Monday 8 June 2015

ನಿಜಾರ್ ಖಬ್ಬಾನಿ ಕವಿತೆ




ನಮ್ಮ ನೆಲ ಸೀಳುವ, 
ನಮ್ಮ ಇತಿಹಾಸ ಒರೆಸಿಹಾಕುವ
ಇಸ್ರೇಲಿನ ಬುಲ್ಡೋಜರುಗಳಿಗೆ ತಲೆಕೊಟ್ಟು 
ಸಾಯಲು ನಿರಾಕರಿಸಿದೆವಾದರೆ
ಭಯೋತ್ಪಾದನೆಯ ಗುನ್ನೆ ನಮ್ಮ ತಲೆಗೆ ಕಟ್ಟಲಾಗುತ್ತದೆ..

ಈ ಬುವಿಯ ಮೇಲಿಂದ
ಉಜ್ಜಿ ಒರೆಸಿ ಅಳಿಸಿ ನಾಶಮಾಡಿಕೊಳಲು  
ನಾವು ನಿರಾಕರಿಸಿದರೆ
ಭಯೋತ್ಪಾದನೆಯ ಅಪರಾಧ ನಮ್ಮದಾಗುತ್ತದೆ..

ಸೀಸರನ ಸೀಸರನು 
ತನ್ನ ಬೇಳೆ ಬೇಯಿಸಿಕೊಳಲು
ಭದ್ರತಾ ಮಂಡಳಿಯೆಂಬ ಗಾಜಿನ ಮನೆಯ 
ವಶಮಾಡಿಕೊಂಡಿರುವಾಗ 
ಕಲ್ಲೊಗೆದ ನಮಗೆ
ಭಯೋತ್ಪಾದನೆಯ ಪಟ್ಟ ದೊರೆಯುತ್ತದೆ..

ತೋಳದೊಡನೆ ಒಪ್ಪಂದ ನಿರಾಕರಿಸಿದರೆ
ಭಯೋತ್ಪಾದನೆಯ ಗುನ್ನೆ ತಲೆಗೇರುತ್ತದೆ..

ನಮ್ಮ ನೆಲ, ಅದರ ಧೂಳಿನ ಮಾನ
ನಾವು ಕಾದುಕೊಂಡರೆ;
ನಮ್ಮವರ ಅತ್ಯಾಚಾರ 
ನಮ್ಮದೇ ಅತ್ಯಾಚಾರವ 
ದಿಟ್ಟವಾಗಿ ವಿರೋಧಿಸಿದರೆ;
ನಮ್ಮ ಆಗಸದ ಕೊನೆಯ ತಾರೆಗಳ
ಮುಚ್ಚಿಟ್ಟು, ಕಾಪಿಟ್ಟುಕೊಂಡರೆ;
ಭಯೋತ್ಪಾದನೆಯ ಕಿರೀಟ ತೊಡಿಸಲಾಗುತ್ತದೆ

ಇದು, ಇವು, ಈ ಭಯೋತ್ಪಾದನೆ
ಪಾಪವೇ ಆದಲ್ಲಿ
ಭಯೋತ್ಪಾದನೆ ಎಷ್ಟು ಸುಂದರ!
ನಾನು ಭಯೋತ್ಪಾದನೆಯ ಪರ.
ಎಲ್ಲಿಯವರೆಗೆ ಹೊಸ ಜಗತ್ತು
ನನ್ನ ಸಂತತಿಯ ಕೊಚ್ಚಿ ಕಡಿದು
ನಾಯಿಪಾಲು ಮಾಡುವುದೋ,
ನಾನು ದನಿಯೆತ್ತಿ ಹೇಳುವವನಿದ್ದೇನೆ ಅಲ್ಲಿಯತನಕ 
ನಾನು ಭಯೋತ್ಪಾದನೆಯ ಪರ..

-

No comments:

Post a Comment