Wednesday 29 June 2016

ಅರ್ಜೆಂಟೀನಾ ನೆಲದಲ್ಲಿ ಚೆ ಹುಡುಕುತ್ತಾ..



ಜೂನ್ ೧೪ ಅರ್ಜೆಂಟೀನಾದ ಕ್ರಾಂತಿಕಾರಿ ಅರ್ನೆಸ್ಟೊ ಚೆ ಗೆವಾರ ಹುಟ್ಟಿದ ದಿನ. ವೈದ್ಯಕೀಯ ಕಲಿತು ಕ್ರಾಂತಿಕಾರಿಯಾದ, ಕಾವ್ಯಪ್ರೇಮಿಯಾಗಿದ್ದ ಚೆ ಬದಲಾವಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದವ. ಅವನ ಬದ್ಧತೆ, ವಿಸ್ತೃತ ಓದು ಮತ್ತು ಸೈದ್ಧಾಂತಿಕ ಸ್ಪಷ್ಟತೆ ಕ್ರಾಂತಿಕಾರಿಗಳಲ್ಲೂ ಅಪರೂಪದ ಗುಣಗಳಾಗಿವೆ. ‘ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ’ ಎಂದ ಚೆಗೆವಾರ ಸಮಾನತೆಗಾಗಿ ತುಡಿವ ಹೋರಾಟಗಾರರ ಕಣ್ಮಣಿ. ಕೇವಲ ೩೯ ವರ್ಷ ಬದುಕಿದ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮೀರಿದ್ದ ಆ ತರುಣನನ್ನು ಜಗತ್ತಿನ ಹಲವು ದೇಶಗಳು ‘ಇವ ನಮ್ಮವ’ ಅಂದುಕೊಂಡಿವೆ. ಭಾಷೆ, ದೇಶ ಗಡಿ ದಾಟಿ ಅವನು ಚಿರಂತನನಾಗಿದ್ದಾನೆ. ಅವ ಕ್ಯೂಬಾದಲ್ಲಿ ಮನೆ ಮಾತು. ಆ ದೇಶದ ಜನಪದ ಹೀರೋ. ನಾವೂ ಅಷ್ಟೇ, ಚೆಗೆವಾರನನ್ನು ನಮ್ಮವನನ್ನಾಗಿಸಿಕೊಂಡುಬಿಟ್ಟಿದ್ದೇವೆ.

ಇಂಥ ಕ್ರಾಂತಿಕಾರಿಯ ನೆಲದಲ್ಲಿ ಇವತ್ತು ಅವನ, ಅವನು ಪ್ರತಿನಿಧಿಸುತ್ತಿದ್ದ ಕಮ್ಯುನಿಸಮ್ಮಿನ ಪ್ರಭಾವ ಎಂಥದು? ಅವರು ಅವನನ್ನೂ, ಅವನಂಥ ಇತರ ದೇಶದ ಕ್ರಾಂತಿಕಾರಿಗಳನ್ನೂ ಹೇಗೆ ಅರಗಿಸಿಕೊಂಡಿದ್ದಾರೆ ಎಂಬ ಕುತೂಹಲವಿತ್ತು. ಮೂರು ತಿಂಗಳ ಹಿಂದೆ ದಕ್ಷಿಣ ಅಮೆರಿಕಾಗೆ ಪ್ರವಾಸ ಹೋಗಿ ಬರಲು ಅದೂ ಒಂದು ಕಾರಣವಾಗಿತ್ತು. ಚೆ ಹುಟ್ಟಿದ ನೆಲ ನೋಡಬೇಕೆಂದು, ಅವನ ನೆಲದಲ್ಲಿ ಅವನ ಕಾಣಬೇಕೆಂದು ಹೋಗಿಬಂದದ್ದು ವಿಶಿಷ್ಟ ಅನುಭವ.

ಅರ್ಜೆಂಟೀನಾಗೆ ಹೋಗಬೇಕೆಂದಾಗ ಕೇಳಿಬಂದ ಮೊದಲ ಪ್ರಶ್ನೆ, ‘ನಿಮ್ಮ ಬಳಿ ಉತ್ತರ ಅಮೆರಿಕದ ವೀಸಾ ಇದೆಯೆ?’. ಇಲ್ಲ, ನಮ್ಮ ಬಳಿ ಇರಲಿಲ್ಲ. ‘ಉತ್ತರ ಅಮೆರಿಕದಲ್ಲಿ ಬಂಧುಗಳಿದ್ದರೆ ಅಲ್ಲಿಂದ ಹೋಗಬಹುದು. ಇಲ್ಲವಾದರೆ ಯಾರ‍್ಯಾರು ಹೋಗುತ್ತಿರುವಿರೋ ಅವರೆಲ್ಲ ಒಟ್ಟಿಗೆ ದೆಹಲಿಗೆ ಹೋಗಿ ವೈಯಕ್ತಿಕ ಸಂದರ್ಶನ ಎದುರಿಸಿ ವೀಸಾ ಪಡೆಯಬೇಕು’ ಎಂಬ ಸೂಚನೆ ಟ್ರಾವೆಲ್ ಏಜೆಂಟ್ ಕಡೆಯಿಂದ ಬಂತು. ಯಾವ ಅಮೆರಿಕವನ್ನು ಚೆ ಎದುರು ಹಾಕಿಕೊಂಡನೋ, ಯಾವ ಅಮೆರಿಕದ ಹುನ್ನಾರದ ಫಲವಾಗಿ ಚೆ ಹತ್ಯೆಯಾಯಿತೊ, ಯಾವ ಅಮೆರಿಕ ಚೆ ನಂಬಿದ ಸಮಾಜವಾದವನ್ನು ಬುಡಮೇಲು ಮಾಡುವ ಜಾಗತೀಕರಣವನ್ನು ಪ್ರತಿಪಾದಿಸುತ್ತಿದೆಯೊ - ಅಂಥ ಅಮೆರಿಕದ ವೀಸಾ ಇದ್ದರೆ ಚೆ ದೇಶಕ್ಕೆ ವೀಸಾವೇ ಬೇಡ!

ಕಾಲಚಕ್ರ ಹೀಗೆ, ಇಷ್ಟು ಉಲ್ಟಾ ತಿರುಗಬಹುದೆ?


ಜನವರಿ ಮೊದಲ ವಾರ. ಒಂದು ಬುಧವಾರ ಮಧ್ಯಾಹ್ನ ಮೂರಕ್ಕೆ ನಮ್ಮ ದಾಖಲೆ ಪರಿಶೀಲಿಸಿದ ಅವರು ದೆಹಲಿಯಿಂದ ಫೋನ್ ಕರೆ ಮಾಡಿ ಸಂದರ್ಶನಕ್ಕೆ ಬನ್ನಿ ಎಂದರು. ವೀಸಾ ಉಚಿತ, ಆದರೆ ಸಂದರ್ಶನಕ್ಕೆ ಖುದ್ದು ಹೋಗಿಬರಲೇಬೇಕು.  ಯಾವತ್ತು ಬರುವುದು ಎಂದರೆ ನಾಳೆ ಅಥವಾ ನಾಳಿದ್ದು ಬನ್ನಿ ಎಂಬ ಉತ್ತರ ಸಿಕ್ಕಿತು. ಅಯ್ಯೋ, ಅದಾಗಲೇ ಮಧ್ಯಾಹ್ನ ಮೂರು ಗಂಟೆ ಆಗಿದೆ. ಕರ್ನಾಟಕದ ಪಶ್ಚಿಮ ಕರಾವಳಿ ಹಳ್ಳಿಯಿಂದ ಇಬ್ಬರು, ಬೆಳಗಾವಿಯಿಂದ ಇಬ್ಬರು ಕೂಡಲೇ ಹೊರಟು ನಾಳೆ ಬೆಳಿಗ್ಗೆ ೧೦.೩೦ರ ಒಳಗೆ ದೆಹಲಿ ತಲುಪುವುದು ಹೇಗೆ? ನಮ್ಮ ಹಾಗೂ ಮಕ್ಕಳ ಪರೀಕ್ಷೆ ಷೆಡ್ಯೂಲು ಎಂಬಿತ್ಯಾದಿ ಅನಾನುಕೂಲಗಳ ಹೇಳಿಕೊಂಡು ಅಪಾಯಿಂಟ್‌ಮೆಂಟ್ ನಾಳೆಗೆ ಫಿಕ್ಸ್ ಮಾಡಿಬಿಡಿ, ಬರುವುದು ಐದ್ಹತ್ತು ನಿಮಿಷ ಹಿಂದೆ ಮುಂದೆ ಆದರೂ ಖಂಡಿತಾ ಬರುತ್ತೇವೆ ಎಂದೆವು. ಸಂದರ್ಶನದ ವೇಳೆ ೧೦.೩೦ರಿಂದ ೧೧.೩೦. ಒಂದು ನಿಮಿಷ ತಡವಾದರೂ ಸಂದರ್ಶನ ಮರುದಿನಕ್ಕೆ ಮುಂದೆ ಹೋಗುತ್ತದೆ. ಬೆಳಿಗ್ಗೆ ಸರಿಯಾಗಿ ೧೦.೩೦ಕ್ಕೆ ಅಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟು ಜನರ ಸಂದರ್ಶನ ಮಾತ್ರ. ಅದೂ ಒಂದು ತಾಸು ಮಾತ್ರ ಎಂದರು. ಎಲ ಎಲಾ, ನಮ್ಮ ಅರಾಜಕ ಚೆ ಇಷ್ಟು ಶಿಸ್ತುಗಾರ ದೇಶದವನೆ?

ಏನು ಮಾಡುವುದು? ಧಡಧಡ ಹೊರಟೆವು. ರಾತ್ರೋರಾತ್ರಿ ಪಯಣಿಸಿ, ಬೆಳ್ಳಂಬೆಳಗ್ಗೆ ಬೆಂಗಳೂರು ಮುಟ್ಟಿ, ಮುಖತೊಳೆಯದೆ ಏರ್‌ಪೋರ್ಟ್ ತಲುಪಿ, ಅಲ್ಲಿಂದ ನವದೆಹಲಿ ತಲುಪಿ, ವಿಮಾನ ನಿಲ್ದಾಣದಿಂದ ಓಡೋಡಿ ಹೋಗುವ ಹೊತ್ತಿಗೆ ಸಮಯ ೧೨.೩೦ ಆಗೇಬಿಟ್ಟಿತು! ಅವತ್ತು ಗುರುವಾರ, ವೀಸಾ ಆಗದು. ಮರುದಿನ ಶುಕ್ರವಾರ ಬೆಳಿಗ್ಗೆ ೧೦.೩೦ರ ಒಳಗೇ ಹೋಗಿ, ಕಾದು ಪಡೆಯಲೇಬೇಕು. ಇಲ್ಲದಿದ್ದರೆ ಮತ್ತೆರೆಡು ದಿನ ಕಾಯಬೇಕು, ಏಕೆಂದರೆ ಅವರಿಗೆ ವಾರದಲ್ಲಿ ಐದೇ ದಿನ ಇರುವುದು!

ಈ ಧಾವಂತದಲ್ಲೇ ಒಂದು ದಿನ ದೆಹಲಿಯಲ್ಲಿ ತಂಗಬೇಕಾದ ಅನಿವಾರ್ಯತೆಗೆ ಮತ್ತೊಮ್ಮೆ ಮಿನಾರು-ಕೋಟೆ-ಚೌಕ-ಭವನ-ಸ್ಮಾರಕಗಳನ್ನೆಲ್ಲ ಸುತ್ತಿ ಬಂದದ್ದಾಯಿತು. ನಮ್ಮಲ್ಲೆ ನೋಡುವುದು ಎಷ್ಟೆಲ್ಲ ಬಾಕಿಯಿದೆ, ವೀಸಾಗೇ ಇಷ್ಟು ಕಷ್ಟಪಟ್ಟು ಅಷ್ಟು ದೂರ ಹೋಗಬೇಕೆ ಎಂಬ ಭಾವವೂ ಸುಳಿದುಹೋಯಿತು.

ಮರುದಿನ ಬೆಳಿಗ್ಗೆ ದೆಹಲಿಯ ಚಳಿ ಲೆಕ್ಕಿಸದೆ ಮುಂಚೆಯೇ ಹೋಗಿ ಕಾನ್ಸುಲೇಟ್ ಎದುರು ನಿಂತೆವು. ಸಂದರ್ಶನ ೧೦.೩೦ಕ್ಕೆ ಶುರು. ಮೊದಲೇ ಹೋಗಿದ್ದರೇನು, ಗೇಟಿನ ಹೊರಗೇ ಕಾಯಿರಿ ಎಂದರು. ಚಳಿಯ ಬೆಳಿಗ್ಗೆ ಗೋಡೆಯಾಚೆ ಕಾಯುತ್ತಾ ನಿಂತೆವು. ನಮ್ಮಂತೆಯೇ ಹಿಂದಿನ ದಿನ ಬಂದು ಹೋದ ಬೇರೆಯವರೂ ಇದ್ದರು. ಅಲ್ಲಿ ಗೇಟ್ ಕೀಪರನಾಗಿದ್ದ ಭಾರತೀಯ ವ್ಯಕ್ತಿ ಅರ್ಜೆಂಟೀನಾದವರ ಶಿಸ್ತು, ಸಮಯಪಾಲನೆಗಳೆಲ್ಲ ತನ್ನ ಮೈಮೇಲೆ ಬಂದವರಂತೆ ಆಡುತ್ತಿದ್ದ. ಚಣಕ್ಕೊಮ್ಮೆ ವಾಚು ನೋಡಿಕೊಳ್ಳುತ್ತ ಸರಿಯಾಗಿ ೧೦.೨೯ಕ್ಕೆ ಲಾಗ್ ಬುಕ್ ತೆರೆದ. ೧೦.೩೦ಕ್ಕೆ ಬರೆಯಲು ಹಚ್ಚಿದ. ೧೦.೩೧ಕ್ಕೆ ಒಳಬಿಟ್ಟ. ಅವರು ಎಷ್ಟು ಸ್ಟ್ರಿಕ್ಟ್ ಎಂಬ ಬಗೆಗೆ ಹಲವಾರು ಕತೆಗಳ ಹೇಳಿದ. ಒಂದು ನಿಮಿಷ ಮೊದಲು ಅಥವಾ ತಡೆದು ಬಿಟ್ಟರೂ ಅವನ ಕೆಲಸ ಹೋಗುವುದಂತೆ!

ಕೊನೆಗಂತೂ ನಮ್ಮ ಸರದಿ ಬಂತು. ನಂನಮ್ಮ ಫೈಲುಗಳನ್ನಾಗಲೇ ಇಟ್ಟುಕೊಂಡು ಕೂತಿರಬಹುದಾದ ರಾಯಭಾರಿ ಏನೇನು ಪ್ರಶ್ನೆ ಕೇಳುವರೋ ಎಂಬ ಆತಂಕದಲ್ಲಿ ವಿಧೇಯ ವಿದ್ಯಾರ್ಥಿಗಳಂತೆ ಒಳಹೋದೆವು.

ಅರೆ, ಈಕೆ! ನಾವಲ್ಲಿ ಲಾಂಜಿನಲ್ಲಿ ಕುಳಿತು ಕಾಯುವಾಗ ಒಂದಡಿ ಎತ್ತರದ ಹೈಹೀಲ್ಸ್ ಚಪ್ಪಲಿ ಹಾಕಿದ ತರುಣಿ ಸ್ಕರ್ಟ್ ಕುಣಿಸುತ್ತ ಹತ್ತಾರು ಸಲ ಆಚೀಚೆ ಓಡಾಡಿದ್ದಳು. ಗಾಳಿ ಬಂದರೆ ಹಾರಿಹೋಗುವಷ್ಟು ಕೃಶವಾಗಿದ್ದ, ಹಾಲುಬಿಳಿ ಬಣ್ಣದ, ಪ್ಲಾಸ್ಟಿಕ್ ಹೂ ಮುಡಿದ ತರುಣಿ. ಅರ್ಜೆಂಟೀನಾ ರಾಯಭಾರ ಅಧಿಕಾರಿಯೇ ಈಕೆ?!

ನಾವಿಬ್ಬರು ಆಕೆಯೆದುರು ಕುಳಿತೆವು. ನಮ್ಮ ಫೈಲ್ ನೋಡಿದಳು. ಅಬ್ಬಬ್ಬಾ ಎಂದರೂ ಹತ್ತಿಪ್ಪತ್ತು ಗ್ರಾಂ ಮಾಂಸವಿರದ ಮೊಗದಲ್ಲಿ ನಗು ತುಂಬಿ ಹರಿಯಿತು. ಕುತ್ತಿಗೆ ವಾರೆ ಮಾಡಿ, ಹುಬ್ಬು ಎತ್ತರಿಸಿ, ಕಣ್ಣರಳಿಸಿ, ಕೈಗಳೆರಡನೂ ಅಗಲಿಸಿ ಅವಳ ದೇಶಕ್ಕೆ ನಾವು ಹೋಗುತ್ತಿರುವುದಕ್ಕೆ ಸ್ವಾಗತಿಸುತ್ತ ವಂದನೆ, ಅಭಿನಂದನೆ ಎರಡನ್ನೂ ತಿಳಿಸಿದಳು.

‘ಯಾಕೆ ಹೋಗುತ್ತಿದ್ದೀರಿ ದಕ್ಷಿಣ ಅಮೆರಿಕಾಗೆ? ಅರ್ಜೆಂಟೀನಾಗೆ? ಯಾರು ಸ್ಪಾನ್ಸರ್ ಮಾಡುತ್ತಿರುವವರು?’

‘ಸ್ಪಾನ್ಸರ್?! ದಕ್ಷಿಣ ಅಮೆರಿಕಕ್ಕೆ ಹೋಗುವ ಯೋಜನೆಗೆ ಎಷ್ಟು ದಿನದಿಂದ ಕಾಸು ಕೂಡಿಡುತ್ತಿದ್ದೇವೆ ಗೊತ್ತ? ಡ್ರಗ್ ಕಂಪನಿಗಳು ಡಾಕ್ಟರುಗಳನ್ನು ಪುಕ್ಕಟೆ ಕಳಿಸುವೆವೆಂಬ ಆಮಿಷ ಒಡ್ಡುವುದು ನಿಜ. ಆದರೆ ನಾವವರನ್ನೆಲ್ಲ ಎಂದೋ ದೂರ ಓಡಿಸಿದ್ದೇವೆ..’ ಎಂದು ಮನದಲ್ಲೇ ಅಂದುಕೊಂಡೆವು.

ಹೋಗಲು ನಮಗಿದ್ದ ಕಾರಣ ಹೇಳಿದೆವು. ಅವು ಮೂರೇ: ಚೆ, ನೆರೂಡ ಮತ್ತು ಮಚುಪಿಚು. ಚೆ ಹೆಸರು ಕೇಳಿ ಅವಳ ಪುಟ್ಟ ಕಣ್ಣು ಅರಳಿದರೂ ಅವನ ಬಗೆಗೆ ತಾನು ಹೆಚ್ಚು ತಿಳಿದಿಲ್ಲ ಎಂದಳು! ಅವನ ಪುಸ್ತಕವನ್ನು ನಾನು ನನ್ನ ಭಾಷೆಗೆ ಅನುವಾದಿಸಿರುವೆ ಎಂದು ಮೋಟಾರ್ ಸೈಕಲ್ ಡೈರೀಸ್ ಪುಸ್ತಕ ತೋರಿಸಿದಾಗ ಅವಳಿಗೆ ಪರಮಾಶ್ಚರ್ಯವಾಯಿತು. ಆಪ್ತವಾಗಿ ಮಾತನಾಡುತ್ತ ತನ್ನ ದೇಶದಲ್ಲಿ ಇನ್ನೂ ಒಂದು ದಿನ ಹೆಚ್ಚು ಕಳೆಯಿರಿ; ಬ್ಯೂನಸ್ ಐರಿಸ್ ನಗರದ ಬೀದಿಗಳಲ್ಲಿ ಅಡ್ಡಾಡಿರಿ; ಅಲ್ಲಿನ ನೈಟ್‌ಲೈಫ್ ಅದ್ಭುತ, ಒಳ್ಳೆಯ ಚರ್ಮದ ಸಾಮಾನು ಸಿಗುತ್ತವೆ ಎಂದಳು. ಇಗ್ವಾಸು ಜಲಪಾತದಲ್ಲಿ ನಿಮ್ಮ ಮೂರು ದಿನ ಹೋಗುತ್ತದೆ. ಅಲ್ಲಿ ಅಷ್ಟೇಕೆ ಸಮಯ? ಅದಕ್ಕಿಂತ ಬ್ಯೂನಸ್ ಐರಿಸ್‌ನಲ್ಲಿಯೇ ಇನ್ನೊಂದು ದಿನ ಹೆಚ್ಚು ಕಳೆಯಲು ಏರ್ಪಾಟು ಮಾಡಿಕೊಳ್ಳಿ ಎಂದಳು. ತನ್ನ ದೇಶದಲ್ಲಿ ಅಲ್ಲಿಯ ಕರೆನ್ಸಿ ಮಾತ್ರ ನಡೆಯುವುದು, ಹಾಗಾಗಿ ಒಳ್ಳೆಯ ದರಕ್ಕೆ ಏರ್‌ಪೋರ್ಟಿನಲ್ಲೇ ಎಕ್ಸ್‌ಚೇಂಜ್ ಮಾಡಿಕೊಂಡುಬಿಡಿ ಎಂದಳು.

ನಾವು ಹ್ಞಾಂ ಹ್ಞೂಂ ಎನ್ನುವುದರಲ್ಲಿ ನಮ್ಮ ಸಂದರ್ಶನ ಮುಗಿಯಿತು. ಈ ಸಂದರ್ಶನ ಯಾಕೆ ಆನ್‌ಲೈನ್ ಮಾಡಬಾರದು ಎಂಬ ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೇಳೇಬಿಟ್ಟೆವು. ‘ನಾವು ವೀಸಾ ಉಚಿತವಾಗಿ ನೀಡುತ್ತೇವೆ. ಆದರೆ ನಮ್ಮ ದೇಶಕ್ಕೆ ಹೋಗಿ ಬರುವವರೊಂದಿಗೆ ಮುಖತಃ ಪರಿಚಯ-ಬಾಂಧವ್ಯ ಹೊಂದಬಯಸುತ್ತೇವೆ. ಅದಕ್ಕೇ ಸಂದರ್ಶನ. ಈಗ ನೋಡಿ: ನೌ ಐ ನೋ ಎ ವಂಡರ್‌ಫುಲ್ ಫ್ಯಾಮಿಲಿ ಇನ್ ಇಂಡಿಯಾ. ಒಳ್ಳೆಯದಲ್ಲವೆ?’ ಎಂದು ಹುಬ್ಬು ಹಾರಿಸಿದಳು.

ನಂತರ ಮಕ್ಕಳ ಸಂದರ್ಶನ ಪ್ರತ್ಯೇಕವಾಗಿತ್ತು. ಅವರಿಗೂ ಅದೇ ಸಲಹೆ. ಅವರು ವೈದ್ಯ ವಿದ್ಯಾರ್ಥಿಗಳೆಂದು ತಿಳಿದು ಮತ್ತಷ್ಟು ಆಸಕ್ತಳಾಗಿ ಎಲ್ಲೆಲ್ಲಿ ಏನೇನು ನೋಡಬೇಕು, ಯಾವ ವಸ್ತು ಎಲ್ಲಿ ಖರೀದಿಸಬೇಕು ಎಂಬ ಯಾದಿಯನ್ನೇ ಬರೆದು ಕಳಿಸಿದಳು.

ಬೆಣ್ಣೆಯಿಂದ ಕೂದಲು ತೆಗೆದಿಟ್ಟಷ್ಟು ಸುಲಭವಾಗಿ ಉಚಿತ ವೀಸಾ ಸಿಕ್ಕಿತು. ಹತ್ತೇಹತ್ತು ನಿಮಿಷದ ಕೆಲಸ. ಇಷ್ಟಕ್ಕೆ ಮೂರು ದಿನಗಳ ತತ್‌ಕ್ಷಣ ರಜೆ, ಅವಸರದ ಏರ್ ಟಿಕೆಟ್, ಧಾವಂತ..

ವಿಚಿತ್ರ, ಆದರೆ ವಾಸ್ತವ. ಏಕೆಂದರೆ ಅದು ಅರ್ಜೆಂಟೀನಾ!


ನನ್ನ ಮಟ್ಟಿಗೆ ಅರ್ಜೆಂಟೀನಾ ಎಂದರೆ ಚೆ ಹೊರತಾದ ಕಲ್ಪನೆ ಗರಿಗೆದರುವುದೇ ಇಲ್ಲ. ಅಲ್ಲಿ ಅವನ ನೆನಪು ಇವತ್ತು ಹೇಗಿದೆಯೋ ಎಂಬ ಕುತೂಹಲ ಬಹಳವಿತ್ತು. ಭಾರತದಲ್ಲಿ ಗಾಂಧಿ, ನೆಹರು, ಭಗತ್, ಅಂಬೇಡ್ಕರ್ ಇದ್ದಂತೆ ಅಲ್ಲಿಯೂ ಅವನ ಹೆಸರಿನ ಸರ್ಕಲ್ಲು, ಸ್ಕ್ವೇರು, ಅಂಗಡಿ, ಥಿಯೇಟರು, ಇನ್ನೂ ಏನೇನೋ ಇರಬಹುದು. ಎಲ್ಲರ ತೋಳು, ಟೀ ಶರ್ಟ್, ಚಹಾ ಕಪ್ಪಿನ ಮೇಲೆ ಚೆ ಇರಬಹುದು.. ಎಂದೆಲ್ಲ ಊಹಿಸಿದ್ದೆ.

ಬ್ಯೂನಸ್ ಐರಿಸ್ ತಿರುಗಲು ಹೊರಟಾಗ ಸುಂದರ ಕಟ್ಟಡಗಳು, ಸ್ಕ್ವೇರ್‌ಗಳು, ಮೆಮೊರಿಯಲ್‌ಗಳು ಹಾದು ಹೋದವು. ಅರ್ಜೆಂಟೀನಾವನ್ನು ಸ್ವಾತಂತ್ರ್ಯಗೊಳಿಸಿದ ಸ್ಯಾನ್ ಮಾರ್ಟಿನ್, ರಾಷ್ಟ್ರಾಧ್ಯಕ್ಷರು-ನಗರ ನಿರ್ಮಾತೃಗಳು-ಸೇನಾಧಿಕಾರಿಗಳು ಮತ್ತಿತರರ ನೆನಪಿನ ಚೌಕ, ಪ್ರತಿಮೆಗಳಿದ್ದವು. ಎಲ್ಲಾದರೂ ಕಂಡಾನೇ ಚೆಗೆವಾರ ಎನ್ನುವುದು ನನ್ನ ನಿರೀಕ್ಷೆ. ಆದರೆ ಒಂದಿಡೀ ದಿನ ಬ್ಯೂನಸ್ ಐರಿಸ್ ಸುತ್ತಿದರೂ ಅವನ ಸುಳಿವಿಲ್ಲ! ಎಲ್ಲ ದೇಶಗಳೂ ತಮ್ಮ ಖ್ಯಾತನಾಮರನ್ನು ಒಂದೇರೀತಿ ನಡೆಸಿಕೊಳ್ಳಲಾರರು ಅಂದುಕೊಂಡರೂ ಈಗ ಅಮೆರಿಕದ ಹೆಗಲ ಮೇಲೆ ಕೈಯಿಕ್ಕಿಕೊಂಡಿರುವ ಅರ್ಜೆಂಟೀನಾ ತನ್ನ ಅಮೆರಿಕ ವಿರೋಧಿ ಮಗನನ್ನು ಮರೆಯಬಯಸುತ್ತಿದೆಯೆ? ಗಡಿ ಮರೆತು ವಿಶ್ವವೇ ನನ್ನದೆಂದವನನ್ನು ಅವನದೇ ದೇಶ ಮರೆತೇಬಿಟ್ಟಿತೆ? ಎಂಬ ಅನುಮಾನ ಕಾಡಿತು.

ಇಡೀ ದಕ್ಷಿಣ ಅಮೆರಿಕದ ಇತಿಹಾಸ, ರಾಷ್ಟ್ರಗಳ ಉದಯ-ಸ್ವತಂತ್ರ ಮುಂತಾದ ವಿಷಯಗಳ ಬಗೆಗೆ ಉರು ಹೊಡೆದುಬಂದದ್ದನ್ನು ಗೈಡ್ ಒಪ್ಪಿಸುತ್ತಿದ್ದಳು. ವಿಶ್ವದ ಅತಿದೊಡ್ಡ ಫುಟ್ಪಾತ್ ಮಾರ್ಕೆಟ್ ಎನಿಸಿಕೊಂಡಿರುವ ಫ್ಲೋರಿಡಾ ಸ್ಟ್ರೀಟ್‌ನಲ್ಲಿ ಪಾದಗಳು ಬಿಸಿಯೇರುತ್ತಿದ್ದವು. ರಾಯಭಾರ ಕಚೇರಿಯ ಕೃಶಾಂಗಿಯ ಮಾತಿಗೆ ವಿರುದ್ಧವಾಗಿ ವ್ಯಾಪಾರಿಗಳೆಲ್ಲರೂ ಅಮೆರಿಕನ್ ಡಾಲರ್ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ‘ಒಳ್ಳೆಯ ರೇಟು ಕೊಡುತ್ತೇವೆ, ಎಕ್ಸ್‌ಚೇಂಜ್ ಬೇಕಾ?’ ಎಂದು ಹೆಜ್ಜೆಹೆಜ್ಜೆಗೂ ಏಜೆಂಟುಗಳು ದುಂಬಾಲು ಬಿದ್ದು ಹಿಂಬಾಲಿಸುತ್ತಿದ್ದರು. ಚರ್ಮದ ವಸ್ತುಗಳ ಬೃಹತ್ ಮಳಿಗೆಗಳ ಸಾಲೇ ಇದ್ದ ಒಂದು ಕೂಡುರಸ್ತೆಯಲ್ಲಿ ಕೇಸರಿ ವಸ್ತ್ರ ತೊಟ್ಟ ಒಂದಷ್ಟು ಜನ ಸಾಲಾಗಿ ಪೋಸ್ಟರ್ ಹಿಡಿದು ನಿಂತಿದ್ದರು. ಸ್ಪ್ಯಾನಿಶ್‌ನ ಆ ಪೋಸ್ಟರಿನಲ್ಲಿ ಪ್ರಾಣಿಹಿಂಸೆಯಿಂದ ತಯಾರಾಗುವ ಚರ್ಮದ ವಸ್ತುಗಳನ್ನು ಕೊಳ್ಳಬಾರದೆಂಬ ಮನವಿ ಇತ್ತು!

ಹೀಗೆ ಬ್ಯೂನಸ್ ಐರಿಸ್ ನಗರವನ್ನು ಉಸಿರಲ್ಲಿ ತುಂಬಿಕೊಳ್ಳುತ್ತ ನಡೆಯುತ್ತಿರುವಾಗ ಒಂದು ಸೊವೆನಿರ್ ಶಾಪಿನ ಪೋಸ್ಟ್ ಕಾರ್ಡಿನಲ್ಲಿ ಚೆಗೆವಾರನ ಮುಖ ಕಾಣಿಸಿಯೇ ಬಿಟ್ಟಿತು. ಗೈಡ್‌ಗೆ ಅದನ್ನು ತೋರಿಸಿ ಚೆಗೆವಾರ ಎಂಬ ದೇಶಬಾಂಧವನ ಕುರಿತ ಅವಳ ಅಭಿಪ್ರಾಯ ಏನೆಂದು ಕೇಳಿದೆ. ಅವನ ಬಗೆಗೆ ತನಗೆ ಹೆಚ್ಚು ತಿಳಿದಿಲ್ಲ ಎಂದಳು. ಅವ ಮೋಟಾರ್ ಸೈಕಲ್ ಡೈರೀಸ್ ಎಂಬ ಪುಸ್ತಕ ಬರೆದಿರುವನೆಂದು, ಅದು ಸಿನಿಮಾ ಆಗಿದೆಯೆಂದು ಅವಳಿಗೆ ಗೊತ್ತಿರಲಿಲ್ಲ. ಚೆ ಎಂದರೆ ಒಂದು ಕಾಲದಲ್ಲಿ ತನ್ನ ದೇಶದಲ್ಲಿ ಬದುಕಿದ ಒಬ್ಬ, ಇವರು ಅವನ ಭಯಂಕರ ಫ್ಯಾನುಗಳು ಎನ್ನುವಂತೆ ಕೆಲ ವಿಷಯ ಹೇಳಿದಳು. ಚೆ ಮಗ ಕ್ಯಾಮಿಲೊ ಗೆವಾರಾ ಮತ್ತು ಕುಟುಂಬ ಈಗ ಕ್ಯೂಬಾದಲ್ಲಿದ್ದಾರೆ. ಕಾರ್ಡೋಬಾದ ಅಲ್ಟಾಗ್ರಾಸಿಯಾದ ಅವನ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಅಲ್ಲಿ ಅವನ ಬಾಲ್ಯ ಕಾಲದ ಪತ್ರ, ಫೊಟೋ, ವಸ್ತುಗಳಿವೆ ಎಂದು ಅಸ್ಪಷ್ಟವಾಗಿ ತಿಳಿಸಿದಳು. ಎಲ್ಲೊ ಕೆಲ ಪ್ರವಾಸಿಗಳಷ್ಟೇ ಕಾರ್ಡೋಬಾಗೆ ಹೋಗುತ್ತಾರೆಂದು ಹೇಳುತ್ತ, ‘ಐ ನೋ ಹಿ ವಾಸ್ ಎ ರೆವಲ್ಯೂಷನರಿ ಅಂಡ್ ಗ್ರೇಟ್, ಬಟ್ ದಟ್ಸ್ ಇಟ್. ಇಟ್ ವಾಸ್ ಅಟ್ ದಟ್ ಟೈಂ. ಇಟ್ ವಾಸ್ ಫಾರ್ ಹಿಸ್ ಟೈಂ. ಈ ಹ್ಯಾವ್ ನೋ ಮೋರ್ ಟು ಸೆ ಅಬೌಟ್ ಹಿಮ್ ನೌ’ ಎಂದುಬಿಟ್ಟಳು.

ಅವಳೆಂದಂತೆ ಚೆ ಅಲ್ಲೀಗ ದೂರದ ನೆನಪು..



ಅವಳು ಹೀಗೆ ಹೇಳುತ್ತಿರುವಾಗಲೇ ಮದರ‍್ಸ್ ಸ್ಕ್ವೇರ್ - ಪ್ಲಾಜಾ ಡಿ ಮೇಯೊ ಬಂತು. ಅರ್ಜೆಂಟೀನಾದಲ್ಲಿ ಮಿಲಿಟರಿ ಆಡಳಿತವಿದ್ದಾಗ ಆಳುವವರಿಂದ ಅಪಹರಿಸಲ್ಪಟ್ಟು ಹತ್ಯೆಯಾದ, ‘ನಾಪತ್ತೆ’ಯಾದ ೩೦ ಸಾವಿರ ತರುಣ-ತರುಣಿಯರ ಅಮ್ಮಂದಿರು ಪ್ರತಿ ಗುರುವಾರ ಅಲ್ಲಿ ಸೇರಿ ತಮ್ಮ ಮಕ್ಕಳಿಗೇನಾಯಿತೆಂದು ಪ್ರಶ್ನಿಸಿದ ಜಾಗ ಅದು. ಇವತ್ತಿಗೂ ಆ ಸ್ಥಳ ವಿಶ್ವದ ಎಲ್ಲ ಕಡೆ ನಡೆಯುವ ಮಾನವ ಹಕ್ಕು ದಮನವನ್ನು ವಿರೋಧಿಸುವ ಪ್ರತಿಭಟನಾ ಸ್ಥಳವಾಗಿದೆ. ಅಲ್ಲಿಳಿದ ಕೂಡಲೇ ಚೆ ಇರುವ ಒಂದು ದೊಡ್ಡ ಪೋಸ್ಟರ್ ಕಾಣಿಸಿತು. ಅದು ಟುಪಾಕ್ ಅಮಾರು ಸಂಘಟನೆಯ ಬ್ಯಾನರ್. ಅವರಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲೇ ಆಚೆ ಕ್ಯಾಮರಾಮನ್ ಜೊತೆ ಒಂದಷ್ಟು ಜನ ಮಾತಾಡುತ್ತಿದ್ದರು. ಕರಪತ್ರ, ಬ್ಯಾನರುಗಳಿದ್ದವು. ಪ್ರತಿಭಟನಾ ನಿರತರ ಮುಖ್ಯ ಬೇಡಿಕೆ ತಮ್ಮ ಸಂಘಟನೆಯ ಮಹಿಳೆ ಮಿಲಾಗ್ರೊ ಸಾಲಾ ಅವರನ್ನು ಬಿಡುಗಡೆ ಮಾಡಬೇಕೆನ್ನುವುದು.

ಯಾರು ಮಿಲಾಗ್ರೊ ಸಾಲಾ?

ಆಕೆ ಅರ್ಜೆಂಟೀನಾದ ಫೂಲನ್ ದೇವಿ. ಟುಪಾಕ್ ಅಮಾರು ಸಂಘಟನೆಯ ಮುಂದಾಳು. ಟುಪಾಕ್ ಅಮಾರು ಎನ್ನುವವ ಬಂಡುಕೋರ ಇಂಕಾ ನಾಯಕ. ಅವನು, ಚೆಗೆವಾರ ಹಾಗೂ ಅರ್ಜೆಂಟೀನಾ ರಾಜಕಾರಣಿ ಇವಾ ಪೆರೋನ್ ಟುಪಾಕ್ ಅಮಾರು ನೇಬರ್‌ಹುಡ್ ಆರ್ಗನೈಸೇಷನ್‌ನ ಆದರ್ಶಗಳು!

ಈ ಆದಿವಾಸಿ ಮಹಿಳೆ ಜೊಜೊಯ್ ಕಾರ್ಮಿಕ ಸಂಘದ ಒಡನಾಡಿ. ೫೧ ವರ್ಷ ವಯಸ್ಸಿನ ಈ ನಾಯಕಿಯ ಸಂಘಟನೆ ಒಂದು ಸರ್ಕಾರೇತರ ಸಂಸ್ಥೆ. ಅದು ವಾರ್ಷಿಕ ೨೦೦ ಮಿಲಿಯನ್ ಪೆಸೊ (೫೦ ಮಿಲಿಯನ್ ಅಮೆರಿಕನ್ ಡಾಲರ್) ಬಜೆಟು ನಿರ್ವಹಿಸುತ್ತದೆ. ೪೦ ವಾಹನಗಳನ್ನು ಹೊಂದಿದ್ದು ಪ್ರತಿ ತಿಂಗಳು ೧.೯ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಸರ್ಕಾರದಿಂದ ಬಡವರ ವಸತಿ ಯೋಜನೆಗೆಂದು ಪಡೆಯುತ್ತದೆ. ಸಂಘಟನೆ ನಡೆಸುವ ಕಟ್ಟಡ ಸಾಮಗ್ರಿ, ಡೈ, ಉಪಕರಣಗಳ ತಯಾರಿಸುವ ಕಾರ್ಖಾನೆಯಿದ್ದು ಅದರಲ್ಲಿ ಐದು ಸಾವಿರ ಕಾರ್ಮಿಕರು ದುಡಿಯುತ್ತಾರೆ. ಸಂಘಟನೆಯ ಎರಡು ಶಾಲೆಗಳಿವೆ. ಎಂಆರ್‌ಐ ಸ್ಕ್ಯಾನರ್ ಮತ್ತಿತರ ಸೌಲಭ್ಯಗಳಿರುವ ಆಸ್ಪತ್ರೆಯನ್ನೂ ಅದು ನಡೆಸುತ್ತದೆ.

ಸಂಘಟನೆಯ ಜನಪ್ರಿಯತೆ ಸಹಿಸಲಾರದೆ ಮೂಲನಿವಾಸಿ ಸಮುದಾಯದ ತಮ್ಮ ನಾಯಕಿಯ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಬಂಧಿಸಿದ್ದಾರೆ ಎಂದು ಬಿಡುಗಡೆಗಾಗಿ ಒತ್ತಾಯಿಸುವವರು ಡ್ರಂ ಬಡಿದು ಕೂಗಿ ಹೇಳುತ್ತಿದ್ದರು.

ಪ್ರತಿಭಟನಾ ನಿರತರ ತಾರಕದ ಘೋಷಣೆಗಳಲ್ಲಿ, ಪ್ರತಿಭಟನೆಯ ತಾಣವೇ ಆಗಿಬಿಟ್ಟಿರುವ ಆ ಸರ್ಕಲಿನಲ್ಲಿ ಚೆಯ ಚದುರಿದ ನೆರಳು ಕಾಣಿಸಿದಂತಾಯಿತು..

***

ಅರ್ಜೆಂಟೀನಾದಲ್ಲಿ ಎಡಪಂಥೀಯ ಹಾಗೂ ಸಾಂಪ್ರದಾಯಿಕ ಶಕ್ತಿಗಳ ನಡುವೆ, ಟ್ರೇಡ್ ಯೂನಿಯನ್ ಹಾಗೂ ಎಡಪಂಥೀಯ ಗೆರಿಲ್ಲಾಗಳ ನಡುವೆ ಸಂಘರ್ಷದ ದೀರ್ಘ ಚರಿತ್ರೆಯೇ ಇದೆ. ಪೆರೋನ್ ಎಂಬ ಜನಪ್ರಿಯ ನಾಯಕನ ಆಳ್ವಿಕೆ, ಟ್ರೇಡ್ ಯೂನಿಯನ್-ಗೆರಿಲ್ಲಾ ಸಂಘಟನೆಗಳ ನಡುವಿನ ಕದನ, ಮಿಲಿಟರಿ ಆಡಳಿತ, ಪೆರೋನ್ ಹೆಂಡತಿಯ ಎಡಬಿಡಂಗಿ ಸಮಯಸಾಧಕ ರಾಜಕಾರಣ, ೧೯೭೩ರ ಆಂಟಿ ಕಮ್ಯುನಿಸ್ಟ್ ಅಲಿಯನ್ಸ್ - ಹೀಗೇ ಅಲ್ಲಿ ಎಡ-ಅತಿ ಎಡ-ಮಿಲಿಟರಿಗಳ ನಡುವಿನ ದೀರ್ಘ ಜಟಾಪಟಿ ನಡೆದಿದೆ. ಕೊನೆಗೆ ೨೦೧೫ರಲ್ಲಿ ಜನರು ಕ್ರಿಶ್ಚಿಯನ್ ಡೆಮೋಕ್ರೆಟಿಕ್ ಪಕ್ಷದ ಮಾರಿಶಿಯೊ ಮಾಕ್ರಿ ಅವರನ್ನು ಅಧ್ಯಕ್ಷರಾಗಿ ಚುನಾಯಿಸಿದ್ದಾರೆ. ಇಲ್ಲಿ ಭಗತನ ನೆಲ ಭಾರತದಲ್ಲಿ ಹಿಂದೂತ್ವ ರಾಜಕಾರಣ ವಿಜೃಂಭಿಸುತ್ತಿರುವಂತೆ ಅಲ್ಲಿ ಚೆಗೆವಾರನ ದೇಶದಲ್ಲಿ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ಆಳ್ವಿಕೆ ಬಂದಿದೆ. ಕ್ಯಾಥೊಲಿಕ್ ಚರ್ಚಿನ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಬ್ಯೂನಸ್ ಐರಿಸ್‌ನವರೆ ಆಗಿದ್ದಾರೆ. ಒಂದು ಶತಮಾನ ಎಡಪಂಥೀಯ ಚಳುವಳಿ, ದಂಗೆ, ಯುದ್ಧ ನಡೆದ ದೇಶವಿಂದು ಬಲಪಂಥೀಯ ಆಳ್ವಿಕೆಗೊಳಪಟ್ಟಿದೆ. ೧೯೧೬ರ ನಂತರ ಆಯ್ಕೆಯಾದ ಮೊದಲ ಎಡ ಅಲ್ಲದ, ಪೆರೋನಿಸ್ಟ್ ಅಲ್ಲದ ಅಧ್ಯಕ್ಷರು ಇವರು.

ಅಂದಹಾಗೆ ನಮ್ಮ ಗೈಡ್ ಸೇರಿದಂತೆ ಭೇಟಿಯಾದ ಬಹುಪಾಲು ಸಾಮಾನ್ಯ ಜನರು ಇವತ್ತಿನ ಅಧ್ಯಕ್ಷರ ಪಕ್ಷದ ಬೆಂಬಲಿಗರೇ ಆಗಿದ್ದರು. ಅವರು ಬಂದಮೇಲೆ ನಿರುದ್ಯೋಗ ಪ್ರಮಾಣ ಇಳಿದಿದೆಯೆಂದೂ, ‘ಅಭಿವೃದ್ಧಿ’ ಆಗುತ್ತಿದೆಯೆಂದೂ, ಹೊಸ ಬೃಹತ್ ಉದ್ಯಮ-ಕಾರ್ಖಾನೆಗಳು ಶುರುವಾಗುತ್ತಿವೆಯೆಂದೂ ಹೇಳಿದರು.

ಭೂಗ್ರಹದ ಮೇಲ್ಮೈ ಲಕ್ಷಣವೇ ಹಾಗಿದೆ, ಋತುಗಳು ಬದಲಾಗುತ್ತಲೇ ಇರುತ್ತವೆ. ಆಯಾ ಋತುವಿಗೆ ತಕ್ಕ ಹಾಗೆ ಮನುಷ್ಯರೂ ಒಗ್ಗಿಕೊಳ್ಳತೊಡಗುತ್ತಾರೆ..


ಬ್ಯೂನಸ್ ಐರಿಸ್‌ನಲ್ಲೊಂದು ಆಧುನಿಕ ಇಂಜಿನಿಯರಿಂಗ್ ವಿಸ್ಮಯಯವಿದೆ. ಅದೊಂದು ವಿದ್ಯುತ್ ಉಪಕರಣ. ೨೦೦೨ರಲ್ಲಿ ನಿಲಿಸಿದ ಲೋಹದ ಹೂವು. ಎಡ್ವರ್ಡೊ ಕೆಟಲಾನೊ ಎಂಬ ಅರ್ಜೆಂಟೀನಾದ ವಾಸ್ತುಶಿಲ್ಪಿ ವಿನ್ಯಾಸ ಮಾಡಿರುವ ಅಲ್ಯುಮಿನಿಯಂ ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟ ಆರು ದಳ ಇರುವ ೨೩ ಅಡಿ ಎತ್ತರದ ಹೂವು. ವಾರೆಯಾಗಿ ಕೂರಿಸಲಾಗಿದ್ದು ಆಗಸ ನೋಡುವಂತೆ ನಿಂತಿದೆ. ಬೆಳಿಗ್ಗೆ ಸರಿಯಾಗಿ ಎಂಟಕ್ಕೆ ಅರಳತೊಡಗುತ್ತದೆ. ಸೂರ್ಯ ಮುಳುಗುವ ಹೊತ್ತಿಗೆ ಮತ್ತೆ ಮುಚ್ಚಿಕೊಳ್ಳುತ್ತದೆ. ಬಲವಾದ ಗಾಳಿ ಬೀಸಿದರೂ ಮುದುಡುತ್ತದೆ. ರಾತ್ರಿ ಅದರ ಮಧ್ಯದಿಂದ ಕೆಂಪು ಪ್ರಭೆ ಹೊರಡುತ್ತದೆ. ರಾಷ್ಟ್ರೀಯ ದಿನಾಚರಣೆಗಳಾದ ಮೇ ೨೫, ಸೆಪ್ಟೆಂಬರ್ ೨೧, ಡಿಸೆಂಬರ್ ೨೪, ಡಿಸೆಂಬರ್ ೩೧ರ ರಾತ್ರಿ ಅದರ ದಳ ಮುಚ್ಚುವುದಿಲ್ಲ. ಅರ್ಜೆಂಟೀನಾದ ಲಾಕ್ ಹೀಡ್ ಮಾರ್ಟಿನ್ ಎಂಬ ವಿಮಾನ ತಯಾರಿಕಾ ಕಂಪನಿ ಅದನ್ನು ತಯಾರಿಸಿದ್ದು ೨೫ ವರ್ಷ ಗ್ಯಾರಂಟಿ ನೀಡಿದೆ.

ಇತ್ತೀಚಿನ ದಶಕಗಳಲ್ಲಿ ದಕ್ಷಿಣ ಅಮೆರಿಕಾದಲ್ಲಿ ತಲೆಯೆತ್ತುವ ಕಮ್ಯುನಿಸಂ ಮತ್ತು ಧಾರ್ಮಿಕ ಮೂಲಭೂತವಾದಿ ರಾಜಕಾರಣಗಳ ಜುಗಲಬಂದಿ ನೋಡಿದರೆ ಪ್ಯಾನ್ ಅಮೆರಿಕಾನಿಸಂ ಕಲ್ಪನೆ ಮತ್ತದನ್ನು ಹುಟ್ಟಿಸಿದ ಕಮ್ಯುನಿಸಂ ಸಿದ್ಧಾಂತವೂ ಸಹಾ ಈ ಲೋಹದ ಹೂವಿನ ಹಾಗೆಯೇ ಇರಬಹುದೆ ಎನಿಸುತ್ತದೆ.

ಅರಳುತ್ತದೆ, ಮುಚ್ಚುತ್ತದೆ. ಅರಳುತ್ತದೆ, ಮುಚ್ಚುತ್ತದೆ. ಆದರೆ ಮುಚ್ಚಿಕೊಂಡಿರುವಾಗಲೂ ಕೆಂಪುಪ್ರಭೆಯಿಂದ ದೀಪ್ತವಾಗಿರುತ್ತದೆ..



Sunday 19 June 2016

ಮೊಚೆ - ಅಳಿದ ಕುಲದ ಕತೆ




ಪೆರು ಎಂದಕೂಡಲೆ ಇಂಕಾಗಳು ಕಣ್ಣೆದುರು ಬರುತ್ತಾರೆ. ತಪ್ಪೇನಲ್ಲ. ಸಣ್ಣಪುಟ್ಟ ಬುಡಕಟ್ಟು ರಾಜ್ಯಗಳನ್ನು ಗೆದ್ದು, ಆಂಡೀಸ್ ಸಾರಸಂಪತ್ತನ್ನೆಲ್ಲ ಹೀರಿ, ೧೨-೧೫ನೇ ಶತಮಾನದ ನಡುವೆ ಉತ್ತುಂಗ ತಲುಪಿದ ವಿಸ್ತಾರ ಸಾಮ್ರಾಜ್ಯ ಅವರದು. ಇಂಕಾಗಳು ಒಳ್ಳೆಯ ಆಡಳಿತಗಾರರು, ದಕ್ಷ ಕಾರ್ಯನಿರ್ವಾಹಕರಾದರೂ ಕಲೆ-ಕೃಷಿ-ಸಂಸ್ಕೃತಿ ಔನ್ನತ್ಯವನ್ನೆಲ್ಲ ನೂರಿನ್ನೂರು ವರ್ಷ ಅವಧಿಯಲ್ಲಿ ತಲುಪಿರಲಾರರು. ಇಂಕಾಪೂರ್ವ ಕಾಲದ ಹಲವು ಜನಾಂಗಗಳ ಜ್ಞಾನ ಆಂಡಿಯನ್ ಸಂಸ್ಕೃತಿಯನ್ನು ರೂಪಿಸಿದೆ.

ಆದರೆ ಹಾಗಂತ ನಿರೂಪಿಸುವುದು ಹೇಗೆ? ಯಾಕೆಂದರೆ ಹತ್ತು ಸಾವಿರ ವರ್ಷ ಹಿಂದಿನಿಂದ ಮನುಷ್ಯವಾಸದ ಸ್ಥಳವಾಗಿರುವ ಪೆರು ದೇಶದ ಲಿಖಿತ ಚರಿತ್ರೆ ಬರೀ ೫೦೦ ವರ್ಷ ಹಳೆಯದು. ಅದರ ಅಲಿಖಿತ ಚರಿತ್ರೆಯನ್ನು ಮೌಖಿಕ ಕಥನಗಳ ಆಧಾರದಲ್ಲಿಯೂ ತಿಳಿಯಲಾಗದು. ವಸಾಹತುಶಾಹಿ ಭಾಷೆಯ ಯಜಮಾನಿಕೆಗೆ ಸಾವಿರಾರು ಸ್ಥಳೀಯ ಭಾಷೆಗಳೂ, ಅವುಗಳ ತಿಳುವಳಿಕೆಯೂ ಮಾಯವಾದ ನೆಲ ಅದು. ಎಂದೇ ಇಂಕಾ ನಾಡು ಎಂದು ನಾವೀಗ ಕರೆಯುವ ಪೆರು ಹಲವು ಅಜ್ಞಾತ, ಅಳಿದುಹೋದ ಭಾಷೆ-ಕುಲಗಳ ಕೊಲಾಜ್ ಎನ್ನಬಹುದು.

ಪೆರುವಿನಲ್ಲಿ ಈಗ ಕೆಚುವಾ, ಉರಾರಿನಾ, ಮಾತ್ಸೆ, ಮಾಟಿ, ಕೊರುಬೊ, ಬೋರಾ, ಚಿಂಚಾ, ಹ್ವಾಂಬಿಟೊ, ಜಿಗಿಟಾ, ಜ಼ಪಾರೋ ಮೊದಲಾದ ನೂರಾರು ಸ್ಥಳೀಯ ಕುಲಗಳಿವೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಅಲೆಮಾರಿ ಬುಡಕಟ್ಟುಗಳಿದ್ದವು. ಸ್ಪ್ಯಾನಿಶ್ ಆಕ್ರಮಣದ ನಂತರ ೧೫೦೦ ಕುಲಗಳು ನಶಿಸಿಹೋದವು. ಕಲೆ, ವಿಜ್ಞಾನ, ನಿರ್ಮಾಣ, ಸಮಾಜರಚನೆಗಳಲ್ಲಿ ಉತ್ತುಂಗಹಂತ ತಲುಪಿದ್ದರೂ ರಂಗದಿಂದ ತನ್ನ ಪಾತ್ರಪೋಷಣೆ ಮುಗಿದ ನಟ ಹಠಾತ್ತಾಗಿ ನಿರ್ಗಮಿಸುವಂತೆ ಕೆಲ ಕುಲಗಳು ಇದ್ದಕ್ಕಿದ್ದಂತೆ ನಿರ್ಗಮಿಸಿ ಹೇಳಹೆಸರಿಲ್ಲದೆ ಹೋದವು.

ಮೊದಲ ಸಹಸ್ರಮಾನದಲ್ಲಿ ಆಗಿಹೋದ ಅಂತಹ ಒಂದು ಇಂಕಾಪೂರ್ವ ಕುಲ ಮೊಚೆ.


ಮೊಚೆಗಳು ಕ್ರಿ. ಶ. ೧೦೦-೮೦೦ ರ ಅವಧಿಯಲ್ಲಿ ಪೆರುವಿನ ಉತ್ತರ ಭಾಗದಲ್ಲಿ (ಈಗಿನ ಟ್ರುಜಿಲೊ) ೨೫೦ ಮೈಲು ಕಡಲತೀರ ಹಾಗೂ ೫೦ ಮೈಲು ಒಳನಾಡು ಪ್ರದೇಶವನ್ನು ನೆಲೆಯಾಗಿಸಿ ಬದುಕಿದ ಸಮುದಾಯ. ನೀರಾವರಿ, ಸ್ಮಾರಕನಿರ್ಮಾಣ, ಪಿಂಗಾಣಿ ಹಾಗೂ ಲೋಹಶಿಲ್ಪಕ್ಕೆ ಮೊಚೆ ಜನಾಂಗ ಹೆಸರುವಾಸಿ. ಕೊಂಚ ಭಿನ್ನವಾದ ಎರಡು ಭಾಷೆ, ಸಂಸ್ಕೃತಿಗಳನ್ನು ಹೊಂದಿದ್ದ, ತಮ್ಮದೇ ಅನನ್ಯ ಶಿಲ್ಪಕಲೆ, ಸಂಗೀತ, ಕೃಷಿ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದ ಕುಲ ಅದು.

ಮೊಚೆಗಳ ಕುರಿತು ತಿಳಿದುಬಂದದ್ದೇ ಒಂದು ಆಕಸ್ಮಿಕ. ಮಚುಪಿಚು ಪ್ರಸಿದ್ಧವಾಗಿ ಪೆರುವಿನ ಅಳಿದುಳಿದ ಪುರಾತತ್ವ ಅವಶೇಷಗಳ ಕುರಿತು ಅಂತಾರಾಷ್ಟ್ರೀಯ ಆಸಕ್ತಿ ಹೆಚ್ಚತೊಡಗಿದಾಗ ಟ್ರುಜಿಲೊ ಬಳಿ ಒಂದು ಮಣ್ಣುದಿಬ್ಬ ಉತ್ಖನನಕಾರರನ್ನು ಸೆಳೆಯಿತು. ಅದು ಮೊಚೆ ನದಿಯ ಪಾತ್ರ ಬದಲಾಯಿಸಿ ಸ್ಪ್ಯಾನಿಶ್ ಆಕ್ರಮಣಕಾರರು ಲೂಟಿಹೊಡೆದಿದ್ದ ಸೂರ್ಯದೇವಾಲಯ. ನೋಡಿದರೆ ೫೦ ಮೀಟರ್ ಎತ್ತರದ ನೈಸರ್ಗಿಕ ದಿಬ್ಬದಂತೆ ಕಾಣುತ್ತಿದ್ದ ಅದು ಮಿಲಿಯಗಟ್ಟಲೆ ಮಣ್ಣುಇಟ್ಟಿಗೆಗಳಿಂದ ಕಟ್ಟಿದ ಸೂರ್ಯದೇವಾಲಯ ಹ್ವಾಕಾ ಡೆಲ್ ಸೋಲ್ ಎಂದು ತಿಳಿದುಬಂತು. ಬಂಗಾರಕ್ಕಾಗಿ ಅಗೆದ ಲೂಟಿಕೋರರು ‘ಬೆಲೆಯಿರದ’ ವಸ್ತುವೆಂದು ಪಿಂಗಾಣಿ ಪಾತ್ರೆ, ಬಟ್ಟೆ, ವಸ್ತು, ಉಪಕರಣಗಳನ್ನು ಹೇರಳವಾಗಿ ಬಿಟ್ಟುಹೋಗಿದ್ದರು. ಅದರ ಪಕ್ಕದಲ್ಲೆ ಇದ್ದ ಮತ್ತೊಂದು ಪುಟ್ಟದಿಬ್ಬವೂ ಉತ್ಖನನಗೊಂಡಾಗ ಅದು ಚಂದ್ರದೇವಾಲಯ ಹ್ವಾಕಾ ಡಿ ಲ ಲುನ ಎಂದು ತಿಳಿಯಿತು. ಅದು ಸುರಕ್ಷಿತವಾಗಿತ್ತು.


(lady of cao bundle)


(lady of cao)

೧೯೮೭ರಲ್ಲಿ ಸಿಪನ್ ಎಂಬಲ್ಲಿ ರಾಜಗೋರಿಯೊಂದು ಪತ್ತೆಯಾಯಿತು. ಲೂಟಿಗೊಳಗಾಗಿದ್ದ ಕ್ರಿ.ಶ. ಮೊದಲನೆ ಶತಮಾನದ ಗೋರಿ ಅದು. ಆಸುಪಾಸಿನ ಹಳ್ಳಿಗಳಲ್ಲಿ ಅಂತಹ ಹಲವು ಗೋರಿಗಳು ಪತ್ತೆಯಾದವು. ಮಮ್ಮಿಗಳು, ಚಿನ್ನ-ಬೆಳ್ಳಿಯ ಆಭರಣ, ತೆಳು ಲೋಹಹಾಳೆ ಹೊದೆಸಿದ ಮುಖವಾಡ, ಪ್ರತಿಮೆ, ಉಪಕರಣ, ಪಾತ್ರೆ, ಮಣಿ ಮತ್ತಿತರ ವಸ್ತುಗಳು ಪತ್ತೆಯಾದವು. ೨೦೦೬ರಲ್ಲಿ ಲೇಡಿ ಆಫ್ ಕ್ಯಾವೊ ಎಂಬ ಮಹಿಳೆಯ ಅತಿ ಸುರಕ್ಷಿತ ಪಿರಮಿಡ್ ಸಿಕ್ಕಿತು. ಹೆರಿಗೆ ಅಥವಾ ತತ್ಸಂಬಂಧಿ ಕಾಲದಲ್ಲಿ ಅಸುನೀಗಿದ್ದ ಇಪ್ಪತ್ತರ ಆಸುಪಾಸಿನ ಕುಲೀನ ಮನೆತನದ ರಾಣಿ ಅವಳು. ಅವಳೊಡನೆ ಮತ್ತೂ ಆರು ಮಾನವರ, ಕೆಲ ಪ್ರಾಣಿಗಳ ಅವಶೇಷಗಳು ದೊರೆತವು. ೨೦೧೩ರಲ್ಲಿ ಮಹಿಳೆಯರ ಆರು ಪಿರಮಿಡ್ ಪತ್ತೆಯಾದವು. ಅದುವರೆಗೆ ಕೇವಲ ಪುರುಷರಿಗಷ್ಟೆ ಅಧಿಕಾರಸ್ಥಾನ ಹಾಗೂ ಪಿರಮಿಡ್ ರಚನೆ ಎಂಬ ಅಭಿಪ್ರಾಯ ಇದ್ದಿದ್ದು ಮಹಿಳೆಯರ ಸರಣಿ ಗೋರಿ ಪತ್ತೆಯಾದ ಬಳಿಕ ಬದಲಾಯಿತು. ಮೊಚೆಗಳು ಒಬ್ಬರಾದಮೇಲೊಬ್ಬರಂತೆ ಪುರೋಹಿತ-ರಾಣಿಯರಿಂದ ಆಳಲ್ಪಟ್ಟರು ಎಂದು ತಿಳಿದುಬಂತು.

ಬೆಸೆಯುವುದು, ತೆಳು ಲೋಹದ ಹಾಳೆಗಳ ಮಾಡುವುದು ತಿಳಿದಿದ್ದ ಕುಶಲಕರ್ಮಿಗಳು ನಾನಾ ವಿನ್ಯಾಸ ಹಾಗೂ ಉಪಯುಕ್ತತೆಯ ಬೆಳ್ಳಿ, ಬಂಗಾರ, ತಾಮ್ರಗಳ ಪಾತ್ರೆ, ಆಭರಣ ತಯಾರಿಸಿದ್ದರು. ಜೊತೆಗೆ ಬಟ್ಟೆ, ಚಾಕು, ಹೂಜಿ, ಲೋಹ, ವಿಕುನ ಮತ್ತು ಅಲ್ಪಾಕ ಪ್ರಾಣಿಗಳ ತುಪ್ಪಳದಿಂದ ನೇಯ್ದ ಬಟ್ಟೆತುಂಡು, ಮರ ಮತ್ತು ಪಿಂಗಾಣಿ ಪಾತ್ರೆಗಳೂ ಸಿಕ್ಕವು. ಪಿಂಗಾಣಿ ಪಾತ್ರೆಗಳಂತೂ ಅಮೂಲ್ಯ ನಿಧಿಯೇ ಸರಿ. ಸಂಗೀತಗಾರರು, ಬಂಧಿತರು, ಪುರೋಹಿತರ ಪ್ರತಿಕೃತಿಗಳು; ಹಾವು, ಕಪ್ಪೆ, ಹಕ್ಕಿ, ಮೀನು, ಏಡಿ, ಜಿಂಕೆ ಮೊದಲಾದ ಪ್ರಾಣಿಗಳ ಮೂರ್ತಿಗಳು; ಬೇಟೆ, ಯುದ್ಧ, ಯೋಧ, ಸೋಲು, ದಿನನಿತ್ಯದ ಜೀವನ, ಕೃಷಿ ಮುಂತಾದವು ಪಿಂಗಾಣಿ ಕಲೆಯಾಗಿ ಅರಳಿದ್ದವು.

ಬಟ್ಟೆ, ಮಡಕೆ ಮತ್ತು ಆಚೀಚಿನ ಗೋಡೆಗಳ ಮೇಲೆ ಇದ್ದ ಚಿತ್ರಗಳ ಪ್ರಕಾರ ಅವರ ಸೃಷ್ಟಿಕರ್ತ ಆಕಾಶ ದೇವತೆ. ಭಯಾನಕ ಶಕ್ತಿಶಾಲಿಯಾದ ಅವನನ್ನು ಸಂಪ್ರೀತಗೊಳ್ಳಲು ನರಬಲಿ ಕೊಡಬೇಕು. ಚಂದ್ರ ಹೆಣ್ಣುದೇವತೆ. ಮಳೆ, ಗಾಳಿ, ಋತುವಿನ ಅಧಿದೇವತೆ. ಅವಳು ಸೂರ್ಯನಿಗಿಂತ ಶಕ್ತಿಶಾಲಿ ಏಕೆಂದರೆ ಹಗಲು-ರಾತ್ರಿ ಎರಡೂ ಕಾಲಗಳಲ್ಲಿ ಕಾಣಬಲ್ಲಳು. ಮತ್ತೊಬ್ಬ ಶಿರಚ್ಛೇದನ ಮಾಡುವ ದೇವತೆ. ಒಂದು ಕೈಲಿ ದೊಡ್ಡ ಕೊಡಲಿ, ಮತ್ತೊಂದು ಕೈಯಲ್ಲಿ ಕಡಿದ ರುಂಡ ಇರುವ ಅರೆಮಾನವ ಅರೆ ಚಿರತೆ ದೇಹದ ದೇವ ಅವನು.

ದೇಹದೊಳಗಿನ ದ್ರವ ಪವಿತ್ರ ಎಂಬ ನಂಬಿಕೆ ಅವರದು. ನೀರಾವರಿಯೇ ಮೂಲವಾದ ಕುಲಕ್ಕೆ ಹರಿವು ಒಂದು ಮೌಲ್ಯ. ಎಂದೇ ತೊಟ್ಟುತೊಟ್ಟಾಗಿ ರಕ್ತದ ಹನಿಗಳನ್ನು ಬಲಿ ನೀಡುವ ರಕ್ತಬಲಿಯ ಚಿತ್ರಗಳು ಕಂಡುಬಂದವು. ಸೋಲು ಎಂದರೆ ಎಲ್ಲ ರಂಧ್ರಗಳಿಂದ ದ್ರವ ಸೋರಿಸುವುದು ಅಥವಾ ಪ್ರಾಣಿ, ಹಕ್ಕಿ ಅಥವಾ ಮನುಷ್ಯರಿಂದ ಕಣ್ಣು, ಗುಪ್ತಾಂಗ ಕೀಳಿಸಿಕೊಳ್ಳುವುದು. ಹಾಗೆ ಸೋತ ಯೋಧರ, ವಧಾಸ್ಥಾನಕ್ಕೆ ಮೆರವಣಿಗೆಯಲ್ಲಿ ಒಯ್ಯುತ್ತಿರುವವರ ಚಿತ್ರಗಳೂ ಅಲ್ಲಿ ಸಿಕ್ಕವು.



ಸೆರೆಯಾಳುಗಳ ಹಾಗೂ ಹರಕೆಯ ನರಬಲಿ ಸಾಮಾನ್ಯವಾಗಿತ್ತು. ಬಲಿಗಿಂತ ಮೊದಲು ಅತಿಹಿಂಸೆ ನೀಡಿ ದುರ್ಬಲಗೊಳಿಸಲಾಗುತ್ತಿತ್ತು. ಅದರ ಭಾಗವಾಗಿ ನರಮಾಂಸ ಭಕ್ಷಣೆಯೂ ನಡೆಯುತ್ತಿತ್ತು. ಇದಕ್ಕೆ ಪುರಾವೆಯೊದಗಿಸುವ ಅನೇಕ ಚಿತ್ರಣಗಳು ಕಂಡುಬರುತ್ತವೆ. ಹ್ವಾಕಾ ಡೆಲ್ ಸೋಲ್ ಬುಡದಲ್ಲಿ ೩೦ ವರ್ಷಕ್ಕಿಂತ ಕಡಿಮೆ ವಯಸಿನ ೪೦ ತರುಣರ ಅಸ್ಥಿಪಂಜರಗಳು ಸಿಕ್ಕವು. ಕೀಲುಸಂದು ತಪ್ಪಿದ, ದವಡೆ ಎಲುಬು ಇಲ್ಲದ, ಎಲುಬು ಮುರಿದ ಅಸ್ಥಿಪಂಜರಗಳವು. ಅವರು ಹಿಂಸೆ ಅನುಭವಿಸಿ ಬಲಿಯಾದವರು.

ಹೀಗೆ ಇಂಕಾಪೂರ್ವ ಮೊಚೆಗಳ ಕತೆಯನ್ನು ಬಟ್ಟೆ, ಚಿತ್ರ, ಲೋಹವಸ್ತು, ಪಿಂಗಾಣಿಗಳೇ ತಿಳಿಸಿಬಿಟ್ಟವು.

ಲೈಂಗಿಕ ಅಭಿವ್ಯಕ್ತಿ 

ಲೀಮಾದ ಲಾರ್ಕೋ ಮ್ಯೂಸಿಯಂ ಹಾಗೂ ಇನ್ನೂ ಕೆಲ ಪುರಾತತ್ವ ಮ್ಯೂಸಿಯಂಗಳ ಮೊಚೆ ಕಾಲದ ಪಿಂಗಾಣಿ ವಸ್ತುಗಳು ಕೆಲವು ವಿಶೇಷಗಳಿಂದ ಥಟ್ಟನೆ ಗಮನ ಸೆಳೆಯುತ್ತವೆ.

ಒಂದೇ ಅಚ್ಚಿನಿಂದ ಎರಕ ಹೊಯ್ಯುವುದು ಅವರಿಗೆ ಗೊತ್ತಿತ್ತು. ಒಂದೇ ತರಹದ ಸಾವಿರಾರು ಪಿಂಗಾಣಿ ಪಾತ್ರೆಗಳು ಅಲ್ಲಿವೆ. ಕಂದು, ಕೆಂಪು, ಹಳದಿ ಬಣ್ಣಗಳು ಸಾಮಾನ್ಯವಾಗಿ ಬಳಕೆಯಾಗಿವೆ. ಮನುಷ್ಯರ ತದ್ರೂಪ ಮೂರ್ತಿಗಳು ಆ ಕಾಲದ ಯಾರದೊ ವ್ಯಕ್ತಿಯದಿರಬೇಕು, ಏಕೆಂದರೆ ಅವು ಪದೇಪದೇ ಕಾಣಿಸಿಕೊಂಡಿವೆ.

ಪಿಂಗಾಣಿ ಕಲೆಯ ಮತ್ತೊಂದು ವಿಶೇಷತೆಯೆಂದರೆ ಒಂದಲ್ಲ ಒಂದು ಕ್ರಿಯೆಯಲ್ಲಿ, ಚಲನೆಯಲ್ಲಿ ತೊಡಗಿರುವ ಮೂರ್ತಿ-ಚಿತ್ರಗಳನ್ನೇ ಅವು ಹೊಂದಿರುವುದು. ಇದುವರೆಗೆ ಸಿಕ್ಕ ೮೦,೦೦೦ಕ್ಕೂ ಮೀರಿದ ಪಿಂಗಾಣಿ ವಸ್ತುಗಳಲ್ಲಿ ಯುದ್ಧ, ಬೇಟೆ, ನೇಯುವಿಕೆ, ಲೈಂಗಿಕ ಕ್ರಿಯೆ ಹೀಗೆ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿದ ಮನುಷ್ಯರಿದ್ದಾರೆ. ಅದರಲ್ಲೂ ೫೦೦ಕ್ಕೂ ಮಿಕ್ಕಿದ ಪಿಂಗಾಣಿ ಮಾದರಿಗಳು ಢಾಳಾಗಿ ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ಪ್ರದರ್ಶಿಸುತ್ತವೆ! ಪುಟ್ಟ ಪಿಂಗಾಣಿ ಪಾತ್ರೆಗಳ ಲೈಂಗಿಕ ಶಿಲ್ಪಗಳನ್ನು ನೋಡುತ್ತಿದ್ದರೆ ಎರಡನೇ ಶತಮಾನದಲ್ಲಿ ವಾತ್ಸಾಯನ ಬರೆದ ಕಾಮಸೂತ್ರ, ಖಜುರಾಹೊ ದೇವಾಲಯಗಳ ಕಾಮಶಿಲ್ಪ ನೆನಪಾಗುತ್ತವೆ.



ಲೈಂಗಿಕ ಚಿತ್ರಣವಿದ್ದ ಪಿಂಗಾಣಿ ಹೂಜಿ-ಪಾತ್ರೆಗಳೆಲ್ಲ ಬಳಕೆಯಲ್ಲಿದ್ದ, ಬಳಸಬಹುದಾದಂತಹ, ದ್ರವಪದಾರ್ಥವನ್ನು ಸುರಿಯಲು ಬಳಸುತ್ತಿದ್ದಂತಹ ಪಾತ್ರೆಗಳು. ಮಾನವ ದೇಹದ ರಂಧ್ರಗಳಿಂದ ದ್ರವ ಹೊರಹರಿಯುವಂತೆ ತೋರಿಸುವ ಆಕಾರಗಳಿವೆ. ಎರಡು ಶಿಶ್ನಗಳನ್ನು ದ್ರವ ಸುರಿವ ದಾರಿಯಾಗಿ ಆಚೀಚೆ ಹೊಂದಿರುವ ಪಾತ್ರೆಯಿದೆ. ಬಹುಪಾಲು ಪಿಂಗಾಣಿ ಪಾತ್ರೆಗಳಲ್ಲಿ ಗುದ ಸಂಭೋಗ ಹಾಗೂ ಮುಖಸಂಭೋಗಗಳು ಚಿತ್ರಿಸಲ್ಪಟ್ಟಿವೆ! ಮನುಷ್ಯರ ಲೈಂಗಿಕ ರಂಧ್ರಗಳನ್ನು, ಅಂಗಾಂಗಗಳನ್ನು ಸ್ಪಷ್ಟವಾಗಿ, ಕೊಂಚ ಉತ್ಪ್ರೇಕ್ಷಿಸಿ ಕೆತ್ತಲಾಗಿದೆ. ಗುದಸಂಭೋಗ ಗಂಡುಗಂಡುಗಳ ನಡುವೆ ಅಷ್ಟೇ ಅಲ್ಲ, ಗಂಡುಹೆಣ್ಣುಗಳ ನಡುವೆಯೂ ಇದೆ! ಯೋನಿ ಸಂಭೋಗ ಚಿತ್ರಣ ಇಲ್ಲವೆನ್ನುವಷ್ಟು ಕಡಿಮೆ. ಮಗು ಮೊಲೆ ಹಾಲು ಕುಡಿಯುತ್ತಿರುವಾಗ ದಂಪತಿಗಳು ಗುದ ಸಂಭೋಗದಲ್ಲಿ ತೊಡಗಿರುವ ಚಿತ್ರ, ಹೆರಿಗೆಯಾಗುತ್ತಿರುವ ಶಿಲ್ಪ, ಹಸ್ತಮೈಥುನದಲ್ಲಿ ತೊಡಗಿರುವ ಗಂಡು ಮತ್ತು ಅವನಿಗೆ ಸಹಕರಿಸುತ್ತಿರುವ ಹೆಣ್ಣು ಶಿಲ್ಪಗಳೂ ಇವೆ. ಅತಿಯಾಗಿ ತೆರೆದುಕೊಂಡ ಲೈಂಗಿಕ ರಂಧ್ರಗಳು ಹಾಗೂ ಅವುಗಳಿಂದ ಸೋರುವ ದ್ರವ ಇರುವವರು ಲೈಂಗಿಕ ಗುಲಾಮರು. ಕುರಿಜಾತಿಯ ಹೆಣ್ಣು ಇಲ್ಲಮಾ ಪ್ರಾಣಿಯನ್ನು ಕುರಿಗಾಹಿ ಸಂಭೋಗಿಸುತ್ತಿರುವ, ಮಹಿಳೆಯನ್ನು ಪಶು, ಮನುಷ್ಯ ಮಿಶ್ರಿತ ವಿಚಿತ್ರ ಜೀವಿಯೊಂದು ಸಂಭೋಗಿಸುತ್ತಿರುವ ದೃಶ್ಯವೂ ಇದೆ.

ಫ್ರೇ ಡೊಮಿಂಗೊ ಡಿ ಸ್ಯಾಂಟೊ ಟಾಮಾಸ್ ಎಂಬ ಸ್ಪೇನಿನ ಪಾದ್ರಿ ಕ್ರಿ. ಶ. ೧೫೬೦ರಲ್ಲಿ ಟ್ರುಜಿಲೊಗೆ ಬಂದಾಗ ಎಲ್ಲಿ ನೋಡಿದರಲ್ಲಿ ಕಾಣುವ ಸಲಿಂಗರತಿಯ ಶಿಲ್ಪಗಳು; ಹೆಣ್ಣಿನಂತೆ ಅಲಂಕರಿಸಿಕೊಂಡು ವರ್ತಿಸುವ ಗಂಡುಗಳ ನೋಡಿ ಹೇವರಿಕೆ ವ್ಯಕ್ತಪಡಿಸುತ್ತ ಅವರ ದೇಹದಲ್ಲಿ ಸೈತಾನ ನೆಲೆಸಿದ್ದಾನೆಂದು ಹೇಳಿದ್ದ. ಸಲಿಂಗಕಾಮ ಕೆಲ ಆಂಡಿಯನ್ ಸಮುದಾಯಗಳಲ್ಲಿ ಸಂಪೂರ್ಣ ಒಪ್ಪಿಗೆ ಪಡೆದಿದ್ದರೆ ಮತ್ತೆ ಕೆಲ ಸಮುದಾಯಗಳಲ್ಲಿ ಬಹಿಷ್ಕಾರಕ್ಕೀಡಾಗಿತ್ತು. ಮೊಚೆಗಳಂತೆ ಸಲಿಂಗಕಾಮ ಬಳಸುತ್ತಿದ್ದ ಬೇರೆ ಕುಲಗಳೂ ಅಲ್ಲಿದ್ದವು. ಸಲಿಂಗರತಿ ಇಂಕಾಗಳಿಂದ ನಿಷೇಧಕ್ಕೊಳಗಾಗಿತ್ತು. ಆದರೆ ಇಂಕಾಪೂರ್ವ ಚಿಂಚಾ ಕುಲ ಸಲಿಂಗಕಾಮ ಬಳಸುತ್ತಿತ್ತು. ಎಂದೇ ಇಂಕಾಗಳು ಯಾವುದೇ ಸಲಿಂಗರತಿಯ ಕುರುಹು-ನೆನಪು ತನ್ನ ಪ್ರಜೆಗಳಿಗೆ ಉಳಿಯಬಾರದೆಂದು ಚಿಂಚಾಗಳನ್ನು ಗೆದ್ದ ಕೂಡಲೇ ಅವರನ್ನು ಜೀವಂತ ಸುಟ್ಟು ಹಾಕಿದರು. ಅವರ ಮನೆ ಕೆಡವಿ; ಹೊಲಗದ್ದೆಗಳ ಗಿಡಮರಗಳನ್ನು ಬುಡಮೇಲಾಗಿಸಿ ಅತ್ಯಂತ ಕ್ರೂರವಾಗಿ ಸಮುದಾಯವನ್ನೇ ನಾಶಮಾಡಿದರು.

ಇವತ್ತಿಗೂ ಯೋನಿಯೇತರ ಸಂಭೋಗ ಹಾಗೂ ಸಲಿಂಗಕಾಮ ಅನೈಸರ್ಗಿಕ ಕ್ರಿಯೆ ಎಂದು ಬಹುಪಾಲು ಸಾಂಸ್ಥಿಕ ಧರ್ಮಗಳು, ದೇಶದ ಕಾನೂನುಗಳು ನಿಷೇಧ ಹೇರಿವೆ. ಅಂತಹ ಲೈಂಗಿಕತೆಯ ಫಲಿತಾಂಶವಾಗಿ ಸಂತಾನೋತ್ಪತ್ತಿ ಆಗದಿರುವುದರಿಂದ ಅದು ಅನೈಸರ್ಗಿಕ ಹಾಗೂ ನಿಷಿದ್ಧ ಎನ್ನುವುದು ಅವರ ವ್ಯಾಖ್ಯಾನ. ಹಾಗಾದರೆ ಮೊಚೆಗಳ ಲೈಂಗಿಕ ರೂಢಿ ಯಾಕೆ ಈ ರೀತಿ ಇತ್ತು? ಅವನ್ನು ಪಿಂಗಾಣಿ ಕಲೆಯಲ್ಲಿ ಏಕೆ ಸೃಷ್ಟಿಸಲಾಯಿತು ಎನ್ನುವುದು ಅಧ್ಯಯನಕ್ಕೊಳಗಾಯಿತು. ಮೆಲನೇಷಿಯಾ, ಟೊಬ್ರಿಯಾಂಡ್ ದ್ವೀಪ ವಾಸಿಗಳಲ್ಲಿ ಸಮಾಜಶಾಸ್ತ್ರಜ್ಞ ಮೆಲಿನೋವ್ಸ್ಕಿ ನಡೆಸಿದ ಅಧ್ಯಯನ, ಇವತ್ತಿಗೂ ಆ ದ್ವೀಪಗಳಲ್ಲಿರುವ ಕೆಲ ಆಚರಣೆ, ನಂಬಿಕೆಗಳನ್ನು ಇದರೊಟ್ಟಿಗೆ ಇಟ್ಟು ಅಧ್ಯಯನಗಳು ನಡೆದವು.



ಸಲಿಂಗಕಾಮ ಒಪ್ಪಿತವಾಗಿದ್ದ ಆದಿಮ ಕುಲಗಳು ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಎರಡೂ ಬೇರೆಬೇರೆ ಎಂದು ನಂಬಿರಬಹುದು. ಸಂತಾನೋತ್ಪತ್ತಿ ಎಂದರೆ ಕೆಲ ಚಣಗಳಲ್ಲಿ ವೀರ್ಯವನ್ನು ಯೋನಿಯೊಳ ಸ್ರವಿಸಿ ಮುಗಿಸಿಬಿಡುವ ಸರಳ ಆಚರಣೆಯಲ್ಲ; ಗುದ, ಮುಖ ಸಂಭೋಗಗಳೂ ಲೈಂಗಿಕತೆಯ ಒಂದು ಭಾಗ ಎಂದು ಭಾವಿಸಿದ್ದಿರಬಹುದು.

ಮೆಲನೇಷಿಯ ಮತ್ತು ಟೊಬ್ರಿಯಾಂಡ್ ವಾಸಿಗಳಲ್ಲಿ ಪ್ರಚಲಿತವಿರುವ ನಂಬಿಕೆಯೆಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಹಿರಿಯ ಗಂಡಸು ಕಿರಿಯ ಗಂಡು-ಹೆಣ್ಣುಗಳಿಗೆ ತನ್ನ ವೀರ್ಯವನ್ನು ಅವರ ರಂಧ್ರಗಳಲ್ಲಿ ಸೇರಿಸುವ ಮೂಲಕ ಉದ್ದೀಪಿಸಬೇಕು. ಎಂದೇ ಹಿರಿಯ ಗಂಡಸು ಕಿರಿಯ ಗಂಡಿನೊಡನೆ, ಆ ಕಿರಿಯ ಗಂಡು ತನ್ನ ಹೆಣ್ಣಿನೊಡನೆ ಕೇವಲ ಯೋನಿ ಮೂಲಕ ಮಾತ್ರವಲ್ಲದೆ ಇತರ ದೇಹದ್ವಾರಗಳ ಮೂಲಕವೂ ಸಂಭೋಗ ಕ್ರಿಯೆಯಲ್ಲಿ ತೊಡಗಬೇಕು. ಹೆಣ್ಣಿನ ಮೊಲೆಹಾಲು ಮತ್ತು ಗಂಡಿನ ವೀರ್ಯ ಇವೆರೆಡೂ ಸಂತಾನೋತ್ಪತ್ತಿ ದ್ರವಗಳು ಹಾಗೂ ಅವು ಅಮರ ದ್ರವಗಳು ಎಂದೇ ಅವರು ಭಾವಿಸುತ್ತಾರೆ. ಗಂಡುಹೆಣ್ಣೆನ್ನದೆ ಎಲ್ಲ ಮಕ್ಕಳು ಮೊಲೆಹಾಲು ಸೇವಿಸುವಂತೆ ವೀರ್ಯಸೇವನೆ ಕೂಡ ಚಾಲ್ತಿಯಲ್ಲಿತ್ತು.

ಇಂಕಾಗಳ ಕಾಲದಲ್ಲಿ ಬಸುರಿಯೊಡನೆ ಹಾಗೂ ಎರಡು ವರ್ಷದೊಳಗಿನ ಎದೆಹಾಲು ಕುಡಿವ ಮಗುವಿನ ತಾಯಿಯೊಡನೆ ಯೋನಿಸಂಪರ್ಕ ಶಿಕ್ಷಾರ್ಹವಾಗಿದ್ದುದನ್ನು ಗಮನಸಿದರೆ ಯೋನಿಯೇತರ ಸಂಭೋಗ ಮತ್ತು ಸಲಿಂಗಕಾಮ ಕುಟುಂಬ ಯೋಜನಾ ವಿಧಾನವೂ ಆಗಿರಬಹುದು ಎನಿಸುತ್ತದೆ.

ಇಂತಹ ಲೈಂಗಿಕತೆಯನ್ನು ಕಲೆಯಲ್ಲಿ ಮೂಡಿಸಿದ ಉದ್ದೇಶ ಬಹುಶಃ ಮನರಂಜನೆ ಮತ್ತು ಲೈಂಗಿಕ ಶಿಕ್ಷಣ ಎರಡೂ ಆಗಿರಬಹುದು. ಅಥವಾ ಸೃಷ್ಟಿ, ಲೈಂಗಿಕತೆಯ ಆನಂದ, ರೀತಿನೀತಿಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಲಿಪಿಯಿರದ ಸಮುದಾಯ ಕಲೆಯ ಮಾರ್ಗ ಬಳಸಿರಬಹುದು.

ಈ ವಿವರಗಳನ್ನೆಲ್ಲ ಓದಿ ಶಿಷ್ಟ, ಮಡಿವಂತ ಮನಸುಗಳು ಮುಜುಗರ ಅನುಭವಿಸಬಹುದು. ವೀರ್ಯಶಕ್ತಿ ಕುರಿತು ಮೊಚೆಗಳಿಗೆ ಮೂಢನಂಬಿಕೆಯಿತ್ತು; ಅವರ ಲೈಂಗಿಕತೆ ವಿಕೃತವಾಗಿತ್ತು ಎಂದು ಒಂದೇ ಸಾಲಿನ ತೀರ್ಪು ನೀಡಬಹುದು. ಆದರೆ ವೈಜ್ಞಾನಿಕ ಆವಿಷ್ಕಾರಗಳಿರದ ಕಾಲದಲ್ಲಿ ಯುದ್ಧ, ಸೇನೆ, ಸಾವುಗಳ ನಡುವೆಯೇ ಮನರಂಜನೆ, ಕುಟುಂಬ ಯೋಜನೆ ಎರಡನ್ನೂ ತೂಗಿಸಿಕೊಳ್ಳಲು ಅವರಿಗೆ ಏನು ಅನಿವಾರ್ಯವಾಗಿತ್ತೋ ನಾವು ಹೇಗೆ ನಿರ್ಧರಿಸುವುದು? ಅದು ಸುಲಭವಲ್ಲ, ಸಾಧುವೂ ಅಲ್ಲ.

ಹಠಾತ್ ನಿರ್ಗಮನ

ಇಷ್ಟು ಸುಸಂಸ್ಕೃತ ಕುಲಕ್ಕೆ ಆಮೇಲೇನಾಯಿತು? ಏಕೆ ನಾಶವಾಯಿತು? ಇದು ವರ್ಷಗಟ್ಟಲೆ ದಕ್ಷಿಣ ಅಮೆರಿಕದ ಅತಿದೊಡ್ಡ ಪುರಾತತ್ವಶಾಸ್ತ್ರ ಒಗಟಾಗಿತ್ತು. ಈಗದಕ್ಕೆ ಉತ್ತರ ಸಿಗತೊಡಗಿದೆ.

ಕ್ರಿ. ಶ. ೫೩೬-೫೯೪ರ ಅವಧಿಯಲ್ಲಿ ಸಂಭವಿಸಿದ ಆಂಡೀಸ್ ‘ಸೂಪರ್ ಎಲ್‌ನಿನೊ ಫಿನಾಮೆನನ್’ ಅವರ ನಾಶಕ್ಕೆ ಕಾರಣವಾಯಿತು ಎನ್ನಲಾಗಿದೆ. ೩೦ ವರ್ಷ ಅತಿ ಮಳೆ, ನಂತರ ೩೦ ವರ್ಷ ಮಳೆಯೇ ಇಲ್ಲದ ಅತಿದುರ್ಭರ ಬರಗಾಲ ತಂದೊಡ್ಡಿದ ಮಹಾನ್ ವಾತಾವರಣ ಬದಲಾವಣೆಗೆ ಇಡೀ ಮೊಚೆ ಸಮಾಜ ಛಿದ್ರಗೊಂಡಿತು. ಎಷ್ಟು ಪ್ರಾಣಿಬಲಿ, ನರಬಲಿ ಕೊಟ್ಟರೂ ಕಡಿಮೆಯಾಗದ ನಿರಂತರ ಪ್ರವಾಹ, ದಶಕಗಟ್ಟಲೆ ಪ್ರತಿಕೂಲ ಕೃಷಿ ಪರಿಸ್ಥಿತಿಯಿಂದ ಆಹಾರ ಕೊರತೆ ಎದುರಾಯಿತು. ೩೦ ವರ್ಷ ಸುರಿದ ಮಳೆ ಕಡಿಮೆಯಾಯಿತು ಎನ್ನುವಾಗ ಭೀಕರ ಬರಗಾಲ ಶುರುವಾಗಿ ಸಮಾಜದಲ್ಲಿ ಕ್ಷೋಭೆ, ಅಶಾಂತಿ, ದಂಗೆ, ಲೂಟಿ ಮತ್ತಿತರ ಸಮಸ್ಯೆಗಳು ಉದ್ಭವಿಸಿದವು. ಸಂಪನ್ಮೂಲ, ಆಹಾರದ ಪೈಪೋಟಿಯಿಂದ ಸಂಭವಿಸಿದ ನಾಗರಿಕ ಯುದ್ಧದಲ್ಲಿ ಹಾಗೂ ಹಸಿವಿನಲ್ಲಿ ಬಹುಪಾಲು ಜನ ನಾಶವಾದರು. ಆದರೂ ಕ್ರಿ. ಶ. ೬೫೦ರವರೆಗೂ ಅವರ ಇರುವಿಕೆ ಇತ್ತೆಂದು ಅವಶೇಷಗಳು ತಿಳಿಸುತ್ತವೆ. ಬರಬರುತ್ತ ಗ್ರಾಮಗಳು ನಾಶವಾದವು. ಕೃಷಿ ನಾಶವಾಯಿತು. ಮೊಚೆ ಸಮುದಾಯ ನಗರೀಕರಣಗೊಂಡಿತು.

ಪ್ರಕೃತಿ ಅವರಿಗೆ ಸುಧಾರಿಸಿಕೊಳ್ಳಲಾಗದ ಹೊಡೆತ ಕೊಟ್ಟಿತು. ಇದರಿಂದ ಪ್ರಕೃತಿ ಆರಾಧಕರಾಗಿದ್ದ ಅವರ ನಂಬಿಕೆ ಛಿದ್ರವಾಯಿತು. ಬದುಕಿನ ಔನ್ನತ್ಯ ಕುರಿತ ಆಸಕ್ತಿ, ಕುತೂಹಲ, ಆಸೆ ಅಳಿಸಿಹೋಯಿತು. ಆಚೀಚಿನ ನಾಡುಗಳಿಗೆ ವಲಸೆ ಹೋದರು. ಆದರೆ ಹಾಗೆ ಹೋದಲ್ಲಿ ಆ ಮೊದಲೇ ನೆಲೆಯಾಗಿದ್ದ ಕುಲಗಳಿಂದ ಭೀಕರ ದಾಳಿಗೊಳಗಾಗಿ ಅಳಿದುಳಿದ ಜನರೂ ನಾಶವಾದರು. ಕೆಲವರು ಪಕ್ಕದ ವಿರು, ರೆಕ್ವಾಯ್‌ಗಳೊಂದಿಗೆ ಕಾದಾಡಿ ಆ ಕುಲಗಳೊಡನೆ ಲೀನವಾದರು.

ಮೊಚೆಗಳ ಮುನ್ನ ವಿರುಗಳಿದ್ದರು. ಮೊಚೆಗಳ ನಂತರ ಹ್ವಾರಿ, ಟಿವನಾಕು, ನಜಕಾ, ಲೀಮಾ ಸಂಸ್ಕೃತಿಗಳು ಬಾಳಿದವು. ಅವರ ನಂತರ ಚಿಮುಗಳು ಬಂದರು. ಆಮೇಲೆ ಅವರನ್ನೆಲ್ಲ ಸೋಲಿಸಿ ಇಂಕಾಗಳು ಬಂದರು. ಆಮೇಲೆ ಅವರನ್ನೂ ಸೋಲಿಸಿ ವಸಾಹತುಶಾಹಿ ಸ್ಪೇನ್ ಬಂತು. ಈಗ ಪೆರುವಿಗರ ತಲೆಮೇಲೆ ಜಾಗತಿಕ ದೊಡ್ಡಣ್ಣ ಕೂತಿದ್ದಾನೆ..

ಇದರಲ್ಲಿ ಯಾರು ಗೆದ್ದವರು? ಯಾರು ಸೋತವರು? ಯಾರು ಆಕ್ರಮಿಸಿದವರು? ಯಾರು ಆಕ್ರಮಿಸಲ್ಪಟ್ಟವರು? ಕೇಳಬಾರದ ಈ ಪ್ರಶ್ನೆಗಳ ವಿಶೇಷವೇನೆಂದರೆ ಅವಕ್ಕೆ ಉತ್ತರ ಇಲ್ಲವೆನ್ನುವುದು.


(ಚಿತ್ರಗಳು ಅಂತರ್ಜಾಲದಿಂದ)

Friday 17 June 2016

ದಕ್ಷಿಣ ಅಮೆರಿಕಾ: ಅಳಿದ ಕುಲಗಳ ನಾಡು






(ಇತ್ತೀಚೆಗೆ ನಾವು ಅಲೆದಾಡಿ ಬಂದ ದಕ್ಷಿಣ ಅಮೆರಿಕ ಕುರಿತು ಬರೆವ ಒತ್ತಡದ ಫಲ ಈ ಬರಹ. ಅಲ್ಲಿ ನನ್ನ ಸೆಳೆದ, ಕಲಕಿದ ಕೆಲ ವಿಷಯಗಳಲ್ಲಿ ಆ ಖಂಡದ ಅಳಿದ, ಅಳಿಯುತ್ತಿರುವ, ಅಪಾಯದಂಚಿನಲ್ಲಿರುವ ಕುಲಗಳ ಕತೆಯೂ ಸೇರಿದೆ. ಅಂಥ ಮೂರು ಕುಲಗಳು ಕ್ರಮವಾಗಿ ಮೊಚೆ, ಗ್ವರಾನಿ ಹಾಗೂ ಮಾಪುಚೆ. ಗ್ವರಾನಿಗಳ ಕುರಿತ ಬರಹ ಇದು.)


ದಕ್ಷಿಣ ಅಮೆರಿಕವನ್ನು ಹಲವು ದೃಷ್ಟಿಗಳಿಂದ ಉಳಿದ ಜಗತ್ತು ಇವತ್ತು ನೋಡುತ್ತಿದೆ. ಸಮೃದ್ಧ ನೈಸರ್ಗಿಕ ಸಂಪತ್ತಿರುವ ನೆಲವಾಗಿ; ಜಾಗತೀಕರಣದ ದುಷ್ಪರಿಣಾಮಗಳನ್ನು ಮೊದಲು ಅನುಭವಿಸಿ, ಹೋರಾಟ ಕಟ್ಟಿದ ನಾಡಾಗಿ; ಕಮ್ಯುನಿಸಂ ಸರ್ಕಾರಗಳನ್ನು ಹೊಂದಿರುವ ದೇಶಗಳ ಖಂಡವಾಗಿ; ಉತ್ತರ ಅಮೆರಿಕದ ಪಕ್ಕದಲ್ಲೆ ಇದ್ದರೂ ಅದರ ಏಕಸ್ವಾಮ್ಯಕ್ಕೆ ಸಡ್ಡು ಹೊಡೆದ ಪುಟ್ಟ ದೇಶಗಳ ಆತ್ಮಾಭಿಮಾನದ ನೆಲವಾಗಿ - ಹೀಗೇ ಹಲವು ನೆಲೆಗಳಲ್ಲಿ ಅದರ ಸ್ವರೂಪವನ್ನು ಗ್ರಹಿಸಬಹುದು. ಇವು ವರ್ತಮಾನದ ವ್ಯಾಖ್ಯಾನಗಳಾದರೆ ಐತಿಹಾಸಿಕವಾಗಿ ದಕ್ಷಿಣ ಅಮೆರಿಕ ಹಲವು ವಿಶಿಷ್ಟ ಕುಲ-ನೆಲೆ-ದೇಶ-ನಾಗರಿಕತೆಗಳು ರೂಪುಗೊಂಡ ಸಂಸ್ಕೃತಿ ಪಾಕಶಾಲೆಯೂ ಹೌದು. ಇವೆಲ್ಲದರ ಜೊತೆಗೇ ಅಥವಾ ಇವೆಲ್ಲಕ್ಕಿಂತ ಮುಖ್ಯವಾಗಿ ಅದು ಅಳಿದುಹೋದ, ಅಳಿಯುತ್ತಿರುವ ಸಾವಿರಾರು ಭಾಷೆಗಳ ನಾಡೂ ಆಗಿದೆ.

ಅಪಾಯದಂಚಿನಲ್ಲಿರುವ ಅಂಥ ಒಂದು ಭಾಷೆಯ, ಅದನಾಡುವ ಜನರ ಮುಖಾಮುಖಿ ಅಚ್ಚರಿದಾಯಕವಾಗಿ ಆಯಿತು..

ದ. ಅಮೆರಿಕದ ಅರ್ಜೆಂಟೀನಾ, ಬ್ರೆಜಿಲ್ ಮತ್ತು ಪರಗ್ವೆ ದೇಶಗಳ ಗಡಿಯಲ್ಲಿ ರುದ್ರರಮಣೀಯ ಇಗ್ವಾಸು ಜಲಪಾತವಿದೆ. ಕಾಸಿಗೆ ಕಾಸು ಸೇರಿಸಿ, ಹತ್ತಾರು ಸಾವಿರ ಮೈಲಿ ಕ್ರಮಿಸಿ, ದುಬಾರಿ ಪ್ರವೇಶ ಶುಲ್ಕ ತೆತ್ತು ನೋಡಿಬಂದರೂ ಪರವಾಗಿಲ್ಲ, ಕಣ್ಣಿದ್ದು ಸಾರ್ಥಕವಾಯಿತು ಎನಿಸುವಂತೆ ಮಾಡುವ ಪ್ರಕೃತಿ ವಿಸ್ಮಯ ಇಗ್ವಾಸು. ಜಲಪಾತದ ನೋಟ, ಶಬ್ದ, ರಮಣೀಯತೆ ನಮ್ಮ ಒಳಹೊರಗನೆಲ್ಲ ತುಂಬಿಕೊಂಡು ಅದನ್ನರಗಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕೋ ಅನಿಸುತ್ತಿರುವಾಗ, ಇಗ್ವಾಸು ನ್ಯಾಷನಲ್ ಪಾರ್ಕಿನ ಕಾಡಿನಲ್ಲಿ ಪಂಚತಾರಾ ಹೋಟೆಲ್ ಶೆರಟನ್ ಕಾಣಿಸಿತು! ಅದರ ಆವಾರ ದಾಟಿದರೆ ಅಲ್ಲಲ್ಲಿ ತಿನ್ನಲು, ಕುಡಿಯಲು, ವಿದೇಶೀ ವಿನಿಮಯ ಮಾಡಿಕೊಳಲು, ವ್ಯಾಪಾರ ಮಾಡಲು ಅವಕಾಶವಿರುವ ಸ್ಥಳಗಳು ಕಂಡವು. ನಮ್ಮೊಡನಿದ್ದ ಇನ್ನೊಂದು ಗುಂಪು ಬರುವವರೆಗೆ ಎರಡು ತಾಸು ಕಾಯಲೇಬೇಕಿತ್ತು. ಕಣ್ಣು ತುಂಬಿಕೊಂಡದ್ದನ್ನು ಮೆಲುಕು ಹಾಕುತ್ತ, ಆಕಾಶ ನೋಡುತ್ತ, ಒಂದೊಳ್ಳೆ ಊಟ ಸಿಕ್ಕಿದ್ದರೆ ತಿರುಗಿಬಂದ ಸುಸ್ತೆಲ್ಲ ಮಾಯವಾಗುತ್ತಿತ್ತೋ ಏನೋ ಎಂದು ಹಂಬಲಿಸುವಾಗ ದೂರದಲ್ಲೆಲ್ಲೋ ಸುಶ್ರಾವ್ಯ ಸಮೂಹ ಗಾಯನ ಕೇಳಿಬಂತು.

ಕಿವಿಗೊಟ್ಟು ಕೇಳಲು ದನಿ ಬಂದ ದಿಕ್ಕು ತಿಳಿಯಿತು, ಲಯ ಮತ್ತು ನಾದ ಥಟ್ಟನೆ ಮನ ಸೆಳೆದವು..



ಎತ್ತರದ ಮರಗಳ ನಡುವೆ ಒಂದು ಬದಿಯಲ್ಲಿ ಶೃತಿಬದ್ಧ, ಲಯಬದ್ಧ ಮಧುರ ಹಾಡು ಹಾಡುತ್ತ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ನಿಂತಲ್ಲೆ ನರ್ತಿಸುತ್ತಿದ್ದ ತಂಡ ಕಾಣಿಸಿತು. ತಲೆಗೆ ಹಕ್ಕಿಗರಿ ಸಿಗಿಸಿಕೊಂಡ ಅಪ್ಪ (?), ಅವನೊಡನೆ ಆರು ಮಕ್ಕಳು - ನಾಲ್ವರು ಪುಟ್ಟವರು, ಇಬ್ಬರು ಹದಿವಯದ ಹುಡುಗರು ಹಾಡುತ್ತಿದ್ದರು. ಒಬ್ಬೊಬ್ಬರ ಕೈಲಿ ಒಂದೊಂದು ವಾದ್ಯ. ಅಪ್ಪ ನಾಲ್ಕಾರು ಬಿದಿರ ಕೊಳವೆಗಳ ತರಹದ್ದನ್ನು ಜೋಡಿಸಿ ತುಟಿಗಿಟ್ಟು ಸ್ವರ ಹೊರಡಿಸುತ್ತ, ನಡುನಡುವೆ ಹಾಡುತ್ತ ಇದ್ದರೆ; ಹುಡುಗನೊಬ್ಬ ಡೋಲು ಬಾರಿಸುತ್ತಿದ್ದ. ಮತ್ತೊಬ್ಬ ಕಂಜರ ತಿರುಗಿಸುತ್ತಿದ್ದ. ಎಳಸು ಚೆಲುವೆಯರು ಚಪ್ಪಾಳೆ ತಟ್ಟುತ್ತ ತಾರಕ ಶೃತಿಯಲ್ಲಿ ಮಧುರ ಸ್ವರ ಹೊರಡಿಸುತ್ತಿದ್ದರು. ಹಾಡಿನ ಭಾಷೆ ಅರ್ಥವಾಗದಿದ್ದರೂ ಹಾದು ಹೋಗುವವರನ್ನು ಚಣಕಾಲ ನಿಲಿಸುವಷ್ಟು ಇಂಪಾದ ಹಾಡು..

ಅವರಿಂದ ಅಷ್ಟು ದೂರ, ಮರದ ಕೆಳಗಿನ ಕಟ್ಟೆ ಮೇಲೆ ಅಡ್ಡಾದೆವು..

ಒಂದು ಗುಂಪು ದೂರದಲ್ಲಿ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಮಕ್ಕಳು ಹೆಜ್ಜೆ ಹಾಕುತ್ತ ಹಾಡು ಶುರು ಮಾಡುತ್ತಿದ್ದವು. ಅವರೆದುರಿಗಿನ ವಿಶಿಷ್ಟ ಆಕಾರದ ಬಿದಿರ ಬುಟ್ಟಿಯಲ್ಲಿ ಯೂರೋ, ಡಾಲರ್, ಪೆಸೊ, ರಿಯಲ್‌ಗಳು ಬೀಳುತ್ತಿದ್ದವು. ಜನರ ಗುಂಪು ಮರೆಯಾದದ್ದೇ ಎಳೆಯರು ಹಾಡು ನಿಲಿಸಿ ನಗುತ್ತ, ಸಿಟ್ಟುಗೊಳ್ಳುತ್ತ, ತಿವಿಯುತ್ತ, ಓಡಿ ತಿನಿಸು ಕೊಂಡುತಂದು ತಿನ್ನುತ್ತ ಗಲಾಟೆ ಹಾಕುತ್ತಿದ್ದವು. ಇನ್ನೊಂದು ಗುಂಪು ಕಂಡಾಗಲೇ ಮತ್ತೆ ಹಾಡು ಶುರುವಾಗುವುದು. ವಾದ್ಯ ನುಡಿಸುತ್ತ, ಎದುರಿದ್ದ ಬಿದಿರ ಬುಟ್ಟಿಯನ್ನು ಅರೆಗಣ್ಣಲ್ಲಿ ವಾರೆಯಾಗಿ ಗಮನಿಸುತ್ತ ನಿಂತಿದ್ದ ಅಪ್ಪ ಯಾವುದೋ ಸಮಾಧಿಯಲ್ಲಿದ್ದಂತಿದ್ದ.


ಅಲ್ಲೇ ಆಚೆ ಆದಿವಾಸಿ ಹೆಣ್ಮಕ್ಕಳು ಮತ್ತು ಗಂಡಸರು ಬಿಲ್ಲುಬಾಣ, ತೆರತೆರನ ವಾದ್ಯಗಳು, ಮರದ ಸಾಮಾನು, ಬುಟ್ಟಿ, ಚಾಪೆ, ಚೀಲ ಹೆಣೆಯುತ್ತ ಮಾರುತ್ತ ಕೂತಿದ್ದರು. ಅದು ಅವರ ವರ್ಕ್‌ಶಾಪ್ ಹಾಗೂ ಮಾರಾಟ ಮಳಿಗೆಯಂತೆ. ತರುಣಿಯೊಬ್ಬಳು ಫೆವಿಕ್ವಿಕ್ ಮತ್ತು ಬಣ್ಣ ಇಟ್ಟುಕೊಂಡು ಮರದ ಹಕ್ಕಿ ಮಾಡುತ್ತ ಕೂತಿದ್ದಳು.



ನೋಡನೋಡುತ್ತಿದ್ದಂತೆ ಅಗಲ ಮುಖದ ಅಪ್ಪ, ಮರಕ್ಕೆ ನೇತುಬಿಟ್ಟ ಪ್ಲಾಸ್ಟಿಕ್ ಚೀಲದಲ್ಲಿ ಏನನ್ನೋ ತುಂಬಿ ಬಂದ. ಬನ್ನುಗಳ ತರಹ ಉರೂಟು ಇರುವ ತಿನಿಸು ಗೋಣಿಚೀಲದಷ್ಟು ದೊಡ್ಡ ಚೀಲದಲ್ಲಿ ಅರ್ಧದಷ್ಟಿದೆ. ಎರಡು ಮೂರು ಸಲ ಎಲ್ಲಿಂದಲೋ ತಂದು ಅದರಲ್ಲಿ ಹಾಕಿಬಂದದ್ದು ನೋಡಿದೆವು. ಏನದು? ಎಲ್ಲಿಂದ ತಂದ? ತಿಂದು ಬಿಟ್ಟಿದ್ದು ಹೆಕ್ಕಿದನೋ? ಬೇಡಿ ಪಡೆದನೋ? ಗಳಿಕೆಯ ದುಡಿಮೆಯಿಂದ ಕೊಂಡು ತಂದನೋ? ಅಷ್ಟೊಂದು ಏಕೆ? ಏನೇನೋ ಊಹೆಗಳು.

ಸೂಕ್ಷ್ಮವಾಗಿರು ಎಂದು ಮಗು ಎಚ್ಚರಿಸಿತು..

ನನಗರಿವಿಲ್ಲದೆ ಅವರೆದುರು ನಿಂತಿದ್ದೆ. ಮಾಸಿದ ಬಿಳಿಯ ಮುಖ. ಅಷ್ಟೇನೂ ಒಪ್ಪವಾಗಿರದ ವೇಷ. ಆ ಮುಖಗಳಲ್ಲಿ ಬೇಸರ, ಬಳಲಿಕೆಯಿತ್ತೇ ವಿನಹ ನಗು ಇರಲಿಲ್ಲ. ಪ್ರತಿನಿತ್ಯ ಬರುವ ಪ್ರವಾಸಿಗರಿಗೆ, ಅಪರಿಚಿತರ ಎದುರು ಲವಲವಿಕೆಯಿಂದ ಹಾಡಬೇಕಾದ ಅನಿವಾರ್ಯತೆಗೆ ಅವರೆಷ್ಟು ಒಗ್ಗಿಕೊಂಡಿದ್ದಾರೆಂದರೆ ಆಪ್ತತೆ, ಸಹಜ ನಗುವಿನ ಒಂದೆಳೆಯೂ ಕಾಣದ ಯಾವುದೋ ಬಿಗು. ಅವರಲ್ಲೆಲ್ಲ ಸಣ್ಣ ಹುಡುಗಿ ತದೇಕವಾಗಿ ಅಕ್ಕನ ಸಂದಿಯಿಂದ ಮಗಳು ತೊಟ್ಟ ಟೋಪಿಯನ್ನೇ ನೋಡುತ್ತಿತ್ತು. ಯಾಕೋ ಆ ಗರಿಗರಿ ಪ್ಲಾಸ್ಟಿಕ್ ನೋಟುಗಳ ನಡುವೆ ಇರಲು ನಮ್ಮ ಕಾಗದದ ಗಾಂಧಿ ತಾತನಿಗೆ ಸಾಧ್ಯವಿಲ್ಲ ಎನಿಸಿತು. ಹುಡುಗರ ಬಳಿ ನಿಮ್ಮ ಶಾಲೆ ಎಲ್ಲಿದೆ ಎಂದು ಕನ್ನಡದಲ್ಲಿ ಕೇಳಿದೆವು. ಹೌದು, ಕನ್ನಡದಲ್ಲೇ ಅಲ್ಲಿ ಮಾತಾಡುತ್ತಿದ್ದೆವು. ಯಾಕೆಂದರೆ ಅಲ್ಲಿನವರಿಗೆ ಬರುವುದು ನಮಗೆ ಬರದ ಪೋರ್ಚುಗೀಸ್, ಸ್ಪ್ಯಾನಿಶ್ ಮಾತ್ರವಾದ್ದರಿಂದ ಅಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲ ಭಾಷೆಗಳೂ ಒಂದೇ. ಅವು ಕೆಂಪೇರಿ ತಂತಮ್ಮಲ್ಲೆ ಕಚಪಚ ಮಾತಾಡಿಕೊಂಡು ಏನೋ ಉತ್ತರ ಹೇಳಿದವು. ಅದು ಯಾವ ಭಾಷೆಯೋ ತಿಳಿಯಲಿಲ್ಲ. ಉಳಿದವರಾಡುವ ನುಡಿಗಿಂತ ಭಿನ್ನ ಎಂದಷ್ಟೆ ಗೊತ್ತಾಯಿತು.

ಅವರ ತಲೆ ಮೇಲೆ ಒಂದು ಬೋರ್ಡು ನೇತಾಡುತ್ತಿತ್ತು: ‘ಇದು ಗ್ವರಾನಿ ಕಾರ್ನರ್. ಇಲ್ಲಿ ಇನ್ನು ಮುಂದೆ ಪ್ರತಿದಿನ ಗ್ವರಾನಿ ಬುಡಕಟ್ಟಿನ ಮಕ್ಕಳು ಹಾಡಲಿದ್ದಾರೆ. ಅವರ ಇರುವಿಕೆ ಹಾಗೂ ಗಾಯನ ಇಗ್ವಾಸು ನ್ಯಾಷನಲ್ ಪಾರ್ಕಿಗೆ ರಂಗನ್ನು ತಂದುಕೊಡಲಿದೆ ಎಂಬ ಭರವಸೆಯಿದೆ’ ಎಂದು ಬರೆಯಲಾಗಿತ್ತು.

ಓ, ಗ್ವರಾನಿಗಳೇ ಇವರು?! ಒಂದು ಕಾಲದಲ್ಲಿ ಈ ನೆಲದ ಬಹುಸಂಖ್ಯಾತ, ಸಮೃದ್ಧ ಕುಲವಾಗಿದ್ದವರಿಗೆ ಇವತ್ತು ಬುಟ್ಟಿಯನಿಟ್ಟು ಭಕ್ಷೀಸು ಕೇಳುವ ಪರಿಸ್ಥಿತಿ ಬಂದಿತೆ? ಅವರ ಹಿಂದೆ ಅನತಿ ದೂರದಲ್ಲಿ ಕಾಣುತ್ತಿದ್ದ ಶೆರಟನ್ ಹೋಟೆಲಿನ ಬೃಹತ್ ಇಮಾರತು ಬೀದಿಗೆ ಬಂದು ಬಿದ್ದ ಮೂಲನಿವಾಸಿಗಳ ಅಣಕಿಸುತ್ತಿಲ್ಲವಷ್ಟೆ?


ಅಭಿವೃದ್ಧಿಗೆ ಬೆಲೆ ತೆತ್ತ ಕುಲ: ಗ್ವರಾನಿ 


ದೂರದ ನಾಡಿಗೆ ಹೋಗಿ, ರಟ್ಟೆ-ಶಸ್ತ್ರ ಬಲದಿಂದ ಅಲ್ಲಿದ್ದವರನ್ನು ಹೆದರಿಸಿ, ಅವರ ಜಾಗ ಒತ್ತರಿಸಿ, ತನ್ನದೆಂದು ಒಕ್ಕಲೆಬ್ಬಿಸಿ, ಆಕ್ರಮಿಸಿದವರು ಉತ್ತರೋತ್ತರ ಅಭಿವೃದ್ಧಿ ಹೊಂದಬಹುದು. ಅಷ್ಟೇ ಅಲ್ಲ, ‘ಆ ಕಾಡು ಮನುಷ್ಯರು ಹೋದಮೇಲೆ ಎಂಥ ರಸ್ತೆ, ಮಹಲು, ಅಣೆಕಟ್ಟು, ಕಾರ್ಖಾನೆಗಳ ಕಟ್ಟಿ ಅಭಿವೃದ್ಧಿ ಮಾಡಿದ್ದೇವೆ ನೋಡಿ’ ಎಂದು ಬೀಗಲೂಬಹುದು. ಆದರೆ ಈ ಅಭಿವೃದ್ಧಿಗೆ ಬೆಲೆ ತೆತ್ತವರು ಯಾರು? ಎಷ್ಟು? ಜಗತ್ತಿನೆಲ್ಲೆಡೆಯ ಆದಿವಾಸಿ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳಲ್ಲಿ ಈ ಪ್ರಶ್ನೆಯ ಮೂಲವಿದೆ. ಸಮೃದ್ಧ ಗಣಿ, ತೈಲ, ಕಾಡುಗಳಿದ್ದ ಪ್ರದೇಶದಲ್ಲಿ ವಾಸಿಸುತ್ತಿದ್ದ ದ. ಅಮೆರಿಕದ ಗ್ವರಾನಿ ಬುಡಕಟ್ಟು ಸಮುದಾಯದ ಐದು ಶತಮಾನಗಳ ಏಳುಬೀಳಿನ ಕತೆ ಈ ಪ್ರಶ್ನೆಗೆ ಉತ್ತರವಾಗುತ್ತದೆ. ಅವರ ಇಂದಿನ ದುಃಸ್ಥಿತಿ ಆಧುನಿಕ ಸಮಾಜದ ಆಕ್ರಮಣಶೀಲತೆ ಪ್ರಾಚೀನ ಬುಡಕಟ್ಟುಗಳನ್ನು ಅಸಹಾಯಕ ದುಸ್ತರ ಬದುಕಿಗೆ ತಂದೊಡ್ಡಿ ನಿಲಿಸಿರುವ ದುರಂತಕ್ಕೆ ಸಾಕ್ಷಿಯಾಗಿದೆ.

ಗ್ವರಾನಿ ದಕ್ಷಿಣ ಅಮೆರಿಕದ ಅತಿ ಹಳೆಯ ಬುಡಕಟ್ಟುಗಳಲ್ಲೊಂದು. ಈ ಹೆಸರು ಅವರಿಟ್ಟುಕೊಂಡದ್ದಲ್ಲ. ಅವರ ಹೆಸರು ‘ಅಬಾ’, ಅಂದರೆ ಜನ. ಜೆಸೂಟ್ ಪಾದ್ರಿಗಳು ಅವರನ್ನು ಕಯುವ (ಕಾಡುಜನ) ಕಂಯ್ಞುವಾ (ನಿರಾಕರಿಸುವವರು) ಎಂದು ಕರೆದರು. ಕೊನೆಗೆ ಕ್ವ-ರಾನಿ ಆಗಿ, ನಂತರ ಗ್ವ-ರಾನಿ ಆಯಿತೆನ್ನುವುದು ಒಂದು ವಿವರಣೆ.

೫೦೦ ವರ್ಷ ಕೆಳಗೆ ವಸಾಹತುಶಾಹಿ ಯೂರೋಪಿಯನ್ನರು ಮೊದಲು ಈ ನೆಲಕ್ಕೆ ಬಂದಿಳಿದಾಗ ಅವರ ಸಂಖ್ಯೆ ನಾಲ್ಕು ಲಕ್ಷದಷ್ಟಿತ್ತು. ಶಿಕಾರಿ, ಜೇನು ಕೀಳುವುದು, ಮೆಕ್ಕೆಜೋಳ ಬೆಳೆಯುವುದು, ಪಶುಸಂಗೋಪನೆಯೇ ಮೊದಲಾದ ಚಟುವಟಿಕೆಗಳಿಂದ ಶಾಂತ ಜೀವನ ನಡೆಸಿದ್ದ ಅರೆ ಅಲೆಮಾರಿ ಸಮುದಾಯ ಅವರದು. ಕ್ರಿ. ಶ. ೧೫೩೭ರಲ್ಲಿ ಗೊಂಜಾಲೊ ಮೆಂಡೋನ್ಸಾ ಮೊತ್ತ ಮೊದಲ ಬಾರಿಗೆ ಈಗಿನ ಪರಗ್ವೆ ಪ್ರದೇಶಕ್ಕೆ ಬಂದಿಳಿದು ಗ್ವರಾನಿ ಜನರಿಗೆ ಮುಖಾಮುಖಿಯಾದ. ಅಲೆಮಾರಿಗಳಿಗೊಂದು ನೆಲೆಯೆಂದು ಅಸುನ್ಸಿಯಾ ಪಟ್ಟಣ ಕಟ್ಟಿದ. ನಂತರ ಅದು ಪರಗ್ವೆ ಪ್ರಾಂತ್ಯದ ರಾಜಧಾನಿಯಾಯಿತು. ಯೂರೋಪಿಯನ್ ಮತ್ತು ಗ್ವರಾನಿ ಮಹಿಳೆಯರ ಸಂಪರ್ಕದಿಂದ ಮಿಶ್ರಕುಲದ ಮೆಸ್ಟಿಜೊಗಳು ಹುಟ್ಟಿದರು.

ಹೀಗೆ ಒಂದೆಡೆ ನೆಲೆಯಾದ ಗ್ವರಾನಿಗಳನ್ನು ಗುಲಾಮಿ ವ್ಯಾಪಾರ ನಡೆಸುತ್ತಿದ್ದ ಕಡಲ್ಗಳ್ಳರು ಹಾಗೂ ಜೆಸ್ಯೂಟ್ ಪಾದ್ರಿಗಳು ಸಮೀಪಿಸಿದರು. ಕ್ರೌರ್ಯವೇ ಮೈವೆತ್ತಂತಿದ್ದ ಕಡಲ್ಗಳ್ಳರಿಗೆ ಅವರನ್ನು ಹಿಡಿದು ಗುಲಾಮ ವ್ಯಾಪಾರ ಮಾಡುವ ಲಾಭದ ಲೆಕ್ಕಾಚಾರವಷ್ಟೆ ಇದ್ದರೆ, ಪಾದ್ರಿಗಳಿಗೆ ಗ್ವರಾನಿಗಳ ಮತಾಂತರದ ಜೊತೆಗೆ ಕಾಡುಮನುಷ್ಯರನ್ನು ನಾಗರಿಕರನ್ನಾಗಿಸುವ ಹಂಬಲವೂ ಇತ್ತು. ಬ್ರೆಜಿಲಿನ ಸಾವೋ ಪೋಲೋ ಪಟ್ಟಣ ಆಗ ಪೋರ್ಚುಗೀಸ್ ಮತ್ತು ಡಚ್ ಕಡಲ್ಗಳ್ಳರ ಗುಲಾಮಿ ವ್ಯಾಪಾರದ ಮೂಲ ನೆಲೆಯಾಗಿತ್ತು. ಕಡಲ್ಗಳ್ಳರು ಸ್ಥಳೀಯ ಇಂಡಿಯನ್ ಮತ್ತು ಆಫ್ರಿಕನ್ ಹೆಂಗಸರೊಡನೆ ಸಂಪರ್ಕ ಸಾಧಿಸಿ ಗಂಡಸರು ಹೆಂಗಸರೆನ್ನದೆ ಅವರ ಹಿಡಿದು ಗುಲಾಮರ ಸಂತೆಯಲ್ಲಿ ಮಾರಿದರು.


ಈ ಆಕ್ರಮಣ, ಅತಿಕ್ರಮಣದ ವಿರುದ್ಧ ಗ್ವರಾನಿಗಳ ಬಳಿ ಇದ್ದ ಅಸ್ತ್ರವಾದರೂ ಯಾವುದು? ಬಿಲ್ಲು-ಬಾಣ! ಅಂಥ ಅಸಹಾಯಕ ಪರಿಸ್ಥಿತಿಯಲ್ಲಿ ಸ್ಪೇನಿನ ಮಿಶನರಿಗಳು ಬಂದರು. ಅದರಲ್ಲಿಯೂ ಜೆಸ್ಯೂಟ್ ಪಾದ್ರಿಗಳು ಗುಲಾಮ ವ್ಯಾಪಾರವನ್ನು ವಿರೋಧಿಸಿದರು. ಯಾವುದೋ ಸ್ಪೇನಿನ ರಾಜನಿಂದ ಕಳಿಸಲ್ಪಟ್ಟು ತಮ್ಮ ಬೆಂಬಲಕ್ಕೆ ನಿಂತ, ತಮ್ಮ ಆರೋಗ್ಯ-ಆಹಾರ ಕುರಿತು ಚಿಂತಿಸಿದ ಮಿಶನರಿಗಳು ಗ್ವರಾನಿ ಜನರಿಗೆ ರಕ್ಷಕ ದೇವತೆಗಳಂತೆ ಕಾಣಿಸಿದರು. ಆದರೂ ಚರ್ಚ್ ಮತ್ತು ಕಡಲ್ಗಳ್ಳರ ನಡುವೆ, ಹಲವು ಬುಡಕಟ್ಟುಗಳ ನಡುವೆ, ಗ್ವರಾನಿ ಮತ್ತು ಜೆಸ್ಯೂಟ್ ಮಿಶನರಿಗಳ ನಡುವೆ ಸಂಘರ್ಷ ನಡೆಯುತ್ತಲೆ ಇತ್ತು. ಪ್ರತಿ ಭಾನುವಾರ ಚರ್ಚಿನ ಬಳಿ ಪ್ರಾರ್ಥನೆಗಾಗಿ ನೆರೆಯುತ್ತಿದ್ದ ಬುಡಕಟ್ಟುಗಳನ್ನು ಹೊತ್ತೊಯ್ಯಲು ಕಡಲ್ಗಳ್ಳರು ದಾಳಿಯಿಡುತ್ತಿದ್ದರು. ಕ್ರಿ. ಶ. ೧೬೩೦ರ ಸುಮಾರಿಗೆ ಹೀಗೆ ಭಾನುವಾರದ ಪ್ರಾರ್ಥನೆ ಸಮಯದಲ್ಲಿ ಅಪಹೃತರಾಗಿ ಗುಲಾಮರಾದವರ ಸಂಖ್ಯೆ ೬೦ ಸಾವಿರ ತಲುಪಿತು! ಶಸ್ತ್ರಸಜ್ಜಿತ ಲೂಟಿಯೆದುರು ಪಾದ್ರಿಗಳೂ ನಿಸ್ಸಹಾಯಕರಾಗಿದ್ದರು. ಪರಿಣಾಮ ನಾಲ್ಕು ಲಕ್ಷ ಗ್ವರಾನಿಗಳಲ್ಲಿ ಕೆಲವೇ ಸಾವಿರ ಜನ ಉಳಿದರು. ಪಾದ್ರಿಗಳು ಚರ್ಚಿನ ಪೋಪರಲ್ಲಿ, ಸ್ಪೇನಿನ ರಾಜನಲ್ಲಿ ವಿನಂತಿಸಿ, ವಾದಿಸಿ ಗುಲಾಮಗಿರಿ ನಿಲಿಸುವಂತೆ ಹಾಗೂ ಇನ್ನಷ್ಟು ಮಿಶನ್ನುಗಳ ಕಳಿಸುವಂತೆ ಮನವೊಲಿಸಿದರು. ೧೦ ಸಾವಿರ ದನಕರುಗಳನ್ನು ಬುಡಕಟ್ಟು ಜನರಿಗೆ ಹಂಚಲಾಯಿತು. ನಾನಾ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು.

ಇದರ ಪರಿಣಾಮವಾಗಿ ೧೭೩೨ರ ವೇಳೆಗೆ ಎರಡು ಸಲ ಬಂದೆರಗಿದ ಸಿಡುಬು ಮಾರಿಗೆ ೪೨ ಸಾವಿರ ಜನ ಸತ್ತರೂ ಸಹಾ ಜನಸಂಖ್ಯೆಯಲ್ಲಿ ಏರಿಕೆ ಕಂಡಿತು. ೧೦೦ ವರ್ಷಗಳಲ್ಲಿ ಅವರ ಸಂಖ್ಯೆ ೧.೪ ಲಕ್ಷವಾಯಿತು.

ನಂತರ ಸ್ಪ್ಯಾನಿಶ್, ಪೋರ್ಚುಗೀಸ್ ಘರ್ಷಣೆ ಶುರುವಾಯಿತು. ಅವರು ತಂತಮ್ಮಲ್ಲಿ ಭೂಪ್ರದೇಶ ಹಂಚಿಕೊಳ್ಳುವಾಗ ಆಯಾ ಭೂಭಾಗದ ಮತಾಂತರಗೊಂಡ ಆದಿವಾಸಿ ಕುಲಗಳನ್ನೂ ಹಂಚಿಕೊಂಡರು. ಆದರೆ ಒಂದು ಆಳ್ವಿಕೆಯಿಂದ ಮತ್ತೊಂದಕ್ಕೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ, ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹೋಗಲು ಗ್ವರಾನಿಗಳು ಹಾಗೂ ಮತ್ತಿತರ ಸಣ್ಣಪುಟ್ಟ ಬುಡಕಟ್ಟುಗಳು ಒಪ್ಪಲಿಲ್ಲ. ಘರ್ಷಣೆ, ಒತ್ತಾಯದ ಒಕ್ಕಲೆಬ್ಬಿಸುವಿಕೆ ಶುರುವಾಯಿತು. ಆದಿವಾಸಿಗಳ ಒಳಬಂಡಾಯ, ನರಬಲಿಯಂತಹ ಮೌಢ್ಯಾಚರಣೆಗಳು, ಜೆಸ್ಯೂಟ್‌ಗಳ ಕೊಲೆ, ದಂಗೆ, ಸಿಡುಬು-ದಡಾರ-ಕ್ಷಯ-ಫ್ಲು ಮೊದಲಾದ ಯೂರೋಪಿಯನ್ ಕಾಯಿಲೆಗಳ ಸೋಂಕು, ಗುಲಾಮಿ ವ್ಯಾಪಾರಿಗಳ ಅಂತರ್ಯುದ್ಧ ಮುಂತಾದ ಸಾಮಾಜಿಕ ಕ್ಷೋಭೆಗಳು ಹಲವು ಸ್ಥಳೀಯ ಬುಡಕಟ್ಟುಗಳನ್ನು ಸಂಪೂರ್ಣ ನಾಶದಂಚಿಗೆ ತಳ್ಳಿದವು. ಅಸಹಾಯಕತೆ ಹುಟ್ಟಿಸಿದ ಸ್ಪರ್ಧೆಗೆ ಪರಸ್ಪರರನ್ನು ನಾಶ ಮಾಡಲು ಆ ಕುಲಗಳು ಸಿಡುಬು ಪೀಡಿತರ ಬಟ್ಟೆಯನ್ನು ಶತ್ರುಕುಲಕ್ಕೆ ದಾನ ನೀಡುವ ತಂತ್ರವನ್ನೂ ಬಳಸಿಕೊಂಡವು!

ಹೀಗೇ ಕೊನೆಮೊದಲಿರದ ನಾಶ ಪರಂಪರೆ ಮುಂದುವರೆದು ಇನ್ನೊಂದು ಶತಮಾನ ಕಳೆವ ಹೊತ್ತಿಗೆ, ೧೮೧೪ರ ವೇಳೆಗೆ ಎಷ್ಟೋ ಸಣ್ಣಪುಟ್ಟ ಸಮುದಾಯಗಳು ಸಂಪೂರ್ಣ ನಾಶವಾದವು. ಬರೀ ೮,೦೦೦ ಗ್ವರಾನಿಗಳು ಮಾತ್ರ ಉಳಿದಿದ್ದರು. ಅವರ ಮನೆ, ದನ, ಹೊಲ, ಭಾಷೆ, ಸಮಾಜ ಎಲ್ಲ ನಾಶವಾಗಿತ್ತು. ಹಾಗೆ ಬದುಕಿ ಉಳಿದ ಕೆಲವರು ೧೮೪೮ರ ವೇಳೆಗೆ ‘ಪೌರ’ ಎಂಬ ಹಣೆಪಟ್ಟಿ ಪಡೆದು ನಗರಕ್ಕೆ ಹೋಗಿ ನೆಲೆಯಾದರು. ನಗರದಲ್ಲಿ ಸಂಪತ್ತು ಗಳಿಸಿ ತಮ್ಮ ಮೂಲ ನೆಲೆ, ಭಾಷೆ, ಸಂಸ್ಕೃತಿ, ಸಂಘರ್ಷದ ಕತೆ ಮರೆತರು. ಹಲವರು ನಾಗರಿಕ ಜಗತ್ತಿಗೆ ಹೇಸಿ ಹಳೆಯ ನೆಲೆಗಳಲ್ಲಿ ದೂರವೇ ವಾಸಿಸಿದರು.

ಹೀಗೆ ಅರಣ್ಯವಾಸಿಗಳಾಗಿದ್ದ ಬ್ರೆಜಿಲ್‌ನ ಗ್ವರಾನಿಗಳು ಈಗ ೫೧,೦೦೦ ಜನರಿದ್ದಾರೆ. ಆ ದೇಶದ ದೊಡ್ಡ ಬುಡಕಟ್ಟು ಇದೇ. ಉಳಿದಂತೆ ಪರಗ್ವೆ, ಅರ್ಜೆಂಟೀನಾಗಳಲ್ಲಿ ಅವರು ಕೆಲವು ಸಾವಿರದಷ್ಟಿದ್ದಾರೆ.


ಆದರೆ, ಬ್ರೆಜಿಲಿನ ಎಲ್ಲ ಗ್ವರಾನಿಗಳನ್ನೂ ಅವರ ಪಾರಂಪರಿಕ ನೆಲದಿಂದ ‘ಅಭಿವೃದ್ಧಿ’ಯ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿದೆ. ಅಲ್ಲೆಲ್ಲ ಗಣಿ ಕಂಪನಿ, ವಿದ್ಯುದಾಗಾರಗಳು, ವಿಸ್ತಾರ ಕೃಷಿ ಪ್ರದೇಶಗಳು ತಲೆಯೆತ್ತಿ ಅವರ ನೆಲೆ ನಾಶವಾಗಿದೆ. ೧೯೯೩ರಲ್ಲೇ ಅವರಿಗೆ ಬೇರೆ ನೆಲ ಕೊಡುವುದಾಗಿ ಸರ್ಕಾರ ಘೋಷಿಸಿದ್ದರೂ ಅದು ಇನ್ನೂ ನೆರವೇರಿಲ್ಲ. ಹೆಚ್ಚಿನವರು ಹೆದ್ದಾರಿಗಳ ಪಕ್ಕ, ನಗರದ ಚೌಕ-ಫ್ಲೈ ಓವರುಗಳ ಕೆಳಗೆ, ನಗರದ ಹೊರಗೆ ಸ್ಲಮ್ಮುಗಳಾಚೆಯ ಸ್ಲಮ್ಮುಗಳಲ್ಲಿ ತಾತ್ಕಾಲಿಕ ಷೆಡ್ಡುಗಳಲ್ಲಿ ಬದುಕುತ್ತಿದ್ದಾರೆ. ಶಿಕ್ಷಿತರಲ್ಲದ; ಶಿಕಾರಿ-ಕೃಷಿ ಬಿಟ್ಟು ಮತ್ತೇನೂ ಗೊತ್ತಿಲ್ಲದ ಅವರು ದಶಕಗಳಿಂದ ಷೆಡ್ಡುಗಳಲ್ಲಿದ್ದಾರೆ. ನೈಸರ್ಗಿಕ ಆಹಾರ-ನೀರಿನ ಮೂಲವಿಲ್ಲದೆ; ರಕ್ಷಣೆ-ಆರೋಗ್ಯ-ಶಿಕ್ಷಣ-ಮನರಂಜನೆ ಮೊದಲಾದ ಯಾವ ನಾಗರಿಕ ವ್ಯವಸ್ಥೆಯೂ ಇಲ್ಲದೆ ಆತ್ಮಗೌರವ ಕಳೆದುಕೊಂಡ ಬದುಕಬೇಕಾದ ಅನಿವಾರ್ಯತೆ ಬಂಡಾಯವನ್ನೇನೋ ಸೃಷ್ಟಿಸಿತು. ಆದರೆ ಅದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು. ಅವರ ಅನೇಕ ಮುಖಂಡರು ಹತ್ಯೆಯಾದರು. ಈಗ ತಾತ್ಕಾಲಿಕ ಷೆಡ್ಡುಗಳಲ್ಲಿ ಒಂದು ತಲೆಮಾರೇ ಹುಟ್ಟಿ ಬಿಟ್ಟಿದೆ. ಅವರ ಹಸುಗೂಸುಗಳು ಅಪೌಷ್ಟಿಕತೆಯಿಂದ ಸಾಯುತ್ತಿವೆ, ಆತ್ಮಹತ್ಯೆಯ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ೩೪ ಪಟ್ಟು ಹೆಚ್ಚಿದೆ. ಉದ್ಯೋಗವಿಲ್ಲದೆ, ಶಿಕ್ಷಣವಿಲ್ಲದೆ ದಿಕ್ಕೆಟ್ಟ ತರುಣರು ಯಾರೂ ಮಾಡದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಪಾರಂಪರಿಕ ಕೌಶಲ್ಯ, ಜ್ಞಾನಗಳು ಆಧುನಿಕತೆಯ ಎದುರು ಕಳಪೆಯಾಗಿಬಿಟ್ಟಿವೆ. ಅವರ ಮಾನವಹಕ್ಕು ಸಂರಕ್ಷಣೆಯನ್ನು ಆದ್ಯತೆಯ ಮೇರೆಗೆ ರಕ್ಷಿಸಬೇಕೆಂದು ವಿಶ್ವಸಂಸ್ಥೆ ಪದೇಪದೇ ಎಚ್ಚರಿಸುತ್ತಿರುವಾಗಲೂ, ಅವರ ಆಗಸದಲ್ಲಿ ಆಜಾದಿಯೆಂಬ ಸೂರ್ಯ ಇನ್ನೂ ಅಸ್ತಂಗತನಾಗಿಯೇ ಇದ್ದಾನೆ.

ಹೊಸ ಜಗತ್ತಿನ ಇಂಡಿಯನ್ನರು

ವಸಾಹತುಗಾರರು ತಾವು ಅನ್ವೇಷಿಸಿದ ‘ಹೊಸ ಜಗತ್ತಿನ’ ಸ್ಥಳೀಯರನ್ನೆಲ್ಲ ಇಂಡಿಯನ್ನರೆಂಬ ಒಂದೇ ಹೆಸರಿನಲ್ಲಿ ಕರೆದರೂ ಸಹ ದ. ಅಮೆರಿಕದಲ್ಲಿ ಇಂಥ ಸಾವಿರಾರು ಇಂಡಿಯನ್ ಕುಲಗಳಿದ್ದವು. ಯೂರೋಪಿನ ನಾವಿಕರು ಬಂದಿಳಿದಾಗ ಬ್ರೆಜಿಲ್ ಒಂದರಲ್ಲೇ ೨,೦೦೦ ಬುಡಕಟ್ಟು ಕುಲಗಳಿದ್ದವು. ಇವತ್ತಿಗೂ ಅತಿ ಹೆಚ್ಚು ಮನುಷ್ಯ ಸಂಪರ್ಕವಿರದ ಕುಲಗಳು (೬೭) ಬ್ರೆಜಿಲಿನಲ್ಲಿವೆ. ಅವರು ೧೮೮ ಸ್ಥಳೀಯ ಭಾಷೆಗಳನ್ನಾಡುತ್ತಾರೆ. ಅರ್ಜೆಂಟೀನಾದಲ್ಲಿ ಇಂಥ ೩೫ ಬುಡಕಟ್ಟುಗಳಿವೆ. ಬೊಲಿವಿಯಾದಲ್ಲಿ ಈ ಸಂಖ್ಯೆ ೩೬, ಎಂದರೆ ದೇಶದ ಜನಸಂಖ್ಯೆಯ ೬೨%. ಚಿಲಿಯಲ್ಲಿ ೪.೬% ಜನ ಬುಡಕಟ್ಟು ಎಂದು ಗುರುತಿಸಿಕೊಂಡವರು. ಪೆರುವಿನಲ್ಲಿ ೪೫% ಜನಸಂಖ್ಯೆ ‘ಇಂಡಿಯನ್ಸ್’ ಇದ್ದಾರೆ. ಕೊಲಂಬಿಯಾದಲ್ಲಿ ೩.೪% ಸ್ಥಳೀಯ ಕುಲಗಳಿವೆ. ವೆನಿಜುವೆಲಾದಲ್ಲಿ ೨೬ ಸ್ಥಳೀಯ ಕುಲಗಳಿವೆ.

ಇವರೆಲ್ಲ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು. ಶಿಕಾರಿ, ಮೀನುಗಾರಿಕೆ, ಕೃಷಿ, ಅರಣ್ಯೋತ್ಪನ್ನ ಸಂಗ್ರಹ ಅವರ ಜೀವನಾಧಾರ. ಮೆಕ್ಕೆಜೋಳ, ಕೆಸಾವಾ, ಸೇಂಗಾ ಹಲವರ ಮುಖ್ಯ ಆಹಾರ. ಈ ಸಮುದಾಯಗಳು ಬುಡಕಟ್ಟು ಜನರೆಂದು ನೋಡಿದ ಕೂಡಲೇ ಹೇಳಬಹುದು. ಅಂಥ ಏನೋ ಒಂದು ‘ತನ’ ಆ ಚಹರೆಗಳಲ್ಲಿದೆ. ಅವರ ಮೈಬಣ್ಣ ತಿಳಿಕಂದು. ನೋಡಲು ಎಲ್ಲರೂ ಹೆಚ್ಚು ಕಡಿಮೆ ಒಂದೇ ತೆರನಾಗಿ ನಮ್ಮ ಅಸ್ಸಾಮಿ, ಮಣಿಪುರಿ ರಾಜ್ಯದವರ ಚಹರೆ ಹೊಂದಿರುವಂತೆ ಕಾಣುತ್ತಾರೆ. ಅದಕ್ಕೆ ಕಾರಣವಿದೆ: ದಕ್ಷಿಣ ಅಮೆರಿಕದ ಬಹುತೇಕ ಎಲ್ಲ ಬುಡಕಟ್ಟುಗಳು ೨೩,೦೦೦ ವರ್ಷ ಕೆಳಗೆ ಪೂರ್ವ ಏಷಿಯಾದಿಂದ, ಅದರಲ್ಲೂ ಸೈಬೀರಿಯಾದಿಂದ ಮೂರು ಹಂತಗಳಲ್ಲಿ ವಲಸೆ ಬಂದವರು. ಅವರ ಭಾಷೆಗಳ ಅಧ್ಯಯನ, ವಂಶವಾಹಿ ಅಧ್ಯಯನ ಹಾಗೂ ಜನಾಂಗೀಯ ಅಧ್ಯಯನಗಳು ಇದನ್ನು ಧೃಢಪಡಿಸಿವೆ.

ಇವತ್ತು ಈ ಬುಡಕಟ್ಟು ಕುಲಗಳಿಗೆ ಬದುಕು ಕಟ್ಟಿಕೊಳ್ಳಲು ಎದುರಾದ ಸವಾಲಿನಷ್ಟೆ ದೊಡ್ಡದಾದ ಮತ್ತೊಂದು ಅಪಾಯದ ಕತ್ತಿ ತಲೆಮೇಲೆ ತೂಗುತ್ತಿದೆ: ಅದು ಭಾಷೆಯ ಅಳಿವಿನದು. ತಮ್ಮ ಭಾಷೆಯಲ್ಲಿ ದಿನಗಟ್ಟಲೆ ಹಾಡುತ್ತ, ನರ್ತಿಸುವ ಮೂಲಕ ದೇವರೊಡನೆ ಸಂಪರ್ಕ ಸಾಧಿಸಬಹುದು ಎಂದವರು ಭಾವಿಸಿದ್ದರು. ಈಗ ಅವರ ಪವಿತ್ರ ಭಾಷೆಗಳೂ ನಶಿಸುತ್ತ ಹೋಗಿವೆ. ಬರಬರುತ್ತ ಶಕ್ತಿಶಾಲಿಗಳ ಭಾಷೆಯೇ ಶಕ್ತಿಶಾಲಿ ಭಾಷೆಯಾಗಿ ಗ್ವರಾನಿಗಳು ಗ್ವರಾನಿ ಮರೆತು ಇಂಗ್ಲಿಷ್-ಸ್ಪ್ಯಾನಿಶ್-ಪೋರ್ಚುಗೀಸ್ ಕಲಿತರೆ, ಆಗದು ವಸಾಹತುಶಾಹಿಗಳ ನಿಜವಾದ ವಿಜಯವಾಗುತ್ತದೆ. ಒಮ್ಮೆ ‘ಆ’ ಭಾಷೆ ಹಿಡಿತ ಸಾಧಿಸಿದರೆ ಮುಗಿಯಿತು, ತಮ್ಮ ಮೌಖಿಕ ಜ್ಞಾನ, ಪರಂಪರೆಯ ಮೇಲಿನ ಗೌರವ, ಭರವಸೆ ಎಲ್ಲ ಅಳಿಸಿ ‘ಆ’ ಭಾಷೆಯಲ್ಲಿರುವುದಷ್ಟೆ ಜ್ಞಾನ ಎಂಬ ಭಾವ ಹೊಸದಾಗಿ ಕಲಿತವನನ್ನು ಆವರಿಸಿಬಿಡುತ್ತದೆ. ಬರೆದಿಟ್ಟಿದ್ದಷ್ಟೆ ಜ್ಞಾನ ಎನಿಸಿಕೊಳ್ಳುತ್ತದೆ.

ಹಾಗಾಗದಂತೆ ಈಗ ದ. ಅಮೆರಿಕಾದ ಸರ್ಕಾರ-ಸಮಾಜಗಳು ಬುಡಕಟ್ಟು ಅಧ್ಯಯನದಲ್ಲಿ ಆಸಕ್ತಿ ತೋರಿವೆ. ಮುಂಬ್ಯ ಗ್ವರಾನಿ, ಜೊಪಾರಾ ಗ್ವರಾನಿ, ತುಪಿ ಗ್ವರಾನಿ ಮೊದಲಾದ ಭಾಷೆಗಳ ಅಧ್ಯಯನ ನಡೆಯುತ್ತಿದೆ. ಸ್ಥಳೀಯ ಭಾಷೆಗಳ ಜನಪದ ಕಲೆ, ಸಾಹಿತ್ಯ ಸಂಗ್ರಹವಾಗುತ್ತಿದೆ. ಬೊಲಿವಿಯಾದಲ್ಲಿ ಗ್ವರಾನಿ ವಿಶ್ವವಿದ್ಯಾಲಯವಿದೆ. ಪರಗ್ವೆ ದೇಶದಲ್ಲಿ ಸ್ಪ್ಯಾನಿಶ್ ಹಾಗೂ ಗ್ವರಾನಿ ಅಧಿಕೃತ ಭಾಷೆಗಳಾಗಿದ್ದು ಶಾಲೆಗಳಲ್ಲಿ ಕಲಿಸಲಾಗುತ್ತದೆ ಹಾಗೂ ನೆರೆಹೊರೆಯವರೊಡನೆ ಮಾತನಾಡುವುದನ್ನು ಉತ್ತೇಜಿಸಲಾಗುತ್ತಿದೆ.



ಅವರಿಂದ ನಾವೂ ಕಲಿಯಬೇಕಾದ ಪಾಠಗಳಿವೆ. ಏಕೆಂದರೆ ನಮ್ಮ ನೆಲಕ್ಕೆ ಬ್ರಿಟಿಷರಿಗಿಂತ ಅವರ ಭಾಷೆ ಅಪಾಯಕಾರಿಯಾಯಿತು. ೧೯೬೧ರ ಸೆನ್ಸಸ್‌ನಲ್ಲಿ ಭಾರತದಲ್ಲಿ ೧,೬೫೧ ಭಾಷೆ ಇದ್ದರೆ ೧೯೭೧ರಲ್ಲಿ ಆ ಸಂಖ್ಯೆ ೧೦೮ಕ್ಕಿಳಿಯಿತು! ೧೦ ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುವ ಭಾಷೆಯಷ್ಟೆ ‘ಭಾಷೆ’ ಎಂದು ಕರೆಸಿಕೊಂಡಿತು. ೧೦೯ನೇ ಭಾಷೆ ಉಳಿದ ಎಲ್ಲ ಭಾಷೆಗಳು ಎಂದು ನಮೂದಾಯಿತು. ಈಗಲೂ ಭಾರತದ ಬಹುಪಾಲು ಭಾಷೆಗಳ ಹತ್ಯೆಗೆ ಇಂಗ್ಲಿಷ್ ಭಾಷೆ ಮೇಲಿನ ನಮ್ಮ ಮೋಹವೇ ಕಾರಣ ಎನ್ನುವುದು ನಿರ್ವಿವಾದವಾಗಿದೆ.

ಅಸಮ ಬಲದ ಯುದ್ಧಗಳು, ಕಾಯಿಲೆಗಳು, ಗುಲಾಮಗಿರಿ, ಮತಾಂತರ ಮೊದಲಾದ ದುಷ್ಟತನಗಳಿಗೆ ಸಂಪೂರ್ಣ ನಾಶವಾದ ಕುಲಗಳ, ಭಾಷೆಗಳ ಲೆಕ್ಕವಿಟ್ಟವರಾರು? ಆದರೆ ತಲೆತಲಾಂತರಗಳಿಂದ ಭಾಷೆ ಮೂಲಕ ಸಮಾಜವೊಂದು ಸಂಗ್ರಹಿಸಿಟ್ಟ ಜ್ಞಾನವು ನಾಶವಾದರೆ ಅಥವಾ ಜನಸಮುದಾಯ ತನ್ನ ಹಳೆಯ ಭಾಷೆ ಮರೆತು ಯಜಮಾನ ಭಾಷೆಗೆ ಒಗ್ಗಿಕೊಂಡುಬಿಟ್ಟರೆ ಆ ವಿಸ್ಮೃತಿ ಆ ಸಮುದಾಯದ ಬಹುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತದೆ. ೨೦೧೨ರ ಏಪ್ರಿಲಿನಲ್ಲಿ ಅಂಡಮಾನಿನ ಬೊವಾ ವೃದ್ಧೆಯೊಬ್ಬಳು ತೀರಿಕೊಂಡಳು. ಆದರೆ ಇಷ್ಟೇ ಹೇಳಿದರೆ ಏನೂ ಹೇಳಿದಂತಾಗಲಿಲ್ಲ, ಅವಳೊಡನೆ ಒಂದು ಭಾಷೆಯೂ ಸಾವಿಗೀಡಾಯಿತು. ಬೊವಾ ಭಾಷೆ ಬಲ್ಲ ಏಕೈಕ ಮಹಿಳೆ ಅವಳಾಗಿದ್ದಳು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಮಾತನಾಡಲು ಯಾರೂ ಸಿಗದೆ ಹಕ್ಕಿಗಳೊಡನೆ ಬೊವಾ ಭಾಷೆಯಲ್ಲಿ ಅವಳು ಸಂಭಾಷಿಸುತ್ತಿದ್ದಳಂತೆ. ಅವಳೊಡನೆ ಆ ಭಾಷೆ, ತಲೆತಲಾಂತರದ ಅದರ ಜ್ಞಾನ ಎಲ್ಲವೂ ನಾಶವಾಯಿತು.

ಭಾಷಾಶಾಸ್ತ್ರಜ್ಞ, ಚಿಂತಕ ಜಿ. ಎನ್. ದೇವಿಯವರ ಪ್ರಕಾರ, ‘ಭಾಷೆಯ ಮೂಲಕ ನಮ್ಮದೇ ಆದ ಲೋಕವನ್ನೇ ಕಟ್ಟಿಕೊಳ್ಳಲು ಸಾಧ್ಯವಿದೆ. ಅಲ್ಲಲ್ಲಿನ ಹವಾಮಾನ, ವಿದ್ಯಮಾನ, ಬದುಕಿಗೆ ತಕ್ಕ ಹಾಗೆ ಭಾಷೆಯೂ ನುಡಿಗಟ್ಟೂ ಅದರ ಪದಕೋಶವೂ ರೂಪುಗೊಂಡಿರುತ್ತದೆ. ಸಂಸ್ಕೃತಿಯ ಬಹುಮುಖ್ಯ ಭಾಗ ಭಾಷೆಯೇ ಆಗಿರುತ್ತದೆ. ಇಂದಿನ ಜೊತೆಗೆ ನಿನ್ನೆ ನಾಳೆಯನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಆದರೆ ಭಾಷೆಯೇ ಕಳೆದುಹೋದರೆ? ಭಾಷೆ ನಾಶವಾಗುವುದರೊಡನೆ ಆ ಭಾಷೆಯಲ್ಲಿದ್ದ ತಲೆತಲಾಂತರಗಳ ಜ್ಞಾನವೂ ಇಲ್ಲವಾಗುತ್ತದೆ. ಭಾಷೆ ಮನುಷ್ಯರಂತೆ ಹುಟ್ಟುತ್ತದೆ ಮತ್ತು ಸಾಯುತ್ತದೆ ಎನ್ನಲಾಗುತ್ತದೆ. ಆದರೆ ಭಾಷೆ ಹುಟ್ಟಬಹುದು, ಸಾಯಲಾರದು. ಅದನ್ನು ಕೊಲ್ಲಬಹುದು ಅಷ್ಟೆ..’


ಪಾರ್ಕಿನಿಂದ ಈಚೆ ಬಂದರೂ, ಅವರ ದೇಶ ಬಿಟ್ಟು ಬಂದರೂ ಆ ಮಕ್ಕಳ ತಾರಕ ಶ್ರುತಿಯ ಜೀವ ತುಂಬಿದ ಸುಶ್ರಾವ್ಯ ಹಾಡು, ಕರಾರುವಾಕ್ ಲಯದ ಪಾದ ಚಲನೆ, ತಂತಿವಾದ್ಯದ ಗುಂಗು ಕಿವಿಯಲ್ಲಿನ್ನೂ ರಿಂಗಣಿಸುತ್ತಲೆ ಇದೆ. ಜೊತೆಗೆ ಅವರದೆ ನೆಲದಲ್ಲಿ ಅವರನ್ನೊಂದು ಪ್ರದರ್ಶನದ, ಜನರ ಸೆಳೆಯುವ ಐಟಂ ಆಗಿಸಿದ ನಮ್ಮ ಅತಿಕ್ರಮಣಶೀಲತೆ, ಅವರ ದಿಕ್ಕೇಡಿತನಕ್ಕೆ ಕಾರಣವಲ್ಲವೆ ಎಂಬ ಪಾಪಪ್ರಜ್ಞೆಯೂ ಮುತ್ತುತ್ತಿದೆ. ಹೀಗಿರುತ್ತ ನಮ್ಮ ನಡುವೆಯೇ ಇರುವ ಇನ್ನೆಷ್ಟೋ ಬೊವಾಗಳು, ಗ್ವರಾನಿಗಳು ಲಯಗೊಳ್ಳದಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಲ್ಲವೆ?




Sunday 12 June 2016

ಶ್ರೀಲಂಕಾದ ಎರಡು ಕವಿತೆಗಳು



(ಜೂನ್ 1, 1981. ಶ್ರೀಲಂಕಾದ ತಮಿಳು ಪ್ರಾಬಲ್ಯದ ಪ್ರದೇಶ ಜಾಫ್ನಾದಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಿತ್ತು. ಬಿಗಿ ಬಂದೋಬಸ್ತು, ರಕ್ಷಣೆಯ ಹೆಸರಲ್ಲಿ ಮಫ್ತಿಯಲ್ಲಿದ್ದ ಸಿಂಹಳ ಪೊಲೀಸರು ಜಾಫ್ನಾದ ಪಬ್ಲಿಕ್ ಲೈಬ್ರರಿಯನ್ನು ಸುಟ್ಟುಹಾಕಿದರು. ಅಂದು ನಡೆದ ಹಿಂಸಾಚಾರದಲ್ಲಿ ತಮಿಳರ ಜೀವಗಳೂ ಬಲಿಯಾದವು. 1930ರಲ್ಲಿ ಸ್ಥಾಪಿಸಲಾದ ಆ ಲೈಬ್ರರಿಯಲ್ಲಿ 90,000ಕ್ಕಿಂತ ಹೆಚ್ಚು ತಮಿಳು ಪುಸ್ತಕಗಳಿದ್ದವು. ಅಪರೂಪದ ಓಲೆಗರಿಯ ಹಸ್ತಪ್ರತಿಗಳಿದ್ದವು. ಜೀವ ನಾಶವಷ್ಟೇ ಅಲ್ಲ, ಗ್ರಂಥಾಲಯ ಸುಡುವಿಕೆ ತಮ್ಮ ಬೌದ್ಧಿಕ ಅಸ್ಮಿತೆಯ ನಾಶ ಎಂದೇ ಶ್ರೀಲಂಕಾದ ತಮಿಳರ ಮನದಲ್ಲಿ ದಾಖಲಾಯಿತು. ಅಷ್ಟೇ ಅಲ್ಲ, ಜನಾಂಗೀಯ ಕಲಹ ಸಶಸ್ತ್ರ ಹೋರಾಟವಾಗಿ ಉಲ್ಬಣಗೊಳ್ಳಲು ಕಾರಣವಾಯಿತು.

ಈ ಘಟನೆ ಕುರಿತು ಶ್ರೀಲಂಕಾದ ಖ್ಯಾತ ತಮಿಳು ಕವಿಗಳಾದ ರುದ್ರಮೂರ್ತಿ ಚೇರನ್ ಬರೆದ ‘ಎರಡನೆಯ ಸೂರ್ಯೋದಯ’ ಹಾಗೂ ಅವರ ತಂದೆಯ ಗೆಳೆಯರಾಗಿದ್ದ ಎಂ. ಎ. ನುಹ್ಮನ್ ಬರೆದ ಪ್ರಸಿದ್ಧ ಕವಿತೆ ‘ಬುದ್ಧನ ಕೊಲೆ’ ಇಲ್ಲಿವೆ.)

 ಎರಡನೆಯ ಸೂರ್ಯೋದಯ


(ಜಾನ್ ವೈಟ್ ಅವರ ಕಲಾಕೃತಿ)

ಅಂದು ಎಂದಿನಂತೆ ಗಾಳಿ ಬೀಸಲಿಲ್ಲ

ಕಡಲಲೆಗಳ ಏರಿಳಿತವಿರಲಿಲ್ಲ

ಸತ್ತಂತೆ ಬಿದ್ದುಕೊಂಡ ಸಮುದ್ರ

 

ಕಡಲ ದಂಡೆಯಲಿ ನಡೆವಾಗ ಏಕೋ

ಮರಳ ಆಳಾಳಕ್ಕೆ ಕುಸಿದವು ಪಾದಗಳು

ಅರೆರೆ, ಇಂದು ಮತ್ತೊಂದು ಸೂರ್ಯೋದಯವೇ!

ಬಾರಿ ಅಲ್ಲಿ, ತೆಂಕಣ ದಿಕ್ಕಿನಲ್ಲಿ!

 

ಏನಾಗಿತ್ತು ಅಲ್ಲಿ ದಕ್ಷಿಣದಲ್ಲಿ?

 

ನನ್ನೂರು ಹೊತ್ತುರಿಯುತ್ತಿತ್ತು

ನನ್ನವರು ಮುಖ ಕಳೆದುಕೊಂಡಿದ್ದರು

ನೆಲ ನಮ್ಮದು, ನಾಡು ನಮ್ಮದೇ

ನೆಲದ ಮೇಲೆ ಬೀಸುವ ಗಾಳಿಗೆ

ಬೇಕಂತೆ ಪರಕೀಯರ ಮೊಹರು, ಅಪ್ಪಣೆ

 

ಯಾರಿಗಾಗಿ ಕಾಯುತ್ತಿರುವೆ ಗೆಳೆಯ?

ನಿನ್ನ ಕೈ ಕಟ್ಟಿರುವುದೇಕೆ ಬೆನ್ನ ಹಿಂದೆ?

ಹಾರುವ ಮೋಡಗಳ ಮೇಲೆ ಬೆಂಕಿಯ ನಾಲಗೆ

ತನ್ನ ಸಂದೇಶ ಬರೆಯುತ್ತಿದೆ

ಈಗಲೂ ಇನ್ನೂ ಕಾಯುವುದೇ?

ಎದ್ದೇಳು,

ಬೀದಿಯ ಇಕ್ಕೆಲಗಳಲ್ಲೂ

ಬೂದಿರಾಶಿಯೊಳಗಿಂದ ಹೊಗೆಯೇಳುತ್ತಿದೆ

ದಾಟು ದಿಟ್ಟವಾಗಿ, ಮುನ್ನುಗ್ಗು ಸಂಗಾತಿಯೇ.




ರುದ್ರಮೂರ್ತಿ ಚೇರನ್
ಅನುಡಾಎಚ್ಎಸ್ಅನುಪಮಾ

ಬುದ್ಧನ ಕೊಲೆ


(Art by Krishna GiLiyar)

ಕಳೆದ ರಾತ್ರಿ, ನನ್ನ ಕನಸಲ್ಲಿ

ಬುದ್ಧಗುರುವನ್ನು ಕೊಲ್ಲಲಾಯಿತು

ಮಫ್ತಿಯ ಪೊಲೀಸರು

ಬುದ್ಧನನು ಗುಂಡಿಟ್ಟು ಕೊಂದರು.

ಜಾಫ್ನಾ ಲೈಬ್ರರಿಯ ಮೆಟ್ಟಿಲುಗಳ ಮೇಲೆ

ರಕ್ತದ ಮಡುವಿನಲ್ಲಿ ಮುಳುಗಿ

ಅಂಗಾತ ಬಿದ್ದ ಬುದ್ಧನ ದೇಹ..

 

ರಾತ್ರಿಯ ಕಗ್ಗತ್ತಲಿನಲ್ಲೇ ಓಡೋಡಿ ಬಂದ

ಮಂತ್ರಿ ಕಂಡದ್ದೇ ಕೆಂಡಾಮಂಡಲ,

ಅವನ ಹೆಸರು ನಮ್ಮ ಯಾದಿಯಲ್ಲಿರಲಿಲ್ಲ,

ಯಾಕೆ ಯಾಕೆ? ಕೊಂದಿದ್ದು ಯಾಕೆ?’

 

ಇಲ್ಲ, ಇಲ್ಲ,’ ಪೊಲೀಸರೆಂದರು,

ಪ್ರಮಾದವೇನೂ ಆಗಿಲ್ಲ ಮಹೋದಯರೇ,

ಅವನ ಬುದ್ಧನ ಕೊಲ್ಲದೇ ಹೋಗಿದ್ದರೆ

ಒಂದೇ ಒಂದು ನೊಣವನ್ನೂ

ಕೊಲ್ಲಲಾಗುತ್ತಿರಲಿಲ್ಲ ನಮಗೆ.

ಎಂದೇ..’


ಆಯಿತು, ಆಯಿತು ನಿಲ್ಲಿಸಿ.

ಕೂಡಲೇ ಮಾಡಿ ಶವ ವಿಲೇವಾರಿ

ಕರಗಿ ಹೋದರು ಗುಡುಗಿದ ಮಂತ್ರಿ..

 

ಮಫ್ತಿಯ ಪೊಲೀಸರು

ಶವವನ್ನು ಒಳಗೆಳೆದು

ಬುದ್ಧನ ದೇಹವನ್ನು

ತೊಂಭತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು.

ಸಿಕಲೋಕವಾದ ಸುತ್ತದಿಂದ ಬೆಂಕಿಯಿಟ್ಟರು

 

ಬುದ್ಧಗುರುವಿನ ದೇಹ ಬೂದಿಯಾಯ್ತು

ಅಂತೆಯೇ ಧಮ್ಮಪದವೂ..





- ಎಂ. ಎ. ನುಹ್ಮನ್

ಅನುಡಾಎಚ್ಎಸ್ಅನುಪಮಾ

Wednesday 8 June 2016

ಥಾಮಸ್ ಪೇಯ್ನ್ (೧೭೩೭-೧೮೦೯) - ಹಲವು ನಾಡು ಕಟ್ಟಿದ ಮಹನೀಯ





  
ಭಾರತದಲ್ಲಿ ಬ್ರಿಟಿಷರು ಇಂಗ್ಲಿಷ್ ಶಿಕ್ಷಣ ಪದ್ಧತಿ ಶುರು ಮಾಡಿದ ನಂತರ ಹಲವು ಪಾಶ್ಚಾತ್ಯ ಸಾಹಿತಿ, ಚಿಂತಕರು ಇಲ್ಲಿನ ತರುಣ ಮನಸ್ಸುಗಳನ್ನು ಪ್ರಭಾವಿಸಿದರು. ಸನಾತನ ಚಿಂತನೆಯ ನೆರಳಿನಲ್ಲಿ ಸ್ಥಗಿತಗೊಂಡಿದ್ದ ಭಾರತೀಯ ವೈಚಾರಿಕತೆ ಮತ್ತು ಮುಕ್ತ ಚಿಂತನೆ ಪಾಶ್ಚಾತ್ಯ ಚಿಂತಕರ ಬರಹಗಳಿಂದ ಹೊಸ ಹೊಳಹನ್ನು, ಹೊರಳನ್ನು ಪಡೆದುಕೊಂಡಿತು. ಅಂಥ ಸಾಲಿನಲ್ಲಿ ಭಾರತದ ಸಾಮಾಜಿಕ-ರಾಜಕೀಯ ಸುಧಾರಣೆಗಳನ್ನು ಪ್ರಭಾವಿಸಿದ ಇಂಗ್ಲಿಷ್ ಅಮೆರಿಕನ್ ರಾಜಕೀಯ ಚಿಂತಕ, ತತ್ವಜ್ಞಾನಿ, ರಾಜಕೀಯ ತತ್ವವೇತ್ತ ಹಾಗೂ ಕ್ರಾಂತಿಕಾರಿ ಥಾಮಸ್ ಪೇಯ್ನ್ ಪ್ರಮುಖನೆನ್ನಬಹುದು. ಆತ ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲಪುರುಷರಲ್ಲೊಬ್ಬ. ಅಮೆರಿಕನ್, ಫ್ರೆಂಚ್ ಕ್ರಾಂತಿಯ ಚಿಂತಕ ರೂವಾರಿಗಳಲ್ಲೊಬ್ಬ. ಮುಕ್ತಸಂವೇದನೆಯನ್ನು ಪ್ರತಿಪಾದಿಸುವವರೆಲ್ಲರ ಒಡನಾಡಿ.

ಪ್ರಜಾಪ್ರಭುತ್ವ ಎಂಬ ಕನಸನ್ನು ಮೊದಲು ಕಂಡ ಚಿಂತಕನೂ ಆದ ಪೇಯ್ನ್, ಜೋತಿಬಾ ಫುಲೆ, ಎಂ. ಜಿ. ರಾನಡೆ, ಭಗತ್ ಸಿಂಗ್, ಬಿ. ಆರ್. ಅಂಬೇಡ್ಕರ್ ಮೊದಲಾದ ಭಾರತದ ಮೇಧಾವಿ ಮನಸುಗಳನ್ನು ಆಳವಾಗಿ ಪ್ರಭಾವಿಸಿದ ಚಿಂತಕ. ಅದರಲ್ಲೂ ಭಾರತದ ಮೊತ್ತಮೊದಲ ಧಾರ್ಮಿಕ-ಸಾಮಾಜಿಕ-ರಾಜಕೀಯ ಕ್ರಾಂತಿಕಾರಿ ಜೋತಿಬಾ ಫುಲೆ ಹಾಗೂ ದಮನಿತರ ನಡುವಿನಿಂದ ಎದ್ದುಬಂದ ಅಕಳಂಕಿತ ನ್ಯಾಯಪ್ರಜ್ಞೆಯ ದನಿ ಬಿ. ಆರ್. ಅಂಬೇಡ್ಕರ್ ಅವರ ಬರಹ ಮತ್ತು ಚಿಂತನೆಗಳ ಮೇಲೆ ಪೇಯ್ನನ ಗಾಢ ಪ್ರಭಾವವಿದೆ. ಅಮೆರಿಕನ್ ಮಿಷನ್ನಿನ ಪ್ರಚಾರಕರ ದೆಸೆಯಿಂದ ಜೋತಿಬಾ ಫುಲೆ ಮತ್ತವರ ಗೆಳೆಯರಿಗೆ ಎಳವೆಯಲ್ಲೆ ಓದಲು ದೊರೆತ ಪೇಯ್ನ್ ಬರೆದ ‘ರೈಟ್ಸ್ ಆಫ್ ಮ್ಯಾನ್' ಎಂಬ ಪುಸ್ತಕ ಆ ತರುಣರ ಯೋಚನಾ ಧಾಟಿಯನ್ನೇ ಬದಲಿಸಿತು. ಭಾರತದಂತೆಯೇ ಜಾಗತಿಕವಾಗಿಯೂ ಹಲವು ಚಿಂತಕರು, ಬರಹಗಾರರು, ಜನನಾಯಕರನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿ ಪೇಯ್ನ್.

ಮುಕ್ತ ಚಿಂತನೆಯನ್ನು ಕೊನೆತನಕ ಎತ್ತಿಹಿಡಿದ ಆತನ ಬದುಕೇ ಒಂದು ಓದಲೇಬೇಕಾದ ಪಾಠದಂತಿದೆ..

ಗ್ರಾಮೀಣ ಇಂಗ್ಲೆಂಡಿನಲ್ಲಿ ಜನಿಸಿದ ಪೇಯ್ನ್ ಶಿಕ್ಷಣದ ಕಲ್ಪನೆಯೇ ಸರಿಯಾಗಿ ಇರದಿದ್ದ ಕಾಲದಲ್ಲಿ ಗ್ರಾಮರ್ ಶಾಲೆಗೆ ಹೋಗಿ ಶಿಕ್ಷಣ ಪಡೆದ. ಅವರ ತಂದೆ ಹಡಗುಗಳಿಗೆ ಹಗ್ಗ ಹೊಸೆದು ಮಾರುವ ವ್ಯಕ್ತಿಯಾಗಿದ್ದರು. ಆರಂಭಿಕ ಶಿಕ್ಷಣದ ನಂತರ ತಂದೆಯ ಉದ್ಯೋಗದಲ್ಲಿ ಸಹಾಯಕನಾಗಿ, ಒಂದಾದಮೇಲೊಂದು ಹತ್ತಾರು ತಾತ್ಕಾಲಿಕ, ಕಡಿಮೆ ಸಂಬಳದ ಉದ್ಯೋಗ ಮಾಡಿದ ತರುಣ ಪೇಯ್ನ್ ಸಾಕಷ್ಟು ಏಳುಬೀಳುಗಳನ್ನು ಕಂಡು ನಿರುದ್ಯೋಗದ ಕಹಿಯನ್ನೂ ಅನುಭವಿಸಿದ. ಕೈಗೊಂಡ ಉದ್ಯೋಗಗಳೆಲ್ಲ ಒಂದಲ್ಲ ಒಂದು ಕಾರಣಕ್ಕೆ ಕೈ ಸುಟ್ಟು ದಿವಾಳಿಯಾದ ಹೊತ್ತಿನಲ್ಲಿ ಬಸುರಿ ಹೆಂಡತಿ ದಿನ ತುಂಬುವ ಮೊದಲೆ ಹೆತ್ತು, ಮಗುವಿನೊಂದಿಗೆ ತೀರಿಕೊಂಡಳು. ನಿರಂತರ ಉದ್ಯೋಗ ಹುಡುಕುತ್ತ ಅಲೆದಲೆದು ಕೊನೆಗೆ ಲಂಡನ್ ತಲುಪಿ ೧೭೭೩ರಲ್ಲಿ ಅಬಕಾರಿ ಇಲಾಖೆಯ ನೌಕರಿಗೆ ಸೇರಿದ. ಅಬಕಾರಿ ನೌಕರರಿಗೆ ಉತ್ತಮ ಸಂಬಳ ಮತ್ತು ಸೂಕ್ತ ಉದ್ಯೋಗ ಸುರಕ್ಷೆ ಒದಗಿಸಬೇಕೆಂದು ಪಾರ್ಲಿಮೆಂಟಿಗೆ ಪತ್ರ ಬರೆದದ್ದು ಅವನನ್ನು ನೌಕರರ ನಾಯಕನಾಗುವಂತೆ ಮಾಡಿತು. ಅದೇವೇಳೆ ಲಂಡನ್ನಿಗೆ ಬಂದ ಅಮೆರಿಕದ ರಾಜಕಾರಣಿ ಬೆಂಜಮಿನ್ ಫ್ರಾಂಕ್ಲಿನ್ ಪರಿಚಯವಾಯಿತು. ಆ ಪರಿಚಯ ಹಾಗೂ ಚರ್ಚೆ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು.

ಪೇಯ್ನ್ ಬ್ರಿಟನ್ ತೊರೆಯಲು ನಿರ್ಧರಿಸಿ ೧೭೭೪ರಲ್ಲಿ ಅಮೆರಿಕದ ಫಿಲಡೆಲ್ಫಿಯಾ ಹಡಗು ಹತ್ತಿದ. ಆದರೆ ನೌಕಾಯಾನ ಮುಗಿಯುವುದರಲ್ಲಿ ಟೈಫಾಯ್ಡ್‌ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪೇಯ್ನ್, ಅಮೆರಿಕದಲ್ಲಿಳಿದ ಕೂಡಲೆ ಫ್ರಾಂಕ್ಲಿನ್‌ನ ವೈದ್ಯರಲ್ಲಿ ಚಿಕಿತ್ಸೆ ಪಡೆದ. ಗುಣಮುಖನಾದದ್ದೇ ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡ. ಎಲ್ಲರಲ್ಲಿ ಸ್ಫೂರ್ತಿ ತುಂಬುವ ಅತ್ಯಂತ ಪ್ರಭಾವಶಾಲಿಯಾದ ಎರಡು ಕರಪತ್ರ ‘ಕಾಮನ್ ಸೆನ್ಸ್ ಮತ್ತು ‘ಅಮೆರಿಕನ್ ಕ್ರೈಸಿಸ್ ಬರೆದು ಪ್ರಕಟಿಸಿದ. ಹೆಚ್ಚುಕಡಿಮೆ ಪ್ರತಿ ಕ್ರಾಂತಿಕಾರಿಯೂ ‘ಕಾಮನ್ ಸೆನ್ಸ್ ಓದಿದ. ಅದರಲ್ಲಿ ಬ್ರಿಟನ್ ರಾಜಸತ್ತೆಯ ವೈಫಲ್ಯ, ಅಮೆರಿಕದ ರಾಜ್ಯಗಳಿಗೆ ಸ್ವಾತಂತ್ರ್ಯದ ಅವಶ್ಯಕತೆ ಕುರಿತು ವಿವರವಾಗಿ ಬರೆಯಲಾಗಿತ್ತು. ಪೇಯ್ನ್ ಪ್ರತಿಪಾದಿಸುತ್ತಿದ್ದ ‘ಮುಕ್ತ ಚಿಂತನೆ ಮತ್ತು ಪ್ರಜಾತಂತ್ರವಾದಿ ಧೋರಣೆ ತುಂಬಿದ್ದ ಬರಹ ಅದು. ಆ ಕಾಲಕ್ಕೆ ಬಹು ವಿನೂತನ ಪ್ರತಿಪಾದನೆಯ ಬರವಣಿಗೆಯಾಗಿ ಗಮನ ಸೆಳೆದು ಲಕ್ಞಾಂತರ ಪ್ರತಿ ಮಾರಾಟವಾಯಿತು.


ಆದರೆ ಹಲವು ರಾಜಭಕ್ತರು ಅವನ ವಿರುದ್ಧ ಕಿಡಿಕಾರಿದರು. ‘ರಾಜಸತ್ತೆ ಇಲ್ಲದಿದ್ದರೆ ಸಮಾಜ ಕೊನೆಗೆ ಪ್ರಜಾಪ್ರಭುತ್ವದಲ್ಲಿ ನಾಶವಾಗಿಹೋಗುತ್ತದೆ' ಎಂದು ಎಚ್ಚರಿಸಿದರು! ೧೭೭೬ರಲ್ಲಿ ಬರೆದ ‘ಅಮೆರಿಕನ್ ಕ್ರೈಸಿಸ್' ಕೂಡ ಕ್ರಾಂತಿಗೆ ಪೂರಕವಾಗಿಯೇ ಇತ್ತು. ಬರಹಗಾರ ಇಂಗರ್‌ಸಾಲ್ ವರ್ಣಿಸಿರುವಂತೆ, ‘ಕಾಮನ್ ಸೆನ್ಸ್' ಪ್ರಬಂಧ ಬರೆಯದಿದ್ದರೆ ಜಾರ್ಜ್ ವಾಷಿಂಗ್ಟನ್ ಕತ್ತಿ ಹಿರಿದಿದ್ದು ವ್ಯರ್ಥವಾಗಿ ಹೋಗುತ್ತಿತ್ತು.

ನಂತರ ೧೭೯೦ರ ಸುಮಾರಿಗೆ ಪೇಯ್ನ್ ಪ್ಯಾರಿಸಿಗೆ ಹೋದ. ಅಲ್ಲಿ ತನ್ನನ್ನು ಫ್ರೆಂಚ್ ಕ್ರಾಂತಿಯಲ್ಲಿ ಗಾಢವಾಗಿ ತೊಡಗಿಸಿಕೊಂಡು ಫ್ರೆಂಚ್ ಸಂವಿಧಾನ ಸಮಿತಿಯಲ್ಲಿ ಕೆಲಸ ಮಾಡಿದ. ಕಿಂಗ್ ಲೂಯಿಗೆ ಮರಣದಂಡನೆ ವಿಧಿಸಬಾರದು, ಬೇಕಾದರೆ ಅಮೆರಿಕಕ್ಕೆ ಗಡೀಪಾರು ಮಾಡಬಹುದು ಎಂದು ಕ್ರಾಂತಿಕಾರಿಗಳ ಬಳಿ ವಾದಿಸಿದ. ಆಗಲೇ ಆತ ‘ರೈಟ್ಸ್ ಆಫ್ ಮ್ಯಾನ್' (೧೭೯೧) ಬರೆದದ್ದು.

‘ರೈಟ್ಸ್ ಆಫ್ ಮ್ಯಾನ್' ಬಹಳಷ್ಟು ಸೂಕ್ಷ್ಮಜ್ಞರನ್ನು ವಿಶ್ವಾದ್ಯಂತ ಗಾಢವಾಗಿ ಪ್ರಭಾವಿಸಿದ ಕೃತಿ. ಅದನ್ನು ಓದಿದ ನೆಪೋಲಿಯನ್ ತಾನು ದಿಂಬಿನಡಿ ‘ರೈಟ್ಸ್ ಆಫ್ ಮ್ಯಾನ್' ಇಟ್ಟುಕೊಂಡು ಮಲಗುವುದಾಗಿಯೂ, ಯಾರಾದರೂ ಬಂಗಾರದ ಪುತ್ಥಳಿ ಮಾಡಿ ನಿಲ್ಲಿಸಲು ಗೌರವಿಸಲು ಯೋಗ್ಯ ವ್ಯಕ್ತಿ ಇದ್ದರೆ ಅದು ಪೇಯ್ನ್ ಮಾತ್ರ ಎಂದೂ ಹೇಳಿದ. (ಆದರೆ ನಂತರ ನೆಪೋಲಿಯನ್ ಸರ್ವಾಧಿಕಾರಿಯಾದಾಗ ಪೇಯ್ನ್ ಕಟುಪದಗಳಲ್ಲಿ ಅವನನ್ನು ಟೀಕಿಸಿದ.) ಫ್ರೆಂಚ್ ಭಾಷೆ ಬರದಿದ್ದರೂ ಫ್ರೆಂಚ್ ನ್ಯಾಷನಲ್ ಕನ್ವೆನ್ಶನ್‌ಗೆ ಆಯ್ಕೆಯಾದ. ಬ್ರಿಟಿಷ್ ಬರಹಗಾರ ಎಡ್ಮಂಡ್ ಬರ್ಕ್ ಫ್ರೆಂಚ್ ಕ್ರಾಂತಿಯ ವಿರುದ್ಧ ಬರೆದಾಗ ಅವನನ್ನು ಕಟುವಾಗಿ ಟೀಕಿಸಿದ. ದೇಶಬಾಂಧವನನ್ನು ಟೀಕಿಸಿದ್ದಕ್ಕಾಗಿ ಪೇಯ್ನ್ ಅನುಪಸ್ಥಿತಿಯಲ್ಲಿ ಬ್ರಿಟನ್ನಿನಲ್ಲಿ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಯಿತು.



 (ಎಡ್ಮಂಡ್ ಬರ್ಕ್ ಮತ್ತು ಪೇಯ್ನ್,  ಬ್ರಿಟನ್ನಿನ ೊಂದು ವ್ಯಂಗ್ಯ ಚಿತ್ರದಲ್ಲಿ)
ಇತ್ತ ಪ್ಯಾರಿಸಿನಲ್ಲಿ ಕ್ರಾಂತಿಕಾರರ ವಿರುದ್ಧ ಇದ್ದ ಆಳುವ ಪಕ್ಷದವರು ಫ್ರೆಂಚ್ ಸಭೆ, ಸಮಿತಿಗಳಲ್ಲಿ ವಿದೇಶೀಯರು ಇರಬಾರದೆಂಬ ನೀತಿ ರೂಪಿಸಿ ಪೇಯ್ನ್‌ನ್ನು ಬಂಧಿಸಿ ಜೈಲಿಗೆ ಕಳಿಸಿದರು. ಜೈಲಿನಲ್ಲಿ ಆತ ‘ಏಜ್ ಆಫ್ ರೀಸನ್' (೧೭೯೩) ಬರೆದ. ಫ್ರಾನ್ಸಿನಲ್ಲಿ ಪೇಯ್ನ್ ಬಂಧನಕ್ಕೊಳಗಾಗಿದ್ದು ಅಮೆರಿಕದಲ್ಲಿ ಹಾಹಾಕಾರವೆಬ್ಬಿಸಿತು. ಭಾವೀ ಅಧ್ಯಕ್ಷ ಜೇಮ್ಸ್ ಮನ್ರೊ ತನ್ನೆಲ್ಲ ಪ್ರಭಾವ ಬಳಸಿ ಅವನನ್ನು ಬಿಡುಗಡೆಗೊಳಿಸಿದ.

೧೭೯೭ರಲ್ಲಿ ಅಗ್ರೇರಿಯನ್ ಜಸ್ಟಿಸ್ (ಕೃಷಿ ನ್ಯಾಯ) ಬಗೆಗೆ ಬರೆದ ಪೇಯ್ನ್ ವೈಯಕ್ತಿಕ ಆಸ್ತಿ ಕಲ್ಪನೆ ಬಗೆಗೆ ಚರ್ಚಿಸಿದ. ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜೀವನವನ್ನು ಸಮತೋಲಗೊಳಿಸಿ ಬದುಕಬೇಕಾದ ಅವಶ್ಯಕತೆ ಕುರಿತು ಬರೆದ. ಕನಿಷ್ಠ ಆದಾಯ, ಪಿಂಚಣಿಯನ್ನು ಸರ್ಕಾರ ಎಲ್ಲರಿಗು ನೀಡಬೇಕೆನ್ನುವುದು ಅದರ ಪ್ರತಿಪಾದನೆಯಾಗಿತ್ತು. ಪೇಯ್ನ್ ಬರೆದ ಕೊನೆಯ ಕರಪತ್ರ ‘ಅಗ್ರೇರಿಯನ್ ಜಸ್ಟಿಸ್, ಅಪೋಸ್ಡ್ ಟು ಅಗ್ರೇರಿಯನ್ ಲಾ ಅಂಡ್ ಟು ಅಗ್ರೇರಿಯನ್ ಮೊನಾಪಲಿ'. ಅದು ರೈಟ್ಸ್ ಆಫ್ ಮ್ಯಾನ್ ಮುಂದುವರಿಕೆಯಂತೆ ವಿಸ್ತರಣೆಯಂತೆ ಇದೆ. ಹೇಗೆ ಬಹುಸಂಖ್ಯೆಯ ಜನರು ಸಹಜ, ಸ್ವತಂತ್ರ ಬದುಕುವ ಹಕ್ಕುಗಳನ್ನು ಭೂಮಾಲೀಕತ್ವದ ಕಾರಣವಾಗಿ ಕಳೆದುಕೊಂಡಿದ್ದಾರೆ ಎಂದು ಅದು ವಿವರಿಸುತ್ತದೆ. ನಂತರ ಅಮೆರಿಕದಲ್ಲಿ ವೃದ್ಧಾಪ್ಯ ವೇತನ, ಕನಿಷ್ಠ ಆದಾಯ ಯೋಜನೆ ಜಾರಿಗೆ ಬರಲು ಈ ಪ್ರಬಂಧವೇ ಪ್ರೇರಣೆಯಾಗಿದೆ. ಪೇಯ್ನ್ ಪ್ರಕಾರ ಸರ್ಕಾರ ಒಂದು ರಾಷ್ಟ್ರೀಯ ನಿಧಿಯನ್ನು ರೂಪಿಸಬೇಕು. ಭೂ ಮಾಲೀಕತ್ವ, ಆಸ್ತಿಹಕ್ಕು ಮೊದಲಾದ ಸಿರಿವಂತ ಸ್ನೇಹಿ ಆಳ್ವಿಕರ ಕ್ರಮಗಳಿಂದ ಯಾರು ತಮ್ಮ ಸಹಜ ಮತ್ತು ಸ್ವತಂತ್ರ ಬದುಕುವ ಹಕ್ಕುಗಳನ್ನು ಕಳೆದುಕೊಂಡು ಬಡವರಾಗಿರುತ್ತಾರೋ ಅಂಥ ಎಲ್ಲ ಭೂಹೀನರಿಗೆ ವಾರ್ಷಿಕ ೧೫ ಪೌಂಡ್ ಸ್ಟರ್ಲಿಂಗ್ ಪರಿಹಾರ ಕೊಡಬೇಕು. ಹಾಗೆಯೇ ೫೦ ವರ್ಷ ದಾಟಿದ ಅಂಥ ಪ್ರತಿಯೊಬ್ಬರಿಗೂ ವಾರ್ಷಿಕ ೧೦ ಪೌಂಡ್ ಸ್ಟರ್ಲಿಂಗ್ ಹಣ ಕೊಡಬೇಕು. ಇದು ಸರ್ಕಾರ ಬಡವರಿಗೆ ಕೊಡುವ ದಾನವಲ್ಲ, ಇದು ಅವರ ಹಕ್ಕು. (ಅಂದಿನ ೧೦ ಪೌಂಡ್ ಎಂದರೆ ಈಗಿನ ಲೆಕ್ಕಾಚಾರದ ಪ್ರಕಾರ ೮೪ ಸಾವಿರ ರೂಪಾಯಿ, ೧೫ ಪೌಂಡ್ ಎಂದರೆ ೧.೪ ಲಕ್ಷ ರೂಪಾಯಿ.) ಸಮಾನತೆ ಹಾಗೂ ಸ್ವಾತಂತ್ರ್ಯದ ಸಲುವಾಗಿ ಖಾಸಗಿ ಭೂಮಾಲಿಕರ ಜವಾಬ್ದಾರಿಯನ್ನೂ ಪೇಯ್ನ್ ನೆನಪಿಸುತ್ತಾನೆ.

ಆತ ಅಜ್ಞಾತ ಹೆಸರಿನಲ್ಲಿ ಗುಲಾಮಗಿರಿಯ ವಿರುದ್ಧವೂ ಬರೆದ.

ನಂತರ ಬಂದದ್ದು ‘ಏಜ್ ಆಫ್ ರೀಸನ್' ಎಂಬ ಕೃತಿ. ಅದರಲ್ಲಿ ಪ್ರಕೃತಿಧರ್ಮ ಅಥವಾ ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದ ಹಾಗೂ ಕ್ರೈಸ್ತ ಧರ್ಮವೂ ಸೇರಿದಂತೆ ಸಾಂಸ್ಥಿಕ ಧರ್ಮದ ಅಪಾಯಗಳ ಕುರಿತು ಹೇಳಿದ್ದ. ಪೇಯ್ನ್ ತಾಯಿ ಆಂಗ್ಲಿಕನ್ ಚರ್ಚಿನವಳಾದರೂ ತಂದೆ ಕ್ವೇಕರ್ ಎಂಬ ಕ್ರಿಸ್ತೀಯ ಗೆಳೆಯರ ಸಂಘದ ಪಂಥದವರು. ಆ ಪಂಥದವರು ಚರ್ಚ್ ಅನ್ನು ನಂಬಿದವರಲ್ಲ. ಬಹುಶಃ ಇದು ಪೇಯ್ನ್ ಧಾರ್ಮಿಕತೆಯ ಮೇಲೆ ಪ್ರಭಾವ ಬೀರಿರಬಹುದು. ‘ನನಗೆ ರೋಮನ್, ಗ್ರೀಕ್, ಟರ್ಕಿಶ್, ಜ್ಯೂಯಿಷ್ ಯಾವ ಚರ್ಚಿನ ಮೇಲೂ ನಂಬಿಕೆಯಿಲ್ಲ. ನನಗೆ ಒಬ್ಬನೇ ದೇವರು, ಹೆಚ್ಚಿಲ್ಲ. ನನ್ನ ಮನಸೇ ನನ್ನ ಚರ್ಚ್. ಅಧಿಕಾರ ಮತ್ತು ಲಾಭದ ಆಸೆಗೆ ಮನುಷ್ಯ ಸೃಷ್ಟಿಸಿದ ಸಂಸ್ಥೆಗಳಿಗಿಂತ ಈಗಿರುವ ಚರ್ಚುಗಳು ಬೇರೆ ಎಂದು ನನಗನಿಸಿಲ್ಲ. ಬೈಬಲ್ ಮತ್ತು ಟೆಸ್ಟ್‌ಮೆಂಟ್‌ಗಳು ಜನರ ಬೌದ್ಧಿಕತೆಯ ಮೇಲಿನ ಹೇರಿಕೆಗಳು. ಮನುಷ್ಯನ ಅವನತಿ, ಜೀಸಸ್ ಎಂಬ ದೇವಸುತನ ಅವತಾರ, ದೇವರ ಕೋಪ ತಣಿಸಲು ಅವನ ಸಾವು, ಪುನರುತ್ಥಾನ  ಇವೆಲ್ಲ ಅದ್ಭುತ ಕಟ್ಟುಕತೆಗಳು. ದೇವರ ಜ್ಞಾನ ಮತ್ತು ಶಕ್ತಿಗೆ ಅವಮಾನ ಎಸಗುವಂತಹ ಸೃಷ್ಟಿಗಳು. ನಿಜವಾದ ಧರ್ಮ ಪ್ರಕೃತಿ ಧರ್ಮ, ಏಕೇಶ್ವರ ಧರ್ಮ. ಒಂದು ದೇವರ ನಂಬುವುದು ಮತ್ತು ತನ್ನ ನೈತಿಕ ಮೌಲ್ಯ-ಗುಣಗಳನ್ನು ನಂಬಿ ದೇವರ ಮೇಲೆ ಭಾರ ಹಾಕಿ ಬದುಕುವುದು, ಇದು ಪ್ರಕೃತಿ ಧರ್ಮ.. ಎಂದು ಪ್ರತಿಪಾದಿಸಿದ.

ಪೇಯ್ನ್ ಪ್ರತಿಪಾದನೆಗಳಲ್ಲಿ ಕೆಲವು ಹೀಗಿವೆ:

v  ‘ಈ ಜಗತ್ತೇ ನನ್ನ ದೇಶ. ಒಳಿತುಂಟು ಮಾಡುವುದೇ ನನ್ನ ಧರ್ಮ'.

v  ‘ತನ್ನ ಅತ್ಯುತ್ಕೃಷ್ಟ ಸ್ವರೂಪದಲ್ಲಿಯೂ ಸಹಾ ಸರ್ಕಾರ ಎನ್ನುವುದು ಒಂದು ಅವಶ್ಯ ಕೇಡು. ತನ್ನ ದುಷ್ಟ ಸ್ವರೂಪದಲ್ಲಿ ಅದು ಅಸಹನೀಯ ಕೇಡು.'

v  ‘ಒಬ್ಬ ಮನುಷ್ಯ ಸಂತೋಷವಾಗಿರಲು ತನಗೆ ತಾನು ಮಾನಸಿಕವಾಗಿ ವಿಧೇಯನಾಗಿರಬೇಕಾದ್ದು ಅಗತ್ಯ. ಅದು ದ್ರೋಹ, ನಂಬಿಕೆ, ಅಪನಂಬಿಕೆಗಳ ಪ್ರಶ್ನೆಯಲ್ಲ. ದ್ರೋಹ ಎಂದರೆ ನಾನು ನಂಬದಿರುವುದನ್ನು ಪ್ರತಿಪಾದಿಸುವುದು.'

v  ‘ಆಧುನಿಕ ವಿಶ್ವದ ಧಾರ್ಮಿಕ ಬಣ್ಣ ಹೀಗಿರಲು ಕಾರಣ ಜೆರುಸಲೇಮಿನಲ್ಲಿ ಒಂದು ಹುಚ್ಚಾಸ್ಪತ್ರೆ ಇಲ್ಲದಿರುವುದು.'

v  ‘ಯಾವುದೇ ಧಾರ್ಮಿಕ ವ್ಯವಸ್ಥೆ ಮಗುವನ್ನು ದಿಗ್ಭ್ರಮೆಗೆ ಒಳಪಡಿಸುವಂಥದೇನನ್ನಾದರೂ ಹೊಂದಿದ್ದರೆ ಅದು ಸತ್ಯವಾಗಿರಲು ಸಾಧ್ಯವಿಲ್ಲ'.

v  ‘ಯಾವುದೇ ಸಂಗತಿಯನ್ನು ಅದು ತಪ್ಪು ಎಂದು ವಿಶ್ಲೇಷಿಸದೆ ದೀರ್ಘಕಾಲ ಹಾಗೇ ಇದ್ದರೆ ಕ್ರಮೇಣ ಮೇಲ್ನೋಟಕ್ಕೆ ಅದು ಸರಿ ಎನಿಸತೊಡಗುತ್ತದೆ.'

v  ಸಹಿಷ್ಣುತೆ ಎನ್ನುವುದು ಅಸಹಿಷ್ಣುತೆಯ ವಿರುದ್ಧ ಪದವಲ್ಲ, ಅದರ ನಕಲಿ ರೂಪ. ಎರಡೂ ಸರ್ವಾಧಿಕಾರವೇ ಒಂದು ಮುಕ್ತಚಿಂತನೆಯನ್ನು ಒತ್ತಿ ಹಿಡಿಯುವ ಹಕ್ಕು ತನ್ನದೆಂದು ಊಹಿಸಿಕೊಳ್ಳುತ್ತದೆ, ಮತ್ತೊಂದು ಮುಕ್ತಚಿಂತನೆಯನ್ನು ಎತ್ತಿ ಹಿಡಿಯುವ ಹಕ್ಕು ತನ್ನದೆಂದು ಭಾವಿಸುತ್ತದೆ.'

v  ತನ್ನ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವವನು ತನ್ನ ಶತ್ರುವು ದಮನಗೊಳ್ಳುವುದರ ವಿರುದ್ಧವೂ ಹೋರಾಡಬೇಕಾಗುತ್ತದೆ.'

v  ತರ್ಕ ಜ್ಞಾನ ಕಳೆದುಕೊಂಡವನ ಜೊತೆ ವಾದ ಮಾಡುವುದೆಂದರೆ ಶವಕ್ಕೆ ಚಿಕಿತ್ಸೆ ನೀಡಿದಂತೆ.'

ಆದರೆ ಯಾವಾಗ ‘ಏಜ್ ಆಫ್ ರೀಸನ್' ಬರೆದು ಕ್ರೈಸ್ತ ಧರ್ಮವನ್ನು ಟೀಕಿಸಿದನೋ ಆಗ ಪೇಯ್ನ್ ಕುಖ್ಯಾತನಾಗತೊಡಗಿದ. ಇಲ್ಲಸಲ್ಲದ ಆಪಾದನೆ, ಗೂಢಚರ್ಯೆಯ ಶಂಕೆ ಅವನನ್ನು ಸುತ್ತುವರಿದವು. ಬಹಳಷ್ಟು ಜನ ಅವನಿಂದ ದೂರ ಸರಿದರು. ಧರ್ಮ ಕುರಿತ ಕಟುಟೀಕೆ ಜನಪ್ರಿಯತೆಯನ್ನು ಜೀವಿತ ಕಾಲದಲ್ಲೇ ಕುಗ್ಗಿಸತೊಡಗಿತು. ತೀವ್ರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡು ಅಮೆರಿಕ, ಫ್ರಾನ್ಸ್, ಬ್ರಿಟನ್, ನೆದರ್ಲೆಂಡ್ಸ್ ಮುಂತಾದ ದೇಶಗಳ ತಿರುಗುತ್ತ ಮುಕ್ತವಾಗಿ ಟೀಕಿಸುತ್ತ, ಮುಕ್ತಚಿಂತನೆಯನ್ನು ಬೆಂಬಲಿಸುತ್ತ, ದೈತ್ಯರನ್ನು ಬೀಳಿಸಿ, ನಿಸ್ವಾರ್ಥಿ ಜನನಾಯಕರ ಮೇಲೆತ್ತಿ ಕಟ್ಟಿದ ಪೇಯ್ನ್ ಗಡಿ, ದೇಶ, ಭಾಷೆಗಳ ಹಂಗಿಲ್ಲದೆ ಮಾನವಹಕ್ಕುಗಳ ಪ್ರತಿಪಾದಿಸಿದ್ದ. ಆದರೆ ಈಗ ಯಾವ ಕಾರಣಗಳಿಗೆ ಪ್ರಸಿದ್ಧನೋ ಆಗ ಅದೇ ಕಾರಣಕ್ಕೆ ಕುಖ್ಯಾತನೂ ಆಗಬೇಕಾಯಿತು. ಶತ್ರುಗಳನ್ನೂ ಪ್ರೀತಿಸಬೇಕೆನ್ನುವವರು ತಮ್ಮ ಮಿತ್ರನಾಗಿದ್ದ ಆತನನ್ನು ದ್ವೇಷಿಸಿದರು. ಅವನ ಸಾವಿಗಾಗಿ ಉಳಿದವರು ಅಸಹನೆಯಿಂದ ಕಾದರು. ಆತನ ಸೇವೆ ಮರೆತರು. ಟೀಕೆ, ಸ್ವವಿಮರ್ಶೆ ಎಂಬ ಮೌಲ್ಯಗಳನ್ನು ದುಷ್ಟತನ, ದ್ರೋಹವೆಂದು ಭಾವಿಸಿದರು. ೧೮೦೨ರಲ್ಲಿ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ತನ್ನ ಜನಪ್ರಿಯತೆ ಕುಂದುತ್ತ ಸಾಗಿದ್ದನ್ನು ಪೇಯ್ನ್ ಗಮನಿಸಿದ. ಅನಾರೋಗ್ಯದಲ್ಲಿಯೂ ಏಕಾಂಗಿಯಾಗಿ ೧೮೦೯ರಲ್ಲಿ ತೀರಿಕೊಂಡ.


ಪೇಯ್ನ್ ತೀರಿಕೊಂಡಾಗ ಸಾವು ಅವನ ಏಕೈಕ ಆಪ್ತ ಗೆಳೆಯನಾಗಿತ್ತು..

ಕೇವಲ ಆರು ಜನ ಅವನ ಶವಯಾತ್ರೆಯಲ್ಲಿದ್ದರು. ಒಂದು ವಾಹನ, ಅದರ ಚಾಲಕ, ಅದರಲ್ಲಿ ವೃತ್ತಿಪರ ದುಃಖಿಸುವ ಮಹಿಳೆ ಮತ್ತವಳ ಮಗು, ಇಬ್ಬರು ಬರಿಗಾಲಿನ ನೀಗ್ರೋಗಳು ಮತ್ತು ಒಬ್ಬ ಕ್ವೇಕರ್ ಪಂಥದವನು. ಪೇಯ್ನ್ ಇಚ್ಛೆಯಂತೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನವೇ ಸಿಗದೇ ಹೋದಾಗ ಬಯಲಿನಲ್ಲಿದ್ದ ಒಂದು ವಾಲ್ನಟ್ ಮರದ ಕೆಳಗೆ ಶವವನ್ನು ಹೂಳಲಾಯಿತು.

ನ್ಯೂಯಾರ್ಕ್ ಪತ್ರಿಕೆಯಲ್ಲಿ ಪ್ರಕಟವಾದ ಬಹುಪಾಲು ಶ್ರದ್ಧಾಂಜಲಿಗಳು ‘ಥಾಮಸ್ ಪೇಯ್ನ್, ದೀರ್ಘ ಕಾಲ ಬಾಳಿದ. ಸ್ವಲ್ಪ ಒಳಿತನ್ನೂ, ಬಹಳ ಕೆಡುಕನ್ನೂ ಮಾಡಿ ತೀರಿಕೊಂಡ' ಎಂದಿದ್ದವು! ೧೮೧೯ರಲ್ಲಿ ಇಂಗ್ಲಿಷ್ ಪತ್ರಕರ್ತ ವಿಲಿಯಂ ಕಾರ್ಬೆಟ್ ಪೇಯ್ನ್‌ಗೆ ವೀರೋಚಿತ ಸಂಸ್ಕಾರವಾಗಬೇಕೆಂದು ಭಾವಿಸಿ ಅವನ ಮೂಳೆಗಳ ಇಂಗ್ಲೆಂಡಿಗೆ ಒಯ್ದ. ಆದರೆ ಇಂಗ್ಲೆಂಡಿನ ರಾಜಮನೆತನ, ರಾಜಕಾರಣಿಗಳು, ಧಾರ್ಮಿಕ-ಸಾಹಿತ್ಯಿಕ ಪ್ರಭಾವಿ ವ್ಯಕ್ತಿಗಳ ನಿರಂತರ ವಿರೋಧದಿಂದ ೨೦ ವರ್ಷ ಸರಿದರೂ, ಮೂಳೆ ಹೊತ್ತು ತಂದ ಕಾರ್ಬೆಟ್ ಸತ್ತರೂ ಪೇಯ್ನ್ ಮೂಳೆಗಳಿಗೆ ಗೌರವಾನ್ವಿತ ಜಾಗ ಸಿಗಲಿಲ್ಲ. ಆಮೇಲೆ ಅವು ಏನಾದವೋ ಯಾರಿಗೂ ಗೊತ್ತಿಲ್ಲ.


ದೇಹದ ಅವಶೇಷಗಳು ಏನಾದರೂ ಆಗಿರಲಿ, ಆದರೆ ಪೇಯ್ನ್ ಚಿಂತನೆಗಳು ಇವತ್ತಿಗೂ ಜಗತ್ತಿನ ಎಲ್ಲೆಡೆ ಹಲವು ದೇಶಗಳ ಕ್ರಾಂತಿ, ಹೋರಾಟ, ದಂಗೆಗಳ ಸ್ಫೂರ್ತಿಯಾಗಿ ಜೀವಂತವಾಗಿವೆ. ಸಮಾನತೆಯ ಸಮಾಜ, ಗಣರಾಜ್ಯ ಕಲ್ಪನೆ, ಮುಕ್ತ ಚಿಂತನೆ, ಪ್ರಕೃತಿ ಧರ್ಮೋಪಾಸನೆ  ಇವೆಲ್ಲ ಅವತ್ತಿಗೆ ಕ್ರಾಂತಿಕಾರಕ, ನವನವೀನ ವಿಚಾರಗಳಾಗಿದ್ದವು. ಪ್ರಜಾತಂತ್ರವಾದಿ ಚಿಂತನೆಗಳನ್ನು, ಸಮಾನತೆಯ ಆಧಾರದ ಸಮಾಜ ನಿರ್ಮಾಣದ ಕನಸನ್ನು ಮೊತ್ತಮೊದಲು ವ್ಯವಸ್ಥಿತವಾಗಿ ಪ್ರತಿಪಾದಿಸಿದ್ದು ಪೇಯ್ನ್. ಅವನ ಚಿಂತನೆಗಳಿಂದ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಗಾಢವಾಗಿ ಪ್ರಭಾವಿತನಾಗಿ ಗುಲಾಮಗಿರಿಯನ್ನು ರದ್ದು ಮಾಡಿದ. ಅವನ ಚಿಂತನೆಗಳಿಂದ ಥಾಮಸ್ ಆಲ್ವಾ ಎಡಿಸನ್, ಬೆಂಜಮಿನ್ ಫ್ರಾಂಕ್ಲಿನ್, ಬರ್ಟ್ರಂಡ್ ರಸೆಲ್, ಇಂಗರ್‌ಸಾಲ್ ಸೇರಿದಂತೆ ಹಲವು ಅಮೆರಿಕನ್, ಬ್ರಿಟಿಷ್ ಬರಹಗಾರರು-ತತ್ವವೇತ್ತರು, ದ. ಅಮೆರಿಕದ ಕ್ರಾಂತಿಕಾರಿಗಳು ಸ್ಫೂರ್ತಿ ಪಡೆದರು. ಸಾಂಸ್ಥಿಕ ಧರ್ಮದ ಕುರಿತ ಆತನ ನೇರನುಡಿ ಹಾಗೂ ವೈಚಾರಿಕತೆ ಹಲವರನ್ನು ಪ್ರಭಾವಿಸಿತು. ಪೇಯ್ನ್ ಬರಹಗಳು ೧೮೧೧ರ ವೇಳೆಗೆ ಸ್ಪ್ಯಾನಿಶ್‌ಗೆ ಅನುವಾದಗೊಂಡು ಲ್ಯಾಟಿನ್ ಅಮೆರಿಕಾದ ಸ್ವಾತಂತ್ರ್ಯಪ್ರಿಯ ಕ್ರಾಂತಿಕಾರಿಗಳ ಬೈಬಲ್ ಆಯಿತು. ಉರುಗ್ವೆಯ ಸಂವಿಧಾನದಂತಿದೆ ಎಂದು ಕರೆಸಿಕೊಂಡ ಜೋಸ್ ಆರ್ಟಿಗಾಸ್‌ನ ಒಂದು ಬರಹ ಪೇಯ್ನ್ ವಿಚಾರಗಳಿಂದ ಗಾಢ ಪ್ರಭಾವಕ್ಕೊಳಗಾಗಿದೆ. ಭಾರತದಲ್ಲಿಯೂ ಪೇಯ್ನ್ ವಿಚಾರಗಳ ಗಾಢಪ್ರಭಾವವಿದೆ.

ಎಂದೇ ಇವತ್ತಿಗೂ ‘ಹಲವು ಹೊಸ ನಾಡುಗಳ ಕಟ್ಟಿದ ಮಹನೀಯ'ನೆಂದೇ ಪೇಯ್ನ್ ಗೌರವಿಸಲ್ಪಟ್ಟಿದ್ದಾನೆ.