Sunday 28 September 2014

`ಕಿವುಡನೂ ಕೇಳಿಸಿಕೊಳ್ಳುವಂತೆ ಮಾತನಾಡಿದ' ಕ್ರಾಂತಿಕಾರಿ ಭಗತ್




ಭಗತ್ ಸಿಂಗ್ ಜೀವನಚರಿತ್ರೆಯ ಕೆಲ ಪುಟಗಳು:

ಬ್ರಿಟಿಷ್ ಸರ್ಕಾರ ಪಬ್ಲಿಕ್ ಸೇಫ್ಟಿ ಬಿಲ್ ಹಾಗೂ ಟ್ರೇಡ್ ಡಿಸ್ಪ್ಯೂಟ್ ಬಿಲ್ ಎಂಬ ಎರಡು ಮಸೂದೆಗಳನ್ನು ಕೇಂದ್ರದಲ್ಲಿ ಮಂಡಿಸಲು ತಯಾರಿ ನಡೆಸಿತ್ತು. ಅವೆರೆಡೂ ಭಾರತೀಯರ ಹಕ್ಕುಗಳನ್ನು ಮೊಟಕುಗೊಳಿಸುವ ಜನವಿರೋಧಿ ಮಸೂದೆ ಎನ್ನುವುದು ಕ್ರಾಂತಿಕಾರಿಗಳ ಅಭಿಪ್ರಾಯವಾಗಿತ್ತು. ಹಲವು ರಾಜಕೀಯ ವ್ಯಕ್ತಿಗಳೂ ಅದನ್ನು ವಿರೋಧಿಸಿದ್ದರು. ವೈಸರಾಯ್ ಅದನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಂಡಿಸುವ ದಿನ ಯಾವುದೆಂದು ತಿಳಿದ ಎಚ್‌ಎಸ್‌ಆರ್‌ಎ (ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್) ಸದಸ್ಯರು ಅವತ್ತು ಗಮನ ಸೆಳೆಯುವ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಕೊನೆಗೆ ಅಸೆಂಬ್ಲಿಯೊಳಗೆ ಪ್ರವೇಶ ಪಡೆಯುವುದು; ಗ್ಯಾಲರಿಯಲ್ಲಿ ಕುಳಿತು ಜನರಿಲ್ಲದ ಜಾಗ ಯಾವುದೆಂದು ನೋಡಿ ಅಲ್ಲಿಗೆ ಬಾಂಬು ಒಗೆಯುವುದು; ಯಾರೂ ಸಾಯಬಾರದು ಹಾಗೂ ಯಾರನ್ನೂ ಗಾಯಗೊಳಿಸಬಾರದು; ಸ್ಫೋಟ ಸಂಭವಿಸಿ ಗಮನ ಸೆಳೆದು ನಂತರ ಬಂಧನಕ್ಕೊಳಗಾಗಬೇಕು; ವಿಚಾರಣೆಯ ಸಮಯವನ್ನು ಹಾಗೂ ತಮ್ಮ ಮೇಲೆ ಮಾಧ್ಯಮಗಳು ನೀಡುವ ಗಮನವನ್ನು ತಮ್ಮ ವಿಚಾರವನ್ನು ಪ್ರಚಾರಪಡಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

ಭಗತ್ ಸಿಂಗ್ ಮತ್ತು ಬಿ. ಕೆ. ದತ್ತ ಇಬ್ಬರೂ ಏಪ್ರಿಲ್ ೮, ೧೯೨೯ರಂದು ನಿರಪಾಯಕಾರಿಯಾದ ಬಾಂಬ್ ಹಿಡಿದು ಸೆಂಟ್ರಲ್ ಅಸೆಂಬ್ಲಿ (ಇಂದಿನ ಪಾರ್ಲಿಮೆಂಟ್) ಒಳ ಹೋದರು. ಅಸೆಂಬ್ಲಿ ನೆರೆದಾಗ ಜನರಿಲ್ಲದ ಕಡೆಗೆ ಬಾಂಬ್ ಬಿಸಾಡಿ ಸ್ಫೋಟಿಸಿದರು. ಅದರ ಜೊತೆಗೆ ‘ಕಿವುಡನು ಕೇಳಿಸುವಂತೆ ಮಾಡಲು’ ಎಂಬ ಕರಪತ್ರ ಬಿಸಾಡಿದರು. ‘ಸಾಮ್ಯಾಜ್ಯಶಾಹಿಗೆ ಧಿಕ್ಕಾರ’, ‘ಕ್ರಾಂತಿಗೆ ಜಯವಾಗಲಿ’ ಎಂದು ಕೂಗಿದರು.

ಆಗ ಎದ್ದ ಗದ್ದಲದಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಪ್ರತಿನಿಧಿಗಳು ಓಡತೊಡಗಿದರು. ಕೆಲವರು ಟೇಬಲ್ಲಿನ ಅಡಿ ಅವಿತರು. ಮೋತಿಲಾಲ್ ನೆಹರೂ, ಮಹಮದ್ ಅಲಿ ಜಿನ್ನಾ, ಮದನ ಮೋಹನ ಮಾಳವೀಯ ಅವರಂಥ ಕೆಲವರಷ್ಟೇ ಶಾಂತವಾಗಿ ವರ್ತಿಸಿದರು. ಭಗತ್ ಹಾಗೂ ದತ್ತಾ ಕೈಯಲ್ಲಿ ಪಿಸ್ತೂಲುಗಳಿದ್ದವು. ಎಂದೇ ಅವರ ಬಳಿ ಹೋಗಿ ಬಂಧಿಸಲು ಪೊಲೀಸರೂ ಹೆದರಿದರು. ಅವರು ತಮ್ಮ ಪಿಸ್ತೂಲು ಆಚೆಯಿಟ್ಟ ಮೇಲೆ ಪೊಲೀಸರು ಬಂಧಿಸಿದರು. ದೆಹಲಿಯಲ್ಲಿ ಒಂದಾದ ಮೇಲೆ ಮತ್ತೊಂದು ಜೈಲಿಗೆ ಅವರನ್ನು ಸ್ಥಳಾಂತರಿಸಲಾಯ್ತು. ಮೇ ತಿಂಗಳಲ್ಲಿ ಆರಂಭಿಕ ವಿಚಾರಣೆ ನಡೆದು ಜೂನ್‌ನಲ್ಲಿ ತೀರ್ಪು ಬಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯ್ತು.

ದತ್ತಾ ಪರವಾಗಿ ಅಸಫ್ ಅಲಿ ವಾದಿಸಿದರೆ ಭಗತ್ ತನ್ನ ಕೇಸನ್ನು ತಾನೇ ವಾದಿಸಿದ. ವಿಚಾರಣೆಯನ್ನು ತಮ್ಮ ತತ್ವ, ಸಂದೇಶವನ್ನು ಸಮಾಜಕ್ಕೆ ಸಾರಲು ಬಳಸಿಕೊಳ್ಳಬೇಕು ಎಂದುಕೊಂಡ. ರಾಷ್ಟ್ರವಾದಿ ವಕೀಲರ ಸಲಹೆಗಳನ್ನು ತೆಗೆದುಕೊಂಡರೂ ತನ್ನ ಪರ ವಾದಿಸಲು ಯಾರೂ ವಕೀಲರು ಬೇಡವೆಂದು ಹೇಳಿದ. ಅವರ ವಕೀಲರು ಅವರೇ.



ವಿಚಾರಣೆ ಸಮಯದಲ್ಲಿ ಹೇಳಿದರು:

‘ನಾವು ಇತಿಹಾಸ ಮತ್ತು ವರ್ತಮಾನವನ್ನು ಗಂಭೀರವಾಗಿ ಅಭ್ಯಸಿಸುವ ನಮ್ರ ವಿದ್ಯಾರ್ಥಿಗಳಲ್ಲದೇ ಬೇರೆಯಲ್ಲ. ಆಷಾಡಭೂತಿತನವನ್ನು ನಾವು ವಿರೋಧಿಸುತ್ತೇವೆ. ನಮ್ಮ ಪ್ರತಿಭಟನೆ ಈ ವ್ಯವಸ್ಥೆಯ ವಿರುದ್ಧ. ಯಾವ ವ್ಯವಸ್ಥೆ ತನ್ನ ಅಯೋಗ್ಯತೆಯನ್ನು, ಕೇಡಿಗತನವನ್ನೂ ಮೊದಲಿನಿಂದ ತೋರಿಸುತ್ತ ಬಂದಿದೆಯೋ; ಭಾರತವನ್ನು ಅವಮಾನಿಸುತ್ತ, ಅಸಹಾಯಕಗೊಳಿಸುತ್ತ ಬಂದಿದೆಯೋ; ಬೇಜವಾಬ್ದಾರಿಯ ನಿರಂಕುಶಪ್ರಭುತ್ವವನ್ನು ಭಾರತದ ಮೇಲೆ ಹೇರಿದೆಯೋ ಅದರ ವಿರುದ್ಧ. ಕಾಲಕಾಲಕ್ಕೆ ಜನಪ್ರತಿನಿಧಿಗಳು ತಮ್ಮ ಬೇಡಿಕೆಗಳ ಸಲ್ಲಿಸುತ್ತಲೇ ಬಂದರೂ ಅವೆಲ್ಲ ಕೇವಲ ಕಸದ ಬುಟ್ಟಿಯಲ್ಲಷ್ಟೇ ಜಾಗ ಪಡೆಯಲು ಸಾಧ್ಯವಾಯಿತು. ಎಂದೇ ಯಾವ ಬೆಲೆ ತೆತ್ತಾದರೂ ಸರಿ ನಾವು ಹೀಗೆ ಮಾಡುವುದೆಂದು ನಿರ್ಧರಿಸಿದೆವು ಹಾಗೂ ಆ ಮೂಲಕ ಸಾಮ್ರಾಜ್ಯಶಾಹಿ ಶೋಷಕರಿಗೆ ವ್ಯಕ್ತಿಯನ್ನು ಕೊಲ್ಲಬಹುದು ಆದರೆ ಆದರ್ಶಗಳನ್ನಲ್ಲ ಎಂದು ಹೇಳಬಯಸಿದೆವು..’

ಹೀಗೆ ಬಾಂಬ್ ಸ್ಫೋಟದಂತಹ ಪ್ರಯೋಗವನ್ನು ತಾವು ಏಕೆ ಆಯ್ದುಕೊಂಡೆವು ಎಂದು ಹೇಳುತ್ತಾ, ಕೊನೆಗೆ ಕ್ರಾಂತಿ ಎಂದರೇನು ಎಂದೂ ಹೇಳುತ್ತಾರೆ. ಅವರ ಪ್ರಕಾರ,

‘ಈ ಇಡೀ ನಾಗರಿಕತೆ ಸೂಕ್ತ ಸಮಯದಲ್ಲಿ ರಕ್ಷಿಸಲ್ಪಡದಿದ್ದರೆ ಪತನಗೊಳ್ಳುತ್ತದೆ. ಒಂದು ತೀವ್ರವಾದ, ತತ್‌ಕ್ಷಣದ ಬದಲಾವಣೆ ಅತ್ಯಂತ ಅವಶ್ಯವಿದೆ. ಇದನ್ನು ಅರಿತವರು ಸಮಾಜವನ್ನು ಸಮಾಜವಾದದ ತತ್ವಗಳ ಆಧಾರದ ಮೇಲೆ ಪುನರ್ ಸಂಘಟಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಆಗದಿದ್ದರೆ, ಮನುಷ್ಯ ಮನುಷ್ಯನನ್ನು, ದೇಶ ದೇಶವನ್ನು ಶೋಷಿಸುವುದು ನಿಲ್ಲದಿದ್ದರೆ, ಮಾನವಕುಲವನ್ನು ಅಪಾಯದಲ್ಲಿ ನಿಲ್ಲಿಸಿರುವ ಕಷ್ಟವನ್ನು ತಡೆಯಲಾಗುವುದಿಲ್ಲ. ಇಲ್ಲದಿದ್ದರೆ ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ನೆಲೆಸುವಂತೆ ಮಾಡುವ ಎಲ್ಲ ಮಾತುಗಳೂ ಹುಸಿಯಾಗುತ್ತವೆ.

ಕ್ರಾಂತಿಯೆಂದರೆ ಕುಸಿಯಲಾರದಂತಹ ಒಂದು ಸಮಾಜ ಸೃಷ್ಟಿಸಲು ಅವಶ್ಯ ಬದಲಾವಣೆ ತರುವ ವ್ಯವಸ್ಥೆ. ಅಲ್ಲಿ ಶ್ರಮಿಕನ ಸಾರ್ವಭೌಮತ್ವವಿರುತ್ತದೆ. ಬಂಡವಾಳ ಮತ್ತು ಸಾಮ್ರಾಜ್ಯಶಾಹಿ ಯುದ್ಧದ ಹಿಂಸೆಯಿಂದ ಅದು ಮನುಷ್ಯಕುಲವನ್ನು ಮುಕ್ತಗೊಳಿಸುತ್ತದೆ.

ಇದು ನಮ್ಮ ಆದರ್ಶ. ಈ ಆದರ್ಶವನ್ನು ಸ್ಫೂರ್ತಿಯಾಗಿಟ್ಟುಕೊಂಡು ಒಂದು ದೊಡ್ಡ ಎಚ್ಚರಿಕೆಯನ್ನು ನೀಡಿದ್ದೇವೆ.’


Tuesday 16 September 2014

ಅಕಟಕಟಾ! ಹರಿಹರಿ!!


[__--0000000000000000Guru-&-Cow.jpg]


ವಿವೇಕಾನಂದ ಚೇತನಗಳೇ ಮನ್ನಿಸಿ, ಕಾವಿ ಕಾಷಾಯ ವಸ್ತ್ರಗಳು ವಾಕರಿಕೆ ತರಿಸುತ್ತಿವೆ ಎಂದು ಹೇಳಲೇಬೇಕಾಗಿದೆ. 

ನಿತ್ಯಾನಂದ ಸ್ವಾಮಿಯ ಸಾಲುಸಾಲು ಹಗರಣಗಳು ಬಯಲಿಗೆ ಬಂದು ಬಿಡದಿ ಆಶ್ರಮ ರಾಸಲೀಲೆಯಿಂದ ಜಗದ್ವಿಖ್ಯಾತವಾಗಿದೆ. ಆಸಾರಾಮ ಬಾಪು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡನೆಂದು ಬಂಧಿಸಲಾಗಿದೆ. ನಿತ್ಯಾನಂದನ ಪುರುಷತ್ವ ಪರೀಕ್ಷೆ ಮಾಧ್ಯಮದ ಗಮನ ಸೆಳೆಯುತ್ತಿರುವಾಗ ಶ್ರೀರಾಮನ ಅಪರಾವತಾರವೆಂದೇ ಬಣ್ಣಿಸಲ್ಪಟ್ಟ ಗೋಸ್ವಾಮಿ ರಾಘವೇಶ್ವರ ಭಾರತಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಘಟನೆ ನಮ್ಮೆದುರಿಗಿದೆ. ಇದೇನು ಸನ್ಯಾಸಿಗಳ  ಚಾತುರ್ಮಾಸವೋ, ರಾಜಮಹಾರಾಜರ ದಂಡಯಾತ್ರೆಯೋ ಎಂದು ಅನುಮಾನವಾಗುವ ಹಾಗೆ ಎಲ್ಲ ಊರುಪಟ್ಟಣಗಳಲ್ಲೂ ನಸುನಗುವ ಕಾವಿಧಾರಿಗಳ ಫೋಟೋ ಹೊತ್ತು ಮಹಾನ್ ವ್ರತಾಚರಣೆಯ ಹೋರ್ಡಿಂಗುಗಳು ರಾರಾಜಿಸುತ್ತಿವೆ. ‘ಧರ್ಮ’ದ ಗುತ್ತಿಗೆ ಹಿಡಿದವರು ಮಾಡುತ್ತಿರುವುದಾದರೂ ಏನು ಎಂದು ಜನಸಾಮಾನ್ಯ ಅಚ್ಚರಿಗೊಳ್ಳಲೂ ಪುರುಸೊತ್ತಿಲ್ಲದಷ್ಟು ವೇಗವಾಗಿ ಬೆಳವಣಿಗೆಗಳು ಸಂಭವಿಸುತ್ತಿರುವಾಗ ಕಾಷಾಯ ಧರಿಸಿದವರ ಕುರಿತು ಎದೆಯ ನಿಜವ ನುಡಿಯಬೇಕಾದ ಕಾಲ ಸನ್ನಿಹಿತವಾಗಿದೆ.. 

ರಾಜ್ಯಾದ್ಯಂತ ಅಜಮಾಸು ಆರು ಲಕ್ಷದಷ್ಟಿರುವ ಬ್ರಾಹ್ಮಣ ಉಪಜಾತಿಯಾದ ಹವ್ಯಕ ಸಮುದಾಯ ಆತ್ಮಗೌರವದ, ನೆಲ ಪ್ರೀತಿಯ ಕೃಷಿಕ ಸಮುದಾಯ. ಬನವಾಸಿಯ ಕದಂಬ ರಾಜ ಮಯೂರವರ್ಮ ಉತ್ತರದ ಆಹಿಚ್ಛತ್ರದಿಂದ (ಈಗಿನ ಬರೇಲಿ) ಯಜ್ಞಯಾಗಾದಿಗಳನ್ನು ನಡೆಸಲು ೩೨ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ತನ್ನ ರಾಜ್ಯದಲ್ಲಿ ನೆಲೆಯಾಗಿಸಿದ; ಅವರೇ ಹವ್ಯಕರು ಎಂಬ ಪ್ರತೀತಿಯಿದೆ. ಹಾಗೆ ಬಂದವರು ಇಲ್ಲೇ ನೆಲೆಯಾಗಿ ವಿಶಿಷ್ಟ ಭಾಷೆ, ಸಂಸ್ಕೃತಿ ರೂಪುಗೊಂಡಿತು. ಉಳಿದ ಬ್ರಾಹ್ಮಣ ಉಪಜಾತಿಗಳಿಗೆ ಹೋಲಿಸಿದರೆ ಹವ್ಯಕರು ನೆಲವ ನಂಬಿದವರು. ಜೀವನೋಪಾಯಕ್ಕಾಗಿ ಪರಾನ್ನ ನೆಚ್ಚದೇ ತಮ್ಮ ಅನ್ನ ತಾವೇ ಬೆಳೆದುಕೊಂಡವರು. ಅವರಿಗೆ ರಾಮಚಂದ್ರಾಪುರ ಮತ್ತು ಸ್ವರ್ಣವಲ್ಲಿ ಎಂಬ ಎರಡು ಪುರಾತನ ಮಠಗಳಿವೆಯೆಂದು ಹೇಳಲಾಗುತ್ತಿದ್ದರೂ ಭೂಮಿಯೇ ಅವರ ಗುರು ಮತ್ತು ದೇವರು. ಹೀಗೆ ಸ್ವಾಭಿಮಾನಿಗಳಾಗಿ ಘನತೆಯಿಂದ ಬದುಕುತ್ತಿದ್ದ ಸ್ನೇಹಪರ ಸಮುದಾಯಕ್ಕೆ ಗುರುಮಠಗಳ ರಾಜಕಾರಣ ಸುತ್ತಿಕೊಂಡಿದ್ದು ಈಚಿನ ದಶಕಗಳಲ್ಲಿ. 

ಈಗ ಪ್ರೇಮಲತಾ ಅತ್ಯಾಚಾರ ಪ್ರಕರಣದಿಂದ ಸುದ್ದಿಯ ಕೇಂದ್ರವಾಗಿರುವ ರಾಮಚಂದ್ರಾಪುರ ಮಠ ಈ ಮೊದಲೂ ಯಾಗ, ಭೂಮಿ, ಗೋವು, ಗೋಕರ್ಣ, ಹುಂಡಿಕಳ್ಳತನ, ಅತ್ಯಾಚಾರ ಸೀಡಿ, ರಾಮಕತೆಯೆಂದು ನಾನಾ ಕಾರಣಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಸುಳಿದಾಡುತ್ತಿತ್ತು. ಹಸುವಿನ ಮಲಮೂತ್ರಾದಿಗಳಿಂದ ಹಿಡಿದು ಬೀಜ, ತಳಿಯವರೆಗೆ ಎಲ್ಲದರ ಬಗ್ಗೆಯೂ ಆ ಮಠ ಆಸಕ್ತ. ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ವಿರೋಧಪಕ್ಷ, ಆಡಳಿತಪಕ್ಷ, ಮಾಧ್ಯಮ, ಸಿನಿಮಾ, ಉದ್ಯಮ - ಹೀಗೆ ಎಲ್ಲ ಕ್ಷೇತ್ರಗಳಲ್ಲಿದ್ದ ತಮ್ಮ ಸಮುದಾಯದ ಪ್ರಮುಖರನ್ನು ಕರೆದು, ಅವರ ಸೆರಗಿಗೆ ಮಂತ್ರಾಕ್ಷತೆ ಹಾಕಿ, ಪ್ರಭಾವೀ ಅನುಯಾಯಿಗಳ ಪಡೆಯನ್ನೇ ಬೆಳೆಸಿಕೊಂಡರು. ಗೋತಳಿ ರಕ್ಷಣೆಗೆಂದು ಸರ್ಕಾರಿ ಭೂಮಿ ಪಡೆದಿದ್ದು ಹಾಗೂ ಗೋಕರ್ಣ ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸಬೇಕೆಂದು ವಾದ ಹೂಡಿ ಯಶಸ್ವಿಯಾಗಿದ್ದು ಭಾರೀ ವಿವಾದ ಸೃಷ್ಟಿಸಿತು. ನಂತರ ಅವರ ಪರಿಕಲ್ಪನೆಯ ಹಾಡು ನರ್ತನಗಳ ರಾಮಕತೆ ಈಗ್ಗೆ ಕೆಲ ವರ್ಷಗಳಿಂದ ಜನಪ್ರಿಯವಾಗಿತ್ತು. ಊರುಕೇರಿಗಳ ಹೆಂಗಳೆಯರು ರಾಮಕಥೆ ಕೇಳಲು ತಂಡೋಪತಂಡವಾಗಿ ಹೋಗಿ ಸೀತಾಮಾತೆಯ ದುಃಖಕ್ಕೆ ತಾವೂ ಕಣ್ಣೀರಾಗಿ ಬಂದರು. 

ರಾಮಕತೆಯಲ್ಲಿ ಹಾಡುತ್ತಿದ್ದ ಕಲಾವಿದೆಯರಲ್ಲಿ ಪ್ರೇಮಲತಾ ಎಂಬ ಮಹಿಳೆ ಹಾಗೂ ಆಕೆಯ ಪತಿ ದಿವಾಕರ ಶಾಸ್ತ್ರಿ ಮಠಕ್ಕೆ ತುಂಬ ಹತ್ತಿರವಿದ್ದವರು. ಪತಿ ದಿವಾಕರ ಶಾಸ್ತ್ರಿ ಮಠದ ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಪ್ರೇಮಲತಾ ಹಾಡು, ನರ್ತನಗಳಿಂದ ಖ್ಯಾತಳಾದ ಚೆಲುವೆ. ಹಣ, ಕೀರ್ತಿ, ಅನುಗ್ರಹ ಎಲ್ಲವೂ ದಿನಬೆಳಗಾಗುವುದರಲ್ಲಿ ಒದಗಿ ಶ್ರೀರಾಮನ ವರಪ್ರಸಾದ ಆ ಕುಟುಂಬಕ್ಕೆ ದೊರೆತದ್ದು ಗುಟ್ಟೇನೂ ಆಗಿರಲಿಲ್ಲ. 

ಆದರೆ ಅದೇ ಪ್ರೇಮಲತಾ ರಾಮಕಥೆಯ ಸಲುವಾಗಿ ಪ್ರವಾಸ ಮಾಡುವಾಗ ರಾಘವೇಶ್ವರರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ದೂರು ಕೊಟ್ಟರು. ದೇವರ ಹೆಸರಲ್ಲಿ ಆಣೆಪ್ರಮಾಣ ಮಾಡಿಸಿ, ರಾಮಪ್ರಸಾದವೆಂದು ಅಮಲುಕಾರಕ ವಸ್ತು ತಿನಿಸಿ ಲೈಂಗಿಕವಾಗಿ ತನ್ನನ್ನು ಬಳಸಿಕೊಳ್ಳಲಾಯಿತು; ತಾನು ನಿರಾಕರಿಸಿದಾಗಲೂ ಕೋಪಾವಿಷ್ಟರಾಗಿ ಬೆದರಿಸಿ ತನ್ನನ್ನು ಬಳಸಿಕೊಂಡರು; ಇದನ್ನು ಸಹಿಸಲೂ ಆಗದೇ, ಅದರಿಂದ ತಪ್ಪಿಸಿಕೊಳ್ಳಲೂ ಆಗದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೊನೆಗೆ ಗಂಡನ ಬಳಿ ಹೇಳಿದಾಗ ಅವರಿಗೂ ಶಾಕ್ ಆಗಿ ನಿಮ್ಹಾನ್ಸಿನಲ್ಲಿ ಚಿಕಿತ್ಸೆ ಪಡೆದರು ಎಂದು ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದರು. 

ಆದರೆ ಆಕೆ ಅತ್ತ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ೩೬ ಪ್ಯಾರಾಗಳ ದೂರು ಬರೆಯುತ್ತಿರುವಾಗಲೇ ಇತ್ತ ಹೊನ್ನಾವರದಲ್ಲಿ ಅವರ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ಮಠದ ಮ್ಯಾನೇಜರ್ ಚಂದ್ರಶೇಖರ್ ದೂರು ದಾಖಲಿಸಿದರು. ತಕ್ಷಣ ದಂಪತಿಗಳನ್ನು ಬಂಧಿಸಲಾಯ್ತು. ಬೆಂಗಳೂರಿನಲ್ಲಿ ಅವರ ಮಗಳು ಅಂಶುಮಾಲಿನಿ ತನ್ನ ತಾಯಿಯ ಮೇಲೆ ಮಠದವರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಹಾಗೂ ಈಗ ಅವರೇ ಜೀವಭಯ ಒಡ್ಡುತ್ತಿದ್ದಾರೆಂದು ಹೇಳಿ ರಕ್ಷಣೆ ಒದಗಿಸಬೇಕೆಂದು ಕೋರಿ ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿದಳು. ಎಫ್‌ಐಆರ್ ದಾಖಲಾಯಿತು. ಬಂಧನಕ್ಕೊಳಗಾಗಿದ್ದ ದಂಪತಿಗಳಿಗೆ ೧೯ ದಿನಗಳ ಬಳಿಕ ಜಾಮೀನು ದೊರೆತು ಬಿಡುಗಡೆಯಾದರು. ಇತ್ತ ರಾಘವೇಶ್ವರರ ಮೌನವ್ರತ, ಚಾತುರ್ಮಾಸ ಎಲ್ಲ ಮುಗಿದರೂ ಬಂಧನವಿರಲಿ, ವಿಚಾರಣೆ ಮಾಡಲೂ ಕೋರ್ಟ್ ತಡೆಯಾಜ್ಞೆ ನೀಡಿತು. ಅವರ ಕುರಿತು ಅವಹೇಳನಕಾರಿಯಾಗಿ ಬರೆಯಬಾರದು ಎಂದು ಮೊದಲೇ ಮಾಧ್ಯಮಗಳಿಗೆ ನೋಟೀಸ್ ಜಾರಿ ಮಾಡಲಾಯಿತು.

ಈ ಸಿನಿಮೀಯ ಪ್ರಕರಣದಲ್ಲಿ ಮೇಲ್ನೋಟಕ್ಕೇ ಎದ್ದು ಕಾಣುವ ವಿಚಿತ್ರ ಸಂಗತಿಯೆಂದರೆ ಅತ್ಯಾಚಾರಕ್ಕೊಳಗಾದೆ ಎಂದು ದೂರು ಕೊಡಹೋದ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳಿಸಿದರೆ; ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದ್ದರೂ ವಿಚಾರಣೆ, ಹೇಳಿಕೆ ಎಲ್ಲವನ್ನೂ ಸಾಕ್ಷಾತ್ ಹೈಕೋರ್ಟ್ ತಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾನೂನಿನೆದೆರು ಯಾರು ಎಷ್ಟು ಸಮಾನರು ಎಂದು ಇನ್ನೊಮ್ಮೆ ಸಾಬೀತಾಗಿದೆ. 

ಒಬ್ಬ ಹೆಂಗಸು ದೂರು ನೀಡಿದ ಕೂಡಲೇ ಅವಳು ಅಮಾಯಕಳೆಂದು ತೀರ್ಪಿತ್ತು, ಆರೋಪಿಯೆಂದು ಹೆಸರಿಸಿದವನಿಗೆ ಶಿಕ್ಷೆ ಕೊಟ್ಟುಬಿಡಿ ಎಂದು ಯಾರೂ ಹೇಳುತ್ತಿಲ್ಲ. ಅದು ಪ್ರೇಮವೋ, ವಶೀಕರಣವೋ; ಒಪ್ಪಿಗೆಯಿದ್ದು ನಡೆಯಿತೋ, ನಡೆಯಲೇ ಇಲ್ಲವೋ; ಮಠದ ಹೆಸರು ಕೆಡಿಸಲು ನಡೆಸಿದ ಸಂಚೋ, ರಕ್ತಮಾಂಸಗಳುಳ್ಳ ನರಮನುಷ್ಯನೊಬ್ಬನ ದೇಹ ಕಾವಿ ಧರಿಸಿ ಪಟ್ಟ ಸಂಕಟವೋ; ಆ ದಂಪತಿಗಳು ಆರ್ಥಿಕ ಫಲಾನುಭವಿಗಳೋ ಅಲ್ಲವೋ - ಇವೆಲ್ಲ ತನಿಖೆ ನಡೆದು ಸತ್ಯ ಹೊರಬೀಳಲಿ. ಆದರೆ ಆಕೆ ಯಾರನ್ನು ಆಪಾದಿತ ಎಂದು ಹೇಳಿದಳೋ ಅವರನ್ನು ಸಾಕ್ಷಾತ್ ಹೈಕೋರ್ಟು, ಜನಪ್ರತಿನಿಧಿಗಳು, ಪ್ರಭಾವೀ ಜನರ ಪಡೆಯೇ ರಕ್ಷಿಸಹೊರಟಿರುವುದು ಪ್ರಜಾಪ್ರಭುತ್ವ ಹಾಗೂ ನ್ಯಾಯವ್ಯವಸ್ಥೆಯ ಅಣಕದಂತಿದೆ. ಧರ್ಮ ಪರಿಪಾಲನಾರ್ಥ ಚಾತುರ್ಮಾಸ ವ್ರತ ಹಿಡಿದ ವಿರಕ್ತ ರಾಘವೇಶ್ವರರು ವ್ರತ ಕೊನೆಗೊಳಿಸಿ ಆಶೀರ್ವಚನ ನೀಡುತ್ತ, ‘ತಮಗೂ ಯುದ್ಧ ಮಾಡಲು ಗೊತ್ತಿದೆ, ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಲು ಬರುತ್ತದೆ, ಆದರೆ ಅದು ತಮ್ಮ ಜಾಯಮಾನವಲ್ಲ ಎಂದೇ ಸುಮ್ಮನಿದ್ದೇವೆ’ ಎಂದು ಸಾಕ್ಷಿಗಳನ್ನು ಹೆದರಿಸುವ, ನಾಶ ಮಾಡುವ ಹೇಳಿಕೆ ನೀಡಿರುವುದು ಅವರ ಬಟ್ಟೆಗೂ, ಅದರ ಬಣ್ಣಕ್ಕೂ, ಪೀಠಕ್ಕೂ ಶೋಭೆ ತರುವ ಮಾತು ಅಲ್ಲವಾಗಿದೆ. 

ನಾವೀಗ ಇರುವುದು ರಾಮರಾಜ್ಯದಲ್ಲೇ, ಅನುಮಾನವೇ ಇಲ್ಲ. ಏಕೆಂದರೆ ಮಹಿಳಾ ಸ್ನೇಹಿ, ಮಹಿಳಾಪರ, ಅತ್ಯಾಚಾರ ವಿರೋಧಿ ಬಿಗಿ ಕಾನೂನುಗಳನ್ನು ಹೊಂದಿರುವ ಭಾರತದಲ್ಲಿ ಒಬ್ಬ ನಡುವಯಸ್ಸಿನ ಹೆಣ್ಣು ಮಗಳು, ಒಳ್ಳೆಯ ಹಾಡುಗಾರ್ತಿ, ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳ ತಾಯಿ, ಅನುಕೂಲಸ್ಥೆ ತನ್ನ ಮೇಲೆ ದೇವಮಾನವನೊಬ್ಬ ದೌರ್ಜನ್ಯ ನಡೆಸಿದ್ದಾನೆಂದು ಹೇಳಿದ ಕೂಡಲೇ ಜೈಲಿಗೆ ಹೋಗುವುದೆಂದರೆ? ಆಕೆ ತಾನು ಎಲ್ಲೆಲ್ಲಿ ಯಾವಾಗ ಹೇಗೆ ಅತ್ಯಾಚಾರಕ್ಕೊಳಗಾದೆ ಎಂದು ವರುಷಗಟ್ಟಲೆಯ ವಿವರಗಳನ್ನು ದೂರಿನಲ್ಲಿ ಬರೆಯತೊಡಗಿದ ಕ್ಷಣದಲ್ಲಿ ಅವಳ ಮೇಲೇ ಆಪಾದನೆ ಹೊರಿಸಿ, ಬಂಧಿಸುವುದೆಂದರೆ? ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದೇ ಇಟ್ಟುಕೊಂಡರೂ ಮೂರು ವಾರ ಕಳೆದರೂ ಬೇಲ್ ಸಿಗಲಾರದಷ್ಟು ಘನಘೋರ ತಪ್ಪೇ ಅದು? ಕಟ್ಟಕಡೆಯ ಮನುಷ್ಯನಿಗೂ ನ್ಯಾಯ ಒದಗಿಸಬೇಕಾದ ನ್ಯಾಯವ್ಯವಸ್ಥೆ ಬಲಿತವರ ಪರ ಇಷ್ಟಬಂದಂತೆ ಮಣಿಯಬಹುದಾದರೆ ಈ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದೇಕೆ ಕರೆಯಬೇಕು? 

ಸಮುದಾಯವೊಂದನ್ನು ಅದರಲ್ಲೂ ಅದರಲ್ಲಿರುವ ಹೆಣ್ಣುಮಕ್ಕಳನ್ನು ಧರ್ಮ ಹೇಗೆ ಕುರುಡರನ್ನಾಗಿಯೂ, ಕಿವುಡರನ್ನಾಗಿಯೂ, ನ್ಯಾಯಸೂಕ್ಷ್ಮ ಕಳೆದುಕೊಳ್ಳುವಂತೆಯೂ ಮಾಡಬಹುದು ಎನ್ನುವುದಕ್ಕೆ ಈ ಪ್ರಕರಣಕ್ಕಿಂತ ಬೇರೆ ಉದಾಹರಣೆ ಬೇಡ. ಯಾರು ರಾಮಕಥೆ ಕೇಳಿ ಪುನೀತರಾಗಲೆಂದು ಪ್ರೇಮಲತಾ ಹಾಡಿದ್ದಳೋ ಆ ಸಮುದಾಯದ ಸಾವಿರಾರು ಹೆಣ್ಣುಮಕ್ಕಳು ಅವಳ ಕುರಿತಾಗಲೀ, ಪಾಲಕರು ಬಂಧನದಲ್ಲಿರುವಾಗ ಅವರ ಇಬ್ಬರು ಹೆಣ್ಮಕ್ಕಳು ಅನುಭವಿಸಿದ ತಲ್ಲಣದ ಕುರಿತಾಗಲೀ ಎಳ್ಳುಕಾಳಿನಷ್ಟೂ ಚಿಂತಿಸದೆ ದೇವಮಾನವನ ಪರ ತಮ್ಮ ಹೆಣ್ತನವನ್ನು ಒತ್ತೆಯಿಟ್ಟು ರಕ್ಷಣೆಗೆ ನಿಂತಿದ್ದಾರೆ. ‘ಗುರುಗಳು ಹೆತ್ತ ತಾಯಿಗಿಂತ ಶುದ್ಧರು. ಇದು ‘ಆ’ ಮಠದವರ ಕಿತಾಪತಿ. ಅಕಸ್ಮಾತ್ ಪ್ರೇಮಲತಾ ಹೇಳಿದ್ದು ನಿಜವೇ ಆಗಿದ್ದರೆ ಮೂರು ವರ್ಷ ಅದೇಕೆ ಸುಮ್ಮನಿದ್ದಳು? ಹತ್ತುಸಲ ಒಪ್ಪಿ ಸುಮ್ಮನೆ ಮಲಗಿದ್ದವಳು ಹನ್ನೊಂದನೇ ಸಲ ಏಕೆ ದೂರು ಕೊಟ್ಟಳು?’ ಎಂದು ಪ್ರೇಮಲತಾಳದಷ್ಟೇ ಅಪರಾಧವೆಂಬಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಅಕಸ್ಮಾತ್ ಆಕೆ ಹೇಳಿದ್ದು ನಿಜವಿರಬಹುದೆ ಎಂದೂ ಅವರು ಯೋಚಿಸಲಾರರು, ಏಕೆಂದರೆ ‘ಗುರು’ಗಳ ಬಗ್ಗೆ ಹಾಗೆ ಯೋಚಿಸುವುದು ಮಹಾಪಾಪ ಎಂದು ಅವರ ತಲೆಯಲ್ಲಿ ತುಂಬಲಾಗಿದೆ! 

ಮಠದ ಜೊತೆಗಿರುವವರ ಸಂಖ್ಯೆ, ಹಣ ಮತ್ತು ಅಧಿಕಾರ ಜನರನ್ನು ಹೇಗೆ ಕುಣಿಸಿ ಮಣಿಸುವುದೆಂದರೆ ಇಂಥ ಗಂಭೀರ ಆಪಾದನೆಯ ನಂತರವೂ ಜನಪ್ರತಿನಿಧಿಗಳು, ಅಧಿಕಾರಸ್ಥರು ಪೀಠದ ಭಕ್ತರಾಗಿ ಅದರ ಬೆನ್ನಿಗಿದ್ದಾರೆ. ಸಣ್ಣಪುಟ್ಟ ಪ್ರಕರಣಗಳಲ್ಲಿ ಕಣ್ಣೀರು ಹರಿಸುವವರೆದುರು ಮೈಕು ಹಿಡಿವ ಮಾಧ್ಯಮಗಳು ಮನಸ್ಸು ಮಾಡಿದರೆ ಈ ಇಡೀ ಪ್ರಕರಣದ ಒಳಹೂರಣವನ್ನು, ಧರ್ಮದ ಸ್ಥಳಗಳ ವಿವಿಧ ಮುಖಗಳ ಅವ್ಯವಹಾರವನ್ನು ಜನಸಾಮಾನ್ಯರೆದುರು ತೆರೆದಿಡಬಹುದಿತ್ತು. ಆದರೆ ನಿತ್ಯಾನಂದ ಸ್ವಾಮಿಯ ಪ್ರಕರಣಕ್ಕೆ ಚಿತ್ರವಿಚಿತ್ರ ಶೀರ್ಷಿಕೆ ಕೊಟ್ಟು ಶೌರ್ಯ ಮೆರೆವ ಮಾಧ್ಯಮಗಳು ಈ ಕುರಿತು ಯಾವ ಒತ್ತಡವೋ, ಭಯವೋ ಅಂತೂ ತಣ್ಣಗಿವೆ. ಮಠದ ಮಾನ ಕಳೆಯಲು ನಡೆಸಿದ ಸಂಚು ಎಂದು ಪ್ರೇಮಲತಾಳ ನಿಜವಾದ ನೋವು ಅಡಗಿಹೋಗುವ ಸಂಭವವಿದೆ. 

ಆಕೆಯ ಪರ ವಾದ ಮಾಡಲು ವಕೀಲರಿಗಾಗಿ ಹುಡುಕಾಟ ನಡೆಸಬೇಕಾಯಿತು. ಈ ಪ್ರಕರಣ ಕುರಿತು ಬರೆದರೆ, ಪ್ರತಿಭಟನೆ ನಡೆಸಿದರೆ ಎಲ್ಲಿ ತಮ್ಮ ಮೇಲೆ ಬಲವಾನರು ತಿರುಗಿ ಬಿದ್ದಾರೋ ಎಂದು ಜನಸಾಮಾನ್ಯರು/ಪತ್ರಕರ್ತರು/ಬರಹಗಾರರು/ಕಾರ್ಯಕರ್ತರು ಅನಿಸಿದ್ದನ್ನು ಹೇಳಲೂ ಹಿಂಜರಿಯುತ್ತ ನುಂಗಿಕೊಳ್ಳುತ್ತಿದ್ದಾರೆ. ‘ಏನಾದರೂ ಬರೆದೀರಿ ಜೋಕೆ. ಬರೆದರೆ ನಿಮ್ಮ ಮೇಲೆ ಎರಡು ಸುಳ್ಳು ಕೇಸು ಖಂಡಿತಾ ಸೃಷ್ಟಿಯಾಗುತ್ತವೆ, ಗೋಕರ್ಣದಲ್ಲಿ ನೋಡಿ, ಏನಾಗಿದೆ ಗೊತ್ತಲ್ಲ?’ ಎಂದು ಒಂದು ಹೆಜ್ಜೆ ಇಡುವ ಮೊದಲೇ ಅಂಜಿಕೆ ಹುಟ್ಟಿಸಲಾಗುತ್ತಿದೆ. ‘ಅವರ ಕುರಿತು ಅವಹೇಳನಕಾರಿಯಾಗಿ ಯಾರೂ ಮಾತನಾಡಬಾರದು. ಕೋರ್ಟಿನ ಆಜ್ಞೆ ಇದೆ, ನ್ಯಾಯಾಂಗ ನಿಂದನೆ ಆಗುತ್ತದೆ’ ಎನ್ನುತ್ತ ಮೌನ ಹಬ್ಬಿಸಲಾಗುತ್ತಿದೆ. 

ಬಾಂಬು ಸ್ಫೋಟವಷ್ಟೇ ಭಯೋತ್ಪಾದನೆ ಅಲ್ಲ. ಆಗಲಿರುವುದನ್ನು ಊಹಿಸಿ ಏನಾದೀತೋ ಎಂಬ ಊಹೆಗೇ ಭಯಪಡುವಂತೆ ಮಾಡುವುದು - ಇದೇ ಅಲ್ಲವೇ ಭಯೋತ್ಪಾದನೆಯೆಂದರೆ? 

***

ಈ ಮತ್ತು ಇಂಥ ಪ್ರಕರಣಗಳಿಂದ ಹಲವು ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ವೇಗದ ಆಧುನಿಕ ಕಾಲದ ತಲ್ಲಣಗಳಿಗೆ, ಬದಲಾಗುತ್ತಿರುವ ಮೌಲ್ಯ ವ್ಯವಸ್ಥೆಗೆ ಇಂದಿನ ತಲೆಮಾರು ಒಡ್ಡಿಕೊಳ್ಳುವಾಗ ಧರ್ಮ ಮತ್ತು ಗುರು-ಮಠಗಳ ಪಾತ್ರ ಏನಿರಬೇಕೆನ್ನುವುದು ಪ್ರಶ್ನಾರ್ಹವಾಗಿದೆ. ವೇಗಆವೇಗಗಳ ನಡುವೆ ಬದುಕಿನ ಕನಿಷ್ಟ ಅವಶ್ಯಕತೆಯತ್ತ ಮಾತ್ರ ಗಮನ ಹರಿಸುವ ಸರಳತೆ ಕಲಿಸಲು; ತನ್ನ ತಪ್ಪುಒಪ್ಪುಗಳ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಂಡು ಆತ್ಮಶುದ್ಧಿ ಹೊಂದಲು; ಮನುಷ್ಯನ ಆಧ್ಯಾತ್ಮಿಕ ಅಗತ್ಯ ಅರಿತು ಅವನ ಚೇತನವನ್ನು ಎಲ್ಲ ಸಂಕಲೆಗಳಿಂದ ಬಿಡಿಸಲು ಧಾರ್ಮಿಕತೆ ಸಹಾಯ ಮಾಡಬೇಕು.

ಆದರೆ ಕಾಲದ ದುರಾದೃಷ್ಟವೆಂದರೆ ಧರ್ಮದ ಸ್ಥಳಗಳೇ ಅಧರ್ಮದ ಕೂಪಗಳಾಗಿ, ಎಲ್ಲ ಪಾಪಕ್ಕೂ ಪ್ರಾಯಶ್ಚಿತ್ತವಿದೆ ಎಂಬ ಅನುಕೂಲಸಿಂಧು ಆಧ್ಯಾತ್ಮ ಬೋಧಿಸುವ ದುಷ್ಟ ಮಾದರಿಗಳಾಗಿ ಜನರ ಎದುರಿಗಿವೆ. ಯಾವುದೇ ಧರ್ಮ/ಜಾತಿಯ ಪೀಠವೂ ಇದರಿಂದ ಹೊರತಲ್ಲ - ಅವು ಪರಸ್ಪರ ಮೇಲ್ಮೆಯ ಪೈಪೋಟಿಗಿಳಿದು ಸಂಸಾರಿಗಳಿಗಿಂತ ಮಿಗಿಲಾಗಿ ಲೌಕಿಕದ ಸಿರಿ ಸಂಪತ್ತು, ಕೀರ್ತಿ ಜನಪ್ರಿಯತೆಯ ಪ್ರವಾಹದಲ್ಲಿ ಮುಳುಗಿಹೋಗಿವೆ. ೮೦ರ ದಶಕದಲ್ಲಿ ಸಂಭವಿಸಿದ ಕುದುರೆಮೋತಿ ಸ್ವಾಮಿಯ ಅತ್ಯಾಚಾರ ಪ್ರಕರಣದಂತಹ ಹತ್ತಾರು ಪ್ರಕರಣ ಈಗ ಸಂಭವಿಸುತ್ತಿದ್ದರೂ ಜಾಗೃತ ಹೋರಾಟ ರೂಪುಗೊಳ್ಳದಿರುವುದು ಬದಲಾದ ಮೌಲ್ಯವ್ಯವಸ್ಥೆಗೆ ಸಾಕ್ಷಿಯಾಗಿದೆ. 

ಧರ್ಮ, ಮಠ, ಸನ್ಯಾಸ, ಕೋರ್ಟು, ಕಾನೂನು ಎಲ್ಲವೂ ಪುರುಷ ನಿರ್ಮಿತಿಗಳು. ಪಡಬಾರದ ಕಷ್ಟ ಪಡುತ್ತ, ಅಷ್ಟೇ ಕಷ್ಟ ಕೊಡುತ್ತ ತನ್ನನ್ನು ತಾನು ಶ್ರೇಷ್ಠ ಎಂದು ಬಿಂಬಿಸಿಕೊಳ್ಳಲು ಜಾತಿ/ಧರ್ಮ/ದೇಶ/ವ್ಯಕ್ತಿ ನಡೆಸುವ ಬಲವಂತದ ಒದ್ದಾಟಗಳು ಅವು. ಭವಿಷ್ಯದಲ್ಲಿ ಇವುಗಳ ಪ್ರಸ್ತುತತೆ ಏನು, ಎಷ್ಟು ಎಂದು ಇವತ್ತಿನ ತಲೆಮಾರು ಎಚ್ಚರದಿಂದ ನಿರ್ಧರಿಸಬೇಕು. ರಾಜಕಾರಣಿಗಳ ಅಧಿಕಾರದ ಆಟದಲ್ಲಿ ಶಾಮೀಲಾಗಿ ಜನರ ಕಣ್ಣಿಗೆ ಮಣ್ಣೆರಚುವ ಜಾತಿಗ್ರಸ್ತ ಕಾವಿಧಾರಿಗಳ ಅಪಾಯವನ್ನು ಸಮಾಜಕ್ಕೆ ತೆರೆದು ತೋರಿಸಬೇಕು. ಧರ್ಮಗುರುಗಳು ಕ್ರಮಿಸುತ್ತಿರುವ ದಾರಿ ಅರಿವಿನ ಕ್ಷಿತಿಜದ ಕಡೆಗೆ ಕರೆದೊಯ್ಯುವ ಸಾಧ್ಯತೆಯಿಲ್ಲದಿರುವಾಗ ಹುಸಿ ಪಾಂಡಿತ್ಯದ ಸೋಗಿನ ಅವರನ್ನು ತಂತಮ್ಮ ಮನೋಪೀಠಗಳಿಂದ ಜನ ಮೊದಲು ಕೆಳಗಿಳಿಸಬೇಕು. ಧರ್ಮದ ದಲ್ಲಾಳಿಗಳ ಒಳಸಂಚನ್ನು ಅರಿತು ತನ್ನ ದಾರಿ ತಾನೇ ಕಂಡುಕೊಳ್ಳಬೇಕಾದ ಸವಾಲು ಎದುರಿಸಬೇಕು. 

ಡಿಜಿಟಲೈಸ್ ಆಗ ಹೊರಟ ಡೆಮಾಕ್ರೆಟಿಕ್ ಭಾರತವೇ, ಯಾವುದು ಜೀವದಾಯಕವೋ ಅದು ಜೀವಸಂಕಟವೂ ಆಗಬಹುದು; ಧರ್ಮ ಇದರಿಂದ ಹೊರತಲ್ಲ ಎಂದು ನೆನಪಿಡು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಜೆಯೇ, ‘ಶ್ರೇಷ್ಠರು ಶ್ರೇಷ್ಠರಾದದ್ದು ಏಕೆಂದರೆ ಅವರೆದುರು ನೀನು ಮೊಣಕಾಲೂರಿದ್ದೀಯೆ ಅದಕ್ಕೇ’ ಎಂಬ ಮಾತನ್ನು ನೆನಪಿಡು. ಇನ್ನೂ ಅಬಲೆಯೆಂದು ಬಣ್ಣಿಸಿಕೊಳುವ ಹೆಣ್ಣೇ, ಯಾವ ಧರ್ಮ/ಕಾನೂನು/ಪೀಠವೂ ಕುಳಿತಲ್ಲಿಗೇ ಬಂದು ನಿನ್ನ ಸಹಾಯಕ್ಕೆ ನಿಲ್ಲುವುದಿಲ್ಲ, ಪರಾಂಬರಿಸು.



Thursday 11 September 2014

Doodh Sagar Falls ಮತ್ತೆ ಮೂಡಿ ಬಾ, ಮತ್ತೆ ನೀನೆನ್ನ ಚಿತ್ತ ಪೃಥಿವಿಯಲ್ಲಿ..




ಒಂದು ಕತೆ

ಕೊಂಕಣದ ಪರ್ವತಗಳ ರಾಜನಿಗೆ ಒಬ್ಬ ಸುಂದರ ಮಗಳು. ಅವಳು ಪ್ರತಿದಿನ ಪರ್ವತ ಪ್ರದೇಶದಲ್ಲಿ ಸಖಿಯರೊಡನೆ ತಿರುಗಾಡಿ, ಸ್ಫಟಿಕ ಶುಭ್ರ ನೀರಿನಲ್ಲಿ ಈಜಾಡಿ ಮಿಂದು ಬರುವವಳು. ಅಂತಪ್ಪ ರಾಜಕುಮಾರಿಯನ್ನು ಒಂದು ದಿನ ಹೆಮ್ಮರಗಳ ನಡುವೆ ಅವಿತು ನಿಂತು ಒಬ್ಬ ರಾಜಕುಮಾರ ನೋಡಲೆತ್ನಿಸಿದ. ರಾಜಕುಮಾರಿಗೆ ಹೇಗೋ ಅದರ ಸುಳಿವು ತಿಳಿಯಿತು. ತನ್ನ ಘನತೆ, ಮಾನ ಕಾಪಾಡಿಕೊಳ್ಳಲು ಸಿಹಿ ಹಾಗೂ ನೊರೆ ಹಾಲು ತುಂಬಿದ ದೊಡ್ಡ ಹೂಜಿಯನ್ನು ಕೌಚಿ ಹಾಕಿದಳು. ಹೂಜಿಯಿಂದ ಹೊರಬಿದ್ದ ಸಿಹಿ, ನೊರೆ ಹಾಲು ಜಲಪಾತದಂತೆ ಧುಮ್ಮಿಕ್ಕಿ ರಾಜಕುಮಾರಿಯ ದೇಹವನ್ನು ಮರೆಮಾಡಿತು. ಅಂದಿನಿಂದ ಅದು ಹಾಗೇ ಸುರಿಯುತ್ತ ಇದೆ.

ಘಟ್ಟಪ್ರದೇಶದ ರಾಜಕುವರಿಯ ಮಾನ ಕಾಪಾಡಲು ನಿರ್ಮಾಣವಾದ ಹಾಲಿನ ತೆರೆಯೇ ದೂಧ್ ಸಾಗರ ಜಲಪಾತ.

ಇದು ಕರ್ನಾಟಕ-ಗೋವಾ ಗಡಿಯಲ್ಲಿ ಮಹಾದಾಯಿ ನದಿಯು ನಿರ್ಮಿಸಿರುವ ಮನೋಹರ ಜಲಪಾತ ದೂಧ್ ಸಾಗರದ ಐತಿಹ್ಯ.

ಆದರೆ ಇತ್ತೀಚೆಗೆ ನಾವು ನೋಡಿಬಂದ ಈ ಜಲಪಾತದ ಬಗೆಗೆ ಇಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ನಿಮ್ಮ ಕೈಕಾಲು ಗಟ್ಟಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕೆ? ಹಾಗಾದರೆ ನೀವು ಭೇಟಿನೀಡಬೇಕಾದ ಸ್ಥಳಗಳಲ್ಲಿ ದೂಧಸಾಗರ ಜಲಪಾತ ಒಂದು. ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದ ಆರಂಭಿಕ ಶಾಟ್‌ಗಳ ರೈಲ್ವೇ ಲೇನನ್ನು ನೋಡಿ, ಹಿನ್ನೆಲೆಯಲ್ಲಿ ಭೋರ್ಗರೆವ ಜಲಪಾತದೆದುರು ಚಲಿಸುವ ರೈಲಿನ ಚಿತ್ರ ನೋಡಿ ಅಚ್ಚರಿಗೊಂಡಿದ್ದಿರೆ? ಅದು ದೂಧ್ ಸಾಗರ ಜಲಪಾತದೆದುರಿನ ರೇಲ್ವೆ ಲೇನು. ಯಾವ ಮಾತನ್ನು ಡಾ. ರಾಜಕುಮಾರ್ ಜೋಗದ ಕುರಿತು ಹೇಳಿದ್ದಾರೋ, ಅದೇ ಮಾತನ್ನು ನಿಸ್ಸಂಶಯವಾಗಿ ಹೇಳಬಹುದಾದ ಮತ್ತೊಂದು ‘ಗುಂಡಿ’ಯಿದೆಯೆ? ಇದೆ, ಅದು ದೂಧ್ ಸಾಗರ ಜಲಪಾತದ ಗುಂಡಿ.

ನಿಜ. ಉಸಿರು ಕಟ್ಟಿ ನೋಡುವಷ್ಟು ಚೆಲುವಿನ ಹಾಗೂ ವೈಭವದ ಜಲಪಾತ ದೂಧ್ ಸಾಗರ. ಸುತ್ತಮುತ್ತ ಹಸಿರು ಕಿಕ್ಕಿರಿದು ಉಕ್ಕುವ ಮಳೆಗಾಲದಲ್ಲಿ ಸುರಿವ ಮಳೆಯ ನಡುವೆ ಆ ಜಲರಾಶಿಯೆದುರು ನಿಂತಾಗ ಈ ಕ್ಷಣ ಇಲ್ಲೇ ಜೀವ ಹೋದರೂ ಪರವಾಗಿಲ್ಲ ಎನಿಸಿಹೋಗುತ್ತದೆ. ಈಗ ನಿಂತಂತೆನಿಸಿ, ಈಗ ಧೋ ಎಂದು ಸುರಿದುಬಿಡುವ ಮಳೆಯ ರುದ್ರ, ರಮಣೀಯ, ಏಕಾಂತದ ಸ್ಥಳ ಅದು. 

ಅಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಸ್ಟೇಷನ್ ಮಾಸ್ತರ್, ಒಂದಿಬ್ಬರು ಗ್ಯಾಂಗ್‌ಮನ್ ಮಾತ್ರ ಇರುತ್ತಾರೆ. ಅದು ಕರ್ನಾಟಕ-ಗೋವಾ ಗಡಿಯಾದರೂ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್ ಇಲ್ಲ; ಪೊಲೀಸ್ ಔಟ್‌ಪೋಸ್ಟ್ ಇಲ್ಲ; ವೈದ್ಯಕೀಯ ಸೌಲಭ್ಯವಿಲ್ಲ; ಹೋಟೆಲ್-ತಂಗುದಾಣವಿಲ್ಲ; ಎಲ್ಲಿಗೇ ಹೋದರೂ ತಮ್ಮ ಕನೆಕ್ಟಿವಿಟಿಯಿದೆ ಎನುವ ಏರ್‌ಟೆಲ್ ಜಾಹೀರಾತನ್ನು ಅಲ್ಲಿನ ಗುಂಡಿಯೊಳಗೇ ಹಾಕಬೇಕು, ಯಾವುದೇ ಮೊಬೈಲ್ ಸಿಗ್ನಲ್ ಇಲ್ಲ. ಹೀಗೆ ‘ಇಲ್ಲ’ಗಳ ನಡುವೆ ಪ್ರಕೃತಿಯ ಜೊತೆಯೇ ನಾವೂ ಒಂದಾಗಿ ಇರಲೇಬೇಕಾದ ಅನಿವಾರ್ಯ ಕ್ಷಣಗಳನ್ನು ಸೃಷ್ಟಿಸುವ ಜಲಪಾತ ಬಹುಕಾಲ ತನ್ನ ಸದ್ದು, ಸೌಂದರ್ಯ, ಜೀವಂತಿಕೆಯಿಂದ ನೆನಪಿನಲ್ಲುಳಿಯುತ್ತದೆ.

ಅದನ್ನು ಓದಿ, ಕೇಳಿ ಅನುಭವಿಸುವುದು ಸಾಧ್ಯವೇ ಇಲ್ಲ, ನೀವೇ ಒಮ್ಮೆ ಹೋಗಿ ನೋಡಿ ಬರಬೇಕು. ಕಂಬಳಿಹುಳ ಚಿಟ್ಟೆಯಾಗುವ; ಹೂವು ಕಾಯಿಯಾಗುವ; ಬೀಜ ಮೊಳಕೆ ಒಡೆಯುವ ಮತ್ತು ಇಂಥವೇ ಅಸಂಖ್ಯ ಪ್ರಕೃತಿ ವಿಸ್ಮಯಗಳ ಅರಿವು, ರೋಮಾಂಚನ ಕಳಕೊಂಡಿರುವ ಇಂದಿನ ನಾವು ಮತ್ತು ನಮ್ಮ ಮಕ್ಕಳು ಆದಷ್ಟು ಇಂಥ ಜಾಗಗಳಿಗೆ ಹೋಗಿ ಬರಲೇಬೇಕು..




ನಮಗೆ ಗೋವಾ ಕಡೆಯಿಂದ ದೂಧ್ ಸಾಗರ ತಲುಪುವುದು ಸುಲಭವಿತ್ತು. ಪಣಜಿ, ಮಡಗಾಂವ್ ಕಡೆಯಿಂದ ಕುಳೆಂ ರೈಲ್ವೇ ಸ್ಟೇಷನ್ನಿಗೆ ರೈಲುಗಳಿವೆ. ಆ ಸ್ಟೇಷನ್ನಿನಿಂದ ೧೧ ಕಿಮೀ ದೂರದಲ್ಲಿ ಜಲಪಾತ ನೆಲ ಮುಟ್ಟುವ ಜಾಗವಿದೆ. ಫಾಲ್ಸ್ ಅನ್ನು ದೂರದಿಂದ ನೋಡಲು ಸಾಧ್ಯವಾಗುವಂತೆ ಬೆಳಿಗ್ಗೆ, ಸಂಜೆ ರೈಲುಗಳು ಚಲಿಸುತ್ತವೆ. ಸ್ಟೇಷನ್ನಿನಲ್ಲಿಳಿದು ಜಲಪಾತದ ಗುಂಡಿಯ ಬಳಿ ನಡೆದು ಹೋಗಲೂಬಹುದು. ಅಥವಾ ‘ದೂಧ್ ಸಾಗರ್ ಟ್ಯಾಕ್ಸಿ ಸ್ಟಾಂಡಿ’ನಿಂದ ಟ್ಯಾಕ್ಸಿ ಹಿಡಿದು ಹೋಗಬಹುದು. ಆದರೆ ಇಷ್ಟು ವರ್ಷವಾದರೂ ಹೋಗದಿದ್ದವರು ಈಗ ಮಕ್ಕಳ ದೆಸೆಯಿಂದ ಬೆಳಗಾವಿ ಕಡೆಯಿಂದ ಹೋಗುವುದೆಂತ ನಿರ್ಧರಿಸಿದೆವು. 

ಕರ್ನಾಟಕದ ಕಡೆಯಿಂದ ಜಲಪಾತಕ್ಕೆ ರೈಲಿನ ದಾರಿ ಮಾತ್ರ ಇದೆ. ಅದಕ್ಕೂ ಬಹಳ ಆಯ್ಕೆಗಳಿಲ್ಲ: ಪ್ರತಿ ಭಾನುವಾರ ಬೆಳಿಗ್ಗೆ ೭.೪೦ಕ್ಕೆ ಬೆಳಗಾವಿಗೆ ಬರುವ ಪೂರ್ಣಾ ಎಕ್ಸ್‌ಪ್ರೆಸ್ (ಪುಣೆ - ಎರ್ನಾಕುಲಂ) ಒಂದೇಒಂದು ರೈಲು ಇದೆ. ಅವತ್ತು ಬೆಳಬೆಳಗ್ಗೆ ಹೋಗಿ ಉದ್ದನೆಯ ಕ್ಯೂನಲ್ಲಿ ನಿಂತು ಪುಟ್ಟಿ ಟಿಕೆಟ್ ಕೊಂಡಳು. ಉಳಿದವರು ತಿಂಡಿ, ನೀರಿನ ಬಾಟಲು ಹೊತ್ತು ಜಿಟಿಜಿಟಿ ಮಳೆಯಲ್ಲಿ ಹರಸಾಹಸಪಟ್ಟು ರೈಲಿನ ಒಳನುಸುಳಿದೆವು. ಆ ಜನಸಾಗರದಲ್ಲಿ ಮಕ್ಕಳಲ್ಲದಿದ್ದರೆ ನಾವು ಒಳಹತ್ತಿ ಸೀಟು ಹಿಡಿಯುತ್ತಿರಲಿಲ್ಲ. ರೈಲಿಡೀ ಹದಿವಯಸ್ಸಿನ ಹುಡುಗರ ತಂಡಗಳು. ಅಂತ್ಯಾಕ್ಷರಿ, ಹಾಡು, ಕೇಕೆ, ಗದ್ದಲ. ಖಾನಾಪುರ ದಾಟಿತು. ಲೋಂಡಾ ಬಂತು. ತುಂಬಿದ ಬೋಗಿಗಳೇ ಮತ್ತೆಮತ್ತೆ ತುಂಬಿಕೊಂಡು ಸೂಜಿಯೂ ಕೆಳಗೆ ಬೀಳಲಾರದಷ್ಟು ಜ್ಯಾಮ್‌ಪ್ಯಾಕ್ ಆಯಿತು. ವಡಾಪಾವ್-ಇಡ್ಲಿವಡೆ-ಗರಮಾಗರಂ ಚಾಯ್‌ವಾಲಾಗಳ ಭರಾಟೆ ವ್ಯಾಪಾರ ನಡೆದಿರುವಾಗಲೇ ರೈಲು ಕ್ಯಾಸಲ್‌ರಾಕ್‌ಗೆ ಹೊರಟಿತು. 

ಕ್ಯಾಸಲ್‌ರಾಕ್ ಬಂದದ್ದೇ ಅರ್ಧ ರೈಲು ಖಾಲಿ! ಅಲ್ಲಿಂದ ೧೪ ಕಿಮೀ ದೂರದ ಜಲಪಾತಕ್ಕೆ ಟ್ರೆಕ್ ಹೋಗುವವರು ಅಲ್ಲೇ ಇಳಿದರು. ಆ ದಾರಿ ರುದ್ರ ರಮಣೀಯವಾಗಿದ್ದು ಹಲವಾರು ಸುರಂಗಗಳ ಹಾದು, ಸೇತುವೆಗಳ ದಾಟಿ, ನಡುವೆ ಸಿಗುವ ಜಲಪಾತಗಳ ಸಂದರ್ಶಿಸುತ್ತ ಹೋಗಬಹುದು ಎಂದು ಅಲ್ಲಿಗೆ ಸತತ ಆರನೇ ವರ್ಷ ಬಂದವನೊಬ್ಬ ಹೇಳುತ್ತಾ ಕೆಳಗಿಳಿದ.


ಕ್ಯಾಸಲ್ ರಾಕ್: ಗಡಿಯ ಹೆಬ್ಬಾಗಿಲು




ಕ್ಯಾಸಲ್ ರಾಕ್ ಊರಿಗೆ ಆ ಹೆಸರು ಏಕೆ ಬಂತು ಎನ್ನುವುದು ಅಸ್ಪಷ್ಟ. ಅಲ್ಲಿ ಕೋಟೆಯಂತಿರುವ ಬಂಡೆಕಲ್ಲು ಗುಡ್ಡಗಳ ಕಾರಣದಿಂದಲೋ ಅಥವಾ ಅದು ಯಾರಾದರೂ ಅಧಿಕಾರಿಯ ಹೆಸರೋ ತಿಳಿದಿಲ್ಲ. ಗೋವಾ-ಕರ್ನಾಟಕ ಗಡಿಯಲ್ಲಿರುವ, ಸಮುದ್ರಮಟ್ಟದಿಂದ ೨೦೫೦ ಅಡಿ ಎತ್ತರದಲ್ಲಿರುವ, ೨೦೦೦ ಜನಸಂಖ್ಯೆಯ ನಮ್ಮ ಉತ್ತರಕನ್ನಡ ಜಿಲ್ಲೆಯ ಪುಟ್ಟ ಊರು ಅದು. ಮ್ಯಾಂಗನೀಸ್ ಅದಿರು ಸಮೃದ್ಧವಾಗಿ ದೊರೆಯುವ ಸ್ಥಳವಾಗಿತ್ತಂತೆ. ಈಗ ‘ದಾಂಡೇಲಿ ಹುಲಿ ರಕ್ಷಿತಾರಣ್ಯ’ ಪ್ರದೇಶದಲ್ಲಿ ಬರುವುದರಿಂದ ಗಣಿಗಾರಿಕೆ ನಿಂತಿದೆ. 

ರೈಲ್ವೇ ಸ್ಟೇಷನ್ನಿನಿಂದ ಅನತಿ ದೂರದಲ್ಲಿ ರೈಲುಹಳಿಯ ಪಕ್ಕ ಸೂರಿಲ್ಲದ ಒಂದು ದೊಡ್ಡ ಕಟ್ಟಡದ ಅವಶೇಷ ಹಾದುಹೋಯಿತು. ಅದರ ಗೋಡೆಗಳು ಪಾಚಿ, ಕಳೆ ಗಿಡಗಳ ಹೊದ್ದು ಹಸಿರು ಬೇಲಿಯಂತೆ ಕಂಗೊಳಿಸುತ್ತಿದ್ದವು. ಅದು ವಸಾಹತುಶಾಹಿ ಕಾಲದ ಪಳೆಯುಳಿಕೆಯಿರಬಹುದೇ? ಮೊದಲು ಈ ಊರು ಪೋರ್ಚುಗೀಸರ ಗೋವಾ ಹಾಗೂ ಬ್ರಿಟಿಷರ ‘ಇಂಡಿಯಾ’ ನಡುವೆ ಸಂಪರ್ಕ ಕಲ್ಪಿಸುತ್ತ, ಆ ಎರಡು ವಸಾಹತುಶಾಹಿ ಶಕ್ತಿಗಳ ಗುದ್ದಾಟದ ಜಾಗವೂ ಆಗಿತ್ತು. ಅಲ್ಲಿ ಪೋರ್ಚುಗಲ್ ಹಾಗೂ ಬ್ರಿಟಿಷ್-ಭಾರತೀಯ ಪ್ರಯಾಣಿಕರ ‘ಅಂತರ ರಾಷ್ಟ್ರೀಯ ತಪಾಸಣೆ’ ನಡೆಯುತ್ತಿತ್ತು. ಮರ್ಮಗೋವಾ ಹಾಗೂ ಕ್ಯಾಸಲ್ ರಾಕ್ ನಡುವಿನ ಮಾರ್ಗವನ್ನು ‘ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ರೈಲ್ವೆ’ ನಿಯಂತ್ರಿಸುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ೧೯೬೧ರಲ್ಲಿ ಗೋವಾ ಪೋರ್ಚುಗೀಸರಿಂದ ಭಾರತದ ವಶಕ್ಕೆ ಬಂದಮೇಲೆ ಭಾರತೀಯ ರೈಲ್ವೆಯ ದಕ್ಷಿಣಮಧ್ಯ ವಲಯಕ್ಕೆ ಸೇರಿಕೊಂಡಿತು. ೨೦೦೩ರಿಂದೀಚೆಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯಕ್ಕೆ ಸೇರಿದೆ. 

ದಾರಿ ಮೇಲೆ ಸುರಂಗ ಬಂದಕೂಡಲೇ ಹುಡುಗರ ದನಿ ಮುಗಿಲು ಮುಟ್ಟುತ್ತಿತ್ತು. ಎಲ್ಲರೂ ತಂತಮ್ಮ ಮೊಬೈಲುಗಳನ್ನು ಬಾಗಿಲು-ಕಿಟಕಿಯ ಹೊರ ತೂರಿಸಿ ವೀಡಿಯೋ, ಫೋಟೋ ತೆಗೆಯುವುದರಲ್ಲಿ ಮಗ್ನರಾಗಿ ಸೀಟುಗಳು ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಹಳಿಮೇಲೆ ನಡೆಯುವವರು ನಡುನಡುವೆ ಸಿಕ್ಕಾಗ ಒಳಗಿರುವವರ ಕಿರುಚಾಟ, ಗದ್ದಲ ಹೆಚ್ಚುತ್ತಿತ್ತು. ಅಪರಿಚಿತರೊಡನೆ ಅಪರಿಚಿತ ಸ್ಥಳದಲ್ಲಿ ತಮ್ಮ ಗದ್ದಲದಿಂದ, ಉಮೇದಿನಿಂದ ಸಂಪರ್ಕ ಸಾಧಿಸುವ ಹರೆಯದ ಕಾಲ! 

ದೂಧ್‌ಸಾಗರ ಸ್ಟೇಷನ್‌ನಲಿ ರೈಲ್ಲು ಕ್ಷಣಕಾಲ ನಿಂತಾಗ ಧಬಧಬ ಎಲ್ಲರೂ ಕೆಳಗಿಳಿದೆವು. ಇಳಿಯುವುದರಲ್ಲಿ ಮಳೆ. ಅದು ಅತಿಸಣ್ಣ ಸ್ಟೇಷನ್. ಟಿಕೆಟ್ ಕೊಡುವ ಸ್ಟೇಷನ್ನೂ ಅಲ್ಲ. ಉಳಿದ ಸ್ಟೇಷನ್ನಿನಂತೆ ಅಲ್ಲಿ ಕಾಯುತ್ತ ನಿಲ್ಲಲು ಜಾಗವಿಲ್ಲ. ಪುರಾತನ ಕಾಲದ್ದೆನಿಸುವ ಒಂದೆರೆಡು ಕೋಣೆಗಳು ಬಿಟ್ಟರೆ ಮತ್ಯಾವ ವ್ಯವಸ್ಥೆಯೂ ಅಲ್ಲಿಲ್ಲ. 

ಆಗ ಬೆಳಗಿನ ೧೧ ಗಂಟೆ. ಸಂಜೆ ಐದರೊಳಗೆ ಇಳಿದ ಜಾಗ ತಲುಪಬೇಕು. ಅಲ್ಲಿಯವರೆಗೂ ಮಳೆಯೋ, ಮಂಜೋ, ನಡೆಯುತ್ತಲಿರುವುದು ಬಿಟ್ಟರೆ ಬೇರೆ ಕೆಲಸವಿಲ್ಲ..


ಜಲಲ ಜಲಲ ಜಲಧಾರೆ..

ನಿಮ್ಮೂರಿಗಿಂತ ನಾನೇನು ಕಡಿಮೆ ಎಂದು ಮಳೆ ಹೊಯ್ದೇ ಹೊಯ್ದಿತು. ಛತ್ರಿ ಎಂಬ ನಿರುಪಯೋಗಿ ವಸ್ತು ನಮ್ಮ ತಲೆ ಮೇಲೆ ಬೀಳಲಿದ್ದ ನಾಲ್ಕೇನಾಲ್ಕು ಹನಿಗಳನ್ನು ತಡೆದು ಮಹಾನ್ ರಕ್ಷಕನಂತೆ ಬೀಗುತ್ತ ಭಾರ ಹೊರೆಯಾಯಿತು. ಆಚೀಚೆ ನೋಡುತ್ತ, ಇಡೀ ದಿನ ನೆನೆಯಬೇಕಾದ ಅರಿವಿಲ್ಲದೆ ಮೈ ಒದ್ದೆಯಾಗದಂತೆ ತಪ್ಪಿಸಿಕೊಳ್ಳುತ್ತ ನಡೆಯತೊಡಗಿದೆವು. ದೂರದಿಂದ ಭೋರ್ಗರೆವ ಸದ್ದು ಕೇಳತೊಡಗಿತು. ನಮ್ಮನ್ನು ಅಲ್ಲಿಳಿಸಿದ ರೈಲು ದೂರದಲ್ಲಿ, ಅಕಾ ಅಲ್ಲಿ, ತಿರುವಿನಲ್ಲಿ ಕ್ಷಣಕಾಲ ನಿಂತದ್ದು ಕಾಣಿಸಿತು. ನಾವೀಗ ಟ್ರ್ಯಾಕ್ ಮೇಲೆ ನಡೆದು, ಜಲಪಾತ ದಾಟಿ, ಅಲ್ಲಿಯತನಕ ಹೋಗಲಿಕ್ಕಿದೆಯೆಂದು ನೆನಪಿಸುತ್ತ ಹುಡುಗರು ಬೇಗಬೇಗ ಕಾಲುಹಾಕಿ ಎಂದು ಅವಸರಿಸಿದವು.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಗಢದ ೩೦ ಚಿಲುಮೆಗಳಿರುವ ಪ್ರದೇಶದಲ್ಲಿ ಹುಟ್ಟುವ ನದಿ ಮಹಾದಾಯಿ. ಕರ್ನಾಟಕದ ಮಹಾದಾಯಿ ಗೋವಾದ ಮಾಂಡವಿ ಆಗುತ್ತಾಳೆ. ಕರ್ನಾಟಕದ ಬಯಲಲ್ಲಿ ಹರಿದು, ಜಾಂಬೋಟಿಯ ಬೆಟ್ಟಗಳಲ್ಲೊಮ್ಮೆ ಧುಮುಕಿ, ಕೊನೆಗೆ ಕಡಲ ಗಂಡನ ಕೂಡಲು ಮಹಾದಾಯಿ ಧುಮ್ಮಿಕ್ಕಬೇಕಾದ ಎತ್ತರ ಕಡಿಮೆಯದಲ್ಲ. ಕೊಂಕಣ ತಲುಪಲು ನದಿ ೧೦೨೦ ಅಡಿ ಕೆಳಗೆ ಹಾರಬೇಕು. 

ಹೀಗೆ ನಾಲ್ಕು ಹಂತಗಳಲ್ಲಿ ಭೋರ್ಗರೆಯುತ್ತ ಧುಮ್ಮಿಕ್ಕುವ ಜಲರಾಶಿಯೇ ದೂಧ್ ಸಾಗರ ಜಲಪಾತ. 




ಭಾರತದ ಐದನೇ ಅತಿ ಎತ್ತರದ ಜಲಪಾತ ಅದು. ವರಾಹಿ ನದಿಯ ಕುಂಚಿಕಲ್ ಜಲಪಾತ (ಶಿವಮೊಗ್ಗ ಜಿಲ್ಲೆ - ೧೪೯೩ ಅಡಿ) ಭಾರತದಲ್ಲೇ ಅತಿ ಎತ್ತರದ ಜಲಪಾತವಾಗಿದ್ದರೆ ೧೦೨೦ ಅಡಿಯ ದೂಧ್ ಸಾಗರ ಐದನೇ ಅತಿ ಎತ್ತರದ್ದು. ೮೩೦ ಅಡಿಯ ನಮ್ಮ ಜೋಗ ೧೧ನೇ ಸ್ಥಾನದಲ್ಲಿದೆ. 

ಐದನೇ ಅತಿ ಎತ್ತರದ.. .. ಮಾಹಿತಿಯೇನೋ ತಿಳಿದಿತ್ತು. ಆದರೆ ಅದರ ಎದುರು ಹೋಗಿ ನಿಂತಾಗ ಮುಖದ ಮೇಲೆರಚುವ ತುಂತುರು ಹನಿಗೆ, ಕಣಿವೆಯನ್ನೆಲ್ಲ ತುಂಬಿ ಆವರಿಸಿದ ಮಂಜಿಗೆ, ಮೈ ಕೊರೆವ ಚಳಿಗೆ ಇಷ್ಟು ದೊಡ್ಡದು ಇನ್ಯಾವುದೂ ಇಲ್ಲ ಎನಿಸಿಹೋಯಿತು. ಒಂದಷ್ಟು ಹೊತ್ತು ಸುಮ್ಮನೇ ಈ ಜಲಪಾತದೆದುರು ನಿಂತೆವು. ಜೋಗ, ಮಾಗೋಡು, ಉಂಚಳ್ಳಿ, ಗಗನಚುಕ್ಕಿ ಭರಚುಕ್ಕಿ ಹೀಗೇ ನಾವು ನೋಡಿದ ಅನೇಕ ಜಲಪಾತಗಳು ಕಣ್ಣೆದುರು ಸುಳಿದುಹೋದವು.

ಅವೆಲ್ಲಕ್ಕಿಂತ ಇದು ಭಿನ್ನ ಎನಿಸುತ್ತಿದೆ ಏಕೆ? ಬಹುಶಃ ನೀರಿಗಿರುವ ಸಾಮೀಪ್ಯವೇ ಅಲ್ಲಿನ ಅನನ್ಯತೆ. ಭೋರ್ಗರೆದು ಕಿವಿಗಡಚಿಕ್ಕುವ ಜಲರಾಶಿಯೆದುರು ರೊಂಯ್ಞನೆ ಗಾಳಿಯೂ ಬೀಸಲು ಶುರು ಮಾಡಿದರೆ ಹನಿಹನಿಯಾಗಿ ನೀರು ಹೇಗೆ ನಿಮ್ಮ ಮೇಲೆರಗುತ್ತದೆ ಎಂದರೆ ಮಳೆಯಲ್ಲಿ ನೀವು ತೋಯ್ದಿರೋ, ನೀವೇ ಮೋಡವಾಗಿ ಮಳೆಯಾದಿರೋ ತಿಳಿಯುವುದಿಲ್ಲ. 




ಮಳೆ ಜೋರಾದಂತೆ ಜನರ ಹರಿವೂ ಜೋರಾಯಿತು. ನಿಲ್ಲುವುದು ಕಷ್ಟವಾಯಿತು. ಹಾಗೇ ರೈಲುರಸ್ತೆಯ ಮೇಲೆ ನಡೆಯುತ್ತ ಹೋದೆವು. ರೈಲು ದಾರಿಯ ಆಚೀಚೆ ಹೆಕ್ಕಬೇಕೆನಿಸುವಷ್ಟು ಕಲ್ಲಿದ್ದಿಲ ಚೂರು ಬಿದ್ದಿತ್ತು. ಕರ್ನಾಟಕದ ಒಳನಾಡಿನ ಕಬ್ಬಿಣದ ಅದಿರು ಗೋವಾ ಬಂದರುಗಳಿಗೆ ಹಾಗೂ ಅಲ್ಲಿಂದ ರಸಗೊಬ್ಬರ, ಕಲ್ಲಿದ್ದಿಲುಗಳನ್ನು ಗೂಡ್ಸ್ ತರುತ್ತಿದ್ದು ಅದು ಹಳಿ ಆಚೀಚೆ ಕಾಣಸಿಗುತ್ತದೆ ಎಂದು ಗ್ಯಾಂಗ್‌ಮನ್ ಹೇಳಿದರು. ಮುಂದೆ ಮೂರು ವ್ಯೂ ಪಾಯಿಂಟುಗಳು ಸಿಕ್ಕವು. ಅದ್ಭುತ ದೃಶ್ಯಗಳು. ಎಷ್ಟೆಂದರೆ ಯಾವ ಕೋನದಿಂದ ಹೇಗೆ ತೆಗೆದರೂ ಅದು ಇರುವಷ್ಟು ಚೆನ್ನಾಗಿ ಫೋಟೋ ಬಂದಿಲ್ಲವೆಂಬ ಅತೃಪ್ತಿ. 

ಇಡೀ ನಡುಹಗಲು ಹೆಗಲ ಮೇಲೆ ಭಾರಹೊತ್ತು ನಡೆದೆವು. ಮಳೆಯ ನಡುವೆ ಕ್ಯಾಮೆರಾ ತೆಗೆಯುವುದು, ಒಳಗಿಡುವುದು ಮಾಡುತ್ತ ವಸ್ತುಗಳ ಬೆಲೆ ನಮ್ಮ ಜೀವಕ್ಕಿಂತ ಹೆಚ್ಚಿನದೇ ಎಂದು ಕಸಿವಿಸಿಗೊಂಡೆವು. ಅಲ್ಲಿ ತಿನ್ನಲು ಕುಡಿಯಲು ಏನೇನೂ ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನು ಹಲವರಿಂದ ಕೇಳಿದ್ದೆವು. ಏನೂ ಸಿಗುವುದಿಲ್ಲ ಎಂದರೆ ಸಾಕು, ಹಸಿವೆ ಜೋರಾಗುತ್ತದೆ. ಜಿಮ್, ಕ್ಯಾಲೊರಿ, ತೂಕ ಎಲ್ಲ ಮರೆತ ನಾಲಿಗೆ ಪುರುಸೊತ್ತಿಲ್ಲದೆ ನುಲಿಯಿತು. ಉಪ್ಪಿಟ್ಟು, ಇಡ್ಲಿ ವಡೆ ಅಲ್ಲದೆ ಡಬ್ಬಿ ತುಂಬಿದ್ದ ಚಕ್ಕುಲಿ, ಹಣ್ಣು, ಬಿಸ್ಕಿಟ್, ಕುರುಕಲು, ಕೇಕ್ ಎಲ್ಲವನ್ನೂ ಮೆಂದೆವು. ಫೋಟೋ ತೆಗೆತೆಗೆದು ಮೆಮೊರಿ ಖಾಲಿಯಾಯಿತು. ಮೊಬೈಲುಗಳ ಚಾರ್ಜ್ ಢಮಾರ್ ಎಂದಿತು. ಕ್ಯಾಸಲ್ ರಾಕಿನಲ್ಲಿ ನಮ್ಮೊಡನೆ ರೈಲು ಹತ್ತಿದ್ದ ಟೀ ಮಾರುವವನ ಬಳಿ ಲೆಕ್ಕವಿಲ್ಲದಷ್ಟು ಸಲ ಟೀ ಕುಡಿದಾಯಿತು.

***

ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ದೂಧ್‌ಸಾಗರವನ್ನು ಮತ್ತಷ್ಟು ಪ್ರಸಿದ್ಧ ಮಾಡಿದೆ. ಅದರ ಆರಂಭದ ಸೀಕ್ವೆನ್ಸ್‌ಗಳನ್ನು ಇಲ್ಲಿಯೇ ಚಿತ್ರೀಕರಿಸಿದ್ದಾರೆ. ಜಲಪಾತವೇನೋ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತ ಸಾವಿರಾರು ಪ್ರವಾಸಿಗಳನ್ನು ಸೆಳೆಯುತ್ತಿದೆ. ಆದರೆ ಅಲ್ಲಿ ಸೆಕ್ಯುರಿಟಿ ಚೆಕ್‌ಪೋಸ್ಟ್ ಒಂದು ಇರಲೇಬೇಕಾದ ಅವಶ್ಯಕತೆಯಿದೆ. ಪ್ರವಾಸಿಗಳಾಗಿ ಬರುವ ತರುಣ ಪೀಳಿಗೆ ಕೈಲಿ ಬಾಟಲಿ ಹಿಡಿಯದೇ ಬರಬಾರದು ಎಂಬ ಅಲಿಖಿತ ನಿಯಮ ಅನುಸರಿಸುತ್ತಿದೆ. ಸುರಿವ ಮಳೆಯಲ್ಲೇ ಹಂತಹಂತವಾಗಿ ಹೆಂಡ ಸುರುವಿಕೊಳ್ಳುತ್ತ ಅಲ್ಲಲ್ಲಿ ಗುಂಪಾಗಿ ಕೂತಿರುವವರು; ಅವರ ವಿಕಾರ ಕಿರುಚಾಟ, ನಡತೆಗಳು ಕಣ್ಣಿಗೆ ರಾಚುತ್ತವೆ. ಎದುರೇ ರೈಲು ಬಂದರೂ, ಅದು ಹಾರ್ನ್ ಮಾಡುತ್ತಿದ್ದರೂ ತೂರಾಡುತ್ತ ಫೋಟೋ ತೆಗೆಯುತ್ತಾರೆ! ಜೊತೆಗಾರರನ್ನು ತುದಿಯಿಂದ ನದಿಗೆ ನೂಕಿ ಬಿಡುವ ಸಾಹಸ ಪ್ರದರ್ಶಿಸುತ್ತಾರೆ. ಕಿರುಚುತ್ತಾ ಗದ್ದಲ ಎಬ್ಬಿಸುವ ಅವರ ಖುಷಿ ಸಾಂಕ್ರಾಮಿಕವೆನಿಸದೇ ಅರ್ಥಹೀನ ಸದ್ದುಗಳಿಂದ ಕಿರಿಕಿರಿಯಾಗುತ್ತದೆ. ಅವರಿಗೆ ಆನಂದ ನೀಡುವುದಾದರೂ ಯಾವುದು? ನಮಗೆ ಅರ್ಥವಾಗದ ಭಾವಲೋಕದ ವಿಸ್ತಾರ ಎಷ್ಟೆಲ್ಲ ಇದೆಯಲ್ಲ ಎಂದು ಅಂಥವರನ್ನು ನೋಡಿದ ಘಳಿಗೆಗಳಲ್ಲಿ ಅನಿಸಿಬಿಡುತ್ತದೆ.

ಬರೀ ಎಳೆಯ ಹುಡುಗರಷ್ಟೇ ಹೀಗೆ ಮಾಡುತ್ತಾರೆ ಎಂದರೆ ತಪ್ಪು. ಕುಟುಂಬ ಬಿಟ್ಟು ಗೆಳೆಯರ ಗುಂಪುಗಳಲ್ಲಿದ್ದ ನಡುವಯಸ್ಕರೂ ತಮ್ಮ ತಾರುಣ್ಯದ ದಿನಗಳು ಮರಳಿ ಬಂದಂತೆ ವರ್ತಿಸುತ್ತಿದ್ದರು. ಕುಡಿದಿದ್ದು ಹೆಚ್ಚಾಗಿ, ಕೂರಲಾರದೇ, ನಿಲ್ಲಲಾರದೇ, ಟ್ರ್ಯಾಕ್ ಮೇಲೇ ಧೊಪ್ಪನೆ ಕಲ್ಲುಬಂಡೆಗಳಂತೆ ಬಿದ್ದುಕೊಂಡವರೂ ಹಲವರಿದ್ದರು. ಇಂಥ ಚಟುವಟಿಕೆ ನಿಯಂತ್ರಿಸಲು ಒಂದು ಸುರಕ್ಷಾ ಕ್ರಮ ತಕ್ಷಣದ ಆದ್ಯತೆಯಾಗಿದೆ. 

ರಮ್ಯ ಪ್ರಕೃತಿಯ ರೋಮಾಂಚನ ಸವಿದು ಅಲ್ಲಿ ನಮ್ಮ ಹೊಲಸನ್ನು ಉಳಿಸಿ ಬರುವ ದೌರ್ಜನ್ಯಕ್ಕೆ ಕೊನೆಯೇ ಇಲ್ಲ. ಅಲ್ಲೀಗ ಹಳಿಯ ಎರಡೂ ಕಡೆ, ಜಲಪಾತದ ಆಚೀಚೆ ಟನ್ನುಗಟ್ಟಲೆ ಕಸ, ಪ್ಲಾಸ್ಟಿಕ್ ರಾಶಿ, ಬಾಟಲಿಗಳು ಬಿದ್ದಿವೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಜಲಪಾತದಷ್ಟೇ ದೊಡ್ಡ ಕಸದ ರಾಶಿ ಕಂಡರೆ ಏನೂ ಆಶ್ಚರ್ಯವಿಲ್ಲ. ಈಗಾಗಲೇ ಹಿಮಾಲಯ, ಸ್ಪೇಸ್ ಸೇರಿದಂತೆ ಎಲ್ಲ ಜಾಗಗಳೂ ಮನುಷ್ಯನ ಕಸದ ಬುಟ್ಟಿಗಳಾಗಿ ಪರಿವರ್ತಿತವಾಗಿರುವಾಗ ಅಲ್ಲಿ ರೈಲ್ವೇ-ಅರಣ್ಯ ಇಲಾಖೆಯವರಿಂದ ಜಂಟಿ ಕಸ ವಿಲೇವಾರಿ ಯೋಜನೆ ಜಾರಿಯಾಗುವುದು ತುರ್ತು ಅವಶ್ಯಕತೆಯಾಗಿದೆ. 




ಬ್ರಗಾಂಝಾ ಘಾಟ್

ನಾವೂ ಕುಡಿದವರಂತೇ ಕಾಲೆಳೆಯುತ್ತ ವಾಪಸು ಬರತೊಡಗಿದೆವು. ಸೃಷ್ಟಿ, ದೇವರು, ಧರ್ಮ, ಧಾರ್ಮಿಕತೆ ಎಂದೆಲ್ಲ ಗಂಭೀರ ಚರ್ಚೆ ಮಕ್ಕಳ ಗುಂಪಿನಲ್ಲಿ ಶುರುವಾಯಿತು. ನಾವೂ ತಾಳ್ಮೆಯಿಂದ ಅವರ ಪ್ರಶ್ನೆಗಳಿಗೆ ಕೇಳುಗಿವಿಯಾದೆವು. ಉಳಿದಂತೆ ಸಿಗದ ಪುರುಸೊತ್ತು ಪ್ರವಾಸದ ಸಮಯದಲ್ಲಿ ಅನಾಯಾಸವಾಗಿ ದಕ್ಕುತ್ತದೆ. ಅದಕ್ಕೇ ಅಲ್ಲವೇ ಪ್ರವಾಸವೆಂದರೆ ಎಲ್ಲರೂ ತುದಿಕಾಲಲ್ಲಿ ಸಿದ್ಧರಾಗುವುದು? 

ಅಂತೂ ಇಳಿದ ಜಾಗಕ್ಕೇ ಮರಳಿ ಚಾ ಮಾರುವವನ ಬಳಿ ಅದೆಷ್ಟನೆಯದೋ ಬಾರಿ ಚಾ ಕೊಂಡು ಸುರುವಿಕೊಂಡೆವು. ಏನು ಮಾಡಿದರೂ ಒದ್ದೆಬಟ್ಟೆ ಹುಟ್ಟಿಸಿದ ನಡುಕ ಕಡಿಮೆಯಾಗಲಿಲ್ಲ. ಅವನ ಬಳಿ, ಸ್ಟೇಷನ್ ಮಾಸ್ತರ ಬಳಿ, ಇಬ್ಬರು ಗ್ಯಾಂಗ್‌ಮನ್ ಬಳಿ ಸಮಯ ಕೊಲ್ಲಲು  ಮರಾಠಿಗನ್ನಡದಲ್ಲಿ ಮಾತನಾಡುತ್ತ ಕೆಲ ಮಾಹಿತಿ ಸಂಗ್ರಹಿಸಿದೆವು.

ನಮ್ಮೆದುರು ಗೋವಾ ಮತ್ತು ಕರ್ನಾಟಕ ಗಡಿಭಾಗದ ಪಶ್ಚಿಮಘಟ್ಟ ಪ್ರದೇಶ ಬ್ರಗಾಂಝಾ ಘಾಟ್ ಹರಡಿಕೊಂಡಿತ್ತು. ಉತ್ತರಕನ್ನಡ, ಬೆಳಗಾವಿ ಹಾಗೂ ಗೋವಾದ ಗಡಿಜಿಲ್ಲೆಗಳು ಈ ಘಟ್ಟ ಪ್ರದೇಶದಲ್ಲಿವೆ. ಇದು ಪಶ್ಚಿಮಘಟ್ಟ ಪರಂಪರಾ ತಾಣದ ಭಾಗ. ಇದರ ಮೇಲ್ಭಾಗದಲ್ಲಿ ದಾಂಡೇಲಿ ಹುಲಿ ರಕ್ಷಿತಾರಣ್ಯವಿದ್ದರೆ ಘಟ್ಟದ ಕೆಳಭಾಗದಲ್ಲಿ ಭಗವಾನ್ ಮಹಾವೀರ ವನ್ಯಧಾಮವಿದೆ.

ಕ್ಯಾಸಲ್‌ರಾಕ್‌ನಿಂದ ಕುಳೆಂ ತನಕವಿರುವ ೨೬ ಕಿಮೀ ಉದ್ದದ ಬ್ರಗಾಂಝಾ ಘಾಟ್ ಸೆಕ್ಷನ್ ದಾರಿ ಭಾರತೀಯ ರೈಲ್ವೇಯ ದುರ್ಗಮ ಹಾದಿಗಳಲ್ಲೊಂದು. ಅದು ರೈಲ್ವೇಗೊಂದು ಸವಾಲೇ ಸರಿ. ಆದರೂ ವಿಶೇಷ ಸಾಮರ್ಥ್ಯದ ೫ ಡೀಸೆಲ್ ಲೋಕೋಮೋಟಿವ್ ಎಂಜಿನ್ ಅಳವಡಿಸಿ ಹತ್ತಾರು ಸಾವಿರ ಟನ್ ಲೋಡ್ ಹೊತ್ತ ಹಲವು ಗೂಡ್ಸ್ ಟ್ರೇನುಗಳು ಅಲ್ಲಿ ದಿನನಿತ್ಯ ತಿರುಗಾಡುತ್ತವೆ. ನಾವಿದ್ದ ಹಾಗೆಯೇ ಮೂರು ಗೂಡ್ಸ್ ಟ್ರೇನುಗಳು ಹಾದುಹೋದವು. 

ಕೂರಲೇಬೇಕು ಎಂದು ಕಾಲು ಹಠ ಹಿಡಿಯುತ್ತಿತ್ತು. ಒದ್ದೆ ನೆಲದ ಮೇಲೆ ಒದ್ದೆ ಕುಂಡೆಯೂರಿ ಪಟ್ಟಭದ್ರರಾಗಿ ಕುಳಿತು ನೆಲವನ್ನು ಒಣಗಿಸತೊಡಗಿದೆವು. ಆದರೆ ಮಳೆ ಮತ್ತೆ ಹೊಯ್ಯತೊಡಗಿತು. ಹಿಡಿದ ಛತ್ರಿಯ ತುದಿಯಿಂದ, ಬಂಡೆ ಮೇಲಿಂದ, ಎಲ್ಲೆಲ್ಲಿ ನೋಡಿದರೂ ಇಳಿವ ಅಸಂಖ್ಯ ಜಲ ‘ಪಾತ’ಗಳು. ಅದರ ನಡುವೆಯೇ ನಗುವ ನೇರಿಳೆ ಬಣ್ಣದ ಪುಟ್ಟಪುಟ್ಟ ಸೋಣೆ ಹೂವು. ಮಬ್ಬು ಬೆಳಕಿಗೆ ಹೂವಿನ ಚಂದದ ಬಣ್ಣ ಸೆರೆ ಹಿಡಿಯಲು ಕ್ಯಾಮೆರಾ ವಿಫಲವಾಯಿತು. ಒಮ್ಮೆ ಮುಟ್ಟೋಣವೆಂದರೆ ಸೆಟೆದ ಕೈಬೆರಳು ಸ್ಪರ್ಶ ಜ್ಞಾನವನ್ನೇ ಕಳಕೊಂಡಿತ್ತು! 

ಅಸಾಮಾನ್ಯ ಪರಿಸರದಲ್ಲಿ, ಅದರಲ್ಲೂ ನೀರಿನ ಸಂಗದಲ್ಲಿ ಮನಸ್ಸು ಏಕೆಂದೇ ತಿಳಿಯದೇ ಮೃದುವಾಗುವುದೇ? ಬಯಲಾಗುವುದೇ? ಇರಬೇಕು. ಇಲ್ಲಿ ಧುಮ್ಮಿಕ್ಕುವ ಜಲಪಾತ, ಅಲ್ಲಿ ಬರದಲ್ಲಿ ಬೇಯುವ ಜೀವ. ಅನಾಯಾಸವಾಗಿ ಮಳೆಯೊಳಗೆ ಸೇರಿಕೊಂಡ ಒಂದು ಉಪ್ಪುಹನಿ. ‘ಎವೆರಿ ಟಿಯರ್ ಡ್ರಾಪ್ ಈಸ್ ಎ ವಾಟರ್ ಫಾಲ್.. ..’ ಹಾಡು ತೇಲಿಬಂತು.

ಕಣ್ಣು ಕಾಣುವಷ್ಟು ದೂರದವರೆಗೆ ಹಸಿರು ಹೊದ್ದ ಬೆಟ್ಟಸಾಲು. ಶಿಖರಗಳ ಮೇಲೆ ಯಾವ ಅವಸರವೂ ಇಲ್ಲದೇ ನಿಧಾನವಾಗಿ, ಘನಗಾಂಭೀರ್ಯದಿಂದೆಂಬಂತೆ ಚಲಿಸುವ ಮೋಡಗಳು. ಮೋಡದ ತೆರೆ ಸರಿದ ಕೂಡಲೇ ಈಗ ಕಂಡು ಈಗ ಮರೆಯಾಗಿಬಿಡುವ ದಿಗಂತದಲ್ಲಿರುವ ಶಿಖರಗಳು. ಅದರ ನಡುವೆಯೇ ಅಕೋ ದೂರದಲ್ಲಿ ಪುಟ್ಟ ಕೆಂಪು ದೀಪ. ವಾಪಸು ನಮ್ಮನ್ನು ಕೊಂಡೊಯ್ಯಲು ಬರಲಿರುವ ರೈಲಿಗಾಗಿ ದೂರದ ಕೆಂಪು ಮಿಣುಕು ದೀಪವನ್ನೇ ನೋಡುತ್ತ ನಿಂತೆವು.. 

ಪಣಜಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಅಂತೂ ಬಂತು. ರಿಸರ್ವ್ ಬೋಗಿ ನಮ್ಮೆದುರು ನಿಂತಿತು. ಒಳನುಗ್ಗಿದೆವು. ಅಲ್ಲಿದ್ದವರಿಗೆ ಇದು ಅನಿರೀಕ್ಷಿತವಲ್ಲ, ಆದರೆ ನಮಗೆ ಮುಜುಗರ. ಮನೆಗೆ ಹೊರಟ ಸೈನ್ಯದವರಿದ್ದರು. ದೆಹಲಿಗೆ ಪ್ರವಾಸ ಹೊರಟ ಗೋವಾದ ಫಾದರ್ ಕುಟುಂಬ ಜಾಗ ಕೊಟ್ಟಿತು. ಬೆಳಗಾವಿ ಮುಟ್ಟುವ ತನಕ ಬಾಯ್ತುಂಬ ಮಾತು ವಿನಿಮಯವಾಯ್ತು. 







ಸುಲಭವೇ ನದಿ ನೀರು ಹಂಚಿಕೊಳ್ಳುವುದು?

ಅವರು ಕೊಂಕಣ ರೈಲ್ವೆ ವಿರೋಧಿ ಚಳುವಳಿಯಲ್ಲಿ, ಮಾಂಡವಿ ಹೋರಾಟದಲ್ಲಿ ಪಾಲ್ಗೊಂಡಿದ್ದವರು. ಅವರೊಡನೆ ಮಾತಾಡುವಾಗ ಮಹಾದಾಯಿಯ ಕಳಸಾ-ಬಂಡೂರಿ ವಿವಾದದ ಒಳಸುಳಿಗಳು ಕೊಂಚಮಟ್ಟಿಗೆ ಅರ್ಥವಾಯಿತು.ವರ ರಾಜ್ಯ ಕಡಲ ತಡಿಯ ಪುಟ್ಟ ರಾಜ್ಯ. ಅದಕ್ಕೆ ಒಳನಾಡು ಕಡಿಮೆ. ಕಡಲ ತಡಿ ಸೇರಲು ಬರುವ ನದಿಗಳನ್ನೇ ಶುದ್ಧ, ಕುಡಿಯುವ ನೀರಿಗೆ ನೆಚ್ಚಿದೆ. ಅವು ಬಹುಪಾಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಬೆಟ್ಟಪ್ರದೇಶದಿಂದಲೇ ಹರಿದು ಬರುತ್ತವೆ. ಅದರಲ್ಲೂ ದೂಧ್ ಸಾಗರ ಜಲಪಾತ ನಿರ್ಮಿಸಿರುವ ಮಹಾದಾಯಿ ನದಿ (ಮಾಂಡವಿ) ತಮ್ಮ ಜೀವನದಿಯೇ ಎಂದರು. ಮಾಂಡವಿ ಹಾಗೂ ಜುವಾರಿ ನದಿಗಳೆರೆಡೂ ಒಟ್ಟಾಗಿ ಸಮುದ್ರ ಸೇರುವ ಜಾಗ ಮರ್ಮಗೋವಾ ಬಂದರನ್ನು ಸೃಷ್ಟಿಸಿವೆ. 

ಆದರೆ ಅದೇ ಮಾಂಡವಿ ಅಥವಾ ಮಹಾದಾಯಿ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೂ ಜೀವನದಿಯಾಗಬಲ್ಲ ಶಕ್ತಿಯಿರುವಂಥದು ಎಂದು ನಾವೂ ಹೇಳಿದೆವು. ಕರ್ನಾಟಕದಲ್ಲಿ ೨೯ ಕಿಮೀ ಹಾಗೂ ಗೋವಾ ರಾಜ್ಯದಲ್ಲಿ ೫೨ ಕಿಮೀ ಕ್ರಮಿಸಿದರೂ ಅದರ ಮುಖ್ಯ ಜಲಾನಯನ ಪ್ರದೇಶ ಕರ್ನಾಟಕ ಎಂಬ ಇಲ್ಲಿಯ ವಾದವನ್ನೂ ಹೇಳಿದೆವು. ಆದರೆ ಕಳಸಾ-ಬಂಡೂರಿ ನಾಲೆ ಮುಖಾಂತರ ೨೦೦ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಯನ್ನು ಗೋವಾ ವಿರೋಧಿಸುತ್ತದೆ. ಈ ನದಿ ಗೋವಾದ ಪೂರ್ವ ಪರ್ವತ ಪ್ರದೇಶಗಳ ಕಬ್ಬಿಣದ ಅದಿರನ್ನು ಸಮುದ್ರದೆಡೆಗೆ ಸಾಗಿಸುವ ಒಳನಾಡು ಜಲ ಸಾರಿಗೆಯ ಪ್ರಮುಖ ಮಾರ್ಗವಾಗಿ, ಮೀನುಗಾರಿಕೆಗೆ, ಪ್ರವಾಸೀ ದೋಣಿಗಳಿಗಾಗಿ ಬಹುಮುಖ್ಯವಾಗಿದ್ದು ಮಾಂಡವಿಯಲ್ಲಿ ನೀರು ಕಡಿಮೆಯಾದರೆ ಇವೆಲ್ಲಕ್ಕೂ ಕಷ್ಟ; ಮಾಂಡವಿ ಟ್ರಿಬ್ಯೂನಲ್ ಎರಡು ರಾಜ್ಯಗಳ ನಡುವಿನ ನೀರು ಹಂಚಿಕೆಯನ್ನು ೩೦-೭೦ ಅನುಪಾತದಲ್ಲಿ ನಡೆಸುತ್ತಿರುವಾಗ ಕರ್ನಾಟಕ ಸುಪ್ರೀಂಕೋರ್ಟಿನ ಸ್ಟೇ ಇದ್ದರೂ ನಾಲಾ ಯೋಜನೆಯನ್ನು ಗುಟ್ಟಾಗಿ ನಡೆಸಿದೆ ಎನ್ನುವುದು ಗೋವನ್ನರ ಆಪಾದನೆ ಎಂದು ಹೇಳಿದರು.

ಸುಲಭವೇ ನದಿ ನೀರು ಹಂಚಿಕೊಳ್ಳುವುದು? ಸಿದ್ಧಾರ್ಥ ಬುದ್ಧನಾದ ತಲ್ಲಣ ಅದು. 

ಅದೇವೇಳೆಗೆ ಟಿಸಿ ಬಂದೇ ಬಂದರು. ದೂಧ್ ಸಾಗರ ಸ್ಟೇಷನ್ನಿನಲ್ಲಿ ಟಿಕೆಟ್ ತೆಗೆಯಬಹುದೆಂದು ಸಿಂಗಲ್ ಟಿಕೆಟ್ ಮೇಲೆ ಬಂದ ಗುಂಪಿನವರು ಸಾವಿರಾರು ರೂಪಾಯಿ ದಂಡ ತೆತ್ತರು. ೩೦-೪೦ ಜನರಿದ್ದ ಆ ಗುಂಪು ತಮ್ಮ ಬಳಿ ದುಡ್ಡಿಲ್ಲ, ‘ರಿಯಾಯ್ತಿ’ ತೋರಿಸಿ ಎಂದು ಅಂಗಲಾಚುತ್ತಿತ್ತು. ಅವರಿಗೆ ಹೇಗೆ ರಿಯಾಯ್ತಿ ತೋರಿಸಿಯಾರು ಎಂದು ಅಚ್ಚರಿಗೊಳ್ಳುವಾಗ ಟಿಸಿ ಅವರನ್ನು ಆಚೆ ಕರೆದೊಯ್ದರು. ಜನರಲ್ ಬೋಗಿಗೆ ಟಿಕೆಟ್ ಮಾಡಿಸಿ ರಿಸರ್ವ್ ಬೋಗಿ ಹತ್ತಿದ್ದಕ್ಕೆ ನಾವೂ ದಂಡ ಕಟ್ಟಬೇಕಾಗಿತ್ತು. ನಮಗೂ ಒಂದಷ್ಟು ಮೊತ್ತ ಕೇಳಿ ಪಡೆದು ಹೊರಟಾಗ ರಸೀದಿ ಕೇಳಿದೆವು. ರಿಯಾಯ್ತಿ ಬೇಡವೆಂದೂ, ಪೂರಾ ದಂಡದ ಹಣ ತೆರುವೆವೆಂದೂ ಹೇಳಿದಾಗ ಆತನ ವಾರೆನೋಟದಲ್ಲಿ ವ್ಯಂಗ್ಯದ ಒಂದು ಎಳೆ ಸುಳಿದುಹೋಯಿತು. 

ಶರಣು..

ಬೆಳಿಗ್ಗೆ ಬೆಳಗಾವಿಯ ಜನದಟ್ಟಣೆಯ ನಡುವೆ ಅಂತೂ ನಮ್ಮ ದೇಹವನ್ನು ರೈಲಿನೊಳಗೆ ತೂರಿಸುವ ತರಾತುರಿಯಲ್ಲಿ ಬಲಗಾಲಿನ ಚಪ್ಪಲಿ ಟ್ರ್ಯಾಕ್ ನಡುವೆ ಉದುರಿಹೋಯಿತು. ರೈಲು ಹೊರಟಿತು. ನಡುವೆ ಸಿಗುವ ಯಾವ ಸ್ಟೇಷನ್ನಿನಲ್ಲೂ ಚಪ್ಪಲಿ ಅಂಗಡಿ ಇಲ್ಲ. ಬರಿಗಾಲಲ್ಲಿ ನಡೆಯುವ ಅಭ್ಯಾಸ ಹೆಚ್ಚುಕಮ್ಮಿ ತಪ್ಪಿಯೇ ಹೋಗಿದೆ. ಹೇಗೆ ನಡೆಯುವುದು ಕಿಲೋಮೀಟರುಗಟ್ಟಲೆ ಕಾಡು ದಾರಿಯನ್ನು? 

ಈ ಕೊರೆತದೊಡನೆ ದೂಧ್‌ಸಾಗರ ಸ್ಟೇಷನ್ನಿನಲ್ಲಿ ಒಂಟಿ ಚಪ್ಪಲಿಯೊಂದಿಗೆ ಇಳಿದಾಗ ಒಂದೆರೆಡು ಹೆಜ್ಜೆಯಿಟ್ಟದ್ದೇ ಟ್ರ್ಯಾಕ್ ಆಚೀಚೆ ಬಹಳಷ್ಟು ಚಪ್ಪಲಿಗಳು ಕಾಣತೊಡಗಿದವು! ಅದರಲ್ಲಿ ಕಳೆದುಹೋದ ಬಲಗಾಲ ಚಪ್ಪಲಿಯಷ್ಟೇ ಸೈಜಿನ, ಆಕಾರದ ಒಂದು ಚಪ್ಪಲಿ ನಮ್ಮನ್ನೇ ಕಾಯುತ್ತ ಬಿದ್ದವರಂತೆ ಸುರಂಗದಲ್ಲಿ ಸಿಕ್ಕಬೇಕೇ?!

ಯಾರ ಪಾದದಿಂದ ಕಳಚಿ ಬಿದ್ದಿತೋ, ಯಾರಿಗೆ ಬೇಡವಾಗಿ ಬಿದ್ದಿತೋ, ಅಂತೂ ಬರಿಗಾಲ ರಕ್ಷಿಸಿದ ಪಾದರಕ್ಷೆಯೇ, ಅದನ್ನು ಅಗಲಿದ ಪಾದವೇ ನಿನಗೆ ಶರಣು..
ಜೀವಕೋಟಿಗಳ ಪೊರೆವ ಜೀವಸೆಲೆಯೇ, ನಿನಗೆ ಶರಣು.. 


Thursday 4 September 2014

ಮಗನ ಮೇಷ್ಟರಿಗೊಂದು ಪತ್ರ



ಪ್ರೀತಿಯ ಮೇಷ್ಟರೆ

ನನ್ನ ಪುಟ್ಟ ಮಗ ತುಂಬ ಒಳ್ಳೆಯ ಹುಡುಗನೇ
ಅವನಿಗೆ ಹೇಳಿ, ಎಲ್ಲರೂ ನಿಯತ್ತಿನವರು, ಸತ್ಯವಂತರು ಅಲ್ಲ
ಆದರೆ ಪ್ರತಿ ಫಟಿಂಗನ ಬದಲು ಒಬ್ಬ ವೀರ
ಪ್ರತಿ ಫುಢಾರಿ ಬದಲು ಒಬ್ಬ ನಿಷ್ಠ ಮುತ್ಸದ್ದಿ
ಪ್ರತಿ ಶತ್ರುವಿನ ಬದಲು ಒಬ್ಬ ಮಿತ್ರ
ಇದ್ದೇ ಇರುತ್ತಾನೆ.

ಹೇಳಿ,
ಪುಸ್ತಕದಲ್ಲಿ ಎಂತೆಂಥ ಅದ್ಭುತಗಳು ಅಡಗಿವೆ ಎಂದು.
ಜೊತೆಗೆ ಏಕಾಂತದಲ್ಲಿ ಆಗಸ ದಿಟ್ಟಿಸಲು ಬಿಡಿ
ಹಕ್ಕಿಗಳ, ಬಿಸಿಲ ಜೀವಿ ಜೇನ್ದುಂಬಿಗಳ
ಹಸಿರುಬೆಟ್ಟದ ಹೂಗಳ ಅನಂತ ವಿಸ್ಮಯ ನೋಡಲಿ.
ಹೇಳಿ ಅವನಿಗೆ,
ಮೋಸಮಾಡಿ ಪಾಸಾಗುವುದಕ್ಕಿಂತ
ಫೇಲಾಗುವುದು ಲೇಸು ಎಂದು.

ಹೇಳಿಕೊಡಿ ತನ್ನ ವಿಚಾರದಲ್ಲಿ ವಿಶ್ವಾಸವಿಡಲು
ಉಳಿದವರು ಅಲ್ಲಗಳೆದರೂ
ಒಳ್ಳೆಯವರಿಗೆ ಒಳ್ಳೆಯವನಾಗಿರಲು
ಕೆಟ್ಟವರೊಡನೆ ಕಟ್ಟುನಿಟ್ಟಾಗಿರಲು
ಗುಂಪುಗುಳಿಯಾಗದಂಥ ಹಳ್ಳಕ್ಕೆ ಬೀಳದಂಥ
ಅಂತಸ್ಸತ್ವ ರೂಢಿಸಿಕೊಳ್ಳಲು.
ಗೌಜುಗದ್ದಲಕೆ ಸೊಪ್ಪು ಹಾಕದೆ
ತನಗೆ ಸರಿಯೆನಿಸಿದ್ದ ಮಾಡಲು.
ಎಲ್ಲರ ಮಾತನ್ನೂ ಕೇಳಿ, ಸತ್ಯದಲ್ಲಿ ಸೋಸಿ
ಒಳ್ಳೆಯದನ್ನಷ್ಟೇ ಒಪ್ಪಲು.

ಹೇಳಿ, ದುಃಖದಲ್ಲೂ ನಗಬಹುದು
ಕಣ್ಣೀರು ಖಂಡಿತ ನಾಚಿಕೆಗೇಡಲ್ಲ
ಸಿಹಿ ಕೂಡ ಅತಿಯಾದರೆ ಒಳ್ಳೆಯದಲ್ಲ
ಎಳೆದುಹಾಕಿ ಹೊಟ್ಟೆ ಕಿಚ್ಚಿನಿಂದಾಚೆಗೆ
ಕಲಿಸಿ ಸುಮ್ಮನೆ ಸುಮ್ಮಾನದಲ್ಲಿ ನಗಲು
ಸಿನಿಕರನ್ನು ಗೇಲಿ ಮಾಡಲು
ಸುಲಭವಾಗಿ ಪುಂಡರ ಬಲಿಹಾಕಲು.

ಬುದ್ಧಿ ಮತ್ತು ಬಲ ಬೇಕಾದರೆ ಮಾರಿಕೊಳ್ಳಲಿ ಹೆಚ್ಚಿನ ಕೂಲಿಗೆ
ಆದರೆ ಹೃದಯವನ್ನು, ಆತ್ಮವನ್ನು ಎಂದೂ ಮಾರದಿರಲಿ.

ನಯವಾಗಿ ನಡೆಸಿಕೊಳ್ಳಿ ಅವನನ್ನು
ಆದರೆ ಹಾಳಾಗುವಷ್ಟು ಮುದ್ದಿಸಬೇಡಿ.
ಬೆಂಕಿಯಲಿ ಬೆಂದೇ ಗಟ್ಟಿಯಾಗಬೇಕಷ್ಟೇ ಕಬ್ಬಿಣ?
ಇರಲಿ ಸಹನೆ ಮೀರುವ ಧೈರ್ಯ, ಧೀರನಾಗುವ ತಾಳ್ಮೆ
ಎಲ್ಲಕ್ಕೂ ಮೊದಲು ತನ್ನ ಉದಾತ್ತತೆಯಲಿ ನಂಬಿಕೆಯಿರಲಿ
ಆಗಷ್ಟೇ ಅವ ಮನುಕುಲದ ಉದಾತ್ತತೆಯಲ್ಲಿ ನಂಬಿಕೆಯಿಡಲು ಸಾಧ್ಯ.

ಇಂಗ್ಲಿಷ್ ಮೂಲ: ಅಬ್ರಹಾಂ ಲಿಂಕನ್
ಕನ್ನಡಕ್ಕೆ: ಬಿದರಹಳ್ಳಿ ನರಸಿಂಹಮೂರ್ತಿ

Tuesday 2 September 2014

ಹೆಣ್ತನವೆಂಬ ಕಾಲನಿ



ವೈದ್ಯಕೀಯ ಮತ್ತು ಲಿಂಗ ರಾಜಕಾರಣ 



ಬೇರಾವ ಜೀವಿಯಲ್ಲೂ ಕಾಣದ ಲಿಂಗ ತಾರತಮ್ಯ ಮಾನವ ಜೀವಿಯಲ್ಲಿ ಕಂಡುಬರುತ್ತದೆ. ದೇಶ-ಕಾಲಗಳ ವ್ಯತ್ಯಾಸವಿಲ್ಲದೆ ಮಾನವ ಸಮಾಜಗಳು ಲಿಂಗ ತಾರತಮ್ಯವನ್ನು ಒಂದಲ್ಲ ಒಂದು ರೀತಿ ತೋರಿಸುತ್ತ ಬಂದಿವೆ. ಹುಟ್ಟುವ ಮೊದಲಿನಿಂದ ಈ ಭೂಮಿ ಬಿಟ್ಟು ಹೋಗುವವರೆಗೆ ಹೆಣ್ಣು ಎಂಬ ಕಾರಣಕ್ಕೆ ತಾರತಮ್ಯ, ಅನ್ಯಾಯ ಅನುಭವಿಸಬೇಕಾಗಿದೆ. ಯಾಕೆ ಹಾಗಾಯಿತು ಎಂದು ಪ್ರಶ್ನೆ ಕೇಳಿಕೊಂಡಾಗ ಸಿಗುವ ಉತ್ತರಗಳು ಲಿಂಗರಾಜಕಾರಣದ ಒಳಹೊರಗನ್ನು ತಿಳಿಸಿಕೊಡುತ್ತವೆ. ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲೇ ಲಿಂಗತಾರತಮ್ಯವನ್ನೂ, ಲಿಂಗ ಅಸಮಾನತೆಯ ಬೇರುಗಳನ್ನೂ ಹೊಂದಿರುವುದರಿಂದ ಮಹಿಳೆ ಯಾವಾಗಲೂ ಶೋಷಿತಳೇ. ಮಹಿಳಾ ಚರಿತ್ರೆಯೆಂದರೆ ಅವಳ ದಮನದ ಚರಿತ್ರೆ. ಎಂದೇ ಯಾವುದೇ ಸಮಸ್ಯೆಯನ್ನು ಚರ್ಚಿಸುವಾಗ ಅದಕ್ಕಿರುವ ಲಿಂಗಸಂಬಂಧಿ ಆಯಾಮಗಳನ್ನು ಚರ್ಚಿಸಬೇಕಾಗುತ್ತದೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಪರಿಶೀಲಿಸುವಾಗ ಲಿಂಗಸಂಬಂಧಿ ಪ್ರಜ್ಞೆ ಇರಬೇಕಾಗುತ್ತದೆ. ಈ ದಿನಗಳಲ್ಲಿ ಲಿಂಗ ಅಸಮಾನತೆಯ ರೂಪಗಳು ಬದಲಾಗುತ್ತಿರುವ ಹಾಗೇ ಲಿಂಗ ರಾಜಕಾರಣದ ವಿವಿಧ ಮುಖಗಳೂ ಮತ್ತೆ ಪರಾಮರ್ಶೆಗೆ ಒಳಪಡುತ್ತಿವೆ.

ಭಾರತದ ಜಾತಿಪದ್ಧತಿ ತನ್ನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರತಿ ಶ್ರೇಣಿಯಲ್ಲೂ ಕೆಳಹಂತವನ್ನೇ ನೀಡಿದ್ದು ಈ ನೆಲದ ಮಹಿಳೆ ಸದಾ ಹಕ್ಕುಗಳಿಂದ ವಂಚಿತಳಾಗಿ ಎರಡನೆಯ ದರ್ಜೆ ಪ್ರಜೆಯಾಗಿ ಬದುಕಿದವಳೇ. ಇವತ್ತು ಈ ೨೦೧೪ರಲ್ಲಿ ನಮ್ಮ ರಾಜ್ಯದ ಮಹಿಳಾ ಪ್ರಾತಿನಿಧ್ಯ ಕೇವಲ ೨.೨೩%. ಭಾರತದ ೬೦ ಕೋಟಿ ಮಹಿಳೆಯರನ್ನು ಸಂಸತ್ತಿನಲ್ಲಿ ೫೯ ಮಹಿಳೆಯರು ಪ್ರತಿನಿಧಿಸುತ್ತಾರೆ - ೯% ಪ್ರಾತಿನಿಧ್ಯ. ೩೩% ಮಹಿಳಾ ಮೀಸಲಾತಿ ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಹೀಗೆ ಉಳಿದೆಲ್ಲ ನೆಲೆಗಳಲ್ಲಿ ಮಹಿಳೆಯ ಪಾತ್ರವನ್ನು ಒಂದೋ ನಗಣ್ಯಗೊಳಿಸುವುದು ಅಥವಾ ಪಾರಂಪರಿಕ ನೆಲೆಗೆ ಕಟ್ಟಿಹಾಕಿ ಅವಳ ಪಾತ್ರವನ್ನು ಮಿತಿಗೊಳಿಸುವುದು ನಿರಂತರ ನಡೆದೇ ಇದೆ. ಹೀಗಿರುತ್ತ ವೈದ್ಯಕೀಯ ರಂಗದ ಲಿಂಗರಾಜಕಾರಣ ಬಹಳ ಭಿನ್ನವಾಗೇನೂ ಇಲ್ಲ.

ವೈದ್ಯಕೀಯ ರಂಗವು ಕಾಯಿಲೆ ಇರುವವರನ್ನು, ಸಾವಿನೆಡೆಗೆ ಚಲಿಸುವವರನ್ನು ಅಥವಾ ಏನೋ ಊನ/ಕುಂದುಕೊರತೆಯಿರುವವರನ್ನೇ ಸದಾ ನಿಭಾಯಿಸುತ್ತದೆ. ಹಾಗೆ ನೋಡಿದರೆ ಮಾನವ ಸಮಾಜದ ಕತ್ತಲಾಳಗಳ ನಿಜರೂಪ ತಿಳಿಯುವುದು ವೈದ್ಯಕೀಯಕ್ಕೆ ಸುಲಭವಿದೆ. ಆದರೆ ವೈದ್ಯಕೀಯವು ಲಿಂಗತಾರತಮ್ಯ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಿಂತ ಲಿಂಗರಾಜಕಾರಣದ ಭಾಗವಾಗಿರುವುದು ವೈಜ್ಞಾನಿಕ ದೃಷ್ಟಿಕೋನದ ದುರಂತ ಸೋಲು ಎನ್ನಬೇಕಿದೆ.

ವೈದ್ಯಕೀಯವು ಅರ್ಧಕ್ಕರ್ಧ ಜನಸಂಖ್ಯೆಯ ಮಹಿಳೆಯರನ್ನು ಮುಖ್ಯ ‘ಗ್ರಾಹಕ’ರಾಗಿ ಪರಿಗಣಿಸಿದೆ. ಬಸುರು, ಬಾಣಂತನ, ಮಕ್ಕಳ ಆರೋಗ್ಯವಲ್ಲದೇ ಹೆಣ್ಮಕ್ಕಳಿಗೆ ಅನನ್ಯವಾದ ಮುಟ್ಟು ಮತ್ತು ತತ್ಸಂಬಂಧಿ ಸಮಸ್ಯೆಗಳು ಅವಳಿಗೆ ಬರುವ ಸಾಧ್ಯತೆಯಿರುವುದರಿಂದ ವೈದ್ಯರು ಹೆಣ್ಣಿನ ಆಪದ್ಭಾಂಧವರೆನ್ನಬಹುದು. ಅವಳ ಆತಂಕದ, ಸಂಕಟದ ಗಳಿಗೆಗಳಲ್ಲಿ ಅವರು ಸಹಾಯ ನೀಡಬಲ್ಲರು. ಆದರೆ ವೈದ್ಯಕೀಯವೂ ಸಮಾಜದ ಒಂದು ಭಾಗವೇ ಆಗಿರುವುದರಿಂದ ಅಲ್ಲೂ ಲಿಂಗರಾಜಕಾರಣದ ಸುಳುಹುಗಳು ನುಸುಳಿರುವುದನ್ನು, ಲಿಂಗತಾರತಮ್ಯ ಮುಂದುವರೆದಿರುವುದನ್ನು ನೋಡಬಹುದು.

ಮಹಿಳೆಯ ಹುಟ್ಟಿನಿಂದ ಹಿಡಿದು ಸಾವಿನ ತನಕ ವೈದ್ಯಕೀಯ ರಂಗ ಲಿಂಗತಾರತಮ್ಯ ತೋರಿಸುತ್ತದೆ. ಬಹುಸಾಮಾನ್ಯವಾಗಿ ಸ್ತ್ರೀ ಭ್ರೂಣ ಹತ್ಯೆಯನ್ನಷ್ಟೇ ವೈದ್ಯಕೀಯದ ಲಿಂಗರಾಜಕಾರಣಕ್ಕೆ ಜೋಡಿಸಲಾಗುತ್ತದೆ. ಆದರೆ ಅದಲ್ಲದೆ ಉಳಿದ ಎಷ್ಟೋ ವಿಷಯಗಳಲ್ಲಿ ಲಿಂಗ ತಾರತಮ್ಯವಿದ್ದು ಕೆಲ ವಿಷಯಗಳ ಬಗೆಗೆ ಈ ಲೇಖನದಲ್ಲಿ ಗಮನ ಹರಿಸಲಾಗಿದೆ.

ಹೆಣ್ತನ: ಕಲ್ಚರಲಿ ಕನ್‌ಸ್ಟ್ರಕ್ಟೆಡ್ ಮತ್ತು ಟೆಕ್ನಲಾಜಿಕಲ್ಲಿ ಮಾಡಿಫೈಡ್. 

ಹೌದು, ಇವತ್ತು ಅವಳ ದೇಹದ ಪ್ರತಿ ಭಾಗವೂ ಮೆಡಿಕಲ್ ವಸಾಹತುವಿನ ಕಾಲನಿಯಾಗಿ ಮಾರ್ಪಟ್ಟಿದೆ. ಗರ್ಭಕೋಶವನ್ನು ಬಾಡಿಗೆ ತಾಯ್ತನಕ್ಕೆ ನೀಡುವುದರಿಂದ ಹಿಡಿದು ಪ್ರತಿ ಭಾಗವೂ ವೈದ್ಯಲೋಕದ ಸಂಶೋಧನೆಯ, ವ್ಯಾಪಾರದ ವಸ್ತುವಾಗಿದೆ. ಹೆಣ್ಣನ್ನು ವೈದ್ಯೆಯಾಗಿ ನೋಡುವುದರ ಲಿಂಗರಾಜಕಾರಣ ಒಂದು ರೀತಿಯದಾದರೆ, ರೋಗಿಯಾಗಿ ಹೆಣ್ಣನ್ನು ನೋಡುವ ರಾಜಕಾರಣ ಬೇರೆ ರೀತಿಯದು.


ಕಾಸ್ಮೆಟಿಕ್ ಇಂಡಸ್ಟ್ರಿ ಲಿಂಗರಾಜಕಾರಣದ ಭಾಗವಾಗಿ ಬೆಳೆಯುತ್ತಿರುವ ಬಂಡವಾಳಶಾಹಿ. ಅದು ಹೆಣ್ಣನ್ನು ಕೇವಲ ಆಹ್ಲಾದಕರ ವಸ್ತುವಾಗಿ ಪರಿಗಣಿಸುತ್ತದೆ. ವೈದ್ಯಕೀಯವಾಗಿ ಕಾಸ್ಮೆಟಿಕ್ ಡೆಂಟಿಸ್ಟ್ರಿ, ಕಾಸ್ಮೆಟಿಕ್ ಸರ್ಜರಿಗಳು ಅತ್ಯಂತ ಜನಪ್ರಿಯವಾಗಿವೆ. ಹಲ್ಲಿನ ಹೊಳಪು ಹೆಚ್ಚಿಸುವುದು; ಅದರ ಮೇಲೊಂದು ಹೊಳೆವ ಹರಳು ಕೂರಿಸುವುದು; ಚರ್ಮದ ಬಣ್ಣ-ಕೂದಲ ಬಣ್ಣ ಬದಲಿಸುವುದು; ಬಣ್ಣ ಉಳಿಸಿಕೊಳುವ ಕಾಳಜಿ; ತುಟಿಮೂಗಿನ ಆಕಾರ ಅಂದ ಹೆಚ್ಚಿಸುವುದು; ಪರಿಮಳದ ವಸ್ತುಗಳು - ಹೀಗೇ ಅಸಂಖ್ಯ ವಸ್ತುವಿಷಯಗಳು ದೇಹಾರೋಗ್ಯಕ್ಕಲ್ಲದ ಕಾರಣಕ್ಕಾಗಿ ವೈದ್ಯಕೀಯದಲ್ಲಿ ಜಾಗ ಪಡೆದಿವೆ. ಕೂದಲು ಉದುರುವುದನ್ನು ತಡೆಗಟ್ಟುವ ಕುರಿತು, ಕೂದಲ ತುದಿ ಸೀಳಿನ ಕುರಿತು, ಮೊಡವೆಯ ಕುರಿತು, ಹಿಮ್ಮಡಿಯ ಒಡಕು ಕುರಿತು, ಸುಕ್ಕುಗಟ್ಟಿದ ಚರ್ಮ ಸರಿಯಾಗುವ ಕುರಿತು ಆ ಉತ್ಪಾದನೆಗಳ ಜಾಹೀರಾತಿನಲ್ಲಿ ವೈದ್ಯರು ಕಾಣಿಸಿಕೊಳ್ಳುತ್ತಾರೆ. ಭಾರತದ ಕಾಸ್ಮೆಟಿಕ್ ಇಂಡಸ್ಟ್ರಿಯ ಗಾತ್ರ ೯೫೦ ಮಿಲಿಯನ್ ಡಾಲರ್. ೨೦೨೦ರ ಹೊತ್ತಿಗೆ ಪ್ರಪಂಚದ ಅತಿ ಹೆಚ್ಚು ಕಾಸ್ಮೆಟಿಕ್ ವಸ್ತುಗಳ ಗ್ರಾಹಕರು ನಮ್ಮ ದೇಶದವರಾಗಲಿದ್ದಾರೆ. ಬಕ್ಕತಲೆ, ಕೂದಲ ಸೀಳು, ಮೊಡವೆ, ಮುಖದ ಸುಕ್ಕು ಸಾವು ಬದುಕಿನ ಪ್ರಶ್ನೆ ಹುಟ್ಟಿಸುವ ರೋಗಗಳೇ ಅಲ್ಲ. ಆದರೆ ಅವುಗಳ ಬಗೆಗೆ ಕೋಟ್ಯಂತರ ರೂಪಾಯಿ ಔಷಧ ವಹಿವಾಟು ನಡೆಯುತ್ತವೆ.


ಪ್ಲಾಸ್ಟಿಕ್ ಸರ್ಜರಿಯೂ ಇದೇ ಹಾದಿ ಹಿಡಿದಿದೆ. ತನ್ನ ಸೌಂದರ್ಯಕ್ಕೆ ಏನೇನು ಊನವಾಗಿದೆ ಎಂದು ವ್ಯಕ್ತಿಯೊಬ್ಬ ಭಾವಿಸುವನೋ ಅದನೆಲ್ಲ ರಿಪೇರಿ ಮಾಡಿಕೊಡುವ ಗ್ಯಾರೇಜ್ ಆಸ್ಪತ್ರೆಗಳು ಮೈದಳೆಯುತ್ತಿವೆ. ಹೆಣ್ಣಿನ ಸ್ತನ ಗಾತ್ರ, ಆಕಾರ ಸರಿ ಮಾಡುವ ಸರ್ಜರಿ, ಮೂಗು ಸರಿ ಮಾಡುವ ಸರ್ಜರಿ, ಕಣ್ಣುಹುಬ್ಬಿನ ಶೇಪ್ ಸರಿ ಮಾಡಲು ಸರ್ಜರಿ ನಡೆಯುತ್ತಿದೆ. ಒಂದು ಕಾಲದಲ್ಲಿ ವಿರೂಪಗೊಳಿಸಲ್ಪಟ್ಟ ಅಂಗಹೀನರಿಗೆ ಮಾಡಲಾಗುತ್ತಿದ್ದ ಪ್ಲಾಸ್ಟಿಕ್ ಸರ್ಜರಿ ಇಂದು ಬಹುಪಾಲು ಕಾಸ್ಮೆಟಿಕ್ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ: ಈ ೨೧ನೇ ಶತಮಾನದಲ್ಲೂ ಅತಿ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ನಡೆಯುವುದು ಸ್ತನಗಾತ್ರ ಹೆಚ್ಚಿಸಿಕೊಳ್ಳಲು. ಅದರ ನಂತರದ ಸ್ಥಾನ ಕನ್ಯಾಪೊರೆ ರಿಪೇರಿಯದು. ಸಹಜವಾಗಿ ಹರಿದಿರಬಹುದಾದ ಕನ್ಯಾಪೊರೆ ಹೊಲಿಸಿಕೊಳ್ಳಲು ಹುಡುಗಿಯರು ನಂಬರ್ ಹಚ್ಚಿ ಕಾಯುತ್ತಿದ್ದಾರೆ! ಈಗಲೂ ಕನ್ಯಾಪೊರೆಯನ್ನು ರಿಪೇರಿ ಮಾಡಿಸಿಕೊಂಡು ತನ್ನ ಪಾವಿತ್ರ್ಯ, ಶುದ್ಧತೆ ಯೋನಿಯಲ್ಲಿದೆ ಎಂದು ಹೆಣ್ಣು ಭಾವಿಸುವುದು; ತನ್ನ ದೇಹವಿರುವುದು ಕೇವಲ ಕಾಮತೃಷೆ ತಣಿಸಲು ಎಂದು ಭಾವಿಸಿರುವುದು ವಿಷಾದದ ಸಂಗತಿಯಾಗಿದೆ.

ಎಲ್ಲರೂ ತಿಳಿದಿರುವಂತೆ ಯೋನಿದ್ವಾರವನ್ನು ಮುಚ್ಚಿರುವ ಕನ್ಯಾಪೊರೆ ಪ್ರಥಮ ಲೈಂಗಿಕ ಸಂಪರ್ಕದ ವೇಳೆ ಹರಿಯುತ್ತದೆ. ಆದರೆ ಈಗ ಹೆಣ್ಣುಮಕ್ಕಳು ಬಾಹ್ಯ ಚಟುವಟಿಕೆಯಲ್ಲೂ ತೊಡಗಿಕೊಂಡಿರುವುದರಿಂದ ಎಷ್ಟೋ ಹುಡುಗಿಯರು ಕನ್ಯೆಯರಾಗಿದ್ದೂ ಕನ್ಯಾಪೊರೆ ಛಿದ್ರವಾಗಿರುತ್ತದೆ. ಕೆಲವು ಸಮುದಾಯಗಳಲ್ಲಿ ಇವತ್ತಿಗೂ ದಂಪತಿಗಳ ಮೊದಲ ಸಮಾಗಮದ ನಂತರ ರಕ್ತಸ್ರಾವವಾದರೆ ಮಾತ್ರ ಅಂಥ ಹೆಣ್ಣು ಪವಿತ್ರಳಾಗಿದ್ದಳು, ಕನ್ಯೆಯಾಗಿದ್ದಳು ಎಂದು ಭಾವಿಸುತ್ತಾರೆ. ಅಂಥ ಕಲ್ಪನೆ ನಿಜವಾಗಬೇಕಿಲ್ಲ ಎಂದು ತಿಳಿಸಿಕೊಡುವ ಬದಲು ಈಗ ಕನ್ಯಾಪೊರೆ ಹರಿದಿದ್ದರೆ ಹೊಲಿದುಕೊಡುವ ಪ್ಲಾಸ್ಟಿಕ್ ಸರ್ಜರಿ ಜನಪ್ರಿಯವಾಗತೊಡಗಿದೆ. ಭಾರತದಲ್ಲಿ ಹೆಣ್ಣಿನ ಪಾವಿತ್ರ್ಯ ಎಷ್ಟು ಮುಖ್ಯವೆಂದರೆ ಹೈಮೆನೋಪ್ಲಾಸ್ಟಿಗಾಗಿ ಮಹಾನಗರಗಳ ಕ್ಲಿನಿಕ್‌ಗಳಲ್ಲಿ ಹೆಣ್ಣುಮಕ್ಕಳು ಪಾಳಿ ಹಚ್ಚಿ ಕಾಯುತ್ತಿದ್ದಾರೆ. ಇದು ಸಮಾಜದೆದುರು ಕನ್ಯತ್ವ ಸಾಬೀತುಪಡಿಸಲು ಮಾಡುವ ಮೋಸದಂತೆ ಕಂಡರೂ ಹೆಣ್ಣು ತನಗೆ ತಾನೇ ಮಾಡಿಕೊಳ್ಳುವ ಅವಮಾನವೂ, ಮೂರ್ಖತನವೂ ಆಗಿದೆ.

ಎದೆಯೋನಿಕಿಬ್ಬೊಟ್ಟೆಗಳೇ ತನ್ನ ಹೆಣ್ತನ/ಪಾವಿತ್ರ್ಯವನ್ನು ಸಾಬೀತುಪಡಿಸುವ ಅಂಗಾಂಗಗಳು ಎಂದು ಹೆಣ್ಣನ್ನು ನಂಬಿಸಿರುವ ಸಮಾಜಕ್ಕೆ ಪೂರಕವಾಗಿ ವಿಜ್ಞಾನ/ತಂತ್ರಜ್ಞಾನಗಳೂ ಆ ನಂಬಿಕೆಗಳನ್ನು ಪೋಷಿಸುತ್ತಿವೆ. ಒಟ್ಟಾರೆ ವೈದ್ಯಕೀಯವು ವಿಜ್ಞಾನ ಅಳವಡಿಸಿಕೊಂಡರೂ ಸಾಮಾಜಿಕ ರೂಢಿ, ಆಚರಣೆ, ನಿಯಮಗಳನ್ನು ಯಥಾವತ್ತಾಗಿ ಪಾಲಿಸಲಿಕ್ಕೆ ನೋಡಿತು. ವಿಜ್ಞಾನ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬದಲು ತಂತ್ರಜ್ಞಾನದ ಮೂಲಕ ಅವರ ಹಳೆಯ ನಂಬಿಕೆ, ಮೂಢನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸಿತು. ಲಿಂಗಭೇದವಿಲ್ಲದೆ ಈ ಯಥಾಸ್ಥಿತಿ ಕಾಯುವ, ವೈಭವೀಕರಿಸುವ ಕೆಲಸವನ್ನು ವೈದ್ಯಕೀಯ ಮಾಡಿದ್ದರಿಂದಲೇ ಇಂದಿಗೂ ಎಷ್ಟೋ ಸಾಮಾಜಿಕ ಅನಿಷ್ಟಗಳು ಹಾಗೇ ಉಳಿದುಬಂದಿವೆ.

ಇದಕ್ಕೆ ಸ್ತ್ರೀಜನನಾಂಗ ವಿರೂಪಗೊಳಿಸುವಿಕೆಯನ್ನು ಉದಾಹರಣೆಯಾಗಿ ಕೊಡಬಹುದು. ವಿಶ್ವಾದ್ಯಂತ ಹಲವು ಮುಸ್ಲಿಂ ದೇಶಗಳಲ್ಲಿ ಮಹಿಳೆಯರ ಜನನಾಂಗ ವಿರೂಪಗೊಳಿಸುವಿಕೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಅವರ ಜನನಾಂಗವನ್ನು ಸುನ್ನತಿಯ ನೆಪದಲ್ಲಿ ಕತ್ತರಿಸಿ ಒಂದು ರಂಧ್ರ ಬಿಟ್ಟು ಹೊಲಿಯಲಾಗುತ್ತದೆ. ಇದು ಅವರು ಕನ್ಯೆಯರಾಗಿರುವರೆಂದು, ಸಚ್ಚಾರಿತ್ರ್ಯವಂತರಾಗಿರುವರೆಂದು ಸಾಬೀತುಪಡಿಸಲು ಸಮಾಜ ವಿಧಿಸಿರುವ ಆಚರಣೆ. ಪ್ರತಿಬಾರಿಯೂ ಲೈಂಗಿಕತೆ ಅವರಿಗೆ ನೋವಿನಿಂದ ಕೂಡಬೇಕು, ಆಗ ಅವರು ಗಂಡನ ಬಿಟ್ಟು ಬೇರೆಯವನ ಜೊತೆ ಮಲಗಲು ಇಷ್ಟಪಡಲಾರರು ಎಂಬ ಉದ್ದೇಶ ಈ ವಿರೂಪಗೊಳಿಸುವಿಕೆಗೆ ಇದೆ. ಹಲವರಿಗೆ ಮೊದಲ ರಾತ್ರಿಯಂದು ಮದುವಣಿಗ ಒಂದು ಸಣ್ಣ ಚೂರಿಯಿಂದ ಯೋನಿಛೇದ ಮಾಡುತ್ತಾನೆ. ಕೆಲವರಿಗೆ ಮೊದಲ ಸಮಾಗಮಕ್ಕೆ ೩ ತಿಂಗಳು ಬೇಕಾದರೆ ೧೫% ಹೆಣ್ಣುಮಕ್ಕಳು ಮದುವೆಯಾದಮೇಲೂ ದೈಹಿಕ ಸಂಪರ್ಕ ಸಾಧ್ಯವೇ ಆಗದೇ ಉಳಿಯುತ್ತಾರೆ. ಮಕ್ಕಳಾಗುವಾಗ ತೆರೆದ, ಹರಿದ ಯೋನಿಯನ್ನು ಮತ್ತೆ ಹೊಲಿಯಲಾಗುತ್ತದೆ. ಹೆಣ್ಣಿಗೆ ಲೈಂಗಿಕತೆ ಆನಂದ ನೀಡುವಂತಿರಬಾರದು ಎನ್ನುವುದು ಇದರ ಉದ್ದೇಶ.

ಇವತ್ತಿಗೂ ಪ್ರತಿದಿನ ೬೦೦೦ ಹೆಣ್ಮಕ್ಕಳು ಜನನಾಂಗ ವಿರೂಪಗೊಳಿಸುವಿಕೆಗೆ ಒಳಗಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ ವೈದ್ಯರು ಗುಟ್ಟಾಗಿ ಮಾಡಿಕೊಡುತ್ತಾರೆ. ಒಬ್ಬ ಬ್ರಿಟನ್ ಸರ್ಜನ್ ಹೆಣ್ಣಿನ ಜನನಾಂಗದ ಕ್ಲಿಟೋರಿಸ್‌ನಲ್ಲಿ ಅವರ ದುಷ್ಟತನ ಅಡಗಿರುವುದೆಂದು ಹೇಳಿ ತಲೆಕೆಟ್ಟ, ಭ್ರಮಾಧೀನ, ಬಜಾರಿ ಹುಡುಗಿಯರ ಕ್ಲಿಟೋರಿಸ್ ಕತ್ತರಿಸಿ ಹಾಕಿದ್ದ.

ಒಟ್ಟಾರೆ ಲಿಂಗರಾಜಕಾರಣ ವೈದ್ಯರನ್ನೂ ಅವರು ಕಲಿತ ವಿಜ್ಞಾನದ ಹೊರತಾಗಿಯೂ ಬಿಡಲಿಲ್ಲ ಎಂದಷ್ಟೇ ಇಲ್ಲಿ ಸೂಚಿಸಬಹುದಾಗಿದೆ.


ಇಲ್ಲಿ ರಿಪ್ರೊಡಕ್ಟಿವ್ ತಂತ್ರಜ್ಞಾನ ಕುರಿತೂ ಕೆಲ ಮಾತು ಹೇಳಬೇಕು. ನಮ್ಮ ಬಹುಪಾಲು ಕುಟುಂಬ ಯೋಜನಾ ವಿಧಾನಗಳು ಮಹಿಳೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಮುಂದೆ ಮಕ್ಕಳು ಬೇಡವೆಂಬ ಬಗ್ಗೆ ‘ಏನಾದರೂ’ ಮಾಡಿಕೊಡಿ’ ಎಂದು ಅಲವತ್ತುಕೊಳ್ಳುವವರು ಮಹಿಳೆಯರೇ. ಕೆಲ ಪುರುಷ ಮಹಾಶಯರಂತೂ ಯಾವ ಕುಟುಂಬ ಯೋಜನಾ ವಿಧಾನಕ್ಕೂ ಒಪ್ಪುವುದಿಲ್ಲ. ಗರ್ಭ ನಿಲ್ಲುವ ಹೆದರಿಕೆಯಿದ್ದರೆ ಹೆಂಗಸರ ಲೈಂಗಿಕತೆ ಹದ್ದುಬಸ್ತಿನಲ್ಲಿರುತ್ತದೆ ಎಂದು ನೇರವಾಗೇ ಹೇಳುತ್ತಾರೆ. ಅಂಥ ಯಾವ ನಿರ್ಬಂಧ ಗಂಡಿಗಿಲ್ಲ. ಏಕೆಂದರೆ ನಮ್ಮ ದೇವರು, ರಾಜಮಹಾರಾಜರೇ ಹಲವು ಹೆಣ್ಣುಗಳನ್ನು ಅನುಭವಿಸಲಿಲ್ಲವೆ? ಈಗಲೂ ಎಷ್ಟೋ ಹೈಪ್ರೊಫೈಲ್ ಪುರುಷರು ಎರಡು, ಮೂರು ಹೆಂಡತಿಯರನ್ನಿಟ್ಟುಕೊಂಡಿಲ್ಲವೆ? ಕುಟುಂಬ ಕಲ್ಯಾಣ ಇಲಾಖೆಯೂ ಸಹಾ ಮಹಿಳೆಯರಲ್ಲೇ ಕುಟುಂಬ ಯೋಜನಾ ವಿಧಾನಗಳನ್ನು ಜನಪ್ರಿಯಗೊಳಿಸಿತ್ತು. ಎಚ್‌ಐವಿ ಬಂದಮೇಲೆ ನಿರೋಧ ಬಳಕೆ ಹೆಚ್ಚೆಚ್ಚು ಪ್ರತಿಪಾದಿಸಲ್ಪಟ್ಟಿತು. ಇತ್ತೀಚೆಗೆ ಗಂಡಸರಿಗೂ ವ್ಯಾಸೆಕ್ಟಮಿ ಮಾಡುವ ಕ್ಯಾಂಪುಗಳು ನಡೆಯುತ್ತಿವೆ. ವ್ಯಾಸೆಕ್ಟಮಿಯು ಅತ್ಯಂತ ಸುರಕ್ಷಿತ, ಅತಿ ಸರಳ, ಗಂಡಿನ ‘ಪುರುಷತ್ವ’ಕ್ಕೆ ಏನೇನೂ ಹಾನಿ ಮಾಡದ ಆಪರೇಷನ್. ಆದರೆ ‘ನರ ಕಟ್’ ಮಾಡಿಸಿಕೊಂಡರೆ ಗಂಡಸುತನವೇ ಬಿದ್ದುಹೋಗುವುದೆಂಬ ನಂಬಿಕೆ ಎಷ್ಟು ಗುಟ್ಟಾಗಿ ಗಂಡಸರಲ್ಲಿ ಬೇರುಬಿಟ್ಟಿದೆಯೆಂದರೆ ವ್ಯಾಸೆಕ್ಟಮಿ ಕ್ಯಾಂಪುಗಳಿಗೆ ಗಂಡಸರು ಬರುವುದಿಲ್ಲ. ಏಕೆಂದರೆ ಅವೆಲ್ಲ ಹೆಂಗಸರದೇ ತಲೆಬಿಸಿ ಎಂಬ ಲೆಕ್ಕ.

ಇನ್ನು ಮಹಿಳೆಯರ ದೇಹದ ಮೇಲೆ ಖಾಸಗಿ ವೈದ್ಯಲೋಕ ಹೂಡಿದ ಬಂಡವಾಳಗಳಲ್ಲಿ ಒಂದಾದ ಕೃತಕ ಗರ್ಭಧಾರಣೆಯ ಕುರಿತು ಎರಡು ಮಾತು:

ಮಗು ಹೆರುವುದೇ ಆತ್ಯಂತಿಕ ಗುರಿ ಎಂದು ವೈದ್ಯ ಜಗತ್ತು ಹೆಣ್ಣನ್ನು ಹೆಚ್ಚೆಚ್ಚು ನಂಬಿಸುತ್ತಿದೆ. ಒಂದೆಡೆ ಹೆರುವ ಸಮಯದಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ತಾಯಂದಿರು ಸಾಯುತ್ತಿದ್ದರೆ ಇನ್ನೊಂದೆಡೆ ದುಡ್ಡಿರುವವರು ಒಂದು ಮಗು ಹೆರಲಿಕ್ಕೆ ಲಕ್ಷಾಂತರ ಖರ್ಚು ಮಾಡುವುದು ವಿಶ್ವದ ವ್ಯಂಗ್ಯವಾಗಿದೆ. ಒಂದು ಮಗು ಹೆರಲಿಕ್ಕೆ, ಅದರ ತಂತ್ರಜ್ಞಾನ ಅಭಿವೃದ್ಧಿಯ ವೈದ್ಯಕೀಯ ಸಂಶೋಧನೆಗೆ ಅತ್ಯಂತ ಹೆಚ್ಚು ಹಣ ವ್ಯಯವಾಗುತ್ತಿದೆ. ವೈದ್ಯಕೀಯ ಮಾನವೀಯ ಪಲುಕುಗಳನ್ನು, ಸೇವಾ ಮನೋಭಾವನೆಯನ್ನು ಕಳೆದುಕೊಂಡು ಬಂಡವಾಳ ಹೂಡಿಕೆಗೆ ಲಾಭಕರ ಕ್ಷೇತ್ರವಾಗಿದೆಯೇ ಎಂಬ ಅನುಮಾನ ಪ್ರಜ್ಞಾವಂತರನ್ನು ಕಾಡುತ್ತಿದೆ. ಮಹಿಳಾ ಆರೋಗ್ಯ ವಿಷಯ ಕುರಿತು ಬದಲಾದ ಆದ್ಯತೆಗಳೇ ಈ ವಿಷಯವನ್ನು ಹೇಳುತ್ತವೆ.

೮೦ರ ದಶಕದಲ್ಲಿ ರಿಪ್ರೊಡಕ್ಟಿವ್ ತಂತ್ರಜ್ಞಾನ ಹಿಡಿಯುತ್ತಿರುವ ದಾರಿ ಕುರಿತು ಅಮೆರಿಕದ ಎಷ್ಟೋ ಮಹಿಳಾ ವೈದ್ಯರು, ತಾತ್ವಿಕರು, ಚಿಂತಕರು, ಆಕ್ಟಿವಿಸ್ಟ್‌ಗಳು ದನಿಯೆತ್ತಿದರೂ ವೈದ್ಯಕೀಯದ ಕಾರ್ಪೋರೇಟ್ ಜಗತ್ತು ಯಾವುದನ್ನೂ ಲೆಕ್ಕಿಸದೇ ಮುಂದುವರೆಯಿತು. ಸಹಜ ಗರ್ಭಧಾರಣೆಯಲ್ಲಿ ಒಂದು ಅಂಡದೊಂದಿಗೆ ಸಂಯೋಗಗಗೊಳ್ಳಲು ಕೋಟ್ಯಂತರ ವೀರ್ಯಾಣುಗಳ ಆಯ್ಕೆಯ ಅವಕಾಶವಿರುತ್ತದೆ. ಈ ಆಯ್ಕೆಯ ಅವಕಾಶ ನಮ್ಮ ಊಹೆಗೂ ಮೀರಿದಷ್ಟು ವಿಶಾಲವಾಗಿರುತ್ತದೆ. ಆದರೆ ಆಯ್ದ ಕೆಲ ವೀರ‍್ಯಕಣಗಳಿಂದ ಅಂಡವನ್ನು ಫಲಿತಗೊಳಿಸುವ ಕೃತಕ ಗರ್ಭಧಾರಣಾ ವಿಧಾನದಲ್ಲಿ ಆಯ್ಕೆಯ ಅವಕಾಶ ಸಹಜ ವಿಧಾನಕ್ಕಿಂತ ಅತ್ಯಂತ ಕಡಿಮೆ. ಹಾಗಾಗಿ ಹುಟ್ಟುವ ಮಕ್ಕಳ ಜೆನೆಟಿಕ್ ಆರೋಗ್ಯದ ಮೇಲೆ, ಅವರ ಸಂತತಿಯ ಮೇಲೆ ಅದು ಪರಿಣಾಮ ಬೀರಬಹುದು; ಅದರಿಂದ ಮಾನವ ಸಮಾಜದ ಜೆನೆಟಿಕ್ ಪೂಲ್ ಮೇಲೆ ದುಷ್ಟರಿಣಾಮ ಉಂಟಾಗಬಹುದೆಂದು ಅದನ್ನು ವಿರೋಧಿಸಲಾಗಿತ್ತು. ಐವಿಎಫ್ ಮಕ್ಕಳ ಬುದ್ಧಿಶಕ್ತಿ, ರೋಗನಿರೋಧಕ ಶಕ್ತಿಯ ಕುರಿತು ಹಲವು ಅನುಮಾನಗಳಿದ್ದವು. ಈ ಕುರಿತು ಎಷ್ಟೇ ಎಚ್ಚರಿಸಿದರೂ ಟೆಕ್ನಾಲಜಿ ಬೆಳೆದೇ ಬೆಳೆಯಿತು.

೧೯೭೮ರಲ್ಲಿ ಮೊದಲ ಯಶಸ್ವಿ ಐವಿಎಫ್ ಶಿಶು ರೂಪುಗೊಂಡ ಮೇಲೆ ೩ ಮಿಲಿಯನ್‌ಗಿಂತ ಹೆಚ್ಚು ಮಕ್ಕಳು ತಮ್ಮ ಬದುಕನ್ನು ಪೆಟ್ರಿಡಿಶ್‌ಗಳಲ್ಲಿ ಆರಂಭಿಸಿದರು. ೧೯೮೯ರಲ್ಲಿ ಕೇವಲ ೩೦,೦೦೦ ಐವಿಎಫ್ ಮಕ್ಕಳು ಹುಟ್ಟಿದ್ದವು. ೨೦೦೨ರಲ್ಲಿ ಈ ಸಂಖ್ಯೆ ೨ ಲಕ್ಷವಾಯಿತು. ಇವತ್ತು ೨೦೧೧ರಲ್ಲಿ ಡೆನ್ಮಾರ್ಕ್ ಮತ್ತು ನೆದರ್‌ಲೆಂಡಿನಂತಹ ದೇಶಗಳಲ್ಲಿ ೪% ಶಿಶುಗಳು ಐವಿಎಫ್‌ನಿಂದ ಉತ್ಪತ್ತಿಯಾದವೇ.

ಯಾರಿಗೆ ದುಡ್ಡಿದೆಯೋ ಅವರಿಗೆ ಮಕ್ಕಳು. ಹೀಗೆ ಸಿರಿವಂತ ಹೆಣ್ಣುಗಳ ದೇಹದ ಮೂಲೆಮೂಲೆಯೂ ಪ್ರಯೋಗಕ್ಕೊಳಪಟ್ಟು ಹೆರುವ ಯಂತ್ರವೆಂದು ಪರಿಗಣಿತವಾಯಿತು. ಹೇಗಾದರೂ ಮಾಡಿ, ಯಾವುದಾದರೂ ವಿಧಾನದಿಂದ ಮಕ್ಕಳನ್ನು ಪಡೆಯುವುದೇ ಹೆಂಗಸಿನ ಬದುಕಿನ ಪರಮೋಚ್ಛ ಗುರಿ ಎಂದು ಆಧುನಿಕ ವೈದ್ಯಕೀಯ ಸಾರಿತು. ಗಮನಿಸಿ: ಕೃತಕ ಗರ್ಭಧಾರಣೆ ಪ್ರಯೋಗ, ಸಂಶೋಧನೆ ಎಲ್ಲವೂ ಖಾಸಗಿಯವರಿಂದ ಅಭಿವೃದ್ಧಿಗೊಳಿಸಲ್ಪಟ್ಟವೇ ಹೊರತು ಯಾವ ಸರ್ಕಾರವೂ, ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಯೂ ಅದರ ಬೆಂಬಲಕ್ಕಿರಲಿಲ್ಲ. ಬಂಜೆತನವೊಂದು ‘ಕಾಯಿಲೆ’ ಎಂದು ಈವರೆಗೆ ಸಮಾಜ ಅಂದುಕೊಂಡಿರಲಿಲ್ಲ. ಆಯ್ದ ವೈದ್ಯರ-ಗ್ರಾಹಕರ ಆಯ್ಕೆಯನ್ನು ಸಂಪೂರ್ಣವಾಗಿ ಬೆಂಬಲಿಸುವ ಉದ್ಯಮವಾಗಿ ಅದು ಬೆಳೆಯಿತು.

ಎಂದರೆ ಲಕ್ಷಗಟ್ಟಲೆ ಖರ್ಚು ಮಾಡುವವರಿಗೆ ಮಾತ್ರ ಹೇಗಾದರೂ ಮಾಡಿ, ಎಂತಾದರೂ ಮಾಡಿ, ಬಾಡಿಗೆ ಗರ್ಭಕೋಶ-ಬಾಡಿಗೆ ತಾಯಿ-ಬಾಡಿಗೆ ಅಂಡ-ಬಾಡಿಗೆ ವೀರ್ಯಕಣಗಳ ಪಡೆದು ಮಗು ಪಡೆಯುವ ಸಾಧ್ಯತೆಯಿದೆ. ಆದರೆ ಈ ಸೌಲಭ್ಯ ನಿಲುಕದವರ ಅಸಹಾಯಕತೆ ಮತ್ತು ಕಸಿವಿಸಿಗಳಿಗೆ ಯಾವ ಉತ್ತರವಿದೆ?

ಇಲ್ಲಿ ಮಹಿಳೆಯರ ದೇಹದ ಮೇಲೆ, ಅದರಲ್ಲೂ ಬಡದೇಶಗಳ ಮಹಿಳೆಯರ ಮೇಲೆ ನಡೆಸುವ ಕ್ಲಿನಿಕಲ್ ಟ್ರಯಲ್ ಬಗೆಗೂ ಕೆಲಮಾತು ಹೇಳಬೇಕು. ಎರಡನೇ ವಿಶ್ವಯುದ್ಧದ ಬಳಿಕ ನ್ಯೂರೆಂಬರ್ಗ್ ಟ್ರಯಲ್ ನಡೆದಾಗ ಮನುಷ್ಯರನ್ನೊಳಗೊಂಡ ಪ್ರಯೋಗ ನಡೆಸುವಾಗ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಸ್ವಷ್ಟವಾಗಿ ಹೇಳಲಾಗಿದೆ. ಅದರ ಮೊದಲ ನೀತಿ ಇದು:

‘ಯಾವುದೇ ಪ್ರಯೋಗದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಒಪ್ಪಿಗೆ ನೀಡುವ ಕಾನೂನುಬದ್ಧ ಅವಕಾಶವಿರಬೇಕು. ಯಾವುದೇ ಒತ್ತಾಯ, ಮೋಸ, ವಂಚನೆ, ನಿರ್ಬಂಧ, ದಬಾಯಿಸುವಿಕೆ, ಅಥವಾ ಇನ್ಯಾವುದೇ ರೀತಿಯ ಒಳಹುನ್ನಾರಗಳಿಲ್ಲದೇ ಅವರಿಗೆ ಅವಕಾಶ ಚಲಾಯಿಸುವ ಮುಕ್ತ ಅಧಿಕಾರ ಇರಬೇಕು. ಅದರಲ್ಲಿ ಒಳಗೊಂಡ ವಸ್ತುವಿಷಯದ ಕುರಿತು ಸಾಕಷ್ಟು ಜ್ಞಾನ ಮತ್ತು ಗ್ರಹಿಕೆಯಿದ್ದು ಅದರಿಂದ ಸೂಕ್ತ ನಿರ್ಧಾರಕ್ಕೆ ಬರಲು ಸಮರ್ಥರಾಗುವಂತಿರಬೇಕು. ಈ ಕೊನೆಯ ಅಂಶ ನೆರವೇರಬೇಕಾದರೆ ಪ್ರಯೋಗದಲ್ಲಿ ಪಾಲ್ಗೊಳ್ಳುವವರಿಗೆ ಅದಕ್ಕಿಂತ ಪೂರ್ವದಲ್ಲಿಯೇ ಅದರ ಸ್ವರೂಪ, ಕಾಲಾವಧಿ, ಉದ್ದೇಶವನ್ನು ತಿಳಿಸಬೇಕು. ಜೊತೆಗೆ ಅದನ್ನು ನಡೆಸುವ ವಿಧಾನ ಹಾಗೂ ರೀತಿಯನ್ನು ತಿಳಿಸಬೇಕು. ಅದರಿಂದ ಆಗಬಹುದಾದ ಅನಾನುಕೂಲ ಮತ್ತು ಅಪಾಯಗಳನ್ನು ಮೊದಲೇ ನಿರೀಕ್ಷಿಸಬೇಕು. ಪ್ರಯೋಗದಲ್ಲಿ ಪಾಲ್ಗೊಳ್ಳುವುದರಿಂದ ತನ್ನ ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿತಿರಬೇಕು.’

ಆದರೆ ಇಂಥ ಯಾವ ಎಚ್ಚರಿಕೆ, ಮಾಹಿತಿಯಿಲ್ಲದಂತೆ ಟ್ರಯಲ್‌ಗಳು ನಡೆಯುತ್ತವೆ. ನೀವು ತಿನ್ನುವ ಎಷ್ಟೋ ಮಾತ್ರೆಗಳು, ಇಂಜಕ್ಷನ್ನುಗಳು ನಿಮಗರಿಯದಂತೆ ನಿಮ್ಮನ್ನು ಪ್ರಯೋಗ ಪಶುಗಳಾಗಿಸಿರುತ್ತವೆ. ಇವೆಲ್ಲ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆಂದರೆ ನಿಮಗೆ ತಿಳಿಯದೆ ನೀವೇ ನಿಮ್ಮ ಕೊರಳನ್ನು ಬಲಿಗಂಬಕ್ಕೆ ಒಡ್ಡಿರುತ್ತೀರಿ. ೨೦೧೨ರಲ್ಲಿ ಸರ್ವೈಕಲ್ ಕ್ಯಾನ್ಸರ್ ವ್ಯಾಕ್ಸೀನ್ ಯೋಜನೆ ಭಾರತದಲ್ಲಿ ಬಂತು. ಆಂಧ್ರಪ್ರದೇಶದಲ್ಲಿ ಹುಡುಗಿಯರು ಅಸ್ವಸ್ಥರಾಗಿ, ತೀರಿಕೊಂಡ ಬಳಿಕ ಅದನ್ನು ನಿಲ್ಲಿಸಲಾಯಿತು. ಆ ಪ್ರಯೋಗವೇನೋ ವಿವಾದ ಹುಟ್ಟಿಸಿ ನಿಂತುಹೋಯಿತು. ಆದರೆ ಜನರ ತಿಳುವಳಿಕೆಗೇ ಬರದೆ ಬಡದೇಶಗಳ ಎಷ್ಟು ಹೆಣ್ಮಕ್ಕಳ ಮೇಲೆ, ಬಡವರ ಮೇಲೆ ಪ್ರಯೋಗಗಳು ನಡೆಯುತ್ತಿವೆಯೋ ಯಾರಿಗೆ ಗೊತ್ತು?

ಪ್ರಪಂಚದ ಕಡುಬಡವರಲ್ಲಿ ಮೂರನೇ ಒಂದು ಭಾಗ ಜನ ಭಾರತೀಯರು. ಹುಟ್ಟಿದ ಪ್ರತಿ ಸಾವಿರ ಮಕ್ಕಳಲ್ಲಿ ೪೭ ಮಕ್ಕಳು ನಾನಾ ಕಾರಣಗಳಿಗೆ ಸಾವನ್ನಪ್ಪುತ್ತವೆ. ೫೦ ಸಾವಿರ ತಾಯಂದಿರು ಹೆರಿಗೆಯ ಸಮಯದಲ್ಲಿ ಒಂದು ವರ್ಷಕ್ಕೆ ಮರಣ ಹೊಂದುತ್ತಾರೆ. ಒಂದು ಲಕ್ಷ ಮಕ್ಕಳ ಸಜೀವ ಜನನಕ್ಕೆ ಎಷ್ಟು ತಾಯಂದಿರು ಮರಣ ಅಪ್ಪುತ್ತಾರೋ ಅದನ್ನು ತಾಯಿ ಮರಣ ದರ ಎನ್ನಲಾಗುತ್ತದೆ. ಭಾರತದಲ್ಲಿ ಪ್ರತಿ ೧೦ ನಿಮಿಷಕ್ಕೊಬ್ಬ ತಾಯಿ ಸಾಯುತ್ತಾಳೆ. ೨೦೧೦ರಲ್ಲಿ ಪ್ರತಿ ೬ ನಿಮಿಷಕ್ಕೊಬ್ಬಳು ಸಾಯುತ್ತಿದ್ದಳು. ಭಾರತದಲ್ಲಿ ೧೯೯೯ರಲ್ಲಿ ತಾಯಿ ಮರಣ ದರ ೪೩೭ ಇತ್ತು. ೨೦೧೩ರಲ್ಲಿ ೨೧೨ಕ್ಕೆ ಬಂದು ನಿಂತಿದೆ. ಆದರೆ ೨೦೧೫ರ ಹೊತ್ತಿಗೆ ತಲುಪಬೇಕಾದ ಗುರಿ ೧೦೯ ಆಗಿದೆ.

ಅಂಥದರ ನಡುವೆ ಫಾರ್ಮಾ ಕಂಪನಿಗಳು ಪರ್ಫಾಮೆನ್ಸ್ ಹೆಚ್ಚಿಸುವ/ನೆನಪಿನ ಶಕ್ತಿ ಉದ್ದೀಪಿಸುವ/ವಯಸ್ಸಾಗದಂತೆ, ರೋಗ ಬರದಂತೆ ತಡೆಗಟ್ಟುವ ಮಾಯಾ ಔಷಧಗಳ ಕುರಿತು ಮಾತನಾಡುತ್ತಾರೆ. ೬೦೦ ಕೋಟಿ ಜನಸಂಖ್ಯೆಯ ಭೂಮಿ ಮೇಲೆ ಎಷ್ಟೋ ಲಕ್ಷಾಂತರ ಬಡವರು, ಮಕ್ಕಳು, ಬಸುರಿಯರು ಕನಿಷ್ಠ ಆರೋಗ್ಯ ಸೌಲಭ್ಯ, ಅನ್ನ ಸಿಗದೆ ದಿನಕಳೆಯುತ್ತ ಅಕಾಲ ಮರಣವನ್ನಪ್ಪುತ್ತಿದ್ದಾರೆ. ಆದರೆ ಸಿರಿವಂತರ ಖಯಾಲಿ, ಅಗತ್ಯಗಳಿಗನುಗುಣವಾಗಿ ವೈದ್ಯಕೀಯ ಸಂಶೋಧನೆ ಹೆಚ್ಚೆಚ್ಚು ವಾಲತೊಡಗಿದೆ. ಖಾಸಗಿ ವಲಯಕ್ಕೆ ರೋಗ/ರೋಗಿಗಳಿಗಿಂತ ಹೆಚ್ಚಾಗಿ ಬರಲಿರುವ ರೋಗ ಪತ್ತೆಹ್ಚುವ, ಅದನ್ನು ತಡೆಗಟ್ಟುವ, ಆರೋಗ್ಯ ಕಾಪಾಡಿಕೊಳ್ಳುವ, ಸಾಮರ್ಥ್ಯ/ನೆನಪಿನ ಶಕ್ತಿ/ಎತ್ತರ/ಅಂದ ಹೆಚ್ಚಿಸುವ ಕುರಿತೇ ಹೆಚ್ಚು ಆಸಕ್ತಿ. ಏಕೆಂದರೆ ಆರೋಗ್ಯವಂತರ ಮಾರ್ಕೆಟ್ ರೋಗಿಗಳದಕ್ಕಿಂತ ವಿಸ್ತಾರವಾದದ್ದಲ್ಲವೇ?

ಹೀಗೆ ಹೆಣ್ಣು, ಹೆಣ್ತನ, ಸೌಂದರ್ಯದ ಪರಿಕಲ್ಪನೆಗಳನ್ನು ತನಗೆ ತಾನೇ ಮರುವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿರುವ ಕಾಲದಲ್ಲಿ ಮಾರುಕಟ್ಟೆ ಕೊಡಮಾಡುತ್ತಿರುವ ನಿರೂಪಗಳು ಅವಳ ದಾರಿತಪ್ಪಿಸುತ್ತ ಮತ್ತದೇ ಪಾರಂಪರಿಕ ನೆಲೆಗೆ ಅವಳನ್ನು ಕಟ್ಟಿ ಹಾಕುವಂತಿವೆ. ಅದರ ಜೊತೆಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ, ಮಹಿಳೆಯ ಆಪದ್ಭಾಂಧವ ವ್ಯವಸ್ಥೆಯಾಗಿರಬೇಕಾದ ವೈದ್ಯಕೀಯ ರಂಗವು ಅವಳ ಹುಟ್ಟಿನ ಮೂಲಕ್ಕೇ ಕೊಡಲಿ ಪೆಟ್ಟು ಕೊಡುತ್ತ ಲಿಂಗರಾಜಕಾರಣದ ಭಾಗವಾಗಿರುವುದು ಆಧುನಿಕತೆಯ ವಿಪರ್ಯಾಸವಾಗಿದೆ. ಈ ಸೂಕ್ಷ್ಮಗಳನ್ನು ‘ಕಲಿತ’ ವೈದ್ಯರಿಗೆ. ಆರೋಗ್ಯವೆಂಬ ಉದ್ಯಮಕ್ಕೆ, ಮಹಿಳೆಯನ್ನೊಳಗೊಂಡು ಇಡೀ ಸಮಾಜಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುವುದು ಹೇಗೆ? ಯಾರು?

ಇದು ಇವತ್ತಿನ ಮಹಿಳಾ ಚಳುವಳಿಯ ಒಂದು ಸವಾಲಾಗಿದೆ.