Wednesday, 4 March 2026

ನಿರ್ಭೀತ ನ್ಯಾಯವಾದಿ ತೀಸ್ತಾ ಸೆಟಲ್ವಾಡ್

 



ಬ್ರಹ್ಮಪುತ್ರಾ ನದಿಯನ್ನು ಸೇರುವ ಉತ್ತರ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳ ಜೀವನದಿ ತೀಸ್ತಾ. ನಿರಂತರ ಅಡೆತಡೆಗಳ ದಾಟಿ ಧುಮ್ಮಿಕ್ಕಿ ಹರಿಯುವ, ನಡುನಡುವೆ ನೆರೆದುಂಬಿ ಅಬ್ಬರಿಸುವ ಈ ನದಿಯ ಹೆಸರನ್ನು ಇಟ್ಟುಕೊಂಡ ಬರಹಗಾರ್ತಿ, ಪತ್ರಕರ್ತೆ, ಮಾನವ ಹಕ್ಕು ಹೋರಾಟಗಾರ್ತಿ, ೬೪ ವರ್ಷದ ತೀಸ್ತಾ ಸೆಟಲ್ವಾಡ್. ಈ ನಮ್ಮಕ್ಕ ನದಿಯಂತಹುದೇ ನ್ಯಾಯಪ್ರಜ್ಞೆಯ, ನಿರ್ಭೀತಿಯ, ಚಲನಶೀಲ ವ್ಯಕ್ತಿತ್ವದ ಮಹಿಳೆ. ಯಾವ ತರಹದ ದಮನಕ್ಕೂ ಶರಣೆನ್ನದ ಛಲದ ಹೆಣ್ಣು. ‘ಸಂವಿಧಾನದ ಕಾಲಾಳು’ (ಫುಟ್ ಸೋಲ್ಜರ್ ಆಫ್ ಕಾನ್ಸ್ಟಿಟ್ಯೂಷನ್) ಎಂದು ಹೆಸರಾಗಿರುವವರು. ಅತ್ಯಂತ ಗೌರವಯುತವಾದ ಈ ಸ್ಥಾನ ಸುಮ್ಮನೆ ಸಿಕ್ಕಿಲ್ಲ. ದಶಕಗಳ ಸಂಘಟನೆ, ಕಾನೂನು ಹೋರಾಟ, ಜೈಲು ವಾಸ, ಕಚೇರಿಗಳಿಗೆ ಅಲೆದಾಟ, ಪ್ರಾಣಾಪಾಯಗಳ ಇತಿಹಾಸ ಅದರ ಹಿಂದಿದೆ. ನ್ಯಾಯಕ್ಕಾಗಿ ಹೋರಾಡುವುದು ಅವರ ಪರಂಪರೆಯಾಗಿದೆ.  

ನ್ಯಾಯವಾದಿಗಳ ಕುಟುಂಬದ ತೀಸ್ತಾರ ಮುತ್ತಜ್ಜ ಸರ್ ಚಿಮನಲಾಲ್ ಸೆಟಲ್ವಾಡ್ ಪ್ರಖ್ಯಾತ ಬ್ಯಾರಿಸ್ಟರ್ ಆಗಿದ್ದವರು. ೧೯೧೯ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿಚಾರಣೆಗೆ ನೇಮಕವಾದ ಹಂಟರ್ ಕಮಿಷನ್ನಿನಲ್ಲಿದ್ದ ಮೂವರು ಭಾರತೀಯರಲ್ಲಿ ಅವರೂ ಒಬ್ಬರು. ಜನರಲ್ ಡಯರ್‌ಗೆ ಕ್ರಾಸ್ ಎಕ್ಸಾಮಿನೇಷನ್ ನಡೆಸಿ ಆತನನ್ನು ಬ್ರಿಟನ್ನಿಗೆ ವಾಪಸು ಕರೆಸಿಕೊಳ್ಳುವಂತೆ ಮಾಡಿದ್ದರು. ಡಾ. ಬಿ. ಆರ್. ಅಂಬೇಡ್ಕರರೊಡನೆ ನಿಕಟ ಸಂಪರ್ಕ ಹೊಂದಿದ್ದರು. ೧೯೨೪ರಲ್ಲಿ ಅಂಬೇಡ್ಕರರು ಬಹಿಷ್ಕೃತ ಹಿತಕಾರಿಣೀ ಸಭಾ ಆರಂಭಿಸುವಾಗ ಕೈ ಜೋಡಿಸಿದ್ದರು. ಸಭಾದ ಮೊದಲ ಅಧ್ಯಕ್ಷರು ಅವರೇ ಆಗಿದ್ದರು. ಚಿಮನಲಾಲರ ಮಗ ಮೋತಿಲಾಲ್ ಸೆಟಲ್ವಾಡ್ (ತೀಸ್ತಾರ ಅಜ್ಜ) ಭಾರತದ ಮೊದಲ ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು. ಭಾರತದ ಮೊದಲ ಅಟಾರ್ನಿ ಜನರಲ್ ಆಗಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದರು. ಅವರ ಮಗ ಮುಂಬಯಿಯಲ್ಲಿ ನ್ಯಾಯವಾದಿಯಾಗಿರುವ ಅತುಲ್ ಸೆಟಲ್ವಾಡ್. ಅತುಲ್ ಮತ್ತು ಸೀತಾರ ಮಗಳು ತೀಸ್ತಾ. 

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವಾಟರ್‌ಗೇಟ್ ಹಗರಣವನ್ನು ಬಯಲಿಗೆಳೆದ ಇಬ್ಬರು ಪತ್ರಕರ್ತರು ಬರೆದ ಪುಸ್ತಕ ‘ಆಲ್ ದ ಪ್ರೆಸಿಡೆಂಟ್ಸ್ ಮೆನ್’. ವಿದ್ಯಾರ್ಥಿ ಜೀವನದಲ್ಲಿ ಈ ಪುಸ್ತಕ ಓದಿದ ತೀಸ್ತಾಗೆ ತಮ್ಮ ಕುಟುಂಬದ ಪಾರಂಪರಿಕ ವೃತ್ತಿಯಂತಾಗಿದ್ದ ವಕೀಲಿಕೆ ಬಿಟ್ಟು ಪತ್ರಕರ್ತೆಯಾಗುವ ಕನಸು ಮೊಳೆಯಿತು. ಕಾನೂನು ವಿದ್ಯಾರ್ಥಿನಿಯಾಗಿ ಎರಡು ವರ್ಷ ಪೂರೈಸಿದ್ದವರು ಅರ್ಧಕ್ಕೇ ಅದನ್ನು ಬಿಟ್ಟು ಮುಂಬೈ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವಿ ಪಡೆದರು. ಬಳಿಕ ೧೯೮೩ರಲ್ಲಿ ಪತ್ರಕರ್ತೆಯಾಗಿ ದ ಡೈಲಿ ಮತ್ತು ದ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಾರ್ತಿಯಾಗಿ ವೃತ್ತಿ ಜೀವನ ಆರಂಭಿಸಿದರು. ‘ದ ಬಿಸಿನೆಸ್ ಇಂಡಿಯಾ’ದ ಸೀನಿಯರ್ ಕರೆಸ್ಪಾಂಡೆಂಟ್ ಆದರು. ಪತ್ರಕರ್ತೆಯಾಗಿ ೧೯೮೪ರ ಭಿವಂಡಿ ಕೋಮುಗಲಭೆಯ ವರದಿ ಮಾಡುತ್ತಿರುವಾಗ ಕೋಮುಹಿಂಸೆಯ ನಿಜರೂಪ ದರ್ಶನವಾಯಿತು. ೧೯೯೨-೯೩ರಲ್ಲಿ ಮುಂಬಯಿಯಲ್ಲಿ ನಡೆದ ಕೋಮುಗಲಭೆಗಳು ಅವರ ಚಿಂತನೆಯ ದಿಕ್ಕನ್ನೇ ಬದಲಿಸಿದವು. 

ವೃತ್ತಿಜೀವನದ ವೇಳೆ ಪರಿಚಯವಾದ ಪತ್ರಕರ್ತ, ಮಾನವಹಕ್ಕು ಹೋರಾಟಗಾರ ಜಾವೇದ್ ಆನಂದ್ ತೀಸ್ತಾ ಅವರ ಬಾಳ ಸಂಗಾತಿಯಾದರು. ಹತ್ತು ವರ್ಷ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಜೋಡಿಯು ಒತ್ತಡದ ಉದ್ಯೋಗಕ್ಕೆ ರಾಜೀನಾಮೆಯಿತ್ತು ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಯೋಚಿಸಿದರು. ೧೯೯೩ರಲ್ಲಿ ಸಬ್ರಂಗ್ ಕಮ್ಯುನಿಕೇಶನ್ಸ್ ಆರಂಭಿಸಿದರು. ಕಮ್ಯುನಾಲಿಸಂ ಕಾಂಬ್ಯಾಟ್ ಎಂಬ ಮಾಸಿಕವನ್ನು ಪ್ರಕಟಿಸತೊಡಗಿದರು. ತೀಸ್ತಾ ಅದರ ಸಂಪಾದಕಿಯಾದರು. (೨೦೧೨ರವರೆಗೂ ಮುದ್ರಿತ ಪ್ರತಿ ಬರುತ್ತಿತ್ತು. ನಂತರ ಡಿಜಿಟಲೀಕರಣಗೊಂಡಿದೆ. ಈಗ ಸಬ್ರಂಗ್ ಇಂಡಿಯಾ, ಕಮ್ಯುನಾಲಿಸಂ ಕಾಂಬ್ಯಾಟ್ ವಿದ್ಯುನ್ಮಾನ ಆವೃತ್ತಿಗಳು ಬರುತ್ತಿವೆ.) ೧೯೯೭ರಲ್ಲಿ ಖೋಜ್ (ಶೋಧ) ಎಂಬ ಯೋಜನೆಯನ್ನು ತೀಸ್ತಾ ಕೈಗೆತ್ತಿಕೊಂಡರು. ಭಾರತದ ಶಾಲಾ ಪಠ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಅದರಲ್ಲಿ ಅಡಗಿರುವ ಅಲ್ಪಸಂಖ್ಯಾತ ಸಮುದಾಯ ವಿರೋಧಿ, ಮಹಿಳಾ ವಿರೋಧಿ ಧೋರಣೆಯ ಪಠ್ಯಗಳನ್ನು ಮರುಬರಹ ಮಾಡುವ ಯೋಜನೆ ಅದು. ಬಹುತ್ವ ಭಾರತದ ನಿಜ ಚರಿತ್ರೆಯನ್ನು ಎತ್ತಿಹಿಡಿಯಲು ಸಾಮಾಜಿಕ ಮಾಧ್ಯಮವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವದು. 

೧೯೯೨-೨೦೦೨. ದೇಶದ ರಾಜಕಾರಣ, ಸಾಮಾಜಿಕ ಬದುಕಿನ ನೇಯ್ಗೆಯನ್ನೇ ಅಲ್ಲೋಲಕಲ್ಲೋಲ ಮಾಡಿದ, ಬಹುತ್ವ ಭಾರತವನ್ನು ಒಡೆದ ದಶಕ. ೨೦೦೨ರ ಕೋಮುಗಲಭೆಯಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್, ವಡೋದರಾ ಮತ್ತಿತರ ಪಟ್ಟಣಗಳಲ್ಲಿ, ಅಧಿಕಾರ ಕೇಂದ್ರಗಳಿಂದ ದೂರವಿರುವ ಹಳ್ಳಿಹಳ್ಳಿಗಳಲ್ಲಿ ಸಾವಿರಾರು ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯಿತು. ಸ್ವಾತಂತ್ರೋತ್ತರ ಭಾರತವು ಕಂಡಿರದ ಕೊಮು ಆಧರಿತ ಹತ್ಯಾಕಾಂಡ ಜರುಗಿತು. ಕಟ್ಟಡದ ಒಳಗಿದ್ದ ಕುಟುಂಬದೊಡನೆ ವಡೋದರಾದ ‘ಬೆಸ್ಟ್ ಬೇಕರಿ’ಯು ಹಾಡುಹಗಲೇ ಬೆಂಕಿಗಾಹುತಿಯಾಯಿತು. ದೂರದ ಹಳ್ಳಿಯೊಂದರ ಬಿಲ್ಕಿಸ್ ಬಾನು ಎಂಬ ಐದು ತಿಂಗಳ ಬಸುರಿ ತನ್ನ ಮೂರು ವರ್ಷದ ಮಗಳು, ಗಂಡ ಮತ್ತಿತರ ಬಂಧುಗಳೊಡನೆ ಜೀವವುಳಿಸಿಕೊಳ್ಳಲು ಊರು ಬಿಟ್ಟು ಹೋಗುವಾಗ ಭೀಕರ ದಾಳಿಗೊಳಗಾದಳು. ಅವಳು, ಅವಳ ತಾಯಿ ಮತ್ತು ಜೊತೆಗಿದ್ದ ಸಂಬಂಧಿ ಮಹಿಳೆಯರು ಗುಂಪು ಅತ್ಯಾಚಾರಕ್ಕೊಳಗಾದರು. ಅವಳ ಮಗಳನ್ನು ಬಂಡೆಗೆ ಜಪ್ಪಿ ಕೊಲ್ಲಲಾಯಿತು. ಇನ್ನೂ ಏಳು ಜನರು ಕಲ್ಲು, ಕೋಲುಗಳಿಂದ ಹೊಡೆತ ತಿಂದು ಕೊನೆಯುಸಿರೆಳೆದರು. ಅತ್ತ ಕಾಂಗ್ರೆಸ್ ಸಂಸದರಾಗಿದ್ದ ಎಹ್ಸಾನ್ ಜಾಫ್ರಿ ಅಹಮದಾಬಾದ್ ನಗರದಲ್ಲಿ ಸಜೀವ ದಹನಕ್ಕೊಳಗಾದರು. ಒಂದೇ ಎರಡೇ, ಎಲ್ಲೆಲ್ಲಿ ನೋಡಿದರೂ ಮನುಷ್ಯರ ನೆತ್ತರು ಹಾದಿಬೀದಿ ಮೇಲೆ ಚೆಲ್ಲಾಡಿಕೊಂಡ ಭೀಭತ್ಸ ಕಾಣಿಸುತ್ತಿತ್ತು. 




ಲಕ್ಷಾಂತರ ಮುಸ್ಲಿಮರು ಊರು, ಮನೆ ಬಿಟ್ಟು ಜೀವವುಳಿಸಿಕೊಳ್ಳಲು ಎಲ್ಲೆಲ್ಲಿಗೋ ಹೋದರು. ಶಸ್ತ್ರಾಸ್ತ್ರ ಹಿಡಿದು ತಿರುಗುತ್ತಿದ್ದ ಧರ್ಮದಮಲಿನ ಉಗ್ರರ ಕೈಗೆ ಸಿಲುಕಿ ಸಾವಿರಾರು ಜನ ಅನ್ಯಾಯವಾಗಿ ಜೀವ ಕಳೆದುಕೊಂಡರು. ಅನ್ನಾಹಾರ, ನೆರಳಿಲ್ಲದೆ ಕಂಡಕಂಡಲ್ಲಿ ಬಚ್ಚಿಟ್ಟುಕೊಂಡು ಅಂತೂಇಂತೂ ರಾಜ್ಯದ ಗಡಿ ದಾಟಿದವರು ಲೆಕ್ಕವಿಲ್ಲದಷ್ಟು ಜನ. 

ಭಯಾನಕ ಸಂಗತಿ ಎಂದರೆ ಅವರ ಸಹಾಯಕ್ಕೆ ಯಾವ ರಕ್ಷಕರೂ ಬರಲಿಲ್ಲ. ರಕ್ಷಿಸಬೇಕಾದವರೇ ಕೊಲ್ಲಲು ಟೊಂಕಕಟ್ಟಿ ನಿಂತಿದ್ದುದು, ತಾವು ಆರಿಸಿ ಕಳುಹಿಸಿದ ಆಳುವವರೇ ತಮ್ಮ ಪ್ರಾಣಹಂತಕರಾಗಿರುವುದು ಅವರ ಅರಿವಿಗೆ ಬಂದಿತು. ಕೊಲೆಗಡುಕರ ವಿರುದ್ಧ ಪ್ರಕರಣ ದಾಖಲಿಸಲೂ ಸಾಧ್ಯವಾಗಲಿಲ್ಲ. ಭಾರತದ, ವಿಶ್ವದ ಅಂತಸ್ಸಾಕ್ಷಿಯನ್ನೇ ನಡುಗಿಸಿದ ಈ ಭೀಕರ ಕೋಮುಹಿಂಸಾಚಾರಕ್ಕೆ ಯಾರು ಹೊಣೆ? ಸ್ಥಳೀಯ ಆಡಳಿತದ, ಸರ್ಕಾರದ ಉತ್ತರದಾಯಿತ್ವ ಏನು? ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಹೇಗೆ? ಎಂಬ ಪ್ರಶ್ನೆಗಳೆದ್ದವು. ಹೋರಾಟ, ಸಂಘಟನೆ, ಪ್ರತಿಭಟನೆಗಳು ರೂಪುಗೊಂಡವು. 

ಆ ಸಮಯದಲ್ಲಿ ತೀಸ್ತಾ ಸೆಟಲ್ವಾಡ್, ಜಾವೆದ್ ಆನಂದ್, ಫಾದರ್ ಸೆಡ್ರಿಕ್ ಪ್ರಕಾಶ್, ಪತ್ರಕರ್ತ ಅನಿಲ್ ಧಾರ್ಕರ್, ಚಿತ್ರರಂಗ ಮತ್ತು ರಂಗಭೂಮಿಯ ಅಲಿಕ್ ಪದಾಮ್ಸಿ, ಜಾವೆದ್ ಅಖ್ತರ್, ವಿಜಯ್ ತೆಂಡೂಲ್ಕರ್, ರಾಹುಲ್ ಬೋಸ್ ಮೊದಲಾದ ಜಾತ್ಯತೀತ ಸಮಸಮಾಜ ಕಟ್ಟಬಯಸುವ ಸಮಾನ ಮನಸ್ಕರು ಒಂದು ಸರ್ಕಾರೇತರ ಸಂಸ್ಥೆ ‘ಸಿಜೆಪಿ’ (ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ - ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು) ಸ್ಥಾಪಿಸಿದರು. ಎಲ್ಲ ಹಿಂಸೆ, ದೌರ್ಜನ್ಯಗಳ ಹಿಂದಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಬಲಪಂಥೀಯ ಹಿಂದೂ ಉಗ್ರ ಸೈದ್ಧಾಂತಿಕ ಸಂಘಟನೆಗಳ ವಿರುದ್ಧ ಸಿಜೆಪಿ ಕಾನೂನು ಸಮರ ಹೂಡಿತು. ಸಾವಿರಾರು ಕುಟುಂಬಗಳು ನ್ಯಾಯ ಪಡೆಯಲು, ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಂತಿತು. ಕೋಮುಗಲಭೆಯಲ್ಲಿ ಸಜೀವ ದಹನಕ್ಕೊಳಗಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಅವರೊಡನೆ ಕೈಜೋಡಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ೬೨ ಜನ ಪ್ರಭಾವಿ ರಾಜಕಾರಣಿಗಳು-ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಬೇಕೆಂದು ಕೋರ್ಟಿನಲ್ಲಿ ದಾವೆ ಹೂಡಿತು. ಖುದ್ದು ಮುಖ್ಯಮಂತ್ರಿಯೇ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದು, ‘ಹಿಂದೂಗಳು ತಮ್ಮ ಸಿಟ್ಟು ತೀರಿಸಿಕೊಳ್ಳಲಿ ಬಿಡಿ’ ಎಂದು ಹೇಳಿದ ಬಗೆಗೆ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಸಾಕ್ಷ್ಯ ಹೇಳಿದರು. (ಆದರೆ ಅವರನ್ನು ೩೦ ವರ್ಷ ಕೆಳಗಿನ ಯಾವ್ಯಾವುದೋ ಹುಸಿ/ಕ್ಷುಲ್ಲಕ ಪ್ರಕರಣಗಳ ನೆಪದಲ್ಲಿ ಜೈಲಿಗೆ ಕಳಿಸಲಾಗಿದೆ. ಮೇಲಿಂದ ಮೇಲೆ ನಗಣ್ಯ ಪ್ರಕರಣಗಳ ಬೆಂಬತ್ತಿ ಅವರ ಜೈಲು ಶಿಕ್ಷೆಯ ಅವಧಿ ದೀರ್ಘಗೊಳ್ಳುತ್ತಲೇ ಹೋಗಿದೆ.) 




ನಮ್ಮನ್ನು ಕಾಯಬೇಕಾದ ಬಲಶಾಲಿ ಪ್ರಭುತ್ವವೇ ನಮಗೆದುರಾಗಿ ನಿಂತರೆ ನ್ಯಾಯ ಪಡೆಯುವುದು ಸುಲಭದ ಮಾತಲ್ಲ. ಆದರೆ ಸಂತ್ರಸ್ತರ ಜೊತೆಗೆ ಧೃಢವಾಗಿ ನಿಂತು ಸಿಜೆಪಿ ವರ್ಷಗಟ್ಟಲೆ ಕಾನೂನು ಸಮರ ಹೂಡಿತು. ಪ್ರತಿವಾದಿಯಾಗಿ ತೀಸ್ತಾ ಲೆಕ್ಕವಿರದಷ್ಟು ಪ್ರಕರಣಗಳಿಗೆ ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾಕ್ಷಿಗಳನ್ನು ನಾಶ ಮಾಡುವ, ಕಣ್ಣೆದುರೇ ಆದದ್ದನ್ನೂ ಪರಿಗಣಿಸದಿರುವ, ದಮನಿತರನ್ನೇ ಹೆದರಿಸಿ, ಆಮಿಷವೊಡ್ಡಿ ತನಿಖೆಯನ್ನು ತಿರುಗುಮುರುಗಾಗಿಸುವ ದುಷ್ಟ ಪ್ರಯತ್ನಗಳಿಗೆ ಅಂಜದೇ ತೀಸ್ತಾ ಪ್ರಕರಣಗಳನ್ನು ಮುನ್ನಡೆದರು. ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಒಂದಾದ ಮೇಲೊಂದು ದಾವೆ ಹೂಡಿ, ನೊಂದವರು ಧೈರ್ಯಗೆಡದೆ ಸಾಕ್ಷಿಯಾಗಿ ಉಳಿಯಲು ಎಲ್ಲ ರೀತಿಯ ಬೆಂಬಲ ನೀಡಿದರು. ಬಿಲ್ಕಿಸ್ ಬಾನು ಪ್ರಕರಣವನ್ನು ತೆಗೆದುಕೊಂಡರೂ ಸಾಕು, ಆಕೆ ತಾನು ಬಿಟ್ಟು ಬಂದ ಊರಿಗೆ ಹೋಗಲು ಹತ್ತು ವರ್ಷ, ನ್ಯಾಯಕ್ಕಾಗಿ ೧೭ ವರ್ಷ ಕಾಯಬೇಕಾಯಿತು. ೨೦ ಸಲ ಮನೆ ಬದಲಿಸಬೇಕಾಯಿತು. ಅವರೊಡನೆ ಸಿಜೆಪಿ ಸದಾ ಬೆಂಬಲವಾಗಿ ನಿಂತಿತು.

ಸುದೀರ್ಘ ಕಾನೂನು ಸಮರದ ಬಳಿಕ ೨೦೦೨ರ ಗುಜರಾತ್ ಮಾರಣಹೋಮದ ಅಪರಾಧಕ್ಕೆ ೧೭೨ ಜನರಿಗೆ ಶಿಕ್ಷೆಯಾಯಿತು. ೧೨೪ ಜನ ಮರಣದಂಡನೆಗೊಳಗಾಗಿ ಬಳಿಕ ಜೀವಾವಧಿ ಶಿಕ್ಷೆ ಪಡೆದು ಜೈಲಿಗೆ ಹೋಗುವಂತಾಯಿತು. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳು ಜೀವಾವಧಿ ಶಿಕ್ಷೆ ಪಡೆದು ಜೈಲಿಗೆ ಹೋದರು. ಬದುಕು ಕಟ್ಟಿಕೊಳ್ಳುವಷ್ಟು ಪರಿಹಾರ ಬಿಲ್ಕಿಸ್‌ಗೆ ದೊರೆಯಿತು. 

ಇದಾವುದೂ ನಿರುಮ್ಮಳವಾಗಿ ಈ ಲೇಖನ ಬರೆದಷ್ಟು ಸುಗಮವಾಗಿ ಸಂಭವಿಸಲಿಲ್ಲ. ಎಂಟಕ್ಕಿಂತ ಹೆಚ್ಚು ಹುಸಿ ಕ್ರಿಮಿನಲ್ ಪ್ರಕರಣಗಳನ್ನು ತೀಸ್ತಾ ಅವರ ಮೇಲೆ ಹಾಕಿಸಲಾಯಿತು. ಈಗಲೂ ಬಂಧನದ ಸಾಧ್ಯತೆ ಸದಾ ಅವರಿಗಿದ್ದೇ ಇದೆ. ಅವರ ಜೊತೆ ನಿಂತ ಕೋಮುಗಲಭೆಯ ಸಂತ್ರಸ್ತರಿಗೆ ಕೋಟ್ಯಂತರ ರೂಪಾಯಿಗಳ ಆಮಿಷವೊಡ್ಡಿ ತಿರುಗಿ ಸಾಕ್ಷ್ಯ ಹೇಳುವಂತೆ ಮಾಡಲಾಗಿದೆ. ಅವರು ತಮ್ಮ ಹೆಸರಲ್ಲಿ ಹಣ ಸಂಗ್ರಹಿಸುತ್ತಿರುವರೆಂದು, ಅದನ್ನು ತಮಗಾಗಿ ಬಳಸುತ್ತಿಲ್ಲವೆಂದು ಸಂತ್ರಸ್ತ ಗುಂಪಿನ ಒಬ್ಬರಿಂದಲೇ ತೀಸ್ತಾ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಲಾಗಿದೆ. ದಲಿತ, ಮುಸ್ಲಿಂ ಮಹಿಳೆಯರ ಹಕ್ಕುಗಳ ಸಲುವಾಗಿ ಹೋರಾಡುವ ಸ್ತ್ರೀವಾದಿ ತೀಸ್ತಾರ ಹೋರಾಟ, ಬರಹ, ಚಟುವಟಿಕೆಗಳನ್ನು ನಿರ್ಬಂಧಿಸಲು ಅವರ ಮೇಲೆ ಡಜನುಗಟ್ಟಲೆ ಹುಸಿ ಪ್ರಕರಣಗಳನ್ನು ಹಾಕಲಾಗಿದೆ. ತಮಗೆ ಸುರಕ್ಷತೆ ಬೇಕು ಎಂದು ೨೦೨೨ರವರೆಗೂ ಹಲವು ಬಾರಿ ಅವರು ಕೋರ್ಟಿಗೆ ಹೋಗುವಂತಾಗಿದೆ. ೨೦೨೨ರಲ್ಲಿ ಬಂಧನಕ್ಕೊಳಗಾಗಿ ಸಬರಮತಿ ಮಹಿಳಾ ಜೈಲಿನಲ್ಲಿ ೭೦ ದಿನ ಕಳೆದು ಬಂದಿದ್ದಾರೆ. ಅವರ ಬೇಲ್ ವಿಚಾರಣೆಯನ್ನು ಗುಜರಾತ್ ಹೈಕೋರ್ಟು ಅತಿ ದೀರ್ಘಾವಧಿಗೆ ಮುಂದೂಡಿತು. ನಂತರವೂ ಖಾಯಂ ಬೇಲ್ ಸಿಗಲು ಒಂದು ವರ್ಷ ಹಿಡಿಯಿತು. ತಾವು ಮತ್ತು ಕುಟುಂಬದವರು ಎದುರಿಸುವ ಪ್ರಾಣಾಪಾಯಗಳನ್ನು ದಿಟ್ಟೆದೆಯಿಂದ ತೀಸ್ತಾ ಮತ್ತು ಬಳಗದವರು ಎದುರಿಸಿದರು. 



ನ್ಯಾಯಕ್ಕಾಗಿ ನಡೆಸಿದ ಹೋರಾಟದ ಅನುಭವಗಳನ್ನು ೨೦೧೭ರಲ್ಲಿ ತೀಸ್ತಾ ‘ಎ ಫುಟ್ ಸೋಲ್ಜರ್ ಆಫ್ ಕಾನ್ಸ್ಟಿಟ್ಯೂಷನ್: ಎ ಮೆಮಾಯರ್’ ಎಂಬ ಹೊತ್ತಗೆಯಲ್ಲಿ ದಾಖಲಿಸಿದ್ದಾರೆ. ೨೦೦೨ರ ಗುಜರಾತ್ ಗಲಭೆಗಳ ವೇಳೆ ‘ರಕ್ಷಕರೇ ದ್ರೋಹವೆಸಗಿದಾಗ’ ಎಂಬ ಅಧ್ಯಾಯವನ್ನು ಬರೆದಿದ್ದಾರೆ. (ಈ ಹೊತ್ತಗೆಯನ್ನು ಕನ್ನಡಕ್ಕೆ ಸಂವಿಧಾನದ ಕಾಲಾಳು ಎಂಬ ಶೀರ್ಷಿಕೆಯಲ್ಲಿ ಸತ್ಯಾ ಎಸ್. ಅನುವಾದಿಸಿದ್ದಾರೆ.) 

ಇಷ್ಟಾದರೂ ಅವರ ಹೋರಾಟ ಮುಗಿದಿಲ್ಲ. ಅದಿನ್ನೂ ಜಾರಿಯಲ್ಲಿದೆ. ಗರ್ಭಿಣಿ ಬಿಲ್ಕಿಸ್ ಬಾನುವನ್ನು ಅತ್ಯಾಚಾರಕ್ಕೊಳಪಡಿಸಿ, ಅವಳ ಕುಟುಂಬಸ್ಥರನ್ನು ಹತ್ಯೆ ಮಾಡಿದ್ದ ಪಾತಕಿಗಳು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಆದ ೨೦೨೫ನೇ ಇಸವಿಯಲ್ಲಿ ‘ಸನ್ನಡತೆ’ಯ ಆಧಾರದಲ್ಲಿ ಬಿಡುಗಡೆಗೊಂಡರು! ಈ ಅನ್ಯಾಯದ ವಿರುದ್ಧ ಜನಾಭಿಪ್ರಾಯ ರೂಪಿಸಿ ಮತ್ತೆ ಕಾನೂನು ಹೋರಾಟದ ಮೂಲಕವೇ ಕೊಲೆಗಡುಕ ಅತ್ಯಾಚಾರಿಗಳನ್ನು ಜೈಲಿಗಟ್ಟುವಲ್ಲಿ ಸಿಜೆಪಿ ಯಶಸ್ವಿಯಾಯಿತು. ಇದು ನ್ಯಾಯಕ್ಕೆ, ಸಂವಿಧಾನಕ್ಕೆ ಸಂದ ಜಯ. ಸಂವಿಧಾನವನ್ನು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನು ನಿಜಾರ್ಥದಲ್ಲಿ ಎತ್ತಿ ಹಿಡಿಯುವ ಪ್ರಯತ್ನವೆಂದು ಪರಿಗಣಿಸಲ್ಪಟ್ಟಿದೆ. 

ಸಿಜೆಪಿ ಗುಜರಾತ್ ಹಿಂಸಾಕಾಂಡದ ಪ್ರಕರಣಗಳ ಬಗೆಗಷ್ಟೇ ಅಲ್ಲದೇ ವಿವಿಧ ನೆಲೆಯ ಹೋರಾಟಗಳಲ್ಲೂ ತೊಡಗಿಕೊಂಡಿದೆ. ನಾಗರಿಕ ದಾಖಲಾತಿ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಅವರ ನೆಲದಲ್ಲೇ ಪರದೇಶಿಗಳಾಗಿಸುವ ಎನ್ನಾರ‍್ಸಿ ವಿರುದ್ಧ ದನಿಯೆತ್ತಿದೆ. ವಿಶೇಷವಾಗಿ ಅಸ್ಸಾಮಿನಲ್ಲಿ ಕಾರ್ಯಪ್ರವೃತ್ತವಾಗಿದೆ. ದ್ವೇಷ ಭಾಷಣ, ಪ್ರಚೋದನಕಾರಿ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಿಸುವುದು; ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸುವುದು; ಜೈಲು ಪಾಲಾಗಿರುವ, ಉನ್ನತ ನ್ಯಾಯಾಲಯಗಳಲ್ಲಿ ಪ್ರಕರಣಗಳಿರುವ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸುವುದೂ ಸೇರಿದಂತೆ ನಾನಾ ಹಂತಗಳಲ್ಲಿ ಸಂತ್ರಸ್ತರೊಡನೆ ನಿಂತಿದೆ. ಕಾನೂನು ಬಾಹಿರವಾಗಿ ಬಂಧಿಸುವುದು, ಎತ್ತಂಗಡಿ, ಬುಲ್ಡೋಜರ್ ದೌರ್ಜನ್ಯವೇ ಮೊದಲಾದ ಪ್ರಭುತ್ವ ಪ್ರಾಯೋಜಿತ ಸಾಮಾಜಿಕ ಅನ್ಯಾಯಗಳು ಕೊನೆಯಾಗಬೇಕೆನ್ನುವುದು ತೀಸ್ತಾ ಮುನ್ನಡೆಸುವ ಸಿಜೆಪಿಯ ಆಶಯವಾಗಿದೆ. 

ಪ್ರಸ್ತುತ ತೀಸ್ತಾ ಅವರು ಜಾವೇದ್ ಆನಂದ್ ಅವರ ‘ಸಬ್ರಂಗ್ ಕಮ್ಯುನಿಕೇಷನ್ಸ್’ ಮಾಧ್ಯಮ ಸಂಸ್ಥೆಯ ವಕ್ತಾರೆಯಾಗಿದ್ದಾರೆ. ಸಿಜೆಪಿಯ ಮುಖ್ಯಸ್ಥೆಯಾಗಿದ್ದಾರೆ. ‘ವಿಮೆನ್ ಇನ್ ದ ಮೀಡಿಯಾ ಕಮಿಟಿ’ಯ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಪತ್ರಕರ್ತೆಯರನ್ನು ಒಂದೆಡೆ ತಂದು ಅವರಲ್ಲಿ ಲಿಂಗನ್ಯಾಯ, ಬರವಣಿಗೆಯಲ್ಲಿ ಲಿಂಗಸೂಕ್ಷ್ಮತೆ, ಮಹಿಳಾ ಸಂಬಂಧಿ ವಿಷಯಗಳ ಸೂಕ್ತ ವರದಿಗಾರಿಕೆ, ಔದ್ಯೋಗಿಕ ವಲಯದಲ್ಲಿ ಲಿಂಗ ತಾರತಮ್ಯಗಳ ಬಗೆಗೆ ಜಾಗೃತಿ ಮೂಡಿಸುವುದು ‘..ಕಮಿಟಿ’ಯ ಗುರಿಯಾಗಿದೆ. ಅವರು ‘ಜರ್ನಲಿಸ್ಟ್ಸ್ ಅಗೇನ್ಸ್ಟ್ ಕಮ್ಯುನಾಲಿಸಂ’ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ‘ಪೀಪಲ್ಸ್ ಯೂನಿಯನ್ ಫಾರ್ ಹ್ಯೂಮನ್ ರೈಟ್ಸ್’ನ ಜನರಲ್ ಸೆಕ್ರೆಟರಿ. 

ಸಾಂಸ್ಥಿಕ ವ್ಯವಸ್ಥೆ, ಆಡಳಿತದಿಂದ ಅವರ ಹೋರಾಟದ ಬದುಕಿಗೆ ವಿರೋಧ, ಅಡೆತಡೆ ಎದುರಾದ ಹಾಗೆಯೇ ಅವರ ದಿಟ್ಟ ನಡೆಯನ್ನು ಗುರುತಿಸಿ ಸಾಕಷ್ಟು ಮನ್ನಣೆಗಳೂ ಸಂದಿವೆ. ಅನೇಕ ಪ್ರತಿಷ್ಠಿತ ಪತ್ರಿಕೋದ್ಯಮ, ಮಾನವಹಕ್ಕು ಪ್ರಶಸ್ತಿಗಳು ಸಂದಿವೆ. ೧೯೯೩ರಲ್ಲಿ ಪಿಯುಸಿಎಲ್ ನೀಡುವ ಜರ್ನಲಿಸಂ ಹ್ಯೂಮನ್ ರೈಟ್ಸ್ ಅವಾರ್ಡ್ ದೊರೆತಿದೆ. ಹರ್ಷ್ ಮಂದೇರ್ ಜೊತೆಗೆ ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ (೨೦೦೨) ಪಡೆದಿದ್ದಾರೆ. ೨೦೦೩ರಲ್ಲಿ ನ್ಯೂರೆಂಬರ್ಗ್ ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅವಾರ್ಡ್ ದೊರೆತಿದೆ. ಪಾರ್ಲಿಮೆಂಟೇರಿಯನ್ಸ್ ಫಾರ್ ಗ್ಲೋಬಲ್ ಆಕ್ಷನ್ ಅಂತಾರಾಷ್ಟ್ರೀಯ ಸಂಘಟನೆಯು ಹೆಲೆನ್ ಕ್ಲಾರ್ಕ್ ಅವರೊಡನೆ ಡಿಫೆಂಡರ್ ಆಫ್ ಡೆಮಾಕ್ರೆಸಿ ಪ್ರಶಸ್ತಿ (೨೦೦೪) ನೀಡಿದೆ. ೨೦೦೬ರಲ್ಲಿ ನಾನಿ ಪಾಲ್ಖೀವಾಲಾ ಪ್ರಶಸ್ತಿ, ಮಾತೋಶ್ರೀ ಭೀಮಾಬಾಯಿ ಅಂಬೇಡ್ಕರ್ ಪ್ರಶಸ್ತಿ, ೨೦೦೭ರಲ್ಲಿ ಪದ್ಮಶ್ರೀ, ಪಾಕ್ಸ್ ಕ್ರಿಸ್ಟಿ ಇಂಟರ್ ನ್ಯಾಷನಲ್ ಪೀಸ್ ಅವಾರ್ಡ್‌ಗಳು ಸಂದಿವೆ. ೨೦೨೦ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯವು ಗೌರವ ಡಾಕ್ಟೊರೇಟ್ ಪದವಿ ನೀಡಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ಹೋರಾಟಗಾರರು, ದಮನಿತರು, ಸಮಸಮಾಜ ಬಯಸುವ ಸಂಗಾತಿಗಳು ತೀಸ್ತಾರನ್ನು ನಮ್ಮ ಎದೆಯೊಳಗೆ, ಕಣ್ಣಗೊಂಬೆಯೊಳಗಿಟ್ಟುಕೊಂಡು ಬಾಳುತ್ತಿದ್ದೇವೆ. 

ಏಕೆಂದರೆ ಎಂದೂ ಗೊಣಗದ, ಹೆದರದ, ಸುಸ್ತು ಸೋಲು ಎನ್ನದ, ಎಲ್ಲ ಭಾರವೂ ತನ್ನ ಹೆಗಲ ಮೇಲೇ ಇಟ್ಟುಕೊಂಡು ನಡೆಯುತ್ತಿರುವೆ ಎಂದು ಬೀಗದ, ನನ್ನಿಂದಲೇ ಬೆಳಗಾಯಿತು ಎಂದು ಉಬ್ಬದ, ‘ನಾನು’ ಹೋಗಿ ‘ನಾವು’ ಆದ ಮಹಿಳಾ ಶಕ್ತಿಗೆ ತೀಸ್ತಾ ಒಂದು ಮಾದರಿಯಾಗಿದ್ದಾರೆ. ಒಬ್ಬ ಮಗ ಮತ್ತು ಮಗಳು ಇರುವ ಕೌಟುಂಬಿಕ ಮಹಿಳೆ ತೀಸ್ತಾ ಮನೆಯ ಜವಾಬ್ದಾರಿಗಳ ಜೊತೆಜೊತೆಗೇ ಭಾರತದ ಪ್ರತಿ ಪ್ರಜೆಯೂ ಸುರಕ್ಷಿತವಾಗಿ, ನೆಮ್ಮದಿಯಿಂದ ಬದುಕಬೇಕೆಂಬ ತಾಯ್ತನದ ಹೋರಾಟ ನಡೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.


***

ಗುಜರಾತ್ ಯಾತಕ್ಕೆ ಪ್ರಖ್ಯಾತ? ನೀವು ಊಹಿಸಿದ್ದು ಸರಿ. ನಮ್ಮಯ ಗಾಂಧಿಯನ್ನು ರೂಪಿಸಿದ ನಾಡು ಗುಜರಾತ್. ನರ್ಮದಾ ಬಚಾವ್ ಆಂದೋಲನದ ಮೇಧಾ ಪಾಟ್ಕರ್ ಮೂಲ ಗುಜರಾತ್. ಜಿಗ್ನೇಶ್ ಮೇವಾನಿಯ ಕರ್ಮಭೂಮಿ ಗುಜರಾತ್. ಪೊಲೀಸ್ ಅಧಿಕಾರಿ ಸಂಜೀವ ಭಟ್ ಅವರ ಸತ್ಯದ ಹೆಜ್ಜೆಗುರುತು ಗುಜರಾತ್. ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ದ ಝಕಿಯಾ ಸೋಮನ್‌ರ ನೆಲ ಗುಜರಾತ್. ನ್ಯಾಯಕ್ಕಾಗಿ ಹೋರಾಡುವ ತೀಸ್ತಾ ಸೆಟಲ್ವಾಡರ ನೆಲೆ ಗುಜರಾತ್.

ಹೌದು. ಯಾವುದೇ ನಾಡನ್ನು ಹೇಗೆ ಗುರುತಿಸಬೇಕೋ ಹಾಗೆಯೇ ಗುರುತಿಸಬೇಕು. ವಸಾಹತುಶಾಹಿಗಳಿಂದ, ಅಸ್ಪೃಶ್ಯತೆಯಿಂದ, ಭ್ರಷ್ಟ ಆಳ್ವಿಕರ ಕಪಿಮುಷ್ಟಿಯಿಂದ ಈ ನೆಲವನ್ನು ಬಿಡಿಸಿ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ದೇಶವಾದ ಭಾರತವನ್ನು ಕಟ್ಟಲು ದುಡಿದವರಲ್ಲಿ ಗುಜರಾತಿನವರಿದ್ದಾರೆ. ಸಂವಿಧಾನವನ್ನು ಕಾಯುವವರು ಗುಜರಾತಿನಲ್ಲಿದ್ದಾರೆ. ಏನು ಬೇಕಾದರೂ ಜಯಿಸಬಹುದೆಂದು ದುಷ್ಟರು ಅಬ್ಬರಿಸದಂತೆ ಸಂವಿಧಾನವನ್ನು ಬದುಕುತ್ತ ನೆಲಯೋಧೆಯಂತೆ ಬೆಂಗಾವಲಾಗಿ ನಿಂತ ತೀಸ್ತಾ ಸೆಟಲ್ವಾಡ್ ಗುಜರಾತಿನವರಾಗಿದ್ದಾರೆ.

ನಮ್ಮ ತೀಸ್ತಾ. ನಮ್ಮ ಅಕ್ಕ, ನಮ್ಮ ಹೆಮ್ಮೆ. ಅವರು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ಹದಿನಾಲ್ಕನೆಯ ವರ್ಷದ ‘ಮಹಿಳಾ ಚೈತನ್ಯ ದಿನ’ದ ಕಾರ್ಯಕ್ರಮಗಳನ್ನು ಉದ್ಘಾಟಿಸಲು, ಹಕ್ಕೊತ್ತಾಯ ಜಾಥಾ ಮೆರವಣಿಗೆಯಲ್ಲಿ ನಮ್ಮೊಂದಿಗೆ ಕೈಕೈ ಹಿಡಿದು ಹೆಜ್ಜೆ ಹಾಕಲು ಇದೇ ಮಾರ್ಚ್ ೭, ೮ರಂದು ಹಾಸನಕ್ಕೆ ಬರುತ್ತಿದ್ದಾರೆ. 

ನೀವೂ ಬರುವಿರಿ ಅಲ್ಲವೇ?


ಡಾ. ಎಚ್. ಎಸ್. ಅನುಪಮಾ


Thursday, 20 November 2025

ಗ್ರೇಟ್ ಬ್ಯಾರಿಯರ್ ರೀಫ್ , ಕೇರ್ನ್ಸ್‌, ಆಸ್ಟ್ರೇಲಿಯಾ - ಅನಿಮಿಷರ ಲೋಕದಲ್ಲಿ




ಕಡಲಾಳದ ನಡಿಗೆ


ಸುರಕ್ಷಿತ ದಂಡೆಗಳ ನಡುವೆ ಮಾತ್ರ ಚಲಿಸಿ ಗೊತ್ತಿರುವ ನಾವಿಕಳಾದದ್ದಕ್ಕೋ, ಆಳದಲ್ಲಿರುವ ಸಾವಿನ ಭಯವೋ, ಅಂತೂ ನನಗೆ ಸಾಹಸ ಅಷ್ಟೇನೂ ಪ್ರಿಯವಲ್ಲ. ಬೆಟ್ಟ, ಆಗಸ, ನದಿ, ಕಡಲುಗಳ ನೋಡುತ್ತ ಆಸ್ವಾದಿಸಿದರೂ ಅದರೊಳಗೇ ಹೊಕ್ಕು ಬಂದದ್ದು ಕಡಿಮೆ. ೨೦೧೮ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಿಗೆ ಪ್ರವಾಸ ಹೋದಾಗ ಪ್ರಕೃತಿಗೆ ಭೌತಿಕವಾಗಿ ಹತ್ತಿರವಾಗಿಸುವ ಹಲವು ಚಟುವಟಿಕೆಗಳನ್ನು ಮಾಡಿದೆವು. ಅದರಲ್ಲಿ ಆಸ್ಟ್ರೇಲಿಯಾದ ಕರಾವಳಿ ಪಟ್ಟಣ ಕೇರ್ನ್ಸ್‌ನಿಂದ ಹವಳ ದ್ವೀಪಕ್ಕೆ ಹೋಗಿಬಂದದ್ದು ಅವಿಸ್ಮರಣೀಯ ಅನುಭವಗಳಲ್ಲೊಂದು.


ಆಸ್ಟ್ರೇಲಿಯಾದ ಈಶಾನ್ಯ ತೀರದಗುಂಟ ೨,೩೦೦ ಕಿಲೋಮೀಟರ್ ಹಬ್ಬಿರುವ ಗ್ರೇಟ್ ಬ್ಯಾರಿಯರ್ ರೀಫ್ ಕೋಟ್ಯಂತರ ಹವಳ ಜೀವಿಗಳು ಅನಾದಿಯಿಂದ ರೂಪಿಸಿರುವ ಹವಳದಂಡೆ. ನಿಸರ್ಗದ ಪರಮ ಅದ್ಬುತ. ಯಾವುದೇ ಜೀವಿ ರೂಪಿಸಿದ ಅತಿ ದೊಡ್ಡ ರಚನೆ. ೨೯೦೦ ಹವಳ ದಿಬ್ಬಗಳು, ೯೦೦ ದ್ವೀಪಗಳ ರೀಫನ್ನು ಬಾಹ್ಯಾಕಾಶದಿಂದಲೂ ಕಾಣಬಹುದು. ೧೭೭೦ರಲ್ಲಿ ನಕಾಶೆ ತಯಾರಿಸಲು ಆಸ್ಟ್ರೇಲಿಯಾಗೆ ಬಂದ ಬ್ರಿಟಿಷ್ ನೌಕಾಧಿಕಾರಿ ಜೇಮ್ಸ್ ಕುಕ್‌ನ ಹಡಗು ತಳ ಒಡೆದು ನಿಂತುಕೊಂಡಿತು. ರಿಪೇರಿಗೆ ಏಳು ವಾರ ಹಿಡಿಯಿತು. ಸುತ್ತಮುತ್ತಲೂ ಕಡಲಾಳ ಕಡಿಮೆಯಿದ್ದು ಹವಳ ದಂಡೆಗಳೇ ಹಡಗು ಒಡೆದವೆನ್ನುವುದನ್ನು ಕುಕ್ ಪತ್ತೆಹಚ್ಚಿದ. ೧೮೦೨ರಲ್ಲಿ ಮ್ಯಾಥ್ಯೂ ಫ್ಲಿಂಡರ‍್ಸ್ ಹವಳ ದ್ವೀಪಗಳ ವಿಸ್ತಾರ ಗುರುತಿಸಿ ‘ದ ಗ್ರೇಟ್ ಬ್ಯಾರಿಯರ್ ರೀಫ್’ ಎಂದು ಕರೆದ. ಅಲ್ಲಿಂದಿಲ್ಲಿಯವರೆಗೂ ಹವಳದ ದಂಡೆಗಳು ಜನಪ್ರಿಯವಾಗುತ್ತ ವಿಶ್ವಪರಂಪರೆಯ ಪಟ್ಟಿಗೆ ಸೇರಿವೆ. ನೈಸರ್ಗಿಕ ಅದ್ಭುತಗಳಲ್ಲೊಂದು ಎಂದು ಬಣ್ಣಿಸಲ್ಪಟ್ಟಿವೆ. ಹವಾಮಾನ ಬದಲಾವಣೆ, ಸಾಗರ ಸೇರುತ್ತಿರುವ ಮಾಲಿನ್ಯಕಾರಕಗಳು, ಆಳಸಮುದ್ರ ಮೀನುಗಾರಿಕೆ, ಪ್ರವಾಸೋದ್ಯಮಗಳಿಂದ ಹವಳ ದ್ವೀಪಗಳು ಘಾಸಿಗೊಂಡು ಬಿಳಿಚಾಗುತ್ತಿವೆ. ಎಂದೇ ರೀಫ್‌ನ ಕೆಲ ಭಾಗಗಳಷ್ಟೇ ಪ್ರವಾಸಿಗಳಿಗೆ ತೆರೆದಿವೆ. 


ಕೇರ್ನ್ಸ್‌ನಿಂದ ರೀಫ್ ಬಳಿಗೆ ಕರೆದೊಯ್ಯಲು ಮುಳುಗು ತಜ್ಞರಿರುವ ಪ್ರವಾಸಿ ಹಡಗುಗಳಿವೆ. ಸುಮಾರು ಒಂದೂವರೆ ತಾಸು ಪಯಣಿಸಿ ನಾವು ಬಿಗ್‌ಕ್ಯಾಟ್ ಗ್ರೀನ್ ಐಲ್ಯಾಂಡ್ ತಲುಪಿದೆವು. ಪ್ರಯಾಣದುದ್ದಕ್ಕೂ ಹಡಗಿನ ಸಿಬ್ಬಂದಿ ಇದುವರೆಗು ಆಗಿರದ ಅದ್ಭುತ ಅನುಭವಕ್ಕೆ ತೆರೆದುಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಆಳಸಮುದ್ರಕ್ಕೆ ಕರೆದೊಯ್ದು ಸುರಕ್ಷಿತವಾಗಿ ತಂದುಬಿಡುವೆವೆಂದು ಪ್ರಮಾಣ ಮಾಡುತ್ತಿದ್ದರು. 


ಹಿಂದಿನ ದಿನವಿಡೀ ಕೇರ್ನ್ಸ್ ಬಳಿಯ ದಟ್ಟಕಾಡಿನಲ್ಲಿ, ಕಡಲ ದಂಡೆಯ ಪೆಲಿಕನ್ನುಗಳ ಮೆರವಣಿಗೆಯಲ್ಲಿ, ಅಬ್ಬರದ ಸಂಗೀತಸಂಜೆಯಲ್ಲಿ ಕಳೆದುಹೋಗಿದ್ದ ನಾವು ಮರುದಿನ ಬೆಳಿಗ್ಗೆ ರೀಫ್ ಕಡೆಗೆ ಹೊರಟೆವು. ಅರ್ಧ ತಾಸು ಕಳೆಯುವುದರಲ್ಲಿ ಮೋಡ ಮುಸುಕಿ ಧಾರಾಕಾರ ಮಳೆ ಶುರುವಾಯಿತು. ಚಟುವಟಿಕೆಗಳು ಅಸಾಧ್ಯವಾಗಬಹುದೇನೋ ಎಂದು ನಾವಂದುಕೊಂಡರೆ, ‘ನೋನೋನೋ, ಏನಾದರಾಗಲಿ ನಿಮ್ಮನ್ನು ಕಡಲೊಳಗೆ ಕರೆದೊಯ್ಯುವುದೇ’ ಎಂಬ ಉತ್ಸಾಹದ ಸಿಬ್ಬಂದಿ ಚಟುವಟಿಕೆಗಳ ಪಟ್ಟಿಯನ್ನೇ ಕೊಟ್ಟರು. ಮುಳುಗುತಜ್ಞ ವಾನ್ಸ್, ನಾವೆಲ್ಲೇ ಕಳೆದುಹೋದರೂ ಎಳೆತರುವೆನೆನ್ನುತ್ತ ಭಯ ಹೋಗಲಾಡಿಸುತ್ತಿದ್ದ. ಬಲುಬೇಗ ಯುವಜನರ ಅಚ್ಚುಮೆಚ್ಚಾದ. 


ನನಗೆ ಕಡಲೊಳಗೆ ಇಳಿಯಲು ಭಯ, ಹಿಂಜರಿಕೆ. ಸಣ್ಣವಳಿರುವಾಗ ಗೋಕರ್ಣದ ಕಡಲಲೆಗಳು ಕಾಲೆಳೆದು ಮುಳುಗಿಸಿದ್ದವು. ಕಣ್ಣುಮೂಗುಬಾಯಿಯಲ್ಲೆಲ್ಲ ನೀರು ತುಂಬಿ ಕಕ್ಕರಮಕ್ಕರವಾದ ನೆನಪಿನ್ನೂ ಹಸಿರಾಗಿದೆ. ಅದಕ್ಕೋ ಏನೋ, ದಂಡೆಯಲ್ಲಿ ಕೂತು ಗಂಟೆಗಟ್ಟಲೆ ಕಳೆದೇನು, ಆದರೆ ಉಪ್ಪುಪ್ಪು ನೀರು ಮೈಗಂಟುವುದು, ನೀರಿಗಿಳಿಯುವುದು ಇಷ್ಟವಿಲ್ಲ. ಗ್ರೇಟ್ ಬ್ಯಾರಿಯರ್ ರೀಫ್ ಬಣ್ಣ ಕಳೆದುಕೊಳ್ಳುತ್ತಿರುವುದೂ ಮನದಲ್ಲಿದ್ದಿದ್ದರಿಂದ ಪಾಪಪ್ರಜ್ಞೆ ಕಾಡತೊಡಗಿತ್ತು. 


ನನ್ನೆಲ್ಲ ಸಂಶಯಗಳಿಗೂ ವಾನ್ಸ್‌ನಿಂದ ಸಮಾಧಾನಕರ ಉತ್ತರ ಬಂತು. ಗುರುತಿಸಲ್ಪಟ್ಟ ಸ್ಥಳಕ್ಕೆ ಮಾತ್ರ ನಾವು ಹೋಗುತ್ತೇವೆ; ಚಟುವಟಿಕೆಗಳು ಪರಿಸರದೊಡನೆ ತಾದಾತ್ಮ್ಯ ಬೆಳೆಸುತ್ತವೆ; ವಿಕಾಸ ಚಕ್ರದಲ್ಲಿ ಇದೂ ಒಂದು ಹಂತವೆಂದು ಪರಿಗಣಿಸಬೇಕು; ಯಾರೂ ಜಲಚರಗಳ ಮುಟ್ಟಬಾರದು, ಹವಳ ದಂಡೆಗಳ ಮೇಲೆ ನಿಲ್ಲಬಾರದೆಂಬ ಕಟ್ಟುನಿಟ್ಟಾದ ನಿಯಮಗಳಿರುವ ಬಗೆಗೆ ತಿಳಿಸಿದ. ಕೊನೆಗೆ ನೀರಿಗಿಳಿಯಲು ಸಿದ್ಧಳಾದೆ. 


ಕಡಲಾಳ ನೋಡಿಬರಲು ಹಲವು ಆಯ್ಕೆಗಳಿವೆ. ಪ್ರತಿ ಕಂಪನಿಯೂ ತಾತ್ಕಾಲಿಕ ತಂಗುದಾಣ (ಮರೈನ್ ವರ್ಲ್ಡ್ ಪೊಂಟೂನ್) ಪ್ಲಾಟ್‌ಫಾರ್ಮ್ ಮಾಡಿಕೊಂಡಿರುತ್ತದೆ. ಅಲ್ಲಿ ಹಡಗು ಲಂಗರು ಹಾಕುತ್ತದೆ. ಕೆಲವರು ತೇಲುತ್ತ ಕಡಲಾಳ ನೋಡುತ್ತಾರೆ. ಗಾಜಿನ ತಳದ ದೋಣಿಯಲ್ಲಿ ಕುಳಿತೂ ನೋಡಬಹುದು. ಕಡಲೊಳಗಿಳಿದು ಪ್ಲಾಟ್‌ಫಾರ್ಮಿನುದ್ದಕ್ಕು ನಡೆಯುತ್ತ ನೋಡಬಹುದು. ಸ್ಕೂಬಾ ಡೈವಿಂಗ್ ಮೂಲಕ ಜಿಗಿದು ಕಡಲಾಳ ತಿರುಗಬಹುದು. ಕಡಿಮೆ ಅಪಾಯ, ಕಡಿಮೆ ಅವಧಿಯ ‘ಸೀ ವಾಕಿಂಗ್’(ಕಡಲ ನಡಿಗೆ)ಯನ್ನು ನಾನು, ಕೃಷ್ಣ ಆಯ್ದುಕೊಂಡೆವು. ಮಕ್ಕಳು ಸ್ಕೂಬಾ ಡೈವಿಂಗಿಗೆ ಸನ್ನದ್ಧರಾದರು.


ನಮ್ಮೆಲ್ಲರನ್ನು ಒಂದೆಡೆ ಕೂರಿಸಿ ಕೈಪಿಡಿಗಳನ್ನು ಕೊಟ್ಟರು. ಏನು ಮಾಡಲಿದ್ದೇವೆ, ಏನು ತೊಂದರೆ ಎದುರಾಗಬಹುದು, ಆಗೇನು ಮಾಡಬೇಕೆಂದು ಸಚಿತ್ರವಾಗಿ ವಿವರಿಸಿದರು. ಟಿವಿ ಪರದೆಯಲ್ಲೂ ತೋರಿಸಿದರು. ಕೈಮೇಲೆ ಸಂಖ್ಯಾ ಕೋಡ್ ಬರೆದು, ನಿಗದಿತ ಸಮಯಕ್ಕೆ ಡೆಕ್‌ಗೆ ಬರಲು ತಿಳಿಸಿದರು. 


ಊಟದ ಸಮಯವಾಯಿತು. ಶಾಖಾಹಾರಿಗಳಿಗೆ ಹಲವು ನಮೂನೆಯ ಅಡುಗೆಗಳಿದ್ದವು. ಬಹುಸಂಖ್ಯೆಯಲ್ಲಿದ್ದ ಚೀನೀ, ಜಪಾನೀ ಪ್ರವಾಸಿಗರು ಹುರಿದ ಸೀಗಡಿಗಳನ್ನು ತಟ್ಟೆ ತುಂಬ ತಂದು ತಿನ್ನುತ್ತಿದ್ದರು. ಸಸ್ಯಾಹಾರಕ್ಕೆ ಹೆಚ್ಚು ಆಯ್ಕೆಗಳಿರಲಿಲ್ಲ. ಏನೋ ಒಂದಷ್ಟು ಹೊಟ್ಟೆಗಿಳಿಸಿ, ಈಜುಡುಗೆ ಧರಿಸಿ ವಾನ್ಸ್ ಬಳಿ ಹೋದೆವು. ಕೈ ಮೇಲಿನ ಸಂಖ್ಯೆ ನೋಡಿ, ನಾವೇನು ಚಟುವಟಿಕೆ ಮಾಡಹೊರಟಿರುವವರೆಂದು ಖಾತ್ರಿಪಡಿಸಿ, ‘ವೆಲ್..’ ಎಂದು ನಗುನಗುತ್ತ ಕರೆದೊಯ್ದ. ಅವನಾಗಲೇ ಉದ್ದ ಬಿಳಿಕೂದಲ ಕಟ್ಟಿ, ಸ್ವಿಮ್ ಸೂಟಿನೊಳಗೆ ಭೀಮಕಾಯ ತುರುಕಿ ಸಿದ್ಧನಾಗಿದ್ದ. ಐದೂವರೆ ಮೀಟರ್ ಆಳದಲ್ಲಿ ತ್ರಾಸವಾಗಬಹುದು; ಕಿವಿಯಲ್ಲಿ ಭೋರ್ಗರೆಯಬಹುದು; ಉಸಿರು ಕಟ್ಟಿದಂತಾಗಬಹುದು; ಮೇಲೆ ಬರಬೇಕೆನಿಸಬಹುದು; ಆದರೆ ಗಲಿಬಿಲಿಗೊಳ್ಳಬೇಡಿ ಎನ್ನುತ್ತ ಮುನ್ನಡೆದ. ನೀರೊಳಗಷ್ಟೆ ಅಲ್ಲ, ನೆಲದ ಮೇಲೂ, ಆಕಾಶದಲ್ಲೂ ಅಪಾಯವಿದೆ. ಆತಂಕವು (ಪ್ಯಾನಿಕ್) ತಲುಪಿಸಬೇಕಾದ ಗುರಿಗಿಂತ ಬೇರೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಪ್ಯಾನಿಕ್ ಆಗಬೇಡಿ ಎಂದು ಮತ್ತೆಮತ್ತೆ ಹೇಳಿದ. ‘ಆಕ್ಸಿಜನ್ ಬರುವ ಮಾಸ್ಕ್‌ನ ಪೈಪು ತಪ್ಪಿತೇ, ಅಲ್ಲೇ ಕೈಯಾಡಿಸಿ, ಸೊಂಟದ ಬಳಿ ನೇತಾಡುತ್ತಿರುತ್ತದೆ. ಮುಳುಗುತ್ತಿದ್ದೀರಾ? ಲೈಫ್ ಜಾಕೆಟ್‌ಗೆ ಗಾಳಿ ತುಂಬಿ, ಮೂವತ್ತು ಸೆಕೆಂಡುಗಳಲ್ಲಿ ಮೇಲೆ ಬರುವಿರಿ. ಎಲ್ಲಿದ್ದರೂ ಸಹಾಯಕರನ್ನು ತಲುಪುವಿರಿ’ ಎಂದು ಧೈರ್ಯ ತುಂಬಿದ. ಮಕ್ಕಳಂತೂ ಕಿಂದರಿಜೋಗಿಯ ಹಿಂದೆ ಅತ್ಯುತ್ಸಾಹದಿಂದ ಸುತ್ತಾಡುತ್ತಿದ್ದರು. 


ಮುಳುಗಲು ಸುಲಭವಾಗಲೆಂದು ಸೊಂಟಕ್ಕೆ ಒರಟು ಕಬ್ಬಿಣದ ಗುಂಡುಗಳ ಬಲುಭಾರದ ಬೆಲ್ಟ್ ಕಟ್ಟಿದರು. ನಮ್ಮ ಚಪ್ಪಲಿ ಕಳಚಿ ಅವರ ಬೂಟು ಹಾಕಿ ವಾನ್ಸ್ ಹಿಂದೆ ನಡೆದೆವು. ಕೆಳಗಿಳಿಯುವ ಕಬ್ಬಿಣದ ಮೆಟ್ಟಿಲುಗಳು ಕಂಡವು. ರೈಲಿಂಗ್ಸ್ ಹಿಡಿದು ನನ್ನ ಹಿಂದಿಳಿಯಿರಿ ಎಂದು ಸನ್ನೆ ಮಾಡಿ ನೀರಿಗಿಳಿದ. ನಾನೂ ಹಿಂಬಾಲಿಸಿದೆ. 


ಅಯ್ಯೋ, ತಣ್ಣ ಕೊರೆವ ನೀರು! ಪಾದ ಮುಳುಗಿತು, ಮೊಣಕಾಲು ಮುಳುಗಿತು, ಮಂಡಿ ಮುಳುಗಿತು, ಸೊಂಟ ಮುಳುಗಿತು. ಕೊರೆವ ನೀರಿಗೆ ಉಸಿರು ಕಟ್ಟಿದಂತೆನಿಸುತ್ತಿದೆ.. ಹೊಟ್ಟೆ, ಎದೆ ಮುಳುಗಿ ಕುತ್ತಿಗೆ ತನಕ ಬಂದಾಗ ಎದ್ದೆದ್ದು ಬಿಕ್ಕಳಿಸಿದಂತೆ ದೊಡ್ಡುಸಿರು ಬರುತ್ತಿದೆ.. ಅಯ್ಯಪ್ಪ, ನಂಗಾಗಲ್ಲ ಎನಿಸುತ್ತಿದೆ. ಆಗಲೇ ಕೆಳಗಿಳಿದು ನಿಂತಿರುವ ಕೃಷ್ಣ ಏನಾಗಲ್ಲ, ಇನ್ನೊಂದೇ ಹೆಜ್ಜೆ ಕೆಳಗಿಡು, ಹೆಲ್ಮೆಟ್ ಹಾಕುತ್ತಾರೆನ್ನುತ್ತ ಸಂಜ್ಞೆ ಮಾಡುತ್ತಿದ್ದಾನೆ. ನೀರು ಗದ್ದ ತಾಕತೊಡಗಿದಾಗ ಮೇಲೇರಿದ ವಾನ್ಸ್ ತಲೆಮೇಲೊಂದು ೩೫ ಕೆಜಿ ಭಾರದ ಹೆಲ್ಮೆಟ್ ಗದುಮಿ ಕೆಳಗೆ ದೂಡಿದ. ಹೆಲ್ಮೆಟ್‌ನೊಳಗೆ ನಳಿಕೆ ಮೂಲಕ ಗಡಗಡ ಎಂದು ಗಾಳಿ ಒಳಬರುತ್ತಿತ್ತು. ಒಳಬರುವ ಗಾಳಿಯೊತ್ತಡ ಎಷ್ಟಿತ್ತೆಂದರೆ ಹೆಲ್ಮೆಟ್ ಒಳಗೆ ನೀರು ನುಗ್ಗಲು ಸಾಧ್ಯವಿಲ್ಲ. ನೀರೊಳಗಿದ್ದರೂ ಮುಖ ಮುಳುಗುವುದಿಲ್ಲ.


ಒಂದು ಮೆಟ್ಟಿಲಿಳಿದದ್ದೇ ಕಡಲೊಳಗಿದ್ದೆ. ನೀರಿನೊಳಗೆ ಹಗುರವಾಗಿದ್ದೆ. ಬೆರಳು, ಉಗುರು, ಬೆನ್ನು, ಕೈಕಾಲುಗಳೆಲ್ಲ ಇವೆಯೋ ಇಲ್ಲವೋ ಎನ್ನುವಷ್ಟು ಹಗುರ. ಆಚೀಚೆ ಕಂಬಿ ಹಿಡಿಯದಿದ್ದರೆ ತೇಲಿ ಹೋಗುವೆನೇನೋ ಎನಿಸುವಷ್ಟು ಹಗುರ. ಗಾಳಿಗೆ ರೆಕ್ಕೆಯ ಭಾರ ಕಳೆದುಕೊಳ್ಳುವ ಹಕ್ಕಿ, ಬೇರಿನಿಂದ ನೆಲಕ್ಕೆ ಭಾರ ಕಳಚಿಕೊಳ್ಳುವ ಮರ, ತಮ್ಮ ಆಕಾರದಿಂದ ನೀರಿಗೆ ಭಾರ ಕಳಚಿಕೊಳ್ಳುವ ಜಲಚರಗಳು ಹಗುರವಾಗುತ್ತವೆ. ಭಾರ ಕಳಚಿಕೊಳ್ಳಲು ಬಾರದ ಮನಭಾರದ ನಾನೂ ಹಗುರವಾಗಿಬಿಟ್ಟಿದ್ದೆ. ಆಹಾ, ಎಂಥ ನಿರಾಳ! ನಿರಾಳ ಮಾಡಿಕೊಂಡದ್ದು ನಾನಲ್ಲ, ನೀರು. ಮುಳುಗಿರುವ ವಸ್ತುವನ್ನು ಮೇಲೆತ್ತುವ ಶಕ್ತಿ ನೀರಿಗಷ್ಟೇ ಅಲ್ಲ, ಎಲ್ಲ ದ್ರವಗಳಿಗೂ ಇದೆ. ಮೇಲೆತ್ತುವಿಕೆಯಿಂದಲೇ ನೀರೊಳಗಿರುವಾಗ ನಮ್ಮ ಭಾರ ಕಡಿಮೆಯಾಗಿ ತೇಲುತ್ತಿರುವಂತೆನಿಸುತ್ತದೆ. ಅದೊಂದು ಅನನ್ಯ ಆನಂದಾನುಭವ.



ಚಳಿ ಮಾಯವಾಗಿ ಅದ್ಭುತ ಲೋಕ ಕಾಣಿಸತೊಡಗಿತ್ತು! ಆಳಾಳವೂ ಸ್ಪಷ್ಟವಾಗಿ ಕಾಣುವಷ್ಟು ಪಾರದರ್ಶಕ, ನೀಲಿ, ಶುಭ್ರ ನೀರಿನಲ್ಲಿ ಮೀನುಗಳ ಹಿಂಡು ಸರಿದು ಹೋಯಿತು. ಹುಲಿಪಟ್ಟೆ ಗೆರೆಯ ಮತ್ತೊಂದು ಗುಂಪು ಬಂತು. ವೆಲ್ವೆಟ್‌ನಂತಹ ಕೆಂಪು ಮೈಯ ನುಣುಪನ್ನು ಮುಟ್ಟುವಾಸೆಯಾಗುವಷ್ಟು ಹೊಳಪಿನದೊಂದು. ಹಾಡೊಂದರ ನಿರ್ದಿಷ್ಟ ಲಯಕ್ಕೆ ಚಲಿಸುತ್ತಿರುವಂತೆ ಒಂದರ ಹಿಂದೊಂದು, ಒಂದರ ಪಕ್ಕ ಇನ್ನೊಂದು ಸರಿದು ಹೋದವು. ಸೀದ ಬಂದು, ಸುಂಯ್ಕ ತಿರುಗಿ, ಅಗೋ ಅಷ್ಟು ದೂರ ತಲುಪಿ, ಮತ್ತೆ ತಿರುಗಿ ನಮ್ಮಿರವಿಗೆ ಕ್ಯಾರೇ ಅನ್ನದೆ ತಮ್ಮ ಪಾಡಿಗೆ ತಾವು ಸರಿದು ಹೋದವು. 


ನನ್ನೆದುರು ಬಂದ ವಾನ್ಸ್ ಬೆರಳನ್ನು ಕೆಳಗೊತ್ತೊತ್ತಿ ತೋರಿಸಿದ. ಎದುರಷ್ಟೇ ಅಲ್ಲ, ಕೆಳಗೂ ನೋಡು ಎಂಬಂತೆ. ಕೆಳ ನೋಡಿದರೆ ಅರೆಅರೇ!! ವಿಮಾನದಿಂದ ನಗರವನ್ನು ನೋಡಿದಂತೆ ಕಾಣುತ್ತಿದೆ. ಬೃಹತ್ ಬಂಡೆಗಳು, ಅದರ ಮೇಲೆ ಹರಡಿಕೊಂಡ ನಾನಾ ಆಕಾರ, ಗಾತ್ರದ ಗಿಡಗಳು. ಅರಳಿ ನಿಂತ ಬಣ್ಣಬಣ್ಣದ ಕಲ್ಲುಹೂವುಗಳು. ಹಸಿರು, ನೀಲಿ, ಗುಲಾಬಿ ಛಾಯೆಗಳ ಭಾರೀ ಹೂಕೋಸಿನಂತಹ ರಚನೆಗಳು. ಅದರ ನಡುವೆ ಸರಿವ ಮೀನ ಹಿಂಡು..







ಹತ್ತಿಪ್ಪತ್ತಲ್ಲ, ನೂರು ಸಾವಿರವಲ್ಲ, ಅಗಣಿತ! ಎಣಿಕೆ ತಪ್ಪಿ ನೋಡುತ್ತಿರುವಾಗ ನಾವಿರುವುದು ಹವಳ ದ್ವೀಪದಲ್ಲಿ; ಕಾಣುತ್ತಿರುವುದು ಬಂಡೆಯ ಮೇಲಣ ಗಿಡವಲ್ಲ, ಹವಳ ಪ್ರಾಣಿ ಎಂದರಿವಾದದ್ದೇ ರೋಮಾಂಚನವಾಯಿತು. ಹವಳ ಸಸ್ಯವಲ್ಲ, ಪ್ರಾಣಿ ಎನ್ನಲು ಗ್ರೀಕ್ ವಿಜ್ಞಾನಿಗಳ ಕಾಲದಿಂದ ನಡೆದ ವಾದ-ವಿವಾದಗಳೆಲ್ಲ ನೆನಪಾದವು. ಸಪೂರ ಬೆರಳಿನಂತಿರುವ ರಚನೆಗಳು ಅಲೆಅಲೆಯಾಗಿ, ನಿಧಾನವಾಗಿ ಚಲಿಸುತ್ತಿದ್ದವು. ಬಂಡೆಗಂಟಿಕೊಂಡ ಹುಲ್ಲು ಜೊಂಡಿನಂತೆ, ಕಮಲದ ಡೇರೆಯ ಹೂವಿನಂತೆ, ಹೂಕೋಸಿನಂತಿರುವ ಅನಿಮೋನ್‌ರೂಪಿ ಹವಳ. ಕೆಂಪು, ಗುಲಾಬಿ, ನಸುಗೆಂಪು, ನೀಲಿ, ಹಸಿರು, ಬೆಳ್ಳಿ ಬಿಳಿ, ಹಳದಿ, ಕಿತ್ತಳೆ, ನೇರಿಳೆ ಬಣ್ಣಗಳ ಹವಳ. ಬೀಸುವ ಗಾಳಿಗೆ ಬೆಳೆದು ನಿಂತ ಪೈರು ಹೊಯ್ದಾಡುತ್ತ ತುಯ್ಯುವ ಹಾಗೆ ಸ್ಲೋಮೋಷನ್ನಿನಲ್ಲಿ ಚಲಿಸುವ ಹವಳ. ಕೆಲವು ರೇಡಿಯಂನಂತಹ ಹೊಳಪು ಮೈ ಹೊಂದಿದ್ದವು. ಹವಳಜೀವಿ ಸ್ರವಿಸುವ ಕ್ಯಾಲ್ಷಿಯಂ ಲವಣವೇ ಗಟ್ಟಿಯಾಗಿ, ಬುಡದ ಬಂಡೆಯಾಗಿ, ಅದರಿಂದಲೇ ಆಭರಣದ ಹವಳ ತಯಾರಿಸುವರೆಂಬ ಮಾಹಿತಿ ಮನದಲ್ಲಿ ಹಾದುಹೋಯಿತು. 


ಅಷ್ಟರಲ್ಲಿ..




ಓಹ್, ಇದು ಅದೇ, ನೀಮೋ! ‘ಫೈಂಡಿಂಗ್ ನೀಮೋ’ ಸಿನಿಮಾದ ಕೆಂಪು, ಬಿಳಿ, ಕಪ್ಪು ಮಿಶ್ರಪಟ್ಟೆಗಳ ಕ್ಲೌನ್ ಫಿಶ್! ಸೀ ಅನಿಮೋನಿನ ಬೆರಳುಗಳ ನಡುವೆ ಕಣ್ಣಾಮುಚ್ಚಾಲೆಯಾಡುವ ತಿಕ್ಕಲಂತೆ, ಆಗಷ್ಟೇ ಈಯ್ದ ಕರು ಚಂಗಲು ಹಾರುವಂತೆ ಪಣ್‌ಪಣ್ ನೆಗೆಯುತ್ತ ಆಚೀಚೆ ಸುಳಿಯತೊಡಗಿತು. ಅನಿಮೋನಿಗೆ ಕಚಗುಳಿಯಿಟ್ಟಂತೆನಿಸಿರಬಹುದು, ಅಲೆಅಲೆಯಾಗಿ ತನ್ನ ಬೆರಳುಗಳ ಕುಣಿಸುತ್ತಿದೆ! ನಾವು ಕೆಮ್ಮೀನಿನ ಚಲನೆ, ಚಾಲಾಕಿತನ, ವಿಸ್ಮಯಗಳ ಕಣ್ಮನ ತುಂಬಿಕೊಳ್ಳುತ್ತಿರುವಾಗ ಚಂದದ ಕಡುನೀಲಿ ಮೀನು (ಡೋರಿ) ಎದುರೇ ಹಾಯಬೇಕೇ? ಸಿನಿಮಾದ ಪಾತ್ರಗಳೆಲ್ಲ ಕಡಲೊಳಗೆ ಹೀಗೆ ಕಣ್ಣೆದುರು ಬಂದಾವೆಂದು ಯಾರು ತಾನೇ ಊಹಿಸಿದ್ದರು?




‘ಏನಿದೇನಿದು ಮಾಟ, ನೋಡಲೆನಿತಿದಚ್ಚರಿ!? ಸೊಗವೆ ಸೂರೆ ಹೋದ ಬೇಟ ನೋಡಿದನಿತು ಅಚ್ಚರಿ’!


ಅನಿಮೋನ್ ಹವಳವು ಕ್ಲೌನ್ ಮೀನಿನ ನೆಲೆ, ಮನೆ, ಗೂಡು ಎಲ್ಲ ಹೌದು. ಹವಳ ಸ್ರವಿಸುವ ರಾಸಾಯನಿಕ ಎಷ್ಟು ವಿಷಯುಕ್ತವೆಂದರೆ ಮತ್ಯಾವ ಮೀನೂ ಅದರ ಬಳಿ ಸುಳಿಯದು. ಆದರೆ ಪುಟ್ಟ ಕೆಮ್ಮೀನಿಗೆ ಅನಿಮೋನಿನ ವಠಾರವೇ ಮನೆ. ಹವಳ ತಿನ್ನಲಾರದ ಎಷ್ಟೋ ಜಲಚರಗಳನ್ನು ತಿಂದು ಕೆಮ್ಮೀನು ಹಾಕುವ ಪಿಷ್ಟೆ ಹವಳಕ್ಕೆ ಆಹಾರವಾಗಿದೆ. ಕೆಮ್ಮೀನಿನ ತಿಕ್ಕಲುತನದ ಚಲನೆ ಹವಳದ ಬೆರಳುಗಳೊಳಗೆ, ನಡುವೆ ಕಡಲ ನೀರು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ. 


ಒಂದು ಪುಟ್ಟ ಮೀನು, ಕಡಲ ತಳಕ್ಕಂಟಿದ ಹವಳ ಸಹಬಾಳ್ವೆಯ ಮಾದರಿಯಾಗಿ ಬದುಕಿವೆಯಲ್ಲ! ನಮಗಿಲ್ಲದ ಅರಿವ ಈ ಜೀವಗಳಿಗೆ ತುಂಬಿದವರ‍್ಯಾರೆ?


ಚಲನೆಯೇ ಕಡಲಾಳದ ಪರಮಸತ್ಯ




ನಮ್ಮುಸಿರ ಹೊರತು ಮತ್ಯಾವ ಸದ್ದೂ ಕೇಳದ ಜಲನಿಶ್ಶಬ್ದದಲ್ಲಿ ಹೆಸರು ಗೊತ್ತಿರದ ಅಸಂಖ್ಯ ಜೀವಗಳು ಕಡಲಾಳದ ರಂಗಸ್ಥಳದಲ್ಲಿ ಚಲಿಸುತ್ತಿದ್ದವು. ಜೀಬ್ರಾ ಪಟ್ಟೆಗಳಿರುವ ಮೀನು, ಕೆಂಪು ರೆಕ್ಕೆಗಳ ಬೆಳ್ಳಿ ಮೀನು, ಹಸಿರು ನೀಲಿ ಮಿಶ್ರ ಮೀನು, ಪುಟ್ಟಮೀನು, ದೊಡ್ಡ ಮೀನು, ಉದ್ದನೆಯ, ಚಪ್ಪಟೆಯಿರುವ, ತಟ್ಟೆಯಂತಿರುವ, ಹಾವಿನಂತಿರುವ, ಚೀಲದಂತಿರುವ ಏನೇನೋ ಆಕಾರಗಳು ಸುಳಿಯುತ್ತಿದ್ದವು. ಪಣ್‌ಪಣ್ ಎಂದು ಕಣ್ಣೆದುರೇ ಕಡಲ್ಗುದುರೆ ಪಲ್ಟಿ ಹೊಡೆದು ಹೋಯಿತು. ಪ್ರತಿಯೊಂದೂ ನಿಧಾನವಾಗಿ, ನವಿರಾಗಿ, ಲಯಬದ್ಧವಾಗಿ ತುಯ್ಯುತ್ತಿವೆ. ನಿಶ್ಚಲ ನಿಂತಂತೆ ಕಾಣುವ ಕಡಲು ಒಳಗೊಳಗೆ ನಿರಂತರ ಪ್ರವಹಿಸುತ್ತಿದೆ. 


ನಿರಂತರ ಚಲನೆಯೇ ಕಡಲಾಳದ ಪರಮಸತ್ಯ. ನಿರಂತರ ಚಲನೆಯೇ ಪ್ರಕೃತಿಯ ಪರಮ ಸತ್ಯ. ಸ್ಥಗಿತವಾದ ಯಾವುದೂ ಇಲ್ಲಿಲ್ಲ. ಚಲನೆಯಿಂದ ಹಗುರ, ಹಗುರಗೊಂಡು ಚಲನವಲನ! ನಾವು ನಿಂತವರು ನಿಂತೇ ಇದ್ದೆವು ಚಲಿಸುವವರ ನೋಡುತ್ತ. 


ನತಮಸ್ತಕಳಾಗಿ ಪಾತಾಳ ವೈಭವಕ್ಕೆ ಬೆರಗುವಡೆದು ನಿಂತಿರುವಾಗ ಪಕ್ಕದಲ್ಲೊಂದು ಬೃಹತ್ ನೆರಳು ಸರಿದು ಹೋಯಿತು. ಬೆಕ್ಕು ಕಾಲು ಸವರಿ ಹೋಗುವಂತೆ ಹೆಗಲ ಸವರಿ ದೊಡ್ಡದೇನೋ ಒಂದು ಈಚೆಯಿಂದಾಚೆ ಹೋದಂತಾಯಿತು. ಕತ್ತು ಮೇಲೆತ್ತಲಾಗದೆ ಶಿರಸ್ತ್ರಾಣದಡಿಯಲ್ಲೇ ನೋಡಿದೆ. ವಿಷಾದಗ್ರಸ್ತ ಚಹರೆಯಂತೆ ಕಾಣುವ ತಗ್ಗಿದ ಬಾಯಿ, ಬೆರಗಿನಿಂದ ಅರಳಿಸಿ ಹೊರಸೂಸಿದಂತಿರುವ ಕಣ್ಣುಗಳು, ದಪ್ಪ ನೀಲಿ ತುಟಿ, ದೊಡ್ಡ ತಲೆ, ತೆರೆದುಕೊಂಡೇ ಇರುವ ಬಾಯಿಯ ಬೃಹತ್ ಕಾಯ ನನ್ನೆದುರು ಬಂತು. ಬುಲ್‌ಡಾಗ್ ನಾಯಿಯಂತೆ ಕಾಣುತ್ತಿದ್ದ ಅನಿಮಿಷ ಹತ್ತಿರ ಬರತೊಡಗಿ ಮೈಮೇಲೆರಗುವುದೋ ಎಂದು ನಾನಂಜುತ್ತಿರುವಾಗ ವಾನ್ಸ್ ಬಂದ. ಅವ ಕಂಡದ್ದೇ ಬಳಿಹೋಗಿ ಸವರತೊಡಗಿತು. ನೀರೊಳಗೆ ತೆಗೆವ ಕ್ಯಾಮೆರಾದಿಂದ ಫೋಟೋ ಸೆಷನ್ನೂ ನಡೆಯಿತು. ಮೈಸವರಿ ಮಾತನಾಡಿಸುವ ಆ ಮನುಷ್ಯ ಸ್ನೇಹಿ, ನಿರಪಾಯಕಾರಿ ಭಾರೀ ಮೀನು ಮಾವೋರಿ ರಾಸ್ಸೆ ಅಥವಾ ನೆಪೋಲಿಯನ್ ಫಿಶ್.



ಇಂತಿಪ್ಪ ಹವಳದ ವಿಸ್ಮಯಲೋಕದಲ್ಲಿ ಮುಳುಗಿರುವಾಗ ನಡೆದದ್ದು ಮುಗಿಯಿತೆಂಬಂತೆ ಮೆಟ್ಟಿಲು ಕೈಗೆ ತಾಗಿತು. ಕಡಲಜೀವಿಗಳಿಗೊಂದು ವಿದಾಯ ಹೇಳಿ ಒಂದೊಂದೇ ಹೆಜ್ಜೆ ಮೇಲಿಟ್ಟ ಹಾಗೆ ಕಿವಿ ಗುಂಯ್ಞ್ ಎನ್ನುತ್ತ ದಬ್ಬಾಕತೊಡಗಿತು. ಮೊದಲೇ ಕೊಟ್ಟ ಸೂಚನೆಯಂತೆ ತಲೆಯಲುಗಿಸುತ್ತ, ಉಗುಳು ನುಂಗಿದಾಗ ಸರಿಯಾಯಿತು. ಇನ್ನೇನು ತಲೆ ನೀರಿಂದ ಮೇಲೆ ಬಂತು ಅನ್ನುವಾಗ ಮೊದಲೇ ಮೇಲೆ ಬಂದಿದ್ದ ವಾನ್ಸ್ ದಡಕ್ಕನೆ ಹೆಲ್ಮೆಟ್ ಎಳೆದ. ಅಬ್ಬಾ! ತಲೆಯ ಭಾರ ಕಳೆಯಿತು. ನೀರಿನಿಂದ ಮೇಲೆ ಬಂದದ್ದೇ ಸೊಂಟ ಕಳಚಿ ಬೀಳುವಷ್ಟು ಭಾರವಾಯಿತು. ಭಾರವಾದದ್ದ ತೆಗೆದಿಟ್ಟು, ನೆನಪುಗಳ ಭಾರದೊಂದಿಗೆ ಡೆಕ್ಕಿಗೆ ಹೋದೆವು.


ಒಂದಿಷ್ಟೂ ಬೇಸರಿಸದೆ ದಿನನಿತ್ಯ ಹೇಳುವುದನ್ನೇ ಮತ್ತೆಮತ್ತೆ ಹೇಳುತ್ತ, ಅವೇಅವೇ ಪ್ರಶ್ನೆಗಳಿಗೆ ಉತ್ತರಿಸುತ್ತ, ನಗೆಮೊಗ ಹೊತ್ತ ಆರೂವರೆ ಅಡಿ ಎತ್ತರದ ಮನುಷ್ಯ ವಾನ್ಸ್. ಆಳಸಮುದ್ರ ಮುಳುಗುಗಾರ. ಯಾವ ಮಾಹಿತಿ ಕೇಳಿದರೂ ಥಟ್ಟನುತ್ತರಿಸುವ ಕಡಲ ಎನ್‌ಸೈಕ್ಲೋಪೀಡಿಯಾ. ಮೆಲ್ಬರ್ನಿನ ಆತ ಬಾಲ್ಯದಿಂದಲೇ ಡೈವಿಂಗ್ ಮಾಡುತ್ತಿದ್ದು ಈ ಕ್ರೂಸಿನಲ್ಲಿ ಇಪ್ಪತ್ತೆಂಟು ವರ್ಷಗಳಿಂದಿದ್ದಾನೆ. ನಡುನಡುವೆ ರಜೆ ಪಡೆದು ಹಾಡು ಕಲಿಯುತ್ತ, ಕಲಿಸುತ್ತ, ಕಚೇರಿ ಮಾಡುತ್ತಾನೆ. 


ಅಂದಹಾಗೆ ಈ ತರುಣನ ವಯಸ್ಸೆಷ್ಟು ಎಂದು ಕೇಳಿದೆವು. ಅರವತ್ಮೂರು, ನಂಬಿ ಎಂದ! ಅರವತ್ತರ ಬಳಿಕವೂ ಇಷ್ಟು ಫಿಟ್ ಆಗಿ, ಉತ್ಸಾಹಿತನಾಗಿರುವುದರ ಗುಟ್ಟೇನೆಂದು ಕೇಳಿದಾಗ, ‘ನಾನೊಬ್ಬ ಟ್ರೂ ಆಸ್ಟ್ರೇಲಿಯನ್. ಬದುಕಿಬಿಡು ಎಂಬ ಆಸ್ಟ್ರೇಲಿಯನ್ ಸ್ಪಿರಿಟ್ ಮತ್ತು ಬಿಯರ್ ನನ್ನ ಉತ್ಸಾಹದ ಮೂಲ. ನಾನು ಬಿಯರ್ ಬಿಟ್ಟು ಮತ್ತೇನನ್ನೂ ಕುಡಿಯುವುದಿಲ್ಲ. ಪ್ರವಾಸ ಬರುವವರಿಗೆಲ್ಲ ಧೈರ್ಯ ತುಂಬಿ ಸುರಕ್ಷಿತವಾಗಿ ನೀರೊಳಗಿಳಿಸಿ ಆ ಇನ್ನೊಂದು ಲೋಕ ನೋಡುವಂತೆ ಪ್ರೇರೇಪಿಸುವುದು; ಕಡಲಿಗೆ ಇನ್ನಷ್ಟು ಹತ್ತಿರಾಗುವಂತೆ ಮಾಡುವುದು ನನಗೆ ಖುಷಿ ಕೊಡುತ್ತದೆ’ ಎಂದ. 


ನಮ್ಮ ನೆಲದಿಂದ ಇಷ್ಟು ದೂರ ಬಂದು ನೆಲದಾಳ ನೋಡುವ ಅವಕಾಶವಿತ್ತ ಕಾಲವೇ, ನಿಸರ್ಗವೇ, ವಾನ್ಸ್ ಎಂಬ ಗೆಳೆಯನೇ, ನಿಮಗೆ ಶರಣು ಶರಣು.


                                                                                                                   ಡಾ. ಎಚ್. ಎಸ್. ಅನುಪಮಾ

 (Images: Personal Collection and Internet)

 ೧


ಕೆಮ್ಮೀನು ‘ನೀಮೋ’ ಕುತೂಹಲಕಾರಿ ಜೀವಿ. ಅವು ಗುಂಪಿನಲ್ಲಿರುತ್ತವೆ. ದ್ವಿಲಿಂಗಿಗಳಾಗಿ ಹುಟ್ಟುತ್ತವೆ. ಗುಂಪಿನ ಅತಿದೊಡ್ಡ ಹಿರಿಯ ಮೀನು ಈಯುವ ಹೆಣ್ಣಾಗಿ ಪರಿವರ್ತನೆಯಾಗುತ್ತದೆ. ಗಂಡಿಗಿಂತ ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತದೆ. ಹೊಸ ತಲೆಮಾರಿನ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ಜೊತೆಯಾಗುತ್ತದೆ. ಕೂಡುವ, ಈಯುವ ಕೆಲಸ ಅವರಿಬ್ಬರೇ ಮಾಡಬೇಕು. ಉಳಿದವರು ಸುಮ್ಮನೆ ಇರುತ್ತಾರಷ್ಟೇ. ಅಕಸ್ಮಾತ್ ಈಯುವ ಹೆಣ್ಣು ಸತ್ತರೆ, ಕೂಡಲೇ ಅದರೊಂದಿಗೆ ಕೂಡುತ್ತಿದ್ದ ಗಂಡು ತಾನೇ ಸರಸರ ಬೆಳೆದು ಈಯುವ ಹೆಣ್ಣಾಗುತ್ತದೆ! ಮತ್ತೊಂದು ಹೊಸ ಯುವ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ರೂಪುಗೊಳ್ಳುತ್ತದೆ. ಹೀಗೆ ಒಂದು ಗುಂಪಿನ ಸಂತಾನೋತ್ಪತ್ತಿ ನಡೆಸುವ ಹೆಣ್ಣು, ಗಂಡಾಗಲು ಕಟ್ಟುನಿಟ್ಟಾದ ಶ್ರೇಣೀಕರಣವಿದೆ. ತುರ್ತು ಸಮಯದಲ್ಲಿ ಗಂಡು ಕೆಲವೇ ದಿನಗಳಲ್ಲಿ (ಕೆಲವೊಮ್ಮೆ ಗಂಟೆಗಳಲ್ಲಿ) ಹೆಣ್ಣಾಗಿ ಬೆಳೆಯುತ್ತದೆ! 


 ೨


ಹೆಚ್ಚುಕಮ್ಮಿ ಎಲ್ಲ ಪ್ರವಾಸಿಗರಿಗೂ ಕಾಣಸಿಗುವ ಬ್ಯಾರಿಯರ್ ರೀಫಿನ ಸೂಪರ್ ಸ್ಟಾರ್ ಮಾವೋರಿ ರಾಸ್ಸೆ. ಅದಕ್ಕೆ ಇವರಿಟ್ಟ ಹೆಸರು ‘ವಾಲಿ’. ಎಣ್ಣೆ, ಗಾಳಿಯಿಂದ ತುಂಬಿದ ಅದರ ತಲೆಮೇಲಿರುವ ಗುಬಟು ಸುಲಲಿತವಾಗಿ ತೇಲಲು ಸಹಾಯ ಮಾಡುತ್ತದೆ. ಮೂವತ್ತು ವರ್ಷ ಬದುಕುವ, ೧೮೦ ಕೆಜಿ ತೂಗುವ ಅವು ಹುಟ್ಟುತ್ತ ದ್ವಿಲಿಂಗಿ. ನಾಲ್ಕಾರು ವರ್ಷಗಳಾದಮೇಲೆ ಪ್ರೌಢವಾಗಿ ಮೊದಲು ಹೆಣ್ಣು ನಂತರ ಗಂಡು ಆಗುತ್ತವೆ. ವಾಲಿ ಮೊದಲು ಹೆಣ್ಣಾಗಿ ಸಾರಾ ಆಗಿದ್ದ. ಒಂಬತ್ತು ವರ್ಷಗಳ ಬಳಿಕ ಗಂಡಾಗಿ ವಾಲಿ ಆದ. ವಯಸ್ಕ ಹಂತದವು ಒಬ್ಬಂಟಿಯಾಗಿರಬಯಸುತ್ತವೆ. ವಾಲಿಗಿಂತ ಹಿರಿಯವೇನಾದರೂ ಬಂದರೆ ಇದನ್ನೇ ಓಡಿಸಿ ತಾವು ಒಂಟಿಯಾಗಿರುತ್ತವಂತೆ. ಇದರಂತೆಯೇ ಇನ್ನೊಂದು ‘ರಿಕ್ಕಿ’ಯೂ ಬರುತ್ತಿದೆಯಂತೆ. 


Monday, 15 September 2025

ಮಿಲ್‌ಫೋರ್ಡ್ ಸೌಂಡ್ ಪಿಯೊಪಿಯೊ ತಾಹಿ

 



ನ್ಯೂಜಿಲ್ಯಾಂಡ್ ದೇಶವನ್ನು, ಅದರಲ್ಲೂ ಮಿಲ್‌ಫೋರ್ಡ್ ಸೌಂಡನ್ನು ನೋಡಿದ ಮೇಲೆ ಬೇರೇನನ್ನಾದರೂ ನೋಡಬೇಕು ಎಂಬ ಹಂಬಲವೇ ಮರೆಯಾಗಿಹೋಯಿತು. ಅಷ್ಟು ಗಾಢವಾಗಿ ಕಣ್ಮನಗಳನ್ನು ತುಂಬಿಕೊಂಡಿರುವ ತಾವು ಅದು. ರುಡ್ಯಾರ್ಡ್ ಕಿಪ್ಲಿಂಗ್ ಎಂಟನೆಯ ಅದ್ಭುತ ಎಂದು ಕರೆದ ಈ ತಾಣವು ನ್ಯೂಜಿಲೆಂಡಿನ ದಕ್ಷಿಣ ದ್ವೀಪದ ನೈರುತ್ಯ ತೀರದಗುಂಟ ಹರಡಿಕೊಂಡಿದೆ. ಉನ್ನತವಾದ ದಕ್ಷಿಣ ಆಲ್ಪ್ಸ್ ಪರ್ವತ ಶ್ರೇಣಿಯ ಶಿಖರಗಳಿಂದ ಟಾಸ್ಮನ್ ಕಡಲನ್ನು ಸೇರುತ್ತಿದ್ದ ಹಿಮನದಿಗಳು ಕೋಟಿಗಟ್ಟಲೆ ವರ್ಷ ಚಲಿಸಿ ಆಳವಾದ, ವಿಸ್ತಾರವಾದ ಕಣಿವೆಗಳನ್ನು ರೂಪಿಸಿದವು. ಹಿಮಯುಗದ ಕೊನೆಗೆ ಕಣಿವೆಗಳಲ್ಲಿ ಕಡಲ ನೀರು ಒಳನುಗ್ಗಿ ‘ಫೋರ್ಡ್‌ಲ್ಯಾಂಡ್ ರೂಪುಗೊಂಡಿತು. ನ್ಯೂಜಿಲ್ಯಾಂಡ್ ದೇಶ ಅದನ್ನು ‘ಫೋರ್ಡ್‌ಲ್ಯಾಂಡ್ ನ್ಯಾಷನಲ್ ಪಾರ್ಕ್ ಎಂದು ಕರೆದಿದೆ. ಮನುಷ್ಯರೇ ಇರದ ರಮ್ಯ, ನಿರ್ಜನ ತಾಣದ ಹೃದಯ ಭಾಗದಲ್ಲಿರುವುದು ಮಿಲ್‌ಫೋರ್ಡ್ ಸೌಂಡ್. ಹೋಗಿಬಂದು ವರ್ಷಗಳೇ ಕಳೆದರೂ ಈಗಲೂ ಕಣ್ಮುಚ್ಚಿ ನೆನೆದರೆ ಅಲ್ಲಿನ ರಮ್ಯ ಪ್ರಕೃತಿ, ತಾಜಾ ಹವೆಯ ಆಹ್ಲಾದ, ಮೈ ಕೊರೆಯುವ ಹಿಮ, ಬಿರುಮಳೆ, ದುರ್ಗಮ ಕಾಡು, ಭಾರೀ ಪರ್ವತ ಸಾಲು, ಜಲಪಾತಗಳು ಮನಸ್ಸನ್ನು ಆವರಿಸಿ ಹಿತಾನುಭವ ನೀಡುತ್ತವೆ.

ವಿಸ್ತಾರವಾದ ಫೋರ್ಡ್‌ಲ್ಯಾಂಡ್ ಪ್ರದೇಶದಲ್ಲಿ ರಸ್ತೆಯ ಮೂಲಕ ಮನುಷ್ಯರು ತಲುಪಲು ಸಾಧ್ಯವಿರುವ ಏಕೈಕ ತಾಣ ಮಿಲ್‌ಫೋರ್ಡ್ ಸೌಂಡ್. ೨೫ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಅದು ನಿಜವಾಗಿ ಸೌಂಡ್ ಅಲ್ಲ. ನದಿ ಕಣಿವೆಯಲ್ಲಿ ಕಡಲ ನೀರು ನುಗ್ಗಿ ಆವರಿಸಿರುವುದು ಸೌಂಡ್. ಹಿಮನದಿ (ಗ್ಲೇಸಿಯರ್) ಕೊರೆದು ಮಾಡಿದ ಆಳ ಕಣಿವೆಗಳಲ್ಲಿ ಕಡಲ ನೀರು ಹೊಕ್ಕು ರೂಪುಗೊಂಡಿರುವುದು ಫೋರ್ಡ್. ೧೮೨೩ರಲ್ಲಿ ಮೊದಲು ಇಲ್ಲಿಗೆ ಬಂದವನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿದ್ದ ಸಮುದ್ರಯಾನ ಸಾಹಸಿ ಜಾನ್ ಗ್ರೋನೋ. ಇಂಗ್ಲೆಂಡಿನ ವೇಲ್ಸ್‌ನಲ್ಲಿರುವ ಪ್ರಾಕೃತಿಕ ಬಂದರು ಮಿಲ್‌ಫೋರ್ಡ್ ಹೆಸರನ್ನೇ ಇದಕ್ಕೂ ಇಟ್ಟು ಸೌಂಡ್ ಎಂದು ಅವನು ಕರೆದದ್ದು ಹಾಗೆಯೇ ಮುಂದುವರೆದಿದೆ.

ಮಾವೊರಿ ಭಾಷೆಯಲ್ಲಿ ಇರುವ ಕತೆಯೊಂದರ ಪ್ರಕಾರ ಮನುಷ್ಯ ಕುಲಕ್ಕೆ ಅಮರತ್ವ ದೊರಕಿಸಿಕೊಡಲು ಮೌಯಿ ಎಂಬ ಅವರ ಕುಲದ ವೀರನು ಈ ಪ್ರದೇಶಕ್ಕೆ ಏಕಾಂಗಿಯಾಗಿ ಬಂದ. ಆದರೆ ಹಿಂತಿರುಗಲಿಲ್ಲ. ಅವನ ಮರಣವನ್ನು ದುಃಖಿಸುತ್ತ ಪಿಯೊಪಿಯೊ ಹೆಸರಿನ ಹಕ್ಕಿ ಇಲ್ಲಿಗೆ ಹಾರಿ ಬಂದಿತಂತೆ. (ನ್ಯೂಜಿಲ್ಯಾಂಡಿನಲ್ಲಿ ಈಗ ಅದು ಅಳಿದ ಪಕ್ಷಿ.) ‘ಒಂದು ಪಿಯೊಪಿಯೊ ಎನ್ನುವ ಅರ್ಥದ ಪಿಯೊಪಿಯೊತಾಹಿ ಹೆಸರನ್ನೇ ಈ ತಾವಿಗೂ ಇಟ್ಟಿದ್ದಾರೆ. ಮೂಲನಿವಾಸಿ ಮಾವೊರಿಗಳಿಗೂ, ವಸಾಹತುಶಾಹಿ ಬ್ರಿಟಿಷರಿಗೂ ಈ ತಾವಿನ ಅಧಿಪತ್ಯಕ್ಕಾಗಿ ದೀರ್ಘ ಸಂಘರ್ಷ ನಡೆದಿದೆ. ೧೯೯೮ರಲ್ಲಿ ಆದ ವೈತಂಗಿ ಒಪ್ಪಂದದ ಬಳಿಕ ಹೆಸರನ್ನು ಮಿಲ್‌ಫೋರ್ಡ್ ಸೌಂಡ್ ಪಿಯೊಪಿಯೊತಾಹಿ ಎಂದು ಬದಲಿಸಲಾಗಿದೆ. ಅವು ಎರಡು ಹೆಸರುಗಳಲ್ಲ. ಅದಲುಬದಲು ಮಾಡಬಹುದಾದ ಹೆಸರುಗಳಲ್ಲ. ಪರ್ಯಾಯ ಹೆಸರುಗಳೂ ಅಲ್ಲ. ಅವೆರೆಡೂ ಸೇರಿ ಒಂದೇ ಹೆಸರಾಗಿದೆ.








ಎರಡು ಕಿಲೋಮೀಟರ್ ಅಗಲ, ೧೫ ಕಿಲೋಮೀಟರ್ ಉದ್ದ, ಸಾವಿರಾರು ಅಡಿ ಆಳದ ಕಣಿವೆ ತುಂಬಿದ ಜಲರಾಶಿ ಪಿಯೊಪಿಯೊತಾಹಿ. ೨೦ ಲಕ್ಷ ವರ್ಷ ಕಾಲ ಕಿಲೋಮೀಟರುಗಟ್ಟಲೆ ಅಗಲದ ಹಿಮನದಿಗಳು ದಕ್ಷಿಣ ಆಲ್ಪ್ಸ್ ಪರ್ವತಗಳಿಂದ ಕಡಲ ಕಡೆಗೆ ನಡೆದವು. ಭೂ ತಾಪಮಾನ ಏರುತ್ತ ಹೋದಂತೆ ಹಿಮ ಕರಗಿ ನಿಂತು ಭಾರೀ ಸರೋವರಗಳನ್ನೂ, ಫೋರ್ಡ್‌ಗಳನ್ನೂ ಸೃಷ್ಟಿಸಿತು. ಪರ್ವತಗಳಿಂದ ಇಳಿಯುತ್ತ ಹಿಮನದಿ ಹೊತ್ತು ತಂದ ಭಾರದ ಕಲ್ಲು-ಬಂಡೆಗಳ ರಾಶಿಯು ಟಾಸ್ಮನ್ ಕಡಲನ್ನು ಹಿಮನದಿಯು ಸೇರುವ ‘ಬಾಯಿಯ ಬಳಿ ಗುಡ್ಡೆ ಹಾಕಿತು. ಹಾಗಾಗಿ ಅಲ್ಲಿ ಸೌಂಡಿನ ಆಳ ೨೯ ಮೀಟರ್ ಇದ್ದರೆ ಉಳಿದೆಡೆ ೩೦೦, ೪೦೦ ಮೀಟರು (೧೩೧೨ ಅಡಿ)ಗಳವರೆಗೂ ಇದೆ. ಎಂದೇ ಕಡಲಿನೊಡನೆ ಸಂಪರ್ಕ ಹೊಂದಿದ್ದರೂ ಭರತ ಇಳಿತ ಸೌಂಡ್ ಅನ್ನು ಬಾಧಿಸುವುದಿಲ್ಲ. ನೀರು ಹೊಯ್ದಾಡುವುದಿಲ್ಲ.


ವರ್ಷವಿಡೀ ಬೀಳುವ ಮಳೆನೀರು ಹಾಗೂ ಫೋರ್ಡನ್ನು ಸೇರುವ ನದಿಗಳ ನೀರು ಮೇಲ್ಮೈನಿಂದ ಆರು ಮೀಟರ್ ಆಳದವರೆಗೆ ನೀರು ಸಿಹಿಯಿರುವಂತೆ ಮಾಡಿವೆ. ಕೆಳಗೆ ಕಡಲ ಉಪ್ಪು ನೀರು ಇದೆ. ಪರ್ವತ, ದಟ್ಟಕಾಡುಗಳನ್ನು ದಾಟಿ ಬರುವ ನೀರಿನಲ್ಲಿ ಟ್ಯಾನಿನ್ ಇದ್ದು ಫೋರ್ಡಿಗೆ ಕಪ್ಪು ಬಣ್ಣ ತಂದು ಕೊಟ್ಟಿದೆ.


ವರ್ಷಕ್ಕೆ ೬೪೧೨ ಮಿಮೀ (೨೫೨ ಇಂಚು) ಮಳೆ ಬೀಳುವ ಪಿಯೊಪಿಯೊತಾಹಿ ಅತಿ ಹೆಚ್ಚು ಮಳೆ ಬೀಳುವ ಮನುಷ್ಯರ ವಾಸಸ್ಥಳಗಳಲ್ಲಿ ಒಂದು. ಇದು ಕರಾವಳಿಯ ಮಳೆಯೂರು ನಮ್ಮ ಹೊನ್ನಾವರದಲ್ಲಿ ಆಗುವ ಮಳೆಗಿಂತ ಎರಡು ಪಟ್ಟು ಹೆಚ್ಚು. ಕೆಲವೊಮ್ಮೆ ಒಂದೇ ದಿನ ೨೫೦ ಮಿ.ಮೀ. (೧೦ ಇಂಚು) ಮಳೆ ಬೀಳುತ್ತದೆ. ಸೆಪ್ಟೆಂಬರಿನಿಂದ ಡಿಸೆಂಬರ್‌ವರೆಗೆ ಅತ್ಯಧಿಕ ಮಳೆಯಾಗುತ್ತದೆ. ವರ್ಷದ ಎಲ್ಲ ತಿಂಗಳಿನಲ್ಲೂ, ಸರಾಸರಿ ೧೮೨ ದಿನ ಮಳೆ ಬೀಳುತ್ತದೆ. ಈ ಮಳೆಯು ಕೋಡುಗಲ್ಲುಗಳ ತುದಿಯಿಂದ ಧುಮ್ಮಿಕ್ಕುವ ಅಸಂಖ್ಯ ಜಲಪಾತಗಳನ್ನು ಸೃಷ್ಟಿಸಿದೆ. ಸಣ್ಣಪುಟ್ಟ ನೀರಧಾರೆಗಳು ತಳ ಮುಟ್ಟದೇ ಗಾಳಿಯಲ್ಲಿ ಹನಿಹನಿಗಳಾಗಿ ಚದುರಿ ಹೋಗುವುದೂ ಕಾಣುತ್ತದೆ. ಅತಿ ಮಳೆಯ ಕಾರಣದಿಂದ ಭೂ ಕುಸಿತ ಸರ್ವೇ ಸಾಮಾನ್ಯ. ಒಂದುವೇಳೆ ಭೂಕಂಪದಿಂದ ಇಬ್ಬದಿಯ ಪರ್ವತಗಳು ಕುಸಿದು ನೀರಿಗೆ ಬಿದ್ದರೆ ಸುನಾಮಿ ಪರಿಣಾಮವುಂಟಾಗುವ ಸಾಧ್ಯತೆಯಿದೆ. ಸನಿಹದಲ್ಲೇ ಇರುವ ವೈಟ್ ಐಲ್ಯಾಂಡಿನ ಜೀವಂತ ಜ್ವಾಲಾಮುಖಿಯ ಸ್ಫೋಟ, ಭೂಕಂಪ ಮುಂತಾದ ಪ್ರಕೃತಿ ವಿಕೋಪದ ಸಾಧ್ಯತೆಗಳು ದಟ್ಟವಾಗಿವೆ. ಆದರೂ ಪ್ರತಿ ವರ್ಷ ಹತ್ತು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.


ಅವಿಸ್ಮರಣೀಯ ಪಯಣ



ಮಿಲ್‌ಫೋರ್ಡ್ ಸೌಂಡ್‌ಗೆ ಹೋಗಲು ಪ್ರಾಚೀನ ದಾರಿಗಳಾವುವೂ ಇಲ್ಲ. ಅನಾದಿಯಿಂದ ಅದು ನಿರ್ಜನ ಪ್ರದೇಶವಾಗಿತ್ತು. ಈಗಲೂ ಜನವಸತಿಯಾಗಲೀ, ಹಳ್ಳಿಪಟ್ಟಣಗಳಾಗಲೀ ಇಲ್ಲದ ದುರ್ಗಮ ಪ್ರದೇಶವೇ ಆಗಿದೆ. ಅಲ್ಲಿಗೆ ಹೋಗಲು ರಸ್ತೆ ಮಾಡಿದ್ದೇ ಒಂದು ಸಾಹಸಗಾಥೆ. ಕಡಿದಾದ ಬಂಡೆಗಳ ಒಡೆದು, ಸುರಂಗ ಕೊರೆದು, ನದಿಗಳಿಗೆ ಸೇತುವೆ ಕಟ್ಟಿ, ಸರೋವರಗಳ ಬಳಸಿ ಅತ್ಯಂತ ಶ್ರಮದಾಯಕವಾದ, ಅಪಾಯಕರ ಸನ್ನಿವೇಶದಲ್ಲಿ ರಸ್ತೆ ಮಾಡುತ್ತ ಹೋಗಬೇಕಿತ್ತು. ಕ್ವೀನ್ಸ್‌ಟೌನಿನಿಂದ ೭೦ ಕಿಲೋಮೀಟರ್ ದೂರ ಇರುವ ಸೌಂಡಿಗೆ ೨೭೦ ಕಿಲೊಮೀಟರಿನ ಸುತ್ತುಬಳಸು ರಸ್ತೆ ಮಾಡಬೇಕಾಯಿತು. (ಕ್ವೀನ್ಸ್‌ಟೌನಿನಿಂದ ಹೆಲಿಕಾಪ್ಟರ್‌ನಲ್ಲಿ ಮುಕ್ಕಾಲುಗಂಟೆಯಲ್ಲಿ ತಲುಪಬಹುದು.)


 




ನಾವು ಕ್ವೀನ್ಸ್‌ಟೌನಿನಲ್ಲಿ ತಂಗಿದ್ದೆವು. ದಕ್ಷಿಣ ಧ್ರುವ ಹತ್ತಿರ ಇರುವ ಕಾರಣವಾಗಿ ಇಡಿಯ ನ್ಯೂಜಿಲ್ಯಾಂಡ್ ತಂಪು ಹವೆ ಹೊಂದಿದೆ. ಕ್ವೀನ್ಸ್‌ಟೌನಿನಲ್ಲಿ ಮಳೆ ಮತ್ತು ಹಿಮ ಎರಡೂ ಸೇರಿ ಇನ್ನೂ ಹೆಚ್ಚು ಚಳಿ ಅನುಭವಕ್ಕೆ ಬರುತ್ತದೆ. ನಾವು ಹೋದ ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿ ಬೆಳಗಿನ ತಾಪಮಾನ ೨ ಡಿಗ್ರಿ ಸೆಂಟಿಗ್ರೇಡ್ ಇರುತ್ತಿತ್ತು! ವಾಕಾಟಿಪು ಎಂಬ ಭಾರೀ ಸರೋವರದ ದಂಡೆಯಲ್ಲಿರುವ, ಹಿಮಾಚ್ಛಾದಿತ ಆಲ್ಪ್ಸ್ ಸೆರಗಿನಲ್ಲಿರುವ, ಸಾಹಸ ಕ್ರೀಡೆ ಮತ್ತು ಪ್ರವಾಸೋದ್ಯಮವೇ ಮೈದುಂಬಿಕೊಂಡ ಪ್ರವಾಸಿಗರ ಸ್ವರ್ಗ ಕ್ವೀನ್ಸ್‌ಟೌನ್. ಇಂಗ್ಲಿಷಿನ ಝಡ್ ಅಕ್ಷರದ ಆಕಾರದಲ್ಲಿರುವ, ೮೦ ಕಿಲೋಮೀಟರ್ ಉದ್ದ, ೫ ಕಿಲೋಮೀಟರ್ ಅಗಲದ, ಕೆಲವೆಡೆ ಒಂದೂವರೆ ಸಾವಿರ ಅಡಿ ಆಳವಿರುವಂಥ ವಾಕಾಟಿಪು ಸರೋವರದ ದಂಡೆಯ ಒಂದು ಭಾಗದಲ್ಲಿ ಕ್ವೀನ್ಸ್‌ಟೌನ್ ನಗರ ಹರಡಿಕೊಂಡಿದೆ.


 ಬಹಳಷ್ಟು ಪ್ರವಾಸಿಗರು ಕ್ವೀನ್ಸ್‌ಟೌನಿನಿಂದ ಮಿಲ್‌ಫೋರ್ಡ್ ಸೌಂಡಿಗೆ ಹೋಗುತ್ತಾರೆ. ಅದು ನ್ಯೂಜಿಲೆಂಡಿನ ಅತ್ಯಂತ ಸುಂದರ, ಅತ್ಯಂತ ಅಪಾಯಕರ ರಸ್ತೆ. ಪಯಣ ಅವಿಸ್ಮರಣೀಯ. ಹೆಚ್ಚಿನವರು ಟೂರಿಸ್ಟ್ ಬಸ್ಸುಗಳಲ್ಲಿ ಹೋಗುತ್ತಾರೆ. ಬೈಕ್, ಕಾರುಗಳನ್ನು ತಾವೇ ಚಲಾಯಿಸಿಕೊಂಡು ಹೋಗಿ ನೋಡುವವರು; ಟ್ರೆಕಿಂಗ್ ಟ್ರ್ಯಾಕುಗಳಲ್ಲಿ ತಂಡವಾಗಿ ಪರ್ವತಗಳ ಹಾಯುತ್ತ ನಡೆದು ತಲುಪುವವರು; ನಡುನಡುವೆ ಸರೋವರಗಳನ್ನು ದೋಣಿಯಲ್ಲಿ ದಾಟಿ ಮುಟ್ಟುವವರು; ಹೆಲಿಕಾಪ್ಟರ್/ವಿಮಾನದಲ್ಲಿ ಹೋಗಿ ನೋಡುವವರೂ ಇದ್ದಾರೆ.


 ನಾವು ಬೆಳಕು ಹರಿಯುವ ಮೊದಲೇ ಹೊರಟೆವು. ಸಮಯಕ್ಕೆ ಸರಿಯಾಗಿ ಬಂದು ನಿಂತ ಬಸ್ಸಿನೊಳಗೆ ಎಪ್ಪತ್ತು ದಾಟಿದ ಭಾರೀ ಆಳ್ತನದ ಹಿರಿಯರೊಬ್ಬರು ಬರಮಾಡಿಕೊಂಡರು. ಗೈಡ್ ಆಗಿ ಜೊತೆಯಾದ ಅವರು ಇತಿಹಾಸ, ಮಾನವಶಾಸ್ತ್ರ, ಜಿಯಾಲಜಿ, ಬಾಟನಿಗಳಲ್ಲೆಲ್ಲ ಅಪಾರ ತಿಳುವಳಿಕೆಯಿರುವ ನಿವೃತ್ತ ಪ್ರೊಫೆಸರರು ಎಂದು ನಂತರ ತಿಳಿಯಿತು. ೨೭೦ ಕಿಲೋಮೀಟರ್ ದೂರವನ್ನು ನಾಲ್ಕೂವರೆಯಿಂದ ಐದು ತಾಸು ಕ್ರಮಿಸಬೇಕು. ನಡುನಡುವೆ ಕಾಡಿನೊಳಹೊಕ್ಕು ಓಡಾಡಲು, ನದಿ ಪಕ್ಕ ನಡೆಯಲು, ಸುರಂಗದ ಬಳಿ ಕಾಯಲು ಒಂದಷ್ಟು ನಿಲುದಾಣಗಳಿವೆ. ರಭಸದ ಮಳೆ ಪಯಣವನ್ನು ನಿಧಾನಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆಂದು ಪ್ರವಾಸದ ಆಯೋಜಕರು ೧೦-೧೫% ಹೆಚ್ಚುವರಿ ಸಮಯ ಇಟ್ಟಿರುತ್ತಾರೆ ಎಂದು ಗೈಡ್ ಹೇಳಿದರು.




ಕ್ವೀನ್ಸ್‌ಟೌನ್ ಬಿಟ್ಟು ಹೆಚ್ಚುಕಡಿಮೆ ಒಂದು ತಾಸು ಕಳೆಯುವವರೆಗೆ ವಾಕಾಟಿಪು ಸರೋವರ ನಮ್ಮೊಡನಿತ್ತು. ಒಂದೆಡೆ ಸರೋವರ, ಮತ್ತೊಂದೆಡೆ ಹಿಮಾಚ್ಛಾದಿತ ಆಲ್ಪ್ಸ್. ನಿಸರ್ಗದ ಸೊಬಗು ತುಂಬಿಕೊಳ್ಳಲು ಎರಡು ಕಣ್ಣು ಸಾಲವು. ಬಳಿಕ ಒಂದಲ್ಲ ಒಂದು ಸರೋವರ ಅಥವಾ ನದಿ ನಮ್ಮ ಜೊತೆಯಿದ್ದವು. ನೀರತಳ ಕಾಣುವ ಪಾರದರ್ಶಕ ಹರಿವು ನೋಡುತ್ತ ಆಹ್ಲಾದಕರ ಪಯಣ ಸಾಗಿತು.


ಒಂದಷ್ಟು ದೂರ ಕ್ರಮಿಸಿದ ಬಳಿಕ ಮಿರರ್ ಲೇಕ್ಸ್ ಇರುವ ತಾಣದಲ್ಲಿ ವಾಹನ ನಿಂತಿತು. ರಸ್ತೆಯ ಪಕ್ಕದಿಂದ ಹತ್ತು ನಿಮಿಷ ನಡೆದರೆ ಸರೋವರ ಕಾಣುತ್ತದೆ. ಅಲ್ಲಿ ಅಂತಹ ಹಲವು ಸರೋವರಗಳಿವೆ. ಅಲ್ಲಿನ ನೀರು ಎಷ್ಟು ತಿಳಿ, ನಿಶ್ಚಲ ಮತ್ತು ಶುದ್ಧ ಎಂದರೆ ಪರ್ವತ, ಆಗಸಗಳ ಪ್ರತಿಬಿಂಬ ಸ್ಪಷ್ಟವಾಗಿ ನೀರಿನಲ್ಲಿ ಕಾಣಿಸುತ್ತದೆ.


ನಮ್ಮ ಗೈಡ್ ತನ್ನ ದೇಶದ ವಿಶಿಷ್ಟ ವಸ್ತುವೊಂದರ ಬಗೆಗೆ ಗಮನ ಸೆಳೆದರು. ಅದು ಮನೂಕ ಜೇನು. ಮನೂಕ ಎಂಬ ಮಾವೊರಿ ಹೆಸರಿನ ಪೊದೆಗಿಡದ ಹೂವಿನಿಂದ ಜೇನುಹುಳುಗಳು ತಯಾರಿಸುವ ಜೇನು ವಿಶ್ವ ಪ್ರಸಿದ್ಧವಂತೆ. ಅದು ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮಾತ್ರ ತಯಾರಾಗುವ ಜೇನಂತೆ. ಜೋನಿಬೆಲ್ಲದಷ್ಟು ದಪ್ಪಗಿರುವ, ಮಣ್ಣಿನ ಪರಿಮಳವನ್ನೂ, ವನಸ್ಪತಿಯ ತಿಳಿ ಘಾಟನ್ನೂ ಹೊಂದಿರುವ ಅದು ಭಾರೀ ಬೇಡಿಕೆಯ ವಸ್ತುವಂತೆ. ಅದಕ್ಕಿರುವ ಔಷಧೀಯ ಗುಣಗಳು, ಸೌಂದರ್ಯವರ್ಧಕವಾಗಿ ಬಳಕೆ, ಮಾರುಕಟ್ಟೆ ಸೃಷ್ಟಿಸಿದ ಹಗೆತನ, ಸ್ಪರ್ಧೆ, ಶುದ್ಧತೆ ನೋಡಲು ರೂಪಿಸಿರುವ ಐದು ಮಾನದಂಡಗಳು, ಆದರೂ ನಡೆಯುವ ಕಲಬೆರಕೆಗಳ ಬಗೆಗೆ ಗೈಡ್ ವಿವರವಾಗಿ ಹೇಳಿದರು. ನಾವು ಹೋದದ್ದು ಮನೂಕ ಹೂ ಋತುವಲ್ಲ. ಅದಾಗಲೇ ಜನವರಿಗೇ ಮುಗಿದು ಹೋಗಿತ್ತು. ಗಾಳಿ ಬೀಸಿದ ದಿಕ್ಕಿಗೆ ಸರಿಯಾಗಿ ತಮ್ಮ ಇಡಿಯ ಕಾಂಡವನ್ನು ವಾಲಿಸಿ ನಿಂತ ಮನೂಕ ಗಿಡಗಳನ್ನಷ್ಟೇ ನೋಡಲು ಸಾಧ್ಯವಾಯಿತು. ಅವು ಬಳ್ಳಾರಿ ಜಾಲಿಯನ್ನು ನೆನಪಿಸಿದವು.


ಅರ್ಧ ದಾರಿ ಸವೆಸಿದಾಗ ಟೆ ಆನಾ ಊರು, ಅದೇ ಹೆಸರಿನ ಸರೋವರ ಬಂದವು. ಊರು ದಾಟಿದ ಮೇಲೆ ನಮ್ಮ ಬಸ್ಸು ಶುಭ್ರ ನೀರಿನ ನದಿಯ ಪಕ್ಕ ಸರಿದು ಹೋಗತೊಡಗಿತು. ಅದು ವಾಕಾಟಿಪು ಕಾ ಟುಕಾ ಅಥವಾ ಹಾಲಿಫೋರ್ಡ್ ನದಿ.






ಕಡಿದಾದ ಪರ್ವತಗಳ ಸೆರಗಿನಲ್ಲಿ ಹಾವಿನಂತೆ ಹರಿದು ಹೋಗುವ ರಸ್ತೆಯಲ್ಲಿ ಹತ್ತಿಳಿಯುತ್ತಿದ್ದೆವು. ಕಡಿದಾದ ಪರ್ವತ ಶ್ರೇಣಿಗಳು ಎದುರು ಹಾದವು. ಸೌಂಡಿಗೆ ತಲುಪುವ ಈ ಕೊನೆಯ ಭಾಗದ ಮಾರ್ಗ ನಿರ್ಮಾಣ ಎಂತಹ ಸವಾಲಿನದಾಗಿತ್ತು ಎಂದು ಗೈಡ್ ಶತಮಾನ ಹಿಂದಿನ ಕತೆ ಹೇಳತೊಡಗಿದರು. ಸಾವಿರಾರು ಅಡಿ ಎತ್ತರದ ಪರ್ವತಗಳು ಅಡ್ಡಗೋಡೆಯಂತೆ ನಿಂತ ಕಾರಣ ಮಿಲ್‌ಫೋರ್ಡನ್ನು ತಲುಪುವುದೇ ಅಸಾಧ್ಯವೆನ್ನುವಂತಾಗಿತ್ತು. ೧೮೮೯ರಲ್ಲಿ ವಿಲಿಯಂ ಹೋಮರ್ ಎಂಬಾತನಿಗೆ ಲಾಳಾಕಾರದ ಪರ್ವತದ ಕಣಿವೆಯಿರುವಲ್ಲಿ ಸುರಂಗ ಕೊರೆದರೆ ಹ್ಯಾಲಿಫೋರ್ಡ್ ನದಿ ಕಣಿವೆಯಿಂದ ಕ್ಲೆಡ್ಡಾ ನದಿ ಕಣಿವೆ ತಲುಪಿ ಮಿಲ್‌ಫೋರ್ಡ್ ಸೌಂಡ್ ಮುಟ್ಟಬಹುದೆಂದು ಅಂದಾಜಾಯಿತು. ಅದು ಹತ್ತಿರದ, ನೇರ ಮಾರ್ಗವೇನೋ ಹೌದು, ಆದರೆ ಸುರಂಗ ಕೊರೆಯುವುದು ಹೇಗೆ? ವರ್ಷದ ಅರ್ಧ ದಿನಗಳಲ್ಲಿ ಸೂರ್ಯನ ಬೆಳಕೇ ಬೀಳದಷ್ಟು ಎತ್ತರೆತ್ತರದ ಪರ್ವತಗಳ ನಡುವಿನ ಪ್ರದೇಶದಲ್ಲಿ ಸುರಂಗ ಕೊರೆಯುವುದು, ರಸ್ತೆ ಮಾಡುವುದು ಸುಲಭವಿರಲಿಲ್ಲ. ಮೊದಲಿಗೆ ಟೆಂಟುಗಳಲ್ಲಿ ನೆಲೆಸಿ ಹಾರೆ ಪಿಕಾಸಿ ಡ್ರಿಲ್ಲುಗಳ ನೆರವಿನಿಂದ ಕೆಲಸ ಆರಂಭಿಸಿದರು. ಏಳುಬೀಳಿನೊಡನೆ ಕೆಲಸ ಸಾಗುತ್ತ ಹೋಯಿತು. ನಡೆಯಿತು, ನಿಂತಿತು, ಮತ್ತೆ ಆರಂಭವಾಯಿತು. ಬಂಡೆ ಒಡೆದ ಹಾಗೂ ಹಿಮ ಕರಗಿ ನೀರು ತುಂಬುತ್ತಿತ್ತು. ಕೊನೆಗೆ ಪಕ್ಕದಲ್ಲೇ ಹರಿವ ಹಾಲಿಫೋರ್ಡ್ ನದಿಗೆ ಸಣ್ಣ ಕಟ್ಟೆ ಕಟ್ಟಿ, ವಿದ್ಯುತ್ ತಯಾರಿಸಿ ಗಂಟೆಗೆ ನಲವತ್ತು ಸಾವಿರ ಲೀಟರ್ ನೀರು ಖಾಲಿ ಮಾಡುತ್ತ ಸುರಂಗ, ರಸ್ತೆಯ ಕೆಲಸ ನಡೆಸಿದರು. ಭೂ ಕುಸಿತಕ್ಕೆ ಕೆಲವರು ಬಲಿಯಾದರು. ಮತ್ತೊಂದು ಭೂಕುಸಿತದಲ್ಲಿ ತೋಡಿದ ಸುರಂಗ ಅರ್ಧಕ್ಕರ್ಧ ಮುಚ್ಚಿ ಹೋಯಿತು. ಅಂತೂ ೧೯ ವರ್ಷಗಳ ಬಳಿಕ ೧೯೪೦ರ ವೇಳೆಗೆ ಸುರಂಗ ಮತ್ತೊಂದು ತುದಿ ತಲುಪಿಯೇ ಬಿಟ್ಟಿತು. ಮಹಾಯುದ್ದದ ಕಾಲವಾಗಿದ್ದರಿಂದ ವಿಳಂಬಗೊಂಡು ೧೯೫೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ಇವತ್ತಿಗೂ ೧.೨ ಕಿಲೋಮೀಟರ್ ಉದ್ದದ ಆ ಹೋಮರ್ ಸುರಂಗದಲ್ಲಿಯೇ ಎಲ್ಲರೂ ಹಾದು ಹೋಗಬೇಕು.


ಸುರಂಗವು ಏಕಮುಖ ಸಂಚಾರ ಹೊಂದಿದೆ. ಎದುರುಬದುರಾದರೆ ಎರಡು ಕಾರುಗಳು ಚಲಿಸಬಹುದು, ಆದರೆ ಎರಡು ಬಸ್ಸುಗಳು ಚಲಿಸಲಾರವು. ಸಂಜೆ ಆರರಿಂದ ಬೆಳಿಗ್ಗೆ ಒಂಬತ್ತರವರೆಗೆ ಮುಚ್ಚಿರುತ್ತದೆ. ಈಗ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಏರುತ್ತಿರುವ ಪ್ರವಾಸಿಗರ ಕಾರಣವಾಗಿ ಸುರಂಗ ಅಗಲ ಮಾಡುವ ಪ್ರಯತ್ನಗಳು ನಡೆದರೂ ಅದು ಸುರಕ್ಷಿತವಲ್ಲ ಮತ್ತು ಅತ್ಯಂತ ಖರ್ಚಿನ ಬಾಬತ್ತು ಎಂದು ಕೈ ಬಿಟ್ಟಿದ್ದಾರೆ.

ನಮ್ಮ ಗೈಡ್ ಹೇಳುತ್ತಿದ್ದ ಸುರಂಗದ ಕತೆ ಕೇಳುತ್ತ ಕೇಳುತ್ತ ಅದರ ಬಾಯಿಯ ಬಳಿ ಬಸ್ಸು ನಿಂತಿತು. ಟ್ರಾಫಿಕ್ ಹೆಚ್ಚಿತ್ತು. ಈ ಕಡೆಯಿಂದ ಹೊರಟವರು ಆಚೆ ತಲುಪಿದ ಮೇಲೆಯೇ ಮತ್ತೊಂದು ತಂಡ ಆಚೆಯಿಂದ ಈಚೆ ಬರುತ್ತಿತ್ತು. ಏಕಮುಖ ಸಂಚಾರವನ್ನು ಸಿಗ್ನಲ್‌ಗಳೇ ನಿರ್ವಹಿಸುತ್ತಿದ್ದವು. ನಾವು ಹೆಚ್ಚುಕಡಿಮೆ ಒಂದು ಗಂಟೆ ಕಾಲ ಕಾದೆವು. ಆದರೂ ಬೋರೆನಿಸುವಂತೆಯೇ ಇಲ್ಲ, ಕಾರಣ ಹೊರಗಣದ ಸೌಂದರ್ಯ. ಕಿಟಕಿಯೊಳಗಿನಿಂದಲೇ ಕಣ್ತುಂಬಿಕೊಳ್ಳುತ್ತಿದ್ದೆವು. ಸಂಪೂರ್ಣ ತಲೆಯೆತ್ತಿ ನೋಡಿದರೂ ತುದಿ ಕಾಣದಷ್ಟು ಎತ್ತರದ ಪರ್ವತಗಳಿಂದ ಜಲಧಾರೆ ಬೀಳುತ್ತಿತ್ತು. ಮಳೆ ಒಂದೇಸಮ ಸುರಿಯುತ್ತಿತ್ತು. ಅಲ್ಲೇನಾದರೂ ಭೂ ಕುಸಿತ ಸಂಭವಿಸಿದರೆ, ಭಾರೀ ಹಿಮಪಾತವಾದರೆ ನಾವು ಇದ್ದಲ್ಲೇ ಇಲ್ಲವಾಗುತ್ತೇವೆ ಎಂದು ಗೈಡ್ ಹೇಳುವಾಗ ಕೆಲವರು ಹೌದೇ ಎಂದು ಭಯಪಟ್ಟರು.


ನನ್ನಾಳದಲ್ಲಿ ನೆಲೆಗೊಂಡಿದ್ದ ವಿಶಿಷ್ಟ ಶಾಂತಿಯು ಹಾಗಾಗುವುದಾದರೆ ಆಗಲಿ; ಇಂಥ ಪ್ರಕೃತಿಯಲ್ಲಿ ಲೀನವಾಗುವುದಕ್ಕಿಂತ ಹೆಚ್ಚಿನ ಸಂತಸ ಬೇರೆ ಇನ್ನೇನಿದೆ ಎಂದು ಹೇಳುತ್ತಿತ್ತು.


ಪಿಯೊಪಿಯೊ ತಾಹಿ



ಕೊನೆಗಂತೂ ಬಿಸಿಲುಮಳೆ ಬೀಳುತ್ತಿರುವ ಹೊತ್ತಿಗೆ ಪಿಯೊಪಿಯೊತಾಹಿ ತಲುಪಿದೆವು. ಅನುಭವದಿಂದ ಮಾತ್ರ ವೇದ್ಯವಾಗುವ ಆ ಅಪರಿಮಿತಾನಂದವನ್ನು ಏನೆಂದು ವರ್ಣಿಸುವುದು? ಹಿಂದೆಂದೂ ಕಾಣದಂತಹ ಚೆಲುವಿನ ಪ್ರಕೃತಿಯ ಮಡಿಲಿನಲ್ಲಿರುವ ಆನಂದವೋ, ಉದ್ವೇಗವೋ, ಚಳಿಯೋ ಅಂತೂ ಒಳಗಿನಿಂದ ನಗು ಮತ್ತು ನಡುಕ ಎದ್ದೆದ್ದು ಬಂದು ಗದಗುಡುವಂತಾಗುತ್ತಿತ್ತು. ಅದರ ನಡುವೆಯೇ ಟಿಕೆಟ್ ಪಡೆದೆವು. ಎಷ್ಟು ಗಂಟೆಯೊಳಗೆ ಎಲ್ಲಿ ಬಂದು ಬಸ್ ಹತ್ತಬೇಕು ಎಂದು ತಿಳಿಸಿ ಗೈಡ್ ಹಿಂದೆ ಉಳಿದರು. ಮೂರಂತಸ್ತಿನ ಯಾಂತ್ರಿಕ ದೋಣಿಯಲ್ಲಿ ಸುರಕ್ಷತೆಯ ದಿರಿಸು ಧರಿಸಿ ಪಯಣ ಆರಂಭಿಸಿದೆವು.

ಈಗ ಬಿಸಿಲು ಈಗ ಮೋಡ. ನಡುನಡುವೆ ಮಳೆ. ಮೋಡದ ನಾಡಿನ ಬಾಗಿಲಿಗೆ ಕಮಾನು ಕಟ್ಟಿದ ಕಾಮನಬಿಲ್ಲು!


 


ವಿಶಾಲ ಕಣಿವೆ ತುಂಬಿದ ಜಲರಾಶಿ, ಎರಡೂ ಕಡೆ ನೀರಿನಿಂದ ಲಂಬವಾಗಿ ಮೇಲೆದ್ದು ಆಗಸ ಸೀಳುವಂತೆ ಕಾಣುವ ನಾಲ್ಕೈದು ಸಾವಿರ ಅಡಿ ಎತ್ತರದ ಪರ್ವತಗಳು. ಹೆಬ್ಬಂಡೆಗಳನ್ನೂ, ಅದರ ನಡುವೆ ಸುರಿಯುತ್ತಿರುವ ಜಲಪಾತಗಳನ್ನೂ, ನೆತ್ತಿ ಮೇಲೇ ಹಾದು ಹೋಗುವ ಹಿಂಜಿದ ಹತ್ತಿಯಂತಹ ಬಿಳಿ ಮೋಡಗಳನ್ನೂ ನೋಡುತ್ತ ಸಾಗಿದೆವು. ಒಂದು ಭಾರೀ ಜಲಪಾತ ದೂರದಿಂದ ಕಾಣಿಸತೊಡಗಿತು, ಕೇಳಿಸತೊಡಗಿತು. ಅದು ಸ್ಟರ್ಲಿಂಗ್ ಜಲಪಾತ. ಹತ್ತಿರ ಹೋಗುತ್ತ ಹೋಗುತ್ತ ಅರೆರೆ! ಜಲಪಾತದ ನೀರಿನಡಿಯೇ ನಮ್ಮ ಬೋಟು ಹೀಗೆ ಹೋಗಿ ಹಾಗೆ ಹೊರಬಂತು!! ಕೆಲವರು ಒದ್ದೆಯಾಗಲೆಂದು ಕೊರೆವ ನೀರ ಧಾರೆಯಡಿ ನಿಂತು ಕೇಕೆ ಹಾಕಿದರು. ನಾವು ಒಳಗೆ ನಿಂತರೂ ಎರಚುವ ಹನಿಗಳು ತೋಯಿಸಿ ಗದಗುಡಿಸಿದವು. ರುದ್ರರಮಣೀಯತೆಯನ್ನು ಅನುಭವಿಸುವ ಚಪ್ಪಾಳೆ, ನಗು, ಕೂಗು, ಹಾಡು, ನರ್ತನ ದೋಣಿಯನ್ನು ತುಂಬಿಕೊಂಡಿತು.


 


ಒಂದಷ್ಟು ದೂರ ಹೋಗುವುದರಲ್ಲಿ ಅಗೋ ಅಲ್ಲಿ ದೂರದಲ್ಲಿ ಎವರೆಸ್ಟಿನಂತೆ ಕಾಣಿಸುವ ಹಿಮಾವೃತ ಭಾರೀ ಶಿಖರ ಕಣ್ಮುಂದೆ ಬಂತು. ಅದು ಮಿತ್ರೆ ಶಿಖರ. ೧೬೯೨ ಮೀಟರ್ ಎತ್ತರವಿದೆ. ಹಿಂಜಿದ ಮೋಡಗಳು ಶಿಖರದ ಸುತ್ತ ಕಣ್ಣುಮುಚ್ಚಾಲೆಯಾಡುತ್ತಿದ್ದವು. ‘ವಾವ್, ‘ಗ್ರೇಟ್, ‘ಕಾಂಟ್ ಬಿಲೀವ್, ‘ಇನ್‌ಕ್ರೆಡಿಬಲ್, ‘ಅಯ್ಯಬ್ಬಾಗಳ ನಡುವೆ ದೋಣಿ ಚಲಿಸತೊಡಗಿತ್ತು. ಎಲ್ಲರ ಕ್ಯಾಮೆರಾಗಳೂ ಪುರುಸೊತ್ತಿಲ್ಲದೆ ಕಂಡ ದೃಶ್ಯವನ್ನು ಚಿತ್ರವಾಗಿ ಒಳಗಿಳಿಸಿಕೊಳ್ಳಲು ಹೆಣಗುತ್ತಿದ್ದವು. ಅಷ್ಟು ದೂರ ಹೋಗುತ್ತಿದ್ದಂತೆ ಬಂಡೆಗಳ ಮೇಲೆ ಮೈ ಒಣಗಿಸಿಕೊಳ್ಳುತ್ತ ಮಲಗಿದ್ದ ಸೀಲ್‌ಗಳು ಕಂಡವು. ಒಂದು ಡಾಲ್ಫಿನ್ ಹಾರಿ ಎಲ್ಲರನ್ನು ರೋಮಾಂಚನಗೊಳಿಸಿ ಮರೆಯಾಯಿತು. ಮತ್ತೆ ಕಾದದ್ದೇ ಬಂತು, ಮೇಲೆ ಬರಲಿಲ್ಲ. ಅಲ್ಲಿಯ ಬಂಡೆಗಳ ಕಂಡು ಒಬ್ಬರು, ‘ಮಾವೊರಿಗಳು ಆಭರಣವಾಗಿ ಧರಿಸುವ ಪೌನಾಮು ಎಂಬ ಹಸಿರು ಮಣಿಯ ಕಲ್ಲುಗಳು ಈ ಬಂಡೆಗಳೇ ಅಂತೆ. ಇವು ಜೇಡ್ ಬಂಡೆಗಳೇ ಇರಬಹುದು ಎಂಬ ಭಾರೀ ಊಹೆಯನ್ನು ಹರಿಯಬಿಡುತ್ತಿದ್ದರು.

 


ಹೇಗೆ ಕಳೆಯಿತೋ ಕಾಲ! ಬೋಟ್ ರೈಡ್ ಮುಗಿದು ಹೋಯಿತು. ಎಷ್ಟು ಸಾಧ್ಯವೋ ಅಷ್ಟನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತ, ಚಣವೂ ವ್ಯರ್ಥವಾಗದಂತೆ ನೋಡಿದೆವು. ಮತ್ತೆಂದಾದರೂ ಈ ಚೆಲುವ ನಾಡಿಗೆ, ಶಾಂತಿ ಸೂಸುವ ಬೀಡಿಗೆ ಬರುವೆವೋ ಇಲ್ಲವೋ ಎಂಬ ಸಂಕಟದ ಮುಳ್ಳು ಆಡುತ್ತಿರಲು ಹಿಂತಿರುಗಿ ಹೊರಟೆವು.

ಎಲ್ಲವನ್ನು ಎಷ್ಟು ತುಂಬಿಕೊಂಡಿದ್ದೆವೆಂದರೆ ಹಿಂತಿರುಗಿ ಬರುವಾಗ ನಮ್ಮ ವಾಹನದೊಳಗೆ ಗಾಢ ನಿಶ್ಶಬ್ದ ಆವರಿಸಿತು. ಕಂಡದ್ದನ್ನು ಅರಗಿಸಿಕೊಳ್ಳಲು ಯತ್ನಿಸುತ್ತ ಸೀಟಿಗೊರಗಿ ಹೊರಗೆ ದಿಟ್ಟಿಸುತ್ತ ಪ್ರಶಾಂತವಾಗಿ ಕುಳಿತಿದ್ದೆವು. ನಮ್ಮ ಮಾರ್ಗದರ್ಶಿಯೂ ಮೌನಕ್ಕೆ ಜಾರಿದ್ದರು.

 ಈಗಲೂ ಕಣ್ಣುಮುಚ್ಚಿ ನೆನೆದರೆ, ಪಿಯೊಪಿಯೊತಾಹಿ ಧುತ್ತನೆ ಎದುರು ಬಂದು ಆಹ್ಲಾದ ಸೃಷ್ಟಿಸುತ್ತದೆ. ಆ ತಾಣದ ಚೆಲುವು, ಗಾಂಭೀರ್ಯ, ರಮಣೀಯತೆ, ಪ್ರಶಾಂತತೆಯ ತರಂಗಗಳು ಇವತ್ತಿಗೂ ನಮ್ಮೆದೆಗಳನ್ನು ಮೀಟುತ್ತಲೇ ಇವೆ.

 ಧನ್ಯರಾದೆವು ಹೇ ಬುವಿಯೇ, ಧನ್ಯವಾದ ನಿನಗೆ.


 


ಡಾ. ಎಚ್. ಎಸ್. ಅನುಪಮಾ


(ಸುಧಾ, ಸೆ. ೨೫, ೨೦೨೫ ಸಂಚಿಕೆ)

Thursday, 3 July 2025

ವೈಟಮೊ: ಬೆಳಕಿನ ಹುಳಗಳ ವಿಸ್ಮಯ ಲೋಕ






ಅಯೊಟೆಅರೊವಾ ನ್ಯೂ ಜಿಲ್ಯಾಂಡಿಯಾ ಆದದ್ದು 

 ಅಂಥ ಕೆಲವು ತಾಣಗಳಿರುತ್ತವೆ, ನೆನಪಿನ ಬಾವಿಯಿಂದ ಸಜೀವವಾಗಿ ಎದ್ದು ಬಂದು ನೆನೆದಾಗಲೆಲ್ಲ ಅಲ್ಲಿ ಹೋಗಿ ನಿಂತು ನೋಡುತ್ತಿರುವ ಭಾವ ಹುಟ್ಟಿಸಿಬಿಡುತ್ತವೆ. ನ್ಯೂಜಿಲೆಂಡ್ ಎಂಬ ದ್ವೀಪ ದೇಶಕ್ಕೆ ಹೋಗಿ ಬಂದು ಕೆಲಕಾಲವಾಗಿದೆ. ಆದರೆ ಅಲ್ಲಿಯ ವೈಟಮೊ ಗುಹೆಗಳು ಮತ್ತು ಮಿಲ್‌ಫೋರ್ಡ್ ಸೌಂಡ್ ಇವತ್ತಿಗೂ ನೆನಪಿನಲ್ಲಿ ಸಜೀವವಾಗಿವೆ. 

 ಉತ್ತರ ದ್ವೀಪ ಮತ್ತು ದಕ್ಷಿಣ ದ್ವೀಪ ಎಂಬ ಎರಡು ದೊಡ್ಡ ದ್ವೀಪಗಳು ಹಾಗೂ ಆರುನೂರು ಸಣ್ಣಪುಟ್ಟ ದ್ವೀಪಗಳು ಸೇರಿ ಆದ ದೇಶ ನ್ಯೂಜಿಲ್ಯಾಂಡ್. ಸ್ಥಳೀಯ ಮೂಲನಿವಾಸಿ ಮಾವೋರಿಗಳ ಭಾಷೆಯಲ್ಲಿ ಅದು ಅಯೊಟೆಅರೊವಾ. ವೈಟಮೊ ಎನ್ನುವುದು ನ್ಯೂಜಿಲೆಂಡ್ ದೇಶದ ಉತ್ತರ ದ್ವೀಪದಲ್ಲಿರುವ ಒಂದು ಸಣ್ಣ ಊರು. ವಾಣಿಜ್ಯ ನಗರಿ ಆಕ್ಲೆಂಡಿನಿಂದ ದಕ್ಷಿಣಕ್ಕೆ ಎರಡು ತಾಸು ಚಲಿಸಿದರೆ ವೈಟಮೊ ಸಿಗುತ್ತದೆ. ಆ ಊರು ತಲುಪುವ ದಾರಿಯೇ ನಯನ ಮನೋಹರ ಭೂದೃಶ್ಯಗಳಿಂದ ತುಂಬಿ ಮನಸೂರೆಗೊಳ್ಳುವಂತಿದೆ. ಪೋಸ್ಟರುಗಳಲ್ಲಿ ನೋಡುವ ರಮ್ಯ ಪ್ರಕೃತಿಯ ಚಿತ್ರಗಳೇ ಮೈವೆತ್ತು ಎದುರಿರುವಂತೆ ಕಾಣಿಸುತ್ತವೆ. ನ್ಯೂಜಿಲೆಂಡಿನ ಹಳ್ಳಿಗಾಡಿನ ಚೆಲುವು, ಶಿಸ್ತು, ಅಚ್ಚುಕಟ್ಟು, ಶುಭ್ರ ಪರಿಸರ, ಹಸಿರು ಮನದುಂಬುತ್ತವೆ. ಹಿಮಾಚ್ಛಾದಿತ ಗುಡ್ಡಬೆಟ್ಟಗಳು, ಹಚ್ಚಹಸಿರು ಹೊದ್ದ ದಿಬ್ಬಗಳು, ಸ್ವಚ್ಛ ಊರುಗಳು, ಶುಭ್ರ ನೀರಿನ ತೊರೆಗಳು, ಸರೋವರಗಳು, ಹಸಿರಿರುವಲ್ಲೆಲ್ಲ ನೆಲ ನೋಡುತ್ತ ಮೇಯುವ ದನ, ಕುರಿ, ಕುದುರೆಗಳ ಹಿಂಡು, ಬೆಟ್ಟದ ಇಳಿಜಾರ ಸೆರಗಿನಲ್ಲಿ ಅಲ್ಲೊಂದು ಇಲ್ಲೊಂದು ಮರದ ಹಲಗೆಯ ಬೇಲಿಯೊಳಗೆ ರೈತರ ಸರಳ ಸುಂದರ ವರ್ಣರಂಜಿತ ಮನೆಗಳು, ಹೂಗಿಡ ಬಳ್ಳಿಗಳು ಪ್ರಕೃತಿಯ ಮಡಿಲಲ್ಲಿರುವ ನಿಜ ಭಾವವನ್ನುಕ್ಕಿಸುತ್ತವೆ. 

 ಸರಿಸುಮಾರು ಐವತ್ತು ಕೋಟಿ ವರ್ಷ ಕೆಳಗೆ ಪೆಸಿಫಿಕ್ ಕಡಲ ತಳದ ಜ್ವಾಲಾಮುಖಿ ಚಟುವಟಿಕೆಯಿಂದ ರೂಪುಗೊಂಡ ದೇಶ ನ್ಯೂಜಿಲೆಂಡ್. ಐವತ್ತು ಕೋಟಿ ವರ್ಷಗಳಿಂದೀಚೆಗೆ ಕಡಲಾಳದ ಭೂ ಹಲಗೆಗಳ ಚಲನೆ ಮತ್ತು ಜ್ವಾಲಾಮುಖಿ ಚಟುವಟಿಕೆಯಿಂದ ಜೀಲಾಂಡಿಯ ಭೂಭಾಗವು ಸಮುದ್ರದಿಂದ ಮೇಲೆದ್ದು ಕೊನೆಗೆ ನ್ಯೂ ಜಿಲ್ಯಾಂಡಿಯಾ ದೇಶವಾಗಿ ರೂಪುಗೊಂಡಿತು. ಅದು ನಾಗರಿಕಗೊಂಡ ಮನುಷ್ಯರು ವಾಸ ಮಾಡಲು ಹುಡುಕಿಕೊಂಡ ಕೊನೆಯ ನೆಲ-ನೆಲೆ ಎನ್ನಬಹುದು. ಉಳಿದ ಭೂಖಂಡಗಳಿಗಿಂದ ದೂರವಾಗಿದ್ದದ್ದರಿಂದಲೋ ಏನೋ ಮನುಷ್ಯ ಇತಿಹಾಸ ಆ ಖಂಡದ ಮಟ್ಟಿಗೆ ಇತ್ತೀಚಿನದು. 

 ಅಲ್ಲಿಗೆ ಮೊದಲು ಹೋದವರು ಆಗ್ನೇಯ ಏಷ್ಯಾದ ಪಾಲಿನೇಷಿಯನ್ ಕುಲದವರು. ಕ್ರಿ. ಶ. ೧೨ನೇ ಶತಮಾನದಲ್ಲಿ ಕುಪೆ ಎಂಬ ಅವರ ಪೌರಾಣಿಕ-ಐತಿಹಾಸಿಕ ನಾಯಕನು ಹಾವೈಕಿ ದ್ವೀಪದಿಂದ ಭಾರೀ ಆಕ್ಟೋಪಸ್ ಅನ್ನು ಹುಡುಕಿ ನಾಶ ಮಾಡಲು ಸಮುದ್ರ ಮಾರ್ಗದಲ್ಲಿ ಚಲಿಸಿ ಇವತ್ತಿನ ನ್ಯೂಜಿಲ್ಯಾಂಡಿಗೆ ಬಂದನಂತೆ. ಅನಂತರ ಸುತ್ತಮುತ್ತಲ ದ್ವೀಪಗಳಲ್ಲಿದ್ದ ಪಾಲಿನೇಷಿಯನ್ನರು ದಶಕಗಳ ಕಾಲ ವಲಸೆ ನಡೆಸಿ ಅಲ್ಲಿಲ್ಲಿ ನೆಲೆಯಾದರು. ವಿವಿಧ ಹಂತದಲ್ಲಿ ವಲಸೆ ಬಂದವರು ಭಿನ್ನ ಒಳಗುಂಪುಗಳ ಸೃಷ್ಟಿಗೆ ಕಾರಣರಾದರು. ಮೂರ್ನಾಲ್ಕು ಶತಮಾನಗಳ ಬಳಿಕ ೧೬೪೨ರಲ್ಲಿ ಡಚ್ ಸಂಶೋಧಕ ಏಬೆಲ್ ಟಾಸ್ಮನ್ ಸಮುದ್ರಯಾನ ಮಾಡುತ್ತ ಈ ದ್ವೀಪಗಳ ಇರವು ಪತ್ತೆ ಹಚ್ಚಿದ. ನಂತರ ೧೭೬೮ರಲ್ಲಿ ಬ್ರಿಟನ್ನಿನ ಅನ್ವೇಷಕ ಕ್ಯಾಪ್ಟನ್ ಜೇಮ್ಸ್ ಕುಕ್ ಆ ನೆಲದಲ್ಲಿಳಿದು, ಕೆಲಕಾಲ ನಿಂತು, ಸಮುದ್ರದ ದಂಡೆಗುಂಟ ಚಲಿಸಿ ದ್ವೀಪಗಳ ಭೂಪಟ ತಯಾರಿಸಿದ. ಯೂರೋಪಿಯನ್ನರ ಬಂದುಹೋಗುವಿಕೆ ಮುಂದುವರೆದು ವ್ಯಾಪಾರ, ವ್ಯವಹಾರ ಏರುಗತಿಯಲ್ಲಿ ಬೆಳೆಯಿತು. ಒಳಿತು ಮತ್ತು ಕೇಡುಗಳು ಜೊತೆಜೊತೆಯಾಗಿ ಬಂದವು. ಹೊರಗಿನಿಂದ ಬಂದ ಆಲೂಗೆಡ್ಡೆ ಬಲು ಜನಪ್ರಿಯವಾಯಿತು. ವಿಪುಲವಾಗಿ ಬೆಳೆದು ಆಹಾರ ಸಮೃದ್ಧಿ ತಂದಿತು. ಮತ್ತೊಂದೆಡೆ ಯೂರೋಪಿಯನ್ ವ್ಯಾಪಾರಿಗಳು ಪೂರೈಸಿದ ಬಂದೂಕುಗಳು (ಮಸ್ಕೆಟ್) ಕೇವಲ ೪೦ ವರ್ಷಗಳಲ್ಲಿ (೧೮೦೦-೧೮೪೦) ಸಾವಿರಾರು ಅಂತರ್ಯುದ್ಧಗಳಿಗೆ ಕಾರಣವಾಗಿ ಮೂವತ್ತರಿಂದ ನಲವತ್ತು ಸಾವಿರ ಮಾವೊರಿಗಳು ಹತರಾಗಲು ಕಾರಣವಾಯಿತು. ೧೮೪೦ರಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಯು ಸ್ಥಳೀಯ ಮಾವೋರಿ ನಾಯಕನೊಡನೆ ವೈತಂಗಿ ಒಪ್ಪಂದ ಮಾಡಿಕೊಂಡಿತು. ಮರುವರ್ಷವೇ ನ್ಯೂಜಿಲ್ಯಾಂಡ್ ತನ್ನ ವಸಾಹತುವೆಂದು ಬ್ರಿಟನ್ ಘೋಷಿಸಿತು. ಇವತ್ತಿಗೂ ಅಲ್ಲಿನ ಮೂಲನಿವಾಸಿಗಳಿಗೂ, ಈ ಎರಡು ಶತಮಾನಗಳಲ್ಲಿ ವಲಸೆ ಹೋಗಿ ನೆಲೆಯಾಗಿ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿರುವ ಯೂರೋಪಿಯನ್ನರಿಗೂ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ತಮ್ಮ ನೆಲದಲ್ಲೇ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಬಹುಸಂಖ್ಯಾತ ಯೂರೋಪಿಯನ್ ಮೂಲದ ನ್ಯೂಜಿಲ್ಯಾಂಡಿಗರು ಈಗಲೂ ಬ್ರಿಟನ್ನಿನ ರಾಜರಾಣಿಯರನ್ನು ತಮ್ಮ ಪರಮೋಚ್ಛ ಆಳ್ವಿಕರೆಂದೇ ಭಾವಿಸಿದ್ದಾರೆ. 

 ವೈಟಮೊ ಗುಹಾಲೋಕ 

 ನೆಲದ ಮೇಲಣ ಎಲ್ಲ ಸಂಘರ್ಷಗಳ ಸಾಕ್ಷಿಯಾಗಿ ಅಲ್ಲಿನ ರಮ್ಯ ಪ್ರಕೃತಿಯಿದೆ. ಮೂರು ಕೋಟಿ ವರುಷ ಕೆಳಗೆ ರೂಪುಗೊಂಡ ವೈಟಮೊ ಗುಹೆಗಳ ಅಧಿಪತ್ಯಕ್ಕೂ ಮಾವೊರಿಗಳು ಮತ್ತು ಬ್ರಿಟಿಷರ ನಡುವೆ ದೀರ್ಘ ಸಂಘರ್ಷ ನಡೆದ ಚರಿತ್ರೆಯಿದೆ.

 ಗುಹೆಗಳನ್ನು ನೋಡಲೆಂದು ನಾವು ಆಕ್ಲೆಂಡಿನಿಂದ ಹೊರಟೆವು. ಭಾರೀ ಟೂರಿಸ್ಟ್ ಬಸ್ಸುಗಳಲ್ಲಿ ನಮ್ಮನ್ನು ತುಂಬಿಕೊಂಡು ಮೂರು ತಾಸು ಪಯಣದ ಬಳಿಕ ಒಂದು ಪುಟ್ಟ ಗುಡ್ಡದ ಸೆರಗಿನಲ್ಲಿ ಇಳಿಸಿದರು. ಏಪ್ರಿಲ್ ತಿಂಗಳ ನಡುಹಗಲಾದರೇನು, ಸ್ವೆಟರು ಧರಿಸಿದ್ದೆವು. ಅಷ್ಟು ತಂಪುಹವೆಯ ಪ್ರದೇಶ ಅದು. ಎತ್ತರದ ಮರಗಳಿಂದಾವೃತವಾದ ಪುಟ್ಟ ಗುಡ್ಡ. ಮರ ನೋಡಲು ಕತ್ತೆತ್ತಿದರೆ ನೀಲ ನಿರಭ್ರ ಆಗಸ. ನೆಲ ಮುಗಿಲ ಬೆರಗಿನಲ್ಲಿ ಮುಳುಗಿಹೋಗಿದ್ದ ನಮಗೆ ಗುಡ್ಡದ ಅಡಿ ಎಂತಹ ಅದ್ಭುತ ಇದೆಯೆನ್ನುವುದು ಒಳಹೊಗುವ ತನಕ ಊಹೆಗೆ ದಕ್ಕಿರಲಿಲ್ಲ. 

 ಆ ಪ್ರದೇಶದ ಮೂಲನಿವಾಸಿಗಳಾದ ಮಾವೋರಿ ಸಮುದಾಯದ ಒಂದು ಕುಟುಂಬದ ಸುಪರ್ದಿನಲ್ಲಿ ಭಾಗಶಃ ಇರುವ ವೈಟಮೊ ಗುಹೆಯ ಬಾಯಿಯ ತನಕ ನಡೆದು ಹೋದೆವು. ಅಲ್ಲಿ ಫುಟ್ಬಾಲ್ ತಾರೆ ಡಿಯಗೊ ಮರಡೋನಾನ ತಮ್ಮನಂತೆ ಕಾಣುವ ವ್ಯಕ್ತಿ ಕೈಯಲ್ಲಿ ಬ್ಯಾಟರಿ ಹಿಡಿದು ಎದುರಾದ. ತನ್ನ ಹಿಂದೆ ನಾವು ಬರಬೇಕು ಎಂದ. ಅವನ ಕಂಚಿನ ಕಂಠ, ಸ್ಪಷ್ಟ ಉಚ್ಛಾರ, ಚಟುವಟಿಕೆಯಲ್ಲಿ ಚಲಿಸುವ ಆನೆಯಂತಹ ದೇಹವನ್ನು ಗಮನಿಸುತ್ತ ವಿವರಗಳ ಕೇಳುತ್ತ ನಡೆದೆವು. ಮುಟ್ಟುವುದು, ಮಾತನಾಡುವುದು, ಫೋಟೋ/ವೀಡಿಯೋ ತೆಗೆಯುವುದು ಮತ್ತು ಧೂಮಪಾನ - ಇವು ಸಂಪೂರ್ಣ ನಿಷಿದ್ಧ ಎಂದು ಪದೇಪದೇ ಹೇಳಿದ. ಮೂರು ಹಂತಗಳಲ್ಲಿರುವ ಒಂದೂವರೆ ಕಿಲೋಮೀಟರಿನಷ್ಟು ದೂರದ ಗುಹೆಯನ್ನು ಕ್ರಮಿಸತೊಡಗಿದೆವು. 



 ವೈ ಎಂದರೆ ನೀರು, ಟಮೊ ಎಂದರೆ ತೂತು. ವೈಟಮೊ ಎಂದರೆ ಜಲದ ಕಂಡಿ. ಅಲ್ಲಿ ವಾಸಿಸುತ್ತಿದ್ದ ಮಾವೊರಿ ಜನರಿಗೆ ಗುಹೆಗಳ ಇರುವಿಕೆಯ ಬಗೆಗೆ ಮೊದಲಿನಿಂದ ಗೊತ್ತಿತ್ತು. ಆದರೆ ಒಳಹೊಕ್ಕಿರಲಿಲ್ಲ. ನ್ಯೂಜಿಲೆಂಡನ್ನು ವಸಾಹತುವನ್ನಾಗಿಸಿಕೊಂಡಿದ್ದ ಬ್ರಿಟಿಷ್ ಅರಸೊತ್ತಿಗೆಯ ಅಧಿಕಾರಿಗಳು ಆ ಪ್ರದೇಶವನ್ನು ಸರ್ವೇ ಮಾಡಲು ೧೮೮೩ರಲ್ಲಿ ಬಂದಾಗ ಸ್ಥಳೀಯ ಮಾವೋರಿ ಕುಲದ ನಾಯಕ ಟಾನೆ ಟಿನೊರಾವು ಮತ್ತು ಅವನ ಪತ್ನಿ ಹುಟಿ ತಮ್ಮ ಒಡೆತನದ ಜಾಗದಲ್ಲಿ ವೈಟಮೊ ನದಿ ಹರಿವಿನ ಪಾತ್ರದಲ್ಲಿ ಇರುವ ಗುಹೆಗಳ ಬಗೆಗೆ ತಿಳಿಸಿದರು. ಗುಹೆಯ ಒಳಹೊಕ್ಕ ಬ್ರಿಟಿಷ್ ಅಧಿಕಾರಿಗಳು ಅಚ್ಚರಿಗೊಂಡು ನಿಂತುಬಿಟ್ಟರು. ಯಾವ ಶಿಲ್ಪಿ ಕಡೆದು ನಿಲ್ಲಿಸಿದ ಶಿಲ್ಪಗಳೋ ಎನ್ನುವಂತೆ ವಿಸ್ಮಯಕರ ಸುಣ್ಣಕಲ್ಲಿನ ರಚನೆಗಳು ಅಲ್ಲಿದ್ದವು. ಒಂದು ಗುಹಾಭಾಗದ ಸೂರಂತೂ ಪುಟ್ಟ ಹಣತೆಗಳಿಂದ ಕಿಕ್ಕಿರಿದು ತಂತಾನೇ ಬೆಳಗುತ್ತಿತ್ತು! ಮೂಕವಿಸ್ಮಿತರಾದ ಅಧಿಕಾರಿಗಳು ಒಬ್ಬರಾದ ಮೇಲೊಬ್ಬರನ್ನು ಬಂದರು, ಮೋಂಬತ್ತಿ ಬೆಳಕಿನಲ್ಲಿ ವಿಸ್ತೃತವಾಗಿ ಶೋಧಿಸಿ ವರದಿ ಸಲ್ಲಿಸಿದರು. 

ಗುಹೆಗಳ ಪ್ರಾಮುಖ್ಯತೆ ಅರಿತ ಟಾನೆ ಮತ್ತು ಹುಟಿ ೧೮೮೯ರಿಂದ ತಂಡತಂಡವಾಗಿ ಗುಹೆಗೆ ಪ್ರವಾಸಿಗಳನ್ನು ಕರೆತಂದು ತೋರಿಸತೊಡಗಿದರು. ರೈಲು ರಸ್ತೆ ನಿರ್ಮಾಣವಾಯಿತು. ಇದುವರೆಗೆ ನಿರ್ಜನವಾಗಿದ್ದ ಗುಹೆಗಳಿಗೆ ವರ್ಷಕ್ಕೆ ಐದುನೂರು ಜನ ಭೇಟಿ ನೀಡತೊಡಗಿದರು. ಬಂದವರು ಸುಮ್ಮನೆ ಹೋಗಲಿಲ್ಲ, ಗೋಡೆಗಳ ಮೇಲೆ ತಮ್ಮ ಹೆಸರು, ಸಂದೇಶ ಕೆತ್ತಿದರು. ೧೯೦೫ರಲ್ಲಿ ಗುಹೆಯ ಗೋಡೆಗಳ ಮೇಲೆ ಭಿತ್ತಿ ಬರಹ ನಡೆಸಿದ್ದನ್ನು ಗಮನಿಸಿದ ಅಧಿಕಾರಿಗಳು ಆ ನೆಪ ಹೂಡಿ ೬೨೫ ಪೌಂಡುಗಳಿಗೆ ಗುಹೆಗಳನ್ನು ಸರ್ಕಾರದ ಸುಪರ್ದಿಗೆ ಪಡೆದರು. ಗುಹೆಗಳ ಸ್ವಾಮ್ಯದ ಬಗೆಗೆ ಸಾಕಷ್ಟು ಸಂಘರ್ಷ ನಡೆಯಿತು. ನಂತರ ಒಬ್ಬರಾದ ಮೇಲೊಬ್ಬರ ಕೈಗೆ ಚಲಿಸಿದ ಗುಹೆಯು ೧೯೮೯ರಿಂದ ಟಾನೆ-ಹುಟಿ ದಂಪತಿಗಳ ವಂಶಸ್ಥರ ಭಾಗಶಃ ಸುಪರ್ದಿಗೆ ಬಂದಿತು. ಅವರೀಗ ಪ್ರವಾಸಿಗಳನ್ನು ಒಳಗೊಯ್ದು ವಿವರಿಸಿ, ತೋರಿಸಿ, ಕರೆತರುವುದಲ್ಲದೆ ಭೇಟಿ ಮಾಡುವವರಿಂದ ಬರುವ ಹಣದಲ್ಲಿ ಪಾಲು ಪಡೆಯುತ್ತಾರೆ. ಗುಹೆಗಳ ಅಭಿವೃದ್ಧಿ-ನಿರ್ವಹಣೆಯ ಪಾಲುದಾರರೂ ಆಗಿದ್ದಾರೆ. 

 ನಮ್ಮ ಜೊತೆ ಬಂದ ‘ಮರಡೋನಾ’ ಟಾನೆ-ಹುಟಿ ವಂಶಸ್ಥನಂತೆ! ಗುಹೆಗಳ ಉಷ್ಣತೆ, ಕಲ್ಲುಗಳ-ನೀರಿನ ಉಷ್ಣತೆ, ಕಾರ್ಬನ್ ಡೈ ಆಕ್ಸೈಡ್ ಮಟ್ಟ, ತೇವಾಂಶ ಎಲ್ಲವನ್ನು ಕಾಲಕಾಲಕ್ಕೆ ಅಳೆಯುವ ತಜ್ಞರ ಸಮಿತಿಯಲ್ಲೂ ಅವನಿರುವನಂತೆ. 

 ಅವನ ಹಿಂದೆ ತಲೆತಗ್ಗಿಸಿ ನಡೆಯುತ್ತ ಗುಹೆಯ ಮೊದಲ ಹಂತ ಪ್ರವೇಶಿಸಿದೆವು. ಗುಹೆಗಳು ಮೊದಲು ಕಡಲಾಳದಲ್ಲಿದ್ದದ್ದಕ್ಕೆ ಸಾಕ್ಷಿಯಾಗಿ ಕಪ್ಪೆಚಿಪ್ಪು, ಹವಳ ಜೀವಿ, ಮೀನಿನ ಮೂಳೆ ಮೊದಲಾದ ಕಡಲಜೀವಿಗಳ ಪಳೆಯುಳಿಕೆಗಳು ಗೋಡೆ, ಸೂರಿನ ಮೇಲೆ ಕಂಡವು. ಅಲ್ಲಿ ಅಂತಹ ಮುನ್ನೂರು ಗುಹೆಗಳಿವೆ ಎಂದವನು ಸಾದ್ಯಂತ ವಿವರಿಸುವಾಗ ಅವನ ದನಿಯಲ್ಲಿ ಎಷ್ಟು ನೈಪುಣ್ಯ, ಖಚಿತತೆ ಇತ್ತು ಎಂದರೆ ಅದು ರೂಪುಗೊಂಡದ್ದ ಅವ ಕಂಡಿರುವನೇನೋ ಎನಿಸಿತು. 






 ಗುಹೆಯ ನಾನಾಭಾಗಗಳಿಗೆ ಚರ್ಚಿನ ಹೆಸರುಗಳನ್ನು ಇಟ್ಟಿದ್ದಾರೆ. ಮೊದಲು ಕೆಟಕೋಂಬ್ ನೋಡಿದೆವು. ಆನಂತರ ಬಾಂಕ್ವೆಟ್ ಚೇಂಬರ್ ಪ್ರವೇಶಿಸಿದೆವು. ಮೇಲಿನಿಂದ ಕೆಳಗೆ ತೊಟ್ಟಿಕ್ಕುವ ನೀರಿನ ಗುಂಟ ಸುಣ್ಣಕಲ್ಲಿನ ಕಂಬಕೋಲು ರೂಪುಗೊಂಡಿವೆ. ಮೇಲಿನಿಂದ ಬಿಳಲಿನಂತೆ ಇಳಿವ, ಕೆಳಗಿನಿಂತ ಹುತ್ತದಂತೆ ಮೇಲೆ ಹೋಗಿರುವ ರಚನೆಗಳು ಒಂದನ್ನೊಂದು ಸಂಧಿಸಿ ಕೆಲವೆಡೆ ಬೃಹತ್ ಸ್ಥಂಭ ರೂಪುಗೊಂಡಿದೆ. ಅದು ಕ್ಯಾಥೆಡ್ರಲ್. ಅಲ್ಲಿ ೧೬ ಮೀ ಎತ್ತರದ ಒಂದು ಸ್ಥಂಭವಿದೆ! ಆ ಭಾಗವು ಉತ್ತಮ ಪ್ರತಿಧ್ವನಿ ಸಾಮರ್ಥ್ಯವನ್ನು ಹೊಂದಿದೆ. ಕ್ಯಾರಲ್ ಹಾಡಬಹುದು ಎಂದು ಮರಡೋನಾ ಸೂಚಿಸಿದ. ಹಲವು ಖ್ಯಾತನಾಮರು ಅಲ್ಲಿ ಹಾಡಿ ಹೋಗಿದ್ದಾರೆಂದ. ನಮ್ಮ ಗುಂಪಿನ ಕೆಲವರು ಒಗ್ಗೂಡಿ ಕ್ಯಾರಲ್ ಹಾಡಿದರು. ನನ್ನ ನೆಚ್ಚಿನ ಕವಿ ಮೂಡ್ನಾಕೂಡು ಅವರ ಹಾಡು ಹಾಡಲು ಹೋದೆ. ಜೊತೆಗೂಡುವವರಿಲ್ಲದೆ ಪ್ರತಿಧ್ವನಿ ಕೇಳಿಬರಲಿಲ್ಲ. 

 ಈ ಗುಹೆ, ಅದರ ಪ್ರತಿ ರಚನೆ ಈಗಲೂ ಬೆಳೆಯುತ್ತಿವೆಯಂತೆ. ಒಂದು ಚದರ ಸೆಂಟಿಮೀಟರ್ ಬೆಳೆಯಲು ಸುಣ್ಣಕಲ್ಲಿಗೆ ೧೦೦ ವರ್ಷ ಬೇಕಂತೆ! ಎಂದರೆ ಹುಲುಮಾನವರಾದ ನಾವು ಸುಣ್ಣಕಲ್ಲಿನ ಲೆಕ್ಕದಲ್ಲಿ ಒಂದು ಸೆಂಟಿಮೀಟರ್ ಕೂಡ ಬೆಳೆಯಲಾರದ ಕುಬ್ಜರು! ಹಾಗಿರುತ್ತ ಹದಿನಾರು ಮೀಟರ್ ಎತ್ತರದ ಸ್ತಂಭ, ಇಷ್ಟೊಂದು ಸುಂದರ ಕಲಾಕೃತಿಗಳು ರೂಪುಗೊಂಡಿರುವ ಮೂರು ಕೋಟಿ ವರ್ಷಗಳ ದೀರ್ಘ ಕಾಲಮಾನ! ಅದನ್ನು ಬೆಳಗುವ ಬರಿಯ ಹನ್ನೊಂದು ತಿಂಗಳ ಆಯಸ್ಸಿನ ಬೆಳಕಿನ ಹುಳ! 

 ಮೂಕವಾಗಿದೆ ಕಾಲವಿಲ್ಲಿ!! 

 ಬೆಳಕಿನ ಬೀಜಗಳು ನಾವು, ನಮಗೆಲ್ಲಿಯ ಸಾವು? 

 ಮೆಟ್ಟಿಲಿಳಿದು ಇಳಿದು ಮುಂದೆ ಹೋದೆವು. ಏನೇನೂ ಕಾಣದ ಕಗ್ಗತ್ತಲು. ಕಂಬಿ ಹಿಡಿದು ತನ್ನ ಹೆಜ್ಜೆಸದ್ದುಗಳ ಅನುಸರಿಸಿ ಮೆಲ್ಲ ಹಿಂಬಾಲಿಸುವಂತೆ ಮರಡೋನಾ ಮೊದಲೇ ತಿಳಿಸಿದ್ದ. ಇದು ನಮಗೆ ಸಂಪೂರ್ಣ ಹೊಸ ಅನುಭವ. ಕುರುಡಾಗುವುದು ಎಂದರೇನು ಎಂದು ಒಮ್ಮೆಲೇ ಅರಿವಿಗೆ ಬಂತು. 

 ಕಗ್ಗತ್ತಲು, ನಿಶ್ಶಬ್ದವನ್ನು ಸೀಳಿ ಸಳಸಳ ನೀರು ಸರಿಸುತ್ತ ಮರಡೋನಾ ಮುನ್ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ನಿಂತ ಅವ ಒಮ್ಮೆ ಕ್ಷೀಣ ಬೆಳಕು ಹರಿಸಿದ. ದೂರದಲ್ಲಿ ಒಂದು ದೋಣಿ ನಿಂತಿತ್ತು. ಬ್ಯಾಟರಿ ಬೆಳಕು ಬಿಡುತ್ತ ಆರಿಸುತ್ತ ಒಬ್ಬೊಬ್ಬರನ್ನೇ ಅದರಲ್ಲಿ ಕೂರಿಸಿದ. ತನ್ನ ತಲೆ ಮೇಲಿದ್ದ ಹಗ್ಗ ಹಿಡಿದು ನಿಂತು ಕಾಲೊತ್ತುತ್ತ ಸಮತೋಲ ಮಾಡುತ್ತ ನಿಧಾನ ದೋಣಿ ಚಲಾಯಿಸತೊಡಗಿದ. 

ಭೂಮಿಯಾಳದ ಗುಹೆ. ಅಗಾಧ ನಿಶ್ಶಬ್ದ. ಹಕ್ಕಿ ಕೂಗಿಲ್ಲ, ಜೀರುಂಡೆ ದನಿಯಿಲ್ಲ, ಮರ-ಎಲೆಗಳ ಮರ್ಮರವವಿಲ್ಲ, ಗಾಳಿ ಮಳೆಯ ಹುಯ್ಯಲು ಶಬ್ದವೂ ಇಲ್ಲ. ಸಂಪೂರ್ಣ ನಿಶ್ಶಬ್ದ. ನಮ್ಮ ಉಸಿರೂ ಕೇಳುತ್ತಿದೆ ಎನ್ನುವ ಹಾಗೆ. ಟಪ ಟಪ ಟಪ.. ಅಲ್ಲೆಲ್ಲೊ ನೀರು ತೊಟ್ಟಿಕ್ಕುವ ಸದ್ದು ಕೇಳುತ್ತಿದೆ. ಗುರಿಕಾರ ಹಗ್ಗ ಜಗ್ಗುತ್ತ, ಕೂತು, ಎದ್ದು ತನ್ನ ಮೈಯ ಚಲನೆಯಿಂದಲೇ ಸಮತೋಲಗೊಳಿಸುತ್ತ ಹುಟ್ಟಿಲ್ಲದೆ ದೋಣಿ ನಡೆಸುತ್ತಿದ್ದಾನೆ. ಮೇಲೆ, ಕೆಳಗೆ, ಆಚೆ, ಈಚೆ ಎಂಥದೂ ಇಲ್ಲದ ಅಗಾಧ ಕಗ್ಗತ್ತಲು. ಕಣ್ಮುಚ್ಚಬೇಕೆನಿಸಿತು. ಕೆಲವರು ಕತ್ತಲಿಗೆ ಹೊಂದಿಕೊಳ್ಳಲಾಗದೇ ಪಿಸಿಪಿಸಿ ಎನ್ನುತ್ತಿದ್ದರು. 




ಓ! ಮೈ!! ಇದ್ದಕ್ಕಿದ್ದಂತೆ ಆಶ್ಚರ್ಯೋದ್ಗಾರಗಳು ಕೇಳಿ ಬಂದವು. ಕಣ್ಣುಬಿಟ್ಟರೆ ಆಗಸದಲ್ಲಿ ಸಾವಿರಾರು ನಕ್ಷತ್ರಗಳು ಮಿನುಗುತ್ತಿವೆಯೋ ಎಂಬ ಹಾಗೆ ಮೇಲೆ ಬೆಳಕಿನ ಬೀಜಗಳು ಗೋಚರಿಸಿದವು. ಗುಹೆಯೊಳಗೆ ಹೊಳೆಯುತ್ತಿದ್ದ ರತ್ನಮಣಿಗಳ ಕಥೆ ನೆನಪಾಯಿತು. ಅಕ್ಕ, ಅಲ್ಲಮರಿಗೆ ಇಂಥ ಕತ್ತಲ ಗುಹೆಗಳಲ್ಲೆ ಬೆಳಕು ಕಂಡಿದ್ದಲ್ಲವೆ? ಅವೆಷ್ಟು ಎತ್ತರದಲ್ಲಿವೆಯೋ, ನಾವೆಷ್ಟು ಆಳದಲ್ಲಿರುವೆವೋ ಒಂದೂ ಅಂದಾಜಾಗಲಿಲ್ಲ. ಈಗಲೋ ಇನ್ನೊಂದು ಚಣಕ್ಕೋ ತನ್ನ ಬೆಳಕಿಗೆ ಮರುಳಾಗಿ ಬರಲಿರುವ ಬಲಿಗಾಗಿ ರತ್ನದೆಳೆಗಳ ಇಳಿಸಿಕೊಂಡು ಅದರೊಳಗೆ ಅತ್ತಿತ್ತ ಮಿಸುಗುತ್ತ, ಬೆಳಕು ಹೆಚ್ಚು ಕಡಿಮೆ ಮಾಡುತ್ತ ನಿಶ್ಚವಾಗಿದ್ದ ಜ್ಯೋತಿಬಿಂದುಗಳು ಕಾಣಿಸಿದವು. ಸೂರಿನಿಂದ ಇಳಿಬಿದ್ದ ಹೊಳೆವ ಸೇವಿಗೆ ಎಳೆಗಳ ನಡುವೆ ಹೊಳೆಹೊಳೆವ ಬೆಳಕಿನುಂಡೆಗಳು. ನರಮನುಷ್ಯರ ಉಗಮವಾಗುವುದಕ್ಕಿಂತ ಕೋಟ್ಯಂತರ ವರ್ಷಗಳ ಮುಂಚೆಯೇ ಈ ಭೂಮಿ ಮೇಲೆ ಬಂದ ಮೊಟ್ಟೆ-ಲಾರ್ವಾ-ಕೋಶಜೀವಿ-ಕೀಟವೆಂಬ ಜೀವನ ಚಕ್ರದ ಹುಳಗಳನ್ನು ಕತ್ತು ಮೇಲೆತ್ತಿ ಕಣ್ಣು ತಣಿವಷ್ಟು, ಮನ ತಣಿವಷ್ಟು ನೋಡಿದೆವು. ಆರ್ತರಾಗಿ ನೋಡಿದೆವು. ಕಣ್ತುಂಬಿಕೊಂಡೆವು. ಏನನ್ನು ಕಂಡು ಮುದಗೊಳ್ಳುವುದೋ ಮಗು ಅದರೆಡೆಗೆ ಕೈಚಾಚುತ್ತದೆ. ವೈಟಮೊ ಬೆಳಕಿನ ಹುಳಗಳ ಕಂಡಾಗ ನಮ್ಮೊಳಗಿನ ಮಗುತನ ಎಚ್ಚೆತ್ತು ಅವುಗಳತ್ತ ಕೈ ಚಾಚತೊಡಗಿತ್ತು. 

 ಮೆಲ್ಲ ಚಲಿಸುತ್ತಿದ್ದ ನಾವೆಯ ಕತ್ತಲಯಾನ ಕೆಲಸಮಯ ಮುಂದುವರೆಯಿತು. ಕೊನೆಗೆ ಅಗೋ ಅಷ್ಟು ದೂರದಲ್ಲಿ ಗುಹೆಯ ಬಾಯಲ್ಲಿ ಬೆಳಕು ಕಾಣತೊಡಗಿತು. ಕತ್ತಲು ಆಪ್ಯಾಯಮಾನವೆನಿಸಿದ ಕಾರಣ ಅಯ್ಯೋ, ಬೆಳಕು ಬರುವುದೇ ಬೇಡವಾಗಿತ್ತು ಎನಿಸಿದ್ದು ಸಹಜವೇ ಆಗಿತ್ತು. 

 ಬೆಳಕಿನ ಹುಳವೆಂಬ ಬೆರಗು! 

 ಎರಡು ರೆಕ್ಕೆಗಳ ಕೀಟ ಅರ‍್ಯಾಕ್ನೊಕ್ಯಾಂಪಾ ಲ್ಯುಮಿನೋಸಾ. ಅದರ ಲಾರ್ವಾ ಹಂತವೇ ಬೆಳಕಿನ ಹುಳ. ಅದು ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಕತ್ತಲಿರುವ, ಒದ್ದೆಯಿರುವ, ಚಪ್ಪಟೆ ಸೂರು ಹೊಂದಿರುವ, ಬಿಸಿಲು ಗಾಳಿ ಬೀಳದ ಪ್ರದೇಶದಲ್ಲಷ್ಟೆ ಅದು ಬದುಕಲು ಸಾಧ್ಯವಿದೆ. ವೈಟಮೊ ನದಿಯ ಬಳಿ ಸಮೃದ್ಧ ಕ್ರಿಮಿಕೀಟಗಳಿರುವ ಪ್ರದೇಶದ ಕತ್ತಲ ಗುಹೆಗಳು ಅವಕ್ಕೆ ಅತ್ಯಂತ ಸೂಕ್ತ ವಾಸಸ್ಥಾನವಾಗಿವೆ. 

 ಒಟ್ಟೂ ೧೧ ತಿಂಗಳ ಜೀವಿತ ಕಾಲಾವಧಿಯ ಕೀಟದ ಅಮ್ಮನು ಸುಮಾರು ೧೦೦-೧೨೦ ಮೊಟ್ಟೆಗಳನ್ನು ಸೂರಿನಲ್ಲಿ ಒಂದರ ಪಕ್ಕ ಒಂದು ಇಟ್ಟು ಸಾಯುತ್ತದೆ. ಇಪ್ಪತ್ತು ದಿನಗಳಲ್ಲಿ ಮೊಟ್ಟೆಯೊಡೆದು ಹೊರಬರುವ ೩ ಮಿಮೀ ಉದ್ದದ ಪುಟ್ಟ ಲಾರ್ವಾಗಳು ಚದುರುತ್ತವೆ. ಜಿಗುಟು ಅಂಟಿನ ಎಳೆಗಳನ್ನು ವಾಂತಿ ಮಾಡಿ (ಅದು ತ್ಯಾಜ್ಯವೂ ಹೌದಂತೆ!), ಇಳಿಬಿಟ್ಟು, ಬಳಿಕ ಬೆಳಕು ಸೂಸಲು ಶುರು ಮಾಡುತ್ತವೆ. ಜೋತಾಡುವ ಬೆಳಕಿನ ಎಳೆಗಳನ್ನು ತಯಾರಿಸುವುದೇಕೆ? ತನ್ನ ಆಹಾರವಾಗಿ ಕ್ರಿಮಿಕೀಟಗಳ ಆಕರ್ಷಿಸಲು, ತನ್ನ ದೇಹ ಹೊರಸೂಸುವ ತ್ಯಾಜ್ಯಗಳ ‘ಉರಿ’ಸಲು, ಉಳಿದವರು ಬೆಳಕಿಗೆ ಹೆದರಿ ತನ್ನ ತಿನ್ನದಂತೆ ರಕ್ಷಿಸಿಕೊಳ್ಳಲು, ಬೆಳಕಿಗೆ ಆಕರ್ಷಿತರಾದವರು ತನ್ನ ಬಾಯಿಗೆ ಬಂದು ಬೀಳಲು! 

 ಎಲ ಎಲಾ ಹುಳವೇ! 

 ಹೀಗೆ ಒಂಬತ್ತು ತಿಂಗಳ ತನಕ ಬೆಂಕಿಕಡ್ಡಿಯಷ್ಟು ಉದ್ದದವರೆಗೆ ಬೆಳೆಯುವ ಬೆಳಕಿನ ಹುಳದ ದೇಹದ ಕೊನೆಯ ಭಾಗ ರಾಸಾಯನಿಕಗಳನ್ನು ಹೊರಸೂಸುತ್ತದೆ. ಅವು ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಬೆಳಕು ಬೀರುತ್ತವೆ. ಪುಟ್ಟ ಹುಳವು ಆಮ್ಲಜನಕದ ಪೂರೈಕೆ ಹೆಚ್ಚು ಕಡಿಮೆ ಮಾಡುವ ಮೂಲಕ ಬೆಳಕನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳುತ್ತದೆ. ಜಿಗುಟು ಅಂಟಿನ ಎಳೆಗೆ ಸಿಕ್ಕಿದ ಕ್ರಿಮಿಕೀಟಗಳನ್ನು ಬಾಯಿಗೆಳೆದುಕೊಳ್ಳುತ್ತದೆ. ನಂತರ ತನ್ನ ಸುತ್ತ ಕೋಶ ನೇಯ್ದುಕೊಂಡು ಸೂರಿಗೆ ಇಳಿಬಿದ್ದು ಹದಿಮೂರು ದಿನಗಳಲ್ಲಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಕೀಟವು ನೋಡಲು ದೊಡ್ಡ ಸೊಳ್ಳೆಯಷ್ಟಿರುತ್ತದೆ. ಅದಕ್ಕೆ ಬಾಯಿರುವುದಿಲ್ಲ, ಜೀರ್ಣಾಂಗ ವ್ಯೂಹವಿರುವುದಿಲ್ಲ. ಉಂಡು ತಿನ್ನುವ ಕೆಲಸವೇ ಇಲ್ಲ. ಏನಿದ್ದರೂ ವಂಶಾಭಿವೃದ್ಧಿಯೊಂದೇ ಗುರಿ. ಗಂಡುಕೀಟ ಕೋಶಗಳ ಬಳಿಯೇ ಸುಳಿದಾಡುತ್ತ ಹೆಣ್ಣುಕೀಟ ಹೊರಬರುವುದನ್ನೇ ಕಾಯುತ್ತಿರುತ್ತದೆ. ಹೆಣ್ಣನ್ನು ಕಂಡದ್ದೇ ಮಿಲನಕ್ರಿಯೆ ನಡೆಸಿ, ಮತ್ತಷ್ಟು ಹೆಣ್ಣುಗಳ ಹುಡುಕಿ ಹೊರಡುತ್ತದೆ. ಹೆಣ್ಣು ಹುಡುಕುತ್ತ ಹಾರುವ ಗಂಡುಗಳು ಎಷ್ಟೋ ಸಲ ಲಾರ್ವಾಗಳು ಇಳಿಬಿಟ್ಟ ಜಿಗುಟು ಎಳೆಗೆ ಸಿಲುಕಿ ಸಾಯುವುದೂ ಇದೆ. ಮಿಲನದ ಬಳಿಕ ಮೂರ‍್ನಾಲ್ಕು ದಿನಗಳಲ್ಲಿ ಫಲಿತ ಮೊಟ್ಟೆಗಳನ್ನಿಟ್ಟು ಹೆಣ್ಣು ಸಾಯುತ್ತದೆ. ಬೆಳಕಿನ ಹುಳದ ಲಾರ್ವಾಗಳಷ್ಟೆ ಬೆಳಕು ಬೀರುವುದು. ನಂತರ ಕೋಶ ಕಟ್ಟಿ, ಕೀಟವಾದ ಅವಸ್ಥೆಯಲ್ಲಿ ಬೆಳಕೂ ಇಲ್ಲ, ಬಾಯಿಯೂ ಇಲ್ಲ. 

 ಮಿಂಚುಹುಳಗಳು ನಮಗೆ ಹೊಸವಲ್ಲ. ಮಳೆರಾತ್ರಿಗಳಲ್ಲಿ ಒಂದು ಮರಕ್ಕೆ ಮರವನ್ನೇ ಅಡರಿಕೊಂಡು ಹೊತ್ತಿ ಆರುವ ಬೆಳಕಿನ ಕುಡಿಗಳನ್ನು ಕಂಡಿದ್ದೇವೆ. ಅಂಗೈಯಲ್ಲಿ ಮಿಂಚುಹುಳವನ್ನು ಮುಚ್ಚಿ ತೆರೆದು ಅದು ಬೀರುವ ಬೆಳಕನ್ನು ಅನುಭವಿಸಿದ್ದೇವೆ. ಇದು ಅದಕ್ಕಿಂತ ತುಂಬಾ ಭಿನ್ನ ಅನುಭವ. ನೆಲದಾಳದ ಗುಹೆಯ ಸೌಂದರ್ಯ, ನಿಶ್ಶಬ್ದ, ಕತ್ತಲು, ನೀರು, ಉಗಮದ ಕತೆ ಮತ್ತವೆಲ್ಲದರ ಜೊತೆಗೆ ಥಟ್ಟನೆ ಪ್ರತ್ಯಕ್ಷವಾಗುವ ಬೆಳಕು - ಇಡಿಯ ಪ್ರವಾಸದಲ್ಲಿ ದೊರೆತ ವಿಶಿಷ್ಟ ಅನುಭವ ಸ್ಮರಣಿಕೆಯಂತೆ ಭಾಸವಾಗುತ್ತವೆ. ನೆನಪಿಗೆ ಒಂದೂ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೇನು, ಆ ಇಡಿಯ ಗುಹಾ ದೃಶ್ಯ ಇಂದಿಗೂ ನಮ್ಮ ನೆನಪಿನ ಕೋಶಗಳಲ್ಲಿ ಭದ್ರವಾಗಿವೆ. 

 ಪ್ರಕೃತಿ ಎಂದರೆ ಅನಂತ ವಿಸ್ಮಯ. ಪ್ರಶ್ನೆಗಳೇ ಇರದ ಉತ್ತರ. ಅರಿತಷ್ಟೂ ನಿಗೂಢ. ಕಲಿತಷ್ಟೂ ಮುಗಿಯದ ಪಾಠ. ಅಲ್ಲವೇ? 

 ಡಾ. ಎಚ್. ಎಸ್. ಅನುಪಮಾ
(ಈ ವಾರದ `ಸುಧಾ'ದಲ್ಲಿ ಪ್ರಕಟ)

Tuesday, 10 June 2025

ಮನೋಜ್ ಬೊಗಾಟಿ: ಕವಿಗೆ, ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ?

 




(ಇತ್ತೀಚೆಗೆ ಮೇ ೧೭, ೧೮ರಂದು ಸಿಂಧನೂರಿನ ಸತ್ಯಾ ಗಾರ್ಡನ್ನಿನಲ್ಲಿ ನಡೆದ ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯ ಆಶಯ ಮಾತುಗಳನ್ನಾಡಲು ಡಾರ್ಜಿಲಿಂಗಿನ ಕವಿ ಮನೋಜ ಬೊಗಾಟಿ ಬಂದಿದ್ದರು. ಎದೆಯ ದನಿಯನ್ನು ಮಾತಾಗಿಸುವ ಕವಿಯನ್ನು ೨೨೬೦ ಕಿಲೋಮೀಟರ್ ದೂರದಿಂದ ಸಿಂಧನೂರಿಗೆ ಕರೆಸಿಕೊಂಡದ್ದೇ ಒಂದು ಕಥನವಾಗಬಲ್ಲದು. ಗಡಿಯಾರದ ಹಿಂದೋಡುವ ಗುಣವೇ ಇಲ್ಲದ ಈತ ಕಳಿಸಿದ್ದು ನೋಡಿರುವುದೂ ಇಲ್ಲ, ಮಾಹಿತಿ-ಸೂಚನೆ ಕೇಳಿರುವುದೂ ಇಲ್ಲ, ಕವಿಗೋಷ್ಟಿಯ ಆಶಯ ಎಂದು ದಿರಿಸಿನಲ್ಲಿ ತಯಾರಾಗುವುದೂ ಇಲ್ಲ. ಸದಾ ತನ್ನದೇ ಅಕ್ಷರ ಲೋಕದ ಸೃಷ್ಟಿಕ್ರಿಯೆಯ ಗುಂಗಿನಲ್ಲಿ ಮುಳುಗಿರುವಂತೆ ಕಾಣುವ ಬರಹಗಾರ ಮನೋಜ್, ಹೇಗಿದ್ದರೋ ಹಾಗೇ ಬಂದು ವೇದಿಕೆಯೇರಿದರು. ಸರಳ ವ್ಯಕ್ತಿತ್ವದ, ಬೆಟ್ಟ ಪ್ರದೇಶ ಡಾರ್ಜಿಲಿಂಗಿನ ಕೆಳವರ್ಗದಿಂದ ಬಂದ ಕವಿ ತಮ್ಮ ಸಾಂದ್ರ ಅನುಭವದ ಮಾತು, ಕವಿತೆ, ಕ್ರಾಂತಿಕಾರಿ ಹುಮ್ಮಸ್ಸಿನ ಮಾತುಗಳಿಂದ ನೆರೆದವರ ಗಮನ ಸೆಳೆದರು.

46 ವರ್ಷದ ಮನೋಜ್ ಡಾರ್ಜಿಲಿಂಗಿನ ಡಾಲ್ಗಾಂವ್ ಪ್ರಾಂತ್ಯದ ರೊಂಗೊದವರು. ಅವರು ಪಡೆದ ಔಪಚಾರಿಕ ಶಿಕ್ಷಣ ಕಡಿಮೆ. ಶೈಕ್ಷಣಿಕ, ಸಾಹಿತ್ಯಿಕ ಹಿನ್ನೆಲೆಯದಲ್ಲದ ಶ್ರಮಿಕ ಕುಟುಂಬದಿಂದ ಬಂದ ಅವರಿಗೆ ನಿಯತಕಾಲಿಕಗಳ ಓದು ಮತ್ತು ಒಡನಾಟದಿಂದ ಸಾಹಿತ್ಯದ ಒಲವು ಬೆಳೆಯಿತು. ಸೂಕ್ಷ್ಮ ಗ್ರಹಿಕೆ ಮತ್ತು ವಿಸ್ತೃತ ಓದು ಅವರನ್ನು ಕವಿ ಮತ್ತು ಪತ್ರಕರ್ತನನ್ನಾಗಿಸಿದವು. ಕ್ರಾಂತಿಕಾರಿ ಕವಿತೆ ಮತ್ತು ಬರಹಗಳಿಂದ ಕೆಳವರ್ಗದ ಜನರ ಧ್ವನಿಯಾದರು. ೨೦೦೮ರಲ್ಲಿ ‘ಬಿಂಬಗೋಷ್ಠಿ’ ಎಂಬ ಮೊದಲ ಕವನ ಸಂಕಲನ ಹೊರತಂದಿರುವ ಬೊಗಾಟಿ, ತಮ್ಮ ದೀರ್ಘ ಕವನಗಳ ಸಂಕಲನ ‘ಫೌಕ ರಂಗಾರು’ (‘ಬಣ್ಣಗಳ ಗಾಯಗಳು’)ವಿಗೆ 2012ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದಾರೆ. ಆರು ಕವನ ಸಂಕಲನಗಳಲ್ಲದೆ ಒಂದು ಕಥಾ ಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಒಂದು ಕೃತಿಯನ್ನು ಹಿಂದಿಯಿಂದ ನೇಪಾಳಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಕಾಲಿಂಪಾಂಗ್‌ನಲ್ಲಿ ಬಾಳಸಂಗಾತಿ ಭಕ್ತಿ ರೈ ಅವರೊಡನೆ ನೆಲೆಸಿರುವ ಮನೋಜ್ ಬುದ್ಧಾನುಯಾಯಿ. ಸಿಂಧನೂರಿನಲ್ಲಿ ಭಾವಾಭಿನಯದ ಏರಿಳಿತದೊಂದಿಗೆ ಹಿಂದಿಯಲ್ಲಿ ಅವರು ಮಾಡಿದ ಭಾಷಣ, ಅವರೊಡನೆ ಆಡಿದ ಮಾತುಕತೆಯ ಸಾರ ಇಲ್ಲಿದೆ.)

‘ನಾನು ಭಾಷಣಕಾರ ಅಲ್ಲ. ಆಡುವುದನ್ನೆಲ್ಲ ಕವಿತೆಯಲ್ಲೇ ಆಡುವವನು. ಅಷ್ಟೆಲ್ಲ ಮಾತಾಡಲಿಕ್ಕೆ ಬರಲ್ಲ. ನನ್ನ ಮಾತೃಭಾಷೆ ನೇಪಾಳಿ. ಕನ್ನಡ ವಾತಾವರಣದ ನನಗಿಲ್ಲಿ ನಿಮ್ಮ ಭಾಷೆಯಲ್ಲಿ ಮಾತನಾಡುವಂತಿದ್ದರೆ ಅನಿಸಿದೆ. ಎಲ್ಲ ಅಪರಿಚಿತವೇ ಆದರೂ ಕುತೂಹಲ ಸೆಳೆಯುತ್ತಿದೆ. ನಿನ್ನೆಯ ಕವಿಗೋಷ್ಟಿ ಕೇಳಿಸಿಕೊಂಡೆ. ಅರೆ, ನಾವು ಬಳಸುವ ಎಷ್ಟೊಂದು ಪದಗಳನ್ನು ಇವರೂ ಬಳಸುವರಲ್ಲ ಎನಿಸಿತು. ಅರ್ಥವಾಗದಿದ್ದರೂ ಅವರ ಲಯ, ದೇಹದ ಭಾಷೆಯಿಂದ ಒಂದಷ್ಟು ಅರ್ಥವಾಯಿತು. ಕವಿತೆ ಎಂದರೆ ಹಾಗೇ, ಅಲ್ಲವೇ?

ಬಗದಾದಿನ ಕವಿ ಸಿನಾನ್ ಅಂತೋನ್ ಬರೆದ ಕವಿತೆ ಇದು:

‘ರಕ್ತದಲ್ಲದ್ದಿದ ಕುಂಚದಿಂದ
ಗೋಡೆಯ ಮೇಲೆ ಬರೆದೆ,
ಅಲ್ಲೊಂದು ಕಿಟಕಿ ಮೂಡಿತು.
ಕಂಡದ್ದು ಎರಡು ದೃಶ್ಯಗಳು:
ಯುದ್ಧ ಮತ್ತು ಅವ್ವ.
ಅವದವ ತನ್ನ ಗರ್ಭಸ್ಥ ಮಗುವಿನ
ಶವದ ಬಟ್ಟೆ ಅರಸುತ್ತಿದ್ದಳು..’


ಈಗ ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ ಎಲ್ಲ ಕಡೆಯೂ ನಾವಂದುಕೊಂಡ ಹಾಗೆ ಏನೂ ಆಗದಂತೆ ಆಗಿದೆ. ನಾವು ಒಂದು ತರಹ ಯಂತ್ರಗಳಂತಾಗಿದೇವಾ ಅನಿಸುತ್ತಿದೆ. ನಮ್ಮಲ್ಲೂ ಯುದ್ಧ ಶುರು ಆಗೇ ಬಿಡ್ತು ಅಂದರು. ಆಮೇಲೆ ಈಗೇನೋ ವ್ಯಾಪಾರದ ಧಮಕಿ ಹಾಕಿ ಯುದ್ಧ ನಿಲ್ಲಿಸಿದೀವಿ ಅಂತಿದ್ದಾರೆ. ಎಲ್ಲರಲ್ಲೂ ಯಾರೋ ನಮ್ಮನ್ನು ನಿಯಂತ್ರಿಸುತ್ತಿರುವ ಭಾವನೆ ಇದೆ.

ಈಗ ಮನುಷ್ಯರು ಕಣ್ಣಿನಿಂದ, ಮನಸ್ಸಿನಿಂದ ನೋಡುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಕೇಳುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಯೋಚಿಸುವುದನ್ನು ನಿಲಿಸಿದ್ದಾರೆ. ತಮ್ಮ ಕಣ್ಣಿನಿಂದ ಕಣ್ಣೀರು ಸುರಿಸಿ ಅಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಮನುಷ್ಯರು ಯಂತ್ರ, ರೊಬಾಟ್ ಆಗಿದಾರೆ. ಯಾಕೆ ಹೀಗಾಯ್ತು? ಏನು ಮಾಡುವುದು? ಈ ಸಮಯದಲ್ಲಿ ನಾನೇನು ಮಾಡಲಿ? ದೋಸ್ತೋ, ಈ ಸಂಕಟದ ಸಮಯದಲ್ಲಿ ನಾನು ಕವಿತೆಯ ಜೊತೆ ಇರಲು ಇಷ್ಟಪಡುತ್ತೇನೆ.

ಸಂಕಟದಲ್ಲಿ ನಮ್ಮ ಜೊತೆ ಇರುವುದು ಕವಿತೆ. ನಮ್ಮ ಚೇತನಕ್ಕೆ ಅವಿನಾಭಾವ ಅಂತ ಜೊತೆಯಿರುವುದು ಕವಿತೆ ಮಾತ್ರವೇ. ಜೀವನದಿಂದ ವಿಮುಖರಾದಾಗ ಮತ್ತೆ ಬದುಕಿನ ವಿವೇಕ ಮರಳುವಂತೆ ಮಾಡುವುದು ಕವಿತೆ. ಕುರುಡು ಕಣ್ಣಿಗೆ ದಿಟ್ಟಿ ಮರಳಿಸುವುದು ಕವಿತೆ. ಇದೆಲ್ಲ ಕವಿತೆಗೆ ಮಾತ್ರ ಸಾಧ್ಯವಿದೆ. ಅದಕ್ಕೇ ಕವಿಯಾಗುವುದು, ಕವಿತೆ ಬರೆಯುವುದು ಎಂದರೆ ಸುಮ್ಮನಲ್ಲ, ಅದು ದೊಡ್ಡ ಜವಾಬ್ದಾರಿ.

ನನಗೀಗ ನಲವತ್ತಾರು ವರ್ಷ. ಈ ಲೋಕವನ್ನು ನೋಡುವುದು ಹೇಗೆ ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರಕೃತಿ-ಮನುಷ್ಯರು, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಏನು ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರೇಮ ಎಂದರೇನು ಎನ್ನುವುದನ್ನು ಕವಿತೆಯೇ ಕಲಿಸಿತು. ನನ್ನ ನಾನು ನೋಡಿಕೊಳ್ಳುವುದನ್ನೂ ಕವಿತೆಯೇ ಕಲಿಸಿತು. ಅದಕ್ಕೇ ಇವತ್ತು ಯಾವುದೋ ದೂರದ ಗುಡ್ಡಗಾಡಿನ ಮೂಲೆಯ ನಾನು ಇಲ್ಲಿ ನಿಮ್ಮ ನಡುವೆ ಬಂದು ನಿಂತಿದ್ದೇನೆ.

ನಾನು ಯಾರು? ಎಲ್ಲಿಂದ ಬಂದಿದೀನಿ? ನಮ್ಮ ಪ್ರದೇಶ, ಗುರುತುಗಳು ಸಂಕಟಗಳು ಏನು ಅಂತ 99% ಜನರಿಗೆ ಗೊತ್ತಿಲ್ಲ. ಭಾರತೀಯರಿಗಂತೂ ಗೊತ್ತೇ ಇಲ್ಲ. ನಮ್ಮ ಬಗೆಗೆ ದೇಶ ಏನಂದುಕೊಂಡಿದೆ? ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣೆಕ್ ಶಾ ಅವರ ಒಂದು ಹೇಳಿಕೆ ಇದೆ: ‘ಯಾರಾದರೂ ನನಗೆ ಸಾಯಕ್ಕೆ ಭಯ ಇಲ್ಲ ಅಂದ್ರೆ ಒಂದೋ ಅವರು ಸುಳ್ಳು ಹೇಳ್ತಿದಾರೆ ಅಥವಾ ಅವರು ಗೂರ್ಖಾ ಆಗಿದಾರೆ ಅಂತ ಅರ್ಥ.’ ನೋಡಿದಿರಾ ಡಾರ್ಜಿಲಿಂಗಿನ ಗೂರ್ಖಾಗಳ ಬಗೆಗಿನ ತಿಳುವಳಿಕೆ? ಇಲ್ಲ, ಯುದ್ಧ ಎಂದರೆ ಧೈರ್ಯದಿಂದ ಎದೆ ಕೊಟ್ಟು ನಿಲ್ಲುವ ನಮಗೂ ಉಳಿದ ಮನುಷ್ಯರಂತೆ ಹೆದರಿಕೆಯಿದೆ, ಸಂಕಟಗಳಿವೆ. ಅಂದರೆ ಮಾಣೆಕ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದೇ? ಇದರರ್ಥ ಏನು? ಇದರರ್ಥ ಯಾರಿಗೂ ಗೂರ್ಖಾಗಳ ಪರಿಸ್ಥಿತಿ, ಸಂಕಟ ಗೊತ್ತಿಲ್ಲ ಅಂತ. ಅದಕ್ಕೇ ನನ್ನ ನೆಲ ಡಾರ್ಜಿಲಿಂಗ್, ಜಾತಿ ಗೂರ್ಖಾ, ಭಾಷೆ ನೇಪಾಳಿ, ಅಲ್ಲಿಯ ಅಸಮಾನತೆ ಸಂಕಟಗಳ ಬಗೆಗೇ ಮಾತನಾಡಲು ಬಯಸುತ್ತೇನೆ.

ಈ ತಿಂಗಳ 25ಕ್ಕೆ ನಮ್ಮೂರಿನಲ್ಲಿ ಒಂದು ಕವಿಗೋಷ್ಟಿ ಇದೆ. ಅಲ್ಲಿ ಹೇಳುತ್ತಾರೆ, ಅಯ್ಯೋ, ಕವಿಗೋಷ್ಟಿಗೆ ಜನರೇ ಬರಲ್ಲ ಅಂತ. ತುಂಬ ಅಭಿವೃದ್ಧಿ ಆದ ಊರು ಅದು. ಆದರೆ ಕವಿಗೋಷ್ಟಿಗಳೇ ಆಗುತ್ತಿಲ್ಲ. ಆದರೂ ಕಷ್ಟಪಟ್ಟು ನನ್ನ ಗೆಳೆಯರು ಕವಿಗೋಷ್ಟಿ ಆಯೋಜನೆ ಮಾಡಿದ್ದಾರೆ. ಅವತ್ತು ನಾನು ‘ಸಾಹೇಬರಿಗೆ ಜೀವಂತ ಮನುಷ್ಯರೆಂದರೆ ಇಷ್ಟವಿಲ್ಲ’ (ಸಾಹೇಬ್ ಕೊ ಜಿಂದಾ ಇನ್ಸಾನ್ ಪಸಂದ್ ನಹೀಂ) ಎಂಬ ಕವಿತೆ ಓದಲಿದ್ದೇನೆ. ಈ ಕವಿತೆ ಓದದಂತೆ ಸಾಹೇಬ್ ನನ್ನನ್ನು ಹೆದರಿಸಬಹುದು. ಆದರೆ ಅದನ್ನೇ ಓದುತ್ತೇನೆ ಮತ್ತು ಕವಿತೆ ಕೇಳಲು ನೀವು ಮುದ್ದಾಂ ಬರಲೇಬೇಕು.

ಆಯೋಜಕರು ನನಗೆ ಫೋನ್ ಮಾಡಿ ಹೇಳಿದರು: ನಿಮ್ಮ ಮಾತು, ಕವಿತೆಗಳಲ್ಲಿ ಸ್ವಲ್ಪ ಪಾಲಿಟಿಕ್ಸ್ ಇದೆಯಲ್ಲ? ಕವಿತೆಗೇಕೆ ರಾಜಕಾರಣ? ಅದನ್ನೆಲ್ಲ ತೆಗೆದುಬಿಡಬಹುದಲ್ಲ? ಕಾರ್ಯಕ್ರಮದಲ್ಲಿ ಕವಿತೆ ಬಗ್ಗೆ ಮಾತ್ರ ಮಾತಾಡಿ ಎಂದರು. ಆಯೋಜಕರ ಪರಿಸ್ಥಿತಿ ನನಗರ್ಥವಾಗುತ್ತದೆ. ಆದರೂ ಕೇಳಿದೆ: ಅರೆ ಭಾಯ್, ಕವಿಗೆ ರಾಜಕಾರಣ ಗೊತ್ತಿಲ್ಲ ಅಂದರೆ ಸಮಾಜಕ್ಕೆ ಸರಿಯಾದ ದಿಕ್ಕು ದಾರಿ ತೋರಿಸುವುದಾದರೂ ಹೇಗೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆಡಳಿತ ಎಲ್ಲ ಸೇರಿ ಡಾರ್ಜಿಲಿಂಗನ್ನು ನಾಶ ಮಾಡಿದರು. ಆದರೂ ಕವಿ ರಾಜಕಾರಣದ ಮಾತಾಡಬಾರದೇ? ಕೇಂದ್ರ ಸರ್ಕಾರ ರಾಜಕಾರಣ ಮಾಡಿದರೆ ಅದು ಸರಿ ಎನ್ನುವಿರಿ. ರಾಜ್ಯ ಸರ್ಕಾರ ರಾಜಕಾರಣ ಮಾಡಿದರೆ ಅದೂ ಸರಿ ಎನ್ನುವಿರಿ. ಸ್ಥಳೀಯ ಆಡಳಿತ ರಾಜಕಾರಣ ಮಾಡಿದರೂ ಸರಿ ಎನ್ನುವಿರಿ. ಎಲ್ಲರೂ ಪಾಲಿಟಿಕ್ಸ್ ಮಾಡಬಹುದಂತೆ. ಕವಿ ಮಾತ್ರ ಮಾಡಬಾರದು ಅಂದ್ರೆ ಹೇಗೆ? ಯಾರು ಹೇಳಿದ್ದು ಹಾಗೆ? ಸಂವಿಧಾನದಲ್ಲಿ ಹಾಗಂತ ಬರೆದಿದಾರಾ? ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ? ಮತ್ತೇನು ಗೊತ್ತಿದೆ?

ಹೀಗೆ ಆಳುವವರು ಮತ್ತು ಸಮಾಜ ಕವಿಯನ್ನು ಭಯಪಡಿಸುತ್ತಾರೆ. ಕವಿತೆಯನ್ನು ಭಯಪಡಿಸುತ್ತಾರೆ. ಡಾರ್ಜಿಲಿಂಗಿನಲ್ಲಿ ಈಗ ಲೋಕತಂತ್ರದ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಾಧಾರಣ ಕಾರ್ಯಕ್ರಮವನ್ನೂ ನಮ್ಮಿಷ್ಟದಂತೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಕೇಳುವ ನಾವಂತೂ ಏನನ್ನೂ ಮಾಡಲು ಸುಲಭವಿಲ್ಲ. ಅಧಿಕಾರಿಗಳು ಎಲ್ಲಿ, ಯಾವಾಗ, ಏನು ಅಪ್ಪಣೆ ಮಾಡುತ್ತಾರೋ ಎನ್ನುವ ಭಯದಲ್ಲೇ ಮಾಡಬೇಕು, ಪರಿಸ್ಥಿತಿ ಹಾಗಿದೆ.

ಆದರೆ ಗೆಳೆಯರೇ ನೆನಪಿಡಿ, ಭಯಗ್ರಸ್ತ ಕವಿಗಳು ಸಮಾಜವನ್ನು ಪುಕ್ಕಲು ಮಾಡುತ್ತಾರೆ. ತಾವು ಪುಕ್ಕಲರಾಗಿ ಕ್ರಾಂತಿಕಾರಿ ಕವಿತೆ ಬರೆದರೆ ಅಂತಹ ಕವಿ ಪಾಖಂಡಿ, ವಂಚಕರಾಗಬಹುದೇ ಹೊರತು ಕವಿ ಆಗಲಾರರು. ಅಂತಹ ಕವಿ ತನ್ನನ್ನು ತಾನು ಕೊಂದುಕೊಳ್ಳುವುದಷ್ಟೇ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ, ಸಂಘಟನಾತ್ಮಕವಾದ ಎಲ್ಲವನ್ನೂ ಕೊಲ್ಲುತ್ತಾರೆ. ಆದರೆ ಯಾವ ಕವಿತೆಯ ಮೇಲೆ ವಿಶ್ವಾಸ ಇಟ್ಟಿರುವಿರೋ ಅದನ್ನು ಬರೆದ ಕವಿ ಪಾಖಂಡಿಯಾಗಿದ್ದರೆ? ಪಾಖಂಡಿ ಕವಿಯ ಕವಿತೆ ಏನಾಗುವುದು? ನಾನು ಕವಿತೆಯ ಮೇಲೆ ವಿಶ್ವಾಸ ಇಡುತ್ತೇನೆ. ಕವಿ ತಾನು ಹೆದರಿದ್ದರೂ ಕವಿತೆ ಹೆದರಬೇಡಿ ಎನ್ನುತ್ತಿರುತ್ತದೆ. ಅದು ಪಾಖಂಡಿ ಆಗಲಾರದು. ಕವಿತೆ ಹೇಗಾದರೂ ಕವಿಯ ಪಾಖಂಡಿತನವನ್ನು ತಿಳಿಸಿಬಿಡುವುದು. ಹೀಗೆ ಸಮಾಜ ನಾಶವಾಗುವುದನ್ನು ತಪ್ಪಿಸುವುದು ಕವಿತೆಯೇ ಆಗಿದೆ. ಅದಕ್ಕೇ ಪ್ರಪಂಚದಲ್ಲಿ ಎಲ್ಲರೂ ಕವಿತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ನಾನು ೧೯೯೬ರಿಂದ ಮೂವತ್ತು ವರ್ಷಗಳಿಂದ ಬರೆಯುತ್ತ ಇದ್ದೇನೆ. ಸಾವಿರಾರು ಕಷ್ಟಗಳ ಜೊತೆ, ಕನಸುಗಳ ಜೊತೆ, ದುಃಖದ ಜೊತೆ ನನ್ನ ಸಮುದಾಯದ ಕತೆ ಬರೆಯುತ್ತ ಇದ್ದೇನೆ. ಕವಿತೆ ಅಂದರೆ ಬರಿಯ ಟೈಂ ಪಾಸ್, ಮನರಂಜನೆ ಅಲ್ಲ. ಈ ದೇಶ ನಮ್ಮಂತಹ ಸಣ್ಣ ಸಮುದಾಯಗಳಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಅಸುರಕ್ಷಿತ. ಅದಕ್ಕೇ ನಾವು ಕವಿತೆ ಬರೆಯಬೇಕಿದೆ, ಹೋರಾಡಬೇಕಿದೆ. ಯಾರೋ ಅರ್ನೆಸ್ಟ್ ಹೆಮಿಂಗ್ವೇ ಹತ್ತಿರ ಬಂದು ಕೇಳಿದರಂತೆ: ‘ನಾನೂ ನಿಮ್ಮಂತೆ ಬರೆಯಬೇಕಲ್ಲ, ಹೇಗೆ?’ ಎಂದು. ಹೆಮಿಂಗ್ವೆ ಅದಕ್ಕೆ, ‘ನಿನ್ನ ಹತ್ರ ಗಾಯ ಇವೆಯಾ? ಇದ್ದರೆ ನೀನು ಬರೆಯಬಲ್ಲೆ.’ ಎಂದರು. ಕವಿಗೆ ಒಳಗಿನಿಂದ ಏನೋ ಆಗಬೇಕು, ಕುದಿಯಬೇಕು, ಉರಿಯಬೇಕು, ಭಾವನೆಗಳು ಹುಟ್ಟಬೇಕು. ಆಗ ಕವಿತೆ ಹುಟ್ಟುತ್ತದೆ.

ನಾನು ಮೊದಲು ‘ಸಪನ’ ಎಂಬ ಕತೆ ಬರೆದೆ, ಪ್ರಕಟವಾಯಿತು. ಬಳಿಕ ನನ್ನ ಮೊದಲ ಕವಿತೆ ‘ಘರ್ ಫರ್ಕನಲೈ’ (ಮನೆಗೆ ಮರಳಲು) ಪ್ರಕಟವಾಯಿತು. ಆಗ ಭೂತಾನಿನಲ್ಲಿ ಒಂದು ರಾಷ್ಟ್ರ, ಒಂದು ನೀತಿ ತತ್ವದಡಿ ಒಂದು ಲಕ್ಷ ಎಂಟು ಸಾವಿರ ನೇಪಾಳಿ ಮಾತಾಡುವ ಗೂರ್ಖಾ ಜನರನ್ನು ಹೊರಹಾಕಿದ್ದರು. ಯಾಕೆ? ಅವರು ಕೇಳಿದ್ದೇನು? ತಮ್ಮ ಭಾಷೆಗೆ ಮಾನ್ಯತೆ ಸಿಗಲಿ, ತಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಯಲಿ ಎಂದು. ಆದದ್ದೇನು? ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಯುಎನ್‌ಎಚ್‌ಆರ್‌ಸಿ ಮಧ್ಯ ಪ್ರವೇಶಿಸಿ ಭೂತಾನ್ ಹೊರದಬ್ಬಿದ ನೇಪಾಳಿ ಭಾಷಿಕ ಗೂರ್ಖಾಗಳನ್ನು ಅಮೆರಿಕ, ಕೆನಡ, ಡೆನ್ಮಾರ್ಕ್, ನಾರ್ವೆ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾಗಿ ಎಲ್ಲೆಲ್ಲಿಗೋ ಕಳಿಸಿದರು. ಯಾವ ಜನ ತಮ್ಮ ಭಾಷೆ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದರೋ ಅವರು ಹೋದಲ್ಲೆಲ್ಲ ಅಲ್ಲಲ್ಲೆ ಕಳೆದು ಹೋದರು. ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡರು. ನೆದರ್ಲೆಂಡಿನಲ್ಲಿ ನೇಪಾಳಿ ನಡೆಯುತ್ತಾ? ಅಮೆರಿಕದಲ್ಲಿ ನೇಪಾಳಿ ನಡೆಯುತ್ತಾ? ವಿದೇಶದಲ್ಲಿ ನಿಮ್ಮ ಮಾತೃಭಾಷೆ ನಡೆಯುತ್ತಾ? ಇಲ್ಲ. ಅವರು ಹೋರಾಡಿದ್ದು ತಮ್ಮ ಭಾಷೆಗಾಗಿ, ಸಂಸ್ಕೃತಿಗಾಗಿ. ಎಲ್ಲ ಸತ್ವನಾಶವಾಯಿತು. ಹಾಗೆ ಹೋದವರಲ್ಲಿ ನನ್ನ ಆಪ್ತ ಬಳಗದವರೂ ಕೆಲವರಿದ್ದರು. ಅವರ ಸಂಕಟ ಕೇಳಿ ನನ್ನ ಮೊದಲ ಕವಿತೆ ‘ಮನೆಗೆ ಹಿಂತಿರುಗಲು..’ ಬರೆದೆ. ಅವರಿನ್ನೂ ಹಿಂತಿರುಗಿಲ್ಲ. ಲಡಾಯಿ ಜಾರಿಯಲ್ಲಿದೆ.

ಈ ದೇಶದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ನೆಲೆಯಾಗಲು ಕಷ್ಟವಿದೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ನಮ್ಮ ಮುಖಚಹರೆ ಬೇರೆಯಿದೆ. ನಮ್ಮನ್ನು ನೋಡಿದರೆ ಸಾಕು, ಚಿಂಗಿ, ಮಿಂಗಿ, ಮೊಮೊ, ಕೊರೊನಾ ಮುಂತಾಗಿ ಏನೇನೋ ಕರೆಯುತ್ತಾರೆ. ಗೂರ್ಖಾಗಳನ್ನು ನೇಪಾಳದಿಂದ ಬಂದ ವಲಸಿಗರು, ಆತಂಕವಾದಿಗಳು, ನುಸುಳುಕೋರರು ಎಂದು ಭಾವಿಸುತ್ತಾರೆ. ಯಾಕೆಂದರೆ ನಾವು ನೇಪಾಳಿ ಭಾಷೆ ಮಾತಾಡುತ್ತೇವೆ. ಬಂಗಾಳಿ ಭಾಷೆಯನ್ನು ಬಾಂಗ್ಲಾ ದೇಶದಲ್ಲೂ, ಪಶ್ಚಿಮ ಬಂಗಾಳದಲ್ಲೂ ಮಾತಾಡ್ತಾರೆ. ಬಂಗಾಳಿ ಭಾಷಿಕರನ್ನು ಬಾಂಗ್ಲಾ ದೇಶೀಯರು ಎನ್ನುವುದಿಲ್ಲ. ಆದರೆ ನೇಪಾಳಿ ಭಾಷೆಯನ್ನು ಮಾತನಾಡುವ ಭಾರತೀಯ ಗೂರ್ಖಾಗಳನ್ನು ಮಾತ್ರ ನೇಪಾಳದ ನುಸುಳುಕೋರರು ಎಂದೇ ಭಾವಿಸುತ್ತಾರೆ. ಇದೆಷ್ಟು ಸರಿ? ನನ್ನನ್ನು ಪರಿಚಯಿಸುವಾಗ ಹಲವರು ನೇಪಾಳಿ ಕವಿ ಎನ್ನುತ್ತಾರೆ. ನಾನು ನೇಪಾಳಿ ಭಾಷೆಯ ಭಾರತೀಯ ಗೂರ್ಖಾ ಕವಿ. ನಮ್ಮ ನೆಲವನ್ನು ಭಾರತ, ನೇಪಾಳ, ಭೂತಾನ, ಚೀನಾ ಎಲ್ಲ ದೇಶಗಳೂ ಕಬಳಿಸಿವೆ. ಭಾರತ ಸ್ವತಂತ್ರವಾದರೂ ನಾವು ಸ್ವತಂತ್ರ ದೇಶದೊಳಗಣ ಮೂಲೆಯ ಸಮುದಾಯವಾಗಿಯೇ ಉಳಿದಿದ್ದೇವೆ. ಇಂಥ ಹತ್ತು ಹಲವು ತಪ್ಪು ಕಲ್ಪನೆಗಳು, ಐಡೆಂಟಿಟಿಯ ಸಂಕಟಗಳು ನಮ್ಮನ್ನು ಅಂಚಿಗೆ ತಳ್ಳಿವೆ. ನೀವು ಅಂಚಿಗೆ ದೂಡಲ್ಪಟ್ಟಾಗ ಸಭ್ಯತೆಯ ಸೋಗು ಹಾಕಲಾರಿರಿ, ಆಕ್ರಮಣಕಾರಿಯಾಗಿಯೇ ಇರಬೇಕಾಗುತ್ತದೆ. ನಿಮ್ಮ ಸಮಾಜವನ್ನು ಅಂಚಿಗೆ ದೂಡಿದಾಗ ಅದು ಸಭ್ಯವಾಗಿರುವುದಿಲ್ಲ, ಉದ್ರೇಕಕಾರಿಯಾಗಿರುತ್ತದೆ. ಎಂದೇ ನನ್ನ ಬರಹ ಆವೇಗ, ಉದ್ವೇಗದಿಂದ ತುಂಬಿದೆ. ಅದು ನಮಗೆ ಸಹಜವಾಗಿಬಿಟ್ಟಿದೆ.

ಡಾರ್ಜಿಲಿಂಗ್ ಈಗ ಪಶ್ಚಿಮ ಬಂಗಾಳದಲ್ಲಿದೆ. ನಮ್ಮ ರಾಜ್ಯ ಭಾಷೆ ಬಂಗಾಳಿ. ನಾವು ಮಾತನಾಡುವುದು ನೇಪಾಳಿ. ಆದರೆ ನಮ್ಮ ಊರಿನಲ್ಲಿ ನಮ್ಮನ್ನು ಆಳುವವರಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಅದರ ಬದಲು ನಾವು ಬಂಗಾಳಿ, ಹಿಂದಿ, ಇಂಗ್ಲಿಷ್ ತ್ರಿಭಾಷೆ ಕಲಿತು ನಮ್ಮ ಭಾಷೆ ಮರೆಯುವಂತಾಗಿದೆ. ಇದು ದಬ್ಬಾಳಿಕೆಯ ಆಳ್ವಿಕೆಗೆ ಕಾರಣವಾಗಿದೆ. ನಮಗಾಗಿ ಮಾಡುವ ಕಾನೂನು, ಯೋಜನೆಗಳು ನಮಗರ್ಥವಾಗದೇ ಹೋಗಿವೆ. ಈ ಭಾಷೆಯ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಗಿಂತ ಹಳೆಯದು. ಸದ್ಯ ನಮ್ಮ ಹೋರಾಟಕ್ಕೆ ಒಂದು ಜಯ ಸಂದಿದೆ. ಮೊದಲು ಬಂಗಾಳಿಯನ್ನೇ ಕಲಿಯಬೇಕಿತ್ತು. ಆದರೆ ಸಾಂವಿಧಾನಿಕ ಭಾಷೆಯಾಗಿ ನೇಪಾಳಿ ಇರುವಾಗ ಅದನ್ನೇ ಮೊದಲ ಭಾಷೆಯಾಗಿ ಮಾಡಬೇಕೆಂದು ಪಟ್ಟುಹಿಡಿದು ವಿಜಯಿಗಳಾಗಿದ್ದೇವೆ. ಆದರೆ ಹೋರಾಟ ಚಾಲ್ತಿಯಲ್ಲಿದೆ. ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಅದಕ್ಕೆ ಆಕ್ರೋಶದ ದನಿ ಕೇಳಿ ಬರುತ್ತದೆ. ಅಲ್ಲಿ ನಾನೊಬ್ಬನೇ ಅಲ್ಲ, ನೀವು ಯಾರನ್ನು ಮಾತನಾಡಿಸಿದರೂ ಹೀಗೇ ಮಾತಾಡುತ್ತ್ತಾರೆ. ಅಂಚಿಗೆ ನಿಂತವರ ದನಿ ಗಡುಸಾಗಿಯೇ ಕೇಳುತ್ತದೆ.

200 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಮ್ಮ ಹಿರೀಕರು ಡಾರ್ಜಿಲಿಂಗಿನಲ್ಲಿದ್ದಾರೆ. ಬ್ರಿಟಿಷರು ಬಂದರು. ಆಡಳಿತದ ಅನುಕೂಲಕ್ಕಾಗಿ ನಮ್ಮನ್ನು ಬಂಗಾಳದಲ್ಲಿ ಸೇರಿಸಿದರು. ಹೋದರು. ಅವರು ಹೋದರೂ ನಾವಿನ್ನೂ ಇಲ್ಲಿಯೇ, ಮೊದಲಿದ್ದ ಹಾಗೆಯೇ ಯಾರವರೂ ಅಲ್ಲದೇ ಉಳಿದಿದ್ದೇವೆ. ಮೊದಲಿನಿಂದ ಇದು ಸಂಕೀರ್ಣ ಸಮಸ್ಯೆಗಳನ್ನುಳ್ಳ ಪ್ರದೇಶ. ೧೯೫೪ರಲ್ಲೇ ಅದನ್ನೊಂದು ಪ್ರತ್ಯೇಕ ಪ್ರದೇಶವಾಗಿ ಕಾಯಿದೆ ತಂದರು. ಆದರೆ ಈಗಲೂ ಅದು ಸಂಕೀರ್ಣ ಸಮಸ್ಯೆಗಳ ಪ್ರದೇಶವಾಗಿಯೇ ಮುಂದುವರೆದಿದೆ. ಹೋರಾಟ ತೀವ್ರವಾದಾಗ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾಡಿದರು. ಪ್ರಾಧಿಕರಣ ಮಾಡ್ತೀವಿ, ರಾಜ್ಯ ಕೊಡಕ್ಕೆ ಆಗಲ್ಲ ಅಂದರು. ನಾಲ್ಕು ದೇಶಗಳು ಸುತ್ತುವರೆದ ಆಯಕಟ್ಟಿನ ಭೂಭಾಗ ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮನ್ನು ಸದಾ ಬಡವರನ್ನಾಗಿಟ್ಟು ಆಳಲು ನೋಡುತ್ತಿದ್ದಾರೆ. ಅಲ್ಲಿನ 70% ಜನ ಕೂಲಿ ಕಾರ್ಮಿಕರು. ಪ್ರತಿ ದಿನ 250 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ. ಅವರು ದುಡಿದಿದ್ದು ದಿನಕ್ಕೆ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವಾಗಿದ್ದರೂ ಅವರಿಗೆ ದೊರೆಯುವುದು ಬರೀ ಇನ್ನೂರೈವತ್ತು ರೂಪಾಯಿ. ಪ್ರಪಂಚದಲ್ಲಿ ಎಂಟು ಔಷಧೀಯ ಸಸ್ಯಗಳ ಪ್ರಮುಖ ತಾಣಗಳಿವೆ. ಅದರಲ್ಲಿ ಡಾರ್ಜಿಲಿಂಗ್ ಅರಣ್ಯ ಪ್ರದೇಶವೂ ಒಂದು. ಅಲ್ಲಿನ ಚಹಾ, ಔಷಧೀಯ ಸಸ್ಯ, ಮರಮುಟ್ಟುಗಳು ತುಂಬ ದುಡ್ಡು ತಂದುಕೊಡುವ ಸಂಪನ್ಮೂಲಗಳು. ಅಲ್ಲಿನ ನದಿ, ಕಾಡು, ಬೆಟ್ಟ, ಮಣ್ಣು, ಮರ ಎಲ್ಲವೂ ಭಾರೀ ಸಂಪನ್ಮೂಲಗಳು. ಒಂದು ಪ್ರತ್ಯೇಕ ರಾಜ್ಯವಾದರೂ ನಮ್ಮನ್ನು ಸುಸ್ಥಿರವಾಗಿಡಬಲ್ಲ ಸಂಪನ್ಮೂಲಗಳು ಅಲ್ಲಿವೆ. ಆದರೆ ಯಾವುದೂ ಸಂಪನ್ಮೂಲವಾಗಿ ನಮಗೆ ಸಿಗದಂತಾಗಿದೆ. ಯಾಕೆ ಈ ತರಹದ ಆರ್ಥಿಕ ದಮನ ಮಾಡುತ್ತಿದ್ದಾರೆ? ಚೀನಾ, ಭೂತಾನ, ಬಾಂಗ್ಲಾ, ನೇಪಾಳ ಎಂಬ ನಾಲ್ಕು ದೇಶಗಳಿಂದ ಸುತ್ತುವರೆದ ಅಪಾಯಕರ ಪ್ರದೇಶದಲ್ಲಿ ನಾವಿದ್ದೇವೆ. ಏನಾದರೂ ಚಕಮಕಿ ಆದರೆ ಹೋರಾಡಲು ಸಾವಿಗೆ ಹೆದರದ ಗೂರ್ಖಾ ಜನರು ಬೇಕಾಗಿದ್ದೇವೆ.

ಇವೆಲ್ಲ ಇಷ್ಯೂ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಬೇಕೆಂಬ ಹೋರಾಟ ರೂಪಿಸಿದೆವು. ಅದನ್ನು ದಮನಿಸಲು ಎಲ್ಲಾ ಪ್ರಯತ್ನ ನಡೆಯಿತು. ಸಂಘಟನೆಗಳನ್ನು ಒಡೆಯಲಾಯಿತು. ಸಂಘಟನೆಯ ಕೆಲವು ವ್ಯಕ್ತಿಗಳಿಗೆ ಆಮಿಷವೊಡ್ಡಲಾಯಿತು. ಬಂಧನ, ಪ್ರಕರಣ, ಕೋರ್ಟು, ಅಲೆದಾಟ, ಎಲ್ಲ ಆಯಿತು ಆಗುತ್ತಲೇ ಇದೆ. ಹೋರಾಟ ಚಾಲ್ತಿಯಲ್ಲಿದೆ. ಕೊನೆಗೆ ಪ್ರತಿಯೊಬ್ಬರಿಗೂ ಐದು ಡೆಸಿಮಲ್ ಭೂಮಿ ಕೊಡೋದು ಅಂತ ಆಯಿತು. ಹೊರಗಿನಿಂದ ಬಂದು ನೆಲೆಸಿದ ಭಾರೀ ಪ್ಲಾಂಟರುಗಳಿಗೆ ಸಾವಿರಾರು ಎಕರೆ ಜಮೀನು. ಅಲ್ಲಿನವರೇ ಆದ ನಮಗೆ ಐದು ಡೆಸಿಮಲ್ ಜಮೀನು. ಇದು ತಂದಿಡುವ ಡೆಮಾಗ್ರಫಿಕ್, ಎಕನಾಮಿಕಲ್ ಬದಲಾವಣೆಯನ್ನು ಊಹಿಸಿ. ಇದರ ವಿರುದ್ಧ ಹೋರಾಡದೇ ಇರುವುದಾದರೂ ಹೇಗೆ? ಕವಿ ಆಗಿ ಇದನ್ನು ನೋಡಿ ಹೇಗೆ ಸುಮ್ಮನಿರಲಿ? ನನ್ನ ನೆಲ, ನನ್ನ ಜಮೀನು, ನನ್ನ ಪರ್ವತ ಪ್ರದೇಶದ ಕಾಡು, ಬೆಟ್ಟಗುಡ್ಡ, ನದಿಗಳೆಲ್ಲ ಸಿರಿವಂತರ ಎಸ್ಟೇಟುಗಳಾಗಿ, ರೆಸಾರ್ಟುಗಳಾಗಿ, ವಿಹಾರಧಾಮಗಳಾಗಿರುವಾಗ ನಾನು ಮಾತ್ರ ಐದು ಡೆಸಿಮಲ್ ಜಾಗಕ್ಕೆ ತೃಪ್ತಿ ಹೊಂದಬೇಕೇ?

ನಾನು ಇದುವರೆಗೆ ಆರು ಕವನ ಸಂಕಲನ ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಸಣ್ಣ ಊರಿನ ಪತ್ರಕರ್ತನಾಗಿ ಖಬರ್ ಮತ್ತು ಕಾಂತಿಪುರ ಎಂಬ ಎರಡು ಪತ್ರಿಕೆ ನಡೆಸುತ್ತಿರುವೆ. ಅದರಲ್ಲಿ ನನ್ನ ಜನರ ಸಂಕಟ ಕುರಿತೇ ಬರೆಯುತ್ತೇನೆ. ೨೦೨೩ರಲ್ಲಿ ಸಿಕ್ಕಿಂನಲ್ಲಿ ತೀಸ್ತಾ ಡ್ಯಾಂ ಒಡೆಯಿತು. ಸಾವಿರಾರು ಜನ ಬಾಧೆಗೊಳಗಾದರು. ಜಮೀನು ಮುಳುಗಿತು. ಊರು ಮನೆ ಮುಳುಗಿದವು. ಪುನರ್ವಸತಿ ಆಗಬೇಕಲ್ಲ. ಈ ವಿಚಾರವಾಗಿ ಬರೆದೆ. ಆದರೆ ಅದು ಪ್ರಾಕೃತಿಕ ವಿಪತ್ತು ಎಂದು ಪರಿಗಣಿತವಾಗಲೇ ಇಲ್ಲ. ರಾಷ್ಟ್ರೀಯ ವಿಕೋಪ ಎಂದೂ ಪರಿಗಣನೆಗೆ ಬರಲಿಲ್ಲ. ಎಂದೇ ಯಾವ ಸಹಾಯ, ಹಣವೂ ಬರಲಿಲ್ಲ. ಅದರ ವಿರುದ್ಧ ಬರೆದೆ, ದನಿಯೆತ್ತಿದೆ. ನನ್ನ ಮೇಲೆ ಆಕ್ರಮಣವಾಯಿತು. ಪ್ರಾಣಾಪಾಯ ಆಗುವಷ್ಟು ಗೂಂಡಾಗಳಿಂದ ಹಲ್ಲೆ ಆಯಿತು.

ಪಶ್ಚಿಮ ಬಂಗಾಳದಲ್ಲಿ ೨೩ ಜಿಲ್ಲೆಗಳಿವೆ. ಅದರ ೩೦% ರೆವಿನ್ಯೂ ಡಾರ್ಜಿಲಿಂಗಿನಿಂದ ಬರುತ್ತಿದೆ. ಅಲ್ಲಿ ಏನಿಲ್ಲ? ಎಲ್ಲ ಇದೆ. ಆದರೆ ನನ್ನ ಜನರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಇದನ್ನು ಕೇಳಿದರೆ ನನ್ನ ಮೇಲೆ ಆಕ್ರಮಣವಾಗುತ್ತದೆ. ಕೇಸು ಹಾಕುತ್ತಾರೆ. ಇದುವರೆಗೆ ನನ್ನ ಮೇಲೆ 17 ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಡ ಕವಿ, ಪತ್ರಕರ್ತ ಏನು ಮಾಡಬಹುದು? ಒಂದು ಪ್ರಕರಣಕ್ಕೆ ಎಷ್ಟು ಖರ್ಚಾಗುತ್ತದೆ ನಿಮಗೆ ಗೊತ್ತು. ಬಾಯಿ ಮುಚ್ಚಲಿ ಎಂದು ಪ್ರಕರಣದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಡಾರ್ಜಿಲಿಂಗಿನಲ್ಲಿ ಇರುವವರು ಜೀವಂತ ಇದ್ದಾರೆ. ನನ್ನ ಜನ ನನಗಾಗಿ ಕೆಲಸ ಮಾಡುತ್ತಾರೆ. ನೀವು ಭಯಪಡದೆ ದನಿಯೆತ್ತುವವರಾಗಿದ್ದರೆ ನಿಮ್ಮ ಪರವಾಗಿ ನಿಲ್ಲುವವರು ಇದ್ದೇ ಇರುತ್ತಾರೆ. ಜನ ನಿಮಗಾಗಿ ಬರುತ್ತಾರೆ. ಅದಕ್ಕೇ ಹೇಳಬೇಕಾದ್ದನ್ನು ಭಯವಿಲ್ಲದೆ ಹೇಳಬೇಕು, ಬರೆಯಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತ ಹೋಗಬಹುದು, ಹೋಗಲಿ. ಅದರಿಂದಲೇ ಈ ನಾನು ಆಗಿದೀನಿ ಅಲ್ವಾ? ನನಗೆ ನಾನೇ ರೂಪುಗೊಳ್ಳಲು ಸಾಧ್ಯವಿಲ್ಲ, ನನ್ನ ಭಾಷೆಯಿಂದ, ಜನರಿಂದ ನಾನಾಗಿದ್ದೇನೆ. ನಾನು ನನಗಾಗಿ ಬದುಕುವೆನೋ ಜನರಿಗಾಗಿ ಬದುಕುವೆನೋ? ಎಂದು ನಿರ್ಧರಿಸುವುದು ನನ್ನ ಕೈಯಲ್ಲೇ ಇದೆ. ಬಹಳಷ್ಟು ಜನ ಸುರಕ್ಷತೆ, ಸಂಸಾರ ಸುಖ ಎಲ್ಲ ಸಿಗುತ್ತದೆ ಅಂತ ತಮಗಾಗಿ ಮಾತ್ರ ಬದುಕುತ್ತಾರೆ. ನಾನು ನನ್ನ ಬದುಕು ಸಮಾಜಕ್ಕೆ, ಜನರಿಗೆ ಅಂತ ನಿರ್ಧರಿಸಿದ್ದೇನೆ.

ನಿಮಗನಿಸಬಹುದು, ಇವ ಕವಿ. ಕವಿತೆ ಬಿಟ್ಟು ಇದೇನು ಮಾತಾಡ್ತಿದಾನೆ ಅಂತ. ಇದೇನು ಪಾಲಿಟಿಕ್ಸ್ ಮಾತಾಡುತ್ತಿದಾನಲ್ಲ ಅಂತ. ನಾನು ಅಂಟುನಂಟು ಹೊಂದಿರುವ ನನ್ನ ನೆಲ ನನ್ನದಲ್ಲದಿದ್ದರೆ ಕವಿತೆ ಹೇಗೆ ಬರೆಯಲಿ? ನನ್ನ ಜನರ ಕಷ್ಟ ಅರ್ಥವಾಗದಿದ್ದರೆ ಕವಿತೆ ಯಾಕೆ ಬರೆಯಲಿ? ನಾವು ಏನೋ ಅದನ್ನೇ ಕವಿತೆಯಾಗಿ ಬರೆಯಬೇಕು. ನಮಗೇನಾಗುತ್ತಿದೆಯೋ ಅದನ್ನೇ ಬರೆಯಬೇಕು. ಆದ್ದರಿಂದ ನಾನು ಈ ತರಹದ ಕವಿತೆ ಬರೆಯುತ್ತಿದ್ದೇನೆ. ಅದರಿಂದ ಹೊರಬರಲಾರದವನಾಗಿದ್ದೇನೆ. ಯಾಕೆಂದರೆ ನನಗೆ ಕಾಲ್ಪನಿಕವಾದದ್ದು ಬರೆಯಲು ಗೊತ್ತಿಲ್ಲ. ನನಗೆ ನನ್ನದು ಗೊತ್ತು. ನನ್ನ ಸುತ್ತಮುತ್ತಿನದು ಗೊತ್ತು. ಮತ್ತು ನಾನು ಅದನ್ನೇ ಬರೆಯುವವನು. ಕಾಲ್ಪನಿಕವಾದದ್ದನ್ನು ಬರೆದರೆ ನನ್ನ ಜನರಿಗೇನು ಸಿಗುತ್ತದೆ? ನನಗೇನು ಸಿಗುತ್ತದೆ? ಕವಿಯೂ ಒಂದು ಮನುಷ್ಯ ಜೀವಿ. ಅವರಿಗೆ ಸಂವೇದನೆ ಇರಬೇಕು. ಸುತ್ತ ನಡೆಯುವುದು ಏನೂ ಕಾಣುತ್ತಿಲ್ಲ ಅಂದರೆ ಅಂತಹವರು ಸತ್ತ ಮನುಷ್ಯರು. ಮಿಡಿಯುವ ಹೃದಯ ಇಲ್ಲದಿದ್ದರೆ ಜೀವವಿಲ್ಲದ ಶವದಂತೆ ಆ ಬದುಕು. ಕವಿಗಳಿಗಿದು ಗೊತ್ತಿರಬೇಕು: ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ನಮ್ಮನ್ನು ಜೀವಂತವಾಗಿಡಲು ಕೇವಲ ಕವಿತೆ ಸಾಕು. ಜಿಂದಾ ರಖನೆ ಕೇ ಲಿಯೆ ಪೊಯೆಟ್ರಿ ಕಾಫೀ ಹೈ. ನಾನು ಇದನ್ನೇ ಮಾಡುತ್ತಿದ್ದೇನೆ.

ಧನ್ಯವಾದ. ನಿಮ್ಮ ಪ್ರೀತಿ ನನ್ನಲ್ಲಿ ಕಣ್ಣೀರು ತುಂಬಿಸುತ್ತಿದೆ. ನಮಸ್ಕಾರ.




ಮನೋಜ್ ಬೊಗಾಟಿ, ಡಾರ್ಜಿಲಿಂಗ್.
(ಕನ್ನಡ ರೂಪ: ಡಾ. ಎಚ್. ಎಸ್. ಅನುಪಮಾ)