Thursday 14 December 2017

ಮನ್ನಿಸಿ, ಇವು ಮಾಂಟೋ ಕತೆಯ ಸಾಲುಗಳಲ್ಲ..




ಒಂದು

ಅದೊಂದು ದುರಾದೃಷ್ಟದ ಇರುಳು. ಆ ಇರುಳು ಕಳೆದು ಬೆಳಗಾಗುವುದರಲ್ಲಿ ಎಷ್ಟೆಷ್ಟೋ ಸಮೀಕರಣಗಳು ಬದಲಾದವು, ಲೆಕ್ಕವಿಲ್ಲದಷ್ಟು ಬದುಕುಗಳು ಬಯಲಾದವು.

೧೯ರ ಎಳೆಯ ಪೋರ. ಮೀಸೆ ಬಲಿಯದ ನೂರು ಕನಸುಗಳ ಆ ಹುಡುಗ ಕಾಲೇಜು ಬಿಟ್ಟವ ದುಡಿಮೆಯತ್ತ ಮುಖ ಮಾಡಿದ್ದ. ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡಲು ಅಣ್ಣ, ಅಪ್ಪನೊಡನೆ ತಾನೂ ಬಂದರದಲ್ಲಿ ಕೆಲಸ ಮಾಡುತ್ತಿದ್ದ. ತರುಣ ರಕ್ತದವನಲ್ಲವೇ, ದೇವರು-ಧರ್ಮ-ಭಾಷೆ-ದೇಶ ಎಂಬಿತ್ಯಾದಿ ವಿಷಯಗಳು ಸೆಳೆಯುತ್ತಿದ್ದವು. ಒಂದು ಗುಂಪಿನೊಡನೆ ತನ್ನನ್ನು ಗುರ್ತಿಸಿಕೊಳ್ಳತೊಡಗಿದ್ದ. ಎರಡು ಉದ್ರಿಕ್ತ ಗುಂಪುಗಳ ನಡುವೆ ಸಂಘರ್ಷವಾಗುತ್ತಿದೆ ಎಂದು ತಿಳಿದರೆ ಏನಾಗುತ್ತಿದೆ ಎನ್ನುವುದನ್ನು ಅಲ್ಲಿಯೇ ಹೋಗಿ ನೋಡಿ ಬರುವ ಹರೆಯದ ಹುಂಬ ಕುತೂಹಲ.

ಆ ಇರುಳು..

ಮರುಬೆಳಗೆದ್ದು ಶಬರಿಮಲೆಗೆ ಹೋಗಲು ಅಯ್ಯಪ್ಪ ಸ್ವಾಮಿ ದೇವರ ಮಾಲೆ ಹಾಕಬೇಕಿತ್ತು. ಆದರೆ ಚಕಮಕಿ ನಡೆದಲ್ಲಿ ಬೈಕು ನಿಲ್ಲಿಸಿ ಬಂದಿದ್ದ. ಬೈಕು ತರುವೆನೆಂದು ಹೇಳಿ ಮನೆಬಿಟ್ಟು ಹೋದ. ಹಾಗೆ ಹೋದವನು ಮತ್ತೆ ಬರಲೇ ಇಲ್ಲ..

ಮನೆಯವರು ಹುಡುಕಿದರು. ಕಂಗಾಲಾದರು. ಅಮ್ಮ ಭೋರಾಡಿ ಅತ್ತರು. ಹೋದವ ಎಲ್ಲೂ ಕಾಣುತ್ತಿಲ್ಲ. ಮೊಬೈಲಿಗೂ ಕರೆ ಹೋಗುತ್ತಿಲ್ಲ. ಪೊಲೀಸರಲ್ಲಿ ಹೇಳಿದರು, ದೂರಿತ್ತರು. ಊಂಹ್ಞೂಂ, ಹುಡುಗ ಎಲ್ಲೂ ಇಲ್ಲ..

ಆದರೆ ಅದಾದ ೨ನೇ ದಿನ ಬೆಳಿಗ್ಗೆ ಆ ಊರ ಕೆರೆಯಲ್ಲಿ ಕೊಳೆತು, ಊದಿ ವಿಕಾರಗೊಂಡಿದ್ದ ಶವವೊಂದು ಬಕ್ಕಲು ಬೋರಲು ಸ್ಥಿತಿಯಲ್ಲಿ ನೀರಿನಲ್ಲಿ ತೇಲಿತು. ಮೇಲೆತ್ತಿ ತಿರುಗಿಸಿ ನೋಡಿದರೆ, ಅದು ಅವನೇ. ಅಯ್ಯೋ..

ಮುಳುಗಿದ್ದವ ಮೇಲೆ ತೇಲಿದ್ದ. ಈಗ ದುಃಖ ಅವನ ಕುಟುಂಬವನ್ನು ಮುಳುಗಿಸಿತು. ಅಷ್ಟೇ ಅಲ್ಲ, ದುಃಖವು ಶವ ಕಂಡ ಎಲ್ಲರನ್ನು ಮುಳುಗಿಸುವ ಅರಬಿ ಕಡಲೇ ಆಯಿತು..

ಎರಡು



ಆ ಮೂರೂ ಜನರಿಗೆ ಲಾರಿಯಲ್ಲಿ ಹೊಂಯ್ಞಿಗೆ ತುಂಬಿಕೊಂಡು ಹೊರಟಾಗ ಹೀಗಾದೀತೆಂಬ ಯಾವ ಕಲ್ಪನೆಯೂ ಇರಲಿಲ್ಲ. ಅಂದು ಬೆಳಿಗ್ಗೆ ಹಳ್ಳಿಯೊಂದರ ಹೊರವಲಯದಲ್ಲಿ ರಸ್ತೆ ಮೇಲೆ ನಿಂತಿದ್ದ ಒಂದಷ್ಟು ಹುಡುಗರು ಲಾರಿ ಚಾಲಕನ ಸೀಟಿನಲ್ಲಿರುವವನ ಹೊರಚಹರೆಯಿಂದಲೇ ಆತನ ಧರ್ಮವನ್ನು ನಿಶ್ಚಯಿಸಿಬಿಟ್ಟರು. ಕೈಯಡ್ಡಮಾಡಿ ನಿಲ್ಲಿಸಿ ಹೆಸರು ಕೇಳಿ, ಹೊರಗೆಳೆದು ಹೊಡೆಯತೊಡಗಿದರು. ಆಗಲೇ ಅವರಿಗೆ ಏನಾಗಬಹುದೆಂಬ ಅರಿವಾದದ್ದು. ಉಳಿದವರಿಬ್ಬರು ಹೊಡೆತ ತಿಂದು ಎದ್ದೆನೋ ಬಿದ್ದೆನೋ ಎಂದು ಓಡಿ ಹೋದರು. ಲಾರಿ ನಿಲ್ಲಿಸಿದ ಚಾಲಕ ಸಿಕ್ಕಿಕೊಂಡ. ಅವನನ್ನು ಅಟ್ಟಾಡಿಸಿ ಹೊಡೆದಟ್ಟಿದ ಗುಂಪು ಮತ್ಯಾರದೋ ಬೆನ್ನು ಹತ್ತಿ ಹೋಯಿತು. ಜೀವವುಳಿದರೆ ಸಾಕೆಂದು ಕಾಡುಬಿದ್ದ ಅವ, ಕೊಂಚ ಸುಧಾರಿಸಿಕೊಂಡು ಹೊರಟಾಗ ಮತ್ತೆ ಇನ್ನೊಂದು ಉದ್ರಿಕ್ತ ಗುಂಪು ಎದುರಾಯಿತು. ಅವರು ಕಬ್ಬಿಣದ ರಾಡಿನಿಂದ ಬಡಿದು ಕೆಡವಿ ಪೆಟ್ರೋಲು ಸುರಿದು ಇನ್ನೇನು ಬೆಂಕಿಯಿಕ್ಕಬೇಕು, ಅಷ್ಟರಲ್ಲಿ ದೂರದಲ್ಲಿ ಬರುತ್ತಿದ್ದ ಜನರ ಮಾತು ಕೇಳಿ ಓಡಿಹೋದರು.

ಎರಡನೆಯ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದ. ರಾಡಿನಿಂದ ಬಿದ್ದ ಹೊಡೆತಕ್ಕೆ ಕಾಲು ಮುರಿದು ಗಾಯವಾಗಿದ್ದರೂ ಕುಂಟಿದ ತೆವಳಿದ. ಮನೆಯೊಂದು ಕಂಡಂತಾಗಿ ಹೋಗಿ ನೀರು ಕೇಳಿದ. ಆ ಬ್ರಾಹ್ಮಣ ಸಮುದಾಯದ ಕುಟುಂಬ ಹಸಿದ, ಗಾಯಗೊಂಡ, ಬಾಯಾರಿದ ಇವ ಹುಚ್ಚನಿರಬೇಕೆಂದೇ ಭಾವಿಸಿತು. ಏನೇ ಅಂದುಕೊಂಡರೂ ಮೋರಿಯಲ್ಲಿ ಅಡಗಿ ಕುಳಿತವನಿಗೆ ಮೂರು ದಿನ ಅನ್ನ, ನೀರು ಕೊಟ್ಟು ಪೊರೆಯಿತು. ಅವರಿಗೆ ಗೊಂದಲ. ಇವನಿಗೆ ಭಯ. ಕೊನೆಗೊಂದು ನಟ್ಟಿರುಳು ತೆವಳುತ್ತ ಮುಖ್ಯರಸ್ತೆ ತಲುಪಿ, ಬೆಳಗಿನ ಜಾವ ವಾಕಿಂಗ್ ಹೋಗುವವರ ಮಾತಿನಿಂದ ಗಲಾಟೆ ಕಡಿಮೆಯಾಗಿದೆ ಎಂದು ತಿಳಿದ. ಮೋರಿ ಬಿಟ್ಟು ಎದ್ದು ಹೊರ ಬಂದ. ಬಳಲಿ, ಗಾಯಗೊಂಡು, ಭಯದಿಂದ ಅರೆಹುಚ್ಚನಂತಾಗಿದ್ದ ವ್ಯಕ್ತಿಯನ್ನು ಬೀಟಿನ ಪೊಲೀಸರು ಆಸ್ಪತ್ರೆಗೆ ಸೇರಿಸಿದರು. ಆ ವೇಳೆಗೆ ಇತ್ತ ಅವನ ಮನೆಯವರು ಅವ ಸತ್ತೇ ಹೋಗಿರುವನೆಂದು ರೋದಿಸತೊಡಗಿದ್ದರು. ಊರಿನವರು ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.

ಅಂತೂ ಈಗ ಮನೆ ತಲುಪಿರುವ ಆತನಿಗೆ ಬದುಕು ಬೋನಸ್ ಎನಿಸಿದೆ. ಮರು ಜನ್ಮ ಸಿಕ್ಕಿದ ಅನುಭವವಾಗುತ್ತಿದೆ.

ಮೂರು


ರಾತ್ರಿ ೧೧.೪೫. ಫೋನು ರಿಂಗಣಿಸಿತು. ‘ನಮ್ಮ ಮನೆ ಎದುರು ನಿಂತು ಸುಮಾರಷ್ಟು ಜನ ಕಲ್ಲು ತೂರ‍್ತ ಇದಾರೆ. ನಮ್ಗೆ ಬಯ ಆಗ್ತ ಇದೆ. ಕೆಲವಷ್ಟು ಗಾಜು ಪುಡಿಪುಡಿ ಆದ್ವು. ಹೊರಗೆ ಹೋಗಿ ಯಾರಂತ ನೋಡ್ಲಿಕ್ಕೆ, ನಿಲ್ಸಿ ಅಂತ ಹೇಳ್ಲಿಕ್ಕೆ ಹೆದರ‍್ಕೆ. ಮೇಡಂ, ಎಂಥ ಮಾಡುದು?’

ಎಂಥ ಮಾಡುವುದು?

‘ಪೊಲೀಸಿನವ್ರ ಜೀಪಿಗೇ ನಾವು ಬೆಂಕಿ ಹಚ್ಚಿದ್ರು. ಇನ್ನು ಈ ಮನೆ ಯಾವ ಲೆಕ್ಕ? ಇವತ್ತು ಮಾತ್ರ ಬಿಡಬಾರ್ದು. ಈ .. .. ಮಕ್ಳ ಮನೆ ಸುಟ್ಟೇ ಹಾಕ್ಬೇಕು.’ ಹಾಡುಹಗಲೇ ಅವರ ಮನೆ ಮುಂದೆ ಸೇರಿದ್ದ ಗುಂಪು ಅವರ ಮನೆಗೆ ಕೇಳುವಂತೇ ಈ ಮಾತು ಆಡುತ್ತ, ಕಲ್ಲು ಹೊಡೆಯಲು ಶುರು ಮಾಡಿತು. ‘ನಲ್ವತ್ತೈದ್ ವರ್ಷಾಯ್ತು ಈ ಊರ‍್ಗೆ ಬಂದು. ನಂ ಮಕ್ಳುಮರಿ ಎಲ್ಲ ಇಲ್ಲೇ ಹುಟ್ಟಿದ್ದು. ಯಾವತ್ಗೂ ಹಿಂಗನಿಸಿರ‍್ಲಿಲ್ಲ. ಆದ್ರೆ ಇವತ್ ಬಾಳಾ ಬೇಜಾರಾಗ್ತೆ ಇದೆ. ಈ ಊರೇ ಬಿಟ್ಬಿಡಬೇಕ್ ಅನುಸ್ತ ಇದೆ. ಇವತ್ತು ಮನೆ ಸುಟ್ಟೇ ಬಿಡ್ತಾರೇನೋ ಅನಿಸ್ತಿದೆ. ನಾವ್ ತಪ್ಪುಸ್ಕಂಡು ಹೋಗುದಾದ್ರು ಹೇಗೆ? ಎಲ್ಲಿಗೆ? ಮನೇಲಿದ್ದ ಡಾಕ್ಯುಮೆಂಟ್ಸ್, ಹಣ, ವಡವೆ ಯಾರ ಮನ್ಲಿ ಇಡುವುದು? ಎಂಥ ಮಾಡುದು ಮೇಡಂ?’

ಎಂಥ ಮಾಡುವುದು?

ಕಲ್ಲು ಒಡೆದ ಗಾಜಿನ ತುಂಡೊಂದು ೬ ತಿಂಗಳ ಮಗುವಿನ ಗಲ್ಲ ತಾಕಿ ಛಿಲ್ಲಂತ ನೆತ್ತರು ಬಂತು. ಮಗುವಿನ ಅಮ್ಮ ಅಳುತ್ತಿದ್ದಾರೆ. ಅಜ್ಜಿ ಇನ್ನೇನು ಗತಿ ಕಾದಿದೆಯೋ ಎಂದು ಗಡಗಡ ನಡುಗಿ ಕುಸಿದಿದ್ದಾರೆ. ಐದು ದಿನದಿಂದ ಬಾಗಿಲು ಜಡಿದುಕೊಂಡು ಮನೆಯೊಳಗೇ ಕೂತುಕೂತು ಬೇಸರವಾದ ಮಗುವಿನ ಅಕ್ಕ, ‘ಅಳುದು ಯಂತಕೆ? ಆಸ್ಪತ್ರೆಗೆ ಯಾಕ್ ಹೋಗ್ತ ಇಲ್ಲ? ಕುಡಿಲಿಕ್ ಹಾಲು ಯಾಕ್ ಕೊಡ್ತ ಇಲ್ಲ? ನಾ ಯಾಕೆ ಹೊರಗೆ ಹೋಗಿ ಆಡ್ಬಾರ್ದು? ಶಾಲೆಗ್ ಯಾಕೆ ರಜ? ಅವ್ರು ಕಲ್ಲು ಯಾಕೆ ಹೊಡಿತಿದಾರೆ? ನಾವ್ ಏನು ತಪ್ಪು ಮಾಡಿದಿವಿ?’ ಇವೇ ಮೊದಲಾದ ಹತ್ತಾರು ಪ್ರಶ್ನೆಗಳ ಒಂದಾದಮೇಲೊಂದು ಕೇಳುತ್ತಿದ್ದಾಳೆ. ಅಮ್ಮ ಕೇಳುತ್ತಿದ್ದಾಳೆ, ‘ಹೇಳಿ ಮೇಡಂ, ನಾವು ಎಂಥ ಮಾಡುದು?’

ಎಂಥ ಮಾಡುವುದು?

ಅವರೆಲ್ಲ ಒಟ್ಟೊಟ್ಟಿಗೆ ಓದುತ್ತ ಬೆಳೆದವರು. ದೇವರು, ಧರ್ಮದ ಮಕ ನೋಡದೇ ಒಟ್ಟಿಗೇ ಜಾತ್ರೆಯಲ್ಲಿ ಬೆಂಡುಬತಾಸು, ಕಜಿಮಿಜಿ, ಜಿಲೇಬಿ ಸವಿದು ಯಕ್ಷಗಾನ ಆಟ ನೋಡಿದವರು. ಅವರೆಲ್ಲ ಜೊತೆಜೊತೆ ಡ್ರೈವಿಂಗ್ ಕಲಿತವರು, ಜೊತೆಜೊತೆಗೆ ಬೈಕು ಓಡಿಸಿದವರು, ಜೊತೆಜೊತೆಗೆ ಬಿರಿಯಾನಿ ತಿಂದು ಪಾರ್ಟಿ ಮಾಡಿದವರು. ಈಗ ಹಳೆಯ ಗೆಳೆಯರು ಧರ್ಮದ ಗುರುತು ಹಿಡಿದು ಉಲ್ಟಾ ತಿರುಗಿ ಬಿದ್ದಿರುವಾಗ, ಮನೆ ಸುಟ್ಟು ಬೂದಿ ಬೂದಿ ಮಾಡುವೆವೆನ್ನುವಾಗ ಅವ ಕೇಳುತ್ತಿದ್ದಾನೆ, ‘ಮೇಡಂ, ನ್ಯಾಯನಾ ಇದು? ಫ್ರೆಂಡ್ಸ್ ಮೇಲೆ ಕಂಪ್ಲೇಂಟ್ ಕೊಡಕ್ಕಾಗುತ್ತಾ? ನಾವೀಗ ಎಂಥ ಮಾಡುದು?’

ಎಂಥ ಮಾಡುವುದು?

ಅಪ್ಪನಿಲ್ಲದ ಬಡ ಸಂಸಾರ. ತುಂಬು ಸಂಸಾರ. ಅವರಿವರ ಬಳಿ ಸಾಲಸೋಲ ಮಾಡಿ ಅಮ್ಮ ಮೂರನೆಯ ಮತ್ತು ಕೊನೆಯ ಮಗಳಿಗೆ ದೇವಸ್ಥಾನದ ಬಳಿಯ ಛತ್ರದಲ್ಲಿ ಮದುವೆ ಎಬ್ಬಿಸಿದ್ದಳು. ಈಗ ನೋಡಿದರೆ ಊರಿಡೀ, ತಾಲೂಕು ಇಡೀ ಗಲಾಟೆ ಶುರುವಾಗಿದೆ. ದಿಬ್ಬಣ ಹೊರಡಲು ಕಳಿಸಬೇಕಾದ ಟೆಂಪೋದವ ಗಲಾಟೆ ಇರುವುದರಿಂದ ನಾಳೆ ಬೆಳಗಾತ ಅಲ್ಲಿ ಹೋಗಲು ಆಗುವುದಿಲ್ಲ ಎನ್ನುತ್ತಿದ್ದಾನೆ. ದೂರದಿಂದ ಬರಬೇಕಾದ ನೆಂಟರಿಷ್ಟರು ಬಸ್ಸು, ಟೆಂಪೋಗಳಿಲ್ಲದೆ ಬರಲು ಸಾಧ್ಯವಾಗದು, ಮದುವೆ ಮುಂದೆ ಹಾಕು ಎನ್ನುತ್ತಿದ್ದಾರೆ. ಗಂಡಿನ ಮನೆಯವರು ಯಾಕೋ ಶಕುನ ಸರಿಯಿಲ್ಲ, ನಾವು ದೇವರಲ್ಲಿ ಇನ್ನೊಮ್ಮೆ ಈ ಸಂಬಂಧದ ಬಗ್ಗೆ ಕೇಳಬೇಕು ಎನ್ನುತ್ತಿದ್ದಾರೆ.

ಸಾಲ, ಬಂಗಾರ, ವರದಕ್ಷಿಣೆ, ಛತ್ರ-ಊಟದ ಅಡ್ವಾನ್ಸ್.. ಅಯ್ಯೋ, ಮತ್ತೆ ಎಲ್ಲವನ್ನು ಇನ್ನೊಮ್ಮೆ ಮಾಡಬೇಕೆ? ಅಮ್ಮ ಕೇಳುತ್ತಿದ್ದಾಳೆ, ‘ಇಡಗುಂಜಿ ಮಾಗಣಪತಿ, ನನ್ನತ್ರ ಸಾದ್ದಿಲ್ಲೆ, ನಾ ಈಗ ಎಂಥ ಮಾಡುದು?

ಎಂಥ ಮಾಡುವುದು?



ಮನ್ನಿಸಿ, ಇವು ಸಾದತ್ ಹಸನ್ ಮಾಂಟೋನ ಕತೆಯ ತುಣುಕುಗಳಲ್ಲ.

ಇದ್ದಕ್ಕಿದ್ದಂತೆ ಒಂದು ದಿನ ಹೀಗೆಲ್ಲ ಆಯಿತು. ೨೦೧೭ರ ಡಿಸೆಂಬರ್ ತಿಂಗಳು ಬರುವವರೆಗೂ ಇದನ್ನು ಯಾರೂ ಊಹಿಸಿರಲಿಲ್ಲ. ಎಲ್ಲ ಸಮುದಾಯದವರು ಹಲವು ವರ್ಷಗಳಿಂದ ಚೆನ್ನಾಗಿಯೇ ಇದ್ದಂಥ ನಮ್ಮೂರಿನಲ್ಲಿ, ಹೊನ್ನೂರಿನಲ್ಲಿ ಹೀಗಾಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಎಲ್ಲೆಲ್ಲೋ ಕೋಮುಗಲಭೆಗಳಾದರೂ ಅದರ ಯಾವ ನೆರಳೂ ಬಿದ್ದಿರದ ನಮ್ಮೂರಲ್ಲಿ, ಅರಬಿ ಕಡಲಲ್ಲಿ ಶರಾವತಿ ಲೀನಗೊಂಡಷ್ಟು ಸಹಜವಾಗಿ ಎಲ್ಲ ಜನಸಮುದಾಯಗಳೂ ಒಂದಾಗಿದ್ದ ಊರಿನಲ್ಲಿ ಇಂಥ ಚಂಡಮಾರುತ ಬೀಸೀತೆಂದು ಯಾರೂ ಊಹಿಸಿರಲಿಲ್ಲ.

ಒಖಿ ಬಂದಿತ್ತು, ಹೋಯಿತು. ಅಂಥ ಎಷ್ಟೋ ಮುನ್ನ ಬಂದಿದ್ದವು, ಹೋಗಿದ್ದವು. ನಮ್ಮ ಕಡಲದಂಡೆ ಸುರಕ್ಷಿತವಾಗಿಯೇ ಇತ್ತು. ಬಟ್ ನಾಟ್ ಎನಿ ಮೋರ್. ಈಗ ಬೀಸುತ್ತಿರುವುದು ಅಸಲಿಗೆ ಚಂಡಮಾರುತವೋ, ಅಥವಾ ಕಡಲ ಮೇಲಣ ಗಾಳಿ ಭರಾಟೆಯೇ ಹೀಗಿದೆಯೋ ತಿಳಿಯುತ್ತಿಲ್ಲ. ಇದು ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ. ಪ್ರಮಾದಗಳು ಅಷ್ಟು ಸುಲಭದಲ್ಲಿ ಸರಿಯಾಗುವಂತೆ ಕಾಣುತ್ತಿಲ್ಲ.

ಯಾರ ನಂಬುವುದು? ಯಾರ ದೂರುವುದು?

ಒಡೆದದ್ದು ಜೋಡಿಸುವುದು ಬಲು ಕಷ್ಟ..

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರೆಡು ವಾರಗಳಿಂದ ಸಂಭವಿಸುತ್ತಿರುವ ಘಟನಾವಳಿಗಳು ಎಲ್ಲರಿಗೂ ನೋವು ತರುವಂಥವಾಗಿವೆ. ಒಂದು ತರಹದ ಅಸಹಾಯಕ ದಿಕ್ಕೇಡಿತನ ಹಲವರನ್ನು ಆವರಿಸಿದೆ. ಕೋಮುಚಕಮಕಿಯಾದ ದಿವಸ ನಾಪತ್ತೆಯಾಗಿ ೨ ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ತೇಲಿದ ೧೯ ವರ್ಷದ ಪರೇಶ್ ಮೇಸ್ತ ಎಂಬ ಹುಡುಗನ ಸಾವಿಗಾಗಿ ಜಿಲ್ಲೆಯಾದ್ಯಂತ ಜನ ಕಂಬನಿ ಮಿಡಿದಿದ್ದಾರೆ.

೧೯ ವರ್ಷ ಯಾರಿಗೂ ಸಾಯುವ ವಯಸ್ಸಲ್ಲ. ಭವಿಷ್ಯದ ನೂರಾರು ಕನಸುಗಳು, ಅವನ್ನು ಸಾಕಾರಗೊಳಿಸಿಕೊಳುವ ತೀವ್ರ ಜೀವನೋತ್ಸಾಹದ, ತಹತಹದ ಕಾಲ ಅದು. ಅಂಥ ವಯೋಮಾನದ ಪರೇಶ್ ಎಂಬ ಯುವಕನ ಸಾವು - ಯಾರಿಂದಲೇ, ಯಾವ ಕಾರಣದಿಂದಲೇ ಆಗಿದ್ದರೂ ಅತ್ಯಂತ ದುಃಖಕರ ಸಂಗತಿ. ಅದರಲ್ಲೂ ಶ್ರಮಿಕರ ಅವನ ಕುಟುಂಬಕ್ಕೆ ದುಡಿಯುವ ಹುಡುಗನ, ಪೀತಿಯ ಮಗನ ಸಾವಿನಿಂದ ಆಗಿರುವ ನಷ್ಟ, ಆಘಾತ ಯಾವ ಪರಿಹಾರದಿಂದಲೂ ತುಂಬುವುದು ಸಾಧ್ಯವಿಲ್ಲ. ಕರಾವಳಿಯ ಮನೆಗಳಲ್ಲಿ ಈ ಪರಿಸ್ಥಿತಿ ಮರುಕಳಿಸದೇ ಇರಲಿ. ಮಗನ ಕಳೆದುಕೊಂಡ ಅವನ ಹೆತ್ತವರ ದುಃಖ ಮತ್ತಾರಿಗೂ ಬಾರದೇ ಇರಲಿ.

ಎಂದೇ ಅವನ ಸಾವಿಗೆ ಕಾರಣವಾದವರನ್ನು ಪತ್ತೆ ಹಚ್ಚಿ, ತಪ್ಪಿತಸ್ಥರನ್ನು ಶಿಕ್ಷಿಸಲೇಬೇಕು. ಆ ಸಾವಿಗೆ ಕಾರಣವಾದ ಪರಿಸ್ಥಿತಿ ಮತ್ತೆ ಉದ್ಭವಿಸದಂತೆ ನೋಡಿಕೊಳ್ಳಲೇಬೇಕು.

ಪರೇಶನ ಸಾವಿನ ದಿಗ್ಭ್ರಮೆ ಒಂದು ಕಡೆಯಾದರೆ; ಎಳೆಯನ ಸಾವಿನ ಕುರಿತು ದುಃಖಗೊಂಡಿರುವ ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ಒಂದಾದಮೇಲೊಂದು ಕಡೆ ಸಂಭವಿಸುತ್ತಿರುವುದು ಮತ್ತಷ್ಟು ಆಘಾತ ನೀಡುವ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿ, ಪ್ರಚೋದನೆಗಳನ್ನೇ ಜನ ನಿಜವೆಂದು ನಂಬಿ ಹಿಂಸಾತ್ಮಕ ಕ್ರಿಯೆಗಿಳಿದಿದ್ದಾರೆ. ಪರೇಶನ ಸಾವಿಗಾಗಿ ಶೋಕಿಸುವವರು ತಮ್ಮ ಆಕ್ರೋಶವನ್ನು ಸಾರ್ವಜನಿಕ ಆಸ್ತಿಪಾಸ್ತಿ, ಅನ್ಯ ಕೋಮಿನ ಅಮಾಯಕರ ಮೇಲೆ ತೋರಿಸುತ್ತಿದ್ದಾರೆ. ಸಣ್ಣಪುಟ್ಟ ಹಳ್ಳಿಗಳನ್ನೂ ಕೋಮುದ್ವೇಷ, ಭಯ ಆವರಿಸತೊಡಗಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಾನವೀಯತೆ ಮೆರೆದವರ ಸುದ್ದಿಗಳೂ ಬರುತ್ತಿವೆ.

ಒಡೆಯುವುದು ಬಲು ಸುಲಭ. ಕೂಡಿಸುವುದು ತೀರಾ ಕಷ್ಟ. ಹೀಗಿರುತ್ತ ಪ್ರಚೋದನೆಗಳಿಂದ ವಿಭಿನ್ನ ಕೋಮಿನ ಜನರು ಒಬ್ಬರ ಮೇಲೊಬ್ಬರು ಹಗೆ ಸಾಧನೆಗೆ ತೊಡಗದಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಅವಸರದ ತೀರ್ಮಾನಗಳಿಗೆ ತಲುಪದೇ ನ್ಯಾಯ ಅನ್ಯಾಯಗಳ ಕುರಿತು ಯೋಚಿಸಿ ನಡೆದುಕೊಳ್ಳಬೇಕಾದ ತುರ್ತು ಇವತ್ತಿನ ಸಮಾಜಕ್ಕೆ ಇದೆ. ಆ ಮೂಲಕ ಪ್ರಾಕೃತಿಕ ಸೌಂದರ್ಯದ, ಶಾಂತಿಯ ನಾಡಾಗಿದ್ದ ಉತ್ತರ ಕನ್ನಡದಲ್ಲಿ ಸೌಹಾರ್ದದ ಬಾಳ್ವೆ ಮತ್ತೆ ನೆಲೆಗೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕೋಮಿನ ಮುಖಂಡರು, ಧಾರ್ಮಿಕ ವ್ಯಕ್ತಿಗಳು, ಸರ್ವ ಪಕ್ಷಗಳ ಮುಖಂಡರು, ಜನಪರ ಸಂಘಟನೆಗಳು ತಂತಮ್ಮ ಭೇದ ಮರೆತು ಸಮಾಜ ಮೊದಲಿನ ಶಾಂತ ಸ್ಥಿತಿಗೆ ಬರುವಂತೆ ಮಾಡಲು ಶ್ರಮಿಸಬೇಕು.

ನಾನುನೀನು ಅವರು ಇವರು ಮನುಜರಾಗಿ ಹುಟ್ಟಿದವರು
ಕೈಗೆ ಕೈ ಜೋಡಿಸು ಬಾ, ಹೊಸ ಜಗತ್ತು ನಮ್ಮದು.. 




1 comment:

  1. aapta baraha madam...pratiyondannu Dharmada kannadakada moolaka noduva manastiti hecchaguttide..idakkella antya endo...deepthi

    ReplyDelete