Monday 28 March 2022

ಸೋನಿ ಸೋರಿ: ಬಲಿಪಶುವಾಗಲೊಲ್ಲದ ಜೀವ

 


2022, ಮಾರ್ಚ್ 16ರಂದು ತನ್ನ ಮೇಲಿದ್ದ ಎಲ್ಲ ಎಂಟು ಸುಳ್ಳು ಪ್ರಕರಣಗಳಿಂದ ಖುಲಾಸೆಯಾದ 47 ವರ್ಷದ ಸೋನಿ ಸೋರಿ ತನ್ನ ಆಜಾದಿಯನ್ನು ತಾನೇ ಗಳಿಸಿಕೊಂಡ ಆದಿವಾಸಿ ಮಹಿಳೆ. ದೇಶವಿದೇಶಗಳಿಂದ ಅಭೂತಪೂರ್ವ ಬೆಂಬಲ ದೊರೆತರೂ ಹನ್ನೊಂದು ವರ್ಷ ನ್ಯಾಯದ ಜಗಲಿ ಹತ್ತಿಳಿದು ಹತ್ತಿಳಿದು ಅಂತೂ ಕೊನೆಗೆ ಆರೋಪಮುಕ್ತಳಾದಳು. ತೀರ್ಪು ಹೊರಬಂದ ಬಳಿಕ ಸೋನಿ, ‘ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಅವರು ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಿದರು. ನಿರಪರಾಧಿಯೆಂದು ಸಾಬೀತುಪಡಿಸಲು ಒಂದು ದಶಕಕ್ಕೂ ಹೆಚ್ಚುಕಾಲ ಹೋರಾಡಬೇಕಾಯಿತು. ನಾನು ಶಾಲಾ ಶಿಕ್ಷಕಿಯಾಗಿದ್ದೆ. ನಕಲಿ ಪ್ರಕರಣಗಳು ನನ್ನ ಜೀವನ, ಘನತೆ, ಕುಟುಂಬವನ್ನು ಹಾಳು ಮಾಡಿದವು. ಕಳೆದುಹೋದ ಹನ್ನೊಂದು ಅಮೂಲ್ಯ ವರ್ಷಗಳನ್ನು ಮರಳಿ ಕೊಡುವವರು ಯಾರು? ರಾಜ್ಯ ಅಥವಾ ಕೇಂದ್ರ ಸರ್ಕಾರ ಅದನ್ನು ಹಿಂದಿರುಗಿಸುತ್ತವೆಯೇ?’ ಎಂದು ಸುದ್ದಿಗೋಷ್ಟಿಯಲ್ಲಿ ಖಾರವಾಗಿ ಪ್ರಶ್ನಿಸಿದಳು. ‘ಸಾವಿರಾರು ಆದಿವಾಸಿಗಳು ಇಂತಹ ಸುಳ್ಳು ಪ್ರಕರಣಗಳ ಭಾರ ಹೊತ್ತು ಜೈಲುಗಳಲ್ಲಿದ್ದಾರೆ. ನನ್ನ ಬದುಕಿನ ಗುರಿ ಆದಿವಾಸಿಗಳಿಗೆ ನ್ಯಾಯ ಒದಗಿಸುವುದೇ ಆಗಿದೆ’ ಎಂದು ಧೃಢವಾಗಿ ಹೇಳಿದಳು.

ಸೋನಿ ಸೋರಿ ಪ್ರಭುತ್ವ ಹಾಗೂ ಮಾವೋವಾದಿಗಳೆಂಬ ಎರಡು ಅಧಿಕಾರಯುತ, ಸಶಸ್ತ್ರ ಬಲಗಳ ನಡುವೆ ಸಿಲುಕಿರುವ ಆದಿವಾಸಿ ಮಹಿಳೆ. ತನ್ನ ಅನುಭವ, ಅಭಿಪ್ರಾಯಗಳನ್ನು ನೇರಾನೇರ ಬಿಚ್ಚಿಡುವ ಬುಡಕಟ್ಟು ಜನರ ಆತ್ಮಸಾಕ್ಷಿ. ಅಪಾರ ಧೈರ್ಯದ ಮತ್ತು ಕೆಚ್ಚಿನ ಜೀವ. ತಾನನುಭವಿಸಿದ ದಾರುಣ ಕಷ್ಟ, ತಾಳಿಕೊಂಡ ದುಃಖಗಳನ್ನು ಹೋರಾಟದ ಮೆಟ್ಟಿಲಾಗಿಸಿಕೊಂಡಾಕೆ. ನಿರಂತರ ದೌರ್ಜನ್ಯಕ್ಕೆ ಒಳಗಾದರೂ ನ್ಯಾಯಕ್ಕಾಗಿ ಹೋರಾಡುವ ಛಲ ಉಳಿಸಿಕೊಂಡವಳು. ‘ಆಸಿಡ್‌ನಲ್ಲಿ ಸುಟ್ಟ ನನ್ನ ಮುಖ ಬಸ್ತಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂಕೇತವಾಗಿದೆ’ ಎನ್ನುವ ಸೋನಿ ವೈಯಕ್ತಿಕ ನೋವು, ಅವಮಾನಗಳನ್ನು ಸಮುದಾಯದ ಉನ್ನತಿಗಾಗಿ ಸಂಘರ್ಷಕ್ಕೆ ಬಳಸಿಕೊಂಡಾಕೆ.

ಅವಳ ಬದುಕಿನ ಏಳುಬೀಳುಗಳಲ್ಲಿ ಭಾರತದ ಕಠೋರ ವಾಸ್ತವಗಳು ಅಡಗಿವೆ. 

ಛತ್ತೀಸಗಡ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಮಹಾರಾಷ್ಟ್ರ - ಈ ಆರು ರಾಜ್ಯಗಳ ಭಾಗಗಳನ್ನು ಹೊಂದಿದ ಮಧ್ಯಭಾರತ ಅದಿರು ಸಮೃದ್ಧವಾಗಿದೆ. ಅಲ್ಲಿನ ಕಾಡು, ಬೆಟ್ಟ, ಕಣಿವೆಗಳಲ್ಲಿ ಆರು ಕೋಟಿ ಆದಿವಾಸಿಗಳಿದ್ದಾರೆ. ತಲೆತಲಾಂತರಗಳಿಂದ ನೀರು, ನೆಲ, ಕಾಡಿನ ಉತ್ಪನ್ನಗಳನ್ನು ಬಳಸುತ್ತಿದ್ದ ಅವರು ಈಗ ಬೃಹತ್ ಅದಿರು ಕಂಪನಿಗಳಿಗೆ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಇದು ಆದಿವಾಸಿಗಳು ಮತ್ತು ಆಳುವವರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮ ನೆಲ, ನೀರು, ಕಾಡುಗಳ ರಕ್ಷಣೆಗಾಗಿ ಅಭಿವೃದ್ಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸುವಂತಾಗಿದೆ. ದುರಂತವೆಂದರೆ ತಮ್ಮ ನೆಲೆಯ ಮೇಲಿರುವ ತಮ್ಮ ಹಕ್ಕಿಗಾಗಿ ಹೋರಾಡುವ ಆದಿವಾಸಿಗಳಿಗೆ ನಕ್ಸಲೈಟರೆಂದು ಹೆಸರಿಟ್ಟು ಸಾವಿರಾರು ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಛತ್ತೀಸಗಡ ರಾಜ್ಯವೊಂದರಲ್ಲೇ 16,475 ಆದಿವಾಸಿಗಳು ಆರೋಪಿಗಳಾಗಿ, 6,743 ಆದಿವಾಸಿಗಳು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದರು. ರಾಜ್ಯಸರ್ಕಾರವು ಆದಿವಾಸಿಗಳ ಮೇಲಿರುವ 23,000 ಪ್ರಕರಣಗಳ ಪರಿಶೀಲನೆಗಾಗಿ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯವರ ನೇತೃತ್ವದ ಸಮಿತಿ ರಚಿಸಿತ್ತು. ಹಲವು ಪ್ರಕರಣಗಳು ನಕಲಿಯೆಂದು ಬಳಿಕ ಧೃಢಪಟ್ಟಿತು. 

ಸಾವಿರಾರು ಖೈದಿಗಳಲ್ಲಿ ಒಬ್ಬಳಾಗಿದ್ದ ಸೋನಿ ತಮಗಿನ್ನೂ ನಲವತ್ತೇಳರ ಸ್ವಾತಂತ್ರ್ಯ ಸಿಕ್ಕಿಲ್ಲವೆಂದೇ ಹೇಳುತ್ತಾಳೆ. ತನ್ನ ದಿಟ್ಟತನ, ಛಲ, ಪ್ರಶ್ನಿಸಿ ಬಂಡೇಳುವ ಗುಣದಿಂದ ವಿಶ್ವದ ಗಮನ ಸೆಳೆದು ಅಭಿವೃದ್ಧಿ ಪರಿಕಲ್ಪನೆಯ ಬಗೆಗೆ ಚರ್ಚೆ ನಡೆಯುವಂತೆ ಮಾಡಿದ್ದಾಳೆ.


ಕಲಿಸುವ ಹೆಬ್ಬಯಕೆಯ ಸೋನಿ

ಛತ್ತೀಸ್‌ಗಡ ರಾಜ್ಯ, ದಾಂತೇವಾಡ ಜಿಲ್ಲೆಯ ಸಮೇಲಿ ಗ್ರಾಮದಲ್ಲಿ ವಿದ್ಯಾವಂತ, ಅನುಕೂಲಸ್ಥ ಆದಿವಾಸಿಗಳ ಕುಟುಂಬದಲ್ಲಿ ಹುಟ್ಟಿದವಳು ಸೋನಿ (1975). ಅವಳ ತಂದೆ ಮುಂಡ್ರಾ ರಾಮ ತಮ್ಮ ಹಕ್ಕಿನ ಅರಣ್ಯಭೂಮಿಯಲ್ಲಿ ಕೃಷಿ ನಡೆಸುತ್ತಿದ್ದವರು. ಕಾಂಗ್ರೆಸ್ ಪಕ್ಷದಲ್ಲಿದ್ದು ಗ್ರಾಮದ ಸರಪಂಚನಾಗಿದ್ದರು. ಅಣ್ಣ ಸುಖದೇವ, ಅತ್ತಿಗೆ ಪಂಚಾಯ್ತಿ ಸದಸ್ಯರಾಗಿದ್ದರು. ಅವಳ ಇಬ್ಬರು ಚಿಕ್ಕಪ್ಪಂದಿರು ಕಾಂಗ್ರೆಸ್ ಶಾಸಕರಾಗಿದ್ದರು. ಅವಳ ಕಸಿನ್ ಅಮೃತಾ ಸೋರಿ ಜಗದಾಳಪುರ ಜಿಲ್ಲೆಯ ಡಿವೈಎಸ್ಪಿ ಆಗಿದ್ದಳು. ಸೋದರ ಸಂಬಂಧಿ ಲಿಂಗಾರಾಂ ಕೊಡೊಪಿ ದೆಹಲಿಯಲ್ಲಿ ಜರ್ನಲಿಸಂ ಕಲಿತು ಪತ್ರಕರ್ತನಾಗಿರುವವನು. 

ಸೋನಿ ಜಗದಾಳಪುರದ ದಿಮ್ರಪಾಲದ ಮಾತಾ ರುಕ್ಮಣಿ ಕನ್ಯಾ ಆಶ್ರಮದಲ್ಲಿ ಹೈಯರ್ ಸೆಕೆಂಡರಿ ತನಕ ಓದಿದಳು. ಬಳಿಕ ನರ್ಸಿಂಗ್ ತರಬೇತಿಗಾಗಿ ಸೇರಿದವಳು ಯಾಕೋ ಅದು ಸರಿಬರದೆ ಜಬೇಲಿಯಲ್ಲಿ ಹುಡುಗಿಯರ ಹಾಸ್ಟೆಲಿನ ವಾರ್ಡನ್ ಆದಳು. 2002ರಲ್ಲಿ ಸಂಸ್ಥೆಯೊಂದು ನಡೆಸುವ ಆಶ್ರಮಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು. 2006ರಲ್ಲಿ ಮುಖ್ಯೋಪಾಧ್ಯಾಯಿನಿಯ ಜವಾಬ್ದಾರಿ ಬಂತು. ಮೂರು ಕೋಣೆಯ ಆಶ್ರಮ ಶಾಲೆಯನ್ನು ಉತ್ತಮಪಡಿಸಿ ಹೆಚ್ಚೆಚ್ಚು ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ಅವಳದು. ತನಗಿರುವ ರಾಜಕೀಯ ಪ್ರಭಾವ, ಪರಿಚಯ ಬಳಸಿಕೊಂಡು ಉತ್ಸಾಹದಿಂದ ಕೆಲಸ ಮಾಡತೊಡಗಿದಳು. ಅಡೆತಡೆಗಳನ್ನೆದುರಿಸಿ ಜಬೇಲಿಯಲ್ಲಿ ಶಾಲಾ ಕಟ್ಟಡ ಎದ್ದು ನಿಲ್ಲಲು ಕಾರಣಳಾದಳು. ಹೊಸ ಕಟ್ಟಡದಲ್ಲಿ ಮಕ್ಕಳು ಖುಷಿಯಿಂದ ಕಲಿಯತೊಡಗಿದರು. ಈ ವೇಳೆಗೆ ಅನಿಲ ಫುತಾನೆ ಎಂಬ ಸಾಮಾಜಿಕ ಕಾರ್ಯಕರ್ತನನ್ನು ಬಾಳಸಂಗಾತಿಯಾಗಿ ಪಡೆದಳು. ಮೂವರು ಮಕ್ಕಳ ತಾಯಿಯಾದಳು.

ಆದಿವಾಸಿಗಳನ್ನು ಸಂಘಟಿಸಿ ಹಕ್ಕು ಜಾಗೃತಿ ಮೂಡಿಸುವ, ಸಮಾನತೆಯ ಸಮಾಜ ಕಟ್ಟಲು ಜೀವ ಪಣಕ್ಕಿಟ್ಟು ಹೋರಾಡುವ ಮಾವೋವಾದಿಗಳ ಪ್ರಾಬಲ್ಯ ಉತ್ತುಂಗದಲ್ಲಿದ್ದ ಕಾಲ ಅದು. ಮಾವೋವಾದಿಗಳ ಆಶಯಗಳು ಆದಿವಾಸಿಗಳನ್ನು ಆಕರ್ಷಿಸಿದ್ದವು. ಅವರ ಯೋಜನೆಗಳಲ್ಲಿ ಒಂದಷ್ಟು ಜನ ಭಾಗಿಯೂ ಆದರು. ಆದರೆ ಜನರಲ್ಲಿ ಹಕ್ಕಿನ ಪ್ರಶ್ನೆ ಜಾಗೃತಗೊಳಿಸುವ ಮಾವೋವಾದಿಗಳೆಂದರೆ ಯಾವುದೇ ಪಕ್ಷದ ಸರ್ಕಾರಕ್ಕೂ ಇಷ್ಟವಿಲ್ಲ. ಅಂಥವರ ದಮನ ಮಾಡದಿದ್ದರೆ ಸರ್ಕಾರಗಳಿಗೆ ಉಳಿಗಾಲವಿರುವುದಿಲ್ಲ. ಮಾವೋವಾದಿ ಹೋರಾಟಗಾರರನ್ನು, ಎಚ್ಚೆತ್ತ ಜನರನ್ನು ಬಗ್ಗುಬಡಿಯಲು ಸೈನ್ಯ, ಅರೆಸೇನಾಪಡೆಗಳು ಆ ಪ್ರದೇಶಕ್ಕೆ ಬಂದವು. ಮಾವೋವಾದಿಗಳ ವಿರುದ್ಧ ಸಲ್ವಾ ಜುಡುಂ ಎಂಬ ಆದಿವಾಸಿಗಳ ಸಶಸ್ತ್ರ ಪಡೆಯನ್ನು ಸರ್ಕಾರವೇ ಸೃಷ್ಟಿಸಿತು. 


ಎಲ್ಲ ಆದಿವಾಸಿಗಳಂತೆ ಮೊದಮೊದಲು ಸೋನಿಯೂ ಮಾವೋವಾದಿಗಳ ಜೊತೆ ಕೈಜೋಡಿಸಿದ್ದಳು. ಬರಬರುತ್ತ ಸರ್ಕಾರದ ಬಗೆಗೆ ಹೇಗೋ ಹಾಗೆ ಮಾವೋವಾದಿಗಳೊಂದಿಗೂ ಭಿನ್ನಮತ ಹೊಂದಿದಳು. ಸರ್ಕಾರವನ್ನು ವಿರೋಧಿಸುವ ನೆಪದಲ್ಲಿ ಆದಿವಾಸಿಗಳ ನೆಮ್ಮದಿಯ ಬದುಕಿಗೆ ಮಾವೋವಾದಿಗಳು ಮುಳ್ಳಾಗತೊಡಗಿರುವರೆಂದು ಅವರಿಗೆ ನೇರವಾಗಿ ಹೇಳಿದಳು. ಒಮ್ಮೆ ಎಲ್ಲ ಶಿಕ್ಷಕರನ್ನೂ ಮಾವೋವಾದಿಗಳು ಜನ್ ಅದಾಲತ್‌ಗೆ ಕರೆದರು. ತಮ್ಮ ಮೇಲೆ ಆಕ್ರಮಣ ಮಾಡುವಾಗ ಹೈಡ್‌ಔಟ್‌ಗಳಾಗಿ ಬಳಸಿಕೊಳ್ಳಲೆಂದೇ ಸೇನಾಪಡೆಗಳು ಆಶ್ರಮ(ಶಾಲೆ)ಗಳನ್ನು ಕಟ್ಟಿವೆ, ಹಾಗಾಗಿ ಅವನ್ನೆಲ್ಲ ಧ್ವಂಸಗೊಳಿಸುತ್ತೇವೆ ಎಂದವರು ಹೇಳಿದಾಗ ಸೋನಿ ಬಲವಾಗಿ ವಿರೋಧಿಸಿದಳು. ಜನರಿಗಾಗಿ ಹೋರಾಡುವವರು ಅವರ ಮನೆ, ಶಾಲೆಗಳನ್ನು ಧ್ವಂಸಗೊಳಿಸುವುದು ಸರಿಯಲ್ಲ. ಆಶ್ರಮ ಶಾಲೆಗಳನ್ನು ಕೆಡವಿದರೆ ಆದಿವಾಸಿ ಮಕ್ಕಳು ಎಲ್ಲಿ ಕಲಿಯಬೇಕು ಎಂದು ಪ್ರಶ್ನಿಸಿದಳು. ಕೊನೆಗೆ ರಕ್ಷಣಾ ಪಡೆಗಳನ್ನು ಶಾಲೆಯೊಳಗೆ ಬಿಡಬಾರದು ಎಂಬ ಷರತ್ತಿನ ಮೇಲೆ ತನ್ನ ಶಾಲೆ ಉಳಿಯುವಂತೆ ನೋಡಿಕೊಂಡಳು. 

ಎಲ್ಲ ಆಶ್ರಮಗಳು ನಾಶವಾದರೂ ಸೋನಿಯ ಆಶ್ರಮ ಉಳಿಯಿತು. ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಕಲಿಯತೊಡಗಿದರು. ಉಳಿದೆಲ್ಲ ಶಾಲೆಗಳನ್ನು ಕೆಡವಿದ ಮಾವೋವಾದಿಗಳು ಅವಳ ಶಾಲೆ ಉಳಿಸಿದ್ದರಿಂದ ಸೋನಿ ನಕ್ಸಲ್ ‘ನೇತಾ’ ಆಗಿರಬೇಕು; ಅಥವಾ ಅವರ ಏಜೆಂಟ್ ಆಗಿರಬೇಕೆಂದು ಪೋಲೀಸರು ತರ್ಕಿಸಿದರು. ಸೋನಿಯ ಸೋದರ ಸಂಬಂಧಿ ಲಿಂಗಾರಾಮ್ ಕೊಡೊಪಿ ದೆಹಲಿಯಲ್ಲಿ ಜರ್ನಲಿಸಂ ಓದುತ್ತಿದ್ದ. ತನ್ನ ಜನರ ಹಕ್ಕಿನ ಬಗೆಗೆ ಸೋನಿಯಂತೆಯೇ ದನಿಯೆತ್ತರಿಸಿ ಮಾತನಾಡುತ್ತಿದ್ದ. ತನ್ನ ನೆಲದ ಕತೆಗಳನ್ನು ಪತ್ರಕರ್ತನಾಗಿ ಹೊರಜಗತ್ತಿಗೆ ತಿಳಿಸುವೆನೆಂದು ಕನಸಿದ್ದ. ವ್ಯವಸ್ಥೆಯ ವಿರುದ್ಧ ಸೋನಿ, ಲಿಂಗಾರಾಮನಂಥವರು ತೋರಿಸುವ ಪ್ರತಿರೋಧ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಲು ಸಾಕಾಯಿತು. 

ಇಲ್ಲಿಂದಾಚೆ ಸೋನಿ ಅಡಕತ್ತರಿಯಲ್ಲಿ ಸಿಲುಕಿದಳು. ಒಂದು ನಿಗೂಢ ಪಾತ್ರವೋ ಎನ್ನುವಂತೆ ಅವಳ ಬಗೆಗೆ ಸುದ್ದಿಗಳು ಹರಿದಾಡಿದವು. ಕ್ರಿಮಿನಲ್ ಪ್ರಕರಣಗಳು ಸುತ್ತಿಕೊಂಡವು. ಸಂಘರ್ಷ ಇರುವ ಪ್ರಾಂತ್ಯದಲ್ಲಿ ಬದುಕುವುದು ಸುಲಭವಿಲ್ಲ. ಮುಗ್ಧ, ಸರಳ ಆದಿವಾಸಿಗಳಿಗೆ ಅದು ಇನ್ನೂ ಕಷ್ಟ. ನೀವು ಒಂದೋ ‘ಇದು’ ಆಗಿರಬೇಕು. ಅಥವಾ ‘ಅದು’ ಆಗಿರಬೇಕು. ಅದಲ್ಲದಿದ್ದರೂ ನಿಮ್ಮನ್ನು ‘ಅದು’ ಎಂದೇ ಪರಿಗಣಿಸಲಾಗುತ್ತದೆ. ಇದು, ಅದುಗಳ ನಡುವೆ ಸಿಲುಕಿ ದೌರ್ಜನ್ಯ ಅನುಭವಿಸುತ್ತಿರುವವರು ಸೋನಿಯಂತಹ ಸಾವಿರಾರು ಮಹಿಳೆಯರು. ಪೊಲೀಸರು ಅವಳನ್ನು ಮಾವೋವಾದಿಯೆಂದರು. ಮಾವೋವಾದಿಗಳು ಅವಳು ಪೊಲೀಸ್ ಮಾಹಿತಿದಾರಳೆಂದು ಅನುಮಾನಿಸಿ ತಮ್ಮ ಹಿಟ್‌ಲಿಸ್ಟಿನಲ್ಲಿ ಅವಳ ಕುಟುಂಬವನ್ನು ಸೇರಿಸಿದರು. ಅವಳು ಎರಡೂ ಕಡೆಯವರನ್ನು ವಂಚಿಸಿ ತಮ್ಮಿಂದ ಹಫ್ತಾ ವಸೂಲು ಮಾಡುತ್ತಿರುವಳೆಂದು ಆ ಪ್ರದೇಶದಲ್ಲಿದ್ದ ಬೃಹತ್ ಕಬ್ಬಿಣ ಮತ್ತು ಉಕ್ಕು ಕಂಪನಿ ಎಸ್ಸಾರ್ ಹೇಳಿತು. 

ಎಲ್ಲ ಬಂಡವಾಳಗಾರರಂತೆ ಎಸ್ಸಾರ್ ತನ್ನ ವ್ಯವಹಾರ ಸುಗಮವಾಗಿರಲು ಇತ್ತ ಅಧಿಕಾರಿಗಳಿಗೂ ಲಂಚ ಕೊಡುತ್ತಿತ್ತು, ಅತ್ತ ಆದಿವಾಸಿಗಳು ತಮ್ಮ ಸುದ್ದಿಗೆ ಬಾರದೇ ಕೆಲಸ ಸುಸೂತ್ರವಾಗಿ ನಡೆಯಲು, ಕಬ್ಬಿಣದ ಸ್ಲರಿ ಹಾದುಹೋಗುವ ಪೈಪ್‌ಲೈನ್ ಅನ್ನು ರಕ್ಷಿಸಲು ಮಾವೋವಾದಿಗಳಿಗೂ ಹಣ ಸಂದಾಯ ಮಾಡುತ್ತಿತ್ತು. ಇಬ್ಬರೂ ಫಲಾನುಭವಿಗಳು ಪರಸ್ಪರ ಕತ್ತಿ ಮಸೆಯುತ್ತಿದ್ದರು. 2011ರ ಸೆಪ್ಟೆಂಬರ್‌ನಲ್ಲಿ ಎಸ್ಸಾರ್ ಕಂಪನಿಯಿಂದ ಮಾವೋವಾದಿಗಳಿಗೆ ತಲುಪಿಸಲು 15 ಲಕ್ಷ ರೂಪಾಯಿ ಒಯ್ಯುತ್ತಿದ್ದರೆಂದು ಲಿಂಗಾರಾಂ ಕೊಡೊಪಿ, ಲಾಲ್ ಎಂಬ ಕಂಟ್ರಾಕ್ಟರ್ ಹಾಗೂ ಎಸ್ಸಾರ್ ಕಂಪನಿಯ ಅಧಿಕಾರಿಯನ್ನು ಪೊಲೀಸರು ಸಂತೆಯಲ್ಲಿ ಬಂಧಿಸಿದರು. ಅಲ್ಲೇ ಇದ್ದ ಸೋನಿ ತನಗೆ ಅಪಾಯವಿದೆಯೆಂದರಿತು ಸಂತೆಯ ಗದ್ದಲದಿಂದ ತಪ್ಪಿಸಿಕೊಂಡು ದೆಹಲಿ ಸೇರಿದಳು. ಅವಳನ್ನು ಕೆಲವೇ ದಿನಗಳಲ್ಲಿ ದೆಹಲಿ ಪೊಲೀಸರು ಹಣ ವಸೂಲಿ, ಅಪರಾಧ ಸಂಚು, ಕಾನೂನುಬಾಹಿರ ಚಟುವಟಿಕೆ ಮುಂತಾದ ಆರೋಪಗಳನ್ನು ಹೊರಿಸಿ ಬಂಧಿಸಿದರು.  

ಬಳಿಕ ವಿಚಾರಣೆಗಾಗಿ ದಾಂತೇವಾಡಾ ಪೊಲೀಸರ ಸುಪರ್ದಿಗೆ ವಹಿಸಲಾಯಿತು. ಪೊಲೀಸ್ ಕಸ್ಟಡಿ ಎನ್ನುವುದು ಭೂಮಿ ಮೇಲಿನ ನರಕವೆಂದು ಆ ಎರಡೇ ದಿನದಲ್ಲಿ ಸೋನಿಗೆ ತಿಳಿದುಹೋಯಿತು. ವಿಚಾರಣೆಗೆಂದು ಸಾಕ್ಷಾತ್ ಎಸ್‌ಪಿಯೇ ಬಂದ. ದಿನವಿಡೀ ಉಪವಾಸ ಕೆಡವಿದರು. ಊಹಿಸಲೂ ಆಗದಷ್ಟು ಅವಾಚ್ಯ ಪದಗಳಿಂದ ಬೈದು ಅವಮಾನಿಸಿದರು. ಪೊಲೀಸ್ ಮಾಹಿತಿದಾರಳಾಗು, ಬಿಡುಗಡೆ ಮಾಡುತ್ತೇವೆ ಎಂಬ ಆಮಿಷವೊಡ್ಡಿದರು. ಅರುಂಧತಿ ರಾಯ್, ಪ್ರಶಾಂತ ಭೂಷಣ್, ಹಿಮಾಂಶು ಕುಮಾರ್ ಮತ್ತಿತರ ಹೋರಾಟಗಾರರಿಗೆ, ಲಿಂಗಾರಾಮನಿಗೆ ಮಾವೋವಾದಿಗಳೊಂದಿಗೆ ಸಂಪರ್ಕ ಇದೆಯೆಂದು ಪತ್ರದಲ್ಲಿ ಬರೆದು ಸಹಿ ಹಾಕು ಎಂದರು. ಸೋನಿ ನಿರಾಕರಿಸಿದಳು. ಮತ್ತಾರೋ ವಿಚಾರಣೆ ನಡೆಸಲು ಬಂದರು. ನಕ್ಸಲೈಟರ ಸೂಳೆ ಎಂದು ಜರೆದರು. ಬತ್ತಲಾಗಿಸಿ ವಿದ್ಯುತ್ ಶಾಕ್ ಕೊಟ್ಟರು. ಯೋನಿಯಲ್ಲಿ, ಗುದದ್ವಾರದಲ್ಲಿ ಕಲ್ಲು ತುಂಬಿದರು. ಮೂತ್ರಕ್ಕೆ ಹೋಗಲೂ ಬಿಡಲಿಲ್ಲ. ಗುಪ್ತಾಂಗಗಳ ಸುತ್ತಲ ಗಾಯದಿಂದ ಕೂರಲಾಗದೇ ಒದ್ದಾಡಿದಳು. ಮೂರು ಮಕ್ಕಳನ್ನು ಹೆರುವಾಗ ಅನುಭವಿಸಿದ್ದಕ್ಕಿಂತ ಹೆಚ್ಚು ನೋವು ಅನುಭವಿಸಿದಳು. ಕುಡಿಯಲು, ತಿನ್ನಲು ಏನನ್ನೂ ಕೊಡಲಿಲ್ಲ. ಎರಡು ದಿನ ಹೊಡೆದು, ಸುಟ್ಟು, ಉಪವಾಸವಿಟ್ಟು ನ್ಯಾಯಾಲಯಕ್ಕೆ ಕರೆದೊಯ್ದ ಸಮಯದಲ್ಲಿ ಅವಳು ಏಳಲಾಗದ ಸ್ಥಿತಿಯಲ್ಲಿ ಜೀಪಿನಲ್ಲಿ ಬಿದ್ದುಕೊಂಡಿದ್ದಳು. ಹೇಳಿಕೆ ಕೊಡಲು ನಿರಾಕರಿಸಿದಳೆಂಬ ನೆಪ ಹೇಳಿ ಕಸ್ಟಡಿ ಮುಂದುವರೆಯಿತು. ಆರೋಗ್ಯ ಹದಗೆಟ್ಟಿತು. ಕಲಕತ್ತಾ ಆಸ್ಪತ್ರೆಗೆ ದಾಖಲು ಮಾಡಿ ಯೋನಿಯಲ್ಲಿದ್ದ ಕಲ್ಲುಗಳನ್ನು ಹೊರತೆಗೆದರು. ಸರ್ಕಾರದ ದಾಖಲೆಗಳಲ್ಲಿ ಇವನ್ನೆಲ್ಲ ಬರೆಯದೇ ಮರೆಮಾಚಿದರು.

ಅನಂತರ ಜಗದಾಳಪುರ ಜೈಲು ತಲುಪಿದ ಸೋನಿ ಅಲ್ಲಿ ತನ್ನಂತೆ ಬಂಧಿಯಾಗಿದ್ದ ಹಲವಾರು ಆದಿವಾಸಿ ತರುಣಿಯರನ್ನು ಕಂಡಳು. ಅವರೆಲ್ಲರೂ ಅತ್ಯಾಚಾರಕ್ಕೊಳಗಾಗಿದ್ದರು. ಯೋನಿಯಲ್ಲಿ ಕಡ್ಡಿ, ಲಾಠಿ ತುರುಕುವುದು, ಮೊಲೆತೊಟ್ಟು ಕತ್ತರಿಸುವುದು, ಗಾಯಕ್ಕೆ ಶಾಕ್ ಕೊಡುವುದೇ ಮೊದಲಾದ ಊಹಿಸಲಾಗದ ಭೀಭತ್ಸ ಹಿಂಸೆಗೆ ಈಡಾಗಿದ್ದರು. ಬಟ್ಟೆ ಬಿಚ್ಚಿಸಿ ಬೆತ್ತಲಾಗಿ ಕಾಲಗಲಿಸಿ ಕೂರುವಂತೆ ಹೇಳುತ್ತಿದ್ದರು. ಒಬ್ಬ ಹುಡುಗಿಯನ್ನಂತೂ ತಿಂಗಳುಗಟ್ಟಲೆ ಒಂದು ಸ್ಟೇಷನ್ನಿನಿಂದ ಇನ್ನೊಂದು ಸ್ಟೇಷನ್ನಿಗೆ ವರ್ಗಾಯಿಸಿ ದಿನನಿತ್ಯ ಅತ್ಯಾಚಾರ ನಡೆಸಿದ್ದರು. ಮಹಿಳಾ ಪೊಲೀಸರೂ ಶಿಕ್ಷಾ ಪ್ರಯೋಗಗಳನ್ನು ನಡೆಸಿದ್ದರು. ತಮಗೇಕೆ ಈ ಅವಮಾನ? ಇದರಲ್ಲಿ ತಮ್ಮ ತಪ್ಪೇನು? ಆದಿವಾಸಿಗಳ ನೆಲಜಲ ಸಂಪನ್ಮೂಲ ದೋಚುವ ದರೋಡೆಕೋರ ಕಂಪನಿಗಳನ್ನು ರಕ್ಷಿಸುವ ಸರ್ಕಾರ ತಮ್ಮ ಮೇಲೇಕೆ ದೌರ್ಜನ್ಯ ಎಸಗುತ್ತಿದೆ? ವಿಚಾರಣೆಯ ನೆಪದಲ್ಲಿ ಪೊಲೀಸರೇ ಎಸಗುತ್ತಿರುವ ಕ್ರೌರ್ಯಕ್ಕೆ ವ್ಯವಸ್ಥೆ ಏಕೆ ಕುರುಡಾಗಿದೆ? ಮುಂತಾದ ಪ್ರಶ್ನೆಗಳು ಸೋನಿಯನ್ನು ಬಾಧಿಸಿದವು. ಮುಖ್ಯಮಂತ್ರಿಗಳಿಗೊಂದು ಪತ್ರ ಬರೆದಳು. ತನ್ನನ್ನು ನಗ್ನಳಾಗಿಸಿ ಹಿಂಸಿಸಿದರೆ, ಯೋನಿಗೆ ಕಲ್ಲುಕಡ್ಡಿ ತುರುಕಿದರೆ, ವಿದ್ಯುತ್ ಶಾಕ್ ಕೊಟ್ಟರೆ ನಕ್ಸಲ್ ಬಿಕ್ಕಟ್ಟು ಕೊನೆಗೊಳ್ಳುವುದೇ ಎಂದು ಪ್ರಶ್ನಿಸಿದಳು. ಅದನ್ನು ಮಾನವ ಹಕ್ಕು ಹೋರಾಟಗಾರರ ಮೂಲಕ ಮಾಧ್ಯಮಗಳಿಗೆ ತಲುಪಿಸಿದಳು. ಅವಳಿಗೆ ತಲೆ ಸರಿಯಿಲ್ಲವೆಂದ ಆಡಳಿತ ಮಾನಸಿಕ ಚಿಕಿತ್ಸೆಗೆ ಕಳಿಸುವ ತಯಾರಿ ಮಾಡತೊಡಗಿತು.

ಈ ವೇಳೆಗೆ ಸೋನಿಯ ಪ್ರಕರಣ ದೇಶಾದ್ಯಂತ ಸುದ್ದಿಯಾಯಿತು. ದೇಶವಷ್ಟೇ ಅಲ್ಲ, ವಿಶ್ವದ ಎಲ್ಲ ಕಡೆಯಿಂದ ಅಪಾರ ಬೆಂಬಲ ಹರಿದು ಬಂತು. ‘ಒನ್ ಬಿಲಿಯನ್ ರೈಸಿಂಗ್’ ಅಭಿಯಾನದ ಭಾಗವಾಗಿ ಸಾವಿರಾರು ಪೋಸ್ಟ್ ಕಾರ್ಡುಗಳು ಜೈಲಿನಲ್ಲಿದ್ದ ಸೋನಿಯನ್ನು ತಲುಪಿದವು. ಮಾನವಹಕ್ಕು, ಮಹಿಳಾ ಸಂಘಟನೆಗಳು ಅವಳ ಬಿಡುಗಡೆಗೆ ಅಭಿಯಾನ ಆರಂಭಿಸಿದರು. ಅದರಲ್ಲೂ ಕಾಲಿನ್ ಗೊನ್ಸಾಲ್ವಿಸ್ ಎಂಬ ಸರ್ವೋಚ್ಚ ನ್ಯಾಯಾಲಯದ ಲಾಯರ್ ನಡೆಸುವ ‘ಹ್ಯುಮನ್ ರೈಟ್ಸ್ ಲಾ ನೆಟ್ವರ್ಕ್’ ಅವಳ ಪ್ರಕರಣದ ಎಲ್ಲ ಕೋನಗಳನ್ನೂ ಪರಿಶೀಲಿಸಿ ನ್ಯಾಯಾಲಯದ ದೀರ್ಘ ಹೋರಾಟಕ್ಕೆ ಬೆಂಬಲ ನೀಡಿತು. ಎರಡೂವರೆ ವರ್ಷ ಬಳಿಕ ಸರ್ವೋಚ್ಚ ನ್ಯಾಯಾಲಯ ಎಂಟರಲ್ಲಿ ಆರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಬೇಲ್ ಮೇಲೆ ಬಿಡುಗಡೆ ಮಾಡಿತು. 

2011ರಲ್ಲಿ ಅವಳ ಪತಿ ಅನಿಲ ಫುತಾನೆಯೂ ಬಂಧಿತನಾಗಿ ಕಸ್ಟಡಿಯಿಂದ ಬೇಗ ಬಿಡುಗಡೆಯಾಗಿದ್ದ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಡೆತ, ಗಾಯಗಳಿಂದ ಸುಧಾರಿಸಿಕೊಳ್ಳಲಾಗದೇ ತೀರಿಹೋದ. ಅದೇವೇಳೆಗೆ ಸೋನಿಯ ತಂದೆ ಪೊಲೀಸ್ ಮಾಹಿತಿದಾರನಾಗಿರುವನೆಂದು ಅವನ ಕಾಲಿಗೆ ಮಾವೋವಾದಿಗಳು ಗುಂಡು ಹೊಡೆದಿದ್ದರು. ಮನೆ ಸುಟ್ಟಿದ್ದರು. ಕೃಷಿ ಮಾಡಬಾರದೆಂಬ ಒತ್ತಡ ತಂದರು. ಅನಿವಾರ್ಯವಾಗಿ ಅವರು ಊರು ಬಿಡಬೇಕಾಯಿತು. ಆಗ ಅವಳ ಮೂವರು ಮಕ್ಕಳ ಪರಿಸ್ಥಿತಿ ಏನಾಗಿರಬಹುದು?! ಸೋನಿ ಬಿಡುಗಡೆಯಾದರೂ ಛತ್ತೀಸಗಡಕ್ಕೆ ಹೋಗುವಂತಿರಲಿಲ್ಲ. ಒಮ್ಮೆ ಹೋಗಿ ಮಕ್ಕಳ ಮುಖ ಕಂಡು ೨೪ ಗಂಟೆಯಲ್ಲಿ ವಾಪಸು ಬರಲು ಅನುಮತಿ ಸಿಕ್ಕಿತು. ಬೇಲ್ ಸಿಕ್ಕರೂ ಎರಡು ಪ್ರಕರಣಗಳ ತೂಗುಗತ್ತಿ ಅವಳ ತಲೆಯ ಮೇಲೆ ನೇತಾಡುತ್ತಲೇ ಇತ್ತು. ದೆಹಲಿಯ ಸಣ್ಣ ಮನೆಯೊಂದರಲ್ಲಿ ಅವಳು ಮತ್ತು ಲಿಂಗಾರಾಂ ಗೃಹಬಂಧನದಲ್ಲಿ ವಾಸಿಸಿದರು. ವಿದ್ಯಾರ್ಥಿಗಳನ್ನು, ಹೋರಾಟಗಾರರನ್ನು ಭೇಟಿಯಾದರು. ‘ಛತ್ತೀಸಗಡದಲ್ಲಿ ಲಾಲ್ ಸಲಾಂ ಎಂದರೆ, ಮಾರ್ಕ್ಸ್ ಎಂದರೆ ನಿಮ್ಮನ್ನು ನಕ್ಸಲ್ ಎಂದು ಬಂಧಿಸುತ್ತಾರೆ, ಇಲ್ಲಿ ಹಾಗಿಲ್ಲ’ ಎಂದು ಲಿಂಗಾರಾಮನೂ, ಅವಳೂ ಓದುವುದರಲ್ಲಿ ತೊಡಗಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗತೊಡಗಿದಾಗ ಸರ್ಕಾರ ಇರಿಸುಮುರುಸು ಅನುಭವಿಸಿತು. ಒಂದಾದಮೇಲೊಂದು ಪ್ರಕರಣಗಳಲ್ಲಿ ಅವಳು ನಿರ್ದೋಷಿಯೆಂದು ಸಾಬೀತಾದಾಗ ರಾಜಕೀಯಕ್ಕೆ ಇಳಿದಳು. ತನ್ನ ಕುಟುಂಬದವರು ಇದ್ದ ಕಾಂಗ್ರೆಸ್ ಪಕ್ಷ ಬೇಡವೆನಿಸಿತ್ತು. ಕಮ್ಯುನಿಸ್ಟ್ ಪಕ್ಷದ ನಡೆಗಳೂ ಬೇಸರ ತಂದಿದ್ದವು. ೨೦೧೪ರಲ್ಲಿ ಆಮ್‌ಆದ್ಮಿ ಪಕ್ಷ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಳು. ಸ್ವಾಮಿ ಅಗ್ನಿವೇಶ್ ಸೇರಿದಂತೆ ಹಲವರು ಅವಳ ಪರ ಪ್ರಚಾರ ಮಾಡಿದರು. ನಿರೀಕ್ಷೆಯಂತೆ ಹಣ ಚೆಲ್ಲದ ಅವಳು ಚುನಾವಣೆಯಲ್ಲಿ ಸೋತಳು. 2016ರಲ್ಲಿ ಬಸ್ತಾರಿನಲ್ಲಿ ಅಪರಿಚಿತರು ಆಸಿಡ್‌ನಂತಹ ಏನನ್ನೋ ಅವಳ ಮೇಲೆರಚಿ ಹೋದರು. ಮುಖವೆಲ್ಲ ಸುಟ್ಟು, ಬೊಬ್ಬೆಯೆದ್ದು ಕರಕಲಾಯಿತು. ಕಣ್ಣು ಬಿಡಲಾಗದೇ ಒದ್ದಾಡುವವಳನ್ನು ಯಾರೋ ಆಸ್ಪತ್ರೆಗೆ ಒಯ್ದರು. ಬಳಿಕ ದೆಹಲಿಗೆ ತೆರಳಿ ಚಿಕಿತ್ಸೆ ಪಡೆದಳು. 

ಆದಿವಾಸಿಗಳು ಸ್ವಾತಂತ್ರ್ಯ ಪ್ರೇಮಿಗಳು. ಸ್ವಯಂಪೂರ್ಣರು. ಸರ್ಕಾರದ ಸವಲತ್ತು, ಸಹಾಯ, ಕೋರ್ಟು ಕಾನೂನುಗಳ ನೆರವಿಲ್ಲದೆ ಸರಳವಾಗಿ ತಮ್ಮಂತೆ ತಾವು ಪ್ರಕೃತಿಯಲ್ಲಿ ಲೀನವಾಗಿ ಬದುಕುವವರು. ಅವರ ಭಾಷೆಯಲ್ಲಿ ಅನಾಥ ಎಂಬ ಶಬ್ದವಿಲ್ಲ. ಆದರೆ ಅವರೀಗ ನಾಗರಿಕ ವ್ಯವಸ್ಥೆಯ ದುರಾಸೆಗೆ ಬಲಿಯಾಗಿ ತಾವೇ ಅನಾಥರಾಗುತ್ತಿದ್ದಾರೆ. 

‘ನಾನೆದುರಿಸಿದ ಶಿಕ್ಷೆಯೇ ನನಗೆ ಬಲ ನೀಡಿತು’ ಎನ್ನುವ ಸೋನಿ ಈಗ ಅಧಿಕೃತವಾಗಿ ಸರ್ಕಾರದ ನ್ಯಾಯಭಾಷೆಯಲ್ಲಿ ಬಿಡುಗಡೆಯಾಗಿದ್ದಾಳೆ. ಆದರೆ ಅವಳ ಬಿಡುಗಡೆಗೆ ಯತ್ನಿಸಿದ, ಹೋರಾಡಿದ ಎಷ್ಟೋ ಹೋರಾಟಗಾರರು ಬಂಧಿಸಲ್ಪಟ್ಟಿದ್ದಾರೆ. ಅವಳ ಮುಖದಲ್ಲಿ ನಗೆಯ ಒಂದು ಎಳೆಯೂ ಕಾಣುವುದಿಲ್ಲ. ನೆಮ್ಮದಿಯ ಒಂದು ಗೆರೆಯೂ ಸಡಿಲವಿಲ್ಲ. ಅಪಮಾನ, ಅತ್ಯಾಚಾರ, ನೋವು, ಆರೋಪ, ಶಿಕ್ಷೆ, ಮಾನನಷ್ಟ, ಆಪ್ತರ ಸಾವು, ಅಸಹಾಯಕತೆ ಮುಂತಾಗಿ ನುಡಿಕೋಶದಲ್ಲಿ ಬದುಕಿನ ಕಷ್ಟನೋವುಗಳನ್ನು ವಿವರಿಸಬಲ್ಲ ಯಾವ್ಯಾವ ಪದಗಳಿವೆಯೋ ಅವನ್ನೆಲ್ಲ ಅನುಭವಿಸಿ ಗಟ್ಟಿಯಾಗಿರುವ, ಸುಟ್ಟುಕೊಂಡಿರುವ ಜೀವ ಅವಳದು. ಅವಳ ಬಿಡುಗಡೆ ಅವಳಿಗೆ ಎಂತಹ ಬಿಡುಗಡೆಯಾಗಿದೆ, ಅವಳ ಮುಂದಿನ ಹೆಜ್ಜೆಗಳು ಎಷ್ಟು ಮುಕ್ತವಾಗಿರಲಿವೆ ಎನ್ನುವುದು ಕಾದು ನೋಡಬೇಕಾದ ಸಂಗತಿಯಾಗಿದೆ. 

‘ನಕಲಿ ಪ್ರಕರಣಗಳನ್ನು ಸೃಷ್ಟಿಸಿ, ಎನ್‌ಕೌಂಟರ್ ಹತ್ಯೆ ಮಾಡುತ್ತಿರುವ ಸುರಕ್ಷಾ ಪಡೆಗಳ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ನಾನು ಬಂಧಿತಳಾದಾಗ ಶಿಕ್ಷಕಿ ವೃತ್ತಿಗೆ ರಾಜೀನಾಮೆ ನೀಡಿರಲಿಲ್ಲ. ನನ್ನಂತೆ ಬಸ್ತಾರಿನಲ್ಲಿ ಬಹಳ ಶಿಕ್ಷಕಿಯರು ತಮ್ಮವರ ಪರ ದನಿ ಎತ್ತಿ ಮಾವೋವಾದಿಗಳೆಂಬ ಹಣೆಪಟ್ಟಿ ಹೊತ್ತು ಕಿರುಕುಳ ಅನುಭವಿಸುತ್ತ ಬದುಕಿದ್ದಾರೆ. ನಾನೀಗ ಮರಳಿ ಕೆಲಸಕ್ಕೆ ಹೋದರೆ ಅಂತಹ ಶಿಕ್ಷಕಿಯರಿಗೆ ತಾವು ಮಾವೋವಾದಿಗಳಲ್ಲ ಎಂದು ಹೇಳಲು ಧೈರ್ಯ ಬರುತ್ತದೆ. ನಕ್ಸಲ್ ಹಣೆಪಟ್ಟಿ ಹೊತ್ತವರು ಬಿಡುಗಡೆಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ತೊಡಗಬಹುದಾಗಿದೆ’ ಎನ್ನುವ ಸೋನಿ ಆದಿವಾಸಿ ಮಹಿಳೆಯರಲ್ಲಿ ಹೋರಾಟದ ಚೈತನ್ಯ ತುಂಬಬಲ್ಲವಳು. ‘ಮೊದಲೆಲ್ಲ ಜನ ಯಾಕೆ ನಕ್ಸಲೈಟರಾಗುತ್ತಾರೆ ಎಂದುಕೊಳ್ಳುತ್ತಿದ್ದೆ. ಆದರೆ ಈಗ ಅರಿವಾಗುತ್ತಿದೆ, ಆದಿವಾಸಿಗಳು ನಕ್ಸಲರಾಗಲು ಸರ್ಕಾರವೇ ಕಾರಣ. ಅವರ ಬದುಕು ಎಷ್ಟು ದುರ್ಭರವಾಗಿದೆ ಎಂದರೆ ಕೋವಿ ಹಿಡಿಯದೇ ಬೇರೆ ಮಾರ್ಗವೇ ಇಲ್ಲ. ನನಗೂ ಅಕ್ಷರ ಬರದಿದ್ದರೆ ಮಾವೋವಾದ ಬಿಟ್ಟು ಬೇರೆ ದಾರಿಯಿರಲಿಲ್ಲ. ಆದರೆ ನನಗೆ ನನ್ನ ಪೆನ್ನಿನ ಮೇಲೆ ನಂಬಿಕೆಯಿದೆ. ನನ್ನ ಶಿಕ್ಷಣದ ಮೇಲೆ ನಂಬಿಕೆಯಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ಬೇಕು. ಸರ್ಕಾರ ಸಹಾಯ ಕೊಡದಿದ್ದರೆ ಬೇರೆ ಕಡೆಯಿಂದ ದುಡ್ಡೆತ್ತಿ ಆ ಕೆಲಸ ಮಾಡುತ್ತೇನೆ, ಆದಿವಾಸಿ ಮಕ್ಕಳೂ ಸಹಿತ ಓದಿ ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಆಗಬೇಕು, ಹಾಗೆ ಶಾಲೆ ನಡೆಸುತ್ತೇನೆ. ಇದು ನನ್ನ ಕನಸು..’ ಎನ್ನುತ್ತಾಳೆ.

ಸೋನಿಯ ಕನಸು ಅರಣ್ಯವಾಸಿಗಳ ನಾಳೆಗಳ ಬಗೆಗೆ ಭರವಸೆ ತುಂಬುವಂತಿದೆ. ನಕಲಿ ಕೇಸುಗಳಲ್ಲಿ ಆದಿವಾಸಿಗಳರನ್ನು ಸಿಲುಕಿಸಿ, ಎನ್‌ಕೌಂಟರ್ ಹೆಸರಲ್ಲಿ ಹತ್ಯೆ ಮಾಡುವ ರಕ್ಷಣಾಪಡೆಗಳ ವಿರುದ್ಧ ಸೋನಿ ಸೋರಿಯಂತೆಯೇ ದಯಾಮಣಿ ಬಾರ್ಲಾ, ಕುನಿ ಶಿಕಾಕಾ, ಶಕುಂತಲಾ ಟೊಪೊ, ಹಿದ್ಮೆ ಮರ್ಕಂ ಮೊದಲಾದ ಆದಿವಾಸಿ ಮಹಿಳೆಯರು ಹೋರಾಡುತ್ತಿದ್ದಾರೆ. ಲಿಂಗನ್ಯಾಯದ ಪ್ರಶ್ನೆಗಳನ್ನು ಅರಣ್ಯವಾಸಿಗಳಿಗೂ, ಅರಣ್ಯದಲ್ಲಿರುವ ಕ್ರಾಂತಿಕಾರಿಗಳಿಗೂ, ಆಡಳಿತ ಯಂತ್ರಕ್ಕೂ ಕೇಳಬಲ್ಲಷ್ಟು ಶಕ್ತರಾಗಿದ್ದಾರೆ.