Sunday 31 March 2024

ಇನ್ನೊಂದ್ ಜಲ್ಮ ಅಂತೇನಾರ ಇದ್ರೆ..

 



ಇನ್ನೊಂದ್ ಜಲ್ಮ ಅಂತೇನಾರ ಇದ್ರೆ

ನಾ ಉಲ್ಟಾ ಬದುಕ್ತಿನಪ್ಪ

ಗರ್ಭದಿಂದ ಗೋರಿಗೆ ಹೋಗದಲ್ಲ

ಗೋರಿಯಿಂದ ಗರ್ಭಕ್ಕೆ ಬರೋದು!

ಸಣ್ಣೋಳು ದೊಡ್ಡ ಆಗದಲ್ಲ,

ಮುದುಕಿ ಮಗುವಾಗೋದು!

ನಂಬಿ, ಆಗುತ್ತೆ

ಅಮಾಸೆ ಆದ್ಮೇಲೇ ಹುಣ್ಣಿಮೆ ಬರಬೇಕಂತ ಎಲ್ಲಿದೆ?

ಹುಣ್ಣಿಮೆ ಆದ್ಮೇಲೂ ಅಮಾಸೆ ಬರಲ್ವೇನು, ಹಾಗೆ.


ಎಂತ ಮಜ ನೋಡು!

ಆಗ ಭೂಮಿ ಮೇಲಿನ ನನ್ನ ಜನ್ಮ 

ಶುರುವಾಗೋದೇ ಸ್ಮಶಾನದಿಂದ!

ಅಲ್ಲಿಂದ ಎದ್ದು ಸೀದ ವೃದ್ಧಾಶ್ರಮಕ್ಕೆ ಬರ‍್ತಿನಿ

ಅಲ್ಲಿ ದಿನದಿಂದ ದಿನಕ್ಕೆ

ವರ್ಷದಿಂದ ವರ್ಷಕ್ಕೆ 

ನೋವು ಬಾವು ಕಮ್ಮಿಯಾಗ್ತ

ಕೊನೆಗೊಂದಿನ ಅವ್ರು 

ನೀನು ಇಲ್ಲಿರಕ್ಕೆ ನಾಲಾಯಕ್

ಮನೆಗೋಗು ಅಂತ ಓಡಸ್ತಾರೆ

ಆಗ ಮನೇಲಿ ಶುರು ಬೇಯ್ಸೋ ತೊಳೆಯೋ ಬಳಿಯೋ 

ಕೊನೆಯಿರದ ಕೆಲಸ

ಆದ್ರೂ ಮಾಡಿದ್ಮೇಲೆ ಎಂಥಾ ಸಮಾಧಾನ!

ಬೇಗಬೇಗ ಕೆಲ್ಸ ಮುಗ್ಸಿ ತಿಂಗ್ಳಲ್ಲಿ ಒಂದಿನ

ಆಫೀಸಿಗೆ ಹೋಗಿ ಪೆನ್ಶನ್ ತಗಂಬರ‍್ತಿನಿ 


ಹಂಗೇ ದಿನ ಕಳೀತಾ ಹೋಗಿ

ಹಸಿವು ನಿದ್ರೆ ಎಲ್ಲ ತಾನೇ ಸರಿಯಾಗ್ತ

ಮಾತ್ರೆ ಇಲ್ದೆನು ಆರಾಮಾಗಿರ‍್ತ ಇರುವಾಗ

ಅಂತಾ ಒಂದಿನ ಬರುತ್ತೆ

ಅವತ್ತಿನಿಂದ ಆಫೀಸ್ಗೆ ಹೋಗಬೇಕು! 

ಹೋದ ದಿನಾನೇ ಪಾರ್ಟಿ 

ಎಲ್ಲ ಗೀತೋಪದೇಶ ಹಾರ ಸೀರೆ ಶಾಲು ಕೊಟ್ಟು

ಮೊದಲ್ನೆ ದಿನನೇ ಸನ್ಮಾನ ಮಾಡ್ತಾರೆ

ಆಮೇಲೊಂದ್ ಮೂವತ್ ಮೂವತ್ತೈದ್ ವರ್ಷ

ಓಡೋಡ್ತ ಕಳೆಯುತ್ತೆ

ಕೆಲಸ ಕೆಲಸ ಕೆಲಸ

ಅದರ ಮಧ್ಯನೇ ಮುಟ್ಟು

ಸ್ರಾವ, ಹೊಟ್ಟೆನೋವು, ಸುಸ್ತು 


ಆ ಜಲ್ಮದಲ್ಲಿ ನಾನಂತೂ ಮದ್ವೆ ಆಗಲ್ಲಪ್ಪ

ಮಕ್ಳೂ ಬ್ಯಾಡ

ಪಾರ್ಟಿ ಮಾಡ್ತ, ಕೆಲಸ ಗೇಯ್ತ, 

ಪ್ರವಾಸ ತಿರುಗ್ತ, ಸಂಘಟನೆ ಮಾಡ್ತ

ಕೊನೆಗೊಂದಿನ ಬರುತ್ತೆ

ಎಳೇ ಪ್ರಾಯದ ನನ್ನ

ಆಫೀಸಿಂದ ಹೊರಗೆ ಕಳುಸ್ತಾರೆ

ಆಗ ಕಾಲೇಜಿಗೆ ಹೋಗಬೇಕು

ಪರೀಕ್ಷೆ ರಿಸಲ್ಟಿಂದ್ಲೇ ಕಾಲೇಜು ಶುರು

ಆಮೇಲೆ ಹೈಸ್ಕೂಲು


ಇದ್ದಕ್ಕಿದ್ದಂತೆ ಒಂದಿನ

ಮುಟ್ಟು ಬರೋದು ನಿಂತೋಗುತ್ತೆ

ಆರತಿ, ಸೀರೆ ಕುಬಸ, ಅಮ್ಮನ ಅಳು

ಎದೆ ಮುಚ್ಚಿಕೊಳ್ಳೋ ಹಂಗೆ ಜಡೆ

ಬರಬರ‍್ತಾ ಕುಳ್ಳಿ ಆಗ್ತ ಆಗ್ತ 

ಎದೆ ಮೇಲಿಂದು ಸಣ್ಣಗಾಗ್ತಾ ಆಗ್ತಾ 

ಕನ್ನಡ ಶಾಲೆಗೋಗಿ

ಅಣ್ಣನ ಹೆಗಲ ಮೇಲೆ ಕೂತು 

ಎಳ್ಳಮಾಸೆ ಜಾತ್ರೆಗೆ ಹೋಗಿ

ಆಮೇಲ್ ಬಾಲವಾಡಿಗೆ ಹೋಗಿ

ಮತ್ತೂ ಸಣ್ಣೋಳಾಗಿ 

ತೊದಲು ಮಾತಾಡ್ತ

ಎಡವಿ ನಡೀತಾ

ಅಂಬೆಗಾಲಿಕ್ಕತಾ

ಅಮ್ಮನ ಹಾಲ ಕುಡಿತಾ

ಒಂದಿನ ಅಮ್ಮನ ಹೊಟ್ಟೆ ಒಳ್ಗೆ ಸೇರಿ


ಆಮೇಲೇನು? ಆಹಾ..

ಒಂಭತ್ ತಿಂಗ್ಳು ಪಾತಾಳಲೋಕದಲ್ಲಿ

ಜಲ ವಿಹಾರ!

ಲಗಾಟ ಹೊಡಿತಾ ಕೈ ಕಾಲಾಡಿಸ್ತಾ

ಕೊನೇಗೊಂದಿನ ರಾತ್ರಿ

ಅಮ್ಮ ಅಪ್ಪನ ಒಂದು ಸುಖದ ನರಳುವಿಕೆಯಲ್ಲಿ 

‘ಹೆಣ್ಣು ಮಗೂನೆ ಮೊದ್ಲು ಆಗ್ಲಿ’ ಅಂತ

ಅಪ್ಪ ಅಮ್ಮನ ಕಿವಿಗೆ ಮುತ್ತಿಕ್ಕಿ ಪಿಸುಗುಡುವಾಗ 

ಎಲ್ಲಾ ಮಾಯ!!


ಏನ್ ಮಜಾ ಅಲ್ವಾ?

ನಾನ್ ಮಾತ್ರ

ಇನ್ನೊಂದ್ ಜಲ್ಮ ಅಂತೇನಾರ ಇದ್ರೆ

ಹಿಂಗೇ.. 

ಇಲ್ಲಿಂದಲ್ಲಿಗೆ ಹೋಗದಲ್ಲ

ಅಲ್ಲಿಂದಿಲ್ಲಿಗೇ ಬರ‍್ತೀನಪ್ಪ..

(Sketch: Krishna GiLiyar)

(ವುಡಿ ಅಲನ್‌ನ ‘ಮೈ ನೆಕ್ಸ್ಟ್ ಲೈಫ್’ ಬರಹದಿಂದ ಪ್ರೇರಿತ)


ಡಾ ಎಚ್ ಎಸ್ ಅನುಪಮಾ


Thursday 14 March 2024

ರಹಮತ್ ತರೀಕೆರೆಯವರ ‘ಕುಲುಮೆ’

 

ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆ

ಸಾಹಿತಿ, ಕಲಾಕಾರರು, ಆಟಗಾರರು, ಜನಪ್ರತಿನಿಧಿಗಳೇ ಮೊದಲಾಗಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಮಾಹಿತಿ ಕಾಲಕಾಲಕ್ಕೆ ಸುದ್ದಿಯಾಗಿ ತಿಳಿಯುವುದರಿಂದ ಅವರ ಬಗೆಗೆ ನಮಗೆಲ್ಲ ಗೊತ್ತು ಎಂದೇ ಸಮಾಜ ಭಾವಿಸುತ್ತದೆ. ಆದರೆ ಆ ವ್ಯಕ್ತಿತ್ವ ರೂಪುಗೊಂಡ ಪರಿ ಅದೃಶ್ಯವಾಗುಳಿದು ಕುತೂಹಲ ಮೂಡಿಸಿರುತ್ತದೆ. ಬರಹಗಾರ, ಚಳವಳಿಯ ಸಂಗಾತಿ, ವಿಚಾರವಾದಿ, ಸಂಸ್ಕೃತಿ ಚಿಂತಕ, ವಿಶ್ವವಿದ್ಯಾಲಯದ ಜನಪ್ರಿಯ ಮೇಷ್ಟ್ರು ಆದ ರಹಮತ್ ತರೀಕೆರೆಯವರು ‘ಇವರು ಹೇಗೆ ಈ ಪರಿ ತಯಾರಾದರು’ ಎಂದು ತಮ್ಮ ಶಿಷ್ಯಕೋಟಿ ಮತ್ತು ಓದುಬಳಗದಲ್ಲಿ ಕುತೂಹಲ ಮೂಡಿಸಿದ್ದರು. ಈಗದಕ್ಕೆ ಉತ್ತರವೋ ಎಂಬಂತೆ ತಮ್ಮನ್ನು ಬೆಳೆಸಿದ, ಬೆರಗಾಗಿಸಿದ ಸಾಕಷ್ಟು ಅಗೋಚರ ಸಂಗತಿಗಳನ್ನು ಆತ್ಮಚರಿತ್ರೆಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆಯನ್ನು ‘ಕುಲುಮೆ’ ಎಂಬ ಸೃಜನಶೀಲ ಹೊತ್ತಗೆಯಾಗಿಸಿದ್ದಾರೆ. 

ಇದೊಂದು ಜ್ಞಾಪಕ ಚಿತ್ರಶಾಲೆ. ನಿರೂಪಣೆಯುದ್ದಕ್ಕೂ ಬಾಲ್ಯ, ಯೌವನಗಳ ನಡುವೆ ಉಯ್ಯಾಲೆಯಂತಹ ಚಲನೆಯಿದೆ. ಲೇಖಕರೇ ಹೇಳಿರುವಂತೆ ಎಲ್ಲಿಂದಾದರೂ ಶುರುಮಾಡಿ ಎಲ್ಲಿಯಾದರೂ ಮುಗಿಸಬಹುದು. ಅಮ್ಮ ಮತ್ತು ಮನೆಯ ಹಿರಿಯರು ತಮ್ಮ ಬಗೆಗೆ ಹೇಳುವ ಬಾಲ್ಯದ ಪ್ರಸಂಗಗಳಿಂದ ಶುರುವಾಗವ ಜೀವನಕಥನವು ಎಳತರಲ್ಲೇ ತನ್ನಮ್ಮ ಧನುರ್ವಾಯುವಿನಿಂದ ತೀರಿಕೊಂಡ ದುಃಖವನ್ನು ತೋಡಿಕೊಳ್ಳುತ್ತ ಕೊನೆಯಾಗುತ್ತದೆ. ಮಗುವಿದ್ದಾಗ ಬಂದ ‘ಅಮ್ಮ’ನ (ಸಿಡುಬು) ಕಾರಣವಾಗಿ ಸಾವಿನ ಮನೆಗೆ ಹೋಗಿಬಂದ ಹುಡುಗ ದೈಹಿಕವಾಗಿ ಅಶಕ್ತನಾಗಿ ಭಾರೀ ಕೆಲಸಕ್ಕೆ ನಾಲಾಯಕ್ಕೆಂದು ಪರಿಗಣಿಸಲ್ಪಟ್ಟು ಓದಿನ ಅವಕಾಶ ಪಡೆಯುತ್ತಾನೆ. ಶಾಲೆಗೆ ಹೋಗುತ್ತ ಕುಲುಮೆ, ಕೃಷಿ, ಮನೆವಾರ್ತೆ, ಗಾರೆ ಕೆಲಸ, ಬೆರಣಿ ತಯಾರಿ, ವ್ಯಾಪಾರವೇ ಮೊದಲಾಗಿ ಸಂಸಾರದ ಬಂಡಿಗೆ ಹೆಗಲು ಕೊಡುವ ಉದ್ಯೋಗ ಮಾಡುತ್ತಲೇ ಶಿಕ್ಷಣ ಮುಂದುವರೆಸಿ ‘ಲಚ್ಚರ್’ ಆಗುವ ಮಹಾಪಯಣ ವಿಸ್ಮಯ ಹುಟ್ಟಿಸುವಂತಿದೆ. 

ಬಹುತೇಕ ಆತ್ಮಕತೆಗಳಲ್ಲಿ ಬಾಲ್ಯ, ಹದಿಹರೆಯಗಳ ಭಾಗ ಚೇತೋಹಾರಿಯಾಗಿರುತ್ತವೆ. ನಡುಹರೆಯ ದಾಟಿದ ನಂತರ ಆತ್ಮಪ್ರಶಂಸೆ, ಸಮಜಾಯಿಷಿ, ಆರೋಪ, ಹಳಹಳಿಕೆಗಳ ವಜ್ಜೆ ಓದುವವರ ಹೆಗಲೇರುತ್ತದೆ. ‘ನಾನು’ ರೂಪುಗೊಳ್ಳುವ ಮೊದಲು ತಿಳಿನೀರಿನಂತಿದ್ದ ಬದುಕು ನಂತರ ಪಾನಕವಾಗುತ್ತದೆ. ಬರೆವವರು ತಂತಮ್ಮ ಶಕ್ತ್ಯಾನುಸಾರ ಬೇಕಾದ್ದನ್ನೆಲ್ಲ ಸೇರಿಸಿ ದಾಹಿ ಓದುವರ್ಗಕ್ಕೆ ಕುಡಿಸುತ್ತಾರೆ. ಈ ದೃಷ್ಟಿಯಿಂದ ‘ಕುಲುಮೆ’ ವಿಭಿನ್ನವಾಗಿದೆ. ‘ಸದರಿ ಕಥನವು ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸೆಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನ ತತ್ವದ ಹುಡುಕಾಟ ಆಗಬೇಕು’ ಎಂದು ಲೇಖಕರು ಪ್ರಜ್ಞಾಪೂರ್ವಕ ನಿಲುವು ತಳೆದ ಕಾರಣವಾಗಿ ಕೊನೆಯತನಕ ಸುಲಲಿತ ಪ್ರಬಂಧದ ತರಹ ಓಡಿಸಿಕೊಂಡು ಓದಿಸಿಕೊಳ್ಳುತ್ತದೆ. 

ಯಾರದೇ ಬಾಳ್ಕಥನವು ಅವರೊಬ್ಬರದೇ ಆಗಲು, ಅವರು ಹುಟ್ಟಿ ಬದುಕಿದ ಕಾಲ ಮಾತ್ರದ್ದಷ್ಟೇ ಆಗಲು ಸಾಧ್ಯವಿಲ್ಲ. ಸಾಧ್ಯದ ತುಂದಿಬಿಂದುಗಳನ್ನು ಹಿಗ್ಗಲಿಸಿ ಹಲವಾರು ವ್ಯಕ್ತಿಚಿತ್ರ, ಸಂದರ್ಭಗಳನ್ನು ಜೊತೆಗೇ ಕಟ್ಟಬೇಕಾಗುತ್ತದೆ. ತಮ್ಮ ಸುತ್ತಮುತ್ತಲ ವ್ಯಕ್ತಿಗಳು, ಪರಿಸರ, ಗ್ರಾಮೀಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಸ್ಯಪ್ರಜ್ಞೆ ಮತ್ತು ಹಳ್ಳಿಗಾಡಿನ ಶ್ರಮಸಮಾಜದ ವರ್ಣನೆ ಗಮನ ಸೆಳೆಯುವಂತಿವೆ. ಚರಾಚರಗಳು ಬದುಕಲೆಂದು ನಡೆಸುವ ಸಕಲ ಕರಾಮತ್ತುಗಳನ್ನೂ ನವಿರು ಹಾಸ್ಯದಲ್ಲಿ ವಿವರಿಸಿ ಜೀವಂತಿಕೆ ತುಂಬಿದ್ದಾರೆ. ಮಂಥನ, ಆತ್ಮಾವಲೋಕನೆ, ನಿವೇದನೆ, ತಪ್ಪೊಪ್ಪಿಗೆ ಎಲ್ಲವೂ ಇವೆ. ತಮ್ಮನ್ನು ತಾವೇ ಪರಿಹಾಸ್ಯ ಮಾಡಿಕೊಳ್ಳುವ ಗುಣವು ನಿರೀಕ್ಷಣಾ ಜಾಮೀನಿನಂತೆಯೂ, ಗುರಾಣಿಯಾಗಿಯೂ, ನೀರಗಂಟಿಯಾಗಿಯೂ ಒದಗಿಬಂದಿದೆ. ಹಾಸ್ಯದ ಚಾಟಿಯೇಟಿಗೆ ಹೆಚ್ಚು ಒಳಗಾಗಿರುವವರು ತಂದೆ ಮತ್ತು ಬಾಳಸಂಗಾತಿ. ಅವರಿಬ್ಬರೂ ರಹಮತರ ಬದುಕು, ಪ್ರಜ್ಞೆಗಳನ್ನಾವರಿಸಿ, ವಿಶಿಷ್ಟ ಲೋಕದೃಷ್ಟಿ ರೂಪಿಸಿದ್ದಾರೆ. 


ಈ ಕೃತಿಯು ಹಳ್ಳಿಗಾಡಿನ ಮುಸ್ಲಿಮರ ಲೋಕದೊಳಗೆ ಕನ್ನಡ ಓದುಗರಿಗೆ ಪ್ರವೇಶ ಒದಗಿಸಿದೆ. ಅಲ್ಲಿನ ಉರ್ದು-ಅರಬಿ-ಕನ್ನಡ ಮಿಶ್ರಿತ ಮಾತು, ನಾಣ್ಣುಡಿ, ಬೈಗುಳ, ಆಚರಣೆ, ಸಂಸ್ಕೃತಿ ಸಂಪ್ರದಾಯಗಳ ಬಗೆಗೆ ಅಮೂಲ್ಯ ವಿವರಗಳಿವೆ. ಬದಲಾದ ಸಾಮಾಜಿಕ ನೇಯ್ಗೆಯು ಮುಸ್ಲಿಂ ಸಮುದಾಯದ ಮೇಲೆ ಹೊರಿಸಿರುವ ಭಯಾತಂಕ, ಒತ್ತಡಗಳು ಹಲವೆಡೆ ಸೂಕ್ಷ್ಮವಾಗಿ ದಾಖಲಾಗಿವೆ. ‘ಪ್ರತಿ ಬಾರಿ ಗಣೇಶನ ಹಬ್ಬ ಬಂದಾಗಲೂ ಬಾಯಿಗೆ ಅಕ್ಕಿಕಾಳು ಹಾಕಿಕೊಂಡು ಎಚ್ಚರವಿದ್ದು ಕೊನೆಗೆ ಏನೂ ಗಲಭೆಯಿಲ್ಲದೆ ಹಬ್ಬ ಮುಗಿದಾಗ ನಿಟ್ಟುಸಿರೊಂದು ಹೊರಹೊಮ್ಮುವಂತಾಗುತ್ತಿತ್ತು’ ಎನ್ನುವ ಮಾತು ಓದುವವರಲ್ಲಿ ವಿಷಾದ, ದಿಗ್ಭ್ರಮೆಗಳನ್ನು ಹುಟ್ಟಿಸುತ್ತವೆ. 

ಯೋಚಿಸಿ, ಚರ್ಚಿಸಿ, ವೈಚಾರಿಕತೆಯನ್ನು ಅಳವಡಿಸಿಕೊಂಡವರಿಗೂ ಬದುಕಿನಲ್ಲಿ ಕೆಲವೊಮ್ಮೆ ಸಂದಿಗ್ಧಗಳೆದುರಾಗುತ್ತವೆ. ಎಳೆತನದಲ್ಲಿ ಧಾರ್ಮಿಕ ಪ್ರವೃತ್ತಿಯವರಾಗಿದ್ದು, ಓದು, ವೈಚಾರಿಕತೆಗೆ ತೆತ್ತುಕೊಂಡ ಬಳಿಕ ವಿಚಾರವಾದಿಯಾಗಿ ಬೆಳೆದರೂ ಬಾಳಲ್ಲಿ ಎದುರಿಸಿದ ದ್ವಂದ್ವಗಳನ್ನು ಪ್ರಾಮಾಣಿಕವಾಗಿ ಇಲ್ಲಿ ಮಂಡಿಸಲಾಗಿದೆ. ‘ಧಾರ್ಮಿಕತೆ-ವೈಚಾರಿಕತೆಗಳ ನಡುವೆ ಚಲಿಸಿದ ಬಾಳನಾವೆ ಕೊನೆಗೆ ಸೂಫಿ ಕಿನಾರೆಯಲ್ಲಿ ಲಂಗರು ಹಾಕಿತು’ ಎಂದು ಈಗ ನೆಲೆ ನಿಂತ ತಾವನ್ನು ಬಣ್ಣಿಸಿದ್ದಾರೆ.

ಕನ್ನಡಕ್ಕೆ ವಿಶಿಷ್ಟ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಟ್ಟಿರುವ ರಹಮತ್ ತರೀಕೆರೆ, ತಾನು ಬರಿಯ ಸಂಗ್ರಹಕಾರ; ಹೆಕ್ಕಿರುವುದನ್ನು ಪ್ರಸ್ತುತ ಪಡಿಸಿದೆನಷ್ಟೇ ಎಂದು ಹೇಳಿಕೊಂಡಿದ್ದಾರೆ. ಲೋಕಸಂಚಾರಿಯಾಗಿ ಹೆಕ್ಕಿ ಪ್ರಸ್ತುತಪಡಿಸಿದ ಸಂಗತಿಗಳು ಮಹತ್ವದ ಸಾಂಸ್ಕೃತಿಕ ಸಂಶೋಧನೆಗಳಾಗಿದ್ದರೂ ಅದರ ಅನುಭವ, ಹೆಗ್ಗಳಿಕೆಗಳ ಬಗೆಗೆ; ಅದಕ್ಕಾಗಿ ತಾನು ಪಡೆದ ಮನ್ನಣೆ, ಪ್ರಶಂಸೆಗಳ ಬಗೆಗೆ ಬರೆದುಕೊಳ್ಳದೇ ಅಕ್ಷರ ವ್ಯವಸಾಯಿಗಳಿಗಿರಬೇಕಾದ ಸಂಯಮವನ್ನು ಎತ್ತಿ ಹಿಡಿದಿದ್ದಾರೆ. ‘ಏನೇ ಬರೆಯಲಿ, ಉದಯೋನ್ಮುಖ ಅವಸ್ಥೆಯ ಅಳುಕು, ಅಭದ್ರತೆಗಳಿಂದ ಬಿಡುಗಡೆ ಸಿಕ್ಕಿಲ್ಲ’ ಎನ್ನುವಲ್ಲಿ ಬೆಳವಣಿಗೆಯ ತುದಿಗಳನ್ನು ಚಿವುಟುತ್ತ, ಚಿಗುರೊಡೆಯಲು ಇರುವ ಸಾಧ್ಯತೆಗಳನ್ನು ಸಜೀವವಾಗಿಟ್ಟಿರುವುದು ತಿಳಿದುಬರುತ್ತದೆ. ಬೇಹೊಣೆ, ದೌಡುವರು, ಸಮಜಾಯಿಶಿಸಿದೆ, ಉತ್ಪತ್ತಿಸುತ್ತಿದೆ, ಗರ್ವಿಸದಿರು, ತಲಾಶಿಸು, ಶೇವಿಸಿದ ಕೆನ್ನೆ, ಪ್ರದಕ್ಷಿಣಿಸಿರುವೆನೋ, ಮಾತುಕತಿಸುತ್ತಿದ್ದರು, ಕುದುರೆ ಸವಾರಿಸಿದ, ಅಪ್ಪಣಿಸಲು, ಸಿಟ್ಟಾಸ್ತ್ರ, ಹಿತವಚಿಸಿದರು.. ಮುಂತಾದ ಸಾಕಷ್ಟು ಹೊಸ ಪದ-ಪ್ರಯೋಗಗಳನ್ನು ಹೊಸ ಸಂಧಿ, ಸಮಾಸಗಳ ಮೂಲಕ ಸೃಷ್ಟಿಸಿದ್ದಾರೆ.  

ತನ್ನನ್ನು, ರಕ್ತಸಂಬಂಧಿಗಳಾದ ಅಕ್ಕ, ಅಣ್ಣ, ತಮ್ಮ, ಅಮ್ಮ, ಅಪ್ಪ, ಬಾಳಸಂಗಾತಿ, ಮಕ್ಕಳು, ಬಂಧುಮಿತ್ರರನ್ನು ಲೋಕ ಏನಂದುಕೊಂಡೀತೋ ಎಂದು ಯೋಚಿಸದೆ ತಮಗೆ ಕಂಡಹಾಗೆಯೇ ಅಚ್ಚು ಹಾಕಿರುವುದು ‘ಕುಲುಮೆ’ ಯ ವೈಶಿಷ್ಟ್ಯ. ಇದಕ್ಕೆ ಕೌಶಲ್ಯ, ಎದೆಗಾರಿಕೆ ಎರಡೂ ಬೇಕು. ತಮ್ಮ ತಕರಾರು, ಆತಂಕ, ಮೆಚ್ಚಿಗೆಗಳನ್ನು ಕೌಶಲ್ಯದಿಂದ ಕಡೆದು ಮಂಡಿಸುವ ಪರಿಯಲ್ಲೇ ಗುಲ್ಲಾಗಬಹುದಾದ ಸಂಗತಿಗಳು ಮಾನವ ಸಹಜವೆನಿಸಿಬಿಡುವಂತೆ ಮಾಡಿದ್ದಾರೆ. 

ಒಮ್ಮೆ ಜನಪದೆ-ಜ್ಞಾನಸುಧೆ ‘ಬಾನು-ನಾನು’ ಜೋಡಿ ನಮ್ಮನೆಗೆ ಬಂದಿತ್ತು. ಮೇಷ್ಟ್ರು ತಮ್ಮ ಜೀವನ ಚರಿತ್ರೆ ಬರೆಯುತ್ತಿರುವ ಸುಳಿವು ನೀಡಿದರು. ಜೊತೆ ಬಂದಿದ್ದ ಅವರ ಗೆಳೆಯರೊಬ್ಬರು, ‘ನಂ ವಿಷ್ಯ ಎಲ್ಲ ಬರೆದಾಯ್ತಾ?’ ಎನ್ನಲು ಬಾನು ಅಕ್ಕ, ‘ಎರಡ್ ವರ್ಷದಿಂದ ಬರಿತನೇ ಇದಾರೆ, ಬರೀತನೇ ಇದಾರೆ, ಇನ್ನೂ ನಾನೇ ಬಂದಿಲ್ಲ, ನೀವು ಬರೋದು ಡೌಟು’ ಎಂದು ಚಟಾಕಿ ಹಾರಿಸಿದ್ದರು. ನಿಜವೇ. ಇದರಲ್ಲಿ ಬಾರದ ತುಂಬ ವಿಷಯಗಳಿವೆ. 

ಯಾವುದನ್ನು ಬರೆಯಬೇಕು, ಯಾವುದನ್ನಲ್ಲ ಎನ್ನುವುದು ಸಂಪೂರ್ಣವಾಗಿ ಬರೆಯುವವರಿಗೇ ಬಿಟ್ಟಿದ್ದು, ನಿಜ. ಆದರೆ ರಹಮತರಂತಹ ಸೂಕ್ಷ್ಮಗ್ರಾಹಿಯ ಬಾಳ್ಕಥನದಲ್ಲಿ ನಾವು ನಿರೀಕ್ಷಿಸಿದ ಕೆಲವಂಶಗಳು ಇಲ್ಲದಿರುವಿಕೆಯಿಂದಲೇ ಎದ್ದು ಕಾಣುವಂತಿವೆ. ನಾಡೆಲ್ಲ ಸುತ್ತಿ ಬೇಕಿರುವುದನ್ನೆಲ್ಲ ಹೆಕ್ಕಿ ಸಾಂಸ್ಕೃತಿಕ ವಿಸ್ಮೃತಿಗೆ ಮದ್ದರೆದ ರಹಮತ್, ತಿರುಗಾಟದ ಅನುಭವ, ಸಾಕ್ಷಾತ್ಕಾರಗಳನ್ನು ಇಲ್ಲಿ ಕಾಣಿಸಿಲ್ಲ. ಅಧ್ಯಾಪನ, ಸಂಶೋಧನೆ, ಬರವಣಿಗೆ, ಕ್ಷೇತ್ರಕಾರ್ಯ, ಮೇಷ್ಟ್ರುಗಿರಿಯ ವಿವರಗಳು ವಿರಳವಾಗಿವೆ. ವಿಶ್ವವಿದ್ಯಾಲಯಗಳ ಬಗೆಗೆ, ಅಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ನೇತ್ಯಾತ್ಮಕ ಸುದ್ದಿಗಳೇ ಹೆಚ್ಚು ಕಿವಿಗೆ ಬೀಳುತ್ತವೆ. ಅದರ ನಡುವೆ ಗುರುಶಿಷ್ಯರ ನಡುವೆ, ಸಹೋದ್ಯೋಗಿಗಳ ನಡುವೆ ನಡೆಯುವ ಕೊಡುಕೊಳ್ಳುವಿಕೆಗೆ ಹಲವು ಮುಖಗಳೂ ಇರುತ್ತವೆ. ನಿವೃತ್ತಿಯಾಗುವವರೆಗೆ ತಮ್ಮ ಜೊತೆಯಾದ ವಿಶ್ವವಿದ್ಯಾಲಯ ಪರಿಸರ ಕುರಿತ ಒಂದೆರೆಡು ಪುಟ ಬಂದಿದೆಯಾದರೂ ಹೊಸತಲೆಮಾರನ್ನು ಬೆಳೆಸುವ, ಅವರೊಂದಿಗೆ ತಾವೂ ಹೊಸದಾಗಿ ಬೆಳೆಯಲು ಅವಕಾಶ ನೀಡುವ ಅಧ್ಯಾಪನದ ವಿವರಗಳು ಕಡಿಮೆ ಇವೆ.

ವಿಶ್ವಾದ್ಯಂತ ಮುಸ್ಲಿಮರ ಬಗೆಗೆ ಹಗೆತನ, ವೈರ ಹೆಚ್ಚಿಸುವಂತಹ ವಿದ್ಯಮಾನ ವ್ಯವಸ್ಥಿತವಾಗಿ ಸಂಭವಿಸುತ್ತಿದೆ. ಮುಸ್ಲಿಮೇತರರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದೇ ರಾಜಕಾರಣದ ದಾಳವಾಗಿರುವುದನ್ನು ಕಾಣುತ್ತಿದ್ದೇವೆ. ಬದಲಾವಣೆಗೆ ಸ್ವಲ್ಪವೂ ಒಡ್ಡಿಕೊಳ್ಳದ ಸ್ಥಗಿತ ಸಮಾಜ ಎಂಬಂತೆ ಮುಸ್ಲಿಂ ಸಮುದಾಯವನ್ನು ಬಿಂಬಿಸಲಾಗುತ್ತಿದೆ. ಹಾಗಿರಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ. ಆದರೆ ಮುಸ್ಲಿಂ ಸಮುದಾಯದೊಳಗೆ ಆಗುತ್ತಿರುವ ಕೋಮುವಾದಿ ಬೆಳವಣಿಗೆಗಳು, ಅದಕ್ಕೆ ಬಂದಿರುವ ಒಳಗಣ ಪ್ರತಿರೋಧ, ಆಂತರಿಕ ಮತ್ತು ಧಾರ್ಮಿಕ ಸಂಘರ್ಷಗಳ ವಿವರ ಹೊರಜಗತ್ತಿಗೆ ಕಾಣದಂತೆ ಪರದೆ ಕಟ್ಟಲಾಗಿದೆ. ಪರದೆಯೊಳಗಣ ತುಮುಲ, ಸಂಘರ್ಷಗಳ ಚಿತ್ರಣವನ್ನು ರಹಮತರಂಥವರು ಮಾತ್ರವೇ ಕಟ್ಟಿಕೊಡಲು ಸಾಧ್ಯವಿದೆ. ಈ ಹೊತ್ತಗೆಯಲ್ಲಿ ಅಂತಹ ವಿಷಯಗಳು ಗೈರಾಗಿವೆ. ಕೊನೆಗೆ ತಾವು ಕಂಡುಕೊಂಡ ಸೂಫಿ ನೆಲೆಯೂ ಸಹ ಸಾಂಸ್ಥಿಕಗೊಂಡು, ಪಟ್ಟಭದ್ರ ಹಂತ ತಲುಪಿರುವುದು, ಅದರೊಳಗೂ ನುಸುಳಿರುವ ಮೂಲಭೂತವಾದದ ಅವಲೋಕನ ಅದೃಶ್ಯವೆನ್ನುವಷ್ಟು ಸೂಕ್ಷ್ಮ ಎಳೆಯಾಗಿ ಚಿತ್ರಣಗೊಂಡಿದೆ. 

ಇಸ್ಲಾಮಿನ ಒಳಗಣ ಸಂಘರ್ಷದ ವಿವರಗಳು ಹಿಂದೂ ಬಲಪಂಥೀಯರ ದ್ವೇಷದ ಬೆಂಕಿಗೆ ತುಪ್ಪ ಸುರಿದು ಇಂಬಾದೀತೆಂಬ ಅಳುಕು ನಿರಾಧಾರ. ಏಕೆಂದರೆ ದ್ವೇಷದ ಬೆಂಕಿ ಹಚ್ಚುವವರು ಸತ್ಯಸಂಗತಿಗಳಿಗಿಂತ ಇಲ್ಲದ ಸುಳ್ಳು ಸುದ್ದಿಗಳನ್ನೇ ಅವಲಂಬಿಸುತ್ತಾರೆ. ಒಂದು ಧರ್ಮದ ಬಲಪಂಥೀಯತೆಯು ಮತ್ತೊಂದು ಧರ್ಮದ ಬಲಪಂಥೀಯತೆಯ ಕಾರಣವೂ, ಪರಿಣಾಮವೂ ಆಗಿರುವಾಗ ಹಿಂದೂ ಕೋಮುವಾದದ ಕಾರಣವಾಗಿ ಮುಸ್ಲಿಂ ಸಮುದಾಯದಲ್ಲಿ ಆಗಿರಬಹುದಾದ ಪಲ್ಲಟಗಳನ್ನು ಕಾಣಿಸಬಹುದಿತ್ತು. ಸಮುದಾಯದೊಡನಿದ್ದೂ ಇಲ್ಲದಂತಿರಬೇಕಾದ ತಳಮಳ, ಅದನ್ನೆದುರಿಸಿದ ಬಗೆಗಳನ್ನು ಮಂಡಿಸಿದ್ದರೆ ವೈಚಾರಿಕತೆ, ಹೊಸತನಕ್ಕೆ ತೆರೆದುಕೊಳ್ಳಬಯಸುವ ಭಾರತದ ಮುಸ್ಲಿಂ ಯುವ ಸಮುದಾಯಕ್ಕೆ ಇಂಬಾಗುತ್ತಿತ್ತು. ವಿಫಲ ಪ್ರೇಮ ಪ್ರಕರಣಗಳು, ಕೌಟುಂಬಿಕ ಸಂಬಂಧಗಳಲ್ಲಿ ತಲೆದೋರಿದ ಬಿಕ್ಕಟ್ಟುಗಳು, ದಾಂಪತ್ಯದ ಬಗೆಗೆ ಬಿಚ್ಚುನುಡಿಯಲ್ಲಿ ಬರೆದ ರಹಮತರು, ಧರ್ಮ-ದೇವರುಗಳನ್ನು ಅದಕ್ಕಿಂತ ಖಾಸಗಿ ವಿಷಯವಾಗಿಸಿ ‘ಮೌನ’ ವಹಿಸಿರುವುದು ಅಚ್ಚರಿದಾಯಕವಾಗಿದೆ. ಇದು ಕೆಲವು ವರ್ತಮಾನದ ಬಿಕ್ಕಟ್ಟಿನ ಸಮಯಗಳಲ್ಲಿ ಅವರ ಗೆಳೆಯರ ಬಳಗ ಆರೋಪಿಸುವುದೆಂದು ಅವರೇ ಬರೆದುಕೊಂಡ ‘ಸುಮ್ಮನಿದ್ದು ಅತ್ತ ಸರಿದುಬಿಡುವ’ ಸ್ವಭಾವದ ಹೊರಚಾಚೂ ಆಗಿರಬಹುದು. ಪ್ರಸಕ್ತ ಬಿಕ್ಕಟ್ಟಿನ ಕಾಲದಲ್ಲಿ ಅವರದನ್ನು ಉಳಿವಿನ ದಾರಿಯಾಗಿಯೂ ಕಂಡುಕೊಂಡಿರಬಹುದು. 

ಯಾಕೋ ಸಾರಾ, ಬಾನು, ನಜ್ಮಾ ಬಾಂಗಿ ನೆನಪಾಗುತ್ತಿದ್ದಾರೆ. ಅಪ್ರಿಯ ಸತ್ಯಗಳನ್ನು ಹೇಳಲು, ಕಟುವಾಸ್ತವ ವಿವರಿಸುವ ಪ್ರಶ್ನೆಗಳನ್ನೆತ್ತಲು ಹೆಣ್ಣುಜೀವಗಳೇ ಆಗಬೇಕೇನೋ!?   

ಅದೇನೇ ಇರಲಿ, ಕನ್ನಡದ ಮಹತ್ವದ ಲೇಖಕರಾಗಿರುವ ರಹಮತ್ ಅವರ ಶಿಷ್ಯೆಯಾಗಿದ್ದೆನೆನ್ನುವುದು ನನಗಂತೂ ಜಂಬ ತರುವ ಸಂಗತಿಯಾಗಿದೆ. ನಾನು ಪಿಯುಸಿ ಓದಿದ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ‘ಲಂಬೂ’ ತರೀಕೆರೆ ಮೇಷ್ಟ್ರು ಕನ್ನಡ ನಾನ್‌ಡಿಟೇಲ್ ಟೆಕ್ಸ್ಟ್ ಪಾಠ ಮಾಡುತ್ತಿದ್ದರು. ಅವರು ಏನು ಪಾಠ ಮಾಡಿದ್ದರೋ ನೆನಪಿಲ್ಲ. ಆದರೆ ‘ಗೋಲ್ಡ್ ಮೆಡಲಿಸ್ಟ್’ ಕನ್ನಡ ಮೇಷ್ಟ್ರು ಹೇಗೆ ಪಾಠ ಮಾಡಿದ್ದರೆನ್ನುವುದು ಮತ್ತು ಅವರ ಅತಿಸುಂದರ ಬರವಣಿಗೆ ಚೆನ್ನಾಗಿ ನೆನಪಿದೆ. ‘ಪ್ರಶ್ನೆ ಮತ್ತು ಹುಡುಕಾಟ ಉಳ್ಳವರಿಗೆ ನಿಲುಗಡೆಯ ಮುಕ್ತಿ ಇದ್ದಂತಿಲ್ಲ’ ಎನ್ನುವ ಗುರುಗಳೇ, ನಿಮಗೂ, ನಿಮ್ಮನ್ನು ಜೀವಂತಿಕೆಯಿಂದಿಟ್ಟಿರುವ ಬಾನು ಅಕ್ಕನೇ ಮೊದಲಾದ ಸಕಲ ಚರಾಚರಗಳಿಗೂ ಸಪ್ರೇಮ ವಂದನೆ.

ಡಾ. ಎಚ್. ಎಸ್. ಅನುಪಮಾ

Tuesday 12 March 2024

ತನ್ನ ಹೆಸರ ತಾ ಮರೆತವಳು..



(Image Source Internet)

ಒಬ್ಬಳು ಹುಡುಗಿ. ಮನೆಯ ಮುದ್ದಿನ ಮಗಳು. ಅವಳ ಚಟಪಟ ಮಾತು, ನಗು, ನಡವಳಿಕೆ ಎಲ್ಲರಿಗೂ ಮುದ್ದೋಮುದ್ದು. ಶಾಲೆಯಲ್ಲೂ ಚುರುಕು. ಆಟೋಟಕ್ಕೂ ಸೈ. ಅಡುಗೆ, ಮನೆಗೆಲಸಕ್ಕೆ ಎತ್ತಿದ ಕೈ. ಅಮ್ಮನಿಗೆ ಅಚ್ಚುಮೆಚ್ಚು. ಅಪ್ಪನಿಗೆ ಪೆಟ್. ಹಾರುತ್ತ, ಒಲಿಸುತ್ತ, ಒಲಿಯುತ್ತ, ಮುನಿಯುತ್ತ, ಮಣಿಯುತ್ತ ಹಕ್ಕಿಯಂತೆ ಹಾರುತ್ತಿದ್ದಳು, ಮೀನಂತೆ ಈಜುತ್ತಿದ್ದಳು. ಸುಖದ ದಿನಗಳು.

ಎಲ್ಲವೂ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕಲ್ಲ. ಅವಳ ಸುಖದ ದಿನ ಕೊನೆಯಾಗುವ ಕಾಲ ಬಂದೇ ಬಂದಿತು.

ಅವಳಿಗೆ ಮದುವೆಯಾಯಿತು.

ಅವಳ ಹೆಸರು ಬದಲಾಯಿತು. ಪಾತ್ರ ಬದಲಾಯಿತು. ನೋಡುವ ಕಣ್ಣುಗಳು ಬದಲಾದವು. ನಿರೀಕ್ಷೆಗಳು ಬದಲಾದವು. ಕೂರುವ, ಏಳುವ, ನಿದ್ರಿಸುವ, ಉಣ್ಣುವ, ಕೋಪಿಸಿಕೊಳ್ಳುವ, ನಗುವ ಸಮಯ ಸಂದರ್ಭ, ಭಾವಭಂಗಿಗಳು ಇದ್ದಕ್ಕಿದ್ದಂತೆ ಸಂಪೂರ್ಣ ಬದಲಾಗಿಬಿಟ್ಟವು. ಅವಳೂ ಬದಲಾದಳು. ಎಷ್ಟರಮಟ್ಟಿಗೆಂದರೆ ತಾನೆಲ್ಲಿರುವೆ, ಏನು ಮಾಡುತ್ತಿರುವೆ, ಇದುವರೆಗೂ ಏನಾಗಿದ್ದೆ, ಏನಾಗುತ್ತಿದೆ ಎನ್ನುವುದೆಲ್ಲ ಮರೆತೇಹೋಯಿತು. ದಿನದಿನವೂ ಬದಲಾಗುವುದೇ ಬದುಕಾಯಿತು. ಸೊಸೆಯಾದಳು, ಸತಿಯಾದಳು, ಅತ್ತಿಗೆಯಾದಳು, ವಾರಗಿತ್ತಿಯಾದಳು, ನಾದಿನಿಯಾದಳು, ಚಿಕ್ಕಮ್ಮ ದೊಡ್ಡಮ್ಮನಾದಳು, ಅಮ್ಮನಾದಳು. 


(Image Source Internet)

ಈಗ ಮನೆಯಲ್ಲಿ ಎಲ್ಲರಿಗೂ ಅವಳು ಬೇಕು. ಅವಳೇ ಬೇಕು. ಅತ್ತೆಮಾವರಿಗೆ ಅವಳಿಲ್ಲದಿದ್ದರೆ ದಿನ ಸರಿಯುವುದೇ ಇಲ್ಲ. ಮಕ್ಕಳಿಗೆ ಅಮ್ಮನಿಲ್ಲದಿದ್ದರೆ ಬೆಳಗಾಗುವುದಿಲ್ಲ. ಅವಳಿಲ್ಲದಿದ್ದರೆ ಗಂಡ ಏನು ಮಾಡಿಯಾನು ಪಾಪ? ಅವನಮ್ಮ ಅಪ್ಪ ಮಗರಾಯನಿಗೆ ಯಾವ ಕೆಲಸವನ್ನೂ ಕಲಿಸಿರಲಿಲ್ಲ. ಅವಳಿಲ್ಲದಿದ್ದರೆ ಹಿತ್ತಿಲು, ಅಂಗಳ ನಳನಳಿಸುವುದಿಲ್ಲ. ಬೆಕ್ಕು, ನಾಯಿ, ದನ ಬಾಯಿ ಮುಚ್ಚುವುದಿಲ್ಲ. ಎಲ್ಲರಿಗೂ ಅವಳು ಬೇಕು. ಅವಳೇ ಬೇಕೇಬೇಕು ಎಂದಾಗಿರುವಾಗ, 

ಒಂದು ದಿನ..

ಒಂದು ದಿನ, ಇದ್ದಕ್ಕಿದ್ದಂತೆ ಅವಳಿಗೆ ತನ್ನ ಹೆಸರು ಮರೆತೇ ಹೋಯಿತು! ನಂಬಿ, ಏನು ಮಾಡಿದರೂ ನೆನಪಾಗುತ್ತಿಲ್ಲ. ತಲೆ ಕೆರೆದುಕೊಂಡಳು. ಯೋಚಿಸಿದಳು. ಕಣ್ಮುಚ್ಚಿ ತೆರೆದಳು. ಕೂತಳು, ನಿಂತಳು, ಮಲಗಿ ಕನಸಿನಲ್ಲಿ ತಿಳಿಯಬಹುದೇ ನೋಡಿದಳು. ಊಂಹ್ಞೂಂ, ಅವಳಿಗೆ ತನ್ನ ಹೆಸರು ನೆನಪಿಗೇ ಬರುತ್ತಿಲ್ಲ.

ಅಯ್ಯೋ, ಇದೇನಿದು! ಅವಳಿಗೆ ಸಿಕ್ಕಾಪಟ್ಟೆ ಆತಂಕವಾಯಿತು. ತನ್ನ ಹೆಸರೇ ನೆನಪಿಗೆ ಬರ‍್ತಿಲ್ಲವಲ್ಲ, ಮುಂದೇನು? ಯಾರನ್ನಾದರೂ ಕೇಳಲೇ? ನಗಾಡುವುದಿಲ್ಲವೆ ಕೇಳಿದವರು? 

‘ಮಾವ, ಮಾವ, ನನ್ ಹೆಸರೇ ಮರೆತೋಗಿದೆ, ಹೇಳ್ತೀರಾ?’

‘ಆಂ.. ನೀ ಯಾರೇ?’

ಥೋ, ಮರೆವು ಹತ್ತಿದವರ ಬಳಿ ಮರೆತ ನನ್ನ ಹೆಸರು ಕೇಳ್ತಿದೀನಲ, ‘ಅತ್ತೆ ಅತ್ತೆ, ಏನಂದ್ಕತಿರ ಏನ, ನನ್ ಹೆಸರೇ ಮರ‍್ತು ಹೋಗಿ ಏನ್ ಹೇಳ್ಲೀ ಗೊತ್ತಾಗ್ತಿಲ್ಲ..’ ಎಂದಳು.

‘ಗಂಡಸ್ರ ಮರೆವಿನ ಕಾಯ್ಲೆ ಈಗ್ಲೇ ಸುರುವಾಯ್ತಾ ನಿಂಗೆ. ಹೋಗ್ಲಿ ತಗ, ಹೆಸರಿದ್ಕಂಡ್ ಏನುಪಯೋಗ ನಮಿಗೆ? ಮರೆಯುದೇ ಒಳ್ಳೇದು’ ಎಂದರು.

ಅಯ್ಯೋ, ಇವರಿಗೇಕೆ ಅರ್ಥನೇ ಆಗ್ತಿಲ್ಲ? ತಲೆಚಚ್ಚಿಕೊಂಡಳು. ‘ಮಕ್ಳೇ ನನ್ ಹೆಸರೇನು ಹೇಳಿ ನೋಡುವಾ?’

‘ನೀನಾ? ನಮ್ಮಮ್ಮ’ ಚಪ್ಪಾಳೆ ತಟ್ಟಿ ನಕ್ಕವು.

ಅಮ್ಮ ಅಂತನಾ ನನ್ ಹೆಸರು? ಇಲ್ಲಿಲ್ಲ. ‘ಇವರ’ ಹತ್ರ ಕೇಳ್ತಿನಿ ಅಂದುಕೊಂಡಳು.

‘ಏನೇ, ಕೇಳ್ತಾ, ನನ್ ಶೂ ಎಲ್ಲಿ ಹಾಳಾಗೋಯ್ತು, ಹುಡುಕ್ಕೊಡು ಸಿಗ್ತಿಲ್ಲ..’

‘ಅಲ್ಲೇ ಇದೆಯಲ, ನಿಮಗಂತೂ ಎದುರಿದ್ರೂ ಕಾಣದೇ ಇಲ್ಲ. ರೀರೀ, ನಂಬ್ತಿರೊ ಬಿಡ್ತಿರೊ, ನಂಗ್ ನನ್ನ ಹೆಸರೇ ನೆನಪಾಗ್ತಿಲ್ಲ ಕಣ್ರಿ’

‘ಹೆಸರ‍್ಯಾಕೆ ಬೇಕು ಚಿನ್ನ?’

‘ಚಿನ್ನ! ಅದು ನನ್ನ ಹೆಸರಾ?’

‘ಅದೇ ಇಟ್ಕ ಏನೀಗ. ನಿಂಗ್ಯಾರ ಹೆಸರು ಬೇಕೋ ಅದನ್ನಿಟ್ಕ, ಫೇಮಸ್ ಸಿನಿಮಾ ಹೀರೋಯಿನ್‌ದು ಬೇಕಾ? ರಾಷ್ಟ್ರಪತಿದು ಬೇಕಾ? ಬೇಕಾದ್ದು ಇಡುಸ್ತಿನಿ. ಏನೇ, ಕೇಳ್ತಾ? ರಾತ್ರಿ ಬರದು ಲೇಟಾಗುತ್ತೆ, ಹ್ಞಂ..’

ಯಾರದೋ ಹೆಸರಿಟ್ಕಂಡರೆ ಅದು ನನ್ ಹೆಸರು ಹೇಗಾಗುತ್ತೆ? 

‘ನಿಂಗಮ್ಮ, ನಿಂಗಮ್ಮ, ಒನ್ನಿಮಿಷ ನಿಲ್ಲು, ನಾ ಯಾರಂತ ಗೊತ್ತ ನಿಂಗೆ?’

‘ಇದೇನಿಂಗ್ಕೇಳೀರಿ. ಬುಡಿ, ನೀವ್ಗೊತ್ತಿಲ್ವ, ಸವ್ಕಾರ್ರ ಎಂಡ್ರು..’

ಅಯ್ಯೋ, ಅದಾಯ್ತು, ಆದ್ರೆ ನಾ ಯಾರು? ನನ್ನ ಹೆಸರು?

ಹೆಸರು ಮರೆಸಲ್ಪಟ್ಟವಳ ದಿನರಾತ್ರಿಗಳು ಇದೇ ತಲ್ಲಣದಲ್ಲೇ ಉರುಳುತ್ತಿರಲು .. ..

ಈಗ ಹೇಳಿ, ಅವಳಿಗೆ ಸಿಕ್ಕಿದ್ದು ಏನು? ಕಳಕೊಂಡಿದ್ದು ಏನು? ತಿಳಿಯಿತೇ ನಿಮಗೇನಾದರೂ? 

(Image Source Internet)

ಗೆಳತಿ ವಾಣಿ ಪೆರಿಯೋಡಿಯಿಂದ ಕೇಳಿದ ಮೇಲಿನ ಕತೆ (ತೆಲುಗು ಲೇಖಕಿ ಪಿ. ಸತ್ಯವತಿ ಅವರ `ದಮಯಂತಿಯ ಮಗಳು’ ಸಂಕಲನದ ಕತೆ) ನಾನಾ ಅರ್ಥ ಹೊರಡಿಸುವಂತಿದೆ. 

ಹೆಣ್ಣು ಎಲ್ಲೆಡೆಯಿಂದ ಕಳೆದುಹೋಗಿರುವಳು, ಕಾಣೆಯಾಗಿರುವಳು, ಕಾಣದಂತಾಗಿರುವವಳು. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರೇ ಇದ್ದರೂ, ಎದುರಿದ್ದರೂ ಅದೃಶ್ಯವಾಗಿರುವವರು. ಸುತ್ತಮುತ್ತ ಮಹಿಳೆಯರೇ ತುಂಬಿದ್ದರೂ ‘ಅಯ್ಯೋ, ಸಮರ್ಥ ನಾಯಕಿಯರೇ ಸಿಗ್ತಿಲ್ಲ, ಭಾಷಣಕಾರ್ತಿಯರೇ ಇಲ್ಲ, ಬರಹಗಾರ್ತಿಯರೇ ಇಲ್ಲ, ಸಾಧಕಿಯರೇ ಕಾಣ್ತಿಲ್ಲ, ಒಳ್ಳೇ ಹೆಣ್ಣೇ ಇಲ್ಲ’ ಎನ್ನುತ್ತಾರೆ! ಹೊರಗೆ ಸಮಾಜದಲ್ಲಂತೂ ಆಯಿತು, ಮನೆಯಲ್ಲಾದರೂ ಹೆಣ್ಣು ಕಾಣಿಸುವಳೇ? ‘ಕಂಡೋರ ಮನೆಯ ಸೇರಲಿರುವ ಗುಂಡು’ ಎಂದೇ ಬೆಳೆಯುತ್ತಾಳೆ. ಮದುವೆಯೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ ಎಂದು ಒಪ್ಪಿಸಲ್ಪಟ್ಟಿದ್ದಾಳೆ. ಬಳಿಕ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’. ಮದುವೆಯಾದದ್ದೇ ಅವಳ ಹೆಸರು ತವರಿನ ಪಡಿತರ ಚೀಟಿಯಿಂದ ರದ್ದಾಗಿ ‘ಕೊಟ್ಟ’ ಮನೆಯ ಕಾರ್ಡಿಗೆ ವರ್ಗಾವಣೆಯಾಗುತ್ತದೆ. ಇಂಥವರ ಮಗಳು ಎನ್ನುವುದು ಇಂಥವರ ಹೆಂಡತಿ ಎಂದು ಬದಲಾಗುತ್ತದೆ. ತವರಿನಲ್ಲಿಟ್ಟ ಹೆಸರನ್ನೂ ಬದಲಿಸುವ ರೂಢಿ ವ್ಯಾಪಕವಾಗಿದೆ. ಅವಳ ಖಾಸಗಿ ಸ್ಥಳ, ಬದುಕು, ಆಪ್ತವಲಯ, ಕೆಳೆತನದ ವಲಯಗಳು ಸಂಪೂರ್ಣ ಬದಲಾಗುತ್ತವೆ. ಬದುಕಿನ ಹಲವು ತಿರುವುಗಳಲ್ಲಿ ಹೆಣ್ಣಿಗೆ ಆಯ್ಕೆಯ ಅವಕಾಶ ಇಲ್ಲ. ಇದ್ದರೂ ಅದು ಪೂರ್ವ ನಿರ್ಧರಿತ. ಎಲ್ಲರ ಹಕ್ಕು, ಸುಖಗಳನ್ನೆತ್ತಿ ಹಿಡಿದು ಪತ್ನಿಯೆಂಬ, ತಾಯ್ತನವೆಂಬ ಹಕ್ಕುನಷ್ಟದ ಸ್ಥಿತಿಯನ್ನೇ ಪರಮ ಪಾವನವೆಂದು ಪರಿಗಣಿಸಿ ತ್ಯಾಗಮಯಿಯಾಗಬೇಕು. ‘ಇದ್ರೆ ಅವರ ಅಮ್ಮನ ತರಹ ಇರಬೇಕು’, ‘ಜೋಡಿ ಅಂದ್ರೆ ಅವುರ‍್ದು..’ ಎಂಬ ಹೊಗಳಿಕೆ ಗಳಿಸಿಕೊಳ್ಳಲು ಮೈಸುಟ್ಟುಕೊಂಡು ಪೂರಿಯಂತೆ ಉಬ್ಬಬೇಕು. 

ಅಮ್ಮನಾಗುವುದೊಂದು ಖಟ್ಟಾಮಿಠ್ಠಾ ಅನುಭವ. ಎಷ್ಟು ಸಂಭ್ರಮವೋ ಅಷ್ಟೇ ಆತಂಕ. ಎಷ್ಟು ಹೆಮ್ಮೆಯೋ ಅಷ್ಟೇ ದಮನಿತ ಅನುಭವ. ಅದರಲ್ಲೂ ಬಸುರು, ಬಾಣಂತನ, ಹೆರಿಗೆ, ತಾಯ್ತನಗಳನ್ನು ಸಾವಧಾನವಾಗಿ ಅನುಭವಿಸುವಷ್ಟೂ ಸಮಯ ಮಾಡಿಕೊಳ್ಳಲಾಗದ ಈ ಕಾಲದ ತಾಯಿಯರ ಅನುಭವ ತುಂಬ ಭಿನ್ನವಾಗಿದೆ. ಆದರೆ ತಾಯ್ತನದ ನಿಜ ಅನುಭವವನ್ನು, ಸಂಕಟವನ್ನು ಹೇಳುವ ಅವಕಾಶವೇ ಇಲ್ಲ. ಬರಿಯ ಸಂಭ್ರಮಿಸಬೇಕು. ಮಕ್ಕಳ ಅನುದಿನದ ಬೇಕುಬೇಡಗಳ ಪೂರೈಸುತ್ತ, ಹಲವು ಒತ್ತಡಗಳ ಸಹಿಸುತ್ತ ಬದುಕಬೇಕು. ತಾಯಿಗೊಂದು ಅಲಂಕಾರಿಕ ದಿನ, ಸ್ಥಾನ ಕೊಟ್ಟುದಕ್ಕೆ ಧನ್ಯಳಾಗಬೇಕು. ಇಷ್ಟಾದರೂ ಯಾವ ಮಕ್ಕಳ ಹೆಸರಿನಲ್ಲಾದರೂ ಅವರ ಅಮ್ಮನ ಹೆಸರಿರುವುದೇ? ಅಮ್ಮನ ಹೆಸರಿನಲ್ಲಿ ಅಜ್ಜಿಯ ಹೆಸರಿಲ್ಲ. ಅಜ್ಜಿಯ ಹೆಸರಲ್ಲಿ ಅವಳಮ್ಮನ ಹೆಸರಿಲ್ಲ. ಹೀಗೇ ಸಾವಿರಾರು ವರ್ಷಗಳಿಂದ ಹೆತ್ತರೂ, ಹೊತ್ತರೂ, ಹೆತ್ತುಹೆತ್ತು ಸತ್ತರೂ ತನ್ನ ಹೆಸರ ಗುರುತೇ ಇಲ್ಲದಂತೆ ಬಾಳಿ ಹೋದವರು ಮಹಿಳೆಯರು. ಅವಳ ಕುರುಹಿಲ್ಲವೆನ್ನುವುದು ಕೊರತೆಯೆಂದು ಯಾರಿಗೂ ಅನ್ನಿಸುವುದಿಲ್ಲ. ಸ್ವತಃ ತನ್ನ ತಾನೇ ಮರೆತ ಹೆಣ್ಣಿಗೂ.

ಸಮಾಜ ಹೀಗಿರುವಾಗ ಮಹಿಳೆ ತಾನು ಕಾಣೆಯಾಗದಿರಲು ಕುಟುಂಬವೆಂಬ ಗಾಣಕ್ಕೆ ಕಟ್ಟಿದ ಹಸುವಾಗದೇ ಹೊಸಿಲು ದಾಟಿ ಎಲ್ಲರಿಗೂ ಘನತೆಯ ಬದುಕು ದೊರೆಯಲೆಂದು ಕೈಜೋಡಿಸಬೇಕು. ಎಲ್ಲ ಸಂಬಂಧಗಳಿಗಿಂತ ಗಾಢವಾದದ್ದು ಸೋದರಿತ್ವ; ಅದುವೇ ಜಗದ ಎಲ್ಲ ಹೆಣ್ಣುಗಳ, ಮನುಷ್ಯರ ಒಗ್ಗೂಡಿಸಬಲ್ಲ ಶಕ್ತಿ; ಮೂರು ಜುಟ್ಟು ಸೇರದಿದ್ದ ಕಡೆಯೂ ಸಾವಿರ ಜಡೆಗಳು ಸೇರಬಲ್ಲವು ಎಂದು ಸಾಧಿಸಿ ತೋರಿಸಬೇಕು. ಲೋಕ ಶಾಂತಿಯಿಂದಿರಲು ಇದೊಂದೇ ದಾರಿ ಎಂದು ತಿಳಿಯಬೇಕು.

                                                                                                   ಡಾ. ಎಚ್. ಎಸ್. ಅನುಪಮಾ

(Published in Varthabharathi Daily on March 8th, 2024)