Friday 19 June 2015

ಯಾರಿಗೂ ಬೇಡದವರು - ರೊಹಿಂಗ್ಯಾ ಮುಸ್ಲಿಮರು







ರಂಜಾನ್ ಉಪವಾಸ ಶುರುವಾಗಿದೆ. ಉಳ್ಳವರು, ಇಲ್ಲದವರು ಎನ್ನದೆ ಎಲ್ಲರೂ ಪುಣ್ಯಸಂಚಯದ ಸಂಭ್ರಮದಲ್ಲಿ ತಂತಮ್ಮದೇ ನೆಲೆಯಲ್ಲಿ ಉಪವಾಸದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ನೀರಮೇಲೆ ತೇಲುತ್ತ ಎತ್ತ ಹೋಗುವುದೆಂದು ತಿಳಿಯದೆ ಎಲುಬು ಹಂದರವಾದ ದೇಹವನ್ನು ಎಳೆದೊಯ್ಯುತ್ತಿರುವ ಸಾವಿರಾರು ನಿರಾಶ್ರಿತ ಮುಸ್ಲಿಮರಿಗೆ ರಂಜಾನಿನ ನೆನಪು ಯಾವ ಭಾವ ಹುಟ್ಟಿಸುತ್ತದೆ!? ಹೌದು, ಈ ಭೂಮಿಯೆಂಬ ೭೦೦ ಕೋಟಿ ಜನ ವಾಸಿಸುತ್ತಿರುವ ಸುವಿಶಾಲ ಬಯಲಲ್ಲಿ ತಾವು ನೆಲೆಯಾಗಲು ಒಂದು ಮೆಟ್ಟು ಜಾಗವೂ ಸಿಗದೆ ಸಮುದ್ರದ ಮೇಲೆ ತೇಲುವ ನಿರಾಶ್ರಿತರಿದ್ದಾರೆ! ಅವರೇ ಬರ್ಮಾದ ರೊಹಿಂಗ್ಯಾ ಮುಸ್ಲಿಮರು. ವಿಶ್ವಸಂಸ್ಥೆಯಿಂದ ಪ್ರಪಂಚದಲ್ಲೆ ಅತಿ ಹೆಚ್ಚು ದಮನಿತ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲ್ಪಟ್ಟ, ಅರ್ಧಶತಮಾನದಿಂದ ಸ್ಥಳಾಂತರಗೊಳ್ಳುತ್ತಲೇ ಇರುವ ಅವರ ಬಿಕ್ಕಟ್ಟು ಎರಡನೆಯ ಸಹಸ್ರಮಾನ ದಾಟಿದ ಬಳಿಕ ತೀರ ಉಲ್ಬಣಿಸಿದೆ. ಅದರಲ್ಲೂ ಕಳೆದ ವರ್ಷ ಸುಮಾರು ೬೫,೦೦೦ ಜನ ಎಲ್ಲಿ ಇಳಿಯುವುದೆಂದೇ ಗೊತ್ತಿಲ್ಲದೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ಬರ್ಮಾದಿಂದ ನೆರೆಯ ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ತೀರಗಳತ್ತ ಹೋಗಿದ್ದರೆ ಈ ವರ್ಷ ಇಷ್ಟು ಹೊತ್ತಿಗಾಗಲೇ ೩೦,೦೦೦ ಜನ ಬರ್ಮಾ ತೊರೆದಿದ್ದಾರೆ.

ಬುದ್ಧನ ಧರ್ಮ ರಾಷ್ಟ್ರೀಯ ಧರ್ಮವಾಗಿರುವ ದೇಶ ಬರ್ಮಾದಲ್ಲಿ ಕೋಮು ದ್ವೇಷವೆ! ಹೌದು. ಬರ್ಮಾದ ಕೋಮುಘರ್ಷಣೆಗೆ ಬರ್ಮಾ ಸ್ವಾತಂತ್ರ ಪಡೆದಷ್ಟೇ ವರ್ಷಗಳ ಇತಿಹಾಸವಿದೆ. ಅದು ಬೌದ್ಧ-ಮುಸ್ಲಿಂ ಘರ್ಷಣೆ ಅಥವಾ ಬರ್ಮೀ-ರೊಹಿಂಗ್ಯಾ ಬಿಕ್ಕಟ್ಟು.

ಬರ್ಮಾದಲ್ಲಿ ೧೦ ಲಕ್ಷ ಮುಸ್ಲಿಮರಿದ್ದು ಅವರಲ್ಲಿ ೮೦% ಜನ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮದ ರಖಿನೆ ಪ್ರಾಂತ್ಯದಲ್ಲಿದ್ದಾರೆ. ತಮ್ಮ ಭಾಷೆಯಲ್ಲಿ ರೂಯಿಂಗಾ ಎಂದರೆ ‘ಬೆಟ್ಟಪ್ರದೇಶದಿಂದ ಬಂದವರು’ ಎಂದು ಸೂಚಿಸುವ ರೊಹಿಂಗ್ಯಾ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಅವರು ಬರ್ಮಾದ ಬೌದ್ಧರಿಗಿಂತ ಜನಾಂಗೀಯವಾಗಿ, ಧಾರ್ಮಿಕವಾಗಿ, ಭಾಷಿಕವಾಗಿ ಭಿನ್ನರು. ಅವರಲ್ಲಿ ಬಹುಪಾಲು ಜನರಿಗೆ ಬರ್ಮಾ ಪೌರತ್ವ ನೀಡಲು ನಿರಾಕರಿಸಿದೆ. ೨೦೧೪ರಲ್ಲಿ ಬರ್ಮಾ ಜನಗಣತಿ ೩೦ ವರ್ಷ ಬಳಿಕ ನಡೆದಾಗ ಬಹುಸಂಖ್ಯಾತ ಬೌದ್ಧರ ಒತ್ತಡದ ಮೇರೆಗೆ ಮುಸ್ಲಿಮರು ತಮ್ಮನ್ನು ಬೆಂಗಾಲಿ ಎಂದು ಗುರುತಿಸಿಕೊಳ್ಳಲು ಮಾತ್ರ ಅವಕಾಶ ನೀಡಿ ರೊಹಿಂಗ್ಯಾ ಅಸ್ಮಿತೆ ನಿರಾಕರಿಸಲಾಯಿತು. ಫೆ. ೨೦೧೫ರಲ್ಲಿ ಅವರಿಗೆ ಕೊಟ್ಟ ತಾತ್ಕಾಲಿಕ ಗುರುತು ಕಾರ್ಡನ್ನು ಹಿಂತೆಗೆದುಕೊಂಡು ಮತದಾನ ಹಕ್ಕನ್ನೂ ನಿರಾಕರಿಸಲಾಯಿತು. ಬರ್ಮಾದ ೧೩೫ ಬುಡಕಟ್ಟು ಸಮುದಾಯಗಳಲ್ಲಿ ರೊಹಿಂಗ್ಯಾರಿಗೆ ಸ್ಥಾನ ಕೊಡಲು ನಿರಾಕರಿಸಲಾಯಿತು. ಬರ್ಮೀ ಮುಸ್ಲಿಂ ಮದುವೆಗಳಲ್ಲಿ ಸೈನ್ಯದ ಪ್ರತಿನಿಧಿಯಿರಬೇಕು; ಮೊದಲೇ ಗುರುತು ಚೀಟಿ ತೋರಿಸಿ ಒಪ್ಪಿಗೆ ಪಡೆಯಬೇಕು; ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ; ಕುಟುಂಬ ಯೋಜನೆ ಅನುಸರಿಸಬೇಕು ಮುಂತಾದ ಕಟ್ಟುಪಾಡುಗಳನ್ನು ಸರ್ಕಾರವೇ ವಿಧಿಸಿ ವ್ಯವಸ್ಥಿತವಾಗಿ ಅವರನ್ನು ಅಂಚಿಗೆ ತಳ್ಳುತ್ತಿದೆ. ಅತಿಕಡಿಮೆ ಕೂಲಿಯ, ಹೀನಾಯ ಕೆಲಸಗಳಷ್ಟೇ ಅವರಿಗುಳಿದು, ಒಲ್ಲೆನೆಂದರೆ ಅದೂ ಇಲ್ಲದ ಹೀನಾಯ ಬಡತನದಲ್ಲಿ ಬದುಕುತ್ತಿದ್ದಾರೆ.

ಅವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು, ೬೦ ವರ್ಷಗಳಿಂದೀಚೆಗೆ ಒಳನುಸುಳಿರುವವರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ; ರೊಹಿಂಗ್ಯಾ ಎನ್ನುವ ಹೆಸರನ್ನು ೫೦ರ ದಶಕದ ನಂತರ ಇತ್ತೀಚೆಗೆ ಬಳಸಲಾಗುತ್ತಿದೆಯೇ ಹೊರತು ಅದು ಅವರ ಸಾಂಸ್ಕೃತಿಕ ಅಸ್ಮಿತೆ ಅಲ್ಲ; ಅವರಿಗೆ ಅಸಲಿಗೆ ಬರ್ಮಾ ನೆಲದ ಮೇಲೆ ಹೃತ್ಪೂರ್ವಕ ಪ್ರೇಮವೇ ಇಲ್ಲ ಎನ್ನುವುದು ಬರ್ಮಾ ಸರ್ಕಾರ ನಾಗರಿಕ ಹಕ್ಕು ನಿರಾಕರಣೆಗೆ ಕೊಡುವ ಕಾರಣ. ಬರ್ಮಾ ಸರ್ಕಾರದ ವ್ಯಾಖ್ಯಾನಗಳು ಬಹುಸಂಖ್ಯಾತರ ಯಾಜಮಾನ್ಯ ನೆಲೆಯವಾದರೂ ಕೆಲ ಸಂಗತಿಗಳು ಸತ್ಯವೇ ಇರಬಹುದು. ಆದರೆ ಅದು ಇಷ್ಟು ಅಮಾನವೀಯವಾಗಿ ತನ್ನ ನೆಲದಲ್ಲಿರುವವರನ್ನು ನಡೆಸಿಕೊಳ್ಳಲು ಕಾರಣವಾಗಬಾರದು.


ಅಶಿನ್ ವಿರತು ಎಂಬ ೪೬ ವರ್ಷದ ಬೌದ್ಧ ಭಿಕ್ಕು ಎರಡು ದಶಕಗಳಿಂದ ಬುದ್ಧನ ಧರ್ಮವನ್ನು ಮೂಲಭೂತವಾದಿ ವ್ಯಾಖ್ಯಾನಗಳಿಗೆ ಸರಿ ಹೊಂದಿಸಿ ‘೯೬೯ ಚಳುವಳಿ’ ಕಟ್ಟಿದ್ದಾರೆ. ಅದು ಮುಸ್ಲಿಮರು ಬೌದ್ಧರಿಗಿಂತ ಸಂಖ್ಯೆಯಲ್ಲಿ ಮಿಗಿಲಾಗುವುದನ್ನು ತಪ್ಪಿಸುವ, ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸುವ ಮೂಲಭೂತವಾದಿ ಧಾರ್ಮಿಕ ಚಳುವಳಿ. ಆತ ಕೋಮುಗಲಭೆ ಹುಟ್ಟುಹಾಕಿದ್ದಕ್ಕಾಗಿ ೭ ವರ್ಷ ಜೈಲುವಾಸ ಅನುಭವಿಸಿ ಬಂದರೂ ಬೌದ್ಧರ ಅಸಹನೆಗೆ, ಅಸಹಿಷ್ಣುತೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ೨೦೧೨ರಲ್ಲಿ ರೊಹಿಂಗ್ಯ ಯುವಕ ಬೌದ್ಧ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಂದ ಬಳಿಕ ಕೋಮುಘರ್ಷಣೆ ಹೆಚ್ಚಾಯಿತು. ನೂರಾರು ರೊಹಿಂಗ್ಯಾ ಮನೆಗಳನ್ನು ಸುಟ್ಟು, ೨೮೦ ಜನರನ್ನು ಕೊಲ್ಲಲಾಯಿತು. ಆ ವರ್ಷ ೧,೨೦,೦೦ ಜನ ಪ್ರಾಣಭಯದಿಂದ ಬರ್ಮಾ ತೊರೆದಿದ್ದಾರೆ. ಬರ್ಮಾದಲ್ಲಿಯೇ ತಮ್ಮ ಊರು, ಮನೆಮಠ ತೊರೆದು ಒಂದೂವರೆ ಲಕ್ಷ ರೊಹಿಂಗ್ಯಾ ಜನ ನಿರಾಶ್ರಿತರ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಜೀವಕಾರುಣ್ಯ ಬೋಧಿಸಿದವನ ನೆಲದಲ್ಲಿ ಸಿಗದ ಕರುಣೆಯನ್ನು ಹುಡುಕುತ್ತ ಎಲ್ಲೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪಾಯದ ಭಯವಿದ್ದರೂ ನಿರಾಶ್ರಿತರಾಗಿ ವಿದೇಶಗಳಿಗೆ ವಲಸೆ ಹೋಗತೊಡಗಿದ್ದಾರೆ.

ಪ್ರಸ್ತುತ ೮೦೦೦ಕ್ಕೂ ಮಿಗಿಲು ರೊಹಿಂಗ್ಯಾ ಮುಸ್ಲಿಮರು ಸಣ್ಣಪುಟ್ಟ ದೊಡ್ಡ ದೋಣಿಗಳಲ್ಲಿ ಬರ್ಮಾ ತೀರದಿಂದ ಹೊರಗೆ ಸಮುದ್ರದಲ್ಲಿ ತೇಲುತ್ತಿದ್ದಾರೆ. ಕುಡಿಯುವ ನೀರೂ ಇಲ್ಲದೆ ಉಚ್ಚೆ ಕುಡಿಯುತ್ತಿದ್ದಾರೆ ಎಂದು ವಿದೇಶಿ ವರದಿಗಾರನೊಬ್ಬ ಅವರನ್ನು ಭೇಟಿಯಾಗಿ ಬಂದು ಬರೆದ. ಅಷ್ಟೇ ಅಲ್ಲ, ಬೋಟ್ ಜನರ ಅನೇಕ ಫೋಟೋ, ವೀಡಿಯೋಗಳು ಹರಿದಾಡುತ್ತ ಅದರಲ್ಲಿರುವವರ ಚಹರೆಗಳೇ ಅಪೌಷ್ಟಿಕತೆ, ಬದುಕಿನ ಪರಿಸ್ಥಿತಿ, ಭವಿಷ್ಯ ಕುರಿತ ಆತಂಕ ಎಲ್ಲವನ್ನು ಹೇಳಿಬಿಟ್ಟವು.

ಕರೆಯದೆ ಬಂದ ಈ ನೆಂಟರ ಮೇಲೆ ಯಾರಿಗೂ ಪ್ರೀತಿಯಿಲ್ಲ, ಇದ್ದರೆ ಅಷ್ಟಿಷ್ಟು ಕರುಣೆ ಮಾತ್ರ. ಫಿಲಿಪೀನ್ಸ್ ಒಂದಷ್ಟು ನಿರಾಶ್ರಿತರಿಗೆ ತನ್ನಲ್ಲಿ ಆಶ್ರಯ ಕೊಟ್ಟಿದೆ. ಬಾಂಗ್ಲಾದೇಶವು ನಿರಾಶ್ರಿತರನ್ನು ‘ಮಾನಸಿಕ ಅಸ್ವಾಸ್ಥ್ಯ’ರೆಂದು ಕರೆದು ಇನ್ನು ಒಳಬಿಟ್ಟುಕೊಳ್ಳಲು ಜಾಗವಿಲ್ಲವೆಂದು ಖಡಾಖಂಡಿತ ನಿರಾಕರಿಸಿದೆ. ಭಾರತದ ಹಲವು ನಗರಗಳಲ್ಲಿ ಅವರು ಕಂಡುಬರುತ್ತಾರೆ. ತೀರ ಇತ್ತೀಚೆಗೆ ಅಂತಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆಯ ಮಧ್ಯಪ್ರವೇಶದ ನಂತರ ಥೈಲ್ಯಾಂಡ್ ಹಾಗೂ ಮಲೇಷ್ಯಾ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿವೆ. ಎಲ್ಲರಿಗೂ ನಿರಾಶ್ರಿತರ ಪ್ರವಾಹ ಹರಿದು ಬಂದರೆ ಹೇಗೆ ನಿಯಂತ್ರಿಸುವುದು ಎಂಬ ಆಂತರಿಕ ಭದ್ರತೆಯ ಆತಂಕ.

ಮಲೇಷ್ಯಾದಲ್ಲಿ ಈಗಾಗಲೇ ೧,೪೦,೦೦೦ ನಿರಾಶ್ರಿತರಿದ್ದಾರೆ. ಮೇ ೨೦೧೫ರಲ್ಲಿ ಸಮುದ್ರದಲ್ಲಿ ಸರ್ಚ್ ಆಪರೇಷನ್ ನಡೆಸಿ ಸಣ್ಣಪುಟ್ಟ ದೋಣಿಗಳಲ್ಲಿ ತೇಲುತ್ತಿದ್ದವರನ್ನು ರಕ್ಷಿಸಿ ಕರೆತರಲಾಯಿತು. ಎಲ್ಲ ತೆರನ ಮಾನವ ಸಾಗಾಣಿಕೆಗೆ ಮೊದಲೇ ಕುಖ್ಯಾತವಾದ ಥೈಲ್ಯಾಂಡ್ ಈ ಬಿಕ್ಕಟ್ಟಿನಿಂದ ರೊಹಿಂಗ್ಯಾಗಳಿಗೆ ಪ್ರವೇಶ, ನಿರ್ಗಮನ, ಮಾರ್ಗ ಎಲ್ಲವು ಆಗಿ ಮಾರ್ಪಟ್ಟಿದೆ. ಬರ್ಮಾ ಸೇರಿದಂತೆ ಇವೆಲ್ಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಸದಸ್ಯರೇ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದೆ.

ಜೀವಕಾರುಣ್ಯ ಬೋಧಿಸಿದ ಬುದ್ಧನ ಧಮ್ಮದ ಭಿಕ್ಕುಗಳೇ ಏಕೆ ರೊಹಿಂಗ್ಯಾರನ್ನು ಕತ್ತು ಹಿಡಿದು ಹೊರದಬ್ಬುವಂತಾಯಿತು? ಬರ್ಮಾ ಸಮಾಜದಲ್ಲಿ ಮುಸ್ಲಿಮರ ಮೇಲೆ ಇಷ್ಟು ಅನುಮಾನ, ಅಪನಂಬಿಕೆ ಬೆಳೆದದ್ದು ಹೇಗೆ? ವಿಶ್ವಾದ್ಯಂತ ಶಾಂತಿದೂತೆ ಎಂದೇ ಬಿಂಬಿಸಲ್ಪಟ್ಟ ಸೂಕಿ ಮಧ್ಯ ಪ್ರವೇಶಿಸದೆ ಏಕೆ ಸುಮ್ಮನಿದ್ದಾರೆ? ಸಾಮಾನ್ಯ ಮುಸ್ಲಿಮರಿಗೆ ಈ ಕಷ್ಟ ತಂದೊಡ್ಡಿದ್ದು ಯಾರು?

ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ರೊಹಿಂಗ್ಯಾ ಬಿಕ್ಕಟ್ಟಿನ ಇನ್ನೊಂದು ಮಗ್ಗುಲು ತಿಳಿಯುವುದೂ ಒಳ್ಳೆಯದೆನಿಸುತ್ತದೆ.

ಬರ್ಮಾದ ಕಾಶ್ಮೀರ ರಖಿನೆ ಪ್ರಾಂತ್ಯ

ಇದು ಒಂದು ಸಮುದಾಯದ ಭಾವನಾತ್ಮಕ/ಧಾರ್ಮಿಕ/ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಾಗಿರದೇ ಸಶಸ್ತ್ರ ಸಂಘರ್ಷದ ಹಿನ್ನೆಲೆಯನ್ನೂ ಹೊಂದಿದೆ.

೧೫ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ ೨೪ ವರ್ಷ ಬಂಗಾಳದಲ್ಲಿ ಕಳೆದು ನಂತರ ರಾಜ್ಯ ಪಡೆದ. ಆಗ ಅವನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ಬಂದರೆನ್ನಲಾಗುತ್ತದೆ. ೧೯, ೨೦ನೇ ಶತಮಾನದ ವಸಾಹತುಶಾಹಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಹೆಚ್ಚಿನವರು ವಲಸೆ ಬಂದರು. ಎರಡನೆಯ ಮಹಾಯುದ್ಧದ ವೇಳೆ ತಮ್ಮನ್ನು ಬೆಂಬಲಿಸಿದರೆ ಪ್ರತ್ಯೇಕ ರಾಜ್ಯ ರಚಿಸಿಕೊಡುವುದಾಗಿ ಹೇಳಿದ ಬ್ರಿಟಿಷರ ಮಾತು ನಂಬಿ ೧೯೪೨ರ ಸುಮಾರಿನಿಂದ ರೊಹಿಂಗ್ಯಾ ಮುಸ್ಲಿಮರ ಸಂಘಟನೆ ಮುಂಚೂಣಿಗೆ ಬಂದು ಶಸ್ತ್ರಸಜ್ಜಿತವಾಯಿತು. ಆದರೆ ಯುದ್ಧಾನಂತರ ೧೯೪೬ರಲ್ಲಿ ಬರ್ಮಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿದ್ದರೂ ತಮ್ಮ ಕನಸು ಕೈಗೂಡುವ ಲಕ್ಷಣಗಳಿಲ್ಲದೆ ಹೋದಾಗ ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನ)ದ ಗಡಿಭಾಗ ರಖಿನೆ ಪ್ರಾಂತ್ಯದ ಮುಸ್ಲಿಮರು ತಾವಿರುವ ಪ್ರದೇಶವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಹೋರಾಟ ಶುರುಮಾಡಿದರು. ಆ ಕುರಿತು ಮೊಹಮದ್ ಅಲಿ ಜಿನ್ನಾ ಬಳಿಯೂ ಮಾತನಾಡಿದರು. ಅಂದಿನ ಬರ್ಮಾ ಸರ್ಕಾರ ಆ ಪ್ರಾಂತ್ಯವನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಕೂಡಲೇ ಮುಜಾಹಿದೀನ್‌ಗಳು ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ೧೯೬೧ರವರೆಗೆ ಮುಜಾಹಿದೀನ್ ಬಂಡುಕೋರರು ಬಾಂಗ್ಲಾ ಜೊತೆಗೆ ವಿಲೀನವೇ ತಮ್ಮ ಗುರಿ ಎನ್ನುತ್ತಿದ್ದರು.

ಗಡಿಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಕಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದ ಅಕ್ರಮ ವಲಸಿಗರ ಪ್ರವೇಶವನ್ನು ಪ್ರೋತ್ಸಾಹಿಸಿದರು. ಬೌದ್ಧ ಆಸ್ತಿ, ವ್ಯಕ್ತಿಗಳನ್ನು ದಾಳಿಯ ಗುರಿಯನ್ನಾಗಿಸಿಕೊಂಡರು. ಇದರ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ ಮಿಲಿಟರಿಯು ಬೃಹತ್ ಕಾರ್ಯಾಚರಣೆ ನಡೆಸಿ ಬಂಡುಕೋರರನ್ನು ಸದೆಬಡಿಯಿತು. ೧೯೫೪ರಲ್ಲಿ ಕ್ಷೀಣಬಲರಾದ ಬಹುಪಾಲು ಮುಜಾಹಿದೀನ್ ಗುಂಪುಗಳು ಶಸ್ತ್ರ ತ್ಯಜಿಸಿ ಶಾಂತಿ ಮಾತುಕತೆಗೆ ಬಂದರೆ; ಉಳಿದ ಸಣ್ಣಪುಟ್ಟ ಬಂಡುಕೋರ ಗುಂಪುಗಳು ಗಡಿಯಲ್ಲಿ ಅಕ್ಕಿ/ಶಸ್ತ್ರಾಸ್ತ್ರ/ಮಾದಕವಸ್ತು/ಮಾದಕ ಕಳ್ಳಸಾಗಣೆಯನ್ನೆ ನೆಚ್ಚಿದರು. ವಿಪರ್ಯಾಸವೆಂದರೆ ೧೯೬೧ರವರೆಗೆ ಬರ್ಮಾದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿದ್ದು ಅದರಲ್ಲಿ ರೊಹಿಂಗ್ಯಾ ಮಂತ್ರಿಗಳು, ಪ್ರತಿನಿಧಿಗಳಿದ್ದರು!


೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು. ಯುದ್ಧದ ವೇಳೆ ಗಡಿಯಲ್ಲಿ ಅಳಿದುಳಿದ ಶಸ್ತ್ರಾಸ್ತ್ರ ಸಂಗ್ರಹಿಸಿದ ಬಂಡುಕೋರರು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಕಟ್ಟಿದರು. ಅವರ ಹೊಸ ಗುಂಪುಗಳು ಕಾಣಿಸಿಕೊಂಡವು. ನಾಯಕರಾಗಿ ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಮುಂಚೂಣಿಗೆ ಬಂದರು. ೭೮ರ ವೇಳೆಗೆ ಬರ್ಮಾ ಮಿಲಿಟರಿಯು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬರ್ಮಾದ ಮುಸ್ಲಿಂ ಜನಸಮುದಾಯ ಬರ್ಮಾ ಬಾಂಗ್ಲಾ ಗಡಿಯಲ್ಲಿ ಜಮೆಯಾಗಿ ಹತ್ತಾರು ಸಾವಿರ ರೊಹಿಂಗ್ಯಾಗಳು ಬಾಂಗ್ಲಾಗೆ ವಲಸೆ ಹೋದರು. ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಹೆಚ್ಚತೊಡಗಿದವು.

೧೯೮೦ರ ನಂತರ ಭಾರತ, ಬಾಂಗ್ಲಾ, ಪಾಕಿಸ್ತಾನ, ಆಫ್ಘನಿಸ್ತಾನ, ಮಲೇಷ್ಯಾದ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆತು ರೊಹಿಂಗ್ಯಾ ಸಾಲಿಡಾರಿಟಿ ಅಸೋಸಿಯೇಷನ್ ಬಲವಾಯಿತು. ಪತ್ಯೇಕ ದೇಶಕ್ಕಾಗಿ ಬೇಡಿಕೆ ಎದ್ದಿತು. ತಾಲಿಬಾನ್, ಅಲ್ ಖೈದಾ ಸೇರಿದಂತೆ ಹಲವು ಸಿರಿವಂತ ಮುಸ್ಲಿಂ ದೇಶ ಮತ್ತು ಸಂಘಟನೆಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಬರ್ಮಾದ ಬೌದ್ಧರ ಹಾಗೂ ಮಿಲಿಟರಿಯ ಕೆಂಗಣ್ಣಿಗೆ ಪದೇಪದೇ ಗುರಿಯಾದ ರೊಹಿಂಗ್ಯರು ಮತ್ತಷ್ಟು ಬೇರ್ಪಡುತ್ತ, ಅಂಚಿಗೆ ತಳ್ಳಲ್ಪಡುತ್ತ ಹೋದರು.



ಅದೇವೇಳೆ ಬರ್ಮಾ ಸೈನ್ಯವು ಗಡಿದಾಟಿ ಬಂದು ಬಾಂಗ್ಲಾದೇಶದ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಿತು. ರೋಹಿಂಗ್ಯಾ ಪೇಟ್ರಿಯಾಟಿಕ್ ಫ್ರಂಟ್, ರೋಹಿಂಗ್ಯಾ ನ್ಯಾಷನಲ್ ಕೌನ್ಸಿಲ್, ರೊಹಿಂಗ್ಯಾ ನ್ಯಾಷನಲ್ ಆರ್ಮಿ, ರೊಹಿಂಗ್ಯಾ ಸಾಲಿಡಾರಿಟಿ ಆರ್ಗನೈಸೇಷನ್ ಇನ್ನಿತರ ಲೆಕ್ಕವಿಲ್ಲದಷ್ಟು ಸಂಘಟನೆಗಳು ಹುಟ್ಟಿಕೊಂಡವು. ಕೋಮು ಸಂಘರ್ಷ, ಮಿಲಿಟರಿ ಜೊತೆ ಸಂಘರ್ಷ ಮುಂದುವರೆದು ೨೦೧೨ರಲ್ಲಿ ದೇಶಭ್ರಷ್ಟ ಬಂಡುಕೋರ ಗುಂಪುಗಳು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ರಹಮಾನ್ ಲ್ಯಾಂಡ್’ ಎಂದು ತಮ್ಮ ಪ್ರದೇಶವನ್ನು ಘೋಷಿಸಿಕೊಂಡಿವೆ. ಅದರ ಧ್ವಜವನ್ನು ಹಾರಿಸಿವೆ.


ಆದರೆ ರೊಹಿಂಗ್ಯಾ ಬಂಡುಕೋರರ ಸಶಸ್ತ್ರ ಸಂಘರ್ಷ ಬೌದ್ಧರೊಂದಿಗಿನ ಸೌಹಾರ್ದ ಸಂಬಂಧ ಹದಗೆಡಲು ಕಾರಣವಾಗಿ ಅವರು ದೇಶ ತೊರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಒಟ್ಟಾರೆ ಸಾಮಾನ್ಯ ರೊಹಿಂಗ್ಯಾ ಮುಸ್ಲಿಮರ ಪಾಲಿಗೆ ಬದುಕು ದುರ್ಭರವಾಗುವಂತೆ ಮಾಡಿರುವುದರಲ್ಲಿ ಬರ್ಮಾ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೇ ಸಶಸ್ತ್ರ ಬಂಡಾಯದ ಕೊಡುಗೆಯೂ ಇದೆ.



ಅನ್ನನೀರುಸೂರಿಲ್ಲದೆ ಸಾಗರದ ನಡುಮಧ್ಯ ಸಿಲುಕಿಕೊಂಡವರಿಗೆ; ತಾವು ಹುಟ್ಟಿ ಬೆಳೆದ ನೆಲದಲ್ಲೇ ಮಾನವ ಹಕ್ಕುಗಳಿಂದ ವಂಚಿತರಾದವರಿಗೆ ಕೂಡಲೇ ನ್ಯಾಯ ಸಿಗಬೇಕು. ಬೆಳೆಯುತ್ತಿರುವ ಸಿರಿಯಾದ ಐಎಸ್ ಉಗ್ರ ಸಂಘಟನೆಯ ಹಿನ್ನೆಲೆಯಲ್ಲಿ, ಬರ್ಮಾದ ಆಚೀಚಿನ ದೇಶಗಳೂ ಕೋಮುಆಧರಿತ ಸರ್ಕಾರಗಳನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಅಂತಾರಾಷ್ಟ್ರೀಯ ಸಮುದಾಯ ಚುರುಕಾಗಬೇಕಾದ ಅವಶ್ಯಕತೆಯಿದೆ.

ಆದರೆ ಬರ್ಮಾದ ರಖಿನೆ ಪ್ರಾಂತ್ಯ ಭಾರತದ ಕಾಶ್ಮೀರವಿದ್ದಂತೆ. ಇದಕ್ಕೆ ಉತ್ತರ ಅಷ್ಟು ಸುಲಭದಲ್ಲಿ ಸಿಗುವಂತಿಲ್ಲ. ಜನಸಾಮಾನ್ಯರ ಬದುಕಿಗಿಂತ ಧರ್ಮದ, ರಾಷ್ಟ್ರೀಯ ಅಸ್ಮಿತೆಯ, ಪಕ್ಷ ರಾಜಕಾರಣದ ಹಿತಾಸಕ್ತಿಗಳೇ ಮೇಲುಗೈ ಪಡೆದಿರುವುದು ಬಿಕ್ಕಟ್ಟು ಹುಟ್ಟಲು ಹಾಗೂ ಉಲ್ಬಣಿಸಲು ಕಾರಣವಾಗಿವೆ. ಅದರ ಪರಿಹಾರವನ್ನು ಬದುಕು ಕಲಿಸಿದ ಅನುಭವದಿಂದ ಜನಸಾಮಾನ್ಯರೇ ಪಡೆದುಕೊಳ್ಳಬೇಕು. ಅದಕ್ಕಿಂತ ಮುನ್ನ ಇನ್ನೆಷ್ಟು ಅಮಾಯಕ ಜನಸಾಮಾನ್ಯರು ಧರ್ಮಾಂಧರು ನಡೆಸುವ ಅವಿವೇಕದ ಧರ್ಮಯುದ್ಧಗಳಿಗೆ ಬಲಿಯಾಗಬೇಕು?!

ದೇವರೇ ಹೇಳಬೇಕು..









Friday 12 June 2015

ಕನಕ ಸಾಹಿತ್ಯ - ಮಹಿಳಾ ಪಾತ್ರಗಳು: ಹೆಣ್ತನದ ಕಣ್ಣಲ್ಲಿ..





೧೬ನೇ ಶತಮಾನದ ವೈಷ್ಣವ ಪಂಥದ ಭಕ್ತ ಕವಿ ಕನಕರ ವ್ಯಕ್ತಿತ್ವ ಮತ್ತು ಸಾಹಿತ್ಯ ಇತ್ತೀಚೆಗೆ ಬಹುಚರ್ಚಿತವಾಗುತ್ತಿದೆ. ಅಂತರಂಗ-ಬಹಿರಂಗವೆನ್ನದೆ ಮನುಷ್ಯ ಜೀವಿಯನ್ನು ಬಾಧೆಗೊಳಪಡಿಸುವ ಸಕಲ ವಿಷಯಗಳನ್ನೂ ಬಹುಸೂಕ್ಷ್ಮವಾಗಿ ವಿಮರ್ಶಿಸಿದ ಕನಕರು ವ್ಯವಸ್ಥೆಯ ತಾರತಮ್ಯ, ಜಾತಿವ್ಯವಸ್ಥೆಯ ಸಿಂಧುತ್ವವನ್ನು ನೇರವಾಗಿ, ಪರೋಕ್ಷವಾಗಿ ಇಷ್ಟದೈವದೆದುರು ದೂರಿದರು. ೧೧-೧೨ನೇ ಶತಮಾನದ ವಚನಕಾರರು ತಮ್ಮ ವಚನಗಳಲ್ಲಿ ತಾರತಮ್ಯವನ್ನು ನೇರವಾಗಿ ಹೇಳಿದ್ದರೆ; ಮೂರ‍್ನಾಲ್ಕು ಶತಮಾನ ನಂತರ ಬಂದ ಕನಕರು ಹೇಳಲೇಬೇಕಾದ ಸತ್ಯಗಳನ್ನು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಕೀರ್ತನೆಗಳಾಗಿ ಹಾಡಿದರು. ಜನಪದದ ಲಯ-ಮಟ್ಟು-ಪದ-ಪರಿಭಾಷೆಗಳನ್ನು ತಮ್ಮ ಕೀರ್ತನೆ ಮತ್ತು ಕಾವ್ಯಗಳಲ್ಲಿ ಯಶಸ್ವಿಯಾಗಿ ಅಡಕಗೊಳಿಸಿದ ಕನಕ ಸಾಹಿತ್ಯ ಒಂದೇಟಿಗೆ ಆಪ್ತವೂ, ಅರ್ಥಪೂರ್ಣವೂ ಎನಿಸಿಬಿಡುತ್ತದೆ. ಎಂದೇ ಕವಿಯಾಗಿ, ಕೀರ್ತನಕಾರರಾಗಿ ಅವರ ರಚನೆಗಳು ಇಂದಿಗೂ ಜನಪ್ರಿಯವಾಗಿವೆ.

ಉಡುಪಿಯ ಕೃಷ್ಣನ ಮೂರ್ತಿಯನ್ನೇ ತಿರುಗಿಸಿದ ಭಕ್ತಿ ಮಹಿಮೆಯ ಜನಜನಿತ ಕತೆಯನ್ನು ಇಂದು ಹೊಸ ಬೆಳಕಿನಲ್ಲಿ ನೋಡಬೇಕಾದ ರಾಜಕೀಯ ಅನಿವಾರ್ಯತೆಯಿರುವ ಹೊತ್ತಿನಲ್ಲಿ ಕನಕರ ಕಾಲ, ಆ ಕಾಲದ ಸಾಮಾಜಿಕ ವಾತಾವರಣ, ಅವರ ಜೀವನಚರಿತ್ರೆ, ಕೃತಿಗಳನ್ನೆಲ್ಲ ಮತ್ತೆ ಅವಲೋಕಿಸಿ ಪುನರ್‌ರೂಪಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಅವರ ಮಾನವಪರತೆ, ಮಹಿಳಾಪರತೆ ವಿಶ್ಲೇಷಣೆಗೊಳಗಾಗುತ್ತಿವೆ.

ಕನಕರಷ್ಟೇ ಅಲ್ಲ, ಇವತ್ತು ನಮ್ಮೆಲ್ಲ ಪುರಾತನರು, ಅವರ ಕಲೆ-ಸಾಹಿತ್ಯ-ತತ್ವಗಳು ಜೀವಪರವಾಗಿವೆ ಎನ್ನಲು ಎರಡು ಅಗ್ನಿಪರೀಕ್ಷೆಗಳನ್ನು ಹಾದು ಬರಬೇಕಾಗಿದೆ:


  • ಅವರು/ಅವರ ಸಂವೇದನೆಗಳು ಶೋಷಿತಪರ, ಅಧಿಕಾರಹೀನರ ಪರವಾಗಿವೆಯೇ? 
  • ಅವು ಲಿಂಗ ಅಸಮಾನತೆ, ತಾರತಮ್ಯ ಗುರುತಿಸುವ ಲಿಂಗಸೂಕ್ಷ್ಮತೆಯನ್ನು ಹೊಂದಿವೆಯೇ? 


ಕನಕ ಸಾಹಿತ್ಯವನ್ನೂ ಈ ಎರಡು ನೆಲೆಗಳಿಂದ ನೋಡುವ ಅವಶ್ಯಕತೆಯಿದೆ.

ನ್ಯಾಯಸೂಕ್ಷ್ಮದ, ಸಾಮಾಜಿಕ ನ್ಯಾಯದ ಪ್ರಶ್ನೆಗಳನೆತ್ತುವ ಮೂಲಕ ಮೊದಲ ಅಗ್ನಿಪರೀಕ್ಷೆಯನ್ನು ಕನಕರು ಹಾದು ಬಂದಿದ್ದಾರೆ. ವೈಷ್ಣವ ಪಂಥ ಮತ್ತು ದಾಸಕೂಟ/ವ್ಯಾಸಕೂಟದ ಪ್ರಭಾವದಿಂದ ಅವರ ಚಿಂತನೆಗಳಿಗೆ ಕೊಂಚ ವೈದಿಕ ಮಿತಿ ಆವರಿಸಿಕೊಂಡಿದ್ದರೂ, ಜಾತಿ ಅಸಮಾನತೆಯ ವಿರುದ್ಧ ಉಳಿದವರಿಗಿಂತ ಭಿನ್ನವಾಗಿ, ಸ್ಫುಟವಾಗಿ ಆಡಿದ್ದಾರೆ. ಸಮಾಜದ ತಾರತಮ್ಯಗಳನ್ನು ಸೃಜನಶೀಲವಾಗಿ ರಾಮಧಾನ್ಯಚರಿತೆಯಲ್ಲಿ ಮಂಡಿಸಿದ್ದಾರೆ. ವಂಚಿತನಿಗೆ ಬೇಕಿರುವುದು ಕಾಲ ಮತ್ತು ಅವಕಾಶವೇ ಹೊರತು ಪಕ್ಷಪಾತವಲ್ಲ ಎಂದು ರಾಗಿಯ ಬಾಯಲ್ಲೇ ನುಡಿಸಿದ್ದಾರೆ.

ಆದರೆ ಇದೇ ಮಾನವಪರತೆ ಲಿಂಗಸೂಕ್ಷ್ಮ ವಿಷಯಗಳ ಬಗೆಗೆ ಕಾಣುವುದಿಲ್ಲ. ಕನಕರಲ್ಲಷ್ಟೇ ಅಲ್ಲ, ಸಾಮಾಜಿಕ ತಾರತಮ್ಯ ವಿರೋಧಿಸಿ, ಮೇಲ್ಜಾತಿ ಪಾರಮ್ಯವನ್ನು ಪ್ರಶ್ನಿಸಿ, ಜಾತಿನಾಶ ಪ್ರತಿಪಾದಿಸುವ ಬಹುತೇಕ ಪುರಾತನ ಹಾಗೂ ಸಮಕಾಲೀನ ಚೇತನಗಳು ಲಿಂಗತಾರತಮ್ಯ ವಿಷಯಕ್ಕೆ ಬಂದರೆ ಅದರ ವಿರುದ್ಧ ದನಿಯೆತ್ತುವುದಿರಲಿ, ಗ್ರಹಿಸಿರುವುದಕ್ಕೆ ಪುರಾವೆ ಸಿಗುವುದೂ ಕಷ್ಟವಾಗಿದೆ. ಏಕೆಂದರೆ ಪುರುಷಾಧಿಕಾರವನ್ನೆಲ್ಲ ಅನುಭವಿಸುವ ಗಂಡಿಗೆ ಲಿಂಗತಾರತಮ್ಯ ಅನುಭವಕ್ಕೆ ಬರುವುದು ಸುಲಭವಲ್ಲ. ಆ ದೃಷ್ಟಿಯಿಂದ ಚಳುವಳಿಯೊಂದನ್ನು ರೂಪಿಸುತ್ತಲೇ ಅದರಲ್ಲಿ ಎಲ್ಲ ಸಮುದಾಯದ ಮಹಿಳೆಯರನ್ನೊಳಗೊಂಡ ಬಸವಣ್ಣ, ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಂತರ ಬುದ್ಧ, ಅಲ್ಲಮ, ರಾಮಕೃಷ್ಣ ಪರಮಹಂಸ ಇನ್ನಿತರರು ಕಣ್ಣೆದುರು ಸುಳಿಯುತ್ತಾರೆ.

ಇವರ ನಡುವೆ ಕನಕರು ಎಲ್ಲಿದ್ದಾರೆ? ನಮ್ಮೆದುರಿರುವ ಕನಕರ ಎರಡು ರೂಪಗಳಾದ ಭಕ್ತ ಕನಕ ಮತ್ತು ಕವಿ ಕನಕರು ಮಹಿಳಾ ವ್ಯಕ್ತಿತ್ವ ಪ್ರತಿಪಾದನೆಯನ್ನು ಹೇಗೆ ಮಾಡಿದ್ದಾರೆ? ಎಂದು ಪರಿಶೀಲಿಸುವುದು ಈ ಬರಹದ ಉದ್ದೇಶವಾಗಿದೆ.

೧೬ನೇ ಶತಮಾನದಲ್ಲಿ ಬದುಕಿದ ಕನಕರು ೨೧ನೇ ಶತಮಾನದ ಸ್ತ್ರೀಪರ ಧೋರಣೆಗಳನ್ನು ಹೊಂದಿರಬೇಕೆಂದು ಬಯಸುವುದು ಸರಿಯಲ್ಲ. ಅಥವಾ ಇವತ್ತಿನ ಸ್ತ್ರೀಕೇಂದ್ರಿತ ದೃಷ್ಟಿಕೋನದಿಂದ ಅವರನ್ನು, ಅವರ ಸಾಹಿತ್ಯವನ್ನು ಅಳೆಯುವುದೂ ಸರಿಯಲ್ಲ. ಆದರೆ ೨೧ನೇ ಶತಮಾನದಲ್ಲಿದ್ದರೂ ಹೆಜ್ಜೆಹೆಜ್ಜೆಗೂ ಲಿಂಗತಾರತಮ್ಯ ಅನುಭವಿಸುವಾಗ ಅದನ್ನು ಗುರುತಿಸುವ, ಮೂಲ ಎಲ್ಲಿದೆಯೆಂದು ಶೋಧಿಸುವ ನಾವು ಕನಕರನ್ನು ಪುರಾತನರೆಂಬ ಭಕ್ತಿಭಾವದಲ್ಲಷ್ಟೇ ನೋಡಬಾರದು. ಅಂದಿಗೆ ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಅಪರೂಪದ ತತ್ವ ಬೋಧಿಸಿದ ಕನಕರು ಹೆಣ್ಣನ್ನು ಹೇಗೆ ಪರಿಭಾವಿಸಿದ್ದರು ಎಂದು ಚಿಕಿತ್ಸಕ ದೃಷ್ಟಿಯಿಂದಲೇ ನೋಡಬೇಕು.

ಇದು ಸ್ತ್ರೀವಾದಿ ದೃಷ್ಟಿಕೋನ ಎಂದು ಒಂದು ‘ವಾದ’ಕ್ಕೆ ಸೀಮಿತಗೊಳ್ಳದಿರಲಿ. ಇದು ಹೆಣ್ತನದ ದೃಷ್ಟಿಕೋನ, ಜೀವಪರ ದೃಷ್ಟಿಕೋನ. ಹೆಣ್ತನ ಎನ್ನುವುದು ಜೈವಿಕ ಸತ್ಯವಷ್ಟೇ ಅಲ್ಲ, ತಿಳಿವಿನ ಸತ್ಯವೂ ಹೌದು. ಹೆಣ್ತನ ಎಂದರೆ ಪುರುಷ ದ್ವೇಷವಲ್ಲ. ಪುರುಷ ಪರಮಾಧಿಕಾರದ ಬದಲು ಮಹಿಳಾ ಪರಮಾಧಿಕಾರ ಸ್ಥಾಪಿಸಬಯಸುವ ಮನಸ್ಥಿತಿಯೂ ಅಲ್ಲ. ಹೆಣ್ತನವು ಗಂಡನ್ನು ಸದಾ ಬಯಸುತ್ತದೆ: ಗಂಡು ಇರುತ್ತಾನೆ, ಇರಬೇಕು ಜೊತೆಯಾಗಿ - ಸಖನಾಗಿ, ಮಗನಾಗಿ, ತಂದೆಯಾಗಿ, ಸಮನಾಗಿ; ಯಜಮಾನನಾಗಿ ಅಲ್ಲ. ಅಲ್ಲಿ ಗಂಡೆನ್ನುವುದು ಹೆಮ್ಮೆಯ ವಿಷಯವಲ್ಲ. ಹೆಣ್ಣೆನ್ನುವುದು ಅವಮಾನದ ವಿಷಯವೂ ಅಲ್ಲ.

***

ಜನಪದ ಸಂವೇದನೆಯಿರಲಿ, ವೇದಕಾಲದ ಮಾದರಿಯಿರಲಿ, ಇವತ್ತಿನ ಮಾನವ ಹಕ್ಕು ಪ್ರತಿಪಾದನೆಯ ಸಮಾಜವಿರಲಿ - ಹೆಣ್ಣನ್ನು, ಹೆಣ್ಣು ವ್ಯಕ್ತಿತ್ವವನ್ನು ಗ್ರಹಿಸುವ ಎರಡು ಮುಖ್ಯ ಮಾದರಿಯನ್ನು ಡಿ. ಆರ್. ನಾಗರಾಜ್ ಸೇರಿದಂತೆ ಬಹುಪಾಲು ವಿಮರ್ಶಕರು ಗುರುತಿಸಿದ್ದಾರೆ.

ಮೊದಲನೆಯದು ವೇದಕಾಲದ ಗೃಹದೇವತೆಯ ಮಾದರಿ ಅಥವಾ ಜನಪದರ ಗರತಿಯ ಮಾದರಿ ಅಥವಾ ಆಧುನಿಕ ಸಮಾಜದ ಫೀಲ್‌ಗುಡ್ ಹೌಸ್‌ವೈಫ್ ಮಾದರಿ. ಈ ಮಾದರಿಯ ಹೆಣ್ಣು ತನಗೆ ದತ್ತವಾಗಿರುವ ಪಾತ್ರವನ್ನು ಸಂಪೂರ್ಣ ಒಪ್ಪಿ ನಡೆಯುತ್ತಾಳೆ. ತನ್ನ ಪಾತ್ರವನ್ನು ತನ್ಮಯಳಾಗಿ ನಿಭಾಯಿಸುತ್ತಾಳೆ. ಮಗಳು, ತಂಗಿ, ಅಮ್ಮ, ಸತಿ, ಸಖಿ, ಯಜಮಾನಿ, ದೇವದಾಸಿ - ಹೀಗೆ ಯಾವ ಪಾತ್ರವೇ ದೊರೆಯಲಿ, ಎಲ್ಲ ಕಡೆ ಸಾಂಪ್ರದಾಯಿಕ ಚಹರೆಗಳನ್ನು ಪ್ರದರ್ಶಿಸಿ, ಪ್ರತಿಪಾದಿಸಿ ಹಾಗೇ ಬದುಕುತ್ತಾಳೆ.

ಎರಡನೆಯದು ವೇದ ಕಾಲದ ಗಾರ್ಗಿ ಮಾದರಿ, ಜನಪದರ ಗಯ್ಯಾಳಿ ಮಾದರಿ ಅಥವಾ ಇವತ್ತಿನ ಹಕ್ಕುಪ್ರಜ್ಞೆ ಜಾಗೃತಗೊಂಡ ಸ್ತ್ರೀವಾದಿ ಮಾದರಿ. ಅದು ಪ್ರಖರ ವೈಚಾರಿಕ ಮಾದರಿ. ಅದು ಅನ್ಯಾಯವೆನಿಸುವ ಎಲ್ಲವನ್ನು ಉಗ್ರವಾಗಿ ಪ್ರತಿಭಟಿಸುತ್ತದೆ, ಪ್ರಶ್ನಿಸುತ್ತದೆ, ವಿಷಾದಗೊಳ್ಳುತ್ತಲೇ ತನ್ನಂತಹ ಇತರರ ಬಗೆಗೆ ಯೋಚಿಸುತ್ತದೆ. ಅದಕ್ಕೆ ತನ್ನ ಬುದ್ಧಿವಂತಿಕೆ ಬಗೆಗೆ ಅಪಾರ ಹೆಮ್ಮೆ. ಅಧಿಕಾರವು ಯಾವುದನ್ನು, ಯಾವ ಗುಣ ಸ್ವಭಾವಗಳನ್ನು ಹೆಣ್ಣಿಗೆ ಶೋಭೆಯಲ್ಲ ಎಂದು ವಿವರಿಸುವುದೋ ಅದನ್ನು ಒಂದು ಅತಿಗೆ ಒಯ್ಯುತ್ತದೆ. ‘ಹೆಣ್ಣು ಚಂಚಲೆ, ಚಪಲೆ, ಅವರ ಬುದ್ಧಿ ಮೊಣಕಾಲ ಕೆಳಗೆ, ನೈತಿಕತೆ ಕಡಿಮೆ’ ಮುಂತಾದ ಗುಣವಿಶೇಷಣಗಳನ್ನು ಅಲ್ಲಗಳೆದು ಅಥವಾ ಅತಿಗೊಯ್ದು ಅದನ್ನೇ ಸರಿಯೆಂದು ಸಾಧಿಸಿತೋರುವ ಮಾದರಿ ಇದು.

ಈ ಎರಡು ಮಾದರಿಗಳಲ್ಲಿ ಗಾರ್ಗಿ-ಗಯ್ಯಾಳಿಯರ ಒಂದು ಉದಾಹರಣೆಯೂ ಕನಕರ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಭಕ್ತಿ ನೆಲೆಯಲ್ಲಿಯೂ ‘ಗಾರ್ಗಿ’ ಮಾದರಿಯ ಹೆಣ್ಣಿನ ಚಿತ್ರಣ ಸಾಧ್ಯವಿತ್ತು. ಆದರೆ ಅದನ್ನು ಕನಕರೇ ಕೈಯಾರ ಬಿಟ್ಟುಕೊಟ್ಟಿದ್ದಾರೆ. ದೇವನೆದುರು ಸಮಾನತೆಗಾಗಿ ಬಂಡೆದ್ದ ಹೆಣ್ಣು ಅವರ ಕಲ್ಪನೆಯಲ್ಲಿರಲಿಕ್ಕಿಲ್ಲ. ಅವರ ಹೆಣ್ಣು ಪಾತ್ರಗಳೆಲ್ಲ ಗರತಿಯ ಮಾದರಿಯವೇ.


ಕನಕರ ಭಕ್ತಿ ಸಾಹಿತ್ಯದಲ್ಲಿ ಹೆಣ್ಣು

ಹಾಗೆ ನೋಡಿದರೆ ಭಕ್ತಿಗೆ ನಿರ್ಲಿಂಗೀ ಸಂವೇದನೆಯಿರಬೇಕು. ಆದರೆ ಭಕ್ತಿಯನ್ನು ಸ್ತ್ರೀ ಸಂವೇದನೆ ಎಂದು ಗುರುತಿಸಲಾಗಿದೆ. ಹೆಣ್ಣೇ ಆಗಿಬಿಡುವುದು ಭಕ್ತಿ ಮಾರ್ಗದ ಮಾದರಿ. ದೇಶಕಾಲ ಭೇದವಿಲ್ಲದೆ ಹಾಫಿಜ್-ರೂಮಿ-ಬಸವಾದಿ ಶರಣರೆಲ್ಲ ತಮ್ಮನ್ನು ಹೆಣ್ಣೆಂದು, ದೇವರನ್ನು ಗಂಡೆಂದು ಭಾವಿಸಿದ್ದಾರೆ. ಆದರೆ ಅದರಲ್ಲೂ ಸಮಸ್ಯೆಗಳಿವೆ. ಏಕೆಂದರೆ ಭಕ್ತಿ ಎಂಬ ನೆಲೆಯೇ ಸಮರ್ಪಣಾಭಾವ, ಶರಣಾಗತಿ, ಅನುಯಾಯಿತ್ವವನ್ನು ಅಪೇಕ್ಷಿಸುವಂಥದು. ಭಕ್ತಿಯ ನೆಲೆ ಉದ್ದೀಪಿಸುವ ಶರಣಾಗತಿಗೆ ಅದನ್ನು ಸ್ತ್ರೀತ್ವದೊಡನೆ ಸಮೀಕರಿಸಿ ನೋಡುವುದು ಲಿಂಗರಾಜಕಾರಣದ ಇನ್ನೊಂದು ಮುಖ. ಶರಣ ಸತಿ, ಲಿಂಗಪತಿ ಎಂದು ವಚನಕಾರರು ಹೇಳಿದಂತೆ ಕನಕರ ಎಷ್ಟೋ ಕೀರ್ತನೆಗಳಲ್ಲಿ ತನ್ನನ್ನು ಹೆಣ್ಣೆಂದು, ಆದಿಕೇಶವ ಗಂಡೆಂದು ಭಾವಿಸಿ ವಿರಹದಿಂದ ಪರಿತಪಿಸುತ್ತಿರುವ ಹೆಣ್ಣೆಂಬಂತೆ ಚಿತ್ರಿಸಿಕೊಂಡ ರಚನೆಗಳಿವೆ. ಹೀಗೆ ಕನಕರು ‘ಅರಿವಿನ ಹೆಣ್ತನ’ ಅನುಭವಿಸಿದ್ದಾರೆ.

ಆದರೆ ‘ಅರಿವಿನ ಹೆಣ್ತನ’ ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆ ಹುಟ್ಟಿಸಲಿಲ್ಲ. ಅವರಿಗಿಂತ ಮೂರ್ನಾಲ್ಕು ನೂರು ವರುಷ ಮೊದಲು, ಜನಪದರ ನಡುವೆ ತಿರುಗಿ, ತತ್ವ ಹೇಳಿ ಬಾಳಿದ ಶಿವಶರಣ-ಶಿವಶರಣೆಯರ ನೆಲವೇ ಕನಕರ ಕರ್ಮಭೂಮಿಯಾಗಿದ್ದರೂ ಶಿವಶರಣರ ಚಿಂತನೆಯ ಪ್ರಭಾವ ಅವರ ಮೇಲೆ ಆದಂತಿಲ್ಲ. ಭಕ್ತಿಯಲ್ಲಾಗಲೀ, ಭವದಲ್ಲಾಗಲೀ ಶಿವಶರಣೆಯರು ಎತ್ತಿದ ಎಷ್ಟೊಂದು ವಿಷಯಗಳು ಕನಕರನ್ನು ಪ್ರಭಾವಿಸಿದಂತಿಲ್ಲ. ವಚನ ಚಳುವಳಿಯಲ್ಲಿ ಮೇಲುಕೀಳೆನ್ನದೆ ಇಡಿಯ ಸಮಾಜ, ವಿಶೇಷವಾಗಿ ತಳಸಮುದಾಯಗಳು ತೊಡಗಿಕೊಂಡದ್ದಿರುವಾಗಲೂ ಶೈವ-ವೈಷ್ಣವ ಪಂಥಗಳ ತಿಕ್ಕಾಟ ಅವರನ್ನು ಆ ಚಿಂತನೆಗಳಿಂದ ದೂರವಿರಿಸಿತೇ ಎಂಬ ಅನುಮಾನ ಸುಳಿಯುತ್ತದೆ. ಅವರ ಮೋಹನ ತರಂಗಿಣಿಯಲ್ಲಿ ತ್ರೇತಾಯುಗದ ದ್ವಾರಕಾಪುರಿಯ ವರ್ಣನೆಯಲ್ಲಿ ೧೧ನೇ ಶತಮಾನದ ರಾಮಾನುಜರು ಬರುತ್ತಾರೆ, ಆದರೆ ಶಿವಭಕ್ತ ಬಾಣಾಸುರನ ನಗರಿಯಲ್ಲಿ ಶರಣರ ಸುಳಿವಿಲ್ಲ.

ಅವರ ರಚನೆಗಳಲ್ಲಿ ಪದೇಪದೇ ಪರಪುರುಷನಲ್ಲಿ ಅನುರಕ್ತಳಾದ ನಾರಿ, ಅಂಥವಳ ನಿಂದಿಸುವ ಮಾತು ಬರುತ್ತದೆ. ಅದರಲ್ಲೂ ಯಾರದೋ ಸ್ವತ್ತಾದ ಪರಸತಿ, ಪರಸ್ತ್ರೀಯರ ಕುರಿತೇ ಹೇಳಲಾಗಿದೆ. ಯಾರದೂ ಅಲ್ಲದ ಅಥವಾ ‘ಪರ’ನ ಸ್ವತ್ತಲ್ಲದ ಹೆಣ್ಣು ಕೇವಲ ಭೋಗದ ವಸ್ತು. ಇದು ವಚನಗಳಲ್ಲೂ, ಬುದ್ಧನ ಬೋಧನೆಗಳಲ್ಲೂ ಕಂಡುಬರುವುದು ನೋಡಿದರೆ ಎಷ್ಟೆಲ್ಲ ಸಾಮಾಜಿಕ ನಿರ್ಬಂಧಗಳ ನಡುವೆಯೂ, ಮದುವೆಯೆಂಬ ಸಂಸ್ಥೆ ಹೆಣ್ಣಿಗೆ ಹೊರಿಸಿರುವ ಜವಾಬ್ದಾರಿ ಕಟ್ಟುಪಾಡುಗಳ ನಡುವೆಯೂ ‘ಪರಪುರುಷ’ನೊಡನೆ ಸತಿ ಕೂಡುವುದು ಸರ್ವೇಸಾಮಾನ್ಯವಾಗಿದ್ದಿರಬೇಕು ಮತ್ತು ಅದು ಎಲ್ಲ ಕಾಲದ ಮಾನವ ಸಮಾಜದ ತಲ್ಲಣವಾಗಿರಬೇಕು ಎನಿಸುತ್ತದೆ. ಒಟ್ಟಾರೆ ಪ್ರಭಾವ, ಪಂಥಗಳ ಮಾತು ಒತ್ತಟ್ಟಿಗಿಟ್ಟು ನೋಡಿದರೂ ಭಕ್ತ ಕನಕರದು ಸಾಂಪ್ರದಾಯಿಕ, ಸನಾತನ ಮಹಿಳಾ ಮಾದರಿಯಾಗಿಯೇ ಕಂಡುಬರುತ್ತದೆ.

ಒಟ್ಟಾರೆ ಭಕ್ತ ಕನಕನನ್ನು ಐಹಿಕವಾಗಿಯೋ, ಆಧ್ಯಾತ್ಮಿಕವಾಗಿಯೋ ಲಿಂಗ ಅಸಮಾನತೆ/ಲಿಂಗ ಪ್ರಶ್ನೆ ಕಾಡಿದಂತಿಲ್ಲ. ಅವರ  ಕೆಲವು ಕೀರ್ತನೆ, ಕವಿತೆಗಳ ಸಾಲು ಹೀಗಿವೆ:


  • ಸೋತು ಹೆಣ್ಣಿಗೆ ಹೆದರಿ ನಾಚುವ ಪುರುಷನ್ಯಾತಕೆ/ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ
  • ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
  •       ಗಂಡಗಂಜದ ನಾರಿ ಅವಳೇ ಹೆಮ್ಮಾರಿ
  • ಪತಿವ್ರತೆಯರೆಂಬುವರು ಶತ ಸಹಸ್ರಕೊಬ್ಬರು/ಮಿತಿಮೀರಿ ಇಹರಯ್ಯ ಇತರ ಜನರು/ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ/ಗತಿಗೆಟ್ಟು ಹೋಗುವರು ಮೂರು ತೊರೆದು
  • ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು/ ಊರಲಿದ್ದರೇನು ತೌರೂರಲಿದ್ದರೇನು?
  • ಮಾನಿನಿಯ ಮನಸು ನಿಧಾನವಿರದಿರೆ/ಮಾನಾಭಿಮಾನಗಳುಳಿದೀತೇ?
  • ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು
  • ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ/ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ
  • ಪತಿ ಸೇವೆಗಿಂದಧಿಕ ಸೇವೆಯುಂಟೆ?


ಇಂಥ ಸಾಲುಗಳು ಹೇರಳವಾಗಿದ್ದು ಇಲ್ಲೆಲ್ಲ ಸಾಂಪ್ರದಾಯಿಕ ಯೋಚನಾಕ್ರಮಕ್ಕಿಂತ ಕನಕರ ಗ್ರಹಿಕೆ ಭಿನ್ನವಾಗಿಲ್ಲ. ಮಗನಿಂದೆ ಗತಿಯುಂಟೆ ಜಗದೊಳು ಎಂಬ ಕೀರ್ತನೆಯಲ್ಲಿ ಪುತ್ರನಿಲ್ಲದೆ ಗತಿಯಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಪ್ರಶ್ನಿಸಿ ಅದರಲ್ಲಿ ಹುರುಳಿಲ್ಲವೆಂದವರು, ತತ್ವಾಗಮಗಳ ಓದಿನಿಂದ ಗತಿ ದೊರೆಯುವುದೆಂದು ಪ್ರತಿಪಾದಿಸುತ್ತಾರೆ. ಒಂದುವೇಳೆ ಮಗಳಿಂದಲೂ ಗತಿಯುಂಟು ಜಗದೊಳು ಎಂದು ಕನಕರೇನಾದರೂ ಹೇಳಿದ್ದರೆ ಆ ಒಂದೇಒಂದು ಸಾಲು ಸಾಕಿತ್ತು, ಅವರು ಆದರ್ಶ ಪುರಾತನರಾಗಿಬಿಡುತ್ತಿದ್ದರು.

ಆದರೂ,

  • ಸಂಸಾರ ಸಾಗರಮನುತ್ತರಿಸುವಡೆ/ಕಂಸಾರಿ ನಾಮವೊಂದೇ ಸಾಕು/ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ/ವನಿತೆಯನು ಬಿಟ್ಟು ತಪವಿರಲು ಬೇಡ ಎನ್ನುತ್ತಾರೆ.
  • ಡಣಾಯಕನಾಗಿ ಯುದ್ಧ ಸೋತು, ವಿಜಯನಗರದವರ ಜೊತೆ ತನ್ನ ದೇಶಕೋಶ ಕಳಕೊಂಡು, ಹೆಂಡತಿಯ ತೌರಿನಲ್ಲಿದ್ದಾಗ ಅವಳೇ ಇವರ ತಳಮಳ ನೋಡಲಾರದೇ ದಾಸನಾಗಿಬಿಡು ಎಂದು ಹೇಳಿದಳೆಂದು ಜೀವನಚರಿತ್ರೆ ಹೇಳುತ್ತದೆ. ಆದದ್ದೆಲ್ಲ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ದಂಡಿಗೆ ಬೆತ್ತವ ಹಿಡಿದು ಆದಿಕೇಶವನ ದಾಸನಾಗಿಬಿಡು ಎಂದು ಹೇಳಿದ ಹೆಂಡತಿ ಕುರಿತು ಗೋಪಾಲ ಬುಟ್ಟಿ ಹಿಡಿವುದಕೆ/ಭೂಪಾಲನೆಂದು ಗರ್ವಿಸುತಿದ್ದೆ/ಆ ಪತ್ನೀ ಕುಲ ಸಾಸಿರವಾಗಲಿ/ಗೋಪಾಲ ಬುಟ್ಟಿ ಹಿಡಿಸಿದಳಯ್ಯಾ ಎಂದು ಹಾರೈಸುತ್ತಾರೆ.


ಎಂದೇ ಇಷ್ಟು ಹೇಳಬಹುದು, ಕನಕರು ಖಂಡಿತ ಮಹಿಳಾ ವಿರೋಧಿಯಲ್ಲ..


ಕವಿ ಕನಕರ ಕಣ್ಣಲ್ಲಿ ಹೆಣ್ಣು 

ಎಂದಿನಿಂದ ಹೆಣ್ಣಿನ ಕುರಿತು ಗಂಡಿಗಿರುವ ಕಾಮಾಸಕ್ತಿ, ಭೋಗಾಸಕ್ತಿಯ ನಿಲುವೇ ಕನಕರದೂ. ಅವರು ರಸಿಕ ಮತ್ತು ಸೌಂದರ್ಯಗ್ರಾಹಿ ಕವಿ. ಹೆಣ್ಣನ್ನು ಅವಳ ಅಂಗಾಂಗಗಳಿಂದಲೇ - ಮಿಕ್ಕೆಲ್ಲದಕ್ಕಿಂತ ಮೊಲೆಯ ಗಾತ್ರ, ಸ್ವರೂಪಗಳಿಂದಲೇ ಅಳೆಯುತ್ತಾರೆ. ದಾಸರಾದ ಮೇಲೂ ಒಂದು ಕೀರ್ತನೆಯಲ್ಲಿ ‘ಪೋಗದೋ ಚಳಿ ಪೋಗದೋ/ನಳಿನಾಕ್ಷಿಯ ತನ್ನ ತೊಡೆ ಮೇಗಡೆ ಇಟ್ಟು/ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ’ ಎನ್ನುತ್ತಾರೆ! ಉಬ್ಬಿದ ಕುಚದ್ವಯದಲ್ಲಿ ತಾನು ಮೂಡಿಸಿದ ನಖಚಂದ್ರನ ಲಾಂಛನವನ್ನು ಅವರ ಗಂಡುಪಾತ್ರಗಳು ಹೆಮ್ಮೆಯಿಂದ ನೋಡುತ್ತಾವೆ.

ಅವರ ಮೋಹನ ತರಂಗಿಣಿ ಒಂದು ಶೃಂಗಾರ ಕಾವ್ಯ. ಅಲ್ಲಿ ಹೆಣ್ಣು ಎಂದರೆ ಸೌಂದರ್ಯಾತಿಶಯ ಮತ್ತು ಗುಣಾತಿಶಯಗಳ ಮೊತ್ತ. ಅದನ್ನು ಬರೆದಾಗ ಅವರಿನ್ನೂ ದಾಸರಾಗಿರಲಿಲ್ಲ. ‘ಹೆಣ್ಣು ಮಾಯೆ’ಯೆನಿಸಿರಲಿಲ್ಲ. ಸ್ತನದ್ವಯಗಳ ವಿವರಿಸಲಂತೂ ಕನ್ನಡದ ಎಷ್ಟೆಷ್ಟು ಉಪಮೆ, ಅಲಂಕಾರ, ಪದ, ನೆಪ ಹುಡುಕಿ ಎಳತಂದಿದ್ದಾರೋ?! ಕೊಡಮೊಲೆ, ಗಡಿಗೆ ಮೊಲೆ, ನುಣ್ಮೊಲೆ, ಬಿಳ್ಮೊಲೆ, ಹೊನ್ನಮೊಲೆ, ದುಂಡುಮೊಲೆ, ಬಟ್ಟ ಬಲ್ಮೊಲೆ, ತೋರಮೊಲೆ, ಹೊಂದಾವರೆ ಮೊಗ್ಗು ಮೊಲೆ.. ಹೀಗೇ ಸಂಸ್ಕೃತ ನಾಚುವಷ್ಟು ಕನ್ನಡದ ನಾಮಪದ, ನಾಮವಿಶೇಷಣ, ಗುಣವಿಶೇಷಣಗಳು ಸುಳಿದುಹೋಗಿವೆ. ಆ ದೇಹಭಾಗದ ರೂಪ, ಗಾತ್ರ ಎಷ್ಟು ಮುಖ್ಯವೆಂದರೆ ರುಕ್ಮಿಣಿ ಕೃಷ್ಣನ ಬಳಿ, ‘ಪುತ್ರನಿಲ್ಲದೆ ಸದ್ಗತಿಯಿಲ್ಲ, ನನಗೊಬ್ಬ ಪುತ್ರನ ಕೊಡು’ ಎಂದು ಕೇಳಿದರೆ ಆ ಮಹರಾಯ, ‘ಮಗುವಾದರೆ ಬಿರುಮೊಲೆ ಜರಿದು ಜೋಲು ಬೀಳುತ್ತಾವೆ’ ಎಂದು ಬೇಡವೆನ್ನುತ್ತಾನೆ. ಅದಕ್ಕವಳು ಮಗು ಹಾಲು ಕುಡಿಯತೊಡಗಿದಾಗ ಸೊರ ಬಿಟ್ಟು ಮೊಲೆ ಇನ್ನೂ ಬಿಗಿಗೊಂಡು ದುಂಡಗೆ ಆಕರ್ಷಿಸುವುದು ಎಂದು ಅವನ ಒಪ್ಪಿಸಿ ಮಗುವನ್ನು ಪಡೆಯುತ್ತಾಳೆ! ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ? ಎಂದು ಹೆಣ್ಣನ್ನು ಹಳಿಯಲು, ನಿರಾಕರಿಸಲು ಸ್ತನಕಾರಣ ಹೇಳುತ್ತಾರೆ. ತಮ್ಮ ಸಖಿಯರನಾಯ್ದುಕೊಳುವ ರಾಣಿಯರೂ ಗಮನ ಕೊಡುವುದು ತನ್ನಿನಿಯನನ್ನು ಸೆಳೆಯುವಂತಹ ಕೊಡಮೊಲೆಗಳು ಅವರಿಗಿವೆಯೇ ಇಲ್ಲವೇ ಎಂಬ ಬಗ್ಗೆ! ಒಟ್ಟಾರೆ ಗಂಡಿಗೆ ಎಣೆಯಿಲ್ಲದಷ್ಟು ಕಾಮಲೀಲೆಯ ಅವಕಾಶ, ಅವಶ್ಯಕತೆ ಎರಡೂ ಇದೆ; ಅದಕ್ಕೆಂದೇ ಹೆಣ್ಣುಗಳು ಸೃಷ್ಟಿಯಾಗಿದ್ದಾರೆ; ಹೆಣ್ಣಿನ ದೇಹ, ಬದುಕು, ಕ್ರಿಯೆಗಳೆಲ್ಲ ಕಾಮದಾಹ ತಣಿಸುವತ್ತಲೇ ಕೇಂದ್ರಿತವಾಗಿವೆ ಎನ್ನುವುದು ಕವಿ ಕನಕರ ಕಲ್ಪನೆ.

ಮೋಹನ ತರಂಗಿಣಿಯ ಸೌರಾಷ್ಟ್ರ ವರ್ಣನೆ, ದ್ವಾರಕಾಪುರ ವರ್ಣನೆಗಳಲ್ಲಿ ಹಸ್ತಿನಿ-ಚಿತ್ತಿನಿ-ಶಂಖಿನಿ-ಪದ್ಮಿನಿ ಜಾತಿಯ ಸ್ತ್ರೀಯರ ವರ್ಣನೆ ತುಂಬಿದೆ. ಆ ಪುರಗಳು ಹೇಗಿವೆ? ಅಲ್ಲಿ ಏನೇನಿವೆ? ಯಾರ‍್ಯಾರಿದ್ದಾರೆ? ಏನು ಮಾಡುತ್ತಿದ್ದಾರೆ?


  • ಸಡಿಲಿದ ಮುಡಿ, ಬೆವರ್ಮನಿ ತುಂಬಿ ತೊಟ್ಟಿಕ್ಕುವ ಮುಖ, ಅಲುಗಾಡುವ ಮೊಲೆಗಳ ಗಂಧ ತೇಯುವ ಹೆಣ್ಣುಗಳಿರುವ ಅಂಗಡಿ..
  • ರಾಗರಸದೊಳನವರತ ಕಾದಲರು ಸಂಭೋಗಕ್ಕೆ ಸಮವಾಗಲೆನುತ ಇರುವ ಪೋಡಿಯಡಕೆ ಅಂಗಡಿಗಳು
  • ಕಾಂತಿಯುಕ್ತ ಕನ್ನೆಯರ ಚಿಗುರು ಮೊಲೆ ನೋಡಿ ನಗುನಗುತ್ತ ಎಳೆವೆರಳ ಚಿಟುಕೊತ್ತಿ ಬಳೆ ತೊಡಿಸುವ ಬಳೆಗಾರರು
  • ಕೊಂಕು ಕಾಣಬೇಕಾದರೆ ಕೂದಲಿನಲ್ಲಿ, ತೊಂಡೆ ಹಣ್ತುಟಿಯಲ್ಲಿ, ಕುಟಿಲ ಕಾಂತೆಯರ ಗಡಿಗೆ ಮೊಲೆಗಳಲ್ಲಿ ಕಾಣಬಹುದೇ ವಿನಾ ಬೇರೆಡೆ ಕಂಡುಬರುವುದಿಲ್ಲ
  • ವೇಶ್ಯೆಯರ ಬಲ್ಮೊಲೆ ಹಿಡಿವರು, ಚೆಂದುಟಿಗಳ ಕಡಿವರು, ಚಿಗುರು ತುಟಿಯವರ ನಿರಿಗೆ ಸುಲಿವರೇ ವಿನಹ ಗರತಿಯರ ಮುಟ್ಟುವುದಿಲ್ಲ
  • ಕಳಶಮೊಲೆ, ಬಾಹುಮೂಲದ ಕಂಕುಳು ಕಾಣುವಂತೆ ತೋಳೆತ್ತಿ ನೀರೆರೆವಾಗ ದಾಹ ಅಡಗಿದ್ದರೂ ಇನ್ನೂ ಕುಡಿವ ನೆಪದಲ್ಲಿ ಹೆಂಗಳ ಮುದ್ದುಮುಖ ನೋಡುವರು
  • ಕಂಕುಳು ಒಡೆಯುವಂತಿರುವ ಭಾರಿ ಮೊಲೆಗಳ ಹೆಣ್ಣಾಳುಗಳ ರುಕ್ಮಿಣಿ ಸತ್ಯಭಾಮೆಯರು ತಮಗೆ ತಕ್ಕವರೆನಿಸಿದವರನ್ನು ತಂತಮ್ಮ ಪಕ್ಷಕ್ಕೆ ಹಂಚಿಕೊಂಡರು.
  • ಉಟ್ಟಬಟ್ಟೆ ತೊಯ್ದು ಬೊಗಸೆಗಣ್ಣ ಅಬಲೆಯರು ಶೈತ್ಯದಿಂದ ಗಡಗಡ ನಡುಗಿದರು ಮೊಲೆಗಳು ನರ್ತಿಸುವಂತೆ
  • ಪ್ರಿಯಕರನ ಎದೆಯ ಧೈರ್ಯವನ್ನು ಮೊಲೆಗೊಡದಿಂದ ಮೊಗೆಯುವಂತೆ ಮೇಲಕ್ಕೆ ಹತ್ತಿ ಬಂದರು ಅಬಲೆಯರು
  • ದುಂಬಿಗುರುಳ ಮೂರು ಸೀಳಾಗಿಸಿ ಗೋಪಾಂಗನೆಯರು ಜಡೆ ಹೆಣೆಯೆ ಅವು ಕೊಡಮೊಲೆಯ ಕೊಪ್ಪರಿಗೆಯ ನಿಧಿ ಕಾಯುವ ಸರ್ಪಗಳಂತೆ ಬೆನ್ನೇರಿದವು.
  • ಆಯಿತು, ಪುರದ ಕನ್ಯೆಯರು, ಅರಮನೆಯ ನಾರಿಯರು ಹೀಗಿದ್ದರು. ಕನ್ನೈದಿಲೆಯ ಕರಿ ಬಣ್ಣದಬಲೆಯರು, ವನದ ಚಿಂಚಿತಿಯರು, ರೈತ ಮಹಿಳೆಯರು ಹೇಗಿದ್ದರು? 
  • ಮದನ ಮಂದಿರದ ಬಾಗಿಲಿಗೆ ತೋರಣ ಕಟ್ಟಿದಂತೆ ತಳಿರ ಉಡುಗೆ ಕಂಗೊಳಿಸಲು ಹೃದಯ ಗೋಪುರದ ಜೋಡಿ ಕಳಶಗಳಂತೆ ಜೋಡಿ ಮೊಲೆಗಳಿದ್ದವು.
  • ಕಲ್ಲರೆಗಳ ಮೇಲೆ ಧುಮ್ಮಿಕ್ಕಿ ನೃತ್ಯವಾಡುವ ಬಿದಿರಕ್ಕಿ ಕುಟ್ಟುವ ಹೆಣ್ಣುಗಳ/ ತೋರ ನುಣ್ಮೊಲೆಯೆದೆ ದಿಗಿಲಾಂತು ಕಂಪಿಸಿತು
  • ಹಾಡುವರು ಅಕ್ಕಿ ಮಾಡುವರು ಬೇಟೆ ನೋಡುವರು ಬಿಲ್ಲುಬಾಣ ಹಿಡಿದು ನಿಂತರು. ಬಗೆಬಗೆಯ ಭಂಗಿಗಳಲಿ ನಿಂದ ಚಂದದ ಹೆಣ್ಣುಗಳು ಅನಿರುದ್ಧನ ಕಂಡದ್ದೇ ಅವರಿಗೆ ತಂತಮ್ಮ ಗಂಡಂದಿರ ಮೇಲಿನ ಪ್ರೀತಿ ಮುರಿದು ಮೂರು ತುಂಡಾಯಿತು.
  • ತುರುಬು ಹಾಗೂ ತೋರಮೊಲೆಯ ಭಾರದಿಂದ ಸಸಿಮಡಿ ಕಾವ ಬೇಡತಿಯರ ಬಡ ನಡು ಬಳುಕುತಿಹುದು


ಪುರವೋ, ವನವೋ, ಎಲ್ಲೂ ಹೆತ್ತುಹೆತ್ತು ಹೈರಾಣಾದ ಹೆಣ್ಣುಗಳು; ಗೇಯ್ದು ಮಾಸಿದ ಚಹರೆಗಳು; ಅಂಗವಿಕಲ, ಸುಂದರಿಯರಲ್ಲದ, ವೃದ್ಧ ಹೆಣ್ಣುಗಳು ಇಲ್ಲವೇ ಇಲ್ಲ. ವಾರಾಂಗನೆಯರ ಹಾಗೂ ವೇಶ್ಯೆಯರ ನಡೆನುಡಿ, ದೇಹಸಿರಿಯ ವರ್ಣನೆ ನೋಡಿದರೆ ದೇವದಾಸಿ ಪದ್ಧತಿ ಬಗೆಗಾಗಲೀ, ಆ ಹೆಣ್ಣುಗಳ ಕೊನೆಗಾಲದ ದುರಂತದ ಬಗೆಗಾಗಲೀ ಕವಿಗೆ ನೆನಪೇ ಇರುವಂತಿಲ್ಲ. ಯುದ್ಧ ಕುರಿತು, ವೀರ ರಸ, ಶೌರ್ಯದ ಕುರಿತು ವರ್ಣನೆಗಳಿವೆ, ಸತಿ ಹೋಗುವ ಹೆಂಗಸರ, ಆ ಕುಟುಂಬಗಳ ಬವಣೆ ಕಾಣುವುದಿಲ್ಲ. ಅವರು ಚೆನ್ನಕೇಶವನನ್ನು ಎದುರುಗೊಂಡು ತಿರುಗಾಡಿದ ಹಾಸನ, ಬೇಲೂರುಗಳ ಜನಮನದ ಬಾಯಲ್ಲಿರುವ ಮಾಸ್ತಿ ಕಥನಗೀತೆಗಳೆಂಬ ದುಃಖಾರ್ತ ಹಾಡುಗಳು ಅವರಿಗೆ ಮುಖಾಮುಖಿಯಾದವೋ ಇಲ್ಲವೋ ಗೊತ್ತಿಲ್ಲ.

ಆಯಿತು. ಕವಿತೆಯಲ್ಲಿ ಶೃಂಗಾರ-ಸೌಂದರ್ಯವಲ್ಲದೆ ಕುಂಟ-ಕುರುಡಿ-ಗೂನಿ-ಉಬ್ಬಲ್ಲು ಸುಬ್ಬಿಯರ ಸಂಕಟಗಳ ಬಗೆಗೆ ಬರೆಯಲಾದೀತೇ? ಇರಲಿ. ಅವರು ಸೃಷ್ಟಿಸಿದ ಮಹಿಳಾ ಪಾತ್ರಗಳ ಗಟ್ಟಿತನ ಯಾವುದರಲ್ಲಿದೆ?

ಚರಿತ್ರೆ ದಮಯಂತಿಯದೇ ಆಗಿದ್ದರೂ ಅದಕ್ಕೆ ನಳ ಚರಿತ್ರೆ ಎಂದು ಹೆಸರಿಡುವುದೇ ಪುರುಷ ಪರಮಾಧಿಕಾರ. ಏಕೆಂದರೆ ನಳ ಒಬ್ಬ ದುರ್ಬಲ ರಾಜ, ದುರ್ಬಲ ಗಂಡ. ಆತ ಅಶ್ವ ಹೃದಯ ಬಲ್ಲವನು. ಆದರೆ ಹೆಂಡತಿಯ ಹೃದಯ ಬಲ್ಲವನಲ್ಲ. ಅವ ಅಡಿಗೆಯ ಸೂಕ್ಷ್ಮಾತಿಸೂಕ್ಷ್ಮ ರಹಸ್ಯ ಅರಿತವನು. ಆದರೆ ಅಡಿಗೆ ಮಾಡುವ ಹೆಂಗಸರ ಒಳತೋಟಿ, ಒಳಸುಳಿಗಳ ಅರಿತವನಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೊತ್ತುಗೊತ್ತಿಲ್ಲದೆ ಜೂಜಾಡಿ, ಸೋಲನ್ನು ವಿಧಿ-ರಾಕ್ಷಸರ ತಲೆಗೆ ಕಟ್ಟಿ, ತನ್ನದೆಲ್ಲವನ್ನು ಕಳೆದುಕೊಂಡು, ನಡುರಾತ್ರಿಯಲ್ಲಿ ಸತಿಸುತರ ಬಿಟ್ಟು ನಡೆದವರು ಮಹಾಪುರುಷರಾಗಿಬಿಟ್ಟಿದ್ದಾರೆ. ಅಂಥವರಲ್ಲಿ ನಡುರಾತ್ರಿಯಲ್ಲಿ ಹೆಂಡತಿಯನ್ನು ಕಾಡೆನ್ನದೆ, ಗುಡ್ಡಗವಿಯೆನ್ನದೆ ಬಿಟ್ಟು ನಡೆದ ಬೇಜವಾಬ್ದಾರಿಯ ನಳನೂ ಸೇರುತ್ತಾನೆ.

ದ್ಯೂತದಲ್ಲಿ ಸೋತು, ಎಲ್ಲವನ್ನು ಕಳಕೊಂಡು, ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಟ್ಟು, ಹೆಂಡತಿಯೊಡನೆ ಕಾಡಿಗೆ ಬಂದ ನಳ ಉಟ್ಟ ದಟ್ಟಿ ಬಳಸಿ ಹಕ್ಕಿ ಹಿಡಿಯಲು ಹೋಗಿ ದಟ್ಟಿಯನ್ನೂ ಕಳಕೊಂಡು ನಗ್ನನಾಗುತ್ತಾನೆ. ಗಂಡನ ಮಾನ ಮುಚ್ಚಲು ದಮಯಂತಿ ಉಟ್ಟ ಸೀರೆ ಹರಿದು ಅರ್ಧ ಅವನಿಗೆ ಕೊಡುತ್ತಾಳೆ. ನಡುರಾತ್ರಿ ಅವಳ ಸೀರೆಯನುಟ್ಟ ನಳ ಅವಳನಲ್ಲೇ ಬಿಟ್ಟು ನಡೆಯುತ್ತಾನೆ. ಸರ್ಪದ ಬಳಿ ಕಚ್ಚಿಸಿಕೊಂಡು, ವಿಕೃತ ರೂಪದ ಬಾಹುಕನಾಗಿ, ಹೆಂಡತಿ ಮಕ್ಕಳ ಮರೆತು, ಸತಿಸುತರ ಜವಾಬ್ದಾರಿಯಿಲ್ಲದೆ ನಳ ಋತುಪರ್ಣ ರಾಜನ ಆಸ್ಥಾನದಲ್ಲಿ ಕುದುರೆತಜ್ಞನಾಗಿರುತ್ತಾನೆ. ಇತ್ತ ದಮಯಂತಿ ಅವನಿಗಾಗಿ ಜಗವೆಲ್ಲ ಹುಡುಕಾಡುತ್ತಾಳೆ. ಇನ್ನೇನು ಸರ್ಪದ ಬಾಯಿ ಹೊಗಲಿರುವ ಅವಳನ್ನು ಬೇಡನೊಬ್ಬ ರಕ್ಷಿಸಿ ಕಾಮಾತುರ ತೋರಿದಾಗ ಕನಕರ ದಮಯಂತಿ ಪುರಾಣದ ದಮಯಂತಿಗಿಂತ ಪ್ರಗತಿಪರ ನಡವಳಿಕೆ ತೋರುತ್ತಾಳೆ. ಅವಳು ತನ್ನ ಪಾತಿವ್ರತ್ಯ ಶಕ್ತಿಯಿಂದ ಬೇಡನನ್ನು ಸುಟ್ಟು ಹಾಕುವುದಿಲ್ಲ. ಬದಲಾಗಿ, ‘ಪ್ರಾಣ ರಕ್ಷಿಸಿದ ನೀನು ನನ್ನ ತಂದೆಗೆ ಸಮಾನ’ ಎಂದು ಬೇಡನ ಬಳಿ ವಾದಿಸಿ ಕೊನೆಗೆ ಕೋಪ ಬಂದರೆ ಶಪಿಸುವುದಾಗಿ ಧಮಕಿ ಹಾಕಿ ಪಾರಾಗುತ್ತಾಳೆ!

ಇಂಥ ಗಟ್ಟಿಗಿತ್ತಿ ಹೆಂಗಸು ಗಂಡನ ಮೈಮರೆವಿನಿಂದ, ಬೇಜವಾಬ್ದಾರಿತನದಿಂದ ಬಂದ ದುಸ್ಥಿತಿಯ ಲೋಪವನ್ನು ಮರೆಮಾಚಲು ವಿಧಿಯೆಂಬ ಅನೂಹ್ಯ ಶಕ್ತಿಯನ್ನು ನಂಬುತ್ತಾಳೆನ್ನುವಂತೆ ಚಿತ್ರಿಸಲಾಗಿದೆ. ಕರುಣಾಳು ನಳನ ತಪ್ಪಿಲ್ಲ, ಎಲ್ಲ ವಿಧಿಯಾಟ ಎಂದು ಅವಳ ಬಾಯಲ್ಲಿ ಹೇಳಿಸಲಾಗಿದೆ. ಅವಳ ಗಟ್ಟಿತನವೆಲ್ಲ ಗಂಡನನ್ನು ಹೇಗಾದರೂ ಮರಳಿ ಪಡೆಯಲು ಪ್ರಯತ್ನಿಸುವುದರಲ್ಲೇ ಖರ್ಚಾಗುತ್ತದೆ. ಒಮ್ಮೆ ಬಾಹುಕ, ‘ಪತಿಯ ತಪ್ಪೆಣಿಸುವ ಸತಿ ಪತಿವ್ರತೆಯೆ?’ ಎನ್ನುತ್ತಾನೆ. ನಮ್ಮ ಸತಿ ದಮಯಂತಿಯಾದರೋ, ಪತಿಯ ತಪ್ಪೆಣಿಸುವುದಿರಲಿ, ಉಳಿದ ಪಂಚಮಹಾಪತಿವ್ರತೆಯರು ಕಷ್ಟನಷ್ಟದಲಿ ಬೆಂದು ಒಂದಲ್ಲ ಒಮ್ಮೆ ತಂತಮ್ಮ ಪತಿರಾಯರಿಗೆ ಬಿರುನುಡಿಯನಾಡಿದ್ದರೂ ಇವಳೆಂದೂ ಒಂದೇ ಒಂದು ಅಂತಹ ಮಾತು ಆಡುವುದಿಲ್ಲ. ಸತಿಪತಿ-ಹೆಣ್ಣುಗಂಡು ಸಮಾನರೆಂದು ಕನಕರು ಚಿತ್ರಿಸಬೇಕಿರಲಿಲ್ಲ. ಕೊನೆಪಕ್ಷ ಹೆಣ್ಣಿಗೆ ಗಂಡಿನ ಹೊರತಾದ, ವ್ಯವಸ್ಥೆಯ ಚೌಕಟ್ಟಿನ ಹೊರತಾದ ಒಂದು ಸಫಲ ಬದುಕನ್ನು ಕಲ್ಪಿಸಿಕೊಳ್ಳಬಹುದಿತ್ತು, ಅದೂ ಅವರಿಗೆ ಸಾಧ್ಯವಾಗಿಲ್ಲ.

ಮೋಹನ ತರಂಗಿಣಿ ಯಲ್ಲಿ ಅನಿರುದ್ಧನ ಮೋಹಿಸಿದ ಕಥಾನಾಯಕಿ ಉಷೆಯ ಸಖಿ ಚಿತ್ರಲೇಖೆ ಎಂಬ ಒಂದು ಪಾತ್ರವಿದೆ. ವಿವಾಹದ ಚೌಕಟ್ಟನ್ನು ಉಲ್ಲಂಘಿಸಿ ಪ್ರೇಮಿಗಳನ್ನು ಒಂದುಮಾಡಿದ ಚಿತ್ರಲೇಖೆ ಸತ್ವಶೀಲ ವ್ಯಕ್ತಿತ್ವವುಳ್ಳ ಪಾತ್ರವಾಗಿ ಮಾತಿನಲ್ಲೂ ಕೃತಿಯಲ್ಲೂ ಚಿತ್ರಿಸಲ್ಪಟ್ಟಿದ್ದಾಳೆ. ಆದರೆ ಚಿತ್ರಲೇಖೆಯೂ ಸೇರಿದಂತೆ ಅಂತಃಪುರದಲ್ಲಿ ತುಂಬಿಕೊಂಡ ಸಾವಿರಾರು ದಾಸಿಯರ ದೇಹ ಕುರಿತ ವಿವರವಾದ ವರ್ಣನೆಯಿದೆಯೇ ಹೊರತು ಅವರಿಗೆಲ್ಲ ದಾಸಿತನದ ಹೊರತಾದ ಅಸ್ತಿತ್ವವೇ ಇಲ್ಲ. ಇಲ್ಲಿ ಕವಿಯ ಮಾನವೀಯ ಮತ್ತು ಸೃಜನಶೀಲ ಕಲ್ಪನೆ ವಿಸ್ತಾರಗೊಂಡಿಲ್ಲ.

ಒಟ್ಟಾರೆ ಕನಕರು ಸೃಷ್ಟಿಸಿದ್ದೆಲ್ಲ ಪ್ರಶ್ನೆಗಳೇ ಇಲ್ಲದ ಗೃಹದೇವತೆಗಳನ್ನು ಅಥವಾ ಗರತಿಯರನ್ನು. ಅದರಲ್ಲೂ ಹಿಂದುಮುಂದು ಮಾಂಸ ತುಂಬಿಕೊಂಡ ಮಾನಿನಿಯರನ್ನು. ಆದರೆ ಈ ಪಾತ್ರಗಳ ಒಳಾಂತರಂಗ ಬಗೆಯುವ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ನಿಜಜೀವನದ ಹೆಂಡತಿಯರನ್ನು ಹತ್ತಿರದಿಂದ ನೋಡಿದರೇ ಗೊತ್ತಾಗುತ್ತದೆ: ಅವರಲ್ಲೂ ಪ್ರತಿರೋಧದ ಅಂಶವಿರುತ್ತದೆ. ಗರತಿಯೂ ಕೂಡಾ ಯಾವುದನ್ನೂ - ಪುರುಷಾಧಿಕಾರವನ್ನೂ ಸಹಾ ಒಂದು ಮಿತಿಯಾಚೆ ಹೋಗಲು ಬಿಡುವುದಿಲ್ಲ. ಅಕಸ್ಮಾತ್ ಅವಳ ತ್ಯಾಗ ವ್ಯರ್ಥವೆನಿಸಿದರೆ; ತಾನು ಆಹುತಿಗೊಳ್ಳುತ್ತಿರುವ ಭಾವ ಹುಟ್ಟಿದರೆ ತನ್ನ ಜೊತೆಗೆ ತನ್ನೊಡನಿರುವ ವ್ಯವಸ್ಥೆಯನ್ನೂ ಆಹುತಿಯಾಗಿಸುತ್ತಾಳೆ. ಹೆಣ್ಣಿನ ಈ ಒಳಸೂಕ್ಷ್ಮ ಕನಕರ ಅರಿವಿಗೆ ಬಂದಿಲ್ಲ.

ಮಹಿಳೆಯ ಅಥವಾ ಯಾವುದೇ ಶೋಷಿತ ವರ್ಗದ ಶಕ್ತಿ ಎಂದರೆ ಸ್ಥಾಪಿತ ಯಾಜಮಾನ್ಯದ ವಿರುದ್ಧ ಪ್ರತಿರೋಧವೇ ಆಗಬೇಕೆಂದಿಲ್ಲ. ಪ್ರತಿರೋಧಕ್ಕಿರುವಷ್ಟೇ ಶಕ್ತಿ ಸ್ವಾಯತ್ತತೆಯ ಬದುಕಿನಲ್ಲೂ ಇದೆ. ರೂಢಿ ವಿರೋಧಿ ಜೀವನ ಕ್ರಮ ಮತ್ತು ಉಲ್ಲಂಘನೆ - ಇವೂ ಪ್ರತಿರೋಧಗಳೇ. ಜನಪದ ರಾಮಾಯಣದ ಸೀತೆ ಪಟ್ಟವೇರಿದ ರಾಮ ಕಂಡವರ ಮಾತು ಕೇಳಿ ಬೆಂಕಿ ಹಾಯ್ದ ತನ್ನನ್ನು ಅನುಮಾನಿಸಿದಾಗ ರಾಜ್ಯ ಬಿಟ್ಟು ಹೋಗುತ್ತಾಳೆ. ರಾಮನ ಬಿಟ್ಟು ಕಾಡಿಗೆ ಹೋಗುತ್ತಾಳೆ. ಅವಳಿ ಮಕ್ಕಳ ಹೊತ್ತುಹೆತ್ತುಬೆಳೆಸಿ, ರಾಮನಿಲ್ಲದ ಒಂದು ಸ್ವಾಯತ್ತ ಬದುಕನ್ನು ಸಾಧ್ಯವಾಗಿಸಿಕೊಳ್ಳುತ್ತಾಳೆ. ಇನ್ನೊಂದು ಜನಪದ ರಾಮಾಯಣದಲ್ಲಿ ಶೂರ್ಪನಖಿ ಮೊಲೆಮೂಗುಗಳ ಕಳಕೊಂಡರೂ ಸುಂದರ ಉದ್ಯಾನವನ ನಿರ್ಮಿಸಿ, ವನಪಾಲಕಿಯಾಗಿ ಏಕಾಂಗಿಯಾಗಿ, ಸ್ವಾಯತ್ತವಾಗಿ ಬದುಕಿದಳು. ಅದನ್ನು ನೋಡಿಬಂದು ನಿಬ್ಬೆರಗಾದ ಲವಕುಶರು ತಮ್ಮಮ್ಮನ ಬಳಿ ಮೊಲೆಮೂಗುಗಳಿರದ ವಿಕಾರರೂಪದ ರಕ್ಕಸಿಯೊಬ್ಬಳ ಅತಿಸುಂದರ ಉದ್ಯಾನ ತಾವು ನೋಡಿದೆವೆಂದು ಬಣ್ಣಿಸುತ್ತಾರೆ. ಹೀಗೆ ಜನಪದದ ಸೀತೆ/ಶೂರ್ಪನಖಿಯರಿಗಿರುವ ಸ್ವಾಯತ್ತ ಬದುಕಿನ ಯಾವ ಅವಕಾಶವೂ ಕನಕರ ದಮಯಂತಿಗಳಿಗೆ ಸಿಗುವುದಿಲ್ಲ. ಬಹುಶಃ ಮಹಾಕಾವ್ಯ ಬರೆದವರೆಲ್ಲ ಪುರುಷರೇ ಆದ ಕಾರಣ ಅವರಿಗೆ ಪತಿವ್ರತೆಯರನ್ನು ಸೃಷ್ಟಿಸಲು ಸಾಧ್ಯವಾಯಿತೇ ಹೊರತು ಬಂಡಾಯದ ಹೆಣ್ಣನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.

ಹಾಗೆ ನೋಡಿದರೆ ನಿಜಜೀವನದಲ್ಲಿ ಭಾರತೀಯ ಸಮಾಜದ ತಳಸಮುದಾಯದ ಹೆಣ್ಣುಗಳು ಹೆಚ್ಚು ಸ್ವಾಯತ್ತ ಬದುಕು ಸಾಗಿಸಿದ್ದಾರೆ, ಅದನ್ನು ಸಾಧ್ಯಮಾಡಿಕೊಂಡಿದ್ದಾರೆ. ಅದನ್ನು ತಳಸಮುದಾಯದ ಕವಿ ಕನಕ ಗ್ರಹಿಸಿರಬೇಕಿತ್ತು. ಕೊನೆಪಕ್ಷ ತಮ್ಮ ರಾಮಧಾನ್ಯ ಚರಿತೆಯಲ್ಲಿ ಧಾನ್ಯಗಳನ್ನು ಪುರುಷರ ಬದಲಾಗಿ ಸ್ತ್ರೀಯರಂತೆ ಸೃಷ್ಟಿಸಿದ್ದರೆ; ಬಿಳ್ಮೊಲೆಯ ವರ್ಸಸ್ ಕನ್ನೈದಿಲೆಯಂಥ ಕರಿಮೊಲೆಯ ಅಬಲೆಯರನ್ನು ಭತ್ತ-ರಾಗಿಗಳಂತೆ ಚಿತ್ರಿಸಿದ್ದರೆ ಆ ಕಾವ್ಯ ಬೇರೆಯದೇ ನೆಲೆಗೆ ಹೋಗಿ ಮುಟ್ಟುತ್ತಿತ್ತು. ಆದರೆ ಜಾತಿಪ್ರಶ್ನೆಯೊಂದನ್ನು ಹೊರತುಪಡಿಸಿ ಮಿಕ್ಕಂತೆ ವೈದಿಕ ಮತ್ತು ಸನಾತನ ಮೌಲ್ಯಗಳಿಗೇ ಕಟ್ಟುಬಿದ್ದ ಕನಕರು ಹೆಣ್ಣಿನ ವಿಷಯದಲ್ಲಿ ಜನಪದದ ಸ್ಮೃತಿ, ವಿವೇಚನೆಗಳನ್ನು ಕಡಿಮೆ ಬಳಸಿದ್ದಾರೆ. ಹೀಗೆ ಕನಕರ ಹೆಣ್ಣು ಪಾತ್ರಗಳು ದಾಸಿ, ಸಖಿ, ಪತಿವ್ರತೆಯ ಚೌಕಟ್ಟಿನಾಚೆ ಬೆಳೆಯದೇ ಪಾರಂಪರಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದರಲ್ಲೇ ಮಗ್ನವಾಗಿಬಿಡುತ್ತವೆ.


ಕನಕರೇ, ನೀವು ಸಖಿಗೀತ ಬರೆದಿರಿ. ಅವಳ ಪರವಾಗಿ ಹಾಡಿದಿರಿ, ಆಡಿದಿರಿ. ಆದರೆ ಸಖಿ ಮೌನವಾಗುಳಿದದ್ದನ್ನು ಗುರುತಿಸದೆ ಹೋದಿರಿ. ಎಂದೇ ಅವಳು ಒಳಮನಸು ತೆರೆಯದೆ ಮೊಲೆಜಘನಗಳ ತೋರಿಸುತ್ತ ಸುಮ್ಮನಿದ್ದುಬಿಟ್ಟಳು.

ಕ್ಷಮಿಸಿ, ಸಖಿಸತಿಯರಿಗೀಗ ಎದೆಬಿಚ್ಚಿ ಆಡಲೇಬೇಕಾದ ಕಾಲ ಬಂದಿದೆ..








Monday 8 June 2015

ನಿಜಾರ್ ಖಬ್ಬಾನಿ ಕವಿತೆ




ನಮ್ಮ ನೆಲ ಸೀಳುವ, 
ನಮ್ಮ ಇತಿಹಾಸ ಒರೆಸಿಹಾಕುವ
ಇಸ್ರೇಲಿನ ಬುಲ್ಡೋಜರುಗಳಿಗೆ ತಲೆಕೊಟ್ಟು 
ಸಾಯಲು ನಿರಾಕರಿಸಿದೆವಾದರೆ
ಭಯೋತ್ಪಾದನೆಯ ಗುನ್ನೆ ನಮ್ಮ ತಲೆಗೆ ಕಟ್ಟಲಾಗುತ್ತದೆ..

ಈ ಬುವಿಯ ಮೇಲಿಂದ
ಉಜ್ಜಿ ಒರೆಸಿ ಅಳಿಸಿ ನಾಶಮಾಡಿಕೊಳಲು  
ನಾವು ನಿರಾಕರಿಸಿದರೆ
ಭಯೋತ್ಪಾದನೆಯ ಅಪರಾಧ ನಮ್ಮದಾಗುತ್ತದೆ..

ಸೀಸರನ ಸೀಸರನು 
ತನ್ನ ಬೇಳೆ ಬೇಯಿಸಿಕೊಳಲು
ಭದ್ರತಾ ಮಂಡಳಿಯೆಂಬ ಗಾಜಿನ ಮನೆಯ 
ವಶಮಾಡಿಕೊಂಡಿರುವಾಗ 
ಕಲ್ಲೊಗೆದ ನಮಗೆ
ಭಯೋತ್ಪಾದನೆಯ ಪಟ್ಟ ದೊರೆಯುತ್ತದೆ..

ತೋಳದೊಡನೆ ಒಪ್ಪಂದ ನಿರಾಕರಿಸಿದರೆ
ಭಯೋತ್ಪಾದನೆಯ ಗುನ್ನೆ ತಲೆಗೇರುತ್ತದೆ..

ನಮ್ಮ ನೆಲ, ಅದರ ಧೂಳಿನ ಮಾನ
ನಾವು ಕಾದುಕೊಂಡರೆ;
ನಮ್ಮವರ ಅತ್ಯಾಚಾರ 
ನಮ್ಮದೇ ಅತ್ಯಾಚಾರವ 
ದಿಟ್ಟವಾಗಿ ವಿರೋಧಿಸಿದರೆ;
ನಮ್ಮ ಆಗಸದ ಕೊನೆಯ ತಾರೆಗಳ
ಮುಚ್ಚಿಟ್ಟು, ಕಾಪಿಟ್ಟುಕೊಂಡರೆ;
ಭಯೋತ್ಪಾದನೆಯ ಕಿರೀಟ ತೊಡಿಸಲಾಗುತ್ತದೆ

ಇದು, ಇವು, ಈ ಭಯೋತ್ಪಾದನೆ
ಪಾಪವೇ ಆದಲ್ಲಿ
ಭಯೋತ್ಪಾದನೆ ಎಷ್ಟು ಸುಂದರ!
ನಾನು ಭಯೋತ್ಪಾದನೆಯ ಪರ.
ಎಲ್ಲಿಯವರೆಗೆ ಹೊಸ ಜಗತ್ತು
ನನ್ನ ಸಂತತಿಯ ಕೊಚ್ಚಿ ಕಡಿದು
ನಾಯಿಪಾಲು ಮಾಡುವುದೋ,
ನಾನು ದನಿಯೆತ್ತಿ ಹೇಳುವವನಿದ್ದೇನೆ ಅಲ್ಲಿಯತನಕ 
ನಾನು ಭಯೋತ್ಪಾದನೆಯ ಪರ..

-