Friday 30 November 2018

ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ: ಉಸಿರು ಕಟ್ಟಿಸುವ ಹೊಗೆ








2018ರ ನವೆಂಬರ್ ಕೊನೆಯ ವಾರ ಭಾರತಕ್ಕೆ ಬಂದಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸಿ ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ನಾಶವಾಗಲಿ’ (ಸ್ಮಾಷ್ ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ) ಎಂಬ ಪೋಸ್ಟರನ್ನು ಕೈಲಿ ಹಿಡಿದು ಕೆಲವು ಭಾರತೀಯ ಪತ್ರಕರ್ತೆಯರ ಜೊತೆ ಫೋಟೋಗೆ ನಿಂತರು. ಈ ನೆಲದ ಎಲ್ಲ ವಿಕಾರ-ವಿಪರ್ಯಾಸಗಳ ಮೂಲಕಾರಣವಾಗಿರುವ, ವಿಶ್ವದ ಯಾವ ಸಮಾಜವೂ ಕೇಳರಿಯದಷ್ಟು ಅನಿರ್ಬಂಧಿತ, ಏಕಮುಖಿ ಅಧಿಕಾರ-ಸುಖಸವಲತ್ತನ್ನು ಬ್ರಾಹ್ಮಣರಿಗೆ, ಎಲ್ಲ ಪುರುಷರಿಗೆ ನೀಡಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕುರಿತು ಜಾಕ್‌ಗೆ ಗೊತ್ತಿತ್ತೋ ಇಲ್ಲವೋ, ಆದರೆ ಪೋಸ್ಟರ್ ಹಿಡಿದು ನಿಂತ ಫೋಟೋ ನೋಡಿದ್ದೇ ತಡ, ದಾರವಂತರು ಕೆರಳಿಹೋದರು. ಅಂಕಣಕಾರ್ತಿ ಸ್ಮಿತಾ ಬರೂವಾ, ಮಣಿಪಾಲ ಸಮೂಹಸಂಸ್ಥೆಗಳ ಮೋಹನದಾಸ ಪೈ, ಬಾಲಿವುಡ್ ಚಿತ್ರಕತೆಗಾರರಾದ ಅದ್ವೈತ್ ಕಲಾ, ರಿಪಬ್ಲಿಕ್ ಟಿವಿಯ ಚಿತ್ರಾ ಸುಬ್ರಹ್ಮಣಿಯನ್, ಲೇಖಕ ಹಿಂದೋಳ್ ಸೇನ್‌ಗುಪ್ತ ಮೊದಲಾದವರು ಈ ಘಟನೆಯನ್ನು ‘ಜನಾಂಗ ದ್ವೇಷ’, ‘ಜಾತಿ ನಿಂದನೆ’ ಎನ್ನುವಂತೆ ಬಿಂಬಿಸಿದರು. ಭಾರತೀಯ ಪತ್ರಿಕೋದ್ಯಮದ 49% ಉಚ್ಛ ಸ್ಥಾನಗಳನ್ನು ತುಂಬಿರುವ ‘ಅಲ್ಪಸಂಖ್ಯಾತ’ ಬ್ರಾಹ್ಮಣರು ಹಾಗೂ ಅನಿವಾಸಿ ಜಾಲಿಗ ಬ್ರಾಹ್ಮಣರು ಟ್ವಿಟರಿನಲ್ಲಿ ಧೂಳೆಬ್ಬಿಸಿ, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎನ್ನುವುದೆಲ್ಲ ಸ್ತ್ರೀವಾದಿಗಳ ಕುತರ್ಕ, ಎಲ್ಲಿದೆ ಅವೆಲ್ಲ? ಎಂದು ಬೊಬ್ಬೆ ಹಾಕಿದರು.

‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆಯೆ! ಅಹಹ, ಹೊಗೆ ದೆಹಲಿಯನ್ನು ಆವರಿಸಿರುವಂತೆ ಈ ದೇಶದ ಜೀವಜಂತುಗಳ ಉಸಿರುಕಟ್ಟಿಸಿರುವುದೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಮತ್ತೇನೂ ಬೇಡ, ತಮ್ಮದೇ ಜಾತಿಯ ನಿಷ್ಪಾಪಿ ವಿಧವೆಯರು, ಪರಿತ್ಯಕ್ತೆಯರು, ಅಡುಗೆ ಕೋಣೆಯಲ್ಲಿ ಬೇಯುವ ತಾಯಂದಿರನ್ನು ನೆನಪಿಸಿಕೊಂಡಿದ್ದರೂ ಸಾಕಿತ್ತು, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆ ಎಂದು ಗೊತ್ತಾಗುತ್ತಿತ್ತು. ಆದರೆ ಜಾತಿ ಅಭಿಮಾನ ಅವರನ್ನು ಎಷ್ಟು ಕುರುಡಾಗಿಸಿತು ಎಂದರೆ ತಮ್ಮ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವ ಒಂದು ಕೇಡನ್ನು ಕಣ್ಣು ತೆರೆದು ನೋಡುವುದೂ ಅಸಾಧ್ಯವಾಯಿತು.

ಏನಿದು ಬ್ರಾಹ್ಮಣೀಯ ಪಿತೃಪ್ರಧಾನತೆ?

ಜೈವಿಕವಾಗಿ ಗಂಡುಹೆಣ್ಣುಗಳ ನಡುವೆ ಕೆಲವು ಭಿನ್ನತೆಗಳಿವೆ, ಹಾಗೆಯೇ ಅನನ್ಯತೆಗಳಿವೆ. ದೈಹಿಕ ಭಿನ್ನತೆಯನ್ನೇ ಮುಂದಿಟ್ಟುಕೊಂಡು ಸಮಾನತೆ, ಸ್ವಾತಂತ್ರ್ಯ, ಪೌರ ಹಕ್ಕುಗಳಿಂದ ಹೆಣ್ಣನ್ನು ವಂಚಿಸುವ ವ್ಯವಸ್ಥೆ ಪಿತೃಪ್ರಾಧಾನ್ಯತೆ. ಹೊಸ ಜೀವವನ್ನು ಹೆರುವ ಶಕ್ತಿಯಿರುವ, ಜೀವ ಪೊರೆವ ಆಹಾರವಾಗಿ ಮೊಲೆಹಾಲು ಸ್ರವಿಸಬಲ್ಲ ಹೆಣ್ಣೆಂಬ ಅದ್ಭುತವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಯತ್ನಿಸದ ಗಂಡು ಸಮುದಾಯವೇ ಇಲ್ಲ. ಹೆಣ್ಣನ್ನು ಅಂಕೆಯಲ್ಲಿಟ್ಟುಕೊಳ್ಳುವ ಪ್ರಯತ್ನಗಳಿಗೆ ಮನ್ನಣೆ ಪಡೆಯುವ ಸಲುವಾಗಿ, ಅದಕ್ಕೆ ಧಾರ್ಮಿಕ ಸಮ್ಮತಿ ಇದೆ ಎಂಬಂತೆ ಬಿಂಬಿಸುವ ಹುನ್ನಾರವಾಗಿ ಮೊದಲು ಅವಳ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಅದಕ್ಕಾಗಿ ಪುರಾಣ, ಕಟ್ಟುಕತೆ, ಐತಿಹ್ಯಗಳ ಸೃಷ್ಟಿಸಲಾಯಿತು. ನಂತರ ಸಾಮಾಜಿಕ, ರಾಜಕೀಯ ಅವಕಾಶಗಳನ್ನು ಕಡಿತಗೊಳಿಸಲಾಯ್ತು. ಕಾಲಕಾಲಕ್ಕೆ ಹೊಸಪ್ರಶ್ನೆಗಳು ಏಳತೊಡಗಿದಾಗ ಅವುಗಳನ್ನು ಹತ್ತಿಕ್ಕಲು ಹೊಸಹೊಸ ಆಚರಣೆಗಳ ಜಾರಿಗೊಳಿಸಲಾಯ್ತು.

ಇದುವೆ ಪಿತೃಪ್ರಾಧಾನ್ಯ ಅಥವಾ ಗಂಡು ಮೇಲರಿಮೆ. ಪಿತೃಪ್ರಾಧಾನ್ಯ ವಿಶ್ವದ ಬಹುತೇಕ ಸಮಾಜಗಳಲ್ಲಿ ಚಾಲ್ತಿಯಲ್ಲಿದೆ. ಇದು ಜಾಕ್ ಪ್ರತಿನಿಧಿಸುವ ಸಮಾಜಕ್ಕೂ, ಅವರು ಪ್ರತಿನಿಧಿಸುವ ಸಂಸ್ಥೆಗೂ ಅನ್ವಯಿಸುತ್ತದೆ. ಮುಂದುವರಿದ ಪಾಶ್ಚಾತ್ಯ ಸಮಾಜಗಳಲ್ಲೂ ನಾನಾ ಲಿಂಗಾಧಾರಿತ ತಾರತಮ್ಯಗಳು ಇವತ್ತಿಗೂ ಚಾಲ್ತಿಯಲ್ಲಿವೆ. ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಲಿಂಗಾಧಾರಿತ ಉದ್ಯೋಗ ತಾರತಮ್ಯ, ವೇತನ ತಾರತಮ್ಯ ಮುಂದುವರೆದಿದೆ. ಹಾಗಾಗಿ ಜಾಕ್ ಆ ಪೋಸ್ಟರ್ ಹಿಡಿಯುವ ಮೂಲಕ ತಮ್ಮ ಸಮಾಜ-ಕಂಪನಿಯ ಪಿತೃಪ್ರಾಧಾನ್ಯ ಕೊನೆಗೊಳಿಸಲು ಮುಂದಾಗುವ ಇಚ್ಛೆ ಹೊಂದಿದ್ದಲ್ಲಿ ಅದು ಸ್ವಾಗತಾರ್ಹ ಎನ್ನಬಹುದು.

ಆದರೆ ಅವರ ಪೋಸ್ಟರು ಕೆಲವು ಭಾರತೀಯರನ್ನು ಕೆರಳಿಸಲು ಕಾರಣ ಅದರಲ್ಲಿದ್ದ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎಂಬ ಪದ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ, ಒಂದು ಶೋಷಕ ಮನಸ್ಥಿತಿಯ ಪ್ರತೀಕವಾದ ಪದದ ಮೊದಲೆರೆಡು ಅಕ್ಷರಗಳನ್ನು ತಮ್ಮ ಜಾತಿಯ ಹೆಸರಲ್ಲಿಟ್ಟುಕೊಂಡವರು ತಮ್ಮನ್ನೇ ನಿಂದಿಸಿದಂತೆ ಕೆರಳಿದರು. ಆ ಬ್ರಹ್ಮಜ್ಞಾನಿಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನುವುದು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರನ್ನು ಬೈಯಲು ರೂಪಿಸಿದ ಪದವಲ್ಲ, ಬದಲಾಗಿ ಅದೊಂದು ಮನಸ್ಥಿತಿ; ಈ ದೇಶದ ಹೆಣ್ಣುಗಳನ್ನು, ಅಧಿಕಾರಹೀನರನ್ನು ತುಳಿಯಲು ಮಾಡಿಕೊಂಡ ಒಂದು ದುಷ್ಟ ಚೌಕಟ್ಟು ಎಂದು ಅರ್ಥವೇ ಆಗಲಿಲ್ಲ. ದಾರವಂತರು ತಿಳಿಯಲಿ: ಜಾತಿ-ಲಿಂಗದ ಕಾರಣವಾಗಿ ಮನುಷ್ಯರನ್ನು ಕೀಳಾಗಿ ನಡೆಸಿಕೊಳ್ಳುವುದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ನಿರಾಕರಿಸುವುದು, ತಾನು ಶ್ರೇಷ್ಠ ಎಂಬ ಜಾತಿ/ಲಿಂಗ ಮೇಲರಿಮೆಯನ್ನು ಉಳಿದವರ ಮೇಲೆ ಹೇರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಅದು ಈ ನೆಲದ, ಸಂವಿಧಾನದ ಆಶಯಗಳಿಗೆ ವಿರುದ್ಧ. ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆಯ ನಾಶ ಎಂದರೆ ಬ್ರಾಹ್ಮಣರ ನಾಶವಲ್ಲ; ಜಾತಿ ಮೇಲರಿಮೆಯ ನಾಶ.



ಭಾರತದ ಪಿತೃಪ್ರಾಧಾನ್ಯತೆಯನ್ನು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನಲು ಕಾರಣಗಳಿವೆ. ಪಿತೃಪ್ರಾಧಾನ್ಯವನ್ನು ಭಾರತದಲ್ಲಿ ಮತ್ತಷ್ಟು ಅಸಹನೀಯಗೊಳಿಸಿರುವುದು ಮತ್ತು ದುಷ್ಟಗೊಳಿಸಿರುವುದು ಇಲ್ಲಿನ ಜಾತಿವ್ಯವಸ್ಥೆ. ಅದು ಎರಡಲಗಿನ ಕತ್ತಿಯಾಗಿ ಈ ದೇಶದ ಹೆಣ್ಣುಗಳ ಘನತೆಯ ಬದುಕಿಗೆ ಎರವಾಗಿದೆ. ಭಾರತದ ಜಾತಿಪದ್ಧತಿಯು ನಡತೆ, ವ್ಯಕ್ತಿತ್ವ, ಸಾಧನೆ, ಉದಾತ್ತತೆ ಮುಂತಾದ ಗುಣಗಳಿಂದ ಅಲ್ಲ; ಹುಟ್ಟಿನಿಂದ ಬ್ರಾಹ್ಮಣರನ್ನು ಶ್ರೇಷ್ಠರೆಂದು ವರ್ಗೀಕರಿಸಿದೆ. ಅವರಿಗೆ ಎಲ್ಲ ವಿಶೇಷ ಸವಲತ್ತು, ಮೀಸಲಾತಿಗಳನ್ನು ಪ್ರಶ್ನಾತೀತವಾಗಿ ಕೊಟ್ಟಿದೆ. ಹುಟ್ಟಿನಿಂದಲೇ ಯಾವುದಾದರೂ ಮೇಲು ಅಥವಾ ಕೀಳೆಂದು ನಿರ್ಧಾರ ಮಾಡುವುದು ಪ್ರಕೃತಿ ವಿರೋಧಿ ತತ್ವ. ಆದರೆ ಜಾತಿಹೆಮ್ಮೆ, ಜಾತಿಪ್ರಜ್ಞೆ, ಜಾತಿ ಶ್ರೇಷ್ಠತೆಯ ವ್ಯಸನಗಳು ಬ್ರಾಹ್ಮಣರ ನಂತರದವೆಂದು ಗುರುತಿಸಲ್ಪಟ್ಟ ಸಾವಿರಾರು ಜಾತಿಗಳಿಗೂ ಹಾಗೇ ಸೋಸಿಕೊಂಡು ಇಳಿಯಿತು. ಅಂಬೇಡ್ಕರ್ ಮನೋಜ್ಞವಾಗಿ ವಿಶ್ಲೇಷಿಸಿರುವಂತೆ ಭಾರತದ ಪ್ರತಿಜಾತಿಯೂ ತಾನು ಮತ್ತೊಂದು ಜಾತಿಗಿಂದ ಶ್ರೇಷ್ಠ ಎಂಬ ಹಿರಿಮೆಯಲ್ಲಿ ಕೆಳಗಿನ ಜಾತಿಯನ್ನು ತುಳಿಯುವುದರಲ್ಲಿ ಮೇಲಿನ ಜಾತಿಯ ತುಳಿತವನ್ನು ಮರೆಯುತ್ತದೆ. ಹೀಗೆ ಬ್ರಾಹ್ಮಣ್ಯವು - ಎಂದರೆ ಅಸಮಾನತೆಯ ಉತ್ಸಾಹ, ಜಾತಿ ಮೇಲರಿಮೆ, ಜನ್ಮಜಾತ ಜಾತಿಅಸ್ಮಿತೆಗಳು - ಪ್ರತಿಜಾತಿಗೂ ಸೋಸಿಕೊಂಡು ಇಳಿದಿವೆ. ಬ್ರಾಹ್ಮಣ್ಯ ಮತ್ತು ಪಿತೃಪ್ರಾಧಾನ್ಯ ಸೇರಿ ಪ್ರತಿ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನಿಸಿಕೊಂಡಿದೆ. ಭಾರತದ ಪ್ರತಿಜಾತಿಯಲ್ಲೂ, ಪ್ರತಿಧರ್ಮದಲ್ಲೂ ಪಿತೃಪ್ರಾಧಾನ್ಯವಿದೆ; ಪಿತೃಪ್ರಾಧಾನ್ಯತೆ ಅಷ್ಟೇ ಅಲ್ಲ, ಬ್ರಾಹ್ಮಣೀಯ ಪಿತೃಪ್ರಾಧಾನ್ಯವಿದೆ.

ಈಗ ಸಂಭವಿಸುತ್ತಿರುವ ಎಷ್ಟೊಂದು ಆಗುಹೋಗುಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕಾರಣವಾಗಿದೆ ಗಮನಿಸಿ:




  • ದೇವಳದಲ್ಲಿ, ಚರ್ಚಿನಲ್ಲಿ; ಶಾಲೆಯಲ್ಲಿ, ಮನೆಯಲ್ಲಿ; ರಸ್ತೆಯಲ್ಲಿ, ಬಸ್ಸಿನಲ್ಲಿ; ಲಿಫ್ಟಿನಲ್ಲಿ, ಕಚೇರಿಯಲ್ಲಿ; ಆಚೆಈಚೆ ಹಿಂದೆಮುಂದೆ ಎಲ್ಲೆಲ್ಲು, ಯಾವಾಗ ಬೇಕಾದರೂ ಅತ್ಯಾಚಾರ ನಡೆಯುತ್ತದೆ. ಬುದ್ಧಿ ಕಲಿಸಲೆಂದೇ ಹೆಣ್ಣುಗಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ದುಷ್ಕೃತ್ಯ ಎಸಗಿದವರಲ್ಲ, ನಿಷ್ಪಾಪಿ ಹೆಣ್ಣಿನದೇ ‘ಮಾನ’ ಹೋಯಿತೆನ್ನಲಾಗುತ್ತದೆ. ಧರ್ಮದ ಹೆಸರಿನಲ್ಲಿಯೇ ಭಾರತದ ಹೆಣ್ಣುಗಳ ದೇಹ ರಣಾಂಗಣವಾಗಿದೆ. ಇದಕ್ಕೆಲ್ಲ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಶಬರಿಮಲೆಗೆ ಹೋಗಬಾರದೆಂದು ಯಾವ ಶಾಸ್ತ್ರ ವಿಧಿಸದಿದ್ದರೂ, ಹೋಗಬಹುದು ಎಂದು ಈ ದೇಶದ ಅತ್ಯುಚ್ಛ ನ್ಯಾಯಾಲಯವೇ ಹೇಳಿದ್ದರೂ, ದೇಗುಲದ ಬಾಗಿಲ ಬಳಿ ಹೆಣ್ಣುಗಳ ತಡೆಯಲು ತಲವಾರು ಹಿಡಿದವರು ಕಾಯುತ್ತಿರುವುದಕ್ಕೆ; ದೇವಾಲಯದೊಳಗೆ ಹೋಗುವುದು ಬೇಡ, ‘ನಾವು ಕಾಯುತ್ತೇವೆ’ ಎಂದು ಮಹಿಳೆಯರೇ ಹೇಳುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಶಿಕ್ಷಿತೆ, ಉದ್ಯೋಗಸ್ಥೆ, ಅಧಿಕಾರಸ್ಥೆಯೇ ಆದರೂ ಹೆಣ್ಣು ಬಾಯ್ಬಿಡದಂತೆ ಅವಳ ತುಟಿ ಹೊಲಿಯುವ ಕೆಲಸ ನಿರಂತರ ಚಾಲ್ತಿಯಲ್ಲಿದ್ದರೆ, ಅದನ್ನು ಮೀರಲು ‘ಮೀಟೂ’ ಸಂಭವಿಸಿದ್ದರೆ, ಮಹಿಳಾ ವಿರೋಧಿ ನಾಯಕನಟ ಕಂ ರಾಜಕಾರಣಿಯೊಬ್ಬ ಇತ್ತೀಚೆಗೆ ತೀರಿಕೊಂಡಾಗ ಅವರ ‘ಮತ್ತೊಂದು ಮುಖ’ದ ಬಗ್ಗೆ ಒಂದು ಮಾತನ್ನೂ ತೊಂದರೆಗೊಳಗಾದವರು ನೆನಪಿಸಿಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ಸೇಲಮ್ಮಿನಲ್ಲಿ ಪಕ್ಕದ ಮನೆಯವನ ಕಾಮತೃಷೆ ತಣಿಸಲು ತನ್ನ ಎಳೆಯ ಮಗಳನ್ನು ದಲಿತ ತಾಯಿ ಕಳಿಸಲಿಲ್ಲವೆಂದು ಕ್ರುದ್ಧನಾದ ಕೊಂಚ ‘ಮೇಲಿನ’ ಜಾತಿಯ ಗಂಡಸು, ತಾಯಿಯೆದುರೇ ಕತ್ತಿ ಹಿರಿದು ಬಾಲೆಯ ತಲೆ ಕಡಿದು ಬಿಸಾಡಿದ. ಪ್ರತಿ ಜಾತಿಯ ಹೆಣ್ಣುಗಳನ್ನು ಅನುಭವಿಸಲು ಅವರಿಗಿಂತ ಮೇಲಿನ ಜಾತಿಯ ಗಂಡುಗಳಿಗೆ ಮನುವು ಕೊಟ್ಟ ಎನ್‌ಒಸಿಯೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ತೆಲಂಗಾಣದ ಮಿರ‍್ಯಾಲಗುಡದಲ್ಲಿ ಅಮೃತವರ್ಷಿಣಿ ಎಂಬ ವೈಶ್ಯ ಬಾಲೆ ಪ್ರಣಯ್ ಎಂಬ ದಲಿತ ಹುಡುಗನನ್ನು ಮದುವೆಯಾದಳು. ಕೋಪಗೊಂಡ ಹುಡುಗಿಯ ಅಪ್ಪ ಪ್ರಣಯ್‌ನನ್ನು ಹಾಡುಹಗಲೇ ಕೊಂದ. ಮಂಡ್ಯದ ಬಳಿ ಅಂತರ್ಜಾತಿ ವಿವಾಹವಾದಳೆಂದು ಅಪ್ಪ ಮಗಳನ್ನು ಕೊಂದ. ತಮಿಳುನಾಡಿನ ಒಬ್ಬ ಅಪ್ಪ ಅಂತರ್ಜಾತಿ ವಿವಾಹವಾದ ಮಗಳು-ಅಳಿಯನನ್ನು ಶಿವನಸಮುದ್ರದ ಬಳಿ ಕರೆತಂದು, ಕೊಂದು ಕತ್ತರಿಸಿ ಚೀಲದಲ್ಲಿ ತುಂಬಿ ಬಿಸಾಡಿದ. ಈ ಎಲ್ಲ ಅಪ್ಪಂದಿರು ‘ಮಗಳು ಮುಖ್ಯವಲ್ಲ, ಜಾತಿಯೇ ನಮಗೆ ಹೆಚ್ಚು’ ಎಂದು ಹೇಳಿರುವುದಕ್ಕೆ, ಇವತ್ತಿಗೂ ಭಾರತದ ೯೫% ಮದುವೆಗಳು ಜಾತಿ ಚೌಕಟ್ಟು ಮೀರಲಾಗದೆ ನಡೆಯುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ವರದಕ್ಷಿಣೆ ನಿಷೇಧ ಕಾಯ್ದೆ ಬಂತು. ತಿದ್ದುಪಡಿ ಆಗಿ ಬಿಗಿಯೂ ಆಯಿತು. ಆದರೂ ವರದಕ್ಷಿಣೆ ಕೊಡಲಾಗದ ಬಡವರ ಮನೆಯ ಹೆಣ್ಣುಗಳು ಜೀವಂತ ಸುಡಲ್ಪಡುತ್ತಿದ್ದರೆ, ಮದುವೆಯ ಮಾರ್ಕೆಟ್ಟಿನಲ್ಲಿ ಆಯ್ದುಕೊಳ್ಳಬಯಸುವ ಸರಕಾಗಲು ಹೆಣ್ಣುಗಳು ಕೊನೆಮೊದಲಿಲ್ಲದ ಕಸರತ್ತು ನಡೆಸುತ್ತಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಆಗಸ್ಟ್ 15ರಂದು ಕೊಪ್ಪಳದ ಬಳಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮಗು ಹೆತ್ತಳು. ಈಗಲೂ ರಾಜ್ಯದ 21% ಮದುವೆಗಳು ಬಾಲ್ಯವಿವಾಹವಾಗಿದ್ದರೆ, ಹೆಣ್ಣುಮಗು ಲೋಕಕ್ಕೆ ಕಣ್ಬಿಡುವ ಮೊದಲೇ ಗಂಡನ ಅಧೀನಕ್ಕೊಳಪಡುತ್ತಿದ್ದರೆ, ಸಂಗಾತಿಯ ಆಯ್ಕೆಯ ಅವಕಾಶಗಳೇ ಹೆಣ್ಣಿಗಿಲ್ಲದಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಸಂವಿಧಾನಬದ್ಧವಾಗಿ ಜನಪ್ರತಿನಿಧಿಯಾದ ಕೆಲವು ಜನನಾಯಕರು ಸಂವಿಧಾನ ಓದದೇ ಅದನ್ನು ಸುಡುವ, ಹೊಸ ಸಂವಿಧಾನ ಬರೆವ ಮಾತನಾಡುತ್ತಿದ್ದಾರೆ. ಈ ದುರಹಂಕಾರಕ್ಕೆ ಕಾರಣ ಅವರ ಕನಸು, ಮನಸು, ಎದೆಗಳನ್ನೆಲ್ಲ ತುಂಬಿಕೊಂಡ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. ಅಂಬೇಡ್ಕರರು ಆಶಿಸಿದ ಸಂವಿಧಾನ ಜಾರಿಯಾಗದಿರಲು ಕಾರಣ ಈ ನೆಲವನ್ನು ಅದೃಶ್ಯವಾಗಿ ಆಳುತ್ತಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಜನರಿಗೆ ಕನಿಷ್ಠ ಅಗತ್ಯವಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗಗಳನ್ನು ಒದಗಿಸುವ ತಮ್ಮ ಜವಾಬ್ದಾರಿಯಿಂದ ಆಳುವವರು ದೂರ ಸರಿಯುತ್ತ, ಧರ್ಮದ ಅಮಲನ್ನು ಪ್ರಜೆಗಳ ತಲೆಗೇರಿಸಿ ತಲವಾರು ಕೊಡುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಎರಡು ವಿಭಿನ್ನ ಜಾತಿಗಳಿಗೆ ಸೇರಿದ ಹಿಂದೂಗಳ ನಡುವೆ, ಭಿನ್ನಧರ್ಮೀಯರ ನಡುವೆ ಅನೂಹ್ಯ ಅಂತರ ತಂತಾನೇ ಸೃಷ್ಟಿಯಾಗಿದ್ದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್ ತನ್ನ ಉದ್ಯೋಗಿ ಜಾಕ್ ನಿಲುವಿಗಿಂತ ತಾನು ಭಿನ್ನ ಎಂದು ಅಂತರ ಕಾಯ್ದುಕೊಳ್ಳಬೇಕಾದ ಭಯ ಸೃಷ್ಟಿಸಿದ್ದು ಬ್ರಾಹ್ಮಣೀಯ ಪಿತೃಪ್ರಧಾನತೆ.



ಅಂಬೇಡ್ಕರರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಜಿಐಪಿ ರೈಲ್ವೇ ವರ್ಕ್‌ಮೆನ್ಸ್ ಕಾನ್ಫರೆನ್ಸ್‌ನಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಅಧ್ಯಕ್ಷರಾಗಿ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡುತ್ತ ೧೯೩೮ರಲ್ಲಿ ಮನೋಜ್ಞವಾಗಿ ಹೇಳಿದ್ದು ಗಮನಾರ್ಹವಾಗಿದೆ:

‘ಬ್ರಾಹ್ಮಣಿಕೆಯು ಪರಿಗಣಿಸಲೇಬೇಕಾದ ಶತ್ರು’ ಎಂಬ ನನ್ನ ಹೇಳಿಕೆ ಅಪಾರ್ಥಕ್ಕೊಳಗಾಗುವುದು ನನಗಿಷ್ಟವಿಲ್ಲ. ಬ್ರಾಹ್ಮಣಿಕೆಯೆಂದರೆ ಒಂದು ಸಮುದಾಯವಾಗಿ ಬ್ರಾಹ್ಮಣರ ಶಕ್ತಿ, ಅಧಿಕಾರ, ಅವಕಾಶ, ಆಸಕ್ತಿಯೆಂದಷ್ಟೇ ನಾನು ತಿಳಿಯುವುದಿಲ್ಲ. ಬ್ರಾಹ್ಮಣಿಕೆಯೆಂದರೆ ಸ್ವಾತಂತ್ರ್ಯ, ಸೋದರತೆ, ಸಮಾನತೆಯನ್ನು ನಾಶ ಮಾಡುವ ಶಕ್ತಿ. ಈ ಅರ್ಥದಲ್ಲಿ ಎಲ್ಲ ಜಾತಿ-ವರ್ಗಗಳಲ್ಲೂ ಬ್ರಾಹ್ಮಣಿಕೆಯಿದೆ ಮತ್ತು ಇದನ್ನು ಹುಟ್ಟುಹಾಕಿದವರು ಬ್ರಾಹ್ಮಣರಾದರೂ ಅವರಿಗಷ್ಟೇ ಇದು ಸೀಮಿತವಾಗಿಲ್ಲ. ಎಲ್ಲ ಕಡೆ ಕಾಣುವ, ಎಲ್ಲರ ಯೋಚನೆ-ಕ್ರಿಯೆಯನ್ನು ಹಿಡಿತದಲ್ಲಿಟ್ಟುಕೊಂಡಿರುವುದು ಇದೇ ಬ್ರಾಹ್ಮಣಿಕೆಯೆಂಬುದು ಅವಿವಾದಿತ ಸತ್ಯ. ಇದು ಕೆಲವರಿಗಷ್ಟೇ ಹೆಚ್ಚು ಅವಕಾಶ ಮಾಡಿಕೊಡುತ್ತದೆಂಬುದೂ ವಿವಾದಾತೀತ ಸಂಗತಿ. ಕೆಲ ವರ್ಗಗಳಿಗೆ ಇದು ಅವಕಾಶಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಬ್ರಾಹ್ಮಣಿಕೆಯು ಅಂತರ್ಜಾತಿ ಭೋಜನ, ಅಂತರ್ಜಾತಿ ವಿವಾಹಗಳಂಥ ಸಾಮಾಜಿಕ ಹಕ್ಕುಗಳನ್ನು ತಡೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಪೌರ ಹಕ್ಕುಗಳಿಗೂ ವಿಸ್ತರಿಸುತ್ತದೆ. .. ಕೋಟಿಗಟ್ಟಲೆ ಜನರಿಗೆ ಪೌರ ಹಕ್ಕುಗಳನ್ನು ನಿರಾಕರಿಸಲಾಗಿದೆ. ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ, ಈಗಲೂ ಉರಿಯುವ ಕೊಳ್ಳಿಯಂತೆ ಜೀವಂತವಾಗಿರುವ ಬ್ರಾಹ್ಮಣಿಕೆಯೇ ಇಂದಿನ ಸಮಸ್ಯೆಗಳಿಗೆ ಕಾರಣವೆಂಬುದನ್ನು ಯಾರಾದರೂ ಸಂಶಯಿಸಲು ಸಾಧ್ಯವೆ? 

ಬ್ರಾಹ್ಮಣಿಕೆ ಎಂದರೆ ಅಸಮಾನತೆಯ ಉತ್ಸಾಹ.. ಬ್ರಾಹ್ಮಣ್ಯವು ಜೀವಂತ ಶಕ್ತಿಯಾಗಿರುವ ತನಕ, ಅದು ಕೊಡುವ ಸವಲತ್ತಿಗಾಗಿ ಕೆಲವರು ಬ್ರಾಹ್ಮಣ್ಯಕ್ಕೆ ಅಂಟಿಕೊಂಡಿರುವ ತನಕ ಅದರಿಂದ ತೊಂದರೆಗೊಳಗಾದವರು ಸಂಘಟಿತರಾಗಲೇಬೇಕಾಗಿದೆ. ಹಾಗೆ ಅದರ ವಿರುದ್ಧ ಸಂಘಟಿತರಾಗುವುದರಲ್ಲಿ ತಪ್ಪೇನಿದೆ?’


ಎಂಭತ್ತು ವರ್ಷಗಳ ಕೆಳಗೆ ಅಂಬೇಡ್ಕರ್ ಹೇಳಿದ್ದು ಇವತ್ತಿಗೂ ಎಷ್ಟು ಸರಿಯಾಗಿದೆಯಲ್ಲವೆ? ಬ್ರಾಹ್ಮಣರಲ್ಲಿ ಮೊದಲುಗೊಂಡು ಎಲ್ಲ ಜಾತಿ ಜನರಲ್ಲಿರುವ ಬ್ರಾಹ್ಮಣಿಕೆ, ಬ್ರಾಹ್ಮಣೀಯ ಪಿತೃಪ್ರಾಧಾನ್ಯ ಭಾರತೀಯ ಸಮಾಜಕ್ಕೊಂದು ಕಪ್ಪುಚುಕ್ಕೆ. ನಾಶವಾಗಲೇಬೇಕಾದ ಕೇಡು. ಆ ವಿಷಮ ಮನಸ್ಥಿತಿಯಿಂದ ಬಿಡಿಸಿಕೊಳ್ಳಲು ಪ್ರತಿ ಭಾರತೀಯ ಪುರುಷನೂ, ಮಹಿಳೆಯೂ ಹೋರಾಡುವುದು ಅವಶ್ಯವಾಗಿದೆ. ಆಗಷ್ಟೆ ಈ ನೆಲದ ಜೀವಗಳು, ಅದರಲ್ಲೂ ಮಹಿಳೆಯರು ಸ್ವಾಯತ್ತವಾಗಿ, ಘನತೆಯ ಬದುಕನ್ನು ಬದುಕಲು ಸಾಧ್ಯವಾಗುತ್ತದೆ.

(Image courtesy: Internet)


Monday 5 November 2018

ಮೀ ಟೂ: ಜಡ ಸಮಾಜವನ್ನು ಬಡಿದೆಬ್ಬಿಸಿದ ಹೆಣ್ಣು ಕೂಗು





ಭಾರತದ ಸಾಮಾಜೀಕರಣ ಹೇಗಿದೆಯೆಂದರೆ ಹುಟ್ಟಿದ್ದು ಹೆಣ್ಣು ಎಂದು ಗೊತ್ತಾದಕೂಡಲೇ ಒಂದು ಕೀಳುತನ, ಅಧೀನತೆಯನ್ನು ಆರೋಪಿಸಲಾಗುತ್ತದೆ. ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಹಾಗೇ ತರಬೇತಿ ನೀಡಲಾಗುತ್ತದೆ. ಮದುವೆ, ಕುಟುಂಬ, ತಾಯ್ತನವೇ ಮೊದಲಾದ ಸಾಮಾಜಿಕ ಸಂಸ್ಥೆಗಳು ಹೆಣ್ಣಿನ ದಮನದ ಸ್ಥಿತಿಯನ್ನು ಕಾಯಂಗೊಳಿಸುತ್ತ ಸ್ಥಾಪಿತಗೊಂಡಿವೆ. ಅದನ್ನು ಪ್ರಶ್ನಿಸದೆ ಅಮಾಯಕ ಹೆಣ್ಣು ಒಪ್ಪಿಕೊಂಡಿರುವುದು ಅವಳ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿದೆ. 

ಎಂದೇ ಒಂದು ಹೆಣ್ಣಿನ ನಿಟ್ಟುಸಿರು ಸಾವಿರಾರು ಪುಟಗಳು ಹೇಳಲಾಗದ್ದನ್ನು ಹೇಳಿಬಿಡುತ್ತದೆ. 

‘ಮೀ ಟೂ’ ಹಾಗೆ ಮಾತಾಗಿ ಹೊರಬಂದ ಹಲವು ನಿಟ್ಟುಸಿರುಗಳ ಮೊತ್ತ. ಅವು ಪ್ರಿಯಾ ರಮಣಿಯ, ತನುಶ್ರೀ ದತ್ತಾಳ, ಶೃತಿ ಹರಿಹರನ್‌ಳ, ಕಂಗನಾ ರನೌತ್‌ಳ ವೈಯಕ್ತಿಕ ನೋವುಗಳಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಹೆಣ್ಣುಗಳು ಅನಾದಿಯಿಂದ ನುಂಗಿಕೊಂಡು ಬಂದ ಒಳಸಂಕಟ. ಎಲ್ಲ ಅಭಿಯಾನ, ಹೋರಾಟಗಳ ಅಂತಿಮ ಆಶಯ ಸಮಾನತೆಯೆಡೆಗಿನ ಬದಲಾವಣೆ. ಯಾರು ಅಧೀನರೋ, ದಮನಿತರೋ ಅವರೇ ತಲೆಯೆತ್ತಿ ನಿಂತು ಸಮಾನತೆಯ ದಾರಿ ಹುಡುಕಬೇಕು. ‘ಮೀ ಟೂ’ ಕೆಲವು ಮಹಿಳೆಯರಿಗಾದರೂ ಅಷ್ಟು ಅವಕಾಶ ಕಲ್ಪಿಸಿದ್ದಲ್ಲಿ ಅಭಿಯಾನ ಸ್ವಾಗತಾರ್ಹ. 

ಬಹುಪಾಲು ಸಾಮಾಜಿಕ ಸಂಸ್ಥೆಗಳು ಪುರುಷ ಪ್ರಾಬಲ್ಯವನ್ನು ಅಂತಸ್ಥವಾಗಿಟ್ಟುಕೊಂಡೇ ರೂಪುಗೊಂಡಿರುತ್ತವೆ. ಸಿನಿಮಾ ರಂಗವಿರಲಿ, ಮಾಧ್ಯಮವಿರಲಿ, ಪಿತೃಪ್ರಾಧಾನ್ಯವನ್ನು, ಗಂಡುಮೇಲರಿಮೆಯನ್ನು ಪೋಷಿಸುವಂಥವೇ ಆಗಿದ್ದು ಲೈಂಗಿಕ ದೌರ್ಜನ್ಯಕ್ಕೆ ಪ್ರಶಸ್ತ ತಾಣಗಳಾಗಿವೆ. ಕೆಲಸದ ಸ್ಥಳದಲ್ಲಿ ಹೆಂಗಸರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಗಂಡಸರು ಬಳಸುವ ಒಂದು ಹುನ್ನಾರ ಲೈಂಗಿಕ ದೌರ್ಜನ್ಯ. ಅದನ್ನು ಹೇಳಿಕೊಳ್ಳುವುದು ವ್ಯವಸ್ಥೆಯ ವಿರೋಧ, ದ್ರೋಹ ಎಂದು ಚಿತ್ರಿಸಲಾಗುತ್ತದೆ. ಫ್ರಾಯ್ಡ್ ಹೆಣ್ಣಿನ ಲೈಂಗಿಕತೆ ಆಳದಲ್ಲಿ ನಿಷ್ಕ್ರಿಯವೂ, ಗಂಡಸಿನಿಂದ ಹಿಂಸೆ ಅನುಭವಿಸಿ ಆನಂದಿಸುವಂಥದೂ, ಸ್ವಮೋಹಿಯೂ ಆದ ಗುಣಗಳನ್ನು ಹೊಂದಿದೆ ಎಂಬ ಹೇಳಿಕೆಯಿತ್ತ. ಇದನ್ನು ಬಹುಪಾಲು ಗಂಡಸರು ಒಪ್ಪುತ್ತಾರೆ. ತಾನೆಂದೂ ಗಂಡಿನಿಂದ ಬಯಸಲ್ಪಡಬೇಕಾದವಳು ಎಂಬ ಅಧೀನ ಸ್ಥಿತಿ ಹೆಣ್ಮಕ್ಕಳ ಮನದಲ್ಲೂ ಧೃಢವಾಗಿರುವುದರಿಂದ ನಿಜಾರ್ಥದ ಬಿಡುಗಡೆ ಅಸಾಧ್ಯವಾಗಿದೆ. ‘ಗಣ್ಯ’ ಮಹಿಳೆ-ಪುರುಷರಲ್ಲೂ ಇದೇ ಧೋರಣೆ ಇರುವುದರಿಂದ ಗಣ್ಯ ಮಹಿಳೆಯರ ದುಃಖ-ನೋವುಗಳೂ ಸಹ ಜನಸಾಮಾನ್ಯ ಮಹಿಳೆಯರಿಗೆ ಹೇಗೋ ಹಾಗೇ ಇವೆ.

ಹೆಣ್ಣು ಇಂತಹ ಹಲವು ಸಂದಿಗ್ಧಗಳ ನಡುವೆ ಬದುಕುತ್ತಿರುವಾಗ, ‘ಮೀ ಟೂ’ ಅಭಿಯಾನ ಸಿನಿಮಾ-ಮಾಧ್ಯಮ ಜಗತ್ತಿನ ಲೈಂಗಿಕ ಕಿರುಕುಳಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಿದೆ. ಮೊದಲು ಭಾರತದಲ್ಲಿ ಮಲಯಾಳ ಸಿನಿಮಾ ಜಗತ್ತಿನ ನಟಿ-ಕಲಾವಿದೆಯರ ಆತ್ಮಗೌರವ-ಘನತೆಯನ್ನು ಎತ್ತಿ ಹಿಡಿಯುವ ಚರ್ಚೆ ದಿಲೀಪ್ ಎಂಬ ನಟನ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದಾಗ ಮೇ ೨೦೧೭ರಲ್ಲಿ ಶುರುವಾಯಿತು. ಮಲಯಾಳಮ್ಮಿನ ಪ್ರಮುಖ ಕಲಾವಿದೆಯರು ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಶುರುಮಾಡಿದರು. ನಂತರ ಹಾಲಿವುಡ್‌ನಲ್ಲಿ ಅಕ್ಟೋಬರ್ ೨೦೧೭ರಲ್ಲಿ ಖ್ಯಾತ ಚಿತ್ರ ನಿರ್ಮಾಟಕ ಹಾರ್ವೆ ವೆಯಿನ್‌ಸ್ಟೀನ್‌ನ ವಿರುದ್ಧ ನಟಿ ಅಲಿಸಾ ಮಿಲಾನೊ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, ‘ಮೀಟೂ’ ಹ್ಯಾಷ್ ಟ್ಯಾಗ್ ಹಾಕಿ ಅಭಿಯಾನ ಶುರುವಾಯಿತು. ಬಿರುಸಾಗಿ ಮುಂದುವರೆದು ವಿಶ್ವಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಅಸಂಖ್ಯ ‘ಗಣ್ಯ ಮಹಿಳೆ’ಯರು ಅನೇಕ ‘ಗಣ್ಯಪುರುಷ’ರ ಲಂಪಟತನವನ್ನು ಬಯಲು ಮಾಡಿದರು. ಬಹುಜನರು ಅಭಿಮಾನದಿಂದ ನೋಡುವ, ‘ಮಾದರಿ’ಗಳೆಂದು ಆದರಿಸುವ ಸಿನಿಮಾ ಲೋಕದ ಪುರುಷೋತ್ತಮರ ಬಣ್ಣ ಬಯಲಾಯಿತು.

ಸೆಪ್ಟೆಂಬರ್ ೨೦೧೮ರಲ್ಲಿ ಭಾರತದ ನಟಿ, ಸದ್ಯ ಸಿನಿಮಾ ರಂಗದಿಂದ ದೂರವಿರುವ ಅಮೆರಿಕವಾಸಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಳು. ೧೦ ವರ್ಷ ಕೆಳಗೆ ನಡೆದ ಕಹಿ ಘಟನೆಗಳು ತನ್ನನ್ನು ಖಿನ್ನತೆಗೆ ದೂಡಿದ್ದು; ಪೌರ್ವಾತ್ಯ ಆಧ್ಯಾತ್ಮ, ಲಡಾಖಿನ ಬೌದ್ಧ ಮಠದ ಸಂಪರ್ಕ, ವಿಪಸ್ಸನ, ಕೊನೆಗೆ ಕ್ರೈಸ್ತ ಧರ್ಮಗಳು ತನ್ನನ್ನು ಖಿನ್ನತೆಯಿಂದ ಹೊರತಂದದ್ದು; ಆದರೂ ಸಿನಿಮಾ ರಂಗ ತೊರೆದು ಅಮೆರಿಕದಲ್ಲಿ ನೆಲೆಸಿದ್ದು ಎಲ್ಲವನ್ನು ಧೈರ್ಯವಾಗಿ ಬಹಿರಂಗಪಡಿಸಿದಳು.

ಹೇಳಿ ಹಗುರಾಗಿಸಿಕೊಳ್ಳುವ ಹೆಣ್ಣುಬಳ್ಳಿ ಹಬ್ಬತೊಡಗಿತು. ಪ್ರಿಯಾ ರಮಣಿ ಎಂಬ ಹಿರಿಯ ಪತ್ರಕರ್ತೆ ಎಂ. ಜೆ. ಅಕ್ಬರ್ ಎಂಬ ಪತ್ರಕರ್ತ-ಪ್ರಭಾವಿ ರಾಜಕಾರಣಿ ಕಂ ಮಂತ್ರಿಯ ವಿರುದ್ಧ ತಮ್ಮ ಅನಿಸಿಕೆಗಳನ್ನು ಬಹಿರಂಗಪಡಿಸಿದರು. ಇದಾದದ್ದೇ ಹಲವರು ತಮ್ಮ ಬಚ್ಚಿಟ್ಟುಕೊಂಡ ನೋವು-ವೇದನೆಗಳ ಹೊರಹಾಕತೊಡಗಿದ್ದಾರೆ. ಕನ್ನಡದಲ್ಲೂ ಇದು ಭಾರೀ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಆಪಾದನೆಗೊಳಗಾದವರು ಅಡ್ಡದಾರಿಗಳಿಂದ, ರಾಜಮಾರ್ಗದಿಂದ ಅಂಥ ಮಹಿಳೆಯರ ಸದ್ದಡಗಿಸುವ, ಅವರ ಕೆರಿಯರ್ ಅನ್ನೇ ಮುಗಿಸಿಬಿಡುವ, ಸಾಕ್ಷಿಗಳನ್ನು ಉಲ್ಟಾ ತಿರುಗಿಸುವ ಹುನ್ನಾರದಲ್ಲಿ ಮುಳುಗಿಹೋಗಿದ್ದಾರೆ. ಮತ್ತೊಂದಷ್ಟು ಕಾಡುಕುದುರೆಗಳು ತಮ್ಮ ಬಣ್ಣವೆಲ್ಲಿ ಬಯಲಾಗಿ ಬಿಟ್ಟೀತೋ ಎಂದು ಮೊದಲೇ ಬಡಬಡಿಸುತ್ತ ಕೆನೆಯತೊಡಗಿದ್ದಾರೆ. 

ಇವೆಲ್ಲ ಆಗುಹೋಗುಗಳಿಂದ ವಿದ್ಯೆ-ಸ್ಥಾನಮಾನ-ಕೀರ್ತಿ-ಹಣ ಎಲ್ಲ ಇರುವ, ಮೇಲ್ವರ್ಗವೆಂದು ನಾವು ಭಾವಿಸುವ, ಮಹಿಳಾ ಸಂಘಟನೆ-ಚಳುವಳಿಗಳು ಅಷ್ಟಾಗಿ ಗಮನ ಕೊಡದ ಥಳುಕಿನ ಲೋಕದಲ್ಲೂ ಹೆಣ್ಣು ಬಾಧಿತಳೆ ಎಂಬುದು ಎಲ್ಲರ ಅರಿವಿಗೆ ದಕ್ಕತೊಡಗಿದೆ. ತಮ್ಮೊಳಗಿನ ನೋವು ಹೊರಹಾಕಲು ಇನ್ನೆಷ್ಟೋ ಮಹಿಳೆಯರಿಗೆ ಈ ಕೆಲವರ ದಿಟ್ಟ ನಡೆ ಧೈರ್ಯ ನೀಡುತ್ತಲೂ ಇರಬಹುದಾಗಿದೆ.






(ಭಾರತದ `ಮೀಟೂ'ನಲ್ಲಿ ಆಪಾದನೆಗೊಳಗಾದವರು)

‘ಮೆಟ್ರೊ ಫೆಮಿನಿಸಂ’!?

ಆದರೆ ಮೀಟೂಗೆ ಒಂದೆರೆಡು ದಿಕ್ಕಿನಿಂದ ಬಲು ಟೀಕೆಯೂ ಬರುತ್ತಿದೆ. 

ತನ್ನ ಮೇಲೆ ಅತ್ಯಾಚಾರವಾಯಿತು ಎಂದು ತನ್ನಳಲನ್ನು ಬಹಿರಂಗಗೊಳಿಸಿದ ನಟಿಯ ವಿರುದ್ಧ ಸಹನಟಿಯೇ ‘ಅವಳು ಸಲಿಂಗಿ’ ಎಂದು ಜರೆಯುವುದು; ಕೆಲವು ನಟಿಯರು ಆರೋಪಿ ಪುರುಷರು ಅಂಥವರಲ್ಲ ಎಂದು ಕ್ಲೀನ್ ಚಿಟ್ ಕೊಡುವುದು, ಜನಪ್ರಿಯತೆ ಗಳಿಸಲು ಹಿಡಿದ ಕೀಳುದಾರಿಯೆಂದು ಇತರ ಮಹಿಳೆಯರೇ ದೂಷಿಸುವುದು ಮುಂದುವರೆದಿದೆ. ಒಂದು ಹೆಣ್ಣಿಗೆ ಮತ್ತೊಂದು ಹೆಣ್ಣಿನ ಅಳಲು ಕೇಳದಂತೆ ಆಗಿರುವುದು, ಅರಿವಾಗದಂತೆ ತಡೆದಿರುವುದು ಯಾವುದು?

ವಿಕಾಸಗೊಂಡ ಮನುಷ್ಯ ಜೀವಿ ನಾಗರಿಕಗೊಳ್ಳುತ್ತ ಹೋದಂತೆ ಮೊದಲು ಗುಲಾಮತನ ಹೇರಿದ್ದು ಹೆಣ್ಣಿನ ಮೇಲೆ. ಫ್ರೆಡೆರಿಕ್ ಏಂಗೆಲ್ಸ್ ಹೇಳುವಂತೆ ಮಾನವ ಸಮಾಜದ ಗುಲಾಮರ ಗುಲಾಮರ ಗುಲಾಮರ ಗುಲಾಮಳು ಹೆಣ್ಣು. ಈ ಗುಲಾಮತನವು ರೂಪಿಸಿದ ಅಧೀನ ಮನಸ್ಥಿತಿ ೨೦೧೮ನೇ ವರ್ಷದಲ್ಲೂ ನಮ್ಮನ್ನು ಗಾಢವಾಗಿ ಆವರಿಸಿದೆ. ಮುಟ್ಟಾಗುವ ವಯೋಮಾನದ ಹೆಣ್ಣು ದೇವಸ್ಥಾನಕ್ಕೆ ಹೋಗಬಾರದೆಂದು ಯಾವ ಶಾಸ್ತ್ರದಲ್ಲಿ ಉಲ್ಲೇಖವಿಲ್ಲದಿದ್ದರೂ, ಹೋಗಬಹುದೆಂದು ಸುಪ್ರೀಂಕೋರ್ಟು ಹೇಳಿದಾಗಲೂ, ಒಳಹೋಗುವುದು ಬೇಡವೆಂದು ಸ್ವತಃ ಹೆಣ್ಣುಗಳೇ ಪ್ರತಿಭಟಿಸುತ್ತಾರೆ. ಆಯ್ಕೆಯಾದ ಜನಪ್ರತಿನಿಧಿ ಮಹಿಳೆಯರೇ ತಮ್ಮ ಗಂಡ/ಪುರುಷ ಬಂಧು ಮೀಟಿಂಗುಗಳಿಗೆ ಬರಬೇಕೆಂದು ಪಟ್ಟು ಹಿಡಿಯುತ್ತಾರೆ. ಹಾಗೆಯೇ ಮೀಟೂ ಅಭಿಯಾನದಲ್ಲೂ ಮಹಿಳೆಯರ ವಿರುದ್ಧ ಮಹಿಳೆಯರೇ ಮಾತಾಡುವುದೂ ಮುಂದುವರೆದಿದೆ. ಇವೆಲ್ಲ ತಪ್ಪು ಮಾದರಿಗಳ ಪ್ರಭಾವದಿಂದ ರೂಪುಗೊಂಡ ಹೆಣ್ಣಿನ ಗುಲಾಮ ಮನಸ್ಥಿತಿಯ ದ್ಯೋತಕವಾಗಿವೆ. 

ಹಾಗಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ತನ್ನ ಮೇಲೆ ನಡೆಯಿತೆಂದು ಅಂತರಂಗದ ನೋವು ಹೇಳುವುದೇ ಹೆಣ್ಣಿಗೆ ಕಷ್ಟವಾಗಿದೆ. ಹೆಣ್ಣು ಎದುರಿಸುವ ಬಹುಪಾಲು ದೌರ್ಜನ್ಯಗಳು ವೈಯಕ್ತೀಕರಿಸಲ್ಪಟ್ಟು ಮೌನವಾಗಿಸುವುದು, ಮೌನ ಹೇರುವುದು ಸಾಧ್ಯವಾಗಿದೆ. 

ಈ ನಿಟ್ಟಿನಲ್ಲಿ ವೈಯಕ್ತಿಕ ನೋವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಮೀಟೂದಂತಹ ಅಭಿಯಾನಗಳನ್ನು ನೋಡಬೇಕು. ‘ನನ್ನ ಸಮಸ್ಯೆ ನನ್ನದಷ್ಟೆ ಅಲ್ಲ; ಜಾತಿ-ವರ್ಗ-ಧರ್ಮ ಆಧಾರಿತ ದೌರ್ಜನ್ಯಗಳು ಹೇಗೆ ಸಾಮೂಹಿಕವಾಗಿ ಚರ್ಚಿಸಬೇಕಾದ ವಿಷಯಗಳೋ ಹಾಗೆ ಲೈಂಗಿಕ ದೌರ್ಜನ್ಯವನ್ನೂ ಸಾಮೂಹಿಕಗೊಳಿಸಿ ಚರ್ಚಿಸಬೇಕು. ಪರಿಹಾರವನ್ನು ಸಾಮೂಹಿಕವಾಗಿ ಕಂಡುಕೊಳ್ಳಬೇಕು’ ಎಂಬ ಅರಿವು ಮೂಡಿದ್ದರಿಂದಲೇ ತಮ್ಮ ಗಣ್ಯತೆ-ಭವಿಷ್ಯದ ಚಿಂತೆಗಳ ಒತ್ತಟ್ಟಿಗಿಟ್ಟು ತಮ್ಮ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಗಟ್ಟಿಯಾಗಿ ಆ ಹೆಣ್ಣುಗಳು ನಿಂತಿದ್ದಾರೆ. 

ಕೆಲ ಸಂಗಾತಿಗಳು ಮೀ ಟೂ ಅಭಿಯಾನವನ್ನು ‘ಮೆಟ್ರೊ ಫೆಮಿನಿಸಂ’, ‘ಕಾರ್ಪೊರೇಟ್ ಫೆಮಿನಿಸಂ’ ಮುಂತಾಗಿ ತಪ್ಪುತಪ್ಪು ಪದಪ್ರಯೋಗಗಳಿಂದ ಜರೆಯತೊಡಗಿದ್ದಾರೆ. ಪ್ರತಿನಿತ್ಯ ದುಡಿಯುವ ವರ್ಗದ ಹೆಣ್ಮಕ್ಕಳು ಲೈಂಗಿಕ ದೌರ್ಜನ್ಯ-ಕಿರುಕುಳ-ಅತ್ಯಾಚಾರಗಳಿಗೆ ಈಡಾಗುತ್ತಿರುವಾಗ ಮೇಲ್ವರ್ಗದ ಗಣ್ಯ ಹೆಣ್ಣುಗಳ ನೋವಷ್ಟೇ ಹೆಚ್ಚು ಜಾಗ ಪಡೆದು ಸುದ್ದಿಯಾಗುತ್ತಿರುವುದು, ಮತ್ತದನ್ನು ಮಾಧ್ಯಮಗಳು-ಸಂಘಟನೆಗಳು ಬೆಂಬಲಿಸಿ ಊರೂರುಗಳಲ್ಲಿ ಚರ್ಚೆಯಾಗುತ್ತಿರುವುದು ಟೀಕಾಕಾರರ ತಕರಾರಿಗೆ ಗುರಿಯಾಗಿದೆ. 

ಹೌದು, ಅವರು ಗಣ್ಯ ಮಹಿಳೆಯರು. ಆದರೆ ಗಣ್ಯರನ್ನು ಗಣ್ಯರನ್ನಾಗಿಸಿದ್ದು ಯಾರು? ಖಾಸಗೀತನದ ಪರಾಕಾಷ್ಠೆ ಗಣ್ಯ ವ್ಯಕ್ತಿಗಳಿಗೆ ತಂತಾನೇ ನೀಡಲ್ಪಟ್ಟಿದೆ. ಅವರ ಖಾಸಗಿತನವನ್ನು ಮಾರ್ಕೆಟ್ ಮಾಡಿ ಗಣ್ಯತೆಯನ್ನು ಹೆಚ್ಚಿಸಲಾಗಿದೆ. ಉಳಿದ ಮನುಷ್ಯರಂತೆಯೇ ಉಂಡು-ತಿಂದು-ಹೇತು-ಅತ್ತು ಬದುಕುವ ಗಣ್ಯರು ಮನುಷ್ಯರೆನ್ನುವುದನ್ನೇ ಸಮಾಜ ಮತ್ತು ಮಾಧ್ಯಮ ಮರೆತಿವೆ. ಅವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೆಲ್ಲ ರೋಚಕ ಸುದ್ದಿಯಾಗುತ್ತದೆ. 

ಆದರೆ ನೆನಪಿಡುವ, ಗಣ್ಯತೆಯೂ ದೊಡ್ಡ ಹೇರಿಕೆ. ತನ್ನ ಕುಟುಂಬದ, ಮನೆತನದ, ಜಾತಿ-ವರ್ಗದ ಗಣ್ಯತೆಯನ್ನು ಕಾಯುವ ಹೊರೆ ಹೆಣ್ಣಿನ ಮೇಲೇ ಬಿದ್ದಿದೆ. ಗಣ್ಯತೆಯ ಉಳಿವಿಗೆ ಮೌನದ ಮೊರೆ ಹೊಕ್ಕು, ಕೊನೆಗೆ ಬಲಿಯಾಗುವುದು ಹೆಣ್ಣು ಬದುಕುಗಳೇ ಆಗಿವೆ. ಹೀಗಿರುತ್ತ ಈ ಮಹಿಳೆಯರ ಅಳಲು ತಪ್ಪು ಕಾರಣಗಳಿಗೆ ಟೀಕೆಗೊಳಗಾಗಿರುವುದು ವಿಷಾದಕರವಾಗಿದೆ. ಇಂಥ ಹೇಳಿಕೊಳ್ಳುವಿಕೆ ಗಣ್ಯ ಮಹಿಳೆಯರಿಗಷ್ಟೆ ಅಲ್ಲ, ತಳವರ್ಗ, ತಳಜಾತಿಗಳ ಹೆಣ್ಮಕ್ಕಳಿಗೂ ಸಾಧ್ಯವಾಗಬೇಕು, ನಿಜ. ಆದರೆ ಅದನ್ನು ಆಗಮಾಡುವ ಜವಾಬ್ದಾರಿ ಯಾರದು? 

ತಳವರ್ಗ, ತಳಸಮುದಾಯಗಳು ಸದಾ ಶೋಷಿತರು, ಸ್ವಾಯತ್ತ ಯೋಚನೆ ಇಲ್ಲದವರು ಎಂಬ ಚಿಂತನೆಯೂ ಇಂಥ ಆರೋಪಗಳ ಹಿಂದಿದೆ. ಈ ಬಗೆಯ ಧೋರಣೆಯೇ ಒಂದು ಯಾಜಮಾನ್ಯ. ದುಡಿಯುವ ವರ್ಗದ ಹೆಣ್ಮಕ್ಕಳು ಬಲು ಸ್ವಾಯತ್ತವಾಗಿ ತಮ್ಮ ಬದುಕಿನ ನಿರ್ಧಾರಗಳ ತಾವೇ ತೆಗೆದುಕೊಳ್ಳುವುದೂ ಇದೆ; ಹಣ, ಅಧಿಕಾರದ ದರ್ಪಕ್ಕೆ ಬಲಿಯಾದದ್ದೂ ಇದೆ. ಹಾಗೆಯೇ ಅರಮನೆಯ ಗೋಡೆಗಳ ಹಿಂದೆ ವಿಲಾಸಿ, ಸೋಮಾರಿ ಹೆಣ್ಣುಗಳೂ ಇದ್ದಾರೆ, ಬಿಕ್ಕುವ ಹೆಣ್ಣುಗಳೂ ಇದ್ದಾರೆ. ಒಂದು ಮಠದ ಸ್ವಾಮಿಯಿಂದ ಅತ್ಯಾಚಾರಕ್ಕೊಳಗಾದ ಗಾಯಕಿಯ ಸಮುದಾಯ ಹೇಳುತ್ತದೆ, ‘ಅವಳೇನಾದರೂ ತಳವರ್ಗ-ಸಮುದಾಯದ ಹೆಣ್ಣಾಗಿದ್ದರೆ ಅಂತಾರಾಷ್ಟ್ರೀಯ ಸುದ್ದಿ ಆಗಿರುತ್ತಿತ್ತು. ಮೇಲ್ಜಾತಿಯವಳಾಗಿರುವುದರಿಂದ ಯಾರಿಗೂ ಬೇಡವಾಗಿದ್ದಾಳೆ.’ ಇತ್ತ ಮತ್ತೊಂದು ಗುಂಪು ಹೇಳುತ್ತದೆ, ‘ಖೈರ್ಲಾಂಜಿ-ವಿಜಯಪುರ-ಮಾಲೂರುಗಳ ದಲಿತ ಮಹಿಳೆಯರು ಅತ್ಯಾಚಾರ-ಕೊಲೆಯಾದರೆ ಯಾರಿಗೇನನಿಸುವುದಿಲ್ಲ, ಅದೇ ನಿರ್ಭಯಾ ಆದರೆ ದೇಶವೇ ಬೀದಿಗೆ ಬಂದು ನಿಲ್ಲುತ್ತದೆ.’ 

ಇದರಲ್ಲಿ ಯಾವುದು ನಿಜ?! 

ದೌರ್ಜನ್ಯವೊಂದೇ ಹೆಚ್ಚು ನಿಜ. ಮಥುರಾ ಎಂಬ ಪೋರಿ ಆದಿವಾಸಿ ಬಾಲಕಿಯಿರಬಹುದು, ಅರುಣಾ ಶ್ಯಾನುಭಾಗ್ ನರ್ಸ್ ಇರಬಹುದು, ನಿರ್ಭಯಾ ದೆಹಲಿಯವಳಿರಬಹುದು, ಸೌಜನ್ಯ ಬಡ ಕುಟುಂಬದ ಎಳೆಬಾಲೆಯಿರಬಹುದು, ವಿಜಯಪುರದ-ಕಾಶ್ಮೀರದ ಎಳೆಯ ಹುಡುಗಿಯರು ದಲಿತ-ಮುಸ್ಲಿಮರಾಗಿರಬಹುದು - ಯಾವ ಜಾತಿ-ಧರ್ಮ-ವರ್ಗ-ಕ್ಷೇತ್ರ-ದೇಶದವರೇ ಆಗಿರಲಿ, ‘ನೊಂದೆ’ ಎಂದು ನಲುಗುವಾಗ ಅವರ ದುಗುಡ ನನ್ನಾಳವನ್ನು ಅಲುಗಿಸಬೇಕು ಎಂಬುದೇ ಸತ್ಯ. ಬೆನ್ನಹಿಂದೆ ತಿವಿತ ಅನುಭವಿಸುತ್ತ ನೆರವಿಗಾಗಿ ಯಾರಾದರೂ ಕರೆದರೆ ಓ ಎಂದು ಧಾವಿಸುವುದು ಎಲ್ಲರ ಕರ್ತವ್ಯ. ಮತ್ಯಾರಿಗೂ ಹಾಗಾಗದಂತೆ ತಡೆಯುವುದು, ಸಮುದಾಯ-ವರ್ಗ-ಲಿಂಗತ್ವಗಳ ಗಡಿದಾಟಿ ಎಲ್ಲರನ್ನೂ ಒಳಗೊಳ್ಳಲೇಬೇಕಾಗಿರುವುದು ಇವತ್ತಿನ ಮಹಿಳಾ ಚಳುವಳಿ ಮತ್ತು ಸಂಘಟನೆಗಳಿಗೆ ಅನಿವಾರ್ಯ.

ಎಲ್ಲ ದಮನಿತರ ಪರವಾಗಿ ನಿಲ್ಲುವುದು, ಲೋಕವನ್ನೇ ಕೆಟ್ಟದರಿಂದ ಕಾಪಿಡುವುದು ಹೆಣ್ತನ. ಇಂಥ ಹೆಣ್ತನವನ್ನು ಪ್ರತಿ ಮಾನವ ಜೀವಿಯಲ್ಲೂ ಉದ್ದೀಪಿಸಿ ನೆಲೆಗೊಳಿಸುವುದು ಸ್ತ್ರೀವಾದ. ಯಾವತ್ತೂ ಸ್ತ್ರೀವಾದವು ಯಶಸ್ಸಿನ ಅಂಕಿಅಂಶಗಳಿಂದ ತೃಪ್ತಿ ಪಡುವುದಿಲ್ಲ. ಮೈನಾರಿಟಿ ಯಶಸ್ಸಿಗಿಂದ ಮೆಜಾರಿಟಿ ವಿಫಲತೆಯ ಕಡೆಗೇ ಅದು ಗಮನ ಹರಿಸುತ್ತದೆ. ನಿಜವಾದ ಬಿಡುಗಡೆಯ ದಾರಿಯನ್ನು ಸ್ತ್ರೀಪುರುಷರೆಲ್ಲರಿಗೂ ಅರಸುತ್ತದೆ. ಮೀಟೂ ಇರಲಿ, ನ್ಯಾಪ್ಕಿನ್ ಇರಲಿ, ‘ಮುತ್ತು’ ಅಭಿಯಾನವಿರಲಿ, ದೇವಾಲಯ ಪ್ರವೇಶ ಹೋರಾಟವಿರಲಿ - ಜಾತಿಗ್ರಸ್ತ ಪಿತೃಪ್ರಧಾನ ಭಾರತೀಯ ಸಮಾಜದ ತಳಪಾಯದ ಒಂದು ಕಲ್ಲನ್ನಾದರೂ ಅದು ಅಲುಗಾಡಿಸುವುದಾದರೆ ಅಂಥ ಎಲ್ಲ ಪ್ರಯತ್ನಗಳಿಗೆ ಹೆಣ್ಮನಗಳ ಬೆಂಬಲವಿರಲಿ.