Saturday 31 December 2016

ಸರಿದ ವರುಷ ಮೂಡಿಸಿದ ಕೆಲ ಸಾಲುಗಳು..



ಕಸ ಬೀಳುವವರೆಗೂ ಕನ್ನಡಿಯಲಿ ಕಣ್ಣು ನೋಡಿಕೊಂಡಿರಲಿಲ್ಲ
ನವೆಯಾಗುವವರೆಗೂ ಚರ್ಮದ ಬಿರುಕು ಕಾಣಿಸಿರಲಿಲ್ಲ
ಮುಳ್ಳು ಚುಚ್ಚುವವರೆಗು ಪಾದದ ಧೂಳು ಗಮನಿಸಿರಲಿಲ್ಲ
ಧನ್ಯವಾದ, ನನ್ನ ನನಗೆ ತೋರಿಸಿದ್ದಕ್ಕೆ.
ಮನ್ನಿಸಿ,
ಗುರುಗಳೆಂದು ನಿಮ್ಮ
ಇಷ್ಟುದಿನ ಕರೆಯದೆ ಇದ್ದುದಕ್ಕೆ..


ಹುಣ್ಣಿಮೆಯ ರಾತ್ರಿ
ರಕ್ತ ಹಾಲಾಗಿ ಕೆಚ್ಚಲ ತುಂಬುವ ಹೊತ್ತು..
ಒಬ್ಬರ ಮೈಗೊಬ್ಬರು 
ಬೆಳದಿಂಗಳು ಸವರುತ್ತಾ ಕೂತಿದ್ದೆವು
ಬೆನ್ನ ಹುರಿಯೊಳಗೇನೋ ಇಳಿದಂತಾಗಿ 
ಚಂದ್ರ ಸಾಕ್ಷಿ
ಇದ್ದಕ್ಕಿದ್ದಂತೆ ಅವನೊಂದು ಹಣತೆಯಾದ
ಅನುದಿನ ಎದುರೆದುರೆ ಇದ್ದರು
ಆಡದೆ ಚರಿತ್ರೆಯಾದ ಮಾತುಗಳು
ಬೆಳಕಾಗಿ ನನ್ನ ಬೆರಳ ಹೊಕ್ಕವು
ಕಣ್ಣು ತುಂಬಿ
ಎದೆಯೊಳಗಿನ ಬೂದಿರಾಶಿಯ ನೇವರಿಸುತ್ತ
ಹರಿದ ನೆರೆ ಬೆಳಕು
ಕವಿತೆಯ ಸಾಲು ಪ್ರವೇಶಿಸಿತು
ಒಂದು ಹೆಜ್ಜೆ ಮುಂದಿಡಲು 
ಎರಡು ಹೆಜ್ಜೆ ಬೆಳಕಾಯಿತು

ಜೀವತೈಲ ಉರಿಸಿ ಉರಿದು
ಅವ ಬೆಳಕಾಗಲು
ಬೆಳಗದಿದ್ದೀತೇ ಕವಿತೆ?
ಬೆಳೆಯದಿದ್ದೀತೇ ಬದುಕು?



ಮರಳ ಮೇಲೆ ದಿನಗಳು ಮೂಡಿದವು
ತೊಳೆದು ಹೋದವು
ಕಡಲು ಕಿನಾರೆಗಳ ಫರಕೇ ತಿಳಿಯದಂತೆ 
ತೇಲಿಸಿತು ನಿನ್ನ ಬೆರಳು..

ಉಗುರು ನೋಯಿಸಿತು; ಬೆರಳು ತಾಗಿದ್ದು ಸುಳ್ಳಲ್ಲ
ದೀಪವಾರಿತು; ತೈಲವೆರೆದದ್ದು, ಬೆಳಕಾದದ್ದು ಸುಳ್ಳಲ್ಲ
ವಿರಹ ಬೇಯಿಸಿತು, ಎದೆಯ ಬಿಸಿಗೆ ಒಲಿದದ್ದು ಸುಳ್ಳಲ್ಲ
ಕಾಯ ದೂರಾಯಿತು, ಜೀವ ಜೀವವೇ ಆಗಿರುವುದು ಸುಳ್ಳಲ್ಲ
ನೆಲ ಒಣಗಿತು, ಬೀಜ ಕನಸಾಗಿ ಧೂಳಲಡಗಿರುವುದು ಸುಳ್ಳಲ್ಲ  

ನಿನ್ನ ಅಂಗೈ ತಾವಿಗೆ ಹಂಬಲಿಸುವ ಅದೃಶ್ಯ ಹಕ್ಕಿ ನಾನು


ಮಾತಿಗೆ ಮಾತು ಸೇರಿತು
ಕುಂಬಾರನ ಕೈಗೆ ಮಣ್ಣು ಸೇರಿತು

ಚಳಿಗೆ ಬಿಸಿಲು ಕಾಯಿಸುವ
ಘಟ್ಟದ ಬೆಟ್ಟಗಳ ಕಡು ಏಕಾಂತದಲ್ಲಿ
ನಕ್ಕವು ಶಬ್ದಗಳು..

‘ಆಡಲೇಬೇಕಾದ ಮಾತುಗಳನ್ನು
ಆಡುವಾಗ ಆಡದಿದ್ದರೆ
ಪಾಪನಿವೇದನೆಗೆಂದು ಕಾಲ
ಯಾವ ಅವಕಾಶವನ್ನೂ ಕೊಡುವುದಿಲ್ಲ..
ಉಸಿರು ಕಟ್ಟಿಸಬೇಡ ನಿನ್ನ ನಾಲಿಗೆಯೊಳಗೆ
ಉಸಿರು ಕಟ್ಟಬೇಡ ಬದುಕಿರುವಾಗಲೇ..’
(ಕಲೆ: ಕೃಷ್ಣ ಗಿಳಿಯಾರ್)

Saturday 3 December 2016

ಟ್ಯಾಂಗೊ - ‘ಕಣ್ಣಲ್ಲಿ ಕಣ್ಣಿಟ್ಟು ನೋಡು’




ಜನಪದ ಕಲಾಪ್ರಕಾರಗಳ ಹುಟ್ಟು ಅರಸುವುದು ನದೀಮೂಲ ಹುಡುಕುವಂತೆಯೇ - ನಿಗೂಢ, ಕುತೂಹಲಕರ. ಆಯಾ ದೇಶಕಾಲಗಳ ಅಗತ್ಯಗಳಿಗೆ ತಕ್ಕಂತೆ ಅದರ ನಡುವಿನಿಂದಲೇ ಎದ್ದು ಬರುವ ಸಂಪತ್ತು ಜನಪದ ಕಲೆ. ವಲಸೆ, ಪರಕೀಯರ ಪ್ರಭಾವ, ಶಿಕ್ಷಣ, ಬದಲಾದ ಆದ್ಯತೆ-ಜೀವನ ಮೌಲ್ಯಗಳ ಈಚಿನ ಶತಮಾನಗಳಲ್ಲಿ ಹೊಸಹೊಸ ಜಾನಪದ ಕಲಾಪ್ರಕಾರಗಳು ಹುಟ್ಟುತ್ತಿವೆಯೆ ಎಂಬ ಕುತೂಹಲವಿತ್ತು. ಅರ್ಜೆಂಟೀನಾ ಎಂಬ ‘ಹೊಸ ನಾಡು’ ಸೃಷ್ಟಿಸಿದ ಜಾನಪದ ನರ್ತನ ಟ್ಯಾಂಗೊ ಕುರಿತ ಮಾಹಿತಿ ಅಂಥ ಕುತೂಹಲವನ್ನು ಇನ್ನಷ್ಟು ಪೋಷಿಸಿತು.

ಬ್ಯೂನಸ್ ಐರಿಸ್ ನಗರದ ಅತಿ ಹಳೆಯ ಬೀದಿ ಸ್ಯಾನ್ ಟೆಲ್ಮೊ ನೇಬರ್‌ಹುಡ್, ಬಂದರಿನ ಬಳಿಯಿದ್ದ ಲಾ ಬೊಕಾ ಸ್ಟ್ರೀಟ್, ಕಮಿನಿಟೊ ಸ್ಟ್ರೀಟ್ ಸುತ್ತುತ್ತಿದ್ದೆವು. ಅಲ್ಲಿ ಇಂಥ ೪೮ ನೇಬರ್‌ಹುಡ್‌ಗಳಿವೆ ಎಂದು ಗೈಡ್ ಹೇಳುತ್ತಿದ್ದರು. ಬಂದರಿನ ಸುತ್ತಮುತ್ತ, ಲಾ ಪ್ಲಾಟಾ ನದಿಯ ದಂಡೆಗಳಲ್ಲಿ ಮುಂಬಯಿಯ ಚಾಳುಗಳ ಒಂದು ಕೋಣೆಯ ಮನೆಗಳನ್ನು ನೆನಪಿಸಿದ ‘ಕಾಂಬಾಂಟಿಷಿಯೊ ಮನೆ’ಗಳು ವರ್ಣವೈವಿಧ್ಯತೆಯಿಂದ ಗಮನ ಸೆಳೆದವು. ನಗರದ ಉಳಿದೆಡೆ ಮನೆಗಳಿಗೆ ಹಚ್ಚದ ಗಾಢ, ದಟ್ಟ, ಕಡುಬಣ್ಣಗಳ ವಿಚಿತ್ರ ಕಾಂಬಿನೇಷನ್ನನ್ನು ಗೋಡೆ, ಬಾಗಿಲು, ಕಿಟಕಿಗಳಿಗೆ ಬಳಿದು ಅದರ ಮೇಲೆ ಚಿತ್ರ, ಘೋಷಣೆ, ಜಾಹೀರಾತುಗಳ ತುಂಬಿಸಲಾಗಿತ್ತು. ಗೊಂಬೆಗಳ ನಿಲಿಸಲಾಗಿತ್ತು. ಅದು ಬಡ, ಕೆಳ ಮಧ್ಯಮ ವರ್ಗದವರೆ ಹೆಚ್ಚಿಗೆ ವಾಸಿಸುವ, ದೂರದ ನಾಡುಗಳಿಂದ ವಲಸೆ ಬಂದವರ ಪ್ರದೇಶ. ತಮ್ಮಿಷ್ಟದಂತೆ ಮನೆ ಕಟ್ಟಿ, ಬಣ್ಣ ಬಳಿಯುವುದು ಅವರಿಗೆ ದುಬಾರಿ. ಎಂದೇ ಹಡಗು ಕಟ್ಟೆಯಿಂದ ಉಳಿದ ಮರಮುಟ್ಟು ತಂದು ಮನೆಕಟ್ಟಿದ್ದಾರೆ. ಉಳಿಕೆ ಬಣ್ಣಗಳ ತಂದು ಮನೆಗಳಿಗೆ ಬಳಿದಿದ್ದಾರೆ. ಒಂದು ಮನೆಯಲ್ಲಿ ಹಲವು ಕೋಣೆ. ಒಂದು ಕೋಣೆಯಲ್ಲಿ ಹಲವು ಜನ.




ಆ ನೇಬರ್‌ಹುಡ್‌ಗಳ ಮತ್ತೊಂದು ವಿಶೇಷ ರಸ್ತೆ ಮೇಲೆ ನರ್ತಿಸುವ ಜೋಡಿಗಳು. ಎತ್ತರದ, ದಪ್ಪದ, ಬಿಳಿಯ, ಕರಿಯ, ಎಳೆಯ, ನಡುಹರೆಯದ ಎಲ್ಲ ತರಹದ ನರ್ತಕ ನರ್ತಕಿಯರೂ ಬೀದಿಯಲ್ಲಿ ಕಂಡರು. ಬೀದಿಯಲ್ಲಿ ನರ್ತನವೇ ಎಂದುಕೊಳುವಾಗ ನಮ್ಮ ಬಳಿ ನರ್ತಿಸುವ ತಂಡವೇ ಬಂತು. ಟ್ಯಾಂಗೋದ ಒಂದೆರೆಡು ಭಂಗಿ ಹೇಳಿಕೊಟ್ಟು, ಫೋಟೋ ತೆಗೆಸಿಕೊಳ್ಳಲು ಪೋಸು ಕೊಟ್ಟರೆ ಮೂರು ಭಂಗಿಗೆ ೧೦೦ ಪೆಸೊ ಕೊಡಬೇಕೆನ್ನುತ್ತ ಒಲ್ಲೆಒಲ್ಲೆ ಎಂದರೂ ಬಿಡದೇ ಕುತ್ತಿಗೆ, ಸೊಂಟಕ್ಕೆ ಕೆಂಪು ಬಟ್ಟೆ ಬಿಗಿದು, ತಲೆಗೆ ಕೆಂಪು ಹ್ಯಾಟು ಇಟ್ಟು, ಮೊದಲ ಪಾಠ ಶುರುಮಾಡೇಬಿಟ್ಟರು.

‘ಇದು ಟ್ಯಾಂಗೊ. ಕಲಿಯಬೇಕೆ? ಹಾಗಾದರೆ ಮೊದಲ ಸ್ಟೆಪ್, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಮೂಗಿಗೆ ಮೂಗು ತಾಗಿಸು.’

ತನ್ನ ಬಲಗೈ ಚಾಚಿ ಹೆಣ್ಣಿನ ಎಡಗೈ ಹಿಡಿದು ಅವಳ ನಡು ಬಳಸಿ ನಿಂತ ನರ್ತಕ ಹೇಳಿದ ಮೊದಲ ಮಾತು ಇದು! ಕಣ್ಣಲ್ಲಿ ಕಣ್ಣಿಟ್ಟು ನೋಡಲೆಂದೇ ಹುಟ್ಟಿದ ಯುಗಳ ನರ್ತನ ಟ್ಯಾಂಗೊ. ಅರ್ಜೆಂಟೀನಾ ಮತ್ತು ಉರಗ್ವೆ ದೇಶಗಳ ನಡುವೆ ಇರುವ ಪ್ರಾಕೃತಿಕ ಗಡಿ ‘ಲಾ ಪ್ಲಾಟಾ’ ನದಿಯ ಎರಡೂ ದಂಡೆಗಳ ಜನರಿಂದ ರೂಪುಗೊಂಡ ನರ್ತನ. ಇಂದು ವಿಶ್ವದ ಎಲ್ಲ ಭಾಗಗಳಿಗೂ ಹರಡಿ ಹಲವು ಶೈಲಿಗಳಲ್ಲಿ ಟ್ಯಾಂಗೊ ಚಾಲ್ತಿಯಲ್ಲಿದೆ. ಭಾರತದಲ್ಲೂ ಜನಪ್ರಿಯವಾಗಿದೆ.



ಹೆಣ್ಣುಗಂಡು ಜೊತೆಜೊತೆ ಮುಖಾಮುಖಿಯಾಗುವ ಮೂರೇ ಕಲಾಪ್ರಕಾರಗಳಿವೆ: ವಿಯೆನ್ನೀಸ್ ವಾಲ್ಟ್ಜ್ (೧೮೩೦), ಪೊಲ್ಕಾ (೧೮೪೦) ಹಾಗೂ ಟ್ಯಾಂಗೊ. ಅದರಲ್ಲಿ ತರುಣಪೀಳಿಗೆಯ ಅಚ್ಚುಮೆಚ್ಚಿನ ನರ್ತನ ಶೈಲಿ ಟ್ಯಾಂಗೊ. ಅದು ಪ್ರಣಯದ ಜೊತೆ ಸಾಂಸ್ಕೃತಿಕ ಸಂಬಂಧ ಹೊಂದಿರುವ ಕಲಾ ಪ್ರಕಾರ. ಅತಿಸಾಮೀಪ್ಯದಲ್ಲಿ ಅತ್ಯಂತ ಲಯಬದ್ಧವಾಗಿ ನರ್ತಕರು ಚಲಿಸುವುದರಿಂದ, ಶೃಂಗಾರಮಯ ಸಾಹಿತ್ಯದ ಕಾರಣದಿಂದ ಅದು ವೇಶ್ಯಾಗೃಹಗಳಲ್ಲಿ ಹುಟ್ಟಿದ ನರ್ತನ ಎಂಬ ಅಪಕೀರ್ತಿಗೆ ಪಾತ್ರವಾಗಿತ್ತು. ಅದನ್ನೆಲ್ಲ ಮೀರಿ ಟ್ಯಾಂಗೊ ಜನಪ್ರಿಯವಾದ ಬಗೆ ಒಂದು ಕಾಲಮಾನದ ಅಧ್ಯಯನದ ವಸ್ತುವಾಗಬಲ್ಲದು.
೧೯ನೇ ಶತಮಾನದ ಶುರುವಿಗೆ ಅರ್ಜೆಂಟೀನಾ ಸ್ಪ್ಯಾನಿಶ್ ವಸಾಹತುವಾಗಿದ್ದರೂ ಬ್ಯೂನಸ್ ಐರಿಸ್ ನಗರ ಬೆಳೆದಿರಲಿಲ್ಲ. ಯೂರೋಪಿನಿಂದ ದೂರವಿದ್ದ ದಕ್ಷಿಣ ಅಮೆರಿಕಾ ಮತ್ತು ಬ್ಯೂನಸ್ ಐರಿಸ್ ವಲಸಿಗರ ಗಮನ ಸೆಳೆದಿರಲಿಲ್ಲ. ಆ ವೇಳೆಗೆ ರೈಲುರಸ್ತೆ ನಿರ್ಮಿಸಲು ಅರ್ಜೆಂಟೀನಾಗೆ ಬಂದ ಬ್ರಿಟಿಷರ ಕಣ್ಣು ಅಲ್ಲಿನ ಕೃಷಿ ಸಮೃದ್ಧಿ, ಗಣಿ ಸಂಪತ್ತುಗಳ ಮೇಲೆ ಬಿದ್ದರೂ ಗುಲಾಮಗಿರಿ ನಿಷೇಧಿಸಲ್ಪಟ್ಟ ಕಾರಣ ಕೆಲಸ ಮಾಡಲು ಕೂಲಿಗಳಿರಲಿಲ್ಲ. ಆಗ ಅರ್ಜೆಂಟೀನಾ ಆಳ್ವಿಕರು ವಲಸಿಗರನ್ನು ಸೆಳೆಯಲು ವಿಪುಲ ಉದ್ಯೋಗ ಅವಕಾಶ, ಸುಲಭ ವೀಸಾ, ವಸತಿ ವ್ಯವಸ್ಥೆ, ಒಂದು ವಾರ ಉಚಿತ ರೇಷನ್ ಮೊದಲಾದ ಆಮಿಷಗಳನ್ನೊಡ್ಡಿದರು.

ಉದ್ಯೋಗವನ್ನರಸಿ ಜನಪ್ರವಾಹವೇ ಅರ್ಜೆಂಟೀನಾದತ್ತ ಹರಿಯಿತು. ಕುಟುಂಬರಹಿತರಾಗಿ ವಲಸೆ ಬಂದ ಒಂಟಿಪುರುಷರಿಂದ ಬ್ಯೂನಸ್ ಐರಿಸ್ ತುಂಬಿಹೋಯಿತು. ಬಂದರಿನ ಕೇರಿಗಳು ಕೆಲಸಗಾರರಿಂದ ಕಿಕ್ಕಿರಿದ ಗೂಡುಗಳಾದವು. ಆದರೆ ವಲಸಿಗರಿಗೆ ಕೈತುಂಬ ಕೆಲಸ ಸಿಗಲೂ ಇಲ್ಲ. ಸಿಕ್ಕ ಕೆಲಸದಿಂದ ಕೈತುಂಬ ಗಳಿಸಲೂ ಆಗಲಿಲ್ಲ. ಸಂಸಾರವಂದಿಗರಾಗುವ ಎಂದರೆ ಅಲ್ಲಿ ಹೆಣ್ಣುಗಳೇ ಇರಲಿಲ್ಲ. ಒಂದೆಡೆ ಕಿತ್ತು ತಿನ್ನುವ ಒಂಟಿತನ. ಮತ್ತೊಂದೆಡೆ ಬಡತನ. ಎಲ್ಲೆಲ್ಲು ನಿರಾಶ ಗಂಡಸರು. ಎಲ್ಲಿ ನೋಡಿದರೂ ಗಂಡಸರು.

ಒಬ್ಬಂಟಿತನವು ಗಲ್ಲಿಗಲ್ಲಿಗಳ ಉಸಿರುಕಟ್ಟಿಸುತ್ತಿದ್ದ ಕಾಲದಲ್ಲಿ ಅವರವರೆ ಹಾಡಿಕೊಂಡರು, ನರ್ತಿಸಿದರು. ಕೆಲವರು ಗಿಟಾರ್, ಕೊಳಲು, ಪಿಯಾನೊ ನುಡಿಸಿದರು. ಆಫ್ರಿಕನ್ ಗುಲಾಮರು ಮತ್ತು ಯೂರೋಪಿಯನ್ ಕೂಲಿಗಳ ಸಂಸ್ಕೃತಿಗಳು ಹದವಾಗಿ ಮಿಶ್ರಣಗೊಂಡು; ಆಫ್ರಿಕನ್ ನೃತ್ಯಲಯ, ಯೂರೋಪಿಯನ್ನರ ಹಾಡು ಮಿಳಿತಗೊಂಡು ಟ್ಯಾಂಗೊ ರೂಪುಗೊಂಡಿತು. ಬ್ಯೂನಸ್ ಐರಿಸ್ ಮತ್ತು ಮಾಂಟೆವಿಡಿಯೊ ನಗರಗಳ ಕೆಳವರ್ಗಗಳ ಜನವಸತಿ ಪ್ರದೇಶದಲ್ಲಿ ಟ್ಯಾಂಗೊ ಬೆಳೆಯಿತು.

ಯಾವುದೇ ಇತಿಹಾಸ ಬರೆದಿಡಲಾಗದ ಜನ ಟ್ಯಾಂಗೊವನ್ನು ಸೃಷ್ಟಿಸಿದರು. ಯುದ್ಧ-ಹಿಂಸೆ-ವಲಸೆ-ವಿಕೋಪಗಳಲ್ಲಿ ತಮ್ಮ ಪ್ರಾಣ ತೆರುವ ಹೊರತು ಮತ್ತಾವ ಚರಿತ್ರೆಯನ್ನೂ ಬರೆದಿಡಲಾರದ ಜನ ಟ್ಯಾಂಗೋವನ್ನು ಬೆಳೆಸಿದರು.

ಶ್ರಮಿಕ ವರ್ಗವನ್ನು ಕಾಡುವ ಒಂಟಿತನವು ಯಾವ್ಯಾವುದನ್ನು ನಾಗರಿಕ ಜಗತ್ತು ‘ಅಪರಾಧ’ ಎನ್ನುವುದೋ, ಅವೆಲ್ಲ ಅಲ್ಲಿ ಬೇರು ಬಿಡಲು ಕಾರಣವಾಯಿತು. ವೇಶ್ಯಾವಾಟಿಕೆ ವೇಗವಾಗಿ ಬೆಳೆಯಿತು. ವೇಶ್ಯೆಯರ ಸಂಖ್ಯೆ ಕಡಿಮೆಯಿದ್ದುದರಿಂದ ವೇಶ್ಯಾಗೃಹಗಳಲ್ಲಿ ಲೈನ್ ಹಚ್ಚಿ ಕ್ಯೂನಲ್ಲಿ ಕಾಯುವವರ ಸಂಖ್ಯೆ ಅದಕ್ಕಿಂತ ವೇಗವಾಗಿ ಬೆಳೆಯಿತು. ಕಾಯುವವರ ಬೇಸರ ಕಳೆಯಲು ವೇಶ್ಯಾಗೃಹಗಳ ಮಾಲೀಕರು ಸ್ಥಳೀಯ ಟ್ಯಾಂಗೊ ಸಂಗೀತಗಾರರನ್ನು, ನರ್ತನಕಾರರನ್ನು ನೇಮಿಸಿದರು.

ನರ್ತನ ಬಲುಬೇಗ ಜನಪ್ರಿಯವಾಯಿತು. ಏಕೆಂದರೆ ಆಗ ಹೆಣ್ಣಿನ ಸಾಮೀಪ್ಯಕ್ಕೆ ಇದ್ದದ್ದು ಎರಡೇ ದಾರಿ: ನರ್ತನ ಅಥವಾ ವೇಶ್ಯಾಗೃಹ. ಒಳ್ಳೆಯ ನರ್ತನ ಕಲಿತರೆ ಉತ್ತಮ ಹೆಣ್ಣುಗಳ ಜೊತೆ ನರ್ತಿಸಲು ಅವಕಾಶ ಸಿಗುತ್ತಿತ್ತು. ಉತ್ತಮ ನರ್ತಕರೊಡನೆ ನರ್ತಿಸಲು ಹೆಣ್ಣುಗಳೂ ಬಯಸುತ್ತಿದ್ದರು. ಹೀಗೆ ಹೆಣ್ಣಿನ ಸಂಪರ್ಕಕ್ಕೆ ಬರುವ ಏಕಮೇವ ಹಂಬಲದೊಂದಿಗೆ ತರುಣರು ಟ್ಯಾಂಗೊ ಕಲಿಯತೊಡಗಿದರು. ಎಲ್ಲೇ ಲೈವ್ ಸಂಗೀತ ಕೇಳಿದರೂ ತರುಣರು ಹೆಜ್ಜೆ ಹಾಕತೊಡಗಿದರು. ಮಧ್ಯಮ ವರ್ಗದವರು ಹೆಣ್ಣುಗಳೊಂದಿಗೆ ನರ್ತಿಸುವ ಕೆಳವರ್ಗದ ಹಾಡುಗಾರರನ್ನು ಮೊದಲು ನೋಡಿದ್ದು ವೇಶ್ಯಾಗೃಹಗಳಲ್ಲಿ. ಹಾಗಾಗಿ ಆ ವರ್ಗದ ಇತಿಹಾಸಕಾರರು ಟ್ಯಾಂಗೊ ವೇಶ್ಯಾಗೃಹದಲ್ಲಿ ಹುಟ್ಟಿತೆಂದು ಭಾವಿಸಿದರು. ಕೆಳವರ್ಗದವರಿಂದ ಶುರುವಾದ ಕಾರಣ ಸಮಾಜದ ಗಮನ ಸೆಳೆಯದೆ, ನಿಷೇಧ ದಾಟಲಾಗದೆ ಟ್ಯಾಂಗೊ ‘ಗೌರವಾನ್ವಿತ’ ಎನಿಸಿಕೊಳಲು ಬಹುಕಾಲ ಕಾಯಬೇಕಾಯಿತು.

ಅದಕ್ಕೆ ಸರಿಯಾಗಿ ಮೊದಮೊದಲು ಟ್ಯಾಂಗೊ ಸಾಹಿತ್ಯ ತಮಾಷೆಯ, ‘ಅಸಭ್ಯ’ ಎಂದು ಕರೆಸಿಕೊಳುವ ಪದ, ಸಾಲುಗಳಿಂದ ತುಂಬಿತ್ತು. ಆದರೆ ಯಾವಾಗ ಯೂರೋಪು ತಲುಪಿ, ಮತ್ತೆ ಅರ್ಜೆಂಟೀನಾಗೆ ಬಂದು ಮಧ್ಯಮವರ್ಗದ ಹುಡುಗ ಹುಡುಗಿಯರು ಕಲಿಯುವ ನರ್ತನವಾಯಿತೊ, ಆಗ ಸಾಹಿತ್ಯ ಬದಲಾಯಿತು. ಹೊಸ ವಾದ್ಯಗಳು ಸೇರ್ಪಡೆಯಾದವು. ಅತ್ಯುತ್ತಮ ಸಂಗೀತ, ಹಾಡುಗಾರರು ಬಂದರು. ಅರ್ಜೆಂಟೀನಾ ಮತ್ತು ಉರುಗ್ವೆ ಸೃಷ್ಟಿಸಿದ ಅತ್ಯುತ್ತಮ ಕವಿಗಳು ಟ್ಯಾಂಗೊ ಹಾಡು ಬರೆದರು.

ಅದು ಟ್ಯಾಂಗೊಗೆ ಉಚ್ಛ್ರಾಯ ಕಾಲ.

ನಂತರ ಮಿಲಿಟರಿ ಆಡಳಿತವು ಟ್ಯಾಂಗೋ ನಿಷೇಧಿಸಿದರೆ, ಅವರ ನಂತರ ಬಂದ ಪೆರೋನ್ ಪ್ರಚಾರಕ್ಕೆ ಟ್ಯಾಂಗೋವನ್ನು ಬಳಸಿ ಮಾನ್ಯತೆ ತಂದುಕೊಟ್ಟರು. ನಂತರ ಮತ್ತೆ ಬಂದ ಮಿಲಿಟರಿ ಸರ್ವಾಧಿಕಾರ ಅದನ್ನು ನಿಷೇಧಿಸಿತು. ಅದರ ಸಾಹಿತ್ಯ ಬದಲಾಯಿತು. ವಾದನಶೈಲಿ ಬದಲಾಯಿತು. ಕೊನೆಗೆ ವಿಶ್ವಕಪ್ ಫುಟ್ಬಾಲ್ ವೇಳೆ ಟ್ಯಾಂಗೊ ಮತ್ತೆ ಜನಪ್ರಿಯವಾಯಿತು.

ಆದರೆ ನಿಷೇಧವೋ, ಪ್ರೋತ್ಸಾಹವೋ, ನರ್ತನದ ಷೋಗಳಿಗೆ ಜನ ಹೋಗುವುದು ನಿಲ್ಲಲಿಲ್ಲ. ಏಳುಬೀಳು ಕಾಣುತ್ತ ಹೋದರೂ ಟ್ಯಾಂಗೊ ಜಗತ್ತಿನ ಅತ್ಯಂತ ಜನಪ್ರಿಯ ಕಲಾಪ್ರಕಾರಗಳಲ್ಲಿ ಒಂದು ಎನಿಸಿಕೊಳುವುದನ್ನು ಯಾರೂ ತಡೆಯಲಾಗಲಿಲ್ಲ.


‘ಕುಣೀಬೇಕ, ಮೈ ಮಣೀಬೇಕ..’

ಹೀಗೆ ಹಗಲಿಡೀ ತಲೆಯಲ್ಲಿ ಟ್ಯಾಂಗೊ ತುಂಬಿಕೊಂಡು ಬ್ಯೂನಸ್ ಐರಿಸ್ ಸುತ್ತಿದವರಿಗೆ ಆ ರಾತ್ರಿ ಡ್ಯಾನ್ಸ್ ಫ್ಲೋರಿನಲ್ಲಿ ಅವಿಸ್ಮರಣೀಯ ಅನುಭವವಾಯಿತು.

ಯಾವುದೋ ಹಾಲಿವುಡ್ ಸಿನಿಮಾ ದೃಶ್ಯವೊಂದರಲ್ಲಿ ನಾವಿಲ್ಲವಷ್ಟೆ ಎಂದು ಮತ್ತೆಮತ್ತೆ ಮುಟ್ಟಿ ನೋಡಿಕೊಂಡೆವು. ಜೆಟ್‌ಲ್ಯಾಗಿನಿಂದ ಉರಿಯುತ್ತಿದ್ದ ಕಣ್ಣುಗಳು, ಇಡಿಯ ದಿನ ತಿರುತಿರುಗಿ ದಣಿದ ಕಾಲುಗಳು ಇಲ್ಲ ಎಂದು ಹೇಳುತ್ತಿದ್ದವು. ಅದೊಂದು ಭವ್ಯ ಹೋಟೆಲಿನ ವೈಭವೋಪೇತ ವಿಶಾ..ಲ ಹಜಾರ. ಅಕೋ ಅಷ್ಟು ದೂರದಲ್ಲಿ ರಂಗಸ್ಥಳ. ಇಳಿಬಿಟ್ಟ ನೀಲಿ ಪರದೆಯ ಹಿಂದೆ ಥಳಥಳಿಸುವ ಲೈಟು. ಎದುರು ಬದುರು ೧+೧, ೨+೨, ೩+೩ ಜನ ಕೂರುವಂತೆ ಸಾಲುಸಾಲಾಗಿ ಟೇಬಲ್ಲು ಕುರ್ಚಿಗಳು. ಟೇಬಲ್ಲಿನ ಮೇಲೆ ಮುಟ್ಟಿದರೆ ಮಾಸುವುದೇನೊ ಅನ್ನಿಸುವಷ್ಟು ಬಿಳಿಯ ಕರ್ಚೀಫು. ಆಗಲೆ ಅಲ್ಲೊಬ್ಬರು ಇಲ್ಲೊಬ್ಬರು ಬಂದು ಕೂತಿದ್ದರು. ರಂಗ ಚೆನ್ನಾಗಿ ಕಾಣುವ ಒಂದು ಜಾಗ ಆರಿಸಿ ಮಬ್ಬು ಬೆಳಕಿನಲ್ಲಿ ನಾವೂ ಕುಳಿತೆವು. ತರಹೇವಾರಿ ಹ್ಯಾಟು, ಲಂಗ, ಮಿನಿಲಂಗ ತೊಟ್ಟು ತಂತಮ್ಮ ಪುರುಷರ ಕೈಹಿಡಿದು ಜೋಡಿಗಳು ಬಂದೇಬಂದವು. ಟೈಟಾನಿಕ್ ಸಿನಿಮಾದಲ್ಲಿ ಹಡಗು ಒಡೆಯುವ ಮುನ್ನ ರೋಸ್ ಮತ್ತು ಜ್ಯಾಕ್ ಬಾಲ್ ರೂಮಿಗೆ ಬಂದ ದೃಶ್ಯ ನೆನಪಾಯಿತು. ಬೃಹತ್ ಹಾಲಿನಲ್ಲಿ ೩೦೦-೪೦೦ ಜನ ತುಂಬಿದರು.

ನಮ್ಮ ಕಣ್ಣನ್ನು ರಂಗದ ಮೇಲೆ ಕೀಲಿಸಿಕೊಂಡೇ ಇದ್ದೆವು. ಪಿಸಿಪಿಸಿ ಮಾತನಾಡುತ್ತಿದ್ದ ಆಚೀಚಿನವರು ಟಣಟಣ ಸದ್ದು ಕೇಳಿದ್ದೇ ಮೌನವಾದರು. ಟ್ರಾಲಿಯಲ್ಲಿ ತರತರಹದ ಬಾಟಲಿ, ಗ್ಲಾಸು, ಚಮಚ ಫೋರ್ಕುಗಳು ಬಂದವು. ತಣ್ಣಗೆ ಕೊರೆವ ಎಸಿ ಹಾಲಿನಲ್ಲಿ ಒಂದೊಂದು ಟೇಬಲ್ಲಿಗೆ ಒಬ್ಬೊಬ್ಬ ಶಿಸ್ತಿನ ಸಹಾಯಕ ನಿಂತು ಕೇಳಕೇಳಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಕೊಡುತ್ತಿದ್ದ. ಒಂದೆರೆಡು ತಾಸಿನಲ್ಲಿ ಎಲ್ಲರ ಊಟ ಮುಗಿಯಿತು.

ತೆರೆ ಮೇಲೆದ್ದಿತು.

ಝಗಮಗಿಸುವ ರಂಗದೊಳಗಿನ ಬಾಲ್ಕನಿಯಲ್ಲಿ ಐದಾರು ಜನ ವಾದ್ಯ ಬಾರಿಸುತ್ತ ಕೂತಿದ್ದರು. ಅತ್ಯಾಕರ್ಷಕ ಮೈಮಾಟ, ದಿರಿಸಿನ ಒಂದು ಜೋಡಿ ರಂಗದ ಮೇಲೆ ಬಂತು. ಹಿನ್ನೆಲೆಯ ಲೈವ್ ಹಾಡಿಗೆ ನೃತ್ಯವೇ ಮೈವೆತ್ತಂತೆ ತನ್ಮಯವಾಗಿ ನರ್ತಿಸಿತು. ನಂತರ ಒಂದಾದಮೇಲೊಂದು ಐದಾರು ಜೋಡಿಗಳು ಒಂದೂವರೆ ತಾಸು ಕಾಲ ‘ನಾ ಕುಣೀಬೇಕ, ಮೈ ಮಣೀಬೇಕ’ ಎನ್ನುವಂತೆ ನರ್ತಿಸಿದರು.

ಎಲ್ಲ ಹಾಡೂ, ವಿವರಣೆಯೂ ಸ್ಪ್ಯಾನಿಶ್, ಪೋರ್ಚುಗೀಸಿನಲ್ಲೆ ಇತ್ತು. ಆ ಭಾಷೆ ಹಾಗೂ ಪಾಶ್ಚಾತ್ಯ ಸಂಗೀತ ಕುರಿತ ನಮ್ಮ ಅಜ್ಞಾನದ ಕಾರಣ ಆವೇಶಭರಿತರಾಗಿ, ಭಾವಭರಿತವಾಗಿ ಹಾಡುಗಾರ-ಹಾಡುಗಾರ್ತಿಯರು ಹಾಡಿದರೂ; ಎಲ್ಲ ಚಪ್ಪಾಳೆ ತಟ್ಟಿ ಉದ್ಗಾರ ಸೂಸುತ್ತಿದ್ದರೂ ಹಾಡು ವಿಶೇಷವೆನಿಸಲಿಲ್ಲ. ತಾರಕದ ಹಾಡು ಗಲಾಟೆಯಂತೆ ಕೇಳಿದರೆ, ಹಿನ್ನೆಲೆ ವಾದ್ಯದ ಆವೇಗ ಟಾಂ ಅಂಡ್ ಜೆರ್ರಿಯನ್ನು ನೆನಪಿಸಿತು. ಆದರೆ ಹಾಡು ಅರ್ಥವಾಗದಿದ್ದರೇನಂತೆ, ಸಾಮರಸ್ಯ ಮತ್ತು ಲಯ ಅನನ್ಯವಾಗಿ ಬೆರೆತ, ಲವಲೇಶದಷ್ಟೂ ಕುಂದಿಲ್ಲದ ನರ್ತನವು ಭಾಷೆಯ ಹಂಗಿಲ್ಲದೆ ಕಣ್ಮನ ತಣಿಸಿತು.

ನಮಗೆ ಹೊಚ್ಚಹೊಸದಾದ ಲಯ-ಭಂಗಿಗಳಲ್ಲಿ, ಅತಿ ವಿಶಿಷ್ಟವಾದ ಶೈಲಿಯಲ್ಲಿ ಕಲಾವಿದರು ಪ್ರದರ್ಶನ ನೀಡಿದರು. ಹುರಿಹುರಿಯಾದ ಸಪೂರ ಮೈಕಟ್ಟಿನ ನರ್ತಕ ನರ್ತಕಿಯರು ಥಳಥಳಿಸುವ ಬಟ್ಟೆ ತೊಟ್ಟು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಅಪ್ಪಿ ಹಿಡಿದ ಭಂಗಿಯಲ್ಲಿ ನರ್ತಿಸುತ್ತಿದ್ದರು. ಅದರ ಮೂಲಭಂಗಿ ಅಬ್ರಾಜೊ (ಎಂಬ್ರೇಸ್) ಎಂದರೆ ಅಪ್ಪುಗೆ. ದುಃಖ, ಕಾತರ, ವಿಷಾದ, ಸಂತಸ, ವಿರಹಗಳ ತೀವ್ರ ಭಾವಾಭಿವ್ಯಕ್ತಿಗೂ ಆಂಗಿಕ ಅಭಿನಯಕ್ಕಿಂತ ಮಿಂಚಿನ ಚಲನೆಗೇ ಅಲ್ಲಿ ಆದ್ಯತೆ. ಎರಡು ದೇಹಗಳು ಒಂದೇ ರೀತಿ ಚಲಿಸಿದವು. ಇಬ್ಬರದೂ ಒಂದೇ ಪಾದವೇನೊ ಎನ್ನುವಷ್ಟು ಹೊಂದಾಣಿಕೆಯ ಲಾಲಿತ್ಯಪೂರ್ಣ ಚಲನೆ.

ಸಮತೋಲನದ ಲಯ ಮತ್ತು ವೇಗವೇ ಟ್ಯಾಂಗೋದ ಹೆಚ್ಚುಗಾರಿಕೆ. ಬಾಗುವುದು, ಬಳುಕುವುದು, ಬಗ್ಗಿಸುವುದು, ಬಿಸಾಡುವುದು, ದೂಡುವುದು, ಬೀಳಿಸುವುದು, ಎತ್ತುವುದು ಮೊದಲಾದ ಚಿತ್ರವಿಚಿತ್ರ ಚಲನೆಗಳನ್ನು ತೆರೆದ ಬಾಯಿ ಮುಚ್ಚದೇ ನೋಡಿದೆವು. ಒಲಿಸುವ, ಒಲಿಯುವ, ಆನಂದಮಯವಾಗುವ ಚಲನೆಗಳೇ ಇದ್ದಂತೆನಿಸಿತು. ಕಲಾವಿದರು ಸುತ್ತಲ ಪರಿವೆಯೇ ಇಲ್ಲದಂತೆ ನರ್ತಿಸಿ ಗಂಧರ್ವಲೋಕ ಸೃಷ್ಟಿಸಿದರು. ನೋಡುಗರೂ ಕಾಲದೇಶಗಳ ಮರೆವಂತೆ ಮಾಡಿದರು.



ಆ ಸಂಗೀತ ಮಾದಕ. ನರ್ತಿಸುವವರ ಮೈಮಾಟ ಮಾದಕ. ನರ್ತನ ಶೈಲಿ ಮಾದಕ. ಮತ್ತು ಏರಿಸಲು ಏನೇನು ಬೇಕೋ ಎಲ್ಲ ಅದರಲ್ಲಿದೆ. ಕೆನ್ನೆಗೆ ಕೆನ್ನೆ, ಎದೆಗೆ ಎದೆ, ತೊಡೆಗೆ ತೊಡೆ ತಾಗಿಸಿ ಕಾಲುಗಳ ನಡುವೆ ಕಾಲುಗಳ ಸರಾಗ ಹರಿದಾಡಿಸಿ ವೇಗವಾಗಿ ಚಲಿಸುವ ಜೋಡಿಗಳು ಅರ್ಧನಾರೀಶ್ವರರಂತೆ ಕಾಣಿಸಿದವು.

ಈ ಚಲನೆ, ಈ ನರ್ತನ ಏನು ಹೇಳುತ್ತಿದೆ? ಸಮಾಜ ಗಂಡುಗಂಡಾದರೆ ಎದುರಾಗುವ ಅಪಾಯಗಳ ಕುರಿತೆ? ಒಂಟಿ ದೇಹಮನಸುಗಳ ತೀವ್ರ ಭಾವಾಭಿವ್ಯಕ್ತಿಯನ್ನು ಚಲನೆಯಲ್ಲಿ ಮಣಿಸಬಹುದೆಂದೆ? ಸಾಂಗತ್ಯವು ಕಾಮಕೇಂದ್ರಿತವಾಗಷ್ಟೇ ಅಲ್ಲದೆ ಜೀವನೋತ್ಸಾಹದ ಸೆಲೆಯಾಗುವುದು ಹೇಗೆಂದು ಹೇಳುತ್ತಿದೆಯೆ?

ಏನಾದರೂ ಇರಲಿ, ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಪುರುಸೊತ್ತಿಲ್ಲದೆ ಸಂಬಂಧಗಳು ಹದಗೆಡುತ್ತಿರುವ ವೇಗದ ಕಾಲದಲ್ಲಿ ಕಣ್ಣಿಟ್ಟು ನೋಡುವುದನ್ನಾದರೂ ಕಲಿಸುವ ಕಲೆಗೆ ಮನುಷ್ಯ ಕುಲ ಋಣಿಯಾಗಿರಲಿ.




Saturday 12 November 2016

ತಲಾಖ್ ನಿಷೇಧ: ದೇವರು ಕೊಟ್ಟರೂ ಪೂಜಾರಿ ಕೊಡದ ವರ





ಭಾರತದಲ್ಲಿ ಈಗ ಎರಡು ವಿಷಯ ಕುರಿತು ಹೆಚ್ಚು ಚರ್ಚೆಗಳಾಗುತ್ತಿವೆ: ಒಂದು ಆಹಾರ ಹಕ್ಕು; ಮತ್ತೊಂದು ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕುಗಳು. ಅದರಲ್ಲೂ 16.7 ಕೋಟಿ ಮುಸ್ಲಿಂ ಜನಸಂಖ್ಯೆಯೊಂದಿಗೆ ಪ್ರಪಂಚದ ಮೂರನೇ ಅತಿ ಹೆಚ್ಚು ಮುಸ್ಲಿಂ ಧರ್ಮಾನುಯಾಯಿಗಳಿರುವ ಭಾರತದಲ್ಲಿ (ಇಂಡೋನೇಷ್ಯಾ 21 ಕೋಟಿ, ಪಾಕಿಸ್ತಾನ 18 ಕೋಟಿ) ತ್ರಿವಳಿ ತಲಾಖ್ ಕುರಿತು ಹೆಚ್ಚೆಚ್ಚು ಚರ್ಚೆಗಳಾಗುತ್ತಿವೆ. ಸಾರಾ, ಬಾನು, ತೆಹಮಿನಾ ದುರಾನಿಯಂತಹ ಲೇಖಕರ ಬರಹಗಳಲ್ಲಿ, ತಮ್ಮ ಗೋಳು ಹೇಳುತ್ತಾ ಬುರ್ಖಾದೊಳಗೇ ಬಿಕ್ಕುತ್ತಿದ್ದ ಸೋದರಿಯರ ನೋವಿನಲ್ಲಿ ಅರಿವಿಗೆ ಬರುತ್ತಿದ್ದ ತಲಾಖ್ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣ ಅಧಿಕಾರದಲ್ಲಿರುವ ಬಲಪಂಥೀಯ ಸರ್ಕಾರ ಎಂದು ನೀವು ಮೊದಲ ಸಾಲು ಓದುವುದರಲ್ಲಿ ನಿರ್ಧರಿಸಿದರೆ ಅದು ಅರ್ಧಸತ್ಯ. ಯಾಕೆಂದರೆ ಆ ಹೆಣ್ಮಕ್ಕಳ ಒಳಸಂಕಟಗಳು ಪ್ರತಿಬಾರಿಯೂ ಸಮುದಾಯದ ಮಹಾಸಂಕಟದ ನೆಪದಲ್ಲಿ ಕೊಚ್ಚಿಹೋಗುತ್ತಿವೆ. ಕೆಲವರು ತಲಾಖ್ ಮುಸ್ಲಿಂ ಸಮುದಾಯದೊಳಗಿನ ಆಂತರಿಕ ಬಿಕ್ಕಟ್ಟು. ಅವರೇ ಅದನ್ನು ಸರಿಪಡಿಸಿಕೊಳ್ಳಲಿ ಎಂದರೆ; ಮತ್ತೆ ಕೆಲವರು ಧಾರ್ಮಿಕ ಸುಧಾರಣೆಯ ಪ್ರಯತ್ನಗಳು ಮುಸ್ಲಿಂ ವಿರೋಧಿ ಕೋಮುವಾದಿಗಳ ಕೈಯ ಹತ್ಯಾರವಾಗಬಹುದೇ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಉಳಿದ ಲೆಕ್ಕಾಚಾರಗಳ ಮಾತು ಏನಾದರೂ ಇರಲಿ, ಮಹಿಳೆಯರಾದರೂ ತ್ರಿವಳಿ ತಲಾಖ್ ಕುರಿತ ಚರ್ಚೆ ಈಗ ಶುರುವಾದದ್ದು ಏಕೆಂಬುದರ ಹಿನ್ನೆಲೆಯನ್ನು, ವಿಷಯದ ಒಳಹೊರಗನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

2015ರ ಅಕ್ಟೋಬರಿನಲ್ಲಿ ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣದ ವಾದ ಆಲಿಸುವಾಗ ಸುಪ್ರೀಂ ಕೋರ್ಟು ಮುಸ್ಲಿಂ ಹೆಣ್ಮಕ್ಕಳೂ ತಾರತಮ್ಯ ಎದುರಿಸುತ್ತಾರೆ ಎಂಬ ವಾದ ಕೇಳಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಸೂಚಿಸಿತು. ಡಿಸೆಂಬರ್ 2015ರಲ್ಲಿ ಬಿಜೆಪಿಯ ವಕೀಲರೊಬ್ಬರು ತ್ರಿವಳಿ ತಲಾಖ್ ಮತ್ತದರಂತಹ ರೂಢಿಗಳಿಂದ ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆಯಾಗುತ್ತಿದ್ದು ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಸೂಕ್ತವೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಆಗ ನ್ಯಾಯಾಧೀಶರು, ಸಮಾನ ನಾಗರಿಕ ಸಂಹಿತೆ ಜಾರಿ ಕೋರ್ಟಿನ ಕೆಲಸವಲ್ಲ. ತ್ರಿವಳಿ ತಲಾಖ್‌ನಿಂದ ತನ್ನ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಚ್ಛೇದಿತೆಯೊಬ್ಬರು ಹೇಳಿದರೆ ಆಗ ಮೂಲಭೂತ ಹಕ್ಕು ವಂಚನೆ ಆಗುತ್ತಿದೆಯೆ ಎಂದು ನೋಡಬಹುದೆಂದರು. ಫೆಬ್ರವರಿ 2016ರಲ್ಲಿ ‘ಸಮಾನತೆಗಾಗಿ ಮುಸ್ಲಿಂ ಮಹಿಳೆಯರ ಹುಡುಕಾಟ’ ಹೆಸರಿನ ಪಿಐಎಲ್ ದಾಖಲಾಯಿತು. ಜಮಾಅತ್ ಉಲೇಮಾ ಇ ಹಿಂದ್ ತಾನೂ ಕೂಡಾ ಪಾರ್ಟಿಯಾಗುವೆನೆಂದು ಅರ್ಜಿ ಸಲ್ಲಿಸಿ, ಅಫಿಡವಿಟ್‌ನಲ್ಲಿ ‘ಮೂಲಭೂತ ಹಕ್ಕುಗಳ ನೆಪದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪ್ರಶ್ನಿಸಲಾಗದು. ಅವು ಶಾಸನಸಭೆಯಲ್ಲಿ ರೂಪಿಸಲ್ಪಟ್ಟವಲ್ಲ, ಕುರಾನಿನಲ್ಲಿ ನಿರ್ದೇಶಿಸಲ್ಪಟ್ಟವು’ ಎಂದು ಅಭಿಪ್ರಾಯಪಟ್ಟಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ಇದೇ ವಾದ ಹಿಡಿದು ವಿಷಯ ಇನ್ನಷ್ಟು ಜಟಿಲವಾಯಿತು.

ಈ ಕೇಸಿನ ಜೊತೆ ಮತ್ತಷ್ಟು ಪ್ರಕರಣಗಳು ದಾಖಲಾಗುತ್ತ ಹೋದವು.


2016 ಫೆಬ್ರುವರಿಯಲ್ಲಿ ಉತ್ತರಾಖಂಡದ ಶಾಯರಾ ಬಾನು ತ್ರಿವಳಿ ತಲಾಖ್, ಹಲಾಲಾ, ಬಹುಪತ್ನಿತ್ವ ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಹೋದರು. 13 ವರ್ಷಗಳ ಕೌಟುಂಬಿಕ ಹಿಂಸೆಯ ನಂತರ ಒಮ್ಮೆಲೆ ಮೂರು ಬಾರಿ ತಲಾಖ್ ಎಂದು ಸ್ಪೀಡ್‌ಪೋಸ್ಟಿನಲ್ಲಿ ಗಂಡನ ಪತ್ರ ಬಂದಾಗ ಮಕ್ಕಳೊಂದಿಗೆ ಅವರು ಅತಂತ್ರೆಯಾಗಿದ್ದರು. ಅವರನ್ನು ಬೆಂಬಲಿಸಿ ತ್ರಿವಳಿ ತಲಾಖ್ ನಿಷೇಧಗೊಳ್ಳಲೇಬೇಕೆಂದು ಪಟ್ಟುಹಿಡಿದ ಬೀಬಾಕ್ ಕಲೆಕ್ಟಿವ್ (ಮಹಿಳಾ ಸಂಘಟನೆಗಳ ಗುಂಪು) ಹಾಗೂ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ (ಬಿಎಂಎಂಎ) ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದವು. ಬಿಎಂಎಂಎ ತನ್ನನ್ನೂ ಒಂದು ಪಾರ್ಟಿಯನ್ನಾಗಿ ಮಾಡುವಂತೆ ಕೇಳಿತು. ಹಾಗೆಯೇ 2004 ರಲ್ಲಿ ತಮಿಳು ನಾಡಿನ ಮೊದಲ ಮಹಿಳಾ ಅಡಿಷನಲ್ ಅಡ್ವೊಕೇಟ್ ಜನರಲ್ ಆಗಿದ್ದ ಚೆನ್ನೈನ ಮಾಜಿ ಎಂಎಲ್‌ಎ, ವಕೀಲೆ ಬದರ್ ಸಯೀದ್ ತಮ್ಮನ್ನೂ ಪ್ರಕರಣದ ಪಾರ್ಟಿಯನ್ನಾಗಿ ಮಾಡುವಂತೆ ಕೇಳಿದರು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ, ಕೇಂದ್ರ ಸರ್ಕಾರವೂ ಪಾರ್ಟಿಗಳಾದವು.

2016 ರ ಮಾರ್ಚಿಯಲ್ಲಿ ಕೇರಳದ ವಿ. ಪಿ. ಜುಹಾರಾ ಅವರ ಮಹಿಳಾ ಸಂಘಟನೆ ‘ನಿಸಾ’ ಇದೇ ವಿಷಯಕ್ಕೆ ಸುಪ್ರೀಂಕೋರ್ಟಿಗೆ ಹೋಯಿತು. ಮೇ ತಿಂಗಳಲ್ಲಿ ಜೈಪುರದ ಆಫ್ರೀನ್ ರೆಹಮಾನ್ (28) ದುಬೈ ಗಂಡನಿಂದ ಸ್ಪೀಡ್ ಪೋಸ್ಟಿನಲ್ಲಿ ತಲಾಖ್ ಪಡೆದ ನಂತರ ಬಿಎಂಎಂಎ ಮೂಲಕ ಸುಪ್ರೀಂ ಕೋರ್ಟಿಗೆ ಹೋದರು. ಜೂನಿನಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಮುಸ್ಲಿಂ ಮಹಿಳಾ ಸಂಘಟನ್‌ನ ಫರಾ ಫೈಜ್ (ಲಕ್ನೋ) ಮುಸ್ಲಿಂ ವೈಯಕ್ತಿಕ ಕಾನೂನನ್ನು ಕಾಯ್ದೆಯನ್ನಾಗಿ (ಕೋಡಿಫೈ) ಮಾಡಬೇಕೆಂದು ಅರ್ಜಿ ಸಲ್ಲಿಸಿದರು. ಆಗಸ್ಟಿನಲ್ಲಿ ಕಲಕತ್ತಾದ ಇಷ್ರತ್ ಜಹಾನ್ ತ್ರಿವಳಿ ತಲಾಖಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ವಿಚ್ಛೇದನದ ನಂತರ ಗಂಡನ ಮನೆಯಲ್ಲಿ ತನ್ನ ಹಕ್ಕುಗಳೇನು ಹಾಗೂ ಮಕ್ಕಳ ಕಸ್ಟಡಿಯ ಹಕ್ಕು ಏನಾಗುತ್ತದೆಂದು ತಿಳಿಯಬಯಸಿದರು. ಅವರು ದುಬೈ ಗಂಡನಿಂದ ಫೋನ್ ಮೂಲಕ 15 ವರ್ಷದ ಮದುವೆಗೆ ವಿಚ್ಛೇದನೆ ಪಡೆದಿದ್ದರು.


ಇದರ ನಡುವೆ ಮುಸ್ಲಿಂ ಮಹಿಳೆಯರಿಂದ ತ್ರಿವಳಿ ತಲಾಖ್ ಪರ-ವಿರೋಧ ವಾದ ಹೇಳಿಕೆಗಳು ಬರುತ್ತಲೇ ಹೋದವು. ಕೆಲ ಮಹಿಳೆಯರು ನಿಷೇಧಕ್ಕೆ ಶತಾಯಗತಾಯ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವು ವೈಯಕ್ತಿಕ ಕಾನೂನು ಮಂಡಳಿಯ ಮಹಿಳೆಯರು ‘ನಿಷೇಧ ಅಗತ್ಯವಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.

ಅದಕ್ಕೆ ವ್ಯತಿರಿಕ್ತವಾಗಿ ಇಬ್ಬರು ಪುರುಷರು ಮಹಿಳೆಯರ ಬೆಂಬಲಕ್ಕೆ ನಿಂತರು. ಅವರಿಬ್ಬರೂ ಕಟ್ಟಾ ಮುಸ್ಲಿಂ ಧರ್ಮಾನುಯಾಯಿಗಳು. ಆಂಧ್ರ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬಿದ್ ರಸೂಲ್ ಖಾನ್ ಸೆಪ್ಟೆಂಬರ್ 2016 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆದು ತ್ರಿವಳಿ ತಲಾಖ್ ನಿಷೇಧಿಸಬೇಕೆಂದೂ, ಇಲ್ಲದಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನು ರದ್ದಾಗಿ ಸಮಾನ ನಾಗರಿಕ ಸಂಹಿತೆ ಜಾರಿಯಾದಲ್ಲಿ ಅದಕ್ಕೆ ಮಂಡಳಿಯೇ ಹೊಣೆಹೊರಬೇಕೆಂದೂ ಹೇಳಿದರು. ಮುಂಬಯಿಯ ಅಬ್ದುಲ್ ರಜಾಕ್ ಮಣಿಯಾರ್ ಎಂಬ ಸಾರ್ವಜನಿಕ ದೂರು ಕೇಂದ್ರವೊಂದರ ಮುಖ್ಯಸ್ಥರು ಮಸೀದಿಗಳ ಹೊರಗೆ ಪೋಸ್ಟರು ಅಂಟಿಸಿ, ‘ತ್ರಿವಳಿ ತಲಾಖ್ ನೀಡಿದವರು ಕೋರ್ಟುಕಟ್ಟೆ ಹತ್ತಲು, ಜೈಲಿಗೆ ಹೋಗಲು, ಪತ್ನಿಯರಿಗೆ ದೊಡ್ಡ ಮೊತ್ತದ ಪರಿಹಾರ ತೆರಲು ಸಿದ್ಧರಾಗಿ’ ಎಂದು ಎಚ್ಚರಿಸಿದರು.

ಈಗ ಈ ಎಲ್ಲ ಅರ್ಜಿಗಳೂ ಒಟ್ಟಿಗೇ ವಿಚಾರಣೆಗೆ ಬರಲಿವೆ. ಇದರ ನಡುವೆ ಕೇಂದ್ರಸರ್ಕಾರ ಒಂದು ಅಫಿಡವಿಟ್ ಸಲ್ಲಿಸಿ ತಲಾಖ್ ಇಸ್ಲಾಮಿನ ಮೂಲತತ್ವ ಅಲ್ಲದ್ದರಿಂದ, ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದರಿಂದ ಅದನ್ನು ನಿಷೇಧಿಸಬೇಕು ಎಂದಿದೆ. ಒಟ್ಟಾರೆ ಹೇಳುವುದಾದರೆ ಹೇಗೆ ಬಾಲ್ಯವಿವಾಹ, ವಧುದಹನ, ಸ್ತ್ರೀಭ್ರೂಣ ಹತ್ಯೆ, ಮರ್ಯಾದಾಹತ್ಯೆ, ವರದಕ್ಷಿಣೆಗಳು ಸಮಾಜದ ಕಪ್ಪುಚುಕ್ಕೆಗಳೋ ಹಾಗೆಯೇ ಮುಸ್ಲಿಂ ಅಕ್ಕತಂಗಿಯರ ಬಾಧಿಸುವ ತ್ರಿವಳಿ ತಲಾಖ್ ಪದ್ಧತಿಯೂ ಭಾರತೀಯ ಸಮಾಜದ ಕಪ್ಪುಚುಕ್ಕೆ. ಈ ಪದ್ಧತಿ ಭಾರತದಲ್ಲಷ್ಟೇ, ಅದೂ ಸುನ್ನಿ ಮುಸ್ಲಿಮರಲ್ಲಷ್ಟೇ ಉಳಿದುಬಂದಿದೆ. ಅದನ್ನು ನಿಷೇಧಿಸುವ ನ್ಯಾಯಯುತ ಮಹಿಳಾಪರ ಕಾನೂನು ಜಾರಿಗಾಗಿ ಧರ್ಮ ಮರೆತು ಪ್ರಯತ್ನಿಸುವುದು ಎಲ್ಲರ ಕರ್ತವ್ಯವಾಗಿದೆ.

ತಲಾಖ್-ಖುಲಾ: ವಾಸ್ತವವೇನು?  


ಇಸ್ಲಾಮಿನಲ್ಲಿ ಮದುವೆ ಎನ್ನುವುದು ಒಂದು ಲಿಖಿತ ಸಾಮಾಜಿಕ ಒಪ್ಪಂದ. ಅದನ್ನು ಕೊನೆಗೊಳಿಸುವ ವಿಚ್ಛೇದನಕ್ಕೆ ಆರಂಭದಿಂದಲೂ ಅವಕಾಶ ನೀಡಿರುವ ಇಸ್ಲಾಂ ಧರ್ಮವು ಹಲವು ಸ್ತರಗಳ ತಲಾಖ್ ಪದ್ಧತಿಯನ್ನು ಸೂಚಿಸಿದೆ. ಸೂಕ್ತ ಕಾರಣವಿದ್ದರೆ, ಗಂಡುಹೆಣ್ಣು ಒಟ್ಟು ಬದುಕಲಾಗದಿದ್ದರೆ ವಿಚ್ಛೇದನೆ ಪಡೆಯಲು ಹಾಗೂ ಮರುಮದುವೆಯಾಗಲು ಇಬ್ಬರಿಗೂ ಆ ಧರ್ಮವು ಅವಕಾಶವಿತ್ತಿದೆ.

ಒಟ್ಟಿಗಿರಲು ಅಸಾಧ್ಯವಾದಂತಹ ಬಲವಾದ ಕಾರಣಗಳು ದೊರೆತಾಗ ಗಂಡ ಹೆಂಡತಿಗೆ ತಲಾಖ್ ನೀಡಬಹುದು. ಮುಟ್ಟಿನ ಸ್ರಾವ ನಿಂತ ದಿನಗಳಲ್ಲಿ, ಗರ್ಭಿಣಿಯಲ್ಲದ ಹೆಂಡತಿಗೆ ಮೊದಲ ತಲಾಖ್ ಹೇಳಬೇಕು. ನಂತರ ಮೂರು ತಿಂಗಳು (ಇದ್ದತ್ ಅವಧಿ) ಕಾಯಬೇಕು. ಈ ಅವಧಿಯಲ್ಲಿ ಮನಃಪರಿವರ್ತನೆಯಾಗಿ ತಲಾಖ್ ಹಿಂತೆಗೆದುಕೊಂಡು ಮದುವೆ ಮುಂದುವರೆಸಬಹುದು. ವಿಚ್ಛೇದನವೇ ಸೂಕ್ತ ಅನಿಸಿದಲ್ಲಿ ಗಂಡ ಎರಡನೆಯ ಬಾರಿ ತಲಾಖ್ ಹೇಳಬೇಕು. ಆಗಲೂ ಕಾಯುವ ಮೂರು ತಿಂಗಳ ಅವಧಿ, ರಾಜಿ ಅವಕಾಶ ಇರುತ್ತದೆ. ಎರಡೂ ಕಡೆಯವರ ಪ್ರಯತ್ನದಿಂದ ಸಂಧಾನವಾದರೆ ತಲಾಖ್ ಬಿದ್ದುಹೋಗುತ್ತದೆ. ಅದಾವುದೂ ಸಂಭವಿಸದಿದ್ದಲ್ಲಿ ಮೂರನೆಯ ತಲಾಖ್ ಹೇಳಬೇಕು. ಅಲ್ಲಿಗೆ ಮದುವೆ ಒಪ್ಪಂದ ಮುಗಿಯುತ್ತದೆ. ‘ಮೆಹ್ರ್’ ಹಣವನ್ನು ಹೆಂಡತಿಗೆ ಕೊಟ್ಟರೆ ಮದುವೆ ಕೊನೆಗೊಂಡಂತೆ. ಕೆಲವೊಮ್ಮೆ ಬಲವಂತದ ‘ಮೆಹ್ರ್ ಮಾಫ್’ ನಡೆಯುವುದೂ ಇದೆ. ಮೂರು ಬಾರಿ ತಲಾಖ್ ಹೇಳಲು ವರ್ಷಗಟ್ಟಲೆ ತೆಗೆದುಕೊಳ್ಳಲೂಬಹುದು. ಈ ಅವಧಿಯೊಳಗೇ ದಂಪತಿಗಳ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಲ್ಲಿ ತಲಾಖ್ ಬಿದ್ದುಹೋಗುವುದು.

ಇನ್ನು ಮುಂದೆಂದಾದರೂ ಒಮ್ಮೆ ಅವರು ಮತ್ತೆ ಪರಸ್ಪರರನ್ನು ಮದುವೆಯಾಗಬಯಸುವುದಾದರೆ ಹೆಂಡತಿ ಬೇರೊಬ್ಬರನ್ನು ಮದುವೆಯಾಗಿ ಅವರೊಡನೆ ಒಂದು ರಾತ್ರಿಯನ್ನಾದರೂ ಕಳೆದು, ಆ ಇನ್ನೊಬ್ಬ ಗಂಡನಿಂದ ತಲಾಖ್ ಪಡೆದು ನಂತರ ಹಳೆಯ ಗಂಡನನ್ನು ಮರುಮದುವೆಯಾಗಬಹುದು. ತಲಾಖ್ ಪಡೆದ ಹೆಣ್ಮಕ್ಕಳು ಮರುಮದುವೆಯಾಗಲು ಅನುಸರಿಸಬೇಕಾದ ಈ ಪದ್ಧತಿಯನ್ನು ‘ಹಲಾಲಾ’ ಎನ್ನುತ್ತಾರೆ. ಹಳೆಯ ಗಂಡನನ್ನು ಮರುಮದುವೆಯಾಗುವ ಎಲಿಜಿಬಿಲಿಟಿ ಬರಲು ಇನ್ನೊಬ್ಬನ ಜೊತೆ ಮಲಗಬೇಕಾದ ಹಿಂಸೆಗೆ ಹೆಣ್ಣು ಒಳಗಾಗಬೇಕಾದ ಅನಿವಾರ್ಯತೆಯಿದೆ.

ಹೆಂಗಸರಿಗೂ ವಿಚ್ಛೇದನ ಪಡೆಯುವ ‘ಖುಲಾ’ ಅವಕಾಶ ಇದೆ. ಆದರೆ ಅವರು ಗಂಡಸಿನಂತೆ ನೇರವಾಗಿ ಬಿಡುಗಡೆ ಹೊಂದಲಾರರು. ಗಂಡನಿಗೆ ಮೆಹ್ರ್ ಹಣವನ್ನು ಎಲ್ಲಿಂದಲಾದರೂ ತಂದು ಕಟ್ಟಿ, ಅವನನ್ನು ಒಪ್ಪಿಸಿ ತಲಾಖ್ ‘ಹೇಳಿಸಿ’ಕೊಳ್ಳಬೇಕು. ಅಲ್ಲೂ ಹೆಣ್ಣಿಗಿರುವ ಅವಕಾಶ ಕಡಿಮೆಯೇ. ಎಂದೇ ತಲಾಖ್ ಪಡೆದಷ್ಟು ಸುಲಭದಲ್ಲಿ ಖುಲಾ ಪಡೆಯಲು ಸಾಧ್ಯವಾಗುವುದಿಲ್ಲ. ಕೋರ್ಟ್ ದಾಖಲೆಗಳು ಹೇಳುವಂತೆ ‘ಖುಲಾ’ ಎಂಬ ಅವಕಾಶವನ್ನು ಹೆಣ್ಮಕ್ಕಳು ಬಳಸಿಕೊಂಡದ್ದು ತೀರ ಅಪರೂಪ. ಬಳಕೆಯಾಗಿದ್ದರೂ ಅದೂ ಗಂಡ ಎರಡನೇ ಮದುವೆಯಾದನೆಂದು, ಆಗಲೇ ಮದುವೆಯಾಗಿದ್ದಾನೆನ್ನುವುದು ತಿಳಿದ ಬಳಿಕ ಮಾತ್ರ.

ಮೇಲ್ನೋಟಕ್ಕೆ ಮಹಿಳಾಸ್ನೇಹಿಯಂತೆ ಕಾಣುವ ಈ ನಿಯಮಗಳಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಎಷ್ಟು ಬೆಲೆ ಇದೆ ಎಂದು ಸುಲಭವಾಗಿ ಊಹಿಸಬಹುದು. ಗಂಡಸಿನ ದೈಹಿಕ ಅಪೇಕ್ಷೆ-ಸಾಮರ್ಥ್ಯಗಳಿಗೆ ಬಹುಪತ್ನಿತ್ವ ಮತ್ತು ತಲಾಖ್ ಅನಿವಾರ್ಯವಾಗಿವೆ; ಇಲ್ಲದಿದ್ದರೆ ಮುಸ್ಲಿಂ ಗಂಡಸರು ಭಾರತೀಯ ಗಂಡಸರಂತೆ ಹೆಂಡತಿಯರನ್ನು ಸೀಮೆಎಣ್ಣೆ ಸುರಿದು ಸುಟ್ಟಾರು ಅಥವಾ ಪಾಶ್ಚಾತ್ಯ ರೀತ್ಯಾ ಲಿವಿಂಗ್ ಇನ್ ಸಂಬಂಧ ಹೊಂದಿ ಜವಾಬ್ದಾರಿಯಿಂದ ತಪ್ಪಿಸಿಕೊಂಡಾರು ಎಂದು ಧರ್ಮಪಂಡಿತರು, ಅವರ ಕೈಗೊಂಬೆಗಳಾದ ಮುಸ್ಲಿಂ ಮಹಿಳೆಯರೇ ಅಭಿಪ್ರಾಯಪಡುತ್ತಿದ್ದಾರೆ! ಕುರಾನಿನ ಹೆಸರಿನಲ್ಲಿಯೇ ಪುರುಷ ಹಿತಾಸಕ್ತಿಗಳನ್ನು ಮಹಿಳೆಯರು ಕಾಪಾಡುತ್ತಿದ್ದಾರೆ!

ಅದು ಹಾಗೇ. ತಪ್ಪು ಪ್ರಶ್ನೆಗಳನ್ನು ಕೇಳಿಕೊಂಡವರು ತಪ್ಪು ಉತ್ತರಗಳನ್ನೇ ಪಡೆಯುತ್ತಿರುತ್ತಾರೆ.



ಈಗ ಚರ್ಚೆ ನಡೆಯುತ್ತಿರುವುದು ಒಂದೇ ಉಸಿರಿನಲ್ಲಿ ಮೂರು ಸಲ ತಲಾಖ್ ಹೇಳಿ ವಿಚ್ಛೇದನ ಕೊಡುವ ಬಗೆಗೆ. ಇದು ಪ್ರವಾದಿಗಳ ಕಾಲದಿಂದಲೂ ಸುನ್ನಿ ಮುಸ್ಲಿಮರ ನಾಲ್ಕೂ ಪಂಗಡಗಳು ಒಪ್ಪಿಕೊಂಡು ಬಂದ ಪ್ರಕ್ರಿಯೆ. ನಂತರ ಹನಬಲಿ ಪಂಗಡದ ಪಂಡಿತರಾದ ಇಬ್ನ್ ತೈಮಿಯಾ ಒಟ್ಟಿಗೆ ಮೂರು ತಲಾಖ್ ಹೇಳುವುದು ಒಮ್ಮೆ ಹೇಳುವುದಕ್ಕೆ ಸಮ ಎಂದು 13ನೇ ಶತಮಾನದಲ್ಲೆ ಭಿನ್ನ ನಿಲುವು ತಳೆದರು. ಈಜಿಪ್ಟ್ 1929 ರಲ್ಲಿ, ಸುಡಾನ್ 1935 ರಲ್ಲಿ ತೈಮಿಯಾ ನಿಲುವು ಒಪ್ಪಿದವು. ಬಹುಪಾಲು ಮುಸ್ಲಿಂ ದೇಶಗಳು ತೈಮಿಯಾ ಅಭಿಪ್ರಾಯ ಅನುಸರಿಸಿದವು. ಎಷ್ಟೋ ದೇಶಗಳು ಧಾರ್ಮಿಕ ಕಾನೂನಿನ ಹೊರಗೆ ನ್ಯಾಯಾಲಯದ ವಿಚ್ಛೇದನವನ್ನೂ ಸ್ವೀಕಾರಾರ್ಹ ಎಂದವು.

1955ರಲ್ಲಿ ಪಾಕಿಸ್ತಾನದ ಪ್ರಧಾನಿ ಮುಹಮದ್ ಅಲಿ ಬೋಗ್ರಾ ಮೊದಲ ಹೆಂಡತಿಯಿಂದ ವಿಚ್ಛೇದನೆ ಪಡೆಯುವ ಮೊದಲೆ ತಮ್ಮ ಕಾರ್ಯದರ್ಶಿಯನ್ನು ಮದುವೆಯಾದರು. ‘ಆಲ್ ಪಾಕಿಸ್ತಾನ್ ವಿಮೆನ್ಸ್ ಅಸೋಸಿಯೇಷನ್’ ಪ್ರತಿಭಟನೆ ನಡೆಸಿದಾಗ ಮೂರುಸಲ ತಲಾಖ್ ಎಂದರು. ಮತ್ತಷ್ಟು ಪ್ರತಿಭಟನೆಗಳು ನಡೆದು, ಮದುವೆ ಮತ್ತು ಕೌಟುಂಬಿಕ ವಿಷಯ ಕುರಿತು ಪರಿಶೀಲಿಸಲು ಏಳು ಸದಸ್ಯರ ಸಮಿತಿಯೊಂದು ನೇಮಕವಾಗಿ ಹೊಸ ನಿಯಮಗಳು ಜಾರಿಯಾದವು. ವಿಚ್ಛೇದನೆಗೆ ನ್ಯಾಯಮಂಡಳಿಯ ಸಮ್ಮತಿ ಅವಶ್ಯವಾಯಿತು. ಅಲ್ಲಿ ಇವತ್ತಿಗೂ ಅದೇ ಕಾನೂನು ಜಾರಿಯಲ್ಲಿದೆ. ಬಾಂಗ್ಲಾದೇಶವೂ ಅದನ್ನೇ ಅನುಸರಿಸಿದೆ. ಪಾಕಿಸ್ತಾನ, ಟ್ಯುನಿಷಿಯ, ಮೊರಕ್ಕೊ, ಇರಾನ್, ಈಜಿಪ್ಟ್, ಬಾಂಗ್ಲಾದೇಶ, ಟರ್ಕಿ, ಸೈಪ್ರಸ್, ಜೋರ್ಡಾನ್, ಸಿರಿಯಾ, ಕತಾರ್‌ಗಳು ಸೇರಿದಂತೆ ವಿಶ್ವಾದ್ಯಂತ 22 ಮುಸ್ಲಿಂ ದೇಶಗಳು ತ್ರಿವಳಿ ತಲಾಖ್ ನಿಷೇಧಿಸಿವೆ. ಶ್ರೀಲಂಕಾದಲ್ಲೂ ಮೂರು ಸಲ ಒಂದು ಪದ ಹೇಳಿ ಹೆಂಡತಿಯನ್ನು ಬಿಡುವಂತಿಲ್ಲ. ಶ್ರೀಲಂಕಾದ ‘ಮುಸ್ಲಿಂ ಮದುವೆ ಮತ್ತು ವಿಚ್ಛೇದನ ಕಾಯ್ದೆ - 1951’ ಅತ್ಯಂತ ವೈಜ್ಞಾನಿಕವಾದದ್ದೆಂದು ಇಸ್ಲಾಮಿ ಪಂಡಿತರೂ ಒಪ್ಪುತ್ತಾರೆ.


ಆದರೆ 8 ಕೋಟಿ ಮುಸ್ಲಿಂ ಮಹಿಳೆಯರಿರುವ ಭಾರತವೆಂಬೋ ಪ್ರಜಾಪ್ರಭುತ್ವ ದೇಶವು ತನ್ನ ನೆರೆಯವರು ತಳೆದ ನ್ಯಾಯಪರ ನಿಲುವು ತಳೆಯಲು ಮೀನಮೇಷ ಎಣಿಸುತ್ತಿದೆ. ಅವಿಭಜಿತ ಭಾರತದಲ್ಲಿ ಅಜ್ಞಾನ, ಪಿತೃಪ್ರಾಧಾನ್ಯ, ಪುರೋಹಿತಶಾಹಿಯ ಹುನ್ನಾರಗಳಿಂದ ತ್ರಿವಳಿ ತಲಾಖ್ ಹಾಗೆಯೇ ಉಳಿದು ಬಂದಿದೆ. ಸ್ಪೀಡ್ ಪೋಸ್ಟ್, ಇ ಅಂಚೆ, ಫ್ಯಾಕ್ಸ್, ಎಸ್ಸೆಮ್ಮೆಸ್, ಫೋನಿನ ಮೂಲಕ ತಲಾಖ್ ಕೊಡುವುದು ಅಬಾಧಿತವಾಗಿ ಮುಂದುವರೆದಿದೆ. ಹೆಂಡತಿಯನ್ನು ಮಣಿಸಿಟ್ಟುಕೊಳ್ಳಲು ಇದೂ ಒಂದು ಅಸ್ತ್ರವಾಗಿದೆ. ಪ್ರತಿ 11 ರಲ್ಲಿ ಒಬ್ಬ ಮುಸ್ಲಿಂ ಮಹಿಳೆ ತಲಾಖ್ ಪಡೆದವಳು, ನ್ಯಾಯಯುತ ಜೀವನಾಂಶಕ್ಕಾಗಿ ಕಾಯುತ್ತಿರುವವಳು ಎಂಬ ಅಂಕಿಅಂಶ ನೋಡಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಮುಸ್ಲಿಂ ಮಹಿಳಾ ಸಂಘಟನೆಗಳು, ಚಿಂತಕರು, ನ್ಯಾಯಾಲಯಗಳು ಅದು ನ್ಯಾಯವಲ್ಲ ಎಂದು ಸಾರಿಸಾರಿ ಹೇಳಿದರೂ ಧಾರ್ಮಿಕ ವ್ಯಕ್ತಿ-ಸಂಘಸಂಸ್ಥೆಗಳು ತಮ್ಮ ಪ್ರಭಾವ, ಅಧಿಕಾರ ಬಳಸಿ ಅದು ನಿಷೇಧಗೊಳ್ಳದಂತೆ ತಡೆದಿದ್ದಾರೆ. ಮುಸ್ಲಿಂ ಪುರೋಹಿತರು ಜನರಿಗೆ ವ್ಯವಸ್ಥಿತವಾಗಿ ತಪ್ಪು ಮಾಹಿತಿ ನೀಡುತ್ತಲೇ ಬಂದಿದ್ದಾರೆ. ‘ಉಲೇಮಾಗಳಿಗೆ ಪೂರಕವಾಗಿ ಈಗ ಚಾಲ್ತಿಯಲ್ಲಿರುವುದು ಇಸ್ಲಾಮಿ ಕಾನೂನಲ್ಲ, ಆಂಗ್ಲೋ ಮೊಹಮದನ್ ಕಾನೂನು’ ಎಂದು ಎ. ಜಿ. ನೂರಾನಿಯಂತಹ ಹಿರಿಯ ವಕೀಲರೂ ಭಾವಿಸುತ್ತಾರೆ.

ಶಾಬಾನುವಿನಿಂದ ಶಾಯರ್ ಬಾನುವರೆಗೆ 

ಭಾರತದಲ್ಲಿ ತ್ರಿವಳಿ ತಲಾಖಿಗೆ ವಿರೋಧ ಈಗ ಬಂದಿರುವುದಲ್ಲ. ಮುಸ್ಲಿಂ ಮತ್ತು ಮುಸ್ಲಿಮೇತರ ಮಾನವಹಕ್ಕು ಸಂಘಟನೆಗಳು ಪದೇಪದೇ ತ್ರಿವಳಿ ತಲಾಖ್ ನಿಷೇಧಕ್ಕೆ ಒತ್ತಾಯಿಸುತ್ತಲೇ ಬಂದಿವೆ. ಈಗ ಚರ್ಚೆ ಮುನ್ನೆಲೆಗೆ ಬಂದಿರುವುದರ ಹಿಂದೆ ದೀರ್ಘ ಹೋರಾಟದ ಹೆಜ್ಜೆ ಗುರುತುಗಳಿವೆ.



1984ರಲ್ಲಿ ಮುಂಬಯಿಯ ಮಹಿಳಾ ಸಂಘಟನೆ ‘ಆವಾಜ್ ಇ ನಿಸ್ವಾನ್’ನ ಮುಂದಾಳು ಶೆಹನಾಜ್ ಶೇಖ್ ಮುಸ್ಲಿಂ ವೈಯಕ್ತಿಕ ಕಾನೂನು ತನ್ನ ಸಮಾನತೆಯ ಹಕ್ಕನ್ನು ಕಸಿದುಕೊಂಡಿದೆ ಎಂದು ಸುಪ್ರೀಂಕೋರ್ಟಿಗೆ ಹೋದರು. 1985ರಲ್ಲಿ ಶಾಬಾನು ಪ್ರಕರಣದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೆ. 125ರ ಪ್ರಕಾರ ಮುಸ್ಲಿಂ ವಿಚ್ಛೇದಿತೆಗೂ ಆಜೀವಪರ್ಯಂತ ಜೀವನಾಂಶದ ಹಕ್ಕಿದೆ ಎಂದು ಕೋರ್ಟು ತೀರ್ಪಿತ್ತಿತು. ಆ ತೀರ್ಪಿನಲ್ಲಿ ಒಂದೆಡೆ ಪ್ರವಾದಿಯವರ ಉಲ್ಲೇಖ ಬಂದಿದ್ದೇ ನೆಪವಾಗಿ ದೇಶಾದ್ಯಂತ ಮುಸ್ಲಿಮರಿಂದ ಪ್ರತಿಭಟನೆ ನಡೆಯಿತು. ಅವರನ್ನು ಸಮಾಧಾನಿಸಲು ಕೌಟುಂಬಿಕ ದೌರ್ಜನ್ಯ ಕಾಯ್ದೆ ಮುಸ್ಲಿಂ ಮಹಿಳೆಯರಿಗೆ ಅನ್ವಯಿಸದಂತೆ ರಾಜೀವಗಾಂಧಿ ಸರಕಾರ ಬೇರೆಯೇ ಆದ ‘ಮುಸ್ಲಿಂ ಮಹಿಳೆ (ವಿಚ್ಛೇದಿತೆಯ ಹಕ್ಕು ಸಂರಕ್ಷಣಾ) ಕಾಯ್ದೆ 1986’ ನ್ನು ಜಾರಿಗೆ ತಂದಿತು. ಕಟ್ಟಾ ಮುಸ್ಲಿಮರನ್ನು ಓಲೈಸಿದ್ದಕ್ಕೆ ಹಿಂದೂ ಧರ್ಮದವರೆಲ್ಲಿ ಕ್ಯಾತೆ ತೆಗೆದಾರೋ ಎಂದು 16ನೇ ಶತಮಾನದ ಬಾಬ್ರಿ ಮಸೀದಿಯ ಬಾಗಿಲು ತೆರೆದರು. 1992ರಲ್ಲಿ ಮಸೀದಿ ಧ್ವಂಸವಾಯಿತು. ಹಾಗೆ ಬಿದ್ದದ್ದು ಬರಿಯ ಮಣ್ಣುರಾಶಿಯಷ್ಟೆ ಆಗುಳಿಯಲಿಲ್ಲ, ಮುಸ್ಲಿಂ ಮಹಿಳೆಯರ ಪ್ರಯತ್ನಗಳನ್ನು ಹೂತುಹಾಕುವ ‘ಧಾರ್ಮಿಕ ಬಿಕ್ಕಟ್ಟು’ ಎಂಬ ಧೂಳು ರಾಶಿಯಾಯಿತು.

ಶೆಹನಾಜ್ ಶೇಖ್ ಪ್ರಕರಣ ಹಿಂತೆಗೆದುಕೊಂಡರು. ಕಾನೂನಾತ್ಮಕವಾಗಿ ಶಾಬಾನುವಿಗೆ ಜಯ ಸಿಕ್ಕಿದ್ದರೂ, ಬರಿಯ 85 ರೂ, 185 ರೂ ಜೀವನಾಂಶ ಪಡೆದಿದ್ದರೂ, ಸಮುದಾಯದ ಒತ್ತಾಯಕ್ಕೆ ಶಾಬಾನು ಗೆದ್ದು ಸೋಲಬೇಕಾಯಿತು.

ಆದರೂ 1993ರಲ್ಲಿ ಅಹ್ಲೆ ಹದೀಸ್ ಪಂಥವು ತ್ರಿವಳಿ ತಲಾಖ್ ಅಮಾನ್ಯ ಎಂಬ ಫತ್ವಾ ಹೊರಡಿಸಿತು. ಇಸ್ಲಾಮಿ ಪಂಡಿತರಾಗಿದ್ದ ರಫೀಕ್ ಝಕಾರಿಯಾ ಆ ಫತ್ವಾವನ್ನು ಕಾಯ್ದೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಮುಸ್ಲಿಂ ಸಂಸದರನ್ನು ಒತ್ತಾಯಿಸಿದರು. ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆದು, ಅಹ್ಲೆ ಹದೀಸ್ ಫತ್ವಾ ಒಪ್ಪಿ ತ್ರಿವಳಿ ತಲಾಖ್ ನಿಷೇಧಿಸಬೇಕು; ಇಲ್ಲದಿದ್ದರೆ ಸರ್ಕಾರದ ಮಟ್ಟದಲ್ಲಿ ಕಾನೂನು ತರುವಂತೆ ಪ್ರಯತ್ನಿಸುವುದಾಗಿ ತಿಳಿಸಿತು. ಮುಸ್ಲಿಂ ಮಹಿಳಾ ಹೋರಾಟಗಾರ್ತಿ ಉಜ್ಮಾ ನಹೀದ್ (ಅವರು ನಂತರ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರಾಗಿದ್ದರು) ತ್ರಿವಳಿ ತಲಾಖ್ ನಿಷೇಧಿಸುವುದಷ್ಟೆ ಅಲ್ಲ, ಹಾಗೆ ಹೇಳಿದ ಗಂಡಸರನ್ನು ಶಿಕ್ಷಿಸಬೇಕು ಹಾಗೂ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೇಳಿದರು. ಆದರೆ ಮಂಡಳಿಯು ತನಗೆ ಫತ್ವಾ ಒಪ್ಪಿಗೆ ಇಲ್ಲ, ತ್ರಿವಳಿ ತಲಾಖ್ ನಿಷೇಧಿಸುವುದಿಲ್ಲ, ಹಾಗೆಂದು ಕಾನೂನು ತಂದರೂ ಅದನ್ನು ಮಾನ್ಯ ಮಾಡುವುದಿಲ್ಲ ಎಂದು ಹಠ ಹಿಡಿಯಿತು. ಜಮಾಅತೆ ಇ ಹಿಂದ್ ಕೂಡಾ ಅದೇ ನಿಲುವು ತಳೆಯಿತು. ಅವು ಯಾವುದೇ ಬದಲಾವಣೆಯನ್ನು ವಿರೋಧಿಸಿದವು.


ಇಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಗೆಗೆ ಎರಡು ಮಾತು:

1973ರಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಚಿತವಾಯಿತು. 1937ಕ್ಕೂ ಮುನ್ನ ಕೆಲವು ಮುಸ್ಲಿಮರು ಸ್ವಧರ್ಮದ ವೈಯಕ್ತಿಕ ಕಾನೂನು ತಿಳುವಳಿಕೆ ಇಲ್ಲದ ಕಾರಣ ಹಿಂದೂ ಕಾನೂನು ಅನುಸರಿಸುತ್ತಿದ್ದರು. ಆಗ ಬ್ರಿಟಿಷರಿಂದ ‘ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಷನ್ ಆಕ್ಟ್ 1937’ ಜಾರಿಗೆ ಬಂತು. ಅದರಡಿಯಲ್ಲಿ 1973 ರಲ್ಲಿ ಸರ್ಕಾರೇತರ ಸಂಸ್ಥೆಯಾಗಿ ಮಂಡಳಿ ರಚಿತವಾಯಿತು. ತಾನೇ ಭಾರತದ ಮುಸ್ಲಿಮರ ಪ್ರತಿನಿಧಿ ಎಂದು ಹೇಳುತ್ತದಾದರೂ ಷಿಯಾ ಮತ್ತು ಅಹ್ಮದಿಯಾ ಮುಸ್ಲಿಮರ ವೈಯಕ್ತಿಕ ಕಾನೂನುಗಳಿಗೆ ಅದರಲ್ಲಿ ಅವಕಾಶವಿಲ್ಲ. ಮುಸ್ಲಿಂ ಸಮಾಜದ ಎಲ್ಲ ವರ್ಗಗಳ 41 ಉಲೇಮಾಗಳು ಅದರ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ. 201 ಜನ ಜನರಲ್ ಬಾಡಿಯಲ್ಲಿದ್ದು ಅವರಲ್ಲಿ ೨೫ ಜನ ಮಹಿಳೆಯರು. ಮಂಡಳಿಯು ೨೦೦೩ರಲ್ಲಿ ಮಾದರಿ ನಿಖಾನಾಮ ಬಿಡುಗಡೆ ಮಾಡಿತು. ಆದರೆ ಅದು ಕುರಾನಿನ ಪ್ರಕಾರ ತಲಾಖ್ ಕೊಡಬೇಕೆಂದು ಹೇಳಿತೇ ವಿನಹ ತಪ್ಪಿದಲ್ಲಿ ನೀಡುವ ಶಿಕ್ಷೆ ಕುರಿತು ಮಾತನಾಡಲಿಲ್ಲ. ಹೊಸನಿಯಮಾವಳಿಗಳನ್ನು ಸಮುದಾಯದೊಳಗೆ ಪ್ರಚುರಪಡಿಸಲೂ ಇಲ್ಲ. ಆದರೆ ಮಾಜಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ತಾಹಿರ್ ಮಹಮೂದ್, ನ್ಯಾ. ಮಾರ್ಕಂಡೇಯ ಖಟ್ಜು ಮೊದಲಾದವರು ಮಂಡಳಿಯ ಪ್ರಾತಿನಿಧ್ಯದ ಅರ್ಹತೆ ಪ್ರಶ್ನಿಸುತ್ತ ಅದನ್ನು ನಿಷೇಧಿಸಬೇಕೆನ್ನುತ್ತಾರೆ.

1994ರಲ್ಲಿ ಮುಂಬಯಿಯ ಸಂಘಟನೆ ‘ಫಿಕ್ರ್’ ಒಂದು ಹೊಸ ನಿಖಾನಾಮ (ಮದುವೆಯ ನಿಯಮಗಳು) ಸಿದ್ಧಪಡಿಸಿತ್ತು. ನಿಖಾನಾಮಾ ನ್ಯಾಯಯುತವಾಗಿ ಬದಲಾದರಷ್ಟೇ ಮುಸ್ಲಿಂ ಮಹಿಳೆಯರ ಸಮಸ್ಯೆಗಳಾದ ತಲಾಖ್, ಜೀವನಾಂಶ, ಮಕ್ಕಳ ಕಸ್ಟಡಿ, ಬಹುಪತ್ನಿತ್ವ ಪರಿಹಾರ ಕಂಡಾವೆನ್ನುವುದು ಹಲವರ ಅಭಿಪ್ರಾಯವಾಗಿತ್ತು. ಅದೇವೇಳೆಗೆ ಹರ‍್ಯಾಣಾ ಹೈಕೋರ್ಟು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ತೀರ್ಪು ನೀಡಿತು. ಸಾಮಾನ್ಯ ಮುಸ್ಲಿಂ ಮಹಿಳೆಯರು ‘ನಮಗೆ ಉಲೇಮಾಗಳಿಂದ ಅಲ್ಲ ನ್ಯಾಯಾಧೀಶರಿಂದ ನ್ಯಾಯ ದೊರೆಯುತ್ತದೆ’ ಎಂದು ತೀರ್ಪನ್ನು ಸ್ವಾಗತಿಸಿದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಉಲೇಮಾ ತಿರಸ್ಕರಿಸಿದವು. ತಲಾಖ್ ನೆಪದಲ್ಲಿ ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದೇ ಹೇಳಿದರು.

ಅಸ್ಘರ್ ಅಲಿ ಎಂಜಿನಿಯರ್ ಈ ಎರಡೂ ಸಂಸ್ಥೆಗಳನ್ನು ಹಲವು ಬಾರಿ ಮಾತುಕತೆಗೆ ಕರೆದರೂ ಅವರು ಬರಲಿಲ್ಲ. ಅಷ್ಟೇ ಅಲ್ಲ, ಷರಿಯತ್‌ನಲ್ಲಿ ಯಾವ ಬದಲಾವಣೆಯನ್ನೂ ಸಹಿಸುವುದಿಲ್ಲ ಎಂಬ ಉತ್ತರ ಬಂತು.


ಹೀಗೆ ‘ಹೌದು’-‘ಅಲ್ಲ’; ‘ಬೇಕು’-‘ಬೇಡ’ಗಳ ಹಗ್ಗಜಗ್ಗಾಟದಲ್ಲಿ ಅಂದು ಶಾಬಾನು ಏಕಾಂಗಿಯಾಗಿದ್ದರು. ಇವತ್ತು ಹಾಗಲ್ಲ. ದೇಶದ ಎಲ್ಲ ಭಾಗದ ಮುಸ್ಲಿಂ ಹೆಣ್ಮಕ್ಕಳು ಮದುವೆ ಕಾನೂನನ್ನು ಕೋರ್ಟಿನಲ್ಲಿ ಪ್ರಶ್ನಿಸತೊಡಗಿದ್ದಾರೆ. ಹೆಚ್ಚುಕಡಿಮೆ ಯಾವ ಮಹಿಳೆಯೂ ತ್ರಿವಳಿ ತಲಾಖ್ ಹಾಗೂ ಬಹುಪತ್ನಿತ್ವವನ್ನು ಒಪ್ಪಲಾರರು. ಬಿಎಂಎಂಎ ಸಂಘಟನೆಯು ೨೦೧೦ರಲ್ಲಿ ಮಾಡಿದ ಸರ್ವೇ ಪ್ರಕಾರ 88 % ಮುಸ್ಲಿಂ ಮಹಿಳೆಯರು ತಲಾಖಿಗೆ ವಿರುದ್ಧವಾಗಿದ್ದರು. ಇವತ್ತು ಹಿಂದೂತ್ವ ರಾಜಕಾರಣದಿಂದ ಸಮುದಾಯ ಒಳಸಂಕಟ-ಹೊರಸಂಕಟವನ್ನೆದುರಿಸುತ್ತಿದ್ದರೂ ಮುಸ್ಲಿಂ ಮಹಿಳೆಯರು ತಮಗೆ ನ್ಯಾಯ ಬೇಕೆಂದು ಕೇಳತೊಡಗಿದ್ದಾರೆ. ಸಮುದಾಯದೊಳಗಿನಿಂದಲೇ ನ್ಯಾಯಕ್ಕಾಗಿ ಒತ್ತಾಯ ಕೇಳಿಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬಿಎಂಎಂಎ


ಗುಜರಾತಿನ ಗೋಧ್ರಾ ಪ್ರಕರಣ ಮತ್ತದರ ನಂತರ ವಿಪ್ಲವದ ದಿನಗಳಲ್ಲಿ ಝಕಿಯಾ ಸೋಮನ್ (51) ಮತ್ತವರ ಗೆಳತಿಯರಿಂದ ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ (ಬಿಎಂಎಂಎ) 2007 ರಲ್ಲಿ ಹುಟ್ಟಿತು. ಇತ್ತೀಚೆಗೆ ಮುಂಬಯಿಯ ಹಾಜಿ ಅಲಿ ದರ್ಗಾಗೆ ಪ್ರವೇಶ ದೊರಕಿಸಿಕೊಳ್ಳಲು ನ್ಯಾಯಾಲಯ ಹೋರಾಟ ನಡೆಸಿ ಜಯಿಸಿದ ಸಂಘಟನೆ ಅದು. ಈಗದು ತ್ರಿವಳಿ ತಲಾಖ್ ವಿಷಯದಲ್ಲಿಯೂ ಹೋರಾಡುತ್ತಿದೆ. ‘ತ್ರಿವಳಿ ತಲಾಖ್ ನಿಷೇಧಗೊಳ್ಳಲೇಬೇಕು. ಕೊನೆಯ ಪಕ್ಷ ಸಾಮಾನ್ಯ ಮುಸ್ಲಿಂ ಮಹಿಳೆಯೂ ಕುರಾನ್ ಓದಿ, ಅರ್ಥ ಮಾಡಿಕೊಂಡು, ವ್ಯಾಖ್ಯಾನಿಸಬಲ್ಲಳು ಎಂದು ಇಡಿಯ ಜಗತ್ತಿಗೆ, ಉಲೇಮಾಗಳಿಗೆ ತಿಳಿಸುವುದಕ್ಕಾದರೂ ನಿಷೇಧ ಜಾರಿಯಾಗಬೇಕು’ ಎನ್ನುತ್ತದೆ ಬಿಎಂಎಂಎ. ಸ್ವತಃ ತ್ರಿವಳಿ ತಲಾಕ್ ವಿಚ್ಛೇದಿತೆಯಾದ ಝಕಿಯಾ ಒಂದು ಪೈಸೆ ಮೆಹ್ರ್ ಇಲ್ಲದೆ ತಮ್ಮ ಬದುಕು ಕಟ್ಟಿಕೊಳ್ಳುವಂತಾಗಿತ್ತು. ಮುಸ್ಲಿಂ ಪುರುಷರು ಸಮುದಾಯದ ಬಿಕ್ಕಟ್ಟಿನ ಹೆಸರಿನಲ್ಲಿ ಮಹಿಳಾ ಪ್ರಶ್ನೆಯನ್ನು ನಗಣ್ಯ ಮಾಡಿದ್ದಾರೆಂದು ಅವರು ಆಕ್ರೋಶಗೊಳ್ಳುತ್ತಾರೆ. ‘ತಮ್ಮ ಸ್ಥಿತಿಯನ್ನು ಜನರು ತಾವೇ ಬದಲಿಸಿಕೊಳ್ಳುವವರೆಗೆ ದೇವರು ಖಂಡಿತವಾಗಿ ಅದನ್ನು ಬದಲಿಸುವುದಿಲ್ಲ’ ಎಂಬ ಕುರಾನಿನ ಉಲ್ಲೇಖ (13;11) ವನ್ನು ಉಲ್ಲೇಖಿಸುತ್ತಾ, ‘1992ರಲ್ಲಿ ಈ ವಿಷಯ ಎತ್ತಿದಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಭವಿಸಿತು. ಸಮುದಾಯ ಅಸುರಕ್ಷಿತ ಮನಸ್ಥಿತಿಯಲ್ಲಿದೆ, ಸುಮ್ಮನಿರಿ ಎಂದರು. 10 ವರ್ಷ ಕಳೆಯಿತು. ಮತ್ತೆ ವಿಷಯ ಎತ್ತಿದೆವು, ಗುಜರಾತಿನಲ್ಲಿ ಮುಸ್ಲಿಂ ಮಾರಣ ಹೋಮ ನಡೆದಿದೆ. ತೀವ್ರ ತಾರತಮ್ಯ ಇದೆ, ತಡೆಯಿರಿ ಎಂದರು. ಮತ್ತೆ 13 ವರ್ಷ ಕಳೆಯಿತು. ಅಸುರಕ್ಷೆ, ತಾರತಮ್ಯ ಈಗಲೂ ಇದೆ. ಆದರೆ ಮಹಿಳೆಯರ ಸಮಸ್ಯೆ ಸಾವಿರಾರು ವರ್ಷಗಳಿಂದ ಇಲ್ಲವೆ? ಇನ್ನು ಹತ್ತು ವರ್ಷ ನಂತರ ಭಾರತದಲ್ಲಿ ಈಗಿರುವುದಕ್ಕಿಂತ ಸೆಕ್ಯುಲರ್ ಸಮಾಜ ಇದ್ದೀತೆಂದು ಯಾವ ಭರವಸೆ ಇಟ್ಟುಕೊಳ್ಳುವುದು?’ ಎನ್ನುತ್ತಾರೆ ಬಿಎಂಎಂಎಯ ನೂರ್ ಜೆಹಾನ್.

ಝಕಿಯಾ ಮುಂದುವರೆದು, ‘ಬಡ, ಅವಿದ್ಯಾವಂತ, ಹಿಂದುಳಿದ ಭಾರತದ ಮುಸ್ಲಿಮರನ್ನು ಧಾರ್ಮಿಕ ನಾಯಕರ ಸೋಗು ಹಾಕಿರುವವರು ನಿಯಂತ್ರಿಸುತ್ತಿದ್ದಾರೆ. ತಪ್ಪು ಮಾಹಿತಿ, ತಿಳುವಳಿಕೆ ಹರಡುತ್ತಿದ್ದಾರೆ’ ಎಂದು ಹೇಳುತ್ತಾರೆ. ಆ ಶಕ್ತಿಗಳೇ ದನಿಯೆತ್ತುವ ಮಹಿಳೆಯರ ವಿರುದ್ಧ ವೈಯಕ್ತಿಕ ಅಪಪ್ರಚಾರ ನಡೆಸುತ್ತ, ಇದೆಲ್ಲ ಆರೆಸ್ಸೆಸ್ ಕೈವಾಡವೆಂದೂ, ಹಿಂದೂವನ್ನು ಮದುವೆಯಾಗಿರುವ ಝಕಿಯಾ ಮುಸ್ಲಿಮಳೇ ಅಲ್ಲವೆಂದೂ ಆರೋಪಿಸುತ್ತಿವೆ. ಅವರಿಗೆಲ್ಲ ಉತ್ತರಿಸುವಂತೆ ಝಕಿಯಾ ತಣ್ಣಗೆ ತಮ್ಮ ಗುರಿ ಮುಂದಿಡುತ್ತಾರೆ: ಅವರ ಬೇಡಿಕೆ ಇಸ್ಲಾಮಿ ಸ್ವರೂಪದ ಮದುವೆ-ವಿಚ್ಛೇದನೆಗೆ. ಅದರಂತೆ,
1. ತಲಾ ಮೂರು ತಿಂಗಳ ಅವಧಿಯ ಎರಡು ತಲಾಖ್
2. ನಡುನಡುವೆ ಸಂಧಾನದ ಪ್ರಯತ್ನ
3. ಕೊನೆಗೂ ಹೊಂದಾಣಿಕೆ ಆಗದಿದ್ದರೆ ಕೋರ್ಟ್ ಮುಖಾಂತರ ವಿಚ್ಛೇದನೆ
4. ಸೂಕ್ತ ಜೀವನಾಂಶ
5. ಮಹಿಳೆಗೂ ಖುಲಾಗೆ ಮುಕ್ತ ಅವಕಾಶ
6. ಮಕ್ಕಳ ಕಸ್ಟಡಿ.
ಈ ಅಂಶಗಳನ್ನೊಳಗೊಂಡ ವಿಚ್ಛೇದನೆ ಕಾನೂನು ಜಾರಿಯಾದರೆ ಮಹಿಳೆಯರಿಗೆ ಅನ್ಯಾಯವಾಗದು ಎನ್ನುವುದು ಅವರ ಅಭಿಮತ.

ಮುಸ್ಲಿಂ ಮಹಿಳಾ ಹಕ್ಕು ರಕ್ಷಣಾ ಕಾಯ್ದೆ ೧೯೮೬ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 - ಇವೆರೆಡೇ ಸಾಕು, ಮನಸ್ಸು ಮಾಡಿದರೆ ಹೆಣ್ಣುಮಕ್ಕಳ ಕಾಯಬಲ್ಲವು. ಭಾರತದ ಕೋರ್ಟುಗಳು ಖುಲಾವನ್ನೂ ಜಾರಿಗೊಳಿಸಬಹುದು, ಅದಕ್ಕೂ ಕಾರಣ ಕೊಡಬೇಕಿಲ್ಲ. ಆದರೆ ಗಂಡಸರೇ ರೂಪಿಸಿರುವ, ಕುರಾನಿಗೆ ವಿರುದ್ಧವಾಗಿರುವ, ದ್ವಂದ್ವಾತ್ಮಕ ಅರ್ಥ ಹೊಂದಿದ ಷರಿಯತ್ ಮಹಿಳೆಯರ ಪಾಲಿಗೆ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಇಸ್ಲಾಮಿನ ಆಳ ಅಧ್ಯಯನ ನಡೆಸಿರುವ ವಿದ್ವಾಂಸರೂ ಸಹ ಈ ಎಲ್ಲ ಶತಮಾನಗಳಲ್ಲಿ ಮುಸ್ಲಿಂ ಸಮುದಾಯ ಮಾಡಿದ ಗಂಭೀರ ಲೋಪವೆಂದರೆ ಮದುವೆಯ ಕುರಿತು ಕುರಾನಿನ ಸಂದೇಶವನ್ನು ತಪ್ಪಾಗಿ ಅರ್ಥೈಸಿರುವುದು ಎನ್ನುತ್ತಾರೆ. ಅಷ್ಟೇ ಅಲ್ಲ, ಕುರಾನಿನ ತಪ್ಪು ವ್ಯಾಖ್ಯಾನದಿಂದ ರೂಪಿಸಲ್ಪಟ್ಟ ಷರಿಯತ್; ಇತಿಹಾಸದಲ್ಲಿ ಎಂದೆಂದೂ ಇರದ, ಕುರಾನಿನ ಬೆಂಬಲವಿರದ ಇಸ್ಲಾಮಿಕ್ ರಾಷ್ಟ್ರ ಕಲ್ಪನೆ; ಕುರಾನಿನಲ್ಲಿ ಹೇಳಲಾಗಿದೆಯೆಂದು ತಿರುಚಲ್ಪಟ್ಟ ಪರಿಕಲ್ಪನೆ ಜೆಹಾದ್ - ಈ ಮೂರನ್ನೂ ಮುಸ್ಲಿಮರು ಕೈಬಿಡಬೇಕೆಂದು ಎ. ಜಿ. ನೂರಾನಿಯಂತಹ ಹಿರಿಯರು ಅಭಿಪ್ರಾಯಪಡುತ್ತಾರೆ.

ಚಲನಶೀಲತೆಯೇ ಧರ್ಮ

ಏಕಸಂಗಾತಿ ಸಂಬಂಧ ಹೆಣ್ಣಿಗೆ ಅನ್ವಯಿಸುವುದಾದರೆ ಗಂಡಿಗೂ ಅನ್ವಯಿಸಬೇಕು. ವಿಚ್ಛೇದನೆ-ಮರುಮದುವೆಗೆ ಗಂಡಸಿಗೆ ಅವಕಾಶವಿದೆಯೆಂದರೆ ಹೆಂಗಸಿಗೂ ಇರಬೇಕು. ಮಕ್ಕಳ ಕಸ್ಟಡಿ, ಆಸ್ತಿ ಹಕ್ಕು ಗಂಡಸಿಗೆ ಇದೆಯೆಂದರೆ ಹೆಣ್ಣಿಗೂ ಇರಬೇಕು. ಇಂಥ ಸಮಾನ ಆಶಯದ ಕಾನೂನು ಯಾವುದೇ ಧರ್ಮದ್ದಾಗಿರಲಿ, ಸಾಂವಿಧಾನಿಕ ಕಾನೂನೇ ಆಗಿರಲಿ, ಜಾತಿ ಪಂಚಾಯ್ತಿಯೇ ಆಗಿರಲಿ - ಅದನ್ನು ವಿರೋಧಿಸಲಾಗದು. ಆದರೆ ಧರ್ಮದ ಅಪವ್ಯಾಖ್ಯಾನದಿಂದ ಅಸಮಾನತೆ-ತಾರತಮ್ಯ ಅನುಭವಿಸುತ್ತಿರುವುದರಿಂದಲೇ ಮುಸ್ಲಿಂ ಮಹಿಳೆಯರು ದನಿಯೆತ್ತಿರುವುದು. ಒಂದು ಕಾಲದಲ್ಲಿ ಸಮಾಜದಲ್ಲಿ ಅಪಾರ ಬದಲಾವಣೆಗೆ ಕಾರಣವಾಗಿದ್ದ ಇಸ್ಲಾಂ ಸಮಾಜ ಸ್ಥಗಿತಗೊಳ್ಳುವುದು ತಪ್ಪಿಸಲೆಂದೇ ಅವರ ದನಿಗಳನ್ನು ಪರಿಗಣಿಸಬೇಕಾಗಿರುವುದು.

ತನ್ನ ಧರ್ಮದ ವರ್ತುಳದಾಚೆ ಮನುಷ್ಯ ಚೇತನ ಪರಿಭಾವಿಸುವ ಎಲ್ಲವನ್ನು ಅಲ್ಲಗಳೆಯುವುದು; ತನ್ನ ಧರ್ಮ ಬಂದ ನಂತರ ಬಂದ ಜ್ಞಾನವನ್ನು ಜ್ಞಾನವೆಂದು ಸ್ವೀಕರಿಸದೆ ಇರುವುದು, ಹೊಸ ತಿಳಿವುಗಳ ಕಲಿಯಲು ನಿರಾಕರಿಸುವುದು ಸನಾತನವಾದ. ಈ ಕಾಲದ ಮುಸ್ಲಿಮರಿಗೆ ಗಾಢನಂಬಿಕೆಯ ಮನೆಯ ವಾತಾವರಣ, ಶಾಲಾಕಾಲೇಜುಸಮಾಜಗಳಲ್ಲಿ ಕಂಡುಬರುವ ಆಧುನಿಕತೆ, ವಿಚಾರವಾದ - ಇವೆರೆಡರ ನಡುವಿನ ವೈರುಧ್ಯ ಅವರ್ಣನೀಯ ದ್ವಂದ್ವ ಹುಟ್ಟಿಸುತ್ತಿರಬಹುದೆ? ಅವರಿಗೆ ಒಳ್ಳೆಯ ಮುಸ್ಲಿಮರಾಗುವ ಗುರಿಯಿರುತ್ತದೆ. ಆದರೆ ಆಧುನಿಕತೆ ಅದನ್ನು ಆಗಮಾಡುವುದಿಲ್ಲವೇನೋ ಎಂಬ ಭಯವೂ ಇರುತ್ತದೆ. ಮುಸ್ಲಿಮರಾಗಿ ಆಧುನಿಕವಾಗಿರುವುದು ತಪ್ಪೆನ್ನುವ ಪಾಪಪ್ರಜ್ಞೆಯನ್ನು ಜನರ ಮನಸಿನಲ್ಲಿ ಬಿತ್ತುವಲ್ಲಿ ಧರ್ಮದ ವಕ್ತಾರರು, ಧರ್ಮರಕ್ಷಕ ಪುರೋಹಿತರು ಯಶಸ್ವಿಯಾಗಿದ್ದಾರೆ. ಈ ದ್ವಂದ್ವವೇ ಸುಧಾರಣೆ ಬಯಸುವವರ ಅಸ್ಪಷ್ಟತೆ, ಅಧೀರತೆಗಳಿಗೆ ಕಾರಣವಾಗಿದೆ. ಅದರಲ್ಲೂ ಬದಲಾಗಬಾರದ್ದನ್ನು ಪೆಟ್ಟಿಗೆಯೊಳಗೆ ತುಂಬಿಟ್ಟು ಅದಕ್ಕೆ ಜಡಿದಿರುವ ಮೊಳೆಗಳಂತೆ ಬಳಸಲ್ಪಟ್ಟ ಮಹಿಳೆಯರಿಗೆ ಈ ಮಾತು ನಿಜವಾಗಿದೆ.

ಆದರೂ ಮಹಿಳೆಯರು ಈ ವಿಷಯವನ್ನು ಸ್ವಲ್ಪಮಟ್ಟಿಗೆ ಪರಿಹರಿಸಿಕೊಳ್ಳುತ್ತಿದ್ದಾರೆ.


ಧರ್ಮಗಳು ಯಾಕಾಗಿ ಹುಟ್ಟಿದವೋ ಮನುಷ್ಯ ಅದನ್ನರಿತು ಬದುಕಿದ್ದರೆ ಈ ಭೂಮಿ ಮೇಲಿನ ಅಂಗೈ ಅಗಲದ ದೇಶಗಳು ತಂತಮ್ಮ ಗಡಿಕಾಯಲು ಪ್ರಾಣಾಂತಿಕ ಅಸ್ತ್ರಗಳ ಮೈತುಂಬ ಪೋಣಿಸಿಕೊಂಡ ಸೈನಿಕರ ಕಾವಲಿಡಬೇಕಿರಲಿಲ್ಲ. ಧರ್ಮಗ್ರಂಥಗಳನ್ನು ಅಕ್ಷರಶಃ ಓದದೇ, ಅರಿತು ಅರ್ಥಮಾಡಿಕೊಂಡು ಅನುಸರಿಸಿದಲ್ಲಿ ಮೂಲಭೂತವಾದ ಹುಟ್ಟುತ್ತಲೇ ಇರಲಿಲ್ಲ. ಅಪ್ರಾಮಾಣಿಕ ಓದು ತಪ್ಪು ಅರ್ಥಗಳ ಹೊರಡಿಸುತ್ತದೆ. ನಾವೀಗಾಗಲೇ ಜಗತ್ತಿನ ಬಹುಪಾಲು ಸಂಕಟಗಳ ಮೂಲ ಧರ್ಮದ ತಪ್ಪು ವ್ಯಾಖ್ಯಾನ ಎನ್ನುವುದಕ್ಕೆ ಸಾಕ್ಷಿಯಾಗಿದ್ದೇವೆ. ಧರ್ಮವನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ತಿರುಚುವವರ ಭರಾಟೆಯಲ್ಲಿ ನಿಜದ ಒಳದನಿಗಳಿಗೆ ಜಾಗ ಕಳೆದುಕೊಳ್ಳುತ್ತಿದ್ದೇವೆ.

ಹೀಗಿರುವಾಗ ಏನು ಮಾಡಬೇಕು? ಒಂದೋ ಧರ್ಮದ ಹಂಗಿಲ್ಲದೆ ಬದುಕಬೇಕು. ಅಥವಾ ಧರ್ಮದನುಯಾಯಿ ಆಗಿದ್ದರೂ  ದಲ್ಲಾಳಿಗಳನ್ನು, ಮಧ್ಯವರ್ತಿಗಳನ್ನು ಕೈಬಿಡಬೇಕು. ಧರ್ಮದ ನಿಜ ಬೇರು ನಮ್ಮಾಳದಲ್ಲಿಳಿದು ಚಿಗುರು ಮೂಡಿಸಿದಲ್ಲಿ ಋತುವಿಗೆ ತಕ್ಕ ಹೊಸಚಿಗುರು ಮೂಡಲೇಬೇಕು. ಆಗ ಮುಸ್ಲಿಂ-ಹಿಂದೂ-ಸಿಖ್-ಕ್ರೈಸ್ತ-ಬೌದ್ಧ ಆಗಿದ್ದುಕೊಂಡೇ ಸೆಕ್ಯುಲರ್ ಆಗಿ, ವೈಜ್ಞಾನಿಕವಾಗಿ ಯೋಚಿಸಲು ಸಾಧ್ಯವಿದೆ. ಆಗ ಜನಸಾಮಾನ್ಯರೂ ಹೊಸ ಭಾಷೆ, ಜ್ಞಾನ, ವಿಚಾರಗಳಿಗೆ ತೆರೆದುಕೊಂಡು ಹೊಸಬೆಳಕು ಒಳಗ ತುಂಬಬಹುದಾಗಿದೆ.



Tuesday 1 November 2016

ಸಂದೇಶ್2ಸೋಲ್ಜರ್ಸ್




ಅಣಾ,
ಹ್ಯಾಪಿ ದೀಪಾವಳಿ, ನಿಂಗೆ 
ನಿನ್ ಜೊತೆ ಇರೊ ಎಲ್ಲಾರಿಗೆ
ಹಬ್ಬ, ಎರಡ್ ಮಾತ್ ಹೇಳಿ ಸೈನ್ಯದವ್ಕೆ 
ಅಂದ್ರು ನಂ ಅಧಿನಾಯಕರು
ಕೆಲ್ಸ ಬಗ್ಸೆ ಮುಗ್ಸಿ ಮೆಸೇಜ್ ಹಾಕಕ್ಕೆ ತಡಾಯ್ತು
ಸುದಾರಸ್ಕ..

ಮತ್ತೇನಿಲ್ಲ, ನಂದು
ಒಂದೆಲ್ಡು ಮೂರು ಮಾತವೆ
ಗುಂಗೆಹುಳ್ದಂಗೆ ನನ್ ಕೊರೀತಾ ಅವೆ 
ನಿನ್ ತಲ್ಗು ಸಾಗಾಕಿ ಹಗುರಾಯ್ತಿನಿ ಕೇಳು..

ಅದೇನ ೧೮೯೯ನೇ ಇಸವಿಲ್ಲಿ
ಅದ್ಯಾರೋ ಬುದ್ಧಿ ಇಲ್ದ್ ಬ್ರಿಟಿಷ್ರು
ಒಂದು ಸೀಮೆಸುಣ್ಣ ತಗಂಡು
ಗೆರೆ ಎಳ್ದು 
ಅದ್ರ ಈಚ್ಗೆ ಇಂಡ್ಯ ಆಚ್ಗೆ ಪಾಕಿಸ್ತಾನ 
‘ಇಕಾ ಇದೇ ಗಡಿ’ ಅಂದ್ರಂತೆ
ಆ ಗೆರೆ ಅಂಗೇ ಹರಡ್ಕತ ಹರಡ್ಕತ 
ಊರುಕೇರಿನೆಲ್ಲ ಪಾಲು ಮಾಡತ 
ನೀ ಇಂಡ್ಯ ನೀ ಪಾಕಿ ಅಂತ 
ಒಳಗೊಳ್ಗೆ ಬಡದಾಟ ಹುಟ್ಸಿರುವಾಗ
ಅದ್ರ ಮನೆ ಕಾಯ್ವೋಗ,
ನೀ ಯಾನಣ ಅದು ನೀ ಅದ್ನ ಕಾಯದು?

ಗೆರೆ ಈಚ್ಗೊ ಆಚ್ಗೊ, ಸಕಲ ಜೀವರಾಶಿನು
ನೆಲದ್ ಮೇಲೇ ನಡಿಬೇಕು 
ಹೊಟ್ಟಿಗ್ ತಿಂದೆ ಬದುಕ್ಬೇಕು
ಹೇತು ಹಗುರಾಗ್ಬೇಕು
ಗೆರೆ ಈಚ್ಗೊ ಆಚ್ಗೊ
ಬಾಂಬು ಬಿದ್ರೆ ಸಕಲ ಜೀವರಾಶಿನು
ಒಮ್ಮುಕ್ಲೆ ಗೊಟಕ್ ಅಂದ್ಬಿಡಬೇಕು
ಗೆರೆ ಈಚ್ಗೊ ಆಚ್ಗೊ 
ಬಿತ್ತಿದ್ದೆಲ್ಲ ಬೆಳೆ, ಕೀಳ್ದೆ ಇದ್ದದ್ದು ಕಳೆ 
ಅಂತನುಸ್ಕಳ್ಳೇಬೇಕು..
ಅಂಗಿರ‍್ತ ಆ ಗೆರೆಗೆ
ಅರ್ತವೂ ಇಲ್ಲ, ಉಪಯೋಗ್ವು ಇಲ್ಲ ಅಂತಾದ್ಮೇಲೆ 
ಆ ಯಮ್ ಚಳೀಲಿ ಅಲ್ಲೇನ್ಮಾಡಿ ಸುಮ್ನೆ,
ಮನಗೋಗಿ ಗೇಯ್ದು ಉಂಡು ಮಲಿಕಳದಲ್ವೆ?

ತಗಾ, ಇದೊಂದ್ ದೀಪ ಅಚ್ಚು..

ಆಮ್ಯಾಲೆ, ಎರಡ್ನೆ ಇಚಾರ.

ನಂ ದೇಸ್ದ ಅರ್ಧಬರ್ಧ ಜನ್ಕೆ
ಹ್ವಟ್ಟೆಗಿಲ್ಲ ಬಟ್ಟೆಗಿಲ್ಲ
ಹಾಸಿದ್ದು ಹೊದ್ದಿದ್ದು 
ಕಾಲತಕ ಬಂದ್ರೆ ತಲೆ ಮುಚ್ಚಲ್ಲ
ತಲೆಗೆಳಕಂಡ್ರೆ ಕಾಲು ಮುಚ್ಚಲ್ಲ
ಅಂಗಿದ್ರುನು ಸೈತ, ನಮ್ಮೋರು
ಏನೋ ದೇಸ ಕಾಯ್ತ ಅವ್ರೆ
ಹ್ವಲ ಕಾದಂಗಲ್ಲ, ಓಗ್ಲಿ ಅಂತಂದು
ಹ್ವಟ್ಟೆಬಟ್ಟೆ ಕಟ್ಟಿ ನಿಂಗೆ 
ಊಟದ್ ಡಬ್ಬಿ ಬೆಚ್ಚನ್ ಕಂಬ್ಳಿ
ಟೋಪಿ ಬೂಟು ಸಾಕ್ಸು
ಎಲ್ಲದ್ನು ಕಳ್ಸವ್ರೆ.
ಆದ್ರೆ
ನಿನ್ನ ಜ್ವತೆ ಇರೋರೇನೊ ನಂ ಹೆಣ್ ಐಕ್ಳ
ಸ್ಯಾಲೆ ರವ್ಕೆ ಎಳ್ದು
ಪುಂಡಾಟ್ಕೆ ಮಾಡ್ತ ಅವ್ರಂತೆ? 
ಯಾರ್ ಮಾತ್ಗು ಕ್ಯಾರೇ ಅಂತಿಲ್ಲವಂತೆ?
ಅಂಗಂತ ನಂ ಶರುಮಿಳ ಉಪಾಸ ಕೂತು
ಏಸೋ ವರ್ಸಾಗಿ ಅದ್ರ ಕೂದ್ಲು ಉದುರೋಗದಂತೆ?

ಅಲ್ಕಣ,
ಕಣ್ಣಿಗ್ ಕಾಣ್ದ ಗೆರೆ ಕಾಯ್ವೋರಂತೆ ನೀವು
ಅಕ್ತಂಗೇರ ಮರ‍್ವಾದೆಮಾನ ಸೂರೆ ಮಾಡಿ
ಅದು ಯಾನಣ ಅದು ನೀವ್ ಮೆಡ್ಲು ಅಂಟಿಸ್ಕ್ಯಳದು?
ಸಿಟ್ಗಲ್ಲ, ಸಂಕ್ಟಕ್ ಏಳ್ದ ಮಾತು ಇದು, ಸರಿಗ್ ಕೇಳು..

ಕ್ವಾ, ಇನ್ನೊಂದ್ ದೀಪ ಅಚ್ಚು..

ಇನ್ ಕೊನೇ ಮಾತು ಇದು.
ಯಾ ತಾಯಿ ಮಗ್ನೊ 
ಯಾ ತಂಗಿ ಅಣ್ನೋ
ಯಾ ಸೋಬ್ತಿ ಗಂಣ್ನೊ 
ಯಾರದಣ್ಣ ಅದು ಆ ಹೆಣ? 
ಚಲ್ಲಾಪಿಲ್ಲಿ ತುಂಡ್‌ತುಂಡು
ಆಚ್ಗದೇನ್ ಎದೆಬಡ್ಕಳ ಸದ್ದು?

ಅಯ್ಯಯ್ಯೋ, ಯುದ್ಧ ಅಂದ್ರೇನ್ ಆಟವೆ?
ಕುರುಕ್ಷೇತ್ರ ಮಾಭಾರತ ಪಾಠ ಕಲಿಸ್ಲಿಲ್ಲೆನು ಇನ್ನೂ?
ಕಳಿಂಗ ಮಗಧ ಪಾಠ ಅನುಸ್ಲಿಲ್ಲೆನು ಇನ್ನೂ?
ಪಾಣಿಪತ್ ತಾಳೀಕೋಟೆ ರಕ್ಕಸತಂಗಡಿ ಪ್ಲಾಸಿ..
ಒಂದೊಂದು ಗುನ್ನೆಯಿಂದ 
ಒಂದೊಂದ್ ಅಕ್ಷರ ಕಲುತ್ರು ಸಾಕಿತ್ತು 
ಈ ಬಡದಾಟನ ಶುರು ಹಚ್ಕಳದು ಸುಲಭ 
ನಿಲ್ಸಕ್ಕೆ ಬೀಳ್ಬೇಕು ಸಾಲ್‌ಸಾಲು ಹೆಣ

ಅದ್ಕೆ, ಬಾ ಅಣೋ ದೀಪ ಹಚ್ಚಣ 
ಒಳಗಿನ್ ಜೋತಮ್ನ ಮಾತು ವಸಿ ಕೇಳಣ
ನಿನ್ ರಗತ ಮಾಂಸ ಅಲ್ದೆ
ಈ ಜನ್ರಿಗೆ ಕೊಡಂಥದು ಏಸೊಂತರ ಅವೆ ನಿನ್ನತ್ರ
ನಿನ ಬಂದೂಕ್ನ ಬಾಯಲ್ಲಿ ಗುಬ್ಬಿ ಗೂಡು ಮಾಡ್ಲಿ
ನಿಂಗೂ ಆಚ್ಗೆ ನಿಂತೋನಿಗೂ ನೂರೊರ್ಷ ಆಯುಸ್ಸು ಸಿಗಲಿ
ಜನರೆಲ್ಲ ಇರುವ್ಯಾಗಿ ತಂತಿ ಬೇಲಿ ನುಸುಳಲಿ
ಯುದ್ಧ ಅಂಬೊ ಪದ ಮಾಯಾಗ್ಲಿ..

ಎಲ್ಲರ ದೋಸ್ತ ಆಗು, ನಿನ್ಗೆ ಶತ್ರುನೆ ಇಲ್ಲ ಆಗ್ಲಿ..




 (ಚಿತ್ರ, ಫೋಟೋ: ಕೃಷ್ಣ ಗಿಳಿಯಾರ್)

Tuesday 18 October 2016

ಖೈರ್ಲಾಂಜಿ: ದೌರ್ಜನ್ಯಗಳು ಮತ್ತಷ್ಟು ದೌರ್ಜನ್ಯಗಳನ್ನು ಹೆರುತ್ತಿರುವ ಕಾಲದಲ್ಲಿ..




ಇವರು ಮಹಾರಾಷ್ಟ್ರದ ಭಂಡಾರಾ ಜಿಲ್ಲಾ ಕೇಂದ್ರದ ಹುಡುಗರ ಹಾಸ್ಟೆಲಿನ ಸೆಕ್ಯುರಿಟಿ ಗಾರ್ಡ್ ಆಗಿರುವ ವ್ಯಕ್ತಿ. ಅವರನ್ನು ಎಲ್ಲರೂ ಕರುಣೆಯಿಂದ, ಅನುಮಾನದಿಂದ, ಉಪೇಕ್ಷೆಯಿಂದ ವಿಚಿತ್ರವಾಗಿ ನೋಡುತ್ತಿದ್ದಾರೆ ಎನಿಸುತ್ತಿದೆಯೆ? ಹೌದು, ಆ ಗಾರ್ಡನ್ನು ಗನ್ನು ಹಿಡಿದ ಇಬ್ಬರು ಪೊಲೀಸರು ಕಾಯುತ್ತಾರೆ. ಭೀಕರ ಸತ್ಯವನ್ನು ಕಂಡ ಮತ್ತು ಅನುಭವಿಸಿದ ಆತನ ದಾರುಣ ನೆನಪುಗಳು ಕೋರ್ಟಿಗೆ ಬಹು ಅಮೂಲ್ಯವಾಗಿರುವುದರಿಂದ ಅವರನ್ನು ರಕ್ಷಿಸುವ ಹೊಣೆ ಸಮಾಜಕ್ಕಿದೆ. ಹಳ್ಳಿಯಲ್ಲಿದ್ದ ಅವರ ಸ್ವಂತ ಮನೆ ನೆತ್ತರಲ್ಲಿ ಮಿಂದೆದ್ದು, ಹೊತ್ತುರಿದು ಈಗ ಬಿಕೋ ಎನ್ನುತ್ತ ಸ್ಮಾರಕವಾಗಿರಲು ಸರ್ಕಾರ ಬೇರೆ ಕಡೆ ವಾಸದ ಮನೆ ನೀಡಿದೆ. ಪಕ್ಕದ ಹಳ್ಳಿಯಲ್ಲಿ ನಾಲ್ಕೆಕರೆ ಭೂಮಿ ಕೊಟ್ಟಿದೆ. ಸರ್ಕಾರಿ ನೌಕರಿ ನೀಡಿದೆ.

ಆತನ ಮುಖದಲ್ಲಿರುವ ಭಾವ ದುಃಖವೋ, ಅಸಹಾಯಕತೆಯೊ, ಕಿಚ್ಚೋ, ಹೇಸಿಗೆಯೊ, ಪ್ರತಿರೋಧವೋ ಒಂದೂ ತಿಳಿಯದಂತಿದೆಯೆ? ಇದಕ್ಕಿಂತ ಹೆಚ್ಚು ಇನ್ನೇನನ್ನು ಯಾರು ಯಾರಿಗಾದರೂ ಮಾಡಿಯಾರು ಎಂದು ಆ ಚಹರೆ ಪ್ರಶ್ನಿಸುತ್ತಿದೆಯೆ? ಒಳಗೆ ಬನ್ನಿ. ಇದು ಅವರ ಮನೆ. ಬಾಡದ ಪ್ಲಾಸ್ಟಿಕ್ ಹೂಹಾರ ಹಾಕಿಕೊಂಡು ನಾಲ್ಕು ಫೋಟೋಗಳು ಕಾಣುತ್ತಿವೆಯೆ? ಅವರೆಲ್ಲ ಈಗ ನೆನಪಾಗಿ ಉಳಿದಿರುವ ಆತನ ಕುಟುಂಬ ಸದಸ್ಯರು. ಹೆಂಡತಿ ಸುರೇಖಾ (೪೪ ವರ್ಷ), ಮಗಳು ಪ್ರಿಯಾಂಕ (೧೮ ವರ್ಷ), ಇಬ್ಬರು ಮಗಂದಿರಾದ ಕಣ್ಣು ಕಾಣದ ರೋಶನ್ (೨೩) ಹಾಗೂ ಸುಧೀರ್ (೨೧) ಅವರ ಫೋಟೋಗಳವು. ಅಕೋ ಅಲ್ಲಿ, ಮನೆಯ ಹೊರಗಿನಂಗಳಲ್ಲಿ ಒಂದು ಮುರಿದ ಮಂಚ ನಿಮ್ಮ ಗಮನ ಸೆಳೆಯುತ್ತಿದೆಯೆ? ಹಳ್ಳಿಯಲ್ಲಿದ್ದ ತನ್ನ ಗುಡಿಸಲಿನ ಏಕೈಕ ಪೀಠೋಪಕರಣವಾಗಿದ್ದ ಆ ಮಂಚವನ್ನು ಒಂದು ಕಾಲದ ತನ್ನ ಬದುಕಿನ ಪುರಾವೆಯೋ ಎನ್ನುವಂತೆ ಆತ ಜತನದಿಂದ ಕಾಪಾಡಿಕೊಂಡಿದ್ದಾರೆ. ಕುಟುಂಬದ ನೆನಪು ಆ ಜೀವಕ್ಕೆ ಬಹು ಅಮೂಲ್ಯವಾದದ್ದು. ಏಕೆಂದರೆ ಆ ನೆನಪುಗಳ ಹೊರತು ಆತ ಏಕಾಂಗಿ. ಊರೊಳಗಿದ್ದೂ ಏಕಾಂಗಿ. ಯಾಕೆಂದರೆ ಅವರ ಬಂಧುಗಳಿಗೆ, ಸ್ನೇಹಿತರಿಗೆ ಅವರೊಡನೆ ಬದುಕಲು ಭಯ. ಸತ್ಯ ಹೇಳಲು ಭಯ. ಮನೆಗೆ ಕಾಲಿಡಲು ಭಯ.



ಇಷ್ಟಾದರೂ ಆ ವ್ಯಕ್ತಿಯ ಗುರುತು ಹತ್ತುತ್ತಿಲ್ಲವೆ? ಅಯ್ಯೋ ಪಾಪ, ಹೋಗಲಿ ಬಿಡಿ. ಗುರುತು ತಿಳಿಯಲು ಆತ ಅಚ್ಛೇ ದಿನಗಳ ತಂದು ಸುರಿಯಲಿರುವ ಜನನಾಯಕನಲ್ಲ, ಕಾವಿಯುಟ್ಟ ಸ್ವಾಮಿಯಲ್ಲ, ಗಡಿಯಲ್ಲಿ ಹುತಾತ್ಮನಾದ ಸೈನಿಕನಲ್ಲ..

ಇರಲಿ, ತಗೊಳ್ಳಿ ಅವರ ವಿಳಾಸ:

ಮಿ. ಭಯ್ಯಾಲಾಲ್ ಭೋತ್ಮಾಂಗೆ,
ಸಾಕೀನ - ಖೈರ್ಲಾಂಜಿ,
ತಾಲೂಕ - ಮೊಹಾಡಿ,
ಜಿಲ್ಲೆ - ಭಂಢಾರಾ,
ರಾಜ್ಯ - ಅಂಬೇಡ್ಕರರ ಮಹಾರಾಷ್ಟ್ರ.

ಸೆಪ್ಟೆಂಬರ್ ೨೯, ೨೦೦೬. ೧೦ ವರ್ಷ ಹಿಂದೆ..

೨೦೦೦ನೇ ಇಸವಿಯಲ್ಲಿ ದೊಮ್ಮ ಭಿಮ್ತೆ ಎಂಬಾತನಿಂದ ೦.೬ ಹೆಕ್ಟೇರ್ ನೆಲವನ್ನು ಭೋತ್ಮಾಂಗೆ ಕುಟುಂಬ ಖರೀದಿಸಿತ್ತು. ಅದರಲ್ಲಿ ೦.೪ ಹೆಕ್ಟೇರ್ ಅನ್ನು ಊರ ರಸ್ತೆಗೆ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಾಗ ಒಲ್ಲದ ಮನಸಿನಿಂದ ಅನಿವಾರ್ಯವಾಗಿ ಬಿಟ್ಟುಕೊಟ್ಟರು. ಆದರೆ ಉಳಿದ ೦.೨ ಹೆಕ್ಟೇರ್ ನೆಲವನ್ನೂ ಬಿಟ್ಟುಕೊಡಬೇಕೆಂದಾಗ ಭಯ್ಯಾಲಾಲ್ ನಿರಾಕರಿಸಿದರು. ಅವರ ಮೇಲೆ ಹಲ್ಲೆಯಾಯಿತು. ಭೋತ್ಮಾಂಗೆಗಳನ್ನು ತಲೆಯೆತ್ತದಂತೆ ಗದುಮ ಬೇಕೆಂದು ಊರ ಸಿರಿವಂತರು ಪ್ರಯತ್ನಿಸುತ್ತಿದ್ದರೆ, ಭಯ್ಯಾಲಾಲ್ ಮತ್ತು ಸುರೇಖಾ ಹೇಗಾದರೂ ಅದೇ ಊರಿನಲ್ಲಿ ಆತ್ಮಘನತೆಯಿಂದ ಬದುಕಿ ತೋರಿಸಬೇಕೆಂಬ ಛಲ ಹೊತ್ತಿದ್ದರು.

ಸೆ. ೩, ೨೦೦೬. ಸಿದ್ಧಾರ್ಥ ಗಜಬಿಯೆ ಪಕ್ಕದ ಹಳ್ಳಿ ಘುಸಾಲಾದ ಪೋಲೀಸ್ ಪಾಟೀಲ. ಭೋತ್ಮಾಂಗೆಗಳಿಗೆ ಬಂಧು. ಸಿದ್ಧಾರ್ಥ ಮತ್ತವನ ತಮ್ಮ ರಾಜನ್ ಅವರೊಡನೆ ಊರ ಮೇಲ್ಜಾತಿಯವರ ಚಕಮಕಿ ನಿರಂತರ ನಡೆಯುತ್ತಿತ್ತು. ಒಮ್ಮೆ ಸಿದ್ಧಾರ್ಥ ರೇಶನ್ನಿನಲ್ಲಿ ಕ್ಯೂ ನಿಂತು ಮೇಲ್ಜಾತಿಯವರಿಗೆ ಸರದಿ ಬಿಟ್ಟು ಕೊಡದೆ ರೇಶನ್ ತೆಗೆದುಕೊಂಡು ಹೋದಾಗ ತೀವ್ರವಾಗಿ ಹಲ್ಲೆಗೊಳಗಾದ. ಕೂಡಲೆ ಆಸ್ಪತ್ರೆ ಸೇರಿದ ಸಿದ್ಧಾರ್ಥ ಪೋಲೀಸರಿಗೆ ದೂರು ಕೊಟ್ಟ. ಆ ಪ್ರಕರಣಕ್ಕೆ ಸುರೇಖಾ ಹಾಗೂ ಮಗಳು ಪ್ರಿಯಾಂಕ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ಎಫ್‌ಐಆರ್ ದಾಖಲಾಗಿ ಸಿದ್ಧಾರ್ಥನ ಮೇಲೆ ಹಲ್ಲೆ ಮಾಡಿದವರು ಬಂಧನಕ್ಕೊಳಗಾದರು.

ಸೆ. ೨೯, ೨೦೦೬ರಂದು ಬೇಲ್ ಮೇಲೆ ಬಿಡುಗಡೆಯಾಗಿ ಅವರು ಲಾಕಪ್ಪಿನಿಂದ ಹೊರ ಬಂದರು. ಕೂಡಲೇ ಸ್ಥಳೀಯ ಶಾಸಕರೊಬ್ಬರು ಫೋನು ಮಾಡಿ, ‘ಬಿಡುಗಡೆಯಾದ ನಿಮ್ಮನ್ನು ಸಿದ್ಧಾರ್ಥ ಹೊಡೆಯಲಿದ್ದಾನೆ, ದಲಿತರು ಈ ಪರಿ ಸೊಕ್ಕಲು ಅವಕಾಶ ಕೊಡಲೇಬಾರದು’ ಎಂದು ಪ್ರಚೋದಿಸಿದರು. ೫೦-೬೦ ಜನ ಕತ್ತಿ, ಕೊಡಲಿ, ಕೋಲು ಹಿಡಿದು ಟ್ರ್ಯಾಕ್ಟರಿನಲ್ಲಿ ಸಿದ್ಧಾರ್ಥ-ರಾಜನ್ ಅವರನ್ನು ‘ವಿಚಾರಿಸಿ’ಕೊಳ್ಳಲು ಹೊರಟರು. ಕೂಡಲೇ ಸುರೇಖಾ ಫೋನು ಮಾಡಿ ರಾಜನ್ ಗಜಬಿಯೆಗೆ ವಿಷಯ ತಿಳಿಸಿದಾಗ ಸೋದರರಿಬ್ಬರೂ ತಪ್ಪಿಸಿಕೊಂಡರು. ಆದರೆ ಜಾತಿ ಎಂಬ ಅಡಕತ್ತರಿಯ ನಡುವೆ ಸಿಲುಕಿಕೊಂಡವರು ಭೋತ್ಮಾಂಗೆ ಕುಟುಂಬದವರು.

ಸಂಜೆ ಐದರ ವೇಳೆ. ಸುರೇಖಾ ಮನೆಯಲ್ಲಿ ಅಡಿಗೆ ಮಾಡುತ್ತಿದ್ದರೆ, ಮಕ್ಕಳು ಓದುತ್ತಿದ್ದರು. ಟ್ರ್ಯಾಕ್ಟರ್‌ಗಳಲ್ಲಿ ಬಂದ ಕೆರಳಿದವರು ತಮ್ಮನ್ನು ಅಪರಾಧಿಗಳನ್ನಾಗಿಸಿ ಸಾಕ್ಷ್ಯ ಹೇಳಿದ ಭೋತ್ಮಾಂಗೆಗಳನ್ನು ಹಿಗ್ಗಾಮುಗ್ಗಾ ಹೊಡೆದರು. ಬಟ್ಟೆ ಕಳಚಿ ಥಳಿಸಿದರು. ರೋಶನ್‌ಗೆ ಪ್ರಿಯಾಂಕ ಜೊತೆ ಸಂಭೋಗ ನಡೆಸುವಂತೆ ಹೇಳಿದರು. ಒಪ್ಪದಿದ್ದಾಗ ಅವನ ಗುಪ್ತಾಂಗಗಳ ಮೇಲೆ ಒದ್ದರು. ಎಲ್ಲರ ಬಟ್ಟೆ ಕಳಚಿ ನಗ್ನರಾಗಿ ಊರು ಸುತ್ತಿ ಬರಲು ಹೇಳಿದರು. ಪ್ರಿಯಾಂಕಳ ಮೇಲೆ ಗುಂಪು ಅತ್ಯಾಚಾರ ನಡೆಸಿ, ಸ್ತನಗಳ ಮೇಲೆ ಕೊಡಲಿಯಿಂದ ಹೊಡೆದು, ಅವಳ ಗುಪ್ತಾಂಗದೊಳಗೆ ಕೋಲು ತೂರಿದರು. ಇದನ್ನೆಲ್ಲ ಮಾಡುವಾಗ ದಲಿತೇತರ ಹೆಂಗಸರು ನೋಡುತ್ತ ನಿಂತು ತಮ್ಮ ಗಂಡಸರನ್ನು ಹುರಿದುಂಬಿಸುತ್ತಿದ್ದರು. ನಂತರ ಸುರೇಖಾಳನ್ನು ವಿವಸ್ತ್ರಗೊಳಿಸಿ, ಭೀಕರವಾಗಿ ಹಿಂಸಿಸಿ, ಹಲವರು ಅತ್ಯಾಚಾರಗೈದರು. ಸೈಕಲ್ ಚೈನಿನಿಂದ, ಕೋಲಿನಿಂದ ಮನಬಂದಂತೆ ಹೊಡೆದು ಎಲ್ಲರ ಕಾಲಿನೆಲುಬುಗಳು ಮುರಿದುಹೋದವು. ಭೀಕರ ಹಿಂಸೆಗೆ ಆಗಲೇ ಅರೆಜೀವವಾಗಿದ್ದವರು ತಲೆಗೆ ಬಿದ್ದ ಕೊಡಲಿ ಪೆಟ್ಟಿಗೆ ತಣ್ಣಗಾಗಿ ಹೋದರು.






ಈ ಭೀಭತ್ಸಕ್ಕೆ ಕೆಲಸದಿಂದ ಮನೆಗೆ ಬಂದ ಭಯ್ಯಾಲಾಲ್ ಹಾಗೂ ಆತ ಓಡಿಹೋಗಿ ಕರೆತಂದ ರಾಜನ್ ಗಜಬಿಯೆ ಸಾಕ್ಷಿಗಳಾಗಿದ್ದರು. ಅವರು ಭಯದಿಂದ ನಿರ್ವಿಣ್ಣರಾಗಿ ಬಳಿಯ ಪೊದೆಯಲ್ಲಿ ಅವಿತು ನಡೆಯುತ್ತಿರುವುದನ್ನು ನೋಡುತ್ತಿದ್ದರು. ಪೊಲೀಸರಿಗೆ ಫೋನು ಮಾಡಿದರು. ಅವರು ಬರಲು ನಾಲ್ಕು ತಾಸು ತಡವಾಯಿತು.

ಆಕಾಶ ಕೆಂಪೇರಿ ನೆತ್ತರ ಮಡುವಿನಲ್ಲಿ ಸೂರ್ಯ ಮುಳುಗಿಹೋಯಿತು. ಆ ದೇಹಗಳನ್ನು ಚಕ್ಕಡಿಯಲ್ಲಿ ತುಂಬಿ ಊರಾಚೆ ಎರಡು ಕಿಮಿ ದೂರದ ಕಾಲುವೆ ಬಳಿ ಬಿಸಾಡಿದರು. ಏಳು ಗಂಟೆ ಹೊತ್ತಿಗೆ ಎಲ್ಲ ಮುಗಿದುಹೋಯಿತು. ರಾತ್ರಿ ಹತ್ತಕ್ಕೆ ಒಬ್ಬ ಪೋಲೀಸ್ ಪೇದೆ ಬಂದ. ಆದರೆ ಅವನು ಕತ್ತಲ ಕಾರಣ ನೀಡಿ ಏನು ಮಾಡಲೂ ಸಾಧ್ಯವಿಲ್ಲ ಎಂದ! ಕಣ್ಣಿದ್ದೂ ಕುರುಡಾದ, ಕಿವಿಯಿದ್ದೂ ಕಿವುಡಾದ ಖೈರ್ಲಾಂಜಿ ಎಂಬ ಗ್ರಾಮವು ಅನ್ಯಾಯವಾಗಿ ತನ್ನ ನಾಲ್ಕು ಜೀವಗಳ ಕಳೆದುಕೊಂಡರೂ ಏನೂ ಆಗಲಿಲ್ಲವೆಂಬಂತೆ ಆ ರಾತ್ರಿಯನ್ನು ಕಳೆದು ಬಿಟ್ಟಿತು..

ಇಪ್ಪತ್ನಾಲ್ಕು ತಾಸು ತರುವಾಯ ದೂರು ದಾಖಲಾಯಿತು. ಶವಗಳ ಪೋಸ್ಟ್ ಮಾರ್ಟಂ ನಡೆಯಿತು. ದೇಹದ ಒಂದಿಂಚೂ ಬಿಡದೆ ಗಾಯಗೊಂಡ, ರಕ್ತ ಹೆಪ್ಪುಗಟ್ಟಿದ ಗುರುತುಗಳಿರುವ, ಸಂಪೂರ್ಣ ನಗ್ನ ಹೆಣ್ಣು ದೇಹಗಳನ್ನು ನೋಡಿದ ವೈದ್ಯರು ‘ಮಿದುಳಿನ ತೀವ್ರ ರಕ್ತಸ್ರಾವದಿಂದ ಸಾವು ಸಂಭವಿಸಿದೆ’ ಎಂದು ವರದಿ ಕೊಟ್ಟು ಕೈತೊಳೆದುಕೊಂಡರು. ‘ಪೋಲೀಸರು ರೇಪ್ ಸುದ್ದಿ ಹೇಳಲಿಲ್ಲ, ನಾನು ನೋಡಲಿಲ್ಲ’ ಎಂದು ಅತ್ಯಾಚಾರವನ್ನು ಶಂಕಿಸದೇ ಹೋದರು.

೫೦ ವರ್ಷ ಕೆಳಗೆ ..

ಖೈರ್ಲಾಂಜಿಯಿಂದ ೧೨೦ ಕಿಮೀ ದೂರದಲ್ಲಿದ್ದ ನಾಗ್ಪುರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ‘ಹಿಂದೂ ಧರ್ಮ ಮತ್ತದರ ಸವರ್ಣೀಯ ಸಮಾಜ ಎಂದೂ ಪರಿವರ್ತನೆಯಾಗದು. ಅದಕ್ಕಾಗಿ ನಾವು ದಲಿತರೇ ಧರ್ಮ ಪರಿವರ್ತನೆಗೊಳಗಾಗಬೇಕು’ ಎಂದು ಲಕ್ಷಾಂತರ ಬೆಂಬಲಿಗರೊಡನೆ ಬೌದ್ಧಾನುಯಾಯಿಯಾಗಿದ್ದರು. ಆಗಲೇ ಭೋತ್ಮಾಂಗೆಗಳೂ ಬೌದ್ಧರಾಗಿದ್ದರು. ಆದರೇನು, ಅವರ ಧರ್ಮ ಪರಿವರ್ತನೆಯಾದರೂ ಸಮಾಜ ಪರಿವರ್ತನೆಯಾಗಲಿಲ್ಲ. ಅವರನ್ನು ನೋಡುವ ಕಣ್ಣುಗಳ ದೃಷ್ಟಿ ಬದಲಾಗಲಿಲ್ಲ. ಅರ್ಧ ಶತಮಾನ ಕಳೆದರೂ, ಹಲವೆಂಟು ಕಾಯ್ದೆಕಾನೂನು ಬಂದರೂ, ಮೀಸಲಾತಿ ನೀಡಿದರೂ ಅಂಬೇಡ್ಕರ್ ಮುನ್ನಡೆಸಿದ್ದ ಸಮುದಾಯಕ್ಕೆ ತನ್ನದೆನ್ನುವ ಒಂದು ಗಟ್ಟಿ ಸೂರು, ಮತ್ತೊಂದು ಮೆಟ್ಟು ಜಾಗ ಸಿಗಲಿಲ್ಲ.

ಭಯ್ಯಾಲಾಲರದು ಪದಗಳಿಗೆ ನಿಲುಕಲಾಗದ ದಿಕ್ಕೇಡಿ ಮನಸ್ಥಿತಿ. ಯಾವ ಮಾತೂ, ಯಾರ ಭರವಸೆಯೂ ಭಯ್ಯಾಲಾಲರಿಗೆ ಧೈರ್ಯ ತುಂಬಲಾಗದೇ ಹೋದವು.



(ಭೋತ್ಮಾಂಗೆಗಳ ಮನೆ)

ಖೈರ್ಲಾಂಜಿಯಲ್ಲಿದ್ದದ್ದು ಮೂರೇ ಮೂರು ದಲಿತರ ಮನೆಗಳು. ಒಂದಷ್ಟು ಆದಿವಾಸಿಗಳದ್ದು. ಬಹುಪಾಲು ಮನೆಗಳು ಮರಾಠರವು. ಎಲ್ಲೋ ಕೆಲವು ಸಿರಿವಂತ ಕುಣಬಿ ಜಮೀನುದಾರರವು. ಅಲ್ಲಿ ಯಾವಾಗಲೂ ಹಿಂದೂ ಮಧ್ಯಮ ಜಾತಿಗಳಿಗೂ, ‘ಬೌದ್ಧ’ ದಲಿತರಿಗು ಚಕಮಕಿ. ಈ ಮೊದಲು ಜಾತಿ ಯಜಮಾನಿಕೆಯ ಹೆಸರಲ್ಲಿ ನಡೆದ ಎಷ್ಟೋ ಅನ್ಯಾಯಗಳು ಹೊರಲೋಕಕ್ಕೆ ಗೊತ್ತೇ ಆಗದೆ ಮುಚ್ಚಿಹೋಗಿದ್ದವು. ಆದರೆ ಈ ಹತ್ಯಾಕಾಂಡ ನಡೆದ ನಂತರ ಅಲ್ಲಿನ ಪ್ರಭಾವಿಗಳು ಎಷ್ಟೇ ಪ್ರಯತ್ನಪಟ್ಟರೂ ಸುದ್ದಿ ಮುಚ್ಚಿಡಲಾಗಲಿಲ್ಲ. ನಕ್ಸಲೈಟ್ ಕೃತ್ಯವೆಂದು ಬಿಂಬಿಸಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದರೂ ಸಹ ದೇಶಾದ್ಯಂತ ನಿಜ ಸುದ್ದಿ ಹರಡಿತು. ದಲಿತ ಮತ್ತು ಜನಪರ ಸಂಘಟನೆಗಳು ಪ್ರತಿಭಟನೆಗಿಳಿದವು. ಎಲ್ಲೆಲ್ಲು ಸಭೆ, ಸಮಾವೇಶ, ಜಾಥಾಗಳು ನಡೆದವು. ಕಮ್ಯುನಿಸ್ಟ್ ಸಂಘಟನೆಗಳು ತೀವ್ರ ಪ್ರತಿಭಟನೆ ದಾಖಲಿಸಿದವು. ಜಾತಿ ದ್ವೇಷಕ್ಕೆ ಬಲಿಯಾದ ಕುಟುಂಬಕ್ಕೆ ದೇಶಕ್ಕೆ ದೇಶವೇ ಮಿಡಿಯಿತು. ಮಾಧ್ಯಮ, ಪೋಲೀಸರು, ಸಂಘಟನೆಗಳು ಎಲ್ಲವೂ ಖೈರ್ಲಾಂಜಿ ಎಂಬ ಪುಟ್ಟ ಹಳ್ಳಿಯ ಬೀದಿಬೀದಿ ತುಂಬಿಕೊಂಡವು. ಅಂತಾರಾಷ್ಟ್ರೀಯ ಮಟ್ಟದಲ್ಲು ಖೈರ್ಲಾಂಜಿ ದೌರ್ಜನ್ಯ ಪ್ರತಿಧ್ವನಿಸಿತು.



ನ್ಯಾಯಕ್ಕಾಗಿನ ಕೂಗು ತಾರಕಕ್ಕೇರಿದಂತೆ ತುರ್ತು ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಟ್ರಯಲ್ ಕೋರ್ಟು ಸ್ಥಾಪನೆಯಾಯಿತು. ಹಳೆಯ ಶವಪರೀಕ್ಷೆ ವರದಿಯಲ್ಲಿ ಅತ್ಯಾಚಾರ ನಡೆದ ಕುರಿತು ಏನನ್ನೂ ಬರೆಯದಿದ್ದ ಬಗೆಗೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದಾಗ ಮತ್ತೆ ಪೋಸ್ಟ್ ಮಾರ್ಟಂ ನಡೆಸಲಾಯಿತು. ಆದರೆ ಆ ವೇಳೆಗೆ ಶವಗಳು ಕೊಳೆತು ಅತ್ಯಾಚಾರಕ್ಕೆ ‘ಸೂಕ್ತ ಸಾಕ್ಷ್ಯ’ ಒದಗಲಿಲ್ಲ. ಸುರೇಖಾ ಕರೆ ಮಾಡಿದ ಮೊಬೈಲ್ ಸಿಮ್ ಅನ್ನು ಮಹಜರ್ ವೇಳೆಗೆ ಪೊಲೀಸರು ಒಯ್ದಿದ್ದರೂ ನಂತರ ‘ಕಳೆದು’ ಹೋದದ್ದು ಸಿಗಲಿಲ್ಲ. ಇದೆಲ್ಲ ಹಿನ್ನಡೆಗಳ ಜೊತೆಗೆ ಜಾತಿಗ್ರಸ್ಥ ಸಮಾಜದ ಪಟ್ಟುಗಳ ಭಯಕ್ಕೆ ಕೋರ್ಟಿಗೆ ಸಾಕ್ಷ್ಯ ಹೇಳಲು ಯಾರೂ ಮುಂದೆ ಬರಲಿಲ್ಲ.

ಆ ಹಳ್ಳಿಯಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು. ೧೭೮ ಮನೆಗಳಿಗೂ ಈ ಕೃತ್ಯ ನಡೆದ ಸ್ಥಳ ಕೂಗಳತೆಯ ದೂರದಲ್ಲಿದೆ. ಆದರೆ ಎಲ್ಲರೂ ಆ ಸಂಜೆ ಏನಾಯಿತೆಂದು ತಮಗೆ ‘ಗೊತ್ತೇ ಇಲ್ಲ’ ಎಂದರು. ತಮಗೆ ವಿಷಯ ತಿಳಿದದ್ದು ಮರುದಿನ ಬೆಳಿಗ್ಗೆ ಕಾಲುವೆಯ ಬಳಿ ಸುರೇಖಾ ಶವ ನೋಡಿದಾಗಲೇ ಎಂದು ಹೇಳಿದರು! ‘ಹಿಡಿ, ಹೊಡಿ, ಓಡಲು ಬಿಡಬೇಡ, ಹಾಕು’ ಎಂದು ಕೂಗುವುದನ್ನು ಕೇಳಿದ ಆಚೀಚಿನ ಹಟ್ಟಿಯ ಜನ, ದನಗಳನ್ನು ಹಿಡಿಯಲು ಯಾರೋ ಓಡುತ್ತಿದ್ದಾರೆ ಎಂದು ಭಾವಿಸಿದರಂತೆ! ಗತಪ್ರಾಣರಾಗುತ್ತಿದ್ದವರ ಆಕ್ರಂದನ, ಚೀರಾಟ ಯಾರ ಕಿವಿಗೂ ಬೀಳಲೇ ಇಲ್ಲವಂತೆ!!

ಕೊನೆಗೆ ಭಯ್ಯಾಲಾಲ್, ಗಜಬಿಯೆ ಸೋದರರು ಮತ್ತಿತರ ಸಾಕ್ಷ್ಯಗಳ ಆಧಾರದ ಮೇಲೆ ೨೦೦೮ರಲ್ಲಿ ಕೋರ್ಟು ಗಮನಾರ್ಹ ತೀರ್ಪು ನೀಡಿತು. ಎಂಟು ಪ್ರಮುಖ ಆರೋಪಿಗಳಲ್ಲಿ ಆರು ಜನರಿಗೆ ಮರಣದಂಡನೆ, ಇಬ್ಬರಿಗೆ ೨೫ ವರ್ಷ ಜೈಲು ಶಿಕ್ಷೆ ವಿಧಿಸಿತು.

ದಲಿತಪರ ಸಂಘಟನೆಗಳು ಮತ್ತು ಮನಸುಗಳು ಖೈರ್ಲಾಂಜಿ ಹತ್ಯಾಕಾಂಡಕ್ಕೆ ತ್ವರಿತವಾಗಿ ಸೂಕ್ತ ನ್ಯಾಯ ದೊರೆಯಿತೆಂದು ನೆಮ್ಮದಿಗೊಂಡವು. ಸಂಘಟನೆಗಳ ಒತ್ತಾಸೆ ಮತ್ತು ಜನಬೆಂಬಲ ಇದ್ದರೆ ದೌರ್ಜನ್ಯ ತಡೆ ಕಾಯ್ದೆ ತಮ್ಮ ನೆರವಿಗೆ ಬರಬಹುದು ಎಂದು ಜನಸಾಮಾನ್ಯರು ಭರವಸೆ ತಳೆದರು.

ಆದರೆ, ೨೦೧೦ರಲ್ಲಿ ಈ ತೀರ್ಪಿನ ವಿರುದ್ಧ ಕೊಲೆ ಆರೋಪಿಗಳು ಹೈಕೋರ್ಟಿಗೆ ಹೋದರು. ಅವರ ಮೇಲ್ಮನವಿ ಪರಿಗಣಿಸಿದ ಮುಂಬೈ ಹೈಕೋರ್ಟಿನ ನಾಗಪುರ ಪೀಠ, ‘ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ’ ಎಂದು ೬ ಜನರ ಮರಣದಂಡನೆಯನ್ನು ೨೫ ವರ್ಷ ಜೈಲು ಶಿಕ್ಷೆಗೆ, ಇಬ್ಬರ ೨೫ ವರ್ಷ ಜೈಲು ಶಿಕ್ಷೆಯನ್ನು ಜೀವಾವಧಿ ಜೈಲು ಶಿಕ್ಷೆಗೆ (೧೪ ವರ್ಷ) ಇಳಿಸಿತು. ಅಷ್ಟೇ ಅಲ್ಲ, ಇದು ಜಾತಿಗೆ ಸಂಬಂಧಿಸಿದ ಪ್ರಕರಣವೇ ಅಲ್ಲ, ಇದು ಪ್ರತೀಕಾರ ಕೊಲೆ ಎಂದು ದಲಿತ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಶಿಕ್ಷೆ ನೀಡಲು ನಿರಾಕರಿಸಿತು.

ಇದುವರೆಗೆ ಆದದ್ದೇ ಈ ಪ್ರಕರಣದಲ್ಲೂ ಆಯಿತು. ಕೆಳಹಂತದ ಕೋರ್ಟು ಜನಾಭಿಪ್ರಾಯಕ್ಕೆ ಅನುಗುಣವಾಗಿ ನ್ಯಾಯಯುತ ತೀರ್ಪು ನೀಡಿದರೂ, ಮೇಲಿನ ಕೋರ್ಟಿನಲ್ಲಿ ಪ್ರಭಾವಿಗಳ ಹಸ್ತಕ್ಷೇಪವು ನ್ಯಾಯದಾನದ ವ್ಯಾಖ್ಯಾನವನ್ನೇ ಬುಡಮೇಲು ಮಾಡಿತು.

ಇಡೀ ಘಟನೆಗೆ ಏಕೈಕ ಪ್ರತ್ಯಕ್ಷ ಸಾಕ್ಷಿ ಭಯ್ಯಾಲಾಲ್ ಈಗ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಹಲವು ಪ್ರಾಣ ಬೆದರಿಕೆಯ ಕರೆಗಳನ್ನು, ಪ್ರಾಣಾಂತಿಕ ನೋವುಗಳನ್ನು ಎದುರಿಸಿದರೂ; ಬದುಕು ಮೂರಾಬಟ್ಟೆಯಾಗಿದ್ದರೂ; ನ್ಯಾಯ ಮರೀಚಿಕೆ ಅನಿಸಿದ್ದರೂ ನ್ಯಾಯ ಪಡೆಯಬೇಕೆಂಬ ಛಲವೇ ಅವರನ್ನು ಬದುಕಿಸಿರುವಂತಿದೆ.

ಇದರ ನಡುವೆ ಐದು ವರ್ಷ ಕೆಳಗೆ ಕೆಲ ಟಿವಿ ಚಾನೆಲ್ಲುಗಳು ಭಯ್ಯಾಲಾಲ್ ಅವರ ಮನೆಗೆ ಹೋಗಿ ಒಂದು ‘ಸ್ಟೋರಿ’ ತಯಾರಿಸಿದವು. ಅವರ ಮನೆಯಲ್ಲಿದ್ದ ಶೀಲಾ ಎಂಬ ಹೆಣ್ಣುಮಗಳನ್ನು ಭಯ್ಯಾಲಾಲ್ ಮರುಮದುವೆಯಾಗಿರಬಹುದೇ ಎಂಬ ಶಂಕೆ ಹರಿಯಬಿಟ್ಟವು. ಅವರಿಬ್ಬರನ್ನೂ ಒಟ್ಟು ಕೂರಿಸಿ ಒಂದು ಶಾಟ್ ತೆಗೆದಿದ್ದವು. ಇದು ಸೃಷ್ಟಿಸಿದ ಅನಗತ್ಯ ಚರ್ಚೆ ಕೊನೆಗೊಳಿಸಲು ಭಯ್ಯಾಲಾಲ್ ಪತ್ರಿಕಾಗೋಷ್ಠಿ ಕರೆದು, ‘ನಾನು ಮರುಮದುವೆಯಾಗಿಲ್ಲ, ಪ್ರಕರಣದ ಸಲುವಾಗಿ ಊರೂರಿಗೆ, ಕೋರ್ಟಿಗೆ ಓಡಾಡಬೇಕಿರುವುದಿಂದ ಮನೆ ನಿಭಾಯಿಸಲು ಒಬ್ಬರನ್ನು ಗೊತ್ತು ಮಾಡಿಕೊಂಡಿರುವೆ. ಮನೆಯಲ್ಲಿರುವುದು ಮನೆಗೆಲಸದ ಶೀಲಾ ಅಷ್ಟೆ’ ಎಂದು ಹೇಳಬೇಕಾಯಿತು.

ಭಯ್ಯಾಲಾಲ್ ಮರುಮದುವೆಯಾಗಿರುವರೋ ಇಲ್ಲವೋ ಬೇರೆ ವಿಷಯ. ಆದರೆ ಆತ ಮರುಮದುವೆಯಾದರೆ ಅದೇನೂ ತಪ್ಪಲ್ಲ. ಆತ ಸದಾ ಬಾಧಿತ ಸ್ಥಿತಿಯಲ್ಲಿಯೇ ಇರಬೇಕೆಂದು ಬಯಸುವುದೂ ಸಾಧುವಲ್ಲ.





(ಕಲೆ: ಸೌರಭ್ ಸಿಂಗ್) 
ಭಾರತ ಎಷ್ಟು ಪುರಾತನವೋ, ದಲಿತರ ಮೇಲಿನ ದೌರ್ಜನ್ಯಗಳೂ ಅಷ್ಟೇ ಪುರಾತನ. ರಾಮಾಯಣ ಎಷ್ಟು ಜನಜನಿತವೋ, ಶಂಭೂಕ ವಧೆಯೂ ಅಷ್ಟೇ ವಾಸ್ತವ. ಅಸ್ಪೃಶ್ಯತೆ ಮತ್ತು ಅದು ಕೊಡಮಾಡಿರುವ ದಮನಿತ ಸ್ಥಿತಿಯಿಂದ ಹೊರಬರಲು ದಲಿತ ಸಮುದಾಯ ನಡೆಸುವ ಪ್ರಯತ್ನಗಳನ್ನು ಸಮಾಜ ಉದಾರವಾಗಿ, ನ್ಯಾಯಯುತವಾಗಿ ನೋಡುತ್ತಿಲ್ಲ. ಸಾಮಾಜಿಕ ಸ್ತರದಲ್ಲಿ ಅವರು ಮೇಲೇರುತ್ತಿದ್ದ ಹಾಗೆ ಅತ್ಯಂತ ಕ್ರೂರ ಮತ್ತು ವಿಕೃತ ದೌರ್ಜನ್ಯ ನಡೆಸಲಾಗುತ್ತಿದೆ. ಎಂದೇ ಎಷ್ಟೆಲ್ಲ ಕಾಯ್ದೆ ಕಾನೂನುಗಳು ಬಂದರೂ ದೌರ್ಜನ್ಯ ನಿರ್ಭಯವಾಗಿ, ನಿರಂತರವಾಗಿ ನಡೆಯುತ್ತಿದೆ.

ದಲಿತ ದೌರ್ಜನ್ಯಗಳನ್ನು ಉಳಿದ ಕ್ರಿಮಿನಲ್ ಅಪರಾಧಗಳಂತೆ ಪರಿಗಣಿಸಲಾಗುವುದಿಲ್ಲ. ಹಾಗೆ ಮಾಡುತ್ತಿರುವುದರಿಂದಲೇ ನ್ಯಾಯದಾನ ಸಾಧ್ಯವಾಗುತ್ತಿಲ್ಲ. ಏಕೆಂದರೆ ಜಾತಿ ದೌರ್ಜನ್ಯ ಎನ್ನುವುದು ತುಂಬ ವ್ಯವಸ್ಥಿತವಾಗಿ ನಡೆಯುವ ಸಮಾಜದ ಹುನ್ನಾರ. ಅದು ಯಾರೋ ಒಬ್ಬರ ಐಡಿಯಾ ಆಗಲೀ, ಬಲಪ್ರಯೋಗ ಅಥವಾ ಹುನ್ನಾರವಾಗಲೀ ಆಗಿರುವುದು ಸಾಧ್ಯವಿಲ್ಲ. ಖೈರ್ಲಾಂಜಿ ಪ್ರಕರಣದಲ್ಲಿ ನಾಲ್ವರು ಅಮಾಯಕರ ಜೀವಹಾನಿ, ಘನತೆ ಹಾನಿಯಾಗುವವರೆಗೆ ಒಂದು ಪ್ರಕರಣ ಯಾಕೆ ಮತ್ತು ಹೇಗೆ ಬೆಳೆಯಿತು ಎಂದು ಗಮನಿಸಿ ಸರಿಪಡಿಸಲು ಯತ್ನಿಸದಿದ್ದರೆ ಭವಿಷ್ಯದಲ್ಲಿ ಸಂಭವಿಸಲಿರುವ ಇನ್ನಷ್ಟು ಇಂಥ ದೌರ್ಜನ್ಯಗಳ ತಡೆಯಲು ಸಾಧ್ಯವಿಲ್ಲ.

ಮಹಾರಾಷ್ಟ್ರದ ಖೈರ್ಲಾಂಜಿಯೇ ಇರಲಿ, ಗುಜರಾತಿನ ಊನಾವೇ ಆಗಲಿ - ದಲಿತರ ಮೇಲೆ ದೌರ್ಜನ್ಯ ನಡೆಸುವವರಿಗೆ ತಮ್ಮ ಕೃತ್ಯ ಉಳಿದ ಸಮಾಜಕ್ಕೆ ತಿಳಿದರೆ ಎಂಬ ಕಾನೂನಿನ ಭಯವೂ ಇಲ್ಲ, ನೈತಿಕ ಭಯವಂತೂ ಇಲ್ಲವೇ ಇಲ್ಲ. ದಲಿತ ಶಂಭೂಕನ ಕೊಂದರೂ ನರಹತ್ಯೆಯ ಪಾಪ ತಟ್ಟದು ಎಂದು ಶ್ರೀರಾಮನಿಗಿದ್ದ ಧೈರ್ಯವೇ ಅವರ ಜೊತೆಯೂ ಇದೆ. ಊನಾದಲ್ಲಿ ದನದ ಚರ್ಮ ಸುಲಿಯುತ್ತಿದ್ದ ದಲಿತ ಯುವಕರನ್ನು ಥಳಿಸಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟವರು ಕೃತ್ಯ ಎಸಗಿದ ಗೋ ರಕ್ಷಕರು. ಅವರಿಗೆ ನಿರಪರಾಧಿಗಳನ್ನು ಜಾತಿ ಹೆಸರಿನಲ್ಲಿ ಶಿಕ್ಷಿಸುವುದು, ಕಾನೂನು ಕೈಗೆ ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿ ತಪ್ಪು ಎಂಬ ಜ್ಞಾನ ಇದೆ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ, ಇ ಮಾಧ್ಯಮದಲ್ಲಿ ಕ್ರಿಯಾಶೀಲರಾದ ಬಹುಸಂಖ್ಯೆಯ ದಲಿತ ತರುಣರಿದ್ದು ಅವರನ್ನು ರೊಚ್ಚಿಗೇಳಿಸುವ, ಭಯಗೊಳಿಸುವ ಉದ್ದೇಶದಿಂದಲೆ ಊನಾ ವೀಡಿಯೊ ಸಾರ್ವಜನಿಕವಾಗಿದೆ.

ಒಟ್ಟಾರೆ, ‘ಅವರ’ ಮೇಲಿನ ಪ್ರೀತಿಗೂ, ‘ಇವರ’ ಮೇಲಿನ ದ್ವೇಷಕ್ಕೂ, ಎಲ್ಲಕ್ಕು ಕಾರಣ ಒಂದೇ: ಜಾತಿ.

ಭಾರತದಲ್ಲಿ ಜಾತಿ ಇಲ್ಲ, ಜಾತೀಯತೆ-ತಾರತಮ್ಯ ಇಲ್ಲ ಎಂದು ಕೆಲ ಪಂಡಿತರು ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ಘಂಟಾಘೋಷವಾಗಿ ಸಾರುತ್ತಿದ್ದಾರೆ. ಆದರೆ ಭಾರತದಲ್ಲಿ ಜಾತಿ ಇದೆ. ಜಾತಿ ಮಾತ್ರ ಇದೆ. ಜಾತಿ ಜೀವಂತವಾಗಿದೆ.

ಏಕೆಂದರೆ ಜಾತಿಗುರುತು ಹೆಮ್ಮೆಯಾಗಿ ಬೆಳೆಯುತ್ತಲಿದೆ, ಅದು ಕೊಲ್ಲುತ್ತದೆ ಮತ್ತು ಅತ್ಯಾಚಾರ ಮಾಡುತ್ತದೆ!



ಒಂದು ವಿಚಿತ್ರ ವೈರುಧ್ಯ

ಜುಲೈ ೧೩, ೨೦೧೬. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಕೋಪರ್ಡಿಯ ಇಟ್ಟಿಗೆ ಭಟ್ಟಿ ಕಾರ್ಮಿಕರ ಮಗಳು - ೧೫ ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಕೊಲೆ ಮಾಡಲಾಯಿತು. ಮರಾಠಾ ಸಮುದಾಯದ ಆ ಹುಡುಗಿಯ ದೇಹವನ್ನು ತೀವ್ರವಾಗಿ ಹಿಂಸಿಸಲಾಗಿತ್ತು. ಕೂಡಲೇ ಆರೋಪಿಗಳ ಬಂಧಿಸಲಾಯಿತು.

ಬಂಧಿತರು ಮೂವರೂ ದಲಿತ ಯುವಕರು. ಕುಡಿದು ಭೀಕರ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು.

ಒಂದು ತಿಂಗಳು. ಒಂದೇಒಂದು ತಿಂಗಳಲ್ಲಿ ಅಹ್ಮದ್ ನಗರ ಮತ್ತಿತರ ಕಡೆಗಳಲ್ಲಿ ಮರಾಠಾ ಸಂಘಸಂಸ್ಥೆಗಳು ಈ ಅತ್ಯಾಚಾರ ವಿರೋಧಿಸಿ ‘ಮೂಕ ಮೆರವಣಿಗೆ’ ನಡೆಸಿದವು. ಮಾಧ್ಯಮದ, ಜನರ ಗಮನ ಸೆಳೆದ ‘ಮರಾಠಾ ಕ್ರಾಂತಿ ಮೂಕ್ ಮೋರ್ಚಾ’ ನಾಸಿಕ, ಪುಣೆ, ಸತಾರಾ, ಲಾತೂರು, ಕೊಲ್ಲಾಪುರ ಮೊದಲಾಗಿ ಎಲ್ಲ ಕಡೆ ನಡೆಯಿತು. ಸೆ. ೨೧ರಂದು ನವಿ ಮುಂಬಯಿಯಲ್ಲಿ ಬೃಹತ್ ಸಮಾವೇಶ ಜರುಗಿತು. ಕೇವಲ ಸತಾರಾ ಒಂದರಲ್ಲೆ ಮೋರ್ಚಾ ವೇಳೆ ೨೦ ಲಕ್ಷ ಜನ ಒಟ್ಟಾಗಿ ಹೆದ್ದಾರಿಯ ಪ್ರಯಾಣಕ್ಕೆ ತಡೆಯುಂಟಾಯಿತು. ಕರ್ನಾಟಕದ ಬೀದರಿನಲ್ಲೂ ‘ಮೀ ಮರಾಠ’ ಎಂದು ಬೃಹತ್ ಮೌನಜಾಥಾ ನಡೆಯಿತು. ಇದುವರೆಗೆ ಅಂಥ ೩೬ ಮೋರ್ಚಾಗಳು ನಡೆದಿವೆ. ಈ ಮೋರ್ಚಾಗಳಲ್ಲಿ ಬಹುಸಂಖ್ಯೆಯ ಹುಡುಗಿಯರು, ಬಯಲುಸೀಮೆಯ ರೈತರೇ ಮೊದಲಾಗಿ ಎಲ್ಲ ಮರಾಠಾ ಜನವರ್ಗಗಳೂ ಪಾಲ್ಗೊಂಡಿವೆ.







ಸ್ಥಳೀಯ ಬೇಡಿಕೆಗಳ ಜೊತೆಗೆ ಮರಾಠಾ ಸಮುದಾಯ ಮುಂದಿಟ್ಟ ಮೂರು ಮುಖ್ಯ ಬೇಡಿಕೆಗಳು:

೧. ಅತ್ಯಾಚಾರ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಿ.
೨. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ನೀಡಿ.
೩. ಅಂಕಿ ಅಂಶ ಪ್ರಕಾರ ಈಗಿರುವ ದಲಿತ ದೌರ್ಜನ್ಯ ತಡೆ ಕಾಯ್ದೆಯಿಂದ ಅತಿ ಹೆಚ್ಚು ಶಿಕ್ಷೆಗೊಳಗಾಗಿರುವವರು, ಬಂಧಿಸಲ್ಪಟ್ಟವರು ಮರಾಠರು. ಎಂದೇ ಆ ಕಾಯ್ದೆಗೆ ಒಂದೋ ತಿದ್ದುಪಡಿ ತನ್ನಿ ಇಲ್ಲವೆ ಅದನ್ನು ರದ್ದು ಮಾಡಿ.

ಎರಡು ದಶಕಗಳಿಂದ ಕೇಳುತ್ತ ಬಂದ ಮೀಸಲಾತಿ ಕೂಗು ಈಗ ಜೋರಾಗಿದೆ. ಹರ‍್ಯಾಣಾ ರಾಜಸ್ಥಾನದ ಜಾಟರಂತೆ, ಗುಜರಾತಿನ ಪಟೇಲರಂತೆ ಮಹಾರಾಷ್ಟ್ರದ ಮರಾಠರು ಮೀಸಲಾತಿ ಕೇಳತೊಡಗಿದ್ದಾರೆ. ಕೂಡಲೇ ಮಹಾರಾಷ್ಟ್ರ ಸರ್ಕಾರ ಓಬಿಸಿ ಮೀಸಲಾತಿಗೆ ಭಂಗ ತರದಂತೆ ೧೬% ಮೀಸಲಾತಿ ಮರಾಠರಿಗೆ, ೫% ಮೀಸಲಾತಿ ಮುಸ್ಲಿಮರಿಗೆ ನೀಡಿದೆ. ಅದನ್ನು ವಿರೋಧಿಸಿ ‘ಯುತ್ ಫಾರ್ ಈಕ್ವಾಲಿಟಿ’ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದು ಈಗ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ದಲಿತರು ೧೦.೮% ಇದ್ದರೆ, ಮರಾಠರು ೩೩% ಇದ್ದಾರೆ. ಓಬಿಸಿಗಳು ೨೮% ಇದ್ದಾರೆ. ಮರಾಠಾ ಸಮುದಾಯದ ರಾಜಕೀಯ ನಾಯಕರು, ಉದ್ದಿಮೆಪತಿಗಳು ಹಾಗೂ ‘ಗಣ್ಯ’ರೂ ಸಾಕಷ್ಟಿದ್ದಾರೆ. ೫೬ ವರ್ಷಗಳಲ್ಲಿ ೧೩ ಮುಖ್ಯಮಂತ್ರಿಗಳು ಮರಾಠಾ ಸಮುದಾಯದವರೇ ಆಗಿ ಹೋಗಿದ್ದಾರೆ. ಅಲ್ಲಿನ ಸಕ್ಕರೆ ಮತ್ತು ಶಿಕ್ಷಣ ಕ್ಷೇತ್ರ ಮರಾಠಾ ಪ್ರಾಬಲ್ಯ ಹೊಂದಿದೆ. ಆದರೆ ಅತಿ ದೊಡ್ಡ ಸಮುದಾಯದ ಒಳಗಿನ ಅಸಮತೋಲನ ಆಕ್ರೋಶ ಹುಟ್ಟಿಸಲು ಕಾರಣವಾಗಿದೆ.

ಮಹಾರಾಷ್ಟ್ರದ ಪ. ಜಾತಿಗಳು ೭.೫% ಕೃಷಿ ಒಡೆತನ ಹೊಂದಿದ್ದರೆ ಪ. ವರ್ಗದವರು ೬.೨% ಕೃಷಿ ಒಡೆತನ ಪಡೆದಿದ್ದಾರೆ. ೭೮.೬%ನಷ್ಟು ಕೃಷಿ ಒಡೆತನ ಮರಾಠರದು. ಆದರೆ ಆ ಸಮುದಾಯದ ೩೫% ಜನ ಭೂಹೀನ ಕೂಲಿ ಕೆಲಸದವರಾಗಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಕೃಷಿಭೂಮಿ ಪರಭಾರೆಯಾಗಿದೆ. ಅವಿಭಕ್ತ ಕುಟುಂಬಗಳು ಅಳಿದು, ಕೃಷಿ ಭೂಮಿ ಒಡೆದು, ಸಣ್ಣ ಕೃಷಿ ಹಿಡುವಳಿಗಳು ನಷ್ಟದಾಯಕವಾಗಿ ಪರಿಗಣಿಸಿವೆ. ಅತಿ ಹೆಚ್ಚು ರೈತ ಆತ್ಮಹತ್ಯೆಗಳು ಮರಾಠಾ ಸಮುದಾಯದಲ್ಲೇ ಸಂಭವಿಸುತ್ತಿವೆ. ಶಿಕ್ಷಣದತ್ತ ಒಲವು ಕಡಿಮೆ ಇರುವುದರಿಂದ ಸರ್ಕಾರಿ ಉದ್ಯೋಗಾವಕಾಶ ಕಡಿಮೆಯಾಗಿದೆ.

ಜನರಿಗೆ ತಮ್ಮ ಈ ಪರಿಸ್ಥಿತಿಗೆ ಕಾರಣ ಜನನಾಯಕರ ನಿಷ್ಕ್ರಿಯತೆ ಎಂಬ ಆಕ್ರೋಶವಿದೆ. ಮೂಕ ಮೋರ್ಚಾವನ್ನು ಮೊದಲು ಬಹಿರಂಗವಾಗಿ ಯಾವ ಪಕ್ಷದ ಮರಾಠಾ ರಾಜಕಾರಣಿಯೂ ಬೆಂಬಲಿಸಲಿಲ್ಲ. ಹೆಚ್ಚಿನ ಮರಾಠಾ ಜನನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವುದೂ ಕಾರಣವಿರಬಹುದು. ಆದರೆ ಈಗ ಶಿವಾಜಿ ಮಹಾರಾಜನ ವಂಶಸ್ಥ, ಸತಾರಾದ ಎನ್‌ಸಿಪಿ ಶಾಸಕ ಉದಯನ ರಾಜೇ ಭೋಸಲೆ, ಮತ್ತೊಬ್ಬ ವಂಶಸ್ಥ-ಎಂಪಿ ಸಂಭಾಜಿ ರಾಜೇ ಛತ್ರಪತಿ, ಮಹಾರಾಷ್ಟ್ರ ಕಂದಾಯ ಮಂತ್ರಿ ಚಂದ್ರಕಾಂತ ಪಾಟೀಲ್ ಮೊದಲಾದವರು ಬೆಂಬಲಿಸುತ್ತಿದ್ದಾರೆ. ಆದರೂ ಸಮುದಾಯದ ಬಲಾಢ್ಯ ರಾಜಕಾರಣಿಗಳು ಸ್ವಜಾತಿಯ ಜನರನ್ನು ಮತಬ್ಯಾಂಕ್ ಎಂದು ಪರಿಗಣಿಸಿದರೇ ಹೊರತು ಒಳಸಂಕಷ್ಟಗಳತ್ತ ಗಮನ ಹರಿಸಲಿಲ್ಲ ಎನ್ನುವುದು ಬಹುತೇಕ ಮರಾಠರ ಅಭಿಪ್ರಾಯವಾಗಿದೆ.

ಒಟ್ಟಾರೆ ತಮಗಿಂತ ‘ಕೆಳಗಿದ್ದು’ ಈಗ ಮೀಸಲಾತಿ ಸವಲತ್ತು ಪಡೆದು ‘ಮೇಲೆ’ ಬರುತ್ತಿರುವ ದಲಿತರತ್ತ ಮರಾಠರ ಕಣ್ಣು ಕೆಂಪಾಗಲು ಹಲವು ಕಾರಣಗಳಿವೆ. ಇತ್ತ ಮುಂದುವರೆಯದ, ಅತ್ತ ‘ಹಿಂದುಳಿದ’ ಗುಂಪಿಗೂ ಸೇರದ ಮಧ್ಯಮ ಜಾತಿಗಳ ಆಕ್ರೋಶ ದಲಿತರ ಮೇಲೆ ತಿರುಗುತ್ತಿದೆ.

ಈ ಬೆಳವಣಿಗೆಗಳು ಜಾತಿಜಾತಿಗಳ ನಡುವೆ ದ್ವೇಷದ ವಿಷ ಹರಡುವ ಎಲ್ಲ ಅಪಾಯ ಗೋಚರಿಸತೊಡಗಿದೆ. ಅಕ್ಟೋಬರ್ ಎರಡನೆಯ ವಾರದಲ್ಲಿ ಮರಾಠಿ ಸಾಹಿತ್ಯ ಪರಿಷತ್ ಸತಾರಾ ಬಳಿ ಪಟನ್ ಎಂಬಲ್ಲಿ ಅಂಬೇಡ್ಕರ್-೧೨೫ ನಿಮಿತ್ತ ಸಾಹಿತ್ಯ ಸಮ್ಮೇಳನ ಏರ್ಪಡಿಸಿತ್ತು. ಅದಕ್ಕೆ ದಲಿತ ಸಾಹಿತಿ ಪ್ರಜ್ಞಾ ಪವಾರ್ ಅಧ್ಯಕ್ಷರಾಗಿದ್ದರು. ದಲಿತ ಚಿಂತಕ ರಾವ್ ಸಾಹೇಬ್ ಕಸಬೆ ಮುಖ್ಯ ಅತಿಥಿಗಳಾಗಿದ್ದರು. ಅವರಿಬ್ಬರೂ ತಮ್ಮ ಭಾಷಣದಲ್ಲಿ ಶಿವಾಜಿ ಕುರಿತು ನೀಡಿದ ಹೇಳಿಕೆಯಿಂದ ಮರಾಠರ ಮನಸ್ಸಿಗೆ ನೋವಾಗಿದೆಯೆಂದು, ದಲಿತರಿಗೆ ಶಿವಾಜಿ ಕುರಿತು ಮಾತನಾಡಲು ಹಕ್ಕಿಲ್ಲವೆಂದು ಸ್ಥಳೀಯ ಮರಾಠಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಬಲವಂತವಾಗಿ ಇಬ್ಬರು ದಲಿತ ಸಾಹಿತಿಗಳನ್ನು ಸಭೆಯಿಂದ ಹೊರಕಳಿಸಿದವು.

ಇದರ ನಡುವೆ ಮಧ್ಯಮ ಜಾತಿಗಳು ಮೀಸಲಾತಿಗೆ ಒತ್ತಾಯಿಸಿರುವಲ್ಲೆಲ್ಲ ಮೀಸಲಾತಿ ನೀತಿ ವಿರೋಧಿಸುವ ಹಿಂದೂತ್ವ ಸರ್ಕಾರ ಆಳುವ ಪಕ್ಷವಾಗಿರುವುದು; ಮೀಸಲಾತಿ ವಿರೋಧಿಸುವ ‘ಯುತ್ ಫಾರ್ ಈಕ್ವಾಲಿಟಿ’ಯಂತಹ ಸಂಘಟನೆಗಳು ಈ ಸಂದರ್ಭ ಬಳಸಿ ಮೀಸಲಾತಿ ನೀತಿ ಅಪ್ರಯೋಜಕ, ನಿರುಪಯುಕ್ತ ಎಂದು ಬಿಂಬಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಮರಾಠಾ ಮೋರ್ಚಾ ಹಲವು ಪ್ರಶ್ನೆಗಳನ್ನೂ, ವಿಷಯಗಳನ್ನೂ ಮುನ್ನೆಲೆಯ ಚರ್ಚೆಗೆ ತಂದಿದೆ.

ಜಾತಿವ್ಯವಸ್ಥೆಯಿಂದ ಬಾಧಿತರು ತಮ್ಮ ಐಡೆಂಟಿಟಿಯನ್ನು, ಬಾಧಿತ ಸ್ಥಿತಿಯನ್ನು ಜಾತಿಯಾಚೆಗೆ ಗುರುತಿಸಿಕೊಳ್ಳದಿರುವುದು ಇಂಥ ವೈರುಧ್ಯಮಯ ಬೆಳವಣಿಗೆಗೆ ಕಾರಣವೇ? ಮೀಸಲಾತಿ ಯಾರಿಗೆ, ಏಕೆ ನೀಡಲಾಗಿದೆಯೆಂದು ನಮ್ಮ ಜನ ಸಮುದಾಯಗಳು ಅರಿತಿಲ್ಲವೆ? ‘ಹಿಂದುಳಿದಿರುವಿಕೆ’, ‘ದಲಿತತ್ವ’ಗಳ ಆಧಾರ ಏನು? ಜಾತಿ/ವರ್ಗಗಳಿಗಿರುವ, ಅದರಲ್ಲು ಅಧಿಕಾರಸ್ಥ ಜಾತಿ/ವರ್ಗಗಳಿಗಿರುವ ಪ್ರಭಾವವು ಸಮಾಜ ಕಲ್ಯಾಣದ ಸ್ವರೂಪವನ್ನೇ ಬುಡಮೇಲು ಮಾಡಬಹುದೆ?

ಭಾರತದ ಪ್ರತಿ ಜಾತಿಯೊಳಗೊಂದು ಕೆಳ ‘ವರ್ಗ’ ಇದೆ. ಆ ವರ್ಗ ಒಟ್ಟೂ ಸಮಾಜದಲ್ಲಿ ಹಾಗೂ ತಮ್ಮದೇ ಜಾತಿಯಲ್ಲಿ ಮೇಲ್ಚಲನೆಯ ಅವಕಾಶ ಸಿಗದೇ ಕಂಗೆಟ್ಟಿದೆ. ಎಂದೇ ದಲಿತೇತರ ಸಮುದಾಯಗಳಿಗೆ ಸೇರಿದ ಕೆಳವರ್ಗಗಳು ದಲಿತರಿಗೆ ನೀಡುವ ಮೀಸಲಾತಿ ಮತ್ತಿತರ ಸವಲತ್ತುಗಳನ್ನು ಅನುಮಾನದಿಂದ, ಈರ್ಷ್ಯೆಯಿಂದ ನೋಡುತ್ತವೆ. ತಮ್ಮ ‘ಕೆಳ’ ಸ್ಥಿತಿಯ ಅಸಹಾಯಕತೆಯಲ್ಲಿ ಕಣ್ಣೆದುರು ಕಾಣುವ ಮತ್ತು ತಮ್ಮ ಅನುಭವಕ್ಕೆ ಸಿಕ್ಕ ವಾಸ್ತವವನ್ನಷ್ಟೆ ಅವು ನಿಜ ಎಂದುಕೊಳ್ಳುತ್ತವೆ. ಎಂದೇ ಅವರ ಕೆಂಗಣ್ಣು ಸವಲತ್ತು ಪಡೆಯಬಲ್ಲ ದಲಿತ ಸಮುದಾಯದತ್ತ ತಿರುಗುತ್ತಿದೆ. ಕೆಳವರ್ಗಗಳ ಈ ಆಕ್ರೋಶವನ್ನು ಅವರದೇ ಜಾತಿಯ ಮೇಲ್ವರ್ಗ ದುರುಪಯೋಗಪಡಿಸಿಕೊಳ್ಳುತ್ತಿರುವುದು ಇವತ್ತಿನ ವೈರುಧ್ಯಗಳ ಹಿಂದಿನ ಕಾರಣವಾಗಿದೆ. ದೌರ್ಜನ್ಯ ತಡೆ ಕಾಯ್ದೆ ವಿಚಾರದಲ್ಲೂ ಅಷ್ಟೆ, ದಲಿತ ಸಮುದಾಯದೊಳಗಿರುವ ಮೇಲ್ಚಲನೆ ಪಡೆದ ವರ್ಗವು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಆ ಕಾಯ್ದೆ ಮತ್ತು ದಲಿತ ಐಡೆಂಟಿಟಿಯನ್ನು ದಾಳದಂತೆ ಬಳಸುವುದು ದಲಿತೇತರರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ವ್ಯಕ್ತಿಗಳ ಸ್ವಾರ್ಥದಿಂದ ಇಡೀ ದಲಿತ ಸಮುದಾಯವು ಉಳಿದ ಸಮಾಜವನ್ನು ತನ್ನ ಮೈಮೇಲೆಳೆದುಕೊಳ್ಳುವಂತಾಗಿದೆ.

ದೌರ್ಜನ್ಯಗಳು ಮತ್ತಷ್ಟು ದೌರ್ಜನ್ಯಗಳನ್ನು ಹೆರುತ್ತಿರುವ ಕಾಲದಲ್ಲಿ ವಂಚಿತರ ಹಕ್ಕು ಪ್ರತಿಪಾದನೆಯನ್ನು ನ್ಯಾಯಯುತವಾಗಿ ಆಲಿಸುವ ಕಿವಿಗಳಿಗೆ, ಅರಿಯುವ ಮನಸುಗಳಿಗೆ ಈ ನೆಲದಲ್ಲಿ ಬರವಿದೆ. ಇರುವೆ ಗುಂಪುಗೂಡುವುದು ನೋಡಿ ಕಿರುಬಗಳು ಮತ್ಸರಗೊಳ್ಳುತ್ತಿವೆ. ಮೇಲ್ವರ್ಗಗಳು ತಮ್ಮ ಹಿತಾಸಕ್ತಿಗೆ ಏನನ್ನೂ ಮಾಡಬಲ್ಲರೆನ್ನಲು ಭಾರತದ ಸಕಲ ಜಾತಿಗಳೂ ಸಾಕ್ಷಿಯಾಗಿರುವಾಗ ಮೀಸಲಾತಿ ನೀತಿ, ದೌರ್ಜನ್ಯ ಕಾಯ್ದೆ ಉಪಯೋಗ-ದುರುಪಯೋಗ ಮುಂತಾದ ವಿಷಯಗಳ ಕುರಿತು ತಲಸ್ಪರ್ಶಿಯಾಗಿ, ವಸ್ತುನಿಷ್ಠವಾಗಿ ಯೋಚಿಸುವ ಕಾಲ ಬಂದಿದೆ.

(ಫೋಟೋ ಮತ್ತು ಚಿತ್ರಗಳು - ಅಂತರ್ಜಾಲದಿಂದ)


Tuesday 11 October 2016

ಆನಂದ್ ತೇಲ್ತುಂಬ್ಡೆ ಸಂದರ್ಶನ:


‘ಯಾವುದೇ ಕ್ರಾಂತಿಕಾರಕ ಚಳುವಳಿ ಜಾತಿ ಆಧರಿತವಾಗಿ ನಡೆಯಲು ಸಾಧ್ಯವಿಲ್ಲ..’

ಸಂದರ್ಶಕರು: ಎಸ್. ಆನಂದ್
ಅನು: ಡಾ. ಎಚ್. ಎಸ್. ಅನುಪಮಾ



೨೦೦೮ರಲ್ಲಿ ಚಿಂತಕ, ಮಾನವ ಹಕ್ಕು ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಖೈರ್ಲಾಂಜಿ ದೌರ್ಜನ್ಯ ಮತ್ತದರ ನಂತರದ ಆಗುಹೋಗುಗಳನ್ನು, ನವಯಾನ ಪ್ರಕಾಶನ ಪ್ರಕಟಿಸಿದ ತಮ್ಮ ಪುಸ್ತಕ, ‘ಪರ್ಸಿಸ್ಟೆನ್ಸ್ ಆಫ್ ಕ್ಯಾಸ್ಟ್: ದ ಖೈರ್ಲಾಂಜಿ ಮರ್ಡರ‍್ಸ್ ಅಂಡ್ ಇಂಡಿಯಾಸ್ ಹಿಡನ್ ಅಪಾರ್ಥೀಡ್’ನಲ್ಲಿ ವಿಶ್ಲೇಷಿಸಿದ್ದಾರೆ. ಅವರ ಪುಸ್ತಕದ ಪ್ರಕಾಶಕರಾದ ಎಸ್. ಆನಂದ್ ಖೈರ್ಲಾಂಜಿ ಸಂಭವಿಸಿದ ೧೦ ವರ್ಷಗಳ ಹೊತ್ತಿಗೆ ತೇಲ್ತುಂಬ್ಡೆ ಅವರೊಂದಿಗೆ ವಿಸ್ತೃತ ಇ-ಮೇಲ್ ಸಂದರ್ಶನ, ಚರ್ಚೆ, ಮಾತುಕತೆಯನ್ನು ಓದುಗರ ವೇದಿಕೆಗಳೊಂದಿಗೆ ನಡೆಸಿದರು. ದಲಿತರ ಮೇಲೆ ಮುಂದುವರೆಯುತ್ತಿರುವ ದೌರ್ಜನ್ಯ, ಊನಾ ನಂತರದ ಪರಿಸ್ಥಿತಿ, ಭಾರತದ ಸಾರ್ವಜನಿಕ ವಲಯದಲ್ಲಿ ಒಳಗೊಳ್ಳುವಿಕೆ ಮತ್ತು ಜನ ವೈವಿಧ್ಯ ಕಣ್ಮರೆಯಾಗುತ್ತಿರುವುದು, ಮೀಸಲಾತಿಯ ಮಿತಿಗಳು, ಹಿಂದುತ್ವ ಮತ್ತು ನವ ಉದಾರವಾದದ ದಿನಗಳಲ್ಲಿ ದಲಿತ ಸಮುದಾಯದ ಭವಿಷ್ಯ - ಈ ಎಲ್ಲದರ ಕುರಿತು ಅವರು ಮಾತನಾಡಿದರು. ಅಷ್ಟೇ ಅಲ್ಲ, ಸಂಸದೀಯ ಹತಾರಗಳು ದಲಿತರನ್ನು ನಿರಂತರ ಕೈಬಿಟ್ಟು ಸೋಲಿಗೀಡುಮಾಡಿರುವಾಗ ಆ ಸಮುದಾಯ ಅಂಬೇಡ್ಕರ್ ಪ್ರಣೀತ ಸಂಸದೀಯ ಹೋರಾಟ, ಪ್ರಜಾತಾಂತ್ರಿಕ ಚಳುವಳಿಗಳ ಮಾರ್ಗಗಳನ್ನು ನೆಚ್ಚಿಕೊಳ್ಳುವ ಕುರಿತು, ಅದರ ಮಿತಿಗಳ ಕುರಿತೂ ಮುಕ್ತವಾಗಿ ಮಾತನಾಡಿದರು.

ಖೈರ್ಲಾಂಜಿ ಹತ್ಯಾಕಾಂಡ ಸಂಭವಿಸಿ ಹತ್ತು ವರ್ಷಗಳಾದವು. ನೀವೊಂದು ಪುಸ್ತಕವನ್ನೂ ಬರೆದಿರಿ. ಆದರೆ ದೌರ್ಜನ್ಯ ಮತ್ತು ಹತ್ಯಾಕಾಂಡಗಳು ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿ ನ್ಯಾಯಾಲಯದಿಂದಲೂ ನ್ಯಾಯ ಎನ್ನುವುದು ಎಂದೋ ಪಲಾಯನ ಮಾಡಿದೆ. ಏಕೆ?



ಹೇಗೆ ನೋಡಿದರೂ ಖೈರ್ಲಾಂಜಿ ಎನ್ನುವುದು ದಿಗ್ಭ್ರಮೆಗೊಳಿಸುವ ಒಂದು ಘಟನೆ. ಆದರೆ ದಲಿತರ ಮೇಲಿನ ದೌರ್ಜನ್ಯಗಳ ದೃಷ್ಟಿಯಲ್ಲಿ ನೋಡಿದರೆ ನಾನು ಆ ಪುಸ್ತಕದಲ್ಲಿ ಚರ್ಚಿಸಿರುವಂತೆ, ಅದರಲ್ಲಿ ವಿಶೇಷವಾದದ್ದು ಏನೂ ಇಲ್ಲ. ಖೈರ್ಲಾಂಜಿಗಿಂತ ಮುಂಚೆ ನಡೆದ ಕೆಲವು ಕುಖ್ಯಾತ ಘಟನೆಗಳನ್ನು ನೆನಪು ಮಾಡಿಕೊಳ್ಳುವುದಾದರೆ - ೧೯೬೮ರ ಕಿಲವೇನ್ಮಣಿಯಿಂದ ೧೯೮೫ರ ಕರಂಚೇಡುವಿನ ತನಕ, ೧೯೯೧ರ ಸುಂಡೂರಿನಿಂದ ೨೦೦೬ರ ಝಝರ್ ತನಕ - ಸಾವಿರಾರು ಭೀಕರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಪ್ರತಿಯೊಂದೂ ಹಿಂಸಾನಂದ ಪಡೆವ ವಿಕೃತ ಕ್ರೌರ್ಯ ಮತ್ತು ಪಶುತ್ವಗಳ ಮಿಶ್ರಣದಿಂದ ಸಂಭವಿಸಿವೆ.

ದಲಿತ ಸಮುದಾಯಕ್ಕೆ ‘ಬುದ್ಧಿ ಕಲಿಸಲು’ ಕೆಲವೇ ಕೆಲವು ದಲಿತರ ಮೇಲೆ ಸವರ್ಣೀಯ ಹಿಂದೂಗಳು ನಡೆಸುವ ಮೇಲೆ ಉಲ್ಲೇಖಿಸಿದಂತಹ ದೌರ್ಜನ್ಯಗಳು ಸಾಮಾನ್ಯ ತಿಳುವಳಿಕೆಗೆ ವಿರುದ್ಧವಾಗಿ ಸ್ವಾತಂತ್ರ್ಯೋತ್ತರ ಭಾರತದ ವಿಶೇಷವಾಗಿವೆ. ಆಳುವ ವರ್ಗ ರೂಪಿಸಿದ ನಿರ್ದಿಷ್ಟ ರಾಜಕೀಯ ಆರ್ಥಿಕತೆಯ ಪರಿಣಾಮ ಅವು ಸಂಭವಿಸಿವೆ. ಜಾತಿ ವಿರುದ್ಧ ಮಾತನಾಡುವ ಬಹುಪಾಲು ಜನರು ದೌರ್ಜನ್ಯಗಳನ್ನು ಈ ವಿಶ್ಲೇಷಣೆಯ ಹಿನ್ನೆಲೆಯಿಂದ ನೋಡುವುದಿಲ್ಲ. ನಿರರ್ಗಳವಾಗಿ ಹಳೆಯ ಮತ್ತು ಅಮೂರ್ತವಾದ ಮನು, ಮನುಧರ್ಮದ ವಿರುದ್ಧ ಸುಲಭದ ಭಾಷಣಗಳನ್ನು, ಘೋಷಣೆಗಳನ್ನು ಹರಿಯಬಿಡುತ್ತಾರೆ.

ಖೈರ್ಲಾಂಜಿ ಕುರಿತು ಪುಸ್ತಕ ಬರೆಯಲು ನನ್ನ ಪ್ರೇರೇಪಿಸಿದ್ದು ಆ ಹತ್ಯಾಕಾಂಡ ನಡೆಯಲು ಕಾರಣವಾದ ವಿಶಿಷ್ಟ ಸಂಗತಿಗಳ ಮಿಶ್ರಣ. ಜಾತೀಯತೆಯ ಘನೀಕೃತ ಸ್ವರೂಪವಾದ ಒಂದು ದೌರ್ಜನ್ಯ ಹೇಗೆ ಸಂಭವಿಸುತ್ತದೆ ಎನ್ನುವುದನ್ನು ನಾನು ವಿಶ್ಲೇಷಿಸಲು ಅದು ಒಂದು ಚೌಕಟ್ಟನ್ನು ಒದಗಿಸಿತು. ಇದು ಸಮಕಾಲೀನ ಜಾತಿ ವಾಸ್ತವವನ್ನು ನಾವು ಅರಿಯಲು ಹಾಗೂ ದಲಿತ ಅಸ್ತಿತ್ವಕ್ಕೆ ಅದು ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಲು ಸಹಾಯ ಮಾಡುತ್ತದೆ.

ಖೈರ್ಲಾಂಜಿಯ ಸುದ್ದಿ ಹರಡಲು ಹತ್ತಿರ ಹತ್ತಿರ ಒಂದು ತಿಂಗಳು ತೆಗೆದುಕೊಂಡರೂ, ಕೂಡಲೇ ಅದು ಹಿಂದೆಂದೂ ಇರದಷ್ಟು ಬೃಹತ್ ಪ್ರಮಾಣದಲ್ಲಿ ದಲಿತ ಸಮುದಾಯದ ಪ್ರತಿಭಟನೆ ನಡೆಯಲು ಕಾರಣವಾಯಿತು. ಸರ್ಕಾರ ಮತ್ತು ನಾಗರಿಕ ಸಮಾಜಕ್ಕೆ ತಕ್ಕುದಾದ ಕಳಂಕವನ್ನು ಅವರ ಮೇಲೆ ಹೇರಿಸಿತು. ಆದರೆ ಪಶ್ಚಾತ್ತಾಪವಿಲ್ಲದ ಸರ್ಕಾರ ಮತ್ತು ಜಾತಿಭ್ರಷ್ಟ ನಾಗರಿಕ ಸಮಾಜಗಳು ಇಷ್ಟರಿಂದ ಬುದ್ಧಿ ಕಲಿಯುತ್ತವೆ ಎಂದು ನಿರೀಕ್ಷಿಸುವುದು ಭೋಳೇತನವಾಗುತ್ತದೆ. ಅದಕ್ಕೆ ವಿರುದ್ಧವಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಸಾಕ್ಷ್ಯಾಧಾರಗಳು, ಅಂಕಿಅಂಶಗಳು ತೋರಿಸುವಂತೆ ಮಹಾರಾಷ್ಟ್ರ ಮತ್ತು ಭಾರತದಾದ್ಯಂತ ಖೈರ್ಲಾಂಜಿ ನಂತರ ದೌರ್ಜನ್ಯಗಳು ಹೆಚ್ಚುತ್ತ ಹೋಗಿವೆ.

೨೦೦೬ರಲ್ಲಿ ೨೭,೦೭೦ ದೌರ್ಜನ್ಯಗಳು ಸಂಭವಿಸಿದ್ದರೆ, ೨೦೧೪ರಲ್ಲಿ ೪೭,೦೬೪ ದೌರ್ಜನ್ಯಗಳು ಸಂಭವಿಸಿ ೭೪% ಹೆಚ್ಚಳ ಕಂಡಿದೆ. ಇವು ದಾಖಲಾದ ಪ್ರಕರಣಗಳು ಮಾತ್ರ. ಮಹಾರಾಷ್ಟ್ರದಲ್ಲಿ ಈ ಏರಿಕೆ ಇನ್ನೂ ಹೆಚ್ಚು - ೮೬%. ಘನ ಅಪರಾಧಗಳಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಏರಿಕೆ ಇನ್ನೂ ಹೆಚ್ಚು - ೧೦೫%. ಈ ಸಂಖ್ಯೆಗಳು ಆಗಿರುವ ದೌರ್ಜನ್ಯಕ್ಕಿಂತ ಗಮನಾರ್ಹವಾಗಿ ಸಣ್ಣವು. ಏಕೆಂದರೆ ದೌರ್ಜನ್ಯಕ್ಕೊಳಗಾದ ದಲಿತನಿಗೆ ಪೊಲೀಸ್ ಸ್ಟೇಷನ್ ತಲುಪುವುದು ಹಾಗೂ ಎಫ್‌ಐಆರ್ ದಾಖಲಿಸುವುದು ಎಂದರೆ ಎಂತ ಸಾಹಸ ಎಂದು ಯಾರಾದರೂ ಊಹಿಸಬಹುದು.

ಖೈರ್ಲಾಂಜಿ ನಂತರ ಪಾಟ್ನಾ ಉಚ್ಛ ನ್ಯಾಯಾಲಯದಿಂದ ಸರಣಿ ತೀರ್ಪುಗಳು ಬಂದವು. ಬಿಹಾರದಲ್ಲಿ ೧೯೯೦ರಲ್ಲಿ ಡಜನುಗಟ್ಟಲೆ ದಲಿತ ದೌರ್ಜನ್ಯ, ಕೊಲೆ ಎಸಗಿದ ಕುಖ್ಯಾತ ರಣವೀರ ಸೇನೆಯ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಲಾಯಿತು. ಅದೇರೀತಿ ಜುಲೈ ೧೭, ೧೯೮೭ರಲ್ಲಿ ಆಂಧ್ರದ ಕರಂಚೇಡುವಿನಲ್ಲಿ ನಡೆದ ಆರು ದಲಿತರ ಹತ್ಯೆಯ ೧೫೯ ಆರೋಪಿಗಳಿಗೆ ಒಂಗೋಲ್ ಟ್ರಯಲ್ ಕೋರ್ಟು ನೀಡಿದ ಶಿಕ್ಷೆಯನ್ನು ಆಂಧ್ರ ಹೈಕೋರ್ಟು ಜೀವಾವಧಿ ಶಿಕ್ಷೆಗೆ ಇಳಿಸಿತು. ಖೈರ್ಲಾಂಜಿಯ ನಂತರ ಅಪರಾಧ ಸಾಬೀತುಗೊಂಡಿರುವ ಪ್ರಮಾಣ ಖಂಡಿತ ಹೆಚ್ಚಾಗಿದೆ. ಆದರೆ ಇದು ದಾರಿ ತಪ್ಪಿಸುವಂತಿದೆ. ಅಪರಾಧ ಸಾಬೀತು ಪ್ರಮಾಣ ಐಪಿಸಿಯ ಇತರೆ ಸೆಕ್ಷನ್ನುಗಳಡಿ ಆಗುವ ಅಪರಾಧ ಸಾಬೀತು ಪ್ರಮಾಣಕ್ಕಿಂತ ಬಹಳ ಕಡಿಮೆಯಿದೆ. ಮತ್ತು ಈ ಮೊತ್ತದಲ್ಲಿ ಘನ ಅಪರಾಧಗಳಾದ ಕೊಲೆ ಮತ್ತು ಅತ್ಯಾಚಾರದ ಅಪರಾಧ ಸಾಬೀತು ಆಗಿರುವುದೂ ಸೇರಿಕೊಂಡಿದೆ.

ಇದನ್ನು ಹೇಗೆ ವಿವರಿಸುವಿರಿ?

ಮೊದಲಿಗೆ, ನವ ಉದಾರವಾದ ದೃಷ್ಟಿಕೋನವು ಗ್ರಾಮೀಣ ಆಗುಹೋಗುಗಳನ್ನು ದಲಿತ ಹಿತಾಸಕ್ತಿಗೆ ವಿರುದ್ಧವಾಗಿ ಬದಲಾಯಿಸಿದೆ. ಈ ಬದಲಾವಣೆಯನ್ನು ಕೃಷಿ ಬಿಕ್ಕಟ್ಟು, ತಳಸಮುದಾಯದ ಜನರ ವಂಚಿತ ಸ್ಥಿತಿ, ಉದ್ಯೋಗ ಸೃಷ್ಟಿಸದ ಬೆಳವಣಿಗೆ, ಸಮಾಜ ಕಲ್ಯಾಣ ಸೇವೆಗಳ ಜವಾಬ್ದಾರಿಯಿಂದ ಕ್ರಮೇಣ ಸರ್ಕಾರ ಹಿಂತೆಗೆದುಕೊಳ್ಳುತ್ತಿರುವುದರಲ್ಲಿ ಕಾಣಬಹುದು. ಆದರೆ ಕಳೆದ ೨೫ ವರ್ಷಗಳಿಂದ ಸಂಭವಿಸುತ್ತಿರುವ ಈ ಬದಲಾವಣೆಗಳು ಸಮಾಜದ ಎಲ್ಲ ಸ್ತರಗಳಲ್ಲಿ ಒಂದೇ ಸಮನಾಗಿಲ್ಲ; ಬಡವರು, ಅದರಲ್ಲಿ ಬಹುಪಾಲು ಇರುವ ದಲಿತರು ತೀವ್ರವಾಗಿ ಬಾಧಿತರು. ಹೀಗೆ ಸೃಷ್ಟಿಯಾಗುವ ಬಿಕ್ಕಟ್ಟು ಜನರನ್ನು ಅನೂಹ್ಯವಾದದ್ದನ್ನು ನಂಬುವಂತೆ ಮಾಡುತ್ತಿದೆ ಮತ್ತು ಇದು ವಿಶ್ವಾದ್ಯಂತ ಎಲ್ಲೆಡೆ ಆಗುತ್ತಲಿದೆ.

ಅನುಭವದಿಂದ ಹೇಳುವುದಾದರೆ, ನವ ಉದಾರವಾದದ ಉದಯ ಮತ್ತು ಹರಡುವಿಕೆಯು ಧಾರ್ಮಿಕ ಮೂಲಭೂತವಾದಕ್ಕೆ ಮತ್ತು ವಿಶ್ವಯುದ್ಧಾನಂತರದ ದಶಕಗಳಲ್ಲಿ ಹಿನ್ನೆಲೆಗೆ ಸರಿದಿದ್ದ ಪ್ರತಿಗಾಮಿ ಚಿಂತನೆಗಳಿಗೆ ಮತ್ತೆ ದಾರಿ ಮಾಡಿಕೊಡುತ್ತಿದೆ. ಭಾರತಕ್ಕೂ ಇದು ಅನ್ವಯಿಸುವುದಾದರೂ ಇಲ್ಲಿ ವಿಷಯವನ್ನು ಸಂಕೀರ್ಣಗೊಳಿಸುವ ಮತ್ತಷ್ಟು ಸಂಗತಿಗಳಿವೆ. ಐಟಿ ಕ್ಷೇತ್ರದ ಕಾರಣವಾಗಿ ಅಮೆರಿಕನ್ನರ ದೃಷ್ಟಿಯಲ್ಲಿ ೨೦೦೦ನೇ ಇಸವಿ ಹೊತ್ತಿಗೆ ಭಾರತದ ಗೌರವ ಹೆಚ್ಚತೊಡಗಿದಂತೆ ಭಾರತವು ತನ್ನ ಗತದ ಬಗೆಗೆ ಅವಮಾನಪಟ್ಟುಕೊಳ್ಳುವಂಥದು ಏನಿಲ್ಲ ಎಂದು ಭಾವಿಸತೊಡಗಿತು. ಜನರು ಜಾತಿ ಮತ್ತು ಜಾತಿ ಸಂಬಂಧಿ ಆಚರಣೆಗಳ ಕುರಿತು ಸಾರ್ವಜನಿಕವಾಗಿ ಮಾತನಾಡತೊಡಗಿದರು. ಹಿಂದೂ ದೇವಾಲಯಗಳು ಕಟ್ಟಲ್ಪಟ್ಟವು, ಪುನರುಜ್ಜೀವನಗೊಂಡವು. ಪಶ್ಚಿಮದಲ್ಲಿ ಮತ್ತು ಭಾರತದಲ್ಲಿ ಎಲ್ಲ ತೆರನ ಹಬ್ಬ, ಆಚರಣೆಗಳು ಹೆಚ್ಚಿದವು. ಅದೇ ವೇಳೆ ಹೊಸ ತಲೆಮಾರಿನ ದಲಿತ ತರುಣ ಪೀಳಿಗೆಯ ಸಾಂಸ್ಕೃತಿಕ ಮತ್ತು ರಾಜಕೀಯ ಕುರಿತ ಖಚಿತ ನಿಲುವುಗಳು ದೌರ್ಜನ್ಯದ ಬೆಂಕಿ ಹೊತ್ತಿಸುವ ಕಿಡಿಯಾಗಿ ಪರಿಣಮಿಸಿದವು.

ಬಲವಿದ್ದವ ಉಳಿದಾನು ಎನ್ನುವ ಸಾಮಾಜಿಕ ವಿಕಾಸವಾದದ ಸಿದ್ಧಾಂತವು ಯಾವಾಗಲೂ ಸಮಾಜದ ಕೆಳವರ್ಗಗಳಿಗೆ ಕಂಟಕಪ್ರಾಯವಾಗಿರುತ್ತದೆ. ಭಾರತದಲ್ಲಿ ಇದು ಹಿಂದೂತ್ವದ ಜೊತೆಜೊತೆ ಕೆಲಸ ಮಾಡುತ್ತದೆ. ಈ ಎರಡು ದುಷ್ಟ ನೆಲೆಗಳ ನಡುವೆ ಹೋಲಿಕೆ ಮತ್ತು ಬಾಂಧವ್ಯ ಎರಡೂ ಇದೆ. ತನ್ನ ಪಂಜಾಗಳನ್ನು ಹಿಂದೂತ್ವವು ಎಷ್ಟೇ ಮುಚ್ಚಿಟ್ಟುಕೊಂಡರೂ ಅದು ಮೂಲತಃ ದಲಿತ ವಿರೋಧಿಯೇ ಆಗಿದೆ. ಅದರ ರಾಜಕೀಯ ಘಟಕವು ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಸಂಕೇತದ ಮೂಲಕ ತನ್ನ ದಲಿತರ ಮೇಲಿನ ಪ್ರೀತಿ, ಕಾಳಜಿಯನ್ನು ಪ್ರದರ್ಶಿಸಹೊರಟರೂ ತನ್ನ ಬೆಂಬಲಿಗರಿಗೆ ದಲಿತರು ತಲೆಯೆತ್ತಿ ನಿಲ್ಲುವ ಯತ್ನ ಮಾಡಿದಾಗಲೆಲ್ಲ ಅದನ್ನು ತುಳಿಯುವಂತೆ ತಾಕೀತು ಮಾಡುತ್ತದೆ. ಇವತ್ತು ಬಿಜೆಪಿಯು ಲೋಕಸಭೆಯಲ್ಲಿ ಸ್ಪಷ್ಟ ಬಹುಮತದಿಂದ ಆಳುತ್ತಿರುವಾಗ, (ಬರೀ ೩೧% ವೋಟು ಬಿದ್ದಿದ್ದರೂ ಸಹಾ), ಮತ್ಯಾವ ವಿವರಣೆಯೂ ಬೇಕಿಲ್ಲವೆನಿಸುತ್ತದೆ. ಅದರ ಕಾಲಾಳುಗಳು ದಲಿತರ ಮೇಲೆ, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಮುಗಿಬಿದ್ದಿದ್ದಾರೆ.

ಈ ದಿನಗಳಲ್ಲಿ ಊನಾ ತರಹದ ಘಟನೆಗಳು ಅಪರಾಧ ನಡೆಸುವವರಿಂದಲೇ ಫೋನ್ ವೀಡಿಯೋನಲ್ಲಿ ಚಿತ್ರೀಕರಿಸಲ್ಪಟ್ಟು ಸಾಮಾಜಿಕ ತಾಣಗಳಲ್ಲಿ ವಿಜಯೋತ್ಸವವೋ ಎಂಬಂತೆ ಹಂಚಿಕೊಳ್ಳಲ್ಪಡುತ್ತಿವೆ. ಹಿಂದೂಸ್ತಾನದ ರೋಗಗ್ರಸ್ತ ಸ್ತ್ರೀಪುರುಷರು ಎಂದು ಅಂಬೇಡ್ಕರ್ ಕರೆದ ಸವರ್ಣೀಯ ಹಿಂದೂಗಳ ಮನಸ್ಸಿನ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ?




ಹಿಂದೂತ್ವದ ಮತಾಂಧರು ತಮ್ಮ ಕಾಯಿಲೆಯ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಊನಾ ಘಟನೆಯನ್ನೇ ನೋಡುವುದಾದರೆ ಗೋರಕ್ಷಕರಿಂದ ಹಲ್ಲೆಗೊಳಗಾದ ದಲಿತ ಯುವಕರ ವೀಡಿಯೋವನ್ನು ತಾವೇ ತೆಗೆದು ವಿಜಯವೆಂಬಂತೆ ಹಂಚಿಕೊಂಡದ್ದು ನೋಡಿದರೆ, ಅವರ ವಿಶ್ವಾಸ ಮತ್ತು ನಿರ್ಭಯ ಸಾಬೀತಾಗುತ್ತದೆ. ತಾವು ಎಂದಿಗೂ ಶಿಕ್ಷೆಗೊಳಪಡುವುದಿಲ್ಲ ಎಂದು ಅವರಿಗೆ ಖಚಿತವಾಗಿ ಗೊತ್ತು.

ಹಾಗೆ ನೋಡಿದರೆ ಯಾವುದೇ ದೌರ್ಜನ್ಯ ಕುರಿತು ಹೇಳಿದರೂ ಈ ಮಾತು ಸತ್ಯ. ದಲಿತರ ಮೇಲೆ ಅಮಾನವೀಯ ಮತ್ತು ಭೀಕರ ಹಿಂಸೆ ಎಸಗುವವರು ತಮಗೆ ಖಂಡಿತವಾಗಿ ಯಾವ ಶಿಕ್ಷೆಯೂ ಆಗುವುದಿಲ್ಲವೆಂದೇ ನಂಬಿರುತ್ತಾರೆ. ಖೈರ್ಲಾಂಜಿ ಅಥವಾ ಊನಾಗೆ ಸಿಕ್ಕ ಪ್ರಚಾರ ಎಲ್ಲ ದೌರ್ಜನ್ಯಗಳಿಗೂ ಸಿಗುವುದು ಅಪರೂಪ. ಹೆಚ್ಚಿನವು ವರದಿಯಾಗದೇ, ಯಾರಿಗೂ ತಿಳಿಯದೇ ಹೋಗುತ್ತವೆ.

ಉದಾಹರಣೆಗೆ ೨೦೧೪ರಲ್ಲಿ ೪೭,೦೬೪ ದೌರ್ಜನ್ಯ ನಡೆದವು. ಅದರಲ್ಲಿ ೭೯೪ ಕೊಲೆ, ೨೩೩೮ ಅತ್ಯಾಚಾರಗಳು. ಅದರಲ್ಲಿ ಎಷ್ಟು ಕೊನೆಪಕ್ಷ ವೃತ್ತ ಪತ್ರಿಕೆಗಳ ಒಳಪುಟಗಳಲ್ಲಾದರೂ ವರದಿಯಾದವು? ಪ್ಯಾನೆಲ್ ಡಿಸ್ಕಷನ್‌ಗಳಲ್ಲಿ ಹೋಗಲಿ, ಹಾಗೆಯೇ ಎಷ್ಟು ಸುದ್ದಿ ಚಾನೆಲ್ಲುಗಳಲ್ಲಿ ಬಂದವು? ಪ್ರತಿ ದಿನ ಸರಾಸರಿ ಇಬ್ಬರು ದಲಿತರ ಕೊಲೆ, ಐವರು ದಲಿತ ಮಹಿಳೆಯರ ಅತ್ಯಾಚಾರ ನಡೆಯುತ್ತಿರುವಾಗ ಈ ಕಾಯಿಲೆಯ ಆಳ ಎಂಥದೆಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಆದರೂ ಬದಲಾವಣೆಯಾಗಿದೆ. ಮೊದಲು ದೌರ್ಜನ್ಯ ಮತ್ತು ಹತ್ಯಾಕಾಂಡಗಳು ಸುದ್ದಿಯಾದದ್ದೇ ಕಡಿಮೆ. ಈಗ ಮಾಧ್ಯಮ ಕ್ಷೇತ್ರ ವಿಸ್ತಾರಗೊಂಡ ಹಾಗೆ, ಅದರಲ್ಲೂ ದಲಿತ ತರುಣರು ಕ್ರಿಯಾಶೀಲರಾಗಿರುವ ಸಾಮಾಜಿಕ ಜಾಲತಾಣಗಳು ಹೆಚ್ಚಿದ ಮೇಲೆ, ನಿರ್ಲಕ್ಷಿಸುವುದು ಕಷ್ಟವಾಗಿದೆ. ಕೆಲವೊಮ್ಮೆ ಹೊಸ ತಂತ್ರಜ್ಞಾನದಿಂದ ಬೆಂಬಲ ಪಡೆದು ಇಂಥ ದೌರ್ಜನ್ಯ-ಹಿಂಸೆಗಳು ಕಚ್ಚಾ ಸರಕೂ ಆಗಬಲ್ಲವು.

ಹೌದು, ತಂತ್ರಜ್ಞಾನ ಜನರ ಬದುಕನ್ನು ಬದಲಾಯಿಸುತ್ತದೆ. ಅದೇ ತರ್ಕ ಹಿಡಿದು ಹೊರಟರೆ ಜಾತಿಯನ್ನೂ ಸಹಾ. ಈ ಮೊದಲು ಮಾಧ್ಯಮದವರು ದಲಿತರನ್ನು ಗಮನಿಸುವುದೇ ಅಪರೂಪವಾಗಿತ್ತು ಎನ್ನುವುದು ನಿಜವೇ. ಇವತ್ತು ಗಮನಿಸುತ್ತಾರೆ, ಆದರೆ ಅದು ನೈತಿಕ ಹೊಣೆಯಿಂದಲ್ಲದೆ ಕೇವಲ ಲಾಭನಷ್ಟದ ತರ್ಕವಷ್ಟೆ ಹಿಂದಿರುತ್ತದೆ. ಜನಪರವಾದ ವಾಚ್ ಡಾಗ್ ತಾನು ಎಂಬ ಪಾತ್ರವನ್ನು ಇವತ್ತು ಮಾಧ್ಯಮ ಬಿಟ್ಟುಕೊಟ್ಟು ಸಂಪೂರ್ಣ ವ್ಯಾಪಾರಿ ಬಂಡವಾಳವೇ ಆಗಿದ್ದರೆ, ದೊಡ್ಡ ಸಂಖ್ಯೆಯ ದಲಿತ ಸಮುದಾಯವು ಸ್ಪರ್ಧಾತ್ಮಕಗೊಳ್ಳುತ್ತ ಹೋಗುತ್ತಿರುವ ಜಗತ್ತಿನಲ್ಲಿ ದೊಡ್ಡ ಗ್ರಾಹಕರಾಗಿ ಹೊಮ್ಮಿದೆ.

ಈ ಮೊದಲು ಮಾಧ್ಯಮವು ಲಾಭನಷ್ಟ ಲೆಕ್ಕಾಚಾರವೇ ಇಲ್ಲದ ಬಂಡವಾಳಶಾಹಿಗಳ ಕೈಯಲ್ಲಿ ಇರಲಿಲ್ಲವೆಂದಲ್ಲ. ಮೊದಲು ಅವರು ಬಂಡವಾಳ ಹೂಡಿಕೆಗೆ ದೀರ್ಘಾವಧಿ ಪ್ರತಿಫಲ ಬಯಸುತ್ತಿದ್ದರು. ತಮ್ಮದೇ ಆದ ಬ್ರ್ಯಾಂಡ್ ಸ್ಥಾಪಿಸಿ ಆ ಮೂಲಕ ಜನರ ವಿಶ್ವಾಸ, ನಂಬಿಕೆ ಪಡೆದುಕೊಳ್ಳುವ ಯತ್ನ ಮಾಡುತ್ತಿದ್ದರು. ಇವತ್ತು ನವ ಉದಾರವಾದವು ಕಾಲದ ಚೌಕಟ್ಟೂ ಸೇರಿದಂತೆ ಎಲ್ಲವನ್ನೂ ಧೂಳೀಪಟಮಾಡಿದೆ, ಎಲ್ಲವನ್ನೂ ಭಿನ್ನವಾಗಿಸಿದೆ. ಈಗ ‘ದೀರ್ಘಕಾಲೀನ’ ಎಂಬ ಯಾವುದೂ ಇಲ್ಲ. ಬಂಡವಾಳ ಹಾಕಿದ್ದನ್ನು ಈಗಲೇ, ಇಲ್ಲೇ ಮರಳಿ ತೆಗೆಯುವ ಹುಮ್ಮಸದಲ್ಲೆ ಎಲ್ಲರೂ ಇದ್ದಾರೆ.

ಸಾಮಾಜಿಕ ಜಾಲತಾಣಗಳಾಗಿ ಅಷ್ಟೇ ಅಲ್ಲ, ಕಡಿಮೆ ಬೆಲೆಗೆ ವಿಪುಲ ಕಂಪ್ಯೂಟಿಂಗ್ ಅವಕಾಶ, ಮಾಹಿತಿ ಸಂಗ್ರಹಕ್ಕೆ ಅವಕಾಶ ಕಲ್ಪಿಸಿರುವ ತಂತ್ರಜ್ಞಾನವು ವಿಶ್ಲೇಷಣೆ-ವಿಮರ್ಶೆಗೆ ಹೊಸ ದೃಷ್ಟಿಕೋನವನ್ನು ಒದಗಿಸಿದೆ. ಅದು ದಲಿತರನ್ನು ತನ್ನ ವಸ್ತು ಮತ್ತು ಸೇವೆಗಳ ಗ್ರಾಹಕರಾಗಿ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಆದ್ದರಿಂದ ಮಾಧ್ಯಮ ರಂಗವು ಹೆಚ್ಚುಕಡಿಮೆ ದಲಿತ ರಹಿತವಾಗಿದ್ದರೂ, ದಲಿತರ ಕುರಿತು ಬರೆಯುವಾಗ ಪೂರ್ವಗ್ರಹ ಮತ್ತು ಅಜ್ಞಾನ ಹೊಂದಿದ್ದರೂ ಅದು ಈಗ ದಲಿತರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೆಲ್ ಫೋನುಗಳು ಹಾಗೂ ಹಗುರವಾಗಿ ಅವು ಸ್ಮಾರ್ಟ್ ಫೋನುಗಳಾಗಿ ಪರಿವರ್ತನೆಯಾಗಿರುವುದು ಸಾಮಾಜಿಕ ಜಾಲತಾಣಗಳ ಉಪಯುಕ್ತತೆಯನ್ನು ಮುನ್ನೆಲೆಗೆ ತಂದಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತಮ್ಮ ಸುದ್ದಿಗಾಗಿ, ಅಭಿವ್ಯಕ್ತಿಗಾಗಿ ಅವಕಾಶ ಪಡೆಯಲು ಸಾಧ್ಯವಾಗದ ತಳಸಮುದಾಯಗಳ ಜನರು ಪ್ರಜ್ಞಾಪೂರ್ವಕವಾಗಿ ಸೋಶಿಯಲ್ ಮೀಡಿಯಾ ಮೊರೆಹೋಗಿದ್ದಾರೆ. ಗೋರಕ್ಷಕರು ದನದ ಚರ್ಮ ಸುಲಿಯುತ್ತಿದ್ದವರನ್ನು ಹೊಡೆದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡಿದರೆ, ಅದೇ ವೀಡಿಯೋವನ್ನು ದಲಿತ ತರುಣ ಜನತೆ ಜನರನ್ನು ಪ್ರತಿಭಟನೆಗೆ ಒಗ್ಗೂಡಿಸಲು ಬಳಸಿಕೊಂಡಿತು.



೨೦೦೬ರಲ್ಲಿ ಖೈರ್ಲಾಂಜಿ ಹತ್ಯಾಕಾಂಡ ಸಂಭವಿಸಿದಾಗ ಸ್ಮಾರ್ಟ್ ಫೋನುಗಳಿನ್ನೂ ದಲಿತರನ್ನು ತಲುಪಿರಲಿಲ್ಲ. ಆದರೆ ಇವತ್ತು ಸೋಶಿಯಲ್ ಮೀಡಿಯಾ ಮತ್ತು ಅಂತರ್ಜಾಲ ಬಳಸಿಕೊಳ್ಳುವ ನಿಶ್ಚಿತ ಉದ್ದೇಶದ ‘ದಲಿತ್ ಕ್ಯಾಮೆರಾ’ ಮತ್ತು ಅದರಂತಹ ಹತ್ತುಹಲವು ವೆಬ್‌ಸೈಟುಗಳು, ವಾಟ್ಸಪ್ ಗುಂಪುಗಳು ಸೃಷ್ಟಿಯಾಗಿವೆ. ತಮ್ಮ ಸಂದೇಶವನ್ನು ಹೆಚ್ಚು ವಿಸ್ತೃತವಾಗಿ ಹರಡಲು ಇದು ಸಹಾಯ ಮಾಡಿದೆಯಾದರೂ, ಮಿತಿಮೀರಿದ ಹಾಗೂ ಆಳ ವಿಶ್ಲೇಷಣೆಯಿಲ್ಲದ ಮೇಲುಮೇಲಿನ ಸುದ್ದಿಗಳ ಕಾರಣವಾಗಿ ಸೋಶಿಯಲ್ ಮೀಡಿಯಾವು ಚಿಂತೆಗೆ ಕಾರಣವಾಗಿದೆ.

ಜೊತೆಗೆ ಸೋಶಿಯಲ್ ಮೀಡಿಯಾ ಆಕ್ಟಿವಿಸ್ಟರ ಒಂದು ವರ್ಗ ಸೃಷ್ಟಿಯಾಗಿದೆ. ಅವರಿಗೆ ದಲಿತ ಚಳುವಳಿಯ ಎಲ್ಲವೂ, ಆರಂಭವೂ ಅಂತ್ಯವೂ ಅದೇ ಆಗಿದೆ. ಅವರ ಎಲ್ಲ ಆಕ್ರೋಶ ಮತ್ತು ಆಕ್ಟಿವಿಸಂ ೩ ಇಂಟು ೪ ಇಂಚಿನ ಸೆಲ್ ಫೋನಿನ ಸ್ಕ್ರೀನಿಗೆ ಸೀಮಿತವಾಗಿದೆ. ಅವರೆಂದೂ ಬೀದಿಗೆ ಬರಲಾರರು. ಅದೊಂದು ಸುಲಭದ ಹೊರದಾರಿಯಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಆಧರಿತ ದಲಿತ ಚಳುವಳಿಯ ಮತ್ತೊಂದು ಮಿತಿಯೆಂದರೆ ಒಂದು ಆವರಣದೊಳಗೇ ಮಿತಿಗೊಳ್ಳುವ ಕಾರಣದಿಂದ ತಮ್ಮ ರಾಜಕಾರಣದ ದೃಷ್ಟಿಕೋನವನ್ನು ಬಲಪಡಿಸುವ ಉದ್ದೇಶಗಳಿಗಾಗಿ ಅಂಥವರು ಐಡೆಂಟಿಟೇರಿಯನ್ ಅಭಿವ್ಯಕ್ತಿಗೇ ಹೆಚ್ಚು ಒತ್ತು ಕೊಟ್ಟುಬಿಡುವ ಅಪಾಯವಿರುವುದು.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಕ್ಯಾಂಪೇನಿನಿಂದ ಸ್ಫೂರ್ತಿ ಪಡೆದು ನಾವು ‘ದಲಿತ್ ಲೈವ್ಸ್ ಮ್ಯಾಟರ್’ ಅಭಿಯಾನ ನಡೆಸಿದೆವು. ಭಾರತದ ಗುಟ್ಟಾದ ಈ ಜನಾಂಗಭೇದಕ್ಕೆ ವಿಶ್ವವು ಏಕೆ ಕುರುಡಾಗಿದೆ ಎಂದು ನಿಮಗನಿಸುವುದು?




ನೀವು ಆಫ್ರಿಕನ್-ಅಮೆರಿಕನ್ ಅಭಿಯಾನದಿಂದ ಸ್ಫೂರ್ತಿ ಪಡೆದು ಆಲ್ ಇಂಡಿಯಾ ದಲಿತ್ ವಿಮೆನ್ಸ್ ರೈಟ್ಸ್ ಫೋರಂ ನಡೆಸಿದ ಅಭಿಯಾನದ ಬಗೆಗೆ ಮಾತನಾಡುತ್ತಿರಬಹುದು. ದಲಿತರು ಅಲ್ಲಿನ ಕರಿಯರೊಂದಿಗೆ ತಮ್ಮನ್ನು ಗುರುತಿಸಿಕೊಳದೆ ಕೇವಲ ಅವರ ಅಭಿಯಾನವನ್ನು ನಕಲು ಮಾಡಲು ಯತ್ನಿಸಿದ್ದು ಹಾಸ್ಯಾಸ್ಪದ. ಆಫ್ರಿಕನ್ ಅಮೆರಿಕನ್ನರಿಗಿಂತ ದಲಿತರದು ಬಹುದೊಡ್ಡ ಸಂಖ್ಯೆಯ ಸಮುದಾಯ. ಆದರೂ ಅವರಿಗೆ ತಮ್ಮ ಹೋರಾಟವನ್ನು ತಿಳಿಯಪಡಿಸಲು ತಮ್ಮದೇ ಆದ ನುಡಿಗಟ್ಟು, ಭಾಷೆ, ಚಿಂತನೆ ಸಿಗಲಿಲ್ಲ. ಏನಾದರೂ ಇರಲಿ, ಜಗತ್ತನ್ನು ಅವರಿಗೆ ಅಭಿಯಾನವು ಪರಿಚಯಿಸುವುದಾದರೆ ಅಷ್ಟರಮಟ್ಟಿಗೆ ಅದು ಸಾರ್ಥಕವೆನ್ನಬಹುದು.

ಸಮಾಜವು ಜಾತಿಪದ್ಧತಿಯೆಂಬ ಕುರೂಪಕ್ಕೆ ಕುರುಡಾಗಿದೆಯೆಂದು ಅಷ್ಟು ಖಂಡಿತವಾಗಿ ಹೇಳಲಾಗದು. ಜನಾಂಗ ಭೇದ ಮತ್ತು ವರ್ಣಭೇದಗಳು ಖಚಿತ ಇತಿಹಾಸ ಹೊಂದಿದ್ದು ಅಭಿವೃದ್ಧಿ ಹೊಂದಿದ ಜಗತ್ತನ್ನು ಒಂದು ಹಂತದಲ್ಲಿ ಸಂಧಿಸುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ ಜಾತಿ ಸಮಸ್ಯೆಯು ಭಾರತಕ್ಕಷ್ಟೇ ಸೀಮಿತವಾದುದು ಮತ್ತು ಅಸ್ಪಷ್ಟವಾದುದು. ವರ್ಣಭೇದದಲ್ಲಿ ಚರ್ಮದ ಬಣ್ಣವು ತಾರತಮ್ಯಕ್ಕೆ ಕಾರಣವಾದಂತೆ, ಜಾತಿ ಆಧಾರದ ಮೇಲಿನ ತಾರತಮ್ಯವು ವಿವರಿಸಲು ಕಷ್ಟವಾದುದು, ಅನುಭವ ಗ್ರಾಹ್ಯವಾದುದು ಹಾಗೂ ಅದನ್ನು ತಿಳಿಯಲು ವಿವರಣೆ ಬಯಸುವಂಥದು.

ಅಲ್ಲದೆ ಗುಲಾಮಗಿರಿಯನ್ನೊಳಗೊಂಡ, ಪೂರಾ ಯೂರೋಪೇ ಆಚರಿಸಿದ ವರ್ಣಭೇಧ ನೀತಿಯು ಹಲವು ದೇಶಗಳ ಜನರನ್ನು ಬಾಧಿಸುತ್ತಿದೆ, ಎಂದೇ ಅದು ಜಾಗತಿಕ ಸಮಸ್ಯೆಯಾಗಿ ಚರ್ಚೆಗೆ ಬರುತ್ತದೆ. ಆದರೆ ಜಾತಿ ಎನ್ನುವುದು ಬಹುಪಾಲು ಈ ಉಪಖಂಡಕ್ಕಷ್ಟೇ ಸೀಮಿತವಾದ ವಿಷಯವಾದ್ದರಿಂದ ಉಳಿದ ವಿಶ್ವವು ಅದರಲ್ಲಿ ತಮ್ಮ ಮಧ್ಯಪ್ರವೇಶ ಅವಶ್ಯವೆಂದು ಭಾವಿಸಲಿಲ್ಲ. ಜೊತೆಗೆ ಇಲ್ಲಿ ಎಲ್ಲಕ್ಕು ತಣ್ಣೀರೆರಚುವ ಬೃಹತ್ ಶಕ್ತಿಯಾಗಿ ಬ್ರಾಹ್ಮಣಶಾಹಿ ಭಾರತೀಯ ಪ್ರಭುತ್ವವಿದೆ. ಅದು ಎಂದಿಗೂ ಜಾತಿಪದ್ಧತಿ ಒಂದು ಸಮಸ್ಯೆ ಎನ್ನುವುದನ್ನು ನಿರಾಕರಿಸುತ್ತಲೇ ಬಂದಿದೆ.

೨೦೦೧ರ ಆಗಸ್ಟ್-ಸೆಪ್ಟೆಂಬರಿನಲ್ಲಿ ಕೆಲವು ಎನ್‌ಜಿಒಗಳು ಮತ್ತು ಸಂಘಸಂಸ್ಥೆಗಳು ಡರ್ಬಾನಿನಲ್ಲಿ ನಡೆದ ವರ್ಣಭೇದ-ಜನಾಂಗಭೇದ ಮುಂತಾದ ಅಸಹಿಷ್ಣುತೆ ವಿರೋಧಿ ಸಮ್ಮೇಳನದಲ್ಲಿ ಜಾತಿ ವಿಷಯ ಮಾತನಾಡಿದಾಗಲೇ ಅದು ಮುನ್ನೆಲೆಗೆ ಬಂದಿದ್ದು. ಆದರೆ ಭಾರತ ಸರ್ಕಾರದ ತೀವ್ರ ವಿರೋಧದ ನಡುವೆ ಅದು ಮುಂದುವರೆಯಲಾಗಲಿಲ್ಲ. ಎಂದೇ ಅಂತಾರಾಷ್ಟ್ರೀಯ ಸಮಾಜದ ಬೆಂಬಲ ಪಡೆಯಲೂ ಆಗಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದು ದಲಿತರ ಐಡೆಂಟಿಟಿ ಗುಂಗು ಮತ್ತು ಪ್ರಾಂತೀಯ/ಪಂಥೀಯ ಮನೋಭಾವವೂ ಒಂದು ಕಾರಣವೆನ್ನಬಹುದು. ದಲಿತರು ತಮ್ಮ ಜಾತಿ ಕವಚದಿಂದ ಹೊರಬಂದು ವಿಶ್ವದ ದಮನಿತರೆಲ್ಲರ ಜೊತೆಗೆ ಒಂದಾಗಿ ತಮ್ಮನ್ನೆಂದೂ ಭಾವಿಸಿಕೊಳ್ಳಲೇ ಇಲ್ಲ. ಮತ್ತೊಂದು ಕಾರಣ ಅವರ ಹೋರಾಟದ ದಾರಿ ಮತ್ತು ತೀವ್ರತೆ.

ಆಫ್ರಿಕನ್ ಅಮೆರಿಕನ್ನರು ದೀರ್ಘಕಾಲ ಮಿಲಿಟೆಂಟ್ ಹೋರಾಟ ನಡೆಸಿದರೆ, ಭಾರತದ ದಲಿತರು ತಮ್ಮ ವಂಚಿತ ಸ್ಥಿತಿಯೇ ಬಂಡವಾಳವಾಗಿರುವ ನಾಯಕ ಕೇಂದ್ರಿತ, ಮಾತುಕತೆ ಆಧಾರಿತ ದಾರಿಯನ್ನು ನೆಚ್ಚಿಕೊಂಡಿದ್ದಾರೆ. ಹೊರಗಣ ಪ್ರಪಂಚ ನ್ಯಾಯಕ್ಕಾಗಿ ಹೋರಾಡುವ ಜನ ಚಳುವಳಿಯು ನೀಡುವ ಶಾಕ್ ಟ್ರೀಟ್‌ಮೆಂಟಿಗೆ ಮಾತ್ರ ಬೆಚ್ಚಿ ಏಳುತ್ತದೆ. ವರ್ಣಭೇದ ನೀತಿಯ ವಿರುದ್ಧದ ಹೋರಾಟ ಜಗತ್ತಿನ ಅಂತರಾಳವನ್ನೇ ಅಲುಗಾಡಿಸಿದರೆ, ದಲಿತರು ಅದನ್ನು ಮಾಡಲಾಗದೇ ಹೋದರು. ದಲಿತ ಚಳುವಳಿಯು ಮತ್ತೆಮತ್ತೆ ಮೀಸಲಾತಿ ಎಂಬ ಏಕೈಕ ವಿಷಯದ ಸುತ್ತ ಗಿರಕಿ ಹೊಡೆಯುತ್ತ ಹೋರಾಟ ಕಟ್ಟಿದರೆ, ಉಳಿದ ಜಗತ್ತು ದಲಿತರು ಸರ್ಕಾರದಿಂದ ಸವಲತ್ತಾಗಿ ಪಡೆದದ್ದು ತಮ್ಮ ಪಾಲಿಗಿಂತ ಹೆಚ್ಚೇ ಇರಬೇಕೆಂದು ಭಾವಿಸಿತು.

ಕೊನೆಯದಾಗಿ ವಿಶಾಲ ವಿಶ್ವದ ಜೊತೆ ಸಂಪರ್ಕ ಕಲ್ಪಿಸಿಕೊಳ್ಳುವುದರಲ್ಲಿಯೂ ನಾವು ವಿಫಲವಾಗಿದ್ದೇವೆ. ವಿದೇಶಗಳಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ತಾರತಮ್ಯದ ಅರಿವು ಉಂಟಾಗುತ್ತಿದ್ದರೆ ಅದಕ್ಕೆ ಕಾರಣ ಅಲ್ಲೆಲ್ಲ ಹರಡಿಕೊಂಡ ಭಾರತೀಯ ದಲಿತರೇ. ಉದಾಹರಣೆಗೆ ಬ್ರಿಟನ್ನಿನ ಈಕ್ವಾಲಿಟಿ ಆಕ್ಟ್. ಅದು ೨೦೧೦ರಲ್ಲಿ ಜಾರಿಯಾಗಿ ಹಿಂದೂ ಮನೆಯೊಂದರಲ್ಲಿ ಬಲವಂತವಾಗಿ ಗುಲಾಮಳಾಗಿ ಬದುಕಿದ್ದ ಬಿಹಾರದ ಆದಿವಾಸಿ ಮಹಿಳೆಗೆ ೧.೮೪ ಲಕ್ಷ ಪೌಂಡುಗಳಷ್ಟು ಬೃಹತ್ ಮೊತ್ತದ ಹಣ ಪರಿಹಾರವಾಗಿ ಬರಲು ಕಾರಣವಾಯಿತು. ಅದು ಬ್ರಿಟನ್ನಿನ ಮೊದಲ ಜಾತಿ ತಾರತಮ್ಯದ ಪ್ರಕರಣವಾಗಿತ್ತು.

೨೫ ವರ್ಷಗಳಿಂದ ಅಮೆರಿಕ ಶೈಲಿಯ ಬಂಡವಾಳವಾದ ಮತ್ತು ಮಾರುಕಟ್ಟೆವಾದವನ್ನು ಭಾರತ ಅನುಸರಿಸುತ್ತಿದೆ. ಆದರೆ ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ನರಿಗೆ ಹೆಚ್ಚೆಚ್ಚು ಅವಕಾಶ ದೊರೆತಂತೆ ಇಲ್ಲಿ ದಲಿತರಿಗೆ ಹೆಚ್ಚು ಅವಕಾಶ ದೊರೆತು ಸಾಮಾಜಿಕ ವೈವಿಧ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫಲನವಾಗುತ್ತಿರುವಂತೆ ಕಾಣುತ್ತಿಲ್ಲ, ಏಕೆ?

ಅಮೆರಿಕದ ಬಂಡವಾಳಶಾಹಿಯು ಒಂದು ಕಲಸುಮೇಲೋಗರದ ಐಡಿಯಾಲಜಿಯನ್ನು ಅರಗಿಸಿಕೊಂಡು ನವ ಉದಾರವಾದದ ರೂಪ ತಳೆದಿದೆ. ಅದು ಉದಾರವಾದದ ತೀವ್ರತರ ರೂಪ. ಅದು ಉದಾರವಾದದ ಋಣಾತ್ಮಕ ಅಂಶಗಳನ್ನೇ ಮೂಲಾಧಾರ ಮಾಡಿಕೊಂಡಿದೆ. ಉದಾಹರಣೆಗೆ ವ್ಯಕ್ತಿಯ ಸ್ವಾತಂತ್ರ್ಯವನ್ನು ಮಾರುಕಟ್ಟೆ ಎಂಬ ದೇವರನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ಈ ತರ್ಕವನ್ನೇ ಮುಂದುವರೆಸಿ ಕೊನೆಗೆ ಸರ್ಕಾರವು ಸಾರ್ವಜನಿಕ ಸೇವೆಯಿಂದ ಹಿಂತೆಗೆದುಕೊಳ್ಳುತ್ತದೆ. ಅವನ್ನೆಲ್ಲ ಖಾಸಗಿ ಬಂಡವಾಳದಾರರಿಗೆ ಕೈಯೆತ್ತಿ ಒಪ್ಪಿಸುತ್ತದೆ.

ಅದರ ಐಡಿಯಲಾಜಿಕಲ್ ವಿಸ್ತರಣೆ ಸಾಮಾಜಿಕ ವಿಕಾಸವಾದ - ಬಲಶಾಲಿಯಷ್ಟೆ ಬದುಕುವನು ಎಂಬ ವಾದ. ಅದು ವಿಶ್ವಯುದ್ಧದ ಬಳಿಕ ಜನಪ್ರಿಯವಾದ ಸಾಮಾಜಿಕ ನ್ಯಾಯ ಎಂಬ ವಿಷಯಕ್ಕೆ ಯಾವ ಅವಕಾಶವನ್ನೂ ಕೊಡುವುದಿಲ್ಲ. ಸಾಮಾಜಿಕ ನ್ಯಾಯದ ಹೆಸರಲ್ಲಿ ನಡೆಯುವುದು ಸಿಎಸ್ಸಾರ್ - ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ. ಅದು ಇರುವುದನ್ನು ಇರುವ ಹಾಗೆ ಮುಂದುವರೆಸಿಕೊಂಡ ಹೋಗಲಿಚ್ಛಿಸುತ್ತದೆ. ಹೀಗಿರುತ್ತ ಅಮೆರಿಕದಲ್ಲಿ ಕೂಡಾ ಬಂಡವಾಳವು ದಮನಿತರ ಪೋಷಣೆ ಮಾಡುವುದೆಂದು ಹೇಳಲಾಗದು. ವೈವಿಧ್ಯದ ಎಲ್ಲ ಚರ್ಚೆಗಳೂ ‘ಮ್ಯಾನೇಜ್‌ಮೆಂಟ್’ ತರ್ಕದ ಫಲವೇ ಆಗಿರುತ್ತವೆ. ಅಲ್ಲದೆ ಇವೆಲ್ಲ ಚರ್ಚೆಯನ್ನು ನಿರ್ದೇಶಿಸುವ ಸಾಮಾಜಿಕ ವಿಕಾಸವಾದ ಎಂಬ ತತ್ವಕ್ಕೆ ಅನುಸಾರವಾಗಿ ವೈವಿಧ್ಯದ ಹೆಸರಿನಲ್ಲಿ ಸಿಗುವ ಅವಕಾಶವು ಮೇಲ್‌ಸ್ತರದ ಅಲ್ಪಸಂಖ್ಯಾತರಿಗೆ, ದಲಿತ ದಮನಿತರಿಗೆ ಸಿಗುತ್ತದೆ. ತಳಸ್ತರದ ಜನಸಮುದಾಯವು ವ್ಯವಸ್ಥಿತವಾಗಿ ಇವೆಲ್ಲದರಿಂದ ಹೊರಗುಳಿಯುತ್ತದೆ.

ಇದು ಭಾರತದಲ್ಲೂ ಆಗುತ್ತಿದೆ. ದಲಿತರ ಮೇಲ್‌ಸ್ತರದವರು, ತಮ್ಮ ಮುಂಚೂಣಿಯ ದಲಿತ ವಾಣಿಜ್ಯೋದ್ಯಮಿಗಳ ಒಕ್ಕೂಟದ ಮೂಲಕ ಈ ತತ್ವದ ಉಪಯೋಗ ಪಡೆಯುತ್ತಾರೆ. ಅವರು ನೇರವಾಗಿ, ಹೊರಗಿಂದ ಹೊರಗೆ ನವ ಉದಾರವಾದಿ ಪ್ರಭುತ್ವದ ಹಾಗೂ ಅದರ ಏಕಮಾತ್ರ ಫಲಾನುಭವಿಗಳಾದ ಬೃಹತ್ ಬಂಡವಾಳಶಾಹಿಗಳಿಂದ ಬೆಂಬಲ ಪಡೆಯುತ್ತಾರೆ. ಬಡವರು ಅಭಿವೃದ್ಧಿ ಹೆಸರಿನ ಕಿಲುಬು ಕಾಸಿಗೆ ಅಥವಾ ಚುನಾವಣಾ ಪೂರ್ವದಲ್ಲಿ ಭರದಿಂದ ಹರಿಯುವ ಭರವಸೆಗಳ ಮಹಾಪೂರಕ್ಕೆ ತೃಪ್ತಿ ಪಡಬೇಕಾಗಿದೆ.

ಇದು ಅಮೆರಿಕದ ಮಟ್ಟಿಗೂ ನಿಜ. ಮೇಲ್ನೋಟಕ್ಕೆ ತುಂಬ ನ್ಯಾಯಯುತ ವ್ಯವಸ್ಥೆಯಾಗಿ, ವೈವಿಧ್ಯತೆಯನ್ನು ಪೋಷಿಸುವ ದೇಶವಾಗಿ ಅದು ಕಾಣಬಹುದು. ಇವತ್ತು ಅಮೆರಿಕದ ಆಫ್ರೋ ಅಮೆರಿಕನ್ನರ ಪರಿಸ್ಥಿತಿ ಸುಧಾರಿಸಿರುವಂತೆ ಕಾಣುತ್ತಿದ್ದರೆ ಅದಕ್ಕೆ ಕಾರಣ ನವ ಉದಾರವಾದವನ್ನು ಅಪ್ಪಿಕೊಳ್ಳುವ ಪೂರ್ವದಲ್ಲಿ ಹಲವೆಂಟು ಅಡೆತಡೆಗಳ ಎದುರಿಸಿ ಅಲ್ಲಿ ಕರಿಯರು ತೊಡಗಿಕೊಂಡ ದೀರ್ಘ ಮತ್ತು ತೀವ್ರ ಹೋರಾಟ. ಜೊತೆಗೆ ಆ ಸಮಾಜದಲ್ಲಿ ಇಂಥ ಪ್ರಯತ್ನಗಳ ಹಿಮ್ಮೆಟ್ಟಿಸುವ ಬ್ರಾಹ್ಮಣವಾದದ ಅಡೆತಡೆಯೂ ಇಲ್ಲ.

ಹೀಗೆ ಅಮೆರಿಕವು ಜೀವಂತ ಬಂಡವಾಳಶಾಹಿಯ ಪಕ್ಕಾ ಉದಾಹರಣೆಯಾಗಿ ರೂಪುಗೊಂಡಿತು. ಎಂದೇ ಅದರ ತರ್ಕವು ಆಫ್ರೋ ಅಮೆರಿಕನ್ ತತ್ವಗಳನ್ನು ಒಪ್ಪಿಕೊಳ್ಳುತ್ತದೆ. ಅವರನ್ನು ತನ್ನ ಸಹಪಯಣಿಗರನ್ನಾಗಿ ಸ್ವೀಕರಿಸುತ್ತದೆ. ಆದರೆ ನೆನಪಿಡಿ: ಹೆಚ್ಚೆಚ್ಚು ಕರಿಯ ಮಿಲಿಯನೇರುಗಳು, ಬಿಲಿಯನೇರುಗಳು ಕಾಣಿಸಿಕೊಂಡಹಾಗೆ ಹೆಚ್ಚೆಚ್ಚು ಕರಿಯರನ್ನು ಜೈಲುಗಳಲ್ಲೂ ಕಾಣಬೇಕಾಗುತ್ತದೆ. ಒಬಾಮಾ ನಂತರದ ಅಮೆರಿಕದಲ್ಲೂ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಕ್ಯಾಂಪೇನ್ ನಡೆಸಬೇಕಾದ ಅವಶ್ಯಕತೆಯಿದೆಯೆಂದರೆ ಅಮೆರಿಕದ ಸಮಾಜ ಎಂಥದೆಂದು ತಿಳಿಯಬಹುದು. ಎಂದೇ ಕುರೂಪಿ ವಾಸ್ತವವನ್ನು ಮರೆಮಾಚುವ ಥಳುಕಿಗೆಂದೂ ಅವಕಾಶ ಕೊಡಬಾರದು.

ಈಗಲೂ ಕಡ್ಡಾಯ ಮೀಸಲಾತಿ ಇರುವ ಕಡೆಗಳಿಂದ ಹೊರತುಪಡಿಸಿ ದಲಿತರು ಉಳಿದ ಕಡೆಗಳಲ್ಲೆಲ್ಲ ಇಲ್ಲದಿರುವುದನ್ನು ಗಮನಿಸಬಹುದು. ಖಾಸಗಿ ಉದ್ದಿಮೆ, ಮಾಧ್ಯಮ, ಪ್ರಕಾಶನ, ಸಿನಿಮಾಗಳಲ್ಲಿ ಅವರು ಇಲ್ಲವೇ ಇಲ್ಲ ಎನ್ನಬಹುದು. ಇವೂ ಅಪರಾಧಗಳೇ ಎನ್ನುವಿರಾ? ಪ್ರಜಾತಾಂತ್ರಿಕಗೊಳ್ಳದ ಸಮಾಜವು ಕೊನೆಗೆ ದೌರ್ಜನ್ಯ, ಹತ್ಯಾಕಾಂಡಗಳು ನಡೆಯಲು ಕಾರಣವಾಗುವುದಿಲ್ಲವೆ?

ನಿಜ. ಯಾವುದೇ ತಾರತಮ್ಯವನ್ನು ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದಿರುವುದರ ಪರಿಣಾಮವೆಂದೇ ಭಾವಿಸಬೇಕು. ಅದು ಭೀಕರ ಹತ್ಯಾಕಾಂಡಗಳಿಗಿಂತ ಕಡಿಮೆ ಅಪರಾಧವಲ್ಲ. ದಲಿತರ ಮೇಲಿನ ತಾರತಮ್ಯ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತದೆ. ಇಂಥ ಮಾತುಗಳೆಲ್ಲ ಕ್ಲೀಷೆಯಂತೆ, ಸವಕಲು ಘೋಷಣೆಯಂತೆ ಕೇಳಬಹುದಾದ್ದರಿಂದ ಎಚ್ಚರದಿಂದಿರುವ ಅವಶ್ಯಕತೆಯಿದೆ. ಜಾತಿ ಸಮೀಕರಣ ತುಂಬ ಸಂಕೀರ್ಣ ಮಾರ್ಗಗಳಲ್ಲಿ ಕೆಲಸ ಮಾಡುತ್ತದೆ. ತಾರತಮ್ಯವೂ ಸರಳವಾದದ್ದಲ್ಲ.

ಉದಾಹರಣೆಗೆ ಕಾಂಗ್ರೆಸ್ ಬಿಜೆಪಿಗಳೆರಡೂ ದಲಿತ ವಾಣಿಜ್ಯೋದ್ಯಮಿಗಳನ್ನು ಎತ್ತಿ ಹಿಡಿಯುತ್ತಾರೆ. ಅದೇವೇಳೆಗೆ ಲಕ್ಷಾಂತರ ರೋಹಿತ್ ವೇಮುಲರನ್ನು ತುಳಿಯುತ್ತಾರೆ. ದಲಿತ ರಾಜಕಾರಣಿಗಳ ಓಲೈಸಲಾಗುತ್ತದೆ, ಸಾಮಾನ್ಯ ದಲಿತನೊಬ್ಬ ಎಫ್‌ಐಆರ್ ದಾಖಲಿಸುವುದೂ ದುಸ್ತರವಾಗಿದೆ. ಅದಕ್ಷ ದಲಿತ ನೌಕರನನ್ನು ಶೋಪೀಸ್‌ನಂತೆ ಎತ್ತಿ ಹಿಡಿಯುತ್ತ ಉದಾರವಾಗಿ ಅನರ್ಹ ಬಡ್ತಿ ನೀಡಲಾಗುತ್ತದೆ. ಸಮರ್ಥ ದಲಿತನನ್ನು ತುಳಿದು ಮುಗಿಸಿಬಿಡಲಾಗುತ್ತದೆ. ಜನರಿಗೆ ಜಾತಿ ಹೇಗೆ ಹೇಗೆ ಕೆಲಸ ಮಾಡುತ್ತದೆಂಬ ಬಗೆಗೆ ಸೂಕ್ಷ್ಮ ಹಾಗೂ ಪೂರ್ಣ ವಿವರಗಳು ಗೊತ್ತಿಲ್ಲ. ಆದ್ದರಿಂದ ನೀವು ಬಹು ಸರಳವಾಗಿ ತಾರತಮ್ಯ ಕುರಿತು ಮಾತನಾಡಿದರೆ ವಿರುದ್ಧ ಪರಿಣಾಮ ಬೀರುತ್ತದೆ.

ಮೀಸಲಾತಿಯಿಲ್ಲದ ಕ್ಷೇತ್ರಗಳಲ್ಲಿ ದಲಿತರು ಕಾಣಿಸುತ್ತಿಲ್ಲವೆಂದರೆ ಅದರರ್ಥ ದಲಿತರು ರಿಸ್ಕ್ ತೆಗೆದುಕೊಳ್ಳಲು ಏನೂ ತಯಾರಿಲ್ಲ ಎಂದು. ಭಾರತೀಯರು ಈಗಲೂ ವಂಶದ, ಕೌಟುಂಬಿಕ ಸಂಬಂಧಗಳ ಆಧಾರದಲ್ಲೇ ವ್ಯವಹರಿಸುತ್ತಾರೆ. ಅದನ್ನೇ ನಯವಾಗಿ ಸಾಮಾಜಿಕ ಬಂಡವಾಳ (ಸೋಶಿಯಲ್ ಕ್ಯಾಪಿಟಲ್) ಎಂದು ಕರೆಯುತ್ತಾರೆ. ಇದು ಸಹಜ. ಯಾಕೆಂದರೆ ವ್ಯಾವಹಾರಿಕವಾಗಿ ನೋಡಿದರೆ ಇದು ವಹಿವಾಟಿನ ಖರ್ಚನ್ನು ಕಡಿಮೆ ಮಾಡುತ್ತದೆ. ಆದರೆ ಆರ್ಥಿಕ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ದಲಿತರಿಗೆ ಈ ಸಾಮಾಜಿಕ ಬಂಡವಾಳ ಇಲ್ಲ. ಅಕ್ಯಾಡೆಮಿಕ್ ಭಾಷೆಯಲ್ಲಿ ಹೇಳುವಂತೆ ಅವರೆಷ್ಟೇ ಸಮರ್ಥರಿರಲಿ, ಹೆಚ್ಚು ಸಂಬಳ ಕೊಡುತ್ತೇವೆಂದು ಖಾಸಗಿ ಕ್ಷೇತ್ರವು ಹೇಳಿದರೂ ಕೂಡ ಅವರು ಸರ್ಕಾರಿ ನೌಕರಿಯನ್ನೇ ಆಯ್ಕೆ ಮಾಡುತ್ತಾರೆ. ಈ ನಿರ್ಧಾರದ ಹಿಂದೆ ಸಾರ್ವಜನಿಕ ವಲಯದ ಉದ್ಯೋಗ ನೀಡುವ ಸುರಕ್ಷತಾ ಭಾವವೂ ಕೆಲಸ ಮಾಡುತ್ತದೆ.

ಹೆಚ್ಚುಕಡಿಮೆ ೧೯೯೦ರ ತನಕ ಇದು ಸಾಮಾನ್ಯವಾಗಿತ್ತು. ಆ ವೇಳೆಗೆ ಹಣ ಗಳಿಸುವ ದಲಿತ ಪಾಲಕರ ಎರಡನೆ, ಮೂರನೇ ತಲೆಮಾರಿನ ದಲಿತ ಹುಡುಗ ಹುಡುಗಿಯರು ನಗರಕೇಂದ್ರಗಳಲ್ಲಿ ನೆಲೆಸಿ ಉತ್ತಮ ಶಾಲಾಕಾಲೇಜುಗಳಲ್ಲಿ ಕಲಿತು, ತಮ್ಮ ಜಾತಿ ಕುರಿತು ಅತಿ ಕಡಿಮೆ ಜ್ಞಾನ ಹೊಂದಿದವರಾಗಿ ಉದ್ಯೋಗ ಮಾರುಕಟ್ಟೆ ಪ್ರವೇಶಿಸಿದರು. ಅವರು ಹೆಚ್ಚು ವೇತನ ತರುವ ಖಾಸಗಿ ಕ್ಷೇತ್ರವನ್ನೆ ಬಯಸಿದರು. ಇದು ಒಂದು ಟ್ರೆಂಡ್ ಆಗಿದ್ದರೂ ತಾರತಮ್ಯ ಈಗಲೂ ನಿಂತಿಲ್ಲ.

ಹಾಗಾಗಿ ಅಧಿಕೃತ ಮೀಸಲಾತಿಯಿಲ್ಲದ ಕಡೆ ನೀವು ದಲಿತರನ್ನು ಕಾಣುವಿರೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಅವರ ಹೊಸ ಕ್ಷೇತ್ರದಲ್ಲೂ ಜಾತಿ ಅವರನ್ನು ಹಿಂಬಾಲಿಸುತ್ತಿದೆಯೋ ಇಲ್ಲವೋ ಎನ್ನುವುದು ಪ್ರಶ್ನೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಹೊರಬರುವ ದಲಿತ ವಿದ್ಯಾರ್ಥಿಗಳು ಖಾಸಗಿ ವಲಯದ ಉದ್ಯೋಗಗಳತ್ತ ಮುಖ ಮಾಡುತ್ತಿರುವುದೇನೋ ಹೌದು. ಆದರೆ ಅಹ್ಮದಾಬಾದಿನ ಐಐಎಂ ನಡೆಸಿದ ಅಧ್ಯಯನದ ಪ್ರಕಾರ ಅವರ ನೇಮಕವು ಒಟ್ಟಾರೆ ೧೬%ಗಿಂತ ಹೆಚ್ಚು ದಾಟಿರುವುದಿಲ್ಲ.

ಇದು ಉದ್ಯೋಗ ಮಾರುಕಟ್ಟೆಯ ವಿಷಯವಾಯಿತು. ಇನ್ನು ಮಾಧ್ಯಮ, ಸಿನಿಮಾದಂತಹ ಕ್ಷೇತ್ರಗಳಿಗೆ ಬಂದರೆ ಸಾಮಾಜಿಕ ಬಂಡವಾಳ ಇಲ್ಲದಿದ್ದರೂ ಬೃಹತ್ ಸಂಖ್ಯೆಯ ದಲಿತರು ಅಲ್ಲೆಲ್ಲ ಪ್ರವೇಶ ಪಡೆಯುತ್ತಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಯಾದ್ದರಿಂದ ಅವರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ಇಲ್ಲದಿರಬಹುದು. ಆದರೆ ಖಂಡಿತವಾಗಿಯೂ ಹೆಚ್ಚಾಗುತ್ತಿದೆ. ಮಾಧ್ಯಮವು ದಲಿತರನ್ನು ತಮ್ಮ ವಸ್ತು ಮತ್ತು ಸೇವೆಗಳ ಗ್ರಾಹಕರನ್ನಾಗಿ ಪರಿಗಣಿಸುವುದೇ ಹೌದಾದಲ್ಲಿ ದಲಿತ ಸಮುದಾಯದ ಸಮಸ್ಯೆ ಮತ್ತದರ ಒಳಹೊರಗುಗಳನ್ನು ಅರಿಯಲು ಅವರು ದಲಿತ ಸಮುದಾಯದವರನ್ನೇ ಪತ್ರಕರ್ತರನ್ನಾಗಿ ನೇಮಿಸಿಕೊಳ್ಳಲು ಹಿಂಜರಿಯಲಾರರು.

ಸಿನಿಮಾಗೆ ಬಂದರೆ, ಸೈರಾಟ್ ಸಿನಿಮಾ ಹೇಳುವಂತೆ, ವೈವಿಧ್ಯಮಯತೆ ಒಳ್ಳೇ ಮಾರಾಟದ ವಸ್ತು ಎಂದು ಎಲ್ಲರಿಗೂ ಅರಿವಾಗುತ್ತಿದೆ. ಎಂದೇ ದಲಿತ ನಿರ್ದೇಶಕರು, ನಟರನ್ನು ನಾವಿಂದು ನೋಡುತ್ತಿದ್ದೇವೆ. ಇಷ್ಟೆಲ್ಲ ಹೇಳಿದ ಮೇಲೂ, ಎಲ್ಲಿಯವರೆಗೆ ಜಾತಿ ಇರುತ್ತದೋ, ಒಂದಲ್ಲ ಒಂದು ರೂಪದಲ್ಲಿ ತಾರತಮ್ಯವೂ ಇದ್ದೇ ಇರುತ್ತದೆ. ಏಕೆಂದರೆ ಜಾತಿ ಎನ್ನುವುದೇ ಮೂಲಭೂತವಾಗಿ ನಿಂತಿರುವುದು ಅಸಮಾನತೆಯ ಮೇಲೆ. ಇದರಿಂದಲೇ ಜಾತಿವಿನಾಶ ಎಂಬ ನಮ್ಮ ಗುರಿಯ ಪ್ರಾಮುಖ್ಯತೆ ಗೊತ್ತಾಗುತ್ತದೆ.

ಸಾರ್ವಜನಿಕವಾಗಿ ಅಥವಾ ಸಾರ್ವಜನಿಕ ದೃಷ್ಟಿಗೆ ಬೀಳುವಂತೆ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವ್ಯಕ್ತಿಯನ್ನು ಕೀಳುಗರೆಯಲೆಂದೇ ಅವಮಾನಿಸುವುದು/ಬೆದರಿಕೆ ಹಾಕುವುದು ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ ೩.೧ (ಎಕ್ಸ್) ಅಡಿಯಲ್ಲಿ ದೌರ್ಜನ್ಯ ಪ್ರಕರಣವೆನಿಸಿಕೊಳುವುದಿಲ್ಲ. ಹಾಗೆ ಮಾಡಿದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂಬ ಹೊಸ ವ್ಯಾಖ್ಯಾನ ಶುರುವಾಗಿರುವುದನ್ನು ಇತ್ತೀಚೆಗೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ. ಇದಕ್ಕೆ ೨೦೧೩ರಲ್ಲಿ ಜೈಪುರ ಲಿಟರರಿ ಫೆಸ್ಟಿವಲ್‌ನಲ್ಲಿ ಆಶಿಶ್ ನಂದಿ ಆಡಿದ ಮಾತುಗಳು ಹಾಗೂ ನಂತರ ನಡೆದ ಪ್ರಕರಣವನ್ನು ಉಲ್ಲೇಖಿಸುತ್ತಾರೆ. ನಿಮ್ಮ ಪ್ರತಿಕ್ರಿಯೆ?

ಇದುವರೆಗೆ ಆ ಸೆಕ್ಷನ್ನಿನಡಿ ಎಷ್ಟು ಆಶಿಶ್ ನಂದಿಗಳನ್ನು ಶಿಕ್ಷಿಸಿದ್ದಾರೆ? ಇದು ಅತ್ಯಂತ ಸಾಮಾನ್ಯವಾಗಿರುವ ಜಾತಿ ಅಪರಾಧ. ನೀವು ಹೇಳಿರುವ ಸೆಕ್ಷನ್ ಅದನ್ನು ದಮನಿಸಲೆತ್ನಿಸುತ್ತದೆ. ಬೇಕೆಂದೇ ದಲಿತರನ್ನು ಅವಮಾನಿಸುವ ಉದ್ದೇಶ ಹೊಂದಿರದಿದ್ದರೆ ಈ ಕಾಯ್ದೆ ಅದು ಹೇಗೆ ದಲಿತೇತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತದೆ? ಒಬ್ಬ ವ್ಯಕ್ತಿಯನ್ನು ‘ಮಾದಿಗ ನನ ಮಗ’, ‘ಭಂಗಿ’, ‘ಧೇಡ್’ ಎಂದು ಕರೆಯುವುದು, ಖಾಸಗಿಯಾಗಿ ಅಂಥ ಪದ ಬಳಸುವುದು ಸವರ್ಣೀಯ ಶಬ್ದಕೋಶದಲ್ಲಿ ಸಾಮಾನ್ಯವಾಗಿದೆ. ಹೀಗಿರುತ್ತ ಮೇಲೆ ಹೇಳಿದ ಸೆಕ್ಷನ್ನನ್ನು ಕೈಬಿಟ್ಟರೆ ಸಾರ್ವಜನಿಕವಾಗಿ, ಸುಲಭವಾಗಿ ದಲಿತರನ್ನು ಹೀಯಾಳಿಸಲು ಸುಲಭ ಮಾಡಿಕೊಟ್ಟಂತಾಗುತ್ತದೆ.

ಇದನ್ನು ದಲಿತ ದೃಷ್ಟಿಯಿಂದ ನೋಡಬೇಕು. ಒಬ್ಬ ದಲಿತನನ್ನು ಅವನ ಜಾತಿ ಹಿಡಿದು ನಿಂದಿಸಿದಾಗ ಅವನಿಗೆ ಹೇಗನಿಸಿರಬಹುದು? ಅಂಥ ನಿಂದೆ ದಲಿತನ ಆತ್ಮಗೌರವವನ್ನು ಬದುಕಿರುವಾಗಲೇ ಕೊಂದುಹಾಕುತ್ತದೆ. ಅದು ದೈಹಿಕ ಹಲ್ಲೆಗಿಂತ ಕೆಟ್ಟದು. ಈ ಮೊದಲು ಅವರಿಗೆ ತಮ್ಮ ಮಾನವ ಹಕ್ಕು ತಿಳಿದಿರಲಿಲ್ಲ. ಸಮಾಜದ ಬ್ರಾಹ್ಮಣೀಯ ಶ್ರೇಣಿಯಲ್ಲಿ ತಮ್ಮ ಕೀಳು ಸ್ಥಾನವನ್ನು ಅನುಭವಿಸಿ ಒಪ್ಪಿಬಿಟ್ಟಿದ್ದರು. ಈಗ ತಮ್ಮ ಮಾನವ ಹಕ್ಕುಗಳ ಅರಿವು ಅವರಿಗೆ ಉಂಟಾಗಿರುವಾಗ ಪರಿಣಾಮ ಭಯಾನಕವಾಗಿದೆ.

ಈ ಅಪರಾಧ ಕುರಿತು ಏನು ಹೇಳುವುದು? ‘ದೌರ್ಜನ್ಯ ತಡೆ’ ಕಾಯ್ದೆಯಡಿ ದಾಖಲಾಗುವ ಎಲ್ಲ ಪ್ರಕರಣಗಳ ವಿಚಾರಣೆಯಲ್ಲೂ ಕೋರ್ಟು ‘ಉದ್ದೇಶಪೂರ್ವಕವಾಗಿ’ ಎಂಬ ಪದದ ಮೇಲೆ ವಿಶೇಷ ಒತ್ತು ಕೊಡುತ್ತಿತ್ತು. ಖೈರ್ಲಾಂಜಿಯಂತಹ ದೊಡ್ಡ ಅಪರಾಧದ ಬಗೆಗೆ ಹೇಳುವುದಾದರೆ, ಬಲಿಪಶುವಾಗಿರುವ ವ್ಯಕ್ತಿ ತನ್ನ ಜಾತಿ ಕಾರಣಕ್ಕಾಗಿ ಕಿರುಕುಳ ಅನುಭವಿಸಿದ ಇತಿಹಾಸ ಇರುವ ಪ್ರಕರಣದಲ್ಲಿ ಕೋರ್ಟು ಅಪರಾಧಿಗಳಿಗೆ ‘ಜಾತಿ ಸಂಬಂಧಿ ದುರುದ್ದೇಶ’ ಇದೆಯೆನ್ನುವುದನ್ನೇ ಅಲ್ಲಗಳೆಯುವುದಾದರೆ, ನ್ಯಾಯಾಧೀಶರು ಯಾವ ಅಪರಾಧವು ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಶಿಕ್ಷೆ ಪಡೆದೀತು ಎಂದು ಹೇಳಬೇಕು. ಇದೇ ತೆರನ ವಾದದಿಂದ ಎಷ್ಟೋ ಅತ್ಯಾಚಾರಿಗಳು ಈ ಕಾಯ್ದೆಯಡಿ ಖುಲಾಸೆಗೊಂಡಿದ್ದಾರೆ. ಅಪರಾಧಿಯ ಕಾಮದಿಂದಲೇ ಹೊರತು ಜಾತಿಕಾರಣಕ್ಕಾಗಿ ಅತ್ಯಾಚಾರ ನಡೆದಿದ್ದಲ್ಲವೆಂದು ಹೇಳಲಾಗುತ್ತದೆ. ನ್ಯಾಯವ್ಯವಸ್ಥೆಯೇ ಇಂಥ ಅತಾರ್ಕಿಕ, ಅಸಂಬದ್ಧ ನಿಲುವು ಹೊಂದಿದರೆ ನ್ಯಾಯ ಸಿಗುವ ಕುರಿತು ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ?

ಇಂಥ ನ್ಯಾಯ ತೀರ್ಮಾನಗಳಿಂದ ದಲಿತರನ್ನು ‘ರೂಢಿ’ಗತವಾಗಿ ಅವಮಾನಿಸಲು ದಲಿತೇತರರಿಗೆ ಮುಕ್ತ ಅವಕಾಶ ಸಿಗುವುದೆಂದು ಭಾವಿಸುವಿರಾ? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಸಾರ್ವಜನಿಕ ಸ್ಥಳದಲ್ಲಿ ದಲಿತರನ್ನು ಅವಮಾನಿಸಲು ಇರುವ ಸ್ವಾತಂತ್ರ್ಯವೆ? ಕಾನೂನು ಇದ್ದರೂ ಸಹ ನಗರ ಮತ್ತು ಗ್ರಾಮೀಣ ಭಾಗದ ದಲಿತರು ತಮ್ಮ ಜಾತಿ ಕಾರಣವಾಗಿ ಕಳಂಕ ಅನುಭವಿಸುತ್ತಿಲ್ಲವೆ? ದೈಹಿಕ ಹಿಂಸೆಯೆಡೆಗೆ ಮೊದಲ ಹೆಜ್ಜೆ ಮೌಖಿಕ ಹಿಂಸೆಯೆ? 

ಹೌದು. ಶ್ರೇಣೀಕೃತ ಸಮಾಜದಲ್ಲಿ - ಆ ಶ್ರೇಣಿ ಜಾತಿಯಿರಲಿ ಅಥವಾ ವರ್ಗವಿರಲಿ - ಸ್ವಾತಂತ್ರ್ಯ ಎನ್ನುವುದು ಎರಡಲಗಿನ ಕತ್ತಿ. ಅದರಲ್ಲೂ ಆ ವ್ಯಕ್ತಿ ತಳ ಸಮುದಾಯದವನಾಗಿದ್ದರೆ ಇನ್ನೊಬ್ಬ ವ್ಯಕ್ತಿಯಿಲ್ಲದೆ ಸ್ವಾತಂತ್ರ್ಯ ಸಂಪೂರ್ಣವಾಗದು. ಬಾಬಾಸಾಹೇಬ್ ಅಂಬೇಡ್ಕರ್ ಗಮನಿಸಿದಂತೆ ಈ ಸ್ವಾತಂತ್ರ್ಯವನ್ನು ಬಂಡವಾಳಿಗರು ತಮ್ಮ ಕಾರ್ಮಿಕರನ್ನು ಶೋಷಿಸಲು ದುರುಪಯೋಗಪಡಿಸಿಕೊಂಡರು.

ಜಾತಿಪದ್ಧತಿ ವಿಷಯಕ್ಕೆ ಬಂದರೆ, ಸಮಾಜದ ಪೂರ್ವಗ್ರಹಕ್ಕೆ ಸಿಕ್ಕಿ ನಲುಗುವ ದಲಿತರನ್ನು ಅವಮಾನಿಸಲು ದಲಿತೇತರರಿಗೆ ಈ ಸ್ವಾತಂತ್ರ್ಯ ಅನುಮತಿ ನೀಡುತ್ತದೆ. ಮೊದಲು ದೌರ್ಜನ್ಯ ಕುರಿತ ಗ್ರಹಿಕೆಗೆ ಯಾವ ಅವಕಾಶವಿರಲಿಲ್ಲ. ಏಕೆಂದರೆ ಅಸ್ಪೃಶ್ಯರು ತಮಗಾದ ದೌರ್ಜನ್ಯ, ಅಪಮಾನಗಳ ಬಗೆಗೆ ದೂರು ಹೇಳಿಕೊಳ್ಳಲು ಅವಕಾಶವೇ ಇರಲಿಲ್ಲ. ಆದರೆ ಈಗ ದಲಿತರಿಗೆ ತಮ್ಮ ಮಾನವ ಹಕ್ಕುಗಳ ಅರಿವಾಗಿ ಕಾನೂನಿನ ಬೆಂಬಲದೊಂದಿಗೆ ಅದನ್ನು ಗಟ್ಟಿಯಾಗಿ ಹೇಳುತ್ತಿರುವಾಗ ಕಾಯ್ದೆ ನೀಡಿದ ಸುರಕ್ಷೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂತೆಗೆದುಕೊಂಡರೆ ದಲಿತರನ್ನು ಹಿಂಸಿಸಲು ಜಾತೀಯ ಮನಸುಗಳಿಗೆ ಮುಕ್ತ ಅವಕಾಶ ಕಲ್ಪಿಸಿದಂತಾಗುವುದು.

ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ ಏನೇನೂ ತೃಪ್ತಿಕರವಾಗಿಲ್ಲದಿದ್ದರೂ ದೇಶಾದ್ಯಂತ ಹಲವು ರಾಜಕೀಯ ಪಕ್ಷಗಳು ಅದನ್ನು ಆರಂಭದಿಂದಲೇ ವಿರೋಧಿಸುತ್ತ ಬಂದಿವೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪಕ್ಷವಿದ್ದಾಗ ಬಾಳ್ ಠಾಕ್ರೆ ಮತ್ತು ಶಿವಸೇನಾ ಈ ಕಾಯ್ದೆಯನ್ನು ವಿರೋಧಿಸಿದ್ದವು. ಆಗ ಪವಾರರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಯಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಒಂದು ಗುಂಪಿಗೆ ಸೇರಿದ ರಾಮದಾಸ ಅಠವಳೆ ಇದ್ದರು. ಅವರು ಶಿವಸೇನಾ ಮೇಲಿದ್ದ ೧೧೦೦ ದೌರ್ಜನ್ಯ ಕೇಸುಗಳನ್ನು ಒಂದೇ ಬಾರಿಗೆ ಹಿಂತೆಗೆದುಕೊಂಡರು. ಇತ್ತೀಚೆಗೆ ಮೂವರು ಕುಡಿದ ದಲಿತ ಯುವಕರಿಂದ ಅಪ್ರಾಪ್ತ ವಯಸ್ಸಿನ ಮರಾಠಾ ಸಮುದಾಯದ ಹುಡುಗಿ ಅತ್ಯಾಚಾರಕ್ಕೊಳಗಾದಳು. ಆ ಪ್ರಕರಣದ ಬೆನ್ನತ್ತಿರುವ ಮರಾಠರು ಈಗ ದೌರ್ಜನ್ಯ ಕಾಯ್ದೆಯನ್ನೇ ವಾಪಸು ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಖೈರ್ಲಾಂಜಿ ಕುರಿತ ನನ್ನ ಪುಸ್ತಕದಲ್ಲಿ ಹೇಗೆ ನ್ಯಾಯ ವ್ಯವಸ್ಥೆಯ ಪ್ರತಿ ಹಂತದಲ್ಲಿ ದೌರ್ಜನ್ಯ ತಡೆ ಕಾಯ್ದೆಯ ಹಲ್ಲು ಉಗುರುಗಳನ್ನು ಕತ್ತರಿಸಲಾಗಿದೆ ಎಂದು ತಿಳಿಸಿದ್ದೇನೆ. ಅದರ ದುರ್ಬಳಕೆಯಾಗುತ್ತಿದೆ ಎಂಬ ಕೂಗು ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಸುವ ಮಧ್ಯಮ ಜಾತಿಗಳಿಂದಲೇ ಕೇಳಿಬರುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಸೇರಿದಂತೆ ರಾಜಕಾರಣಿಗಳು ಅದರ ದುರ್ಬಳಕೆ ಆಗುತ್ತಿದೆ ಎಂದು ಒಪ್ಪಿಕೊಂಡಿರುವುದು ಕುತೂಹಲಕರವಾಗಿದೆ. ಎಲ್ಲರಿಗೂ ದಲಿತರಿಗೆ ಅವರ ಸ್ಥಾನ ಯಾವುದೆಂದು ತೋರಿಸುವ ಬಯಕೆ ಇದ್ದಂತಿದೆ.

ಜಾತಿದೌರ್ಜನ್ಯದ ಬಲಿಪಶುವಿಗೆ ನ್ಯಾಯ ಕೊಡಿಸುವ ಕುರಿತು ಸಾಮಾಜಿಕ ಮತ್ತು ರಾಜಕೀಯ ಇಚ್ಛಾಶಕ್ತಿಯಿಲ್ಲದಿರುವಿಕೆಗೆ ಯಾವುದು ನ್ಯಾಯಯುತ ಮತ್ತು ವ್ಯಾವಹಾರಿಕ ಪರಿಹಾರ ಎನಿಸುತ್ತದೆ? ದಲಿತರು ತಮ್ಮ ಕೈಗೆ ಕಾನೂನನ್ನು ಎತ್ತಿಕೊಂಡಾಗಲೇ ನ್ಯಾಯ ಸಾಧ್ಯವಾಗಿದೆಯೆನಿಸುತ್ತದೆ. ಆದರೆ ಸಂವಿಧಾನ ರಚನೆಯ ಮೇಲುಸ್ತುವಾರಿ ನಡೆಸಿದ ಬಾಬಾಸಾಹೇಬ್ ಅಂಬೇಡ್ಕರ್ ಕಾನೂನಾತ್ಮಕ ಹೋರಾಟದ ಪರವಾಗಿದ್ದರು. ಆದರೆ ದಲಿತ ಚಳುವಳಿ ಪ್ರಜಾಸತ್ತಾತ್ಮಕ ದಾರಿಗಂಟಿಕೊಂಡಿದ್ದರೂ ಕಾನೂನು ಯಾವಾಗಲೂ ಅವರ ಕೈಬಿಟ್ಟಿದೆ. ಹಾಗಾದರೆ ಹೊರದಾರಿ ಯಾವುದು?

ನೀವು ಹೇಳಿದಂತೆ ಕಳೆದ ಏಳು ದಶಕಗಳ ಅನುಭವದಲ್ಲಿ ಎಲ್ಲಾ ಸಾಂಸ್ಥಿಕ ರಚನೆಗಳೂ ದಲಿತರಿಗೆ ನ್ಯಾಯ ಕೊಡಿಸುವುದರಲ್ಲಿ ಸೋತಿರುವುದು ನಿಜ. ಅತಿ ಕಡಿಮೆಯಿರುವ ಶಿಕ್ಷಾಪ್ರಮಾಣ ಇದಕ್ಕೊಂದು ಸೂಚ್ಯಂಕವಾಗಬಲ್ಲದು. ಆದರೆ ಅದು ಅನ್ಯಾಯದ ತೀವ್ರತೆಯನ್ನು ಬಿಂಬಿಸಲು ಸಾಲದು. ಶಿಕ್ಷಾ ಪ್ರಮಾಣ ಒಂದಂಕಿಯಿಂದ ಎರಡಂಕಿ ದಾಟಿರುವುದು ಒಂದು ಸಣ್ಣ ಏರಿಕೆಯಷ್ಟೇ. ಅದು ವಾರ್ಷಿಕ ಸಂಭವಿಸುತ್ತಲೇ ಹೋಗುತ್ತಿರುವ ೪೭,೦೦೦ ದೌರ್ಜನ್ಯಗಳ ಒಟ್ಟು ಮೊತ್ತದ ಸರಾಸರಿ ಶಿಕ್ಷಾ ಪ್ರಮಾಣವಷ್ಟೇ. ಅಪರಾಧಿಯು ದೌರ್ಜನ್ಯಕ್ಕೊಳಗಾದವನ ವರ್ಗದವನೇ ಆಗಿದ್ದರೆ ಶಿಕ್ಷೆ ಆರು ತಿಂಗಳು ಇರಬಹುದು. ಆದರೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆದು ನಡೆಸಲಾಗುವ ಕೊಲೆ, ಅತ್ಯಾಚಾರಗಳಂತಹ ಘನ ಅಪರಾಧಗಳ ನೋಡಿದರೆ ಅವು ಶಿಕ್ಷೆಯಲ್ಲಿ ಕೊನೆಗೊಳ್ಳುತ್ತಿಲ್ಲ. ಖೈರ್ಲಾಂಜಿಯಂತಹ ಬಹಳ ಪ್ರಚಾರ ಪಡೆದ ಪ್ರಕರಣಗಳಲ್ಲಿ ಶಿಕ್ಷೆ ನೀಡಲ್ಪಟ್ಟಿದ್ದರೂ, ನಿಜವಾದ ಅಪರಾಧಿಗಳು ಶಿಕ್ಷೆಗೊಳಗಾಗಿಲ್ಲ ಎಂದು ಖಂಡಿತವಾಗಿ ಹೇಳಬಹುದು. ಸಾಮಾನ್ಯವಾಗಿ ಪ್ರಭಾವಿ ಮಾಸ್ಟರ್ ಮೈಂಡುಗಳ ಶಿಕ್ಷೆಯನ್ನು ಬಡ ಡಮ್ಮಿಗಳಿಗೆ ನೀಡಿ ಅವರನ್ನು ಬಲಿಪಶುವನ್ನಾಗಿಸಲಾಗುತ್ತದೆ.



ಅಂಬೇಡ್ಕರರಿಗೆ ಧಾರ್ಮಿಕ ಹಿನ್ನೆಲೆಯ ಕುಟುಂಬ ಹಾಗೂ ಅಮೆರಿಕ ಮತ್ತು ಇಂಗ್ಲೆಂಡುಗಳಲ್ಲಿ ವಿಶ್ವವಿದ್ಯಾಲಯದ ಕಲಿಕೆಯ ಸಂದರ್ಭದಲ್ಲಿ ಸಿಕ್ಕ ಮುಕ್ತ ಶಿಕ್ಷಣದ ಫಲವಾಗಿ ಅವರು ಸಂಸದೀಯ ಪ್ರಜಾಪ್ರಭುತ್ವದ ಬಗೆಗೆ ಆಳ ನಂಬಿಕೆ ಬೆಳೆಸಿಕೊಂಡಿದ್ದರು. ಮುಕ್ತ ಚಿಂತನೆಯ, ಫೇಬಿಯನ್ ಸಮಾಜವಾದಿಗಳು, ವಾಸ್ತವವಾದಿಗಳೂ ಆಗಿದ್ದ ಜಾನ್ ಡೆವಿ, ಜೇಮ್ಸ್ ಶಾಟ್ವೆಲ್, ಎಡ್ವಿನ್ ಸೆಲಿಗ್ಮನ್, ಜೇಮ್ಸ್ ಹಾರ್ವೆ ರಾಬಿನ್ಸನ್, ಫ್ರಾಂಕ್ಲಿನ್ ಗಿಡ್ಡಿಂಗ್ಸ್ ಮತ್ತು ಅವರಂತಹ ಶಿಕ್ಷಕ ವೃಂದ ಅವರ ಯೋಚನಾ ಕ್ರಮದ ಮೇಲೆ ಅಪಾರ ಪ್ರಭಾವ ಬೀರಿದರು. ಬೂರ್ಷ್ವಾ ಮತ್ತು ಶೋಷಿತರ ನಡುವಿನ ವರ್ಗಸಂಘರ್ಷದ ಮೂಲಕ ಕ್ರಾಂತಿ ಉಂಟುಮಾಡಬಹುದೆಂಬ ಮಾರ್ಕ್ಸಿಸ್ಟ್ ನಂಬಿಕೆಯನ್ನು ಇವರೆಲ್ಲ ವಿರೋಧಿಸುತ್ತಿದ್ದರು. ಅಂಬೇಡ್ಕರ್ ಈ ಚಿಂತನೆಯನ್ನು ಪೂರ್ಣ ಅಳವಡಿಸಿಕೊಂಡಂತೆ ಕಾಣುತ್ತದೆ.

ನಂತರ ಭಾರತ ಸಂವಿಧಾನದ ಕರಡು ಸಿದ್ಧ ಮಾಡಿದ ಮೇಲೆ ಎಲ್ಲಕಡೆಯಿಂದ ಪ್ರಶಂಸೆಯ ಸುರಿಮಳೆ ಬಂದಾಗ, ಒಂದು ಕ್ಷಣದ ಮೈಮರೆವಿನಲ್ಲಿ ದಲಿತರಿಗೆ ಇನ್ನು ಮುಂದೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದ ದಾರಿ ನೆಚ್ಚಿಕೊಳ್ಳುವುದಕ್ಕಿಂತ ಸಾಂವಿಧಾನಿಕ ಮಾರ್ಗ ಹಿಡಿಯುವಂತೆ ಸಲಹೆ ಕೊಟ್ಟರು. ಅವರು ಬೌದ್ಧಧರ್ಮವನ್ನು ಸ್ವೀಕಾರ ಮಾಡಿದಾಗ ಅಹಿಂಸೆಯ ಉತ್ತುಂಗವು ಒಂದು ನಂಬಿಕೆಯಾಗಿ ಬೇರೂರಿತು. ಬೌದ್ಧಧರ್ಮದಲ್ಲಿ ಅಹಿಂಸೆ ಎನ್ನುವುದು ಸಾಪೇಕ್ಷ. ಅದನ್ನು ಅವರೇ ತಮ್ಮ ಪುಸ್ತಕ ‘ಬುದ್ಧ ಅಂಡ್ ಹಿಸ್ ಧಮ್ಮ’ದಲ್ಲಿ ಹೇಳಿದ್ದಾರೆ. ಆದರೆ ತಮ್ಮ ಸಾವಿಗಿಂತ ಒಂದು ತಿಂಗಳು ಮುಂಚೆ ಖಟ್ಮಂಡುವಿನ ಸರ್ವಧರ್ಮ ಸಮ್ಮೇಳನದಲ್ಲಿ ‘ಬುದ್ಧ ಅಂಡ್ ಕಾರ್ಲ್ ಮಾರ್ಕ್ಸ್’ ಎಂಬ ಭಾಷಣ ಮಾಡಿದಾಗ, ಅವರು ಸಂಪೂರ್ಣ ಅಹಿಂಸೆಯನ್ನು ವೈಭವೀಕರಿಸಿರುವಂತೆ ಕಾಣುತ್ತಾರೆ. ಬಹುಶಃ ಅದು ಅವರ ವರ್ಗ ಸ್ಥಾನದ ಕಾರಣವಾಗಿಯೂ ಬಂದ ಯೋಚನೆಯಿರಬಹುದು. ಅದು ಅವರನ್ನು ವರ್ಗ ಸಂಘರ್ಷ ಮತ್ತು ಹಿಂಸೆಯನ್ನು ಪರಿಗಣಿಸದಂತೆ ಮಆಡಿರಬಹುದು.

ಬರ್ನಾರ್ಡ್ ಷಾನ ಫೇಬಿಯನ್ ದಾರಿಯಲ್ಲಿ ವಿವೇಚಿಸಲ್ಪಟ್ಟಂತೆ, ವರ್ಗ ಸಂಘರ್ಷವು ಮಧ್ಯಮ ವರ್ಗವನ್ನು ಸೆಳೆಯಲಾರದು. ಹಿಂಸೆಯನ್ನು ತಡೆಗಟ್ಟುವ ಅಂಬೇಡ್ಕರರ ಧೋರಣೆಯು ಅವರ ಮೊದಲ ಹೋರಾಟ - ಕೊಲಾಬಾ ಡಿಪ್ರೆಸ್ಡ್ ಕ್ಲಾಸ್ ಕಾನ್ಫರೆನ್ಸ್ ನಡೆದ ದಿನಗಳಿಂದಲೇ ಇತ್ತು. ಚವಡಾರ್ ಕೆರೆಯ ನೀರು ಕುಡಿದು ದಲಿತ ಮುಖಂಡರು ಮಾರ್ಚಿ ೧೯ರಂದು ವಾಪಸಾಗುತ್ತಿದ್ದಾಗ ಮಹಾಡಿನ ಸವರ್ಣೀಯ ಹಿಂದೂ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿದರು.



ಅದರಲ್ಲಿ ಭಾಗವಹಿಸಿದ್ದ ೩೦೦೦ಕ್ಕೂ ಅಧಿಕ ಕಾರ್ಯಕರ್ತರಲ್ಲಿ ಬಹುಪಾಲು ಜನರು ವಿಶ್ವಯುದ್ಧ-೧ರಲ್ಲಿ ಭಾಗವಹಿಸಿ ಮರಳಿದ್ದ ಮಾಜಿ ಸೈನಿಕರು. ಹಿಂದೂಗಳ ಆಕ್ರಮಣಕ್ಕೆ ಪ್ರತ್ಯುತ್ತರ ಕೊಡಲು ಅಂಬೇಡ್ಕರರ ಒಂದು ಸಣ್ಣ ಸಮ್ಮತಿಯನ್ನಷ್ಟೇ ಅವರು ಎದುರು ನೋಡುತ್ತಿದ್ದರು. ಆದರೆ ಅಂಬೇಡ್ಕರ್ ಅದನ್ನು ತಡೆದರು. ಇದೇ ತರ್ಕವನ್ನು ಮಹಾಡ್ ಸತ್ಯಾಗ್ರಹದ ವೇಳೆಯೂ ಡಿಸೆಂಬರ್ ೧೯೨೭ರಲ್ಲಿ ಮುಂದುವರೆಸಿದರು. ಅದು ಮೊದಲ ಸಮ್ಮೇಳನದಲ್ಲಿ ನಡೆದ ಘಟನೆಗಳ ಸುತ್ತಮುತ್ತ ಅತ್ಯಂತ ಜಾಗರೂಕವಾಗಿ ಸಂಘಟಿಸಲ್ಪಟ್ಟ ಸಮಾವೇಶ. ಭಾಗವಹಿಸಿದ ಎಲ್ಲ ಪ್ರತಿನಿಧಿಗಳ ಇಚ್ಛೆಗೆ ವಿರುದ್ಧವಾಗಿ ಅಂಬೇಡ್ಕರ್ ಪ್ರಭುತ್ವದೊಂದಿಗೆ ಕಾನೂನಾತ್ಮಕ ಚಕಮಕಿ ಬೇಡವೆಂದು ಚಳುವಳಿಯನ್ನು ನಿಲ್ಲಿಸಿದರು.

ಪ್ರಜ್ಞಾಪೂರ್ವಕ ಹಿಂಸೆಯನ್ನು ತಡೆಗಟ್ಟಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಿಂಸೆಯು ನಿಮ್ಮ ಬದುಕಿನ ಆಂತರಿಕ ಭಾಗವೇ ಆಗಿರುವಾಗ, ಅಹಿಂಸೆ ಎನ್ನುವುದು ಮೀರಬಾರದ ತತ್ವ ಎಂದು ಎತ್ತಿಹಿಡಿಯುವುದು ನೈತಿಕವಾಗಿ ಸಮಸ್ಯಾತ್ಮಕ ಮತ್ತು ವ್ಯಾವಹಾರಿಕವಾಗಿ ತಪ್ಪಾಗುತ್ತದೆ. ನಾನು ಈ ವಿಷಯ ಕುರಿತು ನನ್ನ ‘ಮಹಾಡ್: ದ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ನಲ್ಲಿ ತಿಳಿಸಿದ್ದೇನೆ. ಮಹಾಡದ ಸಮಾವೇಶದ ಪ್ರತಿನಿಧಿಗಳಿಗೆ ಸವರ್ಣೀಯ ಗೂಂಡಾಗಳ ದಾಳಿಯನ್ನು ಎದುರಿಸಿಬಿಡುವಂತೆ ಅಂಬೇಡ್ಕರ್ ಅವರೇನಾದರೂ ಅಂದು ಹೇಳಿದ್ದಿದ್ದರೆ, ದಲಿತ ಚಳುವಳಿಗೆ ಅದು ಹೊಸದೊಂದೇ ಆಯಾಮ ಕೊಡುತ್ತಿತ್ತು.

ಅಕ್ಕಪಕ್ಕದ ಹಳ್ಳಿಗರು ಸವರ್ಣೀಯರಿಂದ ತೊಂದರೆ ಅನುಭವಿಸುವಂತಾಗುತ್ತಿತ್ತು ಎಂಬ ನೆಪ ಸಮರ್ಥನೀಯವಲ್ಲ. ಏಕೆಂದರೆ ಪ್ರತಿ ಹಿಂಸೆ ತೋರಿಸದೆಯೂ ಎಷ್ಟೋ ಕಡೆಗಳಲ್ಲಿ ಅವರು ಹೊಡೆತ ತಿನ್ನುತ್ತಲೇ ಇದ್ದಾರೆ. ದಲಿತರು ಸವರ್ಣೀಯರ ಮೇಲೆ ಕೈಯೆತ್ತಿದರು ಎಂಬ ಒಂದೇಒಂದು ಸುದ್ದಿ ಇಡೀ ಜಾತಿಗ್ರಸ್ತ ಸಮಾಜಕ್ಕೆ ಶಾಕ್ ಟ್ರೀಟ್ಮೆಂಟ್ ಕೊಡುತ್ತಿತ್ತು. ಅದು ನಿಜವಾದ ದಂಗೆಯಾಗುತ್ತಿತ್ತು, ಪಶ್ಚಾತ್ತಾಪವಿಲ್ಲದ ದರ್ಪದ ಹಿಂದೂ ಸವರ್ಣೀಯರೆದುರು ಸಾವಿರ ಸತ್ಯಾಗ್ರಹಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಆಳದಲ್ಲಿ ಬೇರುಬಿಟ್ಟಿರುವ ಜಾತಿ ವಿಷಕ್ಕೆ ಒಂದು ಬಲಿಷ್ಠ ಪ್ರತಿವಿಷವೇ ಬೇಕಾಗಿದೆ, ಮತ್ತು ಅದು ಹಿಂಸೆಗೆ ಪ್ರತಿ ಹಿಂಸೆಯ ಉತ್ತರದಿಂದಲಷ್ಟೇ ಸಾಧ್ಯವಾಗುತ್ತದೆ.

ಜಾತಿ ದೌರ್ಜನ್ಯಗಳು ನಡೆದಾಗಲೂ ಅಷ್ಟೇ, ದುಃಖಿಸುತ್ತ ಕೂರುವ ಬದಲು - ಇಡೀ ದಲಿತ ಪ್ರಜ್ಞೆಯೇ ದುಃಖಿಸುವಂತೆ ಕಾಣುತ್ತ ಮನಕಲಕುವ ಕವಿತೆ, ಆತ್ಮಕತೆ ಬರೆಯುವ ಬದಲು - ಪ್ರತಿಕ್ರಿಯಾತ್ಮಕ ನಡೆಯ ಕುರಿತು ದಲಿತರು ಯೋಚಿಸಿದ್ದೇ ಹೌದಾದಲ್ಲಿ ಶೋಷಕರು ಅಷ್ಟು ನಿರ್ಭಯವಾಗಿ ವರ್ತಿಸಲು ಸಾಧ್ಯವಿಲ್ಲ. ಒಂದು ಕಡೆ ಬಾಬಾಸಾಹೇಬ್ ಅಂಬೇಡ್ಕರರು ದಲಿತರಿಗೆ ೧೦೦ ವರ್ಷ ಆಡುಕುರಿಯಂತೆ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಮೇಲು ಎಂದು ಹೇಳಿದರೆ; ಮತ್ತೊಂದು ಕಡೆ ಅವರು ದಲಿತರಿಗೆ ಅವಶ್ಯವಿರುವಾಗ ಹಿಂಸೆಯ ಕುರಿತು ಯೋಚಿಸಲೂ ಬಿಡುವುದಿಲ್ಲ.

ಹೌದು. ಹಿಂಸೆ ಪ್ರತಿಹಿಂಸೆಗೆ ದಾರಿ ಮಾಡಿಕೊಡುತ್ತದೆ. ೧೯೯೨ರಲ್ಲಿ ಬಿಹಾರದ ಬಾರಾ ಹತ್ಯಾಕಾಂಡದಲ್ಲಿ ಅದೇ ಆಗಿದೆ. ಆದರೆ ಅದೊಂದು ಯುದ್ಧದಂತಹ ಸನ್ನಿವೇಶವಾಗಿತ್ತು. ಅದು ಯಾವಾಗಲೂ ಸಂಭವಿಸುವುದಿಲ್ಲ. ಹಾಗೆ ಆದರೂ ಅದು ಉತ್ತಮ ಭವಿಷ್ಯಕ್ಕಾಗಿ ತೆರಲು ತಕ್ಕುನಾದ ಬೆಲೆ. ಒಟ್ಟಾರೆ ಯಾವುದೇ ತರಹದ ಪ್ರಾಣಹಾನಿಯೂ ಅನಪೇಕ್ಷಿತ. ಆದರೂ ಕ್ರಾಂತಿಕಾರಿ ಹಿಂಸೆಯ ಹಿನ್ನೆಯಲ್ಲಿ ನೋಡಿದಾಗ ಹರ್ಬರ್ಟ್ ಮರ್ಕ್ಯೂಸನ ‘ಕ್ಯಾಲುಕ್ಲಸ್ ಆಫ್ ಪ್ರೋಗ್ರೆಸ್’ ಗಮನಿಸಬೇಕು. ಕ್ರಾಂತಿಯ ವೇಳೆ ಮತ್ತು ನಂತರ ಕೊಲ್ಲಲ್ಪಡುವ ಜನರ ಸಂಖ್ಯೆ ಹಾಗೂ ಕ್ರಾಂತಿ ಸಂಭವಿಸದೆ ಯಥಾಸ್ಥಿತಿಯಿದ್ದರೆ ಸಂಭವಿಸುವ ಸಾವುಗಳ ತುಲನೆ ಅದು. ಅಮೆರಿಕದ ಸಮಾಜಶಾಸ್ತ್ರಜ್ಞ ಬ್ಯಾರಿಂಗ್ಟನ್ ಮೂರ್ ಇಂತಹ ತುಲನಾತ್ಮಕ ವಿಶ್ಲೇಷಣೆಯಂತೆ ಚೀನಾದೊಡನೆ ಭಾರತವನ್ನು ಹೋಲಿಸುವುದು, ಟೆಡ್ ಹೊನ್ರಿಚ್‌ನ ಪ್ರಜಾತಾಂತ್ರಿಕ ಹಿಂಸೆಯ ವ್ಯಾಖ್ಯಾನಗಳು ಇಂತಹ ಪರಿಣಾಮ ಲೆಕ್ಕಾಚಾರ ಹೊಂದಿದ ಇತ್ತೀಚಿನ ವಿಶ್ಲೇಷಣೆಗಳ ಕೆಲವು ಉದಾಹರಣೆಗಳು. ಜಾತಿ ವಿನಾಶ ಎನ್ನುವುದು ಯಾವುದೇ ಕ್ರಾಂತಿಗಿಂತ ಕಡಿಮೆಯದಲ್ಲ.

ಕೊನೆಯದಾಗಿ, ಭಾರತದ ಮೇಲ್ವರ್ಗದ ಜನ ಮತ್ತು ಕಾರ್ಪೋರೇಟ್ ಮೀಡಿಯಾ ಜಾತಿ ಕುರಿತು ಕೇವಲ ಮೂರು ವಿಷಯ ಮಾತನಾಡುತ್ತಾರೆ: ಮೀಸಲಾತಿ, ಜಾತಿ ದೌರ್ಜನ್ಯ ಮತ್ತು ಚುನಾವಣಾ ರಾಜಕಾರಣ. ಅವರೆಂದೂ ತಮ್ಮ ದೃಷ್ಟಿಯನ್ನು ಒಳ ತಿರುಗಿಸಿ ಹೇಗೆ ಜಾತಿಯು ತಮ್ಮ ಬದುಕಿನ ಪ್ರತಿ ಸ್ತರವನ್ನು ಆವರಿಸಿಕೊಂಡಿದೆ ಎಂದು ನೋಡಲಾರರು. ವಾಸ್ತವ ಹೀಗಿರುವಾಗ ನಾವು ಹೇಗೆ ಮತ್ತು ಯಾವಾಗ ಅಂಬೇಡ್ಕರರ ಕನಸಾಗಿರುವ ಜಾತಿವಿನಾಶದ ಗುರಿಯನ್ನು ತಲುಪಬಲ್ಲೆವು?

ನಿಜವಾಗಿ ಮೀಸಲಾತಿ ಮತ್ತು ಚುನಾವಣಾ ರಾಜಕಾರಣಗಳು ಜಾತಿವ್ಯವಸ್ಥೆಯ ಸಂಕೇತಗಳಾಗಿವೆ. ಜಾತಿ ದೌರ್ಜನ್ಯ ಅದರ ಸಾಂದ್ರ ಅಭಿವ್ಯಕ್ತಿಯಾಗಿದೆ. ಅದು ಜಾತಿ ವ್ಯವಸ್ಥೆಯ ವಿಚಿತ್ರ ಮತ್ತು ಕಹಿ ಫಲ. ಮಧ್ಯಮ ಮತ್ತು ಮೇಲ್ವರ್ಗದ ಜನರು ಈ ಭಾಷೆಯಲ್ಲಿ ಮಾತನಾಡಿದರೆ ಅದು ಅವರ ತಪ್ಪೆನ್ನುವುದಿಲ್ಲ. ಆದರೆ ಕಾರ್ಯಕಾರಣಗಳನ್ನು ಸಮಗ್ರವಾಗಿ ಗ್ರಹಿಸಿ ಅವರು ಮಾತನಾಡುವುದಿಲ್ಲ ಎನ್ನುವುದು ದೋಷವಾಗಿದೆ.

ಅವರು ಮೀಸಲಾತಿ ಕುರಿತು ಮಾತನಾಡುವಾಗ ಅದನ್ನು ಮೆರಿಟ್ ಕುರಿತ ಮೂರ್ಖತನದ ಡಿಬೇಟಿಗೆ ಇಳಿಸಿಬಿಡುತ್ತಾರೆ. ಚುನಾವಣಾ ರಾಜಕಾರಣದ ಬಗೆಗೆ ಮಾತನಾಡುವಾಗ ರಾಜಕಾರಣಿ ವರ್ಗದ ಅವಕಾಶವಾದಿತನವನ್ನು ಮುಂದು ಮಾಡಿ ಹೇಳುತ್ತಾರೆ. ಕೊನೆಗದು ಈ ಅಥವಾ ಆ ಪಕ್ಷದ ಪರ ವಿರೋಧದ ಮಾತುಗಳಲ್ಲಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ ಜಾತಿ ದೌರ್ಜನ್ಯ ಕುರಿತು ಚರ್ಚೆ ಆಗುವುದೇ ಇಲ್ಲ. ಅದೂ ಹಾಗಾದರೆ ಅದೊಂದು ‘ದುರಾದೃಷ್ಟಕರ ಘಟನೆ’ ಎನಿಸಿಕೊಂಡು, ಅವು ದಲಿತರ ತೀವ್ರ ಪ್ರತಿಭಟನೆಗೆ ಕಾರಣವಾದರೆ ಅವರ ಅತಿ ಪ್ರತಿಕ್ರಿಯೆಯಂತೆ ಕಾಣಲ್ಪಡುತ್ತವೆ.

ಊನಾ ಘಟನೆ ನಂತರ ದಲಿತರ ಪ್ರತಿಭಟನೆಯ ಕಾವು ಹೆಚ್ಚಿದಾಗ ಮಾಧ್ಯಮಗಳು ಮಾಡಿದ್ದೇನೆಂದರೆ ಅದರಿಂದ ದಲಿತರ ಮತಬ್ಯಾಂಕ್ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು. ಅನ್ಯಾಯ ಮತ್ತು ಅಮಾನವೀಯ ಹಿಂಸೆ ಎಲ್ಲ ಹಿಂದೆ ಸರಿದುಬಿಟ್ಟವು. ಒಂದುವೇಳೆ ದೌರ್ಜನ್ಯ ಮತ್ತು ಮಿಸಲಾತಿಯನ್ನು ಸರಿಯಾಗಿ, ಅರ್ಥಪೂರ್ಣವಾಗಿ ಚರ್ಚಿಸಿದಲ್ಲಿ, ಆಳುವ ವರ್ಗದ ಎಲ್ಲ ಒಳಸುಳಿಗಳೂ ಬಯಲಾಗುತ್ತವೆ.

ನಿಜವಾಗಿ, ಜಾತಿಗಾಗಿ ಸಂವಿಧಾನದಲ್ಲಿ ಒಂದು ಸ್ಥಾನ ಮುಡಿಪಾಗಿಡದಿದ್ದಲ್ಲಿ ಬಹುಹಿಂದೆಯೇ ಅದು ಮರಣಶಯ್ಯೆ ತಲುಪಿ ಈ ವೇಳೆಗೆ ಶಕ್ತಿಹೀನವಾಗಿ ಸತ್ತೇ ಹೋಗಿರುತ್ತಿತ್ತು. ಆಳುವವರ್ಗ ಬಹು ಚಾಕಚಕ್ಯತೆಯಿಂದ ಅದನ್ನು ಉಳಿಸಿಕೊಂಡು ಬಂತು. ಅದೂ ದಲಿತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನೆಪ ಹೇಳಿ ಉಳಿಸಿತು. ಸಾಮಾಜಿಕ ನ್ಯಾಯ ಹೇಗೆ ಕೊಡುವುದು? ಮೀಸಲಾತಿ ಕೊಡಿ..

ಮೀಸಲಾತಿ ನೀತಿಯು ಇಂದು ಶುರುವಾದದ್ದಲ್ಲ. ವಸಾಹತುಶಾಹಿ ಆಳ್ವಿಕರು ೧೯೩೫ರಷ್ಟು ಹಿಂದೆಯೇ ರಾಜಕೀಯ ಮೀಸಲಾತಿಯನ್ನು ಕೊಟ್ಟರು. ಅದು ೧೯೪೩ರ ಹೊತ್ತಿಗೆ ಇವತ್ತಿನ ಕೋಟಾ ಸಿಸ್ಟೆಮ್ ಆಗಿ ಜಾರಿಯಾಯಿತು. ಅಸಾಮಾನ್ಯ ಜನರಿಗಾಗಿ ಅಸಾಮಾನ್ಯ ನೀತಿಯಾಗಿ ಜಾರಿಗೆ ಬಂತು. ಆದರೆ ಸ್ವಾತಂತ್ರ್ಯಾ ನಂತರ ಈ ಉದಾತ್ತ ತತ್ವವು ವಾಸ್ತವದ ಉಪಕರಣವಾಗಿ ಬಳಕೆಗೆ ಬಂತು. ಮೀಸಲಾತಿಯನ್ನು ಪರಿಶಿಷ್ಟ ಜಾತಿಗಳಿಗೆ ಹೇಗೋ ಹಾಗೆ ಪರಿಶಿಷ್ಟ ವರ್ಗಗಳಿಗೂ ಮುಂದುವರೆಸಿದರು.

ಈಗಾಗಲೇ ಇರುವ ಷೆಡ್ಯೂಲಿನಲ್ಲಿ ಪರಿಶಿಷ್ಟ ಜಾತಿ ಜೊತೆಗೆ ಪರಿಶಿಷ್ಟ ವರ್ಗದವರನ್ನೂ ಸೇರಿಸಿಕೊಂಡಿದ್ದರೆ ಈಗಿರುವುದಕ್ಕಿಂತ ಉತ್ತಮವಾಗಿ ಅದನ್ನು ಜಾರಿ ಮಾಡಬಹುದಿತ್ತು. ಅದು ಅಸ್ಪೃಶ್ಯರಾದ ಪರಿಶಿಷ್ಟ ಜಾತಿಗಳನ್ನು ಒಂದು ಕಳಂಕದಿಂದ ದೂರ ಮಾಡಿದಂತೆಯೂ ಆಗುತ್ತಿತ್ತು. ಏಕೆಂದರೆ ಪರಿಶಿಷ್ಟ ವರ್ಗಗಳು ಅಸ್ಪೃಶ್ಯರಲ್ಲ. ಆದರೆ ಪ್ರಭುತ್ವವು ಬರಿಯ ಹೆಸರನ್ನಷ್ಟೆ ಪ. ಜಾತಿ ಇದ್ದಲ್ಲಿ ಪ. ವರ್ಗ ಎಂದು ಬದಲಾಯಿಸಿ, ಒಂದು ಬೇರೆಯ ಷೆಡ್ಯೂಲನ್ನೇ ಸೃಷ್ಟಿಸಿ, ಪರಿಶಿಷ್ಟ ಜಾತಿಗಳಿಗೆ ನೀಡಿದ ಎಲ್ಲ ಅವಕಾಶಗಳ ನೀಡಿತು. ಅದರ ಜೊತೆಗೆ ಅಂಥ ಇನ್ನಷ್ಟು ವರ್ಗಗಳಿದ್ದಲ್ಲಿ ಪ್ರಭುತ್ವವು ಅವರನ್ನೂ ಗುರುತಿಸಿ ಸೇರಿಸುವುದೆಂದೂ, ಅವರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವುದೆಂದೂ ಹೇಳಿತು.

ಹೀಗೆ ಅವರು ಒಂದು ಕ್ಯಾನ್ ತುಂಬ ಜಾತಿಹುಳ ತಯಾರು ಮಾಡಿದರು. ಯಾವಾಗ ಲಾಭವೋ ಆಗದರ ಮುಚ್ಚಳ ತೆಗೆಯಬಹುದು ಹಾಗೆ. ಈ ಮುಚ್ಚಳವನ್ನು ನಾವೆಲ್ಲ ಬಲ್ಲಂತೆ ವಿ.ಪಿ.ಸಿಂಗ್ ತೆರೆದು ಸಮಾಜದಲ್ಲಿ ಜಾತೀಯತೆಯನ್ನು ಹರಡಿದರು.

ಹಿಂದುಳಿದ ದೇಶದಲ್ಲಿ ಹಿಂದುಳಿದಿರುವಿಕೆಯೇ ಮೀಸಲಾತಿ ಕೊಡಲು ಕಾರಣವಾಗಬಾರದು. ವಸಾಹತುಶಾಹಿ ಆಳ್ವಿಕರು ದಲಿತರಿಗೆ ಪ್ರಾತಿನಿಧ್ಯ ಮೀಸಲಾತಿಯನ್ನು ಅವರು ‘ಹಿಂದುಳಿದವರೆಂದಷ್ಟೆ’ ಕೊಟ್ಟದ್ದಲ್ಲ. ಅವರ ಸಾಮಾಜಿಕ ಏಣಿಶ್ರೇಣಿಯು ಯಾವ ಅಭಿವೃದ್ಧಿಯೂ ಅವರ ಬಳಿ ಬರಲು ಬಿಡುವುದಿಲ್ಲ ಎಂದು ಮೀಸಲಾತಿ ನೀಡಿದರು. ಮೀಸಲಾತಿ ಎನ್ನುವುದು ಹಿಂದುಳಿದಿರುವಿಕೆಗೆ ಮದ್ದು ಎಂದು ಭಾವಿಸುವುದು ಅತ್ಯಂತ ಮೂರ್ಖತನವಾಗುತ್ತದೆ.

ಪ್ರಜಾಪ್ರಭುತ್ವ ಗಣರಾಜ್ಯ ಎಂದು ತನ್ನನ್ನು ಕರೆದುಕೊಂಡ ದೇಶವು ತನ್ನ ಪ್ರಜೆಗಳಿಗೆ ಸಮಾನ ಅಭಿವೃದ್ಧಿ ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊತ್ತುಕೊಂಡಿರುತ್ತದೆ. ತಾರ್ಕಿಕವಾಗಿ ಮೂಲಭೂತ ಸವಲತ್ತುಗಳಾದ ಆರೋಗ್ಯ, ಶಿಕ್ಷಣ, ಕನಿಷ್ಠ ಜೀವನಾವಶ್ಯಕತೆಗಳ ಲಭ್ಯತೆ ಇರುವಂತೆ ನೋಡಿಕೊಳ್ಳುವುದು ಈ ಜವಾಬ್ದಾರಿ ನಿಭಾಯಿಸುವ ದಾರಿಯಾಗಿದೆ. ಆದರೆ ಈ ಎಲ್ಲದರಲ್ಲೂ ಭಾರತೀಯ ಪ್ರಭುತ್ವವು ದಯನೀಯವಾಗಿ ಸೋತಿದೆ. ಇವೆಲ್ಲವನ್ನು ಖಾಸಗಿಯವರಿಗೆ ಕೊಟ್ಟು ಆಗಲೇ ಶೋಷಿತರಾದವರು ಇನ್ನಷ್ಟು ಸುಲಿಗೆಗೊಳಗಾಗುವಂತೆ ಮಾಡಿದೆ.

ಆಳುವವರ್ಗಗಳ ಮೋಸವನ್ನು ಅರೆಬರೆ ಭೂಸುಧಾರಣೆ ಜಾರಿ, ಹಸಿರು ಕ್ರಾಂತಿ, ಮತ್ತಿತರ ತಥಾಕಥಿತ ಅಭಿವೃದ್ಧಿ ನೀತಿಗಳಲ್ಲಿ ನೋಡಬಹುದು. ಇದು ಗ್ರಾಮೀಣ ಭಾರತದಲ್ಲಿ ಸಿರಿವಂತ ಶೂದ್ರ ರೈತರನ್ನು ಸೃಷ್ಟಿಸಿತು. ಅವರು ಆಳುವವರ ಜೊತೆ ಕೈಜೋಡಿಸಿಯೇ ಉಳಿದರು. ಇವೆಲ್ಲ ನಡೆಯುವಾಗ ದಲಿತರು ರೈತಕೂಲಿಗಳಾಗಿ, ತಮ್ಮ ಜೀವಿತಕ್ಕೆ ಶೂದ್ರ ರೈತರ ಮೇಲೆ ತೀವ್ರ ಅವಲಂಬಿತರಾಗಿ ಉಳಿದರು.

ಜಾತಿಯ ಮುಖ್ಯ ವ್ಯಕ್ತರೂಪ ಚುನಾವಣಾ ರಾಜಕಾರಣ. ಮೂಲಭೂತವಾಗಿ ಇದರ ಒಳಸಂಚು ‘ಫಸ್ಟ್ ಪಾಸ್ಟ್ ದ ಪೋಸ್ಟ್’ವ್ಯವಸ್ಥೆ, ಎಂದರೆ ಅತಿ ಹೆಚ್ಚು ಮತ ಪಡೆದ ಒಬ್ಬ ವ್ಯಕ್ತಿಯನ್ನು ಆರಿಸಿ ಕಳಿಸುವುದು. ಆದರೆ ಈ ವಿಧಾನ ಭಾರತದಂತಹ ಬಹುಮತಗಳ, ಬಹುಭಾಷೆಗಳ, ಬಹುಸಂಸ್ಕೃತಿಯ, ಬಹುಜನಾಂಗೀಯ, ಬಹುಪ್ರಾಂತೀಯ ದೇಶಕ್ಕೆ ಸರಿ ಹೊಂದುವುದಿಲ್ಲ. ಅದಕ್ಕೇ ಅಂಬೇಡ್ಕರ್ ಈ ದೇಶ ಹಲವು ಸಮುದಾಯಗಳ ಮಿಶ್ರಣ ಎಂದು ಕರೆದದ್ದು. ಆದರೆ ಈ ವ್ಯವಸ್ಥೆಯಿಂದ ಲಾಭ ಸಿಗುವುದು ಮಾತ್ರ ಆಳುವವರಿಗೆ, ಕೊನೆಯಿರದ ಆಳುವ ಅವಕಾಶವಾಗಿ.

ಜಗತ್ತಿನ ಬಹುಪಾಲು ಪ್ರಜಾಪ್ರಭುತ್ವ ದೇಶಗಳು ಅಳವಡಿಸಿಕೊಂಡು ಯಶಸ್ವಿ ಪ್ರಜಾಪ್ರಭುತ್ವಗಳೆನಿಸಿಕೊಳಲು ಕಾರಣವಾದ, ಪ್ರಸ್ತುತ ಜಾರಿಯಲ್ಲಿರುವ ಸಂಖ್ಯಾವಾರು ಪ್ರಾತಿನಿಧ್ಯದಿಂದ ಜಾತಿ/ಸಮುದಾಯಗಳ ಕೈವಾಡದಿಂದ ಆದ ಅನ್ಯಾಯ ಕಡಿಮೆ ಮಾಡಲು ಸಾಧ್ಯವಿತ್ತು. ಆದರೆ ಚುನಾವಣಾ ರಾಜಕಾರಣ ಹೆಚ್ಚೆಚ್ಚು ಸ್ಪರ್ಧಾತ್ಮಕವೂ ಅನಿಶ್ಚಿತವೂ ಆಗುತ್ತ ಹೋದಹಾಗೆ, ಪ್ರಾದೇಶಿಕ ಪಕ್ಷಗಳು ೧೯೭೦ರ ಆರಂಭದಿಂದ ಶುರುವಾದ ಹಾಗೆ, ನಾನು ಮೇಲೆ ಹೇಳಿದ್ದಕ್ಕೆ ಸಹಜ ಪ್ರತಿಕ್ರಿಯೆಯೋ ಎಂಬಂತೆ - ಎಂದರೆ ಹೊಸದಾಗಿ ಸೃಷ್ಟಿಯಾದ ಸಿರಿವಂತ ರೈತರಿಂದ ಮತಬ್ಯಾಂಕು ಅತಿಮೌಲ್ಯ ಪಡೆದುಕೊಂಡುಬಿಟ್ಟಿತು. ಜಾತಿ ಕುಲಗಳು ಮತ ಪೂರೈಸುವ ಬ್ಲಾಕುಗಳಾಗಿ ಅವರಿಗೆ ಒದಗಿಬಂದವು. ದಲಿತ ಚಳುವಳಿ ಹಿನ್ನೆಲೆಗೆ ಸರಿದ ಹೊತ್ತಿನಲ್ಲಿ ತುಂಬ ಸಂಖ್ಯೆಯ ದಲಿತರು ಲಭ್ಯರಾದರು. ದಲಿತರ ವೋಟಿನ ಬೆನ್ನುಹತ್ತಿ, ರಾಜಕೀಯ ಪಕ್ಷಗಳ ಆಶೋತ್ತರಗಳಿಗೆ ತಕ್ಕಂತೆ ಅಂಬೇಡ್ಕರರು ವಿರೂಪಗೊಳಿಸಲ್ಪಟ್ಟು ಒಂದು ಪ್ರಮುಖ ಸಂಕೇತವಾಗಿಬಿಟ್ಟರು.

ಇಂತಹ ವಿಷಮಯ ವಾತಾವರಣದಲ್ಲಿ ಅಂಬೇಡ್ಕರರ ಜಾತಿ ವಿನಾಶ ಕನಸು ಜ್ಯೋತಿರ್ವರ್ಷಗಳಷ್ಟು ದೂರ ಇರುವಂತೆ ತೋರುತ್ತಿದೆ. ಅಂಬೇಡ್ಕರರ ಹೆಸರನ್ನು ಮಂತ್ರದಂತೆ ಜಪಿಸುವವರು ಉಳಿದವರಿಗಿಂತ ಹೆಚ್ಚು ಜಾತಿವಾದಿಗಳಾಗಿ ಕಾಣಿಸುತ್ತಿದ್ದಾರೆ. ಜಾತಿಯ ನುಡಿಗಟ್ಟು ಜಾತಿಗಷ್ಟೇ ಸೀಮಿತಗೊಳ್ಳುವುದಿಲ್ಲ. ಇರುವುದಕ್ಕಿಂತ ಉತ್ತಮ ಶ್ರೇಣಿ ಬಯಸುವುದು ಮತ್ತು ಶ್ರೇಣಿ ಇರಬೇಕೆನ್ನುವುದು ಜಾತಿಯ ಪ್ರಮುಖ ಲಕ್ಷಣವಾಗಿದೆ. ಅದು ಅಮೀಬಾದಂತೆ ಸಹಜವಾಗಿ ಸರಳವಾಗಿ ಉಪಜಾತಿಯಾಗಿ, ಇನ್ನಷ್ಟು ಉಪ ಉಪ ಜಾತಿಗಳಾಗಿ ಒಡೆಯುತ್ತ ಹೋಗುತ್ತದೆ. ಇದೇ ಕಾರಣಕ್ಕೆ ನಾನು ಯಾವಾಗಲೂ ಪ್ರತಿಪಾದಿಸುತ್ತ ಬಂದಿದ್ದೇನೆ, ಯಾವುದೇ ಕ್ರಾಂತಿಕಾರಕ ಚಳುವಳಿ ಜಾತಿ ಆಧರಿತವಾಗಿ ನಡೆಯಲು ಸಾಧ್ಯವಿಲ್ಲ. ಅಥವಾ ಅಸ್ಮಿತೆಯ ಪ್ರತಿಪಾದನೆಯ ಹೆಸರಲ್ಲಿಯೂ ಕ್ರಾಂತಿಕಾರಿ ಬದಲಾವಣೆ ಸಾಧ್ಯವಿಲ್ಲ. ದಲಿತರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಅವರಿಗೆ ಒಳ್ಳೆಯದು.



(ಸ್ಕ್ರೋಲ್.ಇನ್‌ನಲ್ಲಿ ಪ್ರಕಟವಾದ ಸಂದರ್ಶನ)