Friday 8 September 2017

ಗೌರಿ ಲಂಕೇಶ್ - ಕೆಂಪಾದವೋ ಎಲ್ಲಾ ಕೆಂಪಾದವೋ..




ಟ್ರಿಣ್ ಟ್ರಿಣ್ ಟ್ರಿಣ್..

ಮೂರೇ ರಿಂಗಿಗೆ ಮೊಬೈಲ್ ಕರೆ ಕಟ್ ಆಯಿತೆಂದರೆ ಪೇಶೆಂಟ್ ನೋಡುವುದನ್ನು ಒಮ್ಮೆ ನಿಲ್ಲಿಸಿ ವಾಪಸ್ ಕರೆ ಮಾಡುತ್ತಿದ್ದೆ. ಯಾಕೆಂದರೆ ಅದು ಗೌರಿ ಲಂಕೇಶ್ ಅವರದ್ದೆ ಆಗಿರುತ್ತಿತ್ತು. ‘ಮೂರು ರಿಂಗಾದ್ರು ಎತ್ತದವರು ಬ್ಯುಸಿ ಅಂತ ಅರ್ಥ. ಅವರು ಎತ್ತುವರೆಗೂ ಮೊಬೈಲ್ನ ಕಿವಿಗಿಟ್ಕೋಂಡ್ ಕೂರಕ್ಕೆ ನನ್ಕೈಲಾಗಲ್ಲಪ್ಪ..’ ಎನ್ನುತ್ತ ಒಂದು ಸ್ಫೋಟಕ ನಗೆ ನಕ್ಕು ಮಾತು ಮುಂದುವರೆಸುತ್ತಿದ್ದರು ಗೌರಿ. ಇನ್ನು ಆ ಮೂರು ರಿಂಗಿನ ಕರೆ ಬರಲಾರದು ಎಂದು ನೆನೆಸಿಕೊಳ್ಳಲು ದುಃಖವಾಗುತ್ತಿದೆ. ಮೊನ್ನೆ ಸೆಪ್ಟೆಂಬರ್ ೫ರ ರಾತ್ರಿ ತಮ್ಮ ಮನೆ ಬಾಗಿಲಿನಲ್ಲೇ ಹಂತಕರಿಂದ ಹತ್ಯೆಗೊಳಗಾದ ಗೌರಿ ಲಂಕೇಶ್ ಸಾವು ಈಗ ಕ್ರಿಯಾಶೀಲವಾಗಿರುವ ಬಹುತೇಕ ಮನಸುಗಳಲ್ಲಿ ಒಂದು ಖಾಲಿಯನ್ನೂ, ಅಗಣಿತ ಪ್ರಶ್ನೆಗಳನ್ನೂ, ಕಣ್ತುಂಬ ದುಃಖವನ್ನೂ, ಸಿಟ್ಟು-ಹತಾಶೆಯನ್ನೂ ತುಂಬಿದೆ.

ಒಂದು ಕತೆ ನೆನಪಾಗುತ್ತಿದೆ: ಕೇಡಿಗನೊಬ್ಬನ ಮುಷ್ಟಿಯಲ್ಲಿ ಚಂದದ ಹಕ್ಕಿ ಸಿಲುಕಿಕೊಂಡಿದೆ. ಮುಷ್ಟಿಯೊಳಗಿರುವುದು ಬದುಕಿದೆಯೋ ಇಲ್ಲವೋ ಎಂದವ ಕೇಳುತ್ತಿದ್ದಾನೆ. ಬದುಕಿದೆ ಎಂದರೆ ಅವ ಕೈಯಲ್ಲೇ ಹಿಸುಕಿ ಗುಟ್ಟಾಗಿ ಕೊಲ್ಲುತ್ತಾನೆ, ಸತ್ತಿದೆ ಎಂದರೆ ಹೌದೇ ಎಂದು ನಿಮ್ಮ ಕಣ್ಣೆದುರೇ ಕೊಲ್ಲುತ್ತಾನೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಚೆಂದದ ಹಕ್ಕಿಯ ಕತೆ ಈಗ ಹೀಗೇ ಆಗಿದೆಯೇ? ಮುಕ್ತವಾಗಿ ಮಾತನಾಡಿದರೆಂದು, ಬರೆದರೆಂದು ಎಷ್ಟೆಷ್ಟು ಅನನ್ಯ ಜೀವಗಳ ಕಳೆದುಕೊಂಡೆವು? ಇನ್ನೂ ಎಷ್ಟು ಕಾಲ ಹೀಗೆ ಮುಂದುವರೆಯಬೇಕು ಇದು? ಎಂಬಂಥ ಎಷ್ಟೋ ಪ್ರಶ್ನೆಗಳು ನಮ್ಮ ನಡುವೆ ಹರಿದಾಡತೊಡಗಿವೆ.

ಗೌರಿಯ ವಿಚಾರಗಳನ್ನು ತಮ್ಮ ವಿಚಾರಗಳಿಂದ ಎದುರಿಸಲಾರದ ಅವಿಚಾರಿಗಳ ಹೇಡಿತನದ ಕೃತ್ಯ ಈ ಹತ್ಯೆ. ಏಳು ಬುಲೆಟ್ ಅಲ್ಲ, ಅರ್ಧ ಬುಲೆಟ್ ಹೊಕ್ಕರೂ ಸಾಕು ಎನ್ನುವಂತಿದ್ದ ಶಿಥಿಲ ದೇಹದೊಳಗಿನ ಚೈತನ್ಯ ಕುರಿತು ‘ಅವರು’ ಎಷ್ಟು ಭಯಗೊಂಡಿದ್ದಾರೆಂದು ಇದು ತಿಳಿಸಿಕೊಡುತ್ತದೆ. ಗೌರಿಯ ಸಮಯ-ಶಕ್ತಿಯನ್ನೆಲ್ಲ ಅಸಂಖ್ಯ ಕೇಸುಗಳ ಅಲೆದಾಟದಲ್ಲಿ ಹರಣಮಾಡಲು ಮೂಲಭೂತವಾದಿಗಳು ಹತ್ತಾರು ಕೇಸುಗಳನ್ನು ಅವರ ಮೇಲೆ ದಾಖಲಿಸಿದ್ದರು. ‘ಕರ್ನಾಟಕದಲ್ಲಿ ಎಲ್ಲೆಲ್ಲಿ ಕೋರ್ಟಿದಾವೊ ಅಲ್ಲೆಲ್ಲ ನಂದೊಂದು ಕೇಸು ನಡೀತಿದೆ ಕಣಪ್ಪ, ನನ್ಗೆ ಟೈಮಿಲ್ಲ, ದೂರದೂರ ಎಲ್ಲು ನನ್ನ ಕರಿಬೇಡೀಪ್ಪಾ’ ಎನ್ನುತ್ತಿದ್ದರು ಗೌರಿ. ಆದರೆ ಅಷ್ಟೆಲ್ಲ ಬೆದರಿಕೆ, ಕೋರ್ಟ್ ಕೇಸುಗಳ ಹೊರತಾಗಿಯೂ ನಿರ್ಭೀತಿಯಿಂದ ಬರೆಯುತ್ತಿದ್ದದ್ದು, ಓಡಾಡುತ್ತಿದ್ದದ್ದು ಅಪರೂಪದ ದಿಟ್ಟತನವೇ ಸರಿ!





ವಿದ್ಯಾರ್ಥಿ ಸಂಘಟನೆ, ಮಹಿಳಾ-ದಲಿತ-ರೈತ-ಪರಿಸರ-ಆದಿವಾಸಿ ಸಂಘಟನೆ, ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ, ಹಿಂದೂತ್ವವಾದಿಗಳ ಅತಿಗಳಿಗೆ ಸಿಲುಕಿ ನೊಂದ ಸಮುದಾಯಗಳ ಹೋರಾಟಗಳಲ್ಲಿ ಸಕ್ರಿಯವಾಗಿದ್ದವರೆಲ್ಲರಿಗು ಗೌರಿ ಅಕ್ಕನಂತಿದ್ದರು. ಅವರಲ್ಲಿ ಯಾರಾದರೂ ಕಷ್ಟದಲ್ಲಿದ್ದರೆ ಹಿಂದೆಮುಂದೆ ನೋಡದೆ ನೆರವಿಗೆ ಧಾವಿಸುತ್ತಿದ್ದರು. ಹೊಸಪೀಳಿಗೆಯ ಹೋರಾಟಗಾರರನ್ನು ಅತ್ಯಂತ ಭರವಸೆ, ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದ ಜೀವ ಅದು. ಅವರ ಕುಟುಂಬ ಬೆಳೆಬೆಳೆದು ಎಷ್ಟು ವಿಸ್ತಾರವಾಗಿತ್ತು ಎಂದರೆ ದೂರದ ರಾಜ್ಯಗಳ ದಿಟ್ಟ ಹೋರಾಟಗಾರರಾಗಿದ್ದ ಕನ್ನಯ್ಯ, ಜಿಗ್ನೇಶ್, ಶೆಹ್ಲಾ ರಶೀದ್, ಚಂದ್ರಶೇಖರ್ ಆಜಾದ್ ಅವರ ‘ಮಕ್ಕಳಾ’ಗಿದ್ದರು. ಎಲ್ಲಿಯೇ ಆಗಿರಲಿ, ಚಳುವಳಿ-ಹೋರಾಟಗಾರರೊಡನೆ ಅಷ್ಟು ತಾದಾತ್ಮ್ಯ..

ಜೀವಪರವಾಗಿ ಯೋಚಿಸುವ ಎಲ್ಲರೂ ‘೩ಡಿ’ ಬಗೆಗೆ ನಂಬಿಕೆ ಹೊಂದಿರುತ್ತಾರೆ - ಡೆಮಾಕ್ರೆಸಿ, ಡಿಸೆಂಟ್ ಮತ್ತು ಡೈವರ್ಸಿಟಿ (ಪ್ರಜಾಪ್ರಭುತ್ವ, ಭಿನ್ನಮತ, ಬಹುತ್ವ). ಗೌರಿ ಲಂಕೇಶ್ ಕೂಡ ಸದಾ ಚರ್ಚೆಗೆ ಮುಕ್ತವಾಗಿದ್ದರು. ‘ಸಿದ್ಧರಾಮಯ್ಯನವರಿಗೆ ನೀವು ಕೊಡುವ ಮಾರ್ಕ್ಸ್ ಸ್ವಲ್ಪ ಹೆಚ್ಚೇ ಆಗುತ್ತಿದೆ, ಲಂಕೇಶ್ ಇದ್ದಿದ್ದರೆ ಇಷ್ಟು ಕೊಡುತ್ತಿರಲಿಲ್ಲ ಅಲ್ಲವೆ?’ ಎಂದರೆ ‘ಹೌದಾ?’ ಎನ್ನುತ್ತಲೇ ಅದಕ್ಕೆ ಈ ಕಾಲದ ಕಾರಣಗಳನ್ನು ವಿವರಿಸಿ ಹೇಳಿದ್ದರು. ‘ಏನಿದು, ಶರಣತತ್ವ ಎಲ್ಲ ಮರೆತು ಮತ್ತೊಂದು ಬ್ರಾಹ್ಮಿನಿಕಲ್ ಜಾತಿಯಾಗಿರುವ ಲಿಂಗಾಯತರ ಬಗೆಗೆ ಕಮ್ಯುನಿಸ್ಟರಾಗಿ ಹೀಗೆ ಬರೆದಿರುವಿರಲ್ಲ, ಒಬ್ಬ ಮಹಿಳೆಯಾಗಿ ನಿಮ್ಮ ನಿಲುವಿನ ಬಗೆಗೆ ನನಗೆ ತುಂಬ ಕುತೂಹಲವಿತ್ತು’ ಎಂದು ಲಿಂಗಾಯತ ಧರ್ಮ ಪ್ರತಿಪಾದನೆ ಕುರಿತು ಅನುಮಾನ ತೋರಿಸಿದ್ದೆ. ಸಂಯಮದಿಂದ ನನ್ನ ಸಂಶಯಗಳನ್ನೆಲ್ಲ ಕೇಳಿಕೊಂಡು, ಕೆಲವನ್ನು ಒಪ್ಪಿ, ಮತ್ತೆ ಕೆಲವನ್ನು ಭೇಟಿಯಾದಾಗ ವಿವರವಾಗಿ ಮಾತಾಡುವ ಎಂದಿದ್ದರು. ಕೂದಲನ್ನು ಬಿಳಿಯಾಗಿಸಿದಾಗ, ‘ಐ ದೋಂಟ್ ವಾಂಟ್ ಟು ಡೈ. (ಬಣ್ಣ ಹಚ್ಚಲು ಇಷ್ಟವಿಲ್ಲ). ಗ್ರೇಸ್‌ಫುಲಿ ನನ್ನ ವಯಸ್ಸನ್ನು ಒಪ್ಪಿಕೊಂಡಿರುವೆ’ ಎಂದಿದ್ದರು. ಕೆಲಸಂಚಿಕೆಗಳ ಶಬ್ದ ಬಳಕೆ ಬಗೆಗೆ ತಕರಾರೆತ್ತಿದಾಗ, ‘ಅವಕ್ಕೆ ಕೆಪ್ಪು. ಮೃದು ಭಾಷೆಯಲ್ಲಿ ಹೇಳಿದರೆ ಲಾಲಿ ಹಾಡಿನಂತೆ ಕೇಳಿಸೋ ಚಾನ್ಸಿದೆ’ ಎಂದು ನಕ್ಕಿದ್ದರು. ಗೌರಿ ಬಳಿ ಹೀಗೆಲ್ಲ ಚರ್ಚಿಸಿದ್ದ ಸಂಗತಿಗಳನ್ನು ಎಷ್ಟೋ ಪ್ರಗತಿಪರರ ಬಳಿ ಆಡಿದರೆ ಒಂದೇಟಿಗೆ ನನಗೆ ‘ಚೆಡ್ಡಿ’ ತೊಡಿಸಿಬಿಡುತ್ತಾರೆ. ಅಥವಾ ‘ಹಾಗಾದ್ರೆ ಈ ಸಲ ನಿಂ ವೋಟು ಬಿಜೆಪಿಗಾ?’ ಎಂದು ಚುಚ್ಚುತ್ತಾರೆ. ಸಂವಾದಕ್ಕೆ ತಮ್ಮ ಕಿಟಕಿ, ಬಾಗಿಲು, ಮನಸುಗಳ ಮುಚ್ಚಿ ಕೂತಿರುವ ಅಂಥವರ ನಡುವೆ ಒಬ್ಬ ಚಳುವಳಿಕಾರ್ತಿಯಾಗಿ ಗೌರಿ ಮಾಗಿದ್ದರು.

ಸಾಮಾಜಿಕ ಹೋರಾಟಗಳಿಗೆ, ಅದರಲ್ಲೂ ವಿಶೇಷವಾಗಿ ನಕ್ಸಲ್ ಚಳುವಳಿಗೆ ಹೆಣ್ತನದ ಟಚ್ ಕೊಟ್ಟವರು ಗೌರಿ. ಸಾಕೇತ್ ರಾಜನ್, ಪಾರ್ವತಿ-ಹಾಜಿಮಾ ಮತ್ತಿತರ ಅಮೂಲ್ಯ ಜೀವಗಳ ಹತ್ಯೆ ಅವರನ್ನು ಎಷ್ಟು ಅಲುಗಾಡಿಸಿತೆಂದರೆ ಭೂಗತರಾಗಿದ್ದ ಹೋರಾಟಗಾರರು ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳುವಂತೆ ಮಾಡಲು ಸಾಕಷ್ಟು ಶ್ರಮ ವಹಿಸಿದರು. ಬಹುಶಃ ಕರ್ನಾಟಕದ ನಕ್ಸಲ್ ಹೋರಾಟವು ಜನಪರ ಹೋರಾಟವಾಗುವುದರಲ್ಲಿ; ಇವತ್ತಿನಷ್ಟು ಅಹಿಂಸಾತ್ಮಕವಾಗಿ, ಕ್ರಿಯಾಶೀಲವಾಗಿ ಇರುವುದರಲ್ಲಿ ಗೌರಿ ಅಕ್ಕನ ಪಾತ್ರ ದೊಡ್ಡದಿದೆ.


ಕಾಲಕ್ರಮೇಣ ಕೆಲವು ಚಳುವಳಿಕಾರರಲ್ಲಿ ಅಹಮು ತುಂಬಿಕೊಳ್ಳುತ್ತದೆ, ಚಳುವಳಿಯಲ್ಲೂ ಅಹಮು ಬೆಳೆಯುತ್ತದೆ. ಅಹಂ ನಿರಸನಕ್ಕಿರುವ ದಾರಿ ತಮ್ಮ ಪಕ್ಷ-ಸಿದ್ಧಾಂತ-ಸಂಘಟನೆಯ ಆಚೆಗೂ ನಿಂತು ಸಮಷ್ಟಿಯ ಒಳಿತನ್ನು ಗ್ರಹಿಸುವುದು. ಇದಕ್ಕೆ ಗೌರಿ ಲಂಕೇಶ್ ಒಳ್ಳೆಯ ಉದಾಹರಣೆಯಾಗತೊಡಗಿದ್ದರು. ನಕ್ಸಲ್ ಹೋರಾಟಗಾರರ ಪರವಾಗಿದ್ದದ್ದಕ್ಕೆ, ಕಮ್ಯುನಿಸ್ಟರಾದದ್ದಕ್ಕೆ ಅನುಮಾನ-ಬೈಗುಳ-ಟೀಕೆ-ವಿಮರ್ಶೆಯ ಮಳೆ ಸುರಿದಾಗಲೂ ದಮನಿತ ಸಮುದಾಯ-ಸಂಘಟನೆ-ಸೂಕ್ಷ್ಮ ಮನಸುಗಳ ಒಡನಾಡಿಯಾಗಿದ್ದರು. ಕೆಂಪು, ನೀಲಿ ಬಿಳಿ ಎಂದು ಬಣ್ಣಗಳಲ್ಲಿ; ಅದರ ಶೇಡ್‌ಗಳಲ್ಲಿ ಜನಪರ ಚಳುವಳಿಗಳು ಹಂಚಿಹೋಗಿರುವುದನ್ನು ಕೊನೆಗೊಳಿಸಲು; ಐಕ್ಯ ಹೋರಾಟವನ್ನು ವಾಸ್ತವಗೊಳಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಸೈದ್ಧಾಂತಿಕ ಗೋಡೆಗಳನ್ನೆಲ್ಲ ಮೀರಿ ಮಾನವ ತತ್ವದ ಕಡೆಗೆ ಚಲಿಸಲು ಯತ್ನಿಸುತ್ತಿದ್ದರು.

ಅವರ ಭೌತಿಕ ವಯಸು ೫೫ ಆಗಿತ್ತು. ಆದರೆ ಜೈವಿಕ ವಯಸು ಅದರ ಎರಡು ಪಟ್ಟಾಗಿರಬಹುದು. ಒಂದು ಕಾಲಮಾನದಲ್ಲಿ ಎರಡು ಬದುಕುಗಳ ಬದುಕಿದ ತೀವ್ರವಾದಿ ಗೌರಿ. ಕಡಿಮೆ ನಿದ್ರೆ, ಸೇದಿ ಬಿಸುಡುತ್ತಿದ್ದ ಅಸಂಖ್ಯ ಸಿಗರೇಟುಗಳಿಂದ ಕಾಲವನ್ನು ಹೆಚ್ಚುವರಿಯಾಗಿ ಕಡ ಪಡೆದಿದ್ದರೇ? ಗೊತ್ತಿಲ್ಲ. ಈಗ ಎಲ್ಲರ ನೆನಪುಗಳಿಂದ ಗೌರಿ ಎದ್ದೆದ್ದು ಬರುವಾಗ ಇರಬಹುದೆನಿಸುತ್ತಿದೆ.

ಪತ್ರಕರ್ತರು, ಹೋರಾಟಗಾರರು, ಸಾಹಿತಿಗಳು, ಸೂಕ್ಷ್ಮಜ್ಞ ರಾಜಕಾರಣಿಗಳ ಸಂಗಾತಿಯಾಗಿದ್ದ ಗೌರಿ, ಸಾವಿರಾರು ತರುಣ ತರುಣಿಯರ, ಸೂಕ್ಷ್ಮ ಮನಸುಗಳ ನೆನಪಿನಲ್ಲಿ ದಾಖಲಾಗಿದ್ದಾರೆ. ನಿಜಾರ್ಥದಲ್ಲಿ ಸಾವನ್ನು ಗೆದ್ದಿದ್ದಾರೆ. ಆದರೆ ಅದರ ನಡುವೆಯೇ, ‘ನಮ್ಮನೆಯಲ್ಲಿ ಇವತ್ತು ಊಟಕ್ಕೆ ಹೋಳಿಗೆ’ ಎಂದು ಗೌರಿ ಸಾವನ್ನು ಸಂಭ್ರಮಿಸುತ್ತಿರುವ ಸಂಸ್ಕಾರವಂತರೂ ನಮ್ಮ ನಡುವಿದ್ದಾರೆ. ಅವರ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸಿ, ಎಲ್ಲ ತಾವೇ ಕಂಡವರಂತೆ ಬರೆದು, ತಮ್ಮ ಮಾನ ಕಾಪಾಡಿಕೊಳ್ಳುತ್ತಿರುವ ನಿರ್ಬುದ್ಧಿಜೀವಿಗಳಿದ್ದಾರೆ. ‘ಗೌರಿಯ ಪಿಂಡದ ಅಗುಳಿಗೆ ಮುತ್ತುತ್ತಿವೆ ವಿಚಾರವಾದಿ ಕಾಗೆಗಳು’ ಎಂದು ಬರೆವ ಅವಿಚಾರವಾದಿಗಳಿದ್ದಾರೆ.

ಆ ಕತ್ತಲ ಮನಸುಗಳಲಿಷ್ಟು ಬೆಳಕು ತುಂಬಲಿ, ‘ನಾವೂ ಗೌರಿಯೇ’ ಎಂದು ಸಾರಿ ಹೇಳುತ್ತಿರುವ ಸಾವಿರಾರು ಎಳೆಯ ಹೃದಯಗಳೂ ಇವೆ. ಅವರ ದನಿಗಳಲ್ಲಿ ನಮ್ಮ ನಾಳಿನ ಸಮಾನತೆಯ, ಬಹುತ್ವದ ಕನಸುಗಳು ಮೊಳಕೆಯೊಡೆಯುತ್ತಿವೆ..

***

ಏನೇ ಸಮಾಧಾನ ಹೇಳಿಕೊಂಡರೂ, ಸಾವು ಸಾವೇ. ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟವೇ. ಚಳುವಳಿಗಾರರ ಅಂತರಾಳದ ಮಾತುಗಳಿಗೆ ಕಿವಿಯಾಗಿದ್ದ ಒಂದು ಸ್ಪೇಸ್ ಕಡಿಮೆಯಾಗಿದೆ. ಹೀಗಿರುತ್ತ ಹೋರಾಟಗಾರರ ಮೂಲಧ್ಯೇಯಗಳಾದ ೩ಡಿ - ಡೆಮಾಕ್ರಸಿ, ಡೈವರ್ಸಿಟಿ ಮತ್ತು ಡಿಸೆಂಟ್ ಅನ್ನು ಗೌರವಿಸುವುದು; ಮೌನವಾಗಿರದೇ ಅನ್ಯಾಯವೆನಿಸಿದ್ದರ ವಿರುದ್ಧ ಬರಹ-ಹೋರಾಟ ನಡೆಸುವುದು ಗೌರಿ ಅಕ್ಕನಿಗೆ ತೋರಬಹುದಾದ ನಿಜವಾದ ಗೌರವವಾಗಿದೆ.

ಕೆಂಪಾದವೋ ಎಲ್ಲಾ ಕೆಂಪಾದವೋ..
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನಿಮ್ಮ ನೆತ್ತರ ಹೀರಿಕೊಂಡು ಕೆಂಪಾದವು..
ಗೌರಿ ಅಕ್ಕಾ, ನಿನಗಿದು ಪ್ರೀತಿಯ ಸಲಾಮು..