Thursday 28 January 2016

ಅನುರಾಧಾ ಗಾಂಧಿ: ಮುಳ್ಳುಹಾದಿಯಲಿ ಹೆಜ್ಜೆಯಿಟ್ಟ ದಿಟ್ಟೆ





‘ಒಂದಾನೊಂದು ಕಾಲದಲ್ಲಿ’ ನ್ಯಾಯದ ಗಂಟೆ ಬಾರಿಸಿದ ಕೂಡಲೇ ತನ್ನ ರಾಜ್ಯದಲ್ಲಿ ಏನೋ ಅನ್ಯಾಯವಾಗಿದೆ ಎಂದು ಸ್ವತಃ ರಾಜನೇ ಬಂದು ವಿಚಾರಿಸಿ ನ್ಯಾಯ ಪರಿಹರಿಸುತ್ತಿದ್ದನಂತೆ. ಆದರೆ ಅದು ಕತೆಗಳಲ್ಲಷ್ಟೆ. ಕೋಟ್ಯಂತರ ಮಹಿಳೆಯರು ಈ ಎಲ್ಲ ಶತಮಾನಗಳಲ್ಲಿ ಅನ್ಯಾಯವಾಗಿದೆ ಎಂದು ಗಂಟೆ ಬಾರಿಸುವುದಿರಲಿ, ಹೇಳುವ ಅವಕಾಶವೂ ಇಲ್ಲದೆ ಮೂಕವಾಗಿ ಬಾಳಿ ಹೋಗಿದ್ದಾರೆ. ಆದರೂ ಅನಾದಿಯಿಂದ ಮಹಿಳೆ ಪರ್ಯಾಯ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವುದೂ ನಿಜವೇ. ಜಾನಪದದಲ್ಲಿ, ಪುರಾಣಗಳಲ್ಲಿ ಅಲ್ಲಲ್ಲಿ ಇದಕ್ಕೆ ದೃಷ್ಟಾಂತಗಳು ಸಿಗುತ್ತವೆ. ವ್ಯವಸ್ಥೆಯೊಂದರ ದಮನಿತರೆಲ್ಲ ನ್ಯಾಯಕ್ಕಾಗಿ ಪರ್ಯಾಯ ವ್ಯವಸ್ಥೆಯೊಂದನ್ನು ತಮಗರಿವಿಲ್ಲದಂತೆ ಸೃಷ್ಟಿಸಿಕೊಂಡಿರುತ್ತಾರೆ. ಅವರು ಹಿಡಿದ ದಾರಿಗಳು ಭಿನ್ನ; ಅವರು ನಂಬಿದ ತತ್ವಗಳು ಭಿನ್ನ; ಅವರ ಚಿಂತನೆಯ ಮೂಲ, ಸ್ವರೂಪವೂ ಭಿನ್ನ. ಈ ಎಲ್ಲ ಭಿನ್ನತೆಗಳ ಜೊತೆಗೇ ಅವರ ಗಟ್ಟಿತನ ಹಾಗೂ ಹೋರಾಟದ ಕೆಚ್ಚೂ ಉಳಿದವರಿಗಿಂತ ಭಿನ್ನ. ಅಲ್ಲಿಲ್ಲಿ ಮಿಂಚುಹುಳದ ಬೆಳಕಿನಂತೆ ಇಂಥ ಕೆಲವರ ಪ್ರಯತ್ನಗಳಿದ್ದರೂ ಕಾಲ ಪ್ರವಾಹದಲ್ಲಿ ಗುರುತುಳಿಯದಂತೆ ಅವು ಕೊಚ್ಚಿಹೋಗಿರುವುದೂ ನಿಜವಾಗಿದೆ. ಎಂದೇ ಪರ್ಯಾಯ ಮಾರ್ಗ ಕ್ರಮಿಸಿದವರನ್ನು, ಕ್ರಮಿಸುತ್ತಿರುವವರನ್ನು ಅದರೆಲ್ಲ ಏಳುಬೀಳುಗಳೊಡನೆ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ. 

ವ್ಯವಸ್ಥೆಯ ಭಾಗವಾಗಿಲ್ಲದೇ; ವ್ಯವಸ್ಥೆಯನ್ನು ನೆಚ್ಚಿಕೊಳ್ಳದೇ; ಪಾರಂಪರಿಕ ಲಿಂಗ ತಾರತಮ್ಯ, ಜಾತಿ ತಾರತಮ್ಯ, ವರ್ಗ ತಾರತಮ್ಯಗಳ ವಿರುದ್ಧ ಹೋರಾಡಿದ, ಸಂಘಟಿಸಿದ ಮಹಿಳೆಯರಲ್ಲಿ ಅನುರಾಧಾ ಒಬ್ಬರು. ನ್ಯಾಯದ, ಸಮಸಮಾಜದ ಕನಸು ಹೊತ್ತರೂ ಮಾವೋವಾದದ ಸಶಸ್ತ್ರ ಹೋರಾಟವನ್ನು ಬೆಂಬಲಿಸಿದ ಕಾರಣಕ್ಕೆ ಮಹಿಳಾ ಚಳುವಳಿಯ ಡಿಸ್ಕೋರ್ಸ್‌ಗಳಲ್ಲಾಗಲೀ, ಬರಹಗಾರ್ತಿ ಎಂದಾಗಲೀ, ರಾಜಕಾರಣಿಯೆಂದಾಗಲೀ ಉಳಿದ ಸಮಾಜದ ಗುರುತಿಸುವಿಕೆಯಿಂದ ದೂರವುಳಿದವರು ಅವರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದ ಸೆಂಟ್ರಲ್ ಕಮಿಟಿಯ ಏಕೈಕ ಮಹಿಳಾ ಸದಸ್ಯೆಯಾಗಿದ್ದ; ಕಾ. ನರ್ಮದಾ/ಅವಂತಿ/ರಮಾ/ಜಾನಕಿ/ವರ್ಷಾ ಹೀಗೆ ಹಲವು ಹೆಸರುಗಳನ್ನು ಪಡೆದು ಗೃಹ ಸಚಿವಾಲಯದ ‘ಮೋಸ್ಟ್ ವಾಂಟೆಡ್’ ಲಿಸ್ಟಿನಲ್ಲಿದ್ದ ಅನುರಾಧಾ ಶ್ಯಾನ್‌ಭಾಗ್ ಅಥವಾ ಅನುರಾಧಾ ಗಾಂಧಿ ಮಾವೋವಾದಿ ಪಕ್ಷದ ಒಳಗೆ ಹಾಗೂ ಆದಿವಾಸಿ ಸಮಾಜದೊಳಗೆ ಲಿಂಗ ಪ್ರಶ್ನೆಯನ್ನೆತ್ತಿದವರು. ಮಹಾರಾಷ್ಟ್ರದ ನಿಷೇಧಿತ ಸಿಪಿಐ(ಎಂಎಲ್) ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಪಕ್ಷದ ಪ್ರಣಾಳಿಕೆಯಲ್ಲಿ, ನೀತಿನಿಯಮ/ಕಾರ್ಯಯೋಜನೆಗಳನ್ನು ರೂಪಿಸುವ ಸಮಯದಲ್ಲಿ ಜಾತಿ ಪ್ರಶ್ನೆಯನ್ನು, ಸ್ತ್ರೀವಾದವನ್ನು ಸೇರಿಸಿದವರು. ದಂಡಕಾರಣ್ಯದ ಆದಿವಾಸಿ ಕೃಷಿಕ ಸಮುದಾಯಗಳಲ್ಲಿ ‘ಸಹಕಾರಿ ಸಂಸ್ಥೆ’ಗಳನ್ನು ರೂಪಿಸುವ ಅವಶ್ಯಕತೆಯನ್ನು ಸಹಸಂಗಾತಿಗಳಿಗೆ ಮನವರಿಕೆ ಮಾಡಿಕೊಟ್ಟವರು. ಬುದ್ಧಿಜೀವಿಗಳಿಂದ; ಆಳುವವರಿಂದ; ಆರಕ್ಷಕರಿಂದ; ಮಾಧ್ಯಮಗಳಿಂದ ‘ದುಷ್ಟ’ರಂತೆ ಬಿಂಬಿಸಲ್ಪಟ್ಟ ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು ತೀವ್ರ ಅನಾರೋಗ್ಯದ ನಡುವೆ ವರ್ಷಗಟ್ಟಲೆ ಭೂಗತರಾಗಿದ್ದವರು. ಕೊನೆಗೆ ದಂಡಕಾರಣ್ಯದ ದುರ್ಗಮ ಕಾಡುಗಳಲ್ಲಿ ಮಲೇರಿಯಾಗೆ ತುತ್ತಾಗುವವರೆಗೆ ತಮ್ಮ ಅಸ್ತಿತ್ವವನ್ನೇ ಮರೆತು ಬದುಕಿದವರು ಅನುರಾಧಾ. 

‘ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ನಕ್ಸಲ್ ಹಾವಳಿ’ ಎಂದು ಹೇಳುವ ರಾಜಕಾರಣಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶವನ್ನು ಒತ್ತೆಯಿಡುವಾಗ ನಕ್ಸಲ್ ಹಣೆಪಟ್ಟಿ ಹೊತ್ತ ಹೋರಾಟಗಾರರು ಸಂಘಟನೆಯಲ್ಲಿ ತೊಡಗಿದರು. ಜನರನ್ನು ದೋಚುವವರು ದೊಡ್ಡ ನಾಯಕರೆಂದು ಸಕಲ ಗೌರವಗಳಿಗೆ ಪಾತ್ರರಾದರೆ; ತನ್ನದೆನ್ನುವ ಎಲ್ಲವನ್ನು ತೊರೆದು, ಲೂಟಿಕೋರರ ಬುಡ ಅಲುಗಿಸುವ ಹೋರಾಟಗಾರರು ಅನುಮಾನ/ಎನ್‌ಕೌಂಟರ್‌ಗಳಿಗೆ ಬಲಿಯಾದರು. ಈಗ ಕೋಮುವಾದಿ ರಾಜಕಾರಣ ವಿಜೃಂಭಿಸುತ್ತ ಜನಪರ ಬದ್ಧತೆಯ ಸಿದ್ಧಾಂತಗಳು ಯುವಪೀಳಿಗೆಯನ್ನು ಆಕರ್ಷಿಸದೇ ಹೋಗಿವೆ. ಚುನಾವಣೆ ಫಲಿತಾಂಶಗಳು ನೈಜ ಜನಾದೇಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಲಹುತ್ತಿವೆಯೇ ಎಂಬ ಬಗ್ಗೆಯೇ ಅನುಮಾನಗಳಿವೆ.

ಇಂಥ ವಿಪರ್ಯಾಸಗಳ ಹೊತ್ತಿನಲ್ಲಿ ಅನುರಾಧಾ ಹಾಗೂ ಅವರ ಸಂಗಾತಿಗಳ ಬದುಕು-ಹೋರಾಟ-ಪ್ರತಿಪಾದನೆಯತ್ತ ಒಂದು ನೋಟ ಇಲ್ಲಿದೆ:

ಅನುರಾಧಾ ಶಾನಭಾಗ್ ಗಾಂಧಿ (೧೯೫೪-೨೦೦೮)

ಕೊಡಗಿನ ಗಣೇಶ್ ಶಾನ್‌ಭಾಗ್ ಎಳವೆಯಲ್ಲಿ ಮನೆಬಿಟ್ಟು ಸುಭಾಸ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿದರು. ನಂತರ ಲಾ ಓದಿ ಮುಂಬೈ ಹೈಕೋರ್ಟಿನ ವಕೀಲರಾದರು. ಕಮ್ಯುನಿಸ್ಟ್ ಪಕ್ಷ ಸೀಳುಗಳಾಗಿ ಒಡೆಯುವ ಮುನ್ನ ಅದರಲ್ಲಿದ್ದ ಗಣೇಶ್ ಸಿಪಿಐ ಪಕ್ಷದ ಕಚೇರಿಯಲ್ಲೇ ಕುಮುದ್ ಅವರನ್ನು ಮದುವೆಯಾದರು. ಆ ದಂಪತಿಗಳಿಗೆ ಅನುರಾಧಾ ೧೯೫೪ರಲ್ಲಿ ಹುಟ್ಟಿದರು.

೧೯೭೦ರ ದಶಕ ಕಮ್ಯುನಿಸಮ್ಮಿನ ಪ್ರಭಾವಳಿ ಎಲ್ಲೆಲ್ಲೂ ತೀವ್ರವಾಗಿದ್ದ ಕಾಲ. ಚೀನಾದಲ್ಲಿ ಮಾವೋ ತಂದ ಸಾಂಸ್ಕೃತಿಕ ಕ್ರಾಂತಿ; ಅಮೆರಿಕದಲ್ಲಿ ವಿಯೆಟ್ನಾಂ ಯುದ್ಧಕ್ಕೆ ಬಂದ ಪ್ರತಿಕ್ರಿಯೆ; ಭಾರತದ ನಕ್ಸಲ್‌ಬರಿ ಹೋರಾಟ ಇವೆಲ್ಲವೂ ಕೇವಲ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷಿಯಾದಲ್ಲೇ ಕಮ್ಯುನಿಸ್ಟ್ ಅಲೆಯನ್ನು ಹುಟ್ಟುಹಾಕಿದ್ದವು. ಆಗ ಎಲ್ಫಿನ್‌ಸ್ಟನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅನುರಾಧಾ ‘ಪ್ರೊಗ್ರೆಸಿವ್ ಯುತ್ ಮೂವ್‌ಮೆಂಟ್’ ಎಂಬ ತೀವ್ರಗಾಮಿ ವಿದ್ಯಾರ್ಥಿ ಚಳುವಳಿಯನ್ನು ಸೇರಿದರು. ತೀವ್ರ ಬರ ಎದುರಿಸುತ್ತಿದ್ದ ಮಹಾರಾಷ್ಟ್ರ ಮತ್ತು ಸುತ್ತಮುತ್ತಣ ಪ್ರದೇಶಕ್ಕೆ; ಬಾಂಗ್ಲಾ ನಿರಾಶ್ರಿತ ಶಿಬಿರಗಳಿಗೆ ಭೇಟಿ ಕೊಟ್ಟರು. ಬರ ಪರಿಸ್ಥಿತಿಯ ಕುರಿತು ಮುಂಬಯಿಯ ಚಿಂತಕರ, ಬರಹಗಾರರ ಚರ್ಚೆ ಏರ್ಪಡಿಸುತ್ತಿದ್ದರು. ಆಗ ಬಲಗೊಳ್ಳತೊಡಗಿದ್ದ ದಲಿತ್ ಪ್ಯಾಂಥರ್ಸ್ ಜೊತೆಯೂ ಸಂಬಂಧ ಹೊಂದಿದ್ದರು. ಮರಾಠಿ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜ ಮತ್ತು ರಂಗಭೂಮಿಯ ನಡುವಿನ ಸಂಬಂಧಗಳ ಕುರಿತು ಪ್ರಶ್ನೆ ಎತ್ತಿದರು. 

ಸಮಾಜಶಾಸ್ತ್ರ ಎಂಫಿಲ್ ಮಾಡಿದ ಅನುರಾಧಾಗೆ ವಿಲ್ಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು. ಅದೇವೇಳೆ ತುರ್ತು ಪರಿಸ್ಥಿತಿ ಜಾರಿಯಾಗಿ ಅನುರಾಧಾ ಮತ್ತು ಸಂಗಾತಿಗಳು ಚಿಂತಕ-ಬರಹಗಾರ-ಕಲಾವಿದರನ್ನು ಒಟ್ಟುಗೂಡಿಸಿ ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮೋಕ್ರೆಟಿಕ್ ರೈಟ್ಸ್’ ಎಂಬ ಮಾನವ ಹಕ್ಕು ಸಂಘಟನೆ ಆರಂಭಿಸಿದರು. ನಾಟಕಕಾರ ವಿಜಯ್ ತೆಂಡೂಲ್ಕರ್ ಅದರ ಅಧ್ಯಕ್ಷರಾದರೆ, ಅಸ್ಘರ್ ಅಲಿ ಎಂಜಿನಿಯರ್ ಉಪಾಧ್ಯಕ್ಷರಾಗಿದ್ದರು. ಪ್ರಭುತ್ವವು ಕಾನೂನಿನ ಪರಿಧಿಯಾಚೆಗೆ ಜನಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಈ ಸಂಘಟನೆ ವಿರೋಧಿಸಿತು. 



ಅದೇ ವೇಳೆ ಸಮಾನ ಮನಸ್ಕ ಸಂಗಾತಿಯಾಗಿ ಕೊಬಾಡ್ ಗಾಂಧಿ ಪರಿಚಯವಾಗಿ ಅನುರಾಧಾ ಮದುವೆಯಾದರು. ಮುಂಬಯಿ ವೊರ್ಲಿಯ ಶ್ರೀಮಂತ ಪಾರ್ಸಿ ಕುಟುಂಬದ ಕೊಬಾಡ್ ಡೂನ್ ಸ್ಕೂಲಿನಲ್ಲಿ ಓದಿದವರು. ಸಂಜಯ್ ಗಾಂಧಿಯ ಸಹಪಾಠಿ. ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್ನಿಗೆ ಚಾರ್ಟರ್ಡ್ ಅಕೌಂಟೆನ್ಸಿ ಮಾಡಲು ತೆರಳಿದಾಗ ಅಲ್ಲಿ ತೀವ್ರಗಾಮಿ ಗುಂಪುಗಳ ಸಂಪರ್ಕಕ್ಕೆ ಬಂದು ಭಾರತಕ್ಕೆ ವಾಪಸಾಗಿದ್ದರು. 

ಸಂಸದೀಯ ರಾಜಕಾರಣದಿಂದ, ರಾಜಕೀಯ ನಾಯಕರಿಂದ, ಜನ ಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಜನಪರವಾದ ಏನನ್ನೂ ಸಾಧಿಸುವುದು ಅಸಾಧ್ಯ; ಶೋಷಿತ ಎಚ್ಚೆತ್ತು ಕ್ರಾಂತಿಯಾಗಿ ಅವನ ಕೈಗೆ ಅಧಿಕಾರ ಮತ್ತು ಸಂಪನ್ಮೂಲ ದೊರೆತಾಗಲಷ್ಟೇ ನಿಜವಾದ ಸ್ವಾತಂತ್ರ್ಯ ದೊರೆತ ಹಾಗೆ ಎಂದು ಹೋರಾಟಗಾರರ ಒಂದು ಗುಂಪು ಭಾವಿಸಿತು. ಅದಕ್ಕಾಗಿ ಜನಹೋರಾಟವನ್ನು ಸಶಸ್ತ್ರ ಮಾರ್ಗದಲ್ಲಿ ಕೊಂಡೊಯ್ಯಬಯಸಿತು. ಹೀಗೆ ಅಸ್ತಿತ್ವಕ್ಕೆ ಬಂದದ್ದು ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಗುಂಪು. ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲ್ಯುಜಿ) ಕಟ್ಟುವುದರಲ್ಲಿ ಕೊಬಾಡ್ ಪ್ರಮುಖ ಪಾತ್ರ ವಹಿಸಿದರು. ತನ್ನ ಕಾರ್ಯಕ್ಷೇತ್ರವಾಗಿ ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘರ್ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ವ್ಯಾಪಿಸಿದ ದಂಡಕಾರಣ್ಯವನ್ನು ಪಿಡಬ್ಲ್ಯುಜಿ ಆಯ್ದುಕೊಂಡಾಗ ಕೊಬಾಡ್ ಅದರ ಜವಾಬ್ದಾರಿ ವಹಿಸಿಕೊಂಡರು. ಅನುರಾಧಾ ನೆಲೆಯೂ ಮುಂಬಯಿಯಿಂದ ಸ್ಥಳಾಂತರಗೊಂಡಿತು. ವಕೀಲರ ಮಗಳಾದ, ಸಮಾಜ ಶಾಸ್ತ್ರ ಎಂಫಿಲ್ ಪದವೀಧರೆಯಾಗಿ ಅಕ್ಯಾಡೆಮಿಕ್ ವಲಯದಲ್ಲಿ ಬುದ್ಧಿಜೀವಿಯಾಗಿ ಬೆಳೆಯತೊಡಗಿದ್ದ, ರಂಗ-ಸಂಗೀತಾಸಕ್ತಳಾದ ಅನುರಾಧಾ ದಂಡಕಾರಣ್ಯದ ಆದಿವಾಸಿಗಳನ್ನು ಸಂಘಟಿಸುವ ಕೆಲಸಕ್ಕೆ ಮುಂಬಯಿಯಿಂದ ಹೊರಟರು. 

ಇದುವರೆಗಿನ ಅವರ ಹೋರಾಟ-ಜಾಗೃತಿಯ ಸ್ವರೂಪ ಒಂದು ರೀತಿಂiiದಾಗಿದ್ದರೆ ನಂತರದ ಬದುಕು ಇನ್ನೊಂದು ಘಟ್ಟ ಪ್ರವೇಶಿಸಿತು. 

೧೯೮೨ರಲ್ಲಿ ನಾಗಪುರದ ಇಂದೋರ್ ಬಸ್ತಿಯಲ್ಲಿ ಬಾಡಿಗೆ ಮನೆ ಹಿಡಿದರು. ಹೋಗಿ ಬರುವವರಿಂದ ತುಂಬಿದ ಅವರ ಮನೆ ಛತ್ರದಂತಿತ್ತು ಎಂದು ಗೆಳೆಯರ ಬಳಗ ಈಗಲೂ ನೆನೆಯುತ್ತದೆ. ಅಲ್ಲಿ ಅನುರಾಧಾ ಅರೆಕಾಲಿಕ ಉಪನ್ಯಾಸಕ ವೃತ್ತಿಗೆ ಸೇರಿದರು. ಓಡಾಡಲು ಒಂದು ಬೈಸಿಕಲ್ ಕೊಂಡರು. ಆಗಷ್ಟೇ ಕೈಗಾರಿಕಾ ತಾಣವಾಗುತ್ತಿದ್ದ ನಾಗಪುರದ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿತ್ತು. ಬಹುತೇಕ ಕಾರ್ಮಿಕರು ಅಸಂಘಟಿತರು ಹಾಗೂ ದಲಿತ ಸಮುದಾಯದವರು. ಚಂದ್ರಾಪುರ, ಅಮರಾವತಿ, ಜಬಲ್‌ಪುರ, ಯಾವತ್ಮಲ್‌ಗಳಲ್ಲಿ ಕೂಲಿಕಾರ್ಮಿಕರನ್ನು, ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಂಘಟಿಸಿದರು. ಅವರು ವಾಸಿಸುತ್ತಿದ್ದ ಇಂದೋರಾ ಬಸ್ತಿ ಭಾರತದಲ್ಲೇ ಅತಿ ದೊಡ್ಡ ದಲಿತ ಆವಾಸವಾಗಿತ್ತು. ಅಲ್ಲಿ ಗೂಂಡಾ ಹಾವಳಿ ಹೆಚ್ಚು ಎಂದು ಜನ ಹಗಲು ಹೊತ್ತಿನಲ್ಲೂ ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದರು. ಅಂಥಲ್ಲಿ ಅನುರಾಧಾ ಏಕಾಂಗಿಯಾಗಿ ನಡುರಾತ್ರಿ ತಮ್ಮ ಬೈಸಿಕಲ್ ಮೇಲೆ ಮನೆಗೆ ಬರುತ್ತಿದ್ದರು. ಬಸ್ತಿಯ ಜನರ ಜೊತೆ ಸಂಪರ್ಕ ಬೆಳೆಸಿದರು. ಇವರ ಪ್ರೋತ್ಸಾಹದಿಂದ ಬಸ್ತಿಯ ಎಷ್ಟೋ ಹುಡುಗರು ಓದು ಮುಂದುವರೆಸಿದರು. ಹಾಡುಗಾರರ ತಂಡ ಕಟ್ಟಿದರು. ಬಿವಜಿ ಬಡ್ಕೆ ಎಂಬಾತ ಗಂಟಲ ಕ್ಯಾನ್ಸರ್‌ಗೆ ತುತ್ತಾದಾಗ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದರು. ಮನೆಗೆಲಸಕ್ಕೆ ಹೋಗುತ್ತಿದ್ದ ಬಸ್ತಿಯ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರೂ ಅದು ಆಕಸ್ಮಿಕ ವಿದ್ಯುತ್ ಶಾಕ್ ಎಂದು ಕೇಸು ಮುಚ್ಚಿಹೋಗುವುದರಲ್ಲಿತ್ತು. ಅದಕ್ಕೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿ ಅನುರಾಧಾ ಪ್ರತಿಭಟನೆ, ಪ್ರದರ್ಶನ ನಡೆಸಿದರು. ಈ ವೇಳೆಗೆ ಅವರು ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು. 


೧೯೯೦ರ ಹೊತ್ತಿಗೆ ಅನುರಾಧಾ ಆರೋಗ್ಯ ಹದಗೆಡುತ್ತಿದ್ದರೂ ಸಂಘಟನೆಗೆ ಅನುಭವಿ ಸಂಘಟಕರ ಜರೂರಿ ಇದೆಯೆಂದು ದಂಡಕಾರಣ್ಯಕ್ಕೆ ಹೋದರು. ಆ ವೇಳೆಗೆ ಆರ್ಥಿಕ ಉದಾರೀಕರಣ ನೀತಿ ಬಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರವೇ ಮಣೆ ಹಾಕಿತು. ಆದಿವಾಸಿಗಳನ್ನು ಅವರ ಪಾರಂಪರಿಕ ಅರಣ್ಯ ವಾಸಸ್ಥಳಗಳಿಂದ ಎತ್ತಂಗಡಿ ಮಾಡುತ್ತ ಪುನರ್ವಸತಿಯ ಅನಿವಾರ್ಯ ಕಷ್ಟಗಳಿಗೆ ಈಡುಮಾಡಿತು. ಹೀಗೆ ಸಿರಿವಂತರ ಬಂಡವಾಳ ಬೆಳೆಸಲು ತಮ್ಮ ನೆಲೆ, ನೆಲ, ಹಕ್ಕುಗಳನ್ನು ಕಳೆದುಕೊಂಡ ಆದಿವಾಸಿಗಳನ್ನು ಸಂಘಟಿಸುವತ್ತ ಮಾವೋವಾದಿ ಪಕ್ಷ ಗಮನ ಹರಿಸಿತು. ಸಹಜವಾಗಿಯೇ ಉದ್ಯಮಿಗಳ, ಅಧಿಕಾರಿಗಳ, ರಾಜಕಾರಣಿಗಳ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು.

ಬುಡಕಟ್ಟು ಜನರನ್ನು ಸಂಪರ್ಕಿಸಿ, ಅವರ ವಿಶ್ವಾಸ ಗಳಿಸಿ, ಸಂಘಟನೆ ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಅನುರಾಧಾ ಅವರ ಭಾಷೆ ಕಲಿತರು, ಜನಜೀವನ ಅಭ್ಯಸಿಸಿದರು. ಅವರೊಳಗೊಬ್ಬರಾಗಿ ಬೆರೆತರು. ‘ಉಳುವವನೇ ಒಡೆಯ, ಆದಿವಾಸಿಯದೇ ಅಡವಿ’, ಶೋಷಿತರ ಕೈಗೆ ಪ್ರಭುತ್ವ-ಅಧಿಕಾರ’, ‘ಮಹಿಳಾ ವಿಮೋಚನೆ’ ಇಂಥವು ಸ್ಲೋಗನ್ನುಗಳಾಗಿದ್ದವು. 

ಅಡವಿಯ ಬದುಕೂ ಸುಲಭವಾಗಿರಲಿಲ್ಲ. ಬಂಧನದ ಸಾಧ್ಯತೆ ಸದಾ ಇರುವುದರಿಂದ ಗುಟ್ಟಾಗಿ ಬದುಕಬೇಕು. ತಮ್ಮ ಭಾರ ತಾವೇ ಹೊತ್ತು ಸಾಗಬೇಕು. ಸದಾ ಚಲಿಸುತ್ತಿರಬೇಕು. ‘ಡಿಕ್ಲಾಸಿಂಗ್ ಒನ್‌ಸೆಲ್ಫ್’ ಎಂಬ ಮಾರ್ಕ್ಸಿಸ್ಟ್ ತತ್ವದಂತೆ ವರ್ಗ ಅಸ್ಮಿತೆ ಕಳೆದುಕೊಳ್ಳುವುದು ಹೋರಾಟದ ಬದುಕಿನಲ್ಲಿ ತುಂಬ ಮುಖ್ಯ. ಅನುರಾಧಾ ಅದನ್ನು ಅಕ್ಷರಶಃ ಪಾಲಿಸಿದರು. ತಲೆಯ ಮೇಲೆ ಅಪಾಯದ ಕತ್ತಿ ಸದಾ ತೂಗುತ್ತಿರುವಾಗ ಕಾಡುಮೇಡುಗಳನ್ನು ಸಂಗಾತಿಗಳೊಂದಿಗೆ ಸುತ್ತಿದರು. ೧೯೯೮-೯೯ರ ವೇಳೆಗೆ ತೀವ್ರ ಬರ ಆ ಪ್ರದೇಶವನ್ನು ಬಾಧಿಸಿತು. ಕುಡಿಯುವ ನೀರಿಗೆ, ಧಾನ್ಯಕ್ಕೆ ಹಾಹಾಕಾರ. ಸರ್ಕಾರ ನೀಡಿದ ಪಡಿತರ ಅಕ್ಕಿಯಲ್ಲಿ ಕಲ್ಲುಗಳೇ ತುಂಬಿರುತ್ತಿದ್ದವು. ಒಂದು ಅರಣ್ಯ ಪ್ರದೇಶದ ಹತ್ತು ಹಳ್ಳಿಗಳಿಗೆ ನೀರುಣಿಸುತ್ತಿದ್ದ ಕೆರೆಗೆ ಕಾಯಕಲ್ಪ ಅವಶ್ಯವಾಗಿತ್ತು. ಅದಕ್ಕಾಗಿ ಅಧಿಕಾರಿಗಳೊಡನೆ ಚರ್ಚೆ, ಪ್ರತಿಭಟನೆ, ಹಕ್ಕೊತ್ತಾಯ ಜಾಥಾ ನಡೆಸಿದರೂ ಉಪಯೋಗವಾಗದೇ ಹೋಯಿತು. ಆಗ ಸಂಘಟನೆಯ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಕೆರೆ ಕಾಮಗಾರಿ ಪೂರ್ಣಗೊಳಿಸಿದರು. ಕೇಂದ್ರ ಸರ್ಕಾರದ ‘ಉಗ್ರ’ರ ಪಟ್ಟಿಯಲ್ಲಿದ್ದವರು ಸುಮಾರು ೧೦೦ ಕೆರೆಗಳನ್ನು ಅನುರಾಧಾ ಮೇಲುಸ್ತುವಾರಿಯಲ್ಲಿ ಆದಿವಾಸಿಗಳ ಸಹಾಯದಿಂದ ನಿರ್ಮಿಸಿದರು. 

ಇದರ ಜೊತೆಗೆ ಅನುರಾಧಾ ‘ಕ್ರಾಂತಿಯಿಲ್ಲದೆ ಮಹಿಳೆ ಉಳಿಯುವುದಿಲ್ಲ, ಮಹಿಳೆಯಿಲ್ಲದೆ ಕ್ರಾಂತಿಯಾಗುವುದಿಲ್ಲ’ ಎಂಬ ನಂಬಿಕೆಯಿಂದ ಆದಿವಾಸಿ ಮಹಿಳೆಯರ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡರು. ಮಾವೋವಾದಿ ಸಂಘಟನೆ ಹಾಗೂ ಆದಿವಾಸಿ ಸಮಾಜದ ಒಳಗಿರುವ ಪುರುಷಪ್ರಾಧಾನ್ಯ ಹೋದ ಹೊರತು ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ; ಜಾತಿಪದ್ಧತಿ ಹಾಗೂ ಪುರುಷ ಪ್ರಾಧಾನ್ಯವನ್ನು ಇಂಚಿಂಚೇ ನಿರ್ಮೂಲನಗೊಳಿಸದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಈ ತಾತ್ವಿಕತೆಯೊಂದಿಗೆ ವಂಚಿತರಲ್ಲಿಯೇ ಅಂಚಿಗೆ ಸರಿಸಲ್ಪಟ್ಟ ಆದಿವಾಸಿ ಮಹಿಳೆಯರನ್ನು ಜಾಗೃತಿಗೊಳಿಸಿ ‘ಆದಿವಾಸಿ ಕ್ರಾಂತಿಕಾರಿ ಮಹಿಳಾ ಸಂಘಟನ್’ ಕಟ್ಟಿದರು. ೧೯೮೬ರಲ್ಲಿ ಶುರುವಾದ ಕೆಎಎಂಎಸ್‌ನಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯದ ಏಳು ಜಿಲ್ಲೆಗಳ ೪೦ ಲಕ್ಷ ಜನಸಂಖ್ಯೆಯ ೯೦ ಸಾವಿರ ಹೆಣ್ಣುಮಕ್ಕಳು ಸದಸ್ಯರಾಗಿದ್ದಾರೆ. ಆ ಪ್ರದೇಶದಲ್ಲಿ ವಾಸಿಸುವ ಮಾದಿಯಾ, ಮುರಿಯಾ, ದೊರ‍್ಲಾ, ಗೊಂಡ, ರಾಜಗೊಂಡ, ಹಳ್ಬ, ಬತಾರಾ ಇನ್ನಿತರ ಆದಿವಾಸಿ ಬುಡಕಟ್ಟುಗಳ ಮಹಿಳಾ ಸಂಘಟನೆ ಅದು. ಅನುರಾಧಾ ಆ ಹೆಣ್ಣುಮಕ್ಕಳಿಗೆ ತರಗತಿ ನಡೆಸಿ ಅಕ್ಷರಜ್ಞಾನ ನೀಡಿದರು. ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನ ಕುರಿತು ಅವರಿಗೆಲ್ಲ ತಿಳಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅವಶ್ಯಕತೆ ಕುರಿತು ಹಿರಿಯರಿಗೆ ಮನದಟ್ಟು ಮಾಡುತ್ತ ಕಾಡುಮೇಡು ಅಲೆದರು. ಸಂಘಟನೆಯ ಹೊಸ ಸದಸ್ಯರಿಗೆ ಹಾಗೂ ಆದಿವಾಸಿ ಸಮುದಾಯಗಳಿಗೆ ಬೋಧನಾ ಸಾಮಗ್ರಿಗಳನ್ನು ತಾವೇ ತಯಾರಿಸಿದರು. ಹಿಂದಿ-ಇಂಗ್ಲಿಷ್-ಮರಾಠಿಯಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳ ಜೊತೆಗೆ ದಿನಚರಿಯನ್ನೂ ಬರೆದಿಟ್ಟರು. 

ಹೀಗೆ ದಂಡಕಾರಣ್ಯದಲ್ಲಿ ಭಾರತದ ಅತಿದೊಡ್ಡ, ರಹಸ್ಯ ಮಹಿಳಾ ಸಂಘಟನೆ ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನ್’ ಕಟ್ಟಿದವರಲ್ಲಿ ಅನುರಾಧಾ ಒಬ್ಬರು. 


ಆದಿವಾಸಿ ಸಮಾಜ ಮಹಿಳೆಯರ ಪಾಲಿಗೆ ಆದರ್ಶ ಸಮಾಜವೇನಲ್ಲ. ಅಲ್ಲಿ ಹೆಣ್ಣುಮಕ್ಕಳು ದಿನಕ್ಕೆ ೧೬ ತಾಸು ಕೂಲಿಗಳಾಗಿ, ಹೊಲದಲ್ಲಿ ಕೆಲಸಗಾರರಾಗಿ, ಅರಣ್ಯ ಉತ್ಪನ್ನಗಳ ಸಂಗ್ರಾಹಕರಾಗಿ ದುಡಿಯುವುದಲ್ಲದೇ ಮನೆಗೆ ಬಂದಮೇಲೆ ಸಂಸಾರದ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. ಆದರೆ ಇಷ್ಟೆಲ್ಲ ಶ್ರಮ ವಹಿಸಿ ದುಡಿದರೂ ಹಕ್ಕುಗಳಿಂದ ಅವರು ವಂಚಿತರು. ಹೆಣ್ಣುಮಕ್ಕಳಿಗೆ ಬಿತ್ತುವ ಅಧಿಕಾರವಿಲ್ಲ. ಬೆಳೆದದ್ದರಲ್ಲಿ ಪಾಲು ಕೇಳುವಂತಿಲ್ಲ. ಮುಟ್ಟಾದಾಗ ಊರಹೊರಗೆ ಒಬ್ಬರೇ ಇರಬೇಕು. ಅಪಹರಣ, ಬಲವಂತದ ಮದುವೆ, ಬಹುಪತ್ನಿತ್ವ ಸರ್ವೇಸಾಮಾನ್ಯ. ಅದೇವೇಳೆ ಶುರುವಾದ ಸರ್ಕಾರೀ ಪ್ರಾಯೋಜಿತ ‘ಸಲ್ವಾ ಜುದುಂ’ ಸಂಘಟನೆಯಿಂದ, ಅರಣ್ಯಾಧಿಕಾರಿಗಳು, ಕಾಂಟ್ರಾಕ್ಟರ್‌ಗಳು, ಪೊಲೀಸರು ಹಾಗೂ ಜಮೀನ್ದಾರರಿಂದ ಆದಿವಾಸಿ ಮಹಿಳೆಯರು ದೌರ್ಜನ್ಯ ಎದುರಿಸುತ್ತಿದ್ದರು. ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರು. ಹೀಗೆ ಸಮುದಾಯದೊಳಗಿನ ಹಾಗೂ ಹೊರಜಗತ್ತಿನ ಪುರುಷರಿಂದ ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದ ಮಹಿಳೆಯರನ್ನು ಕೆಎಎಂಎಸ್ ಸಂಘಟಿಸಿತು. 

ಅನುರಾಧಾ ಪ್ರತಿವರ್ಷ ಮಾರ್ಚಿ ೮ರಂದು ಆದಿವಾಸಿ ಮಹಿಳೆಯರನ್ನು ಒಟ್ಟುಗೂಡಿಸಿ ಜಾಥಾ, ಪ್ರತಿಭಟನೆ, ರಾಸ್ತಾ ರೋಕೋಗಳನ್ನು ಸಂಘಟಿಸುತ್ತಿದ್ದರು. ನಾರಾಯಣಪುರದಂತಹ ಸಣ್ಣ ಊರಿನ ಮಹಿಳೆಯರು ಸೌಂದರ್ಯ ಸ್ಪರ್ಧೆ ವಿರೋಧಿಸಿ ಪ್ರತಿಭಟಿಸಿದರು. ಮಕ್ಕಳ ಶಿಕ್ಷಣಕ್ಕೆ ತಕ್ಕ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕಾ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದರು. ಅತ್ಯಾಚಾರ ವಿರೋಧಿಸಿ, ಸಾರಾಯಿ ನಿಷೇಧಿಸುವಂತೆ ಆಗ್ರಹಿಸಿ ಊರೂರುಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದವು. ಆದಿವಾಸಿ ಸಮುದಾಯದ ಗಂಡಸರು ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳುವಂತೆ ಕೆಎಎಂಎಸ್ ಅವರೊಡನೆ ಸಂವಾದ ನಡೆಸಿ ಒಪ್ಪಿಸಿತು. ಸಮುದಾಯವೆಲ್ಲ ಒಂದುಗೂಡಿ ಗಣಿಗಾರಿಕೆ, ಸ್ಥಳಾಂತರದ ವಿರುದ್ಧ ದನಿಯೆತ್ತುವಂತೆ ಮಾಡಿತು.

ಸಂಘಟನೆಯ ಕೆಲಸಗಳ ನಡುವೆ ಅನುರಾಧಾ ಎಲ್ಲಾದರೊಮ್ಮೆ ಮುಂಬಯಿಗೆ ಹೋಗಿಬರುತ್ತಿದ್ದರು. ಪಕ್ಷದ ಕೆಲಸವಿರುತ್ತಿತ್ತು, ಜೊತೆಗೆ ಭೇಟಿಗಾಗಿ ಅತಿ ಸ್ವಲ್ಪ ಸಮಯವಿರುತ್ತಿತ್ತು. ಎಂದೇ ತಾಯ್ತಂದೆಯರನ್ನು ಭೇಟಿಮಾಡುತ್ತಿರಲಿಲ್ಲ. ತಮ್ಮ ಬದುಕಿನ ನೆರಳು ಅವರ ಮೇಲೆ ಬೀಳಬಾರದು ಹಾಗೂ ಪೊಲೀಸ್ ಕೆಂಗಣ್ಣಿಗೆ ಕುಟುಂಬ ಗುರಿಯಾಗಬಾರದೆಂದು ತಂದೆ ತೀರಿಕೊಂಡಾಗಲೂ ಹೋಗಲಿಲ್ಲ. ಈ ಕಾರಣಕ್ಕೆ ರಕ್ತಸಂಬಂಧಗಳನ್ನು ತೊರೆದೇಬಿಟ್ಟಿದ್ದರು. ಮಕ್ಕಳು ಬೇಡವೆಂಬ ನಿರ್ಧಾರಕ್ಕೂ ಬಂದಿದ್ದರು.

ಬರದ ದಿನಗಳಲ್ಲಿ ಹುಣಿಸೆ ನೀರಿನೊಂದಿಗೆ ಮುದ್ದೆಯಾದ ಅನ್ನ ಊಟ ಮಾಡುವಾಗ ಅನ್ನ ಗಂಟಲಲ್ಲಿಳಿಯದೆ ಊಟಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿತ್ತು. ಹೊತ್ತುಗೊತ್ತಿಲ್ಲದ ಆಹಾರನಿದ್ದೆಗಳಿಂದ ತೀವ್ರ ಅಸಿಡಿಟಿಯಾಗಿ ಜಠರದ ಹುಣ್ಣು (ಅಲ್ಸರ್) ಆಯಿತು. ಹಲವು ಬಾರಿ ಮಲೇರಿಯಾ ಜ್ವರ ಬಂತು. ಆ ವೇಳೆಗಾಗಲೇ ಪೊಲೀಸರ ವಾಂಟೆಡ್ ಲಿಸ್ಟ್ ಸೇರಿಹೋಗಿದ್ದರಿಂದ ಹೆಸರು ಬದಲಿಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು ಅನಿವಾರ್ಯವಾಗಿ ಚಿಕಿತ್ಸೆ ಪಡೆಯುವುದು ದುಸ್ತರವಾಯಿತು. ಮಲ್ಟಿಪಲ್ ಸ್ಕ್ಲಿರೋಸಿಸ್ ಎಂಬ ಸರ್ವಾಂಗವನ್ನೂ ಬಾಧಿಸುವ ಕಾಯಿಲೆ ಶುರುವಾಗಿ ಶ್ವಾಸಕೋಶ, ಕಿಡ್ನಿ, ಹೃದಯ, ಮೂಳೆ, ಕೀಲು ಎಲ್ಲದರ ಮೇಲೆ ತನ್ನ ಪರಿಣಾಮ ತೋರಿಸಿತು. ಭಾರ ಹೊರುವುದು ಕಷ್ಟವಾಗಿ, ಮೆಟ್ಟಿಲು ಹತ್ತಿಳಿಯುವುದು ಅಸಾಧ್ಯ ಎನ್ನುವಂತಾಗಿ ಅವರ ಹೆಗಲ ಮೇಲಿನ ಚೀಲದಿಂದ ಕಂಬಳಿಯೂ ಭಾರವೆಂದು ಹೊರಹೋಯಿತು. 

ಸಂಘಟನೆಯ ಹೆಣ್ಣುಮಕ್ಕಳಿಗೆ ನಾಯಕತ್ವದ ತರಬೇತಿ ಕೊಡುತ್ತಿರುವಾಗಲೇ ಮತ್ತೆ ಮಲೇರಿಯಾ ಜ್ವರ ಬಂತು. ಈ ಬಾರಿ ಫಾಲ್ಸಿಪಾರಂ ಮಲೇರಿಯಾ ಎಂಬ ಪ್ರಾಣಾಂತಿಕ ರೋಗಾಣುವಿನ ಎರಡೆರೆಡು ತಳಿಗಳು ಅವರ ದೇಹ ಪ್ರವೇಶಿಸಿದ್ದವು. ಅನಿಯಮಿತ ಆಹಾರ, ಕಾಯಿಲೆ, ವಿಶ್ರಾಂತಿ-ಆರೈಕೆಯಿಲ್ಲದೆ ಜರ್ಝರಿತವಾಗಿದ್ದ ದೇಹ ಮಲೇರಿಯಾ ದಾಳಿಗೆ ಸೊರಗಿಹೋಯಿತು. ತಜ್ಞವೈದ್ಯರ ಚಿಕಿತ್ಸೆ ಪಡೆಯುವುದು ಕಷ್ಟವಾಗಿದ್ದರಿಂದ ದಂಡಕಾರಣ್ಯದ ಛಲಗಾತಿಯ ಜರ್ಝರಿತ ದೇಹವನ್ನು ಸಾವು ಸೋಲಿಸುವುದು ತಡವಾಗಲಿಲ್ಲ. ಕೊನೆಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾದರೂ ತಮ್ಮ ೫೪ನೇ ವಯಸ್ಸಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಾಮ್ರೇಡ್ ಅನುರಾಧಾ ಕೊನೆಯುಸಿರೆಳೆದರು.



ಅನುರಾಧಾ ಅವರ ಬರವಣಿಗೆಗಳನ್ನು ಆನಂದ್ ತೇಲ್ತುಂಬ್ಡೆ ಹಾಗೂ ಶೋಮಾ ಸೇನ್ ‘ಸ್ಕ್ರಿಪ್ಟಿಂಗ್ ದಿ ಚೇಂಜ್’ ಎಂಬ ಪುಸ್ತಕವಾಗಿ ಸಂಪಾದಿಸಿದ್ದಾರೆ. ಇದುವರೆಗೆ ಆಪ್ತೇಷ್ಟ-ಸಂಗಾತಿಗಳ ವಲಯದಲ್ಲಷ್ಟೇ ಉಳಿದಿದ್ದ ಅನುರಾಧಾ ಬರಹ-ಚಿಂತನೆಗಳು ಸಂಪಾದಿತ ಕೃತಿಯಿಂದ ಎಲ್ಲರಿಗೂ ಲಭ್ಯವಾಗಿದೆ. ಅರುಂಧತಿ ರಾಯ್ ಅವರ ಪ್ರವೇಶಿಕೆಯಿರುವ ಪುಸ್ತಕವು ಜಾತಿ ಮತ್ತು ಲಿಂಗ ಎಂಬ ಎರಡು ವಿಭಾಗಗಳನ್ನೊಳಗೊಂಡಿದೆ. ಹಲವಾರು ಗಂಭೀರ ಹಾಗೂ ಸಮಕಾಲೀನ ಸಂಗತಿಗಳನ್ನು ಅವರ ಪ್ರಬಂಧಗಳು ಪ್ರೌಢವಾಗಿ ಚರ್ಚಿಸಿವೆ. ಅತ್ಯಾಚಾರ ಕಾನೂನು ಸಮಗ್ರವಾಗಿ ಬದಲಾಗಬೇಕಿದೆ ಎಂದು ಪ್ರತಿಪಾದಿಸುವ ಅವರು ಹೆಣ್ಣು, ಶೀಲ ಹಾಗೂ ಹೆಣ್ಣಿನ ದೇಹದ ಸಮಗ್ರತೆ ಕುರಿತ ಸಮಾಜದ ದೃಷ್ಟಿಕೋನಗಳನ್ನು ವಿಶ್ಲೇಷಿಸಿದ್ದಾರೆ. 

ಆ ಪುಸ್ತಕದಲ್ಲಿ ಅವರು ಸಂಗ್ರಹಿಸಿದ ಬಸ್ತಾರ್ ಹೆಣ್ಣುಮಕ್ಕಳ ಒಂದು ಹಾಡು ಇದು:

ಹುಡುಗನ್ ಹೆರ‍್ತಿ, ಹುಡುಗೀನ್ ಹೆರ‍್ತಿ, ಆದ್ರೆ ನಿನ್ನೆಸರು ಎಲ್ಲೂ ಇರಲ್ಲ ಅಕ್ಕಾ
ಹಗೇವ್ನ ತುಂಬ ಭತ್ತ ತುಂಬ್ಕಂಡೈತೆ, ಆದ್ರೆ ಹೆಂಗ್ಸಿಗದು ಸಿಗಲ್ಲ ಕಣಕ್ಕ
ಹುಡುಗಾಟಗತಿ ವಯಸ್ನಾಗೇ ತಾಳಿ ಬಿಗ್ದು ಕಳಿಸಿಬಿಡ್ತಾರ್ ಕಣಕ್ಕ,
ಹೋಗಲ್ಲಂತೇನಾರ ಅಂದ್ಯ, ಹೊಡ್ದು ಅಟ್ಟಿಬಿಡತಾರೆ ಅಕ್ಕ

ನೋಡ್ತಿರು, ಗಾಳೀಲೆಲ್ಲ ತುಂಬತೈತೆ ಒಂದ್ ಕೂಗು
ಬೂಮಿಆಕಾಸ ಸಮ, ಗಂಡ್ಸು ಹೆಂಗ್ಸು ಸi ಅಂಬೂದು
ಆ ಕೆಂಪ್ ಹೂಗಿಡ, ಜಗ್ಗಿ ಹೂ ಬಿಡ್ತ ಇದೆ ನೋಡಕ್ಕ,
ನಾವೂ ಆ ಹೂವಿನ್ ದಾರೀಲೆ ಹೋರಾಡಣ ಕಣಕ್ಕ
ಕೆಂಪು ಬೆಳಕಿನ ದಿಕ್ಕಲೆ ಹೋಗ್ತ ಇರ‍್ಬೇಕು ಅಂತ
ನಾನಂತೂ ಗಟ್ಟಿ ನಿಚ್ಚೈಸಿಬಿಟ್ಟಿದೀನಿ ಕಣಕ್ಕ..

ಅವರು ಕ್ರಮಿಸಿದ ಹಾದಿ ಕಡಿಮೆ ಜನ ಪಯಣಿಸಿರುವಂತದು. ಹೊರಗಿನ ಸಮಾಜಕ್ಕೆ ಅನುರಾಧಾ ಎಷ್ಟು ದಿನ ನೆನಪಿರುತ್ತಾರೋ, ಎಷ್ಟು ಜನ ಅವರ ಹೆಸರು ತಿಳಿದಿದ್ದಾರೋ ಗೊತ್ತಿಲ್ಲ. ಅವರ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗದೆಯೂ ಹೋಗಬಹುದು. ಆದರೆ ಸ್ವಾಯತ್ತತೆಯೆಡೆಗಿನ ದಂಡಕಾರಣ್ಯದ ಆದಿವಾಸಿಗಳ ನಡಿಗೆಯಲ್ಲಿ ಇವರ ಹೆಜ್ಜೆ ಗುರುತು ಅಳಿಸಲಾರದಂತೆ ಇದೆ ಎನ್ನುವುದು ವಾಸ್ತವವಾಗಿದೆ.



ಬಂದೂಕು ವರ್ಸಸ್ ಬಂದೂಕು ಬೇಕೆ?

ನಮ್ಮಲ್ಲಿ ಹಲವರಿಗೆ ಮಾವೋವಾದಿಗಳು ಯಾಕೆ, ಹೇಗೆ ಆ ದಾರಿಗೊಲಿಯುತ್ತಾರೆ? ಅವರೇಕೆ ಭೂಗತರಾಗಬೇಕು? ಅವರೇಕೆ ಶಸ್ತ್ರದ ದಾರಿ ಹಿಡಿಯುತ್ತಾರೆ? ಎಂಬ ಅಚ್ಚರಿ. ನಕ್ಸಲೈಟ್, ಮಾವೋವಾದಿ, ಗೆರಿಲ್ಲಾ ಹೋರಾಟ, ಸಶಸ್ತ್ರ ಹೋರಾಟ ಮುಂತಾದ ಪದ-ವಿಷಯಗಳು ಬಂದಕೂಡಲೇ ಬಹಳಷ್ಟು ಚಿಂತಕರು ತಮ್ಮ ಚಿಂತನೆಯನ್ನು ಅಲ್ಲಿಗೆ ನಿಲ್ಲಿಸಿಬಿಡುತ್ತಾರೆ. ಅಲ್ಲಿಂದಾಚೆಗೆ ಒಂದೋ ಅಹಿಂಸಾತ್ಮಕ ಮಾರ್ಗ ಬೆಂಬಲಿಸುವ ಕಟ್ಟಾ ನಕ್ಸಲ್ ವಿರೋಧಿಗಳಾಗಿಯೋ ಅಥವಾ ಅವರ ಕಠಿಣ ಜೀವನ-ಹೋರಾಟಕ್ಕೆ ಕರುಣೆ ತೋರಿಸುವ ಮೃದುಹೃದಯಿಗಳೋ ಆಗುತ್ತಾರೆ. ಆದರೆ ಆದಿವಾಸಿ ಸಮುದಾಯಗಳ ದೃಷ್ಟಿಯಿಂದ ಹೋರಾಟಗಾರರನ್ನು ನೋಡಿದರೆ ವಂಚಿಸುವವರು ಯಾರು? ಹಿಂಸೆಯನ್ನು ಉದ್ದೀಪಿಸುವವರು ಯಾರು? ಹಿಂಸೆ ಯಾವುದು? ಅಹಿಂಸೆ ಯಾವುದು? ಬೆಚ್ಚನೆಯ ಜಾಗಗಳಲ್ಲಿರುವ ನಮಗೆ ‘ಹಿಂಸಾತ್ಮಕ’ ಎನಿಸಿದ್ದು ಅಸಹಾಯಕರ ದೃಷ್ಟಿಯಲ್ಲಿ ಧೈರ್ಯದ ಹೆಜ್ಜೆಯೇ? ಎಂಬೆಲ್ಲ ಪ್ರಶ್ನೆಗಳೇಳುತ್ತವೆ. ಇಲ್ಲಿ ಅನುರಾಧಾ ನೆಪದಲ್ಲಿ ದಂಡಕಾರಣ್ಯದ ಮಾವೋವಾದಿ ಹೋರಾಟಗಾರರತ್ತ ಗಮನ ಹರಿಸಿದರೆ ಗುಲಾಬಿಗಿಂತ ಬಂದೂಕಿನ ದಾರಿ ಆಯ್ದುಕೊಂಡದ್ದೇಕೆ ಎಂದು ತಿಳಿದುಬರುತ್ತದೆ. 

ಮಾವೋವಾದಿಗಳು ಆದಿವಾಸಿಗಳೊಡನೆ ಶುರುಮಾಡಿದ ಹಕ್ಕು ಪ್ರತಿಪಾದನಾ ಚಳುವಳಿಯಿಂದ ಸಮೃದ್ಧ ಅದಿರು-ಗಣಿಯ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರಕ್ಕೆ ಕಷ್ಟವಾಯಿತು. ಆಗ ಚಳುವಳಿಯನ್ನು ಮಟ್ಟಹಾಕಲು, ಭೂಸ್ವಾಧೀನ ಸುರಳೀತಗೊಳಿಸಲು ಸರ್ಕಾರ ತನ್ನೆಲ್ಲ ರಕ್ಷಣಾಪಡೆಗಳನ್ನೂ ಬಳಸಿತು. ಅತಿ ಕಠಿಣ ಹಾಗೂ ಕ್ರೂರ ಕಾನೂನುಗಳು ಬಂದು ತಮಗೆ ಬೇಕಾದವರನ್ನು, ಅನುಮಾನ ಬಂದವರನ್ನು ಹಿಡಿದು ಬಂಧಿಸುವ; ವಿಚಾರಣೆಯ ನೆಪದಲ್ಲಿ ಶಿಕ್ಷಿಸುವ; ದೌರ್ಜನ್ಯ ಎಸಗುವ ಅಧಿಕಾರ ರಕ್ಷಣಾ ಪಡೆಗಳಿಗೆ ಸಿಕ್ಕಿತು. ಈ ‘ಜಂಗ್ಲಿ ಕಾನೂನು’ಗಳು ಹೋರಾಟಗಾರರು ಶಸ್ತ್ರಗಳನ್ನೇ ನೆಚ್ಚಿಕೊಳ್ಳಲು ಉತ್ತೇಜಿಸಿತು. ಮಾವೋವಾದಿಗಳು ಸೇತುವೆ ಉಡಾಯಿಸಿದರು, ಪೋಲೀಸರನ್ನು ಕೊಂದರು. ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಹೋರಾಟಗಾರರನ್ನು ಕೊಂದರು. ಆದಿವಾಸಿಗಳ ಒಂದು ಗುಂಪಿಗೆ ಶಸ್ತ್ರಾಸ್ತ್ರ ಕೊಟ್ಟು ಸಲ್ವಾ ಜುಡುಂ ಎಂದರು. ಹೀಗೆ ಬೃಹತ್ ವ್ಯವಸ್ಥೆಯನ್ನೂ, ಸರ್ಕಾರವನ್ನೂ, ಸಮಾಜವನ್ನೂ ಎದುರುಹಾಕಿಕೊಂಡು, ಬಂಧನದಿಂದ ತಪ್ಪಿಸಿಕೊಂಡು ಚಳುವಳಿಯನ್ನು ಮುಂದುವರೆಸಲು ಶಸ್ತ್ರಾಸ್ತ್ರಗಳು, ಕೆಎಎಂಸ್‌ನ ಹೆಣ್ಣುಮಕ್ಕಳು ಅನಿವಾರ್ಯವೆಂಬ ಭಾವನೆ ಮಾವೋವಾದಿ ಹೋರಾಟಗಾರರಲ್ಲಿ ಬಂತು. ದಶಕಗಳ ಕಾಲ ಬಂಧನಕ್ಕೊಳಗಾಗದಂತೆ ಬದುಕಬೇಕೆಂದರೆ ಭೂಗತವಾಗಬೇಕಾಗುತ್ತದೆ. ತಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಮರೆತು ಬದುಕಬೇಕಾಗುತ್ತದೆ. ಅಂತಹ ವ್ಯಕ್ತಿತ್ವಗಳಿಗೆ ರಾಜಿಗೊಳಗಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕಾನೂನಿನ ಚೌಕಟ್ಟಿನೊಳಗೆ ಲಿಬರಲ್ ಆಕ್ಟಿವಿಸ್ಟ್ ಆಗಿ ಯೋಚಿಸಲು, ಕೆಲಸ ಮಾಡಲೂ ಸಾಧ್ಯವಾಗುವುದಿಲ್ಲ. ಎಂದೇ ಸವಾಲು, ಕಷ್ಟಗಳನ್ನೆದುರಿಸಿದರೂ ತಮ್ಮ ತತ್ವಗಳಿಗನುಗುಣವಾಗಿ ಬದುಕುತ್ತಾ ಉಳಿದವರಿಗಿಂತ ಭಿನ್ನ ಮಾರ್ಗ ಹಿಡಿಯುತ್ತಾ ಸಮಾಜದಿಂದ ಪ್ರತ್ಯೇಕಿಸಲ್ಪಡುತ್ತಾರೆ. 

ಪ್ರಸ್ತುತ ವ್ಯವಸ್ಥೆಯಲ್ಲಿ ನಂಬಿಕೆಯಿಡದೆ ಚುನಾವಣೆ ಬಹಿಷ್ಕರಿಸುವ; ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ; ಸಮಾನಾಂತರ ಜನಾಡಳಿತ, ಜನರ ಸರ್ಕಾರ ನಡೆಸಬೇಕೆನ್ನುವ ಮಾವೋವಾದಿಗಳು ದೇಶದ ಸಮಗ್ರತೆಗೇ ದೊಡ್ಡ ಸವಾಲಾಗಿ ಕಾಣಿಸುತ್ತಾರೆ. ಎಂದೇ ೧೯೯೧ರಲ್ಲಿ ಮಹಾರಾಷ್ಟ್ರದಲ್ಲಿ ಕೆಎಎಂಎಸ್ ಅದರ ಮಾತೃ ಸಂಘಟನೆ ಪಿಡಬ್ಲ್ಯುಜಿಯಂತೆಯೇ ನಿಷೇಧಕ್ಕೊಳಗಾಯಿತು. ಅದರಲ್ಲಿದ್ದ, ಇಲ್ಲದ ಹಲವರನ್ನು ಟಾಡಾ ಅಡಿ ಬಂಧಿಸಲಾಯಿತು. ೨೦೦೨ರಲ್ಲಿ ಪೋಟಾ ಬಂತು. ನಂತರ ಎಂಸಿಒಸಿಎ, ಯುಎಪಿಎ - ಹೀಗೆ ನಾಲ್ಕಾರು ಭಯಾನಕ ಕಾಯ್ದೆಗಳು ಬಂದು ಸಣ್ಣ ಭಿನ್ನಮತ, ನಿಷೇಧಿತ ಸಂಘಟನೆ/ವ್ಯಕ್ತಿಗಳೊಡನೆ ಸಂಪರ್ಕಗಳು ನಕ್ಸಲರೆಂಬ ಹಣೆಪಟ್ಟಿ ಹಚ್ಚಿ ಅನುಮಾನದಿಂದ ನೋಡಲು ಸಾಕಾಯಿತು. 


ಹೀಗೆ, ಒಂದು ಉದಾತ್ತ ಅನುಕರಣೀಯ ಮಾದರಿಯಾಗಬೇಕಿದ್ದ ಅರಣ್ಯವಾಸಿಗಳ ಸಂಘಟನೆ ತನ್ನ ಸಶಸ್ತ್ರ ಸ್ವರೂಪದಿಂದಲೇ ಇತರ ಸಂಘಟನೆಗಳಿಂದ ಬೆಂಬಲ ಪಡೆಯಲು ವಿಫಲವಾಗಿದೆ. ಬಾಹ್ಯ ಜಗತ್ತಿನ ವರಸೆಗಳನ್ನು ಸ್ಪಷ್ಟವಾಗಿ ತಿಳಿಯದ ಆದಿವಾಸಿ ಸಮುದಾಯವನ್ನು ಜಾಗೃತಗೊಳಿಸುವುದು, ಸಂಘಟಿಸಿ ಹೋರಾಟ ಕಟ್ಟುವುದು ಆ ಸಮುದಾಯದ ದೃಷ್ಟಿಯಿಂದ ತೀರಾ ಅಗತ್ಯವೇ ಆಗಿದ್ದರೂ ಆದಿವಾಸಿಗಳಿಗೆ, ಅದರಲ್ಲೂ ಮಹಿಳೆಯರಿಗೆ ನೀಡಿದ ಶಸ್ತ್ರಾಸ್ತ್ರ ತರಬೇತಿಯನ್ನು ಅರಗಿಸಿಕೊಳ್ಳಲು ಉಳಿದವರಿಗೆ ಕಷ್ಟವಾಗಿದೆ. ಮಾವೋವಾದಿಗಳು ‘ಜನ ಸರ್ಕಾರ’ ಎಂದು ಅಶಿಕ್ಷಿತ, ಅರೆಶಿಕ್ಷಿತ, ಮುಗ್ಧ ಆದಿವಾಸಿಗಳ ಹೆಸರಿನಲ್ಲಿ ತಾವೇ ಸರ್ಕಾರ ನಡೆಸುವುದು; ಉತ್ತರದಾಯಿತ್ವ ಇಲ್ಲದಂತೆ ಇಡೀ ಸಮಾಜ, ಸರ್ಕಾರ, ಆಡಳಿತ, ಮಾಧ್ಯಮ, ಕಾನೂನುಗಳಿಂದ ದೂರ ಉಳಿದಿರುವುದು ಇವತ್ತಿಗೂ ಅವರನ್ನು ಬೆಂಬಲಿಸಲು ಉಳಿದವರಿಗಿರುವ ತೊಡರಾಗಿದೆ. ಚುನಾವಣೆ, ಪಂಚಾಯತ್‌ರಾಜ್‌ನಂತಹ ಡೆಮಾಕ್ರಸಿಯ ಒಪ್ಪಿತ ಹತಾರಗಳ ಬಗೆಗೆ ಉಳಿದ ಸಮಾಜಕ್ಕಿರುವ ನಂಬಿಕೆ ಮಾವೋವಾದಿಗಳಿಗಿಲ್ಲದಿರುವುದೂ ಈ ಬಿರುಕಿನ ಮತ್ತೊಂದು ಕಾರಣವಾಗಿದೆ. 

ಕೊನೆಗೂ ಆಳುವವರ ಉದ್ದೇಶ ಮತ್ತು ಹೋರಾಡುವವರ ಸಿದ್ಧಾಂತದ ನಡುವೆ ಹೊಂದಾಣಿಕೆಯೇ ಆಗದೆ, ಜನರ ಬಗೆಗೆ ಮಾತನಾಡುವ ಇಬ್ಬರೂ ಪರಸ್ಪರ ಶತ್ರುಗಳಾದರು. ಅದರ ಪರಿಣಾಮವೇನು? ಅನುರಾಧಾ, ಕೊಬಾಡ್, ಸಾಕೇತ್‌ರಂತಹ ಈ ಸಮಾಜಕ್ಕೆ ಅವಶ್ಯವಿದ್ದ ಎಷ್ಟೋ ಜೀವಗಳು ಭೂಗತರಾಗಿ ದೇಶವಿರೋಧಿಗಳೆನಿಸಿಕೊಂಡು ಬದುಕಿ ಕೊನೆಯಾಗಬೇಕಾಯಿತು. ಜನಸಾಮಾನ್ಯರ ಬದುಕು ಕಷ್ಟದಲ್ಲೇ ಮುಂದುವರೆದು, ಅದೇ ಬದುಕೆಂದು ಒಪ್ಪಿಕೊಳ್ಳುವಂತಾಯಿತು.  

ಹಿರಿಯ ಗೆಳತಿ ಮೊನ್ನೆ ನೆನಪಿಸಿದ ಒಂದು ಕತೆ ಸುಮ್ಮನೆ ನೆನಪಾಗುತ್ತಿದೆ: ಒಬ್ಬ ನಕ್ಸಲ್ ಹುಡುಗನಿಗೆ ಅಡವಿಯಲ್ಲಿರುವ ಅವನ ತಾಯಿ ದಿನಾ ರೊಟ್ಟಿ ಒಯ್ದು ಕೊಟ್ಟುಬರುತ್ತಿರುತ್ತಾಳೆ. ಅವನೆಲ್ಲಿದ್ದರೂ ಹುಡುಕಿ ಅವಳು ತರುವ ರೊಟ್ಟಿ ಅದು ಹೇಗೆ ಅಷ್ಟು ಬಿಸಿಯಿರುತ್ತದೆ ಎನ್ನುವುದು ಅವನ ಅಚ್ಚರಿ. ಒಂದು ದಿನ ಅವನ ಅವ್ವ ಪೊಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಹುಡುಗ ಅವ್ವ ಬರಲಿಲ್ಲವೆಂದು ಹುಡುಕಿ ಹೋದಾಗ ಅವಳ ಶವ ಕಾಣುತ್ತದೆ. ಹತ್ತಿರ ಹೋದರೆ ಕಾಣಿಸುವುದು ಅವಳ ಹೊಟ್ಟೆಗವಚಿಕೊಂಡಿದ್ದ ರೊಟ್ಟಿಗಂಟು! ಅದ ಸರಿಸಿದರೆ ಕಾಣುವುದು ಸುಟ್ಟು ಕಪ್ಪಾಗಿದ್ದ ಹೊಕ್ಕುಳ ಪ್ರದೇಶ!! ಅಲ್ಲಿರುತ್ತದೆ ಬಿಸಿರೊಟ್ಟಿಯ ಗುಟ್ಟು.. 

ಆದರೆ..

ಸಹವಾಸಿ/ದೇಶವಾಸಿಗಳ ಬದುಕನ್ನು ಉತ್ತಮಪಡಿಸುವ ಉದಾತ್ತ ಧ್ಯೇಯದಿಂದ ತಮ್ಮ ‘ಉತ್ತಮ’ ಬದುಕನ್ನು ತ್ಯಾಗಮಾಡಿ, ಹಲವು ಬೇನಾಮಿ ಹೆಸರುಗಳಲ್ಲಿ ಎಲ್ಲೆಲ್ಲೋ ವಾಸಿಸಿ, ಅನಾರೋಗ್ಯ ಅಪಘಾತಕ್ಕೊಳಗಾಗಿ, ಜೀವನವನ್ನೇ ಬಲಿದಾನ ಮಾಡಿದ ಹೋರಾಟದಿಂದ ನಿರೀಕ್ಷಿತ ಪ್ರತಿಫಲ ಸಿಕ್ಕಿದೆಯೇ? ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿರುವುದು ನಿರ್ವಿವಾದವಾದರೂ ವ್ಯವಸ್ಥೆಯಿಂದ ಮತ್ತಷ್ಟು ಅವಗಣನೆಗೆ, ಪ್ರಹಾರಕ್ಕೆ, ತಾರತಮ್ಯಕ್ಕೆ ಆದಿವಾಸಿಗಳು ಒಳಗಾಗಲು ಶಸ್ತ್ರಾಸ್ತ್ರ ಸ್ನೇಹ ಕಾರಣವಾಗಿಲ್ಲವೇ? ಬೃಹತ್ ಪ್ರಭುತ್ವದೆದುರು, ಕಂಪನಿಗಳ ಅಂತರರಾಷ್ಟ್ರೀಯ ಹಿತಾಸಕ್ತಿಯೆದುರು ಸ್ಥಳೀಯ ಪ್ರತಿರೋಧ ಅರ್ಥಪೂರ್ಣವಾಗಿದೆಯೆ? ಆದಿವಾಸಿಗಳೇ ಅಭಿವೃದ್ಧಿಯ ಥಳುಕಿಗೆ ಕರಗಿ ಹೋಗುತ್ತಿರುವಾಗ ಅವರನ್ನು ಬೇರೆಯೇ ‘ಪ್ರಜೆ’ಗಳನ್ನಾಗಿಸಿ ಅರಣ್ಯವಾಸಿಗಳಾಗಿಯೇ ಇರಿ ಎನ್ನುವುದು ಸರಿಯೇ? ಮುಗಿಯದ ಅಸಹಾಯಕತೆ ಎದುರಿಸುವ ಆದಿವಾಸಿ ಜನರು ಕೊನೆಗೆ ಹಿಂಸೆಯನ್ನು ಒಪ್ಪಿಕೊಳ್ಳುವಂತಹ ಬದಲಾವಣೆಯಾಗುವುದಕ್ಕೆ ಕಾರಣವಾದರೂ ಯಾವುದು? 



ಮಹಿಳಾ ದೌರ್ಜನ್ಯ ನಾನಾ ಸ್ವರೂಪ-ಪ್ರಮಾಣಗಳಲ್ಲಿ ಹಿಂದೆಂದಿಗಿಂತ ಹೆಚ್ಚಿರುವಾಗ ಅನುರಾಧಾ ಅವರಂತಹ ವ್ಯವಸ್ಥೆಯಲ್ಲಿ ಕರಗಿಹೋಗದ ಹೋರಾಟಗಾರ್ತಿ ನಮ್ಮ ನಿಮ್ಮ ನಡುವೆಯೇ ಕ್ರಿಯಾಶೀಲವಾಗಿದ್ದರೆ; ಅಥವಾ ಆದಿವಾಸಿಗಳ ನಡುವೆಯೇ ಅಡಗುತಾಣಗಳ ಹಂಗಿಲ್ಲದೆ ತಿರುಗಾಡಬಲ್ಲ ವಾತಾವರಣದಲ್ಲಿದ್ದರೆ ಇನ್ನೂ ಹೆಚ್ಚು ಸಾಧಿಸಬಹುದಿತ್ತೆ ಎನಿಸದೇ ಇರುವುದಿಲ್ಲ. ನಕ್ಸಲರ ಜೊತೆ ಮಾತುಕತೆ, ಸಂವಾದ ನಡೆಯುತ್ತಿರುವ; ಆ ಚಳುವಳಿಯೊಳಗೇ ಭಿನ್ನಮತ ಹುಟ್ಟಿಕೊಂಡಿರುವ ಈ ಕಾಲದಲ್ಲಿ ಪರ್ಯಾಯ ನ್ಯಾಯದ ದಾರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಿಸಿ ಸೂಕ್ತ ತಿದ್ದುಪಡಿಗಳೊಂದಿಗೆ ಹೆಣ್ಣುಮಕ್ಕಳು ಮುಂದುವರೆಯಬೇಕಿದೆ. ಕೋಮುವಾದಿ ರಾಜಕಾರಣದ ಢಾಂಭಿಕತೆಯ ಎದುರು ಸೈದ್ಧಾಂತಿಕ ಬದ್ಧತೆಯ ಹಾದಿ ಹಿನ್ನಡೆ ಅನುಭವಿಸುತ್ತಿರುವ ಕಾಲದಲ್ಲಿ ಮುಖ್ಯವಾಹಿನಿಯ ಸಮಾಜದೊಳಗೇ ಹೋರಾಟ ರೂಪಿಸುವುದು ಆಯ್ಕೆಯಾಗಿ ಆ ಚಳುವಳಿಯ ಮುಂದಿದೆ.




Tuesday 26 January 2016

ಬಿಂದು ಕೃಷ್ಣನ್ - ಮೂರು ಮಲೆಯಾಳಿ ಕವಿತೆಗಳು








೧. ಮರೆವಿನ ಹಗೇವು

ನನ್ನಮ್ಮ ಏನನ್ನೂ ಬಿಸಾಡುವುದಿಲ್ಲ
ತುಕ್ಕು ಹಿಡಿದ ಮೊಳೆಯನ್ನೂ
ಎಲ್ಲವೂ ಒಂದಲ್ಲ ಒಂದು ದಿನ
ಬೇಕಾದಾವು ಎಂಬ ಆಲೋಚನೆ.
ಎಲ್ಲ ಎತ್ತಿಡುತ್ತಾಳೆ,
ನಮ್ಮ ಮನೆ
ದೊಡ್ಡ ಕಸದ ಗುಂಡಿ ಈಗ.

ನನ್ನಪ್ಪ ಸಂಪೂರ್ಣ ವಿರುದ್ಧ
ಅವ ಎಲ್ಲ ಬಿಸುಡುವವ
ಗಡಿಯಾರದ ಮುಳ್ಳು
ಅವ ಪಡೆದ ಪದಕ ಪಾರಿತೋಷಕ
ಸವಿನೆನಪು ಹುದುಗಿಸಿದ ಮಿದುಳ ಜೀವಕೋಶ..
ಎಲ್ಲ ಅಂದರೆ ಎಲ್ಲವನೂ
ಕಳಕೊಂಡವನು ಅವನು

ಈಗ ನನ್ನಮ್ಮ
ಅವನ ಎಲ್ಲವನ್ನೂ
ತಾನೇ ಎತ್ತಿಡುತ್ತಾಳೆ

ಇತ್ತೀಚೆಗೆ ಭಯ ನನಗೆ
ಎಲ್ಲಿ ನನ್ನಮ್ಮ
ಪೆಟ್ಟಿಗೆಯಲಿ ಕಾಪಿಟ್ಟ
ಉದುರಿ ಬಿದ್ದ ನನ್ನ ಮೊದಲ ಹಲ್ಲ
ನನಗೆ ಕೊಡುವಾಗ
ಅಪ್ಪ
‘ಯಾರೀ ಹೆಂಗಸು?’
ಎಂದು ಕೇಳಿಯಾನೋ
ಎಂದು.

೨. ಮಗಳಿಗೆ

ಮೊದಲ ಬಾರಿ ನೀ ಕಡಲ ನೋಡಿದಾಗ
ನೀ ನನ್ನ ಸೊಂಟದಲಿದ್ದೆ
ಪುಟ್ಟ ಕಣ್ಣುಗಳೊಳಗೆ
ಅಪಾರ ಕಡಲು ಭೋರ್ಗರೆಯಿತು
ನಿನ್ನ ನಗು ಮಾಯವಾಗಿ
ಅಂಜಿ, ಕಣ್ಣು ಕಿವಿಗಳ ಮುಚ್ಚಿ
ನನ್ನ ಹೆಗಲಿಗೊತ್ತಿ ಮಲಗಿದೆ

ಮೊದಲ ಬಾರಿ ಮಳೆ ನೋಡಿದಾಗ
ನನ್ನ ತೊಡೆ ಮೇಲೆ ಕೂತಿದ್ದೆ
ನಿನ್ನ ಪುಟ್ಟ ಕಣ್ಣುಗಳೊಳಗೆ
ಆಗಸ ಇಳಿಯಿತು
ಪುಟ್ಟ ಪುಷ್ಟ ಬೆರಳುಗಳ ಅರಳಿಸಿ
ಕೇಕೆ ಹಾಕುತ್ತ
ಮಳೆಯ ಸ್ವಾಗತಿಸಿದೆ

ಮೊದಲ ಬಾರಿ ನಿನ್ನ ಪ್ರೇಮ
ಮತ್ತಾರದೊ ಕಂಗಳಲ್ಲಿ ಸಾಕಾರವಾಗುವಾಗ
ನಾ ನಿನ್ನೊಡನಿರುವುದಿಲ್ಲ
ನಿನ್ನ ನಗು ಕಳಕೊಳ್ಳದಿರು
ಅತಿ ಉದ್ವೇಗಗೊಳದೆಯೂ ಇರು
ಕಡಲೊಳಗೆ ಹೆಜ್ಜೆಯಿಡದೆ
ಮಳೆಯಲಿ ತೋಯಿಸಿಕೊಳದೆ
ಬದುಕಬಲ್ಲೆನೆಂದು ತಿಳಿಯದಿರು
ಬೇಕೆಂದಾಗ ಒಂದು ದೋಣಿ ಮತ್ತು ಛತ್ರಿ
ನಿನ್ನ ಬಳಿಯಿವೆ ಎಂದಷ್ಟೆ ಖಾತ್ರಿ ಪಡಿಸಿಕೊ..

೩. ದೇವರ ಸ್ವಂತ..

ಅಳಿವೆಯ ನೀರು
ಉರಿವ ಸೂರ್ಯನ ಬೆಳಕಿಗೆ ಥಳಥಳಿಸುತಿತ್ತು
ಹೌಸ್ ಬೋಟಿನಲ್ಲಿ
ಪರದೇಶಿಯೊಬ್ಬ ಧರಿಸಿದ ಕಪ್ಪು ಕನ್ನಡಕ
ಅವನ ಕಂಗಳ ಕುರುಡಾಗಿಸಿ
ಬಿಸಿಲು ಬೆಳದಿಂಗಳಾಯಿತು.

ಎಣ್ಣೆ ಹಚ್ಚಿ ಮಿಂದು
ಅರಿಶಿನ ಸಿಂಧೂರ ಧರಿಸಿ
ದೇವರ ಸ್ವಂತ ರಾಜ್ಯದ ಮೀನು
ನಿರ್ಭಾವುಕ ಕಣ್ಣುಗಳಲಿ ನೋಡುತ್ತ
ಬೋರಲಾಗಿ ಅವನೆದುರು ಬಿದ್ದಿತು
ದೇವರ ಸ್ವಂತ ಕಲ್ಪವೃಕ್ಷವು
ಅವಗೆ ಹಾಲನೆರೆಯಿತು

ನನ್ನೆಡೆಗೆ ಬರುವ ಮೊದಲು
ಎಲ್ಲಕ್ಕು ನ್ಯಾಯ ಒದಗಿಸಿದ ಅವ
ಇಲ್ಲ, ಬಿಳಿಯ ಹಾಸಿಗೆ ಬಟ್ಟೆಯ ಮೇಲೆ ರಕ್ತಕಲೆಗಳಿರಲಿಲ್ಲ
ಅಲೆಗಳೊಡನೆ ಸೆಣಸುವುದು ಅದು
ಮೊದಲ ಬಾರಿಯೇನಾಗಿರಲಿಲ್ಲ

ನಾ ಹೊರಟಾಗ
ಬೆಳದಿಂಗಳು ನಿಜವಾಗಿಯೂ ಸುರಿಯಿತು
ಆಗ ನೋಡಿದೆ
ನನ್ನ ನೆರೆಯ ಶೆಜಿಯೆತ್ತನ್ ದೋಣಿ ನಡೆಸುತ್ತಿದ್ದ
ಕಳಾಹೀನ ಮುಖ, ಕೆಂಪು ಕಣ್ಣು..

‘ಏಯ್, ಇದರಲ್ಲಿ ತಲೆಹೋಗುವಂಥದೇನಿದೆ?
ನನ್ನ ಗುಡಿಸಲ ಹಿಂದಿನ ಹಳ್ಳದಲ್ಲಿ
ಇವತ್ತು ಮನದಣಿಯೆ ಮೀಯಬೇಕಿದೆ
ಇವತ್ತು ರಾತ್ರಿ ನನ್ನಪ್ಪ
ಔಷಧ ಕುಡಿಯಲಿದ್ದಾನೆ
ಕೆಮ್ಮದೆ ಮಲಗಿ ನಿದ್ರಿಸಲಿದ್ದಾನೆ.
ಇವತ್ತು ನನ್ನ ಸೋದರ
ಹೊಟ್ಟೆ ತುಂಬ ಉಂಡು
ಅಳದೆ ಮಲಗಲಿದ್ದಾನೆ.
ಅದೂ ಮುಖ್ಯ ತಾನೇ?
ಅದು ಮಾತ್ರವೇ ಮುಖ್ಯ ತಾನೇ?

ಇಷ್ಟೆಲ್ಲ ವರ್ಷ ದೋಣಿ ನಡೆಸಿದರೂನು
ನಿನಗಿನ್ನೂ ತಿಳಿದಿಲ್ಲವೆ ಶೆಜಿಯೆತ್ತ
ಅತಿಥಿ ದೇವೋಭವ ಎಂದು?’



- ಮಲೆಯಾಳಿ, ಇಂಗ್ಲಿಷ್ ಮೂಲ: ಬಿಂದು ಕೃಷ್ಣನ್
- ಕನ್ನಡಕ್ಕೆ: ಎಚ್. ಎಸ್. ಅನುಪಮಾ
(ಚಿತ್ರ: ಕೃಷ್ಣ ಗಿಳಿಯಾರ್)

Monday 25 January 2016

‘ದಕ್ಷಿಣಾಯನ’: ದಂಡಿಯಲ್ಲಿ ೩೦-೧-೧೬ರಂದು ಸರ್ವ-ಭಾಷಾ-ಸಂವಾದ





‘ದಕ್ಷಿಣ’ ಎಂಬ ಪದಕ್ಕೆ ಜಾಗತಿಕವಾಗಿ ಈಗ ಹಲವು ಅರ್ಥಗಳಿವೆ. ಮಹಿಳಾ ದೃಷ್ಟಿಕೋನ ಮತ್ತು ವಿವೇಕಗಳನ್ನು ದಕ್ಷಿಣವು ಪ್ರತಿನಿಧಿಸುತ್ತದೆ. ಎಲ್ಲೆಲ್ಲಿ ಜನ ಚಳವಳಿ ಉಸಿರಾಡುತ್ತಿದೆಯೋ ಆ ಎಲ್ಲಾ ಪ್ರದೇಶಗಳು ದಕ್ಷಿಣವೆಂದು ಕರೆಯಲ್ಪಡುತ್ತಿವೆ. ದಕ್ಷಿಣ ಎನ್ನುವುದು ಪರ್ಯಾಯದ ಒಂದು ದಾರಿಯಾಗಿ ನೋಡಲ್ಪಡುತ್ತದೆ. ದಕ್ಷಿಣವೆಂದರೆ ಹೊಸ ಮನೋಭೂಮಿಕೆಗಳನ್ನು ಅನ್ವೇಷಿಸುವುದು; ಚಾಲ್ತಿಯಲ್ಲಿರುವ ತಾತ್ತ್ವಿಕ ಪರಿಕಲ್ಪನೆಗಳಿಗೆ, ವರ್ಗಗಳಿಗೆ ಸವಾಲನ್ನೆಸೆಯುವುದು; ಯಜಮಾನಿಕೆಯ ಏಕಮೇವ ಭಾಷೆಯನ್ನು ತಿರಸ್ಕರಿಸುತ್ತಾ, ತನ್ನ ದೃಷ್ಟಿಯಲ್ಲಿರುವ ಹೊಸ ಭಾಷೆಯೊಂದನ್ನು ಹುಡುಕುತ್ತಾ ಹೋಗುವುದು; ಇದುವರೆಗೆ ಬೆಳಕಿಗೆ ಬರದ, ಹೂತುಹಾಕಿದ, ಮೌನಗೊಳಿಸಿದ ಜ್ಞಾನಗಳನ್ನು ಪತ್ತೆಹಚ್ಚುವುದು ದಕ್ಷಿಣ. ಇದುವರೆಗೆ ನಾನಾ ಕಾರಣಗಳಿಂದ ನಿಗ್ರಹಿಸಲ್ಪಟ್ಟ ಜ್ಞಾನಶಾಖೆಗಳು ದಂಗೆಯೆದ್ದಿರುವ, ಹೊಸ ರಾಜಕೀಯ ಕಲ್ಪನೆಗಳನ್ನು ಸಂಶೋಧಿಸುವ ಸ್ಥಳ ದಕ್ಷಿಣ. ಅಷ್ಟೇ ಅಲ್ಲ, ವಿವಿಧ ಸಂಸ್ಕೃತಿಗಳ ನಡುವಣ ಸಂವಾದವಾಗಿರುವುದು ದಕ್ಷಿಣ. ಅಲ್ಲದೆ, ಎಲ್ಲರನ್ನೂ ಮುಕ್ತಗೊಳಿಸುವ ಹೊಸ ವಾದವನ್ನು ಅದು ಮುಂದಿಡುತ್ತದೆ. ಎಂದರೆ, ದಕ್ಷಿಣವೇ ಒಂದು ಹೊಸ ರಾಜಕೀಯ ಕಲ್ಪನೆಯಾಗುತ್ತದೆ.

ಈಗ ಹೀಗೊಂದು ದಕ್ಷಿಣದೆಡೆಗಿನ ಪಯಣ ಶುರುವಾಗಲೇಬೇಕಾದ ಅನಿವಾರ್ಯತೆಯನ್ನು ಗ್ರಹಿಸಿ ‘ದಕ್ಷಿಣಾಯನ’ ಚಾಲನೆಗೊಂಡಿದೆ.

ದಕ್ಷಿಣಾಯನ ಹೊರಟವರಲ್ಲಿ ಜಿ. ಎನ್. ದೇವಿ ಕೂಡಾ ಒಬ್ಬರು. ಖ್ಯಾತ ಭಾಷಾಶಾಸ್ತ್ರಜ್ಞರು ಹಾಗೂ ವಿಮರ್ಶಕರಾದ ದೇವಿ ಆದಿವಾಸಿ ಸಂಸ್ಕೃತಿ ಕುರಿತು ವಿಸ್ತೃತ ಅಧ್ಯಯನ ನಡೆಸಿ ಆದಿವಾಸಿ ಅಕಾಡೆಮಿ ಶುರು ಮಾಡಿದವರು. ೨೦೧೦ರ ಭಾಷಾ ಗಣತಿ ನೇತೃತ್ವ ವಹಿಸಿಕೊಂಡವರು. ಆದಿವಾಸಿ ಸಮುದಾಯದ ಕುರಿತು ಮಾಡಿದ ಅವರ ಗಮನಾರ್ಹ ಕೆಲಸಗಳನ್ನು ಪರಿಗಣಿಸಿ ೨೦೧೪ರಲ್ಲಿ ಪದ್ಮಶ್ರೀ ನೀಡಲಾಗಿತ್ತು. ಕಲ್ಬುರ್ಗಿ ಹತ್ಯೆಯ ನಂತರ ಹಾಗೂ ಅದರ ಆಸುಪಾಸು ದೇಶಾದ್ಯಂತ ನಡೆದ ಸೌಹಾರ್ದ ಕದಡುವ ಘಟನೆಗಳನ್ನು ವಿರೋಧಿಸಿ ತಮ್ಮ ಪ್ರಶಸ್ತಿಯನ್ನು ವಾಪಸು ನೀಡಿದರು.

ಈಗ್ಗೆ ಮೂರು ತಿಂಗಳ ಹಿಂದೆ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕದ ಕೆಲವು ಚಿಂತಕರು ದೇವಿ ಅವರ ನೇತೃತ್ವದಲ್ಲಿ ‘ದಕ್ಷಿಣಾಯನ’ ಎಂಬ ತಿರುಗಾಟ ಕೈಗೊಂಡರು. ಅವರೆಲ್ಲ ಪುಣೆ, ಕೊಲ್ಲಾಪುರ ಮತ್ತು ಧಾರವಾಡಗಳಲ್ಲಿ ಹಂತಕರಿಂದ ಕೊಲೆಯಾದ ನರೇಂದ್ರ ಧಾಬೋಲ್ಕರ್, ಗೋವಿಂದ ಪಾನ್ಸರೆ ಮತ್ತು ಎಂ. ಎಂ. ಕಲ್ಬುರ್ಗಿ ಅವರ ಕುಟುಂಬ ವರ್ಗವನ್ನು ಭೇಟಿಯಾದರು. ಆ ಮೂರೂ ಸ್ಥಳಗಳಲ್ಲಿ ಅವರೊಡನೆ ದೊಡ್ಡ ಸಂಖ್ಯೆಯ ಲೇಖಕರು, ಕಲಾವಿದರು, ಹೋರಾಟಗಾರರು ಕೈ ಜೋಡಿಸಿ ಈ ವಿಷಯ ಕುರಿತು ಸಾರ್ವಜನಿಕ ಚರ್ಚೆ ನಡೆಸಿದರು. ಈ ತಿರುಗಾಟದ ಕೊನೆಗೆ ‘ದಕ್ಷಿಣಾಯನ’ ಹೊರಟವರು ಜನವರಿ ೩೦ರಂದು ಗುಜರಾತಿನ ದಂಡಿಯಲ್ಲಿ ಸಮಾವೇಶಗೊಳ್ಳುವುದೆಂದು, ಸರ್ವ ಭಾಷಾ ಸಂವಾದವನ್ನು ಅಲ್ಲಿ ಮುಂದುವರೆಸುವುದೆಂದೂ ನಿರ್ಧರಿಸಿದರು.


(ಜೆಕ್ ವ್ಯಂಗ್ಯ ಚಿತ್ರ)
ಸಂಘಟಕರು ನೀಡಿರುವ ಮಾಹಿತಿಯಂತೆ ದಂಡಿ ಸಮಾವೇಶವು ವೈವಿಧ್ಯತೆ, ಬಹುತ್ವ, ಸಮಗ್ರತೆ ಮತ್ತು ಸದ್ಭಾವನೆಯನ್ನು ಗೌರವಿಸುವ ಸೃಜನಶೀಲ ಮತ್ತು ಕ್ರಿಯಾಶೀಲ ಮನಸುಗಳ ಸ್ವಯಂ ಇಚ್ಛೆಯ ಅಭಿವ್ಯಕ್ತಿ. ಅದು ಯಾವುದೇ ಸಂಸ್ಥೆಯಿಂದ ಧನಸಹಾಯ ಪಡೆದು ಮಾಡುತ್ತಿರುವುದಲ್ಲ. ಇದನ್ನು ಯಾವುದೇ ರಾಜಕೀಯ ಪಕ್ಷ ನಡೆಸುತ್ತಿಲ್ಲ, ಅದು ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ಈ ಕಾಲವನ್ನು, ಮಾನವತ್ವವನ್ನು ಮತ್ತು ನೆಲವನ್ನು ಬಾಧಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಕುರಿತ ವಿಶಾಲ ದೃಷ್ಟಿಕೋನದ ಚರ್ಚೆ ನಡೆಯಲೆನ್ನುವುದೇ ಇದರ ಉದ್ದೇಶ. ಇದು ಪ್ರತಿಭಟನಾ ಸಮಾವೇಶವಲ್ಲ. ಈ ಕಾಲಕ್ಕೆ ಅವಶ್ಯವಾಗಿರುವ ರಚನಾತ್ಮಕ ಕ್ರಿಯೆ ಮತ್ತು ಸಂವಾದವನ್ನು ಸೂಕ್ಷ್ಮ ಮನಸುಗಳ ಜೊತೆ ಏರ್ಪಡಿಸುವುದು ಇದರ ಉದ್ದೇಶ. ಭಾರತದ ಇತ್ತೀಚಿನ ಚರಿತ್ರೆಯಲ್ಲಿ ಅತ್ಯಂತ ಸ್ಫೂರ್ತಿದಾಯದ ಸಂಕೇತವಾದ; ನಾಗರಿಕ ಅಸಹಕಾರ ಎಂಬ ನಿಶ್ಶಸ್ತ್ರ ಪ್ರತಿರೋಧದ ಪ್ರಯೋಗ ನಡೆಸಲ್ಪಟ್ಟ ‘ದಂಡಿ’ ಎಂಬ ಸ್ಥಳವನ್ನು ಅಹಿಂಸಾ ತತ್ವವನ್ನು ನೆಚ್ಚುವವರೆಲ್ಲರ ಸಮಾವೇಶಕ್ಕಾಗಿ ಆಯ್ದುಕೊಳ್ಳಲಾಗಿದೆ.

ರೂಪಕದ ಭಾಷೆಯಲ್ಲಿ ಹೇಳಬೇಕೆಂದರೆ ಅಹಿಂಸೆ-ನಿರ್ಭಯತೆ-ಪ್ರೇಮತತ್ವದಲ್ಲಿ ನಂಬಿಕೆಯಿಟ್ಟಿರುವವರೆಲ್ಲ ಸೇರಿ ಮಾಡುವ ಒಂದು ಸಾಮೂಹಿಕ ಪ್ರಾರ್ಥನೆ ಇದು. ಸಂಘಟಕರಲ್ಲೊಬ್ಬರಾದ ಗಣೇಶ ದೇವಿ ಅವರು ದಕ್ಷಿಣಾಯನ ಕುರಿತು ಹೀಗೆ ಹೇಳುತ್ತಾರೆ:

‘ಆಗಸ ದಟ್ಟ ಕಾರ್ಮೋಡಗಳಿಂದ ಕವಿದ ಕಾಲ ದಕ್ಷಿಣಾಯನ. ಅದು ದೀರ್ಘ ರಾತ್ರಿಗಳನ್ನೂ, ಸಂಕ್ಷಿಪ್ತ ದಿನಗಳನ್ನೂ ಹೊಂದಿದ ಕಾಲ. ಅದು ದಕ್ಷಿಣದೆಡೆಗಿನ ನಡಿಗೆಯನ್ನು ಸೂಚಿಸುತ್ತದೆ. ನಮ್ಮ ಕಾಲದಲ್ಲಿ ದಕ್ಷಿಣದ ದಾರಿ ಎಂದರೆ ಸುಲಭದ ಆರೋಹಣದ ದಾರಿಗಳ ಬಿಟ್ಟು ದೇಶಕಾಲಗಳಿಗೆ ಅನ್ವಯವಾಗುವ ಹೊಸ ಮಾರ್ಗಗಳನ್ನು ಶೋಧಿಸುವುದು.

ದಕ್ಷಿಣಾಯನ ಸಿನಿಮಾ, ರಂಗಭೂಮಿ, ಸಾಹಿತ್ಯ, ಕಲೆಗಳ ನಡುವೆ ಸೇತುವೆಯಾಗಬೇಕೆಂಬ ಆಶಯದಿಂದ ಶುರುವಾದ ಚಳುವಳಿ. ಪ್ರತಿರೋಧಕ್ಕಾಗಿ ನಿರ್ಭಯ ಅಭಿವ್ಯಕ್ತಿ ಹೊಂದಲು ಇದು ಪ್ರೇರೇಪಿಸುತ್ತದೆ. ಮನುಷ್ಯ ಘನತೆ ಹಾಗೂ ಬೌದ್ಧಿಕ ಪಾವಿತ್ರ್ಯವನ್ನುಳಿಸುವ ಸಲುವಾಗಿ ಸೂಕ್ಷ್ಮ ಮನಸುಗಳಿಗೆ ಕೊಟ್ಟ ಕರೆ ಇದು.

ಸಹಿಷ್ಣುತೆ ಮತ್ತು ಸಂವಾದವನ್ನು ಒಪ್ಪುವ ಕ್ರಿಯಾಶೀಲ ಅಭಿವ್ಯಕ್ತಿಗಾಗಿನ ಹೊಸ ಹುಡುಕಾಟ ದಕ್ಷಿಣಾಯನ. ಸಮಾನತೆ, ನ್ಯಾಯಪರತೆ ಹಾಗೂ ಭಿನ್ನತೆ ಕುರಿತ ಗೌರವ ಹೊಂದಿರುವ ಪ್ರಗತಿಪರ ಚಿಂತನೆಗಳನ್ನು ಕಾಪಿಟ್ಟುಕೊಳ್ಳುವ ಪ್ರಯತ್ನ ಇದು.

ಜಾತಿ, ವರ್ಗ, ಕುಲ, ಲಿಂಗ, ಭಾಷೆ, ಸ್ವರೂಪ ಎಂಬಿತ್ಯಾದಿ ಅಸ್ಮಿತೆಗಳಾಚೆ ಚಲಿಸುವ; ಗಡಿಗೆರೆಗಳಾಚೆ ಕಲ್ಪನಾಶಕ್ತಿಯನ್ನು ವಿಸ್ತರಿಸುವ; ಸಿದ್ಧಾಂತ, ಪಕ್ಷಪಾತಿ ಸಂಸ್ಥೆಗಳು, ಸಂಘಟನೆ, ಚಳುವಳಿಗಳಿಂದ ಮನಸನ್ನು ಮುಕ್ತಗೊಳಿಸುವ ಧ್ವನಿಯ ಹುಡುಕಾಟ ಇದು.

ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎಂದು, ಎಲ್ಲರೂ ಪವಿತ್ರ ಎಂದು ಈ ಚಳುವಳಿ ಪ್ರತಿಪಾದಿಸುತ್ತದೆ.’

ಇದನ್ನು ಒಂದು ಸಮಾವೇಶಕ್ಕಷ್ಟೆ ಸೀಮಿತಗೊಳಿಸಬಾರದು ಎನ್ನುವುದು ಅವರ ಅಭಿಪ್ರಾಯ. ದಂಡಿ ಕಾರ್ಯಕ್ರಮದ ನಂತರವೂ ‘ಸರ್ವ ಭಾಷಾ ಸಂವಾದ’ವು ಚಿಂತನೆ, ಆತ್ಮನಿರೀಕ್ಷಣೆ ಹಾಗೂ ಚರ್ಚೆಯನ್ನು ಅನೇಕ ರಾಜ್ಯಗಳ ನಗರ, ಪಟ್ಟಣಗಳಲ್ಲಿ ಮಾರ್ಚ್ ೧೨ರಿಂದ ಏಪ್ರಿಲ್ ೬ರವರೆಗೆ - ಅದು ಗಾಂಧಿ ಕೈಗೊಂಡ ದಂಡಿ ಯಾತ್ರೆಯ ಅವಧಿಯ ದಿನಗಳು - ಹಮ್ಮಿಕೊಳ್ಳಬಯಸುತ್ತದೆ. ಆ ಮೂಲಕ ಸೃಜನಶೀಲ ಅಭಿವ್ಯಕ್ತಿಗೆ ಒದಗಿರುವ ಆತಂಕಗಳ ಅರ್ಥಮಾಡಿಕೊಳ್ಳುತ್ತ ಸಮಗ್ರತೆಯ, ಬಂಧುತ್ವದ ಬೆಸುಗೆಗಳ ಗಟ್ಟಿಗೊಳಿಸಬಯಸುತ್ತದೆ.

ಕರ್ನಾಟಕದಲ್ಲಿಯೂ ಇಂಥ ಸಂಚಲನ ಸಂಭವಿಸುತ್ತಿರುವ ಕಾಲ ಇದಾಗಿದೆ. ಜನವರಿ ೩೦ರಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ‘ಸಹಬಾಳ್ವೆಯ ಸಾಗರ’ ಸಮಾವೇಶ ಏರ್ಪಡಿಸುತ್ತಿದೆ. ಸಂಗಾತಿಗಳೇ, ನೀವು ಒಂದೋ ವಿವಿಧ ಧರ್ಮ, ಜಾತಿ, ಭಾಷೆ, ಸಿದ್ಧಾಂತಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶವಾಗಿರುವ ‘ಸಹಬಾಳ್ವೆಯ ಸಾಗರ’ದತ್ತ ಮಂಗಳೂರಿಗೆ ಚಲಿಸಿ. ಅಥವಾ ಸಾಗರ ತಡಿಯ ದಂಡಿಗೆ ಸರ್ವ ಭಾಷಾ ಸಂವಾದಕ್ಕಾದರೂ ಬನ್ನಿ.

ಒಟ್ಟಾರೆ, ಇದು ‘ದಕ್ಷಿಣಾಯನ ಕಾಲ’, ಮರೆಯದಿರಿ..



Tuesday 12 January 2016

‘ಆರನೇ ಹೆಂಡತಿ..’ ತೆಹಮಿನಾ ದುರಾನಿ




‘ಎಷ್ಟೋ ದೇಶದ ಎಷ್ಟೋ ಮಹಿಳೆಯರು ಮೌನದ ಭಾಷೆಯನ್ನೇ ಆಡುತ್ತಾರೆ’ ಎಂದು ಹಿಲರಿ ಕ್ಲಿಂಟನ್ ತನ್ನ ಆತ್ಮಕತೆಯ ಮೊದಲಿಗೆ ಅನಸೂಯಾ ಸೇನ್ ಗುಪ್ತರ ಕವನವನ್ನು ಸುಮ್ಮನೆ ಉಲ್ಲೇಖಿಸಿಲ್ಲ. ತಾವು ಅಸಾಧಾರಣ ಗಂಡಸರೆಂದುಕೊಂಡ ಕೆಲವರ ಅಸಾಧಾರಣ ನಡವಳಿಕೆಗೆ ಅವರ ಹೆಂಡತಿಯರು ಅನುಭವಿಸಿದ ನೋವೂ ಅಸಾಧಾರಣವಾಗಿದೆ. ಮುಕ್ಕಾಲುಪಾಲು ಪತ್ನಿಯರು ಅದು ತಮ್ಮ ವಿಧಿಯೆಂದು ಸುಮ್ಮನಾದರೆ ಪಾಕಿಸ್ತಾನಿ ಕವಿ ಸಾರಾ ಶಗುಫ್ತಾನಂಥವರು ಮತಿಭ್ರಮಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲ್ಲೋ ಕೆಲವರು ಹೊಸ ಬದುಕು ದಕ್ಕಿಸಿಕೊಂಡಿದ್ದಾರೆ. ಒಟ್ಟಾರೆ ವೈವಾಹಿಕ ಬದುಕಿನ ಅನುಭವಿಸಲಾಗದ, ಆಡಲಾಗದ ಸಂಕಟಕ್ಕೆ ಅಕ್ಷರ ರೂಪ ಒದಗಿಸಿರುವ ಮಹಿಳೆಯರು ಕಡಿಮೆಯೇ. ಆದರೂ ತೆಹಮಿನಾ ದುರ್ರಾನಿ ಎಂಬ ಪಾಕಿಸ್ತಾನದ ‘ಅತಿ ಗಣ್ಯ’ ಮನೆತನದ ಹೆಣ್ಣುಮಗಳೊಬ್ಬಳು ಮೌನವಾಗಿ ಅನುಭವಿಸಿದ ಅಪರಂಪಾರ ಕಷ್ಟಗಳ, ಅವಮಾನದ, ಕೆಲವೊಮ್ಮೆ ಸ್ವಯಂಕೇಂದ್ರಿತ ಎನಿಸುವ ನಡವಳಿಕೆಗಳ ಬದುಕನ್ನು ‘ಮೈ ಫ್ಯೂಡಲ್ ಲಾರ್ಡ್’ ಎಂಬ ಆತ್ಮಚರಿತ್ರೆಯಲ್ಲಿ ದಿಟ್ಟವಾಗಿ ಬರೆದುಕೊಂಡಿದ್ದಾಳೆ.

ನಿರಂತರ ಗಾಯಗೊಳುವುದು, ನಿರಂತರ ಮುಲಾಮು ಹುಡುಕುತ್ತ ಮಾಯಿಸುವ ಮಾಯಕದ ಗೋಂದಿಗಾಗಿ ಅರಸುವುದು, ಮತ್ತೆ ಗಾಯಗೊಳ್ಳುವುದು, ಮತ್ತೆ ಮಾಯುವುದು; ಕೊನೆಗಂತೂ ಗಾಯಗೊಳಿಸುತ್ತಿದ್ದ ಚೂಪಿನಿಂದ ದೂರ ಸರಿದು ಮಾಯಲೆತ್ನಿಸುವುದು - ಇದು ೫೦೦ಕ್ಕೂ ಮೀರಿದ ಪುಟಗಳಲ್ಲಿ ಹರಡಿಕೊಂಡ ಮೈ ಫ್ಯೂಡಲ್ ಲಾರ್ಡ್ ಪುಸ್ತಕದ ತಿರುಳು. ‘ಗಂಡಸಿನ ಹೊರತಾಗಿ ಅಧಿಕಾರ-ಅಂತಸ್ತು-ಹಕ್ಕು ಯಾವುದೂ ನಿನಗೆ ಸಿಗುವುದಿಲ್ಲ’ವೆನ್ನುವ ಸಮಾಜದಲ್ಲಿ ಬದುಕಿ ಕೊನೆಗೇ ತನ್ನದೇ ಅಸ್ಮಿತೆಯನ್ನು ಬರಹಗಾರ್ತಿಯಾಗಿ ರೂಪಿಸಿಕೊಂಡವಳ ಆತ್ಮಚರಿತ್ರೆ ಅದು. ಆರ್. ಕೆ. ಹುಡಗಿಯವರು ಶ್ರಮವಹಿಸಿ ಮಾಡಿರುವ ಆ ಪುಸ್ತಕದ ಕನ್ನಡಾನುವಾದ ‘ಆರನೆಯ ಹೆಂಡತಿಯ ಆತ್ಮಕತೆ’ ಓದುತ್ತ ಈ ಹೆಣ್ಣುಮಗಳ ಕಷ್ಟ ಈಗ ಮುಗಿದೀತು; ಇನ್ನೊಂದು ಪುಟಕ್ಕೆ ಮುಗಿದೀತು ಎಂದುಕೊಂಡರೆ ಇಲ್ಲ, ಪುಸ್ತಕ ಕೊನೆಯಾಗುತ್ತ ಬಂದರೂ ದಾರುಣ ಸಂಕಟಗಳು ಕೊನೆಯಾಗುವ ಲಕ್ಷಣಗಳೇ ಇಲ್ಲ. ಓದುತ್ತ ಹೋದಂತೆ ಒಂದು ತೆರನ ಅಸ್ವಸ್ಥತೆ ಓದುವವರನ್ನೂ ಅಮರಿಕೊಂಡು ಉಸಿರುಗಟ್ಟಿದಂತಾಗುತ್ತದೆ.

ಜಗತ್ತಿನ ೩೯ ಭಾಷೆಗಳಿಗೆ ಅನುವಾದಗೊಂಡಿರುವ ಈ ಪುಸ್ತಕ ಪಾಕಿಸ್ತಾನದ ಅತಿ ಗಣ್ಯ ಸಮಾಜದೊಳಗಣ ಅಮಾನವೀಯತೆ, ಹುಸಿ ಧರ್ಮಪರತೆ, ಗುಪ್ತ ದುರ್ವ್ಯವಹಾರಗಳನ್ನು ಎಳೆಎಳೆಯಾಗಿ, ಹೆಣ್ಣೊಬ್ಬಳ ನಿವೇದನೆಯಾಗಿ ತೆರೆದಿಡುತ್ತದೆ. ಇಸ್ಲಾಮಿನಲ್ಲಿ ಹೆಣ್ಣಿಗೆ ಕೊಟ್ಟ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಅವಳನ್ನು ಬುರ್ಖಾದೊಳಗೆ, ಮನೆಯೊಳಗೆ ಬಂಧಿಸಿ, ಅಲಂಕಾರಿಕ ಹೆರುವ ಮಶೀನುಗಳಾಗಿಸಿರುವ ಸಮಾಜ ಹೇಗೆ ಇಸ್ಲಾಂ ಧರ್ಮವನ್ನು, ಪ್ರವಾದಿಯವರ ಹೇಳಿಕೆಗಳನ್ನು ಭ್ರಷ್ಟಗೊಳಿಸಿದೆ ಎಂದು ತೆಹಮಿನಾ ಹೇಳಿಕೊಳ್ಳುತ್ತ ಸಾಗಿದ್ದಾರೆ.



ಪಾಕಿಸ್ತಾನ ಏರ್‌ಲೈನ್ಸಿನ ಎಂಡಿ ಆಗಿದ್ದ, ಬ್ಯಾಂಕ್ ಆಫ್ ಪಾಕಿಸ್ತಾನದ ಡೈರೆಕ್ಟರ್ ಆಗಿದ್ದ ಎಸ್. ಯು. ದುರಾನಿ ಎಂಬವರ ಅತಿಗಣ್ಯ ಕುಟುಂಬದಲ್ಲಿ ಉಳಿದ ಮಕ್ಕಳಿಗಿಂತ ಕೊಂಚ ಕಪ್ಪಗೆ, ಕೊಂಚ ಕಡಿಮೆ ರೂಪಸಿಯಾಗಿ ಹುಟ್ಟಿದ ಹುಡುಗಿ ತೆಹಮಿನಾ. ದೇಶವಿದೇಶಗಳಲ್ಲಿ ಬಂಧುಬಾಂಧವರಿದ್ದ ಅವಳು ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಲಿತ, ಇಂಗ್ಲಿಷ್ ಬಲ್ಲ ಹುಡುಗಿ. ಅವಳ ತಾಯಿಯೂ ಅಂತಹುದೆ ಒಂದು ಗಣ್ಯ ಕುಟುಂಬದಿಂದ ಬಂದ ದರ್ಪದ ಹೆಣ್ಣುಮಗಳು. ತಾಯಿಯ ಅಪ್ಪಚಿಕ್ಕಪ್ಪಂದಿರೆಲ್ಲ ನೈಟ್‌ಹುಡ್ ಪಡೆದ ಅತಿ ಶ್ರೀಮಂತ, ಸುಶಿಕ್ಷಿತ ವ್ಯಕ್ತಿಗಳು. ಕುಲೀನ ಜಮೀನ್ದಾರಿ ಹಿನ್ನೆಲೆಯ ಕುಟುಂಬ ತುಂಬ ಸಂಪ್ರದಾಯವಾದಿಯೂ ಆಗಿತ್ತು.

ಬಾಲ್ಯದಲ್ಲಿ ತಾಯಿಯ ಪ್ರೀತಿ, ಮಾರ್ದವತೆಗಿಂತ ಹೆಚ್ಚಾಗಿ ಕೀಳರಿಮೆ ಹುಟ್ಟಿಸುವ ದಬ್ಬಾಳಿಕೆ-ದರ್ಪದ ನಡವಳಿಕೆಯನ್ನೇ ಅನುಭವಿಸಿದ ತೆಹಮಿನಾ ಒಳಗೊಳಗೇ ಬಂಡಾಯ ಹತ್ತಿಕ್ಕಿಕೊಂಡಳು. ಆದರೆ ಕೊನೆಗೆ ಅಮ್ಮನ ಇಚ್ಛೆಗೆ ವಿರುದ್ಧವಾಗಿ ಅನೀಸನೆಂಬ ಕಡಿಮೆ ಅಂತಸ್ತಿನ, ‘ಅತಿ ಸಾಮಾನ್ಯ’ ಸರ್ಕಾರಿ ನೌಕರಸ್ಥ ವರನನ್ನು ಹದಿವಯದಲ್ಲೇ ಪ್ರೀತಿಸಿ, ಮದುವೆಯಾದಳು. ಅವನಿಂದ ಮಗಳ ಪಡೆದು ವಿವಾಹ, ತಾಯ್ತನಗಳಿನ್ನೂ ಹಸಿಹಸಿಯಾಗಿರುವಾಗಲೇ ಅನಿರೀಕ್ಷಿತವಾಗಿ ಮುಸ್ತಾಫಾ ಖಾರ್ ಎಂಬ ಹೈಪ್ರೊಫೈಲ್ ರಾಜಕಾರಣಿ ಡಿನ್ನರ್ ಪಾರ್ಟಿಯೊಂದರಲ್ಲಿ ಭೇಟಿಯಾಗುತ್ತಾನೆ.

ಮುಸ್ತಾಫಾ ಖಾರ್ ಭೇಟಿ ಅವಳ ಬದುಕಿನ ತಿರುವನ್ನೇ ಬದಲಿಸುತ್ತದೆ.

ತರುಣಿಯರ ಬೇಟೆಯಲ್ಲಿ ನಿಷ್ಣಾತನಾಗಿದ್ದ ಗ್ರಾಮೀಣ ಪಂಜಾಬಿನ ತರುಣ ರಾಜಕಾರಣಿ ಗುಲಾಂ ಮುಸ್ತಾಫಾ ಖಾರ್ ಪ್ರಧಾನಿ ಭುಟ್ಟೋನ ಬಲಗೈ ಬಂಟ, ಆಪ್ತ ಶಿಷ್ಯ. ಅಲ್ಲದೆ ಆ ಕಿರಿಯ ವಯಸ್ಸಿನಲ್ಲೇ ಪಂಜಾಬಿನ ಗವರ್ನರನಾಗಿರುತ್ತಾನೆ. ತೆಹಮಿನಾಳ ಪತಿ ಅನೀಸ್ ಅದೇ ಸರ್ಕಾರದ ಉದ್ಯೋಗಿ. ಗವರ್ನರ್ ತನ್ನ ಅಧಿಕಾರ ಸ್ಥಾನದ ಔಚಿತ್ಯ ಮರೆತು ಬಹು ನಿಧಾನ ಗಣ್ಯಮನೆತನದ ಈ ಹೆಣ್ಣಿನ ಮನವೊಲಿಸಿದರೆ; ವಿವಾಹಿತೆಯಾಗಿದ್ದ ತೆಹಮಿನಾ ಅವನ ಪ್ರಭಾವಳಿ, ಮಾತುಗಾರಿಕೆಯ ಮೋಹಕ್ಕೆ ಸಮಾಜದ ಗೆರೆಗಳ ದಾಟುತ್ತಾಳೆ. ಬಹುಜನಪ್ರಿಯ ಯುವ ರಾಜಕಾರಣಿಯೊಬ್ಬ ತಾನು ನಿನ್ನ ಪಾದಸೇವಕ ಎಂದು ಪಾದದಡಿ ಕುಳಿತು ಬಯಸುವಾಗ ಅವಳ ಒಳಗಣ್ಣು ಕಳೆದುಹೋಗಿ ಏನು ಮಾಡುತ್ತಿರುವೆನೆಂದು ಕ್ಷಣಮಾತ್ರ ಯೋಚಿಸದೆ ಮುಂದೆಮುಂದೆ ನಡೆದೇ ಬಿಡುತ್ತಾಳೆ.

ಅವನ ಮೊದಲ ಪ್ರೇಯಸಿಯರು, ಹೆಂಡತಿಯರು, ಹಿತೈಷಿಗಳು ನೀಡಿದ ಎಚ್ಚರಿಕೆಯನ್ನು ಮುಗ್ಧಳಾಗಿ ಮುಸ್ತಾಫಾ ಬಳಿಯೇ ಆತಂಕದಿಂದ ಹಂಚಿಕೊಳ್ಳುತ್ತಾಳೆ. ಅವನಾದರೋ ಹಾರಿಕೆಯ ಉತ್ತರ ಕೊಡುತ್ತ ಅವಳ ಮೇಲಿನ ಹೊಟ್ಟೆಯುರಿಗೆ ಬೇರೆಯವರು ಹೇಳುವುದನ್ನು ನಂಬಬಾರದೆಂದು ಮನವೊಲಿಸುತ್ತಾನೆ. ಅಮಾಯಕನಾದ ಅನೀಸನನ್ನು, ಎಳೆಯ ಮಗು ತಾನ್ಯಾಳನ್ನು ಬಿಟ್ಟು ಮುಸ್ತಾಫಾನ ಪ್ರೇಮವನ್ನೇ ನಂಬಿ ತೆಹಮಿನಾ ಅವನ ಹಿಂದೆ ನಡೆದಾಗ ತನ್ನದು ಅವಿವೇಕದ, ವಿಶ್ವಾಸ ದ್ರೋಹದ, ಸ್ವಾರ್ಥದ ನಡೆಯಲ್ಲವೆ ಎಂದು ಒಮ್ಮೊಮ್ಮೆ ಅವಳಿಗೂ ಶಂಕೆಯಾಗುತ್ತದೆ. ಆದರೆ ಬಗೆಗಣ್ಣು ಎಚ್ಚರಿಸುವ ಹೊತ್ತಿಗೆ ಹಿಂತಿರುಗಿ ಬರುವುದೇ ಅಸಾಧ್ಯವೆಂಬಷ್ಟು ಮೋಹವಶಳಾಗಿರುತ್ತಾಳೆ.


ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸಲು ಅನೀಸನಿಗೆ ತಲಾಖ್ ನೀಡಿ ಮುಸ್ತಾಫಾನನ್ನು ಮದುವೆಯಾಗುತ್ತಾಳೆ. ಆದರೆ ಕೆಲವೇ ದಿನಗಳಲ್ಲಿ ಅವನ ಪ್ರೇಮ ಏರುತ್ತಿರುವ ಪಾಕಿಸ್ತಾನದ ರಾಜಕೀಯ ಕಾವಿಗೆ ಕರಗತೊಡಗುತ್ತದೆ. ಅವನ ಪೈಶಾಚಿಕ ನಿಜ ಸ್ವರೂಪ ಬಯಲಾಗುತ್ತದೆ. ಅತೀವ ಮುಂಗೋಪ, ಶೀಘ್ರಕೋಪ, ಅನುಮಾನ, ಕ್ರೌರ್ಯಗಳ ಮುಸ್ತಾಫಾ ಹೆಂಡತಿಯನ್ನು ಬಯಸುವುದು ತುದಿಗಾಲಲ್ಲಿ ತನ್ನ ಎಲ್ಲ ತರಹದ ಸೇವೆಗೆ ನಿಂತ ಒಬ್ಬ ಗುಲಾಮಳಾಗಿಯೇ ಹೊರತು ಮತ್ತೇನಕ್ಕೂ ಅಲ್ಲ. ಹಾಗೆ ಅವನ ತೆಕ್ಕೆಗೆ ಬಂದುಹೋದ ಅನೇಕ ಹೆಣ್ಣುಗಳಲ್ಲಿ ತಾನು ಆರನೆಯ ಹೆಂಡತಿ ಎನ್ನುವುದು ಕೆಲವೇ ಸಮಯದಲ್ಲಿ ಅವಳಿಗೆ ತಿಳಿಯುತ್ತದೆ. ಹೆಂಡತಿ, ಮಕ್ಕಳು ಅವನ ಅಹಮನ್ನು ಮೆರೆಸುವ ಶೋಪೀಸುಗಳು; ಅದರಾಚೆ ಅವರಿಗೆ ಅಸ್ತಿತ್ವವಿಲ್ಲ ಎಂದು ಅರಿವಾಗುವುದರಲ್ಲಿ ಸಮಯ ಮೀರಿರುತ್ತದೆ. ಅವನ ಸಲುವಾಗಿ ಮೊದಲ ಪತಿ, ಮಗಳು, ತವರಿನವರು ಎಲ್ಲರನ್ನು ಬಿಟ್ಟುಬಂದಿರುತ್ತಾಳೆ. ಏನಾದರಾಗಲಿ ತನ್ನ ಮೂರ್ಖತನ ಸಾಬೀತಾಗಬಾರದು; ಮರ್ಯಾದೆ ಕಳೆದದ್ದು ಹೊರತೋರಗೊಡಬಾರದು ಎಂದು ನಿರ್ಧರಿಸಿ ಎಲ್ಲವನ್ನು ಸಹಿಸತೊಡಗುತ್ತಾಳೆ.

ಅದೇವೇಳೆ ಸೇನಾ ಕ್ಷಿಪ್ರಕ್ರಾಂತಿ ನಡೆದು ಪ್ರಧಾನಿ ಭುಟ್ಟೊ ಪದಚ್ಯುತಗೊಂಡು ಇದ್ದಕ್ಕಿದ್ದಂತೆ ಮುಸ್ತಾಫಾ ಖಾರ್ ಕುಟುಂಬ ಸಮೇತ ಬ್ರಿಟನ್ನಿಗೆ ಪರಾರಿಯಾಗಬೇಕಾಗುತ್ತದೆ. ಮುಸ್ತಾಫಾನ ಜೊತೆಗೇ ದೇಶಬಿಟ್ಟು ತಾನೂ ಹೊರಡುತ್ತಾಳೆ. ರಾಜಕೀಯ ಅಸ್ಥಿರತೆಯ, ಅಭದ್ರತೆಯ ಅವರ ಇಂಗ್ಲೆಂಡ್ ವಾಸದಲ್ಲಿ ಪಾಕಿಸ್ತಾನದ ರಾಜಕೀಯ ಆಗುಹೋಗುಗಳ ಬಿರುಸಿನ ಪ್ರಭಾವ ಕಾಣುತ್ತಿರುತ್ತದೆ. ಆ ಆತಂಕಗಳಿಂದ ಮತ್ತಷ್ಟು ಪಶುವಿನಂತಾಗುವ ಮುಸ್ತಾಫಾನಿಂದ ತೆಹಮಿನಾ ಭೀಕರ ಹಿಂಸೆ ಅನುಭವಿಸುತ್ತಾಳೆ. ಮುಖಮೋರೆ ನೋಡದೆ ಪ್ರಾಣಿಗಳಿಗೆ ಬಡಿದಂತೆ ಬಡಿಯುವುದು, ಗುದ್ದುವುದು, ಗೋಡೆಗೆ ಜಪ್ಪುವುದು, ಬೆತ್ತಲಾಗಿಸಿ ನಿಲಿಸಿ ತಾನು ಹೇಳಿದಂತೆ ಫೋನಿನಲ್ಲಿ ಹೇಳಲು ಒತ್ತಾಯಿಸುವುದು, ಬೂಟುಕಾಲಲ್ಲಿ ತುಳಿದು ಝಾಡಿಸುವುದು, ಸಿಕ್ಕ ವಸ್ತುವಿನಿಂದ ತುಟಿಮುಖಗಳು ಗಾಯಗೊಂಡು ರಕ್ತ ಹರಿಸುವವರೆಗೆ ಹೊಡೆಯುವುದು, ಯಾರಿಗಾದರೂ ಹೇಳಿದರೆ ಅಥವಾ ಅವನ ಬಿಟ್ಟು ಹೋಗಲೆತ್ನಿಸಿದರೆ ಮಕ್ಕಳ ಪ್ರಾಣ ತೆಗೆಯುತ್ತೇನೆಂದು ಬೆದರಿಸುವುದು; ಬಸುರಿ-ಬಾಣಂತಿಯಾದಾಗ ಅವನ ಆಜ್ಞೆಯಾದಷ್ಟು ಪ್ರಮಾಣದ ಹಾಲುಮೊಟ್ಟೆಮಾಂಸ ತಿನ್ನಲೇಬೇಕೆಂದು ಹೊಡೆಯುತ್ತ ಒತ್ತಾಯಿಸುವುದು - ಒಂದೇ ಎರಡೇ ನೀವು ಊಹಿಸಿಯೇ ಇರದ ಭೀಕರ ದುಷ್ಟತನ, ದೌರ್ಜನ್ಯಗಳನ್ನು ದಿನನಿತ್ಯ, ಪ್ರತಿ ರಾತ್ರಿ ಅನುಭವಿಸುತ್ತಾಳೆ. ಒಂದಾದ ಮೇಲೊಂದು ಅವನ ಮಕ್ಕಳ ಹೆರುತ್ತಾಳೆ. ಎಳೆಯ ಮಕ್ಕಳ ಹಿಂಸಿಸುವ ಅವನ ಪಾಶವೀ ಕೃತ್ಯಕ್ಕೆ, ಎಲ್ಲಿ ಹೋದರೂ ಒದ್ದು ವಾಪಸು ಎಳೆತರುವ ಅವನ ಧಾಡಸೀತನಕ್ಕೆ, ವಿಶ್ವದ ತುಂಬ ಸಂಪರ್ಕ ಜಾಲ ಇರಿಸಿಕೊಂಡು ತಿರುಗುವ ಅವನ ಪ್ರಭಾವಕ್ಕೆ ಅವಳ ಮುಂದೆ ಬೇರೆ ಆಯ್ಕೆಗಳೇ ಇಲ್ಲವಾಗುತ್ತವೆ. ನಿರ್ವಿಣ್ಣಳಾಗಿ ಅವನ ಗುಲಾಮಳಂತೆ ಬದುಕು ಸವೆಸುತ್ತಾಳೆ. ಮನೆಯ ಆಳುಗಳ, ದಾಯಿ-ಡ್ರೈವರ್-ಹೆಲ್ಪರನ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಅವರಾರೂ ಅವಳ ಸಹಾಯಕ್ಕೆ ಬರಲಾರರು. ಅವರು ಮುಸ್ತಾಫಾನ ಗೂಢಚಾರರಾಗಿ ಕೆಲಸ ಮಾಡಬೇಕು, ತುಟಿಬಿಚ್ಚದೆ ಗುಲಾಮರಂತಿರಬೇಕು. ಇಲ್ಲದಿದ್ದರೆ ಅವರ ಹೆಣ ಅಥವಾ ಊರುಗಳಲ್ಲಿ ಅವರ ಸಂಬಂಧಿಗಳ ಹೆಣ ಬೀಳುವುದು ಖಚಿತ.

ಆದರೆ ಮನೆಯಲ್ಲಿ ಏನೇ ರಂಪಾಟವಾಗಲಿ, ಹೊರ ಸಮಾಜಕ್ಕೆ; ಪ್ರತಿನಿತ್ಯದ ಡಿನ್ನರ್ ಪಾರ್ಟಿಗಳಿಗೆ ಇದ್ಯಾವುದೂ ತೋರದಂತೆ ಬೇಗಂ ಮುಸ್ತಫಾ ಖಾರ್ ಅಲಂಕರಿಸಿಕೊಂಡು ನಲಿಯುವ ಪೋಸು ಕೊಟ್ಟು ಎಲ್ಲರನ್ನು ಆದರಿಸಬೇಕು. ಬಿಸಿಬಿಸಿ ರಾಜಕೀಯದ ಚರ್ಚೆ, ನಡೆಗಳಲ್ಲಿ ಅವನ ಸಹವರ್ತಿಯಾಗಿ ಮಾತು ಮುಂದುವರೆಸಬೇಕು; ಮರೆತ ಮಾತು ಎತ್ತಿ ಕೊಡಬೇಕು. ಅನುಕೂಲೆಯಾಗಿ ಆಜ್ಞಾನುವರ್ತಿಯಾಗಿರಬೇಕು. ಒಂದಿನಿತು ಆಡುವ ಮಾತು ತಡವರಿಸಿದರೂ, ಸುಮ್ಮನಿದ್ದರೂ, ಯಾರೊಡನೆಯೊ ಒಂದು ಪದ ಹೆಚ್ಚು ಮಾತನಾಡಿದರೂ ಡಿನ್ನರ್ ಮುಗಿದು ಮನೆಗೆ ಬಂದ ಮೇಲೆ ನರಕ ಎದುರಾಗುತ್ತದೆ.

ಅವಳ ತವರಿನವರು ಬ್ರಿಟನ್ನಿನಲ್ಲಿದ್ದರೂ, ಅವರ ಮನೆಯಲ್ಲೇ ತೆಹಮಿನಾ ಕುಟುಂಬ ವಾಸ್ತವ್ಯ ಹೂಡಿದ್ದರೂ ಏನನ್ನೂ ಹೇಳಿಕೊಳ್ಳುವಂತಿಲ್ಲ, ಹಂಚಿಕೊಳ್ಳುವಂತಿಲ್ಲ. ಅವರೊಡನೆ ಮಾತನಾಡಲು, ಹೊರಹೋಗಲು ಮುಸ್ತಾಫಾನ ಅನುಮತಿ ಪಡೆಯಲೇಬೇಕು. ಅವನ ಎಲ್ಲ ಕಟ್ಟಪ್ಪಣೆ ಪಾಲಿಸುತ್ತ, ದೈಹಿಕ ದೌರ್ಜನ್ಯವನ್ನು ಹಲ್ಲುಕಚ್ಚಿ ಸಹಿಸುತ್ತ ಎಂದಿಗೆ ಈ ಬದುಕು ಕೊನೆಯಾಗಿ ನೆಮ್ಮದಿ ಬಂದೀತೋ ಎಂದು ಪ್ರಾರ್ಥಿಸುತ್ತ ಇರುವಾಗಲೇ ಮುಸ್ತಾಫಾನ ಹೆಣ್ಣು ಖಯಾಲಿ ಮಿತಿಮೀರುತ್ತದೆ. ತೆಹಮಿನಾಳ ಹದಿಮೂರು ವರ್ಷದ ಸುಂದರ ತಂಗಿ ಆದಿಲಾಳನ್ನು ಮರುಳುಮಾಡಿ ಲೈಂಗಿಕವಾಗಿ ಬಳಸಿಕೊಳ್ಳತೊಡಗುತ್ತಾನೆ. ಆದಿಲಾಳನ್ನು ಮದುವೆಯಾಗಲು ತೆಹಮಿನಾಗೆ ತಲಾಖ್ ಕೊಡಲು ತುದಿಗಾಲಲ್ಲಿ ನಿಂತ ಮುಸ್ತಾಫಾ ಆಡುವ ಸುಳ್ಳು ನಾಟಕಗಳು, ತಂತ್ರಪ್ರತಿತಂತ್ರಗಳಿಂದ ರೋಸತ್ತ ತೆಹಮಿನಾ ಆತ್ಮಹತ್ಯೆ ಮಾಡಿಕೊಳ್ಳಲು, ಅವನ ಬಿಟ್ಟುಹೋಗಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ತವರಿನವರೂ ಮುಸ್ತಾಫಾನ ದುರುಳತನಕ್ಕೆ ಅವಳನ್ನು ದೂರಮಾಡಿದಾಗ ಅವನ ಕ್ರೌರ್ಯ ಮತ್ತಷ್ಟು ಹೆಚ್ಚುತ್ತದೆ. ಅವನಿಂದ ಬಿಡುಗಡೆಯಾಗಲು ನಡೆಸುವ ಎಲ್ಲ ಪ್ರಯತ್ನಗಳು ಮಹಾ ಕಪಟ ತಂತ್ರಗಾರನಾದ ಅವನ ಸೌಜನ್ಯ-ಕಣ್ಣೀರು-ಪಶ್ಚಾತ್ತಾಪದ ನಾಟಕದಲ್ಲಿಯೋ, ಮಕ್ಕಳ ಅಪಹರಣದಲ್ಲಿಯೋ ಅಥವಾ ಅವಳಿಗೇ ತಲೆ ಸರಿಇಲ್ಲ ಎಂದು ಕಟ್ಟಿದ ಹುಚ್ಚಿ ಪಟ್ಟದೊಡನೆಯೋ ಕೊನೆಗೊಂಡು ಅವಳ ವ್ಯಕ್ತಿತ್ವ ದಿನದಿನಕ್ಕೆ ಛಿದ್ರಗೊಳ್ಳುತ್ತದೆ. ಅತಿ ದೀನ, ಅತಿ ಅಸಹಾಯಕ, ಅತಿ ಅವಮಾನದ ಪರಿಸ್ಥಿತಿಯಲ್ಲಿ ಅವನ ವಿನಾ ಮತ್ಯಾವ ನೆಲೆಯೂ ತನಗಿಲ್ಲವೆಂದು ಮತ್ತೆಮತ್ತೆ ಮನದಟ್ಟಾಗುತ್ತ ದೇಶಭ್ರಷ್ಟತೆಯ ಬ್ರಿಟನ್ ಬದುಕು ಕಳೆಯುತ್ತದೆ. ಎದೆಗೆಡ್ಡೆ ಆಪರೇಷನ್ ಆದಾಗಲೇ ಆಗಲಿ, ಹೆತ್ತು ಒಂದು ಗಂಟೆಯ ನಂತರವೇ ಆಗಲಿ ಆಸ್ಪತ್ರೆಗೂ ಬಂದು ಅವನು ನಡೆಸುವ ದೈಹಿಕ ದೌರ್ಜನ್ಯ ಓದಿದವರ ಕಣ್ಣು ಕೆಂಡದುಂಡೆ ಸುರಿಸುವಂತೆ ಮಾಡಿದರೆ, ತೆಹಮಿನಾ ಅವನಂಥವನಿಗೇ ಅಂಟಿ ಕೂತಿರುವುದು ಮೂರ್ಖತನ ಎನಿಸಿಬಿಡುತ್ತದೆ.

ಆದರೆ ಅವಳು ಅವಮಾನ, ಯಾತನೆಗಳ ನಡುವೆಯೂ ಅವನಿಗೇ ಅಂಟಿ ಕೂತಿದ್ದರಲ್ಲಿ ಅವನ ಕರಾಮತ್ತೂ ಇದೆ. ತೆಹಮಿನಾಳ ಚೇತನ ಸಹಿಸಲಾಗದ ಯಾತನೆಯಿಂದ ನಾಶವಾಗುವ ಹೊತ್ತಿನಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಅವನು ಭೀತಗೊಂಡು ಅವಳ ಪಾದದಡಿ ಕುಳಿತುಬಿಟ್ಟದ್ದೂ ಇದೆ! ಅಲ್ಲಾಹುವು ತನ್ನನ್ನು ರಕ್ಷಿಸಲೆಂದೇ ಸೃಷ್ಟಿಸಿದ ಬೇಗಮಳು ಅವಳೆನ್ನುತ್ತ; ಅವಳಿಲ್ಲದೆ ತನಗೆ ಜೀವನವೇ ಇಲ್ಲ ಎಂದು ಬುಳುಬುಳು ಅಳುತ್ತ; ಅವಳೇ ತನ್ನನ್ನು ರಕ್ಷಿಸಬಲ್ಲ ಏಕೈಕ ತಾಯಿಯೆಂದು ಆರಾಧಿಸುತ್ತ ಅವಳ ಮಡಿಲ ಮಗುವೋ ಎಂಬಂತೆ ನಾಟಕವಾಡಿದ್ದಿದೆ. ಪದೇಪದೇ ಕ್ಷಮೆಯಾಚಿಸಿ ಇನ್ನೆಂದೂ ಇಂಥ ದಿನಗಳು ಬಾರವೆಂದು ಅಲವತ್ತುಕೊಂಡು ಅವಳನ್ನು ಮತ್ತಷ್ಟು ಹೊಂಡಕ್ಕೆ ಕೆಡವಿದ್ದೂ ಇದೆ. ಒಟ್ಟಾರೆ ಅವನನ್ನು ಅರ್ಥಮಾಡಿಕೊಳ್ಳುವುದೇ ದುಸ್ತರವಾಗಿ ಒಡಕು ಹುಚ್ಚ ವ್ಯಕ್ತಿತ್ವದ ಮುಸ್ತಾಫಾ ಖಾರ್‌ನನ್ನು ಮೌನದಿಂದ ಹದಿನಾಲ್ಕು ವರ್ಷ ತಡೆದುಕೊಳ್ಳುತ್ತಾಳೆ. ಅವ ಇಂದು ಸರಿಯಾದಾನು, ನಾಳೆಗೆ ಸರಿಯಾದಾನು ಎಂದು ದೇವರಲ್ಲಿ, ಸೂಫಿ ಸಂತರಲ್ಲಿ ಪ್ರಾರ್ಥಿಸುತ್ತಾಳೆ. ಭಾರತದ ಅಜ್ಮೇರಿನ ದರ್ಗಾಗೂ ಬಂದುಹೋಗುತ್ತಾಳೆ. ಹಗಲು ರಾತ್ರಿಯೆನದೆ ಅವಳ ಪ್ರಾರ್ಥನೆ ಒಂದೇ; ‘ದಯಾಮಯ ದೇವರೇ, ಮುಸ್ತಾಫಾನಿಗೆ ಶಾಂತಿ ನೀಡು. ಅವನ ಮನ ಶಾಂತಗೊಳ್ಳುವಂತೆ ಮಾಡು.’ ಹೀನಾತಿಹೀನ ಬದುಕು ಶಮನಕಾರಕ ಗುಳಿಗೆಗಳಿಗೆ ಮೊರೆ ಹೋಗುವಂತೆ ಮಾಡುತ್ತದೆ. ಆರೋಗ್ಯ ಕೆಡುತ್ತದೆ.



ಭುಟ್ಟೋ ಗಲ್ಲಿಗೇರಿ, ಅವನ ಮಕ್ಕಳ ರಾಜಕೀಯ ಚಟುವಟಿಕೆ ತೀವ್ರಗೊಂಡಾಗ ಮುಸ್ತಾಫಾ ನಿರಂತರ ಪಕ್ಷಗಳ ಬದಲಿಸುತ್ತಾನೆ. ಭಾರತದ ಪ್ರಧಾನಿ, ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾನೆ. ಕೊನೆಗಂತೂ ಇಡೀ ಕುಟುಂಬ ಪಾಕಿಸ್ತಾನಕ್ಕೆ ಹಿಂದಿರುಗುತ್ತದೆ. ಆದರೆ ಕೂಡಲೇ ಮುಸ್ತಾಫಾ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಗುತ್ತದೆ. ಆ ವೇಳೆಗಾಗಲೇ ರಾಜಕೀಯದ ಆಗುಹೋಗುಗಳನ್ನು ವಿಶ್ಲೇಷಿಸುವಷ್ಟು ಪ್ರಬುದ್ಧ ಚಿಂತನೆ ಹೊಂದಿದ್ದ ತೆಹಮಿನಾ, ಮುಸ್ತಾಫಾ ಜೈಲಿನಲ್ಲಿರುವಾಗ ಅವನ ಬಿಡುಗಡೆಗಾಗಿ ಜನಸಂಘಟನೆ, ಹೋರಾಟ ನಡೆಸುತ್ತಾಳೆ. ಕುಸಿಯುವ ಆರೋಗ್ಯ, ದಣಿವನ್ನು ಲೆಕ್ಕಿಸದೆ ಅವನನ್ನು ಜನನಾಯಕನನ್ನಾಗಿ ಬಿಂಬಿಸುತ್ತ ಅವನ ಬಿಡುಗಡೆಗಾಗಿ, ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ತುಂಬ ಶ್ರಮಿಸುತ್ತಾಳೆ. ಇನ್ನಾದರೂ ಬದುಕು ಹಸನಾದೀತೆಂಬ ಕನಸು ಕಾಣುತ್ತಾಳೆ. ರಾಜಕೀಯವಾಗಿಯೂ ಅವಳಿಗೆ ವರ್ಚಸ್ಸಿನ ಸ್ಥಾನ ಸಿಗುತ್ತದೆ.

ಆದರೆ ಜೈಲಿನಿಂದ ಹೊರಬಂದದ್ದೇ ಮುಸ್ತಾಫಾ ಹಳೆಯ ಚಾಳಿ ಮುಂದುವರೆಸುತ್ತಾನೆ. ಕೊನೆಮೊದಲಿರದ ದೈಹಿಕ ದೌರ್ಜನ್ಯ ಎಸಗುತ್ತ ಅವಳು ಸಾರ್ವಜನಿಕ ಬದುಕಿನಿಂದ ಮಾಯವಾಗುವಂತೆ ನೋಡಿಕೊಳ್ಳುತ್ತಾನೆ. ಎಲ್ಲಕ್ಕಿಂತ ಹೀನವೆಂದರೆ ಗಣ್ಯ ಕುಟುಂಬವೊಂದಕ್ಕೆ ಸೊಸೆಯಾಗಿ ಹೋಗಿದ್ದ ತೆಹಮಿನಾಳ ಕಿರಿಯ ತಂಗಿ ಆದಿಲಾ ಜೊತೆ ಮತ್ತೆ ಪ್ರಣಯ ಸಂಬಂಧ ಶುರುಮಾಡುತ್ತಾನೆ. ಎಲ್ಲ ಖುಲ್ಲಂಖುಲ್ಲಾ! ಅವನಿಗೆ ಯಾವುದನ್ನೂ ಮುಚ್ಚಿಡಬೇಕೆಂಬ ತುರ್ತೇ ಇಲ್ಲ!!

ಮನಸಿರುವವರೆಲ್ಲ ಎಲ್ಲಾದರೊಮ್ಮೆ ಮನೋವ್ಯಾಧಿಗ್ರಸ್ತರಾಗುತ್ತಾರೆ. ಆದರೆ ಹಿಂಸ್ರ ಮನಸ್ಥಿತಿಯ ಮುಸ್ತಾಫಾನಂತಹವರು ರೋಗವೇ ತಾವಾಗಿ ಸಂಪರ್ಕಕ್ಕೆ ಬಂದವರನ್ನೆಲ್ಲ ನಾಶಗೊಳಿಸುತ್ತಾರೆ. ಮುಸ್ತಾಫಾ ಮನೆಯಲ್ಲಿ ಅವನೆಲ್ಲ ಹೆಂಡಿರು, ಮಕ್ಕಳಿಗೆ ಖಾಯಂ ದಾಯಿಯಾಗಿದ್ದ ಆಯೆಶಾ ಎಂಬುವಳ ಕತೆ ನೋಡಿದರೆ ತೆಹಮಿನಾಳ ಸಂಕಟ ಇನ್ನಷ್ಟು ಅರಿವಾಗುತ್ತದೆ. ಮುಸ್ತಾಫಾ ಪಂಜಾಬಿನ ಗವರ್ನರನಾಗಿ ನ್ಯಾಯಪಂಚಾಯ್ತಿ ನಡೆಸುವಾಗ ಇತ್ಯರ್ಥಕ್ಕಾಗಿ ಒಂದು ಪ್ರಕರಣ ಅವನೆದುರು ಬರುತ್ತದೆ. ಮದುವೆಯಾಗಿದ್ದ ಆಯೆಶಾ ಪ್ರಿಯಕರನೊಡನೆ ಓಡಿಹೋಗಿ ದರ್ಗಾವೊಂದರಲ್ಲಿ ಅಡಗಿರುತ್ತಾಳೆ. ಅವಳನ್ನು ಕೂಡಲೇ ಹಿಡಿಸಿ ತರುವ ಮುಸ್ತಾಫಾ ಅವಳ ಪ್ರಿಯಕರನನ್ನು ಹುಚ್ಚರ ಅಸೈಲಮ್ಮಿಗೆ ಕಳಿಸಿ, ಇಪ್ಪತ್ತರ ಹರೆಯದ ಸುಂದರ ತರುಣಿಯನ್ನು ತನ್ನ ಮನೆಗೆಲಸದ ದಾಯಿಯಾಗಿ ಇಟ್ಟುಕೊಳ್ಳುತ್ತಾನೆ. ಜೀವಮಾನ ಪರ್ಯಂತ ಅವಳು ಅವನ ಗುಲಾಮಳು. ಅವನ ಎಲ್ಲ ಅವಶ್ಯಕತೆಗಳ ಪೂರೈಸಬೇಕು. ಕೇಳದಿದ್ದರೆ ಯೋನಿಯೊಳಗೆ ಮೆಣಸಿನಪುಡಿ ತುಂಬುವುದೂ ಇದೆ. ಅವನ ಕುಟುಂಬ ಹೋದ ಕಡೆಗೆಲ್ಲ ಅವಳೂ ಹೋಗುವುದೇ, ಬೇರೆ ಆಯ್ಕೆಯೇ ಇಲ್ಲ. ಅವಳ ಈ ಸೇವೆಗೆ ಪ್ರತಿಯಾಗಿ ಅವಳ ಮನೆಯವರಿಗೆ ವರ್ಷಕ್ಕಿಷ್ಟು ಗೋಧಿ ಕೊಟ್ಟರೆ ಒಡೆಯನ ಜವಾಬ್ದಾರಿ ತೀರಿತು. ಹಾಗೆ ಮನೆಯಾಳಾಗಿ ಬಂದ ಆಯೆಶಾ ಒಡೆಯನ ಎಲ್ಲ ದೌರ್ಜನ್ಯ ಸಹಿಸಿ, ಅವನ ಹೆಂಡಂದಿರ ಆಗಮನ-ನಿರ್ಗಮನವನ್ನು ಬಂಡೆಕಲ್ಲಿನಷ್ಟೆ ನಿರ್ಲಿಪ್ತಳಾಗಿ ನೋಡಿ, ಅವ ಹೇಳಿದ್ದನ್ನು ಕಮಕ್ ಕಿಮಕ್ ಎನ್ನದೆ ಮಾಡುತ್ತ, ಒದೆಸಿಕೊಳ್ಳುತ್ತ, ಸಂಬಳವಿಲ್ಲದೆ, ಸದ್ದಿಲ್ಲದೆ, ಸ್ವತಂತ್ರವೇ ಇಲ್ಲದೆ ಇಡಿಯ ಬದುಕನ್ನು ಸವೆಸುತ್ತಾಳೆ. ಅವಳಂಥ ಬಡವಳಿಗೆ ಬಿಡುಗಡೆಯ ಕನಸು ಬೀಳುವಂತೆಯೇ ಇಲ್ಲ.

ಇದನ್ನೆಲ್ಲ ನೋಡನೋಡುತ್ತ ತೆಹಮಿನಾಳಲ್ಲಿ ಧಾರ್ಮಿಕ ಭಾವ ಜಾಗೃತಗೊಳ್ಳುತ್ತ ಹೋಗುತ್ತದೆ. ತಾನು ಕಟ್ಟಾ ಇಸ್ಲಾಂ ಧರ್ಮಾನುಯಾಯಿ ಎಂದುಕೊಳ್ಳುವ ಮುಸ್ತಾಫಾ ಹೇಗೆ ಧರ್ಮವಿರೋಧಿ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಅವನಿಗೆ ಪ್ರತಿರೋಧ ಒಡ್ಡಲು ಧಾರ್ಮಿಕತೆಯ ನೆಲೆ ಕಂಡುಕೊಂಡು ಪ್ರಾರ್ಥನೆಯ ಮೊರೆ ಹೋಗುತ್ತಾಳೆ. ಇಸ್ಲಾಂ ಹಾಗೂ ಮಹಿಳಾ ಹಕ್ಕು - ಎರಡರಲ್ಲು ನಂಬಿಕೆಯಿಟ್ಟುಕೊಂಡು ಉಳಿದ ಬದುಕನ್ನು ಕಳೆಯುವ ಧೈರ್ಯ ಮೂಡುತ್ತದೆ. ತಡವಾಗಿಯಾದರೂ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾಳೆ: ಆತ್ಮನಾಶವಾಗಿರುವ ತಾನು ಇನ್ನುಳಿದ ಬದುಕನ್ನು ಗೌರವಯುತವಾಗಿ ಕಳೆಯಬೇಕು; ಅಂಥ ಬದುಕು ಬೇಕೆಂದರೆ ಅವನಿಂದ ಬಿಡುಗಡೆ ಹೊಂದಲೇಬೇಕು. ತನ್ನ ಹೆಸರಿಲ್ಲದೆ ನಿನಗೆ ಅಸ್ತಿತ್ವವೇ ಇಲ್ಲ ಎಂದು ಬೆದರಿಸುವ ಮುಸ್ತಾಫಾ ಖಾರ್‌ಗೆ ಬೇಗಂ ತೆಹಮಿನಾ ಖಾರ್ ತೆಹಮಿನಾ ದುರಾನಿಯಾಗಿಯೂ ಬದುಕಬಲ್ಲಳು ಎಂದು ತೋರಿಸಬೇಕು..

ಈ ನಿರ್ಧಾರ ಮನದಲ್ಲಿ ಬೇರುಬಿಟ್ಟದ್ದೇ ತಡ, ತನ್ನ ಮಕ್ಕಳು, ಒಡವೆ, ಆಸ್ತಿ, ಬಾಂಧವ್ಯ ಎಲ್ಲವನ್ನು ತೊರೆದು ಬರಿಗೈಯಲ್ಲಿ ಮನೆಬಿಟ್ಟು ಹೊರಡುತ್ತಾಳೆ.

***

ಅದು ಹೆಂಗಸಿನ ಅಹಂಕಾರವೆಂದಾದರೂ ಕರೆಯಿರಿ, ಅತಿ ಆತ್ಮವಿಶ್ವಾಸದ ಮೂರ್ಖತನ ಎಂದಾದರೂ ಕರೆಯಿರಿ - ಅವರಿಗೆ ಕೆಟ್ಟಿದ್ದನ್ನೆಲ್ಲ ತಾನು ರಿಪೇರಿ ಮಾಡಬಲ್ಲೆ ಎಂಬ ಅಚಲ ವಿಶ್ವಾಸವಿರುತ್ತದೆ. ಅದೇ ವಿಶ್ವಾಸವೇ ಉಳಿದ ಜಗತ್ತು ಕೇಡಿಯೆಂದು, ಖೂಳನೆಂದು ಕರೆವವನನ್ನು ಸರಿಪಡಿಸಹೊರಡುತ್ತದೆ. ಬಹುಶಃ ಹೊಟ್ಟೆಯೊಳಗಿರುವ ಪುಟ್ಟ ಚೀಲವೇ ಯಶಸ್ಸು-ವೈಫಲ್ಯ ಎರಡನ್ನೂ ಕಂಡಿರುವ ಹೆಂಗಸಿನ ಈ ನಡವಳಿಕೆಗೆ ಕಾರಣವಿರಬಹುದು. ಎಷ್ಟೋ ಪ್ರೀತಿ, ಪ್ರೇಮ, ಪ್ರಣಯಗಳು ಅಸಾಮಾನ್ಯವಾದುದನ್ನು ಸಾಧಿಸುವ ಈ ಛಲದಿಂದಲೇ ಮೊಳೆತಿರುತ್ತವೆ. ಇಂತಹುದೇ ಒಂದು ವಿಶ್ವಾಸ ಹಾಗೂ ಇರುವುದನ್ನು ಮುಚ್ಚಿಟ್ಟು ಮರ್ಯಾದೆ ಕಾಪಾಡಿಕೊಳ್ಳಬೇಕೆಂದು ತಾನೇ ಹೇರಿಕೊಂಡ ಜವಾಬ್ದಾರಿ - ಇವೆರೆಡರ ನಡುವೆ ತೆಹಮಿನಾ ಸಿಕ್ಕಿಕೊಳ್ಳುತ್ತಾಳೆ. ಸದಾ ಭೀತಿ - ಅವಮಾನದ ಭೀತಿ, ಹಿಂಸೆಯ ಭೀತಿ, ಮಾನನಷ್ಟದ ಭೀತಿ, ಸಂಸಾರ ಮುರಿದುಹೋಗುವ ಭೀತಿ. ಒಟ್ಟಾರೆ ಭೀತಿಯೇ ಬದುಕೆಂಬಂತೆ ಆದಾಗ ಸೀಳು ವ್ಯಕ್ತಿತ್ವ ಕಾಣಿಸಿಕೊಳ್ಳುತ್ತದೆ. ಎಡವುವುದು, ಎಡವಿದ್ದರ ಸಮರ್ಥನೆಗಿಳಿದು ಮತ್ತಷ್ಟು ಎಡವುವಂತಹ ಆತ್ಮಹತ್ಯಾತ್ಮಕ ನಡವಳಿಕೆಗೆ ಕಾರಣವಾಗುತ್ತದೆ.

ಸಾಂಪ್ರದಾಯಿಕ ಮನಸ್ಸು ಈ ಆತ್ಮಚರಿತ್ರೆಯನ್ನು ಓದಿ ವ್ಯಭಿಚಾರಿ ಹೆಣ್ಣೊಬ್ಬಳು ತನ್ನ ತಪ್ಪಿಗೆ ತಕ್ಕುದಾಗಿ ಶಿಕ್ಷೆ ಅನುಭವಿಸಿದಳು ಎಂದು ವಿಲಕ್ಷಣ ಖುಷಿ ಅನುಭವಿಸಬಹುದು. ಏಕೆಂದರೆ ವಿವಾಹಬಾಹಿರ ಸಂಬಂಧಗಳು ಮೊದಲಿನಿಂದಲೂ ಹೀನಾಯ ಮೌಲ್ಯವೆಂದೇ ಪರಿಗಣಿಸಲ್ಪಟ್ಟಿವೆ. ವಾಸ್ತವ ಸಂಗತಿಯೆಂದರೆ ವಿವಾಹ ಚೌಕಟ್ಟು ರೂಪುಗೊಂಡಷ್ಟೇ ದಿನದಿಂದ ಅದನ್ನು ಉಲ್ಲಂಘಿಸುವ ಪ್ರಯತ್ನವೂ ನಡೆಯುತ್ತಿದೆ. ಏಕಪತ್ನೀವ್ರತಸ್ಥ, ಪತಿವ್ರತೆ ಎಂಬ ಕಿರೀಟಗಳು; ಬಹುಪತ್ನಿತ್ವಕ್ಕೆ (ಇಸ್ಲಾಮಿನಲ್ಲಿ ನಾಲ್ಕು ಮದುವೆಗೆ) ಧಾರ್ಮಿಕ ಅವಕಾಶ; ಸ್ವೇಚ್ಛೆಗೆ, ಲೈಂಗಿಕತೆಯ ಪೂರೈಕೆಗೆ ಸಮಾಜ ಸೃಷ್ಟಿಸಿದ ವೇಶ್ಯಾವೃತ್ತಿ - ಇವೆಲ್ಲದರ ಹೊರತಾಗಿಯೂ ವಿವಾಹಬಾಹಿರ ಸಂಬಂಧಗಳನ್ನು ತಡೆಯುವಲ್ಲಿ ಸಮಾಜಗಳು ಸೋತಿವೆ. ಬುದ್ಧ ತನ್ನ ಉಪದೇಶಗಳಲ್ಲಿ ಪರಸ್ತ್ರೀಯರ ಮೋಹಿಸುವುದು ತಪ್ಪೆನ್ನುತ್ತಾನೆ. ನಮ್ಮ ದಾಸರು, ವಚನಕಾರರು, ತತ್ವಪದಕಾರರು, ಚಿಂತಕರು ‘ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ಮತ್ತೆಮತ್ತೆ ತಿಳಿ ಹೇಳಿದ್ದಾರೆ.

ಆದರೆ ಬರೀ ಬೋಧನೆಗಳಿಂದ ಮನಸ್ಸು ಬದಲಾಗುವಂತಿದ್ದರೆ ಮನುಷ್ಯ ಸಮಾಜ ಇವತ್ತಿರುವಂತೆ ಇರುತ್ತಲೇ ಇರಲಿಲ್ಲ; ಎಲ್ಲ ಆಮಿಷ, ಕಟ್ಟುಪಾಡು, ಅನೀತಿಯ ಭಯಗಳ ಹೊರತಾಗಿಯೂ ಮನುಷ್ಯ ಮನಸಿನ ಮೋಹದ ಬಿರುಗಾಳಿ ಎಷ್ಟು ಪ್ರಬಲವಾಗಿದೆ ಎಂದರೆ ಅದು ಎಲ್ಲ ಚೌಕಟ್ಟುಗಳಾಚೆಗಿನ ಸಂಬಂಧಗಳನ್ನು ಸೃಷ್ಟಿಸುತ್ತಲೇ ಇದೆ. ವಿವಾಹಬಾಹಿರ ಸಂಬಂಧ ಅವಿವೇಕತನವೆ? ಕಾಮಾತುರವೆ? ಅನೈತಿಕ ಆಸೆಯೆ? ಕ್ಷಣಿಕ ಸೆಳೆತವೇ? ತೆಹಮಿನಾ ಮಾನವೀಯವಾಗಿದ್ದ ಮೊದಲ ಸಂಗಾತಿಯನ್ನೂ, ಪ್ರೀತಿಯ ಮಗುವನ್ನೂ ತೊರೆದು ಬರಲು ಸಾಧ್ಯವಾಗಿಸಿದ ಮಾಯಕ ಯಾವುದು? ಗಂಡನಿಂದ ವಿಚ್ಛೇದನ ಪಡೆದು ಒಬ್ಬ ಖ್ಯಾತಿವೆತ್ತ ವ್ಯಕ್ತಿಯ ಹೆಂಡತಿಯಾಗಬೇಕೆಂಬ ಮಹಾತ್ವಾಕಾಂಕ್ಷೆ ತೆಹಮಿನಾಳಿಂದ ಇಷ್ಟನ್ನೆಲ್ಲ ಮಾಡಿಸಿತೆ? ನಿಷ್ಠೆ, ಅನಿಷ್ಠೆಯ ಮಾತುಗಳ ಅತ್ತ ಸರಿಸಿ ನೋಡಿದರೂ ಕ್ಷಣಿಕ ರೋಮಾಂಚನದ ಸೆಳವಿನ ಅಪಾಯ ತೆಹಮಿನಾಗೆ ತಿಳಿಯಲಿಲ್ಲವೆ? ಅತಿ ಹೀನಾಯ ಬದುಕನ್ನು ಮುಚ್ಚಿಟ್ಟು ಸಂಕೀರ್ಣ ಸಂಬಂಧಗಳ ನಿಭಾಯಿಸುವ ಗೋಜಲು ಇಟ್ಟುಕೊಂಡಿದ್ದಾದರೂ ಯಾವ ಸಾಧನೆ?


ಎಲ್ಲ ಕ್ರೌರ್ಯದ ಹಿಂದೆ ಭಯ, ಕೀಳರಿಮೆಯ ಮನಸಿರುತ್ತದೆ. ಕೀಳರಿಮೆಯೇ ಅಮಾನವೀಯ ಕೃತ್ಯಗಳಿಗೆ, ಅವಿವೇಕದ ನಡವಳಿಕೆಗೆ ಕಾರಣವಾಗುತ್ತದೆ. ಈ ಆತ್ಮಚರಿತ್ರೆಯಲ್ಲಿ ತೆಹಮಿನಾ ಹಾಗೂ ಮುಸ್ತಾಫಾ ಇಬ್ಬರೂ ಎಲ್ಲವೂ ಇದ್ದೂ ವಿಚಿತ್ರ ಕೀಳರಿಮೆಗೆ ಬಲಿಯಾದವರು. ಕೀಳರಿಮೆ ತೆಹಮಿನಾಳಲ್ಲಿ ಖಿನ್ನತೆ ಮತ್ತು ವಿವೇಚನೆಯಿರದ ನಡೆಗಳಿಗೆ ಕಾರಣವಾದರೆ, ಮುಸ್ತಾಫಾನಲ್ಲಿ ತನ್ನ ಅಧಿಕಾರ ಕುಸಿದೀತೆಂಬ ಭಯದೊಡನೆ ಸೇರಿ ನಿರಂಕುಶಾಧಿಕಾರಿಯ ಕ್ರೌರ್ಯಕ್ಕೆ ಕಾರಣವಾಗಿದೆ. ಆದರೆ ಇವೆಲ್ಲದಕ್ಕೆ ಊಹಿಸಲಾಗದಷ್ಟು ಬೆಲೆ ತೆತ್ತವರಾರು? ಅನೀಸ್, ತಾನ್ಯಾ? ತೆಹಮಿನಾ? ಅವಳ ಎಳೆಯ ಮಕ್ಕಳು?

ಬದುಕು ಸರಳವಾಗಿದೆ, ಆದರೆ ಕಟ್ಟುಪಾಡುಗಳ ಗೆರೆಗಳೊಳಗೆ ಅದನ್ನು ಗೋಜಲು ಮಾಡಲಾಗಿದೆ. ಒಂದು ಗಂಟಿನಿಂದ ಬಿಡಿಸಿಕೊಳ್ಳಲು ಅದಕ್ಕಿಂತ ಕಗ್ಗಂಟಿನೊಳಗೆ ಕೈಕಾಲು ತೂರಿಸುವಂತಾಗುತ್ತದೆ. ಆಗ ಮೊದಲಿಗಿಂತ ಹೆಚ್ಚು ಬಿಗಿಗೊಳ್ಳುವುದು ಅನಿವಾರ್ಯವೇ ಆಗುತ್ತದೆ. ಹಾಗಾದರೆ ಯಾವುದು ಬಿಡುಗಡೆ? ಯಾವುದು ಬಂಧನ? ಕೊನೆಗು ಮನುಷ್ಯ ಜೀವಿಗೆ ಸಂಬಂಧಗಳಿಂದ ಬೇಕಿರುವುದಾದರೂ ಏನು?

ಇವು ಸುಲಭದಲ್ಲಿ ಬಗೆಹರಿಸಬಲ್ಲ ದ್ವಂದ್ವಗಳಲ್ಲ. ಇವು ಸಾವು ಬದುಕಿನಂತಹ, ಮನುಕುಲದ ಹುಟ್ಟಿನೊಂದಿಗೇ ಬಂದ ಉತ್ತರವಿಲ್ಲದ ಪ್ರಶ್ನೆಗಳು.

***

ಇಡೀ ಪುಸ್ತಕದಲ್ಲಿ ತನ್ನ ನಡವಳಿಕೆಗಳನ್ನೂ, ಮುಸ್ತಾಫಾನದನ್ನೂ ಇದ್ದದ್ದು ಇರುವಂತೆ ಚಿತ್ರಿಸಿರುವುದು ಎದ್ದು ಕಾಣುತ್ತದೆ. ಅವಿವೇಕದ್ದೆನಿಸುವ ತನ್ನ ಪ್ರತಿ ನಡೆಯನ್ನೂ, ಮೊದಲ ಗಂಡನಿಗೆ ಬಗೆದ ವಿಶ್ವಾಸ ದ್ರೋಹವನ್ನೂ, ಮುಸ್ತಾಫಾ ಸತ್ತರೆ ಸಾಕೆಂದು ತಾನು ಹಂಬಲಿಸುವುದನ್ನೂ, ಆಗೀಗ ನುಸುಳುವ ಈರ್ಷ್ಯೆಯನ್ನೂ ಬಚ್ಚಿಡದೆ ಬರೆಯಲಾಗಿದೆ. ನಡುನಡುವೆ ಶಮನಕಾರಿ ಔಷಧಗಳಿಗೆ ಮಾರುಹೋಗಬೇಕಾದ ಅನಿವಾರ್ಯತೆಗೆ ಈಡಾಗಿರುವುದನ್ನು ಹೇಳಲಾಗಿದೆ. ಸಾಧಾರಣವಾಗಿ ಮಹಿಳಾ ಆತ್ಮಕತೆಗಳು ತೃಪ್ತಭಾವದಿಂದ, ತನ್ನ ಇದುವರೆಗಿನ ಬದುಕು-ಸಾಧನೆಯ ಕುರಿತು ಹೆಮ್ಮೆಯನ್ನು ಪ್ರಕಟಿಸುತ್ತ ಕೊನೆಯಾಗುವುದಿಲ್ಲ. ಬದಲಾಗಿ ನಿರೂಪಣೆಯ ಪ್ರತಿ ಹಂತದಲ್ಲೂ ಅಭದ್ರತೆಯ ತೊಳಲಾಟ, ತನ್ನ ಆತ್ಮಗೌರವಯುಕ್ತ ಬಿಡುಗಡೆಯತ್ತ, ಸ್ವಯಂಪರಿಪೂರ್ಣತೆಯತ್ತ ಸಾಗುವುದು ಹೇಗೆಂಬ ಕಾಳಜಿ ಕಂಡುಬರುತ್ತದೆ. ‘ಆರನೆಯ ಹೆಂಡತಿಯ ಆತ್ಮಕಥೆ’ಯೂ ಇದಕ್ಕಿಂತ ಭಿನ್ನವಾಗಿಲ್ಲ.

ವಿಚ್ಛೇದನಗೊಂಡ ಕೆಲ ವರುಷಗಳವರೆಗೆ ಯಾರಿಗೂ ಬೇಡದವಳಾಗಿ ಮಕ್ಕಳಿಂದ, ತವರಿನವರಿಂದ ದೂರವಾಗಿ ಎಲ್ಲ ಸಂಕಷ್ಟಗಳನ್ನೆದುರಿಸಿದ ತೆಹಮಿನಾ ನಂತರ ತನ್ನ ಬದುಕನ್ನು ದಿಟ್ಟವಾಗಿ ರೂಪಿಸಿಕೊಂಡಳು. ಮಹಿಳೆಯರ ಪರ, ದಮನಿತ ಸಮುದಾಯದ ಪರ ದನಿಯೆತ್ತಲು ನಿರ್ಧರಿಸಿದಳು. ದೇವರ ಮೇಲಿನ ಅಚಲ ವಿಶ್ವಾಸದಿಂದ ಬರಹದ ಹಾದಿ ಹಿಡಿಯುವ ತೆಹಮಿನಾ ೧೯೯೧ರಲ್ಲಿ ‘ಮೈ ಫ್ಯೂಡಲ್ ಲಾರ್ಡ್’ ಬರೆದಳು. ಪಾಕಿಸ್ತಾನದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಈ ಕೃತಿ ಬಿರುಗಾಳಿ ಎಬ್ಬಿಸಲಿರುವ ಸೂಚನೆ ಸಿಕ್ಕೊಡನೆ ಪ್ರಕಾಶಕರು ಪ್ರಕಟಣೆಗೆ ಹಿಂದೇಟು ಹಾಕಿದಾಗ ಎಲ್ಲ ಭಯಗಳ ಮೆಟ್ಟಿನಿಂತು ತೆಹಮಿನಾ ತಾನೇ ಪುಸ್ತಕ ಪ್ರಕಟಿಸಿದಳು.


ತಮ್ಮ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟ ಮೈ ಫ್ಯೂಡಲ್ ಲಾರ್ಡ್ ಕೃತಿಯ ಯಶಸ್ಸಿನ ನಂತರ ತೆಹಮಿನಾ ೧೯೯೬ರಲ್ಲಿ ಅಬ್ದುಲ್ ಸತ್ತಾರ್ ಈಧಿ ಎಂಬ ಪಾಕಿಸ್ತಾನದ ನಿಸ್ಪೃಹ ಸಮಾಜ ಸೇವಕರೊಬ್ಬರ ಜೀವನ ಚರಿತ್ರೆ ‘ಎ ಮಿರರ್ ಟು ದ ಬ್ಲೈಂಡ್’ ಬರೆದಳು. ಈಧಿ ಕುರಿತ ಜೀವನ ಚರಿತ್ರೆ ಬರೆಯುವ ಮೂರು ವರ್ಷ ಅವರೊಡನೆ ಅವರ ಆಶ್ರಮಗಳಲ್ಲಿದ್ದಳು. ಗುಜರಾತ್ ಸಂಜಾತ ಈಧಿಯವರ ಈಧಿ ಫೌಂಡೇಷನ್ ಪಾಕಿಸ್ತಾನದ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆ. ವಯೋವೃದ್ಧರು, ರೋಗಿಗಳು, ಪರಿತ್ಯಕ್ತ ಮಹಿಳೆ-ಮಕ್ಕಳಿಗಾಗಿ ೩೩೦ ಆಶ್ರಮ, ಶಾಲೆ, ಆಸ್ಪತ್ರೆ, ಪುನರ್ವಸತಿ ಕೇಂದ್ರಗಳನ್ನು ಪಾಕಿಸ್ತಾನದಾದ್ಯಂತ ನಾನಾ ಕಡೆಗಳಲ್ಲಿ ಹೊಂದಿರುವ ಈಧಿ ಫೌಂಡೇಷನ್ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿದೆ. ೧೯೯೮ರಲ್ಲಿ ತೆಹಮಿನಾ ಬ್ಲಾಸ್ಫೆಮಿ ಎಂಬ ಕಾದಂಬರಿ ಬರೆದು ಇಸ್ಲಾಮಿಕ್ ಪುರೋಹಿತಶಾಹಿಯ, ಆಧ್ಯಾತ್ಮಿಕ ಗುರುಗಳಾದ ಪೀರರ ಗುಪ್ತ ಬದುಕು ಮತ್ತು ಹಗರಣಗಳನ್ನು ಬಯಲಿಗೆಳೆದು ಹಲವರ ಕೆಂಗಣ್ಣಿಗೆ ಗುರಿಯಾದಳು. ಅದು ಕಾಲ್ಪನಿಕ ಕತೆಯಾಗಿದ್ದರೂ ನೈಜ ಘಟನೆಗಳನ್ನಾಧರಿಸಿದ್ದು ಎಂದು ಹೇಳುವ ಮೂಲಕ ಅಂತಹ ದೌರ್ಜನ್ಯದ ಘಟನೆಗಳು ಈಗಲೂ ನಡೆಯುತ್ತಿವೆ ಎಂದು ನೇರವಾಗಿ ಆರೋಪಿಸಿದಳು. ನಂತರ ‘ಹ್ಯಾಪಿ ಥಿಂಗ್ಸ್ ಇನ್ ಸಾರೋ ಟೈಮ್ಸ್’ ಪುಸ್ತಕ ೨೦೧೩ರಲ್ಲಿ ಹೊರಬಂತು.

೨೪ ವರ್ಷ ಕೆಳಗೆ ಪ್ರಕಟವಾದ ಆಕೆಯ ಆತ್ಮಕತೆ ಇವತ್ತಿಗೂ ಪ್ರಸ್ತುತವೇ. ಶಕ್ತಿ, ಅಧಿಕಾರಗಳು ವಂಶಪಾರಂಪರ್ಯವಾಗಿ ಬರುವುದಿಲ್ಲ; ಯಾರೋ ನಮಗೆ ಒದಗಿಸುವುದೂ ಇಲ್ಲ. ಯಾವುದೇ ಸಹಾಯ ಒದಗದ ಒಂದು ನಿಸ್ಸಹಾಯಕ ಸ್ಥಿತಿಯಲ್ಲಿ ಅಸಹಾಯಕ ಚೇತನಗಳೂ ದಿಟ್ಟ ನಿರ್ಧಾರಗಳಿಗೆ ಬರುತ್ತವೆ. ಹಾಗೆ ತೆಹಮಿನಾಗೆ ಒದಗಿಬಂದಿದ್ದು ಬರವಣಿಗೆ. ಹತ್ತಾರು ಜನ್ಮಕ್ಕಾಗುವಷ್ಟು ಅವಮಾನ, ಹಿಂಸೆ, ನೋವು ಅನುಭವಿಸಿರುವ ತೆಹಮಿನಾ, ಬರವಣಿಗೆಯನ್ನೇಕೆ ಆಯ್ದುಕೊಂಡೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ‘ಬಹಳ ಜನ ನನ್ನ ಪ್ರತೀಕಾರ ಮನೋಭಾವದಿಂದ ಮೈ ಫ್ಯೂಡಲ್ ಲಾರ್ಡ್ ಪುಸ್ತಕ ಬರೆದೆನೆಂದು ತಿಳಿದಿದ್ದಾರೆ. ಆದರೆ ನಾನು ಬರೆದದ್ದು ನನಗೋಸ್ಕರ, ನನಗೇನಾಯಿತೆಂದು ತಿಳಿಯುವುದಕ್ಕೋಸ್ಕರ. ಅದು ಕೇವಲ ನನ್ನ ಕತೆಯಲ್ಲ. ನನ್ನಂತೆ ದೌರ್ಜನ್ಯ ಅನುಭವಿಸುವ ಎಷ್ಟೋ ಹೆಣ್ಮಕ್ಕಳ ಹೇಳಿಕೊಳ್ಳಲಾಗದ ಕತೆ. ಅಸಾಧ್ಯ ಏಕಾಂಗಿತನ ಕಾಡುವಾಗ ಅಂತಹ ಒಂದು ಕತೆಯನ್ನು ನನ್ನೊಳಗಿಟ್ಟುಕೊಂಡು ಸುಮ್ಮನಿರುವುದು ಸಾಧ್ಯವೇ ಇರಲಿಲ್ಲ. ಅದು ಪ್ರಾಮಾಣಿಕವಾಗಿ ಹೊರದಾರಿ ಕಂಡುಕೊಂಡ ಆಕ್ರೋಶ. ಹೀಗೆ ಬರೆದೆನೆಂದು ನನ್ನ ಕುಟುಂಬ ನನ್ನನ್ನು ೧೩ ವರ್ಷಗಳ ಕಾಲ ದೂರ ಮಾಡಿತು. ಮನೆಯ ಯಾವ ಮಹಿಳೆಯೂ ನನ್ನನ್ನು ಭೇಟಿಯಾಗಬಾರದೆಂದು ಕಟ್ಟಾಜ್ಞೆ ವಿಧಿಸಲಾಯಿತು. ಆದರೆ ಬರವಣಿಗೆ ಒಂದು ಸಬಲೀಕರಣ ಯತ್ನ. ಹರಿದು ಛಿದ್ರಗೊಂಡ ಬದುಕನ್ನು ಕೂಡಿಸಿ ನೋಡಲು ಬರವಣಿಗೆಯಿಂದ ಸಾಧ್ಯವಾಗಿದೆ. ಆತ್ಮವನ್ನು ನಾನಾ ಸ್ತರಗಳಲ್ಲಿ ಬಂಧಿಸಿರುವ ಎಲ್ಲವನ್ನು ಕಿತ್ತೊಗೆಯಲು ನಾನಾ ಅಭಿವ್ಯಕ್ತಿಗಳ ಅವಶ್ಯಕತೆಯಿದೆ. ಬರವಣಿಗೆ ಮತ್ತು ಪೇಂಟಿಂಗ್ ಅಂತಹ ಎರಡು ದಾರಿಗಳಾಗಿ ನನಗೆ ಒದಗಿವೆ’ ಎನ್ನುತ್ತಾರೆ. ಈಗ ಪೇಂಟಿಂಗ್‌ನಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ತೆಹಮಿನಾ ಒಂದು ಕಾಫಿ ಟೇಬಲ್ ಬುಕ್ ಪ್ರಕಟಿಸಲಿದ್ದಾರೆ.

‘ಆರನೇ ಹೆಂಡತಿಯ ಆತ್ಮಕತೆ’ ಓದುತ್ತ ಮೊದಮೊದಲಿಗೆ ಟಾಲ್‌ಸ್ಟಾಯ್ ಬರೆದ ಅನ್ನಾ ಕರೆನಿನಾ ನೆನಪಿಗೆ ಬರುತ್ತದೆ. ಆದರೆ ದುರಂತ ಸಾವಿಗೆ ಈಡಾಗುವ ಅನ್ನಾಳ ಬದುಕಿಗಿಂತ ಭಿನ್ನವಾದ ಹಾದಿಯನ್ನು ತೆಹಮಿನಾ ಆಯ್ದುಕೊಂಡಿದ್ದಾರೆ. ತನ್ನ ಬದುಕಿನ ಆರಂಭದ ದಿನಗಳಲ್ಲಿ ಸ್ವಯಂಕೇಂದ್ರಿತ ಸಿರಿವಂತ ಖಯಾಲಿ ಬದುಕನ್ನು ಬದುಕಿದ ತೆಹಮಿನಾ ತಡವಾಗಿಯಾದರೂ ಸಮಾಜಕ್ಕೆ ತೆರೆದುಕೊಳುವ ಮೂಲಕ ಬಿಡುಗಡೆಯ ಸಾರ್ಥಕ ದಾರಿಯತ್ತ ನಡೆದಿದ್ದಾರೆ.

ಬರವಣಿಗೆಯ ಆಚೆಗೂ ತೆಹಮಿನಾ ಚಟುವಟಿಕೆಗಳು ವಿಸ್ತರಿಸಿಕೊಂಡಿವೆ. ಮಹಿಳೆಯರ ಪರ ಮಾತನಾಡುವ ದಿಟ್ಟ ದನಿಯಾಗಿ ವಿಸ್ತೃತ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಸ್ತಫಾ ಖಾರ್‌ನ ಮೂರನೆಯ ಹೆಂಡತಿಯ ಮಗ ಬಿಲಾಲ್ ತನ್ನ ಹೆಂಡತಿ ಫಕ್ರಾ ಯೂನಸ್‌ಳನ್ನು ತಂದೆಯಂತೆಯೇ ಹಿಂಸಿಸುತ್ತಿದ್ದ. ಹೆಂಡತಿ ಬೇಸತ್ತು ಮನೆ ತೊರೆದುಹೋದಾಗ ಅವಳ ಮೇಲೆ ಬಿಲಾಲ್ ಆಸಿಡ್ ದಾಳಿ ನಡೆಸಿ ವಿಕೃತಳನ್ನಾಗಿಸಿದ. ಆಗವಳ ಸಹಾಯಕ್ಕೆ ನಿಂತು ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನೆರವಾದದ್ದು ತೆಹಮಿನಾರೇ. ೧೦ ವರ್ಷಗಳಲ್ಲಿ ಫಕ್ರಾಗೆ ೩೬ ಸರ್ಜರಿಗಳು ನಡೆದವು. ಆದರೆ ಕೊನೆಗು ತಾನು ಬದುಕಿ ಉಪಯೋಗವಿಲ್ಲವೆಂದು ಖಿನ್ನತೆಗೊಳಗಾದ ಫಕ್ರಾ ಮನೆಯ ಮಹಡಿಯಿಂದ ಕೆಳಬಿದ್ದು ೨೦೧೩ರಲ್ಲಿ ಆತ್ಮಹತ್ಯೆಗೆ ಶರಣಾದಳು.


ತೆಹಮಿನಾ ೨೦೦೩ರಲ್ಲಿ ಈಗಿನ ಪಾಕ್ ಪ್ರಧಾನಿ ನವಾಜ್ ಶರೀಫರ ತಮ್ಮ ಶಹಬಾಜ್ ಶರೀಫರನ್ನು ಮದುವೆಯಾದರು. ಶಹಬಾಜ್ ಶರೀಫ್ ಈಗ ಪಂಜಾಬಿನ ಮುಖ್ಯಮಂತ್ರಿ. ಆದರೆ ಪಾಕಿಸ್ತಾನದ ರಾಜಕೀಯ ಗಣ್ಯರ ಅತಿ ಅದ್ದೂರಿ ಒಣ ಠೇಂಕಾರವನ್ನು ಕಂಡಿರುವ ಆಕೆ ಜೂನ್ ೨೦೧೫ರಲ್ಲಿ ಪತಿಯೊಡನೆ ಸಣ್ಣ ಮನೆಯೊಂದಕ್ಕೆ ಹೋಗಿದ್ದಾರೆ. ಪಾಕಿಸ್ತಾನದಲ್ಲಿ ಬಡವರು, ಸಿರಿವಂತ ಗಣ್ಯರ ನಡುವಿನ ಅಂತರ ಅಪಾರವಾಗಿದ್ದು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರ ಗಮನ ಸೆಳೆಯುವ ಪ್ರಯತ್ನ ಇದು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.



ಕೊನೆಗೊಂದು ಪ್ರಾರ್ಥನೆ ಮನದಲ್ಲಿ ಸುಳಿಯುತ್ತಿದೆ: ತೆಹಮಿನಾ ನಂಬುವ ದೇವರೇ, ನೀ ಸರ್ವಶಕ್ತ ಹೌದಾದಲ್ಲಿ ಮುಸ್ತಫಾ ಖಾರನಂಥವನನ್ನು, ಬಾಯಿ ಹೊಲೆದುಕೊಂಡ ತೆಹಮಿನಾರನ್ನು ಇನ್ನು ಸೃಷ್ಟಿಸದಿರು..