Monday 20 November 2023

‘ನಾ ಮಣಿಯೆ’ನೆಂದ ವಿ. ಬಾಲಸುಬ್ರಮಣಿಯನ್




(ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕತೆ ~ಫಾಲ್ ಫ್ರಂ ಗ್ರೇಸ್’. ಅದನ್ನು ಕನ್ನಡದ ಲೇಖಕಿ, ರಂಗಕರ್ಮಿ ಎನ್. ಸಂಧ್ಯಾರಾಣಿ ಕನ್ನಡಕ್ಕೆ ‘ಕಲ್ಯಾಣ ಕೆಡುವ ಹಾದಿ: ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ’ ಎಂಬುದಾಗಿ ಅನುವಾದಿಸಿ, ಲಡಾಯಿ ಪ್ರಕಾಶನವು ಪ್ರಕಟಿಸಿದೆ.) 

ಅಧಿಕಾರ ಎಂಬ ಶಬ್ದ ಕೇಳಿದ ಕೂಡಲೇ ದರ್ಪ, ದಬ್ಬಾಳಿಕೆ, ಭ್ರಷ್ಟತೆಯ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಅದಕ್ಕೆ ಕಾರಣ ಅಧಿಕಾರಸ್ಥರೊಡನೆ ನಾವು ಹೊಂದಿರುವ ಅನುಭವ. ಅದರಲ್ಲೂ ಅಪರಿಮಿತ ಅಧಿಕಾರದ ಅವಕಾಶ ಹೊಂದಿದ ಐಎಎಸ್ ‘ಬಾಬು’ಗಳ ಬಗೆಗೆ ವಿಚಿತ್ರ ಆಕರ್ಷಣೆ, ವಿಕರ್ಷಣೆಗಳಿರುತ್ತವೆ. ಹಾಗಂತ ಅಧಿಕಾರದ ಸ್ವರೂಪ, ವ್ಯಾಪ್ತಿಯನ್ನರಿತು ಸಮಾಜದ ಒಳಿತಿಗಾಗಿ ಬಳಸಿದ ಅನುಕರಣೀಯ ಮಾದರಿಗಳೂ ಇಲ್ಲದಿಲ್ಲ. ಅಂಥವರಲ್ಲಿ 1965ನೇ ಬ್ಯಾಚಿನ ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಪ್ರಮುಖರು.

82 ವಸಂತ ಪೂರೈಸಿರುವ ಬಾಲಸುಬ್ರಮಣಿಯನ್ ಸಾಹಿತಿ, ಆಕ್ಟಿವಿಸ್ಟ್ ವಲಯದಲ್ಲಿ ಪರಿಚಿತರು. ‘ಬರ’ ಸಿನಿಮಾದ ಜಿಲ್ಲಾಧಿಕಾರಿಯ ನಿಜಜೀವನದ ಪಾತ್ರವಾಗಿದ್ದವರು. ವೀರೇಂದ್ರಪಾಟೀಲ್, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ, ಎಸ್ಸೆಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತ ಆಡಳಿತದ ಒಳಹೊರಗುಗಳನ್ನು ಕಂಡರು. ನಿವೃತ್ತಿಯ ಬಳಿಕ ಕೋವಿಡ್ ಒದಗಿಸಿದ ಅಯಾಚಿತ ಬಿಡುವಿನಲ್ಲಿ ತಮ್ಮ ಆತ್ಮಚರಿತ್ರೆ ‘ಫಾಲ್ ಫ್ರಂ ಗ್ರೇಸ್’ ಪ್ರಕಟಿಸಿದರು. ಅವರ ‘ಜ್ಞಾಪಕ ಚಿತ್ರಶಾಲೆ’ಯನ್ನು ಪತನಗೊಂಡ ಕರ್ನಾಟಕದ ಸಾಮಾಜಿಕ ನೈತಿಕತೆಯ ಚರಿತ್ರೆಯನ್ನಾಗಿ ಎಲ್ಲರೂ ಓದಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳಿರುವ ಅಪಾರ ಓದು, ಪ್ರಬುದ್ಧ ವಿಶ್ಲೇಷಣೆ, ವ್ಯಂಗ್ಯ, ಹಾಸ್ಯಗಳಿಂದ ತುಂಬಿರುವ ಅವರ ಆತ್ಮಚರಿತ್ರೆಯನ್ನು ಪತ್ತೇದಾರಿ ಕಾದಂಬರಿಯಂತೆ ಓದಬಹುದು.

ತಮಿಳು ಭಾಷಿಕ ಬಾಲಸುಬ್ರಮಣಿಯನ್ ಮದರಾಸು-ರಂಗೂನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಓದುಗುಳಿಯಾಗಿದ್ದ, ಸಮತಾವಾದವನ್ನು ಮೆಚ್ಚಿಕೊಂಡಿದ್ದ ಅವರು ಐಸಿಎಸ್ ಅಧಿಕಾರಿಗಳ ಪ್ರಭಾವಕ್ಕೊಳಗಾಗಿ ಪದವಿಯ ಬಳಿಕ ನಾಗರಿಕ ಆಡಳಿತ ಸೇವೆಯ ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿ 1965ರಿಂದ ಕರ್ನಾಟಕ ಕೇಡರಿನ ಅಧಿಕಾರಿಯಾಗಿ ಆಡಳಿತ ವ್ಯವಸ್ಥೆಯ ವಿವಿಧ ಸ್ಥಾನಗಳನ್ನು ನಿಭಾಯಿಸಿದರು. ಅಧಿಕಾರ ಚಲಾಯಿಸುತ್ತ ಗಾಜಿನರಮನೆಯಲ್ಲಿ ಕೂರದೇ, ಜನಾಧಿಕಾರಕ್ಕೆ ಸಂಚು ಬಂದಿರುವುದನ್ನು ಪತ್ತೆ ಹಚ್ಚಲು ಊರುಕೇರಿ, ಗುಡ್ಡಬಯಲು, ಅಡವಿಗಳನ್ನು ನಿರ್ಭಯವಾಗಿ ಸುತ್ತಿದರು. ಲಿಂಗಸುಗೂರು ಎಸಿಯಾಗಿ, ಶಿವಮೊಗ್ಗ, ಕಲಬುರಗಿ, ಬೆಂಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ಕೇಂದ್ರ ರೇಶ್ಮೆ ಮಂಡಳಿ, ರಾಷ್ಟ್ರೀಯ ಜವಳಿ ನಿಗಮದ ಹುದ್ದೆ ನಿರ್ವಹಿಸಿ, ರಾಮಕೃಷ್ಣ ಹೆಗ್ಡೆಯವರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ, ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರು. ಅಂತಾರಾಷ್ಟ್ರೀಯ ಸಂಸ್ಥೆಗಳ ಜವಾಬ್ದಾರಿಯನ್ನೂ ನಿಭಾಯಿಸಿದರು.

‘ಹಲವು ಸಂಗತಿಗಳು ನೀವು ಯಾವ ಜಾತಿಗೆ ಸೇರಿದವರು ಎನ್ನುವುದರ ಮೇಲೆಯೇ ನಿರ್ಧರಿಸಲ್ಪಡುತ್ತವೆ’ ಎಂಬ ಸೂಕ್ಷ್ಮ ಪತ್ತೆ ಹಚ್ಚಿದ ಬಾಲಸುಬ್ರಮಣಿಯನ್, ಕಾಲ್ತೊಡರಾದ ಜಾತೀಯತೆಯ ಎಳೆಗಳನ್ನು, ರಾಜಕೀಯ ಪಕ್ಷ ಹಿತಾಸಕ್ತಿಗಳನ್ನು ನ್ಯಾಯದ ಸೇತುವೆ ಬಳಸಿ ದಾಟಿದರು. ಅಧಿಕಾರವೆಂಬ ಬಯಲಿಗೆ ಅವರ ಪ್ರವೇಶ ಚಾರಿತ್ರಿಕವಾಗಿ ಪರಿಣಮಿಸಿತು. ಮೊದಲ ಪೋಸ್ಟಿಂಗಿನಲ್ಲಿಯೇ ದಶಕಗಟ್ಟಲೆಯಿಂದ ಕೃಷಿಸಾಲ ಬಾಕಿ ಉಳಿಸಿಕೊಂಡಿದ್ದ ಬಳ್ಳಾರಿಯ ರಾಜಕಾರಣಿ, ‘ರಾಣಿಸಾಹಿಬಾ’ ಬಸವರಾಜೇಶ್ವರಿ ಅವರ ಟ್ರ್ಯಾಕ್ಟರು ಜಪ್ತಿ ಮಾಡಿ ತಂದರು. ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಗಂಧ-ಬೀಟೆಮರದ ಕಳ್ಳ ಸಾಗಾಣಿಕೆ ತಡೆಯುವುದು, ಕಾಫಿ ಪ್ಲಾಂಟರನ ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸುವುದು, ದಲಿತರ ಮುಳುಗಡೆ ಪರಿಹಾರದ ಭೂಮಿಯ ಒತ್ತುವರಿ ನಿಲ್ಲಿಸುವುದೇ ಮೊದಲಾದ ದಿಟ್ಟ ಕ್ರಮಗಳನ್ನು ಕೈಗೊಂಡರು. ಒಂದೇ ವರ್ಷ, ಕಲಬುರಗಿಗೆ ವರ್ಗಾವಣೆಯಾಯಿತು. ಬಿಸಿಲೂರಿನ ಬೇಗೆಗೆ ಜಗ್ಗದೇ ಕೋಮುವೈಷಮ್ಯ, ಉಪಚುನಾವಣೆ, ಬರ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರೆಷ್ಟು ಜನಪ್ರಿಯರಾದರೆಂದರೆ ವರ್ಗವಾಗಿ ಹೊರಟಾಗ ಜನ ಅವರ ರೈಲುಬೋಗಿಯನ್ನು ಹೂಗಳಿಂದ ಅಲಂಕರಿಸಿದರು.

ತುರ್ತುಪರಿಸ್ಥಿತಿಯ ಕಾಲದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ/ಜಿಲ್ಲಾ ನ್ಯಾಯಾಧೀಶರಾದ ಅವರು, ದೊರೆತ ವಿಶಿಷ್ಟ ಅಧಿಕಾರವನ್ನು ಜನಹಿತಕ್ಕಾಗಿಯೂ ಬಳಸಬಹುದೆಂದು ತೋರಿಸಿದರು. ವಿರೋಧಿಗಳನ್ನು ಮಣಿಸಲು ಹೇರಿದ ತುರ್ತು ಪರಿಸ್ಥಿತಿಯನ್ನು ‘20 ಅಂಶಗಳ ಕಾರ್ಯಕ್ರಮ’ ಜಾರಿಗೊಳಿಸಲು ಬಳಸಿಕೊಂಡರು. ಜೀತದಾಳುಗಳ ಬಿಡುಗಡೆ, ದಲಿತ ದೌರ್ಜನ್ಯ ತಡೆ, ಭೂಮಿ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲು ಸದವಕಾಶ ದೊರೆಯಿತು. ಬೆಂಗಳೂರಿನ ಹೊರಭಾಗದ 50 ಬಂಧಿತ ಜೀತದಾಳುಗಳನ್ನು ಬಿಡಿಸಿ, ಪುನರ್ವಸತಿ ಕಲ್ಪಿಸಿದಾಗ ಮಾಜಿ ಜೀತಗಾರರು ತಮ್ಮ ವಸತಿ ಪ್ರದೇಶಕ್ಕೆ ‘ಸುಬ್ರಹ್ಮಣ್ಯ ನಗರ’ವೆಂದು ಹೆಸರಿಟ್ಟರು. ರೇಶ್ಮೆ ಬೋರ್ಡ್ ಆಡಳಿತಾಧಿಕಾರಿಯಾದಾಗ ಸಂಜಯ್ ಗಾಂಧಿ ಸಾವನ್ನಪ್ಪಿದರು. ಸಚಿವೆ ರೇಣುಕಾ ರಾಜೇಂದ್ರನ್ ಸಂಜಯರ ಅಸ್ಥಿ ವಿಸರ್ಜನೆಗೆ ಇಲಾಖೆಯ ಕಾರು ಕೇಳಿದಾಗ, ‘ದೇಶದ ರೇಶ್ಮೆ ಸಾಕಣೆಗೆ ಸಂಜಯ್ ಗಾಂಧಿ ಕೊಡುಗೆ ಏನು? ಅವರ ಅಸ್ಥಿ ವಿಸರ್ಜನೆಗೆ ಸರ್ಕಾರಿ ವಾಹನವೇಕೆ?’ ಎಂದು ಪ್ರಶ್ನಿಸಿ ವಾಹನ ನೀಡಲು ನಿರಾಕರಿಸಿದರು.

ಅಧಿಕಾರವು ‘ವರ’ಗಳ ಜೊತೆಗೆ ‘ಶಾಪ’ದ ಒಂದಂಶವನ್ನೂ ಹೊತ್ತು ತರುತ್ತದೆಂಬ ವಾಸ್ತವದ ಅರಿವೂ ಅವರಿಗಿತ್ತು. ವೃತ್ತಿ ಬದುಕಿನ ಕೊನೆಗೆ ಈ ದಕ್ಷ ಅಧಿಕಾರಿ ದೆಹಲಿ ಕರ್ನಾಟಕ ಭವನದ ‘ಹೋಟೆಲ್ ಮ್ಯಾನೇಜರಿಕೆ’ಯಂತಹ ಕೆಲಸಕ್ಕೆ ನಿಯೋಜನೆಗೊಳ್ಳಬೇಕಾಯಿತು. ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾದರು. ಅವರಿಗೆದುರಾದದ್ದು ವಿರಾಟ್ ಭೂಗಳ್ಳತನದ ಬೆಚ್ಚಿ ಬೀಳಿಸುವ ಮಾಹಿತಿ. 19 ಲಕ್ಷಕೋಟಿ ಬೆಲೆಬಾಳುವ, 11 ಲಕ್ಷ ಎಕರೆ ಸಾರ್ವಜನಿಕ ಭೂಮಿಯ ಕಬಳಿಕೆಯಾಗಿರುವುದನ್ನು ಕಾರ್ಯಪಡೆಯು ಪತ್ತೆಹಚ್ಚಿತು. ಆದರೆ ವರದಿಯನ್ನು ಸ್ವೀಕರಿಸಿ ಕ್ರಮ ಕೈಗೊಳ್ಳದಂತೆ ಭೂ ಮಾಫಿಯಾ ಒತ್ತಡ ಹಾಕಿತು. ಕಾರ್ಯಪಡೆಯನ್ನೇ ನಿವಾರಣೆಗೊಳಿಸಲು ಆಳುವವರು ಮುಂದಾದರು. ಆಗ 200 ಪುಟಗಳ ವರದಿಯನ್ನು ‘ದುರಾಸೆ ಮತ್ತು ಮೌನಸಮ್ಮತಿ’ಯೆಂಬ ಹೊತ್ತಗೆಯಾಗಿಸಿ, 2.2 ಲಕ್ಷ ರೂಪಾಯಿ ಖರ್ಚುಮಾಡಿ ೨೦೦೦ ಪ್ರತಿಗಳನ್ನು ಮುದ್ರಿಸಿ ಸಂಬಂಧಿಸಿದವರೆಲ್ಲರಿಗೂ ಹಂಚಿದರು. ಇದಕ್ಕೆ ದೊರೆತ ಪ್ರತಿಫಲ ‘ಶಾಸಕಾಂಗ ನಿಂದನೆ’ ಎಸಗಿದಿರಿ ಎಂಬ ಆರೋಪ! ಎರಡೂ ಸದನಗಳು ಅವರನ್ನು ಕರೆಸಿದರೂ ‘ಮಣಿಯೆ’ನೆಂದು ತಮ್ಮ ನಿಲುವಿಗೆ ಬದ್ಧರಾಗಿಯೇ ಉಳಿದರು.

ಆರು ದಶಕಗಳ ವೃತ್ತಿ ಬದುಕಿನಲ್ಲಿ ಬಾಲಸುಬ್ರಮಣಿಯನ್, ಕರ್ನಾಟಕದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಕ್ರಮೇಣ ನೈತಿಕವಾಗಿ ಅಧಃಪತನಕ್ಕಿಳಿಯುವುದನ್ನು, 10% ಮಾಮೂಲಿನ ಕರ್ನಾಟಕವು 40% ಕಮಿಷನ್ ರಾಜ್ಯವಾಗುವುದನ್ನು ಆಕ್ರೋಶದಿಂದ ಗುರುತಿಸಿದರು. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು 2022ರಲ್ಲಿ ಆತ್ಮಕತೆ ಬರೆದರು. ಕನ್ನಡದ ಲೇಖಕಿ, ರಂಗಕರ್ಮಿ ಸಂಧ್ಯಾರಾಣಿ ಈಗದನ್ನು ಸಶಕ್ತವಾಗಿ ಅನುವಾದಿಸಿ, ಲಡಾಯಿ ಪ್ರಕಾಶನ ‘ಕಲ್ಯಾಣ ಕೆಡುವ ಹಾದಿ’ಯಾಗಿ ಪ್ರಕಟಿಸಿದೆ. ನೆಲದ ನಾಳೆಗಳ ಬಗೆಗೆ ಕನಸುವ ಮನಸ್ಸುಗಳೆಲ್ಲ ಕಡ್ಡಾಯವಾಗಿ ಈ ಹೊತ್ತಗೆಯನ್ನು ಓದಬೇಕಿದೆ.

ಕೊನೆಯ ಮಾತು:

ಇತ್ತೀಚೆಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಮತ್ತು ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರರ ಆತ್ಮಕತೆಗಳನ್ನು ಓದಿದ ಬೆನ್ನಿಗೇ ಇದನ್ನೂ ಓದಿದ್ದಕ್ಕೋ ಏನೋ ಒಂದಂಶ ಎದ್ದು ಕಾಣಿಸುತ್ತಿದೆ. ಮಹಿಳೆಯರ ಬದುಕು, ಸಾಧನೆಯ ಅವಿಭಾಜ್ಯ ಅಂಗವಾಗಿ ಕುಟುಂಬವಿರುತ್ತದೆ ಮತ್ತದರ ಬಗೆಗೆ ಅವರು ಹೇಳಿಯೇ ಹೇಳುತ್ತಾರೆ. ಆದರೆ ಪುರುಷರಿಗೆ ಕುಟುಂಬ ತಮ್ಮ ‘ಸಾಧನೆ’ಯ ಭಾಗವಾಗಿ ಕಾಣುವುದು ಕಡಿಮೆ! ೪೩೦ ಪುಟಗಳಲ್ಲಿ ಎಲ್ಲೂ ಬಾಲಸುಬ್ರಮಣಿಯನ್ ತಮ್ಮ ಪತ್ನಿ, ಮಕ್ಕಳು, ಕುಟುಂಬ, ಅವರು ನೀಡಿದ ಬೆಂಬಲ, ಸಹಿಸಿದ ಅನಾನುಕೂಲಗಳ ಬಗೆಗೆ ಒಂದೇಒಂದು ಸಾಲನ್ನೂ ಬರೆದಿಲ್ಲ! ರೆಬೆಲ್ ಅಧಿಕಾರಿಯು ರೆಬೆಲ್ ಆಗಿ ಕಾರ್ಯ ನಿರ್ವಹಿಸಿರುವುದರಲ್ಲಿ ಮನೆಯವರ ಪಾಲು ಇದ್ದೇ ಇರುತ್ತದೆ ಮತ್ತು ಒಂದು ಕಾಲದ ಚರಿತ್ರೆಯಾಗಿ ತಮ್ಮ ಅಳವಿಗೆ ಸಿಕ್ಕಿದ ಎಲ್ಲ ವಸ್ತು, ಸಂಗತಿ, ವ್ಯಕ್ತಿತ್ವ, ಸಂದರ್ಭಗಳ ಬಗೆಗೆ ಬರೆದಂತೆ ಕುಟುಂಬದ ಬಗೆಗೂ ಬರೆಯುವುದು ಸೂಕ್ತವಾಗಿದೆ. ಹಾಗಾಗದೇ ಇದ್ದಿದ್ದರಿಂದಲೇ ಚರಿತ್ರೆಯಿಂದ ಮಹಿಳೆ ಅದೃಶ್ಯವಾಗಿದ್ದಾಳೆ. ಎಂದೇ ಸೂಕ್ಷ್ಮ ಸಂವೇದನೆಯ ಬಾಲಸುಬ್ರಮಣಿಯನ್ ಈ ಹೊತ್ತಗೆಯ ಮರುಮುದ್ರಣದಲ್ಲಿ ಅಥವಾ ಮತ್ತೊಂದು ಸಂಪುಟ ಬರೆದಾದರೂ ಸರಿ, ತಮ್ಮನ್ನು ಪೊರೆದ, ರೂಪುಗೊಳಿಸಿದ ಅದೃಶ್ಯ ಶಕ್ತಿಗಳ ಬಗೆಗೂ ಬರೆಯಲೆಂದು ಮನ ಹಾರೈಸುತ್ತಿದೆ. ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿ, ರಾಜಕೀಯವಾಗಿ ಕರ್ನಾಟಕವನ್ನು ಹಿಡಿದಿಟ್ಟ ಹಾಗೆ ಆ ಕಾಲದಲ್ಲಿ ತೀವ್ರವಾಗಿದ್ದ ವಿವಿಧ ಚಳವಳಿಗಳು, ವರ್ಗ-ಧರ್ಮ-ಭಾಷಿಕ ಸಂಘರ್ಷಗಳು ಇಲ್ಲಿ ದಾಖಲಾಗಿಲ್ಲ. ಬಾಲಸುಬ್ರಮಣಿಯನ್ ಅವರ ಗಮನಕ್ಕೆ ಅವೆಲ್ಲ ಬಂದಿರಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ವಿವರ ದಾಖಲಿಸಿರುವ ಎಂಭತ್ತೆರೆಡರ ಹಿರಿಯ ಜೀವದ ನೆನಪಿನ ಶಕ್ತಿ ಹರಿತವಾಗಿಯೇ ಇರುವುದರಿಂದ ಬರೆಯದ ಸಂಗತಿಗಳನ್ನೆಲ್ಲ ಸೇರಿಸಿ ಮತ್ತೊಂದು ಹೊತ್ತಗೆ ಬರಲೆಂದು ಆಶಿಸಬಹುದೇ?  

ಡಾ. ಎಚ್. ಎಸ್. ಅನುಪಮಾ


 (ಪ್ರಕಟಣೆ: ಲಡಾಯಿ ಪ್ರಕಾಶನ, ಗದಗ. ಪುಟ:450, ಬೆಲೆ: 600 ರೂ. ಸಂಪರ್ಕ: ಬಸೂ, 9480286844)


1 comment:

  1. ಅನುಪಮಾ ಅವರು ಬಹಳ ಸೂಕ್ಷ್ಮ ಸಂವೇದನೆಯ ಲೇಖಕಿ. ಬಾಲಸುಬ್ರಮಣ್ಯಂ ಅವರ ಆತ್ಮಕಥೆಯ ಸೂಕ್ಷ್ಮ ಎಳೆಗಳನ್ನು ಗ್ರಹಿಸುತ್ತಲೇ ಅದರ ಕೊರತೆಯ ಅಂಶವನ್ನು ಪರಿಶೀಲಿಸಿರುವುದು ಸೂಕ್ತ ವಾಗಿದೆ. ಅವರಿಗೆ ಧನ್ಯವಾದಗಳು.

    ReplyDelete