Monday 16 May 2022

ನ್ಯಾ. ಕೆ. ಚಂದ್ರು - ಜನಚಳವಳಿ ಮಾತ್ರ ಸಂವಿಧಾನವನ್ನು ರಕ್ಷಿಸಬಲ್ಲದು


ಮೈ ಲಾರ್ಡ್,  ನನ್ನ ವಾದ, ಕೇಳಿ ಕೇಳಿ’ ಎಂದು ವಕೀಲರು, ಕಕ್ಷಿದಾರರು ನ್ಯಾಯಾಧೀಶರನ್ನು ಕೇಳುವರಲ್ಲವೆ? ನ್ಯಾಯಾಧೀಶರೊಬ್ಬರು ‘ಮೈ ಲಾರ್ಡ್ ಎಂಬ ಪದ ಬಳಸಬೇಡಿ, ನಾನೂ ನಿಮ್ಮಂತೆಯೇ ಒಬ್ಬ ವ್ಯಕ್ತಿ' ಎಂದು ಹೇಳಿದರೆ? ತುರ್ತಾಗಿ ನ್ಯಾಯ ದೊರೆಯುವುದೇ ಕನಸು ಎಂಬಂತಾಗಿರುವ, ಪ್ರಕರಣಗಳ ಭಾರದಿಂದ ತತ್ತರಿಸಿರುವ, ಸಿಬ್ಬಂದಿ ಕೊರತೆಯಿರುವ ನ್ಯಾಯಾಲಯದಲ್ಲಿ ಒಬ್ಬ ನ್ಯಾಯಾಧೀಶರು ಕೇವಲ 6 ವರ್ಷದಲ್ಲಿ 96000 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಮಾಡಿದರೆ? ನಂಬಲಸಾಧ್ಯ ಎನಿಸುತ್ತದೆ, ಅಲ್ಲವೆ?

ನೀವು ನಂಬಬೇಕು. ಅಂತಹ ನ್ಯಾಯಮೂರ್ತಿ ಒಬ್ಬರು ಈ ಕಾಲದಲ್ಲಿ ಇರುವರು ಎಂದೇ ನಾವಿನ್ನೂ ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದಾಗಿದೆ.

ಅಂಥವರು ನ್ಯಾಯಮೂರ್ತಿ ಕೆ. ಚಂದ್ರು. ಮದರಾಸು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು. ಅವರು ವಕೀಲರಾಗಿ 1993ರಲ್ಲಿ ನಿಭಾಯಿಸಿದ ಪ್ರಕರಣವೊಂದು ಕಳೆದ ವರ್ಷ ‘ಜೈ ಭೀಮ್’ ಎನ್ನುವ ತಮಿಳು ಸಿನಿಮಾ ಆದ ಬಳಿಕ ನ್ಯಾ. ಚಂದ್ರು ಮನೆಮಾತಾಗಿದ್ದಾರೆ. ಅವರ ಬದುಕು, ಪ್ರತಿಪಾದನೆಯ ಕುರಿತು ಎಲ್ಲರಿಗೂ ಆಸಕ್ತಿ, ಅಚ್ಚರಿ, ಗೌರವ ಮೂಡತೊಡಗಿದೆ.

***

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನಲ್ಲಿ 1951ರಲ್ಲಿ ಹುಟ್ಟಿದ ಚಂದ್ರು ವಿದ್ಯಾರ್ಥಿ ದೆಸೆಯಿಂದಲೇ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ಪ್ರತಿಭಟನೆಗಳನ್ನು ಮುನ್ನಡೆಸಿದ ಕಾರಣಕ್ಕಾಗಿ ಅವರನ್ನು ಚೆನ್ನೈನ ಲೊಯೊಲಾ ಕಾಲೇಜು ಡಿಬಾರ್ ಮಾಡಿತ್ತು. ಬಳಿಕ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪೂರೈಸಿದ ಅವರು, 1973ರಲ್ಲಿ ಕಾನೂನು ಪದವಿಗಾಗಿ ಕಾಲೇಜು ಸೇರಿದರು. ಅವರು ವಿದ್ಯಾರ್ಥಿ ಸಂಘಟನೆಯ ವ್ಯಕ್ತಿ ಎಂದು ಹಾಸ್ಟೆಲಿನಲ್ಲಿ ಜಾಗ ಕೊಡದೆ ಹೋದಾಗ ಆಮರಣಾಂತ ಉಪವಾಸ ಆರಂಭಿಸಿದರು. ಕಾನೂನು ಪದವಿಯ ಬಳಿಕ ರಾವ್ ಅಂಡ್ ರೆಡ್ಡಿ ಎಂಬ ಲಾ ಫರ್ಮಿನಲ್ಲಿ ೮ ವರ್ಷ ಕೆಲಸ ಮಾಡಿದ ಅವರು 1988ರವರೆಗೂ ಸಿಪಿಐ(ಎಂ) ಪಕ್ಷದ ಕಾರ್ಯಕರ್ತನಾಗಿ ದುಡಿದರು. ಶ್ರೀಲಂಕಾದ ದಂಗೆ, ಅಂತರ್ಯುದ್ಧದ ಸಮಯದಲ್ಲಿ ತಮಿಳರ ಪರವಾಗಿ ಮಾತನಾಡುತ್ತಾ ಭಾರತದ ಹಸ್ತಕ್ಷೇಪವನ್ನು ಅವರು ವಿರೋಧಿಸಿದಾಗ ಅದು ಪಕ್ಷವಿರೋಧಿ ಚಟುವಟಿಕೆ ಎನಿಸಿಕೊಂಡಿತು. ಸಿಪಿಐ(ಎಂ) ಪಕ್ಷವು ಅವರನ್ನು ಹೊರಹಾಕಿತು. ಆ ವೇಳೆಗೆ ಅಂಬೇಡ್ಕರ್ ಶತಮಾನೋತ್ಸವ ದೇಶಾದ್ಯಂತ ಆಚರಣೆಯಾಯಿತು. ನ್ಯಾ. ಚಂದ್ರು ಅಂಬೇಡ್ಕರರನ್ನು ಹೆಚ್ಚೆಚ್ಚು ಓದಿಕೊಂಡರು. ಭಾರತದಲ್ಲಿ ಜಾತಿ-ಮತ-ಧರ್ಮಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಲಾಗದು ಎನ್ನುವುದನ್ನು ಕಂಡುಕೊಂಡರು. ಬಾರ್ ಎಟ್ ಲಾ ಮುಗಿಸಿಬಂದ ಅಂಬೇಡ್ಕರರ ಕನಸು  ನ್ಯಾಯಮೂರ್ತಿಯಾಗಬೇಕು ಎನ್ನುವುದಾಗಿರುತ್ತದೆ. ಅಂಬೇಡ್ಕರರ ಬದುಕು ಬರಹಗಳಿಂದ ಸ್ಫೂರ್ತಿ ಪಡೆದ ವಕೀಲ ಚಂದ್ರು ಅವರಿಗೂ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಉತ್ಸಾಹ ಹುಟ್ಟುತ್ತದೆ. ಕ್ರಿಮಿನಲ್ ಮತ್ತು ಸಿವಿಲ್ ಖಟ್ಲೆಗಳೆರಡನ್ನೂ ಮದರಾಸು ಉಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದ ಚಂದ್ರು, 2006ರಲ್ಲಿ ಅದೇ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2009ರಲ್ಲಿ ಖಾಯಂ ನ್ಯಾಯಾಧೀಶರಾದರು. 

ಎಷ್ಟೋ ನ್ಯಾಯಮೂರ್ತಿಗಳು ಬರುತ್ತಾರೆ, ಎಷ್ಟೋ ಜನ ಹೋಗುತ್ತಾರೆ. ಆದರೆ ಜನಮಾನಸದಲ್ಲಿ ನೆನಪಿನಲ್ಲುಳಿಯುವಂತೆ ಕೆಲಸ ಮಾಡುವವರು; ಮಾಡುವ ಕೆಲಸದ ಮೇಲೆ ಅತೀವ ಶ್ರದ್ಧೆಯಿಟ್ಟು ಅರ್ಥಪೂರ್ಣವಾಗಿ ಸೇವಾವಧಿ ಕಳೆಯಬೇಕೆನ್ನುವವರು ಎಲ್ಲೋ ಬೆರಳೆಣಿಕೆಯಷ್ಟು ಜನ. ಈ ದೃಷ್ಟಿಯಿಂದ ನ್ಯಾ. ಕೆ. ಚಂದ್ರು ತುಂಬ ಭಿನ್ನರಾಗಿ ಎದ್ದು ಕಾಣುತ್ತಾರೆ. ಅವರು ನ್ಯಾಯಮೂರ್ತಿಯಾದ ಮೇಲೆ ಕೆಲವು ಬದಲಾವಣೆ ತಂದರು. ಇನ್ನು ಮುಂದೆ ತಮಗೆ ಅಂಗರಕ್ಷಕರು ಬೇಡವೆಂದು ಹೇಳಿದರು. ನ್ಯಾಯಮೂರ್ತಿಗಳನ್ನು ‘ಮೈ ಲಾರ್ಡ್’ ಎಂದು ಸಂಬೋಧಿಸುವುದನ್ನು ನಿಲ್ಲಿಸಿದರು. 2013ರಲ್ಲಿ ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭವನ್ನೂ ಸ್ವೀಕರಿಸಲಿಲ್ಲ. ಅಲ್ಲಿ ನ್ಯಾಯಮೂರ್ತಿಗಳು ಬರುವ ಮೊದಲು ಒಬ್ಬ ಸೇವಕನು ಗದೆಯಂತಹ ಲಾಂಛನ ಹಿಡಿದು ಬಂದು ಜನರನ್ನು ದೂರ ಸರಿಸಬೇಕಿತ್ತು. ಅದನ್ನು ಕೂಡಾ ಬೇಡವೆಂದರು. ಅವರಿಗೊಬ್ಬ ಸೆಕ್ಯುರಿಟಿ ಪೊಲೀಸ್ ಆಫೀಸರ್ ಇದ್ದರು. ಅವರ ಅಗತ್ಯವೂ ಇಲ್ಲ ಬೇಡ ಎಂದರು. ಇವು ಬಾಹ್ಯ ಬದಲಾವಣೆಗಳಾದರೆ ನ್ಯಾಯಾಲಯದ ಒಳಗೂ ಬದಲಾವಣೆ ತಂದರು. ಅಂದಂದಿಗೆ ಸಿದ್ಧಪಡಿಸಿದ ಯಾದಿಯ ಪ್ರಕರಣಗಳನ್ನು ಅವತ್ತಿಗೆ ಮುಗಿಸಲೇಬೇಕು. ಕುದುರೆ ಹಾಗೆ ಕೆಲಸ ಮಾಡಿ, ಋಷಿಗಳ ತರಹ ಬದುಕಿ ಎಂದು ಮುಖ್ಯ ನ್ಯಾಯಮೂರ್ತಿ ಕಪಾಡಿಯಾ ಒಮ್ಮೆ ನ್ಯಾಯಮೂರ್ತಿಗಳಿಗೆ ಹೇಳಿದ್ದರು. ಅವರೂ ಹಾಗೇ ನಡೆದುಕೊಂಡರು. 

ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಪ್ರಕರಣಗಳ ಬಗೆಗೆ ವಿಶೇಷ ಆಸ್ಥೆ ವಹಿಸುತ್ತಿದ್ದ ನ್ಯಾ. ಚಂದ್ರು, ವಿಳಂಬವಿಲ್ಲದೆ ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಹೆಸರುವಾಸಿಯಾದರು. ಮೂರರಿಂದ ನಾಲ್ಕು ವಾರಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. ಮನೆಯಲ್ಲಿಯೇ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವುದು, ಒಂದೇ ತರಹದ ಪ್ರಕರಣಗಳನ್ನು ಒಗ್ಗೂಡಿಸುವುದು, ವಿಚಾರಣೆಯನ್ನು ಅನವಶ್ಯ ಮುಂದೂಡದೇ ಮಿತಗೊಳಿಸುವುದು, ತೀರ್ಪನ್ನು ಕೋರ್ಟಿನಲ್ಲಿ ಓದಿ ಹೇಳಿದ ಬಳಿಕ ಟೈಪಿಸಲು ಸಮಯ ವ್ಯರ್ಥ ಮಾಡದೇ ಮನೆಯಲ್ಲಿ ಮಾಡಿಸುವುದು, ಮೊದಲೇ ಸಿದ್ಧವಾಗಿ ಬರುವುದು - ಹೀಗೆ ತ್ವರಿತ ವಿಲೇವಾರಿಗೆ ಹಲವು ವಿಧಾನಗಳನ್ನು ಅನುಸರಿಸಿದರು. ವಿಚಾರಣೆ ಮುಂದೂಡಿಕೆ ಎನ್ನುವುದು ನ್ಯಾಯಾಲಯಕ್ಕೆ ಹತ್ತಿದ ಕಾಯಿಲೆ ಎನ್ನುವ ನ್ಯಾ. ಚಂದ್ರು, ವಕೀಲರಿಗೆ ಕಾಯಿಲೆ/ಅಪಘಾತ ಮುಂತಾದ ತುರ್ತು ಉಂಟಾಗಿದ್ದು ಹೊರತುಪಡಿಸಿದರೆ ಒಮ್ಮೆ ವಿಚಾರಣೆಗೆ ಬಂದ ಪ್ರಕರಣವನ್ನು ಯಾವ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ತೆಗೆದುಕೊಳ್ಳುತ್ತಿದ್ದರು. ಹುಸಿ ಪ್ರಕರಣಗಳನ್ನು ವಜಾ ಮಾಡಿದರೆ. ಎಲ್ಲ ವಿಚಾರಣೆ ಮುಗಿದರೂ ವರ್ಷಗಟ್ಟಲೆಯಿಂದ ಕೊಳೆಬಿದ್ದ ಪ್ರಕರಣಗಳನ್ನು ತೀರ್ಪಿನ ತನಕ ತಂದು ಅಂತಿಮಗೊಳಿಸಿದರು. ಇದು ಅವರಿಗೆ ಹಗೆಗಳನ್ನು ಸೃಷ್ಟಿಸಿದರೂ ಸಹ ಯುದ್ಧೋಪಾದಿಯಲ್ಲಿ 96 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿ ಅತ್ಯಪೂರ್ವ ದಾಖಲೆ ಬರೆದರು. 

ಆಕ್ರೋಶ, ಪ್ರತ್ಯೇಕತೆ, ಅಸಹಾಯಕತೆಗಳೆಲ್ಲ ಸೇರಿ ಶೋಷಿತರಿಗೆ ಒಂದು ತರಹದ ನಿರ್ಧಾರ ಹುಟ್ಟುತ್ತದೆ. ಅದು ಎಲ್ಲ ಅಡೆತಡೆಗಳ ವಿರುದ್ಧವೂ ಅವರು ಸೆಣಸುವಂತೆ ಮಾಡುತ್ತದೆ. ಅಂತಹ ಅಸಹಾಯಕರ, ಪೊಲೀಸ್ ದೌರ್ಜನ್ಯದ ವಿರುದ್ಧವೂ ಹೋರಾಡುತ್ತಿದ್ದ ಅಮಾಯಕರ ಪ್ರಕರಣಗಳನ್ನು ಹುಡುಹುಡುಕಿ ಇತ್ಯರ್ಥಗೊಳಿಸಿದರು. ಅಂತಹ 25 ಪ್ರಕರಣಗಳನ್ನು ಪ್ರಸ್ತುತಪಡಿಸಿ ‘ಲಿಸನ್ ಟು ಮೈ ವರ್ಡ್ಸ್’ (ಪ್ರ: ಲೆಫ್ಟ್ ವರ್ಡ್) ಎಂಬ ಅತ್ಯಂತ ಮನೋಜ್ಞ ಪುಸ್ತಕ ಪ್ರಕಟಿಸಿದರು. 



ಅವರು ವಕೀಲರಾಗಿದ್ದಾಗಲೂ ಅಮಾಯಕರ ಮೇಲೆ ನಡೆವ ಪೊಲೀಸ್ ದೌರ್ಜನ್ಯದ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದರು. ಪೊಲೀಸರೇ ಅಪರಾಧಿಗಳಾದರೆ ಅವರನ್ನು ಶಿಕ್ಷಿಸಲು ಒಂದೂ ಐಪಿಸಿ ಸೆಕ್ಷನ್ ಇಲ್ಲ, ಹಾಗಾಗಿ ರಕ್ಷಕ ವ್ಯವಸ್ಥೆಯೊಳಗೇ ಇರುವ ಸಾಂಸ್ಥಿಕ ಹಿಂಸೆಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು. ವರ್ಗಗ್ರಸ್ತ ಸಮಾಜದಲ್ಲಿ ನ್ಯಾಯವೂ ವರ್ಗಗ್ರಸ್ತವೇ ಆಗಿರುವುದರಿಂದ ಶೋಷಿತರು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಭಾವಿಸಿ ಅಂತಹವರಿಗೆ ಸಹಾಯ ಮಾಡುತ್ತಿದ್ದರು.  ಹಾಗೆ 1993ರಲ್ಲಿ ಅವರು ವಕೀಲರಾಗಿ ಇರುಳರು ಎಂಬ ಆದಿವಾಸಿ ಕುಟುಂಬದ ಒಂದು ಪ್ರಕರಣವನ್ನು ತೆಗೆದುಕೊಂಡಿದ್ದರು. ಆ ನೈಜ ಕತೆಯನ್ನಾಧರಿಸಿ, ಸೂರ್ಯ ನಾಯಕನಟರಾಗಿ ಜ್ಞಾನವೇಲು ನಿರ್ದೇಶಕರಾಗಿ, 2021ರಲ್ಲಿ ಜೈಭೀಮ್ ಚಿತ್ರವಾಗಿ ತೆರೆಗೆ ಬಂತು. ದೇಶಾದ್ಯಂತ ಅದು ಇರುಳರು ಎಂಬ ಆದಿವಾಸಿಗಳ ಬಗೆಗೂ, ಪೊಲೀಸ್ ದೌರ್ಜನ್ಯಗಳ ಬಗೆಗೂ ಚರ್ಚೆ ಹುಟ್ಟುಹಾಕಿತು. 

‘ನನ್ನ ತೀರ್ಪುಗಳಲ್ಲಿ ಕಾಣುವ ಅಂಬೇಡ್ಕರ್ ಬೆಳಕು’, ‘ಲಿಸನ್ ಟು ಮೈ ವರ್ಡ್ಸ್’ (‘ಸಾಹೇಬ್ರೇ, ನನ್ನ ಮಾತು ಕೇಳಿ’- ನ್ಯಾಯಾಲಯಕ್ಕೆ ಬರುವ ಮಹಿಳೆಯರ ಪ್ರಕರಣಗಳು) ಮೊದಲಾದ ಪುಸ್ತಕಗಳನ್ನು ಬರೆದಿರುವ ಅವರು, ನಿವೃತ್ತಿಯ ಬಳಿಕ ಜನಪರ ಚಿಂತನೆ, ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅಲ್ಲಿ ೬, ೭ನೆಯ ತರಗತಿಯ ಮಕ್ಕಳಿಗೆ ಸಂವಿಧಾನದ ಪಾಠಗಳನ್ನು ತಾವೇ ಬೋಧಿಸುತ್ತಾರೆ. 

‘ಭಾರತ ಸಂವಿಧಾನ ಅಪಾಯದಲ್ಲಿದೆ, ಒಡೆಯುವ ಶಕ್ತಿಗಳ ವಿರುದ್ಧದ ಜನ ಚಳವಳಿ ಮಾತ್ರವೇ ಸಂವಿಧಾನವನ್ನು ರಕ್ಷಿಸಬಹುದಾಗಿದೆ. ಸರ್ಕಾರ ಜನರ ಹಿತಾಸಕ್ತಿ ಪೊರೆಯುವಲ್ಲಿ ವಿಫಲವಾದಾಗ ಜನ ಚಳವಳಿಯೇ ಪರ್ಯಾಯಗಳನ್ನು ಸೃಷ್ಟಿಸಬೇಕಿದೆ’ ಎನ್ನುವ ನ್ಯಾ. ಚಂದ್ರು, ಶೋಷಿತರು ನ್ಯಾಯಾಂಗ ವ್ಯವಸ್ಥೆಯ ಬಗೆಗೆ ಇನ್ನೂ ಭರವಸೆಯಿಟ್ಟುಕೊಳ್ಳಬಹುದು ಎನ್ನುವಂತೆ ಮಾಡಿದ್ದಾರೆ. ಈಗ ಚೆನ್ನೈನಲ್ಲಿ ಪತ್ನಿ ಭಾರತಿಯವರೊಡನೆ ವಾಸವಾಗಿದ್ದಾರೆ.


ಇದೇ ಮೇ 27,28ರಂದು ದಾವಣಗೆರೆಯಲ್ಲಿ ನಡೆಯುವ 8ನೆಯ ಮೇ ಸಾಹಿತ್ಯ ಮೇಳದಲ್ಲಿ (ಸ್ವಾತಂತ್ರ್ಯ-75: ನೆಲದ ದನಿಗಳು) ದಿಕ್ಸೂಚಿ ಮಾತುಗಳನ್ನು ಆಡಲಿದ್ದಾರೆ. 

Sunday 15 May 2022

ಭಯವಿರದ ಸ್ವಾತಂತ್ರ್ಯ - ಕವಿತಾ ಕೃಷ್ಣನ್

 


ಕವಿತಾ ಕೃಷ್ಣನ್ ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ (ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್-ಐಪ್ವಾ)ದ ಜಂಟಿ ಕಾರ್ಯದರ್ಶಿ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದ ನಂತರ ಭುಗಿಲೆದ್ದ ಬೀದಿ ಹೋರಾಟಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮುಂಚೂಣಿಗೆ ಬಂದ ಹೆಸರು. ಮಹಿಳೆಯರ ಹಕ್ಕುಗಳ ಕುರಿತು ಖಚಿತ ಮತ್ತು ಮುಕ್ತ ಅಭಿಪ್ರಾಯಗಳನ್ನು ಹೊಂದಿರುವ ಕವಿತಾ ತಮ್ಮ ಈ ಗುಣಗಳಿಂದಲೇ ತರುಣ ಪೀಳಿಗೆಯನ್ನು ಸೆಳೆದಿರುವ ನಾಯಕಿ.

ಮೂಲತಃ ತಮಿಳುನಾಡಿನ ಕೂನೂರಿನ ಕವಿತಾ ಹುಟ್ಟಿ ಬೆಳೆದಿದ್ದು ಭಿಲಾಯಿಯಲ್ಲಿ. ತಂದೆ ಉಕ್ಕು ಕಾರ್ಖಾನೆಯಲ್ಲಿ ಇಂಜಿನಿಯರ್. ತಾಯಿ ಇಂಗ್ಲಿಷ್ ಉಪನ್ಯಾಸಕಿ. ಮುಂಬಯಿಯಲ್ಲಿ ಪದವಿ ಓದುವಾಗ ಬೀದಿ ನಾಟಕಗಳಲ್ಲಿ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಮುಂದಿದ್ದ ಕವಿತಾ ದೆಹಲಿಯ ಜವಾಹರ್‌ಲಾಲ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮಾಡಿದರು. 1994ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನಾ ವಿದ್ಯಾರ್ಥಿ ಸಾಂಪ್ರದಾಯಿಕ ನಿಲುವು ತಳೆದು ಮಹಿಳಾವಿರೋಧಿ ಭಾಷಣ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವನೆದುರು ತುಂಡುಲಂಗ ತೊಟ್ಟು ಸಿಗರೇಟ್ ಎಳೆಯುತ್ತ ಕವಿತಾ ಮತ್ತವರ ಗೆಳತಿಯರು ತಿರುಗಾಡಿದ್ದರು. ‘ನೀನೇನಾದರೂ ಆಯ್ಕೆಯಾದರೆ ನಮ್ಮಂತಹ ಹುಡುಗಿಯರನ್ನು ಏನು ಮಾಡುತ್ತಿ?’ ಎಂದು ಪ್ರಶ್ನಿಸಿದಾಗ, ‘ಜೈಲಿಗೆ ಅಟ್ಟುತ್ತೇನೆ’ ಎಂದಿದ್ದ ಅವನು. ಅವನ ದರ್ಪದ ಮಾತು ಕವಿತಾ ಮತ್ತವರ ಗೆಳತಿಯರಲ್ಲಿ ರೊಚ್ಚು, ಕೆಚ್ಚು ಎರಡನ್ನೂ ಮೂಡಿಸಿತು. 

ಆಗ ಕವಿತಾ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಸೇರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಪ್ರಸಾದ್ ಎಂಬ ಯುವನಾಯಕನ ಗಾಢ ಪ್ರಭಾವಕ್ಕೆ ಒಳಗಾದರು. ನಂತರ ಜೆಎನ್ಯು ವಿದ್ಯಾರ್ಥಿ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್ ಹಾಗೂ ಶ್ಯಾಂ ನಾರಾಯಣ್ ಯಾದವ್ ಬಿಹಾರದ ಸಿವನ್‌ನ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಹತ್ಯೆಯಾದರು. ಅದಕ್ಕೆ ಕಾರಣರಾದ ಆರ್‌ಜೆಡಿ ಎಂಪಿ ಸೈಯದ್ ಶಹಾಬುದ್ದೀನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದಾಗ ಕವಿತಾ ಜೈಲಿಗೆ ಹೋದರು.

ಹೀಗೆ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಜೀವನ ಆಯ್ದುಕೊಂಡ ಕವಿತಾ ಮುಂದೆಯೂ ಹಲವು ಬಾರಿ ಜೈಲುವಾಸಿಯಾದರು. ಈಗ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ಪಾಲಿಟ್ ಬ್ಯೂರೋ ಸದಸ್ಯೆ. ಪಕ್ಷದ ಮುಖವಾಣಿ ಪತ್ರಿಕೆ ‘ಲಿಬರೇಷನ್’ನ ಸಂಪಾದಕಿ. ತಮ್ಮ ಪಕ್ಷದ ಮಹಿಳಾ ಸಂಘಟನೆ ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ (ಐಪ್ವಾ)ದ ಕಾರ್ಯದರ್ಶಿ. ಕರ್ನಾಟಕದ ಹಿರಿಯ ಮಹಿಳಾ ಹೋರಾಟಗಾರ್ತಿ ಮೈಸೂರಿನ ರತಿ ರಾವ್ ಈಗ ಐಪ್ವಾದ ಅಧ್ಯಕ್ಷರಾಗಿದ್ದಾರೆ.

ಐಪ್ವಾ, ಮಹಿಳೆಯರ ಮೇಲಾಗುವ ಎಲ್ಲ ರೀತಿಯ ಶೋಷಣೆ, ತಾರತಮ್ಯ ಮತ್ತು ಹಿಂಸೆಯನ್ನು ವಿರೋಧಿಸುತ್ತ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಲು ಮಹಿಳೆಯರನ್ನು ಸಂಘಟಿಸುತ್ತದೆ. ಸಾಮಾಜಿಕ ಬದಲಾವಣೆಗಾಗಿ ಪ್ರಗತಿಪರ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಮನೆ, ಉದ್ಯೋಗ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯಕ್ಕೆ ಕಾರಣವಾದ ಪುರುಷ ಪ್ರಧಾನ ದಬ್ಬಾಳಿಕೆಯನ್ನು ವಿರೋಧಿಸುತ್ತದೆ. ಸಮಾಜವಾದ ನೆಲೆಗೊಂಡ ಸಮಾನತೆಯ ಸಮಾಜಕ್ಕಾಗಿ ಹೋರಾಡುತ್ತದೆ. ಜಾತಿ, ವರ್ಗ, ಪಿತೃಪ್ರಾಧಾನ್ಯಗಳು ಶೋಷಣೆಯ ಮೂರು ಮುಖಗಳೆಂದು ಗುರುತಿಸಿ, ಅವುಗಳ ವಿರುದ್ಧ ಹೋರಾಟದಲ್ಲಿ ಸಮಾಜದ ಎಲ್ಲ ಸ್ತರಗಳ ಮಹಿಳೆಯರು ಭಾಗಿಯಾಗಬೇಕೆಂದು ಬಯಸುತ್ತದೆ.

ಐಪ್ವಾ ಸರ್ಕಾರಿ-ವಿದೇಶಿ ಧನಸಹಾಯದಿಂದ ನಡೆಯುವ ಸಂಘಟನೆಯಲ್ಲ. ಅದು ತನ್ನ ಇರವಿಗೆ ಜನಸಾಮಾನ್ಯ ಮಹಿಳೆಯರ ಶಕ್ತಿಯನ್ನೇ ಅವಲಂಬಿಸಿದೆ. 16 ವರ್ಷ ಮುಗಿದ, ಐಪ್ವಾದ ಸಂವಿಧಾನ-ಕಾರ್ಯಕ್ರಮಗಳ ಬಗೆಗೆ ಸಹಮತವುಳ್ಳ ಯಾರೇ ಆದರೂ ಅದರ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ 2 ರೂಪಾಯಿ ಮಾತ್ರ. ಸಹಮತವಿರುವ ವ್ಯಕ್ತಿಗಳು, ಜನಸಾಮಾನ್ಯರಿಂದ ಸಂಗ್ರಹಿಸುವ ಹಣವೇ ಅದರ ಕೆಲಸ ಕಾರ್ಯಗಳಿಗೆ ಆಧಾರ. ಇಂತಹ ಸಂಘಟನೆಗಳ ಸದಸ್ಯರಲ್ಲಿ ಸಹಜವಾಗಿ ಕಾಣುವ ಸರಳ, ನಿರ್ಭಯ, ದಿಟ್ಟ ವ್ಯಕ್ತಿತ್ವ ಕವಿತಾ ಅವರದು.

‘ಫ್ರೀಡಂ ವಿತೌಟ್ ಫಿಯರ್’


2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ಕವಿತಾ ತಮ್ಮ ಭಿನ್ನ ನಿಲುವು, ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದರು. ಜಂತರ್ ಮಂತರ್, ಇಂಡಿಯಾ ಗೇಟ್, ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮನೆ ಎದುರು ಮತ್ತು ದೆಹಲಿಯ ಇತರ ಕಡೆಗಳಲ್ಲಿ ನಡೆದ ಅತ್ಯಾಚಾರ ವಿರೋಧಿ ಪ್ರತಿಭಟನೆಗಳಲ್ಲಿ  ಮುಂಚೂಣಿಯಲ್ಲಿದ್ದರು. ‘ಅತ್ಯಾಚಾರವಾದದ್ದು ದೆಹಲಿಯಲ್ಲಾದರೆ, ಸಾವಿರಾರು ಜನ ಪ್ರತಿಭಟಿಸಿದರೆ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಪ್ರಕರಣದ ವಿಚಾರಣೆ ತ್ವರಿತಗೊಂಡು ಕೂಡಲೇ ತೀರ್ಪು ಬರುತ್ತದೆ. ಇಲ್ಲದಿದ್ದರೆ ದಶಕಗಟ್ಟಲೆ ಕಳೆದ ನಂತರವೂ ‘ಸಾಕ್ಷ್ಯಾಧಾರಗಳಿಲ್ಲದೆ’ ಕೇಸು ಸಾಯುತ್ತದೆ. ಖೈರ್ಲಾಂಜಿಯಲ್ಲಿ, ನಾಗ್ಪುರದಲ್ಲಿ, ಮಣಿಪುರದಲ್ಲಿ ನಡೆದದ್ದು ಮುಚ್ಚಿ ಹೋಗುತ್ತವೆ. ಭಾರತದಲ್ಲಿ ನ್ಯಾಯ ಸಿಗುವುದು ಎಂದರೆ ಲಾಟರಿ ಹೊಡೆಯುವ ಹಾಗೆ’ ಎಂದು ಕವಿತಾ ನ್ಯಾಯವ್ಯವಸ್ಥೆಯ ವಿಳಂಬ ಮತ್ತು ಅದಕ್ಷತೆಯನ್ನು ಕಟುವಾಗಿ ಟೀಕಿಸಿದರು. ಬಲಿಪಶು ಆದವರ ಸಾಕ್ಷ್ಯ ನಂಬುವ ಬದಲು ಫೊರೆನ್ಸಿಕ್ ಸಾಕ್ಷ್ಯಗಳನ್ನೇ ಕೋರ್ಟು ಹೆಚ್ಚೆಚ್ಚು ನಂಬುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ಎಂದು ಬಣ್ಣಿಸಿದ ಕವಿತಾ, ಅತ್ಯಾಚಾರಿಗೆ ಮರಣದಂಡನೆ-ಪೌರುಷಹರಣ ಮಾಡುವುದನ್ನು ಖಂಡತುಂಡವಾಗಿ ವಿರೋಧಿಸಿದರು.

‘ಅತ್ಯಾಚಾರವಾಗುವುದು ಲೈಂಗಿಕ ಬಯಕೆಯ ಕಾರಣದಿಂದಲ್ಲ. ಜ್ಯಾಕ್ ದ ರಿಪ್ಪರ್ ಎಂಬ ಸರಣಿ ಅತ್ಯಾಚಾರಿ-ಕೊಲೆ ಪಾತಕಿ ಷಂಡನಾಗಿದ್ದ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಲೈಂಗಿಕ ಅಂಗವೇ ಬೇಕಿಲ್ಲ, ವಸ್ತುಗಳೂ ಸಾಕು. ಆದ್ದರಿಂದ ಪುರುಷತ್ವ ಹರಣ ಮಾಡುವುದರಿಂದ ಅತ್ಯಾಚಾರ ಕೊನೆಗೊಳ್ಳುವುದಿಲ್ಲ. 100 ಅತ್ಯಾಚಾರಿಗಳಲ್ಲಿ 26 ಜನರಿಗೆ ಮಾತ್ರ ಶಿಕ್ಷೆಯಾಗುತ್ತಿರುವಾಗ ಅತ್ಯಾಚಾರಿಗೆ  ಮರಣದಂಡನೆ ಶಿಕ್ಷೆ ವಿಧಿಸಿಬಿಟ್ಟರೆ ಅತ್ಯಾಚಾರ ತಡೆಗಟ್ಟಲಾರದು’ ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕವಿತಾ ತಿಳಿಸಿದರು. ಹೆಣ್ಣಿಗೆ ಬೇಕಿರುವುದು ಬರಿಯ ರಕ್ಷಣೆಯಲ್ಲ, ಸ್ವಾತಂತ್ರ್ಯ, ಭಯವಿರದ ಸ್ವಾತಂತ್ರ್ಯ ಎನ್ನುತ್ತಾ, ‘ಫ್ರೀಡಂ ವಿತೌಟ್ ಫಿಯರ್’ ಎಂಬ ಘೋಷವಾಕ್ಯ ಚಾಲ್ತಿಯಲ್ಲಿಟ್ಟರು. ಹೆಣ್ಣಿಗೆ ಎಂದೆಂದೂ ನಿರಾಕರಿಸಲಾದ ಸ್ವಾತಂತ್ರ್ಯವನ್ನು ಎಲ್ಲ ದನಿಗಳೂ ಪ್ರತಿಪಾದಿಸಿದವು. ಅವರ ವಿಭಿನ್ನ ವಿಶ್ಲೇಷಣೆ ತರುಣ ಪೀಳಿಗೆಯನ್ನು ಸೆಳೆದು ಸಾಮಾಜಿಕ ಜಾಲತಾಣದ ಕಣ್ಮಣಿಯಾದರು. 

ಎಲ್ಲರೂ ಮಹಿಳೆಯ ರಕ್ಷಣೆ-ಭದ್ರತೆಯ ಬಗೆಗೆ ಮಾತನಾಡಿದರೆ ಕವಿತಾ ಮಹಿಳಾ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರು. ‘ಜಗತ್ತಿನ ಎಲ್ಲಕಡೆ ಹೆಣ್ಣನ್ನು ಆಸೆಯಿಂದಲೆ ನೋಡುತ್ತಾರೆ. ಎಲ್ಲಿ ಹೆಜ್ಜೆಯಿಟ್ಟರೂ ಹೆಣ್ಣು ಅವೇ ನೋಟಗಳ ಎದುರಿಸಬೇಕು. ಸುಂದರ ಹೆಣ್ಣುಗಳ ಚರ್ಮ, ಆಕಾರ, ಸ್ತನ, ನಿತಂಬಗಳಿಗೆ ಸೌಂದರ್ಯದ ಕಾರಣದಿಂದ ಜಾಹೀರಾತಿನಲ್ಲಿ ತೋರಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇದೆ. ಹಾಗಿಲ್ಲದಿರುವ ‘ಕುರೂಪಿ’ಗಳಿಗೆ ಯಾವ ಸ್ವಾತಂತ್ರ್ಯವಿದೆ? ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯ ಬೇರೆ ಬೇರೆ ಅಲ್ಲ. ಯಾಕೆಂದರೆ ಲೈಂಗಿಕ ಸ್ವಾತಂತ್ರ್ಯ ಎಂದರೆ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಆಗಿದೆ.’ 

ಅತ್ಯಾಚಾರದ ಸುತ್ತ, ಅಪರಾಧಿಗಳ ಸುತ್ತ, ಹುಡುಗಿಯರ ‘ನಡತೆ-ಬಟ್ಟೆ’ಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಕವಿತಾ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ವಿಸ್ತೃತ ಆಯಾಮಗಳತ್ತ ಒಯ್ದರು. ‘ಭಯವಿಲ್ಲದೆ ಹೆಣ್ಣು ಹೊರಗೆಲ್ಲು ಮುಕ್ತವಾಗಿ ತಿರುಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾಧ್ಯಮಗಳು ಹೆಣ್ಣು ಎಂದರೆ ಸತಿ ಸಾವಿತ್ರಿಯಂತೆ ತೋರಿಸಿ ‘ಪಢಿಯೆ ಗೀತಾ ಬನೀಯೆ ಸೀತಾ’ ಎನ್ನುವ ತಪ್ಪು ಮಾದರಿ ಸೃಷ್ಟಿಸಿವೆ. ನಾನು ಅಂಥ ಎಲ್ಲ ಮಾದರಿಗಳ ವಿರುದ್ಧ ನಿಲ್ಲಬಯಸುತ್ತೇನೆ. ರಾತ್ರಿ ಏಕೆ ಓಡಾಡಬೇಕು? ಹುಡುಗರೊಡನೆ ಏಕೆ ಅಡ್ಡಾಡಬೇಕು? ಎಂದೆಲ್ಲ ನಮ್ಮನ್ನು ಕೇಳಬೇಡಿ. ಹೆಂಗಸರಿಗೆ ಅಡ್ವೆಂಚರಸ್ ಆಗುವ ಎಲ್ಲ ಹಕ್ಕೂ ಇದೆ: ನಾವು ಹಾಗೇ ಇರುವವರು. ನಮಗೆ ಎಂತೆಂಥ ಬಟ್ಟೆ ಹಾಕಬೇಕು ಎಂದು ಸಲಹೆ ಕೊಡಬೇಡಿ. ಹಗಲು-ರಾತ್ರಿಗಳ ಯಾವ ಹೊತ್ತಿನಲ್ಲಿ ಸಂಚರಿಸುವುದು ಸುರಕ್ಷಿತ ಎಂದು ಹೇಳಬೇಡಿ. ಸುರಕ್ಷಿತವಾಗಿರಲು ಯಾರ ಜೊತೆ, ಎಷ್ಟು ಪುರುಷರ ಜೊತೆಗೆ ಅಡ್ಡಾಡಬೇಕು ಎಂಬ ಲೆಕ್ಕ ಕೊಡಬೇಡಿ. ಎಂಥ ದಿರಿಸು ತೊಡಬೇಕೆಂದು ನಮಗಲ್ಲ, ಅವರಿಗೆ ಹೇಳಿ. ಏಕೆ ಅತ್ಯಾಚಾರ ಮಾಡಬಾರದು ಎಂದು ಅವರಿಗೆ ತಿಳಿಸಿ. ಅಪರಿಚಿತರು, ಹೊರಗಿನವರೇ ಅತ್ಯಾಚಾರಿಗಳು ಎಂದು ಹೆಣ್ಮಕ್ಕಳನ್ನು ಹೆದರಿಸಲಾಗುತ್ತಿದೆ. ಅದು ಪೂರ್ಣ ಸತ್ಯವಲ್ಲ. ಪರಿಚಯಸ್ಥರು, ಬಂಧುಗಳು, ಗುರುಗಳು, ನಾವು ಗೌರವಿಸುವವರು, ರಕ್ಷಿಸುವವರೇ ಅತ್ಯಾಚಾರ ಎಸಗುವುದು ಹೆಚ್ಚಿರುವಾಗ ಯಾರಿಂದ ಯಾರನ್ನು ರಕ್ಷಿಸುತ್ತೀರಿ? ಸಿಸಿಟಿವಿಗಳಿಂದ ಎಷ್ಟು ಹೆಣ್ಮಕ್ಕಳನ್ನು ರಕ್ಷಿಸುತ್ತೀರಿ? ಅತ್ಯಾಚಾರಕ್ಕೊಳಗಾಗದ ಹಾಗೆ ಸದಾ ನಮ್ಮನ್ನು ನಾವೇ ಕಾಪಾಡಿಕೊಳ್ಳುತ್ತಿರಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ ಬೇಕು. ಭಯವಿರದ ಸ್ವಾತಂತ್ರ್ಯ ಬೇಕು.’

ಸಹಜವಾಗಿ ಅವರಿಗೆ ಬೆಂಬಲಿಗರೆಷ್ಟೋ ಅಷ್ಟೇ, ವಿರೋಧಿಗಳೂ ಹುಟ್ಟಿಕೊಂಡರು. ಕೆಟ್ಟ ಮೆಸೇಜುಗಳು, ಟೀಕೆ, ಪ್ರತಿಕ್ರಿಯೆಗಳ ಸುರಿಮಳೆಯೇ ಆಯಿತು. ಮಹಿಳೆ ತನ್ನ ಹಕ್ಕುಗಳ ಬಗೆಗೆ, ಸ್ವಾತಂತ್ರ್ಯದ ಬಗೆಗೆ ಮಾತನಾಡಿದಾಗಲೆಲ್ಲ ಲೈಂಗಿಕ ಸ್ವೇಚ್ಛಾಚಾರಿ ಎಂಬ ಗೂಬೆ ಕೂರಿಸಿ, ‘ಸೂಳೆ’ ಎಂಬ ಪಟ್ಟ ಕಟ್ಟಿ ಬಾಯ್ಮುಚ್ಚಿಸಲಾಗುತ್ತದೆ. ‘ನಕ್ಸಲೈಟ್’ ಎಂದು ಜರೆಯಲಾಗುತ್ತದೆ. ಕವಿತಾಗೂ ಅವೇ ಟೀಕೆಗಳು ಕೇಳಿಬಂದವು.

ಒಬ್ಬನಂತೂ, ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುತ್ತೀ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದ. ‘ಹೌದು, ನನ್ನಮ್ಮ ಅವಳಿಷ್ಟಪಟ್ಟವರ ಜೊತೆಯೇ `ಮಲಗಿ'ದ್ದಳು. ಬಹುಶಃ ನಿನ್ನಮ್ಮನೂ ಸಹ. ಇಷ್ಟಪಟ್ಟವರ ಜೊತೆ `ಮಲಗು'ವುದು ಮಾತ್ರ ಸೆಕ್ಸ್. ಉಳಿದದ್ದು ರೇಪ್, ತಿಳಕೊ’ ಎಂದು ಅವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕವಿತಾಗೆ ಪೂರಕವಾಗಿ ಅವರ ತಾಯಿ ಲಕ್ಷ್ಮಿ ಕೃಷ್ಣನ್, ‘ನಾನು ನನಗೆ ಬೇಕಾದಾಗ, ನನಗಿಷ್ಟ ಬಂದವರ ಜೊತೆ `ಮಲಗಿ'ದ್ದೇನೆ. ಪ್ರತಿ ಸ್ತ್ರೀಪುರುಷರಿಗು ಪರಸ್ಪರ ಒಪ್ಪಿಗೆ ಮೂಲಕ ಸೇರಲು ಇರುವ ಈ ಸ್ವಾತಂತ್ರ್ಯವನ್ನು, ಬಲವಂತವಿರದ, ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು! 


ಒಟ್ಟಾರೆಯಾಗಿ ಸಂಪ್ರದಾಯನಿಷ್ಠ, ಬಲಾಢ್ಯ ವರ್ಗವು ಒಪ್ಪದ ವಿಷಯಗಳನ್ನು ಎತ್ತಿ ಆಡುವ, ಹಕ್ಕು ಪ್ರತಿಪಾದಿಸುವ ಕವಿತಾ ಕೃಷ್ಣನ್ ಒಬ್ಬ ಶಕ್ತ ಸಂಘಟಕಿ, ಮುಕ್ತ ನಿರ್ಭೀತ ಮಾತುಗಾರಿಕೆಯಿಂದ ಜನಸಾಮಾನ್ಯರನ್ನು ಸೆಳೆವ ವಾಗ್ಮಿ. ಮಹಿಳಾಪರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನದೇ ಹಾದಿ ರೂಪಿಸಿಕೊಳ್ಳುತ್ತಿರುವ ಕವಿತಾ ಭವಿಷ್ಯದ ಭರವಸೆಯ ನಾಯಕಿ ಎನ್ನುವುದರಲ್ಲಿ ಅನುಮಾನವಿಲ್ಲ.


ಡಾ. ಎಚ್. ಎಸ್. ಅನುಪಮಾ

(18-2-2018ರಲ್ಲಿ ಬರೆದದ್ದು.)


Saturday 14 May 2022

ರಂಗನಾಯಕಮ್ಮ - ಕಮ್ಯುನಿಸ್ಂ ಎಂದರೆ ನಿರ್ಭೀತಿ

   


ಬಹುತೇಕ ಭಾರತೀಯರಿಗೆ ರಾಮಾಯಣ ಎನ್ನುವುದು ಒಪ್ಪಿ, ಆರಾಧಿಸುವ ಪವಿತ್ರ ಕಥನ. ನೀತಿನಿರೂಪಣೆಯ ದಿನನಿತ್ಯದ ಮಾತುಗಳಲ್ಲಿ ಹಾಸುಹೊಕ್ಕಾಗಿರುವ ಸಾಮಾನ್ಯ ಜ್ಞಾನ. ಚಾರಿತ್ರಿಕ ದಾಖಲೆಯೋ ಎನ್ನುವಂತೆ ಜನಮಾನಸದಲ್ಲಿ ನೆಲೆಸಿರುವ, ಓದುವವರ ಭಾವಕ್ಕೆ ತಕ್ಕಂತೆ ಅಪಾರ ಅರ್ಥವಿಸ್ತಾರಗಳನ್ನು ಒದಗಿಸುವ ಆಕರ. ರಾಮಾಯಣವನ್ನು ಕಲ್ಪವೃಕ್ಷ ಎಂದು ಕವಿಪುಂಗವರು ಹಾಡಿದರು. ಓದುಬರಹವಿರದವರ ಚಿಂತನೆಗಳೊಳಗೂ ಅದು ಹಾಸುಹೊಕ್ಕಾಯಿತು. ಅದಕ್ಕಿರುವಷ್ಟು ಜನಪ್ರಿಯತೆ, ವಿಭಿನ್ನ ಓದುಗಳು, ಜನಪದ ಆವೃತ್ತಿಗಳು ಬೇರಾವ ವೇದಪುರಾಣ ಶಾಸ್ತ್ರಗ್ರಂಥಗಳಿಗೂ ಇಲ್ಲ ಎನ್ನಬಹುದು.

ಕಲ್ಪವೃಕ್ಷವೆನಿಸಿಕೊಂಡ ಅಂಥ ರಾಮಾಯಣವನ್ನು ಗಂಡನಿಂದ ದೂರವಾಗಿದ್ದ ಮೂರು ಮಕ್ಕಳ ತಾಯಿಯೊಬ್ಬಳು ‘ರಾಮಾಯಣ ವಿಷವೃಕ್ಷ’ ಎಂದು ಕರೆದರೆ? ಒಂದಲ್ಲ, ಎರಡಲ್ಲ ೭೦೦ ಪುಟಗಳ ಮೂರು ಸಂಪುಟಗಳಲ್ಲಿ ಅದರ ಪ್ರತಿ ಸಾಲು, ಪ್ರತಿ ಪಾತ್ರ, ಪ್ರತಿ ಘಟನೆಗಳನ್ನೂ ವಿಶ್ಲೇಷಿಸಿ ನಮ್ಮ ಇಂದಿನ ಕೇಡುಗಳ ಮೂಲಕಾರಣ ಅಲ್ಲಿದೆ ಎಂದು ತೋರಿಸತೊಡಗಿದರೆ? ಆಳಿಸಿಕೊಳ್ಳುವವರ ವಿರುದ್ಧವಿರುವ ಆಳುವವನನ್ನು, ಕೆಳಜಾತಿಗಳ ವಿರುದ್ಧವಿರುವ ಮೇಲ್ಜಾತಿಯವರನ್ನು, ಅರಣ್ಯವಾಸಿಗಳ ವಿರುದ್ಧವಿರುವ ನಗರ ಸಮುದಾಯವನ್ನು, ಹೆಣ್ಣಿನ ವಿರುದ್ಧವಿರುವ ಗಂಡನ್ನು, ಮಕ್ಕಳ ಮೇಲಿನ ತಂದೆಯ ನಿಯಂತ್ರಣವನ್ನು, ತಮ್ಮಂದಿರ ಮೇಲೆ ಅಣ್ಣನ ನಿಯಂತ್ರಣವನ್ನು ಎತ್ತಿ ಹಿಡಿಯುವುದರಿಂದ ರಾಮಾಯಣ ಅನ್ಯಾಯದ ಸಂಸ್ಕೃತಿಯಾಗಿದ್ದು ಅದನ್ನು ವಿರೋಧಿಸಬೇಕು ಎಂದು ಬರೆದರೆ? ಸಮಾಜ ಬೆಚ್ಚಿಬಿದ್ದೀತು. ರೊಚ್ಚಿಗೆದ್ದು ಬರೆದವರನ್ನು ಹೊಡೆದು ಹಾಕೀತು.

ಹೌದು. ರಾಮ ಮತ್ತು ರಾಮಾಯಣ ಹಿಂದೆಂದಿಗಿಂತ ಹೆಚ್ಚು ರಾಜಕಾರಣದ ಭಾಗವಾಗಿರುವ ಇಂದು ಇಂಥ ಮಾತನ್ನು ಹೇಳಿ ಅರಗಿಸಿಕೊಳ್ಳುವುದು ಸುಲಭವಿಲ್ಲ. ಅಂದು ೧೯೭೩ರಲ್ಲಿಯೂ ಅಷ್ಟೇ, ಇದೇ ವಾತಾವರಣವಿದ್ದಿತು. ಆದರೆ ಯಾವ ಇಸವಿಯಲ್ಲೂ, ಎಂಥ ಕಷ್ಟಕಾಲದಲ್ಲೂ ದಿಟ್ಟದನಿಗಳು ಎದೆಯ ಮಾತನ್ನು ಹೇಳಲು ಅಂಜಲಾರವು. ಅಂಥ ಒಂದು ನಿರ್ಭೀತ ದನಿ ತೆಲುಗಿನ ಕ್ರಾಂತಿಕಾರಿ ಲೇಖಕಿ ರಂಗನಾಯಕಮ್ಮ ಅವರದು. 

೧೨ ಕಾದಂಬರಿ, ೫ ನೀಳ್ಗತೆಗಳು, ೧೦ ಕಥಾ ಸಂಕಲನಗಳು, ೧೫ ದೀರ್ಘ ಪ್ರಬಂಧಗಳು, ೪ ಲೇಖನ ಸಂಗ್ರಹಗಳು, ೨ ಪ್ರಶ್ನೋತ್ತರ ಹೊತ್ತಗೆಗಳು, ಇಂಗ್ಲಿಷ್‌ನಿಂದ ೨ ಹೊತ್ತಗೆಗಳ ಅನುವಾದ, ೩ ಇಂಗ್ಲಿಷ್ ಕಾದಂಬರಿಗಳ ರೂಪಾಂತರ, ೩ ಸಂಪುಟಗಳ ರಾಮಾಯಣ ವಿಷವೃಕ್ಷಂ, ಮೂರು ಸಂಪುಟಗಳ ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್ ಮುಂತಾಗಿ ಒಟ್ಟು ೫೫ ಪುಸ್ತಕಗಳನ್ನು ಬರೆದ ದಣಿವರಿಯದ ಲೇಖಕಿ ರಂಗನಾಯಕಮ್ಮ. ಅವರು ಬರೆದ ಬಹುಚರ್ಚಿತ ಪುಸ್ತಕ ‘ರಾಮಾಯಣ ವಿಷವೃಕ್ಷಂ’ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು ಇಂದಿಗೂ ಒಂದಾದ ಮೇಲೊಂದು ಮರುಮುದ್ರಣಗಳನ್ನು ಕಾಣುತ್ತಲೇ ಇದೆ. ೮೩ರ ಇಳಿಹರೆಯದಲ್ಲೂ ಅವರು ಬರಹದಲ್ಲಿ ಕ್ರಿಯಾಶೀಲರಾಗಿದ್ದಾರೆ. ಎಷ್ಟೇ ವಿರೋಧ, ಬೆದರಿಕೆ ಬಂದರೂ ಸರಿಯೆನಿಸಿದ ಒಂದಕ್ಷರವನ್ನೂ ತೆಗೆಯದೆ ಮುದ್ರಣದಿಂದ ಮುದ್ರಣಕ್ಕೆ ತಮ್ಮ ಹೊತ್ತಗೆಗಳನ್ನು ನವೀಕರಿಸುತ್ತ, ಹೊಸ ಸಂಗತಿಗಳನ್ನು ಸೇರಿಸುತ್ತ ಸಾಗಿದ್ದಾರೆ.

***

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೊಮ್ಮಿಡಿ ಎಂಬ ಹಳ್ಳಿಯಲ್ಲಿ ೧೯೩೯ರಲ್ಲಿ ಲಕ್ಷ್ಮಿನರಸಮ್ಮ ಮತ್ತು ಲಕ್ಷ್ಮಿಸತ್ಯನಾರಾಯಣಯ್ಯ ಅವರ ಮಗಳಾಗಿ ರಂಗನಾಯಕಮ್ಮ ಹುಟ್ಟಿದರು. ಅವರಿಗೆ ಒಬ್ಬ ಅಕ್ಕ, ಅಣ್ಣ, ನಾಲ್ವರು ತಂಗಿಯರಿದ್ದರು. ತಾಲೂಕು ಕೇಂದ್ರ ತಾಡೆಪಲ್ಲಿಗುಡೆಯಲ್ಲಿ ಅವರ ತಂದೆ ತಮ್ಮ ಸಮುದಾಯಕ್ಕೆ ಸೀಮಿತವಾದ ಪದ್ಮನಾಯಕ ಎಂಬ ಪತ್ರಿಕೆ ನಡೆಸುತ್ತಿದ್ದರು. ಅವರದೇ ಆದ ಸಣ್ಣ ಮುದ್ರಣಾಲಯವೂ ಇತ್ತು. ೧೯೫೬ರಲ್ಲಿ ರಂಗನಾಯಕಮ್ಮ ಅವರ ಕುಟುಂಬ ತೀವ್ರ ಹಣದ ಬಿಕ್ಕಟ್ಟು ಎದುರಿಸಿ ಹಳ್ಳಿಗೆ ಹಿಂದಿರುಗಿತು. ಎಸ್ಸೆಲ್ಸಿ ಮುಗಿಸಿದ ಹುಡುಗಿಯ ಓದು ಮೊಟಕುಗೊಂಡಿತು. ತಾನು ಓದಲೇಬೇಕೆಂದು ಹುಡುಗಿ ಉಪವಾಸ ಕುಳಿತಳು. ಕೊನೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಯನ್ನು ಮನೆಯಿಂದಲೇ ಕಟ್ಟಿದಳು. ನಿಘಂಟಿನ ಸಹಾಯದಿಂದ ಹಿಂದಿ ಕಲಿತು ನಾಲ್ಕು ಹಂತದ ಪರೀಕ್ಷೆ ಪಾಸು ಮಾಡಿದಳು.

ರಂಗನಾಯಕಮ್ಮ ಬಾಲ್ಯದಲ್ಲಿ ದೈವಭಕ್ತಳು. ಏನನ್ನಾದರೂ ಬರೆಯುವ ಮುನ್ನ, ಕೆಲಸ ಆರಂಭ ಮಾಡುವ ಮುನ್ನ ಅಂಗೈಮೇಲೆ ಬೆರಳಿಂದ ಶ್ರೀರಾಮ ಎಂದು ಬರೆದುಕೊಂಡು ಅದನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ಪಠ್ಯದ ಓದಿನ ಜೊತೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ಓದುವ ಹವ್ಯಾಸದ ರಂಗನಾಯಕಮ್ಮನಿಗೆ ಒಮ್ಮೆ ಸಮಾಜ ಸುಧಾರಕ ವೀರೇಶಲಿಂಗಂ ಅವರ ಬರಹ ಓದಲು ಸಿಕ್ಕಿತು. ಮತ್ತಷ್ಟು ಅವರ ಬರಹಗಳನ್ನು ಓದಿದ ಮೇಲೆ ಹುಡುಗಿಯ ಯೋಚನೆಗಳು ಬದಲಾತಗತೊಡಗಿದವು. ವೀರೇಶಲಿಂಗಂ ವಿಚಾರವಾದಿಯಾಗಿದ್ದರೂ ನಾಸ್ತಿಕರಾಗಿರಲಿಲ್ಲ, ಅವರು ಏಕದೇವೋಪಾಸನೆಯನ್ನು ಬೋಧಿಸುತ್ತಿದ್ದರು. ಆದರೆ ಅವರನ್ನು ಓದಿದ ಹುಡುಗಿ ನಾಸ್ತಿಕಳಾಗಿ ರೂಪಾಂತರಗೊಳ್ಳತೊಡಗಿದಳು. ಓದಿನ ಜೊತೆಜೊತೆಗೆ ಬರವಣಿಗೆಯ ಒತ್ತಡವೂ ಜೋರಾಯಿತು. ಬರೆದದ್ದೆಲ್ಲ ತನ್ನ ತಂದೆ ಹೊರತರುತ್ತಿದ್ದ ನಿಯತಕಾಲಿಕದಲ್ಲೇ ಪ್ರಕಟವಾಗುತ್ತಿತ್ತು. ಮೊದಲು ಬರೆದವೆಲ್ಲ ರಾಜಕುಮಾರ, ರಾಜಕುಮಾರಿ, ರಾಕ್ಷಸ, ಭೂತ, ದೇವಾನುದೇವತೆಗಳ ಕತೆಗಳೇ ಆಗಿದ್ದವು. ಹುಡುಗಿ ಬರೆದ ಮೊದಲ ಸಾಮಾಜಿಕ ಕತೆ ‘ಪಾರ್ವತಮ್ಮ’ ತೆಲುಗು ಸ್ವಾತಂತ್ರ್ಯ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಸಂಬಂಧದಲ್ಲೇ ಮದುವೆಯಾಗುವುದು ಸರಿಯಲ್ಲವೆಂದು ಹೇಳುವ ಕತೆ ಅದು. 

೧೯೫೮ರಲ್ಲಿ ಮನೆಯವರು ನೋಡಿದ ವರನೊಡನೆ ಸಾಂಪ್ರದಾಯಿಕ ವಿವಾಹವಾಯಿತು. ಅದೊಂದು ಏಳುಬೀಳಿನ ಸಂಘರ್ಷದ ದಾಂಪತ್ಯ. ಅಷ್ಟಾದರೂ ಬರಹ ಕಾಯಕ ಒಂದೇಸಮ ಮುಂದುವರೆಸಿದರು. ಬರೆದಿದ್ದೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾದವು. ಕೂಡಲೇ ಪುಸ್ತಕಗಳೂ ಆದವು. ರಂಗನಾಯಕಮ್ಮ ತಎಲುಗಿನ ಜನಪ್ರಿಯ ಕತೆಗಾರ್ತಿಯೆನಿಸಿಕೊಂಡರು. ೧೯೬೨-೬೩ರಲ್ಲಿ ಆಂಧ್ರಪ್ರಭಾ ಪತ್ರಿಕೆಯಲ್ಲಿ ಬಲಿಪೀಠಂ ಧಾರಾವಾಹಿ ಪ್ರಕಟವಾಯಿತು. ಪುಸ್ತಕ ರೂಪದಲ್ಲಿ ಬಂದಾಗ ೧೯೬೫ರಲ್ಲಿ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು. 

ದಾಂಪತ್ಯದ ಸಂಘರ್ಷ ವೈಚಾರಿಕ ಓದಿನ ಕಡೆಗೆ ಎಳೆಯಿತು. ಅದರ ಪ್ರಭಾವವು ಕತೆ, ಕಾದಂಬರಿಗಳಲ್ಲಿ ಕಾಣತೊಡಗಿತು. ಸ್ತ್ರೀ, ಚಡುವುಕನ್ನ ಕಮಲಾ, ಕೃಷ್ಣವೇಣಿ ಮೊದಲಾದ ದಿಟ್ಟ ಹೆಣ್ಣು ಪಾತ್ರಗಳಿರುವ ಕಾದಂಬರಿಗಳನ್ನು ಬರೆದರು. ಬದುಕಿನ ಹೊರದಾರಿಗಳನ್ನು ಅವರು ಸೃಷ್ಟಿಸಿದ ಪಾತ್ರಗಳೇ ತೋರಿಸಿಕೊಟ್ಟವು. ೧೯೭೦ರಲ್ಲಿ ಇಬ್ಬರು ಮಗಂದಿರು, ಒಬ್ಬ ಮಗಳು ಹುಟ್ಟಿದ ಬಳಿಕ ಒಟ್ಟಿಗಿರಲು ಸಾಧ್ಯವಾಗದೇ ಗಂಡನಿಂದ ಬೇರೆಯಾದರು. 

ರಂಗನಾಯಕಮ್ಮ ಅವರ ವಿಶೇಷತೆಯೆಂದರೆ ಮಹಿಳಾ ಸ್ವಾತಂತ್ರ್ಯದ ಬಗೆಗೆ ತಮ್ಮ ಪ್ರತಿಪಾದನೆಗಳ ಹಾಗೆಯೇ ತಾವೂ ಸ್ವಾಯತ್ತವಾಗಿ ಬದುಕಿದ್ದು. ೩೧ ವರ್ಷಕ್ಕೆ ಮೂರು ಮಕ್ಕಳೊಡನೆ ಏಕಾಂಗಿಯಾದ ಅವರು ಮರುಮದುವೆಯ ಯೋಚನೆ ಮಾಡಲಿಲ್ಲ. ಕೆಲಸಮಯದ ಬಳಿಕ ತಮಗಿಂತ ೧೦ ವರ್ಷ ಕಿರಿಯ ವ್ಯಕ್ತಿಯೊಡನೆ ‘ಜೊತೆವಾಸ’ದ ಸಂಬಂಧ ಹೊಂದಿದರು. ಮದುವೆಯ ಮೊದಲು ತಮ್ಮ ಹೆಸರನ್ನು ತವರಿನ ಸರ್‌ನೇಮ್ ಜೊತೆಗೆ ದಡ್ಡನಾಲ ರಂಗನಾಯಕಮ್ಮ ಎಂದು ಬರೆದುಕೊಳ್ಳುತ್ತಿದ್ದರು. ಮದುವೆಯ ಬಳಿಕ ಗಂಡನ ಮನೆಯ ಸರ್‌ನೇಮ್ ಆದ ಮುಪ್ಪಾಲ ರಂಗನಾಯಕಮ್ಮ ಎಂದು ಮಾಡಿಕೊಂಡಿದ್ದರು. ಗಂಡನಿಂದ ಬೇರೆಯಾದ ಬಳಿಕ ಎರಡನ್ನೂ ಬಿಟ್ಟು ಕೇವಲ ರಂಗನಾಯಕಮ್ಮ ಎಂದಷ್ಟೇ ಉಳಿಸಿಕೊಂಡರು. 

ಇವೆಲ್ಲ ಸಣ್ಣ ವಿಷಯಗಳೆನಿಸಿದರೂ ತಮ್ಮ ಬರಹದ ಆಶಯಗಳಂತೆ ಮಾದರಿಯಾಗಿ ಬದುಕಲೆತ್ನಿಸಿದ ರಂಗನಾಯಕಮ್ಮ ವಿಶಿಷ್ಟರಾಗಿ ನಿಲ್ಲುತ್ತಾರೆ. 


ಕಮ್ಯುನಿಸ್ಂ ಸಂಪರ್ಕ

ಸಮಸಮಾಜ ಬಯಸುವ ಕಮ್ಯುನಿಸ್ಟ್ ಸಿದ್ಧಾಂತದಡಿ ನಾನಾ ಹೋರಾಟ, ಚಳವಳಿಗಳು ನಡೆದ ನೆಲ ಆಂಧ್ರಪ್ರದೇಶ. ವಿಚ್ಛೇದನದ ಬಳಿಕ ೧೯೭೩ರ ಹೊತ್ತಿಗೆ ರಂಗನಾಯಕಮ್ಮ ಅವರಿಗೆ ಮಾರ್ಕ್ಸ್‌ವಾದಿಗಳ ಪರಿಚಯವಾಯಿತು. ೧೯೭೪ರಲ್ಲಿ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಎಂದು ಕರೆದುಕೊಳ್ಳುತ್ತಿದ್ದ ನಾಗಿರೆಡ್ಡಿಯವರ ಗುಂಪಿನ ಕಾರ್ಯಕರ್ತರು ಭೇಟಿಯಾದರು. ಅವರ ವಿಚಾರ ಒಪ್ಪಿತವೆನಿಸಿ ಕೈ ಜೋಡಿಸಿದರು. ಆ ನಂಟು ಅವರ ಬದುಕಿನ, ಬರವಣಿಗೆಯ ದಿಕ್ಕನ್ನೇ ಬದಲಿಸಿತು. 


ವಿಜಯವಾಡದ ವಿಶ್ವನಾಥ ಸತ್ಯನಾರಾಯಣ ಬರೆದ ರಾಮಾಯಣ ಕಲ್ಪವೃಕ್ಷಂ ತೆಲುಗಿನ ಜನಪ್ರಿಯ ಪುಸ್ತಕ. ಅದಕ್ಕೆ ತಿರುಗೇಟೋ ಎಂಬಂತೆ ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ರಾಮಾಯಣದ ಮಾರ್ಕ್ಸ್‌ವಾದಿ ವಿಮರ್ಶೆ ‘ರಾಮಾಯಣ ವಿಷವೃಕ್ಷಂ’ ಅನ್ನು ರಂಗನಾಯಕಮ್ಮ ಬರೆಯತೊಡಗಿದರು. ಮೂರು ಸಂಪುಟಗಳಲ್ಲಿ ಪ್ರಕಟವಾದಾಗ ತೆಲುಗು ಸಾಹಿತ್ಯ ಲೋಕದಲ್ಲಿ ಸ್ಫೋಟಕ ಪರಿಣಾಮವನ್ನುಂಟುಮಾಡಿತು. ರಂಗನಾಯಕಮ್ಮ ಬಡಪೆಟ್ಟಿಗೆ ಹೆದರಲಿಲ್ಲ. ತಮ್ಮ ವಿಮರ್ಶೆಗೆ ಮೂಲ ಸಂಸ್ಕೃತದ ಆಧಾರ ಒದಗಿಸಲು ೬೦೦ಕ್ಕಿಂತ ಹೆಚ್ಚು ಅಡಿಟಿಪ್ಪಣಿಗಳನ್ನು ಕೊಟ್ಟಿದ್ದರು. ಮೂಲ ವಾಲ್ಮೀಕಿ ರಾಮಾಯಣದ ಸಂಸ್ಕೃತ ಆವೃತ್ತಿಯ ಜೊತೆಗೆ ತೆಲುಗಿನಲ್ಲಿ ಅದಕ್ಕೆ ಬಂದ ‘ಪ್ರತಿ ಪದಾರ್ಥ’, ತಾತ್ಪರ್ಯ (ಸಾರಾಂಶ), ಟೀಕಾ, ವಿಮರ್ಶೆಗಳನ್ನು ಆಧರಿಸಿದ್ದರು. ದೀರ್ಘ ಮುನ್ನುಡಿ, ಹಿನ್ನುಡಿಗಳನ್ನು ತಾವೇ ಬರೆದರು. ಮೊದಲ ಸಂಪುಟಕ್ಕೆ ಬರೆದ ಪ್ರಸ್ತಾವನೆ ೧೭೫ ಪುಟಗಳಷ್ಟಿದೆ. ಆರಂಭದ ಸಾಮುದಾಯಿಕ ಬದುಕಿನ ಮಾನವ ಸಮಾಜವು ನಿರಂಕುಶಾಧಿಪತ್ಯದತ್ತ ಜಾರುತ್ತಿದ್ದ ಅವಧಿಯಾಗಿ ರಾಮಾಯಣ ಕಾಲವನ್ನು ಗುರುತಿಸಿದ ರಂಗನಾಯಕಮ್ಮ, ಹೇಗೆ ದುಡಿಯುವ ವರ್ಗವನ್ನು ದಮನಿಸಿ ರಾಜಸತ್ತೆಗಳು ಬೆಳೆದವು ಎನ್ನುವುದನ್ನು ರಾಮಾಯಣದ ವಿಶ್ಲೇಷಣೆಯ ಮೂಲಕ ವಿವರವಾಗಿ ದಾಖಲಿಸಿದರು. ಅವರ ಮುನ್ನುಡಿ ಓದಿಯೇ ಎಷ್ಟೋ ಜನ ಮಾರ್ಕ್ಸ್‌ವಾದದ ಕಡೆ ಚಲಿಸಿದೆವೆಂದು ಪತ್ರ ಬರೆದರು. ಮೂರು ಸಂಪುಗಳು ೧೯೭೪, ೧೯೭೫, ೧೯೭೬ರಲ್ಲಿ ಪ್ರಕಟವಾಗಿ ಸಾಹಿತ್ಯಲೋಕ, ಮಹಿಳಾವಾದಿಗಳು, ಸಾಮಾಜಿಕ ಹೋರಾಟಗಾರರ ನಡುವೆ ಭಾರೀ ಜನಪ್ರಿಯತೆ ಗಳಿಸಿದವು. ಸಹಜವಾಗಿ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾದವು. ಲೇಖಕಿಯು ಪುರುಷ ದ್ವೇಷಿ, ಸಂಪ್ರದಾಯ ವಿರೋಧಿ, ಬ್ರಾಹ್ಮಣ ದ್ವೇಷಿ ಮುಂತಾದ ಹಣೆಪಟ್ಟಿ ಪಡೆದುಕೊಂಡರು.

ಕಾರ್ಲ್‌ಮಾರ್ಕ್ಸ್‌ನನ್ನು ತಮ್ಮ ಆದರ್ಶ ಸಿದ್ಧಾಂತ ಪ್ರತಿಪಾದಿಸಿದ ವ್ಯಕ್ತಿಯೆಂದು ಗೌರವಿಸುತ್ತಿದ್ದ ರಂಗನಾಯಕಮ್ಮ ಒಂದಾದಮೇಲೊಂದು ಮಾರ್ಕ್ಸ್‌ವಾದದ ಪುಸ್ತಕಗಳನ್ನು ಓದಿದರು. ಅರ್ಥವಾಗದ, ಕಬ್ಬಿಣದ ಕಡಲೆಯಂತಿದ್ದ ವಿಚಾರಗಳನ್ನು ಮತ್ತೆಮತ್ತೆ ಓದಿ ಅದರ ಛಾಯೆಯಲ್ಲಿ ತಮ್ಮ ಚಿಂತನೆಗಳನ್ನು ಹರಿತಗೊಳಿಸಿಕೊಂಡರು. ಎಲ್ಲ ಸಮಸ್ಯೆಗಳಿಗೂ ಮಾರ್ಕ್ಸ್‌ವಾದದಲ್ಲೇ ಪರಿಹಾರ ಇರುವಂತೆ ಕಾಣಿಸತೊಡಗಿತು. ಅದೇವೇಳೆಗೆ ತಾವು ಅರಿತ ಮಾರ್ಕ್ಸ್‌ವಾದಕ್ಕೂ, ಮಾರ್ಕ್ಸ್‌ವಾದಿಗಳ ಬದುಕಿಗೂ ಅಜಗಜಾಂತರ ವ್ಯತ್ಯಾಸ ಇದೆಯೆನಿಸತೊಡಗಿತು. ಸಮಾಜದ ವೈರುಧ್ಯಗಳನ್ನು ವಿಶ್ಲೇಷಿಸಿ ಮಾರ್ಕ್ಸ್‌ವಾದಿ ಸಂಘಟನೆಗಳು ಕಟ್ಟುತ್ತಿರುವ ಹೋರಾಟದಲ್ಲಿ ಏನೋ ಲೋಪವಿದೆ ಎನಿಸಿತು. ಹಾಗೆಂದು ನೇರವಾಗಿ ಸಭೆಗಳಲ್ಲಿ ಚರ್ಚಿಸಿದರು. ನಮ್ಮೊಳಗಿನ ಬೂರ್ಶ್ವಾತನವನ್ನು ನೀಗಿಕೊಳ್ಳುವ ಬಗೆಗೆ ಹೋರಾಟಗಾರರು ಯೋಚಿಸಬೇಕೆಂದು ಸೂಚಿಸಿದರು. ಅದು ಅವರ ಗುಂಪಿಗೆ ಅಪಥ್ಯವಾಯಿತು. ತುರ್ತುಪರಿಸ್ಥಿತಿಯ ವೇಳೆ ಗುಂಪಿನ ನಾಯಕ ನಾಗಿರೆಡ್ಡಿ ತೀರಿಕೊಂಡರು. ಮಿಕ್ಕವರೆಲ್ಲ ೧೯೭೮ರಲ್ಲಿ ‘ಜನಸಾಹಿತಿ’ ಎಂಬ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆ ಆರಂಭ ಮಾಡಿದರು. 

ದಾಸ್ ಕ್ಯಾಪಿಟಲ್ ಅತ್ಯಂತ ಶ್ರೇಷ್ಠ ವಿಚಾರಗಳನ್ನು ಹೊಂದಿದ್ದರೂ ಜನಸಾಮಾನ್ಯರಿಗೆ ಅದನ್ನು ತಿಳಿಸುವಲ್ಲಿ ನಾವು ಮಾರ್ಕ್ಸ್‌ವಾದಿಗಳು ಸೋತಿದ್ದೇವೆ ಎಂದು ಅವರಿಗೆ ಅನಿಸಿತು. ಸಾಮಾನ್ಯ ಜನರಿರಲಿ, ಮಾರ್ಕ್ಸ್‌ವಾದಿ ಸಂಘಟನೆಯ ನಾಯಕರೂ ದಾಸ್ ಕ್ಯಾಪಿಟಲ್ ಓದಿಲ್ಲ ಎನ್ನುವುದು ಗಮನಕ್ಕೆ ಬಂತು. ಕ್ಯಾಪಿಟಲ್ ಅನ್ನು ಸರಳವಾಗಿ ಅರ್ಥವಾಗುವಂತೆ ಬರೆಯಬೇಕೆಂಬ ಪ್ರಯತ್ನ ಆರಂಭಿಸಿದಾಗ ಅವರ ಸಂಘಟನೆ ಒಪ್ಪಲಿಲ್ಲ. ಕೇಂದ್ರ ನಾಯಕತ್ವದ ಒಪ್ಪಿಗೆ ಪಡೆಯಬೇಕು; ಪುಸ್ತಕದ ಕೆಲಸವನ್ನು ಒಬ್ಬರ ಹೆಸರಿನಲ್ಲಲ್ಲ, ಒಂದು ತಂಡವಾಗಿ ಮಾಡಬೇಕು ಎಂದು ನಕಾರ ಸೂಚಿಸಿತು. ಕ್ಯಾಪಿಟಲ್ ಅನ್ನು ಓದಿ ಬರೆಯಲು ಕೇಂದ್ರನಾಯಕರನ್ನು ಏಕೆ ಕೇಳಬೇಕು ಎಂದು ರಂಗನಾಯಕಮ್ಮ ಬಂಡೆದ್ದು ತಮ್ಮಷ್ಟಕ್ಕೆ ತಾವು ಓದಿ ಬರೆಯತೊಡಗಿದರು. ಕೆಲ ಕಾಲದ ಬಳಿಕ ಯಾಕೋ ತನ್ನನ್ನು ಮೂಲೆಗುಂಪು ಮಾಡುವ, ಒಂದು ಗುಂಪಿನೊಂದಿಗೆ ಗುರುತಿಸುವ ಗುಂಪುಗಾರಿಕೆ ಇರುವುದನ್ನು ಗಮನಿಸಿದರು. ಕೂಡಲೇ ಸಂಘಟನೆಯಿಂದ ಹೊರಬಂದರು. ‘ಜನಸಾಹಿತಿ’ಯನ್ನೇಕೆ ಬಿಟ್ಟೆ ಎಂದೂ ಬರೆದುಕೊಂಡರು. ೧೯೭೭ರಿಂದ ೧೯೭೯ರವರೆಗೆ ಪ್ರಜಾಸಾಹಿತಿ ಎಂಬ ಸಾಹಿತ್ಯಿಕ ಮಾಸಿಕದ ಸಂಪಾದಕಿಯಾದರು. ಯಾವುದೇ ಸಂಘಟನೆ, ಪಕ್ಷ ಸೇರದೇ ಸ್ವತಂತ್ರ ಮಾರ್ಕ್ಸ್‌ವಾದಿಯಾಗಿ ಲೋಕಸಮಸ್ತವನ್ನೂ ಅರ್ಥೈಸತೊಡಗಿದರು. ಮೂರು ಸಂಪುಟಗಳಲ್ಲಿ ಕಾರ್ಲ್‌ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್ ಕುರಿತ ಹೊತ್ತಗೆಗಳನ್ನು ತಾವೇ ಪ್ರಕಟಿಸಿದರು. ಅವು ಅತ್ಯಂತ ಸರಳವಾಗಿ ಮಾರ್ಕ್ಸ್‌ವಾದವನ್ನು ಜನಸಾಮಾನ್ಯರಿಗೆ ತಲುಪಿಸಿದವು. ಅವೆಷ್ಟು ಜನಪ್ರಿಯವಾದವೆಂದರೆ ತೆಲುಗಿನಿಂದ ಇಂಗ್ಲೀಷಿಗೆ ಅನುವಾದಗೊಂಡವು. 

೧೯೮೦ರ ಸಮಯ. ಅದು ಯಂಡಮೂರಿ ವೀರೇಂದ್ರನಾಥ್ ಜನಪ್ರಿಯ ಸಾಹಿತಿಯಾಗಿದ್ದ ಕಾಲ. ಅವರ ತುಳಸೀದಳ ಎಂಬ ಧಾರಾವಾಹಿ ಎಲ್ಲೆಡೆ ಮನೆಮಾತಾಗಿತ್ತು. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿ ಸಿನಿಮಾ ಕೂಡಾ ಬಂದಿತು. ಭಾನಾಮತಿ, ಮಾಟ, ಮಂತ್ರ, ಭೂತ ಮೊದಲಾದ ಮೂಢನಂಬಿಕೆಗಳೆಂದು ಪರಿಗಣಿಸಲ್ಪಟ್ಟ ಆಚರಣೆಗಳನ್ನು ರೋಚಕವಾಗಿ ಹೆಣೆದ ಕಾದಂಬರಿಗೆ ವೈದ್ಯರೂ, ಲೇಖಕರೂ ಆಗಿದ್ದ ಕೊಮ್ಮೂರಿ ವೇಣುಗೋಪಾಲ ರಾವ್ ಮುನ್ನುಡಿ ಬರೆದು ಹೊಗಳಿ ಅಟ್ಟಕ್ಕೇರಿಸಿದರು. ಆಂಧ್ರಪ್ರಭಾ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಆ ಜನಪ್ರಿಯ ಕಾದಂಬರಿಯ ಅವಗುಣಗಳ ಬಗೆಗೆ ನಿರಂತರವಾಗಿ ರಂಗನಾಯಕಮ್ಮ ಪ್ರಹಾರ ಮಾಡಿದರು. ವೈದ್ಯರಾಗಿಯೂ ಜನಸಾಮಾನ್ಯರಲ್ಲಿ ಮೂಢನಂಬಿಕೆ ಬಿತ್ತುವ ಸಾಹಿತ್ಯದ ಬಗೆಗೆ ಮೆಚ್ಚಿಗೆಯ ನುಡಿ ಬರೆದ ಕೊಮ್ಮೂರಿಯವರನ್ನು ತೀಕ್ಷ್ಣ ಟೀಕೆಗೆ ಗುರಿ  ಮಾಡಿದರು. ಇದೊಂದು ದೀರ್ಘ ಕಾನೂನು ಸಮರಕ್ಕೆ ನಾಂದಿ ಹಾಡಿತು. 

ವಿಚಾರಣೆಯ ವೇಳೆ ನ್ಯಾಯಾಧೀಶರು ರಾಮಾಯಣ ವಿಷವೃಕ್ಷಂ ಬರೆದಾಕೆ ಇದೇ ರಂಗನಾಯಕಮ್ಮನೇ ಎಂದು ಕೇಳಿ ಮುಂದುವರೆಯುತ್ತಿದ್ದರು. ಬಹುಪಾಲು ನ್ಯಾಯಾಧೀಶರು ಅವರ ಬಗೆಗೆ ಋಣಾತ್ಮಕ ಅಭಿಪ್ರಾಯ ಹೊಂದಿ ಸರಸರನೆ ಅವರ ವಿರುದ್ಧವಾಗಿ ತೀರ್ಪು ಕೊಡುತ್ತಿದ್ದರು. ವಿಚಾರಣೆಯು ನಾಸ್ತಿಕತೆ ವರ್ಸಸ್ ಸಂಪ್ರದಾಯಶೀಲತೆಯ ವಾಗ್ಯುದ್ಧದಲ್ಲಿ ಮುಗಿಯುತ್ತಿತ್ತು. ಆದರೆ ರಂಗನಾಯಕಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸಲಿಲ್ಲ. ಸುಪ್ರೀಂಕೋರ್ಟಿನ ತನಕ ಹೋದರು. ಅಲ್ಲಿಯೂ ಪೂರ್ಣ ನ್ಯಾಯ ಸಿಗುವ ಭರವಸೆಯಿಲ್ಲದಾಗ ಅದುವರೆಗಿನ ಕೋರ್ಟ್ ವಿಚಾರಣೆಯ ಆಗುಹೋಗು ಹಾಗೂ ತನ್ನ ವಿಮರ್ಶೆಗಳನ್ನು ಸೇರಿಸಿ ಒಂದು ಪುಸ್ತಕ ಪ್ರಕಟಿಸಿದರು. ೨೦೦೮ರಲ್ಲಿ ಮುನ್ನುಡಿ ಬರೆದ ವೈದ್ಯರು ತೀರಿಕೊಂಡ ಬಳಿಕ ಕೋರ್ಟು ಆ ಪ್ರಕರಣದ ವಿಚಾರಣೆಯನ್ನೇ ನಿಲ್ಲಿಸಿತು. 

ಅವರ ಬಿಡುಬೀಸಾದ ಬರವಣಿಗೆ, ವಿಚಾರಗಳಿಗೆ ಬಂದ ವಿರೋಧವೇನೂ ಕಡಿಮೆಯದಲ್ಲ. ಆದರೆ ರಂಗನಾಯಕಮ್ಮ ವಿರೋಧಕ್ಕೆ ಹೆದರಿ ದನಿಯನ್ನು ತಗ್ಗಿಸಿಕೊಂಡವರಲ್ಲ. ಪತ್ರಕ್ಕೆ ಪ್ರತಿಪತ್ರ, ಪ್ರಶ್ನೆಗೆ ಉತ್ತರ, ಆರೋಪಕ್ಕೆ ಸ್ಪಷ್ಟೀಕರಣ, ವಿವಾದಕ್ಕೆ ವಿವರಣೆ - ಯಾವ ಗಾಳಿಮಾತೂ ಹಾಗೆಯೇ ಹಾರಿಹೋಗಲು ಬಿಡದೆ ಎಲ್ಲಕ್ಕೂ ಲಿಖಿತವಾಗಿ ಉತ್ತರಿಸಿ ತಾರ್ಕಿಕ ಅಂತ್ಯ ಮುಟ್ಟಿಸಿದರು. ಅಷ್ಟೇ ಅಲ್ಲ, ವಾಗ್ವಾದಗಳನ್ನು ಪುಸ್ತಕವಾಗಿ ಪ್ರಕಟಿಸಿದರು. 


ಅಂಬೇಡ್ಕರ್ ಜನ್ಮಶತಮಾನೋತ್ಸವದ ಬಳಿಕ ಅವರ ಪುಸ್ತಕಗಳನ್ನು ಆಮೂಲಾಗ್ರವಾಗಿ ಓದಿದರು. ತನಗೆ ಏಳುತ್ತಿದ್ದ ಎಷ್ಟೋ ದ್ವಂದ್ವಗಳಿಗೆ ಅವರಲ್ಲಿ ಉತ್ತರವಿದ್ದಂತೆ ತೋರಿತು. ಅಂಬೇಡ್ಕರರ ಬಗೆಗೆ ಅಪಾರ ಗೌರವ ಬೆಳೆಯಿತು. ಆದರೆ ದಲಿತರ ಸಮಸ್ಯೆಗಳಿಗೆ ಬುದ್ಧನಷ್ಟೇ ಪರಿಹಾರವಾಗಲಾರ; ಅಂಬೇಡ್ಕರರಷ್ಟೇ ಆದರೂ ಸಾಲದು; ಮಾರ್ಕ್ಸ್ ಬೇಕೇಬೇಕು ಎಂದು ಭಾವಿಸಿದರು. ಅಂಬೇಡ್ಕರ್-ಬುದ್ಧರ ಜೊತೆ ಮಾರ್ಕ್ಸ್‌ವಾದವೂ ಸೇರಿದರೆ ದಲಿತೋದ್ಧಾರವಾಗುತ್ತದೆ ಎಂಬ ಬರಹ ಬರೆದು ಸಾಕಷ್ಟು ಟೀಕೆಗೆ ಗುರಿಯಾದರು. ಅಂಬೇಡ್ಕರ್‌ವಾದಿಗಳು, ಮಾರ್ಕ್ಸ್‌ವಾದಿಗಳ ನಂತರ ಪ್ರಕರಣವೊಂದರಲ್ಲಿ ಆಂಧ್ರದ ಸ್ತ್ರೀವಾದಿಗಳು ತಳೆದ ನಿಲುವನ್ನು ಬೂರ್ಶ್ವಾ ಎಂದು ಜರೆದು ಅವರಿಂದಲೂ ಟೀಕೆ, ವಿಮರ್ಶೆಗಳನ್ನು ಸ್ವೀಕರಿಸಿದರು. ಹೀಗೆ ಸಮಾಜದ ಹಲವೆಂಟು ವಿಷಯಗಳ ಬಗೆಗೆ ತಮ್ಮ ಅಭಿಪ್ರಾಯವನ್ನು ನಿಖರವಾಗಿ, ನೇರವಾಗಿ ತಿಳಿಸುತ್ತಿದ್ದ ಅವರು ಪ್ರಜಾಸಾಹಿತಿ, ಪ್ರಜಾತಂತ್ರ, ಆಂಧ್ರಜ್ಯೋತಿಗಳಲ್ಲಿ ಪ್ರಶ್ನೋತ್ತರ ರೂಪದಲ್ಲಿ ಎಲ್ಲಾ ವಿಷಯಗಳ ಬಗೆಗೂ ಉತ್ತರಿಸುತ್ತಿದ್ದರು. ಪ್ರಶ್ನೋತ್ತರಗಳನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು.

ಇಂದಿಗೂ ಕೊಂಚ ವಿರಾಮ ದೊರೆತದ್ದೇ ತಮ್ಮ ಹಳೆಯ ಬರಹಗಳನ್ನು ಪರಿಶೀಲಿಸುತ್ತಾರೆ. ಜನರಿಗೀಗ ನಿರುಪಯೋಗಿ ಎಂದು ಹಿಂದೆ ಬರೆದ ತಮ್ಮ ಹಲವಾರು ಕತೆಗಳನ್ನು, ಕೃಷ್ಣವೇಣಿ ಕಾದಂಬರಿಯನ್ನೂ ಹಿಂದೆಗೆದುಕೊಂಡಿದ್ದಾರೆ. ರಾಮಾಯಣ ಓದಿದಂತೆ ಮಹಾಭಾರತವನ್ನೂ ಓದತೊಡಗಿ ೨೦೧೫ರಲ್ಲಿ ‘ಇದಂಡಿ ಮಹಾಭಾರತಮು’ ಬಂತು. ೨೦೧೬ರಲ್ಲಿ ವೇದಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಯೋಚನೆ ಸರ್ಕಾರಕ್ಕಿದೆಯೆಂದು ತಿಳಿದದ್ದೇ ವೇದಗಳನ್ನು ಓದತೊಡಗಿದರು. ಅವುಗಳಲ್ಲೇನಿದೆ, ಇಲ್ಲ ಎಂದು ಅಭಿಪ್ರಾಯ, ಟೀಕೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. 

ಹೀಗೆ ನಿರಂತರವಾಗಿ ಓದು, ಬರೆಹದಲ್ಲಿ ತೊಡಗಿರುವ ಅವರು ಆತ್ಮಚರಿತ್ರೆ ಬರೆಯಬೇಕು ಎಂದು ಓದುಗರು ಒತ್ತಾಯಿಸಿದರೂ ನಿರಾಕರಿಸಿದರು. ತಮ್ಮ ಕತೆ, ಕಾದಂಬರಿ, ಬರಹಗಳಲ್ಲಿ ಆತ್ಮವೃತ್ತಾಂತವು ಆಗೀಗ ಸುಳಿದು ಹೋಗಿರುವುದರಿಂದ ಮತ್ತೆ ಬರೆಯುವ ಅಗತ್ಯ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಗೆಳತಿಯೊಬ್ಬಳಿಗೆ ತಮ್ಮ ದಾಂಪತ್ಯದ ಸಂಘರ್ಷಗಳ ಒಳಹೊರಗುಗಳನ್ನು ಪ್ರಸ್ತಾಪಿಸಿ ಬರೆದ ಪತ್ರಗಳನ್ನು ‘ಆತ್ಮಚರಿತ್ರಾತ್ಮಕ ವಿವರಗಳುಳ್ಳ ಪತ್ರಗಳು’ ಎಂಬ ಹೆಸರಿನಲ್ಲಿ ತಾವೇ ಪ್ರಕಟಿಸಿದರು. 

ತಮ್ಮ ಹೆಚ್ಚಿನ ಪುಸ್ತಕಗಳನ್ನು ಸ್ವೀಟ್ ಹೋಂ ಪಬ್ಲಿಕೇಷನ್ಸ್ ಎಂಬ ತಮ್ಮ ಪ್ರಕಟಣಾ ಸಂಸ್ಥೆಯಿಂದಲೇ ಪ್ರಕಟಿಸಿದ್ದಾರೆ. ಯಾವ ಪ್ರಶಸ್ತಿಯನ್ನೂ ತೆಗೆದುಕೊಳ್ಳಲಾರೆ ಎಂದು ಘೋಷಿಸಿಕೊಂಡಿದ್ದಾರೆ.


***

ಇದು ರಂಗನಾಯಕಮ್ಮ. ಈಗವರಿಗೆ ೮೩ರ ಇಳಿಹರೆಯ. 

ಈ ಭೂಮಿ ಮೇಲಿನ ಜೀವ ಅಜೀವರ ನಡುವೆ ಭೇದ, ತಾರತಮ್ಯ ಇರಕೂಡದು; ಎಲ್ಲರೂ ಎಲ್ಲವನ್ನು ಹಂಚಿಕೊಂಡು ಸಮರಾಗಿ ಘನತೆಯ ಬಾಳು ನಡೆಸುವಂತಹ ಸಮಾಜ ಬರಬೇಕು ಎಂಬ ಉದಾತ್ತ ಕನಸಿನ ಕಮ್ಯುನಿಸ್ಟ್ ಸಿದ್ಧಾಂತ ದುಡಿಯುವ ವರ್ಗಕ್ಕೆ, ಶೋಷಿತರಿಗೆ, ಮಾನವೀಯ ಮನಸ್ಸುಗಳಿಗೆ ಉದಾತ್ತವೆನಿಸುತ್ತದೆ. ಆದರೆ ಬಂಡವಾಳ ಹೂಡುವವರಿಗೆ, ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಅಳೆಯುವವರಿಗೆ ಅದು ಇಷ್ಟವೇ ಆಗುವುದಿಲ್ಲ. ಈಗಂತೂ ವಿಶ್ವಾದ್ಯಂತ ಎಡ, ಕಮ್ಯುನಿಸ್ಟ್ ಚಿಂತನೆ ಎಂದರೆ ಸಮಾಜದ್ರೋಹಿ, ದೈವವಿರೋಧಿ, ರಾಷ್ಟ್ರದ್ರೋಹಿ ಚಿಂತನೆ ಎಂದು ಬಿಂಬಿಸುವಲ್ಲಿ ಬಂಡವಾಳಶಾಹಿಗಳು ಮತ್ತವರ ಏಜೆಂಟರಾದ ಆಳುವ ಸರ್ಕಾರಗಳು ಯಶಸ್ವಿಯಾಗಿವೆ. ಅಂಥದರ ನಡುವೆ ಎಡ ಸಿದ್ಧಾಂತವನ್ನೇ ಗಟ್ಟಿಯಾಗಿ ನಂಬಿದ ರಂಗನಾಯಕಮ್ಮ ಯಾವ ಅಳುಕಿಲ್ಲದೆ ಅದರಂತೆ ಬದುಕುತ್ತ, ಅದರಲ್ಲಿ ಭರವಸೆ ಇಟ್ಟುಕೊಳ್ಳಿ ಎಂದು ಮುಂದಿನ ತಲೆಮಾರುಗಳಿಗೆ ಹೇಳುತ್ತ ಸಮಾನತೆಯ ಕನಸಿನ ಕೊಂಡಿಯಾಗಿದ್ದಾರೆ. ನಾಳೆಯ ನೆಮ್ಮದಿಯ ಬಗೆಗೆ ಲೋಕವನ್ನು ಎಚ್ಚರಿಸುತ್ತಲೇ ಇದ್ದಾರೆ. 

ನ್ಯಾಯದ ಕಣ್ಣು ತೆರೆದುಕೊಂಡ ಆ ಹೆಣ್ಣು ಜೀವಕ್ಕೆ, ಲೋಕವನ್ನೂ ಬೆಳಕಿನೆಡೆಗೆ ಒಯ್ಯುತ್ತಿರುವ ಆ ಕೆಂಪು ಜೀವಕ್ಕೆ ಶರಣು ಶರಣು.