Saturday 1 July 2017

ಗ್ವಾನೊ ಕಥನ




ಸದಾ ಒದ್ದೆಯಾಗಿ ಮಂಜು ಮುಸುಕಿದ ಪೆಸಿಫಿಕ್ ಸಮುದ್ರ ದಂಡೆ, ಭೂಮಿ ಮೇಲಿನ ಅತಿ ಒಣಹವೆಯ ಪ್ರದೇಶವಾದ ಅಟಕಾಮಾ ಮರುಭೂಮಿ - ಇವೆರೆಡರ ನಡುವೆ ಹರಡಿಕೊಂಡಿರುವ ಪುರಾತನ ನಾಗರಿಕತೆಯ ತೊಟ್ಟಿಲು ಪೆರು. ಎರಡು ಸಮಾನಾಂತರ ಪರ್ವತ ಶ್ರೇಣಿಗಳಿರುವ, ೨೦-೩೦ ನದಿಗಳು ಹರಿವ ದೇಶ ಅದು. ಅತಿ ತೇವಾಂಶ-ಅತಿ ಒಣಹವೆ, ಅತಿ ನೀರು-ಮಳೆಯೇ ಬೀಳದ ಮರುಭೂಮಿ, ಕಡಿದಾದ ಇಳಿಜಾರು-ನೀರು ನಿಂತುಬಿಡುವ ಬಯಲು - ಹೀಗೆ ಸಂಪೂರ್ಣ ವಿಭಿನ್ನ ನೆಲ ಲಕ್ಷಣಗಳ ಹೊಂದಿರುವ ದೇಶ ಪೆರು. ಹವಾಮಾನಕ್ಕೆ ತಕ್ಕಂತೆ ವೈವಿಧ್ಯಮಯ ಬೆಳೆ ಬೆಳೆದಿರುವ ಯಶಸ್ವಿ ಕೃಷಿಕರು ಅವರು.

ಪೆರುವಿನ ಪವಿತ್ರ ಕಣಿವೆಯಲ್ಲಿ ಪಯಣಿಸುವಾಗ ಎಲ್ಲೆಲ್ಲು ಬೆಳೆದುನಿಂತ ಹಸಿರು ಕಣ್ತುಂಬುವಂತಿತ್ತು. ಗುಡ್ಡದ ಇಳಿಜಾರುಗಳಲ್ಲಿ, ಕಡಿದಾದ ಪರ್ವತಗಳ ಪಾರ್ಶ್ವದಲ್ಲಿ ಕಡೆದ ಮೆಟ್ಟಿಲುಗಳಲ್ಲಿ, ಬಯಲುಗಳಲ್ಲಿ ಎಲ್ಲೆಲ್ಲು ಸಮೃದ್ಧ ಮತ್ತು ವೈವಿಧ್ಯಮಯ ಬೆಳೆ. ಅದನ್ನು ನೋಡುವಾಗ, ನಮ್ಮ ಕೃಷಿಯೂ, ರೈತ ಆತ್ಮಹತ್ಯೆಗಳೂ ನೆನಪಿಗೆ ಬಂದವು. ನಮ್ಮ ರೈತರು ರಸಗೊಬ್ಬರ-ಬೀಜ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ನಮಗಿಂತ ಮೊದಲೇ ಜಾಗತೀಕರಣಗೊಂಡ ಪೆರುವಿನ ರೈತರು ಗೊಬ್ಬರ, ಬೀಜಕ್ಕಾಗಿ ಸಾಲ ಮಾಡುವರೇ? ಆತ್ಮಹತ್ಯೆಗೆಳಸುವರೇ? ಎಂಬ ಪ್ರಶ್ನೆ ಸುಳಿಯಿತು.

ಏನು ಗೊಬ್ಬರ ಹಾಕಿ ಬೆಳೆ ಬೆಳೆಯುತ್ತಾರೋ? ಅಲ್ಪಾಕ, ಲಾಮಗಳ ಹಿಕ್ಕೆಯೋ ಅಥವಾ ರಸಗೊಬ್ಬರವೋ? ನಮ್ಮ ಚರ್ಚೆಯ ಮಾತು ಅರ್ಥಮಾಡಿಕೊಂಡನೋ ಎನ್ನುವಂತೆ ಗೈಡ್ ಉತ್ತರಿಸಿದ:

‘ಗ್ವಾನೊ ವಾನೊ.’

‘ಗ್ವಾನೊ?’

‘ಹೌದು, ಅದು ಗೊಬ್ಬರ. ನಮ್ಮ ಆಂಡಿಯನ್ ಭಾಷೆಯಲ್ಲಿ ವ್ಯಾನೊ ಎನ್ನುತ್ತೇವೆ. ಕೇಳಿಲ್ಲವೇನು?’

‘ಇಲ್ಲ. ಏನು ವ್ಯಾನೊ ಎಂದರೆ?’

‘ನೈಟ್ರೇಟ್ ಯುದ್ಧ ಎಂದು ಓದಿಲ್ಲವೆ? ವಾರ್ ಆಫ್ ಪೆಸಿಫಿಕ್ ಗ್ವಾನೋಗಾಗಿಯೇ ನಡೆದದ್ದು. ನೈಟ್ರೇಟ್ ಎಂದರೆ ಗ್ವಾನೋ. ರೈತರ ಕೈ ಹಿಡಿದಿದ್ದು ಅದೇ.’

ರೈತರು ಆತ್ಮಹತ್ಯೆಗೆಳಸದಂತೆ ತಡೆದ ಗ್ವಾನೊ! ಅದಕಾಗಿ ಯುದ್ಧ!!



ಏನಿದು ಗ್ವಾನೊ?

ಗ್ವಾನೊ ಮೂಲ ಕೆದಕಿ ಹೊರಟಾಗ ಆಸಕ್ತಿದಾಯಕ ನೈಟ್ರೇಟ್ ಕಥನ ಎದುರಾಯಿತು.

ನೈಟ್ರೇಟ್ ಆಧುನಿಕ ಮನುಷ್ಯನಿಗೆ ಅತ್ಯವಶ್ಯ ರಾಸಾಯನಿಕ. ಅದಕ್ಕೆ ಹಲವು ಉಪಯೋಗಗಳು. ಗೊಬ್ಬರ ತಯಾರಿ, ಸ್ಫೋಟಕ, ಹೊಗೆ ಬಾಂಬು, ರಾಕೆಟ್ ಪ್ರೊಪೆಲೆಂಟ್, ಗ್ಲಾಸ್ ಎನಾಮೆಲ್, ಆಹಾರ ಸಂರಕ್ಷಣೆ ಎಲ್ಲದರಲ್ಲು ಅದು ಉಪಯೋಗಿಸಲ್ಪಡುತ್ತಿದೆ. ಅಟಕಾಮಾ ಮರುಭೂಮಿಯಲ್ಲಿ ಸಾಲ್ಟ್ ಪೀಟರ್ ಶೋಧಿಸಲ್ಪಟ್ಟು, ೨೦ನೇ ಶತಮಾನದಲ್ಲಿ ಕೃತಕ ತಯಾರಿಕಾ ವಿಧಾನಗಳ ಅಭಿವೃದ್ಧಿಪಡಿಸುವವರೆಗೂ ನೈಟ್ರೇಟ್‌ನ ಮೂಲ ಆಕರವಾಗಿ ಜಗತ್ತು ಗ್ವಾನೊವನ್ನೇ ನೆಚ್ಚಿಕೊಂಡಿತ್ತು.

ಗ್ವಾನೊ ಎಂದರೆ ಹಕ್ಕಿ ಉದುರಿಸಿದ ಪಿಷ್ಠೆ. ಗುಹೆಗಳ ಹಕ್ಕಿ, ಬಾವಲಿ ಮತ್ತು ಕಡಲ ಹಕ್ಕಿಗಳ ಹಿಕ್ಕೆ ಅತ್ಯಂತ ನೈಟ್ರೊಜನ್‌ಯುಕ್ತ. ಅದರಲ್ಲು ಕ್ರಿಮಿಕೀಟ ತಿನ್ನುವ ನೆಲದ ಹಕ್ಕಿಗಳ ಪಿಷ್ಟೆಗಿಂತ; ಗುಹೆಯ ತಂಪಲ್ಲಿ ವಾಸಿಸುವ ಬಾವಲಿಗಳ ಪಿಷ್ಟೆಗಿಂತ ಕಡಲಹಕ್ಕಿಗಳ ಪಿಷ್ಟೆ ಹೆಚ್ಚು ಸಾರಜನಕ, ಪೊಟ್ಯಾಷಿಯಂ ಹಾಗೂ ರಂಜಕಯುಕ್ತ. ಎಂದೇ ಕಡಲ ಹಕ್ಕಿಪಿಷ್ಟೆ ಸಮೃದ್ಧ ಬೆಳೆಗೆ ಸಹಾಯಕ.

ಸಾವಿರಾರು ವರ್ಷಗಳಿಂದ ಆಂಡಿಯನ್ ಜನರು ಗ್ವಾನೊ ಬಳಸಿ, ಮಣ್ಣಿನ ಫಲವತ್ತತೆ ಮತ್ತು ಇಳುವರಿ ಹೆಚ್ಚಿಸಬಹುದೆಂದು ತಿಳಿದಿದ್ದರು. ಇಂಕಾ ರಾಜರು ಗ್ವಾನೊ ಬಳಕೆಯ ಮೇಲೆ ನಿರ್ಬಂಧ ಹೇರಿದ್ದಲ್ಲದೆ ಕಡಲ ಹಕ್ಕಿಗಳ ಕೊಂದವರಿಗೆ, ಅವುಗಳ ಸಂತಾನೋತ್ಪತ್ತಿಗೆ ತೊಂದರೆ ಕೊಟ್ಟವರಿಗೆ ಮರಣದಂಡನೆ ವಿಧಿಸುತ್ತಿದ್ದರು.

ಕಡಲ ಹಕ್ಕಿಗಳು ಈ ಪರಿ ಸಂಖ್ಯೆಯಲ್ಲಿ ಇಲ್ಲಿಗೇ ಏಕೆ ಬಂದವು?

ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಶೀತನೀರಿನ ಪ್ರವಾಹ ‘ಹಂಬೋಲ್ಟ್ ಕರೆಂಟ್’. ಅದರ ಉತ್ತರ ತುದಿ ಪೆರು. ಅದು ಎಲ್ಲ ಸಮೃದ್ಧ ಪೋಷಕಾಂಶಗಳು ಪೆರುವಿನ ಕಡಲಾಳ ಬಂದು ಬೀಳುವಂತೆ ಮಾಡುತ್ತದೆ. ಅದಕ್ಕೇ ಅಲ್ಲಿ ಹೆಚ್ಚು ಆಲ್ಗೆ, ಶಿಲೀಂಧ್ರಗಳು ಬೆಳೆಯುತ್ತವೆ. ಅದನ್ನು ತಿಂದು ಮೀನು ಬೆಳೆಯುವುದರಿಂದ ಪ್ರಪಂಚದ ಎಲ್ಲ ಕಡೆಗಿಂತ ಹೆಚ್ಚು ಮೀನು ಪೆರುವಿನ ಕಡಲಲ್ಲಿ ದೊರೆಯುತ್ತದೆ.

ಮೀನು ಹೆಚ್ಚಿರುವುದರಿಂದ ವಲಸೆ ಬರುವ ಕಡಲ ಹಕ್ಕಿಗಳ ಸಂಖ್ಯೆಯೂ ಹೆಚ್ಚು. ಸಮುದ್ರದ ನಡುವಿರುವ ಸಣ್ಣಪುಟ್ಟ ದ್ವೀಪಗಳಿಗೆ ಪೆಂಗ್ವಿನ್, ಪೆಲಿಕನ್ ಸೇರಿದಂತೆ ಲಕ್ಷಾಂತರ ಹಕ್ಕಿಗಳು ಪ್ರತಿವರ್ಷ ವಲಸೆ ಬರುತ್ತವೆ. ಒಣಗುಡ್ಡೆಗಳಂತಹ ಆ ದ್ವೀಪಗಳಲ್ಲಿ ಗಿಡಮರಗಳಿಲ್ಲ, ಗರಿಕೆ ಬೆಳೆಯುವುದಿಲ್ಲ, ಎಲೆ, ಕಡ್ಡಿಗಳೂ ಸಿಗುವುದಿಲ್ಲ. ಹಕ್ಕಿಗಳು ತಮ್ಮ ತುಪ್ಪಳ ಮತ್ತು ಪಿಷ್ಟೆಯಲ್ಲೇ ಮೆತ್ತನ್ನ ಗೂಡು ಕಟ್ಟುತ್ತವೆ. ಮರಿಗಳ ಹಾರಿಸಿಕೊಂಡು ಹೋಗುವವರೆಗೆ ಕೆಲ ತಿಂಗಳು ಅಲ್ಲೆ ತಂಗುತ್ತವೆ.

ಹೀಗೆ ಸಾವಿರಾರು ವರ್ಷಗಳಿಂದ ವರ್ಷವರ್ಷವೂ ಪದರು ಪದರುಗಳಲ್ಲಿ ಮಿಲಿಯಗಟ್ಟಲೆ ಹಕ್ಕಿಗಳ ಪಿಷ್ಟೆ, ಪುಚ್ಛ ಬಿದ್ದುಬಿದ್ದು ಆ ಪುಟ್ಟ ದ್ವೀಪಗಳು ಗೊಬ್ಬರದ ಗುಡ್ಡಗಳಾಗಿ ಪರಿವರ್ತನೆಗೊಂಡಿವೆ. ಪೆರುವಿನ ಬಳಿ ಕೆಲವು ದ್ವೀಪಗಳಂತೂ ೧೦೦-೧೫೦ ಅಡಿ ಆಳದವರೆಗೆ ಹಕ್ಕಿಯ ಹಿಕ್ಕೆಯಿರುವ ಅತ್ಯಂತ ಫಲವತ್ತಾದ ಗೊಬ್ಬರ ಗುಡ್ಡಗಳಾಗಿ ರೂಪುಗೊಂಡಿವೆ. ಮಳೆಯೇ ಬರದ ಒಣ ಹವಾಮಾನವಾದ್ದರಿಂದ ಸಹಸ್ರಾರು ವರ್ಷದಿಂದ ಸಂಗ್ರಹವಾದ ಗ್ವಾನೋದಲ್ಲಿ ೮-೧೬% ನೈಟ್ರೇಟ್ ಅಂಶ ಹಾಗೇ ಉಳಿದು ಬಂದಿದೆ. ಅಷ್ಟೇ ಅಲ್ಲ, ಅದು ‘ವಾಸನೆ’ಯನ್ನೂ ಕಳೆದುಕೊಂಡ ಗೊಬ್ಬರವಾಗಿದೆ.





‘ಅತ್ಯಧಿಕ ಇಳುವರಿ ಬೇಕೆ? ಗ್ವಾನೊ ಬಳಸಿ..’

ಕಡಲ ಹಕ್ಕಿಗಳ ಹಿಕ್ಕೆ ಗೊಬ್ಬರ ಕುರಿತು ಸ್ಪ್ಯಾನಿಶ್ ಆಕ್ರಮಣಕಾರರು ಪೆರುವಿಯನ್ನರಿಂದ ತಿಳಿದುಕೊಂಡರು. ಅಲೆಕ್ಸಾಂಡರ್ ಹಂಬೋಲ್ಟ್ ಎಂಬ ಯೂರೋಪಿಯನ್ ಭೂಗೋಳಶಾಸ್ತ್ರಜ್ಞ ಗ್ವಾನೊ ಬಳಕೆ ಬಗೆಗೆ ವಿಸ್ತೃತವಾಗಿ ಅಧ್ಯಯನ ನಡೆಸಿ ಬರೆದರು. ೧೮೦೨ರ ಬಳಿಕ ಗ್ವಾನೊ ವ್ಯಾಪಾರದ ಭರಾಟೆ ಶುರುವಾಯಿತು. ಸ್ಪೇನಿನಿಂದ ಸ್ವತಂತ್ರವಾದ ಮೇಲೆ ಪೆರು ೧೮೨೦-೨೫ರ ನಡುವೆ ತನ್ನ ಮೊದಲ ಹಡಗು ತುಂಬ ಗ್ವಾನೋ ಸರಕನ್ನು ಬ್ರಿಟನಿಗೆ ರಫ್ತು ಮಾಡಿತು. ಬ್ರಿಟನಿನ ಕಂಪನಿಯೊಂದು ದಲ್ಲಾಳಿಯಾದ ಮೇಲೆ ಗ್ವಾನೋ ಅದೃಷ್ಟ ಖುಲಾಯಿಸಿತು.


ಹತ್ತಿ, ಮೆಕ್ಕೆಜೋಳ ಬೆಳೆಗೆ ಗ್ವಾನೊ ಅತ್ಯುತ್ತಮ ಎಂಬ ಜಾಹೀರಾತು ಎಲ್ಲೆಲ್ಲು ಕಂಡುಬಂತು. ಗ್ವಾನೊ ಹಕ್ಕಿಗಳ ಹಿಕ್ಕೆಯಲ್ಲಿ ಎಷ್ಟು ನೈಟ್ರೊಜನ್ ಇದೆಯೆಂದರೆ ಸ್ಫೋಟಕಗಳನ್ನು ತಯಾರಿಸಬಹುದು ಎಂಬ ಜನಪ್ರಿಯ ನಂಬಿಕೆ ಚಾಲ್ತಿಗೆ ಬಂತು. ೧೮೪೦ರಿಂದ ೧೮೮೦ರ ನಡುವೆ ೪೦ ವರ್ಷಗಳಲ್ಲಿ ೨೦ ಮಿಲಿಯನ್ ಟನ್ ಗ್ವಾನೋ ಮಾರಾಟವಾಯಿತು. ಹೆಚ್ಚಿನದು ಬ್ರಿಟನ್ನಿಗೇ ಹೋಯಿತು. ೧೮೫೮ನೇ ಇಸವಿ ಒಂದರಲ್ಲೇ ಬ್ರಿಟನ್ ೩ ಲಕ್ಷ ಟನ್ ಗ್ವಾನೋ ಖರೀದಿಸಿತು. ಬೇಡಿಕೆ ಹೆಚ್ಚುತ್ತ ಹೋದಂತೆ ಚಿಂಚಾ ಮತ್ತಿತರ ದ್ವೀಪಗಳಿಂದ ಹಕ್ಕಿಹಿಕ್ಕೆಭರಿತ ಮಣ್ಣು, ಗೊಬ್ಬರದ ರಫ್ತು ವಹಿವಾಟು ಹಿಂದೆಂದೂ ಇಲ್ಲದ ವೇಗದಲ್ಲಿ ನಡೆಯಿತು. ೧೮೪೯ರಲ್ಲಿ ೭೯ ಜನ ಮೊದಲ ಚೀನೀ ಕೆಲಸಗಾರರು ಗೊಬ್ಬರ ಗಣಿಗಾರಿಕೆಗೆಂದೇ ಪೆರುವಿಗೆ ವಲಸೆ ಬಂದರು. ಮುಂದಿನ ಕಾಲು ಶತಮಾನದಲ್ಲಿ ಒಂದು ಲಕ್ಷ ಚೀನೀ ಕೆಲಸಗಾರರು ಗ್ವಾನೊ ತೆಗೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪೆರುವಿನ ಕಾಡುಗಳಲ್ಲಿ, ಪರ್ವತ-ಗಣಿಗಳಲ್ಲಿ ಸಾವಿರಾರು ಮೈಲು ರೈಲು ಮಾರ್ಗ ಹಾಕಲಾಯಿತು. ಆ ರೈಲುಮಾರ್ಗಗಳು ಚಿನ್ನ, ಬೆಳ್ಳಿ, ತವರ, ರಬ್ಬರ್ ಹಾಗೂ ಗ್ವಾನೋಗಳನ್ನು ಸಾಗಿಸುವ ಉದ್ದೇಶದಿಂದ ರೂಪುಗೊಂಡವು.

ಪೆರು ತನ್ನ ಭಾರೀ ಅಂತಾರಾಷ್ಟ್ರೀಯ ಸಾಲ ತೀರಿಸಿಕೊಂಡಿತು. ಆರ್ಥಿಕತೆ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಗೊಬ್ಬರದಿಂದ ಗಳಿಸಿದ ಲಾಭ ಎರಡು ಬಿಲಿಯನ್ ಡಾಲರ್ ದಾಟಿತು!

ಲಾಭದ ಆಸೆಗೆ ಬಿದ್ದು ೧೮೫೬ರಲ್ಲಿ ಅಮೆರಿಕ (ಯುಎಸ್‌ಎ) ಗ್ವಾನೊ ಕಾಯ್ದೆ ಜಾರಿಗೆ ತಂದಿತು. ಅದರ ಪ್ರಕಾರ ಪೆಸಿಫಿಕ್ ಮಹಾಸಾಗರದಲ್ಲಿ ಮಾನವ ವಸತಿಯಿಲ್ಲದ ಯಾವುದೇ ನಿರ್ಜನ ದ್ವೀಪದಲ್ಲಿ ಅಮೆರಿಕದ ಪ್ರಜೆ ಗ್ವಾನೊ ಸಂಗ್ರಹವನ್ನು ಕಂಡುಹಿಡಿದರೆ ಅವರಿಗೆ ಆ ಗ್ವಾನೊ ಮೇಲೆ ಸಂಪೂರ್ಣ ಸ್ವಾಮ್ಯವಿರುತ್ತದೆ ಹಾಗೂ ಆ ದ್ವೀಪ ಅಮೆರಿಕಕ್ಕೆ ಸೇರುತ್ತದೆ! ಯಾರದೂ ಅಲ್ಲದ ನೆಲದ ಹಕ್ಕುಗಳನ್ನು ಅಮೆರಿಕವು ತನಗೆ ತಾನೇ ಕೊಟ್ಟುಕೊಂಡ ಕಾಯ್ದೆ ಅದು. ಅಂತಹ ೬೦ಕ್ಕೂ ಹೆಚ್ಚು ದ್ವೀಪಗಳು ಪತ್ತೆಯಾಗಿ ಅಮೆರಿಕಕ್ಕೆ ಸೇರಿದವು. ಈಗಲೂ ೯ ದ್ವೀಪಗಳು ಅಮೆರಿಕದ ಸುಪರ್ದಿನಲ್ಲೇ ಇವೆ.

ಗ್ವಾನೋ ದ್ವೀಪಗಳ ಅಧಿಪತ್ಯಕ್ಕಾಗಿ ಸಾಲುಸಾಲು ಯುದ್ಧಗಳೇ ನಡೆದವು. ೧೮೬೪-೬೬ರಲ್ಲಿ ಸ್ಪೇನ್ ಹಾಗೂ ಚಿಲಿ ದೇಶಗಳು ಒಟ್ಟಾಗಿ ಪೆರು ಮಿತ್ರಪಡೆಗಳ ಮೇಲೆ ಯುದ್ಧಕ್ಕೆ ಹೋದವು. ಚಿಂಚಾದ್ವೀಪದಲ್ಲಿ ಯುದ್ಧವಾಗಿ ಪೆರು ಚಿಲಿಗೆ ಸೋತಿತು. ಅರ್ಧಕ್ಕರ್ಧ ಗ್ವಾನೋ ದ್ವೀಪಗಳು, ಅಟಕಾಮಾದ ಒಂದಷ್ಟು ಭಾಗ ಚಿಲಿಯ ಪಾಲಾಯಿತು. ಚಿಲಿ ಬರಿಯ ಗ್ವಾನೊ ಮಾರಾಟದ ಲಾಭದಿಂದ ೩೦ ವರ್ಷಗಳಲ್ಲಿ ತನ್ನ ಖಜಾನೆಯನ್ನು ೯೦೦% ಹೆಚ್ಚಿಸಿಕೊಂಡಿತು. ೧೮೭೦ರ ವೇಳೆಗೆ ಸಾಲ್ಟ್ ಪೀಟರ್ ಎಂಬ ನೈಟ್ರೇಟ್ ಕಚ್ಛಾವಸ್ತು ಅಟಕಾಮಾ ಮರುಭೂಮಿಯಲ್ಲಿ ಲಭ್ಯವಿದೆಯೆಂದು ತಿಳಿದಾಗ ಗ್ವಾನೊ ಬೇಡಿಕೆಯ ಒತ್ತಡ ಕೊಂಚ ಕಡಿಮೆಯಾಯಿತು. ಪೆರು ಇದ್ದಕ್ಕಿದ್ದಂತೆ ಕಡಿಮೆಯಾದ ಆದಾಯ ತುಂಬಿಸಲು ಗ್ವಾನೋವನ್ನು ಬಳಿದು ಬಾಚಿ ಫ್ರಾನ್ಸಿಗೆ ಮಾರಿತು.

೧೯೧೦ರ ಹೊತ್ತಿಗೆ ಸಾವಿರಾರು ವರ್ಷಗಳಿಂದ ಸಂಗ್ರಹವಾಗಿದ್ದ ಗ್ವಾನೊ ಖಾಲಿಯಾಯಿತು!

ಇಳಿಯುತ್ತಿರುವ ಸಂಗ್ರಹ, ಏರುತ್ತಿರುವ ಬೆಲೆಯಿಂದ ಎಚ್ಚೆತ್ತ ಯೂರೋಪು ಪರ್ಯಾಯ ತಯಾರಿಕಾ ವಿಧಾನ ಅಭಿವೃದ್ಧಿಪಡಿಸದೇ ಬೇರೆ ಮಾರ್ಗವಿರಲಿಲ್ಲ. ಅದು ಕೈಗಾರಿಕಾ ಕ್ರಾಂತಿಯ ಕಾಲ. ಫ್ರಿಟ್ಜ್ ಹೇಬರ್ ಎಂಬ ಯುವ ವಿಜ್ಞಾನಿ ವಾತಾವರಣದಲ್ಲಿದ್ದ ನೈಟ್ರೊಜನ್ (ಸಾರಜನಕ)ವನ್ನು ಸಂಗ್ರಹಿಸಬಹುದೆಂದು ತೋರಿಸಿದ. ಅವನ ಜೊತೆಗೆ ಬಾಶ್ ಎಂಬ ವಿಜ್ಞಾನಿಯೂ ಸೇರಿ ೧೯೦೯ರಲ್ಲಿ ‘ಹೇಬರ್ ಬಾಶ್ ಪ್ರೋಸೆಸ್’ ಅಭಿವೃದ್ಧಿಪಡಿಸಿ ಗಾಳಿಯ ಸಾರಜನಕ ಸಂಗ್ರಹಿಸುವ ವಿಧಾನ ರೂಪಿಸಿದರು. ಇದು ಚಂದ್ರನ ಮೇಲೆ ಮಾನವ ಇಳಿದಷ್ಟೇ ಪ್ರಾಮುಖ್ಯತೆಯ, ‘ಗಾಳಿಯಿಂದ ಬ್ರೆಡ್ಡನ್ನು ಉತ್ಪತ್ತಿ ಮಾಡುವಷ್ಟೆ’ ಅಚ್ಚರಿಯ ಒಂದು ಸಂಶೋಧನೆ ಎಂದು ಬಣ್ಣಿಸಲಾಗಿದೆ. ಯಾಕೆಂದರೆ ಆಗ ಜಗತ್ತು ಗೊಬ್ಬರಕ್ಕಾಗಿ ಹಸಿದಿತ್ತು, ಅದಕ್ಕಾಗಿ ಯುದ್ಧಗಳೇ ನಡೆದಿದ್ದವು. ಹೀಗಿರುತ್ತ ನೈಟ್ರೊಜನ್ ತಯಾರಿ ಸಾಧ್ಯವಾದಾಗ ಜರ್ಮನಿ ಅಮೋನಿಯಾ ತಯಾರಿಸುವ ವಿಧಾನ ಕಂಡುಕೊಂಡರೆ, ಬ್ರಿಟನ್ ಸೂಪರ್ ಫಾಸ್ಫೇಟ್ ಉತ್ಪಾದಿಸುವ ವಿಧಾನ ಸಂಶೋಧಿಸಿತು. ರಸಗೊಬ್ಬರಕ್ಕಾಗಿ ಹಾಗೂ ಸ್ಫೋಟಕಕ್ಕಾಗಿ ನೈಟ್ರೇಟ್ ತಯಾರಿಸುವ ಕಚ್ಛಾವಸ್ತುವಿನ ಭಂಡಾರದ ಹೆಬ್ಬಾಗಿಲು ತೆರೆಯಿತು. ಜಗತ್ತಿನ ಮೂರನೇ ಒಂದು ಭಾಗ ಜನರ ಹೊಟ್ಟೆ ತುಂಬಿಸಲು ಸಾಧ್ಯಮಾಡಿದೆ ಎಂದು ನಂಬಲಾದ ನೈಟ್ರೇಟ್ ರಸಗೊಬ್ಬರ ತಯಾರಿ ಶುರುವಾಯಿತು.

ಆ ಹೊತ್ತಿಗೆ ದ್ವೀಪಗಳ ಗ್ವಾನೊ ಬರಿದಾಗತೊಡಗಿತ್ತು. ಅದು ಬರಿಯ ಗೊಬ್ಬರವಾಗಿರಲಿಲ್ಲ; ಆ ದ್ವೀಪಗಳ ಸಾವಿರಾರು ವರ್ಷಗಳ ಇತಿಹಾಸದ ದಾಖಲೆಯಾಗಿತ್ತು. ಎಷ್ಟೊ ಅಕಶೇರುಕ ಜೀವಿಗಳಿಗೆ ಬಾವಲಿ ಹಿಕ್ಕೆಯೇ ಮುಖ್ಯ ಆಹಾರವಾಗಿತ್ತು. ಗ್ವಾನೋ ಗಣಿಗಾರಿಕೆ ನಡೆದಲ್ಲೆಲ್ಲ ಬಾವಲಿಗಳ ಸಂಖ್ಯೆ ಕ್ಷೀಣಿಸಿತು. ಗಣಿಗಾರಿಕೆಯ ಸದ್ದಿಗೆ ಅವು ಉಣ್ಣಲು ಮರೆತವು. ಆತಂಕಕ್ಕೆ ಸುಮ್ಮನೆ ಹಿಕ್ಕೆ ಉದುರಿಸಿದವು. ಶಬ್ದವೇ ಅವುಗಳ ಸಾವಿಗೆ ಕಾರಣವಾಯಿತು.

ಅತಿ ಮೀನುಗಾರಿಕೆ ಮತ್ಸ್ಯಕ್ಷಾಮಕ್ಕೆ ನಾಂದಿ ಹಾಡಿ ವಲಸೆ ಬರುವ ಹಕ್ಕಿಗಳ ಸಂಖ್ಯೆಯೂ ಗಮನಾರ್ಹವಾಗಿ ಇಳಿಮುಖವಾಯಿತು. ೧೯೫೦ರ ವೇಳೆಗೆ ೩೦ ಮಿಲಿಯನ್ ಕಡಲ ಹಕ್ಕಿಗಳು ಪೆರು ತೀರಕ್ಕೆ ಬರುತ್ತಿದ್ದರೆ ಈಗ ಅವುಗಳ ಸಂಖ್ಯೆ ೪ ಮಿಲಿಯನ್‌ಗೆ ಇಳಿದಿದೆ. ಈಗ ಗ್ವಾನೊ ಸ್ಥಳೀಯ ಬಳಕೆಗಷ್ಟೆ ಸೀಮಿತವಾಗಿದೆ. ಪೆರು ಸರ್ಕಾರ ಗ್ವಾನೋ ದ್ವೀಪಗಳಿಂದ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಬೇಲಿ ಹಾಕಿ ಕಾಯುತ್ತಿದೆ. ಏನಾದರೂ ಬಳಿದು ಬಾಚಿ ಬರಿದಾಗಿಸಿದ ಸಾವಿರಾರು ವರ್ಷಗಳ ಸಂಗ್ರಹ ಮತ್ತೆ ಮುಂಚಿನಂತಾಗಲು ಸಾಧ್ಯವೇ?

ನಿಸರ್ಗ ಮತ್ತು ನಾಗರಿಕತೆ ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಮಾತ್ರ ಪೂರಕವಾದಾವು. ಆಗ ಮಾತ್ರ ಮನುಷ್ಯರಿಗೆ ಸುಸ್ಥಿರ ಬದುಕು ಸಾಧ್ಯವಾಗಬಹುದು. ಕಡಲ ಒಳ ಹರಿವು ಮೀನುಗಳ ಬೆಳೆಸಬಲ್ಲದು. ಮೀನು ಹಕ್ಕಿಯ ಹೊಟ್ಟೆ ತುಂಬಿಸಬಲ್ಲದು. ಹಕ್ಕಿ ತನ್ನ ಪಿಷ್ಟೆಯಿಂದ ನೆಲದ ಸಾರ ಹೆಚ್ಚಿಸಿ ಮನುಷ್ಯನ ಹೊಟ್ಟೆ ತುಂಬಿಸಬಲ್ಲದು.

ಈ ಸರಪಳಿಯನ್ನು ಎಲ್ಲೇ ಭಂಗಗೊಳಿಸಿದರೂ ಅದು ಅನೂಹ್ಯ ಅಪಾಯಗಳಿಗೆಡೆ ಮಾಡಿಕೊಡಬಹುದು. ನಾವೀಗ ಅಂಥ ಅಸಂಖ್ಯ ಅಪಾಯಗಳಿಗೆ ಸಾಕ್ಷಿಯಾಗಿದ್ದೇವೆ. ಇನ್ನಾದರೂ ಪಾಠ ಕಲಿಯದಿದ್ದರೆ ನಮಗೆ ಮತ್ತೊಂದು ಕೊನೆಯ ಅವಕಾಶ ಸಿಗಬಹುದೆ?

***

ಪೆರುವಿನ ರೈತರು ಆತ್ಮಹತ್ಯೆಗೆಳಸುವರೆ ಎಂಬ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಗೈಡ್ ಅದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ. ‘ಪೆರುವಿನ ರೈತರು ಬೇರೆ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಾಫಿಗೆ ಬೆಲೆ ಇಲ್ಲ. ಆಲೂಗೆ ಬೆಲೆ ಇಲ್ಲ. ಅಸ್ಪರಾಗಸ್ ಬೆಳೆ, ಬೆಲೆ ಸಾಲುವುದಿಲ್ಲ. ಏನು ಮಾಡುವುದು? ಆಗವರು ಕೋಕಾ ಬೆಳೆದರು. ಉಳಿದವೆಲ್ಲ ಕೈಕೊಟ್ಟಾಗ ಕಾಸಿಗಾಗಿ ಕಾನೂನುಬಾಹಿರ ಮಾದಕದ್ರವ್ಯ ಕೋಕಾ ಬೆಳೆದರು. ನಿಮಗೆ ಗೊತ್ತೆ? ೧೯೯೫ರಲ್ಲಿ ವಿಶ್ವದ ನಂಬರ್. ೧ ಕೋಕಾ ಬೆಳೆವ ದೇಶ ಪೆರು ಆಗಿತ್ತು! ಜಗತ್ತಿನ ೬೦% ಕೊಕೇನ್, ಕೋಕಾ ಬೆಳೆ, ಪೆರುವಿನಲ್ಲೆ ಬೆಳೆಯಲಾಗುತ್ತಿತ್ತು. ೨ ಲಕ್ಷ ಪೆರು ಕುಟುಂಬಗಳು, ೧೦ ಲಕ್ಷ ರೈತರು ತಮ್ಮ ಜೀವನಾಧಾರವಾಗಿ ಅದೊಂದೇ ಬೆಳೆಯನ್ನು ನಂಬಿದ್ದರು. ಅದನ್ನು ತಡೆಯಲು ಸರ್ಕಾರ ಮಾದಕದ್ರವ್ಯ ತುಂಬಿದ ವಿಮಾನಗಳನ್ನು ಹೊಡೆದುರುಳಿಸಬೇಕಾಯ್ತು. ಹತಾಶರಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೋಕಾ ಬೆಳೆಯುವುದು ಅದಕ್ಕಿಂತ ಭಿನ್ನವೆ? ನಿಮ್ಮ ಮಕ್ಕಳನ್ನು ಮಾದಕ ವಸ್ತು ಜಾಲ ತನ್ನ ಭಾಗವಾಗಿಸಿಕೊಂಡರೆ, ನಿಮ್ಮ ಮಗಳನ್ನು ಮಾದಕ ವಸ್ತು ಕಳ್ಳಸಾಗಣೆದಾರರು ಎತ್ತೊಯ್ದು ಅಪಹರಿಸುವುದಾದರೆ, ಆದರೂ ನೀವು ಕೋಕಾ ಬೆಳೆಯುವಿರಾದರೆ ಅದು ಆತ್ಮಹತ್ಯೆಯಲ್ಲವೆ? ಇರಲಿ, ನಮ್ಮ ರೈತರು ಪ್ರಾಣ ತೆಗೆದುಕೊಳುವವರಲ್ಲ. ಅದರಲ್ಲು ಗೊಬ್ಬರ, ಬೀಜಕ್ಕೆ ಎಂದೂ ಇಲ್ಲ. ಗ್ವಾನೊ ಅಂತೂ ಇದ್ದೇ ಇದೆ. ಈಗ ರಾಸಾಯನಿಕ ಗೊಬ್ಬರವೂ ಬಂದಿದೆ’ ಎಂದರು.

ಪೆರುವಿನಲ್ಲಿ ಮಿಲಿಟರಿ ಆಡಳಿತವಿದ್ದಾಗ ಕೋಕಾ ಬೆಳೆಯುವುದು ಕಡಿಮೆ ಮಾಡಲು ಹಲವು ಕ್ರಮಗಳ ತೆಗೆದುಕೊಳ್ಳಲಾಯ್ತು. ಒಂದಷ್ಟು ಭ್ರಷ್ಟತೆ, ಒಂದಷ್ಟು ಯಶಸ್ಸು.

ಪೆರುವಿನಲ್ಲಿ ೭೨% ರೈತರು ೬ ಹೆಕ್ಟೇರಿಗಿಂತ ಕಡಿಮೆ ಕೃಷಿ ಭೂಮಿ ಉಳ್ಳವರು, ಸಣ್ಣ ರೈತರೆಂದು ಕರೆಸಿಕೊಂಡವರು. ಇನ್ನೂ ಹಳೆಯ ಕೃಷಿ ವಿಧಾನಗಳನ್ನೇ ನೆಚ್ಚಿಕೊಂಡು ಉಳುಮೆ ಮಾಡುವವರು. ಕಿವಿಚ, ಕಿನುಆ, ಕೈಹುಆ, ಲೀಮಾ ಬೀನ್, ತಾರ‍್ವಿ ಮೊದಲಾದ ತಮ್ಮ ದೇಶದ್ದೇ ಆದ ಅನನ್ಯ ಧಾನ್ಯ ಬೆಳೆಯುವವರು. ಆದರೆ ಈಗ ಅಲ್ಲಿ ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಕೃಷಿ ಲಾಭಕರವಲ್ಲ ಎನಿಸಿ ಯುವಸಮೂಹ ನಗರಗಳಿಗೆ ವಲಸೆ ಹೋಗುತ್ತಿದೆ. ಸಣ್ಣರೈತರು ಗಣಿ ಕೆಲಸಗಳಿಗೆ ಹೊರಡುತ್ತಿದ್ದಾರೆ. ಗ್ರಾಮೀಣ ಪೆರುವಿನ ಜನಸಂಖ್ಯೆ ಬರಿಯ ೨೩% ಎನ್ನುವುದನ್ನು ಗಮನಿಸಿದರೆ ಕೃಷಿಗೆ ಕಡಿಮೆಯಾಗುತ್ತಿರುವ ಒಲವು ತಿಳಿದುಬರುತ್ತದೆ.

ಎಲ್ಲೋ ಒತ್ತಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಚುಚ್ಚಿದರೆ ಇನ್ನೆಲ್ಲೋ ಗಾಯವಾಗುತ್ತದೆ. ಎಂಥ ಸಂಕೀರ್ಣ ಸಮಾಜದಲ್ಲಿ, ಎಂಥ ಸಂಕೀರ್ಣ ಕಾಲದಲ್ಲಿ ನಾವು ಬದುಕಿದ್ದೇವೆ! ನಿಜ, ವಿಶ್ವಸಂಸ್ಥೆಯ ಪರಿಸರ ದಿನಾಚರಣೆ - ೨೦೧೭ರ ಘೋಷವಾಕ್ಯ, ‘ಜನರನ್ನು ನಿಸರ್ಗದೊಡನೆ ಬೆಸೆಯುವುದು’ ಬರಿಯ ಘೋಷಣೆಯಾಗದೆ ನಮ್ಮ ಬದುಕೇ ಆಗಬೇಕಾದ ದಿನ ಹತ್ತಿರ ಬಂದಿದೆ.



No comments:

Post a Comment