Wednesday 10 August 2016

ಕರಿ ಕಣಗಿಲ (ತೆಲುಗು ದಲಿತ ಕವಿತೆ)




ಪ್ರಿಯ ಓದುಗ,




ನಾನೀಗ ತೊಡಗಿಕೊಂಡಿರುವುದು ವಾರಂಗಲ್ಲಿನ ಕಾಕತೀಯ ವಿಶ್ವವಿದ್ಯಾಲಯದ ಪ್ರೊ. ಕೆ. ಪುರುಷೋತ್ತಮ್ ಇಂಗ್ಲಿಷ್‌ಗೆ ಅನುವಾದಿಸಿ, ಸಂಪಾದಿಸಿರುವ ಪುಸ್ತಕ ‘ಬ್ಲ್ಯಾಕ್ ಲಿಲೀಸ್’ (ತೆಲುಗು ದಲಿತ ಕವಿತೆಗಳ ಸಂಗ್ರಹ) ಅನುವಾದದಲ್ಲಿ. ಸಾಕಷ್ಟು ಮರಾಠಿ ದಲಿತ ಕವಿತೆಗಳ ಪರಿಚಯವಿರುವ ಕನ್ನಡ ಓದುಗರಿಗೆ ತೆಲುಗು ದಲಿತ ಕಾವ್ಯದ ಒಂದು ನೋಟ ಈ ಸಂಗ್ರಹದಲ್ಲಿ ದಕ್ಕುತ್ತದೆ. ಮೊದಲ ತಲೆಮಾರಿನ ದಲಿತ ಕವಿ ಗುರ್ರಂ ಜಷುವಾರಿಂದ ಹಿಡಿದು ಇತ್ತೀಚೆಗೆ ಬರೆಯುತ್ತಿರುವ ಇನಾಲ ಸೈದುಲು ತನಕ ಒಟ್ಟಾರೆ ೩೯ ಕವಿಗಳ ೭೩ ಕವಿತೆಗಳು ಇಲ್ಲಿದ್ದು ಅವು ವಿಭಿನ್ನ ಕಾಲ, ವಿಷಯ, ಸಿದ್ಧಾಂತ, ಶೈಲಿ, ಕಾಳಜಿಗಳನ್ನೊಳಗೊಂಡಿವೆ. ಅನುವಾದಕರಾದ ಪುರುಷೋತ್ತಮ್ ಅವರ ಪ್ರಕಾರ, ‘ತೆಲುಗು ದಲಿತ ಕಾವ್ಯ ಕ್ರಿಯೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಈ ಸಂಗ್ರಹ. ೧೦೦ ವರ್ಷಕ್ಕಿಂತ ಅಧಿಕ ಕಾಲಮಾನದ ದಲಿತ ಕವಿತೆಗಳ ಪ್ರತಿನಿಧಿಸುತ್ತ, ತೆಲುಗು ಕಾವ್ಯದಲ್ಲಿ ದಲಿತ ಕಾವ್ಯ ಒಂದು ಸಾಹಿತ್ಯಿಕ ಪ್ರಕಾರವಾಗಿ ಬೆಳೆದುಬಂದ ಬಗೆಯನ್ನು ಇವು ತೋರಿಸಿಕೊಡುತ್ತವೆ. ಇಲ್ಲಿ ದಲಿತ ಸಮುದಾಯದ ಪ್ರತಿಭಟನೆ, ಪ್ರತಿಪಾದನೆಗಳಿಂದ ಶುರುವಾಗಿ ದಲಿತ ದೇವತೆಗಳು, ಆಚರಣೆಗಳು, ವಿಧಿಗಳು, ದಲಿತ ರಂಗಭೂಮಿ, ದಲಿತ ಭಾಷೆ ಮತ್ತು ಆಡುನುಡಿಗಳಿಂದ ದಲಿತರ ಸಾಂಸ್ಕೃತಿಕ ಪರ್ಯಾಯಗಳನ್ನು ಹುಡುಕುವ ತನಕದ ಮಾಗುವಿಕೆ ಕಂಡುಬರುತ್ತದೆ.’

ಅದರಿಂದ ಆಯ್ದ ಎಂಟು ಕವಿತೆಗಳ ಅನುವಾದವನ್ನು, ಕವಿಗಳ ಕಿರು ಪರಿಚಯವನ್ನು ಇಲ್ಲಿ ಕೊಡಲಾಗಿದೆ. ನಾಲ್ವರು ತಮ್ಮ ತಾಯಿಯ ಬಗೆಗೆ ಬರೆದ ಕವಿತೆಗಳನ್ನು ಆಸಕ್ತಿಯಿಂದ ಓದಿದರೆ ಕೆಲವು ವಿಶಿಷ್ಟ ಆಯಾಮಗಳು ಹೊಳೆಯುತ್ತವೆ. ಹಲವು ಕವಿಗಳನ್ನು ಒಬ್ಬ ವ್ಯಕ್ತಿ ಅನುವಾದಿಸುವಾಗ ಭಾಷೆಯ ಏಕತಾನತೆ ಉಂಟಾಗುತ್ತದೆ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಲು ಶಿಷ್ಟ ಕನ್ನಡದ ಜೊತೆಗೆ ಎರಡು-ಮೂರು ಉಪಭಾಷೆಗಳನ್ನು ಬಳಸಲಾಗಿದೆ.

ಒಪ್ಪಿಸಿಕೊಳ್ಳಿ..

ಕುಸುಮ ಧರ್ಮಣ್ಣ (೧೮೯೮-೧೯೪೮) 


ಕೃಷಿಕ, ಹೋರಾಟಗಾರ, ಬರಹಗಾರ, ಭಾಷಣಕಾರ. ಆದಿ ಆಂಧ್ರ ಸಮ್ಮೇಳನಗಳ ಅಧ್ಯಕ್ಷರಾಗಿದ್ದವರು. ಅಂಬೇಡ್ಕರರ ವಿಚಾರಧಾರೆಗಳ ಜನರಿಗೆ ತಲುಪಿಸಲೆಂದು ಜಯಭೇರಿ ಎಂಬ ನಿಯತಕಾಲಿಕ ನಡೆಸುತ್ತಿದ್ದರು. ದಲಿತರು ಇಸ್ಲಾಮಿಗೆ ಮತಾಂತರ ಹೊಂದಬೇಕೆಂದು ಹೇಳುತ್ತಿದ್ದರು. ನಾಲ್ಕು ಬಹುಮುಖ್ಯ ಪುಸ್ತಕಗಳ ಪ್ರಕಟಿಸಿದರು. ರಾಷ್ಟ್ರೀಯ ಚಳುವಳಿಯಲ್ಲಿದ್ದ ಗರಿಮೆಲ್ಲ ಸತ್ಯನಾರಾಯಣ ‘ಯೂರೋಪಿಯನ್ನರ ದೊರೆತನಕೆ ಧಿಕ್ಕಾರ’ ಎಂಬ ಪ್ರಖ್ಯಾತ ಕವನ ಬರೆಯುವುದಕ್ಕೆ ಮೊದಲೇ ಕೆಳಗಿನ ಕವಿತೆ ಬರೆಯಲಾಯಿತು ಎನ್ನುವುದು ದಲಿತ ಚಿಂತಕರ ಅಭಿಪ್ರಾಯ.

ಈ ಕರೇ ಮನ್ಶರ ದೊರೆತನಕೆ ಧಿಕ್ಕಾರ 

ಸಂಗೀತದೆಸ್ರು ಯೇಳ್ಕಂಡು
ಹೆಂಗಸ್ರ ಗುಡಿ ವಳಿಕ್ ತತ್ತರೆ
ವರ್ಷೊರ್ಷ ಹೆಣ್ಣೆಂಗಸ್ರ ದ್ಯಾವ್ರಿಗೆ ಮದ್ವೆ ಮಾಡ್ಸಿ
ತಾವು ಅವರ‍್ನ ಹಾಸಿಗ್ಗೆ ಬಳಸ್ಕತಾರೆ.
ಬಿಳೇರ‍್ನು ಜೊತೆ ಬಿಟ್ಕತಾರೆ ಬೇಕಾರೆ.
ಅಯ್ಯ ದ್ಯಾವ್ರೆ,
ನಾವು ಹೊಲೆರೇನಾರ ಗುಡಿ ವಳಿಕ್ ಬರ‍್ತಿವಂದ್ರೆ
ಅಲಲಲಲಾ,
ಕೆರಳಿ ಧುಮುದುಮು ಅಂತ್ ಉರ‍್ದ್ ಬೀಳತಾರೆ.

ನಾವ್ ನಿಂತಲ್ಲಿ ಅವ್ರು ನಿಲ್ಲಲ್ಲ
ಅವ್ರ್ ಬೆಂಕಿ ತಗಂಡ್ರೆ, ಗಂಟ್ಲು ಹರ‍್ಕತಾರೆ
ನಮ್ಮೇಲೆ ಗಾಳಿ ಬೀಸ್ಕಂಡ್ ವೋದ್ರು ಸೈತ
ಮೈಲಿಗಾಯ್ತು ಅಂತ ಬಡ್ಕತಾರೆ.
ನಮ್ಮತ್ರ ಇರೊ ಏನ್ನೂ ಮುಟ್ಟಲ್ಲ ಅವ್ರು.
ಅಯ್ಯ ದೇವ್ರೆ,
ಧರ್ಮ ನ್ಯಾಯನೀತಿಗುಳ ಹುಗದಾಕಿದಾರೆ ಅವ್ರು.

ನಾವ್ ಕೊಟ್ಟ ತರಕಾರಿನ ಗಂಭೀರವಾಗಿ ತಗತರೆ
ಹಣ್ಣು ಕೊಟ್ರೆ ಬೋ ಕುಶಿಂದ್ಲೆ ತಿಂತರೆ
ಕಾಸು ಕೊಟ್ರೆ ಉಶಾರಾಗಿ ಕಿಸೆಗಿಳಿಸ್ತಾರೆ
ಸೇವೆನು ಜಗ್ಸಿ ಮಾಡಿಸ್ಕತ್ತಾರೆ.
ಅಯ್ಯ ದ್ಯಾವ್ರೆ,
ಅವ್ರಿಗೆ ಬೇಕಾದಾಗ ಯಾವ್ದೂ ಮೈಲಿಗೆ ಅಲ್ಲ ಅವ್ರಿಗೆ.

ಸ್ಯಾನೆ ಚೆನಾಗೆ ಯೋಳ್ತರೆ,
ನೀವು ಹೊಲೇರು ಮುಟ್ಟಿದ್ದೇನುನ್ನು ನಾವ್ ಮುಟ್ಟಲ್ಲ ಅಂತ.
ಆದ್ರೆ ನಾವ್ ಕೊಟ್ಟ ಔಸ್ತ ತಗತಾರೆ.
ನಾವ್ ಕಾಸಿದ ಕಷಾಯ ಕುಡೀತರೆ.
ನಾವ್ ಕರೆದ ಹಾಲು ಕುಡೀತರೆ.
ಅಯ್ಯಯ್ಯ, ಏನ್ ಜನ,
ಅವ್ರಿಗೆ ಔಸ್ತ ಕೊಟ್ಟಿದ್ದು ಮರ‍್ತೆ ಬಿಟ್ಟು
ನೀವು ಹೊಲೇರು, ವಂಟೋಗ್ರಿ ಅತ್ತಗೆ ಅಂದ್ಬಿಡ್ತರೆ.

ಇಂಗ್ಲೀಷೋರ ವಿರುದ್ಧ ಹೋರಾಡ್ತ
ಸ್ವರಾಜ ಬೇಕು ಸ್ವಾಸಂತ್ರ ಬೇಕು ಅಂತೇನೊ ಕೇಳ್ತವ್ರೆ
ಆದ್ರೆ ಸ್ವಾಸಂತ್ರನ ನಮ್ಗವ್ರು ಬಿಲ್ಕುಲ್ ಕೊಡದಿಲ್ಲ
ತಮ್ ಗುಡಿಗುಂಡಾರಗುಳಾಗೆ ನಮ್ಮುನ್ನ ಬಿಟ್ಕಳದಿಲ್ಲ
ಧರ್ಮಚತ್ರದ ವಳೀಕು ಬಿಡಲ್ಲ
ಊರ ಬಾವಿಂದ ನೀರು ಸೇದಕ್ ಬಿಡಲ್ಲ
ಅವರಂತಾರೆ, ಹೊಲೆಮಾದುಗರ‍್ಗೆ ಆ ಹಕ್ಕೇ ಇಲ್ಲ
ಅಲ್ಕಣ ದ್ಯಾವ್ರೆ,
ನಮ್ಗೆ ಹಕ್ಕಿಲ್ಲ ಪಕ್ಕಿಲ್ಲ ಅಂದ್ರೆ
ಅದೆಂಗೆ ಸ್ವಸಂತ್ರ ಬತ್ತದೆ ಅವ್ರಿಗೆ?

ನಂ ಜನ್‌ಗುಳೇ,
ಇಲ್ ಕೇಳಿ, ಸಿಟ್ಟಾಗಬ್ಯಾಡಿ.
ನನ ಮಾತು ಕೇಳಿದ್ರೆ,
ನಂಗೂ ನಿಮ್ಗು ವಿಮೋಚ್ನೆ
ನಾನು ನಂದು ಅಂತ ಬಡಿದಾಡ್ತನೆ ಇದ್ರ,
ಎಂದೆಂದ್ಗು ನಿಮ್ಗಿಲ್ಲ ಬಿಡುಗಡೆ.

ಎಲ್ಲೀವರ‍್ಗು ನಮುನ್ನ ಕೀಳಾಗಿ ನೋಡ್ತಿರೊ
ಎಲ್ಲೀವರ‍್ಗು ಮೇಲ್ಜಾತಿ ಕೀಳ್ಜಾತಿ ಇದೆ ಅಂತೀರೊ
ಎಲ್ಲೀವರ‍್ಗು ಮೈಲಿಗೆ ಅಂಬೋದು ಇರುತ್ತೊ
ಭಾಗ್ಯರೆಡ್ಡಿ ಹೇಳಿದ್ನ ಎಲ್ಲೀವರ‍್ಗು ಯಾರೂ ಅರೀರೋ
ಧರ್ಮಣ್ನ ಮಾತ್ಗೆ ಎಲ್ಲೀವರ‍್ಗು ಯಾರೂ ಕಿಮ್ಮತ್ ಕೊಡಲ್ವೊ
ಅಲ್ಲೀವರ‍್ಗು ಬಿಡುಗಡೆನು ಇಲ್ಲ, ವಿಮೋಚನೆನು ಇಲ್ಲ.
ನೆನಪಿಟ್ಕಳಿ ಈ ಮಾತ್ನ.

(ಭಾಗ್ಯ ರೆಡ್ಡಿ ವರ್ಮ (೧೮೮೮-೧೯೩೭) ಆಂಧ್ರಪ್ರದೇಶದಲ್ಲಿ ದಲಿತರು ಶಿಕ್ಷಣ ಪಡೆವಂತೆ, ಸಂಘಟಿತರಾಗುವಂತೆ ಅಂಬೇಡ್ಕರರಿಗಿಂತ ಮೊದಲೆ ಪ್ರಯತ್ನಿಸಿದ ವ್ಯಕ್ತಿ. ಅವರು ದಲಿತ ಮಕ್ಕಳಿಗಾಗಿ ಶಾಲೆ ನಡೆಸಿದರು ಮತ್ತು ಆದಿ ಆಂಧ್ರ ಸಮಾವೇಶಗಳನ್ನು ನಡೆಸಿದರು.)

ಬೋಯಿ ಭೀಮಣ್ಣ (೧೯೧೧-೨೦೦೫) 


ಪೂರ್ವ ಗೋದಾವರಿ ಜಿಲ್ಲೆಯವರು. ಬರಹಗಾರ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ಪತ್ರಕರ್ತ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದವರು. ಮಹಾತ್ಮಾ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರರ ಬರಹಗಳಿಂದ ಪ್ರಭಾವಿತರಾಗಿದ್ದರು. ಅಂಬೇಡ್ಕರರ ವಿಭಿನ್ನ ವಿಚಾರಧಾರೆಯ ನಾಲ್ಕು ಪುಸ್ತಕಗಳನ್ನು ತಂದರು. ಅಂಬೇಡ್ಕರರ ಜಾತಿ ವಿನಾಶ ಪುಸ್ತಕವನ್ನು ಮೊದಲು ತೆಲುಗಿಗೆ ಅನುವಾದ ಮಾಡಿದವರು ಅವರು. ದಲಿತರು ಮೊದಲ ಆರ್ಯನ್ನರು ಹಾಗೂ ಮಾಲಾಮಾದಿಗರು ಒಗ್ಗೂಡಬೇಕೆನುವುದು ಅವರ ಪ್ರತಿಪಾದನೆಯಾಗಿತ್ತು. ಆಂಧ್ರಪ್ರದೇಶ ಅನುವಾದ ಸಂಸ್ಥೆಯ ನಿರ್ದೇಶಕರಾಗಿದ್ದರು. ಪದ್ಮಶ್ರೀ, ಪದ್ಮಭೂಷಣ ಮತ್ತಿತರ ಹಲವು ಪ್ರಶಸ್ತಿ ಪಡೆದರು. ೭೦ ಪುಸ್ತಕ ಪ್ರಕಟಿಸಿದರು. ಒಂದು ಪುಸ್ತಕ ಇಂಗ್ಲಿಷ್‌ನಲ್ಲಿಯೂ ಬರೆದರು. ಅವರ ನಾಟಕ ಪಾಲೆರು ಎಷ್ಟೊ ದಲಿತರಿಗೆ ರೈತಾಪಿ ಕೆಲಸ ಬಿಟ್ಟು ಶಿಕ್ಷಣ ಪಡೆಯಲು ಪ್ರೇರೇಪಿಸಿತು.

ಹಟ್ಟಿಗೆ ಬೆಂಕಿ

ಹಟ್ಟಿಗೆ ಬೆಂಕಿ ಬಿದ್ದದೆ
ಅಯ್ಯೋ, ಹೌದಲ, ಅವು ಉರ‍್ದೋಗ್ತಿದಾವೆ!

ಅಯ್ಯಯ್ಯೋ, ಯಾರ ಹಟ್ಟಿನೋ ಏನೋ?
ಇನ್ಯಾರವು, ದಲಿತರವೇ, ನೋಡು ಬೇಕಾದ್ರೆ.
ಉರ‍್ದೋಗೋ ಹಟ್ಟಿ ಇನ್ಯಾರದಾಗಿರಕ್ಕೆ ಸಾಧ್ಯ ಮತ್ತೆ?

ಈ ದೇಸ್ದ ಧರ್ಮನೇ ಹಂಗದೆ
ಅದ್ರಲ್ಲಿ ಹೇಳಿದ್ ಪರ್‌ಕಾರನೇ
ಲಕ್ಷಗಟ್ಲೆ ಹಟ್ಟಿ, ಗುಡುಸ್ಲು ಇಲ್ಲಿದಾವೆ
ವರ್ಷಕೊಂದ್ಸಲ ಅವು ಸುಟ್ಟೋಯ್ತನೇ ಇರ‍್ತಾವೆ

ಒಂದ್ಸಲ ಸುಟ್ಟವು
ಮತ್ತಮತ್ತ ಸುಡದು ಅದೆಂಗಣ್ಣ?
ಅವೇನು ಮೊಳ್ಕೆ ಬತ್ತಾವಾ?

ಹೌದು ಕಳ್ಲಾ ಮತ್ತೆ,
ಮತ್ತೆ ಎಲ್ಲಿಂದ ಬತ್ತವೆ ಅವು
ಮೊಳಕೆ ಒಡೀದೆ?

ಇದೇ ನಂ ಧರ್ಮದ ಗುಟ್ಟು ಕಳ್ಲಾ
ಗುಡುಸ್ಲೂ ಅವತಾರ ಎತ್ತತವೆ!
ಮತ್ತೆ ಮತ್ತೆ
ಧರ್ಮ ಸಂಸ್ಥಾಪನೆಗಾಗಿ ಸುಟ್ಟೋಯ್ತವೆ
ಮತ್ತೆಮತ್ತೆ ಅವತಾರ ಎತ್ತಿ ಮ್ಯಾಕೇಳ್ತವೆ!

ಸುಟ್ಟು ಉರ‍್ದು ಕರುಕ್ಲಾಗದು
ಮತ್ತೆ ಏಳದು
ಈ ವಿಷಚಕ್ರ ಎಷ್ಟ್ ಕಾಲ
ಇಂಗೇ ತಿರುಗುತ್ತಪ ಅಂಗಾರೆ?

ಇದು ಇಂಗೇನೇ,
ಆ ಹಟ್ಟಿ ವಳ್ಗೆ ಇದಾರ‍್ನೋಡು
ಆ ಜೀವಗುಳ್ಗೆ
ಈ ಧರ್ಮ ರಹಸ್ಯ ತಿಳಿಯೋವರ‍್ಗೆ
ಇದು ಇಂಗೇನೆ.

ಯೆಂಡ್ಲೂರಿ ಸುಧಾಕರ (೧೯೫೯)

ಮಹಾರಾಷ್ಟ್ರದಿಂದ ವಲಸೆ ಬಂದ ಕುಟುಂಬದವರು. ಕವಿ, ಕತೆಗಾರ. ನಾಲ್ಕು ಕವನ ಸಂಕಲನ ಪ್ರಕಟಿಸಿದ್ದಾರೆ. ದಲಿತ ಭಾಷೆ ಹಾಗೂ ಮಾದಿಗ ಅಸ್ಮಿತೆ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಪಿಎಸ್ ತೆಲುಗು ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರು.

ಖೈರ್ಲಾಂಜಿ

ಆಕಾಸ್ದಿಂದ ರಗತ ಬೆಳದಿಂಗ್ಳು ಸುರಿತು
ಮಣ್ಣು ಮಾಂಸದ ಮುದ್ದೆ ಹಂಗಾತು
ಅವತ್ ರಾತ್ರಿ ಆಳೆತ್ರದ ನೀಲಿ ಮೂರ್ತಿ ಕಿರುಚ್ದಾಗ
ಆ ರಾತ್ರಿ, ಆತ್ಮಗೌರವ ಅಂಬದು ಗೋಳಿಡ್ತು.

ಕಣ್ಣಲ್ಲಿ ರಕ್ತ ಇಲ್ಲದ್ ಈ ದೇಸ್ದಾಗೆ
ಎಷ್ಟ್ ಸುಲ್ಬ ದಲಿತ್ರ ಕೊಚ್ಚಿ ಕೊಂದ್ ಬಿಸಾಡದು?
ದನಕುರಿ ಕಡಿಯೊ ಕೈಗಾದ್ರು ರವಷ್ಟು
ಹೃದಯ ಕರುಣೆ ಅಂತ ಇರಬೌದು;
ಮಾವ್ಸ ಕಡಿಯೊ ಕತ್ತಿಗೂ ಸೈತ
ಮುಟ್ಟಿದ ಅನುಭವ ಆಗ್ತಿರಬೌದು.

ಹೂ ಕುಯ್ಯೊ ಕೈಯಿ
ದೇವ್ರುನ ಬೇಡ್ಕಳೊ ಕೈಯಿ
ಬೇರ‍್ಯೋರ್ಗೆ ಸಾಯ ಮಾಡೊ ಕೈಯಿ
ಏನ್ ಕಡಿತಿದ್ವು ಆವಾಗ ಅಲ್ಲಿ?

ನನ್ ಪ್ರೀತಿಯ ಯವ್ವೋ, ಯಕ್ಕೋ
ಬೇರೆ ಹೆಂಗಸ್ರ ಕೊಂದು ಕೊಚ್ಚಿ
ಸಾಯೂ ತನ ಜಪ್ಪಿದ
ಕ್ರೂರಪ್ರಾಣಿಗಳಂತ ನಿಮ್ ಗಣಸ್ರ
ಅದೆಂಗ್ ನೀವ್ ಎತ್ತಿ ಕಟ್ಟಿದ್ರವ್ವ?

ರವಷ್ಟು ಸೆರಗು ಕೆಳಗ್ ಸರುದ್ರೆ ಸಾಕು
ನಿಂ ಶೀಲನೆ ಹಾಳಾಯ್ತು ಅಂತ ಗಾಬ್ರಿಯಾಯ್ತಿರಿ
ಅಂತೋರು, ಅದೆಂಗೆ ನಿಮ್ಮಂತ ಹೆಣ ಮಕ್ಳ
ಮೊಲೆ ಕತ್ತರ‍್ಸಿ ಕಿತ್ ಬಿಸಾಡಿ
ತಾಯಿ ಮಗಳ್ನ ಎದ್ರಾಎದ್ರೆ ರೇಪ್ ಮಾಡಿ ಅಂತ
ನಿಮ್ ಗಣಸ್ರಿಗೆ ಚುಚ್ಚಿಕೊಟ್ರಿ?
ಇಂಥಾ ಭಯಾನಕ ಕಣ್ಣೆದ್ರೆ ನಡಿತಿದ್ರು
ಅದೆಂಗ್ ಅದಕ್ ಸಾಕ್ಷಿಯಾಗಿ ಸುಮ್ಮನಿದ್ರಿ?

ಯಮೋ, ಭಾರತ್ ಮಾತೆ
ನಾವು ಸಂಕ್ಟ ಬಟ್ಟು ಅಳ್ತಿದಿವಿ ಕಮ್ಮೊ
ಯೋ ಗಾಂಧಿ
ನಾವ್ ಕಷ್ಟದಾಗಿದಿವಿ ಕಯ್ಯೊ
ಓ ಬಾಬಾಸಾಹೇಬಾ
ಸಿಟ್ನಿಂದ ನಾವ್ ಕುದಿತಿದಿವಿ ಕಯ್ಯೊ.

ತಲೆಯೆತ್ತಿ ಬದ್ಕಕ್ಕೆ ನಮ್ಗೆ ಹೊಸ್ದೊಂದು ಲೋಕಾನೆ ಬೇಕನುಸ್ತಿದೆ
ಕೊನೆಪಕ್ಸ ನಂ ಯೋನಿ ಮೊಲೆನಾದ್ರು ಸುರಕ್ಷಿತವಾಗಿರೋವಂಗೆ.


ಜೂಪಾಕ ಸುಭದ್ರ (೧೯೬೩)

ತೆಲುಗು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಭದ್ರ ಹೈದರಾಬಾದ್ ಸೆಕ್ರೆಟರಿಯೆಟ್‌ನಲ್ಲಿ ಕೆಲಸ ಮಾಡುತ್ತಾರೆ. ಮಹಿಳಾವಾದಿ ಮತ್ತು ಹೋರಾಟಗಾರ್ತಿಯಾಗಿದ್ದಾರೆ. ತಮ್ಮ ಸಾಮಾಜಿಕ ಹೋರಾಟ ಹಾಗೂ ಟ್ರೇಡ್ ಯೂನಿಯನ್ ಅನುಭವಗಳನ್ನು ಬರಹವನ್ನಾಗಿಸಿರುವ ಅವರು ಅಯ್ಯಯ್ಯೊ ದಮ್ಮಕ್ಕ ಎಂಬ ಕವನ ಸಂಕಲನ ತಂದಿದ್ದಾರೆ. ದಲಿತ ಹೋರಾಟದಲ್ಲಿ ಪಾಲ್ಗೊಳ್ಳುವ ಅವರು ದಲಿತ ಸ್ತ್ರೀವಾದ ಕುರಿತ ಚಿಂತನೆಗಳನ್ನು ವಿಸ್ತರಿಸಿದ್ದಾರೆ.

ನನ್ನವ್ವ, ದುಃಖದ ಬಣವೆ


ಅವ್ವ, ನನ್ನವ್ವ
ಗೋಡೆ ಗೂಡಲ್ಲಿ ಹಚ್ಚಿಟ್ಟ ಬುಡ್ಡಿದೀಪ ಅಲ್ಲ
ಆಕಾಶ ಕಂಬಳಿಯಲ್ಲಿ ಹಾದಿತಪ್ಪಿ ಅಲೆವ ಸೂರ್ಯ
ಭೂಮ್ತಾಯಿ ಹರಡಿ ಬಿಚ್ಚಿದ
ಸೆರಗಿನ ಬರಗಾಲ

ಅವ್ವ, ಕಾಲಾತೀತ ಹುಣ್ಣಿವಿ ಚಂದ್ರ
ಕೊನೆಯಿರದ ಹೋರಾಟದ ಸಾಕಾರ ರೂಪ
ಒರಳಲಿ ಹಾಕಿ ಕುಟ್ಟಿದರೂ ತಲೆ ಮೇಲೆತ್ತಿ
ಒನಕೆ ಎದುರು ಸಿಡಿವ ದವಸದ ಹೊಟ್ಟು

ಕೋಳಿ ಕೂಗಿದ್ದೇ ಏರುವ ಸೂರ್ಯ
ಅವ್ವನ ಕಣ್ಣಲಿ ಬೆಂಕಿ ಕಾಯಿಸಿ ಬೆಚ್ಚಗಾಗುತ್ತಾನೆ
ಬೆಳಗಾತ ಅವ್ವ ನಕ್ಷತ್ರ ಗುಡಿಸುತ್ತಾಳೆ
ಅಂಗಳಕೆ ಸಗಣಿ ನೀರು ಸಾರಿಸಿ
ನಮ್ಮನೆಚ್ಚರಿಸಿ, ತಿನಿಸಿ ಕೂಲಿಗೆ ಹೊರಡುತ್ತಾಳೆ
ಅಡವಿಯ ಹಸುವಾಗಲೀ ಕೊಟ್ಟಿಗೆಯ ಕರುವಾಗಲೀ
ಸಂಜೆವರೆಗೆ ಪರಸ್ಪರ ಕೂಗಿ ಕರೆವಂತಿಲ್ಲ, ಕರೆಯುವುದೂ ಇಲ್ಲ

ಅವ್ವ
ಮತ್ತೆಮತ್ತೆ ಅಯ್ಯನ ಕುಲುಮೆಯಲಿ ಬೇಯುವವಳು
‘ಊಟ ಹೊಟ್ಟೆ ತುಂಬ್ಲಿಲ್ಲ, ಅನ್ನದಲ್ಲಿ ಕಲ್ಲು ಸಿಗತು
ಸಾರಿನಲ್ಲಿ ಕೂದ್ಲು ಸಿಗತು, ಹಡ್ಬೆ ಮುಂಡೆ,
ದುಡದ್ ದುಡ್ನ ತತ್ತಾ ಇಲ್ಲಿ, ಹೆಂಡದಂಗ್ಡಿಗೆ ಕೊಡ್ಬೇಕು..’
ಹಿಂಗೇ ಅವ್ವನ ಮೇಲೆ ಅಯ್ಯನ ಯಾವ್ಯಾವುದೋ ಸಿಟ್ಟು.

ಅವ್ವ
ನಮ್ಮ ಕೈಯ ಊಟ ತುಂಬಿದ ತಾಟು
ರಂಟೆ ಹೊಡೆದ ಸಾಲುಗಳಲ್ಲಿ ಬಿತ್ತಿದ ಬೀಜ
ಹಸಿರು ಬೆಳೆಯಾಗುವ ಮೊಳಕೆ
ಕೆಸರಲಿ ಮುಳುಗಿಸಿದ ಮೊಣಕಾಲು
ನೆಟ್ಟಿ ಮಾಡುವ ಕಳೆ ತೆಗೆವ
ಸಂಜೆ ಕಪ್ಪಾದರೂ ನಿಲಿಸದೆ ಗೇಯುವ
ನನ್ನವ್ವ ಅವಳು.

ನನ್ನವ್ವ
ಗದ್ದೆ ಬದುಗಳಲಿ ಗೇಯುತ್ತ ಹಾಡುವಳು
ಆ ಹಾಡೇ ಹಳ್ಳಿ ಬೀದಿ ತುಂಬಿದ ಬೆಳಕು
ಗೇಯುವ ಅವಳ ಬೆವರೇ
ಮರಳುಗಾಡಿನ ಬುಗ್ಗೆಯಂತೆ ಚಿಮ್ಮುವುದು
ಸದಾ ಉರಿವ ಮಣ್ಣೊಲೆಯ ಬೆಂಕಿ ಅವಳು.

ಅವ್ವನ ಸೊಂಟ ಏರಿ ಕೂತ
ಸವಿ ನೆನಪುಗಳು ನನಗಿಲ್ಲ
ನನಗವಳು ಜೋಗುಳ ಹಾಡಿದ್ದು ಕೇಳಲಿಲ್ಲ
ಹೊಗೆ ಹಿಡಿದ ಒರಟು ಕೈಗಳಲಿ
ತುತ್ತುಣಿಸುತ್ತ ಕತೆ ಹೇಳಲೂ ಇಲ್ಲ
ಆಕಳಿಸುತ್ತ ಅವಳ ಮಡಿಲಲಿ
ತಲೆಯಿಟ್ಟು ಮಲಗುವ ಕಾಲ ಬರಲೇ ಇಲ್ಲ
ನೆಗ್ಗಿದ ಸಿಲವಾರು ತಾಟು ಹಿಡಿದು
ಕೂಳು ಹಾಕೆಂದು ಕಿರುಚಿದ ನನ್ನ ಕೀರಲು ದನಿ
ಇನ್ನೂ ಹಸಿಹಸಿ.

ನನ್ನವ್ವ
ಒಡೆದ ತಮಟೆಯ ನಾದ
ನೆಲಕೆ ಹೂಬಿಡಲು ಹಣ್ಣಾಗಲು ಕಲಿಸಿಕೊಟ್ಟವಳು
ಚಪ್ಪಲಿಗೆಂದು ಚರ್ಮವಾದವಳು
ಒಡೆಯರೆಂಬ ಚಾವಟಿಗೆ
ಬುಗುರಿಯಾಗಿರುವ ಕಡು ದುಃಖಿ
ಬೂಮ್ತಾಯಿಗೆ ತನ್ನೆದೆ ಹಾಲ ನೀಡಿ
ಸುಗ್ಗಿಕಣದಿಂದ ಆಚೆ ನೂಕಲ್ಪಟ್ಟ ಪರದೇಶಿ

ನನ್ನವ್ವ
ಚರಿತ್ರೆಯ ಬಣವೆಯ ದುಃಖಗಳೆಲ್ಲ ರಾಶಿಯಾಗಿ
ಅದುವೆ ತಾನಾಗಿ, ಬಾಗಿಲ ಚಪ್ಪಡಿ ಹಾಸಾಗಿ ಬಿದ್ದಿರುವವಳು
ಸೊಂಟದ ಸುತ್ತ ಸೆರಗು ಬಿಗಿದ
ಕೈಯಲಿ ಕುಡುಗೋಲು ಹಿಡಿದ ನನ್ನ ಅವ್ವ
ಒಂದು ಪ್ರಶ್ನೆ.

ನನ್ನವ್ವ ಅಲೆದ, ನಡೆದ, ಕುಸಿದ ನೆಲಗಳಲಿ
ಎಂದೂ ಕಾಲಿಡದ ಭಾಷೆಗಳೆಲ್ಲ ಸರ್ವನಾಶವಾಗಲಿ.

ಮದ್ದೂರಿ ನಾಗೇಶ ಬಾಬು (೧೯೬೪-೨೦೦೫)

ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದವರು. ಏಳು ಕವನ ಸಂಕಲನ, ನಾಲ್ಕು ದೀರ್ಘ ಕವಿತೆಗಳು, ಹಲವು ಪ್ರಬಂಧಗಳನ್ನು ಬರೆದಿದ್ದಾರೆ. ಜಾತಿ ವ್ಯವಸ್ಥೆಯ ಕಟುಟೀಕಾಕಾರಾಗಿದ್ದ, ರಾಜಿಯಿರದೆ ಜಾತಿ ವಿರೋಧಿಸುತ್ತಿದ್ದ ಬರಹಗಾರ-ಹೋರಾಟಗಾರರ ಸಾಲಿನಲ್ಲಿ ನಾಗೇಶ ಬಾಬು ಒಬ್ಬರು. ಅವರ ಅಕಾಲಿಕ ಮರಣದಿಂದ ತೆಲುಗು ಸಾಹಿತ್ಯವು ಪ್ರತಿಭಾವಂತ ಲೇಖಕನನ್ನು ಕಳೆದುಕೊಂಡಿದೆ.

ಹೊಲಾರ ಅವ್ವ




ಯಾವತ್ತಾದ್ರೂ ನೀವು
ಸಾರ್ವಜನಿಕ ಆಸ್ಪತ್ರೆ ಅನ್ನೋ ಹೆಣದಂಗ್ಡೀಲಿ
ಕಣ್ಣೀರ ಗುಂಡೀನೇನಾದ್ರು ನೋಡಿದ್ರಾ?
ಅದು ನನ್ನವ್ವ!

ಯಾವತ್ತಾದ್ರು ನೀವು
ಗೋರಿ ಮೇಲೊಂದು ಒಂಟಿ ಶಿಲುಬೆ
ಗೋರಿಕಲ್ಲೂ ಹುಗೀದ ಮಣ್ಣಿನ ಗುಡ್ಡೆ
ಸ್ಮಶಾನದಲ್ಲಿ ನೋಡಿದ್ರಾ?
ಅದು ನನ್ನವ್ವ!

ನನ್ನವ್ವ ಯಶೋದಾನೂ ಅಲ್ಲ, ಕೌಸಲ್ಯಾನೂ ಅಲ್ಲ
ಚಂದ್ರನ್ನ ತೋರುಸ್ತ ಬೆಳ್ಳಿ ಚಮಚದಲ್ಲಿ
ಹೊಟ್ಟೆ ತುಂಬೋವಷ್ಟು ಅನ್ನ ಎಂದೂ ಹಾಕ್ಲಿಲ್ಲ
ಒತ್ತಾಯ ಮಾಡಿ ಬಿಸ್ಕೀಟು ತಿನಿಸ್ಲಿಲ್ಲ
ಅವಳ ಕಣ್ಣಲ್ಲಿ ಎಂಥಾ ಬೆಳಕೂ ಇರ‍್ಲಿಲ್ಲ
ಪೆಪ್ಪರ್‌ಮಿಂಟ್ ಕೊಡ್ಸು ಅಂತ ರಚ್ಚೆ ಹಿಡಿದ್ರೆ
ಬೈದು, ಬರ್ಲು ತಗಂಡು ಸರೀ ಬಡಿತಿದ್ಲು.
ಇಂಥಾ ಅವ್ವನ ಬಗ್ಗೆ ನಾನೆಂಥ ಹಾಡು ಬರೀಲಿ?

ಎಲ್ರು ತಂ ತಾಯಂದ್ರ ಮೇಲೆ ಹಾಡು ಬರಿತಾರೆ
ಅವರೆಲ್ಲ ರಾಣಿಯರು, ಹಾಲುಣಿಸಿದವರು
ನನ್ನವ್ವನ ಬಗ್ಗೆ ಏನಿದೆ ಅಂಥಾ ಹೇಳಿಕೊಳೋವಂಥಾದ್ದು?
ಒಳ್ಳೆ ಹೆಸರಿಲ್ಲ, ಮರ್ಯಾದೆ ಬರೊ ಗುಣವಿಶೇಷ ಇಲ್ಲ!
ಅವ್ಳನ್ನ ಕರೆಯೋದೆ ಸೂಳೆ, ಮುಂಡೆ ಅಂತ.
ಒಂದು ಹಿಡಿ ಕೂಳಿಗೆ ಜೀವಮಾನಿಡಿ ಬಡಿದಾಡಿದ ಬುದ್ಧಿಗೇಡಿ
ಹಿಂಗಿರ‍್ತ ಈ ವರ್ಣಮಾಲೆ ಅಕ್ಷರಗೋಳು ಯಾವತ್ತಾದ್ರು
ಇಂಥ ಅವ್ವನ ಬಗ್ಗೆ ಹಾಡು ಬರೆಯಕ್ಕೆ ಒಪ್ತಾವೆ ಅಂತೀರ?
ಅವಳ ಮೇಲೊಂದು ಪದ್ಯ ಬರೆದ್ರೆ ಛಂದಸ್ಸು ಹೊಂದಿಕೊಳುತ್ತಾ?

ಎಲ್ಲಾರ ಅಮ್ಮಂದ್ರು ಗಾಢ ನಿದ್ದೇಲಿರೋವಾಗ
ನನ್ನವ್ವ ಬೆಳೆದು ನಿಂತ ಹೊಲದ ಎದುರು ಇರೋಳು.
ದುಡ್ಡಿದ್ದ ಅಮ್ಮಂದ್ರು ‘ಅತ್ಯುತ್ತಮ ತಾಯಿ’ ಬಹುಮಾನ ಪಡಿವಾಗ
ಹೊಲಾರ ಕೇರಿಯ ನನ್ನವ್ವ
ಒಂದು ಬಾಯಿ ನೀರು ಕುಡದ್ಲು ಅಂತ ಸಿಕ್ಸೆ ಅನುಬೈಸ್ತಿದ್ಲು
ಉಳದೋರ ಅಮ್ಮಂದ್ರು ಮಾ ನಾಯಕಿಯರಂಗೆ ಆಳುವಾಗ
ಹೊಲಾರ ನಮ್ಮವ್ವ ಹಕ್ಕಿಗಾಗಿ ಹೋರಾಡ್ತಿದ್ಲು
ಯಾರೇ ಆಗ್ಲಿ, ಅವ್ರ ತಾಯಿ ಅಂದ್ರೆ
ಕೂಸಿಗೆ ಹಾಲು ಕುಡ್ಸಿದ್ದು, ಜೋಗುಳ ಹಾಡಿದ್ದು ನೆನಪು ಮಾಡ್ಕೊತಾರೆ.
ನಂಗೆ ಮಾತ್ರ ಕಳೆ ತೆಗೆಯೋ, ಗೇಯೋ ಅವ್ವನೆ ನೆಪ್ಪಿಗ್ ಬರೋದು.

ಕಣ್ಣಿಗೇ ಕಾಣದ ಇಂಥಾ ಅವ್ವ
ತನ್ನ ಹೆಣ್ತನನೇ ಗೊತ್ತಿಲ್ದ ಈ ಅವ್ವನ ಬಗ್ಗೆ ಏಂತಾನೆ ಬರೀಲಿ?
ಕೋಳಿ ಕೂಗ್ದಾಗಿಂದ ರಾತ್ರಿ ಅಪ್ಪ ಮುಟ್ಟೋ ತನ
ಅವ್ವ ತಾನು ಹೆಣ್ಣು ಅನ್ನದ್ನೆ ಮರ‍್ತು ಬಿಟ್ಟಿರ‍್ತಾಳೆ!

ನನ್ನವ್ವ ಯಾವತ್ತೂ ಒಂದೇಒಂದು ಜೋಗುಳ ಹಾಡಲಿಲ್ಲ
ಹಸ್ದು ಹಸ್ದು ಗಂಟ್ಲು ಎಂದೋ ಒಣಗೋಗಿದೆ
ಅವಳು ಯಾವತ್ತೂ ನನ್ನ ತಟ್ಟಿ ಮಲಗಿಸ್ಲೂ ಇಲ್ಲ
ಎಂದೋ ಅವಳ ಕೈ ಸನಿಕೆ ಪಿಕಾಸಿ ಆಗ್ಬಿಟ್ಟಿದಾವೆ

ಉಳದ ಮಕ್ಳು ಅಮ್ಮಂದ್ರ ಕೈ ಹಿಡ್ದು ಪಿಕ್ನಿಕ್ಕಿಗೆ ಹೋದ್ರೆ
ನನ್ನವ್ವನ ಕಣಿವೆಯಂತ ಹೊಟ್ಟೇಗೆ ಅಂಟಿ ಮಲಗ್ತಿದ್ದೆ ನಾನು
ಉಳದೋರೆಲ್ಲ ತಾಯಿನೆ ದೇವ್ರು ಅಂತ ಪೂಜೆ ಮಾಡ್ತಿರಬೇಕಾದ್ರೆ
ಶಾಲೆ ಫೀಸು ಕೊಡತಿಲ್ಲ ಯಾಕಂತ ಸಿಟ್ಟಿಲೆ ಬೈತಿದ್ದೆ ನಾನು
ಉಳದ ಮಗಂದ್ರು ತಮ್ಮಮ್ನ ತಲೆನೋವಿಗೆ ತಾವೇ ಸಂಕ್ಟ ಪಡ್ತಿರಬೇಕಾದ್ರೆ
ಕಾಯ್ಲೆ ಬಿದ್ದಿರೊ ಈ ಅವ್ವ ಯಾಕ್ ಸಾಯ್ತಿಲ್ಲ ಅಂತ ಗೊಣಗ್ತಿದ್ದೆ ನಾನು.
ಏನೇಳಲಿ?

ಮಳೇಲಿ ತೊಪ್ಪೆಯಾದೆ ಅಂತ ಅವ್ವನ ಸೀರೇಲಿ ಹೊಕ್ಕಂಡ್ರೆ
ಒಂದು ಸಾವ್ರ ತೇಪೆ ಅಣಕ್ಸಿದ್ವು ನನ್ನ
ಒಣಗಿದ ಗಂಟ್ಲು ಒದ್ದೆ ಆಗ್ಲೀಂತ ಅವಳ ಮೊಲೆ ಚೀಪಿದ್ರೆ
ಪಕ್ಕೆಲುವು ಸ್ವಾಟೆಗ್ ಚುಚ್ಚಿ ತಿವುದ್ವು ನನ್ನ.

ಏನೇ ಆದ್ರೂ
ಈ ಭಾಷೆ, ಈ ಪದ
ನನ್ನವ್ವನ ಮೇಲೆ ಹಾಡು ಬರೆಯಕ್ಕೆ ಯಾವತ್ತೂ ಸಾಲ್ದು
ಮನುಶಳೇ ಅಲ್ಲದೋಳ ಮೇಲೆ
ಲಕ್ಷಾಂತರ ಅಮ್ಮಂದ್ರ ನಡುವೆ ದನದಂಗೆ ಇರೋಳ ಮೇಲೆ
ಯಾವಳು ಹೆತ್ತ ಮಕ್ಳ ಪಶುಗಳಂಗೆ ನೋಡ್ತಾರೋ ಅಂತೋಳ ಮೇಲೆ
ಯಾವತ್ತೂ ಹಾಡು ಬರೆಯೋಕಾಗಲ್ಲ ಈ ಭಾಷೆಗೆ, ಈ ಪದಗಳಿಗೆ.

ರವಿನುತಾಲ ಪ್ರೇಮ ಕಿಶೋರ್ (೧೯೬೫)

ಪ್ರಕಾಶಂ ಜಿಲ್ಲೆಯ ಹಳ್ಳಿಯವರು. ಎಂಟು ನಾಟಕ, ೧೨ ಏಕಾಂಕಗಳು ಹಾಗೂ ಎರಡು ಕವನ ಸಂಕಲನ ಪ್ರಕಟಿಸಿದ್ದಾರೆ. ಇತಿಹಾಸ ಸ್ನಾತಕೋತ್ತರ ಪದವಿ ಪಡೆದವರು. ಹೈದರಾಬಾದಿನ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಗಣಸು ತಾಯಿಯ ಮಗ



ಅವ್ವಾ, ಏ ಯವ್ವಾ
ನಿನ್ ಹೊಟ್ಯಾಗ್ ನಾ ಬೆಳಿಯಾಕ್ ಒಲ್ಲೆ
ಸುಳ್ಳೇ ಒಂಭತ್ ತಿಂಗ್ಳ ಯಾಕ ಹೊರತೀಯಬೆ?

ನೀ ಒಂದ್ ಜಾತ್ಯಾಕಿ, ಅಪ್ಪ ಒಂದ್ ಜಾತ್ಯೋನು
ಜಾತಿ ಒಲ್ಲಂತ ಓಡಿ ಹ್ವಾದವ್ರು ನೀವಲ್ಲೆನು?
ಜಾತಿ ಬೇತಾಳ ನಿಮ್ನ, ನನ್ನ ಹಿಂಗ್ ಬೆನ್ನತ್ತೈತಿ
ಇನುಇನೂ ನಾ ಹುಟ್ಟಿ ಬರಬೇಕಂತಿಯೇನು?

ಜಾತಿ ರೂಢಾ ಮುರದಿ, ಜಾತಿಮರ‍್ವಾದಿ ಮುರ‍್ಯೂದಾಗ್ಲಿಲ್ಲವ್ವ ನಿನಗ
ಜಾತಿ ಬಿಟ್ ಮದಿವಾದಿ ಖರೆ, ಆದ್ರ ಒಳಸೂಕ್ಷ್ಮ ಅರುವಾಗ್ಲಿಲ್ಲ

ಎಲ್ಲಾಕಡೆ ಅಪ್ಪನ ಜಾತಿನೆ ಮುಂದ್ ಬರು ಹೊತ್ನ್ಯಾಗ
ಪಂಚರು ಸೈತ ಅದ್ರ ಕಡೆನೆ ಹೊಳ್ಳಿಕೊಂಡಾಗ
ಹೆಣ್ಣೆಂಗ್ಸು ನಿನ್ ಹೊಟ್ಯಾಗ ಹುಟ್ಟಾಕ್ ಒಲ್ಲೆ ನಾನು
ಗಂಡು ಅವ್ವನ ಗರ್ಭದೊಳಗಽ ಈ ಮಗ ಬೆಳೀಬೇಕು

ಓ ಮುತ್ಯಾ, ಪಂಚರ ಹಿರ‍್ಯಾ,
ದೇವ್ರಿಗೆ ಒಂದ್ ಆಜ್ಞೆ ಹೊಂಡ್ಸು,
ನಂಗೂ ಅದರದೊಂದ್ ಕಾಪಿ ಕಳಸು
ಇನಮ್ಯಾಲ ಅಪ್ಪಂದ್ರು, ಅಪ್ಪಂದ್ರಷ್ಟ ಹೆರತಾರ, ಹೆರಬೇಕು
ಅಪ್ಪಂದರಷ್ಟ ಹೊತ್ತು ಹೆತ್ತು ಕೂಸ್ನ ಬೆಳಸತಾರ, ಬೆಳಸಬೇಕು
ಹೇಳು ಅವ್ರಿಗಿ, ಇದಽ ಕೊನೀ ಫರಮಾನು..

ಚಲ್ಲಪಳ್ಳಿ ಸ್ವರೂಪಾ ರಾಣಿ (೧೯೭೦)


ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನ ವಿಭಾಗದಲ್ಲಿ ಬೋಧಕರಾಗಿದ್ದಾರೆ. ಮಂಕೇನಾ ಪುವ್ವು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮೌಖಿಕ ಪರಂಪರೆ, ಆದಿವಾಸಿ ಮತ್ತು ದಲಿತ ಮಹಿಳೆಯರ ಕುರಿತು ಹಲವು ಪ್ರೌಢ ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಕವಿತೆಗಳು ದಲಿತ ಸ್ತ್ರೀವಾದದ ಎಲ್ಲ ಲಕ್ಷಣಗಳನ್ನು ಪಡೆದಿದೆ.

ಕೆಸರು ಕೈ



ಪಾತ್ರೆಪಗಡೆಗಳ ಟಣಟಣ ಸದ್ದಿನೊಂದಿಗೆ
ಕೋಳಿ ಕೂಗುವ ಹೊತ್ತಿಗೆ
ಅವಳು ಗುಡಿಸಲ ಎಬ್ಬಿಸುತ್ತಾಳೆ
ಗವ್ಗತ್ತಲ ಸೀಳಿ ಹಟ್ಟಿ ಬೆಳಗುತ್ತಾಳೆ
ಕುಡಿಗಳಿಗೆ ನಾಲ್ಕಗುಳು ತಿನಿಸುತ್ತಾಳೆ

ಬುತ್ತಿ ಹೊತ್ತು ಹೊಲಕೆ ಬಂದರೆ
ಒಡೆಯ ಬೈಗುಳದೊಂದಿಗೆ ಸ್ವಾಗತಿಸುತ್ತಾನೆ
ಭತ್ತದ ಎಳೆಸಸಿಯ ಮಿದುವಾಗಿ ಊರಿ ನೆಟ್ಟಿ ಮಾಡುವಾಗ
ಹೊಟ್ಟೆ ಕಳ್ಳು ಗುಡುಗುಡೆಂದು ಭೋರಿಟ್ಟು ಕುಣಿಯುತ್ತದೆ
ಹಿಡಿ ಅನ್ನ, ಚಟಾಕು ಮೆಣಸಿಗಾಗಿ ದಿನವಿಡೀ ಗೇಯುತ್ತಾಳೆ

ಹೆಮ್ಮರದ ಕೊಂಬೆಗೆ ನೇತಾಡುವ ಜೋಳಿಗೆಯಲಿ
ಕೈಗೂಸು ಕಿರುಚುವುದು ಕೇಳುತ್ತಿದ್ದರೂ,
ಆಡಿಸುವವರಿಲ್ಲದ ತನ್ನ ಚಂದುಳ್ಳಿ ಮಗಳು
ಕೆರೆಯ ಕೆಸರಲ್ಲಿ ಆಡುತ್ತಿದ್ದರೂ,
ನೋಡೇ ಇರದವರಂತೆ
ಗದ್ದೆಗೆ ರಸಗೊಬ್ಬರ ಹರಡುತ್ತಾಳೆ
ಕೆಸರು ಮೆತ್ತಿದ ಕೈ, ಮಗ್ನ ಕಳೆಕೀಳುವುದರಲ್ಲಿ..

ಬೇಯಿಸಲು ತಟಾಕು ಕಾಳಿಲ್ಲ ಹಟ್ಟಿಯಲಿ
ಒಡೆಯನ ಕಣದಲ್ಲಿ ಭತ್ತದ ರಾಶಿ
ಕೈ ಕೆಸರಾಗಿಸಿ ಚಿನ್ನದ ಹೂವರಳಿಸಿ
ತೂತು ಕಾಸಿನ ಕೂಲಿ ಪಡೆದಾಗ
ಅವಳ ಹೆಣ್ತನ ಅಣಕಿಸುತ್ತದೆ

ಕರುಳಕುಡಿಗಳ ಹೊಟ್ಟೆ ತುಂಬಿಸಲು
ಬಲೆ ಹಾಕಿ ಕಾಯುವಾಗ
ಅತ್ತ ಗಂಡನೂ ಕಾದಿದ್ದಾನೆ ಮನೆಯಲ್ಲಿ
ಅವಳ ಬೆವರ ಹೆಂಡವಾಗಿಸಿ ಕುಡಿಯಲು

ಬಿಸಿಲಲ್ಲಿ ಒಣಗಿ ಮಳೆಗೆ ನೆಂದು
ಗಂಡನಿಂದ ವದೆ ತಿಂದು
ವರುಷಗಟ್ಟಲೆ ಕೂಲಿಯಲಿ ಜೀವ ತೇದು
ಚೆಂಡು ಹುವ್ವಂತೆ ಫಳಫಳವೆನುತಿದ್ದ ಮೈಯಿ
ಒಣಗಿ ಮಾಸಲಾಗುತ್ತಿದೆ
ಉದುರಲಿರುವ ಎಲೆಯ ಕಡ್ಡಿಯಂತೆ.

ಮುಗ್ಧೆ ಅವ್ವ, ಜೀವಕಳೆ ಮಾಸಿಹೋದವಳು
ಕಣ್ಣೀರ ಹಳ್ಳದಲಿ ಮುಳುಗಿದವಳು
ಮುಳುಗುವ ಸೂರ್ಯನಂತೆ
ಒಲೆಯ ಕಟ್ಟಿಗೆಯಂತೆ
ಸುಟ್ಟು ಕರಕಲಾದವಳು
ಹಸಿವಿನ ಶಿಲುಬೆ ಹೊತ್ತು
ಬದುಕಿನ ಕಲ್ಲುಮುಳ್ಳಿನ
ಹಾದಿಯಲಿ ನಡೆದಿರುವವಳು.


ಯೇಡ್ಲ ಪೀಟರ್ ಪಾಲ್ (೧೯೭೨)

ಗುಂಟೂರು ಜಿಲ್ಲೆಯವರು. ಒಂದು ಕವನ ಸಂಕಲನ ಪ್ರಕಟಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಕಾಲೀನ ವಿಷಯ ಕುರಿತು ಕವಿತೆ ಬರೆಯುತ್ತಾರೆ.

ಬೀದಿನೆ ಬೆಡ್ರೂಂ ಆಗ್ಸಿ..




ಸಜ್ಜಾಲಗುಡವೇ!
ನಿನ್ನೆಸ್ರು ಕೇಳಿದ್ರೆ ಸಾಕು ನಂಗೆ, ಅಯ್ಯಬ್ಬ!
ಅಮಲು ಬರುಸ್ದೆ ಆಪ್ರೇಷನ್ ಮಾಡ್ಕಂಡಂಗಾಯ್ತದೆ
ಎಳಗೂಸ್ನ ಸೋಬ್ನಕ್ಕೆ ಕಳಿಸಿದಷ್ಟು ಗಾಬ್ರಿಯಾಯ್ತದೆ

ಸಜ್ಜಾಲಗುಡ, ಯೋ,
ಅವಳ್ನ ಹಂಗೆ ಎಲ್ಲರೆದುರ‍್ಗೆ ಬತ್ಲೆ ಮಾಡ್ಬೇಕಿತ್ತ?
ಬರೀ ಮೂರ್ರುಪಾಯ್ ಸಾಲ ತೀರ‍್ಸಲಿಲ್ಲಂತ
ಬೀದೀನೆ ಬೆಡ್ರೂಂ ಮಾಡ್ಬೇಕಿತ್ತ?
ಅವ್ಳೇನ್ ಲೈಂಗಿಕ ಬೊಂಬೆ, ರೊಬಾಟು ಅಂತ ತಿಳ್ಕಂಡ್ರ?

ಅವ್ಳು ಬಸವಿ ಅಂಬೊ ಒಂದೇ ಕಾರಣಕ್ಕೆ
ರೇಪ್ ಮಾಡೊ ಹಕ್ಕು ಇದೆ ಅಂದ್ಕಂಡ್ಯ?
ಅತ್ಯಾಚಾರ, ಬೀದೀಲಿ ಬತ್ಲೆ ಮೆರವಣಿಗೆ ಮಾಡಿದ್ರೆ
ಗಿನ್ನೆಸ್ ಬುಕ್ನಲ್ಲಿ ನಿನ್ನೆಸ್ರು ಸೇರಿಬಿಡುತ್ತನ್ನೊ ಆಸೆನ?

ಅವಳ್ನ ರೇಪ್ ಮಾಡೊವಾಗ ಓ ಸಜ್ಜಾಲಗುಡವೇ,
ನೀ ಅದೆಂಗ್ ಸಾಕ್ಷಿಯಾಗ್ ತಿಕ ಮುಚ್ಕಂಡ್ ಸುಮ್ಕಿದ್ದೆ?
ನಿನ್ ಬಾಯಲ್ಲಿ ಅದ್ಯಾರ ಹೇಲು ತುಂಬ್ಕಂಡಿದ್ದೆ?
ಓಗ್ಲಿ ಜನನಾರ ಅದೇನ್ ಮಾಡ್ತಿದ್ರು?

ಅಮ್ಮಾ ಮಹದೇವಮ್ಮ, ಅಯ್ಯೊ
ಪ್ರಾಣಿಗಳಾಗಿದ್ರು ಅವ್ರುನ್ನ ಬಿಡ್ತಿರಲಿಲ್ಲ ತಾಯೆ,
ಕಲ್ಲೂ ಸೈತ ಕರಗ್ತಿತ್ತು

ಅಮ್ಮಾ, ಮಾದೇವಮ್ಮ, ಅಯ್ಯೋ
ಈ ಅಮಾನವೀಯ ಲೋಕ್ದಾಗೆ
ಎಷ್ಟೆಷ್ಟೊ ಹೆಣಮಕ್ಳ ಸೂಳೇರ್ ಮಾಡಿದಾರೆ
ನಿನ್ ಬದುಕ್ನ ಬಂಡೆಕಲ್ಲು ಮಾಡೊ ಕಾಲ ಇದು
ಇದಕ್ಕೆಲ್ಲ ಒಳ್ಳೆ ಮದ್ದು ಯಾವ್ದು ಗೊತ್ತ ತಾಯೆ?
ಅವ್ರ ಅಂಗಾಂಗಗಳ್ನ ಬೇರಲ್ಲೆ ಕಚ್ಚಿ ಬಿಸಾಡದು!

ಅಳಬ್ಯಾಡ ಕಣವ್ವ
ಅವ್ರುನ್ ನೋಡಿ ಗಹಗಹಿಸಿ ನಗ್ಬೇಕು ನೀನು
ಎಂಗ್ ನಗ್ಬೇಕು ಅಂದ್ರೆ
ನಿನ್ ನಗು ಕೇಳಿದ್ ತಟೂವೆ
ದೇವ್ರು ದಿಂಡ್ರು ಎಲ್ರುವೆ
ಮುಚ್ಕಂಡ್ ಅಂಗೆ ಓಡೋಯ್ತಿರ‍್ಬೇಕು.

(ರಾಯಲಸೀಮೆಯ ಕರ್ನೂಲು ಜಿಲ್ಲೆಯ ಹಳ್ಳಿ ಸಜ್ಜಾಲಗುಡದಲ್ಲಿ ಮೂರು ರೂಪಾಯಿ ಸಾಲ ಮರಳಿ ಕೊಡಲಿಲ್ಲವೆಂದು ಮಹದೇವಮ್ಮನನ್ನು ಬೆತ್ತಲಾಗಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿ ಅತ್ಯಾಚಾರ ಎಸಗಿದ್ದರು.)

(ರೇಖಾಚಿತ್ರ: ಡಾ. ಕೃಷ್ಣ ಗಿಳಿಯಾರ್)

Thursday 4 August 2016

ರಿಯೋನತ್ತ ಎಲ್ಲರ ಚಿತ್ತ ..





೨೦೧೬ರ ಒಲಿಂಪಿಕ್ಸ್ ಎಂಬ ಆಟದ ಹಬ್ಬಕ್ಕೆ ಬ್ರೆಜಿಲಿನ ರಿಯೊ ಡಿ ಜನೈರೊ ಗುಡಿಸಿ ಸಾರಿಸಿ ಸುಣ್ಣಬಣ್ಣವಾಗುತ್ತ ರಂಗವಲ್ಲಿ ಇಟ್ಟುಕೊಂಡು ತಯಾರಾಗುತ್ತಿದೆ. ಆದರೆ ಬ್ರೆಜಿಲ್ ಎಂಬ ಭಾರತಕ್ಕಿಂತ ದೊಡ್ಡ ಸಂಪದ್ಭರಿತ ರಾಷ್ಟ್ರಕ್ಕೆ ಕೆಲವರು ಶತ್ರುಗಳು, ಹಲವರು ಹಿತಶತ್ರುಗಳು. ಎಲ್ಲರ ಕಣ್ಣಿರುವುದು ಅಲ್ಲಿನ ಸಂಪತ್ತಿನ ಮೇಲೆ. ಕೆಂಗಣ್ಣು ಅದನ್ನು ಬಾಚಿಕೊಳ್ಳಲು ಸುಲಭ ಮಾಡದ ಸರ್ಕಾರದ ಮೇಲೆ. ಹೀಗಿರುತ್ತ ‘ಜೀಕಾ ವೈರಸ್ ದಾಳಿ’ ಎಂಬ ಗುಲ್ಲು ಸೃಷ್ಟಿಸಿ ಒಲಿಂಪಿಕ್ಸ್‌ಗೆ ಮೊದಲ ಆತಂಕ ಒಡ್ಡಲಾಯಿತು. ‘ರಿಯೊ ಒಲಿಂಪಿಕ್ಸ್ ದಯನೀಯವಾಗಿ ವಿಫಲವಾಗಲು ಎಂಟು ಕಾರಣಗಳು’, ‘ಏಕೆ ಅಲ್ಲಿ ಒಲಿಂಪಿಕ್ಸ್ ನಡೆಯಬಾರದಿತ್ತು?’, ‘ವಿಫಲತೆಗೆ ಏಕೈಕ ಕಾರಣ’ ಎಂದೆಲ್ಲ ಪಟ್ಟಿ ಮಾಡಿ ಬ್ರೆಜಿಲಿನ ಉದ್ದಗಲಆಳ ಅಳೆದು ತೀರ್ಪು ಕೊಡಲಾಯಿತು. ಬ್ರೆಜಿಲಿನ ದಿಲ್ಮಾ ರೌಸೆಫ್ ಅವರ ಎಡಪಂಥೀಯ ಸರ್ಕಾರ ಸಂಪೂರ್ಣ ಭ್ರಷ್ಟವಾಗಿ, ದಿವಾಳಿಯಾಗಿ ಆಗಲೇ ಉರುಳಿ ಬಿದ್ದಿದೆ; ರಿಯೊದಲ್ಲಿ ನಗರಾಡಳಿತವೇ ಇಲ್ಲವೆಂಬಷ್ಟು ಕಾನೂನು ಹದಗೆಟ್ಟಿದೆ ಇತ್ಯಾದಿಯಾಗಿ ಪಶ್ಚಿಮದ ರಾಜಕಾರಣ ವಿಶ್ಲೇಷಕರು ಬರೆದಾಯಿತು.

ಅದೇನೇ ಇರಲಿ, ರಿಯೊ ಒಲಿಂಪಿಕ್ಸ್ ವಿಫಲವಾಗುತ್ತದೆ ಎಂದು ಆರು ತಿಂಗಳಿನಿಂದ ಕಣಿ ನುಡಿಯುತ್ತಿರುವವರ ಮಾತು ಸುಳ್ಳಾಗಲೆಂದು ಹಲವರು ಶ್ರಮಿಸುತ್ತಿದ್ದಾರೆ. ಕ್ರೀಡಾಳುಗಳು ಕೈಕಾಲು ಹುರಿ ಮಾಡಿಕೊಳ್ಳುತ್ತಿದ್ದಾರೆ. ಸಕಲೆಂಟು ವೃತ್ತಿ, ಹವ್ಯಾಸ, ವರ್ಗ, ಹಿತಾಸಕ್ತಿಯ ಜನರೂ ತಂತಮ್ಮ ಉದ್ದೇಶ ಸಾಧನೆಗೆ ರಿಯೊಗೆ ಹೊರಟು ನಿಂತಿದ್ದಾರೆ.

ಒಟ್ಟಾರೆ ಈಗ ಎಲ್ಲರ ಚಿತ್ತ, ರಿಯೋನತ್ತ.

ನಾವೂ ರಿಯೋಗೆ ಹೋಗಿಬಂದೆವು. ಸೊಳ್ಳೆಗಳಿಂದ ಹರಡುವ ಜೀಕಾ ವೈರಸ್ ಕಾಯಿಲೆ ಇನ್ನೇನು ಬ್ರೆಜಿಲಿನಿಂದಾಚೆ ದ. ಅಮೆರಿಕಾ ತುಂಬ ಪಸರಿಸಿ, ವಿಶ್ವದೆಲ್ಲೆಡೆ ವ್ಯಾಪಿಸಿ, ಸೊಳ್ಳೆಗಳಂತೆಯೇ ಮನುಷ್ಯರು ಪುತಪುತನೆ ಸತ್ತು ನಾಶಗೊಳುವರೆಂದು ಜಗತ್ತು ಬೆಚ್ಚುವ ಹೊತ್ತಿಗೆ ನಾವು ಬ್ರೆಜಿಲಿಗೆ ಹೊರಟುಬಿಟ್ಟಿದ್ದೆವು. ತುಟ್ಟಿಯ ಕಾರ್ನಿವಾಲ್ ಸೀಸನ್ ತಪ್ಪಿಸಿ ಜೀಕಾ ಸೀಸನ್ನಿನಲ್ಲಿ ರಿಯೊ ಡಿ ಜನೈರೊ ತಲುಪಿದೆವು. ಜೀಕಾ ಭೀತಿ ಆಧಾರರಹಿತ ಹಾಗೂ ವ್ಯಾಕ್ಸೀನು ಕಂಪನಿಗಳು ಹುಟ್ಟಿಸಿರಬಹುದಾದ ಸುಳ್ಳುಭಯ ಎಂದು ನಂತರ ತಿಳಿದರೂ ಹೊರಟಾಗ ನಮಗಷ್ಟೇನೂ ತಲೆಬಿಸಿಯಾಗಿರಲಿಲ್ಲ. ಎಷ್ಟೆಂದರೂ ಸೊಳ್ಳೆಗಳ, ರೋಗಗಳ, ರೋಗಿಗಳ ನಡುವೆ ಇರುವವರಲ್ಲವೆ? ಸೊಳ್ಳೆ ಕಚ್ಚದಂತೆ ಮುಖಕೈಮೈ ಮುಚ್ಚಿಕೊಂಡು, ಎಲ್ಲೆಡೆ ರಿಪೆಲೆಂಟ್ ಬಳಿದುಕೊಳ್ಳುತ್ತ ಗಗನಯಾನಿಗಳಂತೆ ತೋರುತ್ತಿದ್ದ ಸಹ ಪ್ರವಾಸಿಗರನ್ನು ನೋಡಿ ನಗುತ್ತಿದ್ದೆವು.

ರಿಯೊ ಎಂಬ ಸುಂದರ ನಗರವನ್ನು ವಿಮಾನ ಸುತ್ತುಹಾಕಿ ಇಳಿಯತೊಡಗಿದ ಕೂಡಲೇ ಬಹುಶಃ ಎಲ್ಲರಿಗು ಜೀಕಾ ಮರೆತುಹೋಗಿರಬೇಕು. ಅಷ್ಟು ಚೆಲುವಾದ, ಕಡಲ ಸೆರಗಿನಲ್ಲಿ ಟಿಜುಕ ಕಾಡಿನಿಂದಾವೃತವಾದ ಆಧುನಿಕ ಹಸಿರು ನಗರ ರಿಯೊ. ನಮ್ಮ ನಿರೀಕ್ಷೆಗಿಂತಲೂ ಚೆಲುವಾಗಿ, ವಿಶಿಷ್ಟವಾಗಿ ಕಂಡ ನಗರ ಅದು.

ನದಿಯಲ್ಲದ ಜನವರಿಯ ನದಿ


‘ರಿಯೊ ಡಿ ಜನೈರೊ’ ಪದಗುಚ್ಛದ ಅರ್ಥ ರಿವರ್ ಆಫ್ ಜನವರಿ ಅಥವಾ ಜನವರಿಯ ನದಿ. ಕ್ರಿ. ಶ. ೧೫೦೨ರ ಜನವರಿ ಒಂದನೇ ತಾರೀಖು ಪೋರ್ಚುಗೀಸ್ ನೌಕಾ ಸಾಹಸಿಗಳ ಗುಂಪು ತುಪಿ, ಪುರಿ, ಬೊತೊಕುಡೊ ಜನರಿದ್ದ ಭೂಪ್ರದೇಶವನ್ನು ತಲುಪಿತು. ಸುತ್ತಮುತ್ತ ನೀರಿನಿಂದಾವೃತವಾಗಿದ್ದ ಭೂ ಪ್ರದೇಶ ಯಾವುದೊ ನದಿಯ ಅಳಿವೆಯಂತೆ ಅವರಿಗೆ ಕಾಣಿಸಿತು. ಜನವರಿ ಒಂದನೆ ತಾರೀಖು ಕಂಡದ್ದರಿಂದ ಅದಕ್ಕೆ ಜನವರಿಯ ನದಿ - ರಿಯೊ ಡಿ ಜನೈರೊ ಎಂದು ಪೋರ್ಚುಗೀಸ್ ಭಾಷೆಯಲ್ಲಿ ಕರೆದರು. ಹಾಗೆ ನೋಡಿದರೆ ಅದು ನದಿಯಲ್ಲ, ಕೊಲ್ಲಿ, ‘ಬೇ’. ಅತ್ತ ದಕ್ಷಿಣ ಅಮೆರಿಕದ ಪೆಸಿಫಿಕ್ ದಂಡೆಯ ಪೆರುವಿನಲ್ಲಿ ಸ್ಪೇನಿಗರು ಲೀಮಾ ನಗರ ಕಟ್ಟಿದರೆ ಇತ್ತ ಪೂರ್ವ ದಂಡೆಯಲ್ಲಿ ಪೋರ್ಚುಗೀಸರು ೧೫೬೫ರಲ್ಲಿ ‘ಸೆಂಟ್ ಸೆಬಾಸ್ಟಿಯನ್ ರಿಯೊ ಡಿ ಜನೈರೊ’ ನಗರ ಕಟ್ಟಿದರು.

ಪೋರ್ಚುಗಲ್ಲಿನ ರಾಣಿ ನೆಪೋಲಿಯನ್ನನ ಯುದ್ಧವಿಜಯಗಳಿಗೆ ಹೆದರಿ ತನ್ನ ರಾಜಧಾನಿಯನ್ನು ಲಿಸ್ಬನ್ನಿನಿಂದ ರಿಯೊಗೆ ಸ್ಥಳಾಂತರಿಸಿದ ಕಾಲದಲ್ಲಿ ‘ಯುನೈಟೆಡ್ ಕಿಂಗ್‌ಡಂ ಆಫ್ ಪೋರ್ಚುಗಲ್’ನ ರಾಜಧಾನಿಯಾಗಿ ರಿಯೊ ಮೆರೆಯಿತು. ಯೂರೋಪಿನ ಹೊರಗಿರುವ ಯೂರೋಪ್ ರಾಜವಂಶದ ರಾಜಧಾನಿ ಎಂಬ ಹೆಗ್ಗಳಿಕೆ ರಿಯೊಗೆ ದೊರೆಯಿತು. ನಗರಕ್ಕೆ ಲಿಸ್ಬನ್ನಿನ ರಾಜಪರಿವಾರ ಗಣ್ಯರೊಡನೆ ಬಂದಿಳಿಯಿತು. ಮೊದಲು ಪೋರ್ಚುಗೀಸ್ ಆಳ್ವಿಕರ ಮುಖ್ಯಸ್ಥಾನವಾಗಿದ್ದದ್ದು ೧೭೬೩ರ ನಂತರ ಬ್ರೆಜಿಲಿನ ರಾಜಧಾನಿಯಾಯಿತು. ೧೯೬೦ರಲ್ಲಿ ಬ್ರಸಿಲಿಯಾಗೆ ರಾಜಧಾನಿ ಸ್ಥಳಾಂತರವಾದರೂ ರಿಯೊ ಬ್ರೆಜಿಲಿನ ವಾಣಿಜ್ಯ ರಾಜಧಾನಿಯಾಗಿ ಮುಂದುವರೆದಿದೆ.

ಪೋರ್ಚುಗಲ್ಲಿನ ಹೊರಗಿರುವ ಅತಿ ದೊಡ್ಡ ಪೋರ್ಚುಗೀಸ್ ನಗರ ರಿಯೊ ೬೫ ಲಕ್ಷ ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲ ಪ್ರದೇಶವೂ ಸೇರಿದರೆ ೧.೩ ಕೋಟಿ ಜನ ಇಲ್ಲಿದ್ದಾರೆ. ಅವರಲ್ಲಿ ೫೧% ಬಿಳಿಯರು, ೧೧% ಕರಿಯರು ಹಾಗೂ ಉಳಿದವರು ಅನೇಕ ಕುಲ, ತಳಿ, ಜನಾಂಗಗಳಿಗೆ ಸೇರಿದವರು. ಮಿಶ್ರತಳಿಯ ಮೆಸ್ಟಿಜೊಗಳೂ ಬಹಳಸಂಖ್ಯೆಯಲ್ಲಿದ್ದಾರೆ. ಇಲ್ಲಿ ಹೆಂಗಸರ ಸಂಖ್ಯೆಯೇ ಹೆಚ್ಚು - ೫೩% ಇದೆ! ಪೋರ್ಚುಗೀಸರು ಬರುವ ಮುನ್ನ ರಿಯೊನಲ್ಲಿ ೨೦ ವಿವಿಧ ಭಾಷೆಗಳನಾಡುವ ೭ ಸ್ಥಳೀಯ ಕುಲಗಳಿದ್ದವು. ನಂತರ ಅಪಾರ ಸಂಖ್ಯೆಯ ವಿದೇಶೀಯರು ವಲಸೆ ಬಂದರು. ಹಾಗೆ ಯೂರೋಪಿನಿಂದ ಬಂದವರಲ್ಲಿ ಬಹುಪಾಲು ಜನ ಕೃಷಿ ಕೆಲಸ ಮಾಡುವವರೇ ಇದ್ದು ಹೊಸ ಅವಕಾಶ ಅರಸಿ ಬಂದಿದ್ದರು. ಅಂಗೋಲಾ, ಮೊಜಾಂಬಿಕ್ ಮತ್ತಿತರ ಪ. ಆಫ್ರಿಕಾ ನೆಲಗಳಿಂದ ಕರಿಯರು ಬಂದರು. ಆಫ್ರಿಕಾದ ಕರಿಯರ ಸಂಸ್ಕೃತಿಯಿಂದಲೇ ಸಾಂಬಾ ನೃತ್ಯ ಮತ್ತು ಸಾಂಬಾ ಉತ್ಸವ ‘ಕಾರ್ನಿವಾಲ್’ ರೂಪ ತಳೆದವು.

ಇವತ್ತು ರಿಯೊ ಡಿ ಜನೈರೊ ಎಲ್ಲ ತೆರನ ಪ್ರವಾಸಿ ಆಸಕ್ತಿಗಳಿಗೆ ನೀರೆರೆಯುವ ನಗರ. ಅದು ವ್ಯಾಪಾರಿ ಕೇಂದ್ರ. ಪ್ರವಾಸಿ ಕೇಂದ್ರ, ಆರೋಗ್ಯ ಪ್ರವಾಸಿ ಕೇಂದ್ರ, ಚಾರಣಿಗರ ನಗರ, ಬೆಚ್ಚನೆಯ ಬೀಚುಗಳ ನಗರ, ಫುಟ್ಬಾಲ್ ಪ್ರೇಮಿಗಳ ಕಣ್ಮಣಿ ಎಲ್ಲ ಆಗಿದೆ. ಅದು ಎಲ್‌ಜಿಬಿಟಿ ನಗರವೂ ಹೌದು. ಅತಿ ಹೆಚ್ಚು ಸಲಿಂಗಿ ಸಮುದಾಯದವರು ಇರುವ, ಬರುವ ನಗರ ಇದು. ಒಂದು ಪ್ರದೇಶವಿಡೀ ಅವರಿಗೆಂದೇ ಮೀಸಲಾಗಿದೆ. ರಿಯೊನಲ್ಲಿ ಹಣ್ಣಿದೆ ಹಾಲಿದೆ; ಕಾಫಿಯಿದೆ ವೈನಿದೆ; ಮೀನಿದೆ, ತರಕಾರಿ ಇದೆ; ಸಿಹಿತಿಂಡಿಯಿದೆ, ಬಾರ್ಬಿಕ್ಯೂ ಇದೆ; ಆಟವಿದೆ, ನರ್ತನವಿದೆ; ಹೋರಾಟವಿದೆ, ಸೋಲಿದೆ; ಕೊಳೆತು ಹೋಗುವಷ್ಟು ಸಂಪನ್ಮೂಲವಿದೆ, ಅನ್ನವಿಲ್ಲದೆ ಸಾಯುವಷ್ಟು ಬಡತನವೂ ಇದೆ.

ಎದ್ದು ಕಾಣುವಂತೆ ಅಲ್ಲಿಲ್ಲದೆ ಇದ್ದದ್ದು ಇಂಗ್ಲಿಷ್ ಮಾತ್ರ. ಎಂದೇ ಇಡಿಯ ರಿಯೊವನ್ನು ನಾವು ಕನ್ನಡದಲ್ಲೆ ಮಾತನಾಡಿಸಿ ಬಂದೆವು!

ಅರಣ್ಯ ನಗರಿ - ಬೆಚ್ಚನೆಯ ಬೀಚುಗಳು


ಗ್ವನಬಾರಾ ಬೇಯ ನೆಲಮುಗಿಲುಗಳ ನಡುವೆ ಹರಡಿಕೊಂಡಿರುವ ಬೆಟ್ಟ-ಅರಣ್ಯ ಪ್ರದೇಶದಲ್ಲಿ ರಿಯೊ ನಗರ ಅರಳಿದೆ. ಅದರ ಚೆಲುವಿನಲ್ಲಿ ಎದ್ದು ಕಾಣುವ ಅಂಶವೆಂದರೆ ನಗರ ಹೊಂದಿರುವ ಕಾಡು. ನಮ್ಮೂರುಗಳಲ್ಲಿ ಹೈವೇ ಅಗಲೀಕರಣ ಮತ್ತು ರಸ್ತೆ ನಿರ್ಮಾಣಕ್ಕೆಂದು ಕುಸಿದು ಬಿದ್ದ ಗುಡ್ಡಗಳು ಹಾಗೂ ಮರಗಳ ಮಾರಣಹೋಮ ನೋಡಿ ದುಃಖಿಸುತ್ತಿದ್ದವರಿಗೆ ರಿಯೊ ನಗರ ಈ ಪರಿ ಅರಣ್ಯ ಉಳಿಸಿಕೊಂಡದ್ದು ಖುಷಿ ನೀಡಿತು. ರಿಯೊನಲ್ಲಿರುವುದು ವಿಶ್ವದ ಅತಿ ದೊಡ್ಡ ‘ನಗರ ಅರಣ್ಯ’. ಬೃಹತ್ ಜನಸಂಖ್ಯೆಯ ಹೊರತಾಗಿಯೂ ಕಾಡನ್ನು ಹಾಗೇ ಉಳಿಸಿಕೊಂಡು ಬರಲು ಯತ್ನಿಸಲಾಗಿದೆ. ಕೋಪಕಬಾನಾ ಎಂಬ ಸಮುದ್ರ ದಂಡೆಯಲ್ಲಿದ್ದ ಅರಮನೆ ಮತ್ತು ಮುಖ್ಯ ನಗರದ ನಡುವೆ ಸಂಪರ್ಕ ಕಲ್ಪಿಸಲು ನಗರದ ಮೊದಲ ಸುರಂಗಮಾರ್ಗ ಕೊರೆಯಲಾಯ್ತು. ಈಗ ರಿಯೊ ನಗರದಲ್ಲಿ ೨೬ ಸುರಂಗಗಳಿವೆ. ಬೆಟ್ಟಸಾಲುಗಳ ಕೊರೆದು ಮಾಡಿದ ಸುರಂಗಗಳು ನಗರದ ಹಲವು ಭಾಗಗಳನ್ನು ಬೆಸೆಯುತ್ತವೆ. ೬೫ ಲಕ್ಷ ಜನರಿರುವ ನಗರದಲ್ಲಿ ರಸ್ತೆಗಳು ಕಿಕ್ಕಿರಿದ ಹಾಗೆನಿಸಲಿಲ್ಲ. ಟ್ರಾಫಿಕ್ ಒತ್ತಡ ಕೈಕೊಡಲಿಲ್ಲ. ರಸ್ತೆಗಳ ಪಕ್ಕ ಸೈಕಲಿನವರಿಗೂ, ನಡೆಯುವವರಿಗೂ ಪ್ರತ್ಯೇಕ ಜಾಗ ಕಲ್ಪಿಸಲಾಗಿದೆ.

ಅಂಟಾರ್ಕ್ಟಿಕಾ ಕಡೆಯಿಂದ ಶೀತಜಲ ಹರಿವು ಇದ್ದರೂ ಬೆಚ್ಚನೆಯ ನೀರಿನ ಬೀಚುಗಳು ಅಲ್ಲಿವೆ. ಇಪಾನೆಮಾ ಮತ್ತು ಕೋಪಕಬಾನಾ ಪ್ರಮುಖ ದಂಡೆಗಳು. ‘ದ ಗರ್ಲ್ ಫ್ರಂ ಇಪಾನೆಮಾ’ ಎಂಬ ಒಂದು ಪ್ರಖ್ಯಾತ ಬ್ರೆಜಿಲ್ ಜಾಜ್ ಹಾಡು ೧೯೬೨ರಲ್ಲಿ ಬಂದಿದೆ. ಇಪಾನೆಮಾದಲ್ಲಿಳಿದ ಕೂಡಲೇ ಬಸ್ಸಿನಲ್ಲಿದ್ದ ಸಹ ಪ್ರವಾಸಿಗರು ಆ ಹಾಡು ಹಾಡತೊಡಗಿದರು. ಪ್ರವಾಸಿಗರಿಂದ, ಅವರ ನಾನಾ ಚಟುವಟಿಕೆಗಳಿಗೆ ಇಂಬು ಕೊಡುವ ಕಾಯಕದವರಿಂದ ಆ ಬೀಚುಗಳು ತತ್ತರಿಸುತ್ತಿದ್ದವು. ಮೈಲುಗಟ್ಟಲೆ ಉದ್ದದ ಬೀಚಿನಲ್ಲಿ ಸಾವಿರಗಟ್ಟಲೆ ಪ್ರವಾಸಿಗರು. ಬಿಸಿಲು ಕಾಯಿಸುತ್ತ, ಸಮುದ್ರ ಸ್ನಾನ ಮಾಡುತ್ತ, ದೋಣಿ ವಿಹಾರ ಮಾಡುತ್ತ, ಈಜುತ್ತ, ಬೀಚ್ ಆಟಗಳನಾಡುತ್ತ ಕುಣಿವ ಪ್ರವಾಸಿಗರಿಂದ ಮರಳ ದಂಡೆಗಳು ತುಂಬಿ ತುಳುಕುತ್ತಿದ್ದವು. ಬೀಚಿನುದ್ದಕ್ಕೂ ದಣಿದವರಿಗಾಗಿ ಎಳನೀರು ಮತ್ತಿತರ ತಿನಿಸು ಮಾರುವ, ಬಟ್ಟೆ ಮಾರುವ ಸಂಖ್ಯಾನಾಮದ ಅಂಗಡಿಗಳಿದ್ದವು.

ಪ್ರವಾಸ ಬಂದಲ್ಲೂ ಫಿಟ್ನೆಸ್ ಗಮನ ಬಿಡದವರಿಗಾಗಿ ಬೀಚ್ ಮತ್ತು ಲಗೂನ್ ಬಳಸಿ ಸಾಗುವ ೮ ಕಿಮೀ ಉದ್ದದ ದಂಡೆಯನ್ನು ಮಿನಿ ವ್ಯಾಯಾಮಶಾಲೆಯನ್ನಾಗಿ ಮಾಡಿದ್ದಾರೆ. ಸೈಕಲ್ ತುಳಿಯುವವರು, ಓಡುವವರು, ಸ್ಕೇಟಿಂಗ್ ಮಾಡುವವರು, ಕಸರತ್ತು ಮಾಡುವವರು ಆ ರಸ್ತೆಯಲ್ಲಿ ತುಂಬಿದ್ದರು. ಬೀಚ್ ರಸ್ತೆಯ ಮತ್ತೊಂದು ಬದಿ ಸಂಜೆ ಆರರ ನಂತರ ಎಲ್ಲ ತರಹದ ಅಂಗಡಿಗಳು ತಲೆಯೆತ್ತುತ್ತವೆ. ಕಲಾಕೃತಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬಾರ್, ಆರ್ಕೆಸ್ಟ್ರಾ, ಮ್ಯೂಸಿಕ್-ಸಾಂಬಾ ಷೋ ತನಕ ಎಲ್ಲದೂ ಅಲ್ಲಿ ಕಾಣುತ್ತದೆ.

ನಾವು ಸುಮ್ಮನೆ ಕಾಲೆಳೆಯುತ್ತ ತಿರುಗಿದೆವು. ಬೀಚುಗಳು ನಮಗೆ ಹೊಸದಲ್ಲ. ನಿರ್ಜನ ಕಡಲ ದಂಡೆಯಲ್ಲಿ ಅಲೆಗಳು ಉರುಳುವುದನ್ನು ನೋಡುತ್ತ ಗಂಟೆಗಟ್ಟಲೆ ಕಳೆದಿದ್ದೆವು. ಮಳೆಗಾಲದ ಕಡಲ ರೌದ್ರವನ್ನೂ, ಹುಣ್ಣಿಮೆ ಬೆಳಕಲ್ಲಿ ಬೆಳ್ಳಿಯಲೆಗಳ ಉರುಳುವಿಕೆಯನ್ನೂ ವಿರಳ ಜನ ದಂಡೆಗಳಲ್ಲಿ ಕಂಡಿದ್ದೆವು. ಆದರೆ ಕಿಕ್ಕಿರಿದ ಈ ಸಮುದ್ರ ದಂಡೆಗಳು ಮನದಲ್ಲಿ ಯಾವ ಅಲೆಯನ್ನೂ ಏಳಿಸಲಾರದೆ ಹೋದವು.


ಶುಗರ್ ಲೋಫ್



ನಗರ ಪ್ರವೇಶಿಸುವಲ್ಲಿ ಶುಗರ್ ಲೋಫ್ ಬೆಟ್ಟವಿದೆ. ಸಕ್ಕರೆಯ ಕ್ಯೂಬುಗಳನ್ನು ಸಮುದ್ರ ದಂಡೆಯಲ್ಲಿ ಕವುಚಿ ಹಾಕಿದಂತೆ ಕಾಣುವ ನುಣ್ಣನೆಯ ಬೆಟ್ಟಕ್ಕೆ ಆ ಹೆಸರು ಬಂದಿದೆ. ಏಕಶಿಲಾ ಬೆಟ್ಟ ಅದು. ಇಡೀ ನಗರದ ಪಕ್ಷಿನೋಟ ನೀಡುವ ಶುಗರ್ ಲೋಫ್ ಬೆಟ್ಟದ ಚಾರಣ ರಿಯೊ ಪ್ರವಾಸೋದ್ಯಮಕ್ಕೆ ಗರಿಯಂತಿದೆ. ದೂರದಲ್ಲಿ ಒಂದೆಡೆ ಶಾಂತ ನೀಲ ಅಟ್ಲಾಂಟಿಕ್ ಕಡಲು, ಇಪಾನೆಮ, ಕೋಪಕಬಾನ ಬೀಚುಗಳು, ಸೂರ್ಯ ಸ್ನಾನ ಮಾಡುವ ಸಾವಿರಾರು ಜನ, ತೇಲುವ ಹಾಯಿಗಳು; ಇನ್ನೊಂದೆಡೆ ಹಸಿರು ಮುಕ್ಕಳಿಸುವ ಬೆಟ್ಟ ಬಯಲ ಪ್ರದೇಶ, ಕೊಲ್ಲಿ ನೀರಿನ ನಡುವೆ ಅರಳಿದ ಪುಟ್ಟಪುಟ್ಟ ದ್ವೀಪಗಳು, ವಿಶಾಲ ರಿಯೊ ನಗರ. ಪ್ರಕೃತಿಯ ಚೆಲುವೆಲ್ಲ ಗ್ವನಬಾರಾ ಬೇ ಆಗಿ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ನನ್ನದು ಕಣ್ ಸಫಾರಿ, ಉಳಿದವರದು ಕ್ಯಾಮೆರಾ ಷಟರ್ ಸಫಾರಿ. ಫೋಟೋ ತೆಗೆದಷ್ಟೂ ಸಾಕೆನಿಸುತ್ತಿಲ್ಲ, ಗೈಡ್ ಕೊಟ್ಟ ಸಮಯವೂ ಸಾಕೆನಿಸುತ್ತಿಲ್ಲ. ಆಯಿಲ್ ಪೇಂಟಿಂಗ್ ನೋಡುತ್ತಿರುವ ಭಾಸ ಹುಟ್ಟಿಸುವಷ್ಟು ಸುಂದರ ಭೂದೃಶ್ಯಗಳು.

ಕೇಬಲ್ ಕಾರಿನಲ್ಲಿ ಕುಳಿತು ಎರಡು ಹಂತಗಳಲ್ಲಿ ಬೆಟ್ಟ ಹತ್ತಿಳಿಯುವ ವೇಳೆಗೆ ಫೆಬ್ರುವರಿಯ ಬಿಸಿಲಿಗೆ ನಮ್ಮ ಚರ್ಮ ಸುಟ್ಟು ಕಪ್ಪಾಯಿತು. ಆದರೂ ಹೊಸ ಅನುಭವ ಲೋಕ ತೆರೆದುಕೊಂಡಿತು. ನಮ್ಮ ಸುತ್ತಮುತ್ತ ನಾವರಿಯದ ಭಾಷೆಯಲ್ಲಿ ನೂರಾರು ದನಿಗಳು ಉಲಿಯುತ್ತಿದ್ದವು. ಚೇಡಿಸುತ್ತ, ನಗುತ್ತ, ಹರಟುತ್ತ, ಸಂತಸ ಪಡುತ್ತಿದ್ದವು. ಚಿಟ್ಟೆ, ಪುಟ್ಟ ಹಕ್ಕಿ, ಹದ್ದುಗಳೆಲ್ಲ ಕೈಮೈ ಸವರುತ್ತ ಹೋದವು.


ಆಗ,

ನಿರಂತರ ದಣಿವಿಗೋ, ಅಪರಿಚಿತ ವಾತಾವರಣದಲ್ಲಿ ಸುಡುವ ಬಿಸಿಲಿಗೋ, ನಿದ್ರೆಯಿರದ ರಾತ್ರಿಯನ್ನು ನುಂಗಿ ಬಂದ ಹಗಲಿನ ಅಮಲಿಗೋ ಅಂತೂ ಕಿರಿಯವಳು ಕೆಲ ನಿಮಿಷಗಳ ವಿಸ್ಮೃತಿಯ ಲೋಕಕ್ಕೆ ಜಾರಿಬಿಟ್ಟಳು. ಕಣ್ಣು ಕತ್ತಲಿಟ್ಟು ಎಚ್ಚರ ತಪ್ಪಿದವಳ ಕಂಡು ನಮಗಿಂತ ಉಳಿದವರು ಗಾಬರಿಯಾದರು. ಅನಾಮತ್ ಎತ್ತಿ ಕೊಂಡೊಯ್ದು ಮಲಗಿಸಿ ಉಪಚರಿಸಿದ ಸೆಕ್ಯುರಿಟಿ ತರುಣ ಯಾರ‍್ಯಾರನೋ ಕರೆಸುವ ತಯಾರಿ ನಡೆಸಿದ. ನಾವು ಬೇಡ, ಬೇಡವೆನ್ನುತ್ತಿರುವಷ್ಟರಲ್ಲಿ ತನ್ನ ಸ್ವಪ್ನಲೋಕದಲ್ಲಿ ಏನೇನು ಕಂಡಳೋ, ಅವಳೇ ಎದ್ದು ಕೂತಳು. ನಾವಲ್ಲಿಂದ ಹೊರಬೀಳುವವರೆಗೂ ಆ ತರುಣ ನಮ್ಮ ಹಿಂದೇ ಅಷ್ಟು ದೂರದಲ್ಲಿ ಕಾವಲಿನಂತೆ ಸುಳಿದಾಡಿದ. ಅವನಿಗೆ ಇಂಗ್ಲಿಷ್ ಬಾರದು. ನಮಗೆ ಪೋರ್ಚುಗೀಸ್ ಬಾರದು. ಆದರೂ ಹೊರಡುವಾಗ ನಮಗೆ ಗೊತ್ತಿದ್ದ ಒಂದೇ ಒಂದು ಪೋರ್ಚುಗೀಸ್ ಪದ ‘ಒಬ್ರಗಾಡೊ’ (ಧನ್ಯವಾದ) ಹೇಳಿದೆವು.

ಈ ಭೂಮಿಯ ಯಾವುದೋ ಒಂದು ಅಪರಿಚಿತ ಮೂಲೆಯಲ್ಲೂ ನಿಮಗಾಗಿ ಮಿಡಿಯುವ ಒಂದು ಜೀವ ಸಿಕ್ಕಿಬಿಡುತ್ತದೆ! ಬಾಂಧವ್ಯದ ಒಂದು ಎಳೆ ದಕ್ಕಿಬಿಡುತ್ತದೆ!! ಅದಕ್ಕೇ ಅಲ್ಲವೆ ಈ ಭೂಮಿ ಇಷ್ಟು ಸುಂದರವಾಗಿದೆ?

ಕಾರ್ನಿವಾಲ್

ರಿಯೊನ ಸಾಂಬಾ ಕಾರ್ನಿವಾಲ್ ಬಹು ಪ್ರಖ್ಯಾತ. ಸಾಂಬಾ ನರ್ತನಕ್ಕೆಂದೇ ಸಾಂಬೊಡ್ರೊಮ್ ಎಂಬ ದೊಡ್ಡ ಓಪನ್ ಥಿಯೇಟರ್ ಇದೆ. ಈಸ್ಟರಿನ ೪೦ ‘ಪಥ್ಯ’ದ ದಿನಗಳ ಮೊದಲು ರೆಡ್ ಮೀಟ್ ಸೇವಿಸುವ ಸಂಭ್ರಮಾಚರಣೆಯ ಸಲುವಾಗಿ ಕಾರ್ನಿವಾಲ್ ಶುರುವಾಗಿರಬಹುದು. ಮೊದಮೊದಲು ಅದು ಬಿಳಿಯ ಯೂರೋಪಿಯನ್ನರೆ ಹೆಚ್ಚು ಭಾಗವಹಿಸುವ ಆಚರಣೆಯಾದದ್ದು ಬರಬರುತ್ತ ಎಲ್ಲ ಜನಸಮುದಾಯಗಳೂ ತಮ್ಮದೇ ರೀತಿಯಲ್ಲಿ ಪಾಲ್ಗೊಳುವ ಮಿಶ್ರ ಬ್ರೆಜಿಲ್ ಸಂಸ್ಕೃತಿಯ ಕುರುಹಾಗಿ ಬೆಳೆಯತೊಡಗಿತು. ಈಗ ಬ್ರೆಜಿಲ್ ಮತ್ತದರ ಪ್ರವಾಸೋದ್ಯಮಕ್ಕೆ ವರ್ಣಮಯ, ಸಂಭ್ರಮದ ಉತ್ಸವ ಕಾರ್ನಿವಾಲ್ ಕೊಡುಗೆ ಬಹಳವಿದೆ. ಕಾರ್ನಿವಾಲ್ ನಡೆವ ಒಂದು ವಾರ ಮುಂಚೆ ಮತ್ತು ನಂತರ ಅಲ್ಲಿಗೆ, ಅಷ್ಟೇ ಅಲ್ಲ ಇಡಿಯ ದಕ್ಷಿಣ ಅಮೆರಿಕಕ್ಕೆ ಹೋಗಿ ಬರಲು ಉಳಿದ ಸಮಯಕ್ಕಿಂತ ಎರಡು ಪಟ್ಟು ಬೆಲೆ ತೆರಬೇಕಾಗುತ್ತದೆ.

ಸಾಮೂಹಿಕ ಉತ್ಸವ, ಸಾಮೂಹಿಕ ನರ್ತನ, ಸಾಮೂಹಿಕ ಊಟ ಎಲ್ಲಕ್ಕು ರಿಯೊ ಹೆಸರುವಾಸಿ. ಬೀದಿಗಳನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲೂ ಬಫೆ ಊಟಕ್ಕೆ ಅದು ಹೆಸರುವಾಸಿ. ಜಿಡ್ಡು ಬಸಿಯುತ್ತ ಹಬೆಯಾಡುವ ನಾನಾ ತರಹದ ಬಾರ್ಬಿಕ್ಯೂಗಳನ್ನು ಮೂರ್ನಾಲ್ಕು ಅಡಿ ಎತ್ತರದ ಖಡ್ಗದಲ್ಲಿ ಚುಚ್ಚಿ ತಂದು ಟೇಬಲ್ಲಿನ ಮೇಲೆಯೇ ಕರಕರ ಹೆಚ್ಚಿ ಅತಿಥಿಗಳು ಕೇಳಿದ ಭಾಗ ಹಾಕುತ್ತಾರೆ. ನಾವೂ ಮಧ್ಯಾಹ್ನ ಮತ್ತು ರಾತ್ರಿ ಬಫೆ ಊಟಕ್ಕೆ ಹೋದೆವು. ಹಸಿದು ಕೂತ ನಮ್ಮೆದುರು ಏನಿತ್ತು ಏನಿಲ್ಲ?! ಮಧ್ಯಾಹ್ನದ ರೆಸ್ಟುರಾದಲ್ಲಿ ಕನಿಷ್ಟ ೧೦೦ ಬಗೆಯ ಖಾದ್ಯಗಳು ಇದ್ದವು. ಆದರೆ ಅವುಗಳ ರುಚಿ, ಪರಿಮಳಗಳು ನಮ್ಮ ನಾಸಿಕ-ಜಿಹ್ವೇಂದ್ರಿಯಗಳ ಕೆರಳಿಸಲು ವಿಫಲವಾದ್ದರಿಂದ ಅವು ಖಾದ್ಯಗಳ ಬದಲಾಗಿ ವಸ್ತುಗಳಂತೆ ತೋರತೊಡಗಿದವು. ಮಕ್ಕಳು ಮತ್ತು ಮಕ್ಕಳ ಮಗುವಾದ ಅವರಪ್ಪ ಅತ್ಯುತ್ಸಾಹದಿಂದ ಏನೇನನ್ನೋ ತಿನ್ನಲು ಯತ್ನಿಸಿದರು. ಆದರೆ ಯಾವುದು ಎಷ್ಟು ರುಚಿಸಿತು, ಎಷ್ಟು ತಿಂದರು ಎನ್ನುವುದನ್ನು ಅವರವರ ತಟ್ಟೆಗಳೇ ಹೇಳಿದವು. ಹೊಟ್ಟೆ ತುಂಬ ನೀರು ಕುಡಿದಾದರೂ ಎದ್ದು ಬರುವ ಅಂದರೆ ನೀರು ಉಚಿತವಲ್ಲ. ರೆಸ್ಟುರಾಗೆ ಹೋದ ‘ಗೆಸ್ಟು’ಗಳು ನೀರನ್ನು ದುಪ್ಪಟ್ಟು, ಮೂರು ಪಟ್ಟು ಬೆಲೆ ತೆತ್ತು ಕುಡಿಯಬೇಕು.

ಬೆಂದ ಕಾಳು, ಅರೆಬೆಂದ ಅನ್ನ, ನೆನೆಸಿದ ರವೆ, ಸೊಪ್ಪು, ತರಕಾರಿ ಮಿಶ್ರಣ ಹೀಗೆ ತಟ್ಟೆಗೆ ಏನೇನನ್ನೋ ಹಾಕಿ ತಂದು ರುಚಿ ನೋಡಿ ರಿಯೊ ಸ್ಪೆಷಲ್ ಬಫೆ ಲಂಚ್ ಮುಗಿಯಿತು! ರಾತ್ರಿ ಡಿನ್ನರ್ ಬಫೆಯೂ ಇದಕ್ಕಿಂತ ಭಿನ್ನವಾಗಿರದೆ ಅದರಂತೇ ಇತ್ತು. ಡಿನ್ನರ್ ಬಳಿಕ ಸಾಂಬಾ ಷೋ. ನಮ್ಮೊಡನೆ ಇದ್ದ ಹಳೆಯ, ಹೊಸ ಜೋಡಿಗಳು ಅದಕ್ಕೆಂದೇ ಕೊಂಡ ಬಣ್ಣಬಣ್ಣದ ವಿಚಿತ್ರ ದಿರಿಸಿನಲ್ಲಿ ಅಲಂಕೃತರಾಗಿ, ಸಿದ್ಧರಾಗಿ ಬಂದಿದ್ದರು. ಆದರೆ ದೀರ್ಘ ವಿಮಾನ ಪಯಣ, ಇಡಿಯ ದಿನದ ತಿರುಗಾಟ, ಜೆಟ್ ಲ್ಯಾಗ್ ಎಲ್ಲ ಸೇರಿ ನಾವೆಷ್ಟು ದಣಿದು ಸೋತಿದ್ದೆವೆಂದರೆ ನಮ್ಮ ಎಲ್ಲ ಉತ್ಸಾಹ ಒಗ್ಗೂಡಿಸಿಕೊಂಡರೂ ಸಾಂಬಾ ನರ್ತನವನ್ನು ನೋಡಿ ಆನಂದಿಸಲು ಸಾಧ್ಯವಾಗಲಿಲ್ಲ. ಹೊಟ್ಟೆ ತುಂಬದ ಊಟವೂ ಅದಕ್ಕೊಂದು ಕಾರಣವಿರಬಹುದು.

ಫವೇಲಾ



ನಗರದ ಎಲ್ಲೆಡೆ ಇಟ್ಟ ಕಸದ ಡಬ್ಬಿಗಳಿಂದ ತಮಗೆ ಬೇಕಾದ ವಸ್ತುಗಳನ್ನು ಹೆಕ್ಕಿ ತುಂಬಿಸಿಕೊಳ್ಳುತ್ತಿದ್ದ ಹಲವರು ಕಣ್ಣಿಗೆ ಬಿದ್ದಿದ್ದರು. ಕೋಪಕಬಾನ ಬೀಚನ್ನು ಸ್ವಚ್ಛಗೊಳಿಸುವ ಹುಡುಗರು; ವಯಸ್ಸಾದರೂ ಟ್ಯಾಕ್ಸಿ ಓಡಿಸುವ, ಸೈಕಲ್ ರಿಕ್ಷಾ ತುಳಿಯುವ ಮುದುಕರು; ಏರ್‌ಪೋರ್ಟಿನಲ್ಲಿ, ಹೋಟೆಲಿನಲ್ಲಿ ನೆಲ ವರೆಸುವ ಧಡೂತಿ ಮೈಯ ಹೆಂಗಸರು - ಇವರನ್ನೆಲ್ಲ ನೋಡುವಾಗ ಈ ಸಿರಿವಂತ, ಆಧುನಿಕ ನಗರದಲ್ಲಿ ಬಡತನವೂ ಇರಲೇಬೇಕು ಎನಿಸಿತ್ತು. ಅದಕ್ಕೆ ಸರಿಯಾಗಿ ಬಂಗು, ಲೆಬ್ಲಾನ್‌ನಂತಹ ಕೆಲ ವಸತಿ ಪ್ರದೇಶಗಳನ್ನು ತೋರಿಸುತ್ತ ಗೈಡ್ ಇವು ವಿಶ್ವದಲ್ಲೆ ಅತಿ ದುಬಾರಿ ವಾಸದ ಪ್ರದೇಶ/ಮನೆಗಳೆಂದು ಹೇಳಿದರು. ‘ನೀವು ಮುಂದಿನ ಬಾರಿ ಬ್ರೆಜಿಲಿಗೆ ಬಂದಾಗ ಬಹುಶಃ ನಾನು ಅಲ್ಲಿರಬಹುದು’ ಎಂದು ಹುಬ್ಬು ಹಾರಿಸಿದರು. ‘ಹಾಗಾದರೆ ನೀವೀಗ ಎಲ್ಲಿರುವಿರಿ?’ ಎಂದೆವು. ತನ್ನಂತಹವರೆಲ್ಲ ನಗರ ಪ್ರದೇಶದಿಂದ ಬಹುದೂರದ ಫವೇಲಾಗಳಲ್ಲಿದ್ದು ಅಲ್ಲಿಂದ ನಗರಕ್ಕೆ ಬರುತ್ತೇವೆ ಎಂದು ಹೇಳಿದರು.

ಹೆಸರು ಕುತೂಹಲ ಹುಟ್ಟಿಸಿತು. ಏನಿದು ಫವೇಲಾ?

ಅಟ್ಲಾಂಟಿಕ್ ಸಮುದ್ರವನ್ನೂ, ಇಡಿಕಿರಿದ ಇಪಾನೆಮಾ ದಂಡೆಯನ್ನೂ ನೋಡುತ್ತ ನಿಂತಾಗ ದೂರದಲ್ಲಿ ಸಮುದ್ರಕ್ಕೆ ಚಾಚಿದ ಪುಟ್ಟ ಗುಡ್ಡಗಳ ಇಳಿಜಾರಿನಲ್ಲಿ ಕಿಕ್ಕಿರಿದ ಮನೆಗಳು ತುಂಬಿರುವುದು ಕಾಣುತ್ತಿತ್ತು. ವಿಮಾನ ಲ್ಯಾಂಡ್ ಆಗುವಾಗಲೂ ಹೆಂಚಿನ ಮನೆಗಳು, ಸುಣ್ಣಬಣ್ಣವಿಲ್ಲದ ಇಟ್ಟಿಗೆಯ ಮನೆಗಳು ಕಂಡಿದ್ದವು. ಗೈಡ್ ನಮ್ಮ ಬಳಿ ಬಂದು ಅಗೋ ಅಲ್ಲಿ ಕಾಣುತ್ತಿವೆಯಲ್ಲ, ಅವೇ ಫವೇಲಾಗಳು ಎಂದು ತೋರಿಸಿದ.

ಓಹೋ, ನಮ್ಮ ಸ್ಲಂಗಳ ಹಾಗೆ ನಗರದ ಬಡವರನ್ನು ತುಂಬಿಕೊಂಡು ಫವೇಲಾಗಳಿವೆ! ಅವನು ನೀಡಿದ ಮಾಹಿತಿಗಳು ಬೆಚ್ಚಿಬೀಳಿಸುವಂತಿದ್ದವು.

ಫವೇಲಾಗಳು ೧೯ನೇ ಶತಮಾನದಲ್ಲಿ ಸೃಷ್ಟಿಯಾದವು. ಬಹಿಯಾ ಯುದ್ಧದ ಸೋಲಿನ ನಂತರ ೨೦,೦೦೦ ಮಾಜಿ ಸೈನಿಕರನ್ನು ರಿಯೊಗೆ ತಂದು ಬಿಟ್ಟಾಗ ನೆಲೆಯಿಲ್ಲದ ಸೈನಿಕರಿಂದ ಅವು ಕಟ್ಟಲ್ಪಟ್ಟವು. ನಂತರ ಅವಕಾಶ, ನೆಲೆ ಸಿಗದ ಆಫ್ರಿಕನ್ ಗುಲಾಮರು ಅಲ್ಲಿ ವಾಸಿಸಲು ಬಂದರು. ಬಳಿಕ ಮಾಜಿ ಗುಲಾಮರಿಂದ ಫವೇಲಾಗಳು ತುಂಬಿದವು. ಈಗಲ್ಲಿ ೬೮% ಜನ ಕರಿಯರಿದ್ದಾರೆ. ಆಧುನಿಕ ನಗರದೊಳಗೆ ಇರಲು ಶಕ್ತರಲ್ಲದವರು ಹೊರವಲಯದ ಗುಡ್ಡಗಳ ಇಳಿಜಾರಿನ ಫವೇಲಾಗಳಿಗೆ ದೂಡಲ್ಪಟ್ಟಿದ್ದಾರೆ. ಇತ್ತೀಚೆಗೆ ಗ್ರಾಮೀಣ ಭಾಗದಿಂದ ನಗರಕ್ಕೆ ಕೆಲಸ ಅರಸಿಕೊಂಡು ಬರುವ ವಲಸಿಗರೂ ಫವೇಲಾಗಳನ್ನು ಕಟ್ಟಿಕೊಂಡಿದ್ದಾರೆ. ರಿಯೊ ಒಂದರಲ್ಲೆ ೧೯೭೦ರಲ್ಲಿ ೩೦೦ ಫವೇಲಾಗಳಿದ್ದರೆ ಈಗ ೧೦೦೦ಕ್ಕೂ ಮಿಕ್ಕಿ ಇವೆ. ಕಡಲು, ಬೆಟ್ಟಗಳ ನಡುವಿನ ಸಪಾಟು ಜಾಗಗಳೆಲ್ಲ ಅಂಗಡಿ, ಆಫೀಸು, ಸಿರಿವಂತರ ಮಹಲು-ಮೈದಾನಗಳಾಗಿ ಸಿಂಗರಗೊಂಡಿದ್ದರೆ, ಆಸುಪಾಸಿನ ಬೆಟ್ಟಗಳ ಇಳಿಜಾರುಗಳು ಫವೇಲಾಗಳಾಗಿವೆ. ಇದ್ದಕ್ಕಿದ್ದಂತೆ ಉದ್ಯೋಗ ಅರಸಿ ಪ್ರವಾಹದೋಪಾದಿಯಲ್ಲಿ ಬರುವ ಜನಕ್ಕೆ ವಸತಿ ಸೌಕರ್ಯ ಸಿಗದಿದ್ದಾಗ ಫವೇಲಾಗಳು, ಸ್ಲಮ್ಮುಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬೆಳವಣಿಗೆ ದರ ನಗರ ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ. ಅಲ್ಲಿ ೯೦% ಬಡವರಿದ್ದಾರೆ. ಬೆವರು ಸುರಿಸಿ ದುಡಿದರೂ ಬಡವರಾಗೇ ಇರುವವರು ಅವರು.

ಸಹಜವಾಗಿ ಎಲ್ಲ ‘ಅಕ್ರಮ’, ‘ಅಪರಾಧ’ಗಳಿಗೂ ಇವು ನೆಲೆಯಾಗಿವೆ. ಶಸ್ತ್ರಾಸ್ತ್ರ ವ್ಯಾಪಾರಕ್ಕೂ, ಯೂರೋಪಿಗೆ ಕೊಕೇನ್ ಹೋಗುವ ಮಾರ್ಗಮಧ್ಯವಾಗಿಯೂ ಒದಗಿಬರುತ್ತವೆ. ಡ್ರಗ್ ಪಾರ್ಟಿಗಳು ನಡೆಯುತ್ತಲೆ ಇರುತ್ತವೆ. ತಿಂಗಳಿಗೆ ೩೦೦ ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಡ್ರಗ್ ವಹಿವಾಟು ನಡೆಯುತ್ತದೆ. ಕೆಲ ಫವೇಲಾಗಳು ಸಂಪೂರ್ಣವಾಗಿ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ಮಾಫಿಯಾ ಹಿಡಿತದಲ್ಲಿವೆ. ಸಂಕೀರ್ಣ ರಾಜಕೀಯ-ಆರ್ಥಿಕ ವ್ಯವಸ್ಥೆ ಸೃಷ್ಟಿಸಿರುವ ಡ್ರಗ್ ಡಾನ್‌ಗಳು ಫವೇಲಾಗಳ ಹಿಡಿತ ಪಡೆದಿದ್ದಾರೆ. ಕೊಲೆ, ಜಗಳ, ರಕ್ತಪಾತದ ಮೂಲಕ ‘ವ್ಯವಸ್ಥೆ’ ಕಾದುಕೊಂಡಿದ್ದಾರೆ. ಅಲ್ಲಿ ತೆರಿಗೆಯೂ ಇಲ್ಲ, ಲೈಸೆನ್ಸೂ ಇಲ್ಲ, ಸಬ್ಸಿಡಿಯೂ ಇಲ್ಲ, ಸೌಕರ್ಯವೂ ಇಲ್ಲ.

ಕೆಲವು ಫವೇಲಾಗಳು ಸರ್ಕಾರದ ‘ಪ್ಯಾಸಿಫೈಯಿಂಗ್ ಪೊಲೀಸ್ ಯುನಿಟ್’ನ ಸುಪರ್ದಿಯಲ್ಲಿವೆ. ಇಲ್ಲಿ ನಿಯೋಜಿಸಲ್ಪಡುವ ಪೊಲೀಸರು ವಿಶೇಷ ತರಬೇತಿ ಪಡೆದವರು. ಅಲ್ಲಿ ಕೆಲಸ ಮಾಡಿದ್ದಕ್ಕೆ ಅವರಿಗೆ ಬೋನಸ್ ಆಗಿ ತಿಂಗಳಿಗೆ ೧೫೦ ಅಮೆರಿಕನ್ ಡಾಲರ್ ಹೆಚ್ಚುವರಿ ಸಂಬಳ ಕೊಡಲಾಗುತ್ತದೆ! ಅಲ್ಲಿ ಪೊಲೀಸರ ಮುಖ್ಯ ಕೆಲಸ ಡ್ರಗ್ ಟ್ರಾಫಿಕಿಂಗ್ ತಡೆಯುವುದಲ್ಲ; ಬೀದಿಗಳನ್ನು ಶಸ್ತ್ರಸಜ್ಜಿತ ಗ್ಯಾಂಗುಗಳು ಆಳುವುದನ್ನು ತಡೆದು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವುದು!

ಅವು ವಿದ್ಯುತ್, ಶೌಚ ಮತ್ತಿತರ ನಗರ ವ್ಯವಸ್ಥೆಗಳಿರದ ಸ್ಥಳಗಳು. ಕಿರಿದಾದ ಬೀದಿಗಳು, ಒಂದರ ಮೇಲೊಂದು ಬೆಂಕಿಪೆಟ್ಟಿಗೆಯಂತೆ ಕಟ್ಟಿದ ಮನೆಗಳು. ಸುಣ್ಣಬಣ್ಣವಿಲ್ಲದ ಸುಟ್ಟ ಇಟ್ಟಿಗೆಯ ಗೋಡೆಗಳು. ನಾಕು ಇಟ್ಟಿಗೆಯಿಟ್ಟು ಸಿಮೆಂಟು ಮೆತ್ತಲು ಬಂದವರೆಲ್ಲ, ಜಾಗ ಕಂಡಲ್ಲೆಲ್ಲ ಕಟ್ಟಿ ಬಿಸಾಡಿದಂತಿರುವ ರಚನೆಗಳು. ಮನೆಗಳ ನಡುವೆ ಬೈಕಿರಲಿ, ಮನುಷ್ಯರು ಹೋಗಲೂ ಕಷ್ಟಪಡಬೇಕು, ಅಂಥ ಕಿಷ್ಕಿಂಧೆ. ಗೋಡೆಗಳಿಗೆಲ್ಲ ನೇತುಬಿದ್ದ ಕೇಬಲ್ಲು, ವೈರುಗಳು. ಆ ಅಸ್ತವ್ಯಸ್ತದಲ್ಲೆ ಬದುಕು ಕಟ್ಟಿಕೊಳ್ಳುವ, ಮನರಂಜನೆ ಪಡೆವ ಜನ! ಭೂಕುಸಿತ, ನೆರೆ, ಸಾಂಕ್ರಾಮಿಕ ರೋಗಗಳಂತಹ ಸಮಸ್ಯೆಗಳು ಹೆಚ್ಚಿರುವ ಫವೇಲಾಗಳ ಜೀವನಮಟ್ಟ ಸುಧಾರಿಸಲು ಸ್ಥಳೀಯ ಗುಂಪುಗಳು ರಚನೆಗೊಂಡು ಹೋರಾಡುತ್ತಲೆ ಇವೆ. ನೆಲದ ಒಡೆತನ, ಕುಡಿಯುವ ನೀರು, ವಿದ್ಯುತ್ ಪಡೆಯಲು ಪ್ರಯತ್ನಿಸಿ ಭಾಗಶಃ ಸಫಲವಾಗಿವೆ. ಶಾಲೆ, ಆಸ್ಪತ್ರೆಗಳು ತೆರೆಯಲ್ಪಟ್ಟಿವೆ.

ರಿಯೊ ಎಂಬ ಭವ್ಯ ನಗರಕ್ಕೆ ಫವೇಲಾಗಳು ಕಪ್ಪುಚುಕ್ಕೆಯೆಂದು ಆಳುವವರ ಭಾವನೆ. ಕೆಲವೆಡೆ ಅವು ಮತ್ತೆ ಬೆಳೆಯದಂತೆ ತಡೆಯಲು ನಗರಾಡಳಿತ ಸುತ್ತ ಎತ್ತರದ ಗೋಡೆ ಕಟ್ಟಿದೆ. ೭೦ರ ದಶಕದ ಮಿಲಿಟರಿ ಆಡಳಿತವು ಫವೇಲಾ ನಿರ್ಮೂಲನಾ ಕಾರ್ಯಕ್ರಮ ಹಾಕಿಕೊಂಡು ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿ ಬೇರೆ ಕಡೆ ಮನೆ ಕಟ್ಟಿಕೊಟ್ಟಿತು. ೨೦೧೪ರಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ ನಡೆಯಿತು. ೨೦೧೬ರಲ್ಲಿ ಒಲಿಂಪಿಕ್ಸ್. ವಿಶ್ವದ ಗಮನ ಸೆಳೆವ ಅಂಥ ಸಂದರ್ಭಗಳಲ್ಲಿ ಸುರಕ್ಷತೆ, ಸ್ವಚ್ಛತೆ, ಶಿಸ್ತಿಗೆ ಪ್ರಾಮುಖ್ಯತೆ ಹೆಚ್ಚಿರುತ್ತದೆ. ಎಂದೇ ಫವೇಲಾಗಳನ್ನು ನಗರದ ಭಾಗವಾಗಿ ಪರಿಗಣಿಸಿ ಸುರಕ್ಷೆಗೆ ಪೊಲೀಸ್ ವ್ಯವಸ್ಥೆ, ಮತದಾನ, ಸೌಲಭ್ಯ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಫವೇಲಾಗಳ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡಿ ಜೀವನ ಪರಿಸ್ಥಿತಿ ಸುಧಾರಿಸುವಂತಹ ಕ್ರಮಗಳನ್ನು ನಗರ ಆಡಳಿತವು ಕೈಗೊಳ್ಳುತ್ತ ಬಂದಿದೆ. ಬಿಷಪ್, ಚರ್ಚು, ಮಿಲಿಟರಿ, ನಗರಾಡಳಿತ ಎಲ್ಲರೂ ಸೇರಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಯೋಜನೆಯನ್ನು ನಿಭಾಯಿಸುವಲ್ಲಿನ ಅಸಮರ್ಪಕತೆಯಿಂದ ಫವೇಲಿಗರ ಪುನರ್ವಸತಿಗೆಂದು ಸೃಷ್ಟಿಯಾದ ‘ದೇವರ ನಗರ’ - ಸಿದಾದೆ ಜಿ ಜ್ಯೂಸ್ (ಹರಿಜನ ಕಾಲನಿ?) ಗಳು ಹೊಸ ಫವೇಲಾಗಳಾಗಿ ರೂಪುಗೊಂಡವು. ತೆರವು, ಪುನರ್ವಸತಿ ಕಾರ್ಯಾಚರಣೆಗಳು ಹಿಂಸೆಯನ್ನು ಪ್ರಚೋದಿಸಿ ಹೊಸಹೊಸ ಗ್ಯಾಂಗ್‌ಗಳು ಹುಟ್ಟಿಕೊಂಡವು.

ವರ್ಷಕ್ಕೆ ೨೮ ಲಕ್ಷ ಪ್ರವಾಸಿಗಳು ಬರುವ ನಗರಕ್ಕೆ ನಗರವಾಸಿಗಿಂತ ಪ್ರವಾಸಿ ಮುಖ್ಯ! ವರ್ಷಕ್ಕೆ ೬,೦೦೦ ಕೊಲೆಗಳಾಗುವ ಈ ನಗರ ಸುರಕ್ಷಿತವಲ್ಲವೆಂದು ಪ್ರವಾಸಿಗೆ ಅನಿಸಿದರೆ ರಿಯೊಗೆ ಬಹು ದೊಡ್ಡ ನಷ್ಟ. ಅದಕ್ಕೇ ಫವೇಲಾಗಳನ್ನು ಅಂತರ್ಗತಗೊಳಿಸಿ, ನಗರದ ಭಾಗವಾಗಿಸುವ, ಅದನ್ನು ಸುಸ್ಥಿತಿಯಲ್ಲಿಡುವ ನಾನಾ ಯತ್ನ, ಯೋಜನೆಗಳು ನಡೆಯುತ್ತಲೇ ಇವೆ.

ರಿಯೊ ಟೂರಿಸಂನಲ್ಲಿ ಸ್ಲಂ ಟೂರಿಸಂ ಕೂಡ ಒಂದು ಭಾಗವಾಗಿದೆ!

ಕ್ರೈಸ್ಟ್ ದ ರೆಡೀಮರ್ (ಕ್ರಿಸ್ತು ರಿದ್ಯೆಂತೊರ್) 



ರಿಯೊ ಈಗ ಪ್ರಸಿದ್ಧವಾಗಿರುವುದು ೨೩೦೦ ಅಡಿ ಎತ್ತರದ ಕೊರ್ಕೊವಾದೊ ಬೆಟ್ಟದ ತುತ್ತತುದಿಯ ಮೇಲಿರುವ ಕ್ರಿಸ್ತನ ಬೃಹತ್ ಪ್ರತಿಮೆ ‘ಕ್ರೈಸ್ಟ್ ದ ರೆಡೀಮರ್’ ನಿಂದ. ವಿಶ್ವದ ಆಧುನಿಕ ಏಳು ಅದ್ಭುತಗಳಲ್ಲಿ ಒಂದು ಎಂದು ಇದನ್ನು ಹೆಸರಿಸಲಾಗಿದೆ. ಟಿಜುಕಾ ಅರಣ್ಯದಿಂದ ಆವೃತವಾದ ಬೆಟ್ಟದ ತುದಿಯಲ್ಲಿ ತನ್ನೆರಡೂ ಕೈಗಳನ್ನು ತೆರೆದು ಕ್ರಿಸ್ತ ಕೊಂಚ ಕೆಳ ನೋಡುತ್ತ ರಿಯೊ ನಗರವನ್ನು ಹರಸುತ್ತಿರುವಂತೆ ಕಾಣುತ್ತದೆ. ವಿಶ್ವಾದ್ಯಂತ ಹರಡಿಕೊಂಡ ಕ್ರೈಸ್ತಮತದ ಕುರುಹಾಗಿ ‘ಜಗದೋದ್ಧಾರಕ ಕ್ರಿಸ್ತ’ ಎಂಬರ್ಥದ ಹೆಸರಿನ ಈ ಪ್ರತಿಮೆಯನ್ನು ೧೦೦ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.

೧೯೨೨-೧೯೩೧ರ ನಡುವೆ ಫ್ರೆಂಚ್ ಶಿಲ್ಪಿಯಿಂದ ನಿರ್ಮಾಣಗೊಂಡ ೩೦ ಮೀಟರ್ ಎತ್ತರದ ಈ ಪ್ರತಿಮೆ ಆಧುನಿಕ ತಂತ್ರಜ್ಞಾನ, ಪಾರಂಪರಿಕ ಕಲೆ ಎರಡನ್ನೂ ಢಾಳಾಗಿ ಮಿಶ್ರ ಮಾಡುವ ಆರ್ಟ್ ಡೆಕೊ ಪ್ರಕಾರದಲ್ಲಿ ರಚಿತವಾದದ್ದು. ಇದು ಶಿಲಾ ವಿಗ್ರಹವಲ್ಲ. ಸಿಮೆಂಟ್ ಕಾಂಕ್ರೀಟ್ ಹಾಗೂ ಅಭ್ರಕ (ಕಾಗೆಬಂಗಾರ ಅಥವಾ ಸೋಪ್‌ಸ್ಟೋನ್)ದಿಂದ ತಯಾರಾಗಿದ್ದು. ಕ್ರಿಸ್ತನ ಮುಖವನ್ನು ಪಾಲ್ ಲಿಂಡೋವ್ಸ್ಕಿ ಎಂಬ ಶಿಲ್ಪಿ ಪ್ರತ್ಯೇಕವಾಗಿ ರೂಪಿಸಿದ. ಅದರ ಭಾಗಗಳನ್ನು ಬೇರೆಬೇರೆಯಾಗಿ ನಿರ್ಮಿಸಿ ಬ್ರೆಜಿಲಿಗೆ ತಂದು ಸೇರಿಸಲಾಯಿತು. ೩೦ ಮೀ. ಎತ್ತರದ ಮೂರ್ತಿ ೮ ಮೀಟರ್ ಕಟ್ಟೆಯ ಮೇಲೆ ನಿಂತಿದೆ.

ಬ್ರೆಜಿಲಿನ ಕ್ರೈಸ್ತ ಧರ್ಮಗುರುಗಳಿಗೆ ೧೮೫೦ರ ಸುಮಾರಿಗೆ ಪೋರ್ಚುಗಲ್ಲಿನ ರಾಜಕುಮಾರಿ ಇಸಬೆಲ್ಲಾಳ ಗೌರವಾರ್ಥ ರಿಯೊ ನಗರದ ಕೊರ್ಕೊವಾದೊ ಬೆಟ್ಟದ ಮೇಲೆ ಕ್ರೈಸ್ತ ಸ್ಮಾರಕವೊಂದನ್ನು ನಿಲಿಸುವ ಹಂಬಲವಾಯಿತು. ಆ ಕುರಿತು ಆಳುವವರಿಗೆ ಪ್ರಸ್ತಾಪ ಸಲ್ಲಿಸಿದ್ದರೂ ಅದು ಊರ್ಜಿತವಾಗಲಿಲ್ಲ. ಕೊನೆಗೆ ೧೯೨೦ರ ಹೊತ್ತಿಗೆ ‘ಬ್ರೆಜಿಲ್ ಸಮಾಜದಲ್ಲಿ ದೇವನಿಲ್ಲದ ಸ್ಥಿತಿ ನಿರ್ಮಾಣವಾಗತೊಡಗಿದೆ’ ಎಂದು ಭಯಗೊಂಡ ರಿಯೊ ಕ್ಯಾಥೊಲಿಕ್ ಸರ್ಕಲ್ ಸಹಿ ಮತ್ತು ಹಣ ಸಂಗ್ರಹ ಅಭಿಯಾನ ಕೈಗೊಂಡು ಸ್ಮಾರಕ ನಿರ್ಮಿಸುವ ಒತ್ತಾಯ ತಂದಿತು. ವಿಶ್ವದ ಸಂಕೇತವಾಗಿ ಕಟ್ಟೆ, ವಿಶ್ವಶಾಂತಿಯ ಮತ್ತು ಶಿಲುಬೆಯ ಕುರುಹಾಗಿ ತೆರೆದ ಬಾಹುಗಳ ಕ್ರಿಸ್ತನನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇವತ್ತಿನ ಲೆಕ್ಕದಲ್ಲಿ ೩೩ ಲಕ್ಷ ಅಮೆರಿಕನ್ ಡಾಲರುಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರತಿಮೆಯ ಹೊರಕವಚವನ್ನು ಅಭ್ರಕದಿಂದ ಮಾಡಲಾಗಿದೆ. ೨೦೦೬ರಲ್ಲಿ ಬ್ರೆಜಿಲಿನ ಸಂತಳಾದ ಅವರ್ ಲೇಡಿ ಆಫ್ ಅಪಾರಿಷನ್ ಚರ್ಚ್ ಅನ್ನು ಪ್ರತಿಮೆಯ ಕೆಳಗೆ ನಿರ್ಮಿಸಿದ್ದು ಈಗಲ್ಲಿ ವಿವಾಹ ಮತ್ತಿತರ ಕ್ರೈಸ್ತವಿಧಿಗಳು ನೆರವೇರುತ್ತವೆ.

ಗಾಳಿಮಳೆ, ಸಮುದ್ರ ವಾತಾವರಣಕ್ಕೆ ನಿರಂತರ ಮುಖವೊಡ್ಡಿ ನಿಂತ ಪ್ರತಿಮೆಯನ್ನು ಕಾಲಕಾಲಕ್ಕೆ ಸರಿಪಡಿಸುತ್ತ ಇರಬೇಕಾಗುತ್ತದೆ. ಈ ೧೦೦ ವರ್ಷಗಳಲ್ಲಿ ರಿಪೇರಿಗೊಳ್ಳುತ್ತ ಹೋದಂತೆ ಮೊದಲಿನ ತಿಳಿಬಿಳಿಯ ಶುದ್ಧ ಅಭ್ರಕ ಸಿಗದ ಕಾರಣ ಅದರ ಬಣ್ಣ ದಟ್ಟೈಸುತ್ತ ಹೋಗಿದೆ. ೨೦೦೮ರಲ್ಲಿ ಗುಡುಗು ಸಿಡಿಲಿನ ಮಳೆಗೆ ಮೂರ್ತಿಯ ಹುಬ್ಬು, ತಲೆ ಮತ್ತು ಬೆರಳು ಹಾನಿಗೊಂಡವು. ಅದನ್ನು ೨೦೧೦ರಲ್ಲಿ ವಿಸ್ತೃತವಾಗಿ ರಿಪೇರಿ ಮಾಡಿದರು. ಕಾಂಕ್ರೀಟು, ಅಭ್ರಕ ಲೇಪ, ಒಳಗಿನ ಕಬ್ಬಿಣವೂ ಸೇರಿದಂತೆ ಎಲ್ಲವನ್ನು ನವೀಕರಣಗೊಳಿಸಲಾಯ್ತು. ಶಿಲೀಂಧ್ರ ಬೆಳೆಯದಂತೆ ವಾಟರ್ ಪ್ರೂಫ್ ಮಾಡಲಾಯಿತು. ಆ ವೇಳೆ ಯಾರೋ ಅದರ ಕೈಮೇಲೆ ಬಣ್ಣ ಎರಚಿ ವಿರೂಪಗೊಳಿಸಲು ನೋಡಿದರು. ೨೦೧೪ರಲ್ಲಿ ಸಿಡಿಲು ಬಡಿದು ಬಲಗೈಯ ಬೆರಳು ಬಿದ್ದು ಹೋಯಿತು. ಮೂರ್ತಿಯ ತಲೆ ಹಾಗೂ ಹಸ್ತಗಳ ಮೇಲೆ ಸಿಡಿಲು ನಿರೋಧಕ ಸರಳುಗಳನ್ನಿಟ್ಟು ಸರಿಪಡಿಸಲಾಯಿತು.

ವಿಶ್ವಶಾಂತಿ ಬೋಧಿಸಿದ ಏಸುವಿಗೂ ಬಡಿವ ಸಿಡಿಲು! ಕಾಲದ ಮಹಿಮೆ, ನೆಲದ ಮಹಿಮೆ ಇದೇ ಏನು?!

‘ಅಲ್ಲಿದ್ದಾನೆ, ನಮಗಾಗಿ..’



ಕೊರ್ಕೊವಾದೊ ಬೆಟ್ಟದ ಮೇಲೆ ಹೋಗಲು ರಸ್ತೆಯಿಲ್ಲ. ಒಂದು ಜೋಡಿ ರೈಲು ಹಳಿಯಿರುವ ಕಿರಿದಾದ ರೈಲು ಮಾರ್ಗದಲ್ಲೆ ಪ್ರಯಾಣಿಸಬೇಕು. ಆಚೀಚಿನ ದಟ್ಟ ಕಾಡುಗಳ ನಡುವೆ ಪುಟ್ಟ ರೈಲು ಬೆಟ್ಟ ಹತ್ತುತ್ತದೆ. ಮೇಲಕ್ಕೇ ಕಣ್ಣು ಕೀಲಿಸಿದ್ದರೂ ಎಲ್ಲೂ ಕ್ರಿಸ್ತ ಕಾಣಲಿಲ್ಲ. ರೈಲಿಳಿದರೆ ಮತ್ತೂ ದಟ್ಟ ಕಾಡು. ಕೊನೆಗೆ ಒಂದು ಲಿಫ್ಟಿನೆದುರು ನಮ್ಮನ್ನು ಸಾಲಾಗಿ ನಿಲಿಸಿದರು. ಅಷ್ಟಷ್ಟೆ ಜನರ ಮೇಲೇರಿಸಿದರು. ಲಿಫ್ಟಿನಿಂದ ಹೊರಬಂದು ನೋಡಿದರೆ,

ಅರೆಅರೆಅರೆ, ಎಂಥ ಸುಂದರ ದೃಶ್ಯ! ತಲೆ ಮೇಲೆತ್ತಿದರೆ ಕಾಣುತ್ತಿದ್ದಾನೆ ತಲೆಬಾಗಿ ನಿಂತಿರುವ ಕ್ರಿಸ್ತ.

ಮೆಟ್ಟಿಲೇರಿ ಮೂರ್ತಿಯೆದುರು ನಿಂತು ಪೂರ ಕುತ್ತಿಗೆ ಹಿಂಬಾಗಿಸಿ ಕತ್ತು ಮೇಲೆತ್ತಿದರೆ ಆಗಸದಲ್ಲಿ ಹೊಳೆವ ಸೂರ್ಯನೊಟ್ಟಿಗೆ ಕ್ರಿಸ್ತನ ಮುಖ ಕಾಣಿಸಿತು. ನಮ್ಮ ಗೊಮಟೇಶ್ವರನಿಗಿಂತ ಎರಡು ಪಟ್ಟು ಎತ್ತರ ಇರುವ ಮೂರ್ತಿ. ತನ್ನ ಪಾದದ ಬುಡದಲ್ಲಿ ಗಿಜಿಗಿಜಿ ಇರುವೆಯಂತೆ ಹರಿವ ಜನ ಎಲ್ಲಿ ಕಾಲಡಿ ನೊಂದಾರೊ ಎಂದು ಪೊರೆವಂತೆ ಕೈಚಾಚಿ ನಿಂತ ಶಾಂತ ಮುಖಮುದ್ರೆಯ ಮೂರ್ತಿ.

ಪರಮ ಕರುಣಾಳು ಕ್ರಿಸ್ತ. ಬಡವರಲ್ಲಿ ಬಡವನಾಗಿ, ನೋವಿರುವವರಲ್ಲಿ ನೋವುಣ್ಣುವವನಾಗಿ, ಈ ಜಗದ ಕಟ್ಟಕಡೆಯವರ‍್ಯಾರೋ ಅವರೊಡನೆ ಅವರಿಗಾಗಿಯೇ ಬದುಕಿದ ಕ್ರಿಸ್ತ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಹಾಡು ಎದೆಯೊಳಗಿನಿಂದೆದ್ದು ಬಂತು.

‘ನನ್ನ ಎಲುಬಿನ ಹಂದರದೊಳಗೊಂದು ಇಗರ್ಜಿಯಿದೆ.
ಅಲ್ಲಿದೆ ಕಶೇರು, ಹೆಗಲ ಮೂಳೆಗಳಿಂದಾದ ಶಿಲುಬೆ.
ಅಲ್ಲಿದ್ದಾನೆ ನಮಗಾಗಿ ಮೊಳೆಯ ಜಡಿಸಿಕೊಂಡು 
ನಿತ್ಯ ಮರುಗುವ ಏಸು ಕ್ರಿಸ್ತ..’

ಧರ್ಮ, ಅನುಯಾಯಿತ್ವ, ಆಸ್ತಿಕತೆ-ನಾಸ್ತಿಕತೆಗಳ ಹೊರತಾಗಿ ಆ ಎತ್ತರದಲ್ಲಿ ಕತ್ತೆತ್ತಿ ದಿಟ್ಟಿಸಿದಾಗ ಏನೋ ಒಂದು ಒಳಗೆಲ್ಲ ತುಂಬಿಕೊಂಡಂತಾಯಿತು. ಅದು ಭಕ್ತಿ-ನೆಮ್ಮದಿ-ಶಾಂತಿ ಎಲ್ಲವನ್ನೂ ಒಳಗೊಂಡಂತಿದ್ದ ಕಳವಳವಿಲ್ಲದ ನಿರ್ಲಿಪ್ತಿ. ಚಣಹೊತ್ತು ಮೈಮರೆಯುವಂತೆ ಮಾಡುವ ಪರವಶತೆ.

ಅದೋ ಅಲ್ಲಿ ನೀರ ನಡುವೆ ಲಂಗೋಟಿಯಂತಹ ಏರ್‌ಸ್ಟ್ರಿಪ್‌ನಿಂದ ವಿಮಾನ ಮೇಲೇರುತ್ತಿದೆ. ಇದೋ ಇಲ್ಲಿ ಸಾಲುಸಾಲು ಕಡಲ ಹಕ್ಕಿಗಳು ಕ್ರಿಸ್ತನ ಪ್ರತಿಮೆಗಿಂತ ಮೇಲೆ ಹಾರುತ್ತಿವೆ. ಈಗಷ್ಟೆ ನೆತ್ತಿ ಸುಟ್ಟಿದ್ದ ಸೂರ್ಯ ಅಂಟಾರ್ಕ್ಟಿಕಾ ಕಡೆಯಿಂದ ಬೀಸತೊಡಗಿದ ಶೀತಗಾಳಿಯ ಸೆಳವಿಗೆ ಸಿಕ್ಕನೊ ಎಂಬಂತೆ ಮೋಡದ ಹಿಂದೆ ಮರೆಯಾಗತೊಡಗಿದ್ದಾನೆ. ಈ ಎರಡು ಸಾವಿರ ವರುಷಗಳಲ್ಲಿ ಎಷ್ಟು ಕೋಟಿ ಜೀವಗಳು ಈ ಇವನ ಕರುಣೆಯ ದಿಟ್ಟಿಯಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡಿವೆ? ಎಷ್ಟು ಕೋಟಿ ಸೋತ ಜೀವಗಳು ಅವನ ನುಡಿಯಲಿ ಬದುಕಿನ ಬೆಳಕು ಹುಡುಕಿಕೊಂಡಿವೆ?

ಕಡಲೇ, ಹಕ್ಕಿಯೇ, ಶೀತಗಾಳಿಯೇ, ಪರವಶಕೆ ನನ್ನನೊಡ್ಡಿದ ದಿವ್ಯವೇ, 
ಬಿಟ್ಟುಹೋದೇವೇ ಈ ನೆಲವ ನಾವನುಭವಿಸಿದ ನೆಮ್ಮದಿ, ಚೆಲುವಿನೊಂದಿಗೆ? 
ನಮಗಾಗಿ ಮೊಳೆಯ ಜಡಿಸಿಕೊಂಡು ನಿತ್ಯ ಮರುಗುವ ಏಸು ಕ್ರಿಸ್ತನೇ, 
ಕರುಣವಾಗಿ ನೆಲೆಗೊಳಲಾರೆಯಾ ಮನುಜರ ಎಲುಬಿನ ಹಂದರದೊಳಗೆ?