Wednesday 2 May 2018

ಕಠುವಾದ ಎಳೆಬಾಲೆಗಾಗಿ: ಅಸ್ಮಾ ಅಂಜೂಮ್ ಖಾನ್ (ಆರ್ಕಿಟೆಕ್ಟ್ ಇಂಡಿಯಾ) ಕಳಿಸಿದ ಇಂಗ್ಲಿಷ್ ಕವಿತೆಯ ಅನುವಾದ.



ಕುದುರೆಗಳನ್ನ ಮನೆಗ್ ಕಳಸ್ದೆ..

ಅಮಾ.. ,
ಕುದುರೆಗಳ್ನ ಓಟ ಹೊಡ್ಸಿ ಮನೆಗ್ ಕಳಿಸ್ದೆ
ಅವು ದಾರಿ ಗುರ್ತು ಹಿಡಿದು ಮನೆ ಮುಟ್ಟಿದಾವೆ

ಆದ್ರೆ, ನಂಗೆ ಬರಕ್ಕಾಗ್ಲಿಲ್ಲ ಅಮಾ.
ಜಿಂಕೆಮರಿ ತರ ಇದೆ ಅಂತ 
ನೀನಂತಿದ್ಯಲ, ನನ್ ಕಾಲು
ಅವು, ಅವು ಮರಗಟ್ಟಿ ಹೋದ್ವು,
ಹೌದಮಾ, ಮರಾ ಆದಂಗ್ ಆಗೋದ್ವು..
ಆದ್ರೆ, ಆದ್ರೆ, ನಾನು ಕುದ್ರೆಗಳ್ನ ಮನೆಗೆ ಕಳ್ಸಿದೀನಿ, ಹ್ಞಂ.

ಅಮಾ, 
ಅವು ಅವು ಭೂತಗಳು
ಅವ್ರಿಗೆ ಕೊಂಬಿರ್ಲಿಲ್ಲ, ಕೋರೆದಾಡೆ ಹಲ್ಲಿರ್ಲಿಲ್ಲ
ಭಯಂಕರ ಊ..ದ್ದದ್ ಉಗುರೂ ಇರ್ಲಿಲ್ಲ.
ಆದ್ರೂ ನಂಗೆ ಎಷ್ಟ್ ನೋವು ಮಾಡಿದ್ರು ಗೊತ್ತ
ತುಂಬ ನೋವು ಮಾಡಿದ್ರು ಅಮಾ..
ನೀಲಿ ಹುವ್ವ
ಹಳದಿ ಚಿಟ್ಟೆ
ಎಲ್ಲಾವೂ ಅಲ್ಲೇ ಇದ್ವು
ಆದ್ರೆ ಏನೂ ಮಾಡಕ್ಕಾಗ್ದೆ ನಿಂತ್ಕಂಡ್ವು
ಆಗ ನಾನು ಕುದುರೆಗಳನ್ನ ಮನೆಗ್ ಕಳ್ಸಿಬಿಟ್ಟೆ 

ಅಮಾ
ಅಪ್ಪಂಗ್ ಹೇಳು, ನಂಗೊತ್ತು ಅಂತ
ನಂಗೊತ್ತು
ನಂಗೊತ್ತು ಅವ್ನು ನನ್ ಹುಡುಕ್ದ
ನನ್ ಹೆಸ್ರು ಕೂಗಿದ್ ಕೇಳ್ತು,
ಕಿರುಚಿ ಮತ್‌ಮತ್ ಕರ‍್ದಿದ್ದೂ ಕೇಳ್ತು
ಆದ್ರೆ
ನಂಗ್ ನಿದ್ದೆ ಎಳ್ದು ಹೋಗ್ತಿತ್ತು ಅಮಾ
ಸುಸ್ತಾಗಿತ್ತು
ಅವ್ರು, ಆ ಭೂತಗಳು
ತುಂಬ ಗಾಯ ಮಾಡಿದ್ರು, ತುಂಬ ನೋವು..

ಈಗ ನಾ ಹಿಂಗಂದ್ರೆ ನಿಂಗೇನನ್ಸುತ್ತೋ ಏನೋ
ನೀನೀಗ ಬೆಚ್ಚಗ್ ಅಪ್ಪಿ ಹಿಡ್ದಂಗ್ ಅನಿಸ್ತಿದೆ
ಈಗೇನು ನೋವಿಲ್ಲ
ರಕ್ತ ಎಲ್ಲ ಒಣಗೋಗಿದೆ
ಹುಲ್ಲುಗಾವಲಲ್ಲಿ ನಂಜೊತೆ ತೂಗಾಡ್ತಿದ್ದ
ನೀಲಿ ಹೂವಂಗೆ ಕಾಣ್ತಿದೆ
ಈಗ ನೋವೇ ಆಗ್ತಿಲ್ಲ ಕಣಮಾ..

ಅಮಾ
ಆ ಭೂತಗಳು, ಅವು, ಇನ್ನು ಅಲ್ಲೇ ಇದಾವೆ..
ಏನೇನೋ ಕತೆ ಹೇಳ್ತಾವಪ್ಪ.
ಅವುನ್ನೆಲ್ಲ ನೀನ್ ನಂಬಬೇಡ ಆಯ್ತಾ
ಕರುಳು ಕಿತ್ತೋಗೋ ಸಂಕ್ಟಾಗೋ 
ಅಂತ ಎಷ್ಟೋ ನೀ ನೋಡಿದಿಯ

ಅಮ್ಮಾ,
ಹ್ಞಾಂ, ಮರೆಯಕ್ ಮುಂಚೆ
ಅಲ್ಲೊಂದು ಗುಡಿ ಇದೆ.
ಅದ್ರಲ್ಲೊಂದ್ ದೇವ್ತೆನೂ ಇದೆ.
ಅದಕ್ ಶರಣು ಅಂತೇಳು
ಯಾಕ್ ಗೊತ್ತಾ, ಆ ದೇವ್ತೆನೇ ಸಹಾಯ ಮಾಡಿದ್ದು,
ಅದ್ಕೇ ಕುದ್ರೆಗಳು ಮನೆ ದಾರಿ ಹಿಡ್ದು ಹೋದ್ವು..


2 comments:

  1. ...ಕೊನೆಗೆ ಉಳಿಯುವುದು ಕಣ್ಣಲ್ಲಿ ನೀರು, ಎದೆಯಲ್ಲಿ ನೋವು

    ReplyDelete