Tuesday 1 November 2016

ಸಂದೇಶ್2ಸೋಲ್ಜರ್ಸ್




ಅಣಾ,
ಹ್ಯಾಪಿ ದೀಪಾವಳಿ, ನಿಂಗೆ 
ನಿನ್ ಜೊತೆ ಇರೊ ಎಲ್ಲಾರಿಗೆ
ಹಬ್ಬ, ಎರಡ್ ಮಾತ್ ಹೇಳಿ ಸೈನ್ಯದವ್ಕೆ 
ಅಂದ್ರು ನಂ ಅಧಿನಾಯಕರು
ಕೆಲ್ಸ ಬಗ್ಸೆ ಮುಗ್ಸಿ ಮೆಸೇಜ್ ಹಾಕಕ್ಕೆ ತಡಾಯ್ತು
ಸುದಾರಸ್ಕ..

ಮತ್ತೇನಿಲ್ಲ, ನಂದು
ಒಂದೆಲ್ಡು ಮೂರು ಮಾತವೆ
ಗುಂಗೆಹುಳ್ದಂಗೆ ನನ್ ಕೊರೀತಾ ಅವೆ 
ನಿನ್ ತಲ್ಗು ಸಾಗಾಕಿ ಹಗುರಾಯ್ತಿನಿ ಕೇಳು..

ಅದೇನ ೧೮೯೯ನೇ ಇಸವಿಲ್ಲಿ
ಅದ್ಯಾರೋ ಬುದ್ಧಿ ಇಲ್ದ್ ಬ್ರಿಟಿಷ್ರು
ಒಂದು ಸೀಮೆಸುಣ್ಣ ತಗಂಡು
ಗೆರೆ ಎಳ್ದು 
ಅದ್ರ ಈಚ್ಗೆ ಇಂಡ್ಯ ಆಚ್ಗೆ ಪಾಕಿಸ್ತಾನ 
‘ಇಕಾ ಇದೇ ಗಡಿ’ ಅಂದ್ರಂತೆ
ಆ ಗೆರೆ ಅಂಗೇ ಹರಡ್ಕತ ಹರಡ್ಕತ 
ಊರುಕೇರಿನೆಲ್ಲ ಪಾಲು ಮಾಡತ 
ನೀ ಇಂಡ್ಯ ನೀ ಪಾಕಿ ಅಂತ 
ಒಳಗೊಳ್ಗೆ ಬಡದಾಟ ಹುಟ್ಸಿರುವಾಗ
ಅದ್ರ ಮನೆ ಕಾಯ್ವೋಗ,
ನೀ ಯಾನಣ ಅದು ನೀ ಅದ್ನ ಕಾಯದು?

ಗೆರೆ ಈಚ್ಗೊ ಆಚ್ಗೊ, ಸಕಲ ಜೀವರಾಶಿನು
ನೆಲದ್ ಮೇಲೇ ನಡಿಬೇಕು 
ಹೊಟ್ಟಿಗ್ ತಿಂದೆ ಬದುಕ್ಬೇಕು
ಹೇತು ಹಗುರಾಗ್ಬೇಕು
ಗೆರೆ ಈಚ್ಗೊ ಆಚ್ಗೊ
ಬಾಂಬು ಬಿದ್ರೆ ಸಕಲ ಜೀವರಾಶಿನು
ಒಮ್ಮುಕ್ಲೆ ಗೊಟಕ್ ಅಂದ್ಬಿಡಬೇಕು
ಗೆರೆ ಈಚ್ಗೊ ಆಚ್ಗೊ 
ಬಿತ್ತಿದ್ದೆಲ್ಲ ಬೆಳೆ, ಕೀಳ್ದೆ ಇದ್ದದ್ದು ಕಳೆ 
ಅಂತನುಸ್ಕಳ್ಳೇಬೇಕು..
ಅಂಗಿರ‍್ತ ಆ ಗೆರೆಗೆ
ಅರ್ತವೂ ಇಲ್ಲ, ಉಪಯೋಗ್ವು ಇಲ್ಲ ಅಂತಾದ್ಮೇಲೆ 
ಆ ಯಮ್ ಚಳೀಲಿ ಅಲ್ಲೇನ್ಮಾಡಿ ಸುಮ್ನೆ,
ಮನಗೋಗಿ ಗೇಯ್ದು ಉಂಡು ಮಲಿಕಳದಲ್ವೆ?

ತಗಾ, ಇದೊಂದ್ ದೀಪ ಅಚ್ಚು..

ಆಮ್ಯಾಲೆ, ಎರಡ್ನೆ ಇಚಾರ.

ನಂ ದೇಸ್ದ ಅರ್ಧಬರ್ಧ ಜನ್ಕೆ
ಹ್ವಟ್ಟೆಗಿಲ್ಲ ಬಟ್ಟೆಗಿಲ್ಲ
ಹಾಸಿದ್ದು ಹೊದ್ದಿದ್ದು 
ಕಾಲತಕ ಬಂದ್ರೆ ತಲೆ ಮುಚ್ಚಲ್ಲ
ತಲೆಗೆಳಕಂಡ್ರೆ ಕಾಲು ಮುಚ್ಚಲ್ಲ
ಅಂಗಿದ್ರುನು ಸೈತ, ನಮ್ಮೋರು
ಏನೋ ದೇಸ ಕಾಯ್ತ ಅವ್ರೆ
ಹ್ವಲ ಕಾದಂಗಲ್ಲ, ಓಗ್ಲಿ ಅಂತಂದು
ಹ್ವಟ್ಟೆಬಟ್ಟೆ ಕಟ್ಟಿ ನಿಂಗೆ 
ಊಟದ್ ಡಬ್ಬಿ ಬೆಚ್ಚನ್ ಕಂಬ್ಳಿ
ಟೋಪಿ ಬೂಟು ಸಾಕ್ಸು
ಎಲ್ಲದ್ನು ಕಳ್ಸವ್ರೆ.
ಆದ್ರೆ
ನಿನ್ನ ಜ್ವತೆ ಇರೋರೇನೊ ನಂ ಹೆಣ್ ಐಕ್ಳ
ಸ್ಯಾಲೆ ರವ್ಕೆ ಎಳ್ದು
ಪುಂಡಾಟ್ಕೆ ಮಾಡ್ತ ಅವ್ರಂತೆ? 
ಯಾರ್ ಮಾತ್ಗು ಕ್ಯಾರೇ ಅಂತಿಲ್ಲವಂತೆ?
ಅಂಗಂತ ನಂ ಶರುಮಿಳ ಉಪಾಸ ಕೂತು
ಏಸೋ ವರ್ಸಾಗಿ ಅದ್ರ ಕೂದ್ಲು ಉದುರೋಗದಂತೆ?

ಅಲ್ಕಣ,
ಕಣ್ಣಿಗ್ ಕಾಣ್ದ ಗೆರೆ ಕಾಯ್ವೋರಂತೆ ನೀವು
ಅಕ್ತಂಗೇರ ಮರ‍್ವಾದೆಮಾನ ಸೂರೆ ಮಾಡಿ
ಅದು ಯಾನಣ ಅದು ನೀವ್ ಮೆಡ್ಲು ಅಂಟಿಸ್ಕ್ಯಳದು?
ಸಿಟ್ಗಲ್ಲ, ಸಂಕ್ಟಕ್ ಏಳ್ದ ಮಾತು ಇದು, ಸರಿಗ್ ಕೇಳು..

ಕ್ವಾ, ಇನ್ನೊಂದ್ ದೀಪ ಅಚ್ಚು..

ಇನ್ ಕೊನೇ ಮಾತು ಇದು.
ಯಾ ತಾಯಿ ಮಗ್ನೊ 
ಯಾ ತಂಗಿ ಅಣ್ನೋ
ಯಾ ಸೋಬ್ತಿ ಗಂಣ್ನೊ 
ಯಾರದಣ್ಣ ಅದು ಆ ಹೆಣ? 
ಚಲ್ಲಾಪಿಲ್ಲಿ ತುಂಡ್‌ತುಂಡು
ಆಚ್ಗದೇನ್ ಎದೆಬಡ್ಕಳ ಸದ್ದು?

ಅಯ್ಯಯ್ಯೋ, ಯುದ್ಧ ಅಂದ್ರೇನ್ ಆಟವೆ?
ಕುರುಕ್ಷೇತ್ರ ಮಾಭಾರತ ಪಾಠ ಕಲಿಸ್ಲಿಲ್ಲೆನು ಇನ್ನೂ?
ಕಳಿಂಗ ಮಗಧ ಪಾಠ ಅನುಸ್ಲಿಲ್ಲೆನು ಇನ್ನೂ?
ಪಾಣಿಪತ್ ತಾಳೀಕೋಟೆ ರಕ್ಕಸತಂಗಡಿ ಪ್ಲಾಸಿ..
ಒಂದೊಂದು ಗುನ್ನೆಯಿಂದ 
ಒಂದೊಂದ್ ಅಕ್ಷರ ಕಲುತ್ರು ಸಾಕಿತ್ತು 
ಈ ಬಡದಾಟನ ಶುರು ಹಚ್ಕಳದು ಸುಲಭ 
ನಿಲ್ಸಕ್ಕೆ ಬೀಳ್ಬೇಕು ಸಾಲ್‌ಸಾಲು ಹೆಣ

ಅದ್ಕೆ, ಬಾ ಅಣೋ ದೀಪ ಹಚ್ಚಣ 
ಒಳಗಿನ್ ಜೋತಮ್ನ ಮಾತು ವಸಿ ಕೇಳಣ
ನಿನ್ ರಗತ ಮಾಂಸ ಅಲ್ದೆ
ಈ ಜನ್ರಿಗೆ ಕೊಡಂಥದು ಏಸೊಂತರ ಅವೆ ನಿನ್ನತ್ರ
ನಿನ ಬಂದೂಕ್ನ ಬಾಯಲ್ಲಿ ಗುಬ್ಬಿ ಗೂಡು ಮಾಡ್ಲಿ
ನಿಂಗೂ ಆಚ್ಗೆ ನಿಂತೋನಿಗೂ ನೂರೊರ್ಷ ಆಯುಸ್ಸು ಸಿಗಲಿ
ಜನರೆಲ್ಲ ಇರುವ್ಯಾಗಿ ತಂತಿ ಬೇಲಿ ನುಸುಳಲಿ
ಯುದ್ಧ ಅಂಬೊ ಪದ ಮಾಯಾಗ್ಲಿ..

ಎಲ್ಲರ ದೋಸ್ತ ಆಗು, ನಿನ್ಗೆ ಶತ್ರುನೆ ಇಲ್ಲ ಆಗ್ಲಿ..




 (ಚಿತ್ರ, ಫೋಟೋ: ಕೃಷ್ಣ ಗಿಳಿಯಾರ್)

2 comments:

  1. ಕವಿತೆ ಅಪ್ತವಾಗಿದೆ. ಗಡಿರೇಖೆಗಳು ಇಲ್ಲವಾಗಲಿ ಎಂಬ ಆಶಯ ಕವಿಗಳಿಗೆ ಮಾತ್ರ ಸಾಧ್ಯ. ಅದು ಮಾನವೀಯತೆಯನ್ನು ಉಸಿರಾಡುವವರಿಗೆ ಮಾತ್ರ. ಯಾವ ತಾಯಿಯೂ ತನ್ನ ಮಗನನ್ನು ಸೈನ್ಯಕ್ಕೆ ಕಳಿಸಲು ಬಯಸುವುದಿಲ್ಲ ಅಂತ ಅನಿಸುತ್ತಿದೆ. ಭಾರತದ ಬಡತನ ಕಾರಣವಾಗಿ, ಒಪ್ಪತ್ತಿನ ಊಟಕ್ಕೆ ತೊಂದರೆ ಪಡುವ, ಉಳಲು ತುಂಡು ಭೂಮಿ ಇಲ್ಲದ ಕುಟುಂಬಗಳಿಂದ ಬಂದವರು ಸೈನ್ಯದಲ್ಲಿ ಹೆಚ್ಚಿರಬಹುದು. ಎಸ್ ಎಸ್ ಎಲ್ ಸಿ-ಪಿಯುಸಿ ಹಂತದಲ್ಲೇ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವುದರ ಹಿಂದೆ ಮುಗ್ಧತೆಯ ಬಳಕೆ, ನಿರುದ್ಯೋಗದ ಮನಕ್ಕೆ ಅಮಿಷ ತೋರಿಸುವ ಸಂಚು ಇದೆ ಎನ್ನದೆ ವಿಧಿಯಿಲ್ಲ.

    ReplyDelete