Sunday 5 July 2020

ಕೋವಿಡ್ ೧೯ ಆನ್‌ಲೈನ್ ಕ್ರಾಂತಿ: ತಂತ್ರಜ್ಞಾನ, ಯಂತ್ರೋಪಕರಣಗಳು ವೈದ್ಯರಿಗೆ ಪರ್ಯಾಯವಲ್ಲ




ಕೋವಿಡ್ ಮಹಾಪಿಡುಗು ವಿಶ್ವವನ್ನು ವ್ಯಾಪಿಸಿ ಇನ್ನೂ ತನ್ನ ಬಿರುಸು ಕಡಿಮೆ ಮಾಡಿಕೊಳ್ಳದೇ ಹಾಹಾಕಾರ ಸೃಷ್ಟಿಸಿರುವಾಗ ಅದು ಹೇಗೆ ಬಂತು, ಯಾರಿಂದ ಬಂತು ಎನ್ನುವ ಚರ್ಚೆಗಳು ಒಂದೆಡೆ ಕಾವೇರುತ್ತಿದ್ದರೆ; ಇನ್ನೊಂದೆಡೆ ನೋಡದೇ, ಮುಟ್ಟದೇ ಕೆಲಸ ಮಾಡುವ ಆನ್‌ಲೈನ್ ಸಂಸ್ಕೃತಿಯ ಬಗೆಗೆ ಜನ ಹೆಚ್ಚೆಚ್ಚು ಯೋಚಿಸತೊಡಗಿದ್ದಾರೆ. ಮುಟ್ಟದಿರಿ, ಮುಟ್ಟಿದರೆ ಕೈತೊಳೆಯಿರಿ ಎನ್ನುವ ಕಾಯಿಲೆ ಕೋವಿಡ್‌ಗೆ ಆನ್‌ಲೈನ್ ವ್ಯವಹಾರ ಹೇಳಿಮಾಡಿಸಿದಂತಿದೆ ನಿಜ. ಆದರೆ ಭವಿಷ್ಯದಲ್ಲೂ ಇದು ಬೇಕೇ? ಎಲ್ಲಿ, ಎಷ್ಟು ಬೇಕು? ವೈದ್ಯಕೀಯ ರಂಗದಲ್ಲಿ ಆನ್‌ಲೈನ್ ಸಾಧ್ಯತೆಗಳೇನು ಎನ್ನುವುದು ಚರ್ಚೆಯ ವಿಷಯವಾಗಿದೆ.

ನಿಸ್ತಂತು ಮಾಧ್ಯಮ ಜನಸಂಪರ್ಕ ಸಾಧನವಾಗಿ ಬಳಕೆಯಾಗತೊಡಗಿದ್ದೇ ಬಂಡವಾಳ ಹೂಡುವವರು ಅದರ ವ್ಯಾಪಾರಿ ಸಾಧ್ಯತೆಗಳನ್ನು ಶೋಧಿಸಿದಾಗ. ಈ ವಿಷಯದಲ್ಲಿ ಆರೋಗ್ಯ ಕ್ಷೇತ್ರದ ಬಂಡವಾಳಿಗರು ಮುಂದಿದ್ದಾರೆ. ಕೋವಿಡ್ ಬರುವ ಮೊದಲೇ ವೈದ್ಯಕೀಯವು ಆನ್‌ಲೈನ್ ಆಗಿದೆ. ಪ್ರತಿವರ್ಷ ವೈದ್ಯಕೀಯ ವೃತ್ತಿಗೆ ಇಳಿಯುವ ಸಾವಿರಾರು ಹೊಸ ತಲೆಮಾರಿನ ಡಾಕ್ಟರುಗಳು ತಮ್ಮೊಡನೆ ಹೊಸ ಆಲೋಚನೆಗಳು, ಹೊಸ ಉಪಕರಣಗಳು, ಹೊಸ ಮುನ್ನೋಟಗಳನ್ನು ತಂದಿದ್ದಾರೆ. ಭ್ರೂಣದ ಅಂಗಾಂಶ ಕಸಿ, ರೊಬೋಟುಗಳಿಂದ ಶಸ್ತ್ರಚಿಕಿತ್ಸೆಗೆ ಸಹಾಯವೇ ಮೊದಲಾದ ಹೊಚ್ಚ ಹೊಸಪ್ರಯೋಗಗಳು ನಡೆಯುತ್ತಿವೆ. ಬೇಕೋ ಬೇಡವೋ, ಒಳ್ಳೆಯದೋ ಕೆಟ್ಟದೋ, ಹೊಸತನ ವೈದ್ಯಕೀಯ ವೃತ್ತಿಯನ್ನು ತಂತಾನೇ ಪ್ರವೇಶಿಸುತ್ತಲಿದೆ. ಈಗಂತೂ ಆಟ, ಪಾಠ, ಪ್ರಾರ್ಥನೆ, ಮದುವೆ, ತಲಾಖ್, ಲೈಂಗಿಕತೆ, ಸಭೆಗಳು ಆನ್‌ಲೈನ್ ಆದಮೇಲೆ ಚಿಕಿತ್ಸೆ ಆಗದಿರುತ್ತದೆಯೆ? ಎಲ್ಲೋ ಕುಳಿತು ಇನ್ನೆಲ್ಲೋ ಇರುವ ರೋಗಿಗೆ ವೈದ್ಯಕೀಯ ಸಲಹೆ ಕೊಡಲು ಡಾಕ್ಟರರ ಸಮೂಹವೇ ಸಿದ್ಧವಾಗಿದೆ. ಒಂದೇ ರೋಗವನ್ನನುಭವಿಸುವ ರೋಗಿಗಳ ಜಾಲತಾಣ ಗುಂಪುಗಳಿದ್ದು ಅವರು ಚಿಕಿತ್ಸೆಯ ಸಫಲತೆ-ವಿಫಲತೆ, ರೋಗದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಡಾಕ್ಟರನ್ನು ಕಾಣದೇ ಇಡಿಯ ದೇಹ ಚೆಕಪ್ ಮಾಡಿಕೊಳ್ಳಬೇಕೆ? ಕ್ಯಾನ್ಸರ್‌ಗೆ ಚಿಕಿತ್ಸೆ ಬೇಕೆ? ಚರ್ಮರೋಗಕ್ಕೆ ಪರಿಹಾರ ಬೇಕೆ? ಬಂಜೆತನ ನಿವಾರಣೆಯಾಗಬೇಕೆ? ಯಾವ ಚಿಕಿತ್ಸೆ, ಎಲ್ಲಿ, ಎಷ್ಟು % ಯಶಸ್ಸಿನೊಂದಿಗೆ, ಎಷ್ಟು ಖರ್ಚಿನಲ್ಲಿ ಆಗುತ್ತದೆಂದು ರೇಟಿಂಗ್‌ನೊಡನೆ ತಿಳಿಸುವ ಜಾಹೀರಾತು ತಾಣಗಳಿವೆ. ಯಾರಿಗೆ ಯಾವುದೆಂಬ ವಿವೇಚನೆಯೇ ಇಲ್ಲದೆ ಎಲ್ಲರಿಗೂ ಎಲ್ಲ ಟೆಸ್ಟ್ ಮಾಡಿಸಿ; ರಕ್ತ, ಮೂತ್ರ, ಎಕ್ಸ್‌ರೇ, ಸಿಟಿ-ಎಂಆರ್‌ಐ- ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗಳ ವರದಿಯನ್ನು ದೂರದೂರಿನ ಹೆಸರಾಂತ ತಜ್ಞರಿಗೆ ಕಳಿಸಿ ಸಲಹೆ ಪಡೆಯಬಹುದಾಗಿದೆ. ಮೂಗು, ಕಣ್ಣು, ಹೃದಯ, ಚರ್ಮ, ಕಿಡ್ನಿ, ಶ್ವಾಸಕೋಶ ಮತ್ತಿತರ ಅಂಗಾಂಗಗಳ ತಪಾಸಣಾ ವರದಿ ನೋಡಿ ಆಯಾಯಾ ತಜ್ಞರು, ವಿಶೇಷ ತಜ್ಞರು ಸಲಹೆ ಕೊಡುತ್ತಾರೆ. ಅವರೆಲ್ಲರ ತೀರ್ಪುಗಳನ್ನು ಸೇರಿಸಿ ಲ್ಯಾಬುಗಳು, ಆಸ್ಪತ್ರೆಗಳು ‘ನಿಲ್’ ವರದಿ ನೀಡಿ ರೋಗ, ನಿರೋಗಗಳನ್ನು ನಿಷ್ಕರ್ಷಿಸುತ್ತವೆ. ಮಿಗುವಷ್ಟು ದುಡ್ಡಿರುವ ಸಿರಿವಂತರಿಂದ ಬಡವರವರೆಗೆ, ನಗರವಾಸಿಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಕಾಸಿಗೆ ತಕ್ಕಂತೆ ಈ ಸೌಲಭ್ಯ ವಿಸ್ತರಿಸಿಕೊಂಡಿದೆ.

ವಾಹನ ಹಿಡಿದು, ಎಷ್ಟೋ ದೂರ ಪಯಣಿಸಿ, ಚೀಟಿ ಮಾಡಿ, ಕೂತು ಕಾದು, ಡಾಕ್ಟರನ್ನು ನೋಡುವ ಕಿರಿಕಿರಿಯೇ ಇಲ್ಲವೆಂದು ಆನ್‌ಲೈನ್ ಚಿಕಿತ್ಸೆ ಬಗೆಗೆ ಹಲವರು ಒಲವು ತೋರಿಸುತ್ತಿದ್ದಾರೆ. ಪುರುಸೊತ್ತಿಲ್ಲದ ಕಾಲದಲ್ಲಿ ನಿಸ್ತಂತು ಸಂಪರ್ಕವೇ ಸರಿಯೆಂಬ ಮಾತೂ ಕೇಳಿಬರುತ್ತಿದೆ.

ಹೌದೇ? ಆನ್‌ಲೈನ್ ವೈದ್ಯಕೀಯ ಸಲಹೆಯೇ ಈ ಕಾಲಕ್ಕೆ ಸೂಕ್ತವೇ? ಡಾಕ್ಟರ್ ಮತ್ತು ರೋಗಿಯ ದೃಷ್ಟಿಯಿಂದ ಅದರ ಸಾಧಕ, ಬಾಧಕಗಳೇನು?

ಕಹಿ ಸತ್ಯ


ಮನುಷ್ಯ ದೇಹಕ್ಕೆ ಬರುವ ನೂರಾರು ಆರೋಗ್ಯ ಸಮಸ್ಯೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು:

೧. ಮನೋಕ್ಲೇಷದಿಂದ ಬರುವ ಸಮಸ್ಯೆಗಳು: ದೈಹಿಕ ಕಾಯಿಲೆಯಿರದ ಈ ಸಮಸ್ಯೆಗಳಿಗೆ ಮಾತುಕತೆ-ಸಲಹೆ-ಸೂಕ್ತ ಔಷಧಿಯೇ ಪರಿಹಾರ.
೨. ಔಷಧಿ-ಮಾತ್ರೆ-ಪಥ್ಯದಿಂದ ಗುಣವಾಗುವ ಕಾಯಿಲೆಗಳು: ಉದಾಹರಣೆಗೆ ಅಸ್ತಮಾ, ಏರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮದ ಕಾಯಿಲೆ, ಕೆಲವು ಹೃದ್ರೋಗಗಳು, ಜ್ವರ, ಇತ್ಯಾದಿ.
೩. ಶಸ್ತ್ರಚಿಕಿತ್ಸೆ ಮತ್ತು ಪೂರಕ ‘ಪ್ರೊಸೀಜರು’ಗಳೂ ಅಗತ್ಯವಿರುವಂಥವು: ಹೆರಿಗೆ, ಗರ್ಭಪಾತ, ಗರ್ಭಕೋಶ ಸಂಬಂಧಿ ತೊಂದರೆಗಳು, ಕ್ಯಾನ್ಸರ್ ಗೆಡ್ಡೆ/ಹುಣ್ಣು, ಮೂಳೆಮುರಿತ, ಲಿವರು-ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ತೊಂದರೆಗಳು, ಅಪೆಂಡಿಕ್ಸ್ ಉರಿಯೂತ, ಟಾನ್ಸಿಲ್ ಉರಿಯೂತ, ಕೀವು, ಬಾವು ಇತ್ಯಾದಿ.

ಇದರಲ್ಲಿ ರೋಗಿಗೆ ಯಾವುದೇ ಒಂದು ವರ್ಗದ ಸಮಸ್ಯೆಯಿರಬಹುದು ಅಥವಾ ಎಲ್ಲವೂ ಒಟ್ಟೊಟ್ಟಿಗೆ ಇರಬಹುದು. ಕ್ಯಾನ್ಸರ್, ಸಕ್ಕರೆ ಕಾಯಿಲೆ ಇರುವವರಿಗೆ ಮಾನಸಿಕ ಕಾಯಿಲೆಯೂ ಇರಬಹುದು. ಅಸ್ತಮಾ ಇರುವ ಮಹಿಳೆಗೆ ಅತಿಸ್ರಾವವಾಗಬಹುದು. ರೋಗಿಗೆ ಯಾವ್ಯಾವ ತರಹದ ಸಮಸ್ಯೆಗಳಿವೆಯೆಂದು ಗುರುತಿಸಲು ಡಾಕ್ಟರರು ರೋಗಿಯನ್ನು ‘ನೋಡು’ವುದು ಮುಖ್ಯವಾಗಿದೆ. ನೋಡಿದ ನಂತರ ಅವಶ್ಯವಿರುವ ತಪಾಸಣೆಗಳನ್ನಷ್ಟೇ ಮಾಡಿಸಬೇಕು. ರೋಗಿಯ ಮುಖಭಾವ, ಪ್ರತಿಕ್ರಿಯೆ, ಪರಿಸ್ಥಿತಿ, ಚಲನೆಯ ವಿಧಾನ, ಆತಂಕ, ಅನುಮಾನ, ಪ್ರಶ್ನೆ, ಅವರ ಜೊತೆಗಿರುವವರನ್ನೆಲ್ಲ ‘ನೋಡಿದ’ ಡಾಕ್ಟರು ತಮ್ಮ ಭಾವುಕ, ಬೌದ್ಧಿಕ ಬಂಡವಾಳ ತೊಡಗಿಸಿದಾಗ ರೋಗ-ರೋಗಿ-ಚಿಕಿತ್ಸೆಯ ಸ್ಥೂಲ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ತಮ್ಮ ಹಿಂದಿನ ಅನುಭವ, ಸಹಾನುಭೂತಿಗಳ ಮೂಸೆಯಿಂದ ಆ ರೋಗಿಗೆ ಹೊಂದುವ ಒಂದು ಸೂಕ್ತ ಪರಿಹಾರವನ್ನು ಹೆಕ್ಕಿ ಹೊರತೆಗೆಯಲು ಈ ಚಿತ್ರಣ ಪ್ರೇರೇಪಿಸುತ್ತದೆ. ಡಾಕ್ಟರ್-ರೋಗಿಯ ಸಂಬಂಧ ಚೆನ್ನಾಗಿದ್ದಷ್ಟೂ ಉತ್ತಮ ಪರಿಹಾರಗಳು ಅನುಭವದ ಬುಟ್ಟಿಯಿಂದ ಎದ್ದು ಬರುತ್ತವೆ.

ಮನುಷ್ಯರೆಂಬ ಯಂತ್ರಗಳಲ್ಲದ ಯಂತ್ರಗಳು ನಡೆಯಲು ಶಕ್ತಿ ಸೆಲೆ ಎಷ್ಟು ಮುಖ್ಯವೋ ಭಾವಸೆಲೆಯೂ ಅಷ್ಟೇ ಮುಖ್ಯ. ರೋಗಿಯ ಜೀವಕೋಶಕ್ಕೆ ಔಷಧಿ ಎಷ್ಟು ಅಗತ್ಯವೋ, ಅವರ ಭಾವಕೋಶವನ್ನು ಮರುಪೂರಣ ಮಾಡುವುದೂ ಅವಶ್ಯವಾಗಿದೆ. ಈ ಕುರಿತು ರೋಗಿಗಳನ್ನು, ಸಮಾಜವನ್ನು ಎಚ್ಚರಿಸುತ್ತಲೇ ಡಾಕ್ಟರುಗಳು ತಾವೂ ಮಾನವೀಯಗೊಳ್ಳಬೇಕಾದ ಅವಶ್ಯಕತೆಯಿದೆ. ಮಾಹಿತಿಗೂ, ಜ್ಞಾನಕ್ಕೂ ಅಂತರವಿದೆ. ಓದಿಗೂ, ತಜ್ಞತೆಗೂ ಅಂತರವಿದೆ. ಜನರ ಒಡನಾಟದಿಂದಷ್ಟೇ ಮಾಹಿತಿ ಜ್ಞಾನವಾಗಿ, ವಿವೇಕವಾಗಬಲ್ಲದು; ಅನುಭವವು ಚಿಂತನೆಯಾಗಿ ಅರಳಬಲ್ಲದು. ರೋಗಿಯನ್ನು ನೋಡಿ, ಮುಟ್ಟಿದಾಗ ಡಾಕ್ಟರುಗಳಲ್ಲಿ ಮಾತಿಲ್ಲದೆ ಭಾವನೆಗಳನ್ನು ಪತ್ತೆ ಹಚ್ಚುವ, ಮುಖಚಹರೆ ಅರಿಯುವ ಹೆಣ್ಣುಗುಣ ಉದ್ದೀಪನಗೊಳ್ಳಲು ಸಾಧ್ಯವಿದೆ.

ಆನ್‌ಲೈನ್ ಸಂಪರ್ಕ ಇಂಥ ಎಲ್ಲ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತದೆ. ಡಾಕ್ಟರ್-ರೋಗಿ ಸಂಬಂಧವನ್ನು ವ್ಯಾಪಾರಿ ಗ್ರಾಹಕ ಮಟ್ಟಕ್ಕಿಳಿಸುತ್ತದೆ. ಇದರಿಂದ ಆರ್ಥಿಕ ಲಾಭಗಳಿರಬಹುದು. ಆದರೆ ಜನದೇವರ ದರ್ಶನವಾಗದಿರುವುದು ಡಾಕ್ಟರುಗಳಿಗೆ ದೊಡ್ಡ ನಷ್ಟವೇ ಸರಿ.

ಆನ್‌ಲೈನ್ ಸೇವೆಯ ಇನ್ನೊಂದು ಆತಂಕ ಮಾಹಿತಿ ಸೋರಿಕೆಯದ್ದು. ರೋಗಿಯು ವಿವರ ನೀಡುತ್ತಿರುವುದು ಒಬ್ಬ ವೈದ್ಯರಿಗೇ ಹೊರತು ಹ್ಯಾಕರ್‌ಗೆ ಅಲ್ಲವೆಂದು, ಆನ್‌ಲೈನ್ ಸೇವೆಯಲ್ಲಿ ಬಹಿರಂಗವಾಗುವ ಖಾಸಗಿ ವಿವರಗಳು ಸೋರುವುದಿಲ್ಲವೆಂದು ನಿಶ್ಚಿತವಿರುವುದಿಲ್ಲ. ಆನ್‌ಲೈನ್ ಸೇವೆ ನೀಡುತ್ತಿರುವವರು ನಕಲಿ ಡಾಕ್ಟರುಗಳೋ ಅಲ್ಲವೋ ಎಂದು ತಿಳಿಯಲೂ ಕಷ್ಟವಿದೆ.

ಮನುಷ್ಯರನ್ನು ಬಿಟ್ಟು ಉಳಿದ ಪ್ರೈಮೇಟ್ ಪ್ರಬೇಧದ ಪ್ರಾಣಿಗಳು ದಿನದ ೨೦% ಸಮಯವನ್ನು ಒಂದನ್ನೊಂದು ಮುಟ್ಟುವುದರಲ್ಲಿ ಕಳೆಯುತ್ತವೆ. ನಾವು ಮಾತ್ರ ಆಧುನಿಕರಾಗುತ್ತ ಹೋದಂತೆ ಮುಟ್ಟದ, ಮುಟ್ಟಿಸಿಕೊಳ್ಳದವರಾಗುತ್ತಿದ್ದೇವೆ. ತುಂಬಿ ತುಳುಕಿ ಭೂಮಿ ನಡುಗುವಷ್ಟು ಜನ ತುಂಬಿಕೊಂಡಿದ್ದರೂ ಇನ್ನಿಲ್ಲದ ಒಂಟಿತನ ಮನುಷ್ಯರನ್ನು ಆವರಿಸಿದೆ. ಒಂಟಿತನವು ಖಿನ್ನತೆ ಹುಟ್ಟಿಸುತ್ತದೆ, ಕೀಳರಿಮೆ ಬೆಳೆಸುತ್ತದೆ, ನಗಣ್ಯ ದೈಹಿಕ ಕಿರಿಕಿರಿಗಳೂ ದೊಡ್ಡವೆನಿಸತೊಡಗುತ್ತವೆ, ಚಹರೆಯ ಏರುಪೇರುಗಳೇ ಕಾಯಿಲೆಯಂತೆ ಭಾಸವಾಗುತ್ತವೆ. ಹೆಚ್ಚುತ್ತಿರುವ ದೌರ್ಜನ್ಯಗಳಿಗೆ, ಅತಿಭಯ, ಮುಂಗೋಪ, ಉದ್ರೇಕ, ಅಪರಾಧಿ ಪ್ರವೃತ್ತಿಗಳಂತಹ ನಡತೆಗಳಿಗೆ ಒಂಟಿತನವೇ ಕಾರಣವಾಗಿದೆ. ಒಂಟಿತನದ ಮೂಲ ಸ್ಪರ್ಶ ಹಸಿವು. ಇದಕ್ಕೆ ‘ಆನ್‌ಲೈನ್ ಕ್ರಾಂತಿ’ ಸೃಷ್ಟಿಸುವ ಭ್ರಮಾವಾಸ್ತವ ಕಾರಣವಾಗಿದೆ.

ಒಟ್ಟಾರೆ ಹೇಳುವುದಾದರೆ, ತಂತ್ರಜ್ಞಾನ ಮನುಷ್ಯರಿಗೆ ಸಹಾಯ ಮಾಡಬಹುದು. ಸಣ್ಣಪುಟ್ಟ ಕಾಯಿಲೆಗಳಿಗೆ ಆನ್‌ಲೈನ್ ಸಲಹೆ ಪಡೆಯಬಹುದು. ಔಷಧಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳಬಹುದು. ನಿಮ್ಮ ಡಾಕ್ಟರುಗಳೊಡನೆ ನಿರಂತರ ಆನ್‌ಲೈನ್ ಸಂಪರ್ಕ ಇಟ್ಟುಕೊಂಡು ಆಪ್ತ ಬಾಂಧವ್ಯ ಬೆಳೆಸಿಕೊಳ್ಳಬಹುದು. ಡಾಕ್ಟರರು ತಮ್ಮ ರೋಗಿಗಳ ಜೊತೆ ಆನ್‌ಲೈನ್ ಸಂಪರ್ಕದಲ್ಲಿದ್ದು ಭರವಸೆ, ಮಾಹಿತಿ ನೀಡಬಹುದು. ಆದರೆ ಮನುಷ್ಯರ ಬದಲಾಗಿ ತಂತ್ರಜ್ಞಾನ ಉಪಯೋಗಿಸಲು ಬಾರದು. ಡಾಕ್ಟರಿಗಾಗಿ ಕಾಯುವುದು, ಅವರೆದುರು ಹೇಳಿಕೊಳ್ಳುವುದು, ಪರೀಕ್ಷಿಸಲ್ಪಡುವುದು ಎಷ್ಟೇ ಕಷ್ಟವಾದರೂ ಸಹ ಆಸ್ಪತ್ರೆಗೆ ಹೋದಾಗ ಸಿಗುವ ಜನ, ಅವರ ಅನುಭವ-ಸಾಂತ್ವನದ ನುಡಿಗಳು, ವಾಸ್ತವ ಮಾಹಿತಿಗಳು, ಡಾಕ್ಟರರ ಮೇಲಿನ ವಿಶ್ವಾಸಗಳು ಬದುಕಿನಲ್ಲಿ ಭರವಸೆ ತುಂಬಬಲ್ಲವು.

ಅತಿಗಳ ಫಲಿತ ಕೋವಿಡ್



ಹೆಚ್ಚು ಜನ ಒಂದೆಡೆ ಇರುವುದೇ ಹಿಂಸೆ. ಮುನ್ನೂರಕ್ಕಿಂತ ಹೆಚ್ಚು ಜನ ಒಂದೆಡೆ ಇರುವಲ್ಲಿ ಒಮ್ಮತ ಸಾಧ್ಯವಿಲ್ಲ, ಸಾವಿರ ಜನ ಒಟ್ಟಿಗೇ ಇರುವಲ್ಲಿ ಭಿನ್ನಮತೀಯ ಗುಂಪು ಹುಟ್ಟಿಯೇ ಹುಟ್ಟುತ್ತದೆ. ಹತ್ತು ಸಾವಿರ ಜನ ಹಿಂಸೆಯಿಲ್ಲದೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ಹೀಗಿರುತ್ತ  ಕೋಟ್ಯಂತರ ಜನರನ್ನು ಒಂದು ಸಣ್ಣ ಪ್ರದೇಶದಲ್ಲಿ, ಕಾಲ್ಪನಿಕ ಗೆರೆಯೆಳೆದು, ದೇಶ ರಾಜ್ಯ ಜಾತಿ ಧರ್ಮಗಳೆಂಬ ಅಸ್ಮಿತೆ ಕೊಟ್ಟು ನಿಯಂತ್ರಿಸುವುದು ಪ್ರಕೃತಿ ಸಹಜವಲ್ಲ. ಹೀಗೆ ನಿಸರ್ಗ ತತ್ತ್ವಕ್ಕೆ ವಿರುದ್ಧವಾಗಿ ಒಂದೆಡೆ ನೆರೆವ ಬೃಹತ್ ಜನಸಮೂಹವೇ ಸಾಂಕ್ರಾಮಿಕ ರೋಗಗಳ ಕಾರಣವಾಗಿದೆ. ಬರಿಯ ಸಾಂಕ್ರಾಮಿಕ ರೋಗಗಳಷ್ಟೇ ಅಲ್ಲ, ನಮ್ಮ ಬಹುಪಾಲು ಸಮಸ್ಯೆಗಳ ಮೂಲ ನಗರೀಕರಣ ಮತ್ತು ಜನದಟ್ಟಣೆಯೇ ಆಗಿದೆ. ಒತ್ತೊತ್ತಾಗಿ ಬದುಕುವ ಮನುಷ್ಯ ಜೀವಿಗಳು ಅತಿ ಸಂಪರ್ಕ, ಅತಿ ಬಳಕೆ, ಅತಿ ಆಸೆ, ಅತಿ ತಿರುಗಾಟ, ಅತಿ ಡಾಂಭಿಕತೆ, ಅತಿ ಅನುಭೋಗಕ್ಕೆ ಒಳಗಾಗಿ ತಮ್ಮ ಸುತ್ತಲ ಜೀವಿ, ಅಜೀವಿ ಪರಿಸರವನ್ನು ನಾಶಗೈದದ್ದರ ಫಲಿತವಾಗಿ ಕರೋನಾದಂತಹ ಕಾಯಿಲೆಗಳು ಬಂದಿವೆ. ಶಂಕೆಯೇ ಇಲ್ಲ, ನಮ್ಮ ಅತಿಗಳ ನೇರ ಫಲಿತ ಕೋವಿಡ್-೧೯.

ಈ ಕಾಲವು ಬುದ್ಧಿ ಮತ್ತು ಅನುಭವವನ್ನು ಪ್ರತ್ಯೇಕಿಸಿ ಇಟ್ಟಿದೆ. ನಮಗಾದ ಅನುಭವವನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ ವ್ಯವಧಾನವೂ ಇಲ್ಲದ ಆತುರ ಜೀವಿಗಳಾಗಿದ್ದೇವೆ. ಹಾಗೆ ನೋಡಿದರೆ ರೋಗಗಳು ಬರುವುದೇ ನಮ್ಮ ಅತಿಗಳನ್ನು ಮಿತಿಗೊಳಿಸಲಿಕ್ಕೆ. ನಾವು ಯಕಃಶ್ಚಿತ್ ಜೀವಿಗಳು ಎಂದು ನೆನಪಿಸುವುದಕ್ಕೆ. ಅತಿಗಳನ್ನು ಮಿತಿಗೊಳಿಸಿಕೊಂಡರೆ ಆರೋಗ್ಯ ತಂತಾನೇ ಸರಿಯಾಗುತ್ತದೆ. ಆದರೆ ನಾವು ರೋಗದಿಂದ ಪಾಠ ಕಲಿಯದೆ ರೋಗಕ್ಕೇ ಪಾಠ ಕಲಿಸಹೊರಡುತ್ತೇವೆ. ಸಾರಾಯಿ ಉತ್ಪಾದನೆಗೆ ಸಬ್ಸಿಡಿ ಕೊಟ್ಟು, ಸಾರಾಯಿ ದುಡ್ಡಿನಿಂದಲೇ ಸರ್ಕಾರ ಬದುಕುವುದೆಂದು ಹೇಳಿ, ಮದ್ಯದೊರೆಯನ್ನು ದೇಶ ಬಿಟ್ಟು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟು ಕೊನೆಗೆ ಸಾರಾಯಿ ನಿಷೇಧ ಕಾನೂನು ತರುತ್ತೇವೆ! ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಲೇ ಗುಟ್ಕಾ-ಬೀಡಿ-ಸಿಗರೇಟು ತಯಾರಿಸುತ್ತೇವೆ! ಇಂಥ ವೈರುಧ್ಯಮಯ ನಿಲುವು ಮತ್ತು ಬದುಕುಗಳಿಂದಲೇ ಇವತ್ತು ಅನಾರೋಗ್ಯ ಹೆಚ್ಚಾಗಿರುವುದು. ಆದರೂ ನಾವು ಕೋವಿಡ್‌ಗಳನ್ನು ಗೆಲ್ಲುವ ಭರವಸೆಯಲ್ಲಿದ್ದೇವೆ. ಹೆಚ್ಚೆಚ್ಚು ಆಸ್ಪತ್ರೆಗಳನ್ನು ತೆರೆಯುವ, ಲಸಿಕೆ-ಔಷಧಿ ಕಂಡುಹಿಡಿಯುವ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಸ್ತಾವಗಳು ಕಂಡುಬರುತ್ತಿವೆ. ನಮ್ಮ ಸರ್ಕಾರಗಳಾದರೋ ಕೋವಿಡ್ ಮಹಾಪಿಡುಗನ್ನು ಯುದ್ಧ ಸನ್ನಿವೇಶವೆಂದು ಭಾವಿಸಿವೆ. ಗಮನಿಸಿ, ವಾರಿಯರ‍್ಸ್, ಫ್ರಂಟ್‌ಲೈನ್ ಲೆಫ್ಟಿನೆಂಟ್ಸ್, ಲಾಕ್‌ಡೌನ್, ಕೌಂಟ್‌ಡೌನ್, ಮಿಷನ್ ಇತ್ಯಾದಿ ಯುದ್ಧಕಾಲದ ಭಾಷೆ ಬಳಕೆಯಲ್ಲಿದೆ. ಇದೆಲ್ಲದರ ಹಿಂದೆ ಅದಮ್ಯ ಜೀವನೋತ್ಸಾಹವಿದ್ದಂತೆ ಮನುಷ್ಯ ಮಿದುಳಿನ ಅಜೇಯತನದ ಅಹಂಕಾರವೂ ಇದೆ.

ಆದರೆ ರೋಗ ನಿವಾರಣೆಯೆಂದರೆ ಯುದ್ಧವಲ್ಲ. ಅದು ಎಲ್ಲರೂ ಒಟ್ಟಾಗಿ ಈಜಿ ದಾಟಬೇಕಾದ ವಿಷಮ ಪ್ರವಾಹ. ಪ್ರವಾಹದೆದುರು ಈಜಿ ದಡ ಸೇರಲು ಅನುಭೂತಿ, ಪ್ರೀತಿ, ಸಹಕಾರಗಳ ಜಂಟಿ ರಟ್ಟೆಬಲ ಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ. ಒಗ್ಗಟ್ಟೇ ಮಂತ್ರ, ಪ್ರೀತಿಯೇ ಆಧಾರ. ಹೀಗಿರುತ್ತ ನಗರೀಕರಣ ಮತ್ತು ಅತಿಗಳ ಬದುಕನ್ನು ತ್ಯಜಿಸದೆ ಬರಿಯ ಲಸಿಕೆ, ಔಷಧಿ, ಸಾಮಾಜಿಕ ಅಂತರ ಎಂದುಕೊಳ್ಳುವುದರಿಂದ, ಆನ್‌ಲೈನ್ ಡಾಕ್ಟರುಗಳು ಸಿಗುವುದರಿಂದ ಕೋವಿಡ್ ದೂರವಾಗುವುದಿಲ್ಲ. ಕೋವಿಡ್-೧೯ ಹೋಗುತ್ತದೆ, ೨೦ ಬರುತ್ತದೆ ಅಷ್ಟೇ.

ನಿಜವಾದ ಕ್ರಾಂತಿ ಕೋವಿಡ್-೧೯ಕ್ಕೆ ಲಸಿಕೆ ಕಂಡುಹಿಡಿಯುವುದೋ, ಚಿಕಿತ್ಸೆ ಕಂಡುಹಿಡಿಯುವುದೋ ಅಲ್ಲ. ಆನ್‌ಲೈನ್, ಆಫ್‌ಲೈನಿನಲ್ಲಿ ಅಸಂಖ್ಯ ಡಾಕ್ಟರುಗಳನ್ನು ಗುಡ್ಡೆ ಹಾಕಿಕೊಳ್ಳುವುದೋ ಅಲ್ಲ. ಅಥವಾ ಗಲ್ಲಿಗಲ್ಲಿಗೂ ಆಸ್ಪತ್ರೆ, ಜಿಲ್ಲೆಜಿಲ್ಲೆಯಲ್ಲೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ತೆರೆಯುವುದಲ್ಲ. ಆರೋಗ್ಯ ಕ್ಷೇತ್ರದ ನಿಜವಾದ ಕ್ರಾಂತಿ ಎಂದರೆ ಡಾಕ್ಟರುಗಳು ನಿರುದ್ಯೋಗಿಗಳಾಗುವಷ್ಟು ಆರೋಗ್ಯ ಸಾಧಿಸುವುದು. ಅವಶ್ಯವಿದ್ದಾಗ ಗುರುವಿನಂತೆ ಸಂಪರ್ಕಿಸಲು ‘ನಮ್ಮ ಡಾಕ್ಟರನ್ನು’ ನಾವೇ ಹುಡುಕಿಕೊಳ್ಳುವುದು.

***

ಆಗಲೇ ಆಗಮಿಸಿರುವವರು, ನಿರ್ಗಮನದ ಹಾದಿಯಲ್ಲಿರುವವರು ನಾವು.
ಬರಲಿರುವವರಿಗೆ ಸುರಕ್ಷಿತ ನೆಲ ಬಿಟ್ಟುಹೋಗುವ ಹೊಣೆ ನಮ್ಮದು.
ಎಂದೇ ಮಿತಗೊಳಿಸಿಕೊಳ್ಳೋಣ, ಎಲ್ಲ ಅಂದರೆ ಎಲ್ಲವನ್ನೂ.
ನಮ್ಮ ಕಣ್ಣು ತೆರೆಸಲಿ ಕೋವಿಡ್, ಇನ್ನಾದರೂ.



(ವೈದ್ಯ ಎಂಬ ಕನ್ನಡ ಪದ ‘ರೋಗಿ’ ಪದದಂತೆ ಲಿಂಗತಟಸ್ಥ ಅಲ್ಲ. ಎಂದೇ ‘ಡಾಕ್ಟರ್’ ಪದ ಬಳಸಿರುವೆ.)

(‘ಸೋಂಕು ರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ? ವೈದ್ಯಕೀಯ ರಂಗದಲ್ಲಿ ಏನಾಗುತ್ತಿದೆ? ಭವಿಷ್ಯದ ಸಾಧ್ಯತೆಗಳೇನು?’ ಸಮಾಜಮುಖಿ ಪತ್ರಿಕೆಗೆ ಬರಹ ಜುಲೈ ೨೦೨೦.)

Saturday 13 June 2020

Che Gue Vera ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ - ಕವಿಯ ಮನಸು, ಕ್ರಾಂತಿಯ ಕನಸು..






ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿ ಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶಕ್ಕಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ: ಬದುಕಿದ ೩೯ ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲಿ ನಿರಂತರ ಬೆಳೆಯುತ್ತಲಿರುವ ಮಗು..

ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ‍್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಆತನನ್ನು ಪ್ರಾಣಬಿಡುವಷ್ಟು ಪ್ರೀತಿಸುವವರಿದ್ದಾರೆ, ಕುರುಡು ಅಭಿಮಾನಿಗಳಾದವರಿದ್ದಾರೆ, ಕೊಲೆಗಡುಕನೆಂದು ದ್ವೇಷಿಸುವವರೂ ಇದ್ದಾರೆ. ತಟ್ಟೆ, ಲೋಟ, ಪೆನ್ನು, ಪುಸ್ತಕ, ಕವಿತೆ, ಟೀ ಶರ್ಟ್, ಬ್ಯಾಗ್, ನೋಟು, ನಾಣ್ಯ, ಟೋಪಿ, ಹಚ್ಚೆ, ಸ್ಮಾರಕ, ಸಿನಿಮಾ - ಹೀಗೆ ಎಲ್ಲೆಂದರಲ್ಲಿ ಕಾಣುವ ಚೆಗೆವಾರ ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ. ಅತಿ ಹೆಚ್ಚು ಕಮರ್ಷಿಯಲೈಸ್ ಆದ ನಾಯಕ. ನಮ್ಮ ನೆಲದಿಂದ ಹದಿನೈದು ಸಾವಿರ ಕಿಲೋಮೀಟರು ದೂರದಲ್ಲಿದ್ದರೇನು, ಕನ್ನಡ ಮನಸುಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದವನು. ಚೆ ಕುರಿತ ಪುಸ್ತಕ ಇಟ್ಟರೆ ತಮ್ಮನ್ನು ನಕ್ಸಲೈಟ್ ಬೆಂಬಲಿಗರೆಂದುಕೊಂಡಾರು ಎಂದು ಹಿಂಜರಿವ ಪುಸ್ತಕದಂಗಡಿ ಮಾಲೀಕರು, ತನ್ನ ಮಗನಿಗೆ ಚೆಗೆವಾರ ಎಂದು ಹೆಸರಿಟ್ಟ ವಿ.ಆರ್.ಕಾರ್ಪೆಂಟರ್, ಮೋಟಾರ್ ಸೈಕಲ್ ಡೈರೀಸ್ ಓದಿ ಮೂರ್ನಾಲ್ಕು ಬಾರಿ ಕರ್ನಾಟಕ ಸುತ್ತಿಬಂದ ಮುರಳೀ ಮೋಹನ್ ಕಾಟಿ, ಚೆ ಬದುಕನ್ನು ನೆನಪಿಸುವ ಸಾಕೇತ್ ರಾಜನ್ ಸಾವು - ಹೀಗೆ ಕನ್ನಡದಲ್ಲಿ ಅವನು ಹಲವು ರೀತಿಗಳಲ್ಲಿ ಹಾಸುಹೊಕ್ಕಾಗಿದ್ದಾನೆ.

ನನ್ನ ಮಟ್ಟಿಗೆ ಕನಸು, ಕೆಚ್ಚು, ಚೆಲುವಾಂತ ನಗೆ, ತೀವ್ರತೆ, ದುಡುಕುಗಳ ಮೊತ್ತವಾಗಿ; ಸಫಲನೋ ವಿಫಲನೋ ಎಂದು ಅಳೆಯಬಾರದ ಕೌತುಕವಾಗಿ ಚೆ ಒಳಗಿನವನಾಗಿದ್ದಾನೆ. ‘ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ’ ಎಂದವನನ್ನು ಕಮ್ಯುನಿಸ್ಟ್ ನಾಯಕ, ಗೆರಿಲ್ಲಾ ಹೋರಾಟಗಾರ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಅವ ಹುಟ್ಟಿ ಅರೆ ಶತಮಾನದ ಬಳಿಕ ನಾ ಹುಟ್ಟಿದರೂ ಬಹುವಚನದಲ್ಲಿ ಸಂಬೋಧಿಸಲೂ ಸಾಧ್ಯವಿಲ್ಲ.

ಆತ ನನ್ನ ಸಂಗಾತಿ.

ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಬಟ್ಟೆ ತೊಳೆಯುವ ಮುದುಕಿಗೆ ಒಂದು ಕವಿತೆಯನ್ನು ಅರ್ಪಿಸಿದ ಹೆಂಗರುಳಿನ ಚೆ; ಮುಗುಳುನಗೆಯಿಲ್ಲದೆ ಮಾತಾಡದಿದ್ದ ಚೆ; ರಾತ್ರಿಯ ಹೊತ್ತು ನದಿನೀರಿನಲ್ಲಿ ಮುಳುಗಲು, ಬಾಗಿಲಿರದ ಕೋಣೆಯಲ್ಲಿ ಮಲಗಲು ಹೆದರುತ್ತಿದ್ದ ಚೆ ಕಡು ಕ್ರಾಂತಿಕಾರಿಯಾದದ್ದು ಹೇಗೆ? ತನ್ನ ಮನೆ ಲೈಬ್ರರಿಯ ೩೦೦೦ ಪುಸ್ತಕಗಳಲ್ಲಿ ಹೆಚ್ಚಿನವನ್ನು ಓದಿದ್ದ ವಿಚಾರಮಗ್ನ ವೈದ್ಯ ವಿದ್ಯಾರ್ಥಿ ಚೆ ಗೆರಿಲ್ಲಾ ಹೋರಾಟಗಾರನಾಗಿ ಬದಲಾದದ್ದು ಯಾವಾಗ ಎನ್ನುವುದು ನನ್ನನ್ನು ಸತತ ಕಾಡಿದೆ.

ಅವನಿಗೆ ಸಂಬಂಧಿಸಿದ್ದೆಲ್ಲವನ್ನು ಹುಡುಕಿ, ಓದುವ ಹುಕಿಯಲ್ಲಿ ಈ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದೆ.

ಜಂಗಮ ಪಾದ - ಮೋಟಾರ್ ಸೈಕಲ್ ಡೈರೀಸ್



೧೯೨೮. ಅರ್ಜೆಂಟೀನಾದ ರೊಸಾರಿಯೋದಲ್ಲಿ ಅರ್ನೆಸ್ಟೋ ಗೆವಾರಾ ಲಿಂಚ್ ಹಾಗೂ ಸೆಲಿಯಾ ಡಿ ಲಾ ಸೆರ‍್ನಾ ಅವರ ಮೊದಲ ಮಗನಾಗಿ ಹುಟ್ಟಿದ ಅರ್ನೆಸ್ಟೋ ಸದಾ ಚಟುವಟಿಕೆಯ ಹುಡುಗ. ಅರೆ ಐರಿಶ್ ಮೂಲದ ಅವನ ಕುಟುಂಬದಲ್ಲಿ ಅಪ್ಪ ರಿಪಬ್ಲಿಕನ್ ಬೆಂಬಲಿಗ, ಸ್ಪ್ಯಾನಿಶ್ ಕ್ರಾಂತಿಕಾರಿಗಳ ಪರ. ಮಗನ ಅವಿಶ್ರಾಂತ ಚಟುವಟಿಕೆಗಳನ್ನು ನೋಡಿದ ತಂದೆ, ‘ಅವ ಹುಟ್ಟಿದ ಕೂಡಲೇ ನನಗೆ ಗೊತ್ತಾಯಿತು, ಅವನ ರಕ್ತದಲ್ಲಿ ಐರಿಶ್ ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ’ ಅಂದರಂತೆ. ಅಸ್ತಮಾ ಬಾಧಿಸುತ್ತಿದ್ದರೂ ಫುಟ್ಬಾಲ್, ರಗ್ಬಿ, ಈಜು, ಗಾಲ್ಫ್, ಸೈಕ್ಲಿಂಗ್, ಶೂಟಿಂಗ್ ಎಲ್ಲದರಲ್ಲೂ ಮುಂದಿದ್ದ ಆಟಗಾರ ಚೆ. ಯಾವುದೇ ಆಟವಿದ್ದರೂ ಆತನ ಅಗ್ರೆಸ್ಸಿವ್ ಶೈಲಿ ಎದ್ದು ಕಾಣುತ್ತಿತ್ತು. ನೆರೂಡ, ಕೀಟ್ಸ್, ಮಚಾಡೋ ಅಲ್ಲದೆ ಹಲವು ದೇಶೀ ಮತ್ತು ವಿದೇಶೀ ಕವಿಗಳನ್ನು ಕಂಠಪಾಠವಾಗುವಷ್ಟು ಓದಿಕೊಂಡಿದ್ದ. ವಿಜ್ಞಾನ, ಗಣಿತ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ - ಹೀಗೆ ಜ್ಞಾನಕ್ಕೆ ಸಂಬಂಧಿಸಿದ ಹಲವು ಶಾಖೆಗಳ ಬಗೆಗೆ ಆಳ ತಿಳುವಳಿಕೆ ಹೊಂದಿದ್ದ.

ಚಟುವಟಿಕೆಯ ವ್ಯಕ್ತಿತ್ವ, ತೀವ್ರ ಭಾವುಕತನವೇ ಅವನನ್ನು ಅಲೆಮಾರಿಯನ್ನಾಗಿ ಮಾಡಿರಬಹುದು. ವಿದ್ಯಾರ್ಥಿ ಜೀವನದಲ್ಲೇ ತಿರುಗಾಟ ಶುರು ಮಾಡಿದ. ೧೯೫೦ರಲ್ಲಿ ಒಬ್ಬನೇ ಮೋಟರ್ ಅಳವಡಿಸಿದ ತನ್ನ ಸೈಕಲಿನಲ್ಲಿ ಉತ್ತರ ಅರ್ಜೆಂಟೀನಾದ ಹಳ್ಳಿಗಾಡುಗಳ ೪,೫೦೦ ಕಿಮೀ ಸಂಚರಿಸಿದ. ೧೯೫೧ರಲ್ಲಿ ಆಲ್ಬರ್ಟೋ ಗ್ರೆನಾಡೋ ಜೊತೆಗೂಡಿ ೮,೦೦೦ ಕಿಮೀ ದೂರವನ್ನು, ೯ ತಿಂಗಳಲ್ಲಿ ಕ್ರಮಿಸಿದ. ಎಲ್ಲೆಲ್ಲೂ ಇದ್ದ ಬಡತನ, ಹಸಿವು, ರೋಗ, ಶೋಷಣೆ ಅವನ ಗಮನ ಸೆಳೆದಿದ್ದವು. ವೈದ್ಯ ಪದವಿ ಪಡೆದೊಡನೆ ೧೯೫೩ರಲ್ಲಿ ಮತ್ತೆ ತಿರುಗಾಟಕ್ಕೆ ಹೊರಟ.

ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. ೧೯೫೧ರ ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಅನುಭವ ಈ ಪುಸ್ತಕ. ಅವರು ಭೇಟಿ ನೀಡಿದ ಸ್ಥಳಗಳ ಪಟ್ಟಿ ನೋಡಿದರೆ ಅದು ರಜಾ ಕಳೆಯಲು ಅಥವಾ ಅಧ್ಯಯನ ಕುತೂಹಲದಿಂದ ಕೈಗೊಳ್ಳುವ ಪೂರ್ವನಿಯೋಜಿತ ಐಷಾರಾಮಿ ಪ್ರವಾಸವಾಗಿರಲಿಲ್ಲ ಎಂದು ತಿಳಿಯುತ್ತದೆ. ಅಲ್ಲಿ ಪೂರ್ವ ನಿಶ್ಚಿತವಾಗಿದ್ದುದು ಹೋಗಬೇಕಾದ ಜಾಗವಷ್ಟೇ. ಅಮ್ಮನಿಗೆ ಬರೆದ ಪತ್ರದಲ್ಲಿ ಚೆ, ಹೋಟೆಲು-ಹಾಸ್ಟೆಲಿನಲ್ಲಿ ಉಳಿಯುವ ಪೂರ್ವ ನಿಯೋಜಿತ ಪ್ರವಾಸ ‘ಬೂರ್ಷ್ವಾ’ ಪ್ರವಾಸ; ನಿಜವಾದ ಸಾಹಸಿ ಪ್ರವಾಸಿಗೆ ಅವತ್ತಿನದು ಅವತ್ತೇ ನಿರ್ಧಾರವಾಗಬೇಕು ಎಂದಿದ್ದಾನೆ.

ಪ್ರಯಾಣಕ್ಕೆ, ಚಲನೆಗೆ ಏನೋ ಚೈತನ್ಯವಿದೆ. ಭೂತ-ಭವಿಷ್ಯಗಳ ನಡುವಿನ ವರ್ತಮಾನದಲ್ಲಿರುವ ನಮ್ಮನ್ನು ನಾವು ಹೆಚ್ಚೆಚ್ಚು ಅರಿಯಲು ಅದು ಸಹಾಯ ಮಾಡುತ್ತದೆ. ಈ ಪ್ರಯಾಣ ಅವನನ್ನು ಅವ ನೋಡಿಕೊಳ್ಳುವ ರೀತಿಯನ್ನು, ಲ್ಯಾಟಿನ್ ಅಮೆರಿಕವನ್ನು ಅವ ಅರ್ಥಮಾಡಿಕೊಂಡ ಬಗೆಯನ್ನು ಬದಲಾಯಿಸಿತು. ಹಲವು ದೇಶಗಳ ಸುತ್ತಿ ಚೆ ಮತ್ತು ಗ್ರೆನಾಡೋ ಜನರನ್ನು ಬಾಧಿಸುತ್ತಿರುವ ಕಾಯಿಲೆ ಮತ್ತದರ ಮೂಲ ಏನೆಂದು ಅರ್ಥ ಮಾಡಿಕೊಂಡರು. ತನ್ನ ಟಿಪ್ಪಣಿಗಳಲ್ಲಿ ಚೆ ಚಿಲಿಯ ಗಣಿ ಕಾರ್ಮಿಕರ ದುಸ್ಥಿತಿ ಬಗ್ಗೆ ಬರೆದಿದ್ದಾನೆ. ದಾರಿಯಲ್ಲಿ ಭೇಟಿಯಾದ ನಿರ್ಗತಿಕ ಕಮ್ಯುನಿಸ್ಟ್ ದಂಪತಿಗಳಿಗಾಗಿ ಮರುಗಿದ್ದಾನೆ. ಮಚುಪಿಚುವಿನಲ್ಲಿ ಮೂಲನಿವಾಸಿಗಳನ್ನು ವಸಾಹತುಶಾಹಿಗಳು ಹೇಗೆ ಹೊಸಕಿ ಹಾಕಿದರು ಎಂದು ಗುರುತಿಸಿದ್ದಾನೆ. ಕುಷ್ಠರೋಗ ಕಾಲನಿಗಳಲ್ಲಿ ರೋಗಿಗಳು ತೋರಿಸಿದ ಪ್ರೀತಿಗೆ ಮನಸೋತು ‘ಅತಿ ಹೆಚ್ಚು ವಿಶ್ವಾಸ ಮತ್ತು ಸಹಭಾಗಿತ್ವ ನಿಸ್ಸಹಾಯಕರು ಮತ್ತು ಏಕಾಂಗಿಗಳ ನಡುವೆಯೇ ಒದಗಿಬರುತ್ತದೆ’ ಎನ್ನುತ್ತಾನೆ.

ಲ್ಯಾಟಿನ್ ಅಮೆರಿಕದ ದೇಶಗಳು ಗಣಿ, ಕಾಡು, ಖನಿಜ ಮತ್ತಿತರ ಸಂಪನ್ಮೂಲಗಳ ಹೊರತಾಗಿಯೂ ಹಿಂದುಳಿದಿರುವುದಕ್ಕೆ ಒಂದಾನೊಂದು ಕಾಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗೂ ವರ್ತಮಾನದ ನವವಸಾಹತುಶಾಹಿಗಳ ಬಂಡವಾಳ ಹಿತಾಸಕ್ತಿಯೇ ಪ್ರಮುಖ ಕಾರಣ ಎಂದು ಅವನಿಗೆ ಈ ಅಲೆದಾಟದಲ್ಲಿ ಅರ್ಥವಾಯಿತು. ಲ್ಯಾಟಿನ್ ಅಮೆರಿಕದ ಮೇಲೆ ಉತ್ತರ ಅಮೆರಿಕಾದ ಹಿಡಿತ, ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಯಾಣ ಜಾಗೃತಿ ಮೂಡಿಸಿತು. ದುಡ್ಡಿಲ್ಲ ಎಂದು ಚಿಕಿತ್ಸೆ ಪಡೆಯಲಾಗದ ಮಗು, ನಿರಂತರ ಹಸಿವು ಹುಟ್ಟಿಸುವ ಮೂಢನಂಬಿಕೆಗಳು, ಅಪಘಾತದಿಂದ ಮಗ ಸತ್ತದ್ದನ್ನೂ ವಿಧಿಯೆಂದು ಭಾವಿಸುವ ತಂದೆಯ ಅಸಹಾಯಕತೆ ಅವನನ್ನು ಅಲುಗಾಡಿಸಿದವು. ಈ ಪ್ರಯಾಣದ ಕೊನೆಯಲ್ಲಿ ಅವನಿಗೆ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಉತ್ತರ ಅಖಂಡ ಲ್ಯಾಟಿನ್ ಅಮೆರಿಕಾ, ಶ್ರಮಿಕರ ಅಂತರರಾಷ್ಟ್ರೀಯತೆ ಹಾಗೂ ವಿಶ್ವಕ್ರಾಂತಿಯಲ್ಲಿದೆ ಎಂದು ಮನದಟ್ಟಾಯಿತು. ಗಡಿಯಿಲ್ಲದ ಏಕೀಕೃತ ಹಿಸ್ಪ್ಯಾನಿಕ್ ಅಮೆರಿಕವನ್ನು ಕಲ್ಪಿಸಿಕೊಂಡು ಇದನ್ನೇ ಮುಂದೆಯೂ ಪ್ರತಿಪಾದಿಸುತ್ತ ಬಂದ.

ಈ ಟಿಪ್ಪಣಿಗಳು ರಸ್ತೆ ಮೇಲಿರುವ ಸೂಕ್ಷ್ಮ ಮನಸು ಸುತ್ತಮುತ್ತಲನ್ನು ಹೇಗೆ ಗ್ರಹಿಸಬಹುದು ಹಾಗೂ ದೇಶ ತಿರುಗಿದ ಅನುಭವ ಒಬ್ಬ ಹೋರಾಟಗಾರನನ್ನು ಹೇಗೆ ರೂಪಿಸಬಹುದು ಎಂಬ ಸುಳಿವು ನೀಡುತ್ತವೆ. ಜೊತೆಗೆ ಮುಂದಿನ ಊಟ ಎಲ್ಲಿ, ಡ್ರಿಂಕ್ಸ್ ಎಲ್ಲಿ ಸಿಕ್ಕೀತು ಎಂಬ ಯೋಚನೆಗಳೇ ಪ್ರಧಾನವಾಗಿದ್ದ ಹುಡುಗಾಟಿಕೆಯ ಮನಸ್ಸು ಒಂಭತ್ತು ತಿಂಗಳ ತಿರುಗಾಟದ ಕೊನೆಗೆ ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ತನ್ನ ಹುಟ್ಟುಹಬ್ಬದ ಕೇಕನ್ನು ಹಂಚಿಕೊಳ್ಳುವಷ್ಟು ಬದಲಾಗಿದ್ದು ಹೇಗೆ ಎಂದೂ ತಿಳಿಸುತ್ತವೆ.

ಚೆ ಬರವಣಿಗೆ ವಿಪುಲ. ಗೆರಿಲ್ಲಾ ಯುದ್ಧ ನಿರತನಾಗಿದ್ದಾಗಲೂ ತಪ್ಪುಒಪ್ಪುಗಳ ದಿನಚರಿಯನ್ನು ಕಟ್ಟುನಿಟ್ಟಾಗಿ ಬರೆದವ. ಅವನ ಟಿಪ್ಪಣಿಗಳನ್ನು ಅದರ ಸಾಹಿತ್ಯಿಕ ಮೌಲ್ಯ, ಬರವಣಿಗೆಯ ಶೈಲಿ ಮತ್ತಿತರ ಮಾಪನಗಳ ಜೊತೆಗೇ ಸೂಕ್ಷ್ಮ ಮನದ ನನ್ನ ವೃತ್ತಿ ಬಾಂಧವ ಮೆಡಿಸಿನ್ ಕಿಟ್ ಎತ್ತಿಟ್ಟು ಶಸ್ತ್ರಾಸ್ತ್ರ ಸಂಗ್ರಹ ಕೈಗೆತ್ತಿಕೊಳ್ಳುವಂತೆ ಯಾವುದು ಪ್ರೇರೇಪಿಸಿತು ಎಂದು ತಿಳಿಯಲು ಓದಬೇಕಿದೆ ಎಂದು ಭಾವಿಸುತ್ತೇನೆ.

ಮೆಟಮಾರ್ಫಸಿಸ್



ಚೆಗೆವಾರ ಸಶಸ್ತ್ರ ಹೋರಾಟ ಪ್ರತಿಪಾದಿಸಿದವ. ಕ್ರಾಂತಿಗೆ ಇನ್ನೊಂದು ಹೆಸರು. ಸಮಾನತೆಗೆ ತುಡಿವ ಹೋರಾಟಗಾರರ ಗುರು. ಆದರೆ ಬಂದೂಕುಧಾರಿಯಾಗಿದ್ದರೂ ಅವನು ರಕ್ತ ಪಿಪಾಸುವಲ್ಲ. ಅವನ ಭಾವತೀವ್ರತೆ ಅವನನ್ನು ತೀವ್ರಗಾಮಿಯನ್ನಾಗಿ ಮಾಡಿತು. ದುಡುಕುತನ ಧೈರ್ಯವಾಗಿ ಕ್ರಾಂತಿಕಾರಿ ಗುಣ ರೂಪುಗೊಂಡಿತು. ಅವನಿದ್ದ ಕಾಲಮಾನ, ಅಲೆದಾಟ, ದೊರೆತ ಸಂಪರ್ಕಗಳು ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ಕನಸುವಂತೆ ಮಾಡಿದವು. ಅದನ್ನು ಸಾಕಾರಗೊಳಿಸಲೋ ಎಂಬಂತೆ ಗಡಿ ಮರೆತು ದೇಶ ಸುತ್ತಿದ. ಆದರೆ ತನ್ನನ್ನು, ತನ್ನ ಕನಸುಗಳನ್ನು ಲೋಕ ಅರ್ಥಮಾಡಿಕೊಳ್ಳುತ್ತಿಲ್ಲ ಎನಿಸಿದಾಗ; ಅದರ ಸಾಕಾರಕ್ಕೆ ಸಶಸ್ತ್ರ ಮಾರ್ಗವಲ್ಲದೆ ಬೇರೆ ದಾರಿಯಿಲ್ಲ ಎನಿಸಿದಾಗ ಇಂಜೆಕ್ಷನ್ ಕೊಡುವ ಕೈ ಬಂದೂಕು ಹಿಡಿಯಿತು.

ಇಲ್ಲಿ ಒಂದು ಕುತೂಹಲಕರ ವಿಷಯ ಗಮನಿಸಬೇಕು: ಗಾಂಧಿ-ಅಂಬೇಡ್ಕರರಂಥ, ಮಂಡೇಲಾ-ಟುಟು-ಮಾರ್ಟಿನ್ ಲೂಥರ್ ಕಿಂಗ್ ಅವರಂಥ, ಸೂಕಿ-ವಂಗಾರಿ ಮಥಾಯಿಯಂತಹ ಅಹಿಂಸಾತ್ಮಕ ಹೋರಾಟಗಾರರನ್ನು ದಕ್ಷಿಣ ಅಮೆರಿಕಾ ಸೃಷ್ಟಿಸಲಿಲ್ಲ ಏಕೆ?

ಈ ಪ್ರಶ್ನೆಗೆ ಉತ್ತರ ಪಡೆಯಲು ಅಂದಿನ ದಕ್ಷಿಣ ಅಮೆರಿಕಾದ ಸಾಮಾಜಿಕ/ಆರ್ಥಿಕ ಪರಿಸ್ಥಿತಿ ಮತ್ತು ಎದುರಾಳಿಯ ಮನಸ್ಥಿತಿ ತಿಳಿಯಬೇಕು. ಆಗ ವೈದ್ಯನೊಬ್ಬ ಮಾರ್ಕ್ಸಿಸ್ಟ್ ಹ್ಯೂಮನಿಸ್ಟ್ ಹೋರಾಟಗಾರನಾಗುವಂತೆ; ಫಿಡೆಲ್ ಕ್ಯಾಸ್ಟ್ರೋನಂಥ ಮುತ್ಸದ್ದಿ-ಅಹಿಂಸಾವಾದಿ ಕೊನೆಗೆ ಕಮ್ಯುನಿಸ್ಟ್ ರಾಜಕಾರಣಿಯಾಗುವಂತೆ ಮಾಡಿದ್ದು ಯಾವುದೆಂದು ಅರ್ಥವಾಗುತ್ತದೆ.

ಕೊಲಂಬಸ್ ಅಮೆರಿಕಾ ಖಂಡವನ್ನು ಅನ್ವೇಷಿಸಿದ ಮೇಲೆ ಉತ್ತರ ಅಮೆರಿಕಾ ಬ್ರಿಟಿಷ್ ವಸಾಹತುಶಾಹಿಗಳಿಂದ, ಅವರ ಗುಲಾಮರಿಂದ ತುಂಬಿಹೋದರೆ; ಜನವಸತಿಯಿದ್ದ ಸಂಪದ್ಭರಿತ ದಕ್ಷಿಣ ಅಮೆರಿಕಾವನ್ನು ಯೂರೋಪಿನ ವಸಾಹತುಶಾಹಿ ದೇಶಗಳು ಪಾಲು ಮಾಡಿಕೊಂಡವು. ಪೂರ್ವದಲ್ಲಿ ಪೋರ್ಚುಗಲ್, ಪಶ್ಚಿಮದಲ್ಲಿ ಸ್ಪೇನ್, ಮೇಲ್ಭಾಗದಲ್ಲಿ ಫ್ರೆಂಚ್ ಕಾಲನಿಗಳಾಗಿ ನೆಲವನ್ನು ಹಂಚಿಕೊಳ್ಳಲಾಯಿತು. ಅಲ್ಲಿನ ಮೂಲ ನಿವಾಸಿಗಳಾದ ಅಜಟೆಕ್ ಮತ್ತು ಇಂಕಾಗಳು ನೇಪಥ್ಯಕ್ಕೆ ಸರಿದರು. ಆ ಹೊತ್ತಿಗೆ ವಸಾಹತುಶಾಹಿ ಬ್ರಿಟಿಷ್ ರಾಜಸತ್ತೆಯಿಂದ ಉತ್ತರ ಅಮೆರಿಕಾ ಬೇರೆಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವಾಗಿ, ಹೊಸ ಮಹತ್ವಾಕಾಂಕ್ಷಿ ದೇಶವಾಗಿ ಉದಯವಾಗಿತ್ತು. ಯೂರೋಪಿನ ವಸಾಹತುಶಾಹಿಗಳಿಂದ ಆಕ್ರಮಣಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕದ ಮೇಲೆ ಉತ್ತರ ಅಮೆರಿಕದ ಬಂಡವಾಳಗಾರರ ಕಣ್ಣುಬಿತ್ತು. ಅಲ್ಲಿನ ಅತ್ಯಮೂಲ್ಯ ಖನಿಜ ಸಂಪತ್ತು, ಫಲವತ್ತಾದ ನೆಲ ಬಂಡವಾಳಗಾರರನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ಬಹುರಾಷ್ಟ್ರೀಯ ವ್ಯಾಪಾರೀ-ಗಣಿ-ಕೈಗಾರಿಕಾ ಕಂಪನಿಗಳು ಆ ನೆಲವನ್ನು ಹಾಗೂ ಜನರನ್ನು ಕಂಡುಕೇಳರಿಯದ ಶೋಷಣೆಗೆ ದೂಡಿದವು. ಅಮೆರಿಕಾ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೆರಿಕಾದ ನೆಲ-ಜಲ-ಜನರನ್ನು ತನ್ನ ಕಚ್ಛಾವಸ್ತುಗಳಂತೆ, ಗ್ರಾಹಕರಂತೆ, ಉತ್ಪಾದಿಸುವ ಕೆಲಸಗಾರರಂತೆ ನೋಡಿತು. ಯೂರೋಪಿನ ವಸಾಹತುಶಾಹಿಗಳ ಪ್ರಾಬಲ್ಯ ಕಡಿಮೆಯಾಗಿ ಸ್ವತಂತ್ರ ದೇಶಗಳು ಉದಯವಾದಾಗ ಅಮೆರಿಕದ ವಾಣಿಜ್ಯ ಹಿತಾಸಕ್ತಿ ಅದೆಲ್ಲದರಲ್ಲೂ ಕೈಯಾಡಿಸುತ್ತ ಹೋಯಿತು.

ವ್ಯಾಪಾರೀ ಹಿತಾಸಕ್ತಿ ಹೇಗೆ ಒಂದು ಸ್ವಾಯತ್ತ ದೇಶದ ಆಂತರಿಕ ವಿಷಯಗಳ ಮೇಲೆ ಹಿಡಿತ ಸಾಧಿಸುತ್ತದೆ ಎಂದು ತಿಳಿಯಲು ಯುನೈಟೆಡ್ ಫ್ರುಟ್ ಕಂಪನಿ (ಯುಫ್ಕೊ) ಉದಾಹರಣೆ ಒಂದೇ ಸಾಕು. ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆದ ಹಣ್ಣನ್ನು - ಮುಖ್ಯವಾಗಿ ಬಾಳೆಯ ಹಣ್ಣನ್ನು ಕೊಂಡು ಯೂರೋಪ್ ಮತ್ತು ಉತ್ತರ ಅಮೆರಿಕ ಸೇರಿದಂತೆ ಬೇರೆ ದೇಶಗಳಿಗೆ ಮಾರಾಟ ಮಾಡುವುದು ಈ ಕಂಪನಿಯ ವ್ಯವಹಾರವಾಗಿತ್ತು. ೧೮೯೯ರಲ್ಲಿ ಶುರುವಾದ ಅಮೆರಿಕದ ಈ ಹಣ್ಣಿನ ಕಂಪನಿ ಬರಬರುತ್ತ ವಿಸ್ತಾರಗೊಂಡು ಅದಕ್ಕೆ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವಂತಾಯಿತು. ಲ್ಯಾಟಿನ್ ಅಮೆರಿಕದ ಸಣ್ಣದೊಡ್ಡ ದೇಶಗಳ ಬಹುಪಾಲು ಭೂಮಿಯ ಮೇಲೆ ಒಡೆತನದ ಹಕ್ಕು ಪಡೆದು, ರೈತರು ಕಂಪನಿ ಹೇಳಿದ ಬೆಳೆಯನ್ನೇ ಬೆಳೆಯುವಂತೆ - ಅದರಲ್ಲೂ ಬಾಳೆಯಹಣ್ಣನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವಂತೆ; ತಮ್ಮ ಸಾಂಪ್ರದಾಯಿಕ ಕೃಷಿ ಕೈಬಿಡುವಂತೆ; ಬೆಳೆದಿದ್ದನ್ನು ಕಂಪನಿಗೇ ಮಾರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿತು. ತನಗೆ ಪ್ರತಿಸ್ಪರ್ಧಿಗಳಾಗಿದ್ದ ೩೩ ಹಣ್ಣು ಮಾರಾಟಗಾರ ಕಂಪನಿಗಳು ತಂತಮ್ಮ ಕಂಪನಿಯನ್ನು ಯುಫ್ಕೊಗೆ ವಹಿಸಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಸಿತು. ತಮಗೆ ತೆರಿಗೆ ರಿಯಾಯ್ತಿಗಳನ್ನು ಪಡೆದು; ಅದನ್ನು ಕೊಡಬಲ್ಲ ಸರ್ಕಾರ ಬರಲು ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತ ಯುನೈಟೆಡ್ ಫ್ರುಟ್ ಕಂಪನಿ ಒಂದು ಹಂತದಲ್ಲಿ ಮಧ್ಯ ಅಮೆರಿಕಾದ ಅತಿದೊಡ್ಡ ಭೂಮಾಲೀಕನೆನಿಸಿಕೊಂಡಿತು. ಪ್ರತಿ ದೇಶದಲ್ಲೂ ಲಕ್ಷಾಂತರ ಎಕರೆ ಭೂಮಿ ಕಂಪನಿಯ ಒಡೆತನದಲ್ಲಿತ್ತು. ಅದರ ಏಕಸ್ವಾಮ್ಯವಿರುವ ಪ್ರದೇಶಗಳನ್ನು ‘ಬನಾನಾ ರಿಪಬ್ಲಿಕ್’ಗಳೆಂದು ಕರೆಯಲಾಯ್ತು. ಈ ಹೊಸ ವಸಾಹತುಶಾಹಿ ೧೯೦೧ರಲ್ಲಿ ಗ್ವಾಟೆಮಾಲಾದಲ್ಲಿ ಪೋಸ್ಟಲ್ ಸರ್ವೀಸ್ ಶುರುಮಾಡಿತು. ೧೯೧೩ರಲ್ಲಿ ಟ್ರಾಪಿಕಲ್ ರೇಡಿಯೋ ಅಂಡ್ ಟೆಲಿಗ್ರಾಫ್ ಕಂಪನಿ ಶುರುಮಾಡಿತು. ವ್ಯಾಪಾರೀ ಹಡಗು ಸಂಚಾರ ವ್ಯವಸ್ಥೆ ಶುರುಮಾಡಿತು. ೧೯೨೮ರಲ್ಲಿ ಕಾರ್ಮಿಕರ ಮುಷ್ಕರವಾದಾಗ ನಡೆದ ಗೋಲಿಬಾರಿನಲ್ಲಿ ಅಂದಾಜು ೨೦೦೦ ಕೆಲಸಗಾರರ ಹತ್ಯೆಯಾಯಿತು. ೧೯೩೦ರ ವೇಳೆಗೆ ಅದು ಅತಿ ದೊಡ್ಡ ಉದ್ಯೋಗದಾತನಾಯಿತು. ಕ್ಯೂಬಾದ ಸಕ್ಕರೆ ಮಿಲ್‌ಗಳನ್ನೂ, ಉಳಿದ ದೇಶಗಳ ಹಣ್ಣು ಮತ್ತು ಕೃಷಿ ಉತ್ಪನ್ನಗಳನ್ನೂ ನಿಯಂತ್ರಿಸುವ ಮಟ್ಟಕ್ಕೆ ಹೋಯಿತು. ಬಾಳೆಹಣ್ಣಿನ ಕಂಪನಿ ಎದುರು ಸಣ್ಣಪುಟ್ಟ ರೈತರು, ಅವರ ಬೆಳೆಗಳು, ದರ, ಅವಕಾಶ ಎಲ್ಲ ನೆಲಕಚ್ಚಿದವು.

ನಿರುದ್ಯೋಗ, ಬಡತನ, ಹಸಿವು, ಕಾಯಿಲೆ, ದಬ್ಬಾಳಿಕೆಗಳು ಮನುಷ್ಯನನ್ನು ದಂಗೆಯೇಳಲು ಪ್ರೇರೇಪಿಸುತ್ತವೆ. ಆ ಕಾಲಮಾನದ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಒಂದೆಡೆ ಗಣಿ ಕೆಲಸಗಾರರ ದುಸ್ಥಿತಿ, ಕಡಿಮೆ ವೇತನ, ಬಡತನ, ಹಸಿವು, ನಿರುದ್ಯೋಗವಿದ್ದರೆ ಇನ್ನೊಂದೆಡೆ ರೈತರನ್ನು ಯುಫ್ಕೋ ಸುಲಿಯಿತು. ಇವೆಲ್ಲವೂ ನವವಸಾಹತುಶಾಹಿಗಳ ವಿರುದ್ಧ ಸಂಘಟನೆ, ಹೋರಾಟ ಶುರುವಾಗಲು ಕಾರಣವಾಯಿತು. ಕಮ್ಯುನಿಸಂ ಎಂದು ಕರೆಯದೇ ವರ್ಗ ಹೋರಾಟ ಶುರುವಾಯಿತು.

ಕೆಲವೆಡೆ ಚುನಾಯಿತ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದವು. ಅವು ಭೂ ಸುಧಾರಣೆಯನ್ನು ಮೊದಲ ಆದ್ಯತೆಯನ್ನಾಗಿ ತೆಗೆದುಕೊಂಡು ಜನರಿಗೆ ಭೂಮಿ ಹಂಚುವುದನ್ನು ಮುಖ್ಯ ಕಾರ್ಯಕ್ರಮವಾಗಿ ಮಾಡಿಕೊಂಡವು. ಗಣಿ, ಬ್ಯಾಂಕು, ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿದವು. ಇಂಥ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮೊದಲು ಪೆಟ್ಟು ಕೊಟ್ಟಿದ್ದು ಬಾಳೆಹಣ್ಣು ಕಂಪನಿ ಮತ್ತು ಅದರಂಥ ವ್ಯಾಪಾರಿ ಮಾಲೀಕರಿಗೆ. ಆ ಬಂಡವಾಳಗಾರ ಹಿತಾಸಕ್ತಿಗಳು ಸುಮ್ಮನೆ ಕೂರಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವರ್ತಿಸುವವರೇ ಅಧಿಕಾರದ ಮುಖ್ಯಸ್ಥಾನಗಳಲ್ಲಿರುವಂತೆ ನೋಡಿಕೊಂಡವು. ಸರ್ಕಾರಗಳನ್ನು ಉರುಳಿಸಿದವು. ಕೈಗೊಂಬೆಗಳನ್ನು ಕೂರಿಸಿದವು. ಜನಪರ ನಾಯಕರನ್ನು ಅಪಘಾತಗಳಲ್ಲಿ ಕೊಂದವು. ಕ್ಯೂಬಾ, ಗ್ವಾಟೆಮಾಲಾ, ಬೊಲಿವಿಯಾ ದೇಶಗಳ ಹೋರಾಟಕ್ಕೆ ಇದೇ ಪರಿಸ್ಥಿತಿ ಕಾರಣವಾಯಿತು.

ಸರ್ವಾಧಿಕಾರವೇ ಆಡಳಿತ ವಿಧಾನವಾದ, ಪ್ರಜಾಪ್ರಭುತ್ವವಾದಿ ಸಂವಾದ-ಮಾತುಕತೆ-ಕ್ರಿಯೆಗಳಿಗೆ ಅವಕಾಶವೇ ಇರದ ಲ್ಯಾಟಿನ್ ಅಮೆರಿಕಾದಲ್ಲಿ ಚೆಗೆವಾರನ ಸಮಕಾಲೀನರು, ಸಮಾನ ಮನಸ್ಕರು ಮತ್ತು ನ್ಯಾಯಯುತ ಬದುಕಿಗಾಗಿ ಹೋರಾಡುವವರ ಎದುರು ಬಹಳ ಆಯ್ಕೆಗಳಿರಲಿಲ್ಲ. ಅಂದಿನ ಸಮಾಜವೇ ಮೊದಲು ಶಸ್ತ್ರಾಸ್ತ್ರಗಳನ್ನು ನೆಚ್ಚದಿದ್ದ ಚೆಗೆವಾರ ಹಾಗೂ ಕ್ಯಾಸ್ಟ್ರೋ ಅಂಥವರು ಅಹಿಂಸಾವಾದಿಗಳಾಗಿ ಉಳಿಯದಂತೆ ಮಾಡಿತು. ಅವರು ಸಶಸ್ತ್ರ ಹೋರಾಟಗಾರರಾದ ಪ್ರಕ್ರಿಯೆ ಮರಿಹುಳ ಕಂಬಳಿಹುಳವಾದಷ್ಟೇ ಸಹಜವಾಗಿ ನಡೆಯಿತು.

ಕಟ್ಟಿದ ಮುಷ್ಟಿ, ಕೊನೆಯುಸಿರಿರುವವರೆಗೆ..


ಎರಡು ವಿದ್ಯಾರ್ಥಿ ಜೀವನದ ಪ್ರವಾಸದ ನಂತರ ವೈದ್ಯಕೀಯ ಡಿಗ್ರಿ ಪಡೆದ ಚೆ ಆ ಹೊತ್ತಿಗಾಗಲೇ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸ್ಪಷ್ಟ ನಿಲುವು ಹೊಂದಿದ್ದ. ತಿರುಗಾಟದಲ್ಲಿ ಏರ್ಪಟ್ಟ ಸಂಪರ್ಕಗಳಿಂದ ಸಂಘರ್ಷದ ಪಾಲುದಾರನಾದ.

೧೯೫೩ರಲ್ಲಿ ಗ್ವಾಟೆಮಾಲಾದಲ್ಲಿದ್ದಾಗ ಚಿಕ್ಕಮ್ಮನಿಗೆ ಬರೆದ ಪತ್ರದಲ್ಲಿ ತಾನು ಯುನೈಟೆಡ್ ಫ್ರುಟ್ ಕಂಪನಿಯ ಬಾಳೆಹಣ್ಣಿನ ಸಾಮ್ರಾಜ್ಯದಲ್ಲಿ ಪ್ರಯಾಣ ಮಾಡುತ್ತಿರುವುದಾಗಿ, ಅಲ್ಲಿ ‘ಕ್ಯಾಪಿಟಲಿಸ್ಟ್ ಆಕ್ಟೋಪಸ್’ಗಳು ನೆಲವನ್ನು, ರೈತರನ್ನು ಹಿಡಿದಿಟ್ಟುಕೊಂಡಿವೆ ಎಂದು ವರ್ಣಿಸಿದ್ದ. ಅವನು ಅಲ್ಲಿದ್ದಾಗಲೇ ಚುನಾಯಿತ ಸರ್ಕಾರದ ಪ್ರತಿನಿಧಿಯಾಗಿ ಭೂಸುಧಾರಣೆ ತರಲು ಯತ್ನಿಸುತ್ತಿದ್ದ ಜೇಕಬೊ ಆರ್ಬೆಂಜ್ ಸರ್ಕಾರವನ್ನು ಅಮೆರಿಕದ ಸಿಐಎ ಬೆಂಬಲಿತ ಕಾರ್ಲೋಸ್ ಕ್ಯಾಸ್ಟಿಲೊ ಕ್ಷಿಪ್ರಕ್ರಾಂತಿ ನಡೆಸಿ ಉರುಳಿಸಿದ. ಯುನೈಟೆಡ್ ಫ್ರುಟ್ ಕಂಪನಿಯ ೨.೨೫ ಲಕ್ಷ ಎಕರೆಯನ್ನು ಭೂ ಸುಧಾರಣೆಗಾಗಿ ಅದಾಗಲೇ ಆರ್ಬೆಂಜ್ ಸರ್ಕಾರ ವಹಿಸಿಕೊಂಡಿತ್ತು. ಅದರಿಂದ ಕಂಗಾಲಾದ ಕಂಪನಿ ತನ್ನ ವ್ಯಾಪಾರೀ ಹಿತಾಸಕ್ತಿ ಕಾಯುವ ಸರ್ಕಾರವನ್ನು ಸ್ಥಾಪಿಸಲು ಸಿಐಎ ಜೊತೆ ಸೇರಿ ಸಂಚು ನಡೆಸಿತು. ಆ ಸಂಚಿನ ವಿರುದ್ಧ ಅಲ್ಲಿ ದಂಗೆಯೇಳಲು ಸೂಕ್ತ ವಾತಾವರಣವಿತ್ತು. ಆಗ ಆರ್ಬೆಂಜೊ ಬೆಂಬಲಿಗರನ್ನು ಚೆ ಸೇರಿದ. ಮುಂದೆ ಅವ ಮದುವೆಯಾದ ಹಿಲ್ಡಾ ಗಾಡಿಯಾ ಪರಿಚಯವಾದದ್ದು ಅಲ್ಲೇ. ಕ್ಷಿಪ್ರಕ್ರಾಂತಿ ಕೂಡಲೇ ನಡೆಯಬೇಕೆಂಬುದು ಚೆ ಅಭಿಪ್ರಾಯವಾಗಿದ್ದರೂ ಉಳಿದವರು ಅವನಷ್ಟು ವೇಗವಾಗಿ ಯೋಚಿಸಲು ವಿಫಲರಾದರು. ಜೀವಕ್ಕೆ ಕುತ್ತು ಬರುವ ಸಾಧ್ಯತೆ ಎದುರಾಗಿ ಚೆ ಗ್ವಾಟೆಮಾಲಾ ತೊರೆದು ಮೆಕ್ಸಿಕೋಗೆ ಹೋದ.

ಅಮೆರಿಕ ಕುರಿತ ಅವನ ಅಭಿಪ್ರಾಯ ಗ್ವಾಟೆಮಾಲಾದಲ್ಲಿ ಗಟ್ಟಿಯಾಯಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಸರ್ಕಾರಗಳನ್ನೂ ಅದು ಬುಡಮೇಲು ಮಾಡುತ್ತದೆ ಎಂದು ತಿಳಿಯಿತು. ‘ಅಮೆರಿಕಕ್ಕೆ ಭೂ ಸುಧಾರಣೆ ಮಾತು ಬೇಡ, ಅವರು ಕುಡಿಯುವ ನೀರಿನ ಸಮಸ್ಯೆ ಕುರಿತು ಬೇಕಾದಷ್ಟು ಮಾತಾಡುತ್ತಾರೆ. ಬಹುಶಃ ಶೌಚ ಕ್ರಾಂತಿಗೆ ಜಗತ್ತನ್ನು ಸಿದ್ಧಮಾಡುತ್ತಿದ್ದಾರೆ’ ಎಂದು ಛೇಡಿಸಿದ. ಸಶಸ್ತ್ರ ಹೋರಾಟ, ಸಶಸ್ತ್ರ ಜನಸಮುದಾಯ ಮಾತ್ರ ನವವಸಾಹತುಶಾಹಿಗಳ ಹಗಲು ದರೋಡೆಯನ್ನು ತಡೆಗಟ್ಟಬಲ್ಲದು ಎಂಬ ಭಾವನೆ ಧೃಢವಾಯಿತು.

೧೯೫೫ರಲ್ಲಿ ಮೆಕ್ಸಿಕೋನಲ್ಲಿ ಕ್ಯೂಬಾದ ದೇಶಭ್ರಷ್ಟ ಕ್ರಾಂತಿಕಾರಿಗಳ ಪರಿಚಯವಾಯಿತು. ಫಿಡೆಲ್ ಕ್ಯಾಸ್ಟ್ರೋ ಮತ್ತು ಸಂಗಡಿಗರು ಸರ್ವಾಧಿಕಾರಿ ಬ್ಯಾಟಿಸ್ಟಾನ ಸರ್ಕಾರ ಕಿತ್ತೊಗೆಯಲು ಜನ ಹೋರಾಟ ಸಂಘಟಿಸತೊಡಗಿದ್ದರು. ಅವರ ಯೋಜನೆಯನ್ನು ಸಂಪೂರ್ಣ ಬೆಂಬಲಿಸಿದ ಚೆ ಕ್ಯೂಬಾ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ತಕ್ಷಣ ನಿರ್ಧರಿಸಿದ. ಗೆರಿಲ್ಲಾ ತರಬೇತಿ ಪಡೆದ. ಹೊಸಬರನ್ನು ನೇಮಿಸಿಕೊಳ್ಳಲು ನೆರವಾಗಿ ಅವರಿಗೆ ತರಬೇತಿ, ತಿಳುವಳಿಕೆ ಕೊಟ್ಟ. ಶಸ್ತ್ರಾಸ್ತ್ರ ಫ್ಯಾಕ್ಟರಿಯನ್ನು ಶುರುಮಾಡುವಲ್ಲಿ ಅವನ ಪಾತ್ರ ಹಿರಿದು. ಅವರಿಗೆಲ್ಲ ವೈದ್ಯಕೀಯ ನೆರವನ್ನು ಕಲ್ಪಿಸುತ್ತಲೇ ಕ್ಷಿಪ್ರದಾಳಿ ನಡೆಸುವ ತುಕಡಿಯ ಕಮ್ಯಾಂಡರ್ ಆದ. ಆ ತಂಡದಲ್ಲಿ ವೈದ್ಯನಾಗಿ ಹೋಗಿದ್ದ ಚೆ ಮೊದಲ ಯತ್ನ ಸೋಲಿನಲ್ಲಿ ಕೊನೆಗೊಳ್ಳುವುದನ್ನು ನೋಡಬೇಕಾಯಿತು.

೧೯೫೯ರಲ್ಲಿ ತುಂಬ ಯೋಜಿತವಾಗಿ ನಡೆಸಿದ ಎರಡನೆಯ ಹೋರಾಟದಲ್ಲಿ ಕ್ಯಾಸ್ಟ್ರೋ ಬೆಂಬಲಿಗರಿಗೆ ಗೆಲುವಾಯಿತು. ಕ್ರಾಂತಿಕಾರಿಗಳ ನಾಯಕ ಕ್ಯಾಸ್ಟ್ರೋ ದೇಶದ ಅಧ್ಯಕ್ಷನಾದ. ಆಗ ಚೆಗೆ ಕ್ಯೂಬಾ ಪೌರತ್ವ ನೀಡಿ ಹಲವು ಜವಾಬ್ದಾರಿಗಳನ್ನು ವಹಿಸಲಾಯಿತು. ಕ್ಯೂಬಾ ಸರ್ಕಾರದ ಪ್ರತಿನಿಧಿಯಾಗಿ ಹಲವು ದೇಶಗಳಿಗೆ ಭೇಟಿಕೊಟ್ಟ. ಅಮೆರಿಕವನ್ನು ವಿರೋಧಿಸುತ್ತಿದ್ದ ಚೆ ಸೋವಿಯತ್ ಯೂನಿಯನ್ ಜೊತೆ ಕ್ಯೂಬಾ ಉತ್ತಮ ಸಂಬಂಧ ಹೊಂದಲಿ ಎಂದು ಆಶಿಸಿದ. ಅಮೆರಿಕ ಆರ್ಥಿಕ ದಿಗ್ಭಂಧನ ಹೇರಿದ್ದರಿಂದ ಈ ಕ್ರಮ ಅನಿವಾರ್ಯವಾಗಿತ್ತು. ಹಲವು ದೇಶಗಳ ಜೊತೆ ವ್ಯಾಪಾರ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿದ. ಕ್ಯೂಬಾ ನ್ಯಾಷನಲ್ ಬ್ಯಾಂಕಿನ ಅಧ್ಯಕ್ಷನಾದ, ಕೈಗಾರಿಕಾ ಮಂತ್ರಿಯಾದ, ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷನಾದ. ಭುಸುಧಾರಣೆಯತ್ತ ವಿಶೇಷ ಗಮನ ಕೊಟ್ಟ. ಅದಕ್ಕಾಗಿ ಒಂದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಯಿತು. ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಹಂಚಲಾಯಿತು. ಅಮೆರಿಕ ಕಂಪನಿಗಳ ವಶದಲ್ಲಿದ್ದ ೪.೮ ಲಕ್ಷ ಎಕರೆ ವಶಪಡಿಸಿಕೊಳ್ಳಲಾಯಿತು. ಜೊತೆಗೆ ಕೈಗಾರಿಕೆ, ಬ್ಯಾಂಕ್ ಹಾಗೂ ವ್ಯಾಪಾರ ವಹಿವಾಟು ರಾಷ್ಟ್ರೀಕರಣಗೊಂಡಿತು. ಉನ್ನತ ಶಿಕ್ಷಣದಲ್ಲಿ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಯ್ತು. ಶಿಕ್ಷಣದ ಕಡೆ ಗಮನ ಕೊಟ್ಟು ೧೯೬೧ನ್ನು ‘ಶಿಕ್ಷಣ ವರ್ಷ’ ಎಂದು ಘೋಷಿಸಲಾಯ್ತು. ಹೀಗೆ ಹಲವು ಹುದ್ದೆ, ಅಧಿಕಾರ ವಹಿಸಿಕೊಂಡ ಚೆ ದಣಿವರಿಯದೆ ಕೆಲಸ ಮಾಡಿದ.

೧೯೬೪ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಚೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ. ‘ಚರ್ಮದ ಬಣ್ಣದ ಕಾರಣವಾಗಿ ತಮ್ಮದೇ ಮಕ್ಕಳಿಗೆ ತಾರತಮ್ಯ ತೋರಿಸಿ ಕೊಲ್ಲುವವರು; ಕರಿಯರ ಕೊಲೆಗಾರರನ್ನು ಶಿಕ್ಷಿಸದೆ ರಕ್ಷಿಸುವವರು; ಸ್ವತಂತ್ರ ಮನುಷ್ಯರಾಗಲು  ನ್ಯಾಯಯುತ ಹಕ್ಕು ಪ್ರತಿಪಾದಿಸುವ ಕರಿಯರನ್ನು ದಮನಿಸುವವರು ಬೇರೆ ದೇಶಗಳ ಸ್ವಾತಂತ್ರ್ಯ ರಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದ. ವರ್ಣಭೇಧವನ್ನು ತೀವ್ರವಾಗಿ ಖಂಡಿಸಿ ಅದನ್ನು ಕೊನೆಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲೇಬೇಕು ಎಂದು ಹೇಳಿದ.

ತೀಕ್ಷ್ಣವಾದ ಹಾಗೂ ಸ್ಪಷ್ಟವಾದ ಮಾತುಗಳಲ್ಲಿ ಸೂಕ್ತ ವಾದ ಮಂಡಿಸುತ್ತಿದ್ದ ಕಾರಣ ಚೆ ತೃತೀಯ ಜಗತ್ತಿನ ರಾಷ್ಟ್ರಗಳ ಪ್ರತಿನಿಧಿಯಂತೆ ಮಾತನಾಡತೊಡಗಿದ. ಜೊತೆಗೆ ಕ್ರಾಂತಿ ಎಲ್ಲೆಲ್ಲೂ ಸಂಭವಿಸಬೇಕು, ಹಲವು ವಿಯೆಟ್ನಾಂಗಳು ಹುಟ್ಟಬೇಕು ಎನ್ನತೊಡಗಿದ. ಸಮಾನತೆಯ ಮಾತು ಕೇಳಿದೊಡನೆ ಬಂಡವಾಳಶಾಹಿಗಳಿಗೆ ಎದೆ ನಡುಕ ಹುಟ್ಟುತ್ತದೆ. ಎಂದೇ ಚೆಯ ಪ್ರಾಣ ತೆಗೆವ ಹಲವು ಪ್ರಯತ್ನಗಳು ನಡೆದವು.

ಬರಬರುತ್ತ ಅವನಿಗೆ ಸೋವಿಯತ್ ಯೂನಿಯನ್‌ನಲ್ಲಿ ಮಾರ್ಕ್ಸ್ ಇಲ್ಲ, ಕಮ್ಯುನಿಸಮ್ಮೂ ಇಲ್ಲ ಎನಿಸತೊಡಗಿತು. ಆಲ್ಜೀರಿಯಾದ ಒಂದು ಸಮ್ಮೇಳನದಲ್ಲಿ ಬಹಿರಂಗವಾಗಿಯೇ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಎರಡನ್ನೂ ಒಂದೇ ಉಸಿರಿನಲ್ಲಿ ಖಂಡಿಸಿದ. ಉತ್ತರ ಗೋಳದ ಪೂರ್ವ-ಪಶ್ಚಿಮದಲ್ಲಿರುವ ಈ ಎರಡು ದೇಶಗಳು ದಕ್ಷಿಣ ಗೋಳಾರ್ಧವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆಯೆಂದು ದೂರಿದ. ಈ ವಿಮರ್ಶೆ ಕ್ಯೂಬಾಕ್ಕೆ ಬಿಸಿ ತುಪ್ಪವಾಯಿತು. ಆಗ ಸೋವಿಯತ್ ಮತ್ತು ಚೀನಾ ಸಂಬಂಧಗಳು ಬಿಗುವಾಗಿದ್ದವು. ಈ ಸಮ್ಮೇಳನದ ಮಾತುಗಳೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವನ ಕೊನೆಯ ಭಾಷಣ. ನಂತರ ಅವನು ಕ್ಯೂಬಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಆತನ ಇರುವಿಕೆ ಬಗ್ಗೆ ಪ್ರಶ್ನೆಗಳೆದ್ದವು. ಕೊನೆಗೊಂದು ದಿನ ಕ್ಯಾಸ್ಟ್ರೋ ಚೆಯ ವಿದಾಯ ಪತ್ರ ಓದಿದ. ಚೆ ಕ್ಯೂಬಾದಲ್ಲಿ ತಾನು ವಹಿಸಿಕೊಂಡಿದ್ದ ಎಲ್ಲ ಜವಾಬ್ದಾರಿಯನ್ನೂ ತ್ಯಜಿಸಿ ಪೌರತ್ವವನ್ನೂ ಬಿಟ್ಟುಕೊಟ್ಟಿದ್ದ. ತಾನು ಕ್ರಾಂತಿಯನ್ನು ಹರಡಲು ಇತರ ದೇಶಗಳಲ್ಲೂ ಕೆಲಸ ಮಾಡುವೆನೆಂದು ತಿಳಿಸಿ ಕಾಂಗೋಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಲು ಹೋದ. ಆದರೆ ಅಲ್ಲಿ ಅವನ ಪ್ರಯತ್ನ ವಿಫಲವಾಯಿತು. ನಂತರ ಗುಟ್ಟಾಗಿ ಕ್ಯೂಬಾಗೆ ಬಂದು ಬೊಲಿವಿಯಾಗೆ ಹೋದ. ಅಲ್ಲಿ ಕ್ರಾಂತಿಕಾರರನ್ನು ಸೇರಿಕೊಂಡಾಗ ಅವನ ಪಡೆ ಇಬ್ಭಾಗವಾಯಿತು. ಕೇವಲ ೧೭ ಜನರೊಂದಿಗೆ ಉಳಿದ ಚೆಯನ್ನು ಅಕ್ಟೋಬರ್ ೮, ೧೯೬೭ರಲ್ಲಿ ಸೆರೆ ಹಿಡಿಯಲಾಯ್ತು. ಮರುದಿನ ವಾಷಿಂಗ್ಟನ್ನಿನ ಮಾರ್ಗದರ್ಶನದಂತೆ ಹತ್ಯೆ ಮಾಡಲಾಯಿತು. ಬೆರಳಚ್ಚು ಪರೀಕ್ಷೆಗಾಗಿ ಅವನ ಕೈ ಕತ್ತರಿಸಿ ಅರ್ಜೆಂಟೀನಾಗೆ ಕಳಿಸಿ, ಉಳಿದ ದೇಹಗಳ ಜೊತೆ ಎಲ್ಲೆಂದು ತಿಳಿಸದೇ ಹೂಳಲಾಯಿತು.

೧೯೯೭ರಲ್ಲಿ ಗುರುತಿಸದ ಗೋರಿಯಲ್ಲಿ ಬೊಲಿವಿಯಾದಲ್ಲಿದ್ದ ಅವನ ದೇಹವನ್ನು ಹೊರತೆಗೆದು ಕ್ಯೂಬಾಕ್ಕೆ ತಂದು ಸಂತ ಕ್ಲಾರಾದಲ್ಲಿ ಸ್ಮಾರಕ, ಸಮಾಧಿ ನಿರ್ಮಿಸಲಾಯಿತು.

***

ಚೆ ಅಸ್ತಮಾ ಬಾಧಿತ. ಅವನ ಉಸಿರಿನಷ್ಟೇ ಉಸಿರನ್ನು ಬಿಗಿಹಿಡಿಯುವ ಅಸ್ತಮಾ ಕೂಡಾ ಅವನ ಸಂಗಾತಿಯಾಗಿತ್ತು. ಅವನ ವ್ಯಕ್ತಿತ್ವದ ನಿರಂತರ ಚಡಪಡಿಕೆಗೆ ಉಸಿರುಗಟ್ಟಿದ ಅನುಭವ ನೀಡುವ ಕ್ರಾನಿಕ್ ಅಸ್ತಮಾವೂ ಒಂದು ಕಾರಣವಾಗಿತ್ತೇ?

ಈಗಲೂ ಚೆಯನ್ನು ಬಾಧಿಸಿದ ಅಸ್ತಮಾ ಇದೆ. ಆಗವನು ಅಸ್ತಮಾಗೆ ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ ಬೇರೆ. ಈಗ ನೀಡುವ ಚಿಕಿತ್ಸೆ ಬೇರೆ. ಆಗ ಅವ ಚಿಕಿತ್ಸೆ ನೀಡಿದ ಕುಷ್ಠರೋಗ ಈಗಲೂ ಇದೆ. ಆದರೆ ಅದರ ಪ್ರಮಾಣ, ಚಿಕಿತ್ಸೆಯ ರೀತಿ ಎಲ್ಲ ಈಗ ಬೇರೆಯಾಗಿದೆ. ಈಗ ರೋಗಿಗಳನ್ನು ಬೇರ್ಪಡಿಸಿ ಕಾಲನಿಗಳಲ್ಲಿ ಒಂದೆಡೆ ಇಟ್ಟು ಚಿಕಿತ್ಸೆ ಕೊಡುವುದಿಲ್ಲ. ಬದಲಾಗಿ ಅವರವರು ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲವೂ ಹಾಗೆಯೇ. ಸಮಸ್ಯೆ ಆಗಲೂ ಇತ್ತು, ಈಗಲೂ ಇದೆ. ಪರಿಹಾರ ಆಯಾ ಕಾಲದೇಶಗಳಿಗೆ ತಕ್ಕ ಸ್ವರೂಪ ಪಡೆದುಕೊಳ್ಳಬೇಕು ಅಷ್ಟೇ. ಎಂದೇ ಚಿಕಿತ್ಸಾ ರೂಪಿ ಎನ್ನುವುದಕ್ಕಿಂತ ನಮ್ಮ ರೋಗಗಳ ಗುರುತಿಸುವ ಡಯಾಗ್ನೋಸ್ಟಿಕ್ ಟೂಲ್ ಆಗಿ ಅವ ಹೆಚ್ಚು ಮುಖ್ಯವಾಗುತ್ತಾನೆ. ಅವನ ಸ್ಪಿರಿಟ್ ತರುಣರಲ್ಲಿ ವ್ಯವಸ್ಥೆಯ ಜಡತನದ ವಿರುದ್ಧ ಬಂಡೇಳುವ ಗುಣ ಹುಟ್ಟಿಸುವ ಉತ್ತೇಜಕವಾಗಬೇಕು. ಅವನ ಜೀವನ, ಧ್ಯೇಯ, ಚಿಂತನೆಗಳು ಇತಿಹಾಸದಿಂದ ಕಲಿವ ತಪ್ಪುಒಪ್ಪುಗಳ ಪಾಠವಾಗಿ ಮುಖ್ಯವಾಗಬೇಕು.

ನೆರೂಡನಿಗೆ ಅವ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ: ‘ನಾವೆಲ್ಲ ಯುದ್ಧ ವಿರೋಧಿಗಳೇ. ಆದರೆ ಒಮ್ಮೆ ಅದರಲ್ಲಿ ಭಾಗಿಯಾದೆವು ಎಂದರೆ ಮುಗಿಯಿತು, ಅದನ್ನು ಬಿಟ್ಟಿರಲಿಕ್ಕೇ ಆಗುವುದಿಲ್ಲ. ಮತ್ತೆಮತ್ತೆ ಅದು ನಮ್ಮನ್ನು ಸೆಳೆದುಕೊಳ್ಳುತ್ತದೆ.’ ಇವತ್ತು ಶಾಂತಿಗಾಗಿ ಯುದ್ಧ ನಡೆಯುತ್ತಿದೆ. ಧರ್ಮಕ್ಕಾಗಿ ಯುದ್ಧ ನಡೆಯುತ್ತಿದೆ. ವೈಯಕ್ತಿಕ ಕಾರಣಗಳಿಗಾಗಿ, ಗಡಿಗಾಗಿ ಯುದ್ಧ ನಡೆಯುತ್ತಿದೆ. ನಾನು ನಂಬಿರುವುದನ್ನೇ ಎಲ್ಲರೂ ನಂಬುವಂತೆ ಮಾಡಲು ಯುದ್ಧ ಏರ್ಪಡುತ್ತಿದೆ. ಶಸ್ತ್ರಾಸ್ತ್ರ ತಯಾರಿಸುವ ದೇಶಗಳು ವ್ಯಾಪಾರ ಹೆಚ್ಚಿಸಿಕೊಳ್ಳಲು ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ. ಹೀಗಿರುವಾಗ ಹಿಂಸೆಯನ್ನು ಇವತ್ತಿನ ವಿಶ್ವಗ್ರಾಮ ಅರ್ಥಿಕತೆಯಲ್ಲಿ ಬೇರೆಯೇ ಆಗಿ ಗ್ರಹಿಸಬೇಕಿದೆ. ಜನರ ವಿಮೋಚನೆಯ ಹೋರಾಟದಲ್ಲಿ ಜಾಗೃತಿಯ ಉಪಕರಣಗಳನ್ನಾಗಿ ಯಾವ್ಯಾವುದನ್ನು ಸುರಕ್ಷಿತವಾಗಿ ಬಳಸಿಕೊಳ್ಳಬಹುದು ಎಂದು ವಿವೇಚಿಸುವ ಕಾಲ ಬಂದಿದೆ. ಹೆಚ್ಚುಕಡಿಮೆ ನೂರು ವರ್ಷಗಳ ಹಿಂದೆ ಲ್ಯಾಟಿನ್ ಅಮೆರಿಕದಲ್ಲಿದ್ದ ಪರಿಸ್ಥಿತಿ ಇಲ್ಲಿ ಈಗ ಇದೆ. ಪ್ರಜಾಪ್ರಭುತ್ವವು ಭಿನ್ನಮತ, ಅಸಮ್ಮತಿಯನ್ನು ಹಣಿಯಲು ನಾನಾ ಹತಾರಗಳನ್ನು ಬಳಸಿಕೊಳ್ಳುತ್ತಿದೆ. ಉದಾರವಾದ, ಮುಕ್ತ ಆರ್ಥಿಕತೆಯ ಆಕ್ಟೋಪಸ್ ಹಿಡಿತದಲ್ಲಿ ಜನ ಸಮುದಾಯ ನಲುಗುತ್ತಿದೆ. ಹೀಗಿರುವಾಗ ಪರ್ಯಾಯ ಮಾರ್ಗಗಳ ಶೋಧಿಸುವವರು ಅದರ ಸಾಧಕ-ಬಾಧಕಗಳ ಜೊತೆಗೇ ತಿಳಿದಿರಲೇಬೇಕಾದ ಒಂದು ಮಾರ್ಗ ಚೆಗೆವಾರನದು ಎನಿಸುತ್ತಿದೆ.

ಶಸ್ತ್ರ ಹಿಡಿದ ಸರ್ವಾಧಿಕಾರಿಗಳನ್ನೂ, ಧಾರ್ಮಿಕ ಮೂಲಭೂತವಾದಿ ಜಿಹಾದಿಗಳನ್ನೂ ಚೆಯೊಡನಿಟ್ಟು ಹೋಲಿಸುವ ‘ಅಹಿಂಸಾವಾದಿ’ ಪ್ರತಿಪಾದನೆಗಳು ನಮ್ಮೆದುರು ಇವೆ. ಆದರೆ ಚೆ ರಕ್ತ ಪಿಪಾಸುವಲ್ಲ. ಅವನ ದಾರಿಯನ್ನು ವಿಮರ್ಶಿಸುತ್ತಲೇ ಆ ಹಾದಿಯ ಪ್ರಧಾನ ಆಶಯ ಏನಾಗಿತ್ತು ಎನ್ನುವುದನ್ನು ಗಮನಿಸುವುದೂ ನಮ್ಮ ಜವಾಬ್ದಾರಿಯಾಗಿದೆ. ಎಂದೇ ಪೂರ್ವಯೋಜಿತ ವ್ಯಕ್ತಿ ಚಿತ್ರದಾಚೆಗೆ, ಅಡಿ ಟಿಪ್ಪಣಿಗಳ ವಿವರಗಳಾಚೆಗೆ ಚೇಯನ್ನು ಅವನು ಮಂಡಿಸಿಕೊಂಡ ಹಾಗೆಯೇ ಓದುಗ ತಿಳಿಯಲಿ; ಒಂದು ವಾದದವರಿಗೆ, ಒಂದು ವಿಚಾರ ಧಾರೆಯ ಹೋರಾಟಗಾರರಿಗಷ್ಟೇ ಅವನು ಸೀಮಿತವಾಗದಿರಲಿ ಎಂಬ ಉದ್ದೇಶದಿಂದ ಈ ಟಿಪ್ಪಣಿಗಳನ್ನು ಕನ್ನಡಿಗರಿಗೆ ತಲುಪಿಸುತ್ತಿದ್ದೇವೆ.

ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರಿ’ ಕೆಲವೆಡೆ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಮತ್ತೆ ಕೆಲವೆಡೆ ಅವರು ಎಲ್ಲಿ ಹತ್ತಿ ಎಲ್ಲಿ ಇಳಿದರು ಎಂದು ತಿಳಿಯದೇ ಗೊಂದಲಗೊಳಿಸುತ್ತದೆ. ಕೆಲ ಐತಿಹಾಸಿಕ ಸ್ಥಳದ ವಿವರಗಳೂ ಅಸ್ಪಷ್ಟ ಹಾಗೂ ಅಪೂರ್ಣವಾಗಿವೆ. ಬಹುಶಃ ಸ್ಪ್ಯಾನಿಶ್ ಹೆಸರುಗಳಿರುವ ಆ ಸ್ಥಳಗಳ ಕುರಿತ ನಮ್ಮ ಅಪರಿಚಿತತೆ ಅದಕ್ಕೆ ಕಾರಣವಿರಬಹುದು. ಆದರೆ ವಿವರಗಳು ಪೇಲವ ಅನಿಸುವ ಹೊತ್ತಿಗೆ ಮಿಂಚಿನಂತೆ ಎದೆಯಾಳದ ಒಂದೆರೆಡು ಸಾಲುಗಳನ್ನು ಹೊಳೆಯಿಸಿಬಿಡುವ ಚೆ ನಿರೂಪಣೆಗೆ ಜೀವ ತುಂಬುತ್ತಾನೆ. ಅವನ ತರುಣ ಹುಮ್ಮಸ್ಸು ಮತ್ತು ಚೈತನ್ಯ ಓದುಗನಲ್ಲೂ ಜೀವ ಸಂಚಲನ ಉಂಟುಮಾಡುತ್ತದೆ. ಅದಕ್ಕೇ ಹುಂಬತನದ ನಡುವೆ ಮಿಂಚುವ ಎದೆಯಾಳದ ಎರಡು ಸಾಲುಗಳಾಗಿ ಚೆ ನಿಮ್ಮ ಮುಂದಿದ್ದಾನೆ..

(ಲಡಾಯಿ ಪ್ರಕಾಶನ ಪ್ರಕಟಿಸಿದ ಚೆಗೆವಾರನ ಮೋಟಾರ್ ಸೈಕಲ್ ಡೈರೀಸ್ ಪುಸ್ತಕದ ಕನ್ನಡಾನುವಾದಕ್ಕೆ 2014ರಲ್ಲಿ ನಾನು ಬರೆದ ಪ್ರವೇಶಿಕೆ)

Thursday 11 June 2020

ಕೋವಿಡ್ - 19 ಲಸಿಕೆ, ಚಿಕಿತ್ಸೆ: ಅವಸರ ಸಲ್ಲದು





ತಾಪಮಾನ ಏರಿದೆಯೆಂದು ನಾನಾ ವಿಧಗಳಲ್ಲಿ ಭೂಮಿ ಹೇಳಿದ್ದು ನಮಗೆ ಕೇಳಿರಲಿಲ್ಲ. ಆದರೆ ಕ್ಷುದ್ರವೆಂದುಕೊಳ್ಳಬಹುದಾದ ಅರೆಜೀವಿ ಕಣವೊಂದು ದೊಡ್ಡಣ್ಣ, ಸಣ್ಣಯ್ಯ ಎನ್ನದೆ ಎಲ್ಲರೂ ಮಂಡಿಯೂರುವಂತೆ ಮಾಡಿರುವಾಗ ನಮ್ಮ ಉಸಿರಾಟದ ಸದ್ದು ನಮಗೇ ಕೇಳುವಷ್ಟು ಗಾಬರಿ ಆವರಿಸಿಕೊಂಡಿದೆ. ನಡೆದು, ಹಸಿದು, ದಣಿದು ರಸ್ತೆಗಳ ತುಂಬಿರುವ ಶ್ರಮಿಕ ಭಾರತ; ಮೊಣಕಾಲೂರಿದಂತೆ ಕಂಡರೂ ಕೊರಳೊತ್ತಿ ಉಸಿರು ಕಟ್ಟಿಸುವ ಅಮೆರಿಕ; ಕೋವಿಡ್ ಸಂಕಷ್ಟ ಮರೆಸಲು ತೋಳೇರಿಸುತ್ತಿರುವ ಚೀನಾ; ದಿಟ್ಟ, ಖಚಿತ ನಿಲುವು ತೆಗೆದುಕೊಳ್ಳಲಾಗದಂತೆ ದುಡ್ಡಿದ್ದವರ ಹಂಗಿಗೊಳಗಾದ ವಿಶ್ವ ಆರೋಗ್ಯ ಸಂಸ್ಥೆ - ಇದನ್ನೆಲ್ಲ ನೋಡುವಾಗ ಇಡಿಯ ವಿಶ್ವ ದೂರದೃಷ್ಟಿಯ ದಾರ್ಶನಿಕ ನಾಯಕತ್ವವಿಲ್ಲದೇ ಸೊರಗಿರುವುದು ಸ್ಪಷ್ಟವಾಗಿದೆ. ಕಂಗೆಡಿಸುವ ವಾಸ್ತವದ ಆಳಗಲಗಳೇ ಇನ್ನೂ ಅಳತೆಗೆ ಸಿಗದಂತಾಗಿರುವಾಗ ಕೋವಿಡ್ ನಂತರದ ಜಗತ್ತು ಹೇಗಿರಬಹುದೆನ್ನುವುದು ನಮ್ಮ ಕಲ್ಪನೆಯ ಆಚೆ ಚಾಚಿಕೊಂಡಿದೆ. ಆದರೆ ಲಾಕ್‌ಡೌನ್ ಆದೆವೆಂದು ಮರುಗುತ್ತಿರುವವರ ಚಿತ್ತ ಎಷ್ಟು ಬೇಗ ಅನ್‌ಲಾಕ್ ಆದೇವೋ, ಎಷ್ಟು ಬೇಗ ಕೋವಿಡ್‌ಗೆ ಔಷಧ, ಲಸಿಕೆ ಕಂಡುಹಿಡಿದೇವೋ ಎನ್ನುವತ್ತ ನೆಟ್ಟಿದೆ. ಇದೇ ಧಾವಂತ ಆರೋಗ್ಯ ಕ್ಷೇತ್ರವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಬಂಡವಾಳ ಜಗತ್ತಿಗೂ ಆವರಿಸಿಬಿಟ್ಟಿದೆ.

ಆದರೆ ಆರೋಗ್ಯ ಸಂಶೋಧನೆ ಎನ್ನುವುದು ಅಡುಗೆಯೆಂಬ ಧ್ಯಾನದ ಹಾಗೆ. ಅಲ್ಲಿ ಅವಸರ, ವಿಳಂಬ ಮತ್ತು ನಿರ್ಲಕ್ಷಗಳಿಗೆ ಕ್ಷಮೆಯೇ ಇಲ್ಲ.

ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಎಂಬ ಮಲೇರಿಯಾ ಸೋಂಕಿಗೆ ಕೊಡುವ ಔಷಧಿಯನ್ನೇ ತೆಗೆದುಕೊಂಡರೆ, ಅದು ಕೋವಿಡ್-೧೯ಗೂ ಫಲಕಾರಿಯಾಗುತ್ತದೆಂದು ‘ಕಂಡು ಹಿಡಿ’ಯಲಾಯಿತು. ಆಸ್ಪತ್ರೆ, ಔಷಧಿಯಂಗಡಿಗಳ ಸ್ಟೋರಿನಲ್ಲಿದ್ದ ಎಚ್‌ಸಿಕ್ಯು ಮಂಗಮಾಯವಾಗಿಬಿಟ್ಟಿತು. ಅಮೆರಿಕವು ತುರ್ತಾಗಿ ಎಚ್‌ಸಿಕ್ಯು ಕಳಿಸುವಂತೆ ಕೇಳಿದಾಗ ಲಾಕ್‌ಡೌನ್ ಸಡಿಲಿಸಿ ಭಾರತ ಕಳಿಸಲೊಪ್ಪಿತು. ಕ್ಲೋರೋಕ್ವಿನ್ ಬಳಸಿದರೆ ಹೃದಯ ಕಾಯಿಲೆಯಿರುವವರಲ್ಲಿ ಮರಣ ಸಂಭವಿಸಬಹುದು ಎಂಬ ಎಚ್ಚರಿಕೆಯ ನಡುವೆ ಹಲವರು ಅದನ್ನು ಸೇವಿಸಿ ಹೃದಯಸ್ಥಂಭನಕ್ಕೊಳಗಾದರು.

ಇದರ ನಡುವೆ ಬ್ರಿಟನ್ನಿನಲ್ಲಿ ನೆಲೆಸಿದ ಇಬ್ಬರು ಭಾರತ ಮೂಲದ ವೈದ್ಯವಿಜ್ಞಾನಿಗಳು ಎಚ್‌ಸಿಕ್ಯು ಕೋವಿಡ್‌ಗೆ ಪರಿಣಾಮಕಾರಿಯಲ್ಲ, ಅಪಾಯಕಾರಿ ಎಂದು ಬ್ರಿಟಿಷ್ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿ ಪ್ರಕಟಿಸಿದರು. ಮತ್ತೊಂದೆಡೆ ಅಧ್ಯಯನ ವಿಧಾನವೇ ಸರಿಯಿಲ್ಲವೆಂದು ಇನ್ನೊಂದು ಗುಂಪು ಅದನ್ನು ಸಂಪೂರ್ಣ ಅಲ್ಲಗಳೆಯಿತು. ಒಬ್ಬರ ಹಿಂದೆ ಔಷಧ ತಯಾರಿಕಾ ಕಂಪನಿಯಿದ್ದರೆ, ಮತ್ತೊಬ್ಬರ ಹಿಂದೆ ಸ್ಯಾನಿಟೈಸರ್‌ಗಳನ್ನು ತಯಾರಿಸುವ ಕಂಪನಿಯಿತ್ತು. ಲೋಕಹಿತಕ್ಕಿಂತ ಬಂಡವಾಳ ಹಿತ, ಪೇಟೆಂಟ್ ಹಿತವೇ ಕ್ರಿಯಾಶೀಲವಾಯಿತು.

ಕೋವಿಡ್ ಲಸಿಕೆಯದು ಮತ್ತೊಂದು ಕತೆ. ಆರೋಗ್ಯವಂತ ವ್ಯಕ್ತಿಗೆ ರೋಗ ಬರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ನೀಡಲಾಗುತ್ತದೆ. ಈಗ ದಿನಕ್ಕೊಂದು ವಿಜ್ಞಾನಿಗಳ ತಂಡ ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಿದ್ಧಗೊಳಿಸಿಯೇಬಿಟ್ಟೆವು ಎನ್ನುತ್ತಿವೆ. ನಮಗೆ ಅವಸರವಿದೆಯೆಂದು ಕೋವಿಡ್‌ಗೆ ಅವಸರವಿದೆಯೆ? ಲಸಿಕೆಯನ್ನು ಫಾಸ್ಟ್‌ಫುಡ್ಡಿನಂತೆ ಫಟಾಫಟ್ ತಯಾರಿಸಬಹುದೇ?

ಖಂಡಿತ ಇಲ್ಲ.

ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡುಹಿಡಿಯುವೆವೋ ಅದನ್ನು ಕೂಲಂಕಶ ಅಧ್ಯಯನಕ್ಕೊಳಪಡಿಸಬೇಕು; ಆಂಟಿಜೆನ್ನುಗಳ ಪಟ್ಟಿ ಮಾಡಿ, ಕಾಯಿಲೆಕಾರಕವಾದದ್ದನ್ನು ಬಿಟ್ಟು ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುವುದನ್ನು ಗುರುತಿಸಬೇಕು; ಆಯ್ದ ಕೆಲವು ಪ್ರಾಣಿಗಳಿಗೆ ಉದ್ದೀಪಕ ಆಂಟಿಜೆನ್ ಕೊಡಬೇಕು; ನಂತರ ಪ್ರಾಣಿಗಳ ರಕ್ತಮಾದರಿ ಸಂಗ್ರಹಿಸಿ ರೋಗಾಣುವಿನ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿವೆಯೇ ಎಂದು ಪರೀಕ್ಷಿಸಬೇಕು; ಪ್ರಾಣಿಯನ್ನು ನಿಜವಾದ ರೋಗಾಣುವಿಗೊಡ್ಡಿ ಸೋಂಕುಂಟುಮಾಡಿ ಕಾಯಿಲೆ ಬರದಂತೆ ರೋಗನಿರೋಧಕ ಶಕ್ತಿ ಬಂದಿದೆಯೇ ಪರಿಶೀಲಿಸಬೇಕು; ಪ್ರಾಣಿಗಳ ಮೇಲಿನ ಪ್ರಯೋಗ ಸಫಲವಾದರೆ ಆರೋಗ್ಯವಂತ ಮನುಷ್ಯರನ್ನು ಆಯ್ದು, ಸಮ್ಮತಿ ಪಡೆದು, ಲಸಿಕೆ ನೀಡಬೇಕು; ಅವರ ರೋಗನಿರೋಧಕ ಶಕ್ತಿ ಹೆಚ್ಚಿತೇ? ರೋಗಾಣುವಿನ ಸಂಪರ್ಕವಾದಾಗ ರೋಗ ಬರದಂತೆ ತಡೆಗಟ್ಟಿತೇ? ರೋಗನಿರೋಧಕ ಶಕ್ತಿ ಎಷ್ಟು ಕಾಲ ಇರುವುದು ಎಂದೆಲ್ಲ ಪರೀಕ್ಷಿಸಬೇಕು; ಸುರಕ್ಷಿತತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳ ಬಗೆಗೆ ವಿಸ್ತೃತ ಕ್ಲಿನಿಕಲ್ ಟ್ರಯಲ್‌ಗಳಾದ ನಂತರ ಮಾರುಕಟ್ಟೆಗೆ ಬಿಡಬೇಕು. ..

ಓಹೋ, ಎಂಥ ದೀರ್ಘ ಪ್ರಕ್ರಿಯೆ ಅಲ್ಲವೆ? ಹೌದು.


ಎಡ್ವರ್ಡ್ ಜೆನ್ನರ್


ಆಲ್ಬರ್ಟ್ ಬ್ರೂಸ್ ಸ್ಯಾಬಿನ್


ಲೂಯಿಸ್ ಪಾಶ್ಚರ್


ವ್ಲದಿಮಿರ್ ಹಾಫ್ಕಿನ್

ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ವ್ಲದಿಮಿರ್ ಹಾಫ್ಕಿನ್, ಆಲ್ಬರ್ಟ್ ಬ್ರೂಸ್ ಸ್ಯಾಬಿನ್ - ಒಬ್ಬರೇ ಇಬ್ಬರೇ? ಒಂದು ಲಸಿಕೆ ಕಂಡುಹಿಡಿಯಲು ಜೀವಿತಾವಧಿಯನ್ನೇ ಸವೆಸಿದವರಿದ್ದಾರೆ. ಸಫಲಗೊಳ್ಳದೇ ಲಯವಾಗಿ ಹೋದವರು ಅಸಂಖ್ಯ ಜನರಿದ್ದಾರೆ. ಇಂದಿನ ವೇಗದ ಕಾಲದಲ್ಲೂ ಒಂದು ಲಸಿಕೆ ತಯಾರಿಗೆ ಕನಿಷ್ಟ ಎರಡು ವರ್ಷ ಬೇಕೇಬೇಕು. ಅದಕ್ಕಿಂತ ಮುನ್ನ ಮಾರುಕಟ್ಟೆಗೆ ಬಂದದ್ದು ಮೌಲಿಕ, ಸುರಕ್ಷಿತ ಆಗಿರಲು ಸಾಧ್ಯವಿಲ್ಲ.

ಆದರೆ ಕೋವಿಡ್-೧೯ ಬಂದು ಆರು ತಿಂಗಳೂ ಆಗಿಲ್ಲ, ಲಸಿಕೆ ಪ್ರಯತ್ನ ಶುರುವಾಗಿ ಮೂರು ತಿಂಗಳಾಗಿಲ್ಲ, ದಿನಕ್ಕೊಂದು ತಂಡ ತಾನಿನ್ನೇನು ವ್ಯಾಕ್ಸೀನ್ ತಯಾರಿಸಿಯೇ ಬಿಟ್ಟೆ ಎನ್ನುತ್ತಿವೆಯಲ್ಲ!

ಇದ್ದಕ್ಕಿದ್ದಂತೆ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವರಸ ಹುಟ್ಟಿಕೊಂಡಿದೆ. ಕಂಡುಕೇಳರಿಯದ ಗಿಡ, ಮೂಲಿಕೆ, ಎಲೆ-ಬೇರು-ತೊಗಟೆ-ಕಷಾಯಗಳನ್ನು ಬಳಸತೊಡಗಿದ್ದಾರೆ. ಆದರೆ ನಿಯಮಿತ ಆಹಾರ, ನಿದ್ರೆ ಮತ್ತು ಶ್ರಮದ ಸರಳ ಬದುಕು ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ಸಂಚಯಗೊಳಿಸೀತೇ ಹೊರತು ಛೂಮಂತ್ರ ಗಾಳಿ ಅಂದಕೂಡಲೇ ದೇಹ ಧೃಢವಾಗಲಾರದು. ನಾಗರಿಕ ಬದುಕಿನ ಎಲ್ಲ ಹಳವಂಡ, ಕೇಡು, ಆಮಿಷ, ಲೋಲುಪತೆಗಳನ್ನು ಅಡಿಯಿಂದ ಮುಡಿಯವರೆಗೆ ಹೊಲಿದುಕೊಂಡ ನಮಗೆ ಅಶಿಸ್ತಿನ ಬದುಕೇ ಹಿತವಾಗಿರುವಾಗ ನಾರುಬೇರುಗಳ ಸಿದ್ಧೌಷಧಗಳು ತಕ್ಷಣದ ಆರೋಗ್ಯ ನೀಡಲಾರವು.

ಮುಕ್ಕಾಲು ಭಾಗ ಸುಶಿಕ್ಷಿತರಿರುವ ಭಾರತದಲ್ಲಿ ಹೀಗಾಯಿತೇಕೆ?

ಸ್ವಾತಂತ್ರ್ಯಾನಂತರ ಎರಡು ದಶಕಗಳ ತನಕ ಹೊಸ ನಾಡು ಕಟ್ಟುವ ಹುಮ್ಮಸದ ಜನರು, ವೈಜ್ಞಾನಿಕ ದೃಷ್ಟಿಕೋನ-ವಿಜ್ಞಾನ ಸಂಶೋಧನೆಗಳನ್ನು ಬಲಪಡಿಸಬೇಕೆನ್ನುವ ನಾಯಕತ್ವ ದೇಶದಲ್ಲಿತ್ತು. ನಂತರ ನಾವು ಅಭಿವೃದ್ಧಿಯ ಮಾತನಾಡಿದೆವು, ಸಾಮಾಜಿಕ ನ್ಯಾಯದ ಮಾತನಾಡಿದೆವು, ಧರ್ಮ-ದೇಗುಲಗಳ ಬಗೆಗೆ ಎಗ್ಗಿಲ್ಲದೆ ಬಡಿದಾಡಿದೆವು. ಆದರೆ ವಿಜ್ಞಾನ, ವೈಜ್ಞಾನಿಕ ಸಂಶೋಧನೆಯ ಬಗೆಗೆ ಚಕಾರವೆತ್ತಲಿಲ್ಲ. ನಿತ್ಯ ಬದುಕಿನ ಲೋಲುಪತೆಗೆ ಪೂರಕವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಕರಣ, ಯಂತ್ರಗಳನ್ನೇನೋ ಕಂಡುಹಿಡಿದೆವು. ಮೂಲವಿಜ್ಞಾನ, ಆರೋಗ್ಯ ವಿಜ್ಞಾನ ನಮ್ಮನ್ನು ಸೆಳೆಯಲಿಲ್ಲ.


ಇದರಿಂದ ನಿಜಕ್ಕೂ ಸೊರಗಿದ್ದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಚರಕ, ಸುಶ್ರುತರಂಥ ಮೇಧಾವಿಗಳನ್ನು ಸಾವಿರಾರು ವರ್ಷ ಮೊದಲೇ ಸೃಷ್ಟಿಸಿದ ಭಾರತವು ನೂರನಲವತ್ತು ಕೋಟಿ ಜನಗಡಣದ ನಡುವೆ ತನಗೆ ಅಗತ್ಯವಿರುವ ಔಷಧ, ಲಸಿಕೆ ತಾನೇ ತಯಾರಿಸಿಕೊಳ್ಳುವ, ತನ್ನ ಕಾಯಿಲೆಗಳಿಗೆ ಕಾರಣ ಹುಡುಕಿ ಔಷಧ ಕಂಡುಹಿಡಿದುಕೊಳ್ಳುವ ಜಾಗತಿಕ ಗುಣಮಟ್ಟದ ಸಂಶೋಧನಾ ತಂಡ ಕಟ್ಟಲು ವಿಫಲವಾಗಿದೆ. ‘ಪುರಾಣ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿಯಿಂದ ಗಣಪನನ್ನು ಸೃಷ್ಟಿಸಿದೆವು, ರಾಮಾಯಣ ಕಾಲದಲ್ಲಿ ಆನೆ ಲದ್ದಿಯಿಂದ ಜೆಟ್ ಫ್ಯುಎಲ್ ತಯಾರಿಸಿ ಪುಷ್ಪಕವಿಮಾನ ಹಾರಿಸಿದ್ದೆವು, ಬರಲಿರುವ ರೋಗಗಳೆಲ್ಲವನ್ನು ಊಹಿಸಿ ಋಷಿಮುನಿಗಳು ಆಗಲೇ ಮಂತ್ರೌಷಧವನ್ನು ಸಂಹಿತೆಗಳಲ್ಲಿ ಬರೆದಿಟ್ಟಿರುವರು’ ಎಂಬಂತಹ ಅಪದ್ಧ, ಅಪಕ್ವ ವಿಚಾರಗಳನ್ನೇ ಹುಸಿಚಿಂತಕರು, ಜನನಾಯಕರು ತಾವೂ ನಂಬಿ, ಜನರನ್ನೂ ಕತ್ತಲಲ್ಲಿಟ್ಟ ಕಾರಣದಿಂದ ಒಂದೆಡೆ ಮೌಢ್ಯವು ಆರೋಗ್ಯ ಸಂಶೋಧನಾ ಕ್ಷೇತ್ರವನ್ನು ಬಡವಾಗಿಸಿದ್ದರೆ ಇನ್ನೊಂದೆಡೆ ಖಾಸಗಿ ಬಂಡವಾಳವು ಅದನ್ನೊಂದು ಉದ್ದಿಮೆಯಾಗಿಸಿದೆ. ಖಾಸಗಿ ಆರೋಗ್ಯ/ಔಷಧ ಸಂಸ್ಥೆಗಳಿಂದ ಅತ್ಯಾಧುನಿಕ, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ನಿಜ. ಆದರೆ ರೋಗಿಗಳು ಲಾಭತರುವ ಗ್ರಾಹಕರಾಗಿ ಮಾರ್ಪಟ್ಟಿದ್ದರಿಂದ ಖಾಸಗಿ ವಲಯದ ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಉದ್ದೇಶ ಕುರಿತು ಅನುಮಾನ ಮೂಡುವಂತಾಗಿದೆ.

ಎಂದೇ ಜನಸರ್ಕಾರಗಳು ಔಷಧ ತಯಾರಿಕೆ, ಸಂಶೋಧನೆ, ರೋಗ ನಿಯಂತ್ರಣ ಕ್ಷೇತ್ರವನ್ನು ಬಂಡವಾಳಿಗರಿಗೆ ಕೈಯೆತ್ತಿ ಕೊಟ್ಟು ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೋಡದೇ, ಈ ನೆಲದ ಬೌದ್ಧಿಕ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬೇಕು. ಜನರ ಜೀವ ಪೊರೆಯುವ ಕೃಷಿ, ಆರೋಗ್ಯ, ಕ್ರೀಡೆ, ಶಿಕ್ಷಣಗಳಿಗೆ ದೇಶದ ಸುರಕ್ಷತೆಗೆ ಕೊಡುವಷ್ಟೇ ಹಣಕಾಸನ್ನು ತೆಗೆದಿರಿಸಿ ಲೋಕಹಿತ ಕಾಪಾಡಬೇಕು. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರೆ ಲಾಭವಿಲ್ಲ ಎಂದರಿತು ಆರೋಗ್ಯ ಸಂಶೋಧನೆಯನ್ನು ಚುರುಕುಗೊಳಿಸಬೇಕು. ಜಾತಿ-ಧರ್ಮ-ಲಾಭ-ನಷ್ಟ ಲೆಕ್ಕಾಚಾರ ಬಿಟ್ಟು ಭವಿಷ್ಯದ ಅಗತ್ಯಗಳನ್ನು ಊಹಿಸಿ ಕಾರ್ಯಪ್ರವೃತ್ತರಾಗುವ ದೂರದೃಷ್ಟಿಯ ಕನಸುಗಾರರು ಜನರನ್ನು ಮುನ್ನಡೆಸುವಂತಾಗಬೇಕು.



Monday 27 April 2020

ಕ್ವಾರಂಟೈನ್: ಗೂಡು ತೂಗ್ಯಾವ ಗಾಳಿಗೆ..



ಅದೆಲ್ಲಿಂದಲೋ ಕಣ್ಣಿಗೆ ಕಾಣಬಾರದಷ್ಟು ಸಣ್ಣ ವೈರಸ್ಸು ಬಂದು, ನಾನೂ ನಿಮ್ಮ ಜೊತೆ ಇರುತ್ತೇನೆಂದು ಗುದ್ದಾಡುತ್ತ, ಉಸಿರು ಕಟ್ಟಿಸುತ್ತ, ಬುದ್ಧಿ ಕಲಿಸುತ್ತ, ಗಾಬರಿಗೊಳಿಸುತ್ತ, ದಿಕ್ಕುದಿಕ್ಕಿಗು ಹರಡಿಹಬ್ಬಿ ನಮ್ಮನ್ನು ದಿಕ್ಕೇಡಿಗಳನ್ನಾಗಿಸಿರುವಾಗ ಹದಿನಾಲ್ಕು ದಿನದ ಮನೆವಾಸಕ್ಕೆ ಕಳಿಸಲ್ಪಡುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ದೂರವಿರಿ, ದೂರವಿಡಿ ಎನ್ನುವ ‘ಕ್ವಾರಂಟೈನ್’ ಪದ ಹೆಚ್ಚೆಚ್ಚು ಕೇಳಿಬರುತ್ತಿದೆ.

ಏನಿದು ಕ್ವಾರಂಟೈನ್?



ರೋಗಿ-ರೋಗಾಣು ಮತ್ತು ಸಮಾಜವನ್ನು ಬೇರ್ಪಡಿಸಿ ದೂರವಿಡುವ ಕ್ರಿಯೆಯನ್ನು ಸೂಚಿಸುವ ಪದ ಕ್ವಾರಂಟೈನ್. ಈ ವೆನೆಷಿಯನ್ ಪದದ ಅರ್ಥ ‘ನಲವತ್ತು’. ಹದಿನಾಲ್ಕನೇ ಶತಮಾನದ ಬ್ಯುಬೋನಿಕ್ ಪ್ಲೇಗಿನ ಸಮಯದಲ್ಲಿ ಇಟಲಿಯ ಬಂದರಿಗೆ ಬೇರೆಡೆಯಿಂದ ಬಂದ ಹಡಗುಗಳನ್ನು ಅದರಲ್ಲಿದ್ದ ಜನರ ಸಮೇತ 40 ದಿನ ಸಮುದ್ರದಲ್ಲೇ ನಿಲ್ಲಿಸಿ ನಂತರ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಹಡಗಿನ ಪ್ರವೇಶ ತಡೆಯುವ ಸೂಚನೆಯಾಗಿ ಈ ಪದ ಮತ್ತು ಕಪ್ಪುಹಳದಿ ಚೌಕಳಿಯ ಬಾವುಟ ಬಳಸಲಾಯಿತು.

ರೋಗಿಗಳನ್ನು ನಿರೋಗಿಗಳಿಂದ ದೂರವಿಡುವ ಕ್ರಮವನ್ನು ಕ್ರಿಸ್ತಪೂರ್ವ ಕಾಲದಿಂದಲೇ ರೂಢಿಸಿಕೊಂಡಿದ್ದೇವೆ. ಬೈಬಲಿನ ಓಲ್ಡ್ ಟೆಸ್ಟ್‌ಮೆಂಟಿನಲ್ಲಿರುವ ಕ್ರಿ. ಪೂ. 5ನೇ ಶತಮಾನದ ಮೂರನೆಯ ತೋರಾದಲ್ಲಿ ‘ಮೈಮೇಲೆ ಗುಳ್ಳೆ ಎದ್ದಿರುವವರನ್ನು ಪುರೋಹಿತರು ಏಳು ದಿನ ಬೇರೆಯಿರಿಸಬೇಕು. ವಾರದ ನಂತರ ಪರೀಕ್ಷಿಸಿ ಗುಳ್ಳೆ ಮಾಯ್ದಿರದಿದ್ದರೆ, ಮತ್ತೆ ಏಳು ದಿನ ಪ್ರತ್ಯೇಕವಾಗಿರಿಸಬೇಕು’ ಎಂದು ಉಲ್ಲೇಖಿಸಲಾಗಿದೆ. ಬರಿಯ ಪ್ರಾರ್ಥನೆ, ಹರಕೆಗಳಷ್ಟೇ ಅಲ್ಲ, ದೈಹಿಕವಾಗಿ ರೋಗಿಯಿಂದ ದೂರ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಮನಗಂಡು 7ನೇ ಶತಮಾನದ ಪ್ರವಾದಿ ಮಹಮ್ಮದರು, 14ನೇ ಶತಮಾನದ ವೈದ್ಯ-ತತ್ತ್ವಶಾಸ್ತ್ರಜ್ಞ-ಖಗೋಳಶಾಸ್ತ್ರಜ್ಞ ಅವಿಸೆನ್ನಾ (ಇಬ್ನ್ ಸಿನಾ) ‘ಕಾಯಿಲೆಯಿರುವವರನ್ನು ಉಳಿದವರಿಂದ ಪ್ರತ್ಯೇಕಿಸಿ’ ಎಂದು ಸ್ಪಷ್ಟವಾಗಿ ಹೇಳಿದರು.

ಆದರೆ ಬೇರೆಯಾಗಿ, ದೂರವಾಗಿ ಇರುವುದು ಮನುಷ್ಯಪ್ರಾಣಿಗೆ ಸಹ್ಯವಲ್ಲ, ಸುಲಭವೂ ಅಲ್ಲ. ರೋಗ-ರೋಗಾಣುವಿನ ಕಾರಣಕ್ಕೆ ತಮ್ಮನ್ನು ಪ್ರತ್ಯೇಕಿಸಿಡುವುದನ್ನು ಯಾರೂ ಖುಷಿಯಿಂದ ಸ್ವೀಕರಿಸುವುದಿಲ್ಲ. ಕ್ವಾರಂಟೈನ್ ಪದಕ್ಕೆ ಇರುವಂತೆಯೇ ಅದರ ಹಿಂದಿನ ಪ್ರತ್ಯೇಕತೆಯ ನೋವಿಗೂ, ಉಲ್ಲಂಘನೆಗೂ ದೀರ್ಘ ಚರಿತ್ರೆಯಿದೆ.

ಮಾನವಚರಿತ್ರೆಯಲ್ಲೇ ಅತಿದೀರ್ಘಕಾಲ, 26 ವರುಷ ಕ್ವಾರಂಟೈನ್‌ಗೆ ಒಳಪಡಿಸಲಾದವಳ ಕತೆ ಹೀಗಿದೆ:



ಚಾರ್ಲ್ಸ್ ವಾರೆನ್ ಎಂಬ ನ್ಯೂಯಾರ್ಕ್ ಬ್ಯಾಂಕರ್ 1906ರಲ್ಲಿ ಸಂಸಾರದೊಂದಿಗೆ ಪ್ರವಾಸಕ್ಕೆ ಹೋದಾಗ ಅಡುಗೆಗಾಗಿ ಮೇರಿ ಮಲೋನ್‌ಳನ್ನು ಕರೆದೊಯ್ದಿದ್ದ. ಸ್ವಲ್ಪ ದಿನದಲ್ಲೇ ವಾರೆನ್ನನಿಗೆ ಟೈಫಾಯ್ಡ್ (ವಿಷಮಶೀತಜ್ವರ) ಬಂತು. ನಂತರ ಅವನ ಹೆಂಡತಿ, ಮಗಳು, ಇಬ್ಬರು ಕೆಲಸದವರು, ತೋಟದ ಮಾಲಿ, ಮತ್ತೊಬ್ಬ ಮಗಳು ಎಲ್ಲರಿಗೂ ಟೈಫಾಯ್ಡ್ ಜ್ವರ ಬರುತ್ತದೆ. ಗಾಬರಿಗೊಂಡ ವಾರೆನ್, ತನ್ನ ಪ್ರವಾಸವನ್ನು ಮೊಟಕುಗೊಳಿಸಿ, ಪಟ್ಟಣದ ಆರೋಗ್ಯ ಇಲಾಖೆಗೆ ಪತ್ರ ಬರೆದು ಈ ಬಗೆಗೆ ತನಿಖೆ ನಡೆಸಬೇಕೆಂದು ಕೋರಿಕೊಳ್ಳುತ್ತಾನೆ. ಅವನಿದ್ದ ಮನೆಯ ಕೆಲಸದವರು, ಆಹಾರ ನೀರು ಸರಬರಾಜಿನವರು, ಅಡುಗೆ ಸಹಾಯಕರು ಎಲ್ಲರ ತಪಾಸಣೆ ನಡೆಯುತ್ತದೆ. ಅಡಿಗೆಯವಳಾಗಿದ್ದ ಮೇರಿಯಿಂದ ಟೈಫಾಯ್ಡ್ ಹರಡಿದ್ದು ಅವಳು ಜ್ವರಪೀಡಿತಳಾಗದಿದ್ದರೂ ರೋಗವಾಹಕಳಾಗಿದ್ದಾಳೆ ಎಂದು ತಿಳಿದುಬರುತ್ತದೆ. ಅವಳನ್ನು ಎಚ್ಚರಿಸಿ, ಕೆಲಸ ಬಿಡಿಸಿ, ಕಳಿಸುತ್ತಾರೆ.

ಅತ್ಯುತ್ತಮ ಬಾಣಸಿಗಳಾಗಿದ್ದ ಅವಳಿಗೆ ಅಡಿಗೆಯಲ್ಲದೆ ಬೇರೆ ಕೆಲಸ ಗೊತ್ತಿರುವುದಿಲ್ಲ. ಬೇರೊಂದು ಮನೆಯಲ್ಲಿ ಅಡುಗೆಯವಳಾಗುತ್ತಾಳೆ. ಅವರಿಗೆ ಜ್ವರ ಬಂದಾಗ ಕೆಲಸ ಬಿಟ್ಟು ಬೇರೆಡೆ ಸೇರುತ್ತಾಳೆ. ಮತ್ತೆರೆಡು ಮನೆಗಳಲ್ಲಿ ಹೀಗೇ. ಮನೆಯವರಿಗೆ ಜ್ವರ ಬಂದಕೂಡಲೇ ಹೇಳದೇಕೇಳದೇ ಬಿಟ್ಟುಹೋಗುತ್ತಿರುತ್ತಾಳೆ. ಅವಳು ಹೋದಲ್ಲೆಲ್ಲ ಜ್ವರವೂ ಹಿಂಬಾಲಿಸುತ್ತಿರುತ್ತದೆ. ಕೊನೆಗೆ ಜಾರ್ಜ್ ಸೋಪರ್ ಎಂಬ ಸ್ಯಾನಿಟೇಷನ್ ಇಂಜಿನಿಯರನನ್ನು ಟೈಫಾಯ್ಡ್ ಹರಡುವಿಕೆಯ ಬಗೆಗೆ ತನಿಖೆ ನಡೆಸಲು ನೇಮಿಸಿದಾಗ ಟೈಫಾಯ್ಡ್ ವಾಹಕರಿಂದ ಹಲವರಿಗೆ ಸೋಂಕು ತಗುಲುತ್ತಿದೆಯೆಂದೂ, ಮೇರಿ ವಾಹಕಳೆಂದೂ ಗುರುತಿಸುತ್ತಾನೆ.

ಮೇರಿ ಮಲೋನ್ ‘ಸಾಲ್ಮೊನೆಲ್ಲ ಟೈಫಿ’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಟೈಫಾಯ್ಡ್ ಜ್ವರದ ವಾಹಕಳಾಗಿದ್ದಳು. ಜ್ವರ ಇರುವವರಲ್ಲಿ ಮತ್ತು ವಾಹಕರ ಮಲದಲ್ಲಿ ಸಾಲ್ಮೊನೆಲ್ಲಾವು ದೇಹದಿಂದ ಹೊರಹೋಗುತ್ತಿರುತ್ತದೆ. ನೊಣಗಳು ಅವನ್ನು ಪರಸರಿಸುತ್ತವೆ. ಶೌಚದ ಬಳಿಕ ಸ್ವಚ್ಛವಾಗಿ ಕೈತೊಳೆಯದ ಅಡುಗೆಯವರು, ವೈಯಕ್ತಿಕ ಶುಚಿತ್ವ ಕಡಿಮೆಯಿರುವವರು ಟೈಫಾಯ್ಡ್‌ಗೆ ತುತ್ತಾಗುತ್ತಾರೆ ಮತ್ತು ಹರಡುತ್ತಾರೆ. ಮೇರಿ ಟೈಫಾಯ್ಡ್ ವಾಹಕಳಾಗಿ ಅಡುಗೆ ಕೆಲಸ ಮಾಡುತ್ತಿದ್ದುದರಿಂದ ಆಹಾರ ಸೋಂಕುಂಟಾಗಿ ಸುಮಾರು ೫೧ ಜನರಿಗೆ ಟೈಫಾಯ್ಡ್ ಹರಡಿದಳೆಂದು, ಮೂವರ ಸಾವಿಗೆ ಕಾರಣಳೆಂದು ಶಂಕಿಸಲಾಗುತ್ತದೆ.

ರಕ್ತ, ಮಲ ತಪಾಸಣೆಗೆ ಅವಳು ಒಪ್ಪದಿದ್ದಾಗ ಬಲವಂತವಾಗಿ ಗೃಹಬಂಧನದಲ್ಲಿರಿಸಲಾಗುತ್ತದೆ. ಜ್ವರವೇ ಬರದೆ ತಾನು ಹೇಗೆ ಟೈಫಾಯ್ಡ್ ಹರಡಲು ಸಾಧ್ಯವೆಂಬುದು ಮೇರಿಯ ವಾದ. ಆಸ್ಪತ್ರೆಯಲ್ಲಿ ಭೇಟಿಮಾಡಿದ ಸೋಪರ್ ಅವಳ ಕುರಿತು ಪುಸ್ತಕ ಬರೆಯುವುದಾಗಿಯೂ, ರಾಜಧನ ಪೂರಾ ಅವಳಿಗೇ ಕೊಡುವುದಾಗಿಯೂ ಮನವೊಲಿಸಲೆತ್ನಿಸುತ್ತಾನೆ. ಆದರೆ ತನಗೊದಗಿದ ಅಪಖ್ಯಾತಿಯಿಂದ ಕುಪಿತಳಾದ ಮೇರಿ ಮನಸ್ಸು ಮಾಡುವುದಿಲ್ಲ. ಎರಡು ವರ್ಷದ ನಂತರ ಷರತ್ತಿನ ಮೇರೆಗೆ ಬಿಡುಗಡೆಯಾಗುತ್ತಾಳೆ. ಅಡುಗೆಯ ಕೆಲಸ ಬಿಡಬೇಕು ಅಥವಾ ಟೈಫಾಯ್ಡ್ ಬ್ಯಾಕ್ಟೀರಿಯಾದ ಅಡಗುತಾಣವಾದ ಪಿತ್ತಕೋಶ (ಗಾಲ್ ಬ್ಲಾಡರ್)ವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆಸಬೇಕೆನ್ನುವುದು ಷರತ್ತು. ಅಡುಗೆ ಕೆಲಸ ಮಾಡುವುದಿಲ್ಲವೆಂದು ಹೇಳಿ ಹೊರಬರುತ್ತಾಳೆ.

ಲಾಂಡ್ರಿ ಕೆಲಸ ಸಿಗುತ್ತದೆ. ಆದರೆ ಅವಳಿಗದು ಇಷ್ಟವಿಲ್ಲ, ಸಂಬಳವೂ ಕಡಿಮೆ. ಕೊನೆಗೆ ತನ್ನ ಹೆಸರು ಮೇರಿ ಬ್ರೌನ್ ಎಂದು ಬದಲಿಸಿಕೊಂಡು ಮತ್ತೆ ಅಡುಗೆಯವಳಾಗಿ ಸೇರುತ್ತಾಳೆ! ಅಲ್ಲಿ ಟೈಫಾಯ್ಡ್ ಶುರುವಾದದ್ದೇ ಕೆಲಸ ಬಿಟ್ಟು ಬೇರೆ ಹೆಸರಿನಿಂದ ಬೇರೆ ಕೆಲಸ ಮಾಡುತ್ತಾಳೆ. ಒಮ್ಮೆ ಟೈಫಾಯ್ಡ್ ಸಾಂಕ್ರಾಮಿಕ ಹಬ್ಬಿದಾಗ ಇವಳು ನ್ಯೂಯಾರ್ಕಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ ಮತ್ತಲ್ಲಿ ೨೫ ಜನರಿಗೆ ಕಾಯಿಲೆ ಬಂದಿರುತ್ತದೆ! ಆಗ ಬಂಧಿಸಲ್ಪಟ್ಟ ಅವಳನ್ನು ೨೩ ದೀರ್ಘ ವರ್ಷಗಳ ಕಾಲ ಸಾಯುವವರೆಗೂ ಕ್ವಾರಂಟೈನಿನಲ್ಲಿ ಇಡಲಾಗುತ್ತದೆ. ದೂರದ್ವೀಪದಲ್ಲಿ ಏಕಾಂಗಿಯಾಗಿ, ಕೊನೆಯ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ, ನ್ಯುಮೋನಿಯಾದಿಂದ ತೀರಿಕೊಳ್ಳುತ್ತಾಳೆ.

ರೋಗವಾಹಕ ವ್ಯಕ್ತಿಗಳನ್ನು (ಕ್ಯಾರಿಯರ‍್ಸ್) ಸಮಾಜದಿಂದ ಬೇರ್ಪಡಿಸಿ ಇಡುವುದು ಕಾಯಿಲೆಯ ದೃಷ್ಟಿಯಿಂದ ಸರಿ. ಆದರೆ ಮನುಷ್ಯ ಜೀವಿಯನ್ನು ಕಾಯಿಲೆಯಿರುವ ಕಾರಣಕ್ಕೆ ಸಮಾಜ ನಡೆಸಿಕೊಳ್ಳುವ ರೀತಿ ಸರಿಯೇ ಎಂಬ ಪ್ರಶ್ನೆಗಳೆದ್ದವು. ಹಾಗಾದರೆ ರೋಗಿಗೆ ಸಾಮಾಜಿಕ ಜವಾಬ್ದಾರಿಗಳಿಲ್ಲವೇ? ಕ್ವಾರಂಟೈನನ್ನು ಒಪ್ಪದಿದ್ದವರಿಗೆ ತಿಳಿಸಿಹೇಳಬಹುದು, ಹಠಮಾರಿಯಾಗಿ ಸಮಾಜವಿರೋಧಿಯಾದರೆ ಸುಮ್ಮನೇ ಬಿಟ್ಟುಬಿಡಬಹುದೇ? ಎಂಬ ಮರುವಾದವೂ ಕೇಳಿಬಂತು. ಅಂದು ನಡೆದ ದೀರ್ಘ ಚರ್ಚೆ, ಆರೋಪ, ಪ್ರತ್ಯೇಕವಾಗಿರಿಸುವಿಕೆಗಳು ಇವತ್ತಿಗೂ ಜೀವಂತವಾಗಿವೆಯೆನ್ನುವುದನ್ನು ಗಮನಿಸಬಹುದು.

ದೈಹಿಕ ದೂರವಷ್ಟೇ ಸಾಕು

ನಮ್ಮ ಪ್ರಾಣ ನಾವು ಉಳಿಸಿಕೊಳ್ಳಬೇಕೆಂದು ಕಲಿತ ಮಾನವೀಯತೆಯ ಪಾಠಗಳನ್ನೆಲ್ಲ ಮರೆತಂತೆ ಕಾಣುತ್ತಿರುವ ಕಾಲದಲ್ಲಿ ಜನರ ಸಣ್ಣತನ, ಅವಕಾಶವಾದಿತನ, ದ್ವೇಷ, ಕೀಳರಿಮೆಗಳೆಲ್ಲ ಹೊರಬರತೊಡಗಿವೆ. ಒಂದಾದಮೇಲೊಂದು ಕೇಡು, ಬಿಕ್ಕಟ್ಟುಗಳು ಬಂದೆರಗಿದರೆ ಮನುಷ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಊಹಿಸಲೂ ಅಸಾಧ್ಯವಾಗಿದೆ. ರೋಗವನ್ನು ದೂರವಿಡುವ ನೆಪದಲ್ಲಿ ರೋಗಿಯನ್ನು, ರೋಗಿಯ ಸಮುದಾಯವನ್ನೇ ಪ್ರತ್ಯೇಕಗೊಳಿಸಿ ದೂಷಿಸುವುದು ಹೆಚ್ಚಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥದೇ ಪ್ರಮಾದಗಳು ಸಂಭವಿಸಿವೆ.

ಹೆಚ್ಚುಕಡಿಮೆ ನಾಲ್ಕು ಶತಮಾನ ಕಾಲ ಯೂರೋಪನ್ನು ಕಾಡಿದ ಬ್ಯುಬೋನಿಕ್ ಪ್ಲೇಗ್ ಕೋಟಿಗಟ್ಟಲೆ ಜೀವಗಳನ್ನು ಬಲಿತೆಗೆದುಕೊಂಡಿತು. ಪ್ಲೇಗ್ ಉತ್ತುಂಗ ತಲುಪತೊಡಗಿದ 1348ರ ಹೊತ್ತಿಗೆ ಕ್ರೈಸ್ತಧರ್ಮವನ್ನು ಹೀನಾಯಗೊಳಿಸಲು ಯಹೂದಿಗಳು ಮಾಡಿದ ತಂತ್ರ ಅದು ಎಂದು ಚರ್ಚು ಭಾವಿಸಿತು. ಕಾಯಿಲೆ ತೀವ್ರಗೊಳಿಸಲು ಯಹೂದಿಗಳು ಬಾವಿಗೆ ವಿಷ ಹಾಕಿದರೆಂದು ಆರೋಪಿಸಿ, ಬಲವಂತದ ತಪ್ಪೊತ್ತಿಗೆಗೆ ಒಳಪಡಿಸಿ, ಅಸಂಖ್ಯ ಜನರನ್ನು ಜೀವಂತ ದಹಿಸಲಾಯಿತು. ಇನ್ನು ಇಟಲಿಯಲ್ಲಿ 1493ರಿಂದ 1785ರತನಕ 121 ಕಾನೂನುಗಳು ಜಾರಿಯಾದವು. ಬಹುಪಾಲು ಕಾನೂನುಗಳು ಅಲೆಮಾರಿ ಜನಾಂಗವಾಗಿದ್ದ ರೋಮಾಗಳಿಂದ ಪ್ಲೇಗ್ ಬಂದಿತೆಂದು ಅವರನ್ನು ಅಂಕೆಯಲ್ಲಿಡಲೆಂದೇ ಸೃಷ್ಟಿಯಾದವು. ಪ್ಲೇಗ್ ನಿಯಂತ್ರಣಕ್ಕೆಂದು ರೋಮಾ ಗಂಡುಹೆಣ್ಣುಗಳು ಊಹಿಸಲಾಗದಷ್ಟು ದಾರುಣ ಹಿಂಸೆಗೆ ಒಳಗಾದರು. ಯೂರೋಪಿನ ಕೆಲವೆಡೆ ನಾಟಿವೈದ್ಯರಿಂದ, ಮಾಟಗಾರರ ತಪ್ಪು ಮಾಟದಿಂದ ಪ್ಲೇಗ್ ಬಂದಿದೆಯೆಂದು 90 ಸಾವಿರ ಜನರನ್ನು ಶಿಕ್ಷಿಸಲಾಯಿತು. ಅವರಲ್ಲಿ ಹೆಚ್ಚಿನವರು ಮಾಟಗಾತಿಯರೇ ಆಗಿದ್ದರು ಮತ್ತು ಅವರು ‘ಒಂಟಿ ಮಹಿಳೆ’ಯರಾಗಿದ್ದರು.





ಕಾಯಿಲೆಗೆ ಹೆಸರಿಡುವಾಗಲೂ ಜನಾಂಗದ್ವೇಷವನ್ನು ಹೊರಗೆಡವಲಾಯಿತು: ಏಷಿಯಾಟಿಕ್ ಕಾಲರಾ (1826), ಏಷಿಯಾಟಿಕ್ ಪ್ಲೇಗ್ (1846), ಏಷಿಯಾಟಿಕ್ ಫ್ಲೂ (1956), ಹಾಂಗ್‌ಕಾಂಗ್ ಫ್ಲು (1965), ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (2012), ಗೇ ರಿಲೇಟೆಡ್ ಇಮ್ಯುನೊಡಿಫಿಷಿಯೆನ್ಸಿ (ಗ್ರಿಡ್- ನಂತರ ಎಚ್ಚೈವಿ, 1985) - ಈ ಹೆಸರುಗಳೇ ಒಂದು ದೇಶ, ಪ್ರದೇಶ, ಸಮುದಾಯದ ಹೆಸರನ್ನು ಕಾಯಿಲೆಗೆ ಇಟ್ಟಿರುವುದನ್ನು ತೋರಿಸುತ್ತವೆ. ವಿಶ್ವ ಆರೋಗ್ಯಸಂಸ್ಥೆ ತಟಸ್ಥ ಆದರೆ ತಾಂತ್ರಿಕ ಹೆಸರುಗಳನ್ನೇ ರೋಗ-ರೋಗಾಣುವಿಗೆ ಇಡಬೇಕೆಂದು ಸೂಚಿಸಿದ ಮೇಲೂ ಕೋವಿಡ್ ಅನ್ನು ‘ಚೈನಾ ವೈರಸ್’, ‘ಕುಂಗ್‌ಫು ಫ್ಲು’ ಎನ್ನುವುದು ಮುಂದುವರೆದಿದೆ. ಭಾರತದಲ್ಲಿದು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ ಕಾಯಿಲೆ ಹರಡುವಿಕೆಯನ್ನು ಒಂದು ಧರ್ಮೀಯರ ತಲೆಗೆ ಕಟ್ಟಿ, ಅವರು ಬೇಕೆಂದೇ ತಪಾಸಣೆ-ಕ್ವಾರಂಟೈನಿಗೆ ಒಳಗಾಗದೇ ರೋಗ ಹರಡುತ್ತಿರುವರೆಂದು ಬಿಂಬಿಸಲಾಗುತ್ತಿದೆ. ಅಪಾಯಕಾರಿ ಹುಸಿ ವೀಡಿಯೋಗಳು ಹರಿದಾಡುತ್ತಿವೆ. ತಮ್ಮೊಳಗಿನ ಆಕ್ರೋಶ, ಅಸಹಾಯಕತೆ, ಭಯ, ಅನಿಶ್ಚಿತತೆಗಳನ್ನು ಜನರು ಲಾಕ್‌ಡೌನ್ ಉಲ್ಲಂಘನೆ, ಕ್ವಾರಂಟೈನ್ ತಪ್ಪಿಸಿಕೊಳ್ಳುವಿಕೆ, ಪರಧರ್ಮ ದ್ವೇಷಗಳ ಮೂಲಕ ತೀರಿಸಿಕೊಳ್ಳುವಂತೆ ಕಂಡುಬರುತ್ತಿದೆ. ಮುಂದೊಂದು ದಿನ ಕೆಮ್ಮುವವರನ್ನು ಹೊಡೆಯುವ, ಹೊರದೂಡುವ ದಿನಗಳು ಬಂದರೂ ಆಶ್ಚರ್ಯವಿಲ್ಲ.

ದೇಹವಿಜ್ಞಾನ ನಮಗೆ ಹೇಳಿತ್ತು: ಕಾಯಿಲೆಗಳು ಯಾವುದೇ ಜಾತಿಮತಧರ್ಮಕುಲ ನೋಡದೆ ಎಲ್ಲರಿಗೂ ಬರುತ್ತವೆ. ರೋಗಾಣುವಿಗೆ ಬೇಕಾದದ್ದು ಒಂದು ಸಜೀವ ದೇಹ, ಮತ್ತದರ ಬಿಸಿ, ಮತ್ತು ಸಂಖ್ಯೆ ವೃದ್ಧಿಸಿಕೊಂಡು ಹೊರಹೋಗಲು ಒಂದು ದಾರಿ ಮಾತ್ರ ಎಂದು. ರೋಗಿಯನ್ನು ನೋಡಿ ಕೈತೊಳೆಯುವುದು ರೋಗಿಗಳಿಗೆ ಮಾಡುವ ಅವಮಾನವೆಂದು ಭಾವಿಸಿದ ಕಾಲವಿತ್ತು. ವಿಯೆನ್ನಾದ ಸೆಮೆಲ್ ವೈಸ್ ಕೈತೊಳೆಯುವುದರ ಮೂಲಕ ಬಾಣಂತಿ ನಂಜು ಕಡಿಮೆ ಮಾಡಬಹುದೆಂದು ಹೇಳಿದಾಗ ಅವನನ್ನು ಆಸ್ಪತ್ರೆಯಿಂದ ವಜಾ ಮಾಡಿದ್ದರು. ಕಾಯಿಲೆಯಿದ್ದರೂ ಲೆಕ್ಕಿಸದೇ ಸೇವೆ ಮಾಡುವುದು ಮೌಲ್ಯ ಎಂದು ಭಾವಿಸಲಾಗಿತ್ತು. ಕುಷ್ಠ, ಕ್ಷಯ ರೋಗಿಗಳ ನೋಡುತ್ತ ತಾವೇ ಲಯವಾದ ಎಷ್ಟೋ ವೈದ್ಯರಿದ್ದರು. ಬರಬರುತ್ತ ದೇಹವಿಜ್ಞಾನವು ರೋಗಾಣುವನ್ನು ಕಂಡು, ಅದನ್ನು ಪ್ರತ್ಯೇಕಿಸಲು ಹೇಳತೊಡಗಿದಮೇಲೆ ರೋಗಿಯನ್ನೇ ರೋಗಾಣುವಿನಂತೆ ಅಮಾನವೀಯವಾಗಿ ಕಾಣುತ್ತಿರುವುದು, ಪ್ರತ್ಯೇಕಿಸುವುದು ಹೆಚ್ಚುತ್ತಿದೆ.

ಲೋಕವೇ ಸಂಕಟಕ್ಕೀಡಾಗಿದೆ. ಈ ಹೊತ್ತು ಮನುಷ್ಯರ ಪ್ರಾಣವುಳಿಸಲು ದೈಹಿಕ ದೂರ ಕಾಪಾಡಿಕೊಳ್ಳಬೇಕೇ ಹೊರತು ಮಾನಸಿಕವಾಗಿ ಒಂದಾಗಿರಬೇಕು. ಅಲ್ಲವೆ?



ಕಾಲವು ಒಮ್ಮೆ ಹಿಂದೆ ಹೋಗುತ್ತಾ, ಒಮ್ಮೆ ಮುಂದೆ ಚಲಿಸುತ್ತಾ, ಹಿಂದುಮುಂದಿನ ನಡುವಿರುವ ನಮಗೆ ಇಂದೇನು ಬೇಕೆಂಬುದನ್ನೇ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇನೋ ಅನಿಸುವಂತೆ ಎಲ್ಲ ನಡೆಯುತ್ತಿದೆ. ಹಳೆಯದನ್ನು ಹೊಸರೊಡನೆ ಕೂಡಿಸಿ ನಾಳೆಗೆ ಕೌದಿ ಹೊಲಿಯುತ್ತಿರುವಾಗ ಬಂದೆರಗಿದ ಕರೋನಾ, ಎಲ್ಲವನ್ನು ಕಿತ್ತೆಳೆಯುತ್ತಿದೆ. ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿ ಬದುಕು ತುಯ್ಯುತ್ತಿರುವಾಗ ಹೊಸಲೋಕವನ್ನು ಹೊಸತಾಗೇ ಕಟ್ಟಿಕೊಳ್ಳಲು ಕಾಲ ಪ್ರಚೋದಿಸುತ್ತಿದೆ.

ಕಾಲವು ಕಳ್ಳಮಾಲನ್ನೂ ಪವಿತ್ರಗೊಳಿಸಿ ಪಿತ್ರಾರ್ಜಿತ ಆಸ್ತಿಯಾಗಿಸಿಬಿಡುತ್ತದೆ. ಹಾಗೆ ಇವತ್ತಿನ ಕೋಮುದ್ವೇಷವೆಂಬ ಕದ್ದ ಮಾಲು ಬರಲಿರುವ ಮೂರ್ನಾಲ್ಕು ತಲೆಮಾರುಗಳ ಪಿತ್ರಾರ್ಜಿತ ಆಸ್ತಿಯಾಗಬಾರದು. ಎಂದೇ ಕಷ್ಟಕಾಲದಲ್ಲೂ ಮೈತ್ರಿಯ ಅನುಭವವಿರುವಂತೆ ನೋಡಿಕೊಳ್ಳೋಣ. ಪ್ರಾಣಭಯದ ದಿನಗಳಲ್ಲೂ ಒಬ್ಬರನ್ನೊಬ್ಬರು ಪರಸ್ಪರತೆಯ ಕನ್ನಡಿಯಲ್ಲಿ ನೋಡಿಕೊಳ್ಳೋಣ. ಹಿತದ ನುಡಿಗಳೆಂಬ ತಂಗಾಳಿಯನ್ನೂ, ಪ್ರೀತಿಯೆಂಬ ಪ್ರಾಣನದಿಯನ್ನೂ ಭವಿಷ್ಯದ ತಲೆಮಾರಿಗೆ ಬಿಟ್ಟುಹೋಗೋಣ.

ವೈರಸ್ಸು ಅಳಿದಮೇಲೂ ನಾವಿರಬೇಕಲ್ಲವೇ? ನಮಗಿರುವುದು ಎರಡೇ ಕಣ್ಣುಗಳಾದರೂ ಕಾಣುವ ಕನಸುಗಳಿಗೆ ಮಿತಿಯಿದೆಯೆ?



(ಎಲ್ಲ ಚಿತ್ರಗಳೂ ಅಂತರ್ಜಾಲದವು)



Sunday 22 March 2020

ಕೋವಿಡ್ - 19 ಕೋಲಾಹಲ





ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು. ಇಣುಕಿ ನೋಡುತ್ತಿದ್ದರು. ಆದರೆ ಈಗ ಬಂದವರು ತಾವು ಕೋವಿಡ್-೧೯ ಪರೀಕ್ಷೆಯಲ್ಲಿ ನೆಗೆಟಿವ್ ಇದ್ದೇವೆಂದು ಪ್ರಮಾಣಪತ್ರ ತೋರಿಸಿದರೂ ಕೇಳದೇ ಆ ಜೋಡಿಯನ್ನು ಅಟ್ಟಾಡಿಸಿ ಬೈದು, ಪೊಲೀಸರ ಕರೆದು, ಆಂಬುಲೆನ್ಸಿನಲ್ಲಿ ಕೂಡಿ ಹಾಕಿ ಊರು ಬಿಟ್ಟೋಡಿಸಿದರು. ಅಷ್ಟೇ ಅಲ್ಲ, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಆ ಜೋಡಿಯ ಭಾವಚಿತ್ರ ಹಂಚಿಕೊಂಡು ಅವರನ್ನು ಯಾರೂ ನಿಮ್ಮ ಊರುಗಳೊಳಗೆ ಬಿಟ್ಟುಕೊಳ್ಳಬೇಡಿ ಎಂದು ಪ್ರಚಾರ ಮಾಡಿದರು.

ಮಂಡ್ಯದ ಹೊರಭಾಗದಲ್ಲಿ ನಾರುಬೇರುಗಳ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಹೊತ್ತು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಬಂದ ಹಕ್ಕಿಪಿಕ್ಕಿ ಸಮುದಾಯದ ಅಲೆಮಾರಿಗಳು ತಮ್ಮ ನೆಲೆಗೆ ವಾಪಸಾದದ್ದೇ ಉಳಿದವರು ಭಯಭೀತರಾದರು. ಹಕ್ಕಿಪಿಕ್ಕಿ ಟೆಂಟುಗಳೊಳಗೆ ಅಲ್ಲೋಲಕಲ್ಲೋಲವಾಯಿತು. ಕೊನೆಗೆ ವಿದೇಶದಿಂದ ಹಿಂದಿರುಗಿದವರಿಗೆ ಬೇರೆ ವ್ಯವಸ್ಥೆ ಮಾಡುವಂತಾಯಿತು.

ಮತ್ತೊಂದೆಡೆ ಭಾರತದ ಹಳ್ಳಿ, ನಗರ, ಕೇರಿಗಳಲ್ಲಿ ಟಿವಿ, ಜಾಲತಾಣಗಳಿಂದ ಕರೋನಾ ಅತಿಸುದ್ದಿಯಿಂದ ಭಯದ ವ್ಯಾಧಿ ಹರಡತೊಡಗಿದೆ. ಹೊರಗೆ ಹೋಗಬೇಡಿ. ಮುಟ್ಟಬೇಡಿ. ಮನೆಗೆ ಕರೆಯಬೇಡಿ. ಕೆಮ್ಮುವವರ ಬಳಿ ನಿಲ್ಲಬೇಡಿ ಎಂಬಿತ್ಯಾದಿ ಬೇಡಗಳ ನಡುವೆ ಆಗಲೇ ವ್ಯಕ್ತಿಗಳ ನಡುವಿರುವ ದೂರ ವಿಸ್ತಾರವಾಗತೊಡಗಿದೆ.

‘ಅಯ್ಯೋ, ತಂಡಿಕೆಮ್ಮ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ರಕ್ತ ಟೆಸ್ಟ್ ಮಾಡಿ ಕಡೆಗೆ ೧೪ ದಿನ ಕ್ವಾಣೇಲಿ ಕೂಡಿ ಹಾಕ್ತಾರಂತೆ’ ಎಂಬ ಹೆದರಿಕೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಕೆಲವರು ಹೆದರಿದರೆ; ತಂತಮ್ಮ ಮನೆಯ ಮದುವೆ, ತೀರ್ಥಯಾತ್ರೆ, ಧಾರ್ಮಿಕ ಕಾರ್ಯಗಳೆಲ್ಲವನ್ನು ರದ್ದು ಮಾಡಿದ್ದಾರೆ ಮತ್ತೆ ಕೆಲವರು. ಶಾಲೆಯೂ ಇಲ್ಲದೆ, ಪರೀಕ್ಷೆಯೂ ಇಲ್ಲದೇ ಪಾಸಾಗಿ ಮುಂದಿನ ತರಗತಿಗೆ ಹೋದ ಮಕ್ಕಳು ಸಮಯ ಕಳೆಯಲು ಹೊಸಹೊಸ ಯೋಜನೆಗಳನ್ನು ಹಾಕತೊಡಗಿವೆ. ‘ಅರೆ, ಎಲ್ಲಾದರೂ ಸಾಧ್ಯವೇ? ಸಾಧ್ಯವೇ ಇಲ್ಲ’ ಎನ್ನುವಂತಹುದೆಲ್ಲ ತಂತಾನೇ ಅನಿವಾರ್ಯವಾಗಿ, ಸಾಧ್ಯವೂ ಆಗಿ ಏರ್‌ಪೋರ್ಟುಗಳು, ಮಾಲುಗಳು, ದೇವಳ-ಆಶ್ರಮ-ಮಠಗಳು, ಹೋಟೆಲು ಬೀಚುಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಗುಡಿಸಲು-ಟೆಂಟು-ಸ್ಲಮ್ಮುವಾಸಿಗಳು, ಕೂಲಿಗಳು, ಮನೆದೇವಿಯರು ತಂತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ.

ಇಷ್ಟೆಲ್ಲ ಉಲ್ಟಾಪಲ್ಟಾ, ಕೋಲಾಹಲ, ಅಸಂಭವ ಸಂಭವ ಆಗುತ್ತಿರುವುದಾದರೂ ಏತಕ್ಕೆ? ಭಯಕ್ಕೆ, ಪ್ರಾಣಭಯಕ್ಕೆ. ನಿಜ. ಜೀವಿಗಳ ಚಟುವಟಿಕೆಯನ್ನೆಲ್ಲ ನಿಯಂತ್ರಿಸುವ ಮುಖ್ಯ ಚಾಲನಾ ಶಕ್ತಿ ಭಯ ಎನ್ನುವುದು ಮತ್ತೆ ಸಾಬೀತಾಗಿದೆ. ಅದರಲ್ಲೂ ಪ್ರಾಣಭಯ ಆವರಿಸಿಕೊಂಡಿತೆಂದರೆ ಯಮನಿಯಮಗಳು ಮರೆತು ಹೋಗುತ್ತವೆ. ಸಂಬಂಧಗಳು ಕಾಣೆಯಾಗುತ್ತವೆ. ಎತ್ತ, ಏನುಗಳು ಸತ್ತು ಹೋಗುತ್ತವೆ. ನಾವೆಳೆದ ಗಡಿಗಳೆಂಬ ಹುಸಿರೇಖೆಗಳು ತಂತಾವೇ ಅಳಿಸಿ ಹೋಗುತ್ತವೆ. ಜೈಲುಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ತಮ್ಮ ಮೇಲೆ ತಾವೇ ಆರೋಪಿಸಿಕೊಂಡ ಹುಸಿ ಶಕ್ತಿಗಳೆಲ್ಲ ಕರಗಿಹೋಗಿ ಸುಮ್ಮಸುಮ್ಮನೆ ‘ಮಹಾನ್’ ಆದವರು ಬೆತ್ತಲಾಗಿ ನಿಜಸ್ವರೂಪ ಬಯಲಾಗುತ್ತದೆ. ಸರ್ವಾಧಿಕಾರಿಯಿಂದ ಹಿಡಿದು ಬೀದಿ ಬದಿಯ ಭಿಕಾರಿಯವರೆಗೂ; ಪರಮಾಣು ಶಸ್ತ್ರಾಸ್ತ್ರ ಹೊಂದಿದವರಿಂದ ಹಿಡಿದು ಚಿಂದಿ ಆಯುವವರವರೆಗೆ ಪ್ರಾಣಭಯ ಆವರಿಸಿದಾಗ ಎಲ್ಲರಿಗೂ ಬದುಕುಳಿವ ಹಂಬಲದ ಹೊರತು ಮತ್ತೆಲ್ಲ ಮರೆತುಹೋಗುತ್ತದೆ.

ಹೌದು. ಕೋವಿಡ್-19 ವೈರಸ್‌ನಿಂದ ಹರಡುತ್ತಿರುವ ಕಾಯಿಲೆ ಮತ್ತು ಮರಣ ಭೀತಿ ಇಡಿಯ ವಿಶ್ವವನ್ನೇ ಆವರಿಸಿದ ೨೦೨೦ರ ಮಾರ್ಚ್ ಹೊತ್ತಿಗೆ ಗಡಿ, ಮೂರ್ತಿ, ಸ್ಮಾರಕ, ಮಾಲು, ಮಹಲು, ಫ್ಯಾಷನ್, ಯುದ್ಧ, ದಂಗೆಗಳೇ ಮೊದಲಾದ ಮನುಷ್ಯ ಅಹಂಕಾರದ ನಿರ್ಮಿತಿಗಳೆಲ್ಲಾ ತಾತ್ಕಾಲಿಕವಾಗಿಯಾದರೂ ಪೊಳ್ಳು ಎಂದೆನಿಸುವಂತೆ ಅಣುರೇಣುತೃಣವೊಂದು ನಿವಾಳಿಸಿ ಬಿಸಾಡಿದೆ. ಲಕ್ಷ ಕೋಟಿ ರೂಪಾಯಿಗಳನ್ನು ಗಾಳಿಯಲ್ಲೇ ಸೃಷ್ಟಿಸುವ ಷೇರು ಮಾರುಕಟ್ಟೆ ಎಂಬ ಮಾಯಾನಗರಿ ಮೇಣದರಮನೆಯಂತೆ ಕರಗಿ ಹೋಗುತ್ತಿದೆ. ಯಾವುದೂ ಬೇಡ, ಯಾರಿಗೂ ಬೇಡವೆನುವಂತಹ ತಾತ್ಕಾಲಿಕ ಸ್ಮಶಾನ ವೈರಾಗ್ಯ ಆವರಿಸಿದಂತಿದೆ. ಧರ್ಮಗುರುಗಳ ಸಾಕ್ಷಿಯಿಲ್ಲದೆ ಎಲ್ಲ ಶವಗಳನ್ನೂ ಮಿಲಿಟರಿ-ಮುನ್ಸಿಪಾಲಿಟಿ ಲಾರಿಗಳು ಹೊತ್ತೊಯ್ದು ವಿದ್ಯುತ್ ಚಿತಾಗಾರದಲ್ಲಿ ಸುಟ್ಟುಬಿಡುತ್ತಿವೆ. ಧರ್ಮ-ಜಾತಿ ಭೇದವಿಲ್ಲದೆ ಬದುಕಿರುವವರನ್ನೂ, ಮರಣಿಸಿದವರನ್ನೂ ವೈರಸ್ ಆವರಿಸಿಕೊಂಡಿದೆ.





ಎರಡು ಕಾಲಿನವರ ಸಾಧನೆ ಏನೇ ಇರಲಿ, ಪ್ರಕೃತಿಯೆದುರು ಎಲ್ಲವೂ ತೃಣವೇ, ನಿಜ ದೈವ ಪ್ರಕೃತಿಯೇ ಎಂಬ ಪಾಠ ಮತ್ತೆಮತ್ತೆ ಕಲಿಯಬೇಕಾಗಿದೆ.

ವೈರಸ್ ಎಂಬ ವಿಸ್ಮಯ-ಅಪಾಯ

ಆನೆ, ತಿಮಿಂಗಿಲಗಳಿಂದ ಹಿಡಿದು ಬ್ಯಾಕ್ಟೀರಿಯಾಗಳಂತಹ ಏಕಕೋಶ ಜೀವಿಗಳ ತನಕ ಜೀವಿಗಳಿಗೆ ನಾನಾ ಕಾಯಿಲೆಗಳನ್ನುಂಟುಮಾಡುವ; ಏಡ್ಸ್, ಪೋಲಿಯೋ, ದಡಾರ, ಸಿಡುಬು, ಮೈಲಿಬೇನೆ, ಕಾಮಾಲೆ, ವಾಂತಿಭೇದಿ, ರುಬೆಲ್ಲಾ, ಇನ್‌ಫ್ಲುಯೆಂಜಾ, ಹಂದಿಗೋಡು ಕಾಯಿಲೆ, ಮಂಗನ ಕಾಯಿಲೆ, ಮಂಗನಬಾವು ಮತ್ತಿತರ ನೂರಾರು ಕಾಯಿಲೆಗಳಿಗೆ ಕಾರಣವಾದ ವೈರಸ್‌ಗಳು ಬಲು ವಿಚಿತ್ರ, ವಿಶಿಷ್ಟ ಅಪಾಯಕಾರಿ ಕಣಗಳು. ಪಕ್ಷಿ, ಪ್ರಾಣಿ, ಗಿಡ, ಶಿಲೀಂಧ್ರ, ಬ್ಯಾಕ್ಟೀರಿಯಾ ಇತ್ಯಾದಿ ಬೇರೊಂದು ಜೀವಿಯ ಜೀವಕೋಶದೊಳಗೆ ಮಾತ್ರ ಬದುಕಬಲ್ಲ ಸೂಕ್ಷ್ಮಾಣುಗಳು ಅವು. ಇತ್ತ ‘ಜೀವಿ’ಯೂ ಅಲ್ಲ. ಅತ್ತ ‘ಅಜೀವಿ’ಗಳೂ ಅಲ್ಲ. ಜೀವಿ ಅಜೀವಿಗಳ ನಡುವಿರುವ ಅತ್ಯಂತ ಸರಳ, ಅತಿ ಸಣ್ಣ ಕಣ ವೈರಸ್ ಸಂಪೂರ್ಣ ಬೇರೆ ಜೀವಕೋಶವನ್ನು ಅವಲಂಬಿಸಿರುವಂಥವು.

ವೈರಸ್ಸುಗಳ ಗಾತ್ರ ಬಲು ಕಿರಿದು. ಎಲ್ಲೋ ಕೆಲವನ್ನು ಹೊರತುಪಡಿಸಿದರೆ ಎಲ್ಲವೂ ಬ್ಯಾಕ್ಟೀರಿಯಾಗಿಂತ ಸಣ್ಣವು. ಪೋಲಿಯೋ ವೈರಸ್ ಉಪ್ಪಿನ ಒಂದು ಕಣದ 10 ಸಾವಿರದಲ್ಲಿ ಒಂದನೇ ಭಾಗದಷ್ಟು ಗಾತ್ರದ್ದು; ಕೋವಿಡ್ ಐದು ಸಾವಿರದ ಒಂದು ಭಾಗದಷ್ಟು ದೊಡ್ಡದು. ವೈರಸ್ಸುಗಳಿಗಿಂತ ಬ್ಯಾಕ್ಟೀರಿಯಾಗಳು 8-10 ಪಟ್ಟು ದೊಡ್ಡದಿರುತ್ತವೆ. 1931ರಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಂಡುಹಿಡಿದ ಮೇಲೆಯೇ ನಾವು ವೈರಸ್ಸುಗಳನ್ನು, ಅವುಗಳ ರೂಪರಚನೆಯನ್ನು ಕಂಡದ್ದು.

ಪ್ರಾಣಿಗಳ ದೇಹದಲ್ಲಷ್ಟೇ ಇರುವ ಕೆಲವು ವೈರಸ್‌ಗಳು ಮನುಷ್ಯರನ್ನು ತಲುಪಿ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗೆ ಏಡ್ಸ್ ಕಾಯಿಲೆ ದಕ್ಷಿಣ ಆಫ್ರಿಕಾದ ಚಿಂಪಾಂಜಿಗಳಿಂದ; ಸಾರ‍್ಸ್ ಕಾಯಿಲೆ ಸಿವೆಟ್ ಬೆಕ್ಕುಗಳಿಂದ; ಕೆಎಫ್‌ಡಿ ಮಂಗಗಳಿಂದ; ಮರ‍್ಸ್-2019 ಒಂಟೆಗಳಿಂದ; ಈಗ ಕೋವಿಡ್-೧೯ ಬಾವಲಿಗಳಿಂದ ಬಂದಂಥವು. ಶ್ವಾಸನಾಳ, ಬಾಯಿ, ಗಂಟಲು, ಚರ್ಮ, ಲೈಂಗಿಕ ಅಂಗಾಂಗಗಳು, ಕೀಟದ ಕಡಿತ ಮುಂತಾದ ಮಾರ್ಗಗಳಿಂದ ಮಾನವ ದೇಹದೊಳಗೆ ಪ್ರಾಣಿ ವೈರಸ್‌ಗಳು ಹೊಕ್ಕಿಬಿಡುತ್ತವೆ. ಮುಖ ನೆಕ್ಕಿದ ಒಂಟೆ, ತಲೆಮೇಲೆ ಹತ್ತಿದ ಮಂಗ, ಕಾಲಸಂದಿ ತೂರಿಕೊಳುವ ಬೆಕ್ಕು, ರೋಗವಾಹಕ ಜೀವಿಯ ಅರೆಬೆಂದ ಮಾಂಸದಡುಗೆ, ತರಕಾರಿ-ಮಾಂಸದ ಮಾರುಕಟ್ಟೆಗಳಲ್ಲಾಗುವ ಮನುಷ್ಯ-ಪ್ರಾಣಿ ಸಂಪರ್ಕ - ಇವೇ ಮೊದಲಾದ ಕಾರಣಗಳಿಗೆ ಮನುಷ್ಯರಲ್ಲಿ ಪ್ರಾಣಿಯ ವೈರಸ್ ಸೇರಿಬಿಡಬಹುದು. ಹಾಗೆಯೇ ಇಕೋ ಟೂರಿಸಂ, ಅತಿಕ್ರಮಣ, ಒತ್ತುವರಿ, ವಲಸೆಗಳಿಂದ ಪ್ರಾಣಿಗಳಿಗೆ ನಮ್ಮ ವೈರಸ್‌ಗಳನ್ನು ನಾವೂ ದಾಟಿಸುತ್ತಿರಬಹುದು.

ನವೆಂಬರ್ 2019ರಿಂದ ಇದುವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನರನ್ನು ಕೊಂದಿರುವ ಮರ‍್ಸ್ ತಾನು ಅಂಟಿದ 30% ಜನರನ್ನು ಕೊಂದು ಹಾಕುವಷ್ಟು ಅಪಾಯಕಾರಿ. ಈಗ ಬಂದೆರಗಿರುವ ಕೋವಿಡ್-೧೯ರ ಸ್ವಭಾವ ನಮಗಿನ್ನೂ ತಿಳಿದಿಲ್ಲ. ಈ ಬರಹ ಬರೆಯುತ್ತಿರುವ 22-3-20ರ ಮಧ್ಯಾಹ್ನದವರೆಗೆ ಕೋವಿಡ್-19 ನಿಂದ 3,12,500  ರೋಗಿಗಳು ಬಾಧಿತರಾಗಿದ್ದರೆ 13,424 ಜನ ಮರಣ ಹೊಂದಿದ್ದಾರೆ. ಮೂರು ತಿಂಗಳಲ್ಲಿ ಅಂಟಾರ್ಕ್ಟಿಕಾ ಬಿಟ್ಟು ಎಲ್ಲ ಖಂಡಗಳಿಗೂ ಅದು ಹರಡಿದೆ. 167ಕ್ಕಿಂತ ಹೆಚ್ಚು ದೇಶಗಳಲ್ಲಿ ಕೋವಿಡ್‌ನ ಸೋಂಕಿದೆ. ಈಗದು ಯೂರೋಪ್ ಕೇಂದ್ರಿತ. ಇಟಲಿ, ಇರಾನ್, ಸ್ಪೇನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಮರಣ ಪ್ರಮಾಣ 3.4 % ಇದೆ.



ಏನಿದು ಕರೋನಾ, ಕೋವಿಡ್?

ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನುಂಟುಮಾಡುವ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಹೊಸವರ್ಷ ಕೊಡುತ್ತಿರುವ ಕೊಡುಗೆಯೋ ಎಂಬಂತೆ ರೋಗಕಾರಣವಾದ ‘ಹೊಸ ಕರೋನಾ ವೈರಸ್’ ಪತ್ತೆಯಾಯಿತು. ವುಹಾನ್‌ನ ಕಡಲ ಆಹಾರಪದಾರ್ಥಗಳ ಸಗಟು ಮಾರುಕಟ್ಟೆಯಿಂದ ಅದು ಹರಡಿದೆ ಎನ್ನಲಾಯಿತು. ಬಾವಲಿಗಳ ದೇಹಲ್ಲಿರುವ ಕರೋನಾ ವೈರಸ್‌ಗೆ 96% ಸಾಮ್ಯತೆ ಇರುವ ವೈರಾಣು ರೋಗಿಗಳಲ್ಲಿ ಪತ್ತೆಯಾಯಿತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಯ ಮಾರಾಟ ಇಲ್ಲದಿದ್ದ ಕಾರಣ ಪ್ಯಾಂಗೊಲಿನ್‌ನಂತಹ ಮಧ್ಯವರ್ತಿ ಪ್ರಾಣಿಯಿಂದ ಅಥವಾ ಮಾರುಕಟ್ಟೆಯಲ್ಲಿದ್ದ ಹಾವಿನ ಮಾಂಸದಿಂದ ಅದು ಬಂದಿರಬಹುದೆಂದು ಶಂಕಿಸಲಾಯಿತು. ಕೊನೆಗೆ ಅದಕ್ಕೆ ಕೋವಿಡ್-19 ಎಂಬ ನಾಮಕರಣ ಮಾಡಿದರು. ಇಲ್ಲಿಯವರೆಗೆ ಗೊತ್ತಿರದ ಹೊಸ ವೈರಸ್ ಆಗಿದ್ದರಿಂದ ‘ನೊವೆಲ್’ ವೈರಸ್ ಎಂದು ಕರೆಸಿಕೊಂಡಿತು.

ಸೂರ್ಯನ ಚಿತ್ರ ಬರೆವಾಗ ಉರೂಟು ಸೊನ್ನೆಯ ಸುತ್ತ ಪ್ರಭೆ ಬರೆಯುತ್ತಿದ್ದೆವು, ನೆನಪಿದೆಯೆ? ಅದು ಸೌರ ಕರೋನಾ. ಅಂಥದೇ ರಚನೆಯನ್ನು ಮೈತುಂಬ ಹೊದ್ದಿರುವಂಥವು ಕರೋನಾ ವೈರಸ್‌ಗಳು. ಎಲ್ಲ ರೀತಿಯ ಕರೋನಾ ವೈರಸ್ಸುಗಳೂ ಮಾರಣಾಂತಿಕವಲ್ಲ. ಕೆಲವು ನೆಗಡಿ, ಕೆಮ್ಮು, ಸಣ್ಣ ಜ್ವರಕ್ಕೆ ಮುಗಿದುಹೋಗುತ್ತವೆ. ಹೊಸಋತುವಿನ ಆರಂಭದ ದಿನಗಳ ತಂಡಿ, ಸಣ್ಣಜ್ವರ, ಗಂಟಲುರಿ ಕರೋನಾದಿಂದ ಆಗಿರುವ ಸಾಧ್ಯತೆಯೂ ಇದೆ. ಎಲ್ಲೋ ಕೆಲವೊಮ್ಮೆ ದುಷ್ಟತನವನ್ನೆಲ್ಲ ಆವಾಹಿಸಿಕೊಂಡುಬರುವ ಕೇಡಿಗ ತಳಿಗಳು ಹುಟ್ಟಿಬಿಡುತ್ತವೆ. ಈಗ ಚಾಲ್ತಿಯಲ್ಲಿರುವ ಮರ‍್ಸ್-೨೦೧೯, ಕೋವಿಡ್-೧೯ ಅಂತಹವು.

10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದ ಕರೋನಾ ವೈರಸ್ ಬಿಸಿರಕ್ತದ ಬೆನ್ನೆಲುಬಿರುವ ಪ್ರಾಣಿಗಳು, ಹಕ್ಕಿ, ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು. ಹಂದಿ, ದನ, ಕೋಳಿ, ನಾಯಿ, ಫೆರೆಟ್, ಕುದುರೆ, ಟರ್ಕಿ, ಬೆಕ್ಕು, ಮೊಲಗಳಲ್ಲಿ ಶೀತ, ಭೇದಿ, ಕರುಳಿನ ತೊಂದರೆಯುಂಟುಮಾಡುವ ಈ ವೈರಸ್ ಮನುಷ್ಯರನ್ನು ಬಾಧಿಸತೊಡಗಿದ್ದು ಇತ್ತೀಚಿನ ಶತಮಾನಗಳಲ್ಲಿ. ನೂರಿನ್ನೂರು ವರ್ಷಗಳ ಹಿಂದೆ ಪ್ರಾಣಿಗಳ ಶ್ವಾಸಕ್ರಿಯೆಯನ್ನು ಬಾಧಿಸುವ ಕರೋನಾ ವೈರಸ್ ಬಂದರೆ, ಇತ್ತೀಚೆಗೆ ಮನುಷ್ಯರನ್ನು ಬಾಧಿಸುವ ಸಾರ‍್ಸ್, ಮರ‍್ಸ್ ಕಾಯಿಲೆಯ ವೈರಸ್ ಉತ್ಪತ್ತಿಯಾಗಿವೆ.


ಕೋವಿಡ್ 19 ಬಂದರೆ ಏನಾಗುವುದು?
  • ಏನೂ ಆಗದೇ ಇರಬಹುದು. ಈ ಸಾಧ್ಯತೆಯೇ ಹೆಚ್ಚು.
  • ಕೆಲವರಿಗೆ ವೈರಸ್ ಸೋಂಕುಂಟಾದ ಹದಿನಾಲ್ಕು ದಿನಗಳೊಳಗೆ ತಂಡಿ, ಗಂಟಲುರಿ, ಸಣ್ಣ ಜ್ವರ, ಭೇದಿ ಶುರುವಾಗುತ್ತದೆ.
  • ನಂತರ ಮೂಗು, ಗಂಟಲ ಮೂಲಕ ಶ್ವಾಸಕೋಶ ಪ್ರವೇಶಿಸುವ ವೈರಸ್ ಕೆಲವರಲ್ಲಿ ತೀವ್ರತರದ ನ್ಯುಮೋನಿಯಾ ಉಂಟುಮಾಡುತ್ತದೆ. ಅತಿಜ್ವರ, ಕೆಮ್ಮು, ದಮ್ಮು, ವಾಂತಿ, ತಲೆನೋವು, ಉಸಿರಾಟದ ತೊಂದರೆ ಹೆಚ್ಚುತ್ತದೆ.
  • ಅತಿ ತೀವ್ರತರವಾಗುವ ಕೆಲವು ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳ ವೈಫಲ್ಯತೆಯಾಗಿ ಮರಣವುಂಟಾಗುತ್ತದೆ. 

ಇದುವರೆಗೆ ರೋಗ ಬಾಧಿಸಿದವರಲ್ಲಿ 60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕುಂಠಿತಗೊಂಡವರು, ಎಳೆಯ ಮಕ್ಕಳೇ ಹೆಚ್ಚಿದ್ದಾರೆ. ಬಡದೇಶಗಳಿಗಿಂತ ಮುಂದುವರೆದ ದೇಶಗಳನ್ನು ಹೆಚ್ಚು ಬಾಧಿಸಿದೆ. ಇಂದು ವಿಶ್ವಪಿಡುಗು (ಪ್ಯಾಂಡೆಮಿಕ್) ಎಂದು ಘೋಷಿಸಲ್ಪಟ್ಟಿದೆ. ಯಾಕೆಂದರೆ ಅದು ಸುಲಭದಲ್ಲಿ ಹರಡುವಂಥದು. ಆದರೆ ಇದರಿಂದಾಗುವ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಗಳು, ಸಂಸ್ಥೆಗಳು, ಸಮಾಜಗಳು ನಾನಾ ಸಲಹೆ, ಸೂಚನೆಯಿತ್ತಿವೆ. ಹರಡುವಿಕೆ ತಡೆಯಲು ಇರುವ ಕೆಲವು ಸುಲಭ ತಂತ್ರಗಳಿವು:




  • ಅತಿ ಅನಿವಾರ್ಯವಲ್ಲದ ಎಲ್ಲ ಪ್ರಯಾಣ ರದ್ದುಗೊಳಿಸಿ ಇದ್ದಲ್ಲೇ ಇರುವುದು. 
  • ಬಟ್ಟೆ ಮೇಲೆ ವೈರಸ್ 6 ರಿಂದ 12 ಗಂಟೆ ಕಾಲ ಬದುಕಬಹುದು. ಈ ವೈರಸ್ ಉಷ್ಣಸೂಕ್ಷ್ಮ. ೩೦-೩೫ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಹಾಗೂ ಸೋಪಿಗೆ ಸತ್ತು ಹೋಗುತ್ತದೆ. ಹಾಗಾಗಿ ಪದೇಪದೇ ಸೋಪು ನೀರಿನಲ್ಲಿ ಕೈ ತೊಳೆಯಬೇಕು. ಸೋಪು ಹಚ್ಚಿ ಬಟ್ಟೆ ತೊಳೆದು ಬಿಸಿಲಲ್ಲಿ ಒಣಗಿಸಬೇಕು. 
  • ಕೆಮ್ಮುವಾಗ ಸೀನುವಾಗ ಮುಖಗವಸಿನಿಂದ ಅಥವಾ ವಸ್ತ್ರದಿಂದ ಮೂಗುಬಾಯಿ ಮುಚ್ಚಿಕೊಂಡಿರಬೇಕು. ಯಾಕೆಂದರೆ ಒಮ್ಮೆ ಸೀನಿದರೆ ಅಥವಾ ಕೆಮ್ಮಿದರೆ 20,000 ಕಿರುಹನಿಗಳು ವಾತಾವರಣಕ್ಕೆ ಸೇರುತ್ತವೆ. ಪ್ರತಿ ಕಿರುಹನಿಯೂ ನೂರಾರು ವೈರಸ್ ಕಣಗಳನ್ನು ಹೊಂದಿದ್ದು ಎದುರಿರುವವರನ್ನು ಬೇರೆಬೇರೆ ರೀತಿ ತಲುಪುತ್ತವೆ. ಹಾಗಾಗಿ ಜನರ ನಡುವೆ ಇರುವಾಗಲೆಲ್ಲ ಮುಖಗವಸು ತೊಡಬೇಕು. 
  • ಕೆಮ್ಮುವವರು, ಸೀನುವವರಿಂದ ಮೂರು ಮೀಟರ್ ದೂರ ಇದ್ದರೆ ಒಳ್ಳೆಯದು. ಮೂರು ಮೀಟರ್ (10 ಅಡಿ) ಅಂತರ ಸಿಕ್ಕರಷ್ಟೇ ಕೆಮ್ಮು, ಸೀನಿನ ಹನಿಗಳು ನೆಲ ಮುಟ್ಟುತ್ತವೆ.
  • ಬಂದವರನ್ನು ಸ್ವಾಗತಿಸುತ್ತ ಅಪ್ಪಿಕೊಳ್ಳುವುದು, ಕೈಕುಲುಕುವುದು, ಮುತ್ತಿಕ್ಕುವುದು ಮಾಡಬಾರದು. ಸಾಮಾಜಿಕ ಅಂತರವಿಟ್ಟುಕೊಂಡು ದೂರದಿಂದಲೇ ಹಾರೈಸಬೇಕು. 
  • ಲೋಹದ ಮೇಲ್ಮೈ ಮೇಲೆ ವೈರಸ್ 12 ಗಂಟೆ ಕಾಲ ಜೀವಂತ ಇರಬಲ್ಲದು. ಹಾಗಾಗಿ ಅಂತಹ ಮೇಲ್ಮೈಗಳನ್ನು ಮುಟ್ಟುತ್ತ ಇರುವವರು ಪದೇಪದೇ ಸೋಪು ಹಚ್ಚಿ (ಸ್ಯಾನಿಟೈಸರ್ ಹಚ್ಚಿ ಅಲ್ಲ) ಕೈ ತೊಳೆಯಬೇಕು. ಅಂತಹ ಮೇಲ್ಮೈಗಳನ್ನೂ ಶುಚಿಗೊಳಿಸಬೇಕು.
  • ನಮ್ಮ ಮೈಕೈಮೇಲೆ 5-10 ನಿಮಿಷ ವೈರಸ್ ಜೀವಂತ ಉಳಿಯಬಹುದು. ಆದರೆ ಆ 5-10 ನಿಮಿಷದಲ್ಲಿ ನಾವು ಅಪ್ರಜ್ಞಾಪೂರ್ವಕವಾಗಿ ಕಣ್ಣು, ಮೂಗು, ಬಾಯಿ, ಕಿವಿ ಮುಟ್ಟಿ ಅಲ್ಲೆಲ್ಲ ಸೇರಿಸಿರುತ್ತೇವೆ. ಹಾಗಾಗಿ ನಮ್ಮ ಮೈ ಮುಖ ಮುಟ್ಟಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.

2018ರಲ್ಲಿ ಮಲೇರಿಯಾದಿಂದ ವಿಶ್ವಾದ್ಯಂತ 4 ಲಕ್ಷ ಜನ ಸತ್ತಿದ್ದಾರೆ. ಏಡ್ಸ್‌ನಿಂದ 7.7 ಲಕ್ಷ ಜನ ಅಸು ನೀಗಿದ್ದಾರೆ. ಪ್ರತಿ ವರ್ಷ 22 ಸಾವಿರ ಜನ ಡೆಂಗಿಗೆ ಬಲಿಯಾಗುತ್ತಾರೆ. ಹುಚ್ಚುನಾಯಿ ಕಡಿತದ ರೇಬಿಸ್‌ನಿಂದ ವಾರ್ಷಿಕ 55 ಸಾವಿರ ಜನ ಸಾಯುತ್ತಾರೆ. ಒಂದೂವರೆ ಲಕ್ಷ ಜನ ಟೈಫಾಯ್ಡ್‌ನಿಂದ ಸಾಯುತ್ತಾರೆ. 40 ಸಾವಿರ ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ಹಾಗಿರುವಾಗ ಇದುವರೆಗೆ 13000 ಜನರನ್ನು ಕೊಂದ ಕೋವಿಡ್ ಬಗೆಗೇಕೆ ಇಷ್ಟು ಭೀತಿ?

ಭೀತಿ ಏಕೆಂದರೆ ನಮಗೆ ಅದರ ಬಗ್ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಅದರ ಕಾರಣ, ನಿಯಂತ್ರಣ, ಚಿಕಿತ್ಸೆ, ಪರಿಣಾಮ, ಲಸಿಕೆ, ಹರಡುವಿಕೆ ಬಗೆಗೆ ಹೆಚ್ಚು ಗೊತ್ತಿಲ್ಲ. ಇನ್ನೂ ಲಸಿಕೆ, ಚುಚ್ಚುಮದ್ದು ಕಂಡುಹಿಡಿದಿಲ್ಲ. ಮನುಷ್ಯರ ಮೇಲೆ ಪ್ರಯೋಗಿಸಬಹುದಾದ ಲಸಿಕೆ ಕಂಡುಹಿಡಿಯಲು ತಿಂಗಳುಗಳೇ ಬೇಕಾಗಬಹುದು. ಬೃಹತ್ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ವರುಷಗಳೇ ಬೇಕಾಗಬಹುದು. ಹಾಗಾಗಿ ಇದರ ಬಗೆಗೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತವಾಗಿದೆ.

14ನೇ ಶತಮಾನದ ಬ್ಯುಬೋನಿಕ್ ಪ್ಲೇಗ್ ವಿಶ್ವದ ಕಾಲುಭಾಗ ಜನಸಂಖ್ಯೆಯನ್ನು ಕೊಂದು ಹಾಕಿತ್ತು. 102 ವರ್ಷ ಕೆಳಗೆ, 1918ರಲ್ಲಿ ಬಂದ ಎಚ್೧ಎನ್೧ ಇನ್‌ಫ್ಲುಯೆಂಜಾ ಕಾಯಿಲೆ ವಿಶ್ವಾದ್ಯಂತ ಮಿಂಚಿನಂತೆ ಹರಡಿ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. (ವಿಶ್ವದ ಮೂರನೆ ಒಂದು ಭಾಗ ಜನರಿಗೆ ಸೋಕಿದ ಆ ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬಂದಿತ್ತು.) 2009ರ ಇನ್‌ಫ್ಲುಯೆಂಜಾ ಎಚ್೧ಎನ್೧ ಕನಿಷ್ಟ 2 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. (ಅದು ಹಂದಿಗಳಿಂದ ಮನುಷ್ಯರಿಗೆ ರವಾನೆಯಾಗಿತ್ತು.) ಇದೂ ಅಂತಹ ಒಂದು ವಿಶ್ವವ್ಯಾಧಿಯಾಗದಿರಲಿ ಎನ್ನುವುದೇ ಈ ಎಲ್ಲ ಮುನ್ನೆಚ್ಚರಿಕೆಗಳ ಉದ್ದೇಶವಾಗಿದೆ.

ಆದ್ದರಿಂದ ಕೋವಿದಕ್ಕೆ ಅಂಜದೇ, ಆತಂಕದಿಂದ ದಿನ ದೂಡದೇ, ಸಮಯ ವ್ಯಯವಾಯಿತೆಂದು ದುಃಖಿಸದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ. ಅನಿವಾರ್ಯವಲ್ಲದ, ತುರ್ತು ಅಲ್ಲ ಎಲ್ಲ ತಿರುಗಾಟ, ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸೋಣ. ಚಿಕಿತ್ಸೆಯ ಹುಸಿ ಭರವಸೆಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡದಿರೋಣ. ಅನಾಯಾಸವಾಗಿ ಸಿಕ್ಕ ಈ ವಿರಾಮ-ರಜೆಯ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಲಿಕ್ಕೆ, ಆತ್ಮಾವಲೋಕನ ಮಾಡಿಕೊಳ್ಳಲಿಕ್ಕೆ, ನಾಳಿನ ನಡೆಗಳ ಬಗೆಗೆ ಯೋಚಿಸಲಿಕ್ಕೆ ವಿನಿಯೋಗಿಸೋಣ. ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ನೆಲ, ಸಮಾಜ ಬಿಟ್ಟು ಹೋಗುವುದು ಹೇಗೆಂಬ ಬಗೆಗೆ ಚಿಂತಿಸೋಣ.






Wednesday 18 March 2020

ಮಹಿಳಾ ದಿನ: ಮಹಿಳಾ ಚೈತನ್ಯ ದಿನ








ಇಡೀ ಮಾರ್ಚ್ ತಿಂಗಳು ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತದೆ. ಓಹೋಹೋ! ಇನ್ನೇನು ಮಹಿಳೆಯರಿಗೆ ಸ್ವರ್ಗ ಕೈಗೆಟುಕಿತು ಎನ್ನುವಂತೆ, ಜಗವೇ ಮಹಿಳಾ ಪರವಾಯಿತೋ ಎನುವಂತೆ.. ಎಲ್ಲರೂ ಮಹಿಳಾ ದಿನ ಆಚರಿಸುವವರು, ಹೆಣ್ಣನ್ನು ನೆನೆದು ಗೌರವಿಸುವವರೇ.. ಏರ್‌ಲೈನ್ ಕಂಪನಿಗಳು, ಕಾಸ್ಮಿಟಿಕ್ ಕಂಪನಿಗಳು, ಜ್ಯುವೆಲರಿ ಕಂಪನಿಗಳು, ಬ್ರಾಂಡೆಡ್ ಬಟ್ಟೆ-ವಸ್ತುಗಳ ಮಾಲ್‌ಗಳಿಂದ ಹಿಡಿದು ಬೀದಿ-ಕೇರಿ-ಶಾಲೆಗಳಲ್ಲೂ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಮ್ಯೂಸಿಕಲ್ ಚೇರ್, ಅಡುಗೆ ಸ್ಪರ್ಧೆ, ತಿನ್ನುವ ಸ್ಪರ್ಧೆ, ಫ್ಯಾಷನ್ ಷೋ ಏನೆಲ್ಲ ನಡೆಯುತ್ತವೆ. ಮಹಿಳೆಯರ ಒಂದು ಕೇಶಾಲಂಕಾರದ ಸಲೂನಿನಲ್ಲಿ ಎಲ್ಲ ಫ್ಯಾಷನ್‌ಗು ೨೫% ಡಿಸ್ಕೌಂಟ್! ಕೂದಲು ನೇರ ಇದ್ದದ್ದು ಸುರುಳಿ; ಸುರುಳಿ ಇದ್ದದ್ದು ನೇರ; ಕಪ್ಪು ಇದ್ದದ್ದು ವರ್ಣಮಯ; ಬಿಳಿ ಇದ್ದದ್ದು ಕಪ್ಪು ವಗೈರೆ ವಗೈರೆ ಮಾಡಿಕೊಡುತ್ತಾರೆ. ಆ ಸಲೂನಿನಲ್ಲಿರುವವರೆಲ್ಲ ಹುಡುಗರೆ. ಹುಡುಗಿಯರ ತಲೆ ತಿಕ್ಕಿ, ತೊಳೆದು, ಹಿಂಡಿ, ಎಳೆ ಎಳೆಯಾಗಿ ಬಿಡಿಸಿ, ಒಣಗಿಸಿ, ಪಾಲು ಮಾಡಿ, ಇಸ್ತ್ರಿ ಮಾಡಿ, ನೇರ, ಸುರುಳಿ ಹೀಗೆ ನಾನಾ ತರಹದ ಫ್ಯಾಷನ್ ಮಾಡುತ್ತಿದ್ದಾರೆ! ಆಭರಣದಂಗಡಿಯಲ್ಲಿ ಮಜೂರಿಯಿಲ್ಲ. ಕೆಲವಡೆ ಶುದ್ಧ ಕುಂಕುಮ ಸಪ್ತಾಹ ನಡೆಯುತ್ತದೆ. ಯಾವ ಐದು ಶುದ್ಧ ವಸ್ತುಗಳಿಂದ ಶುದ್ಧ ಕುಂಕುಮ ತಯಾರಿಸುವುದು ಮತ್ತು ಆ ಮೂಲಕ ಮುತ್ತೈದೆತನ ಕಾಪಾಡಿಕೊಳ್ಳುವುದು ಅಂತ ಅಲ್ಲಿ ಹೇಳಿಕೊಡುತ್ತಾರೆ!

ಆಹಾ ಮಹಿಳಾಪರ ಲೋಕವೇ!?

ತಡೆ ತಂಗಿ. ಇದು ಒಂದು ಮುಖ. ಇನ್ನೊಂದು ಕಡೆ ನೋಡಿದರೆ..

ಮಹಿಳಾ ದಿನ ಆಚರಿಸಿದ ಒಬ್ಬನೇ ಒಬ್ಬ ಗಂಡಸೂ ‘ಇನ್ನುಮುಂದೆ ನೀನೊಬ್ಬಳೇ ಅಡಿಗೆ, ಪಾತ್ರೆ, ಸ್ವಚ್ಛತೆ ಕೆಲಸ ಮಾಡುವುದು ಬೇಡ. ಇವತ್ತಿಂದ ಎಲ್ಲ ಫಿಫ್ಟಿ ಫಿಫ್ಟಿ ಎಂದು ಹೇಳುವರೇ? ಖಂಡಿತಾ ಇಲ್ಲ. ಮೂರು ತಿಂಗಳ ಮಗುವಿನಿಂದ ಹಿಡಿದು ತೊಂಭತ್ತರ ಮುದುಕಿಯವರೆಗೆ ಪ್ರತಿ ಇಪ್ಪತ್ತೈದು ನಿಮಿಷಕ್ಕೊಬ್ಬಳು ದಾಖಲೆಗೆ ಸಿಗುವ ಹಾಗೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ದೆಹಲಿಯ ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹುಡುಗಿಯರ ಕಾರ್ಯಕ್ರಮ ವಿರೋಧಿಸಿ ಒಂದು ಗುಂಪು ಸಾಮೂಹಿಕವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹೊರನಡೆಯಿತು. ಗುಜರಾತಿನ ಭುಜ್‌ನ ಕಾಲೇಜೊಂದು ದೇವಾಲಯ ಆವರಣದಲ್ಲೇ ಇರುವುದರಿಂದ ಮುಟ್ಟಾದವರು ಊಟದ ಒಳಾವರಣಕ್ಕೆ ನಿಯಮ ಉಲ್ಲಂಘಿಸಿ ಬಂದಿದ್ದಾರೆಂದು ತಿಳಿದು ಶಿಕ್ಷಕಿಯರ ಸಹಾಯದಿಂದ ನೂರಾರು ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿ ಮುಟ್ಟಾಗಿದ್ದರೆಯೋ ಇಲ್ಲವೋ ಪರೀಕ್ಷಿಸಿತು!

ಹಾಗಾದರೆ ಮಹಿಳಾ ವಾಸ್ತವ ಯಾವುದು?

ಮ್ಯೂಸಿಕಲ್ ಚೇರ್, ಫ್ಯಾಷನ್ ಷೋ, ರಿಯಾಯ್ತಿ, ಸಂಭ್ರಮಗಳಷ್ಟೆ ಮಹಿಳಾ ದಿನಾಚರಣೆಗಳಲ್ಲ. ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಅಸಮಾನತೆಯ ಮಾತುಗಳಷ್ಟೇ ಮಹಿಳಾ ದಿನಾಚರಣೆಯ ಉದ್ದೇಶವಲ್ಲ. ಪುರುಷ ವಿರೋಧವಷ್ಟೇ ಮಹಿಳೆಯರ ಗುಂಪುಗೂಡುವಿಕೆಯ ಅಜೆಂಡಾ ಅಲ್ಲ. ಮಹಿಳಾ ದಿನಾಚರಣೆ ಎಂದರೆ ಘನತೆಯ ಬದುಕಿಗೆ ಮಹಿಳೆಯರು ನಡೆಸಿದ ಹೋರಾಟದ ನೆನಪು. ದೌರ್ಜನ್ಯ ವಿರೋಧವನ್ನಷ್ಟೆ ನಾವು ಮಾತನಾಡುತ್ತಿರುವಂತೆ ಕೇಳುತ್ತಿದೆ, ಆದರೆ ನಮ್ಮ ಮಾತು ಹಿಂಸೆಯ ವಿರುದ್ಧ, ಎಲ್ಲ ತಾರತಮ್ಯದ ವಿರುದ್ಧ, ಯುದ್ಧದ ವಿರುದ್ಧ, ಅಧಿಕಾರ ಕೇಂದ್ರೀಕರಣದ ವಿರುದ್ಧ.

ಸಮಾಜದ ಎಲ್ಲ ಪುರುಷಾಕೃತಿಗಳನ್ನು ಮುಖಾಮುಖಿಯಾಗುವವಳು ಮಹಿಳೆ. ಪುರುಷಾಕೃತಿ ಎನ್ನುವುದು ಜೈವಿಕ ಪುರುಷತ್ವದ ಕುರಿತ ಮಾತಷ್ಟೆ ಅಲ್ಲ. ಜಾತಿ, ಧರ್ಮ, ಯುದ್ಧ, ಅಧಿಕಾರಗಳೆಲ್ಲ ಪುರುಷಾಕೃತಿಗಳೇ. ಇವೆಲ್ಲದರ ದುಷ್ಟತನವನ್ನು ಅಳೆಯಬಲ್ಲವಳು ಅವೆಲ್ಲದರಿಂದ ಬಾಧಿತಳಾದ ಮಹಿಳೆಯೇ. ಹಾಗಾಗಿ ಮಹಿಳಾ ದಿನ ಆಚರಿಸುವುದೆಂದರೆ ಹಸಿವಿನ ವಿರುದ್ಧ, ಎಲ್ಲ ಶೋಷಣೆ-ಹಿಂಸೆಯ ವಿರುದ್ಧ, ಅಸಮಾನತೆಯ ವಿರುದ್ಧ, ಸಮತೆಯ ಸಮಾಜಕ್ಕಾಗಿ ಮುನ್ನಡೆಯುವ ವಿಚಾರ.

ಮಹಿಳಾ ದಿನ ಎಂದರೆ ಮಹಿಳೆಯರು ತಮ್ಮ ಚೈತನ್ಯ ಹೆಚ್ಚಿಸಿಕೊಳ್ಳುವ ದಿನ. ಅದಕ್ಕಾಗಿ ಮಹಿಳೆಯರು ಎರಡು ರೀತಿಗಳಲ್ಲಿ ಗಟ್ಟಿಯಾಗಬೇಕು. ಗಟ್ಟಿಯೆಂದರೆ ಕಣ್ಣೀರಾಗದ, ಅಯ್ಯೋ ಎನದ ಗಡಸು ಎದೆಗಲ್ಲುಗಳಾಗುವುದಲ್ಲ. ಬದಲಿಗೆ ಸ್ವ ಇಚ್ಛೆಯಿಂದ, ಸಹಜ ಸರಳ ಸ್ವಾಯತ್ತ ಜೀವನ ನಡೆಸಲು ಧೃಢವಾಗುವುದು. ಅದಕ್ಕಾಗಿ ಹೊರಗಿನ ಸಮಾಜದಲ್ಲಿ ದಿಟ್ಟವಾಗಿ ನಡೆಯಲು, ಗಟ್ಟಿಯಾಗಿ ಮಾತನಾಡಲು, ಘನತೆಯಿಂದ ಬದುಕಲು ಹಕ್ಕು ಸ್ವಾತಂತ್ರ್ಯಗಳನ್ನು ಗಳಿಸಿಕೊಳ್ಳಬೇಕು. ಜೊತೆಗೆ ಒಳಗಿನಿಂದಲೂ ಗಟ್ಟಿಯಾಗಬೇಕು.

ಸ್ವಮೋಹ ಮತ್ತು ಸ್ವಪ್ರೀತಿ



ವ್ಯಕ್ತಿತ್ವದ ಗಟ್ಟಿತನದ ಮೂಲ ಎಲ್ಲಿದೆ? ಅದು ಸ್ವ ಪ್ರೀತಿಯಲ್ಲಿದೆ. ಸ್ವಪ್ರೀತಿಯೆಂದರೆ ಶಕ್ತಿಮಿತಿಗಳೊಡನೆ ತನ್ನತನದ ಅರಿವು. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ತಿದ್ದಿತೀಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ, ಮೌನ ವಹಿಸುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ಹಾಗಾಗಿ ತನ್ನ ನಿಜಸ್ವರೂಪ ಅರಿಯದೇ ಸ್ವಮೋಹದ ಬಲೆಯಲ್ಲಿ ಬಂಧಿಗಳಾಗಿರುವವರು ಅವರು.

ಕನ್ನಡಿಯೆದುರು ಒಂದೇ ಸಮ ನಿಂತು ಹುಬ್ಬು ತೀಡುವುದು, ಮುಖ ಚಹರೆ ನೋಡಿಕೊಳ್ಳುವುದು ಸ್ವಮೋಹ. ಈ ಉಡುಪು ತೊಟ್ಟರೆ ಅವರು ಹಾಗೆಂದಾರೋ, ಅದಕ್ಕೆ ಇವರು ಹೀಗೆಂದಾರೋ ಎಂದು ಯೋಚಿಸುತ್ತ ಯಾವುದನ್ನು ತೊಟ್ಟರೆ ಅತಿಸುಂದರಿಯಾಗಿ ಕಾಣುವೆನೆಂಬ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ಸ್ವಮೋಹ. ನಾಲಿಗೆ ರುಚಿಯ ಬೆನ್ನು ಹತ್ತಿ ಅಪೌಷ್ಟಿಕತೆಗೋ, ಅತಿ ಸೇವನೆಗೋ ಒಳಗಾಗುವುದು ಸ್ವಮೋಹ. ನಾಕು ಕಾಸು ಬಂದದ್ದೇ ಬಟ್ಟೆಬಂಗಾರದ ಅಂಗಡಿಗೆ ಓಡಿ ಥಳಥಳ ಹೊಳೆವ ವಸ್ತ್ರಾಭರಣಗಳ ಖರೀದಿಸುವುದು ಸ್ವಮೋಹ. ‘ಅಯ್ಯೋ, ನಾನು ಕಪ್ಪು, ಅಯ್ಯೋ, ನಾನು ಹೆಣ್ಣಾಗಿ ಹುಟ್ಟಿದೆ, ಈ ಬಣ್ಣ ಕಳೆಯಲು ಯಾವ ಕ್ರೀಮು ಹಚ್ಚಲಿ? ಯಾವ ಫೇಸ್‌ಪ್ಯಾಕ್ ಬಳಿಯಲಿ?’ ಎಂದು ಕೊರಗುವುದು ಸ್ವಮೋಹ. ತನ್ನ ರೂಪ, ಆಕಾರ, ಬಣ್ಣ, ಆರ್ಥಿಕ ಸ್ಥಿತಿಗಳ ಬಗ್ಗೆ ಸದಾ ಕೊರಗುತ್ತ, ಸಾಧುವಲ್ಲದ ದಾರಿಗಳಿಂದ ಅವನ್ನೆಲ್ಲ ಆಗಮಾಡಹೊರಡುವುದು ಸ್ವಮೋಹ.

ಆದರೆ ಸ್ವಮೋಹವು ಕೀಳರಿಮೆಯನ್ನು ಬೆಳೆಸುತ್ತದೆ. ಅನಗತ್ಯ ಸಂಗತಿಗಳಿಗೆ ಗಮನ ಕೊಡುವಂತೆ ಮಾಡುತ್ತದೆ. ನಮ್ಮ ದೇಹದ ನಿಜವನ್ನು ನಾವೇ ಗುರುತಿಸದಂತೆ, ಗೌರವಿಸದಂತೆ, ಒಪ್ಪಿಕೊಳ್ಳದಂತೆ ಸಂಕೀರ್ಣ ಸ್ವಭಾವ ರೂಪುಗೊಳ್ಳುತ್ತದೆ. ನನ್ನನ್ನು ನಾನೇ ಪ್ರೀತಿಸದಿದ್ದರೆ, ಅದು ಇರುವ ಹಾಗೆಯೇ ಒಪ್ಪಿಕೊಳ್ಳದಿದ್ದರೆ ಹೊರಜಗತ್ತಿನ ತಾರೀಫಿನ ಮರ್ಜಿಗೆ ಒಳಗಾಗಿ, ಇಲ್ಲಸಲ್ಲದ ಪ್ರಯತ್ನ ಮಾಡುತ್ತ ಸುಸ್ತಾಗಬೇಕಾಗುತ್ತದೆ. ಕೆಲವೊಮ್ಮೆ ಕೀಳರಿಮೆ ತನ್ನ ರೂಪ-ಸಂಪತ್ತಿನ ಬಗೆಗಷ್ಟೇ ಅಲ್ಲ, ತನ್ನವರ ಬಗೆಗೂ ವಿಸ್ತರಿಸುವುದಿದೆ.

ಇದರ ಮೂಲ ನಮ್ಮ ದುಃಖ ಗುರುತಿಸಿ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿರುವುದರಲ್ಲಿದೆ. ರೂಪ-ಸ್ವರೂಪಗಳು ದುಃಖಕಾರಣವಾಗಲಾರವು ಎಂದು ನಮಗೆ ನಾವೇ ತಿಳಿಸಿಕೊಳ್ಳುವುದರಲ್ಲಿ, ಸಮಾಜಕ್ಕೆ ತಿಳಿಯಹೇಳುವುದರಲ್ಲಿದೆ. ಸ್ವತಃ ನಮಗೆ, ಸಮಾಜದ ಇತರ ಜೀವಿಗಳಿಗೆ, ಪ್ರಕೃತಿಗೆ ಹಾನಿಯುಂಟುಮಾಡಬಹುದಾದ ನಮ್ಮ ದುರ್ಗುಣಗಳನ್ನು, ತಪ್ಪು ನಡೆಗಳನ್ನು ಸ್ವಭಾವ-ರೂಢಿ-ಮಾತು-ಕ್ರಿಯೆಗಳನ್ನು ಮೊದಲು ಬದಲಿಸಿಕೊಳ್ಳಬೇಕು, ನಿಜ. ಯಾರೆಂದರೆ ಯಾರಿಗೂ ಹಾನಿಮಾಡದ ನನ್ನ ಬಣ್ಣ, ಮೂಗಿನ ಆಕಾರ, ಕಣ್ಣು, ತಲೆಗೂದಲು, ಧ್ವನಿ ಹೇಗೇ ಇದ್ದರೂ ಅದರಿಂದ ಯಾರಿಗೆ ಹಾನಿ? ಯಾವ ಸಮಾಜಕ್ಕೆ ನಷ್ಟ? ಆದರೆ ಅದನ್ನು ಒಪ್ಪಿತವಾಗುವಂತೆ ಬದಲಿಸಿಕೊಳ್ಳುವುದರಲ್ಲೇ ನಮ್ಮ ಗಮನ ನೆಟ್ಟುಹೋಗಿದೆ.

ಎಂದೇ ಸ್ವಮೋಹ ಸಲ್ಲದು. ಬದಲಾಗಿ ಸ್ವಪ್ರೀತಿ ಬೆಳೆಸಿಕೊಳ್ಳಬೇಕು.

ನಾನು ಕಪ್ಪು ಹೌದು, ಆದರೆ ಅದು ನನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ.
ನಾನು ಕುಳ್ಳಿ, ಹೌದು, ಆದರೆ ಅದು ನನ್ನ ಸಾಮರ್ಥ್ಯದ ಮಿತಿಯಾಗುವುದಿಲ್ಲ
ನಾನು ದಪ್ಪ, ಹೌದು, ಆದರೆ ಅದು ನನ್ನ ಸಾಮರ್ಥ್ಯ ವಿಸ್ತರಣೆಗೆ ತಡೆಯಾಗುವುದಿಲ್ಲ.
ನನಗೆ ಮೆಳ್ಳೆಗಣ್ಣು, ಹೌದು, ಆದರೆ ದಿಗಂತದ ತನಕ ದಿಟ್ಟಿಸಲು ನನಗಿಲ್ಲ ತಡೆ
ನನ್ನ ಸ್ತನಗಳು ಸಣ್ಣಗಿವೆ, ಹೌದು; ನನಗೆ ಮೆಳ್ಳೆಗಣ್ಣು, ಹೌದು; ನನ್ನ ಯಾವುದೋ ಅಂಗ ಊನ, ಹೌದು; ನನ್ನ ಬಳಿ ನೀರಿನಂತೆ ಖರ್ಚು ಮಾಡಲು ಹಣವಿಲ್ಲ, ಹೌದು; ಆದರೆ ಅದು ಇರುವುದೇ ಹಾಗೆ. ನಾನಿರುವುದೇ ಹೀಗೆ.

ನಾನಿರುವುದೇ ಹೀಗೆ. ನನ್ನ ದೇಹ ನನಗೆ, ನನ್ನ ಬದುಕು ನನಗೆ. ಇದೇ ಹೆಣ್ಣುತನ.

ಈ ಅರಿವು ಹುಟ್ಟುವುದೇ ಸಾಕ್ಷಾತ್ಕಾರ. ಈ ಅರಿವೇ ಸ್ವಪ್ರೀತಿ. ನನ್ನ ದೈಹಿಕ ಚಹರೆಗಳನ್ನು, ದೇಹ ವಾಸ್ತವಗಳನ್ನು ವಸ್ತುಸ್ಥಿತಿಯನ್ನು ತಿಳಿದು, ಅರಗಿಸಿಕೊಂಡು, ಗೌರವಿಸತೊಡಗಿದರೆ ಆಗ ಅಸೂಯೆ, ಕೀಳರಿಮೆ, ಕೋಪ, ದ್ವೇಷದಂತಹ ಅನುಪಯುಕ್ತ ಸಂಗತಿಗಳಿಗೆ ಮನೋಲಯವು ಪೋಲಾಗಲಾರದು. ನಮ್ಮ ಸಬಲೀಕರಣದ ಹೆಬ್ಬಾಗಿಲನ್ನು ನಾವೇ ತೆರೆದುಕೊಳ್ಳಬಹುದು.


(ಚಿತ್ರಗಳು: ಅಂತರ್ಜಾಲದಿಂದ)



‘ಏನೂ ಕೆಲ್ಸ ಮಾಡಲ್ಲ’




ನಾವೆಲ್ಲ ಕಲಿತ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ. ಎಷ್ಟೋ ವರುಷದ ನಂತರ ಶಾಲೆಯಲ್ಲಿ ಕಲಿತವರೆಲ್ಲ ಒಟ್ಟು ಸೇರಿದ್ದೆವು. ಲಂಗ ಚಡ್ಡಿ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡಿ ಆಮೇಲೆ ದೂರವಾದ ಗೆಳೆಯ, ಗೆಳತಿಯರನ್ನು ನೋಡಿ ಮತ್ತೆ ಬಾಲ್ಯದ ಸಂತೋಷ, ಸಂಭ್ರಮ ಅನುಭವಿಸುತ್ತಿದ್ದೆವು. ಒಂದೇ ಮಣೆ ಮೇಲೆ ಕೂತು ಮಗ್ಗಿ ಬಾಯಿಪಾಠ ಮಾಡಿದ, ಅಕ್ಷರ ತಿದ್ದಿದ ನಿರ್ಮಲಾ, ಶರಾವತಿ, ಲಕ್ಷ್ಮಿ, ಅಮೀನಾ ಎಲ್ಲ ಸಿಕ್ಕಿಬಿಟ್ಟರು. ಹಲವರು ಅದೇ ಹಳ್ಳಿಯ ಆಸುಪಾಸಿನಲ್ಲಿ ಸಂಸಾರವಂದಿಗರಾಗಿದ್ದರೆ ನಾವು ಕೆಲವರಷ್ಟೇ ದೂರದೂರುಗಳ ಸೇರಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಹೇಳಲಾಗದ ಆನಂದದಲ್ಲಿ ನಮ್ಮ ಮಾತಿನ ಕೊಟ್ಟೆ ಬಿಚ್ಚತೊಡಗಿತು..

‘ನೀ ಈಗ ಏನ್ ಕೆಲಸದಲ್ಲಿದೀ ಅಮೀನಾ?’ ಚಟಪಟನೆ ಮಾತನಾಡುತ್ತಿದ್ದ, ಬಲು ಆಸ್ಥೆಯಿಂದ ಅಲಂಕರಿಸಿಕೊಂಡು ಬಂದಿದ್ದ ಗೆಳತಿಯನ್ನು ಕೇಳಿದೆ.

‘ಕೆಲ್ಸ ಏನೂ ಇಲ್ಲ ಮರಾಯ್ತಿ, ಹಿಂಗೇ ಮನೇಲಿದ್ದೆ..’

‘ಹಿಂಗೇ ಎಲ್ಲಿರ‍್ತದೆ ಅದು? ಬೀಡಿ ಕಟ್ಟುದು, ಮಲ್ಗೆ ಮಾಲೆ ಮಾಡಿ ಮಾರುದು, ಸುರಗಿ ಮಕ್ಕೆ, ಕಾಡರಶ್ಣ ತಂದು ಕಮ್ತೀರಿಗೆ ಹಾಕುದು ಏನಾದ್ರು ಮಾಡ್ತನೇ ಇರ್ತದೆ..’ ಲಕ್ಷ್ಮಿ ಮಾತು ಸೇರಿಸಿದಳು.

‘ನೀಯೆಂತ ಕೆಲ್ಸ ಮಾಡ್ತಿದ್ಯೆ ಲಕ್ಷ್ಮಿ?’ ದುಬೈಯಿಂದ ಬಂದಿದ್ದ ರೀಟಾ ಕೇಳಿದಳು.

‘ಎಂತದೂ ಇಲ್ವೆ. ಎಂಥ ಮಣ್ಣು ಕೆಲ್ಸವೇನೋ ನಮದು. ಬಟ್ಟೆ ತೊಳಿ, ಪಾತ್ರೆ ತಿಕ್ಕು, ಮೀನು ಕತ್ತರ್ಸು, ಹಪ್ಪಳ ಉಪ್ಪಿನಕಾಯಿ ಮಾಡು, ಹಾಸು, ಮಡಚು, ಸಾರಸು, ಗೇರು, ಒಕ್ಕು, ರುಬ್ಬು .. ಹೀಂಗೇ. ನಿಮ್ಮಂಗೆ ಗನಾ ಕೆಲ್ಸ ಅಲ್ವೇ ನಮ್ದು, ಮೊದ್ಲಿಲ್ಲ, ಕೊನೆಯಿಲ್ಲ. ಸಾಯ್ಲಿ..’

‘ನಾವು ಕೆಲ್ಸ ಅಂತ ಹೊರಗೆ ಹೋಗಿ ನಾಕು ಕಾಸು ತರೋರಾದ್ರೂ ನೀ ಹೇಳ್ದ್ಯಲೆ ಈಗ, ಅಂತ ಯಾವ ಕೆಲ್ಸನೂ ಕಮ್ಮಿ ಆಗಿಲ್ಲ. ಹೆಣ್ಣುಮಕ್ಕಳ ಕೆಲ್ಸದಿಂದಲೆ ಮನೆ ಮನೆಯಾಗಿರೋದು. ನಾವು ಹೆಮ್ಮೆ ಪಡ್ಬೇಕು ಅದ್ಕೆ, ಬೇಸರ ಯಂತಕ್ ಲಕ್ಷ್ಮಿ?’

‘ಬ್ಯಾಸ್ರ ಯಾಕಂದ್ರೆ ಇಷ್ಟಪ ಕೆಲ್ಸ ಮಾಡ್ತಿದ್ರೂ ಮನೆ ಗಣಸ್ರ ಕೇಳಿದ್ರೆ ಈ ಹೆಂಗಸ್ರಿಗೆ ಎಂತ ಕೆಲ್ಸ? ನಾವ್ ದುಡ್ಕ ಬಂದಿದ್ನ ಮಾಡ್ಕಂಡ್ ತಿಂಬೂದು ಅಷ್ಟೆಯ ಅಂತ ನಗಾಡ್ತ್ರು. ಮನೆ ಕೆಲ್ಸಕ್ಕೆ ಕಾಸಿಲ್ಲ, ಕಿಮ್ಮತ್ತಿಲ್ಲ. ನೀವೆಲ್ಲ ಹೊರಗೋಗಿ, ತಿರುಗಾಡಿ ಕಾಸು ಗಳಿಸೋವಂಗಾದ್ರಿ. ನಮ್ದು ಏನಿದ್ರು ಎಲ್ಲ ಇಲ್ಲೆಯ, ಮೀಟಿಂಗು ಟ್ರಿಪ್ಪು ಪಾರ್ಟಿ ಜೈಲು ಎಲ್ಲಾವ್ದೂ ಒಂದಾ ಬಾವಿಕಟ್ಟೆ ಅತ್ವಾ ಅಡಿಗೆ ಕಟ್ಟೆಲೇ ಮುಗೀಬೇಕು. ಆದ್ರೂ ಪೋಲಕ ಹೊಲುಸ್ಬೇಕು, ಜಾತ್ರೇಲಿ ಬಳೆ ಇಟ್ಕಬೇಕು ಅಂತ ಗಣಸ್ರ ಹತ್ರ ದುಡ್ ಕೇಳಿದ್ರೆ ನೂರು ಮಾತು.. ನಿರ್ಮಲಾ, ಶರಾವತಿ, ಲಕ್ಷ್ಮಿ, ಸುಧಾ, ನಮ್ಮೆಲ್ಲಾರದೂ ಅಷ್ಟೇ, ಕೆಲಸ ಅಂತ ಕಣ್ಗೆ ಯಾರ‍್ಗೂ ಕಾಣ್ದೇ ಇರೋ ಕೆಲ್ಸನ ಒಂದೇಸಮ ಮಾಡ್ತಾನೇ ಇದೀವಿ...’

ಲಕ್ಷ್ಮಿಯ ದನಿಯಲ್ಲಿದ್ದ ಖೇದ ಎಲ್ಲರ ಅನುಭವಕ್ಕೆ ನಿಲುಕಿ ಚಣ ಮೌನ ಆವರಿಸಿತು.

ಈ ವಿಷಾದದ ದನಿಗಳು ಗೃಹಬಂಧನಕ್ಕೊಳಗಾಗಿ ಗೃಹಸೇವಕಿಯರಾದ ಗೃಹಪಾಲಕಿಯರದು. ಒಂದಿಡೀ ಸಂಸಾರದ ಹೊಟ್ಟೆ-ನಾಲಗೆಯ ಕಾಳಜಿ, ಹಿರಿಕಿರಿಯರ ಹೊತ್ತುಗೊತ್ತಿನ ಪೂರೈಕೆ, ರಿಪೇರಿ, ಸ್ವಚ್ಛತೆ, ಸಾಮಾನು ದಾಸ್ತಾನು, ಹಿತ್ತಲು-ಅಂಗಳ-ದನಕರು-ಗಿಡಗಂಟಿ ಮೇಲ್ವಿಚಾರಣೆಗಳನ್ನೆಲ್ಲ ನೋಡಿಕೊಳ್ಳುವ ಮನೆಯೊಡತಿಯರ ಆಡಲಾಗದ ಮಾತುಗಳಿವು. ಕೆಲವರಿಗೆ ಮನೆಕೆಲಸದ ಜೊತೆ ಕೃಷಿ ಕೆಲಸವಿದ್ದರೆ ಮತ್ತೆ ಕೆಲವರಿಗೆ ಅಂಗಡಿ, ಹಣ್ಣು-ತರಕಾರಿ ಬೆಳೆಯುವುದು, ಹಾಲು ವ್ಯಾಪಾರ ಇತ್ಯಾದಿ ಮೇಲುವಸಿ ಕೆಲಸವಿರುತ್ತದೆ. ಮಕ್ಕಳ ಹೊತ್ತು ಹೆತ್ತು ಸಾಕುವುದು, ಮನೆಯ ಅಶಕ್ತರಿಗೆ, ಅನಾರೋಗ್ಯದವರಿಗೆ ಹೆಗಲಾಗಿ ಸೇವೆ ಮಾಡುವುದು ಹೆಂಗಸರದೇ ಹೊಣೆ. ಎರಡು ಕೈಗಳಿಗೆ ಇಪ್ಪತ್ತು ಕೈಗಳ ಕೆಲಸವಿರುತ್ತದೆ. ಎಷ್ಟು ಮಾಡಿದರೇನಂತೆ? ‘ಏನ್ಕೆಲಸ ಮಾಡ್ತಿದೀರಾ?’ ಎಂದು ಯಾರಾದರೂ ಕೇಳಿದರೆ, ಗೃಹಲಕ್ಷ್ಮಿಯರು ‘ಏನೂ ಇಲ್ಲ’ ಎನ್ನುತ್ತಾ ಮುರುಟಿಕೊಳ್ಳುತ್ತಾರೆ!

ಬರಿಯ ಅಡುಗೆ ಮನೆಯೊಂದರಲ್ಲಿ ದಿನಕ್ಕೆ ನೂರು ಸಲ ಕೂತೇಳುತ್ತಾರೆ, ಐನೂರು ಸಲವಾದರೂ ಬಗ್ಗಿ ಏಳುತ್ತಾರೆ. ಬಾವಿ, ಬಟ್ಟೆಕಲ್ಲಿನೆದುರು ಬೆವರು ಸುರಿಸುತ್ತಾರೆ, ಒಲೆಯೆದುರು ರಕ್ತ ನೀರು ಮಾಡುತ್ತಾರೆ. ಆದರೂ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗೆಗೆ ಹೆಮ್ಮೆಯಿಲ್ಲ, ಅದು ಹೇಳಿಕೊಳ್ಳಬೇಕಾದ ಕೆಲಸವೆನಿಸಿಲ್ಲ, ಯಾಕೆ?

ಯಾಕೆಂದರೆ ಹೆಣ್ಣುಗಳಿಗೆ ಮನೆವಾರ್ತೆಯ ದುಡಿಮೆ ಎಂದರೆ ಕೊನೆಮೊದಲಿರದ, ವಿರಾಮವಿರದ ಸ್ವಾತಂತ್ರ್ಯಹರಣ. ಅದು ರಜೆಯಿರದ, ವೇತನವಿರದ, ವಿರಾಮವೂ ಇರದ ಹೇರಲ್ಪಟ್ಟ ದುಡಿಮೆ. ಆ ದುಡಿಮೆ ಅವರಿಗೆ ಗೌರವ ತರುತ್ತಿಲ್ಲ, ಅಧಿಕಾರ ನೀಡುತ್ತಿಲ್ಲ, ಸ್ವಾತಂತ್ರ್ಯ ನೀಡುತ್ತಿಲ್ಲ. ಬದಲಾಗಿ ಗೌರವ, ಅಧಿಕಾರ, ಸ್ವಾತಂತ್ರ್ಯ ಎಲ್ಲಕ್ಕೂ ಎರವಾಗಿದೆ. ಹೆಣ್ಣುತನವನ್ನು ಸಾಬೀತುಪಡಿಸುವುದೇ ಮನೆಯೊಳಗಿನ ಉಚಿತ ದುಡಿಮೆ ಎನ್ನಲಾಗುತ್ತದೆ.

ಅವರಿಗೆ ತಮ್ಮ ದುಡಿಮೆ ಗೌರವದ ಕಾಯಕವೆನಿಸದಿರಲು ಇದೇ ಕಾರಣವಾಗಿದೆ.

ಕಾಣದ ಕೆಲಸ, ಕೇಳದ ಕಥೆ..






ಕಾಯಕವೇ ಶ್ರೇಷ್ಠ, ಕಾಯಕವೇ ಧರ್ಮ ಎಂದ ಶರಣರ ನೆಲ ನಮ್ಮದು. ‘ಅನ್ನ ಶ್ರಮ’ ಎನ್ನುತ್ತಿದ್ದರು ಗಾಂಧೀಜಿ. ‘ವಸ್ತುವಿನ ತಯಾರಿಕೆಯ ಹಿಂದೆ ರಕ್ತ, ಬೆವರು, ಕಣ್ಣೀರು ಇರುತ್ತದೆ. ಅದನ್ನು ಅದೃಶ್ಯವಾಗಿಸಿ ಸರಕಿಗೆ ಮೌಲ್ಯ ತುಂಬಲಾಗುತ್ತದೆ’ ಎಂದ ಕಾರ್ಲ್ ಮಾರ್ಕ್ಸ್. ಕೆಲಸದ ಮೇಲುಕೀಳು ವಿಭಜನೆಯಿಂದ ಹುಟ್ಟಿದ ಜಾತಿವ್ಯವಸ್ಥೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಶ್ರಮದ ಮಹತ್ವದ ಬಗೆಗೆ ಎಲ್ಲ ಮಹಾನುಭಾವರೂ ತಿಳಿಸಿ ಹೇಳಿದರು. ಆದರೂ ಮನೆವಾರ್ತೆಯ ಶ್ರಮ ಕೀಳೆನಿಸಿಕೊಂಡು ಕೇವಲ ಹೆಣ್ಣುಗಳ ಹೆಗಲ ವಜ್ಜೆಯಾಗಿಸಿತು. ಅವರ ಕೆಲಸವೆಲ್ಲ ವೇತನ ರಹಿತ, ಉಚಿತ, ಕಡ್ಡಾಯ ಸೇವೆಯೇ ಆಯಿತು.

ಒಂದು ಅಧ್ಯಯನದಂತೆ ಪ್ರತಿ ಹೆಣ್ಣೂ ಪ್ರತಿದಿನ ವೇತನವಿರದ ೨೯೭ ನಿಮಿಷ ಸೇವೆಯ ಕೆಲಸ ಮಾಡಿದರೆ ಪ್ರತಿ ಗಂಡೂ ೩೧ ನಿಮಿಷ ಅಂತಹ ಕೆಲಸ ಮಾಡುತ್ತಾನೆ. ಎಂದರೆ ಪ್ರತಿ ಮನೆಯೂ ಮನೆಯಾಗಿರುವುದರ ಹಿಂದೆ ಕನಿಷ್ಟ ಒಬ್ಬಳ ‘ರಕ್ತ, ಬೆವರು, ಕಣ್ಣೀರು’ ಇದೆ.

ಆದರೂ ಸಮಾಜ ಹೇಗಿದೆಯೆಂದರೆ, ಮನೆಯಲ್ಲಿ ಹೆಣ್ಣು ಹುಟ್ಟುವುದು ಬೇಡ. ಹೆಣ್ಣು ದೇವರ ಬಳಿ ಬರುವುದು ಬೇಡ. ಅವಳ ಬುದ್ಧಿಮತ್ತೆ ತೋರಿಸುವುದು ಬೇಡ. ಅಧಿಕಾರದ ಸನಿಹ ಬರುವುದು ಬೇಡವೇ ಬೇಡ. ಬೇಕಿರುವುದು ಅವಳ ದೇಹ-ಬೆವರು-ರಕ್ತ ಮಾತ್ರ. ಅದೂ ಗಂಡಿನ ಸೇವೆ ಮಾಡಲು ಮತ್ತು ಮಕ್ಕಳ ಹೆತ್ತು ಕೊಡಲು. ‘ದಾಸಿಯಂತೆ ಸೇವೆ ಮಾಡುವ, ಮಂತ್ರಿಯಂತೆ ಸಮಾಲೋಚನೆಗೆ ಸಿಗುವ, ರಂಭೆ(ವೇಶ್ಯೆ)ಯಂತೆ ಹಾಸಿಗೆ ಸುಖವ ಕೊಡುವ, ತಾಯಿಯಂತೆ ಉಣಿಸುವ, ರೂಪದಲ್ಲಿ ಲಕ್ಷ್ಮಿಯಂತೆ, ಇರುವ’ ಮಾದರಿ ಹೆಣ್ಣು ಪತ್ನಿಯಾಗಿ ಬೇಕು ಎಂದೇ ಎಲ್ಲ ಗಂಡುಗಳು ನಿರೀಕ್ಷಿಸುತ್ತಾರೆ. ಪುರುಷ ಸಮಾಜದ ಈ ಧೋರಣೆಯನ್ನು ಕತೆ, ಹಾಡು, ಪುರಾಣಗಳಾಗಿಸಿ ಹೆಣ್ಣುಗಳ ತಲೆಗೆ ತುಂಬಲಾಗಿದೆ. ಮಾತೃದೇವತೆ, ಅನ್ನಪೂರ್ಣೆ, ಕ್ಷಮಯಾಧರಿತ್ರೀ ಮೊದಲಾದ ಮುಳ್ಳಿನ ಕಿರೀಟಗಳನ್ನು ಹೆಣ್ಣುಗಳ ತಲೆಯ ಮೇಲಿಡಲಾಗಿದೆ.

ಹತ್ತು ಹಲವು ನಿರೀಕ್ಷೆಗಳಿಗೆ ತಕ್ಕವಳಾಗಿ ಬದುಕಲು ಹಲವಾರು ಕೆಲಸಗಳನ್ನು ಒಮ್ಮೆಗೇ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಹೆಣ್ಣುಗಳ ಮೇಲಿದ್ದರೂ, ಅದು ‘ಮಲ್ಟಿಟಾಸ್ಕಿಂಗ್’ ಎಂಬ ಬಿರುದಿಗೆ ಪಾತ್ರವಾಗಿದೆ. ಆದರೆ ಹೆಣ್ಣು ಬದುಕಿನ ಗುಣಾತ್ಮಕತೆಯನ್ನು ಅದೇ ಕಡಿಮೆ ಮಾಡಿದೆ. ಕೆಲಸದ ಸ್ಥಳದಲ್ಲೂ ಮಹಿಳೆಗೆ ಎರಡನೆಯ ದರ್ಜೆ ಸ್ಥಾನ, ಅಪಾಯಗಳೇ ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಈಗವರು ಮನೆಯಾಚೆಗೂ ದುಡಿದು ಗಳಿಸುತ್ತಿದ್ದರೂ ಮನೆಗೆ ಬಂದನಂತರ ವಿರಾಮ ಮರೀಚಿಕೆಯಾಗಿದೆ. ಅತಿಶ್ರಮದ ಅನುಭವಗಳು ಹೆಣ್ಣು ಜನ್ಮ ಕೀಳು, ಹೆಣ್ಣು ಜನ್ಮ ಬೇಡ ಎಂದು ಹೆಣ್ಣುಗಳೇ ಹೇಳುವಂತೆ ಮಾಡಿವೆ.

ಅರಿಸ್ಟಾಟಲ್ ‘ಗಂಡು ಅಂತ ಒಂದೇ ಪ್ರಬೇಧ ಇದ್ದು ಹೆಣ್ಣು ಅಪೂರ್ಣ ಮಾನವ ಜೀವಿಯಾಗಿದ್ದಾಳೆ’ ಎನ್ನುತ್ತಾನೆ. ಇದನ್ನೇ ಗಂಡುಪ್ರಧಾನ ಸಮಾಜ ಈಗಲೂ ನಂಬಿಕೊಂಡಿದೆ. ಆದರೆ ಲಿಂಗತಾರತಮ್ಯವು ಪ್ರಾಕೃತಿಕವಲ್ಲ, ಸಾಂಸ್ಕೃತಿಕವಾದದ್ದು ಎಂದು ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆಯಿದೆ. ಅದಕ್ಕೆ ಒಂದೇ ದಾರಿ: ‘ಸಮತೆಯೆಡೆಗೆ ನಮ್ಮ ನಡಿಗೆ..’ ಈ ಬಾರಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷವಾಕ್ಯ ‘ಸಮಾನತೆಯ ತಲೆಮಾರು ನನ್ನದು: ಪಡೆಯುತಿಹೆವು ಮಹಿಳಾ ಹಕ್ಕುಗಳ ಅರಿವು’ ಇದನ್ನೇ ಧ್ವನಿಸುವಂತಿದೆ.

ಸಮಾನತೆಯ ಅರ್ಥವನ್ನು, ಸೌಂದರ್ಯವನ್ನು ಸಮಾಜ ಅರಿತು ರೂಢಿಸಿಕೊಂಡಲ್ಲಿ ಆಗ ಈ ಭೂಮಿ ಖಂಡಿತವಾಗಿ ಈಗಿರುವುದಕ್ಕಿಂತ ನೆಮ್ಮದಿಯ ನೆಲೆಯಾಗುತ್ತದೆ. ಎಷ್ಟೋ ಸಂಕಟಗಳು ತಂತಾವೇ ಪರಿಹಾರ ಕಾಣುತ್ತವೆ.

 (ಚಿತ್ರಗಳು: ಅಂತರ್ಜಾಲದಿಂದ)


Monday 10 February 2020

ಸಬರಮತಿಯ ನಾವಿಕರು




ಗ್ರಾಮೀಣ ಭಾಗದ ಸಬರಮತಿ


ಅಹಮದಾಬಾದಿನ ಸಬರಮತಿ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರುಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ ತನ್ನ ವಿರುದ್ಧ ನಡೆದ ದಾಳಿಯನ್ನು, ದೈಹಿಕ, ಮಾನಸಿಕ ಆಘಾತದ ಗಾಯಗಳನ್ನು ಯಾವುದೇ ವ್ಯಕ್ತಿ, ಕುಟುಂಬ, ಷಹರ, ಸಮುದಾಯ, ದೇಶವು ಮಾಯಿಸಿಕೊಳ್ಳುವುದು, ಅದರಿಂದ ಚೇತರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಹಿನ್ನೆಲೆಯಲ್ಲಿ ಚಾರಿತ್ರಿಕ ಗಾಯಗಳನ್ನನುಭವಿಸಿದ ಗುಜರಾತಿಗರ ಮಾಯುವಿಕೆ ಹೇಗಿರಬಹುದೋ ಎಂಬ ಕಾಳಜಿಯ ಮುಳ್ಳು ಸದಾ ಎದೆಯಲ್ಲಿ ಟಿಕ್‌ಗುಡುತ್ತಿತ್ತು. ಎಂದೇ ಹೆಸರು ಬದಲಿಸಿಕೊಳ್ಳುವ ಯಾದಿಯಲ್ಲಿ ಸೇರಿರುವ, ಸಬರಮತಿ ದಂಡೆಯ ಅಹಮದಾಬಾದ್ ಎಂಬ ಷಹರದಲ್ಲಿ ಇಂದು ಕಾಗೆಗಳು ಹೇಗೆ ಕಾಗುಡುತ್ತಿವೆ, ಗೂಬೆಗಳು ಹೇಗೆ ದಿಟ್ಟಿಸುತ್ತಿವೆ, ಲಾಲಿಹಕ್ಕಿ ಹೇಗೆ ಹಾಡುತ್ತಿದೆ ಕಾಣಬೇಕೆಂದು ಎರಡು ಬಾರಿ ಹೋಗಿಬಂದೆ.

ಗಾಯಗೊಂಡವರು, ಗಾಯಗೊಳಿಸಿದವರೆಂಬ ಎರಡು ದಂಡೆಗಳ ನಡುವೆ ಪ್ರೇಮ ಸಬರಮತಿ ಹರಿಯುತ್ತಿದ್ದಳು. ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಅಲ್ಲಲ್ಲಿ ಜೊತೆಜೊತೆಗೆ ನಡೆಯತೊಡಗಿದ್ದರು. ಕಾಲವೆಂಬ ಮಾಯಕವು ಗಾಯ ಮಾಯಿಸಲು ಮುಲಾಮು ಹಚ್ಚಿದ ಕುರುಹುಗಳಿದ್ದವು. ನೆಲದ ಮೇಲಿನ ನಾಲ್ಕು ದಿನದ ಬದುಕಿಗೆ ಬೇಕಿರುವುದು ದ್ವೇಷವಲ್ಲ, ಪ್ರೀತಿ, ವಿಶ್ವಾಸ ಎಂಬ ಪರಮಸತ್ಯ ಪ್ರತಿದಿನವೂ ಸೂರ್ಯನೊಂದಿಗೇ ಬೆಳಗತೊಡಗಿತ್ತು..

ಅಹಮದಾಬಾದಿನಲ್ಲಿ ಸಿಕ್ಕಿದ ಅನಿಲಭಾಯಿ, ಅಶ್ರಫ್ ಭಾಯಿ, ರಹಮತ್‌ಭಾಯಿಯಂತಹವರು ತಮ್ಮ ಕಪಟವಿರದ ಮಾತುಗಳಿಂದ ಎದೆಯ ಸಂವಿಧಾನವನ್ನು ತೆರೆದು ತೋರಿಸಿದರು. ಸಂವಿಧಾನವನ್ನೇ ಬದುಕುವುದೆಂದರೇನೆಂದು ತಿಳಿಯಪಡಿಸಿ ಭಾರತದ ನಾಳೆಗಳ ಬಗೆಗೆ ಭರವಸೆ ಮೂಡಿಸಿದರು.

ಇದು ಕಾಲಕ್ರಾಂತಿಯೇ ಸರಿ. ಆದರೆ ಇಂಥ ಸೂಕ್ಷ್ಮ ಕಂಪನಗಳು ವೇಗದ ಚಲನೆಗೆ ದಕ್ಕಲಾರದು. ಹುಳುವಾಗಿ ಹರಿದರಷ್ಟೇ ಅದೃಶ್ಯವಾದದ್ದು ಕಾಣಬಹುದು.

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

ಅಹಮದಾಬಾದ್ ವಿಮಾನ ನಿಲ್ದಾಣದ ಹೊರಗೆ ಒಬ್ಬ ತರುಣ ಆಟೋ ಬೇಕೆ ಎಂದು ಕೂಗುತ್ತಿದ್ದ. ನಾನು ತಂಗಲಿದ್ದ ವಸತಿಗೃಹವು ಅಲ್ಲಿಂದ ಹದಿಮೂರು ಕಿ.ಮೀ. ದೂರವಿತ್ತು. ಲೋಕಾಭಿರಾಮ ಮಾತಾಡಬೇಕೆನಿಸಿ ಆಟೋ ಹತ್ತಿದೆ. ಇಪ್ಪತ್ತೈದರ ಆಜುಬಾಜಿನ ತರುಣ ಅಶ್ರಫ್, ಬರಿಯ ಇನ್ನೂರೈವತ್ತು ರೂಪಾಯಿಯಲ್ಲಿ ಕರೆತಂದ. ಬೆಲೆ ಕಟ್ಟಲಾಗದಷ್ಟು ಅಮೂಲ್ಯ ಭರವಸೆಯನ್ನು ಮರಳಿ ತುಂಬಿದ.

ದೀಪಹಚ್ಚುವ ಕಾಲದಲ್ಲಿ ನಾನಲ್ಲಿದ್ದೆ. ಅಂದು ರಾತ್ರಿ ಹಣತೆ ಬೆಳಗಿಸಬೇಕು ಅಂದುಕೊಂಡಿದ್ದೆ. ಆದರೆ ವಿಮಾನಯಾನದಲ್ಲಿ ಹಣತೆ-ಬೆಂಕಿಕಡ್ಡಿ ಎರಡೂ ನಿಷಿದ್ಧವಾಗಿದ್ದರಿಂದ ತಂದಿರಲಿಲ್ಲ. ಹಾಗಂತ ಹೇಳಿದ್ದೇ ತಡ, ಅಶ್ರಫ್ ದಾರಿಯುದ್ದಕ್ಕೂ ಇದ್ದ ಪಟಾಕಿ ಅಂಗಡಿಗಳ ಬಳಿ ಮೆಲ್ಲನೆ ಆಟೋ ಚಲಾಯಿಸಿದ. ಎಲ್ಲೋ ಒಂದಿಬ್ಬರು ಮೇಣ ತುಂಬಿದ ಹಣತೆ ಇಟ್ಟುಕೊಂಡಿದ್ದರು. ಅದನ್ನು ಹಚ್ಚುವುದು ಹೇಗೆ? ಮತಾಪು ಕಡ್ಡಿ ಕೊಟ್ಟರು. ಆಗ ನನ್ನ ಸಾರಥಿಯು, ‘ಅಣ್ಣಾ, ಮತಾಪುಕಡ್ಡಿ ಬೇಡ, ಹೊಗೆಗೆ ಬೆಳಕೇ ಕಾಣಂಗಿಲ್ಲ, ಬರೀ ಕಡ್ಡಿಪೆಟಿಗಿ ಕೊಡು’ ಎಂದು ಕೇಳಿದ. ಜಮಾನಾ ಹೇಗಾಗಿದೆ ಅಂದರೆ ಬೆಳಕು ಹರಡುವಾಗಲೂ ಢಂಢಂ ಶಬ್ದವಾಗಬೇಕು, ಹೊಗೆ ಹರಡಬೇಕು ಎಂದು ಗೊಣಗಿಕೊಳ್ಳುತ್ತಾ ರಿಕ್ಷಾ ಇಳಿದು ಹೋಗಿ ಬೆಂಕಿಪೆಟ್ಟಿಗೆ ಹುಡುಕಿ ತಂದ.

ಅವನೊಡನೆ ಅದೂಇದೂ ಅಂತ ಗುಜರಾತಿನ ಪ್ರಸಕ್ತ ಸನ್ನಿವೇಶದ ಬಗೆಗೆ ಮಾತಿಗೆಳೆದೆ. ಬಹುಕಾಲದ ಕೆಳಗೇ ರಾಜಾಸ್ಥಾನದಿಂದ ‘ಅಮದಾವಾದಿಗೆ’ ಬಂದಿದ್ದ ಕುಟುಂಬದವನು ಅವನು. ಷಹರ ಹೊತ್ತುರಿಯುವಾಗ ಅವರ ಮೂಲನೆಲೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಂದೇ ಮರಳಿ ಹೋಗಲಿಲ್ಲ. ವೋಟಿಗಾಗಿ ಏನು ಬೇಕಾದರೂ ಮಾಡಿಸುವವರ ಆಟ ಇದೆಲ್ಲ ಎಂದು ಪಕ್ಷಗಳ, ನೇತಾರರ ಹೆಸರುಗಳನ್ನು ನೇರವಾಗಿ, ಧೈರ್ಯವಾಗಿ ಹೇಳುತ್ತ ಹೋದ.

ಅವನ ಪ್ರಕಾರ ಗುಜರಾತಿನವರಿಗೆ ಮುಖ್ಯವಾದದ್ದು ವ್ಯಾಪಾರ ಮತ್ತು ಬಂಡವಾಳ. ಅದಕ್ಕೆ ಕಷ್ಟ ಬರುವುದಾದರೆ ಏನನ್ನು ಬೇಕಾದರೂ ಬಿಟ್ಟುಬಿಡಲು, ಏನನ್ನಾದರೂ ಹಿಡಿಯಲು ಸಿದ್ಧರಾಗುತ್ತಾರೆ. ಗುಜರಾತನ್ನು ಸಸ್ಯಾಹಾರಿ ರಾಜ್ಯ ಮಾಡಲಿಕ್ಕೆ ಹೊರಟಿದ್ದರು. ಸಬ್ವೇ ಅಂಗಡಿಯಲ್ಲೂ ಎಗ್ ಪಫ್ ನಿಲ್ಲಿಸಿದ್ದರು. ಆದರೆ ವ್ಯವಹಾರ ನಷ್ಟವಾಗಿ ಮಾಂಸಮೊಟ್ಟೆ ನಿಲ್ಲಿಸಿದ್ದವರು ಪುನಃ ಶುರು ಮಾಡಿದ್ದಾರೆ; ಅವತ್ತು ಬರದಂತೆ ತಡೆಹಿಡಿದ ಕೆಎಫ್‌ಸಿ ಈಗ ಬಂದಿದೆ ಎಂದ.

ಗಲಭೆಯಿಂದ ಎಲ್ಲರಿಗೂ ನಷ್ಟವಾಗಿದೆ. ಅದರಿಂದ ಯಾರಿಗೂ ಲಾಭವಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಹಾಗಾಗಿ ಇನ್ನು ಗುಜರಾತಿನಲ್ಲಿ ಹಿಂದೆ ಆದಂತೆ ಗಲಭೆಗಳು ಆಗುವುದಿಲ್ಲ ಎನ್ನುವುದು ಅವನ ಅಭಿಪ್ರಾಯ. ‘ನೀವ್ ಯಾರ‍್ಗನ್ನಾ ಕೇಳಿ ಮೇಡಂ, ಇದೇ ಹೇಳ್ತಾರೆ. ಕೆಲ್ಸಾ ಇಲ್ಲ, ಎಲ್ಲಾರ‍್ಗುನು ಕಷ್ಟ. ಹಾಂಗೆ ನೋಡಿದ್ರೆ ಮುಸ್ಲಿಂ ಹುಡುಗ್ರು ಉದ್ಯೋಗ ಇಲ್ಲ, ಆ ಕೆಲ್ಸ ಸಿಗ್ಲಿಲ್ಲ ಅಂತ ಸುಮ್ನಿರಲ್ಲ, ಯಾವ್ದೇ ಕೆಲ್ಸ ಬೇಕಾದ್ರೂ ಮಾಡಿಬಿಡ್ತಾರೆ. ಆದ್ರೆ ನಮ್ಮ ದೋಸ್ತರಲ್ಲಿ ಕೆಲವ್ರು ಅವತ್ತು ಗಲಭೆಯಲ್ಲಿ ಇದ್ದೋರು ಅಂತ ಕೇಸ್ ಆಗಿ ಸ್ಟೇಷನ್ನು, ಕೋರ್ಟಿಗೆ ತಿರುಗಾಡಿ ತಿರುಗಾಡಿ ಸುಸ್ತ್ ಹೊಡ್ದಿದಾರೆ. ಕೇಸಿದೆ ಅಂತ ಅವ್ರಿಗೆ ಯಾರಿಗೂ ಮದುವೆ ಆಗ್ಲಿಲ್ಲಾ. ದೊಡ್ ನೌಕ್ರಿ, ಸರ್ಕಾರಿ ನೌಕ್ರಿ ಸಿಗ್ತಿಲ್ಲ. ಹೊರ‍್ಗೆ ಹೋಗ್ಲಿಕ್ಕೆ ವೀಸಾ ಇಲ್ಲ. ಎಷ್ಟೋ ಜನ್ರ ಆಧಾರ ಕಾರ್ಡು, ಮತ್ತುಳಿದ ಕಾರ್ಡೆಲ್ಲ ಕಿತ್ಕಂಡು ಏನೂ ಮಾಡಕ್ಕಾಗ್ತಿಲ್ಲ. ಅದೋ ಇದೋ ಸಾದಾ ಕೆಲ್ಸ ಮಾಡಕ್ಕೆ ಅವ್ರಿಗೆ ಮನ್ಸಿಲ್ಲ. ನೋಡ್ತಿದೀವಲ, ನಮ್ ಹಿಂದೂ ಫ್ರೆಂಡ್ಸ್ ತುಂಬಾ ಕಷ್ಟದಲ್ಲಿದಾರೆ ಮೇಡಂ. ಬಾಳಾ ಕಷ್ಟ. ಸುಮ್ನೆ ಅದೇನೋ ಬಂತು ಅಂತ ಆಗ ಒಂದ್ಸಲಕ್ಕೆ ಏರ‍್ಕಂಡು ಹೋದ್ರು. ನೋಡಿ, ಈಗ ಇತ್ಲಾಗೆ ಕೆಲ್ಸಾನೂ ಇಲ್ಲ, ಆ ಕಡೆ ಅವ್ರಿಗೂ ಬೇಡ. ಮನೆಯೋರ‍್ಗೆ ಬಾರೀ ಕಷ್ಟ. ಎಲ್ರಿಗೂ ಈಗ ತಿಳೀತಾ ಇದೆ. ಈಗ ಅವ್ರೇ ಹೇಳ್ತಾರೆ ನಮ್ಮತ್ರ, ನಾವವತ್ತು ಮಾಡಿದ್ದು ಸರಿಯಾಗ್ಲಿಲ್ಲ ಮರಾಯಾ ಅಂತ. ಅದ್ಕೇ, ಗ್ಯಾರಂಟಿ ಹೇಳ್ತಿನ್ ಕೇಳಿ ಮೇಡಂ, ಎಲ್ಲಾ ಮತ್ತೆ ಮೊದ್ಲಿನಂಗೇ ಆಗುತ್ತೆ, ಸ್ವಲ್ಪಾ ಟೈಂ ಬೇಕು ಅಷ್ಟೇ’ ಎಂದ.

ರಸ್ತೆಪಕ್ಕ ಬಹುತೇಕ ಸಿಗ್ನಲ್, ಸರ್ಕಲುಗಳಲ್ಲಿ ಹಸಿರು ಬಾವುಟ ಹಾರಿಸುತ್ತಿದ್ದ ಸೂರಿನಡಿ ಹಸಿರು ಚಾದರ ಹೊದ್ದ ಗೋರಿಗಳು ಕಂಡುಬಂದವು. ಅವು ಸೂಫಿ ಸಂತರ ಮಜಾರುಗಳು. ‘ಅಮ್ದಾವಾದಿನಲ್ಲಿ ಇಂತಹ ನೂರಾರು ಕಾಣಬೋದು ನೀವು. ದೊಡ್ಡದೊಡ್ಡ ಬಿಲ್ಡಿಂಗ್ ಇದಾವಲ್ಲ, ಅದರಲ್ಲಿ ಎಷ್ಟೋ ಬಿಲ್ಡಿಂಗುಗಳ ಕೆಳಗಿನ ಮಹಡೀಲಿ ಮಜಾರುಗಳಿದಾವೆ ಮೇಡಂ. ಯಾವ ಜಾತಿ ಧರ್ಮದೋರಾನಾ ಆಗ್ಲಿ, ಎಲ್ಲರೂ ಪ್ರತಿ ಶುಕ್ರವಾರ ಲೋಬಾನ ಹಚ್ಚಿ ಹೂವಿನ ಚಾದರ್ ಹಾಕ್ತಾರೆ. ಸಂತರು ಒಳ್ಳೇದೇ ಮಾಡ್ತಾರೆ ಅಂತ ಎಲ್ರಿಗೂ ನಂಬಿಕೆ’ ಅಂದ.



‘ಮೊದ್ಲು ನಮ್ಮನೆ ಇದ್ದ ಏರಿಯಾ ಸ್ಲಮ್ಮು ಮೇಡಂ. ಎಲ್ಲಾ ಬಡವ್ರು, ಅವತ್ತವತ್ಗೆ ದುಡದು ತಿನ್ನೋರು. ಅಲ್ಲಿ ನಮ್ದು ಮತ್ತು ಹಿಂದೂ ಜನ್ರದ್ದು ಒಟ್ಟೊಟ್ಟಿಗೇ ಮನೆ ಇದ್ವು. ನೋಡ್ಬೇಕು ನೀವು, ಒಂದೇ ಗೋಡೆ, ಮನೆ ಆಚೆ ಈಚೆ ಅಷ್ಟೆ. ನೀವು ಮನೆ ಅಂತಾ ಕರೀತಿರೊ, ಮಕಾನು ಅಂತ ಕರೀತಿರೋ, ಏನು ಬದಲಾಗುತ್ತೆ? ಅಲ್ಲಾ ಅಂತ ಕರೀತಿರೋ, ಜಗನ್ನಾಥ ಅಂತ ಕರೀತಿರೋ, ದೇವ್ರ ಮೇಲಿಟ್ಟಿರೋ ವಿಶ್ವಾಸದಲ್ಲಿ ಏನು ಬದಲಾಗುತ್ತೆ? ಯಾವ್ಯಾವ್ದೊ ಹೆಸರಲ್ಲಿ ದೇವ್ರುನ್ನ, ನಾವು ನಂಬಿರೋ ಧರ್ಮನ ಕರೀತಿವಿ ಅಷ್ಟೇ.’

ಮೊದಲು ಅಶ್ರಫನ ಕುಟುಂಬ ಸಬರಮತಿ ನದಿ ದಂಡೆಯಲ್ಲಿತ್ತಂತೆ. ನದಿಗೆ ಕಾಂಕ್ರೀಟು ದಂಡೆ ಕಟ್ಟುತ್ತ ಅಲ್ಲಿದ್ದವರನ್ನೆಲ್ಲ ಎತ್ತಂಗಡಿ ಮಾಡುವಾಗ ಬೇರೆಬೇರೆ ಧರ್ಮ, ಜಾತಿಯವರನ್ನು ಬೇರೆಬೇರೆ ಕಡೆ ಹಾಕಿ ಬಾಲ್ಯದ ಎಷ್ಟೋ ದೋಸ್ತರು ದೂರವಾದರಂತೆ. ಅವರ ಈಗಿನ ಮನೆಯ ಗೋಡೆಗೆ ಜೋಗ್ನಿ ಮಾತಾ ಇರುವ ಟೈಲ್ಸ್ ಅನ್ನು ತನ್ನ ತಂದೆ ಕೂರಿಸಿದ್ದು ಮಾತಾ ತಮ್ಮನ್ನು ಕಾಪಾಡುವಳೆಂದು ನಂಬಿದ್ದಾರೆ ಎಂದ ಅಶ್ರಫ್. ಫೋಟೋ ತೋರಿಸಿದ, ನಮ್ಮ ಚಾಮುಂಡೇಶ್ವರಿ ತರಹ ಇದ್ದಾಳೆ ಜೋಗ್ನಿ ಮಾತಾ. ಹಾಗೆಯೇ ಬಂಗ್ದಾದಿಯಾ ಪೀರನ ಅನುಯಾಯಿಗಳಲ್ಲಿ ಹಿಂದೂಗಳೇ ಹೆಚ್ಚು ಇದ್ದಾರಂತೆ. ಎಷ್ಟು ದಿನ ತಾನೇ ಒಬ್ಬರು ಮತ್ತೊಬ್ಬರನ್ನು ದ್ವೇಷಿಸಲು ಸಾಧ್ಯ? ಎಷ್ಟುದಿನ ಸಿಟ್ಟು ಉಳಿಯಲು ಸಾಧ್ಯ? ಎದುರೆದುರು ನಿಂತು ಎಷ್ಟು ದಿನ ಮುಖ ನೋಡದೆ ಇರಲು ಸಾಧ್ಯ? ನಾವು ಕುಡಿದ ತಾಯಿಯ ಹಾಲು - ‘ಮಾಂ ಕೀ ದೂಧ್ ಕಾ ಅಸರ್’ - ಹಾಗಿರಲಿಕ್ಕೆ ಬಿಡುವುದಿಲ್ಲ. ಕುಣಿಸುವವರ ತಾಳಕ್ಕೆ ತಕ್ಕಂತೆ ನಾಕು ದಿನ ಕುಣಿದಾರು, ಎಂಟು ದಿನ ಕುಣಿದಾರು, ಒಂದು ವರ್ಷ ಕುಣಿದಾರು. ಸುಸ್ತಾದ ಮೇಲೆ ಅವರ ಕಾಲೇ ಅವರಿಗೆ ನಿಜ ಏನೆಂದು ಹೇಳುತ್ತದೆ ಎನ್ನುವುದರಲ್ಲಿ ತನಗೆ ನಂಬಿಕೆಯಿದೆ ಅಂದ.

ಅವ ಹೀಗೇ ಮಾತಾಡುತ್ತ ಹೋಗುವಾಗ ಕೇಸರಿ ಪಡೆ ಸೃಷ್ಟಿಸಿದ ಭಯ, ಭೀತಿಗೆ ಜನ ಒಳಗಾಗಿದ್ದಾರೆಯೇ ಒಂಬ ಶಂಕೆ ಸುಳಿಯಿತು. ನನ್ನ ಭಾವ ಗ್ರಹಿಸಿದನೋ ಎಂಬಂತೆ, ‘ಜಡ್ಡುಗಟ್ಟಿದ ಕೆಡುಕು ಎಲ್ಲಾ ಕಡೆ ಇರ‍್ತದೆ. ಅದು ಹೋಗ್ಬೇಕಾದ್ರೆ ಇದ್ದಿದ್ದನ್ನೆಲ್ಲ ಕಿತ್ತು ಹಾಕಬೇಕಾಗ್ತದೆ. ಆಗ ಒಂದಷ್ಟು ಬೇಕಾಗಿರೋದನ್ನೂ ಕಳಕೊಳ್ತೀವಿ, ಅದು ಸಹಜ’ ಎನ್ನುತ್ತಾ ಕೆಲ ಘಟನೆಗಳನ್ನು ಹೇಳಿದ. ಈಗ ಹಳೆಯ ಗಾಯಗಳು ಮಾಯ್ದಿವೆ, ಆದರೆ ಕಲೆಗಳು ಮಾತ್ರ ಉಳಿದಿವೆ ಎಂದು ಸೂಚ್ಯವಾಗಿ ಹೇಳಿದ.

ಏನೇ ಆಗಲಿ, ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಇಬ್ಬರೂ ಸಮಾಧಾನಗೊಂಡು ಜೊತೆಜೊತೆಗೆ ನಡೆಯುವುದು; ಕಣ್ಣೀರು ಸುರಿಸಿದವರು ಆದದ್ದನ್ನು ಮರೆತು ತಾವು ಸುರಕ್ಷಿತವೆಂದುಕೊಳ್ಳುವುದು ಸಾಧ್ಯವಾಗಿದ್ದರೆ ಅದು ಕಾಲಕ್ರಾಂತಿಯೇ ಎನಿಸಿತು.

ಈ ಕ್ರಾಂತಿಯು ಜ್ಯೋತಿಯಾಗಿ ಬೆಳಗುವ ಕಾಲ ಬೇಗ ಬರಲಿ..



‘ನನ್ನ ರಿಕ್ಷಾನೇ ನನ್ನ ಮಂದಿರ’ - ಅನಿಲ ಭಾಯಿ

ಸಬರಮತಿ ನದಿ, ನದಿದಂಡೆಯ ಆಶ್ರಮ ಹೊಕ್ಕು ಹೊರಟು ಬಂದಿದ್ದೆ. ಹಳೆಯ ಅಹಮದಾಬಾದನ್ನು ಸುತ್ತಬೇಕಿತ್ತು. ಪ್ರಣಾಮಿ ದೇವಾಲಯ, ಜೂಲ್ತಾ ಮಿನಾರು, ಶೀಡಿಸೈದಿ ಜಾಲಿ ಮತ್ತಿತರ ಜಾಗಗಳನ್ನು ನೋಡಬೇಕಿತ್ತು. ಕೈಯಡ್ಡಹಾಕಿ ನಿಲ್ಲಿಸಿದ ಆಟೋದವರು ಎಲ್ಲಿಗೆಂದು ಕೇಳಿದ ಮೇಲೆ ಹೋಗಿಬಿಟ್ಟಿದ್ದರು.

ನಿಧಾನ ಒಂದು ಆಟೋ ಬಂತು. ಸಣಕಲು ಸಾರಥಿ ಕೂತಿರುವನೋ ಮಲಗಿರುವನೋ ತಿಳಿಯದಂಥ ಭಂಗಿಯಲ್ಲಿದ್ದರು. ಒಂದು ಕಾಲು ಮಡಚಿ ಸೀಟಿನ ಮೇಲಿಟ್ಟು, ಇನ್ನೊಂದೇ ಕಾಲಲ್ಲಿ ಆಟೋ ಓಡಿಸುತ್ತಿದ್ದರು. ಹುಬ್ಬು ಹಾರಿಸಿ ಕಣ್ಣಲ್ಲೇ ಎಲ್ಲಿಗೆ ಎಂದರು. ಪ್ರಣಾಮಿ ಮಂದಿರ ಎಂದೆ. ಹಲವರಿಗೆ ಪ್ರಣಾಮಿ ಎಂಬ ಹೆಸರೇ ಗೊತ್ತಿರಲಿಲ್ಲ. ಆದರೆ ಈತ ಕಣ್ಮುಚ್ಚಿ ಗೂಗಲಿಸಿ ‘ಸಾರಂಗಪುರ ದರವಾಜಾ, ದೌಲತ್ ಖಾನಾದ ಬಳಿ’ ಎನ್ನುತ್ತ ಹತ್ತಿಹತ್ತಿ ಎಂದು ಕಣ್ಣಲ್ಲೇ ಸೂಚಿಸಿದರು.

ಅವರು ಅನಿಲ ಭಾಯಿ. ಗೈಡ್ ಆಗಿ, ಗುರುವಾಗಿ ಒದಗಿದ ಐವತ್ತರ ಆಸುಪಾಸಿನ ಕೃಶ ಶರೀರಿ.

ಆತುರವಿರದೆ, ಆಲಸ್ಯವೂ ಇರದೆ ಹಳೆಯ ಷಹರದೆಡೆಗೆ ಚಲಿಸತೊಡಗಿದೆವು. ಅವರನ್ನು ಮಾತಿಗೆಳೆಯಲು ಪ್ರಶ್ನೆಗಳ ಚಾದರ ಹಾಸತೊಡಗಿದೆ. ಒಂದಾದಮೇಲೊಂದು ದರವಾಜಾಗಳ ದಾಟುತ್ತ ಹೋದಂತೆ ಅಹ್ಮದ್ ಶಾಹನೆಂಬ ಅರಸು, ಅವ ಕಟ್ಟಿದ ಹದಿನಾಲ್ಕು ಬಾಗಿಲು(ದರವಾಜಾ)ಗಳು, ಅದರೊಳಗಿನ ನಗರದ ಕುರಿತು ಮಾತು ಅರಳತೊಡಗಿತು.

‘ಇದು ಅಮ್ದಾವಾದು. ಅಮ್ಮದ್ ಷಾ ಕಟ್ಟಿಸಿದ ಊರು. ಈ ದರವಾಜಾಗಳಿದಾವಲ್ಲ, ಇದರ ಒಳಗೆ ಅಮ್ದಾವಾದಿನ ಆತ್ಮ ಇದೆ. ಹೊರಗಡೆ ಬೆಳೀತಾ ಬೆಳೀತಾ ಎರಡು ದರವಾಜಾ ಹೋಯಿತು. ಸಬರಮತಿ ನದಿ ಇತ್ತಲ್ಲ, ಅದೂ ಮೊದಲು ಊರನಡುವೆ ಹರೀತಿದ್ದಿದ್ದು ನಗರ ಕಟ್ಟುವಾಗ ಹೊರಗೆ ಹೋಯಿತು. ಅಷ್ಟೇಅಲ್ಲ, ಗೋಮತಿ ಅಂತ್ಲೂ ಒಂದು ನದಿ ಹರೀತಿತ್ತಂತೆ. ಈಗ ಮತಿನೂ ಇಲ್ಲ, ಗೋಮತಿನೂ ಇಲ್ಲದಂತಾಯಿತು’ ಎನ್ನುತ್ತ ದರವಾಜಾಗಳ, ಹೊಸ ಷಹರದ ಇತಿಹಾಸ ಹೇಳತೊಡಗಿದರು.

ಪಾಂಚ್ ಕುಂವಾ ದರವಾಜಾ, ಪ್ಯಾರ್ ಕಾ ದರವಾಜಾ, ರಾಯಪುರ ದರವಾಜಾ, ಅಸ್ಟೋಡಿಯಾ ದರವಾಜಾ, ಲಾಲ್ ದರವಾಜಾಗಳ ದಾಟಿದೆವು. ದಿಲ್ಲಿ ದರವಾಜಾ ಬಂದಾಗ ಈಗ ಹದಿನೆಂಟು ವರ್ಷ ಕೆಳಗೆ ಸಂಭವಿಸಿದ ಭೀಕರ ಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳನ್ನು ನೆನಪಿಸಿದರು. ಒಂದೆಡೆ ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿಯವರ ಚಿತ್ರ; ಇನ್ನೊಂದೆಡೆ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಇದ್ದ ಚಿತ್ರ ಅದು. ಇಡಿಯ ಸನ್ನಿವೇಶವನ್ನು ಅಭಿವ್ಯಕ್ತಿಸುವಂತಿದ್ದ ಅವರಿಬ್ಬರ ಮುಖಭಾವಗಳು ಎಲ್ಲಾ ಮಾಧ್ಯಮಗಳಲ್ಲೂ ರಾರಾಜಿಸಿದ್ದವು. ಭಾರತ ಅಷ್ಟೇ ಅಲ್ಲ, ಪ್ರಪಂಚದಲ್ಲೇ ಖ್ಯಾತವಾಗಿದ್ದವು. ಆದರೆ ಅಶೋಕ ಪಾರಮಾರ ಎಂಬ ತರುಣ ಕೆಲಸವಿಲ್ಲದೆ, ದುಡಿಮೆಯಿಲ್ಲದೆ, ಪ್ರೇಮಿಸಿದವಳಿಂದ ಮೋಸಹೋಗಿ ಕ್ರುದ್ಧಗೊಂಡಿದ್ದಾಗ ಒಳಸಿಟ್ಟನ್ನು ರಟ್ಟೆಯಲ್ಲಿ ಹೊರಹಾಕಿದ್ದರೇ ಹೊರತು ಅವರು ಅಂಥ ಯಾವುದೇ ಸಂಘಟನೆಯವರಾಗಿರಲಿಲ್ಲವಂತೆ. ತಮ್ಮನ್ನು ಬಿಂಬಿಸಿದ ಪರಿಯಿಂದ ಮನನೊಂದ ಅವರು ಕೆಲವು ವರ್ಷ ಕೆಳಗೆ ದಿಲ್ಲಿ ದರವಾಜಾ ಬಳಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು, ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನೇ ಕರೆದರಂತೆ. ಅನ್ಸಾರಿಯವರ ಆತ್ಮಕತೆ ಗುಜರಾತಿಯಲ್ಲಿ, ಹಾಗೂ ಅನಂತರ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಗಿದೆ. ಅಶೋಕ ಪಾರಮಾರ ಅವರು ಊನಾದವರೆಗಿನ ದಲಿತ ಸ್ವಾಭಿಮಾನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು. ಇದನ್ನು, ಇಂಥ ಹಲವು ವ್ಯಕ್ತಿ-ಘಟನೆಗಳ ವಿವರಗಳನ್ನು ಅನಿಲಭಾಯಿ ಹೇಳುತ್ತ ಸಾಗಿದರು.






ಸಾರಂಗಪುರ ದರವಾಜಾ ಬಂತು. ಸಣ್ಣಪುಟ್ಟ ಗಲ್ಲಿಗಳಂತಹ ಬೀದಿಗಳಲ್ಲಿ ಎಲ್ಲೆಲ್ಲೂ ಪವಡಿಸಿದ ದನಗಳ ದಾಟುತ್ತಾ ಪ್ರಣಾಮಿ ಮಂದಿರ ತಲುಪಿದೆವು. ‘ಒಳಗೆ ಬರ‍್ತೀರಾ?’ ಎಂದೆ. ‘ನಾನು ನಾಸ್ತಿಕ. ನನ್ನ ರಿಕ್ಷಾನೇ ನನಗೆ ಮಂದಿರ’ ಎಂದರು. ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಗ್ರಂಥ ಪಠಣ ನಡೆಯುತ್ತಿತ್ತು. ಮೈಸೂರುಪಾಕದಂತಹ ಬಲು ರುಚಿಯಾದ ಪ್ರಸಾದ ಕೊಟ್ಟರು. ಅನಿಲಭಾಯಿಗೂ ಒಂದು ತುಂಡು ಕೊಡಹೋದರೆ, ‘ಬೇಡ, ಅದನ್ನ ತುಪ್ಪದಲ್ಲಿ ಮಾಡಿರ‍್ತಾರೆ. ನಾನು ತುಪ್ಪ ಬಿಟ್ಟಿದ್ದೇನೆ’ ಎಂದರು!

‘ಬೇಜಾರಾಗ್ಬೇಡಿ ಬೇನ್ಜಿ. ನಾನು ಯಾವ್ದೇ ಮಂದಿರ, ಮಸೀದಿ, ಗುರುದ್ವಾರಗಳಿಗೆಲ್ಲ ಹೋಗೋದಿಲ್ಲ. ಈಗ ಹಿಂದೂಗಳಿಗೆ ತಾನು ಹಿಂದೂ ಅಂತ ಗರ್ವ. ಮುಸಲಮಾನರಿಗೆ ತಾನು ಮುಸಲ್ಮಾನ ಅಂತ ಗರ್ವ. ಹಿಂಗೇ ಎಲ್ಲಾರ್ಗುನೂ. ಯಾವ್ದೇ ಇರಲಿ, ನಂನಂ ಧರ್ಮ ನಮ್ಮಲ್ಲಿ ವಿನಯ ಹುಟ್ಟಿಸ್ಬೇಕೇ ಹೊರ‍್ತು ಗರ್ವ ಹುಟ್ಟಿಸಬಾರದು. ತಾನಿಂಥ ಧರ್ಮದವ, ಜಾತಿಯವ, ದೇಶದವ ಅಂತ ಗರ್ವ ಹುಟ್ಟಿತಾ? ಮುಗೀತು, ಅವ್ರೂ ನಾಶ. ಧರ್ಮ, ದೇಶ, ಜಾತಿನೂ ನಾಶ. ಇವತ್ತು ಇದೇ ಆಗ್ತಾ ಇರೋದು. ಅದ್ಕೇ ಹೀಗಾಗ್ತಿರೋದು’ ಎಂದರು.

ಎಲಎಲಾ! ಹೌದಲ್ಲವೆ? ಜನಸಾಮಾನ್ಯರಿಗಿರುವ ಲೋಕಜ್ಞಾನ ಜನನಾಯಕರಿಗಿದ್ದಿದ್ದರೆ ಇಷ್ಟು ಗಾಯಗಳೂ ಆಗುತ್ತಿರಲಿಲ್ಲ, ಕಲೆ ನೋಡಿಕೊಳ್ಳಬೇಕಾದ್ದೂ ಇರಲಿಲ್ಲ ಅಲ್ಲವೆ?

ಪ್ರಣಾಮಿ ನೋಡಿ ಆಯಿತು. ನಾನು ನೋಡಬೇಕಿದ್ದ ಉಳಿದ ಸ್ಥಳಗಳ ಪಟ್ಟಿ ಹೇಳಿ ಅಲ್ಲಿಗೂ ಬರುವಿರಾ ಎಂದೆ. ಹತ್ತಿ ಎಂದು ಸನ್ನೆ ಮಾಡಿದರು. ಊಟದ ಸಮಯವೆಂದು ನೆನಪಿಸಿದಾಗ ಮುಖ್ಯ ರೇಲ್ವೆ ಸ್ಟೇಷನ್ನಿನ ಎದುರು ಗುಜರಾತಿ ಹೋಟೆಲಿಗೆ ಕರೆದೊಯ್ದರು. ‘ನೀವೂ ಬನ್ನಿ’ ಎಂದು ಕರೆದರೆ, ‘ನಾನು ಬೆಳಿಗ್ಗೆ ಹನ್ನೊಂದಕ್ಕೆ ಊಟಮಾಡಿ ಹೊರಬಿದ್ದರೆ ಮತ್ತೆ ರಾತ್ರಿ ಎಂಟಕ್ಕೆ ಮನೆ ಮುಟ್ಟಿದ ಮೇಲೇ ಉಣ್ಣುವುದು. ಸಂಜೆ ಐದು ಗಂಟೆಗೆ ಒಂದು ಚಾ ಮಾತ್ರ’ ಎಂದರು!

ಎಷ್ಟು ಖಚಿತವಾಗಿದಾರಲ್ಲ ಘನವ್ರತಿ ಎಂದು ಅಚ್ಚರಿಪಡುತ್ತಾ ಗುಜರಾತಿ ಊಟ ಒಳಗಿಳಿಸಿದೆ. ದಾಲ್ ಪಾಯಸದಂತಿತ್ತು. ಎಲ್ಲಕ್ಕೂ ಸಕ್ಕರೆ ಹಾಕಿದ್ದರು. ಇಲ್ಲ, ಇಷ್ಟು ಸಿಹಿ ನಾಲಗೆಯ ಜನ ಕಲ್ಲೆದೆಯವರಾಗಲು ಸಾಧ್ಯವಿಲ್ಲವೆನಿಸಿತು.

‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ’ - ರಹಮತ್ ಭಾಯಿ




ಸಂದುಗೊಂದು ಸುತ್ತಿ ಜೂಲ್ತಾ ಮಿನಾರ್‌ಗೆ ಹೋದೆವು. ತಲೆತಲಾಂತರದಿಂದ ಮಿನಾರು ನೋಡಿಕೊಳ್ಳುತ್ತಿರುವ ರಹಮತ್ ಭಾಯಿ ಒಳಗಿದ್ದರು. ಸಾರಥಿ ಅನಿಲಭಾಯಿ ಅವರನ್ನು ಕೂಗಿ ಕರೆದು, ತೋರಿಸಲು ಹೇಳಿದರು. ಪಕ್ಕಪಕ್ಕ ನಿಂತಿರುವ, ಕಂಪಿಸುವ ಜೋಡಿ ಮಿನಾರುಗಳ ಆವರಣದಲ್ಲಿ ಜನರೇ ಇರಲಿಲ್ಲ. ಒಂದನ್ನು ಅಲುಗಿಸಿದರೆ ಇನ್ನೊಂದು ಅಲುಗುತ್ತದೆ. ಒಂದು ಕಂಪಿಸಿದರೆ ಇನ್ನೊಂದು ಕಂಪಿಸುತ್ತದೆ. ಇದನ್ನು ದೂಡಿದರೆ ಅದು ಗಲಗಲಿಸುತ್ತದೆ. ನೋಡಲು ಬಂದವರು ನೋಡಿ, ದೂಡಿ, ಸ್ವಲ್ಪ ಹಾಳಾಗಿ ಈಗ ಅಲುಗಿಸುವುದು ನಿಷಿದ್ಧವಾಗಿದೆ. ಇದನ್ನು ಹೇಗೆ ಕಟ್ಟಿರಬಹುದು ಅಂತ ರಹಮತ್ ಭಾಯಿಯವರನ್ನು ಕೇಳಿದೆ. ‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ ಮೇಡಂ, ಹಾಂಗೆನೇ ಇದೂ’ ಎಂದರು.

‘ನಿಮ್ಮಂಥಾದ್ದೇ ಪ್ರಶ್ನೆ ಎಲ್ರಿಗೂ ಬಂತು. ಇದು ಕಂಪಿಸಿದ್ರೆ ಅದೂ ಹ್ಯಾಂಗೆ ಕಂಪಿಸ್ತದೆ ಅಂತ. ಇಲ್ಲೇ ಇನ್ನೊಂದು ಜೂಲ್ತಾ ಮಿನಾರಿತ್ತು. ನೋಡುವ ಅಂದ್ಕಂಡಿ ಬ್ರಿಟಿಷ್ರು ಅದ್ನ ಸಾವಕಾಶ ಬಿಚ್ಚಿದ್ರಂತೆ. ಏನು ಕಾಣ್ತು? ಎಂಥಾದ್ದೂ ಇಲ್ಲ, ಮಣ್ಣು. ಕಾಣೋದಾದ್ರೂ ಹ್ಯಾಂಗೆ? ಜೋಡಣೇಲೇ ಇರ‍್ತದೆ ಜಾದೂ. ಮತ್ತೆ ಮೊದ್ಲಿನ ಹಾಂಗೇ ಜೋಡಿಸಿಟ್ರಂತೆ. ಆದ್ರೆ ಹ್ಯಾಂಗಿಟ್ರೂ ಮೊದಲಿನಂಗೆ ಆಗ್ಲಿಲ್ಲ. ಮೊದಲಿನಂಗೆ ಕಂಪನಾನೂ ಹುಟ್ಲೇ ಇಲ್ಲ. ಕೊನೆಗೆ ಬೀಳಿಸಿಬಿಟ್ರಂತೆ. ಜನರೂ ಹೀಂಗೇ, ಈ ಮಿನಾರುಗಳ ತರಾನೇ. ಅದು ಹ್ಯಾಂಗೆ ಒಬ್ರಿಗೊಬ್ರು ಹೊಂದ್ಕೊಂಡಿದಾರಲ್ಲ ಅಂತ ಅವ್ರನ್ನ ಬಿಡಿಸಿಬಿಡಿಸಿ ಇಟ್ರೆ ಕೊನೆಗೆ ಸರ್ವನಾಶಾನೇ. ಆದ್ರೆ ಏನ್ಮಾಡೋದು ಮೇಡಂ? ಈಗ ಅದೇ ನಡೀತಿದೆ. ಅದ್ಕೇ ಹ್ಯಾಂಗಾದ್ರೂ ಮತ್ತೆ ಮೊದ್ಲಿದ್ದಂಗೆ ಕಟ್ಬೇಕು, ಮತ್ತಷ್ಟು ಬೀಳ್ಸಬ್ಯಾಡ್ರಪ್ಪ ಅಂತ ತಡೀಬೇಕು. ನಿಮ್ಮಂಥೋರು ಎಲ್ಲೆಲ್ಲಿಂದ್ಲೋ ಬಂದು ನೋಡಿ ಹೋಗ್ತಿರಿ, ಆದ್ರೆ ಇಲ್ಲಿಯೋರು ತಮ್ಮೋರದ್ದೇ ಗೋರಿ, ಅರಮನೆ ಒಂದನ್ನೂ ಸರಿ ಇಟ್ಕಳಲ್ಲ. ಬೆಲೆನೇ ಗೊತ್ತಿಲ್ಲ. ಮೋರಾ ಮೋರಾ ಮಹಾಭಾರತ್, ತೇರಾ ತೇರಾ ರಾಮಾಯಣ್ ಅಂತಾರೆ ಈಕಡೆ. ಅಂದ್ರೆ ನಂದು ನಂದು ಅನ್ನೋದು ಮಹಾಭಾರತ, ನಿಂದು ನಿಂದು ಅನ್ನೋದು ರಾಮಾಯಣಾಂತ. ಇವತ್ತು ‘ಎಲ್ಲಾ ನಿಮ್ದು’ ಅಂದ ರಾಮನ ಹೆಸರಿನಾಗೆ ‘ಎಲ್ಲಾನೂ ನಂದೇ’ ಅನ್ನೋ ಮಾಭಾರತ ನಡೀತಾ ಇದೆ. ಅದ್ಕೇ ಗಾಂಧಿಬಾಪು ಹೇಳಿದ್ದು ಇಲ್ಲಿನೋರಿಗೆ ಅರ್ಥವೇ ಆಗ್ತಿಲ್ಲ’ ಎಂದು ದೊಡ್ಡ ಉಸಿರೆಳೆದುಕೊಂಡರು.

ಎಂಥ ಮಾರ್ಮಿಕವಾದ ಮಾತು! ನೆಲದ ವಿವೇಕವೆಂದರೆ ಇದೇ ಅಲ್ಲವೆ!?

ಸೂಕ್ಷ್ಮ ಕುಸುರಿಯಲ್ಲಿ ಕೆತ್ತಲ್ಪಟ್ಟ ತರುಲತೆ, ಪಕ್ಷಿಪ್ರಾಣಿ ಪ್ರಪಂಚ ನೋಡಿಬಂದು ಅಚ್ಚರಿಗೊಂಡು ರಿಕ್ಷಾ ಹತ್ತಿದೆ. ನನ್ನ ತಾರೀಫು ಕೇಳಿದ ಅನಿಲಭಾಯಿ ತಣ್ಣಗೆ, ‘ಈ ರಾಜರದು ಇದೊಂದು ಸರಿಯಲ್ಲ. ಕಟ್ಟಿದೋರಿಗೆ ಕೈತುಂಬ ದಾನದತ್ತಿ, ಭೂಮಿ, ಹಣ ಎಲ್ಲ ಕೊಡೋದು. ಕೊನೆಗೆ ತಮ್ಮದಕ್ಕಿಂತ ಚೆನ್ನಾಗಿ ಬೇರೆ ಯಾರ‍್ಗೂ ಕಟ್ಟಿಕೊಡಬಾರದಂತ ಅವರ ಎರಡೂ ಕೈ ಕಡಿಯೋದು. ಈ ಮಿನಾರು ಕಟ್ಟಿದೋನು, ಎಲ್ಲಾ ಮುಗ್ದು ಇನ್ನೇನು ರಾಜ ಇನಾಮು ಕೊಡಬೇಕಂತ ಬರುವಾಗ, ‘ತಡೀರಿ, ಒಂದ್ ಕಲ್ಲು ಕೂಡಿಸಲಿಕ್ಕೆ ಮರೆತೆ’ ಅಂತ ಮೇಲೆ ಹತ್ತಿ ಹೋದನಂತೆ. ಯಾರಿಗೂ ಕಾಣದಂಗೆ ಸರಿ ಇದ್ದಿದ್ದ ಕಲ್ಲನ್ನ ಎಳೆದು ಬಂದನಂತೆ. ಅದಕ್ಕೇ ಈಗದು ಒಂದು ಕಡೆ ವಾಲ್ತಾ ಇದೆ. ಇಂಥದೆಲ್ಲ ಇದ್ಮೇಲೆ ನೋಡೋದೇನು ಅಂತ ನಾನು ಇಂಥವುನ್ನೆಲ್ಲ ನೋಡಕ್ಕೇ ಹೋಗಲ್ಲ’ ಎಂದರು!

ಅಹಮದಾಬಾದಿನ ಇತಿಹಾಸದ ಆಳಗಲ ತಿಳಿಸುತ್ತಾ ಸಾಗಿದ ಅವರನ್ನು ಗೈಡ್ ಆಗಿದ್ದಿರಾ ಅಂತ ಕೇಳಿದೆ. ಇಲ್ಲವಂತೆ. ಮಾಸ್ತರಾಗಿದ್ದರಾ? ಇಲ್ಲವೆಂದರು. ಇತಿಹಾಸ ಓದಿದಾರಾ? ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರವಂತೆ. ಪ್ರೇಮ ಎಂಬ ಎರಡೂವರೆ ಅಕ್ಷರ ಮಾತ್ರ ಓದಿದ ಪಂಡಿತ ತಾನೆನ್ನುತ್ತಾ ಪೋತಿ ಪಢ್ ಪಢ್ ಜಗ್ ಮುವಾ/ಪಂಡಿತ್ ಭಯಾ ನ ಕೋಯಿ/ಢಾಯಿ ಅಕ್ಷರ್ ಪ್ರೇಮ್ ಕೆ/ಜೊ ಪಢೆ ಸೊ ಪಂಡಿತ್ ಹೋಯೆ ಎಂಬ ಕಬೀರವಾಣಿಯನ್ನು ಉದ್ಧರಿಸಿದರು. ಅವರು ದಿನವೂ ಕಬೀರನನ್ನು ಓದುತ್ತಾರಂತೆ. ಕಬೀರ ಇಷ್ಟ ಏಕೆಂದರೆ ಅವನು ಸಂತನಾಗಿ ಬೋಧಿಸಲಿಲ್ಲ, ನೇಕಾರನಾಗಿ ದುಡಿದು ಬದುಕಿದ, ಅದಕ್ಕೇ ಎಂದರು! ಅನಿಲಭಾಯಿಯ ಹೆಂಡತಿ, ಮಕ್ಕಳು, ‘ಇಷ್ಟೊಂದೆಲ್ಲ ತಿಳಕೊಂಡಿದಿರಿ, ಕೌನ್ ಬನೇಗಾ ಕರೋಡಪತಿಯ ಎಲ್ಲ ಪ್ರಶ್ನೆಗೂ ಉತ್ತರ ಹೇಳ್ತೀರಿ, ಕನಿಷ್ಟ ನಾಕು ಕೋಟಿ ಗೆಲ್ತಿರಿ. ಹೋಗ್ಬನ್ನಿ’ ಅನ್ನುತ್ತಾರಂತೆ. ‘ಅಂತಾ ದುಡ್ಡು ನಂಗೆ ಬೇಡ. ನಾನು ದುಡಿಯದೆ ಇರೋ ಒಂದ್ರೂಪಾಯೂ ಬೇಡ. ಹೆಂಗೆಂಗೋ ದುಡ್ಡು ಗಳಿಸಿದೋರು, ಅವರ ಮಕ್ಕಳು ಏನಾದ್ರು, ಹೇಗಿದಾರೆ ಎಲ್ಲ ನೋಡಿದೀನಿ. ಹಡಬೆ ದುಡ್ಡು ಮನೇನೇ ಹಾಳು ಮಾಡುತ್ತೆ. ನಮ್ಮ ಬುಡನೇ ಕತ್ತರಿಸುತ್ತೆ. ಕಬೀರ ಏನ್ ಹೇಳಿದಾನೆ ಗೊತ್ತಾ? ‘ಸಾಯಿ, ಇತ್ನಾ ದೀಜಿಯೆ, ಜಾ ಮೈ ಕುಟುಂಬ ಸಮಾಯೆ/ಮೈ ಭೀ ಭೂಖ್ ನ ರಹೂಂ, ಸಾಧೂ ಭೂಖ್ ನ ಜಾಯೆ’ ಅಂತ. ದೇವರೇ, ನನಗಿಷ್ಟು ಕೊಡು, ನಾನೂ ಉಪವಾಸ ಬೀಳಬಾರದು, ಮನೆಗೆ ಬಂದ ಸಾಧುಸಂತರೂ ಉಪವಾಸ ಹೋಗಬಾರದು, ಅಷ್ಟು ಅಂತ. ನಂಗೂ ಅಷ್ಟೇ ಸಾಕು’ ಎಂದರು.

ಹೀಗೇ ಊರು ಸುತ್ತಾಡಿ, ಸಂಜೆ ಅವರ ಸಮಯಕ್ಕೆ ಸರಿಯಾಗಿ ಚಹ ಕುಡಿದು, ವಿದಾಯ ಹೇಳುವ ಕಾಲ ಬಂತು. ಎಷ್ಟಾಯಿತೆಂದು ಕೇಳಿದರೆ ಅವರು ಹೇಳುತ್ತಲೇ ಇಲ್ಲ. ಕೊನೆಗೊಂದು ನೋಟು ಎಳೆದು ಕೊಟ್ಟರೆ, ‘ಬೇಡ, ಬೇಡ, ಅಷ್ಟೆಲ್ಲ ಆಗೋದಿಲ್ಲ’ ಎಂದು ಹಾಳೆಮೇಲೆ ಗುಣಿಸಿ, ಕೂಡಿಸಿ ನಾಲ್ಕುನೂರಾ ಐವತ್ತು ತೆಗೆದುಕೊಂಡರು. ಅದರಲ್ಲಿ ಚಹದ ದುಡ್ಡು ಹತ್ತು ರೂಪಾಯಿ ಕಳೆದಿದ್ದರು! ‘ನಾಳೆ ಏರ್‌ಪೋರ್ಟಿಗೆ ನೀವೇ ಬಿಡಿ. ಬೆಳಿಗ್ಗೆ ಹನ್ನೊಂದರ ವಿಮಾನ’ ಅಂದೆ. ‘ಆಗೋದಿಲ್ಲ. ನಾನು ಊಟಮಾಡಿ ಮನೆ ಬಿಡೋದು ಸರೀ ಹನ್ನೊಂದಕ್ಕೆ. ಬೇಕಾದಷ್ಟು ಆಟೋ, ಟ್ಯಾಕ್ಸಿ ಸಿಗ್ತಾವೆ. ಇಲ್ಲಿ ಯಾರೂ ಮೋಸ ಮಾಡಲ್ಲ. ಹೆಣ್ಣುಮಕ್ಕಳಿಗಂತೂ ಏನೂ ತೊಂದ್ರೆ ಇಲ್ಲ. ಹೋಗ್ಬನ್ನಿ’ ಎಂದರು.

ಇಳಿಯುತ್ತಾ, ‘ಮೊಬೈಲು ನಂಬರು ಇದೆಯೆ?’ ಎಂದೆ. ‘ನಂಬರ್ ಬೇಕಾದ್ರೆ ತಗೊಳಿ, ಆದರೆ ಹ್ಯಾಂಡ್‌ಸೆಟ್ ಸರಿಯಿಲ್ಲ. ನೀವು ಮಾತಾಡಿದ್ರೂ ಕೇಳದೇ ಇರಬೋದು, ನಾನು ಮಾತಾಡಿದ್ದೂ ಕೇಳದೇ ಹೋಗಬೋದು. ಫೋನ್ ಎತ್ತದೆ ಇರಬೋದು. ಬೇಡಬೇಡ ಅಂದ್ರೂ ಮಕ್ಕಳು ಕೊಡಿಸಿದರಂತ ಇಟ್ಕೊಂಡಿದೀನಿ ಅಷ್ಟೇ’ ಎಂದು ಒಂದು ಡಬ್ಬ ತೋರಿಸಿದರು.

ನನಗಿಷ್ಟೇ ಸಾಕು ಎನುವ ನಿರ್ಲಿಪ್ತತೆ. ಅದು ಬೇಡ, ಇದು ಬೇಡವೇ ಬೇಡ ಎಂಬ ಖಚಿತ ನಿರಾಕರಣೆ. ನೀರ ಮೇಲಿನ ಎಣ್ಣೆಯಂತಹ, ಪದುಮ ಪತ್ರದ ಮೇಲಿನ ಜಲಬಿಂದುವಿನಂತಹ ಅನಿಲ ಗುಣ! ಅವರನ್ನು ಫೋಟೋ ಆಗಿ ಬಂಧಿಸಿಡುವ ಮನಸ್ಸಾಗಲಿಲ್ಲ.

ವಿದಾಯ ಹೇಳಿ ಬೀಳ್ಕೊಂಡಾಗ ಛಕ್ಕನೆ ಹೊಳೆಯಿತು:

ಗಾಯ ಮಾಯಿಸುವ ವಿವೇಕವೆಂಬ ಮುಲಾಮು ಈ ನೆಲದ ಗುಣದಲ್ಲೇ ಹಾಸುಹೊಕ್ಕಾಗಿದೆ.
ಇರುವೆ ಕಾಲಿನ ಗೆಜ್ಜೆ ಸದ್ದು ಕೇಳುವ ಸೂಕ್ಷ್ಮ ದೇವರುಗಳು ಮಣ್ಣ ಕಣಕಣದಲ್ಲೂ ಇದ್ದಾರೆ!