Sunday 22 March 2020

ಕೋವಿಡ್ - 19 ಕೋಲಾಹಲ





ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು. ಇಣುಕಿ ನೋಡುತ್ತಿದ್ದರು. ಆದರೆ ಈಗ ಬಂದವರು ತಾವು ಕೋವಿಡ್-೧೯ ಪರೀಕ್ಷೆಯಲ್ಲಿ ನೆಗೆಟಿವ್ ಇದ್ದೇವೆಂದು ಪ್ರಮಾಣಪತ್ರ ತೋರಿಸಿದರೂ ಕೇಳದೇ ಆ ಜೋಡಿಯನ್ನು ಅಟ್ಟಾಡಿಸಿ ಬೈದು, ಪೊಲೀಸರ ಕರೆದು, ಆಂಬುಲೆನ್ಸಿನಲ್ಲಿ ಕೂಡಿ ಹಾಕಿ ಊರು ಬಿಟ್ಟೋಡಿಸಿದರು. ಅಷ್ಟೇ ಅಲ್ಲ, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಆ ಜೋಡಿಯ ಭಾವಚಿತ್ರ ಹಂಚಿಕೊಂಡು ಅವರನ್ನು ಯಾರೂ ನಿಮ್ಮ ಊರುಗಳೊಳಗೆ ಬಿಟ್ಟುಕೊಳ್ಳಬೇಡಿ ಎಂದು ಪ್ರಚಾರ ಮಾಡಿದರು.

ಮಂಡ್ಯದ ಹೊರಭಾಗದಲ್ಲಿ ನಾರುಬೇರುಗಳ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಹೊತ್ತು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಬಂದ ಹಕ್ಕಿಪಿಕ್ಕಿ ಸಮುದಾಯದ ಅಲೆಮಾರಿಗಳು ತಮ್ಮ ನೆಲೆಗೆ ವಾಪಸಾದದ್ದೇ ಉಳಿದವರು ಭಯಭೀತರಾದರು. ಹಕ್ಕಿಪಿಕ್ಕಿ ಟೆಂಟುಗಳೊಳಗೆ ಅಲ್ಲೋಲಕಲ್ಲೋಲವಾಯಿತು. ಕೊನೆಗೆ ವಿದೇಶದಿಂದ ಹಿಂದಿರುಗಿದವರಿಗೆ ಬೇರೆ ವ್ಯವಸ್ಥೆ ಮಾಡುವಂತಾಯಿತು.

ಮತ್ತೊಂದೆಡೆ ಭಾರತದ ಹಳ್ಳಿ, ನಗರ, ಕೇರಿಗಳಲ್ಲಿ ಟಿವಿ, ಜಾಲತಾಣಗಳಿಂದ ಕರೋನಾ ಅತಿಸುದ್ದಿಯಿಂದ ಭಯದ ವ್ಯಾಧಿ ಹರಡತೊಡಗಿದೆ. ಹೊರಗೆ ಹೋಗಬೇಡಿ. ಮುಟ್ಟಬೇಡಿ. ಮನೆಗೆ ಕರೆಯಬೇಡಿ. ಕೆಮ್ಮುವವರ ಬಳಿ ನಿಲ್ಲಬೇಡಿ ಎಂಬಿತ್ಯಾದಿ ಬೇಡಗಳ ನಡುವೆ ಆಗಲೇ ವ್ಯಕ್ತಿಗಳ ನಡುವಿರುವ ದೂರ ವಿಸ್ತಾರವಾಗತೊಡಗಿದೆ.

‘ಅಯ್ಯೋ, ತಂಡಿಕೆಮ್ಮ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ರಕ್ತ ಟೆಸ್ಟ್ ಮಾಡಿ ಕಡೆಗೆ ೧೪ ದಿನ ಕ್ವಾಣೇಲಿ ಕೂಡಿ ಹಾಕ್ತಾರಂತೆ’ ಎಂಬ ಹೆದರಿಕೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಕೆಲವರು ಹೆದರಿದರೆ; ತಂತಮ್ಮ ಮನೆಯ ಮದುವೆ, ತೀರ್ಥಯಾತ್ರೆ, ಧಾರ್ಮಿಕ ಕಾರ್ಯಗಳೆಲ್ಲವನ್ನು ರದ್ದು ಮಾಡಿದ್ದಾರೆ ಮತ್ತೆ ಕೆಲವರು. ಶಾಲೆಯೂ ಇಲ್ಲದೆ, ಪರೀಕ್ಷೆಯೂ ಇಲ್ಲದೇ ಪಾಸಾಗಿ ಮುಂದಿನ ತರಗತಿಗೆ ಹೋದ ಮಕ್ಕಳು ಸಮಯ ಕಳೆಯಲು ಹೊಸಹೊಸ ಯೋಜನೆಗಳನ್ನು ಹಾಕತೊಡಗಿವೆ. ‘ಅರೆ, ಎಲ್ಲಾದರೂ ಸಾಧ್ಯವೇ? ಸಾಧ್ಯವೇ ಇಲ್ಲ’ ಎನ್ನುವಂತಹುದೆಲ್ಲ ತಂತಾನೇ ಅನಿವಾರ್ಯವಾಗಿ, ಸಾಧ್ಯವೂ ಆಗಿ ಏರ್‌ಪೋರ್ಟುಗಳು, ಮಾಲುಗಳು, ದೇವಳ-ಆಶ್ರಮ-ಮಠಗಳು, ಹೋಟೆಲು ಬೀಚುಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಗುಡಿಸಲು-ಟೆಂಟು-ಸ್ಲಮ್ಮುವಾಸಿಗಳು, ಕೂಲಿಗಳು, ಮನೆದೇವಿಯರು ತಂತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ.

ಇಷ್ಟೆಲ್ಲ ಉಲ್ಟಾಪಲ್ಟಾ, ಕೋಲಾಹಲ, ಅಸಂಭವ ಸಂಭವ ಆಗುತ್ತಿರುವುದಾದರೂ ಏತಕ್ಕೆ? ಭಯಕ್ಕೆ, ಪ್ರಾಣಭಯಕ್ಕೆ. ನಿಜ. ಜೀವಿಗಳ ಚಟುವಟಿಕೆಯನ್ನೆಲ್ಲ ನಿಯಂತ್ರಿಸುವ ಮುಖ್ಯ ಚಾಲನಾ ಶಕ್ತಿ ಭಯ ಎನ್ನುವುದು ಮತ್ತೆ ಸಾಬೀತಾಗಿದೆ. ಅದರಲ್ಲೂ ಪ್ರಾಣಭಯ ಆವರಿಸಿಕೊಂಡಿತೆಂದರೆ ಯಮನಿಯಮಗಳು ಮರೆತು ಹೋಗುತ್ತವೆ. ಸಂಬಂಧಗಳು ಕಾಣೆಯಾಗುತ್ತವೆ. ಎತ್ತ, ಏನುಗಳು ಸತ್ತು ಹೋಗುತ್ತವೆ. ನಾವೆಳೆದ ಗಡಿಗಳೆಂಬ ಹುಸಿರೇಖೆಗಳು ತಂತಾವೇ ಅಳಿಸಿ ಹೋಗುತ್ತವೆ. ಜೈಲುಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ತಮ್ಮ ಮೇಲೆ ತಾವೇ ಆರೋಪಿಸಿಕೊಂಡ ಹುಸಿ ಶಕ್ತಿಗಳೆಲ್ಲ ಕರಗಿಹೋಗಿ ಸುಮ್ಮಸುಮ್ಮನೆ ‘ಮಹಾನ್’ ಆದವರು ಬೆತ್ತಲಾಗಿ ನಿಜಸ್ವರೂಪ ಬಯಲಾಗುತ್ತದೆ. ಸರ್ವಾಧಿಕಾರಿಯಿಂದ ಹಿಡಿದು ಬೀದಿ ಬದಿಯ ಭಿಕಾರಿಯವರೆಗೂ; ಪರಮಾಣು ಶಸ್ತ್ರಾಸ್ತ್ರ ಹೊಂದಿದವರಿಂದ ಹಿಡಿದು ಚಿಂದಿ ಆಯುವವರವರೆಗೆ ಪ್ರಾಣಭಯ ಆವರಿಸಿದಾಗ ಎಲ್ಲರಿಗೂ ಬದುಕುಳಿವ ಹಂಬಲದ ಹೊರತು ಮತ್ತೆಲ್ಲ ಮರೆತುಹೋಗುತ್ತದೆ.

ಹೌದು. ಕೋವಿಡ್-19 ವೈರಸ್‌ನಿಂದ ಹರಡುತ್ತಿರುವ ಕಾಯಿಲೆ ಮತ್ತು ಮರಣ ಭೀತಿ ಇಡಿಯ ವಿಶ್ವವನ್ನೇ ಆವರಿಸಿದ ೨೦೨೦ರ ಮಾರ್ಚ್ ಹೊತ್ತಿಗೆ ಗಡಿ, ಮೂರ್ತಿ, ಸ್ಮಾರಕ, ಮಾಲು, ಮಹಲು, ಫ್ಯಾಷನ್, ಯುದ್ಧ, ದಂಗೆಗಳೇ ಮೊದಲಾದ ಮನುಷ್ಯ ಅಹಂಕಾರದ ನಿರ್ಮಿತಿಗಳೆಲ್ಲಾ ತಾತ್ಕಾಲಿಕವಾಗಿಯಾದರೂ ಪೊಳ್ಳು ಎಂದೆನಿಸುವಂತೆ ಅಣುರೇಣುತೃಣವೊಂದು ನಿವಾಳಿಸಿ ಬಿಸಾಡಿದೆ. ಲಕ್ಷ ಕೋಟಿ ರೂಪಾಯಿಗಳನ್ನು ಗಾಳಿಯಲ್ಲೇ ಸೃಷ್ಟಿಸುವ ಷೇರು ಮಾರುಕಟ್ಟೆ ಎಂಬ ಮಾಯಾನಗರಿ ಮೇಣದರಮನೆಯಂತೆ ಕರಗಿ ಹೋಗುತ್ತಿದೆ. ಯಾವುದೂ ಬೇಡ, ಯಾರಿಗೂ ಬೇಡವೆನುವಂತಹ ತಾತ್ಕಾಲಿಕ ಸ್ಮಶಾನ ವೈರಾಗ್ಯ ಆವರಿಸಿದಂತಿದೆ. ಧರ್ಮಗುರುಗಳ ಸಾಕ್ಷಿಯಿಲ್ಲದೆ ಎಲ್ಲ ಶವಗಳನ್ನೂ ಮಿಲಿಟರಿ-ಮುನ್ಸಿಪಾಲಿಟಿ ಲಾರಿಗಳು ಹೊತ್ತೊಯ್ದು ವಿದ್ಯುತ್ ಚಿತಾಗಾರದಲ್ಲಿ ಸುಟ್ಟುಬಿಡುತ್ತಿವೆ. ಧರ್ಮ-ಜಾತಿ ಭೇದವಿಲ್ಲದೆ ಬದುಕಿರುವವರನ್ನೂ, ಮರಣಿಸಿದವರನ್ನೂ ವೈರಸ್ ಆವರಿಸಿಕೊಂಡಿದೆ.





ಎರಡು ಕಾಲಿನವರ ಸಾಧನೆ ಏನೇ ಇರಲಿ, ಪ್ರಕೃತಿಯೆದುರು ಎಲ್ಲವೂ ತೃಣವೇ, ನಿಜ ದೈವ ಪ್ರಕೃತಿಯೇ ಎಂಬ ಪಾಠ ಮತ್ತೆಮತ್ತೆ ಕಲಿಯಬೇಕಾಗಿದೆ.

ವೈರಸ್ ಎಂಬ ವಿಸ್ಮಯ-ಅಪಾಯ

ಆನೆ, ತಿಮಿಂಗಿಲಗಳಿಂದ ಹಿಡಿದು ಬ್ಯಾಕ್ಟೀರಿಯಾಗಳಂತಹ ಏಕಕೋಶ ಜೀವಿಗಳ ತನಕ ಜೀವಿಗಳಿಗೆ ನಾನಾ ಕಾಯಿಲೆಗಳನ್ನುಂಟುಮಾಡುವ; ಏಡ್ಸ್, ಪೋಲಿಯೋ, ದಡಾರ, ಸಿಡುಬು, ಮೈಲಿಬೇನೆ, ಕಾಮಾಲೆ, ವಾಂತಿಭೇದಿ, ರುಬೆಲ್ಲಾ, ಇನ್‌ಫ್ಲುಯೆಂಜಾ, ಹಂದಿಗೋಡು ಕಾಯಿಲೆ, ಮಂಗನ ಕಾಯಿಲೆ, ಮಂಗನಬಾವು ಮತ್ತಿತರ ನೂರಾರು ಕಾಯಿಲೆಗಳಿಗೆ ಕಾರಣವಾದ ವೈರಸ್‌ಗಳು ಬಲು ವಿಚಿತ್ರ, ವಿಶಿಷ್ಟ ಅಪಾಯಕಾರಿ ಕಣಗಳು. ಪಕ್ಷಿ, ಪ್ರಾಣಿ, ಗಿಡ, ಶಿಲೀಂಧ್ರ, ಬ್ಯಾಕ್ಟೀರಿಯಾ ಇತ್ಯಾದಿ ಬೇರೊಂದು ಜೀವಿಯ ಜೀವಕೋಶದೊಳಗೆ ಮಾತ್ರ ಬದುಕಬಲ್ಲ ಸೂಕ್ಷ್ಮಾಣುಗಳು ಅವು. ಇತ್ತ ‘ಜೀವಿ’ಯೂ ಅಲ್ಲ. ಅತ್ತ ‘ಅಜೀವಿ’ಗಳೂ ಅಲ್ಲ. ಜೀವಿ ಅಜೀವಿಗಳ ನಡುವಿರುವ ಅತ್ಯಂತ ಸರಳ, ಅತಿ ಸಣ್ಣ ಕಣ ವೈರಸ್ ಸಂಪೂರ್ಣ ಬೇರೆ ಜೀವಕೋಶವನ್ನು ಅವಲಂಬಿಸಿರುವಂಥವು.

ವೈರಸ್ಸುಗಳ ಗಾತ್ರ ಬಲು ಕಿರಿದು. ಎಲ್ಲೋ ಕೆಲವನ್ನು ಹೊರತುಪಡಿಸಿದರೆ ಎಲ್ಲವೂ ಬ್ಯಾಕ್ಟೀರಿಯಾಗಿಂತ ಸಣ್ಣವು. ಪೋಲಿಯೋ ವೈರಸ್ ಉಪ್ಪಿನ ಒಂದು ಕಣದ 10 ಸಾವಿರದಲ್ಲಿ ಒಂದನೇ ಭಾಗದಷ್ಟು ಗಾತ್ರದ್ದು; ಕೋವಿಡ್ ಐದು ಸಾವಿರದ ಒಂದು ಭಾಗದಷ್ಟು ದೊಡ್ಡದು. ವೈರಸ್ಸುಗಳಿಗಿಂತ ಬ್ಯಾಕ್ಟೀರಿಯಾಗಳು 8-10 ಪಟ್ಟು ದೊಡ್ಡದಿರುತ್ತವೆ. 1931ರಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಂಡುಹಿಡಿದ ಮೇಲೆಯೇ ನಾವು ವೈರಸ್ಸುಗಳನ್ನು, ಅವುಗಳ ರೂಪರಚನೆಯನ್ನು ಕಂಡದ್ದು.

ಪ್ರಾಣಿಗಳ ದೇಹದಲ್ಲಷ್ಟೇ ಇರುವ ಕೆಲವು ವೈರಸ್‌ಗಳು ಮನುಷ್ಯರನ್ನು ತಲುಪಿ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗೆ ಏಡ್ಸ್ ಕಾಯಿಲೆ ದಕ್ಷಿಣ ಆಫ್ರಿಕಾದ ಚಿಂಪಾಂಜಿಗಳಿಂದ; ಸಾರ‍್ಸ್ ಕಾಯಿಲೆ ಸಿವೆಟ್ ಬೆಕ್ಕುಗಳಿಂದ; ಕೆಎಫ್‌ಡಿ ಮಂಗಗಳಿಂದ; ಮರ‍್ಸ್-2019 ಒಂಟೆಗಳಿಂದ; ಈಗ ಕೋವಿಡ್-೧೯ ಬಾವಲಿಗಳಿಂದ ಬಂದಂಥವು. ಶ್ವಾಸನಾಳ, ಬಾಯಿ, ಗಂಟಲು, ಚರ್ಮ, ಲೈಂಗಿಕ ಅಂಗಾಂಗಗಳು, ಕೀಟದ ಕಡಿತ ಮುಂತಾದ ಮಾರ್ಗಗಳಿಂದ ಮಾನವ ದೇಹದೊಳಗೆ ಪ್ರಾಣಿ ವೈರಸ್‌ಗಳು ಹೊಕ್ಕಿಬಿಡುತ್ತವೆ. ಮುಖ ನೆಕ್ಕಿದ ಒಂಟೆ, ತಲೆಮೇಲೆ ಹತ್ತಿದ ಮಂಗ, ಕಾಲಸಂದಿ ತೂರಿಕೊಳುವ ಬೆಕ್ಕು, ರೋಗವಾಹಕ ಜೀವಿಯ ಅರೆಬೆಂದ ಮಾಂಸದಡುಗೆ, ತರಕಾರಿ-ಮಾಂಸದ ಮಾರುಕಟ್ಟೆಗಳಲ್ಲಾಗುವ ಮನುಷ್ಯ-ಪ್ರಾಣಿ ಸಂಪರ್ಕ - ಇವೇ ಮೊದಲಾದ ಕಾರಣಗಳಿಗೆ ಮನುಷ್ಯರಲ್ಲಿ ಪ್ರಾಣಿಯ ವೈರಸ್ ಸೇರಿಬಿಡಬಹುದು. ಹಾಗೆಯೇ ಇಕೋ ಟೂರಿಸಂ, ಅತಿಕ್ರಮಣ, ಒತ್ತುವರಿ, ವಲಸೆಗಳಿಂದ ಪ್ರಾಣಿಗಳಿಗೆ ನಮ್ಮ ವೈರಸ್‌ಗಳನ್ನು ನಾವೂ ದಾಟಿಸುತ್ತಿರಬಹುದು.

ನವೆಂಬರ್ 2019ರಿಂದ ಇದುವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನರನ್ನು ಕೊಂದಿರುವ ಮರ‍್ಸ್ ತಾನು ಅಂಟಿದ 30% ಜನರನ್ನು ಕೊಂದು ಹಾಕುವಷ್ಟು ಅಪಾಯಕಾರಿ. ಈಗ ಬಂದೆರಗಿರುವ ಕೋವಿಡ್-೧೯ರ ಸ್ವಭಾವ ನಮಗಿನ್ನೂ ತಿಳಿದಿಲ್ಲ. ಈ ಬರಹ ಬರೆಯುತ್ತಿರುವ 22-3-20ರ ಮಧ್ಯಾಹ್ನದವರೆಗೆ ಕೋವಿಡ್-19 ನಿಂದ 3,12,500  ರೋಗಿಗಳು ಬಾಧಿತರಾಗಿದ್ದರೆ 13,424 ಜನ ಮರಣ ಹೊಂದಿದ್ದಾರೆ. ಮೂರು ತಿಂಗಳಲ್ಲಿ ಅಂಟಾರ್ಕ್ಟಿಕಾ ಬಿಟ್ಟು ಎಲ್ಲ ಖಂಡಗಳಿಗೂ ಅದು ಹರಡಿದೆ. 167ಕ್ಕಿಂತ ಹೆಚ್ಚು ದೇಶಗಳಲ್ಲಿ ಕೋವಿಡ್‌ನ ಸೋಂಕಿದೆ. ಈಗದು ಯೂರೋಪ್ ಕೇಂದ್ರಿತ. ಇಟಲಿ, ಇರಾನ್, ಸ್ಪೇನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಮರಣ ಪ್ರಮಾಣ 3.4 % ಇದೆ.



ಏನಿದು ಕರೋನಾ, ಕೋವಿಡ್?

ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನುಂಟುಮಾಡುವ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಹೊಸವರ್ಷ ಕೊಡುತ್ತಿರುವ ಕೊಡುಗೆಯೋ ಎಂಬಂತೆ ರೋಗಕಾರಣವಾದ ‘ಹೊಸ ಕರೋನಾ ವೈರಸ್’ ಪತ್ತೆಯಾಯಿತು. ವುಹಾನ್‌ನ ಕಡಲ ಆಹಾರಪದಾರ್ಥಗಳ ಸಗಟು ಮಾರುಕಟ್ಟೆಯಿಂದ ಅದು ಹರಡಿದೆ ಎನ್ನಲಾಯಿತು. ಬಾವಲಿಗಳ ದೇಹಲ್ಲಿರುವ ಕರೋನಾ ವೈರಸ್‌ಗೆ 96% ಸಾಮ್ಯತೆ ಇರುವ ವೈರಾಣು ರೋಗಿಗಳಲ್ಲಿ ಪತ್ತೆಯಾಯಿತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಯ ಮಾರಾಟ ಇಲ್ಲದಿದ್ದ ಕಾರಣ ಪ್ಯಾಂಗೊಲಿನ್‌ನಂತಹ ಮಧ್ಯವರ್ತಿ ಪ್ರಾಣಿಯಿಂದ ಅಥವಾ ಮಾರುಕಟ್ಟೆಯಲ್ಲಿದ್ದ ಹಾವಿನ ಮಾಂಸದಿಂದ ಅದು ಬಂದಿರಬಹುದೆಂದು ಶಂಕಿಸಲಾಯಿತು. ಕೊನೆಗೆ ಅದಕ್ಕೆ ಕೋವಿಡ್-19 ಎಂಬ ನಾಮಕರಣ ಮಾಡಿದರು. ಇಲ್ಲಿಯವರೆಗೆ ಗೊತ್ತಿರದ ಹೊಸ ವೈರಸ್ ಆಗಿದ್ದರಿಂದ ‘ನೊವೆಲ್’ ವೈರಸ್ ಎಂದು ಕರೆಸಿಕೊಂಡಿತು.

ಸೂರ್ಯನ ಚಿತ್ರ ಬರೆವಾಗ ಉರೂಟು ಸೊನ್ನೆಯ ಸುತ್ತ ಪ್ರಭೆ ಬರೆಯುತ್ತಿದ್ದೆವು, ನೆನಪಿದೆಯೆ? ಅದು ಸೌರ ಕರೋನಾ. ಅಂಥದೇ ರಚನೆಯನ್ನು ಮೈತುಂಬ ಹೊದ್ದಿರುವಂಥವು ಕರೋನಾ ವೈರಸ್‌ಗಳು. ಎಲ್ಲ ರೀತಿಯ ಕರೋನಾ ವೈರಸ್ಸುಗಳೂ ಮಾರಣಾಂತಿಕವಲ್ಲ. ಕೆಲವು ನೆಗಡಿ, ಕೆಮ್ಮು, ಸಣ್ಣ ಜ್ವರಕ್ಕೆ ಮುಗಿದುಹೋಗುತ್ತವೆ. ಹೊಸಋತುವಿನ ಆರಂಭದ ದಿನಗಳ ತಂಡಿ, ಸಣ್ಣಜ್ವರ, ಗಂಟಲುರಿ ಕರೋನಾದಿಂದ ಆಗಿರುವ ಸಾಧ್ಯತೆಯೂ ಇದೆ. ಎಲ್ಲೋ ಕೆಲವೊಮ್ಮೆ ದುಷ್ಟತನವನ್ನೆಲ್ಲ ಆವಾಹಿಸಿಕೊಂಡುಬರುವ ಕೇಡಿಗ ತಳಿಗಳು ಹುಟ್ಟಿಬಿಡುತ್ತವೆ. ಈಗ ಚಾಲ್ತಿಯಲ್ಲಿರುವ ಮರ‍್ಸ್-೨೦೧೯, ಕೋವಿಡ್-೧೯ ಅಂತಹವು.

10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದ ಕರೋನಾ ವೈರಸ್ ಬಿಸಿರಕ್ತದ ಬೆನ್ನೆಲುಬಿರುವ ಪ್ರಾಣಿಗಳು, ಹಕ್ಕಿ, ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು. ಹಂದಿ, ದನ, ಕೋಳಿ, ನಾಯಿ, ಫೆರೆಟ್, ಕುದುರೆ, ಟರ್ಕಿ, ಬೆಕ್ಕು, ಮೊಲಗಳಲ್ಲಿ ಶೀತ, ಭೇದಿ, ಕರುಳಿನ ತೊಂದರೆಯುಂಟುಮಾಡುವ ಈ ವೈರಸ್ ಮನುಷ್ಯರನ್ನು ಬಾಧಿಸತೊಡಗಿದ್ದು ಇತ್ತೀಚಿನ ಶತಮಾನಗಳಲ್ಲಿ. ನೂರಿನ್ನೂರು ವರ್ಷಗಳ ಹಿಂದೆ ಪ್ರಾಣಿಗಳ ಶ್ವಾಸಕ್ರಿಯೆಯನ್ನು ಬಾಧಿಸುವ ಕರೋನಾ ವೈರಸ್ ಬಂದರೆ, ಇತ್ತೀಚೆಗೆ ಮನುಷ್ಯರನ್ನು ಬಾಧಿಸುವ ಸಾರ‍್ಸ್, ಮರ‍್ಸ್ ಕಾಯಿಲೆಯ ವೈರಸ್ ಉತ್ಪತ್ತಿಯಾಗಿವೆ.


ಕೋವಿಡ್ 19 ಬಂದರೆ ಏನಾಗುವುದು?
  • ಏನೂ ಆಗದೇ ಇರಬಹುದು. ಈ ಸಾಧ್ಯತೆಯೇ ಹೆಚ್ಚು.
  • ಕೆಲವರಿಗೆ ವೈರಸ್ ಸೋಂಕುಂಟಾದ ಹದಿನಾಲ್ಕು ದಿನಗಳೊಳಗೆ ತಂಡಿ, ಗಂಟಲುರಿ, ಸಣ್ಣ ಜ್ವರ, ಭೇದಿ ಶುರುವಾಗುತ್ತದೆ.
  • ನಂತರ ಮೂಗು, ಗಂಟಲ ಮೂಲಕ ಶ್ವಾಸಕೋಶ ಪ್ರವೇಶಿಸುವ ವೈರಸ್ ಕೆಲವರಲ್ಲಿ ತೀವ್ರತರದ ನ್ಯುಮೋನಿಯಾ ಉಂಟುಮಾಡುತ್ತದೆ. ಅತಿಜ್ವರ, ಕೆಮ್ಮು, ದಮ್ಮು, ವಾಂತಿ, ತಲೆನೋವು, ಉಸಿರಾಟದ ತೊಂದರೆ ಹೆಚ್ಚುತ್ತದೆ.
  • ಅತಿ ತೀವ್ರತರವಾಗುವ ಕೆಲವು ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳ ವೈಫಲ್ಯತೆಯಾಗಿ ಮರಣವುಂಟಾಗುತ್ತದೆ. 

ಇದುವರೆಗೆ ರೋಗ ಬಾಧಿಸಿದವರಲ್ಲಿ 60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕುಂಠಿತಗೊಂಡವರು, ಎಳೆಯ ಮಕ್ಕಳೇ ಹೆಚ್ಚಿದ್ದಾರೆ. ಬಡದೇಶಗಳಿಗಿಂತ ಮುಂದುವರೆದ ದೇಶಗಳನ್ನು ಹೆಚ್ಚು ಬಾಧಿಸಿದೆ. ಇಂದು ವಿಶ್ವಪಿಡುಗು (ಪ್ಯಾಂಡೆಮಿಕ್) ಎಂದು ಘೋಷಿಸಲ್ಪಟ್ಟಿದೆ. ಯಾಕೆಂದರೆ ಅದು ಸುಲಭದಲ್ಲಿ ಹರಡುವಂಥದು. ಆದರೆ ಇದರಿಂದಾಗುವ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಗಳು, ಸಂಸ್ಥೆಗಳು, ಸಮಾಜಗಳು ನಾನಾ ಸಲಹೆ, ಸೂಚನೆಯಿತ್ತಿವೆ. ಹರಡುವಿಕೆ ತಡೆಯಲು ಇರುವ ಕೆಲವು ಸುಲಭ ತಂತ್ರಗಳಿವು:




  • ಅತಿ ಅನಿವಾರ್ಯವಲ್ಲದ ಎಲ್ಲ ಪ್ರಯಾಣ ರದ್ದುಗೊಳಿಸಿ ಇದ್ದಲ್ಲೇ ಇರುವುದು. 
  • ಬಟ್ಟೆ ಮೇಲೆ ವೈರಸ್ 6 ರಿಂದ 12 ಗಂಟೆ ಕಾಲ ಬದುಕಬಹುದು. ಈ ವೈರಸ್ ಉಷ್ಣಸೂಕ್ಷ್ಮ. ೩೦-೩೫ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಹಾಗೂ ಸೋಪಿಗೆ ಸತ್ತು ಹೋಗುತ್ತದೆ. ಹಾಗಾಗಿ ಪದೇಪದೇ ಸೋಪು ನೀರಿನಲ್ಲಿ ಕೈ ತೊಳೆಯಬೇಕು. ಸೋಪು ಹಚ್ಚಿ ಬಟ್ಟೆ ತೊಳೆದು ಬಿಸಿಲಲ್ಲಿ ಒಣಗಿಸಬೇಕು. 
  • ಕೆಮ್ಮುವಾಗ ಸೀನುವಾಗ ಮುಖಗವಸಿನಿಂದ ಅಥವಾ ವಸ್ತ್ರದಿಂದ ಮೂಗುಬಾಯಿ ಮುಚ್ಚಿಕೊಂಡಿರಬೇಕು. ಯಾಕೆಂದರೆ ಒಮ್ಮೆ ಸೀನಿದರೆ ಅಥವಾ ಕೆಮ್ಮಿದರೆ 20,000 ಕಿರುಹನಿಗಳು ವಾತಾವರಣಕ್ಕೆ ಸೇರುತ್ತವೆ. ಪ್ರತಿ ಕಿರುಹನಿಯೂ ನೂರಾರು ವೈರಸ್ ಕಣಗಳನ್ನು ಹೊಂದಿದ್ದು ಎದುರಿರುವವರನ್ನು ಬೇರೆಬೇರೆ ರೀತಿ ತಲುಪುತ್ತವೆ. ಹಾಗಾಗಿ ಜನರ ನಡುವೆ ಇರುವಾಗಲೆಲ್ಲ ಮುಖಗವಸು ತೊಡಬೇಕು. 
  • ಕೆಮ್ಮುವವರು, ಸೀನುವವರಿಂದ ಮೂರು ಮೀಟರ್ ದೂರ ಇದ್ದರೆ ಒಳ್ಳೆಯದು. ಮೂರು ಮೀಟರ್ (10 ಅಡಿ) ಅಂತರ ಸಿಕ್ಕರಷ್ಟೇ ಕೆಮ್ಮು, ಸೀನಿನ ಹನಿಗಳು ನೆಲ ಮುಟ್ಟುತ್ತವೆ.
  • ಬಂದವರನ್ನು ಸ್ವಾಗತಿಸುತ್ತ ಅಪ್ಪಿಕೊಳ್ಳುವುದು, ಕೈಕುಲುಕುವುದು, ಮುತ್ತಿಕ್ಕುವುದು ಮಾಡಬಾರದು. ಸಾಮಾಜಿಕ ಅಂತರವಿಟ್ಟುಕೊಂಡು ದೂರದಿಂದಲೇ ಹಾರೈಸಬೇಕು. 
  • ಲೋಹದ ಮೇಲ್ಮೈ ಮೇಲೆ ವೈರಸ್ 12 ಗಂಟೆ ಕಾಲ ಜೀವಂತ ಇರಬಲ್ಲದು. ಹಾಗಾಗಿ ಅಂತಹ ಮೇಲ್ಮೈಗಳನ್ನು ಮುಟ್ಟುತ್ತ ಇರುವವರು ಪದೇಪದೇ ಸೋಪು ಹಚ್ಚಿ (ಸ್ಯಾನಿಟೈಸರ್ ಹಚ್ಚಿ ಅಲ್ಲ) ಕೈ ತೊಳೆಯಬೇಕು. ಅಂತಹ ಮೇಲ್ಮೈಗಳನ್ನೂ ಶುಚಿಗೊಳಿಸಬೇಕು.
  • ನಮ್ಮ ಮೈಕೈಮೇಲೆ 5-10 ನಿಮಿಷ ವೈರಸ್ ಜೀವಂತ ಉಳಿಯಬಹುದು. ಆದರೆ ಆ 5-10 ನಿಮಿಷದಲ್ಲಿ ನಾವು ಅಪ್ರಜ್ಞಾಪೂರ್ವಕವಾಗಿ ಕಣ್ಣು, ಮೂಗು, ಬಾಯಿ, ಕಿವಿ ಮುಟ್ಟಿ ಅಲ್ಲೆಲ್ಲ ಸೇರಿಸಿರುತ್ತೇವೆ. ಹಾಗಾಗಿ ನಮ್ಮ ಮೈ ಮುಖ ಮುಟ್ಟಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.

2018ರಲ್ಲಿ ಮಲೇರಿಯಾದಿಂದ ವಿಶ್ವಾದ್ಯಂತ 4 ಲಕ್ಷ ಜನ ಸತ್ತಿದ್ದಾರೆ. ಏಡ್ಸ್‌ನಿಂದ 7.7 ಲಕ್ಷ ಜನ ಅಸು ನೀಗಿದ್ದಾರೆ. ಪ್ರತಿ ವರ್ಷ 22 ಸಾವಿರ ಜನ ಡೆಂಗಿಗೆ ಬಲಿಯಾಗುತ್ತಾರೆ. ಹುಚ್ಚುನಾಯಿ ಕಡಿತದ ರೇಬಿಸ್‌ನಿಂದ ವಾರ್ಷಿಕ 55 ಸಾವಿರ ಜನ ಸಾಯುತ್ತಾರೆ. ಒಂದೂವರೆ ಲಕ್ಷ ಜನ ಟೈಫಾಯ್ಡ್‌ನಿಂದ ಸಾಯುತ್ತಾರೆ. 40 ಸಾವಿರ ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ಹಾಗಿರುವಾಗ ಇದುವರೆಗೆ 13000 ಜನರನ್ನು ಕೊಂದ ಕೋವಿಡ್ ಬಗೆಗೇಕೆ ಇಷ್ಟು ಭೀತಿ?

ಭೀತಿ ಏಕೆಂದರೆ ನಮಗೆ ಅದರ ಬಗ್ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಅದರ ಕಾರಣ, ನಿಯಂತ್ರಣ, ಚಿಕಿತ್ಸೆ, ಪರಿಣಾಮ, ಲಸಿಕೆ, ಹರಡುವಿಕೆ ಬಗೆಗೆ ಹೆಚ್ಚು ಗೊತ್ತಿಲ್ಲ. ಇನ್ನೂ ಲಸಿಕೆ, ಚುಚ್ಚುಮದ್ದು ಕಂಡುಹಿಡಿದಿಲ್ಲ. ಮನುಷ್ಯರ ಮೇಲೆ ಪ್ರಯೋಗಿಸಬಹುದಾದ ಲಸಿಕೆ ಕಂಡುಹಿಡಿಯಲು ತಿಂಗಳುಗಳೇ ಬೇಕಾಗಬಹುದು. ಬೃಹತ್ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ವರುಷಗಳೇ ಬೇಕಾಗಬಹುದು. ಹಾಗಾಗಿ ಇದರ ಬಗೆಗೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತವಾಗಿದೆ.

14ನೇ ಶತಮಾನದ ಬ್ಯುಬೋನಿಕ್ ಪ್ಲೇಗ್ ವಿಶ್ವದ ಕಾಲುಭಾಗ ಜನಸಂಖ್ಯೆಯನ್ನು ಕೊಂದು ಹಾಕಿತ್ತು. 102 ವರ್ಷ ಕೆಳಗೆ, 1918ರಲ್ಲಿ ಬಂದ ಎಚ್೧ಎನ್೧ ಇನ್‌ಫ್ಲುಯೆಂಜಾ ಕಾಯಿಲೆ ವಿಶ್ವಾದ್ಯಂತ ಮಿಂಚಿನಂತೆ ಹರಡಿ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. (ವಿಶ್ವದ ಮೂರನೆ ಒಂದು ಭಾಗ ಜನರಿಗೆ ಸೋಕಿದ ಆ ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬಂದಿತ್ತು.) 2009ರ ಇನ್‌ಫ್ಲುಯೆಂಜಾ ಎಚ್೧ಎನ್೧ ಕನಿಷ್ಟ 2 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. (ಅದು ಹಂದಿಗಳಿಂದ ಮನುಷ್ಯರಿಗೆ ರವಾನೆಯಾಗಿತ್ತು.) ಇದೂ ಅಂತಹ ಒಂದು ವಿಶ್ವವ್ಯಾಧಿಯಾಗದಿರಲಿ ಎನ್ನುವುದೇ ಈ ಎಲ್ಲ ಮುನ್ನೆಚ್ಚರಿಕೆಗಳ ಉದ್ದೇಶವಾಗಿದೆ.

ಆದ್ದರಿಂದ ಕೋವಿದಕ್ಕೆ ಅಂಜದೇ, ಆತಂಕದಿಂದ ದಿನ ದೂಡದೇ, ಸಮಯ ವ್ಯಯವಾಯಿತೆಂದು ದುಃಖಿಸದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ. ಅನಿವಾರ್ಯವಲ್ಲದ, ತುರ್ತು ಅಲ್ಲ ಎಲ್ಲ ತಿರುಗಾಟ, ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸೋಣ. ಚಿಕಿತ್ಸೆಯ ಹುಸಿ ಭರವಸೆಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡದಿರೋಣ. ಅನಾಯಾಸವಾಗಿ ಸಿಕ್ಕ ಈ ವಿರಾಮ-ರಜೆಯ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಲಿಕ್ಕೆ, ಆತ್ಮಾವಲೋಕನ ಮಾಡಿಕೊಳ್ಳಲಿಕ್ಕೆ, ನಾಳಿನ ನಡೆಗಳ ಬಗೆಗೆ ಯೋಚಿಸಲಿಕ್ಕೆ ವಿನಿಯೋಗಿಸೋಣ. ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ನೆಲ, ಸಮಾಜ ಬಿಟ್ಟು ಹೋಗುವುದು ಹೇಗೆಂಬ ಬಗೆಗೆ ಚಿಂತಿಸೋಣ.






Wednesday 18 March 2020

ಮಹಿಳಾ ದಿನ: ಮಹಿಳಾ ಚೈತನ್ಯ ದಿನ








ಇಡೀ ಮಾರ್ಚ್ ತಿಂಗಳು ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತದೆ. ಓಹೋಹೋ! ಇನ್ನೇನು ಮಹಿಳೆಯರಿಗೆ ಸ್ವರ್ಗ ಕೈಗೆಟುಕಿತು ಎನ್ನುವಂತೆ, ಜಗವೇ ಮಹಿಳಾ ಪರವಾಯಿತೋ ಎನುವಂತೆ.. ಎಲ್ಲರೂ ಮಹಿಳಾ ದಿನ ಆಚರಿಸುವವರು, ಹೆಣ್ಣನ್ನು ನೆನೆದು ಗೌರವಿಸುವವರೇ.. ಏರ್‌ಲೈನ್ ಕಂಪನಿಗಳು, ಕಾಸ್ಮಿಟಿಕ್ ಕಂಪನಿಗಳು, ಜ್ಯುವೆಲರಿ ಕಂಪನಿಗಳು, ಬ್ರಾಂಡೆಡ್ ಬಟ್ಟೆ-ವಸ್ತುಗಳ ಮಾಲ್‌ಗಳಿಂದ ಹಿಡಿದು ಬೀದಿ-ಕೇರಿ-ಶಾಲೆಗಳಲ್ಲೂ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಮ್ಯೂಸಿಕಲ್ ಚೇರ್, ಅಡುಗೆ ಸ್ಪರ್ಧೆ, ತಿನ್ನುವ ಸ್ಪರ್ಧೆ, ಫ್ಯಾಷನ್ ಷೋ ಏನೆಲ್ಲ ನಡೆಯುತ್ತವೆ. ಮಹಿಳೆಯರ ಒಂದು ಕೇಶಾಲಂಕಾರದ ಸಲೂನಿನಲ್ಲಿ ಎಲ್ಲ ಫ್ಯಾಷನ್‌ಗು ೨೫% ಡಿಸ್ಕೌಂಟ್! ಕೂದಲು ನೇರ ಇದ್ದದ್ದು ಸುರುಳಿ; ಸುರುಳಿ ಇದ್ದದ್ದು ನೇರ; ಕಪ್ಪು ಇದ್ದದ್ದು ವರ್ಣಮಯ; ಬಿಳಿ ಇದ್ದದ್ದು ಕಪ್ಪು ವಗೈರೆ ವಗೈರೆ ಮಾಡಿಕೊಡುತ್ತಾರೆ. ಆ ಸಲೂನಿನಲ್ಲಿರುವವರೆಲ್ಲ ಹುಡುಗರೆ. ಹುಡುಗಿಯರ ತಲೆ ತಿಕ್ಕಿ, ತೊಳೆದು, ಹಿಂಡಿ, ಎಳೆ ಎಳೆಯಾಗಿ ಬಿಡಿಸಿ, ಒಣಗಿಸಿ, ಪಾಲು ಮಾಡಿ, ಇಸ್ತ್ರಿ ಮಾಡಿ, ನೇರ, ಸುರುಳಿ ಹೀಗೆ ನಾನಾ ತರಹದ ಫ್ಯಾಷನ್ ಮಾಡುತ್ತಿದ್ದಾರೆ! ಆಭರಣದಂಗಡಿಯಲ್ಲಿ ಮಜೂರಿಯಿಲ್ಲ. ಕೆಲವಡೆ ಶುದ್ಧ ಕುಂಕುಮ ಸಪ್ತಾಹ ನಡೆಯುತ್ತದೆ. ಯಾವ ಐದು ಶುದ್ಧ ವಸ್ತುಗಳಿಂದ ಶುದ್ಧ ಕುಂಕುಮ ತಯಾರಿಸುವುದು ಮತ್ತು ಆ ಮೂಲಕ ಮುತ್ತೈದೆತನ ಕಾಪಾಡಿಕೊಳ್ಳುವುದು ಅಂತ ಅಲ್ಲಿ ಹೇಳಿಕೊಡುತ್ತಾರೆ!

ಆಹಾ ಮಹಿಳಾಪರ ಲೋಕವೇ!?

ತಡೆ ತಂಗಿ. ಇದು ಒಂದು ಮುಖ. ಇನ್ನೊಂದು ಕಡೆ ನೋಡಿದರೆ..

ಮಹಿಳಾ ದಿನ ಆಚರಿಸಿದ ಒಬ್ಬನೇ ಒಬ್ಬ ಗಂಡಸೂ ‘ಇನ್ನುಮುಂದೆ ನೀನೊಬ್ಬಳೇ ಅಡಿಗೆ, ಪಾತ್ರೆ, ಸ್ವಚ್ಛತೆ ಕೆಲಸ ಮಾಡುವುದು ಬೇಡ. ಇವತ್ತಿಂದ ಎಲ್ಲ ಫಿಫ್ಟಿ ಫಿಫ್ಟಿ ಎಂದು ಹೇಳುವರೇ? ಖಂಡಿತಾ ಇಲ್ಲ. ಮೂರು ತಿಂಗಳ ಮಗುವಿನಿಂದ ಹಿಡಿದು ತೊಂಭತ್ತರ ಮುದುಕಿಯವರೆಗೆ ಪ್ರತಿ ಇಪ್ಪತ್ತೈದು ನಿಮಿಷಕ್ಕೊಬ್ಬಳು ದಾಖಲೆಗೆ ಸಿಗುವ ಹಾಗೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ದೆಹಲಿಯ ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹುಡುಗಿಯರ ಕಾರ್ಯಕ್ರಮ ವಿರೋಧಿಸಿ ಒಂದು ಗುಂಪು ಸಾಮೂಹಿಕವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹೊರನಡೆಯಿತು. ಗುಜರಾತಿನ ಭುಜ್‌ನ ಕಾಲೇಜೊಂದು ದೇವಾಲಯ ಆವರಣದಲ್ಲೇ ಇರುವುದರಿಂದ ಮುಟ್ಟಾದವರು ಊಟದ ಒಳಾವರಣಕ್ಕೆ ನಿಯಮ ಉಲ್ಲಂಘಿಸಿ ಬಂದಿದ್ದಾರೆಂದು ತಿಳಿದು ಶಿಕ್ಷಕಿಯರ ಸಹಾಯದಿಂದ ನೂರಾರು ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿ ಮುಟ್ಟಾಗಿದ್ದರೆಯೋ ಇಲ್ಲವೋ ಪರೀಕ್ಷಿಸಿತು!

ಹಾಗಾದರೆ ಮಹಿಳಾ ವಾಸ್ತವ ಯಾವುದು?

ಮ್ಯೂಸಿಕಲ್ ಚೇರ್, ಫ್ಯಾಷನ್ ಷೋ, ರಿಯಾಯ್ತಿ, ಸಂಭ್ರಮಗಳಷ್ಟೆ ಮಹಿಳಾ ದಿನಾಚರಣೆಗಳಲ್ಲ. ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಅಸಮಾನತೆಯ ಮಾತುಗಳಷ್ಟೇ ಮಹಿಳಾ ದಿನಾಚರಣೆಯ ಉದ್ದೇಶವಲ್ಲ. ಪುರುಷ ವಿರೋಧವಷ್ಟೇ ಮಹಿಳೆಯರ ಗುಂಪುಗೂಡುವಿಕೆಯ ಅಜೆಂಡಾ ಅಲ್ಲ. ಮಹಿಳಾ ದಿನಾಚರಣೆ ಎಂದರೆ ಘನತೆಯ ಬದುಕಿಗೆ ಮಹಿಳೆಯರು ನಡೆಸಿದ ಹೋರಾಟದ ನೆನಪು. ದೌರ್ಜನ್ಯ ವಿರೋಧವನ್ನಷ್ಟೆ ನಾವು ಮಾತನಾಡುತ್ತಿರುವಂತೆ ಕೇಳುತ್ತಿದೆ, ಆದರೆ ನಮ್ಮ ಮಾತು ಹಿಂಸೆಯ ವಿರುದ್ಧ, ಎಲ್ಲ ತಾರತಮ್ಯದ ವಿರುದ್ಧ, ಯುದ್ಧದ ವಿರುದ್ಧ, ಅಧಿಕಾರ ಕೇಂದ್ರೀಕರಣದ ವಿರುದ್ಧ.

ಸಮಾಜದ ಎಲ್ಲ ಪುರುಷಾಕೃತಿಗಳನ್ನು ಮುಖಾಮುಖಿಯಾಗುವವಳು ಮಹಿಳೆ. ಪುರುಷಾಕೃತಿ ಎನ್ನುವುದು ಜೈವಿಕ ಪುರುಷತ್ವದ ಕುರಿತ ಮಾತಷ್ಟೆ ಅಲ್ಲ. ಜಾತಿ, ಧರ್ಮ, ಯುದ್ಧ, ಅಧಿಕಾರಗಳೆಲ್ಲ ಪುರುಷಾಕೃತಿಗಳೇ. ಇವೆಲ್ಲದರ ದುಷ್ಟತನವನ್ನು ಅಳೆಯಬಲ್ಲವಳು ಅವೆಲ್ಲದರಿಂದ ಬಾಧಿತಳಾದ ಮಹಿಳೆಯೇ. ಹಾಗಾಗಿ ಮಹಿಳಾ ದಿನ ಆಚರಿಸುವುದೆಂದರೆ ಹಸಿವಿನ ವಿರುದ್ಧ, ಎಲ್ಲ ಶೋಷಣೆ-ಹಿಂಸೆಯ ವಿರುದ್ಧ, ಅಸಮಾನತೆಯ ವಿರುದ್ಧ, ಸಮತೆಯ ಸಮಾಜಕ್ಕಾಗಿ ಮುನ್ನಡೆಯುವ ವಿಚಾರ.

ಮಹಿಳಾ ದಿನ ಎಂದರೆ ಮಹಿಳೆಯರು ತಮ್ಮ ಚೈತನ್ಯ ಹೆಚ್ಚಿಸಿಕೊಳ್ಳುವ ದಿನ. ಅದಕ್ಕಾಗಿ ಮಹಿಳೆಯರು ಎರಡು ರೀತಿಗಳಲ್ಲಿ ಗಟ್ಟಿಯಾಗಬೇಕು. ಗಟ್ಟಿಯೆಂದರೆ ಕಣ್ಣೀರಾಗದ, ಅಯ್ಯೋ ಎನದ ಗಡಸು ಎದೆಗಲ್ಲುಗಳಾಗುವುದಲ್ಲ. ಬದಲಿಗೆ ಸ್ವ ಇಚ್ಛೆಯಿಂದ, ಸಹಜ ಸರಳ ಸ್ವಾಯತ್ತ ಜೀವನ ನಡೆಸಲು ಧೃಢವಾಗುವುದು. ಅದಕ್ಕಾಗಿ ಹೊರಗಿನ ಸಮಾಜದಲ್ಲಿ ದಿಟ್ಟವಾಗಿ ನಡೆಯಲು, ಗಟ್ಟಿಯಾಗಿ ಮಾತನಾಡಲು, ಘನತೆಯಿಂದ ಬದುಕಲು ಹಕ್ಕು ಸ್ವಾತಂತ್ರ್ಯಗಳನ್ನು ಗಳಿಸಿಕೊಳ್ಳಬೇಕು. ಜೊತೆಗೆ ಒಳಗಿನಿಂದಲೂ ಗಟ್ಟಿಯಾಗಬೇಕು.

ಸ್ವಮೋಹ ಮತ್ತು ಸ್ವಪ್ರೀತಿ



ವ್ಯಕ್ತಿತ್ವದ ಗಟ್ಟಿತನದ ಮೂಲ ಎಲ್ಲಿದೆ? ಅದು ಸ್ವ ಪ್ರೀತಿಯಲ್ಲಿದೆ. ಸ್ವಪ್ರೀತಿಯೆಂದರೆ ಶಕ್ತಿಮಿತಿಗಳೊಡನೆ ತನ್ನತನದ ಅರಿವು. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ತಿದ್ದಿತೀಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ, ಮೌನ ವಹಿಸುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ಹಾಗಾಗಿ ತನ್ನ ನಿಜಸ್ವರೂಪ ಅರಿಯದೇ ಸ್ವಮೋಹದ ಬಲೆಯಲ್ಲಿ ಬಂಧಿಗಳಾಗಿರುವವರು ಅವರು.

ಕನ್ನಡಿಯೆದುರು ಒಂದೇ ಸಮ ನಿಂತು ಹುಬ್ಬು ತೀಡುವುದು, ಮುಖ ಚಹರೆ ನೋಡಿಕೊಳ್ಳುವುದು ಸ್ವಮೋಹ. ಈ ಉಡುಪು ತೊಟ್ಟರೆ ಅವರು ಹಾಗೆಂದಾರೋ, ಅದಕ್ಕೆ ಇವರು ಹೀಗೆಂದಾರೋ ಎಂದು ಯೋಚಿಸುತ್ತ ಯಾವುದನ್ನು ತೊಟ್ಟರೆ ಅತಿಸುಂದರಿಯಾಗಿ ಕಾಣುವೆನೆಂಬ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ಸ್ವಮೋಹ. ನಾಲಿಗೆ ರುಚಿಯ ಬೆನ್ನು ಹತ್ತಿ ಅಪೌಷ್ಟಿಕತೆಗೋ, ಅತಿ ಸೇವನೆಗೋ ಒಳಗಾಗುವುದು ಸ್ವಮೋಹ. ನಾಕು ಕಾಸು ಬಂದದ್ದೇ ಬಟ್ಟೆಬಂಗಾರದ ಅಂಗಡಿಗೆ ಓಡಿ ಥಳಥಳ ಹೊಳೆವ ವಸ್ತ್ರಾಭರಣಗಳ ಖರೀದಿಸುವುದು ಸ್ವಮೋಹ. ‘ಅಯ್ಯೋ, ನಾನು ಕಪ್ಪು, ಅಯ್ಯೋ, ನಾನು ಹೆಣ್ಣಾಗಿ ಹುಟ್ಟಿದೆ, ಈ ಬಣ್ಣ ಕಳೆಯಲು ಯಾವ ಕ್ರೀಮು ಹಚ್ಚಲಿ? ಯಾವ ಫೇಸ್‌ಪ್ಯಾಕ್ ಬಳಿಯಲಿ?’ ಎಂದು ಕೊರಗುವುದು ಸ್ವಮೋಹ. ತನ್ನ ರೂಪ, ಆಕಾರ, ಬಣ್ಣ, ಆರ್ಥಿಕ ಸ್ಥಿತಿಗಳ ಬಗ್ಗೆ ಸದಾ ಕೊರಗುತ್ತ, ಸಾಧುವಲ್ಲದ ದಾರಿಗಳಿಂದ ಅವನ್ನೆಲ್ಲ ಆಗಮಾಡಹೊರಡುವುದು ಸ್ವಮೋಹ.

ಆದರೆ ಸ್ವಮೋಹವು ಕೀಳರಿಮೆಯನ್ನು ಬೆಳೆಸುತ್ತದೆ. ಅನಗತ್ಯ ಸಂಗತಿಗಳಿಗೆ ಗಮನ ಕೊಡುವಂತೆ ಮಾಡುತ್ತದೆ. ನಮ್ಮ ದೇಹದ ನಿಜವನ್ನು ನಾವೇ ಗುರುತಿಸದಂತೆ, ಗೌರವಿಸದಂತೆ, ಒಪ್ಪಿಕೊಳ್ಳದಂತೆ ಸಂಕೀರ್ಣ ಸ್ವಭಾವ ರೂಪುಗೊಳ್ಳುತ್ತದೆ. ನನ್ನನ್ನು ನಾನೇ ಪ್ರೀತಿಸದಿದ್ದರೆ, ಅದು ಇರುವ ಹಾಗೆಯೇ ಒಪ್ಪಿಕೊಳ್ಳದಿದ್ದರೆ ಹೊರಜಗತ್ತಿನ ತಾರೀಫಿನ ಮರ್ಜಿಗೆ ಒಳಗಾಗಿ, ಇಲ್ಲಸಲ್ಲದ ಪ್ರಯತ್ನ ಮಾಡುತ್ತ ಸುಸ್ತಾಗಬೇಕಾಗುತ್ತದೆ. ಕೆಲವೊಮ್ಮೆ ಕೀಳರಿಮೆ ತನ್ನ ರೂಪ-ಸಂಪತ್ತಿನ ಬಗೆಗಷ್ಟೇ ಅಲ್ಲ, ತನ್ನವರ ಬಗೆಗೂ ವಿಸ್ತರಿಸುವುದಿದೆ.

ಇದರ ಮೂಲ ನಮ್ಮ ದುಃಖ ಗುರುತಿಸಿ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿರುವುದರಲ್ಲಿದೆ. ರೂಪ-ಸ್ವರೂಪಗಳು ದುಃಖಕಾರಣವಾಗಲಾರವು ಎಂದು ನಮಗೆ ನಾವೇ ತಿಳಿಸಿಕೊಳ್ಳುವುದರಲ್ಲಿ, ಸಮಾಜಕ್ಕೆ ತಿಳಿಯಹೇಳುವುದರಲ್ಲಿದೆ. ಸ್ವತಃ ನಮಗೆ, ಸಮಾಜದ ಇತರ ಜೀವಿಗಳಿಗೆ, ಪ್ರಕೃತಿಗೆ ಹಾನಿಯುಂಟುಮಾಡಬಹುದಾದ ನಮ್ಮ ದುರ್ಗುಣಗಳನ್ನು, ತಪ್ಪು ನಡೆಗಳನ್ನು ಸ್ವಭಾವ-ರೂಢಿ-ಮಾತು-ಕ್ರಿಯೆಗಳನ್ನು ಮೊದಲು ಬದಲಿಸಿಕೊಳ್ಳಬೇಕು, ನಿಜ. ಯಾರೆಂದರೆ ಯಾರಿಗೂ ಹಾನಿಮಾಡದ ನನ್ನ ಬಣ್ಣ, ಮೂಗಿನ ಆಕಾರ, ಕಣ್ಣು, ತಲೆಗೂದಲು, ಧ್ವನಿ ಹೇಗೇ ಇದ್ದರೂ ಅದರಿಂದ ಯಾರಿಗೆ ಹಾನಿ? ಯಾವ ಸಮಾಜಕ್ಕೆ ನಷ್ಟ? ಆದರೆ ಅದನ್ನು ಒಪ್ಪಿತವಾಗುವಂತೆ ಬದಲಿಸಿಕೊಳ್ಳುವುದರಲ್ಲೇ ನಮ್ಮ ಗಮನ ನೆಟ್ಟುಹೋಗಿದೆ.

ಎಂದೇ ಸ್ವಮೋಹ ಸಲ್ಲದು. ಬದಲಾಗಿ ಸ್ವಪ್ರೀತಿ ಬೆಳೆಸಿಕೊಳ್ಳಬೇಕು.

ನಾನು ಕಪ್ಪು ಹೌದು, ಆದರೆ ಅದು ನನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ.
ನಾನು ಕುಳ್ಳಿ, ಹೌದು, ಆದರೆ ಅದು ನನ್ನ ಸಾಮರ್ಥ್ಯದ ಮಿತಿಯಾಗುವುದಿಲ್ಲ
ನಾನು ದಪ್ಪ, ಹೌದು, ಆದರೆ ಅದು ನನ್ನ ಸಾಮರ್ಥ್ಯ ವಿಸ್ತರಣೆಗೆ ತಡೆಯಾಗುವುದಿಲ್ಲ.
ನನಗೆ ಮೆಳ್ಳೆಗಣ್ಣು, ಹೌದು, ಆದರೆ ದಿಗಂತದ ತನಕ ದಿಟ್ಟಿಸಲು ನನಗಿಲ್ಲ ತಡೆ
ನನ್ನ ಸ್ತನಗಳು ಸಣ್ಣಗಿವೆ, ಹೌದು; ನನಗೆ ಮೆಳ್ಳೆಗಣ್ಣು, ಹೌದು; ನನ್ನ ಯಾವುದೋ ಅಂಗ ಊನ, ಹೌದು; ನನ್ನ ಬಳಿ ನೀರಿನಂತೆ ಖರ್ಚು ಮಾಡಲು ಹಣವಿಲ್ಲ, ಹೌದು; ಆದರೆ ಅದು ಇರುವುದೇ ಹಾಗೆ. ನಾನಿರುವುದೇ ಹೀಗೆ.

ನಾನಿರುವುದೇ ಹೀಗೆ. ನನ್ನ ದೇಹ ನನಗೆ, ನನ್ನ ಬದುಕು ನನಗೆ. ಇದೇ ಹೆಣ್ಣುತನ.

ಈ ಅರಿವು ಹುಟ್ಟುವುದೇ ಸಾಕ್ಷಾತ್ಕಾರ. ಈ ಅರಿವೇ ಸ್ವಪ್ರೀತಿ. ನನ್ನ ದೈಹಿಕ ಚಹರೆಗಳನ್ನು, ದೇಹ ವಾಸ್ತವಗಳನ್ನು ವಸ್ತುಸ್ಥಿತಿಯನ್ನು ತಿಳಿದು, ಅರಗಿಸಿಕೊಂಡು, ಗೌರವಿಸತೊಡಗಿದರೆ ಆಗ ಅಸೂಯೆ, ಕೀಳರಿಮೆ, ಕೋಪ, ದ್ವೇಷದಂತಹ ಅನುಪಯುಕ್ತ ಸಂಗತಿಗಳಿಗೆ ಮನೋಲಯವು ಪೋಲಾಗಲಾರದು. ನಮ್ಮ ಸಬಲೀಕರಣದ ಹೆಬ್ಬಾಗಿಲನ್ನು ನಾವೇ ತೆರೆದುಕೊಳ್ಳಬಹುದು.


(ಚಿತ್ರಗಳು: ಅಂತರ್ಜಾಲದಿಂದ)



‘ಏನೂ ಕೆಲ್ಸ ಮಾಡಲ್ಲ’




ನಾವೆಲ್ಲ ಕಲಿತ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ. ಎಷ್ಟೋ ವರುಷದ ನಂತರ ಶಾಲೆಯಲ್ಲಿ ಕಲಿತವರೆಲ್ಲ ಒಟ್ಟು ಸೇರಿದ್ದೆವು. ಲಂಗ ಚಡ್ಡಿ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡಿ ಆಮೇಲೆ ದೂರವಾದ ಗೆಳೆಯ, ಗೆಳತಿಯರನ್ನು ನೋಡಿ ಮತ್ತೆ ಬಾಲ್ಯದ ಸಂತೋಷ, ಸಂಭ್ರಮ ಅನುಭವಿಸುತ್ತಿದ್ದೆವು. ಒಂದೇ ಮಣೆ ಮೇಲೆ ಕೂತು ಮಗ್ಗಿ ಬಾಯಿಪಾಠ ಮಾಡಿದ, ಅಕ್ಷರ ತಿದ್ದಿದ ನಿರ್ಮಲಾ, ಶರಾವತಿ, ಲಕ್ಷ್ಮಿ, ಅಮೀನಾ ಎಲ್ಲ ಸಿಕ್ಕಿಬಿಟ್ಟರು. ಹಲವರು ಅದೇ ಹಳ್ಳಿಯ ಆಸುಪಾಸಿನಲ್ಲಿ ಸಂಸಾರವಂದಿಗರಾಗಿದ್ದರೆ ನಾವು ಕೆಲವರಷ್ಟೇ ದೂರದೂರುಗಳ ಸೇರಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಹೇಳಲಾಗದ ಆನಂದದಲ್ಲಿ ನಮ್ಮ ಮಾತಿನ ಕೊಟ್ಟೆ ಬಿಚ್ಚತೊಡಗಿತು..

‘ನೀ ಈಗ ಏನ್ ಕೆಲಸದಲ್ಲಿದೀ ಅಮೀನಾ?’ ಚಟಪಟನೆ ಮಾತನಾಡುತ್ತಿದ್ದ, ಬಲು ಆಸ್ಥೆಯಿಂದ ಅಲಂಕರಿಸಿಕೊಂಡು ಬಂದಿದ್ದ ಗೆಳತಿಯನ್ನು ಕೇಳಿದೆ.

‘ಕೆಲ್ಸ ಏನೂ ಇಲ್ಲ ಮರಾಯ್ತಿ, ಹಿಂಗೇ ಮನೇಲಿದ್ದೆ..’

‘ಹಿಂಗೇ ಎಲ್ಲಿರ‍್ತದೆ ಅದು? ಬೀಡಿ ಕಟ್ಟುದು, ಮಲ್ಗೆ ಮಾಲೆ ಮಾಡಿ ಮಾರುದು, ಸುರಗಿ ಮಕ್ಕೆ, ಕಾಡರಶ್ಣ ತಂದು ಕಮ್ತೀರಿಗೆ ಹಾಕುದು ಏನಾದ್ರು ಮಾಡ್ತನೇ ಇರ್ತದೆ..’ ಲಕ್ಷ್ಮಿ ಮಾತು ಸೇರಿಸಿದಳು.

‘ನೀಯೆಂತ ಕೆಲ್ಸ ಮಾಡ್ತಿದ್ಯೆ ಲಕ್ಷ್ಮಿ?’ ದುಬೈಯಿಂದ ಬಂದಿದ್ದ ರೀಟಾ ಕೇಳಿದಳು.

‘ಎಂತದೂ ಇಲ್ವೆ. ಎಂಥ ಮಣ್ಣು ಕೆಲ್ಸವೇನೋ ನಮದು. ಬಟ್ಟೆ ತೊಳಿ, ಪಾತ್ರೆ ತಿಕ್ಕು, ಮೀನು ಕತ್ತರ್ಸು, ಹಪ್ಪಳ ಉಪ್ಪಿನಕಾಯಿ ಮಾಡು, ಹಾಸು, ಮಡಚು, ಸಾರಸು, ಗೇರು, ಒಕ್ಕು, ರುಬ್ಬು .. ಹೀಂಗೇ. ನಿಮ್ಮಂಗೆ ಗನಾ ಕೆಲ್ಸ ಅಲ್ವೇ ನಮ್ದು, ಮೊದ್ಲಿಲ್ಲ, ಕೊನೆಯಿಲ್ಲ. ಸಾಯ್ಲಿ..’

‘ನಾವು ಕೆಲ್ಸ ಅಂತ ಹೊರಗೆ ಹೋಗಿ ನಾಕು ಕಾಸು ತರೋರಾದ್ರೂ ನೀ ಹೇಳ್ದ್ಯಲೆ ಈಗ, ಅಂತ ಯಾವ ಕೆಲ್ಸನೂ ಕಮ್ಮಿ ಆಗಿಲ್ಲ. ಹೆಣ್ಣುಮಕ್ಕಳ ಕೆಲ್ಸದಿಂದಲೆ ಮನೆ ಮನೆಯಾಗಿರೋದು. ನಾವು ಹೆಮ್ಮೆ ಪಡ್ಬೇಕು ಅದ್ಕೆ, ಬೇಸರ ಯಂತಕ್ ಲಕ್ಷ್ಮಿ?’

‘ಬ್ಯಾಸ್ರ ಯಾಕಂದ್ರೆ ಇಷ್ಟಪ ಕೆಲ್ಸ ಮಾಡ್ತಿದ್ರೂ ಮನೆ ಗಣಸ್ರ ಕೇಳಿದ್ರೆ ಈ ಹೆಂಗಸ್ರಿಗೆ ಎಂತ ಕೆಲ್ಸ? ನಾವ್ ದುಡ್ಕ ಬಂದಿದ್ನ ಮಾಡ್ಕಂಡ್ ತಿಂಬೂದು ಅಷ್ಟೆಯ ಅಂತ ನಗಾಡ್ತ್ರು. ಮನೆ ಕೆಲ್ಸಕ್ಕೆ ಕಾಸಿಲ್ಲ, ಕಿಮ್ಮತ್ತಿಲ್ಲ. ನೀವೆಲ್ಲ ಹೊರಗೋಗಿ, ತಿರುಗಾಡಿ ಕಾಸು ಗಳಿಸೋವಂಗಾದ್ರಿ. ನಮ್ದು ಏನಿದ್ರು ಎಲ್ಲ ಇಲ್ಲೆಯ, ಮೀಟಿಂಗು ಟ್ರಿಪ್ಪು ಪಾರ್ಟಿ ಜೈಲು ಎಲ್ಲಾವ್ದೂ ಒಂದಾ ಬಾವಿಕಟ್ಟೆ ಅತ್ವಾ ಅಡಿಗೆ ಕಟ್ಟೆಲೇ ಮುಗೀಬೇಕು. ಆದ್ರೂ ಪೋಲಕ ಹೊಲುಸ್ಬೇಕು, ಜಾತ್ರೇಲಿ ಬಳೆ ಇಟ್ಕಬೇಕು ಅಂತ ಗಣಸ್ರ ಹತ್ರ ದುಡ್ ಕೇಳಿದ್ರೆ ನೂರು ಮಾತು.. ನಿರ್ಮಲಾ, ಶರಾವತಿ, ಲಕ್ಷ್ಮಿ, ಸುಧಾ, ನಮ್ಮೆಲ್ಲಾರದೂ ಅಷ್ಟೇ, ಕೆಲಸ ಅಂತ ಕಣ್ಗೆ ಯಾರ‍್ಗೂ ಕಾಣ್ದೇ ಇರೋ ಕೆಲ್ಸನ ಒಂದೇಸಮ ಮಾಡ್ತಾನೇ ಇದೀವಿ...’

ಲಕ್ಷ್ಮಿಯ ದನಿಯಲ್ಲಿದ್ದ ಖೇದ ಎಲ್ಲರ ಅನುಭವಕ್ಕೆ ನಿಲುಕಿ ಚಣ ಮೌನ ಆವರಿಸಿತು.

ಈ ವಿಷಾದದ ದನಿಗಳು ಗೃಹಬಂಧನಕ್ಕೊಳಗಾಗಿ ಗೃಹಸೇವಕಿಯರಾದ ಗೃಹಪಾಲಕಿಯರದು. ಒಂದಿಡೀ ಸಂಸಾರದ ಹೊಟ್ಟೆ-ನಾಲಗೆಯ ಕಾಳಜಿ, ಹಿರಿಕಿರಿಯರ ಹೊತ್ತುಗೊತ್ತಿನ ಪೂರೈಕೆ, ರಿಪೇರಿ, ಸ್ವಚ್ಛತೆ, ಸಾಮಾನು ದಾಸ್ತಾನು, ಹಿತ್ತಲು-ಅಂಗಳ-ದನಕರು-ಗಿಡಗಂಟಿ ಮೇಲ್ವಿಚಾರಣೆಗಳನ್ನೆಲ್ಲ ನೋಡಿಕೊಳ್ಳುವ ಮನೆಯೊಡತಿಯರ ಆಡಲಾಗದ ಮಾತುಗಳಿವು. ಕೆಲವರಿಗೆ ಮನೆಕೆಲಸದ ಜೊತೆ ಕೃಷಿ ಕೆಲಸವಿದ್ದರೆ ಮತ್ತೆ ಕೆಲವರಿಗೆ ಅಂಗಡಿ, ಹಣ್ಣು-ತರಕಾರಿ ಬೆಳೆಯುವುದು, ಹಾಲು ವ್ಯಾಪಾರ ಇತ್ಯಾದಿ ಮೇಲುವಸಿ ಕೆಲಸವಿರುತ್ತದೆ. ಮಕ್ಕಳ ಹೊತ್ತು ಹೆತ್ತು ಸಾಕುವುದು, ಮನೆಯ ಅಶಕ್ತರಿಗೆ, ಅನಾರೋಗ್ಯದವರಿಗೆ ಹೆಗಲಾಗಿ ಸೇವೆ ಮಾಡುವುದು ಹೆಂಗಸರದೇ ಹೊಣೆ. ಎರಡು ಕೈಗಳಿಗೆ ಇಪ್ಪತ್ತು ಕೈಗಳ ಕೆಲಸವಿರುತ್ತದೆ. ಎಷ್ಟು ಮಾಡಿದರೇನಂತೆ? ‘ಏನ್ಕೆಲಸ ಮಾಡ್ತಿದೀರಾ?’ ಎಂದು ಯಾರಾದರೂ ಕೇಳಿದರೆ, ಗೃಹಲಕ್ಷ್ಮಿಯರು ‘ಏನೂ ಇಲ್ಲ’ ಎನ್ನುತ್ತಾ ಮುರುಟಿಕೊಳ್ಳುತ್ತಾರೆ!

ಬರಿಯ ಅಡುಗೆ ಮನೆಯೊಂದರಲ್ಲಿ ದಿನಕ್ಕೆ ನೂರು ಸಲ ಕೂತೇಳುತ್ತಾರೆ, ಐನೂರು ಸಲವಾದರೂ ಬಗ್ಗಿ ಏಳುತ್ತಾರೆ. ಬಾವಿ, ಬಟ್ಟೆಕಲ್ಲಿನೆದುರು ಬೆವರು ಸುರಿಸುತ್ತಾರೆ, ಒಲೆಯೆದುರು ರಕ್ತ ನೀರು ಮಾಡುತ್ತಾರೆ. ಆದರೂ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗೆಗೆ ಹೆಮ್ಮೆಯಿಲ್ಲ, ಅದು ಹೇಳಿಕೊಳ್ಳಬೇಕಾದ ಕೆಲಸವೆನಿಸಿಲ್ಲ, ಯಾಕೆ?

ಯಾಕೆಂದರೆ ಹೆಣ್ಣುಗಳಿಗೆ ಮನೆವಾರ್ತೆಯ ದುಡಿಮೆ ಎಂದರೆ ಕೊನೆಮೊದಲಿರದ, ವಿರಾಮವಿರದ ಸ್ವಾತಂತ್ರ್ಯಹರಣ. ಅದು ರಜೆಯಿರದ, ವೇತನವಿರದ, ವಿರಾಮವೂ ಇರದ ಹೇರಲ್ಪಟ್ಟ ದುಡಿಮೆ. ಆ ದುಡಿಮೆ ಅವರಿಗೆ ಗೌರವ ತರುತ್ತಿಲ್ಲ, ಅಧಿಕಾರ ನೀಡುತ್ತಿಲ್ಲ, ಸ್ವಾತಂತ್ರ್ಯ ನೀಡುತ್ತಿಲ್ಲ. ಬದಲಾಗಿ ಗೌರವ, ಅಧಿಕಾರ, ಸ್ವಾತಂತ್ರ್ಯ ಎಲ್ಲಕ್ಕೂ ಎರವಾಗಿದೆ. ಹೆಣ್ಣುತನವನ್ನು ಸಾಬೀತುಪಡಿಸುವುದೇ ಮನೆಯೊಳಗಿನ ಉಚಿತ ದುಡಿಮೆ ಎನ್ನಲಾಗುತ್ತದೆ.

ಅವರಿಗೆ ತಮ್ಮ ದುಡಿಮೆ ಗೌರವದ ಕಾಯಕವೆನಿಸದಿರಲು ಇದೇ ಕಾರಣವಾಗಿದೆ.

ಕಾಣದ ಕೆಲಸ, ಕೇಳದ ಕಥೆ..






ಕಾಯಕವೇ ಶ್ರೇಷ್ಠ, ಕಾಯಕವೇ ಧರ್ಮ ಎಂದ ಶರಣರ ನೆಲ ನಮ್ಮದು. ‘ಅನ್ನ ಶ್ರಮ’ ಎನ್ನುತ್ತಿದ್ದರು ಗಾಂಧೀಜಿ. ‘ವಸ್ತುವಿನ ತಯಾರಿಕೆಯ ಹಿಂದೆ ರಕ್ತ, ಬೆವರು, ಕಣ್ಣೀರು ಇರುತ್ತದೆ. ಅದನ್ನು ಅದೃಶ್ಯವಾಗಿಸಿ ಸರಕಿಗೆ ಮೌಲ್ಯ ತುಂಬಲಾಗುತ್ತದೆ’ ಎಂದ ಕಾರ್ಲ್ ಮಾರ್ಕ್ಸ್. ಕೆಲಸದ ಮೇಲುಕೀಳು ವಿಭಜನೆಯಿಂದ ಹುಟ್ಟಿದ ಜಾತಿವ್ಯವಸ್ಥೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಶ್ರಮದ ಮಹತ್ವದ ಬಗೆಗೆ ಎಲ್ಲ ಮಹಾನುಭಾವರೂ ತಿಳಿಸಿ ಹೇಳಿದರು. ಆದರೂ ಮನೆವಾರ್ತೆಯ ಶ್ರಮ ಕೀಳೆನಿಸಿಕೊಂಡು ಕೇವಲ ಹೆಣ್ಣುಗಳ ಹೆಗಲ ವಜ್ಜೆಯಾಗಿಸಿತು. ಅವರ ಕೆಲಸವೆಲ್ಲ ವೇತನ ರಹಿತ, ಉಚಿತ, ಕಡ್ಡಾಯ ಸೇವೆಯೇ ಆಯಿತು.

ಒಂದು ಅಧ್ಯಯನದಂತೆ ಪ್ರತಿ ಹೆಣ್ಣೂ ಪ್ರತಿದಿನ ವೇತನವಿರದ ೨೯೭ ನಿಮಿಷ ಸೇವೆಯ ಕೆಲಸ ಮಾಡಿದರೆ ಪ್ರತಿ ಗಂಡೂ ೩೧ ನಿಮಿಷ ಅಂತಹ ಕೆಲಸ ಮಾಡುತ್ತಾನೆ. ಎಂದರೆ ಪ್ರತಿ ಮನೆಯೂ ಮನೆಯಾಗಿರುವುದರ ಹಿಂದೆ ಕನಿಷ್ಟ ಒಬ್ಬಳ ‘ರಕ್ತ, ಬೆವರು, ಕಣ್ಣೀರು’ ಇದೆ.

ಆದರೂ ಸಮಾಜ ಹೇಗಿದೆಯೆಂದರೆ, ಮನೆಯಲ್ಲಿ ಹೆಣ್ಣು ಹುಟ್ಟುವುದು ಬೇಡ. ಹೆಣ್ಣು ದೇವರ ಬಳಿ ಬರುವುದು ಬೇಡ. ಅವಳ ಬುದ್ಧಿಮತ್ತೆ ತೋರಿಸುವುದು ಬೇಡ. ಅಧಿಕಾರದ ಸನಿಹ ಬರುವುದು ಬೇಡವೇ ಬೇಡ. ಬೇಕಿರುವುದು ಅವಳ ದೇಹ-ಬೆವರು-ರಕ್ತ ಮಾತ್ರ. ಅದೂ ಗಂಡಿನ ಸೇವೆ ಮಾಡಲು ಮತ್ತು ಮಕ್ಕಳ ಹೆತ್ತು ಕೊಡಲು. ‘ದಾಸಿಯಂತೆ ಸೇವೆ ಮಾಡುವ, ಮಂತ್ರಿಯಂತೆ ಸಮಾಲೋಚನೆಗೆ ಸಿಗುವ, ರಂಭೆ(ವೇಶ್ಯೆ)ಯಂತೆ ಹಾಸಿಗೆ ಸುಖವ ಕೊಡುವ, ತಾಯಿಯಂತೆ ಉಣಿಸುವ, ರೂಪದಲ್ಲಿ ಲಕ್ಷ್ಮಿಯಂತೆ, ಇರುವ’ ಮಾದರಿ ಹೆಣ್ಣು ಪತ್ನಿಯಾಗಿ ಬೇಕು ಎಂದೇ ಎಲ್ಲ ಗಂಡುಗಳು ನಿರೀಕ್ಷಿಸುತ್ತಾರೆ. ಪುರುಷ ಸಮಾಜದ ಈ ಧೋರಣೆಯನ್ನು ಕತೆ, ಹಾಡು, ಪುರಾಣಗಳಾಗಿಸಿ ಹೆಣ್ಣುಗಳ ತಲೆಗೆ ತುಂಬಲಾಗಿದೆ. ಮಾತೃದೇವತೆ, ಅನ್ನಪೂರ್ಣೆ, ಕ್ಷಮಯಾಧರಿತ್ರೀ ಮೊದಲಾದ ಮುಳ್ಳಿನ ಕಿರೀಟಗಳನ್ನು ಹೆಣ್ಣುಗಳ ತಲೆಯ ಮೇಲಿಡಲಾಗಿದೆ.

ಹತ್ತು ಹಲವು ನಿರೀಕ್ಷೆಗಳಿಗೆ ತಕ್ಕವಳಾಗಿ ಬದುಕಲು ಹಲವಾರು ಕೆಲಸಗಳನ್ನು ಒಮ್ಮೆಗೇ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಹೆಣ್ಣುಗಳ ಮೇಲಿದ್ದರೂ, ಅದು ‘ಮಲ್ಟಿಟಾಸ್ಕಿಂಗ್’ ಎಂಬ ಬಿರುದಿಗೆ ಪಾತ್ರವಾಗಿದೆ. ಆದರೆ ಹೆಣ್ಣು ಬದುಕಿನ ಗುಣಾತ್ಮಕತೆಯನ್ನು ಅದೇ ಕಡಿಮೆ ಮಾಡಿದೆ. ಕೆಲಸದ ಸ್ಥಳದಲ್ಲೂ ಮಹಿಳೆಗೆ ಎರಡನೆಯ ದರ್ಜೆ ಸ್ಥಾನ, ಅಪಾಯಗಳೇ ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಈಗವರು ಮನೆಯಾಚೆಗೂ ದುಡಿದು ಗಳಿಸುತ್ತಿದ್ದರೂ ಮನೆಗೆ ಬಂದನಂತರ ವಿರಾಮ ಮರೀಚಿಕೆಯಾಗಿದೆ. ಅತಿಶ್ರಮದ ಅನುಭವಗಳು ಹೆಣ್ಣು ಜನ್ಮ ಕೀಳು, ಹೆಣ್ಣು ಜನ್ಮ ಬೇಡ ಎಂದು ಹೆಣ್ಣುಗಳೇ ಹೇಳುವಂತೆ ಮಾಡಿವೆ.

ಅರಿಸ್ಟಾಟಲ್ ‘ಗಂಡು ಅಂತ ಒಂದೇ ಪ್ರಬೇಧ ಇದ್ದು ಹೆಣ್ಣು ಅಪೂರ್ಣ ಮಾನವ ಜೀವಿಯಾಗಿದ್ದಾಳೆ’ ಎನ್ನುತ್ತಾನೆ. ಇದನ್ನೇ ಗಂಡುಪ್ರಧಾನ ಸಮಾಜ ಈಗಲೂ ನಂಬಿಕೊಂಡಿದೆ. ಆದರೆ ಲಿಂಗತಾರತಮ್ಯವು ಪ್ರಾಕೃತಿಕವಲ್ಲ, ಸಾಂಸ್ಕೃತಿಕವಾದದ್ದು ಎಂದು ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆಯಿದೆ. ಅದಕ್ಕೆ ಒಂದೇ ದಾರಿ: ‘ಸಮತೆಯೆಡೆಗೆ ನಮ್ಮ ನಡಿಗೆ..’ ಈ ಬಾರಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷವಾಕ್ಯ ‘ಸಮಾನತೆಯ ತಲೆಮಾರು ನನ್ನದು: ಪಡೆಯುತಿಹೆವು ಮಹಿಳಾ ಹಕ್ಕುಗಳ ಅರಿವು’ ಇದನ್ನೇ ಧ್ವನಿಸುವಂತಿದೆ.

ಸಮಾನತೆಯ ಅರ್ಥವನ್ನು, ಸೌಂದರ್ಯವನ್ನು ಸಮಾಜ ಅರಿತು ರೂಢಿಸಿಕೊಂಡಲ್ಲಿ ಆಗ ಈ ಭೂಮಿ ಖಂಡಿತವಾಗಿ ಈಗಿರುವುದಕ್ಕಿಂತ ನೆಮ್ಮದಿಯ ನೆಲೆಯಾಗುತ್ತದೆ. ಎಷ್ಟೋ ಸಂಕಟಗಳು ತಂತಾವೇ ಪರಿಹಾರ ಕಾಣುತ್ತವೆ.

 (ಚಿತ್ರಗಳು: ಅಂತರ್ಜಾಲದಿಂದ)