Monday 16 May 2022

ನ್ಯಾ. ಕೆ. ಚಂದ್ರು - ಜನಚಳವಳಿ ಮಾತ್ರ ಸಂವಿಧಾನವನ್ನು ರಕ್ಷಿಸಬಲ್ಲದು


ಮೈ ಲಾರ್ಡ್,  ನನ್ನ ವಾದ, ಕೇಳಿ ಕೇಳಿ’ ಎಂದು ವಕೀಲರು, ಕಕ್ಷಿದಾರರು ನ್ಯಾಯಾಧೀಶರನ್ನು ಕೇಳುವರಲ್ಲವೆ? ನ್ಯಾಯಾಧೀಶರೊಬ್ಬರು ‘ಮೈ ಲಾರ್ಡ್ ಎಂಬ ಪದ ಬಳಸಬೇಡಿ, ನಾನೂ ನಿಮ್ಮಂತೆಯೇ ಒಬ್ಬ ವ್ಯಕ್ತಿ' ಎಂದು ಹೇಳಿದರೆ? ತುರ್ತಾಗಿ ನ್ಯಾಯ ದೊರೆಯುವುದೇ ಕನಸು ಎಂಬಂತಾಗಿರುವ, ಪ್ರಕರಣಗಳ ಭಾರದಿಂದ ತತ್ತರಿಸಿರುವ, ಸಿಬ್ಬಂದಿ ಕೊರತೆಯಿರುವ ನ್ಯಾಯಾಲಯದಲ್ಲಿ ಒಬ್ಬ ನ್ಯಾಯಾಧೀಶರು ಕೇವಲ 6 ವರ್ಷದಲ್ಲಿ 96000 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಮಾಡಿದರೆ? ನಂಬಲಸಾಧ್ಯ ಎನಿಸುತ್ತದೆ, ಅಲ್ಲವೆ?

ನೀವು ನಂಬಬೇಕು. ಅಂತಹ ನ್ಯಾಯಮೂರ್ತಿ ಒಬ್ಬರು ಈ ಕಾಲದಲ್ಲಿ ಇರುವರು ಎಂದೇ ನಾವಿನ್ನೂ ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದಾಗಿದೆ.

ಅಂಥವರು ನ್ಯಾಯಮೂರ್ತಿ ಕೆ. ಚಂದ್ರು. ಮದರಾಸು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು. ಅವರು ವಕೀಲರಾಗಿ 1993ರಲ್ಲಿ ನಿಭಾಯಿಸಿದ ಪ್ರಕರಣವೊಂದು ಕಳೆದ ವರ್ಷ ‘ಜೈ ಭೀಮ್’ ಎನ್ನುವ ತಮಿಳು ಸಿನಿಮಾ ಆದ ಬಳಿಕ ನ್ಯಾ. ಚಂದ್ರು ಮನೆಮಾತಾಗಿದ್ದಾರೆ. ಅವರ ಬದುಕು, ಪ್ರತಿಪಾದನೆಯ ಕುರಿತು ಎಲ್ಲರಿಗೂ ಆಸಕ್ತಿ, ಅಚ್ಚರಿ, ಗೌರವ ಮೂಡತೊಡಗಿದೆ.

***

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನಲ್ಲಿ 1951ರಲ್ಲಿ ಹುಟ್ಟಿದ ಚಂದ್ರು ವಿದ್ಯಾರ್ಥಿ ದೆಸೆಯಿಂದಲೇ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ಪ್ರತಿಭಟನೆಗಳನ್ನು ಮುನ್ನಡೆಸಿದ ಕಾರಣಕ್ಕಾಗಿ ಅವರನ್ನು ಚೆನ್ನೈನ ಲೊಯೊಲಾ ಕಾಲೇಜು ಡಿಬಾರ್ ಮಾಡಿತ್ತು. ಬಳಿಕ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪೂರೈಸಿದ ಅವರು, 1973ರಲ್ಲಿ ಕಾನೂನು ಪದವಿಗಾಗಿ ಕಾಲೇಜು ಸೇರಿದರು. ಅವರು ವಿದ್ಯಾರ್ಥಿ ಸಂಘಟನೆಯ ವ್ಯಕ್ತಿ ಎಂದು ಹಾಸ್ಟೆಲಿನಲ್ಲಿ ಜಾಗ ಕೊಡದೆ ಹೋದಾಗ ಆಮರಣಾಂತ ಉಪವಾಸ ಆರಂಭಿಸಿದರು. ಕಾನೂನು ಪದವಿಯ ಬಳಿಕ ರಾವ್ ಅಂಡ್ ರೆಡ್ಡಿ ಎಂಬ ಲಾ ಫರ್ಮಿನಲ್ಲಿ ೮ ವರ್ಷ ಕೆಲಸ ಮಾಡಿದ ಅವರು 1988ರವರೆಗೂ ಸಿಪಿಐ(ಎಂ) ಪಕ್ಷದ ಕಾರ್ಯಕರ್ತನಾಗಿ ದುಡಿದರು. ಶ್ರೀಲಂಕಾದ ದಂಗೆ, ಅಂತರ್ಯುದ್ಧದ ಸಮಯದಲ್ಲಿ ತಮಿಳರ ಪರವಾಗಿ ಮಾತನಾಡುತ್ತಾ ಭಾರತದ ಹಸ್ತಕ್ಷೇಪವನ್ನು ಅವರು ವಿರೋಧಿಸಿದಾಗ ಅದು ಪಕ್ಷವಿರೋಧಿ ಚಟುವಟಿಕೆ ಎನಿಸಿಕೊಂಡಿತು. ಸಿಪಿಐ(ಎಂ) ಪಕ್ಷವು ಅವರನ್ನು ಹೊರಹಾಕಿತು. ಆ ವೇಳೆಗೆ ಅಂಬೇಡ್ಕರ್ ಶತಮಾನೋತ್ಸವ ದೇಶಾದ್ಯಂತ ಆಚರಣೆಯಾಯಿತು. ನ್ಯಾ. ಚಂದ್ರು ಅಂಬೇಡ್ಕರರನ್ನು ಹೆಚ್ಚೆಚ್ಚು ಓದಿಕೊಂಡರು. ಭಾರತದಲ್ಲಿ ಜಾತಿ-ಮತ-ಧರ್ಮಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಲಾಗದು ಎನ್ನುವುದನ್ನು ಕಂಡುಕೊಂಡರು. ಬಾರ್ ಎಟ್ ಲಾ ಮುಗಿಸಿಬಂದ ಅಂಬೇಡ್ಕರರ ಕನಸು  ನ್ಯಾಯಮೂರ್ತಿಯಾಗಬೇಕು ಎನ್ನುವುದಾಗಿರುತ್ತದೆ. ಅಂಬೇಡ್ಕರರ ಬದುಕು ಬರಹಗಳಿಂದ ಸ್ಫೂರ್ತಿ ಪಡೆದ ವಕೀಲ ಚಂದ್ರು ಅವರಿಗೂ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಉತ್ಸಾಹ ಹುಟ್ಟುತ್ತದೆ. ಕ್ರಿಮಿನಲ್ ಮತ್ತು ಸಿವಿಲ್ ಖಟ್ಲೆಗಳೆರಡನ್ನೂ ಮದರಾಸು ಉಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದ ಚಂದ್ರು, 2006ರಲ್ಲಿ ಅದೇ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2009ರಲ್ಲಿ ಖಾಯಂ ನ್ಯಾಯಾಧೀಶರಾದರು. 

ಎಷ್ಟೋ ನ್ಯಾಯಮೂರ್ತಿಗಳು ಬರುತ್ತಾರೆ, ಎಷ್ಟೋ ಜನ ಹೋಗುತ್ತಾರೆ. ಆದರೆ ಜನಮಾನಸದಲ್ಲಿ ನೆನಪಿನಲ್ಲುಳಿಯುವಂತೆ ಕೆಲಸ ಮಾಡುವವರು; ಮಾಡುವ ಕೆಲಸದ ಮೇಲೆ ಅತೀವ ಶ್ರದ್ಧೆಯಿಟ್ಟು ಅರ್ಥಪೂರ್ಣವಾಗಿ ಸೇವಾವಧಿ ಕಳೆಯಬೇಕೆನ್ನುವವರು ಎಲ್ಲೋ ಬೆರಳೆಣಿಕೆಯಷ್ಟು ಜನ. ಈ ದೃಷ್ಟಿಯಿಂದ ನ್ಯಾ. ಕೆ. ಚಂದ್ರು ತುಂಬ ಭಿನ್ನರಾಗಿ ಎದ್ದು ಕಾಣುತ್ತಾರೆ. ಅವರು ನ್ಯಾಯಮೂರ್ತಿಯಾದ ಮೇಲೆ ಕೆಲವು ಬದಲಾವಣೆ ತಂದರು. ಇನ್ನು ಮುಂದೆ ತಮಗೆ ಅಂಗರಕ್ಷಕರು ಬೇಡವೆಂದು ಹೇಳಿದರು. ನ್ಯಾಯಮೂರ್ತಿಗಳನ್ನು ‘ಮೈ ಲಾರ್ಡ್’ ಎಂದು ಸಂಬೋಧಿಸುವುದನ್ನು ನಿಲ್ಲಿಸಿದರು. 2013ರಲ್ಲಿ ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭವನ್ನೂ ಸ್ವೀಕರಿಸಲಿಲ್ಲ. ಅಲ್ಲಿ ನ್ಯಾಯಮೂರ್ತಿಗಳು ಬರುವ ಮೊದಲು ಒಬ್ಬ ಸೇವಕನು ಗದೆಯಂತಹ ಲಾಂಛನ ಹಿಡಿದು ಬಂದು ಜನರನ್ನು ದೂರ ಸರಿಸಬೇಕಿತ್ತು. ಅದನ್ನು ಕೂಡಾ ಬೇಡವೆಂದರು. ಅವರಿಗೊಬ್ಬ ಸೆಕ್ಯುರಿಟಿ ಪೊಲೀಸ್ ಆಫೀಸರ್ ಇದ್ದರು. ಅವರ ಅಗತ್ಯವೂ ಇಲ್ಲ ಬೇಡ ಎಂದರು. ಇವು ಬಾಹ್ಯ ಬದಲಾವಣೆಗಳಾದರೆ ನ್ಯಾಯಾಲಯದ ಒಳಗೂ ಬದಲಾವಣೆ ತಂದರು. ಅಂದಂದಿಗೆ ಸಿದ್ಧಪಡಿಸಿದ ಯಾದಿಯ ಪ್ರಕರಣಗಳನ್ನು ಅವತ್ತಿಗೆ ಮುಗಿಸಲೇಬೇಕು. ಕುದುರೆ ಹಾಗೆ ಕೆಲಸ ಮಾಡಿ, ಋಷಿಗಳ ತರಹ ಬದುಕಿ ಎಂದು ಮುಖ್ಯ ನ್ಯಾಯಮೂರ್ತಿ ಕಪಾಡಿಯಾ ಒಮ್ಮೆ ನ್ಯಾಯಮೂರ್ತಿಗಳಿಗೆ ಹೇಳಿದ್ದರು. ಅವರೂ ಹಾಗೇ ನಡೆದುಕೊಂಡರು. 

ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಪ್ರಕರಣಗಳ ಬಗೆಗೆ ವಿಶೇಷ ಆಸ್ಥೆ ವಹಿಸುತ್ತಿದ್ದ ನ್ಯಾ. ಚಂದ್ರು, ವಿಳಂಬವಿಲ್ಲದೆ ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಹೆಸರುವಾಸಿಯಾದರು. ಮೂರರಿಂದ ನಾಲ್ಕು ವಾರಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. ಮನೆಯಲ್ಲಿಯೇ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವುದು, ಒಂದೇ ತರಹದ ಪ್ರಕರಣಗಳನ್ನು ಒಗ್ಗೂಡಿಸುವುದು, ವಿಚಾರಣೆಯನ್ನು ಅನವಶ್ಯ ಮುಂದೂಡದೇ ಮಿತಗೊಳಿಸುವುದು, ತೀರ್ಪನ್ನು ಕೋರ್ಟಿನಲ್ಲಿ ಓದಿ ಹೇಳಿದ ಬಳಿಕ ಟೈಪಿಸಲು ಸಮಯ ವ್ಯರ್ಥ ಮಾಡದೇ ಮನೆಯಲ್ಲಿ ಮಾಡಿಸುವುದು, ಮೊದಲೇ ಸಿದ್ಧವಾಗಿ ಬರುವುದು - ಹೀಗೆ ತ್ವರಿತ ವಿಲೇವಾರಿಗೆ ಹಲವು ವಿಧಾನಗಳನ್ನು ಅನುಸರಿಸಿದರು. ವಿಚಾರಣೆ ಮುಂದೂಡಿಕೆ ಎನ್ನುವುದು ನ್ಯಾಯಾಲಯಕ್ಕೆ ಹತ್ತಿದ ಕಾಯಿಲೆ ಎನ್ನುವ ನ್ಯಾ. ಚಂದ್ರು, ವಕೀಲರಿಗೆ ಕಾಯಿಲೆ/ಅಪಘಾತ ಮುಂತಾದ ತುರ್ತು ಉಂಟಾಗಿದ್ದು ಹೊರತುಪಡಿಸಿದರೆ ಒಮ್ಮೆ ವಿಚಾರಣೆಗೆ ಬಂದ ಪ್ರಕರಣವನ್ನು ಯಾವ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ತೆಗೆದುಕೊಳ್ಳುತ್ತಿದ್ದರು. ಹುಸಿ ಪ್ರಕರಣಗಳನ್ನು ವಜಾ ಮಾಡಿದರೆ. ಎಲ್ಲ ವಿಚಾರಣೆ ಮುಗಿದರೂ ವರ್ಷಗಟ್ಟಲೆಯಿಂದ ಕೊಳೆಬಿದ್ದ ಪ್ರಕರಣಗಳನ್ನು ತೀರ್ಪಿನ ತನಕ ತಂದು ಅಂತಿಮಗೊಳಿಸಿದರು. ಇದು ಅವರಿಗೆ ಹಗೆಗಳನ್ನು ಸೃಷ್ಟಿಸಿದರೂ ಸಹ ಯುದ್ಧೋಪಾದಿಯಲ್ಲಿ 96 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿ ಅತ್ಯಪೂರ್ವ ದಾಖಲೆ ಬರೆದರು. 

ಆಕ್ರೋಶ, ಪ್ರತ್ಯೇಕತೆ, ಅಸಹಾಯಕತೆಗಳೆಲ್ಲ ಸೇರಿ ಶೋಷಿತರಿಗೆ ಒಂದು ತರಹದ ನಿರ್ಧಾರ ಹುಟ್ಟುತ್ತದೆ. ಅದು ಎಲ್ಲ ಅಡೆತಡೆಗಳ ವಿರುದ್ಧವೂ ಅವರು ಸೆಣಸುವಂತೆ ಮಾಡುತ್ತದೆ. ಅಂತಹ ಅಸಹಾಯಕರ, ಪೊಲೀಸ್ ದೌರ್ಜನ್ಯದ ವಿರುದ್ಧವೂ ಹೋರಾಡುತ್ತಿದ್ದ ಅಮಾಯಕರ ಪ್ರಕರಣಗಳನ್ನು ಹುಡುಹುಡುಕಿ ಇತ್ಯರ್ಥಗೊಳಿಸಿದರು. ಅಂತಹ 25 ಪ್ರಕರಣಗಳನ್ನು ಪ್ರಸ್ತುತಪಡಿಸಿ ‘ಲಿಸನ್ ಟು ಮೈ ವರ್ಡ್ಸ್’ (ಪ್ರ: ಲೆಫ್ಟ್ ವರ್ಡ್) ಎಂಬ ಅತ್ಯಂತ ಮನೋಜ್ಞ ಪುಸ್ತಕ ಪ್ರಕಟಿಸಿದರು. 



ಅವರು ವಕೀಲರಾಗಿದ್ದಾಗಲೂ ಅಮಾಯಕರ ಮೇಲೆ ನಡೆವ ಪೊಲೀಸ್ ದೌರ್ಜನ್ಯದ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದರು. ಪೊಲೀಸರೇ ಅಪರಾಧಿಗಳಾದರೆ ಅವರನ್ನು ಶಿಕ್ಷಿಸಲು ಒಂದೂ ಐಪಿಸಿ ಸೆಕ್ಷನ್ ಇಲ್ಲ, ಹಾಗಾಗಿ ರಕ್ಷಕ ವ್ಯವಸ್ಥೆಯೊಳಗೇ ಇರುವ ಸಾಂಸ್ಥಿಕ ಹಿಂಸೆಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು. ವರ್ಗಗ್ರಸ್ತ ಸಮಾಜದಲ್ಲಿ ನ್ಯಾಯವೂ ವರ್ಗಗ್ರಸ್ತವೇ ಆಗಿರುವುದರಿಂದ ಶೋಷಿತರು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಭಾವಿಸಿ ಅಂತಹವರಿಗೆ ಸಹಾಯ ಮಾಡುತ್ತಿದ್ದರು.  ಹಾಗೆ 1993ರಲ್ಲಿ ಅವರು ವಕೀಲರಾಗಿ ಇರುಳರು ಎಂಬ ಆದಿವಾಸಿ ಕುಟುಂಬದ ಒಂದು ಪ್ರಕರಣವನ್ನು ತೆಗೆದುಕೊಂಡಿದ್ದರು. ಆ ನೈಜ ಕತೆಯನ್ನಾಧರಿಸಿ, ಸೂರ್ಯ ನಾಯಕನಟರಾಗಿ ಜ್ಞಾನವೇಲು ನಿರ್ದೇಶಕರಾಗಿ, 2021ರಲ್ಲಿ ಜೈಭೀಮ್ ಚಿತ್ರವಾಗಿ ತೆರೆಗೆ ಬಂತು. ದೇಶಾದ್ಯಂತ ಅದು ಇರುಳರು ಎಂಬ ಆದಿವಾಸಿಗಳ ಬಗೆಗೂ, ಪೊಲೀಸ್ ದೌರ್ಜನ್ಯಗಳ ಬಗೆಗೂ ಚರ್ಚೆ ಹುಟ್ಟುಹಾಕಿತು. 

‘ನನ್ನ ತೀರ್ಪುಗಳಲ್ಲಿ ಕಾಣುವ ಅಂಬೇಡ್ಕರ್ ಬೆಳಕು’, ‘ಲಿಸನ್ ಟು ಮೈ ವರ್ಡ್ಸ್’ (‘ಸಾಹೇಬ್ರೇ, ನನ್ನ ಮಾತು ಕೇಳಿ’- ನ್ಯಾಯಾಲಯಕ್ಕೆ ಬರುವ ಮಹಿಳೆಯರ ಪ್ರಕರಣಗಳು) ಮೊದಲಾದ ಪುಸ್ತಕಗಳನ್ನು ಬರೆದಿರುವ ಅವರು, ನಿವೃತ್ತಿಯ ಬಳಿಕ ಜನಪರ ಚಿಂತನೆ, ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅಲ್ಲಿ ೬, ೭ನೆಯ ತರಗತಿಯ ಮಕ್ಕಳಿಗೆ ಸಂವಿಧಾನದ ಪಾಠಗಳನ್ನು ತಾವೇ ಬೋಧಿಸುತ್ತಾರೆ. 

‘ಭಾರತ ಸಂವಿಧಾನ ಅಪಾಯದಲ್ಲಿದೆ, ಒಡೆಯುವ ಶಕ್ತಿಗಳ ವಿರುದ್ಧದ ಜನ ಚಳವಳಿ ಮಾತ್ರವೇ ಸಂವಿಧಾನವನ್ನು ರಕ್ಷಿಸಬಹುದಾಗಿದೆ. ಸರ್ಕಾರ ಜನರ ಹಿತಾಸಕ್ತಿ ಪೊರೆಯುವಲ್ಲಿ ವಿಫಲವಾದಾಗ ಜನ ಚಳವಳಿಯೇ ಪರ್ಯಾಯಗಳನ್ನು ಸೃಷ್ಟಿಸಬೇಕಿದೆ’ ಎನ್ನುವ ನ್ಯಾ. ಚಂದ್ರು, ಶೋಷಿತರು ನ್ಯಾಯಾಂಗ ವ್ಯವಸ್ಥೆಯ ಬಗೆಗೆ ಇನ್ನೂ ಭರವಸೆಯಿಟ್ಟುಕೊಳ್ಳಬಹುದು ಎನ್ನುವಂತೆ ಮಾಡಿದ್ದಾರೆ. ಈಗ ಚೆನ್ನೈನಲ್ಲಿ ಪತ್ನಿ ಭಾರತಿಯವರೊಡನೆ ವಾಸವಾಗಿದ್ದಾರೆ.


ಇದೇ ಮೇ 27,28ರಂದು ದಾವಣಗೆರೆಯಲ್ಲಿ ನಡೆಯುವ 8ನೆಯ ಮೇ ಸಾಹಿತ್ಯ ಮೇಳದಲ್ಲಿ (ಸ್ವಾತಂತ್ರ್ಯ-75: ನೆಲದ ದನಿಗಳು) ದಿಕ್ಸೂಚಿ ಮಾತುಗಳನ್ನು ಆಡಲಿದ್ದಾರೆ. 

No comments:

Post a Comment