Monday 13 March 2023

K K Shailaja - ಕೆ. ಕೆ. ಶೈಲಜಾ ಟೀಚರ್: ಅಧಿಕಾರದೆಡೆಗೆ ಉದಾತ್ತ ನಿಸ್ಪೃಹತೆ

 

ಕೇರಳದ ಶಿವಪುರಂನ ಪ್ರೌಢಶಾಲೆ. ವಿದ್ಯಾರ್ಥಿಯೊಬ್ಬ ತಿಕ್ಕಲನಂತೆ ವರ್ತಿಸತೊಡಗಿದ್ದ. ಹೆಚ್ಚುಕಡಿಮೆ ಎಲ್ಲರೂ ಅವನ ಮೈಮೇಲೆ ದೆವ್ವ ಬಂದಿದೆಯೆಂದು ಯೋಚಿಸುತ್ತಿದ್ದರು. ದೆವ್ವ ಬಿಡಿಸುವ ವಿಧಾನಗಳನ್ನು ಪಾಲಕರಿಗೆ ಸೂಚಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಅವನನ್ನು ತಡೆದುಕೊಳ್ಳುವುದು ಮನೆಯವರಿಗೂ, ಶಾಲೆಯವರಿಗೂ ಬಲು ಕಷ್ಟವಾಗಿತ್ತು. ಹಿಂಸೆ, ಪ್ರತಿಹಿಂಸೆ ನಡೆಯುತ್ತಿತ್ತು. ಆಗ ಶಾಲೆಯ ವಿಜ್ಞಾನದ ಟೀಚರ್ ಅವನನ್ನು ಹಿಡಿದದ್ದು ದೆವ್ವವೂ ಅಲ್ಲ, ಭೂತವೂ ಅಲ್ಲ, ಅವನದು ಮಾನಸಿಕ ಅಸ್ವಸ್ಥತೆಯೆಂದು ಸ್ಪಷ್ಟವಾಗಿ ಗುರುತಿಸಿದರು. ಅವನ ಮನೆಗೆ ಹೋಗಿ, ತಾಯ್ತಂದೆಯರೊಡನೆ ಮಾತನಾಡಿ, ಮನೋರೋಗ ತಜ್ಞರ ಬಳಿಗೆ ತಾವೇ ಒಯ್ದರು. ಅವನು ಕ್ರಮೇಣ ಮೊದಲಿನಂತಾದದ್ದು ಎಲ್ಲರಲ್ಲೂ ಸಮಾಧಾನ ತಂದಿತ್ತು.  ರೋಗದ ವಿಷಯದಲ್ಲಿ ತರ್ಕಬದ್ಧವಾಗಿ ಯಾವಾಗ ಏನು ಮಾಡಬೇಕೋ ಆಗ ಅದನ್ನು ಮಾಡಿದರೆ ಮಾತ್ರ ನಿಯಂತ್ರಣ ಸಾಧ್ಯವೆಂದು ಆ ಟೀಚರ್ ಅರಿತಿದ್ದರು. ಅಂದಷ್ಟೇ ಅಲ್ಲ, ಮುಂದೆಯೂ ಅವರ ವೈಚಾರಿಕ ಮುಂದಾಳ್ತನ ಅವರದೇ ನೆಲವನ್ನು ರೋಗದ ಭಯಾನಕ ಹಿಡಿತದಿಂದ ಪಾರುಮಾಡಿತು.

ಅವರು ಶೈಲಜಾ ಟೀಚರ್.

ಅಂತಹ ಕೆಲವು ಹೆಣ್ಣು ಜೀವಗಳಿರುತ್ತವೆ: ಮಾಡುವ ಕೆಲಸದಿಂದ, ಆಯ್ದುಕೊಳ್ಳುವ ದಾರಿಯಿಂದ, ಶ್ರದ್ಧೆ-ಬದ್ಧತೆಯಿಂದ ಅವರ ಇರವನ್ನು ಲೋಕ ಗುರುತಿಸಬಲ್ಲದು. ಹೆಸರು, ಹಣದ ಹಪಾಹಪಿಯಿರದ ಅವರ ಗಮನವೆಲ್ಲ ಮಾಡುವ ಕೆಲಸವನ್ನು ಚೆಂದಗಾಣಿಸುವ ಕಡೆಗೇ ಇರುತ್ತದೆ. ಅವರ ಶ್ರಮದ ಚೆಲುವು ಎಂತಹುದೆಂದರೆ ಗಮನಿಸದಿರಲು ಲೋಕಕ್ಕೆ ಸಾಧ್ಯವೇ ಇಲ್ಲ. 

ಅಂಥವರಲ್ಲಿ ನಮ್ಮ ನೆರೆಯ ರಾಜ್ಯ ಕೇರಳದ ಮಾಜಿ ಆರೋಗ್ಯ ಸಚಿವರೂ, ಹಾಲಿ ಶಾಸಕರು ಮತ್ತು ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಕೆ. ಕೆ. ಶೈಲಜಾ ಒಬ್ಬರು. ವಿಶ್ವವೇ ಹೊಸಹೊಸ ಸಾಂಕ್ರಾಮಿಕ ರೋಗಗಳಿಂದ ತತ್ತರಿಸುತ್ತಿರುವಾಗ ಧೃಢವಾಗಿ ನಿಂತು ನಿಫಾ ಮತ್ತು ಕೋವಿಡ್-೧೯ ಎಂಬ ಭಯಾನಕ ವೈರಸ್‌ಗಳು ಕಡಲತಡಿಯ ಕೇರಳವನ್ನು ಹೊಸೆದು ಹಾಕದಂತೆ ದಕ್ಷ ತಂಡವೊಂದನ್ನು ಕಟ್ಟಿಕೊಂಡವರು. ನಡುರಾತ್ರಿಯೋ ಹಗಲೋ, ತನ್ನ ಆರೋಗ್ಯ ಸರಿಯಿದೆಯೋ ಇಲ್ಲವೋ, ಉಂಡೆನೋ ಇಲ್ಲವೋ ಎಂದು ಲೆಕ್ಕಿಸದೇ ಪ್ರತಿಯೊಂದು ಹಂತದಲ್ಲೂ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿದಿನ ರಾತ್ರಿ ೮ಕ್ಕೆ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯ ಮಾಹಿತಿಗಳು ಜನರಲ್ಲಿ ಧೈರ್ಯ ತುಂಬುತ್ತಿದ್ದವು. ವಸ್ತುಸ್ಥಿತಿಯನ್ನು ಅರ್ಥ ಮಾಡಿಸುವಂತಿದ್ದವು. ವಿಶ್ವದ ಮಾಧ್ಯಮಗಳೂ ಆ ಪತ್ರಿಕಾಗೋಷ್ಠಿಯನ್ನು ಎದುರು ನೋಡುತ್ತಿದ್ದರು. ಕಾಯಿಲೆಯ ಬಗೆಗೆ, ಅದರ ಹರಡುವಿಕೆ-ನಿಯಂತ್ರಣ-ಚಿಕಿತ್ಸೆಯ ಬಗೆಗೆ ಖಚಿತ ಮಾಹಿತಿಗಳನ್ನು ನೀಡುತ್ತ, ಏನು ಮಾಡಬೇಕೆನ್ನುವುದನ್ನು ತಿಳಿಸುತ್ತ ಹೋದ ಶೈಲಜಾ ಸಮಗ್ರ ದೃಷ್ಟಿಕೋನದಿಂದ ವಿಸ್ತೃತ ಕಾರ್ಯಯೋಜನೆ ರೂಪಿಸಿ ಅಚ್ಚುಕಟ್ಟಾಗಿ ಜಾರಿಯಾಗುವಂತೆ ನೋಡಿಕೊಂಡರು. 

ಪ್ರೌಢಶಾಲೆಯ ಭೌತಶಾಸ್ತ್ರ ಶಿಕ್ಷಕಿಯಾಗಿ ಎರಡು ದಶಕ ಕೆಲಸ ಮಾಡಿದ್ದ ಶೈಲಜಾ ಟೀಚರ್, ಆರೋಗ್ಯಮಂತ್ರಿಯಾಗಿ ವಿಶ್ವವೇ ತಮ್ಮತ್ತ ಗಮನಿಸುವಂತೆ ಕೆಲಸ ನಿರ್ವಹಿಸಿದರು. ವಿಶ್ವಸಂಸ್ಥೆಯೂ ಅವರ ಕಾರ್ಯದಕ್ಷತೆ, ಬದ್ಧತೆ, ಪರಿಶ್ರಮಗಳನ್ನು ಗುರುತಿಸಿ ಗೌರವಿಸಿತು. 

***

ಕಣ್ಣೂರು ಜಿಲ್ಲೆಯ ಮಟ್ಟನೂರಿನ ಕೆ. ಕುಂದನ್ ಮತ್ತು ಕೆ. ಕೆ. ಶಾಂತಾ ಅವರ ಮಗಳಾಗಿ ನವೆಂಬರ್ ೨೦, ೧೯೫೬ರಲ್ಲಿ ಹುಟ್ಟಿದ ಶೈಲಜಾ ಅವರದು ಕಮ್ಯುನಿಸ್ಟ್ ಹೋರಾಟಗಾರರ ಮನೆತನ. ತಾಯಿಯ ತಾಯಿ ಎಂ. ಕೆ. ಕಲ್ಯಾಣಿಯಮ್ಮ, ಇರಿಟ್ಟಿ ಊರಿನ ಪ್ರಗತಿಪರ ಚಿಂತನೆಗಳ ಮೂಲಸೆಲೆಯಂತೆ ಇದ್ದವರು. ಬ್ರಿಟಿಷರ ಕಾಲದಲ್ಲಿ ಆರಂಭದ ಕಮ್ಯುನಿಸ್ಟರಿಗೆ ಅಡಗುದಾಣವಾಗಿ ತಮ್ಮ ಮನೆಯನ್ನು ಬಳಸಿದವರು. ಇಡಿಯ ರಾಜ್ಯವೇ ಮೈಲಿಬೇನೆಗೆ ತುತ್ತಾದ ಸಮಯದಲ್ಲಿ ಜನರ ನಡುವೆ ಮಿಂಚಿನಂತೆ ಸಂಚರಿಸಿ ಬಾಧಿತ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಧೈರ್ಯ ತುಂಬಿದವರು. ಕಲ್ಯಾಣಿಯಮ್ಮ ಎಂದರೆ ಊರಲ್ಲಿ ಎಲ್ಲರಿಗೂ ಗೌರವ. ಹೆಂಡಗುಡುಕರು, ಉಡಾಳರು ಅವರ ಎದುರು ಬರಲು ಅಂಜುತ್ತಿದ್ದರು. ಕುಡುಕರು ದಾರಿಯಲ್ಲಿ ಕಂಡರೆ ಅವರ ತಲೆಮೇಲೆ ನೀರು ಸುರಿದು ಬುದ್ಧಿ ಹೇಳಿ ಎಷ್ಟೋ ಜನರಿಗೆ ಕುಡಿತ ಬಿಡಿಸಿದ್ದರು. ಅಂತಹ ಅಜ್ಜಿಯನ್ನು ಅರಳುಗಂಗಳಿಂದ ನೋಡಿ ಬೆಳೆದ ಹುಡುಗಿ ಶೈಲಜಾ. ಕಲ್ಯಾಣಿಯಮ್ಮನ ತಮ್ಮ ಎಂ. ಕೆ. ರಾಮಉನ್ನಿ ಜಮೀನ್ದಾರೀ ಪದ್ಧತಿಯ ವಿರುದ್ಧ ಹೋರಾಡಿದ ‘ಕೆಂಪು ದಳ’ದ ಸದಸ್ಯರಾಗಿ ವಿಪರೀತ ಪೊಲೀಸ್ ಹಿಂಸೆಗೆ ಒಳಗಾಗಿದ್ದರು. ಒಮ್ಮೆ ಸೆರೆಮನೆಯಲ್ಲಿ ತೀವ್ರ ಹಿಂಸೆ ಅನುಭವಿಸಿ ಬಿಡುಗಡೆಯಾದ ಕೂಡಲೇ ತೀರಿಕೊಂಡರು. ಅಜ್ಜಿಯ ಮತ್ತೊಬ್ಬ ತಮ್ಮ ಎಂ. ಕೆ. ಕೃಷ್ಣನ್ ರೈತ ಹೋರಾಟದಲ್ಲಿ ಸೇಲಂ ಜೈಲು ಸೇರಿದರು. ೨೨ ಜನರನ್ನು ಗುಂಡು ಹೊಡೆದು ಪೊಲೀಸರು ಕೊಲ್ಲಲೆತ್ನಿಸಿದಾಗ ತಲೆ ಸವರಿ ಹೋದ ಗುಂಡಿನಿಂದ ಆಶ್ಚರ್ಯಕರವಾಗಿ ಅವರು ಪಾರಾಗಿದ್ದರು. ಇಂತಹ ಕತೆಗಳ ಕೇಳುತ್ತ ಹುಡುಗಿ ಬೆಳೆದಳು. 

ಮಡತ್ತಿಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ದಿಟ್ಟ ಯುವತಿ ಶೈಲಜಾ ಕಾಲೇಜು ದಿನಗಳಲ್ಲೇ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಸೇರಿದರು. ಬಳಿಕ ಕೇರಳ ಸ್ಟೇಟ್ ಯುತ್ ಫೆಡರೇಷನ್ (ಅದೀಗ ಡಿವೈಎಫ್ಫೈ)ನ ಭಾಗವಾದರು. ತಮ್ಮ ಶ್ರದ್ಧೆ, ಬದ್ಧತೆ, ಹಿಡಿದ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮುಗಿಸುವ ದಕ್ಷತೆಯಿಂದ ಸಂಘಟನೆಯ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಿಎಸ್ಸಿ, ಬಿಎಡ್ ಮುಗಿಸಿದ ಬಳಿಕ ಶಿವಪುರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದರು. ಅವರ ವೈಜ್ಞಾನಿಕ ಮನೋಭಾವ, ಸಾಮಾಜಿಕ ಕಾಳಜಿ ಆಗಲೇ ವ್ಯಕ್ತವಾಗುತ್ತಿತ್ತು. ಯಾವ ವಿದ್ಯಾರ್ಥಿ/ನಿಯೂ ಶಾಲೆ ಬಿಡಲು ಸಾಧ್ಯವಿರಲಿಲ್ಲ. ಅದರಲ್ಲೂ ಹುಡುಗಿಯರು ಶಾಲೆ ಬಿಟ್ಟರೆ ಟೀಚರ್ ಅವರ ಮನೆಗೇ ಹೋಗುತ್ತಿದ್ದರು. ಅವರ ತಾಯ್ತಂದೆಯರನ್ನು ಒಪ್ಪಿಸಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದ್ದರು. 



ಸಂಘಟನೆಯ ಕೆಲಸಗಳಲ್ಲಿ ಜೊತೆಜೊತೆಯಿದ್ದ ಶೈಲಜಾ ಮತ್ತು ಭಾಸ್ಕರನ್ ೧೯೮೧ರಲ್ಲಿ ಬಾಳಸಂಗಾತಿಗಳಾದರು. ಪಳಸ್ಸಿ ಶಾಲೆಯಲ್ಲಿ ಭಾಸ್ಕರನ್ ಮುಖ್ಯೋಪಾಧ್ಯಾಯರಾದರು. ಇಬ್ಬರೂ ಶಿಕ್ಷಕ ವೃತ್ತಿ ನಡೆಸುತ್ತಲೇ ಸಂಘಟನೆಯಲ್ಲೂ ಸಕ್ರಿಯರಾದರು. ಸ್ತ್ರೀ ಶಬ್ದಮ್ ಎಂಬ ಐದ್ವಾ ಮಹಿಳಾ ಸಂಘಟನೆಯ ಮುಖವಾಣಿ ಪತ್ರಿಕೆಗೆ ಶೈಲಜಾ ಸಂಪಾದಕಿಯಾದರು. ‘ಇಂಡಿಯನ್ ವರ್ತಮಾನವುಂ, ಸ್ತ್ರೀ ಸಮೂಹವುಂ’ ಮತ್ತು ‘ಚೀನಾ: ರಾಷ್ಟ್ರಂ, ರಾಷ್ಟ್ರೀಯಂ, ಕಷ್ಟಕಾಲ’ ಎಂಬ ಎರಡು ಪುಸ್ತಕಗಳನ್ನು ಬರೆದರು. ಅಂದಿನ ಮುಖ್ಯಮಂತ್ರಿ ಕರುಣಾಕರನ್ ಕಣ್ಣೂರಿಗೆ ಬಂದಾಗ ಶಾಲೆಗೆ ರಜೆ ಹಾಕಿ ಆ ಸಭೆಗೆ ಹೋದರು. ಯುವ ಸಮುದಾಯದೆಡೆಗಿನ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಕಪ್ಪುಬಾವುಟ ತೋರಿಸಿ ಬಂಧನಕ್ಕೊಳಗಾದರು.

ಇದರ ನಡುವೆ ಕೂತ್ತುಪರಂಬದಲ್ಲಿ ಸಚಿವರೊಬ್ಬರು ಬಂದಾಗ ಪ್ರತಿಭಟನಾ ಪ್ರದರ್ಶನ ಏರ್ಪಡಿಸಿದ ಡಿವೈಎಫ್ಫೈನ ಐವರು ಕಾರ್ಯಕರ್ತರು ಗುಂಡೇಟಿಗೆ ಬಲಿಯಾದರು. ಈ ಘಟನೆ ಶೈಲಜಾರನ್ನು ರಾಜಕೀಯಕ್ಕೆಳೆದು ತಂದಿತು. ೧೯೯೬ರಲ್ಲಿ ಕೆಲಸಕ್ಕೆ ರಜೆ ಹಾಕಿ ಚುನಾವಣೆಗೆ ನಿಂತು ಶಾಸಕರಾದರು. ಆದರೆ ತನ್ನ ಸಾಮಾಜಿಕ ಚಟುವಟಿಕೆಯ ನಡುವೆ ಬೋಧನಾ ವೃತ್ತಿಗೆ ನ್ಯಾಯ ಒದಗಿಸಲು ಆಗುವುದಿಲ್ಲ ಎನಿಸಿದ್ದೇ ೨೩ ವರ್ಷ ಕೆಲಸ ಮಾಡಿದ ಬಳಿಕ ೨೦೦೪ರಲ್ಲಿ ರಾಜೀನಾಮೆ ಸಲ್ಲಿಸಿದರು. ಶಿಕ್ಷಕಿಯೊಬ್ಬರು ಜನಪ್ರಿಯ ಜನನಾಯಕಿಯಾಗಿ ಬೆಳೆಯಲು ಈ ನಿರ್ಧಾರ ಕಾರಣವಾಯಿತು. ಅವರ ಪಕ್ಷವು ಪೂರ್ಣಪ್ರಮಾಣದ ರಾಜಕಾರಣದಲ್ಲಿ ಅವರನ್ನು ಸಕ್ರಿಯಗೊಳಿಸಿತು. 

೨೦೦೬ರಲ್ಲಿ ಪೆರವೂರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶೈಲಜಾ ಇದುವರೆಗೆ ಸೋಲಿನ ರುಚಿ ಕಂಡದ್ದು ಒಮ್ಮೆ ಮಾತ್ರ. ಅದು ೨೦೧೧ರಲ್ಲಿ ಕಾಂಗ್ರೆಸ್ಸಿನ ಸನ್ನಿ ಜೋಸೆಫ್ ಎದುರು ಸೋತಾಗ. ಮತ್ತೆ ೨೦೧೬ರಲ್ಲಿ ಕೂತ್ತುಪರಂಬದಲ್ಲಿ ಗೆದ್ದ ಬಳಿಕ ಪಿಣರಾಯಿ ವಿಜಯನ್ ಅವರ ಮೊದಲ ಮಂತ್ರಿಮಂಡಲದಲ್ಲಿ ಸಚಿವೆಯಾದರು. ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಎಂಬ ಬಹುಮುಖ್ಯವಾದ ಮೂರು ಖಾತೆಗಳ ಜವಾಬ್ದಾರಿ ಅವರ ಹೆಗಲಿಗೆ ಬಂತು. ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವಾಗ ೨೦೧೮ರಲ್ಲಿ ನಿಫಾ ವೈರಸ್ ಸೋಂಕು ಕೇರಳಕ್ಕೆ ಬಂತು. ಸದಾ ಪ್ರವಾಸಿಗರಿಂದ ತುಂಬಿಕೊಂಡ, ಪ್ರವಾಸೋದ್ಯಮವೇ ಆರ್ಥಿಕತೆಯ ಬೆನ್ನೆಲುಬಾದ ದೇವರ ನಾಡು ಆಗಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿತ್ತು. ಅದರ ಮೇಲೆ ನಿಫಾ ಬಂತು. ಆ ಸಮಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಶೈಲಜಾರ ಪಾತ್ರ ಹಿರಿದು. ಇನ್ನೇನು ನಿಫಾ ಶಂಕೆ ಮುಗಿಯಿತು ಎನ್ನುವಾಗ ಕೋವಿಡ್-೧೯ ಅಪ್ಪಳಿಸಿತು. ಭಾರತ ಸರ್ಕಾರ ಮತ್ತು ದೇಶದ ಉಳಿದ ರಾಜ್ಯಗಳು ಕೋವಿಡ್‌ಗೆ ಎಚ್ಚೆತ್ತುಕೊಳ್ಳುವ ಮೊದಲೇ ಕೇರಳ ಜಾಗೃತಗೊಂಡಿತು. ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವೈರಸ್ ಹಾವಳಿಯನ್ನು ಗಮನಿಸಿ ಜನಭರಿತ ಭಾರತಕ್ಕೆ ಬಂದರೇನು ಮಾಡುವುದೋ ಎಂದು ಪ್ರವಾಸಿಗರಿಂದ ತುಂಬಿದ್ದ ಕೇರಳ ರಾಜ್ಯವು ತಕ್ಷಣ ಕಾರ್ಯಪ್ರವೃತ್ತವಾಯಿತು. ೨೦೧೮ರ ಪ್ರವಾಹ, ನಿಫಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಿದ್ದ ರಾಜ್ಯವು ೨೦೨೦ ಜನವರಿ ೩೦ರಂದು ಮೊದಲ ಕೋವಿಡ್ ಸೋಂಕು ಪತ್ತೆಯಾದದ್ದೇ ತುರ್ತಾಗಿ ಕಾರ್ಯಪ್ರವೃತ್ತವಾಯಿತು. ಎರಡೇ ದಿನದಲ್ಲಿ ಮತ್ತೆರೆಡು ಪ್ರಕರಣಗಳು ದಾಖಲಾದಾಗ ತುರ್ತುಸಭೆ ಕರೆದು ಅವಘಡ ನಿರ್ವಹಣಾ ಸಮಿತಿ ರಚನೆಯಾಯಿತು. ಮುಖ್ಯಮಂತ್ರಿ, ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳ ತಂಡ ಹತ್ತು ಹಲವು ಕಾರ್ಯತಂತ್ರಗಳನ್ನು ಯೋಜಿಸಿತು. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ತುರ್ತು ಕಾರ್ಯ ಪಡೆಗಳ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಿ ದಿನದಿನವೂ ಹೊಸಹೊಸ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡತೊಡಗಿತು.

ಕೋವಿಡ್-೧೯ ಕಾಯಿಲೆಯ ಬಗೆಗೆ, ವೈರಸ್ ಬಗೆಗೆ ನಮಗೀಗ ಅಷ್ಟಿಷ್ಟು ತಿಳಿದಿದೆ. ಅಂತಹ ಯಾವೊಂದೂ ಪೂರ್ವಜ್ಞಾನವಿಲ್ಲದ, ಲಸಿಕೆ ತಯಾರಾಗಿರದ, ಚಿಕಿತ್ಸೆ ಲಭ್ಯವಿರದಿದ್ದ ಆರಂಭದ ಸಮಯದಲ್ಲಿ ಶೈಲಜಾ ತೋರಿದ ವಿವೇಕ ಮತ್ತು ಪೊರೆವ ಹೆಣ್ಣು ಗುಣಗಳು ರಾಜ್ಯದ ಜನರನ್ನು ಕಂಗೆಡದೆ ಸೋಂಕನ್ನು ಎದುರಿಸಲು ಸಜ್ಜುಗೊಳಿಸಿದವು. ಈ ಹಂತದಲ್ಲಿ ಶೈಲಜಾ ತಮ್ಮನ್ನು ಸಂಪೂರ್ಣ ಜನಸಂಪರ್ಕಕ್ಕೆ ಒಡ್ಡಿಕೊಂಡರು. ಚುರುಕಾಗಿ ಓಡಾಡುತ್ತ ಜನರಲ್ಲಿ ವಿಶ್ವಾಸ ತುಂಬಿದರು. ಹೆಚ್ಚೆಚ್ಚು ಪರೀಕ್ಷೆ ನಡೆಸಿ, ಕೂಡಲೇ ಸೋಂಕು ಪತ್ತೆ ಮಾಡಿ, ಸೋಂಕಿತರನ್ನು ಪ್ರತ್ಯೇಕ ಇರಿಸಿ, ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ನಿಯಂತ್ರಣ ಮಾರ್ಗ ಹುಡುಕಿದರು. ಸರ್ಕಾರವು ಕುಡುಂಬಶ್ರೀ ಕಾರ್ಯಕರ್ತರನ್ನು ಬಳಸಿಕೊಂಡು ರೇಶನ್ ಪೂರೈಸಿತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿತು. ಇದೇ ಸಂದರ್ಭ ಬಳಸಿಕೊಂಡು ರಾಜ್ಯದ ವೈದ್ಯಕೀಯ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ಬಲಪಡಿಸಿತು. ಉಳಿದ ದೇಶ, ರಾಜ್ಯಗಳು ಅತಿ ಹೆಚ್ಚು ಸೋಂಕಿನಿಂದ ತತ್ತರಿಸುತ್ತ, ಕೆಲವು ಸರ್ಕಾರಗಳು ಪರೀಕ್ಷೆಯನ್ನೇ ಮಾಡದೇ ಹುಸಿ ನಿಯಂತ್ರಣದ ಗ್ರಾಫುಗಳನ್ನು ಕಾಗದದ ಮೇಲೆ ತೋರಿಸುತ್ತ, ಸುಡಲು ಸ್ಮಶಾನವೂ ಸಿಗದೆ ಶವಗಳು ಕ್ಯೂನಲ್ಲಿ ಕಾಯುತ್ತಾ ಇರುವಾಗ ಕೇರಳ ಪ್ರತಿದಿನ ಲಕ್ಷಗಟ್ಟಲೆ ಪರೀಕ್ಷೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿತು. 

ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಫಲ. ಐದು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂತು. ಇದು ಇಡಿಯ ಸರ್ಕಾರ, ಅಧಿಕಾರಿಗಳು, ಕಾರ್ಯಕರ್ತರು ಎಲ್ಲರ ಮಿಶ್ರ ಶ್ರಮದ ಫಲವೇ ಹೌದು. ಆದರೆ ಯೋಜನೆಯಲ್ಲಿ ಆರೋಗ್ಯ ಸಚಿವೆ ಶೈಲಜಾ ಪಾಲು ದೊಡ್ಡದು. 

ಒಂದಾದ ಮೇಲೊಂದು ಕೋವಿಡ್ ಅಲೆಗಳು ಬಂದಪ್ಪಳಿಸಿದರೂ ಕೇರಳ ರಾಜ್ಯವು ಸುಳ್ಳು ಅಂಕಿಅಂಶ ತೋರಿಸಿ ತನ್ನಲ್ಲಿ ಸೋಂಕು ಕಡಿಮೆಯಾಯಿತು ಎನ್ನಲಿಲ್ಲ. ಮಿಕ್ಕ ರಾಜ್ಯಗಳು ಸಾವಿರಗಟ್ಟಲೆ ಟೆಸ್ಟ್‌ಗಳನ್ನು ಮಾಡುವಾಗ ತಾನು ಲಕ್ಷಗಟ್ಟಲೆ ಟೆಸ್ಟುಗಳನ್ನು ಮಾಡಿ ಸೋಂಕಿತರನ್ನು ಶುಶ್ರೂಷೆಗೊಳಪಡಿಸಿತು. ಧೈರ್ಯ ಕಳೆದುಕೊಳ್ಳದೆ ಇರಲಿ ಎಂದು ಸ್ವತಃ ಆರೋಗ್ಯ ಸಚಿವರೇ ಮಿಂಚಿನಂತೆ ರಾಜ್ಯದಾದ್ಯಂತ ಸಂಚರಿಸಿದರು. ಎಷ್ಟೋ ಸಲ ಮನೆಗೆ ಹೋಗದೇ ದಿನಗಳುರುಳುತ್ತಿದ್ದವು. ಸೋಂಕನ್ನು ಮನೆಗೆ ತಲುಪಿಸದಂತೆ ಎಚ್ಚರ ವಹಿಸಬೇಕಾಗುತ್ತಿತ್ತು. ಆದರೂ ಮನೆಯವರೊಂದಿಗೆ ನಿತ್ಯ ಸಂಪರ್ಕ ಇರಿಸಿಕೊಂಡಿದ್ದರು. ಧೈರ್ಯಗೆಡದಂತೆ ಜನರಲ್ಲಿ ಹೇಗೆ ಭರವಸೆ ತುಂಬುತ್ತಿದ್ದರೋ ಅದನ್ನು ಕುಟುಂದವರಲ್ಲಿಯೂ ತುಂಬಿದರು. ಅವರಿಗೆ ಶೋಭಿತ್ ಮತ್ತು ಲಸಿತ್ ಎಂಬ ಇಬ್ಬರು ಗಂಡುಮಕ್ಕಳು. ಶೋಭಿತ್ ಅಬುಧಾಭಿಯಲ್ಲಿದ್ದರು. ಅಲ್ಲಿಯ ಕೋವಿಡ್ ಕಾಳಜಿ ಕೇಂದ್ರದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಮತ್ತೊಬ್ಬ ಮಗ ಲಸಿತ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಇಂಜಿನಿಯರ್ ಆಗಿರುವರು. ಮಕ್ಕಳನ್ನು, ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸುತ್ತ ಧೈರ್ಯ ತುಂಬಿ, ಧೈರ್ಯ ಪಡೆದವರು ಶೈಲಜಾ. 

ನಿರುದ್ವಿಗ್ನವಾಗಿ ಆದರೆ ನಿರಂತರವಾಗಿ, ಖಚಿತವಾಗಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾದ ರೀತಿಗೆ ವಿಶ್ವವೇ ಅಚ್ಚರಿಗೊಂಡಿತು. ಅವರ ಕಾರ್ಯವೈಖರಿಯ ಬಗೆಗೆ ಚರ್ಚೆಗಳಾದವು. ಗಾರ್ಡಿಯನ್ ಪತ್ರಿಕೆ ಅವರನ್ನು ‘ಕೊರೊನಾ ಸಂಹಾರಕಿ’, ‘ರಾಕ್‌ಸ್ಟಾರ್ ಹೆಲ್ತ್ ಮಿನಿಸ್ಟರ್’ ಎಂದು ಹೆಸರಿಸಿತು. ಏಷಿಯಾದ ಶಕ್ತ ಕೊರೋನಾ ವಾರಿಯರ್‌ಗಳಲ್ಲಿ ಪ್ರಮುಖರೆಂದು ಬಿಬಿಸಿ ಹೇಳಿತು. ವೋಗ್ ಪತ್ರಿಕೆಯು ವೋಗ್ ವಾರಿಯರ್ ಎಂದಿತು. ಬ್ರಿಟಿಷ್ ಪತ್ರಿಕೆ ಪ್ರಾಸ್ಪೆಕ್ಟ್ ಅವರನ್ನು ೨೦೨೦ನೇ ಇಸವಿಯ ಅತ್ಯುನ್ನತ ಚಿಂತಕಿ ಎಂದಿತು. ಫೈನಾನ್ಶಿಯಲ್ ಟೈಮ್ಸ್ ಅಂತೂ ೨೦೨೦ನೇ ಇಸವಿಯ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ ಎಂದು ಗುರುತಿಸಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾಗೆ ನಂತರದ ಸ್ಥಾನ ನೀಡಿತು. ‘ಸಾಮಾಜಿಕ ಸೇವಾ ದಿನ’ದಂದು ಮಾತನಾಡಲು ವಿಶ್ವದ ಕೆಲವೇ ನಾಯಕರ ಜೊತೆಗೆ ವಿಶ್ವಸಂಸ್ಥೆಯಿಂದ ಆಹ್ವಾನ ಬಂತು. ಅವರ ಕಾರ್ಯ-ಸಾಧನೆ ಆಧರಿಸಿ ‘ವೈರಸ್’ ಎಂಬ ಸಿನಿಮಾವೂ ತಯಾರಾಯಿತು.

ಅವರನ್ನು ಪೂರಾ ಸಮಾಜಕ್ಕೆ ಬಿಟ್ಟುಕೊಟ್ಟ ಅವರ ಕುಟುಂಬ ಕೋವಿಡ್ ಕಷ್ಟದ ಕಾಲವನ್ನು ಹೇಗೆ ನಿಭಾಯಿಸಿತು ಎಂಬ ಪ್ರಶ್ನೆಗೆ, ‘ಪಕ್ಷ ಎಂದರೆ ನಮ್ಮ ದೇಹದ ಒಂದು ಭಾಗ ಇದ್ದ ಹಾಗೆ. ಅದರಿಂದ, ಅದಕ್ಕಾಗಿಯೇ ನಾವು ಬದುಕುವುದು. ಎಂದೇ ಜನರಿಗಾಗಿ ಪಕ್ಷದ ನಿರ್ದೇಶನದಂತೆ ಶೈಲಜಾ ಅವರು ಕೆಲಸ ಮಾಡುತ್ತಿರುವುದು ಎಂದು ಅರಿತುಕೊಳ್ಳುವುದು ನಮಗೆ ಸಾಧ್ಯವಾಯಿತು. ಹಾಗಾಗಿ ನಮ್ಮ ಕುಟುಂಬಕ್ಕೆ ಅವರು ಜೊತೆಯಿಲ್ಲದಿರುವುದನ್ನು ತಾಳಿಕೊಳ್ಳುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕಮ್ಯುನಿಸ್ಟ್ ಕುಟುಂಬಗಳಿರುವುದೇ ಹೀಗೆ. ಮನೆಯವರಿಗೆಲ್ಲ ಶೈಲಜಾ ಟೀಚರ್ ಮಂತ್ರಿಯಾಗಿ, ಮತ್ತೊಂದಾಗಿ ಕೆಲಸ ಮಾಡುವಾಗ ಹೆಮ್ಮೆಯೇ ಆಯಿತು’ ಎಂದು ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ, ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶೈಲಜಾರ ಬಾಳಸಂಗಾತಿ ಭಾಸ್ಕರನ್ ಮಾಸ್ಟರ್ ಹೇಳುತ್ತಾರೆ.


ಕೋವಿಡ್ ಅಲೆಯ ಬಳಿಕ ಕೇರಳ ವಿಧಾನಸಭೆಗೆ ಚುನಾವಣೆಗಳು ನಡೆದವು. ಈ ಬಾರಿ ತನ್ನ ಕ್ಷೇತ್ರ ಬದಲಿಸಿ ಮಟ್ಟನೂರಿನಿಂದ ಶೈಲಜಾ ಸ್ಪರ್ಧಿಸಿದರು. ನಿರೀಕ್ಷೆಯಂತೆ ೬೦,೯೬೩ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಕೇರಳದ ಇತಿಹಾಸದಲ್ಲಿ ಅದೊಂದು ದಾಖಲೆ. ಇಷ್ಟು ಭಾರೀ ಅಂತರದಿಂದ ಅದುವರೆಗೆ ಯಾರೂ ಗೆಲುವು ಪಡೆದಿರಲಿಲ್ಲ. ಅವರನ್ನೇ ಕೇರಳದ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಮಾಧ್ಯಮಗಳೂ, ಜನರೂ ಊಹಿಸಿದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಮುಖ್ಯಮಂತ್ರಿಯವರನ್ನು ಬಿಟ್ಟು ಎಲ್ಲ ಹೊಸಮುಖಗಳನ್ನೇ ಸಚಿವರನ್ನಾಗಿ ಮಾಡಲಾಯಿತು. ಮುಖ್ಯಮಂತ್ರಿಯಾಗುವುದಿರಲಿ, ಶೈಲಜಾ ಸಚಿವೆಯಾಗುವ ಪ್ರಶ್ನೆಯೇ ಏಳಲಿಲ್ಲ. ಅವರನ್ನು ಸಿಪಿಐ(ಎಂ) ಪಕ್ಷದ ಕೇಂದ್ರಸಮಿತಿಯ ಸದಸ್ಯೆಯಾಗಿ ನೇಮಿಸಿದರು. ಪಕ್ಷದ ಮಹಿಳಾ ಸಂಘಟನೆ ಐದ್ವಾದ ಕೇರಳ ರಾಜ್ಯ ಕಾರ್ಯದರ್ಶಿಯಾಗಿಸಿದರು. ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾದರು. ಭಾರೀ ಅಂತರದಿಂದ ಗೆದ್ದಾಗಲೂ, ಯಶಸ್ವಿಯಾಗಿ ಕೆಲಸ ನಿರ್ವಹಿಸಿ ವಿಶ್ವದ ಗಮನ ಸೆಳೆದಾಗಲೂ ಮಂತ್ರಿಮಂಡಲದಿಂದ ಅವರನ್ನು ಕೈಬಿಟ್ಟ ಕುರಿತು ಹಲವೆಡೆಗಳಿಂದ ಆಕ್ರೋಶ, ಟೀಕೆಗಳು ಕೇಳಿಬಂದವು. ಆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ‘ಒಮ್ಮೆ ಒಬ್ಬರಷ್ಟೇ ಮುಖ್ಯಮಂತ್ರಿಯಾಗಲು ಸಾಧ್ಯ. ಈಗ ಪಿಣರಾಯಿ ದಕ್ಷರಾಗಿದ್ದು ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಮಂತ್ರಿಮಂಡಲ ಮತ್ತು ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಲಿವೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ’ ಎಂದು ಶೈಲಜಾ ತಣ್ಣಗೆ ಹೇಳಿದರು.

ನಿಫಾ ಮತ್ತು ಕೋವಿಡ್ ಸಾಂಕ್ರಾಮಿಕಗಳ ದಕ್ಷ ನಿಯಂತ್ರಣಕ್ಕಾಗಿ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಬಂದಾಗ ಶೈಲಜಾ ಅದನ್ನು ನಿರಾಕರಿಸಿದರು. ‘ನನ್ನ ಪಕ್ಷದವರೊಡನೆ ಚರ್ಚಿಸಿರುವೆ. ಪ್ರಶಸ್ತಿಯ ಕುರಿತು ಎಲ್ಲ ಗೌರವವನ್ನಿಟ್ಟುಕೊಂಡೇ ಹೇಳುತ್ತಿರುವೆ, ನಾನು ಒಬ್ಬಳೇ ಕೆಲಸ ಮಾಡಲಿಲ್ಲ. ಎಂದೇ ಕೆಲಸದ ಯಶಸ್ಸು ಸಾಮೂಹಿಕ ಪ್ರಯತ್ನಕ್ಕೆ ಸಲ್ಲಬೇಕೇ ಹೊರತು ಒಬ್ಬ ವ್ಯಕ್ತಿಗಲ್ಲ. ಆ ಪ್ರಶಸ್ತಿಯನ್ನು ಯಾವತ್ತೂ ವ್ಯಕ್ತಿಗಳಿಗೆ ಕೊಟ್ಟಿರುವರೇ ವಿನಹ ರಾಜಕಾರಣಿಗಳಿಗೆ ಕೊಟ್ಟಿಲ್ಲ. ಹಾಗಾಗಿ ಪ್ರಶಸ್ತಿ ಪಡೆಯದಿರಲು ನಿರ್ಧರಿಸಿರುವೆ’ ಎಂದು ತಿಳಿಸಿದರು.

ಇಂತಹ ನಮ್ಮಕ್ಕ ಶೈಲಜಾ ಮಂಜು ಸಾರಾ ರಾಜನ್ ಅವರ ಸಹಾಯದಿಂದ ತಮ್ಮ ಆತ್ಮಚರಿತ್ರೆ ‘ಮೈ ಲೈಫ್ ಅಸ್ ಎ ಕಾಮ್ರೇಡ್’ ಬರೆದು ಪ್ರಕಟಿಸಿದ್ದಾರೆ. ವಿಶ್ವವೇ ಗುರುತಿಸಿದ ಶೈಲಜಾ ಟೀಚರ್ ರೂಪುಗೊಂಡ ಪರಿಯನ್ನು ಅದರಲ್ಲಿ ತಿಳಿಯಬಹುದಾಗಿದೆ.


ಅಧಿಕಾರಕ್ಕಾಗಿ ಹಪಹಪಿಸದ, ಅಧಿಕಾರ ಅನುಭವಿಸಲಿಕ್ಕೆಂದೇ ರಾಜಕಾರಣ ನಡೆಸದ, ತನ್ನ ಪಾಲಿಗೆ ಬಂದದ್ದನ್ನು ದಕ್ಷವಾಗಿ ನಿಭಾಯಿಸಿ ಆಸೆಆಮಿಷಗಳಿಂದ ದೂರವೇ ಉಳಿಯುವ ನಿಸ್ಪೃಹತೆ ಒಂದು ಅಸಾಮಾನ್ಯ ಗುಣ. ಕಮ್ಯುನಿಸಂ ಇರಲಿ, ಸ್ತ್ರೀವಾದವೇ ಇರಲಿ, ಯಾವುದೇ ಮಾನವೀಯ ಸಿದ್ಧಾಂತವು ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ಸಂಪನ್ಮೂಲವನ್ನಾಗಿ ನೋಡುತ್ತದೆ.  ಅಧಿಕಾರವನ್ನು ಲೋಕಹಿತದ ಕಾರಣಕ್ಕಾಗಿ ಬಳಸಬೇಕು, ಸಾಮೂಹಿಕವಾಗಿ ಅನುಭವಿಸಬೇಕೆಂದು ತಿಳಿಸುತ್ತದೆ. ಇದು ತಾತ್ತ್ವಿಕವಾಗಿ ನ್ಯಾಯವೇ ಆದರೂ ಇದನ್ನೊಪ್ಪಿಕೊಂಡ ಸಜೀವ ಮಾದರಿಗಳು ಇಲ್ಲವೆಂಬಷ್ಟು ವಿರಳವಾಗಿವೆ. ವರ್ತಮಾನದ ಸಂದರ್ಭದಲ್ಲಿ ಅಧಿಕಾರ ರಾಜಕಾರಣದ ಕಾರಿಡಾರುಗಳ ಕಂಬ, ಮೂಲೆಗಳೂ ಹೇಳುವ ಸ್ವಾರ್ಥ,  ಸ್ವಜನಪಕ್ಷಪಾತ, ದ್ರೋಹ, ಕುಟಿಲ ವ್ಯೂಹಗಳ ದುಷ್ಟ ಉದಾಹರಣೆಗಳ ನಡುವೆ ಶೈಲಜಾ ತರಹದ ಹೆಣ್ಣು ಜೀವವೊಂದು ನಮ್ಮ ನಡುವೆಯೇ ಇದೆ ಮತ್ತು ಹೆಣ್ಣುಮಾದರಿಯ ಮುಂದಾಳ್ತನಕ್ಕೆ ಸೂಕ್ತ ಉದಾಹರಣೆಯಾಗಿದೆ ಎನ್ನುವುದು ಭರವಸೆಯ ಸಂಗತಿಯಾಗಿದೆ. 

(ಇಂತಹ ನಮ್ಮಕ್ಕ ಶೈಲಜಾ ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಮಾರ್ಚ್ ೭ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹಕ್ಕೊತ್ತಾಯ ಜಾಥಾ ಉದ್ಘಾಟಿಸಲಿಕ್ಕೆ ಕರ್ನಾಟಕಕ್ಕೆ, ತುಮಕೂರಿಗೆ ಬರಲಿದ್ದಾರೆ. ಬನ್ನಿ, ಅಕ್ಕ ಶೈಲಜಾರೊಂದಿಗೆ ಹೆಜ್ಜೆ ಹಾಕುವಾ. ಕೈಗೆ ಕೈ ಜೋಡಿಸುವಾ.)

                                                                                                                            ಡಾ. ಎಚ್. ಎಸ್. ಅನುಪಮಾ

No comments:

Post a Comment