Friday 22 June 2018

ನಾನೊಂದು ಮರವಾಗಿದ್ದರೆ..




‘ಪ್ರತಿದಿನವೂ ಭೂಮಿದಿನ’

ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿದ್ದೆವು. ಅತಿ ನಗರೀಕೃತ ಖಂಡ-ದೇಶದಲ್ಲಿ ಸಿಡ್ನಿ, ಮೆಲ್ಬರ್ನ್ ಮೊದಲಾದ ಮಹಾನಗರಗಳ ಕಾಂಕ್ರೀಟ್ ಕಾಡಿನ ನಡುವೆ ಅರಣ್ಯಭರಿತ ಪಾರ್ಕುಗಳು ಗಮನ ಸೆಳೆದವು. ಆದಿಮ ಕಾಡುಗಳ ಕಡಿದು ನಗರ ಕಟ್ಟುವಾಗ ನಡುನಡುವೆ ಹಳೆಯ ಮರಗಿಡಗಳ ಉಳಿಸಿಕೊಂಡು ಊರು ಕಟ್ಟಿದ್ದಾರೆ. ಹಾಗಾಗಿ ಅಲ್ಲಿನ ಪಾರ್ಕುಗಳಲ್ಲಿ ಎತ್ತರೆತ್ತರದ ನೂರಾರು ವರ್ಷ ಹಳೆಯ ಮರಗಳಿದ್ದವು. ಒಂದೆಡೆ ‘ಪ್ರತಿದಿನವೂ ಭೂಮಿದಿನ’ ಎಂದು ಬರೆದಿದ್ದರು. ‘ಸಸ್ಯವು ನೀರು, ನೆಲ, ಬೆಳಕಿನಿಂದ ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ ಸಂಪೂರ್ಣ ಸ್ವಾವಲಂಬಿ. ನೆಲಬಾನುಗಳ ನಡುವಿನ ನೀರಕೊಂಡಿ. ಇಂಗಾಲವನ್ನು ಆಮ್ಲಜನಕವಾಗಿಸುವ ಜರಡಿ. ಬೆಳಕುನೀರನ್ನು ಅನ್ನವಾಗಿಸುವ ಅಡಿಗೆಗುಡಿ. ಉಳಿದ ಜೀವರಾಶಿಗಳ ಬದುಕಿಸಲೆಂದೇ ಇರುವ ಮರಗಿಡಗಳಿಗೆ ಧನ್ಯವಾದಗಳು’ ಎಂಬ ಮತ್ತೊಂದು ಫಲಕವಿತ್ತು.

ಪ್ರತಿದಿನ ಭೂಮಿದಿನ! ನಿಜವೇ. ಕಾಂಗರೂ ನಾಡಿನವರ ಹಸಿರುಪ್ರಜ್ಞೆಗೆ ಶರಣುಶರಣು.

ಭೂಮಿಮೇಲಿನ ಕೆಲವು ಅತಿಹಳೆಯ ಮರಗಳು ಆಸ್ಟ್ರೇಲಿಯಾದಲ್ಲಿವೆ; ನ್ಯೂಸೌತ್‌ವೇಲ್ಸ್ ಪ್ರಾಂತ್ಯದಲ್ಲಿ 13, 000 ವರ್ಷ ಹಳೆಯ ರೇರ್ ಯೂಕಲಿಪ್ಟಸ್ ಎಂಬ ಜಾತಿಯ ಐದಾರು ನೀಲಗಿರಿ ಮರಗಳಿವೆ. ಅವನ್ನು ಯಾರ ಕಣ್ಣಿಗೂ ಬೀಳದಂತೆ ಗೌಪ್ಯವಾಗಿಟ್ಟು ಸಂರಕ್ಷಿಸಲಾಗಿದೆ. ಕಲ್ಪಿಸಿಕೊಳ್ಳಿ: 13 ಸಾವಿರ ವರ್ಷ ಹಳೆಯ ಮರಗಳು! ಆಸ್ಟ್ರೇಲಿಯಾ ಧ್ವಜದಲ್ಲಿ ಆರು ನಕ್ಷತ್ರಗಳಾಗಿರುವುದು ಆ ಆರು ಮರಗಳೇ ಇರಬೇಕು. ಅವು ಭೂತಕಾಲಕ್ಕೆ, ವರ್ತಮಾನ ಬೆಳೆದು ಭವಿಷ್ಯವಾಗುವ ಘಳಿಗೆಗಳಿಗೆ ಮರಸಾಕ್ಷಿಯಾಗಿರಬೇಕು.

ಈಗ ಭೂಗ್ರಹದ ನೆಲದ ಮೇಲೆ 40% ಕೃಷಿಭೂಮಿ, 37% ನಗರ ಆವರಿಸಿರುವುದರಿಂದ ಕೇವಲ 23% ಕಾಡು ಮಾತ್ರ ಉಳಿದಿದೆ. ನಾವೀಗ ಎಲ್ಲವೂ ತನ್ನ ಉಪಭೋಗಕ್ಕೇ ಇರುವುದೆಂದು ಬಗೆದ ಮನುಷ್ಯ ನಾಗರಿಕತೆಯ ಕಾಲಘಟ್ಟದಲ್ಲಿದ್ದೇವೆ. ಭೂಮಿ ಮೇಲಿನ ಚರಾಚರಗಳ ಬಗೆಗೆ ಕನಿಷ್ಠ ಕುತೂಹಲವೂ ಇಲ್ಲದ ಮನುಷ್ಯರ ಬುದ್ಧಿಬಡತನಕ್ಕೆ ಪ್ರಕೃತಿ ಬಲಿಯಾಗುತ್ತಿದೆ. ಸಾಕಷ್ಟು ಪ್ರಕೃತಿನಾಶವಾದ ಮೇಲೆ ಕೆಲ ದೇಶಗಳು ಎಚ್ಚೆತ್ತಿವೆ. ಭೂಮಿಮೇಲೆ ಬರಿಯ ಮನುಷ್ಯರಷ್ಟೆ ಇಲ್ಲ, ಇರುವುದೆಲ್ಲ ಬರಿಯ ಮನುಷ್ಯ ಮಾತ್ರರಿಗಲ್ಲ ಎಂದರಿತು ರಕ್ಷಿತಾರಣ್ಯಗಳ ರೂಪಿಸಲಾಗಿದೆ.

ಹಾಗೆ ಆಸ್ಟ್ರೇಲಿಯಾ ಪಶ್ಚಿಮತೀರದಲ್ಲಿ ಹವಳ ದಂಡೆಗಳ ಮಳೆಕಾಡು ರಕ್ಷಿತಾರಣ್ಯವಾಗಿದೆ. ಅದು ವಿಶ್ವದ ಅತಿಹಳೆಯ ಮಳೆಕಾಡು. 15 ಕೋಟಿ ವರ್ಷಗಳಿಂದ ಆ ಕಾಡು ನಿರಂತರ ರೂಪುಗೊಳ್ಳುತ್ತ ಬಂದಿದೆ. ಅದು ವಿಶ್ವದ ಮೊದಲ ಹೂಬಿಡುವ ಸಸ್ಯಗಳ, ಡೈನೋಸಾರುಗಳ ನೆಲೆಯೂ ಆಗಿತ್ತು. 5,000 ವರ್ಷಗಳಿಂದ ಮನುಷ್ಯರು ವಾಸವಾಗಿರುವ ಅಲ್ಲಿ ೨೦ಕ್ಕಿಂತ ಹೆಚ್ಚು ಆದಿವಾಸಿ ಕುಲಗಳಿವೆ. ಆಸ್ಟ್ರೇಲಿಯಾದ ಅರ್ಧದಷ್ಟು ಹಕ್ಕಿಗಳು, ಮೂರನೇ ಒಂದು ಭಾಗ ಸಿಹಿನೀರ ಮೀನು, ಕಾಲುಭಾಗ ಕಪ್ಪೆ, ಮೂರನೆ ಒಂದು ಭಾಗ ಸಸ್ತನಿ ಪ್ರಭೇದಗಳು ಅಲ್ಲಿವೆ. 2,260 ಸಸ್ಯ ಪ್ರಭೇದಗಳು, (ಅದರಲ್ಲಿ 678 ಮತ್ತೆಲ್ಲೂ ಇಲ್ಲದಂಥ ಜಾತಿಯವು), ಕಾಂಗರೂ, ಮಸ್ಕಿ ರ‍್ಯಾಟ್ ಕಾಂಗರೂ, ಚಿಟ್ಟೆಗಳು, ಹಾರಲಾಗದ ದೊಡ್ಡ ಹಕ್ಕಿ ಸದರ್ನ್ ಕ್ಯಾಸೊವೆರಿಯಂತಹ ಹಲವು ಅಪರೂಪದ, ವಿನಾಶದಂಚಿನ ಜೀವಿಗಳ ಕೊನೆಯ ನೆಲೆಯೂ ಆಗಿದ್ದು ಜೀವಂತ ಮ್ಯೂಸಿಯಂ ಎಂದು ಕರೆಯಲ್ಪಟ್ಟಿದೆ. ಆದರೆ ಮೊದಲು ಇಡಿಯ ಆಸ್ಟ್ರೇಲಿಯಾವನ್ನೇ ಆವರಿಸಿದ್ದ ಮಳೆಕಾಡುಗಳು ಈಗ ಕೇವಲ ಒಂಭತ್ತು ಲಕ್ಷ ಹೆಕ್ಟೇರ್ ಪ್ರದೇಶವನ್ನು ಎಂದರೆ ಒಟ್ಟೂ ವಿಸ್ತೀರ್ಣದ 0.12%ನಷ್ಟು ಮಾತ್ರ ಉಳಿದಿವೆ. ಎಂದೇ ಮಳೆಕಾಡುಗಳನ್ನು ಅದರ ಮೂಲಸ್ವರೂಪದಲ್ಲಿ ಬರಲಿರುವ ಪೀಳಿಗೆಗೆ ಉಳಿಸಬೇಕು, ಭೂತದ ಕೊಂಡಿಯಾಗಿ ಭವಿಷ್ಯಕ್ಕೂ ತಲುಪಿಸಬೇಕೆಂಬ ಉದ್ದೇಶದಿಂದ ಅದನ್ನು ‘ವಿಶ್ವ ಪಾರಂಪರಿಕ ತಾಣ’ವೆಂದು ಪರಿಗಣಿಸಲಾಗಿದೆ.

ಸ್ಕೈ ರೇಲ್ ಎಂಬ ಹಕ್ಕಿನೋಟ

ಕ್ವೀನ್ಸ್‌ಲ್ಯಾಂಡ್ ಪ್ರಾಂತ್ಯದ ಕೇರ್ನ್ಸ್ ಬಳಿಯಿರುವ ದಟ್ಟಾರಣ್ಯದಲ್ಲಿ ಕುರಂಡಾ ಆದಿವಾಸಿಗಳ ಹಳ್ಳಿಯಿದೆ. ಕುರಂಡಾದ ಆಸುಪಾಸು 9000 ಚ.ಕಿ.ಮೀ. ಪ್ರದೇಶ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದೆ. ಕುರಂಡಾ ರಕ್ಷಿತಾರಣ್ಯಕ್ಕೆ ಹೋಗಲು ಇರುವ 7.5 ಕಿಮೀ ಉದ್ದದ ರೋಪ್ ವೇ (ಸ್ಕೈ ರೇಲ್) 1995ರಿಂದ ಪ್ರವಾಸಿಗರನ್ನೊಯ್ಯುತ್ತಿದೆ. ವಿಮಾನದಲ್ಲಿ ಹಾರುತ್ತ ಕೆಳಗಿರುವ ಗುಡ್ಡಬೆಟ್ಟಗಳನ್ನು ನೋಡಿದ್ದೆವು. ಬೆಟ್ಟಗಳನ್ನು ಹೆಮ್ಮರಗಳ ತಲೆಮೇಲಿಂದ ಹಕ್ಕಿಯಂತೆ ದಾಟುತ್ತ ಮೇಲಿಂದ ಕಾಡು ನೋಡುವುದು ಹೊಸ ಅನುಭವ ನೀಡಿತು. ಪಕ್ಷಿಗಳ ಹಾಡು, ಕೀಟಗಳ ಸದ್ದು, ಪ್ರಾಣಿಗಳ ಚಲನೆ, ಹೂಬಿಟ್ಟ-ಚಿಗುರಿದ ಮರಬಳ್ಳಿಗಳ ಅಂದ ನೋಡುತ್ತ ಸಾಗುವುದು ಅವರ್ಣನೀಯ ಆನಂದ ತುಂಬಿತು.




ಅಲೆಕ್ಸಾಂಡ್ರಾ ಪಾಮ್, ಕೌರಿ ಪೈನ್, ಆಲ್ಪೈನ್ ಬೀಚ್, ಹೂಪ್ ಪೈನ್, ರೆಡ್ ಪೆಂಡಾ, ಆಲ, ಫಿಗ್, ಕಡಗಿ, ನಾನಾ ಆಕಾರ-ಗಾತ್ರ-ವಯಸ್ಸಿನ ನೀಲಗಿರಿ ಮರಗಳೇ ಮೊದಲಾದ ಸಾವಿರಾರು ಜಾತಿಯ ಗಿಡಮರಗಳು ಅಲ್ಲಿದ್ದವು. ನೀಲಗಿರಿಯ ಹೂವು ಇಷ್ಟು ಚಂದ ಎಂದು ಗೊತ್ತೇ ಇರಲಿಲ್ಲ. ಈಗದರ ತಲೆಮೇಲೆ ಸರಿದು ಹೋಗುವಾಗ ದುಂಬಿ ಮುತ್ತಿದ ಮಧುಭರಿತ ಹೂವಿನ ಚೆಲುವಿಗೆ ಮನಸೋತೆವು. ನೀಲಗಿರಿಯ ತವರು ಆಸ್ಟ್ರೇಲಿಯಾದಲ್ಲಿ ೭೦೦ ವಿವಿಧ ಜಾತಿಯ ನೀಲಗಿರಿ ಮರಗಳಿದ್ದು ಇಲ್ಲಿದ್ದ ಹಲವು ಪ್ರಭೇದಗಳು ಗಮನ ಸೆಳೆದವು.

ಅಲ್ಲಿನ ಮತ್ತೊಂದು ವಿಶೇಷ ಜರಿಗಿಡ. ಹೂಬಿಡದೆ ಸಂತಾನೋತ್ಪತ್ತಿ ಮಾಡುವ ಜರಿಗಿಡ (ಫರ್ನ್) ಹೆಮ್ಮರಗಳ ಮೈಮೇಲೆ, ಕೆಳಗೆ ಎಲ್ಲೆಲ್ಲು ಕಂಡವು. ಕೆಲವು ಹೆಮ್ಮರಗಳ ಕಾಂಡದ ಮೇಲೆ ಒಂದು ಗಿಡವಿಟ್ಟಂತೆ ಕೂತಿದ್ದರೆ ಮತ್ತೆ ಕೆಲವು ಮರವಿಲ್ಲದ ಚೂರು ಜಾಗದಲ್ಲಿ ನೆಲದ ಮೇಲೆಲ್ಲ ಹರಡಿದ್ದವು. ಕೂಪರ‍್ಸ್ ಫರ್ನ್ ನೆಲದ ಮೇಲಿಂದ ಕೋಲಿನಂತೆ ಮೇ..ಲೆ ಬಂದು ತುದಿಯಲ್ಲಿ ಚಂಡರಳಿಸಿಕೊಂಡು ಛತ್ರಿಯಂತೆ ನಿಂತಿತ್ತು. ಸ್ಟ್ಯಾಗ್ ಹಾರ್ನ್, ಬರ್ಡ್ಸ್ ನೆಸ್ಟ್ ಜರಿಗಿಡಗಳು ಹಕ್ಕಿಗೂಡೇನೋ ಎನುವಂತೆ, ಬುಟ್ಟಿ ಕೌಚಿಟ್ಟಂತೆ ಕಂಡವು. ಮರದ ಕಾಂಡಕ್ಕಂಟಿಕೊಂಡ ಬುಟ್ಟಿಯಲ್ಲಿ ಸಂಗ್ರಹವಾದ ಉದುರಿದೆಲೆಗಳು, ತೇವಾಂಶ, ಮಳೆನೀರು, ಮಂಜುಹನಿ ಜರಿಗಿಡಕ್ಕೆ ಸತ್ವ ಒದಗಿಸುವುದು.

ಹೆಮ್ಮರದ ಪಕ್ಕವಿದ್ದ ಕೆಲವು ಗಿಡಬಳ್ಳಿಗಳು ಮರದ ತುತ್ತತುದಿಯವರೆಗೂ ಹರಡಿ ಸೂರ್ಯಕಿರಣಗಳಿಗೆ ಪೈಪೋಟಿ ನಡೆಸಿದ್ದವು. ಕಾಡುಬಳ್ಳಿಗಳು ರಟ್ಟೆಗಾತ್ರದ ಹುರಿಹಗ್ಗದಂತೆ ಮರಗಳ ಸುತ್ತಿ, ಸಂಕಲೆಯಲ್ಲಿ ಕೊಂಬೆರೆಂಬೆಗಳ ಬಂಧಿಸಿ ಮರದ ಮೇಲ್ಭಾಗದಲ್ಲಿ ಬಲೆಯಂತೆ, ಚಾಮರದಂತೆ, ರೇಶಿಮೆ ಬಟ್ಟೆಯಂತೆ ಹರಡಿಕೊಂಡಿದ್ದವು. ಮೂಲಮರ ಕಾಣದಷ್ಟು ಎಲೆ, ಹೂವು ಅರಳಿಸಿದ್ದವು. ಒಂದೆಡೆ ಹಾಗೆ ಮುಚ್ಚಿದ್ದ ಬಳ್ಳಿ ಪೂರಾ ಒಣಗಿ ಮರದ ಮೇಲೆ ಗೋಣಿಬಲೆ ಹಾಸಿದಂತಿತ್ತು. ಹೆಮ್ಮರಗಳ ನಡುವೆ ತಾನೂ ಅಷ್ಟೇ ಎತ್ತರಕ್ಕೆ ಹಬ್ಬಿ ಬಿದಿರು (ಲಾಯರ್ ಕೇನ್) ಚಂಡರಳಿಸಿ ನಿಂತಿತ್ತು. ಒಣಮರ ಬಿದ್ದು ಅಷ್ಟು ಜಾಗ ಬೆಳಕಾಗಿದ್ದರೆ ಸಾಕು, ಅಕ್ಕಪಕ್ಕದ ಮರಗಿಡಬಳ್ಳಿಗಳೆಲ್ಲ ತಮ್ಮ ರೆಂಬೆಕೊಂಬೆಗಳ ಖಾಲಿಜಾಗಕ್ಕೆ ನುಗ್ಗಿಸಿದ್ದವು.







ಮಳೆಕಾಡುಗಳಲ್ಲಿ ಪಕ್ಕಪಕ್ಕ ನಿಂತಿರುವ ಸಸ್ಯಗಳ ನಡುವೆ ನೀರಿಗಾಗಿ ಅಲ್ಲ, ನೆಲಕ್ಕಾಗೂ ಅಲ್ಲ, ಸೂರ್ಯನ ಬೆಳಕಿಗಾಗಿ ತೀವ್ರ ಸ್ಪರ್ಧೆಯಿರುತ್ತದೆ. ಮಳೆಗಾಲಕ್ಕಿಂತ ವಿಪುಲ ಬೆಳಕಿನ ಬೇಸಿಗೆಯಲ್ಲೇ ಮಳೆಕಾಡುಗಳ ಬೆಳವಣಿಗೆ ಹೆಚ್ಚಿರುತ್ತದೆ. ಸಸ್ಯದ ಎಲೆಗಳಲ್ಲಿ ಬೆಳಕುಸಂವೇದಿ ರಾಸಾಯನಿಕ ಇದ್ದು ಎಷ್ಟು, ಹೇಗೆ, ಎಲ್ಲಿ, ಯಾವ ದಿಕ್ಕಲ್ಲಿ ಬೆಳೆಯಬೇಕೆಂಬ ಸೂಚನೆಯನ್ನು ಕಾಂಡಕ್ಕೆ ಕೊಡುವುದು ಬಿಸಿಲು ಹೀರಿಕೊಳ್ಳುವ ಎಲೆಗಳೇ ಆಗಿವೆ. ಪ್ರತಿಸಸ್ಯಕ್ಕೂ ಪಕ್ಕದವರಿಗಿಂತ ಬೇಗ ಬೆಳೆದು ಹೆಚ್ಚು ಬೆಳಕು ಪಡೆಯುವ ಗುರಿ. ವಾರೆ ಬಾಗಿದ ಬಿದಿರು, ಹಬ್ಬುತ್ತ ಮೇಲೆಮೇಲೆ ಹೋದ ಬಳ್ಳಿ, ಮರವೊಂದನ್ನು ಬಳ್ಳಿಯಂತೆ ಮೂರೂ ಸುತ್ತು ಆವರಿಸಿ ಅದಕಿಂತ ಮೇಲೆ ಹೋಗುವ ಇನ್ನೊಂದು ಮರ - ಇವರೆಲ್ಲ ಬೆಳಕಿನ ಪೈಪೋಟಿಗೆ ಬಿದ್ದು ನೆರಳಿನಿಂದಾಚೆ ಬರಲು ಪ್ರಯತ್ನಿಸಿದವರು. ಇದೆಲ್ಲದರ ಉದಾಹರಣೆಗಳೂ ಅಲ್ಲಿದ್ದವು.

ಅಲೆಲೆ! ಮೂಕಜೀವಿಗಳ ನಡುವೆ ಇಷ್ಟು ಸ್ಪರ್ಧೆ! ಬೆಳಕಿಗಾಗಿ ಹೂಡಿದ ಜೀವನ ನಾಟಕಗಳನ್ನು ಮೇಲಿಂದ ನೋಡುವಾಗ ಯಾಕೋ ಬಿ. ಜಿ. ಎಲ್. ಸ್ವಾಮಿ ನೆನಪಾದರು. ಜೊತೆಯಿರಬೇಕಿತ್ತು ಎನಿಸಿತು..

ವೃಕ್ಷವೈಭವ


ನಡುನಡುವೆ ಗೋಪುರ ತಂಗುದಾಣಗಳಲ್ಲಿ ಸ್ಕೈ ರೇಲ್ ನಿಲ್ಲುತ್ತದೆ. ಅಲ್ಲಿಂದ ಕಾಡಿನೊಳಹೊಕ್ಕು ಕಾಡುನಡಿಗೆಗೆ ಅವಕಾಶವಿದೆ. ಮರಗಳ ಕೆಳಗೆ, ದಾರಿಯುದ್ದಕ್ಕೂ ವಿವರಣೆಗಳ ಫಲಕ ಇದೆ. ಗೈಡ್ ಜೊತೆ ಹೋಗಿಬರಲೂ ಸಾಧ್ಯವಿದೆ. ಒಂದೆಡೆ ರೋಪ್‌ವೇನಿಂದ ಕೆಳಗಿಳಿದು ಕಾಡಿನೊಳಗೆ ನಡೆಯತೊಡಗಿದೆವು. ಕೇವಲ 1% ಸೂರ್ಯ ರಶ್ಮಿಯಷ್ಟೆ ನೆಲ ತಲುಪುವ ದಟ್ಟಕಾಡು..

ಕಾಳಬೆಳಕು. ಸುತ್ತಲೂ ಬೃಹತ್ ಮರಗಳು. ನೆಲತುಂಬಿದ ಸಣ್ಣಸಣ್ಣ ಸಸ್ಯಗಳು. ಆಲ್ಪೈನ್ ಬೀಚ್ ಮರಗಳು ಸಾಕಷ್ಟಿದ್ದವು. ಒರಟೊರಟಾದ ಅದರ ಮೈಮೇಲೆ ಶಿಲೀಂಧ್ರ, ಪಾಚಿ, ಹಾವಸೆ ಯಥೇಚ್ಛ ಬೆಳೆದು ತೊಗಟೆ ಮೇಲೆ ಮರಿಕಾಡನ್ನೇ ಸೃಷ್ಟಿಸಿದ್ದವು. ಅಲ್ಲಿದ್ದ ಬಹುಪಾಲು ಹೆಮ್ಮರಗಳ ಮೈಮೇಲೆಲ್ಲ ಸಸ್ಯರಾಶಿ. ಮರದ ಆಶ್ರಯ ಅರಸಿ ಬಂದವರಿಂದ ಒಂದು ಲಾಭ ಮರಕ್ಕಾದರೆ ಎರಡು ಲಾಭ ಬಂದವರಿಗೆ.

ಬೀಚ್ ಮರದ ಬುಡದಲ್ಲೆ ಹೊಟ್ಟೆಬಿರಿ ತಿಂದು ಜಡಗೊಂಡು ಬಿದ್ದ ಕುದ್ರಬಾಳ (ಹೆಬ್ಬಾವಿನ ಜಾತಿಯ ಹಾವು) ಇತ್ತು. ಕೆಲ ಹಕ್ಕಿ, ದೊಡ್ಡ ಜೇಡ, ನೀಲಿ ಚಿಟ್ಟೆ ಬಿಟ್ಟರೆ ನಮಗೆ ಹೆಸರೇ ಗೊತ್ತಿರದ ಅಸಂಖ್ಯ ಕ್ರಿಮಿಕೀಟ ಹಕ್ಕಿಗಳು ಅಲ್ಲಿದ್ದವು. ನಾನಾ ಸದ್ದುಗಳ ಹೊರಡಿಸುತ್ತಿದ್ದವು. ಹಣೆಮೇಲೆ ತಿಲಕವಿದ್ದ ನಾಮಗೋಳಿ, ಕಾಡುಕೋಳಿ ಹೀಗೆ ಕಂಡು ಹಾಗೆ ಮಾಯವಾಗುತ್ತಿದ್ದವು.

ನಡೆಯುತ್ತ, ನಡೆಯುತ್ತ ಒಂದು ಬೃಹತ್ ಕಾಂಡದೆದುರಿಗೆ ನಿಂತೆವು. ನಾವು ನಾಲ್ಕೂ ಜನ ಕೈಯಗಲಿಸಿ ನಿಂತರೂ ಅದರ ಕಾಂಡ ಸುತ್ತುವರೆಯಲಾಗುವುದಿಲ್ಲ. ಒಂದೂ ರೆಂಬೆಕೊಂಬೆಯಿಲ್ಲದೆ ನೇರ ಮೇಲೆ ಹೋಗಿ ಒಮ್ಮೆಲೆ ಛತ್ರಿಯಂತೆ ಅರಳಿಕೊಂಡಿದ್ದ ಮರ ನೋಡಲು ಪೂರಾ ಕುತ್ತಿಗೆ ಎತ್ತಿ ಹಿಂಬಾಗಬೇಕು. ಆಕಾಶಕ್ಕೆ ಸವಾಲೆಸೆದು ಬೆಳೆದಿದೆಯೋ ಎನ್ನುವಂತೆ ಮರ ನಿಂತಿತ್ತು. ಬೂದುಗುಲಾಬಿ ಬಣ್ಣದ, ನಯಸು ಕಾಂಡದ, ೬೦ ಮೀ (೧೫೦ ಅಡಿ) ಎತ್ತರದ ಕೌರಿ ಪೈನ್. ತೆಳುವಾಗಿ ಕಾಂಡದ ಸಿಪ್ಪೆ ಸುಲಿದಿತ್ತು. ಕೆಂಜಿಗೆಹಿಂಡು ಯಾವುದೋ ರಾಜಕಾರ್ಯದ ಅವಸರವೆಂಬಂತೆ, ಯಾರೋ ತುರ್ತೆಂದು ಹೇಳಿಕಳಿಸಿದರೋ ಎನುವಂತೆ, ದರುಶನಕ್ಕಾಗಿ ಸರದಿಯಲಿ ಹೋಗುವವರಂತೆ ಶಿಸ್ತಾಗಿ ಒಂದರ ಹಿಂದೊಂದು ಸರಸರ ಸಾಗಿದ್ದವು. ಪುಟ್ಟ ಕೆಂಪುಕಪ್ಪು ಬಣ್ಣದ ಕೀಟಗಳು ಮಿಲನಾನಂದದಲ್ಲಿ ತಲ್ಲೀನವಾಗಿದ್ದವು.

ಕೌರಿಪೈನ್ ಆ ನೆಲದ ವೃಕ್ಷವಿಶೇಷ. ಆದರೀಗ ಕೌರಿ ನಾಶದಂಚಿನಲ್ಲಿರುವ, ರಕ್ಷಿಸಲ್ಪಟ್ಟ ಪ್ರಭೇದ. ಅದು ಬಲು ಮೃದು. ರೆಂಬೆಗಳಿಲ್ಲದೆ ಇರುವುದರಿಂದ ಅತಿ ಉದ್ದದ, ಅಗಲದ ಹಲಗೆ, ತೊಲೆಗಳ ಮಾಡಬಹುದು. ಒಳ್ಳೆ ಪಾಲಿಶ್ ಹಿಡಿಯುತ್ತದೆ. ಎಂದೇ ಎಗ್ಗಿಲ್ಲದೆ ಕಡಿದರು. ಹುಡುಹುಡುಕಿ ದೊಡ್ಡದೊಡ್ಡ ಹಳೆಮರಗಳ ಕಡಿದು ಪೀಠೋಪಕರಣ, ಮನೆ, ಬೇಲಿ, ಹಡಗು ಕಟ್ಟಲು ಬಳಸಿದರು. ಒಂದಾನೊಂದು ಕಾಲದಲ್ಲಿ ಎಲ್ಲೆಲ್ಲು ಕಾಣುತ್ತಿದ್ದ ಶತಮಾನಗಟ್ಟಲೆ ಹಳೆಯ ಕೌರಿ ಪೈನ್ ರಕ್ಷಿತಾರಣ್ಯಕ್ಕೆ ಸೀಮಿತವಾದವು.




ಆ ಜೀವಚೇತನವನ್ನು ಏನೆಂದು ವರ್ಣಿಸುವುದು? ಐದೂವರೆ ಅಡಿಯ ನನ್ನ ದೇಹವು ೧೫೦ ಅಡಿಯ ವೃಕ್ಷವೈಭವದೆದುರು ನಿಂತು ಅಚ್ಚರಿ, ಆನಂದ ಮತ್ತಿನ್ನೇನೇನನ್ನೋ ಅನುಭವಿಸತೊಡಗಿತು. ತನ್ನ ಅಸಂಖ್ಯ ಬೆರಳೆಲೆಗಳ ಆಡಿಸುತ್ತ ಅದು ಮಾತನಾಡುವಾಗ ಮರ ನೋಡುತ್ತ ಹೀಗೇ ನಿಲ್ಲಬೇಕೆನಿಸಿತು.

ಜೀವವುಕ್ಕುವ ಮರಗಳು ಬೆಂಕಿ, ನೀರು, ಗಾಳಿಯಂತೆ ನಿರ್ಜೀವವೆಂದು ಬಗೆದಿದ್ದೆವಲ್ಲ ನಾವು!? ಹೆಚ್ಚೆಂದರೆ ನೂರು ವರ್ಷ ಬದುಕುವ ನಮಗೆ ಸಸ್ಯಗಳಿಗೂ ಜೀವ ಇದೆ ಎಂದು ತಿಳಿಯಲು ಸಾವಿರಾರು ವರುಷ ಬೇಕಾಯಿತಲ್ಲ!

ಮರ ಎಂದರೆ ಜೀವಚೈತನ್ಯ. ಮರ ಎಂದರೆ ಪ್ರೀತಿ, ಸಹನೆ, ಸಹಬಾಳ್ವೆ. ನಾನೊಂದು ಮರವಾದರೂ ಆಗಿದ್ದರೆ..?..

ನಾನೊಂದು ಮರವಾಗಿದ್ದರೆ
ನಿಂತಲ್ಲೆ ಚಲಿಸಬಹುದಿತ್ತು.
ಪಾಚಿ, ಹಲ್ಲಿ, ಹಕ್ಕಿ, ಹಾವು,
ಚಿಟ್ಟೆ, ಹುಳಗಳೊಡನೆ ಒಟ್ಟೆ ಬಾಳಬಹುದಿತ್ತು.
ಚಳಿಗೆ ಮರಗಟ್ಟಿ ಎಲೆ ಹಳದಿಯಾದರೂ
ವಸಂತಕ್ಕೆ ಹಸಿರೆಲೆಗಳ ಚಿಗುರಿಸಬಹುದಿತ್ತು.
ಗಡಿಯಾರ ಕಟ್ಟದೇ, ಕ್ಯಾಲೆಂಡರು ನೋಡದೇ
ವರುಷವರುಷ ಹೂಹಣ್ಣು ತಳೆಯಬಹುದಿತ್ತು.
ಕೊನೆಯುಸಿರಿನವರೆಗೂ ಬೆಳೆಯಬಹುದಿತ್ತು.
ಸಾವು ಬರುವನಕ ಹೊಸದಾಗಲು ಬೆಳೆಯಬಹುದಿತ್ತು..

ಮರ ಎಂದೂ ವಿಷಾದಿಸುವುದಿಲ್ಲ.
ಮರ ಎಂದೂ ಕೋಪಗೊಳ್ಳುವುದಿಲ್ಲ.
ಮರ ಎಂದೂ ದೂರುವುದಿಲ್ಲ.
ಸಂತಸಕೆ ಹುಚ್ಚೆದ್ದು ಕುಣಿಯುವುದಿಲ್ಲ.
ಆರ್ತವಾಗಿ ಮೊರೆಯಿಡುವುದಿಲ್ಲ.
ನೊಂದರೆ ಕಣ್ಣೀರು ಸುರಿಸುವುದಿಲ್ಲ.
ಗಾಯಗೊಂಡರೆ ರಕ್ತ ಹರಿಸುವುದಿಲ್ಲ.
ವಿಕೋಪಕ್ಕೆ ಬೆದರಿ ಓಡುವುದಿಲ್ಲ
ಅಪಾಯವೆಂದು ಮೇಲೆರಗುವುದಿಲ್ಲ
ಸಾಯುವಾಗ ನಿಶ್ಶಬ್ದ, ಸತ್ತಮೇಲೂ ನಿಶ್ಶಬ್ದ.
ಎಂದೆಂದೂ ಗಂಭೀರ, ಮಹಾಮೌನ.

ಎಂಥ ಘನತೆಯ ಬದುಕು ಮರವೇ..
ನಾನೊಂದು ಮರವಾದರೂ ಆಗಿದ್ದರೆ..

***

ಬರಿಯ ೧೦೦ ವರ್ಷ ಬದುಕುವ ಮನುಷ್ಯರು ಕ್ಷೀಣಾಯುಗಳು. ಓಡಾಡುವ ಪ್ರಾಣಿಗಳು ಹೆಚ್ಚೆಂದರೆ 200 ವರ್ಷದ ಆಚೀಚೆ ಬದುಕಬಲ್ಲವು. ಆದರೆ ಸಸ್ಯಗಳು ಸಾವಿರಾರು ವರ್ಷ ಬದುಕಿಯಾವು. ಚಿಲಿಯ ಅಟಕಾಮ ಮರುಭೂಮಿ, ನಮೀಬಿಯಾದ ಮರುಭೂಮಿಗಳಲ್ಲಿ 2000 ವರ್ಷ ಹಳೆಯ ಮುಳ್ಳುಕಂಟಿಗಳಿವೆ. ದ. ಆಫ್ರಿಕಾದ ಬೇಯೋಬಾಬ್ 2000 ವರ್ಷ, ಕ್ಯಾಲಿಫೋರ್ನಿಯಾದ ಬ್ರಿಸಲ್‌ಕೋನ್ ಪೈನ್ 5000 ವರ್ಷ ಹಳೆಯವು. ಆಸ್ಟ್ರೇಲಿಯಾದ ರೇರ್ ಯೂಕಲಿಪ್ಟಸ್ 13,000 ವರ್ಷದಿಂದ ನಿಂತಿದೆ. ಸ್ಪೇನಿನ ಮೆಡಿಟರೇನಿಯನ್ ಸಮುದ್ರದಾಳದ ಪೊಸಿಡೊನಿಯಾ ಹುಲ್ಲುಗಾವಲು ಒಂದು ಲಕ್ಷ ವರ್ಷ ಹಳೆಯದು!

ಅದ್ಭುತ! ಈ ಭೂಮಿಗ್ರಹ ನನ್ನದು, ನನ್ನದಷ್ಟೆ ಅಲ್ಲ, ಇನ್ನೆಷ್ಟೊ ಪಶುಪಕ್ಷಿ ಕ್ರಿಮಿಕೀಟಗಳದೂ ಹೌದು ಎಂಬ ಅರಿವು ಹುಟ್ಟುವ ಗಳಿಗೆ ಇನ್ನೂ ಅದ್ಭುತ. ಅಂಥ ಅರಿವು ಹುಟ್ಟಿಸಿದ ಮಳೆಕಾಡಿಗೆ ಶರಣು.. ಹವಳದಂಡೆಗೆ ಶರಣು..

‘ಒತ್ತಾಯವಿಲ್ಲದೆ ಬೆಳೆಯುವ, ವಸಂತವು ಬರುವುದೋ ಎಂಬ ಆತಂಕವಿಲ್ಲದ, ಬೇಗಬೇಗ ಬೆಳೆಯಬೇಕೆಂಬ ಆತುರವಿಲ್ಲದ ಮರದ ಹಾಗಿರಬೇಕು ಕಲಾವಿದ’ ಎನ್ನುತ್ತಾನೆ ರಿಲ್ಕ್. ಕಲಾವಿದರಷ್ಟೆ ಅಲ್ಲ, ಮನುಷ್ಯರೆಲ್ಲ ಹಾಗೇ ಇರಬೇಕು. ಮರದ ಬದುಕು ಪಾಠವಾಗಿ ನಮ್ಮಾಳಕಿಳಿಯಲಿ. ಹಸಿರು ಅವಿರತ ಪ್ರಜ್ಞೆಯಾಗಲಿ.


(Photos: Dr Prithvi K A)

No comments:

Post a Comment