Thursday 20 July 2023

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..






 ದೇವರುಗಳ ಕಾಡಿನಲ್ಲಿ ಮೂಕಬಾಲೆಯ ಬಿಕ್ಕು ಅರಣ್ಯರೋದನವಾಗಿರುವ ಹೊತ್ತು

ಈ ಕವಿತೆಗೆ ಶೀರ್ಷಿಕೆ ಇರುವುದಿಲ್ಲ

ಉಟ್ಟಬಟ್ಟೆ ಹರಿದರೆ ತೇಪೆ ಹಾಕುತ್ತೇನೆ

ಮಲಿನವಾದರೆ ಮತ್ತೆ ತೊಳೆಯುತ್ತೇನೆ

ಬಟ್ಟೆಯೇ ಸಿಗದಿದ್ದರೆ 

ಬೆತ್ತಲಾದೇನು ಅಕ್ಕನಂತೆ

ತೊಡದ ಬಟ್ಟೆಯ ಕೊಳೆಯ ತೊಳೆಯಲೆಂತೆ?


ಉಂಗುಷ್ಠ ಹರಿದರೆ ಹೊಲಿಯುತ್ತೇನೆ

ಒಂಟಿ ಜೋಡಾದರೆ ಅತ್ತ ಎತ್ತಿಡುತ್ತೇನೆ

ಕಲ್ಲುಮುಳ್ಳುಗಳ ಬರಿಗಾಲಲೂ ದಾಟುವೆ 

ನಡೆವ ಹಾದಿಯೇ ಪಾದ ನುಂಗಿದರೆ 

ಹೆಜ್ಜೆಗಳನೆತ್ತ ಇಡಲೆ?


‘ಕಾಡೇ ಗೂಡೇ..’ ಎಂದು ಕಣ್ಮುಚ್ಚುವಾಗ ಭಯ

‘ನಮ್ಮಯ ಹಕ್ಕಿಯ’ ಬಿಟ್ಟೇ ಎನುವಾಗ ಭಯ

ಲಂಗ ಮೇಲೆತ್ತಿ ಕುಂಟೋಬಿಲ್ಲೆಯಾಡುತ್ತ  

ಮಿಡಿಮೊಲೆಗಳು ಹಾರಿ ಬೀಳುವಾಗ 

ಅಮ್ಮನಿಗೆ ಭಯವೋ ಭಯ


ಮೊಲೆಮುಡಿಗಳು ಕುಡಿಯೊಡೆದು

ಅಂಗಾಂಗದೊಳಗೆ ಅನಂಗ ಹರಿದಾಡಿದ ಹೊತ್ತು

ಜೀವ ತತ್ತರ

ಮೈಮೇಲೆದ್ದವು ಹುತ್ತ

ಹುತ್ತದ ಬಾಯಿಗಳೆಲ್ಲ ಯೋನಿಗಳಾದವು

ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು

ಸಹಸ್ರ ಯೋನಿಗಳ ದೇಹ

ಸರ್ವಋತು ಸ್ರಾವ 


ಯುದ್ಧ ಅಲ್ಲೆಲ್ಲೋ ನಡೆಯುತ್ತಿಲ್ಲ

ಗುಂಡಿನ ಸದ್ದಷ್ಟೆ ಎದೆ ನಡುಗಿಸುವುದಿಲ್ಲ

ಇಟ್ಟರೆ ಕೊಳೆವ ಹೂತರೆ ಮಣ್ಣಾಗುವ

ಸುಟ್ಟರೆ ಬೂದಿಯಾಗುವ ಈ ದೇಹ

ಗುಪ್ತಾಂಗಗಳ ಗುಟ್ಟಿನ ಸಂಕಟಗಳು 

ಕೈದು ಹಿಡಿದು ಕಾದುವ ರಣರಂಗ


ಇದ್ದಳಂತೆ ಹಾಗೊಬ್ಬಳು

ದಿಟ್ಟವಾಗಿ ಬೆತ್ತಲಾಗಿ ಒಬ್ಬಂಟಿ ಅಲೆದವಳು

ಕೂಡದೆ ಹೆರದೆ ಲಿಂಗಸತಿಯಾದವಳು..

ಹಾಗೂ ಇದ್ದಳಂತೆ ಮಗದೊಬ್ಬಳು

ಸೂರ್ಯನ ನೆನಹಿಗೇ ಬಸಿರಾಗಿ ಹೆತ್ತವಳು.. 


ಓ ದೇವರೇ, ಸಾಧ್ಯವಿಲ್ಲ ಇನ್ನು

ಹೀಗೊಂದು ವರ ನೀಡು:

ಜೀವಕುಲಕೋಟಿಯ ಉಭಯವಳಿಯಲಿ

ಮಾನವ ಸಂತತಿ ಅಯೋನಿಜವಾಗಲಿ..                                                                                                  

(2013)  

                                      

 

                                    2. ಕವಿತೆಯೇ ಎಚ್ಚರಇದು ಅತ್ಯಾಚಾರಿಗಳ ಕಾಲ..

ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ  ಕವಿತೆಯೇ,
ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ,
ಎಚ್ಚರಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.  
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ

ಎಚ್ಚರಇದು ಅತ್ಯಾಚಾರಿಗಳ ಕಾಲ.

ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿನಾರು ಹೆಕ್ಕಿ ಗೂಡು ಕಟ್ಟುತ್ತದೆ

ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ

ಸುರನೋ ಅಸುರನೋ ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.

ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು.
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು.
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು.
ಜೀವಕಾರುಣ್ಯದ ಮೊಲೆ ಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..

ಡಾ. ಎಚ್. ಎಸ್. ಅನುಪಮಾ (2014)


ಹೇಡಿ ಶಬ್ದಗಳೇ,

ಪುಟ್ಟ ಬಾಲೆಯ ಭಯದ ಬಿಕ್ಕುಗಳಲ್ಲಿ

ಐಸಿಯುನ ನಿಟ್ಟುಸಿರುಗಳಲ್ಲಿ

ಕಣ್ಣ ಹನಿಗಳಲ್ಲಿ ತಗ್ಗಿಸಿದ ತಲೆಯಲ್ಲಿ

ಅಡಗಿ ಉಠಬೈಸ್ ತೆಗೆವ ಹೇಡಿ ಶಬ್ದಗಳೇ,

ಕಾಗೆ ಕಾವ್‌ಗುಡುವ

ಸರ್ಪ ಬುಸುಗುಡುವ 

ಹಂದಿ ಹ್ಞೂಂಕರಿಸುವ ಸದ್ದಿಗೂ ಅರ್ಥವಿದೆ.

ಒಡಲುರಿಯ ಹಾಡಾಗಿಸದ ನಿಮಗೆ 

ಲಜ್ಜೆಯಿರುವುದೇ ಹೌದಾದಲ್ಲಿ  

ಅಗ್ನಿಪರ್ವತದ ಬಾಯೊಳಗೆ ಹಾರಿಬಿಡಿ.

ಏರು ಗಂಟಲ ದನಿಯಲ್ಲಿ

ಕಟ್ಟಿದ ಮುಷ್ಠಿಯಲ್ಲಿ

ದಿಟ್ಟ ನಡುಗೆಯಲ್ಲಿ

ಮತ್ತೆ ಹುಟ್ಟಿಬನ್ನಿ..

- ಡಾ. ಎಚ್. ಎಸ್. ಅನುಪಮಾ (2013)


Tuesday 18 July 2023

Medical Education ವೈದ್ಯಕೀಯ ಶಿಕ್ಷಣ

 


2023ರ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಫಲಿತಾಂಶ ಗಮನಿಸಿರುತ್ತೀರಿ. ಪರೀಕ್ಷೆ ಬರೆದ 20.36 ಲಕ್ಷ ಯುವಜನರಲ್ಲಿ 11.46 ಲಕ್ಷ ಜನ ಅರ್ಹತೆ ಗಳಿಸಿದರು. ಕಷ್ಟಕುಲಗಳ, ಬಡತನದ ಮನೆಗಳ ಮಕ್ಕಳು ಹಣ, ಪ್ರಭಾವವಿಲ್ಲದಿದ್ದರೂ ಸ್ವಯಂ ಪರಿಶ್ರಮದಿಂದ ಉತ್ತಮ ರ‍್ಯಾಂಕ್ ಗಳಿಸಿರುವ ಸುದ್ದಿತುಣುಕುಗಳು ಕೆಳವರ್ಗಗಳ ವಿದ್ಯಾರ್ಥಿ/ನಿಯರಲ್ಲಿ ಭರವಸೆ, ಕನಸುಗಳ ಬಿತ್ತಿದೆ. ಆದರೆ ಸೀಟು ಹಂಚಲು ರೂಪಿಸಿದ ರ‍್ಯಾಂಕಿಂಗ್ ವ್ಯವಸ್ಥೆಯೇ ಏಣಿಶ್ರೇಣಿ, ಮೇಲರಿಮೆ, ಕೀಳರಿಮೆಗಳನ್ನು ಸೃಷ್ಟಿಸಿರುವುದು ಗಾಬರಿ ಹುಟ್ಟಿಸುವಂತಿದೆ.

ನೀಟ್‌ನಲ್ಲಿ ಅರ್ಹತೆ ಗಳಿಸದ ಪಾಲಕರಲ್ಲಿ ನಿರಾಸೆ, ಬೇರೆ ದಾರಿ ಅರಸುವ ಅನಿವಾರ್ಯತೆಯುಂಟಾಗಿದೆ. ಅರ್ಹತೆ ಪಡೆದ ಕೆಲ ಕುಟುಂಬಗಳಲ್ಲಿ ಮೊದಲ ಬಾರಿ ಡಾಕ್ಟರಾಗಲಿರುವ ತಮ್ಮ ಕುಟುಂಬ ಸದಸ್ಯರ ಬಗ್ಗೆ ಹೆಮ್ಮೆ, ನಿರೀಕ್ಷೆ ತುಂಬಿಕೊಂಡಿದೆ. ಕೆಲವರು ತಮ್ಮ ವರ್ಗ/ಜಾತಿ/ಸಿರಿವಂತಿಕೆಯ ಗರ್ವಕ್ಕೆ ತಕ್ಕಂತೆ ಮಕ್ಕಳಿಗೆ ಮೆಡಿಕಲ್ ಸೀಟು ಸಿಕ್ಕಿತೆಂದು ಹಿಗ್ಗಿದ್ದಾರೆ. ಸರ್ಕಾರಿ ಸೀಟು ಸಿಗದಿದ್ದರೇನು, ಕ್ಯಾಪಿಟೇಶನ್ ಕೊಟ್ಟಾದರೂ ಮಕ್ಕಳು ‘ಡಾ.’ ಆಗಬೇಕೆಂದು ಸೈಟು, ಬಂಗಾರಗಳ ಮಾರಿ ಸಿದ್ಧವಾದವರಿದ್ದಾರೆ. ದುಡ್ಡಿನ ರಾಶಿಯ ಮೇಲೆ ಕುಳಿತವರಿಗೆ ಸೀಟಿನ ಚಿಂತೆಯಿಲ್ಲ. ಇವೆಲ್ಲದರ ನಡುವೆ ಜನಸೇವೆ ಮಾಡಲೆಂದೇ ವೈದ್ಯರಾಗುವ, ವೈದ್ಯರನ್ನಾಗಿಸುವ ಕನಸು ಕಂಡವರು ಎಷ್ಟಿರಬಹುದು ಎನ್ನುವುದು ನಮ್ಮ ಊಹೆಗೆ ಬಿಟ್ಟದ್ದು. 

ನಮೂದಿಸಿದ ಸಂಖ್ಯೆಗಳಲ್ಲಿ ಕೊಂಚ ಏರುಪೇರಿರಬಹುದು: ಅಂತೂ ಭಾರತದಲ್ಲಿ 704 ಮೆಡಿಕಲ್ ಕಾಲೇಜುಗಳಿವೆ. ಅತಿಹೆಚ್ಚು (68) ಕಾಲೇಜುಗಳಿರುವ ಕರ್ನಾಟಕದಲ್ಲಿ ಎಂಸಿಐ ಮಾನ್ಯತೆ ಪಡೆದ 21 ಸರ್ಕಾರಿ ಕಾಲೇಜುಗಳಿವೆ. ಮೊದಲ ಸರ್ಕಾರಿ ಮೆಡಿಕಲ್ ಕಾಲೇಜು ಮೈಸೂರಿನಲ್ಲಿ(1924) ಶುರುವಾಯಿತು. ನಂತರ ಬೆಂಗಳೂರು(1955), ಹುಬ್ಬಳ್ಳಿ(1957) ಬಳ್ಳಾರಿ(1961)ಗಳಲ್ಲಿ ಶುರುವಾದವು. ಅದಾದಮೇಲೆ 40 ವರ್ಷ ಒಂದೇಒಂದು ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯಲಿಲ್ಲ. ಆ ಅವಕಾಶವನ್ನು ಖಾಸಗಿಯವರು ಬಳಸಿಕೊಂಡರು. ಜಾತಿ-ಧರ್ಮ-ಪಕ್ಷ-ರಾಜಕಾರಣಿ-ಸ್ವಾಮಿಯ ಹೆಸರಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಪುತುಪುತನೆದ್ದವು. ಹೊಸಹೊಸ ಕಾಲೇಜುಗಳು ಈಗಲೂ ಆರಂಭವಾಗುತ್ತಲೇ ಇವೆ. ಅದರ ಜೊತೆಗೆ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿಯಿಂದ 17 ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳು ಆರಂಭವಾಗಿದೆ. 

ಆಗಸ್ಟ್ ೨೦೨೨ರ ಪ್ರಕಾರ ದೇಶಾದ್ಯಂತ 48,028 ಸರ್ಕಾರಿ ಸೀಟುಗಳು, 44,765 ಖಾಸಗಿ ಸೀಟುಗಳು (ಒಟ್ಟು 92,793) ನೀಟ್ ಬರೆದವರಿಗೆ ಲಭ್ಯವಿವೆ. (ಏಮ್ಸ್, ಜಿಪ್ಮರ್, ಸಶಸ್ತ್ರ ಸೇನಾಪಡೆಗಳ ಮೆಡಿಕಲ್ ಕಾಲೇಜು, ನಿಮ್ಹ್ಯಾನ್ಸ್, ಇಎಸ್ಸೈ ಮೊದಲಾದ ಸ್ವಾಯತ್ತ ಸಂಸ್ಥೆಗಳಲ್ಲಿ ಮತ್ತು ಡೀಮ್ಡ್-ಟು-ಬಿ ಯುನಿವರ್ಸಿಟಿಗಳಲ್ಲಿ 28,920 ಸರ್ಕಾರಿ, 17,915 ಖಾಸಗಿ ಸೀಟುಗಳಿವೆ. ಅದಕ್ಕೆ ಅವರದೇ ಪರೀಕ್ಷೆ ಬರೆಯಬೇಕು.) ಕರ್ನಾಟಕದ 10,395 ಮೆಡಿಕಲ್ ಸೀಟುಗಳಲ್ಲಿ 21 ಸರ್ಕಾರಿ ಮೆಡಿಕಲ್ ಕಾಲೇಜುಗಳ 3200ರಷ್ಟು ಸೀಟುಗಳು ಲಭ್ಯವಿವೆ. ಉಳಿದವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾಲಯಗಳಲ್ಲಿವೆ. 

ಭಾರತದಾದ್ಯಂತ ೧,೩೯,೬೨೮ ವೈದ್ಯರು ಪ್ರತಿ ವರ್ಷ ಹೊರಬರುತ್ತಾರೆ. ಅಷ್ಟಾದರೂ ಗ್ರಾಮೀಣ ಪ್ರದೇಶಗಳಿಗೆ, ಬಡವರಿಗೆ ಆರೋಗ್ಯಸೇವೆ ನೀಡಲು ವೈದ್ಯರಿಲ್ಲ ಎಂಬ ಕೂಗು ಕೇಳಿಬರುತ್ತಿದೆ. 

ಹೀಗೇಕೆ? 


ಸೇವಾಕ್ಷೇತ್ರದಿಂದ ಉದ್ಯಮದ ಮಟ್ಟಕ್ಕಿಳಿದಿರುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಆಳಗಲ ಅರಿತರೆ ಇದಕ್ಕೆ ಕಾರಣಗಳು ಸ್ಪಷ್ಟವಾಗುತ್ತವೆ. ಮೊದಲೆಲ್ಲ ವೈದ್ಯರಾಗಲು ರಾತ್ರಿ ಹಗಲೆನದೆ ರೋಗಿಗಳ ನೋಡಲು ಸಿದ್ಧವಿರುವ, ರಕ್ತ ಕೀವಿಗೆ ಹೇಸದ, ಸೇವಾ ಮನೋಭಾವವಿರುವ ವ್ಯಕ್ತಿತ್ವ ಬೇಕು ಎಂಬ ನಿರೀಕ್ಷೆಯಿತ್ತು. ಈಗ ವೈದ್ಯಕೀಯವೆಂದರೆ ಅತಿ ಸ್ಪರ್ಧಾತ್ಮಕವಾಗಿ ಗೆಲ್ಲಬೇಕಿರುವ, ಅತಿ ಹೆಚ್ಚು ಭದ್ರತೆ, ಅವಕಾಶ, ಗಳಿಕೆ, ಗೌರವ ತಂದುಕೊಡುವ ಉದ್ಯೋಗವೆನಿಸಿಕೊಂಡಿದೆ. ರೋಗಿಗಳಿಲ್ಲಿ ಗ್ರಾಹಕರು. ಫಾರ್ಮಾ ಕಂಪನಿಗಳ ಪ್ರಾಡಕ್ಟ್‌ಗಳನ್ನು ಜನರಿಗೆ ಮುಟ್ಟಿಸಲು ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳು ಉಪಕರಣಗಳಷ್ಟೇ. 

ಅತಿ ಶ್ರೇಣೀಕೃತ ವ್ಯವಸ್ಥೆಯಾದ ವೈದ್ಯಕೀಯ ಶಿಕ್ಷಣವು ಹೆಚ್ಚು ಖಾಸಗೀಕರಣಗೊಂಡಿದೆ. ಸರ್ಕಾರಿ ಸೀಟುಗಳ ಮೂರುಪಟ್ಟು ಅವಕಾಶ ಖಾಸಗಿ ಕಾಲೇಜುಗಳಲ್ಲಿವೆ. ಖಾಸಗಿ ಕಾಲೇಜುಗಳ 25% ಸೀಟುಗಳನ್ನು ಸರ್ಕಾರಿ ಕೋಟಾದಲ್ಲಿ ಭರ್ತಿ ಮಾಡುತ್ತಾರೆ. ಅಲ್ಲಿನ ದುಬಾರಿ ಫೀಸು ತೆತ್ತು ಸರ್ಕಾರಿ ಸೀಟಿನ ವಿದ್ಯಾರ್ಥಿಗಳು ಓದಬೇಕು. ಉಳಿದ 75% ಸೀಟುಗಳಿಗೆ ಪ್ರವೇಶ ಪಡೆಯಲು ಇರಬೇಕಾದ ಮುಖ್ಯ ಅರ್ಹತೆ ಹಣ. ಆಯಾ ಕಾಲೇಜಿನ ನಿಯಮಗಳಿಗೆ ತಕ್ಕಂತೆ 80 ಲಕ್ಷದಿಂದ ಒಂದೆರೆಡು ಕೋಟಿಯ ತನಕ ಬೇಕಾಗುತ್ತದೆ. ನಂತರ ಐದೂವರೆ ವರ್ಷದ ಓದಿನ ಖರ್ಚು ನಿಭಾಯಿಸಿ, ಬಳಿಕ ದುಬಾರಿ ಬೆಲೆಗೆ ಪಿಜಿ ಸೀಟು ಪಡೆಯಬೇಕು. ಅದನ್ನೂ ಕ್ಯಾಪಿಟೇಶನ್ ಕೊಟ್ಟೇ ಪಡೆಯುವುದಾದರೆ ಮೂರ‍್ನಾಲ್ಕೈದು ಕೋಟಿ ಖರ್ಚು ಮಾಡಿ ಎಂಡಿ/ಎಂಎಸ್ ಪಡೆಯಬೇಕು. ಅಂದರೆ ತಜ್ಞವೈದ್ಯರಾಗಲು ಕನಿಷ್ಟ 9-10 ವರ್ಷ ಮತ್ತು 7-8 ಕೋಟಿ ರೂಪಾಯಿ ಬೇಕು. ಗಮನಿಸಿ, ಕರ್ನಾಟಕದಲ್ಲಿ ಸರ್ಕಾರಿ ಸೀಟಿನಲ್ಲಿ ಹೊರಬರುವ ಎರಡರಷ್ಟು ಸಂಖ್ಯೆಯ ವೈದ್ಯರು ಹಣ ಸುರಿದು ವೈದ್ಯ ಪದವಿ ಪಡೆದಿರುತ್ತಾರೆ. (ಮೆರಿಟ್ ಎಂದು ಕೂಗುವ ಮೀಸಲಾತಿ ವಿರೋಧಿಗಳು ಈ ಬಗ್ಗೆ ಚಕಾರೆತ್ತದಿರುವುದು ಗಮನಾರ್ಹ.) 

ಯಾವ ತಾಯ್ತಂದೆಯರಾದರೂ ಜನಸೇವೆ ಮಾಡಲಿ ಎಂದು ಇಷ್ಟು ಹಣ ಸುರಿದು ಮಕ್ಕಳನ್ನು ಓದಿಸುತ್ತಾರೆಯೇ? ಅತ್ಯಾಧುನಿಕ ಆಸ್ಪತ್ರೆಗಳಲ್ಲಿ, ಸಿರಿವಂತರ ನಡುವೆ ಕಲಿತ ಆ ಯುವವೈದ್ಯರು ಅತಿ ಕಡಿಮೆ ಸೌಲಭ್ಯವಿರುವ, ಕಡಿಮೆ ಆದಾಯದ ಗ್ರಾಮೀಣ/ಸರ್ಕಾರಿ ಕೆಲಸಗಳಿಗೆ ಹೋಗಲು ಇಚ್ಛಿಸಿಯಾರೇ? ಹೀಗೆ ವೈದ್ಯಕೀಯ ಶಿಕ್ಷಣವನ್ನು ದುಬಾರಿ ವ್ಯವಹಾರವನ್ನಾಗಿಸಿರುವ ನೀಟ್ ಅಕಾಡೆಮಿ, ಕೋಚಿಂಗ್ ಸೆಂಟರ್ ಮತ್ತು ಕ್ಯಾಪಿಟೇಶನ್ ಮೆಡಿಕಲ್ ಕಾಲೇಜುಗಳನ್ನು ಬೆಳೆಸುತ್ತಿರುವ ವ್ಯವಸ್ಥೆ ಒಂದೆಡೆ; ವೈದ್ಯರು ಉದಾರಿಗಳೂ, ಉದಾತ್ತ ಗುಣದವರೂ, ಸೇವಾಮನೋಭಾವ ಇರುವವರೂ ಆಗಿರಬೇಕೆಂದು ಬಯಸುವ ಸಮಾಜ ಇನ್ನೊಂದೆಡೆ.

ಕೆಲವರ್ಷಗಳ ಹಿಂದಿನ ತನಕ ಮಕ್ಕಳ ತಜ್ಞರು, ಸರ್ಜರಿ, ಸ್ತ್ರೀರೋಗ, ಎಲುಬುಕೀಲು, ಹೃದ್ರೋಗ ತಜ್ಞತೆಗಳು ಬಹುಬೇಡಿಕೆಯ ಸ್ನಾತಕೋತ್ತರ ಪದವಿಗಳಾಗಿದ್ದವು. ಈಗ ಅತಿಹೆಚ್ಚು ಡಿಮ್ಯಾಂಡ್ ಇರುವುದು ಚರ್ಮರೋಗ ತಜ್ಞರಾಗಲು! ಜೀವನ್ಮರಣದ ಪ್ರಶ್ನೆಯಲ್ಲದಿದ್ದರೂ ‘ಚೆಂದ’ ಕಾಣುವುದು ಜನರ ಪ್ರಾಥಮಿಕ ಆದ್ಯತೆಯಾಗಿದೆ. ಮಾರುಕಟ್ಟೆಯ ವ್ಯಾಖ್ಯಾನಕ್ಕೆ ತಕ್ಕಂತೆ ಜನರನ್ನು ಚೆಲುವ ಚೆಲುವೆಯರನ್ನಾಗಿಸಲು ವೈದ್ಯಕೀಯ ರಂಗ ಟೊಂಕಕಟ್ಟಿ ನಿಂತಿದೆ! 

ಈ ಕಾಲದ ಮೌಲ್ಯಗಳ ವೈರುಧ್ಯಕ್ಕೆ, ಆಷಾಢಭೂತಿತನಕ್ಕೆ, ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ ಎನ್ನಲಿಕ್ಕೆ ಇದಕ್ಕಿಂತ ಉದಾಹರಣೆಗಳು ಬೇಕೇ?

‘ವನಸುಮದೊಳೆನ್ನ ..’



ನೀಟ್ ಫಲಿತಾಂಶ ಬಂದ ದಿನದಿಂದ ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟ ಗಮನಿಸಿರುತ್ತೀರಿ. ಅತಿ ಸ್ಪರ್ಧೆ, ಆಶೋತ್ತರ, ಆತಂಕ, ನಿರೀಕ್ಷೆಗಳಿರುವುದನ್ನೇ ಬಂಡವಾಳ ಮಾಡಿಕೊಂಡು ನೀಟ್ ಕಾಲೇಜು, ಅಕಾಡೆಮಿಗಳು ಇಡೀ ಪುಟ ಜಾಹೀರಾತು ಕೊಡುತ್ತಿವೆ. ತಮ್ಮಲ್ಲಿ ಕಲಿತರೆ ವೈದ್ಯಕೀಯ ಸೀಟು ಗ್ಯಾರಂಟಿ ಎನ್ನುತ್ತ ಅತಿಹೆಚ್ಚು ಅಂಕ ಗಳಿಸಿದ ಯಶಸ್ವಿ ವಿದ್ಯಾರ್ಥಿ/ನಿಯರ ಫೋಟೋವನ್ನು ದೊಡ್ಡದಾಗಿ ಪ್ರಕಟಿಸುತ್ತಿವೆ. ಮೆಡಿಕಲ್ ಪ್ರವೇಶ ಪಡೆಯುವುದು ಅತ್ಯಂತ ಹೆಗ್ಗಳಿಕೆಯ ವಿಷಯವೆಂಬಂತೆ ಬಿಂಬಿಸಲಾಗುತ್ತಿದೆ. ಹೀಗೆ ಶುರುವಾಗುವ ಮೆಡಿಕಲ್ ಹೈಪ್, ‘ಅಪರೂಪದಲ್ಲಿ ಅಪರೂಪದ ಅವಕಾಶ ಪಡೆದವರು ನಾವು’ ಎಂಬ ಅಹಮನ್ನು ವೈದ್ಯ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ವೈದ್ಯರಾದರೂ ಮುಂದುವರೆಯುತ್ತದೆ.

ಅಹಂ ನಿರಸನ ಅಷ್ಟೇನೂ ಸುಲಭವಲ್ಲ. ಅದಕ್ಕೆ ನಮ್ಮನ್ನು ನಿರಂತರವಾಗಿ ದಿವ್ಯಕ್ಕೆ ಒಡ್ಡಿಕೊಳ್ಳಬೇಕು. ರೋಗಿಗಳಂತೆ ತಾವೂ ಮರಣಾಧೀನರೇ ಹೊರತು ಸರ್ವಶಕ್ತರಲ್ಲ ಎಂಬ ಪ್ರಜ್ಞಾ (ವಿನಯ); ಅಸಹಾಯಕತೆಯಲ್ಲಿರುವವರಿಗೆ ತನ್ನ ಬಳಿ ಸಾಧ್ಯವಿರುವ ಸಹಾಯವನ್ನೆಲ್ಲ ಮಾಡಬೇಕು ಎಂಬ ಕರುಣಾ; ಜಾತಿ, ಲಿಂಗ ಮತ್ತು ವರ್ಗಪ್ರಜ್ಞೆಗಳ ಮೀರಿದ ಸಮತಾ - ಇವೇ ಆ ದಿವ್ಯಗಳು. 

ಜನಕೆ ಸಂತಸವೀವ ಘನನು ನಾನೆಂದೆಂಬ 

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ

ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು..’ (ಡಿವಿಜಿ)

ಎಲ್ಲಕ್ಕಿಂತ ಮುಖ್ಯವಾದದ್ದು ನಮ್ಮ ‘ಗಳಿಕೆ’ಯ ದುಡ್ಡಿಗೆ ಉತ್ತರದಾಯಿತ್ವ ಆರೋಪಿಸಿಕೊಳ್ಳುವುದು. ನಮ್ಮ ಬಳಿ ಹೊಟ್ಟೆತುಂಬ ಉಂಡು ಮಿಗುವಷ್ಟು ಇದೆಯೆಂದರೆ ಅದಕ್ಕೆ ಹಸಿದವರ ಅನ್ನ ಕಸಿದುಕೊಂಡ ಕಳಂಕ ಅಂಟಿರುತ್ತದೆ. ವೈದ್ಯರ ಯೋಚನೆ ಈ ದಿಕ್ಕಿನಲ್ಲಿ ಕೊಂಚ ಹರಿದರೂ ಸಾಕು, ತಂತಾನೇ ಅವರ ಸ್ಟಾಂಡರ್ಡ್‌ಗಳು, ಫೀಸುಗಳು, ಚಿಕಿತ್ಸೆ-ತಪಾಸಣೆಯ ಯಾದಿಗಳು ಬದಲಾಗಿಬಿಡುತ್ತವೆ. ಹೀಗೆ ಜನರ ಋಣಭಾರವನ್ನು ನೆನಪಿಸುವಂತಹ ಶಿಕ್ಷಣವು ವೈದ್ಯಕೀಯವಷ್ಟೆ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಅವಶ್ಯವಾಗಿದೆ. ಅದರಲ್ಲಿ ಸಮಾಜದ ಪಾತ್ರವೂ ಮಹತ್ವದ್ದಾಗಿದೆ. 

ಡಾ. ಎಚ್. ಎಸ್. ಅನುಪಮಾ

(ಬರಹವನ್ನು ಆಲೋಪತಿ ವೈದ್ಯಪದ್ಧತಿಯ ಕಾಲೇಜುಗಳನ್ನಷ್ಟೆ ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ಉಳಿದ ವೈದ್ಯಪದ್ಧತಿಗಳ ಶಿಕ್ಷಣ ಕುರಿತು ನನಗಷ್ಟು ತಿಳಿದಿಲ್ಲ.)