Friday 16 June 2023

Hameeda Banu ಮೊದಲ ಭಾರತೀಯ ಮಹಿಳಾ ಕುಸ್ತಿಪಟು: ಹಮೀದಾ ಬಾನು

ಗಂಡುಮಯ ಕುಸ್ತಿ ಕಣ


ಎದೆಯುಬ್ಬಿಸಿ, ತೋಳು ಮಡಚಿ, ತೊಡೆ ತಟ್ಟಿ ಎದುರಾಳಿಯನ್ನು ಆಹ್ವಾನಿಸುವ ಕುಸ್ತಿಕಣದಲ್ಲಿ ಏಣಿಶ್ರೇಣಿಯೇ ಉಸಿರಾದ ಗಂಡು ಮೌಲ್ಯಗಳು ಮೆರೆಯುವುದು ಏನೂ ಅಚ್ಚರಿಯಲ್ಲ. ಗಂಡುಹಿರಿಮೆಯ ರೋಗಕ್ಕೆ ಬಲಶಾಲಿ ‘ಅಬಲೆ’ಯರು ಬಲಿಯಾಗುವುದೂ ಹೊಸತಲ್ಲ. ನಂಬಿ, ೨೦೦೪ರವರೆಗೆ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿಪಂದ್ಯಗಳಿರಲಿಲ್ಲ. ದೈಹಿಕವಾಗಿ ಬಲಿಷ್ಠರಾಗಿದ್ದರೂ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ತಡೆಯಲಾಗಲಿಲ್ಲ. ಹೆಣ್ಣೆಂಬ ಕಾರಣಕ್ಕೆ ಹಿಂಸೆ, ಹೀಯಾಳಿಕೆಗಳನ್ನು ಅವರೀಗಲೂ ಎದುರಿಸುತ್ತಿದ್ದಾರೆ. ಈಗ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳ ಪೀಡಕ ಮಂತ್ರಿಯು, ‘ಬಲಿಷ್ಠವಾಗಿರುವ ಮಹಿಳಾ ಕುಸ್ತಿಪಟುಗಳನ್ನು ನಿಭಾಯಿಸಲಿಕ್ಕೆ ಅಂತಿಂಥವರಿಂದ ಸಾಧ್ಯವಿಲ್ಲ, ನನ್ನಂಥ ಗಂಡಸೇ ಬೇಕು’ ಎಂದೊಮ್ಮೆ ಹೇಳಿದ್ದರ ಹಿಂದೆ ಅವರ ದೈಹಿಕ ಸಾಮರ್ಥ್ಯದ ಬಗೆಗಿನ ಅಸಹನೆ ಎದ್ದು ಕಾಣುತ್ತದೆ. ಅಸಹನೆ ಇಂದಿನದಲ್ಲ, ಭಾರತದಲ್ಲಷ್ಟೇ ಅಲ್ಲ. ಕುಸ್ತಿಪಟು ಮಹಿಳೆಯರು ವಿಶ್ವಾದ್ಯಂತ ಶೋಷಣೆಗೊಳಗಾಗಿದ್ದಾರೆ. ಅವಕಾಶ, ಅಧಿಕಾರದ ನೆಪದಲ್ಲಿ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆದಿದೆ.

ಈ ಹೇಳಿಕೆಗೆ ಇಂಬುಕೊಂಡುವಂತೆ ನಾವು ಮರೆತ ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾಬಾನು ಬೇಗಂ ಬಗೆಗೆ ಒಂದಷ್ಟು ಮಾಹಿತಿ ಪ್ರಕಟವಾಗಿದೆ. ಪೇಪರ್‌ಕ್ಲಿಪ್ ಮತ್ತು ಬಿಬಿಸಿ ಜಾಲತಾಣಗಳು ಶತಮಾನದ ಹಿಂದೆ ಭಾರತದ ಮುಸ್ಲಿಂ ಹುಡುಗಿಯೊಬ್ಬಳು ಕುಸ್ತಿಪಟುವಾಗಲು ಯತ್ನಿಸಿ, ಮನೆ ಬಿಟ್ಟುಬಂದು, ಉಸ್ತಾದನನ್ನು ತಾನೇ ಹುಡುಕಿಕೊಂಡು ಅಜೇಯಳಾಗಿ ಮೆರೆದ ರೋಚಕ ಕಥನವನ್ನು ವೃತ್ತಪತ್ರಿಕೆಯ ವರದಿಗಳಿಂದ ಹೆಕ್ಕಿ ತೆಗೆದಿವೆ. ಮಾಹಿತಿ ಅಸ್ಪಷ್ಟವಾಗಿದ್ದರೂ ಅವಳ ಬದುಕು, ಸಾಧನೆಗಳು ದಿಙ್ಮೂಢಗೊಳಿಸುವಂತಿವೆ. 

1920ರ ಸುಮಾರು ಪಂಜಾಬ್‌ನ ಮಿರ್ಜಾಪುರದ ಕುಸ್ತಿಪಟುಗಳ ಮನೆಯಲ್ಲಿ ಹಮೀದಾಬಾನು ಹುಟ್ಟಿದಳು. ಕುಸ್ತಿ ನೋಡುತ್ತ, ತಾನೂ ಅಖಾಡಕ್ಕಿಳಿಯುವ ಕನಸು ಕಾಣುತ್ತ ಬೆಳೆದರೂ ಸಾಂಪ್ರದಾಯಿಕ ಪರಿಸರದಲ್ಲಿ ಕುಸ್ತಿಪಟುವಾಗುವುದು ಕಷ್ಟ ಎಂದರಿತಳು. ಮನೆಬಿಟ್ಟು ಅಮೃತಸರಕ್ಕೆ ಬಂದು ಸಲಾಂ ಪೈಲ್ವಾನ ಎಂಬವನ ಮನವೊಲಿಸಿ ತರಬೇತಿ ಪಡೆಯತೊಡಗಿದಳು. ಕುಸ್ತಿ ಮಾಡಬೇಕೆಂದರೆ ಗಂಡಸರೊಡನೆಯೇ ಮಾಡಬೇಕಿತ್ತು. ಎಂದೇ ಹೆಣ್ಣುತನದ ಹೊರಚಹರೆಗಳನ್ನೆಲ್ಲ ಗಂಡಸರಂತೆ ಬದಲಿಸಿಕೊಂಡಳು. 

೧೯೩೭ರಲ್ಲಿ ಮೊದಲ ಬಾರಿ ಅಖಾಡಕ್ಕಿಳಿದಳು. ಮಹಿಳಾ ಪೈಲ್ವಾನರಿರದ ಕಾರಣ ಪುರುಷರೊಡನೆ ಸೆಣಸಬೇಕಾಯಿತು. ಪರ್ದಾದಲ್ಲಿರಬೇಕಾದ ಭಾರತೀಯ ನಾರಿ, ಅದರಲ್ಲೂ ಮುಸ್ಲಿಂ ಮಹಿಳೆ ಪೈಲ್ವಾನರನ್ನು ಕೆಡವಿ, ಎತ್ತಿ ಒಗೆಯುವುದೆಂದರೆ?! ಅಮೃತಸರವೆಂಬ ಕುಸ್ತಿಯ ತವರು ಹುಬ್ಬು ಗಂಟಿಕ್ಕಿತು. ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು. ಕಟ್ಟುಕತೆಗಳು ಹರಿದಾಡಿದವು. ಬದುಕಲು ಕಷ್ಟವಾದಾಗ ಹಮೀದಾ ಅಲಿಘರಕ್ಕೆ ಬಂದಳು. ದೆಹಲಿಯ ಕೆಲವು ಪೈಲ್ವಾನರನ್ನು ಸೋಲಿಸಿದಳು.

ಲಾಹೋರಿನ ಫಿರೋಜ್ ಖಾನನೊಡನೆ ಆಗ್ರಾದಲ್ಲಿ ನಡೆದ ಪಂದ್ಯ ಅವಳನ್ನು ಪ್ರಖ್ಯಾತಗೊಳಿಸಿತು. ಹೆಂಗಸಿನೊಡನೆ ಕುಸ್ತಿಯೇ ಎಂದು ಮೂದಲಿಸಿದ ಫಿರೋಜ್‌ನನ್ನು ಕೆಲವೇ ನಿಮಿಷಗಳಲ್ಲಿ ಕೆಡವಿದಳು. ಚುರುಕುತನದ ಪಟ್ಟುಗಳಿಂದ ದಿನಬೆಳಗಾಗುವುದರಲ್ಲಿ ಖ್ಯಾತಳಾದಳು. ಒಬ್ಬರಾದಮೇಲೊಬ್ಬರನ್ನು ಮಣಿಸಿದಳು.


ಗಂಡಸರಿಗಿಂತ ಚೆನ್ನಾಗಿ ಕುಸ್ತಿ ಮಾಡುವ ಹೆಣ್ಣು!! ಅರಗಿಸಿಕೊಳ್ಳಲು ಸಮಾಜಕ್ಕೆ ಕಷ್ಟವಾಯಿತು. ಅವಮಾನಿಸುವ ಬೈಗುಳಗಳು ತೂರಿಬಂದವು. ಕೋಪ ಬಂದರೂ ತಡೆದುಕೊಂಡ ಹಮೀದಾ ಅಖಾಡದಲ್ಲಿ ಗೆದ್ದು ಉತ್ತರಿಸಿದಳು. ‘ಮುಂಚೆನೇ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರ‍್ತಾಳೆ. ಎದುರಾಳಿಗಳು ಬೇಕೆಂದೇ ಸೋಲ್ತಾರೆ’ಂದು ಸುದ್ದಿ ಹಬ್ಬಿಸಲಾಯಿತು. ಪುಣೆಯ ರಾಮಚಂದ್ರ ಸಾಳುಂಕೆಯೊಡನೆ ಪಂದ್ಯ ಏರ್ಪಟ್ಟಾಗ ಕುಸ್ತಿ ಒಕ್ಕೂಟ ತಕರಾರೆತ್ತಿ ಪಂದ್ಯವನ್ನು ರದ್ದುಗೊಳಿಸಿತು. ಕೊಲ್ಲಾಪುರದ ಪೈಲ್ವಾನನೊಬ್ಬನನ್ನು ಸೋಲಿಸಿದ ಬಳಿಕ ಅವನ ಅಭಿಮಾನಿಗಳು ಕಲ್ಲೆಸೆದು ಗದ್ದಲವೆಬ್ಬಿಸಿದರು. ಗುಂಪು ಚದುರಿಲು ಪೊಲೀಸರು ಬರಬೇಕಾಯಿತು. ಮತ್ತೊಮ್ಮೆ ಅವಳ ಪಂದ್ಯದ ಬಳಿಕ ಕುಂಟ ಮತ್ತು ಕುರುಡನ ನಡುವೆ ಕುಸ್ತಿಪಂದ್ಯ ಏರ್ಪಡಿಸಿ ಅವಳ ಪಂದ್ಯವನ್ನು ಮನೋರಂಜನೆಯ ಡಮ್ಮಿ ಪಂದ್ಯವೆಂಬಂತೆ ಬಿಂಬಿಸಲಾಯಿತು. ಅಷ್ಟಾದರೂ ಅವಳ ಜನಪ್ರಿಯತೆ ಎಷ್ಟಿತ್ತೆಂದರೆ ೧೯೪೪ರಲ್ಲಿ ಗೂಂಗಾ ಪೈಲ್ವಾನ್ ಜೊತೆಗಿನ ಕುಸ್ತಿ ನೋಡಲು ಮುಂಬಯಿಯಲ್ಲಿ ೨೦,೦೦೦ ಜನ ಸೇರಿದ್ದರು! ಕೊನೆಯ ಗಳಿಗೆಯಲ್ಲಿ ಪೈಲ್ವಾನ್ ಬೃಹತ್ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಸಿದ್ಧತೆ ನಡೆಸಲು ಸಮಯ ಬೇಕೆಂದು ಪಂದ್ಯ ರದ್ದುಗೊಳಿಸಿದ. ಬಂದ ಜನ ಕೋಪಗೊಂಡು ತಿರುಗಿ ಹೋದರೆಂದು ಬಾಂಬೆ ಕ್ರಾನಿಕಲ್ ಬರೆಯಿತು. ಮಹಾರಾಷ್ಟ್ರದ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿಯವರಿಗೆ ಹಮೀದಾ ತನ್ನ ಕುಸ್ತಿ ಪಂದ್ಯಗಳು ಅನಧಿಕೃತವಾಗಿ ನಿಷೇಧಕ್ಕೊಳಪಟ್ಟು ರದ್ದಾಗುತ್ತಿವೆಯೆಂದು ಪತ್ರ ಬರೆದಳು. ಪ್ರಾಯೋಜಕರು ದುರ್ಮಾರ್ಗದಿಂದ ಹಣ ಬಾಚುತ್ತಿರುವುದಕ್ಕೆ ಹಾಗಾಗುತ್ತಿದೆಯೆಂದು ಮೊರಾರ್ಜಿ ಉತ್ತರ ಬರೆದರು. 

ಕ್ರಾಫ್‌ಕಟ್‌ನ ಕೇಶವಿನ್ಯಾಸ, ಯುದ್ಧ ಕವಚದಂತಹ ಅಂಗಿ ತೊಡುತ್ತಿದ್ದ ಹಮೀದಾಳ ಎತ್ತರ, ತೂಕ, ಊಟ ಎಲ್ಲವೂ ದೇಶವಿದೇಶಗಳಲ್ಲಿ ಸುದ್ದಿಯಾದವು. ಅವಳ ಬಗೆಗೆ ವಿದೇಶೀ ಪತ್ರಿಕೆಗಳೂ ಬರೆದವು. ದಿನಕ್ಕೆಂಟು ತಾಸು ನಿದ್ರೆ, ೬ ತಾಸು ತಾಲೀಮು, ೧೦ ತಾಸು ಊಟ ಎಂದೆಲ್ಲ ಕತೆಗಳು ಹಬ್ಬಿದವು. ಐದಡಿ ಮೂರಿಂಚು ಎತ್ತರವಿದ್ದ ಹಮೀದಾ ೧೦೮ ಕೆಜಿ ತೂಗುತ್ತಿದ್ದಳು. ಪ್ರತಿದಿನ ೫.೬ ಲೀಟರ್ ಹಾಲು, ೨.೮ ಲೀಟರ್ ಸೂಪು, ೧.೮ ಲೀಟರ್ ಜ್ಯೂಸ್ ಕುಡಿಯುತ್ತಿದ್ದಳು. ದಿನವೂ ಒಂದು ಕೋಳಿ, ಒಂದು ಕೆಜಿ ಮಟನ್, ಒಂದು ಕೆಜಿ ಬಾದಾಮಿ, ಅರ್ಧ ಕೆಜಿ ಬೆಣ್ಣೆ, ೬ ಮೊಟ್ಟೆ, ಎರಡು ದೊಡ್ಡ ಬ್ರೆಡ್‌ಲೋಫ್, ಎರಡು ತಟ್ಟೆ ಬಿರಿಯಾನಿ ತಿನ್ನುತ್ತಿದ್ದಳು. 


ಆ ವೇಳೆಗೆ ೩೨೦ ಪಂದ್ಯಗಳಲ್ಲಿ ಅಜೇಯಳಾಗುಳಿದ ‘ಅಲಿಘರದ ಅಮೆಜಾನ್’, ‘ನನ್ನನ್ನು ಸೋಲಿಸಿದವರನ್ನು ಮದುವೆಯಾಗುವೆ’ನೆಂದು ಫೆಬ್ರುವರಿ ೧೯೫೪ರಲ್ಲಿ ಪ್ರಕಟಿಸಿದಳು. ಬಹಿರಂಗ ಸವಾಲಿಗೆ ಉತ್ತರವಾಗಿ ಪಾಟಿಯಾಲಾ, ಕಲಕತ್ತಾದಿಂದ ಪೈಲ್ವಾನರು ಬಂದು ಸೋತುಹೋದರು. ಮೇ ತಿಂಗಳಲ್ಲಿ ಬರೋಡಾದ ಆಸ್ಥಾನ ಪೈಲ್ವಾನ್ ಛೋಟೆ ಗಾಮಾ ಮತ್ತು ಬಾಬಾ ಪೈಲ್ವಾನರೊಡನೆ ಸೆಣಸಬೇಕಿತ್ತು. ಅವಳಲ್ಲಿ ತಲುಪುವುದರೊಳಗೆ ವಾಹನಗಳು, ಲೈಟುಕಂಬ, ಗೋಡೆಗಳ ಮೇಲೆಲ್ಲಾ ಪೋಸ್ಟರುಗಳು ರಾರಾಜಿಸುತ್ತಿದ್ದವು. ಪಂದ್ಯ ಶುರುವಾಯಿತು. ಗಾಮಾನನ್ನು ಇನ್ನೇನು ಮಣಿಸಿಯೇಬಿಟ್ಟಳು ಎನ್ನುವಷ್ಟರಲ್ಲಿ ‘ಛೇ, ಹೆಂಗಸಿನೊಂದಿಗೆ ಸೆಣಸುವುದೇ?’ ಎಂದಾತ ಹಿಂದೆಗೆದ. ನಂತರ ಬಾಬಾ ಪೈಲ್ವಾನನು ‘ಗೆದ್ದರೆ ಮದುವೆ, ಸೋತರೆ ನಿವೃತ್ತಿ’ ಎಂದು ಘೋಷಿಸಿದ. ಅವನನ್ನು ೧ ನಿಮಿಷ ೩೪ ಸೆಕೆಂಡಿನಲ್ಲಿ ಮಣಿಸಿ ನಿವೃತ್ತಿಯಾಗುವಂತೆ ಮಾಡಿದಳು. ೧೯೫೪ರಲ್ಲಿ ರಷಿಯಾದ ವೆರಾ ಚಿಸ್ತಿಲಿನ್ ಎನ್ನುವವಳ ಜೊತೆಗೆ ಕುಸ್ತಿ ಏರ್ಪಟ್ಟಿತು. ಒಂದೇ ನಿಮಿಷದಲ್ಲಿ ಸೋಲಿಸಿ ನೆಲಕ್ಕೊರಗಿಸಿದಳು. ಈ ಪಂದ್ಯ ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಸೆಣಸುವ ಕನಸನ್ನು ಹುಟ್ಟಿಸಿತು. 

ಅಷ್ಟೇ. 

ಅದಾದಮೇಲೆ ಇದ್ದಕ್ಕಿದ್ದಂತೆ ಕುಸ್ತಿಯ ರಂಗದಿಂದ ಕಾಣೆಯಾದಳು. ಜನರ ನೆನಪಿನಿಂದ ನಿಧಾನ ಮರೆಯಾದಳು. ಏನಾದಳು, ಎಲ್ಲಿರುವಳೆಂದು ಯಾರಿಗೂ ತಿಳಿಯಲಿಲ್ಲ. ಈಗ ಅಷ್ಟಿಷ್ಟು ವಿಷಯ ಹೊರಬಂದಿದೆ.

ತನ್ನನ್ನು ಕೇಳದೇ ಯೂರೋಪಿಗೆ ಹೋಗುವೆನೆಂದು ಪ್ರಕಟಿಸಿದ್ದಕ್ಕೆ ಕೋಪಗೊಂಡ ಸಲಾಂ ಕೈಕಾಲಿನ ಮೂಳೆ ಮುರಿಯುವಂತೆ ಅವಳಿಗೆ ಹೊಡೆದು ಮುಂಬಯಿಯ ಕಲ್ಯಾಣದಲ್ಲಿ ಬಿಟ್ಟು ಅಲಿಘರಕ್ಕೆ ಹೋಗಿಬಿಟ್ಟ. ಅವಳ ಕೈಕಾಲುಗಳ ಬಲಿಷ್ಠಗೊಳಿಸಿದ್ದ ಕಬ್ಬಿಣದ ಬಡಿಗೆಯೇ ಮೂಳೆಯನ್ನೂ ಮುರಿಯಿತು. ವರುಷಗಟ್ಟಲೆ ನಡೆಯಲಾಗಲಿಲ್ಲ. ಮತ್ತೆಂದೂ ಕುಸ್ತಿ ಮಾಡಲಿಲ್ಲ. ಹಮೀದಾ ಗಂಡುಮಗುವೊಂದನ್ನು ಸಾಕುತ್ತಿದ್ದಳು. ಬದುಕು ದುಸ್ತರವಾಯಿತು. ದನ, ಎಮ್ಮೆ ಸಾಕಿ ಹಾಲು ಮಾರಾಟದಿಂದ ಜೀವಿಸಿದಳು. ತಿಂಡಿತಿನಿಸು ಮಾಡಿ ರಸ್ತೆಬದಿ ಮಾರುತ್ತ ಮಗನೊಡನೆ ಬದುಕಿದಳು. ಕಾಸಿಗೆ ಕಾಸು ಕೂಡಿಸಿ ಮನೆ ಕಟ್ಟಿಸಿ ಬಾಡಿಗೆಗೂ ಕೊಟ್ಟಳು. (ಹಮೀದಾ ಸಲಾಂನನ್ನು ಮದುವೆಯಾಗಿದ್ದಳೆಂಬ ಗಾಳಿಸುದ್ದಿಯಿತ್ತು. ಅವನ ಮಗಳ ಪ್ರಕಾರ ಅವರಿಬ್ಬರೂ ಮದುವೆಯಾಗಿದ್ದರು. ಮಗಳು ಹಮೀದಾಳನ್ನು ಚಿಕ್ಕಮ್ಮನೆಂದೇ ಕರೆಯುತ್ತಿದ್ದಳು. ಹಮೀದಾಳ ಸಾಕುಮಗನ ಪ್ರಕಾರ ಅವರು ಆಪ್ತವಾಗಿದ್ದರು, ಆದರೆ ಮದುವೆಯಾಗಿರಲಿಲ್ಲ. ಸಲಾಂ ಪೈಲ್ವಾನ್ ಮರಣಶಯ್ಯೆಯಲ್ಲಿರುವಾಗ ನೋಡಿಬಂದಳಂತೆ. ೧೯೮೫ರ ಆಸುಪಾಸು ತೀರಿಕೊಂಡ ಅವಳ ಕೊನೆಯ ದಿನಗಳು ದಾರುಣವಾಗಿದ್ದವು.)






ಕುಸ್ತಿ ಭಾರತದ ಜನಪ್ರಿಯ, ಪುರಾತನ ಕ್ರೀಡೆ. ರಾಮಾಯಣ ಮಹಾಭಾರತದಲ್ಲೂ ಮಲ್ಲಯುದ್ಧ ನಡೆದಿದೆ. ಭೀಮ, ದುರ್ಯೋಧನ, ಜರಾಸಂಧ, ಬಲರಾಮ, ಹನುಮಂತ ಮುಂತಾದವರೆಲ್ಲ ಗದೆ ಹಿಡಿದ ಮಲ್ಲಯುದ್ಧ ಪ್ರವೀಣರೇ. ಆದರೆ ಗದೆ ಹಿಡಿದ ಚಾಮುಂಡಿ ಅದನ್ನು ಅಲಂಕಾರಿಕವಾಗಿ ಕೆಳಗೆ ಮಲಗಿಸಿ ಹಿಡಿದಿರುವಳೇ ಹೊರತು ಮೇಲೆತ್ತಿ ಝಳಪಿಸುವುದಿಲ್ಲ. ಅಂದರೆ ಹೆಣ್ಣುಗಳು ಕುಸ್ತಿಯಾಡಿರುವ ಪೌರಾಣಿಕ, ಐತಿಹಾಸಿಕ ದಾಖಲೆಗಳಿಲ್ಲ. ಅಂತಹ ಗಂಡುಲೋಕದಲ್ಲಿ ಅಜೇಯಳಾಗಿ ಮೆರೆದದ್ದು; ದೇಹ ಮುಚ್ಚಿಕೊಳ್ಳದವರು ಹೆಂಗಸರೇ ಅಲ್ಲ ಅಂದುಕೊಳ್ಳುವ ಸಮಾಜದಲ್ಲಿ ಬುರ್ಖಾ, ಪರ್ದಾ, ಹಿಜಾಬ್, ನಖಾಬ್‌ಗಳೆಂಬ ಧಾರ್ಮಿಕ ಕಟ್ಟಲೆಗಳನ್ನು ಮೀರಿದ್ದು; ಮದುವೆಯ ಹಂಗಿಲ್ಲದೆ ಸಲಾಂನೊಡನೆ ಬದುಕಿದ್ದು; ಕಷ್ಟನಷ್ಟಗಳು ಬಂದೆರಗಿದಾಗಲೂ ಘನತೆಯ ಬದುಕು ಕಟ್ಟಿಕೊಂಡದ್ದು ಹಮೀದಾಳ ಛಲ, ಸ್ವಾಭಿಮಾನದ ಪ್ರತೀಕವಾಗಿವೆ. ಆದರೆ ಗಂಡು ಗೆಲ್ಲಲಾಗದ, ಗೆದ್ದವನನ್ನು ಮದುವೆಯಾಗುವೆನೆಂಬ ಅವಳ ಸವಾಲನ್ನು ಸಹಿಸದ ಗಂಡುಗರುವ ಕೈಕಾಲು ಮುರಿದು ಕೂರಿಸಿದ್ದು ಮಹಿಳೆಯರ ಸ್ವಾಯತ್ತ ಹಂಬಲದ ಗತಿಯನ್ನು ಸೂಚಿಸುವ ಸಂಕೇತವಾಗಿದೆ. 


ಮಿಲ್ಡ್ರೆಡ್ ಬರ್ಕ್

ಇದು ವಿಶ್ವದೆಲ್ಲೆಡೆಯ ಪರಿಸ್ಥಿತಿ. ಇಲ್ಲಿ ಹಮೀದಾ, ಅಲ್ಲಿ ಮಿಲ್ಡ್ರೆಡ್ ಬರ್ಕ್. ಅಮೆರಿಕದಲ್ಲಿ ತನ್ನನ್ನು ಸೋಲಿಸುವವರಿಲ್ಲದೆ ಅಜೇಯಳಾಗುಳಿದಿದ್ದ ಮಿಲ್ಡ್ರೆಡ್ ಬರ್ಕಳದ್ದೂ ದಮನಿತ ಕಥನವೇ. ತಾನು ಮೊದಲು ನೋಡಿದ ಕುಸ್ತಿ ಪಂದ್ಯದಲ್ಲಿ ಗೆದ್ದವನನ್ನು ಬೆನ್ನತ್ತಿ, ಕಾಡಿ, ಬೇಡಿ, ಕುಸ್ತಿ ಕಲಿತು, ಕೊನೆಗೆ ಅವನನ್ನೇ ಮದುವೆಯಾಗಿದ್ದ ಬರ್ಕ್, ಮಹಿಳಾ ಕುಸ್ತಿಪಟುಗಳ ಹಕ್ಕಿಗಾಗಿ ಹೋರಾಡಿದವಳು. ವಿಶ್ವ ಕುಸ್ತಿಪಟುಗಳ ಒಕ್ಕೂಟದಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಜಾಗವಿಲ್ಲವೆಂದಾಗ ೧೯೫೪ರಲ್ಲಿ ಏಕಾಂಗಿಯಾಗಿ ಸೆಣಸಿ ವಿಶ್ವ ಮಹಿಳಾ ಕುಸ್ತಿಪಟುಗಳ ಸಂಘ ಕಟ್ಟಿದವಳು. ಇಡಿಯ ಅಮೆರಿಕವನ್ನು, ವಿಶ್ವವನ್ನು ಸುತ್ತಿ ಒಬ್ಬರಾದ ಮೇಲೊಬ್ಬರು ಕುಸ್ತಿಪಟುಗಳನ್ನು ಮಣಿಸಿದವಳು. (ಅವಳು ಭಾರತಕ್ಕೇಕೋ ಬರಲಿಲ್ಲ. ಅದೇ ಕಾಲಮಾನದಲ್ಲಿ ಇಲ್ಲಿ ಪ್ರಸಿದ್ಧಳಾಗಿದ್ದ ಹಮೀದಾ ಬಾನುವಿನೊಡನೆ ಸೆಣಸಲಿಲ್ಲ.) ಆದರೆ ಅವಳೂ ಗಂಡ-ಗುರುವಿನಿಂದ ಅನ್ಯಾಯಕ್ಕೆ ಒಳಗಾದಳು. 

ಅಲ್ಲಿ ಅವಳು, ಇಲ್ಲಿವಳು. ಅಂದು ಅವರು, ಇಂದು ಇವರು. ಅಂತೂ ಲೋಕದ ಗಂಡುಗರುವ ಇಳಿಯದ ಹೊರತು ಹೆಣ್ಣು ನೆಮ್ಮದಿಯ ನಾಳೆಗೆ ಬೆಳಕು ಹರಿಯದು.

Photos: Internet 

ಡಾ. ಎಚ್. ಎಸ್. ಅನುಪಮಾ