Tuesday 8 June 2021

ಇನ್ನೊಂದು ಭಾರತದ ಕತೆ!





ಈ ಋತುವಿನಲ್ಲಿ ಪ್ರತಿ ವರ್ಷವೂ ವೈದ್ಯರಿಗೆ ಪುರುಸೊತ್ತಿರುವುದಿಲ್ಲ. ಬೇಸಿಗೆ, ಮಳೆಗಾಲಗಳು ಬ್ಯಾಕ್ಟೀರಿಯಾ, ವೈರಸ್‌ಗಳ ವಂಶಾಭಿವೃದ್ಧಿಗೆ ಪೂರಕವಾಗಿರುವುದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದ ನನ್ನ ಕ್ಲಿನಿಕ್ ಕೂಡಾ ಇದರಿಂದ ಹೊರತಲ್ಲ. ಒಣಗಿದ ಗಂಟಲು ಒದ್ದೆಯಾಗಲಿಕ್ಕೂ ನಮಗೆ ಸಮಯ ಇಲ್ಲ.

ನಾನು ಹೇಳಹೊರಟಿರುವುದು ಇನ್ನೊಂದು ಭಾರತದ ಕತೆ. ಇಲ್ಲಿ ಆಕ್ಸಿಜನ್ ಸಮಸ್ಯೆಯಿಲ್ಲ. ಸುಲಿಗೆ ಮಾಡುವ ಆಸ್ಪತ್ರೆಗಳಿಲ್ಲ. ಹಾಸಿಗೆ ಕೊರತೆಯಿಲ್ಲ. ಹೆಣ ಸುಡಲು ಸರತಿಯಿಲ್ಲ. ಕಟ್ಟಿಗೆಗೆ ಬರವಿಲ್ಲ. ಯಾಕೆಂದರೆ ಇದು ರಾಜಧಾನಿಯಿಂದ ನಾಲ್ಕುನೂರು ಕಿಮೀ ದೂರದಲ್ಲಿರುವ ದೊಡ್ಡ ಹಳ್ಳಿಯಂತಹ ಉತ್ತರಕನ್ನಡ ಜಿಲ್ಲೆ. ಇಡೀ ಜಿಲ್ಲೆಗೊಂದು ಅತ್ಯಾಧುನಿಕ ಆಸ್ಪತ್ರೆ ಇಲ್ಲ. ಕೋವಿಡ್ ಇನ್ನೂ ಎಲ್ಲೋ ಯಾರಿಗೋ ಆಗುತ್ತಿರುವ ವಿಪತ್ತೇ ಹೊರತು ತಮ್ಮ ಮನೆಬಾಗಿಲಿಗೆ ಬಂದಿದೆ ಎಂದು ಜನ ಭಾವಿಸಿಲ್ಲ. ಎಲ್ಲಕ್ಕೂ ಅವರು ನಾಗರಿಕ ವ್ಯವಸ್ಥೆಯನ್ನು ಎಷ್ಟೋ ಅಷ್ಟೇ ಅಣ್ಣಪ್ಪ, ತಿಮ್ಮಪ್ಪ, ಚೌಡಿ, ಜಟಗ, ಆರೋಗ್ಯಮಾತೆಯರಂತಹ ದೈವಗಳನ್ನೂ, ಮಾಟ-ನೋಟ-ಯಂತ್ರ-ತಾಯಿತಗಳನ್ನೂ ನಂಬಿದ್ದಾರೆ. ಇವರಲ್ಲಿ ಒಬ್ಬರಲ್ಲ ಒಬ್ಬರು ತಮ್ಮ ತಲೆ ಕಾಯ್ವರೆಂದು ನಿಶ್ಚಿಂತರಾಗಿದ್ದಾರೆ. ತಪಾಸಣೆ ಮಾಡಿಸಿದರೆ ಕೊರೋನಾ ಪತ್ತೆಯಾಗುವುದರಿಂದ ತಪಾಸಣೆಯನ್ನೇ ಮಾಡಿಸದೆ ಥಂಡಿಜ್ವರವೆಂದು ಗುಣ ಮಾಡಿಕೊಳ್ಳುವುದು ಜಾಣತನವೆಂದು ನಂಬಿದ್ದಾರೆ! 


ಗುಡ್ಡಗಾಡು ಪ್ರದೇಶವಾದ ನಮ್ಮೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒಂದೂಕಾಲು ವರ್ಷದಿಂದ ಇಲ್ಲ. ಮೂಲೆಮೂಲೆಗಳಿಂದ ಆಸ್ಪತ್ರೆಗೆ ಬರಲು ಖಾಸಗಿ ವಾಹನಗಳನ್ನೇ ನೆಚ್ಚಬೇಕು. ನನ್ನ ಕ್ಲಿನಿಕ್ ತಲುಪಲು ಹೊಳೆ ದಾಟಿ, ಕಾಲ್ದಾರಿಯಲ್ಲಿ ನಡೆದು, ಮರಳಿನ ಗಾಡಿಯಲ್ಲೋ, ರಿಕ್ಷಾದಲ್ಲೋ ೩೦-೩೫ ಕಿ.ಮೀ. ಕ್ರಮಿಸಿ ಬರುವ ರೋಗಿಗಳಿದ್ದಾರೆ. ನೆರೆಹೊರೆಯವರ ನಿನ್ನೆ, ಇವತ್ತು, ನಾಳೆಗಳ ಜಡ್ಡಿಗೆ ಔಷಧಿ ಒಯ್ಯುವ ಹೊಣೆ ಬಂದವರಿಗೆ ಇರುತ್ತದೆ. ಒಬ್ಬರ ಮೇಲೊಬ್ಬರು ಒತ್ತೊತ್ತಿ ನಾಲ್ಕಾರು ಜನ ಒಂದೇ ರಿಕ್ಷಾದಲ್ಲಿ ಬರುತ್ತಾರೆ. ಮಾಸ್ಕ್ ಹಾಕಿದ್ದರೆ ಕೊರೊನಾ ವೈರಸ್ಸಿನ ಪುಣ್ಯ. 

ಬಂದವರೇ ನಂಬರ್ ತೆಗೆದು, ರಿಪೇರಿಗೆ ಕೊಟ್ಟ ಮಿಕ್ಸಿ, ತರಕಾರಿ, ಕಿರಾಣಿ ಸಾಮಾನು, ಕ್ಷೌರ, ಹೊಲೆಯಲು ಕೊಟ್ಟ ಬಟ್ಟೆ, ಗೋಡಾಕ್ಟ್ರ ಬಳಿ ಗಂಟಿಕಾಯಿಲೆಗೆ ಮದ್ದು, ಜಾತಕ ತೋರಿಸುವುದು, ಮಂತ್ರಿಸಿದ ದಾರ ಪಡೆಯುವುದು ಮೊದಲಾದ ಕೆಲಸಗಳನ್ನು ಪೂರೈಸಿಕೊಳ್ಳಲು ಹೊರಡುತ್ತಾರೆ. ಅದರ ನಡುವೆ ತಮ್ಮ, ಮನೆಯವರ ಜ್ವರಜಾಪತ್ತಿಗೆ ಇಂಜೆಕ್ಷನ್, ಮಾತ್ರೆ, ಗ್ಲುಕೋಸುಗಳ ಚಿಕಿತ್ಸೆ ಪಡೆಯುತ್ತಾರೆ. ಗಂಟಲು ದ್ರವ ಪರೀಕ್ಷೆಗೆ ಕೊಡಿರೆಂದು ಎಷ್ಟು ಹೇಳಿದರೂ ‘ಇವತ್ ಪುರ್ಸತ್ತಿಲ್ರಾ ಅಮಾ, ನಾಳಿಗ್ ಹೋಗುದೇ ಸೈ’ ಎಂದು ನಡೆದುಬಿಡುತ್ತಾರೆ. ‘ನೀವು ಮುಟ್ಟಿದ್ರೆ ಸಾಕು, ಗುಣ’ ಎಂದು ನನ್ನನ್ನೇ ಉಬ್ಬಿಸುತ್ತಾರೆ! 

ನೂರಾರು ರೋಗಿಗಳಲ್ಲಿ ಹತ್ತು ಜನರೂ ಕೋವಿಡ್ ಟೆಸ್ಟಿಗೆ ಹೋಗುವುದಿಲ್ಲ. ಹೋಗಿ ಪಾಸಿಟಿವ್ ಆದವರು ಯಾಕಾದರೂ ಟೆಸ್ಟ್ ಮಾಡಿಸಿಕೊಂಡೆವೋ? ತಮ್ಮಷ್ಟೇ/ತಮಗಿಂತ ಹೆಚ್ಚೇ ರೋಗಲಕ್ಷಣ ಇರುವವರು ಆರಾಮದಲ್ಲಿ ಅಡ್ಡಾಡಿಕೊಂಡಿರುವಾಗ ಮೇಡಂ ಹೇಳಿದರೆಂದು ಮಾಡಿಸಿ ಬಂಧಿಯಾದೆನಲ್ಲ ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದವರೇ ಹೆಚ್ಚು. ಕೆಲವರು ‘ಆಶಾ ಬಂದು ಪೋಟ ಹೊಡ್ದು ನಂ ಮನೆ ಮರ್ಯಾದೆ ಎಲ್ಲ ಹೋತು’ ಎಂದು ದೂರಿದ್ದೂ ಇದೆ. 


ಆ ಯುವತಿ ಗ್ರಾಮ ಚಾವಡಿಯ ಶ್ಯಾನುಭೋಗಳು. ಹತ್ತು ದಿನದಿಂದ ಜ್ವರ. ‘ಕೋವಿಡ್ ಟೆಸ್ಟ್ ಮಾಡ್ಸಿದಿರಾ?’ ಎಂಬ ಪ್ರಶ್ನೆ ಮುಗಿಯುವುದರಲ್ಲಿ, ‘ಅಯ್ಯೋ ಮೇಡಂ, ಕೋವಿಡ್ ಅಂಬೊ ಪದ ಕೇಳಿದ್ರೇ ಒಂತರ ವಾಂತಿ ಬರುವಂಗೆ, ಜ್ವರ ಬಂದಂಗೆ ಆಗ್ತದೆ ನಂಗೆ’ ಎಂದು ಕುಸಿದಳು. ‘ಈಗಂತೂ ಪಾಸಿಟಿವ್ ಇರೋರ ಮನೆಮನೆಗ್ ಹೋಗಿ ಅವ್ರ ಫೋಟೋ, ಕಾಂಟಾಕ್ಟ್ಸ್ ಫೋಟೋ ತರಬೇಕು. ಹೋದಹೋದಲ್ಲಿ ಬೈದು ಕಳಿಸ್ತಾರೆ. ಜಗಳ ಮಾಡ್ತಾರೆ. ಎಷ್ಟ್ ರಿಸ್ಕ್ ತಗಂಡು ಕೆಲ್ಸ ಮಾಡಿದ್ರೂ ಉಪಯೋಗಿಲ್ಲ. ಮನೇಲಿ ನೋಡಿದ್ರೆ ಊರೂರು ತಿರುಗಿ ನಾನೇ ಕೊರೊನ ತಗಂಡ್ ಬರ‍್ತಿನೆನೊ ಅನ್ನೋ ಹಂಗಾಡ್ತಾರೆ. ಈ ಪಗಾರೂ ಬೇಡ, ಕೆಲ್ಸನೂ ಬೇಡ, ರಿಸೈನ್ ಮಾಡುವ ಅನಿಸ್ತಿದೆ’ ಎನ್ನುತ್ತ ಗದ್ಗದಳಾದಳು. 

ಏಕತಾನತೆಯ ಕೆಲಸ, ಸಹಕಾರ-ಬೆನ್ನು ತಟ್ಟುವಿಕೆ ಇಲ್ಲದ ಒಂದೇಸಮ ದುಡಿತ - ಈ ದಣಿವು ಕೋವಿಡ್ ಸೋಂಕಿಗಿಂತ ಅಪಾಯಕಾರಿ. ಅವಳ ಟೆಸ್ಟ್‌ಗಳೇನೋ ನೆಗೆಟಿವ್ ಬಂದಿವೆ. ಆದರೆ ಮನದ ದಣಿವಿಗೆ ಮದ್ದು ಇದೆಯೆ?


ಈ ಮುಂಚೆ ಅನುಮತಿ ನೀಡಿದವೆಂದು ನೂರಾರು ಮದುವೆಗಳು ಈಗಲೂ ನಡೆಯುತ್ತಿವೆ. ‘ನಮಗಾದ್ದು ಬರಿ ತಂಡಿಕೆಮ್ಮ, ಬೇರೆಯೋರಿಗಾದ್ದು ಕೊರೊನಾ’ ಎಂದೇ ಜನ ಭಾವಿಸಿರುವುದರಿಂದ ದೇವಕಾರ್ಯ, ಬಯಕೆ ಶಾಸ್ತ್ರ, ನಾಮಕರಣ, ಗಡಿಪೂಜೆ, ಚೌಡಿಪೂಜೆ, ಹುಟ್ಟುಹಬ್ಬ, ನಿಶ್ಚಿತಾರ್ಥಗಳಂತಹ ಸಣ್ಣಪುಟ್ಟ ಸಮಾರಂಭಗಳು ಬೇಕಾದಷ್ಟು ನಡೆಯುತ್ತಿವೆ. ಬಳಿಕ ಸೋಂಕು ಬರುವುದೂ, ಮನೆಯವರೆಲ್ಲ ಮಲಗುವುದೂ ಇದೆ. ಆದರೆ ರೋಗಲಕ್ಷಣ ಮುಚ್ಚಿಡುವುದೇ ಹೆಚ್ಚು. ಜ್ವರ ಸುಟ್ಟು ಹೋಗುವಂತಿದ್ದರೂ, ‘ಮೈಕೈನೋವು, ತಲೆಸುತ್ತು, ಸುಸ್ತು, ಊಟಸೇರಲ್ಲ’ ಅಂದಾರೇ ಹೊರತು ಜ್ವರದ ಸುದ್ದಿ ಎತ್ತುವುದಿಲ್ಲ! ‘ಅಯ್ಯಯ್ಯಯ್ಯ, ತಂಡಿಜ್ವರ ಎಂಥದೂ ಇಲ್ಲ, ಗಂಟಲು ನೋವಂತೂ ಕೇಳಬಾರ‍್ದು, ನುಂಗದೇ ಬಗೇಲಿ ಕಸ್ಟ, ಬಗ್ಗೇಲಿ ಸುಸ್ತು, ರಾತ್ರಿ ಕೆಮ್ಮ ಅಷ್ಟೇ ಶಿವಾಯಿ ಬೇರೇನಿಲ್ಲ’ ಎನ್ನುತ್ತಾರೆ. ಕೆಲವರ ಸ್ಥಿತಿ ಗಂಭೀರಗೊಂಡರೂ, ‘ಕಡೆಗ್ ಹೆಣನೂ ಕೊಡುದಿಲ್ಲಂತೆ’, ‘ಹೆಣುದ್ ಕಣ್ಣು, ಹಾರ್ಟು, ಕಿಡ್ನಿ ತೆಗಿತಾರಂತೆ’, ‘ಕೊರೊನ ಪೇಶೆಂಟ್ ಅಡ್ಮಿಟ್ ಆದ್ರೆ ತಲೆಗಿಷ್ಟು ಅಂತ ಅವ್ರಿಗೆಲ್ಲ ದುಡ್ಡು ಬರ‍್ತದಂತೆ’ ಮುಂತಾದ ಅಂತೆಕಂತೆಗಳನ್ನು ನಂಬಿ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಎಷ್ಟು ಬಸುರಿಯರಿಗೆ ಅವಧಿಪೂರ್ವ ಹೆರಿಗೆಗಳು, ಗರ್ಭಪಾತಗಳು ಸಂಭವಿಸಿವೆಯೋ? ವೃದ್ಧರ, ಬಡವರ, ಅಸಹಾಯಕರ ಎಷ್ಟು ಸಾವುಗಳು ಕೋವಿಡ್‌ನಿಂದ ಸಂಭವಿಸಿವೆಯೋ? ‘ಬಾರೀ ಟೆನ್ಶನ್ನಾಗಿದ್ದ, ಅದ್ಕೆ ಹಾರ್ಟ್ ಅಟ್ಯಾಕ್ ಆತು’; ‘ಮೃತ್ಯು ಹೊಡೀತು’; ‘ಗ್ರಾಚಾರ ತಿರುಗತು’; ‘ಅವಳ ಅವ್ವಿ, ಅಬ್ಬೆನು ಹೀಂಗೆ ಸತ್ತದ್ದು, ಇದ್ಕು ಹಂಗೇ ಆತು’ ಮುಂತಾಗಿ ನಾನಾ ಕಾರಣಗಳ ಬೆನ್ನೇರಿ ಸಾವುನೋವುಗಳು ಲೆಕ್ಕದಿಂದ ತಪ್ಪಿಸಿಕೊಂಡಿವೆ. 

ನೀವೆಷ್ಟು ವಿವರಿಸಿ ಹೇಳಿದರೂ ಗಾಳಿಸುದ್ದಿಗಳನ್ನು ನಂಬುವಷ್ಟು ಸತ್ಯವನ್ನು ನಂಬಲಾರರು. ಹೆಚ್ಚು ಹೇಳಿದರೆ ನಿಮ್ಮನ್ನು ಬಿಟ್ಟು ಯಂತ್ರಕ್ಕೋ, ತಾಯಿತಕ್ಕೋ ಮೊರೆ ಹೋದಾರೆಯೇ ಹೊರತು ನಿಜವನ್ನು ಎದುರಿಸಲಾರರು. ಕೋವಿಡ್ ಭೀತಿಗಿಂತ ಅದರ ನಿರಾಕರಣೆ, ನಿಷ್ಕಾಳಜಿ ದಿಗ್ಭ್ರಮೆ ಹುಟ್ಟಿಸುತ್ತದೆ. ಇದೇಕೆ ಹೀಗೆ? ತಮಗೆ ಬಂದ ಕಾಯಿಲೆ ಗುಟ್ಟಾಗಿಯೇ ಇರಲೆಂದು ಮನುಷ್ಯರು ಬಯಸುವುದಾದರೂ ಏಕೆ? ಕಲ್ಪಿತ ‘ನಾನು’ವಿಗೂ, ನಿಜವಾದ ‘ನಾನು’ವಿಗೂ ಇರುವ ವ್ಯತ್ಯಾಸ ಲೋಲುಪ ಜಗತ್ತಿನಲ್ಲಿ ಹಿಗ್ಗುತ್ತಲೇ ಇರುವುದು ಈ ಮನಃಸ್ಥಿತಿಗೆ ಕಾರಣವೇ? ಕಾಯಿಲೆಯ ಕಾರಣಕ್ಕೆ ಮನೆಮಂದಿ ಗುರುತಿಸಲ್ಪಡುವುದು ನಾನು ಎಂಬ ಅಹಮಿಗೆ ಪೆಟ್ಟು ಕೊಡುವುದೇ? 

ಉತ್ತರವಿಲ್ಲದ ಪ್ರಶ್ನೆಗಳು. ಪ್ರಶ್ನೆ ಕೇಳಿಕೊಳ್ಳುವುದು ಮೂರ್ಖತನವೋ? ದೇಶವನ್ನು ಕರಾಳ ಭವಿಷ್ಯಕ್ಕೆ ದೂಡಿದ ಹೊಣೆಗೇಡಿ ಆಳುವವರ್ಗ ಮೂರ್ಖವೋ? ರೋಗಿಗಳನ್ನು ದೂರದಿಂದಲೇ ನೋಡಿ ಹಣ ಗಳಿಸಿ ಸುಮ್ಮನಿರುವುದು ಬಿಟ್ಟು ಇಂಥ ಅಪಾಯಕಾರಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುವ ನಾನೇ ಮೂರ್ಖಳೋ?

ಎಲ್ಲ ಅಯೋಮಯ. ಇದು ನನ್ನಂತಹ ಸಾವಿರಾರು ವೃತ್ತಿ ಬಾಂಧವರ ಅನುಭವ. ಪಾಸಿಟೀವೋ, ನೆಗೆಟೀವೋ, ಸುರಕ್ಷತೆಯ ಕ್ರಮಗಳೊಂದಿಗೆ ಎಲ್ಲರನ್ನು ಮುಟ್ಟಿ ಪ್ರೀತಿ ಹಂಚುವುದೊಂದೇ ಮಾರ್ಗ.