Friday 31 October 2014

ರಾಜಮಾರ್ಗದಲೊಂದು ಪಯಣ: ಸಾ(ರ)ಥಿಯ ಪ್ರಶ್ನೆಗಳೊಂದಿಗೆ..




ಈಗ ಪ್ರವಾಸ ಕಷ್ಟವಲ್ಲ: ಕೈಯಲಷ್ಟು ದುಡ್ಡು, ಕುತೂಹಲ, ಒಂಟಿಯೆನಿಸದಂತೆ ಜೊತೆಯೊಂದು ಇದ್ದರೆ ಎಲ್ಲಿಗಾದರೂ ಹೋಗಿಬರಬಹುದು. ಆದರೆ ಹಾಗೆ ಹೋದಾಗ ಅಪರಿಚಿತ ಸ್ಥಳಗಳಲ್ಲಿ ಸಾಥಿಯಾಗಿ ಸಿಗುವ ಕೆಲವರು ಬದುಕೆಂಬ ಅಚ್ಚರಿಯನ್ನು ನಮ್ಮೊಳಗೆ ತುಂಬುತ್ತಾರೆ. ನಮ್ಮ ಇತ್ತೀಚಿನ ದೆಹಲಿ-ಆಗ್ರಾ-ರಾಜಸ್ಥಾನ ಪ್ರವಾಸದಲ್ಲಿ ಜೊತೆಯಾದ ಡ್ರೈವರ್ ಅನಿಲ್ ಒಂದು ವಾರ, ಸಾವಿರ ಕಿಲೋಮೀಟರಿಗಿಂತ ಹೆಚ್ಚು ದೂರವನ್ನು ನಮ್ಮೊಡನೆ ಕ್ರಮಿಸಿದರು. ಅನಿಲ್ ತಿಳುವಳಿಕೆಯ, ಪ್ರಾಮಾಣಿಕ, ಮಿತಭಾಷಿ ಮನುಷ್ಯ. ಅವರ ನಡೆನುಡಿಗಳೇ ವ್ಯಕ್ತಿತ್ವಕ್ಕೊಂದು ಗಾಂಭೀರ್ಯ ಕೊಟ್ಟಿದ್ದವು. ೨೦ ವರ್ಷಗಳಿಂದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಅವರು ಬಲುಬೇಗ ನಮ್ಮ ಆದ್ಯತೆ, ಅಪೇಕ್ಷೆಗಳನ್ನು ಗುರುತಿಸಿ ಸಂದುಗೊಂದು ಮೂಲೆಗಳ ಫೋಟೋ ತೆಗೆಯಲು ಅನುವು ಮಾಡಿಕೊಟ್ಟಿದ್ದರು. ವರ್ತಮಾನದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತ ತಾವು ಆಮ್‌ಆದ್ಮಿ ಬೆಂಬಲಿಸಿದ್ದಾಗಿ ಹೇಳಿದರು. ಅವರ ಪ್ರಕಾರ ದೆಹಲಿಯಲ್ಲಿ ಏನಾದರೂ ಬದಲಾವಣೆ ತರುವುದಾದರೆ ಅದು ಆಮ್‌ಆದ್ಮಿ ಪಕ್ಷಕ್ಕೆ ಮಾತ್ರ ಸಾಧ್ಯವಿತ್ತು. ‘ಆದರೆ ಏನು ಮಾಡುವುದು? ಹಾಗಾಗಿ ಹೋಯಿತು.’

ಆ ಸಹರಥಿಯೊಂದಿಗಿನ ಪ್ರವಾಸದ ಒಂದು ತುಂಡು ಅನುಭವ ನಿಮ್ಮೊಂದಿಗೆ:

ದೆಹಲಿಯ ನಾಲ್ಕೂ ದಿಕ್ಕಿನಲ್ಲಿ ಮುಘಲ್ ಕಾಲದ ಗಡಿಗುರುತು ಎಂದು ಗಡಿ ಸೂಚಿಸುವ ಕಲ್ಲುಕಂಬಗಳಿವೆ. ಅಂಥ ಒಂದು ನಮಗೆದುರಾಗಿ ದೆಹಲಿ ಹೊರವಲಯಕ್ಕೆ ಬಂದೆವೆಂದು ಹೇಳಿತು. ಅನಿಲ್ ಸೀಳುದಾರಿಯಲ್ಲಿ ವಾಹನ ನಿಲ್ಲಿಸಿ, ‘ಆಗ್ರಾಗೆ ಹೋಗಲು ನಮ್ಮೆದುರು ಎರಡು ಆಯ್ಕೆಗಳಿವೆ: ಮೊದಲನೆಯದು ಹಳೆಯ ದೆಹಲಿ-ಆಗ್ರಾ ರಸ್ತೆ. ಈ ಹೊತ್ತು ಸರಿಸುಮಾರು ಐದು ಘಂಟೆ ಬೇಕು, ಎರಡನೆಯದು ಯಮುನಾ ಎಕ್ಸ್‌ಪ್ರೆಸ್ ವೇ. ದೇಶದಲ್ಲೇ ನಂಬರ್ ವನ್. ಸ್ವಲ್ಪ ತುಟ್ಟಿ, ಆದರೆ ಎರಡು ತಾಸಿನಲ್ಲಿ ಹೋಗಬಹುದು. ಯಾವುದರಲ್ಲಿ ಹೋಗುವ?’ ಎಂದರು. ದೇಶದಲ್ಲೇ ಅಂಥ ಹೈವೇ ಇಲ್ಲ ಎನ್ನುತ್ತಾರಲ್ಲ, ನೋಡೇಬಿಡುವ ಎಂದು ಯಮುನಾ ಎಕ್ಸ್‌ಪ್ರೆಸ್ ವೇ ದಾರಿ ಹಿಡಿದೆವು.

ನೋಯ್ಡಾ ದಾಟಿತು. ಗ್ರೇಟರ್ ನೋಯ್ಡಾ ಬಂದಿತು. ಅಲ್ಲಿ ಬಡಾವಣೆಗಳನ್ನು ಮಲ್ಲೇಶ್ವರ, ಗಾಂಧಿನಗರ, ಜಯನಗರ, ಜೆಪಿ ನಗರ ಮುಂತಾದ ನಾಮಪದಗಳ ಬದಲಾಗಿ ಸೆಕ್ಟರುಗಳೆಂದು ಸಂಖ್ಯೆಯಿಂದ ಗುರುತಿಸಲಾಗಿದೆ. ಆ ಜಾಗ ಮೊದಲು ಹೇಗಿತ್ತು ಎಂದು ತಿಳಿಸುವ ಪಳೆಯುಳಿಕೆಗಳ ನಡುವೆಯೇ ಇನ್ನು ಒಂದು ವರ್ಷದ ನಂತರ ಹೇಗಾದೀತು ಎಂದು ಊಹಿಸಿಕೊಳ್ಳಲು ಹೋರ್ಡಿಂಗುಗಳು ನೆರವಾಗುತ್ತವೆ.


ರಣರಣ ಬಿಸಿಲಿನಲ್ಲಿ ಹೊಳೆಯುತ್ತಿದ್ದ, ಎರಡೂ ಕಡೆ ೬+೨ ಲೇನುಗಳಿರುವ ದೋ..ಡ್ಡ ಹೆದ್ದಾರಿ ಯಮುನಾ ಎಕ್ಸ್‌ಪ್ರೆಸ್ ವೇ. ಕಾರಲ್ಲಿ ಕೂತಿದ್ದೇವೋ, ಕೋಣೆಯ ಕುರ್ಚಿಯಲ್ಲಿ ಕೂತಿದ್ದೇವೋ ಗೊತ್ತಾಗದಂತೆ ಕುಡಿದ ನೀರು ಅಲುಗದಂತೆ ದಾರಿ ಸವೆಯುತ್ತಿತ್ತು. ಒಂದು ತಿರುವಿಲ್ಲ, ಸೈಡ್ ಕೊಡಲು ಆಚೀಚೆ ಹೋಗುವ ಕೆಲಸವಿಲ್ಲ. ಮುಂದೆ ಬರುವವ ತಾಗಿಸಿಯಾನೆಂಬ ಆತಂಕವಿಲ್ಲ. ಹೊಂಡ ಬಂದೀತೋ, ಗುಂಡಿಯೋ ಎಂಬ ಚಿಂತೆಯಿಲ್ಲ. ಓವರ್‌ಟೇಕ್ ಮಾಡಬೇಕೆಂದರೆ ಪೂರ್ತಾ ಬಲಗಡೆಗೆ ಹೋಗಬೇಕು. ಇಲ್ಲದಿದ್ದರೆ ಒಂದು ಲೇನ್ ಹಿಡಿದರೆ ಮುಗಿಯಿತು, ನೇರ ಅಂದರೆ ನೇರ. ವೇಗ ಗಂಟೆಗೆ ೧೦೦ ಕಿಮೀ ಮೀರಬಾರದು ಎನ್ನುವುದನ್ನು ಬಿಟ್ಟರೆ ಡ್ರೈವರ್ ನಿದ್ದೆ ಮಾಡಿದರೂ ಗಾಡಿ ತಾನೇ ಹೋದೀತು. ಇಂಥ ರಸ್ತೆಯಲ್ಲಿ ಸೆಲ್ಫ್‌ಡ್ರೈವ್ ವೆಹಿಕಲ್ ತರಬಹುದು ಎಂದು ನಾಳಿನ ತಂತ್ರಜ್ಞಾನ ಕುರಿತು ಮಗಳು ಹೇಳತೊಡಗಿದಳು.

ಅಮ್ಯೂಸ್‌ಮೆಂಟ್ ಪಾರ್ಕ್, ಅಪಾರ್ಟ್‌ಮೆಂಟ್, ಶೈಕ್ಷಣಿಕ ಸಂಘಸಂಸ್ಥೆಗಳು, ಕೈಗಾರಿಕೆ, ವ್ಯಾಪಾರೋದ್ಯಮಗಳನ್ನು ಎರಡೂ ಕಡೆ ಅಭಿವೃದ್ಧಿ ಪಡಿಸುವುದು ತಮ್ಮ ಗುರಿಯೆಂದು ಅಭಿವೃದ್ಧಿ ಪ್ರಾಧಿಕಾರದ ಬೋರ್ಡುಗಳು ಸಾರಿ ಹೇಳುತ್ತಿದ್ದವು. ೨೦೧೦ರಲ್ಲಿ ಶುರುವಾದ ಮಹಾಮಾಯಾ ಟೆಕ್ನಿಕಲ್ ವಿಶ್ವವಿದ್ಯಾಲಯ, ಗೋಲ್ಗೊತಿಯಾ ಖಾಸಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಹಾದುಹೋದವು. ಭಾರತದ ಏಕೈಕ ಗ್ರ್ಯಾನ್‌ಪ್ರಿ ಫಾರ್ಮುಲಾ ರೇಸ್ ಟ್ರ್ಯಾಕ್ ಇರುವ ಮೈದಾನ ವಿಸ್ತಾರ ಜಾಗದಲ್ಲಿ ಹರಡಿಕೊಂಡಿತ್ತು. ನಂತರ ಸ್ಪೋರ್ಟ್ಸ್ ಸಿಟಿ, ಗಾಲ್ಫ್ ಕೋರ್ಸ್, ಅಸಂಖ್ಯ ಬಹುಮಹಡಿ ಫ್ಲಾಟುಗಳ ಕಾಡು, ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣ.. ಇಕ್ಕೆಲಗಳಲ್ಲಿ ಏನುಂಟು? ಏನಿಲ್ಲ?! ಅಷ್ಟು ಕಟ್ಟಡ ಕೆಲಸಕ್ಕೆ ಬೇಕಾದ ಇಟ್ಟಿಗೆಯಾಗಿ ಸಾವಿರಾರು ಎಕರೆ ಹೊಲಗಳ ಮೇಲ್ಮೈಯ ಫಲವತ್ತಾದ ಮಣ್ಣು ಅಕಾ ಅಷ್ಟು ದೂರದಲ್ಲಿ ನೂರಾರು ಭಟ್ಟಿಗಳಲ್ಲಿ ಹೊಗೆಯುಗುಳುತ್ತ ಸುಟ್ಟುಕೊಳ್ಳುತ್ತಿದ್ದವು.

ರಸ್ತೆಯೇನೋ ಅತ್ಯದ್ಭುತವಾಗಿತ್ತು. ಆದರೆ ವಾಹನಗಳೇ ಇಲ್ಲ. ಹೈವೇ ಎಂದ ಮೇಲೆ ಟ್ರಾಫಿಕ್ ಇರಬೇಕಲ್ಲವೆ? ಆದರೆ ಅಲ್ಲೊಂದು ಇಲ್ಲೊಂದು ವಾಹನ, ಅದೂ ಕಾರುಗಳಷ್ಟೇ ಕಂಡವು. ಟ್ರಕ್ ಮತ್ತು ಭಾರೀ ವಾಹನಗಳಂತೂ ಇಲ್ಲವೆನ್ನುವಷ್ಟು ಕಡಿಮೆ. ಆಚೀಚೆ ಭಣಭಣ. ಜನರಿಲ್ಲ, ಅಂಗಡಿ ಹೋಟೆಲುಗಳಿಲ್ಲ, ಪ್ರಾಣಿಗಳಿಲ್ಲ, ಊರುಗಳಿಲ್ಲ. ಹೈವೇಗಳ ಮೇಲೆ ಸಾಮಾನ್ಯವಾಗಿ ಕಾಣುವ ಢಾಬಾವೂ ಕಾಣಿಸಲಿಲ್ಲ. ಅಂತೂ ಹೈವೇ ಪಕ್ಕ ಒಂದು  ಪಾಶ್ ‘ಸುವಿಧಾ’ ಕಾಣಿಸಿ ಅತ್ತ ಹೊರಟೆವು.


ಅಲಿಘರ್, ಮಥುರಾ ಮತ್ತಿತರ ಊರುಗಳ ಹೊರಹೊರಗೇ ಈ ರಸ್ತೆ ಹಾರಿಕೊಂಡು ಹೋಗುತ್ತದೆ. ಮೊದಲೆಲ್ಲ ಎಷ್ಟು ಹೆಚ್ಚಾದರೆ ಅಷ್ಟು ಊರುಗಳನ್ನು ಜೋಡಿಸಲು ರಸ್ತೆ ಮಾಡುತ್ತಿದ್ದರು. ಒಂದು ಹೈವೇ ಹಾದುಹೋಯಿತು ಎಂದರೆ ಊರಿನ ಲಕ್ಷಣ, ಭೂಮಿಯ ದರ ಎಲ್ಲ ಬದಲಾಗುತ್ತಿತ್ತು. ಆದರೆ ಊರೊಳಗೆ ಹಾದುಹೋಗದ ಇಂಥ ರಸ್ತೆಗಳಿಂದ ಆ ಊರವರಿಗೇನು ಲಾಭವಿದೆ?

ನಮಗೆ ಹೀಗೆನಿಸುವ ಹೊತ್ತಿಗೆ ಒಂದೆಡೆ ರಸ್ತೆಯ ಅಂಚಿನಲ್ಲಿ ಜನಸಂದಣಿ ಕಾಣಿಸಿತು. ಬಾವುಟಗಳೂ, ಪಟಗಳೂ ಹಾರುತ್ತಿರುವುದರಿಂದ ದರ್ಗಾವೋ, ಗದ್ದಿಗೆಯೋ ಇರಬೇಕೆಂದುಕೊಂಡೆವು. ನಮ್ಮ ಊಹೆಗೆ ಅನಿಲ್ ನಕ್ಕರು. ಅದೊಂದು ಅಪಘಾತ ನಡೆದ ಸ್ಥಳ. ಅಪಘಾತವಾದ ಬೈಕ್ ಅಲ್ಲಿ ದೇವರ ರೂಪದಲ್ಲಿದೆ. ದಿನಾ ಬೈಕಿಗೆ ಪೂಜೆ ನಡೆಯುತ್ತದೆ. ಬೈಕ್ ಹಾಗೂ ಅಪಘಾತದಲ್ಲಿ ಅಲ್ಲೇ ಸತ್ತ ಅದರ ಸವಾರನ ಮಹಿಮೆ ಎಂಥದೆಂದರೆ ಅಲ್ಲಿ ಪವಾಡಗಳು ಜರುಗಿವೆ. ಹಲವು ಘೋರ ದುರಂತಗಳು ತಪ್ಪಿವೆ. ಸತ್ತವರು ಬದುಕಿದ್ದಾರೆ. ಜಖಂ ಆದ ವಾಹನಗಳು ತಾವೇ ಚಲಿಸಿ ಸವಾರನನ್ನು ಆಸ್ಪತ್ರೆಗೆ ಒಯ್ದಿವೆ! ಎಂದೇ ಜನ ಹರಕೆ ಹೊತ್ತು, ಹೊಸ ವಾಹನ ಕೊಂಡು ಅಲ್ಲಿ ಬರುತ್ತಾರೆ ಎಂದು ವಿವರಿಸಿದರು.

ಇನ್‌ಕ್ರೆಡಿಬಲ್ ಇಂಡಿಯಾ!

ಯಮುನಾ ಎಕ್ಸ್‌ಪ್ರೆಸ್ ವೇ

ದೆಹಲಿ ಮತ್ತು ಆಗ್ರಾಗಳ ನಡುವಿನ ೧೬೫ ಕಿಲೋಮೀಟರ್ ಉದ್ದದ ಯಮುನಾ ಎಕ್ಸ್‌ಪ್ರೆಸ್ ವೇ ದೇಶದಲ್ಲೇ ಅತಿ ಉದ್ದದ ಆರು ಲೇನ್‌ಗಳ ನಿಯಂತ್ರಿತ ಎಕ್ಸ್‌ಪ್ರೆಸ್ ವೇ. ಇದು ಅತಿಬಳಕೆ, ದುರ್ಬಳಕೆಯಿಂದ ಕೃಶಳಾದ ಯಮುನಾ ನದಿಯ ಪೂರ್ವ ದಂಡೆಯಲ್ಲಿದೆ. ಹಳೆಯ ಗ್ರಾಂಡ್‌ಟ್ರಂಕ್ ರಸ್ತೆ (ಎನ್‌ಎಚ್ ೯೧) ಹಾಗೂ ಎನ್‌ಎಚ್-೨ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ೨೦೦೧ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ರಾಜನಾಥ್ ಸಿಂಗ್ ‘ತಾಜ್ ಎಕ್ಸ್‌ಪ್ರೆಸ್ ವೇ’ ಯೋಜನೆ ರೂಪಿಸಿದರು. ಆದರೆ ಸರ್ಕಾರ ಬದಲಾಗಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಮಾಯಾವತಿ ಮುಖ್ಯಮಂತ್ರಿಯಾದಾಗ ಅದಕ್ಕೆ ‘ಯಮುನಾ ಎಕ್ಸ್‌ಪ್ರೆಸ್ ವೇ’ ಎಂದು ಮರುನಾಮಕರಣ ಮಾಡಿ ೨೦೦೭ರಲ್ಲಿ ನಿರ್ಮಾಣ ಶುರುವಾಯಿತು. ೨೦೧೨ ಆಗಸ್ಟ್‌ನಲ್ಲಿ ಪೂರ್ಣಗೊಂಡಿತು.

ಗೌತಮಬುದ್ಧ ನಗರ, ಬುಲಂದ ಶಹರ್, ಅಲಿಘರ್, ಹಾತ್ರಾಸ್, ಮಥುರಾ, ಆಗ್ರಾ ಜಿಲ್ಲೆಗಳ ೧೧೮೭ ಹಳ್ಳಿಗಳು ಯಮುನಾ ಎಕ್ಸ್‌ಪ್ರೆಸ್ ವೇಗೆ ಭೂಮಿ ಬಿಟ್ಟುಕೊಟ್ಟಿವೆ. ದೆಹಲಿ-ಆಗ್ರಾ ನಡುವಿನ ಪ್ರಯಾಣ ಸಮಯವನ್ನು ೪ ತಾಸಿನಿಂದ ೧೦೦ ನಿಮಿಷಗಳಿಗಿಳಿಸುವ ಮಹತ್ವಾಕಾಂಕ್ಷೆಯಿಂದ ಇದು ರೂಪುಗೊಂಡಿದ್ದು ಜೇಪೀ ಗ್ರೂಪ್ ಎಂಬ ಕಂಪನಿ ಬಂಡವಾಳ ಹಾಕಿದೆ. ಈ ಹೈವೇ ದೀರ್ಘಕಾಲ ಬಾಳಿಕೆ ಬರುವ ಸಿಮೆಂಟ್ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿದೆ. ೩೫ ಅಂಡರ್‌ಪಾಸ್ ಹಾಗೂ ೫ ಟೋಲ್‌ಗೇಟ್‌ಗಳಿದ್ದು ಪೂರ್ತಿ ಬಲಗಡೆಯ ಲೇನಿನಲ್ಲಷ್ಟೇ ಓವರ್‌ಟೇಕ್ ಮಾಡಬೇಕು. ಅಪಘಾತ ಮತ್ತು ಮಿತಿಮೀರಿದ ವೇಗ ತಡೆಗಟ್ಟಲು ಪ್ರತಿ ಐದು ಕಿಮೀಗೊಂದು ಸಿಸಿಟಿವಿಯನ್ನು ಅಳವಡಿಸಲಾಗಿದ್ದು ಅಲ್ಲಲ್ಲಿ ಗಸ್ತು ವಾಹನಗಳು ಕಾಣುತ್ತವೆ.


ನಾವು ನೋಡಿದಾಗ ವಾಹನಗಳು ತುಂಬ ವಿರಳವಾಗಿ ಕಂಡುಬಂದರೂ ಪ್ರತಿದಿನ ಒಂದು ಲಕ್ಷ ವಾಹನಗಳು ಈ ರಸ್ತೆ ಬಳಸಬಹುದೆಂದು ಅಂದಾಜು ಮಾಡಲಾಗಿದೆ. ಸಾವಿರಾರು ಕಿಮೀ ಚಲಿಸಬೇಕಾದವರಿಗೆ ಈ ಸುಂಕ ತುಟ್ಟಿ ಎನ್ನುವುದೇ ಕಡಿಮೆ ವಾಹನಗಳು ಓಡಾಡಲು ಕಾರಣ ಎಂದರು ಅನಿಲ್. ಅಲ್ಲಿನ ಸುಂಕದರ ಹೀಗಿದೆ:

ಅಲಿಘರ್, ಮಥುರಾ, ಆಗ್ರಾ ಎಂದು ದೂರವನ್ನು ಮೂರು ಭಾಗವಾಗಿಸಿಕೊಂಡು ಸುಂಕ ವಿಧಿಸಲಾಗುತ್ತದೆ. ದೆಹಲಿ-ಆಗ್ರಾ ನಡುವೆ ಒಮ್ಮೆ ಹೋಗಲು ವಿಧಿಸುವ ಶುಲ್ಕ ಹೀಗಿದೆ:

ದ್ವಿಚಕ್ರ ವಾಹನಗಳಿಗೆ - ೧೫೦ ರೂ.
ಕಾರ್/ಜೀಪ್/ವ್ಯಾನ್ - ೩೨೦ ರೂ.
ಮಿನಿ ಬಸ್/ಲಾರಿ   - ೫೦೦ ರೂ.
ಬಸ್/ಟ್ರಕ್        - ೧೦೫೦ ರೂ.
ಮಲ್ಟಿ ಆಕ್ಸೆಲ್ ವಾಹನ - ೧೬೦೦ ರೂ.
ಏಳಕ್ಕಿಂತ ಹೆಚ್ಚು ಆಕ್ಸೆಲ್ - ೨೧೦೦ ರೂ.
ಇರುವ ವಾಹನ

ಮರಳಿ ೨೪ ತಾಸಿನಲ್ಲಿ ಬರುವುದಾದರೆ ಒಂದೂವರೆಪಟ್ಟು ಕೊಡಬೇಕು. ತಿಂಗಳಿಗೆ ೧೯ಕ್ಕಿಂತ ಹೆಚ್ಚು ಸಲ (ಹತ್ತೊಂಭತ್ತೇ ಏಕೆ?) ಬಳಸುವ ವಾಹನಗಳಿಗೆ ವಿಶೇಷ ರಿಯಾಯ್ತಿ! ಅಂದಹಾಗೆ ೧೬೫ ಕಿಲೋಮೀಟರು ದೂರದ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ತಗುಲಿದ ವೆಚ್ಚ ೧೨,೮೪೦ ಕೋಟಿ ರೂಪಾಯಿ! ೨೦೧೪, ಜೂನ್ ೨೦ಕ್ಕೆ ಮಂಡಿಸಿದ ಉತ್ತರಪ್ರದೇಶ ರಾಜ್ಯದ ಒಟ್ಟೂ ಆಯವ್ಯಯದ ಕೊರತೆ ೪,೫೭೦ ಕೋಟಿ ರೂಪಾಯಿ..

***

ನಿವೃತ್ತಿ ಅನಿವಾರ್ಯವಾಗುವ ತನಕ ಡ್ರೈವಿಂಗ್‌ನಿಂದಲೇ ಬದುಕು ನಡೆಸಬೇಕಾದ ಅನಿಲ್ ತನ್ನಿಬ್ಬರು ಮಕ್ಕಳನ್ನು ಹೇಗಾದರೂ ಓದಿಸಿ ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಹಚ್ಚುವುದಾಗಿ ಹೇಳಿದರು. ಮನೆಬಿಟ್ಟು ಹೊರಟವರು ವಾಪಸು ಬರುವುದೇ ಖಾತ್ರಿಯಿರದ ಈ ಕೆಲಸ ಮಕ್ಕಳಿಗೆ ಬೇಡ ಎನ್ನುವುದು ಅವರ ನಿಲುವು. ತಮ್ಮ ವೃತ್ತಿಬಾಂಧವರ ಅದರಲ್ಲೂ ಟ್ರಕ್ ಡ್ರೈವರ್ ಗೆಳೆಯರ ಕುರಿತು ಅವರ ಮಾತು ತಿರುಗಿತು

ಭಾರತದ ಅಜಮಾಸು ೪೮ ಲಕ್ಷ ಟ್ರಕ್ ಡ್ರೈವರುಗಳ ಬದುಕಿನತ್ತ ಕಣ್ಣುಹಾಯಿಸಿದರೆ ನಮ್ಮ ಆರ್ಥಿಕತೆಯ ಬೆನ್ನೆಲುಬಾದ ಅವರ ಜೀವನ ಹೇಗಿದೆಯೆಂದು ತಿಳಿಯುತ್ತದೆ. ದೇಶವೆಂಬ ವಾಹನದ ಚಕ್ರ ಚಲಿಸಲು ಎಷ್ಟೋ ಲಕ್ಷಾಂತರ ಜೀವಗಳು ಬದುಕಿನ ಬೆಲೆ ತೆರುತ್ತಿದ್ದಾರೆಂದು ಗೊತ್ತಾಗುತ್ತದೆ. ಜೀವಮಾನವಿಡೀ ದೂರದೂರದ ರಾಜ್ಯ-ಊರುಗಳಿಗೆ ಸಾಮಾನು ಸಾಗಿಸುವ ಟ್ರಕ್ ಡ್ರೈವರು/ಕ್ಲೀನರುಗಳದ್ದು ಕಡಿಮೆ ಸಂಬಳಕ್ಕೆ ಅತಿ ಅಪಾಯಕಾರಿ ಮತ್ತು ಏಕತಾನತೆಯ ಕೆಲಸ. ಕೆಲವೊಮ್ಮೆ ೧೫-೨೦ ದಿನ ರಸ್ತೆಮೇಲೆ ಇರಬೇಕಾಗುತ್ತದೆ. ಲೋಡ್ ಇಳಿಸಿದ ಕೂಡಲೇ ಮತ್ತೆ ಯಜಮಾನ ಹೇಳಿದಲ್ಲಿಗೆ ಹೊರಡಲು ಸಿದ್ಧವಾಗಬೇಕು. ವಾರಗಟ್ಟಲೆ ಮನೆ, ಹೆಂಡತಿ-ಮಕ್ಕಳಿಂದ ದೂರವುಳಿಯಬೇಕು. ಮನರಂಜನೆ, ವಿರಾಮಗಳಿಲ್ಲದೆ ದಿನರಾತ್ರಿ ಚಲಿಸಬೇಕು. ರಸ್ತೆ ಬದಿಯಿರುವ ಢಾಬಾಗಳಲ್ಲೇ ಊಟ, ನಿದ್ದೆ, ಸ್ನಾನ ಎಲ್ಲ ಮುಗಿಸಬೇಕು. ಬೇಸಿಗೆಯಲ್ಲಿ ಎಸಿಯಲ್ಲದ ಕ್ಯಾಬಿನ್ನಿನಲ್ಲಿ ಬಿಸಿಗಾಳಿ ಸಹಿಸಬೇಕು. ಮಳೆಗಾಲದಲ್ಲಿ ಜಾರುವ ರಸ್ತೆಯ ಮೇಲೆ ಲೋಡು ಸರಿಯಿದೆಯೋ ಇಲ್ಲವೋ ಎಂದು ಮತ್ತೆಮತ್ತೆ ಖಚಿತಪಡಿಸಿಕೊಳ್ಳುತ್ತ ಮುಂದೆ ಸಾಗಬೇಕು. ಒಂದೇ ಭಂಗಿಯಲ್ಲಿ, ಕೊನೆಯಿರದ ಏಕತಾನತೆಯಲ್ಲಿ ಸಾವಿರಾರು ಕಿಲೋಮೀಟರ್ ದಾರಿಯನ್ನು ಒಬ್ಬಿಬ್ಬ ಡ್ರೈವರ್/ಕ್ಲೀನರನೊಡನೆ ಕ್ರಮಿಸಬೇಕು.

ಕೆಲಸವೆಷ್ಟೋ ಅಷ್ಟೇ ವಿರಾಮವೂ ಮನುಷ್ಯನಿಗೆ ಮುಖ್ಯ. ಆದರೆ ವಾರಗಟ್ಟಲೆ ರಸ್ತೆ ಮೇಲಿರುವವರಿಗೆ ವಿರಾಮವೆಂದರೆನು? ಲಾರಿ ನಿಲಿಸಿ, ನೆಲದ ಮೇಲೆ ಬಟ್ಟೆ ಹಾಸಿ, ಯಾವುದಾದರೂ ಢಾಬಾದಲ್ಲಿ ೩-೪ ತಾಸು ಮಲಗುವುದು. ಮನರಂಜನೆಯೆಂದರೆ ಹಾಡು ಕೇಳುವುದು ಅಥವಾ ಬೀಡಿ, ಸಿಗರೇಟು, ಕುಡಿತ ವಗೈರೆ ಚಟಗಳಿಗೆ ದೇಹವೊಪ್ಪಿಸುವುದು. ಮನರಂಜನೆಯಿಲ್ಲದ ಕೆಲಸವೇ ಅವರು ರಿಸ್ಕಿ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಡ್ರೈವರುಗಳಲ್ಲಿ ಸ್ಟ್ರೆಸ್ ಕಾರಣದಿಂದ ಅನೇಕ ಕಾಯಿಲೆಗಳು ಅವಧಿಪೂರ್ವವಾಗಿ ಕಾಣಿಸಿಕೊಳ್ಳುತ್ತಿವೆ. ಏರುತ್ತಿರುವ ಏಡ್ಸ್ ಮತ್ತಿತರ ಲೈಂಗಿಕ ರೋಗಗಳ ಪ್ರಮಾಣವೂ ಆತಂಕಕಾರಿಯಾಗಿದೆ.

ಅನಿಲ್ ಹೇಳಿದಂತೆ ಸೂಕ್ತ ಪಗಾರವಿಲ್ಲದೇ ದಿನಕ್ಕೆ ೧೮-೨೦ ತಾಸು ಕೆಲಸ ಮಾಡುವ ಟ್ರಕ್ ಡ್ರೈವರುಗಳು ಕನಿಷ್ಠ ಅವಧಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಬೇಕು. ದಿನದ ಯಾವುದಾದರೂ ಒಂದು ಅವಧಿಯ ೪-೫ ತಾಸು ಟ್ರಕ್ಕುಗಳು ರಸ್ತೆ ಮೇಲಿರಬಾರದೆಂಬ ಕಾನೂನು ಮಾಡಬೇಕು. ಅವರಿಗೆ ಕೊಡುವ ದಿನಭತ್ಯೆ ಲಾಡ್ಜಿಗೆ ಹೋಗಿ ಉಳಿಯಲು ಸಾಕಾಗುವುದಿಲ್ಲ. ಎಂದೇ ಟ್ರಕ್ ಡ್ರೈವರುಗಳಿಗೆ ಮಾತ್ರ ಮೀಸಲಾದ ಕಡಿಮೆ ಬೆಲೆಯ ವಸತಿ ವ್ಯವಸ್ಥೆ ಮಾಡಬೇಕು. ಹೈವೇ ಪಕ್ಕ ಪ್ರಯಾಣಿಕರಿಗೆ ಸುವಿಧಾ ಇರುತ್ತದೆ. ವಾಹನಕ್ಕೆ ಬಂಕ್, ಗ್ಯಾರೇಜುಗಳಿರುತ್ತವೆ. ಆದರೆ ಡ್ರೈವರುಗಳಿಗೆ? ಹೆದ್ದಾರಿಗಳಲ್ಲಿ ಕಡ್ಡಾಯವಾಗಿ ನಾಲ್ಕು ತಾಸಿನ ದಾರಿ ಕ್ರಮಿಸಿದ ಕೂಡಲೇ ಒಂದು ‘ಡ್ರೈವರ್ ಸುವಿಧಾ’ ಇರುವಂತೆ ನೋಡಿಕೊಳ್ಳಬೇಕು. ಆಗ ಅನಿವಾರ್ಯವಾಗಿ ಅವರು ವಿರಮಿಸುತ್ತಾರೆ. ಮನುಷ್ಯರಂತೆ ಬದುಕಲು ಅದು ಅತಿ ಅವಶ್ಯವಾಗಿದೆ.

***

ಯಮುನಾ ಎಕ್ಸ್‌ಪ್ರೆಸ್ ವೇ ನನ್ನಲ್ಲೂ ಕೆಲ ಪ್ರಶ್ನೆಗಳನ್ನು ಕೆದಕಿತು:

ತನ್ನ ಬಳಿ ಲೋಕೋಪಯೋಗಿ ಇಲಾಖೆಯನ್ನು ಹೊಂದಿರುವ ರಾಜ್ಯ ಸರ್ಕಾರ ಅಥವಾ ಹೈವೇ ಅಥಾರಿಟಿ ಆಫ್ ಇಂಡಿಯಾ ಅಥವಾ ಇನ್ಯಾವುದೇ ಸರ್ಕಾರಿ ಸ್ವಾಮ್ಯದ ಇಲಾಖೆ/ಮಂಡಳಿ/ಸಂಸ್ಥೆ ಏಕೆ ಇಂಥ ರಸ್ತೆ ನಿರ್ಮಿಸಲಾರದು?
ಹೈವೇ ಮೇಲೆ ದಿನಕ್ಕೆ ಒಟ್ಟು ಎಷ್ಟು ವಾಹನ ಓಡಾಟವಾಗಿ ಎಷ್ಟು ಸಂಗ್ರಹವಾಯಿತು ಎಂಬ ಲೆಕ್ಕವನ್ನು ಯಾರಿಗೆ ಕೊಡಲಾಗುತ್ತದೆ? ಹಾಗೆ ಎಷ್ಟು ವರ್ಷ ವಸೂಲಿ ಮಾಡುತ್ತಾರೆ? ಸರ್ಕಾರದ ಪಾಲೆಷ್ಟು? ರಸ್ತೆ ಮಾಡಿದವನ ಉತ್ತರದಾಯಿತ್ವ ಯಾವ ಬಗೆಯದು?
ಈ ಅಭಿವೃದ್ಧಿಗಾಗಿ ನೆಲೆ ಕಳೆದುಕೊಂಡವರಿಗೆ ರಸ್ತೆ ಎಷ್ಟರಮಟ್ಟಿಗೆ ಉಪಯುಕ್ತ? ಜೇಪೀ ಕಂಪನಿ ‘ದೇಶದ ಅಭಿವೃದ್ಧಿ’ಗಾಗಿ ಇಂಥ ಹೈವೇ ನಿರ್ಮಿಸಿ ದಶಕಗಟ್ಟಲೆ ದುಡ್ಡು ಬಾಚುವುದನ್ನೇ ಕಸುಬಾಗಿಸಿಕೊಳ್ಳುತ್ತದೆ. ಆದರೆ ಇಂಥ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರು ಒಮ್ಮೆ ಮಾತ್ರ ಪರಿಹಾರ ಪಡೆದು ಸುಮ್ಮನಾಗಬೇಕು. ರೈತರು/ಸರ್ಕಾರ ೧೦ ವರ್ಷಕ್ಕೆ ಮಾತ್ರ ಲೀಸ್‌ಗೆ ಕೊಡುವಂತಾಗಬೇಕು. ನಂತರ ಪ್ರತಿ ಅವಧಿ ಮುಗಿದ ಮೇಲೂ ಅಂದಂದಿನ ದರದಂತೆ ಲೀಸ್ ನವೀಕರಣಗೊಳ್ಳಬೇಕು. ಏಕೆ ಇಂತಹ ‘ಬಹುಜನ ಸ್ನೇಹಿ’ ಪಾಲಿಸಿಯನ್ನು ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಭೂಮಿ ಕಳೆದುಕೊಳ್ಳುವವರ ಪರವಾಗಿ ಜಾರಿ ಮಾಡಬಾರದು?

ಈಗ ವೇಗದ ಚಲನೆಗೆ ವಾಹನ ಬೇಕು. ಅದನ್ನು ತಯಾರಿಸಲು ಕಾರ್ಖಾನೆಯಿರಬೇಕು. ವಾಹನಗಳಿಗೆ ತುಂಬಲು ತೈಲ ಬೇಕು. ತೈಲಕ್ಕಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಣಗಬೇಕು. ವಾಹನ ಕೊಳ್ಳುವ ಹಣ ಕಡಿಮೆ ಬಿದ್ದರೆ ಸಾಲ ಕೊಡಲು ಬ್ಯಾಂಕ್ ಬೇಕು. ಕೊನೆಗೆ ವಾಹನ ಓಡಿಸಲು ಒಳ್ಳೆಯ ರಸ್ತೆ ಮಾಡಬೇಕು. ಅದಕ್ಕಾಗಿ ವಿಶ್ವಬ್ಯಾಂಕ್ ಬಳಿ ದುಬಾರಿ ಬಡ್ಡಿಗೆ ಸಾಲ ಪಡೆಯಬೇಕು. ಆಯಕಟ್ಟಿನ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ದೊಡ್ಡ ರಸ್ತೆ ಮಾಡಿದ ಮೇಲೆ ಬರೀ ಕಾರು ಲಾರಿ ಓಡಿಸಿ ಸುಮ್ಮನಿರಲು ಸಾಧ್ಯವೇ? ರಸ್ತೆಯ ಆಚೀಚೆ ಜನರನ್ನು ಯಾವ್ಯಾವ ರೀತಿಯಲ್ಲಿ ಸೆಳೆಯಬಹುದೋ ಅಂಥ ಎಲ್ಲ ವ್ಯಾಪಾರ, ಮನರಂಜನೆಗೆ ವ್ಯವಸ್ಥೆ ಮಾಡಬೇಕು .. .. ..

ಇದೇ ಅಭಿವೃದ್ಧಿ ಎಂದಾದಲ್ಲಿ ಅದು ಯಾರಿಂದ? ಯಾರಿಗಾಗಿ? ಯಾರಿಗೋಸ್ಕರ?



Saturday 25 October 2014

ವೇತನ ತಾರತಮ್ಯ



‘ಸಂಬಳ ಹೆಚ್ಚು ಮಾಡುವಂತೆ ಕೇಳಬೇಡಿ, ಕೆಲಸ ಮಾಡಿ, ವ್ಯವಸ್ಥೆಯಲ್ಲಿ ನಂಬಿಕೆಯಿಡಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆಯಿಡಿ,  ಅದು ತಾನಾಗಿಯೇ ಆಗುತ್ತದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಇತ್ತೀಚೆಗೆ ಹೇಳಿದ ಮಾತು ಭಾರೀ ಗದ್ದಲ ಎಬ್ಬಿಸಿತು. ತಂತ್ರಜ್ಞಾನ ಕ್ಷೇತ್ರದ ಸರಿ ಸುಮಾರು ೭೫೦೦ ಮಹಿಳೆಯರ ಜೊತೆ ಅವರು ಸಂವಾದ ನಡೆಸುತ್ತಿದ್ದಾಗ ಮೈಕ್ರೋಸಾಫ್ಟ್ ನಿರ್ದೇಶಕರಲ್ಲೊಬ್ಬರಾದ ಮಾರಿಯಾ ಕ್ಲೇವ್ ಕೇಳಿದ್ದು ಇಷ್ಟು: ‘ಸಂಬಳ ಹೆಚ್ಚು ಮಾಡಿ ಎಂದು ಹೇಗೆ ಕೇಳುವುದೆಂದು ಹಿಂಜರಿಯುವ ಮಹಿಳಾ ಉದ್ಯೋಗಿಗಳಿಗೆ ನಿಮ್ಮ ಸಲಹೆ ಏನು?’ ಅದಕ್ಕೆ ನಾದೆಲ್ಲಾ ಮೇಲ್ಕಂಡ ಸಲಹೆ ನೀಡಿದ್ದರು. ಈ ಸಲಹೆಯನ್ನು ಗಂಡುಹೆಣ್ಣೆನ್ನದೆ ಎಲ್ಲರಿಗೂ ನೀಡಿದ್ದರೆ ಅದನ್ನು ದೊಡ್ಡ ಕಂಪನಿಯೊಂದರ ಆಡಳಿತಗಾರನ ಉತ್ತಮ ಸಲಹೆ ಎಂದುಕೊಳ್ಳಬಹುದಿತ್ತು. ಆದರೆ ಮಹಿಳೆಯರಿಗೇ ನೀಡಿದ ಸಲಹೆಯಾದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಉದ್ಯೋಗಸ್ಥ ಮಹಿಳೆಯರಿಂದ ಇದಕ್ಕೆ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ ನಾದೆಲ್ಲಾ ತನ್ನ ಪ್ರತಿಕ್ರಿಯೆ ಸಂಪೂರ್ಣ ತಪ್ಪು ಎಂದು ಕ್ಷಮೆ ಕೇಳಿದ್ದೂ ಆಯಿತು.

‘ಆದದ್ದೆಲ್ಲಾ ಒಳ್ಳೆಯದೇ ಆಗಿದೆ, ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ, ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ. ರೋದಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?’ ಎಂದು ಬೋಧಿಸುವ ಕರ್ಮ ಸಿದ್ಧಾಂತವು ಯಾರಿಗೆ ‘ಒಳ್ಳೆಯದಾಗಿದೆಯೋ’ ಅವರಿಗೆ ತುಂಬ ಆಪ್ಯಾಯಮಾನವಾಗಿರುತ್ತದೆ. ಅವರಿಗೆ ಮಾತ್ರ ಆದ ಒಳ್ಳೆಯದಕ್ಕೆ ಅವರಲ್ಲಿ ಹೆಮ್ಮೆಯನ್ನೂ, ತೃಪ್ತಿಯನ್ನೂ ಹುಟ್ಟಿಸುತ್ತದೆ. ಆದರೆ ಇದೇ ಕರ್ಮ ಸಿದ್ಧಾಂತವನ್ನು ವಿಧವೆಯರಿಂದ ಹಿಡಿದು ವೇಶ್ಯೆಯರ ತನಕ; ಕೊಲೆಗಡುಕನಿಂದ ಹಿಡಿದು ಕೊಲೆಯಾದವನ ತನಕ ಬೋಧಿಸಿದರೆ? ಕರ್ಮ ಸಿದ್ಧಾಂತವನ್ನು ಹೇಳಿಯೇ ಅನ್ಯಾಯಕ್ಕೊಳಗಾಗದವ ತನ್ನ ಪಾಲಿಗೆ ಬಂದಿದ್ದೇ ಪರಮಾನ್ನ ಎಂದು ತಿಳಿದು ಪ್ರಶ್ನೆಯೆತ್ತದೆ ಬದುಕಿರುವಂತೆ ಮಾಡುವ ಹುನ್ನಾರ ಎನ್ನಬಹುದಷ್ಟೆ.

ಆದರೆ ೨೧ನೇ ಶತಮಾನದಲ್ಲಿ, ದೊಡ್ಡವರೂ ಸಮಾನತೆ, ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದಾರೆ. ಹಾಗಿರುವಾಗ ದಿನಕ್ಕೆ ೧.೪ ಕೋಟಿ ರೂಪಾಯಿಯಷ್ಟು ಭಾರೀ ಸಂಬಳ ಪಡೆವ; ಬಿಲಿಯನ್ನುಗಟ್ಟಲೆ ಡಾಲರುಗಳನ್ನು ಸಾಮಾಜಿಕ ಕೆಲಸಗಳಿಗೆ ದಾನ ಮಾಡುವ ಬಿಲ್ ಗೇಟ್ಸ್‌ನ ಕಂಪನಿಯ ಸಿಇಒ ನಾದೆಲ್ಲಾ, ಮಹಿಳಾ ಉದ್ಯೋಗಿಗಳಿಗಷ್ಟೇ ಕರ್ಮದ ಮಾತನಾಡಿದಾಗ ಸಹಜವಾಗಿಯೇ ಅದು ಆಕ್ಷೇಪಾರ್ಹವಾಯಿತು. ಅದರಲ್ಲೂ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆದರೂ ಭಾರತೀಯ ಹುಟ್ಟುಗುಣ, ಮಣ್ಣಗುಣ ಬಿಡದ ನಾದೆಲ್ಲಾ ಬಗ್ಗೆ ವ್ಯಾಪಕ ಟೀಕೆ ಕೇಳಿಬಂತು. ಯಥಾಸ್ಥಿತಿವಾದವನ್ನು ಬೋಧಿಸಲು ಕರ್ಮ ಸಿದ್ಧಾಂತಕ್ಕಿಂತ ಉತ್ತಮ ನೆಪ ಬೇಕಿಲ್ಲವೆಂದು ಅವರ ಮಾತುಗಳನ್ನು ವಿಮರ್ಶಿಸಲಾಯಿತು.

ಮೈಕ್ರೋಸಾಫ್ಟ್ ೧೯೭೮ರಲ್ಲಿ ಶುರುವಾದಾಗ ಇದ್ದ ೧೧ ಉದ್ಯೋಗಿಗಳಲ್ಲಿ ಇಬ್ಬರು ಮಹಿಳೆಯರು. ಅವರಲ್ಲಿ ಒಬ್ಬರು ಎರಡೇ ತಿಂಗಳಲ್ಲಿ ಸಂಬಳದ ವಿಷಯವಾಗಿ ಅಸಮಾಧಾನಗೊಂಡು ಕೆಲಸ ಬಿಟ್ಟಿದ್ದರು. ಇವತ್ತು ಮೈಕ್ರೋಸಾಫ್ಟ್‌ನ ೧,೧೦,೦೦೦ ಉದ್ಯೋಗಿಗಳಲ್ಲಿ ೨೯% ಮಹಿಳೆಯರಿದ್ದಾರೆ. ನಾದೆಲ್ಲಾಗೆ ಆ ಪ್ರಶ್ನೆ ಕೇಳಿದ ಮಾರಿಯಾ ೫ ವರ್ಷ ಕೆಳಗೆ ಮೈಕ್ರೊಸಾಫ್ಟ್ ಸೇರಿದ್ದು. ಅವರು ಮಹಿಳೆಯರನ್ನು ಹೆಚ್ಚೆಚ್ಚು ನೇಮಿಸಿಕೊಳ್ಳುವಂತೆ ಹಾಗೂ ಬಡ್ತಿ ವಿಷಯದಲ್ಲಿಯೂ ಪರಿಗಣಿಸುವಂತೆ ಗಮನ ಸೆಳೆಯುತ್ತಲೇ ಬಂದಿದ್ದರು. ಅದೇವೇಳೆಗೆ ತಂತ್ರಜ್ಞಾನ ಕಂಪನಿಗಳಲ್ಲೂ ಇರುವ ವೇತನ ತಾರತಮ್ಯದ ಕುರಿತು ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಕೂಡಾ ಒಂದು ಪುಸ್ತಕ ಬರೆದು ಗಮನ ಸೆಳೆದಿದ್ದರು. ಸರಾಸರಿ ಎಲ್ಲ ಕಂಪನಿಗಳನ್ನು ಪರಿಗಣಿಸಿದರೆ ಮಹಿಳೆಯರು ಅದೇ ಸಾಮರ್ಥ್ಯ, ಅರ್ಹತೆಯಿದ್ದರೂ ೨೪% ಸಂಬಳ ಕಡಿಮೆ ಪಡೆಯುವ ಕುರಿತು ಪ್ರಶ್ನೆಗಳೆದ್ದವು.

ಅದೊಂದು ಓಪನ್ ಸೀಕ್ರೆಟ್. ಟೆಕ್ ಜಗತ್ತು ಬಹುಪಾಲು ಪುರುಷಮಯ, ಬಿಳಿಯ ಹಾಗೂ ಏಷಿಯನ್ ಡಾಮಿನೆಂಟ್ ಇರುವಂಥದೆನ್ನುವ ವಿಷಯವನ್ನು ಅದರ ಒಳಹೊರ ಸುಳಿವವರೆಲ್ಲ ಗಮನಿಸಿರುವಂಥದೇ. ಆದರೆ ಕರಾರುವಾಕ್ ತಂತ್ರಜ್ಞಾನ ಜಗತ್ತಿನಲ್ಲಿ ಸಂಬಳ ಮಾತ್ರ ಏನೇನೂ ಕರಾರುವಾಕ್ ಅಲ್ಲ. ಅದು ಒಂದೇ ಕಂಪನಿಯಲ್ಲಿ ಕೆಲಸ ಮಾಡುವ; ಒಂದೇ ವಿದ್ಯಾರ್ಹತೆ, ಅನುಭವ, ಸಾಮರ್ಥ್ಯ ಹೊಂದಿರುವ ಇನ್ನೊಬ್ಬರಿಗಿಂತ ಬೇರೆಯಾಗಿರಬಹುದು. ಕೆಲಸದ ಸಂದರ್ಶನಕ್ಕಾಗಿ ಹೋದಾಗ ಎಷ್ಟು ಸಂಬಳ ನಿರೀಕ್ಷಿಸುವಿರಿ ಎಂಬ ಪ್ರಶ್ನೆ ಕೇಳಲಾಗುತ್ತದೆ. ಕಂಪನಿಯ ಅವಶ್ಯಕತೆ, ಸಾಮರ್ಥ್ಯಕ್ಕೆ ಅನುಗುಣವಾಗಿದ್ದರೆ ಅಭ್ಯರ್ಥಿ ಬಯಸುವಷ್ಟು ಸಂಬಳ ಕೊಡಲಾಗುತ್ತದೆ. ಒಂದೇ ಅರ್ಹತೆಯವರಿಗೂ ಅವರವರ ಕೇಳಿಕೆಯ ಆಧಾರದ ಮೇಲೆ ಬೇರೆಬೇರೆ ವೇತನ ಪಾವತಿಯಾಗುತ್ತದೆ. ಒಬ್ಬರಿಗೆ ಎಷ್ಟು ಸಂಬಳ ಎನ್ನುವುದು ಉಳಿದವರಿಗೆ ಗೊತ್ತಿರುವುದಿಲ್ಲ.

ಇಂಥ ಅನಿಶ್ಚಿತ ಜಗತ್ತಿನ ಡೆಡ್‌ಲೈನ್ ಕೆಲಸಗಳನ್ನು ಹೆಣ್ಣು ಎಷ್ಟರಮಟ್ಟಿಗೆ ಜವಾಬ್ದಾರಿ ನಿಭಾಯಿಸಿಯಾಳು? ಈ ಅನುಮಾನ ಕಂಪನಿಯವರಿಗಿರುತ್ತದೆ. ಅದೂ ಕುಟುಂಬ-ಮಕ್ಕಳ ಜವಾಬ್ದಾರಿಯ ಕಾರಣವಾಗಿ ಓವರ್ ಟೈಂ ಕೆಲಸ ಮಾಡಲಾಗದ; ಪ್ರವಾಸ ಹೋಗಲಾಗದ ಮಹಿಳೆ ಬಡ್ತಿ ಪಡೆದು ಉನ್ನತ ಸ್ಥಾನದಲ್ಲಿದ್ದರೆ ಎಷ್ಟು ಬದ್ಧತೆಯಿಂದ ಕಂಪನಿಯ ಕೆಲಸಕ್ಕೆ ತನ್ನನ್ನು ಒಪ್ಪಿಸಿಕೊಂಡಾಳು ಎಂಬ ಬಗೆಗೆ ಅವರಿಗೆ ಶಂಕೆ.

ತಂತ್ರಜ್ಞಾನವೊಂದೇ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮಹಿಳೆಗೂ ಕೌಟುಂಬಿಕ ಜವಾಬ್ದಾರಿ ಮೊದಲನೆಯ ಜವಾಬ್ದಾರಿ. ಉದ್ಯೋಗ, ಬಡ್ತಿ ಎರಡನೇ ಆದ್ಯತೆಯ ವಿಷಯಗಳು. ಎಂದೇ ಅವಳ ಜೈವಿಕ ಬದಲಾವಣೆಗಳು ಹಾಗೂ ಕುಟುಂಬದವರ ಆಪತ್ತುಗಳು ಅವಳದೇ ಆಪತ್ಕಾಲವಾಗಿ ಪರಿಣಮಿಸುತ್ತವೆ. ಎಂಟ್ರಿ ಲೆವೆಲ್‌ನಲ್ಲಿ ಬೇಕಾದಷ್ಟು ಮಹಿಳೆಯರು ಕಂಡುಬಂದರೂ ನಂತರ ಬಡ್ತಿ, ಸ್ಥಾನ, ಜವಾಬ್ದಾರಿ ನೀಡುವಲ್ಲಿ ತಾರತಮ್ಯವಿರಲು ಇದೇ ಕಾರಣವಾಗಿದೆ.


ಇದು ಮಹಿಳಾ ಸಾಫ್ಟ್‌ವೇರಿಗರ ಕತೆಯಷ್ಟೇ ಅಲ್ಲ. ಮೊದಲಿನಿಂದ ಮಾನವ ಪ್ರಬೇಧದ ಹೆಣ್ಣು ಶ್ರಮಜೀವಿಯೇ ಆಗಿದ್ದರೂ ಬಹುಪಾಲು ಮಹಿಳೆಯರ ಶ್ರಮಕ್ಕೆ ಸಂಬಳದ ಬೆಲೆಯಿಲ್ಲ. ಮನೆಯ, ಕುಟುಂಬದ ಕೆಲಸಗಳಿಗೆ ಸಂಬಳ ಕೊಡುವವರಾರು? ಜವಾಬ್ದಾರಿಯ ಹಂಚಿಕೆ, ವೇತನ-ಕೆಲಸದ ಸ್ವರೂಪದ ತಾರತಮ್ಯ ಮನುಷ್ಯ ಸಮಾಜದಲ್ಲಿ ಎಷ್ಟು ಅಂತರ್ಗತವಾಗಿದೆಯೆಂದರೆ ಅದು ಯಾರ ಗಮನಕ್ಕೂ ಬರದೇ ಹೋಗಿದೆ. ಇವತ್ತಿಗೂ ಒಂದು ಹೊರೆ ಸೊಪ್ಪಿಗೆ ‘ಹೆಣ್ಣು ಹೊರೆ’ಗೆ ೫೦ ರೂ, ಗಂಡು ಹೊರೆಗೆ ೭೫-೮೦ ರೂ. ಗದ್ದೆ ಕೊಯಿಲಿಗೆ ಹೆಣ್ಣಾಳಿಗೆ ೧೫ ಸೇರು ನೆಲ್ಲು ಹಾಗೂ ಎಲೆ ಅಡಿಕೆ; ಗಂಡಾಳಿಗೆ ೩೦೦ ರೂಪಾಯಿ ಮತ್ತು ಬೀಡಿ. ದಿನದ ಕೆಲಸಕ್ಕೆ ಗಂಡಾಳಿಗೆ ೩೦೦ ರೂ, ಹೆಣ್ಣಾಳಿಗೆ ೧೨೦-೧೫೦ ರೂ. ಪೌರ ಕಾರ್ಮಿಕರಲ್ಲಿ ಕಸ ಹಿಡಿವವಳು, ಬಾಚಿ ತುಂಬುವವಳು ಹೆಣ್ಣು, ಹಾರೆ-ಸಲಿಕೆ-ಪಿಕಾಸಿ ಹಿಡಿವವ ಗಂಡು. ಈ ತಾರತಮ್ಯ ಕೆಲವು ಸರ್ಕಾರಿ ಯೋಜನೆಗಳಲ್ಲೂ ಇರುವುದು ವ್ಯವಸ್ಥೆಯ ಪುರುಷ ಮನಸ್ಥಿತಿಯ ಪ್ರತೀಕವಾಗಿದೆ.


ಹೆಣ್ಮಕ್ಕಳಿಗೆ ಕೂಲಿ ಕಡಿಮೆ, ಇದು ಸರಿಯೇ ಎಂದು ಕೇಳಿದ್ದಕ್ಕೆ ಒಬ್ಬ ಕೂಲಿ ಮಹಿಳೆ ಹೇಳಿದ ಮಾತು ಮಾರ್ಮಿಕವಾಗಿದೆ: ‘ಹೆಂಗ್ಸು ಅಂತ ಬಸ್ಚಾರ್ಜ್ ಕಮ್ಮಿನಾ ಅಮ್ಮ? ಹೆಂಗ್ಸು ಅಂತ ಹೋಟ್ಲು ಬಿಲ್ ಕಮ್ಮಿನಾ? ಸಿನಿಮಾ ರೇಟು ಕಮ್ಮಿನಾ? ಏನಿಲ್ಲ. ಅಲ್ಲೆಲ್ಲ ಕಮ್ಮಿ ಮಾಡಿ ಅವ್ರು ಸಂಬ್ಳನೂ ಕಮ್ಮಿ ಕೊಡಲಿ, ನಾವು ಯಾಕಂತ ಕೇಳ್ದೆ ಕೆಲ್ಸ ಮಾಡ್ಬಿಡ್ತೀವಿ.’



ಕೈಗಾರಿಕಾ ಕ್ರಾಂತಿಯ ನಂತರ ಹೆಣ್ಮಕ್ಕಳು ಗಂಡಸರೊಟ್ಟಿಗೆ ಸಂಘಟಿತ ದುಡಿಮೆಯ ಕೆಲಸಗಳಲ್ಲಿ ತೊಡಗುವುದು ಹೆಚ್ಚಾಯಿತು. ಆಗ ಪುರುಷರಷ್ಟೇ, ಅವರ ದುಡಿಮೆಯ ಅವಧಿಯಷ್ಟೇ ಮಹಿಳೆ ದುಡಿದರೂ ಸಂಬಳದಲ್ಲಿ ವ್ಯತ್ಯಾಸವಿತ್ತು. ರಾಜಕೀಯ ಮತ್ತು ನಾಗರಿಕ ಹಕ್ಕುಗಳಿಗಾಗಿ ಪ್ರತಿಪಾದಿಸಿ ಶುರುವಾದ ಮಹಿಳಾ ಹೋರಾಟವು ಇದನ್ನು ಗಮನಿಸಿ ಸಮಾನ ವೇತನಕ್ಕಾಗಿಯೂ ಆಗ್ರಹಿಸಿತು. ಹಾಗೆ ನೋಡಿದರೆ ಮಹಿಳಾ ಪ್ರಜ್ಞೆ ಎಚ್ಚೆತ್ತಿದ್ದೇ ವೇತನ ತಾರತಮ್ಯ ಗುರುತಿಸಿ ಎಂದು ಹೇಳಬಹುದು.


ಮದುವೆ, ಹೆರಿಗೆ, ಮಕ್ಕಳ ಪಾಲನೆ ಇತ್ಯಾದಿ ಮಹಿಳೆಯ ಜೈವಿಕ ಜವಾಬ್ದಾರಿಗಳು ಇಡೀ ಸಮಾಜದ ಉಳಿವಿಗೆ ಅವಶ್ಯವಿರುವ ವಿಷಯಗಳು. ಅದಕ್ಕೆ ತನ್ನ ಬದುಕು, ವೃತ್ತಿ, ಆಯಸ್ಸನ್ನೇ ಪಣವಾಗಿಟ್ಟು ದುಡಿಯುವವಳು ಮಹಿಳೆ. ಹಾಗೆ ನೋಡಿದರೆ ಅರ್ಧದಷ್ಟು ಜನಸಂಖ್ಯೆಯ ಹೆಣ್ಣುಮಕ್ಕಳು ತಮ್ಮ ಜೈವಿಕ ಜವಾಬ್ದಾರಿ ನಿಭಾಯಿಸಿ, ಉದ್ಯೋಗದಲ್ಲೂ ತೊಡಗಿಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಅವರ ದುಪ್ಪಟ್ಟು ಜವಾಬ್ದಾರಿಯನ್ನು ಗುರುತಿಸಿ, ಗೌರವಿಸಿ ಹೆಚ್ಚೇ ಸಂಬಳ ನೀಡಬೇಕಾದ್ದು ನ್ಯಾಯ.

ಆದರೆ ಹೊಟ್ಟೆಯಲ್ಲೇ ಹೆಣ್ಣುಮಗುವಿನ ಬದುಕು ಚಿವುಟಿ ಹಾಕುವವರಿಗೆ ಇವೆಲ್ಲ ತಲೆಬುಡವಿಲ್ಲದ ವಾದಸರಣಿಗಳಾಗಿ, ಹಠಮಾರಿ ಹೆಂಗಸರ ರಗಳೆಗಳಾಗಿ ಕಾಣುತ್ತದೆಯೇ ಹೊರತು ಬೇಡಿಕೆಗಳ ಹಿಂದಿನ ತಥ್ಯ ಅರ್ಥವಾಗಬೇಕಾದರೆ ಬೇರೊಂದು ಹೊಸ ಯುಗವೇ ಶುರುವಾಗಬೇಕೇನೋ. ನಾದೆಲ್ಲಾ ಅಥವಾ ಅವರಂತಹ ಅಧಿಕಾರದ ಸ್ಥಾನದಲ್ಲಿರುವವರು ಮಹಿಳಾಪರ ಮನಸ್ಸು ಹೊಂದಿದರೆ ವೇತನ ತಾರತಮ್ಯ, ಅಧಿಕಾರ ಹಂಚಿಕೆಯ ತಾರತಮ್ಯ ಸರಿಪಡಿಸುವುದು ಖಂಡಿತಾ ಕಷ್ಟವಿಲ್ಲ. ಇದುವರೆಗೆ ಹೇಗೇ ಇರಲಿ, ಇವತ್ತಿನಿಂದ ‘ನಾನು’ ಅದನ್ನು ಬದಲಿಸಲು ಪ್ರಯತ್ನಿಸುತ್ತೇನೆ ಎನ್ನುವ ವ್ಯಕ್ತಿ ನಿಜವಾದ ಅವತಾರ ಪುರುಷನಾಗಬಲ್ಲ.

ಯಾವ ಕಾನೂನು ಕ್ರಮ, ಹೋರಾಟವಿಲ್ಲದೆ ಅಂಥದೊಂದು ಮನಸು ಎಲ್ಲರಲ್ಲೂ ಹುಟ್ಟಲಿ ಎಂದು ಆಶಿಸೋಣವೇ?



Thursday 23 October 2014

ಫೊಂತಮಾರಾ ಇಟಲಿಯಾದರೇನು ಶಿವಾ! ದೆಹಲಿಯಾದರೇನು ಶಿವಾ!?

Front Cover





ಲೇಬರ್ ಮಾರ್ಕೆಟ್!

ಅವತ್ತು ಗ್ರೇಟರ್ ನೋಯ್ಡಾದ ಸರ್ಕಲಿನಲ್ಲಿ ಹಲವು ಬಣ್ಣಗಳ, ವಯೋಮಾನದ, ತರತರಹದ ದಿರಿಸು ತೊಟ್ಟ ತರುಣರು, ಹೊಳೆವ ಲೋಹದ ಬಳೆಗಳ ತೋಳಿಗೆ ತೊಟ್ಟ ಹೆಂಗಸರು, ನಡುವಯಸ್ಕ ಗಂಡಸರು ಗುಂಪುಗುಂಪಾಗಿ ಕೈಲೊಂದು ಡಬ್ಬಿ ಹಿಡಿದು ಬಿಸಿಲು ಕಾಯಿಸುತ್ತ ಕೂತಿದ್ದರು. ಕೆಲವರು ಆಚೀಚೆ ತಾರಾಡುತ್ತ ಬೀಡಿ ಎಳೆಯುತ್ತಿದ್ದರು. ಇಷ್ಟು ಬೆಳಬೆಳಗ್ಗೆ ಇವರೆಲ್ಲ ಎಲ್ಲಿಗೆ ಹೊರಟಿದ್ದಾರು? ಡ್ರೈವರ್ ಹೇಳಿದರು - ‘ಎಕ್ಸ್‌ಪ್ರೆಸ್‌ವೇ ಮತ್ತು ಮೆಗಾಸಿಟಿ ಕಾಮಗಾರಿಗೆ ಚೂರುಪಾರು ಭೂಮಿಯನ್ನು ಸರ್ಕಾರಕ್ಕೆ ಸಾವಿರಾರು ಹಳ್ಳಿಗರು ಮಾರಿದರು. ಕೊಟ್ಟ ಕಾಸು ಖಾಲಿಯಾಗಿರಬೇಕು, ಇವತ್ತಿನ ಕೆಲಸ ಹುಡುಕಿ ಇಲ್ಲಿ ಬಂದು ನಿಂತಿದ್ದಾರೆ. ಇದು ಲೇಬರ್ ಮಾರ್ಕೆಟ್.’

ಲೇಬರ್ ಮಾರ್ಕೆಟ್! ಹೊಸ ಪದ. ಹೂಹಣ್ಣು, ಮೀನು, ದಿನಸಿಗಳಂತೆ ಕೂಲಿಗಳಿಗೊಂದು ಮಾರ್ಕೆಟ್. ಕೆಲಸಕ್ಕೆ ಜನ ಬೇಕಾದವರು, ಏಜೆಂಟರು ಈ ಮಾರ್ಕೆಟ್ಟಿಗೆ ಬಂದು ತಮಗೆ ಬೇಕಾದಂಥ, ಬೇಕಾದಷ್ಟು ಜನರನ್ನು ಒಯ್ಯುತ್ತಾರೆ. ಅಂದಂದಿನ ಕೆಲಸದ ದರ ಅಂದಂದೇ ನಿರ್ಧಾರವಾಗುತ್ತದೆ. ಏರಬಹುದು, ಇಳಿಯಬಹುದು, ಕೆಲಸವಿಲ್ಲದೆ ವಾಪಸು ಹೋಗಬೇಕಾಗಲೂಬಹುದು. ಬೆಳಿಗ್ಗೆ ಮುಂಚೆ, ಸಂಜೆ ದರ ಕಡಿಮೆ. ನಡುಮಧ್ಯ ಅಷ್ಟಿಷ್ಟು ಚೌಕಾಸಿ ನಡೆಯುತ್ತದೆ. ಥೇಟ್ ಸಂತೆಮಾಳದ ಹಾಗೇ. ಎಲ್ಲವೂ ಅನಿಶ್ಚಿತ.

ಒಂದು ಕಾಲದಲ್ಲಿ ತಮ್ಮ ಕುಟುಂಬಕ್ಕಾಗುವಷ್ಟು ಕಾಳುಕಡಿ ಬೆಳೆದು, ಬೆಳೆದದ್ದರಲ್ಲಿ ಬಂದಷ್ಟರಲ್ಲಿ ತಂಪಾಗಿದ್ದ ಜೀವಗಳು ಕೈಗೆ ಬಂದ ಒಂದಷ್ಟು ಕಂತೆ ನೋಟನ್ನು ಸಂಭ್ರಮದಿಂದ ಪಡೆದು, ಊರುಕೇರಿದೇವರೊಂದಿಗೆ ನೆಲೆ ಕಳೆದುಕೊಂಡು, ಈಗ ಭಿಕಾರಿಗಳಾಗಿ ಬೀದಿಗೆ ಬಿದ್ದಿದ್ದರು.

ಏಕೆ ಹೀಗಾಯಿತು?

ಈಗಲೂ ದೇಶದ ಅರ್ಧಕ್ಕಿಂತ ಹೆಚ್ಚು ಜನರ ಉದ್ಯೋಗದಾತ ಕೃಷಿಯೇ. ಎಲ್ಲರೂ ತಿನ್ನುವುದು ರೈತ ಬೆಳೆದ ಹಿಡಿ ಕೂಳನ್ನೇ ಆದರೂ ಈಗ ಯೂರಿಯಾ, ಫ್ಯಾಕ್ಟಂಫಾಸ್ ಜಾಹೀರಾತು ಕಾಣೆಯಾಗಿವೆ. ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕಗಳಿಗೆ ಕಂಪನಿಗಳನ್ನೇ ನೆಚ್ಚಬೇಕಾಗಿದೆ. ಎಸ್‌ಇಜಡ್‌ಗೆ ಭೂಮಿ ಪರಭಾರೆ ಮಾಡಲು ‘ಒಳ್ಳೇ ರೇಟು’ ಕೊಡಬೇಕೆಂದು ರೈತರೇ ಹೇಳಿಕೆ ನೀಡುತ್ತಾರೆ. ಚೂರುಪಾರು ಭೂಮಿಯನ್ನು ರಸ್ತೆಗೋ, ಅಣೆಕಟ್ಟೆಗೋ, ಇನ್ಯಾವುದೋ ಅಭಿವೃದ್ಧಿಗೋ ಕಳೆದುಕೊಂಡವರ ಕುಟುಂಬಗಳು ಪಟ್ಟಣಕ್ಕೆ ಕೆಲಸ ಅರಸಿ ಗುಳೆ ಹೋಗಿವೆ. ನಗರದ ಸ್ಲಮ್ಮುಗಳು ಬೆಳೆಯುತ್ತಿವೆ.

ಒಟ್ಟಾರೆ ಕೃಷಿ ಎಂಥ ನಷ್ಟದ ಬಾಬತ್ತು ಆಗಿದೆಯೆಂದರೆ ರೈತರ ಆತ್ಮಹತ್ಯೆಗಳು ಅದಕ್ಕೆ ಸಾಕ್ಷಿಯಾಗಿವೆ. ಸಬ್ಸಿಡಿಯ ಬೀಜ, ಗೊಬ್ಬರ, ಸಾಲಕ್ಕಾಗಿ ನಿಂತ ಕ್ಯೂನಲ್ಲಿ ರೈತರ ಆತ್ಮಗೌರವ ನಾಶವಾಗುತ್ತಿದೆ. ರೈತರ ಆತ್ಮಹತ್ಯೆ ಬಗ್ಗೆ ಬರೆಬರೆದು, ಮಾತಾಡಿ ದಣಿದು ಈಗ ಆ ವಿಚಾರವನ್ನೇ ಹಿನ್ನೆಲೆಗೆ ಸರಿಸಿದ್ದೇವೆ. ಮಣ್ಣಿನ ಮಕ್ಕಳ ಪರವಾಗಿ ರಾಜಕಾರಣ ಮಾಡುವವರು, ಮಾತನಾಡುವವರು ಮನ್ನಣೆ, ಓಟು ಪಡೆದು ಸುಖವಾಗಿದ್ದೇವೆ. ರೈತಸಂಘ ಒಡೆದು, ಚೂರಾಗಿ ರೈತರ ನೆನಪಿನಿಂದ ಮರೆಯಾಗತೊಡಗಿದೆ.

ಆದರೆ ಈಗ ಜನರದ್ದೇ ಸರ್ಕಾರವಿದೆ. ಜನ ಆರಿಸಿ ಕಳಿಸಿದ ಜನಪ್ರತಿನಿಧಿಗಳು ಜನರ ಸಲುವಾಗೇ ಎಲ್ಲವನ್ನು ಮಾಡುತ್ತಾರೆ! ಎಲ್ಲವೂ ಜನರಿಗೆ ತಿಳಿದೇ, ತಿಳಿಸಿಯೇ, ಒಪ್ಪಿಗೆ ಪಡೆದೇ ನಡೆಯುತ್ತಿದೆ.

ಅಗದೀ ಡೆಮಾಕ್ರೆಟಿಕ್! ಜನರಿಂದ, ಜನರಿಗಾಗಿ, ಜನರೇ ಮಾಡಿಕೊಂಡ ವ್ಯವಸ್ಥೆ. ದೂರುವುದಾದರೂ ಜನರನ್ನೇ!

ಎಲಎಲಾ, ಇದೆಂಥ ಕಣ್ಕಟ್ಟು ಎನಿಸುತ್ತಿರುವಾಗಲೇ ಇತ್ತೀಚೆಗೆ ಫೊಂತಮಾರಾ ಎಂಬ ಕಾದಂಬರಿ ಓದಲು ಸಿಕ್ಕಿತು. ೮೦ ವರ್ಷ ಕೆಳಗೆ ಇಟಲಿಯ ಸರ್ವಾಧಿಕಾರಿಯೊಬ್ಬನಿಂದ ರೈತರಿಗೆ ಇವತ್ತಿನಂಥದೇ ಸ್ಥಿತಿ ಒದಗಿತ್ತು. ಆತ ಹಳ್ಳಿಗಳಿಂದ ಕೃಷಿಕರ ನಗರ-ವಿದೇಶ ವಲಸೆ ನಿರ್ಬಂಧಿಸಿದ, ಏಕೆಂದರೆ ಅನ್ನದಾತ ಅನ್ನ ಬೆಳೆಯದಿದ್ದರೆ ದೇಶ ಹೊಟ್ಟೆಗೇನು ತಿನ್ನಬೇಕು ಎನ್ನುವುದು ಅವನ ಮತ. ಸರ್ವಾಧಿಕಾರಿಯ ಹಲವು ಕಾಯ್ದೆ, ಕಾನೂನಿನಿಂದ ಹಳ್ಳಿಗರಿಗೆ ಎಂಥ ಕೇಡುಗಾಲ ಒದಗಿತ್ತು ಎಂದು ಚಿತ್ರಿಸಿದ ಅದ್ಭುತ ಕಾದಂಬರಿಯ ಅನುವಾದವನ್ನು ಕುವೆಂಪು ಭಾಷಾಭಾರತಿ ಮರುಪ್ರಕಟಿಸಿದೆ.

ಅದರ ಓದು ಹುಟ್ಟಿಸಿದ ಅಲೆಗಳನ್ನು ಹಾಗೂ ಆಸಕ್ತಿದಾಯಕ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಾಗಿದೆ.


ಇಟಲಿ ಮತ್ತು ಫೊಂತಮಾರಾ

ಸುಮಾರು ೮೦ ವರ್ಷ ಕೆಳಗಿನ ಇಟಲಿಯ ಒಂದು ಹಳ್ಳಿ ಮತ್ತಲ್ಲಿನ ಅಧಿಕಾರಹೀನ ಜನತೆಯ ಸಂಕಟಗಳನ್ನು ದೇಶಭ್ರಷ್ಟ ಕಾದಂಬರಿಕಾರನೊಬ್ಬ ಚಿತ್ರಿಸಿದ ಕೃತಿ ಫೊಂತಮಾರಾ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧ, ಒಪ್ಪಂದ, ವ್ಯಾಪಾರಗಳ ಬಗೆಗೆ ಅರಿವೇ ಇಲ್ಲದ ಸಾಮಾನ್ಯ ಹಳ್ಳಿಗರ ಅವಸ್ಥೆ ಅದರಲ್ಲಿದೆ. ಗ್ರಾಮೀಣ ಜನರಿಗೂ, ನಗರ ಪ್ರಜ್ಞೆಗೂ ಇರುವ ಅಗಾಧ ಅಂತರವನ್ನು ಕಲಾಕೃತಿ ತಿಳಿಸುತ್ತದೆ.

ಫೊಂತಮಾರಾದ ಕಾಲ ೧೯೩೦ರ ಆಸುಪಾಸಿನ ಯೂರೋಪ್. ಸ್ಪೇನಿನ ಅಂತರ್ಯುದ್ಧ ಆಗಷ್ಟೇ ಮುಗಿದಿತ್ತು. ೧೯೨೨ರಿಂದ ಇಟಲಿಯಲ್ಲಿ ನ್ಯಾಷನಲ್ ಫ್ಯಾಸಿಸ್ಟ್ ಪಕ್ಷದ ಮುಸೊಲಿನಿ ಎಂಬ ಮಾಜಿ ಸೋಷಲಿಸ್ಟ್ ಅಧಿಕಾರ ಹಿಡಿದಿದ್ದ. ೩ ವರ್ಷ ಪ್ರಜಾಪ್ರಭುತ್ವ ವೇಷವನ್ನು ನೆಪಮಾತ್ರಕ್ಕಾದರೂ ತೊಟ್ಟಿದ್ದ ಮುಸೊಲಿನಿ ನಂತರ ಪೂರ್ಣ ಸರ್ವಾಧಿಕಾರ ಮೆರೆದ. ಇಂಗ್ಲೆಂಡಿನ ಚರ್ಚಿಲ್ ಸೇರಿದಂತೆ ಹಲವು ರಾಜಕಾರಣಿಗಳು, ಅಕ್ಯಾಡೆಮಿಕ್ ವಲಯದ ಚಿಂತಕರು ಮುಸೊಲಿನಿ ಇಟಲಿಗೆ ಒಂದು ಶಿಸ್ತನ್ನೂ, ಕ್ರಮಬದ್ಧತೆಯನ್ನೂ ತಂದುಕೊಟ್ಟನೆಂದೇ ಭಾವಿಸಿದ್ದರು. ೧೯೩೩ರಲ್ಲಿ ಮುಸೊಲಿನಿಯನ್ನು ಬ್ರಿಟನ್ ಪಾರ್ಲಿಮೆಂಟ್ ‘ರೋಮನ್ ಜೀನಿಯಸ್’ ಎಂದು ಕರೆದು ಆತ ‘ಈಗ ಬದುಕಿರುವವರಲ್ಲೇ ಜನರಿಗೆ ಸೂಕ್ತ ನ್ಯಾಯ ನೀಡಿದ ಮಹಾನ್ ನ್ಯಾಯದಾತ’ ಎಂದು ಬಣ್ಣಿಸಿತ್ತು. ಇಟಲಿಯ ವೃತ್ತಪತ್ರಿಕೆ, ನಿಯತಕಾಲಿಕಗಳು, ವಿಶ್ವವಿದ್ಯಾಲಯಗಳ ಪ್ರಕಟಣೆಗಳು ಫ್ಯಾಸಿಸ್ಟ್ ಸರ್ಕಾರದ ವಿಧಿವಿಧಾನ-ಅಭಿವೃದ್ಧಿಶೀಲತೆ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿದ್ದಾಗ ವಿಶ್ವದ ಎಲ್ಲೆಡೆಯ ಬುದ್ಧಿವಂತರು ಇಟಲಿ ಮಾದರಿಯ ಅಧ್ಯಯನ ಮಾಡಿ ಹೋಗುತ್ತಿದ್ದರು. ಅದೇವೇಳೆಗೆ ಅಧಿಕಾರಕ್ಕೆ ಬಂದ ಹಿಟ್ಲರ್ ಮತ್ತು ಮುಸೊಲಿನಿ ಇಡಿಯ ಜಗತ್ತನ್ನು ಫ್ಯಾಸಿಸಂ ಪರ ಮತ್ತು ವಿರುದ್ಧ ಎಂದು ಇಬ್ಭಾಗಗೊಳಿಸುವಂತೆ ಕಾಣುತ್ತಿತ್ತು.

ಅಂತಹ ಕಾಲದಲ್ಲಿ ಫೊಂತಮಾರಾ ಎಂಬ ಹಳ್ಳಿಯ ಜನ ಹೊಸ ಸರ್ಕಾರವೆಂದು ಬಂದ ಫ್ಯಾಸಿಸ್ಟ್ ಪಕ್ಷದ ಆಡಳಿತದಲ್ಲಿ ಹೇಗೆ ಬದುಕಿದರು? ಹೇಗೆ ದಬ್ಬಾಳಿಕೆಯ ಕಾಯ್ದೆಗಳನ್ನು ಹೇರಲಾಯಿತು? ಅಮಾಯಕ, ಅಸಹಾಯಕ ಹಳ್ಳಿಯ ಜನ ಅದನ್ನು ಹೇಗೆ ಎದುರಿಸಿದರು? ರೈತರ ದಂಗೆ ನೈತಿಕ ವಿಜಯವೇ ಆಗಿದ್ದರೂ ಅದು ರಕ್ತಪಾತ ಮತ್ತು ದಮನದಲ್ಲಿ ಕೊನೆಗೊಂಡ ವಿಫಲ ಯತ್ನವಾಗಿತ್ತೇ? ಎಂಬ ಪ್ರಶ್ನೆಗಳನ್ನು ವ್ಯಂಗ್ಯ ಮತ್ತು ಗಾಢ ವಿಷಾದದೊಂದಿಗೆ ಶೋಧಿಸುವ ಕಾದಂಬರಿ ಫೊಂತಮಾರಾ.

ಅದನ್ನು ಬರೆದದ್ದು ಇಟಾಲಿಯನ್ ಭಾಷೆಯಲ್ಲಾದರೂ ಮೊದಲು ಅದರ ಜರ್ಮನ್ ಅನುವಾದ ೧೯೩೩ರಲ್ಲಿ ಜ್ಯೂರಿಚ್‌ನಲ್ಲಿ ಪ್ರಕಟವಾಯಿತು. ೧೯೩೪ರಲ್ಲಿ ಪೆಂಗ್ವಿನ್ ಪುಸ್ತಕದವರು ಇಂಗ್ಲಿಷ್ ಅನುವಾದ ಪ್ರಕಟಿಸಿದರು. ವಿಶ್ವಾದ್ಯಂತ ಗಮನ ಸೆಳೆದ ಅದು ೧೯೩೬ರಲ್ಲಿ ನ್ಯೂಯಾರ್ಕಿನಲ್ಲಿ ‘ಫಂಟ ಅಮಾರಾ’ (ಕಹಿ ಹಳ್ಳ) ಎಂಬ ಹೆಸರಿನ ನಾಟಕವಾಗಿ ಪ್ರದರ್ಶನ ಕಂಡಿತು. ೧೯೭೭ರಲ್ಲಿ ಸಿನಿಮಾ ಆಯಿತು. ಫ್ಯಾಸಿಸ್ಟ್ ನೀತಿಯನ್ನು ಟೀಕಿಸಿದ ಫೊಂತಮಾರಾ ಅಧಿಕಾರಹೀನರ ಪ್ರತಿರೋಧದ ಸಂಕೇತವಾಯಿತು. ೧೯೪೭ರಲ್ಲಿ ಮೂಲ ಇಟಾಲಿಯನ್ ಕಾದಂಬರಿ ಪ್ರಕಟವಾಗಿ ಇದುವರೆಗೆ ೨೭ ಭಾಷೆಗಳಿಗೆ ಅನುವಾದಗೊಂಡಿದೆ. ೧೫ ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ೬೦ರ ದಶಕದಲ್ಲೇ ಕನ್ನಡಾನುವಾದ ನಡೆದು ಸಾಕಷ್ಟು ಚರ್ಚೆಗೊಳಗಾಗಿದೆ.



ಅವಮಾನದ ಎದುರು, ಅನ್ಯಾಯದ ಎದುರು ಯಾರೂ ತಲೆ ತಗ್ಗಿಸಿ ನಡೆಯಕೂಡದು.
- ಇನ್ಯಾತ್ಸಿಯೋ ಸಿಲೋನೆ 

ಈ ಕಾದಂಬರಿ ಬರೆದ ಸೆಕೆಂಡಿನೊ ಟ್ರಾಂಕ್ವಿಲಿ ೧೯೦೦ರಲ್ಲಿ ಇಟಲಿಯಲ್ಲಿ ಹುಟ್ಟಿದ. ಅವನ ಕಾವ್ಯನಾಮ ಇನ್ಯಾತ್ಸಿಯೊ ಸಿಲೋನೆ. ಸಿಲೋನೆ ೧೫ ವರ್ಷದವನಾಗಿದ್ದಾಗ ಭೂಕಂಪವಾಗಿ ಅವನ ತಾಯಿ ಮತ್ತು ಐವರು ಸೋದರರು ಸತ್ತರು. ಆತ ಇಟಾಲಿಯನ್ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯ. ೧೯೨೭ರಲ್ಲಿ ದೇಶ ಬಿಟ್ಟು ಸೋವಿಯತ್‌ಗೆ ಹೋಗಬೇಕಾಯಿತು. ಅಲ್ಲಿ ಸ್ಟಾಲಿನ್ನನ ಅಧಿಕಾರದಡಿ ಕಮ್ಯುನಿಸಂ ಒಂದು ‘ವ್ಯವಸ್ಥೆ’ಯಾಗಹೊರಟಿದೆಯೆಂದು ಅದರ ರೀತಿನೀತಿ ವಿರೋಧಿಸಿ ಕಮ್ಯುನಿಸ್ಟ್ ಪಕ್ಷದಿಂದಲೂ ಉಚ್ಚಾಟಿತನಾದ. ನಂತರ ೧೯೩೦ರಲ್ಲಿ ಸ್ವಿಟ್ಜರ್‌ಲೆಂಡಿಗೆ ಬಂದು ನೆಲೆಸಿದ.

ಅತ್ತ ಇಟಲಿಯಲ್ಲಿ ಅವನ ತಮ್ಮ ರೊಮೊಲೊ ಕಮ್ಯುನಿಸ್ಟ್ ಪಕ್ಷದ ಸದಸ್ಯನಾದದ್ದಕ್ಕೆ ಬಂಧಿಸಲ್ಪಟ್ಟ. ಸಿಲೋನೆ ಹೇಳಿರುವಂತೆ ರೊಮೊಲೊ ಕ್ರಾಂತಿಕಾರಿಯಾಗಿರಲಿಲ್ಲ. ಅಣ್ಣನನ್ನು ತನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ವಿಚಾರಣಾ ಆಯೋಗದೆದುರು ಉತ್ತರಿಸಿದ್ದ. ರೊಮೊಲೊಗೆ ೧೨ ವರ್ಷ ಜೈಲು ಶಿಕ್ಷೆಯಾಯಿತು. ಆದರೆ ತೀವ್ರ ಹೊಡೆತದಿಂದ ಅವನು ೧೯೩೧ರಲ್ಲಿ ಜೈಲಿನಲ್ಲೇ ಸತ್ತ. ಆ ವೇಳೆಗೆ ಸಿಲೋನೆಗೆ ಟಿಬಿ ಕಾಯಿಲೆಯೂ ಆಗಿ ತೀವ್ರ ಮಾನಸಿಕ ಖಿನ್ನತೆ ಆವರಿಸಿತು.

ಖಿನ್ನತೆ, ಕಾಯಿಲೆ, ದೇಶಭ್ರಷ್ಟತೆ, ಏಕಾಂಗಿತನದ ಕಾಲದಲ್ಲಿ ಬರವಣಿಗೆಯೊಂದೇ ಬದುಕುಳಿವ ದಾರಿ ಎಂದು ಕಂಡುಕೊಂಡ ಸಿಲೋನೆ ತೀವ್ರ ಒತ್ತಡದಲ್ಲಿ ತನ್ನ ಮೊದಲ ಕಾದಂಬರಿ ಫೊಂತಮಾರಾ ಬರೆದ. ಅದು ಇಟಲಿಯ ಫ್ಯಾಸಿಸ್ಟ್ ಆಡಳಿತ ವೈಖರಿಯ ಕುರಿತು ಹೊರಜಗತ್ತಿಗೆ ವಿವರವಾಗಿ ತಿಳಿಸಿದ ಮೊತ್ತಮೊದಲ ಬರಹ. ಆಗಿನ ವೃತ್ತಪತ್ರಿಕೆಗಳ ವರದಿಗಿಂತ ಭಿನ್ನವಾಗಿ, ವಿಷದವಾಗಿ ಅಂದಿನ ಕಾಲವನ್ನು ಕಾದಂಬರಿ ಓದುಗನ ಮುಂದೆ ಚಿತ್ರಿಸಿತು. ಕಮ್ಯುನಿಸ್ಟ್ ಸಿದ್ಧಾಂತದ ಆಧಾರದ ಮೇಲೆ ಬರೆದ ಕಾದಂಬರಿಯಾಗಿದ್ದರೂ ಆ ಮಾರ್ಗದ ಬಗೆಗೆ ಅನುಮಾನವಿಟ್ಟುಕೊಂಡೇ ರೈತ ದಂಗೆಯನ್ನು ಚಿತ್ರಿಸಿತು.

ಸರಳವಾಗಿ ಹೇಳಬೇಕೆಂದರೆ ‘ಫೊಂತಮಾರಾ’ ಮಹಾಯುದ್ಧ ಪೂರ್ವದ ಹಳ್ಳಿಯ ಜಗತ್ತು ಮಹಾಯುದ್ಧ ನಂತರದ ತತ್‌ಕ್ಷಣದ ಬದಲಾವಣೆಗಳಿಂದ ಹೇಗೆ ಸಂಕಟಕ್ಕೊಳಗಾಯಿತು ಎಂದು ವಿವರಿಸುವ ಕಲಾಕೃತಿ. ಬಹುಶಃ ‘ಬರವಣಿಗೆ ಎಂದರೆ ತನ್ನ ಕಾಲದ ಬಗ್ಗೆ ಸಾಕ್ಷಿ ಹೇಳುವುದು’ ಎಂಬ ತತ್ವವನ್ನು ನೆಚ್ಚಿಯೇ ಸಿಲೋನೆ ಬರೆದದ್ದರಿಂದ ಅದಕ್ಕೆ ಸಾರ್ವಕಾಲಿಕತೆ ದಕ್ಕಿತು.

ಸಿಲೋನೆಯ ಈ ಕಾದಂಬರಿ ವಸ್ತುವಿನಂತೆ ನಿರೂಪಣೆಯಲ್ಲೂ ಹೊಸತನದಿಂದ ಕೂಡಿದೆ. ಇಡೀ ಕಾದಂಬರಿಯನ್ನು ಮೂವರು ನಿರೂಪಿಸಿದ್ದಾರೆ. ಗಿಯೋವಾನಿ, ಅವನ ಹೆಂಡತಿ ಹಾಗೂ ಎಳೆಯ ಮಗ. ಅವರು ದೇಶಭ್ರಷ್ಟನಾಗಿದ್ದ ಬರಹಗಾರನಿಗೆ ತಮ್ಮೂರಿನ ಕತೆಯನ್ನು ಒಂದು ರಾತ್ರಿ ಹೇಳತೊಡಗುತ್ತಾರೆ. ಬರಹಗಾರ ಕೊನೆಗೆ ಅದನ್ನು ಕಾದಂಬರಿಯಾಗಿಸುತ್ತಾನೆ.

ಬಹುಪಾಲು ನಿರೂಪಣೆ ಗಿಯೋವಾನಿಯದ್ದೇ. ಅವನೊಬ್ಬ ಇಟಲಿಯ ಸಾಮಾನ್ಯ ರೈತ. ಕ್ರಾಂತಿಕಾರಿ ಆಲೋಚನೆಗಳಿಲ್ಲದವನು. ಆದರೆ ತನ್ನೂರಿನ ಬರಾರ್ಡೋ ವಯೋಲಾನಂತಹ ತರುಣರ ಸಿಟ್ಟನ್ನು ಅರಿತು ಬೆಂಬಲಿಸುವವನು. ಬರಬರುತ್ತ ಫೊಂತಮಾರಾದಲ್ಲಿ ಹೊಸ ಸರ್ಕಾರ ಬಂದ ಮೇಲೆ ಆದ ಬದಲಾವಣೆಗಳಿಂದ ಅವ ಚಕಿತನೂ, ಮೋಸ ಹೋದ ಭಾವವುಳ್ಳವನೂ, ವಿಷಾದವುಳ್ಳವನೂ ಆಗಿದ್ದಾನೆ.

ಅವನ ಹೆಂಡತಿ ಮಡ್ಡಲೇನಾ ಗಟ್ಟಿಗಳು. ಹಳ್ಳದ ನೀರನ್ನು ಕಂಟ್ರಾಕ್ಟರನ ದೊಡ್ಡ ತೋಟಕ್ಕೆ ತಿರುಗಿಸುವುದನ್ನು ನೋಡಿ ಸಿಟ್ಟಿಗೆದ್ದು ಹೆಂಗಸರನ್ನು ಗುಂಪುಗೂಡಿಸಿ ಪ್ರತಿಭಟಿಸಲು ಪಟ್ಟಣಕ್ಕೆ ಒಯ್ದವಳು. ಕಪ್ಪಂಗಿಯವರು ಊರ ಹೆಂಗಸರ ಮೇಲೆ ಅತ್ಯಾಚಾರ ಮಾಡುವಾಗ, ಪೊಲೀಸರೂ ಸುಮ್ಮನಿದ್ದಾಗ, ಚರ್ಚ್ ಗೋಪುರದ ಗಂಟೆ ಬಾರಿಸಿ ದೆವ್ವ ಬಂತೆಂದು ಎಲ್ಲರೂ ಓಡಿಹೋಗುವಂತೆ ಮಾಡಿದವಳು.

ಅವರ ಮಗ ಬರಾರ್ಡೋ ವಯೋಲಾನ ಜೊತೆಗೆ ಪಟ್ಟಣಕ್ಕೆ ಕೆಲಸ ಹುಡುಕಿ ಹೋದ. ಕೊನೆಯ ನಿರೂಪಣೆ ಅವನದು.


ವಕೀಲ-ಧರ್ಮಗುರು-ಕಂಟ್ರಾಕ್ಟರ್: ‘ನಿಮಗೆ ಉತ್ತರ ಗೊತ್ತಾದಾಗ ಅವರು ಪ್ರಶ್ನೆ ಬದಲಿಸುತ್ತಾರೆ’

ದೇವರೂ ಸೇರಿದಂತೆ ಎಲ್ಲರೂ ಮರೆತ ಫೊಂತಮಾರಾ ಜಮೀನ್ದಾರಿಕೆಯಿಂದ ನಲುಗಿದ್ದ ಸಣ್ಣಪುಟ್ಟ ರೈತರಿಂದ ತುಂಬಿದ್ದ ಒಂದು ಹಳ್ಳಿ. ಸಮಾಜ ರಚನೆ ಎಂದೂ ಬದಲಾಗುವುದಿಲ್ಲ; ಅದರಲ್ಲಿ ತಮ್ಮ ಸ್ಥಳ ಕೆಳಗಿನದ್ದು; ಅದೇ ದೈವನಿಯಮ ಎಂದು ನಂಬಿದ್ದ ಹಳ್ಳಿಗರ ಊರು ಅದು. ನೂರಾರು ವರ್ಷಗಳಿಂದ ಹಳ್ಳಿಯನ್ನೇ ತಮ್ಮ ಜಗತ್ತು ಎಂದುಕೊಂಡು, ಅನಕ್ಷರತೆ, ಅಧಿಕಾರಹೀನತೆಯ ಸಂಕಷ್ಟಗಳನ್ನು ಒಳಗುಮಾಡಿಕೊಂಡು ಬದುಕಿದವರು ಫೊಂತಮಾರಿಗರು. ತಮ್ಮ ಹಳ್ಳಿ, ಆಸುಪಾಸಿನ ಕೆಲ ಊರುಗಳ ಬಿಟ್ಟರೆ ಉಳಿದುದರ ಕುರಿತು ಜ್ಞಾನವಿಲ್ಲದ್ದವರು. ಅವರಿಗೆ ರೋಂ, ಅಮೆರಿಕಗಳು ಯಾರೋ ಹೋಗಿಬಂದವರು ಹೇಳಿದ ಅನುಭವಗಳ ಮೇಲೆ ಪ್ರಜ್ಞೆಗಿಳಿದ ಹೆಸರುಗಳು. ಹೊರಪ್ರಪಂಚದ ಕುರಿತ ಅವರ ಅಜ್ಞಾನ ಅಥವಾ ತಪ್ಪು ತಿಳುವಳಿಕೆ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತ ಹೋಗುತ್ತದೆ. ಟ್ರಕ್ಕುಗಳು ಬಂದು ನಗರಕ್ಕೆ ತುಂಬಿಕೊಂಡು ಹೊರಟಾಗ ಭೂಹಂಚಿಕೆಗೆ ತಮ್ಮನ್ನು ಕರೆದಿದ್ದಾರೆ ಎಂದು ಭಾವಿಸುತ್ತಾರೆ. ಕೊನೆಗೆ ಫ್ಯಾಸಿಸ್ಟ್ ರ‍್ಯಾಲಿಯಲ್ಲಿ ಭಾಗವಹಿಸಿ ತಲೆಬುಡ ಅರ್ಥವಾಗದೆ ಹಿಂತಿರುಗುತ್ತಾರೆ. ಹೀಗೇ ಹೊಸ ಸರ್ಕಾರದ ಹೊಸಹೊಸ ಕಾನೂನುಗಳಲ್ಲಿ ಮತ್ತೆಮತ್ತೆ ಸಿಕ್ಕಿಬೀಳುತ್ತಾರೆ.

ದೇಶದಲ್ಲಿ ಬದಲಾದ ಸರ್ಕಾರ, ಅದರ ಸ್ವರೂಪಗಳ ಬಗ್ಗೆ ರೈತರಿಗೆ ಕನಿಷ್ಟ ಅರಿವೂ ಇರುವುದಿಲ್ಲ. ಇದ್ದಕ್ಕಿದ್ದಂತೆ ತಮ್ಮ ದೈನಂದಿನ ಬದುಕಿನ ಚಕ್ರ ಬದಲಾಗತೊಡಗಿದಾಗ ಹೊಸ ಸರ್ಕಾರ ಕುರಿತು ಹೀಗೆ ಗ್ರಹಿಸುತ್ತಾರೆ:

‘ರೋಮ್ ನಗರದಲ್ಲಿ ಹೊಸ ಸರ್ಕಾರ ಸ್ಥಾಪನೆಯಾಗಿದೆ ಎಂಬುದನ್ನು ಮೇಲಿಂದ ಮೇಲೆ ಬರುವ ಸುದ್ದಿ ಕೇಳಿ ಅಂದಾಜು ಮಾಡಿದೆವು. ಅಲ್ಲದೆ ಏನೋ ಯುದ್ಧ ನಡೆದಿರಬೇಕೆಂದೂ, ಯುದ್ಧದ ತಯಾರಿ ನಡೆದಿರಬೇಕೆಂದೂ ಊಹಿಸಿದೆವು. ಯಾಕೆಂದರೆ ಯುದ್ಧವಿಲ್ಲದೆ ಹಳೆಯ ಸರ್ಕಾರ ನಾಶವಾಗುವುದು, ಹೊಸ ಸರ್ಕಾರ ಸ್ಥಾಪನೆಯಾಗುವುದು ಹೇಗೆ ಸಾಧ್ಯ? ಆದರೆ ಈ ಹೊಸ ಸರ್ಕಾರದವರು ಯಾರ ವಂಶದವರು? ಎಲ್ಲಿಂದ ಬಂದವರು? ಇದೊಂದೂ ನಮಗೆ ತಿಳಿದಿಲ್ಲ. ಸರ್ಕಾರಗಳು ಆಗುವುದೂ, ಹೋಗುವುದೂ ನಗರಗಳಲ್ಲಿ ತಾನೇ?’

ಗ್ರಾಮೀಣ ಜನರಿಗೂ, ನಗರವಾಸಿಗಳಿಗೂ ನಡುವಿರುವ ಅಗಾಧ ಅಂತರವನ್ನು ಹಳ್ಳಿಗರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ತಮ್ಮ  ಮುಗ್ಧತೆಯ ಕಾರಣವಾಗಿ ಸತತ ವಂಚನೆಗೊಳಗಾಗುತ್ತಿದ್ದಾರೆ. ವಿದ್ಯುತ್ ಬಿಲ್ ತುಂಬಲು ಅಸಾಧ್ಯವಾದಾಗ ತಮ್ಮ ಹೊಗೆಸೊಪ್ಪು ತುಂಬುವ ನಳಿಕೆ ಒರೆಸಲು ಬಿಲ್ ಕಾಗದ ಬಳಸುತ್ತಾ ಒಂದು ದಿನ ಊರಿಗೆ ವಿದ್ಯುತ್ ಸರಬರಾಜು ನಿಲ್ಲುತ್ತದೆ.

ಅಂತಹ ಒಂದು ಕತ್ತಲ ರಾತ್ರಿ ಪೆಲಿನೊ ಎಂಬ ನಗರವಾಸಿ ಅಧಿಕಾರಿ ಹಳ್ಳಿಗೆ ಬರುತ್ತಾನೆ. ಅವ ಮತ್ಯಾವುದೋ ಹೊಸ ಕರ ವಿಧಿಸಲು ಬಂದನೆಂದು ಬಿಂಕಗೊಂಡು ಅವನ ಬಳಿ ಮಾತೇ ಆಡದೆ ಕೂರುತ್ತಾರೆ. ಆದರೆ ತಾನು ಬಂದದ್ದು ಹಳ್ಳಿಗರ ಸಹಿ ಸಂಗ್ರಹಕ್ಕೆನ್ನುತ್ತಾ ಸಹಿ ಹಾಕುವಂತೆ ಕೇಳುತ್ತಾನೆ. ಏಕೆ ಸಹಿ ಹಾಕಬೇಕೆಂದು ಅವನು ಹೇಳಿದ್ದು ತಿಳಿಯದೇ ಭಯ, ಅನುಮಾನದಲ್ಲಿ ಹಳ್ಳಿಯ ಜನ ಸುಮ್ಮನಿದ್ದುಬಿಡುತ್ತಾರೆ. ಕೊನೆಗೆ ಬೆಂಕಿಕಡ್ಡಿ ಗೀರಿ ಹುಟ್ಟಿದ ಮಬ್ಬು ಬೆಳಕಿನಲ್ಲಿ ಹಳೆಯ ಸೈನ್ಯಾಧಿಕಾರಿಯಾಗಿದ್ದವನೊಬ್ಬ ಸಹಿ ಹಾಕಿದ ಮೇಲೆ ಒಬ್ಬೊಬ್ಬರೇ ಸಹಿ ಕೊಡುತ್ತಾರೆ. ಸಹಿ ಸಂಗ್ರಹವಾದ ಹಾಳೆಯ ಮೇಲೆ ‘ನಾವು ಸ್ವ ಇಚ್ಛೆಯಿಂದ, ಮನಃಪೂರ್ವಕ, ಉತ್ಸಾಹದಿಂದ ನಮ್ಮ ಹೊಲಗಳಿಗೆ ಉಣಿಸುವ ನೀರನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ..’ ಎಂದು ಬರೆದಿದ್ದರೂ ಅದನ್ನು ಓದಲಾಗದೇ ಸಹಿ ಕೊಟ್ಟಿರುತ್ತಾರೆ.

ತಮಗೆ ಗೊತ್ತಿಲ್ಲದೆ ನೀರಿನ ಹಕ್ಕು ಬಿಟ್ಟುಕೊಟ್ಟಿರುತ್ತಾರೆ. ಅವರ ಒಪ್ಪಿಗೆ ಪಡೆದೇ ಅವರನ್ನು ವಂಚಿಸಲಾಗುತ್ತದೆ.

ನಗರದ ಅಧಿಕಾರಿ ಪೆಲಿನೊ ಬಗ್ಗೆ ನಿರೂಪಕ ಹೇಳುವುದು ಹೀಗೆ:

‘ಹಳ್ಳಿಗರಿಗೆ ಪಟ್ಟಣದವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ನಾನು ಸ್ಪೇನಿನಿಂದ ಇಂಡಿಯನ್ನರ ತನಕ ಎಲ್ಲ ಹಳ್ಳಿಗರ ಜೊತೆ ಮಾತಾಡಿದ್ದೇನೆ. ಯಾರ ಜೊತೆ ಮಾತನಾಡಿದರೂ ಫೊಂತಮಾರಿಗರ ಜೊತೆ ಮಾತಾಡಿದಂತೆ ಅನಿಸಿದೆ. ಆದರೆ ಮೊನ್ನೆ ಭಾನುವಾರ ಇಟಲಿಯ ನಗರವಾಸಿ ಬಂದು ಹೋದನಲ್ಲ, ಅಬ್ಬಾ, ಅವ ಹೇಳಿದ ತಲೆಬುಡ ನಮಗೆ ಅರ್ಥವಾಗಲಿಲ್ಲ..’

ಅರ್ಥವಾಗದೇ ಇದ್ದದ್ದರ ಬೆಲೆ ಅವರಿಗೆ ನಂತರ ತಿಳಿಯುತ್ತದೆ. ಒಂದು ದಿನ ನೋಡುತ್ತಾರೆ, ತಮ್ಮ ಹೊಲಕ್ಕೆ ಬರುವ ಹಳ್ಳದ ನೀರನ್ನು ಬೇರೆಲ್ಲೋ ತಿರುಗಿಸಲಾಗುತ್ತಿದೆ! ಹೆಂಗಸರು ಸಿಟ್ಟಿಗೆದ್ದು ಪಟ್ಟಣದ ಮೇಯರ್ ಬಳಿ ಜಗಳಕ್ಕೆ ಹೋಗುತ್ತಾರೆ. ಅಲ್ಲಿ ಅವರಿಗೆ ಎದುರಿಗೇ ಸಿಕ್ಕಿಬಿಡುವವನು ಅವರ ವಕೀಲ ಡಾನ್ ಸರ್ಕೋಸ್ಟಾಂಜಾ.

ಈ ವಕೀಲ ಮಹಾವಂಚಕ. ತನ್ನನ್ನು ‘ಜನಸೇವಕ’ ಎಂದು ಕರೆದುಕೊಳ್ಳುತ್ತ ಆ ಊರಿನ ಯಾರೇ ಎಲ್ಲೇ ಎದುರು ಸಿಗಲಿ, ಅವರನ್ನು ಹೆಸರು ಹಿಡಿದು ಕರೆದು ಮಾತನಾಡಿಸಿ ‘ಫೊಂತಮಾರಾಗೆ ಜಯವಾಗಲಿ’ ಎಂದು ಕಿರುಚುತ್ತಿದ್ದವ. ಫೊಂತಮಾರಾದ ಪ್ರತಿ ಜಗಳವೂ ಅವನ ಆಫೀಸಿನಲ್ಲೇ ಪರಿಹಾರವಾಗಬೇಕು. ಹುಟ್ಟಿದ, ಸತ್ತ ಪ್ರತಿ ದಾಖಲೆಯನ್ನೂ ಅವನೇ ಕೊಡಬೇಕು. ಹಳ್ಳಿಗರು ಪಟ್ಟಣಕ್ಕೆ ಬಂದ ಸಂದರ್ಭಗಳಲ್ಲಿ ಅವರಿಗೆ ಅವನು ಬೇಕೇಬೇಕು. ಜನರ ಸಹಾಯಕ್ಕೆ ಒದಗಿದವನಂತೆ ನಟಿಸಿ ಜನರನ್ನು ಹಿಡಿತದಲ್ಲಿಟ್ಟುಕೊಂಡವ. ಅನಕ್ಷರಸ್ಥ ಫೊಂತಮಾರಿಗಳಿಗೆ ಕೇವಲ ತನ್ನ ಹೆಸರು ಬರೆಯುವುದನ್ನಷ್ಟೇ ಕಲಿಸಿ ಬ್ಯಾಲೆಟ್ ಪೇಪರ್ ಮೇಲೆ ಬರೆಸಿ ಪ್ರತಿನಿಧಿಯಾದವ. ಒಳಗೊಳಗೇ ಬಲಶಾಲಿಗಳ ಜೊತೆ ಒಪ್ಪಂದ ಮಾಡಿಕೊಂಡು ಅನವರತ ಅವರನ್ನು ವಂಚಿಸಿದವ.

ಈ ವಕೀಲ ಜನರ ನಿಜವಾದ ಶತ್ರು. ಹೊಸ ಕಾನೂನಿನಂತೆ ಕೆಲಸಗಾರರ ವೇತನ ೪೦% ಕಡಿತವಾಗಲು ಅವರ ಪರವಾಗಿ ಸರ್ಕಾರಕ್ಕೆ ಒಪ್ಪಿಗೆ ಕೊಟ್ಟವನು ಅವನೇ. ಹೆಚ್ಚುಕಮ್ಮಿ ೪೦ ವರ್ಷಗಳಿಂದ ಫೊಂತಮಾರಾದ ಕೋಳಿ, ಮೊಟ್ಟೆಗಳೆಲ್ಲ ಅವನ ಕಿಚನ್ನಿನಲ್ಲೇ ಕೊನೆಯ ಘಳಿಗೆಗಳನ್ನು ಎಣಿಸಿವೆ. ಆ ಕಾಲದ ಇಟಲಿಯಲ್ಲಿ ಶ್ರಮಿಕರ, ರೈತರ, ಕಾರ್ಮಿಕರ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತಾ, ಅವರ ಪರವಾಗಿ ಸರ್ಕಾರದ ಜೊತೆ ‘ಮಾತನಾಡುತ್ತಿದ್ದ’ ಅಸಂಖ್ಯರಲ್ಲಿ ಸರ್ಕೋಸ್ಟಾಂಜಾ ಕೂಡಾ ಒಬ್ಬ. ಈಗವನು ನೀರಿನ ವಿವಾದದಲ್ಲಿ ಪಟ್ಟಣದ ಕಂಟ್ರಾಕ್ಟರನಿಗೂ, ಫೊಂತಮಾರಿಗರಿಗೂ ನಡುವೆ ‘ಮುಕ್ಕಾಲು-ಮುಕ್ಕಾಲು’ ಭಾಗ ನೀರನ್ನು ಸಮವಾಗಿ ಹಂಚಿಬಿಟ್ಟ! ಇಬ್ಬರಿಗೂ ಮುಕ್ಕಾಲು ಪಾಲು ಕೊಡುವುದು ಹೇಗೆಂದು ಜನರಿಗೆ ಅನುಮಾನವಿದ್ದರೂ ತಮ್ಮ ವಕೀಲನನ್ನು ನಂಬಿದರು. ೫೦ ವರ್ಷ ನೀರು ಬಿಟ್ಟುಕೊಡುವುದು ಕಷ್ಟವೆಂದಾಗ ೧೦ ಲಸ್ತರ್ ಕಾಲ ಬಿಟ್ಟುಕೊಡಿ ಎಂದು ಒಪ್ಪಿಸಿದ. ಒಂದು ಲಸ್ತರ್ ಎಂದರೆ ೫ ವರ್ಷ ಎಂದು ಹಳ್ಳಿಗರಿಗೆ ಗೊತ್ತಿಲ್ಲವೆಂದು ಖಚಿತವಾಗಿ ಅವನಿಗೆ ಗೊತ್ತಿತ್ತು.

ಇಂಥವರನ್ನೆಲ್ಲ ನೋಡಿ ಧೈರ್ಯಶಾಲಿ ತರುಣ, ಬರಾರ್ಡೋ ಎಂಬ ಜನರ ವಕ್ತಾರ ಹೀಗೆ ಹೇಳುತ್ತಾನೆ:

‘ಎಲೆಕ್ಷನ್ ಪ್ರಕಾರ ನಡೆಯುವ ಸರ್ಕಾರದಲ್ಲಿ ಅಧಿಕಾರವೆಲ್ಲ ಶ್ರೀಮಂತರ ಕೈ ಸೇರುತ್ತದೆ. ಶ್ರೀಮಂತರು ತಮಗೆ ಬೇಕಾದ ರೀತಿಯಲ್ಲಿ ಎಲೆಕ್ಷನ್ ಮೃಗವನ್ನು ಪಳಗಿಸಿಕೊಂಡಿದ್ದಾರೆ. ಸರ್ಕಾರವನ್ನು ಒಬ್ಬನೇ ಅರಸ ನಡೆಸುತ್ತಿದ್ದಾಗ ಶ್ರೀಮಂತರೂ ಅವನಿಗೆ ಹೆದರುತ್ತಿದ್ದರು. ಅರಸನಿಗೂ, ರೈತರಿಗೂ ನಡುವೆ ವಿರೋಧಕ್ಕೆ ಕಾರಣವಿರಲಿಲ್ಲ. ಈಗ ರೈತರು ಮತ್ತು ರಾಜಕುಮಾರ ಎಷ್ಟೇ ತಲೆ ಚಚ್ಚಿಕೊಂಡರೂ ಕೇಳುವವರಾರು? ಸರ್ಕಾರ ಕಳ್ಳರಿಂದಲೇ ನಡೆಯುವುದು. ಐನೂರು ಜನ ಕಳ್ಳರಿರುವುದಕ್ಕಿಂತ ಒಬ್ಬ ಕಳ್ಳನಿರುವುದು ವಾಸಿ. ಒಬ್ಬನಿಗೆ ಎಷ್ಟೇ ಹಸಿವೆಯಿದ್ದರೂ ಐನೂರು ಜನರಷ್ಟು ಪ್ರಮಾಣದಲ್ಲಿ ಕಬಳಿಸುವುದು ಅವನಿಗೆ ಸಾಧ್ಯವಿರಲಿಲ್ಲ.’

ಈಗಿರುವ ಜನರ ಸರ್ಕಾರ ಕಳ್ಳರದ್ದು; ಅದಕ್ಕಿಂತ ಅರಸೊತ್ತಿಗೆಯೇ ಮೇಲು ಎನ್ನುವುದು ಹಳ್ಳಿಗರ ಭಾವನೆ!

ಹೋಗಲಿ, ಧರ್ಮಗುರುಗಳಾದರೂ ಜನರ ಪರವಿದ್ದಾರೆಯೇ? ಕಾದಂಬರಿಯಲ್ಲಿ ಒಬ್ಬ ಹಳ್ಳಿಗನಿಗೆ ಬೀಳುವ ಕನಸು ಕುತೂಹಲಕಾರಿಯಾಗಿದೆ:

‘ಕೊನೆಗೆ ಪೋಪ ಗುರುಗಳಿಗೂ, ಏಸು ಪ್ರಭುವಿಗೂ ನಡುವೆ ಒಪ್ಪಂದವಾಯಿತು. ಒಪ್ಪಂದದ ಸವಿನೆನಪಿಗೆ ರೈತರಿಗೆ ಏನಾದರೂ ಒಳ್ಳೆಯದು ಮಾಡುವ ಇಚ್ಛೆ ಏಸುವಿಗೆ. ‘ರೈತರಿಗೆ ಈ ಭೂಮಿಯನ್ನೆಲ್ಲ ಹಂಚಿಬಿಡೋಣವೇ?’ ಎನ್ನುತ್ತಾರೆ. ಆಗ ಪೋಪ ಗುರುಗಳು, ‘ನೆಲವೆಲ್ಲ ಭೂಪತಿ ರಾಜನದಲ್ಲವೆ? ರೈತರಿಗೆ ಭೂಮಿ ಹಕ್ಕು ಕೊಡುವುದು ಅವನಿಗೆ ಬೇಸರವಾಗುವುದಿಲ್ಲವೆ?’ ಎನ್ನುತ್ತಾರೆ. ‘ಹಾಗಾದರೆ ರೈತರಿಗೆ ತೆರಿಗೆ ವಿನಾಯ್ತಿ ಕೊಡುವುದೇ?’ ಪ್ರಶ್ನಿಸುತ್ತಾರೆ ಏಸುಪ್ರಭು. ‘ರಾಜಕುಮಾರ ಟೋರ್ಲೋನಿಯೋ ಸಂತ ಪೀತರನ ನಿಧಿಗೆ ಪ್ರತಿ ವರ್ಷ ಎರಡು ಸಾವಿರ ಮಿಲಿಯ ಲಿರೆ ಕೊಡುತ್ತಾರೆ. ರಾಜಕುವರನಿಗೆ ಆದಾಯ ಬರುವುದು ಜನರ ತೆರಿಗೆಯಿಂದ ಎನ್ನುವುದನ್ನು ಮರೆಯಬಹುದೆ?’ ಎನ್ನುತ್ತಾರೆ ಪೋಪಗುರುಗಳು. ಏಸುವು ‘ರೈತರಿಗೆ ಸಮೃದ್ಧ ಮಳೆಬೆಳೆ ಫಸಲು ಕೊಡೋಣವೇ?’ ಎಂದು ಕೇಳುತ್ತಾರೆ. ಪೋಪರು, ‘ಸಮೃದ್ಧ ಫಸಲಿನಿಂದ ಬೆಲೆ ಇಳಿಯುತ್ತದೆ. ಕಾರ್ಡಿನಲ್ ಪ್ರಭೃತಿಗಳೂ, ಪೋಪರೂ ಮೂಲತಃ ಜಮೀನ್ದಾರರೆನ್ನುವುದನ್ನು ಮರೆಯದಿರೋಣ’ ಎನ್ನುತ್ತಾರೆ.

ಬೇರೆಯವರಿಗೆ ತೊಂದರೆಯಾಗದಂತೆ ರೈತರಿಗೆ ಒಳ್ಳೆಯದು ಮಾಡಲು ಸಾಧ್ಯವೇ ಇಲ್ಲವೇ ಎಂದು ಏಸು ನೊಂದುಕೊಳ್ಳುತ್ತಾರೆ. ಆಗ ಪೋಪರು ಏಸುಪ್ರಭುವಿನ ಜೊತೆ ಆಕಾಶ ಸಂಚಾರ ಹೊರಡುತ್ತಾರೆ. ಕೆಳಗೆ ನೋಡುತ್ತಾರೆ, ರೈತರು ಜಗಳ, ಹಸಿವು, ಕಾಯಿಲೆ, ನೋವಿನಲ್ಲಿ ಕೂಗುತ್ತ, ಅಳುತ್ತ, ಕಿರುಚುತ್ತ, ಬಡಿದಾಡಿಕೊಳ್ಳುತ್ತ ಇದ್ದಾರೆ! ಕೂಡಲೇ ಪೋಪರು ಏಸುವಿನ ಚೀಲದಿಂದ ಒಂದು ಮುದ್ದೆ ಹೇನು ತೆಗೆದು ಭೂಮಿ ಮೇಲೆ ಬಿಟ್ಟು ‘ಜನರ ಮನಸ್ಸು ಪಾಪದತ್ತ ಎಳಸದೇ ಇರಲಿ. ಅವರು ಸದಾ ತುರಿಸಿಕೊಳ್ಳುತ್ತ ಇರಲಿ’ ಎನ್ನುತ್ತಾರೆ!’

ಏಸುಪ್ರಭು ಮತ್ತು ಪೋಪರ ನಡುವಿನ ಒಪ್ಪಂದದ ಸವಿನೆನಪಿಗೆ ಜನರಿಗೆ ತುರಿಕೆ ಬಹುಮಾನವಾಗಿ ಸಿಗುತ್ತದೆ!

ಧರ್ಮಗುರುವಿನ ಕಾಳಜಿ ಹೀಗಿರುವಾಗ ಫೊಂತಮಾರಾಕ್ಕೊಬ್ಬ ಕಂಟ್ರಾಕ್ಟರ್ ಬರುತ್ತಾನೆ. ಆತ ನಮ್ಮ ಬೃಹತ್ ಬಂಡವಾಳಶಾಹಿಗಳಂತೆ. ನೇರ ಎಲ್ಲೂ ಕಾಣನು. ಆದರೆ ನಡೆವ ಎಲ್ಲವೂ ಅವನ ಲಾಭಕ್ಕೇ ಆಗಿರುತ್ತದೆ. ಜನ ಅವನ ಬಗ್ಗೆ ಹೇಳುವುದು ಹೀಗೆ:

‘ಅವ ನಮ್ಮ ಜಿಲ್ಲೆಯಲ್ಲಿ ಅಮೆರಿಕವನ್ನೇ ಕಂಡಿದ್ದಾನಂತೆ. ಪಿನ್ನಿನಿಂದ ಬಂಗಾರ ತಯಾರಿಸುವ ವಿದ್ಯೆ ಅವನಿಗೆ ಗೊತ್ತಿದೆಯಂತೆ. ಶ್ರೀಮಂತಿಕೆಯ ಸಲುವಾಗಿ ತನ್ನ ಆತ್ಮವನ್ನು ಪಿಶಾಚಿಗೆ ಮಾರಿದ್ದಾನೆ. ಅವನ ಬಳಿ ಬ್ಯಾಂಕ್ ನೋಟು ತಯಾರಿಸುವ ಕಾರ್ಖಾನೆಯಿದೆ..’

ಇಂಥವನ ಕೇಡಿಗತನಕ್ಕೆ ಬೆಂಬಲವಾಗಿ ವಕೀಲ, ಅಧಿಕಾರಿಗಳೆಲ್ಲ ಇರುವಾಗ ವಾದವಿವಾದ, ಚರ್ಚೆ ಒಪ್ಪಂದಗಳಿಂದ ಲಾಭವಿಲ್ಲ ಎನ್ನುವುದು ಬರಾರ್ಡೋನ ವಾದ. ಫೊಂತಮಾರಿಗರು ತಮ್ಮ ಊರಿಗೊಬ್ಬ ಪಾದ್ರಿ ಬೇಕೆಂದು ನಗರದವರ ಬಳಿ ಕೇಳಿದಾಗ ಅವರು ಕಳಿಸಿದ್ದು ಸಿಂಗರಿಸಿದ ಕತ್ತೆಯನ್ನು! ಇದರಿಂದ ಸಿಟ್ಟಿಗೆದ್ದ ಬರಾರ್ಡೋ ನಗರಕ್ಕೆ ಹೋಗುವ ನೀರು ಸರಬರಾಜು ಪೈಪನ್ನು ಹಲವೆಡೆ ಒಡೆದು ಹಾಕಿದ್ದ. ನಗರಕ್ಕೆ ಹೋಗುವ ಕಾಂಕ್ರೀಟ್ ಮೈಲುಕಲ್ಲುಗಳನ್ನು ಒಡೆದು ಹಾಕಿದ್ದ. ಏಸು ಹುಟ್ಟುವ ಮೊದಲಿನಿಂದ ಎಲ್ಲರಿಗೂ ಸೇರಿದ್ದ ಹುಲ್ಲುಗಾವಲಿಗೆ ಕಂಟ್ರಾಕ್ಟರ್ ಬೇಲಿ ಹಾಕಿಕೊಂಡು ತನ್ನದೆಂದಾಗ ಅದನ್ನು ಹಾಕಿದಷ್ಟು ಸಲ ಸುಟ್ಟ. ಕಾವಲುಗಾರರನ್ನು ನೇಮಿಸಿದಾಗಲೂ ಬೇಲಿಗೆ ಬೆಂಕಿಯಿಟ್ಟು ಅವರೇ ಜೈಲಿಗೆ ಹೋಗುವಂತೆ ಮಾಡಿದ.

ಬರಾರ್ಡೋನ ಪ್ರಕಾರ ‘ಪಟ್ಟಣಿಗರ ಬಳಿ ಮಾತಿನ ವಾದ ಹೂಡಿ ಪ್ರಯೋಜನವಿಲ್ಲ. ಕಾನೂನು ರಚಿಸುವವರು ಅವರು, ಅದನ್ನು ಪ್ರಯೋಗಿಸುವ ನ್ಯಾಯಾಧೀಶರೂ ಅವರೇ, ಅದರ ಅರ್ಥ ಹೇಳುವ ಲಾಯರಿಗಳೂ ಅವರೇ. ಹೀಗಿರುವಾಗ ರೈತರಿಗೆ ಅವರು ಹೇಗೆ ನ್ಯಾಯ ಮಾಡಿಯಾರು? ಫೊಂತಮಾರಿಗಳು ನೀರು ಕೊಡೆಂದು ಕಂಟ್ರಾಕ್ಟರ್ ಬಳಿ ಕೇಳಿಕೊಂಡು ಹೋಗಲೇಬಾರದು. ಅವನ ಟ್ಯಾನರಿ ಸುಟ್ಟುಹಾಕಬೇಕು. ಅವನ ಕಟ್ಟಿಗೆ ಡಿಪೋಗೆ ಬೆಂಕಿ ಹಚ್ಚಬೇಕು. ಅವನ ಜಮೀನಿನ ಬೇಲಿ ಕಿತ್ತೆಸೆಯಬೇಕು. ಅವನ ಇಟ್ಟಿಗೆ ಭಟ್ಟಿಗಳ ಒಡೆದು ಹಾಕಬೇಕು. ಆ ಮೂರ್ಖ ನಮ್ಮ ಈ ಯಾವ ಸಿಟ್ಟನ್ನೂ ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ರಾತ್ರಿ ಡೋನಾ ರೊಸಾಲಿಯಾ ಜೊತೆ ಹಾಸಿಗೆಯಲ್ಲಿರುವಾಗ ಅವನ ವಿಲ್ಲಾಗೆ ಬೆಂಕಿ ಹಚ್ಚಬೇಕು. ನೀರು ಪಡೆಯಲು ಇದೊಂದೇ ಹಾದಿ. ಇಲ್ಲವಾದರೆ ಒಂದುದಿನ ನಿಮ್ಮ ಹೆಣ್ಣುಮಕ್ಕಳನ್ನು ಬಜಾರಿನಲ್ಲಿಟ್ಟು ಆತ ಮಾರುವುದನ್ನು ನಿಮ್ಮ ಕಣ್ಣಿಂದಲೇ ನೋಡುತ್ತೀರಿ. ಆಮೇಲೆ ಅವನನ್ನು ದೂರಬೇಡಿ..’

ಆದರೆ ಬರಾರ್ಡೋ ಮತ್ತವನಂಥವರು ಅನ್ಯಾಯವನ್ನು ಗ್ರಹಿಸಿ ಅದರ ಪರಿಹಾರಾರ್ಥ ಏನಾದರೂ ಮಾಡಹೊರಟ ಕೂಡಲೇ ಪ್ರಭುತ್ವದ ದಮನ ಶುರುವಾಗುತ್ತದೆ. ಹಿಂಸೆ ಹಿಂಬಾಲಿಸುತ್ತದೆ.

‘ಭಯ ಇಡೀ ಜನಸಮುದಾಯವನ್ನೇ ಆವರಿಸಿದಾಗ ಅದಕ್ಕೆ ಯಾವ ವಿವರಣೆಯೂ ಇರುವುದಿಲ್ಲ. ಭಯ ಎಲ್ಲರನ್ನೂ ಆವರಿಸುತ್ತದೆ. ಅದು ಪ್ರಭುತ್ವದ ವಿರೋಧಿಗಳನ್ನಷ್ಟೇ ಅಲ್ಲ, ಫ್ಯಾಸಿಸ್ಟರೂ ಎಲ್ಲರಿಗಿಂತ ಹೆಚ್ಚು ಭಯಗ್ರಸ್ತರಾಗಿರುತ್ತಾರೆ. ತಮ್ಮ ವಿರೋಧಿಗಳನ್ನು ಅವರು ಏಕೆ ಕೊಲ್ಲಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಪೊಲೀಸ್ ಮತ್ತು ಸೈನ್ಯದ ಗಾತ್ರ ಏಕೆ ಹೆಚ್ಚಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಸಾವಿರಾರು ಮುಗ್ಧ ಜನರನ್ನು ಗಲ್ಲಿಗೇಕೆ ಏರಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಹೆಚ್ಚು ತಪ್ಪು ಮಾಡಿದ ಹಾಗೂ ಹೆಚ್ಚೆಚ್ಚು ಭಯ. ಭಯ ಹೆಚ್ಚಾದ ಹಾಗೆ ಮತ್ತಷ್ಟು ಅಪರಾಧ. ಅಪರಾಧ ಮತ್ತು ಭಯ ಹೀಗೆ ಹೆಚ್ಚುತ್ತಲೇ ಹೋಗುವುದು..’

ಇಷ್ಟು ಸರಳವಾಗಿ ಹಿಂಸೆಯ ಮೀಮಾಂಸೆ ಅರಿತಿದ್ದರೂ; ಮನುಷ್ಯನಿರಲಿ, ದೇವರೇ ಇರಲಿ ಯಾರಿಗೂ ತಲೆಬಾಗದೇ ಎದೆಯುಬ್ಬಿಸಿ ನಡೆಯಬೇಕೆಂಬ ಬಿಸಿರಕ್ತದ ಬರಾರ್ಡೋನಿಗೂ ಬರಬರುತ್ತ ‘ಎಲ್ಲವೂ ಅಪ್ರಯೋಜಕ, ಶತ್ರು ಬಲಶಾಲಿಯಾಗಿದ್ದಾನೆ, ಜನ ಮಂಕುಬೂದಿ ಎರಚಿದವರಂತೆ ಮೋಡಿಗೊಳಗಾಗಿದ್ದಾರೆ’ ಎನಿಸುತ್ತದೆ. ಎಲ್ಲೆಲ್ಲೂ ಕರ್ಫ್ಯೂ. ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಚರ್ಚೆ ನಿಷೇಧಿಸಲಾಗುತ್ತದೆ. ದಂಗೆಯ ವಾತಾವರಣ ನಿರ್ಮಾಣವಾಗುತ್ತದೆ.

ಆಮೇಲೆ ಏನಾಗುತ್ತದೆ?

‘ಫೊಂತಮಾರಾ’ ಓದಿ..

***

ಸಿಲೋನೆ ೧೯೩೧ರಲ್ಲಿ ಕಲ್ಪಿಸಿಕೊಂಡ ಇಟಲಿಯ ಫೊಂತಮಾರಾಕ್ಕಿಂತ ೨೦೧೪ರ ಭಾರತ, ಪಾಕಿಸ್ತಾನ, ಸ್ಪೇನ್, ಮಯನ್ಮಾರ್, ಇರಾಕ್, ಉಗಾಂಡಾದ ಯಾವುದೇ ಹಳ್ಳಿಯೂ ಬೇರೆಯಾಗಿಲ್ಲ. ಎಲ್ಲ ಜನಭರಿತ, ಸಂಪದ್ಭರಿತ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದ ಬಡದೇಶಗಳ ಸ್ಥಿತಿ ಇವತ್ತು ಹೀಗೇ ಇದೆ. ಸಮಾಜದ ಅಂಚಿನಲ್ಲಿ ಅತ್ಯಂತ ಕಷ್ಟದಿಂದ ಜೀವನ ನಡೆಸುತ್ತಿರುವ ಜನ ಇನ್ನಷ್ಟು ಹತಾಶೆಗೆ ದೂಡಲ್ಪಟ್ಟು ಆತ್ಮಹತ್ಯೆ, ದಂಗೆ, ಅಶಾಂತಿಯತ್ತ ಹೊರಳುತ್ತಿದ್ದಾರೆ. ಇವತ್ತಿನ ರೈತರನ್ನು, ಬಡವರನ್ನು ಧರ್ಮ, ರಾಜಕಾರಣ ಅಂದಿನಂತೇ ವಂಚಿಸುತ್ತಿವೆ.

ಸರ್ಕಾರ, ಚರ್ಚು, ನ್ಯಾಯವ್ಯವಸ್ಥೆ ಇತ್ಯಾದಿ ಎಲ್ಲ ಸ್ಥಾಪಿತ ವ್ಯವಸ್ಥೆಗಳ ನಯಸುಗಾರಿಕೆ, ವಂಚನೆ, ದಬ್ಬಾಳಿಕೆ ಹಾಗೂ ಜನವಿರೋಧಿ ನೀತಿಗಳನ್ನು ಅತ್ಯಂತ ವ್ಯಂಗ್ಯವಾಗಿ ಲೇವಡಿ ಮಾಡುವ ಈ ಕಾದಂಬರಿ ವಿಶ್ವಾದ್ಯಂತ ಎಷ್ಟು ಮೆಚ್ಚುಗೆ ಪಡೆಯಿತೋ ಅಷ್ಟೇ ಟೀಕೆಯನ್ನೂ ಎದುರಿಸಿತು. ಕಾದಂಬರಿಯಲ್ಲಿ ಚಿತ್ರಿತವಾದ ಹಳ್ಳಿಗರ ಅಮಾಯಕತೆ ಮತ್ತು ಪ್ರಭುತ್ವದ ದಮನ ಉತ್ಪ್ರೇಕ್ಷಿತ ಎನ್ನಲಾಯಿತು. ಅಂತಹ ರೈತದಂಗೆಗಳು ನಿಜವಾಗಿ ಇಟಲಿಯಲ್ಲಿ ನಡೆಯಲೇ ಇಲ್ಲ ಎಂದು ಹೇಳಲಾಯಿತು. ಅದರ ಬೆನ್ನಿಗೇ ಸಿಲೋನೆ ದೇಶಬಿಟ್ಟು ಹೋದ ಗೂಢಚಾರ, ಫ್ಯಾಸಿಸ್ಟರ ಗುಪ್ತಚರ ಎನ್ನಲಾಯಿತು. ಕಮ್ಯುನಿಸ್ಟ್ ಪಕ್ಷ ವಿರೋಧಿ ಕೆಲಸ ಮಾಡಿದವನೆಂದು, ಅಮೆರಿಕದ ಪರವಾಗಿದ್ದನೆಂದು ದಾಖಲೆ ಸಮೇತ ಹೇಳುವ ಪುಸ್ತಕ ಹೊರಬಂತು.

ಸಿಲೋನೆ ಕಮ್ಯುನಿಸ್ಟನೋ ಅಲ್ಲವೋ; ಅಂದಿನ ಇಟಲಿ ಹಾಗಿತ್ತೋ, ಇಲ್ಲವೋ; ಸೃಜನಶೀಲ ಕೃತಿಯಲ್ಲಿ ಉತ್ಪ್ರೇಕ್ಷೆ ಸಿಂಧುವೋ ಅಲ್ಲವೋ - ಯಾವುದೇನೇ ಇರಲಿ, ಗಾಢವಾಗಿ ಪ್ರಭುತ್ವವನ್ನು ಟೀಕಿಸುತ್ತ, ರೈತರ ಪರವಾಗಿ ಪ್ರಾಮಾಣಿಕವಾಗಿ ಚಿಂತಿಸಿದ ಕಾದಂಬರಿ ಓದಿದವನ ಮನದಲ್ಲಿ ಬಹುಕಾಲ ಹಲವು ಪ್ರಶ್ನೆಗಳನ್ನು ಉಳಿಸುವುದಂತೂ ನಿಜ. ದೇಶಕಾಲದ ಹಂಗಿಲ್ಲದೆ ಅನ್ವಯವಾಗುವುದೇ ಸತ್ವಶಾಲಿ ಬರವಣಿಗೆಯ ಲಕ್ಷಣವೆಂದಾದರೆ ಫೊಂತಮಾರಾ ನಿಸ್ಸಂಶಯವಾಗಿ ಶ್ರೇಷ್ಠ ಕಾದಂಬರಿಯ ಸಾಲಿನಲ್ಲಿ ನಿಲ್ಲುತ್ತದೆ.

ಯೋಚಿಸಿ:

ಗಾಂಧಿ ಪ್ರತಿಪಾದಿಸಿದ ಗ್ರಾಮ ಸ್ವರಾಜ್ಯ, ಅಂಬೇಡ್ಕರ್ ಪ್ರತಿಪಾದಿಸಿದ ನಗರ ವಲಸೆ, ಅಬ್ದುಲ್ ಕಲಾಂ ಅವರ ‘ಪುರ ಮಾದರಿ’, ಮಾರ್ಕ್ಸ್‌ನ ಸಂಪೂರ್ಣ ಕ್ರಾಂತಿ ಅಥವಾ ಮತ್ತಿನ್ಯಾವ ಹೊಸ ಮಾದರಿ ಇವತ್ತಿನ ವಿಶ್ವಗ್ರಾಮದ ಸಮಸ್ಯೆಗಳಿಗೆ ಸೂಕ್ತವಾಗುತ್ತದೆ?



Monday 13 October 2014

ಮಂಗಳ ಯಾನ




ಸೆ. ೨೪, ೨೦೧೪. ಭಾರತದ ೧೩೫೦ ಕೆಜಿ ಭಾರದ ‘ಮಾರ್ಸ್ ಆರ್ಬಿಟರ್ ಮಿಷನ್’ ನೌಕೆ ಮಂಗಳನ ಗುರುತ್ವ ವಲಯ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ೨೦೧೩, ನವೆಂಬರ್ ೫ರಂದು ಶ್ರೀಹರಿ ಕೋಟಾ ಉಡ್ಡಯನ ಕೇಂದ್ರದಿಂದ ಹಾರಿದ ಮೇಲೆ ಭೂಮಿ ಸುತ್ತ ಚಂದ್ರನಂತೆ ತಿರುಗಲು ಆರಂಭಿಸಿ, ಸುತ್ತುವ ಪಥವನ್ನು ಆರು ಬಾರಿ ಬದಲಾಯಿಸಿ, ಕೊನೆಗೆ ಭೂ ಗುರುತ್ವ ತಪ್ಪಿಸಿಕೊಂಡು ಅದರಾಚೆ ನಭಕ್ಕೆ ಜಿಗಿದಿದ್ದ ನೌಕೆ ಸೂರ್ಯನ ಸುತ್ತ ಸುತ್ತುತ್ತ ಹೊಂಚುಹಾಕುತ್ತಿತ್ತು. ಭೂಮಿಯಿಂದ ೨೨.೪ ಕೋಟಿ ಕಿಮೀ ದೂರದಲ್ಲಿದ್ದರೂ ಬೆಂಗಳೂರಿನ ನಿಯಂತ್ರಣ ಕೇಂದ್ರದ ರೇಡಿಯೋ ಸಿಗ್ನಲ್ ಸಂಕೇತ ಸ್ವೀಕರಿಸಿ ಮಂಗಳ ಗ್ರಹ ಸಮೀಪ ಬಂದದ್ದೇ ಅದರ ವಲಯ ಪ್ರವೇಶಿಸಿ ಯಶಸ್ವಿಯಾಗಿ ತಿರುಗತೊಡಗಿತು.

ಅಮೆರಿಕ, ರಷ್ಯಾ ಮತ್ತು ಯೂರೋಪಿನ ಸ್ಪೇಸ್ ಏಜೆನ್ಸಿಯ ನಂತರ ವಿಶ್ವದಲ್ಲಿ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ನೌಕೆ ಕಳಿಸಿದ ನಾಲ್ಕನೇ ದೇಶ ಭಾರತವಾಗಿದೆ. ಜಪಾನ್, ಚೀನಾಗಳ ಪ್ರಯತ್ನ ವಿಫಲವಾಗಿದ್ದ ಕಾರಣ ಮಂಗಳ ನೌಕೆಯನ್ನು ಕಳಿಸಿದ ಏಷ್ಯಾದ ಪ್ರಥಮ ದೇಶ ಎಂಬ ಹೆಗ್ಗಳಿಕೆಯೂ ಭಾರತಕ್ಕೆ ಸಿಕ್ಕಿದೆ. ೨೦೦೮ರ ಚಂದ್ರಯಾನ ಹಾಗೂ ಈ ಮಂಗಳ ಯಾನ ಯಶಸ್ವಿಯಾಗುವುದರೊಂದಿಗೆ ಭಾರತ ಬಾಹ್ಯಾಕಾಶ ವಿಜ್ಞಾನ ಹಾಗೂ ಅಂತರಿಕ್ಷ ಸಂಶೋಧನೆ ವಿಷಯದಲ್ಲಿ ವಿಶ್ವದ ಪ್ರಮುಖ ದೇಶಗಳ ಜೊತೆ ಮುಂಚೂಣಿಯಲ್ಲಿ ನಿಂತಿದೆ.

ನಮ್ಮ ಉಪಗ್ರಹ ಉಡಾವಣಾ ವ್ಯವಸ್ಥೆ ಎಷ್ಟು ಕರಾರುವಾಕ್ ಹಾಗೂ ಕಡಿಮೆ ಬೆಲೆಗೆ ಆಗುವಂಥದೆಂದರೆ ಹಲವು ದೇಶಗಳು ನಮ್ಮ ದೇಶ ತಯಾರಿಸಿದ ರಾಕೆಟ್‌ನಿಂದ ತಮ್ಮ ಉಪಗ್ರಹಗಳನ್ನು ಇಲ್ಲಿಂದಲೇ ಹಾರಿಬಿಡುತ್ತಿವೆ. ಅಂತರಿಕ್ಷ ವಿಜ್ಞಾನ ಮತ್ತು ಗಣಿತದಲ್ಲಿ ಭಾರತ ಮೊದಲಿನಿಂದಲೂ ಇತರ ದೇಶ, ನಾಗರಿಕತೆಗಳಿಗಿಂತ ಹೆಚ್ಚಿನ ತಿಳಿವನ್ನು ಪಡೆದಿತ್ತು. ಆದರೆ ಮೊದಲ ಸಹಸ್ರಮಾನದ ನಂತರ ವಿಜ್ಞಾನ ತಿಳುವಳಿಕೆಗೆ ಒಂದು ಮಂಕು ಆವರಿಸಿತು. ನಂತರ ವಿದೇಶೀ ಆಳ್ವಿಕೆ, ಬಡತನ, ಆಂತರಿಕ ಬಿಕ್ಕಟ್ಟು, ರಾಜಕೀಯ ಹೋರಾಟ, ಜಾತಿಧರ್ಮಗಳ ಮೇಲಾಟದ ನಡುವೆ ಕಲೆ, ಸಂಗೀತ, ಸಾಹಿತ್ಯಗಳು ಏಳ್ಗೆ ಹೊಂದಿದರೂ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಸ್ಥಗಿತತೆ ಬಂದುಬಿಟ್ಟಿತು.

ಈ ೧೫೦ ವರ್ಷಗಳಲ್ಲಿ ಆಂತರಿಕ ಸಮಸ್ಯೆಗಳ ನಡುವೆಯೂ ನಮ್ಮ ನೆಲದಲ್ಲಿ ಹಲವಾರು ವಿಜ್ಞಾನಿಗಳು ರೂಪುಗೊಂಡರು. ಈಗ ಅಂಥದೊಂದು ವಿಜ್ಞಾನಿಗಳ ತಂಡದೊಂದಿಗೆ ತಂತ್ರಜ್ಞ, ಸಹಾಯಕ, ಕೆಲಸಗಾರರು ಅವಿರತ ಶ್ರಮ ವಹಿಸಿ ದುಡಿದು ಮಂಗಳ ಯಾನ ಯಶಸ್ವಿಯಾಗಿಸಿದ್ದಾರೆ,

ಅವರೆಲ್ಲರಿಗೂ ಅಭಿನಂದನೆಗಳು.


ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವೆ?

ಇದೇ ವೇಳೆ ಸಾಮಾಜಿಕ ಕಾಳಜಿಯುಳ್ಳ ಕೆಲವು ಸೂಕ್ಷ್ಮಮನದ ವ್ಯಕ್ತಿಗಳು ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಇದಕ್ಕೆ ಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ೪೫೦ ಕೋಟಿ ರೂ. ವೆಚ್ಚದಲ್ಲಿ ಭಾರತದಂತಹ ಬಡದೇಶ ಅಂತರಿಕ್ಷಕ್ಕೆ ರಾಕೆಟ್ ಹಾರಿಸಿ ಮಂಗಳನತ್ತ ನಡೆದಿರುವುದು ಯಾವ ಮಹಾ ಸಾಧನೆ? ಇದರಿಂದ ಜನ ಸಾಮಾನ್ಯನಿಗೇನು ಉಪಯೋಗ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ನಿಜ. ಮಂಗಳನ ಮೇಲೆ ಆರ್ಬಿಟರ್ ಇಳಿದ ತಕ್ಷಣ ಈ ದೇಶದ ಮಲದ ಗುಂಡಿಗಳನ್ನು ಇಳಿದು ಸ್ವಚ್ಛಗೊಳಿಸುವವರಿಗೆ, ರಸ್ತೆ ಬದಿ ಕಲ್ಲಂಗಡಿ ಮಾರುವವರಿಗೆ, ರೈಲ್ವೇ ಚಾಯ್‌ವಾಲಾಗಳಿಗೆ, ಹೊಟ್ಟೆಗಾಗಿ ದೇಹ ಮಾರಿಕೊಳ್ಳುವ ಸೆಕ್ಸ್ ವರ್ಕರ್‌ಗೆ ಏನೂ ಉಪಯೋಗವಾಗುವುದಿಲ್ಲ. ಈಗಲೂ ಭಾರತದಲ್ಲಿ ಬಡತನ ರೇಖೆಯ ಕೆಳಗೆ ಕಾಲುಭಾಗಕ್ಕಿಂತ ಹೆಚ್ಚು ಜನ ಬದುಕುತ್ತಿದ್ದಾರೆ. ೧೧ ಕೋಟಿ ಅಲೆಮಾರಿಗಳು ಅತಿ ವಂಚಿತ ಸ್ಥಿತಿಯಲ್ಲಿದ್ದಾರೆ. ೨೦ ನಿಮಿಷಕ್ಕೊಂದು ಅತ್ಯಾಚಾರ ಸಂಭವಿಸುತ್ತಿದೆ. ದಲಿತ ದೌರ್ಜನ್ಯ, ಕೊಲೆ, ಸುಲಿಗೆ ಸಂಭವಿಸುತ್ತಿದೆ. ಇವರೆಲ್ಲರ ಬದುಕಿನ ಸಮಸ್ಯೆಗಳು ಮಂಗಳ ಯಾನದ ಬಳಿಕವೂ ಹಾಗೆಯೇ ಇವೆ.

೧೯೬೩ರಲ್ಲಿ ಮೊದಲ ರಾಕೆಟ್ ಉಡಾವಣೆಯಾದಾಗ, ೧೯೬೯ರಲ್ಲಿ ಇಸ್ರೋ ಸ್ಥಾಪನೆಯಾದಾಗ, ೧೯೭೫ರಲ್ಲಿ ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾದಾಗ ಇಂಥವೇ ಮಾತುಗಳು ಕೇಳಿಬಂದಿದ್ದವು. ಬಡದೇಶ ಭಾರತ ಅಂತರಿಕ್ಷಕ್ಕೆ ಉಪಗ್ರಹ ಹಾರಿಬಿಡುವ ದೊಡ್ಡಸ್ತಿಕೆ ತೋರಿಸುವುದಕ್ಕಿಂತ ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂಬ ಟೀಕೆಯೂ ಕೇಳಿಬಂದಿತ್ತು. ಆದರೆ ಅವತ್ತು ಹಾರಿಸಿದ ರಾಕೆಟ್ ಹಾಗೂ ರಾಕೆಟ್ ಹೊತ್ತೊಯ್ದ ಉಪಗ್ರಹಗಳಿಂದ ಇವತ್ತು ಏನೇನು ಉಪಯೋಗವಾಗುತ್ತಿದೆ ಎನ್ನುವುದನ್ನು ನಿತ್ಯ ಜೀವನವೇ ಹೇಳುತ್ತಿದೆ. ಮನೆಮನೆಯ ಟಿವಿ, ಫೋನು, ಮೊಬೈಲು, ಅಂತರ್ಜಾಲ ಸಂಪರ್ಕ ಸಾಧ್ಯವಾಗಿರುವುದು; ಹವಾಮಾನ ಸೂಚನೆ, ದೂರ ಸಂಪರ್ಕ, ದೂರ ಶಿಕ್ಷಣಗಳೆಲ್ಲ ಸುಲಭವಾಗಿರುವುದು ಭೂಮಿಯ ಕೃತಕ ಉಪಗ್ರಹಗಳಿಂದಲೇ. ಹೀಗಿರುತ್ತ ಮಂಗಳನ ಮೇಲಿಳಿದ ಪ್ರಯತ್ನ ಮುಂದೆ ಎಂಥ ದೂರಗಾಮಿ ಮತ್ತು ಸಮಾನಾಂತರ ಪರಿಣಾಮಗಳನ್ನು ಹೊಂದಿರಬಹುದು? ಶ್ರಮಿಕನ ಕೆಲಸವನ್ನು ಘನತೆಯಿಂದ ಮಾಡಲಿಕ್ಕೆ, ಬದುಕು ಸುಧಾರಿಸಲಿಕ್ಕೆ ಮುಂದಾನೊಂದು ಕಾಲದಲ್ಲಿ ಇದು ಯಾವ ರೂಪದಲ್ಲಿ ಸಹಾಯ ಮಾಡಬಹುದು? ಎನ್ನುವುದು ಇವತ್ತು ನಮ್ಮ ಊಹೆಗೆ ನಿಲುಕದಿರುವ ಸಾಧ್ಯತೆಯೂ ಇದೆ.


ಗಣಿತದ ಸಮೀಕರಣ, ಟ್ರಿಗೊನೊಮೆಟ್ರಿ ಜ್ಞಾನ ಬಳಸಿ ಕಟ್ಟಲಾದ ಸೇತುವೆ, ಅಣೆಕಟ್ಟುಗಳು ಎಲ್ಲರ ಉಪಯೋಗಕ್ಕೂ ಬರುತ್ತವೆ. ದಿನಬಳಕೆಯ ಶ್ರಮವನ್ನು ಹಗುರಗೊಳಿಸುವ ಎಷ್ಟೋ ಉಪಕರಣಗಳು ವೈಜ್ಞಾನಿಕ ಆವಿಷ್ಕಾರಗಳಾಗಿವೆ. ವಿಜ್ಞಾನ, ತಂತ್ರಜ್ಞಾನಗಳು ಶ್ರಮಿಕನ, ರೈತನ, ಮಹಿಳೆಯ ಘನತೆ ಹೆಚ್ಚಿಸುವ ಹಾಗೂ ಶ್ರಮ ಕಡಿಮೆ ಮಾಡುವ ಎಷ್ಟೋ ವಸ್ತುಗಳನ್ನು ಆವಿಷ್ಕರಿಸಿವೆ. ಮುಲ್ಕ್ ರಾಜ್ ಆನಂದ್ ತಲೆ ಮೇಲೆ ಮಲ ಹೊರುವುದನ್ನು ತಡೆಯಬಲ್ಲ ಮಾರ್ಗವೆಂದರೆ ಎಲ್ಲರೂ ಫ್ಲಷ್ ಕಕ್ಕಸುಗಳನ್ನು ಬಳಸುವುದು ಎಂದು ತಮ್ಮ ‘ಅಸ್ಪೃಶ್ಯ’ ಕಾದಂಬರಿಯಲ್ಲಿ ಸೂಚ್ಯವಾಗಿ ಹೇಳಿದ್ದರು. ಜೈವಿಕ ತಂತ್ರಜ್ಞಾನ ಕ್ಷೇತ್ರದ ಮುಖ್ಯ ಫಲಾನುಭವಿ ರೈತ ಹಾಗೂ ರೋಗಿಗಳು. ಒಳ್ಳೆಯದಕ್ಕೋ ಕೆಟ್ಟದಕ್ಕೋ ಅಲೆಮಾರಿಯಿಂದ ಹಿಡಿದು ರಾಷ್ಟ್ರಾಧ್ಯಕ್ಷರ ತನಕ ಎಲ್ಲರ ಕೈಲಿರುವ ಮೊಬೈಲು ಅವರ ಜೀವನದ ಗತಿಯನ್ನೇ ಬದಲಿಸಿದೆ. ಒಂದು ಕಾಲದಲ್ಲಿ ಜ್ಞಾನಕ್ಕೆ ರಹದಾರಿಯೇ ಇಲ್ಲದ ಎಷ್ಟೋ ಸಮುದಾಯಗಳಿದ್ದವು. ಈಗ ಯಾವ ವಿಷಯದ ಕುರಿತು, ಎಷ್ಟೊತ್ತಿಗೆ ಬೇಕಾದರೂ, ತಾರತಮ್ಯವಿಲ್ಲದೇ ಎಲ್ಲರಿಗೂ ಮಾಹಿತಿ ಭಂಡಾರವನ್ನೇ ತೆರೆದಿಡುವ ದೃಶ್ಯ ಮಾಧ್ಯಮ ಹಾಗೂ ಅಂತರ್ಜಾಲ ಬಂದಿರುವುದು ಸೋಜಿಗವೇ. ವಿಜ್ಞಾನದ ಆನ್ವಯಿಕ ಉಪಯೋಗಗಳು ಜನರನ್ನು ನೇರವಾಗಿ ತಲುಪಲು ಸಾಧ್ಯವಿರುವಾಗ ಸಾಕ್ಷರತೆ-ಅನಕ್ಷರಸ್ಥ ಪದಗಳಿಗೆ ಅರ್ಥ ಬೇರೆಯಾಗುತ್ತಿದೆ. ಹೀಗಿರುವಾಗ ವೈಜ್ಞಾನಿಕ ತಿಳುವಳಿಕೆ ಹೊಂದಿರಬೇಕಾದದ್ದು ಕಾಲದ ಅಗತ್ಯವಾಗಿದೆ. ‘ಅದು ನನಗಲ್ಲ’ ಎಂದುಕೊಳ್ಳುವುದು ನಮ್ಮನ್ನೇ ಮಿತಿಗೊಳಿಸಿಕೊಳ್ಳುವ ಧೋರಣೆಯಾಗಿದೆ.

ವಿಜ್ಞಾನ ಅಣುಬಾಂಬನ್ನು ತಯಾರಿಸಿತು, ಅಣುವಿದ್ಯುತ್ ಅನ್ನೂ ಉತ್ಪಾದಿಸಿತು; ಬುಲೆಟ್ ಟ್ರೇನನ್ನು ತಯಾರಿಸಿತು, ಎಕೆ ೪೭ ಅನ್ನೂ ಉತ್ತಮಪಡಿಸಿತು. ಜಗತ್ತನ್ನು ಪೊಲಿಯೋ ಮುಕ್ತ, ಸಿಡುಬು ಮುಕ್ತ, ಪ್ಲೇಗ್ ಮುಕ್ತಗೊಳಿಸಿತು, ಎಬೊಲಾ, ಎಚ್ಚೈವಿ, ಸಾರ‍್ಸ್ ದಾಳಿಗೆ ಕಂಗಾಲೂ ಆಯಿತು. ವಿಜ್ಞಾನವೆಂಬ ಜ್ಞಾನದ ಕತ್ತಿಯನ್ನು ಯಾವಾಗ ಯಾವುದಕ್ಕೆ ಬಳಸುತ್ತೀ? ಯಾವಾಗ ಒರೆಗೆ ಸೇರಿಸುತ್ತೀ ಎನ್ನುವುದನ್ನು ಮನುಷ್ಯ ವಿವೇಚನೆ ನಿರ್ಧರಿಸಬೇಕು. ಯುದ್ಧದಂತಹ ಜೀವವಿರೋಧಿ ಉದ್ದೇಶಗಳಿಗೆ ತಂತ್ರಜ್ಞಾನ ಬಳಕೆಯಾಗದೇ ಜ್ಞಾನ ಸದ್ವಿನಿಯೋಗವಾಗುವಂತೆ ನಾಗರಿಕ ಸಮಾಜ ನೋಡಿಕೊಳ್ಳಬೇಕು.

ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದಂತೆ ತಂತ್ರಜ್ಞಾನವನ್ನು ಜನಸಾಮಾನ್ಯರ ಉಪಯೋಗಕ್ಕೆ ನಿಲುಕುವಂತೆ ಉಪಯೋಗಿಯಾಗಿ ಮಾಡಲೂ ಪ್ರಯತ್ನಿಸಬೇಕಿದೆ. ಒಂದು ಸಣ್ಣ ಉದಾ: ಅವರವರ ಮನೆಯ ಕಸ, ಮಲ ಮುಂತಾದ ವಿಸರ್ಜಿತ ವಸ್ತುಗಳಿಂದ ಅವgವರ ಮನೆಗೆ ಸಾಕಾಗುವ ಬಯೋಗ್ಯಾಸ್ ತಯಾರಿಸಬಹುದಾಗಿದೆ. ಈ ದಿಕ್ಕಿನತ್ತ ಸಂಶೋಧನೆ ನಡೆದು ಯಶಸ್ವಿಯಾದರೆ ಆಗ ಮ್ಯಾನ್‌ಹೋಲಿನೊಳಗೆ ಮನುಷ್ಯ ಇಳಿವ ಅವಶ್ಯಕತೆಯೇ ಬರುವುದಿಲ್ಲ. ಜೊತೆಗೆ ಪೆಟ್ರೋ ಉತ್ಪಾದನೆಗಳ ಅವಲಂಬನೆ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆ ಗಮನಾರ್ಹವಾಗಿ ಇಳಿಯಬಹುದು. ಇಂಥ ಜನಸ್ನೇಹಿ ಸಂಶೋಧನೆಗಳತ್ತ ವಿಜ್ಞಾನಿ ಸಮೂಹ ಮನಸ್ಸು ಕೊಡುವಂತೆ ನಿರ್ದೇಶಿಸುವ ಹೊಣೆ ಸರ್ಕಾರ ಹಾಗೂ ಸಾರ್ವಜನಿಕರದ್ದಾಗಿದೆ.

***

ಇಂಥವೆಲ್ಲ ದೇಶವೊಂದಕ್ಕೆ ಏಕೆ ಬೇಕು? ಅಥವಾ ಮನುಷ್ಯನಿಗೆ ಇಂಥ ‘ಸಾಧನೆ’ಗಳೆಲ್ಲ ಏಕೆ ಬೇಕು?

ಬರೀ ಹೊಟ್ಟೆ ತುಂಬ ಉಂಡು, ಬಟ್ಟೆ ತೊಟ್ಟು ನಲಿಯುವುದರಿಂದಷ್ಟೇ ಮನುಷ್ಯನೆಂಬ ಅಸಾಧ್ಯ ಪ್ರಾಣಿ ತೃಪ್ತಿ ಹೊಂದುವುದಾಗಿದ್ದರೆ ಯಾವ ಕಲಾವಿದನೂ, ಚಿತ್ರಕಾರನೂ, ಸಂಗೀತಗಾರ-ಕವಿ-ಚಿತ್ರ ನಿರ್ದೇಶಕ-ಕ್ರೀಡಾಪಟುವೂ ಭೂಮಿ ಮೇಲೆ ಹುಟ್ಟುತ್ತಿರಲಿಲ್ಲ. ಹೊಟ್ಟೆಬಟ್ಟೆ ತುಂಬಿದ ಮೇಲೂ ಮನುಷ್ಯ ಏನೋ ಒಂದನ್ನು ಸಾಧಿಸಲು ಹಾತೊರೆಯುತ್ತಾನೆ. ಅದನ್ನು ಮಹತ್ವಾಕಾಂಕ್ಷೆಯೆಂದು ಅತ್ತ ಸರಿಸಲಾಗುವುದಿಲ್ಲ. ಬಹುಶಃ ತನಗೆ ಸಾಧ್ಯವಿರುವುದನ್ನು ಅದರ ಪರಿಪೂರ್ಣತೆಯಲ್ಲಿ ಮಾಡಲು; ಸಾಮರ್ಥ್ಯವನ್ನು ಅದರ ಉತ್ತುಂಗಕ್ಕೆ ಒಯ್ಯಲು; ಆ ಮೂಲಕ ಅಮರನಾಗಲು ಮಾನವನ ಅವಿರತ ಪ್ರಯತ್ನವೇ ಪಿರಮಿಡ್, ತಾಜಮಹಲು, ರಾಕೆಟ್ ನಿರ್ಮಾಣದಂಥ ಹಂಬಲಗಳ ಹಿಂದಿದೆ. ಬದುಕುವ ಹಂಬಲದ ಮೂಲ ಸೆಲೆಯೂ, ಸ್ಫೂರ್ತಿಯೂ ಅದೇ ಆಗಿದೆ.

ಎಂದೇ ೪೫೦ ಕೋಟಿ ವೆಚ್ಚದ ಮಂಗಲಯಾನ ಏಕೆ ಬೇಕಿತ್ತು ಎನ್ನುವಷ್ಟು ಸಿನಿಕರಾಗದಿರೋಣ. ಬರೀ ದೆಹಲಿ-ಆಗ್ರಾ ನಡುವಿನ ೧೬೫ ಕಿಮೀ ಉದ್ದದ ಒಂದು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ತಗುಲಿದ್ದು ೧೨, ೮೪೦ ಕೋಟಿ ರೂಪಾಯಿ. ಐದು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ತಗಲುವ ವೆಚ್ಚ ೨೫೦೦ ಕೋಟಿ ರೂಪಾಯಿ. ಗ್ರೇಟರ್ ನೋಯ್ಡಾದ ‘ದಲಿತ ಪ್ರೇರಣಾ ಸ್ಥಳ್’ ಎಂಬ ಪ್ರತಿಮೆಗಳ ಪಾರ್ಕಿಗೆ ಖರ್ಚಾದದ್ದು ೬೮೫ ಕೋಟಿ. ಇವು ಕೆಲವು ಉದಾಹರಣೆಗಳಷ್ಟೇ. ಹೀಗೆ ಪಾರ್ಕು, ಪ್ರತಿಮೆ, ಡ್ಯಾಂ, ರಸ್ತೆ ಎಂದು ಎಷ್ಟೆಷ್ಟೊ ಸಾವಿರ ಕೋಟಿಗಳನ್ನು ಹಲವಾರು ಯೋಜನೆಗಳಿಗೆ ಖರ್ಚು ಮಾಡುವ ಭಾರತವೆಂಬ ‘ಬಡ ದೇಶ’ದಲ್ಲಿ ಭ್ರಷ್ಟತೆಯೇ ಲಕ್ಷ ಕೋಟಿಗಳನ್ನು ಗುಳುಂ ಮಾಡುತ್ತದೆ. ನಾವು ದಿನನಿತ್ಯ ಉಂಡು ಚೆಲ್ಲಿ ಹಳಸುವ ಆಹಾರದ ಬೆಲೆಯೂ, ಹೊಸದು ಬಂದಿತೆಂದು ಬಿಸಾಡಿದ ಮೊಬೈಲು-ಕಂಪ್ಯೂಟರು-ಕಾರು ಮತ್ತಿತರ ಗ್ಯಾಡ್ಗೆಟ್ಟುಗಳ ಬೆಲೆಯೂ ಲಕ್ಷಾಂತರ ಕೋಟಿಯಾಗುತ್ತದೆ. ಅದಕ್ಕೆ ಹೋಲಿಸಿದಲ್ಲಿ ೪೫೦ ಕೋಟಿ ದೊಡ್ಡ ಮೊತ್ತವಲ್ಲ. ಎಲ್ಲಿ ಅವಶ್ಯವಿದೆಯೋ ಅಲ್ಲಷ್ಟೇ ಖರ್ಚು ಮಾಡುವಂತೆ ಖಜಾನೆಯ ಕೀಲಿಕೈ ಇಟ್ಟುಕೊಂಡವರ ಮೇಲೆ ಒತ್ತಡ ತರುವುದು, ಅದರ ಜೊತೆಗೆ ಕನಿಷ್ಠ ವೈಜ್ಞಾನಿಕ ತಿಳುವಳಿಕೆ ಮತ್ತು ದೃಷ್ಟಿಕೋನ ಹೊಂದುವುದು ಇವತ್ತಿನ ಸಮಾಜಕ್ಕೆ ಅವಶ್ಯವಾಗಿದೆ.

ಪೋಖ್ರಾನಿನಲ್ಲಿ ಬುದ್ಧ ನಕ್ಕದ್ದನ್ನು ಸಾಧನೆಯೆಂದು ಕರೆದುಕೊಳ್ಳಲು ಸಾಧ್ಯವೇ ಇಲ್ಲ. ಪರಮಾಣು ಸ್ಫೋಟದ ಏಕೈಕ ಉದ್ದೇಶ ಸಮೂಹ ನಾಶ. ಅದು ಜೀವವಿರೋಧಿಯೇ. ಆದರೆ ಮಂಗಳನ ಬಳಿ ಸಾರಿದ ಪ್ರಯತ್ನ ಸಮೂಹನಾಶಕ ಉದ್ದೇಶಗಳನ್ನು ಹೊತ್ತಿರುವ ಸೂಚನೆಗಳು ಸದ್ಯಕ್ಕೆ ಕಾಣುತ್ತಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಾದ ಹಾಗೂ ವಿಜ್ಞಾನಿಗಳು ಜನಸ್ನೇಹಿ ಸಂಶೋಧನೆಯಲ್ಲಿ ತೊಡಗುವಂತೆ ಉತ್ತೇಜಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಹೀಗೊಂದು ಗಾಂಧಿ ಸ್ಮೃತಿ


ಎಲ್ಲ ಜ್ಞಾನವೂ ಕಲಿತವನ ಅಹಂಕಾರ ನಾಶಮಾಡುವಂತಿರಬೇಕು. ಇಲ್ಲದಿದ್ದಲ್ಲಿ ಅದರಿಂದ ಅವನಿಗೂ, ಸಮಾಜಕ್ಕೂ ಉಪಯೋಗವಿಲ್ಲ. ಇಲ್ಲಿ ೧೯೨೭ರಲ್ಲಿ ಬೆಂಗಳೂರಿನ ಸೈನ್ಸ್ ಇನ್ಸ್‌ಟಿಟ್ಯೂಟ್‌ಗೆ ಬಂದಿದ್ದ ಗಾಂಧಿ ಹೇಳಿದ ಕೆಲ ಮಾತುಗಳನ್ನು ನೆನೆಯುವುದು ಸೂಕ್ತ.

ಇನ್‌ಸ್ಟಿಟ್ಯೂಟ್‌ನ ವಿಭಾಗಗಳ ಪರಿಚಯ ಮಾಡಿಕೊಂಡ ಗಾಂಧೀಜಿ ವಿದ್ಯಾರ್ಥಿ, ವಿಜ್ಞಾನಿಗಳನ್ನುದ್ದೇಶಿಸಿ ಆಡಿದ ಮಾತುಗಳಿವು:

‘ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬಲ್ಲೆನಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ; ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.

ಹಳ್ಳಿಯ ಮಂದಿಯನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದು ಕೊಟ್ಟ ಹಣವನ್ನು ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ನಿಮ್ಮ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದೆಲ್ಲ ಹೇಳಿದರೆ ಅವರಿಗೆ ಹೇಗೆ ತಾನೇ ಅರ್ಥವಾದೀತು? ಅವರು ನಮಗೆ ಬೆನ್ನು ಮಾಡಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.

...ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರರರು ನನಗೆ ಹೇಳಿದರು. ಆದರೆ ಈ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳಾದರೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ.

‘ನಮ್ಮ ಕೈಯಲ್ಲಾದುದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ’ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು.

ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.’



Wednesday 1 October 2014

ಪ್ಯಾಲೆಸ್ಟೀನ್ ಬಗ್ಗೆ ಗಾಂಧಿ





‘ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ. ಆ ಸಮುದಾಯ ನೂರಾರು ವರ್ಷಗಳಿಂದ ಅನುಭವಿಸುತ್ತಿರುವ ಬವಣೆಯ ಬಗ್ಗೆ ಅವರಿಂದಲೇ ಕೇಳಿ ತಿಳಿದಿದ್ದೇನೆ. ಅವರು ಕ್ರಿಶ್ಚಿಯನ್ ಧರ್ಮದಲ್ಲಿ ಅಸ್ಪೃಶ್ಯರಿದ್ದಂತೆ. ಯಹೂದಿಗಳನ್ನು ಕ್ರಿಶ್ಚಿಯನ್ನರು ನಡೆಸಿಕೊಳ್ಳುತ್ತಿರುವ ರೀತಿಗೂ, ಹಿಂದೂ ಧರ್ಮ ಅಸ್ಪೃಶ್ಯರನ್ನು ನೋಡಿಕೊಳ್ಳುತ್ತಿರುವ ರೀತಿಗೂ ತುಂಬಾ ಸಾಮ್ಯವಿದೆ. ಎರಡೂ ಧರ್ಮಗಳು ತಾವು ನಡೆದುಕೊಳ್ಳುತ್ತಿರುವ ರೀತಿಗೆ ಧರ್ಮದ ಅನುಮೋದನೆ ಇದೆ ಎಂದು ತಿಳಿದುಕೊಂಡಿರುವುದು ದುರಾದೃಷ್ಟಕರವಾಗಿದೆ.

ಆದರೆ ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ ಎಂದಾಕ್ಷಣ ಅವರ ಎಲ್ಲ ಬೇಡಿಕೆಗಳ ಬಗ್ಗೆ ಸಮ್ಮತಿಯಿದೆ ಎಂದರ್ಥವಲ್ಲ. ತಮಗೆ ಪ್ರತ್ಯೇಕ ರಾಷ್ಟ್ರ ಬೇಕೆನ್ನುವ ಅವರ ಬೇಡಿಕೆ ನನಗೆ ಎಂದೂ ಸರಿಯೆನಿಸುವುದಿಲ್ಲ. ಬೈಬಲ್ ಇತ್ಯಾದಿಯನ್ನು ಉದ್ಧರಿಸಿ ತಾವು ಪ್ಯಾಲೆಸ್ಟೀನಿಗೆ ಹಿಂದಿರುಗಬೇಕು ಎನ್ನುವ ಅವರ ವಾದ ಅರ್ಥವಿಲ್ಲದ್ದು. ಅದರ ಬದಲು ಉಳಿದವರಂತೆ ಯಹೂದಿಗಳು ಕೂಡ ತಾವು ಹುಟ್ಟಿ ಬೆಳೆದ ದೇಶವನ್ನೇ ತಮ್ಮದೆಂದು ಪರಿಗಣಿಸುವುದು ಅಗತ್ಯ.

ಪ್ಯಾಲೆಸ್ಟೀನ್ ಅರಬ್ಬರಿಗೆ ಸೇರಿದ್ದು. ಇಂಗ್ಲಿಷ್ ಜನಕ್ಕೆ ಇಂಗ್ಲೆಂಡ್ ಸೇರಿದ ಹಾಗೆ, ಫ್ರೆಂಚರಿಗೆ ಫ್ರಾನ್ಸ್ ಇದ್ದ ಹಾಗೆ. ಯಹೂದಿಗಳನ್ನು ಅರಬ್ಬರ ಮೇಲೆ ಹೇರುವುದು ತಪ್ಪು ಮತ್ತು ಅದು ಅಮಾನವೀಯ ಕೂಡ. ಪ್ಯಾಲೆಸ್ಟೀನಿನಲ್ಲಿ ಇವತ್ತು ಏನಾಗುತ್ತಿದೆಯೋ ಅದಕ್ಕೆ ಯಾವ ನೈತಿಕ ಬೆಂಬಲವೂ ಇಲ್ಲ. ಯಹೂದಿಗಳ ಒತ್ತಾಯದಂತೆ ಅವರಿಗೆ ಒಂದು ಪ್ರತ್ಯೇಕ ರಾಷ್ಟ್ರ ನಿರ್ಮಾಣವಾದರೆ ಎರಡು ರಾಷ್ಟ್ರಗಳನ್ನು ಹೊಂದಿದ ಸೌಲಭ್ಯ ಅವರದಾಗುತ್ತದೆ - ತಾವು ಹುಟ್ಟಿ ಬೆಳೆದ ನಾಡು ಮತ್ತು ಹೊಸ ರಾಷ್ಟ್ರ. ಎರಡೂ ಕಡೆ ಸವಲತ್ತು ಪಡೆಯುವ ಅವಕಾಶ ಅವರಿಗೆ ದಕ್ಕುತ್ತದೆ. ಇದು ಸರಿಯಾದ ಮಾರ್ಗವಲ್ಲ. ಇದರಿಂದ ಅರಬ್ - ಯಹೂದಿ ಸಮಸ್ಯೆ ಬಗೆಹರಿಯುವುದಿಲ್ಲ.’

೨೬-೧೧-೩೮ರ ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಿಂದ.