Monday 15 April 2024

Annihilation of Caste ಜಾತಿ ವಿನಾಶ - ಜಾತಿ ಅಸ್ಮಿತೆ: ಯುವ ಭಾರತದ ಕಣ್ಣಲ್ಲಿ

 



ಡಾ. ಬಿ. ಆರ್. ಅಂಬೇಡ್ಕರರ ಪ್ರಮುಖ ಚಿಂತನೆಗಳಲ್ಲಿ ಜಾತಿ ವಿನಾಶವೂ ಒಂದು. ಜಾತ್ಯತೀತ ಸಮಾಜ ಕಟ್ಟುವ ಆಶಯದಿಂದಲೇ ಸ್ವತಂತ್ರ ಭಾರತ ಸಂವಿಧಾನ ರೂಪುಗೊಂಡದ್ದು. ಆದರೆ ಇವತ್ತಿಗೂ ಹುಟ್ಟಿನೊಂದಿಗೆ ಅಂಟುವ ಜಾತಿಮತಗಳ ಅಸ್ಮಿತೆ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಮರಣಾನಂತರವೂ ಅದೇ ಗುರುತು ಮುಂದುವರೆಯುತ್ತದೆ. ಕೆಲವು ಸಮುದಾಯಗಳು ಸದಾ ತಾರತಮ್ಯ ಅನುಭವಿಸುವುದಕ್ಕೂ, ಮತ್ತೆ ಕೆಲವು ಸದಾ ಅಯಾಚಿತ ಸವಲತ್ತು ಪಡೆಯುತ್ತಿರುವುದಕ್ಕೂ ಇದೇ ನೇರ ಕಾರಣವಾಗಿದೆ. ಹೀಗೆ ಸಮಾಜದ ಪ್ರತಿ ಘಟಕವೂ ಜಾತಿಮತಗಳ ಅಸ್ಮಿತೆ, ಮೋಹದಲ್ಲಿ ಮುಳುಗಿ ಹೋಗಿರುವಾಗ ರಾಜಕಾರಣ, ಧಾರ್ಮಿಕ ಸಂಘಟನೆ-ಸಂಸ್ಥೆಗಳು, ಆಚರಣೆಗಳಷ್ಟೇ ಇದಕ್ಕೆ ಕಾರಣವೋ? ಅಥವಾ ಜಾತಿವಿನಾಶಕ್ಕಾಗಿ ಕರೆಕೊಡುವ ನಮ್ಮ ದಾರಿ, ಗುರಿಗಳೆಡೆಗಿನ ಅಸ್ಪಷ್ಟತೆ, ಅಪ್ರಾಮಾಣಿಕತೆಯೂ ಕಾರಣವೋ? ಜಾತಿವಿನಾಶ ನಿಜವಾಗಿ ಸಾಧ್ಯವೇ? ಅದು ಅಗತ್ಯವೇ? ಜಾತಿವಿನಾಶ ಎಂದರೇನು? ಮುಂತಾದ ಪ್ರಶ್ನೆಗಳು ಏಳುತ್ತವೆ. ಅವುಗಳಿಗೆ ಉತ್ತರ ಅರಸಲು ಯುವಜನರ ಮುಖಾಮುಖಿಯಾಗುವುದೊಂದು ಅರ್ಥಪೂರ್ಣ ಮಾರ್ಗವಾಗಿದೆ. 

ಈ ಆಶಯ ಹೊತ್ತು ನಮ್ಮ ಮನೆಯಲ್ಲಿ ಪ್ರತಿ ತಿಂಗಳು ನಡೆಸುವ ‘ಪ್ರಜ್ಞಾ ಜಾಗೃತಿ ಯುವಶಿಬಿರ’ದಲ್ಲಿ ಕಳೆದೆರೆಡು ವರ್ಷಗಳಿಂದ ೧೨೦೦ ಯುವಜನರನ್ನು ಮುಖಾಮುಖಿಯಾಗಿರುವೆ. ಹಲವು ಸಂಗತಿಗಳ ಬಗೆಗೆ ಬೆಳಕು ಚೆಲ್ಲುವ ೨೦ ಪ್ರಶ್ನೆಗಳಿಗೆ ಅನಾಮಿಕರಾಗಿ ಅವರು ಉತ್ತರಿಸುತ್ತಾರೆ. ಜೊತೆಗೆ ಈ ತಿಂಗಳ ಶಿಬಿರದಲ್ಲಿ, ‘ಹುಟ್ಟಿದ ಜಾತಿಯಲ್ಲಿ ನನ್ನ ಅನುಭವ’ ಎಂಬ ವಿಷಯದ ಬಗೆಗೆ ಹೆಸರು ನಮೂದಿಸದೆ ಒಂದುಪುಟ ಬರೆದುಕೊಟ್ಟಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ಹಿನ್ನೆಲೆಗಳಿಂದ ಬಂದವರು ತೋರಿಸಿದ ಉತ್ತರದ ಕಿಂಡಿಯ ಕೆಲ ತುಣುಕುಗಳಿಲ್ಲಿವೆ: 

  • ನಾನು ಎಸ್ಸಿ. ಬಾಬಾಸಾಹೇಬರ ಜಾತಿಯಲ್ಲಿ ಹುಟ್ಟಿರದಿಕ್ಕೆ ಹೆಮ್ಮೆಯಿದೆ. ಈಗ ಎಲ್ಲ ಜಾತಿಯೋರಿಗೂ ಯಾವ ಸ್ಥಳದಲ್ಲಾದರೂ ಕೆಲಸ ಮಾಡೋ ಅವಕಾಶವಿದೆ. ಇದುವರೆಗೆ ನಾನೇನೂ ದಲಿತಳು ಅಂತ ತೊಂದರೆ ಅನುಭವಿಸಿಲ್ಲ. ಆದರೂ ಕೆಲವೆಡೆ ಇದೆ ಅಂತ ಕೇಳಿದೇನೆ. ಜಾತಿ ಭೇದಭಾವ ಹೋಗಬೇಕು. ಯಾವುದಾದರೂ ಒಂದು ಸಾಧನೆ ಮಾಡಿ ದಲಿತ ಮಕ್ಕಳಿಗಷ್ಟೇ ಅಲ್ಲ, ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸ್ತೀನಿ. ಜಾತಿಪದ್ಧತಿ ಹೋಗಲಾಡಿಸ್ತೀನಿ. 
  • ಕೆಲವು ಕೀಳುಜಾತಿಯವರ ಅನುಭವ ಕೇಳಿ ‘ಯಪ್ಪಾ ಆ ಜಾತಿಯಲ್ಲಿ ಹುಟ್ಟಬಾರದು’ ಅನುಸ್ತಿತ್ತು. ಸದ್ಯ, ನಾವು ನಾಮದೇವ ಸಿಂಪಿಗೇರರು. ನಮ್ಜಾತಿ ಅಂದ್ರೆ ನಂಗಿಷ್ಟ. ನಮ್ಮ ದೇವರು ಪಾಂಡುರಂಗ ವಿಠಲ. ನಂಗೆ ಈ ಜಾತಿ ಬಿಟ್ಟು ಮತ್ಯಾವ ಜಾತಿಯಲ್ಲೂ ಹುಟ್ಟಕ್ಕೆ ಇಷ್ಟವಿಲ್ಲ. 
  • ನನ್ನ ಜಾತಿಯಲ್ಲಿ ಹುಟ್ಟಿದ್ದಕ್ಕೆ ಬೇಸರ ಇದೆ. ಎಲ್ಲಾರಿಗು ಇವರು ದೌರ್ಜನ್ಯ ಮಾಡಿದಾರೆ. ಮುಂದಿನ ಜನ್ಮ ಅಂತಿದ್ರೆ ಮನುಷ್ಯರಾಗಿ ಹುಟ್ಟಬಾರದು ಅನಿಸಿದೆ. 
  • ನಾನು ಹಿಂದೂ ಹಟಗಾರ. ನೇಕಾರಿಕೆ ಮಾಡ್ತೀವಿ. ಅಟ್ಟಿಮಟ್ಟಿ ಮಗ್ಗ, ಪಾರ್ಲಾ ಮಗ್ಗ ನಮ್ಮನೇಲಿದಾವೆ. ನಂಗೆ ನನ್ ಜಾತಿ ಮೇಲೆ ತುಂಬಾನೇ ಅಭಿಮಾನ, ತುಂಬಾನೆ ವಿಶ್ವಾಸ. ನನ್ ಪ್ರಕಾರ ನಮ್ಜಾತಿ ತುಂಬಾನೆ ಒಳ್ಳೆದು. ಈ ಜಾತಿಯಲ್ಲಿ ಹುಟ್ಟಿರೋದಕ್ಕೆ ಹೆಮ್ಮೆಯಿದೆ. 
  • ನನ್ನದು ‘ಮೇಲುಜಾತಿ’ ಅಂತ ಕರೆಸಿಕೊಂಡಿದೆ. ಅದಕ್ಕಾಗಿಯೇ ಇಡೀ ಜಿಲ್ಲೆಗೆ ಮೂರನೆಯ ರ‍್ಯಾಂಕ್ ಬಂದ್ರೂ ಮೊರಾರ್ಜಿ ವಸತಿ ಶಾಲೆಯಲ್ಲಿ ರಾಜ್ಯದ ಎಲ್ಲೂ ಸೀಟು ಸಿಗಲಿಲ್ಲ. ಕಾಲೇಜಿಗೆ ಹೋಗಕ್ಕೆ ಬಸ್ ಪಾಸ್ ಮಾಡಿಸುವಾಗಲೂ ೧೫೦೦ ರೂಪಾಯಿ ಕೊಡಬೇಕಿತ್ತು. ಕಷ್ಟದಿಂದ ಶುಂಠಿ ತಿಕ್ಕಿ ಹಣ ಹೊಂದಿಸಿದ್ವಿ. ನನ್ನ ಕ್ಲಾಸ್‌ಮೇಟ್ ಎಸ್ಸಿ. ಅವಳಪ್ಪ ನೌಕರಿಯಲ್ಲಿದ್ದರೂ ಅವರಿಗೆ ೧೫೦ ರೂಪಾಯಿ. ಈ ತಾರತಮ್ಯ ಜಾತಿ ಆಧಾರಿತ ಮೀಸಲಾತಿಯ ಬಗೆಗೆ ವಿರೋಧ ಹುಟ್ಟಿಸಿತು. ಆದರೆ ಆಮೇಲೆ ಓದು, ಆತ್ಮಾವಲೋಕನದಿಂದ ಅಭಿಪ್ರಾಯ ಬದಲಾಗಿದೆ. ನನಗೆ ಸಿಗದ ಸೀಟಿನಲ್ಲಿ ಒಬ್ಬ ಹಿಂದುಳಿದ ಹುಡುಗಿ ಓದಿದಾಳೆ ಅಂತ ಸಮಾಧಾನ ಮಾಡ್ಕೊಂಡಿದೀನಿ.   
  • ನಂದು ಹಿಂದೂ ಮರಾಠಾ ಜಾತಿ. ಶಿವಾಜಿ ಮಹಾರಾಜ ಅಂದ್ರೆ ತುಂಬಾನೇ ಇಷ್ಟ. ಅವರವರ ಜಾತಿ ಅವರವರಿಗೆ ಶ್ರೇಷ್ಠ. ನನಗೆ ನಮ್ಮ ಜಾತಿ ಶ್ರೇಷ್ಠ. ಜಗತ್ತಿನಲ್ಲಿರುವವೆಲ್ಲ ಪಂಥಗಳು. ಇರುವ ಏಕೈಕ ಧರ್ಮ ಹಿಂದೂಧರ್ಮ. ನಾನು ಹಿಂದೂ ಅಂತ ನಂಗೆ ಹೆಮ್ಮೆಯಿದೆ.
  • ಲಿಂಗಾಯತಳಾಗಿ ಹುಟ್ಟಿದ್ದು ಒಂದುಕಡೆ ಹೆಮ್ಮೆ, ಇನ್ನೊಂದು ಕಡೆ ಅಸಮಾಧಾನ. ಮೂರ್ತಿಪೂಜೆ, ಹೋಮಹವನ, ಯಜ್ಞಯಾಗ ಮಾಡ್ತಿದಾರೆ ಮತ್ತು ಅದನ್ನು ಬಸವಣ್ಣ ವಿರೋಧಿಸಿದಾನೆ. ಇರುವುದು ಮಾನವ ಜಾತಿ ಒಂದೇ. ಉಳ್ಳವರು ಇಲ್ಲದವರನ್ನು ಶೋಷಣೆ ಮಾಡಲು ಜಾತಿವ್ಯವಸ್ಥೆ ಮಾಡಿಕೊಂಡರು. ನಾನು ಬಸವಣ್ಣನವರು, ಗೌತಮ ಬುದ್ಧ, ಅಂಬೇಡ್ಕರರನ್ನು ಅನುಸರಿಸಿ ಬದುಕಲು ಇಷ್ಟಪಡುತ್ತೇನೆ.
  • ಗೌಡರ ಜಾತಿಯಲ್ಲಿ ಹುಟ್ಟಿದೆ. ಮನೆಯೋರು ಮಾಡೋ ಜಾತಿ ತಾರತಮ್ಯ ನೋಡಿಕೊಂಡೇ ಬಂದಿದೀನಿ. ಅವರು ಬೇರೆ ಜಾತಿಯೋರು ನಮ್ಮನೆಗೆ ಬಂದರೆ ದೇವರು ಕೋಪ ಮಾಡ್ಕೋತದೆ ಅಂದ್ಕೋತಾರೆ. ಅಮ್ಮ ಬೈತಾಳಂತ ಮೊದಮೊದಲು ಬೇರೆ ಜಾತಿ ಫ್ರೆಂಡ್ಸನ್ನ ಮನೆಗೆ ಕರೀತಿರಲಿಲ್ಲ. ಈಗ ಕರೆದು ಬಿಡ್ತೀನಿ, ಹೋದ್ಮೇಲೆ ಯಾವ ಜಾತೀಂತ ಹೇಳ್ತೀನಿ. ಅವರು ಬಂದುಹೋಗಿದ್ದಕ್ಕೆ ಮನೆ ಏನ್ ಬಿದ್ದೋಯ್ತಾಂತ ವಾದ ಮಾಡ್ತೀನಿ. ನಮ್ಮಮ್ಮ ಈಗೀಗ ಜಾತಿಗೀತಿ ನಂಬೋದು ಕಮ್ಮಿ ಮಾಡಿದಾರೆ. ನನ್ನ ಫ್ರೆಂಡ್ಸ್‌ನ ಚೆನ್ನಾಗಿ ಸತ್ಕಾರ ಮಾಡ್ತಾರೆ. ಅದು ಖುಷಿ ವಿಷಯ. ಆದ್ರೆ ಹಿಂದೂ-ಮುಸ್ಲಿಂ ಶತ್ರುಗಳು ಅನ್ನೋ ತರ ಮಾತಾಡ್ತಾರೆ. ಹಾಗಲ್ಲ ಅಂತ ನಂಗೊತ್ತು. ಆದರೆ ಅವರತ್ರ ದನಿ ಎತ್ತಕ್ಕೆ ಆಗಿಲ್ಲ. 
  • ನಾನು ಇಸ್ಲಾಂ ಧರ್ಮದಲ್ಲಿ ಹುಟ್ಟಿದೇನೆ. ಇದರಲ್ಲಿ ಪರ್ದಾ ಪದ್ಧತಿ ಬಹಳಾ ವಿಶೇಷ ಪದ್ಧತಿಯಾಗಿದೆ. ನನಗದು ಸೇಫ್ಟಿ ಫೀಲ್ ಆಗುತ್ತೆ. ನಮಾಜ್, ಕುರಾನ್, ರಂಜಾನ್ ಎಲ್ಲ ನಂಗಿಷ್ಟ. ನಮ್ಮ ಜಾತಿಯಲ್ಲಿ ಎಲ್ಲ ಸಮಾನರು ಅಂತಾ ಭಾವಿಸುತ್ತಾರೆ. 
  • ಜಾತಿ ಎಂಬ ಪದದ ಬಗೆಗೇ ನಂಗೆ ಸಿಟ್ಟು. ನಾನು ಹುಟ್ಟಿದ ಜಾತಿಯವರು ಭೇದಭಾವ ಅನುಭವಿಸೋದನ್ನು ಕಣ್ಣಾರೆ ಕಂಡಿದೀನಿ. ನಾವು ಅವರ ಬಿಂದಿಗೇನ ಮುಟ್ಟಿದ್ವಿ ಅಂತ ಬೈದು ಗೋವಿನ ಸಗಣಿ ತಂದು ತೊಳೆದು ನೀರು ತಗಂಡು ಹೋಗಿದ್ರು. ಮತ್ತೊಬ್ರು ನಮ್ ಸಮ್ಮಂದಿಕರು ಜಮೀನಲ್ಲಿ ಕೆಲಸ ಮಾಡಿ ಮಾಲೀಕರ ಮನೆಗೆ ಊಟಕ್ಕೆ ಹೋದರೆ ಸಾವುಕಾರ್ರು ತಮ್ಮನೇಲಿ ಊಟಕ್ಕಿಕ್ಕದೆ ನಮ್ಮೋರ ಮನೆಗೆ ಕಳಿಸ್ತಿದ್ರು. ನಾನು ‘ನೀವ್ಯಾಕೆ ಅವರ ಮನೆಗೆ ಕೆಲಸಕ್ ಹೋಗ್ತೀರಿ, ಬಿಡಿ’ ಅಂದೆ. ‘ಹಂಗಂದ್ರ ಆದತೇ? ಜೀವ್ನ ನಡೆಸಕ್ಕೆ ಕಾಸು ಬೇಕಲ್ಲ, ನಂಗೇನು ಬೇಜಾರಿಲ್ಲ’ ಅಂದ್ರು. ನಂಗೆ ಕಣ್ಣೀರು ಬಂತು. ನಾನು ಓದಿ ಏನು ಪ್ರಯೋಜನ ಅನಿಸ್ತು. ಮುಂದಿನ ಪೀಳಿಗೆಗೆ ಈ ರೀತಿ ಆಗದಂಗೆ ಏನಾದ್ರೂ ಮಾಡಬೇಕು.
  • ಇಲ್ಲಿಯವರೆಗು ಹಲ ತಿರುವುಗಳಲ್ಲಿ ಜಾತಿ ಪ್ರಶ್ನೆ ಬಂದಿದೆ. ಆದರೆ ಇದ್ಯಾವುದನ್ನೂ ನನ್ನೊಳಗಿಳಿಯಲು ಬಿಟ್ಟಿಲ್ಲ. ನನಗೆ ಜಾತಿ ಬಗ್ಗೆ ನಂಬಿಕೆನೇ ಇಲ್ಲ. ಒಂದೊಳ್ಳೆ ಸಮಾಜ ಸೃಷ್ಟಿಗೆ ಜಾತಿಗಳ ಅವಶ್ಯಕತೆಯಿಲ್ಲ. ಬೀಯಿಂಗ್ ಜೆನ್ ನೆಕ್ಸ್ಟ್, ಜಾತಿ ಹೊರತುಪಡಿಸಿ ನಾವು ಗಮನ ಹರಿಸಬೇಕಾದ ವಿಚಾರಗಳು ಸಾಕಷ್ಟಿವೆ. ನಾನು ನೋಡಿರೋ ಪ್ರಕಾರ ಯುತ್ಸ್ ಜಾತಿಧರ್ಮನ ಅಷ್ಟು ಕೇರ್ ಮಾಡಲ್ಲ.
  • ನನಗೆ ಅಲ್ಲಾಹನ ಮೇಲೆ, ನಮಾಜ್ ಮೇಲೆ ಬಹಳ ನಂಬಿಕೆಯಿದೆ. ನಮ್ಮ ಕುರಾನ್ ತಿಳಿಸುವ ಒಂದೊಂದು ಶಬ್ದವೂ ನಿಜವಾಗಿದೆ. ನಿಜವಾದ ಮನಸ್ಸಿಂದ ಬೇಡಿರುವುದೆಲ್ಲಾ ಸಿಕ್ಕಿದೆ. ನಂಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ.
  • ನಮ್ಮನೆಯಲ್ಲಿ ನಮಗಿಂತ ಕೆಳಜಾತಿಯೋರ ಫ್ರೆಂಡ್ ಮಾಡಿಕೋಬೇಡ ಅಂತಿದ್ದರು. ಇದು ನಂಗೆ ತುಂಬ ಕೋಪ ತರಿಸುತ್ತಿತ್ತು. ಕೆಳಜಾತ್ಯರು ಅನುಭವಿಸುವುದನ್ನು ಕಣ್ಣಾರೆ ಕಂಡಿದೇನೆ. ಅವರಿಗೆ ಮೀಸಲಾತಿ ಕೊಟ್ಟು ಬೆಳೆಯಲು ಅವಕಾಶ ಮಾಡಿರೋದು ಒಳ್ಳೆಯದು. ಆದರೆ ಜಾತಿ ಬೇಡ ಅನ್ನುವ ನಾವೇ ಅದನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಪ್ರತಿ ಅರ್ಜಿ ಫಾರಂನಲ್ಲೂ ಜಾತಿ ಕಾಲಂ ಇಟ್ಟಿದ್ದಾರೆ. ಇಂತಹ ಚಿಕ್ಕಚಿಕ್ಕ ತಪ್ಪುಗಳಿಂದಲೇ ಜಾತಿಯ ಬೆಳವಣಿಗೆ ಹೆಚ್ಚಿದೆ. 
  • ನಾನು ಒಕ್ಕಲಿಗ ಜಾತಿಯಲ್ಲಿ ಹುಟ್ಟಿರೋದು. ಜಾತಿಯಲ್ಲಿ ಒಕ್ಕಲಿಗ ಜಾತಿಯೇ ಮೇಲಂತ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ಒಂದ್ಕಡೆ ಹೇಳಿದಾರೆ. ಆದರೆ ಸಮಾಜ ಜಾತಿಗಿಂತ ಬಡವ ಶ್ರೀಮಂತ ಅಂತ ನೋಡುತ್ತದೆ. ನಾನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಚಿನ್ನಾಭರಣ ಹಾಕ್ಕೊಂಡವರನ್ನ ಚೆನ್ನಾಗಿ ಮಾತನಾಡಿಸಿ ಫೋಟೋಗೆ ಕರೀತಿದ್ರು. ಬಡವರನ್ನು ಕೀಳಾಗಿ ಕಂಡರು. ಒಂದು ಮದುವೆಯಿತ್ತು. ಒಂದಿನ ಹಿಂದೆನೆ ನಾವು ಹೋಗಿದ್ವು. ಅವರು ನಮಗೆ ನಕಲಿ ಓಲೆ ಕೊಟ್ಟು ತಾವು ಚಿನ್ನದೋಲೆ ಹಾಕ್ಕಂಡರು. ನಮ್ಮೂರಲ್ಲಿ ಒಂದು ಗೃಹಪ್ರವೇಶ ಇತ್ತು. ನಮ್ಮ ಹತ್ತಿರ ಯಾವುದೇ ಚೆನ್ನಾಗಿರೋ ವಸ್ತು ಇಲ್ಲಂತ ಕರೀಲೇ ಇಲ್ಲ. ನಮ್ಮ ಅಕ್ಕಪಕ್ಕದೋರೂ ನಮ್ಮನೆ ಚೆನ್ನಾಗಿಲ್ಲ ಅಂತ ಮಾತನಾಡಲ್ಲ. ಹೀಗೆ ಒಳಗಿನವರೆ ಬಡವರಿಗೆ ತಾರತಮ್ಯ ಮಾಡ್ತಾರೆ. ಈ ಜಾತೀಲ್ ಹುಟ್ಟಿದ್ದು ನಂ ತಪ್ಪಾ? ಅದಕ್ಕೇ ಜಾತಿಯಲ್ಲ, ಬಡತನದ ಆಧಾರದ ಮೇಲೆ ಮೀಸಲಾತಿ ಕೊಡ್ಬೇಕು.
  • ನಾನು ಎಸ್ಸಿ ಮಾದಿಗ. ಈ ಜಾತಿಯಲ್ಲಿ ಇರೋಕೆ ಇಷ್ಟ ಇದ್ದಿಲ್ಲ. ಮುಂಚೆಯಿಂದನೂ, ಮುಂದೆನೂ. ಯಾಕಂದ್ರೆ ನಂಗೆ ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೋವು, ಹಿಂಸೆ, ಅವಮಾನ ಆಗಿದೆ. ಮನೆ ಜವಾಬ್ದಾರಿ ನನ್ನ ಮೇಲೇ ಇರೋ ಕಾರಣಕ್ಕೆ ಕೆಲ್ಸ ಕೇಳ್ಕಂಡು ಹೋಗ್ತಿದ್ದೆ. ಜಾತಿ ಕೇಳಿ ಬೇಡ ಅಂದಿದ್ದು, ಮಾದಿಗಿತ್ತಿ ಅಂತ ಬೈದಿದ್ದು, ನಿನ್ ಜಾತಿಯೋರು ಸೂಳೆ ಕೆಲಸಕ್ಕೆ ಬೀದೀಲಿ ನಿಲ್ತಾರೆ ಅಂತ ಮೈಕೈ ಮುಟ್ಟಿದ್ದು, ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಂಡು ಮನೆ ಸೇರಿದ್ದು ನೋವು ಕೊಟ್ಟಿದೆ. ಮನೆ ಪರಿಸ್ಥಿತಿ ನೆನೆಸಿಕೊಂಡು ಎಲ್ಲ ನುಂಗಿದೆ. ಬರಬರ‍್ತ ನನ್ನ ಮೇಲೇ ನಂಗೆ ಹೇಸಿಕೆಯಾಗೋಯ್ತು. ಈಗ ಎಲ್ಲಾದರಿಂದ ಹೊರಬರತಾ ಇದೀನಿ. ನನ್ನ ನಾನು ಇಷ್ಟಪಡೋದಕ್ಕೆ ಶುರು ಮಾಡಿದೀನಿ.
  • ನನ್ನ ಜಾತಿ ಇಟ್ಕೊಂಡು ಅವಮಾನ ಮಾಡಿದಾರೆ. ಆದರೆ ನಾನದನ್ನ ತಲೇಲಿ ಇಕ್ಕಂಡಿಲ್ಲ. ಈ ಜಾತಿನ ಮಾದರಿ ಮಾಡಿಕೊಟ್ಟಿರೋರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಯಾರೇ ಅವಮಾನ ಮಾಡಿದ್ರೂ ನಾವು ಕುಗ್ಗೋದಿಲ್ಲ, ಅದನ್ನೇ ಶಕ್ತಿ ಮಾಡ್ಕೋತೀವಿ. ಯಾರು ಏನೇ ಹೇಳ್ಲಿ ನಮ್ಜಾತಿಗೆ, ನಾನದನ್ನ ಕೇರ್ ಮಾಡಲ್ಲ. ಈಗೇನೂ ಮೊದಲಿನಂಗೆ ತಾರತಮ್ಯ ಆಗೋದಿಲ್ಲ. ಎಲ್ಲರೂ ಮನೆ ಒಳಗೆ ಕರೆದು ಮಾತಾಡಿಸ್ತಾರೆ. ಚೆನಾಗೇ ಮಾತಾಡಿಸ್ತಾರೆ. ಆದರೂ ನಾನು ಯಾರ ಮನೆಗೆ ಹೋಗಲ್ಲ. ಅವಮಾನ ಮಾಡ್ತಾರೇನೋ ಅನಿಸುತ್ತೆ. ನನಗೆ ನನ್ ಜಾತಿ ಮೇಲೆ ಬಾಳ ಹೆಮ್ಮೆಯಿದೆ. 


ಇದೇ ಯುವಜನರು ಅನಾಮಿಕರಾಗಿ ಬರೆದ ಉತ್ತರಗಳಲ್ಲಿ 50% ಜನ ಒಂದಲ್ಲ ಒಂದು ಜಾತಿತಾರತಮ್ಯ ಅನುಭವಿಸಿದ್ದರು. 85% ಮೀಸಲಾತಿ ಜಾತಿ ಆಧಾರದಲ್ಲಿ ಇರಬಾರದು ಎಂದು ಹೇಳಿದ್ದರು. ಆಯ್ಕೆ ಅವಕಾಶವಿದ್ದರೆ 60% ಯುವಜನರು ಖಚಿತವಾಗಿ ಒಂದು ಜಾತಿ/ಧರ್ಮದಲ್ಲಿ ಹುಟ್ಟಲು ಬಯಸಿದ್ದರು. ಅರ್ಧದಷ್ಟು ಜನ ಸಂಗಾತಿ ಆಯ್ಕೆಯಲ್ಲಿ ತಮ್ಮ ಜಾತಿಯೇ ಬೇಕೆಂದರು. ಆದರೆ 100% ಯುವಜನರು ಜಾತಿವಿನಾಶವಾಗಬೇಕೆಂದು ಬಯಸಿದ್ದರು! 

ಯುವಭಾರತ ಹೀಗೆ ಸಾಗುತ್ತಿದೆ. ಒಂದೇ ದೇಶ, ಒಂದೇ ಸಮಾಜ, ಒಂದೇ ಕಾಲಮಾನದಲ್ಲಿ ಬದುಕುತ್ತಿರುವ ಯುವಜನರ ಅಭಿವ್ಯಕ್ತಿ, ಅನುಭವದಲ್ಲಿ ಮೇಲ್ಕಾಣಿಸಿದಂತೆ ಅಪಾರ ವ್ಯತ್ಯಾಸ, ಗೊಂದಲಗಳಿವೆ. ಹಲವರಿಗೆ ತಮ್ಮ ಜಾತಿ, ಧರ್ಮದ ಮೇಲೆ ಅಪಾರ ಅಭಿಮಾನವಿದೆ. ‘ಕೀಳುಜಾತಿ’ ಎಂಬ ಪದಬಳಕೆ ಸಾಮಾನ್ಯವಾಗಿದೆ! ‘ಅನ್ಯ’ಜಾತಿಗಳ ಬಗೆಗೆ ಮನೆಗಳಲ್ಲಿ ನಡೆಯುವ ಚರ್ಚೆಗಳು ಯುವಜನರಲ್ಲಿ ತಪ್ಪು ಅಭಿಪ್ರಾಯಗಳನ್ನೂ, ಹುಸಿ ಜಾತಿ ಶ್ರೇಷ್ಠತೆಯನ್ನೂ, ಅಲ್ಲಿಲ್ಲಿ ಜಾತಿಮತಗಳ ಗಡಿ ಮೀರುವ ಪ್ರಯತ್ನಗಳನ್ನೂ ಹುಟ್ಟುಹಾಕಿವೆ. ಮೀಸಲಾತಿಯನ್ನು ಬಡತನ ನಿರ್ಮೂಲನೆಯ ಕಾರ್ಯಕ್ರಮವೆಂದು ಭಾವಿಸಿದಂತಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ಕುಟುಂಬದಲ್ಲಿ, ಸಮಾಜದಲ್ಲಿ ಇಲ್ಲದ್ದರಿಂದಲೇ ಮೀಸಲಾತಿಗೆ ಅಪಾರ್ಥ ತುಂಬಿಕೊಂಡಿದೆ. 

ಇವೆಲ್ಲ ವಿಷಯಗಳನ್ನು ಯುವಜನರ ಬಳಿ ಅಂಕಿಅಂಶಗಳೊಂದಿಗೆ, ಸಂವಿಧಾನದ ಆಶಯಗಳೊಂದಿಗೆ ವಿವರವಾಗಿ ಚರ್ಚಿಸುವ ಅಗತ್ಯವಿದೆ. ಸಮಾನತೆ ಯಾವುದು? ಅದನ್ನು ತರುವುದು ಹೇಗೆಂದು ಅರಿವಾಗಬೇಕಾದರೆ ನಮ್ಮೊಳಗಿನ ನ್ಯಾಯದ ಕಣ್ಣುಗಳನ್ನು ತೆರೆದುಕೊಳ್ಳಬೇಕಿದೆ. ಅದಕ್ಕಾಗಿಯೇ ಸಂವಿಧಾನದ ಪೀಠಿಕಾ ಭಾಗದಲ್ಲಿ ಮೊದಲು ‘ನ್ಯಾಯ’ ಬರುತ್ತದೆ; ನಂತರ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಬರುತ್ತವೆ ಎಂದು ಯುವಜನರಿಗೆ ಎತ್ತಿ ತೋರಿಸಬೇಕಿದೆ.

ಹಾಗಂತ ನಿರಾಶರಾಗಬೇಕಿಲ್ಲ. ಕಾರ್ಮೋಡದಂಚಿಗೆ ಬೆಳ್ಳಿಮಿಂಚೂ ಇದೆ. ಈ ಸಲದ ಶಿಬಿರಾರ್ಥಿಗಳ ಉತ್ತರವನ್ನು ಹೀಗೂ ವಿಶ್ಲೇಷಿಸಬಹುದು: ಶಿಬಿರಾರ್ಥಿಗಳಲ್ಲಿ ಆಯ್ಕೆಯ ಅವಕಾಶವಿದ್ದರೆ ಜಾತಿಯೊಲ್ಲದೆ ಮನುಷ್ಯಜಾತಿ/ಪ್ರಾಣಿಪಕ್ಷಿಯಾಗಿ ಹುಟ್ಟಲು ೪೦% ಯುವಜನರು ಬಯಸಿದ್ದರು! ೮೫% ಜಾತಿತಾರತಮ್ಯವನ್ನು ತಾವು ಮಾಡಿಲ್ಲ ಎಂದಿದ್ದರು. ಸಂಗಾತಿ ಆಯ್ಕೆಯಲ್ಲಿ ಯಾವ ಜಾತಿಯಾದ್ರೂ ಅಡ್ಡಿಯಿಲ್ಲ ಎಂದು ೫೦% ಯುವಜನರು ಹೇಳಿದ್ದರು. ಎಲ್ಲರೂ ಜಾತಿವಿನಾಶವಾಗಲೇಬೇಕೆಂದು ಹೇಳಿದ್ದರು!

ನಿಜ. ಭರವಸೆಯಿಡೋಣ. ನಮ್ಮೆಲ್ಲರ ನ್ಯಾಯದ ಕಣ್ಣುಗಳನ್ನು ಮಬ್ಬುಗೊಳಿಸಿರುವ ಜಾತಿ, ಮತ, ದೇಶ, ಭಾಷೆ, ಲಿಂಗತ್ವಗಳೆಂಬ ಮೋಹದ ಧೂಳನ್ನು ಝಾಡಿಸಿಕೊಳ್ಳೋಣ. ಈ ಕಾಲದ ಅಗತ್ಯಗಳಿಗೆ ತಕ್ಕಂತೆ ಬಾಬಾಸಾಹೇಬರ, ಅಷ್ಟೇ ಅಲ್ಲ ಬುದ್ಧ-ಬಸವ-ಅಕ್ಕ-ಅಲ್ಲಮ-ಕಬೀರ-ನಾರಾಯಣಗುರು-ಮಾರ್ಕ್ಸ್-ಫುಲೆ-ಗಾಂಧಿ-ಪೆರಿಯಾರರ ವಿಚಾರಧಾರೆಗಳನ್ನು ಅರಿತು, ಮುರಿದು, ಒಟ್ಟು ಸೇರಿಸಿ, ಹೊಸದಾಗಿ ಕಟ್ಟೋಣ. 

                                                                                                                     ಡಾ. ಎಚ್. ಎಸ್. ಅನುಪಮಾ





Wednesday 3 April 2024

ಜಿಜ್ಞಾಸೆ




ಥಿಸಿಯಸ್
ನಿಜಕ್ಕೂ ಹಾಗೊಬ್ಬ ಇದ್ದನೋ
ಕತೆಯಲ್ಲಿ ಬೆಳೆದವನೋ
ಗೊತ್ತಿಲ್ಲ.
ಇಷ್ಟು ನಿಜ, ಅವನೊಬ್ಬ ಮಹಾನ್ ಗ್ರೀಕ್ ವೀರ
ಅರಿ ಭಯಂಕರ
ಗ್ರೀಸಿನವರ ಹೃದಯದರಸ
ಪುರಾಣದ ಜನಪ್ರಿಯ ನಾಯಕ
ಕ್ರಿಸ್ತಪೂರ್ವದಲ್ಲಿ ಮಿನೊಟರನ ಕೊಂದು
ವಿಜಯಿ ಥಿಸಿಯಸನ ಹಡಗು
ಅಥೆನಿನ ಕ್ರೀಟ್ ದಂಡೆಗೆ ಬಂದು
ಲಂಗರು ಹಾಕಿ ನಿಂತಿತು
ಕಳೆದಂತೆ ಕಾಲ
ಇಲ್ಲವಾಯಿತು ಥಿಸಿಯಸನ
ಭೌತಿಕ ದೇಹ
ಆದರೇನು
ಗುಡಿಗೋಪುರ ಮಾರ್ಗ
ಮನೆಮನಗಳಲಿ ನೆಲೆಯಾದ ಅವ
ನಿಧಾ..ನ ಅವನಿಲ್ಲವಾಗಿ
ವರುಷ ಸರಿದವು ಶತಮಾನ ಸಂದವು
ಅವ ಬಂದಿದ್ದ ಹಡಗು
ಕ್ರೀಟ್ ದಂಡೆಯಲಿ ಹಳತಾಯಿತು
ಮರಮುಟ್ಟು ಕೊಳೆಯತೊಡಗಿತು
ಸಡಿಲಾದವು ತುಕ್ಕು ಹಿಡಿದ ತಿರುಪು
ಕಳಚಿತು ಕಿರುಗುಡುವ ಚಿಲಕ ಸಂದು
ಹೆಗ್ಗಳ ಇಲಿ ಜಿರಲೆ ಗೆದ್ದಲು..
ಛೇ! ಛೇ!! ಛೇ! ಛೇ!!
ನಮ್ಮ ಥಿಸಿಯಸನ ಹಡಗು
ಹೀಗೆ ಲಡ್ಡಾಗಬಹುದೇನು?
ಪಾಚಿಗಟ್ಟಿ ಜಾರುವ ಹಲಗೆಗಳ ಬದಲಿಸಿದರು
ತಿರುಪುಗಳ ತಿರುಗಿಸಿದರು
ಬಣ್ಣ ಬಳಿದರು ಮೊಳೆ ಹೊಡೆದರು
ಅಂಟು ತಿಕ್ಕಿ ಚಂದಗೊಳಿಸಿದರು
ಪತಾಕೆ ಬೇರೆ ಹಾರಿಸಿದರು
ಹಗ್ಗ ಹೊಸೆದು ಹೊಸತು ಕಟ್ಟಿದರು
ಇಂತು ಹಡಗು ದುರಸ್ತಿಗೊಳುತ ಹೋಗಿ
ನಿಂತೇ ಇದೆ ಈಗಲೂ ಗಟ್ಟಿಮುಟ್ಟಾಗಿ
ಸಾವಿರಾರು ವರುಷಗಳ ಹಿಂದಿನ ನೆನಪಾಗಿ..
ಹೀಗೆ
ಎಲ್ಲ ಅಂದರೆ ಎಲ್ಲ ಬದಲಿಸಿಕೊಂಡು
ಕ್ರೀಟ್ ದಂಡೆಯಲಿಂದೂ ನಿಂತಿರುವ ಅದು
ಹಡಗೇನೋ ಹೌದು,
ಆದರೆ ಥಿಸಿಯಸನ ಹೊತ್ತು ತಂದದ್ದೆ ಅದು?
ಹಲಗೆ ಮೊಳೆ ಚಿಲಕ ಬಣ್ಣಗಳ ಬದಲಿಸಿಕೊಂಡದ್ದು
ಹೇಗಾದೀತು ಥಿಸಿಯಸನದು?
ಈಗಿರುವ ಹಡಗು ಯಾರದು?
ಥಿಸಿಯಸನ ಹಡಗು ಯಾವುದು?
ಒಂದು ದಂಡೆ ಕಚ್ಚಿ ಹಿಡಿದು
ಅಂದಿನಿಂದ ಇಂದಿನವರೆಗು
ಇಷ್ಟೂ ಇಂಟು ಇಷ್ಟಡಿ ಜಾಗದಲ್ಲಿ
ಗೂಟ ಹೊಡಕೊಂಡು
ಥಿಸಿಯಸನ ಹೊತ್ತು ತಂದ ತಾಣದಲೇ ನಿಂತದ್ದಕ್ಕೆ
ಅದೇ ಇದು ಎಂಬ ಬಿರುದೋ?
ಹೀಗೊಂದು ಜಿಜ್ಞಾಸೆ ಕೊರೆಯತೊಡಗಿತು
ಎರಡು ಸಾವಿರ ವರುಷಗಳ ಕೆಳಗೆ
ಫ್ಲುಟಾರ್ಕನೆಂಬ ಗ್ರೀಕ್ ಕಥನಕಾರನಿಗೆ.
ಜಿಜ್ಞಾಸೆ ಫ್ಲುಟಾರ್ಕನಿಗಷ್ಟೇ ಅಲ್ಲ ಸಂಗಾತಿ,
ಮೊಳೆಯುತಿತ್ತು ನನ್ನೊಳಗೂ..
ಪುಟ್ಟ ಅಂಡವಾಗಿದ್ದೆ
ಗರ್ಭಚೀಲದೊಳಗೊಂದು ಮುದ್ದೆಯಾದೆ
ಅಳಲಾರದ ಆಡಲಾರದ ಜೀವವಾಗಿದ್ದದ್ದು
ಉಸಿರೆಳೆದ ಶಿಶುವಾಗಿ ಪೋರಿಯಾಗಿ ಕನ್ನೆಯಾಗಿ
ಬದಲಾಗುತ್ತಲೇ ಹೋದೆ
ಆವಾಗಾವಾಗ
ಕಂಡಿದ್ದು ಕೇಳಿದ್ದು
ಉಂಡಿದ್ದು ಅನುಭವಿಸಿದ್ದು
ಕೂಡಿದ್ದು ಕಾಡಿದ್ದು
ಎಲ್ಲವೆಂದರೆ ಎಲ್ಲವೂ
ಹಾವಿನಂತ ನನ್ನ ಪೊರೆ ಕಳಚಿ
ಬದಲಾಗುತ್ತ ಬಂದೆ
ಬದಲಾಗುತ್ತ ನಡೆದೆ
ಹಾಗಾದರೆ
ಈಗ ಉಸಿರಾಡುತ್ತಿರುವ
ಈ ಬಜಾರಿ ‘ನಾನು’
ನಿಜದ ನಾನೋ?
ಅಥವಾ
ಅಂದಿನ ಲಜ್ಜೆಮುದ್ದೆ ನಾನು, ನಿಜದ ನಾನೋ?
ಜಿಜ್ಞಾಸೆಯ ಕಿಲುಬು ತುಕ್ಕು
ಸಂದುಮೂಲೆಗಳ ತುಂಬುತಲಿದ್ದಾಗ
ಒಳಗೊಂದು ಜೀವ ಮಿಸುಕಿತು
ಒದ್ದು ಸ್ಫೋಟಗೊಂಡು ಒಂದುದಿನ ಹೊರಬಂತು
ಆಗ ನಿಚ್ಚಳವಾಯಿತು,
ಅಂದು ಅಮ್ಮಾ ಎಂದು ಅತ್ತವಳು ನಾನೇ
ಇಂದು ಅಮ್ಮಾ ಎನಿಸಿಕೊಳಲು ಅತ್ತವಳೂ ನಾನೇ..
ಕಾಲನದಿ ಒಳ ಹರಿದರೂನು
ದಿರಿಸು ಬದಲಿಸಿ ನಿಂತರೂ
ಕಂಬಳಿಹುಳವೂ ಚಿಟ್ಟೆಯೂ
ಬೇರೆಬೇರೆ ಎನಬಹುದೇ?
ಕಣ್ಣನೋಟಕ್ಕೆ ದಕ್ಕದಿರಬಹುದು
ಸತ್ಯ ಬದಲಾಗಬಹುದೇ?
ಡಾ. ಎಚ್. ಎಸ್. ಅನುಪಮಾ
(Sketch: Krishna GiLiyar)

Sunday 31 March 2024

ಇನ್ನೊಂದ್ ಜಲ್ಮ ಅಂತೇನಾರ ಇದ್ರೆ..

 



ಇನ್ನೊಂದ್ ಜಲ್ಮ ಅಂತೇನಾರ ಇದ್ರೆ

ನಾ ಉಲ್ಟಾ ಬದುಕ್ತಿನಪ್ಪ

ಗರ್ಭದಿಂದ ಗೋರಿಗೆ ಹೋಗದಲ್ಲ

ಗೋರಿಯಿಂದ ಗರ್ಭಕ್ಕೆ ಬರೋದು!

ಸಣ್ಣೋಳು ದೊಡ್ಡ ಆಗದಲ್ಲ,

ಮುದುಕಿ ಮಗುವಾಗೋದು!

ನಂಬಿ, ಆಗುತ್ತೆ

ಅಮಾಸೆ ಆದ್ಮೇಲೇ ಹುಣ್ಣಿಮೆ ಬರಬೇಕಂತ ಎಲ್ಲಿದೆ?

ಹುಣ್ಣಿಮೆ ಆದ್ಮೇಲೂ ಅಮಾಸೆ ಬರಲ್ವೇನು, ಹಾಗೆ.


ಎಂತ ಮಜ ನೋಡು!

ಆಗ ಭೂಮಿ ಮೇಲಿನ ನನ್ನ ಜನ್ಮ 

ಶುರುವಾಗೋದೇ ಸ್ಮಶಾನದಿಂದ!

ಅಲ್ಲಿಂದ ಎದ್ದು ಸೀದ ವೃದ್ಧಾಶ್ರಮಕ್ಕೆ ಬರ‍್ತಿನಿ

ಅಲ್ಲಿ ದಿನದಿಂದ ದಿನಕ್ಕೆ

ವರ್ಷದಿಂದ ವರ್ಷಕ್ಕೆ 

ನೋವು ಬಾವು ಕಮ್ಮಿಯಾಗ್ತ

ಕೊನೆಗೊಂದಿನ ಅವ್ರು 

ನೀನು ಇಲ್ಲಿರಕ್ಕೆ ನಾಲಾಯಕ್

ಮನೆಗೋಗು ಅಂತ ಓಡಸ್ತಾರೆ

ಆಗ ಮನೇಲಿ ಶುರು ಬೇಯ್ಸೋ ತೊಳೆಯೋ ಬಳಿಯೋ 

ಕೊನೆಯಿರದ ಕೆಲಸ

ಆದ್ರೂ ಮಾಡಿದ್ಮೇಲೆ ಎಂಥಾ ಸಮಾಧಾನ!

ಬೇಗಬೇಗ ಕೆಲ್ಸ ಮುಗ್ಸಿ ತಿಂಗ್ಳಲ್ಲಿ ಒಂದಿನ

ಆಫೀಸಿಗೆ ಹೋಗಿ ಪೆನ್ಶನ್ ತಗಂಬರ‍್ತಿನಿ 


ಹಂಗೇ ದಿನ ಕಳೀತಾ ಹೋಗಿ

ಹಸಿವು ನಿದ್ರೆ ಎಲ್ಲ ತಾನೇ ಸರಿಯಾಗ್ತ

ಮಾತ್ರೆ ಇಲ್ದೆನು ಆರಾಮಾಗಿರ‍್ತ ಇರುವಾಗ

ಅಂತಾ ಒಂದಿನ ಬರುತ್ತೆ

ಅವತ್ತಿನಿಂದ ಆಫೀಸ್ಗೆ ಹೋಗಬೇಕು! 

ಹೋದ ದಿನಾನೇ ಪಾರ್ಟಿ 

ಎಲ್ಲ ಗೀತೋಪದೇಶ ಹಾರ ಸೀರೆ ಶಾಲು ಕೊಟ್ಟು

ಮೊದಲ್ನೆ ದಿನನೇ ಸನ್ಮಾನ ಮಾಡ್ತಾರೆ

ಆಮೇಲೊಂದ್ ಮೂವತ್ ಮೂವತ್ತೈದ್ ವರ್ಷ

ಓಡೋಡ್ತ ಕಳೆಯುತ್ತೆ

ಕೆಲಸ ಕೆಲಸ ಕೆಲಸ

ಅದರ ಮಧ್ಯನೇ ಮುಟ್ಟು

ಸ್ರಾವ, ಹೊಟ್ಟೆನೋವು, ಸುಸ್ತು 


ಆ ಜಲ್ಮದಲ್ಲಿ ನಾನಂತೂ ಮದ್ವೆ ಆಗಲ್ಲಪ್ಪ

ಮಕ್ಳೂ ಬ್ಯಾಡ

ಪಾರ್ಟಿ ಮಾಡ್ತ, ಕೆಲಸ ಗೇಯ್ತ, 

ಪ್ರವಾಸ ತಿರುಗ್ತ, ಸಂಘಟನೆ ಮಾಡ್ತ

ಕೊನೆಗೊಂದಿನ ಬರುತ್ತೆ

ಎಳೇ ಪ್ರಾಯದ ನನ್ನ

ಆಫೀಸಿಂದ ಹೊರಗೆ ಕಳುಸ್ತಾರೆ

ಆಗ ಕಾಲೇಜಿಗೆ ಹೋಗಬೇಕು

ಪರೀಕ್ಷೆ ರಿಸಲ್ಟಿಂದ್ಲೇ ಕಾಲೇಜು ಶುರು

ಆಮೇಲೆ ಹೈಸ್ಕೂಲು


ಇದ್ದಕ್ಕಿದ್ದಂತೆ ಒಂದಿನ

ಮುಟ್ಟು ಬರೋದು ನಿಂತೋಗುತ್ತೆ

ಆರತಿ, ಸೀರೆ ಕುಬಸ, ಅಮ್ಮನ ಅಳು

ಎದೆ ಮುಚ್ಚಿಕೊಳ್ಳೋ ಹಂಗೆ ಜಡೆ

ಬರಬರ‍್ತಾ ಕುಳ್ಳಿ ಆಗ್ತ ಆಗ್ತ 

ಎದೆ ಮೇಲಿಂದು ಸಣ್ಣಗಾಗ್ತಾ ಆಗ್ತಾ 

ಕನ್ನಡ ಶಾಲೆಗೋಗಿ

ಅಣ್ಣನ ಹೆಗಲ ಮೇಲೆ ಕೂತು 

ಎಳ್ಳಮಾಸೆ ಜಾತ್ರೆಗೆ ಹೋಗಿ

ಆಮೇಲ್ ಬಾಲವಾಡಿಗೆ ಹೋಗಿ

ಮತ್ತೂ ಸಣ್ಣೋಳಾಗಿ 

ತೊದಲು ಮಾತಾಡ್ತ

ಎಡವಿ ನಡೀತಾ

ಅಂಬೆಗಾಲಿಕ್ಕತಾ

ಅಮ್ಮನ ಹಾಲ ಕುಡಿತಾ

ಒಂದಿನ ಅಮ್ಮನ ಹೊಟ್ಟೆ ಒಳ್ಗೆ ಸೇರಿ


ಆಮೇಲೇನು? ಆಹಾ..

ಒಂಭತ್ ತಿಂಗ್ಳು ಪಾತಾಳಲೋಕದಲ್ಲಿ

ಜಲ ವಿಹಾರ!

ಲಗಾಟ ಹೊಡಿತಾ ಕೈ ಕಾಲಾಡಿಸ್ತಾ

ಕೊನೇಗೊಂದಿನ ರಾತ್ರಿ

ಅಮ್ಮ ಅಪ್ಪನ ಒಂದು ಸುಖದ ನರಳುವಿಕೆಯಲ್ಲಿ 

‘ಹೆಣ್ಣು ಮಗೂನೆ ಮೊದ್ಲು ಆಗ್ಲಿ’ ಅಂತ

ಅಪ್ಪ ಅಮ್ಮನ ಕಿವಿಗೆ ಮುತ್ತಿಕ್ಕಿ ಪಿಸುಗುಡುವಾಗ 

ಎಲ್ಲಾ ಮಾಯ!!


ಏನ್ ಮಜಾ ಅಲ್ವಾ?

ನಾನ್ ಮಾತ್ರ

ಇನ್ನೊಂದ್ ಜಲ್ಮ ಅಂತೇನಾರ ಇದ್ರೆ

ಹಿಂಗೇ.. 

ಇಲ್ಲಿಂದಲ್ಲಿಗೆ ಹೋಗದಲ್ಲ

ಅಲ್ಲಿಂದಿಲ್ಲಿಗೇ ಬರ‍್ತೀನಪ್ಪ..

(Sketch: Krishna GiLiyar)

(ವುಡಿ ಅಲನ್‌ನ ‘ಮೈ ನೆಕ್ಸ್ಟ್ ಲೈಫ್’ ಬರಹದಿಂದ ಪ್ರೇರಿತ)


ಡಾ ಎಚ್ ಎಸ್ ಅನುಪಮಾ


Thursday 14 March 2024

ರಹಮತ್ ತರೀಕೆರೆಯವರ ‘ಕುಲುಮೆ’

 

ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆ

ಸಾಹಿತಿ, ಕಲಾಕಾರರು, ಆಟಗಾರರು, ಜನಪ್ರತಿನಿಧಿಗಳೇ ಮೊದಲಾಗಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಮಾಹಿತಿ ಕಾಲಕಾಲಕ್ಕೆ ಸುದ್ದಿಯಾಗಿ ತಿಳಿಯುವುದರಿಂದ ಅವರ ಬಗೆಗೆ ನಮಗೆಲ್ಲ ಗೊತ್ತು ಎಂದೇ ಸಮಾಜ ಭಾವಿಸುತ್ತದೆ. ಆದರೆ ಆ ವ್ಯಕ್ತಿತ್ವ ರೂಪುಗೊಂಡ ಪರಿ ಅದೃಶ್ಯವಾಗುಳಿದು ಕುತೂಹಲ ಮೂಡಿಸಿರುತ್ತದೆ. ಬರಹಗಾರ, ಚಳವಳಿಯ ಸಂಗಾತಿ, ವಿಚಾರವಾದಿ, ಸಂಸ್ಕೃತಿ ಚಿಂತಕ, ವಿಶ್ವವಿದ್ಯಾಲಯದ ಜನಪ್ರಿಯ ಮೇಷ್ಟ್ರು ಆದ ರಹಮತ್ ತರೀಕೆರೆಯವರು ‘ಇವರು ಹೇಗೆ ಈ ಪರಿ ತಯಾರಾದರು’ ಎಂದು ತಮ್ಮ ಶಿಷ್ಯಕೋಟಿ ಮತ್ತು ಓದುಬಳಗದಲ್ಲಿ ಕುತೂಹಲ ಮೂಡಿಸಿದ್ದರು. ಈಗದಕ್ಕೆ ಉತ್ತರವೋ ಎಂಬಂತೆ ತಮ್ಮನ್ನು ಬೆಳೆಸಿದ, ಬೆರಗಾಗಿಸಿದ ಸಾಕಷ್ಟು ಅಗೋಚರ ಸಂಗತಿಗಳನ್ನು ಆತ್ಮಚರಿತ್ರೆಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆಯನ್ನು ‘ಕುಲುಮೆ’ ಎಂಬ ಸೃಜನಶೀಲ ಹೊತ್ತಗೆಯಾಗಿಸಿದ್ದಾರೆ. 

ಇದೊಂದು ಜ್ಞಾಪಕ ಚಿತ್ರಶಾಲೆ. ನಿರೂಪಣೆಯುದ್ದಕ್ಕೂ ಬಾಲ್ಯ, ಯೌವನಗಳ ನಡುವೆ ಉಯ್ಯಾಲೆಯಂತಹ ಚಲನೆಯಿದೆ. ಲೇಖಕರೇ ಹೇಳಿರುವಂತೆ ಎಲ್ಲಿಂದಾದರೂ ಶುರುಮಾಡಿ ಎಲ್ಲಿಯಾದರೂ ಮುಗಿಸಬಹುದು. ಅಮ್ಮ ಮತ್ತು ಮನೆಯ ಹಿರಿಯರು ತಮ್ಮ ಬಗೆಗೆ ಹೇಳುವ ಬಾಲ್ಯದ ಪ್ರಸಂಗಗಳಿಂದ ಶುರುವಾಗವ ಜೀವನಕಥನವು ಎಳತರಲ್ಲೇ ತನ್ನಮ್ಮ ಧನುರ್ವಾಯುವಿನಿಂದ ತೀರಿಕೊಂಡ ದುಃಖವನ್ನು ತೋಡಿಕೊಳ್ಳುತ್ತ ಕೊನೆಯಾಗುತ್ತದೆ. ಮಗುವಿದ್ದಾಗ ಬಂದ ‘ಅಮ್ಮ’ನ (ಸಿಡುಬು) ಕಾರಣವಾಗಿ ಸಾವಿನ ಮನೆಗೆ ಹೋಗಿಬಂದ ಹುಡುಗ ದೈಹಿಕವಾಗಿ ಅಶಕ್ತನಾಗಿ ಭಾರೀ ಕೆಲಸಕ್ಕೆ ನಾಲಾಯಕ್ಕೆಂದು ಪರಿಗಣಿಸಲ್ಪಟ್ಟು ಓದಿನ ಅವಕಾಶ ಪಡೆಯುತ್ತಾನೆ. ಶಾಲೆಗೆ ಹೋಗುತ್ತ ಕುಲುಮೆ, ಕೃಷಿ, ಮನೆವಾರ್ತೆ, ಗಾರೆ ಕೆಲಸ, ಬೆರಣಿ ತಯಾರಿ, ವ್ಯಾಪಾರವೇ ಮೊದಲಾಗಿ ಸಂಸಾರದ ಬಂಡಿಗೆ ಹೆಗಲು ಕೊಡುವ ಉದ್ಯೋಗ ಮಾಡುತ್ತಲೇ ಶಿಕ್ಷಣ ಮುಂದುವರೆಸಿ ‘ಲಚ್ಚರ್’ ಆಗುವ ಮಹಾಪಯಣ ವಿಸ್ಮಯ ಹುಟ್ಟಿಸುವಂತಿದೆ. 

ಬಹುತೇಕ ಆತ್ಮಕತೆಗಳಲ್ಲಿ ಬಾಲ್ಯ, ಹದಿಹರೆಯಗಳ ಭಾಗ ಚೇತೋಹಾರಿಯಾಗಿರುತ್ತವೆ. ನಡುಹರೆಯ ದಾಟಿದ ನಂತರ ಆತ್ಮಪ್ರಶಂಸೆ, ಸಮಜಾಯಿಷಿ, ಆರೋಪ, ಹಳಹಳಿಕೆಗಳ ವಜ್ಜೆ ಓದುವವರ ಹೆಗಲೇರುತ್ತದೆ. ‘ನಾನು’ ರೂಪುಗೊಳ್ಳುವ ಮೊದಲು ತಿಳಿನೀರಿನಂತಿದ್ದ ಬದುಕು ನಂತರ ಪಾನಕವಾಗುತ್ತದೆ. ಬರೆವವರು ತಂತಮ್ಮ ಶಕ್ತ್ಯಾನುಸಾರ ಬೇಕಾದ್ದನ್ನೆಲ್ಲ ಸೇರಿಸಿ ದಾಹಿ ಓದುವರ್ಗಕ್ಕೆ ಕುಡಿಸುತ್ತಾರೆ. ಈ ದೃಷ್ಟಿಯಿಂದ ‘ಕುಲುಮೆ’ ವಿಭಿನ್ನವಾಗಿದೆ. ‘ಸದರಿ ಕಥನವು ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸೆಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನ ತತ್ವದ ಹುಡುಕಾಟ ಆಗಬೇಕು’ ಎಂದು ಲೇಖಕರು ಪ್ರಜ್ಞಾಪೂರ್ವಕ ನಿಲುವು ತಳೆದ ಕಾರಣವಾಗಿ ಕೊನೆಯತನಕ ಸುಲಲಿತ ಪ್ರಬಂಧದ ತರಹ ಓಡಿಸಿಕೊಂಡು ಓದಿಸಿಕೊಳ್ಳುತ್ತದೆ. 

ಯಾರದೇ ಬಾಳ್ಕಥನವು ಅವರೊಬ್ಬರದೇ ಆಗಲು, ಅವರು ಹುಟ್ಟಿ ಬದುಕಿದ ಕಾಲ ಮಾತ್ರದ್ದಷ್ಟೇ ಆಗಲು ಸಾಧ್ಯವಿಲ್ಲ. ಸಾಧ್ಯದ ತುಂದಿಬಿಂದುಗಳನ್ನು ಹಿಗ್ಗಲಿಸಿ ಹಲವಾರು ವ್ಯಕ್ತಿಚಿತ್ರ, ಸಂದರ್ಭಗಳನ್ನು ಜೊತೆಗೇ ಕಟ್ಟಬೇಕಾಗುತ್ತದೆ. ತಮ್ಮ ಸುತ್ತಮುತ್ತಲ ವ್ಯಕ್ತಿಗಳು, ಪರಿಸರ, ಗ್ರಾಮೀಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಸ್ಯಪ್ರಜ್ಞೆ ಮತ್ತು ಹಳ್ಳಿಗಾಡಿನ ಶ್ರಮಸಮಾಜದ ವರ್ಣನೆ ಗಮನ ಸೆಳೆಯುವಂತಿವೆ. ಚರಾಚರಗಳು ಬದುಕಲೆಂದು ನಡೆಸುವ ಸಕಲ ಕರಾಮತ್ತುಗಳನ್ನೂ ನವಿರು ಹಾಸ್ಯದಲ್ಲಿ ವಿವರಿಸಿ ಜೀವಂತಿಕೆ ತುಂಬಿದ್ದಾರೆ. ಮಂಥನ, ಆತ್ಮಾವಲೋಕನೆ, ನಿವೇದನೆ, ತಪ್ಪೊಪ್ಪಿಗೆ ಎಲ್ಲವೂ ಇವೆ. ತಮ್ಮನ್ನು ತಾವೇ ಪರಿಹಾಸ್ಯ ಮಾಡಿಕೊಳ್ಳುವ ಗುಣವು ನಿರೀಕ್ಷಣಾ ಜಾಮೀನಿನಂತೆಯೂ, ಗುರಾಣಿಯಾಗಿಯೂ, ನೀರಗಂಟಿಯಾಗಿಯೂ ಒದಗಿಬಂದಿದೆ. ಹಾಸ್ಯದ ಚಾಟಿಯೇಟಿಗೆ ಹೆಚ್ಚು ಒಳಗಾಗಿರುವವರು ತಂದೆ ಮತ್ತು ಬಾಳಸಂಗಾತಿ. ಅವರಿಬ್ಬರೂ ರಹಮತರ ಬದುಕು, ಪ್ರಜ್ಞೆಗಳನ್ನಾವರಿಸಿ, ವಿಶಿಷ್ಟ ಲೋಕದೃಷ್ಟಿ ರೂಪಿಸಿದ್ದಾರೆ. 


ಈ ಕೃತಿಯು ಹಳ್ಳಿಗಾಡಿನ ಮುಸ್ಲಿಮರ ಲೋಕದೊಳಗೆ ಕನ್ನಡ ಓದುಗರಿಗೆ ಪ್ರವೇಶ ಒದಗಿಸಿದೆ. ಅಲ್ಲಿನ ಉರ್ದು-ಅರಬಿ-ಕನ್ನಡ ಮಿಶ್ರಿತ ಮಾತು, ನಾಣ್ಣುಡಿ, ಬೈಗುಳ, ಆಚರಣೆ, ಸಂಸ್ಕೃತಿ ಸಂಪ್ರದಾಯಗಳ ಬಗೆಗೆ ಅಮೂಲ್ಯ ವಿವರಗಳಿವೆ. ಬದಲಾದ ಸಾಮಾಜಿಕ ನೇಯ್ಗೆಯು ಮುಸ್ಲಿಂ ಸಮುದಾಯದ ಮೇಲೆ ಹೊರಿಸಿರುವ ಭಯಾತಂಕ, ಒತ್ತಡಗಳು ಹಲವೆಡೆ ಸೂಕ್ಷ್ಮವಾಗಿ ದಾಖಲಾಗಿವೆ. ‘ಪ್ರತಿ ಬಾರಿ ಗಣೇಶನ ಹಬ್ಬ ಬಂದಾಗಲೂ ಬಾಯಿಗೆ ಅಕ್ಕಿಕಾಳು ಹಾಕಿಕೊಂಡು ಎಚ್ಚರವಿದ್ದು ಕೊನೆಗೆ ಏನೂ ಗಲಭೆಯಿಲ್ಲದೆ ಹಬ್ಬ ಮುಗಿದಾಗ ನಿಟ್ಟುಸಿರೊಂದು ಹೊರಹೊಮ್ಮುವಂತಾಗುತ್ತಿತ್ತು’ ಎನ್ನುವ ಮಾತು ಓದುವವರಲ್ಲಿ ವಿಷಾದ, ದಿಗ್ಭ್ರಮೆಗಳನ್ನು ಹುಟ್ಟಿಸುತ್ತವೆ. 

ಯೋಚಿಸಿ, ಚರ್ಚಿಸಿ, ವೈಚಾರಿಕತೆಯನ್ನು ಅಳವಡಿಸಿಕೊಂಡವರಿಗೂ ಬದುಕಿನಲ್ಲಿ ಕೆಲವೊಮ್ಮೆ ಸಂದಿಗ್ಧಗಳೆದುರಾಗುತ್ತವೆ. ಎಳೆತನದಲ್ಲಿ ಧಾರ್ಮಿಕ ಪ್ರವೃತ್ತಿಯವರಾಗಿದ್ದು, ಓದು, ವೈಚಾರಿಕತೆಗೆ ತೆತ್ತುಕೊಂಡ ಬಳಿಕ ವಿಚಾರವಾದಿಯಾಗಿ ಬೆಳೆದರೂ ಬಾಳಲ್ಲಿ ಎದುರಿಸಿದ ದ್ವಂದ್ವಗಳನ್ನು ಪ್ರಾಮಾಣಿಕವಾಗಿ ಇಲ್ಲಿ ಮಂಡಿಸಲಾಗಿದೆ. ‘ಧಾರ್ಮಿಕತೆ-ವೈಚಾರಿಕತೆಗಳ ನಡುವೆ ಚಲಿಸಿದ ಬಾಳನಾವೆ ಕೊನೆಗೆ ಸೂಫಿ ಕಿನಾರೆಯಲ್ಲಿ ಲಂಗರು ಹಾಕಿತು’ ಎಂದು ಈಗ ನೆಲೆ ನಿಂತ ತಾವನ್ನು ಬಣ್ಣಿಸಿದ್ದಾರೆ.

ಕನ್ನಡಕ್ಕೆ ವಿಶಿಷ್ಟ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಟ್ಟಿರುವ ರಹಮತ್ ತರೀಕೆರೆ, ತಾನು ಬರಿಯ ಸಂಗ್ರಹಕಾರ; ಹೆಕ್ಕಿರುವುದನ್ನು ಪ್ರಸ್ತುತ ಪಡಿಸಿದೆನಷ್ಟೇ ಎಂದು ಹೇಳಿಕೊಂಡಿದ್ದಾರೆ. ಲೋಕಸಂಚಾರಿಯಾಗಿ ಹೆಕ್ಕಿ ಪ್ರಸ್ತುತಪಡಿಸಿದ ಸಂಗತಿಗಳು ಮಹತ್ವದ ಸಾಂಸ್ಕೃತಿಕ ಸಂಶೋಧನೆಗಳಾಗಿದ್ದರೂ ಅದರ ಅನುಭವ, ಹೆಗ್ಗಳಿಕೆಗಳ ಬಗೆಗೆ; ಅದಕ್ಕಾಗಿ ತಾನು ಪಡೆದ ಮನ್ನಣೆ, ಪ್ರಶಂಸೆಗಳ ಬಗೆಗೆ ಬರೆದುಕೊಳ್ಳದೇ ಅಕ್ಷರ ವ್ಯವಸಾಯಿಗಳಿಗಿರಬೇಕಾದ ಸಂಯಮವನ್ನು ಎತ್ತಿ ಹಿಡಿದಿದ್ದಾರೆ. ‘ಏನೇ ಬರೆಯಲಿ, ಉದಯೋನ್ಮುಖ ಅವಸ್ಥೆಯ ಅಳುಕು, ಅಭದ್ರತೆಗಳಿಂದ ಬಿಡುಗಡೆ ಸಿಕ್ಕಿಲ್ಲ’ ಎನ್ನುವಲ್ಲಿ ಬೆಳವಣಿಗೆಯ ತುದಿಗಳನ್ನು ಚಿವುಟುತ್ತ, ಚಿಗುರೊಡೆಯಲು ಇರುವ ಸಾಧ್ಯತೆಗಳನ್ನು ಸಜೀವವಾಗಿಟ್ಟಿರುವುದು ತಿಳಿದುಬರುತ್ತದೆ. ಬೇಹೊಣೆ, ದೌಡುವರು, ಸಮಜಾಯಿಶಿಸಿದೆ, ಉತ್ಪತ್ತಿಸುತ್ತಿದೆ, ಗರ್ವಿಸದಿರು, ತಲಾಶಿಸು, ಶೇವಿಸಿದ ಕೆನ್ನೆ, ಪ್ರದಕ್ಷಿಣಿಸಿರುವೆನೋ, ಮಾತುಕತಿಸುತ್ತಿದ್ದರು, ಕುದುರೆ ಸವಾರಿಸಿದ, ಅಪ್ಪಣಿಸಲು, ಸಿಟ್ಟಾಸ್ತ್ರ, ಹಿತವಚಿಸಿದರು.. ಮುಂತಾದ ಸಾಕಷ್ಟು ಹೊಸ ಪದ-ಪ್ರಯೋಗಗಳನ್ನು ಹೊಸ ಸಂಧಿ, ಸಮಾಸಗಳ ಮೂಲಕ ಸೃಷ್ಟಿಸಿದ್ದಾರೆ.  

ತನ್ನನ್ನು, ರಕ್ತಸಂಬಂಧಿಗಳಾದ ಅಕ್ಕ, ಅಣ್ಣ, ತಮ್ಮ, ಅಮ್ಮ, ಅಪ್ಪ, ಬಾಳಸಂಗಾತಿ, ಮಕ್ಕಳು, ಬಂಧುಮಿತ್ರರನ್ನು ಲೋಕ ಏನಂದುಕೊಂಡೀತೋ ಎಂದು ಯೋಚಿಸದೆ ತಮಗೆ ಕಂಡಹಾಗೆಯೇ ಅಚ್ಚು ಹಾಕಿರುವುದು ‘ಕುಲುಮೆ’ ಯ ವೈಶಿಷ್ಟ್ಯ. ಇದಕ್ಕೆ ಕೌಶಲ್ಯ, ಎದೆಗಾರಿಕೆ ಎರಡೂ ಬೇಕು. ತಮ್ಮ ತಕರಾರು, ಆತಂಕ, ಮೆಚ್ಚಿಗೆಗಳನ್ನು ಕೌಶಲ್ಯದಿಂದ ಕಡೆದು ಮಂಡಿಸುವ ಪರಿಯಲ್ಲೇ ಗುಲ್ಲಾಗಬಹುದಾದ ಸಂಗತಿಗಳು ಮಾನವ ಸಹಜವೆನಿಸಿಬಿಡುವಂತೆ ಮಾಡಿದ್ದಾರೆ. 

ಒಮ್ಮೆ ಜನಪದೆ-ಜ್ಞಾನಸುಧೆ ‘ಬಾನು-ನಾನು’ ಜೋಡಿ ನಮ್ಮನೆಗೆ ಬಂದಿತ್ತು. ಮೇಷ್ಟ್ರು ತಮ್ಮ ಜೀವನ ಚರಿತ್ರೆ ಬರೆಯುತ್ತಿರುವ ಸುಳಿವು ನೀಡಿದರು. ಜೊತೆ ಬಂದಿದ್ದ ಅವರ ಗೆಳೆಯರೊಬ್ಬರು, ‘ನಂ ವಿಷ್ಯ ಎಲ್ಲ ಬರೆದಾಯ್ತಾ?’ ಎನ್ನಲು ಬಾನು ಅಕ್ಕ, ‘ಎರಡ್ ವರ್ಷದಿಂದ ಬರಿತನೇ ಇದಾರೆ, ಬರೀತನೇ ಇದಾರೆ, ಇನ್ನೂ ನಾನೇ ಬಂದಿಲ್ಲ, ನೀವು ಬರೋದು ಡೌಟು’ ಎಂದು ಚಟಾಕಿ ಹಾರಿಸಿದ್ದರು. ನಿಜವೇ. ಇದರಲ್ಲಿ ಬಾರದ ತುಂಬ ವಿಷಯಗಳಿವೆ. 

ಯಾವುದನ್ನು ಬರೆಯಬೇಕು, ಯಾವುದನ್ನಲ್ಲ ಎನ್ನುವುದು ಸಂಪೂರ್ಣವಾಗಿ ಬರೆಯುವವರಿಗೇ ಬಿಟ್ಟಿದ್ದು, ನಿಜ. ಆದರೆ ರಹಮತರಂತಹ ಸೂಕ್ಷ್ಮಗ್ರಾಹಿಯ ಬಾಳ್ಕಥನದಲ್ಲಿ ನಾವು ನಿರೀಕ್ಷಿಸಿದ ಕೆಲವಂಶಗಳು ಇಲ್ಲದಿರುವಿಕೆಯಿಂದಲೇ ಎದ್ದು ಕಾಣುವಂತಿವೆ. ನಾಡೆಲ್ಲ ಸುತ್ತಿ ಬೇಕಿರುವುದನ್ನೆಲ್ಲ ಹೆಕ್ಕಿ ಸಾಂಸ್ಕೃತಿಕ ವಿಸ್ಮೃತಿಗೆ ಮದ್ದರೆದ ರಹಮತ್, ತಿರುಗಾಟದ ಅನುಭವ, ಸಾಕ್ಷಾತ್ಕಾರಗಳನ್ನು ಇಲ್ಲಿ ಕಾಣಿಸಿಲ್ಲ. ಅಧ್ಯಾಪನ, ಸಂಶೋಧನೆ, ಬರವಣಿಗೆ, ಕ್ಷೇತ್ರಕಾರ್ಯ, ಮೇಷ್ಟ್ರುಗಿರಿಯ ವಿವರಗಳು ವಿರಳವಾಗಿವೆ. ವಿಶ್ವವಿದ್ಯಾಲಯಗಳ ಬಗೆಗೆ, ಅಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ನೇತ್ಯಾತ್ಮಕ ಸುದ್ದಿಗಳೇ ಹೆಚ್ಚು ಕಿವಿಗೆ ಬೀಳುತ್ತವೆ. ಅದರ ನಡುವೆ ಗುರುಶಿಷ್ಯರ ನಡುವೆ, ಸಹೋದ್ಯೋಗಿಗಳ ನಡುವೆ ನಡೆಯುವ ಕೊಡುಕೊಳ್ಳುವಿಕೆಗೆ ಹಲವು ಮುಖಗಳೂ ಇರುತ್ತವೆ. ನಿವೃತ್ತಿಯಾಗುವವರೆಗೆ ತಮ್ಮ ಜೊತೆಯಾದ ವಿಶ್ವವಿದ್ಯಾಲಯ ಪರಿಸರ ಕುರಿತ ಒಂದೆರೆಡು ಪುಟ ಬಂದಿದೆಯಾದರೂ ಹೊಸತಲೆಮಾರನ್ನು ಬೆಳೆಸುವ, ಅವರೊಂದಿಗೆ ತಾವೂ ಹೊಸದಾಗಿ ಬೆಳೆಯಲು ಅವಕಾಶ ನೀಡುವ ಅಧ್ಯಾಪನದ ವಿವರಗಳು ಕಡಿಮೆ ಇವೆ.

ವಿಶ್ವಾದ್ಯಂತ ಮುಸ್ಲಿಮರ ಬಗೆಗೆ ಹಗೆತನ, ವೈರ ಹೆಚ್ಚಿಸುವಂತಹ ವಿದ್ಯಮಾನ ವ್ಯವಸ್ಥಿತವಾಗಿ ಸಂಭವಿಸುತ್ತಿದೆ. ಮುಸ್ಲಿಮೇತರರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದೇ ರಾಜಕಾರಣದ ದಾಳವಾಗಿರುವುದನ್ನು ಕಾಣುತ್ತಿದ್ದೇವೆ. ಬದಲಾವಣೆಗೆ ಸ್ವಲ್ಪವೂ ಒಡ್ಡಿಕೊಳ್ಳದ ಸ್ಥಗಿತ ಸಮಾಜ ಎಂಬಂತೆ ಮುಸ್ಲಿಂ ಸಮುದಾಯವನ್ನು ಬಿಂಬಿಸಲಾಗುತ್ತಿದೆ. ಹಾಗಿರಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ. ಆದರೆ ಮುಸ್ಲಿಂ ಸಮುದಾಯದೊಳಗೆ ಆಗುತ್ತಿರುವ ಕೋಮುವಾದಿ ಬೆಳವಣಿಗೆಗಳು, ಅದಕ್ಕೆ ಬಂದಿರುವ ಒಳಗಣ ಪ್ರತಿರೋಧ, ಆಂತರಿಕ ಮತ್ತು ಧಾರ್ಮಿಕ ಸಂಘರ್ಷಗಳ ವಿವರ ಹೊರಜಗತ್ತಿಗೆ ಕಾಣದಂತೆ ಪರದೆ ಕಟ್ಟಲಾಗಿದೆ. ಪರದೆಯೊಳಗಣ ತುಮುಲ, ಸಂಘರ್ಷಗಳ ಚಿತ್ರಣವನ್ನು ರಹಮತರಂಥವರು ಮಾತ್ರವೇ ಕಟ್ಟಿಕೊಡಲು ಸಾಧ್ಯವಿದೆ. ಈ ಹೊತ್ತಗೆಯಲ್ಲಿ ಅಂತಹ ವಿಷಯಗಳು ಗೈರಾಗಿವೆ. ಕೊನೆಗೆ ತಾವು ಕಂಡುಕೊಂಡ ಸೂಫಿ ನೆಲೆಯೂ ಸಹ ಸಾಂಸ್ಥಿಕಗೊಂಡು, ಪಟ್ಟಭದ್ರ ಹಂತ ತಲುಪಿರುವುದು, ಅದರೊಳಗೂ ನುಸುಳಿರುವ ಮೂಲಭೂತವಾದದ ಅವಲೋಕನ ಅದೃಶ್ಯವೆನ್ನುವಷ್ಟು ಸೂಕ್ಷ್ಮ ಎಳೆಯಾಗಿ ಚಿತ್ರಣಗೊಂಡಿದೆ. 

ಇಸ್ಲಾಮಿನ ಒಳಗಣ ಸಂಘರ್ಷದ ವಿವರಗಳು ಹಿಂದೂ ಬಲಪಂಥೀಯರ ದ್ವೇಷದ ಬೆಂಕಿಗೆ ತುಪ್ಪ ಸುರಿದು ಇಂಬಾದೀತೆಂಬ ಅಳುಕು ನಿರಾಧಾರ. ಏಕೆಂದರೆ ದ್ವೇಷದ ಬೆಂಕಿ ಹಚ್ಚುವವರು ಸತ್ಯಸಂಗತಿಗಳಿಗಿಂತ ಇಲ್ಲದ ಸುಳ್ಳು ಸುದ್ದಿಗಳನ್ನೇ ಅವಲಂಬಿಸುತ್ತಾರೆ. ಒಂದು ಧರ್ಮದ ಬಲಪಂಥೀಯತೆಯು ಮತ್ತೊಂದು ಧರ್ಮದ ಬಲಪಂಥೀಯತೆಯ ಕಾರಣವೂ, ಪರಿಣಾಮವೂ ಆಗಿರುವಾಗ ಹಿಂದೂ ಕೋಮುವಾದದ ಕಾರಣವಾಗಿ ಮುಸ್ಲಿಂ ಸಮುದಾಯದಲ್ಲಿ ಆಗಿರಬಹುದಾದ ಪಲ್ಲಟಗಳನ್ನು ಕಾಣಿಸಬಹುದಿತ್ತು. ಸಮುದಾಯದೊಡನಿದ್ದೂ ಇಲ್ಲದಂತಿರಬೇಕಾದ ತಳಮಳ, ಅದನ್ನೆದುರಿಸಿದ ಬಗೆಗಳನ್ನು ಮಂಡಿಸಿದ್ದರೆ ವೈಚಾರಿಕತೆ, ಹೊಸತನಕ್ಕೆ ತೆರೆದುಕೊಳ್ಳಬಯಸುವ ಭಾರತದ ಮುಸ್ಲಿಂ ಯುವ ಸಮುದಾಯಕ್ಕೆ ಇಂಬಾಗುತ್ತಿತ್ತು. ವಿಫಲ ಪ್ರೇಮ ಪ್ರಕರಣಗಳು, ಕೌಟುಂಬಿಕ ಸಂಬಂಧಗಳಲ್ಲಿ ತಲೆದೋರಿದ ಬಿಕ್ಕಟ್ಟುಗಳು, ದಾಂಪತ್ಯದ ಬಗೆಗೆ ಬಿಚ್ಚುನುಡಿಯಲ್ಲಿ ಬರೆದ ರಹಮತರು, ಧರ್ಮ-ದೇವರುಗಳನ್ನು ಅದಕ್ಕಿಂತ ಖಾಸಗಿ ವಿಷಯವಾಗಿಸಿ ‘ಮೌನ’ ವಹಿಸಿರುವುದು ಅಚ್ಚರಿದಾಯಕವಾಗಿದೆ. ಇದು ಕೆಲವು ವರ್ತಮಾನದ ಬಿಕ್ಕಟ್ಟಿನ ಸಮಯಗಳಲ್ಲಿ ಅವರ ಗೆಳೆಯರ ಬಳಗ ಆರೋಪಿಸುವುದೆಂದು ಅವರೇ ಬರೆದುಕೊಂಡ ‘ಸುಮ್ಮನಿದ್ದು ಅತ್ತ ಸರಿದುಬಿಡುವ’ ಸ್ವಭಾವದ ಹೊರಚಾಚೂ ಆಗಿರಬಹುದು. ಪ್ರಸಕ್ತ ಬಿಕ್ಕಟ್ಟಿನ ಕಾಲದಲ್ಲಿ ಅವರದನ್ನು ಉಳಿವಿನ ದಾರಿಯಾಗಿಯೂ ಕಂಡುಕೊಂಡಿರಬಹುದು. 

ಯಾಕೋ ಸಾರಾ, ಬಾನು, ನಜ್ಮಾ ಬಾಂಗಿ ನೆನಪಾಗುತ್ತಿದ್ದಾರೆ. ಅಪ್ರಿಯ ಸತ್ಯಗಳನ್ನು ಹೇಳಲು, ಕಟುವಾಸ್ತವ ವಿವರಿಸುವ ಪ್ರಶ್ನೆಗಳನ್ನೆತ್ತಲು ಹೆಣ್ಣುಜೀವಗಳೇ ಆಗಬೇಕೇನೋ!?   

ಅದೇನೇ ಇರಲಿ, ಕನ್ನಡದ ಮಹತ್ವದ ಲೇಖಕರಾಗಿರುವ ರಹಮತ್ ಅವರ ಶಿಷ್ಯೆಯಾಗಿದ್ದೆನೆನ್ನುವುದು ನನಗಂತೂ ಜಂಬ ತರುವ ಸಂಗತಿಯಾಗಿದೆ. ನಾನು ಪಿಯುಸಿ ಓದಿದ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ‘ಲಂಬೂ’ ತರೀಕೆರೆ ಮೇಷ್ಟ್ರು ಕನ್ನಡ ನಾನ್‌ಡಿಟೇಲ್ ಟೆಕ್ಸ್ಟ್ ಪಾಠ ಮಾಡುತ್ತಿದ್ದರು. ಅವರು ಏನು ಪಾಠ ಮಾಡಿದ್ದರೋ ನೆನಪಿಲ್ಲ. ಆದರೆ ‘ಗೋಲ್ಡ್ ಮೆಡಲಿಸ್ಟ್’ ಕನ್ನಡ ಮೇಷ್ಟ್ರು ಹೇಗೆ ಪಾಠ ಮಾಡಿದ್ದರೆನ್ನುವುದು ಮತ್ತು ಅವರ ಅತಿಸುಂದರ ಬರವಣಿಗೆ ಚೆನ್ನಾಗಿ ನೆನಪಿದೆ. ‘ಪ್ರಶ್ನೆ ಮತ್ತು ಹುಡುಕಾಟ ಉಳ್ಳವರಿಗೆ ನಿಲುಗಡೆಯ ಮುಕ್ತಿ ಇದ್ದಂತಿಲ್ಲ’ ಎನ್ನುವ ಗುರುಗಳೇ, ನಿಮಗೂ, ನಿಮ್ಮನ್ನು ಜೀವಂತಿಕೆಯಿಂದಿಟ್ಟಿರುವ ಬಾನು ಅಕ್ಕನೇ ಮೊದಲಾದ ಸಕಲ ಚರಾಚರಗಳಿಗೂ ಸಪ್ರೇಮ ವಂದನೆ.

ಡಾ. ಎಚ್. ಎಸ್. ಅನುಪಮಾ

Tuesday 12 March 2024

ತನ್ನ ಹೆಸರ ತಾ ಮರೆತವಳು..



(Image Source Internet)

ಒಬ್ಬಳು ಹುಡುಗಿ. ಮನೆಯ ಮುದ್ದಿನ ಮಗಳು. ಅವಳ ಚಟಪಟ ಮಾತು, ನಗು, ನಡವಳಿಕೆ ಎಲ್ಲರಿಗೂ ಮುದ್ದೋಮುದ್ದು. ಶಾಲೆಯಲ್ಲೂ ಚುರುಕು. ಆಟೋಟಕ್ಕೂ ಸೈ. ಅಡುಗೆ, ಮನೆಗೆಲಸಕ್ಕೆ ಎತ್ತಿದ ಕೈ. ಅಮ್ಮನಿಗೆ ಅಚ್ಚುಮೆಚ್ಚು. ಅಪ್ಪನಿಗೆ ಪೆಟ್. ಹಾರುತ್ತ, ಒಲಿಸುತ್ತ, ಒಲಿಯುತ್ತ, ಮುನಿಯುತ್ತ, ಮಣಿಯುತ್ತ ಹಕ್ಕಿಯಂತೆ ಹಾರುತ್ತಿದ್ದಳು, ಮೀನಂತೆ ಈಜುತ್ತಿದ್ದಳು. ಸುಖದ ದಿನಗಳು.

ಎಲ್ಲವೂ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕಲ್ಲ. ಅವಳ ಸುಖದ ದಿನ ಕೊನೆಯಾಗುವ ಕಾಲ ಬಂದೇ ಬಂದಿತು.

ಅವಳಿಗೆ ಮದುವೆಯಾಯಿತು.

ಅವಳ ಹೆಸರು ಬದಲಾಯಿತು. ಪಾತ್ರ ಬದಲಾಯಿತು. ನೋಡುವ ಕಣ್ಣುಗಳು ಬದಲಾದವು. ನಿರೀಕ್ಷೆಗಳು ಬದಲಾದವು. ಕೂರುವ, ಏಳುವ, ನಿದ್ರಿಸುವ, ಉಣ್ಣುವ, ಕೋಪಿಸಿಕೊಳ್ಳುವ, ನಗುವ ಸಮಯ ಸಂದರ್ಭ, ಭಾವಭಂಗಿಗಳು ಇದ್ದಕ್ಕಿದ್ದಂತೆ ಸಂಪೂರ್ಣ ಬದಲಾಗಿಬಿಟ್ಟವು. ಅವಳೂ ಬದಲಾದಳು. ಎಷ್ಟರಮಟ್ಟಿಗೆಂದರೆ ತಾನೆಲ್ಲಿರುವೆ, ಏನು ಮಾಡುತ್ತಿರುವೆ, ಇದುವರೆಗೂ ಏನಾಗಿದ್ದೆ, ಏನಾಗುತ್ತಿದೆ ಎನ್ನುವುದೆಲ್ಲ ಮರೆತೇಹೋಯಿತು. ದಿನದಿನವೂ ಬದಲಾಗುವುದೇ ಬದುಕಾಯಿತು. ಸೊಸೆಯಾದಳು, ಸತಿಯಾದಳು, ಅತ್ತಿಗೆಯಾದಳು, ವಾರಗಿತ್ತಿಯಾದಳು, ನಾದಿನಿಯಾದಳು, ಚಿಕ್ಕಮ್ಮ ದೊಡ್ಡಮ್ಮನಾದಳು, ಅಮ್ಮನಾದಳು. 


(Image Source Internet)

ಈಗ ಮನೆಯಲ್ಲಿ ಎಲ್ಲರಿಗೂ ಅವಳು ಬೇಕು. ಅವಳೇ ಬೇಕು. ಅತ್ತೆಮಾವರಿಗೆ ಅವಳಿಲ್ಲದಿದ್ದರೆ ದಿನ ಸರಿಯುವುದೇ ಇಲ್ಲ. ಮಕ್ಕಳಿಗೆ ಅಮ್ಮನಿಲ್ಲದಿದ್ದರೆ ಬೆಳಗಾಗುವುದಿಲ್ಲ. ಅವಳಿಲ್ಲದಿದ್ದರೆ ಗಂಡ ಏನು ಮಾಡಿಯಾನು ಪಾಪ? ಅವನಮ್ಮ ಅಪ್ಪ ಮಗರಾಯನಿಗೆ ಯಾವ ಕೆಲಸವನ್ನೂ ಕಲಿಸಿರಲಿಲ್ಲ. ಅವಳಿಲ್ಲದಿದ್ದರೆ ಹಿತ್ತಿಲು, ಅಂಗಳ ನಳನಳಿಸುವುದಿಲ್ಲ. ಬೆಕ್ಕು, ನಾಯಿ, ದನ ಬಾಯಿ ಮುಚ್ಚುವುದಿಲ್ಲ. ಎಲ್ಲರಿಗೂ ಅವಳು ಬೇಕು. ಅವಳೇ ಬೇಕೇಬೇಕು ಎಂದಾಗಿರುವಾಗ, 

ಒಂದು ದಿನ..

ಒಂದು ದಿನ, ಇದ್ದಕ್ಕಿದ್ದಂತೆ ಅವಳಿಗೆ ತನ್ನ ಹೆಸರು ಮರೆತೇ ಹೋಯಿತು! ನಂಬಿ, ಏನು ಮಾಡಿದರೂ ನೆನಪಾಗುತ್ತಿಲ್ಲ. ತಲೆ ಕೆರೆದುಕೊಂಡಳು. ಯೋಚಿಸಿದಳು. ಕಣ್ಮುಚ್ಚಿ ತೆರೆದಳು. ಕೂತಳು, ನಿಂತಳು, ಮಲಗಿ ಕನಸಿನಲ್ಲಿ ತಿಳಿಯಬಹುದೇ ನೋಡಿದಳು. ಊಂಹ್ಞೂಂ, ಅವಳಿಗೆ ತನ್ನ ಹೆಸರು ನೆನಪಿಗೇ ಬರುತ್ತಿಲ್ಲ.

ಅಯ್ಯೋ, ಇದೇನಿದು! ಅವಳಿಗೆ ಸಿಕ್ಕಾಪಟ್ಟೆ ಆತಂಕವಾಯಿತು. ತನ್ನ ಹೆಸರೇ ನೆನಪಿಗೆ ಬರ‍್ತಿಲ್ಲವಲ್ಲ, ಮುಂದೇನು? ಯಾರನ್ನಾದರೂ ಕೇಳಲೇ? ನಗಾಡುವುದಿಲ್ಲವೆ ಕೇಳಿದವರು? 

‘ಮಾವ, ಮಾವ, ನನ್ ಹೆಸರೇ ಮರೆತೋಗಿದೆ, ಹೇಳ್ತೀರಾ?’

‘ಆಂ.. ನೀ ಯಾರೇ?’

ಥೋ, ಮರೆವು ಹತ್ತಿದವರ ಬಳಿ ಮರೆತ ನನ್ನ ಹೆಸರು ಕೇಳ್ತಿದೀನಲ, ‘ಅತ್ತೆ ಅತ್ತೆ, ಏನಂದ್ಕತಿರ ಏನ, ನನ್ ಹೆಸರೇ ಮರ‍್ತು ಹೋಗಿ ಏನ್ ಹೇಳ್ಲೀ ಗೊತ್ತಾಗ್ತಿಲ್ಲ..’ ಎಂದಳು.

‘ಗಂಡಸ್ರ ಮರೆವಿನ ಕಾಯ್ಲೆ ಈಗ್ಲೇ ಸುರುವಾಯ್ತಾ ನಿಂಗೆ. ಹೋಗ್ಲಿ ತಗ, ಹೆಸರಿದ್ಕಂಡ್ ಏನುಪಯೋಗ ನಮಿಗೆ? ಮರೆಯುದೇ ಒಳ್ಳೇದು’ ಎಂದರು.

ಅಯ್ಯೋ, ಇವರಿಗೇಕೆ ಅರ್ಥನೇ ಆಗ್ತಿಲ್ಲ? ತಲೆಚಚ್ಚಿಕೊಂಡಳು. ‘ಮಕ್ಳೇ ನನ್ ಹೆಸರೇನು ಹೇಳಿ ನೋಡುವಾ?’

‘ನೀನಾ? ನಮ್ಮಮ್ಮ’ ಚಪ್ಪಾಳೆ ತಟ್ಟಿ ನಕ್ಕವು.

ಅಮ್ಮ ಅಂತನಾ ನನ್ ಹೆಸರು? ಇಲ್ಲಿಲ್ಲ. ‘ಇವರ’ ಹತ್ರ ಕೇಳ್ತಿನಿ ಅಂದುಕೊಂಡಳು.

‘ಏನೇ, ಕೇಳ್ತಾ, ನನ್ ಶೂ ಎಲ್ಲಿ ಹಾಳಾಗೋಯ್ತು, ಹುಡುಕ್ಕೊಡು ಸಿಗ್ತಿಲ್ಲ..’

‘ಅಲ್ಲೇ ಇದೆಯಲ, ನಿಮಗಂತೂ ಎದುರಿದ್ರೂ ಕಾಣದೇ ಇಲ್ಲ. ರೀರೀ, ನಂಬ್ತಿರೊ ಬಿಡ್ತಿರೊ, ನಂಗ್ ನನ್ನ ಹೆಸರೇ ನೆನಪಾಗ್ತಿಲ್ಲ ಕಣ್ರಿ’

‘ಹೆಸರ‍್ಯಾಕೆ ಬೇಕು ಚಿನ್ನ?’

‘ಚಿನ್ನ! ಅದು ನನ್ನ ಹೆಸರಾ?’

‘ಅದೇ ಇಟ್ಕ ಏನೀಗ. ನಿಂಗ್ಯಾರ ಹೆಸರು ಬೇಕೋ ಅದನ್ನಿಟ್ಕ, ಫೇಮಸ್ ಸಿನಿಮಾ ಹೀರೋಯಿನ್‌ದು ಬೇಕಾ? ರಾಷ್ಟ್ರಪತಿದು ಬೇಕಾ? ಬೇಕಾದ್ದು ಇಡುಸ್ತಿನಿ. ಏನೇ, ಕೇಳ್ತಾ? ರಾತ್ರಿ ಬರದು ಲೇಟಾಗುತ್ತೆ, ಹ್ಞಂ..’

ಯಾರದೋ ಹೆಸರಿಟ್ಕಂಡರೆ ಅದು ನನ್ ಹೆಸರು ಹೇಗಾಗುತ್ತೆ? 

‘ನಿಂಗಮ್ಮ, ನಿಂಗಮ್ಮ, ಒನ್ನಿಮಿಷ ನಿಲ್ಲು, ನಾ ಯಾರಂತ ಗೊತ್ತ ನಿಂಗೆ?’

‘ಇದೇನಿಂಗ್ಕೇಳೀರಿ. ಬುಡಿ, ನೀವ್ಗೊತ್ತಿಲ್ವ, ಸವ್ಕಾರ್ರ ಎಂಡ್ರು..’

ಅಯ್ಯೋ, ಅದಾಯ್ತು, ಆದ್ರೆ ನಾ ಯಾರು? ನನ್ನ ಹೆಸರು?

ಹೆಸರು ಮರೆಸಲ್ಪಟ್ಟವಳ ದಿನರಾತ್ರಿಗಳು ಇದೇ ತಲ್ಲಣದಲ್ಲೇ ಉರುಳುತ್ತಿರಲು .. ..

ಈಗ ಹೇಳಿ, ಅವಳಿಗೆ ಸಿಕ್ಕಿದ್ದು ಏನು? ಕಳಕೊಂಡಿದ್ದು ಏನು? ತಿಳಿಯಿತೇ ನಿಮಗೇನಾದರೂ? 

(Image Source Internet)

ಗೆಳತಿ ವಾಣಿ ಪೆರಿಯೋಡಿಯಿಂದ ಕೇಳಿದ ಮೇಲಿನ ಕತೆ (ತೆಲುಗು ಲೇಖಕಿ ಪಿ. ಸತ್ಯವತಿ ಅವರ `ದಮಯಂತಿಯ ಮಗಳು’ ಸಂಕಲನದ ಕತೆ) ನಾನಾ ಅರ್ಥ ಹೊರಡಿಸುವಂತಿದೆ. 

ಹೆಣ್ಣು ಎಲ್ಲೆಡೆಯಿಂದ ಕಳೆದುಹೋಗಿರುವಳು, ಕಾಣೆಯಾಗಿರುವಳು, ಕಾಣದಂತಾಗಿರುವವಳು. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರೇ ಇದ್ದರೂ, ಎದುರಿದ್ದರೂ ಅದೃಶ್ಯವಾಗಿರುವವರು. ಸುತ್ತಮುತ್ತ ಮಹಿಳೆಯರೇ ತುಂಬಿದ್ದರೂ ‘ಅಯ್ಯೋ, ಸಮರ್ಥ ನಾಯಕಿಯರೇ ಸಿಗ್ತಿಲ್ಲ, ಭಾಷಣಕಾರ್ತಿಯರೇ ಇಲ್ಲ, ಬರಹಗಾರ್ತಿಯರೇ ಇಲ್ಲ, ಸಾಧಕಿಯರೇ ಕಾಣ್ತಿಲ್ಲ, ಒಳ್ಳೇ ಹೆಣ್ಣೇ ಇಲ್ಲ’ ಎನ್ನುತ್ತಾರೆ! ಹೊರಗೆ ಸಮಾಜದಲ್ಲಂತೂ ಆಯಿತು, ಮನೆಯಲ್ಲಾದರೂ ಹೆಣ್ಣು ಕಾಣಿಸುವಳೇ? ‘ಕಂಡೋರ ಮನೆಯ ಸೇರಲಿರುವ ಗುಂಡು’ ಎಂದೇ ಬೆಳೆಯುತ್ತಾಳೆ. ಮದುವೆಯೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ ಎಂದು ಒಪ್ಪಿಸಲ್ಪಟ್ಟಿದ್ದಾಳೆ. ಬಳಿಕ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’. ಮದುವೆಯಾದದ್ದೇ ಅವಳ ಹೆಸರು ತವರಿನ ಪಡಿತರ ಚೀಟಿಯಿಂದ ರದ್ದಾಗಿ ‘ಕೊಟ್ಟ’ ಮನೆಯ ಕಾರ್ಡಿಗೆ ವರ್ಗಾವಣೆಯಾಗುತ್ತದೆ. ಇಂಥವರ ಮಗಳು ಎನ್ನುವುದು ಇಂಥವರ ಹೆಂಡತಿ ಎಂದು ಬದಲಾಗುತ್ತದೆ. ತವರಿನಲ್ಲಿಟ್ಟ ಹೆಸರನ್ನೂ ಬದಲಿಸುವ ರೂಢಿ ವ್ಯಾಪಕವಾಗಿದೆ. ಅವಳ ಖಾಸಗಿ ಸ್ಥಳ, ಬದುಕು, ಆಪ್ತವಲಯ, ಕೆಳೆತನದ ವಲಯಗಳು ಸಂಪೂರ್ಣ ಬದಲಾಗುತ್ತವೆ. ಬದುಕಿನ ಹಲವು ತಿರುವುಗಳಲ್ಲಿ ಹೆಣ್ಣಿಗೆ ಆಯ್ಕೆಯ ಅವಕಾಶ ಇಲ್ಲ. ಇದ್ದರೂ ಅದು ಪೂರ್ವ ನಿರ್ಧರಿತ. ಎಲ್ಲರ ಹಕ್ಕು, ಸುಖಗಳನ್ನೆತ್ತಿ ಹಿಡಿದು ಪತ್ನಿಯೆಂಬ, ತಾಯ್ತನವೆಂಬ ಹಕ್ಕುನಷ್ಟದ ಸ್ಥಿತಿಯನ್ನೇ ಪರಮ ಪಾವನವೆಂದು ಪರಿಗಣಿಸಿ ತ್ಯಾಗಮಯಿಯಾಗಬೇಕು. ‘ಇದ್ರೆ ಅವರ ಅಮ್ಮನ ತರಹ ಇರಬೇಕು’, ‘ಜೋಡಿ ಅಂದ್ರೆ ಅವುರ‍್ದು..’ ಎಂಬ ಹೊಗಳಿಕೆ ಗಳಿಸಿಕೊಳ್ಳಲು ಮೈಸುಟ್ಟುಕೊಂಡು ಪೂರಿಯಂತೆ ಉಬ್ಬಬೇಕು. 

ಅಮ್ಮನಾಗುವುದೊಂದು ಖಟ್ಟಾಮಿಠ್ಠಾ ಅನುಭವ. ಎಷ್ಟು ಸಂಭ್ರಮವೋ ಅಷ್ಟೇ ಆತಂಕ. ಎಷ್ಟು ಹೆಮ್ಮೆಯೋ ಅಷ್ಟೇ ದಮನಿತ ಅನುಭವ. ಅದರಲ್ಲೂ ಬಸುರು, ಬಾಣಂತನ, ಹೆರಿಗೆ, ತಾಯ್ತನಗಳನ್ನು ಸಾವಧಾನವಾಗಿ ಅನುಭವಿಸುವಷ್ಟೂ ಸಮಯ ಮಾಡಿಕೊಳ್ಳಲಾಗದ ಈ ಕಾಲದ ತಾಯಿಯರ ಅನುಭವ ತುಂಬ ಭಿನ್ನವಾಗಿದೆ. ಆದರೆ ತಾಯ್ತನದ ನಿಜ ಅನುಭವವನ್ನು, ಸಂಕಟವನ್ನು ಹೇಳುವ ಅವಕಾಶವೇ ಇಲ್ಲ. ಬರಿಯ ಸಂಭ್ರಮಿಸಬೇಕು. ಮಕ್ಕಳ ಅನುದಿನದ ಬೇಕುಬೇಡಗಳ ಪೂರೈಸುತ್ತ, ಹಲವು ಒತ್ತಡಗಳ ಸಹಿಸುತ್ತ ಬದುಕಬೇಕು. ತಾಯಿಗೊಂದು ಅಲಂಕಾರಿಕ ದಿನ, ಸ್ಥಾನ ಕೊಟ್ಟುದಕ್ಕೆ ಧನ್ಯಳಾಗಬೇಕು. ಇಷ್ಟಾದರೂ ಯಾವ ಮಕ್ಕಳ ಹೆಸರಿನಲ್ಲಾದರೂ ಅವರ ಅಮ್ಮನ ಹೆಸರಿರುವುದೇ? ಅಮ್ಮನ ಹೆಸರಿನಲ್ಲಿ ಅಜ್ಜಿಯ ಹೆಸರಿಲ್ಲ. ಅಜ್ಜಿಯ ಹೆಸರಲ್ಲಿ ಅವಳಮ್ಮನ ಹೆಸರಿಲ್ಲ. ಹೀಗೇ ಸಾವಿರಾರು ವರ್ಷಗಳಿಂದ ಹೆತ್ತರೂ, ಹೊತ್ತರೂ, ಹೆತ್ತುಹೆತ್ತು ಸತ್ತರೂ ತನ್ನ ಹೆಸರ ಗುರುತೇ ಇಲ್ಲದಂತೆ ಬಾಳಿ ಹೋದವರು ಮಹಿಳೆಯರು. ಅವಳ ಕುರುಹಿಲ್ಲವೆನ್ನುವುದು ಕೊರತೆಯೆಂದು ಯಾರಿಗೂ ಅನ್ನಿಸುವುದಿಲ್ಲ. ಸ್ವತಃ ತನ್ನ ತಾನೇ ಮರೆತ ಹೆಣ್ಣಿಗೂ.

ಸಮಾಜ ಹೀಗಿರುವಾಗ ಮಹಿಳೆ ತಾನು ಕಾಣೆಯಾಗದಿರಲು ಕುಟುಂಬವೆಂಬ ಗಾಣಕ್ಕೆ ಕಟ್ಟಿದ ಹಸುವಾಗದೇ ಹೊಸಿಲು ದಾಟಿ ಎಲ್ಲರಿಗೂ ಘನತೆಯ ಬದುಕು ದೊರೆಯಲೆಂದು ಕೈಜೋಡಿಸಬೇಕು. ಎಲ್ಲ ಸಂಬಂಧಗಳಿಗಿಂತ ಗಾಢವಾದದ್ದು ಸೋದರಿತ್ವ; ಅದುವೇ ಜಗದ ಎಲ್ಲ ಹೆಣ್ಣುಗಳ, ಮನುಷ್ಯರ ಒಗ್ಗೂಡಿಸಬಲ್ಲ ಶಕ್ತಿ; ಮೂರು ಜುಟ್ಟು ಸೇರದಿದ್ದ ಕಡೆಯೂ ಸಾವಿರ ಜಡೆಗಳು ಸೇರಬಲ್ಲವು ಎಂದು ಸಾಧಿಸಿ ತೋರಿಸಬೇಕು. ಲೋಕ ಶಾಂತಿಯಿಂದಿರಲು ಇದೊಂದೇ ದಾರಿ ಎಂದು ತಿಳಿಯಬೇಕು.

                                                                                                   ಡಾ. ಎಚ್. ಎಸ್. ಅನುಪಮಾ

(Published in Varthabharathi Daily on March 8th, 2024)

Saturday 24 February 2024

ಎ. ಅರುಳ್ ಮೌಳಿ, ಚೆನ್ನೈ

 



ಮದರಾಸು ಉಚ್ಚ ನ್ಯಾಯಾಲಯದಲ್ಲಿ 1988ರಿಂದ ನ್ಯಾಯವಾದಿಯಾಗಿರುವ ಎ. ಅರುಳ್ ಮೌಳಿ ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ಮತ್ತು ವಾಗ್ಮಿ. ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಳ್, ಸಾಮಾಜಿಕ ಚಿಂತನೆಗಳ ಕೌಟುಂಬಿಕ ಹಿನ್ನೆಲೆಯವರು. ಅವರ ತಂದೆ ತಮಿಳು ಭಾಷಾ ಪಂಡಿತರು. ತಾಯಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರಿಬ್ಬರೂ ಪೆರಿಯಾರ್ ಅವರ ಕಟ್ಟಾ ಅನುಯಾಯಿಗಳು. ತಮಿಳ್ ನಾಡನ್ ಎನ್ನುವವರು ತಮಿಳಿಗೆ ಅನುವಾದಿಸಿದ್ದ ಮನುಸ್ಮೃತಿಯನ್ನು ಪ್ರಕಟಿಸಿದ್ದರು. 

1968ರಲ್ಲಿ ನಾಲ್ಕು ವರ್ಷವಾಗಿದ್ದಾಗಲೇ ಸೇಲಂನಲ್ಲಿ ನಡೆದ ದ್ರಾವಿಡ ಕಳಗಂ ಸಭೆಯಲ್ಲಿ ಪೆರಿಯಾರರ ಎದುರು ಬಾಲೆ ಅರುಳ್ ಭಾಷಣ ಮಾಡಿದ್ದರು. 1978ರ ನಂತರ, 14 ವರ್ಷ ತುಂಬಿದ ಹುಡುಗಿಯಿರುವಾಗಲಿಂದ ದ್ರಾವಿಡ ಕಳಗಂ ಸಭೆಗಳಲ್ಲಿ ಅವರು ಮಾತನಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಸಮಾನ ಮನಸ್ಕರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಚರ್ಚೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರಸ್ತುತ ದ್ರಾವಿಡ ಕಳಗಂ ವಕ್ತಾರರಾಗಿ ಮಾಧ್ಯಮದ ಡಿಬೇಟುಗಳಲ್ಲೂ ಪಾಲ್ಗೊಳ್ಳುವ ಅರುಳ್, ಲಿಂಗಸೂಕ್ಷ್ಮತೆ, ಸ್ತ್ರೀವಾದಿ ಚಿಂತನೆ, ದ್ರಾವಿಡ ಚಿಂತನೆಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಈಗ ದ್ರಾವಿಡ ಕಳಗಂನ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯ ಕುರಿತು ನಡೆಯುವ ಹಲವಾರು ಸಭೆ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರಗಳಿಗೂ ಇದೇ ಉದ್ದೇಶಗಳಿಗೆ ಭೇಟಿ ನೀಡಿದ್ದಾರೆ. 

ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ತಮಿಳಿನಲ್ಲೇ ವಾದಿಸಬಯಸುವ ಅರುಳ್, ರಿಟ್, ಸೇವಾ ವಿಷಯಗಳು, ಸಿವಿಲ್ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಪ್ರಕರಣವು ಸಾಮಾಜಿಕವಾಗಿ ಪ್ರಮುಖವೆನಿಸಿದರೆ ಅದನ್ನು ತೆಗೆದುಕೊಂಡು ವಾದಿಸುತ್ತಾರೆ. 

ಸಮಾಜದಲ್ಲಿ ಎಲ್ಲ ತರಹದ ಅಸಮಾನತೆ ಅಳಿಯಲು, ಲಿಂಗ ಸಮಾನತೆ ನೆಲೆಯಾಗಲು, ಕಂಪ್ಯೂಟರ್ ಬಂದರೂ ಅದರಲ್ಲೂ ಜಾತಕ ನೋಡುವ ಮೌಢ್ಯ ಅಳಿಯಲು ಪೆರಿಯಾರ್ ಚಿಂತನೆಗಳು ಅತ್ಯಗತ್ಯ; ಬದುಕಿಗೆ ಬೇಕಿರುವುದು ಶಿಸ್ತೇ ಹೊರತು ಭಕ್ತಿಯಲ್ಲ ಎಂದು ನಂಬಿರುವ ಅರುಳ್ ಮೌಳಿ, ಇದೇ ಮಾರ್ಚ್ 8ರಂದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಮಹಿಳಾ ಚೈತನ್ಯ ದಿನ’ದ ಭಾಗವಾಗಿ ನಡೆಯಲಿರುವ ‘ಮಹಿಳಾ ಪ್ರಾತಿನಿಧ್ಯ: ಆಶಯ, ವಾಸ್ತವ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲು ಚೆನ್ನೈನಿಂದ ಬರಲಿದ್ದಾರೆ. 

ಬನ್ನಿ, ಅವರ ದನಿಗೆ ದನಿಗೂಡಿಸೋಣ.


ಸಬಾ ನಖ್ವಿ - ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

 



ಭಾರತೀಯ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಮೂರು ದಶಕಗಳಿಂದ ಸುದ್ದಿಮೂಲ ಕ್ಷೇತ್ರಕಾರ್ಯ, ಡೆಸ್ಕ್, ಮುಖ್ಯ ಚರ್ಚೆ, ಸಂವಾದಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಸಬಾ ನಖ್ವಿ ಅವರದು. ಇದುವರೆಗೆ 4 ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕಿಯೂ ಹೌದು. ಹಿರಿಯ ಪತ್ರಕರ್ತ, ಬರಹಗಾರ ಸಯೀದ್ ನಖ್ವಿ ಮತ್ತು ಅರುಣಾ ಅವರ ಮಗಳಾದ ಸಬಾ, ದೆಹಲಿಯ ಸಂತ ಸ್ಟೀಫನ್ ಕಾಲೇಜು ಮತ್ತು ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಬಳಿಕ ಪತ್ರಕರ್ತೆಯಾಗಿ ಕೆಲಸ ಆರಂಭಿಸಿ ಔಟ್‌ಲುಕ್ ನಿಯತಕಾಲಿಕದಲ್ಲಿ ಪೊಲಿಟಿಕಲ್ ಎಡಿಟರ್ ಆಗಿ 2015ರವರೆಗೆ ಕೆಲಸ ಮಾಡಿದರು. ಈಗ ಫ್ರಂಟ್‌ಲೈನ್, ದ ಹಿಂದೂ, ಟ್ರಿಬ್ಯೂನ್, ಸ್ಕ್ರೋಲ್.ಇನ್, ಟೆಲಿಗ್ರಾಫ್ ಮತ್ತಿತರ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿದ್ದಾರೆ. 

ಸಬಾ ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯಾಗಿದ್ದಾರೆ. ಇನ್ ಗುಡ್ ಫೆಯ್ತ್ (2012), ಕ್ಯಾಪಿಟಲ್ ಕಾಂಕ್ವೆಸ್ಟ್ (2015), ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ (2018), ಪಾಲಿಟಿಕ್ಸ್ ಆಫ್ ಜುಗಾಡ್: ಸ್ಯಾಫ್ರನ್ ಸ್ಟಾರ್ಮ್ (2019) ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಇನ್ ಗುಡ್ ಫೆಯ್ತ್’ ಒಬ್ಬ ಪತ್ರಕರ್ತೆಯಾಗಿ ಅವರು ಕಂಡುಕೊಂಡ ಭಾರತವಾಗಿದೆ. ಸಣ್ಣಪುಟ್ಟ ಊರುಗಳಲ್ಲಿ, ಜನಸಾಮಾನ್ಯರ ಉತ್ಸಾಹದಲ್ಲಿ, ಊರೆಲ್ಲ ಒಂದು ದೈವದ ಮೇಲಿಡುವ ವಿಶ್ವಾಸದಲ್ಲಿ ಸಹಬಾಳ್ವೆಯ, ಬಹುತ್ವದ ಭಾರತ ಇನ್ನೂ ಉಸಿರಾಡುತ್ತಿದೆ ಎಂದವರು ದಾಖಲಿಸಿದ್ದಾರೆ. ಬಂಗಾಳಿ ಮುಸ್ಲಿಮರ ಬನದೇವತೆ, ದೈವತ್ವಕ್ಕೇರಿಸಲ್ಪಟ್ಟ ಮಹಾರಾಷ್ಟ್ರದ ಶಿವಾಜಿ, ಶಿರಡಿ ಸಾಯಿಬಾಬಾರ ಮೂಲ, ಗುಡಿ-ದರ್ಗಾ ಎರಡೂ ಆಗಿರುವ ಅಸಂಖ್ಯ ತಾಣಗಳ ಒಳಹೊಕ್ಕು ಶೋಧಿಸಿರುವ ಸಬಾ, ಧಾರ್ಮಿಕ ಮೂಲಭೂತವಾದಕ್ಕೆ ಇಂತಹ ಯಾವುದೋ ಮೂಲೆಯಲ್ಲಿರುವ ಸಣ್ಣಪುಟ್ಟ ಶ್ರದ್ಧಾ ಕೇಂದ್ರಗಳೇ ಮದ್ದು ಎಂದು ನಂಬುತ್ತಾರೆ. ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಧರ್ಮಗಳು ಒಡೆಯುವುದನ್ನು ಇಂತಹ ತಾಣಗಳು ತಣ್ಣಗೆ ಹೇಗೆ ನಿರಾಕರಿಸಿ ಒಂದುಗೂಡಿಸುತ್ತವೆಂದು ತೋರಿಸುತ್ತಾರೆ. 

‘ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ’ ಪುಸ್ತಕದಲ್ಲಿ ಎರಡು ದಶಕಗಳ ಕಾಲ ಪತ್ರಕರ್ತೆಯಾಗಿ ಬಿಜೆಪಿ ಎಂಬ ಪಕ್ಷವನ್ನು ತಾವು ಗಮನಿಸಿ, ಹಿಂಬಾಲಿಸಿ, ಕಂಡುಕೊಂಡದ್ದನ್ನು ಸಬಾ ದಾಖಲಿಸಿದ್ದಾರೆ. ಸಮರ್ಥ ಮಹಿಳೆಯರನ್ನು ಅವರು ಮುನ್ನೆಲೆಗೆ ತಂದದ್ದನ್ನು ಗುರುತಿಸುತ್ತಾರೆ. ಹೊಂದಾಣಿಕೆ ಸರ್ಕಾರ ರಚಿಸಿದ ಸ್ಥಿತಿಯಿಂದ ಇವತ್ತು ಬಿಜೆಪಿಯು ಅಖಂಡ ಬಹುಮತ ಪಡೆದು ಯಜಮಾನಿಕೆ ಸ್ಥಾಪಿಸಿರುವವರೆಗಿನ ಬೆಳವಣಿಗೆಯನ್ನು ‘ವಸ್ತುನಿಷ್ಠ’ವಾಗಿ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅದು ಈ ಎರಡು ದಶಕಗಳಲ್ಲಿ ಭಾರತದಲ್ಲಾದ ಏಳುಬೀಳುಗಳ ಮೂಲವನ್ನು ಸ್ವತಃ ಕಂಡು ದಾಖಲಿಸಿರುವ ಕಥನವಾಗಿದೆ. ಇದುವರೆಗೆ ಹೊರಜಗತ್ತಿಗೆ ತಿಳಿದಿರದ ಹಲವು ವಿಷಯಗಳ ಬಗೆಗೆ ಹಾಸ್ಯದ ಲೇಪನದೊಂದಿಗೆ ಆಳವಾಗಿ, ವಿಷದವಾಗಿ ಬೆಳಕು ಚೆಲ್ಲಿದೆ. ವರದಿಗಾರಿಕೆಯ ಫಲವಾಗಿ ಲಭಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಬಿಜೆಪಿಯ ನಾಯಕರ ಜೊತೆಗಿನ ನಿರಂತರ ಸಂಪರ್ಕವನ್ನು ಬಳಸಿಕೊಂಡಿರುವ ಸಬಾ, ವಾಜಪೇಯಿ-ಅಡ್ವಾನಿಯ ಬಿಜೆಪಿಗೂ, ಮೋದಿ-ಶಾ ಕೇಸರಿ ಪಕ್ಷಕ್ಕೂ ಇರುವ ವ್ಯತ್ಯಾಸಗಳನ್ನು ಸ್ಫುಟವಾಗಿ ಗುರುತಿಸಿದ್ದಾರೆ. ಬಿಜೆಪಿ ಪಕ್ಷದ ಒಳಹೊರಗನ್ನು ‘ತಟಸ್ಥ’ವಾಗಿ ಸುದೂರದಿಂದ ಮಂಡಿಸಿದ್ದಾರೆ. ‘ಸಮಕಾಲೀನ ಚರಿತ್ರೆಯೊಳಗಿನ ಡೀಪ್ ಡೈವ್’ ಎಂದೇ ಈ ಹೊತ್ತಗೆಯನ್ನು ವಿಶ್ಲೇಷಿಸಲಾಗಿದೆ. ಆಬ್ಜೆಕ್ಟಿವ್ ಜರ್ನಲಿಸಂ (ವಸ್ತುನಿಷ್ಟ ಪತ್ರಿಕೋದ್ಯಮ) ತಮ್ಮ ನಿಲುವು ಎನ್ನುವ ಅವರು ತಮ್ಮ ಸಹವರ್ತಿಗಳಿಂದ ಇದೇ ಕಾರಣಕ್ಕೆ ಟೀಕೆಗೂ ಒಳಗಾಗಿದ್ದಾರೆ. 

ಎಲ್ಲ ಮತಧರ್ಮಗಳ ಮದುವೆಯ ಖಾಸಗಿ ಕಾನೂನುಗಳು ಹೆಣ್ಣನ್ನು ಕ್ಷುದ್ರಗೊಳಿಸುತ್ತವೆಂದು ನಾಗರಿಕ ವಿವಾಹವನ್ನು ಬೆಂಬಲಿಸುವ ಸಬಾ ತನ್ನ ಇಷ್ಟಾನಿಷ್ಟ ಅರಿಯುವ ಗೆಳೆಯನನ್ನು ಹುಡುಕಿಕೊಂಡಿದ್ದಾರೆ. ಬಂಗಾಳದ ಸಂಜಯ್ ಭೌಮಿಕ್ ಅವರ ಬಾಳಸಂಗಾತಿ. ಮಗಳು ಸಾರಾ ಭೌಮಿಕ್. ದೇಶದಲ್ಲಿ ಸಾವಿರಾರು ಜನ ಜಾತಿ, ಮತ, ಲಿಂಗತ್ವ ಪೂರ್ವಗ್ರಹದಿಂದ ಬಳಲುತ್ತಿರುವಾಗ ಅದನ್ನೆಲ್ಲ ತಿಳಿಸಲು ಪತ್ರಕರ್ತೆಯಾಗಿ ತನಗೆ ಅವಕಾಶ ಮತ್ತು ಧ್ವನಿ ಸಿಕ್ಕಿದೆ; ಎಂದೇ ತಾನು ತನ್ನ ಕತೆ ಹೇಳುವುದಕ್ಕಿಂತ ಜನರ ಕತೆಗಳನ್ನು ಹೇಳಲೆಂದು ಇರುವುದಾಗಿ ಸಬಾ ಭಾವಿಸಿದ್ದಾರೆ. ತಮ್ಮ ನೇರನುಡಿಯ ಕಾರಣಕ್ಕೆ ದಿನನಿತ್ಯ ವೈಯಕ್ತಿಕವಾದ ಸವಾಲುಗಳನ್ನೆದುರಿಸುತ್ತ ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದೆಗೊಳಗಾಗಿದ್ದಾರೆ. ಆದರೂ ತಾನು ಭಾರತೀಯ ಮುಸ್ಲಿಂ ಎನ್ನುವುದು ಕೆಲಸಕ್ಕೆ ಅಡ್ಡಿ ಬಂದಿಲ್ಲ; ತಾನು ಬಲಿಪಶು ಅಲ್ಲ ಎಂದುಕೊಳ್ಳುವ ದಿಟ್ಟೆ ಆಕೆ.

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಬಾ ನಖ್ವಿ ದೆಹಲಿಯಿಂದ ಬರಲಿದ್ದಾರೆ. ಬನ್ನಿ, ಅವರೊಂದಿಗೆ ನಾವೂ ದನಿಗೂಡಿಸೋಣ. ಜೊತೆಜೊತೆಗೆ ಹೆಜ್ಜೆ ಹಾಕೋಣ.