Thursday 28 May 2015

‘ಹೂಗಳನ್ನು ಕಿತ್ತು ಹಾಕಬಹುದು, ಹೂವರಳಿಸಲಿರುವ ವಸಂತವನ್ನಲ್ಲ..’





‘ನೀನು ಹೇಳುವುದನ್ನು ನಾನು ಒಪ್ಪದಿರಬಹುದು, ಆದರೆ ಪ್ರಾಣ ಕೊಟ್ಟಾದರೂ ಸರಿ, ಹೇಳುವ ನಿನ್ನ ಹಕ್ಕನ್ನು ರಕ್ಷಿಸುತ್ತೇನೆ’ ಎಂದು ವಾಲ್ಟೇರ್ ಹೇಳಿದ ಕಾಲ ಸರಿದುಹೋಗಿದೆ. ಈಗ ಭಿನ್ನಮತ ಎತ್ತಿದವರ ಸದ್ದಡಗಿಸುವ, ಅಂಥವರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಮೂಢನಂಬಿಕೆಯ ವಿರುದ್ಧ, ಜನರ ದೌರ್ಬಲ್ಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ವಿರುದ್ಧ, ಎಲ್ಲ ರೀತಿಯ ಮೂಲಭೂತವಾದದ ವಿರುದ್ಧ ನಿರ್ಭಯವಾಗಿ ಮಾತನಾಡುತ್ತಿದ್ದ ಹಿರಿಯರ ಮೌನವಾಗಿಸಲು ಸರಣಿ ಹತ್ಯೆಗಳಾಗಿವೆ. ಪುಣೆಯ ನರೇಂದ್ರ ಧಾಬೋಲ್ಕರ್, ಆರ್‌ಟಿಐ ಆಕ್ಟಿವಿಸ್ಟ್ ಸತೀಶ್ ಶೆಟ್ಟಿಯವರ ಹತ್ಯೆಯ ಬೆನ್ನಿಗೇ ಕೊಲ್ಲಾಪುರದ ಕಾಮ್ರೇಡ್ ಗೋವಿಂದ ಪನ್ಸಾರೆ ಗುಂಡಿಗೆ ಬಲಿಯಾಗಿರುವುದು ಅಸಹನೆಯ ಕಾಲಮಾನಕ್ಕೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇದೇ ಫೆಬ್ರುವರಿ ೧೬ರ ಬೆಳಿಗ್ಗೆ ೮.೩೦ರ ವೇಳೆಗೆ ವಾಕ್ ಮುಗಿಸಿ ಇನ್ನೇನು ಪತ್ನಿ ಉಮಾ ಅವರೊಡನೆ ಮನೆಯೊಳಗೆ ಹೋಗಲಿದ್ದ ೮೨ರ ಇಳಿವಯಸ್ಸಿನ ಗೋವಿಂದ ಪನ್ಸಾರೆ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಯಿತು. ಎದೆ, ಕುತ್ತಿಗೆ, ಮೀನಖಂಡ ಹಾಗೂ ತಲೆಯನ್ನು ಗುಂಡುಗಳು ಪ್ರವೇಶಿಸಿದವು. ಆಘಾತಗೊಂಡ ನೆರೆಹೊರೆಯವರು ಕೂಡಲೇ ಆಸ್ಪತ್ರೆಗೆ ಒಯ್ದು ಶಸ್ತ್ರಚಿಕಿತ್ಸೆ ಮಾಡಿದರೂ ಕುತ್ತಿಗೆಯ ಗಾಯದ ರಕ್ತಸ್ರಾವ ನಿಲ್ಲದೇ ಹೋಯಿತು. ಕೊನೆಗೆ ಕೊಲ್ಲಾಪುರದಿಂದ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೂ ಪರಿಸ್ಥಿತಿ ಸುಧಾರಿಸದೆ ಫೆ. ೨೦ರಂದು ಪನ್ಸಾರೆ ಕೊನೆಯುಸಿರೆಳೆದರು.


ಕೇವಲ ಒಂದೂವರೆ ವರ್ಷ ಕೆಳಗೆ ಪನ್ಸಾರೆಯವರ ಆಪ್ತ ಸ್ನೇಹಿತ ನರೇಂದ್ರ ಧಾಬೋಲ್ಕರರನ್ನು ಪುಣೆಯ ಹೊರಭಾಗದ ಅವರ ಮನೆಯ ಬಳಿ ಹೀಗೇ ಹತ್ಯೆ ಮಾಡಲಾಗಿತ್ತು. ಇದುವರೆಗೂ ಧಾಬೋಲ್ಕರ್ ಹಂತಕರನ್ನು ಹಿಡಿಯುವುದು ಒತ್ತಟ್ಟಿಗಿರಲಿ, ಪತ್ತೆ ಮಾಡಲೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ವ್ಯವಸ್ಥೆಯ ವೈಫಲ್ಯವನ್ನು ಟೀಕಿಸಿದ್ದ ಪನ್ಸಾರೆಯವರೂ ಅದೇ ರೀತಿ ಹತ್ಯೆಯಾಗಿದ್ದಾರೆ. ಅವರ ಹಂತಕರ ಪತ್ತೆಗಾಗಿ ಕೂಡಲೇ ೧೦ ತನಿಖಾ ತಂಡಗಳನ್ನು ರಚಿಸಲಾಯಿತು. ಐವರನ್ನು ಸಂಶಯದ ಮೇಲೆ ಬಂಧಿಸಲಾಯಿತು. ಇಷ್ಟೆಲ್ಲ ಆದರೂ, ಹಂತಕರು ಕರ್ನಾಟಕಕ್ಕೆ ಪರಾರಿಯಾದರು ಎಂದು ನಂಬಲಾಗಿದ್ದರೂ, ಹತ್ಯೆ ಕುರಿತು ಯಾವುದೇ ಸುಳಿವು ಸಿಗದ ಕಾರಣ ವಿದೇಶೀ ತಜ್ಞರ ಸಹಾಯ ಪಡೆಯಲು ಸರ್ಕಾರ ನಿರ್ಧರಿಸಿದೆ.

ಅಂಗೈಯೊಳಗೇ ಬಚ್ಚಿಟ್ಟುಕೊಂಡಿರುವ ಹಂತಕರನ್ನು ಪತ್ತೆಹಚ್ಚಲು ಯಾವ ವಿದೇಶಿ ತನಿಖಾ ಏಜೆನ್ಸಿಯೂ ಬೇಡ. ಅದು ಬೇರೆ ಮಾತು. ಆದರೆ ಪನ್ಸಾರೆಯವರ ಹತ್ಯೆ ಮತ್ತದರ ಕಾರಣಗಳ ಕುರಿತು ನೆರೆಯ ಕರ್ನಾಟಕವೂ ಸೇರಿದಂತೆ ಎಲ್ಲಿಯೂ ಸಾರ್ವಜನಿಕ ಪ್ರತಿಭಟನೆ, ಚರ್ಚೆಗಳು ಹೆಚ್ಚು ನಡೆಯದೇ ಇರುವುದು ಆತಂಕದ ವಿಷಯವಾಗಿದೆ. ಭಾಷೆಗಾಗಿ, ನದಿ ನೀರಿಗಾಗಿ, ಗಡಿಗಾಗಿ, ಒಂದು ಸವಲತ್ತಿಗಾಗಿ ತಮ್ಮ ಮಿತ್ರತ್ವ-ಶತ್ರುತ್ವವನ್ನು ನವೀಕರಣಗೊಳಿಸಿ ಬಡಿದಾಡುವ ‘ಓರಾಟ’ಗಾರ ಸಂಘಟನೆಗಳು; ಸಾವಿನ ದಾರುಣತೆಯನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುವ ರಾಜಕಾರಣಿಗಳು ಇಂಥ ಅನ್ಯಾಯದ ಕೊಲೆಗಳ ಬಗೆಗೆ ಏಕೆ ದನಿಯೆತ್ತುವುದಿಲ್ಲ ಎಂದು ಜನ ಯೋಚಿಸಬೇಕಾಗಿದೆ.

ಒಂದು ವಿಷಯ ಸ್ಪಷ್ಟ: ಈ ಹತ್ಯೆಗಳ ಹಿಂದೆ ‘ಪ್ರಶ್ನೆ ಕೇಳಬೇಡಿ, ಸುಮ್ಮನಿರಿ’ ಎಂಬ ಸಂದೇಶ ಇದೆ. ಇಂಥ ಸಂದೇಶ ಯಾರಿಂದ ಬಂದಿದೆ? ಆದರೆ ಯಾಕೆ ಸುಮ್ಮನಿರಬಾರದು ಎಂದು ಎಲ್ಲರಿಗೂ ತಿಳಿಸಲೇಬೇಕಾಗಿದೆ. ಎಂದೇ ಸೌಹಾರ್ದದ ನಾಳೆಗಳ ಕನಸಿರುವವರು ಪನ್ಸಾರೆಯವರ ಬದುಕಿನ ಪಯಣ ಕುರಿತು ತಿಳಿಯುವುದು ಹೆಚ್ಚು ಪ್ರಸ್ತುತವಾಗಿದೆ.

***

ಸಾಮಾಜಿಕ ಕಾರ್ಯಕರ್ತ, ಮಾರ್ಕ್ಸ್‌ವಾದಿ ಹೋರಾಟಗಾರ, ಟ್ರೇಡ್ ಯೂನಿಯನ್ ಲಾಯರ್, ಬರಹಗಾರ ಗೋವಿಂದ ಪನ್ಸಾರೆ ೧೯೩೩ರಲ್ಲಿ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಕೊಲ್ಹಾರದ ಹಳ್ಳಿಯೊಂದರಲ್ಲಿ ಹುಟ್ಟಿದರು. ಅವರ ಹಿರೀಕರ  ಜಮೀನು ಲೇವಾದೇವಿಗಾರರ ಪಾಲಾದ ಕಾರಣ ಭೂಹೀನ ಕುಟುಂಬ ಬಡತನಕ್ಕೆ ತಳ್ಳಲ್ಪಟ್ಟಿತು. ಅವರ ತಾಯ್ತಂದೆಯರು ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಓದಿನಲ್ಲಿ ಮುಂದಿದ್ದ ಪನ್ಸಾರೆ ಕೊಲ್ಹಾರ, ಅಹ್ಮದ್ ನಗರ ಹಾಗೂ ನಂತರ ಕೊಲ್ಲಾಪುರದಲ್ಲಿ ಶಿಕ್ಷಣ ಮುಂದುವರೆಸಿದರು. ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಬಿಎ, ಎಎಲ್‌ಬಿ ಓದಿದರು. ತಮ್ಮ ಖರ್ಚನ್ನು ತಾವೇ ನಿಭಾಯಿಸಲು ಓದುತ್ತಿರುವಾಗಲೇ ವೃತ್ತಪತ್ರಿಕೆ ಮಾರಾಟ, ಮುನ್ಸಿಪಾಲ್ಟಿ ಪ್ಯೂನ್ ಕೆಲಸ, ಪ್ರಾಥಮಿಕ ಶಾಲೆಯಲ್ಲಿ ಪಾಠ, ೧೦ ವರ್ಷ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಬೋಧನೆ - ಎಲ್ಲವನ್ನೂ ಮಾಡಿದರು. ಕಾನೂನು ಪದವಿ ಪಡೆದ ನಂತರ ೧೯೬೪ರಿಂದ ವಕೀಲಿ ವೃತ್ತಿ ಆರಂಭಿಸಿದರು. ಹಲವು ವರ್ಷ ಕೊಲ್ಲಾಪುರ ಬಾರ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿದ್ದರು.

ಶಾಲಾ ದಿನಗಳಲ್ಲೇ ಕಮ್ಯುನಿಸ್ಟ್ ವಿಚಾರಧಾರೆಗೆ ತೆರೆದುಕೊಂಡಿದ್ದ ಅವರು ಸಿಪಿಐ ನಾಯಕ ಪಿ. ಬಿ. ಪಾಟೀಲರ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ೧೯೫೨ರಲ್ಲಿ ಪಕ್ಷ ಸೇರಿ ೧೦ ವರ್ಷ ಕಾಲ ಸಿಪಿಐನ ರಾಜ್ಯ ಕಾರ್ಯದರ್ಶಿಯಾಗಿದ್ದರು. ೧೯೬೨ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ಕಮ್ಯುನಿಸ್ಟರು ಚೀನಾ ಪರ ಸಹಾನುಭೂತಿಯುಳ್ಳವರೆಂದು ಬಂಧನಕ್ಕೊಳಗಾದಾಗ ಪನ್ಸಾರೆ ಕೂಡಾ ಜೈಲಿನಲ್ಲಿದ್ದರು. ಅಸಂಘಟಿತ ವಲಯದ ಕಾರ್ಮಿಕರ ಹತ್ತು ಹಲವು ಚಳುವಳಿಯಲ್ಲಿ ಭಾಗವಹಿಸಿದ್ದರು. ಕೃಷಿ ಕಾರ್ಮಿಕರು, ಮನೆಗೆಲಸದವರು, ಹಾಲು ತಯಾರಕರು, ಆಟೋರಿಕ್ಷಾ ಸಂಘದವರು, ಬೀದಿಬದಿ ವ್ಯಾಪಾರಿಗಳು, ಸ್ಲಂವಾಸಿಗಳ ಸಂಘಟನೆ - ಹೀಗೇ ಸಾಮಾನ್ಯ ಜನರ ಹಾಗೂ ಶೋಷಿತರ ಹೋರಾಟಗಳಲ್ಲಿ ಪನ್ಸಾರೆ ಸದಾ ಜೊತೆಯಿದ್ದರು.


೧೯೮೪ರಲ್ಲಿ ಪನ್ಸಾರೆ ‘ಶಿವಾಜಿ ಕೋಣ್ ಹೋತಾ?’ (ಶಿವಾಜಿ ಯಾರು?) ಎಂಬ ತಮ್ಮ ಮೊದಲ ಪುಸ್ತಕ ಬರೆದರು. ಮರಾಠಾ ಅಭಿಮಾನವನ್ನು ಬಡಿದೆಬ್ಬಿಸಲು ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು ಹಾಗೂ ಬಲಪಂಥೀಯ ರಾಜಕಾರಣವು ಶಿವಾಜಿಯ ಚರಿತ್ರೆಯನ್ನು ತಿರುಚಿ ಆತ ಉಗ್ರ ಹಿಂದುತ್ವವಾದಿ ರಾಜನೆಂಬ ಹುಸಿ ಪ್ರಭಾವಳಿ ಕಟ್ಟಿದ್ದಾರೆನ್ನುವುದು ಪನ್ಸಾರೆ ಅಭಿಮತ. ಶಿವಾಜಿ ಎಂಬ ಮರಾಠಾ ರಾಜ ಮುಸ್ಲಿಂ ವಿರೋಧಿಯಾಗಿರಲಿಲ್ಲ; ರಕ್ತದಾಹದ ವೀರನಾಗಿರಲಿಲ್ಲ. ಗೋವು-ಬ್ರಾಹ್ಮಣರ ಮಹಾರಕ್ಷಕನಾದ ಹಿಂದೂ ಕ್ಷತ್ರಿಯ ರಾಜನಾಗಿರಲಿಲ್ಲ. ಬದಲಾಗಿ ಬಡಜನರ ಪರವಾಗಿದ್ದ, ಸಮಾಜ ಸುಧಾರಣೆ ತರಬಯಸಿದ, ರೈತ-ಮಹಿಳೆ-ಶೂದ್ರಾತಿಶೂದ್ರರ ಪರವಾಗಿದ್ದ ಗುಡ್ಡಗಾಡು ಅರಸನಾಗಿದ್ದ. ಶಾಂತಿ, ಸೌಹಾರ್ದದಿಂದ ತನ್ನ ರಾಜ್ಯದ ಜನತೆ ಬಾಳಬೇಕೆಂದು ಬಯಸಿದ್ದ. ಈ ವಿಷಯಗಳನ್ನು ಐತಿಹಾಸಿಕ ಸಾಕ್ಷ್ಯಗಳೊಂದಿಗೆ ಪ್ರತಿಪಾದಿಸಿದ ಅವರ ಪುಸ್ತಕ ಶಿವಾಜಿ ಸುತ್ತ ಕಟ್ಟಲಾದ ತಪ್ಪುಮಾಹಿತಿಯ ಹುತ್ತವನ್ನು ಕಿತ್ತೊಗೆದು ಅವನನ್ನೊಬ್ಬ ಜನಸ್ನೇಹಿ, ಸುಧಾರಣಾವಾದಿ ರಾಜ ಎಂದು ವಿವರಿಸಿ ಹೇಳಿತ್ತು. ಈ ಪುಸ್ತಕ ಪನ್ಸಾರೆಯವರಿಗೆ ಅಭಿಮಾನಿಗಳನ್ನೂ, ಅಸಂಖ್ಯ ವಿರೋಧಿಗಳನ್ನೂ ಸೃಷ್ಟಿಸಿತು.

೮೦ ಪುಟಗಳ ೩೦ ರೂಪಾಯಿಯ ಈ ಪುಸ್ತಕ ಅತ್ಯಂತ ಜನಪ್ರಿಯವಾಗಿದೆ. ಈಗಲೂ ಅದರ ಪ್ರಕಾಶಕರಾದ ಲೋಕ ವಾಙ್ಮಯ ಗೃಹ ಪ್ರಕಾಶನವು ನಾಲ್ಕೈದು ತಿಂಗಳಿಗೊಮ್ಮೆ ಆ ಪುಸ್ತಕದ ೩೦೦೦ ಪ್ರತಿ ಮುದ್ರಿಸುತ್ತದೆ. ಇದುವರೆಗೆ ೩೭ ಮುದ್ರಣಗಳನ್ನು ಕಂಡು ಒಂದೂವರೆ ಲಕ್ಷ ಪ್ರತಿ ಮಾರಾಟವಾಗಿದೆ. ಅವರು ಹತ್ಯೆಯಾದ ಮರುದಿನ ಒಂದೇ ದಿನದಲ್ಲಿ ಅದರ ೩೦೦೦ ಪ್ರತಿ ಮಾರಾಟವಾಗಿವೆ. ಕನ್ನಡ, ಉರ್ದು, ಗುಜರಾತಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಅದರ ನಂತರ ಹಲವು ಪುಸ್ತಕಗಳನ್ನು ಅವರು ಬರೆದರು. ಮೀಸಲಾತಿ, ಮಾರ್ಕ್ಸ್‌ವಾದ, ಮುಸ್ಲಿಮರ ಸಮಸ್ಯೆಗಳು, ಆರ್ಟಿಕಲ್ ೩೭೦, ರಾಜರ್ಷಿ ಶಾಹೂ, ಕಾರ್ಮಿಕ ಕಾನೂನು, ಕಾರ್ಮಿಕ ನೀತಿಗಳು, ಜಾಗತೀಕರಣದ ಪ್ರಭಾವ, ಕೃಷಿಯ ಸಮಸ್ಯೆಗಳು - ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿದರು. ಬಹುತೇಕ ಪುಸ್ತಕಗಳು ಮರು ಮುದ್ರಣ ಕಂಡಿವೆ.

೧೯೯೨ರಲ್ಲಿ ಬಾಬ್ರಿ ಮಸೀದಿ ಕೆಡವಲ್ಪಟ್ಟಾಗ ‘ಅಮ್ಹಿ ಭಾರತೀಯ’ ಎಂಬ ಅಭಿಯಾನ ಶುರುಮಾಡಿ ಕೋಮು ಸೌಹಾರ್ದಕ್ಕಾಗಿ ಶ್ರಮಿಸಿದರು. ನರೇಂದ್ರ ಧಾಬೋಲ್ಕರ್ ಮತ್ತು ಸಮಾನ ಮನಸ್ಕ ಗೆಳೆಯರ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ನಡೆಗಳನ್ನು ಬೆಂಬಲಿಸಿದ್ದರು. ಕೊಲ್ಲಾಪುರ ಗ್ರಂಥಾಲಯದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ನರೇಂದ್ರ ಧಾಬೋಲ್ಕರ್ ಮಾತನಾಡದಂತೆ ನಿರ್ಬಂಧ ಉಂಟಾದಾಗ ಕಾರ್ಮಿಕರಿಂದ ಹಣ ಸಂಗ್ರಹಿಸಿ ಶ್ರಮಿಕ ಪ್ರತಿಷ್ಠಾನದ ವತಿಯಿಂದ ಧಾಬೋಲ್ಕರರ ಸರಣಿ ಉಪನ್ಯಾಸ ಏರ್ಪಡಿಸಿದರು. ‘ವಿವೇಕ ಜಾಗೃತಿ’ ಎಂಬ ಮೂಢನಂಬಿಕೆ ವಿರೋಧಿ ಅಭಿಯಾನ ಶುರುಮಾಡಿದರು. ಫುಲೆ, ಶಾಹು, ಅಂಬೇಡ್ಕರರ ವಿಚಾರ ಕುರಿತು ೧೦೦ ಕಾಲೇಜುಗಳಲ್ಲಿ ಭಾಷಣ ಮಾಡಿದರು. ಪ್ರತಿವರ್ಷ ಕಾಮ್ರೇಡ್ ಅಣ್ಣಾಭಾವು ಸಾಠೆ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿದ್ದರು. ಅವರಿಗೆ ೭೫ ವರ್ಷವಾಯಿತೆಂದು ಸನ್ಮಾನ ಏರ್ಪಡಿಸಿದಾಗ ಅದನ್ನು ಸುತರಾಂ ನಿರಾಕರಿಸಿದರು. ಅದರಬದಲು ಜನಪರ ಹೋರಾಟದಲ್ಲಿ ತೊಡಗಿಕೊಂಡ ೭೦ ಜನರ ಜೀವನಚರಿತ್ರೆ ಪ್ರಕಟಿಸಬೇಕೆಂದು ಸೂಚಿಸಿದರು. ತಮಿಳಿನ ಮುರುಗನ್ ಅವರು ‘ಸುಮ್ಮನಾದಾಗ’, ಸುಮ್ಮನಾಗಿಸುವ ಸಾಂಸ್ಕೃತಿಕ ರಾಜಕಾರಣ ಕುರಿತು ವಿಸ್ತೃತವಾಗಿ ಮಾತನಾಡಿದ್ದರು.

ತೀರಾ ಇತ್ತೀಚೆಗೆ ತಾವು ಕೆಲಸ ಮಾಡಿದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತ ಶಿವಾಜಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ದನಿಯೆತ್ತಿದ್ದರು. ‘ತಮ್ಮ ಮುಸ್ಲಿಂ ದ್ವೇಷ ಕಾರಿಕೊಳ್ಳಲು ಶಿವಾಜಿಯನ್ನು ಉಪಕರಣವಾಗಿ ಯಾರೂ ಬಳಸದಿರಲಿ. ಶಿವಭಕ್ತರು ಸೃಷ್ಟಿ ಮಾಡಿದ ಶಿವಾಜಿ ಇಮೇಜ್ ಅನ್ನು ಮುಸ್ಲಿಮರು ನಂಬದಿರಲಿ. ಅವರು ತಮ್ಮ ಇತಿಹಾಸ ತಾವೇ ವಿಶ್ಲೇಷಿಸಿ ಅರಿಯುವಂತಾಗಲಿ’ ಎಂದು ಹೇಳಿದ್ದೇ ಅಲ್ಲದೆ ಗಾಂಧಿಯನ್ನು ಕೊಂದ ಹಂತಕರ ಹೆಸರಿನಲ್ಲಿ ದೇವಾಲಯ ಕಟ್ಟಹೊರಟವರನ್ನು ಕಟುಮಾತುಗಳಲ್ಲಿ ಖಂಡಿಸಿದ್ದರು. ಆಗ ಅಲ್ಲಿನ ವಿದ್ಯಾರ್ಥಿ ನಾಯಕನೊಬ್ಬ ಕೆರಳಿ ಗದ್ದಲ ಎಬ್ಬಿಸಿದ್ದ. ಕೋರ್ಟಿನಲ್ಲಿ ಅವರನ್ನು ಎದುರಿಸುವುದಾಗಿಯೂ, ಗೋಡ್ಸೆ ಮಹಾನ್ ದೇಶಭಕ್ತ ಎಂದು ತಾನು ಸಾಧಿಸಿ ತೋರಿಸುವುದಾಗಿಯೂ ಸವಾಲು ಹಾಕಿದ. ‘ದಯವಿಟ್ಟು ಹಾಗೆ ಮಾಡಪ್ಪ, ಕೋರ್ಟಿಗೆ ಹೋದಾಗಲಾದರೂ ನಿಜವಾದ ವಿಷಯ ಏನೆಂದು ಪ್ರಚಾರವಾಗಲಿ’ ಎಂದು ತಣ್ಣಗೆ ಅವನಿಗೆ ಉತ್ತರಿಸಿ, ಮಾತು ಮುಗಿಸಿ ಬಂದಿದ್ದರು.

ಹೀಗೆ ಎಂಟು ದಶಕ ಬಾಳಿ, ಜಾತಿ/ಧರ್ಮ/ಭಾಷೆಗಳ ಹೆಸರಿನಲ್ಲಿ ಅಸಹನೆಯ ಅಂಧಾಭಿಮಾನ ಹುಟ್ಟಿಸುವವರನ್ನು ಶತಾಯಗತಾಯ ವಿರೋಧಿಸಿ, ಜೀವನದ ಇಳಿಸಂಜೆ ತಲುಪಿದ್ದರು ಕಾಮ್ರೇಡ್ ಗೋವಿಂದ ಪನ್ಸಾರೆ. ಎಂಭತ್ತರ ವಯಸ್ಸಿನಲ್ಲೂ ವಯೋಸಹಜ ಮರೆವು, ದಣಿವು, ನಿಶ್ಶಕ್ತಿಗಳನ್ನು ಎಂದೂ ತೋರಿದವರಲ್ಲ. ಯಾವುದೇ ಜನಪರ ಹೋರಾಟವಿದ್ದರೂ ಅಲ್ಲಿ ಕೂಡಲೇ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಟೋಲ್‌ಗಳಲ್ಲಿ ಸುಂಕ ಸಂಗ್ರಹಿಸುವುದರ ವಿರುದ್ಧ ದನಿಯೆತ್ತಿದ್ದರು. ವರ್ಷಾನುಗಟ್ಟಲೆ ನಿರ್ಮಾಣ ಸುಂಕವನ್ನು ವಿಧಿಸುವುದು, ಸುಂಕ ಸಂಗ್ರಹಿಸುವುದೇ ಒಂದು ಧಂಧೆಯಾಗಿ ಮಾಡಿಕೊಂಡಿರುವುದನ್ನು ವಿರೋಧಿಸಿ ಸುಂಕ ಪಾವತಿಸಬಾರದೆಂದು ನಾಗರಿಕರಿಗೆ ಹೇಳುತ್ತಿದ್ದರು. ಕೊಲ್ಲಾಪುರದ ಈ ಹೋರಾಟ ಪನ್ಸಾರೆ ಬದುಕಿನ ಕೊನೆಯ ಹೋರಾಟವಾಯಿತು.

***

‘ಪ್ರಗತಿಪರ ಮಹಾರಾಷ್ಟ್ರ ಎನ್ನುವುದೊಂದು ಭ್ರಮೆ’ ಎನ್ನುತ್ತಿದ್ದ ಪನ್ಸಾರೆ ಮೂಲಭೂತವಾದದಲ್ಲಿ ಮುಳುಗೆದ್ದ ಪಶ್ಚಿಮ ಮಹಾರಾಷ್ಟ್ರದ ಎಡ-ಬಲ ಸಂಘರ್ಷವನ್ನು ದಶಕಗಳಿಂದ ನೋಡಿದ್ದವರು. ಪಕ್ಷಭೇದವಿಲ್ಲದೆ ರಾಜಕಾರಣವು ಬೆಳೆಸುತ್ತಿರುವ ಭಾಷೆ/ಧರ್ಮದ ಅಂಧಾಭಿಮಾನ, ಪ್ರಾಂತೀಯತೆಯ ಅಮಲುಗಳನ್ನು ಗಮನಿಸಿದ್ದರು. ಅಂಥವರ ಹತ್ಯೆಯಾಗಿದ್ದೇಕೆ? ಶಿವಾಜಿ ಯಾರು ಎಂದು ನಿಜ ಹೇಳಿದ್ದಕ್ಕೆ ಕಣ್ಮುಚ್ಚಿದರೋ? ಅಭಿವೃದ್ಧಿಗೆಂದು ಸರ್ಕಾರ ಖರ್ಚು ಮಾಡಿದ ಹಣಕ್ಕೆ ನಾಗರಿಕರು ಸುಂಕ ಕೊಡಬೇಕಿಲ್ಲ ಎಂದು ಟೋಲ್ ಸುಂಕ ವಿರೋಧಿಸಿದಕ್ಕಾಗಿ ಕೊನೆಯುಸಿರೆಳೆದರೋ? ಖಾಸಗೀಕರಣದ ಕಟ್ಟಾ ವಿರೋಧಿಯಾಗಿದ್ದಕ್ಕೆ ತಣ್ಣಗಾದರೋ?

ಫುಲೆ, ಅಂಬೇಡ್ಕರ್, ಹಮೀದ್ ದಳವಾಯಿಯಂತಹ ಸಮಾಜ ಸುಧಾರಕ ವಿಶ್ವಚೇತನಗಳನ್ನೂ; ಅವರಷ್ಟೇ ಸಂಖ್ಯೆಯ ಧಾರ್ಮಿಕ/ಭಾಷಿಕ ಮೂಲಭೂತವಾದಿಗಳನ್ನೂ ಸೃಷ್ಟಿಸಿದ ನೆಲ ಮಹಾರಾಷ್ಟ್ರ. ಭಕ್ತಿಪಂಥದ ಚಳುವಳಿಯಿಂದ ಹಿಡಿದು ಸಮಾನತೆಗಾಗಿ ಪ್ರತಿಪಾದಿಸುವ ಅನೇಕ ಚಳುವಳಿಗಳ ಬೀಜವನ್ನು ಆ ನೆಲವು ಮೊಳೆಯಿಸಿದೆ. ೧೯೬೦ರಲ್ಲಿ ರಾಜ್ಯವಾಗಿ ರೂಪುಗೊಂಡ ಮೇಲೆ ೨೦೧೪ರ ತನಕ, ನಡುವೆ ನಾಲ್ಕು ವರ್ಷ ಬಿಟ್ಟರೆ ಅಲ್ಲಿ ಸದಾ ಕಾಂಗ್ರೆಸ್ ಮುಖ್ಯಮಂತ್ರಿಯೇ ಆಡಳಿತ ನಡೆಸಿದ್ದಾರೆ. ಹೀಗಿದ್ದೂ ಸಂಯುಕ್ತ ಮಹಾರಾಷ್ಟ್ರಕ್ಕಾಗಿ ೧೯೬೦ರಲ್ಲಿ ಹೋರಾಡಿದ ವ್ಯಕ್ತಿ; ಫುಲೆ, ಅಂಬೇಡ್ಕರ್, ಶಾಹೂ ಅವರ ತತ್ವಗಳನ್ನು ಎದೆಗೆ ನಿಕಟವಾಗಿಟ್ಟುಕೊಂಡು ಹೋರಾಡಿದ ಪನ್ಸಾರೆ ಹತ್ಯೆಯಾಗಿದ್ದಾರೆ. ಸತ್ಯಶೋಧಕ ಸಮಾಜದ ಆಶಯಗಳು ಸಜೀವವಾಗಿ ಉಸಿರಾಡಿದ್ದ ಛತ್ರಪತಿ ಶಾಹೂ ಮಹಾರಾಜರ ಕೊಲ್ಲಾಪುರವೀಗ ಸತ್ಯವಿರೋಧಿಗಳ ನೆಲೆಯಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ರಂಗಗಳಲ್ಲಿ ಮೂಲಭೂತವಾದ ನಿಧಾನಕ್ಕೆ ತನ್ನ ಬೇರುಗಳನ್ನು ಇಳಿಸಿ ಬಿಟ್ಟಿದೆ.

ಇದರ ಜೊತೆಗೆ ಖಾಸಗಿ ಬಂಡವಾಳದ ಮಾಲೀಕರು ಎಂದಿನಿಂದಲೂ ಆಳುವವರಿಗೆ ಹಾಗೂ ಮೂಲಭೂತವಾದಿಗಳಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಮುಕ್ತ ಮಾತು-ಚರ್ಚೆ ಎಂದರೆ ಅವರಿಗೆ ನಡುಕ ಹುಟ್ಟುತ್ತದೆ. ಜನಸಮುದಾಯ ಜಾಗೃತಿಗೊಳ್ಳತೊಡಗಿದರೆ ಅವರ ತೊಡೆಗಳು ಬಿದ್ದುಹೋಗುತ್ತವೆ. ಎಂದೇ ಜನರನ್ನು ಜಾಗೃತಿಗೊಳಿಸುವ, ಪ್ರಶ್ನಿಸುವ, ಮುಕ್ತ ಚರ್ಚೆ ಹುಟ್ಟುಹಾಕುವ ಜನರನ್ನು ‘ಬುದ್ಧಿಜೀವಿ’ಗಳೆಂದು ಹಳಿದು ಸುಮ್ಮನಿರಿಸಲಾಗುತ್ತದೆ. ಸಣ್ಣಪುಟ್ಟ ಆಮಿಷಗಳ ತೋರಿಸಿ ಬಡತನದಿಂದ ಹಸಿದ ದೊಡ್ಡ ಜನಸಮುದಾಯವನ್ನು ಕೋಮುವಾದ, ಭಾಷಾಭಿಮಾನಗಳತ್ತ ಸೆಳೆದುಕೊಳ್ಳಲಾಗುತ್ತಿದೆ. ಜನರಿಂದಲೇ ಜನಪರ ನಾಯಕರನ್ನು ಸುಮ್ಮನಿರಿಸುವ ಹುನ್ನಾರಗಳೂ ನಡೆಯುತ್ತಿವೆ.

ಇದು ಹೊಸತಲ್ಲ. ಪ್ರಶ್ನಿಸುವ ತನ್ನ ಹಕ್ಕಿಗಾಗಿ ಸಾಕ್ರೆಟಿಸ್ ವಿಷ ಕುಡಿದು ಸಹಸ್ರಮಾನಗಳೇ ಸಂದುಹೋಗಿವೆ. ಪ್ರಾಣ ತೆಗೆದರೂ ಭಿನ್ನಮತ ಸಂಪೂರ್ಣ ನಿಲ್ಲುವುದಿಲ್ಲ ಎಂಬ ಸತ್ಯವನ್ನು ಆಳುವವರು ಅರಿಯಬೇಕಾಗಿದೆ. ಆದರೆ ಒಂದಂಶ ನೆನಪಿಡಬೇಕು: ಯಾವುದೇ ವಿಷಯಕ್ಕಾಗಿ ಜನರ ನಡುವೆ ಆಳದ ಅಸಹನೆ ಸೃಷ್ಟಿಸುವುದು ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯದಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಸಂವಿಧಾನಬದ್ಧ ಕಾರ್ಯಾನಿರ್ವಹಣೆಯೂ ಸಾಧ್ಯವಾಗುವುದಿಲ್ಲ. ಮುಕ್ತವಾಗಿ ಮಾತನಾಡುವವರ ಹತ್ಯೆಗೈದು, ಬದುಕಿರುವವರ ಭಯಗೊಳಿಸುವ ಪ್ರಯತ್ನಗಳು ನಿಷ್ಕ್ರಿಯ, ಭಯಗ್ರಸ್ತ ಭಾವೀಪ್ರಜೆಗಳನ್ನು ಸೃಷ್ಟಿಸುತ್ತವೆ. ಆಗ ಜನರೆದುರು ಅಸತ್ಯವನ್ನು ಅದರ ಎಲ್ಲ ಮುಖಗಳೊಂದಿಗೆ ಬಿಚ್ಚಿಡುವವರು ಯಾರು? ಬಡವ, ಅಲ್ಪಸಂಖ್ಯಾತ, ಕಾರ್ಮಿಕರ ಪರ ಯೋಚಿಸುವವರನ್ನು ಬೆಂಬಲಿಸುವವರು ಯಾರು? ಸುಲಭದ ಪ್ರಚೋದನೆಗೆ ಜನ ಪಕ್ಕಾಗದಂತೆ ತಡೆಯುವುದಾದರೂ ಹೇಗೆ?

ಇವು ನಾವೆಲ್ಲ ಉತ್ತರಿಸಿಕೊಂಡು ಮುಂದಡಿಯಿಡಬೇಕಾದ ಪ್ರಶ್ನೆಗಳು. ಏಕೆಂದರೆ ನಡೆವ ನೆಲ ತನ್ನೊಡಲಲ್ಲಿ ನೆಲಬಾಂಬುಗಳ ಮುಚ್ಚಿಟ್ಟುಕೊಳ್ಳದೆ ಹೂವರಳಿಸುವಂತೆ ಮಾಡುವ ಜವಾಬ್ದಾರಿ ಚಲಿಸುವ ಪಾದಗಳ ಮೇಲೇ ಇದೆ..

-

No comments:

Post a Comment