Sunday 6 January 2019

ಹೇಳಬೇಕಿತ್ತು ಅಂದೇ



ಇಂದೇಕೆ? ಅಂದೇ ಹೇಳಬೇಕಿತ್ತು ಎಂದೆಯಾ ತಂದೆ
ಕುಂಭ ಹಿಡಿದು ಮುಕಾಂಬೆಯಾಗಿ ಇರು ಎಂದಿರಿ
ಬಿರುಬಿಸಿಲಲೂ ಬರಿಗಾಲಲಿ ನಡೆ ಎಂದು ರಥವೇರಿದಿರಿ
ಹೇಳುವುದಾದರೂ ಹೇಗೆ? ಭೋಪರಾಕಿನ ಹೊರತು ಏನೂ ಕೇಳುವುದಿಲ್ಲ ನಿಮಗೆ

ಇಂದೇಕೆ, ಅಂದೇ ಹೇಳಬೇಕಿತ್ತು ಎಂದೆಯಾ ತಂದೆ
ಹುಶಾರ್, ಬಂದೀರಿ, ಪಟ್ಟಗತ್ತಿಗಳು ಕಾದಿವೆ ಎಂದಿರಿ
ಮೊಲೆಯೋನಿಗಳು ಸ್ರವಿಸುತಿವೆ ಗಿರಿಯನೇರಬೇಡ ಎಂದಿರಿ
ಕಠುವಾದ ದೇವತೆ ಕಣ್ಮುಚ್ಚಿ ಕಲ್ಲಾಗಿರುವಾಗ 
ಇಗರ್ಜಿಯ ಗೋಡೆ ಕಲ್ಲುಗಳೂ ನನ್ನ ಹೊರಲು ಶಿಲುಬೆಯಾಗಿರುವಾಗ 
ಅರಗಿನರಮನೆಯೇ ಸಿಂಗಾರೆವ್ವನ ಸುಟ್ಟು ಬೂದಿ ಮಾಡಿರುವಾಗ 
ಹೇಳುವುದಾದರೂ ಹೇಗೆ?
ಬೆಂಕಿ ಬೆಳಕು ಫರಕು ತಿಳಿಯಲಿಲ್ಲ ನಮಗೆ
ಕೈದೀಪ ಕಿಚ್ಚಾಗಿ ಸುಡುವುದೆಂದರಿವಾಗಲಿಲ್ಲ ನಮಗೆ

ಕೆಂಪು ನಿಮ್ಮದು ಹಳದಿ ನಿಮ್ಮದು
ಕೆಂಪು ಹಳದಿ ಬಣ್ಣ ಬಾವುಟಗಳೆಲ್ಲ ನಿಮದು 
ಕೆಂಪು ನಿಮ್ಮದು ಹಳದಿ ನಿಮ್ಮದು 
ಕೆಂಪು ಹಳದಿ ಪೇಟ, ಶಾಲು, ತುರಾಯಿಗಳೆಲ್ಲ ನಿಮದು
ನೆಲ ನಮ್ಮದಲ್ಲ ನಾವು ನೆಲದವರು
ಗಡಿ ನಮಗಿಲ್ಲ ನಾವು ನುಡಿಯವರು 
ತೇರು ನಮದಲ್ಲ ನಾವು ಕನ್ನಡಮ್ಮನ ಒಕ್ಕಲು
ಕಿತ್ತೂರಿನ ಕತ್ತಿ ಕಿತ್ತಿರಿ ದುರ್ಗದ ಒನಕೆ ಒಗೆದಿರಿ
ಬೆಳವಡಿಯ ಪತಾಕೆ ಸುಟ್ಟಿರಿ
ಇಂದೇಕೆ? ಅಂದೇ ಹೇಳಬೇಕಿತ್ತು ಎಂದರೆ 
ಹೇಳುವುದಾದರೂ ಹೇಗೆ? ಎದೆ ನೆಲದ ಭಾಷೆ ತಿಳಿಯುವುದೇ ಇಲ್ಲ ನಿಮಗೆ
ಅದೆಷ್ಟು ಹೆಣ್ಣುಗಳ ನೆತ್ತರ ಕುಡಿದಿದೆಯೋ ಈ ನೆಲ 
ದಾಸವಾಳ ಇನ್ನೆಲ್ಲೂ ಇಲ್ಲದಷ್ಟು ಕೆಂಪಾಗಿ ಅರಳಿದೆ..

ಇಂದೇಕೆ? ಅಂದೆ ಕೊಡಿಸಬಹುದಿತ್ತು ನ್ಯಾಯ ಎಂದೆಯಾ ತಂದೆ
ನ್ಯಾಯವೆಂದರೆ ಎದುರಿರುವವರ ಶಿಕ್ಷಿಸುವುದೆ? 
ಮಾಗಿ ಋತು ಕರುಣದ ಕೊನೆ ಹನಿಗಳನುದುರಿಸಿದೆ
ಮೆಟ್ಟುವವರೆದುರೇ ತಲೆಯೆತ್ತಿ ಬೆಳೆಯುವೆವು ಗರುಕೆಯಂತೆ

ಬಾಬಾ ಇದ್ದಾರೆ ನಮಗೆ ಬಾಪು ಇದ್ದಾರೆ ನಮಗೆ 
ಸಾವಿತ್ರಿ ಇದ್ದಾಳೆ ನಮಗೆ ಕರುಣದ ಗುರು ಇದ್ದಾನೆ ನಮಗೆ
ಮಾತು ಕಸಿದೀರಿ ಮೌನ ಕಸಿಯಬಹುದೆ 
ಹಾಡು ನಿಲಿಸೀರಿ ಎದೆಗವಿತೆ ಅಳಿಸಬಹುದೆ
ದೀಪ ಕಸಿದೀರಿ ಬೆಳಕು ತಡೆಯಬಹುದೆ
ಬರೆಯಲಿದ್ದೇವೆ ಪ್ರೀತಿ ಚಿತ್ತಾರ ಖಾಲಿ ಕುಂಭಗಳ ಮೇಲೆ 
ತುಂಬಲಿದ್ದೇವೆ ಕುಂಭ ಹೊತ್ತ ಅಕ್ಕಂದಿರೆದೆಗಳಲಿ ದಿಟದ ದಿಟ್ಟ ಕವಿತೆ

ಯಾರೆಂದವರು ಮರ ಅಚಲವೆಂದು?
ಅದು ನಿಂತಲ್ಲೆ ಪ್ರತಿಕ್ಷಣ ನಡೆಯುವುದು..
ಕೈಗೆಕೈ ಜೋಡಿಸಿ ಮೆರವಣಿಗೆ ಹೊರಡಲಿದ್ದೇವೆ ತಂದೆ
ಬಣ್ಣ ಬಾವುಟ ಪೇಟ ಹಾರ ತುರಾಯಿಗಳೆಲ್ಲ ಇರಲಿ ನಿಮಗೆ
ನಾವು, ಈ ನೆಲದ ಹೆಣ್ಣುಗಳು, ಅದೋ ನೋಡಿ,
ಕೈಗೆಕೈ ಜೋಡಿಸಿ ಮೆರವಣಿಗೆ ಹೊರಟಿದ್ದೇವೆ
ಧನ್ಯವಾದ ನಿಮಗೆ ಕೊಟ್ಟಿರುವ ಎಳ್ಳುಕಾಳಿಗೆ, ಕಸಿದುಕೊಂಡ ಕುಂಬಳಕ್ಕೆ
ಧನ್ಯವಾದ ನಿಮಗೆ, ನಮ್ಮ ದಾರಿ ನಮಗೆ ತೋರಿಸಿದ್ದಕ್ಕೆ..
ಧನ್ಯವಾದ ನಿಮಗೆ, ನಮ್ಮ ದಾರಿಯೇನೆಂದು ನಮಗೆ ನೆನಪಿಸಿದ್ದಕ್ಕೆ..


(ವರ್ಣ ಚಿತ್ರ ಕೃಪೆ - ಅಂತರ್ಜಾಲ)

11 comments:

  1. ತುಂಬಾ ಅದ್ಭುತವಾಗಿ ಮಾರ್ಮಿಕವಾಗಿ ಮೂಡಿಬಂದಿದೆ.

    ReplyDelete
  2. ಚೆಂದ ಬಂದಿದೆ ಅನುಪಮಾ, ನಮ್ಮೆಲ್ಲರ ಸಿಟ್ಟನ್ನು ಪ್ರೀತಿಯ ಹನಿಯಾಗಿಸಿ ಹೊರ ಹಾಕಿದ್ದೀರಿ. ಅಭಿನಂದನೆಗಳು!

    ReplyDelete
  3. ಅರ್ಥಗರ್ಭೀತ ಕವನ. ಹೇಳಲೇಬೇಕಾದ ಸತ್ಯಗಳೂ ಹೌದು...
    ಅಭಿನಂದನೆಗಳು ಮೇಡಂ.

    ReplyDelete
  4. ಹೇಳಲೇಬೇಕಾಗಿದ್ದುದೆಲ್ಲವೂ ಇದೆ

    ReplyDelete
  5. ಸಮ ಚಿತ್ತದ ಪ್ರತಿರೋದ. Great.

    ReplyDelete
  6. ಪ್ರತಿಭಟನೆ ಬದಲಿಮಾರ್ಗ ಕಂಡುಕೊಳ್ಳುವುದೇ ಆಗಿರುತ್ತದೆ.ಸಂವೇದನಾಶೀಲ ಪ್ರತಿಭಟನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದೀರಿ.ಪ್ರೀತಿಯ ಅಭಿನಂದನೆಗಳು.

    ReplyDelete
  7. ಅಕ್ಕ, ಪೂರ್ಣ ಕುಂಭದ ವಿರುದ್ಧ ಪ್ರತಿಭಟಿಸಿದಾಗಲೇ ನಿಮ್ಮಿಂದ ಅದೇ ವಿಷಯದ ಬಗ್ಗೆ ಯಾವುದಾದರೂ ಕವನ ಇರುತ್ತೆ ಅಂತ ನಿರೀಕ್ಷೆ ಮಾಡಿರುತ್ತಾರೆ.ಆದರೆ ಕವನದಲ್ಲಿ ಬಳಸಿರುವ ಪದಗಳನ್ನು ನಿರೀಕ್ಷೆ ಮಾಡಿರಲಿಕ್ಕೆ ಸಾಧ್ಯವೇ ಇಲ್ಲ. ಬಳಸಿರುವ ಪದಗಳು ಪೂರ್ಣ ಕುಂಭದ ವಿರುದ್ಧದ ನಿಲುವುಗಳನ್ನು ಸಮರ್ಥವಾಗಿ ತಿಳಿಸುತ್ತವೆ. ಕವನದಲ್ಲಿ ಬಳಸಿರುವ ತಂದೆ ಮತ್ತು ಖಾಲಿ ಕುಂಭಗಳ ಮೇಲೆ ಪ್ರೀತಿಯ ಚಿತ್ತಾರ ಬರೆಯುವೆವು ಎಂಬುದು ನನಗೆ ಇಷ್ಟವಾಯಿತು. ಮಂಜುಳಾ ಹೆಚ್, ಟೇಕ್ ಕೇರ್ ಅಕ್ಕ.

    ReplyDelete
  8. Beautiful , all our frustration, aspiration reflected. Most appropriate Thank you

    ReplyDelete
  9. ನೀವು ಹೇಳಿದ್ದು ಸರಿ ನ್ಯಾಯವೆಂದರೆ ಎದುರಿನವರನ್ನು ಶಿಕ್ಷಿಸುವುದಲ್ಲ ಮುಂದೆ ತಪ್ಪಾಗದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ.
    ನೇರವಾಗಿ ಕಲ್ಲೆಸೆದರೆ ತಪ್ಪಾದೀತು ಪ್ರತಿಭಟನೆಯಾದೀತು ರೇಶಿಮೆ ಶಾಲಿನಲ್ಲಿ ಕಲ್ಲುಕಟ್ಟಿ ಹೊಡೆಯುವುದೆ ಸೂಕ್ತ..ಗೌರವಕ್ಕೆ ರೇಶಿಮೆಶಾಲು ತಪ್ಪರಿವಾಗಲು ಕಲ್ಲು ಎರಡೂ ಸಂದಾಯವಾಗುತ್ತದೆ.. ಆದರೆ ಮೈಗೂ ಮನಸಿಗೂ ಹಚ್ಚಿಕೊಂಡ ಹರಳೆಣ್ಣೆಯ ದಪ್ಪ ಎಷ್ಟಿದೆ ಅನ್ನುವುದರಲ್ಲಿ ಇದೆ ತಪ್ಪಿನರಿವಾಗುವ ಹಾಗು ತಪ್ಪನ್ನ ಒಪ್ಪಿಕೊಳ್ಳುವ ವಿಷಯ...

    ReplyDelete
  10. ಸಮಯೋಚಿತವಾಗಿದೆ,ಸರ್ವಕಾಲಿಕವೂ ಆಗಿದೆ.

    ReplyDelete