Sunday 22 November 2015

ಟಿಪ್ಪು: ಚರಿತ್ರೆಯ ಕಾಲದ ನಾಣ್ಯ







ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು. ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು. ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು. ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ, ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶ್ರಿಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ; ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು.

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ? ವಸಾಹತುಶಾಹಿ ಕಾಲದ ರಾಜನಿಗೆ ಪ್ರಜಾಪ್ರಭುತ್ವ ಭಾರತಕ್ಕೆ ಮಾದರಿಯಾಗುವ ಸೆಕ್ಯುಲರ್ ಲಕ್ಷಣಗಳಿದ್ದವೆ? ಮುಸ್ಲಿಂ ಸಮುದಾಯದ ಬದುಕು ಸುಧಾರಿಸುವುದು ಆಳುವವರ ಇಂಥ ನಡೆಗಳಿಂದಲೇ? ಎಂದು ವಸ್ತುನಿಷ್ಠವಾಗಿ ನೋಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಕಾಲದ ನಡಿಗೆಯ ಯಾವುದೇ ಒಂದು ಬಿಂದುವಿನಲ್ಲಿ ಇಟ್ಟ ಹೆಜ್ಜೆ ಮತ್ತು ಆಯ್ಕೆ ತಪ್ಪಾದರೆ ಅದರ ಜವಾಬ್ದಾರಿಗಳನ್ನು ಆ ಕಾಲದ ಎಲ್ಲರೂ ಸಮವಾಗಿ ಹೊತ್ತುಕೊಳ್ಳಬೇಕಾಗುತ್ತದೆ.


ಟಿಪ್ಪು ಚರಿತ್ರೆಕಾಲದ ಒಂದು ನಾಣ್ಯ. ಈ ಮಾತು ಟಿಪ್ಪುವಿಗಷ್ಟೆ ಅಲ್ಲ, ಬಹುಪಾಲು ಚಾರಿತ್ರಿಕ ವ್ಯಕ್ತಿಗಳಿಗೆ, ಅದರಲ್ಲೂ ರಾಜರಿಗೆ ಅನ್ವಯಿಸುತ್ತದೆ. ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ.


ನಾಣ್ಯ ಒಂದು: ಯುದ್ಧ-ಆಡಳಿತ

ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.

ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.

ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು. ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ. ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ.



ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.

ಆದರೆ..

ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು. ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು. ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ. ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು.


ಹೆತ್ತವಳ ಒಡಲ ಸಂಕಟವೇನಾಗಿತ್ತೋ, ಸ್ವಂತ ಮಕ್ಕಳ ಒತ್ತೆಯಿಟ್ಟದ್ದು ಅನನ್ಯ ದೇಶಪ್ರೇಮವೆಂದು ಕೊಂಡಾಡಲ್ಪಟ್ಟಿತು.

ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆ ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ ಸಲಹಾಕಾರನಾಗಿದ್ದ ಫ್ರೆಂಚ್ ಅಧಿಕಾರಿ ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಹೇಳಿದ. ಆದರೆ ‘ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮವೆಂದು ಟಿಪ್ಪು ಹೋರಾಟವನ್ನೇ ಆಯ್ದುಕೊಂಡ.



ಹುಲಿಯಂತೆ ಬದುಕಬೇಕೆಂದು ತಮ್ಮ ರಾಜ ಬಯಸಿದ್ದಕ್ಕೆ ಮೈಸೂರಿನ ೧೧,೦೦೦ ಸೈನಿಕರು ಪ್ರಾಣ ತೆರಬೇಕಾಯಿತು. ಕಾವೇರಿ ಕೆಂಪಾಗಿ ಹರಿಯಿತು.

ನಾಣ್ಯ ೨: ಸ್ವದೇಶಿ  - ಪರದೇಶಿ





ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.

ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ. ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ.  

ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ. ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.

ಈ ಸಂಕೀರ್ಣ ಸಂಬಂಧಗಳಲ್ಲಿ ಯಾರು ಸ್ವದೇಶಿ, ಯಾರು ಪರದೇಶಿ? ಅವೆಲ್ಲ ದೇಶಕಾಲಗಳಷ್ಟೇ ನಿರ್ಧರಿಸಬೇಕಾದ ಸಂಗತಿ.



ನಮ್ಮೂರು ಉತ್ತರಕನ್ನಡದ ಹೊನ್ನಾವರ ಕುರಿತು ವಸಾಹತುಶಾಹಿಗಳಿಗೆ, ಆದಿಲ್ ಶಾಹಿಗಳಿಗೆ, ಆಚೀಚಿನ ಪಾಳೆಯಪಟ್ಟುಗಳಿಗೆ, ಮೈಸೂರರಸರಿಗೆ ಬಹಳ ಆಕರ್ಷಣೆ. ಏಕೆಂದರೆ ಅದು ೨೦೦-೩೦೦ ಟನ್ ತೂಕದ ಹಡಗುಗಳನ್ನು ನಿಲ್ಲಿಸಬಲ್ಲ ಪ್ರಾಕೃತಿಕ ಬಂದರಾಗಿತ್ತು. ೧೭೬೩ರಲ್ಲಿ ಬಿದನೂರನ್ನು ತನ್ನ ಆಡಳಿತ ಕೇಂದ್ರವಾಗಿ ಮಾಡಿಕೊಂಡ ಹೈದರಾಲಿ ಹೊನ್ನಾವರ ಮತ್ತು ಮಂಗಳೂರಿನಲ್ಲಿ ನೌಕಾಸೈನ್ಯ ಇಟ್ಟ. ೧೭೬೯ರಲ್ಲಿ ಬ್ರಿಟಿಷ್ ಪಡೆ ಅವನ ವಿರುದ್ಧ ದಂಡೆತ್ತಿ ಬಂದಾಗ ಹೈದರಾಲಿಯ ಅಶ್ವದಳ ಅವನಿಗೇ ತಿರುಗಿ ಬಿದ್ದು ಹೊನ್ನಾವರ ಕೈತಪ್ಪಿ ಹೋಯಿತು. ಅದನ್ನು ಮತ್ತೆ ಹೈದರಾಲಿ ವಶಪಡಿಸಿಕೊಂಡ. ಆದರೆ ೧೭೮೪ರಲ್ಲಿ ಕ್ಯಾಪ್ಟನ್ ಟೋರಿಯಾನೋ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಮೂರು ತಿಂಗಳ ಕಾಲ ಹೊನ್ನಾವರ ಬಂದರವನ್ನು ತನ್ನ ವಶದಲ್ಲಿ ಇಟ್ಟುಕೊಂಡಾಗ ಅವನಿಂದ ಹೊನ್ನಾವರವನ್ನು ಗೆದ್ದ ಟಿಪ್ಪು ಶಹರವನ್ನು ಸಂಪೂರ್ಣ ನಾಶಮಾಡಿದ. ಮೊದಲು ವ್ಯಾಪಾರೀ ಕೇಂದ್ರವಾಗಿ ಜನರಿಂದ ಗಿಜಿಗಿಜಿಗುಡುತ್ತಿದ್ದ ಬಂದರವು ಸುಟ್ಟು, ನಿರ್ಜನ ಸುಡುಗಾಡಿನಂತಾಯಿತು. ೧೭೯೯ರಲ್ಲಿ ಅವನ ಮರಣಾನಂತರ ಐದು ಅಂಗಡಿಗಳು ಹೊನ್ನಾವರದಲ್ಲಿ ತೆರೆಯಲ್ಪಟ್ಟವು. ೧೮೦೦ರಲ್ಲಿ ಒಂದೇಒಂದು ವಾಸದ ಮನೆಯೂ ಇಲ್ಲಿರಲಿಲ್ಲ. ೧೮೦೧ರಲ್ಲಿ ಬಂದಿದ್ದ ಪ್ರವಾಸಿ ಬುಕಾನನ್ ಅಲ್ಲಿಲ್ಲಿ ಅಡಗಿಕೊಂಡಿದ್ದ ವ್ಯಾಪಾರಿಗಳೆಲ್ಲ ಈಗ ಒಬ್ಬೊಬ್ಬರಾಗಿ ಹಿಂದಿರುಗಿ ಬರುತ್ತಿದ್ದಾರೆಂದು ಬರೆದ.

ತನ್ನ ರಾಜ್ಯದ ಗಡಿಯಾಚೆ ಇರುವ, ಬೇರೆ ಭಾಷೆ ಆಡುವ, ಬೇರೆ ದಿರಿಸು ತೊಡುವ, ತನ್ನ ದೇವರನ್ನು ನಂಬದ ಎಲ್ಲರೂ ಶತ್ರು/ಅನ್ಯ ಎಂಬ ಭಾವವೇ ರಾಷ್ಟ್ರೀಯತೆಯಾಗಿದ್ದ ಕಾಲದಲ್ಲಿ ಯಾವುದು ದೇಶಭಕ್ತಿ, ಯಾವುದು ದೇಶದ್ರೋಹ? ಅದನ್ನು ಈ ಕಾಲದಲ್ಲಿ ನಿರ್ಧರಿಸಬಹುದೆ?

ನಾಣ್ಯ ೩: ಧರ್ಮಾಂಧ - ಧರ್ಮ ಸಹಿಷ್ಣು

ಟಿಪ್ಪು ಹಿಂದೂ ಬಹುಸಂಖ್ಯಾತರ ಪ್ರದೇಶವನ್ನು ಆಳುತ್ತಿದ್ದ ಮುಸ್ಲಿಂ ರಾಜ. ಆಸ್ಥಾನದ ಮುಖ್ಯ ಸ್ಥಾನಗಳಲ್ಲಿ ಹಿಂದೂಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ನೇಮಿಸಿಕೊಂಡಿದ್ದ. ಆತ ‘ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಲ್ಪಟ್ಟ. ಅದು ಹೈದರಾಲಿಯ ರಾಜನೀತಿಯಾಗಿತ್ತು. ದಿವಾನ್ ಪೂರ್ಣಯ್ಯನಿಂದ ಹಿಡಿದು ಖಜಾಂಚಿಯವರೆಗೆ ಬಹಳ ಜಾಗಗಳಲ್ಲಿ ಮುಸ್ಲಿಮೇತರರು ಆಸ್ಥಾನದ ಸೇವೆಯಲ್ಲಿದ್ದರು. ೧೫೬ ದೇವಾಲಯಗಳಿಗೆ ನಿಯಮಿತ ವಾರ್ಷಿಕ ದತ್ತಿ ನೀಡುತ್ತಿದ್ದ. ಎಷ್ಟೋ ದೇವಾಲಯಗಳಿಗೆ ಖಾಯಂ ಉತ್ಪನ್ನದ ಮಾರ್ಗವಾಗಿ ಭೂಮಿ ಉಂಬಳಿ ನೀಡಿದ. ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣದ ದೇವಾಲಯಗಳೂ ಸೇರಿದಂತೆ ಹಲವು ದೇವಾಲಯಗಳಿಗೆ ಚಿನ್ನ ಬೆಳ್ಳಿ ಉಡುಗೊರೆ ನೀಡಿದ. ೧೭೯೧ರಲ್ಲಿ ಮರಾಠರು ಶ್ರಿಂಗೇರಿ ಮಠ ಮತ್ತು ದೇವಾಲಯದ ಮೇಲೆ ದಾಳಿ ಮಾಡಿ, ಹಲವರನ್ನು ಕೊಂದು, ಲೂಟಿ ಮಾಡಿದಾಗ ಮಠದ ಸ್ವಾಮಿಗಳು ಸಹಾಯ ಕೋರಿ ಟಿಪ್ಪುವಿನೊಡನೆ ಪತ್ರ ವ್ಯವಹಾರ ನಡೆಸಿದರು. ಟಿಪ್ಪು ರಕ್ಷಣೆ ನೀಡಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆಯ ಸನಿಹವೇ ಇದ್ದ ರಂಗನಾಥ ಮಂದಿರದ ಪೂಜಾಧ್ವನಿಯೂ, ಮಸೀದಿಯ ಕರೆಯೂ ಒಟ್ಟೊಟ್ಟು ಕೇಳಿಬರುತ್ತಿದ್ದವು.

ಈ ವಿವರಗಳು ತನ್ನ ರಾಜ್ಯದಲ್ಲಿ ಅವ ಧರ್ಮಸಹಿಷ್ಣುವಾಗಿದ್ದ ಎಂದು ತಿಳಿಸುತ್ತವೆ.

ಆದರೆ ಅವನೇ ಹೇಳಿಕೊಂಡಂತೆ ಆತ ಇಸ್ಲಾಮಿನಲ್ಲಿ ಗಾಢ ನಂಬಿಕೆಯಿಟ್ಟು ಅಲ್ಲಾಹುವಿನ ರಾಜ್ಯ ತರಬಯಸಿದ್ದ ಘಾಜಿ. ರಾಜ್ಯದೆಲ್ಲೆಡೆ ಸಾಧ್ಯವಾದಷ್ಟು ಮಸೀದಿ ನಿರ್ಮಾಣ ಮಾಡಿದ. ತಾನು ಗೆದ್ದ ಪ್ರದೇಶಗಳ ಕಾಫಿರರನ್ನು ಕೊಂದ ಬಗ್ಗೆ, ಅವರನ್ನು ‘ಮತಾಂತರದ ಗೌರವಕ್ಕೊಳಪಡಿಸಿದ್ದರ ಬಗೆಗೆ ಹಲವು ಪತ್ರಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಮುಘಲ್ ಸಾಮ್ರಾಜ್ಯ ಅವನತಿ ಕಾಣುವ ಹೊತ್ತಿಗೆ ಉಚ್ಛ್ರಾಯ ಸ್ಥಿತಿಗೆ ಬಂದ ಟಿಪ್ಪು ಒಂದು ವಿಶಾಲ ಮುಸ್ಲಿಂ ಸಾಮ್ರಾಜ್ಯ ಕಟ್ಟುವ ಕನಸು ಹೊಂದಿ ಬಾದಶಾಹ್ ಎಂದು ತನ್ನನ್ನೇ ತಾನು ಕರೆದುಕೊಂಡ. ಮಾರ‍್ಕ್ವೆಸ್ ಆಫ್ ವೆಲ್ಲೆಸ್ಲಿಗೆ ಆತ ಉಡುಗೊರೆ ನೀಡಿದ ಕತ್ತಿಯ ಮೇಲೆ ಅಲ್ಲಾನ ರಾಜ್ಯ ಸ್ಥಾಪನೆಗೆ ತನ್ನ ಪ್ರಯತ್ನಗಳನ್ನು ಉತ್ಪ್ರೇಕ್ಷೆಯಿಂದ ವರ್ಣಿಸಿದ್ದಾನೆ. ಶ್ರೀರಂಗಪಟ್ಟಣ ಅರಮನೆಯ ಆವರಣದ ಒಂದು ಬಂಡೆಯ ಮೇಲೆ ‘ಕಾಫಿರರು ನಾಶವಾಗಲಿ, ಅವರ ಆಯಸ್ಸು ಕಡಿಮೆಯಾಗಲಿ, ಕುರುಡಾಗಲಿ, ಅವಮಾನಗೊಂಡು ಮುಖ ಕರಿ ಆಗಲಿ.. ಇತ್ಯಾದಿ ಕೆತ್ತಲಾಗಿದೆ.


೧೭೮೪ರಲ್ಲಿ ಮಂಗಳೂರು ಒಪ್ಪಂದವಾದದ್ದೇ ಅಲ್ಲಿದ್ದ ಕ್ಯಾಥೊಲಿಕ್ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಗಡೀಪಾರು ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ. ಥಾಮಸ್ ಮನ್ರೋ (ಮಂಗಳೂರು ಕಲೆಕ್ಟರ್) ಪ್ರಕಾರ ೬೦,೦೦೦ ಕ್ರೈಸ್ತರು ಬಂಧಿತರಾಗಿ ಶ್ರೀರಂಗಪಟ್ಟಣಕ್ಕೆ ಕಳಿಸಲ್ಪಟ್ಟರು. ೭೦೦೦ ಜನ ಪಾರಾದರು. ಆರು ವಾರ ಕಾಲ್ನಡಿಗೆಯಲ್ಲಿ ಘಟ್ಟ ಹತ್ತಿ ಶ್ರೀರಂಗಪಟ್ಟಣಕ್ಕೆ ಹೋದ ಬಂಧಿತರು ಅವನ ಸಾವಿನವರೆಗೂ ೧೫ ವರ್ಷ ಕಾಲ ಬಂಧಿತರಾಗಿಯೇ ಇದ್ದರು. ಬಂಧಿತರಲ್ಲಿ ಒಬ್ಬನಾಗಿದ್ದ ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕರಿ ಪ್ರಕಾರ ೩೦,೦೦೦ ಜನರನ್ನು ಇಸ್ಲಾಮಿಗೆ ಮತಾಂತರಿಸಲಾಯ್ತು. (ಗೆಜೆಟಿಯರ್ ಪ್ರಕಾರ ೩೦,೦೦೦ ಜನರಿಗೆ ಬಲವಂತವಾಗಿ ಸುನ್ನತಿ ನಡೆಸಿ ಮೈಸೂರಿಗೆ ಕಳಿಸಲಾಯಿತು.) ಹೊತ್ತುತಂದ ಹೆಂಗಸರು, ಸಣ್ಣ ಹೆಣ್ಮಕ್ಕಳನ್ನು ಅವನ ಸೈನ್ಯದವರು ‘ಇಟ್ಟುಕೊಂಡರು ಅಥವಾ ಮದುವೆ ಮಾಡಿಕೊಂಡರು. ಪ್ರತಿರೋಧ ತೋರಿದವರ ಮೂಗು, ಕಿವಿ, ಮೇಲ್ದುಟಿ ಕತ್ತರಿಸಲಾಯಿತು. ಫಾದರ್ ಮಿರಾಂಡಾ ಸೇರಿದಂತೆ ೨೧ ಜನ ಪಾದ್ರಿಗಳನ್ನು ವಾಪಸು ಬಂದರೆ ನೇಣಿಗೇರಿಸುವುದಾಗಿ ಹೇಳಿ, ೨ ಲಕ್ಷ ರೂ. ದಂಡ ವಿಧಿಸಿ ಗೋವಾಕ್ಕೆ ಗಡೀಪಾರು ಮಾಡಲಾಯಿತು. ಮಂಗಳೂರಿನ ೨೭ ಚರ್ಚುಗಳನ್ನು ನೆಲಸಮ ಮಾಡಲಾಯಿತು. ಸ್ಕರಿ ನಂತರ ನೆನಪಿಸಿಕೊಳ್ಳುವಂತೆ ಬ್ರಿಟಿಷ್ ಸೈನಿಕರ ಮೇಲೆ ಅವನ ಸೇಡು ವಿಶೇಷವಾಗಿರುತ್ತಿತ್ತು. ಬಲವಂತದ ಸುನ್ನತಿಗೊಳಪಡಿಸಲಾಗುತ್ತಿತ್ತು. ಅವರು ಹೆಂಗಸರಂತೆ ಚೋಲಿ ಧರಿಸಿ ಆಸ್ಥಾನದಲ್ಲಿ ನರ್ತನ ಮಾಡಬೇಕಿತ್ತು. ಅವನು ಬಿಡುಗಡೆಯಾದಾಗ ಕುರ್ಚಿ ಮೇಲೆ ಕೂರುವುದು, ನೈಫ್ ಪೋರ‍್ಕ್ ಬಳಸುವುದನ್ನೇ ಮರೆತುಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾನೆ.

ಮಲಬಾರಿನ, ತಂಜಾವೂರಿನವರ, ಕೊಡಗಿನವರ ಸಾಂಸ್ಕೃತಿಕ ನೆನಪುಗಳಲ್ಲಿ ಟಿಪ್ಪುವಿನ ಕೆಲವು ಉದಾತ್ತ ನಡವಳಿಕೆಗಳ ಉಲ್ಲೇಖವಿದ್ದರೂ, ಅವನ ಕ್ರೌರ್ಯದ ಕತೆಗಳ ಸಂಖ್ಯೆ ದೊಡ್ಡದಿದೆ. ೧೭೬೩ರಲ್ಲಿ ಹೈದರಾಲಿ ಮೊದಲ ಬಾರಿಗೆ ಮಲಬಾರನ್ನು ಆಕ್ರಮಿಸಿದಾಗ ಸಣ್ಣಪುಟ್ಟ ದೊರೆಗಳು ತಿರುವಾಂಕೂರಿಗೆ ಓಡಿಹೋದರು. ಕಲ್ಲಿಕೋಟೆಯ ಜಾಮೊರಿನ್ ದೊರೆ ತನ್ನ ಅರಮನೆಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡ. ನಾಯರ್ ಸಮುದಾಯವು ಟಿಪ್ಪುವಿನ ಯುದ್ಧ-ತಂತ್ರಗಳಲ್ಲಿ ಇನ್ನಿಲ್ಲದ ಹೊಡೆತ ತಿಂದಿತು. ಇತಿಹಾಸಕಾರರ ಪ್ರಕಾರ ಕೇರಳದ ಎಲ್ಲ ಸೈನಿಕರು ಹೆಚ್ಚುಕಮ್ಮಿ ನಾಯರ್ ಸಮುದಾಯದವರು. ಅವರ ಜನಸಂಖ್ಯೆ ಅಂದಿನ ಕೇರಳದ ಜನಸಂಖ್ಯೆಯ ಐದನೇ ಒಂದು ಭಾಗ. ಮಲಬಾರನ್ನು ಮೈಸೂರಿನ ಸೇನೆ ಸುತ್ತುವರೆದಾಗ ಆರು ರಾಜವಂಶಗಳು ಮತ್ತು ಬಹಳಷ್ಟು ನಾಯರ್ ಕುಟುಂಬಗಳು ತಿರುವಾಂಕೂರಿನ ‘ಧರ್ಮರಾಜನ ಆಶ್ರಯಕ್ಕೆ ಓಡಿಹೋದವು. ಧರ್ಮರಾಜನ ಪ್ರಬಲ ಕೋಟೆ ತಮ್ಮನ್ನು ಕಾಪಾಡೀತೆಂಬ ನಂಬಿಕೆ ಅವರದು. ಆದರೆ ೧೭೮೯ರ ಯುದ್ಧದಲ್ಲಿ ಆ ಕೋಟೆ ನುಚ್ಚುನೂರಾದಾಗ ಬಹಳಷ್ಟು ನಾಯರ್‌ಗಳು ಕಾಡಿಗೆ ಓಡಿಹೋದರು. ಕೆಲವರು ಸೈನಿಕರ ಕೈಗೆ ಸಿಕ್ಕು ಇಸ್ಲಾಮಿಗೆ ಮತಾಂತರಗೊಂಡರು. ಭೂಮಿ, ಶಸ್ತ್ರಾಸ್ತ್ರ, ಹಕ್ಕು ಕಳೆದುಕೊಂಡ ಕಾಡುಪಾಲಾದ ನಾಯರ್‌ಗಳು ಸುಮ್ಮನಿರಲಿಲ್ಲ. ಪದೇಪದೇ ಒಗ್ಗೂಡಿ ದಾಳಿ ನಡೆಸುತ್ತಿದ್ದರು. ಇದನ್ನು ಕೆ. ಎಂ. ಫಣಿಕ್ಕರ್ ಸ್ವಾತಂತ್ರ್ಯ ಹೋರಾಟ ಎಂದು ಕರೆಯುತ್ತಾರೆ. ಆಗ ಮಲಬಾರಿನಲ್ಲಿದ್ದ ಬಹುವಿವಾಹ ಮತ್ತು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಟಿಪ್ಪು ನಿರ್ಬಂಧಿಸಿದ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಹೆಂಗಸರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಲಾಗುವುದು ಎಂಬ ಬಹಿರಂಗ ಪ್ರಕಟಣೆ ಕೊಟ್ಟ. ೨೫ ವರ್ಷ ಇದು ಹಾಗೇ ಮುಂದುವರೆಯಿತು. ಬೇಕಲಕೋಟೆಯ ಗವರ್ನರ್ ಬುದ್ರೂಜ್ ಖಾನನಿಗೆ ಬರೆದ ಪತ್ರದಲ್ಲಿ ಟಿಪ್ಪು, ೪ ಲಕ್ಷ ಹಿಂದೂಗಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಲಾಗಿದ್ದು ತಿರುವಾಂಕೂರಿನ ರಾಮನ್ ನಾಯರನನ್ನೂ, ಅವನ ಪ್ರಜೆಗಳನ್ನೂ ಮತಾಂತರಗೊಳಿಸುವ ಕನಸೇ ರೋಮಾಂಚಕಾರಿ ಎಂದು ಹೇಳಿಕೊಂಡಿದ್ದಾನೆ.

ಆದರೆ ಟಿಪ್ಪುವಷ್ಟೇ ಅಲ್ಲ, ಆ ಕಾಲದ ಎಲ್ಲ ರಾಜರೂ ತಂತಮ್ಮ ಧರ್ಮ ರಕ್ಷಿಸುವ. ಧರ್ಮ ಕಾರ್ಯಗಳ ಉತ್ಪ್ರೇಕ್ಷಿಸಿ ಹೇಳುವ ಪರಿಪಾಠ ಇಟ್ಟುಕೊಂಡಿದ್ದರು. ಟಿಪ್ಪುವಿನಿಂದ ತಮ್ಮನ್ನು ಕಾಪಾಡುವನೆಂದು ಜನ ನಂಬಿದ ‘ಧರ್ಮರಾಜ - ಆಧುನಿಕ ತಿರುವಾಂಕೂರು ಜನಕ ಮಾರ್ತಾಂಡ ವರ್ಮನಾದರೂ ಎಂಥವನಾಗಿದ್ದ? ಆತ ಡಚ್ ವಸಾಹತುಶಾಹಿಯ ಅವನತಿಗೆ ನಿರ್ಣಾಯಕ ಕೊನೆ ಹಾಡಿದ ಭಾರತದ ರಾಜನೇನೋ ಹೌದು. ಆದರೆ ಅದಕ್ಕೂ ಮುನ್ನ ಪಟ್ಟವೇರಲು ಸೋದರ ಸಂಬಂಧಿಗಳ ಕಗ್ಗೊಲೆ ನಡೆಸಿ, ಅವರ ಹೆಂಡಿರನ್ನು ಮೀನುಗಾರರಿಗೆ ‘ಇಟ್ಟುಕೊಳ್ಳಲು ಕೊಟ್ಟು; ಅವರ ಅರಮನೆಗಳ ನಾಶಮಾಡಿ, ಅಲ್ಲಿ ಗುಂಡಿ ತೋಡಿಸಿ ಕೆರೆಕಟ್ಟೆ ಕಟ್ಟಿಸಿದ್ದ!

ಮಲಬಾರಿನ ಜನ ಮಾರ್ತಾಂಡವರ್ಮನ ಬೆಂಕಿಯಿಂದ ಮೈಸೂರಿನ ಟಿಪ್ಪು ಬಾಣಲೆಗೆ ಬಿದ್ದರು. ಇವರಲ್ಲಿ ಯಾರ ನಡೆ ಜನಪರ, ಯಾರ ನಡೆ ಜನವಿರೋಧಿ ಎಂದು ಈ ಕಾಲದಲ್ಲಿ ನಿಂತ ನಾವು ಹೇಳುವುದು?

ಕೊಡಗನ್ನು ವಶಪಡಿಸಿಕೊಳ್ಳಲು ಹೈದರಾಲಿ ಮತ್ತು ಟಿಪ್ಪು ಪದೇಪದೇ ಆಕ್ರಮಣ ನಡೆಸಿದರು. ಅದಕ್ಕೆ ಮುಖ್ಯ ಕಾರಣ ಕೊಡಗು ವಶವಾದರೆ ಮಂಗಳೂರು ಬಂದರಿನ ಒಡೆತನ ಸಿಗುವುದೆನ್ನುವುದು. ಆದರೆ ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯಪ್ರೇಮಿ ಕೊಡವರು ಎಂದೂ ಮಣಿಯಲಿಲ್ಲ. ತಮ್ಮ ಗುಡ್ಡಬೆಟ್ಟಗಳ ನಾಡಿನಲ್ಲಿ ಗೆರಿಲ್ಲಾ ಯುದ್ಧತಂತ್ರಗಳ ಮೂಲಕ ಅವನ ಸೇನೆಯನ್ನು ಸದಾ ಮಣಿಸಿದರು. ಹೀಗಿರುತ್ತ ಸ್ನೇಹಹಸ್ತ ಚಾಚಿ ಟಿಪ್ಪು ಮಡಿಕೇರಿಗೆ ಹೋದ. ಈ ಸಮ್ಮಿಲನಕ್ಕೆ ಭಾರೀ ಸಂಖ್ಯೆಯ ಕೊಡವರು ರಾಜಧಾನಿಯಲ್ಲಿ ಸೇರಿದರು. ಆಗ ಇದ್ದಕ್ಕಿದ್ದಂತೆ ಅವರ ಮೇಲೆ ಕರ್ನೂಲಿನ ನವಾಬ ಸೇನೆಯೊಂದಿಗೆ ಎರಗಿದ. ಅವ ಟಿಪ್ಪುವಿನ ಗೆಳೆಯ, ಅದು ಟಿಪ್ಪುವಿನ ತಂತ್ರವೇ ಆಗಿತ್ತು. ೫೦೦ ಕೊಡವರು ಅಲ್ಲೆ ಸತ್ತರು. ೪೦,೦೦೦ ಜನ ಕಾಡಿಗೆ ಓಡಿದರು. ರಾಜನೊಡನೆ ಸಾವಿರಾರು ಜನರನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೊಯ್ಯಲಾಯಿತು. ಹಿಂಸೆ, ಸಾವು, ಬಲವಂತದ ಮತಾಂತರ.. ಈ ಸಂಖ್ಯೆ ಅವನ ಆಸ್ಥಾನ ಇತಿಹಾಸಕಾರರದೂ ಸೇರಿದಂತೆ ೭೦೦೦೦-೮೫೦೦೦ ನಡುವೆ ತೂಗಾಡುತ್ತದೆ. ಈ ಸಂಖ್ಯೆಗಳಲ್ಲಿ ಯಾವುದು ನಿಜ? ಯಾವುದು ಉತ್ಪ್ರೇಕ್ಷೆ? ಈ ದಾಖಲೆಗಳು ನಂಬಲರ್ಹವೆ?

ಒಟ್ಟಾರೆ ಚರಿತ್ರೆಯೊಂದು ಕಣಜದ ಗೂಡು. ಕೈಹಾಕಿದರೆ ಅವು ಕುಟುಕಿಯಾವೇ ಹೊರತು ಒಂದು ಹನಿ ಮಧುವೂ ದೊರೆಯಲಾರದು.

ರಾಜರ ಕಿಂಗ್‌ಸೈಜ್ ಅಹಮು: ಬಲಿಪಶು ಯಾರು?


ಇದು ನಾಣ್ಯದ ಎರಡು ಮುಖಗಳ ಅವಲೋಕನ. ಬಹುಶಃ ಚರಿತ್ರೆಯ ಯಾವ ಪುಟ ತೆರೆದರೂ ಅದಕ್ಕೆ ಎರಡೆರೆಡು ಅರ್ಥ, ಸಾಧ್ಯತೆಗಳು ಇದ್ದೇ ಇವೆ. ಮಧ್ಯಯುಗದಲ್ಲಿ ಈ ನೆಲವನ್ನಾಳಿದ ಛಪ್ಪನ್ನಾರು ನೃಪತಿಗಳಲ್ಲಿ ಯಾವುದೇ ರಾಜನ ಚರಿತ್ರೆ ತೆಗೆಯಿರಿ, ಅವರು ತಂತಮ್ಮ ಮನೆತನದವರನ್ನು/ರಾಜ್ಯದವರನ್ನು ಕೊಲ್ಲಿಸಿ ಪಟ್ಟಕ್ಕೆ ಬಂದಿದ್ದಾರೆ. ಹೆಂಗಸರ ಮೇಲೆ, ಅದರಲ್ಲೂ ಶತ್ರು ರಾಜ್ಯದ ಹೆಂಗಸರ ಮೇಲೆ ಇನ್ನಿಲ್ಲದಂತೆ ದೌರ್ಜನ್ಯವೆಸಗಿದ್ದಾರೆ. ವಿರೋಧಿ ರಾಜನ ಧರ್ಮ ಮತ್ತು ರಾಜಸ್ವದ ಕುರುಹುಗಳನ್ನು ನಿರ್ದಯವಾಗಿ ನಾಶ ಮಾಡಿದ್ದಾರೆ. ಎಲ್ಲೋ ಅಪರೂಪಕ್ಕೊಬ್ಬ ಛತ್ರಪತಿ ಶಾಹೂ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂಥವರನ್ನು ಬಿಟ್ಟರೆ ಎಲ್ಲ ರಾಷ್ಟ್ರೀಯತೆಗಳು ತಮ್ಮ ‘ಕುಲ ತಿಲಕರೆಂದು ಆರಾಧಿಸುವ ರಾಜರುಗಳು ಲೆಕ್ಕವಿಲ್ಲದಷ್ಟು ಹೆಂಗಸರು ವಿಧವೆಯರಾಗಲು; ಸತಿ ಹೋಗಲು ಕಾರಣರಾಗಿದ್ದಾರೆ. ರಾಜರ ದೇಶಪ್ರೇಮವೆಂಬ ವೈಯಕ್ತಿಕ ಪ್ರತಿಷ್ಠೆ ಕಾಯಲು ಯುದ್ಧ ಮಾಡಿ ಇನ್ನೆಷ್ಟೊ ಜನ ಅಂಗವಿಕಲರಾಗಿ, ಮತ್ತಿನ್ನೆಷ್ಟೊ ಬಡ, ರೈತಾಪಿ ಜನರು ಯುದ್ಧದ ಖರ್ಚು ತೆರಲು ಅರೆಹೊಟ್ಟೆಯಲ್ಲಿ ಸತ್ತಿದ್ದಾರೆ. ರಾಜರು ಕೊಟ್ಟ ಕೋಟಿಗಟ್ಟಲೆ ರೂಪಾಯಿ ದಂಡ, ಯುದ್ಧಖರ್ಚು ಎಲ್ಲಿಂದ ಬಂತು? ಅವೆಲ್ಲ ತನ್ನ ರಾಜ್ಯದ ಅಥವಾ ಗೆದ್ದ ರಾಜ್ಯದ ಬಡರೈತರನ್ನು, ಜನಸಾಮಾನ್ಯರನ್ನು ಸುಲಿದೇ ಬಂತು.

ಹೀಗೆ ರಾಜರುಗಳ ಕಿಂಗ್ ಸೈಜ್ ಅಹಮನ್ನು ಪೋಷಿಸಲು ಜನಸಾಮಾನ್ಯ ತೆತ್ತ ಬೆಲೆ ಗಮನಿಸಿದರೆ; ರಾಜತ್ವ, ಶೌರ್ಯ ಮತ್ತು ರಾಷ್ಟ್ರೀಯತೆಯ ಆಚೆಗೆ ಗಮನ ಹರಿಸಿದರೆ ಕೆಡುಕಿಲ್ಲದೆ ಯಾವ ರಾಜನ ಇತಿಹಾಸವೂ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ರಾಜ್ಯ, ಪಟ್ಟ, ಸಿಂಹಾಸನ ಗಳಿಸಿ ಉಳಿಸಿಕೊಳ್ಳಲು ಆ ಕಾಲದ ರಾಜರಿಗೆ ಅದು ಅವಶ್ಯವಾಗಿದ್ದಿರಲೂಬಹುದು. ಏಕೆಂದರೆ ಆಗಿನ್ನೂ ಮಾರ್ಕ್ಸ್, ಲಿಂಕನ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಹುಟ್ಟಿರಲಿಲ್ಲ. ಆಗಿನ್ನೂ ಪ್ರಜಾಪ್ರಭುತ್ವದ ಕನಸು ಯಾರಿಗೂ ಬಿದ್ದಿರಲಿಲ್ಲ. ಅದರಲ್ಲೂ ಬುದ್ಧನ ಮರೆತ ಭಾರತವು ಆಂತರಿಕ ಯುದ್ಧಗಳಲ್ಲಿ ಹರಿಸಿದ ರಕ್ತಹೊಳೆ ಅರಬಿ ಸಾಗರವನ್ನೂ, ಬಂಗಾಳ ಕೊಲ್ಲಿಯನ್ನೂ, ಹಿಂದೂ ಸಾಗರವನ್ನೂ ಕೆಂಪಾಗಿಸಿತ್ತು.

ಇರಲಿ, ಅವರೆಲ್ಲ ಹಾಗಿದ್ದರು, ಆಗಿಹೋಯಿತು.

ಆದರೆ ಕರ್ನಾಟಕದ ಹಿಂದೂ/ಕ್ರೈಸ್ತ/ಮುಸ್ಲಿಂ ಧಾರ್ಮಿಕ ಸಮುದಾಯಗಳ ನೆನಪುಗಳಲ್ಲಿ ತದ್ವಿರುದ್ಧ ಚಿತ್ರಣ ಹೊಂದಿದ ಎಂದೋ ಆಳಿದ ರಾಜ ಟಿಪ್ಪುವನ್ನು ಇವತ್ತು ಮುಸ್ಲಿಮರಿಗೆ ಐಡೆಂಟಿಟಿ ಕೊಡುವ ನಾಯಕನಂತೆ ಬಿಂಬಿಸುವುದು ಎಷ್ಟು ಸರಿ?

ಚರಿತ್ರೆಯಲ್ಲಿರಬೇಕಾದವರನ್ನು ಅಲ್ಲಿ ಹಾಗೇ ಬಿಡದೆ ಅವರನ್ನು ಎತ್ತಿ ತಂದು ಧರ್ಮಾಂಧನೋ, ಧರ್ಮ ಸಹಿಷ್ಣುವೋ; ದೇಶಭಕ್ತನೋ ದೇಶದ್ರೋಹಿಯೋ ಎಂದು ಚರ್ಚಿಸುವುದು; ಚರ್ಚೆ ಹುಟ್ಟುಹಾಕುವುದು ಅಳಿದ ರಾಜನಿಗೂ ಶೋಭೆಯಲ್ಲ. ಪ್ರಜಾಪ್ರಭುತ್ವದ ಸರ್ಕಾರಕ್ಕೆ ಖಂಡಿತಾ ಶೋಭೆಯಲ್ಲ. ಟಿಪ್ಪುವಿಗೆ ಹಜರತ್ ಎಂದು ಸಂಬೋಧಿಸಿ ಜಯಂತಿ ಆಚರಿಸುವ ಸರ್ಕಾರದ ನಡೆ ಇತಿಹಾಸವನ್ನು ಕೋಮುವಾದೀಕರಣಗೊಳಿಸಲು ಸಹಾಯಮಾಡುವುದಷ್ಟೇ ಅಲ್ಲ, ವಸ್ತುನಿಷ್ಠವಾಗಿ ಇತಿಹಾಸವನ್ನು ತಿಳಿಯದಂತೆಯೂ ಮಾಡುತ್ತದೆ.

ಸಂಘಪರಿವಾರದ ಸಂಘಟನೆ, ಪಕ್ಷಗಳಿಗೆ ಮುಸಲ್ಮಾನರು ಎಂದರೆ ಅಬ್ದುಲ್ ಕಲಾಮರಂಥ ರುದ್ರವೀಣೆ ಬಾರಿಸುವ, ಸಂಸ್ಕೃತ ಕಲಿತು ವೇದ ಓದುವ, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಗೋವುಗಳು ಬೇಕು. ಅದೇ ಸೆಕ್ಯುಲರ್ ಕಾಂಗ್ರೆಸ್ಸಿಗೆ ಸಂಘಪರಿವಾರವು ಖಂಡತುಂಡ ವಿರೋಧಿಸುವ ಟಿಪ್ಪುವಿನಂಥ ರಾಜನೇ ಏಕೆ ಬೇಕು? ಉಳಿದೆಲ್ಲ ಜಾತಿ, ಸಮುದಾಯಗಳಿಗೆ ವಾಲ್ಮೀಕಿ, ಕನಕ, ನಾರಾಯಣ ಗುರು, ಬಸವಣ್ಣನಂತಹ ಸಾಂಸ್ಕೃತಿಕ ಅಥವಾ ಸಮಾಜ ಸುಧಾರಣೆಗೆ ಶ್ರಮಿಸಿದ ಸುಧಾರಣಾವಾದಿ ನಾಯಕರಿದ್ದರೆ ಮುಸ್ಲಿಮರಿಗೆ ಮಾತ್ರ ಅಳಿದ ರಾಜನೊಬ್ಬನನ್ನು ಸಮುದಾಯದ ನಾಯಕನೆಂಬಂತೆ ಬಿಂಬಿಸುವುದು ಏಕೆ? ಷಿಯಾಸುನ್ನಿ, ಹಿಂದೂಮುಸ್ಲಿಂ ಭಾವೈಕ್ಯಕ್ಕೆ ಶ್ರಮಿಸಿದ ಬಿಜಾಪುರದ ದೊರೆ; ಗುಲಬರ್ಗಾದ ಸೂಫಿ ಬಂದೇ ನವಾಜರ ಶಿಷ್ಯ; ಕವಿ, ಕಲಾವಿದ ಇಬ್ರಾಹಿಂ ಆದಿಲ್ ಶಾಹ ಇವತ್ತು ಯಾರಿಗೂ ನೆನಪಾಗುತ್ತಿಲ್ಲ ಏಕೆ? ಶಿಶುನಾಳ ಶರೀಫರಾಗಲೀ, ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣಕ್ಕೆ ಶ್ರಮಿಸಿದ ಸರ್ ಸಯ್ಯದ್ ಅಹ್ಮದ್ ಖಾನ್ ಅವರಾಗಲೀ, ವರ್ತಮಾನಕ್ಕೆ ತಕ್ಕಂತೆ ಇಸ್ಲಾಮನ್ನು ಪ್ರಸ್ತುತಗೊಳಿಸಿದ ಅಸ್ಘರ್ ಅಲಿ ಇಂಜಿನಿಯರರಾಗಲೀ ಅಥವಾ ಈ ನಾಡಿನ ಉದ್ದಗಲ ಸೌಹಾರ್ದ ಬಾಳ್ವೆಗೆ ಶ್ರಮಿಸಿದ; ಇವತ್ತಿಗೂ ಅಳಿದುಳಿದ ಸೌಹಾರ್ದದ ನಿಜಕುರುಹುಗಳಾದ ದರ್ಗಾದ ಸಂತರಾಗಲೀ ಯಾರಿಗೂ ಬೇಕಾಗಿಲ್ಲ ಏಕೆ?

ಇನ್ನಾದರೂ ರಕ್ತ ಪಿಪಾಸುತನವೇ ಸಿಂಹಾಸನದ ಆಧಾರವಾಗಿದ್ದ ರಾಜ-ಗೌಡ-ನಾಯಕ-ಸುಲ್ತಾನ-ದೊರೆಗಳನ್ನು ನಮ್ಮ ವಿಮಾನ ನಿಲ್ದಾಣ, ಪಾರ್ಕು, ರೈಲ್ವೇಸ್ಟೇಷನ್ನು, ರಸ್ತೆಗಳಿಗೆ ಹೆಸರಾಗಿ ಇಡುವ, ರಾಜಾರಾಧನೆ ನಡೆಸುವ ಪರಿಪಾಠ ನಿಲಿಸಿ ಅವರವರ ಗೋರಿಗಳಲ್ಲಿ ಅವರು ಆರಾಮಾಗಿ ಮಲಗಲು ಬಿಡಬೇಕು. ಈ ನೆಲದ ಸಾಂಸ್ಕೃತಿಕ ಎಳೆಗಳ ಕಾಪಿಟ್ಟ, ಸೌಹಾರ್ದ ಕಾಪಾಡಿದ ಹೊಸಚಹರೆಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು.

ಇವತ್ತು ಮುಸ್ಲಿಂ ಧರ್ಮ ಮತ್ತು ಸಮುದಾಯ ಹಿಂದೆಂದಿಗಿಂತ ಒಳಸಂಕಷ್ಟವನ್ನೆದುರಿಸುತ್ತಿದೆ. ವಿಶ್ವದ ಅತಿ ಹೆಚ್ಚು ಸಿರಿವಂತರು ಹಾಗೂ ಅತಿ ಹೆಚ್ಚು ಬಡವರು ಇಸ್ಲಾಮಿನ ಅನುಯಾಯಿಗಳಾಗಿದ್ದಾರೆ. ಒಂದೆಡೆ ಬಂಡವಾಳದಿಂದ ಹರಿದು ಬರುವ ದುಡ್ಡು ಮೈಗೂಡಿಸುವ ಆಧುನಿಕತೆ; ಮತ್ತೊಂದೆಡೆ ಯಾವುದೂ ಬದಲಾಗಬಾರದೆನ್ನುವ ಗಾಢ ನಂಬಿಕೆಯ ಧರ್ಮ - ಈ ಎರಡರ ಹಗ್ಗಜಗ್ಗಾಟದಲ್ಲಿ ಕೊನೆಗು ಬಲಿಯಾಗುತ್ತಿರುವುದು ಯಾವುದು ಹಾಗೂ ಯಾರು ಎನ್ನುವುದರ ಬಗೆಗೆ ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜ ಚಿಂತಿಸಬೇಕಿದೆ. ಅದರಲ್ಲೂ ಬಡ, ಕೆಳವರ್ಗದವರೇ ಹೆಚ್ಚಿರುವ ಭಾರತದ ಮುಸ್ಲಿಮರು ಈ ದೇಶದಲ್ಲಿ ಧರ್ಮವನ್ನು ಎಷ್ಟು, ಹೇಗೆ ಇಟ್ಟುಕೊಳ್ಳಬೇಕೆಂದು ಯೋಚಿಸಬೇಕಿದೆ.

ಹೀಗಿರುತ್ತ ಕರ್ನಾಟಕದ ಮುಸ್ಲಿಮರಿಗೆ ಟಿಪ್ಪು ಜಯಂತಿ ಆಚರಿಸುವುದು ನೆಮ್ಮದಿಯ ಭಾವ, ಸುರಕ್ಷಿತ ಭಾವ ಮೂಡಿಸುವುದೆಂಬ ಭ್ರಮೆ ಸರ್ಕಾರ, ಸಮಾಜಕ್ಕೆ ಇದ್ದರೆ ಅದು ಆತ್ಮಘಾತುಕ ಭೋಳೇತನವಲ್ಲದೆ ಮತ್ತೇನಲ್ಲ. ಇನ್ನಾದರೂ ಪ್ರಜಾಪ್ರಭುತ್ವ ದೇಶದ ಸೆಕ್ಯುಲರ್ ಸರ್ಕಾರಗಳು ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳು ಮತ್ತು ಅದರ ಅನುಯಾಯಿಗಳಿಗೆ ಧರ್ಮವನ್ನು ಚಲನಶೀಲಗೊಳಿಸುವ ಅವಕಾಶ ಮಾಡಿಕೊಡಬೇಕು. ಒಳವಿಮರ್ಶೆ ಇಲ್ಲದೇ ಇರುವ ಯಾವುದೇ ಸಾಂಸ್ಥಿಕ ವ್ಯವಸ್ಥೆಯೂ ಜಡ್ಡುಗಟ್ಟಿ ಹೋಗುತ್ತದೆ. ಅದೇ ಹಾದಿಯಲ್ಲಿ ಧರ್ಮಗಳು ನಡೆಯದಂತೆ ತಡೆಯಲು ದಿಟ್ಟ ದನಿಗಳು ಕೇಳಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣ, ಉದ್ಯೋಗಾವಕಾಶ, ಸಮಾಜದ ಆಗುಹೋಗುಗಳಲ್ಲಿ ಒಳಗೊಳ್ಳುವಿಕೆ ಮುಂತಾದ ನಡೆಗಳು ಸಮುದಾಯವನ್ನು ಸುರಕ್ಷಿತ, ಸುಸ್ಥಿರ ಬದುಕಿಗೆ ಕೊಂಡೊಯ್ಯಬಲ್ಲವೇ ಹೊರತು ಜಾತಿ/ಧರ್ಮಕ್ಕೊಂದು ಜಯಂತಿ ಆಚರಿಸುವಂಥ ಸಾಂಕೇತಿಕ ಕ್ರಿಯೆಗಳಿಂದಲ್ಲ ಎಂದು ಆಳುವವರಿಗೆ ತಿಳಿಸಿಹೇಳಬೇಕು.
      


Tuesday 10 November 2015

ಸುರ್ಜಿತ್ ಪತಾರ್ ಪಂಜಾಬಿ ಕವಿತೆ




ಸುರ್ಜಿತ್ ಪತಾರ್ ಪಂಜಾಬಿಯ ಮುಖ್ಯ ಕವಿ. ಇದುವರೆಗೆ ೭ ಕವನ ಸಂಕಲನಗಳನ್ನೂ, ಒಂದು ಗದ್ಯ ಬರಹ ಸಂಕಲನವನ್ನೂ ಪ್ರಕಟಿಸಿದ್ದಾರೆ. ಹಲವು ಯೂರೋಪಿನ ನಾಟಕಗಳನ್ನು ಪಂಜಾಬಿಗೆ ರೂಪಾಂತರ ಮಾಡಿದ್ದಾರೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಸಮ್ಮಾನ ಗಳಿಸಿದ್ದಾರೆ.


೧ ನನ್ನಮ್ಮ ಮತ್ತು ನನ್ನ ಕವಿತೆ

ನನ್ನಮ್ಮನಿಗೆ ನನ್ನ ಕವಿತೆ ಅರ್ಥವೇ ಆಗುವುದಿಲ್ಲ
ಮಾತೃಭಾಷೆಯಲ್ಲೇ ನಾನು ಬರೆದಿದ್ದರೂ ಸಹಾ.

ಅವಳು ತಿಳಿದುಕೊಳ್ಳಲು ಆದದ್ದು ಇಷ್ಟೇ:
ತನ್ನ ಮಗನ ಮನದಲ್ಲಿ ಎಂಥದೋ ದುಃಖ ಮಡುಗಟ್ಟಿದೆ.

ಆದರೆ ನಾನಿಲ್ಲೆ ಇರುವಾಗ
ಈ ದುಃಖ ಅವನ ಬಳಿಗೆ ಬಂದದ್ದಾದರೂ ಹೇಗೆ?

ಅಕ್ಷರ ಅರಿಯದ ಅಮ್ಮ
ನನ್ನ ಕವಿತೆಯನ್ನು ಬಹುಸೂಕ್ಷ್ಮವಾಗಿ ಜಾಲಾಡಿದಳು
ತನಗೆ ತಾನೇ ಹೇಳಿಕೊಂಡಳು:
ನೋಡಿ ಮಹಾಜನರೇ, ಇಲ್ಲಿ ನೋಡಿ
ನಮ್ಮ ಹೊಟ್ಟೆಯಿಂದ ನಾವೇ ಹುಟ್ಟಿಸಿದ ನಮ್ಮ ಮಕ್ಕಳು
ತಮ್ಮ ದುಃಖವನ್ನು ಕಾಗದಕ್ಕೆ ಹೇಳುತ್ತಾರೆ,
ನಮಗಲ್ಲ.

ಅವಳು ಕಾಗದವ ತನ್ನೆದೆಗೆ ಒತ್ತಿ ಹಿಡಿದಳು
ಅದಾದರೂ
ತನ್ನನ್ನು ತನ್ನ ಮಗನ ಬಳಿ
ತಂದೀತೆಂಬ ಆಸೆಯಿಂದ..

೨ ಶಬುದಗಳು ಬಲು ಹಗುರ




ಶಬುದಗಳು ಬಲು ಹಗುರ
ಎಲ್ಲಿಂದಲಾದರೂ ಕಿತ್ತು
ಎಲ್ಲಿಯಾದರೂ ಇಟ್ಟುಬಿಡಬಹುದು.

‘ಕಡಲು’ ಎಂಬ ಪದ ತೆಗೆದುಕೊ
ನಗು’ವಿನ ಪಕ್ಕ ಇಡು
‘ನಗುವ ಕಡಲು’ ಆಯಿತು.

‘ಮರ’ ಎಂಬ ಪದ ತಗೊ
‘ನಡೆ’ ಯ ಪಕ್ಕ ಇಡು
‘ನಡೆವ ಮರ’ ಸೃಷ್ಟಿಸು

ಎಷ್ಟು ಸುಲಭ!
ಎರಡು ಪದ ಹೆಕ್ಕು, ಕೂಡಿಸು.
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾರುವ ಹಣತೆ
ಹಾಡುವ ತಾರೆ..

ಸುಲಭ!
ಹೆಕ್ಕಿಕೊ, ಇಡು.

ಆದರೆ ಕಷ್ಟ ಇರುವುದು
ಎಲ್ಲಿಂದ ಹೆಕ್ಕಿ
ಎಲ್ಲಿ ಇಡಬೇಕೆಂದು ತಿಳಿಯಲು.

ಕಷ್ಟ ಯಾಕೆಂದರೆ
ಅವನ್ನು ಅವು ಇಟ್ಟ ಜಾಗದಲ್ಲೆ
ಶತಮಾನಗಟ್ಟಲೆ ಉಳಿಯುವಂಥ ಜಾಗ
ಹುಡುಕಬೇಕಲ್ಲ, ಅದಕ್ಕೆ.

ಇಲ್ಲವಾದರೆ
ಸತ್ಯದ ಒಂದು ಮೆಲುಗಾಳಿ ಬೀಸಿದರೆ
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾಡುವ ತಾರೆಗಳೆಲ್ಲ ಚದುರಿಹೋಗುತ್ತವೆ.
ಏಕೆಂದರೆ ಶಬುದಗಳು ಬಲು ಹಗುರವಾಗಿವೆ.

೩ ಶ್ರೀಮಾನ್ ಕವಿ


ಮೊದಲ ಸಾಲು ಬರೆಯುತ್ತೇನೆ
ಆಳುವ ಅರಸನ
ಭಯದಲ್ಲಿ ಮುರುಟಿ
ಆ ಸಾಲನ್ನು ಚಕಚಕ ಕತ್ತರಿಸುತ್ತೇನೆ.

ಮತ್ತೊಂದು ಸಾಲು ಬರೆಯುತ್ತೇನೆ
ಗೆರಿಲ್ಲಾ ಬಂಡುಕೋರರ ನೆನಪಾಗಿ
ಹೆದರಿ ಕತ್ತರಿಸುತ್ತೇನೆ

ಹೀಗೆ ನಾನು
ನನ್ನದೇ ನೂರಾರು ಸಾಲುಗಳ ಕೊಂದೆ
ಜೀವ ಉಳಿಸಿಕೊಳ್ಳಲು.

ಆಗಾಗ ಹತ ಸಾಲುಗಳಿಂದ ಪಿಶಾಚಿಗಳೆದ್ದು
ನನ್ನ ಸುತ್ತ ತಿರುಗುತ್ತ ಕೇಳುತ್ತವೆ:

‘ಶ್ರೀಮಾನ್ ಕವಿಯೇ,
ನೀನೊಬ್ಬ ಕವಿಯೊ
ಅಥವಾ ಕಾವ್ಯ ಹಂತಕನೋ?’


೪ ಪಂಚನದಿಗಳ ನಾಡು

ಶೋಕ
ಹಿಂಸೆ
ಭಯ
ನಿರಾಶೆ
ಮತ್ತು ಅನ್ಯಾಯ

ಇವು ಇತ್ತೀಚಿಗೆ ನನ್ನ ಪಂಚನದಿಗಳ ಹೆಸರು.

ಒಂದಾನೊಂದು ಕಾಲದಲ್ಲಿ ಅದು
ಸಟ್ಲೆಜ್
ಬಿಯಾಸ್
ರಾವಿ
ಝೀಲಂ
ಮತ್ತು ಚಿನಾಬ್
ಆಗಿತ್ತು.

ನನಗೆ ಭರವಸೆಯಿದೆ
ಅಂಥ ಒಂದು ದಿನ
ಒಂದಲ್ಲ ಒಮ್ಮೆ ಬರುತ್ತದೆ
ಆಗ ನನ್ನ ಪಂಚನದಿಗಳ ಹೆಸರು
ಸಂಗೀತ
ಕಾವ್ಯ
ಪ್ರೇಮ
ಸೌಂದರ್ಯ
ಮತ್ತು ನ್ಯಾಯ
ವೇ ಆಗಿರುತ್ತದೆ.


೫  ಆ ದಿನ


ಹೇಗಾದರೂ ಆ ‘ದಿನ’
ಮತ್ತೆ ಸಿಕ್ಕಿಬಿಟ್ಟರೆ
ಅದರ ಬಿಳಿಹಂಸೆಯಂತಹ ಗಾಯಗೊಂಡ ಕಾಯಕೆ
ಮುಲಾಮು ಸವರುತ್ತೇನೆ

ಆದರೆ ಒಂದು ‘ದಿನ’ ಎಂದರೆ
ಅಲ್ಲಿಲ್ಲಿ ಅಂಡಲೆದು
ಇದ್ದಕ್ಕಿದ್ದಂತೆ ಒಂದು ಸಂಜೆ
ಚಿಂದಿಯುಟ್ಟು ಮನೆಗೆ ಮರಳುವ;
ರೈಲಿಗೆ ಕಾಯುತ್ತ ಯಾವುದೋ ಸ್ಟೇಷನ್ನಿನಲ್ಲಿ ಸಿಕ್ಕ
ಮನೆ ಬಿಟ್ಟು ಓಡಿಹೋದ ಮಗನಂತಲ್ಲ..

ದಿನಗಳು ಮನೆಬಿಟ್ಟು ಓಡಿಹೋದ ತಿರುಬೋಕಿಗಳಲ್ಲ
ದಿನವೆಂದರೆ
ನಮ್ಮ ಮಾತಿನಿಂದ, ಮೌನದಿಂದ
ಕೊಲ್ಲಲ್ಪಟ್ಟ ದಿನದ ಊಳಿಡುವ ಭೂತ.
ಅವುಗಳ ಗಾಯ
ಈಗ ನಮ್ಮ ಕೈಯಳತೆಗೆ ಮೀರಿದ್ದು

ಈ ದಿನದ ಆಕ್ರಂದನ
ನಿನ್ನೆ ದಿನವ ತಲುಪಲಾರದು
ಶತಶತಮಾನ ಕಳೆದರೂ..




ನ್ಯಾಯ ಕೇಳಬೇಡವೆಂದು ನಾನ್ಯಾವಾಗ ಹೇಳಿದೆ?
ನಿನ್ನ ಹಕ್ಕುಗಳಿಗಾಗಿ ಹೋರಾಡಬೇಡವೆಂದೆನೆ?
ಆದರೆ ನಿಜ ಶತ್ರು ಯಾರೆಂದು ಗುರುತಿಸದೆ
ನಿನ್ನದೇ ಕೈಕಾಲು ಕಡಿದುಕೊಳಬೇಡ ಅಷ್ಟೆ.

ಬೇಡವಾದಲ್ಲೆಲ್ಲ ಸುಮ್ಮಸುಮ್ಮನೆ ಹಾರಾಡುತ್ತ
ನಿನ್ನ ರೆಕ್ಕೆಗಳ ಗೌರವ ಕಳೆಯಬೇಡ
ದುಃಖದ ವಿರುದ್ಧ ಹೋರಾಡಬೇಕಿದೆ
ಬಡತನದ ವಿರುದ್ಧ ಹೋರಾಡಲಿಕ್ಕಿದೆ
ತಲೆ ಕಾಯ್ವ ನೆಪದಲ್ಲಿ ತಲೆ ತೆಗೆವವರ
ವಿರುದ್ಧವೂ ನಾವು ಹೋರಾಡಬೇಕಿದೆ

ನಿನ್ನ ಕತ್ತಿ ಮೊನೆಯಂಚಿಗೆ ನನ್ನ ಪ್ರಾಣ ಕೊಡಬಲ್ಲೆ
ಅದು ಅಮುಖ್ಯವೆಂದು ಯಾರಾದರು ಹೇಳಬಹುದೆ?

ಅದರ ಕಡೆ ಗಮನ ಹರಿಸು, ಚೆನ್ನಾಗಿ ಮಸೆ
ಅಲಗುಗಳ ಹರಿತಗೊಳಿಸಿ ಇಡು
ಕತ್ತಲಲ್ಲಿ ಬೆಳಕಾಗಿ ಬರೆಯುವಂತೆ
ಬೆಂಕಿಯ ಜ್ವಾಲೆಯಂತೆ ಅದನಿಡು
ಅಂಥ ಕಾಲವೂ ಇದೆ, ಆಗ
ಕತ್ತಿಯಷ್ಟೆ ಬರೆಯಬಲ್ಲುದಾಗಿದೆ..

ಕ್ರಮಿಸಿದ ಹಾದಿಯ ಮತ್ತೇಕೆ ಕ್ರಮಿಸುವೆ?
ಎದುರಿನ ಹಾದಿ ಎಷ್ಟೊಂದು ಕಡಿದಾಗಿದೆ..

(ಇಂಗ್ಲಿಷ್‌ಗೆ: ಅಜ್ಮೇರ್ ರೋದೆ
ಕನ್ನಡಕ್ಕೆ: ಅನುಪಮಾ)

ಚಿತ್ರಗಳು: ಕೃಷ್ಣ ಗಿಳಿಯಾರ್

Sunday 1 November 2015

ಚರಿತ್ರೆಯೆಂದರೆ...




ಶಾಲೆಗೆ ಹೋಗುವ ಮಗಳು ಕೇಳಿದಳು:
‘ಅಮ್ಮಾ, ಚರಿತ್ರೆಯೆಂದರೆ ಏನು?’

ಹೇಳಿದೆ.

‘ಹಾಗಿದ್ದರೆ ಈ ಕೆಂಚಮ್ಮನ ಅಮ್ಮನಮ್ಮನಮ್ಮನಮ್ಮ
ಯಾರ ಮನೆಯ ಪಾತ್ರೆ ತೊಳೆಯುತ್ತಿದ್ದಳು?’

‘ಗೊತ್ತಿಲ್ಲ ಮಗಳೆ..’

‘ನನ್ನಜ್ಜನಜ್ಜನಜ್ಜನಜ್ಜ ಯಾರ ಮನೆ ಗಾಡಿ ಹೊಡೆಯುತ್ತಿದ್ದ?’

‘ಅದೂ ಗೊತ್ತಿಲ್ಲ ಮಗಳೆ..’

‘ನಮಗೆ ಚರಿತ್ರೆಯೇ ಇಲ್ಲವೇ?
ಸರಿಯಾಗಿ ಹುಡುಕಿದೆ ತಾನೆ?’

ಚರಿತ್ರೆಯ ಪುಟಗಳ ನಡುವೆ
ಶಂಕಿಸುವ ಮಗಳ ಕೈಹಿಡಿದು
ಕಾಲಾಡಿಸುತ್ತಾ, ಹುಡುಕುತ್ತ ನಡೆದೆ.

ರಾಜಾಧಿರಾಜ ಮಹಾರಾಜರ ಮೂರ್ತಿಗಳು
ಧರೆಗಿಳಿದ ದೇವಿಯರಾದ ಅಮ್ಮಣ್ಣಿಯರು
ಗಜತುರಗಕಾಲಾಳಿನ ಅಕ್ಷೋಹಿಣಿ ಸೇನೆಗಳು
ವಿಜಯ ಪತಾಕೆಗಳು ದುಂದುಭಿ ಜಾಗಟೆಗಳು
ಕಿರೀಟ ತೊಟ್ಟು ಭುಜಕೀರ್ತಿ ಹೊತ್ತು
ಧೂಳಿನೊಳಗೇ ಹೊಳೆಯುತ್ತಿದ್ದವು

ಗೆದ್ದ ಯುದ್ಧ ಪಡೆದ ಬಿರುದು
ಸುವರ್ಣ ಸಿಂಹಾಸನದ ನೀತಿ ನ್ಯಾಯ
ಅಂಬಾರಿಯಲಿ ಕುಳಿತ ಮಹಾಕಾವ್ಯ
ಅಂತಃಪುರದ ಗತ್ತು ವೈಭವದ ಗಮ್ಮತ್ತು
ಎಲ್ಲದರ ಲೆಕ್ಕ ದಾಖಲೂ
ತುದಿ ಬೆರಳಲೆಂಬಂತೆ ಸಿಕ್ಕಿಬಿಟ್ಟಿತು

ದಾಖಲಿಸಿದವನ ತೊಗಲ ನಿಶಾನೆ
ಚರಿತ್ರೆಯ ಅಣುಕಣದಲ್ಲಿ ಹುದುಗಿಕೊಂಡಿತ್ತು.

ಅಷ್ಟೇ.

ಸೆರೆಸಿಕ್ಕ ಅರಸನ ಕಾಲಾಳಿನ ಕತೆ
ಕಾದಾಡುತ್ತ ಹೆಳವಾದವರು ಬದುಕಿ ನರಳಿದ ಶಿಕ್ಷೆ
ನಾಯಿನರಿ ಪಾಲಾದ ಅನಾಥ ಹೆಣಗಳ ಸಂಖ್ಯೆ
ದಫ್ತರದಲೆಲ್ಲೂ ಸಿಗಲಿಲ್ಲ

ನೆತ್ತರ ಕುಡಿದು ಹಸಿಯಾದ ಮಣ್ಣು
ಗರಿಕೆ ಮೊಳೆಯದ್ದಕ್ಕೆ ಕಾರಣ ಹೇಳಲಿಲ್ಲ
ಕುಸಿದ ಸಾವಿರ ಮನೆಗಳ
ಅಂತಃಸ್ಸಾಕ್ಷಿಯಿಲ್ಲದೆ ಅಲುಗಾಡಿದ ಅರಮನೆಗಳ
ಅಡಿ ಹೂತುಹೋದ ಅವಶೇಷಗಳ
ದಾರುಣ ಕತೆಯನ್ನದು ಬೆಳೆಸಲಿಲ್ಲ
ಸತಿಯಾಗದ ವಿಧವೆಯರ ಅರೆಬೆಂದ ಬಾಳಿಗೆ
ಮಾಸ್ತಿಕಲ್ಲು ನಿಲಿಸಿರಲಿಲ್ಲ
ಒಂಟಿ ಹುಲಿ ಹೊಡೆದವಗಲ್ಲದೆ
ಕೋಟಿ ದನ ಕಾದವಗೆ ಸನ್ಮಾನವಿರಲಿಲ್ಲ
ನಿತ್ಯ ನಿಶ್ಶಸ್ತ್ರ ಹೋರಾಡಿದವರ
ಮಸುಕು ನೆನಪೂ ಆ ಪುಟಗಳಿಗಿಲ್ಲ

ಮಗಳೇ,
ಚರಿತ್ರೆಯೆಂದರೆ ಹೀಗೇ
ಮುಳುಗಿದ ಹಡಗಿನ ತೇಲುವ ಹಲಗೆಗಳ
ಕೂಡಿಸಿ ಊಹಿಸುವ ಕೆಲಸ...

ಅದು ರಾಜ-ಮಂತ್ರಿಯ ಚರಿತೆ
ಯುದ್ಧ ಹಿಂಸೆಯ ಚರಿತೆ
ಗೋರಿಯೆಂದೆದ್ದು ಸುಳಿವ ಭೂತಗಳು
ಗುದ್ದಾಡುತ್ತ ವೀರಗಲ್ಲುಗಳ ಕಾಯುತ್ತವೆ
ರಕ್ತದಕ್ಷರಗಳು ಮಾಸದಂತೆ
ಮತ್ತೆಮತ್ತೆ ತಿದ್ದುತ್ತವೆ
ಕದನಕುತೂಹಲದಲಿ
ಖಾಲಿ ಬಿಳಿ ಪುಟಗಳ
ಹುಡುಹುಡುಕಿ ತುಂಬಿಸುತ್ತವೆ
ನಿನ್ನೆಯ ಸುಳ್ಳುಕತೆಗೆ ಹೊಸ ಬಣ್ಣತುಂಬಿ
ಕೋಲೂರಿ ನಾಳೆಗೆ ದಾಟಿಸುತ್ತವೆ..

ಬರೆದ ಚರಿತ್ರೆ ಹೀಗೆ ಮಗಳೇ...

ಅಲ್ಲಿ
ಸಂಬಂಧವಿಲ್ಲ ಅನುಬಂಧವಿಲ್ಲ
ಕರುಣೆಯಿಲ್ಲ ಕಾರಣವಿಲ್ಲ
ಕೆಂಚಮ್ಮ ನಂಜಯ್ಯನವರಿಗೆ ಜಾಗವಿಲ್ಲ.
ಕಡಲ ಸೇರಿದ ಮಳೆಹನಿಯ ದನಿಯು
ಮಾತಾಗಿ ದಾಖಲಾಗುವುದಿಲ್ಲ

ಮಗಳೇ,
ಚರಿತ್ರೆ ನಿನ್ನ ನ್ಯಾಯಸೂಕ್ಷ್ಮದ ಮನಸಿನಲ್ಲಿದೆ
ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ
ಅಕ್ಷರಗಳಲಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ
ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ.


(ಚಿತ್ರಗಳು: ಕೃಷ್ಣ ಗಿಳಿಯಾರ್)