Thursday 20 July 2023

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..






 ದೇವರುಗಳ ಕಾಡಿನಲ್ಲಿ ಮೂಕಬಾಲೆಯ ಬಿಕ್ಕು ಅರಣ್ಯರೋದನವಾಗಿರುವ ಹೊತ್ತು

ಈ ಕವಿತೆಗೆ ಶೀರ್ಷಿಕೆ ಇರುವುದಿಲ್ಲ

ಉಟ್ಟಬಟ್ಟೆ ಹರಿದರೆ ತೇಪೆ ಹಾಕುತ್ತೇನೆ

ಮಲಿನವಾದರೆ ಮತ್ತೆ ತೊಳೆಯುತ್ತೇನೆ

ಬಟ್ಟೆಯೇ ಸಿಗದಿದ್ದರೆ 

ಬೆತ್ತಲಾದೇನು ಅಕ್ಕನಂತೆ

ತೊಡದ ಬಟ್ಟೆಯ ಕೊಳೆಯ ತೊಳೆಯಲೆಂತೆ?


ಉಂಗುಷ್ಠ ಹರಿದರೆ ಹೊಲಿಯುತ್ತೇನೆ

ಒಂಟಿ ಜೋಡಾದರೆ ಅತ್ತ ಎತ್ತಿಡುತ್ತೇನೆ

ಕಲ್ಲುಮುಳ್ಳುಗಳ ಬರಿಗಾಲಲೂ ದಾಟುವೆ 

ನಡೆವ ಹಾದಿಯೇ ಪಾದ ನುಂಗಿದರೆ 

ಹೆಜ್ಜೆಗಳನೆತ್ತ ಇಡಲೆ?


‘ಕಾಡೇ ಗೂಡೇ..’ ಎಂದು ಕಣ್ಮುಚ್ಚುವಾಗ ಭಯ

‘ನಮ್ಮಯ ಹಕ್ಕಿಯ’ ಬಿಟ್ಟೇ ಎನುವಾಗ ಭಯ

ಲಂಗ ಮೇಲೆತ್ತಿ ಕುಂಟೋಬಿಲ್ಲೆಯಾಡುತ್ತ  

ಮಿಡಿಮೊಲೆಗಳು ಹಾರಿ ಬೀಳುವಾಗ 

ಅಮ್ಮನಿಗೆ ಭಯವೋ ಭಯ


ಮೊಲೆಮುಡಿಗಳು ಕುಡಿಯೊಡೆದು

ಅಂಗಾಂಗದೊಳಗೆ ಅನಂಗ ಹರಿದಾಡಿದ ಹೊತ್ತು

ಜೀವ ತತ್ತರ

ಮೈಮೇಲೆದ್ದವು ಹುತ್ತ

ಹುತ್ತದ ಬಾಯಿಗಳೆಲ್ಲ ಯೋನಿಗಳಾದವು

ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು

ಸಹಸ್ರ ಯೋನಿಗಳ ದೇಹ

ಸರ್ವಋತು ಸ್ರಾವ 


ಯುದ್ಧ ಅಲ್ಲೆಲ್ಲೋ ನಡೆಯುತ್ತಿಲ್ಲ

ಗುಂಡಿನ ಸದ್ದಷ್ಟೆ ಎದೆ ನಡುಗಿಸುವುದಿಲ್ಲ

ಇಟ್ಟರೆ ಕೊಳೆವ ಹೂತರೆ ಮಣ್ಣಾಗುವ

ಸುಟ್ಟರೆ ಬೂದಿಯಾಗುವ ಈ ದೇಹ

ಗುಪ್ತಾಂಗಗಳ ಗುಟ್ಟಿನ ಸಂಕಟಗಳು 

ಕೈದು ಹಿಡಿದು ಕಾದುವ ರಣರಂಗ


ಇದ್ದಳಂತೆ ಹಾಗೊಬ್ಬಳು

ದಿಟ್ಟವಾಗಿ ಬೆತ್ತಲಾಗಿ ಒಬ್ಬಂಟಿ ಅಲೆದವಳು

ಕೂಡದೆ ಹೆರದೆ ಲಿಂಗಸತಿಯಾದವಳು..

ಹಾಗೂ ಇದ್ದಳಂತೆ ಮಗದೊಬ್ಬಳು

ಸೂರ್ಯನ ನೆನಹಿಗೇ ಬಸಿರಾಗಿ ಹೆತ್ತವಳು.. 


ಓ ದೇವರೇ, ಸಾಧ್ಯವಿಲ್ಲ ಇನ್ನು

ಹೀಗೊಂದು ವರ ನೀಡು:

ಜೀವಕುಲಕೋಟಿಯ ಉಭಯವಳಿಯಲಿ

ಮಾನವ ಸಂತತಿ ಅಯೋನಿಜವಾಗಲಿ..                                                                                                  

(2013)  

                                      

 

                                    2. ಕವಿತೆಯೇ ಎಚ್ಚರಇದು ಅತ್ಯಾಚಾರಿಗಳ ಕಾಲ..

ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ  ಕವಿತೆಯೇ,
ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ,
ಎಚ್ಚರಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.  
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ

ಎಚ್ಚರಇದು ಅತ್ಯಾಚಾರಿಗಳ ಕಾಲ.

ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿನಾರು ಹೆಕ್ಕಿ ಗೂಡು ಕಟ್ಟುತ್ತದೆ

ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ

ಸುರನೋ ಅಸುರನೋ ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.

ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು.
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು.
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು.
ಜೀವಕಾರುಣ್ಯದ ಮೊಲೆ ಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..

ಡಾ. ಎಚ್. ಎಸ್. ಅನುಪಮಾ (2014)


ಹೇಡಿ ಶಬ್ದಗಳೇ,

ಪುಟ್ಟ ಬಾಲೆಯ ಭಯದ ಬಿಕ್ಕುಗಳಲ್ಲಿ

ಐಸಿಯುನ ನಿಟ್ಟುಸಿರುಗಳಲ್ಲಿ

ಕಣ್ಣ ಹನಿಗಳಲ್ಲಿ ತಗ್ಗಿಸಿದ ತಲೆಯಲ್ಲಿ

ಅಡಗಿ ಉಠಬೈಸ್ ತೆಗೆವ ಹೇಡಿ ಶಬ್ದಗಳೇ,

ಕಾಗೆ ಕಾವ್‌ಗುಡುವ

ಸರ್ಪ ಬುಸುಗುಡುವ 

ಹಂದಿ ಹ್ಞೂಂಕರಿಸುವ ಸದ್ದಿಗೂ ಅರ್ಥವಿದೆ.

ಒಡಲುರಿಯ ಹಾಡಾಗಿಸದ ನಿಮಗೆ 

ಲಜ್ಜೆಯಿರುವುದೇ ಹೌದಾದಲ್ಲಿ  

ಅಗ್ನಿಪರ್ವತದ ಬಾಯೊಳಗೆ ಹಾರಿಬಿಡಿ.

ಏರು ಗಂಟಲ ದನಿಯಲ್ಲಿ

ಕಟ್ಟಿದ ಮುಷ್ಠಿಯಲ್ಲಿ

ದಿಟ್ಟ ನಡುಗೆಯಲ್ಲಿ

ಮತ್ತೆ ಹುಟ್ಟಿಬನ್ನಿ..

- ಡಾ. ಎಚ್. ಎಸ್. ಅನುಪಮಾ (2013)


No comments:

Post a Comment