Sunday 26 April 2015

ಭಟಕಳದ ನವಾಯತರು







೨೨ ವರ್ಷ ಕೆಳಗೆ ಕರಾವಳಿಯ ಈ ಹಳ್ಳಿಗೆ ಬಂದ ಹೊಸತರಲ್ಲಿ ಕನ್ನಡ ಬರದ, ಉರ್ದು ಬರದ, ಇಂಗ್ಲೀಷ್ ಬರದ ಒಂದು ವಿಶಿಷ್ಟ ರಾಗ-ಶೈಲಿಯಲ್ಲಿ ಮಾತನಾಡುವ ಬುರ್ಖಾ ತೊಟ್ಟ ಹೆಣ್ಣುಮಕ್ಕಳು ನನಗೆ ಒಗಟಿನಂತೆ ಕಂಡಿದ್ದರು. ಅವರು ಕಾಲ್ಗೆಜ್ಜೆ ಧರಿಸುತ್ತಿರಲಿಲ್ಲ, ಕಾಲುಂಗುರವಿರಲಿಲ್ಲ, ಮೂಗು ಚುಚ್ಚಿಕೊಂಡಿರಲಿಲ್ಲ. ಎಲ್ಲರ ಕೊರಳಲ್ಲೂ ಕರಿಮಣಿಯಿರಲಿಲ್ಲ. ಮಗುವಿನಿಂದ ವೃದ್ಧೆಯವರೆಗೆ ಹೆಚ್ಚುಕಡಿಮೆ ಎಲ್ಲರೂ ನಾನಾ ನಮೂನೆಯ ಪರ್ದಾ ತೊಟ್ಟ ಸುಣ್ಣಬಿಳಿಯ ಬಣ್ಣದವರು. ಮುಸ್ಲಿಮರಿಗೆ ಉರ್ದು ತಿಳಿದಿರಲೇಬೇಕು ಎಂದುಕೊಳುವವರಿಗೆ ಆಘಾತವಾಗುವಂತೆ ಅವರು ಕೊಂಕಣಿಯನ್ನೇ ಸುಲಭವಾಗಿ ಮಾತನಾಡುವರೆಂದು ನಂತರ ತಿಳಿದಿತ್ತು. ಅವರ ವಿಶಿಷ್ಟ ಅರಬಿ ಸರ್‌ನೇಮ್‌ಗಳ ಜೊತೆಗೆ ಶ್ರಿಂಗೇರಿ, ಚಾಮುಂಡಿ, ಬರ್ಮಾವರ, ಲಂಕಾ, ಭಟಕಳ ತರಹದ ಸರ್‌ನೇಮುಗಳು ಇದ್ದವು. ಅವರ ಸಮುದಾಯ ಕುರಿತು ತಿಳಿಯಲು ಕುತೂಹಲಭರಿತ ಹುಡುಕಾಟವೊಂದು ನನ್ನೆಲ್ಲ ಮಾತುಗಳಲ್ಲಿರುತ್ತಿತ್ತು.

ಕೊನೆಗೆ ತಿಳಿಯಿತು: ಹಿಂದೂ ಮಹಾ ಸಾಗರದೊಳಗೊಂದು ಅರಬ್ಬೀ ಸಮುದ್ರವಿದೆ, ಅವರು ಭಟಕಳದ ನವಾಯತರು ಎಂದು.

ಈ ಬಹುದೊಡ್ಡ ದೇಶ ಭಾರತದಲ್ಲಿ ಪ್ರತಿ ಊರಿನ, ಪ್ರತಿ ಸಮುದಾಯದ, ಪ್ರತಿ ವೃತ್ತಿಯವರ ಕಷ್ಟನಷ್ಟ, ಚಹರೆ, ಬದುಕು, ಆಹಾರ ಎಷ್ಟೊಂದು ಭಿನ್ನವಾಗಿದೆ!? ಸುಮ್ಮನೆ ಪತ್ರಿಕಾ ವರದಿಗಳನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಇತ್ತೀಚೆಗೆ ಭಟಕಳದ ಹುಡುಗರನ್ನು ಮದುವೆಯಾಗಿದ್ದ ಪಾಕಿಸ್ತಾನದ ಕೆಲ ಯುವತಿಯರು ತಮಗೆ ಖಾಯಂ ವೀಸಾ ಹಾಗೂ ಭಾರತದ ಪೌರತ್ವ ಕೊಡಬೇಕೆಂದು ಆಳುವವರಿಗೆ ಮನವಿ ಸಲ್ಲಿಸಿದ್ದರು. ದೇಶ ವಿಭಜನೆಯ ಕಾಲದಲ್ಲಿ ಭಾರತದಿಂದ, ಭಟಕಳದಿಂದ ಪಾಕಿಸ್ತಾನಕ್ಕೆ ಹೋದ ಎಷ್ಟೋ ಕುಟುಂಬಗಳಿದ್ದು ಅವರ ನಡುವೆ ಗಡಿದಾಟಿ ಸಂಬಂಧ ಏರ್ಪಡುತ್ತಲೇ ಇದೆ; ಆಚೀಚಿನ ಸತಿಪತಿಗಳು ವಿಸಿಟಿಂಗ್ ವೀಸಾದಲ್ಲೇ ಸಂಸಾರ ಸಾಗಿಸುತ್ತಾರೆ; ಬಂದವರು ಮೆಡಿಕಲ್ ಇನ್ನಿತರೆ ಕಾರಣಗಳ ಒಡ್ಡಿ ವೀಸಾ ಮುಂದುವರೆಸಲು ಪ್ರಯತ್ನಿಸುತ್ತಾರೆ ಎಂದು ಅವರ ಮಾತುಗಳಿಂದ ತಿಳಿಯಿತು!


(ಯಾಸೀನ್ ಭಟಕಳ)
ಕಳೆದ ತಿಂಗಳು ಯೆಮನಿನಲ್ಲಿದ್ದ ಭಟಕಳಿಗರು ಐಸಿಸ್ ಉಗ್ರರ ದಾಳಿಯ ಕಾರಣ ಅನ್ನನೀರಿಲ್ಲದೆ ಗೃಹಬಂಧನಕ್ಕೊಳಗಾಗಿ ಕಾಲ ಕಳೆಯುತ್ತಿದ್ದು ಆ ಕುಟುಂಬದವರ ಬಂಧುಗಳು ಇಲ್ಲಿ ಮಾಧ್ಯಮದೆದುರು ತಮ್ಮ ಆತಂಕ ತೋಡಿಕೊಂಡಿದ್ದರು. ಅದಕ್ಕೂ ಮುನ್ನ ತನ್ನ ಹೆಸರಿನ ಮುಂದೆ ಭಟಕಳವನ್ನು ಅಂಟಿಸಿಕೊಂಡ ಅಹ್ಮದ್ ಸಿದ್ಧಿ ಬಾಪ್ಪಾ ಭಯೋತ್ಪಾದಕನೆಂಬ ಪಟ್ಟ ಹೊತ್ತು ಭಟಕಳ ರಾಷ್ಟ್ರೀಯ ಸುದ್ದಿಯಲ್ಲಿ ಜಾಗ ಪಡೆದಿತ್ತು. ಆಗ ಕರಾವಳಿಯ ಈ ಊರಿನವರು ಯಾವ್ಯಾವ ಕಸಿವಿಸಿ ಅನುಭವಿಸಿದರೋ? ಅಂತೂ ಶತಮಾನಗಳ ಹಿಂದೆ ಮೂಲನೆಲೆ ಬಿಟ್ಟು ವಲಸೆ ಬಂದಿದ್ದ ಜನಾಂಗ ನೆಮ್ಮದಿಯಿಂದ ನೆಲೆಯೂರಿರುವ ನೆಲೆಯಲ್ಲಿ ಈಗ ಹಲವು ತಲ್ಲಣಗಳನ್ನು ಎದುರಿಸುತ್ತಲಿದೆ.

ನಮ್ಮ ನಿಮ್ಮ ನಡುವೆಯೇ ಇದ್ದರೂ ನಾವು ತಿಳಿಯದೇ ಇರಬಹುದಾದ ನವಾಯತ ಸಮುದಾಯ ಕುರಿತದ್ದು ಈ ಬರಹ:

ಉತ್ತರ ಕನ್ನಡದ ಭಟಕಳ ಹೇಗೆ ದಮ್ ಬಿರಿಯಾನಿ, ಸ್ಯಾಂಡೋ ಹಲ್ವಾಕ್ಕೆ ಪ್ರಸಿದ್ಧವೋ ಹಾಗೇ ಅಲ್ಲಿನ ನವಾಯತ ಸಮುದಾಯವೂ ಸಹಾ. ಅದು ಒಂದು ಲಕ್ಷ ಜನಸಂಖ್ಯೆಯ ಪುಟ್ಟ ಸಮುದಾಯ. ವ್ಯಾಪಾರವೇ ಅವರ ಮುಖ್ಯ ಉದ್ಯೋಗ. ಹೋಗಿ ನೆಲೆನಿಂತ ಸ್ಥಳವನ್ನೇ ಸರ್‌ನೇಮ್ ಆಗಿಯೂ ಇಟ್ಟುಕೊಳ್ಳುವ ಅವರ ಮೂಲ ಕುರಿತು ಹಲವು ವಿವರಣೆಗಳಿದ್ದರೂ ಅದು ಅರಬ್ ಜನಾಂಗ ಎಂಬ ಬಗ್ಗೆ ಎಲ್ಲರದೂ ಸಹಮತವಿದೆ.

ಪರ್ಷಿಯ, ಮೆಸಪಟೋಮಿಯಾ ಜೊತೆಗೆ ಕ್ರಿ.ಪೂ. ಕಾಲದಿಂದಲೇ ಭಾರತ ವ್ಯಾಪಾರ ಸಂಬಂಧ ಹೊಂದಿತ್ತು. ಇಸ್ಲಾಂ ಉದಯದ ನಂತರ ಸಮೀಕರಣಗಳು ಬದಲಾದರೂ ವ್ಯಾಪಾರ ಮುಂದುವರಿದಿತ್ತು. ೮ನೇ ಶತಮಾನದಲ್ಲಿ ಖಲೀಫ ಅಬ್ದ್ ಅಲ್ ಮಲಿಕ್ ಮಾರ‍್ವಾನ್‌ನ ಆಳ್ವಿಕೆಯ ಕಾಲದಲ್ಲಿ, ಹಜಾಜ್ ಬಿನ್ ಯೂಸುಫ್ ಎಂಬಾತ ಇರಾಕಿನ ಗವರ್ನರನಾಗಿ ಭಯಾನಕ ಸುಲಿಗೆಯ ಆಡಳಿತ ನಡೆಸುತ್ತಿದ್ದಾಗ ಹಲವು ಪ್ರತಿಷ್ಠಿತ, ಘನತೆವೆತ್ತ ವ್ಯಾಪಾರೀ ಕುಟುಂಬಗಳು ಮರಣಶಿಕ್ಷೆಗೆ ಹೆದರಿ ಪರ್ಷಿಯವನ್ನು ತೊರೆದವು. ಆಗ ಪರ್ಷಿಯನ್ನರು ಅರಬ್ಬರ ವ್ಯಾಪಾರೀ ದಾರಿಯ ಒಂದು ನೆಲೆಯಾದ ಭಾರತದ ಪಶ್ಚಿಮ ಕರಾವಳಿಗೆ ಬಂದಿಳಿದರು ಎನ್ನುವುದು ನವಾಯತರ ಮೂಲ ಕುರಿತ ವಿವರಣೆ. ಮತ್ತೆ ಕೆಲವರ ಪ್ರಕಾರ ವಲಸೆ ಬಂದ ಯೆಮನಿನ ಅಬ್ದಲ್ಲಾ ವಾಯತ್ ಎಂಬವನ ಪೀಳಿಗೆಗೆ ಸೇರಿದವರು ನವಾಯತ ಸಮುದಾಯದವರು. ಸ್ಥಳೀಯರು (ನವಾಯತೇತರರು) ವಿಜಯನಗರದ ರಾಜನಿಗೆ ಅರಬ್ಬೀ ಕುದುರೆಗಳ ಮಾರಲು ಬಂದು ಇಲ್ಲೇ ನೆಲೆ ನಿಂತ ವ್ಯಾಪಾರಸ್ಥರು ಅವರು ಎಂದು ಭಾವಿಸಿದ್ದರೆ, ನವಾಯತರ ಮೌಖಿಕ ಪರಂಪರೆ ತಮ್ಮನ್ನು ಹಡ್ರಾಮಿಗಳು (ಯೆಮನಿನ ಒಂದು ಸ್ಥಳ) ಎಂದು ನಂಬಿದೆ. ನವಾಯತಿ ಸರ್‌ನೇಮ್‌ಗಳಲ್ಲಿರುವ ಸ್ಥಳಗಳು ಯೆಮನಿನಲ್ಲಿವೆ. ಅಲ್ಲಿನವರ ಜೊತೆ ಈಗ ಯಾವುದೇ ಕೊಡುಕೊಳು ಇಲ್ಲದಿದ್ದರೂ ಯೆಮನ್ ಮೂಲದವರೆಂದು ತಮ್ಮನ್ನು ಭಾವಿಸಿಕೊಂಡಿದ್ದಾರೆ.

ಈ ಎಲ್ಲ ಶತಮಾನಗಳಲ್ಲಿ ಸಮುದ್ರ ಹಲವು ಬಾರಿ ಉಕ್ಕೇರಿದೆ, ಶಾಂತವಾಗಿದೆ. ಅಂತೇ ಭಟಕಳದ ನವಾಯತರ ಬದುಕು ಸಹಾ. ಭಟಕಳ ಹಲವು ಆಳ್ವಿಕೆಗಳನ್ನು ಕಂಡಿದೆ. ಮೊದಲ ಸಹಸ್ರಮಾನದ ಕೊನೆಯ ಭಾಗದಲ್ಲಿ ಚೋಳರಿಂದ ಆಳಿಸಿಕೊಂಡ ಕೊಂಕಣವು ಮುಂದೆ ಹೊಯ್ಸಳರು, ವಿಜಯನಗರದ ಅರಸರು, ಪೋರ್ಚುಗೀಸರು, ಸಾಳುವ ವಂಶದ ಹಾಡುವಳ್ಳಿ ಅರಸರು, ಕೆಳದಿ ನಾಯಕರು, ಟಿಪ್ಪು ಸುಲ್ತಾನ ಹಾಗೂ ಬ್ರಿಟಿಷರ ಆಳ್ವಿಕೆಗೆ ಒಳಗಾಗಿದೆ. ಯಾವುದೇ ಆಳ್ವಿಕೆಯ ಕಾಲದಲ್ಲೂ ವ್ಯಾಪಾರ, ವಹಿವಾಟು ಹಾಗೂ ಸಮುದ್ರಮಾರ್ಗ ವ್ಯಾಪಾರದ ತಮ್ಮ ಅನುಭವದ ಕಾರಣದಿಂದ ಅಂತಾರಾಷ್ಟ್ರೀಯ ಬಂದರಾಗಿದ್ದ ಭಟಕಳದಲ್ಲಿ ನವಾಯತರ ನೆಲೆಯು ಅಬಾಧಿತವಾಗಿ ಮುಂದುವರೆದಿದೆ.

ಎತ್ತರದ ನಿಲುವಿನ, ಸುಣ್ಣಬಿಳಿ ಬಣ್ಣದ ಈ ಸಮುದಾಯದವರು ಸುನ್ನಿ ಶಫಿ ಪಂಗಡದವರು. (ಉತ್ತರ ಭಾರತದ ಮುಸ್ಲಿಮರು ಸುನ್ನಿ ಹನಫಿ ಪಂಗಡದವರು.) ಈ ಸಮುದಾಯದ ರೀತಿರಿವಾಜು, ಅಡುಗೆ, ಅಲಂಕಾರ, ಭಾಷೆ, ಸರ್‌ನೇಮ್ ಎಲ್ಲವೂ ಉಳಿದ ಮುಸ್ಲಿಮರಿಗಿಂತ ಭಿನ್ನ. ೧೯೪೭ರ ದೇಶವಿಭಜನೆಯ ಕಾಲದಲ್ಲಿ ಬಹುಪಾಲು ನವಾಯತರು ಪಾಕಿಸ್ತಾನಕ್ಕೆ ಹೋಗಿ ಕರಾಚಿ ಹಾಗೂ ಸಿಂಧ್ ಪ್ರಾಂತ್ಯದ ಸುತ್ತಮುತ್ತ ನೆಲೆಯಾದರು. ಭಾರತದಲ್ಲಿ ಅವರು ಮುಖ್ಯವಾಗಿ ಭಟಕಳದಲ್ಲಿ ಹಾಗೂ ಕರಾವಳಿಯುದ್ದಕ್ಕೂ ಕುಮಟಾ, ಹೊನ್ನಾವರ, ಮುರ್ಡೇಶ್ವರ, ಮಂಕಿ, ಶಿರೂರು, ಬೈಂದೂರು, ಬಸರೂರು, ಮಲ್ಪೆ ಮುಂತಾದ ಊರುಗಳಲ್ಲಿದ್ದಾರೆ. ಅಲ್ಲದೆ ಹಾಸನ, ಕೋಲಾರ, ಗೋವಾ, ರತ್ನಗಿರಿ, ದಮನ್-ದಿಯು, ಹೈದರಾಬಾದ್, ತಮಿಳುನಾಡಿನ ಆರ್ಕಾಟ್, ಮಧ್ಯಪ್ರದೇಶದ ಇಂದೋರ್-ಉಜ್ಜಯಿನಿ ಮತ್ತಿತರ ಕಡೆಗಳಲ್ಲೂ ಚದುರಿದ್ದಾರೆ. ಉಳಿದ ಕಡೆಗಳಲ್ಲಿರುವವರು ಸ್ಥಳೀಯ ಭಾಷೆ, ಸಂಸ್ಕೃತಿಯಲ್ಲಿ ಕರಗಿ ಹೋಗಿದ್ದರೆ ಕರಾವಳಿಯ ಭಟಕಳಿಗರು ಮಾತ್ರ ತಮ್ಮ ಅನನ್ಯತೆಯನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದಾರೆ.

ಅವರ ಭಾಷೆ ನವಾಯತಿ. ಅದು ಪರ್ಷಿಯನ್, ಅರೇಬಿಕ್, ಸಂಸ್ಕೃತ, ಮರಾಠಿಯ ಮಿಶ್ರಪಾಕವಾಗಿದ್ದರೂ ಮೂಲಧಾತು ಕೊಂಕಣಿಯೇ. ಅದಕ್ಕೆ ಲಿಪಿಯಿಲ್ಲ. ಅರೆಬಿಕ್ ಲಿಪಿಯನ್ನೇ ಬಳಸುತ್ತದೆ. ಆದರೆ ಉರ್ದು ಎಂಬ ಅರೆಬಿಕ್ ಲಿಪಿ ಹೊಂದಿದ ತನ್ನ ಕಿರಿಯ ಸೋದರಿಗಿಂತ ಏಳೆಂಟು ಶತಮಾನ ಮುಂಚೆಯೇ ರೂಪುಗೊಂಡಿರುವ ಭಾಷೆ ಒಂದೇಒಂದು ಸಮುದಾಯ ಮಾತ್ರ ಬಳಸಲ್ಪಡುವ ಭಾಷೆಯಾಗಿ, ಕಲೆಸಾಹಿತ್ಯವಾಗಿ ಅಭಿವ್ಯಕ್ತಗೊಳದೇ ಇದ್ದ ಭಾಷೆಯಾಗಿ ಹರಡಲು ಸಾಧ್ಯವಾಗಲಿಲ್ಲವೇ?

ಅಂತೂ ನವಾಯತರ ಮೂಲ, ಆಚಾರವಿಚಾರ, ಭಾಷೆ, ಸಂಸ್ಕೃತಿ, ಜಾನಪದದ ಬಗೆಗೆ ವಿಸ್ತೃತ ಸಂಶೋಧನೆ ನಡೆಯಬೇಕಿದೆ. ತಿಳಿಯಬೇಕಾದದ್ದು ಬಹಳವಿದೆ..

***

ಅಂತಾರಾಷ್ಟ್ರೀಯ ತೈಲ ಬೆಲೆ, ಗಲ್ಫ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಂಬಂಧ, ಅರಬ್ ಜಗತ್ತಿನ ಆಗುಹೋಗುಗಳಲ್ಲಿ ಅಮೆರಿಕದ ಹಸ್ತಕ್ಷೇಪ - ಇವೆಲ್ಲ ಹುಟ್ಟಿಸುವ ಬದಲಾವಣೆಗಳು ನವಾಯತರ ಎದೆಯಂಗಳದ ತಲ್ಲಣಗಳಾಗಿ ರೂಪಾಂತರಗೊಳ್ಳುತ್ತವೆ. ಪರ್ಷಿಯನ್ ಗಲ್ಫಿನಲ್ಲಿ ಬೀಸುವ ಐಸಿಸ್ ಬಿರುಗಾಳಿ ಇಲ್ಲಿನವರನ್ನೂ ಬಾಧಿಸುತ್ತದೆ. ಏಕೆಂದರೆ ತನ್ನ ಯಂಗ್ ಅಂಡ್ ಎನರ್ಜೆಟಿಕ್ ತರುಣ ಪೀಳಿಗೆಯನ್ನು ಪ್ರತಿ ಮನೆಯೂ ಗಲ್ಫ್‌ನಲ್ಲಿ ಬಿಟ್ಟಿದೆ. ಇನ್ನೆಷ್ಟೋ ಹುಡುಗರ ಕಣ್ಣುಗಳಲ್ಲಿ ಆ ದೇಶಗಳ ವೀಸಾ ಪಡೆವ ಕನಸು ಹಸಿಯಾಗಿದೆ. ಇದರ ನಡುವೆ ಯಾಸೀನ್ ಭಟಕಳ ಎಂಬ ತರುಣ ಭಯೋತ್ಪಾದಕನಾಗಿ ಹುಟ್ಟಿಸಿರುವ ತಲ್ಲಣಗಳ ವಿಸ್ತಾರ ಬಹುಮುಖಿಯದಾಗಿದೆ. ಅಷ್ಟೇ ಅಲ್ಲ, ಶುದ್ಧ ಇಸ್ಲಾಮನ್ನು ಪ್ರತಿಪಾದಿಸುವವರು, ಇವತ್ತಿನ ಅಂತಾರಾಷ್ಟ್ರೀಯ ಬದಲಾವಣೆಗೆ ತಕ್ಕಂತೆ ಇಸ್ಲಾಮನ್ನು ಕಟ್ಟ ಹೊರಟಿರುವವರ ಕಾರಣದಿಂದ ಸಮುದಾಯ ಎದುರಿಸುತ್ತಿರುವ ಆತಂಕಗಳ ಸ್ವರೂಪವೂ ಬೇರೆಯಾಗಿದೆ. ಓವೈಸಿಗಳಿಗೆ ಅಬ್ಬರದ ಪ್ರಚಾರ ಸಿಗುತ್ತಿದೆ. ಈ ಸಿರಿವಂತ, ಶಾಂತ ಸಮುದಾಯ ಇವತ್ತು ಬಿಕ್ಕಟ್ಟಿನಲ್ಲಿದೆ.

ಈಗ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳು ತಂತಾನೇ ‘ಸೂಕ್ಷ್ಮ’ ಎನಿಸಿಕೊಂಡುಬಿಟ್ಟಿವೆ. ಯಾಸೀನ್ ಭಟಕಳ ಬಂಧನವಾದ ಹೊತ್ತಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಯೊಂದು ತನ್ನ ಭಟಕಳ ರೂಟ್‌ನ ಎಲ್ಲ ಬಸ್ಸುಗಳನ್ನೂ ರದ್ದುಪಡಿಸಿರುವುದಾಗಿ ಘೋಷಿಸಿ ದೇಶಭಕ್ತಿ ಮೆರೆಯಿತು. ಆದರೆ ಕೋಮುಗಲಭೆ ದೃಷ್ಟಿಯಿಂದ ಸೂಕ್ಷ್ಮ ಎಂದು ಗುರುತಿಸಲ್ಪಟ್ಟಿದ್ದರೂ ಭಟಕಳ ಶತಮಾನಗಳಿಂದ ಜನ ಶಾಂತಿಯಿಂದ ಬದುಕಿದ ಪ್ರದೇಶ. ಜೈನ, ಕ್ರೈಸ್ತ, ಹಿಂದೂ ಮತ್ತು ಮುಸ್ಲಿಮರು ಈ ಎಲ್ಲ ವರ್ಷಗಳಲ್ಲಿ ಶಾಂತಯುತವಾಗಿ ಬದುಕಿ ಬಂದಿದ್ದಾರೆ. ಭಟಕಳ ನಗರದಲ್ಲಿಯೇ ೧೮ ದೇವಸ್ಥಾನಗಳಿವೆ. ೮೦ಕ್ಕಿಂತ ಹೆಚ್ಚು ಮಸೀದಿಗಳಿವೆ. ಚರ್ಚುಗಳು ಇವೆ. ಇರಾನಿ ಸ್ಮಶಾನವಿದೆ. ಇತ್ತೀಚಿನ ಬದಲಾದ ರಾಜಕೀಯ ಸಮೀಕರಣಗಳು ಮತ್ತು ಧರ್ಮ-ರಾಜಕೀಯದ ಅನೈತಿಕ ಮೈತ್ರಿಯಿಂದ ೧೯೭೦ರ ನಂತರ ಕೊಂಚ ಬದಲಾವಣೆ ಕಾಣತೊಡಗಿದೆ. ೧೯೯೩ರ ನಂತರ ಉತ್ತರ ಕರ್ನಾಟಕದ ಮುಸ್ಲಿಮರು ಮನೆ ಕೆಲಸ ಮತ್ತಿತರೆ ಮೇಲುವಸಿ ಕೆಲಸಕ್ಕೆಂದು ಇಲ್ಲಿಗೆ ವಲಸೆ ಬರುವುದು ಹೆಚ್ಚಾಗಿದೆ. ಆದರೆ ಇಂಥ ಕೆಲ ಸಣ್ಣ ಬದಲಾವಣೆ ಹೊರತುಪಡಿಸಿ ಈಗಲೂ ಪ್ರತಿ ಮುಸ್ಲಿಂ ಮನೆಯೂ ಹಿಂದೂ ಕೆಲಸಗಾರರು, ವ್ಯಾಪಾರಿಗಳೊಡನೆ ಸಂಪರ್ಕ ಹೊಂದಿದೆ. ಚನ್ನಪಟ್ಟಣದ ಹನುಮಂತ ದೇವರ ಉತ್ಸವದ ರಥ ಶಾಬಂದ್ರಿ ಕುಟುಂಬಕ್ಕೆ ಮೊದಲ ಗೌರವ ಸಲ್ಲಿಸಿಯೇ ಎಳೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ರಥದ ಚಕ್ರ ಮುರಿದು ಹೋಗಿ ಅದನ್ನು ರಿಪೇರಿ ಮಾಡುವಷ್ಟು ಹಣವಿಲ್ಲದಾಗ ಅದನ್ನು ಶಾಬಂದ್ರಿ ಕುಟುಂಬ ಮಾಡಿಕೊಟ್ಟಿತ್ತಂತೆ. ಈಚೆಗೆ ಕೆಲವರು ಅದನ್ನು ನಿಲ್ಲಿಸಲು ಯತ್ನಿಸಿದರೂ ಅಬಾಧಿತವಾಗಿ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.

ಈಗ ತಂಜೀಂನಂತಹ ಹಿರಿಯ ಸಂಸ್ಥೆ ಪುರಪ್ರಮುಖರೊಡನೆ ಭಟಕಳವನ್ನು ಶಾಂತಿಯತ್ತ ನಡೆಸಬೇಕಾದ ಕಾಲ ಬಂದಿದೆ. ಅದು ಐ. ಎಚ್. ಸಿದ್ದಿಕ್‌ರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು; ಎಂ. ಎಂ. ಸಿದ್ದಿಕ್‌ರಂತಹ ಸಮಾಜ ಸುಧಾರಣಾಕಾರರನ್ನು; ಮುಂಬೈ ಶಾಸನಸಭೆಯಲ್ಲಿ ಶಾಸಕರಾಗಿದ್ದ ಹಾಗೂ ಸೌದಿ ಅರೇಬಿಯಾಗೆ ರಾಯಭಾರಿಯಾಗಿದ್ದ ಎ. ಕೆ. ಹಾಫಿಜ್ಕಾರಂತಹವರನ್ನೂ; ಕರ್ನಾಟಕ ಸರ್ಕಾರದಲ್ಲಿ ೬ ವರ್ಷ ಮಂತ್ರಿಯಾಗಿದ್ದ ಜೆ. ಎಚ್. ಶಂಸುದ್ದೀನ್‌ರಂತಹವರನ್ನೂ; ಮೂರು ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಎಸ್. ಎಂ. ಯಾಹ್ಯಾರನ್ನೂ ನೀಡಿದೆ. ಶತಮಾನ ಕಂಡ ತಂಜೀಂ ಸಂಸ್ಥೆ ಸಮುದಾಯದ ಮೇಲೆ ನಿಯಂತ್ರಣ ಹೊಂದಿ ಸಮಾಜಕ್ಕೆ ಉತ್ತಮ ಕೆಲಸ ಮಾಡುತ್ತಿದೆ. ಸಮಾಜಸೇವಾ ಕಾರ್ಯಗಳಲ್ಲಿ ಸಮುದಾಯ ಬಾಂಧವರು ತೊಡಗಿಕೊಳ್ಳಲು ಉತ್ತೇಜಿಸುತ್ತದೆ. ಸ್ಥಳೀಯ ಭಾಷೆ ಕಲಿಯಬೇಕಾದ ಅವಶ್ಯಕತೆ ಕುರಿತು ಇತ್ತೀಚೆಗೆ ಮಾತನಾಡಿದೆ.


(ಶಂಸುದ್ದೀನ್ ಜುಕಾಕು)
ಆದರೆ ಸಮುದಾಯದವರು ಉನ್ನತ ಶಿಕ್ಷಣ ಪಡೆವ ಕುರಿತು, ಅದರಲ್ಲೂ ಹೆಣ್ಣುಮಕ್ಕಳ ಕಲಿಕೆ ಕುರಿತು ಹಿರಿಯರು ಆಧುನಿಕ ಮನೋಭಾವ ಹೊಂದಬೇಕಾದ ಅವಶ್ಯಕತೆಯಿದೆ. ಭಟಕಳದಲ್ಲಿ ಅಂಜುಮನ್ ಸಂಸ್ಥೆಯು ನರ್ಸರಿ ಶಾಲೆಯಿಂದ ಹಿಡಿದು ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ದೇಶದ ಸಾಕ್ಷರತೆಯ ಸರಾಸರಿಗಿಂತ ಹೆಚ್ಚು ಪುರುಷಮಹಿಳೆಯರ ಸಾಕ್ಷರತೆ ಭಟಕಳದಲ್ಲಿದೆ. ಆದರೂ ಸಾಮಾನ್ಯವಾಗಿ ನವಾಯತ ಹುಡುಗರು ಉನ್ನತ ಶಿಕ್ಷಣಕ್ಕಿಂತ ದುಡಿಮೆಗೆ ಗಮನ ಕೊಟ್ಟು ಹೊರದೇಶಗಳಿಗೆ ಹೋಗುವುದು ಕಂಡುಬರುತ್ತದೆ. ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸಂಖ್ಯೆ, ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಿದೆ. ಮುಖದಲ್ಲಿ ಬಾಲ್ಯದ ಚಹರೆಗಳಿನ್ನೂ ಮಾಸಿರದ ಎಳೆಯ ಅಮ್ಮಂದಿರು ಹೊತ್ತು, ಹೆತ್ತು, ಕೂಡುಕುಟುಂಬಗಳ ನಿರ್ವಹಣೆಯಲ್ಲಿ, ಗಲ್ಫಿನಿಂದ ಬರಲಿರುವ ಗಂಡನ ಸಲುವಾಗಿ ಮಾಡಿಕೊಳ್ಳುವ ತಯಾರಿಯಲ್ಲಿ ಕಳೆದೇ ಹೋಗುವುದನ್ನು ನೋಡುವಾಗ ಎಷ್ಟು ವೈದ್ಯೆ-ಇಂಜಿನಿಯರ್-ಶಿಕ್ಷಕಿ-ವೃತ್ತಿನಿರತರನ್ನು ಸಮಾಜ ಕಳೆದುಕೊಂಡಿತಲ್ಲ ಎಂದು ಆತಂಕವಾಗುತ್ತದೆ.

ಶತಮಾನಗಳ ಹಿಂದೆ ಬಂದ ಜನಾಂಗವೊಂದು ಇವತ್ತಿಗೂ ತನ್ನ ಬಂಧುಬಾಂಧವರನ್ನು ದೂರದೂರದ ದೇಶಗಳಲ್ಲಿ ಉದ್ಯೋಗ ವ್ಯಾಪಾರಕ್ಕೆ ಕಳಿಸುವ ಸಂಪ್ರದಾಯ ಮುಂದುವರೆಸಿಕೊಂಡೇ ಬಂದಿದೆ. ವರುಷ, ಎರಡು ವರುಷಕ್ಕೊಮ್ಮೆ ಬರುವ ಪತಿ; ಕೂಡು ಕುಟುಂಬದ ಜವಾಬ್ದಾರಿ, ಸಂಕಟಗಳು; ಪರದೇಶದಲ್ಲಿರುವವರು ಎದುರಿಸುವ ಒಂಟಿತನ, ಅಭದ್ರತೆಗಳು; ಅದು ಕುಟುಂಬ ರಚನೆಯಲ್ಲಿ ಮಾಡಿರಬಹುದಾದ ಏರುಪೇರುಗಳು; ತಮ್ಮ ಗಂಡಸರನ್ನು ದೂರದೂರುಗಳಲ್ಲಿ ಬಿಟ್ಟು ಸಂಸಾರ ನಿಭಾಯಿಸಿದ ಮಹಿಳೆಯರ ಅನುಭವಗಳು - ಇವೆಲ್ಲ ಹೊರಜಗತ್ತಿಗೆ ತಿಳಿಯಬೇಕು. ಪೂರ್ಣ ಪರದೆಯೊಳಗೇ ಇರುವ ಹೆಣ್ಮಕ್ಕಳು ಮಾತನಾಡಬೇಕು. ಅವರಿಗೆ ಕನ್ನಡ ಕಲಿಸಬೇಕು. ಅಥವಾ ಉಳಿದವರು ನವಾಯತಿ ಕಲಿಯುವಂತಾಗಬೇಕು. ಅದು ಎಷ್ಟು ದೂರದ ಹಾದಿಯೋ ಗೊತ್ತಿಲ್ಲ, ಆದರೆ ಅದು ಕ್ರಮಿಸಲೇಬೇಕಾದ ಹಾದಿ.

ತಮ್ಮ ಅಸ್ಮಿತೆ, ಕುರುಹುಗಳ ಉಳಿಸಿಕೊಳ್ಳುತ್ತಲೇ ಉಳಿದ ಸಮುದಾಯಗಳ ಜೊತೆಗಿನ ಕೊಡುಕೊಳು ಸಂಬಂಧದಲ್ಲಿ ವ್ಯವಹಾರದ ಹೊರತಾದ ಆಪ್ತತೆ ಬೆಳೆಸಿಕೊಳ್ಳುವುದು; ಎತ್ತರದ ಕೋಟೆಗೋಡೆಯಂತಹ ಕಾಂಪೌಂಡುಗಳಾಚೆಗಿನ ಲೋಕವನ್ನು ಒಳಗಿನವರು ಗ್ರಹಿಸಬೇಕಾಗಿರುವುದು; ಒಟ್ಟೂ ಸಮಾಜದ ಎಲ್ಲ ಆಗುಹೋಗುಗಳಲ್ಲಿ ನವಾಯತ ಬಂಧುಗಳು ಭಾಗವಹಿಸುವುದು ಸದ್ಯದ ತುರ್ತಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯವು ಅನನ್ಯತೆ ಉಳಿಸಿಕೊಳ್ಳುವ ಭರದಲ್ಲಿ ‘ಶುದ್ಧತೆ’ಯನ್ನು ಪ್ರತಿಪಾದಿಸುತ್ತ ತನ್ನನ್ನು ಮಿತಿಗೊಳಿಸಿಕೊಳ್ಳಬೇಕೇ ಅಥವಾ ಕರಗಿ ಮಿಳಿತಗೊಳಬೇಕೇ? ನೀರಲ್ಲಿ ನೀರಾಗಿ ಬೆರೆಯಬೇಕೇ ಅಥವಾ ತೈಲ ಬಿಂದುವಾಗಿ ಉಳಿಯಬೇಕೇ?  

ಎಷ್ಟೋ ಸಮುದಾಯಗಳು ಎದುರಿಸಿದ, ಈಗಲೂ ಎದುರಿಸುತ್ತಿರುವ ಮಿಲಿಯನ್ ಡಾಲರ್ ಸವಾಲು ಇದು. ಕೊಲ್ಲಿ, ಖಾರಿ, ಸಮುದ್ರಗಳನ್ನೇ ದಾಟಿಕೊಂಡ ಬಂದ ಸಮುದಾಯ ಈ ಸವಾಲನ್ನೂ ದಾಟಿ ನಿಲ್ಲುವಂತಾಗಲಿ..









Sunday 19 April 2015

ಇಷ್ಟೆ ಇಷ್ಟೇ





(ಚಿತ್ರ: ಕೃಷ್ಣ ಗಿಳಿಯಾರು)

ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಇಬ್ಬನಿ ಬಿಂದು
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು
ಗೆಲುವಿನ ಉನ್ಮಾದ ಸೋಲಿನ ಹತಾಶೆಯಿರದ ಮಿಂಚುಹುಳು

ನಾನು ರೂಮಿಯಲ್ಲ
ಶಂಸನೆಂಬ ತಳವಿರದ ಗುಡಾಣ ತುಂಬಿದ ಗಾಳಿ

ನಾನು ಬುದ್ಧನಲ್ಲ
ಲೋಕಕ್ಕೆ ಭಿಕ್ಕುವನಿತ್ತು ಬಿಕ್ಕುಳಿಸಿಕೊಂಡ
ಯಶೋಧರೆಯ ನಡುರಾತ್ರಿಯ ಮೌನ

ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
ಇಟ್ಟ ಮೊಟ್ಟೆ ಮರಿಯಾಗಿಸದೇ ಹೋದ
ಅವರ ಗರ್ಭಚೀಲದ ಕಾವು..

ನಾನು ಚೆ ಅಲ್ಲ
ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
ನೆರೂಡನ ಹಾಡಲು ಕಾದ ಹಕ್ಕಿ ಕೊರಳು

ನಾನು
ಬೆಟ್ಟವಲ್ಲ ಜಲಪಾತವಲ್ಲ
ಗುಹೆಯಲ್ಲ ಕಣಿವೆಯಲ್ಲ
ಕಂಡಷ್ಟೂ ದೂರ ಹಬ್ಬಿರುವ ಬಯಲ ಕೂಸು..
ನಿನ್ನೊಡನಿಟ್ಟ ಹೆಜ್ಜೆಗುರುತುಗಳ ಹೊರತು
ಮತ್ತಿಲ್ಲ ಆಳ ಎತ್ತರ ವಿಸ್ತಾರಗಳ ಕನಸು.

Friday 10 April 2015

ಮಾತೃಭಾಷಾ ಶಿಕ್ಷಣ




(ಚಿತ್ರ: ಕೃಷ್ಣ ಗಿಳಿಯಾರ್)

ಸ್ವಾತಂತ್ರ್ಯ ಬಂದು ಇಷ್ಟೆಲ್ಲ ವರುಷಗಳಾದರೂ, ಭಾಷಾವಾರು ಪ್ರಾಂತ್ಯ ರಚನೆಯಾಗಿ ೬ ದಶಕ ಕಳೆದರೂ, ೨೨ ಭಾಷೆಗಳನ್ನು ರಾಜ್ಯಭಾಷೆಗಳನ್ನಾಗಿ ಸಂವಿಧಾನದ ಷೆಡ್ಯೂಲಿನಲ್ಲಿ ಒಪ್ಪಿಕೊಂಡರೂ ಸರ್ಕಾರಗಳಿಗೆ ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ಯಾಕೆ ಮುಖ್ಯ ಎನ್ನುವ ಅರಿವಾಗಿಲ್ಲ. ವರ್ಷದಿಂದ ವರ್ಷಕ್ಕೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ತನ್ನ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಮಟ್ಟದಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಖಾಸಗೀಕರಣವನ್ನು ಉತ್ತೇಜಿಸುತ್ತಿದೆ. ಒಂದು ಕಡೆ ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸಿದಂತೆ ತೋರುವ ಅಪರಿಮಿತ ಉದ್ಯೋಗಾವಕಾಶ ಇಂಗ್ಲಿಷ್ ಭಾಷಾಜ್ಞಾನವೇ ನಿಜವಾದ ಅರ್ಹತೆ ಎನ್ನುವ ಮಿಥ್ ಸೃಷ್ಟಿಸುತ್ತಿದ್ದರೆ, ಅದಕ್ಕೆ ಪೂರಕವಾಗಿ ಲಾಭಕೋರ ಖಾಸಗಿ ಶಾಲೆಗಳು ಇಂಗ್ಲಿಷ್ ಕಲಿತರಷ್ಟೆ ಬದುಕುವ ಅವಕಾಶ ಎಂಬ ಧಾವಂತಕ್ಕೆ ಪಾಲಕರು ಬೀಳುವಂತೆ ಮಾಡುತ್ತಿವೆ. ಅರೆಬರೆ ಇಂಗ್ಲಿಷ್ ಕಲಿತ ನೌಕರ ವರ್ಗ ಸೃಷ್ಟಿಸಿಕೊಳ್ಳಲು ಬಂಡವಾಳಶಾಹಿಗಳು ಹೂಡುವ ವಾದವನ್ನೆಲ್ಲ ಸರ್ಕಾರಗಳೂ ಒಪ್ಪಿಕೊಂಡು ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಹೊರಟಿವೆ. ಕಡ್ಡಾಯ ಮಾತೃಭಾಷಾ ಶಿಕ್ಷಣ ಜಾರಿಗೊಳಿಸಲು ಕೋರ್ಟುಕಟ್ಟೆ ಹತ್ತಿ ಖಾಸಗಿ ಶಾಲೆಗಳೊಂದಿಗೆ ಸೆಣಸುವಂತಾಗಿದೆ.

ಇತ್ತೀಚೆಗೆ ಮಾತೃಭಾಷಾ ಶಿಕ್ಷಣ ಕುರಿತ ವಿಷಯಗಳು ಚರ್ಚೆಗೆ ಬರುತ್ತಿವೆ. ಅದರಲ್ಲೂ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ಐದು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಅದರ ಸಾಧಕ, ಬಾಧಕ, ಲೋಪದೋಷಗಳ ಕುರಿತು ಚರ್ಚೆ ನಡೆಯುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಸಮಾನ ಶಿಕ್ಷಣ ಹಾಗೂ ಮಾತೃಭಾಷಾ ಶಿಕ್ಷಣಕ್ಕಾಗಿ ‘ಅಖಿಲ ಭಾರತ ಸಮಾನ ಶಿಕ್ಷಣ ಹಕ್ಕು ವೇದಿಕೆ’ ರೂಪುಗೊಂಡಿದೆ. ಕರ್ನಾಟಕ ಜನಶಕ್ತಿ ಸಂಘಟನೆ ಸಮಾನ ಶಿಕ್ಷಣ ಜನಾಂದೋಲನವನ್ನು ಮೂರು ವರ್ಷಗಳಿಂದ ರಾಜ್ಯಾದ್ಯಂತ ಹಮ್ಮಿಕೊಂಡು, ವ್ಯವಸ್ಥಿತವಾಗಿ ಹಲವು ಸ್ತರಗಳ ಚರ್ಚೆ, ಕಾರ್ಯಕ್ರಮವನ್ನು ನಡೆಸುತ್ತಿದೆ.

ಇದರ ಬೆನ್ನಲ್ಲೇ ಶ್ರವಣಬೆಳಗೊಳದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ದೇವನೂರ ಮಹಾದೇವ ನಿರಾಕರಿಸಿದರು. ಮಾತೃಭಾಷಾ ಶಿಕ್ಷಣ ಮಾಧ್ಯಮ ನೀತಿ ಜಾರಿಯಾಗುವವರೆಗು ತಾವು ಯಾವುದೇ ಸಮ್ಮಾನ, ಸ್ಥಾನಮಾನ ಸ್ವೀಕರಿಸುವುದಿಲ್ಲವೆಂದು ಘೋಷಿಸುವುದರೊಂದಿಗೆ ಆ ಬೇಡಿಕೆಗೊಂದು ಸ್ಟಾರ್ ಮಾನ್ಯತೆ ಬಂದಿತು. ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ದೇವನೂರು ಸಾಹಿತ್ಯ ಪರಿಷತ್ತಿಗೆ ಬರೆದ ಪತ್ರದ ಸಾವಿರಾರು ಪ್ರತಿಗಳನ್ನು ಹಂಚಲಾಯಿತು.

ಇವೆಲ್ಲದರ ಮುಂದುವರಿದ ಭಾಗವಾಗಿ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಂಘಟನೆಯ ಸಂಗಾತಿಗಳು ಏಪ್ರಿಲ್ ಮೊದಲ ವಾರದಲ್ಲಿ ಎರಡು ದಿನದ ಮಾತೃಭಾಷಾ ಮಾಧ್ಯಮ ಕುರಿತ ರಾಷ್ಟ್ರೀಯ ಚಿಂತನಾ ಶಿಬಿರವೊಂದನ್ನು ನಡೆಸಿದರು. ಅದರಲ್ಲಿ ಮಾತೃಭಾಷಾ ಮಾಧ್ಯಮ ಕಲಿಕೆಯ ವಿವಿಧ ಆಯಾಮಗಳ ಕುರಿತು, ಸಾಧಕ-ಬಾಧಕಗಳ ಕುರಿತು ಸಾಹಿತ್ಯ, ಕಾನೂನು, ರಾಜಕೀಯ ಕ್ಷೇತ್ರಗಳ ಅನುಭವಿಗಳೊಡನೆ; ಶಿಕ್ಷಕ ಬಂಧುಗಳ ಜೊತೆ ಸಂವಾದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವನೂರು ಸೇರಿದಂತೆ ಕನ್ನಡದ ಬಹುತೇಕ ಆರೋಗ್ಯಕರ ಮನಸುಗಳ ದಂಡೇ ನೆರೆದಿತ್ತು.

ಮಾತೃಭಾಷಾ ಶಿಕ್ಷಣ ಕುರಿತು ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟನೆಗಳೂ ತಮ್ಮ ಗಮನ ಹರಿಸಬೇಕಾಗಿದೆ ಎಂದು ಹೇಳುತ್ತ ಜನಸಾಹಿತ್ಯ ಸಂಘಟನೆ ತಾನೇ ಅದಕ್ಕೊಂದು ಮಾದರಿಯಾದದ್ದು ಅನುಕರಣೀಯ ಪ್ರಯತ್ನ ಎನ್ನಬಹುದು. ನಾನು ಪಾಲ್ಗೊಂಡ ದಿನ ಚಿಂತನಾ ಶಿಬಿರದಲ್ಲಿ ಕಂಡದ್ದು, ಕೇಳಿದ್ದು, ಮನದಲ್ಲಿ ಅನುಮಾನವಾಗಿ ಸುಳಿದಾಡಿದ್ದು ನಿಮ್ಮೊಂದಿಗೆ..



ನೋಡಲು ಫಕ್ಕನೆ ಕಡಿದಾಳು ಶಾಮಣ್ಣನವರನ್ನು ಹೋಲುತ್ತಿದ್ದ ವೃದ್ಧರೊಬ್ಬರು ತಮ್ಮ ಚುರುಕಾದ ಮಾತು, ಚರ್ಚೆ, ಕರಾರುವಾಕ್ ಜ್ಞಾನದಿಂದ ಬಹುಜನರ ಗಮನ ಸೆಳೆದರು. ಇಡೀ ದಿನ ಚರ್ಚೆ, ಸಂವಾದ, ಧಾರವಾಡ ಘೋಷಣೆಯ ಕರಡು ತಯಾರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾಷಣ ಕೇಳಲು, ಪ್ರಶ್ನೆ ಎತ್ತಲು ಹಿಂಜರಿಯುವ ಹಿರಿಕಿರಿಯರು ನಾಚುವಂತೆ ಓಡಾಡಿದರು. ಈ ವಿಷಯ ಕುರಿತು ಯಾರದೇ ಸಣ್ಣ ಅನುಮಾನಕ್ಕೂ ಅವರ ಬಳಿ ಸವಿಸ್ತಾರವಾದ ವಿವರಣೆ ಸಿದ್ಧವಿತ್ತು. ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಅವರನ್ನು ತಾತ ಎನ್ನುವುದಕ್ಕಿಂತ ಆಪ್ತವಾಗಿ ಸಂಬೋಧಿಸುವುದು ಸಾಧ್ಯವಿಲ್ಲ.

ಅವರು ಮಾತೃಭಾಷಾ ಶಿಕ್ಷಣದ ಅವಶ್ಯಕತೆಯನ್ನು ಪ್ರತಿಪಾದಿಸುತ್ತ ದಶಕಗಳಿಂದ ದೇಶಾದ್ಯಂತ ಓಡಾಡುತ್ತಿರುವ ಅನಿಲ್ ಸದ್ಗೋಪಾಲ್.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲಾರ್ ಬಯಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಸದ್ಗೋಪಾಲ ತಾತ, ನಾನಾ ಹಂತದ ಬೋಧನೆಯಲ್ಲಿ ತೊಡಗಿಕೊಂಡವರು. ಶಿಕ್ಷಣ ಹಕ್ಕು ಪ್ರತಿಪಾದಿಸುವ ಸಂಘಟನೆಗಳೊಂದಿಗೆ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಗ್ರಾಮೀಣ ಭಾಗದ ೧೦೦೦ ಶಾಲೆಗಳ ಒಂದು ಲಕ್ಷ ಮಕ್ಕಳಿಗೆ ಪ್ರಾಯೋಗಿಕವಾಗಿ, ಯಶಸ್ವಿಯಾಗಿ, ಪ್ರಯೋಗಾಧಾರಿತ ವಿಜ್ಞಾನ ಶಿಕ್ಷಣ ನೀಡುತ್ತಿದ್ದಾರೆ. ೮೦ರ ದಶಕದಲ್ಲಿ ಪ್ರಜಾ ವಿಜ್ಞಾನ ಚಳುವಳಿ, ಮಾನವ ಹಕ್ಕು ಚಳುವಳಿಯಲ್ಲಿ ಕೆಲಸ ಮಾಡಿದ ಅವರು ನಂತರ ಭೋಪಾಲಿನ ವಿಷಾನಿಲ ಪೀಡಿತ ಜನರೊಂದಿಗೂ ಕೈಜೋಡಿಸಿದ್ದರು. ಅನೇಕ ಸರ್ಕಾರಿ ಕಮಿಷನ್-ಇಲಾಖೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿ ಶಿಕ್ಷಣ ಹಕ್ಕು ಕಾಯ್ದೆ ಬರಲು ಶ್ರಮಿಸಿದರು. ಜೊತೆಗೆ ಲೋಪದೋಷಗಳಿದ್ದ ಉದ್ದೇಶಿತ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಲ್ಲಿ, ಸಮಾನ ಶಿಕ್ಷಣ-ಮಾತೃಭಾಷಾ ಶಿಕ್ಷಣದ ಸಲುವಾಗಿ ಅಖಿಲ ಭಾರತ ಮಟ್ಟದ ಜಾಗೃತಿ ಹಾಗೂ ಹೋರಾಟ ರೂಪಿಸುವಲ್ಲಿ ಅವರ ಪಾತ್ರ ಹಿರಿದು. ಅವರಂತೇ ಮತ್ತೊಬ್ಬ ಹಿರಿಯರು ಅಲ್ಲಿ ಕಂಡುಬಂದರು. ಅವರು ಜೋಗಾಸಿಂಗ್. ಪಂಜಾಬ್ ವಿಶ್ವವಿದ್ಯಾಲಯದ ಪ್ರೊಫೆಸರರು. ಇವರಿಬ್ಬರೂ ಕನ್ನಡದಲ್ಲಿ ನಡೆದ ಇಡಿಯ ದಿನದ ಕಲಾಪಗಳನ್ನು ಪಕ್ಕ ಕುಳಿತ ದುಭಾಷಿಗಳ ಸಹಾಯದಿಂದ ಕೇಳಿ, ತಿಳಿದು ಸಂವಾದದಲ್ಲೂ ಭಾಗವಹಿಸಿದರು. ಇಬ್ಬರೂ ಹಿರಿಯರು ಮಾತೃಭಾಷಾ ಶಿಕ್ಷಣ ಅವಶ್ಯ ಏಕೆ ಎನ್ನುವುದನ್ನು, ಶಿಕ್ಷಣ ಹಕ್ಕು ಕಾಯ್ದೆಯ ಕ್ಲಾಸ್‌ಗಳನ್ನು, ಸಂವಿಧಾನದ ಕೆಲವು ಪರಿಚ್ಛೇದಗಳನ್ನು ಅರೆದು ಕುಡಿದಿರುವರೇನೋ ಎಂಬಂತೆ ಲೀಲಾಜಾಲವಾಗಿ ಮಾತನಾಡಿದರು, ವಿವರಿಸಿದರು, ಪ್ರಶ್ನಿಸಿದರು. ಸಭೆಯೊಳಗೆ, ಹೊರಗೆ ವೈಯಕ್ತಿಕವಾಗಿ ಹಾಗೂ ಗುಂಪುಗಳಲ್ಲಿ ಅವರು ದಣಿವಿರದೆ ಸಂವಾದಿಸುತ್ತಿದ್ದುದು ಕಂಡುಬಂತು.

ಅವರ ಪ್ರಕಾರ ಕೇವಲ ಪ್ರಾಥಮಿಕ/ಪ್ರೌಢ ಶಿಕ್ಷಣವಷ್ಟೆ ಅಲ್ಲ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಆಗಬೇಕು! ಕನ್ನಡ ಮೆಡಿಕಲ್ ಕಾಲೇಜು, ಕನ್ನಡ ಇಂಜಿನಿಯರಿಂಗ್ ಕಾಲೇಜು, ಕನ್ನಡ ಮ್ಯಾನೇಜ್‌ಮೆಂಟ್ ಮತ್ತಿತರೆ ಕಾಲೇಜುಗಳು ತಲೆಯೆತ್ತಬೇಕು!! ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಪಡೆಯಲು ಸಾಧ್ಯವಾಗದಿದ್ದರೆ ಮಾತೃಭಾಷಾ ಶಿಕ್ಷಣ ಎಂಬ ಬೇಡಿಕೆಗೆ ಮಾನ್ಯತೆಯೇ ಇಲ್ಲ..

ಆದರೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಯಿತು. ಈಗಲೂ ಸ್ವಲ್ಪ ಕಷ್ಟವೇ. ಪ್ರೌಢಶಾಲೆಯವರೆಗೆ ವಿಜ್ಞಾನ, ವಾಣಿಜ್ಯ, ಸಮಾಜ ಎಲ್ಲವನ್ನೂ ಮಾತೃಭಾಷೆಯಲ್ಲಿ ಕಲಿಯುವುದು ಸರಿ. ಆದರೆ ವೃತ್ತಿಪರ/ತಾಂತ್ರಿಕ ಕೋರ್ಸುಗಳೂ ಮಾತೃಭಾಷೆಯಲ್ಲೇ ಎನ್ನುವುದು ಕೊಂಚ ಅತಿಯಲ್ಲವೆ? ಭಾಷೆಯ ಕಾರಣದಿಂದ ನಮ್ಮನ್ನು ನಾವು ಕೆಲಸ, ಶಿಕ್ಷಣ ಎಲ್ಲಕ್ಕೂ ನಮ್ಮ ರಾಜ್ಯಕ್ಕೇ ಕಟ್ಟಿಹಾಕಿಕೊಂಡಂತಲ್ಲವೆ? ಹಿರಿಯರಿಬ್ಬರು ಈ ಕುರಿತು ವಿಸ್ತೃತ ವಿವರಣೆ ನೀಡಿದರಾದರೂ ಅದೇಕೋ ಅವೆಲ್ಲ ತೀರಾ ದೂರದ ಕನಸೆಂದೇ ತೋರಿತು. ಅದರಲ್ಲೂ ನನ್ನದೇ ಜ್ಞಾನಕ್ಷೇತ್ರವನ್ನು ಕನ್ನಡದಲ್ಲಿ ಕಲ್ಪಿಸಿಕೊಂಡ ಮೇಲೆ ಮತ್ತಷ್ಟು ಕಳವಳವಾಯಿತು.

ರೋಗಿಗಳ ನೋಡಲು, ಅವರ ಭಾಷೆಯಲ್ಲಿ ಸಂಭಾಷಣೆ ನಡೆಸಲು ಯಾವುದೇ ಭಾಷೆಯನ್ನು ಅಲ್ಪ ಕಾಲದಲ್ಲಿ ಕಲಿಯಬಹುದು. ಆದರೆ ಸಿದ್ಧ ಪಠ್ಯವೇ ಇಲ್ಲದ, ವಿಸ್ತೃತ ಅಧ್ಯಯನ ಬಯಸುವ ಎಂಬಿಬಿಎಸ್ ಅನ್ನು ಕನ್ನಡ ಭಾಷೆಯಲ್ಲಿ ಕಲಿತು, ನಂತರ ಸ್ನಾತಕೋತ್ತರ ಕಲಿಕೆಗಾಗಿ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ಬರೆದು, ಗೌಹಾತಿಯಲ್ಲೋ ಪಾಂಡಿಚೆರಿಯಲ್ಲೋ ಅಮೃತಸರದಲ್ಲೋ ಸೀಟು ಸಿಕ್ಕರೆ, ಆಗ ಆ ರಾಜ್ಯದ ಭಾಷೆ ಕಲಿತು, ಅದರ ಲಿಪಿ ಕಲಿತು, ಅದರಲ್ಲಿರುವ ಸ್ನಾತಕೋತ್ತರ ಪಠ್ಯಗಳನ್ನು ಓದಿ, ಪರೀಕ್ಷೆ ಬರೆಯುವುದು ಸುಲಭವೇ? ನಾನು ಓದುವುದನ್ನು ನನ್ನ ಭಾಷೆಗೆ ತರ್ಜುಮೆ ಮಾಡಿಕೊಂಡು, ಪಠ್ಯವಾಗಿಸಿಕೊಳ್ಳುವುದು ಕಲಿಕೆಯ ಹೊರೆಯನ್ನು ಇನ್ನಷ್ಟು ಹೆಚ್ಚಿಸದೆ? ಹೊಸ ವೈದ್ಯಕೀಯ ಉಪಕರಣ/ಅವುಗಳ ಬಳಕೆ/ಹೊಸ ಔಷಧ/ಶಸ್ತ್ರಚಿಕಿತ್ಸೆಯ ಹೊಸಹೊಸ ವಿಧಾನಗಳ ಕುರಿತ ಸಂಶೋಧನೆ/ಮಾಹಿತಿಗಾಗಿ ಭಾರತದ ಎಲ್ಲ ರಾಜ್ಯಗಳ ವೈದ್ಯರ ಹಾಗೂ ವಿಶ್ವದ ಹಲವು ಪ್ರತಿಷ್ಠಿತ ವೈದ್ಯವಿದ್ಯಾಲಯಗಳ ಜರ್ನಲ್‌ಗಳ ನೆರವನ್ನು ವೈದ್ಯರು ಹಂಚಿಕೊಳ್ಳಬೇಕಾಗುತ್ತದೆ. ಅದು ಸಂಪರ್ಕ ಭಾಷೆಯಾದ ಇಂಗ್ಲಿಷ್ ಮೂಲಕ ಸುಲಲಿತವಾಗಿ ನಡೆಯುತ್ತಿದೆ. ಹೀಗಿರುವಾಗ ಕನ್ನಡದಲ್ಲಿಯೇ ಪದವಿ, ಸ್ನಾತಕೋತ್ತರ ಎಲ್ಲವನ್ನು ಕಲಿತು ವಿಶ್ವದ ಜ್ಞಾನದ ಜೊತೆ ನನ್ನದನ್ನು ಸಂವಹನ ಮಾಡಿಕೊಳ್ಳಲು ಕಷ್ಟ ಮಾಡಿಕೊಳ್ಳುವುದೇಕೆ? ಇವತ್ತಿಗೂ ಭಾರತದ ಬಹುಪಾಲು ವೈದ್ಯರಿಗೆ ಉತ್ತಮ ಇಂಗ್ಲಿಷ್ ಇಲ್ಲದಿರುವ ಕಾರಣ ಸೆಮಿನಾರುಗಳಲ್ಲಿ, ಕಾನ್ಫರೆನ್ಸುಗಳಲ್ಲಿ ತಮ್ಮ ಅನುಭವ, ಜ್ಞಾನವನ್ನು ವಿಶ್ವದೆದುರು ತೆರೆದಿಡಲು ಸಾಧ್ಯವಿಲ್ಲದೇ ಕೀಳರಿಮೆ ಅನುಭವಿಸುತ್ತಾರೆ. ಹಾಗಿರುವಾಗ ಬರೀ ಕನ್ನಡದಲ್ಲಿಯೇ ಎಲ್ಲವನ್ನೂ ಕಲಿತು ಸಂಪರ್ಕ ಸಾಧಿಸುವುದು ಇನ್ನೂ ಕಷ್ಟವಲ್ಲವೇ? ಆಗ ಶಿಕ್ಷಣದ ಗುಣಮಟ್ಟ ಏನಾದೀತು?

ಆದರೆ ನಾನು ಯಾವ ಕಾರಣಗಳಿಗಾಗಿ ಕಲಿಕೆ ಕಷ್ಟವೆಂದು ಹೇಳಿದೆನೋ ಆ ಹಿರಿಯರು ಅದೇ ಕಾರಣಗಳಿಗೆ ಮಾತೃಭಾಷಾ ಶಿಕ್ಷಣ ಬರಬೇಕೆಂದರು. ಮಾತೃಭಾಷಾ ಶಿಕ್ಷಣ ನೀತಿ ಬಂದರೆ ನಾನು ಈ ದೇಶದ ಯಾವುದೇ ರಾಜ್ಯಕ್ಕೆ ಶಿಕ್ಷಣಾರ್ಥಿಯಾಗಿ ಹೋದರೂ ಅಲ್ಲಿ ನನಗೆ ಕನ್ನಡದಲ್ಲಿ ಬೋಧಿಸುವ ಸಿಬ್ಬಂದಿ ನೇಮಿಸಬೇಕು; ಕನ್ನಡದಲ್ಲಿ ನನ್ನನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡುವ ವ್ಯವಸ್ಥೆಯಾಗಬೇಕು. ಎಲ್ಲ ಭಾಷೆಗಳಲ್ಲೂ ಮೌಲ್ಯಯುತ ಪಠ್ಯ, ಆಕರ ಗ್ರಂಥ, ಬೋಧಕ ಸಿಬ್ಬಂದಿ ಸಿದ್ಧವಾಗಬೇಕು. ಕಾಲಕಾಲಕ್ಕೆ ಬೇರೆಭಾಷೆಗಳಲ್ಲಿ ಬಂದ ಜ್ಞಾನಶಿಸ್ತುಗಳು ನಮ್ಮ ಮಾತೃಭಾಷೆಗೆ ತರ್ಜುಮೆಗೊಳ್ಳುವಂತೆ ಅಕಾಡೆಮಿಯೊಂದು ಕೆಲಸ ಮಾಡಬೇಕು. ಇದು ಕೇವಲ ಕನ್ನಡವಷ್ಟೇ ಅಲ್ಲ, ಮೆಡಿಕಲ್ ಶಿಕ್ಷಣವಷ್ಟೇ ಅಲ್ಲ; ಷೆಡ್ಯೂಲಿನಲ್ಲಿರುವ ೨೨ ಭಾಷೆಗಳಿಗೂ, ಎಲ್ಲ ತೆರನ ಶಿಕ್ಷಣದ ಕೋರ್ಸುಗಳಿಗೂ ಅನ್ವಯಿಸಬೇಕು. ಆಗ ಮಾತೃಭಾಷೆ ಉಳಿಯುತ್ತದೆ. ವಿದ್ಯಾರ್ಥಿಗಳು ನಿಜಾರ್ಥದಲ್ಲಿ ಸುಶಿಕ್ಷಿತರಾಗುತ್ತಾರೆ; ಮೊದಲಿನಂತೆ ಹೆಚ್ಚೆಚ್ಚು ಜನ ವೈಜ್ಞಾನಿಕ ಮನೋಭಾವ ಹೊಂದುತ್ತಾರೆ; ವಿಜ್ಞಾನ ಕಲಿತು ವಿಜ್ಞಾನಿಗಳಾಗುತ್ತಾರೆ. ಒಟ್ಟಾರೆ ಕಲಿಕೆಯೇ ಸುಲಭವಾಗುತ್ತದೆ..

ಆದರೆ ಮೊದಲೆಲ್ಲ ಮಾತೃಭಾಷೆಯಲ್ಲೇ ಜ್ಞಾನ ಲಭ್ಯವಿದ್ದಾಗಲೂ ಅಕ್ಷರ ಕಲಿವ ಅವಕಾಶವಿದ್ದವರೆಲ್ಲ ಏಕೆ ಚರಕ, ಸುಶ್ರುತ, ಪಾಣಿನಿ, ಪೈಥಾಗೊರಸ, ಪ್ಲೇಟೋ ಆಗಲಿಲ್ಲ? ಅಥವಾ ಇಂಗ್ಲಿಷ್ ಮಾತೃಭಾಷೆಯಾಗಿ ಹೊಂದಿರುವ ವಿದೇಶದ ಮಕ್ಕಳೆಲ್ಲ ಏಕೆ ವಿಜ್ಞಾನಿ-ಸಂಶೋಧಕರಾಗಲಿಲ್ಲ? ಕಲಿಕೆ ಮತ್ತು ಜ್ಞಾನ ಭಾಷೆಗಿಂತ ಹೆಚ್ಚು ವೈಯಕ್ತಿಕ ಆಸಕ್ತಿಗೆ ಸಂಬಂಧಿಸಿದ್ದೂ ಅಲ್ಲವೆ? ಕಲಿಕೆ ಕೇವಲ ಭಾಷೆಯ ಪ್ರಶ್ನೆ ಮಾತ್ರ ಅಲ್ಲವಷ್ಟೆ? ಇವು ನನ್ನ ಅನುಮಾನಗಳು.

ಹೌದು. ಆದರೆ ಈಗ ಎಲ್ಲರಿಗೂ ಕಲಿಕೆಗೆ ಸಮಾನ ಹಕ್ಕು, ಅವಕಾಶವಿರುವಾಗ ಜ್ಞಾನ ಮಾತೃಭಾಷೆಯಲ್ಲೇ ದೊರೆತರೆ ಸಂಶೋಧನೆ, ಸಂವಹನದ ಗುಣಮಟ್ಟ ಇನ್ನೂ ಹೆಚ್ಚುತ್ತದೆ ಎಂದರು ತಾತ.

ನಿಜ. ಅವರ ಕನಸುಗಳು ಒಂದು ವೇಳೆ ನನಸಾದರೆ ಆಗ ಉದ್ಭವಿಸುವ ಶಿಕ್ಷಿತ ಸಮಾಜದ ಕಲ್ಪನೆ - ರಮ್ಯವಾಗೇನೋ ಇದೆ. ಆದರೆ ಭಾರತವೆಂಬೋ ಬಹುಭಾಷೆಗಳ ದೇಶದ ಎಷ್ಟೊಂದು ಭಾಷೆಗಳಿಗೆ ತರ್ಜುಮೆಗೊಳ್ಳಬೇಕಾದ ಜ್ಞಾನ, ಅದರ ಆಯ್ಕೆ, ಅನುವಾದಕರ ಆಯ್ಕೆ, ಲಭ್ಯತೆ, ಅಕಾಡೆಮಿ, ಇದೆಲ್ಲದರ ಗುಣಮಟ್ಟ ನಿರ್ವಹಣೆ ಸಾಧ್ಯವೇ?

ನನ್ನ ಅನುಮಾನಗಳಿಗೆ ಹಿರಿಯರು ತುಂಬ ಉತ್ಸಾಹದಿಂದ ಎಳೆ ಎಳೆಯಾಗಿ ವಿವರಿಸುವಾಗ ಅವರ ಕಣ್ಣ ಹೊಳಪಿಗೆ, ವಿಶ್ವಾಸಕ್ಕೆ ಶರಣಾದೆನಾದರೂ ಹಲವು ಪ್ರಶ್ನೆ, ಅನುಮಾನ ಗಂಟಲಲ್ಲಿ ಹೂತುಹೋದವು. ಬೇರೆಬೇರೆ ದೇಶಗಳು ತಂತಮ್ಮ ಮಾತೃಭಾಷೆಯಲ್ಲೇ ಸಾಧನೆ ಮಾಡಿದಂತೆ ೧೨೦ ಕೋಟಿ ಜನರ ನೂರಾರು ಭಾಷೆಗಳ ಭಾರತ ದೇಶವು ಮಾತೃಭಾಷೆಗಳನ್ನಷ್ಟೇ ಮಾಧ್ಯಮವಾಗಿ ತನ್ನ ಪ್ರಜೆಗಳಿಗೆ ಕಲಿಸಿದರೆ ಹೇಗೆ ಸಾಧನೆ ಮಾಡಬಹುದು ಎಂಬ ಬಗ್ಗೆ ಗೊಂದಲಗಳೇ ಉಳಿದವು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ತಾವು ವಿಶ್ವದ ಮೂಲೆಮೂಲೆಯ ಜನರೊಡನೆ ತಾದಾತ್ಮ್ಯದಿಂದ ಕಲ್ಪಿಸಿಕೊಂಡು ‘ವಿಶ್ವಮಾನವ’ರಾಗಿರುವಂತೆ ಭಾವಿಸುವ ಇವತ್ತಿನ ಪೀಳಿಗೆ ಮಾತೃಭಾಷೆಯಲ್ಲೇ ಎಲ್ಲ ಕಲಿಕೆ ಎನ್ನುವುದನ್ನು ಹೇಗೆ ಸ್ವೀಕರಿಸಿಯಾರು ಎಂಬ ಅನುಮಾನವಾಯಿತು. ಇದೇ ಆತಂಕವನ್ನು ಹೊರಗೆ ಸುಳಿಯುತ್ತಿದ್ದ ಹಲವು ಎಳೆಯ ಜೀವಗಳು ಹಂಚಿಕೊಂಡವು.

ಇದೆಲ್ಲದರ ನಡುವೆಯೇ ‘ಮಾತೃಭಾಷೆಗಾಗಿ ನಡೆಯುತ್ತ’ ಹಿರಿಕಿರಿಯ ಜೀವಗಳು ಒಂದಷ್ಟು ದೂರ ಒಟ್ಟಿಗೇ ಕ್ರಮಿಸಿದೆವು..



                                                                                                (ಚಿತ್ರ: ಕೃಷ್ಣ ಗಿಳಿಯಾರ್)
ಈಗ ಕನ್ನಡ ಶಾಲೆ ಮತ್ತು ಸರ್ಕಾರಿ ಶಾಲೆ ಸಮಾನಾರ್ಥಕ ಪದಗಳು. ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವುದು ಗುಣಮಟ್ಟದ ಶಿಕ್ಷಣವಲ್ಲ, ಅದರ ನೆರಳು ಮಾತ್ರ ಎನ್ನುವುದು ಹಲವರ ಅಳಲು. ೭ನೇ ತರಗತಿವರೆಗೆ ನಪಾಸು ಮಾಡುವಂತಿಲ್ಲ; ಒಂದೇ ಕೋಣೆಯಲ್ಲಿ ಅದೇ ಶಿಕ್ಷಕಿ ಬೇರೆಬೇರೆ ತರಗತಿಗೆ ಬೇರೆಬೇರೆ ಪಾಠ ಮಾಡುವುದು; ಶಿಕ್ಷಕರಿಗೆ ಚುನಾವಣೆ/ಬಿಸಿಯೂಟ/ಜನಗಣತಿ/ವಿಕೋಪ ನಿರ್ವಹಣೆಯಂತಹ ಬೋಧನೇತರ ಕೆಲಸಗಳ ಹೊರೆ ಹೆಚ್ಚಿಗೆ ಆಗಿರುವುದು - ಇದೆಲ್ಲದರಿಂದ ಸರ್ಕಾರಿ ಶಾಲೆಯ ಉಚಿತ ಶಿಕ್ಷಣವು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ತಮ್ಮ ಮಕ್ಕಳನ್ನು ರೂಪಿಸಬಲ್ಲುದೇ? ಎಂಬ ಬಗ್ಗೆ ಪಾಲಕರಿಗೆ ಅನುಮಾನವಿದೆ. ಯಾರನ್ನೂ ನಪಾಸು ಮಾಡದೇ, ಪರೀಕ್ಷೆಯೇ ಇಲ್ಲದೆ, ಎಲ್ಲರನ್ನೂ ಸಮಾನವಾಗಿ ತಯಾರು ಮಾಡುವುದು ತುಂಬ ಉದಾತ್ತ ಗುರಿಯೇನೋ ಹೌದು. ಆದರೆ ಅದಕ್ಕೆ ತುಂಬ ಪೂರ್ವತಯಾರಿ, ಸೂಕ್ತ ಪಠ್ಯ, ಮೌಲ್ಯಮಾಪನ, ನುರಿತ ಶಿಕ್ಷಕರು ಬೇಕು. ಆ ವ್ಯವಸ್ಥೆ ನಮ್ಮ ಶಾಲೆಗಳಲ್ಲಿ ಇದೆಯೇ? ಸ್ಪರ್ಧೆಯ ಸೋಲುಗೆಲುವಿನ ಭಯ ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಕಳಿಸುವಂತೆ ಮಾಡಿದೆ.

ಏಕರೂಪ ಪಠ್ಯ ಮತ್ತು ಶಿಕ್ಷಣದ ಸಲುವಾಗಿ ಎಲ್ಲ ಶಾಲೆಗಳನ್ನು ಸರ್ಕಾರವೇ ವಹಿಸಿಕೊಳ್ಳಬೇಕು, ಖಾಸಗಿ ಶಾಲೆಗಳು ಬೇಡವೇ ಬೇಡ ಎಂಬ ಕೂಗು ಕೇಳಿಸುತ್ತಿದೆ. ಆದರೆ ಶಿಕ್ಷಣವಷ್ಟೇ ಅಲ್ಲ, ಯಾವುದೇ ಕ್ಷೇತ್ರವೂ ಖಾಸಗೀಕರಣಗೊಳ್ಳದಂತೆ ತಡೆಯಲು ಆಳುವವರಲ್ಲಿ ಉತ್ಸುಕತೆಯೇ ಇಲ್ಲ. ಅದಕ್ಕೆ ಬದಲು ಪೊಲೀಸ್/ಸೇನೆಯಂತಹ ಕೆಲವೇ ವ್ಯವಸ್ಥೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನು ವ್ಯವಸ್ಥಿತವಾಗಿ ಖಾಸಗಿಯವರಿಗೆ ಮಾರಿಬಿಡುವ ಧಾವಂತ ಆಳುವವರಲ್ಲಿದೆ. ಈ ಧೋರಣೆಯಿಂದಲೇ ಸರ್ಕಾರಿ ಶಾಲೆ ಕ್ಷೀಣಿಸಿ, ಖಾಸಗಿ ಶಾಲೆ ತೆರೆಯಲು ಸೂಕ್ತ ಸನ್ನಿವೇಶವನ್ನು ಸರ್ಕಾರಗಳೇ ನಿರ್ಮಿಸಿವೆ. ಈಗ ಡೀಮ್ಡ್ ಯೂನಿವರ್ಸಿಟಿಗಳು ತಲೆಯೆತ್ತತೊಡಗಿವೆ. ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ. ಸ್ಟೇಟ್ ಸಿಲಬಸ್ ಮಾತೃಭಾಷೆಯಲ್ಲಿರಲೇಬೇಕು ಎಂದ ಮೇಲೆ ಎಲ್ಲ ಶಾಲೆಗಳೂ ಸಿಬಿಎಸ್ಸಿ, ಐಸಿಎಸ್ಸಿಯಂತಹ ಸೆಂಟ್ರಲ್ ಸಿಲಬಸ್ಸಿಗೆ ವರ್ಗಾವಣೆಗೊಂಡಿವೆ. ೫ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಎಂದ ಕೂಡಲೇ ಪಾಲಕರನ್ನೆಲ್ಲ ಒಗ್ಗೂಡಿಸಿ ಖಾಸಗಿ ಶಾಲೆಗಳ ಸಂಘದವರು ಸುಪ್ರೀಂಕೋರ್ಟಿನ ತನಕ ಹೋಗಿ ಕೇಸು ಗೆದ್ದರು. ಅವರ ಬಳಿ ‘ಮಕ್ಕಳ ಭವಿಷ್ಯ’, ‘ಆಯ್ಕೆಯ ಅವಕಾಶ’ ಎಂಬ ಅಸ್ತ್ರಗಳಿವೆ.

ಹೀಗಿರುತ್ತ ತಮ್ಮ ಖಾಸಗಿ ಆಸ್ತಿಯಾಗಿರುವ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳನ್ನು ಅದರ ಮಾಲೀಕರು ಸಮಾನ ಶಿಕ್ಷಣ ಎಂಬ ಉದಾತ್ತ ಧ್ಯೇಯಕ್ಕಾಗಿ ಎಂದಾದರೂ ಸರ್ಕಾರಕ್ಕೆ ವಹಿಸಿಕೊಟ್ಟಾರು ಎಂದು ಕನಸಬಹುದೆ?

***

ಒಂದು ಕಡೆ ತಾಂತ್ರಿಕ/ವೃತ್ತಿಪರ/ಉನ್ನತ ಶಿಕ್ಷಣವೂ ಮಾತೃಭಾಷೆಯಲ್ಲಿರಬೇಕೆನ್ನುವ ಸದ್ಗೋಪಾಲ ತಾತನಂತಹವರು ಇದ್ದರೆ; ಮತ್ತೊಂದೆಡೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಅನ್ನೂ ಕಲಿಸಬೇಕೆಂದು ಒಂದು ಗುಂಪು ಒತ್ತಾಯಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ಬಹುತೇಕರು ದಲಿತ/ತಳ ಸಮುದಾಯದ ಹಾಗೂ ಬಡ ಮಕ್ಕಳು. ಗ್ರಾಮೀಣ ಭಾಗದ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ವಿಷಯದಲ್ಲಿ ಫೇಲಾಗುವುದು, ಇಂಗ್ಲಿಷ್ ಭಾಷೆ ಕಷ್ಟವಾದ ಕಾರಣಕ್ಕೇ ಕಾಲೇಜು, ಹೈಸ್ಕೂಲು ಬಿಡುವುದು ಜಾಸ್ತಿ. ಆದ್ದರಿಂದ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಕಲಿಕೆಯನ್ನು ಸರ್ಕಾರಿ ಶಾಲೆಗಳಲ್ಲಿ ತರಬೇಕೆಂಬ ಒತ್ತಾಯ ಕೇಳಿಬಂದು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ.

ಸಾವಿತ್ರಿಬಾಯಿ ಫುಲೆ, ಅಂಬೇಡ್ಕರರಿಂದ ಹಿಡಿದು ಇವತ್ತಿನ ಚಂದ್ರಭಾನ್ ಪ್ರಸಾದ್ ಮತ್ತವರ ಸಹವರ್ತಿಗಳ ತನಕ ಹಲವು ದಲಿತ ಚಿಂತಕರು, ಹಿತೈಷಿಗಳು ಇಂಗ್ಲಿಷ್ ಭಾಷೆಯೇ ಶೋಷಿತನ ಹೊಸ ಅರಿವಿಗೆ, ಜಾಗೃತಿಗೆ, ಕೀಳರಿಮೆ ಕಳೆದುಕೊಳ್ಳಲಿಕ್ಕೆ ಇರುವ ಮೊದಲ ಮೆಟ್ಟಿಲು ಎಂದು ಭಾವಿಸಿದ್ದಾರೆ. ಚಂದ್ರಭಾನ್ ಪ್ರಸಾದ್ ಇಂಗ್ಲೀಷಮ್ಮನ ಗುಡಿ ಕಟ್ಟಿದ್ದಾರೆ. ಭಾಷೆ ಅದರೊಂದಿಗೆ ಬರುವ ಪರಂಪರೆ ಹಾಗೂ ಸಂಸ್ಕೃತಿಗಳು ತಮ್ಮನ್ನು ಪಾರಂಪರಿಕವಾಗಿ ಅದೇ ನೆಲೆಯಲ್ಲಿರುವಂತೆ ಮಾಡುತ್ತವೆ ಎನ್ನುವುದು ಅವರ ಅಭಿಮತ.

ಮಾತೃಭಾಷಾ ಶಿಕ್ಷಣದ ಪರವಾಗಿರುವವರು ಮತ್ತು ಇಂಗ್ಲಿಷ್ ಕಲಿಕೆ ಬೇಕೆನ್ನುವವರು ಇಬ್ಬರೂ ಸಮಾನ ಅಂಶಗಳನ್ನು ಕಾರಣವಾಗಿ ಮುಂದೊಡ್ಡುತ್ತಾರೆ. ಆದರೆ ಮಾತೃಭಾಷಾ ಶಿಕ್ಷಣ ಜಾಗೃತಿ ಅಭಿಯಾನದಲ್ಲಿ ಇಂಗ್ಲಿಷ್ ಪರ ಗುಂಪಿನ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ. ಹೀಗಾಗಬಾರದು. ಅವರ ಅಭಿಪ್ರಾಯಗಳನ್ನು ಪರಿಗಣಿಸಬೇಕು, ಚರ್ಚೆ ನಡೆಯಬೇಕು, ಒಗ್ಗಟ್ಟಾಗಿ ಶಿಕ್ಷಣ ನೀತಿ ರೂಪಿಸಬೇಕು. ಆಗ ಮಾತ್ರ ದ್ವಂದ್ವಗಳಿಲ್ಲದ ಏಕರೂಪ ಶಿಕ್ಷಣ ನೀತಿಗಾಗಿ ಸರ್ಕಾರವನ್ನು ಒತ್ತಾಯಿಸುವುದು, ಖಾಸಗಿ ಶಾಲೆಗಳನ್ನು ಸುಮ್ಮನಿರಿಸುವುದೂ ಸುಲಭವಾಗುತ್ತದೆ. ವಿಸ್ತೃತ ಜನಬೆಂಬಲ ದೊರೆತರಷ್ಟೆ ಮಾತೃಭಾಷಾ ಶಿಕ್ಷಣ ಆಂದೋಲನ ಚಳುವಳಿಯ ರೂಪ ಪಡೆಯಲು ಸಾಧ್ಯವಾಗುತ್ತದೆ.

***

ಬಲಪಂಥೀಯ ರಾಜಕಾರಣವೂ ಈಗ ಮಾತೃಭಾಷೆಯ ಮಾತನಾಡುತ್ತಿದೆ. ಭಾಷೆಯ ಹೆಸರಿನಲ್ಲಿ ಸೇನೆಗಳು ಹುಟ್ಟಿಕೊಂಡಿವೆ. ಭಾಷೆ ಬೌದ್ಧಿಕ ವಿಕಸನಕ್ಕೆ ಹೇಗೋ ಹಾಗೇ ಅಂಧಾಭಿಮಾನ, ದುರಭಿಮಾನಕ್ಕೂ ಕಾರಣವಾಗಬಲ್ಲುದು; ಇಂಗ್ಲಿಷ್ ಕಲಿಸುವತ್ತ ತೋರುವ ಅನಾದರ ಇಂಗ್ಲಿಷ್ ಬರುವ-ಬರದಿರುವವರ ನಡುವಿನ ಕಂದಕ ಅಗಲ ಮಾಡಬಹುದು; ಇದು ಇನ್ನಷ್ಟು ಉದ್ಯೋಗಾವಕಾಶ ಕಡಿಮೆ ಮಾಡಬಹುದು - ಹೀಗಾಗದು ಎನ್ನಲು ಗಟ್ಟಿ ನೆಲೆಯ ಕಾರಣಗಳ ಶೋಧಿಸಿ ತೋರಿಸುವ ಕೆಲಸವಾಗಬೇಕು. ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಇಂಗ್ಲಿಷ್ ಎರಡರಲ್ಲೂ ಸಮಾನ ಪಂಡಿತರಾಗುವಂತೆ ಮಾಡುತ್ತ, ಜನರಿಗೆ ಮಾತ್ರ ನಿಮ್ಮ ಮಕ್ಕಳನ್ನು ಮಾತೃಭಾಷಾ ಶಿಕ್ಷಣಕ್ಕೆ ಕಳಿಸಿ ಎಂದು ಬೋಧಿಸುವುದು ಆಷಾಢಭೂತಿತನವಾಗುತ್ತದೆ.

ನಮ್ಮ ದ್ವಂದ್ವವನ್ನು ಜನರಿಗೆ ದಾಟಿಸದಂತೆ; ತಾಯಿ, ತಾಯ್ನುಡಿಯೆಂದು ಭಾವುಕರೂ ಆಗದಂತೆ ಎಚ್ಚರದೊಂದಿಗೆ ಮುಂದಿನ ಹೆಜ್ಜೆಗಳಿಡುವ ಕಾಲ ಇದು. ‘ಸದ್ಯಕ್ಕೆ ಪ್ರೌಢಶಾಲೆವರೆಗೆ ಮಾತೃಭಾಷಾ ಶಿಕ್ಷಣ ಕೇಳುವತ್ತ ನಮ್ಮ ಆಂದೋಲನವನ್ನು ಫೋಕಸ್ ಮಾಡುವುದು ಒಳ್ಳೆಯದು’ ಎಂದ ದೇವನೂರರ ಮಾತನ್ನು ಎಲ್ಲರೂ ಗಮನಿಸಬೇಕು ಎನಿಸುತ್ತಿದೆ..