Friday 25 September 2015

ಶೀನಾ ಬೋರಾ ಪ್ರಕರಣ: ಬಿಟ್ಟ ಸ್ಥಳ ತುಂಬಿ..




(ಶೀನಾ-ಇಂದ್ರಾಣಿ)

ಒಂದು ಮೆಸೇಜ್ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ:

‘ಕೇವಲ ಎರಡೇ ಎರಡು ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ, ಐಎಎಸ್ ಪರೀಕ್ಷೆ ಪಾಸು ಮಾಡಿ. ಉಳಿದ ಎಲ್ಲ ಪ್ರಶ್ನೆಗಳಿಗೆ ನೀವು ತಪ್ಪು ಉತ್ತರಿಸಿದರೂ ಅಥವಾ ಉತ್ತರಿಸದಿದ್ದರೂ ಪರವಾಗಿಲ್ಲ, ಈ ಎರಡು ಪ್ರಶ್ನೆಗೆ ಉತ್ತರಿಸಿ:
ಮೊದಲ ಪ್ರಶ್ನೆ: ಇಂದ್ರಾಣಿ ಮುಖರ್ಜಿಯ ನಿಖರವಾದ ವಂಶವೃಕ್ಷ ರಚಿಸಿ.
ಎರಡನೆ ಪ್ರಶ್ನೆ: ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?..’

ಇಲ್ಲಿ ಗೇಲಿಗೊಳಗಾಗಿರುವುದು ಆಧುನಿಕ ಕುಂತಿ ಇಂದ್ರಾಣಿ ಮುಖರ್ಜಿ. ಒಂದೂವರೆ ತಿಂಗಳಿನಿಂದ ಎಲ್ಲ ಸುದ್ದಿಮಾಧ್ಯಮಗಳಲ್ಲೂ ರಾರಾಜಿಸಿದ, ಹಲವು ‘ಮಾಜಿ’ ಎಂಬ ಪ್ರಿಫಿಕ್ಸ್ ಹೊಂದಿದ ಇಂದ್ರಾಣಿ ಮುಖರ್ಜಿ. ಮದುವೆಗೂ ಮುನ್ನ ಉಂಟಾದ ಸಾಂಗತ್ಯದ ಫಲವಾಗಿ ಹೆತ್ತ ಮಕ್ಕಳಿಬ್ಬರನ್ನು ಸಾವಿರಾರು ಮೈಲಿ ದೂರದಲ್ಲಿ ತನ್ನ ತಾಯ್ತಂದೆಯರ ಬಳಿ ಇಟ್ಟಿದ್ದಷ್ಟೆ ಅಲ್ಲ, ಹದಿವಯಸ್ಸು ಕಳೆದನಂತರ ಅವರು ತನ್ನೊಡನೆ ಇರಲು ಬಂದರೆ ಮಕ್ಕಳನ್ನು ತಮ್ಮತಂಗಿಯೆಂದು ಎಲ್ಲರಿಗು ಪರಿಚಯಿಸಿದ ಇಂದ್ರಾಣಿ ಮುಖರ್ಜಿ. ಯಾವ ಅನೂಹ್ಯ ಶಂಕೆಸಂಚುಗಳಲ್ಲಿ ಮುಳುಗಿಹೋದಳೋ, ಅಂತೂ ಕಣ್ಣಲ್ಲಿ ರಕ್ತವಿಲ್ಲದೆ  ತನ್ನ ಮಗಳನ್ನೇ ಕೊಂದ ಇಂದ್ರಾಣಿ ಮುಖರ್ಜಿ.

ದಿನದಿನಾ ಪತ್ತೇದಾರಿ ಧಾರಾವಾಹಿಯಂತೆ ಕಂತುಗಳಲ್ಲಿ ಬಿಚ್ಚಿಕೊಂಡ ಕೊಲೆಯ ವಿವರಗಳಿಂದ ಹತಭಾಗ್ಯೆ ಮಗಳು ಶೀನಾ ಬೋರಾ ಎಲ್ಲರ ಕಣ್ಣು ನೀರಾಡುವಂತೆ ಮಾಡಿದಳು. ಪ್ರಸ್ತುತ ಮಾಧ್ಯಮಗಳು ತಮ್ಮ ಪ್ರೈಂಟೈಂ ಅನ್ನು ಇದಕ್ಕೇ ಮೀಸಲಿಟ್ಟು ಒಂದಾದ ಮೇಲೊಂದು ಸ್ಫೋಟಕ ಸುದ್ದಿಗಳನ್ನು ದಿನನಿತ್ಯ ಹೊರಹಾಕಿದವು. ಇಂದ್ರಾಣಿ-ಪೀಟರರ ಮಹತ್ವಾಕಾಂಕ್ಷಿ ಯೋಜನೆ ಐಎನ್‌ಎಕ್ಸ್ ಎಂಬ ಮಾಧ್ಯಮ ಸಂಸ್ಥೆಯ ಹೆಸರು ಕೇಳದ ಸಾಮಾನ್ಯರೂ ಸಹಾ ಇದು ಥಳುಕಿನ ಲೋಕದ ದಗಲ್ಬಾಜಿ ಕೃತ್ಯವೆಂದೇ ಅಂದುಕೊಂಡರು. ಅವರು ನೋಡುತ್ತಿದ್ದ ಕಳಪೆ ಥ್ರಿಲ್ಲರ್‌ಗಳಿಗಿಂತ ಇದು ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ.

ಸಿನಿಮಾದಲ್ಲಿ ಆದಂತೆಯೇ ಈ ಕೇಸಿನಲ್ಲಿ ತನಿಖೆ, ಪರೀಕ್ಷೆ, ವರದಿ ಎಲ್ಲವೂ ಕರಾರುವಾಕ್ ಆಗಿ ನಡೆದು, ಇನ್ನೇನು ಈ ಕೊಲೆ ಕೇಸಿನ ಕೊನೆ ಬಂತೇ ಹೋಯಿತೆನ್ನುವಾಗ ಸಾವಿರಾರು ಕೋಟಿ ರೂಪಾಯಿ ಆಸ್ತಿ ತನಿಖೆ ಮತ್ತದರ ಲಿಂಕುಗಳನ್ನು ಹರಡತೊಡಗಿದ ದಕ್ಷ ಪೊಲೀಸ್ ಅಧಿಕಾರಿ ಎತ್ತಂಗಡಿಯಾದರು. ಖುದ್ದು ಆಸಕ್ತಿ ವಹಿಸಿ ಪ್ರಕರಣದ ಹೂರಣ ಬಯಲು ಮಾಡಿದ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ವರ್ಗಾವಣೆಯಾದರು. ಬಡ್ತಿ ಪಡೆದು ‘ಹೋಂಗಾರ್ಡ್ಸ್ ನಿರ್ದೇಶಕ’ ಎಂಬ ಅತ್ಯಂತ ನಿಷ್ಕ್ರಿಯ ಸ್ಥಾನಕ್ಕೆ ಕಳಿಸಲ್ಪಟ್ಟರು! ಸಾಲದೆಂಬಂತೆ ಕಾಲಮಿತಿಯನಿಟ್ಟುಕೊಂಡು ವಿಸ್ತೃತ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಪೊಲೀಸರಿಂದ ಆ ಕೇಸನ್ನು ಹಿಂಪಡೆದು ಸಿಬಿಐಗೆ ವರ್ಗಾಯಿಸಲಾಯಿತು!!




ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಆರಕ್ಷಕ ವ್ಯವಸ್ಥೆಯಲ್ಲಿ ಮಾರಿಯಾರಂಥ ಅಪರೂಪದ ಅಧಿಕಾರಿಗಳು ನ್ಯಾಯ ಸಿಗಬಹುದೆನ್ನುವ ಆಶಾಭಾವನೆ ಮೂಡಿಸುವಂತಿರುತ್ತಾರೆ. ಆದರೆ ಅಂಥವರ ಕೈಗಳನ್ನೂ ಕಟ್ಟಿ ಹಾಕುವ ಇಂಥ ಹುನ್ನಾರಗಳು ನ್ಯಾಯದಾನ ವ್ಯವಸ್ಥೆ ಕುರಿತು ಜನ ಸಿನಿಕರಾಗುವಂತೆ ಮಾಡುತ್ತವೆ. ಒಟ್ಟಾರೆ ಭಾರತದಲ್ಲಿ ಏನು ಮಾಡಿಯೂ ದಕ್ಕಿಸಿಕೊಳ್ಳಲು ಸಾಧ್ಯವಿದೆ ಎಂಬ ಭಾವನೆ ಬೆಳೆಯುತ್ತಿದೆ.

ಹಾಗಾಗಿಯೇ ಈ ಬರಹದಲ್ಲಿ ಎಷ್ಟು ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯಸೂಚಕ ಚಿಹ್ನೆ ಬಳಸಿದರೂ ಕಡಿಮೆಯೇ..


ಯಾರು ಈ ಇಂದ್ರಾಣಿ ಬೋರಾ ಯಾನೆ ಇಂದ್ರಾಣಿ ಖನ್ನಾ ಯಾನೆ ಇಂದ್ರಾಣಿ ಮುಖರ್ಜಿ?

೩೦ ವರ್ಷ ಕೆಳಗಿನ ಈಶಾನ್ಯ ಭಾರತದ ಒಂದು ಪುಟ್ಟ ಪಟ್ಟಣದ ಹುಡುಗಿ ಇಂದ್ರಾಣಿ. ಪಿಯುಸಿವರೆಗೆ ಕಲಿತ ಹುಡುಗಿ ಮುಂದೆ ಪದವಿ ಕಲಿಯಲು ಕೊಂಚ ದೂರದ ಶಿಲ್ಲಾಂಗ್ ಸೇರುತ್ತಾಳೆ. ಅಲ್ಲಿ ಒಬ್ಬಾತನ ಪರಿಚಯವಾಗುತ್ತದೆ. ಅಷ್ಟೇನೂ ಸಿರಿವಂತನಲ್ಲದ, ಸ್ಫುರದ್ರೂಪಿಯಲ್ಲದ, ಮಹತ್ವಾಕಾಂಕ್ಷಿಯಲ್ಲದ ವ್ಯಕ್ತಿ ಆತ. ಅವರಿಬ್ಬರು ನಾಲ್ಕು ವರ್ಷ ಒಟ್ಟಿಗೆ ವಾಸಿಸುತ್ತಾರೆ. ಹುಡುಗಿ ಮನೆಯವರಿಗೆ ತಿಳಿಯಿತೊ ಇಲ್ಲವೊ, ತಿಳಿದರೂ ಏನಾದರೂ ಹೇಳಿದರೋ ಇಲ್ಲವೋ ಅಂತೂ ಅವರಿಬ್ಬರೂ ಮದುವೆಯಾಗದೇ ಒಂದು ಹೆಣ್ಣು, ಒಂದು ಗಂಡು ಮಗುವಿನ ತಾಯ್ತಂದೆಯರಾಗುತ್ತಾರೆ. ತಾವು ಜೊತೆಜೊತೆಯಾಗಿ ನೋಡಿದ ಸಿನಿಮಾ ನೆನಪಿನಲ್ಲಿ ಹುಡುಗಿಗೆ ಶೀನಾ ಎಂದೂ; ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ನೆನಪಿಗೆ ಮಗನಿಗೆ ಮಿಖಾಯಿಲ್ ಎಂದೂ ಹೆಸರಿಸುತ್ತಾರೆ. ಬರಬರುತ್ತ ಮಹತ್ವಾಕಾಂಕ್ಷಿಯಾದ ಆ ಹುಡುಗಿಗೆ ತನ್ನ ಸಂಗಾತಿಯ ಆದಾಯ ತನ್ನ ಖರ್ಚು ಸರಿತೂಗಿಸುವಷ್ಟು ಇಲ್ಲ; ತನ್ನ ಶಕ್ತಿ ಸಾಧ್ಯತೆಗಳು ಶಿಲಾಂಗ್ ಅನ್ನೂ ಮೀರಿ ಬಹಳ ಇದೆ ಎಂದೆನಿಸಿದ್ದೇ ಹೆತ್ತ ಮಕ್ಕಳನ್ನು ತಾಯ್ತಂದೆಯರ ಸುಪರ್ದಿಗೆ ಬಿಟ್ಟು ನಾಪತ್ತೆಯಾಗಿಬಿಟ್ಟಳು. ಮುಂದಿನ ೧೦ ವರ್ಷ ಅವಳ ಸುದ್ದಿಯಿಲ್ಲ.
ಇತ್ತ ಊರಲ್ಲಿ ಬಿಟ್ಟ ಮಕ್ಕಳಿಬ್ಬರೂ ತಮ್ಮ ಅಜ್ಜನ ಸರ್‌ನೇಮ್ ಬೋರಾ ಇಟ್ಟುಕೊಂಡೇ ಬೆಳೆದವು. ಆ ಸಣ್ಣ ಊರಲ್ಲಿ ಅವರ ಅಜ್ಜಿಅಜ್ಜ ಇವರನ್ನು ತಮ್ಮ ಮಕ್ಕಳೆಂದು ಹೇಳಿಕೊಳ್ಳಲು ಸಾಧ್ಯವಿರಲಿಲ್ಲ; ಹಾಗೆಂದರೆ ಯಾರೆಂದು ಹೇಳಿದ್ದಿರಬಹುದು? ತಮ್ಮ ನಿಜ ಗುರುತು ಹೇಳಿಕೊಳ್ಳಲಾಗದೆ ಮಕ್ಕಳು ಏನೇನು ಸಂಕಟ ಅನುಭವಿಸಿದವೊ? ಆವಾಗೀವಾಗ ಮಕ್ಕಳ ಅಪ್ಪ ಬಂದು ಭೇಟಿಮಾಡುತ್ತಿದ್ದ. ಆದರೆ ಅವನನ್ನು ಬರದಂತೆ ಅಜ್ಜಅಜ್ಜಿಮಾವಂದಿರು ತಡೆಯುತ್ತಿದ್ದರು. ಕೊನೆಗೆ ಅವನೂ ಬೇರೆ ಮದುವೆಯಾದ. ಆ ಎಳೆಯ ಹುಡುಗಿ ಶೀನಾ ೧೦ನೇ ತರಗತಿಯವಳಿದ್ದಾಗ ಬರೆದುಕೊಂಡ ಡೈರಿಯ ಕೆಲಪುಟಗಳು ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅದನ್ನು ಓದಿದರೆ ಕಲ್ಲೂ ಕರಗುತ್ತದೆ.


ಸಾಕಲು ಸಾಧ್ಯವಿಲ್ಲದ ಮೇಲೆ ಭೂಮಿ ಮೇಲೆ ಮಕ್ಕಳನ್ನು ತರುವುದು ಅಪರಾಧ. ಏಕೆಂದರೆ ಹೆತ್ತವರ ಕ್ಷಣದ ಮೈಮರೆವಿಗೆ ಶಿಕ್ಷೆ ಅನುಭವಿಸಬೇಕಾಗುವುದು ಎಳೆಯ ಮಕ್ಕಳು. ಶೀನಾಳ ಡೈರಿಯ ಪುಟಪುಟಗಳಲ್ಲಿ ಎಳೆ ಹುಡುಗಿಯ ಒಂಟಿತನ, ಹತಾಶೆ, ಖಿನ್ನತೆ ಒಳಗನ್ನು ಅಲ್ಲಾಡಿಸುವಷ್ಟು ತುಂಬಿಕೊಂಡಿವೆ. ಅವಳು ತನ್ನ ತಂದೆಗೆ ಪದೇಪದೇ ಪತ್ರ ಬರೆದಿದ್ದಾಳೆ. ತನಗೆ ಎಂಥದೋ ಸರ್ಟಿಫಿಕೇಟ್ ಬೇಕು, ಕಳಿಸು ಎಂದು ಕೇಳಿಕೊಂಡಿದ್ದಾಳೆ. ತಮ್ಮ ಜಾತಿ ಯಾವುದು, ತನಗೆ ಗೊಂದಲವಾಗುತ್ತಿದೆ ಎಂದು ಕೇಳಿದ್ದಾಳೆ. ‘ಮಾವಂದಿರೊಡನೆ ನೀನು ವ್ಯವಹಾರ ಮಾಡುವುದೇಕೆ? ಅವರು ನಿನಗೆ ಖಂಡಿತ ಸಹಾಯ ಮಾಡಲಾರರು. ನೀನು ಹಿಟಾಚಿ ಕೆಲಸ ಬಿಟ್ಟು ಒಳ್ಳೆಯ ಕೆಲಸ ನೋಡು’ ಎಂದಿದ್ದಾಳೆ. ‘ಅಜ್ಜ, ಅಜ್ಜಿ ಇಬ್ಬರೂ ನೀನು ಕೆಟ್ಟವನು ಎನ್ನುತ್ತಾರೆ. ಆದರೆ ನನಗೆ ಹಾಗನಿಸುತ್ತಿಲ್ಲ, ಬರೆದಿಟ್ಟ ಪತ್ರ ಕಳಿಸಲು ಎನ್‌ವೆಲಪ್ ಸಿಗುತ್ತಿಲ್ಲ, ಅದು ಎಲ್ಲಿ ಸಿಗುತ್ತದೆ?’ ಎಂದು ಮುಗ್ಧವಾಗಿ ಕೇಳಿದ್ದಾಳೆ. ಮೊದಮೊದಲು ತನ್ನಮ್ಮನ ಬಗೆಗೆ ಹೆಮ್ಮೆಯಿಂದ ಬರೆದುಕೊಂಡ ಶೀನಾ, ಅವಳೊಬ್ಬ ಭರವಸೆಯ ಉದ್ಯಮಿಯೆಂದು ಪೇಪರಿನಲ್ಲಿ ಬಂದ ಫೋಟೋ ಕತ್ತರಿಸಿಟ್ಟುಕೊಂಡಿದ್ದಾಳೆ. ಆದರೆ ಕೊನೆಗೆ ‘ಅವಳು ನನ್ನಮ್ಮನಲ್ಲ, ನನ್ನ ಕಡುವೈರಿ’ ಎನ್ನುತ್ತಾಳೆ. ‘ಎಲ್ಲ ಹ್ಯಾಪಿ ಬರ್ತ್ ಡೇ ಎನ್ನುತ್ತಿದ್ದಾರೆ. ಆದರೆ ನನಗೆ ಈ ಬದುಕಿನಲ್ಲಿ ಯಾವ ಖುಷಿಯೂ ಇಲ್ಲ’ ಎನ್ನುತ್ತ ವಿಷಣ್ಣಳಾಗುತ್ತಾಳೆ.

ಇತ್ತ ಮಕ್ಕಳ ಕತೆ ಹೀಗಾದರೆ ಅತ್ತ ಮಕ್ಕಳ ಅಮ್ಮ ಕಲಕತ್ತ ತಲುಪಿ, ಎಚ್‌ಆರ್ ಕಂಪನಿ ಶುರುಮಾಡಿ, ತನಗಿಂತ ಹೆಚ್ಚು ಪ್ರಾಯದ ಉದ್ಯಮಿಯನ್ನು ಮದುವೆಯಾಗಿ, ಇನ್ನೂ ಒಬ್ಬ ಮಗಳು ವಿಧಿಯನ್ನು ಹೆತ್ತಳು. ತನ್ನ ಬೆಳವಣಿಗೆಯ ವೇಗಕ್ಕೆ ಕಲಕತ್ತವೆಂಬ ಕೆರೆ ಸಾಲದೆಂದು ಅನಿಸಿದ್ದೇ ಮೀನು ತಿಮಿಂಗಿಲವಾಗಲು ಮುಂಬೈ ಕಡಲಿಗೆ ಜಿಗಿಯಿತು. ಎರಡನೆಯ ಪತಿಗೆ ಡೈವೋರ್ಸ್ ಕೊಟ್ಟು ಮಗಳ ಜೊತೆ ಮುಂಬೈ ಸೇರಿದಳು. ರಿಲಯನ್ಸ್, ಸ್ಟಾರ್ ಟಿವಿ ಮೊದಲಾದ ಗ್ರಾಹಕರನ್ನು ಹೊಂದಿದ ಅವಳ ಕಂಪನಿ ಬೆಳೆದೇ ಬೆಳೆಯಿತು. ಅಲ್ಲಿ ಪರಿಚಯವಾದವ ಅವಳಿಗಿಂತ ತುಂಬ ಹಿರಿಯನಾದ ಪೀಟರ್ ಮುಖರ್ಜಿ. ಆತ ಸ್ಟಾರ್ ಇಂಡಿಯಾದ ಸಿಇಒ. ಡೈವೋರ್ಸಿಯಾಗಿದ್ದ ಅವನಿಗೆ ಮೊದಲ ಮದುವೆಯಿಂದ ಹುಟ್ಟಿದ ಇಬ್ಬರು ಗಂಡು ಮಕ್ಕಳಿದ್ದರು. ಇಂದ್ರಾಣಿ ಆತನನ್ನು ಮದುವೆಯಾದಳು, ತನ್ನ ಮೊದಲ ಸಂಬಂಧವನ್ನೂ, ಅದರಿಂದ ಹುಟ್ಟಿದ ಎರಡು ಮಕ್ಕಳ ವಿವರಗಳನ್ನು ಮುಚ್ಚಿಟ್ಟು ವಿಧಿ ತನ್ನ ಏಕಮಾತ್ರ ಪುತ್ರಿ ಎಂದಳು. ಮತ್ತೆ ತಮಗೆ ಮಕ್ಕಳು ಬೇಡವೆಂದು ತನ್ನ ಮಗಳು ವಿಧಿಯನ್ನು ಪೀಟರ್ ದತ್ತು ತೆಗೆದುಕೊಳ್ಳುವಂತೆ ಮಾಡಿದಳು.



ನಾಟಕವೇನೋ ಭರ್ಜರಿಯಾಗೇ ನಡೆಯುತ್ತಿತ್ತು. ಥಳುಕಿನ ಸ್ವರ್ಗಲೋಕದ ಮಂದಿಯ ಬದುಕಲ್ಲವೆ? ಜನಸಾಮಾನ್ಯರ ಊಹೆಗೂ ನಿಲುಕದ ವೈಭೋಗ. ಆಗ ಅಸ್ಸಾಮಿನಿಂದ ಬಂದಿಳಿದರು ಶೀನಾ, ಮಿಖಾಯಿಲ್. ಅವರ ಅಜ್ಜಿಅಜ್ಜರಿಗೆ ವಯಸ್ಸಾಗಿತ್ತು, ನೋಡಿಕೊಳ್ಳುವವರಿರಲಿಲ್ಲ. ಅವರನ್ನು ಮುಂಬೈಯ ತನ್ನ ಪ್ರತಿಷ್ಠಿತ ವಲಯದಲ್ಲಿ ತಮ್ಮ, ತಂಗಿಯೆಂದು ಪರಿಚಯಿಸಿ, ಪ್ರತಿಷ್ಠಿತ ಕಾಲೇಜಿಗೆ ಓದಲು ಸೇರಿಸಿ, ಸಕಲ ವೈಭೋಗಗಳಲ್ಲಿ ಮಕ್ಕಳನ್ನು ಮುಳುಗಿಸಿ, ನಿಜ ಮರೆಮಾಚುವಂತೆ ಅವರನ್ನು ಒತ್ತಡದಲ್ಲಿಟ್ಟು, ಮಿಖಾಯಿಲ್ ಮದಿರೆಯ ದಾಸನಾಗಿ, ಐಷಾರಾಮಿ ಬದುಕನ್ನು ಪ್ರೀತಿಸುವ ಹುಡುಗನಾಗಿ, ಶೀನಾ ತಾಯಿಯ ಜೊತೆ ನಿರಂತರ ಸಂಘರ್ಷಕ್ಕಿಳಿದು ಬೇರೆ ವಾಸಿಸತೊಡಗಿ, ಪೀಟರನ ಮಗನನ್ನು ಪ್ರೇಮಿಸತೊಡಗಿ, .. ..

ಕೊನೆಗೆ,

ತನ್ನ ತಾಯಿಯ ಮೂರನೇ ಗಂಡನ ಮೊದಲ ಹೆಂಡತಿಯ ಮಗನನ್ನು ಪ್ರೀತಿಸಿದ ತಪ್ಪಿಗೆ ಶೀನಾ ತನ್ನ ತಾಯಿ ಯಾನೆ ಅಕ್ಕ ಇಂದ್ರಾಣಿಯಿಂದ ಕೊಲೆಯಾದಳು. ಕೊಲೆಯಾದ ಮೂರು ವರ್ಷ ಬಳಿಕ ಓಹೋ, ಇಂಥ ತಮ್ಮ ಪರಿಚಿತೆ ಸತ್ತಳೆಂದು ಲೋಕಕ್ಕೆ ಅರಿವಾಯಿತು..

ನಡುವೆ ಎಂಥ ಗೋಡೆ!

ಇದೊಂದು ವಿಸ್ತೃತಗೊಳ್ಳುತ್ತ ವಿಚ್ಛಿದ್ರಗೊಂಡ ಕುಟುಂಬದ ದುರಂತ ಕತೆ. ಇಲ್ಲಿ ವರ್ಷಗಟ್ಟಲೆ ರಕ್ತಬಂಧುವೊಬ್ಬರು ಕಣ್ಣಿಗೆ ಬೀಳದಿದ್ದರೂ, ಎಲ್ಲಿದ್ದಾರೋ ಏನೋ ಎಂದು ತಿಳಿಯದಿದ್ದರೂ ಉಳಿದವರಿಗೆ ಏನೂ ಅನಿಸುವುದೇ ಇಲ್ಲ. ಅಮೆರಿಕದಲ್ಲಿದ್ದಾಳೆ ಎಂದು ತನ್ನ ‘ತಂಗಿ’ ಶೀನಾ ಕುರಿತು ‘ಅಕ್ಕ’ ಇಂದ್ರಾಣಿ ಹೇಳಿದ್ದೇ ತಡ, ಶೀನಾಳ ಪ್ರೇಮಿ, ತಮ್ಮ, ಗೆಳತಿ, ತಂದೆ, ಅಜ್ಜಿಅಜ್ಜ ಇತ್ಯಾದಿ ಯಾರೆಂದರೆ ಯಾರೂ ಅವಳ ಬಗ್ಗೆ ಯೋಚಿಸದೆ, ಹುಡುಕದೆ, ಅವಳ ಸಂಪರ್ಕವೇ ಇಲ್ಲದೆ ಇದ್ದುಬಿಡುತ್ತಾರೆ! ಕಾಣೆಯಾದವಳ ಬಗೆಗೆ, ಸಂಪರ್ಕಕ್ಕೆ ಸಿಗದವಳ ಬಗೆಗೆ ಯಾರೂ ಯೋಚಿಸದೆ, ಹುಡುಕದೆ ಇರುತ್ತಾರೆ! ಇವತ್ತಿನ ಇ ಮೇಲ್, ಮೆಸೇಜ್, ವಾಟ್ಸಪ್, ಟ್ವಿಟರ್ ಯುಗದಲ್ಲಿ ಮನುಷ್ಯರ ನಡುವೆ ಸಂವಹನವೇ ಇಲ್ಲದಂಥ ಗೋಡೆ ಎದ್ದಿದೆಯೆಂದಾದರೆ ಅದೆಷ್ಟು ದಪ್ಪದ ಗೋಡೆ ಅದು? ಆ ಗೋಡೆ ಕಟ್ಟಿಕೊಂಡದ್ದಕ್ಕೆ ತೆರಬೇಕಾದ ಬೆಲೆಯಾದರೂ ಎಷ್ಟು? ವ್ಯಕ್ತಿಗಿಂತ ವಸ್ತುಗಳೇ ಮೌಲಿಕವೆನಿಸಿಕೊಂಡ ಸರಕಿನ ಯುಗದಲ್ಲಿ ಹೀಗಾಗುವುದೆ ಅಥವಾ ಮನುಷ್ಯ ಪ್ರಾಣಿಯ ದುಷ್ಟತನವನ್ನು ದೇಶ, ಕಾಲಗಳು ಪಳಗಿಸದೆ ಹೋದಾಗ ಇಂಥದ್ದು ಸಂಭವಿಸುವುದೆ?

ಈ ಕತೆಯಲ್ಲಿ ನಾವು ಕೇಳಿದ್ದೆಲ್ಲ ನಿಜವೇ ಆದರೂ ಅಲ್ಲಿ ಹಲವು ಖಾಲಿ ಜಾಗಗಳಿವೆ. ಬಿಟ್ಟ ಸ್ಥಳಗಳಲ್ಲಿ ನಿಮ್ಮ ಊಹೆಯನ್ನೇ ತುಂಬಿಕೊಳ್ಳಬೇಕು. ಯಾಕೆಂದರೆ ಯಾವ ಮದುವೆಯ ಕುರಿತು, ಯಾವ ಸಂಬಂಧಗಳ ಕುರಿತು ಯಾರ‍್ಯಾರು ತಂತಮ್ಮ ಪಾರ್ಟ್‌ನರುಗಳಲ್ಲಿ ಎಷ್ಟೆಷ್ಟು ಏನೇನು ಹೇಳಿಕೊಂಡಿದ್ದರೊ, ಎಷ್ಟು ಮುಚ್ಚಿಕೊಂಡಿದ್ದರೊ ಅವರಿಗೇ ಗೊತ್ತು. ಇರಲಿ. ಅವೆಲ್ಲ ಅವರವರ ಅಂತರಂಗದ ಯಾರೂ ನೋಡಬಾರದ ಒಳಕೋಣೆಗಳಲ್ಲೇ ಇರಲಿ; ಆದರೆ ತಾನು ಹೆತ್ತ ಮಗುವಿನ ಮೇಲೆ ತಾಯಿಗೆ ಮಮಕಾರ ಬೆಳೆಯದಿರಲು, ಕೊಲ್ಲಲು ಹೇಗೆ ಸಾಧ್ಯ?

ಸಾಧ್ಯವಿದೆ. ಏಕೆಂದರೆ ಹೆತ್ತ ಕೂಡಲೇ ಹೆಣ್ಣು ಅಮ್ಮನಾಗುವುದಿಲ್ಲ. ಅಮ್ಮತನವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ರೂಪಿಸಲು ಕುಟುಂಬ, ಅಪ್ಪ, ಸಮಾಜ ಇರಬೇಕು. ಇಲ್ಲದಿದ್ದರೆ ಹೊಟ್ಟೆಯಲ್ಲಿರುವ ಮಗುವನ್ನು ಬೇಡ ಎಂದು ತೆಗೆದುಹಾಕಿದಷ್ಟೆ ಸುಲಭವಾಗಿ ಬೆಳೆದು ನಿಂತ ಮಗಳನ್ನೂ, ಮಗನನ್ನೂ ಇಲ್ಲವಾಗಿಸಿಬಿಡುತ್ತಾರೆ. ಅಲ್ಲದೆ ತಾನು ಹೆತ್ತದ್ದೋ, ಮತ್ತೊಬ್ಬರು ಹೆತ್ತದ್ದೋ, ಪ್ರಾಣ ತೆಗೆಯದೆ ಇರಲು ಒಳಗೊಂದು ಸರಿತಪ್ಪು ವಿವೇಚನೆಯ ತಕ್ಕಡಿ ಅವಶ್ಯವಿದೆ. ಅದಿಲ್ಲದಿದ್ದರೆ ತನ್ನೆಲ್ಲ ಸಂಕಟಗಳ ಪರಿಹಾರ ಇನ್ಯಾರದೊ ಸಾವಿನಲ್ಲಿ ಅಡಗಿದೆ ಎಂಬ ದುಷ್ಟ ಭ್ರಮೆ ಮನಸ್ಸನ್ನಾವರಿಸುತ್ತದೆ.

ಅದೇನೇ ಆಗಲಿ, ಸರಿತಪ್ಪು ಯಾವುದೆಂದು, ಯಾರದೆಂದು ಸುಲಭದಲ್ಲಿ ನಿರ್ಧರಿಸಲಾಗದ ಈ ದುಷ್ಟ ಕಾಲದಲ್ಲಿ ಶೀನಾ ಬೋರಾಗೆ ದೊರೆತಂಥ ಅಮ್ಮ-ಅಪ್ಪ-ಅಜ್ಜಿಅಜ್ಜ-ಕುಟುಂಬ ಮತ್ತಾರಿಗೂ ಸಿಗದಿರಲಿ..





Friday 11 September 2015

ಎಂ. ಎಂ. ಕಲಬುರ್ಗಿ: ಪೂರ್ವಭಾಷಿಗೆ ಶರಣು..




ಕವಿರಾಜಮಾರ್ಗಕಾರ ಬಣ್ಣಿಸಿದ ಕಾಲದ ಕನ್ನಡ ಜನಪದಲ್ಲಿ ನ್ಯಾಯಯುತ ಹಕ್ಕು ಪ್ರತಿಪಾದಿಸಿದವರ ಕೈ ಕಡಿಯುವುದು, ಪ್ರತಿಭಟಿಸುವವರ ಹತ್ಯೆಗೈಯುವುದು, ಪ್ರಶ್ನಿಸುವವರ ಮುಖಕ್ಕೆ ಮಸಿ, ಸಗಣಿ ಬಳಿಯುವುದು ಇತ್ತೋ ಇಲ್ಲವೋ, ಆದರೆ ಈಗ ಕನ್ನಡ ನುಡಿಯಂತೇ ಕನ್ನಡ ಜನಪದವೂ ಆತಂಕ, ಅಭದ್ರತೆಯನ್ನೆದುರಿಸುತ್ತಿದೆ. ಕವಿರಾಜಮಾರ್ಗಕಾರನ ಕಾಲ ಕುರಿತು ಅಧ್ಯಯನ ನಡೆಸಿದ ಕನ್ನಡ ದನಿಯೊಂದನ್ನು ಬಲವಂತದ ಮೌನಕ್ಕೆ ದೂಡಲಾಗಿದೆ.

ಹೌದು. ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಬಸವಣ್ಣನ ಕೊಲೆಗಾರರೆಂದು ಮಠ-ಗುರುಗಳನ್ನು ಟೀಕಿಸುತ್ತಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಇದುವರೆಗೆ ಅಲ್ಲೆಲ್ಲೆಲ್ಲೋ ಸಂಭವಿಸುತ್ತಿದ್ದದ್ದು ಇಂದು ನಮ್ಮಂಗಳದಲ್ಲೇ ಸಂಭವಿಸಿ ಪ್ರಜ್ಞಾವಂತರು ದಿಗ್ಭ್ರಮೆಗೊಂಡರು. ಅವರ ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿದರು. ಚಂಪಾ, ಕನ್ನಡದ ಆರು ಉದಯೋನ್ಮುಖ ಕವಿಗಳು, ಹಿಂದಿ ಲೇಖಕ ಉದಯಪ್ರಕಾಶ್ ಸೇರಿದಂತೆ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು. ಅತಿದುಃಖದ, ಅತಿ ಆಕ್ರೋಶದ ಪ್ರತಿಕ್ರಿಯೆಗಳು ಕೇಳಿಬಂದ ಬೆನ್ನಲ್ಲೇ ‘ಎಲ್ಲ ಅತಿಯಾಯಿತು, ಸುಮ್ಮನಿರಿ’ ಎಂಬ ಧಾಟಿಯ ಅತಿ ನ್ಯೂಟ್ರಲ್ ಪ್ರತಿಕ್ರಿಯೆಗಳೂ ಕೇಳಿಬಂದವು. ಯಾವ ಪುರೋಹಿತಶಾಹಿಯನ್ನು ಕಲಬುರ್ಗಿ ಟೀಕಿಸುತ್ತಿದ್ದರೋ ಅದರ ಮುಂದುವರೆದ ಕೊಂಡಿಗಳಂತಿದ್ದ ಮಠ, ಟ್ರಸ್ಟ್, ಸಂಸ್ಥೆಗಳೊಂದಿಗೆ ಅವರಿಗಿದ್ದ ಸೌಹಾರ್ದ ಸಂಬಂಧ-ಒಡನಾಟವನ್ನು ನೆನೆಸಿಕೊಂಡು ಕೆಲ ಮನಸುಗಳು ಕಸಿವಿಸಿಗೊಂಡವು. ಒಟ್ಟಾರೆ ಅವರವರ ಭಾವ, ಭಕುತಿಗೆ ತಕ್ಕಂತೆ ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು.

ಆದರೆ ಎಲ್ಲಕ್ಕಿಂತ ವಿಲಕ್ಷಣವಾಗಿ ಕರಾವಳಿ ಮತ್ತಿತರ ಕಡೆಗಳಲ್ಲಿ ಅವರು ಬರೆದ ಒಂದಕ್ಷರವನ್ನೂ ಓದಿರದ ಧರ್ಮಾಂಧರಿಂದ ಸಂಭ್ರಮದ ಪ್ರತಿಕ್ರಿಯೆ ವ್ಯಕ್ತವಾಯಿತು! ಧರ್ಮದ್ರೋಹಿಗೆ ತಕ್ಕ ಶಾಸ್ತಿಯಾಯಿತು ಎಂದು ಜಾಲತಾಣಗಳಲ್ಲಿ ಕಮೆಂಟುಗಳು ಬಂದವು. ಮುಂದಿನ ಸರದಿ ಯಾರದು ಎಂದೂ ಹಿಟ್‌ಲಿಸ್ಟ್ ಬಿಡುಗಡೆ ಮಾಡಲಾಯಿತು. ಅದರ ಆಧಾರದ ಮೇಲೆ ಕೆಲವರ ಬಂಧನ, ಬಿಡುಗಡೆಯೂ ಆಯಿತು.

ಅಂತರ್ಜಾಲದಲ್ಲಿ ಹಿಟ್‌ಲಿಸ್ಟ್?! ನಿಜ. ಇವತ್ತು ಸ್ಥಳೀಯ, ಅಂತಾರಾಷ್ಟ್ರೀಯ ಘಟನೆ ತೀವ್ರಗಾಮಿ ಮನಸುಗಳಲ್ಲಿ ಯಾವ ತೆರನ ಪ್ರತಿಕ್ರಿಯೆ ಹುಟ್ಟುಹಾಕುತ್ತದೆ ಎಂದು ನೋಡಲು ಅಂತರ್ಜಾಲ ಗಮನಿಸಬೇಕು. ಅಂತರ್ಜಾಲವು ಕಲಿತ, ತರುಣ ಪೀಳಿಗೆಯ, ಒಂದು ವರ್ಗದ ಮನಸ್ಥಿತಿಯ ಪ್ರತಿಬಿಂಬವಾಗಿದ್ದು ಶಿಷ್ಟರೆಂದುಕೊಂಡವರ ದುಷ್ಟತನವನ್ನು ಅನಾವರಣಗೊಳಿಸುವ ಮಾಧ್ಯಮವಾಗಿದೆ. ಕೆರಳಿದ ಹಾಗೂ ಅಸಹನೆಯ ಸಮಾಜ ಸೃಷ್ಟಿಸುವಲ್ಲಿ ಮಾಧ್ಯಮ ಮತ್ತು ಅಂತರ್ಜಾಲದ ಮಹತ್ವದ ಪಾತ್ರವಿದೆ. ಭಾರತದಲ್ಲಂತೂ ಅಂತರ್ಜಾಲದ ಕಮೆಂಟಿಗರ ಪಡೆಯೇ ಸೃಷ್ಟಿಯಾಗಿದ್ದು ಮುಕ್ತ ವಿಚಾರಗಳನ್ನು, ಅದರ ಪ್ರತಿಪಾದಕರನ್ನು ‘ಬುಜೀ’ (ಬುದ್ಧಿಜೀವಿ) ಗಳೆಂದು ಅದು ಮನಬಂದಂತೆ ಹಣಿಯುತ್ತದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆ, ಟೀಕೆಯೂ ಸಮಾಜದಲ್ಲಿ ಎಂತೋ ಅಂತೆಯೇ ಜಾಲದಲ್ಲೂ ಅತಿವೇಗದ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕುತ್ತಿದೆ. ಅಂತರ್ಜಾಲಿಗರ ಉಗ್ರ ಗುಂಪು ಒಂದು ಆರೋಗ್ಯಕರ ಚರ್ಚೆ ನಡೆಯುವುದೇ ಸಾಧ್ಯವಾಗದಂತೆ ಮಾಡುತ್ತ ಬೀದಿಹೋರಾಟದಷ್ಟೆ ಭರಾಟೆಯಿಂದ ಜಾಲಿಗರ ಕಾಳಗ ನಡೆಸುತ್ತದೆ.

ಇವತ್ತು ಎಲ್ಲ ದೇಶ, ಧರ್ಮಗಳಲ್ಲೂ ಈ ಉನ್ಮಾದದ ಮನಸ್ಥಿತಿ ಇದೆ. ಇದು ಇದ್ದಕ್ಕಿದ್ದಂತೆ ಸೃಷ್ಟಿಯಾದದ್ದಲ್ಲ. ಅದಕ್ಕೆ ಪ್ರಸಕ್ತ ರಾಜಕೀಯ ಹುಟ್ಟುಹಾಕುವ ಸಾಮಾಜಿಕ ಹಾಗೂ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ. ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಅದು ಸೃಷ್ಟಿಸುತ್ತದೆ. ಇದು ಕಲಬುರ್ಗಿ ಹಂತಕರನ್ನಷ್ಟೇ ಅಲ್ಲ; ಪೆರುಮಾಳ್ ಮುರುಗನ್, ಶಿರೀನ್ ದಳವಿ, ಬಿನಾಯಕ್ ಸೇನ್, ತೀಸ್ತಾ, ಸಂಜೀವ ಭಟ್ ಮುಂತಾದ ಎಷ್ಟೋ ಸಂವೇದನಾಶೀಲರ ಕೊಲೆಗಾರರನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿದೆ. ಒಟ್ಟಾರೆ ಹೇಳುವುದಾದರೆ ಕಲಬುರ್ಗಿಯವರ ಹತ್ಯೆಗೆ ಕಾರಣ ಮತ್ತು ಸುಳುಹುಗಳು ಅಂತರ್ಜಾಲದಲ್ಲೇ ದೊರೆಯುತ್ತವೆ.

ಈ ಹತ್ಯೆ ಮತ್ತದರ ಕುರಿತು ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಕೆಲ ಅಂಶಗಳನ್ನು ಗಮನಿಸಬಹುದು:


  • ಕಲಬುರ್ಗಿ ಅವರ ಹತ್ಯೆ ಇಂಥವರಿಂದಲೇ ಆಯಿತೆನ್ನಲು ಇನ್ನೂ ಯಾವ ಸುಳುಹೂ ದೊರೆತಿಲ್ಲ. ಆದರೆ ಇದು ವಿಚಾರ ವಿರೋಧಿಗಳ ಕೃತ್ಯ ಎನ್ನುವುದು ಓಪನ್ ಸೀಕ್ರೆಟ್. ಕಲಬುರ್ಗಿಯವರ ಸಮಕಾಲೀನರೂ, ಸಹವರ್ತಿಗಳೂ ಆಗಿದ್ದ, ಅವರಂತೇ ಮಠ-ಪೀಠ ವ್ಯವಸ್ಥೆಗಳನ್ನು ಟೀಕಿಸುತ್ತಿದ್ದ ಲಿಂಗಣ್ಣ ಸತ್ಯಂಪೇಟೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ದರು. ಕಲಬುರ್ಗಿಯವರಿಗೂ ಪ್ರಾಣ ಬೆದರಿಕೆಯ ಕರೆಗಳು ಬಂದು ಕೆಲವು ದಿನ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು. ಪೊಲೀಸ್ ರಕ್ಷಣೆ ಬೇಡವೆಂದು ಅವರೇ ನಿರಾಕರಿಸಿದ ಮೇಲೆ ಹತ್ಯೆ ಸಂಭವಿಸಿದೆ. ಅದು ಮೂಲಭೂತವಾದಿಗಳಿಂದಲೇ ಆದದ್ದು ಎಂದುಕೊಳ್ಳುವುದಾದರೆ ಅವರು ಬಹಳ ಸಾಫ್ಟ್ ಟಾರ್ಗೆಟ್ ಆಗಿದ್ದರು. ಅವರಿಗಿಂತ ಖಂಡತುಂಡ ಮಾತುಗಳಲ್ಲಿ ಯಾವುದೇ ಅನುಮಾನ, ಭಯವಿರದೆ ಮೂಲಭೂತವಾದದ ಎಲ್ಲ ಒಳಮಗ್ಗುಲು, ಆಯಾಮಗಳನ್ನು ಬರಹ-ಪುಸ್ತಕ ರೂಪದಲ್ಲಿ ಹೊರ ಹಾಕುವ ಹತ್ತಾರು ಚಿಂತಕರು, ಹೋರಾಟಗಾರರು ಕನ್ನಡದಲ್ಲಿದ್ದಾರೆ. ಆದರೂ ಅವರನ್ನೇ ಏಕೆ ಆಯ್ದುಕೊಳ್ಳಲಾಯಿತು? ಇದು ಅಪರಾಧ ಸಂಹಿತೆಯ ಒಳಸೂಕ್ಷ್ಮಗಳಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಯಾವಾಗಲೂ ವ್ಯವಸ್ಥೆಗೆ ಒಳಗಿದ್ದು ವಿರುದ್ಧ ಮಾತನಾಡುವ ‘ಕ್ರಿಟಿಕಲ್ ಇನ್‌ಸೈಡರ‍್ಸ್’ ಮೇಲೆ ಹೆಚ್ಚು ಸಿಟ್ಟಿರುತ್ತದೆ. ಉದಾಹರಣೆಗೆ ನಾನು ಹಿಂದೂ ಎಂದು ಅದರ ಒಳಹುಳುಕುಗಳ ಕುರಿತು ಹೇಳುವ ಗಾಂಧಿ ಹಿಂದೂ ಉಗ್ರಗಾಮಿಗಳಿಂದ ಕೊಲ್ಲಲ್ಪಡುತ್ತಾರೆ. ಹಂತಕ ವ್ಯವಸ್ಥೆ ಉಳಿದವರನ್ನು ಭಯಗೊಳಿಸುವ ಸಲುವಾಗಿ ಇಂಥ ಸಾಫ್ಟ್ ಟಾರ್ಗೆಟ್‌ಗಳನ್ನೇ ಆಯ್ದುಕೊಳ್ಳುತ್ತದೆ. 
  • ಇವತ್ತು ಕಾಲ ನಾವು ತಿಳಿದಷ್ಟು ಅಮಾಯಕವಾಗಿಲ್ಲ. ಮೂಲಭೂತವಾದದ ಹುನ್ನಾರಗಳಿಗೆ ಕವಿ, ಚಿಂತಕರ ಅಂತರಂಗದ ಮಾತು, ಸ್ಪಷ್ಟತೆ, ನಿರ್ಭಯ ಸ್ವತಂತ್ರ ಪ್ರವೃತ್ತಿಗಳೆಲ್ಲ ಬಲಿಯಾಗುತ್ತಿರುವ ಸೂಚನೆ ಕಾಣತೊಡಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹಿರಿಕಿರಿಯರೆನ್ನದೆ ನಾವೆಲ್ಲ ಮಾತನಾಡುತ್ತೇವೆ. ಆದರೆ ಯಾವ ಮೂಲಭೂತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆಯೊ ಅದರ ಸಾಂಸ್ಕೃತಿಕ ಮುಖವಾಡ ಕಿತ್ತೆಸೆದು ನೋಡಲು, ಅದರ ನಾನಾವೇಷಗಳನ್ನು ಗುರುತಿಸಲು, ಸಂತಾನ ಅರಿಯಲು ನಾವು ವಿಫಲರಾಗಿದ್ದೇವೆ. ಕಲಬುರ್ಗಿಯವರಂಥ ಹಿರಿಯ ಚಿಂತಕ, ಸಾಹಿತಿಗಳೂ ಇದರಿಂದ ಹೊರತಲ್ಲ. ಕೆಲ ಚಿಂತಕರು ಸಂಘಟಕರ ಥಳಕುಬಳುಕು, ಶಿಸ್ತು, ಸಿರಿಗಳಿಗೆ ಮಾರುಹೋಗಿ ಜನವಿದ್ದಲ್ಲೆಲ್ಲ ಜಾತ್ರೆ ಎಂದುಕೊಂಡು ಹೋಗುತ್ತಿದ್ದಾರೆ. ಆದರೆ ಸಿರಿ ಪ್ರದರ್ಶನದ ಜಾತ್ರೆಯಲ್ಲಿ ನಮ್ಮ ಮನೆದೇವರಾದ ಕಲ್ಲುದೈವಗಳಿರುವುದಿಲ್ಲ; ಬರಿ ಉತ್ಸವ ಮೂರ್ತಿಗಳೇ ಇರುತ್ತವೆ. ಅಷ್ಟೇ ಅಲ್ಲ, ಹಂಗಿನರಮನೆಯು ತನ್ನಲ್ಲಿ ಬಂದುಹೋದವರ ಹೆಸರನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದೂ ಚಿಂತಕರಿಗೆ ತಿಳಿಯದೇ ಹೋಗಿದೆ. ಈ ಹತ್ಯೆಯ ನಂತರವಾದರೂ ಮೂಲಭೂತವಾದಿ ಪಕ್ಷ-ಸಂಘಗಳೊಂದಿಗೆ ಸಂಬಂಧವಿರುವ ಯಾವುದೇ ಸಭೆಸೆಮಿನಾರುಗಳಲ್ಲಿ ಭಾವಹಿಸುವ ಕುರಿತು ನಾವು ಮರು ಯೋಚಿಸಬೇಕಿದೆ. 
  • ಕಲಬುರ್ಗಿ ಹತ್ಯೆ ಖಂಡಿಸಿ ರಾಜಧಾನಿಯಲ್ಲಿ ಹಾಗೂ ಧಾರವಾಡ-ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆ, ಖಂಡನೆ ವ್ಯಕ್ತವಾಗುತ್ತಿದೆ. ಧಾರವಾಡ ಕೇಂದ್ರಿತ ಆಗುಹೋಗುಗಳು ತನಿಖಾ ವ್ಯವಸ್ಥೆ ಚುರುಕಾಗುವಂತೆ ಒತ್ತಡ ಸೃಷ್ಟಿಸುತ್ತಿವೆ. ಕಲಬುರ್ಗಿಯವರೊಡನೆ ನಿತ್ಯ ಒಡನಾಡಿದವರು ಸದ್ಯದ ಆಘಾತ ಹಾಗೂ ನಾಳೆಯ ಜವಾಬ್ದಾರಿಗಳೆರಡರ ಸಮತೋಲ ಕಾಯ್ದುಕೊಳ್ಳುತ್ತ ಪ್ರತಿನಿತ್ಯ ಒಟ್ಟಾಗಿ ಚರ್ಚಿಸುತ್ತ ಜಾಗೃತರಾಗಿ, ಒಗ್ಗಟ್ಟಾಗಿರಬೇಕಾದ ಅವಶ್ಯಕತೆ ಕುರಿತು ಸ್ಪಷ್ಟವಾಗತೊಡಗಿದ್ದಾರೆ. ಹತ್ಯೆ ವಿರೋಧಿ ಸಮಿತಿ ರಚನೆಯಾಗಿ ನ್ಯಾಯದ ಆಗ್ರಹಕ್ಕೆ ಹೋರಾಟದ ಸ್ವರೂಪ ನೀಡುತ್ತಿದೆ.


ಇದಕ್ಕಿಂತ ಭಿನ್ನವಾಗಿ ಗುಟ್ಟಾಗಿ ಚೆಡ್ಡಿ ತೊಟ್ಟ ಚಿಂತಕರ ಪಡೆ ಪ್ರಪಂಚದ ಬೇರಾವುದೇ ದೇಶದಲ್ಲಿಲ್ಲದಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದಲ್ಲಿದೆ; ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎನ್ನುವುದೆಲ್ಲ ಬುದ್ಧಿಜೀವಿಗಳ ಅನಗತ್ಯ ಬೊಗಳೆ ಎಂದು ಬೆನ್ನು ನೀವಿಕೊಳ್ಳುತ್ತಿದೆ. ಅದು ಅವರ ಅನುಭವವಾಗಿ ನಿಜವಿರಬಹುದು. ಯಾಕೆಂದರೆ ವ್ಯವಸ್ಥೆಯ/ಧರ್ಮ-ಜಾತಿಯ ಪರವಾಗಿ ನೀವಿರುವುದಾದರೆ ಭಾರತದಲ್ಲಿ ಹೇರಳ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಯಥಾಸ್ಥಿತಿಯನ್ನು ಒಪ್ಪದೆ ಹೊಸವಿಚಾರ ಪ್ರತಿಪಾದಿಸುವವರಿಗಷ್ಟೆ ಆ ಸ್ವಾತಂತ್ರ್ಯದ ಇತಿಮಿತಿಗಳೇನೆಂದು ಸ್ಪಷ್ಟವಾಗಿ ಅರಿವಾಗುತ್ತಿದೆ.



  • ಯಾವುದೇ ಸರ್ಕಾರವಿರಲಿ, ಎಂಥ ಗಹನ ಅಪರಾಧವೇ ಇರಲಿ, ಅದು ಪ್ರಭಾವೀ ಧರ್ಮ/ಜಾತಿ/ಪಕ್ಷದ ವ್ಯಕ್ತಿಗೆ ಸಂಬಂಧಿಸಿದ್ದಾದರೆ ಹೇಗೆ ಮುಚ್ಚಿ ಹೋಗುತ್ತಿದೆಯೆಂದು ನಾವು ನೋಡುತ್ತಿದ್ದೇವೆ. ಯಾವುದೇ ಜಾತಿಯ, ಪಂಥದ ಸ್ವಾಮಿಯಲ್ಲದ ನಿತ್ಯಾನಂದನನ್ನೇನೋ ಹಿಡಿದು ಹಾಕಿದರು. ಆದರೆ ಸ್ವಾಮಿಯೊಬ್ಬ ತಮ್ಮನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆ ಕುಲದ ಹೆಣ್ಮಕ್ಕಳು ಪದೇಪದೇ ದೂರು ಕೊಟ್ಟರೂ ವ್ಯವಸ್ಥೆಯೇ ಭೇದಿಸಲಾಗದ ಕೋಟೆ ಕಟ್ಟಿ ಆತನನ್ನು ರಕ್ಷಿಸುತ್ತಿದೆ. 


ನಮ್ಮ ತನಿಖಾ ತಂಡದ ನಾಯಿಗಳಾದರೋ ವಾಸನೆ ಮೂಸುತ್ತ ಮೂಸುತ್ತ ಒಂದು ಸರ್ಕಲಿನಲ್ಲೋ, ಬಸ್‌ಸ್ಟ್ಯಾಂಡ್-ರೈಲ್ವೆ ಸ್ಟೇಷನಿನಲ್ಲೊ ನಿಂತುಬಿಡುತ್ತವೆ. ಅಲ್ಲಿಂದ ಮುಂದೆ ವಿಶಾಲ ಬಯಲೂ, ಅದರ ತುಂಬ ಗವಿ-ಬಿಲ-ಗುಹೆಗಳೂ ಇದ್ದು ಅಲ್ಲಿ ಸಾಕ್ಷಿಯೆಂಬ ಇರುವೆಯನ್ನು ಹುಡುಕುವುದೇ ಕಷ್ಟವಾಗಿದೆ. ಗುಂಡು ಹಾರಿಸಿದ ಶಾರ್ಪ್ ಶೂಟರುಗಳ ಸುಳಿವು ದೊರೆತೀತು. ಅವರಿಗೆ ಕಾಸು ಕೊಟ್ಟ ರೌಡಿಯ ಸುಳಿವು ದೊರೆತೀತು. ಆದರೆ ಆ ರೌಡಿಯನ್ನು ಸಾಕಿಕೊಂಡ ಅಪ್ಪಅಮ್ಮಗಳ ಬಗೆಗೆ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ದೊರೆತರೂ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಪ್ರಭಾವೀ ವ್ಯಕ್ತಿಯವರೆಗೆ ಬಂದುನಿಂತು ತನಿಖೆ ‘ಇಲ್ಲಿಗೀ ಕತೆ ಮುಗಿಯಿತು’ ಎಂದು ಅಪೂರ್ಣಗೊಳ್ಳುವುದೇ ಜಾಸ್ತಿಯಾಗಿದೆ. ಲಿಂಗಣ್ಣ ಸತ್ಯಂಪೇಟೆ ಅವರ ಶವ ಚರಂಡಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿ; ನರೇಂದ್ರ ಧಾಬೋಲ್ಕರ್, ಪನ್ಸಾರೆ ಹತ್ಯೆಯಾಗಿ ವರ್ಷಗಳೇ ಉರುಳಿದರೂ ಹಂತಕರ ಸುಳಿವು ಸಿಗದಿರುವುದು ನಮ್ಮ ಕಣ್ಣೆದುರಿಗಿದೆ.





ಹೀಗಿರುತ್ತ ಹತ್ಯೆ ಖಂಡಿಸಿ ಹಂತಕರನ್ನು ಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸುವುದು; ಹಲವೆಡೆ ಬರಹಗಾರರು, ಚಿಂತಕರು ಸಭೆ ನಡೆಸಿ, ತಮಗೆ ದೊರಕಿದ ಪ್ರಶಸ್ತಿ ಸಮ್ಮಾನಗಳನ್ನು ನಿರಾಕರಿಸಿರುವುದು ಮುಂತಾದ ಸಾಂಕೇತಿಕ ಹಾಗೂ ಸೃಜನಶೀಲ ಕ್ರಮಗಳೆಲ್ಲ ತನಿಖೆ ಚುರುಕುಗೊಳ್ಳುವಂತೆ ಒತ್ತಡ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಬಹುಪಾಲು ಅಪರಾಧ ತನಿಖೆಗಳೆಲ್ಲ ನಾನಾ ಕಾರಣಗಳಿಗಾಗಿ ಹಳ್ಳ ಹಿಡಿಯುತ್ತಿರುವಾಗ ಜಡಭರತ ವ್ಯವಸ್ಥೆಯ ಮೇಲೆ ಒತ್ತಡ ತರುವ ಸಲುವಾಗಿ ನಿರಂತರ ಹೋರಾಟ, ನ್ಯಾಯ ದೊರೆಯುವವರೆಗೆ ಹೋರಾಟ ಅಗತ್ಯವಾಗಿದೆ. ಎಂದೇ ಕಲಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ ಹಿರಿಕಿರಿಯರು ಭಿನ್ನಭೇದ ಮರೆತು ಒಟ್ಟಾಗಿ ಸೆ. ೧೪ರಂದು ಧಾರವಾಡದಲ್ಲಿ ಬೃಹತ್ ರ‍್ಯಾಲಿ ಮತ್ತು ಸಮಾವೇಶದಲ್ಲಿ ಒಗ್ಗೂಡಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಮಾನ ಮನಸ್ಕರ ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಂತಕರನ್ನು ಗುರುತಿಸುವಂತೆ; ಹಂತಕ ವ್ಯವಸ್ಥೆಯ ಬೇರುಗಳನ್ನು ಬುಡಮಟ್ಟ ಕಿತ್ತುಹಾಕುವಂತೆ ಒತ್ತಾಯಿಸಿದರು. ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ; ಹತ್ಯೆ ಹೇಡಿಗಳ ಕೆಲಸ ಎಂಬ ಅಭಿಪ್ರಾಯ ಕೇಳಿಬಂತು. ಒಟ್ಟಾರೆ ಕೋಮುವಾದವನ್ನೂ, ಅದು ಸೃಷ್ಟಿಸುವ ಅಸಹನೆಯನ್ನೂ ತೊಡೆಯಲು ಕಲಬುರ್ಗಿ ಹತ್ಯೆಯನ್ನು ಮುಂದಿಟ್ಟುಕೊಂಡು ಶ್ರಮಿಸಬೇಕು; ಎಳೆಯ ಮನಸುಗಳಲ್ಲಿ ಆರೋಗ್ಯಕರ ಧಾರ್ಮಿಕತೆ ಬೆಳೆಸಬೇಕು; ಜಿಲ್ಲಾ ಕೇಂದ್ರಗಳಲ್ಲೂ ಸರಣಿ ಹೋರಾಟಗಳಾಗಬೇಕು ಎಂದು ನಿರ್ಧರಿಸಲಾಯಿತು.

ಜೀವಮಾನವಿಡೀ ಕಲಬುರ್ಗಿಯವರು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಅವರ ಮರಣವೂ ಜಾಗ್ರತ ಗುಂಪೊಂದು ಕ್ರಿಯಾಶೀಲವಾಗುವಂತೆ ಮಾಡಿರುವುದು ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂಬ ಮಾತು ನಿಜಗೊಳ್ಳುವಂತೆ ಮಾಡಿದೆ. ಕಲಬುರಗಿಯವರನ್ನು ಮೌನವಾಗಿಸಿರುವೆವೆಂದು ಯಾರೂ ಬೀಗದಿರಲಿ, ಇದುವರೆಗೆ ಬಾಯಿಗೆ ಬೀಗ ಹಾಕಿಕೊಂಡವರ ನಾಲಿಗೆಗಳಲ್ಲೂ ಕಲಬುರ್ಗಿ ನುಡಿಯತೊಡಗಿದ್ದಾರೆ!

***

ಈ ದುರ್ಘಟನೆಯ ಬಳಿಕ ಅವರ ಆಪ್ತೇಷ್ಟರು, ಶಿಷ್ಯರು ಕಲಬುರ್ಗಿಯವರ ಗೆಯ್ಮೆ ಗರಿಮೆಗಳನ್ನು, ಅವರ ಮಾತು-ಚಿಂತನೆ-ವ್ಯಕ್ತಿತ್ವವನ್ನು ನೆನಪಿಸಿಕೊಂಡು ಎಲ್ಲೆಲ್ಲೂ ಬರೆಯುತ್ತ, ಮಾತನಾಡುತ್ತಿರುವಾಗ ಅವರನ್ನು ಎಂದೂ ಭೇಟಿಯಾಗದ, ಫೋನಿನಲ್ಲಿ ಮಾತನಾಡದ, ಅವರ ಒಂದೂ ಭಾಷಣ-ಪಾಠ ಕೇಳದ, ಅಷ್ಟಾಗಿ ಓದಿಕೊಂಡಿಲ್ಲದ ನಾನು ಏನು ಬರೆಯುವುದು ಎಂದುಕೊಳ್ಳುತ್ತಿದ್ದೆ. ಆದರೆ ಒಳದನಿ ಏಕೆ ಅವರು ನಿನ್ನ ಅಕ್ಷರ ಬಂಧುವಲ್ಲವೆ ಎಂದು ಪ್ರಶ್ನಿಸುತ್ತಿದೆ. ಈ ಸಾವಿನ ಕುರಿತು ಬರೆಯಬೇಕಾದ ಒತ್ತಡ ಸೃಷ್ಟಿಸಿದೆ.

ಮನುಷ್ಯ ದೇಹ ಅಮರವಲ್ಲ. ಅವನ ಚೇತನ ಕಾಲದ ಸರಪಳಿಯಲ್ಲಿ ಭಾಷೆಯ ಒಂದು ಕೊಂಡಿ. ಒಬ್ಬ ಬರಹಗಾರನ ಸಾವು ಕೇವಲ ಒಂದು ಮಾನವ ಜೀವದ ಇಲ್ಲವಾಗುವಿಕೆಯಲ್ಲ. ಅದು ಒಂದು ಭಾಷೆಯ ಒಂದು ಸಂವೇದನೆಯ ಸಾವು. ಬರಹಗಾರನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ದೇಹವಲ್ಲ, ಆತ ಅವನಂತೆ ಯೋಚಿಸುವ ಒಂದು ಸಮುದಾಯದ, ಒಂದು ತಲೆಮಾರಿನ ಪ್ರತಿನಿಧಿ. ಬರವಣಿಗೆ ಎಂದರೆ ಆಡದವರ ಮಾತು, ಕಾಣದವರ ಕಣ್ಣು. ವಾಲ್ಮೀಕಿ ರಾಮನ ಕುರಿತು ಹೇಳುವಂತೆ ಬರಹಗಾರ ‘ಪೂರ್ವಭಾಷಿ’. ಎದುರಿರುವವರು ಆಡಲಾರದ, ಅನುಭವಿಸಲಾರದ ಸಂಕಟಗಳಿಗೆ ಮಾತಿನ ರೂಪ ಕೊಟ್ಟು ಅವರಿಗಿಂತ ಮೊದಲೇ ಆಡುವವ. ಅದರಲ್ಲೂ ಸಂಶೋಧಕನ ಸ್ಥಾನ ಕವಿಗಿಂತ, ಬರಹಗಾರನಿಗಿಂತ ವಿಭಿನ್ನ ಹಾಗೂ ವಿಶಿಷ್ಟ. ಸತ್ಯನಿಷ್ಠುರಿಯಾಗಿ ಚರಿತ್ರೆ ತಿಳಿಯಬೇಕಾದ, ತಿಳಿಸಬೇಕಾದ ಜವಾಬ್ದಾರಿ ಸಂಶೋಧಕರ ಹೆಗಲ ಮೇಲಿರುತ್ತದೆ. ಎಂದೇ ದಿಟ್ಟವಾಗಿ, ವಿಶಿಷ್ಟವಾಗಿ ಚರಿತ್ರೆಯ ಮೂಲ ಆಕರಗಳನ್ನೇ ಶೋಧಿಸುತ್ತ ನಡೆದಿದ್ದ; ನಾನೆಂದೂ ನೋಡಿರದ, ಮಾತನಾಡಿರದ, ಕಲಬುರ್ಗಿಯವರ ಸಾವು ಒಳಗೊಂದು ತಂತಿ ಕಡಿದ ಅನುಭವ ಹುಟ್ಟಿಸುತ್ತಿದೆ.

ಅಳಿವಿರದ ಚೇತನವೇ, ಇಡುವ ಹೆಜ್ಜೆಗಳಲಿಷ್ಟು ಸತ್ಯದ ಕಸುವು ತುಂಬು, ನಮಸ್ಕಾರ..




Sunday 6 September 2015

ವೈದ್ಯಶಿಕ್ಷಣ ಮತ್ತು ಲಿಂಗರಾಜಕಾರಣ: ಪ್ಯಾಂಡೊರಾ ಪೆಟ್ಟಿಗೆ





ಇವತ್ತು ಎಷ್ಟೋ ಮಹಿಳೆಯರು ವೈದ್ಯ ವೃತ್ತಿಯಲ್ಲಿದ್ದಾರೆ. ಈಗ ಪ್ರತಿವರ್ಷ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ, ರ‍್ಯಾಂಕ್ ಪಡೆದವರ ಪಟ್ಟಿಯಲ್ಲಿ ವಿದ್ಯಾರ್ಥಿನಿಯರದೇ ಮೇಲುಗೈಯಾಗಿರುತ್ತದೆ. ವೈದ್ಯ ಕಾಲೇಜುಗಳಲ್ಲೂ ಬಿಳಿ ಏಪ್ರನ್ ತೊಟ್ಟ ಎಳೆಯ ವೈದ್ಯೆಯರು ಸಾಕಷ್ಟು ಕಾಣುತ್ತಾರೆ. ಇತ್ತೀಚೆಗೆ ಓದಿದ ವರದಿಯಂತೆ ಪಾಕಿಸ್ತಾನದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ವೈದ್ಯರಿದ್ದಾರೆ! ಇವತ್ತು ಹೆಣ್ಣುಮಕ್ಕಳು ಇಷ್ಟು ಸುಲಭದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಗಿಟ್ಟಿಸುತ್ತಿರುವುದರ ಹಿಂದೆ ಈ ಹಾದಿಯನ್ನು ತೆರವುಗೊಳಿಸಿದ ಪೂರ್ವ ಮಾತೆಯರ ಹೋರಾಟದ ದೊಡ್ಡ ಚರಿತ್ರೆಯೇ ಇದೆ. ಅದನ್ನು ತೆರೆದರೆ ‘ಪ್ಯಾಂಡೋರಾ’ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ.

ಗ್ರೀಕ್ ಪುರಾಣದ ಪ್ರಕಾರ ಭೂಮಿ ಮೇಲೆ ಹುಟ್ಟಿದ ಮೊದಲ ಹೆಣ್ಣು ಪ್ಯಾಂಡೊರಾ. ದೇವಾನುದೇವತೆಗಳು ಅವಳಿಗೆ ಸೌಂದರ್ಯ, ವಸ್ತ್ರ, ಸಂಗೀತ, ಮಾತು ಇತ್ಯಾದಿ ಎಲ್ಲ ಜಾಣ್ಮೆಯ ಕಾಣಿಕೆಯನ್ನೇನೋ ನೀಡಿದರು. ಆದರೆ ಸ್ವರ್ಗದಿಂದ ಬೆಂಕಿಯನ್ನು ಪ್ರೊಮಿಥಿಯಸ್ ಎಂಬ ನರನು ಅಪಹರಿಸಿ ತಂದಾಗ ಸರ್ವೇಶ ಜೀಯಸ್ಸನು ಅವನ ತಮ್ಮನಿಗೆ ಪ್ಯಾಂಡೊರಾಳನ್ನು ಒಂದು ಪೆಟ್ಟಿಗೆ ಸಮೇತ ನೀಡಿಬಿಟ್ಟ. ಬೆಂಕಿಯ ಜೊತೆಗೆ ಪ್ಯಾಂಡೊರಾಳೂ, ಅವಳ ಪೆಟ್ಟಿಗೆಯೂ ಸ್ವರ್ಗದಿಂದ ಭೂಮಿಗೆ ಬಂದವು. ಆ ಪೆಟ್ಟಿಗೆಯಲ್ಲಿ ಸಾವು, ರೋಗರುಜಿನ, ದುಃಖಗಳೂ ಸೇರಿದಂತೆ ಎಲ್ಲ ಕೆಡುಕುಗಳೂ ಇದ್ದವು. ಅದು ತಿಳಿಯದ ಪ್ಯಾಂಡೊರಾ ಕುತೂಹಲ ತಡೆಯಲಾಗದೆ ಭೂಮಿ ಮೇಲೆ ಬಂದವಳೇ ಆ ಪೆಟ್ಟಿಗೆ ತೆರೆದುಬಿಟ್ಟಳು. ಅಗೋ, ಅದರಲ್ಲಿದ್ದ ಎಲ್ಲ ಕೆಡುಕುಗಳೂ ಹೊರಬಂದೇಬಿಟ್ಟವು. ಅವಳೆಷ್ಟೇ ಅದರ ಮುಚ್ಚಳ ಹಾಕಲು ಯತ್ನಿಸಿ ಪೆಟ್ಟಿಗೆ ಮೇಲೇ ಹತ್ತಿ ಕೂತರೂ ಹೊರಬರುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗವಳು ಅದರ ಮುಚ್ಚಳ ಹಾಕುವಾಗ ತಳದಲ್ಲಿ ಒಂದೇ ಒಂದು ಉಳಿದಿತ್ತು: ಅದು ‘ಭರವಸೆ’! (ಹೋಪ್).


(source: internet)
ಈಗ ಹೆಣ್ಣುಮಕ್ಕಳೂ ತಮ್ಮ ಮುಚ್ಚಿಟ್ಟ ಗಾಯಗಳ ತೆರೆದು ತೋರಿಸತೊಡಗಿದರೆ ಪ್ಯಾಂಡೊರಾ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ. ಆದರೂ ತಳದಲ್ಲಿ ಉಳಿದಿರುವ ಹನಿ ಭರವಸೆ, ಆ ಧೈರ್ಯದಿಂದ ಪೆಟ್ಟಿಗೆಯಿಂದ ಹೊರಬಂದವನ್ನು ಆವಾಗೀವಾಗ ಪಟ್ಟಿ ಮಾಡಿ ನೋಡಬೇಕಾಗುತ್ತದೆ!

ಅನಾದಿಯಿಂದ ಅಕ್ಷರದ ಬೆಳಕನ್ನು ನಿರಾಕರಿಸಲ್ಪಟ್ಟವರು ಮಹಿಳೆಯರು. ಪೂರ್ವಪಶ್ಚಿಮಉತ್ತರದಕ್ಷಿಣಗಳ ಭೇದವಿಲ್ಲದೆ ಎಲ್ಲ ದೇಶಗಳೂ ಅವರನ್ನು ಜ್ಞಾನ ವಂಚಿತರನ್ನಾಗಿಸಿವೆ. ಅದರಲ್ಲೂ ವಿಜ್ಞಾನ, ವೈದ್ಯ ವಿಜ್ಞಾನ ಮಹಿಳೆಯ ಜ್ಞಾನವನ್ನು ಮನೆಮದ್ದಿಗಷ್ಟೇ ಸೀಮಿತಗೊಳಿಸಿತ್ತು. ವಿಶ್ವಾದ್ಯಂತ ಸಾರ್ವಜನಿಕರಿಗೆ ಲಭ್ಯವಾಗುವಂತೆ ವೈದ್ಯ ವೃತ್ತಿಯಲ್ಲಿ ತೊಡಗಿದ ಯಾವುದೇ ಪ್ರಕಾರದ ಮಹಿಳಾ ವೈದ್ಯರೂ ಇರಲಿಲ್ಲ. ಇಸ್ಲಾಮಿಕ್ ಮಧ್ಯಪ್ರಾಚ್ಯದಲ್ಲಿ, ಪ್ರಾಚೀನ ಭಾರತದ ಆಯುರ್ವೇದದಲ್ಲಿ, ಚೀನಾದ ವೈದ್ಯ ಪದ್ಧತಿಯಲ್ಲಿ, ಗ್ರೀಸಿನಲ್ಲಿ ವೈದ್ಯ ಮಹಿಳೆಯರಿರಲಿಲ್ಲ. ಪುರುಷ ವೈದ್ಯರಿಗೆ ಸಹಾಯಕರಾಗಿ ಹಲವರು ಇದ್ದರು. ಅವರನ್ನು ರೋಗಿಯ ಸೇವೆ ಮಾಡುವ ‘ದಾದಿ’, ‘ದಾಯಿ’ ಕೆಲಸಗಳಿಗೆ ನೇಮಿಸಲಾಗುತ್ತಿತ್ತೇ ವಿನಹ ವೈದ್ಯರ ಕೆಲಸಕ್ಕೆ ನೇಮಕ ಮಾಡಿದ್ದು ಇಲ್ಲವೆನ್ನುವಷ್ಟು ಕಡಿಮೆ. ಈ ಮಾತು ಇವತ್ತಿಗೂ ನಿಜ. ಒಂದು ಅಂಕಿಅಂಶದ ಪ್ರಕಾರ ಭಾರತದ ೯೪.೬ % ನರ್ಸುಗಳು ಮಹಿಳೆಯರು. ಅದೇ ಭಾರತದ ೮.೫ ಲಕ್ಷ ಅಲೋಪತಿ ವೈದ್ಯರಲ್ಲಿ ೧೭% ಮಾತ್ರ ಹೆಣ್ಣುಮಕ್ಕಳು. ಗ್ರಾಮೀಣ ಭಾಗದ ವೈದ್ಯರಲ್ಲಿ ೮% ಮಾತ್ರ ಮಹಿಳೆಯರು. ೨೦೦೦ ಜನಸಂಖ್ಯೆಗೆ ಒಬ್ಬ ಪುರುಷ ವೈದ್ಯನಿದ್ದರೆ, ಮಹಿಳಾ ವೈದ್ಯೆ ೧೧,೦೦೦ ಜನಸಂಖ್ಯೆಗೆ ಒಬ್ಬರಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನ ಹೀಗಿರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಲಿಂಗ ರಾಜಕಾರಣವು ಸ್ತ್ರೀಗುಣ/ಸ್ವಭಾವವೆಂದು ಇಲ್ಲದ ಗುಣಗಳನ್ನು, ಮನುಷ್ಯ ಅಸಹಜ ಮೌಲ್ಯಗಳನ್ನು ಆರೋಪಿಸಿ ಹೆಣ್ಣು ಅದನ್ನೇ ನಂಬುವಂತೆ ಮಾಡಿದ್ದು. ಮಹಿಳಾ ಮಾದರಿಗಳು, ವ್ಯಾಖ್ಯಾನಗಳು ಹುಟ್ಟಿದ್ದು ಅವಳ ನಿಯಂತ್ರಣಕ್ಕೆ ಹಾಗೂ ಸದಾ ಅವನೆಂಬ ಯಜಮಾನನ ಅಧೀನದಲ್ಲಿದ್ದರಷ್ಟೇ ಇವಳು ಸುರಕ್ಷಿತ ಎಂದು ತಿಳಿಸುವುದಕ್ಕೆ. ಭಾರತದ ಜಾತಿಪದ್ಧತಿ ತನ್ನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರತಿ ಶ್ರೇಣಿಯಲ್ಲೂ ಕೆಳಹಂತವನ್ನೇ ನೀಡಿದ ಕಾರಣ ಈ ನೆಲದ ಮಹಿಳೆ ಸದಾ ಹಕ್ಕುಗಳಿಂದ ವಂಚಿತಳಾಗಿ ಎರಡನೆಯ ದರ್ಜೆ ಪ್ರಜೆಯಾಗಿ ಬದುಕಿದಳು. ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲೇ ಲಿಂಗತಾರತಮ್ಯವನ್ನೂ, ಲಿಂಗ ಅಸಮಾನತೆಯ ಬೇರುಗಳನ್ನೂ ಹೊಂದಿರುವುದರಿಂದ ಮಹಿಳೆಯ ಪಾತ್ರವನ್ನು ಒಂದೋ ನಗಣ್ಯಗೊಳಿಸುವುದು ಅಥವಾ ಪಾರಂಪರಿಕ ನೆಲೆಗೆ ಕಟ್ಟಿಹಾಕಿ ಅವಳ ಪಾತ್ರವನ್ನು ಮಿತಿಗೊಳಿಸುವುದು ನಿರಂತರ ನಡೆದೇ ಇತ್ತು. ಹೀಗಿರುತ್ತ ವೈದ್ಯಕೀಯವೂ ಲಿಂಗರಾಜಕಾರಣದಿಂದ ತಪ್ಪಿಸಿಕೊಳ್ಳಲಿಲ್ಲ. ಮಹಿಳೆ ತಲೆಮೇಲೆತ್ತಿ ತನ್ನ ಎಲ್ಲ ಹಕ್ಕುಗಳ ಪ್ರತಿಪಾದಿಸತೊಡಗಿದ ಮೇಲಷ್ಟೇ ವೈದ್ಯಕೀಯವೂ ಹೆಣ್ಣಿನ ಅನನ್ಯತೆಗಳ ಬಗೆಗೆ, ಅನನ್ಯ ಸಮಸ್ಯೆಗಳ ಬಗೆಗೆ ಗಮನ ಹರಿಸಿತೆಂದು ಹೇಳಬಹುದು.

ಸೀತೆಯರಿಗದೆಷ್ಟು ಲಕ್ಷ್ಮಣ ರೇಖೆಗಳು? 


ಭಾರತದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ೧೮೩೫ರಲ್ಲಿ ಸ್ಥಾಪನೆಯಾಯಿತು. ಮೊದಲ ಬಾರಿ ಹೆಣ್ಣುಮಕ್ಕಳನ್ನು - ಅದರಲ್ಲೂ ಬ್ರಿಟಿಷ್ ಹೆಣ್ಣುಮಕ್ಕಳನ್ನು - ವೈದ್ಯ ಕೋರ್ಸಿಗೆ ಸೇರಿಸಿಕೊಂಡಿದ್ದು ೧೮೭೫ರಲ್ಲಿ. ಅವರ ಜೊತೆ ಭಾರತೀಯ ಕ್ರೈಸ್ತ ಅಥವಾ ಆಂಗ್ಲೋಸಾಕ್ಸನ್ ಮೂಲದವರಿಗಷ್ಟೇ ಪ್ರವೇಶವಿತ್ತು. ಆ ಕಾಲೇಜಿನ ಮೊದಲ ವಿದ್ಯಾರ್ಥಿನಿ ಮೇರಿ ಆನ್ ಪ್ರವೇಶಕ್ಕೆ ಎಷ್ಟು ಕಷ್ಟ ಪಟ್ಟಳೋ, ಅಷ್ಟೇ ಪ್ರತಿರೋಧ ನಂತರವೂ ಎದುರಿಸಿದಳು. ಕಾಲೇಜಿಗೆ ಹೋಗತೊಡಗಿದ ಮೇಲೂ ಪಾಠ ಹೇಳಿಕೊಡುವವರಿಲ್ಲದೆ ಹಲವು ತಿಂಗಳು ಕೈಕೈ ಹೊಸೆಯುತ್ತ ಕಾಲ ಕಳೆಯಬೇಕಾಯಿತು. ಏಕೆಂದರೆ ಅಲ್ಲಿನ ಡೈರೆಕ್ಟರ್ ಮಹಾಶಯನಿಗೆ (ಆತನೂ ಬ್ರಿಟಿಷ್) ಹೆಣ್ಮಕ್ಕಳಿಗೆ ಬೋಧಿಸಲು ಇಷ್ಟವಿರಲಿಲ್ಲ. ‘ನೀನು ವಾರ್ಡಿನಲ್ಲಿ ತಿರುಗಾಡು, ಆದರೆ ನಾನು ನಿನಗೆ ಪಾಠ ಹೇಳುವುದಿಲ್ಲ’ ಎಂದು ಆತ ಬೋಧಿಸಲು ನಿರಾಕರಿಸಿದ. ಆದರೆ ಮೇರಿ ಉಳಿದ ಪ್ರೊಫೆಸರುಗಳ ಸಹಾಯದಿಂದ ಪದವಿ ಪಡೆದಳು. ಅಬಲಾ ದಾಸ್ (ಜಗದೀಶಚಂದ್ರ ಬೋಸ್ ಹೆಂಡತಿ) ೧೮೮೧ರಲ್ಲಿ ಪ್ರವೇಶ ಪರೀಕ್ಷೆ ಪಾಸು ಮಾಡಿದ್ದರೂ ಹೆಣ್ಣು ಎಂಬ ಕಾರಣಕ್ಕೆ ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಕ್ರೈಸ್ತೇತರರಿಗೆ ಪ್ರವೇಶವಿರದ ಕಾರಣ ಭಾರತದ ಮೊದಲ ವೈದ್ಯೆ ಆನಂದಿ ಬಾಯಿ ಜೋಷಿ ೧೮೮೬ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ಕಾಲೇಜಿನಲ್ಲಿ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಪಡೆದು ಪದವಿ ಗಳಿಸಬೇಕಾಯಿತು.

ಆದರೆ ಭಾರತದಲ್ಲಷ್ಟೇ ಹೀಗೆಂದು ಭಾವಿಸಿದರೆ ತಪ್ಪಾದೀತು. ಎಲ್ಲ ಕಡೆಯೂ ಭೂಮಿ ಗುಂಡಗಿದೆ, ಆದರೂ ಚಪ್ಪಟೆಯಾಗಿಯೇ ಅನುಭವಕ್ಕೆ ದಕ್ಕುತ್ತದೆ. ಅಮೆರಿಕದಲ್ಲಿ ‘ಹೈಯರ್ ಎಜುಕೇಷನ್ ಅಮೆಂಡ್‌ಮೆಂಟ್ ಆಕ್ಟ್ ೧೯೭೨’ ಹಾಗೂ ‘ಪಬ್ಲಿಕ್ ಹೆಲ್ತ್ ಸರ್ವೀಸ್ ಆಕ್ಟ್ ೧೯೭೫’ ಜಾರಿಯಾಗುವವರೆಗೆ ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸೇವೆಯ ಮೇಲೆ ನಿರ್ಬಂಧವಿತ್ತು. ಅಮೆರಿಕವಷ್ಟೇ ಅಲ್ಲ, ವಿಶ್ವಾದ್ಯಂತ ಮಹಿಳೆಯರನ್ನು ವೈದ್ಯವೃತ್ತಿಯಿಂದ ದೂರವಿಟ್ಟ ದೊಡ್ಡ ಇತಿಹಾಸವಿದೆ.

೧೫೪೦ರಲ್ಲಿ ದೊರೆ ಎಂಟನೇ ಹೆನ್ರಿಯು ‘ಬಾರ್ಬರ್ ಸರ್ಜನ್’ಗಳ ಗುಂಪನ್ನು ಸೇವೆಗಾಗಿ ನೇಮಿಸಿಕೊಂಡು ವೈದ್ಯಕೀಯವನ್ನು ವೃತ್ತಿಯಾಗಿ ಪರಿಗಣಿಸಿದ ಮೊದಲ ದೊರೆಯಾದ. ಆದರೆ ಆ ಕೆಲಸಕ್ಕೆ ಹೆಣ್ಣುಮಕ್ಕಳ ನೇಮಕವನ್ನು ನಿರ್ಬಂಧಿಸಲಾಗಿತ್ತು. ನಂತರ ಕೆಲ ಶತಮಾನಗಳವರೆಗೆ ವೈದ್ಯಕೀಯ ಸೇವೆ ವೃತ್ತಿ ರೂಪ ಪಡೆದುಕೊಳ್ಳುತ್ತಿರುವಾಗಲೂ ಮಹಿಳೆಯರಿಗೆ ಅದು ನಿಲುಕದೇ ಇತ್ತು. ಮಹಿಳಾ ವೈದ್ಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ೧೯-೨೦ನೇ ಶತಮಾನದವರೆಗೂ ಕಾಯಬೇಕಾಯಿತು.

ಕೇವಲ ೨೦೦ ವರ್ಷ ಕೆಳಗೆ ಗಂಡಸಿನ ವೇಷದಲ್ಲಿ ಹೆಣ್ಣು ವೈದ್ಯವೃತ್ತಿ ನಡೆಸಬೇಕಾದ ಪರಿಸ್ಥಿತಿ ಇತ್ತು!


(ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ - ಮಾರ್ಗರೆಟ್ ಆನ್ ಬಲ್ಕ್‌ಲಿ)

ನಿಜ. ಮಾರ್ಗರೆಟ್ ಆನ್ ಬಲ್ಕ್‌ಲಿ ಎಂಬ ಮಹಿಳೆಯ ವೃತ್ತಾಂತ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಹೆಣ್ಣು ಎಂದು ಗೊತ್ತಾದರೆ ಕಲಿಯುವ, ಪ್ರಾಕ್ಟೀಸ್ ಮಾಡುವ ಅವಕಾಶ ಸಿಗುವುದಿಲ್ಲವೆಂದು ಇಂಗ್ಲೆಂಡಿನ ಮಾರ್ಗರೆಟ್ ಬಲ್ಕ್‌ಲಿ ತನ್ನ ಹೆಸರನ್ನು ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ (೧೭೮೯-೧೮೬೫) ಎಂದು ಬದಲಿಸಿಕೊಂಡು ವೈದ್ಯಕೀಯ ಸೇರಿದಳು. ಗಂಡಿನ ವೇಷದಲ್ಲಿ ಎಡಿನ್‌ಬರೋ ಮೆಡಿಕಲ್ ಕಾಲೇಜಿನಿಂದ ಮೆಡಿಕಲ್ ಪದವಿ ಪೂರೈಸಿ, ರಾಯಲ್ ಕಾಲೇಜಿನಲ್ಲಿ ಮಾಸ್ಟರ್ ಡಿಗ್ರಿಯೂ ಆಯಿತು. ಕೊನೆಗೆ ಬ್ರಿಟಿಷ್ ಸೈನ್ಯದಲ್ಲಿ ಸರ್ಜನ್ ಆಗಿ ಮಾರ್ಗರೆಟ್ ಯಾನೆ ಜೇಮ್ಸ್ ಸ್ಟುವರ್ಟ್ ಸೇವೆ ಸಲ್ಲಿಸಿದಳು. ಭಾರತ, ದ. ಆಫ್ರಿಕಾ, ಮಾಲ್ಟಾ, ಜಮೈಕಾ, ಮಾರಿಷಿಯಸ್ ಮುಂತಾದ ಹಲವಾರು ಕಡೆ ಬ್ರಿಟಿಷ್ ಕಾಲನಿಗಳಿರುವಲ್ಲೆಲ್ಲ ಕೆಲಸ ಮಾಡಿದಳು. ಆಫ್ರಿಕಾದ ಮೊತ್ತಮೊದಲ ಯಶಸ್ವಿ ಸಿಸೇರಿಯನ್, ಎಂದರೆ ತಾಯಿ ಮಗು ಇಬ್ಬರೂ ಬದುಕುಳಿವಂತೆ ಸಿಸೇರಿಯನ್ ಮಾಡಿದ ಖ್ಯಾತಿ ಅವಳದೇ. ಹೋದಲ್ಲೆಲ್ಲ ಸ್ಥಳೀಯರ ಆರೋಗ್ಯ, ಸ್ವಚ್ಛತೆ ಹಾಗೂ ಸಾಮಾಜಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಿದ ಜೇಮ್ಸ್ ಯಾನೆ ಮಾರ್ಗರೆಟ್‌ಗೆ ಬ್ರಿಟಿಷ್ ಸೈನ್ಯದಲ್ಲಿ ಇನ್‌ಸ್ಪೆಕ್ಟರ್ ಜನರಲ್ ಹುದ್ದೆಯ ತನಕ ಬಡ್ತಿ ಸಿಕ್ಕಿತು. ಬದುಕಿಡೀ ಏಕಾಂಗಿಯಾಗಿಯೇ ಇದ್ದ ಜೇಮ್ಸ್‌ಗೆ ಸಾಕು ನಾಯಿ ಹಾಗೂ ಜಮೈಕಾದ ಸಹಾಯಕ ಜಾನ್ ಅವರೇ ಸಂಗಾತಿಗಳು.

೧೮೬೫ರಲ್ಲಿ ಜೇಮ್ಸ್ ತೀರಿಕೊಂಡಾಗ ಮೃತದೇಹವನ್ನು ಸ್ನಾನಕ್ಕೆ ಒಯ್ದರು. ಆಗ ನೋಡುತ್ತಾರೆ, ಸರ್ಜನನ ದೇಹ ಹೆಣ್ಣಿನದು! ಹೆಣ್ಣಿನ ಎಲ್ಲ ಅಂಗಾಂಗಗಳೂ ಇವೆ, ಹೊಟ್ಟೆ ಮತ್ತು ಜನನಾಂಗಗಳು ಮಗು ಹೆತ್ತ ಲಕ್ಷಣ ತೋರಿಸುತ್ತವೆ ಎಂದು ಮೃತದೇಹಕ್ಕೆ ಸ್ನಾನ ಮಾಡಿಸಿದಾಕೆ ಹೇಳಿದಳು. ಎಲ್ಲರೂ ಬೆಚ್ಚಿಬಿದ್ದರು. ತನಿಖೆ ಶುರುವಾಯಿತು. ಪತ್ರ ವ್ಯವಹಾರಗಳನ್ನು ನೋಡಿದ ಮೇಲೆ ಅದು ಹೆಸರು ಬದಲಿಸಿಕೊಂಡಿದ್ದ, ಗಂಡಸೆಂದು ಹೇಳಿ ಬದುಕಿದ್ದ ಮಾರ್ಗರೆಟ್ ಬಲ್ಕ್‌ಲಿ ಎಂಬ ಮಹಿಳೆಯೆಂದು ಗೊತ್ತಾಯಿತು!

ಆ ಸರ್ಜನ್ ವಿಚಿತ್ರ, ವಿಕ್ಷಿಪ್ತ ನಡವಳಿಕೆಯವನಾಗಿದ್ದನೆಂದು ಎಲ್ಲ ತಮ್ಮ ಅನುಭವ ಹೇಳಿಕೊಂಡರು. ಫ್ಲಾರೆನ್ಸ್ ನೈಟಿಂಗೇಲ್ ಸಹಾ ಈ ಸರ್ಜನನ ಕಿರುಕುಳದ ನಡವಳಿಕೆಯ ಬಗೆಗೆ ಕಸಿವಿಸಿಯ ಪ್ರತಿಕ್ರಿಯೆಯನ್ನು ತನ್ನ ಡೈರಿಯಲ್ಲಿ ದಾಖಲಿಸಿದ್ದಾಳೆ. ಬಹುಶಃ ಬದಲಾದ ಲಿಂಗ ಅಸ್ಮಿತೆಯೊಂದಿಗೆ ಹೊರಜಗದೊಡನೆ ವ್ಯವಹರಿಸಬೇಕಾದ ಅಗತ್ಯ, ತನ್ನ ಕೀರಲು ದನಿಗಾಗಿ ಬೆನ್ನಹಿಂದೆ ಆಡಿಕೊಳ್ಳುತ್ತಿದ್ದ ವ್ಯಂಗ್ಯದ ಮಾತುಗಳು, ಸಾಯುವವರೆಗೆ ಜೊತೆಯಲ್ಲಿದ್ದ ಜಮೈಕಾದ ಸಹಾಯಕ ಜಾನ್‌ನೊಂದಿಗಿದ್ದ ಗುಟ್ಟಾದ ಸಂಬಂಧ ಇವೆಲ್ಲವೂ ಅಂಥ ನಡತೆಗೆ ಕಾರಣವಾಗಿದ್ದವೇ? ಯಾರು ಬಲ್ಲರು?



ಒಂದು ಹೆಣ್ಣು ವೈದ್ಯವೃತ್ತಿ ನಡೆಸಲು ಇಷ್ಟಪಟ್ಟರೆ ಜೀವಮಾನ ಪೂರ್ತಿ ಗಂಡುವೇಷದಲ್ಲಿಯೇ ಬದುಕಬೇಕಾಗಿತ್ತು ಎನ್ನುವುದಷ್ಟೇ ಈ ಘಟನೆಯ ನಂತರ ಹೊರಜಗತ್ತಿಗೆ ಗೊತ್ತಾಯಿತು.

ಮೊದಲ ವೈದ್ಯೆ: ಹೆಜ್ಜೆಯ ಬೆನ್ನಿಗೆ ಮಹಿಳಾ ಚಳುವಳಿ

ಮಹಿಳಾ ಚಳುವಳಿಯ ಮೊದಲ ದನಿಗಳು ಕೇಳಿಬರತೊಡಗಿದ ಮೇಲೆ ೧೮೫೦ರ ಸುಮಾರು ಲಂಡನ್, ಪೆನ್ಸಿಲ್ವೇನಿಯಾ, ಸೇಂಟ್ ಪೀಟರ‍್ಸ್‌ಬರ್ಗ್, ಎಡಿನ್‌ಬರೋ, ಟೋಕಿಯೋ, ಗ್ವಾಂಗ್ಜುಗಳಲ್ಲಿ ಮಹಿಳಾ ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದವು. ಪ್ಯಾರಿಸ್ ಮೆಡಿಕಲ್ ಕಾಲೇಜಿನಲ್ಲಿ ವಿಶ್ವದ ಎಲ್ಲ ಭಾಗಗಳ ವೈದ್ಯ ವಿದ್ಯಾರ್ಥಿನಿಯರು ಬೆರಳೆಣಿಕೆಯಷ್ಟು ಇದ್ದರು. ಆದರೆ ಅಲ್ಲಿ ಫ್ರೆಂಚ್ ವಿದ್ಯಾರ್ಥಿನಿಯರಿರಲಿಲ್ಲ. ಆ ಕಾಲೇಜಿನಲ್ಲಿ ೧೮೭೫ರಲ್ಲಿ ಪದವಿ ಪಡೆದ ಮೆಡೆಲಿನ್ ಬ್ರೆಸ್ ಮೊದಲ ಫ್ರೆಂಚ್ ವೈದ್ಯೆ.

ಪ್ಯಾರಿಸ್ ಮೆಡಿಕಲ್ ಕಾಲೇಜು ಪ್ರವೇಶ ಕೋರಿ ಮಹಿಳೆಯರು ದೊಡ್ಡ ಹೋರಾಟ ನಡೆಸಿದ್ದಾರೆ. ೧೮೬೭ರಲ್ಲಿ ಅಮೆರಿಕಾದ ಮೇರಿ ಪುಟ್ನಾಮ್ ಅಲ್ಲಿ ಪ್ರವೇಶ ಬಯಸಿದಾಗ ಆಡಳಿತ ಮಂಡಳಿ ಅಡ್ಮಿಷನ್ ನಿರ್ಬಂಧಿಸಿತು. ಹೆಣ್ಣುಮಕ್ಕಳ ಪ್ರವೇಶವು ಸಮಾಜದ ಮತ್ತು ವೃತ್ತಿಯ ನೈತಿಕತೆ ಕಡಿಮೆ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. ಆಗ ಮದುವೆಯಾದ ಮೇಲೆ ಕಾನೂನಾತ್ಮಕವಾಗಿ ಮಹಿಳೆಯರನ್ನು ಮೈನರ್‌ಗಳೆಂದು ಪರಿಗಣಿಸಲಾಗುತ್ತಿತ್ತು. ಅದರಿಂದ ವೈದ್ಯಕೀಯ ಸೇವೆ ಮತ್ತು ವೃತ್ತಿಗೆ ತೊಂದರೆಯಾಗಬಹುದು ಎಂದು ಸೀಟು ನಿರಾಕರಿಸಲಾಯಿತು. ನಂತರ ಈ ವಿಷಯ ರಾಜಕುಮಾರಿ ಯೂಜೆನಿಯ ಬಳಿ ಹೋಯಿತು. ಪ್ರವೇಶ ಕೊಡುವುದೋ ಬೇಡವೋ ಎಂಬ ಬಗ್ಗೆ ಸಮಿತಿ ರಚಿಸಲಾಯಿತು. ರಾಜಕುಮಾರಿಯ ಒತ್ತಾಸೆಯಿಂದ ಪ್ರವೇಶ ಸಿಕ್ಕಿತು. ಹಾಗೆ ಪ್ರವೇಶ ಪಡೆದು, ೧೮೭೦ರಲ್ಲಿ ಪ್ಯಾರಿಸ್ ಮೆಡಿಕಲ್ ಸ್ಕೂಲಿನಿಂದ ಪಾಶ್ಚಾತ್ಯ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಮೊದಲ ಮಹಿಳೆ ಇಂಗ್ಲೆಂಡಿನ ಎಲಿಜಬೆತ್ ಗ್ಯಾರೆಟ್. ಮೇರಿ ಪುಟ್ನಾಮ್ ೧೮೭೧ರಲ್ಲಿ ಪದವಿ ಪಡೆದಳು.

ಪ್ರವೇಶವೇನೋ ಸಿಕ್ಕಿತು, ನಂತರ ವೈದ್ಯಶಿಕ್ಷಣ ಪಡೆಯುವಾಗ ಮೊದಲ ವೈದ್ಯೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಲೈಬ್ರರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೂತ್ ರಚಿಸಲಾಗಿತ್ತು. ಒಬ್ಬ ಸಿವಿಲ್ ಲಾ ಪ್ರೊಫೆಸರ್ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತ, ‘ಈ ವಿದ್ಯಾರ್ಥಿನಿಯನ್ನು ಸೇರಿಸಿಕೊಳ್ಳುವಾಗ ಕ್ಲಾಸ್‌ರೂಮಿನಲ್ಲಿ ಪೊಲೀಸರನ್ನಿಟ್ಟುಕೊಳ್ಳಬೇಕೆಂದು ಹೆದರಿದ್ದೆವು. ಆದರೆ ಹಾಗಾಗಲಿಲ್ಲ. ಅದಕ್ಕೆ ಉಳಿದ ಹುಡುಗರನ್ನು ಅಭಿನಂದಿಸುತ್ತೇನೆ’ ಎಂದರು.

ಹಾಗೆ ನೋಡಿದರೆ ಪ್ರೊಫೆಸರರಿಗಿಂತ ಹುಡುಗರು ಹುಡುಗಿಯರನ್ನು ಮುಕ್ತವಾಗಿ ನಡೆಸಿಕೊಂಡಿದ್ದರು. ಮೇರಿ ಪುಟ್ನಾಮ್‌ನಿಂದ ಹಿಡಿದು ಹಲವರು ತಾವು ಮಂಡಿಸಿದ ಪ್ರಬಂಧಗಳಲ್ಲಿ ತಮ್ಮ ಸಹಪಾಠಿ ಹುಡುಗರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ‘ಸ್ವಾತಂತ್ರ್ಯ, ಸಮಾನತೆ, ಸೋದರತೆಗಳು ಗೋಡೆ ಮೇಲೆ ಬರೆದ ಘೋಷಣೆಗಳಾಗದಂತೆ ನೋಡಿಕೊಂಡ ಸ್ನೇಹಿತರಿಗೆ’ ಮಟಿಲ್ಡಾ ಅಯರ್ಟನ್ ತನ್ನ ಪ್ರಬಂಧ ಅರ್ಪಿಸಿದ್ದಾಳೆ. ಕೆಲ ಹುಡುಗಿಯರು ತಮ್ಮ ಅನುಭವಗಳನ್ನು ಡೈರಿಯಲ್ಲಿ ದಾಖಲಿಸಿದ್ದಾರೆ:

‘ಹುಡುಗಿ ಆಸ್ಪತ್ರೆ ಅಥವಾ ಕ್ಲಾಸ್ ರೂಂ ಪ್ರವೇಶಿಸಿದ ಕೂಡಲೇ ಹುಡುಗರು ಬೂ ಎಂದು ಕೂಗಲು ಶುರು ಮಾಡುತ್ತಿದ್ದರು. ಹುಡುಗಿಯರು ಪ್ರೊಫೆಸರರೊಟ್ಟಿಗೇ ಕೋಣೆ ಪ್ರವೇಶಿಸಬೇಕು. ಮೊದಲ ಸಾಲಿನಲ್ಲೇ ಕೂರಬೇಕು. ಒಂದು ದಿನ ಎಷ್ಟೊತ್ತಾದರೂ ಪ್ರೊಫೆಸರ್ ಬರಲಿಲ್ಲವೆಂದು ನಿಂತು ನಿಂತು ಸಾಕಾಗಿ ಹುಡುಗಿಯರು ಕ್ಲಾಸ್‌ರೂಮಿನೊಳಗೆ ಹೋಗಿ ಮೊದಲ ಸಾಲಿನಲ್ಲಲ್ಲ, ಹುಡುಗರ ನಡುವೆ ಇದ್ದ ಜಾಗದಲ್ಲೇ ಕೂತುಬಿಟ್ಟೆವು. ಅವರ ಜೋಕುಗಳು ಆಗ ನಿಂತವು’ ಎಂದು ಒಬ್ಬಾಕೆ ಡೈರಿಯಲ್ಲಿ ದಾಖಲಿಸಿದ್ದಾಳೆ.

ಯಾಕೆ ವಿರೋಧ?

೧೮೮೮ರಲ್ಲಿ ಕ್ಯಾರೊಲಿನ್ ಷುಲ್ಟ್ಜ್ ಎಂಬ ವೈದ್ಯ ವಿದ್ಯಾರ್ಥಿನಿಯ ಥೀಸಿಸ್ ಮೌಲ್ಯಮಾಪನ ಮಾಡಿ ಪ್ರೊ. ಚಾರ್ಕಾಟ್ ಎಂಬ ಖ್ಯಾತ ಸರ್ಜನ್ ಬರೆದ ಟಿಪ್ಪಣಿಗಳು ಒಟ್ಟಾರೆ ಸಮಾಜ ಮಹಿಳೆಯನ್ನು ಹೇಗೆ ಗ್ರಹಿಸಿತ್ತು ಎಂದು ತಿಳಿಸುತ್ತವೆ. ಥೀಸಿಸ್ ಅನ್ನು ಮೆಚ್ಚಿಕೊಳ್ಳುತ್ತಲೇ ಆಕೆ ವೈದ್ಯೆಯಾಗಲು ಏಕೆ ಅನುಮತಿ ಕೊಡಬಾರದೆಂದು ಆತ ನಾಲ್ಕು ಷರಾ ಬರೆದ:


  1. ಅವರ ದೈಹಿಕ ನ್ಯೂನತೆ, ದೌರ್ಬಲ್ಯದ ಕಾರಣದಿಂದಲೇ ಹುಡುಗಿಯರಿಗೆ ರೋಗಿಗಳನ್ನು ಎತ್ತುವುದು ಅಸಾಧ್ಯವಾಗಿದೆ. 
  2. ತಿಂಗಳಲ್ಲಿ ಒಂದು ವಾರ ಅವರ ದೈಹಿಕ ಶಕ್ತಿ ಕುಂದಿರುತ್ತದೆ. ಋತುಸ್ರಾವದ ಅವಧಿಯಲ್ಲಿ ತನ್ನ ಕಾಳಜಿ ವಹಿಸುವುದು ಬಿಟ್ಟು ಬೇರಾರೋ ರೋಗಿಯ ಕಾಳಜಿಯನ್ನು ವಹಿಸಲು ಸಾಧ್ಯವಾಗುವುದಿಲ್ಲ. 
  3. ನೈಸರ್ಗಿಕವಾದ ಅವರ ರಚನೆ, ಬಾಗುಬಳುಕುಗಳ ಸೂಕ್ಷ್ಮ ದೇಹ ರೋಗಿಗಳ ಕೊಳಕು ಹಾಗೂ ಒರಟು ದೇಹಗಳ ಜೊತೆ ಒಡನಾಡುವುದಕ್ಕೆ ಸೂಕ್ತವಲ್ಲ. ಹೆಣ್ಮಕ್ಕಳ ಸೂಕ್ಷ್ಮ ಪ್ರವೃತ್ತಿಯೂ ಈ ವೃತ್ತಿಗೆ ಮತ್ತೊಂದು ಅಡೆತಡೆ. ರಕ್ತ, ಕೀವು, ಮಾಂಸಮಜ್ಜೆ ಅವರ ವ್ಯಕ್ತಿತ್ವದ ಸೂಕ್ಷ್ಮತೆಯನ್ನು ನಾಶ ಮಾಡುತ್ತದೆ. 
  4. ನೈಸರ್ಗಿಕ ಗುಣ ಸ್ವಭಾವಗಳೇ ಅವರು ವೈದ್ಯ ವೃತ್ತಿ ಮಾಡದಂತೆ ತಡೆಯುತ್ತವೆ. ಅವರು ಅತೀವ ಹೆಮ್ಮೆಯ, ಮಹಾತ್ವಾಕಾಂಕ್ಷೆಯ ಪ್ರವೃತ್ತಿಯವರು. ಅದರಿಂದಾಗಿ ಅವರು ಯಾರಿಗೂ ಎರಡನೆಯವರಾಗಿರಲು ಬಯಸುವುದಿಲ್ಲ. ಸೇವೆ ಮಾಡುವುದೇ ಮುಖ್ಯವಾಗಿದ್ದರೆ ಅವರು ಮಿಡ್‌ವೈಫುಗಳಾಗಿಯೋ, ನರ್ಸುಗಳಾಗಿಯೋ ಸೇವೆ ಮಾಡಿಕೊಂಡಿರಬಹುದಿತ್ತಲ್ಲವೆ? ವೈದ್ಯೆಯರೇ ಆಗಬೇಕೆಂದೇನಿತ್ತು?


ಚಾರ್ಕಾಟ್ ಅಷ್ಟೇ ಅಲ್ಲ, ಉಳಿದವರ ಅನಿಸಿಕೆಗಳೂ ಹೆಚ್ಚುಕಮ್ಮಿ ಇವೇ ಆಗಿದ್ದವು. ‘ಹೆಣ್ಣು ಗುಣ’ಗಳು ವೈದ್ಯವೃತ್ತಿಗೆ ಅಡೆತಡೆ ಎಂದೇ ಎಲ್ಲರೂ - ಹೆಣ್ಮಕ್ಕಳೂ ಕೂಡಾ, ಭಾವಿಸಿದ್ದರು. ಅಗಸ್ಟಿನೆ ಗೆರಾಲ್ಟ್ ೧೮೬೮ರಲ್ಲಿ, ‘ಮಹಿಳೆಗೆ ವೈದ್ಯ ಪದವಿ ಪಡೆಯುವ ಎಲ್ಲ ಹಕ್ಕಿದೆ. ಗುಣಪಡಿಸುವುದು ಅವಳ ಪ್ರಕೃತಿ ದತ್ತ ಗುಣವಾಗಿದೆ. ಎಷ್ಟೋ ನರ್ಸ್‌ಗಳು, ಮಿಡ್ವೈಫ್‌ಗಳು ಅದನ್ನು ಖಚಿತಪಡಿಸಿದ್ದಾರೆ. ಆದರೆ ನೈಸರ್ಗಿಕವಾಗಿ ಹೆರುವುದು, ಮಕ್ಕಳನ್ನು ಬೆಳೆಸುವುದು ಅವಳ ಕರ್ತವ್ಯವಾಗಿದೆ. ಆದ್ದರಿಂದ ಕೆಲವೇ ಕೆಲವು ವಿಶೇಷ ಮಹಿಳೆಯರಿಗಷ್ಟೇ ವೈದ್ಯಕೀಯ ಓದು, ಉದ್ಯೋಗದ ಅನುಮತಿ ನೀಡಬೇಕು’ ಎಂದು ಬರೆದಳು.

ಆ ಕಾಲದ ವೈಜ್ಞಾನಿಕ ಮತ್ತು ವೈದ್ಯಕೀಯ ಪತ್ರಿಕೆಗಳು ಎಲಿಜಬೆತ್ ಗ್ಯಾರೆಟ್‌ಗೆ ಮೊದಲ ಮಹಿಳಾ ವೈದ್ಯ ಪದವಿ ನೀಡಿದಾಗ ೧೮೭೦ರಲ್ಲಿ ಹೀಗೆ ಬರೆದವು:


(ಎಲಿಜಬೆತ್ ಗ್ಯಾರೆಟ್‌)
‘ಕಠಿಣ ಕೆಲಸ, ಗಾಯ, ರಕ್ತದ ಕಲೆ, ರೋಗ, ಗಲೀಜು ಈ ಎಲ್ಲವನ್ನೂ ನೋಡುತ್ತ ಹೆಣ್ಣು ತನ್ನ ಹೆಣ್ತನದ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಾಳೆ. ಅವರು ಹೆಣ್ಣೂ ಅಲ್ಲ, ಗಂಡೂ ಅಲ್ಲದಂತಾಗುತ್ತಾರೆ. ಬಸುರಾದಾಗ ಹೊಟ್ಟೆ ಮುಂದೆ ಮಾಡಿಕೊಂಡು ಹೇಗೆ ರೋಗಿಗಳನ್ನು ನೋಡುತ್ತಾರೆ? ಉತ್ತಮ ವೈದ್ಯನಾಗಲು ಮುಕ್ತ ಮತ್ತು ಗಟ್ಟಿ ಮನಸ್ಸು ಬೇಕು. ವಿಶಾಲ ಬುದ್ಧಿ ಮತ್ತು ಅನುಭವ ಬೇಕು. ತನ್ನ ಭಾವನೆಗಳ ಮೇಲೆ ನಿಯಂತ್ರಣವಿರುವ ಗಟ್ಟಿ ವ್ಯಕ್ತಿತ್ವ, ಗಂಭೀರ ಸ್ವಭಾವ, ಸಹಿಷ್ಣುತೆ, ನೈತಿಕತೆ ಮತ್ತು ಮಾಂಸಖಂಡದ ಶಕ್ತಿ ಎಲ್ಲ ಬೇಕು. ಹೆಣ್ಣಿನ ಗುಣಗಳು ಇವಕ್ಕೆ ವಿರುದ್ಧವಿಲ್ಲವೆ?’

ವೈದ್ಯಕೀಯ ನಿಯತಕಾಲಿಕಗಳು ೧೮೭೫ರಲ್ಲಿ ಹೀಗೆ ಬರೆದವು:

‘ಉಳಿದೆಲ್ಲ ಕಾರಣಗಳು ಏನೇ ಇರಲಿ, ಹೆಣ್ಣು ವೈದ್ಯಳಾಗುವುದು ಸಾಧ್ಯವಿಲ್ಲ, ಸರಿಯಲ್ಲ. ವೈದ್ಯಳಾದರೆ ಅವಳು ತನ್ನ ಹೆಣ್ತನ ಕಳೆದುಕೊಳ್ಳುತ್ತಾಳೆ. ಸೂಕ್ಷ್ಮತೆ ಕಳೆದುಕೊಳ್ಳುತ್ತಾಳೆ. ಅವರ ನೈತಿಕ ವ್ಯಕ್ತಿತ್ವ ಸಂಪೂರ್ಣ ಬದಲಾಗುತ್ತದೆ. ಅವರ ಹೃದಯ ಮಿಡಿಯುವುದನ್ನು ನಿಲಿಸುತ್ತದೆ. ಮದುವೆಯಲ್ಲಿ, ಕುಟುಂಬದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೊರಗಿನಿಂದ ಅವರು ಹೆಣ್ಣಿನಂತಿದ್ದರೂ ಹೆಣ್ತನವನ್ನು ಹೊಂದಿರುವುದಿಲ್ಲ. ಹೆಣ್ಣಾಗಿರಬೇಕೆಂದರೆ ವೈದ್ಯರಾಗಲು ಸಾಧ್ಯವಿಲ್ಲ. ವೈದ್ಯೆಯಾದ ಹೆಣ್ಣು ಅರೆಲಿಂಗಿಯಾಗಬಹುದು ಅಥವಾ ದೆವ್ವವಾಗಬಹುದು. ಈ ವಿಶೇಷಣಗಳನ್ನು ಒಪ್ಪಿಕೊಳ್ಳುವವರು ವೈದ್ಯೆಯರಾಗಲು ತೊಂದರೆಯಿಲ್ಲ. ಜೊತೆಗೆ ಇದನ್ನೂ ನೆನಪಿಡಬೇಕು, ವೈದ್ಯರಾಗಿ ಹೆಂಗಸರು ದಾರುಣವಾಗಿ ಸೋಲುವುದಂತೂ ಖಚಿತ.’

ಎಂಥ ಭವಿಷ್ಯವಾಣಿ ಮತ್ತು ಹಾರೈಕೆ! ಇಂಥದನ್ನು ಕೇಳಿಯೂ ಕಂಗೆಡದೆ ಓದಿ ವೈದ್ಯೆಯರಾದವರು ನಿಜಕ್ಕೂ ಗಟ್ಟಿ ವ್ಯಕ್ತಿತ್ವದವರೇ ಆಗಿರಬೇಕು. ಆದರೆ ಯಾಕೆ ಮಹಿಳೆ ವೈದ್ಯವೃತ್ತಿ ನಡೆಸಲು ಈ ಪರಿಯ ಪ್ರತಿರೋಧವಿತ್ತು?

೧೮೮೪ರಲ್ಲಿ ಮಹಿಳಾ ವೈದ್ಯರಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್‌ಗೆ ಪ್ರವೇಶ ದೊರಕಿದಾಗ ಅದನ್ನು ಪುರುಷರಿಗೊದಗಿದ ಸ್ಪರ್ಧೆ ಎಂದು ಹೇಳಲಾಯಿತು! ಹೆಣ್ಮಕ್ಕಳನ್ನು ತತ್ಸಮಾನ ಅಧಿಕಾರದ, ಹಣಗಳಿಕೆಯ ಜಾಗಗಳಲ್ಲಿ ಬಿಟ್ಟುಕೊಳ್ಳದೇ ಇರಲು ಸ್ಪರ್ಧೆ ಮುಖ್ಯ ಕಾರಣವಾಗಿತ್ತು.

‘ಹೆಣ್ಮಕ್ಕಳನ್ನು ಆಸ್ಪತ್ರೆಗಳಿಗೆ ನೂಕಿ ಅವರನ್ನು ವೈದ್ಯರಾಗಿಸುವ ಪ್ರಯತ್ನ ನಡೆದಿದೆ. ಮೊದಲು ನಮ್ಮ ಗೌರವಾನ್ವಿತ ರಾಜಕುಮಾರಿ ಯೂಜೀನ್ ಟರ್ಕಿಯ ಮಹಿಳೆಯರಿಗೆ ಅವಕಾಶ ನೀಡಿದರು. ನಂತರ ಅಲ್ಜೀರಿಯಾದವರಿಗೆ ಇವರು ವಿಸ್ತರಿಸಿದರು. ಆ ದೇಶಗಳಲ್ಲಿ ಸದ್ಯಕ್ಕೆ ಮಹಿಳಾ ವೈದ್ಯರ ಅವಶ್ಯಕತೆ ಇರಬಹುದು. ಆದರೆ ಫ್ರಾನ್ಸ್‌ನಲ್ಲಿ ಆ ಸ್ಥಿತಿ ಇಲ್ಲ. ಈಗ ನೋಡಿದರೆ ಇದೇ ನೀತಿಯನ್ನು ಇಡೀ ಜಗತ್ತಿಗೆ ವಿಸ್ತರಿಸುವಂತೆ ಕಾಣುತ್ತದೆ. ಹೆಣ್ಮಕ್ಕಳು ವೈದ್ಯಕೀಯ ವಿದ್ಯಾಲಯದಲ್ಲಿ ಓದಿದರೂ ವಿಶ್ವವಿದ್ಯಾಲಯದ ಪದವಿ ನೀಡಲಾಗುತ್ತಿದೆ. ಎಂದರೆ ಅವರು ಈ ಕಾಲನಿಗಳಲ್ಲಷ್ಟೇ ಅಲ್ಲ, ಪ್ರಪಂಚದ ಯಾವ ಭಾಗದಲ್ಲಾದರೂ ವೃತ್ತಿ ಕೈಗೊಳ್ಳಬಹುದು. ಇದು ವೃತ್ತಿ ಮತ್ತು ಶಿಕ್ಷಣ ಎರಡನ್ನೂ ಹೆಣ್ಮಕ್ಕಳ ಪಾಲಿಗೆ ಸುಲಭಗೊಳಿಸಿದಂತೆ. ಇದು ಸರಿಯಲ್ಲ.’

ಈ ಸುಮಾರಿಗೇ ಮನೋವಿಶ್ಲೇಷಣೆ ಹಾಗೂ ಕನಸುಗಳ ವಿಶ್ಲೇಷಣೆ ಮಾಡಿದ ಮನೋವೈದ್ಯ ಫ್ರಾಯ್ಡ್‌ನ ಹೆಣ್ಣಿನ ಮಾದರಿ ಗಾಬರಿ ಹುಟ್ಟಿಸುವಂತಿದೆ. ಅವನು ತನಗಿರದ ಯಾವುದೋ ಒಂದು ಅಂಗ ಗಂಡಸಿಗಿದೆ; ಎಂದೇ ಅವಳಿಗೆ ತನ್ನ ಮೇಲೆ ಕೀಳರಿಮೆ ಹಾಗೂ ಗಂಡಿನ ಮೇಲೆ ದ್ವೇಷ ಎಂದು ‘ಶಿಶ್ನದ್ವೇಷ’ವನ್ನು ಪ್ರತಿಪಾದಿಸಿದ. ಮಾನಸಿಕ ಸ್ತರದಲ್ಲಿ ದ್ವೇಷ ಮನೆ ಮಾಡಿರುವುದರಿಂದಲೇ ಹೆಣ್ಣಿಗೆ ನ್ಯಾಯದ ಪರಿಕಲ್ಪನೆ ಅಷ್ಟಾಗಿರುವುದಿಲ್ಲ; ಗಂಡಸು ಹೇಳಿದಂತೆ ಕೇಳುವ ವಸ್ತುವಾಗದಿದ್ದರೆ ಅವಳಿಗೆ ಸುಖ ಸಿಗುವುದಿಲ್ಲ; ಹುಟ್ಟಿನಿಂದ ಅವನಿಗಿಂತ ತಾನು ಕಡಿಮೆ ಎಂದು ಒಪ್ಪಿಕೊಂಡರಷ್ಟೇ ಲೈಂಗಿಕ ಸಂತೃಪ್ತಿ ದೊರೆಯಲು ಸಾಧ್ಯ ಎಂದೂ ಫ್ರಾಯ್ಡ್ ಪ್ರತಿಪಾದಿಸಿದ. ನಿಷ್ಕ್ರಿಯತೆಯನ್ನು ಹೆಣ್ಣುತನಕ್ಕೂ, ಕ್ರಿಯಾಶೀಲತೆಯನ್ನು ಗಂಡುತನಕ್ಕೂ ಅವನ ಅನುಯಾಯಿಗಳು ಸಮೀಕರಿಸಿದರು.

ಈಗ 

ಇಂತಹ ಪರಿಸ್ಥಿತಿಯ ನಡುವೆಯೇ ಅಂದು ಸಾಕಷ್ಟು ಮಹಿಳೆಯರು ವೈದ್ಯ ಪದವಿ ಪಡೆದರು. ಆದರೆ ಈಗ ವೈದ್ಯಕೀಯ ವಿದ್ಯಾಲಯ ಪ್ರವೇಶಕ್ಕೆ ಲಿಂಗ ನಿರ್ಬಂಧ ಇಲ್ಲ. ಆದರೆ ಕೆಳಹಂತದ ಕೆಲಸಗಳಲ್ಲಿಯೇ ವೈದ್ಯೆಯರು ಹೆಚ್ಚು ಕಾಣುತ್ತಾರೆ. ಪ್ರಾಕ್ಟೀಸಿನಲ್ಲಿ, ಮೇಲಿನ ಹಂತಗಳಿಗೆ ಹೋದಹಾಗೆ ಅವರ ಸಂಖ್ಯೆ ಇಳಿಮುಖವಾಗಿದೆ. ಮೆಡಿಕಲ್ ಕಾಲೇಜಿನ ಅಧಿಕಾರದ ಹುದ್ದೆಗಳು, ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷಾಧಿಪತ್ಯವೇ ಮೇಲುಗೈ ಪಡೆದಿದೆ. ಯಾವುದೋ ಗಹನ ಸಂಶೋಧನೆ, ಗೌರವ-ಗುರುತಿಸುವಿಕೆ ಮಹಿಳೆಗೆ ಕಷ್ಟವೇ. ಫ್ಯಾಕಲ್ಟಿ ಸದಸ್ಯರಾಗಿ, ಎಚ್‌ಒಡಿಗಳಾಗಿ, ಅಸೋಸಿಯೇಷನ್ ಮುಖ್ಯಸ್ಥರಾಗಿ, ಡೀನ್ ಆಗಿ, ಡೈರೆಕ್ಟರಾಗಿ ಹೆಣ್ಣುಮಕ್ಕಳ ಸಂಖ್ಯೆ ತುಂಬ ಕಡಿಮೆ. ಅವರ ಪ್ರೊಮೋಷನ್ ನಿಧಾನ. ೧೯೨೮ರಲ್ಲಿ ಡಾ. ಬಿ.ಸಿ.ರಾಯ್ ಅವರಿಂದ ಶುರುವಾದ ಭಾರತೀಯ ವೈದ್ಯಕೀಯ ಸಂಘದಲ್ಲಿ ೧,೭೮,೦೦೦ ಸದಸ್ಯ ವೈದ್ಯರಿದ್ದು ಇದುವರೆಗೆ ವರ್ಷಕ್ಕೊಬ್ಬರಂತೆ ೮೫ ವೈದ್ಯರು ಐಎಂಎ ಅಧ್ಯಕ್ಷರಾಗಿಹೋಗಿದ್ದಾರೆ. ಅವರಲ್ಲಿ ೧೯೮೪-೮೫ರಲ್ಲಿ ಮುಂಬಯಿಯ ಡಾ. ಲಲಿತಾ ರಾವ್ ಎಂಬ ಮಹಿಳೆಯನ್ನು ಬಿಟ್ಟರೆ ಮತ್ಯಾವ ಮಹಿಳೆಯೂ ಇದುವರೆಗೆ ಅಧ್ಯಕ್ಷ ಪದವಿಗೇರಲಾಗಿಲ್ಲ.

ತಜ್ಞತೆಯಲ್ಲೂ ಲಿಂಗಾಧಾರಿತ ವ್ಯತ್ಯಾಸ ಕಾಣಬಹುದು. ಹೆಣ್ಮಕ್ಕಳಿಗೆ ಸ್ತ್ರೀರೋಗ, ಮಕ್ಕಳ ರೋಗ, ಚರ್ಮರೋಗ, ಅನಸ್ತೇಷಿಯಾ, ರೇಡಿಯಾಲಜಿ ಹಾಗೂ ನಾನ್‌ಕ್ಲಿನಿಕಲ್ ಹುದ್ದೆಗಳು ಕಾದಿರುತ್ತವೆ. ಆದರೆ ಎಲುಬು ಕೀಲು, ಫೋರೆನ್ಸಿಕ್ ಮೆಡಿಸಿನ್, ಸರ್ಜರಿ ಇತ್ಯಾದಿ ವಿಭಾಗಗಳಲ್ಲಿ ಹಾಗೂ ಸೂಪರ್ ಸ್ಪೆಷಾಲಿಟಿ ಕೇರ್‌ನಲ್ಲಿ ಪುರುಷರೇ ಅಧಿಕ.

ಇದಕ್ಕೆ ಕಾರಣ ಅವಕಾಶ ನಿರಾಕರಣೆಯಲ್ಲ. ಹಾಗೆ ನೋಡಿದರೆ ಹೆಣ್ಮಕ್ಕಳ ಶಿಕ್ಷಣಕ್ಕೆ ಇವತ್ತು ಹೆಚ್ಚು ಉತ್ತೇಜನವಿದೆ. ಆದರೆ ಹೆಣ್ಣಿನ ಬದುಕು ಮದುವೆ-ಮಕ್ಕಳ ಸಲುವಾಗಿ ಯೋಜಿಸಲ್ಪಡುವಂತೆ, ಪ್ಲಾನ್ಡ್ ಆಗಿರುವಂತೆ ವೃತ್ತಿಯ ಸಲುವಾಗಿ ಹೆಚ್ಚು ಪ್ಲಾನ್‌ಗಳನ್ನು ಹೊಂದಿರುವುದಿಲ್ಲ. ತನ್ನನ್ನು ತಾನು ಅರಿವ ಮೊದಲೇ, ತನ್ನ ಆದ್ಯತೆಗಳ ಅರಿವ ಮೊದಲೇ ಅವಳು ತನ್ನ ಲಿಂಗಾಧಾರಿತ ಪಾತ್ರ ನಿರ್ವಹಿಸಲು ಸಿದ್ಧವಾಗಬೇಕಾಗುತ್ತದೆ. ಮಹಿಳೆಯರೆದುರು ಎರಡು ಸಮನಾದ ಆದರೆ ಘನತರವಾದ ಕಾರ್ಯಗಳಿರುತ್ತವೆ: ಒಳ್ಳೆಯ ವೈದ್ಯೆಯಾಗಿ ರೋಗಿಗಳಿಗೆ ಉತ್ತಮ ಸರ್ವೀಸ್ ಕೊಡಬೇಕು; ಅದೇ ವೇಳೆ ಒಳ್ಳೆಯ ಅಮ್ಮ-ಹೆಂಡತಿಯಾಗಿ ಸಂಸಾರವನ್ನೂ ನಿಭಾಯಿಸಬೇಕು. ಈ ಇಬ್ಬಗೆಯ ಒತ್ತಡಗಳಲ್ಲಿ ಈಜಿ ದಡ ಸೇರಲು ಕುಟುಂಬಕ್ಕಾಗಿ ವೃತ್ತಿಯ ಕೆಲವಂಶವನ್ನು, ವೃತ್ತಿಗಾಗಿ ಕುಟುಂಬದ ಕೆಲ ಹಿತಗಳನ್ನು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಇದೆ.

ದುಡಿಯುವ ಹೆಣ್ಣು ಇವತ್ತು ಜೈವಿಕ ಮಹಿಳೆ, ಸಾಮಾಜಿಕ ಮಹಿಳೆ ಎಂಬ ಎರಡು ಪಾತ್ರಗಳು ಒಡ್ಡುವ ಸವಾಲುಗಳ ದಾಟಿ ಬದುಕಬೇಕಿದೆ. ಇವೆರೆಡೂ ಒಂದರೊಳಗೊಂದು ಮಿಳಿತಗೊಳ್ಳದ ಹಾಗೆ ವಿರುದ್ಧ ಸಾಮಾಜಿಕ ವ್ಯವಸ್ಥೆಯಿದೆ. ಅವೆರೆಡೂ ಪೂರಕವಾದರೆ ಸಂಪೂರ್ಣ ಮಹಿಳೆ ಜನ್ಮ ತಳೆದಾಳು. ಸಮಾಜದ ಎಷ್ಟೋ ಮೌಲ್ಯಗಳು, ಜೀವನಶೈಲಿ, ಸಂಬಂಧಗಳ ಸ್ವರೂಪ, ಆಚರಣೆಗಳು ಆಧುನಿಕ ತಂತ್ರಜ್ಞಾನದ ಕಾರಣವಾಗಿ ಬದಲಾವಣೆ ಕಂಡಿವೆ. ಆದರೆ ಬದಲಾಗದೇ ಇರುವುದು ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಪಾತ್ರಕ್ಕಿರುವ ಜವಾಬ್ದಾರಿ. ಬಹುಶಃ ಈ ಜವಾಬ್ದಾರಿ ಎಷ್ಟು ಗುರುತರವಾದದ್ದೆಂದರೆ ಅದನ್ನು ಸಮನಾಗಿ ಹಂಚಿಕೊಳ್ಳಲು ಹೆಗಲೆಣೆಯಾಗಿ ಗಂಡಿನ ಸಹಕಾರ ಸಿಗದೇ ಹೋದರೆ ವೈದ್ಯೆಯರಷ್ಟೇ ಅಲ್ಲ, ಹೊರಗೆ ದುಡಿಯುವ ಎಲ್ಲ ಮಹಿಳೆಯರು ಸಂಕಷ್ಟ ಅನುಭವಿಸಲೇಬೇಕಾಗುತ್ತದೆ.

ದುಡಿಯುವ ಎಲ್ಲ ಹೆಣ್ಮಕ್ಕಳೂ ಜೈವಿಕ ಸಾಮರ್ಥ್ಯದ ಜೊತೆಗೆ ಮನುಷ್ಯರಾಗಿ ತಮ್ಮೆಲ್ಲ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕಾದರೆ ದಾರಿ ಒಂದೆ: ಲಿಂಗಾಧಾರಿತ ಜವಾಬ್ದಾರಿಗಳ ಹೊರೆ ಕಡಿಮೆ ಮಾಡುವುದು; ಮನೆವಾಳ್ತೆ ಕೆಲಸಗಳನ್ನು ಕುಟುಂಬದ ಇತರ ಸದಸ್ಯರು ಹಂಚಿಕೊಳ್ಳುವುದು. ಆಗ ಗಂಡು ತನ್ನವಳಾಗಿಸಿಕೊಂಡ ಹೆಣ್ಣು ಬೇರೆಯೇ ಆಗಿರುತ್ತಾಳೆ.

ಕವಿ ಇಮ್ರೋಜ್ (ಅಮೃತಾ ಪ್ರೀತಂ ಸಂಗಾತಿ) ಹೇಳುವಂತೆ,

ಸಂಪೂರ್ಣ ಹೆಣ್ಣು ದೇಹಕ್ಕಿಂತ ಮಿಗಿಲಾದವಳು
ಹೆಣ್ಣಿನ ದೇಹದೊಂದಿಗೆ ಮಲಗಬಹುದು
ಆದರೆ ಕೇವಲ ದೇಹದೊಂದಿಗೆ ಎಚ್ಚರಗೊಳ್ಳಲು ಸಾಧ್ಯವಿಲ್ಲ
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು ಎಚ್ಚರಗೊಂಡವನಿಗೆ ಮಾತ್ರ..

ದೇಹವಷ್ಟೆ ಅಲ್ಲದೆ ನಿಜದ ಹೆಣ್ಣಿಗಾಗಿ ಗಂಡು ಬಯಸತೊಡಗಿದರೆ ಆಗ ಅವಳ ಬಹುತೇಕ ಆಲಾಪ, ವಿಲಾಪ, ಸಂಕಷ್ಟಗಳೂ ಕೊನೆಯಾಗುತ್ತವೆ.