Monday 4 May 2015

ಬುದ್ಧ ಮಾರ್ಗಿಯ ಮೊದಲ ತೊದಲು..




ಜಿಂಯ್ಞ್‌ಗುಡುವ ಸದ್ದಿನಲೇ
ಹುಟ್ಟು ಸಾವು ಕಾಮ ಕ್ರೋಧಗಳ ದಾಟುತ್ತ
ದೇಹ ನಾಲಿಗೆಯಾದ ಜೀರುಂಡೆಯೇ,
ಮೌನ ತಿಳಿಯದ ಮಾತು ನಿನಗೆ.
ಇವತ್ತು ವೈಶಾಖ ಹುಣ್ಣಿಮೆ.
ಕೇಳು ಹೇಳುತ್ತೇನೆ ಮೈಯೆಲ್ಲ ಕಿವಿಯಾದ ಬುದ್ಧನ ಕತೆ..

ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಶಾಖ ಹುಣ್ಣಿಮೆಯ ದಿನ
ಕಪಿಲವಸ್ತುವಿನ ಮಾಯಾ ಶುದ್ಧೋದನರ ಮಡಿಲು
ಸಿದ್ಧಾರ್ಥ ಬೆಳಕಿನಿಂದ ತುಂಬಿಕೊಂಡಿತು.
ಲುಂಬಿನಿ ವನದಲ್ಲಿ ಹೆತ್ತ ಮರುಗಳಿಗೆ ಮಾಯಾ ಕೊನೆಯುಸಿರೆಳೆದಳು
ಚಿಕ್ಕಮ್ಮ ಪ್ರಜಾಪತಿಯ ಅಂಗೈಯ ಕೂಸಾಗಿ
ನೀಲಿಗಣ್ಣಿನ ಮಗು ಚಂದಿರನಂತೆ ಬೆಳೆಯಿತು
ಇಂದಿಗೆ ಚಿಕ್ಕವನು ನಾಳೆಗೆ ದೊಡ್ಡವನು ಆಯಿತು

ಎಲ್ಲ ಮಕ್ಕಳಿಗೆ ಹೇಗೋ ಹಾಗೇ ಪುಟ್ಟನಿಗೂ
ಕಾಡುಗಿಡಮರಪ್ರಾಣಿಪಕ್ಷಿ ಅಂದ್ರೆ ತುಂಬ ಇಷ್ಟ
ಕತೆ ಕೇಳೋದು, ಕತೆ ಹೇಳೋದು ಅಂದ್ರೆ ಇನ್ನೂ ಇಷ್ಟ
ಸುಮ್ಮನಿರುವವನೇ ಅಲ್ಲ
ಮಗು ಎಲ್ಲಿಂದ ಬರುತ್ತೆ? ಹುಟ್ಟೋದು ಹೇಗೆ?
ಸತ್ತೋರು ಏನಾಗ್ತಾರೆ? ಎಲ್ಲೋಗ್ತಾರೆ? ಯಾಕೆ ಎಲ್ರು ಹುಟ್ಟಿ ಸಾಯಬೇಕು?
ಹೀಗೇ ಏನೇನೋ ಪ್ರಶ್ನೆ ತಿರುಗಾ ಮುರುಗಾ.
ರಾಜ ಪರಿವಾರಕ್ಕೋ
ಇಷ್ಟು ಸಣ್ಣವ ಎಂತೆಂಥ ಪ್ರಶ್ನೆ ಕೇಳುವನಲ್ಲ ಎಂಬ ಸೋಜಿಗ
ಅದೇವೇಳೆ ಬಂದ ದೇಶಾವರಿಯ ಅಯ್ಯನೋರು
ಸಿದ್ಧಾರ್ಥ ಸರ್ವಸಂಗ ಪರಿತ್ಯಾಗಿ ಆಗ್ತಾನೆ ಅಂತ ಹೇಳಿಹೋದರು.

ನಡುಗಿ ಹೋಯಿತು ಅಂತಃಪುರ
ತಮ್ಮ ಏಕೈಕ ಕುವರ ಸರ್ವಸಂಗ ಪರಿತ್ಯಾಗಿ?

ಒಂದು ದಿನ ದೇವದತ್ತ, ಸಿದ್ಧಾರ್ಥ
ಈಜುವ ಚಂದದ ಹಂಸೆ ನೋಡಿದರು
ಸಿದ್ಧಾರ್ಥ ಮೌನವಾಗಿ ಮೈಮರೆತು ನೋಡುತ್ತ ನಿಂತರೆ
ದೇವದತ್ತ ಬಿಲ್ಲೆಳೆದ, ಬಾಣ ಬಿಟ್ಟ.
ಅಯ್ಯೋ, ರೆಕ್ಕೆ ಪಟಪಟಿಸಿ ವಿಲಗುಡುವ ಹಂಸ, ರಗುತಮಯ ಕೊಳ..
ಸಿದ್ಧಾರ್ಥನ ಕಣ್ಣಲ್ಲಿ ಒಂದು ಗೆರೆ ನೀರು
ಓಡಿದವನೇ ಹಕ್ಕಿಯನೆತ್ತಿ ಎದೆಗವಚಿ, ಬಾಣಕಿತ್ತು
ಕೀಚು ಗಂಟಲ ನೋವ ಸಂತೈಸಿದ
ದೇವದತ್ತ ಕೇಳಿದ: ಕೊಡು, ಅದು ನನ್ನದು, ನನ್ನ ಬಾಣಕ್ಕೆ ಗುರಿಯಾದದ್ದು.
ಸಿದ್ಧಾರ್ಥನಿಗೋ ನೊಂದ ಜೀವ ಬಿಡಲಾಗದ ನಂಟು

ಕೊನೆಗೆ ಹಿರಿಯರು ನ್ಯಾಯ ಹೇಳಿದರು:
ಪ್ರಾಣ ತೆಗೆಯಹೊರಟವನಿಗೆ ಸೇರುವುದಿಲ್ಲ, ಅದು ಉಳಿಸಿದವನದು.
ಅಂತೂ ಹಕ್ಕಿ ಜೀವವುಳಿಸಿದವನ ಕೈ ಸೇರಿತು.
ಪುಟ್ಟ ಸಿದ್ಧಾರ್ಥನಿಗೆ ರೆಕ್ಕೆಗಳ ಕರುಣಿಸಿ ಹಾರಿಹೋಯಿತು.

ಗಜತುರಗಕಾಲಾಳಿನ ಅಧಿಪತಿಯಾಗಲಿರುವ ರಾಜ
ಮುಳುವಾಗದೇ ಅವಗೆ ಈ ಜೀವಪರ ನ್ಯಾಯ?
ಕನಲಿದರು ಸೇನೆ ಪರಿವಾರದವರು.
ಹೇಗಾದರೂ ಅವಗೆ ಪ್ರಶ್ನೆಗಳ ಮರೆಸಬೇಕು, ಪ್ರಶ್ನೆ ಮರೆವಂತೆ ಮಾಡಬೇಕು

ಗಾಯನ ವಾದನ ನರ್ತನ ಭೋಜನ
ವೈಭೋಗ, ಸುಖ, ಸಂಪತ್ತುಗಳ ಅವನೆದುರು ಗುಡ್ಡೆಹಾಕಿದರು
ಚಿಗುರು ಮೀಸೆ ಮೊಳೆವುದರಲ್ಲಿ
ಚಂದುಳ್ಳಿ ಸುಗುಣೆ ಯಶೋಧರೆ ಜೋಡಿಯಾದಳು

ಅವ ಬೆಲ್ಲ ಕೇಳಿದ, ರುಚಿ ಹತ್ತಿತು, ತಿಂದ. ಮತ್ತೆ ಕೇಳಿದ, ಕೊಟ್ಟಷ್ಟನ್ನೂ ಮುಗಿಸಿದ.
ಮತ್ತಷ್ಟು ಕೇಳಿದ, ರುಚಿಯಾಗುತ್ತ ಹೋಯಿತು. ಇನ್ನಷ್ಟು, ಇನ್ನೂಇನ್ನೂ.. ಮತ್ತಷ್ಟು..
ಕೊನೆಗೆ ರುಚಿಯೇ ಹೊಟ್ಟೆ ನೋವಾಯಿತು.
ಆದರೂ ಬೇಕು, ಇನ್ನುಇನ್ನೂ, ಇನ್ನಷ್ಟು, ಮತ್ತಷ್ಟು..

ಸಿದ್ಧಾರ್ಥ ಹಗಲು ರಾತ್ರಿಗಳ ಮರೆತ
ನಿದ್ರೆ ಉಪವಾಸ ಮರೆತ
ಜನ, ಜವಾಬ್ದಾರಿ, ಜನಾದರಗಳ ಮರೆತ
ಮುಳುಗಿದ, ಯಶೋಧರೆಯ ನಸುಬಿಸಿಯ ಒಡಲ ಸಗ್ಗದಲ್ಲಿ
ಅವಳೀಗ ಕಾಯಿ ಜಗ್ಗಿದ ಬಳ್ಳಿ..

ಆದರೆ ಪ್ರಶ್ನೆಗಳ ಅಷ್ಟು ಸುಲಭಕ್ಕೆ ಮರೆಯಲಾದೀತೇ ಜೀರುಂಡೆ?
ಇಲ್ಲಿ ಮುಳುಗಿದವು ಅಲ್ಲಿ ಮೇಲೆದ್ದವು.
ಮುಳುಗಿದವನೂ ಅಷ್ಟೆ, ಒಂದಲ್ಲ ಒಮ್ಮೆ ಮೇಲೆ ಬರಲೇಬೇಕು
ಯಾಕೋ ಇದ್ದಕ್ಕಿದ್ದಂತೆ ಒಂದು ದಿನ,
ರಾಜಕುವರ ತಲ್ಲಣಿಸಿದ. ಉಸಿರುಕಟ್ಟುತ್ತಿದೆ.
ಯಾವುದರಲೂ ಖುಷಿ ಇಲ್ಲ. ಯಾವುದೂ ತೃಪ್ತಿ ನೀಡುತ್ತಿಲ್ಲ.
ಏಕೆ ಹೀಗೆ?
ಎಷ್ಟಿದ್ದರೂ ಇನ್ನೂ ಏನೋ ಬೇಕು, ಏನದು?
ಚೆನ್ನನೊಡನೆ ಹೊರ ಸಂಚಾರ ಹೊರಟ.
ಸುತ್ತ ಹೊಲ ಗದ್ದೆ ಹಸಿರು.
ಗೇಯುತ್ತಲೇ ಹೊಡೆಸಿಕೊಳುವ ರೈತನ ಎತ್ತು.
ಮರಕೆ ಹಬ್ಬಿದ ಬಳ್ಳಿ.
ಕುಕ್ಕಿಕುಕ್ಕಿ ಹುಳ ತಿನುವ ಗುಬ್ಬಿ.
ಗುಬ್ಬಿ ಹಿಡಿಯ ಹವಣಿಸುವ ಹದ್ದು
ಹೊರಗೆಲ್ಲ ತುಂಬಿರುವಾಗ ದುಃಖ ಇಷ್ಟೊಂದು
ವೈಭೋಗದಲಿ ನಾನೊಬ್ಬ ಹೇಗೆ ಸುಖವಾಗಿರುವುದು?
ದುಃಖ ಹುಟ್ಟುವುದು ಹೇಗೆ? ನೀಗಿಕೊಳ್ಳೋದು ಹೇಗೆ?
ಎಷ್ಟು ಕೇಳಿದರೂ ಚೆನ್ನನ ಬಳಿ ಉತ್ತರವಿಲ್ಲ.
‘ದೊರೆಮಗನೇ, ನಾ ಬಲ್ಲವನಲ್ಲ..’
ಸತ್ಯ ತಿಳಿಯಬೇಕು ಚೆನ್ನ. ಸತ್ಯ ತಿಳಿಯಬೇಕು..
ಒಂದು ದಿನ, ಮಗ ರಾಹುಲ ಹುಟ್ಟಿದ ದಿನ
ಹಾಲ್ದುಟಿಯ ಮಗುವಿಗೆ ಅವಳು ಮೊಲೆಯೂಡುತಿರುವಾಗ
ನಡುರಾತ್ರಿ ಎದ್ದ, ಹೊರಟೇಬಿಟ್ಟ..


ಊರೂರು ಅಲೆದ, ತಲೆಬೋಳಿಸಿದ, ಚಿಂದಿ ಉಟ್ಟ, ಗೌತಮನಾದ.
ಪಂಡಿತ ಪಾಮರರ ಕೇಳುತ್ತ ಹೋದ.
ಲೋಕದಲಿ ಇಷ್ಟೊಂದು ದುಃಖವಿದೆಯಲ್ಲ, ಅದರ ಮೂಲ ಯಾವುದು?
ಅದನ್ನ ನಿವಾರಿಸೋದು ಹೇಗೆ?
ಯಾರಿಗೆ ತಾನೇ ಗೊತ್ತು?
ಎಲ್ಲರೂ ಹುಡುಕಾಟ ನಡೆಸಿದ್ದರು
ಕೆಲವೊಮ್ಮೆ ಹಾಗೇ ಜೀರುಂಡೆ,
ಏನು ಹುಡುಕುತ್ತ ಇದೀವಿ ಅಂತ ಗೊತ್ತಿಲ್ಲದಿದ್ದರೆ
ಹುಡುಕುತ್ತಲೇ ಇರಬೇಕಾಗುತ್ತೆ..

ಆರು ವರುಷ ಕಠೋರ ತಪಸು ಮಾಡಿದ
ಘನಘೋರ ಉಪವಾಸ
ಅನ್ನ ಬಿಟ್ಟ ಹಾಲು ಬಿಟ್ಟ
ಹಣ್ಣುಹಂಪಲು ಬಿಟ್ಟ ಗೆಡ್ಡೆಗೆಣಸು ಬಿಟ್ಟ
ಬರಿ ಒಂದು ಎಲೆ, ಅಥವಾ ಒಂದು ಕಾಯಿ
ಕೆಲವೊಮ್ಮೆ ಅದೂ ಇಲ್ಲ
ನಿದ್ರೆಯಿಲ್ಲ, ನೆರಳಿಲ್ಲ, ಊಟವಿಲ್ಲ, ಮೆತ್ತೆಯಿಲ್ಲ
ಮಾತುಕತೆಗೆ ಗೆಳೆಯರಿಲ್ಲ
ಆರು ವರ್ಷ ಏಕಾಂಗಿ ಅಲೆದ, ಅರಸಿದ
ಶಿಥಿಲವಾಯಿತು ದೇಹ, ಆದರೂನು ಕಾಣಲಿಲ್ಲ ಸತ್ಯ.
ಒಂದು ಚಳಿಯ ಬೆಳಗು ಮೀಯಲೆಂದು ನಡುಗುತ್ತ ನದಿಗಿಳಿದವ
ಕಣ್ಣು ಕತ್ತಲಿಟ್ಟು ಕುಸಿದ
ಏನು ಎಂತು ಅರಿವು ತಪ್ಪಿ ಮುಳುಗಿದ, ತೇಲಿದ, ಮುಳುಗಿದ, ತೇಲಿದ
ಅಲ್ಲೇ ಆಚೆ ಅಡವಿಯ ಹಳ್ಳಿ ಹುಡುಗಿ ಸುಜಾತ
ನೀರಿಗಾಗಿ ಬಂದವಳು ದಂಡೆಯಲಿ ನಿಂದು ನೋಡುತ್ತಾಳೆ
ಏನೋ ಒಂದು ನದಿನೀರಲ್ಲಿ ಮುಳುಗುತ್ತಿದೆ, ತೇಲುತ್ತಿದೆ..
ಏನದು? ಒಣಕಾಷ್ಠವೋ? ಕೃಶದೇಹವೋ? ಪ್ರೇತವೋ?
ಒಂದೆಡೆ ಭಯ, ಮತ್ತೊಂದೆಡೆ ಮರುಕ. ಕೊನೆಗು ಕರುಣದ ಕೈ ಮೇಲಾಯಿತು.
ಎಲುಬಿನ ಹಂದರವ ಮೇಲೆತ್ತಿ ತಂದಳು.
ಓಹ್, ಹೊಟ್ಟೆಗೆ ಹತ್ತಿಕೊಂಡ ಬೆನ್ನು ಎದೆ. ಕ್ಷೀಣವಾಗಿ ಉಸಿರಾಡುತ್ತಿದೆ, ಇದು ಶವವಲ್ಲ
ಅರೆತೆರೆದ ಕಣ್ಣು ಮಿಟುಕಿಸುತ್ತಿದೆ, ಇದು ಪ್ರೇತವಲ್ಲ
ಕಂಗಳಲಿ ಎಂಥ ತೇಜಸ್ಸು! ಯಾರಿವನು ಕೃಶದೇಹಿ?
ಸೋಜಿಗಬಟ್ಟು ಓಡಿಹೋಗಿ ಪಾಯಸದ ಪಾತ್ರ ತಂದಳು
ಒಂದೊಂದೇ ಗುಟುಕು ಒಳಗಿಳಿದಂತೆ ಜೀವ ಸಂಚಾರವಾಯಿತು..

ಸುಜಾತ, ನದಿ, ನಾಲಿಗೆಯ ಮೇಲೆ ಸಿಹಿ
ಕಣ್ಣುಬಿಟ್ಟ ಗೌತಮನಿಗೆ ಹೊಸಲೋಕ ಕಂಡಂತಾಯಿತು
ಕಠೋರ ತಪಸ್ಸು ಸತ್ಯದರ್ಶನ ಮಾಡಿಸಲಾರದೆಂದು ಹೊಳೆದುಹೋಯಿತು
ದೇಹವ ಲಲ್ಲೆಗರೆದು ಮುದ್ದಿಸಿದರೆ ಸತ್ಯ ತಿಳಿಯುವುದಿಲ್ಲ
ದೇಹ ಲಯಗೊಳಿಸಿದರೂನು ಸತ್ಯ ಹೊಳೆಯುವುದಿಲ್ಲ
ಅತಿಯಾದುದೆಲ್ಲವೂ ವಿಷವೇ, ಅಮೃತವೂ ಸಹಾ..
ಮುವ್ವತ್ತೈದರ ಗೌತಮ ನಡೆದ ಮಧ್ಯಮಮಾರ್ಗದಲಿ
ದೇಹವೆಂಬ ವಾದ್ಯವ ಶೃತಿಗೊಳಿಸಿದ

ಧ್ಯಾನದತ್ತ ಈಗವನ ಚಿತ್ತ
ಹಿಡಿ ಮಾಂಸದ ದೇಹವೇ ಧ್ಯಾನವಾಗಿ ಅರಳಿಯ ಕೆಳಗೆ ಕುಳಿತ
ಉತ್ತರ ಸಿಗುವವರೆಗೆ ಏಳಲಾರೆನೆಂದು ನಿಶ್ಚಲನಾದ
ನಲವತ್ತೊಂಭತ್ತು ದಿನ.
ಬಿಳಲೊಂದು ಕೆಳಗಿಳಿಯಿತು
ಎಳೆ ಚಿಗುರು ಹೊರಗಿಣುಕಿತು
ಹೂವು ತೊಟ್ಟು ಕಳಚಿತು, ಕಾಯಿ ಕಚ್ಚಿ ತೂಗಿತು
ಹಗಲು ಸರಿಯಿತು ಇರುಳು ಹರಿಯಿತು
ನಲವತ್ತೊಂಭತ್ತನೇ ದಿನ
ಒಂದು ಎಲೆ
ಒಂದೇ ಒಂದು ಅರಳಿ ಎಲೆ
ಗಾಳಿಯಲ್ಲಿ ಬೆಳದಿಂಗಳಲ್ಲಿ ನಿಧಾ..ನ ಹೊಯ್ದಾಡುತ್ತ ತುಯ್ದಾಡುತ್ತ
ನಿಮೀಲಿತ ನೇತ್ರದೆದುರು ನೆಲ ಮುಟ್ಟಿತು..

ಅಕಾ, ಝಗ್ಗನೆ ಬೆಳಕಾಯಿತು!



ಈ ಲೋಕದಲಿ ಯಾವುದೂ ಅಳಿಯುವುದಿಲ್ಲ
ಎಲ್ಲವೂ ಬದಲಾಗುತ್ತವೆ
ಕ್ರಿಯೆಪ್ರತಿಕ್ರಿಯೆ ನಿರಂತರ ಸಂಭವಿಸುತ್ತಲೇ ಇರುತ್ತದೆ
ಯಾವ ಬೀಜ ಬಿತ್ತುವೆಯೋ ಅದೇ ಬೆಳೆ ಬರುತ್ತದೆ
ಇದು ಸತ್ಯ. ಸತ್ಯವನರಿಯದ ಆಸೆಯೇ ದುಃಖಕ್ಕೆ ಮೂಲ

ಸತ್ಯಗುಣ ಎಚ್ಚೆತ್ತು ಸಿದ್ಧಾರ್ಥ ಗೌತಮ ಬುದ್ಧನಾದ.
ಇರುವುದ ಇರುವ ಹಾಗೇ ತಿಳಿವ ಅರಿವು ಹುಟ್ಟಿ ಅರಹಂತನಾದ:

ಸಿದ್ಧಾರ್ಥ ಗೌತಮ ಬುದ್ಧನಾದ ಜೀರುಂಡೆ.
ತನ್ನೊಳಗೆ ಬೆಳಗಿದ ಹಣತೆಯಿಂದ ಮತ್ತೈದು ಹಣತೆ ಬೆಳಗಿದ
ಅವರೈವರು ಮತ್ತಷ್ಟು ಸೊಡರ ಹಚ್ಚಿದರು..
ಸಂಘ ಹುಟ್ಟಿತು
ಅವನ ಮಾತಿನಿಂದ ಅಸತ್ಯ ದೂರವಾಯಿತು
ತೆರೆದುಕೊಳ್ಳುತ್ತ ಹೋದ
ಸತ್ಯದ ಮೇಲಿನ ಮುಸುಕುಗಳು ತಂತಾನೆ ಜಾರತೊಡಗಿದವು

ಅವ ಕಿವಿಯಾದ
ಮೈಯಿಡೀ ಕಿವಿಯಾಗಿ ಕೇಳಿದ
ಅವ ಕಣ್ಣಾದ
ಪುಟ್ಟ ಇರುವೆಯ ನೋಟವಾದ
ಅವ ಕರುಣೆಯಾದ
ಮೈತ್ರಿಯೇ ಗಾಳಿಯಾಗಿ ಉಸಿರಾಡಿದ

ಕೊಲಬೇಡ, ಕಳಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ

ಕಸ ಬೀಳುತ್ತಲೇ ಇರುತ್ತದೆ; ಒಳಹೊರಗ ಗುಡಿಸುತ್ತಲೇ ಇರು 
ಅಣುವಿನಷ್ಟೂ ಕಸ ಬಿಡದೆ ಗುಡಿಸು, ಕಸದ ಬೆಟ್ಟ ಬೆಳೆಯಲಾರದು
ಒಳಗೆ ಗುಡಿಸಿ ಗುಡ್ಡೆಯಾದರೆ ಹಿಡಿ ಕಸ, ಹೊರಜಗ ಬೆಳಗಬಲ್ಲದು

ಉರಿವ ಹಣತೆ ಏನನೂ ಉಳಿಸುವುದಿಲ್ಲ ಬೆಳಕಿನ ಹೊರತು
ಬೆಳಗು, ಬೆಳಕಾಗು ಉಳಿಸದೆ ಏನನೂ ಬೆಳಕಿನ ಹೊರತು

ದುಃಖವಿದೆ, ದುಃಖ ಎಲ್ಲರಿಗೂ ಇದೆ
ದುಃಖ ಮೂಲ ನಾವೇ ಆಗಿದ್ದೇವೆ
ದುಃಖಮೂಲ ಕ್ರಿಯೆಯ ತ್ಯಜಿಸು
ಅರಿವೇ ದುಃಖ ಕೊನೆಗೊಳಿಸುವ ಮಾರ್ಗವಾಗಿದೆ

ಹೀಗೆ ಅವ ಕೇಳುತ್ತ ಹೋದ; ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ
ನಲವತ್ತೈದು ವರುಷ ಗಂಗೆಯ ತಟದ ಗಾಳಿಯಾಗಿ ಬೀಸಿದ..



ಮಗ ಬುದ್ಧನಾದದ್ದು ಅರಿತು ಹಿಗ್ಗಿದ ಶುದ್ಧೋದನ, ಬಾರೆಂದು ಕರೆದ ಕಪಿಲವಸ್ತುವಿಗೆ
ಒಂದಲ್ಲ ಎರಡಲ್ಲ ಹತ್ತು ಸಲ, ಹತ್ತು ಸಲ ಕರೆ ಕಳಿಸಿದ
ಒಂಭತ್ತು ಸಲ ಕರೆಯ ಬಂದವರು ಕರೆಯನೇ ಮರೆತು ಸಂಘಮಿತ್ರರಾಗಿ ಅಲ್ಲೇ ನಿಂತರು
ಹತ್ತನೆಯ ಸಲ, ಅವನ ಬಾಲ್ಯದ ಗೆಳೆಯ ಕಲುದಾಯಿ, ತಂದೆಯ ಕಾತುರ ಅರುಹಿದ
ಹೊರಟಿತು ಬುದ್ಧ ಸಂಘ ಕಪಿಲವಸ್ತುವಿನ ಕಡೆಗೆ
ತಲುಪಿತು ಎರಡು ತಿಂಗಳ ಬಳಿಕ ಸಿಂಗರಗೊಂಡ ನಗರದ ಹೆಬ್ಬಾಗಿಲಿಗೆ
ರಾಜಕುವರ, ಅಲ್ಲಲ್ಲ ಸಿದ್ಧಾರ್ಥ ಬುದ್ಧನ ಎದುರುಗೊಳಲು ತವಕಿಸುತಿದೆ ಊರಿಗೂರೇ
ಬುದ್ಧಬಳಗಕ್ಕೆ ಉಣಿಸಲು ಎಡೆಬಿಡದೆ ದುಡಿಯುತಿದೆ ಅರಮನೆಯ ಪಾಕಶಾಲೆ
ಬುದ್ಧನಾದರೋ ಕಪಿಲವಸ್ತುವಿನ ಕೇರಿಗಳಲಿ ಎತ್ತುತ್ತಿದ್ದಾನೆ ಭಿಕ್ಷೆ
‘ಅಕ್ಕಯ್ಯಾ, ಬಂದಿರುವೆ ಮನೆ ಬಾಗಿಲಿಗೆ, ಕರುಣದ ಭಿಕ್ಷೆ ನೀಡು’
‘ಮಾವಯ್ಯಾ, ಬಂದಿರುವೆವು ನಿಮ್ಮ ಮನೆ ಬಾಗಿಲಿಗೆ, ಕರುಣದ ಕೋರಣ್ಯ ನೀಡು..’
ಕನಲಿ ಶುದ್ಧೋದನ ಓಡಿಬಂದು ನಿಂತ ಮಗನೆದುರಲಿ
ಅಯ್ಯೋ, ಎಷ್ಟು ಸೊರಗಿರುವೆ ಸಿದ್ಧಾರ್ಥ ಕುವರ?
ಅಹ, ಕಂಗಳ ಕಾಂತಿಯೇ, ನಿನಗೆ ನಮೋನಮಃ
‘ಮಗನೇ, ನಮ್ಮದು ವೀರಧೀರಕಲಿಗಳ ಪರಂಪರೆ
ನಾವು ನೀಡುವವರೇ ಹೊರತು ಬೇಡುವುದಿಲ್ಲ ಭಿಕ್ಷೆ’

ಶಾಂತನಾಗಿ ಉತ್ತರಿಸಿದ ತಥಾಗತ ಬುದ್ಧ
‘ರಾಜ, ಭಿಕ್ಷೆ ನಿನ್ನ ಪರಂಪರೆಯಲ್ಲ, ಇದು ಬುದ್ಧರ ಪರಂಪರೆ
ಸಾವಿರಾರು ಬುದ್ಧರು ಭಿಕ್ಷೆ ಬೇಡಿಯೇ ಬುದ್ಧರಾದರು’

ಬುದ್ಧನ ನೋಡಲು ನೆರೆಯಿತು ಇಡಿಯ ಕಪಿಲವಸ್ತುವೇ
ಬರದವಳು ಒಬ್ಬಳೇ ಯಶೋಧರೆ
ಬಂದು ಯಾರ ನೋಡುವುದು? ಏನು ಆಡುವುದು?
ಬಿಂಕವೋ ಭಕುತಿಯೋ ತಿಳಿಯದೆ ಕುಳಿತಳು ಒಳಗೆ

ಅರಮನೆಗೆ, ಹುಟ್ಟಿದ ಮನೆಗೆ ಬಾ ಸಿದ್ಧಾರ್ಥ - ತಂದೆಯ ಆಗ್ರಹ
ಬಂದ ಬುದ್ಧ ಅರಮನೆಗೆ, ಬಂದರು ಸಂಘಮಿತ್ರರು ಅರಮನೆಗೆ.
ಅರಮನೆಯ ಸುವರ್ಣ ಸಿಂಹಾಸನಗಳು ಆಪುಹುಲ್ಲಿನ ಚಾಪೆಗಳಾದವು
ಸೆಟೆದ ಹುರಿಮೀಸೆಗಳಲಿ ನಗುವು ಸುಳಿಯಿತು
ಪಂಜರದ ಸರಳು ಚಿಗುರಿ ಹಕ್ಕಿ ಹೊರಹಾರಿದವು

ಅರಮನೆಯ ಜೀವಗಳು ಸಂಘಮಿತ್ರರಾದರು
ಲೋಕಕ್ಕೆ ಗುರುವಾದವ ಗುರುವಾಗಲಿ ತನ್ನ ಮಗುವಿಗು
ಎಳೆಯ ರಾಹುಲನ ಕರೆತಂದು ಅಮ್ಮ ಹಿಂದೆ ಸರಿದು ನಿಂತಳು
ನಂದ ಅನಿರುದ್ಧ ಆನಂದ ರಾಹುಲ
ಸಂಘ ಬೆಳೆದೇ ಬೆಳೆಯಿತು
ಶಾಕ್ಯಕುಲದ ಅರಸೊತ್ತು ಶಾಕ್ಯಮುನಿಯ ಹಿಂದೆ ನಡೆಯಿತು
ಐದೇ ವರುಷ, ಶುದ್ಧೋದನನ ತರುವಾಯ
ಅಂತಃಪುರದ ಜೀವಗಳೂ ತೇರಿಯರಾದವು

ಇಂತು ನಡೆದಿದ್ದವಗೆ ಒಮ್ಮೆ
ದಾರಿಯಲಿ ಕಿಸಾಗೋತಮಿ ಸಿಕ್ಕಳು
ತನ್ನ  ಒಬ್ಬನೇ ಮಗನ ಸಾವಿನಿಂದ ಕನಲಿ ಕಂಗೆಟ್ಟು ಹುಚ್ಚಿಯಾದವಳು:
ಬುದ್ಧನ ಪಾದದ ಬಳಿ ಶವವಿಟ್ಟು ರೋದಿಸಿದಳು:
ಲೋಕಗುರುವೆ, ಸುಗತನೇ,
ಬದುಕಿಸಿಕೊಡು ನನ್ನ ಒಡಲ ಕುಡಿಯ ಭಂತೇ.

ಎಚ್ಚೆತ್ತವನ ಇರುಳು ದೀರ್ಘ
ದಣಿದವನ ದಾರಿಯೂ ದೀರ್ಘ
ಗೋತಮಿ, ಹಾವು ಪೊರೆ ಕಳಚುವಂತೆ
ಭೂತಕಾಲವ ಮತ್ತೆಮತ್ತೆ ಕಳಚಿಕೊಳ್ಳಬೇಕು
ಯಾವುದಕೆ ಅಂಟಿಕೊಂಡಿರುವೆವೋ ಅದನಷ್ಟೆ ನಾವು ಕಳಕೊಳ್ಳುವೆವು

ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ
ಮೋಹಕಿಂತ ದೊಡ್ಡ ಬೆಂಕಿಯಿಲ್ಲ
ಹಗೆತನಕಿಂತ ವಿಷಜಂತುವಿಲ್ಲ
ಅವಿವೇಕಕಿಂತ ಪಾಶವಿಲ್ಲ
ದುರಾಸೆಗಿಂತ ದೊಡ್ಡ ಬಿರುಗಾಳಿಯಿಲ್ಲ

ಯಾವ ಹಿತನುಡಿಯೂ ಗೋತಮಿಯ ಒಡಲುರಿ ನಂದಿಸಲಿಲ್ಲ
ಅವಳದೊಂದೇ ಮಾತು: ಮಗನ ಜೀವ ಮರಳಿಸು
ಕೊನೆಗವಳ ಕೋರಿಕೆಯ ಮನ್ನಿಸಿದ ಬುದ್ಧ, ಆದರೊಂದು ಷರತ್ತು:
ನೀನು ಸಾವಿರದ ಮನೆಯ ಸಾಸಿವೆಕಾಳು ತರಬೇಕು.

ಮಗನ ಮರಳಿ ಪಡೆವ ಗಳಿಗೆ ನೆನೆನೆನೆದು ಹಿಗ್ಗಿದಳು
ಹೊರಟಳು, ಮಗುವಿನ ಶವವ ಎದೆಗಪ್ಪಿ ಹಿಡಿದು.
‘ಅವ್ವಾ, ಸಾವು ಬರದ ಮನೆಯವರು ಹಿಡಿ ಸಾಸಿವೆ ಕಾಳು ಕೊಡಿ,
ಅಯ್ಯಾ, ನೀವು ಕೊಡಬಲ್ಲಿರೇ ಹಿಡಿ ಸಾಸಿವೆ ಕಾಳು?
ಅಕ್ಕಾ, ನನಗೆ ಬೇರೇನೂ ಬೇಡ, ಒಂದೇ ಒಂದು ಹಿಡಿ ಸಾಸಿವೆಕಾಳು..’
ಒಂದು ಹಿಡಿ ಸಾಸಿವೆ ಕೊಡಲು ಎಲ್ಲರೂ ಸಿದ್ಧರು
ಆದರೆ ಎಲ್ಲವೂ ಸಾವು ಕಂಡ ಸೂರು.
ಸುತ್ತಿಸುತ್ತಿ ಬಳಲಿದವಳ ಅಂಗಾಲು ಕೆಂಪು ದಾಸಾಳ ಹೂವು
ಅಲೆದ ಗೋತಮಿಯ ಪಾದದರಿವು ಸತ್ಯ ತಿಳಿಸಿತು:
ಗಟ್ಟಿಯಾದಳು. ಶಕ್ತಿಯಾದಳು.
ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ.
ಏಕೆ ಅಳಲಿ? ಏಕೆ ದುಃಖಿಸಲಿ? ನನ್ನಂತೆಯೇ ಎಲ್ಲ
ನಾನಿನ್ನು ಅಳುವುದಿಲ್ಲ, ನಾನಿನ್ನ ದುಃಖಿಸುವುದಿಲ್ಲ..

ಹೀಗೆ ಜೀರುಂಡೆ, ಮಗುವಿನ ದುಃಖದಲಿ ಕಂಗೆಟ್ಟವಳು ತೇರಿಯಾದಳು.
ಬುದ್ಧ ಕೇಳುತ್ತ ಹೋದ, ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ..


ಒಮ್ಮೆ ಬುದ್ಧ ಮಾರ್ಗದಲಿ ಅಂಗುಲಿಮಾಲ ಎದುರಾದ.
ಜೀರುಂಡೆ, ದುರ್ಭರ ಕ್ಷಣಗಳು ಕಣ್ಣು ತೆರೆಸಬಲ್ಲವು, ಸಾಕ್ಷಿಗೀ ಕತೆ ಕೇಳು.

ಕೋಸಲ ರಾಜ್ಯದಲೊಂದು ಬೆಳಿಗ್ಗೆ ಬುದ್ಧ ಧ್ಯಾನ ಮುಗಿಸಿ ದಟ್ಟಡವಿಯತ್ತ ನಡೆದ
ದಾರಿಹೋಕರು, ರೈತರು ಕೂಗಿದರು
ಹೋಗಬೇಡ ಅತ್ತ, ಇದ್ದಾನಲ್ಲಿ ಅಂಗುಲಿಮಾಲನೆಂಬ ದೈತ್ಯ, ನರಹಂತಕ.
ಹೇಳಿದ್ದು ಕೇಳಿಯೇ ಇಲ್ಲದವನಂತೆ ಬುದ್ಧ ನಡೆದ, ಶಾಂತ, ನಿರ್ಲಿಪ್ತ
ಅನತಿ ದೂರ ನಡೆವುದರಲಿ ಕೇಳಿತು ನೆಲಕೆ ಹೆಜ್ಜೆಯಪ್ಪಳಿಸುವ ಶಬ್ದ
ಯಾರೋ ಓಡಿ ಬರುತ್ತಿದ್ದಾರೆ, ಸನಿಹ ಬರಬಯಸುತ್ತಾರೆ
ಬುದ್ಧ ನಿಧಾನಿಸಿದ. ಆದರೂ ಬೆಂಬತ್ತಿದವರು ಮುಟ್ಟದೇ ಹೋದರು.
‘ಏಯ್, ನಿಲ್ಲು ಯಾರದು’ ಎಂದವರು ಅನುವುದಕ್ಕೂ, ಬುದ್ಧ ನಿಲುವುದಕ್ಕೂ ಸರಿಹೋಯಿತು.

ಕೊರಳಲಿ ಬೆರಳಮಾಲೆ
ಕೊರಳ ಸುತ್ತ ರಗುತದ ಕಲೆ
ಏರಿಳಿವ ಎದೆ, ಕೆದರಿದ ತಲೆ, ಉಗ್ರ ಕಣ್ಣು, ಕಂಪಿಸುವ ಮೂಗಿನ ಹೊಳ್ಳೆ
ಸುತ್ತ ಪಸರಿಸಿತು ಹಸಿ ರಕ್ತ, ಬೆವರ ವಾಸನೆ.

‘ಏಕಿಷ್ಟು ಆತಂಕಗೊಂಡಿರುವೆ ಮಗೂ?’

ಮಗೂ..

ಮಗುವೆಂಬ ಪದ ಕೇಳಿದ್ದೇ ಆ ಭಯಾನಕ ಮಾಂಸದ ಬೆಟ್ಟ ಮೇಣದಂತೆ ಕರಗತೊಡಗಿತು. ಪುಟ್ಟ ಸೊಡರೊಂದು ಹೊತ್ತಿಕೊಂಡಿತು.

‘ನಾನು ತಕ್ಷಶಿಲೆಯವನು. ಗುರು ದಕ್ಷಿಣೆ ಕೊಡಲು ಸಾವಿರ ಬಲ ಕಿಬ್ಬೆರಳ ಸಂಗ್ರಹಿಸುತ್ತಿರುವವನು.
ಕಾಡಿ ಬೇಡಿ ಒಂದೊಂದನೇ ಪಡೆದು ಮರಕೆ ನೇತುಹಾಕಿದೆ. ಅವು ಹದ್ದುಕಾಗೆಗಳ ಪಾಲಾದವು.
ಈಗ ಕಾಡುವುದಿಲ್ಲ, ಬೇಡುವುದಿಲ್ಲ. ಕೊಲ್ಲುವುದು, ಪಾರಿತೋಷಕವ ಕೊರಳಲೇ ಧರಿಸುವುದು.
ನನ್ನ ಬಳಿಯೀಗ ಸಾವಿರಕೆ ಒಂದೇ ಒಂದು ಕಿರುಬೆರಳು ಕಡಿಮೆ.
ಗುರುದಕ್ಷಿಣೆ ನೀಡಿ ತಾಯ್ತಂದೆಯರ ನೋಡಹೋಗಲು ಒಂದೇ ಒಂದು ಕಿರುಬೆರಳು ಕಡಿಮೆ.
ಪಂಡಿತನಾಗಿ ಸತಿಸುತರೊಡನೆ ಬದುಕಲು ಒಂದೇ ಒಂದು ಕಿರುಬೆರಳು ಕಡಿಮೆ.
ಹಿಂಸ್ರಪಶುವಿನ ವನವಾಸ ತಪ್ಪಲು ಒಂದೇ ಒಂದು ಕಿರುಬೆರಳು ಕಡಿಮೆ.
ಒಂದು ಬೇಕು. ಒಂದೇ ಒಂದು. ನೀನಾಗಿಯೇ ಕೊಟ್ಟರೆ ಜೀವವುಳಿಯುತ್ತದೆ. ಇಲ್ಲವಾದಲ್ಲಿ ಬೆರಳೂ ಇಲ್ಲ, ಕೊರಳೂ ಇಲ್ಲ..’

‘ಮಗೂ ಒಂದೇಕೆ, ಎರಡನೂ ತಗೊ. ಕಿರುಬೆರಳೇಕೆ, ಹೆಬ್ಬೆರಳನೂ ತಗೋ.
ಬರೀ ಬೆರಳೇಕೆ, ಪಾದ ಕೈಗಳನೂ ತಗೋ. ಈ ಪ್ರಾಣವೂ ನಿನದೇ, ತಗೋ.
ಹೇಗಿದ್ದರೂ ಅಳಿಯಬೇಕು ಒಂದಲ್ಲ ಒಂದು ದಿನ ಎಲ್ಲವೂ..’

ಆಡುವವ, ಬರಿಯ ಮಾತನಾಡುವವ ಜ್ಞಾನಿಯಲ್ಲ
ಶಾಂತ, ನಿರ್ಭಯ, ಜೀವ ಪ್ರೀತಿಯ ಸತ್ಯನೇ ಜ್ಞಾನಿ

ದುರ್ಮಾರ್ಗದತ್ತ ಸೆಳೆಯಲು ಶತ್ರುಗಳು ಬೇಕಿಲ್ಲ, ನಿನ್ನ ಮನಸು ಸಾಕು.
ಮಾರ್ಗ ಆಗಸದಲಿಲ್ಲ, ನಿನ್ನ ಎದೆಯೊಳಗೇ ಇರುವುದು ಹುಡುಕು.
ಸಾವಿರ ಕದನಗಳ ಗೆಲುವುದಕಿಂತ ನಿನ್ನ ನೀ ಗೆಲ್ಲು,
ಆ ವಿಜಯವನಾರೂ ಕಸಿಯಲಾರರು.

ಕೋಪದ ಕೆಂಡ ಅಂಗೈಲಿ ಹಿಡಿದು ತೂರಹೊರಟರೆ
ಮೊದಲು ಅದು ನಿನ್ನ ಕೈಯನೇ ಸುಡುತ್ತದೆ
ನಿಜವ ಅರಿತುಕೊ, ಆಗ ನೈಜ ಪ್ರೇಮ ಅರಳುತ್ತದೆ

ಬುದ್ಧ ಹಸ್ತ ಅಂಗುಲಿಮಾಲನ ಬಳಿ ಚಾಚಿತು. ಮುಂಗುರುಳ ನೇವರಿಸಿ ಬೆವರ ಒರೆಸಿತು. ಕಿರುಬೆರಳು ಕೇಳಿದರೆ ಪ್ರಾಣವನೇ ಕೊಡಲೊಪ್ಪಿದವ; ಭಯಗೊಳದೆ ಬೆವರದೆ ಆತಂಕಗೊಳದೆ ಕೈಚಾಚುವವ, ಯಾರೀತ? ಯಾರೀತ?

ಓಹ್ ಬುದ್ಧನೇ ಇರಬೇಕು. ಮರುಕ್ಷಣ ಅಂಗುಲಿಮಾಲ ಸಂಘಮಿತ್ರನಾದ.

ಪ್ರಜಾಪಾಲಕನ ಕೆಲಸ ಪೀಡಕರ ದಂಡಿಸುವುದು ಎಂದು ತಿಳಿದವನೇ ರಾಜ.
ಕೋಸಲದ ಪ್ರಸೇನಜಿತು ಅಂಗುಲಿಮಾಲನ ಸಂಹರಿಸಲು ಬಂದ.
ಮಾರ್ಗಮಧ್ಯೆ ಬುದ್ಧಗುರುವಿನ ದರ್ಶನಕೆ ನಿಂದ.

ಬುದ್ಧನೆಂದ: ರಾಜ, ನೀ ಸಂಹರಿಸಹೊರಟ ಅಂಗುಲಿಮಾಲ ಭಿಕ್ಕುವಾಗಿದ್ದರೆ?

ಎಲ್ಲಿಯಾದರೂ ಉಂಟೆ? ನರಹಂತಕರು ಭಿಕ್ಕುವಾದಾರೇ ಬುದ್ಧ?

ಅವನನ್ನ ನಿನಗೆ ತೋರಿಸಿದರೆ?

ಅವ ಭಿಕ್ಕುವಾಗಿದ್ದರೆ ಸಿಗಲಿದೆ ಕ್ಷಮಾದಾನ.

ಹೌದೇ, ಹಾಗಾದರೆ ನೋಡಲ್ಲಿ, ಓ ಅಲ್ಲಿ ಧ್ಯಾನಸ್ಥನಾಗಿರುವ ಏಳು ಆನೆಗಳಷ್ಟು ಬಲಶಾಲಿ ತರುಣ, ಅವನೇ ಅಂಗುಲಿಮಾಲ, ಅಲ್ಲಲ್ಲ, ಅವನ ಕೊರಳಲೀಗ ಬೆರಳ ಮಾಲೆಯಿಲ್ಲ. ಅವನ ಹುಟ್ಟು ಹೆಸರು ಅಹಿಂಸಕ.

ಕಿವಿಯನ್ನು ನಂಬದಿದ್ದರೂ ಕಣ್ಣುಗಳ ನಂಬಲೇಬೇಕು. ಕಣ್ಣುಗಳನಲ್ಲದಿದ್ದರೂ ಬುದ್ಧನ ನಂಬಲೇಬೇಕು.
ಪ್ರಸೇನಜಿತು ಅಹಿಂಸಕನಿಗೆ ವಸ್ತ್ರಗಳ ನೀಡಿ ಹೊರಟ.

ಆದರೆ ಅಹಿಂಸಕನಿಗೆ ಪಶ್ಚಾತ್ತಾಪ, ಪಾಪಪ್ರಜ್ಞೆ.

‘ನರಹತ್ಯೆಗೇನು ಪ್ರಾಯಶ್ಚಿತ್ತ? ಶುದ್ಧಗೊಳಿಸುವೆಯ ಬುದ್ಧಗುರುವೆ ನನ್ನ?’

ಯಾರೂ ಯಾರನೂ ಪವಿತ್ರಗೊಳಿಸಲಾರರು, ಅಪವಿತ್ರಗೊಳಿಸಲೂ ಆರರು
ಪವಿತ್ರ, ಅಪವಿತ್ರಗಳು ನಿನ್ನಲೇ ಇವೆ
ಎಲ್ಲ ಜೀವಗಳನಿನ್ನು ಸಮನಾಗಿ ಪ್ರೀತಿಸು, ಅದುವೇ ಧರ್ಮ.

ಹೀಗೆ ಬುದ್ಧ ಹೇಳುತ್ತ ಹೋದ, ಕೇಳುತ್ತ ಹೋದ
ಮೈಯೆಲ್ಲ ಕಿವಿಯಾದ, ಕರುಣೆಯೇ ಉಸಿರಾದ..



ಕಾಲವೇ ಇರದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿಯ ಎಲೆ ಹಳದಿಯಾಗತೊಡಗಿತು.
ಬುದ್ಧ ಕೇಳಿದ: ಕಾಯ ಕ್ಷೀಣಿಸುತ್ತಿದೆ, ಆಧಾರ ಬೇಕದಕೆ
ಯಾರಾದರೊಬ್ಬರು ಸಹಾಯಕರಾಗಬಲ್ಲಿರಾ ನನಗೆ?

ಲೋಕಗುರುವಿನ ಸಹಾಯಕೆ ಎಲ್ಲ ನಾಮುಂದೆ ತಾಮುಂದೆ..
ಆದರೆ ದೂರದಲಿ ಕುಳಿತಿದ್ದನೊಬ್ಬ ಸುಮ್ಮನೆ
ಅವ ಆನಂದ. ಸಿದ್ಧಾರ್ಥನ ಪೂರ್ವಾಶ್ರಮದ ಬಂಧು.

ಅರೆ ನೀನೇಕೆ ಅಷ್ಟು ದೂರ? ಸುಮ್ಮನಿರುವುದು?

ನಿನಗಾರು ಬೇಕೆಂದು ನಿನಗೇ ಗೊತ್ತಲ್ಲ ಬುದ್ಧ, ಮತ್ತೇಕೆ ನೀನು ಪ್ರಶ್ನಿಸುವುದು?

ಹಾಗಾದರೆ ಆಗಬಲ್ಲೆಯಾ ನನ್ನ ಸಹಾಯಕ ನೀನು?

ಯಾಕಿಲ್ಲ? ಆದರೆ ಕೆಲ ಷರತ್ತುಗಳಿಗೆ ನೀ ಒಪ್ಪಬೇಕು.

ಬುದ್ಧನಿಗೂ ಷರತ್ತೇ? ಆಯಿತು ಕೇಳೋಣ ಹೇಳು.

ನಿನಗಿತ್ತ ಆಹಾರ ನನಗೆ ಕೊಡಬಾರದು; ನಿನ್ನ ಕರೆದ ಮನೆಗೆ ನನ್ನ ಒಯ್ಯಬಾರದು; ನಿನಗಿತ್ತ ವಸ್ತ್ರಗಳ ನನಗೆ ನೀಡಬಾರದು; ಸಂಘದಲಿ ಸವಲತ್ತಿನ ಜಾಗ ಸಿಗಬಾರದು..

ಆಗಲಿ, ಆದರೆ ಇವೆಲ್ಲ ಏಕೆ?

ಆನಂದ ಸವಲತ್ತುಗಳಿಗಾಗಿ ಬುದ್ಧನ ಹಿಂದೆ ಬಿದ್ದ ಎಂದು ಯಾರೂ ಭಾವಿಸಬಾರದು, ಅದಕ್ಕೆ.

ಓಹೋ, ಆಯಿತು. ಒಪ್ಪಿದೆ. ಮುಗಿಯಿತೇ?

ನಿನ್ನ ನೋಡಬಂದವರ ನಾನೇ ಪರಿಚಯಿಸಲು ಬಿಡು; ನನ್ನ ಕರೆದಲ್ಲಿ ಬರಲೇಬೇಕು ನೀನು; ಧಮ್ಮ ಕುರಿತ ಶಂಕೆಗಳ ಕೇಳಲು ಅನುಮತಿಸಬೇಕು; ನಾನಿಲ್ಲದಾಗ ನೀಡಿದ ಉಪದೇಶವ ನನ್ನೆದುರು ಇನ್ನೊಮ್ಮೆ ಪುನರುಚ್ಛರಿಸಬೇಕು..

ಒಪ್ಪಿದೆ ಆನಂದ, ಒಪ್ಪಿದೆ.

ಬುದ್ಧ ಆನಂದರು ನಂತರ ಇಪ್ಪತ್ತೈದು ವರುಷ
ಗುರು ಶಿಷ್ಯರೋ ತಂದೆಮಗನೋ ತಾಯಿಮಗುವೋ
ಯಾರು ಗುರುವೋ ಯಾರು ಶಿಷ್ಯರೋ
ಯಾರು ತಂದೆಯೋ ಯಾರು ಮಗನೋ
ಯಾರು ತಾಯಿಯೋ ಯಾರು ಮಗುವೋ ತಿಳಿಯದಂತೆ
ಜೀವದ ಜೀವವಾಗಿ ಬದುಕಿದರು.
ಆನಂದ ಬುದ್ಧನ ಕಾಪಿಟ್ಟ, ಧಮ್ಮ ಬೋಧೆಗಳ ನೆನಪಿಟ್ಟ.

ಕಾಲವೇ ಇಲ್ಲದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿ ಎಲೆಯ ತೊಟ್ಟು ಮುದುಡಿತು.
ಕೆಳಗುರುಳಿ ನೆಲದ ಸಾರವಾಗಲು ಬಯಸಿತು.

ಕಮ್ಮಾರ ಕುಂದನ ಕೈತುತ್ತೇ ಕಡೆಯದು
ಬುದ್ಧನ ದೇಹ ಕ್ಷೀಣಿಸತೊಡಗಿತು
ಪರಿನಿರ್ವಾಣದ ಸಮಯ ಸನ್ನಿಹಿತವಾಯಿತು
ಆನಂದನ ಮಡಿಲಲ್ಲಿ ಮೇಲುಸಿರೆಳೆಯುತ್ತ ಮಲಗಿದ್ದ ದೇಹ
ಅದು ಎಂಭತ್ತರ ವೃದ್ಧ ಬುದ್ಧನದಷ್ಟೇ ಆಗಿರಲಿಲ್ಲ:
ಎಳೆಯ ಮಗು, ಹದಿವಯದ ರಾಜಕುವರ, ಸುಂದರ ಪತಿ, ಲಾಲಿಸಿದ ಅಪ್ಪ,
ಅಲೆಮಾರಿ ಸುಮನ, ಬುದ್ಧ ಗುರು ಎಲ್ಲ ಅಲ್ಲಿದ್ದರು.
ಎಲ್ಲ ಭಿಕ್ಕುಗಳ ಕರೆಸಿದ, ಶಂಕೆಗಳಿವೆಯೇ ಕೇಳಿದ.
ನನಗೆ ಉತ್ತರಾಧಿಕಾರಿಗಳಿಲ್ಲ, ಸಂಘವೇ ನಿಮ್ಮ ದಾರಿ ಎಂದ.

ನನ್ನ ಕಲಿಕೆಯೇ ಮುಗಿದಿಲ್ಲ, ಗುರುವೇ ಹೊರಟುಬಿಟ್ಟೆಯಲ್ಲ
ಕೊನೆಯ ಮಾತೊಂದ ಹೇಳು, ಆನಂದ ಕಣ್ಣೀರುದುಂಬಿದ.
ಅರೆನಿಮೀಲಿತ ನೇತ್ರಗಳ ಬೆಳಕಲ್ಲಿ ಹೊರಟಿತು ಕೊನೆಯ ಮಾತು:


ಯಾವುದನ್ನೂ ಅಪ್ಪಿಕೊಳ್ಳಬೇಡ, ನಾಯಕನ ಹಿಂಬಾಲಿಸಬೇಡ.
ನೀನೇ ಸಂಘ, ನೀನೇ ಬೆಳಕು
ನಿನ್ನ ಆಶ್ರಯ ನೀನೇ,
ನಿನ್ನ ನೀನಲ್ಲದೆ ಮತ್ತಾರೂ ರಕ್ಷಿಸಲಾರರು
ನಿನ್ನ ಹಾದಿಯ ನೀನೇ ತುಳಿಯಬೇಕು
ನಿನ್ನ ಬೆಳಕು ನೀನೇ ನಿನಗೆ ನೀನೇ ಬೆಳಕು..

ಬುದ್ಧ ಮಹಾಮೌನದ ಬಯಲಾದ
ಎಲ್ಲ ಅರಿವಿನಾಚೆಯ ನಿರ್ವಾಣವಾದ
ಈಗ ಆನಂದ ಒಂಟಿ, ಏಕಾಂಗಿ
ಅಂದು ಯಶೋಧರೆ, ಪ್ರಜಾಪತಿಯರ ದುಃಖ ಇಂದು ಆನಂದನ ಕಾಡಿತು
ವಿನೀತೆ, ಧೈರ್ಯವಂತೆ ಯಶೋಧರೆ ನಡೆದುಬಿಟ್ಟಿದ್ದಳು ಬುದ್ಧನಿಗಿಂತ ಎರಡು ವರುಷ ಮೊದಲು
ಸಂತೈಸಿದಳು ಪ್ರಜಾಪತಿ, ಬುದ್ಧನ ನಂತರವೂ ಬದುಕಿದವಳು, ನೂರಿಪ್ಪತ್ತು ತುಂಬುವವರೆಗೂ

***

ಹೆತ್ತ ಮರುಗಳಿಗೆ ತಾಯ ಕಳಕೊಂಡವನಲ್ಲವೇ ಪುಟ್ಟ?
ದುಃಖ ಸಿದ್ಧಾರ್ಥನ ಜೊತೆಗೇ ಹುಟ್ಟಿತು
ಅವನೊಡನೇ ಬೆಳೆಯಿತು
ಗಾಯಗೊಂಡ ಹಂಸೆಗಾಗಿ ಅತ್ತವನಲ್ಲವೇ ಸಿದ್ಧಾರ್ಥ?
ಅರಿವು ಅವನೊಡನೇ ಹುಟ್ಟಿತು
ಅವನೊಡನೇ ಬೆಳೆಯಿತು

ಸಿದ್ಧಾರ್ಥ ಗೌತಮ ಬುದ್ಧನಾದ ಎಂದೇ
ಬುದ್ಧರು ಇನ್ನು ಇದ್ದಾರೆ ಎಂದೇ ಅಲ್ಲವೆ ಜೀರುಂಡೆ
ಭೂಮಿ ಗುಂಡಗಿರುವುದು? ಅದು ತಿರುಗುವುದು?
ಬರಬಿಸಿಲುಗಳ ನಡುವೆಯೂ ಮಳೆಬೆಳೆ ಆಗುವುದು?

ಎಲ್ಲ ಜೀವಿಗಳಲಿ ಕಾರುಣ್ಯವಿಡು, ಅದುವೇ ಧರ್ಮ
ಎಂದು ಬುದ್ಧ ಹೇಳಿ ಎರಡೂವರೆ ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಅವನ ದಾರಿ ನಡೆದ ಅಶೋಕ ಎಂಭತ್ನಾಲ್ಕು ಸಾವಿರ ಸ್ತೂಪಗಳ ಕಟ್ಟಿ
ಎರಡು ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಕಳಬೇಡ, ಕೊಲಬೇಡವೆಂದ ಬಸವ ಅಂತರಂಗ ಬಹಿರಂಗ ಶುದ್ಧಿಯ ಹೇಳಿ
ಎಂಟು ನೂರು ವೈಶಾಖ ಹುಣ್ಣಿಮೆ ಕಳೆದವು
ಧರ್ಮವು ಶೋಷಿತನ ನಿಟ್ಟುಸಿರು; ಹೃದಯಹೀನ ಲೋಕದ ಹೃದಯ; ಆತ್ಮಹೀನನ ಆತ್ಮ
ಎಂದು ಮಾರ್ಕ್ಸನು ಹೇಳಿ ನೂರರವತ್ತು ವೈಶಾಖ ಹುಣ್ಣಿಮೆ ಕಳೆದವು
ಘನತೆಯ ಬದುಕನರಸಿ ಬುದ್ಧ ದಾರಿಯಲಿ ಬಾಬಾ ನಡೆದು
ಅರವತ್ತು ವೈಶಾಖ ಹುಣ್ಣಿಮೆ ಕಳೆಯುತ್ತಿದೆ...
ಇಂತಿರುವಾಗ ಕರ್ಣಾಟ ದೇಶದೊಳು ಮೂರು ಲಕ್ಷ ಬೌದ್ಧರು
ಭರತ ಖಂಡದೊಳು ಎಂಭತ್ತು ಲಕ್ಷ ಬೌದ್ಧರು

ಆದರೂ ಭಂತೇ,
ಯಾಕೆ ಕಲ್ಲಾಗಿವೆ ಮನಸು?
ಯಾಕೆ ಹನಿ ನೀರಿಲ್ಲದ ಬಂಡೆಯಾಗಿದೆ ಕಣ್ಣು?
ಯಾಕೆ ಹೊರಳಲು ಮರೆತಿದೆ ಹೊಟ್ಟೆ ಕರುಳು?
ಯಾಕೆ ತಲೆ ಮೇಲೆ ಮಲ ಸುರಿಯಲಾಗುತ್ತದೆ ನೀರು ಎಂದು?
ಯಾಕೆ ಮುತ್ತು ಕಟ್ಟಿಸಿಕೊಳ್ಳುವುದು ಗುಳದಾಳಿಯ ಕೊರಳು?
ಯಾಕೆ ಚೋಮ ಕೊನೆಯುಸಿರೆಳೆಯುತ್ತಾನೆ ನೆಲ ಸಿಗದೆ ಚೂರೇಚೂರು?

ಯಾಕೆಂದರೆ ಜೀರುಂಡೆ,
ನಾವು ಬುದ್ಧನ ಭೇಟಿ ಆದೆವು, ಮುಂದೆ ಸಾಗಿದೆವು,
ಬೌದ್ಧರಾದೆವು, ಬುದ್ಧರಾಗದೇ ಹೋದೆವು
ಅದಕ್ಕೇ..

ಅದಕ್ಕೆ, ಅದಕ್ಕೇ,
ಜೀವಬಂಧುವೇ,
ಬಾ ಬುದ್ಧಮಾರ್ಗಿಯಾಗುವ
ಅವರ ಕರೆ, ಇವರನ್ನೂ ಕರೆ
ಎಡದವರ ಕರೆ, ಬಲದವರನ್ನೂ ಕರೆ
ಮೇಲಿರುವವರ ಕರೆ, ಕೆಳಗಿರುವವರನ್ನೂ ಕರೆ
ಹಿಂದಿರುವವರ ಕರೆ, ಮುಂದಿರುವವರನ್ನೂ ಕರೆ
ತರತಮವಿಲ್ಲ ಬುದ್ಧ ಬೆಳಕಿಗೆ, ಬೀರುತ್ತದೆ ಒಂದೇ ರೀತಿ ಎಲ್ಲ ಕಡೆಗೆ

ಬಾ ಬಂಧು ನಮ್ಮೊಡನೆ
ಬುದ್ಧಮಾರ್ಗದಲಿ ಸಾಗುವ
ಅದು ಕ್ಷಮೆಯ ಹಾದಿ
ಅದು ಮಿತದ ಹಾದಿ
ಅದು ಮಧ್ಯಮ ಹಾದಿ
ಅದು ಸಮಚಿತ್ತದ ಹಾದಿ
ನಿನ್ನೆದೆಯ ಅಂಗೈಲಿ ಹಿಡಿದು ನಡೆ
ಅದು ಕರುಣದ ಹಾದಿ..


(ಎಲ್ಲ ಚಿತ್ರಗಳು: ಕೃಷ್ಣ ಗಿಳಿಯಾರು)

5 comments:

  1. ಈ ತುಸು ದೀರ್ಘಕಾವ್ಯದೊಳಗೆ ಬುದ್ದ ಅಕ್ಷರಗಳಿಂದ ಕಳಚಿಕೊಂಡು ಬರುತ್ತಿದ್ದಾನೆ ಎನಿಸುತ್ತದೆ... ತುಂಬಾ ಚೆನ್ನಾಗಿದೆ :)

    ReplyDelete
  2. ಇದು ನೀಳ್ಗವಿತೆ. ಬುದ್ಧನ ಇಡೀ ಬದುಕನ್ನು ಕವಿತೆ ಕಟ್ಟಿಕೊಡುತ್ತಿದೆ. ಬುದ್ಧನನ್ನು ಸರಳವಾಗಿ ಯುವ ಜನಾಂಗಕ್ಕೆ ತಲುಪಿಸಲು ಸಹಾಯಕ. ಇದನ್ನು ರೂಪಕವಾಗಿ, ದೃಶ್ಯ ಮಾಧ್ಯಮಕ್ಕೂ ಅಳವಡಿಸಬಹುದು. ಹಿನ್ನೆಲೆಯಲ್ಲಿ ಕವಿತೆ ಹಾಡುತ್ತಾ ಪಾತ್ರಗಳು ವೇದಿಕೆ ಬಂದರೆ , ನಾಟಕ ರೂಪದಲ್ಲಿ ಬುದ್ಧನನ್ನು ಕಟ್ಟಿಕೊಡಬಹುದು. ಈ ಕಾರ್ಯವನ್ನು ರಂಗಾಯಣದಂತಹ ಸಂಸ್ಥೆಗಳು ಮಾಡಬಹುದು. ಇಡೀ ಕವಿತೆಯನ್ನು ಓದುವಾಗ ನನಗೆ ನೆನಪಾದುದು ಪಿ.ಲಂಕೇಶರ ` ಮೋಕ್ಷವನ್ನು ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ......'ಲೇಖನ. ಬುದ್ಧ ಮೈಯಲ್ಲಾ ಕಿವಿಯಾಗಿಸಿಕೊಳ್ಳುವ ಪ್ರಕ್ರಿಯೆ ಅದ್ಭುತವಾಗಿದೆ. ಅಲ್ಲಲ್ಲಿ ಪ್ರತಿಮೆಗಳು ಮತ್ತು ವಚನ ಸಾಹಿತ್ಯದ ಪ್ರಭಾವ ಕವಿತೆಯ ಮೇಲಿದೆ. ಬಸವ ಮತ್ತು ಅಲ್ಲಮ ಅಲ್ಲಲ್ಲಿ ಸುಳಿದಿದ್ದಾರೆ....ಈ ಕವಿತೆ ಪದವಿ ವಿದ್ಯಾರ್ಥಿಗಳಿಗೆ ಕವಿವಿ, ಶಿವಮೊಗ್ಗ ಮತ್ತು ಮಂಗಳೂರು ವಿ.ವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು . ಇಲ್ಲಿ ತುರ್ತಾಗಿ ಅವಶ್ಯವಿದೆ. ಕೋಮುವಾದ ಬೆಳೆಯುತ್ತಿರುವ ಜಿಲ್ಲೆಗಳ ಯುವಜನಾಂಗಕ್ಕೆ ಕಣ್ಣು ತೆರೆಸುವಂತಿದೆ ಕವಿತೆ. ಕವಿತೆಗೆ ನೆರವಾಗಿ ಬಂದ ರೇಖಾ ಚಿತ್ರಗಳು ಸೊಗಸಾಗಿವೆ. ಕೃಷ್ಣ ಗಿಳಿಯಾರ ಸರ್ ಕೈಚಳಕವೇ ಅಂಥದ್ದು.

    ಕವಿತೆಯಲ್ಲಿ ಈ ಪ್ರತಿಮೆ ತುಂಬಾ ಇಷ್ಟವಾಯಿತು.
    ಉರಿವ ಹಣತೆ ಏನನೂ ಉಳಿಸುವುದಿಲ್ಲ ಬೆಳಕಿನ ಹೊರತು
    ಬೆಳಗು, ಬೆಳಕಾಗು ಉಳಿಸದೆ ಏನನೂ ಬೆಳಕಿನ ಹೊರತು

    -ಇಬ್ಬನಿ.

    ReplyDelete
  3. ಬೌದ್ಧರಾದೆವು, ಬುದ್ಧರಾಗದೇ ಹೋದೆವು..
    ಎಂಥ ಮೌಲಿಕ ಸತ್ಯ ಬಿಚ್ಚಿಟ್ಟಿದ್ದ್ದೀರಿ ಅನುಪಮಾ, ಯೋಚನೀಗೆ ಹಚ್ಚುವ ಸುದೀರ್ಘ ಕಾವ್ಯ.. ಹಲವಾರು ಮಗ್ಗಲುಗಳನ್ನ್ನು ಪರಿಚಯಿಸಿತು.

    ReplyDelete
  4. ಬುದ್ಧನ ಪರಿಚಯ ಮಾಡುತ್ತಲೇ, ಮಾನವೀಯತೆಗೆ ಅಗತ್ಯವಾದ ಉತ್ತಮ ಮೌಲ್ಯಗಳ ಸಾಕ್ಷಾತ್ಕಾರವೇ ಆಗಿ ಹೋಗಿದೆ ಈ ಅಕ್ಷರಗಳ ಜಾತ್ರೆಯಲ್ಲಿ. ಸಂಗ್ರಹಣ ಯೋಗ್ಯವಾಗಿದೆ ನಿಮ್ಮ ಈ ಕವಿತೆ.

    ReplyDelete
  5. ಮಾನವೀಯತೆಯ ನೈಜ ಪಾಠ ಕಲಿಸಿಕೊಟ್ಟ ಬುದ್ಧನಂತವರು ಇವತ್ತು ಬೇಕಾಗಿದೆ ಒಳ್ಳೆಯ ಕಥನ ಕವನ

    ReplyDelete