Thursday 14 March 2024

ರಹಮತ್ ತರೀಕೆರೆಯವರ ‘ಕುಲುಮೆ’

 

ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆ

ಸಾಹಿತಿ, ಕಲಾಕಾರರು, ಆಟಗಾರರು, ಜನಪ್ರತಿನಿಧಿಗಳೇ ಮೊದಲಾಗಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಮಾಹಿತಿ ಕಾಲಕಾಲಕ್ಕೆ ಸುದ್ದಿಯಾಗಿ ತಿಳಿಯುವುದರಿಂದ ಅವರ ಬಗೆಗೆ ನಮಗೆಲ್ಲ ಗೊತ್ತು ಎಂದೇ ಸಮಾಜ ಭಾವಿಸುತ್ತದೆ. ಆದರೆ ಆ ವ್ಯಕ್ತಿತ್ವ ರೂಪುಗೊಂಡ ಪರಿ ಅದೃಶ್ಯವಾಗುಳಿದು ಕುತೂಹಲ ಮೂಡಿಸಿರುತ್ತದೆ. ಬರಹಗಾರ, ಚಳವಳಿಯ ಸಂಗಾತಿ, ವಿಚಾರವಾದಿ, ಸಂಸ್ಕೃತಿ ಚಿಂತಕ, ವಿಶ್ವವಿದ್ಯಾಲಯದ ಜನಪ್ರಿಯ ಮೇಷ್ಟ್ರು ಆದ ರಹಮತ್ ತರೀಕೆರೆಯವರು ‘ಇವರು ಹೇಗೆ ಈ ಪರಿ ತಯಾರಾದರು’ ಎಂದು ತಮ್ಮ ಶಿಷ್ಯಕೋಟಿ ಮತ್ತು ಓದುಬಳಗದಲ್ಲಿ ಕುತೂಹಲ ಮೂಡಿಸಿದ್ದರು. ಈಗದಕ್ಕೆ ಉತ್ತರವೋ ಎಂಬಂತೆ ತಮ್ಮನ್ನು ಬೆಳೆಸಿದ, ಬೆರಗಾಗಿಸಿದ ಸಾಕಷ್ಟು ಅಗೋಚರ ಸಂಗತಿಗಳನ್ನು ಆತ್ಮಚರಿತ್ರೆಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆಯನ್ನು ‘ಕುಲುಮೆ’ ಎಂಬ ಸೃಜನಶೀಲ ಹೊತ್ತಗೆಯಾಗಿಸಿದ್ದಾರೆ. 

ಇದೊಂದು ಜ್ಞಾಪಕ ಚಿತ್ರಶಾಲೆ. ನಿರೂಪಣೆಯುದ್ದಕ್ಕೂ ಬಾಲ್ಯ, ಯೌವನಗಳ ನಡುವೆ ಉಯ್ಯಾಲೆಯಂತಹ ಚಲನೆಯಿದೆ. ಲೇಖಕರೇ ಹೇಳಿರುವಂತೆ ಎಲ್ಲಿಂದಾದರೂ ಶುರುಮಾಡಿ ಎಲ್ಲಿಯಾದರೂ ಮುಗಿಸಬಹುದು. ಅಮ್ಮ ಮತ್ತು ಮನೆಯ ಹಿರಿಯರು ತಮ್ಮ ಬಗೆಗೆ ಹೇಳುವ ಬಾಲ್ಯದ ಪ್ರಸಂಗಗಳಿಂದ ಶುರುವಾಗವ ಜೀವನಕಥನವು ಎಳತರಲ್ಲೇ ತನ್ನಮ್ಮ ಧನುರ್ವಾಯುವಿನಿಂದ ತೀರಿಕೊಂಡ ದುಃಖವನ್ನು ತೋಡಿಕೊಳ್ಳುತ್ತ ಕೊನೆಯಾಗುತ್ತದೆ. ಮಗುವಿದ್ದಾಗ ಬಂದ ‘ಅಮ್ಮ’ನ (ಸಿಡುಬು) ಕಾರಣವಾಗಿ ಸಾವಿನ ಮನೆಗೆ ಹೋಗಿಬಂದ ಹುಡುಗ ದೈಹಿಕವಾಗಿ ಅಶಕ್ತನಾಗಿ ಭಾರೀ ಕೆಲಸಕ್ಕೆ ನಾಲಾಯಕ್ಕೆಂದು ಪರಿಗಣಿಸಲ್ಪಟ್ಟು ಓದಿನ ಅವಕಾಶ ಪಡೆಯುತ್ತಾನೆ. ಶಾಲೆಗೆ ಹೋಗುತ್ತ ಕುಲುಮೆ, ಕೃಷಿ, ಮನೆವಾರ್ತೆ, ಗಾರೆ ಕೆಲಸ, ಬೆರಣಿ ತಯಾರಿ, ವ್ಯಾಪಾರವೇ ಮೊದಲಾಗಿ ಸಂಸಾರದ ಬಂಡಿಗೆ ಹೆಗಲು ಕೊಡುವ ಉದ್ಯೋಗ ಮಾಡುತ್ತಲೇ ಶಿಕ್ಷಣ ಮುಂದುವರೆಸಿ ‘ಲಚ್ಚರ್’ ಆಗುವ ಮಹಾಪಯಣ ವಿಸ್ಮಯ ಹುಟ್ಟಿಸುವಂತಿದೆ. 

ಬಹುತೇಕ ಆತ್ಮಕತೆಗಳಲ್ಲಿ ಬಾಲ್ಯ, ಹದಿಹರೆಯಗಳ ಭಾಗ ಚೇತೋಹಾರಿಯಾಗಿರುತ್ತವೆ. ನಡುಹರೆಯ ದಾಟಿದ ನಂತರ ಆತ್ಮಪ್ರಶಂಸೆ, ಸಮಜಾಯಿಷಿ, ಆರೋಪ, ಹಳಹಳಿಕೆಗಳ ವಜ್ಜೆ ಓದುವವರ ಹೆಗಲೇರುತ್ತದೆ. ‘ನಾನು’ ರೂಪುಗೊಳ್ಳುವ ಮೊದಲು ತಿಳಿನೀರಿನಂತಿದ್ದ ಬದುಕು ನಂತರ ಪಾನಕವಾಗುತ್ತದೆ. ಬರೆವವರು ತಂತಮ್ಮ ಶಕ್ತ್ಯಾನುಸಾರ ಬೇಕಾದ್ದನ್ನೆಲ್ಲ ಸೇರಿಸಿ ದಾಹಿ ಓದುವರ್ಗಕ್ಕೆ ಕುಡಿಸುತ್ತಾರೆ. ಈ ದೃಷ್ಟಿಯಿಂದ ‘ಕುಲುಮೆ’ ವಿಭಿನ್ನವಾಗಿದೆ. ‘ಸದರಿ ಕಥನವು ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸೆಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನ ತತ್ವದ ಹುಡುಕಾಟ ಆಗಬೇಕು’ ಎಂದು ಲೇಖಕರು ಪ್ರಜ್ಞಾಪೂರ್ವಕ ನಿಲುವು ತಳೆದ ಕಾರಣವಾಗಿ ಕೊನೆಯತನಕ ಸುಲಲಿತ ಪ್ರಬಂಧದ ತರಹ ಓಡಿಸಿಕೊಂಡು ಓದಿಸಿಕೊಳ್ಳುತ್ತದೆ. 

ಯಾರದೇ ಬಾಳ್ಕಥನವು ಅವರೊಬ್ಬರದೇ ಆಗಲು, ಅವರು ಹುಟ್ಟಿ ಬದುಕಿದ ಕಾಲ ಮಾತ್ರದ್ದಷ್ಟೇ ಆಗಲು ಸಾಧ್ಯವಿಲ್ಲ. ಸಾಧ್ಯದ ತುಂದಿಬಿಂದುಗಳನ್ನು ಹಿಗ್ಗಲಿಸಿ ಹಲವಾರು ವ್ಯಕ್ತಿಚಿತ್ರ, ಸಂದರ್ಭಗಳನ್ನು ಜೊತೆಗೇ ಕಟ್ಟಬೇಕಾಗುತ್ತದೆ. ತಮ್ಮ ಸುತ್ತಮುತ್ತಲ ವ್ಯಕ್ತಿಗಳು, ಪರಿಸರ, ಗ್ರಾಮೀಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಸ್ಯಪ್ರಜ್ಞೆ ಮತ್ತು ಹಳ್ಳಿಗಾಡಿನ ಶ್ರಮಸಮಾಜದ ವರ್ಣನೆ ಗಮನ ಸೆಳೆಯುವಂತಿವೆ. ಚರಾಚರಗಳು ಬದುಕಲೆಂದು ನಡೆಸುವ ಸಕಲ ಕರಾಮತ್ತುಗಳನ್ನೂ ನವಿರು ಹಾಸ್ಯದಲ್ಲಿ ವಿವರಿಸಿ ಜೀವಂತಿಕೆ ತುಂಬಿದ್ದಾರೆ. ಮಂಥನ, ಆತ್ಮಾವಲೋಕನೆ, ನಿವೇದನೆ, ತಪ್ಪೊಪ್ಪಿಗೆ ಎಲ್ಲವೂ ಇವೆ. ತಮ್ಮನ್ನು ತಾವೇ ಪರಿಹಾಸ್ಯ ಮಾಡಿಕೊಳ್ಳುವ ಗುಣವು ನಿರೀಕ್ಷಣಾ ಜಾಮೀನಿನಂತೆಯೂ, ಗುರಾಣಿಯಾಗಿಯೂ, ನೀರಗಂಟಿಯಾಗಿಯೂ ಒದಗಿಬಂದಿದೆ. ಹಾಸ್ಯದ ಚಾಟಿಯೇಟಿಗೆ ಹೆಚ್ಚು ಒಳಗಾಗಿರುವವರು ತಂದೆ ಮತ್ತು ಬಾಳಸಂಗಾತಿ. ಅವರಿಬ್ಬರೂ ರಹಮತರ ಬದುಕು, ಪ್ರಜ್ಞೆಗಳನ್ನಾವರಿಸಿ, ವಿಶಿಷ್ಟ ಲೋಕದೃಷ್ಟಿ ರೂಪಿಸಿದ್ದಾರೆ. 


ಈ ಕೃತಿಯು ಹಳ್ಳಿಗಾಡಿನ ಮುಸ್ಲಿಮರ ಲೋಕದೊಳಗೆ ಕನ್ನಡ ಓದುಗರಿಗೆ ಪ್ರವೇಶ ಒದಗಿಸಿದೆ. ಅಲ್ಲಿನ ಉರ್ದು-ಅರಬಿ-ಕನ್ನಡ ಮಿಶ್ರಿತ ಮಾತು, ನಾಣ್ಣುಡಿ, ಬೈಗುಳ, ಆಚರಣೆ, ಸಂಸ್ಕೃತಿ ಸಂಪ್ರದಾಯಗಳ ಬಗೆಗೆ ಅಮೂಲ್ಯ ವಿವರಗಳಿವೆ. ಬದಲಾದ ಸಾಮಾಜಿಕ ನೇಯ್ಗೆಯು ಮುಸ್ಲಿಂ ಸಮುದಾಯದ ಮೇಲೆ ಹೊರಿಸಿರುವ ಭಯಾತಂಕ, ಒತ್ತಡಗಳು ಹಲವೆಡೆ ಸೂಕ್ಷ್ಮವಾಗಿ ದಾಖಲಾಗಿವೆ. ‘ಪ್ರತಿ ಬಾರಿ ಗಣೇಶನ ಹಬ್ಬ ಬಂದಾಗಲೂ ಬಾಯಿಗೆ ಅಕ್ಕಿಕಾಳು ಹಾಕಿಕೊಂಡು ಎಚ್ಚರವಿದ್ದು ಕೊನೆಗೆ ಏನೂ ಗಲಭೆಯಿಲ್ಲದೆ ಹಬ್ಬ ಮುಗಿದಾಗ ನಿಟ್ಟುಸಿರೊಂದು ಹೊರಹೊಮ್ಮುವಂತಾಗುತ್ತಿತ್ತು’ ಎನ್ನುವ ಮಾತು ಓದುವವರಲ್ಲಿ ವಿಷಾದ, ದಿಗ್ಭ್ರಮೆಗಳನ್ನು ಹುಟ್ಟಿಸುತ್ತವೆ. 

ಯೋಚಿಸಿ, ಚರ್ಚಿಸಿ, ವೈಚಾರಿಕತೆಯನ್ನು ಅಳವಡಿಸಿಕೊಂಡವರಿಗೂ ಬದುಕಿನಲ್ಲಿ ಕೆಲವೊಮ್ಮೆ ಸಂದಿಗ್ಧಗಳೆದುರಾಗುತ್ತವೆ. ಎಳೆತನದಲ್ಲಿ ಧಾರ್ಮಿಕ ಪ್ರವೃತ್ತಿಯವರಾಗಿದ್ದು, ಓದು, ವೈಚಾರಿಕತೆಗೆ ತೆತ್ತುಕೊಂಡ ಬಳಿಕ ವಿಚಾರವಾದಿಯಾಗಿ ಬೆಳೆದರೂ ಬಾಳಲ್ಲಿ ಎದುರಿಸಿದ ದ್ವಂದ್ವಗಳನ್ನು ಪ್ರಾಮಾಣಿಕವಾಗಿ ಇಲ್ಲಿ ಮಂಡಿಸಲಾಗಿದೆ. ‘ಧಾರ್ಮಿಕತೆ-ವೈಚಾರಿಕತೆಗಳ ನಡುವೆ ಚಲಿಸಿದ ಬಾಳನಾವೆ ಕೊನೆಗೆ ಸೂಫಿ ಕಿನಾರೆಯಲ್ಲಿ ಲಂಗರು ಹಾಕಿತು’ ಎಂದು ಈಗ ನೆಲೆ ನಿಂತ ತಾವನ್ನು ಬಣ್ಣಿಸಿದ್ದಾರೆ.

ಕನ್ನಡಕ್ಕೆ ವಿಶಿಷ್ಟ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಟ್ಟಿರುವ ರಹಮತ್ ತರೀಕೆರೆ, ತಾನು ಬರಿಯ ಸಂಗ್ರಹಕಾರ; ಹೆಕ್ಕಿರುವುದನ್ನು ಪ್ರಸ್ತುತ ಪಡಿಸಿದೆನಷ್ಟೇ ಎಂದು ಹೇಳಿಕೊಂಡಿದ್ದಾರೆ. ಲೋಕಸಂಚಾರಿಯಾಗಿ ಹೆಕ್ಕಿ ಪ್ರಸ್ತುತಪಡಿಸಿದ ಸಂಗತಿಗಳು ಮಹತ್ವದ ಸಾಂಸ್ಕೃತಿಕ ಸಂಶೋಧನೆಗಳಾಗಿದ್ದರೂ ಅದರ ಅನುಭವ, ಹೆಗ್ಗಳಿಕೆಗಳ ಬಗೆಗೆ; ಅದಕ್ಕಾಗಿ ತಾನು ಪಡೆದ ಮನ್ನಣೆ, ಪ್ರಶಂಸೆಗಳ ಬಗೆಗೆ ಬರೆದುಕೊಳ್ಳದೇ ಅಕ್ಷರ ವ್ಯವಸಾಯಿಗಳಿಗಿರಬೇಕಾದ ಸಂಯಮವನ್ನು ಎತ್ತಿ ಹಿಡಿದಿದ್ದಾರೆ. ‘ಏನೇ ಬರೆಯಲಿ, ಉದಯೋನ್ಮುಖ ಅವಸ್ಥೆಯ ಅಳುಕು, ಅಭದ್ರತೆಗಳಿಂದ ಬಿಡುಗಡೆ ಸಿಕ್ಕಿಲ್ಲ’ ಎನ್ನುವಲ್ಲಿ ಬೆಳವಣಿಗೆಯ ತುದಿಗಳನ್ನು ಚಿವುಟುತ್ತ, ಚಿಗುರೊಡೆಯಲು ಇರುವ ಸಾಧ್ಯತೆಗಳನ್ನು ಸಜೀವವಾಗಿಟ್ಟಿರುವುದು ತಿಳಿದುಬರುತ್ತದೆ. ಬೇಹೊಣೆ, ದೌಡುವರು, ಸಮಜಾಯಿಶಿಸಿದೆ, ಉತ್ಪತ್ತಿಸುತ್ತಿದೆ, ಗರ್ವಿಸದಿರು, ತಲಾಶಿಸು, ಶೇವಿಸಿದ ಕೆನ್ನೆ, ಪ್ರದಕ್ಷಿಣಿಸಿರುವೆನೋ, ಮಾತುಕತಿಸುತ್ತಿದ್ದರು, ಕುದುರೆ ಸವಾರಿಸಿದ, ಅಪ್ಪಣಿಸಲು, ಸಿಟ್ಟಾಸ್ತ್ರ, ಹಿತವಚಿಸಿದರು.. ಮುಂತಾದ ಸಾಕಷ್ಟು ಹೊಸ ಪದ-ಪ್ರಯೋಗಗಳನ್ನು ಹೊಸ ಸಂಧಿ, ಸಮಾಸಗಳ ಮೂಲಕ ಸೃಷ್ಟಿಸಿದ್ದಾರೆ.  

ತನ್ನನ್ನು, ರಕ್ತಸಂಬಂಧಿಗಳಾದ ಅಕ್ಕ, ಅಣ್ಣ, ತಮ್ಮ, ಅಮ್ಮ, ಅಪ್ಪ, ಬಾಳಸಂಗಾತಿ, ಮಕ್ಕಳು, ಬಂಧುಮಿತ್ರರನ್ನು ಲೋಕ ಏನಂದುಕೊಂಡೀತೋ ಎಂದು ಯೋಚಿಸದೆ ತಮಗೆ ಕಂಡಹಾಗೆಯೇ ಅಚ್ಚು ಹಾಕಿರುವುದು ‘ಕುಲುಮೆ’ ಯ ವೈಶಿಷ್ಟ್ಯ. ಇದಕ್ಕೆ ಕೌಶಲ್ಯ, ಎದೆಗಾರಿಕೆ ಎರಡೂ ಬೇಕು. ತಮ್ಮ ತಕರಾರು, ಆತಂಕ, ಮೆಚ್ಚಿಗೆಗಳನ್ನು ಕೌಶಲ್ಯದಿಂದ ಕಡೆದು ಮಂಡಿಸುವ ಪರಿಯಲ್ಲೇ ಗುಲ್ಲಾಗಬಹುದಾದ ಸಂಗತಿಗಳು ಮಾನವ ಸಹಜವೆನಿಸಿಬಿಡುವಂತೆ ಮಾಡಿದ್ದಾರೆ. 

ಒಮ್ಮೆ ಜನಪದೆ-ಜ್ಞಾನಸುಧೆ ‘ಬಾನು-ನಾನು’ ಜೋಡಿ ನಮ್ಮನೆಗೆ ಬಂದಿತ್ತು. ಮೇಷ್ಟ್ರು ತಮ್ಮ ಜೀವನ ಚರಿತ್ರೆ ಬರೆಯುತ್ತಿರುವ ಸುಳಿವು ನೀಡಿದರು. ಜೊತೆ ಬಂದಿದ್ದ ಅವರ ಗೆಳೆಯರೊಬ್ಬರು, ‘ನಂ ವಿಷ್ಯ ಎಲ್ಲ ಬರೆದಾಯ್ತಾ?’ ಎನ್ನಲು ಬಾನು ಅಕ್ಕ, ‘ಎರಡ್ ವರ್ಷದಿಂದ ಬರಿತನೇ ಇದಾರೆ, ಬರೀತನೇ ಇದಾರೆ, ಇನ್ನೂ ನಾನೇ ಬಂದಿಲ್ಲ, ನೀವು ಬರೋದು ಡೌಟು’ ಎಂದು ಚಟಾಕಿ ಹಾರಿಸಿದ್ದರು. ನಿಜವೇ. ಇದರಲ್ಲಿ ಬಾರದ ತುಂಬ ವಿಷಯಗಳಿವೆ. 

ಯಾವುದನ್ನು ಬರೆಯಬೇಕು, ಯಾವುದನ್ನಲ್ಲ ಎನ್ನುವುದು ಸಂಪೂರ್ಣವಾಗಿ ಬರೆಯುವವರಿಗೇ ಬಿಟ್ಟಿದ್ದು, ನಿಜ. ಆದರೆ ರಹಮತರಂತಹ ಸೂಕ್ಷ್ಮಗ್ರಾಹಿಯ ಬಾಳ್ಕಥನದಲ್ಲಿ ನಾವು ನಿರೀಕ್ಷಿಸಿದ ಕೆಲವಂಶಗಳು ಇಲ್ಲದಿರುವಿಕೆಯಿಂದಲೇ ಎದ್ದು ಕಾಣುವಂತಿವೆ. ನಾಡೆಲ್ಲ ಸುತ್ತಿ ಬೇಕಿರುವುದನ್ನೆಲ್ಲ ಹೆಕ್ಕಿ ಸಾಂಸ್ಕೃತಿಕ ವಿಸ್ಮೃತಿಗೆ ಮದ್ದರೆದ ರಹಮತ್, ತಿರುಗಾಟದ ಅನುಭವ, ಸಾಕ್ಷಾತ್ಕಾರಗಳನ್ನು ಇಲ್ಲಿ ಕಾಣಿಸಿಲ್ಲ. ಅಧ್ಯಾಪನ, ಸಂಶೋಧನೆ, ಬರವಣಿಗೆ, ಕ್ಷೇತ್ರಕಾರ್ಯ, ಮೇಷ್ಟ್ರುಗಿರಿಯ ವಿವರಗಳು ವಿರಳವಾಗಿವೆ. ವಿಶ್ವವಿದ್ಯಾಲಯಗಳ ಬಗೆಗೆ, ಅಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ನೇತ್ಯಾತ್ಮಕ ಸುದ್ದಿಗಳೇ ಹೆಚ್ಚು ಕಿವಿಗೆ ಬೀಳುತ್ತವೆ. ಅದರ ನಡುವೆ ಗುರುಶಿಷ್ಯರ ನಡುವೆ, ಸಹೋದ್ಯೋಗಿಗಳ ನಡುವೆ ನಡೆಯುವ ಕೊಡುಕೊಳ್ಳುವಿಕೆಗೆ ಹಲವು ಮುಖಗಳೂ ಇರುತ್ತವೆ. ನಿವೃತ್ತಿಯಾಗುವವರೆಗೆ ತಮ್ಮ ಜೊತೆಯಾದ ವಿಶ್ವವಿದ್ಯಾಲಯ ಪರಿಸರ ಕುರಿತ ಒಂದೆರೆಡು ಪುಟ ಬಂದಿದೆಯಾದರೂ ಹೊಸತಲೆಮಾರನ್ನು ಬೆಳೆಸುವ, ಅವರೊಂದಿಗೆ ತಾವೂ ಹೊಸದಾಗಿ ಬೆಳೆಯಲು ಅವಕಾಶ ನೀಡುವ ಅಧ್ಯಾಪನದ ವಿವರಗಳು ಕಡಿಮೆ ಇವೆ.

ವಿಶ್ವಾದ್ಯಂತ ಮುಸ್ಲಿಮರ ಬಗೆಗೆ ಹಗೆತನ, ವೈರ ಹೆಚ್ಚಿಸುವಂತಹ ವಿದ್ಯಮಾನ ವ್ಯವಸ್ಥಿತವಾಗಿ ಸಂಭವಿಸುತ್ತಿದೆ. ಮುಸ್ಲಿಮೇತರರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದೇ ರಾಜಕಾರಣದ ದಾಳವಾಗಿರುವುದನ್ನು ಕಾಣುತ್ತಿದ್ದೇವೆ. ಬದಲಾವಣೆಗೆ ಸ್ವಲ್ಪವೂ ಒಡ್ಡಿಕೊಳ್ಳದ ಸ್ಥಗಿತ ಸಮಾಜ ಎಂಬಂತೆ ಮುಸ್ಲಿಂ ಸಮುದಾಯವನ್ನು ಬಿಂಬಿಸಲಾಗುತ್ತಿದೆ. ಹಾಗಿರಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ. ಆದರೆ ಮುಸ್ಲಿಂ ಸಮುದಾಯದೊಳಗೆ ಆಗುತ್ತಿರುವ ಕೋಮುವಾದಿ ಬೆಳವಣಿಗೆಗಳು, ಅದಕ್ಕೆ ಬಂದಿರುವ ಒಳಗಣ ಪ್ರತಿರೋಧ, ಆಂತರಿಕ ಮತ್ತು ಧಾರ್ಮಿಕ ಸಂಘರ್ಷಗಳ ವಿವರ ಹೊರಜಗತ್ತಿಗೆ ಕಾಣದಂತೆ ಪರದೆ ಕಟ್ಟಲಾಗಿದೆ. ಪರದೆಯೊಳಗಣ ತುಮುಲ, ಸಂಘರ್ಷಗಳ ಚಿತ್ರಣವನ್ನು ರಹಮತರಂಥವರು ಮಾತ್ರವೇ ಕಟ್ಟಿಕೊಡಲು ಸಾಧ್ಯವಿದೆ. ಈ ಹೊತ್ತಗೆಯಲ್ಲಿ ಅಂತಹ ವಿಷಯಗಳು ಗೈರಾಗಿವೆ. ಕೊನೆಗೆ ತಾವು ಕಂಡುಕೊಂಡ ಸೂಫಿ ನೆಲೆಯೂ ಸಹ ಸಾಂಸ್ಥಿಕಗೊಂಡು, ಪಟ್ಟಭದ್ರ ಹಂತ ತಲುಪಿರುವುದು, ಅದರೊಳಗೂ ನುಸುಳಿರುವ ಮೂಲಭೂತವಾದದ ಅವಲೋಕನ ಅದೃಶ್ಯವೆನ್ನುವಷ್ಟು ಸೂಕ್ಷ್ಮ ಎಳೆಯಾಗಿ ಚಿತ್ರಣಗೊಂಡಿದೆ. 

ಇಸ್ಲಾಮಿನ ಒಳಗಣ ಸಂಘರ್ಷದ ವಿವರಗಳು ಹಿಂದೂ ಬಲಪಂಥೀಯರ ದ್ವೇಷದ ಬೆಂಕಿಗೆ ತುಪ್ಪ ಸುರಿದು ಇಂಬಾದೀತೆಂಬ ಅಳುಕು ನಿರಾಧಾರ. ಏಕೆಂದರೆ ದ್ವೇಷದ ಬೆಂಕಿ ಹಚ್ಚುವವರು ಸತ್ಯಸಂಗತಿಗಳಿಗಿಂತ ಇಲ್ಲದ ಸುಳ್ಳು ಸುದ್ದಿಗಳನ್ನೇ ಅವಲಂಬಿಸುತ್ತಾರೆ. ಒಂದು ಧರ್ಮದ ಬಲಪಂಥೀಯತೆಯು ಮತ್ತೊಂದು ಧರ್ಮದ ಬಲಪಂಥೀಯತೆಯ ಕಾರಣವೂ, ಪರಿಣಾಮವೂ ಆಗಿರುವಾಗ ಹಿಂದೂ ಕೋಮುವಾದದ ಕಾರಣವಾಗಿ ಮುಸ್ಲಿಂ ಸಮುದಾಯದಲ್ಲಿ ಆಗಿರಬಹುದಾದ ಪಲ್ಲಟಗಳನ್ನು ಕಾಣಿಸಬಹುದಿತ್ತು. ಸಮುದಾಯದೊಡನಿದ್ದೂ ಇಲ್ಲದಂತಿರಬೇಕಾದ ತಳಮಳ, ಅದನ್ನೆದುರಿಸಿದ ಬಗೆಗಳನ್ನು ಮಂಡಿಸಿದ್ದರೆ ವೈಚಾರಿಕತೆ, ಹೊಸತನಕ್ಕೆ ತೆರೆದುಕೊಳ್ಳಬಯಸುವ ಭಾರತದ ಮುಸ್ಲಿಂ ಯುವ ಸಮುದಾಯಕ್ಕೆ ಇಂಬಾಗುತ್ತಿತ್ತು. ವಿಫಲ ಪ್ರೇಮ ಪ್ರಕರಣಗಳು, ಕೌಟುಂಬಿಕ ಸಂಬಂಧಗಳಲ್ಲಿ ತಲೆದೋರಿದ ಬಿಕ್ಕಟ್ಟುಗಳು, ದಾಂಪತ್ಯದ ಬಗೆಗೆ ಬಿಚ್ಚುನುಡಿಯಲ್ಲಿ ಬರೆದ ರಹಮತರು, ಧರ್ಮ-ದೇವರುಗಳನ್ನು ಅದಕ್ಕಿಂತ ಖಾಸಗಿ ವಿಷಯವಾಗಿಸಿ ‘ಮೌನ’ ವಹಿಸಿರುವುದು ಅಚ್ಚರಿದಾಯಕವಾಗಿದೆ. ಇದು ಕೆಲವು ವರ್ತಮಾನದ ಬಿಕ್ಕಟ್ಟಿನ ಸಮಯಗಳಲ್ಲಿ ಅವರ ಗೆಳೆಯರ ಬಳಗ ಆರೋಪಿಸುವುದೆಂದು ಅವರೇ ಬರೆದುಕೊಂಡ ‘ಸುಮ್ಮನಿದ್ದು ಅತ್ತ ಸರಿದುಬಿಡುವ’ ಸ್ವಭಾವದ ಹೊರಚಾಚೂ ಆಗಿರಬಹುದು. ಪ್ರಸಕ್ತ ಬಿಕ್ಕಟ್ಟಿನ ಕಾಲದಲ್ಲಿ ಅವರದನ್ನು ಉಳಿವಿನ ದಾರಿಯಾಗಿಯೂ ಕಂಡುಕೊಂಡಿರಬಹುದು. 

ಯಾಕೋ ಸಾರಾ, ಬಾನು, ನಜ್ಮಾ ಬಾಂಗಿ ನೆನಪಾಗುತ್ತಿದ್ದಾರೆ. ಅಪ್ರಿಯ ಸತ್ಯಗಳನ್ನು ಹೇಳಲು, ಕಟುವಾಸ್ತವ ವಿವರಿಸುವ ಪ್ರಶ್ನೆಗಳನ್ನೆತ್ತಲು ಹೆಣ್ಣುಜೀವಗಳೇ ಆಗಬೇಕೇನೋ!?   

ಅದೇನೇ ಇರಲಿ, ಕನ್ನಡದ ಮಹತ್ವದ ಲೇಖಕರಾಗಿರುವ ರಹಮತ್ ಅವರ ಶಿಷ್ಯೆಯಾಗಿದ್ದೆನೆನ್ನುವುದು ನನಗಂತೂ ಜಂಬ ತರುವ ಸಂಗತಿಯಾಗಿದೆ. ನಾನು ಪಿಯುಸಿ ಓದಿದ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ‘ಲಂಬೂ’ ತರೀಕೆರೆ ಮೇಷ್ಟ್ರು ಕನ್ನಡ ನಾನ್‌ಡಿಟೇಲ್ ಟೆಕ್ಸ್ಟ್ ಪಾಠ ಮಾಡುತ್ತಿದ್ದರು. ಅವರು ಏನು ಪಾಠ ಮಾಡಿದ್ದರೋ ನೆನಪಿಲ್ಲ. ಆದರೆ ‘ಗೋಲ್ಡ್ ಮೆಡಲಿಸ್ಟ್’ ಕನ್ನಡ ಮೇಷ್ಟ್ರು ಹೇಗೆ ಪಾಠ ಮಾಡಿದ್ದರೆನ್ನುವುದು ಮತ್ತು ಅವರ ಅತಿಸುಂದರ ಬರವಣಿಗೆ ಚೆನ್ನಾಗಿ ನೆನಪಿದೆ. ‘ಪ್ರಶ್ನೆ ಮತ್ತು ಹುಡುಕಾಟ ಉಳ್ಳವರಿಗೆ ನಿಲುಗಡೆಯ ಮುಕ್ತಿ ಇದ್ದಂತಿಲ್ಲ’ ಎನ್ನುವ ಗುರುಗಳೇ, ನಿಮಗೂ, ನಿಮ್ಮನ್ನು ಜೀವಂತಿಕೆಯಿಂದಿಟ್ಟಿರುವ ಬಾನು ಅಕ್ಕನೇ ಮೊದಲಾದ ಸಕಲ ಚರಾಚರಗಳಿಗೂ ಸಪ್ರೇಮ ವಂದನೆ.

ಡಾ. ಎಚ್. ಎಸ್. ಅನುಪಮಾ

Tuesday 12 March 2024

ತನ್ನ ಹೆಸರ ತಾ ಮರೆತವಳು..



(Image Source Internet)

ಒಬ್ಬಳು ಹುಡುಗಿ. ಮನೆಯ ಮುದ್ದಿನ ಮಗಳು. ಅವಳ ಚಟಪಟ ಮಾತು, ನಗು, ನಡವಳಿಕೆ ಎಲ್ಲರಿಗೂ ಮುದ್ದೋಮುದ್ದು. ಶಾಲೆಯಲ್ಲೂ ಚುರುಕು. ಆಟೋಟಕ್ಕೂ ಸೈ. ಅಡುಗೆ, ಮನೆಗೆಲಸಕ್ಕೆ ಎತ್ತಿದ ಕೈ. ಅಮ್ಮನಿಗೆ ಅಚ್ಚುಮೆಚ್ಚು. ಅಪ್ಪನಿಗೆ ಪೆಟ್. ಹಾರುತ್ತ, ಒಲಿಸುತ್ತ, ಒಲಿಯುತ್ತ, ಮುನಿಯುತ್ತ, ಮಣಿಯುತ್ತ ಹಕ್ಕಿಯಂತೆ ಹಾರುತ್ತಿದ್ದಳು, ಮೀನಂತೆ ಈಜುತ್ತಿದ್ದಳು. ಸುಖದ ದಿನಗಳು.

ಎಲ್ಲವೂ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕಲ್ಲ. ಅವಳ ಸುಖದ ದಿನ ಕೊನೆಯಾಗುವ ಕಾಲ ಬಂದೇ ಬಂದಿತು.

ಅವಳಿಗೆ ಮದುವೆಯಾಯಿತು.

ಅವಳ ಹೆಸರು ಬದಲಾಯಿತು. ಪಾತ್ರ ಬದಲಾಯಿತು. ನೋಡುವ ಕಣ್ಣುಗಳು ಬದಲಾದವು. ನಿರೀಕ್ಷೆಗಳು ಬದಲಾದವು. ಕೂರುವ, ಏಳುವ, ನಿದ್ರಿಸುವ, ಉಣ್ಣುವ, ಕೋಪಿಸಿಕೊಳ್ಳುವ, ನಗುವ ಸಮಯ ಸಂದರ್ಭ, ಭಾವಭಂಗಿಗಳು ಇದ್ದಕ್ಕಿದ್ದಂತೆ ಸಂಪೂರ್ಣ ಬದಲಾಗಿಬಿಟ್ಟವು. ಅವಳೂ ಬದಲಾದಳು. ಎಷ್ಟರಮಟ್ಟಿಗೆಂದರೆ ತಾನೆಲ್ಲಿರುವೆ, ಏನು ಮಾಡುತ್ತಿರುವೆ, ಇದುವರೆಗೂ ಏನಾಗಿದ್ದೆ, ಏನಾಗುತ್ತಿದೆ ಎನ್ನುವುದೆಲ್ಲ ಮರೆತೇಹೋಯಿತು. ದಿನದಿನವೂ ಬದಲಾಗುವುದೇ ಬದುಕಾಯಿತು. ಸೊಸೆಯಾದಳು, ಸತಿಯಾದಳು, ಅತ್ತಿಗೆಯಾದಳು, ವಾರಗಿತ್ತಿಯಾದಳು, ನಾದಿನಿಯಾದಳು, ಚಿಕ್ಕಮ್ಮ ದೊಡ್ಡಮ್ಮನಾದಳು, ಅಮ್ಮನಾದಳು. 


(Image Source Internet)

ಈಗ ಮನೆಯಲ್ಲಿ ಎಲ್ಲರಿಗೂ ಅವಳು ಬೇಕು. ಅವಳೇ ಬೇಕು. ಅತ್ತೆಮಾವರಿಗೆ ಅವಳಿಲ್ಲದಿದ್ದರೆ ದಿನ ಸರಿಯುವುದೇ ಇಲ್ಲ. ಮಕ್ಕಳಿಗೆ ಅಮ್ಮನಿಲ್ಲದಿದ್ದರೆ ಬೆಳಗಾಗುವುದಿಲ್ಲ. ಅವಳಿಲ್ಲದಿದ್ದರೆ ಗಂಡ ಏನು ಮಾಡಿಯಾನು ಪಾಪ? ಅವನಮ್ಮ ಅಪ್ಪ ಮಗರಾಯನಿಗೆ ಯಾವ ಕೆಲಸವನ್ನೂ ಕಲಿಸಿರಲಿಲ್ಲ. ಅವಳಿಲ್ಲದಿದ್ದರೆ ಹಿತ್ತಿಲು, ಅಂಗಳ ನಳನಳಿಸುವುದಿಲ್ಲ. ಬೆಕ್ಕು, ನಾಯಿ, ದನ ಬಾಯಿ ಮುಚ್ಚುವುದಿಲ್ಲ. ಎಲ್ಲರಿಗೂ ಅವಳು ಬೇಕು. ಅವಳೇ ಬೇಕೇಬೇಕು ಎಂದಾಗಿರುವಾಗ, 

ಒಂದು ದಿನ..

ಒಂದು ದಿನ, ಇದ್ದಕ್ಕಿದ್ದಂತೆ ಅವಳಿಗೆ ತನ್ನ ಹೆಸರು ಮರೆತೇ ಹೋಯಿತು! ನಂಬಿ, ಏನು ಮಾಡಿದರೂ ನೆನಪಾಗುತ್ತಿಲ್ಲ. ತಲೆ ಕೆರೆದುಕೊಂಡಳು. ಯೋಚಿಸಿದಳು. ಕಣ್ಮುಚ್ಚಿ ತೆರೆದಳು. ಕೂತಳು, ನಿಂತಳು, ಮಲಗಿ ಕನಸಿನಲ್ಲಿ ತಿಳಿಯಬಹುದೇ ನೋಡಿದಳು. ಊಂಹ್ಞೂಂ, ಅವಳಿಗೆ ತನ್ನ ಹೆಸರು ನೆನಪಿಗೇ ಬರುತ್ತಿಲ್ಲ.

ಅಯ್ಯೋ, ಇದೇನಿದು! ಅವಳಿಗೆ ಸಿಕ್ಕಾಪಟ್ಟೆ ಆತಂಕವಾಯಿತು. ತನ್ನ ಹೆಸರೇ ನೆನಪಿಗೆ ಬರ‍್ತಿಲ್ಲವಲ್ಲ, ಮುಂದೇನು? ಯಾರನ್ನಾದರೂ ಕೇಳಲೇ? ನಗಾಡುವುದಿಲ್ಲವೆ ಕೇಳಿದವರು? 

‘ಮಾವ, ಮಾವ, ನನ್ ಹೆಸರೇ ಮರೆತೋಗಿದೆ, ಹೇಳ್ತೀರಾ?’

‘ಆಂ.. ನೀ ಯಾರೇ?’

ಥೋ, ಮರೆವು ಹತ್ತಿದವರ ಬಳಿ ಮರೆತ ನನ್ನ ಹೆಸರು ಕೇಳ್ತಿದೀನಲ, ‘ಅತ್ತೆ ಅತ್ತೆ, ಏನಂದ್ಕತಿರ ಏನ, ನನ್ ಹೆಸರೇ ಮರ‍್ತು ಹೋಗಿ ಏನ್ ಹೇಳ್ಲೀ ಗೊತ್ತಾಗ್ತಿಲ್ಲ..’ ಎಂದಳು.

‘ಗಂಡಸ್ರ ಮರೆವಿನ ಕಾಯ್ಲೆ ಈಗ್ಲೇ ಸುರುವಾಯ್ತಾ ನಿಂಗೆ. ಹೋಗ್ಲಿ ತಗ, ಹೆಸರಿದ್ಕಂಡ್ ಏನುಪಯೋಗ ನಮಿಗೆ? ಮರೆಯುದೇ ಒಳ್ಳೇದು’ ಎಂದರು.

ಅಯ್ಯೋ, ಇವರಿಗೇಕೆ ಅರ್ಥನೇ ಆಗ್ತಿಲ್ಲ? ತಲೆಚಚ್ಚಿಕೊಂಡಳು. ‘ಮಕ್ಳೇ ನನ್ ಹೆಸರೇನು ಹೇಳಿ ನೋಡುವಾ?’

‘ನೀನಾ? ನಮ್ಮಮ್ಮ’ ಚಪ್ಪಾಳೆ ತಟ್ಟಿ ನಕ್ಕವು.

ಅಮ್ಮ ಅಂತನಾ ನನ್ ಹೆಸರು? ಇಲ್ಲಿಲ್ಲ. ‘ಇವರ’ ಹತ್ರ ಕೇಳ್ತಿನಿ ಅಂದುಕೊಂಡಳು.

‘ಏನೇ, ಕೇಳ್ತಾ, ನನ್ ಶೂ ಎಲ್ಲಿ ಹಾಳಾಗೋಯ್ತು, ಹುಡುಕ್ಕೊಡು ಸಿಗ್ತಿಲ್ಲ..’

‘ಅಲ್ಲೇ ಇದೆಯಲ, ನಿಮಗಂತೂ ಎದುರಿದ್ರೂ ಕಾಣದೇ ಇಲ್ಲ. ರೀರೀ, ನಂಬ್ತಿರೊ ಬಿಡ್ತಿರೊ, ನಂಗ್ ನನ್ನ ಹೆಸರೇ ನೆನಪಾಗ್ತಿಲ್ಲ ಕಣ್ರಿ’

‘ಹೆಸರ‍್ಯಾಕೆ ಬೇಕು ಚಿನ್ನ?’

‘ಚಿನ್ನ! ಅದು ನನ್ನ ಹೆಸರಾ?’

‘ಅದೇ ಇಟ್ಕ ಏನೀಗ. ನಿಂಗ್ಯಾರ ಹೆಸರು ಬೇಕೋ ಅದನ್ನಿಟ್ಕ, ಫೇಮಸ್ ಸಿನಿಮಾ ಹೀರೋಯಿನ್‌ದು ಬೇಕಾ? ರಾಷ್ಟ್ರಪತಿದು ಬೇಕಾ? ಬೇಕಾದ್ದು ಇಡುಸ್ತಿನಿ. ಏನೇ, ಕೇಳ್ತಾ? ರಾತ್ರಿ ಬರದು ಲೇಟಾಗುತ್ತೆ, ಹ್ಞಂ..’

ಯಾರದೋ ಹೆಸರಿಟ್ಕಂಡರೆ ಅದು ನನ್ ಹೆಸರು ಹೇಗಾಗುತ್ತೆ? 

‘ನಿಂಗಮ್ಮ, ನಿಂಗಮ್ಮ, ಒನ್ನಿಮಿಷ ನಿಲ್ಲು, ನಾ ಯಾರಂತ ಗೊತ್ತ ನಿಂಗೆ?’

‘ಇದೇನಿಂಗ್ಕೇಳೀರಿ. ಬುಡಿ, ನೀವ್ಗೊತ್ತಿಲ್ವ, ಸವ್ಕಾರ್ರ ಎಂಡ್ರು..’

ಅಯ್ಯೋ, ಅದಾಯ್ತು, ಆದ್ರೆ ನಾ ಯಾರು? ನನ್ನ ಹೆಸರು?

ಹೆಸರು ಮರೆಸಲ್ಪಟ್ಟವಳ ದಿನರಾತ್ರಿಗಳು ಇದೇ ತಲ್ಲಣದಲ್ಲೇ ಉರುಳುತ್ತಿರಲು .. ..

ಈಗ ಹೇಳಿ, ಅವಳಿಗೆ ಸಿಕ್ಕಿದ್ದು ಏನು? ಕಳಕೊಂಡಿದ್ದು ಏನು? ತಿಳಿಯಿತೇ ನಿಮಗೇನಾದರೂ? 

(Image Source Internet)

ಗೆಳತಿ ವಾಣಿ ಪೆರಿಯೋಡಿಯಿಂದ ಕೇಳಿದ ಮೇಲಿನ ಕತೆ (ತೆಲುಗು ಲೇಖಕಿ ಪಿ. ಸತ್ಯವತಿ ಅವರ `ದಮಯಂತಿಯ ಮಗಳು’ ಸಂಕಲನದ ಕತೆ) ನಾನಾ ಅರ್ಥ ಹೊರಡಿಸುವಂತಿದೆ. 

ಹೆಣ್ಣು ಎಲ್ಲೆಡೆಯಿಂದ ಕಳೆದುಹೋಗಿರುವಳು, ಕಾಣೆಯಾಗಿರುವಳು, ಕಾಣದಂತಾಗಿರುವವಳು. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರೇ ಇದ್ದರೂ, ಎದುರಿದ್ದರೂ ಅದೃಶ್ಯವಾಗಿರುವವರು. ಸುತ್ತಮುತ್ತ ಮಹಿಳೆಯರೇ ತುಂಬಿದ್ದರೂ ‘ಅಯ್ಯೋ, ಸಮರ್ಥ ನಾಯಕಿಯರೇ ಸಿಗ್ತಿಲ್ಲ, ಭಾಷಣಕಾರ್ತಿಯರೇ ಇಲ್ಲ, ಬರಹಗಾರ್ತಿಯರೇ ಇಲ್ಲ, ಸಾಧಕಿಯರೇ ಕಾಣ್ತಿಲ್ಲ, ಒಳ್ಳೇ ಹೆಣ್ಣೇ ಇಲ್ಲ’ ಎನ್ನುತ್ತಾರೆ! ಹೊರಗೆ ಸಮಾಜದಲ್ಲಂತೂ ಆಯಿತು, ಮನೆಯಲ್ಲಾದರೂ ಹೆಣ್ಣು ಕಾಣಿಸುವಳೇ? ‘ಕಂಡೋರ ಮನೆಯ ಸೇರಲಿರುವ ಗುಂಡು’ ಎಂದೇ ಬೆಳೆಯುತ್ತಾಳೆ. ಮದುವೆಯೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ ಎಂದು ಒಪ್ಪಿಸಲ್ಪಟ್ಟಿದ್ದಾಳೆ. ಬಳಿಕ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’. ಮದುವೆಯಾದದ್ದೇ ಅವಳ ಹೆಸರು ತವರಿನ ಪಡಿತರ ಚೀಟಿಯಿಂದ ರದ್ದಾಗಿ ‘ಕೊಟ್ಟ’ ಮನೆಯ ಕಾರ್ಡಿಗೆ ವರ್ಗಾವಣೆಯಾಗುತ್ತದೆ. ಇಂಥವರ ಮಗಳು ಎನ್ನುವುದು ಇಂಥವರ ಹೆಂಡತಿ ಎಂದು ಬದಲಾಗುತ್ತದೆ. ತವರಿನಲ್ಲಿಟ್ಟ ಹೆಸರನ್ನೂ ಬದಲಿಸುವ ರೂಢಿ ವ್ಯಾಪಕವಾಗಿದೆ. ಅವಳ ಖಾಸಗಿ ಸ್ಥಳ, ಬದುಕು, ಆಪ್ತವಲಯ, ಕೆಳೆತನದ ವಲಯಗಳು ಸಂಪೂರ್ಣ ಬದಲಾಗುತ್ತವೆ. ಬದುಕಿನ ಹಲವು ತಿರುವುಗಳಲ್ಲಿ ಹೆಣ್ಣಿಗೆ ಆಯ್ಕೆಯ ಅವಕಾಶ ಇಲ್ಲ. ಇದ್ದರೂ ಅದು ಪೂರ್ವ ನಿರ್ಧರಿತ. ಎಲ್ಲರ ಹಕ್ಕು, ಸುಖಗಳನ್ನೆತ್ತಿ ಹಿಡಿದು ಪತ್ನಿಯೆಂಬ, ತಾಯ್ತನವೆಂಬ ಹಕ್ಕುನಷ್ಟದ ಸ್ಥಿತಿಯನ್ನೇ ಪರಮ ಪಾವನವೆಂದು ಪರಿಗಣಿಸಿ ತ್ಯಾಗಮಯಿಯಾಗಬೇಕು. ‘ಇದ್ರೆ ಅವರ ಅಮ್ಮನ ತರಹ ಇರಬೇಕು’, ‘ಜೋಡಿ ಅಂದ್ರೆ ಅವುರ‍್ದು..’ ಎಂಬ ಹೊಗಳಿಕೆ ಗಳಿಸಿಕೊಳ್ಳಲು ಮೈಸುಟ್ಟುಕೊಂಡು ಪೂರಿಯಂತೆ ಉಬ್ಬಬೇಕು. 

ಅಮ್ಮನಾಗುವುದೊಂದು ಖಟ್ಟಾಮಿಠ್ಠಾ ಅನುಭವ. ಎಷ್ಟು ಸಂಭ್ರಮವೋ ಅಷ್ಟೇ ಆತಂಕ. ಎಷ್ಟು ಹೆಮ್ಮೆಯೋ ಅಷ್ಟೇ ದಮನಿತ ಅನುಭವ. ಅದರಲ್ಲೂ ಬಸುರು, ಬಾಣಂತನ, ಹೆರಿಗೆ, ತಾಯ್ತನಗಳನ್ನು ಸಾವಧಾನವಾಗಿ ಅನುಭವಿಸುವಷ್ಟೂ ಸಮಯ ಮಾಡಿಕೊಳ್ಳಲಾಗದ ಈ ಕಾಲದ ತಾಯಿಯರ ಅನುಭವ ತುಂಬ ಭಿನ್ನವಾಗಿದೆ. ಆದರೆ ತಾಯ್ತನದ ನಿಜ ಅನುಭವವನ್ನು, ಸಂಕಟವನ್ನು ಹೇಳುವ ಅವಕಾಶವೇ ಇಲ್ಲ. ಬರಿಯ ಸಂಭ್ರಮಿಸಬೇಕು. ಮಕ್ಕಳ ಅನುದಿನದ ಬೇಕುಬೇಡಗಳ ಪೂರೈಸುತ್ತ, ಹಲವು ಒತ್ತಡಗಳ ಸಹಿಸುತ್ತ ಬದುಕಬೇಕು. ತಾಯಿಗೊಂದು ಅಲಂಕಾರಿಕ ದಿನ, ಸ್ಥಾನ ಕೊಟ್ಟುದಕ್ಕೆ ಧನ್ಯಳಾಗಬೇಕು. ಇಷ್ಟಾದರೂ ಯಾವ ಮಕ್ಕಳ ಹೆಸರಿನಲ್ಲಾದರೂ ಅವರ ಅಮ್ಮನ ಹೆಸರಿರುವುದೇ? ಅಮ್ಮನ ಹೆಸರಿನಲ್ಲಿ ಅಜ್ಜಿಯ ಹೆಸರಿಲ್ಲ. ಅಜ್ಜಿಯ ಹೆಸರಲ್ಲಿ ಅವಳಮ್ಮನ ಹೆಸರಿಲ್ಲ. ಹೀಗೇ ಸಾವಿರಾರು ವರ್ಷಗಳಿಂದ ಹೆತ್ತರೂ, ಹೊತ್ತರೂ, ಹೆತ್ತುಹೆತ್ತು ಸತ್ತರೂ ತನ್ನ ಹೆಸರ ಗುರುತೇ ಇಲ್ಲದಂತೆ ಬಾಳಿ ಹೋದವರು ಮಹಿಳೆಯರು. ಅವಳ ಕುರುಹಿಲ್ಲವೆನ್ನುವುದು ಕೊರತೆಯೆಂದು ಯಾರಿಗೂ ಅನ್ನಿಸುವುದಿಲ್ಲ. ಸ್ವತಃ ತನ್ನ ತಾನೇ ಮರೆತ ಹೆಣ್ಣಿಗೂ.

ಸಮಾಜ ಹೀಗಿರುವಾಗ ಮಹಿಳೆ ತಾನು ಕಾಣೆಯಾಗದಿರಲು ಕುಟುಂಬವೆಂಬ ಗಾಣಕ್ಕೆ ಕಟ್ಟಿದ ಹಸುವಾಗದೇ ಹೊಸಿಲು ದಾಟಿ ಎಲ್ಲರಿಗೂ ಘನತೆಯ ಬದುಕು ದೊರೆಯಲೆಂದು ಕೈಜೋಡಿಸಬೇಕು. ಎಲ್ಲ ಸಂಬಂಧಗಳಿಗಿಂತ ಗಾಢವಾದದ್ದು ಸೋದರಿತ್ವ; ಅದುವೇ ಜಗದ ಎಲ್ಲ ಹೆಣ್ಣುಗಳ, ಮನುಷ್ಯರ ಒಗ್ಗೂಡಿಸಬಲ್ಲ ಶಕ್ತಿ; ಮೂರು ಜುಟ್ಟು ಸೇರದಿದ್ದ ಕಡೆಯೂ ಸಾವಿರ ಜಡೆಗಳು ಸೇರಬಲ್ಲವು ಎಂದು ಸಾಧಿಸಿ ತೋರಿಸಬೇಕು. ಲೋಕ ಶಾಂತಿಯಿಂದಿರಲು ಇದೊಂದೇ ದಾರಿ ಎಂದು ತಿಳಿಯಬೇಕು.

                                                                                                   ಡಾ. ಎಚ್. ಎಸ್. ಅನುಪಮಾ

(Published in Varthabharathi Daily on March 8th, 2024)

Saturday 24 February 2024

ಎ. ಅರುಳ್ ಮೌಳಿ, ಚೆನ್ನೈ

 



ಮದರಾಸು ಉಚ್ಚ ನ್ಯಾಯಾಲಯದಲ್ಲಿ 1988ರಿಂದ ನ್ಯಾಯವಾದಿಯಾಗಿರುವ ಎ. ಅರುಳ್ ಮೌಳಿ ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ಮತ್ತು ವಾಗ್ಮಿ. ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಳ್, ಸಾಮಾಜಿಕ ಚಿಂತನೆಗಳ ಕೌಟುಂಬಿಕ ಹಿನ್ನೆಲೆಯವರು. ಅವರ ತಂದೆ ತಮಿಳು ಭಾಷಾ ಪಂಡಿತರು. ತಾಯಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರಿಬ್ಬರೂ ಪೆರಿಯಾರ್ ಅವರ ಕಟ್ಟಾ ಅನುಯಾಯಿಗಳು. ತಮಿಳ್ ನಾಡನ್ ಎನ್ನುವವರು ತಮಿಳಿಗೆ ಅನುವಾದಿಸಿದ್ದ ಮನುಸ್ಮೃತಿಯನ್ನು ಪ್ರಕಟಿಸಿದ್ದರು. 

1968ರಲ್ಲಿ ನಾಲ್ಕು ವರ್ಷವಾಗಿದ್ದಾಗಲೇ ಸೇಲಂನಲ್ಲಿ ನಡೆದ ದ್ರಾವಿಡ ಕಳಗಂ ಸಭೆಯಲ್ಲಿ ಪೆರಿಯಾರರ ಎದುರು ಬಾಲೆ ಅರುಳ್ ಭಾಷಣ ಮಾಡಿದ್ದರು. 1978ರ ನಂತರ, 14 ವರ್ಷ ತುಂಬಿದ ಹುಡುಗಿಯಿರುವಾಗಲಿಂದ ದ್ರಾವಿಡ ಕಳಗಂ ಸಭೆಗಳಲ್ಲಿ ಅವರು ಮಾತನಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಸಮಾನ ಮನಸ್ಕರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಚರ್ಚೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರಸ್ತುತ ದ್ರಾವಿಡ ಕಳಗಂ ವಕ್ತಾರರಾಗಿ ಮಾಧ್ಯಮದ ಡಿಬೇಟುಗಳಲ್ಲೂ ಪಾಲ್ಗೊಳ್ಳುವ ಅರುಳ್, ಲಿಂಗಸೂಕ್ಷ್ಮತೆ, ಸ್ತ್ರೀವಾದಿ ಚಿಂತನೆ, ದ್ರಾವಿಡ ಚಿಂತನೆಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಈಗ ದ್ರಾವಿಡ ಕಳಗಂನ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯ ಕುರಿತು ನಡೆಯುವ ಹಲವಾರು ಸಭೆ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರಗಳಿಗೂ ಇದೇ ಉದ್ದೇಶಗಳಿಗೆ ಭೇಟಿ ನೀಡಿದ್ದಾರೆ. 

ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ತಮಿಳಿನಲ್ಲೇ ವಾದಿಸಬಯಸುವ ಅರುಳ್, ರಿಟ್, ಸೇವಾ ವಿಷಯಗಳು, ಸಿವಿಲ್ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಪ್ರಕರಣವು ಸಾಮಾಜಿಕವಾಗಿ ಪ್ರಮುಖವೆನಿಸಿದರೆ ಅದನ್ನು ತೆಗೆದುಕೊಂಡು ವಾದಿಸುತ್ತಾರೆ. 

ಸಮಾಜದಲ್ಲಿ ಎಲ್ಲ ತರಹದ ಅಸಮಾನತೆ ಅಳಿಯಲು, ಲಿಂಗ ಸಮಾನತೆ ನೆಲೆಯಾಗಲು, ಕಂಪ್ಯೂಟರ್ ಬಂದರೂ ಅದರಲ್ಲೂ ಜಾತಕ ನೋಡುವ ಮೌಢ್ಯ ಅಳಿಯಲು ಪೆರಿಯಾರ್ ಚಿಂತನೆಗಳು ಅತ್ಯಗತ್ಯ; ಬದುಕಿಗೆ ಬೇಕಿರುವುದು ಶಿಸ್ತೇ ಹೊರತು ಭಕ್ತಿಯಲ್ಲ ಎಂದು ನಂಬಿರುವ ಅರುಳ್ ಮೌಳಿ, ಇದೇ ಮಾರ್ಚ್ 8ರಂದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಮಹಿಳಾ ಚೈತನ್ಯ ದಿನ’ದ ಭಾಗವಾಗಿ ನಡೆಯಲಿರುವ ‘ಮಹಿಳಾ ಪ್ರಾತಿನಿಧ್ಯ: ಆಶಯ, ವಾಸ್ತವ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲು ಚೆನ್ನೈನಿಂದ ಬರಲಿದ್ದಾರೆ. 

ಬನ್ನಿ, ಅವರ ದನಿಗೆ ದನಿಗೂಡಿಸೋಣ.


ಸಬಾ ನಖ್ವಿ - ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

 



ಭಾರತೀಯ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಮೂರು ದಶಕಗಳಿಂದ ಸುದ್ದಿಮೂಲ ಕ್ಷೇತ್ರಕಾರ್ಯ, ಡೆಸ್ಕ್, ಮುಖ್ಯ ಚರ್ಚೆ, ಸಂವಾದಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಸಬಾ ನಖ್ವಿ ಅವರದು. ಇದುವರೆಗೆ 4 ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕಿಯೂ ಹೌದು. ಹಿರಿಯ ಪತ್ರಕರ್ತ, ಬರಹಗಾರ ಸಯೀದ್ ನಖ್ವಿ ಮತ್ತು ಅರುಣಾ ಅವರ ಮಗಳಾದ ಸಬಾ, ದೆಹಲಿಯ ಸಂತ ಸ್ಟೀಫನ್ ಕಾಲೇಜು ಮತ್ತು ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಬಳಿಕ ಪತ್ರಕರ್ತೆಯಾಗಿ ಕೆಲಸ ಆರಂಭಿಸಿ ಔಟ್‌ಲುಕ್ ನಿಯತಕಾಲಿಕದಲ್ಲಿ ಪೊಲಿಟಿಕಲ್ ಎಡಿಟರ್ ಆಗಿ 2015ರವರೆಗೆ ಕೆಲಸ ಮಾಡಿದರು. ಈಗ ಫ್ರಂಟ್‌ಲೈನ್, ದ ಹಿಂದೂ, ಟ್ರಿಬ್ಯೂನ್, ಸ್ಕ್ರೋಲ್.ಇನ್, ಟೆಲಿಗ್ರಾಫ್ ಮತ್ತಿತರ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿದ್ದಾರೆ. 

ಸಬಾ ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯಾಗಿದ್ದಾರೆ. ಇನ್ ಗುಡ್ ಫೆಯ್ತ್ (2012), ಕ್ಯಾಪಿಟಲ್ ಕಾಂಕ್ವೆಸ್ಟ್ (2015), ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ (2018), ಪಾಲಿಟಿಕ್ಸ್ ಆಫ್ ಜುಗಾಡ್: ಸ್ಯಾಫ್ರನ್ ಸ್ಟಾರ್ಮ್ (2019) ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಇನ್ ಗುಡ್ ಫೆಯ್ತ್’ ಒಬ್ಬ ಪತ್ರಕರ್ತೆಯಾಗಿ ಅವರು ಕಂಡುಕೊಂಡ ಭಾರತವಾಗಿದೆ. ಸಣ್ಣಪುಟ್ಟ ಊರುಗಳಲ್ಲಿ, ಜನಸಾಮಾನ್ಯರ ಉತ್ಸಾಹದಲ್ಲಿ, ಊರೆಲ್ಲ ಒಂದು ದೈವದ ಮೇಲಿಡುವ ವಿಶ್ವಾಸದಲ್ಲಿ ಸಹಬಾಳ್ವೆಯ, ಬಹುತ್ವದ ಭಾರತ ಇನ್ನೂ ಉಸಿರಾಡುತ್ತಿದೆ ಎಂದವರು ದಾಖಲಿಸಿದ್ದಾರೆ. ಬಂಗಾಳಿ ಮುಸ್ಲಿಮರ ಬನದೇವತೆ, ದೈವತ್ವಕ್ಕೇರಿಸಲ್ಪಟ್ಟ ಮಹಾರಾಷ್ಟ್ರದ ಶಿವಾಜಿ, ಶಿರಡಿ ಸಾಯಿಬಾಬಾರ ಮೂಲ, ಗುಡಿ-ದರ್ಗಾ ಎರಡೂ ಆಗಿರುವ ಅಸಂಖ್ಯ ತಾಣಗಳ ಒಳಹೊಕ್ಕು ಶೋಧಿಸಿರುವ ಸಬಾ, ಧಾರ್ಮಿಕ ಮೂಲಭೂತವಾದಕ್ಕೆ ಇಂತಹ ಯಾವುದೋ ಮೂಲೆಯಲ್ಲಿರುವ ಸಣ್ಣಪುಟ್ಟ ಶ್ರದ್ಧಾ ಕೇಂದ್ರಗಳೇ ಮದ್ದು ಎಂದು ನಂಬುತ್ತಾರೆ. ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಧರ್ಮಗಳು ಒಡೆಯುವುದನ್ನು ಇಂತಹ ತಾಣಗಳು ತಣ್ಣಗೆ ಹೇಗೆ ನಿರಾಕರಿಸಿ ಒಂದುಗೂಡಿಸುತ್ತವೆಂದು ತೋರಿಸುತ್ತಾರೆ. 

‘ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ’ ಪುಸ್ತಕದಲ್ಲಿ ಎರಡು ದಶಕಗಳ ಕಾಲ ಪತ್ರಕರ್ತೆಯಾಗಿ ಬಿಜೆಪಿ ಎಂಬ ಪಕ್ಷವನ್ನು ತಾವು ಗಮನಿಸಿ, ಹಿಂಬಾಲಿಸಿ, ಕಂಡುಕೊಂಡದ್ದನ್ನು ಸಬಾ ದಾಖಲಿಸಿದ್ದಾರೆ. ಸಮರ್ಥ ಮಹಿಳೆಯರನ್ನು ಅವರು ಮುನ್ನೆಲೆಗೆ ತಂದದ್ದನ್ನು ಗುರುತಿಸುತ್ತಾರೆ. ಹೊಂದಾಣಿಕೆ ಸರ್ಕಾರ ರಚಿಸಿದ ಸ್ಥಿತಿಯಿಂದ ಇವತ್ತು ಬಿಜೆಪಿಯು ಅಖಂಡ ಬಹುಮತ ಪಡೆದು ಯಜಮಾನಿಕೆ ಸ್ಥಾಪಿಸಿರುವವರೆಗಿನ ಬೆಳವಣಿಗೆಯನ್ನು ‘ವಸ್ತುನಿಷ್ಠ’ವಾಗಿ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅದು ಈ ಎರಡು ದಶಕಗಳಲ್ಲಿ ಭಾರತದಲ್ಲಾದ ಏಳುಬೀಳುಗಳ ಮೂಲವನ್ನು ಸ್ವತಃ ಕಂಡು ದಾಖಲಿಸಿರುವ ಕಥನವಾಗಿದೆ. ಇದುವರೆಗೆ ಹೊರಜಗತ್ತಿಗೆ ತಿಳಿದಿರದ ಹಲವು ವಿಷಯಗಳ ಬಗೆಗೆ ಹಾಸ್ಯದ ಲೇಪನದೊಂದಿಗೆ ಆಳವಾಗಿ, ವಿಷದವಾಗಿ ಬೆಳಕು ಚೆಲ್ಲಿದೆ. ವರದಿಗಾರಿಕೆಯ ಫಲವಾಗಿ ಲಭಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಬಿಜೆಪಿಯ ನಾಯಕರ ಜೊತೆಗಿನ ನಿರಂತರ ಸಂಪರ್ಕವನ್ನು ಬಳಸಿಕೊಂಡಿರುವ ಸಬಾ, ವಾಜಪೇಯಿ-ಅಡ್ವಾನಿಯ ಬಿಜೆಪಿಗೂ, ಮೋದಿ-ಶಾ ಕೇಸರಿ ಪಕ್ಷಕ್ಕೂ ಇರುವ ವ್ಯತ್ಯಾಸಗಳನ್ನು ಸ್ಫುಟವಾಗಿ ಗುರುತಿಸಿದ್ದಾರೆ. ಬಿಜೆಪಿ ಪಕ್ಷದ ಒಳಹೊರಗನ್ನು ‘ತಟಸ್ಥ’ವಾಗಿ ಸುದೂರದಿಂದ ಮಂಡಿಸಿದ್ದಾರೆ. ‘ಸಮಕಾಲೀನ ಚರಿತ್ರೆಯೊಳಗಿನ ಡೀಪ್ ಡೈವ್’ ಎಂದೇ ಈ ಹೊತ್ತಗೆಯನ್ನು ವಿಶ್ಲೇಷಿಸಲಾಗಿದೆ. ಆಬ್ಜೆಕ್ಟಿವ್ ಜರ್ನಲಿಸಂ (ವಸ್ತುನಿಷ್ಟ ಪತ್ರಿಕೋದ್ಯಮ) ತಮ್ಮ ನಿಲುವು ಎನ್ನುವ ಅವರು ತಮ್ಮ ಸಹವರ್ತಿಗಳಿಂದ ಇದೇ ಕಾರಣಕ್ಕೆ ಟೀಕೆಗೂ ಒಳಗಾಗಿದ್ದಾರೆ. 

ಎಲ್ಲ ಮತಧರ್ಮಗಳ ಮದುವೆಯ ಖಾಸಗಿ ಕಾನೂನುಗಳು ಹೆಣ್ಣನ್ನು ಕ್ಷುದ್ರಗೊಳಿಸುತ್ತವೆಂದು ನಾಗರಿಕ ವಿವಾಹವನ್ನು ಬೆಂಬಲಿಸುವ ಸಬಾ ತನ್ನ ಇಷ್ಟಾನಿಷ್ಟ ಅರಿಯುವ ಗೆಳೆಯನನ್ನು ಹುಡುಕಿಕೊಂಡಿದ್ದಾರೆ. ಬಂಗಾಳದ ಸಂಜಯ್ ಭೌಮಿಕ್ ಅವರ ಬಾಳಸಂಗಾತಿ. ಮಗಳು ಸಾರಾ ಭೌಮಿಕ್. ದೇಶದಲ್ಲಿ ಸಾವಿರಾರು ಜನ ಜಾತಿ, ಮತ, ಲಿಂಗತ್ವ ಪೂರ್ವಗ್ರಹದಿಂದ ಬಳಲುತ್ತಿರುವಾಗ ಅದನ್ನೆಲ್ಲ ತಿಳಿಸಲು ಪತ್ರಕರ್ತೆಯಾಗಿ ತನಗೆ ಅವಕಾಶ ಮತ್ತು ಧ್ವನಿ ಸಿಕ್ಕಿದೆ; ಎಂದೇ ತಾನು ತನ್ನ ಕತೆ ಹೇಳುವುದಕ್ಕಿಂತ ಜನರ ಕತೆಗಳನ್ನು ಹೇಳಲೆಂದು ಇರುವುದಾಗಿ ಸಬಾ ಭಾವಿಸಿದ್ದಾರೆ. ತಮ್ಮ ನೇರನುಡಿಯ ಕಾರಣಕ್ಕೆ ದಿನನಿತ್ಯ ವೈಯಕ್ತಿಕವಾದ ಸವಾಲುಗಳನ್ನೆದುರಿಸುತ್ತ ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದೆಗೊಳಗಾಗಿದ್ದಾರೆ. ಆದರೂ ತಾನು ಭಾರತೀಯ ಮುಸ್ಲಿಂ ಎನ್ನುವುದು ಕೆಲಸಕ್ಕೆ ಅಡ್ಡಿ ಬಂದಿಲ್ಲ; ತಾನು ಬಲಿಪಶು ಅಲ್ಲ ಎಂದುಕೊಳ್ಳುವ ದಿಟ್ಟೆ ಆಕೆ.

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಬಾ ನಖ್ವಿ ದೆಹಲಿಯಿಂದ ಬರಲಿದ್ದಾರೆ. ಬನ್ನಿ, ಅವರೊಂದಿಗೆ ನಾವೂ ದನಿಗೂಡಿಸೋಣ. ಜೊತೆಜೊತೆಗೆ ಹೆಜ್ಜೆ ಹಾಕೋಣ.    


Dr G V Vennela ಡಾ. ಜಿ. ವಿ. ವೆನ್ನೆಲ

 



ಸಿಕಂದರಾಬಾದಿನಲ್ಲಿ ವಾಸಿಸುತ್ತಿರುವ ಡಾ. ಜಿ. ವಿ. ವೆನ್ನೆಲ (ಗುಮ್ಮಾಡಿ ವಿಠ್ಠಲರಾವ್ ವೆನ್ನೆಲ) ಉದಯೋನ್ಮುಖ ರಾಜಕಾರಣಿಯಾಗಿದ್ದಾರೆ. ಹೋರಾಟಗಾರರ, ಜನಸಮುದಾಯಗಳ ಮನದಲ್ಲಿ ‘ಗದ್ದರ್’ ಎಂದು ಜನಪ್ರಿಯರಾಗಿರುವ ಜನಕವಿ, ಕ್ರಾಂತಿಕಾರಿ ಹಾಡುಗಾರ ಗದ್ದರ್ ಮತ್ತು ವಿಮಲಾ ಅವರ ಮಗಳು ವೆನ್ನೆಲ. ಕ್ರಾಂತಿಯ ಕನಸಿನ ತಂದೆ ಆಳುವವರ ಕೆಂಗಣ್ಣಿಗೆ ಗುರಿಯಾಗಿ, ಭೂಗತರಾಗಿ, ಕುಟುಂಬದವರಿಗೂ ಎಲ್ಲಿರುವರೆಂಬ ಸುಳಿವು ಸಿಗದಂತೆ ಬದುಕಬೇಕಿದ್ದ ದಿನಗಳಲ್ಲಿ ತಾಯಿ ವಿಮಲಾ ತಮ್ಮ ಮಕ್ಕಳನ್ನು ಅತ್ಯಂತ ಕಷ್ಟದಿಂದ, ಜತನದಿಂದ ಬೆಳೆಸಿದರು. ಪದೇಪದೇ ಮನೆ, ವಿಳಾಸ, ಉದ್ಯೋಗ ಬದಲಿಸುತ್ತ ತಮ್ಮ ಮತ್ತು ಮಕ್ಕಳ ಪತ್ತೆ ಸಿಗದಂತೆ ಸುರಕ್ಷಿತವಾಗಿರುವಂತೆ ನೋಡಿಕೊಂಡರು. ಪ್ರತಿದಿನವೂ ನೋಡಲು, ಮಾತನಾಡಲು ತಂದೆ ಸಿಗದಿದ್ದರೂ  ಅವರ ಪ್ರಭಾವದಲ್ಲಿ ವೆನ್ನೆಲ ಮತ್ತು ಸೋದರರು ಬೆಳೆದರು. 

ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಅಭದ್ರ ಪರಿಸ್ಥಿತಿ ಎದುರಿಸುತ್ತ ಬೆಳೆದರೂ ವೆನ್ನೆಲ ಓದಿನಲ್ಲಿ ಸದಾ ಮುಂದಿದ್ದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನೂ, ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಪಿಎಚ್‌ಡಿಯನ್ನೂ, ಸ್ಕೂಲ್ ಮ್ಯಾನೇಜ್‌ಮೆಂಟಿನಲ್ಲಿ ಪಿಜಿ ಡಿಪ್ಲೊಮಾವನ್ನೂ ಪಡೆದರು. ಸಮಸಮಾಜದ ಸಾಕಾರಕ್ಕಾಗಿ ತಂದೆ ಗದ್ದರ್ ಸಿಕಂದರಾಬಾದಿನ ಅಲವಾಳದಲ್ಲಿ ಬಡಮಕ್ಕಳಿಗೆ ಉಚಿತ, ಉತ್ತಮ ಶಿಕ್ಷಣ ನೀಡುವ ಕನಸಿನಿಂದ ಆರಂಭಿಸಿದ ಮಹಾಬೋಧಿ ವಿದ್ಯಾಲಯದಲ್ಲಿ ೧೮ ವರ್ಷಗಳ ಹಿಂದಿನಿಂದ ಬೋಧಿಸುತ್ತಿದ್ದಾರೆ. 10 ವರ್ಷಗಳಿಂದ ಶಾಲೆಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ತಮ್ಮ ತಂದೆಯ ಮರಣಾನಂತರ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ವೆನ್ನೆಲ, ಸಿಕಂದರಾಬಾದಿನ ಕಂಟೋನ್ಮೆಂಟ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರ ಎದುರು ಐದು ಬಾರಿ ಎಂಎಲ್‌ಎ ಆಗಿದ್ದ ಸಾಯಣ್ಣ ಅವರ ಮಗಳು ಲಾಸ್ಯ ನಂದಿತಾ ಎಂಬ ಇಂಜಿನಿಯರ್ ಬಿಆರೆಸ್‌ನಿಂದ ಸ್ಪರ್ಧಿಸಿದರು. ಸಿಕಂದರಾಬಾದ್ ಎಂಬ ಮಹಾನಗರದಲ್ಲಿದ್ದರೇನು, ಕಂಟೋನ್ಮೆಂಟ್ ಪ್ರದೇಶದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎಂದರಿತ ವೆನ್ನೆಲ, ‘ಶಿಕ್ಷಣ, ಆರೋಗ್ಯ, ಉದ್ಯೋಗ’ ಎಂಬ ಮೂರಂಶಗಳನ್ನಿಟ್ಟುಕೊಂಡು ಚುನಾವಣೆಗಿಳಿದರು. ಕ್ಷೇತ್ರದ ತುಂಬ ಪಾದಯಾತ್ರೆ ಮಾಡಿ ಜನರ ನಾಡಿ ಮಿಡಿತ ಅರಿಯಲೆತ್ನಿಸಿದರು. ಆದರೂ 17 ಸಾವಿರಕ್ಕೂ ಮಿಕ್ಕಿ ಮತಗಳ ಅಂತರದಿಂದ ಲಾಸ್ಯ ಗೆದ್ದರು. (ಆದರೆ ಅವರು ಭೀಕರ ರಸ್ತೆ ಅಪಘಾತದಲ್ಲಿ ಇದೇ ಫೆಬ್ರುವರಿ 23ರಂದು ತೀರಿಕೊಂಡರು.) 43 ವರ್ಷದ ಎರಡು ಮಕ್ಕಳ ತಾಯಿ ವೆನ್ನೆಲ ತನ್ನ ತಂದೆಯ ಕನಸುಗಳನ್ನು ಸಾಕಾರಗೊಳಿಸಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ತನ್ನ ಗುರಿ ಎನ್ನುತ್ತಾರೆ. ಭ್ರಷ್ಟ, ಮೇಲ್ಜಾತಿಗಳ ಯಜಮಾನಿಕೆಗೆ ತುತ್ತಾಗಿರುವ, ಅಪರಾಧಿಗಳಿಂದ ತುಂಬಿ ಹೋಗಿರುವ ರಾಜಕೀಯ ರಂಗವನ್ನು ಸ್ವಚ್ಛಗೊಳಿಸಿ, ಬದಲಿಸುವುದೇ ತನ್ನ ಆಶಯ ಎನ್ನುತ್ತಾರೆ. ಅವರಿಗಿರುವ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ, ಶಿಕ್ಷಣಗಳ ಜೊತೆಗೆ ಜನಬೆಂಬಲವೂ ಒದಗಿ ಬಂದರೆ ಭವಿಷ್ಯದ ಉಜ್ವಲ ಜನ ನಾಯಕಿಯಾಗುವ, ಹೋರಾಟಗಾರ್ತಿಯಾಗವ ಸಾಧ್ಯತೆಗಳು ದಟ್ಟವಾಗಿವೆ. 

ಡಾ. ಜಿ. ವಿ. ವೆನ್ನೆಲ ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ಮಹಿಳಾ ಚೈತನ್ಯ ದಿನ’ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಿಕಂದರಾಬಾದಿನಿಂದ ಬರಲಿದ್ದಾರೆ. 

ಬನ್ನಿ, ಅವರೊಂದಿಗೆ ನಾವೂ ಕೈ ಜೋಡಿಸೋಣ.


Tuesday 20 February 2024

ಕಿತ್ತೂರ ಚೆನ್ನಮ್ಮನ ತವರು ಕಾಕತಿ



 

ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ನೋಡಬಾರದು ಅಂತ ಏಕೆ ಹೇಳಿದರು? ನನ್ನದು ಅನ್ನುವ ಏನನ್ನೂ  ಗುರುತಿಸಿಕೊಳ್ಳಲಾಗದ, ಇಟ್ಟುಕೊಳ್ಳಲಾಗದ, ಇರಲಾಗದ ತಾವನ್ನು ಮತ್ತೆಮತ್ತೆ ಲೋಕ ಕೆದಕದೆ ಇರಲಿ ಎಂದೇ? ನಂತರ ತಲುಪಿದ ಸ್ಥಿತಿಗೂ, ಅದರ ಮೂಲಕ್ಕೂ ಇರುವ ವ್ಯತ್ಯಾಸವನ್ನು ಗಮನಿಸದಿರಲೆಂದೇ? ಇಂಥ ವಿನೀತ ಆರಂಭದಿಂದ ಎಲ್ಲವೂ ಹೊರಡುವುದು ಎಂಬ ವಾಸ್ತವ ಸತ್ಯವನ್ನು ನಿರಾಕರಿಸಲೆಂದೇ!? 

ಕಿತ್ತೂರಿನ ರಾಣಿಯಾದ ಕಾಕತಿಯ ಚೆನ್ನಮ್ಮ ಹುಟ್ಟಿದ ಊರನ್ನೂ, ಮದುವೆಯಾಗಿ ಮಹಾವಲಸೆ ಹೋಗಿ ನೆಲೆಗೊಂಡ ಕಿತ್ತೂರನ್ನೂ ನಾವು ಇಟ್ಟಿರುವ ಸ್ಥಿತಿ ನೋಡಿದಾಗ ಈ ವಿಷಯ ಕೊರೆಯುತ್ತದೆ. ಕಿತ್ತೂರಿನ ಕೋಟೆ, ಅರಮನೆ, ಗುರುಮನೆ, ಅವಳ ಗಂಡನ ತಲೆಮಾರಿನ ಹಿರೀಕರ ಸಮಾಧಿ, ಮಠ, ಅವಳ ಸಮಾಧಿಯಿರುವ ತಾಣ, ಅವಳಿಂದ ಸೋಲನುಭವಿಸಿದ ಬ್ರಿಟಿಷ್ ಅಧಿಕಾರಿಗಳ ಮರಣ ಸ್ಮಾರಕಗಳು, ಲಾವಣಿ ಪದಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಅವು ‘ಅಭಿವೃದ್ಧಿ’ಗೊಂಡು ಅಷ್ಟಿಷ್ಟಾದರೂ ಸಂರಕ್ಷಿಸಲ್ಪಟ್ಟಿವೆ. ಆದರೆ ಚೆನ್ನಮ್ಮ ಎಂಬ ಹುಡುಗಿಯು ದಿಟ್ಟ, ಸ್ವಾತಂತ್ರ್ಯ ಪ್ರೇಮಿ ಸ್ವಾಭಿಮಾನದ ಹೆಣ್ಣಾಗಿ ಹೇಗೆ ಬೆಳೆದಳು ಎಂದು ಅವಳ ತವರನ್ನು ಶೋಧಿಸುವ, ತಿಳಿಯುವ ಆಸಕ್ತಿ ಸಮಾಜಕ್ಕಿಲ್ಲ ಎನ್ನುವುದು ಅವಳ ತವರು ಕಾಕತಿಯನ್ನು ನೋಡಿದರೆ ತಿಳಿಯುತ್ತದೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಗಂಡರಿಮೆಯ ಸಮಾಜ ನಮ್ಮದಾಗಿರುವುದರಿಂದ ಅವಳ ತವರು ಕಾಕತಿ ನಮಗೆ ನಗಣ್ಯ. (ಕನ್ನಡದ ಯಾವುದೇ ಹಿರಿಯ ಲೇಖಕಿಯ ಮನೆ/ಊರು/ತಾವು ಸ್ಮಾರಕವಾಗಿಲ್ಲದಿರುವುದು ಇದೇ ಕಾರಣದಿಂದ ಇರಬಹುದು.)

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೆಳಗಾವಿ ಕಳೆದು ಆರು ಕಿಲೋಮೀಟರ್ ಕ್ರಮಿಸಿ ನಂತರ ಸಿಗುವ ಕಾಕತಿಯಲ್ಲಿಳಿದರೆ ಸುಡುಬಿಸಿಲಿನ ಜೊತೆಗೆ ಇಂಥ ಹೆಣ್ಣು ವಾಸ್ತವಗಳೂ ಸುಡುತ್ತವೆ. 


ದೇಸಾಯರ ವಾಡೆಯಲ್ಲಿ ಹಾಕಿರುವ ಫಲಕ, ಕಾಕತಿ


ದೇಸಾಯರ ವಾಡೆ, ಕಾಕತಿ


ನಾಡ ಹೆಂಚಿನ ಮನೆ



ಮನೆಮನೆಯ ಗೋಡೆಗಳ ಮೇಲೂ ಶಿವಾಜಿ, ಚೆನ್ನಮ್ಮನಿಲ್ಲ.. 



ಕಾಕತಿ ಊರನ್ನು ಹೆದ್ದಾರಿಯು ಇಬ್ಭಾಗಿಸಿದೆ. ಪುಣೆಗೆ ಹೋಗುವ ದಿಸೆಯಲ್ಲಿ ಹೆದ್ದಾರಿಯಿಂದ ಎಡಬದಿಗೆ ನೆಲಕ್ಕಿಳಿದು ಹೋದರೆ ಮೊದಲಿಗೇ ‘ದೇಸಾಯರ ಗಲ್ಲಿ’ ಕಾಣುತ್ತದೆ. ಅಲ್ಲಿಂದ ಎಡಭಾಗದಲ್ಲಿ ಹೆಚ್ಚುಕಡಿಮೆ ಒಂದು ಕಿಲೋಮೀಟರ್ ಕ್ರಮಿಸಿದರೆ ಚೆನ್ನಮ್ಮ ಹುಟ್ಟಿದ ವಾಡೆಯಿದ್ದ ಸ್ಥಳವಿದೆ. ಬಲಬದಿಗೆ ಒಂದೆರೆಡು ಕಿಲೋಮೀಟರು ಕ್ರಮಿಸಿದರೆ ಪುಟ್ಟ ದಿಬ್ಬ. ಅದರ ಮೇಲೆ ಚೆನ್ನಮ್ಮ ಆಡಿ, ಕಲಿತು, ಬೆಳೆದ ಕೋಟೆಯಿದೆ. ಅದಷ್ಟೂ ಜಾಗ ‘ದೇಸಾಯರ ವಾಡೆ’ಯಾಗಿ ಅವರಿಗೇ ಸೇರಿತ್ತು. ಬರಬರುತ್ತ ಜನವಸತಿ ತಲೆಯೆತ್ತಿ ಈಗ ನೂರಾರು ಮನೆಗಳು ಕಿಕ್ಕಿರಿದಿವೆ. ಆ ಕಾಲದ ತುಣುಕೊಂದು ಇಲ್ಲಿ ಬಂದು ಬಿದ್ದಿದೆಯೋ ಎನ್ನುವಂತೆ ನಮ್ಮ ಕಡೆ ಕಾಣುವುದೇ ಅಪರೂಪವಾಗಿರುವ ಕಪ್ಪು ನಾಡಹೆಂಚಿನ ಮನೆಗಳು, ಮಣ್ಣುಗೋಡೆಗಳು, ಹಳೆಯ ವಾಸ್ತುಶೈಲಿಯ ಉಪ್ಪರಿಗೆ ಮನೆಗಳು ಕಾಣಸಿಗುತ್ತವೆ. ಬಹುತೇಕ ಮನೆಗಳ ಗೋಡೆಯ ಮೇಲೆ ಶಿವಾಜಿಯ ಚಿತ್ರ, ಶಿಲ್ಪವಿದೆ. 

ನಾವು ಹೋದ ಉರಿಬಿಸಿಲಿನ ಮಧ್ಯಾಹ್ನ ಮಹಿಳೆಯರು ಇನ್ನೇನು ತಾಟಿನ ಮುಂದೆ ಬಂದು ಕೂರಲಿರುವವರಿಗಾಗಿ ಅಟ್ಟುವ ತಯಾರಿಯಲ್ಲಿ ಸರಬರ ಓಡಾಡತೊಡಗಿದ್ದರು. ಮನೆಗಳಿಂದ ಹೊರಸೂಸುವ ಗಮಲುಗಳೇ ಅದನ್ನು ತಿಳಿಸುತ್ತಿದ್ದವು. ಮನೆಗಳ ಕಾಡಿನಲ್ಲಿ ಚೆನ್ನಮ್ಮ ಹುಟ್ಟಿದ ಜಾಗ ಯಾವುದು ಎಂಬ ಮಾರ್ಗಸೂಚಿ, ಫಲಕ ಯಾವುದೂ ಕಾಣದೇ ಹೋಯಿತು. ಮಗುವನ್ನು ಚಚ್ಚಿಕೊಂಡು ವಾಟೆ ಹಿಡಿದು ಸರಸರ ಬರುತ್ತಿದ್ದ ಒಬ್ಬಾಕೆಯನ್ನು ಕೇಳಿದರೆ ಕೈಯಾಡಿಸುತ್ತ ಹೋದಳು. ಮತ್ತೊಂದಿಬ್ಬರೂ ಅವಳಂತೆಯೇ ಗೊಣಗಿದರು. ಓಹೋ, ಹೆಂಗಸರಿಗೆ ಕೆಲಸದ ಗಡಿಬಿಡಿ. ಖಾಲಿ ನಿಂತಿದಾನಲ್ಲ ಇವನನ್ನ ಕೇಳುವಾ ಎಂದು ಬೈಕ್ ಒರಗಿ ನಿಂತ ಪೋರನ ಬಳಿ ಕೇಳಿದೆ. ಊರಿನಲ್ಲಿ ಬಹುತೇಕರು ಮರಾಠಿ ಮಾತನಾಡುವವರು, ಅದಕ್ಕೇ ನೀವು ಕೇಳಿದ್ದು ಅವರಿಗೆ ಅರ್ಥ ಆಗಿಲ್ಲವೆಂದು ದೂರದಿಂದಲೇ ನನ್ನ ಗಮನಿಸಿದ್ದ ಅವನು ತಿಳಿಸಿದ. 

ಅವನೆಂದಂತೆ, ‘ಅಲ್ಲಿಂದ ಇಲ್ಲೀಮಟ ಜಾಗಾ ಚನ್ನಮ್ಮ ರಾಣೇರ ಅಪ್ಪಾರು ದೇಸಾಯರದಾ ಆಗಿತ್ತಂತರಿ. ಅವರ‍್ಯಾರೂ ಬರವಲ್ಲಾಗ್ಯಾರ ಈಗ. ಅವ್ರ ವಾಡೇ ಸನೇಕ ಮಂದೀ ಕುರಿ ಮೇಸಾಕ್, ಕುಳ್ಳು ಒಣಗಿಸಾಕ್ ಹತ್ತಿದುರ್ರಿ. ಬರಬರತ ಬೇಲಿ ಹಾಕೊಂದು, ಮನಿ ಕಟಗೊಂದು ನಮದೆ ಅನಲಿಕ್ ಹತ್ತಿದುರ್ರಿ. ಅದಕ ದೇಸಾಯರ ಮಂತಾನದೋರು ಬಂದು ಕಂಪೌಂಡ್ ಬೇಲಿ ಹಾಕಿಶಿ, ಗೇಟ ಕೂಡಿಶಿ, ಬೀಗ ಹಾಕಿ ಹೋಗ್ಯಾರರಿ. ಯಾವಾಗರೆ ಒಮ್ ಬಂದು ಯಾರರೆ ಕಿತ್ತು ಒಗದಾರ ಹ್ಯಂಗಂತ ನೋಡಿ ಹೋಗತಾರ್ರಿ, ಆಟಾ. ಈಗಲ್ಲೆ ನೆಲ ಸಪಾಟೈತಿ, ಏನಿಲ್ಲ’. 

ಅವ ಏನಿಲ್ಲ, ಏನಿಲ್ಲ ಅಂದರೂ ದೇಸಾಯರ ವಾಡೆಯಿರುವ ತಾವಿನ ಗುರುತು ಪಡೆದು ಮುಂದೆ ಬಂದೆವು. ಅಲ್ಲಿ ಕುಸಿದ ಬಿದ್ದ ಕಲ್ಲುಮಣ್ಣುಗಳ ಪುಟ್ಟ ದಿಬ್ಬ ಕಂಡಿತು. ಅದೇ ಧೂಳಪ್ಪ ಗೌಡ ದೇಸಾಯರ ಮಗಳಾಗಿ (ಅವಳಮ್ಮನ ಹೆಸರೇನೋ!?) ಚೆನ್ನಮ್ಮ ಹುಟ್ಟಿ ಬೆಳೆದ ಜಾಗ. ರಾಣಿ ಚೆನ್ನಮ್ಮನೇನೂ ತೀರಾ ಹಿಂದಿನವಳಲ್ಲ. ೨೫೦ ವರ್ಷಗಳ ಹಿಂದೆ ಕಟ್ಟಿದ ಕಲ್ಲುಮಣ್ಣಿನ ಮನೆಗೆ ಒಳಗಿದ್ದು ರಕ್ಷಿಸುವವರ ಕಾಳಜಿಯೂ ಸಿಗದೇ; ಎದುರಾಳಿ ಮನುಷ್ಯರು-ಪ್ರಾಣಿಕ್ರಿಮಿಕೀಟಗಳು-ಗಿಡಗಂಟಿಗಳ ದಾಳಿ ಎದುರಿಸಲೂ ಸಾಧ್ಯವಾಗದೇ ಕುಸಿದು ಮಣ್ಣುಗುಪ್ಪೆಯಾಗಿ ಹೋಗಿದೆ.

ಚೆನ್ನಮ್ಮನು ಅಕ್ಷರಾಭ್ಯಾಸ, ಕುದುರೆ ಸವಾರಿ, ಯುದ್ಧ ವಿದ್ಯೆಗಳ ಕಲಿತದ್ದು ಅಲ್ಲಿಂದ ಸೀದಾ ನೇರ ಮತ್ತೊಂದು ದಿಕ್ಕಿಗೆ ಹೋದರೆ ಕಾಣುವ ‘ಕಿಲ್ಲಾದಾಗ’. ‘ಹೀಂಗ ಸೀದಾ ಹೋಗರಿ. ಡೆಡ್ ಎಂಡಿನ್ಯಾಗ ಕಿಲ್ಲಾದ ಮೆಟ್ಟಿಲು ಸಿಗತಾವ’ ಅಂದರು. ಕಿರಿದಾದ ರಸ್ತೆಯ ಎರಡೂ ಬದಿ ಇರುವ ಮನೆಗಳ ಹಾದು ಸಣ್ಣ ಗುಡ್ಡದ ಬುಡ ತಲುಪಿದೆವು. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳು. ಎಲ್ಲೆಂದರಲ್ಲಿ ಗುಪ್ಪೆ ಬಿದ್ದ ಕಸದ ರಾಶಿ. 

‘ಅಲ್ಲಿ ಮೇಲೆ ಏನೂ ಇಲ್ಲ, ಒಂದು ಕಡೆ ಸ್ವಲ್ಪ ಕಿಲ್ಲಾದ ಗೋಡೆ ಅದಾವ, ಒಂದು ಗುಹೆ ತರಾ ಐತಿ. ಕಲ್ಲು, ಗ್ವಾಡೆ ಬೀಳಂಗಾಗ್ಯಾವ. ಹುಶಾರಿ ಮತ್ತ’ ಅಂದರೊಬ್ಬರು. ನಾನೆಂದೂ ನೋಡಿರದ ಕಪ್ಪು, ಕಡುಗೆಂಪಿನ ಹಕ್ಕಿಯೊಂದು ಪಟಪಟನೆ ಬಂದು ಜಾಲಿ ಗಿಡದ ಮೇಲೆ ಕೂತು ಏನೋ ಕಿಲಕಿಲಕಿಲನುಲಿದು ಪಟ್ಟನೆ ಹಾರಿಯೇ ಹೋಯಿತು. ಚೆನ್ನಮ್ಮ ಹಕ್ಕಿ ರೂಪಿಯಾಗಿ ಬಂದು ಉಲಿದು ಹೋದಳು. ‘ಇರುವುದೆಲ್ಲ ಬಿದ್ದು ಹೋಗಿರುವಾಗ ಏನೂ ಇಲ್ಲದ ಹಾಗೆಯೇ ಕಾಣುತ್ತದೆ. ಆದರೆ ಇಲ್ಲದ ಕಡೆಯೂ ಏನೆಲ್ಲ, ಎಷ್ಟೆಲ್ಲ ಇರುತ್ತದೆ!’ ಎಂದ ಪಿಸುನುಡಿಯ ದನಿ ಕೇಳಿದಂತಾಯಿತು.

ಅಲ್ಲಿ ದಿಬ್ಬದ ಮೇಲೆ ಎರಡು ಸುತ್ತಿನ ಗೋಡೆಗಳು ಚಿಕ್ಕ ಆವಾರ ಸೃಷ್ಟಿಸಿವೆ. ಆವರಣದೊಳಗೊಂದು ಸಣ್ಣ ನೀರಿನ ಮೂಲವಿದೆ. ದೂರದೂರದವರೆಗೆ ಬಯಲು, ಗುಡ್ಡ, ಜೀವಾದಿಗಳ ಚಲನವಲನ ಕಾಣಬಹುದಾದಂತಹ ಐನಾತಿ ಜಾಗವೊಂದು ಪಶ್ಚಿಮ ದಿಕ್ಕಿನಲ್ಲಿದೆ. ಅದರ ತುದಿಗೆ ಬುರುಜು ಇದೆ. ಆ ಸ್ಥಳದಲ್ಲಿ ಎಲ್ಲ ವಿದ್ಯೆಗಳನ್ನು ಚೆನ್ನೆ ಕಲಿತಳು. 

ಅಲ್ಲಿನ ಇತಿಹಾಸದ ಬಗೆಗೆ ತಿಳಿಸುವ ಫಲಕ ನಿಲ್ಲಿಸುವುದಕ್ಕಾಗಲೀ, ಸ್ಮಾರಕವೆಂದು ಸಂರಕ್ಷಿಸುವ ಮನಸ್ಸಾಗಲೀ ಯಾರಿಗೂ ಇದ್ದಂತಿಲ್ಲ. ಕಿತ್ತೂರು ಚೆನ್ನಮ್ಮ ಅಂದದ್ದೇ ಕುದುರೆಯ ಮೇಲೆ ಕತ್ತಿ ಹಿರಿದು ಕೂತ ರಾಣಿ ನೆನಪಾಗುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದ ಹಾಡು ಗುಂಯ್ಞ್‌ಗುಡುತ್ತದೆ. ಅವಳು ಹುಟ್ಟಿದ ಊರಿನಲ್ಲಿ ಅವಳದೊಂದು ಮೂರ್ತಿ ನಿಲ್ಲಿಸಿ, ಕಟ್ಟೆ ಕಟ್ಟಿ, ತನ್ನ ಹೊಣೆ ಮುಗಿಯಿತು ಎಂದು ಆಳುವವರ್ಗ ಅಂದುಕೊಂಡಿದೆ. ವರ್ಷದ ಸೂಚಿತ ದಿನಗಳಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವಳನ್ನೊಂದು ಜಾತಿಗೆ ಕಟ್ಟಿ ಹಾಕಿ..

ಚಿನ್ನ ಅಮೂಲ್ಯ. ಎಲ್ಲರಿಗೂ ಗೊತ್ತಿದೆ. ಆದರೆ ಮಣ್ಣು ಅದಿರಿನಿಂದ ಹೊನ್ನು ಹೇಗೆ ಬಂತು ಎನ್ನುವುದರ ಬಗೆಗೆ ಅಸೀಮ ಅಜ್ಞಾನ, ಅಸಡ್ಡೆಯಿದೆ.

                                                                                                      ಡಾ. ಎಚ್. ಎಸ್. ಅನುಪಮಾ

                                                                                                              


Tuesday 9 January 2024

CSMVS Mumbai - ಕಳೆದ ಕಾಲದ ಸಾಕ್ಷಿ: ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯ, ಮುಂಬಯಿ

 

ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ, ಮುಂಬಯಿ

ಋತು ಹೊರಳುತ್ತಿದೆ. ಪ್ರತಿ ಬಾರಿ ಒಂದಷ್ಟು ಹೊಸದನ್ನು ಹೊತ್ತು ತರುತ್ತಿದೆ. ಹಳೆಯದರ ಕುರುಹು ಉದುರಿದ ಎಲೆಯ ತೊಟ್ಟು ಅಂಟಿದ ಗುರುತಿನಲ್ಲಿ, ಮರದ ಕಾಂಡದೊಳಗೆ ಸೇರಿ ಹೋದ ವರ್ತುಲದಲ್ಲಿ ಕಾಣದಂತೆ ಅಡಗಿರುತ್ತವೆ. ಕಾಣದ ಕಾಲ ಸಾಕ್ಷಿಗಳ ಕಾಣುವ ಹಂಬಲದಿಂದ ಚರಿತ್ರೆಯ ಪುಟಗಳಲ್ಲಿ ನಡೆದಾಡಿ ಬಂದೆ. ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಬಳಿಯಿರುವ ‘ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ’ ಅಥವಾ ‘ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ’ದ ನೆಲದೈವಗಳ ಭೇಟಿ ಮಾಡಿದೆ. ‘ಹೇಗಿದ್ದ ನಾವು ಹೀಗಾದ’ ಚರಿತ್ರೆಯ ಅರುಹುತ್ತ, ಬಾಳಿಹೋದ ಕಾಲದ ವೈಭವ, ಸವಾಲು, ಅಚ್ಚರಿ, ದುಃಖಕ್ಕೆ ಸಾಕ್ಷಿಯಾದ ಎಪ್ಪತ್ತು ಸಾವಿರ ವಸ್ತುಗಳನ್ನು ಒಡಲುಗೊಂಡ ವಸ್ತುಸಂಗ್ರಹಾಲಯವನ್ನು ಒಮ್ಮೆ ಸುತ್ತಿ ಬರಲು ದಿನವಿಡೀ ಬೇಕು. ಬರಿದೆ ‘ನೋಡಲು’ ವಾರಗಳೇ ಬೇಕಾದಾವು. ಅದು ರೂಪುಗೊಂಡ ಕಥನವು ಇತಿಹಾಸದ ಒಂದು ಅಧ್ಯಾಯಕ್ಕೆ ಸರಿ ಮಿಗಿಲು. 

ಕ್ರಿ. ಶ. 1905ರಲ್ಲಿ ವೇಲ್ಸ್ ರಾಜಕುವರ ಮುಂಬಯಿಗೆ ಬಂದ ನೆನಪಿಗೆ ವಸ್ತುಸಂಗ್ರಹಾಲಯವನ್ನು ತೆರೆಯಬೇಕೆಂದು ನಾಗರಿಕರು ಯೋಚಿಸಿದರು. ಫಿರೋಜ್ ಶಾ ಮೆಹ್ತಾ, ಬದ್ರುದ್ದೀನ್ ತ್ಯಾಬ್ಜಿ, ಜಸ್ಟಿಸ್ ಚಂದಾವರ್ಕರ್, ಸಸೋನ್ ಡೇವಿಡ್, ನರೋತ್ತಮದಾಸ್ ಗೋಕುಲದಾಸ್ ಮುಂತಾದವರು ‘ರಾಯಲ್ ವಿಸಿಟ್ ಮೆಮೊರಿಯಲ್ ಫಂಡ್’ ಸ್ಥಾಪಿಸಿದರು. ಸಾರ್ವಜನಿಕ ದೇಣಿಗೆ ಮತ್ತು ಬಾಂಬೆ ಪ್ರೆಸಿಡೆನ್ಸಿ ಸರ್ಕಾರದ ನೆರವಿನಿಂದ ಯೋಜನೆ ಸಿದ್ಧವಾಯಿತು. ವಿನ್ಯಾಸ ರೂಪಿಸಲು ಮುಕ್ತ ಸ್ಪರ್ಧೆ ನಡೆದು (ಮುಂದೆ ಗೇಟ್ ವೇ ಆಫ್ ಇಂಡಿಯಾ ವಿನ್ಯಾಸಗೊಳಿಸಿದ) ಸ್ಕಾಟಿಶ್ ವಾಸ್ತುಶಿಲ್ಪಿ ಜಾರ್ಜ್ ವಿಟೆಟ್ ಯಶಸ್ವಿಯಾದನು. ಮುಂಬೈ ದ್ವೀಪದ ತುತ್ತತುದಿಯ ಪ್ರದೇಶದಲ್ಲಿ ಭೂಮಿ ದೊರೆಯಿತು. ಕುರ್ಲಾ ಪ್ರದೇಶದ ಬಸಾಲ್ಟ್ ಶಿಲೆ ಬಳಸಿ ನಿರ್ಮಾಣ ಕಾರ್ಯ ನಡೆಯಿತು. ಬಿಜಾಪುರದ ಗೋಲ್‌ಗುಂಬಜ್, ಗೋಲ್ಕೊಂಡ ಕೋಟೆ, ಮುಘಲ್-ಮರಾಠಾ-ಜೈನ ವಾಸ್ತುಶಿಲ್ಪಗಳ ಮಿಶ್ರಣವಾದ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಕಟ್ಟಡ ಕಟ್ಟಲಾಯಿತು. 


1915ರ ಹೊತ್ತಿಗೆ ಸಿದ್ಧವಾದರೂ ಮೊದಲ ಮಹಾಯುದ್ಧದ ಕಾರಣ ಮಕ್ಕಳ ಕಲ್ಯಾಣ ಕೇಂದ್ರವಾಗಿ, ಮಿಲಿಟರಿ ಆಸ್ಪತ್ರೆಯಾಗಿ ಕಟ್ಟಡ ಬಳಕೆಯಾಯಿತು. 1920ರಲ್ಲಿ ಟ್ರಸ್ಟಿನ ಸುಪರ್ದಿಗೆ ಬಂತು. ಮುಂಬಯಿಯ ಸಿರಿವಂತರು, ಕಲಾಸಕ್ತರು, ಸ್ಥಳೀಯ ನಿವಾಸಿಗಳು, ಪಾರ್ಸಿ ವ್ಯಾಪಾರಸ್ಥರು ದೇಣಿಗೆ, ತಮ್ಮ ವಸ್ತು ಸಂಗ್ರಹಗಳನ್ನು ಉದಾರವಾಗಿ ನೀಡಿದರು. ವಿಶಿಷ್ಟ ವಸ್ತುಗಳ ಖರೀದಿಯೂ ನಡೆಯಿತು. ಒಂದೆಡೆ ಮುಂಬಯಿಯಲ್ಲಿ 1922ರಲ್ಲಿ ವೇಲ್ಸ್‌ನ ರಾಜಕುವರ (ಐದನೆಯ ಜಾರ್ಜ್ ದೊರೆ) ಮತ್ತೆ ಬಂದಾಗ ಬ್ರಿಟಿಷ್ ರಾಜಸತ್ತೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರ ಹರತಾಳ, ಪ್ರದರ್ಶನಗಳು ಏರ್ಪಾಟಾದರೆ ಮತ್ತೊಂದೆಡೆ ವಸ್ತುಸಂಗ್ರಹಾಲಯ ಉದ್ಘಾಟನೆಯಾಯಿತು. 

ಅಲ್ಲಿ ಕಲೆ, ಪುರಾತತ್ವಶಾಸ್ತ್ರ, ನ್ಯಾಚುರಲ್ ಹಿಸ್ಟರಿಯ ಮೂರು ವಿಭಾಗಗಳಿವೆ. ಆರು ಭಾಷೆಗಳಲ್ಲಿ ಆಡಿಯೋ ವಿವರಣೆ ವ್ಯವಸ್ಥೆಯಿದೆ. ರಾಜ್ಯ ಸರ್ಕಾರ ಮತ್ತು ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ಧನಸಹಾಯದೊಂದಿಗೆ ನಡೆಯುತ್ತಿದ್ದು 1998ರಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ’ ಎಂದು ಹೆಸರು ಬದಲಾಗಿದೆ. 



ಒಳಹೊಕ್ಕ ಕೂಡಲೇ ಒಂಬತ್ತನೆಯ ಶತಮಾನದ ಮಧ್ಯಪ್ರದೇಶದ ಬೃಹತ್ ಯಜ್ಞ ವರಾಹ ಎದುರುಗೊಳ್ಳುತ್ತದೆ. ಮುಖ್ಯ ಗುಂಭದ ಕೆಳಗಿನ ವಿಶಾಲ ಆವರಣದ ಮೂರು ಮೂಲೆಗಳಲ್ಲಿ ಬೋಧಿಸತ್ವ ಮೈತ್ರೇಯ ಮತ್ತು ಗ್ರೀಸ್‌ನ ಡಯೋನಿಸಸ್; ಈಜಿಪ್ಟಿನ ನದಿದೇವತೆ ಹಾಪಿ ಮತ್ತು ಭಾರತದ ಗಂಗೆ; ಈಜಿಪ್ಟಿನ ಸಿಂಹಮುಖಿ ದೇವ ಸೆಖ್ಮೆಟ್ ಮತ್ತು ಭಾರತದ ನರಸಿಂಹರು ವಿವರ, ವರ್ಣನೆ, ತುಲನೆಗಳೊಂದಿಗೆ ಜೊತೆಜೊತೆ ಕಾಣಿಸುತ್ತಾರೆ. ನಾಸಿಕ್‌ನ ಬೃಹತ್ ವಾಡೆಯೊಂದರ ಮರದ ಕಟಾಂಜನವನ್ನು ಅದಿರುವ ಹಾಗೆಯೇ ಆಕರ್ಷಕವಾಗಿ ಬಳಸಿ ಹತ್ತಿಹೋಗುವ ವ್ಯವಸ್ಥೆ ಮಾಡಲಾಗಿದೆ. ಮೂರು ಮಹಡಿಗಳಲ್ಲಿ ವಸ್ತುಗಳಿವೆ. ವಸ್ತುಗಳ ಹಿನ್ನೆಲೆ ಬಣ್ಣ, ಸ್ಥಳ, ಮೌನ ಎಲ್ಲವೂ ಅವುಗಳ ಪ್ರಾಚೀನತೆ, ಗಹನತೆ, ಮೌಲ್ಯವನ್ನು ತಿಳಿಸುವಂತಿವೆ. ಪುರಾತನ ಶಿಲ್ಪಗಳಿರುವ ಕಡೆ ಕತ್ತಲನ್ನು ಸೃಷ್ಟಿಸಿ, ಶಿಲ್ಪಗಳ ಮೇಲಷ್ಟೇ ಬೆಳಕು ಬೀಳುವಂತೆ ಮಾಡಿ ದೇಶಕಾಲದಾಚೆಯ ಅಲೌಕಿಕ ಆವರಣದ ಭಾಸವಾಗುತ್ತದೆ. 


ಶಿಲಾಯುಗದಿಂದ ಇಂದಿನವರೆಗೆ ಭಾರತ ರೂಪುಗೊಂಡ ಚರಿತ್ರೆಯನ್ನು ಪ್ರಸ್ತುತಪಡಿಸುವ ಶಿಲೆ, ಟೆರ್ರಾಕೋಟಾ, ಕಂಚು, ಮರದ ಸಾವಿರಾರು ವಿಗ್ರಹಗಳು; ಜಪಾನ್, ಚೀನಾದ ಆನೆದಂತ ಹಾಗೂ ಪಿಂಗಾಣಿ ವಸ್ತುಗಳು; ಗುಪ್ತ, ಮೌರ್ಯ, ಚಾಲುಕ್ಯ, ರಾಷ್ಟ್ರಕೂಟರ ವಸ್ತುಗಳು; ಕರ್ನಾಟಕದ ದುರ್ಗಾ, ಶೇಷಶಾಯಿ ವಿಷ್ಣು, ಉಮಾಮಹೇಶ್ವರ, ಬ್ರಹ್ಮ, ನಾಗರ, ವರುಣ; ಸ್ಥಳೀಯ ದೈವಗಳು, ವೈದಿಕ-ಬೌದ್ಧ-ಜೈನ-ಆದಿವಾಸಿ ಶಿಲ್ಪಗಳು; ಸಿಂಧೂ  ನಾಗರಿಕತೆಯ ಉತ್ಖನನದ ವಸ್ತುಗಳು; ಅಲಂಕಾರಿಕ ಕಲಾಪ್ರಕಾರಗಳು, ಕಿರುವರ್ಣ ಚಿತ್ರಗಳು; ಅಕ್ಬರನ ಶಿರಸ್ತ್ರಾಣ, ಕವಚ; ಹಲವು ರಾಜ್ಯ-ದೇಶ-ಕಾಲಮಾನದ ನಾಣ್ಯಗಳು; ಖ್ಯಾತನಾಮರ ವರ್ಣಚಿತ್ರಗಳು; ಓಲೆಗರಿ, ಶಿಲ್ಪದ ಪ್ರತಿಕೃತಿಗಳು; ನ್ಯಾಚುರಲ್ ಹಿಸ್ಟರಿ ವಿಭಾಗದಲ್ಲಿ ಮೈದುಂಬಿಕೊಂಡ ಜೀವಿಗಳು; ಮುಂಬಾದೇವಿಯ ಮುಂಬಯಿಯು ಬಂಬಯ್ (ಪೋರ್ಚುಗೀಸ್ ಭಾಷೆಯಲ್ಲಿ ಗುಡ್ ಹಾರ್ಬರ್) ಆಗಿ ಮತ್ತೀಗ ಮುಂಬಯಿ ಮಹಾನಗರವಾಗಿ ಬೆಳೆದ ಪರಿ; ಮನುಷ್ಯ ಸಮಾಜವನ್ನು ಬಾಧಿಸಿದ ರೋಗರುಜಿನ ಯುದ್ಧಗಳ ಚಿತ್ರ - ಓಹ್! ಏನುಂಟು ಏನಿಲ್ಲ!! 


ಪಾಕಿಸ್ತಾನದ ತಖ್ತ್-ಇ-ಬಹಿಯ ಗಾಂಧಾರ ಶೈಲಿಯ ಮೀಸೆಯಿರುವ ಬುದ್ಧನ (ಕ್ರಿ.ಶ. ೧-೩ನೆಯ ಶತಮಾನ) ತದ್ರೂಪ


ಆಂಧ್ರದ ಅಮರಾವತಿಯ ಎರಡನೆಯ ಶತಮಾನದ ಸ್ತೂಪವೊಂದರ ಪದ್ಮಪೀಠ


ಮಹಾರಾಷ್ಟ್ರದ ಭಂಢಾರಾ ಜಿಲ್ಲೆ ಪೌನಿಯಲ್ಲಿ ದೊರೆತ ಕ್ರಿ. ಶ. ಒಂದನೆಯ ಶತಮಾನದ ಹೀನಾಯಾನ ಸ್ತೂಪದ ಶಿಲಾಸ್ಥಂಭ

ಒರಿಸ್ಸಾದ ಹನ್ನೆರೆಡನೆಯ ಶತಮಾನದ ‘ಭೂಮಿಸ್ಪರ್ಶ ಮುದ್ರೆ’ಯ ಬುದ್ಧ

ಸಾವಿರಾರು ವಸ್ತುಗಳಲ್ಲಿ ಬುದ್ಧ ಸಂಬಂಧಿ ವಸ್ತುವಿಷಯಗಳು ಗಮನ ಸೆಳೆಯುತ್ತವೆ. ಪ್ರವೇಶ ದ್ವಾರದಲ್ಲೇ ಹಸಿರು ಹುಲ್ಲುಹಾಸಿನ ಮೇಲೆ ಮಲಗಿರುವ ಬುದ್ಧನ ತಲೆಯ ಬೃಹತ್ ಶಿಲ್ಪ ಕೈಬೀಸಿ ಕರೆಯುತ್ತದೆ. ಕೆಳಮಹಡಿಯಲ್ಲಿ ಪತನಗೊಂಡ/ನಾಶಗೊಳಿಸಲ್ಪಟ್ಟ ಸ್ತೂಪಗಳ ಉತ್ಖನನದಲ್ಲಿ ದೊರೆತ ಪ್ರಾಚೀನ ಬೌದ್ಧ ಶಿಲ್ಪಗಳ ನೆರವಿಯೇ ಇದೆ. ಜಾನ್ ಲಾಕ್‌ವುಡ್ ಕಿಪ್ಲಿಂಗ್ (ರುಡ್ಯಾರ್ಡ್ ಕಿಪ್ಲಿಂಗ್ ತಂದೆ) ರೂಪಿಸಿದ, ಪಾಕಿಸ್ತಾನದ ತಖ್ತ್-ಇ-ಬಹಿಯ ಗಾಂಧಾರ ಶೈಲಿಯ ಮೀಸೆಯಿರುವ ಬುದ್ಧನ (ಕ್ರಿ.ಶ. ೧-೩ನೆಯ ಶತಮಾನ) ತದ್ರೂಪವಿದೆ. ಆಂಧ್ರದ ಅಮರಾವತಿಯ ಎರಡನೆಯ ಶತಮಾನದ ಸ್ತೂಪವೊಂದರ ಪದ್ಮಪೀಠವಿದೆ. ಕನ್ಹೇರಿ ಗುಹೆಯ ಕ್ರಿ.ಶ. ಒಂದನೇ ಶತಮಾನದ ಮಹಾಸುತಸೋಮ ಜಾತಕ ಶಿಲ್ಪವಿದೆ. ಮಹಾರಾಷ್ಟ್ರದ ಭಂಢಾರಾ ಜಿಲ್ಲೆಯ ಪೌನಿಯಲ್ಲಿ ದೊರೆತ ಕ್ರಿ. ಶ. ಒಂದನೆಯ ಶತಮಾನದ ಸ್ತೂಪವೊಂದರ ಸುಂದರ ಶಿಲಾಸ್ಥಂಭವು ಬುದ್ಧನನ್ನು ಚಕ್ರ, ಸ್ತೂಪ, ಬೋಧಿವೃಕ್ಷದಿಂದ ಚಿತ್ರಿಸಿ ಹೀನಾಯಾನದ ಪ್ರಭಾವವನ್ನು ತಿಳಿಸುತ್ತದೆ. ಮೂರನೇ ಶತಮಾನದ ಗಾಂಧಾರದ ಬೋಧಿಸತ್ವ, ಐದನೆಯ ಶತಮಾನದ ಕಿರೀಟವಿರುವ ಚಕ್ರವರ್ತಿ ಬುದ್ಧರಿದ್ದಾರೆ. ಒರಿಸ್ಸಾದ ಹನ್ನೆರೆಡನೆಯ ಶತಮಾನದ ‘ಭೂಮಿಸ್ಪರ್ಶ ಮುದ್ರೆ’ಯ ಕರಿಕಲ್ಲ ಬುದ್ಧನಿದ್ದಾನೆ. ಬಲಗೈಯಲ್ಲಿ ಭೂಮಿ ಮುಟ್ಟುವಂತೆ ಪದ್ಮಾಸನದಲ್ಲಿ ಕುಳಿತ ಶಿಲ್ಪವು ಬುದ್ಧ ಸಾಕ್ಷಾತ್ಕಾರ ಪಡೆದ ಕ್ಷಣವನ್ನು ಪ್ರತಿನಿಧಿಸುವ ಭಂಗಿಯಾಗಿದೆ. 


ಮಹಾರಾಷ್ಟ್ರದ ನಾಲಾಸೊಪಾರಾದಲ್ಲಿ ದೊರೆತ ಅಶೋಕನ ಒಂಭತ್ತನೆಯ ಶಿಲಾಶಾಸನ

ಮಹಾರಾಷ್ಟ್ರದ ನಾಲಾಸೊಪಾರಾದಲ್ಲಿ ದೊರೆತ ಮೌರ್ಯ ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿರುವ ಅಶೋಕನ ಒಂಭತ್ತನೆಯ ಶಿಲಾಶಾಸನವಿದೆ. ಎಲ್ಲ ದಮ್ಮಗಳನ್ನೂ ಗೌರವಿಸಿ ಪ್ರೋತ್ಸಾಹಿಸುತ್ತಿದ್ದ ಸಾಮ್ರಾಟ ಅಶೋಕನು ದಮ್ಮ ಮತ್ತು ವಿನಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಹನ್ನೆರೆಡು ಭಿಕ್ಕುಗಳನ್ನು ಕಾಶ್ಮೀರ-ಗಾಂಧಾರ, ಮಹಿಷ ಮಂಡಲ(ಮೈಸೂರು), ಬನವಾಸಿ, ಅಪರಾಂತಕ(ಪಶ್ಚಿಮ ಭಾರತದ ಗುಜರಾತ್, ಕಛ್, ಸಿಂಧ್), ಮಹಾರಾಷ್ಟ್ರ, ಯವನ(ಗ್ರೀಸ್), ಹಿಮಾಲಯ(ಟಿಬೆಟ್), ಸುವರ್ಣಭೂಮಿ(ಥೈಲ್ಯಾಂಡ್, ಬರ್ಮಾ) ಮತ್ತು ಶ್ರೀಲಂಕಾ ಎಂಬ ಒಂಭತ್ತು ದೇಶಗಳಿಗೆ ಕಳಿಸಿದ. ಕೊಂಕಣ ಪ್ರದೇಶದ ಮುಖ್ಯ ಬಂದರು ಸೊಪಾರಾ (ಶೂರ್ಪರಕ, ಈಗ ನಾಲಾಸೋಪಾರಾ)ಗೆ ದಮ್ಮರಖ್ಖಿತ ಎಂಬ ಭಿಕ್ಕುವನ್ನು ಕಳಿಸಿದ್ದ. ನಾಲಾಸೊಪಾರಾದಲ್ಲಿ ಕುಸಿದ ಬೌದ್ಧ ಸ್ತೂಪದ ಅವಶೇಷಗಳಿವೆ. ಜಗನ್ನಾಥ ಮಂದಿರದ ಅಡಿಪಾಯ, ಸುತ್ತಮುತ್ತೆಲ್ಲ ಬೌದ್ಧ ವಸ್ತುಗಳು ಸಿಕ್ಕಿವೆ. ಸನಿಹದ ಹಳ್ಳಿಯೊಂದರ ಮುಸ್ಲಿಂ ರುದ್ರಭೂಮಿಯಲ್ಲಿ ಅಶೋಕನ ಎಂಟು, ಒಂಬತ್ತನೇ ಶಿಲಾಶಾಸನಗಳು ದೊರೆತಿವೆ. ಮುಂಬಯಿ ಸಂಗ್ರಹಾಲಯದಲ್ಲಿರುವ ಒಂಭತ್ತನೆಯ ಶಿಲಾಶಾಸನದ ಸರಳ ಅನುವಾದ ಇದು: 

‘ದೇವಾನಾಂಪ್ರಿಯ ಪ್ರಿಯದರ್ಶಿ ಹೇಳುತ್ತಾನೆ: ರೋಗಗಳು ಬಂದೆರಗಿದಾಗ, ಮಗನ/ಮಗಳ ಮದುವೆ ಮಾಡುವಾಗ, ಮಗು ಹುಟ್ಟಿದಾಗ, ಯಾತ್ರೆ ಮಾಡುವಾಗ ಗಂಡಸರು ಮತ್ತವರ ಹೆಂಡತಿ, ತಾಯಂದಿರು ಹಲವಾರು ಆಚರಣೆಗಳನ್ನು ಮಾಡುತ್ತಾರೆ. ಕ್ಷುಲ್ಲಕ, ನಿರುಪಯೋಗಿ ನೇಮಗಳನ್ನು ನಡೆಸುತ್ತಾರೆ. ಆಚರಣೆಗಳನ್ನು ಮಾಡಬೇಕು, ಆದರೆ ಅವರು ಮಾಡುತ್ತಿರುವವು ಕಡಿಮೆ ಪ್ರತಿಫಲ ನೀಡುವಂತಹವು. ಎಂದೇ ಸದಾಚಾರ(ನೈತಿಕತೆ)ಯನ್ನುದ್ದೀಪಿಸುವಂತಹ, ಫಲಪ್ರದವಾಗುವಂತಹ ಕೆಳಕಂಡ ಆಚರಣೆಗಳನ್ನಷ್ಟೇ ಮಾಡುವುದು ವಿಹಿತ: ಬಂದಿಗಳಿಗೆ, ದಾಸ-ದಾಸಿಯರಿಗೆ ಕರುಣೆ ತೋರುವುದು; ಹಿರಿಯರಿಗೆ ಗೌರವ ತೋರುವುದು; ಪಶುಗಳ ಬಗೆಗೆ ಕರುಣೆ, ಮೃದುಭಾವ ಹೊಂದುವುದು; ಬ್ರಾಹ್ಮಣ ಮತ್ತು ಶ್ರಮಣರಿಗೆ ಉದಾರವಾಗಿರುವುದು. ತಂದೆ, ಮಗ, ಮಾಲಕ, ಗೆಳೆಯ, ನೆರಹೊರೆಯವರೆಲ್ಲ ‘ಇದು ನೀತಿ, ಗುರಿ ತಲುಪುವವರೆಗೆ ಮಾಡಬೇಕಾದದ್ದು ಇಂತಹದನ್ನು’ ಎಂದು ತಿಳಿಯಬೇಕು.’ 

ಶಾಸನ ಓದಿ ಮುಂದೆ ಹೋದರೆ 5-6ನೆಯ ಶತಮಾನದ ಸಿಂಧ್ ಪ್ರಾಂತ್ಯದ ‘ಕಹುಜೊದಾರೊ ಸ್ತೂಪ’ (ಇಂದಿನ ಪಾಕಿಸ್ತಾನದ ಮಿರ್‌ಪುರ್‌ಖಾಸ್) ಉತ್ಖನನದ ವಸ್ತುಗಳು ಹೊಸಲೋಕಕ್ಕೆ ಕರೆದೊಯ್ಯುತ್ತವೆ. ಮೂವತ್ತು ಎಕರೆ ಜಾಗದಲ್ಲಿ ಗುಪ್ಪೆಬಿದ್ದ ಇಟ್ಟಿಗೆ ರಾಶಿಯನ್ನು ಸಿಂಧ್‌ನ ರೈಲುರಸ್ತೆ ಕಾಮಗಾರಿ ನಡೆಯುವಾಗ ಗಮನಿಸಲಾಯಿತು. ಬ್ರಿಟಿಷ್ ಕಮಿಷನರ್ ಜಾನ್ ಜೇಕಬ್ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಸೂಪರಿಂಟೆಂಡೆಂಟ್ ಹೆನ್ರಿ ಕಸಿನ್ಸ್‌ಗೆ ವಿಷಯ ತಿಳಿಸಿದ. ಮಿರ್‌ಪುರ್‌ಖಾಸ್‌ಗೆ ಬಂದ ಕಸಿನ್ಸ್ ದಿಬ್ಬದ ಉತ್ಖನನ, ವಸ್ತುಗಳ ದಾಖಲೀಕರಣದಲ್ಲಿ ಮುಳುಗಿಯೇ ಹೋದ. ಸ್ಥಳದ ಚಿತ್ರ, ನಕಾಶೆ, ಫೋಟೋ, ವರದಿಗಳನ್ನು ಪ್ರಕಟಿಸಿ ಸಿಂಧ್ ಪ್ರಾಂತ್ಯದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ.  

ಅದೇ ಹೆನ್ರಿ ಕಸಿನ್ಸ್ ಮುಂಬಯಿ ವಸ್ತುಸಂಗ್ರಹಾಲಯದ ಆರಂಭದ ಬುನಾದಿ ರೂಪಿಸಿದವರಲ್ಲಿ ಒಬ್ಬ. ಎಂದೇ ಅಲ್ಲೀಗ ಮಿರ್‌ಪುರ್‌ಖಾಸ್‌ನ ಕುಳಿತ ಭಂಗಿಯ ಐದು ಬುದ್ಧ ಶಿಲ್ಪಗಳು, ಅನುಯಾಯಿಯ ಶಿಲ್ಪ, ಜಾಂಭುಲ, ಕುಬೇರ ಮೊದಲಾಗಿ ೨೯೭ ಅಚ್ಚಿನ ಚಿತ್ರಗಳ ಹೊಂದಿದ ಟೆರ್ರಾಕೋಟ ಇಟ್ಟಿಗೆಗಳು, ಜಾತಕ ಕತೆಗಳಿರುವ ಕಲ್ಲಿನ ತುಂಡುಗಳಿವೆ. ಗುಪ್ತ-ಕುಶಾನರ ಕಾಲದ ಭಾರತ, ಬೌದ್ಧ ಧರ್ಮ, ಅರಬ್-ಗ್ರೀಸ್-ಸಿಂಧೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಗಳನ್ನು ಅರ್ಥ ಮಾಡಿಕೊಳ್ಳಲು ಅವು ಸಹಕಾರಿಯಾಗಿವೆ. 

‘ಕಹುಜೊದಾರೊ ಸ್ತೂಪ’ (ಇಂದಿನ ಪಾಕಿಸ್ತಾನದ ಮಿರ್‌ಪುರ್‌ಖಾಸ್) ಉತ್ಖನನದ ವಸ್ತುಗಳು




ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸತೊಡಗಿರುವ, ಹುಸಿ ವ್ಯಾಖ್ಯಾನಗಳಲ್ಲಿ ಸತ್ಯ ಮಸುಕಾದಂತೆ ಕಾಣಿಸುತ್ತಿರುವ ವರ್ತಮಾನ ಕಾಲದಲ್ಲಿ ಯುವ ಪೀಳಿಗೆಯನ್ನು ಕಲೆ, ಚರಿತ್ರೆಗಳ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಲು; ಅಂತಾರಾಷ್ಟ್ರೀಯ ಕಲೆ, ಸಂಗೀತ, ಚರಿತ್ರೆಗಳನ್ನು ಭಾರತದ ಜೊತೆಯಿಟ್ಟು ಅರಿಯಲು; ಅಂದಿನ ಮತ್ತು ಇಂದಿನ ಸಮಾಜ, ಸಂಸ್ಕೃತಿಯನ್ನು ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿ, ಚಿಂತನೆ, ಸಂದರ್ಭಗಳ ತಿಳಿಯಲು ವಸ್ತುಸಂಗ್ರಹಾಲಯಗಳು ಅವಕಾಶ ಕಲ್ಪಿಸುತ್ತವೆ. ಇದರ ಮಹತ್ವವನ್ನರಿತಿರುವವರು ಈ ವಸ್ತುಸಂಗ್ರಹಾಲಯದ ಚುಕ್ಕಾಣಿ ಹಿಡಿದಿರುವ ಕಾರಣ ಅದೀಗ ತನ್ನ ೬೦% ಬಜೆಟ್ ಅನ್ನು ಕಲಾ ಶಿಕ್ಷಣಕ್ಕಾಗಿ ವ್ಯಯಿಸುತ್ತದೆ. ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯಗಳೊಂದಿಗೆ ಸೇರಿ ಹೊಸಹೊಸ ಥೀಮುಗಳ ಪ್ರದರ್ಶನ ಏರ್ಪಡಿಸುತ್ತದೆ. ಆ ಮೂಲಕ ವಿದೇಶೀ ಕಲೆ, ಸಂಗೀತ, ವಸ್ತುಗಳನ್ನು ಭಾರತದ ಜೊತೆಯಿಟ್ಟು ಅರಿಯಲು ಹೊಸ ಅವಕಾಶ ಕಲ್ಪಿಸಿದೆ. ಪ್ರಸ್ತುತ ಗೆಟ್ಟಿ, ಬ್ರಿಟಿಷ್ ಮ್ಯೂಸಿಯಂ, ಬರ್ಲಿನ್ ಮ್ಯೂಸಿಯಂ ಮತ್ತು ಭಾರತದ ಇತರ ಮ್ಯೂಸಿಯಂಗಳ ಜೊತೆ ಸೇರಿ ಪ್ರದರ್ಶನವೊಂದನ್ನು ಏರ್ಪಡಿಸಿ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ವಿದೇಶಗಳಿಂದ ನೂರರಷ್ಟು ಬಹುಮುಖ್ಯ ವಸ್ತುಗಳು ಬಂದಿವೆ. ಪ್ರಾಚೀನ ಮತ್ತು ವರ್ತಮಾನದ ಸಂಸ್ಕೃತಿಯನ್ನು ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮೂರು ಸಂಗತಿಗಳ ಬಗೆಗೆ - 1. ಬದುಕಿನಲ್ಲಿ ಪ್ರಕೃತಿಯ ಪಾತ್ರ 2. ದೈವೀ ಸ್ವರೂಪ 3. ಸೌಂದರ್ಯ ಕುರಿತ ಮಾನದಂಡ-ಚಿಂತನೆಗಳ ಕುರಿತು ನಮ್ಮ ತಿಳಿವನ್ನು ಆಳಗೊಳಿಸಿಕೊಳ್ಳುವುದು ಅಂತಾರಾಷ್ಟ್ರೀಯ ಸಹಭಾಗಿತ್ವದ ಉದ್ದೇಶವಾಗಿದೆ. ಈ ಪ್ರದರ್ಶನ ೨೦೨೪ ಅಕ್ಟೋಬರ್‌ವರೆಗೆ ಇರುತ್ತದೆ. 

ಇಷ್ಟು ಹೇಳಿದ ಮೇಲೂ ಅಲ್ಲಿರುವ ಇತಿಹಾಸವೆಂಬ ಹಡಗಿನ ಒಂದು ಹಲಗೆಯನ್ನೂ ಅಕ್ಷರಗಳಲ್ಲಿ ಕಾಣಿಸಲು ಸಾಧ್ಯವಾಗಿಲ್ಲ. ಮ್ಯೂಸಿಯಮ್ಮಿನ ವಸಾಹತುಶಾಹಿ ಹೆಸರೇನೋ ಬದಲಾಯಿತು, ಆದರೆ ಸರ್ವಾಧಿಕಾರ ಹೇರುವ ಆಳ್ವಿಕೆ ಕೊನೆಗೊಂಡು ಜನತಂತ್ರ ಸಾಕಾರವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿಲ್ಲ. ಫ್ರಾನ್ಸಿಸ್ ಬೇಕನ್ ‘ಇತಿಹಾಸವೆಂದರೆ ತೇಲುವ ಹಲಗೆಯ ಕಂಡು ಮುಳುಗಿದ ಹಡಗನ್ನು ಕಲ್ಪಿಸುವುದು’ ಎನ್ನುತ್ತಾನೆ. ತೇಲುವ ಹಲಗೆಗಳನ್ನು ಅವಿರುವಂತೆ ನೋಡುವುದು, ಎಲ್ಲಿ ಹೇಗೆ ಯಾವ ಸ್ಥಿತಿಯಲ್ಲಿ ಸಿಕ್ಕಿದವೆಂದು ಅರಿಯುವುದು ಹಡಗನ್ನು ಕಲ್ಪಿಸಲು, ಅದರಲ್ಲಿ ಕಾಲಯಾನ ಕೈಗೊಳ್ಳಲು ತುಂಬ ಮುಖ್ಯ. 

ಎಂದೇ, ಹೊರಡಿ ಮುಂಬಯಿಗೆ. ವಸ್ತುಸಂಗ್ರಹಾಲಯದ ದಾರಿ ಮರೆಯದಿರಿ ಮತ್ತೆ. 

                                                                                                                ಡಾ. ಎಚ್. ಎಸ್. ಅನುಪಮಾ

(7-1-24, Prajavani)