಸ್ತ್ರ ಬಂಡುಕೋರರು ಲೈಂಗಿಕ ಕ್ರಿಯೆಗೆ ಸಹಕರಿಸದೆ ಪ್ರತಿರೋಧ ತೋರಿದಳೆಂದು ಒಬ್ಬಳನ್ನು ಗುಂಡುಹಾಕಿ ಕೊಂದರು. ಗುರ‍್ಗಾಂವ್‌ನ ೧೯ ವರ್ಷದ ಹುಡುಗಿ; ಬೆಂಗಳೂರಿನ ಐಟಿ ಉದ್ಯೋಗಿ; ಮಹಾರಾಷ್ಟ್ರದ ಬಸ್ ಕಂಡಕ್ಟರ್; ಜಾರ್ಖಂಡ್, ಪ. ಬಂಗಾಳ, ಜಮ್ಮು ಕಾಶ್ಮೀರ, ರಾಜಸ್ಥಾನ, ಗುಜರಾತ್ - ಹೀಗೆ ಎಲ್ಲೆಲ್ಲೂ ಅತ್ಯಾಚಾರ ಪ್ರಕರಣಗಳು ‘ದೈನಿಕ ಭಾಸ್ಕರ್’ನಲ್ಲಿ ವರದಿಯಾಗಿದ್ದವು.

ಬದಾವೂಂ ಪ್ರಕರಣ ಕುರಿತು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ಅತ್ಯಾಚಾರವೇನೂ ಅಂಥ ವಿಶೇಷ ಅಪರಾಧವಲ್ಲ, ಅದು ಅತ್ಯಂತ ಸಾಮಾನ್ಯ ಅಪರಾಧ ಎಂದು ವಿವರಿಸಿದ್ದರು. ಎಸ್‌ಪಿ ನಾಯಕ ನರೇಶ್ ಅಗರವಾಲ್ ‘ಅತ್ಯಾಚಾರ ಆರೋಪ ನಿಜವಲ್ಲ, ಪ್ರಾಣಿಗಳಲ್ಲೂ ಕೂಡ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕ ಸಾಧ್ಯವಿಲ್ಲ’ ಎಂದು ಹೇಳಿದ್ದರು. ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ‘ಅತ್ಯಾಚಾರ ನಡೆಸುವುದು ಒಮ್ಮೊಮ್ಮೆ ಸರಿ, ಒಮ್ಮೊಮ್ಮೆ ತಪ್ಪು’ ಎಂದು ಹೇಳಿದರು. ಛತ್ತೀಸ್‌ಗಡದ ಗೃಹಮಂತ್ರಿ ರಾಮಸೇವಕ ಪೈಕಾ (ಬಿಜೆಪಿ) ‘ಅತ್ಯಾಚಾರ ಆಕಸ್ಮಿಕವಾಗಿ ಆಗಿಬಿಡುತ್ತದೆ, ಯಾರೂ ಅದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ’ ಎಂದು ಸಮರ್ಥಿಸಿಕೊಂಡರು. ಮಹಾರಾಷ್ಟ್ರದ ಗೃಹಮಂತ್ರಿ ಆರ್. ಆರ್. ಪಾಟೀಲ್ (ಎನ್‌ಸಿಪಿ) ‘ಅತ್ಯಾಚಾರ ತಡೆಗಟ್ಟಲು ಸಾಧ್ಯವೇ ಇಲ್ಲ, ಏಕೆಂದರೆ ಬಹಳಷ್ಟು ಮನೆಗಳಲ್ಲಿ ಕುಟುಂಬದಲ್ಲೇ ಅತ್ಯಾಚಾರ ಸಂಭವಿಸುತ್ತದೆ, ಅಲ್ಲೆಲ್ಲ ಪೊಲೀಸರನ್ನು ನಿಲ್ಲಿಸಬರುವುದಿಲ್ಲ’ ಎಂದರು! ನಮ್ಮ ಪ್ರಧಾನಮಂತ್ರಿಗಳು ಎಷ್ಟು ದಿನವಾದರೂ ಬದಾವೂಂ ಬಗೆಗೆ ಮಾತೇ ಆಡಲಿಲ್ಲ. ಪಕ್ಷಭೇದವಿಲ್ಲದೆ ಜನನಾಯಕರು ಮಹಿಳೆಯರನ್ನು ತಾವು ಹೇಗೆ ಪರಿಭಾವಿಸುತ್ತೇವೆಂದು ತಿಳಿಸಿಕೊಟ್ಟರು.

ಅನಾದಿಯಿಂದಲೂ ಇಲ್ಲಿರುವ ರೇಪ್ ಸಂಸ್ಕೃತಿ ಈಗ ಲಿಂಗದ್ವೇಷದ ರೂಪ ಪಡೆದು ಮುಂದುವರೆಯುತ್ತಿದೆಯೆ? ಗಂಡಿನ ಸೇಡು ತೀರಿಸಿಕೊಳ್ಳುವಿಕೆಗೆ ಒಂದು ಉಪಕರಣವಾಗಿ ಹೆಣ್ಣಿನ ದೇಹ ಬಳಕೆಯಾಗುತ್ತಿದೆಯೆ? ತಮ್ಮ ‘ಆಸ್ತಿ’ಯಾದ ಹೆಣ್ಣನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ಗಂಡ, ಕುಟುಂಬ, ಸಮಾಜ ಭಾವಿಸಿವೆಯೆ? ಮಹಿಳಾ ಮಂತ್ರಿ-ಮುಖ್ಯಮಂತ್ರಿ, ಮಹಿಳಾ ಪರ ಕಾನೂನು, ಮಹಿಳಾ ಪೊಲೀಸ್ ಸ್ಟೇಷನ್, ಮಹಿಳಾ ಮೀಸಲಾತಿ, ಮಹಿಳಾ ಆಯೋಗ, ರೇಪ್ ಸೆಲ್ ಎಲ್ಲ ಇದ್ದರೂ ಮಹಿಳೆಯರ ಧೈರ್ಯ ದಿನದಿಂದ ದಿನಕ್ಕೆ ಏಕೆ ಕಡಿಮೆಯಾಗುತ್ತಿದೆ?

ಇಂಥ ಎಲ್ಲ ಪ್ರಶ್ನೆಗಳ ನಡುವೆ ಸಹಸ್ರಮಾನಗಳಿಂದ ಗೆದ್ದವ ಸೋತವನ ಹೆಣ್ಣನ್ನು ಉಪಭೋಗಿಸುವುದು ನ್ಯಾಯ ಎಂದುಕೊಂಡುಬಂದ ವ್ಯವಸ್ಥೆಯಲ್ಲಿ ಎಲ್ಲವೂ ಒಂದೇ ಸಲ ಸರಿಯಾಗಿಬಿಡುವುದಿಲ್ಲ; ದೀರ್ಘಕಾಲೀನ ನಡಿಗೆಯ ಮೊದಲ ಹೆಜ್ಜೆಗಳನ್ನಾದರೂ ಮುಂದಿಡಬೇಕಾದ ಅನಿವಾರ್ಯ ಮತ್ತು ತುರ್ತು ಪರಿಸ್ಥಿತಿ ಈಗ ಬಂದಿದೆ ಎಂದಷ್ಟೇ ಅರ್ಥವಾಯಿತು. ಸಂವಿಧಾನ ಕೈಲಿ ಹಿಡಿದು ನಿಂತ ಅಂಬೇಡ್ಕರರ ಧೀರೋದಾತ್ತ ನಿಲುವಿನ ಮೂರ್ತಿಯೂ, ನೇತಾಡುವ ಆ ಎರಡು ದೇಹಗಳೂ ಬಿರುಬಿಸಿಲಿನ ಧಗೆಯ ನಡುವೆ ಒಟ್ಟೊಟ್ಟಿಗೆ ಕಣ್ಣು ತುಂಬತೊಡಗಿದವು..



Wednesday 25 June 2014

ದಿನಚರಿಯ ಕೆಲವು ಪುಟಗಳೂ.. ಹಲವು ಪ್ರಶ್ನೆಗಳೂ..




ಅಕ್ಟೋಬರ್ ೧೦, ಗುರುವಾರ. ೨೦೧೩.

ಬೆಳಗಿನಿಂದ ಒಂಥರಾ ತಳಮಳ ಹೊಟ್ಟೆಯೊಳಗೆ ಸುಳಿಯುತ್ತಿದೆ. ಸುಮ್ಮನೆ ‘ನನ್ನ ಸತ್ಯಶೋಧನೆಯ ಕತೆ’ಯ ಒಂದು ಪುಟ ತೆಗೆದೆ: ಕೊನೆಯ ಮಗ ಹುಟ್ಟಿದ ಏಳು ವರ್ಷಗಳ ತರುವಾಯ ಸಂಪೂರ್ಣ ಬ್ರಹ್ಮಚರ್ಯ ಸ್ವೀಕರಿಸುವ ಕುರಿತು ಹೆಂಡತಿಯ ಬಳಿ ಚರ್ಚಿಸಿದ್ದನ್ನು ಗಾಂಧಿ ಬರೆದುಕೊಂಡ ಪುಟ. ಎಲ್ಲ ಖುಲ್ಲ. ಮನಸಿಗೆ ಅಕ್ಷರ ರೂಪ ನೀಡಿದಂತೆನಿಸುವ ಸಾಲುಗಳು..

ದೇವಸ್ಥಾನಕ್ಕೆ ಅಂತ ಹೊರಟು ಎಷ್ಟೋ ವರ್ಷಗಳಾಗಿದ್ದವು. ಇನ್ನೇನು ಮಧ್ಯಾಹ್ನ ಹೊರಡಬೇಕು. ಹಟ್ಟಿಕೇರಿಯ ನಾಗಯಲ್ಲಮ್ಮ ದೇವಸ್ಥಾನದಲ್ಲಿ ನಡೆಯಲಿದೆ ಎನ್ನುವ ಮಡೆಸ್ನಾನ ಕುರಿತು ಮಾತನಾಡಿ ಬರುವ ಬನ್ನಿ ಎಂದು ಯಾರು ಯಾರಿಗೋ ಹೇಳಿದ್ದೇವೆ, ಹಲವು ಕಾರಣಗಳಿಂದ ಬರಲಾರೆವೆಂದು ಆಪ್ತಮಿತ್ರರು ಹೇಳತೊಡಗಿದ್ದಾರೆ. ವಿಷ್ಣು ನಾಯ್ಕರು ಆರಾಮಿಲ್ಲದೆ ಮಲಗಿದ್ದಾರೆ. ಯಾರುಯಾರು ಬಂದಾರು?

ಹಟ್ಟಿಕೇರಿ. ಮುಂಬೈಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಂಕೋಲಾ ಬಳಿ ಇರುವ ಪುಟ್ಟ ಗ್ರಾಮ. ೨೨ ವರ್ಷ ಕೆಳಗೆ ರಾಧಾ ಎಂಬ ಅಂಗನವಾಡಿ ಕಾರ್ಯಕರ್ತೆಗೆ ‘ದೇವಿ’ ಮೈಮೇಲೆ ಬರುತ್ತಿದ್ದಳು. ನಂತರ ನಾಗದೇವತೆ ಮೈದುಂಬತೊಡಗಿತು. ತನ್ನ ಪುಟ್ಟ ಮನೆಯ ಜಗಲಿ ಮೇಲೆ ‘ನಾಗಯಲ್ಲಮ್ಮ’ ದೇವಿಯ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತ, ಮೈದುಂಬಿದಾಗ ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಇದ್ದರು. ಕಾಯಿಲೆ, ವ್ಯಾಜ್ಯ, ಕೌಟುಂಬಿಕ ತಾಪತ್ರಯ ಹೀಗೆ ಹತ್ತು ಹಲವು ಸಮಸ್ಯೆಗಳನ್ನಿಟ್ಟುಕೊಂಡು ಬಂದವರಿಗೆ ರಾಧಾ ಉತ್ತರ ಕೊಡುತ್ತಿದ್ದರು. ಹಲವರಿಗೆ ಅವರ ಸಲಹೆ, ನಿರ್ದೇಶನಗಳು ನಿಜವಾದವು. ಬರಬರುತ್ತ ನಂಬಿ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು.

ಫೋಟೋದಲ್ಲಿದ್ದ ದೇವರು ಕಲ್ಲಿನ ಮೂರ್ತಿಯಾಯಿತು. ಜಗಲಿ ಕಟ್ಟೆಯಲ್ಲಿ ಪುಟ್ಟ ಗುಡಿ ತಲೆಯೆತ್ತಿತು. ಕೊನೆಗೆ ಮನೆಯಿದ್ದ ಜಾಗವೇ ಮಂದಿರವಾಯಿತು. ಆಚೀಚೆ ಮನೆಗಳಿರುವ ಕೇರಿಯಲ್ಲಿ ರಸ್ತೆಗೆ ತಾಗಿಕೊಂಡೇ ಪುಟ್ಟ ಕಾಂಕ್ರೀಟ್ ದೇವಸ್ಥಾನ ಬೆಳೆಯಿತು. ಒಳಗೆ ಆಮೆಯಾಕಾರದ ಬಲಿಹಾಸು. ನಂದಿ. ಹೊರಗೊಂದು ಧ್ವಜದೀಪಕಂಬ. ನೂರಿನ್ನೂರು ಜನ ಕುಳಿತರೆ ತುಂಬಿ ತುಳುಕುವಷ್ಟು ದೊಡ್ಡ ಆವಾರ.

ನವರಾತ್ರಿಯಲ್ಲಿ ಉತ್ಸವ, ಭಜನೆ, ಪಲ್ಲಕ್ಕಿ, ತುಲಾಭಾರ ಇನ್ನಿತರ ವಿಶೇಷ ಪೂಜೆಗಳು ನಡೆಯತೊಡಗಿದವು. ಪ್ರಸಾದ ವಿನಿಯೋಗ ಮೊದಲಾಯಿತು. ಅನ್ನಸಂತರ್ಪಣೆ ರಸ್ತೆ ಮೇಲೇ ನಡೆಯಬೇಕು ಏಕೆಂದರೆ ಆಚೀಚೆ ಮತ್ತೆ ಜಾಗವಿಲ್ಲ. ಕೆಲ ಭಕ್ತಾದಿಗಳು ಮಡೆಸ್ನಾನದ ಉರುಳುಸೇವೆಯನ್ನು ಶುರುಮಾಡಬೇಕೆಂಬ ಬೇಡಿಕೆ ಇಟ್ಟ ಪರಿಣಾಮ ದಸರಾ ಹಬ್ಬದ ಕೊನೆಯ ದಿವಸ ಅನ್ನಸಂತರ್ಪಣೆ ಆದಮೇಲೆ ಉಂಡುಬಿಟ್ಟೆದ್ದ ಎಲೆಗಳ ಮೇಲೆ ಉರುಳುಸೇವೆ ಮಾಡುವ ಪರಿಪಾಠ ಈಗೆರೆಡು ಮೂರು ವರ್ಷಗಳಿಂದ ಶುರುವಾಗಿತ್ತು.

ಕೋಮು ಸೌಹಾರ್ದ ವೇದಿಕೆ ಅದನ್ನು ವಿರೋಧಿಸಿ ಪ್ರತಿಭಟಿಸಿತು. ಸ್ಥಳೀಯರೇ ಆದ ಕೆಕೆಎಸ್‌ವಿಯ ರಮೇಶ್ ದಕ್ಷಿಣ ಕನ್ನಡದಲ್ಲಿರುವ ಮಡೆಸ್ನಾನ ಪದ್ಧತಿ ಇಲ್ಲಿ ಮುಂದುವರೆಯಲು ಬಿಡಬಾರದೆಂದು ಶತಾಯಗತಾಯ ಹೋರಾಡಿದರು. ಕಳೆದ ಬಾರಿ ಅವರೊಡನೆ ಕನ್ನಡ ಸಾಹಿತ್ಯ ಪರಿಷತ್ತೂ ಸೇರಿ ಪ್ರತಿಭಟನೆ ಉಗ್ರವಾಯಿತು. ಉರುಳುವವರ ನಡುವೆಯೇ ಹೋಗಿ, ನಿಲ್ಲಿಸಿ ಎಂದು ತಡೆಗಟ್ಟಿ, ಚಕಮಕಿ ಹೊಯ್‌ಕೈ ಆಗುವ ಮಟ್ಟಕ್ಕೆ ಹೋಯಿತು. ನಂತರ ಗ್ರಾಮಸ್ಥರು ತಮ್ಮೂರಿನಿಂದ ಅಂಕೋಲಾ ತಹಶೀಲ್ದಾರ್ ಕಚೇರಿ ತನಕ ಮೆರವಣಿಗೆ ಬಂದು ಆಫೀಸಿಗೆ ಮುತ್ತಿಗೆ ಹಾಕಿ ರಮೇಶ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ದೂರು ಕೊಟ್ಟರು. ಕೊನೆಕೊನೆಗೆ ರಮೇಶ್ ಏಕಾಂಗಿಯಾಗಿ ಕೋರ್ಟುಕಚೇರಿ, ಎಸ್‌ಪಿ ಕಚೇರಿ ಅಲೆದರು.

ಈ ವರ್ಷ ಒಳಗೊಳಗೇ ಬುಸುಗುಡುವ ಸದ್ದು ಕೇಳತೊಡಗಿತ್ತು. ಕೆಕೆಎಸ್ವಿಯ ರಮೇಶ್, ಕಸಾಪದ ರೋಹಿದಾಸ ನಾಯಕ್ ತಾವು ಮಡೆಸ್ನಾನ ನಡೆಯಲು ಬಿಡುವುದಿಲ್ಲವೆಂದು ಪತ್ರಿಕಾ ಹೇಳಿಕೆ, ಸಂದರ್ಶನ ಕೊಡುವಾಗ ಅತ್ತ ಹಟ್ಟಿಕೇರಿಯಲ್ಲಿ ತೆರೆಮರೆಯಲ್ಲಿ ತಯಾರಿ ನಡೆಯತೊಡಗಿದೆಯೆಂಬ ವದಂತಿ ಕೇಳಿಬರುತ್ತಿತ್ತು. ಧರ್ಮರಕ್ಷಕರು ಮಧ್ಯ ಪ್ರವೇಶಿಸುವ ಎಲ್ಲ ಲಕ್ಷಣಗಳು ಕಾಣತೊಡಗಿದ್ದವು. ಈ ಸಲ ಏನಾದೀತು? ದ್ವಂದ್ವ ಅಭಿಪ್ರಾಯಗಳಿದ್ದವು.

ರಮೇಶ್ ಸಂಗಡಿಗರ ಉದ್ದೇಶವನ್ನೇ ಹೊತ್ತು, ಅವರ ಪ್ರಯತ್ನಗಳಿಗೆ ಪೂರಕವಾಗಿ ಆದರೆ ಕೊಂಚ ಭಿನ್ನ ದಾರಿಯಲ್ಲಿ ಹೀಗೇಕೆ ಒಮ್ಮೆ ಪ್ರಯತ್ನಿಸಬಾರದು? ಆಕೆಯ ಬಳಿಯೇ ಹೋಗಿ ವಿಷಯ ಪ್ರಸ್ತಾಪ ಮಾಡಿ, ‘ನಾವು ನಿಮ್ಮ ಶ್ರದ್ಧೆಯ ದೇವಸ್ಥಾನ ಮುಚ್ಚಿ ಎನ್ನುವುದಿಲ್ಲ, ದಸರಾ ನಿಲ್ಲಿಸಿ ಎನ್ನುತ್ತಿಲ್ಲ. ಆದರೆ ಎಂಜಲೆಲೆ ಮೇಲೆ ಉರುಳುವುದು ಆತ್ಮವನ್ನು ಹೀನಗೊಳಿಸುವ ಕ್ರಿಯೆ, ಅದನ್ನು ನಿಲ್ಲಿಸಿ’ ಎಂದಷ್ಟೇ ಹೇಳಿದರೆ ಹೇಗೆ? ಈ ಯೋಚನೆ ಬಂದಿದ್ದೇ ಸಮಾನ ಮನಸ್ಕರನ್ನು ಸಂಪರ್ಕಿಸಿದೆವು. ಕೊನೆಗೆ ಮಡೆಸ್ನಾನ ನಡೆಯುವ ನಾಲ್ಕು ದಿನ ಮೊದಲು ಅರ್ಚಕಿ ರಾಧಾ ಅವರ ಭೇಟಿ ಮಾಡುವುದೆಂದು ನಿಶ್ಚಯವಾಯಿತು. ಅದೇ ಭಾಗದವರಾದ ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ ಆ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಸಂಪರ್ಕಿಸಿದರು.

ಅಕ್ಟೋಬರ್ ೧೦. ಮಧ್ಯಾಹ್ನ ಹಟ್ಟಿಕೇರಿಗೆ ನಾನು, ಗಂಗಾಧರ ಹಿರೇಗುತ್ತಿ, ಹನುಮಂತ ಹಾಲಿಗೇರಿ (ಇಬ್ಬರೂ ಪತ್ರಕರ್ತರು), ನಾಗರಾಜ ನಾಯಕ್(ನ್ಯಾಯವಾದಿ), ಶಾಂತಾರಾಂ ನಾಯಕ್, ಜಗದೀಶ ಶೀಳ್ಯ(ನಿವೃತ್ತ ಉಪನ್ಯಾಸಕರು), ಬಾಬು ಶೇಖ್(ಸಮಾಜ ಸೇವಕರು) ಹಾಗೂ ಹಟ್ಟಿಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಾರುತಿ ನಾಯ್ಕ್ ಹೋದೆವು. ನಮಗಿಂತ ಕೊಂಚ ಮೊದಲೇ ಭೇಟಿ ಕೊಟ್ಟ ಪ್ರಜಾವಾಣಿಯ ಸಿದ್ಧಲಿಂಗ ಸ್ವಾಮಿ ವಸ್ತ್ರದ್ ಸೂಕ್ತ ಭೂಮಿಕೆ ಸಿದ್ಧಪಡಿಸಿಟ್ಟಿದ್ದರು. ಸಾಲಂಕೃತ ನಾಗಯಲ್ಲಮ್ಮ ದೇವಿ ಕಂಗೊಳಿಸುತ್ತಿದ್ದಳು. ಆವಾರದೊಳಗೆಲ್ಲ ಕರ್ಪೂರ, ಊದುಗಡ್ಡಿ, ಹೂವಿನ ಸಮ್ಮಿಶ್ರ ಪರಿಮಳ. ಮನೆಗೆ ಬಂದ ನೆಂಟರನ್ನು ಕರೆವಂತೆ ಒಳ ಕರೆದು ಉಪಚರಿಸಿದರು. ಪಂಚಾಮೃತ, ಪ್ರಸಾದ ಹಾಗೂ ಭಂಡಾರಗಳ ವಿನಿಯೋಗವಾಯಿತು. ನವರಾತ್ರಿಯಿಡೀ ಉಪವಾಸವಿದ್ದು ದೇವಿಯನ್ನು ಪೂಜಿಸುವುದಾಗಿ ಹೇಳಿಕೊಂಡ ರಾಧಾ ಸವದತ್ತಿ ಎಲ್ಲಮ್ಮನ ಮಣಿಸರವನ್ನೂ, ಲಿಂಗ ರುದ್ರಾಕ್ಷಿಯನ್ನೂ ಕೊರಳಲ್ಲಿ ಧರಿಸಿದ್ದರು. ಒಂದಷ್ಟು ಜನ ಕೇರಿಯವರೂ ಬಂದು ಸೇರಿದರು. ಅಲ್ಲಿ ನಡೆಯುವ ಸೇವೆಗಳ ವಿವರ, ದೇವಸ್ಥಾನದ ಮಹಿಮೆ, ರಾಧಾ ನಾಯ್ಕ್ ಅವರ ಭಕ್ತಾನುಯಾಯಿಗಳ ಸಂಖ್ಯೆಯ ಕುರಿತು ಹೇಳುತ್ತಿರುವಾಗ ಅವರಲ್ಲಿ ಕೆಲವರಿಗೆ ನಮ್ಮ ಗುರುತು ಹತ್ತಿತು.

ಇಲ್ಲಿ ನಡೆಯುತ್ತಿರುವ ಮಡೆಸ್ನಾನ ಕುರಿತು ಮಾತನಾಡಲು ಬಂದಿದ್ದೇವೆ ಎಂದ ಕೂಡಲೇ ನಾವು ‘ಅವರ’ ಕಡೆಯವರು ಎಂದು ಭಾವಿಸಿ ರಾಂಗಾದರು. ‘ನಮ್ಗೆ ಮಡೆಸ್ನಾನ ಅಂದ್ರೆ ಏನಂತ್ಲೆ ಗೊತ್ತಿಲ್ಲ. ಇಲ್ಲಿ ಅಂಥದ್ದೇನೂ ನಡಿಯುದಿಲ್ಲ. ತಮ್ ಪೋಟ ಪೇಪರ್ರಲ್ಲಿ ಬರಲಿ ಅಂತ ಅವ್ರು ಸುಂಸುಮ್ನೆ ಗಲಾಟೆ ಮಾಡಿ ಹೋಗಿದಾರೆ. ಬರಲಿ ಅವ್ರು ಈ ಸಲ’ ಎನ್ನುತ್ತ ಧ್ವನಿಗಳು ತಾರಕಕ್ಕೇರಿದವು. ಜನಪರವಾದ ಕೆಲಸ ಮಾಡುವ ಕೋಮು ಸೌಹಾರ್ದ ವೇದಿಕೆ ಮತ್ತು ರಮೇಶ್ ಬಗೆಗೆ ಅವರಿಗಿರುವ ಸಿಟ್ಟು ನೋಡಿ ಖೇದವಾಯಿತು. ಪೇಪರಿನಲ್ಲಿ ಫೊಟೋ ಬರಿಸಿಕೊಳ್ಳುವುದು ಅವರ ಉದ್ದೇಶ ಅಲ್ಲವೆಂದೂ, ಕಾನೂನು ವ್ಯಾಖ್ಯಾನ ಏನಿದೆಯೆಂದೂ ತಿಳಿಸಹೊರಟೆವು. ಸೇರಿದ ಜನರೆಲ್ಲ ಒಟ್ಟಿಗೇ ವಾದ ಮಾಡತೊಡಗಿದರು. ಮಡೆಸ್ನಾನ ಎನ್ನುವ ಪದವೇ ತಮಗೆ ಗೊತ್ತಿಲ್ಲವೆಂದರು. ಅದು ಇಲ್ಲಿ ಎಲ್ಲಿ ನಡೆಯುತ್ತಿದೆ ಎಂದು ಮರುಪ್ರಶ್ನಿಸಿದರು. ಕೊನೆಗೆ ನಮ್ಮ ವಕೀಲರು, ‘ಆಯಿತು, ನಡೆಯುತ್ತಿಲ್ಲವಾದರೆ ಒಳ್ಳೆಯದಾಯಿತು. ನಾವು ನಿಮಗೆ ಧನ್ಯವಾದ ಹೇಳಿ ಹೋಗುತ್ತೇವೆ ಅಷ್ಟೇ’ ಎಂದು ಸುಮ್ಮನಾಗಿಸಿದರು.

ಮುಕ್ಕಾಲು ತಾಸು ರಾಧಾ ಮತ್ತು ಅಲ್ಲಿ ಸೇರಿದವರೊಡನೆ ನಡೆದ ಮಾತುಕತೆಯಲ್ಲಿ ಹೀಗೆ ಹೇಳಿದೆವು: ‘ನಮಗೆ ಈ ದೇವರ ಮೂರ್ತಿ ಮೇಲೆ ನಂಬಿಕೆ ಇದೆಯೋ ಇಲ್ಲವೋ, ಆದರೆ ನಿಮ್ಮ ಮನಸಲ್ಲಿರೋ ಒಳ್ಳೆತನವೇ, ಸದಿಚ್ಛೆಯೇ ದೇವರು. ಅಂಥ ಆತ್ಮದ ದೇವ್ರನ್ನ ಎಂಜಲು ಮೇಲೆ ಉರುಳ್ಸೋದು ಕೀಳಲ್ಲವಾ? ನೀವು ಈ ದೇಶದ ಸುಪ್ರೀಂಕೋರ್ಟು, ಸಂವಿಧಾನ ಗೌರವಿಸ್ತೀರಿ ಅಂತಾದ್ರೆ ಈಗ ಮಡೆಸ್ನಾನ ನಿಷೇಧ ಆಗಿದೆ, ಮೂಢನಂಬಿಕೆ ನಿಷೇಧ ಕಾನೂನು ಬರ್ತಿದೆ ಅಂತ ತಿಳಕೊಳ್ಳಿ. ಆದ್ರೂ ಅಂಥದ್ನ ನಡೆಸಕ್ಕೆ ಹೋದ್ರೆ ರಾಜ್ಯದ ಎಲ್ಲ ಕಡೆಯಿಂದ ಸಂಘಟನೆಗಳು ಬರ್ತಾವೆ, ಪ್ರತಿಭಟನೆ ನಡೆಯುತ್ತೆ, ಸುಬ್ರಹ್ಮಣ್ಯದಲ್ಲಿ ಆಯ್ತಲ್ಲ ಹಾಗೆ ಗಲಾಟೆ ಆಗುತ್ತೆ, ಪೋಲೀಸ್ನೋರು ಬರ್ತಾರೆ. ನಿಮ್ಮ ಧಾರ್ಮಿಕ ಸ್ಥಳದಲ್ಲಿ ಅಂಥದೆಲ್ಲ ಇರ್ಬೇಕಾ?’

‘ನೀವು ಬರೀ ಹಿಂದೂಗಳ ಸುದ್ದಿಗೇ ಬರ‍್ತಿರ, ಬರಿತಿರ, ಉಳಿದೋರು ಮಾಡಿದ್ದಕ್ಕೆ ಏನಾದ್ರೂ ಹೇಳ್ತಿರಾ?’ ಎಂಬ ಪುರಾತನ ಪ್ರಶ್ನೆ ಆ ಗುಂಪಿನ ನಡುಮಧ್ಯದಿಂದ ತೂರಿಬಂತು.

‘ದೇವ್ರಿಗೆ ಹಿಂದೂ, ಮುಸ್ಲಿಂ ಅಂತ ಹೆಸರಿಡಬಾರ್ದು, ದೇವರು ಎಲ್ರಿಗೂ ದೇವ್ರೇ. ಅವನು ಒಬ್ನೇ. ನೋಡಿ ಇವ್ರು ಬಾಬು ಶೇಖ್ ಅಂತ, ಸಮಾಜ ಸೇವಕರು, ಈಗ ಇಲ್ಲಿ ಬಂದಿದಾರೆ. ಅವರಲ್ಲೂ ಸಹಾ ಮೊದ್ಲಿನ ಎಷ್ಟೋ ಆಚರಣೆ ನಿಲ್ಸಿದಾರೆ, ಆದರೆ ಅದು ನಮ್ಗೆ ಗೊತ್ತಾಗಿರಲ್ಲ ಅಷ್ಟೇ..’ ಎಂದೆವು. ಗುಂಪಿನಲ್ಲೊಬ್ಬ ಮುಸ್ಲಿಂ ಇದ್ದಾರೆಂದ ಕೂಡಲೇ ಮಾತಿನ ಧಾಟಿ ಬದಲಾಯಿತು. ‘ಇಲ್ಲಿಗೆ ಸಾಯಬರೂ ಬಾಳಾ ಜನ ಬರ್ತಾರೆ, ನಡ್ಕೋತಾರೆ’ ಎಂದು ಮೆದುವಾದರು.

ಕೆಲವರು, ‘ನಾವೀಗ ಆಗ್ಲೆ ಹರಕೆ ಕಟ್ಕಂಡಿದಿವಲ್ಲ, ಏನ್ಮಾಡಬೇಕು?’ ಎಂದು ದನಿಯೇರಿಸಿದರು. ‘ಎಲ್ಲಕ್ಕೂ ಒಂದು ಪರ್ಯಾಯ ಅಂತ ಇರುತ್ತೆ, ಅನುಕೂಲ ಸಿಂಧು ಅಂತ ಇರುತ್ತೆ. ಅದ್ರ ಬದ್ಲು ಏನು ಮಾಡ್ಬೇಕು ಅಂತ ಅರ್ಚಕಿ ಸೂಚಿಸ್ತಾರೆ, ಅದನ್ನೇ ಮಾಡಿದರಾಯ್ತು. ಹೇಳಿ ರಾಧಾಬಾಯಿ ಅವರೇ, ಮಡೆಸ್ನಾನ ಅಂತ ಉರುಳಲಿಕ್ಕೆ ಜನ ಬಂದ್ರೆ ಅದ್ರ ಬದಲು ಏನು ಮಾಡ್ಬಹುದು ಅಂತೀರಾ?’ ಎಂದೆವು. ಚರ್ಚೆಯ ಬಳಿಕ ‘ದೀಡು ನಮಸ್ಕಾರ’ ಮಾಡಬಹುದು ಎಂದಾಯಿತು.

‘ಪತ್ರಿಕೆಗಳೋರು ನೋಡಿ ಒಬ್ರೂ ನಿಮ್ಮಂಗೆ ಇಲ್ಲಿಗೆ ಬರಲಿಲ್ಲ, ನಮ್ಮನ್ನ ಮಾತಾಡ್ಸಲಿಲ್ಲ, ತಮಗಿಷ್ಟ ಬಂದಂಗೆ ಒಬ್ಬೊಬ್ರು ಒಂದೊಂದು ತರ ಬರ್ದಿದಾರೆ, ಯಾರು ಹೇಳಿದ್ದು ಅವ್ರಿಗೆ ಇದನ್ನೆಲ್ಲ?’ ಎಂದು ತಾವು ಕತ್ತರಿಸಿಟ್ಟುಕೊಂಡ ಪತ್ರಿಕಾ ವರದಿಗಳನ್ನು ತೋರಿಸಿದರು. ದೇವರು ಮೈಮೇಲೆ ಬರುವುದು ಮೂಢನಂಬಿಕೆ ಎಂದು ಬರೆದಿದ್ದರ ಬಗ್ಗೆ ಸಿಟ್ಟಾದರು. ‘ದೇವ್ರು ಮನುಷ್ರ ಮೈಮೇಲೆ ಬರಕ್ಕಾಗುತ್ತಾ? ದೇವ್ರು ಬಂದ್ರೆ ಮನಷ ತಡಕಂಡಾನಾ? ಈ ದೇಹ ಸುಟ್ಟು ಉರದೋಗುತ್ತೆ. ಅದೊಂದು ಗಾಳಿ ತರ, ಶಕ್ತಿ, ನಮ್ಮೊಳಗೆ ತುಂಬಕಳತ್ತೆ. ಆಗ ಅದೇನು ನುಡೀಬೇಕೋ ಹಂಗೆ ಮಾತ್ನ ನಂ ನಾಲ್ಗೆಯಿಂದ ನುಡಸುತ್ತೆ ಅಷ್ಟೇ’ ಎಂದರು.

ನಿಜ, ನಾವು ಇಂಥ ಸೂಕ್ಷ್ಮ ವಿಷಯಗಳನ್ನು ನೇರ ಅವರನ್ನು ನೋಡದೆ, ಮಾತಾಡದೆ ವರದಿ ಮಾಡಬಾರದು. ಮೊಬೈಲಿನಲ್ಲಿ ಸಂಪರ್ಕ ಸಾಧಿದರೂ ಮುಖಾಮುಖಿ ಸಂಪರ್ಕ, ಮಾತುಕತೆ ರೂಪುಗೊಳಿಸುವ ಅಭಿಪ್ರಾಯಗಳು ಬೇರೆ, ದೂರನಿಂತು ಕೇಳಿ ಮಾಡುವ ವರದಿ ಬೇರೆ ಎಂದು ಎಲ್ಲರಿಗೂ ಆ ಕ್ಷಣ ಅನಿಸಿತು.

ನಾವು ಅವರಿಗೆ ಹೇಳಬೇಕೆಂದು ಏನೇನೋ ಮಾತುಗಳನ್ನು ಸಂಗ್ರಹದಲ್ಲಿಟ್ಟುಕೊಂಡು ಹೋಗಿದ್ದೆವು. ಅವರು ಹೇಗೆ ಹೇಳಿದರೆ ಏನು ಹೇಳಬೇಕೆಂಬ ವರಸೆಗಳೆಲ್ಲ ಸಿದ್ಧವಾಗಿದ್ದವು. ಆದರೆ ಅದ್ಯಾವ ಮಾತನ್ನೂ ಎತ್ತಲಾಗಲಿಲ್ಲ. ನಾವಂದುಕೊಂಡಂತೆ ಆಡಿ ಬರಲು ಇದೇನು ಭಾಷಣ-ಸೆಮಿನಾರ್ ಅಲ್ಲವಲ್ಲ. ಆ ಕ್ಷಣ ಅಲ್ಲಿ ಸೇರುವ ಜನ, ಅವರ ಪ್ರತಿಕ್ರಿಯೆಗಳಿಗೆ ತಕ್ಕಂತೆ ನಮ್ಮ ವಿಚಾರ-ನಡೆಗಳೂ ರೂಪುಗೊಂಡವು. ಆಶಯ, ವಾಸ್ತವಗಳು ರೂಪುಗೊಳ್ಳುವುದು, ಭಿನ್ನವಾಗುವುದು ಹೀಗೇ ಇರಬಹುದೆ?

ಹೊರಡುವಾಗ ಪತ್ರಿಕೆಗಳಲ್ಲಿ ಒಬ್ಬೊಬ್ಬರು ಒಂದೊಂದು ತರಹ ಬರೆಯುವುದು ಬೇಡ, ನೀವೇ ಒಂದು ಪತ್ರಿಕಾಗೋಷ್ಟಿ ಕರೆದು ಹೇಳಿಕೆ ನೀಡಿ ಎಂದೆವು. ಅದು ಅವರ ಮನಸಿನೊಳಗೆ ಹೋಗಲಿಲ್ಲ. ಕೊನೆಗೆ ಬೀಳ್ಕೊಡುತ್ತ ದಸರೆಗೆ ಬನ್ನಿ ಎಂದು ಕರೆದರು.

ಅಲ್ಲಿಂದ ಹೊರಬಂದ ಮೇಲೆ ಒಟ್ಟಿಗೇ ಚರ್ಚಿಸಿ ಹೀಗೆ ಅಭಿಪ್ರಾಯಪಟ್ಟೆವು: ಈ ಸಲಕ್ಕೆ ನಾವು ಅವರನ್ನು ನಂಬೋಣ. ಈಗ ನಡೆಸಿದ ಮಾತುಕತೆಯನ್ನೇ ಮರುದಿನ ಪತ್ರಿಕೆಗಳಲ್ಲಿ ಸುದ್ದಿಯಾಗಿ ಹಾಕೋಣ. ಮಡೆಸ್ನಾನ ಜೀವನ್ಮರಣದ ಪ್ರಶ್ನೆಯಲ್ಲ. ಕಾರಣ ಈ ಸಲಕ್ಕೆ ತಾವು ನಡೆಸುವುದಿಲ್ಲ ಎನ್ನುವ ಅವರ ಮಾತನ್ನು ನಂಬಿ ಮೊದಲೇ ಆಯೋಜಿಸಿದ ಪ್ರತಿಭಟನೆ ಕೈಬಿಡುವುದು ಒಳ್ಳೆಯದು. ನಾವೇ ಅವರನ್ನು ನಂಬುವುದರಿಂದ ಒಂದು ಮಾರಲ್ ಬೈಂಡಿಂಗ್ ಅವರ ಮೇಲಿದ್ದಂತಾಗುತ್ತದೆ. ಕೆಕೆಎಸ್‌ವಿ ಕ್ರಮಗಳು ಅವರಲ್ಲಿ ಒಂದು ಚರ್ಚೆಯನ್ನು ಹುಟ್ಟುಹಾಕಿವೆ. ಅದು ವಿರುದ್ಧ ಪರಿಣಾಮ ಬೀರದಂತೆ ನಾವು ನಡೆದುಕೊಳ್ಳಬೇಕು. ನಮ್ಮೆಲ್ಲರ ಭೇಟಿಯಿಂದ ಏನಾದರೂ ಕನ್ವಿನ್ಸ್ ಆಗಿದ್ದರೆ ಒಂದು ಆಂತರಿಕ ಚರ್ಚೆ ಮತ್ತೆ ಶುರುವಾಗುತ್ತದೆ. ಅದು ನಮ್ಮ ಆಶಯಗಳ ಪರವಾಗಿ ಇರುವಂತೆ ನೋಡಿಕೊಳ್ಳಬೇಕಾದರೆ ‘ನಾವು-ಅವರು’ ಕಂದಕ ಸೃಷ್ಟಿಯಾಗಬಾರದು. ಅಷ್ಟಕ್ಕೂ ತಮ್ಮ ನಿಯಂತ್ರಣ ಮೀರಿ ಭಕ್ತಾದಿಗಳು ನಡೆಸಿಬಿಟ್ಟರು ಎಂದೇನಾದರೂ ಅವರು ಈ ಸಲ ಮಡೆಸ್ನಾನ ನಡೆಸೇಬಿಟ್ಟಲ್ಲಿ ಮುಂದಿನ ಸಾರಿ ಜಾಥಾ, ಪ್ರತಿಭಟನೆ, ಜಾಗೃತಿ ಇನ್ನಿತರ ಮಾರ್ಗಗಳ ಕುರಿತು ಯೋಚಿಸಿದರಾಯಿತು..

ಕೂಡಲೇ ರಮೇಶ್ ಜೊತೆ ಮಾತನಾಡಿದೆವು. ಕೆಕೆಎಸ್‌ವಿ ತೆಗೆದುಕೊಂಡ ತೀವ್ರಗಾಮಿ ನಿಲುವಿನ ಹಿನ್ನೆಲೆಯಿಲ್ಲದೇ ಹೋಗಿದ್ದರೆ ಇವತ್ತು ಹೀಗೆ ಮಾತನಾಡಿ ಬರಲು ಸಾಧ್ಯವಾಗುತ್ತಿರಲಿಲ್ಲ. ಉದಾರವಾದಿ ಪ್ರಯತ್ನಗಳನ್ನೆಲ್ಲ ಅರಗಿಸಿಕೊಂಡೇ ವ್ಯವಸ್ಥೆ ಯಥಾಸ್ಥಿತಿಯನ್ನು ಕಾಯ್ದುಕೊಂಡುಬಂದಿರುತ್ತದೆ. ಅದಕ್ಕೊಂದು ಜರ್ಕ್ ನೀಡುವುದು, ಅದು ಎಚ್ಚೆತ್ತುಕೊಳ್ಳುವುದು ತತ್‌ಕ್ಷಣದ ತೀವ್ರ ಕ್ರಿಯೆಗಳಿಗೇ. ಹಾಗಂತ ಅಂಥ ಕ್ರಮಗಳನ್ನೇ ಎಷ್ಟು ಕಾಲ ನೆಚ್ಚಿಕೊಳ್ಳಬಹುದು? ರಮೇಶ್‌ಗೆ ಒಪ್ಪಿಗೆಯಾಯಿತೋ ಇಲ್ಲವೋ, ಅವರ ಪ್ರಯತ್ನಗಳಿಗೆ ಪೂರಕವಾದದ್ದೇನೋ ನಡೆಯಿತು ಎಂದು ಅನಿಸಿರಬಹುದು.

ಈ ಬಾರಿ ಏನಾಗಬಹುದು ಎಂಬ ಆತಂಕದ ನಿರೀಕ್ಷೆಯೊಂದಿಗೆ ಮನೆಗೆ ಬಂದೆವು. ಬಂದಮೇಲೂ ಒಂದೆರೆಡು ವಿಷಯ ಕೊರೆಯಹತ್ತಿತು. ಮನೆಯಲ್ಲಿ ಪೂಜೆ, ತೀರ್ಥ, ಪ್ರಸಾದಗಳ ಹರ್ಗಿಸ್ ಬೇಡವೆನ್ನುವ ನಾನು ಅಲ್ಲಿ ಕೊಟ್ಟ ಪಂಚಾಮೃತ ಸುಮ್ಮನೇ ಕುಡಿದೆನಲ್ಲ?! ನನಗದರಲ್ಲಿ ನಂಬಿಕೆಯಿಲ್ಲ ಎಂದು ಭಂಡಾರ ನಿರಾಕರಿಸಬಹುದಿತ್ತೆ? ಲಕ್ಷ್ಮೀಶ ತೋಳ್ಪಾಡಿ ದೇವನೆದುರು ನಮ್ಮ ಸ್ಥಾಪಿತ ಅಹಂಕಾರ ಕಳೆದುಕೊಳ್ಳುವ ಸಾಧನವೆಂದು ಮಡೆಸ್ನಾನ ಇನ್ನಿತರ ಆಚರಣೆಗಳನ್ನು ಬೆಂಬಲಿಸುತ್ತಾರೆ. ಆದರೆ ಮನೆಯಲ್ಲಿ ನನ್ನದೊಂದು ಸ್ಥಾಪಿತ ಅಹಂ ಇದೆ. ಅದು ನಿರೀಶ್ವರವಾದದಿಂದ ಹುಟ್ಟಿದೆ. ಅದನ್ನು ಜನರೆದುರು ಇವತ್ತು ನಾನು ಕಳಕೊಂಡಿದ್ದು ಒಳ್ಳೆಯದಕ್ಕೋ? ತೀರ್ಥ-ಭಂಡಾರ ನಿರಾಕರಿಸಿದರೆ ಜನರಿಂದ ದೂರವಾಗುವ ಅಪಾಯವನ್ನು ಮಣಿದ ಅಹಂ ತಪ್ಪಿಸಿತೆ?

ಒಂದು ಆಚರಣೆಯನ್ನು ನಿಲ್ಲಿಸಿ ಎಂದು ಹೇಳದೇ ಅದಕ್ಕೆ ಬದಲಾಗಿ ಇನ್ನೊಂದು ಆಚರಣೆಯನ್ನು ನಡೆಸಿ ಎಂದೆವು. ನುಣುಚಿಕೊಳ್ಳುವ ಮಾತುಗಳಿಗೆ ನಾವು ಮಣಿದೆವೆ? ಮಡೆಸ್ನಾನವನ್ನಾಗಲೀ, ದೀಡು ನಮಸ್ಕಾರವನ್ನಾಗಲೀ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಒಂದು ಆಚರಣೆ ನಿಲ್ಲಿಸಿ ಇನ್ನೊಂದು ಶುರುಮಾಡಿದರೆ ಏನು ಸಾಧಿಸಿದಂತಾಯಿತು? ಹಾಗಂತ ಅವನ್ನೆಲ್ಲ ನಿಲ್ಲಿಸಿಬಿಡಿ ಎನ್ನಲು ‘ನಾವ್ಯಾರು?’

ಬರೀ ಪ್ರಶ್ನೆಗಳು.

ಮಲಗಿದರೆ ಆಕೆಯ ಮುಖವೇ ತೇಲಿ ಬರುತ್ತಿದೆ. ಸಪೂರ ಮೈಕಟ್ಟಿನ ಕೀರಲು ಗಟ್ಟಿದನಿಯ ಆಕೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಆಕೆ. ಮಹಿಳೆಯೊಬ್ಬಳು ಅರ್ಚಕಿಯಾಗಿರುವ ಪೂಜಾಸ್ಥಳ ಕಟ್ಟಿದ ಆಕೆ. ನಾ ತಿಳಿದ ಮಹಿಳಾ ವಾದ, ಇವ ಕಲಿಸಿದ ಮಾರ್ಕ್ಸ್‌ವಾದ, ಅಂಬೇಡ್ಕರರನ್ನೆಲ್ಲ ಆಕೆಗೆ ಹೇಗೆ ಪರಿಚಯಿಸಲಿ? ಧರ್ಮ ಅಫೀಮು ಎಂದರೆ ನನ್ನ ಕಿತ್ತೆಸೆಯುತ್ತಾರೆ ಅಲ್ಲಿ. ದೇವರು-ಪೂಜೆ-ಆಚರಣೆಗಳೆಲ್ಲ ಪುರುಷ ಪ್ರಧಾನ ಸಮಾಜದ ಹುನ್ನಾರಗಳು; ಅದನ್ನು ಉಲ್ಲಂಘಿಸಿ ಈಚೆ ಬಂದರೆ ಆಗ ನಿಮಗಿರುವ ಅಪಾರ ಶಕ್ತಿ-ಸಾಧ್ಯತೆಯ ಅರಿವಾಗುತ್ತದೆ ಎಂದರೆ ಆಕೆಯೇ ನನಗೆ ಗೇಟ್ ಪಾಸ್ ಕೊಡುತ್ತಾಳೆ. ರೋಸಾ, ಅಂಬೇಡ್ಕರ್, ಶರ್ಮಿಳಾ, ಉಮಾರನ್ನು ಓದುವ ನಾನು ಅವಳೊಡನೆ ಸಂಬಂಧ ಸಾಧಿಸುವುದು ಹೇಗೆ?

ಹೇಗೆ?

ಪಟ್ಟನೆ ಹೊಳೆಯಿತು: ಬೊಟ್ಟು, ಸೀರೆ, ಹಾವಭಾವ, ಮಾತು - ಇವನ್ನೆಲ್ಲ ನನ್ನವರೊಂದಿಗೆ, ನನ್ನಂತಹವರೊಂದಿಗೆ ಸುಲಭ ಸಂವಹನವಾಗಲೆಂದೇ ಇಟ್ಟುಕೊಂಡಿರುವುದಲ್ಲವೆ? ಭಾಷೆಯ ಹಾಗೇ ನನ್ನ ಇರವೂ ಸುತ್ತಲವರೊಂದಿಗೆ ಸಂವಹನಕ್ಕಾಗಿ ಎಂದೇ ಅಲ್ಲವೇ? ಹಟ್ಟಿಕೇರಿಯಿಂದ ಎಲ್ಲರೂ ಹೊರಡುವಾಗ ಕೊನೆಯಲ್ಲಿ ನನ್ನ ಸೆರಗಿಗೆ ಆಕೆ ಹಾಕಿದ ಬಾಳೆಹಣ್ಣು-ಭಂಡಾರದ ಪೊಟ್ಟಣವನ್ನು ಇಸಕೊಂಡೆನಲ್ಲ, ಅದೇ ಆಕೆಯ ಜೊತೆ ‘ಕನೆಕ್ಟ್’ ಆಗಲು ನನಗಿದ್ದ ದಾರಿ. ಎಸ್. ಇದು ಮುಖ್ಯ - ಗೆಟ್ ಕನೆಕ್ಟೆಡ್. ಸಂಗಾತಿ ಇದನ್ನು ರಾಜಿಕೋರತನವೆಂದರೂ ಸರಿಯೇ, ಮಧ್ಯಮಮಾರ್ಗಿ ಅಥವಾ ಸೆಂಟ್ರಿಸ್ಟ್ ಎಂದರೂ ಸರಿ, ಇದು ಮುಖ್ಯ - ಗೆಟ್ ಕನೆಕ್ಟೆಡ್.

ಅಂತೂ ಕೊನೆಗೆ ಉದ್ವೇಗದಿಂದ ಕಾದ ಆ ದಿನ ಬಂದೇ ಬಂತು. ಈ ಬಾರಿ ಮಡೆಸ್ನಾನ ನಡೆಯಲಿಲ್ಲ..

ಇದು ಸೋಲುಗೆಲುವಿನ ಪ್ರಶ್ನೆಯಲ್ಲ. ಈ ಸಲ ನಡೆಯದಿರಲು ಕಾರಣಗಳೇನೇ ಇರಲಿ, ಮುಂದಿನ ಸಾರಿ ನಡೆಯದೆಂದು ಹೇಳಬರುವುದಿಲ್ಲ. ನಮ್ಮೂರಿನಲ್ಲಿ ಪ್ರತಿ ಹತ್ತತ್ತು ಕಿಲೋಮೀಟರಿಗೊಬ್ಬ ದೇವ ಮಾನವ, ದೇವಸ್ಥಾನ, ದೈವಸ್ಥಾನ ಸಿಗುತ್ತದೆ. ಹೀಗಿರುವಾಗ ಇವತ್ತು ಇಲ್ಲಿ ನಿಂತದ್ದು ನಾಳೆ ಇನ್ನೆಲ್ಲೋ, ಇನ್ನೇನೋ ಆಗಿ ಶುರುವಾಗುವ ಸಾಧ್ಯತೆಯಂತೂ ಇದ್ದೇ ಇದೆ. ಜನರನ್ನು ಹುಸಿಧಾರ್ಮಿಕತೆಯಿಂದ, ಅತಿ ಆಸ್ತಿಕತೆಯಿಂದ ಯಾವುದು ಈಚೆ ತರಬಲ್ಲದು? ಮೂಢನಂಬಿಕೆಗಳ ವಿರುದ್ಧ ಕಾನೂನು ಜಾರಿ ಇದಕ್ಕೊಂದು ಪರಿಹಾರವೆಂಬಂತೆ ನೋಡಲು ಸಾಧ್ಯವೆ?

***



ಮೇಲಿನ ಅನುಭವವನ್ನು ಇಲ್ಲಿ ದಾಖಲಿಸಿರುವ ಉದ್ದೇಶ ಸಾಸಿವೆಕಾಳು ಮೊನೆಯಷ್ಟು ಪ್ರಯತ್ನವನ್ನು ವೈಭವೀಕರಿಸುವುದಲ್ಲ, ಬದಲಾಗಿ ಕೋಮುವಾದಿಗಳನ್ನು ಆರೋಪಿಸಿ, ಎದುರಿಸುವುದರಲ್ಲೇ ಪ್ರತಿರೋಧದ ಮಾರ್ಗ ಕಡೆದುಕೊಂಡಿರುವ ನಾವು ಅವಕಾಶ ಸಿಕ್ಕಾಗ ನಮ್ಮ ಸುತ್ತಮುತ್ತ ಸೆಕ್ಯುಲರ್ ಪ್ರಯೋಗ ನಡೆಸಬೇಕು ಎಂದು ಆಗ್ರಹಿಸುವುದಕ್ಕಾಗಿ. ವರ್ತಮಾನ ಹೇಗಿದೆ ಎಂದರೆ ಅದು ಸ್ಪಷ್ಟತೆ ಬಯಸುತ್ತದೆ. ತತ್‌ಕ್ಷಣದ ಕ್ರಿಯೆಯನ್ನು ಬಯಸುತ್ತದೆ. ನಿಧಾನ ಮತ್ತು ಮೌನ ಈ ಎರಡೂ ನಮ್ಮ ಮೈಗೆ ಎಣ್ಣೆ ಹಚ್ಚಿ ಕೋಮುವಾದಿಗಳಿಗೆ ಕೈಯೆತ್ತಿ ಅವಕಾಶ ಬಿಟ್ಟುಕೊಡುತ್ತವೆ. ಹಾಗಾಗದಂತೆ ಪರಿಸ್ಥಿತಿಗೆ ತಕ್ಕ ಹಾಗೆ ನಮ್ಮ ನಡೆಗಳನ್ನು ಬದಲಿಸಿಕೊಳ್ಳುತ್ತ ಆರೋಗ್ಯಕರ ತಾತ್ವಿಕತೆಯನ್ನು ಜನಸಮುದಾಯದಲ್ಲಿ ಬಿತ್ತುವುದು ಇವತ್ತಿನ ಜರೂರಲ್ಲವೆ?

ಕೋಮುವಾದ ಸೃಷ್ಟಿಸಿರುವ ಮನುಷ್ಯ ಮನುಷ್ಯರ ನಡುವಿನ ಅಸಹನೆ ಇವತ್ತಿನ ದೊಡ್ಡ ಸಾಮಾಜಿಕ ಬಿಕ್ಕಟ್ಟು. ಕೋಮುವಾದದ ಅಪಾಯವೇನೆಂದರೆ ಅದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಒಂದು ಜಾತಿಗೆ ಸೀಮಿತವಾಗಿಲ್ಲ, ಒಂದು ಸಂಘಟನೆಗೆ, ಸರ್ಕಾರಕ್ಕೆ ಸೀಮಿತವಾಗಿಲ್ಲ. ಕೋಮುವಾದ ಒಂದು ಮನಸ್ಥಿತಿಯಾಗಿ ರೂಪುಗೊಳ್ಳುತ್ತಿದೆ. ಮೋದಿಯಲ್ಲದಿದ್ದರೆ ಇನ್ನೊಬ್ಬ, ಆಸಾರಾಮನಲ್ಲದಿದ್ದರೆ ಮತ್ತೊಬ್ಬ ಜನಸಮುದಾಯವನ್ನು ಮರುಳುಗೊಳಿಸಿ, ಉದ್ರೇಕಿಸಿ ಭಾಷಣ ಮಾಡುತ್ತ, ಚರಿತ್ರೆ-ವರ್ತಮಾನ-ಭವಿಷ್ಯದ ಸತ್ಯಗಳನ್ನೇ ಬದಲಾಯಿಸುತ್ತಾರೆ. ಅಸಹನೆ, ದ್ವೇಷವೇ ಅವರ ಬೀಜ, ನೀರು, ಗೊಬ್ಬರ, ನೆಲ ಎಲ್ಲವೂ. ನಮೋವಾದಿಗಳ ಮಟ್ಟಿಗೆ ಮಾರ್ಕ್ ಟ್ವೇನ್ ಹೇಳುವ ‘ಅವನಲ್ಲಿರುವ ಸುಳ್ಳನ್ನು ತೆಗೆ, ನಿನ್ನ ಟೋಪಿಯ ಗಾತ್ರದಷ್ಟು ಕುಬ್ಜನಾಗುತ್ತಾನೆ ಅವನು. ಅವನಿಂದ ದ್ವೇಷವನ್ನು ತೆಗೆ, ಅವನೇ ಕಾಣೆಯಾಗುತ್ತಾನೆ’ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿದೆ.

ಜೊತೆಗೇ ಕೋಮುವಾದದ ಇನ್ನೊಂದು ಅಪಾಯವನ್ನೂ ಗ್ರಹಿಸಬೇಕು: ಅದು ಆಧ್ಯಾತ್ಮಿಕ ಸಂಕೇತಗಳನ್ನು, ದೇವರನ್ನು ಕಲ್ಲು-ಗಾರೆ ಮಟ್ಟಕ್ಕೆ ಇಳಿಸಿದೆ. ಮಸೀದಿ ಕೆಡವುವ, ಮಂದಿರ ಕಟ್ಟುವ ದುಷ್ಟತನ ಇದೇ ಗ್ರಹಿಕೆಯ ಮೇಲೆ ಹುಟ್ಟಿಕೊಂಡಿದೆ.

ಕಳೆದ ವರ್ಷಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ವಿರೋಧಿಸಿ ಎಷ್ಟೊಂದು ಪ್ರತಿಭಟನೆ ನಡೆದಿದೆ. ಟಿವಿಯಲ್ಲಿ ಮೇಲಿಂದ ಮೇಲೆ ಆ ಕುರಿತ ಚರ್ಚೆ, ವಿರೋಧ ಪ್ರಸಾರವಾಗಿದೆ. ನಮ್ಮೂರ ಪಕ್ಕದಲ್ಲೇ ಒಂದು ಸುಬ್ರಹ್ಮಣ್ಯ ಕ್ಷೇತ್ರವಿದೆ. ಅದರ ವ್ಯವಸ್ಥಾಪಕರು ಆಸ್ಪತ್ರೆಗೆ ಬರುತ್ತಿರುತ್ತಾರೆ.  ಮೊನ್ನೆ ಅವರ ಬಳಿ ‘ಎಲ್ಲೆಲ್ಲೋ ನಡೆಯುವ ಮಡೆಸ್ನಾನ ನಿಲ್ಲಿಸುವಂತೆ ಬರೆಯುತ್ತ, ಕೆಲಸ ಮಾಡುತ್ತ ಇದ್ದೇವೆ. ನಮ್ಮೂರಿನಲ್ಲಿ ಮಡೆಸ್ನಾನ ನಡೆಸಬೇಡಿ ಮತ್ತೆ’ ಎಂದೆ. ಅದಕ್ಕವರು, ‘ಮೇಡಂ, ನಿಮಗ್ಗೊತ್ತಿಲ್ಲ. ಈಗ ನಾಕೈದು ವರ್ಷದಿಂದ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ದಿನ ಮಡೆಸ್ನಾನ ನಡೆಸಲು ಒತ್ತಡ ಹೆಚ್ಚಾಗುತ್ತಿದೆ. ಅಷ್ಟು ದೂರ ಹೋಗಿ ಮಾಡ್ಲಿಕ್ಕೆ ಆಗಲ್ಲ, ಇದೂ ಸುಬ್ರಹ್ಮಣ್ಯ ಕ್ಷೇತ್ರವೇ, ಮಡೆಸ್ನಾನಕ್ಕೆ ಅವಕಾಶ ಕೊಡಿ ಅಂತ ಮತ್ತೆಮತ್ತೆ ಹೇಳುತ್ತಿದ್ದಾರೆ. ನಾವು ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇವೆ. ಅದನ್ನ ನಡೆಸೋವಷ್ಟು ಜಾಗವೂ ಇಲ್ಲ, ಪದ್ಧತಿಯೂ ಇಲ್ಲ ಎಂದು ಹೇಳುತ್ತಿದ್ದೇವೆ’ ಎಂದರು. ಪತ್ರಿಕೆ, ಟಿವಿಯಲ್ಲಿ ಮಡೆಸ್ನಾನ ಬೇಡವೆಂದು ನಡೆಸಿದ ಪ್ರತಿಭಟನೆ ಮತ್ತು ಚರ್ಚೆಯನ್ನು ಜನ ಹೀಗೆ ಅರ್ಥಮಾಡಿಕೊಂಡರೆ? ಅದು ನಡೆಸಬಾರದೆಂಬ ಜಾಗೃತಿ ಮೂಡಿಸುವ ಬದಲು ಅದು ನಡೆಯುವುದನ್ನು, ನಾಗನಂತೆ ಜನ ಉರುಳುವುದನ್ನು ನೋಡಿ ತಾವೂ ತಮ್ಮೂರ ಹತ್ತಿರದ ದೇವಸ್ಥಾನಗಳಲ್ಲಿ ಉರುಳ ಬಯಸುತ್ತಾರೆಯೇ?

ದಿನದಿಂದ ದಿನಕ್ಕೆ ಕೋಮುವಾದ ಬೆಳೆಯುತ್ತಿರುವಾಗ ಅದನ್ನು ವಿರೋಧಿಸುವ ಸೆಕ್ಯುಲರ್, ಪ್ರಗತಿಪರ ದನಿಗಳೇಕೆ ಇಷ್ಟು ಕಡಿಮೆಯಿವೆ? ನಮ್ಮ ಸೆಕ್ಯುಲರಿಸಂ ವ್ಯಾಖ್ಯಾನವೇ ತಪ್ಪಾಗಿದೆಯೇ? ಸೆಕ್ಯುಲರ್ ಎಂದರೆ ಧರ್ಮ ನಿರಪೇಕ್ಷ ಎಂದುಕೊಂಡೆವು, ಅದನ್ನು ಸಂಸ್ಕೃತಿ ನಿರಪೇಕ್ಷ ಎಂದೂ ಅರ್ಥೈಸಿಕೊಂಡೆವೆ? ಸೆಕ್ಯುಲರಿಸಂ ಎಂದರೆ ಸರಳ ಸಾಮಾಜಿಕ ನ್ಯಾಯದ ರಾಜಕಾರಣವಷ್ಟೇ ಅಲ್ಲ, ಅದಕ್ಕೊಂದು ಸಾಂಸ್ಕೃತಿಕ ಒಳನೋಟವೂ ಇರಬೇಕಾಗುತ್ತದೆ ಎಂದು ಮರೆತೆವೆ? ಏಕೆಂದರೆ ಸಂಸ್ಕೃತಿಯನ್ನು ಬಿಟ್ಟು ಮಾತನಾಡುವುದು ಕೃತಕ ಸೆಕ್ಯುಲರಿಸಂ. ಅಂಥ ಸಂದರ್ಭದಲ್ಲೇ ಹಿಂದುತ್ವ ಬೆಳೆಯುತ್ತದೆ, ಅಷ್ಟೇ ಅಲ್ಲ, ಫ್ಯಾಸಿಸ್ಟ್ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈಗ ಆಗುತ್ತಿರುವುದು ಅದೇ ಅಲ್ಲವೆ?

ಈ ಅನುಮಾನಗಳು ಏಕೆಂದರೆ ನಿಜವಾದ ಸೆಕ್ಯುಲರಿಸಂನ ಶಕ್ತಿ ತಳ ಸಮುದಾಯಗಳು. ಆದರೆ ಬಲಪಂಥೀಯರು ತಳಸಮುದಾಯಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಇವತ್ತು ಬಲಪಂಥೀಯ ಸಂಘಟನೆಗಳ ಬಹುಪಾಲು ಕಾರ್ಯಕರ್ತರು ತಳಸಮುದಾಯದವರೇ ಆಗಿದ್ದಾರೆ. ಇದನ್ನು ಕಾಲದ ವ್ಯಂಗ್ಯ ಎನ್ನಬಹುದೇ? ನಾವಿಲ್ಲಿ ಧರ್ಮಸ್ಥಳದ ವಿರುದ್ಧ ಮಾತನಾಡಿದರೆ ಪೆಟ್ಟು ತಿನ್ನಬೇಕಾಗುವುದು ಯಾವ ಜನರ ಪರವಾಗಿ ನಾವು ಮಾತನಾಡುತ್ತೇವೆಯೋ ಅದೇ ಜನರಿಂದಲೇ! ಹಾಗಾದರೆ ಜನ, ಜನಪರ ಎಂದು ನಾವು ಯಾರ ಕುರಿತು ಮಾತನಾಡುತ್ತೇವೋ ಅದೇ ಜನ ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲವೆ? ಜನ ತಮ್ಮ ಪರ ಎಂದು ನಮ್ಮ ನಡೆಗಳನ್ನು ಗುರ್ತಿಸಲು ಸಾಧ್ಯವಾಗದೇ ಹೋಗಿದೆಯೆಂದರೆ ನಮ್ಮ ದಾರಿಗಳನ್ನು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆಯೆ?

ಜೀವವೇ, ಕೇವಲ ಪ್ರಶ್ನೆ ಹುಟ್ಟಿಸಬೇಡ. ವಾಸ್ತವವಾದಿ ಹಾಗೂ ಕ್ರಿಯಾತ್ಮಕ ನೆಲೆಯಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗುವುದಕ್ಕೆ ಇರುವ ಮಾರ್ಗವಾಗಿ ಕಣ್ಣೆದುರು ತೆರೆದುಕೋ..


Monday 23 June 2014

ದೇವರುಗಳ ಕಾಡಿನಲ್ಲಿ ಮೂಕಬಾಲೆಯ ಬಿಕ್ಕು ಅರಣ್ಯರೋದನವಾಗಿರುವ ಹೊತ್ತು ಈ ಕವಿತೆಗೆ ಶೀರ್ಷಿಕೆ ಇರುವುದಿಲ್ಲ..




ಉಟ್ಟಬಟ್ಟೆ ಹರಿದರೆ ತೇಪೆ ಹಾಕುತ್ತೇನೆ
ಮಲಿನವಾದರೆ ತೊಳೆಯುತ್ತೇನೆ
ಬಟ್ಟೆಯೇ ಸಿಗದಿದ್ದರೆ 
ನಿನ್ನಂತೆ ಬೆತ್ತಲಾದೇನು ಅಕ್ಕಾ
ತೊಡದ ಬಟ್ಟೆಯ ಕೊಳೆಯ ಹೇಗೆ ತೊಳೆಯಲೆ?

ಉಂಗುಷ್ಠ ಹರಿದರೆ ಹೊಲಿಯುತ್ತೇನೆ
ಒಂಟಿ ಜೋಡಾದರೆ ಅತ್ತ ಎತ್ತಿಡುತ್ತೇನೆ
ಕಲ್ಲುಮುಳ್ಳುಗಳ ಬರಿಗಾಲಲೂ ದಾಟಬಹುದು
ನಡೆವ ಹಾದಿಯೇ ಪಾದ ನುಂಗಿದರೆ 
ಹೆಜ್ಜೆಗಳನೆತ್ತ ಇಡಲೆ?

ಮೊಲೆಮುಡಿಕಿಬ್ಬೊಟ್ಟೆಗಳು ಕುಡಿಯೊಡೆದು 
ಅಂಗಾಂಗದೊಳಗೆ ಅನಂಗ ಹರಿದಾಡಿದ ಕ್ಷಣ
ಜೀವ ತತ್ತರ
ಮೈಮೇಲೆದ್ದವು ಹುತ್ತ
ಹುತ್ತದ ಬಾಯಿಗಳೆಲ್ಲ ಯೋನಿಗಳಾದವು
ಸದ್ದಿರದೆ ಒಳಹೊರಗೆ ಸರಿದಾಡಿದವು ಹಾವು
ಸಹಸ್ರ ಯೋನಿಗಳ ದೇಹ
ಸರ್ವಋತು ಸ್ರಾವ 

ಯುದ್ಧ ಅಲ್ಲೆಲ್ಲೋ ನಡೆಯುತ್ತಿಲ್ಲ
ಹಿಂಸೆ ಉಗ್ರಗಾಮಿಗಳ ಸ್ವತ್ತಲ್ಲ
ಗುಂಡಿನ ಸದ್ದಷ್ಟೆ ಎದೆ ನಡುಗಿಸುವುದಿಲ್ಲ
ಇಟ್ಟರೆ ಕೊಳೆಯುವ 
ಸುಟ್ಟರೆ ಬೂದಿಯಾಗುವ ಈ ದೇಹ
ಹೊರುವ ಹೆರುವ ತಣಿಸುವ ನೆಪದಲ್ಲಿ
ಗುಪ್ತಾಂಗಗಳ ಗುಟ್ಟಿನ ಸಂಕಟಗಳು 
ಕೈದು ಹಿಡಿದು ಕಾದುವ ಯುದ್ಧಭೂಮಿ

‘ಕಾಡೇ ಗೂಡೇ..’ ಎಂದು ಕಣ್ಮುಚ್ಚುವಾಗ ಭಯ
‘ನಮ್ಮಯ ಹಕ್ಕಿಯ’ ಬಿಟ್ಟೇ ಎನುವಾಗ ಭಯ
ಲಂಗ ಮೇಲೆತ್ತಿ ಕುಂಟೋಬಿಲ್ಲೆಯಾಡುತ್ತ  
ಮಿಡಿಮೊಲೆಗಳು ಹಾರಿ ಬೀಳುವಾಗ 
ಅಮ್ಮನಿಗೆ ಭಯವೋ ಭಯ

ಇದ್ದಳಂತೆ ಹಾಗೊಬ್ಬಳು
ದಿಟ್ಟವಾಗಿ ಬೆತ್ತಲಾಗಿ ಒಬ್ಬಂಟಿ ಅಲೆದವಳು
ಕೂಡದೆ ಹೆರದೆ ಲಿಂಗಸತಿಯಾದವಳು..
ಹಾಗೂ ಇದ್ದಳಂತೆ ಮಗದೊಬ್ಬಳು
ಸೂರ್ಯನ ನೆನಹಿಗೇ ಬಸಿರಾದವಳು.. 

ಓ ದೇವರೇ 
ಹೀಗೊಂದು ವರ ನೀಡು
ಮಾನವ ಸಂತತಿ ಅಯೋನಿಜವಾಗಲಿ.. 

***

ಕಣ್ಣ ಹನಿಗಳಲ್ಲಿ
ತಗ್ಗಿಸಿದ ತಲೆಯಲ್ಲಿ
ಪುಟ್ಟ ಬಾಲೆಯ ಭಯದ ಬಿಕ್ಕುಗಳಲ್ಲಿ
ಐಸಿಯುನ ನಿಟ್ಟುಸಿರುಗಳಲ್ಲಿ
ಅಡಗಿ ಉಠಬೈಸ್ ತೆಗೆವ ಹೇಡಿ ಶಬ್ದಗಳೇ
ಕಾಗೆ ಕಾವ್‌ಗುಡುವ
ಸರ್ಪ ಬುಸುಗುಡುವ 
ಹಂದಿ ಹ್ಞೂಂಕರಿಸುವ ಸದ್ದಿಗೂ
ಒಂದು ಅರ್ಥವಿದೆ
ಒಡಲುರಿಯ ಹಾಡಾಗಿಸದ ನಿಮಗೆ 
ಲಜ್ಜೆಯಿರುವುದೇ ಹೌದಾದಲ್ಲಿ  
ಅಗ್ನಿಪರ್ವತದ ಬಾಯೊಳಗೆ ಹಾರಿಬಿಡಿ.
ಏರು ಗಂಟಲ ದನಿಯಲ್ಲಿ
ಕಟ್ಟಿದ ಮುಷ್ಠಿಯಲ್ಲಿ
ದಿಟ್ಟ ನಡುಗೆಯಲ್ಲಿ 
ಮತ್ತೆ ಹುಟ್ಟಿಬನ್ನಿ..

ನಡುವೆ ಸುಳಿವಾತ್ಮ




‘ನನಗೆ ಸೆಮಿನಾರಿಗೆ ಬರಬಾರದಂತ ಇಲ್ಲ, ಆದರೆ.. ಎರಡು ಕಷ್ಟ ಇದೆ. ನೀವು ಬಸ್ ಚಾರ್ಜ್ ಕೊಡ್ತೀರಾ? ಯಾಕಂದ್ರೆ..’

‘ಬಸ್ ಚಾರ್ಜ್ ಅಷ್ಟೇ ಅಲ್ಲ, ನಡೆಸುತ್ತಿರುವವರು ವಿಶ್ವವಿದ್ಯಾನಿಲಯದವರು. ಅವರು ದಿನದ ಭತ್ಯೆಯನ್ನೂ, ಉಳಿಯಲು ವಸತಿ ವ್ಯವಸ್ಥೆಯನ್ನೂ ಮಾಡುತ್ತಾರೆ, ನೀವು ಬನ್ನಿ.’

‘ಅಯ್ಯೋ, ನಮಗೆಲ್ಲ ಯಾರೂ ವಸತಿ ವ್ಯವಸ್ಥೆ ಮಾಡುವುದಿಲ್ಲ, ಸುಲಭಕ್ಕೆ ರೂಮು ಕೊಡುವುದೂ ಇಲ್ಲ. ಅದ್ಕೇ..’

‘ಇಲ್ಲಮ್ಮ, ನಿಮ್ಮ ಮುಂಚಿನ ಅನುಭವ ಅನುಭವ ಹೇಗಾದರೂ ಇರಲಿ, ಖಂಡಿತವಾಗಿ ಹೇಳುತ್ತೇನೆ, ವಸತಿ ವ್ಯವಸ್ಥೆ ಮತ್ತು ಭತ್ಯೆ ಸಿಗುತ್ತದೆ, ನಾವೆಲ್ಲ ಇರುತ್ತೇವೆ, ಬರಬೇಕು..’

‘ನನ್ನ ಧ್ವನಿ ಕೇಳಿ ಬಾರಮ್ಮ ಅನ್ನಬೇಡಿ, ನನಗೆ ಹೋಗೋಬಾರೋ ಅಂದ್ರೆ ತುಂಬ ಖುಷಿ. ಪುಲ್ಲಿಂಗ ಬಳಸಿ. ಹುಡ್ಗಿಯಾಗೇ ಬೆಳೆಸಿದ್ದರು, ಆದರೆ ನಾನು ಆಪರೇಷನ್ ಮಾಡಿಸಿಕೊಂಡ ಮೇಲೆ ಗಂಡಾಗಿ ಬದಲಾಗಿದೇನೆ..’

‘ಕ್ಷಮಿಸಿ, ಪುಲ್ಲಿಂಗ ಸ್ತ್ರೀಲಿಂಗ ತಲೆಬಿಸಿಯೇ ಬೇಡ, ಬಹುವಚನ ಬಳಸುತ್ತೇನೆ. ಆಗಬಹುದೇ?’

‘ಸರಿ, ಆದ್ರೆ ನೀವು ಹೇಳಿದ ದಿನನೇ ನಂಗೆ ಸಂಗೀತ ಟೀಚರ್ ಕ್ಲಾಸ್ ಇಟ್ಟಿದಾರೆ, ಈ ವರ್ಷ ಸಂಗೀತ ಪರೀಕ್ಷೆಗೆ ಕೂತಿದೀನಿ. ಹೋದೊರ್ಷ ಡಯಾಬಿಟಿಸ್ ಹೆಚ್ಚಾಗಿ ಕೂತಿದ್ದ ಪರೀಕ್ಷೆ ಬರೆಯಕ್ಕೆ ಆಗಲಿಲ್ಲ. ಅದ್ಕೇ ಈ ವರ್ಷ ಕೂರ‍್ಲೇಬೇಕು. ಕಷ್ಟಪಟ್ಟು ಕಲೀತಿದೀನಿ. ನಾನು ಹೀಗೆ ಅಂತ ಗೊತ್ತಾದ ಮೇಲೂ ಅವ್ರು ಹೇಳ್ಕೊಡ್ತಿದಾರೆ, ಅದಕೇ ತಪ್ಪಿಸೋಕೆ ಮನಸ್ಸಿಲ್ಲ.’

ಸಂಭಾಷಣೆ ಪೂರಾ ಹೀಗೇ ಆತಂಕ, ಅನುಮಾನಗಳಲ್ಲೇ ಮುಗಿದುಹೋಯಿತು. ಅವರಿವರನ್ನು ಕೇಳಿ, ಹೇಳಿ ಅಂತೂ ತಾನು ಸೆಮಿನಾರಿಗೆ ಬರುವುದಿಲ್ಲ ಎಂದು ನಿರ್ಧಾರವಾಯಿತು! ಓ ದೇವರೇ, ಜೀವವೊಂದು ತನ್ನನ್ನೇ ತಾನು ಪಾಪಕೂಪದಲ್ಲಿ ಊಹಿಸಿಕೊಂಡು ಮುಳುಗಿದರೆ ಅದರ ಬಳಿ ಹೋಗುವುದಾದರೂ ಹೇಗೆ?

***

ಆ ರೈಲಿನಲ್ಲಿ ಕಾಲಿಟ್ಟರೆ ಅದೇನು ಬೋಗಿಯೋ, ಕಡಲೇಕಾಯಿ ಪರಿಷೆಯಾದ ಬೀದಿಯೋ ಅನುಮಾನವಾಯಿತು. ಕಾಲಬುಡದಲ್ಲಿ ಹಾಸಿನಂತೆ ಹರಡಿದ್ದ ಸೇಂಗಾ ಸಿಪ್ಪೆ, ಕಸದ ರಾಶಿ. ಕೈಲಿದ್ದ ಕಿತ್ತಳೆಹಣ್ಣು ಬಾಯಿಗೆ ಹೋಗಲೊಲ್ಲೆ ಎಂದಿತು. ಒಂದು ಗಂಟೆ ಕಳೆಯುವುದರಲ್ಲಿ ಹದಿನಾಲ್ಕು, ಹದಿನೈದರ ಆಸುಪಾಸಿನ ಹುಡುಗ ಒಂದು ಬಟ್ಟೆಯಲ್ಲಿ ಸಿಪ್ಪೆಕಸ ಒಟ್ಟುಕೂಡಿಸುತ್ತ ಬಂದ. ಎಲ್ಲ ಒಂದು, ಎರಡು ರೂ ಅವನ ಕೈಗೆ ಹಾಕಿದರು. ಬೇಡುವ ಬದಲು ಏನೋ ಕೆಲಸ ಮಾಡಿ ದುಡ್ಡು ಕೇಳುತ್ತಿದ್ದಾನಲ್ಲ, ಸಮಾಧಾನವಾಯಿತು. ನನ್ನ ಬಳಿಯಿದ್ದ ಎರಡು ಕಿತ್ತಳೆ ಅವನ ಸೇರಿದವು.

ಅವನ ಹಿಂದೇ ಆತ/ಕೆ ಬಂದ/ಳು. ಸೀರೆ ಉಟ್ಟ ದಪ್ಪ ದನಿಯ ಗಂಡಸು. ನೋಡಲು ಬಲಶಾಲಿ. ಢಾಳು ಅಲಂಕಾರ. ಗೋಟುಹಣೆಯಲ್ಲಿ ಹರಳು ಕೂರಿಸಿದ ಉದ್ದನಾಮದಂತಹ ಟಿಕ್ಲಿ. ಬಣ್ಣ ಮೆತ್ತಿದ್ದರೂ ಹೆರೆದ ಗಡ್ಡಮೀಸೆ ಕಾಣುತ್ತಿದ್ದ ಚೌಕಮುಖ. ದುಡ್ಡು ಕೊಡದಿದ್ದವರನ್ನು ತಿವಿದು, ಕಿಸೆಗೆ ಕೈಹಾಕಿ ಕಾಸು ಸೆಳೆಯುತ್ತಿದ್ದಳು. ಮತ್ತೆ ಕೆಲವರನ್ನು ಒತ್ತಿ, ಮುಟ್ಟಿ ನಕ್ಕು ಮುಂದೆ ಸರಿದಳು. ನಾನು ನಗುತ್ತ ಎರಡು ಕಿತ್ತಳೆ ಹಣ್ಣು ಕೊಟ್ಟರೆ ಗಹಗಹಿಸುತ್ತ ಸ್ವೀಕರಿಸಿ ನನ್ನ ಕೈಯನ್ನೂ, ಕಿತ್ತಳೆಯನ್ನೂ ಗಟ್ಟಿ ಅಮುಕಿದಳು.

ನಾನು ಸಾವರಿಸಿಕೊಳ್ಳುವುದರಲ್ಲಿ ರೈಲು ಚಲಿಸತೊಡಗಿತು. ನಿಲ್ದಾಣದಲ್ಲಿರುವವರೆಲ್ಲ ಹಿಂದೆ ಓಡುತ್ತಿರುವಂತೆ ಕಾಣುವಾಗ ಅರೆ, ಇದೇನಿದು, ಆಕೆ/ತ ಕಸಗುಡಿಸಿದ ಆ ಹುಡುಗನನ್ನು ನೆಲಕ್ಕೆ ಹಾಕಿ ತುಳಿಯುತ್ತಿದ್ದಾಳೆ. ಎದ್ದು ನಿಂತು ಬಗ್ಗಿ ನೋಡುವುದರಲ್ಲಿ ರೈಲು ವೇಗ ಹೆಚ್ಚಿಸಿಕೊಂಡಿತು.

‘ಸ್ಟೇಶನ್ನಿಗೊಬ್ಬೊಬ್ರು ಚಕ್ಕಾ ಬರತಾರ ನೋಡ್ರಿ. ಇಂವ, ಅತವ ಈಕಿ ಆಟಾಟು ದಿನಕ ಒಬ್ಬೊಬ್ಬ ಹುಡುಗನ ಸಂತೀ ಬರತಾನ. ನಾ ದಿನಾ ನೋಡತೀನಲ್ಲ, ಈ ಹುಡುಗನ್ನ ತಂದು ಭಾಳ್ ದಿನಾ ಆಗಿಲ್ಲ, ಹಿಂಗ ಒದಿಯೂದು, ಬಡಿಯೂದು, ಕೊನೀಗೆ ತರಡ ಒಡಿಯೂದು..’

ಯಾವುದೋ ಜೋಕು ಕೇಳಿದಂತೆ ಇಡೀ ರೈಲೇ ನಗತೊಡಗಿದಾಗ ಸಂಕಟವೋ, ಮತ್ತೆಂಥದೋ ಹೊಟ್ಟೆಯೊಳಗೆ ನುಲಿಯತೊಡಗಿತು.

***

ಇವೆಲ್ಲ ಹೆಣ್ಣೂ ಅಲ್ಲ, ಗಂಡೂ ಅಲ್ಲ, ಎರಡೂ ಆದ ಅಥವಾ ಎರಡೂ ಅಲ್ಲದ ಮೂರನೇ ಲಿಂಗದವರ ಕುರಿತ ಮಾತುಗಳು ಎನ್ನುವುದನ್ನು ನೀವು ಇಷ್ಟು ಹೊತ್ತಿಗಾಗಲೇ ಊಹಿಸಿರುತ್ತೀರಿ. ಲೈಂಗಿಕತೆ ಬಗ್ಗೆ ಮುಕ್ತ ಮಾತುಗಳನ್ನೇ ಆಡದ ಭಾರತೀಯ ಸಮಾಜ ಸಲಿಂಗಿಗಳ ಬಗೆಗೆ ಹೇಸಿಕೆ ಮತ್ತು ಅತಿ ಮಡಿವಂತಿಕೆ ಇಟ್ಟುಕೊಂಡಿದೆ. ಈಗಲೂ ಆಡಲು, ಬರೆಯಲು ತುಂಬ ಕಸಿವಿಸಿ, ದ್ವಂದ್ವ ಹುಟ್ಟಿಸುವ ವಿಚಾರ ಸಲಿಂಗರತಿಯದು. ಇದರಿಂದ ನಾನೂ ಹೊರತಲ್ಲ.

ಒಂದು ಕುಟುಂಬ ಬುದ್ಧಿಮಾಂದ್ಯ, ಅಂಗವಿಕಲ ಮಗುವನ್ನು ತನ್ನದೆಂದುಕೊಳ್ಳುತ್ತದೆ. ಒಂದು ಧರ್ಮ/ಜಾತಿ/ಪ್ರಾಂತ್ಯ ಅನಾಥರನ್ನು, ವಿಧವೆಯರನ್ನು, ಕೊಲೆಗಡುಕರನ್ನೂ ತನ್ನವರೆಂದುಕೊಳ್ಳುತ್ತದೆ. ಆದರೆ ಮೂರನೇ ಲಿಂಗಿಗಳನ್ನು ಯಾವ ಜಾತಿ, ಧರ್ಮ, ಕುಟುಂಬವೂ ಮುಕ್ತವಾಗಿ ತನ್ನದೆಂದು ಹೇಳಿಕೊಳ್ಳಲು ಹಿಂಜರಿಯುತ್ತವೆ. ಕಲಿತವರು, ಸಮಾಜದ ಬೇರೆಬೇರೆ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದವರು, ಬರಹಗಾರರೂ ಸಹಾ ಸಲಿಂಗಿ ಎಂದಕೂಡಲೇ ‘ಏನೋ ಒಂಥರಾ’ ವರ್ತಿಸುವುದನ್ನು ನೋಡಬಹುದು. ಅವರ ಜೊತೆ ಒಂದು ಕೊಡೆಕೊಳೆಯೇ ಏರ್ಪಡದ ಸ್ಥಿತಿ ಇರುವುದರಿಂದಲೇ ಅವರ ದಲಿತತ್ವಕ್ಕಿರುವ ಹಲವು ಮುಖಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ.

ತನ್ನದಲ್ಲದ ‘ತಪ್ಪಿಗೆ’ ನಿರಂತರ ಅವಮಾನಕ್ಕೆ, ಕ್ರೌರ್ಯಕ್ಕೆ, ಶಿಕ್ಷೆಗೆ ಒಳಗಾಗುವ ಮೂರನೇ ಲಿಂಗಿಗಳ ಜೊತೆ ಕೆಲಕಾಲ ಒಡನಾಡಿದರೆ ಒಂದು ಅನೂಹ್ಯ ಲೋಕ ತೆರೆದುಕೊಳ್ಳುತ್ತದೆ. ಉಳಿದವರ ಗಮನ ಸೆಳೆಯುವ ಪ್ರಯತ್ನವಾಗಿ ಉತ್ಪ್ರೇಕ್ಷಿತ ನಡವಳಿಕೆ-ಅಲಂಕಾರ-ಭಾವತೀವ್ರತೆ-ಹಿಂಸೆಗಳು ಮೊದಲಿಗೇ ಎದ್ದು ಕಾಣುತ್ತವೆ. ಸಮಾಜದ ನಿರಾಕರಣೆ ಆ ಸಮುದಾಯದವರಲ್ಲಿ ಎಂಥ ಐಡೆಂಟಿಟಿ ಕ್ರೈಸಿಸ್ ಹುಟ್ಟಿಸಿದೆಯೆಂದರೆ ಅಪರಿಚಿತರಾಗಿ ಬಳಿ ಹೋದರೆ ಅಸಭ್ಯವೆನಿಸುವ ನಡವಳಿಕೆ ಕಸಿವಿಸಿ ಹುಟ್ಟಿಸುತ್ತದೆ; ಆಪ್ತವಾಗಿ ಸಂಪರ್ಕ ಏರ್ಪಟ್ಟಾಗ ಹಿಂಜರಿಕೆ, ಆತ್ಮದೂಷಣೆ, ಅನುಮಾನಗಳು ಢಿಕ್ಕಿಹೊಡೆಯುತ್ತವೆ.

ಸಮಾಜವಾದರೂ ಸಲಿಂಗಿಗಳ ಕುರಿತು ಏಕಷ್ಟು ಹಿಂಜರಿಯುತ್ತದೆ? ‘ಹಿಜ್ಡಾ ನನಮಗ’ ಎಂಬ ಬೈಗಳ ಕೇಳುತ್ತೇವೆ. ಮಕ್ಕಳಾಗದ ಸೊಸೆಯನ್ನು ಆಸ್ಪತ್ರೆಗೆ ತರುವ ಅತ್ತೆ ‘ನನ ಮಗ ಚಕ್ಕಾ ಅಲ್ಲ, ಇವ್ಳದ್ದೇ ಏನೋ ಮಿಸ್ಟೇಕು, ಸ್ವಲ್ಪ ಸರಿಮಾಡಿನೋಡಿ’ ಎನ್ನುತ್ತಾರೆ. ಬಹುಶಃ ಹೆಣ್ಣು-ಗಂಡು ಎಂಬ ಎರಡೇ ಲಿಂಗಗಳಿರುವ ಬೈನರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರಿಂದ ಮೂರನೆಯದರ ಬಗೆಗೆ ಅಸಡ್ಡೆ, ತಿರಸ್ಕಾರ ಉಳಿದುಹೋಗಿದೆಯೆ?

ಯಾವ ದೇಶದ ಚರಿತ್ರೆ-ಪುರಾಣಗಳ ತೆಗೆದು ನೋಡಿದರೂ ಮೂರನೇ ಲಿಂಗದ ಅಸ್ತಿತ್ವ ಎಲ್ಲ ಕಾಲದಲ್ಲೂ ಇರುವುದು ಕಂಡುಬರುತ್ತದೆ. ಭಾರತದಲ್ಲಿ ವಾತ್ಸಾಯನನ ಕಾಮಸೂತ್ರ ಯಾವ ಹಿಂಜರಿಕೆಯಿಲ್ಲದೆ ಸ್ಪಷ್ಟ ಮಾತುಗಳಲ್ಲಿ ಸಲಿಂಗ ಸಂಬಂಧವನ್ನು ವಿವರಿಸಿತು. ಖಜುರಾಹೋ ಸೇರಿದಂತೆ ಅನೇಕ ದೇವಾಲಯಗಳ ಶಿಲ್ಪಗಳೂ ಕೂಡಾ ಲೈಂಗಿಕತೆಯ ವಿವಿಧ ಭಂಗಿಗಳನ್ನು ನಿರೂಪಿಸುತ್ತ ಸಲಿಂಗ ಸಂಬಂಧವನ್ನೂ ಚಿತ್ರಿಸಿದವು. ಕಾವ್ಯ, ಶಿಲ್ಪ, ಸ್ಮೃತಿ, ನೀತಿಸಂಹಿತೆಗಳು ಅವರನ್ನು ಗುರುತಿಸಿವೆ. ಭಾರತೀಯ ಸಮಾಜವು ಹಿಜ್ರಾ, ಚಕ್ಕಾ, ಅರಾವಣಿ, ಸಲಿಂಗಿ ಎಂದೆಲ್ಲ ಬೇರೆಬೇರೆ  ಹೆಸರುಗಳಿಂದ ಕರೆದು, ಅವರು ಹಾಗಾಗಲು ಕಾರಣವೇನೆಂದು ರಾಮಾಯಣ-ಮಹಾಭಾರತಗಳಲ್ಲಿ ಕತೆ ಸೇರಿಸಿತು. ಅರ್ಧನಾರೀಶ್ವರ ಶಿವ, ಬಹುಚರಾದೇವಿ, ಮಹಾಭಾರತದ ಶಿಖಂಡಿ, ಕುರುಕ್ಷೇತ್ರ ಯುದ್ಧದ ಹಿಂದಿನ ದಿನ ಕೃಷ್ಣನನ್ನು ಮದುವೆಯಾದ ಅಹಿರಾವಣ, ಶಿವ-ಮೋಹಿನಿ ಸಂಗಮದಿಂದ ಹುಟ್ಟಿದ ಷಣ್ಮುಖ - ಇವರೆಲ್ಲ ದೇವರಾದರು. ಇದನ್ನೆಲ್ಲ ಗಮನಿಸಿದರೆ ಮೂರನೇ ಲಿಂಗದ ಅಸ್ತಿತ್ವ ಮತ್ತು ಸಲಿಂಗರತಿ ಭಾರತೀಯ ಸಮಾಜಕ್ಕೆ ಮೊದಲಿನಿಂದ ಗೊತ್ತಿತ್ತು. ಅವರಿಗೆ ಧಾರ್ಮಿಕ ಸ್ಥಾನ ಕಲ್ಪಿಸಲೆಂದೇ ಪುರಾಣದ ಕಥೆ, ಉಪಕಥೆಗಳನ್ನು ಸೇರಿಸಲಾಯಿತು.

ಆದರೆ ಅನಾದಿಯಿಂದ ಸಲಿಂಗಕಾಮ ನೈಸರ್ಗಿಕ ಎಂದು ಜಗತ್ತಿನ ಯಾವ ಧರ್ಮವೂ, ಸಮಾಜವೂ ಒಪ್ಪಿಕೊಳ್ಳಲಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರ ಹೆಣ್ಣು ಯಾ ಗಂಡಿನೊಡನೆ ಯೋನಿ ಹೊರತಾದ ಲೈಂಗಿಕತೆ ಅಪರಾಧವೆಂದು ಅತಿಕಡಿಮೆ ದಂಡ ವಿಧಿಸುವಂತೆ ಸೂಚಿಸಿತು. ಮನುಸ್ಮೃತಿಯು ಸಲಿಂಗಕಾಮವನ್ನು ನಿಯಂತ್ರಿಸಬೇಕಾದ ಅಪರಾಧ ಎಂದು ಕರೆಯಿತು. ೧೮೬೦ಕ್ಕಿಂತ ಮುಂಚೆ ಸಲಿಂಗಕಾಮ ಕಾನೂನು ಪ್ರಕಾರ ಅಪರಾಧವಾಗಿರಲಿಲ್ಲ. ೧೫೪ ವರ್ಷ ಕೆಳಗೆ ೧೮೬೦ರಲ್ಲಿ ರೂಪುಗೊಂಡ ಇಂಡಿಯನ್ ಪೀನಲ್ ಕೋಡ್ ತನ್ನ ೩೭೭ನೇ ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಅಪರಾಧ, ಅನೈಸರ್ಗಿಕ ಎನ್ನುತ್ತದೆ. ಆ ಕಾನೂನಿನಡಿ ಬಂಧನಕ್ಕೊಳಗಾಗಿ ಶಿಕ್ಷೆ ಪಡೆದವರ ಪ್ರಮಾಣ ಇಲ್ಲವೆನ್ನುವಷ್ಟು ಕಡಿಮೆಯಾದರೂ, ಪೊಲೀಸರು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲು ಆ ಕಾನೂನು ಸಾಕಷ್ಟು ಅವಕಾಶ ಕಲ್ಪಿಸಿತು. ಸಮಾಜದಿಂದಷ್ಟೇ ಅಲ್ಲ, ಕಾನೂನಾತ್ಮಕವಾಗಿಯೂ ಮೂರನೇ ಲಿಂಗಿಗಳಿಗೆ ಅಸ್ತಿತ್ವವಿಲ್ಲದೇ ಸಲಿಂಗಕಾಮಿ ಎಂದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಯಿತು. ಅವರು ಒಳಹೊರಗೆ ಏನು, ಹೇಗಿರಬಹುದು ಎಂಬ ದುಷ್ಟ ಕುತೂಹಲದ ಹೊರತಾಗಿ ಮತ್ತಿನ್ಯಾವ ಭಾವವೂ ಜನರಲ್ಲಿ ಸುಳಿಯಲಿಲ್ಲ. ಅವರನ್ನು ಬಳಕೆ ಮಾಡಿಕೊಳ್ಳುವವರಿಗೂ ಅವರ ಎದೆಯ ಮಾತು-ಕಷ್ಟ-ಅನುಭವಗಳನ್ನು ಕೇಳುವ ಗರಜು ಬೀಳಲಿಲ್ಲ.

ಹೀಗೆ ಎಲ್ಲ ಬಗೆಯ ತಾರತಮ್ಯ, ವಂಚನೆಗೆ ಒಳಗಾದ ಲೈಂಗಿಕ ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ರಕ್ಷಿಸಬೇಕೆಂದು ಅಮರ್ತ್ಯಸೆನ್ ಹಾಗೂ ವಿಕ್ರಮ್ ಸೇಠ್ ಸೇರಿದಂತೆ ಹಲವರು ಪ್ರತಿಪಾದನೆ ಮಾಡುತ್ತಲೇ ಇದ್ದರು. ಸರ್ಕಾರೇತರ ಸಂಸ್ಥೆಗಳೂ ಕ್ರಿಯಾಶೀಲವಾಗಿದ್ದವು. ೧೯೯೪ರಲ್ಲಿ ಭಾರತ ಮೂರನೇ ಲಿಂಗವನ್ನು ಕಾನೂನು ಪ್ರಕಾರ ಗುರುತಿಸಿ ಅವರಿಗೆ ಎಲ್ಲ ಮೂಲಭೂತ ಹಕ್ಕುಗಳನ್ನೂ ನೀಡಿತು. ೧೯೯೮ರಲ್ಲಿ ಶೋಭಾ ನೆಹ್ರು ಎಂಬ ಹಿಜ್ರಾ ಹರಿಯಾಣದ ಹಿಸ್ಸಾರ್‌ನ ಪುರಸಭೆಗೆ ಆಯ್ಕೆಯಾದರು. ೨೦೦೬ರಲ್ಲಿ ಪಾಟ್ನಾ ನಗರಸಭೆ ತೆರಿಗೆ ಸಂಗ್ರಹಣಾಕಾರರ ಸಹಾಯಕರನ್ನಾಗಿ ಮೂರನೇ ಲಿಂಗಿಗಳನ್ನು ನೇಮಿಸಿ ೪% ಕಮಿಷನ್ ಕೊಡತೊಡಗಿತು. ಅತಿ ಹೆಚ್ಚು ಅತ್ಯಾಚಾರ, ಲೈಂಗಿಕ ಹಿಂಸೆ, ದೌರ್ಜನ್ಯಕ್ಕೊಳಗಾಗುವ ಸಲಿಂಗಿ ಸಮುದಾಯ ಅತ್ಯಾಚಾರ ಕಾನೂನು ಬದಲಿಸಲು ನೇಮಕವಾದ ವರ್ಮಾ ಸಮಿತಿ ಎದುರು ಹಲವು ಬಾರಿ ಹೋಯಿತು. ಆದರೆ ಬದಲಾದ ಕಾನೂನಿನಲ್ಲಿ ಆ ಸಮುದಾಯದ ಬೇಡಿಕೆಗಳಿಗೆ ಮನ್ನಣೆಯಿರಲಿಲ್ಲ. ಅದರ ಬೆನ್ನಲ್ಲೇ ಬಂದಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ದೇಶಾದ್ಯಂತ ಆ ಸಮುದಾಯದವರಷ್ಟೇ ಅಲ್ಲ, ಸರ್ಕಾರೇತರ ಮತ್ತು ಪ್ರಗತಿಪರ ಮನಸ್ಸಿನ ಸಂಘಟನೆಗಳೂ ತೀರ್ಪನ್ನು ಪ್ರಶ್ನಿಸುವಂತೆ ಮಾಡಿದೆ. ಆ ಸಮುದಾಯ ಸಂಘಟಿತವಾಗುತ್ತ, ತನ್ನ ಅನುಭವ ಹಂಚಿಕೊಳ್ಳುತ್ತ, ಬರೆಯುತ್ತ, ಹಕ್ಕುಗಳಿಗೆ ಹೋರಾಡತೊಡಗಿದೆ.

೨೦೦೯ರಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವುದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿತು. ಸಲಿಂಗಕಾಮಿಯೆಂದು ಹೇಳಿಕೊಳ್ಳುವುದು ಅಪರಾಧವಲ್ಲ ಎಂದಮೇಲೆ ಅವರ ಸಂಘಟನೆಗಳು ಬಲವಾದವು. ಆದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಹಲವರು ಧ್ವನಿಯೆತ್ತಿದರು. ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲೇರಿತು. ೨೦೧೨ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುತ್ತ ‘sಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವುದನ್ನು ನಿಲಿಸಬೇಕು. ಈ ಮೊದಲು ಅನೈಸರ್ಗಿಕವೆಂದು ಅಮಾನ್ಯವಾಗಿದ್ದ ಲಿವ್‌ಇನ್ ಸಂಬಂಧ, ಸಿಂಗಲ್ ಪೇರೆಂಟ್, ಕೃತಕ ಗರ್ಭಧಾರಣೆ ಇತ್ಯಾದಿಗಳನ್ನು ನ್ಯಾಯವ್ಯವಸ್ಥೆ ಮತ್ತು ಸಮಾಜ ಹೇಗೆ ಮಾನ್ಯಮಾಡಿವೆಯೋ ಹಾಗೇ ಬದಲಾಗುತ್ತಿರುವ ಕಾಲದಲ್ಲಿ ಸಲಿಂಗಕಾಮವನ್ನು ನೈಸರ್ಗಿಕ ಎಂದೇ ಭಾವಿಸಬೇಕು’ ಎಂದು ಹೇಳಿತು. ಆದರೆ ಒಂದೇ ವಾರದಲ್ಲಿ ಕೇಂದ್ರ ಗೃಹ ಸಚಿವಾಲಯವು ಸುಪ್ರೀಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಸಲಿಂಗ ಕಾಮ ಅನೈತಿಕ ಮತ್ತು ಸಾಮಾಜಿಕ ಸಂಬಂಧಗಳನ್ನೇ ಹಾಳುಮಾಡುವ ಸಂಗತಿ ಎಂದು ಬಣ್ಣಿಸಿತು. ಆದರೆ ಹಾಗೆ ಹೇಳಿದ ಮರು ವಾರದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳುವುದು ತಪ್ಪೇನಲ್ಲ ಎಂದು ತಿರುವುಮುರುವು ಹೇಳಿಕೆ ಕೊಟ್ಟಿತು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ‘ಅದು ಅಲ್ಲ, ಇದು ಅಲ್ಲ ಎಂದು ಕೋರ್ಟಿನ ಸಮಯ ಹಾಳುಮಾಡಬೇಡಿ’ ಎಂದು ಪರಿಶೀಲನೆಗೆ ಸಮಯ ನೀಡಿತು. ಹಲವು ಗುಂಪುಗಳು ತಂತಮ್ಮ ಅಭಿಪ್ರಾಯ ದಾಖಲಿಸಿದವು. ಕೊನೆಗೆ ಡಿ. ೧೧ರಂದು ಕೋರ್ಟು ತೀರ್ಪು ನೀಡಿ, ‘ಒಪ್ಪಿಗೆಯಿಲ್ಲದ, ಅಪ್ರಾಪ್ತರೊಡನೆಯ ಅಯೋನಿ-ಶಿಶ್ನ ಲೈಂಗಿಕತೆಯನ್ನು ಸೆಕ್ಷನ್ ೩೭೭ ಐಪಿಸಿ ಮೊದಲಿನಂತೇ ಅಪರಾಧವೆಂದು ಪರಿಗಣಿಸುತ್ತದೆ. ಅಪ್ರಾಪ್ತನೆಂದರೆ ೧೮ ವರ್ಷಕ್ಕಿಂತ ಕಡಿಮೆ ಪ್ರಾಯದ ಒಪ್ಪಿಗೆ ನೀಡುವಷ್ಟು ಪ್ರೌಢನಲ್ಲದ ವ್ಯಕ್ತಿ. ಸಂಸತ್ತು ಕಾನೂನಿಗೆ ತಿದ್ದುಪಡಿ ತರುವವರೆಗೆ ಈ ನಿರ್ದೇಶನ ಅನ್ವಯಿಸುತ್ತದೆ’ ಎಂದು ತೀರ್ಪು ನೀಡಿತು.

ಧರ್ಮಧರ್ಮಗಳ ನಡುವೆ ಮತ್ಯಾವುದೇ ವಿಷಯಕ್ಕೆ ಭಿನ್ನಮತವಿರಲಿ, ಅಸಹನೆಯಿರಲಿ, ಈ ವಿಷಯದಲ್ಲಿ ಎಲ್ಲ ಧರ್ಮಗಳೂ ಒಂದೇ ನಿಲುವು ತಳೆದವು. ಆ ಸಮುದಾಯದವರ ದಾರುಣ ಬದುಕಿಗೆ ಬೆಂಬಲವಾಗಿ ನಿಲ್ಲದ ಧರ್ಮಗಳು ಸಲಿಂಗಿಗಳ ಲೈಂಗಿಕತೆಯನ್ನು ಅಧಾರ್ಮಿಕ ಎಂದವು! ಬಾಬಾ ರಾಂದೇವ್ ತಾನು ಯೋಗದಿಂದ ಸಲಿಂಗರತಿ ಎನ್ನುವ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿಕೊಂಡರೆ, ವಿಎಚ್‌ಪಿ ತೀರ್ಪನ್ನು ಬೆಂಬಲಿಸಿತು. ಜೊತೆಗೆ ಹಿಂದೂ, ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮಗಳ ಧಾರ್ಮಿಕ ಮುಖಂಡರು ಸಲಿಂಗಕಾಮಕ್ಕೆ ಧರ್ಮಸಮ್ಮತಿಯಿಲ್ಲ, ಅದು ಅನೈಸರ್ಗಿಕ ಎಂದರು.

ಆದರೆ ನಮ್ಮೊಳಗಿನ, ಹೊರಗಿನ ನಿಸರ್ಗವನ್ನು ನೋಡಲಾರದಷ್ಟು ಧಾವಂತದ ಈ ಬದುಕಿನಲ್ಲಿ ಯಾವುದು ನೈಸರ್ಗಿಕ, ಯಾವುದು ಅನೈಸರ್ಗಿಕ ಎಂದು ವಿಂಗಡಿಸುವುದು ಸುಲಭವಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಗತ್ಯವಾಗಿರುವ, ಅನಿವಾರ್ಯವಾಗಿರುವ ಎಲ್ಲವೂ ನೈಸರ್ಗಿಕವೇ ಎನ್ನುವುದು ಮಾನವಹಕ್ಕು ಯುಗದ ಮಾತು.

***


ವೈದ್ಯಕೀಯವಾಗಿ ಸರಳಗೊಳಿಸಿ ಹೇಳುವುದಾದರೆ ಎಕ್ಸ್ ಎಕ್ಸ್ ಲಿಂಗ ವರ್ಣತಂತು ಹೊಂದಿರುವ ಜೀವಿ ಹೆಣ್ಣಾದರೆ, ಎಕ್ಸ್ ವೈ ಲಿಂಗ ವರ್ಣತಂತು ಹೊಂದಿರುವ ಜೀವಿ ಗಂಡಾಗಿರುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ, ಅದರಲ್ಲೂ ಬೆನ್ನುಹುರಿಯಿಲ್ಲದ ಪ್ರಾಣಿಗಳಲ್ಲಿ (ಅಕಶೇರುಕಗಳು ಮತ್ತು ಅದಕ್ಕಿಂತ ಕೆಳ ಸ್ತರದ ಬಸವನಹುಳು, ಕೆಲ ಜಾತಿಯ ಮೀನು, ಎರೆಹುಳ ಇತ್ಯಾದಿಗಳಲ್ಲಿ) ಒಂದೇ ಪ್ರಾಣಿಯು ಎರಡೂ ಲಿಂಗಗಳ ಲೈಂಗಿಕ ಅಂಗಾಂಗಗಳನ್ನು ಹೊಂದಿರುತ್ತದೆ. ಸಂಗಾತಿಯೊಂದಿಗೆ ಕೂಡುವುದು ಎಂದರೆ ಗರ್ಭ ಕಟ್ಟುವುದು, ಕಟ್ಟಿಸಿಕೊಳ್ಳುವುದು ಎರಡೂ ಆಗಿರುತ್ತದೆ. ವಿಕಾಸದ ಮೇಲಿನ ಹಂತದಲ್ಲಿರುವ ಮಾನವ ಮತ್ತಿತರ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಪ್ರಭೇದಗಳು ವಿಶಿಷ್ಟವಾಗಿ, ಬೇರೆಬೇರೆಯಾಗಿ ಸೃಷ್ಟಿಯಾಗಿವೆ.

ಹೀಗಿರುತ್ತ ಸೃಷ್ಟಿಕ್ರಿಯೆಯ ಆರಂಭದ ಹಂತದಲ್ಲಿ ಕೋಶಗಳ ಒಡೆಯುವಿಕೆ-ಕೂಡುವಿಕೆಯಲ್ಲಾಗುವ ಏರುಪೇರಿನಿಂದ ಕೆಲವೊಮ್ಮೆ ಎಕ್ಸ್ ಎಕ್ಸ್ ವೈ/ ಎಕ್ಸ್ ವೈವೈ/ ಎಕ್ಸ್ ಎಕ್ಸ್ ವೈವೈ ಮಿಶ್ರಣದ ಹೆಚ್ಚುವರಿ ಲಿಂಗಕ್ರೋಮೋಸೋಮುಗಳಿರುವ ಜೀವವು ಹುಟ್ಟುತ್ತದೆ. ಅಂಥ ಜನನದ  ಪ್ರಮಾಣವೆಷ್ಟು ಎಂಬ ಅಂಕಿಅಂಶ ಸ್ಪಷ್ಟವಾಗಿಲ್ಲದಿದ್ದರೂ ಪ್ರತಿಶತ ೧-೧.೭% ಶಿಶುಗಳು ಒಂದಲ್ಲ ಒಂದು ಲಿಂಗ ಸಂಬಂಧಿ ದ್ವಂದ್ವ ಅಥವಾ ಅಸ್ಪಷ್ಟತೆಯನ್ನು ಹೊಂದಿರುತ್ತವೆ ಎನ್ನುವುದು ಒಂದು ಅಂದಾಜು. ದೇಹದೊಳಗಿನ ಅಂಗಾಂಗ ಸ್ಪಷ್ಟವಾಗಿ ಒಂದು ಲಿಂಗದ್ದಾಗಿದ್ದರೆ, ಹೊರಗಿನ ಅಂಗಾಂಗ ಮತ್ತೊಂದು ಲಿಂಗದ್ದಾಗಿರುತ್ತದೆ. ಅಥವಾ ಎರಡೂ ಲಿಂಗದ ಮಿಶ್ರ ಅಂಗಾಂಗಗಳಿರುತ್ತವೆ ಅಥವಾ ಯಾವುದೆಂದು ನಿರ್ಧರಿಸಲಾಗದಂತೆ ದ್ವಂದ್ವ ಅಂಗಾಂಗಗಳಿರುತ್ತವೆ. ಅಂಥವರಲ್ಲಿ ನೋಡಲು ಗಂಡಸಿನ ತರಹ ಇದ್ದರೂ ಶಿಶ್ನ-ವೃಷಣ ಇಲ್ಲದಿರುವುದು; ಗಡ್ಡ-ಮೀಸೆ ಇದ್ದರೂ ಮೊಲೆಯಿರುವುದು; ಒಳಗೆ ಅಂಡಕೋಶ ಇದ್ದರೂ ಹೊರಗೆ ಪುಟ್ಟ ಶಿಶ್ನವು ಇರುವುದು, ಮೀಸೆ, ಗಡ್ಡ, ಮೊಲೆ ಯಾವುದೂ ಬೆಳೆಯದಿರುವುದು - ಹೀಗೆ ಭಿನ್ನ ಮಿಶ್ರಣದ ಲಿಂಗದ್ವಂದ್ವ ಕಂಡುಬರುತ್ತದೆ.

ಹೀಗೆ ಹುಟ್ಟುವ ಮಕ್ಕಳನ್ನು ಸಾಧಾರಣವಾಗಿ ತಾಯ್ತಂದೆಯರು ಮತ್ತು ಸಮಾಜ ಯಾವುದೋ ಒಂದು ಲಿಂಗವೆಂದು ಗುರುತಿಸಿ ಬೆಳೆಸುತ್ತಾರೆ. ಆದರೆ ಹೆಣ್ಣು-ಗಂಡು ಎಂಬ ಲಿಂಗಗಳು ನಿಸರ್ಗ ಸೃಷ್ಟಿಯಾದರೆ ಹೆಣ್ತನ, ಗಂಡಸ್ತನ ಎನ್ನುವ ಲೈಂಗಿಕತೆ ಸಮಾಜದ ಸೃಷ್ಟಿ. ಆದರೂ ಅವರು ದೊಡ್ಡವರಾಗುತ್ತ ಹೋದಾಗ ತಮ್ಮ ಲೈಂಗಿಕ ಅಂಗಾಂಗ ತಾನು ಬೆಳೆಸಲ್ಪಟ್ಟ ಲಿಂಗಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ, ತಾನು ಬೆಳೆಸಲ್ಪಟ್ಟ ಲಿಂಗತ್ವವೂ, ತನ್ನ ಆಂಗಿಕ ಲಿಂಗತ್ವವೂ ಬೇರೆ ಎಂದು ತಿಳಿದಾಗ ದಿಗ್ಭ್ರಮೆಗೊಂಡು ಹತಾಶರಾಗುತ್ತಾರೆ. ಲಿಂಗದ್ವಂದ್ವವು ವ್ಯಕ್ತಿತ್ವವನ್ನು ಉದ್ದುದ್ದ, ಅಡ್ಡಡ್ಡ ಸೀಳುತ್ತದೆ. ಮೊದಲು ಕುಟುಂಬದಿಂದ ಅವಜ್ಞೆಗೆ ಒಳಗಾಗುತ್ತಾರೆ. ಅಂಥ ವ್ಯಕ್ತಿ ತಮ್ಮ ಕುಟುಂಬದಲ್ಲಿರುವುದು ಅವಮಾನ ಎಂದು ಕುಟುಂಬ ಆದಷ್ಟು ಮುಚ್ಚಿಡಲು ಯತ್ನಿಸುತ್ತದೆ. ಎಷ್ಟೋ ಕುಟುಂಬಗಳು ಬೆಳೆದ ಮೇಲೆ ಆ ವ್ಯಕ್ತಿ ತನ್ನ ಲಿಂಗ ಬೇರೆ ಎಂದು ಘೋಷಿಸಿಕೊಳ್ಳಲು ಬಿಡುವುದಿಲ್ಲ. ಆಗ ಹಠ, ಕ್ರೌರ್ಯ, ಹಿಂಸೆ, ಮನೆ ಬಿಟ್ಟೋಡುವುದು ಶುರುವಾಗುತ್ತದೆ. ಮನೆಯಿಂದ, ಸಮಾಜದಿಂದ ತಿರಸ್ಕೃತರಾದ ಹುಡುಗರು ಒಬ್ಬ ಗುರುವಿನ ಕೈಗೆ ಸಿಕ್ಕರೆ ಆತ ನಿರ್ವಾಣ ಕ್ರಿಯೆ ನಡೆಸಿ ಹಿಜ್ರಾ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಅಲ್ಲಿ ಗುರು-ಗುರು ಸೋದರರಿಂದ ನಿರಂತರ ಲೈಂಗಿಕ/ಆರ್ಥಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಸರ್ಜರಿ ಮಾಡಿಕೊಂಡು ತನಗೊಂದು ಸ್ಪಷ್ಟ ಲಿಂಗತ್ವ ಸಿಗಬಹುದೆಂದು ಪ್ರಯತ್ನಿಸುತ್ತಾರೆ. ಆದರೆ ಲಿಂಗ ಬದಲಾವಣೆಯ ನಂತರವೂ ತನಗೊಬ್ಬ ಆಪ್ತ ಸಂಗಾತಿ ಸಿಗದೇ; ತನ್ನದೇ ವಲಯ ಕಟ್ಟಿಕೊಳ್ಳಲಾಗದೇ ಅಸಹಾಯಕತೆಯಲ್ಲಿ ಎಷ್ಟೋ ಜನ ಬಳಲುತ್ತಾರೆ. ಸಿಗರೇಟು, ಕುಡಿತ ಎಲ್ಲ ಅಂಟುತ್ತವೆ.

ಬಹುಪ್ರಚಾರದಲ್ಲಿರುವ ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆಗಳೆಲ್ಲ ಗಂಡಾಗಿ, ಅರೆಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾದವರ ಕಡುಕಷ್ಟದ ಜೀವನ ವಿವರಗಳಾಗಿವೆ. ಆದರೆ ಅಲ್ಲಿ ವಿಭಿನ್ನ ಗುಂಪುಗಳಿವೆ: ಗಂಡಾಗಿ ಹೆಣ್ಣಾಗಿರಬಯಸುವ, ಗಂಡಾಗಿಯೂ ಗಂಡಿನೊಡನೇ ಇರಬಯಸುವ, ಹೆಣ್ಣಾಗಿ ಕಂಡರೂ ಅರೆಗಂಡಾಗಿ ಹೆಣ್ಣಿನೊಡನೆ ಇರಬಯಸುವ; ಹೆಣ್ಣಾದರೂ ಹೆಣ್ಣಿನೊಡನೆ ಇರಬಯಸುವ - ಹೀಗೇ ದ್ವಂದ್ವ ಲಿಂಗಿ, ಏಕಲಿಂಗಿ, ಉಭಯ ಲಿಂಗಿ, ಸಲಿಂಗಿ, ಮಿಶ್ರಲಿಂಗಿ ಎಂಬ ಹಲವು ಗುಂಪುಗಳಿವೆ. ಲಿಂಗಬದಲಾವಣೆಯ ಶಸ್ತ್ರಕ್ರಿಯೆಗೊಳಗಾಗಿ ಕೆಲವರು ಶಿಶ್ನ, ಬೀಜ ತೆಗೆಸಿ ಉಡುಗೆ, ತೊಡುಗೆ, ಹಾವಭಾವಗಳಲ್ಲಿ ಪೂರಾ ಹೆಣ್ಣಿನಂತೆಯೇ ವರ್ತಿಸಿ ಗಂಡಸರ ಜೊತೆ ಇರಲು ಶುರುಮಾಡಿದರೆ; ಹುಟ್ಟುವಾಗ ಹೆಣ್ಣಿನಂತಿದ್ದ ಮತ್ತೆ ಕೆಲವರು ಶಿಶ್ನದ ಆಪರೇಷನ್‌ಗೆ ಒಳಗಾಗಿ ಗಂಡಸಾಗಿ ಬದಲಾಗುತ್ತಾರೆ. ಸರಳಗೊಳಿಸಿ ಹೇಳುವಾಗ ಇವೆಲ್ಲ ತುಂಬ ಸುಲಭ ಎನಿಸಬಹುದು. ಆದರೆ ಮಾನವದೇಹವೆಂಬ ಸೂಪರ್ ಕಂಪ್ಯೂಟರ್ ಸೂಪರ್ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತದೆ.

ಈ ಮಾತುಗಳು ಹೇಳಬಯಸುವುದಿಷ್ಟೆ: ಸಲಿಂಗಿಯ ಸೃಷ್ಟಿ ಸೃಷ್ಟಿಕ್ರಿಯೆಯ ಏರುಪೇರಿನಿಂದ ಆಗುವಂಥದು. ಮನೋವೈದ್ಯದ ಪ್ರಕಾರವೂ ಅದು ವಿಕೃತಿಯಲ್ಲ. ಅನೈಸರ್ಗಿಕವಲ್ಲ, ಏಕೆಂದರೆ ನಿಸರ್ಗವೇ ಅವರನ್ನು ಸೃಷ್ಟಿ ಮಾಡಿರುವುದು. ಲೈಂಗಿಕ ಅಂಗಾಂಗವೂ, ದೇಹವೂ ಉಳಿದವರಿಗಿಂತ ಭಿನ್ನವಾಗಿರುವಾಗ ಅವರ ಲೈಂಗಿಕತೆಯೂ ಭಿನ್ನವಾಗಿರಲೇಬೇಕಾಗುತ್ತದೆ. ಎಂದೇ ಪುರುಷ-ಪುರುಷ, ಸ್ತ್ರೀ-ಸ್ತ್ರೀ ಸಂಬಂಧಗಳು ಸಂತಾನೋತ್ಪತ್ತಿಯ ಉದ್ದೇಶವಿಲ್ಲದೆ ಏರ್ಪಡುತ್ತದೆ. ಮಕ್ಕಳಿರುವ ಕುಟುಂಬವನ್ನು ಹೊಂದುವ ಸಾಧ್ಯತೆ ಇಲ್ಲವೆಂದ ಮೇಲೆ ಲೈಂಗಿಕ ಕ್ರಿಯೆ ಲೈಂಗಿಕ ತೃಪ್ತಿಗಾಗಿಯೇ ನಡೆದು, ಸಲಿಂಗಿಗಳದು ಢಾಳಾದ ಅತಿ ಲೈಂಗಿಕಾಸಕ್ತಿಯೆನಿಸುವಂತೆ ಮಾಡುತ್ತದೆ. ಸಾಂಪ್ರದಾಯಿಕ ಬೈನರಿ ಲಿಂಗತ್ವದ ಸಮಾಜಕ್ಕೆ ಅದು ವಿಕೃತಿಯಂತೆ, ಅನೈಸರ್ಗಿಕವೆಂಬಂತೆ ಕಾಣುತ್ತದೆ. ಇದಾವುದನ್ನೂ ಹೇಳಿಕೊಳ್ಳಲಾಗದ ಪ್ರಪಾತದಂಚಿನಲ್ಲಿ ಸಮಾಜ ಅವರನ್ನು ಇಷ್ಟೂ ಕಾಲ ಇಟ್ಟುಕೊಂಡುಬಂದಿದೆ.

‘ಸೃಷ್ಟಿಯ ಬೆಳೆ ಬೆಳೆಯುವಾಗ ಸೈತಾನನು ಅಲ್ಲೊಂದು ಇಲ್ಲೊಂದು ಕಳೆ ಬೀಜ ನೆಟ್ಟನು. ಬೆಳೆಯ ನಡುವಿನ ಕಳೆಯೇ ನಾವು ಅಂಗವಿಕಲರು’ ಎನ್ನುತ್ತಾನೆ ಮಲೆಯಾಳಿ ಅಂಗವಿಕಲ ಕವಿ ನಾರಾಯಣ್. ಇದೇ ಮಾತನ್ನು ಹಿಜಡಾಗಳೂ ಅನ್ವಯಿಸಿಕೊಳ್ಳುತ್ತಾರೆ.

***


ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಹಿಜ್ಡಾಗಳಿಗೆ ಬದುಕಲು ವೇಶ್ಯಾವಾಟಿಕೆ ಅನಿವಾರ್ಯ ಎನ್ನುವಂತಹ ಸ್ಥಿತಿ ಇದೆ. ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಮೊದಲಾದವರ ಆತ್ಮಕತೆಗಳನ್ನು ಓದಿದರೆ ಸಮಾಜದ ನಿರಂತರ ನಿರಾಕರಣೆ, ಅದನ್ನು ಮೀರಲು ಆ ಜೀವಗಳು ಪಡುವ ಪ್ರಯತ್ನ, ಅಭದ್ರತೆ ಹಾಗೂ ಅದು ಹುಟ್ಟಿಸುವ ವಿಕ್ಷಿಪ್ತ ಮತ್ತು ಸೂಕ್ಷ್ಮ ವ್ಯಕ್ತಿತ್ವ - ಈ ಎಲ್ಲದರ ಪರಿಚಯವಾಗುತ್ತದೆ. ಆ ಸಮುದಾಯದೊಳಗಿನ ಕಷ್ಟಗಳನ್ನು ಉಳಿದ ಸಮಾಜ ಅರ್ಥಮಾಡಿಕೊಳ್ಳುವುದು ಕಷ್ಟವಾಗಿರುವಾಗ ಆ ಸಮುದಾಯವೂ ತನ್ನೊಳಗಿನ ಲೋಪಗಳ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎನಿಸುತ್ತಿದೆ:


  • ಸಲಿಂಗಿಗಳಲ್ಲಿಯೂ ಪುರುಷಪ್ರಾಧಾನ್ಯವಿದೆ, ಪುರುಷಪ್ರಧಾನ ಸಮಾಜದ ಎಲ್ಲ ತಾರತಮ್ಯ ಇದೆ. ಹೆಣ್ಣು ಧ್ವನಿ ಎತ್ತಲು ಅಲ್ಲಿಯೂ ಕಷ್ಟವಿದೆ. ಅಲ್ಲಿ ಗುರು ಇದ್ದಾನೆ. ಪರಂಪರೆಯಿದೆ. ವರ್ಷಕ್ಕೊಮ್ಮೆ ಅವನನ್ನು ಎಲ್ಲಿದ್ದರೂ ಭೇಟಿಯಾಗಬೇಕು. ತಪ್ಪಿದರೆ ನಾಣ್ಯದಿಂದ ಹಣೆ ಸುಡುತ್ತಾರೆ, ಏಳು ವರ್ಷ ಸಮುದಾಯದಿಂದ ಹೊರಹಾಕುತ್ತಾರೆ, ಸತ್ತರೆ ಹೆಣ ತೆಗೆಯುವುದಿಲ್ಲ ಎಂಬಿತ್ಯಾದಿ ಕಠೋರ ಶಿಕ್ಷೆಗಳಿವೆ. ಸಮುದಾಯದೊಳಗಿರುವ ಪುರುಷ ಪ್ರಾಧಾನ್ಯ, ಏಣಿಶ್ರೇಣಿ, ಪರಂಪರೆಯನ್ನು ಈ ಕಾಲದ ಸಲಿಂಗಿಗಳು ಪ್ರಶ್ನಿಸಿ ಅದರಿಂದ ಹೊರಬರಲು ಯತ್ನಿಸದಿದ್ದರೆ ಅವರನ್ನು ಪಾರಂಪರಿಕವಾಗಿ ನೋಡುವ ಸಮಾಜದ ಕಣ್ಣು ಬದಲಾಗುವುದು ಹೇಗೆ?
  • ತಮ್ಮನ್ನು ಲೈಂಗಿಕ ಕಾರ್ಮಿಕರೆಂದು ಕರೆದುಕೊಳುವ ಅವರು ಯೂನಿಯನ್ ಕಟ್ಟಿಕೊಂಡಿದ್ದಾರೆ. ಸಂತೆಯ ಸಾಮಾನುಗಳಂತೆ ವೇಶ್ಯಾವಾಟಿಕೆಗೆ ಅಪ್ರಾಪ್ತರು, ಅಸಹಾಯಕರು ಮಾರಾಟವಾಗುತ್ತಿರುವಾಗ, ಎಚ್‌ಐವಿ ಮತ್ತಿತರ ಸಾಂಕ್ರಾಮಿಕ ರೋಗಗಳು ಕಣ್ಣೆದುರು ಕುಣಿಯುವಾಗ ಈ ಕಾರ್ಮಿಕರ ಉದ್ಯೋಗವನ್ನು ಬೆಂಬಲಿಸುವುದು ಹೇಗೆ?
  • ಉಳಿದ ಸಮಾಜ ಲಿಂಗ, ಲೈಂಗಿಕತೆ, ಲಿಂಗತ್ವದ ಬಗೆಗೆ ಯೋಚಿಸುವಂತೆ ಮಾಡುವವರು ಸಲಿಂಗಿಗಳು. ಆದರೆ ಸಲಿಂಗಿ ಜೋಡಿಗಳು ಲಿಂಗತ್ವ ಮೀರಿ ಬದುಕುವುದಿಲ್ಲ. ಜೋಡಿಗಳಲ್ಲಿ ಒಬ್ಬರು ಪೂರಾ ಗಂಡು/ಗಂಡನಂತೆ, ಅವರ ಜೊತೆಗಾರರು ಪೂರಾ ಹೆಣ್ಣು ಅಥವಾ ಹೆಂಡತಿಯಂತೆ ಪಾತ್ರ ನಿರ್ವಹಿಸುತ್ತಾರೆ. ಲಿಂಗತ್ವ ಬಿಡಬೇಕೆನ್ನುವವರು ಮತ್ತದೇ ಪಾರಂಪರಿಕ ಕುಟುಂಬ ಚೌಕಟ್ಟಿನ ಲಿಂಗತಾರತಮ್ಯ, ದೌರ್ಜನ್ಯಕ್ಕೆ ತಮ್ಮನ್ನು ಈಡುಮಾಡಿಕೊಳ್ಳುತ್ತಾರೆ. ದೌರ್ಜನ್ಯಕ್ಕೆ ಮೂಲ ಕಾರಣವಾದ ಲಿಂಗತ್ವವನ್ನು ತಾವು ಮೀರದೇ ಸಮಾಜ ಮಾತ್ರ ಮೀರಬೇಕೆಂದು ಬಯಸುವುದು ಸರಿಯೆ?  
  • ಲೈಂಗಿಕಾಸಕ್ತಿಗೆ ವಿರುದ್ಧ ಲಿಂಗವು ಸುಲಭವಾಗಿ ಸಿಗದಿದ್ದರೆ ಸಲಿಂಗಕಾಮವನ್ನು ರೂಢಿಸಿಕೊಳ್ಳುವವರು ಮಿಶ್ರಲಿಂಗಿಗಳು. ಅವರದು ಅನುಕೂಲಸಿಂಧು ಲಿಂಗತ್ವ. ಕಡಿಮೆ ದುಡ್ಡಿಗೆ ಸುಲಭವಾಗಿ ಹುಡುಗರು ಸಿಕ್ಕರೆ ಸಲಿಂಗಿಗಳು, ಇಲ್ಲದಿದ್ದರೆ ಹೆಣ್ಣೇ ಬೇಕೆನ್ನುವವರು. ಕುಟುಂಬದಿಂದ ದೀರ್ಘಕಾಲ ದೂರವುಳಿವ, ಒಂಟಿಯಾಗಿರುವ ಗಂಡಸರು ಎಳೆಯ ಹುಡುಗರನ್ನು, ನಿರ್ಗತಿಕ, ಅಸಹಾಯಕ ಬಾಲಕರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡು ಆ ತರುಣಬಾಲರ ವ್ಯಕ್ತಿತ್ವ, ಲೈಂಗಿಕತೆಯನ್ನೇ ನಾಶಮಾಡಿದ ಅಸಂಖ್ಯ ಉದಾಹರಣೆಗಳು ನಮ್ಮೆದುರಿಗಿವೆ. ಸಲಿಂಗಕಾಮ ಅಪರಾಧವಲ್ಲ ಎಂದಾದರೆ ಇಂಥ ಕಾಮಪಿಪಾಸು ಮಿಶ್ರಲಿಂಗಿಗಳು ಅಸಹಾಯಕ ಹುಡುಗರನ್ನು ನಾಶ ಮಾಡುತ್ತಲೇ ಹೋಗುತ್ತಾರೆ. ಅತ್ಯಾಚಾರವೆಂದ ಕೂಡಲೇ ಹೆಣ್ಣಿನ ಮೇಲೆ ಗಂಡಿನ ಆಕ್ರಮಣವೆಂದಷ್ಟೇ ಬಿಂಬಿತವಾಗುತ್ತದೆ. ಹಾಗಾದರೆ ಸಲಿಂಗಕಾಮ ಕಾನೂನುಬದ್ಧ ಎಂದಾದಾಗ ಆ ತರುಣ-ಬಾಲರ ಪರವಾಗಿ ಹೇಗೆ, ಯಾರು ಧ್ವನಿಯೆತ್ತುವುದು?
  • ಸಲಿಂಗಕಾಮ ಸಿಂಧು ಎಂದಾದರೆ ಅತ್ಯಾಚಾರ, ವ್ಯಭಿಚಾರ, ಒಪ್ಪಿಗೆ, ಮದುವೆ, ವಿಚ್ಛೇದನ, ಆಸ್ತಿಹಕ್ಕು ಇವುಗಳ ವ್ಯಾಖ್ಯೆ ಏನು? 



ಆಗಬೇಕಿರುವುದೇನು? 


  • ಸಮಾಜದ ದೃಷ್ಟಿಕೋನ ಬದಲಾಗಬೇಕು. ಆಗಮಾತ್ರ ಅಂಥ ವ್ಯಕ್ತಿಗಳು ಮನೆಬಿಟ್ಟು ಬೇರೆ ಸಮುದಾಯವಾಗಿ ಗುಂಪುಗಳಲ್ಲಿ ಬದುಕುವ ಅನಿವಾರ್ಯತೆ ತಪ್ಪುತ್ತದೆ. ಕೌಟುಂಬಿಕ ಸುರಕ್ಷೆ ಸಿಗುತ್ತದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. 
  • ಲಿಂಗಬದಲಾವಣೆಯ ಶಸ್ತ್ರಚಿಕಿತ್ಸೆ ಹಾಗೂ ನಂತರದ ಕೌನ್ಸೆಲಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. 
  • ಶಿಕ್ಷಣದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ಔದ್ಯೋಗಿಕ ತರಬೇತಿ, ವೃತ್ತಿ ಶಿಕ್ಷಣ, ಸ್ವಉದ್ಯೋಗದತ್ತ ಗಮನ ಹರಿಸಬೇಕು. 
  • ಸಮುದಾಯ ಸುರಕ್ಷತೆಯ ವಿಶ್ವಾಸ ಹೊಂದಲು ಸಂಘಟಿತವಾಗಬೇಕು. ತಾವೂ ಈ ಸಮಾಜದ ನಾಗರಿಕರು; ಉಳಿದ ಸಮಾಜಕ್ಕೆ ಶಿಕ್ಷಣ, ಉದ್ಯೋಗ, ರಾಜಕಾರಣ, ಅಭಿವ್ಯಕ್ತಿಗಾಗಿ ಯಾವ್ಯಾವ ಹಕ್ಕುಗಳಿವೆಯೋ ಅವೆಲ್ಲ ತಮಗೂ ಇವೆ ಎಂದು ತಿಳಿಯಬೇಕು. ತಮ್ಮ ಹಕ್ಕುಗಳ ಕುರಿತು ಸಮುದಾಯದೊಳಗೊಂದು ಪ್ರಜ್ಞೆ ಮೂಡಿಸುತ್ತಲೇ ಉಳಿದ ಸಮಾಜಕ್ಕೂ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವಾಗಬೇಕು.
  • ಸ್ಪಷ್ಟ ಲಿಂಗ ಅಸ್ಮಿತೆ ಇಲ್ಲದಿರುವುದು ವ್ಯಕ್ತಿತ್ವದ ಒಂದು ದೊಡ್ಡ ಕೊರೆ ನಿಜ. ಆದರೆ ಅದರ ಆಚೆಗೂ ತಮ್ಮ ಪ್ರತಿಭೆ, ಉದ್ಯೋಗ, ಅವಕಾಶದ ಸಲುವಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು.
  • ಸಮಾಜದ ಇತರೆಲ್ಲ ಸಮಸ್ಯೆ, ಸವಾಲುಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡು ಮುಖ್ಯವಾಹಿನಿಯಲ್ಲಿರಬೇಕು. ಸಲಿಂಗಿ ಎಂಬ ಅಸ್ಮಿತೆಯ ಜೊತೆಜೊತೆಗೆ ಉಳಿದ ಸಮಾಜದ ಭಾಗ ತಾವೆಂದು ತಿಳಿದು ಜವಾಬ್ದಾರಿ ನಿಭಾಯಿಸಬೇಕು. ಈ ಮಾತು ಕೇವಲ ಸಲಿಂಗಿಗಳಿಗಷ್ಟೇ ಅಲ್ಲ, ಎಲ್ಲ ಶೋಷಿತರಿಗೂ ಅನ್ವಯಿಸುತ್ತದೆ.


ಘೋರ ಅತ್ಯಾಚಾರಕ್ಕೊಳಗಾಗುವ, ಸಂಗಾತಿ-ತಲೆಹಿಡುಕ-ಗಿರಾಕಿ-ಪೊಲೀಸರು ಹೀಗೆ ಎಲ್ಲ ದಿಕ್ಕಿನಿಂದಲೂ ಕೇವಲ ನಿಂದನೆ, ಬೈಗುಳ, ಅವಮಾನ, ಹಿಂಸೆಯನ್ನೇ ಎದುರಿಸುವ ಸಮುದಾಯವನ್ನು ಸಮಾಜ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಹೆಚ್ಚೇನೂ ಬೇಡ, ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುವುದನ್ನು ಕಲಿಯಬೇಕು. ಲೈಂಗಿಕ ವಸ್ತುಗಳಾಗಿಸಿ ನೋಡುವ ಪರಿಪಾಠ ನಿಲ್ಲಿಸಬೇಕು. ಈ ದೇಶದಲ್ಲಿ ಯಾವುದೇ ವ್ಯಕ್ತಿಗಾದರೂ ಒಂದು ಅಯಾಚಿತ ಬೆಂಬಲ ಸಿಕ್ಕೇ ಸಿಗುತ್ತದೆ. ಅದು ಜಾತಿ ಬೆಂಬಲ. ಆದರೆ ಹಿಜಡಾಗಳಿಗೆ, ದ್ವಂದ್ವ ಲಿಂಗಿಗಳಿಗೆ ಆ ಬೆಂಬಲವೂ ಇಲ್ಲ. ಪ್ರಕೃತಿಯೇ ತೋರಿದ ತಾರತಮ್ಯಕ್ಕೆ ಇತ್ತ ಹೆಣ್ಣೂ ಅಲ್ಲದೆ, ಅತ್ತ ಗಂಡೂ ಅಲ್ಲದೆ, ನಡುವೆ ಸುಳಿವ ಆತ್ಮಗಳಾದ ಅವರು ತನ್ನ ಬಂಧುವೆಂದು ಹೇಳಿಕೊಳ್ಳಲು ಎಲ್ಲರಿಗೂ ಹಿಂಜರಿಕೆ.

ಲಿಂಗ ಕಾಲಂ ತುಂಬಲಾಗದ ಕಾರಣಕ್ಕೆ ಪ್ರಮಾಣಪತ್ರ ಸಿಗುವುದೂ ಕಷ್ಟವಾದ ಅವರ ಬದುಕು ಎಷ್ಟು ದುರ್ಭರ! ಎರಡೇ ಲಿಂಗಗಳಿರುವ ಸಮಾಜದ ಬೈನರಿ ಮಾಡೆಲ್ ಅವರನ್ನು ಇದುವರೆಗೆ ಘಾಸಿಗೊಳಿಸಿದ್ದು ಸಾಕು. ಕೋರ್ಟಿನ ತೀರ್ಮಾನ ಏನೇ ಇದ್ದರೂ ಅವರು ಮಾನವರಂತೆ ಬದುಕಲು ಅನುವು ಮಾಡಿಕೊಡುವುದೊಂದೇ ಆ ಸಮುದಾಯಗಳ ಬಿಡುಗಡೆ, ಸಬಲೀಕರಣಕ್ಕೆ ಹಲವು ದಾರಿಗಳನ್ನು ತೆರೆಯಬಹುದು..

Saturday 14 June 2014

ನಿಷ್ಠೆ: ಮುಷ್ಟಿಯೊಳಗಿನ ಗಂಧ




ಭೂಮಿಮೇಲಿನ ಬಹುಪಾಲು ಜೀವಿಗಳಲ್ಲಿ ಗಂಡು-ಹೆಣ್ಣು ಜೊತೆಯಾಗಿರುವುದರ ಮೂಲ ಕಾರಣ ಸಂತತಿಯನ್ನು ಬೆಳೆಸುವುದು. ಮಾನವನನ್ನು ಹೊರತುಪಡಿಸಿದರೆ ಉಳಿದಂತೆ ಸಂತತಿಯು ತನಗೆ ತಾನೇ ಬದುಕಲು ಶಕ್ತವಾದೊಡನೆ ಹೆಣ್ಣುಗಂಡು ಬೇರೆಯಾಗುತ್ತವೆ. ಇನ್ನೊಂದು ‘ಸಂತಾನೋತ್ಪತ್ತಿ ಕಾಲ’ ಬಂದಾಗ ಬೇರೆ ಸಂಗಾತಿಯೊಡನೆ ಒಗ್ಗೂಡುತ್ತವೆ. ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ‘ಮಾನವ ಮರಿ’ ತುಂಬಾ ಪ್ರಿಮೆಚೂರ್. ತನ್ನ ತಾಯ್ತಂದೆಯರು ತಿನ್ನುವುದನ್ನು ತಿನ್ನಲಾರದ, ಕುಡಿಯಲಾರದ, ಚಲನಹೀನ ಸ್ಥಿತಿಯಲ್ಲಿರುವುದರಿಂದ ಅದಕ್ಕೆ ಹೆಚ್ಚು ಕಾಳಜಿಯ ಅಗತ್ಯವಿದೆ. ಎಂದೇ ಹೆಚ್ಚುಕಾಲದವರೆಗೆ ಅದರ ತಾಯ್ತಂದೆಯರು ಒಟ್ಟಿಗಿರುವುದು ಜೈವಿಕ ಅನಿವಾರ್ಯವೂ, ಅಗತ್ಯವೂ ಆಗಿದೆ. ಇದು ವಿಜ್ಞಾನ ಮತ್ತು ಪ್ರಕೃತಿಯ ವಾಸ್ತವ ಸತ್ಯ. ಆದರೆ ಮನುಷ್ಯರಲ್ಲಿ ಮಕ್ಕಳು ಸ್ವಯಂಸಾಮರ್ಥ್ಯ ಪಡೆದಮೇಲೂ ಸಂಬಂಧ ನಶಿಸದೇ ಪಾಲಕರು ಮಕ್ಕಳೊಟ್ಟಿಗೇ ಇರುತ್ತಾರೆ. ಇದಕ್ಕೆ ಸಂತತಿಯ ಸಂಖ್ಯೆ ಕಡಿಮೆ ಇರುವುದು, ಉತ್ತರಾಧಿಕಾರದ ಕಲ್ಪನೆ, ಲೈಂಗಿಕತೆಯನ್ನು ಸಂತಾನೋತ್ಪತ್ತಿಯ ಆಚೆ ಜೀವಮಾನ ಪರ್ಯಂತ ಮನರಂಜನೆಯ ಸಾಧನವಾಗಿ ಬಳಸುವುದು ಕಾರಣವಾಗಿವೆ.

ಮಾನವನಲ್ಲಿ ‘ಉತ್ತರಾಧಿಕಾರಿ’ಯ ಅವಶ್ಯಕತೆ ಉಂಟಾಗಿದ್ದರಿಂದ ತನ್ನದೇ ‘ಹೆಂಡತಿ-ಮಕ್ಕಳ ಸಂಸಾರ’ವನ್ನು ಕಟ್ಟಿಕೊಳ್ಳಲು ‘ಮದುವೆ’ ಕಲ್ಪನೆ ಚಾಲ್ತಿಗೆ ಬಂತು. ಹೀಗೆ ಎಷ್ಟೋ ಸಾವಿರ ವರ್ಷಗಳಿಂದ ರೂಢಿಯಲ್ಲಿರುವ ಮದುವೆ-ದಾಂಪತ್ಯ ವ್ಯವಸ್ಥೆ ಇವತ್ತು ಎಷ್ಟು ಅಂತರ್ಗತವಾಗಿದೆಯೆಂದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಮದುವೆಯಾಗಿ ಮಕ್ಕಳನ್ನು ಪಡೆಯುವುದೇ ಆತ್ಯಂತಿಕ ಗುರಿ ಎಂದು ಭಾವಿಸಲಾಗಿದೆ. ಎಂದೇ ಒಂಟಿಯಾಗಿ, ಮದುವೆಯಾಗದೇ/ಬೇಡದೇ ಇರುವವರನ್ನು ಸಮಾಜ ಅನುಮಾನದಿಂದ ನೋಡುತ್ತದೆ. ಸಂತತಿಯನ್ನು ಉತ್ಪಾದಿಸಲಾಗದ ಸಲಿಂಗ ಸಂಬಂಧವನ್ನು, ವಿವಾಹೇತರ ಸಂಬಂಧವನ್ನು ತುಚ್ಛೀಕರಿಸುತ್ತದೆ.

ಮದುವೆ ವ್ಯವಸ್ಥೆಯಲ್ಲಿ ಪ್ರಪಂಚದ ಎಲ್ಲ ದೇಶ, ಸಮುದಾಯಗಳ ಹೆಣ್ಣುಮಕ್ಕಳು ‘ಬಂಧನ’ಕ್ಕೊಳಗಾಗಿದ್ದಾರೆ. ಆದಿಮ ಬುಡಕಟ್ಟು ಸಮಾಜವನ್ನೂ ಸೇರಿಸಿ ಮನೆ ಸಂಭಾಳಿಸುವ, ಹೊತ್ತೊತ್ತಿಗೆ ಹೊಟ್ಟೆ ಬೆಂಕಿ ತಣಿಸುವ, ಮಕ್ಕಳನ್ನು ಜೋಪಾನ ಮಾಡುವ, ಅವರ ಕಲಿಕೆಗೆ ಸಂಬಂಧಿಸಿದ ಜವಾಬ್ದಾರಿಗಳೆಲ್ಲ ಹೆಣ್ಣಿನ ಹೆಗಲೇರಿವೆ. ಅಂಥ ಜವಾಬ್ದಾರಿಗಳನ್ನು ಅನಿವಾರ್ಯವೆಂದು ಒಪ್ಪಿಸಲು ‘ತಾಯ್ತನ’, ‘ಅನ್ನಪೂರ್ಣೆ’, ‘ಗೃಹಲಕ್ಷ್ಮಿ’ ಮೊದಲಾದ ಕಿರೀಟಗಳನ್ನು ಸೃಷ್ಟಿಸಲಾಗಿದೆ. ಮನೆ-ಮಕ್ಕಳು-ಸಂಪತ್ತಿನ ನಿರ್ವಹಣೆಗಳೆಂಬ ಕೊನೆ ಮೊದಲಿರದ; ಗೌರವ-ಗುರುತಿಸುವಿಕೆಯಿರದ; ದುಡಿಮೆ ಎಂದು ಪರಿಗಣಿಸಲ್ಪಡದ; ಹಣ ಗಳಿಸಿಕೊಡದ ಸೇವೆಯಲ್ಲೇ ಹೆಣ್ಣು ಮುಳುಗಿಹೋಗಿದ್ದಾಳೆ. ಜೊತೆಗೆ ಉತ್ತರಾಧಿಕಾರಿಯಾಗಿ ಒಂದೇ ತಂದೆಯ ಮಕ್ಕಳನ್ನು ಪಡೆಯುವುದು ಅವಶ್ಯವಾದ್ದರಿಂದ ಒಂದು ಹೆಣ್ಣು ಒಂದೇ ಗಂಡಿನೊಟ್ಟಿಗೆ ಇರುವುದನ್ನು ಮೌಲ್ಯವೆಂದು ಹೇಳುತ್ತಾ ಪಾತಿವ್ರತ್ಯ, ಶೀಲ ಮುಂತಾದ ಪರಿಕಲ್ಪನೆಗಳೂ ಹುಟ್ಟಿಕೊಂಡಿವೆ.

ಈ ರೀತಿಯಾಗಿ ಮಹಿಳೆಯ ದಮನದ ಮೂಲ ನೆಲೆಯೇ ‘ಮದುವೆ’ ಎಂಬ ಸಂಸ್ಥೆ ಹಾಗೂ ಅದು ಜಾರಿಗೊಳಿಸುವ ದಾಂಪತ್ಯ-ಕುಟುಂಬ ವ್ಯವಸ್ಥೆಯಲ್ಲಿದೆ ಎನ್ನುವುದು ಕಟ್ಟಾ ಸ್ತ್ರೀವಾದಿ ನಿಲುವು. ಹೆಣ್ಣಿನ ಅಪಾರ ಸಾಧ್ಯತೆಗಳನ್ನು, ಸಾಮರ್ಥ್ಯವನ್ನು ಕುಟುಂಬ ಮೊಟಕುಗೊಳಿಸಿದೆ ಹಾಗೂ ಈ ವ್ಯವಸ್ಥೆ ಆತ್ಯಂತಿಕವಾಗಿ ಬದಲಾಗದ ಹೊರತು ಯಾವುದೂ ಬದಲಾಗುವುದಿಲ್ಲ ಎನ್ನುವುದು ಅವರ ಪ್ರತಿಪಾದನೆ.

ಕುಟುಂಬ ಮತ್ತು ಮದುವೆ ಕುರಿತಾದ ಮಾತುಗಳೇ ದಾಂಪತ್ಯಕ್ಕೂ, ಅದರ ನಿಭಾಯಿಸುವಿಕೆಗೆ ಅಗತ್ಯವಾದ ನಿಷ್ಠೆಗೂ ಅನ್ವಯಿಸುತ್ತವೆ.

ಒಂದು ಕತೆ ಹೀಗಿದೆ: ಒಂದು ಕಾಡು. ಅಪ್ಪ, ಅಮ್ಮ, ಎಳೆಯ ಮಗ ಚೆಂದವಾಗಿ ವಾಸಮಾಡುತ್ತಿರುತ್ತಾರೆ. ಅವರ ಮನೆಗೆ ಅತಿಥಿಯೊಬ್ಬ ಬರುತ್ತಾನೆ. ಬಂದವನು ಹಲವು ದಿನದವರೆಗೆ ಅಲ್ಲಿದ್ದು ಆತಿಥ್ಯ ಸ್ವೀಕರಿಸುತ್ತಾನೆ. ಅಂತೂ ಒಂದು ದಿನ ಆತ ಹೊರಟು ನಿಂತು ಅಪ್ಪ, ಮಗನಿಗೆ ಬೀಳ್ಕೊಡುಗೆಯ ಮಾತು ಹೇಳುತ್ತಾನೆ. ಮನೆಯೊಡತಿಗೆ ಹೇಳಿಬರಲು ಒಳಹೋದವ ಕೆಲ ಸಮಯವಾದರೂ ಹೊರಬರುವುದಿಲ್ಲ. ಅಪ್ಪ, ಮಗ ಹೊರಗೇ ನಿಂತಿರುತ್ತಾರೆ. ಕೊನೆಗೆ ಅವನು ಹೊರಬಂದಾಗ ಅವನೊಡನೆ ಮನೆಯೊಡತಿ ಗಂಟು ಕಟ್ಟಿಕೊಂಡು ನಿಂತಿರುತ್ತಾಳೆ. ಅತಿಥಿ ಮುಂದೆಮುಂದೆ ಹೋದರೆ, ಇವಳು ಅವನ ಹಿಂದೆಹಿಂದೆ. ಮಗು ಅಮ್ಮಾ ಎನ್ನುತ್ತದೆ, ಆಕೆ ಹಿಂತಿರುಗಿ ಒಮ್ಮೆ ನೋಡಿ ಮುಂದುವರೆಯುತ್ತಾಳೆ. ಮಗು ಅಪ್ಪನನ್ನು ‘ಅಪ್ಪಾ, ಅವಳೆಲ್ಲಿಗೋ ಹೋಗುತ್ತಿದ್ದಾಳೆ. ಅವಳನ್ನು ಹೋಗದಂತೆ ತಡೆಯಿರಿ’ ಎನ್ನುತ್ತ ಮತ್ತೆ ಅಮ್ಮನನ್ನು ಕೂಗುತ್ತದೆ. ಅವಳು ನಿಲ್ಲದೇ ಹೋಗುತ್ತಲೇ ಇದ್ದಾಳೆ. ‘ಅಯ್ಯೋ, ನನ್ನಮ್ಮ ಜಗಲಿ ದಾಟಿ, ಅಂಗಳ ದಾಟಿ, ಹೂದೋಟ ದಾಟಿ, ಬೇಲಿ ದಾಟಿದರೂ ಅಪ್ಪ ಏನೂ ಹೇಳುವುದಿಲ್ಲವಲ’, ಮಗು ಕಂಗಾಲಾಗುತ್ತದೆ. ಅಮ್ಮನನ್ನು ಕರೆಯುತ್ತದೆ. ಅಪ್ಪನ ಬಳಿ ಅವಳನ್ನು ತಿರುಗಿಬರುವಂತೆ ಕರೆ ಎನ್ನತೊಡಗುತ್ತದೆ. ಅಪ್ಪ, ‘ಮಗು, ಇಷ್ಟು ದಿನ ಅವಳು ನಮ್ಮನ್ನು ಯಾವ ಕೊರತೆಯೂ ಇಲ್ಲದಂತೆ ನೋಡಿಕೊಂಡಳು. ಈಗ ಅವಳಿಗೆ ಯಾಕೋ ಎಲ್ಲವನ್ನು ತೊರೆದು ಹೋಗಬೇಕೆನಿಸಿ ಹೊರಟಿದ್ದಾಳೆ. ಹೊರಟವಳನ್ನು ಇಟ್ಟುಕೊಳ್ಳಬಾರದು, ನಾ ತಡೆಯಲಾರೆ. ಆಕೆ ಹೋಗಲಿ, ಇದ್ದಲ್ಲಿಯೇ ಸುಖವಾಗಿರಲಿ’ ಎನ್ನುತ್ತಾನೆ.

ಅಮ್ಮ ಹೊರಟೇಹೋಗುತ್ತಾಳೆ.

ಆ ಮಗುವೇ ಬೆಳೆದು ದೊಡ್ಡವನಾದ ಮೇಲೆ ಮನುಸ್ಮೃತಿ ಬರೆದ ಮನು. ಬಾಲ್ಯದ ಈ ಅನುಭವದಿಂದಲೇ ಆತ ಗಂಡ, ಮಕ್ಕಳನ್ನು ಬಿಟ್ಟು ಹೆಂಗಸರು ಎಲ್ಲೂ ಹೋಗದ ಹಾಗೆ ನಾನಾ ನಿಯಮಗಳನ್ನು ಜಾರಿಗೆ ತಂದ ಎನ್ನಲಾಗುತ್ತದೆ.

ಇದು ಕಟ್ಟುಕತೆಯೋ, ಇತಿಹಾಸವೋ ಗೊತ್ತಿಲ್ಲ. ಇದೇನು ಕತೆಯೋ, ಮನುವಿಗೆ ಸಂಭವಿಸಿದ ಜೀವನದ ಘಟನೆಯೋ ಅದೂ ನಿಶ್ಚಿತವಿಲ್ಲ. ಆದರೆ ಇಷ್ಟು ಮಾತ್ರ ಸತ್ಯ, ಗಂಡುಹೆಣ್ಣು ಭೇಧವಿಲ್ಲದೆ ಎಲ್ಲರ ತಲೆಯೊಳಗೊಬ್ಬ ಮನು ಇದ್ದು ನಿರಂತರ ಹೆಣ್ಣಿಗೆ ಗಡಿಗೆರೆ ಎಳೆಯುವಲ್ಲಿ ನಿರತನಾಗಿದ್ದಾನೆ. ಈ ಮನುತನವೇ ಇಂಥದ್ದು ಎಷ್ಟೋ ಮನೆಗಳಲ್ಲಿ ಸಂಭವಿಸಿದರೂ, ಸಂಭವಿಸುತ್ತಿದ್ದರೂ ‘ನಿಷ್ಠೆ’ ಇಲ್ಲದೇ ಇರುವುದೇ ‘ಹೊಂದಾಣಿಕೆ’ ಆಗದಿರುವುದಕ್ಕೆ ಮುಖ್ಯ ಕಾರಣವೆನ್ನುತ್ತ ಬುಡಮಟ್ಟದ ತಾರತಮ್ಯ ಗುರುತಿಸಲ್ಪಡದೇ ಉಳಿದಿದೆ.


ಮದುವೆ, ದಾಂಪತ್ಯ ನಿಷ್ಠೆ ಮತ್ತು ವ್ಯಭಿಚಾರ: ಸುಡುವ ಕಾಲದ ಸಾಕ್ಷಿ..



ನಿಷ್ಠೆ ಎಂಬ ಪದವೇ ಗೊಂದಲಮಯ. ನಿಷ್ಠೆ ದೈಹಿಕ/ಲೈಂಗಿಕತೆಗಷ್ಟೇ ಸೀಮಿತವಲ್ಲ. ದಾಂಪತ್ಯ ನಿಷ್ಠೆ ಎನ್ನುವುದು ಮಾಪನವಿರದ ಮೌಲ್ಯ. ಏಕೆಂದರೆ ಕಾನೂನಾಗಲೀ, ಸಮಾಜ-ವ್ಯಕ್ತಿಯಾಗಲೀ ನಿಷ್ಠೆಯನ್ನು ಹೇರಲು ಸಾಧ್ಯವಿಲ್ಲ. ಸಂಬಂಧವೇ ಅದನ್ನು ಸೃಷ್ಟಿಸಬೇಕು. ಹೆಣ್ಣುಗಂಡು ಇಬ್ಬರೂ ಸಮಾನರಾಗಿ, ಸಮಾನ ಗೌರವದಿಂದ ಬಾಳುವ ದಿನಗಳು ಬರುವವರೆಗಿನದು ವಿಪ್ಲವ ಕಾಲ. ಅಂಥ ಸುಡುವ ಕಾಲದ ಸಾಕ್ಷಿಗಳಾಗಿ ನಾವು-ನೀವು-ಮದುವೆ-ದಾಂಪತ್ಯ ಎಲ್ಲವೂ..

ಕಾಲ ಬದಲಾಗುತ್ತ; ವಿಜ್ಞಾನ-ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಾಜ ಆಧುನಿಕಗೊಳ್ಳುತ್ತ ಹೋಗುತ್ತಿರುವಾಗ ಕುಟುಂಬದ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ವ್ಯಕ್ತಿಯಾಗಿ ‘ಹೊರಗೆ’ ದುಡಿಯುವುದು ಮಹಿಳೆಗೆ ಅನಿವಾರ್ಯವಾಗುತ್ತಿದೆ. ಆದರೂ ಅವಳಿಗೆ ಸಾಂಪ್ರದಾಯಿಕ ಕರ್ತವ್ಯಗಳಿಂದ, ಜೈವಿಕ ಹೊಣೆಗಾರಿಕೆಯಿಂದ ವಿನಾಯಿತಿ ಇಲ್ಲದೇ ಬದಲಾದ ಕಾಲದಲ್ಲೂ ಹೆಣ್ಣಿಗೆ ಮನೆ-ಸಂಸಾರ ಎನ್ನುವುದು ಮತ್ತಷ್ಟು ಬಂಧನ ಎನಿಸತೊಡಗಿದೆ. ಜೊತೆಗೆ ಈ ಮಾಹಿತಿ ಯುಗದಲ್ಲಿ ಏರ್ಪಡುವ ಸಂಪರ್ಕಗಳು; ಸಂಬಂಧಗಳು; ಒಡನಾಟಗಳಿಂದಾಗಿ ಒಂದೇ ವ್ಯಕ್ತಿಯಿಂದ ತನ್ನ ಭಾವುಕ ಅಗತ್ಯ ಪೂರೈಸಿಕೊಳ್ಳಲಾಗದೇ ಹೆಣ್ಣಾಗಲೀ, ಗಂಡಾಗಲೀ, ದಾಂಪತ್ಯದ ಹೊರಗೆ ಸಂಬಂಧ ಹೊಂದುವುದು ಸಾಮಾನ್ಯವಾಗಿದೆ. ಅಭಿರುಚಿ-ಆಶಯ-ಗುರಿ ಸಾಧನೆಗೆ ಪೂರಕವಾಗಿ ಹತ್ತಿರವಾದ ವ್ಯಕ್ತಿಯೊಡನೆ ನಿಕಟ ಸಂಬಂಧ ಬೆಳೆಯುತ್ತಿದೆ.

ಆದರೆ ಮದುವೆ-ದಾಂಪತ್ಯವನ್ನು ಬದಲಾದ ಕಾಲದಲ್ಲಿ ಸಮಾಜ ಹೇಗೆ ಪರಿಗಣಿಸುತ್ತಿದೆ ಎಂದು ನೋಡಿದರೆ ವಸ್ತುಸ್ಥಿತಿಗೂ, ಬೋಧಿಸುವ ನೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದುಬರುತ್ತದೆ. ಈ ದ್ವಂದ್ವವೇ ವಿವಾಹ ಸಂಸ್ಥೆಯು ತನಗೆ ತಾನೇ ಮುಳುವಾಗಲು ಕಾರಣವಾಗಿದೆ.  ಈಗಲೂ ಮಗಳನ್ನು ಗಂಡನ ಮನೆಗೆ ‘ಕಳಿಸ’ಲಾಗುತ್ತದೆ. ಅವಳನ್ನು ‘ಕೊಡು’ವಾಗ ಅಪ್ಪಅಮ್ಮ ‘ಹೊಂದಿಕೊಂಡು ಹೋಗು’ ಎಂಬ ಕಿವಿಮಾತು ಹೇಳುತ್ತಾರೆ. ಹೊಂದಾಣಿಕೆ ಎನ್ನುವುದು ಏಕಮುಖವಾದದ್ದು ಮತ್ತು ಹೆಣ್ಣಿನ ಮೌನ/ತ್ಯಾಗ ಬಯಸುವಂಥದ್ದು ಎಂದು ಮತ್ತೆ ಹೇಳಬೇಕಿಲ್ಲ. ಆದರೆ ಈ ಹೊಂದಾಣಿಕೆ ಕೌಟುಂಬಿಕ ದೌರ್ಜನ್ಯವನ್ನು ‘ಗಂಡನಲ್ಲದೆ ಇನ್ನಾರು ಹೊಡೆದಾರು?’ ಎಂದು ಸಹಿಸಿಕೊಳ್ಳುವವರೆಗೆ; ‘ನನ ಮುಡಿಯ ಕೇದಿಗೆ ಅವಳೂ ಒಂಚಣ ಮುಡಿಯಲಿ’ ಎಂದು ಗಂಡನ ವಿವಾಹೇತರ ಸಂಬಂಧ ಸಹಿಸುವವರೆಗೆ ಮುಂದುವರೆಯುತ್ತದೆ.

ನಿಷ್ಠೆಯ ಇನ್ನೊಂದು ಅತಿ ಬಾಲ್ಯವಿವಾಹ. ಬಾಲ್ಯವಿವಾಹ ಇವತ್ತಿಗೂ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಕಾರಣ ಹೆಣ್ಣಿನ ಮನಸ್ಸು ಮತ್ತು ದೇಹ ಬಲಿಯುವ ಮೊದಲೇ ಅದು ಒಂದು ಗಂಡಿಗೆ ಮೀಸಲಿರಬೇಕು ಎನ್ನುವುದು. ಹೆಣ್ಣು ಈ ಗೆರೆಯನ್ನು ದಾಟಿದಲ್ಲಿ ಹಾದರ-ವ್ಯಭಿಚಾರದ ಪಟ್ಟ ಕಟ್ಟಿಟ್ಟದ್ದು. ಒಂದಿಡೀ ಕುಟುಂಬದ, ಸಮುದಾಯದ ಗೌರವ ಹೆಣ್ಣುಗಳ ಯೋನಿ ಶುದ್ಧತೆಯಿಂದ, ನಿಷ್ಠೆಯಿಂದ ಅಳೆಯಲ್ಪಡುತ್ತದೆ. ಮೇಲ್ಜಾತಿ ಮೇಲ್ಜಾತಿಯಾದದ್ದು ವಿಧವಾ ಪದ್ಧತಿ, ಸತಿ ಸಹಗಮನ, ವಿಧವಾ ವಿವಾಹ ನಿಷೇಧ, ಬಾಲ್ಯವಿವಾಹ, ಮರುವಿವಾಹ ನಿಷೇಧ ಮುಂತಾದ ಹೆಣ್ಣುಗಳ ಮೇಲಿನ ಲೈಂಗಿಕ ನಿರ್ಬಂಧಗಳಿಂದಲೇ. ಆದರೆ ಈ ನಿರ್ಬಂಧ ಗಂಡಿಗಿಲ್ಲ. ಅವನು ಎಷ್ಟು ಹೆಚ್ಚು ಹೆಣ್ಣುಗಳನ್ನು ಆಳಬಲ್ಲನೋ ಅಷ್ಟು ಪುರುಷೋತ್ತಮ. ಬಹುಪತ್ನಿತ್ವವನ್ನು ಹೆಚ್ಚುಕಡಿಮೆ ಎಲ್ಲ ಧರ್ಮಗಳೂ ಮಾನ್ಯ ಮಾಡಿವೆ.

ಇವತ್ತಿಗೂ ವೇಶ್ಯಾವಾಟಿಕೆ, ದೇವದಾಸಿ ಪದ್ಧತಿ ನಮ್ಮ ನಡುವಿದೆ. ಅವುಗಳ ಇರುವಿಕೆಯೇ ನಿಷ್ಠೆ ಗಂಡಿಗೆ ಸಂಬಂಧಪಟ್ಟ ಪ್ರಶ್ನೆ ಅಲ್ಲ, ನಿಷ್ಠೆಯನ್ನು ಹೆಣ್ಣಿನ ಮೇಲೆ ಮಾತ್ರ ಸಮಾಜ ಹೇರಿದೆ ಎನ್ನಲು ಸಾಕ್ಷಿಯಾಗಿದೆ. ‘ಏಕಪತ್ನೀ ವ್ರತಸ್ಥ’ ಎನ್ನುವುದು ಗಂಡಸಿಗೆ ಗುಣವಾಚಕ, ಹೆಗ್ಗಳಿಕೆ, ಮೌಲ್ಯ. ಆದರೆ ಏಕಪತಿ ವ್ರತಸ್ಥೆ ಎಂಬ ಪದಪ್ರಯೋಗವೇ ಇಲ್ಲ. ಏಕೆಂದರೆ ಅದು ಕಡ್ಡಾಯ. ಆಕಾಶದಲ್ಲಿ ಹಾರುವ ಗಂಧರ್ವನ ನೆರಳನ್ನು ನೋಡಿ ಮೋಹಿಸಿದಳು ಎಂದು ರೇಣುಕೆಯ ತಲೆಯನ್ನು ಅವಳ ಮಗನಿಂದಲೇ ಕಡಿಸಿ ಪಾತಿವ್ರತ್ಯ ಮತ್ತು ನಿಷ್ಠೆಯನ್ನು ವೈಭವೀಕರಿಸಿದ ಸಮಾಜ ನಮ್ಮದು. ಗಂಡ ಸತ್ತರೆ ಅವನ ಚಿತೆಯೇರುವುದು ಅಥವಾ ತಲೆ ಬೋಳಿಸಿಕೊಂಡು ವಿರೂಪಗೊಳ್ಳುವುದು ಅಥವಾ ಮರುಮದುವೆಯಿಲ್ಲದೆ ಜೀವಮಾನವಿಡೀ ಒಬ್ಬಂಟಿಯಾಗಿ ಕಳೆಯುವುದು ಭಾರತೀಯ ಸಮಾಜ ಮಹಿಳೆಗೆ ವಿಧಿಸಿರುವ ಕಿರೀಟಗಳು. ಜೊತೆಗೆ ಗಂಡ ಕುಂಟನೋ, ಕುರುಡನೋ, ಹೆಳವನೋ, ಕುಡುಕನೋ, ವ್ಯಭಿಚಾರಿಯೋ - ಅವನನ್ನು ಪೊರೆಯಬೇಕಾದ್ದು ಹೆಂಡತಿಯ ಪರಮ ಕರ್ತವ್ಯ ಎಂದೇ ಇಂದಿಗೂ ಹೇಳಲಾಗುತ್ತದೆ. ಮಹಾಸತಿಯರ ಕುರಿತ ಲೆಕ್ಕವಿಲ್ಲದಷ್ಟು ಕತೆಪುರಾಣಗಳನ್ನು ಸೃಷ್ಟಿಸಲಾಗಿದೆ. ಇದನ್ನೇ ಹೆಣ್ಣು ಒಪ್ಪಿಕೊಂಡು ಬೆಳೆದಿದ್ದಾಳೆ.

ಹೀಗಿದ್ದೂ ಅಪವಾದವೆನ್ನುವಂತಹ ಸಂಬಂಧಗಳನ್ನೂ, ಲೈಂಗಿಕತೆಯನ್ನೂ ನಮ್ಮ ಪರಂಪರೆ ಹೊಂದಿದೆ. ಪುರಾಣಗಳಲ್ಲಿ ಅದಕ್ಕೆ ಪುರಾವೆ ಸಿಗುತ್ತದೆ. ಐವರು ಗಂಡಂದಿರನ್ನು ಹಂಚಿಕೊಂಡ ದ್ರೌಪದಿ, ಗಂಡನಿದ್ದೂ ಕೃಷ್ಣನಿಗೊಲಿದು ವಿವಾಹಬಾಹಿರ ಸಂಬಂಧ ಹೊಂದಿದ ರಾಧೆ, ನಿಯೋಗಕ್ಕೊಳಗಾದ ಹೆಣ್ಣುಮಕ್ಕಳು - ಇಂಥ ಪಾತ್ರಗಳು ಏಕೆ ಸೃಷ್ಟಿಯಾದವು ಎನ್ನುವುದನ್ನು ಗಮನಿಸಬೇಕು. ಹೆಣ್ಣುಗಳ ಸಂಖ್ಯೆ ಕಡಿಮೆಯಿದ್ದ ಆದಿಮ ಕುಲಗಳಲ್ಲಿ ಹೆಣ್ಣನ್ನು ಬೆಲೆಬಾಳುವ ವಸ್ತುಗಳೊಂದಿಗೆ ಅಥವಾ ಇನ್ನೊಂದು ಹೆಣ್ಣಿನೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ಧತಿಯಿತ್ತು. ಆಗ ಒಂದೇ ಹೆಣ್ಣು ಅಣ್ಣತಮ್ಮಂದಿರನ್ನು ಮದುವೆಯಾಗುವ ಪದ್ಧತಿಯೂ ಇತ್ತು. ಆದರೆ ಆಳುವ ಕುಲದಲ್ಲಿ ಸಮರ್ಥ ಗಂಡಸರು ಯುದ್ಧಗಳಲ್ಲಿ ತೀರಿಕೊಂಡು ಹೆಚ್ಚುವರಿ ಹೆಣ್ಣುಗಳಿದ್ದಾಗ್ಯೂ ಒಂದೇ ಹೆಣ್ಣನ್ನು ಐವರು ವರಿಸಿರುವುದರ ಹಿಂದೆ ಉತ್ತರಾಧಿಕಾರದ ಸಮಸ್ಯೆ ಬರಬಾರದು ಹಾಗೂ ಅಣ್ಣತಮ್ಮಂದಿರಲ್ಲಿ ರಾಜ್ಯ ಹಂಚಿಹೋಗಬಾರದಂತೆ ನೋಡಿಕೊಳ್ಳುವ ರಾಜಕೀಯ ಉದ್ದೇಶ ಅಡಗಿದೆ. ಬೇರೆಬೇರೆ ಮನೆಯ ಐವರು ಗಂಡಸರೊಟ್ಟಿಗೆ ಇರಲಿಲ್ಲ ದ್ರೌಪದಿ. ಐವರು ಅಣ್ಣತಮ್ಮಂದಿರೊಟ್ಟಿಗೆ, ಸರತಿ ಪ್ರಕಾರ ಒಬ್ಬರೊಟ್ಟಿಗೆ ಒಂದೊಂದು ವರ್ಷದಂತೆ ಇದ್ದಳು. ಈ ಸರತಿ ಪದ್ಧತಿ ಹುಟ್ಟಲಿರುವ ಮಕ್ಕಳ ಪಿತೃತ್ವ ಪ್ರಶ್ನಾರ್ಹವಾಗದಂತೆ ನೋಡಿಕೊಂಡಿತು. ಮಹಾಭಾರತದಲ್ಲಿ ಮಕ್ಕಳಾಗದೇ ಇದ್ದಾಗ ಬೇರೊಬ್ಬ ಗಂಡಸಿನೊಟ್ಟಿಗೆ ಕೇವಲ ಮಕ್ಕಳನ್ನು ಪಡೆಯಲಿಕ್ಕಾಗಿ ಲೈಂಗಿಕ ಸಂಪರ್ಕ ಮಾಡುವ, ‘ನಿಯೋಗ’ ಎಂದು ಒಪ್ಪಿತವಾಗಿರುವ ಪ್ರಮೇಯವೂ ಬರುತ್ತದೆ. ಈ ವಿವಾಹಬಾಹಿರ ಲೈಂಗಿಕ ಸಂಬಂಧವನ್ನು ಸಮಾಜ ಒಪ್ಪುತ್ತಿತ್ತು ಏಕೆಂದರೆ ಅದು ದೇಹ ಸುಖಕ್ಕಾಗಿ ಕೂಡಿದ ಕೂಟವಲ್ಲ. ಬದಲು ಮಕ್ಕಳಾಗದ ಗಂಡನಿಗೆ ಉತ್ತರಾಧಿಕಾರಿಯನ್ನು ಹೆತ್ತುಕೊಡಲು ನಡೆಸಿದ್ದು. ಇದರಲ್ಲಿ ಅವಳ ಆಯ್ಕೆ, ಆಸೆ-ಇಷ್ಟದ ಪ್ರಶ್ನೆಯೇ ಬರುವುದಿಲ್ಲ. ಇಂಥವೆಲ್ಲ ಮತ್ತೆಮತ್ತೆ ಹೆಣ್ಣಿನ ಲೈಂಗಿಕತೆಯನ್ನು ಸಂತಾನೋತ್ಪತ್ತಿಗಷ್ಟೇ ಸೀಮಿತಗೊಳಿಸಿ ‘ನಿಷ್ಠೆ’ ಕಾಪಾಡಿಕೊಳ್ಳುವಂತೆ ಮಾಡಿದ ಪ್ರಯತ್ನಗಳು. ಅದೇರೀತಿ ರಾಧೆ ಗಂಡನಿದ್ದೂ ಗಂಡನಿಗೆ ತೋರಿದಷ್ಟೇ ನಿಷ್ಠೆಯನ್ನು ಕೃಷ್ಣನಿಗೆ ತೋರಿದ್ದಾಳೆ. ಆಗಲೇ ಹೆಂಡಿರನ್ನು ಪಡೆದಿದ್ದ ಕೃಷ್ಣನಿಗೊಲಿದು ಯಮುನಾ ನದೀ ತೀರದಲ್ಲಿ ಕೊನೆ ಮೊದಲಿಲ್ಲದೆ ಕಾಯುತ್ತಾ ನಿಷ್ಠೆ ಮೆರೆದಿದ್ದಾಳೆ. ಎಂದೇ ಅವಳಿಗೆ ವ್ಯಭಿಚಾರಿಯ ಪಟ್ಟದ ಬದಲು ಗೌರವ ದೊರೆತಿದೆ.

ಒಟ್ಟಾರೆ ಏಕಸಂಗಾತಿ ಅಥವಾ ಬಹುಸಂಗಾತಿಯನ್ನು ಹೊಂದುವುದು ಆಯಾಕಾಲಕ್ಕೆ ಅನಿವಾರ್ಯವಾದ ಅನುಕೂಲಸಿಂಧು ಹೊಂದಾಣಿಕೆ ಎಂದಷ್ಟೇ ಹೇಳಬಹುದು. ಆದರೆ ಕತೆ/ಪುರಾಣಗಳ ಪಾತ್ರಕ್ಕೆ ಸಿಕ್ಕಷ್ಟು ಗೌರವ ನಿಜ ಜೀವನದಲ್ಲಿ ಯಾವ ರಾಧೆಗೂ ಸಿಕ್ಕುವುದಿಲ್ಲ. ಎಲ್ಲ ಸಮಾಜಗಳೂ ಹೆಣ್ಣಿನ ವ್ಯಭಿಚಾರವನ್ನು ಮಾತ್ರ ಗುರುತಿಸಿ ಶಿಕ್ಷಿಸುತ್ತ ಬಂದಿದೆ. ಗಂಡಸು ಗುಲಾಮಳೊಂದಿಗೋ, ಅವಿವಾಹಿತಳೊಂದಿಗೋ, ವೇಶ್ಯೆಯೊಂದಿಗೋ ದೈಹಿಕ ಸಂಬಂಧವಿರಿಸಿಕೊಂಡರೆ ಅವನ ಹೆಂಡತಿಯ ದೃಷ್ಟಿಯಿಂದ ಅದು ತಪ್ಪಲ್ಲ. ಅದೇ ಆತ ವಿವಾಹಿತ ಮಹಿಳೆಯೊಡನೆ ಸಂಬಂಧ ಇರಿಸಿಕೊಂಡರೆ ‘ಮತ್ತೊಬ್ಬನ ಆಸ್ತಿ’ಯನ್ನು ಹರಣ ಮಾಡಿದ್ದಕ್ಕಾಗಿ ಅದು ಪಾಪ, ತಪ್ಪು. ಅದಕ್ಕಾಗಿ ಸಾರ್ವಜನಿಕವಾಗಿ ಹೇಯ ಶಿಕ್ಷೆಯನ್ನೇ ಕೊಡಲಾಗಿದೆ.

ಎಂದಿನಿಂದ ದಾಂಪತ್ಯ ನಿಷ್ಠೆ ಇಲ್ಲದಿರುವುದು ನಮ್ಮ ಸಮಾಜದಲ್ಲೂ ದೊಡ್ಡ ಸಮಸ್ಯೆಯಾಗಿರಬೇಕು. ಏಕೆಂದರೆ ‘ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ವಚನ ಕಾಲವೂ ಹೇಳಿದೆ. ವ್ಯಭಿಚಾರಿ ಹೆಣ್ಣಿನ ಕ್ಷಮಾರ್ಹವಲ್ಲದ ತಪ್ಪಿಗೆ ಏನೇನು ಶಿಕ್ಷೆ ಕೊಡಬಹುದು, ಪರಸತಿಯರನ್ನು ಪುರುಷ ಏಕೆ ಲಪಟಾಯಿಸಬಾರದು ಎಂದು ಎಲ್ಲ ನೀತಿಸಂಹಿತೆಗಳೂ ಸೂಚಿಸಿವೆ. ವ್ಯಭಿಚಾರದ ಆರೋಪಕ್ಕೊಳಗಾಗಿ ದೈಹಿಕ, ಮಾನಸಿಕ ಹಿಂಸೆ ಹಾಗೂ ಭಯೋತ್ಪಾದಕ ಶಿಸ್ತು ಕ್ರಮಗಳಿಂದ ಸಾವಿರಾರು ಹೆಣ್ಣುಗಳು ಬಸವಳಿದಿದ್ದಾರೆ. ವ್ಯಭಿಚಾರಿಣಿಯನ್ನು ತನ್ನವರೆಂದು ಒಪ್ಪಿಕೊಳ್ಳಲು ಯಾರೂ ಸಿದ್ಧವಿಲ್ಲದಿದ್ದರೆ ಅವರನ್ನು ದಾಸಿಯನ್ನಾಗಿ ಮಾಡಲಾಗುತ್ತಿತ್ತು. ೧೯ನೇ ಶತಮಾನದ ಮೊದಲ ಭಾಗದ ತನಕ ಅಂಥ ದಾಸಿಯರ ಮಾರಾಟ ನಡೆಯುತ್ತಿತ್ತು. ೧೮೪೩ರಲ್ಲಿ ವ್ಯಭಿಚಾರಿಣಿಯರ ಹರಾಜನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿತು. ಬ್ರಾಹ್ಮಣ ಮತ್ತು ವೈಶ್ಯ ಮಹಿಳೆಯರು ಮಾರಾಟಕ್ಕೆ ಬರುತ್ತಿರಲಿಲ್ಲ. ಬದಲಾಗಿ ಅವರ ಕೈಮೇಲೆ ‘ವೇಶ್ಯೆ’ ಎಂದು ಬರೆ ಎಳೆದು ಗುರುತು ಹಾಕಿ ಜಾತಿಯಿಂದ ಹೊರಹಾಕುತ್ತಿದ್ದರು. ವಿಧವೆಯರು ಬಸುರಾದರೆ ಅಥವಾ ವಿವಾಹಬಾಹಿರ ಸಂಬಂಧ ಹೊಂದಿ ಮಕ್ಕಳಾದರೆ ಜಾತಿಯಿಂದ ಹೊರಹಾಕುತ್ತಿದ್ದರು. ಅವರದೇ ಒಂದು ಉಪಜಾತಿಯಾಗಿ, ಕೀಳಾಗಿ ನೋಡಲ್ಪಡುವ ಸಮುದಾಯಗಳೆಷ್ಟೋ ಇವೆ. ಕೇರಳದಲ್ಲಿ ವ್ಯಭಿಚಾರಿ ಹೆಂಗಸರ ವಿಚಾರಣೆಗೆ ರಾಜನು ‘ಸ್ಮಾರ್ತ ವಿಚಾರಂ’ ಎಂಬ ವಿಶೇಷ ವಿಚಾರಣೆ ನಡೆಸುತ್ತಿದ್ದ. ಇದರರ್ಥ ಪಾತಿವ್ರತ್ಯ ಅತಿ ಅಗತ್ಯ ಎನ್ನುವುದನ್ನು ರಾಜ್ಯಾಧಿಕಾರವೂ ಎತ್ತಿ ಹಿಡಿದಿತ್ತು. ಈಗಲೂ ಇಲ್ಲಿ ‘ಮರ್ಯಾದಾ ಹತ್ಯೆ’ ನಡೆಯುತ್ತದೆ. ಅದಕ್ಕೆ ಸಮಾಜದ ಮೌನ ಸಮ್ಮತಿಯಿದೆ. ಮಾಡಿದ್ದಕ್ಕೆ ತಕ್ಕ ಪ್ರತಿಫಲ ಅನುಭವಿಸಿದಳು ಎಂದು ಬೋಧಿಸುವ ಕರ್ಮ ಸಿದ್ಧಾಂತವಿದೆ.

ಕೇವಲ ಭಾರತೀಯ ಸಮಾಜದಲ್ಲಷ್ಟೇ ಅಲ್ಲ, ಜಗತ್ತಿನ ಬಹುಪಾಲು ಧರ್ಮಗಳು ವಿವಾಹದಲ್ಲಿ ನಿಷ್ಠೆಯಿಲ್ಲದಿರುವುದು - ಅಥವಾ ವ್ಯಭಿಚಾರವನ್ನು ಕಠೋರ ಶಿಕ್ಷೆ ನೀಡಿ ನಿರ್ಬಂಧಿಸಲು ಪ್ರಯತ್ನಿಸಿವೆ. ಆದರೂ ಕರುಣಾಳು ಏಸು ವ್ಯಭಿಚಾರ ಕುರಿತು ಏನು ಹೇಳಿದ್ದಾನೆ ಎಂಬ ಕುತೂಹಲಕ್ಕೆ ನೋಡಿದರೆ ಬೈಬಲಿನಲ್ಲಿ ಹೀಗೂ ಒಂದು ಕತೆಯಿದೆ: ‘ಅವರು ಜೀಸಸನ ಬಳಿ ಒಬ್ಬ ಮಹಿಳೆಯನ್ನು ಎಳೆತಂದರು. ‘ಆಕೆ ವ್ಯಭಿಚಾರ ಎಸಗಿದ್ದಾಳೆ, ನಮ್ಮ ಗುರು ಮೋಸೆಸ್ ಅಂಥವರನ್ನು ಕಲ್ಲು ಹೊಡೆದು ಸಾಯಿಸುವಂತೆ ಹೇಳಿದ್ದಾನೆ, ಏನು ಮಾಡುವುದು?’ ಎಂದು ಕೇಳಿದರು. ಕ್ರಿಸ್ತ ಅವರ ಮಾತು ಕೇಳಿಯೂ ಕೇಳದವರಂತೆ ಕಾಲಬೆರಳಿನಿಂದ ಮಣ್ಣಿನ ಮೇಲೆ ಏನನ್ನೋ ಬರೆಯತೊಡಗುತ್ತಾನೆ. ಅವರು ಮತ್ತೆಮತ್ತೆ ಕೇಳುತ್ತಾರೆ. ಆಗ ಕ್ರಿಸ್ತ ‘ನಿಮ್ಮಲ್ಲಿ ಯಾರು ಒಂದೂ ತಪ್ಪು ಎಸಗಿಲ್ಲವೋ ಅಂಥವರು ಆಕೆಗೆ ಮೊದಲ ಕಲ್ಲು ಹೊಡೆಯಬಹುದು’ ಎನ್ನುತ್ತಾ ತಲೆತಗ್ಗಿಸಿ ತನ್ನ ಕೆಲಸ ಮಾಡತೊಡಗುತ್ತಾನೆ. ನಿಧಾನ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಾರೆ. ತಲೆಯೆತ್ತಿ ಜೀಸಸ್ ಅವರೆಲ್ಲ ಎಲ್ಲಿ ಹೋದರು ಎಂದು ಆ ಮಹಿಳೆಯನ್ನು ಕೇಳಿದಾಗ ಅವಳು ಅವನ ಮಾತಿನಿಂದ ಸಂಚಲನಗೊಂಡ ಅವರು ತಂತಮ್ಮ ಆತ್ಮಶೋಧನೆಗೊಳಗಾಗಿ ಅಲ್ಲಿಂದ ಮರಳಿದರು ಎಂದು ಹೇಳುತ್ತಾಳೆ. ‘ನನಗೂ ನಿನ್ನ ಮೇಲೆ ಯಾವ ದೂರುಗಳೂ ಇಲ್ಲ. ನೀನು ಹೋಗಬಹುದು, ಆದರೆ ಅದೇ ತಪ್ಪನ್ನು ಮತ್ತೆ ಮಾಡಬೇಡ’ ಎಂದು ಜೀಸಸ್ ಅವಳಿಗೆ ಹೇಳಿಕಳಿಸುತ್ತಾನೆ.

ಆದರೆ ಕರುಣೆ ಮತ್ತು ಅಂತಸ್ಸಾಕ್ಷಿಯ ಪ್ರಶ್ನೆಗಳು ಜೀಸಸ್ ಕಾಲಕ್ಕೇ ಮುಗಿದುಹೋದವು. ಕ್ರೈಸ್ತ ಧರ್ಮವೂ ಸೇರಿದಂತೆ ಬಹುತೇಕ ಧiಗಳು ವ್ಯಭಿಚಾರಕ್ಕೆ ಮರಣದಂಡನೆ ವಿಧಿಸಿವೆ. ಹೆಚ್ಚುಕಡಿಮೆ ಪ್ರಪಂಚದ ಎಲ್ಲ ಧರ್ಮಗಳು ವಿವಾಹಬಾಹಿರ ಸಂಬಂಧವನ್ನು ಕಟುಮಾತುಗಳಲ್ಲಿ ಖಂಡಿಸುತ್ತವೆ. ‘ಸ್ಟೋನಿಂಗ್ ಸುರಯ್ಯಾ’ ಸಿನೆಮಾ ಈಗಲೂ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವ ಘೋರ ಮರಣದಂಡನೆಯ ಶಿಕ್ಷೆ ಇರುವುದರ ಕುರಿತು ಜಗತ್ತಿಗೆ ಹೇಳಿತು. ಈಗಲೂ ಇರಾಕ್, ಸೌದಿ ಅರೇಬಿಯಾ, ಸೊಮಾಲಿಯಾ, ಸುಡಾನ್, ಯೆಮನ್, ನೈಜೀರಿಯಾ, ಇಂಡೋನೇಷ್ಯಾ, ಪಾಕಿಸ್ತಾನಗಳಲ್ಲಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ಕಾನೂನಾತ್ಮಕವಾಗಿದೆ. ಬ್ರೂನಿಯ ಸುಲ್ತಾನ ಕಳೆದ ವರ್ಷದಿಂದ ಕಲ್ಲುಹೊಡೆದು ಸಾಯಿಸುವ ಶಿಕ್ಷೆಯನ್ನು ಅಧಿಕೃತವಾಗಿ ಮಾನ್ಯ ಮಾಡಿದ್ದಾನೆ. ನೆರೆಯ ಪಾಕಿಸ್ತಾನದಲ್ಲಿ ಕೋರ್ಟಿನ ಒಳಗೂ, ಹೊರಗೂ ಕಲ್ಲು ಹೊಡೆದು ಸಾಯಿಸುವ ತೀರ್ಪು ಜಾರಿಯಾಗುತ್ತಲೇ ಇದೆ.

ಉಲ್ಲಂಘನೆ: ವ್ಯವಸ್ಥೆಯ ವೈಫಲ್ಯವೋ? ಸೃಷ್ಟಿಯೋ?



ನಿಷ್ಠೆಯ ಮಾತು, ಕಠೋರ ಶಿಕ್ಷೆ, ಧರ್ಮಬೋಧೆ, ಅಪಮಾನ ಎಲ್ಲದರ ಹೊರತಾಗಿ ಉಲ್ಲಂಘನೆಗಳೂ ನಡೆಯುತ್ತಲೇ ಬಂದಿವೆ. ಎಲ್ಲ ಅಂಕಿಸಂಖ್ಯೆಗಳು ನಿಜವನ್ನೇ ಬಿಂಬಿಸಬೇಕಿಲ್ಲ; ಸತ್ಯ ಅದರಾಚೆ ಎಲ್ಲೋ ಇದೆ ಎಂದು ಒಪ್ಪಿಕೊಳ್ಳುತ್ತಲೇ ವಿಶ್ವದ ನಾನಾಭಾಗಗಳಲ್ಲಿ ನಡೆದ ಸರ್ವೇ ಪ್ರಕಾರ ವಿವಾಹೇತರ ದೈಹಿಕ ಸಂಪರ್ಕ ಹೊಂದಿರುವವರ ಸಂಖ್ಯೆ ಸರಾಸರಿ ೨೨% ಇದೆ. ವಿವಾಹಬಂಧನ ಪವಿತ್ರವಾದುದು, ವ್ಯಭಿಚಾರ ಕಾನೂನಾತ್ಮಕವಾಗಿ ಅಷ್ಟೇ ಅಲ್ಲ, ನೈತಿಕವಾಗಿಯೂ ಅಪರಾಧ ಎಂದು ಸಮಾಜ, ಧರ್ಮ ಮತ್ತು ಕಾನೂನು ಪದೇಪದೇ ಹೇಳುತ್ತ ಬಂದಾಗಲೂ ಏಕೆ ಇಷ್ಟು ಜನ ವಿವಾಹೇತರ ಸಂಬಂಧ ಹೊಂದಿದ್ದಾರೆ? ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದನ್ನು ನಿರ್ಬಂಧಿಸಿದ ಮೇಲೂ ಹೆಚ್ಚುಕಮ್ಮಿ ಕಾಲು ಭಾಗ ಜನಸಂಖ್ಯೆ ತಾವು ಅಂಥ ಸಂಬಂಧ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಿರುವಾಗ ಸಮಾಜ ಏಕೆ ಬಹುಸಂಗಾತಿಗಳನ್ನು ಹೊಂದುವುದನ್ನು ತಪ್ಪಾಗಿ ಭಾವಿಸುತ್ತದೆ? ಕೇವಲ ಎಚ್‌ಐವಿ ಕಾರಣದಿಂದ ತಪ್ಪೇ? ಏಕಸಂಗಾತಿ ಸಂಬಂಧ ಎನ್ನುವುದೇ ಹುಸಿ ಮೌಲ್ಯವೇ? ಯಾಕಾದರೂ ‘ನಿಷ್ಠೆ’ಯ ಆಚೆ ಮನಸ್ಸು ಚಲಿಸುತ್ತದೆ?

ಯಾವುದೇ ಸಂಬಂಧ ಕೆಲಕಾಲದ ನಂತರ ತಾಜಾತನ, ಸಂಚಲನೆ ಕಳೆದುಕೊಳ್ಳುತ್ತದೆ. ನವೀಕರಿಸಲು ಹೊಸಹೊಸ ನೆಲೆಗಳು ಸಿಗದಿದ್ದಲ್ಲಿ ಬೇಗನೇ ಮುಗಿದುಹೋಗುತ್ತದೆ. ದಾಂಪತ್ಯವೂ ಇಬ್ಬರ ನಡುವಿನ ಒಂದು ಸಂಬಂಧ. ಅದರ ವಿಶೇಷ ಏನೆಂದರೆ ಅದು ಲೈಂಗಿಕ ಸಂಬಂಧ, ಸಮಾಜವು ಒಪ್ಪಿ ಹರಸಿದ ಕಾನೂನಾತ್ಮಕ ಸಂಬಂಧ. ಸಂತತಿಯನ್ನು ಪಡೆಯಲಿಕ್ಕಾಗಿಯೇ ಇಬ್ಬರಿಗೆ ಸಮಾಜ ನೀಡಿದ ಹೊಣೆಗಾರಿಕೆ ದಾಂಪತ್ಯ. ಆದರೆ ಕೇವಲ ಮಕ್ಕಳ ಬೆಳೆಸಿ ದೊಡ್ಡ ಮಾಡುವುದಕ್ಕೋ ಅಥವಾ ದೈಹಿಕ ಕಾಮವಾಂಛೆಗೋ ನಿಂತುಬಿಟ್ಟರೆ ಉಳಿದ ಸಂಬಂಧಗಳಂತೆ ಅದೂ ‘ಏಳನೇ ವರ್ಷ’ಕ್ಕೆ ಬಿಕ್ಕಳಿಸಲು ಶುರುಮಾಡುತ್ತದೆ. ‘ಏಳನೇ ವರ್ಷದ ಬಿಕ್ಕಳಿಕೆ’ ಎನ್ನುವುದು ಸಂಬಂಧಗಳು ಕೆಲಕಾಲದ ನಂತರ ಮೊದಲ ಬಿಸಿ ಉಳಿಸಿಕೊಳ್ಳಲಾರವು ಎನ್ನಲು ಹೇಳುವ ಒಂದು ಮಾತು. ಏಳನೇ ವರ್ಷ ಎನ್ನುವುದು ಉತ್ಪ್ರೇಕ್ಷಿತ ಊಹೆಯೇ ಆಗಿದ್ದರೂ ಸಂಬಂಧಗಳು ಕೆಲಕಾಲದ ನಂತರ ಮೊದಲ ಬಿಸಿ ಕಳೆದುಕೊಳ್ಳುವುದನ್ನು ಎಲ್ಲರೂ ಅನುಭವಿಸಿರುತ್ತಾರೆ. ನಂತರವೂ ಅದು ಆರೋಗ್ಯಪೂರ್ಣವಾಗಿ ಮುಂದುವರೆಯಲು ಏನೋ ಒಂದು ‘ಅಂಟು’ ಬೇಕಾಗುತ್ತದೆ. ಮಕ್ಕಳು, ಸಮಾನಾಸಕ್ತಿಗಳು, ಬಂಧುಬಳಗದವರು ಇಂಥ ಅಂಟಿನ ಕೆಲಸವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುತ್ತಾರೆ. ಆದರೂ ಹೊಸನೆಲೆಗಳಲ್ಲಿ ಸಂಬಂಧ ನವೀಕರಣಗೊಳ್ಳುತ್ತ ಹೋಗದಿದ್ದರೆ ದಾಂಪತ್ಯ ಕುರಿತ ಅನಾದರ ಶುರುವಾಗುತ್ತದೆ.

ವ್ಯಭಿಚಾರಕ್ಕೆ ವಿಧಿಸುವ ಅತಿ ಕಠೋರ ಶಿಕ್ಷೆ ಮಾನವಹಕ್ಕು ಉಲ್ಲಂಘನೆಯಾಗಿದೆ ಎಂಬ ಕೂಗೆದ್ದಿರುವುದರಿಂದ ಈಗ ಶಿಕ್ಷಾ ಪ್ರಮಾಣ ಕಡಿಮೆಯಾಗಿದೆ. ಆದರೆ ಇವತ್ತಿಗೂ ೮೫% ಡೈವೋರ್ಸುಗಳು ವಿವಾಹಬಾಹಿರ ಸಂಬಂಧದ ಕಾರಣಕ್ಕೇ ಆಗುತ್ತಿವೆ. ಜೊತೆಗೆ ಭಾರತದ ವ್ಯಭಿಚಾರದ ವ್ಯಾಖ್ಯೆ ಮತ್ತು ಕಾನೂನಿನ ಬಗೆಗೆ ಸ್ತ್ರೀವಾದಿಗಳು ತಕರಾರು ಹೊಂದಿದ್ದಾರೆ. ಅದು ಆಧುನಿಕ ನಿಯೋಗ ಪದ್ಧತಿಯಂತಿದೆ ಎಂದು ವಾದಿಸಲಾಗುತ್ತದೆ. ಭಾರತದಲ್ಲಿ ವಿವಾಹಿತ ಮಹಿಳೆಯೊಂದಿಗೆ ‘ಅನ್ಯ’ ಪುರುಷನು ಅವಳ ಗಂಡನ ಒಪ್ಪಿಗೆ ಪಡೆಯದೇ ಲೈಂಗಿಕ ಸಂಪರ್ಕ ಹೊಂದಿದಲ್ಲಿ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ. ‘ಆ’ ಗಂಡಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಕಸ್ಮಾತ್ ಮಹಿಳೆಯ ಗಂಡ ಸಮ್ಮತಿ ನೀಡಿದ್ದರೆ ವಿವಾಹಬಾಹಿರ ಲೈಂಗಿಕತೆ ಅಪರಾಧವಲ್ಲ! ಅಲ್ಲದೇ ವ್ಯಭಿಚಾರ ಕಾನೂನಿನಲ್ಲಿ ಹೆಣ್ಣಿಗೆ ಶಿಕ್ಷೆಯಿಲ್ಲ, ಬಹುಶಃ ಅವಳಿಗೆ ಶಿಕ್ಷೆ ನೀಡಲು ಗಂಡ ಮತ್ತು ಸಮಾಜ ಸಾಕು ಎಂಬ ಧೋರಣೆ ಇರಬಹುದು. ಒಟ್ಟಾರೆ ಗಂಡನ ಆಸ್ತಿಯಾದ ಹೆಂಡತಿಯನ್ನು ಬೇರೊಬ್ಬನಿಗೆ ಕೊಡಲು ಗಂಡ ಒಪ್ಪಿದರೆ ಅದು ಶಿಕ್ಷಾರ್ಹವಲ್ಲ. ಅವನ ಒಪ್ಪಿಗೆ ಇಲ್ಲದಿದ್ದರೆ ಅದು ಶಿಕ್ಷಾರ್ಹ. ಎಂದರೆ ಹೆಣ್ಣನ್ನೊಂದು ವಸ್ತುವಾಗಿಸಿ ಒಬ್ಬನಲ್ಲ ಇನ್ನೊಬ್ಬನ ಸುಪರ್ದಿನಲ್ಲಿರುವ ಆಸ್ತಿಯೆಂದು ಪರಿಗಣಿಸಿದಂತಾಯಿತು. ಇದು ಮಹಿಳಾ ಹಕ್ಕು ಹಾಗೂ ಘನತೆಯ ವಿರುದ್ಧ ಎಂದು ಮಹಿಳಾ ಸಂಘಟನೆಗಳು ಕಾನೂನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಕೋರ್ಟು ಮೆಟ್ಟಿಲೇರಿವೆ.

ದಾಂಪತ್ಯ ನಿಷ್ಠೆ ಕುರಿತು ವ್ಯಾಖ್ಯಾನ ಮಾಡಹೊರಡುವುದು ಹಾಸ್ಯಾಸ್ಪದ, ಏಕೆಂದರೆ ಮನುಷ್ಯ, ಮಾನವ ಮನಸ್ಸು ಹೇಗೆ ಭಿನ್ನವೋ ಹಾಗೇ ಇಬ್ಬರ ನಡುವಿನ ಸಂಬಂಧದ ಸ್ವರೂಪವೂ ಭಿನ್ನವಾಗಿರುತ್ತದೆ. ದಾಂಪತ್ಯವೆಂದ ಕೂಡಲೇ ಕಣ್ಣೆದುರು ಒಂದು ದೊಡ್ಡ ಸ್ಪೆಕ್ಟ್ರಂ ಹರಡಿಕೊಳ್ಳುತ್ತದೆ. ಅರ್ಧ ಶತಮಾನ, ಅಥವಾ ಅದಕ್ಕಿಂತ ಹೆಚ್ಚು ಒಬ್ಬರಿಗೊಬ್ಬರು ಅನುಸರಿಸಿ ಬಾಳಿದವರಿಂದ ಹಿಡಿದು ಮದುವೆಯಾದ ಮರುದಿನವೇ ಬೇರೆಯಾದವರ ತನಕ; ತೀರಿಕೊಂಡ ಸಂಗಾತಿಯ ನೆನಪಲ್ಲಿ ಜೀವಮಾನವಿಡೀ ಏಕಾಂಗಿಯಾಗಿರುವವರಿಂದ ಹಿಡಿದು ಒಂದೇ ಸಮಯದಲ್ಲಿ ಹಲವರೊಡನೆ ಸಂಬಂಧ ಇಟ್ಟುಕೊಳ್ಳುವ ಮಹಾನುಭಾವರ ತನಕ ವಿಸ್ತೃತ ಸ್ವರೂಪದ ಸಂಬಂಧಗಳು ಕಾಣಸಿಗುತ್ತವೆ. ಇದರ ಆಚೆ ವಿರುದ್ಧ ಲಿಂಗಿಗಳ ನಡುವೆ ಸಂತತಿ ಮುಂದುವರೆಸುವ ಉದ್ದೇಶವಿಲ್ಲದೆ ಕೇವಲ ಲೈಂಗಿಕ ತೃಪ್ತಿಗಾಗಿಯೇ ಆಪ್ತ ಸಾಂಗತ್ಯ ಉಂಟಾಗುವುದೂ ಹೆಚ್ಚಾಗತೊಡಗಿದೆ. ಲಿವ್‌ಇನ್ ಸಂಬಂಧಗಳನ್ನು, ಸಲಿಂಗ ಸಂಬಂಧಗಳನ್ನು ಕೋರ್ಟೂ ಮಾನ್ಯ ಮಾಡುತ್ತಿದೆ. ಜೊತೆಗೆ ಆತ್ಮಸಂಗಾತವೋ, ಸಾಹಚರ್ಯವೋ ಅಥವಾ ಇಂಥ ಯಾವ ಹೆಸರಿಡಲೂ ಸಾಧ್ಯವಾಗದ ಸಂಬಂಧಗಳೆಷ್ಟೋ ಪ್ರತಿ ವ್ಯಕ್ತಿಯ ಜೀವನದಲ್ಲಿ ಒದಗಿಬರುತ್ತದೆ. ಕಾನೂನು, ಸಮಾಜ-ರೂಢಿಯ ಚೌಕಟ್ಟಿನಲ್ಲಿರದ ಸಂಬಂಧಗಳು ಕುಟುಂಬದ ಸಮಗ್ರತೆಗೆ, ದಂಪತಿಗಳ ಸಾಹಚರ್ಯಕ್ಕೆ ತೊಂದರೆ ಕೊಡದೇ ಹೋದಲ್ಲಿ ಅದೇನೂ ಘಾತಕವಲ್ಲ.

ಇಷ್ಟು ಹೇಳುತ್ತಲೇ ನಿಷ್ಠೆಯ ಮಾತನ್ನು ಒತ್ತಟ್ಟಿಗಿಟ್ಟು ಒಂದು ಎಚ್ಚರದ ಕುರಿತೂ ಅವಶ್ಯವಾಗಿ ಮಾತನಾಡಬೇಕಿದೆ: ಎಲ್ಲ ಸಂಬಂಧಗಳಲ್ಲೂ ಒಂದು ವಿಶ್ವಾಸ ಮತ್ತು ಬದ್ಧತೆ ಅವಶ್ಯವಾಗಿವೆ. ಅವೆರೆಡೂ ಇಲ್ಲದೇ ಕೇವಲ ಲೈಂಗಿಕ ಉನ್ಮಾದ ತೀರಿಸಿಕೊಳ್ಳಲೆಂದು ಹಲವು ಸಂಬಂಧಗಳನ್ನು ಏಕಕಾಲಕ್ಕೆ ಹೊಂದುವುದು ವ್ಯಕ್ತಿ/ಕುಟುಂಬ/ಸಮಾಜದ ದೃಷ್ಟಿಯಿಂದ ಘಾತಕತನವಾಗಿದೆ. ‘ಸಂಗಾತಿಯನ್ನಲ್ಲದೆ ಮತ್ತಾರನ್ನೂ ಕತ್ತೆತ್ತಿ ನೋಡಬಾರದು’ ಎಂಬ ಒಡೆತನ ಹೇಗೆ ವ್ಯಕ್ತಿತ್ವ-ಸಂಬಂಧದ ಬೆಳವಣಿಗೆಗೆ ಅಪಾಯಕಾರಿಯೋ ಹಾಗೇ ಒಂದು ಸಂಬಂಧದಲ್ಲಿ ನೆಲೆ ನಿಲ್ಲದೇ, ತೃಪ್ತಿ ಕಾಣದೇ ಖಾಯಂ ಅಲೆಮಾರಿಯಾಗಿರುವುದೂ ಅಷ್ಟೇ ಅಪಾಯಕಾರಿ. ಅದು ವ್ಯಕ್ತಿತ್ವಕ್ಕೊಂದು ಸೀಳುತನ ಒದಗಿಸುವುದಲ್ಲದೆ ಆ ವ್ಯಕ್ತಿಗಿಂತ ಹೆಚ್ಚು ಸಂಗಾತಿಯನ್ನು ಬಾಧಿಸುತ್ತದೆ.

ಮೇಲಿನ ಅಭಿಪ್ರಾಯಗಳನ್ನು ‘ಸ್ತ್ರೀವಾದಿ ದೃಷ್ಟಿಕೋನ’ ಎಂದು ಕರೆಯುವುದಕ್ಕಿಂತ ವೈಯಕ್ತಿಕ ಅಭಿಪ್ರಾಯ-ಅವಲೋಕನ ಎನ್ನುವುದು ಸೂಕ್ತ. ನಾವು ಕಲಿತ, ಅರಿತ ಸ್ತ್ರೀವಾದವೆಲ್ಲ ಮನೆಯೆಂಬ ನಾಲ್ಕು ಗೋಡೆಯ ಚೌಕಟ್ಟಿನೊಳಗೆ ಪ್ರವೇಶಿಸಿದ ಕೂಡಲೇ ಎಲ್ಲೆಲ್ಲೋ ಹಾರಿಹೋಗಿ ರೂಢಿಗತ ಪಾತ್ರಗಳಿಗೆ ಅನಿವಾರ್ಯವಾಗಿ ಅಂಟಿಕೊಳ್ಳುತ್ತಿರುವಾಗ ಮದುವೆ, ದಾಂಪತ್ಯ ಕುರಿತು ಏನೇ ಹೇಳಿದರೂ ಈ ಬರಹ ಪೂರ್ಣವಾಗುವುದಿಲ್ಲ. ಗಂಡನೆಂಬ ಕೆಂಡವನ್ನು ಉಡಿಯಲಿಟ್ಟುಕೊಂಡು ಹಾದಿ ಸವೆಸುವವರಿಗೆ ‘ನಿನಗೆ ಬೆಚ್ಚಗೆನಿಸುತ್ತಿದೆಯೋ? ಸುಟ್ಟುಕೊಂಡ ಅನುಭವವಾಗುತ್ತಿದೆಯೋ?’ ಎಂದು ಕೇಳಿದರೆ ಏನು ಉತ್ತರ ಹೇಳಬಹುದು? ಒಟ್ಟಾರೆ ದಾಂಪತ್ಯವೆಂದರೆ ಇಬ್ಬರ ನಡುವಿನ ಆಸ್ತಿ ಹಂಚಿಕೆಯ ಹೊಂದಾಣಿಕೆಯಲ್ಲ, ನಿಷ್ಠೆಯೆಂದರೆ ‘ನಿನ್ನ ಸಕಲಕ್ಕೂ ನಾನೇ ಏಕಮೇವ ವಾರಸುದಾರ’ನೆಂಬ ಹಕ್ಕು ಸಾಧನೆಯಲ್ಲ. ಬದಲಾಗಿ ದಾಂಪತ್ಯವು ಇಬ್ಬರ ನಡುವೆ ಅಂತರವನ್ನೂ, ಅಂಟನ್ನೂ ಕಾಯುವ ಮಾಯಾಜಾಲ. ನಿಷ್ಠೆ ವ್ಯಕ್ತಿಯ ಪರವಾಗಿ ಅಲ್ಲ, ನ್ಯಾಯದ ಪರವಾಗಿ ಇರಬೇಕಾದ ಮೌಲ್ಯ. ಅಂಟು, ಅಂತರ ಮತ್ತು ನ್ಯಾಯ ಹದವಾಗಿ ಮಿಳಿತಗೊಂಡು ಇಡುವ ಹೆಜ್ಜೆಗಳಲ್ಲಿ ಯಾವ ಲೆಕ್ಕಾಚಾರವೂ ಇರುವುದಿಲ್ಲ. ಅಳೆದು ತೂಗಹೊರಟಿದ್ದು ಕೈಯಿಂದ ನುಣುಚಿಹೋಗದೇ ಇರುವುದಿಲ್ಲ.

Friday 13 June 2014

ಖಲೀಲ್ ಗಿಬ್ರಾನನ ಎರಡು ದೃಷ್ಟಾಂತ ಕಥೆಗಳು





ನನ್ನ ದುಃಖ ಹುಟ್ಟಿದಾಗ



ನನ್ನ ದುಃಖ ಹುಟ್ಟಿದಾಗ ಜತನದಿಂದ ಜೋಪಾನ ಮಾಡಿದೆ. ಪ್ರೀತಿ ತುಂಬಿದ ಕಾಳಜಿಯಿಂದ ಗಮನಿಸಿದೆ.

ನನ್ನ ದುಃಖ ಎಲ್ಲ ಜೀವಿಗಳಂತೆ ಬೆಳೆಯಿತು. ಬಲಶಾಲಿಯಾಗಿ, ಸುಂದರವಾಗಿ, ಅದ್ಭುತ ಆನಂದವಾಗಿ.

ನಾವು ಒಬ್ಬರನೊಬ್ಬರು ಪ್ರೀತಿಸಿದೆವು, ನನ್ನ ದುಃಖ ಮತ್ತು ನಾನು, ನಮ್ಮ ಸುತ್ತಲ ಜಗವನ್ನು ಪ್ರೀತಿಸಿದೆವು; ದುಃಖಕ್ಕೆ ಕರುಣೆಯ ಹೃದಯವಿತ್ತು, ನನ್ನ ಹೃದಯ ದುಃಖದಿಂದಾಗಿ ಕರುಣಾಪೂರಿತವಾಗಿತ್ತು.

ನಾನು ಮತ್ತು ನನ್ನ ದುಃಖ ಸಂವಾದಿಸುವಾಗ, ನಮ್ಮ ಹಗಲುಗಳಿಗೆ ರೆಕ್ಕೆ ಮೂಡಿದವು. ರಾತ್ರಿಗಳು ಕನಸುಗಳಿಂದ ಸುತ್ತುವರೆಯಲ್ಪಟ್ಟವು. ದುಃಖಕ್ಕೆ ವಾಕ್ಚಾತುರ್ಯದ ನಾಲಿಗೆ, ನನ್ನ ನಾಲಿಗೆ ದುಃಖದಿಂದ ವಾಕ್ಚಾತುರ್ಯ ಪಡೆದಿದೆ.

ನಾನು ಮತ್ತು ದುಃಖ ಒಟ್ಟಿಗೆ ಹಾಡುವಾಗ, ನಮ್ಮ ನೆರೆಹೊರೆಯವರು ತಂತಮ್ಮ ಬಾಗಿಲಲಿ ಕುಳಿತು ನಮ್ಮನ್ನು ಆಲಿಸುತ್ತಿದ್ದರು. ನಮ್ಮ ಹಾಡುಗಳು ಕಡಲಿನಂತೆ ಆಳವಾಗಿ, ಅಪರಿಚಿತ ನೆನಪುಗಳ ಮಧುರ ದನಿಯಾಗಿದ್ದವು.

ನಾವು ಒಟ್ಟಿಗೇ ನಡೆದಾಗ, ಜನ ಮೃದುವಾದ ನೋಟದಿಂದ ನಮ್ಮೆಡೆ ನೋಡುತ್ತಿದ್ದರು, ಅತಿಮಧುರ ದನಿಯಿಂದ ಪಿಸುನುಡಿಗಳನಾಡುತಿದ್ದರು. ನಮ್ಮ ಕಡೆ ಅಸೂಯೆಯಿಂದ ನೋಡುವವರೂ ಇದ್ದರು, ಏಕೆಂದರೆ ದುಃಖ ಮಹಾನ್ ಮತ್ತು ನಾನು ದುಃಖದೊಂದಿಗೆ ಹೆಮ್ಮೆಯಿಂದಿದ್ದೆ.

ಆದರೆ ನನ್ನ ದುಃಖ ತೀರಿಕೊಂಡಿತು, ಎಲ್ಲ ಜೀವಿಗಳಂತೇ, ನಾನೊಬ್ಬನೇ ಉಳಿದೆ ಚಿಂತಿಸುತ್ತಾ, ಧ್ಯಾನಿಸುತ್ತಾ.

ಈಗ ನಾನು ಮಾತನಾಡಿದರೆ ಆಡಿದ ಪದ ಕಿವಿಯ ಮೇಲೆ ಭಾರವಾಗಿ ಬೀಳುತ್ತದೆ.

ನಾನು ಹಾಡುವಾಗ ನೆರೆಯವರು ಬಂದು ಕೇಳುವುದಿಲ್ಲ.

ನಾನು ಹಾದಿಯಲಿ ನಡೆವಾಗ ಯಾರೂ ನನ್ನತ್ತ ದೃಷ್ಟಿ ಹರಿಸುವುದಿಲ್ಲ.

ನನ್ನ ನಿದ್ರೆಯಲ್ಲಿ ಮಾತ್ರ ಮರುಕ ತುಂಬಿದ ದನಿಗಳು ಪಿಸುಗುಡುವುದು ಕೇಳುತ್ತದೆ, ‘ನೋಡಲ್ಲಿ, ಇವನೇ, ಅವನ ದುಃಖ ಸತ್ತುಹೋಗಿದೆ.’

(ದಿ ಮ್ಯಾಡ್ ಮ್ಯಾನ್)



ನನ್ನ ಖುಷಿ ಹುಟ್ಟಿದಾಗ


ನನ್ನ ಖುಷಿ ಹುಟ್ಟಿದಾಗ ಅದನ್ನು ನನ್ನ ತೋಳಿನಲ್ಲಿ ಎತ್ತಿ ಹಿಡಿದು ಮನೆ ಮೇಲೆ ಹತ್ತಿ ಕೂಗಿದೆ, ‘ಎಲ್ಲ ಬನ್ನಿ, ನನ್ನ ನೆರೆಹೊರೆಯ ಬಂಧುಗಳೇ, ಬಂದು ನೋಡಿ. ಈ ದಿನ ಖುಷಿ ನನ್ನಲ್ಲಿ ಹುಟ್ಟಿದೆ. ಎಳೆಬಿಸಿಲಿನಲಿ ನಗುವ ಈ ಆನಂದದಾಯಿಯ ಎತ್ತಿಕೊಳ್ಳಿ.’

ಆದರೆ ನನ್ನ ಅಕ್ಕಪಕ್ಕದ ಮನೆಯ ಯಾರೊಬ್ಬರೂ ಖುಷಿ ನೋಡಲು ಬರಲಿಲ್ಲ. ನನಗೆ ಪರಮಾಶ್ಚರ್ಯ.

ಪ್ರತಿದಿನ, ಏಳು ಮಾಸ, ನನ್ನ ಮನೆ ಮೇಲೆ ನಿಂತು ಖುಷಿಯ ಬಗೆಗೆ ಕೂಗಿ ಹೇಳಿದೆ, ಆದರೂ ಯಾರೊಬ್ಬರೂ ಗಮನ ಹರಿಸಲಿಲ್ಲ. ನಾನು ನನ್ನ ಖುಷಿ ಒಂಟಿಯಾಗಿದ್ದೆವು, ಯಾರೂ ನೋಡದೇ, ಭೇಟಿಯಾಗುವವರು ಬರದೇ.

ಆಗ ನನ್ನ ಖುಷಿ ಪೇಲವವಾಗುತ್ತ, ಬಳಲುತ್ತ ಹೋಯಿತು. ಏಕೆಂದರೆ ನನ್ನ ಹೃದಯದ ಹೊರತಾಗಿ ಮತ್ತಾರೂ ಅದರ ಲವಲವಿಕೆಯ ನೋಡಲಿಲ್ಲ. ನನ್ನ ತುಟಿಯ ಹೊರತಾಗಿ ಮತ್ತಾರೂ ಚುಂಬಿಸಲಿಲ್ಲ.

ನನ್ನ ಖುಷಿ ಬೇರ್ಪಟ್ಟ ಏಕಾಂಗಿತನದಲ್ಲಿ ತೀರಿಕೊಂಡಿತು.

ಈಗ ನಾನು ಸತ್ತ ಖುಷಿಯನ್ನು ಸತ್ತ ದುಃಖದೊಂದಿಗೆ ನೆನೆಯುತ್ತೇನೆ. ಆದರೆ ನೆನಪು ಶರತ್ಕಾಲದ ಉದುರುವ ಎಲೆ. ಉದುರುವಾಗ ಗಾಳಿಯಲ್ಲಿ ಕೊಂಚ ಸದ್ದು ಮಾಡುತ್ತದೆ. ನಂತರ ಎಂದೆಂದೂ ನಿಶ್ಶಬ್ದ.

(ದಿ ಮ್ಯಾಡ್ ಮ್ಯಾನ್)

ಅನುವಾದ: ಅನುಪಮಾ

ಕೆಂಡಮಾಸ್ತಿ








       ಹಗಲ ಮರಿ ಇನ್ನೇನು ಮೊಟ್ಟೆಯೊಡೆದು ಹೊರಬರುವ ಹೊತ್ತು..

   ಕೇರಿಯ ನಸುಗತ್ತಲಿನೊಳಗೆ ಕಾಲಿಟ್ಟಿದ್ದೇ ರೊಂಯ್ಞನೆ ಬೀಸಿಬಂದ ಕುಳಿಗಾಳಿಗೆ ಸ್ವೆಟರಿನೊಳಗೂ ನಡುಕ ಹುಟ್ಟಿತು. ಕೇರಿ ಆಗಲೇ ಎಚ್ಚೆತ್ತಿದೆ. ಮಡ್ಲು ಮಾಡಿನ ಕಂಡಿಗಳ ನಡುವಿಂದ ಹೊಗೆಯೇಳುವುದು ಅಸ್ಪಷ್ಟವಾಗಿ ಕಾಣುತ್ತಿದೆ. ಮನೆಗಳಿಂದ ಲಟಪಟ ಸದ್ದು. ದೂರದಲ್ಲಿ ಚೊಂಬು ಹಿಡಿದು ಇಳಿಜಾರು ಇಳಿಯುತ್ತಿರುವ ಆಕೃತಿ. ಕಾಲಡಿಯೇ ಸುಳಿಸುಳಿದು ಓಡುವ ಕೋಳಿಪಿಳ್ಳೆಗಳು. ‘ಸಂಕ್ರಾತಿಗೆ ಎಂಟು ದಿನಕೇ ಜಾತ್ರೆ, ಇನ್ ಮೂರ‍್ದಿನ ಉಳಿತಷ್ಟೇಯಾ. ಅಮ್ಮನೋರ ಮನಿ ನೋಡ್ಕಬರುಕೆ ಹೋಗುದಾದ್ರೆ ಮದ್ಲೇ ಬರಬೇಕು. ಬೆಳಕ್ಹರುದ್ರೆ ಚಪ್ಪರ, ಕೊಂಡ ತೋಡಣ ಅಂತ ಹುಡುಗ್ರು ಬಂದ್ಬಿಡ್ತಾರೆ, ನಂಗೂ ಕೆಲ್ಸಕೆ ತಡಾಯ್ತದೆ’ ಎಂದು ನಾಗಿ ಎಚ್ಚರಿಸಿದ್ದಳು. ಬೆಳಕು ಹರಿಯುವುದರಲ್ಲಿ ಕೇರಿ ತಲುಪಿದ್ದೆ.

   ಇಲ್ಲಿ ಯಾವುದು ನಾಗಿ ಮನೆ? ಕೇರಿಯ ಎಲ್ಲ ಬಿಡಾರಗಳೂ ಮಸುಕಾಗಿ ಒಂದೇರೀತಿ ಕಾಣುತ್ತಿವೆ. ಬಾಗಿಲ ಆಚೀಚಿನ ಗೋಡೆ ಮೇಲೆ ಮಂಡಲ ರಂಗೋಲಿಯಿರುವ ಓ ಆ ಮನೆ, ಅವಳದಿರಬೇಕು. ಮನೆಯೆದುರು ನಿಂತದ್ದೇ ಕೊಂಯ್ಞ್‌ಗುಡುತ್ತ ಬಾಗಿಲು ತೆರೆದುಕೊಂಡು ಹಬೆಯಾಡುವ ಮೈಯ ನಾಗಿ ಈಚೆ ಬಂದಳು. ‘ಸಾನ ಮಾಡ್ಕ ಬಂದಿದಿ ತಾನೆ? ಎಂತಕಂದ್ರೆ ಮೈಲಿಗಿಯೋರೆಲ್ಲ ಹೋಗಿ ಮುಟ್ಟುಚಿಟ್ಟು ಆದ್ರೆ ಏನಿಲ್ಲ ಮತ್ತೆ, ಮಾಸ್ತಮ್ಮಂಗೆ ಸಿಟ್ಟು ಬಂದು ಎಲ್ರೂ ಸರ್ವನಾಶ..’ ಎಂದಳು.

   ನೀರಿಳಿಯುತ್ತಿದ್ದ ಕೂದಲನ್ನು ಒಟ್ಟುಮಾಡಿ ಗಂಟುಕಟ್ಟುತ್ತ ಒಳಹೋಗಿ ಮಾಗಿಮಲ್ಲಿಗೆ ದಂಡೆ ಸೂಡಿಕೊಂಡು ನನಗೊಂದು ತಂದಳು. ಕಾಡುಮಲ್ಲಿಗೆಯ ನವಿರು ಪರಿಮಳವೋ, ನಾಗಿಯ ಹಬೆ ಮೈ ಹೊರಸೂಸುತ್ತಿದ್ದ ಲೈಫ್‌ಬಾಯ್ ಸಾಬೂನಿನ ಪರಿಮಳವೋ ಅಂತೂ ಅಲೌಕಿಕ ಸುಗಂಧ ಅಲ್ಲೆಲ್ಲ ಹರಡಿತು. ಕಿರಿಗುಡುವ ಬಾಗಿಲು ಸರಿಸುತ್ತ, ಮಾಡಿಗೆ ಸಿಗಿಸಿದ ಕತ್ತಿ ಕೈಲಿ ಹಿಡಿದು ‘ಗಿರಕಿ ಮೆಟ್ಟಿನ ಸದ್ದಿಗೇ ನೀ ಬಂದಿದ್ದು ಗೊತ್ತಾತು..’ ಎನ್ನುತ್ತ ಮುಂದೆಮುಂದೆ ನಡೆದಳು. ಮಾಸಿದ ಕಗ್ಗೆಂಪು ಸೀರೆಯುಟ್ಟ ನಾಗಿಯ ಕಣ್ಣು ಕೆಂಪೇರಿದ್ದವು. ಅವಳ ನೀರಿಳಿಯುವ ಕೂದಲು ಒದ್ದೆ ಮಾಡಿದ ಬೆನ್ನು, ಸೊಂಟ, ಹಿಂತೊಡೆಗಳು ಕತ್ತಿಯೊಡನೆ ಲಯಬದ್ಧವಾಗಿ ಚಲಿಸುತ್ತಿದ್ದವು. ತೊನೆವ ಇಂಥ ಜೀವಕ್ಕೆಲ್ಲಿಯ ಮುಟ್ಟುಚಿಟ್ಟು?

   ‘ದೇವ್ರೆ ಮನುಷ್ಯನ್ನ ಮಾಡ್ದೋನು ಅಂದ್ಮೇಲೆ ಮುಟುಚಟ್ಟು ಅಂತೆಲ್ಲಿದೆ ನಾಗಿ’ ಎಂದೆ.

   ‘ಐ.. ಮುಟ್ಟಂತ ಈಗ ಮನೆಗ್ಯಾರು ಕುಂತಾರು? ತ್ವಾಟಗದ್ದೆ, ಸೊಪ್ಪುದರಕು ಅಂತ ಮಾಡದ್ನೆಲ್ಲ ಮಾಡದೇ. ಮುಟ್ಟಂತ ಮೂರ‍್ದಿನ ಗಂಜಿಗಸಿ ಕಾಸೂ ಕೆಲ್ಸಕಷ್ಟೇ ರಜೆ. ಒಳ್ಳೇದೇ ಬಿಡು. ಮಾಡ್ಕ ತಿಂದ್ರೆ ಅವಕ್ಕೂ ಗೊತ್ತಾಗುತ್ತೆ ಕಷ್ಟ.’

‘ಮಾಡಿ ತಿನಲಿ ಬಿಡು, ಈ ಕತ್ತಿ ಯಾಕ್ ಹಿಡ್ಕಂಡ್‌ಬಂದೆ ಭದ್ರಕಾಳಿ ಹಂಗೆ?’

‘ಅದೇನೋ ಅಮಾ, ಕತ್ತಿ ಯಾವಾಗೂ ನನ್ಜೊತೆ ಇರ‍್ಬೇಕು. ಮಲಿಕಳುವಾಗೂ ಪಕ್ಕ ಇದ್ರೇ ಸಮಾದಾನ. ನಮ್ಮವ್ವಿನೂ ಹಂಗೇ ಮಾಡ್ತಿತ್ತು. ಕಬ್ಣ ಹಿಡಿದ್ರೆ ದೆವ್ವ ಬರಲ್ಲ. ದೆವ್ವಗಿವ್ವ ಸಾಯ್ಲಿ, ಮನ್ನೆ ಟಿವಿಲಿ ತೋರ್ಸಿದಂಗೆ ಕೆಡಿಸಕ್ಬಂದರ‍್ನ ಕತ್ತರಸಿ ಅತ್ತ ಒಗೆಯಕ್ಕಾದ್ರೂ ಆದಾತು ಅಂತ..’

ಆಡಾಡುತ್ತ ಮಾತು ಮೊನ್ನೆಯಷ್ಟೇ ಅವರ ಕೇರಿಗೆ ಬಂದು ಶುದ್ಧ ಮಾಡಿಹೋದ ‘ದೊಡ್ಡ ಸ್ವಾಮಿಗೋಳ’ ಕಡೆ ತಿರುಗಿತು. ಸ್ವಾಮಿಗಳು ಬರುವಾಗ ಕೇರಿಗೆ ತೋರಣವಾಗಲು ಮೈಕೈ ತರಚಿಕೊಂಡ ಮಾವಿನಮರ ತೋರಿಸಿದಳು. ಸ್ವಾಮಿಗಳು ಬರುವುದರಿಂದ ಯಾರೂ ಗೌಲುಮಾಂಸ ತಿನ್ನಬಾರದೆಂದು ಕೇರಿಯ ಹಿರಿಯ ಕಟ್ಟು ಮಾಡಿದ್ದ. ಎಂದೇ ಅವಳಿಗೆ ಬಳಚು ವ್ಯಾಪಾರವಿರಲಿಲ್ಲ. ವಾರದ ಬಳಿಕ ನಿನ್ನೆಯಷ್ಟೇ ಬಳಚು ಹೆಕ್ಕಲು ಹೊಳೆ ಮುಳುಗಿದ್ದಳು. ಒಂದು ಹೆಗಲಿಗೆ ಹೊಂಯ್ಞಿಗೆ ಚೀಲ, ಇನ್ನೊಂದು ಹೆಗಲಿಗೆ ಬಳಚಿನ ಚೀಲ ನೇಲಿಸಿಕೊಂಡು ಹೊಳೆ ಮುಳುಗೇಳುವ ಅವಳ ಚಿತ್ರ ಕಣ್ಮುಂದೆ ಬಂತು. ಎರಡೂ ಹೆಗಲು ನೋಯುತ್ತಿರಬಹುದೇ ಎಂಬ ನನ್ನ ಯೋಚನೆಯನ್ನು ಅಣಕಿಸುವಂತೆ ಅವಳ ಕುತ್ತಿಗೆ ತುಂಬಿದ್ದ ಮಣಿಸರಗಳು ಕಿಲಕಿಲಗುಡಹತ್ತಿದವು. ಕುತ್ತಿಗೆ ಪೂರಾ ಮುಚ್ಚಿ ಗಲ್ಲಕ್ಕೆ ಕಚಗುಳಿಯಿಡುತ್ತಿದ್ದ ಮಣಿಸರಗಳೂ, ದಷ್ಟಪುಷ್ಟ ಮಾಂಸಖಂಡಗಳೂ ಅವಳ ಓಡುನಡಿಗೆಯ ಜೊತೆಗೆ ತಾವೂ ಹಾರಿಹಾರಿ ಬೀಳತೊಡಗಿದವು. ರವಿಕೆಯಿಲ್ಲದ ದೇಹಕ್ಕೆ ಚಳಿಯ ಹೆದರಿಕೆಯಿರಲಿಲ್ಲ. ನಡುಗುತ್ತ ನಾನು ಅವಳ ಹಿಂದೋಡಿದೆ.

 ‘ಸ್ವಾಮ್ಗುಳು ಬಂದೋರೇ ಕೇರಿಲೆಲ್ಲ ತಿರುಗಿ ಸುದ್ದ ಮಾಡಿದ್ರು. ನಾಕು ಮನೆ ಹೊಕ್ಕು ಪಾದಪೂಜೆ ಮಾಡಿಸ್ಕಂಡ್ರು. ನಮ್ಮ ಕೇರಿಯ ಅಷ್ಟೂ ಹೆಂಗುಸ್ರಿಗೆ ಸೀರೆ ಕುಂಕ್ಮ ಪ್ರಸಾದ, ಗಂಡುಸ್ರಿಗೆ ಪಂಜಿ ಅಕ್ಷತೆ ಕೊಟ್ಟೋದ್ರು. ‘ಇನ್ನು ಮ್ಯಾಲೆ ದೇವ್ರು ದಿಂಡ್ರಿಗೆ ರಕ್ತಗಿಕ್ತ ಬಲಿ ಕೊಡಬ್ಯಾಡ್ರಿ. ಅದು ಪರಮಾತ್ಮನಿಗೆ ಇಸ್ಟ ಆಗಲ್ಲ. ನೋಡ್ರಿ ನಂ ಪೈಕಿ ದೇವ್ರು ರಕ್ತ ಕೊಡದಿದ್ರೂ ನಮ್ಮುನ್ನೆಲ್ಲ ಉದ್ಧಾರ ಮಾಡ್ತಿಲ್ವ? ನಿಮ್ ಜಟಗನ ಮನೆ, ಮಾಸ್ತಿಚೌಡಿ ದೇವ್ರನ ಸುದ್ದ ಮಾಡಿಕೊಡ್ತೀನಿ, ಇನ್ಮೇಲೆ ಬಾಳೆಗೊನಿ, ತೆಂಗನಕಾಯಿ, ಗುಂಬಳಕಾಯಿ ಮಾತ್ರ ಕೊಡಿ ಸಾಕು, ಕೋಳಿ ಕುಯ್ಯದು ನಿಲ್ಸಿಬಿಡಿ’ ಅಂತಂದ್ರು....’

 ‘ಜಟಗನಿಗೆ ಕೋಳಿ ಕುಯ್ಯಬೇಡಿ ಅಂದ್ರೆ ನೀವು ಒಪ್ಪಿಬಿಟ್ರಾ?’

 ‘ಹೇಳ್ತಿನಿ ಕೇಳು. ಸ್ವಾಮಿಗುಳು ರಕ್ತಬಲಿ ಬ್ಯಾಡ ಅಂದಾಗ ಎಲ್ರ ಬಾಯಿ ಕಟ್ಟೋಯ್ತು. ಆದ್ರೆ ಈ ನಮಮ್ಮ ಇದಾಳಲ್ಲ, ಇವ್ಳು ಅಂತಿಂತೋಳಲ್ಲ. ಜಟಗನೂ ಅಷ್ಟೆ ಬಾರೀ ಸಿಟ್ಟಿನಾಂವಾ. ರಕ್ತಬಲಿ ಇಲ್ದಿದ್ರೆ ನಮ್ನೇ ಬಲಿ ತಗಂಡ್ ಬಿಡೋವಷ್ಟ್ ಸಿಟ್ಟು ಇವರದ್ದು. ಕೋಳಿ ಕುಯ್ಯೋ ದೇವ್ರ ಸಿಟ್ಟು ಬಾಳೆಹಣ್ಣಿನ ಗುರುಗುಳ್ಗೆ ಗೊತ್ತಾಗಲ್ಲ ಬಿಡು ಪಾಪ..’

ಮಾಸ್ತಿ, ಜಟಗರ ಗುಣಗಾನ ಮಾಡುತ್ತ ರಕ್ತಬಲಿ ಬೇಡ ಅಂದ ಸ್ವಾಮಿಗಳ ಅಜ್ಞಾನದ ಬಗ್ಗೆ ಮರುಗುತ್ತ ತಾನು ಹೇಳಿದ್ದು ಗಿಡಮರಗಳಿಗೆಲ್ಲ ಕೇಳಿಬಿಟ್ಟೀತೋ ಎಂದು ಮೆಲುದನಿಯಲ್ಲಿ ಮಾತನಾಡತೊಡಗಿದಳು. ನಿಧಾನವಾಗಿ ಒಂದು ಸಣ್ಣ ಗುಡ್ಡ ಏರತೊಡಗಿದ್ದೆವು. ಗುಡ್ಡದಾಚೆಯ ಆಕಾಶ ಕೆಂಪಾಗಿ ಇನ್ನೇನು ಸ್ಫೋಟಗೊಳ್ಳುವ ಜ್ವಾಲಾಮುಖಿಯಂತೆ ತೋರುತ್ತಿತ್ತು. ನಿರ್ಜನವಾಗಿದ್ದ ಬೆಟ್ಟದ ಮೇಲಿನಿಂದ ಕೆಳಗಿನ ಊರು ಕೇರಿ ಪುಟ್ಟದಾಗಿ ಕಾಣುತ್ತಾ ದೂರವಾಗತೊಡಗಿತ್ತು.

   ‘ನಾಗಿ, ಅಲ್ನೋಡು ಸೂರ್ಯ..’

   ‘ಓ ನಮಪ್ನೇ, ಕೈ ಮುಗಿತೆ ಸ್ವಾಮಿಯೇ. ಅಮೋ, ನಾ ದರಕು ಉಡುಗಿ ವಾಪಸ್ ಹೋಗತ್ತಿಗೆ ಪ್ರತಿದಿನಾ ಹಿಂಗೇ ಕಾಣುಸ್ತಾನೆ ನೋಡು. ಈ ಸ್ವಾಮಿದೇವ್ರು ಜಗತ್ನ ಹೆಂಗೆ ಹುಟ್ಟುಸ್ದ, ಭೂಮಿ ಹೆಂಗ್ ಹುಟ್ತು, ಆಕಾಶ ಹೆಂಗ್ ಸುಷ್ಟಿ ಆಯ್ತು ಅಂತ ಹಳಬ್ರು ಹಾಡೋ ಹಾಡ್ನ ಕೇಳಿದೀಯಾ ನೀನು? ಈ ಭೂಮೆಲ್ಲಾ ಒಂದು ಮೊಟ್ಟೆ ಆಕಾರ‍್ದಾಗೆ ಹುಟ್ತಂತೆ. ಆಮೇಲೆ ಮೊಟ್ಯಾಗಿನ ಹಳದಿ ಸೂರ್ಯನಾಗಿ, ಬಿಳೀದು ಆಕಾಶವಾಗಿ ಹರಡತಂತೆ. ಯಾವ ರಾಯನ ಕಾಲ್ದಿಂದ್ಲು ನಮಗಾಗಿದ್ದುಕ್ಕೆ ಸಾಕ್ಷಿಯಾಗಿ ನಿಂತಾನೆ ಈ ಸ್ವಾಮಿ..’

   ಇದ್ದಕ್ಕಿದ್ದಂತೆ ನಾಗಿ ಮೌನವಾದಳು. ಇದೇ ಗುಡ್ಡದ ಮೇಲೇ ಅಲ್ಲವೇ ಶೌಚಕ್ಕೆ ಬಂದಿದ್ದ ಅವಳ ಅಂಗವಿಕಲ ಮಗಳನ್ನು ಪುಂಡುಹುಡುಗರು ಎಳೆದಾಡಿದ್ದು? ಇದೇ ಸೂರ್ಯಸಾಕ್ಷಿಯಾಗೇ ಅಲ್ಲವೆ ಅವಳು ರಣಚಂಡಿಯಂತೆ ಆ ಹುಡುಗರ ಮನೆಗಳೆದುರು ನಿಂತು ಅಬ್ಬರಿಸಿದ್ದು? ಬಸುರಾದ ಎಳೆಯ ಬುದ್ಧಿಮಾಂದ್ಯ ಜೀವ ಮತ್ತು ಅದಕ್ಕೆ ಹುಟ್ಟಬಹುದಾದ ಮಗುವನ್ನು ಸಾಕಿಯೇ ಸಿದ್ಧ ಎಂದ ಏಕಾಂಗಿ ನಾಗಿಯ ದಿಟ್ಟತನವೇ ಅಲ್ಲವೆ ನನ್ನಲ್ಲಿ ಮಲಗಿದ್ದ ಸ್ತ್ರೀವಾದವನ್ನು ಬಡಿದೆಬ್ಬಿಸಿದ್ದು? ನನ್ನಮ್ಮನಷ್ಟು ಹಿರಿಯಳಾದ ನಾಗಿ ಸರಸರ ಬೆಟ್ಟ ಹತ್ತುತ್ತಿದ್ದರೆ ನಾನು ಏದುಬ್ಬಸಪಡುತ್ತಿದ್ದೆ. ಈಗ ಐದಾರು ವರ್ಷವಿರಬಹುದಾದ ಆ ಮಗುವನ್ನು ಇತ್ತೀಚೆಗೆ ನೋಡಲಿಲ್ಲ. ಮಗಳನ್ನು ಅಕ್ಕನ ಮನೆಯಲ್ಲಿಟ್ಟಿರುವುದಾಗಿ ಹೇಳಿದ್ದಳು, ಮಗು?

ಒಂದೊಂದೇ ಹೆಜ್ಜೆ ಮೇಲೆ ಬರತೊಡಗಿದ ಎಳೆಯ ಸೂರ್ಯ. ಇಬ್ಬನಿಯ ಮಬ್ಬಿನ ನಡುವೆ ದೂರದಲ್ಲಿ ಗುಡಿಯ ಕಳಶ ಹೊಳೆಯತೊಡಗಿತ್ತು. ಮಂಜಿನ ಆಲಯಕೆ ಬಿಸಿಲ ಕಳಶ? ‘ಅಮೋ, ಬೇಗ್ಬೇಗ ಬಾ. ಕಳಸ ಕಾಣ್ತಿದೆ ನೋಡು. ಕಳಸಾನೂ ಆ ಸ್ವಾಮಿಗಳೇ ಕೊಟ್ಟುಂದು. ಆ ಕಳಸ, ಪೂಜೆ ಸಾಮಾನ, ದೊಡ್ಡ ದೀಪದಕಂಬ, ಒಂದು ಹಿತ್ತಾಳೆ ಗಂಟೆ ಎಲ್ಲ ಕೊಟ್ಟೋಗಿದಾರೆ. ಯಾರಾದ್ರೂ ಕದ್ದುಬಿಟ್ಟಾರು ಅಂತ ಗಂಟೆಗೊಂದು ಕೋಣೆ ಮಾಡಿ ಬೀಗ ಹಾಕಿಟ್ಟಿದಾರೆ. ಅಲ್ಲಾ? ಒಂದ್ಮಾತು ಕೇಳ್ತೀನಿ, ಅಂಥಾ ಒಳ್ಳೇ ಗಂಡಮಕ್ಳಿದಾರೆ. ಮನೆ ಇದೆ. ಎರಡು ಕಾರಿದೆ. ನಿಂಗ್ಯಾಕೆ ಈ ಮಾಸ್ತಿ ಗಿರ?’

    ‘ಅವರಿದ್ರೇನು, ಮಾಸ್ತಿನೂ ಜೊತೆ ಇರಬಾರದೇ? ನನಗಿರಲಿ, ನಿಂಗ್ಯಾಕೆ ಮಾಸ್ತಿ ಗಿರ?’

   ಚಣ ತಡೆದು ನಿಂತಳು. ಅವಳ ಗಂಡ ಬದುಕಿದ ಕಾಲದ ಕತೆ ಹೇಳಿದಳು. ಅವನದ್ದು ಮೀನು ಸಾರು ಸರಿಯಾಗ್ಲಿಲ್ಲ, ಹೊಸದಾಗಿ ಮಾಡಲಿಲ್ಲ ಅಂತ ಯಾವತ್ತೂ ಊಟ ತಿಂಡಿದೇ ಜಗಳವಂತೆ. ಒಂದಿನ ಮಕಮಾರೆ ನೋಡದೇ ಜಪ್ಪಿದ್ದನಂತೆ. ಸಿಟ್ಟಾಗಿ ಊಟತಿಂಡಿ ಬಿಟ್ಟು ಎರಡು ದಿನ ಮಲಗಿದ ಅವಳ ಮೈಮೇಲೆ ತಾಯಿ ಮನೆ ಕಡೆಯ ನಾಗದೇವ್ತೆ ಬರಲಿಕ್ಕೆ ಶುರುವಾಯಿತು. ಅದು ಬಾರೀ ಪವರಿನ ದೇವರಂತೆ. ಅದು ನಾಗಿಗೆ ಅನ್ನ ತಿನಬಾರ‍್ದು ಅಂತ ಕಟ್ಟು ಮಾಡಿತ್ತು. ಬರೀ ಸೀಯಾಳ, ಅವಲಕ್ಕಿ, ಹಣ್ಣು, ಉಪ್ಪಿಟ್ಟು ಇಂತಹದೇ ತಿನ್ನಬೇಕೇ ಹೊರತು ಅಕ್ಕಿದೇನೂ ತಿನ್ನುವಂತಿಲ್ಲ, ಮಾಂಸಗೌಲು ಮುಟ್ಟುವಂತಿಲ್ಲ. ಬರಬರುತ್ತ ಹುತ್ತದ ಮಣ್ಣೇ ತಿನ್ನಬೇಕನಿಸಲಿಕ್ಕೆ ಶುರುವಾಯಿತಂತೆ. ಆ ನಾಗದೇವರು ಮೈಮೇಲೆ ಬಂದ ಮೇಲೆ ಗಂಡನಿಗೆ ಅವಳ ಬಗ್ಗೆ ಭಯಭಕ್ತಿ ಹುಟ್ಟಿ ಸರಿಯಾದನೇನೋ ಹೌದು, ಆದರೆ ಅವಳೇ ಸೋಲತೊಡಗಿದ್ದಳು. ಅದು ಮೈದುಂಬದ ಹಾಗೆ ಮಾಡಲು ಯಾವ್ಯಾವ ದೇವರನ್ನು ಬೇಡಿಕೊಂಡರೂ, ತಿರುಪತಿ ದೇವರಿಗೆ ಮುಡಿ ಹರಕೆ ಕಟ್ಟಿದರೂ ಪ್ರಯೋಜನ ಆಗಿರಲಿಲ್ಲವಂತೆ.

‘ಕೊನೆಗೆ ಈ ಮಾಸ್ತಮ್ಮನಿಗೆ ವರ್ಷೊರ್ಷ ಕೊಂಡ ಹಾಯ್ತಿನಿ ಅಂತ ಹೇಳ್ಕಂಡ ಮೇಲೆ ನಾಗ ಮೈಮೇಲೆ ಬರೋದು ನಿಂತಿದ್ದು. ಅಂತಾ ಮಾಸ್ತಿ ಕಣಮ್ಮಾ ಇದು. ನಾಗನ್ನೂ ಹೊಡೆಯೊವಷ್ಟು ಪೋರ್ಸ್ ಇದೆ ಇವಳ್ಗೆ. ಇವ್ಳ ಹತ್ರನೇ ಜಟಗ ಇದಾನೆ. ಅವರಿಬ್ರಿಗೂ ವರ್ಷೊರ್ಷ ರಕ್ತಬಲಿ ಆಗ್ಲೇಬೇಕು. ಮನೆಗೊಂದ್ ಕೋಳಿ, ಬಂಡಿಹಬ್ಬ ಎಲ್ಲ ಮಾಡ್ಲೇಬೇಕು. ಇಲ್ದಿದ್ರೆ ಯಾರಿಗೂ ಏಳಗತಿ ಇಲ್ಲ. ಮಕ್ಕಳು ಮರಿಗೆ ಕಾಯ್ಲೆ, ದೆಯ್ಯದ ಕಾಟ, ಕೋಳಿ-ದನಕೆ ರೋಗ, ಮರದ ಕಾಯಿ ಉದುರದು, ತೆಂಗುಗೇರು ಮರಕೆ ಹೂಂಗೇ ಹಿಡೀದೇ ಇರದು - ಎಲ್ಲ ಸುರುವಾಗುತ್ತೆ. ಅದುಕ್ಕೆಯಾ..’

   ನಾಗಿ ದನಿ ತಗ್ಗಿಸಿ ಹತ್ತಿರವಾಗುತ್ತಿರುವ ಗುಡಿಯ ಹಿತ್ತಾಳೆಗಂಟೆಗೆ ಎಲ್ಲಿ ಕೇಳಿಬಿಡುವುದೋ ಎಂದು ನಿಧಾನ ಪಿಸುಗುಟ್ಟಿದಳು. ‘ಆ ದೊಡ್ಡಸ್ವಾಮಿಗಳು ಹೊಕ್ಕು ಹೋದ ನಾಕು ಮನೆಯೋರ‍್ನ ಬಿಟ್ಟು ಉಳದ ಮನೆಯೋರು ರಿವಾಜಿನ ಹಾಗೆ ವರ್ಷಾನೂ ಕೋಳಿಬಲಿ ಕೊಡಬೌದು ಅಂತ ಅಂದಿದಾನೆ ಹಿರಿಯ. ಆ ನಾಕು ಮನೆಯೋರು ಮಾತ್ರ ಮಾವ್ಸ ಬಲಿ ಮಾಡ್ದೆ ಸ್ವಾಮಿಗೋಳು ಹೇಳ್ದಂಗೆ ಪೂಜೆ ಮಾಡ್ಲಿ. ಅವರಲ್ಲಿ ವರ್ಷಕೊಬ್ರು ಮಾಸ್ತಿ ಪೂಜೆ ಮಾಡ್ಬೇಕೂಂತ ಮಾತಾಗಿದೆ. ಈ ವಿಚಾರ ಮಠದ ಸ್ವಾಮಿಗೋಳ ಹತ್ರ ಆಡದ್ಬ್ಯಾಡ ಅಂತ ನಿಚ್ಚಯ ಆಗಿದೆ.’

‘ಮಾಸ್ತಮ್ಮ ಅಂದ್ರೆ ಯಾರ‍್ಗೊತ್ತಾ ನಾಗಿ? ಸತ್ತ ಗಂಡನ ಸುಡುವಾಗ ತಾನೂ ಅದೇ ಬೆಂಕಿಗೆ ಹಾರಿದೋಳು.’

‘ಹೌದು, ಅವ್ಳು ದೇವ್ತೆಯಾಗಿ ಆಕಾಶಕೋದವಳು. ಅದ್ರ ಸಲುವಾಗೇ ವರ್ಷೊರ್ಷ ಕೆಂಡಸೇವೆ ಮಾಡ್ತಾ ಇರದು. ಗಂಡ ಸತ್ತ ಮೇಲೆ ಬೇವರ್ಸಿಗಳ ಕೈಗೆ ಸಿಕ್ಕು ಸಾಯಕಿಂತ ಅದೇ ಚಲೋ ಬಿಡು. ಮಕ್ಳುಮರಿನ ಬೆಂಕಿಗೆ ದೂಡ್ದೋರೇ ನೋಡ್ಕಳ್ಳಿ.’ ಚಿಟಿಚಿಟಿ ಕೆಂಡದಂತೆ ಸಿಡಿದವು ಅನುಭವಜನ್ಯ ಮಾತುಗಳೇ?

ಅಕಾ! ಬಂದೇ ಬಿಟ್ಟಿತು ಮಾಸ್ತಿಗುಡಿ!



ಒಣಗಿದ ಚಪ್ಪರದೊಳಗಿನಿಂದ ನಿನ್ನೆ ಸಂಜೆ ಹಚ್ಚಿದ ದೀಪ ಗರ್ಭಗುಡಿಯಲ್ಲಿ ಇನ್ನೂ ಮಿಣಿಗುಡುತ್ತ ಉರಿಯುತ್ತಿತ್ತು. ಅಭಯ ಮುದ್ರೆಯಲ್ಲಿ ಕೈಯೆತ್ತಿ ನಿಂತ, ತುಂಬುಎದೆ, ತುಂಬುಮೈಯ ಹೆಣ್ಣು ಆಕೃತಿ ಕುಂಕುಮದಲ್ಲಿ ಮುಳುಗಿಹೋಗಿತ್ತು. ಶಿಲ್ಪದ ಹೊರಗೂ ಚೆಲ್ಲಾಡಿದ ರಕ್ತಕೆಂಪು ಕುಂಕುಮ. ಬಾಗಿ ನೆಲಮುಟ್ಟಿ ಒಳಹೋದ ನಾಗಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದಳು. ಒಳಬರದೇ ಅನುಮಾನಿಸುತ್ತ ದೂರ ನಿಂತ ನನ್ನನ್ನು ಎಚ್ಚರಿಸಿದಳು:

‘ಅಮೋ, ಈ ಮಾಸ್ತಮ್ಮ ಉಳಿದ ದೇವ್ರ ಥರ ಅಲ್ಲ. ತಾನು ಸುಟಕಂಡು ನಮ್ಮನ್ನ ಬೆಚ್ಚಗಿಟ್ಟಿರೋಳು. ಅವಳ ಹತ್ರ ಬರದಿದ್ರೆ ಕೇಳಲ್ಲ. ಆದರೆ ಬಂದ್ಮೇಲೆ ಮನಸು ಗಟ್ಟಿ ಇಟ್ಕಂಡು ಮುಟ್ಟಬೇಕು. ಇವ್ಳು ಕೆಂಡಮಾಸ್ತಿ. ಮುಟ್ಟಿದ್ರೆ ಕೈ ಸುಡಬೋದು. ಮುಟ್ಟದೇ ಇದ್ರೆ ಇಡೀ ಮೈಯೇ ಸುಟ್ಟೋಗುತ್ತೆ, ತಗೋ...’  

ಚಾಚಿದ ನಾಗಿಯ ಅಂಗೈ ತುಂಬ ಕೆಂಪು ಕುಂಕುಮ. ಅದು ಮೈ ಸುಡುವ ಬೆಂಕಿಯಾಗುವ ಮೊದಲೇ ತುದಿಬೆರಳಲ್ಲಿ ಒತ್ತಿಹಿಡಿದೆ, ಹಣೆಮೇಲೆ ಬೆಳಗುವ ಉರಿಗಣ್ಣಾಯಿತು...