Sunday 21 May 2023

ಕೆಂಪು-ಬಿಳಿ-ಹಸಿರು ಸಂಗಾತಿ: ಪ್ರಕಾಶ್ ಹಿಟ್ನಳ್ಳಿ

 




ವಿಜಯಪುರದ ಬಳಿಯ ಹಿಟ್ಟಿನಹಳ್ಳಿ. ಆ ಊರಲ್ಲಿ ಅಂದು ಜಾತ್ರೆ. ನೆತ್ತಿ ಮೇಲೇ ನೇಸರಿತ್ತು. ಅದರ ಪರಿವೆಯಿಲ್ಲದ ಮಕ್ಕಳು ಜೀಕುವ, ತೂಗುವ, ಹತ್ತಿಳಿವ ಆಟ ನಡೆಸಿದ್ದರು. ಬೀದಿಬೀದಿಗಳ ದಾಟಿ, ಸಂದಿ ಓಣಿ ಹಾಯ್ದು ಹೋಗುತ್ತಲೇ ಇದ್ದೆವು. ಗಾಳಿ ಬೆಳಕಾದರೂ ಎಲ್ಲಿಂದ ಬಂದೀತು ಎಂದು ನಾವಚ್ಚರಿಗೊಳ್ಳುವಂತೆ ಕಟ್ಟಿದ ಕಿರಿದಾದ ಮಣ್ಣಿನ ಮನೆಗಳು. ಊಟದ ಸಮಯವೆಂದು ಮನೆಗಳಿಂದ ಹೊರಸೂಸುತ್ತಿದ್ದ ನಾನಾ ಪರಿಮಳಗಳು ತಿಳಿಸುತ್ತಿದ್ದವು.

ಕಿರಿದಾದ ಓಣಿಗಳ ಹಾದು ಮನೆಯೆದುರು ನಿಂತೆವು. ಅದು ಮನೆಯೇ? ಸುಣ್ಣಬಣ್ಣ ಕಾಣದ ಮಣ್ಣು, ಕಲ್ಲುಗಳು ಸಹಜ ರೂಪ, ಬಣ್ಣದಲ್ಲಿ ಅಂಟಿಕೊಂಡು ನಿಂತಿದ್ದವು. ಗೋಡೆಗಳು ಮೂಲೆಯಲ್ಲಿ ಕೂಡಿಕೊಂಡು ಅಷ್ಟು ಆಗಸವನ್ನು ಒಳಗೆ ಹಿಡಿದಿಟ್ಟು ಸೂರು ಹೊದ್ದು ಮನೆಯೆಂಬ ಆವರಣ ಸೃಷ್ಟಿಸಿದ್ದವು. ನೂರಾರು ವರ್ಷ ಹಳೆಯ ಮರದ ಬಾಗಿಲಿನ ಹೊಳಪು ಮಾಸಿದ್ದರೂ, ಮೈ ಬಿರಿಬಿಟ್ಟರೂ ತನ್ನ ಗಾತ್ರ ಮಾತ್ರದಿಂದ ಧೃಢತೆಯನ್ನು ಸಾರುತ್ತ ನಿಂತಿತ್ತು. ಬಾಗಿಲುವಾಡದ ಮೇಲೆ ಮತ್ತು ಎರಡೂ ಬದಿ ಗೂಡುದೀಪಗಳಿಗೆ ಮಾಡಿದ್ದ ಗೂಡುಗಳು ಖಾಲಿಯಿದ್ದವು. 

ಹೊರಜಗಲಿಯ ಮೇಲೆ ಪುಳ್ಳೆ ಒಣಗುತ್ತಿವೆ. ಅರೆತೆರದ ಬಾಗಿಲ ಒಳಗೆ ಯಾರೋ ಇರುವರೆನಲು ಯಾವ ಸದ್ದೂ ಕೇಳಿಸುತ್ತಿಲ್ಲ. ಒಂದು ಜೊತೆ ಜೋಡೂ ಹೊರಗಿಲ್ಲ. ಬಾಗಿಲಾಚೆ ನೇತಾಡುತ್ತಿದ್ದ ಪೈಪಿನ ತುದಿಗಂಟಿದ ಕೆಇಬಿ ಮೀಟರು ಒಳಗ್ಯಾರೋ ವಾಸವಿರುವರೆಂದು ಸೂಚಿಸಿತು. ೨೦೦ ವರ್ಷಗಳ ಹಿಂದಿನ ಕಾಲದ ತುಣುಕೊಂದನ್ನು ಅನಾಮತ್ ಎತ್ತಿತಂದು ಸಣ್ಣಪುಟ್ಟ ತಾರಸಿ ಮನೆಗಳ ಈ ಗಲ್ಲಿಯಲ್ಲಿ ಇಟ್ಟಂತೆ ಅನಿಸಿತು.

ಬಾಗಿಲು ಸರಿಸಿದರೆ ಒಳಗೆ ನಿತಾಂತ ಮೌನ. ಅಲ್ಲಿ, ನಡುಮನೆಯಲ್ಲಿ ಮೌನಚಾಪೆಯ ಮೇಲೆ ಎರಡು ಅಂಗೈಗಳನ್ನೇ ತಲೆದಿಂಬಾಗಿಸಿ ಅಂಗಾತ ಮಲಗಿದ ರೂಹು ಕಾಣಿಸಿತು. ಕಾಮ್ರೇಡ್ ಎಂದು ಕರೆದದ್ದೇ ಕೃಶಜೀವವೊಂದು ಧಿಗ್ಗನೆದ್ದು ಕುಳಿತಿತು. ಹಣೆಮೇಲೆ ಕೈಯಿಟ್ಟು ಕಣ್ಣು ಕಿರಿದಾಗಿಸಿ ಉರಿವ ಬಿಸಿಲ ಬೀದಿಯೆಡೆಗೆ ನೋಡಿತು. ಬಂದವರಾರೆಂದು ತಿಳಿದದ್ದೇ ಕಾಷ್ಟವೇ ಜೀವ ತಳೆದಂತಾಯಿತು. ಬರ್‌ಬರ್ರೀ, ಬರ್‌ಬರ್ರೀ ಎನ್ನುತ್ತ ತಡಬಡಿಸಿ ಎದ್ದು ಬಂದವರನ್ನು ಸ್ವಾಗತಿಸಿ, ಕೂರಿಸಲು ತಾವು ಹುಡುಕತೊಡಗಿತು. 

ಮಂಚದ ಮೇಲೆ, ಕಟ್ಟೆಯ ಮೇಲೆ ನಾವು ಕೂರಬೇಕು, ಕೆಳಗೆ ತಾನು ಕೂರಬೇಕು ಎನ್ನುವುದು ಅವರ ವ್ಯವಸ್ಥೆ. ಬೇಡಬೇಡವೆಂದರೂ ಹೊರಹೋಗಿ ‘ಸಂತೋಷ’ ಎಂದು ಕೂಗಿ ಕರೆದು ನೀರು, ಸಿಹಿ ತರಿಸಿದರು. ‘ಇದು ಗಾಂವ್ಟಿ ಸ್ವೀಟ. ಕರದಂಟು, ತಗೋರಿ’ ಎಂದು ಎರಡೂ ಕೈ ತುಂತುಂಬಿ ಕೊಡತೊಡಗಿದರು. ಇದನೂ ತಗೋರಿ, ಇನ್ನೂ ತಗೋರಿ, ನೀವು ಕೂಡ್ರಿ, ಇಲ್ಲೆ ಬರ್ರಿ ಎಂದು ಆ ಜೀವ ಪಟ್ಟ ಸಂಭ್ರಮದಲ್ಲಿ, ಅವರ ನಡೆ, ಮಾತು, ಚರ್ಯೆಯಲ್ಲಿ, ‘ನಿಮ್ಮ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ವೆಂಬ ಬಸವಣ್ಣನ ಮಾತು ಮೈವೆತ್ತಿಬಂದಂತೆ ಕಂಡಿತು. ಅವರನ್ನು ನೋಡುತ್ತ ಸರಿಯಾಗಿ ಮಾತನಾಡಲು ಸಾಧ್ಯವಾಗುವಂತೆ ನಡುಮನೆಯ ನಡುವೊಂದು ಕುರ್ಚಿಯಿರಿಸಿ ಅವರ ಸುತ್ತ ನಾವು ಕೂತೆವು.

ಅವರು ಪ್ರಕಾಶ ಕುಲಕರ್ಣಿ. ಶರಣ ಪ್ರಕಾಶ ಕುಲಕರ್ಣಿ. ಅಲ್ಲಲ್ಲ, ಕಾಮ್ರೇಡ್ ಪ್ರಕಾಶ್ ಕುಲಕರ್ಣಿ. ಮನ್ನಿಸಿ, ಹಾಗಲ್ಲ, ಅವರು ಪ್ರಕಾಶ ಹಿಟ್ನಳ್ಳಿ. ಹೌದು. ಪ್ರಕಾಶ್ ಕುಲಕರ್ಣಿಯಾಗಿ ದೊಡ್ಡ ರೈತ ಮನೆತನದ ವಾಡೆಯಲ್ಲಿ ಹುಟ್ಟಿದ ವ್ಯಕ್ತಿ ಪ್ರಕಾಶ್ ಹಿಟ್ನಳ್ಳಿಯಾದದ್ದರ ಹಿಂದೆ ಒಂದು ಪರಿವರ್ತನೆಯ ಜೀವಂತ ಕಥನವಿದೆ.

***

೧೯೪೦ರಲ್ಲಿ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಕುಲಕರ್ಣಿಯವರ ಕೃಷಿ ಮನೆತನದಲ್ಲಿ ಹುಟ್ಟಿದ ಹುಡುಗ ಪ್ರಕಾಶ. ೧೦ ತಿಂಗಳ ಎಳವೆಯಲ್ಲಿಯೇ ಅವನ ತಾಯಿ ಮೂರು ಮಕ್ಕಳ ಬಿಟ್ಟು ತೀರಿಹೋದಳು. ತಂದೆ ಮರುಮದುವೆಯಾಗಲಿಲ್ಲ. ಪ್ರಾಥಮಿಕ ಶಾಲೆ ಊರಲ್ಲೇ ಮುಗಿಯಿತು. ಬಳಿಕ ಕೃಷಿಕ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದು ನಡೆಯಿತು. ತಾಯಿಲ್ಲದ ಮನೆಯ ಹುಡುಗ ಬಳಗದೊಳಗೇ ಏಕಾಂಗಿಯಂತಿದ್ದ. ಅವನಾಯಿತು, ಅವನ ಲೋಕವಾಯಿತು. ಸದಾ ಏನನ್ನೋ ಯೋಚಿಸುತ್ತ ಹುಬ್ಬು ಗಂಟಾಗಿಸಿ, ಕಣ್ಣು ಕಿರಿದಾಗಿಸಿ, ಒಂದುಕಡೆ ಕೂತು ಯೋಚಿಸುತ್ತಿದ್ದ. ನೂರೆಂಟು ಪ್ರಶ್ನೆಗಳು, ಸಂದೇಹಗಳು, ಹಿಂಜರಿಕೆಗಳು. ಜೊತೆಗೊಂದಷ್ಟು ಮನೆತನದ ಹಿರಿಮೆ ಮತ್ತು ಗಂಡುಗತ್ತು. ತಾನು, ತನ್ನ ಸ್ಥಿತಿಗತಿಯ ಬಗೆಗೆ ಕೇಳಿಕೊಳ್ಳುತ್ತ ಬೆಳೆದ ಅವನು ಪ್ರೌಢಶಾಲೆ ಪ್ರವೇಶಿಸಿದ. ಚುರುಕಿನ ಹುಡುಗ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾದರೂ ಎಸ್ಸೆಸ್ಸಿ ಫೇಲಾದ. ಕಾರಣ ಅವನ ಗಮನ ಓದಿನಿಂದ ಹೋರಾಟದತ್ತ ತಿರುಗಿತು. (ನಂತರ ವಕೀಲರಾದ) ವೆಂಕಟೇಶ್ ಕುಲಕರ್ಣಿ ಅವನ ಮಾಸ್ತರಾಗಿದ್ದರು. ಅವರು ವಿದ್ಯಾರ್ಥಿಗಳಲ್ಲಿ ಹೋರಾಟದ ಪ್ರವೃತ್ತಿ ಬೆಳೆಸುತ್ತಿದ್ದರು. ಒಂದುದಿನ ಶಾಲೆಯ ಕಟ್ಟಡ ಹಳತಾಗಿ ಕುಸಿದುಬಿತ್ತು. ಸದ್ಯ, ಮಕ್ಕಳು ಒಳಗಿರದಿದ್ದರಿಂದ ಪ್ರಾಣಾಪಾಯ ತಪ್ಪಿತು. ಅದು ಶಿಥಿಲವಾಗಿದೆಯೆಂದು ಎಷ್ಟು ಬಾರಿ ಪತ್ರ ಬರೆದರೂ, ಖುದ್ದು ಹೋಗಿ ಹೇಳಿದರೂ ರಿಪೇರಿ ಮಾಡಿಸದ ಆಡಳಿತದವರಿಗೆ ಚುರುಕು ಮುಟ್ಟಿಸಬೇಕೆಂದು ಮಾಸ್ತರರು ಮುನ್ಸಿಪಾಲ್ಟಿ ಕಟ್ಟಡಕ್ಕೇ ಇಡೀ ಶಾಲೆಯ ಮಕ್ಕಳನ್ನು ಒಯ್ದರು. ಅಲ್ಲೇ ಒಳಗೆ ಕೂರಿಸಿ ಪಾಠ ಮಾಡತೊಡಗಿದರು. ಅದು ಎಳೆಯ ಪ್ರಕಾಶನ ಸಂಘರ್ಷ, ಹೋರಾಟದೆಡೆಗಿನ ಮೊದಲ ಪಯಣ. ಬಳಿಕ ಅದು ವಿಸ್ತಾರಗೊಂಡಿತು. ಬಿಜಾಪುರದಲ್ಲಿ ಜಾಗೃತ ಭಾರತ ಪತ್ರಿಕೆ ಆರಂಭವಾಗಿ ‘ಜಾಗೃತ ಭಾರತ ಸಂಘಟನೆ’ ಬೆಳೆಯತೊಡಗಿತ್ತು. ಅದರಲ್ಲಿ ಹುಡುಗ ಸೇರಿಕೊಂಡ. ಮುಂದಿನದನ್ನು ಪ್ರಕಾಶ್ ಅವರ ಮಾತುಗಳಲ್ಲೇ ಕೇಳಬೇಕು:

‘ಅಲ್ಲಿ ಲಾಯದಗುಂದಿ ಅಂತ ನಂ ಲೀಡರೊಬ್ಬರಿದ್ದರು. ಅವರಿಗೆ ಸಿದ್ಧಪ್ಪ ನಿಂಬರಗಿ ಲೀಡರ್. ನಿಂಬರಗಿ ಅವರಿಗೆ ಡಾಕ್ಟರ್ ಗಂಗಾಧರ ಅಧಿಕಾರಿ ಅಂತ, ಅವ್ರು ಲೀಡರ್. ಡಾಕ್ಟರ್ ಅಧಿಕಾರಿ ಗೊತ್ತೇನಿಲ್ಲೋ? ಗೊತ್ತಿರಲೇಬೇಕು ನಿಮಗ. ಜರ್ಮನಿಯ ಬರ್ಲಿನಿನಲ್ಲಿ ಕೆಮಿಸ್ಟ್ರಿ ಪಿಎಚ್ಡಿ ಮಾಡಿದ್ದರು. ಐನ್‌ಸ್ಟೀನ್, ಜೆ. ಸಿ. ಬೋಸ್, ಸಿ. ವಿ. ರಾಮನ್ ಅಂಥವರ ಪರಿಚಿತರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರು. ಮೀರತ್ ಕೇಸಿನಲ್ಲಿ ಜೈಲಿಗೆ ಹೋದ ೩೩ ಜನರಲ್ಲಿ ಅವರೂ ಒಬ್ಬರು. ಅವರು ನಾಲ್ಕು ಜನರನ್ನು ತಯಾರು ಮಾಡಿದರು: ಬಾಲಸಿಂಗ್ ಮಾಸ್ತರ್, ಸದಪ್ಪ ಅಕ್ಕಿ, ರಾಜಪ್ಪ ದುಬೆ, ಲಾಯದಗುಂದಿ.

ಅದರಾಗ ದುಬೆ ಅನ್ನೋರು (ಬಿಜಾಪುರದಿಂದ ಆಮೇಲೆ ಎರಡು ಸಲ ಎಂಪಿ ಆದ್ರು), ಕಮ್ಯುನಿಸ್ಟ್, ಸೋಷಲಿಸ್ಟ್, ಅಂಬೇಡ್ಕರ್‌ವಾದಿ ಅಂತ ಯಾರ‍್ಯಾರು ಕಾಂಗ್ರೆಸ್ಸಿಂದ ದೂರದೂರ ಇರತಿದ್ದರೋ, ಅವರನ್ನೆಲ್ಲ ಎಳೆದೆಳೆದು ಕಾಂಗ್ರೆಸ್ಸಿಗೆ ತರತಿದ್ರು. ‘ಕಾಂಗ್ರೆಸ್ ನಿಮ್ದೂ ಹೌದು, ನಮ್ಮಂಥಾ ಎಲ್ಲರ‍್ದೂ ಹೌದು. ನೀವೂ ಬರ್ರಿ, ಕಾಂಗ್ರೆಸ್‌ನ ಕಬ್ಜಾ ಮಾಡ್ರಿ’ ಅಂತಿದ್ರು. ಎಸ್. ಎಸ್. ಅರಕೇರಿ ಅಂತ. ೧೯೬೭ರಾಗ ಎಂಎಲ್‌ಎ ಆಗಿದ್ರು. ಅವರ‍್ನೂ ಕಾಂಗ್ರೆಸ್ಸಿಗೆ ಕರಕಂಡು ಬಂದ್ರು. ಆದರೆ ನಮಗೆ ಅಷ್ಟೊತ್ಗೆ ಕಾಂಗ್ರೆಸ್ ಬಗ್ಗೆ ವಿರೋಧ ಭಾವನೆ ಬಂದಿತ್ತು. ಬ್ಲಿಟ್ಸ್‌ನಂತಹ ಪತ್ರಿಕೆ ಓದಿ, ಪಾಟೀಲ ಪುಟ್ಟಪ್ಪ, ಬೊಮ್ಮಾಯಿ ಬರೆದ ಎಂ. ಎನ್. ರಾಯ್ ಕುರಿತ ಬರಹ ಓದಿ ಅನ್ಯಾಯದ ವಿರುದ್ಧ ಹೋರಾಟ ಅಂದ್ರೆ ಕಾಂಗ್ರೆಸ್ ವಿರುದ್ಧ ಹೋರಾಟ ಅಂತ ಅನಿಸಿಬಿಟ್ಟಿತ್ತು. ನನ್ನಂಗೆ ಅನಿಸಿದೋರು ಬಾಳ ಮಂದಿ ಇದ್ರು. ನಮ್ಮಲ್ಲೆ ಅಲ್ಲಾವುದ್ದೀನ್ ಹಿಪ್ಪರಗಿ, ದಸ್ತಗೀರ್ ಸಾಹೇಬ್ ಕೊಲ್ಹಾರ್, ಬಾಲಸಿಂಗ್ ಉಸ್ತಾದ ಮೊದಲಾದವರು ಸುತ ಇದ್ದರು. ಇವರೆಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಕಮ್ಯುನಿಸ್ಟ್ ಪಕ್ಷ, ಚಿಂತನೆ ಬೆಳೆಯಕ್ಕೆ ಕಾರಣ ಆದವರು. ೧೯೪೫-೪೬ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಶುರು ಮಾಡಿದ್ರು. 


ಕಾಂಗ್ರೆಸ್ ಬಿಟ್ಟು ಎಡಕ್ಕೆ ಯಾಕೆ ಬಂದ್ರಿ?

ನಾನು ಕಾಂಗ್ರೆಸ್ ಬಿಟ್ಟು ಎಡಕ್ಕೆ ಬರಕ್ಕೆ ಡಾ. ಸಂಗಪ್ಪ ಮನಗೂಳಿ ಕಾರಣ. ಅವರು ನಾನಾಸಾಹೇಬರ ತೂಫಾನ್ ಸೇನೇಲಿದ್ರು. ರಾಮದುರ್ಗ, ಜತ್ತ್, ಸಾಂಗ್ಲಿ, ಜಮಖಂಡಿ ಸಂಸ್ಥಾನಗಳ ವಿರುದ್ಧ ಪ್ರಜಾ ಪರಿಷತ್ ಕಟ್ಟೋದ್ರಲ್ಲಿ ಅವರು ಪಾತ್ರ ದೊಡ್ಡದು. ೧೯೬೨ರಲ್ಲಿ ಜಾಗೃತ ಭಾರತ ಪತ್ರಿಕೆ ಶುರುವಾಯ್ತು. ನಮ್ಮ ಸಂಬಂಧ ಗಾಢವಾಗಿ ಬೆಳೀತು. ರಾವ್ ಬಹಾದೂರ್, ಸದಪ್ಪ ಅಕ್ಕಿ ಅವರ ಪರಿಚಯ ಆಯ್ತು. ಇಂಚಗೇರಿ ಸಂಪ್ರದಾಯದ ಪರಿಚಯಾನೂ ಆತು. ಇಂಚಗೇರಿ ಊರಂತೂ ಕಮ್ಯುನಿಸ್ಟ್ ಊರಿನಂಗಿತ್ತು. ಅಲ್ಲಿ ಮಕ್ಕಳಿಗೆ ಲೆನಿನ್, ಮಾವೋ ಅಂತೆಲ್ಲ ಹೆಸರಿಟ್ಟಿದ್ರು. ಆ ಹೆಸರಿನೋರು ಈಗೂ ಸಿಗತಾರೆ ನಿಮಗೆ. ಅವರು ಭೂಮಾಲಿಕರ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಭೀಮಾ ನದಿ ದಂಡೆಯ ಜಾಗೀರದಾರರ ವಿರುದ್ಧ ಭಾಳ ಹೋರಾಟ ನಡೆದವು. ಈ ಹೋರಾಟ ಕಟ್ಟಲಿಕ್ಕೆ ಅಂತನೇ ರೈತಸಂಘದ ಯುನಿಟ್ಸ್ ಇದ್ದವು. ತೆಲಂಗಾಣ, ಬಂಗಾಳ, ಯುಪಿ ತರಾನೇ ಇಲ್ಲೂ ಸಣ್ಣಪುಟ್ಟ ಭೂ ಹೋರಾಟ ನಡೆದೇ ಇತ್ತು. ಇಂಚಗೇರಿ ಮಹಾದೇವಪ್ಪನವರ ನಂತರ ಭೂಪಾಲ ನಾಂದ್ರೇಕರ್ ಅಲ್ಲಿಗೆ ಬಂದ್ರು. ಇಂಚಗೇರಿ ಮಠ ಹೇಗಿತ್ತು ಅಂದ್ರೆ ಎಲ್ಲೇ ಏನೇ ತಕರಾರು ನಡೀಲಿ, ಮಠ ಮಧ್ಯಪ್ರವೇಶ ಮಾಡಿ ಲೋಕಲ್ ಕೋರ್ಟ್ ತರಹ ನ್ಯಾಯ ಬಗೆಹರಿಸ್ತಾ ಇತ್ತು. ಯಾವ್ದೇ ಭಾಗದಲ್ಲಿ ಹೋರಾಟ ನಡೀಲಿ, ೨೦೦, ೩೦೦, ೫೦೦ ಜನ ಕಾರ್ಯಕರ್ತರ ತಂಡ ತಗಂಡು ಇಂಚಗೇರಿಯ ಲೀಡರ್ಸ್ ಬರ‍್ತಿದ್ರು. ಸರ್ಕಾರದೋರು ಎಷ್ಟೋ ಸಲ ಡಾಂಗೆ, ಇಂಚಗೇರಿ ಮಹಾದೇವಪ್ಪ, ಡಾ. ಮನಗೂಳಿ ಅವರನ್ನೆಲ್ಲ ಅರೆಸ್ಟ್ ಮಾಡಿ ಆರ್ಥರ್ ರೋಡ್ ಜೈಲಲ್ಲಿಟ್ಟಿದ್ರು. ಒಂದ್ಸಲ ಜೈಲಲ್ಲಿ ಡಾಂಗೆ ಮರ್ಡರ್ ಆಗ್ತಿದ್ರು. ಅವರನ್ನು ಅಂಕೋಲಾದ ಗಣು ನಾಯ್ಕರ್ ಉಳಿಸಿದ್ದು. ಆಗ ಬಿ. ವಿ. ಕಕ್ಕಿಲ್ಲಾಯ ಅವರ ಹತ್ರ ಭೂಗತ ಪಾರ್ಟಿಯ ಕೆಲವು ಜವಾಬ್ದಾರಿಗಳಿದ್ವು. ಅವರು ಮಹಾರಾಷ್ಟ್ರ ಪಾರ್ಟಿ ಯುನಿಟ್‌ಗಿಂತ ಬೆಂಗಳೂರು ಯುನಿಟ್ ಜೊತೆ ಹೆಚ್ಚು ಸಂಪರ್ಕ ಇಟ್ಕಂಡಿದ್ರು. ಹಿಂಗಾಗಿ ಕರ್ನಾಟಕದ ಏಕೀಕರಣಕ್ಕೆ ಮುಂಚೆನೇ ನಾವು ಬೆಂಗ್ಳೂರಿನ ಪಾರ್ಟಿ ಜನರ ಜೊತೆಗೆ ಹೆಚ್ಚು ಸಂಪರ್ಕ ಇಟ್ಕಂಡಿದ್ವಿ.


ನೀವು ಜಮೀನ್ದಾರರ ಮನೆಯವರು. ಭೂ ಹೋರಾಟದಲ್ಲಿ ತೊಡಗಿದ್ದಕ್ಕೆ ಮನೆಯಲ್ಲಿ ಏನೂ ಹೇಳಲಿಲ್ವಾ? 

ಯಾರೂ ನನ್ನನ್ನ, ನನ್ನ ಕೆಲ್ಸಾನ ಕೇರ್ ಮಾಡ್ಲಿಲ್ಲ. ಇಂವಾ ಏನೋ ಹೇಳತಾನ, ಹೋರಾಟ ಗೀರಾಟ ಅಂತ ಅನ್ನತಾನ, ಹಂಗೆಲ್ಲಾಕತಿ ಅಂತ ಬಾಳ ಧೈರ್ಯದಾಗಿದ್ರು. ಮುಂಬೈ ಪ್ರಾಂತ್ಯದೊಳಗ ಮೊರಾರ್ಜಿ ಒಂದು ಕುಟುಂಬ ಹೆಚ್ಚಂದ್ರ ೫೨ ಎಕರೆ ಜಮೀನು ಇಟಗೋಬೌದು; ಒಕ್ಕಲುತನಕ್ಕ ಬ್ಯಾರೇದರಿಗೆ ಕೊಟ್ಟ ಜಮೀನು ಉಳೋರಿಗೇ ಸೇರತದೆ ಅನ್ನೋ ಕಾಯ್ದೆ ಜಾರಿ ತರತಾನೆ ಅಂತ ಸುದ್ದಿ ಬಿತ್ತು. ಅದು ಗೊತ್ತಾಗಿದ್ದೇ ಮೋಜಣಿ ಇಲಾಖೇಲಿ ನೌಕರ ಆಗಿದ್ದ ನಮಪ್ಪ ಹೊಲಾ ಎಲ್ಲ ವಾಪಸ್ ತಗಂಡು ಒಕ್ಕಲುತನಾ ಚಾಲೂ ಮಾಡಿದ. ನಾ ಸಣ್ಣಾವಿದ್ದಾಗೇ, ೧೦ ತಿಂಗಳಾ ಇರಬೇಕು, ಅವ್ವ ತೀರ‍್ಕಂಡಿದ್ಲು. ಮತ್ತೆ ಮದುವೆ ಆಗಲಿಲ್ಲ. ನಮ್ಮನ್ನು ನೋಡಿಕಳೋ ಕೆಲಸ, ರೈತಾಪಿ ಎಲ್ಲಾ ಮಾಡಾಕ ಹತ್ತಿದ್ದ. ೧೯೬೬ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಾಗ ಟೆನನ್ಸಿ ತರಹದ ಏನೋ ಮಾಡಾಕ್ ಹೋದ್ರು. ಆದ್ರೆ ಅದು ಸರಿ ಇರ್ಲಿಲ್ಲ. ಉಳೋರಿಗೆ ಸಿಗೋ ಭೂಮಿಗೂ ಒಂದು ಸೀಲಿಂಗ್ ಹಾಕಿದ್ರು. ಅದಕ್ಕೆ ಬಾಳ ವಿರೋಧ ಬಂದವು. ಆದರೆ ದೇವರಾಜ ಅರಸು ಕಾಯ್ದೆ ಬಂತಲ್ಲ, ಅದು ನಿಜಕೂ ರೆವಲ್ಯೂಷನರಿನೇ. ಬಂಗಾಳ, ಕೇರಳದ ಕಾಯ್ದೆಕಿಂತಾ ಅದು ರೆವಲ್ಯೂಷನರಿ. ಯಾಕಂತಿರಾ? ಅಲ್ಲಿ ಪಹಣಿಯಿರಬೇಕು, ಉಳುಮೆ ಮಾಡುತ್ತಿರುವ ರೈತರ ಹೆಸರಿರಬೇಕು ಅಂದಿದ್ರು. ಇಲ್ಲಿ ಅದೇನಿಲ್ಲ. ಸಾಕ್ಷಿ ಸಾಕು. ಟ್ರಿಬ್ಯೂನಲ್ ಮಾಡಿಬಿಟ್ರು, ಲೋಕಲ್ ಟ್ರಿಬ್ಯೂನಲ್. ಅದರಲ್ಲಿ ಬೇರೆಬೇರೆ ಗುಂಪಿನ ಹಿರೇರನ್ನ ಹಾಕಿ ಒಬ್ರಿಗೊಬ್ರು ಸುಳ್ಳು ಹೇಳಲಾರದಂಗ ಸತ್ಯ ಸೀಲ್ ಆಗೋಹಂಗ ಆತು. ನಿಂ ಕಾರವಾರ, ದಕ್ಷಿಣಕನ್ನಡ ಜಿಲ್ಲೆ ವಳಗ ಬಾರೀ ಸಕ್ಸಸ್ ಆಯ್ತು. ಹೌದಿಲ್ಲೋ? ಆದ್ರ ನಂ ಜಿಲ್ಲೆಯೊಳಗ ಬಾಳ ಮಂದಿ ಉಳುಮಿ ಮಾಡೋರ ಹತ್ರ ಜುಲುಮಿಂದ ಸಹಿ ತಗೊಂಡ್ರು. ಅದ ತಿಳಿದು ನಾವು ಹೋರಾಟ ಮಾಡ್ತಿದ್ದೆವು.

ಇನ್ನ ನಂ ಮನೆಯೋರು. ಅವರು ನನ್ನ ಲೆಕ್ಕದಿಂದ ಬಿಟ್ಟಿದ್ರು. ಯಾಕ? ನಾ ೧೬ ವರ್ಷಕ್ಕ ಜನಿವಾರ ತಗದು ಹರ‍್ದುಹಾಕಿದ್ದೆ. ಗುಡಿಗೆ ಹೋಗೋದು ಬಿಟ್ಟಿದ್ದೆ. ಹಾಗಂತ ಮನೇ ಬಿಡಲಿಲ್ಲ. ಹೋಗಿ ಬರತಾ ಇರ‍್ತಿದ್ದೆ. ಅಪ್ಪ ಅಂವಾ ಇಲ್ಲಾದ ಮ್ಯಾಲ ೫೦-೬೦ ಎಕರೆ ಭೂಮಿ ಜವಾಬ್ದಾರಿ ನೋಡ್ತಿದ್ದೆ. ನಂಗೆ ಅವರು ಸಪೋರ್ಟೂ ಕೊಡ್ಲಿಲ್ಲ, ವಿರೋಧನೂ ಮಾಡಲಿಲ್ಲ. ಅವರಿಗೆ ಎರಡು ವಿಷ್ಯ ಗೊತ್ತಿದ್ವು: ಇಂವಾ ಕೆಣಕಿದರ ಸುಮ್ಮಿರಾಂವಲ್ಲ ಅನ್ನೋದೊಂದು. ಮತ್ತ ಇಂವಾ ಕೆಟ್ ಕೆಲ್ಸಾ ಮಾಡಂಗಿಲ್ಲ ಅನ್ನೋದು ಇನ್ನೊಂದು. ನಾ ಯಾವ ಪುಸ್ತಕ ತಂದು ಓದತಿದ್ನೋ ನಮಪ್ಪ ಅವನೆಲ್ಲಾ ಓದತಿದ್ದ. ಅವರಿಗೆ ನಂದೇನು ಅಂತ ಗೊತ್ತಿತ್ತು. ಹಂಗಾಗಿ ಯಾದಕೂ ಜುಲುಮಿ ಮಾಡಲಿಲ್ಲ. ಮದವಿ ಅಂದ್ರು. ಇಲ್ಲ ನಾನು ಸ್ವಾಮಿ ವಿವೇಕಾನಂದರ ಹಾದೀ ವಳಗ, ಗಾಂಧೀ ಹೇಳಿದಂಗ ಇರತೀನಿ ಅಂದೆ. ಇಬ್ರು ಅಣ್ಣಂದ್ರು ಮದುವೆಯಾದ್ರು. ಅವರ ಸಂಸಾರದ ಜೊತೆ ಮನೆ ಬೆಳಕೋತ ಹೋಯ್ತು. 

ಪ್ರೇಮ ಗೀಮ?

ಏ ಎಲ್ಲಾದ್ರೂ ಐತೆನು? ಆಗೆಲ್ಲ ಗಂಡು, ಹೆಣ್ಣು ಒಟ್ಟು ಕೂಡಿ ಕೆಲ್ಸಾ ಮಾಡೋ ಹೊಕ್ಕು ಬಳಕೆನೇ ಇದ್ದಿದ್ದಿಲ್ಲ. ಮುಂಬೈ, ಕಲಕತ್ತಾದಂತ ಕಡೆ ಇರಾಕಬೇಕು ಅಷ್ಟ. ಕರ್ನಾಟಕದ ಕಮ್ಯುನಿಸ್ಟ್ ವಲಯದಾಗಂತೂ ಹೆಣ್ಣುಮಕ್ಕಳು ಗಂಡುಮಕ್ಕಳು ಒಗ್ಗೂಡಿ ಕೆಲಸಾ ಮಾಡೋದು ಒಟ್ ಇರ್ಲಿಲ್ಲ. 

ಆದರೆ ಕಾಂಗ್ರೆಸ್ಸಿನಲ್ಲಿ, ನೀವಿದ್ದ ಸೇವಾದಳದಲ್ಲಿ ಸಾಕಷ್ಟು ಹೆಣ್ಣುಮಕ್ಕಳಿದ್ರು. ೩೦೦ ವಿಧವೆಯರ ಒಂದು ಮಹಿಳಾ ತಂಡವನ್ನು ಉಮಾಬಾಯಿ ಕುಂದಾಪುರ ಕಟ್ಟಿದ್ದರು. ಗಾಂಧೀಜಿಯವರ ಕಾಲದಲ್ಲಿ ಹೆಚ್ಚು ಹೆಣ್ಣುಮಕ್ಕಳು ಸಾಮಾಜಿಕವಾಗಿ ತೊಡಗಿಕೊಂಡಿದ್ರು. 

ಹೌದು. ಉಮಾಬಾಯಿ, ಯಶೋಧರಮ್ಮ ತರಾ ಬಾಳ ಮಂದಿ ಹೆಣಮಕ್ಕಳು ಕಾಂಗ್ರೆಸ್ಸಿಗೆ ಬಂದ್ರು. ಆದರ ಕಮ್ಯುನಿಸ್ಟ್ ಪಕ್ಷದೊಳಗ ಅಷ್ಟು ನಡೀಲಿಲ್ಲ ಅಂತ ಅನಸತದ. ಸಮಸಮಾಜ ಅನ್ನೋವಂತಾ ನಾವು, ಹುಡಕಿ ಹುಡುಕಿ ಇನ್ನೂ ಅಷ್ಟು ಹೆಣಮಕ್ಳನ್ನ ಸೇರಿಸಿಕೋಬೇಕಿತ್ತು ಅಂತನಿಸತದ.

ಕಮ್ಯುನಿಸ್ಟ್ ಪಕ್ಷದ ಸಮಸಮಾಜ ಕನಸಿನಲ್ಲಿ, ಪಕ್ಷದ ಅಜೆಂಡಾದಲ್ಲಿ ಗಂಡುಹೆಣ್ಣು ಸಮಾನತೆ ಇರಲಿಲ್ಲ ಅಂತಾಯ್ತು ಅಲ್ವೇ? ಇವತ್ತಿಗೂ ಕಮ್ಯುನಿಸ್ಟ್ ಪಕ್ಷಗಳ ಪಾಲಿಟ್ ಬ್ಯೂರೋದಲ್ಲಿ ಮಹಿಳೆಯರು ವಿರಳವಾಗಿರೋದಕ್ಕೆ ಇದೇ ಮನಸ್ಥಿತಿ ಕಾರಣವಾಗಿರಬಹುದೇ? 

ಹೌದು. ನೀವು ಹೇಳಿದ್ದನ್ನೆಲ್ಲ ನಾನು ಹೊತಗೋತೀನಿ, ತಪ್ಪಾಗೇದ. ಮಹಿಳಾ ಪ್ರಶ್ನೆ ನಮಗ ಮುಖ್ಯ ಆಗಲಿಲ್ಲ. ನಮದಷ್ಟೇ ಅಲ್ಲ, ನನಗನಿಸತದ, ಏಷ್ಯನ್ ದೇಶಗಳಲ್ಲೆಲ್ಲ ಹೀಂಗ ಆಗೇದ. ಮತ್ಯಾರೂ ಬೇಡ, ಕಾಮ್ರೇಡುಗಳು ಅವರವರ ಮನೆ ಹೆಣಮಕ್ಳನ್ನ ಕರಕಂಡು ಬಂದ್ರೂ ಸಾಕಿತ್ತು. ಜಾಗೃತಿ ಬೆಳೀತಿತ್ತು. ಅದು ಆಗಲಿಲ್ಲ. ಇನ್ನು ಯುವಕಾರ್ಯಕರ್ತರಿಗೆ ವೈರಾಗ್ಯ, ಬ್ರಹ್ಮಚರ್ಯಗಳು ಮಹಾ ಮೌಲ್ಯಗಳು ಅನ್ನಂತಹ ವಾತಾವರಣ. ನನ್ನ ಮೇಲೆ ಆನಂದಮಠ ಕಾದಂಬರಿ ಪ್ರಭಾವ, ಅರಬಿಂದೋ, ದಯಾನಂದ ಸರಸ್ವತಿ, ವಿವೇಕಾನಂದರ ಪ್ರಭಾವ ಆಗಿರಬಹುದು. ನಾನಂತ್ರೂ ಗಾಂಧಿ ಪುಸ್ತಕ ಓದೇ ಲಗ್ನಾ ಆಗದು ಬಿಟ್ಟೆ. ಮದಿವಿ ಕಡೆ ಮನಸ್ಸೇ ಹರೀಲಿಲ್ಲ.

ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಪಕ್ಷ ಕಾಂಗ್ರೆಸ್ಸನ್ನು ಬೆಂಬಲಿಸಿತಲ್ಲ?

ಎಮೆರ್ಜೆನ್ಸಿ ಹೊತ್ತಿನಾಗೂ ಸರ್ಕಾರನ ಸಪೋರ್ಟ್ ಮಾಡಿದ್ದಕ್ಕೆ ಪಕ್ಷ ಬಾರೀ ಹೊಡೆತ ತಿಂದಿದೆ. ಮತ್ತ ಪಾರ್ಟಿ ಒಳಗ ವಿರೋಧ ಅಭಿಪ್ರಾಯ ಬಂದು ಒಡೆದಿದೆ. ನಂ ಲೀಡರಾಗಿದ್ದ ಡಾಂಗೆಯವರನ್ನೆ ತೆಗೆದು ಹಾಕಿದಾರೆ. ಆದರ ನನ್ನ ತಿಳುವಳಿಕೆ ಮಟ್ಟಿಗೆ ತುರ್ತು ಪರಿಸ್ಥಿತಿ ಬೆಂಬಲಿಸಲಿಕ್ಕೆ ಒಂದೇ ಕಾರಣ ಇದ್ದದ್ದು ನಮಗ. ಇಂದಿರಾ ಗಾಂಧಿ ೨೦ ಅಂಶದ ಕಾರ್ಯಕ್ರಮ ಹಾಕಿದ್ರಲ್ಲ, ಅದು ಪೂರಾ ಆಂಟಿ ಫ್ಯೂಡಲ್ ಕಾರ್ಯಕ್ರಮ ಮತ್ತು ಅದು ಜಾರಿಗೆ ಬರೋದರಲ್ಲಿ ನಮ್ಮ ಹೋರಾಟನೂ ಇತ್ತು. ಹೌದಿಲ್ಲೋ ನೀವ ನೋಡ್ರಿ, ೧೯೬೯ರಿಂದ ೧೯೭೫-೭೬ರ ತನಕದ ಇಂದಿರಾ ಕಾಂಗ್ರೆಸ್ ಬೇರೆ. ಎಮರ್ಜೆನ್ಸಿ ನಂತರದ ಸಂಜಯ್ ಗಾಂಧಿ ಕಾಂಗ್ರೆಸ್ ಬೇರೆ. ಹಾಗಾಗಿ ೨೦ ಅಂಶದ ಕಾರ್ಯಕ್ರಮ ಅನುಷ್ಠಾನ ಆಗಾಕ ಎಮರ್ಜೆನ್ಸಿ ಒಳ್ಳೇ ಅವಕಾಶ ಅಂತ ತಿಳಿದಿವಿ. ಬಾಳ ಕೆಲಸಾ ಮಾಡಿದಿವಿ. ಅದು ಎಲ್ಲೆಲ್ಲಿ ಅನುಷ್ಠಾನ ಆಕೋತ ಹೋಯ್ತೋ, ಅಲ್ಲೆಲ್ಲ ನಾವು ಅರೆಸ್ಟ್ ಆದ್ವಿ. ದೇಶಾದ್ಯಂತ ಒಟ್ಟು ೩೨೦೦೦ ಸಿಪಿಐ ಕಾರ್ಯಕರ್ತರು ಬಂಧನಕ್ಕೊಳಗಾದ್ರು. 

ನೀವು ಅರೆಸ್ಟ್ ಆಗಿದ್ರಾ? ಭೂಗತ ಆಗಿದ್ರಾ?

ಅರೆಸ್ಟ್ ಆಗೇನಿ, ಆದರ ಭೂಗತ ಆಗಲಿಲ್ಲ. ನನ್ನ ಕೆಲಸದ ರೀತೀಲಿ ಯಾವಾಗೂ ಭೂಗತ ಆಗೂ ಪ್ರಸಂಗ ಬರಲಿಲ್ಲ. ಆದರ ಭಾಳ ಮಂದಿ ಭೂಗತ ಆಗಿ ಕೆಲಸಾ ಮಾಡ್ಯಾರ. ಹುತಾತ್ಮ ಆಗ್ಯಾರ. ಮನೀಮಠ ಆಸಿ ಬಿಟ್ಟು ಜೈಲಿನ್ಯಾಗ ಕೊಳತಾರ. ನಾ ಲಾಕಪ್ಪಿನಾಗ ಹೊಡತ ಬಡತ ತಿಂದೇನಿ, ಭೂಗತ ಆಗಲಿಲ್ಲ.

ಕಮ್ಯನಿಸ್ಟೇತರ ಚಟುವಟಿಕೆಗಳಲ್ಲೂ ಇದ್ರಾ?

೧೯೫೫ ಅನಸತದ, ಗೋವಾ ವಿಮೋಚನೆ ಟೈಮಲ್ಲಿ ಬೇರೆ ಬೇರೆ ಕಡೆಯಿಂದ ಕಾರ್ಯಕರ್ತರನ್ನ ಕಳಿಸಿ ಹೋರಾಡಿದವರು ಕಮ್ಯುನಿಸ್ಟರೇ. ಅದು ಇಂಪೀರಿಯಲಿಸ್ಟ್ಸ್ ವಿರುದ್ಧ ಹೋರಾಟದಂಗ ತಿಳಿದಿವಿ. ಆಗೆಲ್ಲ ನಂ ಕಡೆಯಿಂದ ಕಾರ್ಯಕರ್ತರು ಗೋವಾದ ಒಳಗ ನುಸುಳಿದರು. 

ಕಮ್ಯುನಿಸ್ಟೇತರ ಚಟುವಟಿಕೆ ಅಂದ್ರ, ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಪಿಎಸ್‌ಪಿ, ಆರ್‌ಪಿಐ ಕೂಡೇ ಕೆಲಸ ಮಾಡತಿದ್ವಿ. ೧೯೬೦ರಲ್ಲಿ ರಾಷ್ಟ್ರೀಯ ಕಾರ್ಮಿಕ ಮುಷ್ಕರ ಆತು. ಜಾಗೃತ ಭಾರತ ಸಂಘಟನೆಯಿಂದ ಒಟ್ಟೇ ಹೋರಾಡಿದ್ವಿ. ನಾನು ಮೂರು ದಿನ ಲಾಕಪ್‌ನಲ್ಲಿದ್ದೆ. ಆಮ್ಯಾಲೆ ನಮ್ಮನ್ನ ಬಿಟ್ರು. ನಂ ಲೀಡರುಗಳನ್ನಷ್ಟೇ ಜೈಲಿಗೆ ಹಾಕಿದ್ರು. ೧೯೬೨ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೀತು. ಆಗ ಅದನ್ನ ಕೊಯ್ನಾ-೨ ಪ್ರಾಜೆಕ್ಟ್ ಅಂತಿದ್ರು. ಮಹಾರಾಷ್ಟ್ರಕ್ಕ ೪ ಕೋಟಿ ರೂಪಾಯಿ ಮೊದಲೇ ಕೊಟ್ಟಿದ್ದಿದ್ರೆ ವಿಜಾಪುರನೂ ಬಾಳ ಮೊದಲೇ ಸೊಲ್ಲಾಪುರದಂಗ ಆಗತಿತ್ತು. ಹಂಗಾಗಲಿಲ್ಲ. ಹೋರಾಟ ನಡೀತು. ವಿಜಾಪುರ ನಗರ ಸೇವಾ ಸಮಿತಿ ಅಂತ ಆತು. ಪಿ. ಎಸ್. ಪಾಟೀಲ್ ಅಧ್ಯಕ್ಷರು, ಲಾಯದಗುಂದಿ ಅದರ ಸೆಕ್ರೆಟರಿ. ೪ ಲಕ್ಷ ಎಕರೆಗೆ ನೀರುಣಿಸೋ ಕೊಯ್ನಾ-೨ ಬ್ಯಾಡ ನಮಗ, ೨೨ ಲಕ್ಷ ಎಕರೆಗೆ ನೀರುಣಿಸೋ ಆಲಮಟ್ಟಿ ಪ್ರಾಜೆಕ್ಟ್ ತಗಳಿ ಅಂತ ಹೋರಾಟ ನಡೀತು. ಅದರಾಗ ನಾನಿದ್ದೆ. ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಹೋರಾಟ ಮಾಡಿದ್ವಿ. ಕೊನೆಗೆ ೧೯೬೪ರಾಗ ಶಾಸ್ತ್ರಿಯವರು ೧೫ ಲಕ್ಷ ಎಕರೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. 

ಕಮ್ಯುನಿಸ್ಟ್ ಪಕ್ಷ ವಿಭಜನೆ ಬಗ್ಗೆ ಏನು ಹೇಳ್ತೀರಿ?

ವಿಕೇಂದ್ರೀಕರಣ ಆಗಬೇಕೇ ಹೊರತು ವಿಚ್ಛಿದ್ರ ಆಗಬಾರದು. ನಾ ಇವತ್ಗೂ ಸಾಧ್ಯ ಇದ್ದಷ್ಟೂ ಒಂದಾಗ್ಬೇಕು ಅಂತೀನಿ. ಆದರ ಕಾಲ ಹೀಂಗ ಹೊಂಟದ, ಕಮ್ಯುನಿಸ್ಟ್ ಪಕ್ಷ ಅಷ್ಟ ಅಲ್ಲ, ಎಲ್ಲಾವ್ದೂ ಹೋಳಾಗ್ಯಾವ, ಆಗಲಿಕತ್ತಾವ. ಅದಕ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಿಂತ ಸ್ವಹಿತಾಸಕ್ತಿನೇ ಹೆಚ್ಚು ಕಾರಣ ಅನಸತದ ನನಗ. ನನ್ನ ಮಾತು ಸರಿ ಹೌದಲ್ಲೋ ನೀವ ಯೋಚನೆ ಮಾಡರಿ. ನೆಹರೂ ಸರ್ಕಾರದ ಜೊತೆ ಹೋಗಬೇಕೋ ಬೇಡವೋ ಅನ್ನುವುದೇ ಮುಖ್ಯ ಕಾರಣವಾಗಿ ಪಕ್ಷ ಒಡೀತು. ರಷ್ಯಾ ಜೋಡಿ ನೆಹರೂ ಗೌರ್ಮೆಂಟಿನ ಸಂಬಂಧ ಚಲೋ ಇತ್ತಲ, ಕೆಲವ್ರು ಕಾಂಗ್ರೆಸ್ ಜೊತೆನೇ ಇರೋ ನಿರ್ಧಾರ ಮಾಡಿದ್ರು. ಇಂಡೋಚೀನಾ ಯುದ್ಧ ಆಯ್ತು. ನೆಹರೂ ಜೊತೆ ಇಲ್ಲದೇ ಇರೋರು ಅರೆಸ್ಟ್ ಆದ್ರು. ಅವರೆಲ್ಲ ಸೇರಿ ಹೊಸಾ ಪಕ್ಷ ಹುಟ್ಟತು. ಇದ್ರ ಬಗ್ಗೆ ಬಾಳಾ ಮಾತುಕತೆ ಆಗಿದೆ. ಬಾಳ ಗೊಂದಲ. ಎಷ್ಟು ಮಾತಾಡಿದರೂ ಸಮಾಧಾನ ಆಗಂಗಿಲ್ಲ. ಏನು ಹೇಳದು. ರಷ್ಯಾ ಚೀನಾ ದೂರ ಆಗಿ ಇಲ್ಲಿ ಎರಡು ಪಕ್ಷ ಆದ್ವು ಅನಿಸತದ. ಇಲ್ಲೀ ಬಾಳ ಮಂದಿ ಆಚೆಗ್ ಹೋದ್ರು. ಮೂಲ ಪಕ್ಷದಾಗ ಸ್ವಲ್ಪ ಜನ ಅಷ್ಟ ಉಳದ್ವಿ. ನಾನೂ ಮೂಲ ಪಕ್ಷದಾಗೇ ಉಳದೆ. ಪಕ್ಷ ಒಡದಿದ್ದು ಮತ್ತ ಒಡೀತು, ಮತ್ತ ಒಡೀತು. ಇದುತನಾ ೨೦-೩೦ ಹೋಳಾತಂದರ ಪಕ್ಷ, ಐಡಿಯಾಲಜಿ ಉಳೀತಾವೇನು? ಏನ್ ಡಿಫರೆನ್ಸ್ ಐತಿ, ಕೂತು ಮಾತಾಡಿ ಬಗೆಹರಿಸಿಕೋಬೇಕು, ಅಷ್ಟೇ ಶಿವಾಯ್ ಪಕ್ಷ ಒಡೀಬಾರ್ದು. ಆದರ ಈಗ ಯಾಕೋ ದೊಡ್ಡ ಶತ್ರು ಎದುರು ಬಂದು ನಿಂತಂತ ಹೊತ್ತಿನ್ಯಾಗ ಎಲ್ರೂ ಕೂಡೋ ಮಾತಾಡ್ಲಿಕ್ ಹತ್ಯಾರ. ನೀವೂ ಎಲ್ಲಾರ‍್ನೂ ಕೂಡಿಸಿಕೋತ ಹೊಂಟೀರಿ. ಅದ ಸ್ವಲ್ಪು ಸಮಾಧಾನ ಅನಿಸೇದ ನನಗ. ಒಂದೇ ದಾರೀ ವಳಗ ಹೋಗೋರು, ಒಂದೇ ಕನಸಿನ್ಯಾಗ ದುಡಿಯೋರು ನಾವು ಕೂಡಿ ಚರ್ಚಾ ಮಾಡಬೇಕು, ಕೂಡಿ ಕೆಲಸಾ ಮಾಡಬೇಕು, ಕೂಡಿ ಬಾಳಬೇಕು. ಆಗ ಸಮಾಜದಾಗ ಏನಾದರೂ ಬದಲಾವಣೆ ತರೋಕೆ ಸಾಧ್ಯ ಆಗತದ. ಹೌದಿಲ್ಲೋ? 



ನಾನು ಎನ್ನುವುದನ್ನು ಆದಷ್ಟು ತಪ್ಪಿಸಿಕೊಳ್ಳಲು ನೋಡುತ್ತಿದ್ದ ಆ ಸಂಘಜೀವಿ, ‘ಏ ನಾ ಮಾಡಿದ್ದಲ್ಲದು’, ‘ನಾವೊಬ್ಬನ ಅಲ್ಲ’, ‘ನಾವು ಅಷ್ಟ್ರೂ ಕೂಡಿ ಮಾಡೇವಿ’ಯಂತಹ ಮಾತುಗಳನ್ನು ಪದೇಪದೇ ಹೇಳುತ್ತ ‘ನಾನು’ವಿನಿಂದ ದೂರ ಇರಲು ಯತ್ನಿಸಿದ್ದು ವಿಶೇಷವೆನಿಸಿತು. ಅವರ ಆರೋಗ್ಯದ ಬಗೆಗೆ ವಿಚಾರಿಸಿದಾಗಲೂ ಸಹ, ಅದೇನೂ ದೊಡ್ಡ ಸಮಸ್ಯೆಯಲ್ಲವೆಂಬಂತೆ ತೇಲಿಸಿದರು. ಮಾತಾಡುವಾಗ ಬರುವ ಏದುಸಿರು, ಬಾತುಕೊಂಡ ಕಾಲು, ಆಯ ತಪ್ಪುತ್ತ ನಡೆಯುತ್ತಿದ್ದ ಪರಿಗೆ ಮತ್ತೆಮತ್ತೆ ಆರೋಗ್ಯದ ಬಗೆಗೆ ಕೇಳಿದೆವು. ‘ಹಾರ್ಟಿನ ಪಂಪ್ ಏನೋ ಸರೀ ಕೆಲಸ ಮಾಡತಿಲ್ಲ ಅನತಾರ, ಅದಕ ಮಾತ್ರೆ ಕೊಟ್ಟಾರ. ಊಟ ಎಷ್ಟ್ ಉಣತೀನೋ ಅಷ್ಟು ಮಾತ್ರೆನೂ ತಗೋರಿ ಅನತಾರ. ನಾನ ಅಷ್ಟಿಷ್ಟು ಕಡಿಮಿ ಮಾಡಿಕೋತ ಬಂದೇನಿ. ಶುಗರು ಬಂದದ ಅಂದರು. ಅದು ಬ್ಯಾಡ, ಇದು ಬ್ಯಾಡ ಅಂದ್ರು. ಈಗ ಯಾರೋ ಹೊಸಬ ಡಾಕ್ಟರು ಸಿಕ್ಕಾರ. ಔಷಧ ಇಲ್ಲದಂಗ ಕಡಿಮಿ ಮಾಡಿ ಕೊಡತೇನಿ ಅಂದಾರ’ ಎಂದು ಆರೋಗ್ಯದ ವಿಷಯ ಬೆಳೆಸಲಿಚ್ಛಿಸದೆ ಮೊಟಕುಗೊಳಿಸಿದರು.

ಬಹುತೇಕ ಹೋರಾಟಗಾರರು ಪ್ರಾಯದ ಕಾಲದಲ್ಲಿ ಆರೋಗ್ಯ ಗಮನಿಸಿರುವುದಿಲ್ಲ. ದೇಹ ಮಾಗಿದಾಗಲೂ ಕಾಯಿಲೆಗೆ ಔಷಧಿ, ಆಹಾರಕ್ರಮ, ವ್ಯಾಯಾಮಗಳ ಬಗೆಗೆ ವಿಶ್ವಾಸವಿಡುವುದಿಲ್ಲ. ಗಾಂಧಿ ಇದಕ್ಕೊಂದು ಅಪವಾದದಂತಿದ್ದದ್ದು ಬಿಟ್ಟರೆ ಎಲ್ಲರೂ ಹೀಗೇ ಎಂದುಕೊಂಡು ಮೇಲೆದ್ದೆವು. ಒಮ್ಮೆ ಮನೆ ಸುತ್ತು ಹಾಕಿದೆವು. ಆ ಮನೆಗೆ ಎಲ್ಲೂ ಕಿಟಕಿಯಿಲ್ಲ, ಮೇಲೊಂದು ಸಣ್ಣ ಗೂಡಿನಂತಹ ಕಿಂಡಿ ಮಾತ್ರ. ಆದರೂ ಎರಡು ಮೊಳ ದಪ್ಪದ ಗೋಡೆಗಳ ಕೋಣೆಯಲ್ಲಿ, ಬಿರುಬೇಸಿಗೆಯ ವಿಜಯಪುರ ಜಿಲ್ಲೆಯ ಒಂದೂರಿನಲ್ಲಿ ಫ್ಯಾನಿಲ್ಲದ ಮನೆಯಲ್ಲಿ ತಂಪಾಗಿ ಕುಳಿತಿದ್ದೆವು. ಒಂಗಿನ ಮನೆಯಂತೂ ಇನ್ನಷ್ಟು ತಣ್ಣಗಿತ್ತು. ಮಣ್ಣುಮಕ್ಕು ಸೇರಿಸಿ ಕಟ್ಟಿದ ಹಳೆಯ ಮನೆಗಳು ಹಾಗೇ ತಂಪು ಎಂಬ ಉತ್ತರ ಬಂದಿತು. ಆ ಮನೆಯಲ್ಲಿ ಒಂದೂ ಫ್ಯಾನಿಲ್ಲ. ಫ್ಯಾನಷ್ಟೇ ಅಲ್ಲ, ಅಲ್ಲಿ ಇನ್ನೆಷ್ಟೆಷ್ಟೋ ಇಲ್ಲ. ಮುಂದಿನ ಬಾಗಿಲು ಪೂರಾ ಹಾಕಲಾಗುವುದಿಲ್ಲ. ಹಿಂದಿನ ಬಾಗಿಲೇ ಇಲ್ಲ. ಅಡುಗೆಯ ಮನೆಯ ಒಂದುಕಾಲದ ಸಮೃದ್ಧಿ, ಸುವರ್ಣ ಯುಗಗಳನ್ನು ಸಾರುತ್ತ ಇರುವ ಒಲೆ, ತೋಡೊಲೆ, ನಾಗಂದಿಗೆ, ನೇತು ಹಾಕುವ ಗೂಟ, ನಿಲ, ಕಪಾಟು, ದೀಪದ ಗೂಡುಗಳು ಹತ್ತಾರು ವರ್ಷಗಳಿಂದ ಉಪಯೋಗವಾಗುತ್ತಿಲ್ಲ. ಅಡುಗೆ ಮನೆಯ ಹಿಂದಿನ ಬಾವಿ, ಬಟ್ಟೆ-ಪಾತ್ರೆ ತೊಳೆವ ಕಲ್ಲಿನ ಕಟ್ಟೆಗಳ ಸುತ್ತ ಜಾಲಿ, ಹಳು, ಕಳೆ ಬೆಳೆದು ಅವು ಕಾಣುವುದೇ ಇಲ್ಲ. ಮುಕ್ಕಾಲು ಭಾಗ ಬಳಸದೇ ಇರುವ ಮನೆಯು ಕೆಲವೇ ದಿನದಲ್ಲಿ ನೆಲಸಮವಾಗುವುದನ್ನು ತಪ್ಪಿಸುವ ಪ್ರಯತ್ನಗಳೇ ನಡೆದಿಲ್ಲ. ‘ಇದು ಇಷ್ಟ. ಇನ್ನೇಸು ದಿನ ಇರತೀನಿ ನಾ? ಎಲ್ಲ ಕಾಯಲಿಕತಾರ, ಈ ಮುತ್ಯಾ ಯಾವಾಗ ಸಾಯತಾನಂತ. ನಾ ಸತ್ತ ಕೂಡಲೇ ಈ ಮನೀ ಬೀಳತದ, ಅದರ ಜಾಗದಾಗ ತಾರಸಿ ಮನೀ ಏಳತಾವ, ನೋಡತಿರ್ರಿ’ ಎನ್ನುತ್ತ ವಿದಾಯದ ಮಾತು ಹೇಳಿದರು. ‘ನಿಮ್ಮನ್ನ ಬಿಟ್ಟು ಬರತೀನಿ’ ಅಂತ ತೇಲುಗಾಲು ಹಾಕುತ್ತ ಹೊರಟ ನಮ್ಮ ಜೊತೆ ಬಂದರು. ಬೇಡಬೇಡವೆಂದು ನಾವು, ಆಸುಪಾಸಿನ ಮನೆಯ ಮಕ್ಕಳು, ಹೆಂಗಸರು ಹೇಳಿದರೂ ಕೇಳಲಿಲ್ಲ. ‘ಬಿಸುಲ್ಯಾಗ ಯಾಕ ಹೊಕ್ಕೀರಿ ಅಜ್ಜಾರ. ನಂ ಹುಡುಗ್ರನ್ನ ಕಳಸ್ತೀವಿ, ನೀವ್ ಹೋಗಬ್ಯಾಡ್ರಿ’ ಅಂತ ಬಾಜು ಮನೆಯ ಹೆಂಗಸರು ಕೂಗಿದರು. ಇಲ್ಲ. ‘ಮುತ್ಯಾ ಮಾತು ಕೇಳಂಗಿಲ್ಲ’ ಎಂದು ಅವರು ಗೊಣಗಿಕೊಂಡಿದ್ದು ಸರಿಯೆನ್ನುವಂತೆ ಅಜ್ಜಾರು ಪಂಚೆ ಚುಂಗನ್ನು ಒಂದು ಕೈಲಿ ಹಿಡಿದು, ಮತ್ತೊಂದು ಕೈ ಗಾಳಿಯಲ್ಲಾಡಿಸುತ್ತ ಮೂಲೆಯ ತನಕ ಬಂದು ನಮ್ಮನ್ನು ಕಳಿಸಿಯೇ ಹಿಂತಿರುಗಿದರು. 

ಅದು ಕಾಮ್ರೇಡ್ ಪ್ರಕಾಶ್.

ಪ್ರಾಯದಲ್ಲಿ ಘನತೆಯಿಂದ, ದಿಟ್ಟವಾಗಿ ಲೋಕಕ್ಕಾಗಿ ಬದುಕಿ ಜೀವನ ಸವೆಸಿದ ಎಷ್ಟೋ ಹಿರಿಯ ಜೀವಗಳು ಇಳಿಗಾಲದ ಒಂಟಿತನ, ಅಸಹಾಯಕತೆ, ಏಕಾಂಗಿತನಕ್ಕೆ ಹಣ್ಣಾಗಿ ಆತ್ಮಮರುಕದಲ್ಲಿ ಮುಳುಗಿಹೋಗುತ್ತವೆ. ದಯನೀಯ ಮನಸ್ಥಿತಿ ತಲುಪುತ್ತವೆ. ಮತ್ತೆ ಕೆಲವರು ತಾವು ನಂಬಿದ್ದಕ್ಕೆ ವಿರುದ್ಧ ದಿಕ್ಕಿನತ್ತ ಚಲಿಸಿ ಢಿಕ್ಕಿ ಹೊಡೆದು ನಿಂತು ಮಣ್ಣಾಗುವುದೂ ಇದೆ. ಆದರೆ ಈ ಘಾಟಿ ತರುಣ ಪ್ರಕಾಶ ಹಿಟ್ನಳ್ಳಿ ಮಾತ್ರ ೮೩ರ ಹರೆಯದಲ್ಲೂ ತಮ್ಮ ವಿನಯ, ವಿಶ್ಲೇಷಣೆ, ವಿಮರ್ಶೆಯ ಗುಣಗಳನ್ನು ಬಿಟ್ಟುಕೊಡದೆ ಆರೋಗ್ಯಕರ ಮನಸ್ಸನ್ನು ಹೊಂದಿರುವುದು; ವರ್ತಮಾನದ ಸಣ್ಣ ಸೂಕ್ಷ್ಮಗಳನ್ನೂ ಗಮನಿಸಿ ಚರ್ಚಿಸುವುದು ಎಲ್ಲ ತಲೆಮಾರಿನ, ಎಲ್ಲ ಸೈದ್ಧಾಂತಿಕ ಧಾರೆಯ ಹೋರಾಟಗಾರರಿಗೂ ಅನುಕರಣೀಯ ಗುಣವಾಗಿದೆ. ಸೆಕೆ, ಚಳಿ, ದೂಳು, ಬಿಸಿಲು, ಬರಗಳ ಸಮ್ಮಿಶ್ರ ನೆಲ ವಿಜಯಪುರವು ಇಂದು ಅಷ್ಟಿಷ್ಟಾದರೂ ಸಮೃದ್ಧಿ, ನೆಮ್ಮದಿ ಪಡೆದಿದ್ದರೆ ಅದಕ್ಕೆ ಪ್ರಕಾಶರ ತಲೆಮಾರಿನ ಹತ್ತುಹಲವು ಹೋರಾಟಗಾರರ ನಿಸ್ವಾರ್ಥ ತೆತ್ತುಕೊಳ್ಳುವಿಕೆ ಕಾರಣವಾಗಿದೆ. ಇವರೆಲ್ಲರ ಹೋರಾಟದ ಬದುಕುಗಳು ಕಾಲದ ವಿಸ್ಮೃತಿಗೆ ಸರಿಯುವ ಮುನ್ನ ದಾಖಲಿಸುವ ಕೆಲಸವಾಗಬೇಕು; ಅವರ ಬದ್ಧತೆ ನಮ್ಮ ಕಣ್ಣುಗಳಲ್ಲಷ್ಟು ಕನಸನ್ನಾದರೂ ತುಂಬಬೇಕು ಎಂದು ಹಾರೈಸಿಕೊಳ್ಳುತ್ತಾ ರಣಬಿಸಿಲಿನಡಿ ನಡೆಯತೊಡಗಿದೆವು. 

ಡಾ. ಎಚ್. ಎಸ್. ಅನುಪಮಾ



ನಿರ್ಭೀತೆ ನಜ್ಮಾ ಬಾಂಗಿ

 



೧೯೮೨. ಸಮಾಜಕ್ಕಾಗಿ ಏನೂ ಮಾಡಲಾಗದೇ ಮಕ್ಕಳನ್ನು ಹೆರುವುದರಲ್ಲಿ ತಾನು ಕಳೆದುಹೋದೆನಲ್ಲ ಎಂದು ಮೂರನೆಯ ಹೆಣ್ಣುಮಗುವನ್ನು ಹೆತ್ತ ಹಾಸನದ ವಕೀಲೆಯೋರ್ವಳು ವಿಷಾದಗೊಂಡಿದ್ದಳು. ಅಕಸ್ಮಾತ್ ಅವಳ ಮನೆಗೆ ಬಂದ ‘ಲಂಕೇಶ್ ಪತ್ರಿಕೆ’ಯಲ್ಲಿ ಬಿಜಾಪುರದ ಮುಸ್ಲಿಂ ಯುವತಿಯೊಬ್ಬಳು ಥಿಯೇಟರಿಗೆ ಹೋಗಿ ಸಿನಿಮಾ ನೋಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದಳೆಂದೂ, ಅವಳ ಮೇಲೆ ಫತ್ವಾ ಹೊರಡಿಸಲಾಗಿದೆಯೆಂದೂ ಸುದ್ದಿ ಬಂದಿತ್ತು. ದಂಡಿಯಾಗಿ ಭಾರತೀಯ ಸಿನಿಮಾಗಳು ತಯಾರಾಗುತ್ತಿದ್ದ ೧೯೮೨ನೇ ಇಸವಿಯಲ್ಲಿ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದು ಅಪರಾಧವಾಗಬಹುದೇ? ಹೆಣ್ಣುಮನಸ್ಸು ಆಸ್ಫೋಟಿಸಿತು. ಮಗುವನ್ನು ಮಲಗಿಸಿ ಆಕೆ ಪೆನ್ನು ಹಿಡಿದಳು. ‘ಇಸ್ಲಾಮಿನಲ್ಲಿ ಮಹಿಳೆಗೂ ಮನರಂಜನೆಗೆ ಅವಕಾಶವಿದೆ. ಒಮ್ಮೆ ಪ್ರವಾದಿಯವರ ಎದುರು ಈಜಿಪ್ಟಿನ ಬುಡಕಟ್ಟು ಜನ ಪಲ್ಟಿ ಲಾಗ ಹಾಕುತ್ತಾ ಆಟ ಪ್ರದರ್ಶಿಸಿದಾಗ ಪತ್ನಿ ಆಯೆಷಾರನ್ನು ಕರೆಸಿ, ತಮ್ಮ ಬೆನ್ನ ಹಿಂದೆ ನಿಲ್ಲಿಸಿ ಅದನ್ನು ತೋರಿಸಿದ್ದರು. ಹದೀಸಿನಲ್ಲಿಯೂ ಎರಡು ಕಡೆ ಹೆಣ್ಣಿಗೂ ಮನರಂಜನೆ ಪಡೆಯುವ ಅವಕಾಶ ಇದೆಯೆಂಬ ಉಲ್ಲೇಖವಿದೆ’ ಎಂದು ಪಕ್ಕಾ ವಕೀಲಳಾಗಿ ದಾಖಲೆ ಸಮೇತ ಬರೆದಳು. ಅದು ಅವಳು ಬರೆದ ಮೊದಲ ಬರಹವಾಗಿತ್ತು. ಅವಳಿಗೆ ಹೆಗಲಾಗಿದ್ದ ಬಾಳಸಂಗಾತಿ ಪತ್ರಿಕೆಗೆ ಕಳಿಸಿದರು. ಬರುವ ವಾರ ಅದು ಪ್ರಕಟವಾಗಿಯೇಬಿಟ್ಟಿತು! ಆ ಯುವತಿ ಹಾಸನದ ಬಾನು ಮುಷ್ತಾಕ್.


ಅವರ ಬರಹದ ಜೊತೆಜೊತೆಗೇ ಇನ್ನೂ ಒಂದು ಬರಹ ಲಂಕೇಶ್ ಪತ್ರಿಕೆಯಲ್ಲಿ ಬಂದಿತ್ತು. ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಎಲ್ಲ ಸಮುದಾಯದ ಮಹಿಳೆಯರೂ ದೇಶ ತಮಗೆ ಕೊಟ್ಟ ಸ್ವಾತಂತ್ರ್ಯವನ್ನು ಧರ್ಮದ ಚೌಕಟ್ಟಿನೊಳಗೆ ಪಡೆಯಲು ಸಾಧ್ಯವಿದೆ; ಶಿಕ್ಷಣ, ಉದ್ಯೋಗ, ಮನರಂಜನೆ ಪಡೆಯುವ ಹಕ್ಕು ಮುಸ್ಲಿಂ ಹೆಣ್ಣುಮಕ್ಕಳಿಗೂ ಇದೆ ಎಂದವರು ಭಾರತೀಯ ಮುಸ್ಲಿಂ ಮಹಿಳೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದ್ದರು. ಆಕೆ ಮಂಗಳೂರಿನ ಸಾರಾ ಅಬೂಬಕರ್. ಇಬ್ಬರಿಗೂ ಲಂಕೇಶರು ಪತ್ರ ಬರೆದು ಪತ್ರಿಕೆಗೆ ಬರೆಯುತ್ತಿರುವಂತೆ ಸೂಚಿಸಿದರು. ಮುಂದೆ ಅವರಿಬ್ಬರೂ ಮುಸ್ಲಿಂ ಮಹಿಳಾ ಸಂವೇದನೆಯನ್ನು ಕನ್ನಡಕ್ಕೆ ಪರಿಚಯಿಸಿದ ಮಹತ್ವದ ಲೇಖಕಿಯರಾದರು.

ಇದಾವುದರ ಅರಿವೂ ಇಲ್ಲದ, ಇದಕ್ಕೆಲ್ಲ ಕಾರಣಳಾದ, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರೂ ನಿರ್ಭೀತೆಯಾಗಿ ಇದ್ದ ಆ ಬಿಜಾಪುರದ ಯುವತಿ ನಜ್ಮಾ ಬಾಂಗಿ.






ಒಂದು ತಲೆಮಾರಿನ ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಗಮನ ಸೆಳೆದು ಅವರನ್ನು ಲೇಖಕಿಯರನ್ನಾಗಿಸಿದ; ದೇಶವಿದೇಶಗಳಲ್ಲೆಲ್ಲ ಸುದ್ದಿಯಾಗಿದ್ದ; ನ್ಯಾಯವಾಗಿ, ಪರಹಿತಕಾರಿಯಾಗಿ, ತನ್ನಿಷ್ಟದ ಹಾಗೆ ಬದುಕಲು ಒಂಟಿಹೆಣ್ಣಿಗೂ ಅವಕಾಶ ಇದೆಯೆಂದು ಧೃಢವಾಗಿ ನಂಬಿ ಬದುಕಿದ ನಜ್ಮಾ ಬಾಂಗಿಯ ಹೆಸರು ಆವಾಗೀವಾಗ ಕಿವಿಮೇಲೆ ಬೀಳುತ್ತಿತ್ತು. ಹೆಣ್ಣಿನ ಸ್ವಾತಂತ್ರ್ಯಹರಣ, ದಮನದ ಮಾತು ಬಂದಾಗ ಸಭೆ, ಸೆಮಿನಾರು, ಪ್ರಬಂಧಗಳಲ್ಲಿ ಸುಳಿಯುತ್ತಿತ್ತು. ಸಿನಿಮಾ ನೋಡುವಂತಹ ಒಂದು ಸಾಮಾನ್ಯ ಸಂಗತಿಯು ಕೆಲವೊಮ್ಮೆ ಎಂತಹ ಸ್ಫೋಟಕ ಪರಿಣಾಮ ಬೀರಬಹುದು ಎನ್ನಲು, ಒಂದು ತಲೆಮಾರಿನ ಮೇಲೆ ಅದರ ಪ್ರಭಾವ, ಪ್ರತಿಫಲವನ್ನು ಗುರುತಿಸಲು ಪ್ರಕರಣವನ್ನು ಉದಾಹರಿಸುತ್ತಿದ್ದೆವು. ಆದರೆ ಆಕೆ ಎಲ್ಲಿ ಹೋದಳು? ಏನು ಮಾಡುತ್ತಿರಬಹುದು? ಒತ್ತಡಕ್ಕೆ ಮಣಿದು ತಣ್ಣಗಾದಳೋ? ಫೈರ್‌ಬ್ರ್ಯಾಂಡ್ ಗುಣವನ್ನಿನ್ನೂ ಉಳಿಸಿಕೊಂಡಿರುವಳೋ? ಎಂಬ ಕುತೂಹಲವುಳಿದಿತ್ತು. ಇದೇ ಏಪ್ರಿಲ್ ೩೦ರಂದು ಬಿಜಾಪುರದಲ್ಲಿ ಅವರನ್ನು ಭೇಟಿಯಾದ ನಂತರ ಕೊರೆಯುತ್ತಿದ್ದ ಪ್ರಶ್ನೆಯ ಹುಳಗಳು ಉತ್ತರದ ಚಿಟ್ಟೆಗಳಾಗಿ ಹಾರಿದವು.

ಅಂದು ಏಪ್ರಿಲ್ ೩೦, ರವಿವಾರ. ಸಂಜೆ ಆರು ಗಂಟೆಯ ಮೇಲೆ ಯಾರನ್ನೂ ಭೇಟಿ ಮಾಡದ ಕಾರಣ ಬೆಳಿಗ್ಗೆಯೇ ವಿಜಯಪುರದ ಗಲ್ಲಿಗಲ್ಲಿ ಸುತ್ತಿ ಗಣೇಶಗುಡಿಯ ಬಳಿಯಿದ್ದ ನಜ್ಮಾರ ಮನೆಗೆ ಹೋದೆವು. ಹೊರಗಿನಿಂದ ಅರೆಬರೆ ಮುಗಿತಾಯವಾಗಿದ್ದ ಕಾಂಕ್ರೀಟ್ ಮನೆ. ಕೈದೋಟದಲ್ಲಿ ಬಹಳ ಕಾಲದಿಂದ ಯಾರೂ ಕೈಯಾಡಿಸಿಲ್ಲವೆಂದು ಹೇಳುವ ಗಿಡಗಂಟಿಗಳು. ಮೆಲ್ಲನೆ ಹೊರಬಂದು ಓರೆದೃಷ್ಟಿ ಬೀರಿ ಮೈಮುರಿದು ಅಲ್ಲಾಚೆ ಮೆಟ್ಟಿಲ ಮೇಲೆ ದಿಗಂತ ನೋಡುತ್ತ ಕೂತ ಮುದಿಬೆಕ್ಕು. ಒಳಗೆ ವ್ಯವಹಾರದ ಮಾತು ಕೇಳುತ್ತಿತ್ತು. ಹತ್ತು ನಿಮಿಷ ಕಾದು ಬಂದವರು ಹೊರಟ ಮೇಲೆ ಒಳಹೋದೆವು. ಮನೆಯೊಡತಿ ಮುಗುಳ್ನಕ್ಕು ಮರೆಯಾದರು. ಬೇಗ ಬಂದೆವೇನೋ, ಅವರ ಚಹಾತಿಂಡಿಯಾದರೂ ಆಗಿದೆಯೋ ಇಲ್ಲವೋ ಎಂದು ಹಿಂಜರಿದು ಕೇಳಿದೆವು. ‘ಆಗಿದೆ, ಆಗಿದೆ. ಪೈಲೆ ಖಾನಾಪೀನಾ. ಬಾದಮೇ ನಾಹ್ನಾ, ಕಮಾನಾ. ಸಹೀ?’ ಎಂದು ಜೋರಾಗಿ ನಕ್ಕರು. ಆ ನಗುವಿನೊಂದಿಗೆ ನಮ್ಮ ನಡುವಿದ್ದ ಅಪರಿಚಿತತೆ, ಹಿಂಜರಿಕೆಯ ಗೋಡೆ ಕುಸಿದು ಬಿತ್ತು. ಮುಂದಿನ ಎರಡೂವರೆ ತಾಸು ಅವರೊಡನೆ ಹಿಂದಿ, ಇಂಗ್ಲಿಷ್, ಕನ್ನಡಗಳಲ್ಲಿ ಬಹು(ಮಿಶ್ರ)ಭಾಷಾ ಮಾತುಕತೆ ನಡೆಯಿತು. ಅದರ ಸಾರ ಇಲ್ಲಿದೆ:

ನಿಮ್ಮ ಹೆಸರಿನ, ಮನೆತನದ ಹಿನ್ನೆಲೆ.

ನನ್ನ ತಂದೆ ಎ. ಎಸ್. ಬಾಂಗಿ. ಮೂಲತಃ ವಿಜಯಪುರದವರು. ಆದಿಲ್‌ಶಾಹಿ ಅರಸರಿಗೆ ಹತ್ತಿರವಿದ್ದ, ಶಿಕ್ಷಿತರ ಕುಟುಂಬದವರು. ಹಳೆಯ ಬಿಜಾಪುರ ಗೆಜೆಟಿನಲ್ಲಿ ಇನಾಂದಾರ್, ಜಾಗೀರದಾರ್, ಪೀರ್‌ಜಾದೆ ಅಂತೆಲ್ಲ ಎಂಟು ಕುಟುಂಬಗಳ ಉಲ್ಲೇಖವಿದೆ. ಅದರಲ್ಲಿ ನಮ್ಮದೂ ಒಂದು. ೪೦೦ ವರ್ಷಗಳ ಕೆಳಗೆ ಅರಸರೊಡನೆ ನಮ್ಮ ಹಿರೀಕರೊಬ್ಬರು ಬೇಟೆಗೆ ಹೋದರು. ನಮಾಜಿನ ಸಮಯದಲ್ಲಿ ಅಜಾನ್ ಕೂಗಲು ಯಾರೂ ಇಲ್ಲದ್ದರಿಂದ ನಮ್ಮ ಹಿರೀಕ ಅಜಾನ್ ಕೂಗಿದರು. ಅರಸರಿಗೆ ಖುಷಿಯಾಗಿ ಬಾಂಗಿ ಅನ್ನುವ ಬಿರುದು ಕೊಟ್ಟು, ಹಿಟ್ಟಿನಹಳ್ಳಿಯ ಹತ್ತಿರ, ಮನಗೂಳಿಯ ಹತ್ತಿರ ನೂರಾರು ಎಕರೆ ಕೃಷಿ ಭೂಮಿಯನ್ನು ಇನಾಮು ಕೊಟ್ಟರು. ಬಾಂಗಿ ಎಂದರೆ ಅಜಾನ್ ಕೂಗುವವರು ಎಂದರ್ಥ.  

ನಮ್ಮ ಮತ್ತೊಬ್ಬ ಹಿರೀಕರು ಹಕೀಂ ಆಗಿದ್ದರು. ಯಾರೂ ವಾಸಿ ಮಾಡಲಾಗದ ಖಾಯಿಲೆಗಳಿಗೆಲ್ಲ ಔಷಧಿ ಕೊಡುತ್ತಿದ್ದರು. ಸತಾರಾದ ಸಾಹೂ ಮಹಾರಾಜರಿಗೆ ಚಿಕಿತ್ಸೆ ನೀಡಿ ಹೊಟ್ಟೆಯಲ್ಲಿದ್ದ ಗಂಟು ಕರಗಿಸಿದ್ದರು. ಅದನ್ನು ಮೆಚ್ಚಿ ಸತಾರಾದ ರಾಜರು ದಿನಕ್ಕೊಂದು ರೂಪಾಯಿ ಭಕ್ಷೀಸು ಕಳಿಸುತ್ತಿದ್ದರು. ನನಗಿನ್ನೂ ವರ್ಷಕ್ಕೊಮ್ಮೆ ೩೬೫ ರೂಪಾಯಿ ಬರುತ್ತಿದ್ದದ್ದು ನೆನಪಿದೆ. ೧೯೬೯ ಇರ‍್ಬೇಕು, ಇಂದಿರಾಗಾಂಧಿ ಪ್ರೈವಿ ಪರ್ಸ್ ಬಂದ್ ಮಾಡಿದಾಗ ದುಡ್ಡು ಬರುವುದು ನಿಂತಿತು.

ನನ್ನ ಓದು ಬಿಜಾಪುರದಲ್ಲೇ. ತಂದೆ ಮುಂಬಯಿಯಲ್ಲಿ ಮೆಟ್ರಿಕ್ ಮಾಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ೪೦ ವರ್ಷ ಗೋಳಗುಮ್ಮಟದ ಕಸ್ಟೋಡಿಯನ್ ಆಗಿದ್ದರು. ದೇಶವಿದೇಶಗಳ ಗಣ್ಯರಿಗೆ ಗೋಳಗುಮ್ಮಟ ತೋರಿಸ್ತಿದ್ರು. ನಾವು ಅದನ್ನು ನೋಡ್ತಾ ಬೆಳೆದೆವು. ‘ಗೋಳಗುಮ್ಮಟ ನಮ್ದೇ. ಅದನ್ನ ದೇಶಕ್ಕೆ ತೋಫಾ ಕೊಟ್ಟಿದೀವಿ’ ಅಂತ ಅಂದುಕೊಂಡಿದ್ದೆವು.

ಅಮ್ಮ ಫಾತಿಮುನ್ನಿಸಾ ಬೇಗಂ ಹೈದರಾಬಾದಿನವರು. ಬಡಜನರ ಪ್ರೀತಿಪಾತ್ರಳು. ಮನೆಯ ಬಜೆಟ್ ಮಾಡಿ, ಖರ್ಚು ನಿಭಾಯಿಸಿ, ಬಡವರಿಗೂ ಕೊಟ್ಟು, ಆಪತ್ತಿಗೆಂದು ದುಡ್ಡು ಉಳಿಸುತ್ತಿದ್ದಳು. ನಮ್ಮ ಬಡಾವಣೆಯ ಮುದುಕರು, ಅನಾಥರು ಊಟದ ಹೊತ್ತಿಗೆ ಮನೆಗೆ ಬಂದುಬಿಡೋರು. ಅವರೆಲ್ಲ ಅಮ್ಮನ್ನ ಬೀಬೀ ಅಂತ ಕರೆಯೋದು ಕೇಳಿ ನಾವೂ ಬೀಬೀ ಅಂತನೇ ಕರೀತಿದ್ವಿ. ಅಮ್ಮನ ತಾಯಿ, ನಮ್ಮಜ್ಜಿ, ಹೈದರಾಬಾದಲ್ಲಿ ಹೆಡ್‌ಮಿಸ್ ಆಗಿದ್ದರು. ಚಿಕನ್ ಕಾಟನ್ ಸೀರೆಯುಟ್ಟು, ಶೂಸ್ ಹಾಕಿ, ಕಾಲುಮೇಲೆ ಕಾಲು ಹಾಕಿ ಕುರ್ಚೀಲಿ ಕೂತರೆ ನೋಡಬೇಕು, ರಾಣಿ ತರಹ ಕಾಣ್ತಿದ್ದರು. ಆಗ ಬಡಮಕ್ಕಳು ಜಾಣರಾಗಿದ್ರೂ ಓದಕ್ಕೆ ಆಗ್ತಿರಲಿಲ್ಲ. ಅವರಿಗೆಲ್ಲ ಅಜ್ಜಿ ಸಹಾಯ ಮಾಡೋರು. ಮನೆಮನೆಗೆ ಹೋಗಿ ಹುಡುಗ್ರಿಗೆ ಓದಿಸಿ ಅಂತ ಕರ‍್ಕೊಂಡು ಬರ‍್ತಿದ್ರು. ಅದಕ್ಕೇ ಅವರಂದ್ರೆ ಎಲ್ಲರಿಗೂ ಗೌರವ. ಕಂಡಕಂಡಲ್ಲಿ ಗುರುಮಾತೆಗೆ ನಮಸ್ಕಾರ ಮಾಡೋರು. ‘ದುವಾ ಮಾಡಿ, ನಮಗೆ ಒಳ್ಳೇದೇ ಆಗುತ್ತೆ’ ಅಂತಿದ್ದರು. (ಈಗ ಶಿಕ್ಷಕರು ಮಕ್ಕಳ ಕಾಲಿಗೆ ಬಿದ್ದು ದುವಾ ಮಾಡಿ ಅನ್ಬೇಕು, ಹಾಗಾಗಿದೆ ಅಲ್ವಾ ಎಂದು ನಜ್ಮಾ ನಗಲು, ಆ ನಗುವಿನ ಹೊಡೆತಕ್ಕೆ ಬಾಬ್‌ಕಟ್ ಆದ ಬಿಳಿಕರಿ ಕೂದಲು ಅತ್ತಿತ್ತ ಓಲಾಡಿ ತಾನೂ ಬಿದ್ದುಬಿದ್ದು ನಗಾಡಿತು.) ಆದರೆ ಅಂಥ ಅಜ್ಜಿಯ ಮಗಳು ನಮ್ಮಮ್ಮ ತುಂಬ ಸಾಂಪ್ರದಾಯಿಕಳು. ಬಿಲ್ಕುಲ್ ಮನೆಬಿಟ್ಟು ಹೊರಗೆ ಬರಲಿಲ್ಲ. ಏಳನೇಯತ್ತೆವರೆಗೆ ಮಾತ್ರ ಓದಿದ್ದು. ಪ್ರಯಾಣಿಸುವಾಗ ಟಾಂಗಾದ ಸುತ್ತ ಚಾದರ್ ಕಟ್ಟಿ ಯಾರಿಗೂ ಕಾಣದಂತೆ ಹೋಗಿಬರುತ್ತಿದ್ದಳು.

ನನಗೆ ಇಬ್ಬರು ಸೋದರರು, ನಾಲ್ವರು ಸೋದರಿಯರು. ಒಬ್ಬ ಅಣ್ಣ ಎಸ್ಸೆಲ್ಸಿ ತನಕ ಕನ್ನಡ ಮೀಡಿಯಂನಲ್ಲಿ ಓದಿ ಇಂಗ್ಲಿಷ್ ಎಂಎ ಮಾಡಿ ಉದ್ಯೋಗ ಹಿಡಿದ. ತಮ್ಮ ಇಂಗ್ಲಿಷ್ ಮೀಡಿಯಂನಲ್ಲಿ ಓದಿ, ಪದವಿ ಪಡೆದು ಟೈಮ್ಸ್ ಆಫ್ ಇಂಡಿಯಾ ಸೇರಿದ. ಒಬ್ಬ ಸೋದರಿ ಮರಾಠಿ ಮೀಡಿಯಂನಲ್ಲಿ ಓದಿ, ಉಸ್ಮಾನಿಯಾದಿಂದ ಎಕನಾಮಿಕ್ಸ್ ಪದವಿ ಪಡೆದಳು. ಮತ್ತೊಬ್ಬ ಸೋದರಿ ಹಿಂದಿ ಮೀಡಿಯಂನಲ್ಲಿ ಕಲಿತು ಬಿಎ ಮಾಡಿದಳು. ನಾನು ಹೈಸ್ಕೂಲಿನವರೆಗೆ ಉರ್ದು ಮೀಡಿಯಂ. ಆಮೇಲೆ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಬಿಎಸ್ಸಿ ಸಿಬಿಜಡ್ ಓದಿದೆ. ಪ್ರವಾದಿಯವರ ಹೇಳಿಕೆಯಂತೆ ನನ್ನ ತಾಯ್ತಂದೆ ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಿದರು. ಬೇರೆಬೇರೆ ಭಾಷಾ ಮಾಧ್ಯಮದಲ್ಲಿ ಕಲಿಸಿದರು.

ಸಾಂಪ್ರದಾಯಿಕ ರೂಢಿಗಳನ್ನು ನಿರಾಕರಿಸಿ ಬದುಕೋಕೆ ಹೇಗೆ ಸಾಧ್ಯವಾಯಿತು?

ಅಪ್ಪ ಮುಕ್ತ ಯೋಚನೆಗಳಿದ್ದೋರು. ಅಮ್ಮ ಮಾತ್ರ ಸಾಂಪ್ರದಾಯಿಕಳು. ಮೊದಲಿಂದ ನಾನು ‘ಒಂಥರಾ’. ಎಷ್ಟು ನಕ್ಕು ನಗಿಸ್ತೀನೋ ಅಷ್ಟೇ ಹಠಾ ಹಿಡೀತಿದ್ದೆ. ನನಗೇನು ಇಷ್ಟವೋ ಹಾಗೆ ಮಾಡುವುದೇ. ತುಂಬ ಜಗಳಗಂಟಿ. ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿ ಆಗಿದ್ದೆ. ಯೂನಿಯನ್ ಲೀಡರ್ ಆಗಿದ್ದೆ. ಅದೇನೂ ಹುಡುಗಿಯರ ಕಾಲೇಜಲ್ಲ, ಕಂಬೈನ್ಡ್. ಪರ್ದಾ ಇರಲಿಲ್ಲ. ಒಂದಿನ ಬಸ್ಸಲ್ಲಿ ತುಂಬ ರಶ್ ಇತ್ತು. ನನ್ನ ಪಕ್ಕದ ಸೀಟಲ್ಲಿ ಒಬ್ಬ ಹುಡುಗ ಬಂದು ಕೂತ. ‘ಹುಡುಗ್ರ ಸೀಟು ಅಲ್ಲಿದೆ, ಇಲ್ಯಾಕೆ ಕೂತ್ಯೋ?’ ಅಂದೆ. ಅವನು ಏಳಲಿಲ್ಲ. ಕೋಪ ಬಂದು ಬಸ್ಸಿಳಿದಿದ್ದೇ ಪ್ರಿನ್ಸಿಪಾಲ್ ಹತ್ರ ಹೋದೆ. ಅವನ್ನ ಕರೆಸಿ ಡಿಬಾರ್ ಮಾಡ್ತಿವಿ ಅಂದಾಗ ಹೆದರಿ ಕಾಲಿಗೆ ಬೀಳಕ್ಕೆ ಬಂದ. ನಾನು ಯಾರಿಗೂ, ಯಾವುದಕ್ಕೂ ಹೆದರ‍್ತಾ ಇರ‍್ಲಿಲ್ಲ. ನಾವು ಸರಿ ದಾರೀಲಿರುವಾಗ ಯಾಕೆ ಹೆದರಬೇಕು ಅಂತ. ಒಂದ್ಸಲ ಯಾರೋ ಹಿಂದಿನಿಂದ ಚುಡಾಯಿಸಿದ್ರು. ಲೂನಾ ನಿಲಿಸಿ, ಚಪ್ಲಿ ತಗಂಡು ಹೊಡೆದು ಬಂದಿದೀನಿ. ಹ್ಞಾಂ, ಬಿಜಾಪುರದಲ್ಲಿ ಲೂನಾ ಓಡ್ಸಿದ ಮೊದಲ ಹೆಣ್ಣುಮಗಳು ನಾನು. ೨೦ ವರ್ಷ ಓಡಿಸಿದ್ರೂ ನಾನು ಅದನ್ನ ಬಿಡಲಿಲ್ಲ. ಕೊನೆಗೆ ಅದಕ್ಕೇ ಬೋರಾಗಿ ನನ್ನ ಬಿಟ್ಟೋಯ್ತು. (ಅಂದ್ರೆ ಪಾರ್ಕಿಂಗಿನಲ್ಲಿ ನಿಲ್ಲಿಸಿದ್ದನ್ನು ಯಾರೋ ಕದ್ದು ಒಯ್ದರಂತೆ.)

ಬಿಎಸ್ಸಿ ಆಯ್ತು, ಆಮೇಲೆ?

ಅಷ್ಟೊತ್ತಿಗೆ ತಂದೆಗೆ ಅನಾರೋಗ್ಯವಾಯ್ತು. ಬಂಗಾಳದಲ್ಲಿ ಗಲಭೆ ಆಗಿ ಕೆಲಸ ಕಳೆದುಕೊಂಡು ಒಬ್ಬ ಅಣ್ಣ ಮನೆಗೆ ಬಂದ. ನಾನು ಜಮೀನು ನೋಡ್ತೀನಿ ಅಂತ ಹಳ್ಳಿ ಕಡೆ ಹೋಗ್ಬಿಟ್ಟ. ಆಗೆಲ್ಲ ಬಿಎಸ್ಸಿ ಮಾಡಿದರೆ ಹೈಸ್ಕೂಲಲ್ಲಿ ಸುಲಭದಲ್ಲಿ ಕೆಲಸ ಸಿಗತಿತ್ತು. ಅಂಜುಮನ್ ಸಂಸ್ಥೆಯಲ್ಲಿ ಶಿಕ್ಷಕಿಯಾದೆ. ಕೆಲಸ ಮಾಡ್ತನೇ ಬಿಎಡ್ ಕಟ್ಟಿದೆ. ಎರಡು ಸಲ ರಜೆ ಬಂದಾಗ ಧಾರವಾಡಕ್ಕೆ ಹೋಗಿ ಪಾಠ ತಗೊಂಡು ಬಂದು ಬಿಎಡ್ ಮುಗಿಸಿದೆ. ಇನ್ನೂ ಏನಾದರೂ ಓದಬೇಕಲ್ಲ ಅನಿಸಿ ಎಲ್‌ಎಲ್‌ಬಿ ಕಟ್ಟಿದೆ. ಆದರೆ ಮುಗಿಸಕ್ಕೆ ಆಗಲಿಲ್ಲ. ಹೀಗೇ ಎಲ್ಲ ನಡೀತಿತ್ತು. ಪಾಠ ಮಾಡ್ತಾ, ನಗುತ್ತ, ಕೀಟಲೆ ಮಾಡ್ತಾ, ವಿದ್ಯಾರ್ಥಿಗಳಿಗೆ ‘ಸ್ಟ್ರಿಕ್ಟ್’ ಆದರೂ ಪೆಟ್ ಟೀಚರಾಗಿ ಆರಾಮವಾಗಿ ಇದ್ದುಬಿಟ್ಟೆ. ಇಷ್ಟಬಂದಲ್ಲಿ ಹೋದೆ, ಇಷ್ಟಬಂದದ್ದು ಖರೀದಿ ಮಾಡಿದೆ. ಮನದಿಚ್ಛೆಯಂತೆ ಉಟ್ಟೆ, ತೊಟ್ಟೆ. ಬುರ್ಖಾ ತೊಡು, ತಲೆಗೆ ಬಟ್ಟೆ ಸುತ್ತಿಕೋ ಅಂತ ಅಮ್ಮ ಒತ್ತಾಯ ಮಾಡಿದರೂ ಕ್ಯಾರೇ ಅನ್ನಲಿಲ್ಲ. ಅಪ್ಪ ನನ್ನಿಷ್ಟದಂತೆ ಇರಕ್ಕೆ ಸಪೋರ್ಟ್ ಮಾಡಿದರು.

೧೯೮೨ನೇ ಇಸವಿ ಬಗೆಗೆ ಹೇಳಿ.

ಏನಂತ ಹೇಳೋದು?! ಆಗ ಕೆಲವು ಹೆಣ್ಣುಮಕ್ಕಳಿಗೆ ಸಿನಿಮಾ ಹುಚ್ಚು ಹಿಡಿದಿತ್ತು. ಕದ್ದು ಮುಚ್ಚಿ ನೋಡೋರು. ಮನೆ ಕೆಲಸ ಮುಗಿಸಿ ಸೆಕೆಂಡ್ ಶೋಗೆ ಹೋಗೋರು. ಮಸಾಲೆ ಸಿನಿಮಾನೂ ನೋಡೋರು. ಪರ್ದಾ ಇಲ್ಲ ಅಂತ ತಕರಾರು ಬರಬಾರದಲ್ಲ, ಟಾಕೀಸಲ್ಲಿ ಪರ್ದಾ ಕಟ್ಟಿಸಿ ನೋಡಿಬರೋರು. ಸಿನಿಮಾ ಅಂದ್ರೆ ಹರಾಂ. ಹೆಂಗಸರು ಪಿಚ್ಚರ್ ನೋಡಿ ಹಾಳಾಗೋದನ್ನ ಹೇಗೆ ನಿಲಿಸೋದು ಅಂತ ಕೆಲವರಿಗೆ ತಲೆಬಿಸಿಯಾಗಿಬಿಟ್ಟಿತ್ತು. ‘ಬಂದ್ ಕರೋಮಾ ಬಂದ್ ಕರೋ, ಪಿಚ್ಚರ್ ದೇಖನಾ ಬಂದ್ ಕರೋ’ ಅಂತ ಹಾಡು ಹೇಳಿಸುತ್ತಿದ್ರು. ಆದ್ರೆ ಹೀರೋ ಹೀರೋಯಿನ್‌ಗಳಲ್ಲಿ ಎಷ್ಟೊಂದು ಜನ ಮುಸ್ಲಿಮರೇ ಇದ್ದರು. ‘ಅರೆ, ಅವ್ರೆಲ್ಲ ಆಕ್ಟಿಂಗ್ ಮಾಡ್ತಾರಲ್ವಾ? ಸಿನಿಮಾ ತೆಗೆದಿರೋದು ಯಾಕೆ ಮತ್ತೆ, ನೋಡಕ್ಕಲ್ವ?’ ಅಂತ ನನಗನಿಸ್ತಿತ್ತು. ಆಗ ‘ಲಾ ಖುದಾ’ ಅಂತನೋ ಏನೋ ಒಂದು ಸಿನಿಮಾ ಲಕ್ಷ್ಮಿ ಥಿಯೇಟರಿಗೆ ಬಂತು. ನೋಡೇಬಿಡಣ ಅಂತ ಹೋದೆ. ಟಿಕೆಟ್ ತಗೊಂಡೆ. ಯಾರೋ ನನ್ನ ನೋಡಿ ಫೋನ್ ಮಾಡಿ ನಮ್ಮ ಜನರನ್ನ ಕರೆಸಿದ್ರು. ಟಿಕೆಟ್ ಕೊಟ್ಟಾಂವ ಬಂದು, ‘ಯವ್ವಾ, ಮನೀಗ್ ಹೋಗವ್ವ, ನೀವ್ ಬರಂಗಿಲ್ಲಂತ ಇಲ್ಲೆಲ್ಲ’ ಅಂದ. ನಾನು ಸುಮ್ನೆ ಅವನ ಕಡೆ ನೋಡಿ ಒಳಗೆ ಹೋದೆ. ತಗೋ, ಹೊರಗೆ ಗಲಾಟೆ ಶುರುವಾಯ್ತು. ಥಿಯೇಟರಿನ ಮ್ಯಾನೇಜರ್ ಬಂದು, ‘ನಮ್ಮಲ್ಲಿ ಪರ್ದಾ ಸಿಸ್ಟಂ ಇಲ್ಲ, ನೀವ್ ಹೊರಗ ಹೋಗರಿ ಮೇಡಂ’ ಅಂತ ಕೈಮುಗಿದ. ‘ನಾನು ದುಡ್ ಕೊಟ್ಟು ಟಿಕೆಟ್ ತಗಂಡಿದಿನಿ. ಸಿನಿಮಾ ನೋಡೇ ನೋಡ್ತಿನಿ. ಅವ್ರು ಗಲಾಟೆ ಮಾಡ್ತಿದ್ರೆ ಪೊಲೀಸರನ್ನ ಕರೆಸಿ. ನಾ ಯಾಕೆ ಹೊರಗೆಹೋಗಲಿ’ ಅಂತ ಕೂತ್ಬಿಟ್ಟೆ. ಆರಾಮಾಗಿ ಪೂರ್ತಿ ಸಿನಿಮಾ ನೋಡಿ ಹೊರಗೆ ಬಂದ್ರೆ ಎಲ್ಲ ಕೆರಳಿ ನಿಂತಿದಾರೆ. ‘ಸಿನಿಮಾ ಕೆಟ್ಟದು, ನೋಡಬಾರ್ದು’ ಅಂದ್ರು. ‘ಕೆಟ್ಟದಾದ್ರೆ ಮುಸ್ಲಿಂ ಗಂಡಸರೆಲ್ಲ ಸಿನಿಮಾ ನೋಡತಾರಲ, ಅವರಿಗೂ ಬರಬೇಡ ಅಂತ ಹೇಳಿ’ ಅಂದೆ. ‘ಉಲ್ಟಾ ಮಾತಾಡ್ಬೇಡ. ಇನ್ನು ಪಿಚ್ಚರ‍್ಗೆ ಬಂದ್ರೆ ಸರೀ ಇರಲ್ಲ. ಥಿಯೇಟ್ರನ್ನೇ ಬಂದ್ ಮಾಡಸ್ತೀವಿ’ ಅಂದ್ರು. ‘ಕೆಟ್ಟದನ್ನೆಲ್ಲ ಬಂದ್ ಮಾಡ್ಸದಾದ್ರೆ ಮೊದ್ಲು ಹೆಂಡದ ಅಂಗ್ಡಿ ಬಂದ್ ಮಾಡ್ಸಿ’ ಅಂದೆ. ಅವ್ರಿಗೆ ಕೆರಳೋಯ್ತು. ‘ಮರ್ಯಾದಸ್ಥರ ಮನಯೋಳಂಗೆ ಕಾಣ್ತೀ. ಜಮಾತಿಂದ ಹೊರಗಾಕಿಸ್ತೀವಿ ನೋಡು’ ಅಂದ್ರು. ಗದ್ದಲ ಶುರುವಾಯ್ತು. ತಳ್ಳಾಟ, ನೂಕಾಟ, ಕೆಟ್ಟಕೆಟ್ಟ ಮಾತು. ಅಷ್ಟೊತ್ಗೆ ಉಂಯ್ಞ್ ಉಂಯ್ಞ್ ಅಂತ ಪೊಲೀಸ್ ವ್ಯಾನ್ ಬಂದಿದ್ದೇ ಎಲ್ಲ ಓಡೋದ್ರು. ಪೊಲೀಸ್ ಜೀಪಲ್ಲಿ ನನ್ನನ್ನ ಮನೆಗೆ ತಂದು ಬಿಟ್ಟರು.

ಮರುದಿನ ಶಾಲೆಗೆ ಹೋಗ್ಬೇಕು ಅಂತ ಹೊರಗೆ ಬಂದ್ರೆ, ‘ಹೊರಗ್ಬಾ, ನಿನ್ ಸುಟ್ಟಾಕ್ತೀವಿ. ನಿನ್ ಮನೆ ಸುಡ್ತೀವಿ’ ಅಂತ ಒಂದು ಗುಂಪೇ ಜಮಾಯಿಸಿದೆ! ಅಪ್ಪನಿಗೆ ಸಖತ್ ಸಿಟ್ಟು ಬಂತು. ‘ನನ್ನ ಮನೆ ಮುಂದೆನೇ ನಿಂತು ಸುಟ್ಟಾಕ್ತೀನಿ ಅಂತೀರಾ? ನನ್ನ ಮಗಳು ಅವಳು, ನೀವ್ಯಾರ್ರೋ ಕೇಳೋಕೆ? ಅದೆಂಗ್ ಸುಟ್ಟಾಕ್ತೀರೋ ನೋಡೇಬಿಡ್ತೀನಿ’ ಅಂತ ಸ್ಟೇಷನ್ನಿಗೆ ಹೋದ್ರು. ನಾನೂ ಹೋದೆ. ಕಂಪ್ಲೇಂಟ್ ಬರ‍್ದೆ. ಮನೆ ಹತ್ರ ಪೊಲೀಸ್ ಕಾವಲು ಹಾಕಿದ್ರು. ಹಿಂದೊಬ್ರು, ಮುಂದೊಬ್ರು ಪೊಲೀಸ್. ಶಾಲೆಗೆ ಹೋದ್ರೆ ನನ್ನ ಜೊತೆಗೇ ಪೊಲೀಸ್. ಡಿಸಿ ಆಫೀಸಿಗೆ ಹೋಗಿ ಬರಲಿಕ್ಕೂ ಹಿಂದೆ ಮುಂದೆಲ್ಲ ಪೊಲೀಸ್ ವೆಹಿಕಲ್. ಹೀಗೇ ನಡೀತು.

ಪತ್ರಿಕೆಯವರು, ಹೋರಾಟಗಾರರು ನಿಮಗೆ ಬೆಂಬಲ ಕೊಡಲಿಲ್ವಾ?

ಕೊಟ್ಟಿದಾರೆ. ಈ ಘಟನೆ ಬಗ್ಗೆ ಎಲ್ಲಾ ಕಡೆ ಸುದ್ದಿ ಬಂತು. ಒಂದು ಕನ್ನಡ ಪೇಪರ್ ಇಡೀ ಪುಟ ಸುದ್ದಿ ಹಾಕ್ತು. ಎಲ್ಲಾ ಬಂದ್ರು. ಬಿಬಿಸಿ, ವಾಷಿಂಗ್ಟನ್ ಪೋಸ್ಟಲ್ಲೂ ಸುದ್ದಿ ಬಂತಂತೆ. ಒಂದು ಪತ್ರಿಕೇಲಿ, (ಲಂಕೇಶ್ ಪತ್ರಿಕೆ ಅನಿಸುತ್ತೆ), ‘ಧರ್ಮದ ಗುತ್ತಿಗೆ ಹಿಡಿದ ಮೂಲಭೂತವಾದಿಗಳನ್ನು ಎದುರಿಸಿ, ತಾರತಮ್ಯವನ್ನು ಪ್ರತಿಭಟಿಸಿ, ಅವಿವಾಹಿತ ಯುವತಿ ಸಿನಿಮಾ ನೋಡಿಬಂದು ಹೋರಾಟ ಮಾಡಿದಳು’ ಅಂತ ಬರೆದುಬಿಟ್ಟಿದ್ರು. ಯುದ್ಧನೇ ಶುರು ಆಯ್ತು. ‘ಕುರಾನ್ ವಿರುದ್ಧ ಹೇಳೋವಷ್ಟು, ಧರ್ಮನೇ ಎದುರು ಹಾಕ್ಕೊಳೋವಷ್ಟು ಸೊಕ್ಕಾ ನಿಂಗೆ’ ಅಂದರು. ನಿಜವಾಗಿ ನಾನು ಧರ್ಮನ ಎದುರು ಹಾಕ್ಕೊಳಕ್ಕೆ ಅಂತ ಸಿನಿಮಾ ನೋಡಲಿಲ್ಲ. ನೋಡಬೇಕನಿಸಿ ನೋಡಿದ್ದೆ ಅಷ್ಟೆ. ಇದ್ದಕ್ಕಿದ್ದಂಗೆ ವಿಲನ್ ಆಗಿಬಿಟ್ಟಿದ್ದೆ. 

ಅಷ್ಟು ಗಲಾಟೆ ಆದಮೇಲೆ ಕೆಲಸ ಮಾಡಕ್ಕೆ ಕಷ್ಟವಾಗಲಿಲ್ವಾ?

ಆಯ್ತು. ಹೆಜ್ಜೆಹೆಜ್ಜೆಗೂ ಕಷ್ಟ. ಮಕ್ಕಳನ್ನು ನನ್ನ ವಿರುದ್ಧ ಎತ್ತಿ ಕಟ್ಟಿದರು. ಈ ಮೇಡಂ ಪಾಠ ಮಾಡಲ್ಲ, ಧರ್ಮದ ವಿರುದ್ಧ ಹೇಳ್ತಾರೆ, ನಮಗವರ ಪಾಠ ಬೇಡ ಅಂತ ಸ್ಟೂಡೆಂಟ್ಸ್ ಹತ್ತಿರ ಬರೆಸಿಕೊಂಡರು. ಒತ್ತಾಯಕ್ಕೆ ಬರೆದುಕೊಟ್ಟ ಮಕ್ಕಳು ನನ್ನ ಹತ್ರ ಅಳ್ತಾ ಬಂದು ಹೇಳಿದವು. ವಸ್ತ್ರಸಂಹಿತೆ ಬೇರೆ ಅನುಸರಿಸ್ತಾ ಇರಲಿಲ್ಲ ಅಂತ ಕೋಪವಿತ್ತು. ಸಸ್ಪೆಂಡ್ ಮಾಡಿದರು. ಆದರೆ ಒಂದೇ ತಿಂಗಳಲ್ಲಿ ಖುದ್ದು ಪ್ರಧಾನಿಯೇ ಆಸಕ್ತಿ ವಹಿಸಿ ಸಸ್ಪೆನ್ಶನ್ ರದ್ದಾಯಿತು. ಆದರೆ ನಾನಾರೀತಿಯ ಕಿರುಕುಳ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಫುಟ್ಬಾಲಿನಂತೆ ಓಡಾಡಿಸಿದರು. ಪಾಠ ಮಾಡಕ್ಕೆ ತರಗತಿಗಳನ್ನೇ ಕೊಡಲಿಲ್ಲ. ಟೈಂಟೇಬಲ್ ಹಾಕಲಿಲ್ಲ. ಸಂಬಳ ಸರಿಯಾಗಿ ಬರಲಿಲ್ಲ. ಪದೇಪದೇ, ರಾತ್ರೋರಾತ್ರಿ ಮನೆಯ ನೀರಿನ ಪೈಪ್ ಒಡೀತಿದ್ದರಿಂದ ನೀರಿಗೂ ಪರದಾಡಬೇಕಾಯಿತು. ಅಷ್ಟಾದರೂ ೧೨ ವರ್ಷ ಕೆಲಸ ಮಾಡಿದೀನಿ. ಕೊನೆಗೆ ದುಡ್ಡು ಮುಖ್ಯವಲ್ಲ, ನೆಮ್ಮದಿಯಿಂದ ಬದುಕೋದು ಮುಖ್ಯ ಅಂತ ಅಪ್ಪ ಕೆಲಸ ಬಿಡಲಿಕ್ಕೆ ಹೇಳಿದರು. ವಿಆರೆಸ್ ತಗೊಂಡೆ.

ಪ್ರೀತಿ, ಪ್ರೇಮ, ಮದುವೆ ಅಂತೆಲ್ಲ..

ನೋ ನೋ ನೋ. ಲವ್ ಗಿವ್ವೆಲ್ಲ ಆಗಲಿಲ್ಲ. ಇಷ್ಟು ಜೋರಿರೋ ಹೆಂಗ್ಸನ್ನ ಯಾವ ಗಂಡಸಾದ್ರೂ ಲವ್ ಮಾಡ್ತಾನಾ? (ಕಣ್ಣು ಮಿಟುಕಿಸಿ ನಗು.) ಮನೆಯಲ್ಲಿ ಮದುವೆಯ ಮಾತು ಬರ‍್ತಿತ್ತು. ಅಕ್ಕಂದಿರ, ಅಣ್ಣಂದಿರ ಮದುವೆ ಆಗಿತ್ತು. ನಾನು ಮಾತ್ರ ಗಟ್ಟಿಯಾಗಿ ‘ಒಲ್ಲೆ’ ಅಂದೆ. ‘ಮದುವೆಯಾದರೆ ಮುಗೀತು, ಬಾಳೆಲ್ಲ ಗುಲಾಮಗಿರಿ. ನಾನೂ ದುಡಿತೇನೆ, ಅವನೂ ದುಡೀತಾನೆ. ಆದ್ರೆ ಸಂಜೆ ಬಂದ್ಮೇಲೆ ಆರಾಮ ಕೂತು ಚಾ ಅಂದರೆ ಚಹಾ ಕೊಡಬೇಕು. ತಲೆನೋವೆಂದರೆ ಬಾಮ್ ಉಜ್ಜಬೇಕು. ನಾಕು ಸಾಮಾನು ಪಟ್ಟಿ ಬರೆದು ತರಿಸೋಕೆ ಬೆಣ್ಣೆ ಹಚ್ಚಬೇಕು. ಅವರು ಹೇಳಿದಂಗೇ ಅಡುಗೆ, ಮಾತು, ಬಟ್ಟೆ, ಯಾತ್ರೆ, ಮಕ್ಕಳುಮರಿ, ಸಂಸಾರ. ಅಬ್ಬಬ್ಬ, ನನ್ನ ಕೈಲಿ ಸಾಧ್ಯವಿಲ್ಲ. ನನಗೂ ಸೇವೆ ಮಾಡೋವಂತಾ, ಜೊತೆಯಿದ್ರೂ ನನ್ನಿಷ್ಟದಂತೆ ಇರೋಕೆ ಬಿಡೋ ಗಂಡು ಸಿಕ್ಕರಷ್ಟೇ ಮದುವೆ ಅಂದೆ. ಅವತ್ತಷ್ಟೇ ಅಲ್ಲ, ಯಾವತ್ತಿಗೂ ಅಂತಹ ಗಂಡು ಭೂಮಿ ಮೇಲೆ ಸಿಗಲ್ಲ ಅನ್ನೋದು ಗೊತ್ತಾಗಿ ಮನೆಯವರು ಸುಮ್ಮನಾದ್ರು.




ಮನೆಯಲ್ಲೇ ಇರಕ್ಕೆ ಬೇಸರ ಆಗಲಿಲ್ಲವೆ?

ಬೇಸರ ಕಳೆಯಲಿಕ್ಕೆ ಒಂದೇಸಮ ಓದಿದೆ. ಲೈಬ್ರರಿ ಪುಸ್ತಕ, ನ್ಯೂಸ್‌ಪೇಪರ್ ಓದಿದ್ದೇ ಓದಿದ್ದು. ಆಲಮಟ್ಟಿ ಅಣೆಕಟ್ಟೆ ಏರಿಸುವ ಹೋರಾಟದ ಬಹಿರಂಗ ಸಭೆಗೆ ಹೋಗಿದ್ದೆ. ಮಹಿಳಾ ಸಂಘಟನೆಗಳು ಕರೆದವು. ಸ್ವಲ್ಪಸ್ವಲ್ಪ ಪಾಲ್ಗೊಂಡೆ. ಬೆಳಗಾವಿಯ ಮಹಿಳಾ ದಿನಾಚರಣೆಯೊಂದಕ್ಕೆ ಕರೆದರು. ರಾಯಚೂರು ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಿಬಂದೆ. ಆದರೆ ಅದರಲ್ಲೇ ಪೂರಾ ತೊಡಗಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಪುಸ್ತಕಗಳ ನಂಟು ಹೆಚ್ಚಾಯಿತು. ಅಟ್ಟದಲ್ಲಿದ್ದ ಹಿರೀಕರ ದಫ್ತರಗಳನ್ನು ತೆಗೆದೆ. ಓಹೋ, ಅದೊಂದು ಬೇರೆಯದೇ ಜಗತ್ತು. ಆಗಲೇ ಹೇಳಿದೆನಲ್ಲ, ಒಬ್ಬ ಹಿರೀಕರು ಹಕೀಮರಾಗಿದ್ದರು ಅಂತ, ಹಕೀಮತಿಯ ಪುಸ್ತಕಗಳನ್ನ ಓದಿ ಔಷಧಿ ಕೊಡಲಿಕ್ಕೆ ಶುರು ಮಾಡಿದೆ. ಕಾಮಾಲೆ, ಸಂಧಿವಾತ, ಕಣ್ಣುಬೇನೆಯಂತಹ ಕಾಯಿಲೆಗೆ ಚೂರ್ಣ, ಮದ್ದು ಮಾಡಿ ಕೊಟ್ಟೆ. ಮನೆಯ ತಾಪತ್ರಯ ಹೇಳಿಕೊಂಡು ಬಂದವರಿಗೆ ಧೈರ್ಯ ಹೇಳಿ ತಾಯಿತ ಮಾಡಿಕೊಟ್ಟೆ. ಹಲವರಿಗೆ ಕಾಯಿಲೆ ಗುಣವಾಯಿತು, ತಾಯಿತ ದಾರಿ ತೋರಿಸಿತು. ಗಂಡ ಬಾಳಾ ತ್ರಾಸು ಕೊಡತಾನಂತ ಒಬ್ಬಳು ಬಂದಳು. ತಾಯಿತ ಮಾಡಿಕೊಟ್ಟೆ. ಅದನ್ನವಳು ಕಟ್ಟಿಕೊಂಡ ಮೇಲೆ ಗಂಡ ಕೂರು ಅಂದ್ರೆ ಕೂರ‍್ತಾನಂತೆ, ನಿಲ್ಲು ಅಂದ್ರೆ ನಿಲ್ತಾನಂತೆ! ನೆಮ್ಮದಿ ಇಲ್ಲ ಅಂತ ಬಂದೋರಿಗೆ ತಾಯಿತ ಬರೀತಾ, ಸಮಾಧಾನ ಹೇಳ್ತಾ ನಾನೂ ನೆಮ್ಮದಿ ಪಡಕೊಂಡಿದೇನೆ. (ಮದ್ವೆಯಾಗಿದೀಯಾ? ನಿನ್ಗೇನಾದ್ರೂ ಅಂಥದು ಬೇಕಾ ಎನ್ನುತ್ತ ಮುಂಬಾಗಿ ತುಂಟತನದಿಂದ ನಕ್ಕರು.)

ಅಂದು ಬುರ್ಖಾ ತೊಡದೇ ನೀವಿದ್ದದ್ದನ್ನು ಸಮಾಜ ಸಹಿಸಿತೇ?

ಅವತ್ತು ಬಾಳ ಜನ ಬುರ್ಖಾ ಹಾಕ್ತಾ ಇರಲಿಲ್ಲ. ಹೊರಗೆ ಹೋಗುವಾಗ ಮಾತ್ರ ಕೆಲವರು ಹಾಕ್ತಾ ಇದ್ದಿದ್ದು. ಕೆಳವರ್ಗದ ಹೆಣ್ಣುಮಕ್ಕಳಿಗಂತೂ ಅವೆಲ್ಲ ಗೊತ್ತೇ ಇರಲಿಲ್ಲ. ಅದನ್ನು ಕಂಪಲ್ಸರಿ ಅಂತ ಎಲ್ಲೂ ಹೇಳಿಲ್ಲ. ಈಗ ಎಷ್ಟು ಸಣ್ಣ ಹುಡುಗಿಯರಿಗೂ ಸ್ಕಾರ್ಫ್, ಗ್ಲೋವ್, ಸಾಕ್ಸ್ ಹಾಕಿ ಬುರ್ಖಾ ತೊಡಿಸ್ತಾರೆ! ನಾನು ತಮಾಷೆ ಮಾಡ್ತೀನಿ, ‘ಹಜ್ ಕರ‍್ಕೇ ಆಯೀ ಕ್ಯಾ ಮಾ?’ ಅಂತ. ದೇಹವನ್ನು ಸೆಕ್ಸಿ ಆಗಿ ತೋರಿಸದಂತೆ ಸಡಿಲ ಬಟ್ಟೆ ಹಾಕಬೇಕು ಎನ್ನುವುದು ಬುರ್ಖಾ ಹಿಂದಿದ್ದ ಉದ್ದೇಶ ಅಷ್ಟೇ. ಟೈಟ್ ಫಿಟಿಂಗ್ ಮಾಡಿಸಿ, ಮನಸೆಳೆಯುವಂತಹ ಡಿಸೈನ್ ಮಾಡಿ ಹಾಕೋಹಾಗಿದ್ದರೆ ಬುರ್ಖಾನೂ ಒಂದೇ, ಸಲ್ವಾರ್ ಕಮೀಜೂ ಒಂದೇ. ಬಟ್ಟೆಗಳದ್ದೇ ದೊಡ್ಡ ಬಿಸಿನೆಸ್. ಅವರದ್ದೇ ಕುಮ್ಮಕ್ಕು. ನಾನು ಅವತ್ತಿಗೂ ಇವತ್ತಿಗೂ ಬುರ್ಖಾ ತೊಟ್ಟಿಲ್ಲ, ಎಂದೆಂದೂ ತೊಡುವುದೂ ಇಲ್ಲ. ನನ್ನ ಬಟ್ಟೆ ಎಷ್ಟು ಸಡಿಲ ಇದೆಯೆಂದರೆ ಇದೇ ಬುರ್ಖಾದಂತೆ ಕವರ್ ಮಾಡತ್ತೆ. ಹಿಜಾಬ್‌ನೂ ಹಿಂದಿಂದ ಎಳೀಬಹುದು. ಆದ್ರೆ ನನ್ನ ಬಾಬ್‌ಕಟ್ ಯಾರೂ ಎಳೆಯಕ್ಕಾಗಲ್ಲ. ಪರ್ಫೆಕ್ಟ್ ಅಲ್ವಾ?

ಇಸ್ಲಾಂನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಪರದೆಯೊಳಗೆ ಕೂಡಿ ಹಾಕಲಾಗಿದೆ ಎಂಬ ಮಾತಿದೆಯಲ್ಲ?

ಇಸ್ಲಾಮಲ್ಲಿ ಹೆಣ್ಣುಮಕ್ಕಳಿಗೆ ಲಿಬರ್ಟಿ ಇದೆ, ಆದರೆ ಕೆಲವೆಡೆ ಇಲ್ಲ. ಉದಾಹರಣೆಗೆ ಅಜಾನ್ ಕೂಗಕ್ಕಾಗಲ್ಲ, ಮಸೀದಿಗೆ ಹೋಗಕ್ಕಾಗಲ್ಲ, ಅಪರಿಚಿತ ಸ್ತ್ರೀಪುರುಷರು ಒಟ್ಟೊಟ್ಟಿಗೆ ಇರಕ್ಕಾಗಲ್ಲ. ಆದರೆ ಏನಿದೆ ಏನಿಲ್ಲ ಅಂತ ನಾವೇ ಓದಿ ಅರ್ಥ ಮಾಡ್ಕೋಬೇಕು. ಇದೆಯೆಂದಿರುವುದನ್ನೂ ತಪ್ಪಾಗಿ ಅರ್ಥೈಸಿ ಇಲ್ಲ ಅಂದಿರೋದು ಸಾಕಷ್ಟಿದೆ. ಅದಕ್ಕೇ ಸುಮ್ನೇ ಯಾರೋ ಹೇಳಿದ್ದನ್ನ ನಂಬಿ ಅನುಸರಿಸೋದಲ್ಲ. ನಾವೇ ಸ್ವತಃ ಓದಿ, ಯೋಚಿಸಿ ತಿಳಕೋಬೇಕು.

ಈ ಕಾಲಮಾನದಲ್ಲಿ ಹೀಗೆ ನೀವಿಬ್ರೇ ಮನೇಲಿದೀರ, ಭಯ ಅನಿಸಲ್ಲವೆ?

ನನಗೆ ಯಾವತ್ತೂ ಭಯ ಇಲ್ಲ. ಅನ್ಯಾಯ ಮಾಡಿದರಷ್ಟೇ ಭಯ ಪಡಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಜೊತೆಗೆ ಹಿರೀಕರಿಂದ ಬಂದ ಗೌರವ, ಪ್ರೀತಿ, ವಸ್ತುಗಳು ಇದಾವೆ. ಈ ಪೆಟ್ಟಿಗೆ ಕಾಣ್ತಾ ಇದೆಯಲ್ಲ, ಸಾಗವಾನಿಯದು, ೨೦೦ ವರ್ಷ ಹಳೆಯದು. ಈ ಬೀಗ ಹೇಗಿದೆ ಅಂದ್ರೆ ಬಾಗಿಲು ಮುರಿದರೂ ಬೀಗ ಮುರಿಯಲ್ಲ. ಈ ಗಡಿಯಾರ ನೋಡಿ, ಕೀ ಕೊಟ್ರೆ ಇವತ್ತಿಗೂ ನಡೆಯುತ್ತೆ. ಈ ಟೇಬಲ್ಲಿನ ಕಾಲು ನೋಡಿ, ಮಜಬೂತಾಗಿದಾವೆ. ಸ್ವಲ್ಪ ಪಾಲಿಶ್ ಮಾಡಿದ್ರೆ ಬಾರೀ ಚೆನ್ನಾಗಾಗುತ್ತೆ. ಈ ಕಂಚಿನ ತಟ್ಟೆ ನೋಡಿ, ‘ಸೈಯದ್ ಮೆಹಬೂಬ್ ಸುಭಾನ್-೧೨೮೭’ ಅಂತ ಬರೆದಿದೆ. ೮೦೦ ವರ್ಷ ಹಳೇದು. ಬಗದಾದಿನ ಸೂಫಿಗಳು ದುವಾ ಮಾಡುವಾಗ ಕೈಯಲ್ಲಿ ಹಿಡೀತಿದ್ದ ತಟ್ಟೆ ಅದು. ಇದನ್ನ ಹಿಡಿದು ನಾನು ಎಷ್ಟೋ ಜನರಿಗೆ ದುವಾ ಕೇಳಿದೇನೆ. ನಿಜ ಆಗಿದೆ. ಹಿರೀಕರ ಇಂಥಾ ವಸ್ತುಗಳ ಮಧ್ಯನೇ ಇರೋದಕ್ಕೋ ಏನೋ ಆ ಕಾಲದಲ್ಲೇ, ಅವರ ಮಧ್ಯನೇ ಇದೀವಿ ಅನಿಸಿದೆ. ಭಯನೇ ಇಲ್ಲ. ಆದರೆ ಸಾಕಷ್ಟು ವಸ್ತುಗಳನ್ನ ಮ್ಯೂಸಿಯಂಗೆ ಕೊಟ್ಟಿದೀವಿ. ಉಳಿದಿದ್ದು ಒಂದೊಂದೇ ಮಾರಾಟ ಮಾಡತಾ ಇದೇವೆ. ವಯಸ್ಸಾಗ್ತಾ ಇದೆ, ಸಂಬಂಧಿಕರೆಲ್ಲ ಹೈದರಾಬಾದಿನಲ್ಲಿ ಇದಾರೆ. ನಾವೂ ಅಲ್ಲಿಗೇ ಹೋಗುವ ಅಂದುಕೊಂಡಿದೇವೆ. ಹೀಗೇ ಇನ್ನೆಷ್ಟು ದಿನನೋ ಗೊತ್ತಿಲ್ಲ. ಇರುವಷ್ಟು ದಿನ, ಯಾರಿಗೂ ತೊಂದರೆ ಕೊಡದ ಹಾಗೆ, ಅಯ್ಯೋ ಹೀಗಾಯ್ತಂತ ಅಳದ ಹಾಗೆ, ಅದುಬೇಕು ಇದುಬೇಕಂತ ಆಸೆ ಪಡದ ಹಾಗೆ, ನಾಲ್ಕು ಜನರ ಕಣ್ಣೀರು ಒರೆಸಿ, ಕೊನೆಗೆ ನಡೆದುಬಿಡೋದು. ಏನಂತೀರಾ?




ಏನೆನ್ನುವುದು ನಾವು?

ಈಗ ಅಜಮಾಸು ೭೫ ವಯಸ್ಸಿನವರಿರಬಹುದಾದ ಅವರು ತಮಗೆಷ್ಟು ವರ್ಷ ಎಂದು ಏನು ಮಾಡಿದರೂ ಹೇಳಲಿಲ್ಲ. ‘ಮೈ ಸೋಲಾ ಸಾಲ್ ಜೈಸೀ ದಿಖ್ತಾ ನಹೀ? ಸೋಲಾ ಬರಸ್ ಲಿಖೋ’ ಎಂದೇ ತುಂಟತನದಿಂದ ಬೆನ್ನು ಚಪ್ಪರಿಸಿದರು. ತಾನು ವಿಧಿಸಿದ ಚೌಕಟ್ಟನ್ನು ಮೀರಿ, ಮದುವೆಯೆಂಬ ಆತ್ಯಂತಿಕ ಹೆಣ್ಣು ಗುರಿಯನ್ನು ಮುಟ್ಟಲೊಲ್ಲದೆ ಏಕಾಂಗಿಯಾಗಿ ಸಂತೋಷವಾಗಿ ಬದುಕುವ ಹೆಣ್ಣುಗಳ ಬಗೆಗೆ ಸಮಾಜಕ್ಕೆ ತೀವ್ರ ಅಸಮಾಧಾನ, ಅಸಡ್ಡೆ ಇರುತ್ತದೆ. ಸಣ್ಣ ಕಾರಣ ಸಿಕ್ಕರೆ ಸಾಕು, ನೂರೊಂದು ಕತೆಗಳು ಹುಟ್ಟಿಕೊಳ್ಳುತ್ತವೆ. ಸಹಾಯವೆಂದೋ, ಸಾಂಗತ್ಯವೆಂದೋ ಒಬ್ಬ ಒಂಟಿ ಹೆಣ್ಣು ಗಂಡಿನೊಡನೆ ಸಂಪರ್ಕವಿಟ್ಟುಕೊಂಡರೆ ಅದಕ್ಕೊಂದು ತರಹದ ಕತೆ. ಒಂಟಿ ಹೆಣ್ಣು ಮತ್ತೊಂದು ಹೆಣ್ಣಿನೊಡನಿದ್ದರೆ ಅದು ಮಗದೊಂದು ದಿಕ್ಕಿನ ಕತೆ. ಅಂಥ ಎಲ್ಲದಕ್ಕೂ ಗ್ರಾಸವಾಗಿ, ಕೇಳಬಾರದ್ದನ್ನು ಕೇಳಿ, ಹೇಳಬೇಕಾದ್ದನ್ನು ಹೇಳಿ, ತನ್ನಿಷ್ಟದಂತೆ ಜೀವಿಸುವ ಹಕ್ಕು ತನಗಿದೆ ಎಂದು ಬದುಕಿ ತೋರಿಸುತ್ತಿರುವ ಅಪರೂಪದ ದಿಟ್ಟ ಮಹಿಳೆ ನಜ್ಮಾರ ಬದುಕೇ ಒಂದು ಹೋರಾಟದಂತಿದೆ.

ರಾಜಕಾರಣದ ಪ್ರತಿ ಆಗುಹೋಗುಗಳ ಬಗೆಗೂ ಅಪ್‌ಡೇಟ್ ಆಗಿರುವ ರಾಜಕೀಯ ಪ್ರಜ್ಞೆ, ತಮ್ಮನ್ನೇ ಲೇವಡಿ ಮಾಡಿಕೊಳ್ಳುವ ಹಾಸ್ಯ ಪ್ರಜ್ಞೆ, ಇರುವುದನ್ನು ಅದಿರುವಂತೆ ಗುರುತಿಸಬಲ್ಲ ವಾಸ್ತವ ಪ್ರಜ್ಞೆ, ಸುತ್ತಮುತ್ತಿನವರಿಗೆ ಸಾಧ್ಯವಿರುವಷ್ಟು ಸಹಾಯ ಮಾಡಬೇಕೆಂಬ ಸಮುದಾಯ ಪ್ರಜ್ಞೆ ಇರುವ ನಜ್ಮಾ ನೆನಪು-ಮರೆವುಗಳ ಸಮನ್ವಯದ ವಯೋಮಾನದಲ್ಲಿ ಬದುಕುತ್ತಿದ್ದಾರೆ. ಅವರ ದೇಹಭಾಷೆಯಲ್ಲಿ ತುಂಟತನ, ನಗೆಚಾಟಿಕೆ, ಮುಕ್ತ ಅಭಿವ್ಯಕ್ತಿ ಹಾಸುಹೊಕ್ಕಾಗಿವೆ. ಅವರಲ್ಲಿ ಹಲವು ವೈವಿಧ್ಯಗಳ ಸಮನ್ವಯವಿದೆ. ಆಧುನಿಕತೆ, ಆಂಟಿಕ್ವಿಟಿಯ ಸಮನ್ವಯವಿದೆ. ಧರ್ಮಶ್ರದ್ಧೆ, ವೈಯಕ್ತಿಕ ಸ್ವಾತಂತ್ರ್ಯಗಳ ಸಮನ್ವಯವಿದೆ. ಕನ್ನಡ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳ ಸಮನ್ವಯವಿದೆ. ತಮಾಷೆಯಿದೆ, ವಿಷಾದವಿದೆ. ಒಂಟಿತನದ ಅಸಹಾಯಕತೆಯಿದೆ; ಅದೂ ಬದುಕಿನ ಒಂದು ಮಜಲಷ್ಟೇ ಎಂದು ದಾಟಿ ಬಿಡುವ ಸ್ಫೂರ್ತಿಯಿದೆ.

ನಜ್ಮಾ ಈಗ ಅಕ್ಕನೊಡನೆ ಒಂದು ಪುಟ್ಟ ಮನೆಯಲ್ಲಿದ್ದಾರೆ. ಅವರ ತಾಯತ, ಮದ್ದು, ಔಷಧಿಗಳು ಜನರೊಡನೆ ಅಷ್ಟಿಷ್ಟು ಒಡನಾಟ ಒದಗಿಸಿ ಬದುಕನ್ನು ಸಹ್ಯಗೊಳಿಸಿರುವಂತಿದೆ. ಆದರೆ ಸಣ್ಣಪುಟ್ಟ ಸಹಾಯಕ್ಕೂ ಯಾರೂ ಇಲ್ಲದಿರುವುದು ಕಷ್ಟವಾಗಿದೆ. ನಾವು ಹೋದಾಗ ಕುಡಿಯುವ ನೀರು ಮುಗಿದುಹೋಗಿತ್ತು. ಕ್ಯಾನು ತುಂಬಿಸಿ ತರುವವರು ಕಾಣದೇ ತಳಮಳಗೊಂಡಿದ್ದರು. ಆದರೂ ಎಲ್ಲ ಇಲ್ಲಗಳ ನಡುವೆ ಮನೆಯೆದುರಿನ ಒಂಟಿಮರದ ಹಾಗೆಯೇ ಧೃಢವಾಗಿ, ಚಲನಶೀಲವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ನಿರಾವಲಂಬಿ, ಸರಳ, ನಿರ್ಭೀತ ಬದುಕು ಘನತೆಯ ಬದುಕಿಗೊಂದು ಒಳ್ಳೆಯ ಮಾದರಿಯಾಗಿದೆ.




ಡಾ. ಎಚ್. ಎಸ್. ಅನುಪಮಾ

Saturday 20 May 2023

Chennabhairadevi Chaturmukha Basadi - ಗೇರುಸೊಪ್ಪೆ ಸೀಮೆಯ ರಾಣಿ ಚೆನ್ನಭೈರಾದೇವಿ-ಚತುರ್ಮುಖ ಬಸದಿ

 ಕಾನುಹಾದಿ, ನದಿ, ಬಸದಿಯೂ, ಮತ್ತದರ ಕಾಳುಮೆಣಸಿನ ರಾಣಿಯೂ.. 


ಕತ್ಲೆಕಾನಿನ ನಟ್ಟನಡುವೆ 

ಸುಮಾರು ೩೦ ವರ್ಷಗಳ ಕೆಳಗೆ, ಉತ್ತರಕನ್ನಡವೆಂಬ ೮೩% ಅಡವಿ, ೧೭% ಜನವಸತಿಯಿರುವ ಹಸಿರುಮಯ ಜಿಲ್ಲೆಗೆ ನಾವು ಬಂದ ಹೊಸತು. ಹೊಸನೆಲದ ಮೂಲೆಮೂಲೆ ನೋಡುವ ತವಕ. ಎಲ್ಲರ ಬಾಯಲ್ಲೂ ನಲಿಯುವ ಕತ್ಲೆಕಾನಿನ ಗೇರುಸೊಪ್ಪೆಗೆ ಹೊರಟಿದ್ದೆವು. ೩೦ ಕಿ.ಮೀ. ಬೈಕಿನಲ್ಲಿ ಹೋಗಿ ಶರಾವತಿ ದಂಡೆಯ ತನಕ ನಡೆದೆವು. ನೀರು ಎಲ್ಲಿಯವರೆಗೆ ಏರಿದರೆ ಎಷ್ಟು ಅಪಾಯ ಎಂದು ಸೂಚಿಸುವ ಹಸಿರು-ಹಳದಿ-ಕೆಂಪು ಪಟ್ಟಿಗಳ ‘ಪ್ರವಾಹ ಅಪಾಯ ಸೂಚನಾ ಫಲಕ’ವು ನದಿಯೊಳಗೆ ನಿಂತಿತ್ತು. ದಡದಲ್ಲಿ ನಿಲ್ಲಿಸಿದ್ದ ದೋಣಿ ಕರೆದು ಶರಾವತಿ ನದಿಗಿಳಿದೆವು. ಒಂದರ್ಧ ಗಂಟೆ ಪಯಣಿಸಿ, ತಾರಿಯಲ್ಲಿಳಿದು ಅಂಬಿಗರಿಂದ ದಾರಿ ಗುರುತು ಪಡೆದು ದಟ್ಟ ಕಾಡಿನೊಳಗೆ ನಡೆದು ಹೋದೆವು. ಹಿಡಿದ ದಾರಿ ಸರಿಯಿದೆಯೇ ಎಂದು ಕೇಳಲು ದಾರಿ ಮೇಲೆ ಯಾರೂ ಸಿಗಲಿಲ್ಲ. ಕೆಸರು, ಮಣ್ಣಿನ ದಾರಿಯಲ್ಲಿ ನಡೆದು, ಅರೆಬರೆ ಶಿಥಿಲಾವಸ್ಥೆ ತಲುಪಿದ ಬಸದಿ ತಲುಪಿ ಅಯ್ಯಬ್ಬಾ ಎಂದು ಕುಳಿತೆವು. ನಮ್ಮನ್ನು ಕಂಡು ಮರುಗಿದ ಭಟ್ಟರ ಮನೆಯಲ್ಲಿ ಆಸರ ಕುಡಿದು, ಅನಾರೋಗ್ಯದ ಅವರ ಕುಟುಂಬ ಪಡುವ ಕಷ್ಟಕ್ಕೆ ಮರುಗಿ, ನಿಧಿಗಳ್ಳರ ದುರಾಸೆಗೆ ಬಲಿಯಾದ ಬಸದಿಯ ದುಃಸ್ಥಿತಿಗೆ ತಳಮಳಿಸಿ ಹಿಂತಿರುಗಿ ಹೊರಟೆವು. ತಾರಿಯ ಬಳಿ ಬಂದರೆ ಅಂಬಿಗರು, ‘ನೀರು ಕಮ್ಮಿ ಅದೆ. ಆದ್ರೂ ಕುಳ್ಳಿ ನೋಡುವನಿ’ ಎಂದು ದೋಣಿ ಹತ್ತಿಸಿದರು. ಕಡಲ ಇಳಿತ ಬಂದೆರಗಿ ಹೊಳೆ ನೀರು ಜರ್ರನಿಳಿಯಿತು. ನಮ್ಮನ್ನು ಕೆಳಗಿಳಿಸಿ ಅಂಬಿಗರು ಕೈಯಲ್ಲಿ ದೋಣಿಯನ್ನೆಳೆದು ಮುಂದೊಯ್ದರು. ಜಾರುವ ಹೊಳೆ ತಳದ ಕಲ್ಲುಗಳ ಮೇಲೆ ಹುಶಾರಾಗಿ ಕಾಲಿಡುತ್ತಾ, ಬಟ್ಟೆ ಒದ್ದೆ ಮಾಡಿಕೊಂಡು ನೀರಿನಲ್ಲಿ ನಡೆಯತೊಡಗಿದೆವು. ಇಳಿತ ಮುಗಿದು ಭರತ ಬಂದದ್ದು ನಮ್ಮ ಕಾಲುಗಳ ಅನುಭವಕ್ಕೆ ನಿಲುಕುವ ಮೊದಲೇ ಅಂಬಿಗರಿಗೆ ತಿಳಿದುಹೋಯ್ತು. ದೋಣಿ ಹತ್ತಿಸಿ ಗೇರುಸೊಪ್ಪೆಯ ಹೊಳೆಬಾಗಿಲು ಮುಟ್ಟಿಸಿದರು.

ಕೆಲವರ್ಷಗಳ ಬಳಿಕ ಭರತ, ಇಳಿತ ನೆಚ್ಚುವ ದೋಣಿಯ ಸಹವಾಸವೇ ಬೇಡವೆಂದು ನಿಜಾರ್ಥದಲ್ಲಿ ಜೋಲಿಯಂತೆ ತೂಗುತ್ತಿದ್ದ, ಮರದ ಹಲಗೆಗಳನ್ನು ಹಗ್ಗದಲ್ಲಿ ಹೆಣೆದು ಮಾಡಿದ ತೂಗುಸೇತುವೆಯ ಮೇಲೆ ತಳದ ನದಿ ನೋಡುತ್ತಾ ದ್ವೀಪಗಳ ದಾಟಿ ಹೋದೆವು. ಅಡಿಕೆ ಮರದ ಸಾರದಲ್ಲಿ ಮಳೆಗಾಲದ ಹಳ್ಳ ದಾಟಿ ರೂಢಿಯಿದ್ದರೂ ಹಲಗೆಗಳ ನಡುವಿಂದ ಆಳದಲ್ಲಿ ಕಾಣುವ ವಿಶಾಲ ನದಿಯು ಭಯ ಹುಟ್ಟಿಸಿತು. ಭಯ, ರೋಮಾಂಚನಗಳ ನಡುವೆ ಬಸದಿ ಕಂಡು, ಒಯ್ದದ್ದು ತಿಂದು, ಇಂಬಳ-ಉಣುಗುಗಳಿಗೆ ರಕ್ತದಾನ ಮಾಡಿ ಹಿಂತಿರುಗಿದರೂ ಅವು ಕಚ್ಚಿದ ಜಾಗದಲ್ಲಿ ತಿಂಗಳುಗಟ್ಟಲೆ ಕೆರೆತ ಅನುಭವಿಸಿದೆವು.


ಮಗದೊಮ್ಮೆ ಹೋದದ್ದು ಶರಾವತಿ ಟೇಲ್‌ರೇಸ್ ಎಂಬ ಐದು ಮೆಗಾವ್ಯಾಟ್ ವಿದ್ಯುತ್ ತಯಾರಿಸುವ ಯೋಜನೆ ಬಿಸಿಬಿಸಿ ಸುದ್ದಿಯಲ್ಲಿದ್ದಾಗ. ಅದನ್ನು ವಿರೋಧಿಸುತ್ತಿದ್ದ ಪರಿಸರವಾದಿ ಡಾ. ಕುಸುಮಾ ಸೊರಬ ಅಪಘಾತಕ್ಕೀಡಾಗಿ ತೀರಿಕೊಂಡಿದ್ದರು. ಬರಲಿರುವ ಅವಘಡವನ್ನರಿಯದ ಜನ ಹೊಳೆಯಂತೆಯೇ ತಣ್ಣಗಿದ್ದರು. ಅಣೆಕಟ್ಟೆಯ ಕೆಲಸ ಭರದಿಂದ ನಡೆದಿತ್ತು. ಉತ್ತರ ಭಾರತದಿಂದ ಬಂದು ಬೀಡುಬಿಟ್ಟ ಕೆಲಸಗಾರರ ಕಾಲನಿಯ ಪಕ್ಕದಿಂದಾಸಿ, ಯಾರದೋ ಹೆಸರು ಹೇಳಿ ಪ್ರವೇಶ ಗಿಟ್ಟಿಸಿ ಅಣೆಕಟ್ಟೆಯೆದುರಿನ ಸೇತುವೆ ದಾಟಿದೆವು. ಸ್ವಲ್ಪ ದೂರ ಕೆಮ್ಮಣ್ಣಿನಲ್ಲಿ ಚಲಿಸಿದ ‘ಮಾರುತಿ’ಯು ಆಳಗುಂಡಿ, ಕೆಸರಿಗೆ ಹೆದರಿ ಢಕ್ಕೆಂದು ಅಲ್ಲೇ ನಿಂತಿತು. ಇನ್ನೇನು ಬಂತು, ಬಂತು ಎಂದು ಮಕ್ಕಳನ್ನು ಪುಸಲಾಯಿಸುತ್ತ ಮುಂಬರಿದೆವು. ಹೊಳೆಸಂಗ ತೊರೆದು  ಕಾಲುದಾರಿಯಲ್ಲಿ ನಡೆದು ಹೋಗುವಾಗ ತಣ್ಣೀರ ಹಳ್ಳ ಎದುರು ಹಾಯಿತು. ಆಳವಾಗಿ, ಶಾಂತವಾಗಿ, ಕೆಲವೆಡೆ ಹರಿವ ಸದ್ದೂ ಕೇಳದಷ್ಟು ಗಂಭೀರವಾಗಿ, ದಿಕ್ಕು ಬದಲಿಸುತ್ತ ಶರಾವತಿ ನಮ್ಮ ಎಡಬಲ ಹರಿಯುತ್ತಿದ್ದಳು. ರಸ್ತೆಯ ಇಕ್ಕೆಲದಲ್ಲೂ ಕತ್ತಲೆ ಕಾನು. ನಂದಿ, ಮತ್ತಿ, ಸಾಗವಾನಿ, ಭರಣಿಗೆ, ಶಿವನಿ, ಹೆಬ್ಬಲಸು, ಮಾವು ಮುಂತಾದ ಹೆಸರರಿಯದ ನೂರಾರು ಜಾತಿಯ ಹೆಮ್ಮರಗಳು. ಎಲ್ಲೆಲ್ಲೂ ಬೆತ್ತ. ರಸ್ತೆ ಮೇಲೂ ಮೈಚಾಚಿದ್ದ ಬೆತ್ತದ ಹಿಂಡಲು ಚರ್ಮ ಸೀಳದಂತೆ ಎಚ್ಚರಿಕೆಯಿಂದ ನಡೆದೆವು. ಅಂತೂಇಂತೂ ಬಸದಿ ತಲುಪಿದಾಗ ಪುರಾತತ್ತ್ವ ಇಲಾಖೆಯ ಬೋರ್ಡು ಸ್ವಾಗತಿಸಿತು. ಸುತ್ತಮುತ್ತ ಸ್ವಚ್ಛವಾಗಿ ಕಲ್ಲು ಹಾಸು ಹಾಸಿಕೊಂಡು ಕೊಂಚ ಸುಧಾರಣೆ ಕಂಡಿತ್ತು.

ಈಗಿನ ಕತೆ ಬೇರೆ. ಬಸದಿಗೆ ಹೋಗಲು ಕಿರಿದಾದ ಡಾಂಬರು ರಸ್ತೆ ಆಗಿದೆ. ಯಾರ ಪ್ರಭಾವ, ಅನುಮತಿಯಿಲ್ಲದೇ ಅಣೆಕಟ್ಟೆಯೆದುರಿಂದಲೇ ವಾಹನದಲ್ಲಿ ಹೋಗಲು ಸಾಧ್ಯವಿದೆ. ಇಷ್ಟು ಸಲೀಸಾದ ಮೇಲೂ ನಮ್ಮೂರ ಮುಕ್ಕಾಲು ಪಾಲು ಜನ ಬಸದಿ ನೋಡಿಲ್ಲ, ‘ಅಲ್ಲಿಗ್ ಹೋಪುದ್ ರಾಶೀ ಕಷ್ಟ’ ಅಂತಲೇ ಭಾವಿಸಿದ್ದಾರೆ. ಆದರೆ ವಾರಕ್ಕೊಂದು ದೇಶ ನೋಡುವ, ದಿನಕ್ಕೆರೆಡು ಊರು ನೋಡುವ, ಜಾಲತಾಣಗಳಲ್ಲಿ ಪ್ರವಾಸಕಥನಗಳನ್ನು ಹೇಳುವುದೇ ಬದುಕಾಗಿರುವ ತಿರುಗಾಡಿಗಳು ಬಂದುಹೋಗುತ್ತಿದ್ದಾರೆ. ಇಲ್ಲಿಯ ಚರಿತ್ರೆ, ಜನಜೀವನದ ಆಳಕ್ಕಿಳಿಯದೇ ತಪ್ಪುತಪ್ಪು ವ್ಯಾಖ್ಯಾನಗಳ ಮಾಡುತ್ತ ಮೋಜು ಮಾಡಲಿಚ್ಛಿಸುವ ಪ್ರವಾಸಿಗರನ್ನು ಕರೆಯುತ್ತಿದ್ದಾರೆ. ‘ಇಲ್ಲಿ ನೆಟ್ವರ್ಕೇ ಇಲ್ಲ ಬ್ರೋ, ಮ್ಯಾಪೂ ಹಾಕಕ್ಕಾಗಲ್ಲ. ಸ್ವಲ್ಪ ಊಟತಿಂಡಿ, ನೆಟ್ವರ್ಕ್ ಇಷ್ಯೂ ಸುಧಾರಿಸ್ಬುಟ್ರೆ ಗುರೂ, ಈ ಜಾಗ ಸಖತ್ ಡೆವಲಪ್ ಆಗುತ್ತೆ. ಆಗ ನೋಡಿ ದೇವ್ರೂ, ಕೈಕಾಲಿಡಕ್ಕಾಗಲ್ಲ, ಅಷ್ಟು ಟೂರಿಸ್ಟ್ಸ್ ಬರ‍್ತಾರೆ’ ಎನ್ನುತ್ತಾರೆ. ಯಾರೂ ನೋಡದ ಲೋಕದಲ್ಲಿ ಸಿನಿಮಾದಂತೆ ತಮ್ಮ ಮದುವೆ ಆಗಬೇಕೆಂಬ ಭ್ರಮೆಯ ನವದಂಪತಿಗಳು ಸಹಾ ಮೇಕಪ್ ತಂಡ, ಸ್ಟುಡಿಯೋ ತಂಡದೊಡನೆ ಬಂದು ಮೂಲೆಮೂಲೆಗಳನ್ನು ತಡಕುತ್ತಿದ್ದಾರೆ.

ಆದರೆ, ‘ಓ ಅರಹಂತರೇ, ಈ ಜಾಗ ಅಭಿವೃದ್ಧಿಯಾಗಿ ಹೆಚ್ಚೆಚ್ಚು ಜನ ಬರುವುದೂ ಬೇಡ. ಸೆಲ್ಫಿಯ ಉನ್ಮಾದದಲ್ಲಿ ತಿಂದು, ಕುಡಿದು ಬಿಸಾಡಿ ಕಾಡು, ನದಿ, ಝರಿಗಳು ಗಬ್ಬೆದ್ದು ನಾರುವುದೂ ಬೇಡ. ಈಗಿರುವಂತೆ ದಟ್ಟಕಾಡಿನ ನಟ್ಟನಡು ನೀವು ಕಷ್ಟಲಭ್ಯರಾಗಿಯೇ ಇರಿ. ಬರಬೇಕೆನ್ನುವವರು ಕಷ್ಟಪಟ್ಟೇ ಬರುವಂತಿರಲಿ’ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ.

ಚತುರ್ಮುಖ ಬಸದಿ


ಜೈನಮತದಲ್ಲಿ ಸೃಷ್ಟಿಕರ್ತ ದೇವರ ಪರಿಕಲ್ಪನೆಯಿಲ್ಲ. ಪೂಜನೀಯ, ಆದರ್ಶ ಮಾನವರಾದ ತೀರ್ಥಂಕರರ ಬಿಂಬಗಳು ಬಸದಿಯಲ್ಲಿರುತ್ತವೆ. ತೀರ್ಥ ಎಂದರೆ ಧರ್ಮ. ಧರ್ಮೋಪದೇಶ ಮಾಡುವವರು, ಧರ್ಮವೆಂಬ ದೋಣಿಯ ಮೂಲಕ ಮಾರ್ಗದರ್ಶನ ಮಾಡಿದವರು ತೀರ್ಥಂಕರರು. ರಾಗದ್ವೇಷ ಜಯಿಸಿದ ಜಿನರು, ವೀತರಾಗರು, ಅರಿಹಂತರು ಅವರು. ತೀರ್ಥಂಕರರ ಬಿಂಬವಿರುವ, ಜಿನಮುನಿಗಳಿಗಾಗಿ ಕಟ್ಟಿದ ಮಂದಿರ ಜಿನಾಲಯ ಅಥವಾ ಬಸದಿ. ಅಂಥದೊಂದು ಬಸದಿಯು ನದಿ ತಳದ ಕರಿಬಂಡೆಯೇ ಎದ್ದುಬಂದು ಮೈಮೇಲೆ ಚಿತ್ತಾರ ಅರಳಿಸಿಕೊಂಡು ನಿಂತಿದೆಯೋ ಎನ್ನುವಂತೆ ಗೇರುಸೊಪ್ಪೆಯ ಶರಾವತಿ ತಟದ ದಿಬ್ಬದ ಮೇಲೆ ನಿಂತಿದೆ. ಆಚೀಚೆ ಗುಡ್ಡೆಯಾಗಿ ಬಿದ್ದ ಅವಶೇಷಗಳ ನಡುವಿನ ಅಗಲ ದಾರಿಯಲ್ಲಿ ನಡೆದು ೩೦-೪೦ ಮೆಟ್ಟಿಲೇರಿದರೆ, ಆಹಾ, ೫೦೦ ವರುಷಗಳಿಂದ ಏಳುಬೀಳು, ಹಗೆ, ಮೋಹ, ದ್ವೇಷ, ನಿರಾಸಕ್ತಿಗಳನ್ನು ತಮ್ಮೊಳಗೇ ಅರಗಿಸಿಕೊಂಡು ಲೋಕವನ್ನು ಅವಲೋಕಿಸುತ್ತ ಶಾಂತವಾಗಿ ಅರಹಂತರು ಕುಳಿತಿದ್ದರೆ ಅವರನ್ನು ವರ್ಣಿಸುವುದು ಹೇಗೆ?!

ಸಮವಸರಣದ ಬಸದಿಯನ್ನು ಪ್ರವೇಶಿಸುವವರ ಸರ್ವಸೊಕ್ಕುಗಳನ್ನು ಮುರಿಯುವಂತೆ ‘ಮಾನಸ್ತಂಭ’ ಎದುರು ಹಾಯುತ್ತದೆ. ಹಿನ್ನೆಲೆಗೆ ನಾಲ್ವರ ಬಿಂಬಗಳನ್ನು ನಾಲ್ಕು ದಿಕ್ಕಿಗೆ ಸಮನಾಗಿಟ್ಟು ಪೂಜಿಸುವ ಸರ್ವತೋಭದ್ರ ಚತುರ್ಮುಖ ಬಸದಿ ಕಾಣುತ್ತದೆ. ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಲ್ಪಟ್ಟ, ಹೊಯ್ಸಳ-ವಿಜಯನಗರ ಶೈಲಿಯ ಶಿಲ್ಪ ಕಲಾಕೃತಿ. ನಾಲ್ಕು ದ್ವಾರಗಳ ಬಸದಿಯನ್ನು ಯಾವ ಕಡೆಯಿಂದ ಹೊಕ್ಕರೂ ನಾಲ್ಕು ಕಂಬಗಳ ನವರಂಗ ಎದುರಾಗುತ್ತದೆ. ಒಳಗೆ ಅಂತರಾಳದಲ್ಲಿ ಅಲಂಕೃತ ಕಂಬಗಳ ನಡುವೆ ಭದ್ರಪೀಠದ ಮೇಲೆ ಕುಳಿತಿರುವ ಆದಿನಾಥ (ರಿಷಭನಾಥ), ಅಜಿತನಾಥ, ಶಾಂಭವನಾಥ, ಅಭಿನಂದನನಾಥ ಎಂಬ ತೀರ್ಥಂಕರರು ಕಾಣುತ್ತಾರೆ. ಜೈನಮತದ ೨೪ ತೀರ್ಥಂಕರರಲ್ಲಿ ಮೊದಲ ನಾಲ್ವರ ಮೂರ್ತಿಗಳು ಇವು.



೨೪ರಲ್ಲಿ ೨೧ ತೀರ್ಥಂಕರರು ನಿಂತ ಭಂಗಿ ‘ಕಾಯೋತ್ಸರ್ಗ’ದಲ್ಲಿ ನಿರ್ವಾಣ ಹೊಂದಿದ್ದರೆ, ಆದಿನಾಥ, ನೇಮಿನಾಥ ಮತ್ತು ಮಹಾವೀರರು ಪದ್ಮಾಸನದಲ್ಲಿ ನಿರ್ವಾಣ ಹೊಂದಿದವರು. ನಿರ್ವಾಣ ಭಂಗಿಯಲ್ಲೇ ಶಿಲ್ಪ ಕಟೆಯಬೇಕೆಂದು ಜೈನ ಶಿಲ್ಪಶಾಸ್ತ್ರ ಹೇಳಿದರೂ ಇಲ್ಲಿ ಎಲ್ಲರೂ ಎಡಗಾಲ ಮೇಲೆ ಬಲಗಾಲು ಇಟ್ಟು, ಹಸ್ತವನ್ನು ಒಂದರಮೇಲೊಂದಿಟ್ಟು ಧ್ಯಾನಸ್ಥರಾಗಿ ಪಲ್ಯಂಕಾಸನದಲ್ಲಿ ಕುಳಿತಿದ್ದಾರೆ. ಅವರನ್ನು ಪೀಠದಲ್ಲಿರುವ ಸಂಕೇತಗಳಿಂದ (ಆದಿನಾಥ-ವೃಷಭ, ಅಜಿತನಾಥ-ಆನೆ, ಶಾಂಭವನಾಥ-ಕುದುರೆ, ಅಭಿನಂದನನಾಥ-ಕಪಿ), ಅವರ ಸಹಚರ ಯಕ್ಷಯಕ್ಷಿಯರಿಂದ ಯಾವುದು ಯಾರೆಂದು ಗುರುತಿಸಬಹುದು. ತಲೆಯ ಮೇಲೆ ಜೈನಪ್ರಭಾವವನ್ನು ಬಿಂಬಿಸುವ ಮುಕ್ಕೊಡೆಯಿಂದ ಆದಿನಾಥ ಮೂರ್ತಿಯನ್ನು ಗುರುತಿಸಬಹುದು. 

ಚತುರ್ಮುಖದ ದಕ್ಷಿಣ ಬಾಗಿಲವಾಡದಲ್ಲಿ ಗಜಲಕ್ಷ್ಮಿಯಿದ್ದಾಳೆ. ಮಿಕ್ಕೆಲ್ಲ ಕಡೆ ಧ್ಯಾನಸ್ಥ ತೀರ್ಥಂಕರರೇ ಇದ್ದಾರೆ. ನಾಲ್ಕು ದ್ವಾರಗಳ ಎರಡೂ ಕಡೆ ದ್ವಾರಪಾಲಕರು ಅಲಂಕೃತರಾಗಿ ದ್ವಿಭಂಗದಲ್ಲಿ ನಿಂತಿದ್ದಾರೆ. ಹೊರಾವರಣದ ಗೋಡೆಯಲ್ಲಿ ಸಾಲಭಂಜಿಕಾ ಶಿಲ್ಪಗಳಿವೆ. ಸುಂದರ ಕೆತ್ತನೆಯ ಜಾಲಂಧ್ರಗಳಿವೆ. ನಾಗರಶೈಲಿಯ ಪುಟ್ಟ ಗೋಪುರ, ಮಂಟಪಗಳಿವೆ. 

೭೦೦ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡ ಬಸದಿ ಸಮುಚ್ಚಯದ ಆಸುಪಾಸಿನಲ್ಲಿ ಪೂಜೆಗೊಂಡ ನಾಗಶಿಲ್ಪಗಳು ಕಂಡುಬರುತ್ತವೆ. ಭಾರತದ ಬಹುತೇಕ ಆದಿ ಮತಪಂಥಗಳಂತೆ ಜೈನರಲ್ಲಿಯೂ ನಾಗಾರಾಧನೆ ಇದೆ. ಪಾರ್ಶ್ವನಾಥ, ಸುಪಾರ್ಶ್ವನಾಥರಿಗೆ ತಲೆಮೇಲೆ ಹಾವಿನ ಕೊಡೆಯಿದೆ. ಪಾರ್ಶ್ವನಾಥರ ಯಕ್ಷ, ಯಕ್ಷಿಯರಾದ ಧರಣೇಂದ್ರ, ಪದ್ಮಾವತಿಯರು ನಾಗದಂಪತಿಗಳು ಎಂದೇ ವರ್ಣಿಸಲ್ಪಟ್ಟಿದ್ದಾರೆ.

ಇಲ್ಲಿ ಜೈನಮುನಿ ಸಮಂತಭದ್ರರ ಮಠವಿತ್ತು. ಶ್ರವಣಬೆಳಗೊಳದ ಶಾಖಾಮಠವಾಗಿದ್ದ ಅದರಲ್ಲಿ ಮುನಿವೃಂದವೂ, ವಿದ್ಯಾರ್ಥಿಗಳೂ ಇದ್ದರು. ಚತುರ್ಮುಖ ಬಸದಿಯ ಹತ್ತಿರದಲ್ಲೇ ಪಾರ್ಶ್ವನಾಥ ಬಸದಿ, ನೇಮಿನಾಥ ಬಸದಿಗಳಿವೆ. ಪಾರ್ಶ್ವನಾಥರ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ದೇವಾಲಯವಿದ್ದು ಪೂಜೆ ನಡೆಯುತ್ತದೆ. ಬಸದಿಯ ಆಚೀಚೆ ೧೦೮ ಜೈನದೇವಾಲಯಗಳು ಇದ್ದವು. ಚತುರ್ಮುಖ ಬಸದಿಯನ್ನು ಕಲ್ಲಿನಲ್ಲಿ ಕಟ್ಟಿದ್ದರೆ ಸುತ್ತಮುತ್ತಲ ಬಸದಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಜಂಬಿಟ್ಟಿಗೆ ಕಲ್ಲಿನಲ್ಲಿ ಕಟ್ಟಿರಬಹುದು. ಎಲ್ಲೆಂದರಲ್ಲಿ ಪಾಳುಬಿದ್ದ ಗೋಡೆ, ಪಾಯ, ಕಂಬ, ಮಂಟಪಗಳ ಅವಶೇಷಗಳನ್ನು ನೋಡಿದರೆ ಹಾಗೆನಿಸುತ್ತದೆ. ಬಸದಿಯ ನಾಲ್ಕೂ ದಿಕ್ಕಿಗೆ ಕುದುರೆಯಲ್ಲಿ ಓಡಾಡುವ ದಾರಿಗಳಿದ್ದುವಂತೆ. ಬಳಸದ ಹಾದಿಯನ್ನು ಕಾಡು ಆವರಿಸಿಕೊಂಡ ಕಾರಣಕ್ಕೆ ಅವು ಕಾಣೆಯಾಗಿವೆ. ಅರಣ್ಯ ಉತ್ಪನ್ನಗಳ ಸಂಗ್ರಹ, ಶುದ್ಧೀಕರಣಕ್ಕೆಂದು, ಕುಡಿಯುವ ನೀರಿಗೆಂದು ತೋಡಿರಬಹುದಾದ ಹತ್ತಾರು ಬಾವಿಗಳು ಇಲ್ಲಿವೆ.

ಹತ್ತಿರದಲ್ಲಿಯೇ ಒಂದೆಡೆ ಜೈನದಾನ ಶಾಸನ, ಸಮಾಧಿಮರಣದ ಸ್ಮರಣೆಗೆ ನಿಲ್ಲಿಸಿದ ನಿಷಿದಿಗಲ್ಲು, ವೀರಗಲ್ಲು, ಮಹಾಸತಿಗಲ್ಲುಗಳನ್ನು ಜೋಡಿಸಿಟ್ಟಿದ್ದಾರೆ. ಬಹುತೇಕ ಶಾಸನಗಳು ‘ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ವರಕುಮಾರಿ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಡು ಭಟಿಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು’ ಬರೆಸಲ್ಪಟ್ಟವೇ ಆಗಿವೆ. ಇವಲ್ಲದೆ ಲೋಹಶಾಸನ, ಸ್ಮಾರಕ ಶಿಲ್ಪಗಳೂ ಸಾಕಷ್ಟು ದೊರೆತಿವೆ. ಈ ಪ್ರದೇಶದಲ್ಲಿ ದಾನಶಾಸನಗಳು ವಿಪುಲವಾಗಿ ದೊರಕಿವೆ. ಬಹುತೇಕ ಶಾಸನಗಳನ್ನು ಓದಿ ದಾಖಲಿಸಲಾಗಿದೆ. ಕೆಲವು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ತಲುಪಿದ್ದರೆ ಮತ್ತೆ ಕೆಲವು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿವೆ. ಉಳಿದವು ಇಲ್ಲಿ ಪಂಚಭೂತಗಳಿಗೊಡ್ಡಿಕೊಂಡು ಸವೆಯುತ್ತಿವೆ. 



ಜೈನ ಗೃಹಸ್ಥರಿಗೆ ಷಟ್ಕರ್ಮಗಳಲ್ಲಿ ದಾನ ಪ್ರಮುಖವಾದದ್ದು. ಆಹಾರ, ಅಭಯ, ಶಾಸ್ತ್ರ, ಭೈಷಜ (ಹಸಿದವರಿಗೆ ಅನ್ನ, ಸಂಕಟದಲ್ಲಿರುವವರಿಗೆ ಆಶ್ರಯ, ರೋಗಿಗಳಿಗೆ ಔಷಧಿ, ಅಭ್ಯಾಸಿಗಳಿಗೆ ಶಾಸ್ತ್ರಗ್ರಂಥ) ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ. ಜೈನದಾನ ಶಾಸನಗಳನ್ನು ಹಾಳು ಮಾಡಿದರೆ ಏನಾಗುವುದು ಎಂದು ಶಾಪಾಶಯವನ್ನೂ ಕೆತ್ತಲಾಗಿದೆ. 

ಗೇರುಸೊಪ್ಪೆ ಸೀಮೆಯ ಶಾಸನಗಳನ್ನು ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕೆಂಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಂಗ್ರಹಿಸಿದ್ದ. ೧೮೬೭ರಲ್ಲಿ ಅಜಂತಾ ಕೇವ್ ಟೆಂಪಲ್ ಕಮಿಷನ್ ಎಂದು ಆರಂಭವಾಗಿ ಕೊನೆಗೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಆದ ನಮ್ಮ ಹೆಮ್ಮೆಯ ಪುರಾತತ್ತ್ವ ಇಲಾಖೆಯು ಪ್ರತಿವರ್ಷ ‘ಆನ್ಯುವಲ್ ರಿಪೋರ್ಟ್ ಆಫ್ ಇಂಡಿಯನ್ ಎಪಿಗ್ರಫಿ’ ಪ್ರಕಟಿಸುತ್ತಿತ್ತು. ಇಲ್ಲಿನ ಶಾಸನಗಳನ್ನು ೧೯೨೦-೩೦ರ ಹೊತ್ತಿಗಾಗಲೇ ಓದಿ ಪ್ರಕಟಿಸಲಾಗಿತ್ತು. ಸ್ವಾತಂತ್ರ್ಯಾನಂತರವೂ ಅಧ್ಯಯನ ಮುಂದುವರೆದಿತ್ತು. ಎಂ. ಚಿದಾನಂದಮೂರ್ತಿ ೧೯೬೬ರಲ್ಲಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನಡೆಸುವಾಗ ಇಲ್ಲಿಯ ಶಾಸನಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಪಿ.ಬಿ.ದೇಸಾಯಿ, ಆರ್. ನರಸಿಂಹಾಚಾರ್, ಹಂಪನಾ, ಸೂರ್ಯನಾಥ ಕಾಮತ್, ಕೆ. ಜಿ. ಭಟ್ ಸೂರಿ, ಕೆ. ಜಿ. ವಸಂತ ಮಾಧವ ಮೊದಲಾದವರು ಸಾಕಷ್ಟು ಅಧ್ಯಯನ ನಡೆಸಿ ಕರಾವಳಿ ಕರ್ನಾಟಕದ ಇತಿಹಾಸ ಅರಿತುಕೊಳ್ಳಲು ಕಾರಣರಾದರು. ಆದರೆ ಈಗಿನ ಆಳುವವರ ಇತಿಹಾಸ ಪ್ರಜ್ಞೆ, ಆಸಕ್ತಿಗಳು ಅಡ್ಡದಾರಿ ಹಿಡಿದಿರುವ ಕಾರಣ ಪುರಾತತ್ತ್ವ ಇಲಾಖೆ ಸಿಬ್ಬಂದಿಯಿಲ್ಲದೇ ಸೊರಗುತ್ತಿದೆ. ಕಣ್ಣೆದುರೇ ಶಾಸನ, ಗುಡಿ, ಕೋಟೆಗಳು ಕರಗಿಹೋಗುತ್ತಿದ್ದರೂ ಅದರ ಬಗೆಗೆ ಜನರ, ಜನಪ್ರತಿನಿಧಿಗಳ ಅಸಡ್ಡೆ ಕಂಗೆಡಿಸುವಂತಿದೆ. 

ಕೆಕ್ಕೇಕೆಕೆಕೆಕೆಕೆಕೆ

ಹೆಚ್ಚುಕಡಿಮೆ ೪೦೦ ವರುಷಗಳಿಂದ ಈ ಬಸದಿ ದುರಾಶೆಯ ಕಳ್ಳರ ಹಾರೆಗುದ್ದಲಿ ಪ್ರಯೋಗಕ್ಕೊಳಗಾಗಿ ತಾನೊಂದೇ ಈ ದಟ್ಟ ಕಾಡಿನಲ್ಲಿ ನಿಂತಿದೆ. ಬರುವವರಿಲ್ಲದೆ, ಹೋಗುವವರಿಲ್ಲದೆ, ಹೇಳುವವರು ಕೇಳುವವರು ಪೂಜಿಸುವವರು ನಂಬುವವರು ಇಲ್ಲದೆ, ಯಾರಿಲ್ಲದಿದ್ದರೂ ಲೋಕವಿದೆಯಲ್ಲ ಎನ್ನುವಂತೆ ಗಿಡಮರಪಕ್ಷಿಪ್ರಾಣಿಕ್ರಿಮಿಕೀಟ ಬಾವಲಿಗಳ ನಡುವೆ ಅರಹಂತರು ಇದ್ದಾರೆ. 

ಇಂತಹ ಕಡೆ ಅಷ್ಟುಹೊತ್ತು ಮೌನವಾಗಿ ಕೂರದಿದ್ದರೆ ಯಾವುದೂ ಎದೆಗಿಳಿಯದು ಎನಿಸಿ ಸುಮ್ಮನೇ ಕುಳಿತೆವು.

ಮುಗಿಲೆತ್ತರ ಬೆಳೆದ ಮರಗಳ ನಡುವೆ ಕಲ್ಲಿನಲ್ಲಿ ಅರಳಿದ ಹೂವೋ ಎನ್ನುವಂತೆ ಬಸದಿ ನಿಂತಿದೆ. ಆವರಣದ ನಂದಿಮರ ಎಷ್ಟು ನೂರು ವರ್ಷ ಹಳೆಯದೋ? ಆಚೀಚೆ ರಾಶಿಗೊಂಡು ಬಿದ್ದ ಕಲ್ಲುಗಳಲ್ಲಿ ಯಾರ‍್ಯಾರ ಬೆವರು, ಹೆಸರು ಅಡಗಿದೆಯೋ? ದಿಬ್ಬದಡಿ ಎಷ್ಟು ಗುಡಿಗಳಿವೆಯೋ? ಇದರಲ್ಲಿ ರಾಣಿಯ ಅರಮನೆ ಯಾವುದೋ? ಸೆರೆಮನೆ ಯಾವುದೋ? ಆಸ್ಥಾನ, ಪೂಜಾಗೃಹ, ಪುರಪ್ರಮುಖರ ಮನೆಗಳೆಲ್ಲ ಎಲ್ಲಿದ್ದವೋ? ಇಲ್ಲೇ ಕುಳಿತು ಚೆನ್ನೆಯೂ, ಜೈನಮುನಿಗಳೂ, ಶ್ರಾವಕರೂ ಅದಾವ ಪ್ರಾರ್ಥನೆಗಳನ್ನು ವಿಶ್ವಹೃದಯಕ್ಕೆ ತಲುಪಿಸಿದ್ದರೋ? ಪ್ರಕೃತಿಯು ಕಾಡಿನ ರೂಪದಲ್ಲಿ ಹಳೆಯ ಚಹರೆಗಳನ್ನು ಅಳಿಸಿದೆ. ಬಿದ್ದಕಲ್ಲುಗಳ ನಡುವಿಂದ ಗಿಡಮರಬಳ್ಳಿಗಳು ಮೈತಳೆದು ಹಸಿರು ಹೊದ್ದು ನಿಂತುಬಿಟ್ಟಿವೆ. ಯಾವುದರ ಅಡಿ ಏನಿದೆಯೋ? ಬಗೆಯುತ್ತ ಹೋದರೆ ಅನಾವರಣಗೊಳ್ಳುವ ಸತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಈ ಕಾಲಕ್ಕೆ ಇದೆಯೋ ಇಲ್ಲವೋ? 

ಕಟಕಟಕಟಕಟ ಸದ್ದು. ಸದ್ದು ಹಿಂಬಾಲಿಸಿ ಕುತ್ತಿಗೆ ಮೇಲೆತ್ತಿಕೊಂಡಿತು. ಅದೋ ಅಲ್ಲಿ, ಕುನ್ನೇರಳೆ ಮರದ ಮೇಲೆ ಕಾಣುವ ಕ್ಯಾಸಾಳ. ಎರಡು ಮೊಳದಷ್ಟು ದೊಡ್ಡದಿರುವ ಕೆಂಪು-ಬಿಳಿ ಬಣ್ಣದ ಬೃಹತ್ ಮರದಳಿಲು ಅಥವಾ ಕೆಂದಳಿಲು ಮುಂಗಾಲುಗಳ ನಡುವೆ ಏನನ್ನೋ ಹಿಡಿದು ತಿನ್ನುತ್ತಿದೆ. ಅದಲ್ಲಿ ಕೂತಿರುವಂತೆಯೇ ಮತ್ತೊಂದು ಬಂತು. ಅಟ್ಟಾಡಿಸಿಕೊಂಡು ಒಂದರ ಹಿಂದೊಂದು ಓಡಿದವು. ಜಗಳವೋ, ಚಿನ್ನಾಟವೋ ಅವರ ಭಾವ-ಭಾಷೆ ಗೊತ್ತಿರದ ನಾವು. ಜೇನ್ನೊಣಗಳ ಝೇಂಕಾರ, ಪುಟ್ಟ ಚಿಟ್ಟುಗುಟುರ ಹಕ್ಕಿಯ ಟೊಂಯ್ಞ್ಗ್ ಟೊಂಯ್ಞ್ಗ್ ಎಂಬ ಲೋಹಕುಟ್ಟಿದ ಸದ್ದು; ಕುರ್ರೋ ಕುಟ್ರ್ ಕುಟ್ರ್ ಕುಟ್ರ್ ಎಂಬ ಹಸಿರೆಲೆಗಳ ನಡುವೆ ಅಡಗಿದ ಸೊಪ್ಪುಕುಟುರ ಹಕ್ಕಿಯ ಹಾಡು; ಕಾಡಿಗೆ ಕಾಡೇ ಪ್ರತಿಧ್ವನಿಸುವಂತೆ ಚಿಂವಚಿಂವಚಿಂವ ಎನ್ನುತ್ತ ಹಿಂಡುಹಿಂಡಾಗಿ ಸರ್ರಭರ್ರ ಹಾರುವ ಹೆಬ್ಬೆರಳಿನಷ್ಟು ದೊಡ್ಡದಿರುವ ಬಾಳೆಗುಬ್ಬಿಗಳು; ಕೊಳಪಳಕೊಳಪಳವೆಂಬ ಪಿಕಳಾರ, ಯುಗಾದಿಯ ಕೋಗಿಲೆ, ಗುಟುರುಗುಡುವ ಕೆಂಬೂತ, ಪದಗಳಲ್ಲಿ ಹಿಡಿದಿಡಲಾಗದ ಕದುಗ ಹಕ್ಕಿಯ ಕರೆ, ಕೆಕ್ಕೇಕೆಕ್ಕೆಕ್ಕೆಕ್ಕೆಕ್ಕೆಕ್ಕೆ ಎಂದು ವಿಚಿತ್ರವಾಗಿ ಸದ್ದು ಮಾಡುತ್ತ ನಿಧಾನ ಬಂದು ಕೂತ ಮಂಗಟ್ಟೆ ಹಕ್ಕಿಯ ಗೌಜು ಮತ್ತು ಕಾಡಿನ ಶಬ್ದವೈವಿಧ್ಯಕ್ಕೆ ಬೆರಗಾಗಿ ಲಬಡಬಲಬಡಬವೆನ್ನುವ ನಮ್ಮ ಹೃದಯಗಳು - ಓಹ್ ಕವಿವಾಣಿಯೇ, ಈ ಜಗಹೃದಯ ಆನಂದಮಯವೇ!!

ಸಾಳುವರು

ಇದನ್ನು ಕಟ್ಟಿಸಿದ ರಾಣಿ ಚೆನ್ನಭೈರಾದೇವಿ (ಆಳ್ವಿಕೆ ಕ್ರಿ.ಶ. ೧೫೫೨-೧೬೦೬) ಸಾಳುವ ವಂಶಕ್ಕೆ ಸೇರಿದವಳು. ಸಾಳುವರ ರಾಜಧಾನಿಯಾಗಿದ್ದ ಗೇರುಸೊಪ್ಪವು ಉತ್ತರಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಶರಾವತಿ ನದೀದಂಡೆಯ ಮೇಲಿದೆ. ನದಿಯ ಉತ್ತರ ದಂಡೆಗೆ ಗೇರುಸೊಪ್ಪ ಇದ್ದರೆ ದಕ್ಷಿಣ ದಂಡೆಯಲ್ಲಿ ನಗಿರೆಯಿತ್ತು. ಅಲ್ಲಿ ನೂರಾರು ಜೈನ ಬಸದಿಗಳಿದ್ದ ಕಾರಣ ಬಸದಿಕೇರಿಯೆಂದೂ ಕರೆಯುತ್ತಿದ್ದರು. (ಈಗದನ್ನು ನಗರಬಸ್ತಿಕೇರಿ ಎಂದು ಕರೆಯುತ್ತಾರೆ). ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಳುವ ರಾಜರಿಂದ ಆಳಲ್ಪಟ್ಟ ಈ ಪ್ರದೇಶವು ‘ಹೈವೆ’ ಎಂದೂ ಕರೆಸಿಕೊಂಡಿತ್ತು. ವ್ಯಾಪಾರ, ವ್ಯವಹಾರ, ವಾಣಿಜ್ಯ ವಹಿವಾಟು ಕೇಂದ್ರವಾಗಿದ್ದ ಗೇರುಸೊಪ್ಪೆಯು ಸುಂದರ ದೇವಾಲಯ, ಬಸದಿಗಳಿಗೂ ಪ್ರಸಿದ್ಧವಾಗಿತ್ತು. ಹೊನ್ನಾವರವು ಒಳನಾಡು ಬಂದರಾಗಿಯೂ, ಭಟ್ಕಳವು ವಿದೇಶೀ ಬಂದರಾಗಿಯೂ ಪ್ರಖ್ಯಾತವಾಗಿದ್ದವು. ಬಂದರುಗಳ ಸಲುವಾಗಿಯೇ ಯುದ್ಧ, ಮೈತ್ರಿ ಎರಡೂ ಏರ್ಪಟ್ಟವು. ಆಗ ಭಾರತಕ್ಕೆ ವಿದೇಶಿ ವರ್ತಕರು ಮಸಾಲೆ ಪದಾರ್ಥಗಳ ವ್ಯಾಪಾರಕ್ಕಾಗಿಯೇ ಬರುತ್ತಿದ್ದರು. ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಹಜವಾಗಿ ಸೊಂಪಾಗಿ ಬೆಳೆಯುತ್ತಿದ್ದ ಕಾಡುಮೆಣಸಿನ ಬಳ್ಳಿ ಖಾರವಾದ ಆದರೆ ಹಗುರವಾದ ಮೆಣಸಿನ ಕಾಳನ್ನು ಸುರಿಸುತ್ತಿತ್ತು. ಮಲೆನಾಡಿನ ಸಣ್ಣಪುಟ್ಟ ಪಾಳೆಯಪಟ್ಟುಗಳಿಗೂ ಇದು ವಿದೇಶೀ ವಿನಿಮಯದ ಮುಖ್ಯ ವಸ್ತುವಾಗಿತ್ತು. ಉತ್ತಮ ಜಾತಿಯ ಕುದುರೆಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. 

ಈಗಿನ ಉತ್ತರ ಕನ್ನಡವನ್ನು (ಹೈವೆ) ಸಾಳುವ ವಂಶದವರೂ, ದಕ್ಷಿಣ ಕನ್ನಡವನ್ನು (ತುಳುನಾಡು) ತುಳುವ ವಂಶದವರೂ ಆಳುತ್ತಿದ್ದರೆಂದು ಶಾಸನಗಳಲ್ಲಿ ಹೇಳಲಾಗಿದೆ. ಆದರೆ ಈ ಎರಡೂ ಹೆಸರುಗಳು ಅದಲುಬದಲಾಗುತ್ತಿದ್ದದ್ದೂ ಇದೆ. ವಿಜಯನಗರವನ್ನು ಆಳಿದವರು ತುಳುವ ಅರಸು ಮನೆತನದವರು. ಆ ವಂಶದ ಮೂಲಪುರುಷರು ಯಾವುದೋ ಕಾಲಘಟ್ಟದಲ್ಲಿ ಹಂಪಿಗೆ ವಲಸೆ ಹೋಗಿರಬಹುದು. ಹಾಗೆಯೇ ಆ ಮನೆತನದ ಶಾಖೆಯೊಂದು ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ದೇವಿಕಾಪುರಕ್ಕೂ ಹೋಗಿ ನೆಲೆಯಾಯಿತು. ಅದರ ಮತ್ತೊಂದು ಟಿಸಿಲು ಸಾಳುವ ವಂಶವಾಗಿ ನಾಲ್ಕುನೂರು ವರ್ಷ ಕರಾವಳಿಯಲ್ಲಿ ಆಳ್ವಿಕೆ ನಡೆಸಿತು.

೧೪ನೆಯ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳನ ಸೈನಿಕನಾಗಿದ್ದ ಹೊನ್ನನೆಂಬುವನು ಸಾಳುವ ಅರಸು ಮನೆತನದ ಮೂಲ ವ್ಯಕ್ತಿ. ಹೊಯ್ಸಳರ ಅವನತಿಯ ಬಳಿಕ ದಟ್ಟಡವಿಯಿಂದಾವೃತವಾದ ನಗಿರೆ-ಹಾಡುವಳ್ಳಿಗಳಲ್ಲಿ ನೆಲೆ ನಿಂತು ಪಾಳೆಯಪಟ್ಟನ್ನು ಕಟ್ಟಿದನು. ಅವನ ಬಳಿಕ ಹೈವರಸನು ಹಾಡುವಳ್ಳಿ, ಭಟಕಳ, ಹೊನ್ನಾವರ, ಚಂದಾವರ, ಗೋಕರ್ಣ ಸೀಮೆಗಳನ್ನು ಆಳಿದನು. ವಿಜಯನಗರದ ಸಾಮಂತನಾಗಿ ಮಹಾಮಂಡಲೇಶ್ವರನೆಂಬ ಬಿರುದು ಪಡೆದನು. ಅವನ ಬಳಿಕ ದಾಯಾದಿ ಕಲಹ ಉಂಟಾಗಿ ಸಾಳುವ ಮನೆತನವು ಹಾಡುವಳ್ಳಿ ಮತ್ತು ನಗಿರೆ (ಗೇರುಸೊಪ್ಪ) ಎಂದು ಇಬ್ಭಾಗವಾಯಿತು. ಹಾಡುವಳ್ಳಿಯಲ್ಲಿ ಹೈವನ ಮಗ ಸಂಗಿರಾಯ ಮತ್ತು ಗೇರುಸೊಪ್ಪೆಯಲ್ಲಿ ಅವನ ಅಳಿಯ ಸಂಗಮ ರಾಜರಾದರು. ಇವೆರೆಡು ಸಣ್ಣ ರಾಜ್ಯಗಳ ಮಧ್ಯೆ ಸದಾ ಹಗೆ. ಒಬ್ಬರಮೇಲೊಬ್ಬರು ಯುದ್ಧ ಮಾಡಿ ಸಾವುನೋವುಗಳಾದವೇ ಹೊರತು ಯಾರೋ ಒಬ್ಬರ ಆಳ್ವಿಕೆ ಬರಲು ಸಾಧ್ಯವಾಗಲಿಲ್ಲ. 

ಸಂಗಿರಾಯನು ವಿಜಯನಗರದ ಮಾಂಡಲಿಕನಾಗಲು ಒಲ್ಲದೆ ಸ್ವತಂತ್ರ ರಾಜನಾಗಿರಬಯಸಿದನು. ಅದಕ್ಕಾಗಿ ಯುದ್ಧವನ್ನೂ ಮಾಡಿದನು. ಸಂಗಿರಾಯನ ಬಳಿಕ ಇಂದಗರಸ ಪಟ್ಟಕ್ಕೆ ಬಂದು ಕನಿಷ್ಟ ೬೦ ವರ್ಷ ರಾಜ್ಯಭಾರ ಮಾಡಿದನು. ಬಳಿಕ ಇಮ್ಮಡಿ ಸಂಗಿರಾಯ, ಇಮ್ಮಡಿ ಇಂದಗರಸ, ದೇವರಾಯ ಒಡೆಯ, ಗುರುರಾಯ ಒಡೆಯ ಮೊದಲಾದವರು ಆಳ್ವಿಕೆ ನಡೆಸಿದರು. ಇಮ್ಮಡಿ ದೇವರಾಯನು (೧೫೧೫-೧೫೫೦) ಮಡಗೋವೆಯ ಬಳಿ ನಡೆದ ಭೀಕರ ಯುದ್ಧದಲ್ಲಿ ಸೋಲನ್ನಪ್ಪಿ ೧೫೫೦ರಲ್ಲಿ ಸಾವನ್ನಪ್ಪಿದ ಬಳಿಕ ಇಮ್ಮಡಿ ದೇವರಾಯನ ಪತ್ನಿ ಹಾಡುವಳ್ಳಿಯ ಚೆನ್ನಾದೇವಿ ರಾಣಿಯಾಗಿ ಆಳ್ವಿಕೆ ನಡೆಸತೊಡಗಿದಳು. ಭೈರಾದೇವಿಯೆಂಬ ದಿಟ್ಟ ಮಹಿಳೆಯ ಮಗಳಾದ ಚೆನ್ನಾದೇವಿ ಈ ನೆಲದವಳೇ ಆದರೂ ಅವಳ ರಾಜ್ಯವನ್ನು ಕಸಿಯಲು ಪೋರ್ಚುಗೀಸರು ಪಿಳ್ಳೆನೆವ ತೆಗೆದರು. ಮೊದಲೇ ಆದ ಒಪ್ಪಂದದಂತೆ ತಮಗೆ ಕಪ್ಪ ಕೊಡಲಿಲ್ಲ ಮತ್ತು ತಮ್ಮ ಅನುಮತಿ ಪಡೆಯದೆ ಅರಬ್ಬರ ಹಡಗುಗಳಿಗೆ ಭಟಕಳದ ಬಂದರಿನಲ್ಲಿ ಆಶ್ರಯ ಕೊಟ್ಟಳು ಎಂಬ ಆರೋಪ ಹೊರಿಸಿ ಗೋವೆಯ ಪೋರ್ಚುಗೀಸರ ಮಂಡಲಾಧಿಕಾರಿ ಆಲ್ಫಾನ್ಸೋ ಡಿಸೋಜಾ ಮತ್ತವನ ೧೨೦೦ ಸೈನಿಕರ ದಂಡು ರಾಣಿಯ ವ್ಯಾಪಾರ ಕೇಂದ್ರಗಳನ್ನು ಮುತ್ತಿಗೆ ಹಾಕಿ, ಭಟಕಳವನ್ನು ಸುಟ್ಟು ಹಾಕಿತು. ರಾಣಿ ಪೋರ್ಚುಗೀಸರಿಗೆ ಕಪ್ಪ ಕೊಡುವಂತಾಯಿತು. ಸೋಲಿನಿಂದ ಕಂಗೆಟ್ಟು ಅವಳು ವೈರಾಗ್ಯ ಹೊಂದಿದ ಬಳಿಕ ತಂಗಿ ಚೆನ್ನಭೈರಾದೇವಿ ಪಟ್ಟಕ್ಕೆ ಬಂದಳು. ಆದರೆ ಅವಳು ಕಿರಿಯಳೆಂದು ಸೋದರಮಾವ ಕೃಷ್ಣದೇವರಸ ಆಡಳಿತ ನಡೆಸಿದನು. 

ಗೇರುಸೊಪ್ಪ ಹಾಡುವಳ್ಳಿಯ ಸಾಳುವರು ಜೈನಮತಾವಲಂಬಿಯಾಗಿದ್ದರು. ಭದ್ರಬಾಹು ಭಟ್ಟಾರಕರು ಚಂದ್ರಗುಪ್ತ ಮೌರ್ಯನೊಡನೆ ಬೆಳಗೊಳಕ್ಕೆ ಬಂದ ನೂರಿನ್ನೂರು ವರ್ಷಗಳಲ್ಲಿ ಕನ್ನಡ ನಾಡಿನೆಲ್ಲೆಡೆ ಜೈನಮತವು ಪಸರಿಸಿತು. ಉತ್ತರಕನ್ನಡದ ಬನವಾಸಿಯ ಕದಂಬರು ವೈದಿಕ ಮತಾವಲಂಬಿಯಾದರೂ ಜೈನಧರ್ಮದವರೊಡನೆ ವೈವಾಹಿಕ ಸಂಬಂಧ ಬೆಳೆಸಿದ್ದರು. ಕದಂಬ ರಾಣಿಯೋರ್ವಳು ಸಲ್ಲೇಖನ ಸ್ವೀಕರಿಸಿದ್ದನ್ನು ಕುಮಟೆಯ ಪಾರ್ಶ್ವನಾಥ ಬಸದಿಯ ನಿಷಿಧಿ ಶಾಸನ ಹೇಳುತ್ತದೆ. ಗೇರುಸೊಪ್ಪೆಯ ಸಾಳುವರು ಕೆಲವೆಡೆ ವಿಜಯನಗರದ ಮಹಾಮಂಡಲೇಶ್ವರರೆಂದೂ, ಕೆಲವೆಡೆ ‘ಕದಂಬಾನ್ವಯ’ರೆಂದೂ ಹೇಳಿಕೊಂಡಿದ್ದಾರೆ. ಅಂತೂ ಜೈನಮತವು ಸಾಳುವರ ಕಾಲದಲ್ಲಿ ಕರಾವಳಿಯಲ್ಲಿ ಮತ್ತಷ್ಟು ಭದ್ರವಾಯಿತು. ನಗಿರೆಯಲ್ಲಿ ಸಮಂತಭದ್ರ ಮಠ, ಹಾಡುವಳ್ಳಿಯಲ್ಲಿ ಅಕಲಂಕ ಮಠಗಳು ಕುಂದುಕುಂದಾನ್ವಯ ಯತಿಪರಂಪರೆಯ ಬೇರೆಬೇರೆ ಶಾಖೆಗಳಾಗಿದ್ದರೂ ಶ್ರವಣಬೆಳಗೊಳದ ಶಾಖಾಮಠವಾಗಿ ಬೆಳವಣಿಗೆಯಾದವು.

ಕರಿಮೆಣಸಿನ ರಾಣಿ ಚೆನ್ನಭೈರಾದೇವಿ (೧೫೩೬-೧೬೦೬)

ಭಾರತದ ಇತಿಹಾಸದಲ್ಲೇ ಅತಿ ದೀರ್ಘ ಅವಧಿಗೆ ರಾಣಿಯಾಗಿದ್ದವಳು ಚೆನ್ನಭೈರಾದೇವಿ. ಮಹಿಳೆ ‘ರಾಣಿ’ಯಾಗಿ ೫೪ ವರ್ಷ ‘ಅವ್ವರಸಿ’ಯಾಗಿ ರಾಜ್ಯಭಾರ ನಡೆಸಿದ್ದು ಸಾಮಾನ್ಯವಲ್ಲ. ಕಳೆಗುಂದುತ್ತಿದ್ದ ಆಶ್ರಿತ ವಿಜಯನಗರ ಸಾಮ್ರಾಜ್ಯ, ಆಚೀಚಿನ ರಾಜರ ಜೊತೆಯ ನಿರಂತರ ಯುದ್ಧದ ನಡುವೆ ೫೪ ವರ್ಷ ಆಳಿದ ಚೆನ್ನಭೈರಾದೇವಿ ಅಪರೂಪದ ರಾಜತಾಂತ್ರಿಕ ಕೌಶಲ, ಧೈರ್ಯ ಮತ್ತು ಸರ್ವಧರ್ಮ ಸಹಿಷ್ಣುತೆಗೆ ಹೆಸರಾಗಿದ್ದಳು. ಮಿರ್ಜಾನ್ ಕೋಟೆ, ಹಾಡುವಳ್ಳಿಯ ಬಸದಿಗಳು, ಗೇರುಸೊಪ್ಪದ ಚತುರ್ಮುಖ ಬಸದಿ, ಭಟ್ಕಳದ ದೇವಾಲಯ-ಬಸದಿಗಳು ಅವಳ ಕಾಲದಲ್ಲಿ ಕಟ್ಟಿಸಿದಂಥವು. ಶಾಸನಗಳು ಅವಳನ್ನು ನಗಿರೆಯ ರಾಣಿ, ಹೈವ - ತುಳುವ - ಕೊಂಕಣ ಪ್ರದೇಶಗಳ ರಾಣಿಯೆಂದು ಉಲ್ಲೇಖಿಸುತ್ತವೆ. ಈಗಿನ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು, ಗೋವಾದ ದಕ್ಷಿಣ ಭಾಗವನ್ನು ಇದು ಒಳಗೊಂಡಿದೆ. ಗೇರುಸೊಪ್ಪ ಹಾಡುವಳ್ಳಿಗಳಿಂದ ಭೈರಾದೇವಿ ಹಾಗೂ ಪದ್ಮಲಾದೇವಿ ಎಂಬ ಮತ್ತಿಬ್ಬರು ರಾಣಿಯರು ಅಲ್ಪಕಾಲ ಆಳ್ವಿಕೆ ನಡೆಸಿದ್ದರೂ ತನ್ನ ವ್ಯವಹಾರ ಚಾತುರ್ಯ, ದೀರ್ಘಕಾಲದ ಆಳ್ವಿಕೆಯ ಕಾರಣವಾಗಿ ಚೆನ್ನಭೈರಾದೇವಿ ಗಮನಾರ್ಹಳಾಗಿದ್ದಾಳೆ. ಮಲೆಕಾಡುಗಳಲ್ಲಿ ಪತ್ತೆಯಾಗುತ್ತಿರುವ ಪಾಳುಬಿದ್ದ ಅವಶೇಷಗಳಿಂದ ಇತಿಹಾಸಾಸಕ್ತರನ್ನು ಇತ್ತೀಚೆಗೆ ಸೆಳೆಯುತ್ತಿದ್ದಾಳೆ.

ವ್ಯವಹಾರ, ಮಾತುಕತೆ, ತಂತ್ರಗಾರಿಕೆಯಲ್ಲಿ ನಿಪುಣಳಾದ ಕೂಡಲೇ ತರುಣಿ ಚೆನ್ನಭೈರಾದೇವಿ ಗೇರುಸೊಪ್ಪ ಮತ್ತು ಹಾಡುವಳ್ಳಿಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಳು. ಬರಿಯ ಹಣಕ್ಕೆ, ಅಧಿಕಾರಕ್ಕೆ, ನೆಲದೊಡೆತನಕ್ಕೆ ಬಡಿದಾಡದೇ ಸ್ವಾಯತ್ತತೆಗಾಗಿ ಹೋರಾಡಿದಳು. ಒಟ್ಟು ೩೭ ರೇವುಗಳ ಅಧಿಪತ್ಯ ಹೊಂದಿದ್ದ ಚೆನ್ನೆಯ ಕಾಲದಲ್ಲಿ ಹೊನ್ನಾವರವು ವಿಜಯನಗರದ ರಾಜ್ಯಪಾಲನನ್ನು ಹೊಂದಿತ್ತು. ರೇವುಗಳ ಒಡೆತನವಲ್ಲದೇ ಘಟ್ಟಪ್ರದೇಶ, ಮತ್ತದರಾಚೆಯ ಭಾರಂಗಿ, ಆವಿನಹಳ್ಳಿ, ಬಿದನೂರು, ಕರೂರು, ಮರಬಿಡಿ, ಸೌಳನಾಡು ಸೀಮೆಗಳೂ ಅವಳ ಆಡಳಿತಕ್ಕೆ ಬಂದವು. ಮಿದಿಗೆ (ಈಗಿನ ಮಿರ್ಜಾನ್)ಯಲ್ಲಿ, ಕಾನೂರಿನಲ್ಲಿ ಕೋಟೆ ನಿರ್ಮಾಣ ಆರಂಭವಾಯಿತು. 

ಒಳನಾಡುಗಳಿಂದ ಕಾಳುಮೆಣಸು, ಗಂಧ, ಶುಂಠಿ, ದಾಲ್ಚಿನ್ನಿಯಂತಹ ಅರಣ್ಯ ಉತ್ಪನ್ನಗಳು ಬರುತ್ತಿದ್ದವು. ಅಡಿಕೆ, ಕುಚ್ಚಿಗೆ ಅಕ್ಕಿ, ಕಣಿವೆಯ ಗದ್ದೆಗಳಲ್ಲಿ ಬೆಳೆಯುತ್ತಿದ್ದ ಗಂಧಸಾಲೆ ಎಂಬ ಪರಿಮಳದ ಅಕ್ಕಿ (ಪಾಯಸದ ಅಕ್ಕಿ), ಜಾಯಿಕಾಯಿ, ಹತ್ತಿ (ಬೂರುಗ), ಲವಂಗವೇ ಮೊದಲಾದ ವಸ್ತುಗಳನ್ನು ವಿದೇಶಗಳಿಗೆ ಕಳಿಸತೊಡಗಿದಳು. ಹಗ್ಗ, ತಾಮ್ರ, ತೆಂಗು, ಅಡಕೆಗಳು ಯೂರೋಪ್, ಆಫ್ರಿಕಾ, ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತಾಗುತ್ತಿದ್ದವು. ಅದಕ್ಕೆ ಬದಲಾಗಿ ಪರ್ಷಿಯನ್ ಕುದುರೆಗಳು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಅವಳ ಸೇನೆಗೆ ಸೇರ್ಪಡೆಯಾದವು. ರೇವುಗಳ ಸುಂಕದಿಂದ ಬಂದ ಹಣವನ್ನು ಕಲೆ, ಸಂಸ್ಕೃತಿ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದಳು.

ಪೋರ್ಚುಗೀಸರ ವಶದಲ್ಲಿದ್ದ ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಆಲ್ಫಾನ್ಸೋ ಮೆಕ್ಸಿಯು ಪೋರ್ಚುಗೀಸ್ ರಾಜನಿಗೆ, ‘ಬಟಿಕಳ (ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್ (ಕಾನೂರು), ಮರ್ಜೆನ್ (ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೆಡೋಸ್ (ಹದಿನೈದನೆಯ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳುಮೆಣಸು ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ (ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿವೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು’ ಎಂದು ಬರೆದಿದ್ದಾನೆ. ಈ ಕಾರಣದಿಂದಲೇ ‘ಆಕೆಯ ಜೊತೆಗೆ ಅತ್ಯಂತ ಜಾಗರೂಕತೆಯಿಂದ, ಮುತ್ಸದ್ದಿತನದಿಂದ ವರ್ತಿಸಬೇಕು. ಸ್ನೇಹಸೌಹಾರ್ದಗಳಿಂದಲ್ಲದೇ ಅವಳನ್ನು ನಮ್ಮ ಪರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ..’ ಎಂದು ೧೫೯೧ರ ಪೋರ್ಚುಗೀಸ್ ದಾಖಲೆಗಳು ಚೆನ್ನಭೈರಾದೇವಿಯ ಬಗ್ಗೆ ಹೇಳುತ್ತವೆ. ಕಾಳುಮೆಣಸಿನ ವ್ಯಾಪಾರ ವಹಿವಾಟಿನಿಂದಲೇ ಅವಳಿಗೆ ‘ಕಾಳು ಮೆಣಸಿನ ರಾಣಿ’ (ರೈನಾ ದ ಪಿಮೆಂಟಾ-ಪೆಪ್ಪರ್ ಕ್ವೀನ್) ಎಂಬ ಹೆಸರು ಬಂತು. 

ವಿಜಯನಗರದ ಅರಸು ಸದಾಶಿವರಾಯ ಅವಳ ರೇವುಗಳ ಮೂಲಕವೇ ಪರ್ಶಿಯನ್ ಕುದುರೆಗಳು ಬರುತ್ತಿದ್ದುದರಿಂದ ಮೈತ್ರಿಯಿಂದಿದ್ದನು. ಅವಳೂ ೧೫೬೦ರಲ್ಲಿ ವಿಜಯನಗರದದ ಅಧಿರಾಜತ್ವವನ್ನು ಒಪ್ಪಿದಳು. ಬಿಜಾಪುರದ ಆದಿಲ್ ಶಾಹಿಗಳೊಡನೆ ೧೫೬೯ರಲ್ಲಿ ಒಪ್ಪಂದ ಮಾಡಿಕೊಂಡಳು. ಕಲ್ಲಿಕೋಟೆಯ ಜಾಮೊರಿನ್ ದೊರೆಯೊಡನೆಯೂ ಒಪ್ಪಂದ ಮಾಡಿಕೊಂಡಳು. ವ್ಯಾಪಾರೀ ಕುತಂತ್ರಗಳಿಗೆ ಕುಖ್ಯಾತರಾಗಿದ್ದ ಪೋರ್ಚುಗೀಸರು ಹೊನ್ನಾವರ ಬಂದರಿನಲ್ಲಿ ಅಕ್ರಮವಾಗಿ ಯುದ್ಧನೌಕೆ ನಿಲ್ಲಿಸಲು ಯತ್ನಿಸಿದಾಗ ೧೫೭೦ರಲ್ಲಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿದಳು. ಅವರನ್ನು ಹೊನ್ನಾವರದಿಂದ ಓಡಿಸಲು ಭೀಕರ ಕದನ ನಡೆಸಿ ಅಪಾರ ನಷ್ಟವನ್ನುಂಟುಮಾಡಿದಳು. ಬಸ್ರೂರನ್ನು ಪೋರ್ಚುಗೀಸರು ಮುತ್ತಿದಾಗ ಅಲ್ಲಿನ ಆಳುವವರ ನೆರವಿಗೆ ೩೦೦೦ ಬಲದ ಸೈನ್ಯ ಕಳಿಸಿದಳು. ರೇವುಗಳ ಮೇಲಿನ ಹಿಡಿತ ಮತ್ತು ಕಾಳುಮೆಣಸಿನ ಉತ್ಪಾದನಾ ಪ್ರದೇಶಗಳ ಮೇಲಿನ ಹಿಡಿತ ಎರಡೂ ಇದ್ದ ಕಾರಣ ಪೋರ್ಚುಗೀಸರು ಅವಳೊಡನೆ ಸ್ನೇಹಸಂಬಂಧವಿಟ್ಟುಕೊಳ್ಳಲೇಬೇಕಾಗಿತ್ತು. ಎಂದೇ ಪೋರ್ಚುಗೀಸರ ಮತಾಂತರ ತಪ್ಪಿಸಿಕೊಳ್ಳಲು ಗೋಮಾಂತಕದಿಂದ ವಲಸೆ ಬಂದ ಕೊಂಕಣಿ ಭಾಷಿಕ ಬ್ರಾಹ್ಮಣ, ಅಂಬಿಗ, ಸೊನಗಾರರೇ ಮೊದಲಾದ ಸಮುದಾಯಗಳಿಗೆ ರಾಣಿ ಆಶ್ರಯ ಕೊಟ್ಟರೂ ಅವರದನ್ನು ಸಹಿಸಬೇಕಾಯಿತು. ಆದರೆ ಮಿರ್ಜಾನ್, ಅಂಕೋಲ, ಬೈಂದೂರು ರೇವುಪಟ್ಟಣಗಳಿಗಾಗಿ ನೆರೆಯ ಕೆಳದಿ ಮತ್ತು ಬೀಳಗಿಯ ರಾಜರ ಜೊತೆ ನಿರಂತರ ಸಂಘರ್ಷ ಏರ್ಪಡುತ್ತಿತ್ತು. ಒಮ್ಮೆ ಬೀಳಗಿಯ ಅರಸ ನರಸಿಂಗ(ರಂಗರಾಜ)ನು ಗೇರುಸೊಪ್ಪೆಯನ್ನು ಆಕ್ರಮಿಸಲು ಹೊನ್ನಾವರ ಬಳಿಯ ಹಳದೀಪುರದವರೆಗೂ ಬಂದಾಗ ಅವನನ್ನು ಹಿಮ್ಮೆಟ್ಟಿಸಿದ್ದಳು. 

೧೬೦ ವರ್ಷಕಾಲ ನಗಿರೆ, ಹಾಡುವಳ್ಳಿ ರಾಜ್ಯಗಳು ದಾಯಾದಿಗಳಂತೆ ಕಾದಾಡಿಕೊಂಡಿದ್ದಾಗ ಇವಳು ಅವೆರೆಡನ್ನೂ ಒಗ್ಗೂಡಿಸಿದಳು. ಹಲವೆಡೆ ಬಸದಿ, ಮಠಗಳನ್ನು ಕಟ್ಟಿಸಿದಳು. ಶೈವ, ವೈಷ್ಣವ ದೇವಸ್ಥಾನಗಳಿಗೆ ಉದಾರ ದೇಣಿಗೆ ನೀಡಿದಳು. ಉಪ್ಪುಂದ ಎಂಬ ಇಂದಿನ ಉಡುಪಿ ಜಿಲ್ಲೆಯ ಊರಿನಲ್ಲಿ ಸಿಕ್ಕ ಚೆನ್ನಭೈರಾದೇವಿಯ ಶಾಸನವು ಇಡೀ ಸೀಮೆಯ ತೆರಿಗೆಯನ್ನು ಮನ್ನಾ ಮಾಡಿರುವ ವಿಷಯ ಮತ್ತು ಗೋಕರ್ಣದ ಮಹಾಬಲೇಶ್ವರ ದೇವರ ಧರ್ಮಕ್ಕೆ ಬಿಟ್ಟ ವಿಷಯವನ್ನು ತಿಳಿಸುತ್ತದೆ. ೧೫೫೬ರ ಒಂದು ಶಾಸನದಲ್ಲಿ ಚೆನ್ನಭೈರಾದೇವಿಯು ‘ಅಮೃತಪಡಿ ಸೇವೆ, ಕಾರ್ತೀಕ ಪೂಜೆ, ಶಿವರಾತ್ರಿ, ಜಿನದಯಾಷ್ಟಮಿ, ಯುಗಾದಿ, ಶ್ರುತಪಂಚಮಿ, ಶ್ರಾವಣದ ಕ್ಷೀರಾಭಿಷೇಕ, ಅಷ್ಟಾನ್ಹಿಕ ದಶಲಕ್ಷಣ ಪೂಜೆ, ಹಾಲಧಾರೆ, ಕಜ್ಜಾಯಸೇವೆ’ ನಡೆಸಿದ್ದನ್ನು ಹೇಳಿದೆ. ಇದರಿಂದ ಉಳಿದ ಧರ್ಮಗಳನ್ನೂ ಅವಳು ಕಡೆಗಣಿಸಲಿಲ್ಲ ಎನ್ನುವುದು ಗೊತ್ತಾಗುತ್ತದೆ.

ರಾಜಕಾರಣದ ಏಳುಬೀಳುಗಳ ನಡುವೆ ಕಲೆ, ಸಾಹಿತ್ಯವನ್ನೂ ಅವಳು ಪ್ರೋತ್ಸಾಹಿಸಿದಳು. ತನ್ನ ಆಳ್ವಿಕೆಯ ಪ್ರದೇಶದಲ್ಲಿ ನೂರಾರು ಬಸದಿ, ಮಠ, ಗುಡಿ ಕಟ್ಟಿಸಿ ದಾನ ನೀಡಿದಳು. ಜೈನ ವಿದ್ವಾಂಸ, ವೈಯ್ಯಾಕರಣಿ ಭಟ್ಟಾಕಳಂಕ ಅವಳ ಕಾಲದಲ್ಲಿ ಹಾಡುವಳ್ಳಿಯಲ್ಲಿದ್ದು ಕರ್ನಾಟಕ ಶಬ್ದಾನುಶಾಸನವೆಂಬ ಮಹಾನ್ ವ್ಯಾಕರಣ ಗ್ರಂಥ ರಚಿಸಿದ. ಹಾಡುವಳ್ಳಿಯೂ ಜ್ಞಾನಕೇಂದ್ರವಾಗಿ ಬೆಳೆಯಿತು.

ಇಂಥ ರಾಣಿಯನ್ನು ಕೆಳದಿಯ ನಾಯಕ ಹಾಗೂ ಬೀಳಗಿಯ ಅರಸರ ನಿರಂತರ ದಾಳಿ ದುರ್ಬಲಗೊಳಿಸುತ್ತ ಬಂದಿತು. ಆ ಎರಡು ಮನೆತನಗಳ ನಡುವೆ ವೈವಾಹಿಕ ಸಂಬಂಧ ಏರ್ಪಟ್ಟಿದ್ದೇ ಅವರಿಬ್ಬರೂ ಗೇರುಸೊಪ್ಪದ ಮೇಲೆ ದಾಳಿ ನಡೆಸಿದರು. ಕೆಳದಿಯ ವೆಂಕಟಪ್ಪ ನಾಯಕನು ದಳವಾಯಿ ಲಿಂಗಣ್ಣನೊಡನೆ ಭಾರೀ ಸೇನೆ ಕಳಿಸಿ ಕುಟಿಲೋಪಾಯದಿಂದ ರಾಣಿಯನ್ನು ಕೈಸೆರೆ ಹಿಡಿದನು. ಹಾವಿನಹಳ್ಳಿ, ಕರವೂರು, ಗೇರುಸೊಪ್ಪೆ, ಗೋವರ್ಧನಗಿರಿ, ವಡ್ಡಿಮೇದಿನ ಮೊದಲಾದ ಅವಳ ಕೋಟೆಗಳನ್ನು ವಶಪಡಿಸಿಕೊಂಡನು. ಅವಳ ಬಳಿಯಿದ್ದ ‘ವಿಚಿತ್ರತರ’ ವಸ್ತುಗಳು, ವಾಹನಗಳು, ಬಟ್ಟೆ ಮೊದಲಾದ ಎಲ್ಲವನ್ನು ಕೆಳದಿಗೆ ಸಾಗಿಸಿದರು. ಅವಳಿಗೆ ಸಂಬಂಧಿಸಿ ಸಿಕ್ಕಿರುವ ಕೊನೆಯ ಶಾಸನ ೧೫೯೯ನೇ ಇಸವಿಯದು. ವೃದ್ಢರಾಣಿ ಚೆನ್ನಭೈರಾದೇವಿ ಸೆರೆಯಾಳಾಗಿ ತನ್ನ ಕೊನೆಗಾಲವನ್ನು ನಗಿರೆಯ ಕಾರಾಗೃಹದಲ್ಲಿ ಕಳೆದು ೧೬೦೬ರಲ್ಲಿ ನಿಧನ ಹೊಂದಿದಳು. ಅವಳ ಕಣ್ಣೆದುರೇ ಗೇರುಸೊಪ್ಪೆಯು ಕೆಳದಿ ಸಾಮ್ರಾಜ್ಯದ ಭಾಗವಾಯಿತು. ಬಳಿಕ ಮತ್ತೆಂದೂ ಅದು ತನ್ನದೇ ಆಳರಸರನ್ನು ಪಡೆಯಲು ಸಾಧ್ಯವಾಗಲಿಲ್ಲ. 

ಇತಿಹಾಸದ ತೆರವುಗಳು

೧೫೭೯ರ ಒಂದು ಶಾಸನದಲ್ಲಿ ‘ವೀರಮ್ಮನ ಕುಮಾರತಿಯರಾದ, ವೀರ ಒಡೆಯರ ಸಂಜಾತೆಯಾದ, ಶ್ರೀಮನ್ ಮಹಾಮಂಡಳೇಶ್ವರ ಸಾಳುವ ಕೃಷ್ಣ ದೇವರಸರವರ ಹೆಂಡತಿಯಾದ ಪಟ್ಟಮಹಾದೇವಿಯರೆನಿಸಿದ ಶ್ರೀಮನ್ ಮಹಾಮಂಡಳೇಶ್ವರ ಚೆನ್ನಭೈರಾದೇವಿಯಮ್ಮ’ ಎಂಬ ಉಲ್ಲೇಖವಿದೆ. ಹಾಡುವಳ್ಳಿ ಅರಸರ ಮತ್ತೊಂದು ವಂಶಾವಳಿಯಲ್ಲಿ ಗುರುರಾಯ ಒಡೆಯ ಮತ್ತು ವೀರಮ್ಮನವರ ಮಗಳು ಭೈರಾಂಬ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಚೆನ್ನಾಂಬ (ವಿಜಯನಗರದ ಸದಾಶಿವರಾಯನ ಪತ್ನಿ) ಹಾಗೂ ಚೆನ್ನಭೈರಾದೇವಿ (ನಗಿರೆಯ ಕೃಷ್ಣರಾಯರ ಪತ್ನಿ) ಎಂಬ ಉಲ್ಲೇಖವಿದೆ. ಎಂದರೆ ಅವಳು ವಿವಾಹಿತಳೇ? ಸಂಗೀತಪುರದಲ್ಲಿದ್ದು ಗೇರುಸೊಪ್ಪೆಯನ್ನೂ ಆಳಿದಳೇ? ಅವಳ ಸಂತತಿ ಮುಂದುವರೆಯಿತೇ? 

ಬಸದಿಯ ಹೊರಭಾಗದಲ್ಲಿ ಸೂರಿಲ್ಲದೆ ನಿಂತ ಕಂಬಗಳು, ಅದರಾಚೆ ಎಲ್ಲೆಲ್ಲೂ ಚದುರಿದ ಕಲ್ಲುಕಂಬಗಳನ್ನು ನೋಡಿದರೆ ಕಟ್ಟುವಿಕೆ ಅಪೂರ್ಣವಾಗಿದೆ ಅನಿಸುತ್ತದೆ. ಇದೇ ಸಾಳುವರ, ಚೆನ್ನಭೈರಾದೇವಿಯ ಇತರ ಬಸದಿಗಳು ಶಿಸ್ಟ್ ಕಲ್ಲು ಚಪ್ಪಡಿಗಳ ಇಳಿಜಾರು ಸೂರನ್ನು ಹೊದ್ದು ನಿಂತಿದ್ದರೆ ಇದಕ್ಕೆ ಸೂರಿಲ್ಲ ಏಕೆ? ಕಲ್ಲುಕಂಬಗಳ ಮೇಲೆ ಮುಳಿಹುಲ್ಲ ಸೂರು ಹೊದಿಸಿದ್ದರೇ? 

೧೬೨೩ರಲ್ಲಿ ಚೆನ್ನಭೈರಾದೇವಿ ಸತ್ತು ಹದಿನೇಳು ವರ್ಷಗಳ ನಂತರ ಭಾರತಕ್ಕೆ ಬಂದ ಪೋರ್ಚುಗೀಸ್ ಪ್ರವಾಸಿಗ ಪೆಟ್ರೋ ಡೆಲ್ಲಾವೆಲ್ಲೆ ಹೊನ್ನಾವರದಿಂದ ಕೆಳದಿಗೆ ಹೋದ. ಹದಿನೆಂಟು ದಿನಗಳ ಕಾಲ ಕೆಳದಿಯ ಅರಸರ ಆಸ್ಥಾನದಲ್ಲಿದ್ದ. ತಾನು ಕೇಳಿದ ಕೆಳದಿಯ ವೈರಿ ಚೆನ್ನಭೈರಾದೇವಿಯ ಕತೆಗಳನ್ನು ಪ್ರವಾಸಕಥನದಲ್ಲಿ ದಾಖಲಿಸಿದ. ಆದರೆ ಡೆಲ್ಲಾವೆಲ್ಲೆಯಾಗಲೀ, ಈ ಪ್ರದೇಶಕ್ಕೆ ಬಂದ ಇತರ ಪ್ರವಾಸಿಗರು, ವರ್ತಕರಾಗಲೀ ಯಾರೂ ಚತುರ್ಮುಖ ಬಸದಿಯ ಬಗೆಗೆ ಉಲ್ಲೇಖಿಸಿಲ್ಲ ಏಕೆ?

ಡೆಲ್ಲಾವೆಲ್ಲೆಯ ಕತೆಗಳನ್ನೇ ಇತಿಹಾಸವೆಂದು ಪರಿಗಣಿಸಿ ರಾಣಿಗೆ ತನ್ನ ಸೇನಾಧಿಪತಿ ಗೊಂಡನಾಯಕಯೊಂದಿಗೆ ಅನೈತಿಕ ಸಂಬಂಧವಿತ್ತೆಂದೂ, ಅದರಿಂದಲೇ ಆಕೆ ಕೆಳದಿ ಅರಸರೊಂದಿಗಿನ ಯುದ್ಢದಲ್ಲಿ ಸೋಲನ್ನಪ್ಪಿದಳೆಂದೂ ಕೆಲ ಇತಿಹಾಸಕಾರರು ದಾಖಲಿಸುತ್ತಾರೆ. ಆದರೆ ಕೆಳದಿಯ ರಾಜ ಹಿರಿಯ ವೆಂಕಟಪ್ಪ ನಾಯಕನು ಎಪ್ಪತ್ತು ವರ್ಷದ ವೃದ್ಧ ರಾಣಿ ಚೆನ್ನಭೈರಾದೇವಿಯನ್ನು ಮೋಸದಿಂದ ಸೆರೆ ಹಿಡಿದು ನಗಿರೆಯ ಸೆರೆಮನೆಯಲ್ಲಿ ಆಕೆಯ ಸಾವಿನವರೆಗೂ ಇಟ್ಟನೆಂದೂ, ತಮಗೆ ಸಹಾಯ ಮಾಡಿದ ಗೊಂಡನಾಯಕನನ್ನು ಬಳಿಕ ಕೊಲ್ಲಿಸಿದ ಎಂಬ ಚೆನ್ನಭೈರಾದೇವಿಯ ಬಗೆಗೆ ಕಾದಂಬರಿ ಬರೆದ ಲೇಖಕ ಡಾ| ಗಜಾನನ ಶರ್ಮರ ಅಭಿಪ್ರಾಯ ಸರಿಯೇ? 

ನಗಿರೆಯ ರಾಣಿ, ಆ ಕಾಲದ ಮತಪಂಥ-ಜನಜೀವನ-ಆಳರಸರ ಬಗೆಗೆ ಇತಿಹಾಸದಲ್ಲಿ ಸಾಕಷ್ಟು ಖಾಲಿಜಾಗಗಳಿವೆ, ಅಸ್ಪಷ್ಟತೆಯಿದೆ. ಅವೆಲ್ಲದರ ಬಗೆಗೆ ಸಂಶೋಧನೆಗಳಾಗಬೇಕಿದೆ. 

ಗೇರುಸೊಪ್ಪ, ಹೊನ್ನಾವರ ಸೀಮೆಯ ಕಾಡುನಾಡಿನೊಳಗೆ ತೋಟ, ಗದ್ದೆ ರೂಢಿಸುವವರಿಗೆ ಚಿಕ್ಕಪುಟ್ಟ ಮೂರ್ತಿಗಳು, ಶಾಸನಗಳು ಸಿಗುತ್ತಲೇ ಇರುತ್ತವೆ. ನದೀ ತಟದ, ಕಾನು ಮಧ್ಯದ ಯಾವ ಊರು ಹೊಕ್ಕರೂ ಅಲ್ಲೊಂದು ಬಾವಿ, ಜಟಗ ಸಿಗುತ್ತವೆ. ಅಂತಹ ಜಟಗನ ಮೂರ್ತಿಗಳಲ್ಲಿ ಜೈನಜಟಗಕ್ಕೆ ‘ಪವರ್ರು’ ಹೆಚ್ಚೆಂಬ ಭಾವನೆಯಿದೆ. ಜೈನಜಟಗ ಸಿಕ್ಕ ಭೂಮಿಯನ್ನೂ ಯಾರೂ ಸುಲಭಕ್ಕೆ ಖರೀದಿಸುವುದಿಲ್ಲ. ಬಲಿಗಿಲಿ ನಡೆಯದ ಅದರ ಪೂಜೆಗೆ ಜೈನ ಭಟ್ಟರೇ ಬರಬೇಕಾಗುತ್ತದೆ! ಕ್ರೈಸ್ತ ಬಾಂಧವರ ಮನೆ, ತೋಟದಲ್ಲಿ ಸಿಕ್ಕ ಮೂರ್ತಿಗಳೂ ಪೂಜೆಗೊಳ್ಳುತ್ತವೆ. ಕೆಲವು ಪುರಾತತ್ವ ಇಲಾಖೆಯ ಕಚೇರಿ ಸೇರಿದರೆ ಹಲವು ಜೈನ ವಸ್ತುಸಂಗ್ರಹಾಲಯಕ್ಕೆ ಹೋದವು. ಮತ್ತೆ ಕೆಲವು ಸ್ಥಳೀಯರ ಮನೆಯಂಗಳಲ್ಲಿ ಚೌಡಿ, ಜಟಗ, ನಾಗನ ಮೂರ್ತಿಗಳಾಗಿ ನೆರಕೆ ಚಪ್ಪರ ಕಟ್ಟಿಸಿಕೊಂಡಿವೆ. ಕಾಳುಮೆಣಸಿನ ಸಂಗ್ರಹಕ್ಕೆಂದು ಚೆನ್ನಭೈರಾದೇವಿ ತೋಡಿಸಿದ ಬಾವಿಗಳು ಈ ಭಾಗದ ಹಲವು ಹಳ್ಳಿಗಳಲ್ಲಿವೆ. 

ಇತಿಹಾಸವೆಂದರೆ ಮುಳುಗಿದ ಹಡಗಿನ ತೇಲುವ ಹಲಗೆಗಳು ಎಂದಿದ್ದಾನೆ ಫ್ರಾನ್ಸಿಸ್ ಬೇಕನ್. ತೇಲುವುದನ್ನು ಎಚ್ಚರಿಕೆಯಿಂದ ಜೋಡಿಸಿ, ಮುಳುಗಿರುವುದನ್ನು ಶ್ರದ್ಧೆಯಿಂದ ಹುಡುಕಾಡಿ ನಮ್ಮ ನಿಜ ಇತಿಹಾಸವನ್ನು ನಾವೇ ಕಟ್ಟಿಕೊಳ್ಳಬೇಕಿದೆ. ಎಲ್ಲೆಲ್ಲೋ ಹುದುಗಿರುವ ಕಲ್ಲು, ಮೂರ್ತಿ, ಶಾಸನ, ಗಡಿಗಂಬಗಳು ಸತ್ಯದ ಒಂದೊಂದು ಕೊಂಡಿಯನ್ನು ಬಚ್ಚಿಟ್ಟುಕೊಂಡಿರುವ ಸಾಧ್ಯತೆಯಿದೆ. ಅವನ್ನೆಲ್ಲ ಕಾಪಿಟ್ಟು ಮುಂದಿನ ಪೀಳಿಗೆ ತಮ್ಮ ಗತವನ್ನು ಅದಿರುವಂತೆ ಸಮಗ್ರವಾಗಿ ಅರಿಯಲು ನಾವು ಅವಕಾಶ ಕಲ್ಪಿಸಬೇಕಿದೆ.  ಯಾಕೆಂದರೆ ತಮ್ಮ ನಿನ್ನೆಗಳ ಅರಿಯದವರು ನಾಳೆಗಳ ಸೃಷ್ಟಿಸಲಾರರು. ಇವತ್ತಿನ ಜಾತಿ, ಧರ್ಮಗ್ರಸ್ತ ಮನಸುಗಳು ಭವಿಷ್ಯದ ಸಮಾಜವನ್ನೂ ಒಡೆಯದಂತೆ, ಬರಲಿರುವ ಪೀಳಿಗೆ ಆರೋಗ್ಯಕರ ನೆಮ್ಮದಿಯ ನಾಳೆಗಳನ್ನು ಪಡೆಯುವಂತೆ ಮಾಡಲು ಗತದ ಸರಿಯಾದ ಅರ್ಥೈಸುವಿಕೆ ಅಗತ್ಯವಾಗಿದೆ. 





ಡಾ. ಎಚ್. ಎಸ್. ಅನುಪಮಾ