Tuesday 12 July 2016

ಸಂತಾನೋತ್ಪತ್ತಿ: ಒಂದಷ್ಟು ವಿಜ್ಞಾನ, ಮತ್ತೊಂದಷ್ಟು..







(krishna giliyar chitra)

ಜೋರು ಮಳೆ ಶುರುವಾಗಿ ಒಂದು ತಿಂಗಳ ಮೇಲಾಯಿತು. ಅವರವರ ಅವಶ್ಯಕತೆಗೆ ತಕ್ಕ ತಯಾರಿಯಲ್ಲಿ ಅವರವರು ತೊಡಗಿದ್ದಾರೆ. ಮಳೆಗಾಲವೆಂದರೆ ಬೇಗ ಒಣಗುವ ಕಾಟನೇತರ ಬಟ್ಟೆ ಧರಿಸುವುದು; ಒಣಗದ ಬಟ್ಟೆಗಳ ಇಸ್ತ್ರಿ ಮಾಡಿ ಬಲವಂತವಾಗಿ ಒಣಗಿಸಿ ಹಾಕಿಕೊಳ್ಳುವುದು; ಹೊಟ್ಟೆ ಜಡವಾಗದ ಹಾಗೆ ಬಿಸಿ, ಲಘು ಆಹಾರ ತೆಗೆದುಕೊಳ್ಳುವುದು; ಒದ್ದೆ ಕೈಯಲ್ಲಿ ಏನನ್ನೂ ಮುಟ್ಟದಿರುವುದು; ಮಕ್ಕಳನ್ನು ಮಳೆಥಂಡಿಯಲ್ಲಿ ಎಬ್ಬಿಸಿ, ತಯಾರು ಮಾಡಿ ಶಾಲೆಗೆ ಕಳಿಸುವುದು ಇತ್ಯಾದಿ. ಮೀನುಪ್ರಿಯರ ಬವಣೆ ಬೇರೆ: ಸಂತಾನೋತ್ಪತ್ತಿ ಕಾಲವೆಂದು ಒಂದೂವರೆ ತಿಂಗಳ ಕಾಲ ಮಾನ್ಸೂನ್‌ಗಾಗಿ ಮೀನುಗಾರಿಕೆ ನಿಷೇಧ ಆಗುವುದರಿಂದ ಬೇರೆ ಆಹಾರಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯ ಸಂಕಟ ಅವರದು. ಹೊರಗೆ ಕಚೇರಿ, ವ್ಯಾಪಾರವೆಂದು ತಿರುಗುವವರಿಗೆ ಕೊಡೆ ಹಿಡಿದೇ ತಿರುಗುವ, ಸೂಡಿಕೊಂಡು ಹೋದ ಕೊಡೆಯನ್ನು ನಂತರ ನೆನಪಿಟ್ಟು ಮರಳಿ ತರುವ ಜವಾಬ್ದಾರಿ. ಜಪ್ಪಿ ಹುಯ್ದು ಥಂಡಿ ಹುಟ್ಟಿಸುವ ಮೃಗಶಿರಾ-ಆರಿದ್ರೆಗಳೆಂಬ ಎರಡು ನಕ್ಷತ್ರಗಳ ಮಳೆ ಕಳೆದರೆ ಇನ್ನೊಂದು ವರ್ಷ ಬದುಕಿಯೇನು ಎಂಬ ಚಿಂತೆ ಪ್ರಾಯ ಹೋದವರದು.

ಹೀಗೆ ಜನವರ್ಗ ತನ್ನ ಸ್ಥಳ, ಉದ್ಯೋಗ, ಅವಶ್ಯಕತೆಗೆ ಅನುಗುಣವಾಗಿ ತೊಡಗಿರುವ ಬದಲಾವಣೆಗಳದು ಒಂದು ತೂಕವಾದರೆ ಮನುಷ್ಯೇತರ ಜೀವಸಾಮ್ರಾಜ್ಯದ ಅಸಂಖ್ಯಾತ ಜೈವಿಕ ಕ್ರಿಯೆಗಳದು ಸಾವಿರ ಪಟ್ಟು ತೂಕ. ಮನುಷ್ಯನಿಗೆ ಆಹಾರೋತ್ಪಾದನೆ ಹಾಗೂ ದೈನಂದಿನ ಚಟುವಟಿಕೆಗಳ ನಡೆಸಿಕೊಂಡು ಹೋಗಲು ಒಂದು ತೆರನ ಚಟುವಟಿಕೆ ಅವಶ್ಯವಾದರೆ; ನಮ್ಮ ಎದುರು, ಅಕ್ಕಪಕ್ಕ, ಸಂದಿಗೊಂದಿ ಸುಳಿವ ಪಶುಪಕ್ಷಿ ಕ್ರಿಮಿಕೀಟಗಳಲ್ಲಿ ಅತ್ಯಂತ ವೇಗದ, ವಿಶಿಷ್ಟ ಚಟುವಟಿಕೆಗಳು ನಮ್ಮ ಗಮನಕ್ಕೇ ಬರದೆ ನಡೆದುಹೋಗುತ್ತಿರುತ್ತವೆ. ಕೇವಲ ಒಂದು ಮಳೆ, ಒಂದೇ ಒಂದು ಮಳೆ ಸೃಷ್ಟಿಸಿಬಿಡುವ ಅದ್ಭುತಗಳನ್ನು ಗಮನಿಸಿದರೆ ಪ್ರಕೃತಿ ಎಂಥ ವಿಸ್ಮಯವೆಂಬ ಅರಿವಾಗುತ್ತದೆ.

ಪ್ರಾಣಿಲೋಕಕ್ಕೆ ಮಳೆಗಾಲವೆಂದರೆ ಕನ್ಯಾಮಾಸ, ಕನ್ನಿ ತಿಂಗ್ಳ್. ಮಕ್ಕಳುಮರಿ ಮಾಡಿಕೊಳ್ಳುವ ತುರ್ತುಪರಿಸ್ಥಿತಿಯ ಕಾಲವೂ ಹೌದು. ಭವಿಷ್ಯದಲ್ಲಿ ೨-೩ ವರ್ಷ ಸೂಕ್ತ ಪರಿಸ್ಥಿತಿ ಪೂರಕವಾಗಿ ಒದಗದಿರಬಹುದು ಎಂದು ಆದಷ್ಟು ತುರ್ತಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಇದರಲ್ಲಿ ವಿಸ್ಮಯವೇನಿಲ್ಲ, ಮನರಂಜನೆ-ಬೇಸರ-ಯುದ್ಧ ಗೊತ್ತಿರದ ಜೀವಿಗಳು ನಡೆಸುವ ಎಲ್ಲ ಅಂದರೆ ಎಲ್ಲ ಕ್ರಿಯೆಗಳು ಕೇವಲ ಸಂತಾನೋತ್ಪತ್ತಿಗಾಗಿ, ತಮ್ಮ ಉಳಿವಿಗಾಗಿಯೇ ಇವೆ. ಮನುಷ್ಯ ತಾನೂ ಉಳಿದ ಜೀವಿಗಳಂತೆ ಕೇವಲ ಒಬ್ಬ ಜೀವಿ ಎಂದುಕೊಳ್ಳುವ  ಮನಸ್ಥಿತಿ ದಕ್ಕಬೇಕಾದರೆ ಮತ್ತೆಮತ್ತೆ ಪ್ರಾಣಿ ಲೋಕದತ್ತ ಕಣ್ಣುಹಾಯಿಸುತ್ತಿರಬೇಕಾಗುತ್ತದೆ. ಅಂಥ ಕೆಲ ನೋಟಗಳು, ಅದರಲ್ಲು ಸಂತಾನೋತ್ಪತ್ತಿ ಚಟುವಟಿಕೆ ಕುರಿತ ಅವಲೋಕನಗಳು ಇಲ್ಲಿವೆ:

ಕಪ್ಪೆ-ಜೀರುಂಡೆ ನ್ಯಾಯ: ಗೆದ್ದರೆ ಸದ್ದು, ಸೋತರೆ ಸುಮ್ಮನಿರು!

ಬೇಸಿಗೆಯ ಸದ್ದುಗಳೇ ಬೇರೆ. ಅಲ್ಲಿ ಬಲು ಸದ್ದು ಮಾಡುವುದು ಬಿಸಿಲು. ಮನುಷ್ಯನ ಸುಳಿವಿರದ ಪ್ರಕೃತಿಯೆದುರು ನಿಂತರೆ ಬೇಸಿಗೆಯಲ್ಲಿ ಮೌನದ ಸದ್ದೇ ಹೆಚ್ಚು. ಆದರೆ ಮಳೆಗಾಲದ ಖದರೇ ಬೇರೆ. ಎಲ್ಲ ಜೀವರಾಶಿಗಳ ಸರ್ವಾಂಗಗಳೂ ಬಾಯಿಗಳೇನೋ ಎನ್ನುವಷ್ಟು ಸದ್ದು ಕೇಳಿಸುತ್ತದೆ. ಅದರಲ್ಲು ನೀವು ಮಲೆನಾಡಿನ ಮಳೆಕಾಡಿನ ಸನಿಹದಲ್ಲಿದ್ದರೆ ಈ ಮಾತು ಹೆಚ್ಚು ಅರ್ಥವಾಗುತ್ತದೆ.

ಸದ್ದುಗದ್ದಲ ಎಬ್ಬಿಸುವುದರಲ್ಲಿ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಸುವವರು ಕಪ್ಪೆ ಹಾಗೂ ಜೀರುಂಡೆ. ಮಳೆಬಂದ ನಂತರ ನಿಂತ ನೀರಿನ ಬಳಿ ನಾನಾ ಲಯ, ಶೃತಿಯಲ್ಲಿ ಅವು ವರಲುವುದು ಕೇಳಿದರೆ ಮಳೆಯೊಡನೆ ಭೂಮಿಗೆ ಎಷ್ಟು ಬಾಯಿ, ಗಂಟಲು ಮೂಡಿದೆಯೊ ಅನಿಸದೆ ಇರದು. ಇಲ್ಲೊಂದು ವಿಶೇಷವಿದೆ: ಇವೆರೆಡೂ ಸದ್ದು ‘ಹಾಡು' ಅಲ್ಲ, ಸಂಗಾತಿಯನ್ನು ಕರೆವ ‘ಕರೆ'ಗಳು. ಯಾಕೆಂದರೆ ಸದ್ದು ಬಾಯಿಂದ ಬಂದಿದ್ದಲ್ಲ, ಬದಲಾಗಿ ಬೇರೆ ಅಂಗಾಂಗಗಳಿಂದ ಹೊರಡಿಸಿದ್ದು. ಅಷ್ಟೇ ಅಲ್ಲ, ಆ ಸದ್ದನ್ನು ಮಾಡುವವರು ಕೇವಲ ಗಂಡುಗಳು!

ಸದ್ದು ಶುರು ಮಾಡುವವರಲ್ಲಿ ಕಪ್ಪೆಯೆ ಮೊದಲು. ಅದರದು ಮಳೆ ಸುರಿವ ಮುನ್ನ ಮೋಡದ ಊಹೆಗೇ ಶುರುವಾಗುವ ಸದ್ದು. ಕಪ್ಪೆ ಶೀತರಕ್ತ ಪ್ರಾಣಿ. ಗಾಳಿಯಲ್ಲಿರುವ ನೀರು, ಆಮ್ಲಜನಕ ಹೀರಿಕೊಂಡು ಬದುಕಬಲ್ಲ, ನೀರು-ನೆಲ ಎರಡು ಕಡೆಯಲ್ಲು ಬದುಕುವ ಉಭಯಜೀವಿ. ಎಲ್ಲೊ ಹುದುಗಿಕೊಂಡಿರುವ ಕಪ್ಪೆಗೆ ಆಗಸದ ಮೋಡ ಕಾಣಲು ಬೆನ್ನಿನಲ್ಲಿ ಕಣ್ಣಿಲ್ಲ, ಆದರೆ ಅದರ ಚರ್ಮವೆಲ್ಲ ಕಣ್ಣೇ. ಒಂದು ಮಳೆ ಬಿದ್ದರೆ ಸಾಕು, ಚಿತ್ರ ವಿಚಿತ್ರ ಸದ್ದುಗಳಲ್ಲಿ ವಟರಗುಟ್ಟಲು ಶುರು ಮಾಡುತ್ತದೆ. ಗಂಡುಗಳು ಸಂತಾನೋತ್ಪತ್ತಿಗೆ ಪ್ರಶಸ್ತವಾದ ತೇವವಿರುವ ಸ್ಥಳವನ್ನು ಹುಡುಕಿಕೊಂಡು ಬರುತ್ತವೆ. ಹಲವು ಗಂಡುಗಳು ಅಂಥ ಜಾಗಗಳಲ್ಲಿ ನೆಲೆಯಾಗಿ ತಮ್ಮ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ತಿಳಿಸಲು; ಹೆಣ್ಣನ್ನು ಶೃತಿ-ಲಯಗಳೊಂದಿಗೆ ಆಕರ್ಷಿಸಲು ಬಾಯಿ ತೆಗೆಯದೆ ಸದ್ದು ಹೊರಡಿಸಿ ಹೆಣ್ಣುಗಳ ಕರೆಯತೊಡಗುತ್ತವೆ. ಸದ್ದು ಹೊರಡಿಸಲಾರದಂಥವು ಈಗಾಗಲೇ ಗದ್ದಲ ಇರುವ ಜಾಗಗಳಲ್ಲಿ, ಎಂದರೆ ಹರಿವ ನೀರಿನ ಪಕ್ಕ ನೆಲೆಯಾಗಿ ಬಣ್ಣ, ಆಕಾರ, ಜಿಗಿತ ಮೊದಲಾದ ಬೇರೆ ವಿಧಾನಗಳಲ್ಲಿ ಹೆಣ್ಣನ್ನು ಆಕರ್ಷಿಸುತ್ತವೆ.



ಚ್ಯೂಯಿಂಗ್ ಗಂ ಜಗಿದ ಮಕ್ಕಳು ಬಾಯೆದುರು ಮಾಡುವ ಗುಳ್ಳೆಯಂತಹ ಚೀಲ ಕಪ್ಪೆಯ ಗಂಟಲ ಕೆಳಗಿರುವುದನ್ನು ಬಹಳಷ್ಟು ಜನ ನೋಡಿರಬಹುದು. ಅದು ಗಂಟಲ ಕೆಳಗಿನ ಗಾಳಿ ಚೀಲ. ಗಾಳಿಚೀಲದ ಜೊತೆ ಗಂಟಲೂ ಜೊತೆಗೂಡಿ ಎಷ್ಟು ಜೋರು ಸದ್ದು ಹೊರಡಿಸುತ್ತವೆಂದರೆ ಒಂದು ಮೈಲು ದೂರದವರೆಗೆ ಕೇಳುತ್ತದೆ. ಅದರಲ್ಲಿ ಗಾಳಿಯನ್ನು ಇಷ್ಟಿಷ್ಟೆ ತುಂಬಿಕೊಂಡು ಕಂಪಿಸಲು ಶುರು ಮಾಡುವ ಮೂಲಕ ಗಂಡು ತನ್ನ ಶಕ್ತಿ, ಸಾಮರ್ಥ್ಯ, ಪ್ರೀತಿ, ತಾನಿರುವ ಸ್ಥಳ ಎಲ್ಲವನ್ನು ಹೆಣ್ಣಿಗೆ ತಿಳಿಸುತ್ತದೆ. ಈ ಸದ್ದಿಗೆ ಹೆಣ್ಣು ಪ್ರತಿಕ್ರಿಯೆಯ ಉತ್ತರ ನೀಡುತ್ತದೆ. ಉತ್ತರವು ಗಂಡನ್ನು ಸಂತಾನೋತ್ಪತ್ತಿ ಪ್ರಕ್ರಿಯೆಗೆ ಇನ್ನಷ್ಟು ಪ್ರಚೋದಿಸುತ್ತದೆ. ಹೆಣ್ಣುಗಳು ಗಟ್ಟಿಯಾಗಿ ಆದರೆ ಕಡಿಮೆ ವೇಗದಲ್ಲಿ ಹಾಡುವ ಗಂಡುಗಳನ್ನು ಹೆಚ್ಚು ಸಮರ್ಥ ಎಂದು ಭಾವಿಸುತ್ತವೆ. ಗಂಡುಗಳ ಸಂಖ್ಯೆ ಹೆಣ್ಣಿಗಿಂತ ಜಾಸ್ತಿ. ನೂರಾರು ಗಂಡಿದ್ದರೇನು, ಯಾರದು ಗಟ್ಟಿಧ್ವನಿ ಎಂದು ತನಗನಿಸುವುದೊ ಅದನ್ನೆ ಹೆಣ್ಣು ಆಯ್ದುಕೊಳ್ಳುತ್ತದೆ.

ಕಪ್ಪೆಗಳಲ್ಲಿ ಹೆಣ್ಣುಗಂಡಿನ ನಡುವೆ ಸ್ಪರ್ಶ ಸಂಪರ್ಕವಿದೆ, ಆದರೆ ಲೈಂಗಿಕ ಸಂಪರ್ಕವಿಲ್ಲ. ಅಲ್ಲಿ ಸಂತಾನೋತ್ಪತ್ತಿ ಬಾಹ್ಯ. ಎಂದರೆ ಹೆಣ್ಣು ಮೊಟ್ಟೆಗಳನ್ನು ಹೊರಗೆ ಬಿಡುಗಡೆ ಮಾಡುತ್ತದೆ, ಗಂಡು ವೀರ್ಯವನ್ನು ಬಿಡುಗಡೆಯಾದ ಮೊಟ್ಟೆಗಳ ಮೇಲೆ ಸ್ರವಿಸಿ ಫಲಿತಗೊಳಿಸುತ್ತದೆ. ಮೊಟ್ಟೆಗಳ ಹೊರಸುರಿಸುವಂತೆ ಹೆಣ್ಣನ್ನು ಒಪ್ಪಿಸಲು ಗಂಡು ಹೆಣ್ಣಿನ ಬೆನ್ನುಸವಾರಿ ಮಾಡುತ್ತದೆ. ಅದನ್ನು ‘ಆಂಪ್ಲೆಕ್ಸಸ್' ಎಂದು ವಿಜ್ಞಾನ ಭಾಷೆಯಲ್ಲಿ, ಅಪ್ಪುಗೆ ಎಂದು ಕನ್ನಡದಲ್ಲಿ ಹೇಳಬಹುದು. ಸಾಧಾರಣವಾಗಿ ಗಂಡುಗಳು ಹೆಣ್ಣಿನ ಗಾತ್ರದ ಅರ್ಧದಷ್ಟಿರುತ್ತವೆ. ಹೆಣ್ಣಿನ ಬೆನ್ನ ಮೇಲೆ ಕುಳಿತು ತನ್ನ ಮುಂಗಾಲುಗಳಿಂದ ಹೆಣ್ಣಿನ ಕುತ್ತಿಗೆ ಕೆಳಭಾಗ ಒತ್ತಿಹಿಡಿಯುತ್ತದೆ. ಭದ್ರವಾದ ಹಿಡಿತಕ್ಕೆಂದೇ ಗಂಡಿನ ಮುಂಗಾಲ ಒಳಭಾಗದಲ್ಲಿ ವಿಶಿಷ್ಟ ಪ್ಯಾಡುಗಳಿರುತ್ತವೆ. ಈ ಹಿಡಿತ ಹೆಣ್ಣಿಗೆ ಅಂಡವನ್ನು ಸ್ರವಿಸಲು ಪ್ರಚೋದಿಸುತ್ತದೆ. ಇದು ಕೆಲವೊಮ್ಮೆ ದಿನಗಟ್ಟಲೆ ತೆಗೆದುಕೊಳ್ಳಬಹುದು. ಹೆಣ್ಣು ಲೋಳೆಯಿಂದಾವೃತವಾದ ಅಂಡಗಳನ್ನು ನೀರಿನಲ್ಲಿ ಅಥವಾ ಒದ್ದೆ ಜಾಗದಲ್ಲಿ ಬಿಡುಗಡೆ ಮಾಡಿದ್ದೇ ಗಂಡು ಮೂತ್ರನಾಳದ ಮೂಲಕ ಮೊಟ್ಟೆಗಳ ಮೇಲೆ ವೀರ್ಯ ಸುರಿಸುತ್ತದೆ.



ಹೆಣ್ಣುಗಳು ಇನ್ನೂ ಹೆಚ್ಚು ‘ಸಮರ್ಥ' ಗಂಡು ಸಿಕ್ಕರೆ ಇರಲಿ ಎಂದು ಅರ್ಧದಷ್ಟು ಅಂಡಗಳನ್ನು ಮಾತ್ರ ಹೊರಸುರಿಸಿ ಉಳಿದವನ್ನು ಹಾಗೇ ಇಟ್ಟುಕೊಂಡಿರುತ್ತವೆ. ಇದಕ್ಕೆ ವ್ಯಭಿಚಾರ ಎಂದು ಹೆಸರಿಟ್ಟುಬಿಡಬೇಡಿ; ತಳಿ ರಕ್ಷಣೆಗಾಗಿ, ಉತ್ತಮ ತಳಿ ಸೃಷ್ಟಿಗಾಗಿ ಈ ಕಾಯ್ದಿರಿಸುವಿಕೆ. ಹೆಣ್ಣು ತನ್ನ ಕೆಲಸ ಮುಗಿದದ್ದೇ ಜಾಗ ಖಾಲಿ ಮಾಡಿದರೆ ಗಂಡು ಸುರಿದ ವೀರ್ಯವನ್ನು, ಫಲಿತಗೊಂಡ ಅಂಡಗಳನ್ನು ಕೆಲಕಾಲ ತನ್ನ ಭೌಗೋಳಿಕ ಪ್ರದೇಶ ರಕ್ಷಿಸಿಕೊಳ್ಳುತ್ತ ಕಾಯುತ್ತದೆ. ಕೆಲಗಂಡುಗಳಂತೂ ತಮ್ಮ ಹಿಂಗಾಲ ನಡುವೆ ಫಲಿತ ಮೊಟ್ಟೆಗಳನಿಟ್ಟುಕೊಂಡು ಕಾಯುತ್ತವೆ. ಇನ್ನು ಕೆಲ ಗಂಡುಗಳು ಫಲಿತ ಮೊಟ್ಟೆಗಳ ಮೇಲೆ ಜೆಲ್ಲಿ ಸ್ರವಿಸಿ ತಮ್ಮನ್ನು ತಾವು ಅದರ ನಡುವೆ ಮುಳುಗಿಸಿಕೊಂಡುಬಿಡುತ್ತವೆ!

ಇಂತಿಪ್ಪ ಮಂಡೂಕ ಸಂತಾನೋತ್ಪತ್ತಿ ಪುರಾಣಂ ಸಂಪೂರ್ಣಂ!!

ಮಳೆಗಾಲದ ಮತ್ತೊಬ್ಬ ಗಲಾಟೆಕೋರ ಜೀರುಂಡೆಗಳ ಕತೆಯೇನು? ಮಲೆನಾಡಿನ ಇರುಳುಗಳಲ್ಲಿ ಜೀರುಂಡೆ ಸದ್ದಿದ್ದರೆ ಮಾತ್ರ ಮರುಬೆಳಗು ಸೂರ್ಯ ಹುಟ್ಟುವುದು. ಕಿವಿಯೊಳಗೆ ಭೈರಿಗೆ ಹಾಕಿ ಕೊರೆದಂಥ ಸದ್ದು ಅವುಗಳದ್ದು. ಎಲ್ಲಿದ್ದಾವೆಂದು ಕಣ್ಣಿಗೇ ಕಾಣಿಸದ ಕೀಟವನ್ನು ನೋಡಿದವರು ಕಮ್ಮಿ, ‘ಕೇಳಿದವರು' ಬಹಳ. ಜೀರುಂಡೆ ಕೂಡ ಗಂಟಲಿನಿಂದ ಕೂಗುವುದಿಲ್ಲ. ತನ್ನ ದೇಹಕ್ಕಿಂತ ಗಿಡ್ಡದಾಗಿರುವ ರೆಕ್ಕೆಯನ್ನು ಅದುರಿಸಿ ಸದ್ದು ಹೊರಡಿಸುತ್ತದೆ. ಆ ರೆಕ್ಕೆಗಳು ತಂತಿಕಡ್ಡಿಗಳ ಜಾಲರಕಂಟಿಸಿದ ಚರ್ಮದ ಹಾಳೆಗಳು. ರೆಕ್ಕೆಗಳನ್ನು ಒಂದು ಕೋನದಲ್ಲಿ ಮೇಲೆತ್ತಿ ಎರಡೂ ರೆಕ್ಕೆ ಕಂಪಿಸುವಂತೆ ಮಾಡಿದಾಗ ರೆಕ್ಕೆ ನಡುವಿನ ಘರ್ಷಣೆ, ಗಾಳಿ, ಕಂಪನ ಎಲ್ಲ ಸೇರಿ ಒಂದು ಕರ್ಣಕಠೋರ ಶಬ್ದ ಉತ್ಪತ್ತಿಯಾಗುತ್ತದೆ.

ಈ ಸದ್ದು ಸೃಷ್ಟಿಸುವವರು ಗಂಡುಗಳು. ಅದು ಕರೆಯುವ, ಮನವೊಲಿಸುವ, ವಿಜಯೋತ್ಸವ ಆಚರಿಸುವ, ಒಂದು ಮಿಲನದ ಬಳಿಕ ಮತ್ತುಳಿದ ಮೊಟ್ಟೆಗಳನ್ನೂ ಇಲ್ಲೆ ಫಲಿತಗೊಳಿಸು ಎಂದು ಹೆಣ್ಣಿನ ಮನವೊಲಿಸುವ ಸದ್ದು.


ಮಳೆಗಾಲ, ತಂಪು ಕಾಲ ಬಂದದ್ದೆ ಮೀಸೆಯಿಂದ ಉಳಿದವರೊಡನೆ ಗುದ್ದಾಡಿ ಗಂಡು ಜೀರುಂಡೆ ತನ್ನ ಪ್ರದೇಶ ಗುರುತಿಸಿಕೊಳ್ಳುತ್ತದೆ. ಗೆದ್ದವ ಸದ್ದು ಮಾಡುತ್ತಾನೆ. ಸೋತವ ಸುಮ್ಮನಾಗುತ್ತಾನೆ. ಮೀಸೆಯಿಂದಲೆ ಬಳಿಬಂದ ಹೆಣ್ಣಿನ ಓಲೈಕೆ ಶುರುವಾಗುತ್ತದೆ. ಗಂಡು ವೀರ್ಯ ರಸವನ್ನು ಒಂದು ಪುಟ್ಟಚೀಲದಲ್ಲಿ ತುಂಬಿಸಿ ಅದನ್ನು ಬೆನ್ನ ಮೇಲೆ ಇಟ್ಟುಕೊಂಡಿರುತ್ತದೆ. ಅದರ ಮೇಲೆ ಒಲಿದ ಹೆಣ್ಣು ಕೂರುತ್ತದೆ. ತನ್ನ ಅಂಡಕೋಶದಲ್ಲಿ ವೀರ್ಯಚೀಲ ಹೊಕ್ಕು, ಸುರಿದು ಖಾಲಿಯಾಗತೊಡಗಿದ ಮೇಲೆ, ಚೀಲ ಹೆಣ್ಣಿನ ದೇಹದೊಳಗಿರುವಂತೆಯೇ ಬೇರೆಬೇರೆಯಾಗುತ್ತವೆ. ಕೆಲವು ಅಂಡಗಳು ಫಲಿತಗೊಳ್ಳುತ್ತವೆ. ಗಂಡು ಮನವೊಲಿಸುತ್ತಿದ್ದರೂ ತನ್ನ ಒಳಾಂಗದಲ್ಲಿ ಸೇರಿಹೋಗಿರುವ ವೀರ್ಯಚೀಲವನ್ನು ಹೆಣ್ಣು ತಿಂದು ಹಾಕುತ್ತದೆ! ಆ ಅರ್ಧಖಾಲಿಯಾದ ವೀರ್ಯಚೀಲ ಹೆಣ್ಣಿಗೆ ಆಹಾರವೂ ಹೌದು. ನಂತರ ಹೆಣ್ಣು ಹೊಸಹೊಸ ಗಂಡುಗಳ ಕರೆ ಹುಡುಕಿಕೊಂಡು ಹೋಗುತ್ತದೆ. ಕೊನೆಗೆ ಫಲಿತಗೊಂಡ ಮೊಟ್ಟೆಗಳ ಒದ್ದೆಜಾಗದ ಸಂದುಗೊಂದು, ತೋಡುಗಳಲ್ಲಿಟ್ಟು ಬರುತ್ತದೆ.

ಹೆಣ್ಣುಗಳು ‘ಚಂಚಲೆ'ಯರೆನಿಸುವುದೆ? ಜೆನೆಟಿಕ್ ಹೊಸತನಕ್ಕಾಗಿ, ತಳಿನಾಶ ತಪ್ಪಿಸುವ ಸಲುವಾಗಿ ಅನಿವಾರ್ಯವಾಗಿ ಪಾಲಿಸಲೇಬೇಕಾದ ಪ್ರಕೃತಿ ನಿಯಮ ಅದು! 

ಏನೇ ಇರಲಿ, ನಿಜವೆಂದರೆ ಹೆಣ್ಣಿಗೆ ಗಂಡು ಮಾಯೆ, ಗಂಡಿಗೆ ಹೆಣ್ಣು ಮಾಯೆ. ತಳಿ-ಸಂತಾನೋತ್ಪತ್ತಿ-ಪ್ರೇಮ ಎಲ್ಲ ನಂತರದ ಹಳಹಳಿಕೆಗಳು..

ಬೆಕ್ಕಿನ ಫ್ಯಾಮಿಲಿ ಪ್ಲಾನಿಂಗ್!

ಬೆಕ್ಕಿನ ಪ್ರೇಮಿ ಮಗಳು ಗಟಾರದಲ್ಲಿತ್ತೆಂದು ರೆಸ್ಕ್ಯೂ ಮಾಡಿ ತಂದ ಮರಿಬೆಕ್ಕು ಒಂದು ವರ್ಷ ಪ್ರಾಯವಾದ ಕೂಡಲೇ ಮರಿ ಹಾಕಲು ಶುರುಮಾಡಿತು. ಎರಡು ವರ್ಷಗಳಲ್ಲಿ ಪ್ರತಿ ಸಲ ೩-೪ ಮರಿಯಂತೆ ಐದು ಬಾರಿ ಮರಿ ಹಾಕಿತು. ಅವನ್ನು ಮೋಳ(=ಬಾವುಗ=ಗಂಡುಬೆಕ್ಕು) ಕೊಲ್ಲದಂತೆ ಕಾದು, ಸ್ವಲ್ಪ ದೊಡ್ಡವಾದ ಮೇಲೆ ಯಾರಿಗೆ ಬೇಕೋ ಅವರಿಗೆ ವಿಲೇವಾರಿ ಮಾಡಿ ನಾವು ಉಸಿರು ಬಿಡುವುದರಲ್ಲಿ ನಮ್ಮ ಅಮ್ಮನವರು ಮತ್ತೊಮ್ಮೆ ಮರಿ ಹಾಕಲು ಸಿದ್ಧವಾಗುತ್ತಿದ್ದರು! ಮರಿಗಳನ್ನು ಈದು ಈದು ಬೆಕ್ಕು ಸವೆದು ಸತ್ತು ಹೋಗುವುದೆನಿಸಿತು. ಕೊನೆಯ ಸಲದ ಎಳೆಮರಿಗಳನ್ನಂತೂ ಮೋಳ ಕೊಂದುಹಾಕಿದ್ದೇ ಅಲ್ಲದೆ ಗಂಡಿನೊಡನೆ ಗುದ್ದಾಡಿ ನಮ್ಮ ಬೆಕ್ಕಿನ ಮೈತುಂಬ ಗಾಯಗಳಾದವು. ಬೆಕ್ಕು ಬಾವುಗರ ತಾರಾಮಾರಿ ಮರಿಗಳ ರಕ್ಷಣೆಗಾಗಷ್ಟೇ ಅಲ್ಲ; ಬೆಕ್ಕು ಬೆದೆಗೆ ಬಂದಾಗ ಹೆಣ್ಣು ತೋರಿಸುವ ಪ್ರತಿರೋಧದಿಂದಲೂ ಆಗುತ್ತಿತ್ತು.

ಹೆಣ್ಣು ಬೆಕ್ಕಿಗೆ ಮೋಳಗಳಿಂದ ಮೋಕ್ಷ ಸಿಗುವಂತೆ ಏನು ಮಾಡುವುದು? ಬೆಕ್ಕಿಗೆ ಕುಟುಂಬ ಯೋಜನೆ ಆಪರೇಷನ್ ಮಾಡಿಸುವುದು. ಮಾಡಿಸಿಬಿಟ್ಟೆವು. ಇನ್ನಾದರೂ ಮೋಳಗಳ ಕಾಟವಿಲ್ಲದೆ ಇದು ಆರಾಮ ಇರಲಿ ಎಂದುಕೊಂಡು ನಾವು ನೆಮ್ಮದಿಯಾದೆವು. ಎಷ್ಟು ಮೂರ್ಖರೋ ನಾವು! ಆಪರೇಷನ್ ಆಗಿ ಗರ್ಭಕೋಶ ತೆಗೆದಿದ್ದರು. ಆದರೆ ಅಂಡಕೋಶ ಇತ್ತು. ಹೆಣ್ಣುಬೆಕ್ಕಿಗೆ ಬೆದೆ ಬರುವುದು ನಿಲ್ಲಲಿಲ್ಲ. ಮೋಳಗಳ ಕಾಟವೂ ನಿಲ್ಲಲಿಲ್ಲ..

ತೋಬಾ, ತೋಬಾ. ಕಾಟ ಎಂಬ ಪದ ಉಪಯೋಗಿಸುವುದು ತಪ್ಪು. ಯಾಕೆಂದರೆ ನಮ್ಮ ಬೆಕ್ಕಿಗೂ ಅದೇ ಬೇಕಿತ್ತು!

ಗಡವನಂತೆ ಕೆನ್ನೆಯುಬ್ಬಿರುವ, ಗಂಟಲುಬ್ಬಿಸಿ ಗದ್ಗದ ದನಿಯಲ್ಲಿ ಕರೆಯುವ ಮೋಳ (ಬಾವುಗ) ಬೆಕ್ಕುಗಳು ಒಂದೊಂದೇ ಠಳಾಯಿಸತೊಡಗಿದವು. ಗಂಡಿನಿಂದ ನಮ್ಮ ಮುದ್ದು ಬೆಕ್ಕನ್ನು ಕಾಪಾಡಬೇಕೆಂಬ ಇನ್‌ಸ್ಟಿಂಕ್ಟ್ ನಮದಾದರೆ, ಮೋಳನ ಕರೆ ಕೇಳಿದ್ದೇ ನಮ್ಮ ಬೆಕ್ಕು ವಯ್ಯಾರದಿಂದ ಎದ್ದು ಮೈ ನೆಕ್ಕಿಕೊಂಡು ಹೊರಟುಬಿಟ್ಟಿತು. ಅದು ಇದರ ಹಿಂದೆ ಸುತ್ತುವುದು, ಇದು ಅದರ ಹಿಂದೆಮುಂದೆ ಸುಳಿಯುವುದು. ಕೊನೆಗೊಬ್ಬ ಅಳಿಯ ಬಾವುಗರು ಎರಡು ದಿನ ಹಿಂದೆ ಮುಂದೆ ತಿರುಗಿ ಸಾಧನೆ ಮಾಡಿಯೇಬಿಟ್ಟರು. ಹಾಗೆಂದು ಬೆಕ್ಕು ವಂಯ್ಞ ವಂಯ್ಞ ಎಂದು ಕೂಗಿದಾಗಲೇ ಗೊತ್ತಾದದ್ದು. ಬೆಕ್ಕಿನ ಕಾಲು, ಕಿವಿ, ಬೆನ್ನಿನ ಮೇಲೆಲ್ಲ ಗೀರು ಗಾಯ. ಅವತ್ತಿಡೀ ದೇಹದ ಮೂಲೆಮೂಲೆಗಳನ್ನೂ ನೆಕ್ಕಿಕೊಂಡದ್ದೇ ಕೆಲಸ ಬೆಕ್ಕಿಗೆ.


ಮತ್ತೆ ಮರುಬೆಳಗಾಗುವುದರಲ್ಲಿ ಮತ್ತೊಂದು ಮೋಳ ಹಾಜರು! ಗಾಯಗೊಂಡಿದ್ದರೂ ಇದು ಎದ್ದು ಬಿಂಕದಿಂದ ಹೊರನಡೆಯಿತು! ಅದರೆದುರೇ ಕೂತಿತು. ಗಂಡು ಒಂದು ಹೆಜ್ಜೆ ಮುಂದೆ ಬಂದರೆ ಇದು ಪಂಜಾ ಎತ್ತಿ ಹೊಡೆಯುತ್ತಿತ್ತು. ಎದುರಿರಬೇಕು, ಆದರೆ ಮುಟ್ಟಬಾರದು. ನಿರ್ಜನವಾಗಿದ್ದ ಟಿವಿ ಹಾಲಿನಲ್ಲಿ ಒಂದು ದಿನವಿಡೀ ಇದೇ ಕಣ್ಣಾಮುಚ್ಚಾಲೆ ನಡೆಯಿತು. ನಮ್ಮ ಬೆಕ್ಕು ತನ್ನ ಜ್ಯೂರಿಸ್‌ಡಿಕ್ಷನ್ನಿನ ಸೋಫಾ ಮೇಲೆ ಅರೆನಿಮೀಲಿತ ನೇತ್ರೆಯಾಗಿ ಮಲಗಿದ್ದರೆ ಮೋಳ ಕೆಳಗೆ ನೆಲದ ಮೇಲೆ, ಇದರ ಎದುರೇ ಧ್ಯಾನಸ್ಥವಾಗಿ ಕೂತಿತು. ಅದು ಸಖಿಯ ದಾಸಾನುದಾಸ. ಹೀಗೆ ಟೆರೇಸಿನಲ್ಲಿ, ಕಿಟಕಿಯ ಚಡಿಯಲ್ಲಿ, ಮನೆಯೊಳಗೆ, ಕಂಪೌಂಡ್ ಗೋಡೆಯ ಮೇಲೆ ಒಬ್ಬರೆದುರು ಇನ್ನೊಬ್ಬರು ಕುಳಿತು ಉರುಟಣೆ ಆಯಿತು.

ಏನಾದರೇನು, ಮುಟ್ಟಲು ಕೊಡದ ಹೆಣ್ಣಿನಿಂದ ಬೇಸತ್ತ ಮೋಳ ವಾಪಸು ಹೋಯಿತು. ಅದು ಹೋದದ್ದೇ ನಮ್ಮ ಬೆಕ್ಕು ರಾಣಿಯವರಿಗೆ ವಿರಹ ವೇದನೆ. ಗೊಗ್ಗರು ಸ್ವರದಲ್ಲಿ ಕೂಗಿ ಕರೆದಿದ್ದೇ ಕರೆದಿದ್ದು!

ಎದುರಿರುವಾಗ ಬಿಂಕ, ತಿರಸ್ಕಾರ; ದೂರ ಇರುವಾಗ ಮೋಹ. ಬಿಟ್ಟೇನೆಂದರೂ ಬಿಡದ ಮಾಯೆ!

ನಾವು ದಿನನಿತ್ಯ ನೋಡುವ ಪ್ರಾಣಿಗಳಲ್ಲೇ ಬೆಕ್ಕುಗಳ ಜಾತಿಯ ಸಮಾಗಮ ಅತಿ ಪ್ರತಿರೋಧದ ನಡುವೆ ನಡೆಯುವಂಥದ್ದು. ಮೈಮೇಲೆ ಗಾಯವಿಲ್ಲದೆ ಹೆಣ್ಣು ಗರ್ಭ ಕಟ್ಟುವುದೇ ಇಲ್ಲವೆನಬಹುದು. ಒಂದನ್ನೊಂದು ಬೆರಸುತ್ತ, ಕಚ್ಚುತ್ತ, ಹೆದರಿಸುತ್ತಲಿರುವುದು ಗಂಡು ಹೆಣ್ಣುಗಳ ಸರಸವೋ, ಕಚ್ಚಾಟವೋ ಒಂದೂ ತಿಳಿಯುವುದಿಲ್ಲ. ಒಟ್ಟಾರೆ ಹೆಣ್ಣಿನ ತೀವ್ರ ಪ್ರತಿರೋಧದ ನಡುವೆ ಅಲ್ಲಿ ಸಂತಾನೋತ್ಪತ್ತಿ ನಡೆಯುತ್ತದೆ. ಆದರೆ ಹೆಣ್ಣಿನಿಂದೇಕೆ ಪ್ರತಿರೋಧ? ನಿರಾಕರಣೆ?

ಸಮಾಗಮದ ಹೊತ್ತಿಗೆ ತನಗೆ ಅನುಕೂಲಕರ ಭಂಗಿ ದಕ್ಕಿಸಿಕೊಳ್ಳಲು ಗಂಡು ಹೆಣ್ಣಿನ ಕುತ್ತಿಗೆ ಮೇಲಿನ ಚರ್ಮ ಕಚ್ಚಿ ಹಿಡಿದಾಗ ಗಂಡಿನ ಹಲ್ಲು, ಉಗುರುಗಳಿಂದ ಹೆಣ್ಣು ಗಾಯಗೊಳ್ಳುತ್ತದೆ. ಜೊತೆಗೆ ಸಮಾಗಮದ ಬಳಿಕ ಗಂಡುಬೆಕ್ಕು ತನ್ನ ಲೈಂಗಿಕ ಅಂಗವನ್ನು ಹೊರಗೆಳೆಯುವಾಗ ಹೆಣ್ಣು ತೀವ್ರ ನೋವನುಭವಿಸುತ್ತದೆ. ಯಾಕೆಂದರೆ ಗಂಡಿನ ಅಂಗದಲ್ಲಿ ೧೦-೧೫ ಚೂಪಾದ ಮೊಳೆಯಂತಹ ರಚನೆಗಳಿದ್ದು ಅವು ಯೋನಿಗೋಡೆಗಳನ್ನು ಗೀರುತ್ತ ಹೋಗುತ್ತವೆ. ಪ್ರತಿ ಸಂಭೋಗದ ಕೊನೆಗೆ ಹೆಣ್ಣುಬೆಕ್ಕು ಅರಚಿಕೊಳ್ಳುವುದು, ಗಂಡಿನ ಮೇಲೆ ದಾಳಿಗೆ ಮುಂದಾಗುವುದು ಇದೇ ಕಾರಣಕ್ಕೆ.

ಆದರೆ ಯೋನಿಗೋಡೆಗಳ ಗೀರುವಿಕೆ ಅನಿವಾರ್ಯ, ಯಾಕೆಂದರೆ ಅದೇ ಹೆಣ್ಣಿನಲ್ಲಿ ಅಂಡ ಬಿಡುಗಡೆಯಾಗುವಂತೆ, ತಾಯ್ತನದ ಹಾರ್ಮೋನುಗಳು ಬಿಡುಗಡೆಯಾಗುವಂತೆ ಮಾಡುವುದು. ಪ್ರಾಣಿಸಂಗ್ರಹಾಲಯದಲ್ಲಿರುವ ಎಷ್ಟೋ ಪ್ರಾಣಿಗಳು ಸಂಭೋಗವಿಲ್ಲದ ಕೃತಕ ಗರ್ಭಧಾರಣೆಯಿಂದ ಗರ್ಭ ಧರಿಸದಿರುವುದಕ್ಕೆ, ಹಾಗೆ ಪಡೆದ ಮರಿಗಳ ಮೇಲೆ ಲವಲೇಶ ಮೋಹವಿಲ್ಲದೆ ಕಾಳಜಿ ವಹಿಸಲು ನಿರಾಕರಿಸುವುದಕ್ಕೆ ಇದೇ ಕಾರಣ. ಒಂದುಬಾರಿಯ ಸಂಪರ್ಕದಿಂದ ಅಂಡ/ಹಾರ್ಮೋನು ಬಿಡುಗಡೆಯಾಗದಿರಬಹುದು, ಆದ್ದರಿಂದ ಮತ್ತೆಮತ್ತೆ ಬೇರೆ ಗಂಡುಗಳೂ ಸಂಪರ್ಕ ನಡೆಸಲು ಹೆಣ್ಣು ಅವಕಾಶ ನೀಡುತ್ತದೆ.

ಹೆಣ್ಣಿನ ಪ್ರತಿರೋಧಕ್ಕೆ ಮತ್ತೊಂದು ಕಾರಣ ಕುಟುಂಬ ಯೋಜನೆ. ಇಲ್ಲದಿದ್ದರೆ ಆರೋಗ್ಯವಂತ ಹೆಣ್ಣುಬೆಕ್ಕು ಪ್ರತಿ ಬೆದೆಯಲ್ಲಿ ಯಶಸ್ವಿಯಾಗಿ ಗರ್ಭ ಕಟ್ಟಿದ್ದರೆ, ಹಾಕಿದ ಎಲ್ಲ ಮರಿಗಳೂ ಉಳಿದುಬಿಟ್ಟರೆ ಜೀವಮಾನದಲ್ಲಿ ೧೫೦ ಮರಿಗಳನ್ನು ತಯಾರು ಮಾಡುತ್ತದೆ! ಭೂಮಿ ಬೆಕ್ಕುಗಳಿಂದ ತುಂಬಿ ಹೋಗುತ್ತಿತ್ತು. ಅದರ ವಿರುದ್ಧ ಪ್ರಕೃತಿಯ ಮೊದಲ ನಿಯಂತ್ರಣ ಬಾವುಗನ ದೂರವಿಡುವಂತೆ ಬೆಕ್ಕಿಗೆ ಕಲಿಸಿದ್ದೇ ಆಗಿರಬೇಕಲ್ಲವೆ?

ಬೆಕ್ಕೇಕೆ? ಹಳೆಯ ಕಾಲದ ಎಷ್ಟು ಅಜ್ಜಂದಿರು ತನ್ನ ಹೆಂಡತಿ ಬಾಣಂತನಕ್ಕೆ ತವರಿಗೆ ಹೋದದ್ದು ಮತ್ತೆ ಬರಲೇ ಇಲ್ಲವೆಂದೂ; ಅದನ್ನು ಕರೆತರಲು ತಾನು ಸರ, ಬಳೆ, ದನ ಅಂತ ಎಷ್ಟೆಷ್ಟು ವಸ್ತುಗಳ ತಂದುಕೊಟ್ಟು ಉಪಚಾರ ಮಾಡಬೇಕಾಯಿತೆಂದೂ; ಮತ್ತೆ ಕೆಲವರು ಪಂಚಾಯ್ತಿ-ಹೊಡೆತಬಡಿತಕ್ಕಿಳಿದೆವೆಂದೂ ಹೇಳಿದ್ದನ್ನು ನೀವು ಕೇಳಿಲ್ಲವೇ? ಬಾಣಂತನ ಮುಗಿಸಿ ಬರುವುದರೊಳಗೆ ಕಾವಲಿಯ ಮೇಲಿನ ನೀರಗುಳ್ಳೆಯಂತೆ ಕಾದಿರುತ್ತಿದ್ದ ಗಂಡ ಮತ್ತೆ ವರ್ಷ ತುಂಬುವುದರೊಳಗೆ ಹೊಟ್ಟೆ ಬರಿಸುವುದರಿಂದ ಬೇಸತ್ತು ಅಜ್ಜಿಮುತ್ತಜ್ಜಿಯರು ಹಾಗೆ ಮಾಡಿರಬಹುದು. ಗಂಡಿನಿಂದ ದೂರ ಇರುವುದೂ ಒಂದು ತೆರನ ಕುಟುಂಬ ಯೋಜನೆಯೇ ಅಲ್ಲವೆ?!



ನಾ ಕೂರುವ ಕಿಟಕಿ ಪಕ್ಕ ಇರುವ ಸಂಪಿಗೆ ಮರದ ಎಲೆ ಮೇಲೆ ಒಂದು ಗೊದ್ದದಷ್ಟು ಪುಟ್ಟ ಜೇಡ ಚಿತ್ರವಿಚಿತ್ರವಾಗಿ ಬಲೆ ನೇಯ್ದಿತು. ಅದರಲ್ಲಿ ಕೂತು ಬಲೆಯೂ ತಾನೂ ಒಟ್ಟಿಗೇ ಕಂಪಿಸುವಂತಹ ಚಲನೆ ಹೊರಡಿಸುತ್ತಿತ್ತು. ಮೊನ್ನೆ ಅದಕ್ಕಿಂತ ಹತ್ತುಪಟ್ಟು ದೊಡ್ಡ ಜೇಡ ಹತ್ತಿರ ಬಂತು. ಅದರ ಅಮ್ಮನಿರಬೇಕು, ಮೊಟ್ಟೆಯಿಂದ ಹೊರಬಂದದ್ದು ಹೇಗಿದೆ ನೋಡಿಹೋಗಲು ಬಂದಿರಬೇಕೆಂದು ಊಹಿಸಿದೆ. ಆದರೆ ಅದು ಬಂದದ್ದೇ ಪುಟ್ಟ ಜೇಡನ ಕಂಪನದ ರೀತಿಯೇ ಬದಲಾಯಿತು. ಎಲ್ಲ ಕಾಲುಗಳನ್ನೂ ಹಿಂದೆಳೆದುಕೊಂಡು ವಿಚಿತ್ರವಾಗಿ ಕುಣಿಯಲು ಶುರುಮಾಡಿತು. ದೊಡ್ಡ ಜೇಡ ಅದನ್ನು ತಿಂದು ಹಾಕುವುದೇನೋ, ಈ ಬೇಟೆಯನ್ನು ಹೇಗೆ ನೋಡುವುದು ಎಂಬ ತಳಮಳದೊಂದಿಗೇ ನೋಡುತ್ತ ಹೋದೆ. ದೊಡ್ಡದು ತನ್ನ ಕಡ್ಡಿ ಮುಂಗಾಲುಗಳಿಂದ ಸಣ್ಣಜೇಡವನ್ನು ಬಲೆಯಾಚೆ ಎಳೆಯತೊಡಗಿತು. ತೆಕ್ಕೆಗೆಳೆದುಕೊಳುವ ಮನುಷ್ಯರಂತೆ. ಸಣ್ಣದೂ ನಿಧಾನ ಕಂಪನ ನಿಲ್ಲಿಸಿ ದೊಡ್ಡ ಜೇಡ ನಿರ್ದೇಶನ ಮಾಡುವಲ್ಲಿ ಬಿಟ್ಟು ಎಲ್ಲೆಲ್ಲೊ ಸುತ್ತತೊಡಗಿತು. ಅದರ ಬೆನ್ನ ಮೇಲೇರಿತು. ಅಡಿ ಹೋಯಿತು. ಮುಖದ ಬಳಿ ಬಂತು. ಓಹ್, ಈಗ ಇದು ತಿಂದು ಹಾಕುತ್ತದೆ ಎಂದು ನನ್ನ ಊಹೆ. ಇಲ್ಲ. ಇದು ತಾಸುಗಟ್ಟಲೆ ನಡೆದು ಕೊನೆಗೆ ಗೊತ್ತಾಯಿತು, ಪುಟ್ಟದು ಗಂಡು, ಅದಕ್ಕಿಂತ ಹತ್ತು ಪಟ್ಟು ದೊಡ್ಡದು ಹೆಣ್ಣು. ಬಹುಪಾಲು ಹೆಣ್ಣುಜೇಡಗಳು ಸಮಾಗಮದ ಬಳಿಕ ಗಂಡನ್ನು ತಿಂದುಹಾಕುತ್ತವೆ. ಎಷ್ಟೋ ಗಂಡುಗಳು ಮೊದಲ ಸಮಾಗಮದ ವೇಳೆ ಸತ್ತು ಹೋಗುತ್ತವೆ. ಕೆಲವು ಪ್ರಬೇಧಗಳು ಹೆಣ್ಣು ತನ್ನನ್ನು ತಿನ್ನದಂತೆ ಏನೇನೋ ರಕ್ಷಣಾ ಉಪಾಯವನ್ನು ಮಾಡಿಕೊಳ್ಳುತ್ತವೆ. ಮೊದಲೆ ವೀರ್ಯವನ್ನು ಸಿರಿಂಜಿನಂತಹ ರಚನೆಯಲ್ಲಿ ತುಂಬಿಟ್ಟುಕೊಂಡು, ಹೆಣ್ಣುಬಂದು ಹೋಗುವ ಜಾಗದ ಗುರುತು ಹಿಡಿದು ಅಲ್ಲಿ ಕಾದು, ಕೊಳವೆಯಂತಹ ರಚನೆ ಮೂಲಕ ಅದನ್ನು ಹೆಣ್ಣಿನ ದೇಹಕ್ಕೆ ಸೇರಿಸಿ ತಮ್ಮನ್ನು ಕಾಪಾಡಿಕೊಳ್ಳುತ್ತವೆ!

ಕೀಟ ಸಾಮ್ರಾಜ್ಯದಲ್ಲಿ ಹೆಚ್ಚು ಸಂಖ್ಯೆಯ ಸಂತತಿ ಜನಿಸುತ್ತದೆ. ಅದರಲ್ಲಿ ಮೊಟ್ಟೆಯಿಡಬಲ್ಲ ಬಲಿಷ್ಟ ಹೆಣ್ಣಿನ ಸಂಖ್ಯೆ ಕಡಿಮೆ ಇರುತ್ತದೆ. ಅವು ಆಕಾರದಲ್ಲು ದೊಡ್ಡವು. ಸಮಾಗಮದ ಬಳಿಕ ಗಂಡನ್ನು ತಿನ್ನುವ ಸ್ವಭಾವ ಮನುಷ್ಯನಿಗೆ ವಿಲಕ್ಷಣ ಎನಿಸುತ್ತದೆ. ಹೆಣ್ಣುಗಂಡನ್ನು ತಿನ್ನುವುದೇಕೆ? ವೀರ್ಯದಾನಿಗಳ ಸಂಖ್ಯೆ ಇಳಿಸಲೆಂದೇ? ಇದೂ ಪ್ರಕೃತಿದತ್ತ ಕುಟುಂಬ ಯೋಜನೆಯೇ?

ಗೊತ್ತಿಲ್ಲ, ಜೇಡವನ್ನೇ ಕೇಳಬೇಕು.
                          
***

ವಿಕಾಸದ ಅತ್ಯಂತ ಕೆಳಹಂತದ ಜೀವಿಗಳು, ಏಕಕೋಶ ಜೀವಿಗಳಲ್ಲಿ ಸಂತಾನೋತ್ಪತ್ತಿಗೆ ಮತ್ತೊಂದು ಜೀವಿಯ ಅವಶ್ಯಕತೆಯಿಲ್ಲ. ಕೆಲವು ಸಸ್ಯಗಳೂ ಸೇರಿದಂತೆ ಅವೆಲ್ಲ ಅಲೈಂಗಿಕ ವಿಧಾನದಿಂದ ತಂತಾವೆ ಸಂತಾನೋತ್ಪತ್ತಿ ನಡೆಸುತ್ತವೆ. ಎಂದರೆ ಒಂದು ಜೀವಿ ತನ್ನ ಜೀನುಗಳಿಂದ ತನ್ನಂಥದೇ ಮತ್ತಷ್ಟು ಜೀವಿಗಳ ಉತ್ಪಾದಿಸುತ್ತದೆ. ನಂತರದ ಹಂತದ ಕೆಲವು ಜೀವಿಗಳಲ್ಲಿ ಸಮಯ ಹೇಗೆ ಬಯಸುತ್ತದೋ ಹಾಗೆ - ಕೆಲವೊಮ್ಮೆ ಲೈಂಗಿಕವಾಗಿ, ಕೆಲವೊಮ್ಮೆ ನಿರ್ಲಿಂಗಿ ವಿಧಾನದಲ್ಲಿ (ಎ-ಸೆಕ್ಷುವಲ್) ಸಂತಾನೋತ್ಪತ್ತಿ ನಡೆಸುತ್ತವೆ. ಇನ್ನೂ ಕೊಂಚ ವಿಕಾಸ ಹೊಂದಿರುವ ಮೃದ್ವಂಗಿಗಳಂತಹ ಜೀವಿಗಳು ದ್ವಿಲಿಂಗಿಗಳು. ಅವು ಗಂಡು ಮತ್ತು ಹೆಣ್ಣು ಎರಡೂ ಆಗಿರುತ್ತವೆ. ಒಂದು ಇನ್ನೊಂದರಿಂದ ವೀರ್ಯ ಪಡೆವಾಗ ತಾನೂ ವೀರ್ಯದಾನ ಮಾಡಿರುತ್ತದೆ. ಫಲಿತಗೊಳ್ಳುತ್ತಲೇ ಫಲಿತಗೊಳಿಸಿರುತ್ತದೆ.

ಅಲ್ಲಿ ಅಮಿತ ಸಂಖ್ಯೆಯ ಸಂತತಿ ಹುಟ್ಟುತ್ತದೆ. ಜೇಡ ಒಮ್ಮೆಗೆ ಸರಾಸರಿ ೩೦ ಸಾವಿರ ಮೊಟ್ಟೆಯಿಡುತ್ತದೆ! ವಿಕಾಸದ ಕೆಳ ಮಜಲುಗಳಲ್ಲಿ ಇರುವ ಜೀವಿಗಳೆಲ್ಲ ಬಹುಸಂಖ್ಯೆಯ ಸಂತತಿ ಉತ್ಪಾದಿಸುತ್ತವೆ. ಮೊಟ್ಟೆ ಒಡೆದು ಹೊರಬಂದ ಮೇಲೆ ಶಕ್ತವಾದವು ಉಳಿಯುವ ಅವಕಾಶ ಗಳಿಸಿಕೊಳ್ಳುತ್ತವೆ. ಬದುಕುವವರಿಗಿಂತ ಸಾಯುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಎಂದೇ ಅಲ್ಲಿ ಪಾಲಕತನದ ಜವಾಬುದಾರಿ ಕಡಿಮೆ. ಸಾಂಗತ್ಯದ ಅವಧಿ ಕಡಿಮೆ. ಗಂಡುಹೆಣ್ಣುಗಳ ದೈಹಿಕ ಸಂಯೋಗದ ವಿಧಾನಗಳು ಬೇರೆ. ಅಂಥ ಸಂತಾನೋತ್ಪತ್ತಿ ಕ್ರಿಯೆ ನಡೆವಲ್ಲಿ ಅಮ್ಮನಿಗೆ ಮಕ್ಕಳ ಜವಾಬ್ದಾರಿ ಕಡಿಮೆ.

ಆ ವಿಕಾಸದ ಏಣಿಯ ನಂತರದ ಹಂತದ ಜೀವಿಗಳಲ್ಲಿ ಗಂಡು ಹೆಣ್ಣು ಎಂಬ ಲಿಂಗ ಭೇದ ಸೃಷ್ಟಿಯಾಯಿತು. ಆದರೆ ಹೆಚ್ಚು ಶಕ್ತಿ ಬೇಡುವ, ೫೦% ಜೀನುಗಳನ್ನಷ್ಟೆ ವರ್ಗಾಯಿಸಲು ಸಾಧ್ಯವಿರುವ, ೫೦% ಜೀವಿಗಳಷ್ಟೆ ‘ಉತ್ಪಾದಿಸಲು ಸಾಧ್ಯವಾಗುವ ಲೈಂಗಿಕ ಸಂತಾನೋತ್ಪತ್ತಿ ವಿಧಾನಕ್ಕೆ ಏಕೆ ಜೀವಿಗಳು ಹೊರಳಿಕೊಂಡವು ಎನ್ನುವುದು ಜೀವಶಾಸ್ತ್ರಜ್ಞರು ಇನ್ನೂ ಬಿಡಿಸಲಾರದ ಒಗಟು. ಬಹುಶಃ ತಳಿವೈವಿಧ್ಯ ಕಾಪಾಡಿಕೊಳ್ಳಲು, ಸಂತಾನ ಮಿತಗೊಳಿಸಲು ಪ್ರಕೃತಿ ಹೂಡಿದ ಉಪಾಯ ಇದಾಗಿರಬೇಕು ಎಂಬ ಊಹೆಯಿದೆ.

ಅದೇನೇ ಇರಲಿ, ಲೈಂಗಿಕವಾಗಿ ‘ಪ್ರಬುದ್ಧ'ವಾಗುತ್ತ ಹೋದಂತೆ ಜೀವಿಗಳ ಹಿಂಸಾಪ್ರವೃತ್ತಿಯೂ ಹೆಚ್ಚುತ್ತ ಹೋಗಿದೆ!

ಒಂದು ಅಧ್ಯಯನದಿಂದ ಕುತೂಹಲಕರ ಅಂಶ ಪ್ರಾಣಿಗಳಲ್ಲಿ ಪತ್ತೆಯಾಗಿದೆ: ಹಿಂಸಾಪ್ರವೃತ್ತಿ ಮತ್ತು ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸುವ ಮಿದುಳಿನ ಭಾಗ ಒಂದೇ ಆಗಿದೆ! ಎಂದರೆ ಹಿಂಸೆಗೂ, ಲೈಂಗಿಕತೆಗೂ ಸಂಬಂಧವಿದೆ. ಪ್ರಾಣಿಯು ಜೊತೆಗೂಡಲು ತಯಾರಾಗುವುದೊ, ಯುದ್ಧ ಮಾಡಲು ಸಿದ್ಧವಾಗುವುದೊ ಎನ್ನುವುದನ್ನು ಮಿದುಳಿನ ಆ ಭಾಗ ಪ್ರಚೋದನೆಗನುಗುಣವಾಗಿ ನಿರ್ಧರಿಸುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ ಲೈಂಗಿಕ ಅನುಭವವಿರುವ ಜೀವಿಗಳು ಹಿಂಸಾತ್ಮಕ ಸ್ವಭಾವ ಹೊಂದಿವೆ. ಕಪ್ಪೆ, ಜೀರುಂಡೆಗಳಂತಹ ಜೀವಿಗಳಿಗೆ ಲೈಂಗಿಕಾನುಭವವಿಲ್ಲ. ಅಲ್ಲಿ ಹಿಂಸೆ ಕಡಿಮೆ. ಅವು ಕೇವಲ ಸಂತಾನೋತ್ಪತ್ತಿಯನ್ನು ತಮ್ಮ ಜವಾಬ್ದಾರಿ ಹಾಗೂ ಜೀವಮಾನದ ಹೊಣೆಯಾಗಿ ನಿಭಾಯಿಸುತ್ತವೆ. ಆದರೆ ಬೆಕ್ಕಿನಂತಹ ಪ್ರಾಣಿಗಳು ಲೈಂಗಿಕ ಅನುಭವ ಹೊಂದಿವೆ, ಅಲ್ಲಿ ಹಿಂಸೆಯೂ ಹೆಚ್ಚು ಇದೆ.

ಹಾಗಾದರೆ ವಿಕಾಸದ ತುತ್ತತುದಿಯಲ್ಲಿರುವ ಮನುಷ್ಯರ ಕತೆ ಏನು? ಎಲ್ಲ ಅನುಭವ, ಸಂವೇದನೆಗಳ ಆತ್ಯಂತಿಕ ತುದಿ ಮುಟ್ಟಿದ ಜೀವಿ; ಅದನ್ನು ವ್ಯಕ್ತಪಡಿಸಲು ಭಾಷೆ-ಕಲೆ ಮುಂತಾದ ಅಭಿವ್ಯಕ್ತಿ ರೂಢಿಸಿಕೊಂಡಿರುವ ಮನುಷ್ಯನ ಲೈಂಗಿಕತೆಗೂ ಹಿಂಸಾಪ್ರವೃತ್ತಿಗೂ ಏನು ಸಂಬಂಧ? ಕೌಟುಂಬಿಕ ದೌರ್ಜನ್ಯಗಳು, ಅತ್ಯಾಚಾರಕ್ಕೂ ಅವನ ಸೂಕ್ಷ್ಮ ಸಂವೇದನೆಗೂ ಸಂಬಂಧವಿದೆಯೆ?

ಸಂಬಂಧ ಇರಲೇಬೇಕು. ಅನುಭವಿಸುತ್ತಿರುವುದನ್ನು ಅಭಿವ್ಯಕ್ತಿಸಿದರೆ ಅಷ್ಟು ಪುರಾವೆ ಸಾಕು.


No comments:

Post a Comment