Tuesday 21 February 2023

Mirjan Fort ಮಿರ್ಜಾನ್ ಕೋಟೆ



ಕರಾವಳೀ ಭಾಗಕ್ಕೆ ಸಮುದ್ರವು ಒಂದು ಗಡಿ ಹಾಗೂ ಕೋಟೆಯ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾಲುಸಾಲು ಹಬ್ಬಿರುವ ಸಹ್ಯಾದ್ರಿ ಪರ್ವತಶ್ರೇಣಿ ಹಾಗೂ ಅದರ ದಟ್ಟಡವಿಯು ಕಾವಲು ಕೆಲಸ ಮಾಡುವಂತಿವೆ. ಹೀಗಾಗಿ ಕೋಟೆಕೊತ್ತಲಗಳು ಈ ಭಾಗದಲ್ಲಿ ಬಹಳವಾಗಿಲ್ಲ. ಅಲ್ಲದೇ ಕೋಟೆಯೆಂದ ಕೂಡಲೇ ಕಣ್ಣಿಗೆ ಕಟ್ಟುವ ಗಟ್ಟಿಶಿಲೆಯ ದುರ್ಗಮ ಕೋಟೆಗಳೂ ಇಲ್ಲಿಲ್ಲ. ಇದಕ್ಕೆ ಚಾರಿತ್ರಿಕ ಕಾರಣಗಳು ಬೇರೆಯೇ ಇರಬಹುದು. ಕರಾವಳಿಯ ಕೋಟೆಗಳಲ್ಲಿ ಮಂಗಳೂರು ಬಳಿಯ ಬೇಕಲ ಕೋಟೆ ಪ್ರಸಿದ್ಧವಾಗಿದ್ದು ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಮಿರ್ಜಾನ್ ಕೋಟೆಯೂ ಐತಿಹಾಸಿಕ ಸ್ಮಾರಕವಾಗಿ ಹೆಸರು ಗಳಿಸಿಕೊಳ್ಳುತ್ತಿದೆ. ಕೋಟೆಕೊತ್ತಲಗಳು ಒಂದುಕಾಲದಲ್ಲಿ ರಾಜನ ಹಿರಿಮೆ ಸಾರುವ ಸ್ಥಾವರ ಸಂಕೇತಗಳಾಗಿದ್ದರೆ, ಇಂದು ಅವು ನಿನ್ನೆಯ ಕಡೆಗೊಮ್ಮೆ ಗಮನ ಹರಿಸುವಂತೆ ನಮ್ಮನ್ನು ಪ್ರಚೋದಿಸುವ ತಾಣಗಳಾಗಿವೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ 8 ಕಿಮೀ ಉತ್ತರಕ್ಕೆ, ಅಘನಾಶಿನೀ ನದಿಯ ಆಸುಪಾಸಿನಲ್ಲಿರುವ ಊರು ಮಿರ್ಜಾನ್. ಮೊದಲು ಅದು ಮಿದಿಗೆ ಆಗಿತ್ತು. ಜನವಸತಿಭರಿತ ಪಟ್ಟಣವಾಗಿರದೆ ಸಾಗರ ವ್ಯವಹಾರ (ಮಾರಿಟೈಮ್ ಟ್ರೇಡ್) ನಡೆಸಿದ ಸ್ಥಳವಾಗಿತ್ತು. ಕ್ರಿಸ್ತಪೂರ್ವ ಕಾಲದಿಂದಲೂ ‘ಪ್ಲೈನಿ ದಿ ಎಲ್ಡರ್’, ಪುಟಿಂಗರ್, ಪೆರಿಪ್ಲಸ್ ಮೊದಲಾದವರು ಆ ಸ್ಥಳವನ್ನು ಮುಸ್ಸುರಿಸ್ ಎಂದು ಉಲ್ಲೇಖಿಸಿದ್ದಾರೆ. ಮಧ್ಯಯುಗದಲ್ಲಿ ಭಾರತಕ್ಕೆ ವಿದೇಶಿ ಪ್ರವಾಸಿಗಳಾಗಿ ಬಂದಿದ್ದ ಡೊಮಿಂಗೊ ಪೇಸ್ (1520), ಡಿ ಬ್ಯಾರೋಸ್ (1580), ಬಾರ್ಬೋಸಾ, ಹ್ಯಾಮಿಲ್ಟನ್ ಮತ್ತು ಬುಕಾನನ್ ತಮ್ಮ ಪ್ರವಾಸೀ ದಿನಚರಿಯಲ್ಲಿ ಈ ಸ್ಥಳವನ್ನು ಉಲ್ಲೇಖಿಸಿದ್ದಾರೆ. ಬುಕಾನನ್ ಈ ಪ್ರದೇಶವನ್ನು ಮಿದಿಜೋಯ್ ಎಂದು ಕರೆದರೆ ಮಿಕ್ಕವರು ಮೆರ್ಗಾನ್, ಮಿರ‍್ಗ್ಯೂ, ಮೆರ‍್ಗ್ಯೂ, ಮೆರ‍್ಗಿಯೊ ಮೊದಲಾಗಿ ಒಬ್ಬೊಬ್ಬರು ಒಂದೊಂದು ರೀತಿ ಹೆಸರಿಸಿದ್ದಾರೆ.


ಯಾರು ಕಟ್ಟಿಸಿದ ಕೋಟೆ?




ಮಿರ್ಜಾನಿನಲ್ಲಿ 16-17ನೇ ಶತಮಾನದ ಒಂದು ಕೋಟೆಯಿದೆ. ಕೋಟೆಯು 100 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಮೊನ್ನೆ ಮೊನ್ನಿನವರೆಗೂ ಕುಡುಕರ, ಮಟ್ಕಾ ಜೂಜುಕೋರರ ಅಡಗುದಾಣವೆಂದು ಸಂಜೆ ಹೊತ್ತು ಪ್ರವೇಶಿಸಲು ಜನ ಹೆದರುತ್ತಿದ್ದ ಈ ಕೋಟೆಯು, 2000ನೇ ಇಸವಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಹಸ್ತಾಂತರಗೊಂಡಂದಿನಿಂದ ಮರುಜೀವ ಪಡೆದು ಕಂಗೊಳಿಸುತ್ತಿದೆ. ಇತ್ತೀಚೆಗೆ ಕನ್ನಡದ ದುನಿಯಾ ಮತ್ತು ಗಾಳಿಪಟದಂತಹ ಒಂದೆರೆಡು ಕನ್ನಡ ಚಿತ್ರಗಳೂ ಚಿತ್ರೀಕರಣಗೊಂಡ ನಂತರ ಜನಪ್ರಿಯ ಪ್ರವಾಸೀ ತಾಣವಾಗಿದೆ.   

ಕರಾವಳಿಯಲ್ಲಿ ಹೇರಳವಾಗಿ ಸಿಗುವ ಜಂಬಿಟ್ಟಿಗೆ ಕಲ್ಲಿನ (ಲ್ಯಾಟಿರೈಟ್) ಈ ಕೋಟೆಯನ್ನು ಯಾರು ಕಟ್ಟಿಸಿದರೆಂಬ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. 2000-2001ರಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ಇಲ್ಲಿ ಉತ್ಖನನ ನಡೆಸಿತು. ಏಳು ಭಾರಗುಂಡುಗಳೂ, ೫೦ ಕಬ್ಬಿಣದ ಬಂದೂಕು ಗುಂಡುಗಳೂ, ‘ಸರ್ಪಮಲ್ಲಿಕಾ ವಂಶ’ಕ್ಕೆ ಸೇರಿದ ಅಲಂಕರಿಸಲ್ಪಟ್ಟ ಬಿಂದಿಗೆ, ನಾಣ್ಯಗಳೂ ಸಿಕ್ಕವು. ಭಾರಗುಂಡುಗಳು ತಲಾ 20 ಕೆಜಿ ತೂಕದವಾಗಿದ್ದರೆ, ೫೦೦ ವರ್ಷ ಹಳೆಯ ಕಬ್ಬಿಣದ ಬಂದೂಕು ಗುಂಡುಗಳು ಪತ್ತೆಯಾಗಿವೆ. ಅದಲ್ಲದೆ ನೀಲಿ ಬಣ್ಣದ ನವಿಲು, ಹಾವುಗಳ ಚಿತ್ರವಿರುವ ಚೀನೀ ಪಿಂಗಾಣಿ ವಸ್ತುಗಳು, ಚಾಕು, ಕೊಡಲಿ, ಚಮಚ, ಕಾಯಿ ತುರಿವ ಹೆರೆಮಣೆ, ಮೊಳೆ ಮೊದಲಾದ ದಿನಬಳಕೆಯ ವಸ್ತುಗಳೂ ಸಿಕ್ಕಿವೆ. ಕೋಟೆಯ ದಕ್ಷಿಣ ಭಾಗದ ಪ್ರವೇಶದ ಬಳಿ ಅಗೆದರೆ ಈಗಲೂ ಸುಡುಮಣ್ಣು ದೊರಕುವುದೆಂದೂ, ಸುಟ್ಟ ಭತ್ತದ ಕಾಳು ಸಿಗುತ್ತದೆಂದೂ ಸ್ಥಳೀಯರು ಹೇಳುತ್ತಾರೆ.

ಪುರಾತತ್ತ್ವ ಇಲಾಖೆಯ ಉತ್ಖನನವು ಕೋಟೆಯ ಒಡೆತನದ ಬಗೆಗೆ ಇದ್ದ ಊಹಾಪೋಹಗಳಿಗೆ ತಾತ್ಕಾಲಿಕ ನಿಲುಗಡೆ ಹಾಕಿತು. ಮೊದಲು ಈ ಜಾಗವು ಅರಬ್ ನವಾಯತ ವ್ಯಾಪಾರಿಗಳ, ವಿಜಯನಗರ ಕಾಲದ ಸಾಗರ ವ್ಯವಹಾರ ನಡೆವ ಮಾರುಕಟ್ಟೆ ಸ್ಥಳವಾಗಿದ್ದು ಬಳಿಕ ಗೇರುಸೊಪ್ಪವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ‘ಕಾಳುಮೆಣಸಿನ ರಾಣಿ’ ಚೆನ್ನಭೈರಾದೇವಿಯ ಒಡೆತನಕ್ಕೆ ಬಂತು. ಕೋಟೆಯ ಒಂದು ಪಕ್ಕದಲ್ಲಿರುವ ‘ಜೈನ’ ಕಂಬವು ಮಾನಸ್ತಂಭದಂತೆ ಕಾಣುತ್ತ ಜೈನರಾಣಿ ಚೆನ್ನಭೈರಾದೇವಿಗೆ ಈ ಕೋಟೆಯ ‘ಒಡತಿ’ ಸ್ಥಾನವನ್ನು ಕಲ್ಪಿಸುತ್ತದೆ. ಭಾರತ ದೇಶದ ಇತಿಹಾಸದಲ್ಲೇ ಅತಿ ದೀರ್ಘಾವಧಿ ೫೪ ವರ್ಷ ಕಾಲ ರಾಣಿಯಾಗಿ ಆಳಿದ (ಕ್ರಿ.ಶ.1552-1606) ಚೆನ್ನಭೈರಾದೇವಿ ಸಾಳುವ ವಂಶಕ್ಕೆ ಸೇರಿದವಳು. ವಿಜಯನಗರ ಪತನಗೊಳ್ಳುತ್ತಿರುವ ಕಾಲದಲ್ಲೂ ತನ್ನನ್ನು ಆ ಸಾಮ್ರಾಜ್ಯದ ‘ಮಹಾಮಂಡಲೇಶ್ವರ’ ಎಂದು ಕರೆದುಕೊಳ್ಳುತ್ತಿದ್ದಳು. ಅವಳಿದ್ದಷ್ಟು ಕಾಲವೂ ಕಾಳುಮೆಣಸು, ದಾಲ್ಚಿನ್ನಿ, ಜಾಯಿಕಾಯಿ ಹಾಗೂ ಕುಚ್ಚಿಗೆ ಅಕ್ಕಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿ ಪೋರ್ಚುಗೀಸರನ್ನು ತಡೆದು ನಿಲ್ಲಿಸಿದ್ದಳು. ಎತ್ತರ ಪ್ರದೇಶದಲ್ಲಿರುವ, ಸಮುದ್ರ ನದಿಗಳಿಗೆ ಹತ್ತಿರದಲ್ಲಿರುವ, ಘಟ್ಟದ ಕಡೆಯ ಮೇಲೂ ಒಂದು ಕಣ್ಣಿಡಲು ಸಹಾಯವಾಗುವ ಈ ಆಯಕಟ್ಟಿನ ಜಾಗದಲ್ಲಿ ಕೋಟೆಯೊಂದು ಇದ್ದರೆ ವ್ಯಾಪಾರ ವ್ಯವಹಾರವಷ್ಟೇ ಅಲ್ಲ, ಸುರಕ್ಷತೆಯ ದೃಷ್ಟಿಯಿಂದಲೂ ಅನುಕೂಲ ಎಂದು ಉತ್ತಮ ಆಡಳಿತಗಾರಳಾಗಿದ್ದ ಅವಳು ಭಾವಿಸಿದ್ದಿರಬಹುದು. 

ಚೆನ್ನಭೈರಾದೇವಿಯ ಬಳಿಕ ಕೋಟೆ ಬಹಮನಿಗಳ ಕೈಗೆ ಹೋಯಿತು. ನಂತರ ಬಿಜಾಪುರ ಸುಲ್ತಾನನ ಗೋವಾ ರಾಜ್ಯಪಾಲ ಷರೀಫ್ - ಉಲ್ - ಮುಲ್ಕ್ ಸುಪರ್ದಿಗೆ ಬಂದಿತು. 1652ನೇ ಇಸವಿಯಲ್ಲಿ ಪೋರ್ಚುಗಲ್ ದೊರೆ ಜೋಆವೋ-4 ಆಡಳಿತದಡಿಯಲ್ಲಿ ಗೋವಾದ ರಾಜ್ಯಪಾಲನಾಗಿದ್ದ ಕಾಂಡ್-ಡಿ-ಸಾರ್ಜೆಡಾಸ್ ಹೊರಡಿಸಿದ ಬಂಗಾರದ ನಾಣ್ಯ, ಪಿಂಗಾಣಿ ಸಾಮಾನುಗಳು ಉತ್ಖನನದ ವೇಳೆ ಸಿಕ್ಕಿದ್ದು, ಅವು ನಂತರದ ಪೋರ್ಚುಗೀಸರ ಒಡೆತನವನ್ನು ತಿಳಿಸುತ್ತವೆ. ನಾಣ್ಯಗಳ ಒಂದು ಮುಖದಲ್ಲಿ ನೇಗಿಲಿನಂತಹ ರಚನೆಯನ್ನು ಎಡಗೈಲಿ ಹೊತ್ತ ಸಂತ ಥಾಮಸನ ಚಿತ್ರವಿದೆ. ಮೇಲೊಂದು ಕೊಂಡಿಯಿರುವ ಅದು ನಾಣ್ಯವಾಗಿಯೂ, ಅಧಿಕಾರಿಗಳ ಸ್ಥಾನ ನಿರ್ದೇಶಿಸುವ ಸರದ ಪದಕವಾಗಿಯೂ ಬಳಕೆಯಲ್ಲಿದ್ದಿರಬಹುದು. 

ಪೋರ್ಚುಗೀಸರ ಬಳಿಕ ಕೆಳದಿಯ ಚೆನ್ನಮ್ಮ, ಮರಾಠರ ಕೈಗೆ ಮಿರ್ಜಾನ್ ಕೋಟೆ ಹೋಯಿತು. ಕೆಲಕಾಲ ಅಂಕೋಲಾದ ಸರ್ಪಮಲ್ಲಿಕ ವಂಶದ ಸುಪರ್ದಿಯಲ್ಲಿತ್ತು. ಆ ವಂಶದ ಮೊಹರಿನ ಕೆಲವು ನಾಣ್ಯಗಳು ದೊರೆತಿವೆ. ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಶವಾಯಿತು. ಕೊನೆಯ ಮೈಸೂರು ಯುದ್ಧದ ಬಳಿಕ ಬ್ರಿಟಿಷರಿಗೆ ಹೋಯಿತು.

ಒಟ್ಟಾರೆಯಾಗಿ ಹೇಳುವುದಾದರೆ ವಿಜಯನಗರದ ಕೃಷ್ಣದೇವರಾಯ (1509-1526), ಚೆನ್ನಭೈರಾದೇವಿ (1552-1606), ಪೊಂಡಾದಿಂದ ಆಡಳಿತ ನಡೆಸಿದ ಬಿಜಾಪುರ ಆದಿಲ್‌ಶಾಹಿಗಳ ಸಾಮಂತ ಶರೀಫ್ ಉಲ್ ಮುಲ್ಕ್ (1606-1640), ಅಂಕೋಲಾದ ಸರ್ಪಮಲ್ಲಿಕ, ಪೋರ್ಚುಗೀಸರು, ಕೆಳದಿ ಚೆನ್ನಮ್ಮ, ಮರಾಠರು, ಬಿದನೂರಿನ ಅರಸರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಕೊನೆಗೆ ಬ್ರಿಟಿಷರ ಸುಪರ್ದಿಗೆ ಕೋಟೆ ಹಸ್ತಾಂತರವಾಯಿತು. 

ಇವರಲ್ಲಿ ಯಾರು ಯಾವುದನ್ನು ಕಟ್ಟಿಸಿದರು? ನೆಲೆಗಟ್ಟನ್ನು ಒಬ್ಬರು ಹಾಕಿದರೆ, ಹೊರಗಿನ ಕಂದಕ ಒಬ್ಬರು ತೋಡಿದರು. ಕಂಭ. ಕಮಾನು. ಬುರುಜು. ಕಾವಲು ಗೋಪುರ. ಬಾವಿ. ಕಾಲುವೆ. ಪ್ರಾರ್ಥನಾ ಸ್ಥಳ, ಮಿಹ್ರಾಬ್, ಮಾರುಕಟ್ಟೆ ಸಂಕೀರ್ಣ, ಲಾಯ ಮೊದಲಾದವು  ಹಲವು ದೇಶ-ಭಾಷೆ-ಮತಗಳ ಆಳ್ವಿಕರಿಂದ ರೂಪಿಸಲ್ಪಟ್ಟವು. 

ಯಾವುದೇ ಐತಿಹಾಸಿಕ ಸ್ಮಾರಕದಂತೆ ಯಾರೋ ‘ಒಬ್ಬರು’ ಇದನ್ನು ಕಟ್ಟಿಸಿರಲಾರರು ಎನ್ನುವ ಅಂಶ ಇವತ್ತು ನಾವು ಗಮನಿಸಬೇಕಾದ ಬಹುಮುಖ್ಯ ಸಂಗತಿಯಾಗಿದೆ. 


ಕೋಟೆಯೊಳಗಣ ಬಾವಿಗಳು 




ಕೋಟೆಯ ಸುತ್ತಲೂ ಅಗಲವಾದ ಕಾಲುವೆಯಿದೆ. ಅದರಲ್ಲಿ ನೀರು ತುಂಬಿ ಮೊಸಳೆಗಳನ್ನು ಬಿಡುತ್ತಿದ್ದರಂತೆ. ಕೋಟೆಯೊಳಗೆ ಒಂಭತ್ತು ಬಾವಿಗಳಿವೆ. ಇಷ್ಟೊಂದು ಬಾವಿಗಳನ್ನು ಇಷ್ಟು ಸಣ್ಣ ಜಾಗದಲ್ಲಿ ಏಕಾಗಿ ನಿರ್ಮಿಸಿರಬಹುದು ಎಂದು ಅಚ್ಚರಿಯಾಗುವಂತೆ ಅವು ಇವೆ. ಬಾವಿಗಳಿಗೆ ಇಳಿದುಹೋಗಲು ಗಟ್ಟಿಮುಟ್ಟಾದ ಮೆಟ್ಟಿಲುಗಳನ್ನುಳ್ಳ ಸುರಂಗದಂತಹ ವ್ಯವಸ್ಥೆ ಇದೆ. ಹೊರ ಆವರಣದ ಬಾವಿಗಳು ಕೋಟೆಯ ಹೊರಗಿನ ಕಾಲುವೆಯ ಜೊತೆ ಸಂಪರ್ಕ ಹೊಂದಿವೆ. ಕಾಲುವೆಯು ಅಲ್ಲೇ ಆಚೆ ಹರಿಯುವ ಹಳ್ಳವನ್ನು, ಆ ಮೂಲಕ ಅಘನಾಶಿನಿ ನದಿ-ಸಮುದ್ರವನ್ನು ಸಂಪರ್ಕಿಸುತ್ತದೆ. ವ್ಯಾಪಾರ ವಿನಿಮಯ ನಡೆಸಲು ಸಮುದ್ರದೊಡನೆ ಸಂಪರ್ಕ ಸಾಧಿಸುವುದು ಮುಖ್ಯವಾಗಿದ್ದರಿಂದ ಒಳಗಿನ ಬಾವಿಗಳು ಹೊರಸಂಪರ್ಕ ಹೊಂದಿರಬಹುದು. ಅಥವಾ ಸಮುದ್ರದಲ್ಲಿರುವ ನಾವೆಗಳ ಮೇಲೆ ಇದ್ದಕ್ಕಿದ್ದಂತೆ ಎರಗಿ ತಪ್ಪಿಸಿಕೊಳ್ಳಲು ಅಥವಾ ವೈರಿ ಆಕ್ರಮಣದ ವೇಳೆ ಬಾವಿ->ಕಾಲುವೆ->ನದಿ->ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಮಾಡಿದ ಯೋಜಿತ ಸುರಕ್ಷತಾ ವ್ಯವಸ್ಥೆಯೂ ಇದಾಗಿರಬಹುದು. 

ಒಂಭತ್ತರಲ್ಲಿ ಮೂರು ಬಾವಿಗಳಲ್ಲಿ ಈಗಲೂ ನೀರಿದೆ. ಇಪ್ಪತ್ತು ಅಡಿ ವ್ಯಾಸದ ಒಂದು ದೊಟ್ಟ ಬಾವಿಯಂತೂ ತಳಕಾಣದಷ್ಟು ಆಳವಾಗಿದ್ದು ಶುದ್ಧ ತಿಳಿನೀರನ್ನು ಹೊಂದಿದೆ. ಇದು ಕೋಟೆಯ ಒಳ ಆವರಣದಲ್ಲಿದ್ದು ಕುಡಿಯಲು ಬಳಕೆಯಾಗುತ್ತಿದ್ದಿರಲೂಬಹುದು. ಈ ಬಾವಿಗೂ ಇಳಿದುಹೋಗಲು ಮೆಟ್ಟಿಲು ವ್ಯವಸ್ಥೆಯಿದೆ. ಒಟ್ಟಾರೆ ಕೋಟೆಯ ಒಳಗೆ ಹಾಗೂ ಹೊರಗೆ ಸಾಗಾಣಿಕೆಗೆ, ರಕ್ಷಣೆಗೆ, ದಿನ ಬಳಕೆಯ ನೀರಿಗೆ ಇವು ಬಳಕೆಯಾಗುತ್ತಿದ್ದಿರಬಹುದು. 

ಕೋಟೆಯ ಹೊರ ಆವರಣದಲ್ಲಿ ದಿಕ್ಕಿಗೊಂದು ಬತೇರಿ ಇದೆ. ಎಲ್ಲಕ್ಕಿಂತ ಎತ್ತರದಲ್ಲಿ ಕಾವಲು ಗೋಪುರದಂತಹ ರಚನೆಯೊಂದಿದ್ದು ಅದೀಗ ರಾಷ್ಟ್ರೀಯ ದಿನಾಚರಣೆಗಳಂದು ಧ್ವಜ ಹಾರಿಸುವ ಧ್ವಜಕಟ್ಟೆಯಾಗಿ ಪರಿವರ್ತನೆಯಾಗಿದೆ. ಕೋಟೆಯ ಒಳಗಿನ ವಿಶಾಲ ಮೈದಾನದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ಮಾರುಕಟ್ಟೆಯ ಅವಶೇಷಗಳಿವೆ. ವಾಸಸ್ಥಾನ, ದರ್ಬಾರು, ಲಾಯ, ದೊಡ್ಡ ಹಜಾರಗಳ ನೆಲಗಟ್ಟೂ ಕಾಣುತ್ತವೆ. ಪರ್ಷಿಯನ್ ಕುದುರೆಗಳು ವಿಜಯನಗರ ಸೇನೆಯ ಮುಖ್ಯ ಭಾಗವಾಗಿದ್ದವು. ಪರ್ಷಿಯನ್ (ಇವತ್ತಿನ ಇರಾನ್) ಕುದುರೆಗಳು ಈ ಅಂತಾರಾಷ್ಟ್ರೀಯ ಬಂದರಿನ ಮೂಲಕವೇ ಭಾರತ ತಲುಪಿ ನಂತರ ಒಳನಾಡು ಪ್ರವೇಶಿಸುತ್ತಿದ್ದವು. ಆ ಕಾರಣವಾಗಿ ಲಾಯದ ರಚನೆಯಿರಬಹುದು ಎಂದು ಊಹಿಸಬಹುದಾಗಿದೆ.


ಕೋಟೆಯೊಳಗೆ ದೊಡ್ಡ ಮರವೊಂದರ ಬುಡದಲ್ಲಿ ಶಿವ, ಚೌಡಿ, ಮಾಸ್ತಿಕಲ್ಲು, ನಾಗ, ದೈವದ ಕಲ್ಲುಗಳಿವೆ. ಪ್ರಾರ್ಥನಾಗೃಹ ಮತ್ತು ಮಿಹ್ರಾಬ್‌ಗಳೂ ಇವೆ. ಕೋಟೆಯ ಪಕ್ಕದಲ್ಲೇ ಅತಿ ಹಳೆಯ ಚರ್ಚ್ ಒಂದಿದೆ. ಕೋಟೆ ಕಾಯಲು ಮೊಸಳೆ, ಕಂದಕ, ನೀರು, ನದಿ, ಸೇನೆಯನ್ನಷ್ಟೇ ನಂಬದ ಆಳ್ವಿಕರು ಅನೇಕ ದೇವರುಗಳನ್ನು ಸ್ಥಾಪಿಸಿಕೊಂಡಿದ್ದ ಕುರುಹುಗಳಿವು. 

ಯಾವ ದೇವರ ಒಕ್ಕಲೇ ಇರಲಿ, ಎಷ್ಟು ಸೈನ್ಯ ಬಲವಿರಲಿ, ಮೆರೆದವರೆಲ್ಲ ಒಂದಲ್ಲ ಒಂದು ದಿನ ಮೈಚೆಲ್ಲಿ ಮಲಗಿದ್ದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ, ಅವರು ಬಿಟ್ಟುಹೋದ ಸ್ಥಾವರಗಳಿಗೂ ಅನ್ವಯಿಸುತ್ತದೆ. ಕೋಟೆಯ ಹಿಂಭಾಗದ ಗೋಡೆ ಬುರುಜುಗಳಲ್ಲಿ ಅದೆಲ್ಲಿಂದಲೋ ಬಂದು ಬಿದ್ದ ಅಶ್ವತ್ಥವು ಬೇರು ಬಿಟ್ಟು, ಬಿಳಲು ಬಿಟ್ಟು ಎಷ್ಟು ಸೊಂಪಾಗಿ ಬೆಳೆಯುತ್ತಿದೆಯೆಂದರೆ ಕಟ್ಟಿರುವುದನ್ನು ಕೆಡವಿ ಹಾಕಲು ಪ್ರಕೃತಿಯೇ ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಜೊಂಡುಹುಲ್ಲು, ಪಾಚಿ, ಹುಲ್ಲುಗರಿಕೆಗಳೆಲ್ಲ ನಿಧಾನವಾಗಿ ಗೋಡೆಗಳಿಗೆ ಮುದಿತನ ತಂದೊಡ್ಡುತ್ತಿದ್ದರೆ ಅರಳಿಯ ಬೇರುಗಳು ಇತಿಹಾಸಕ್ಕೆ ಸಾಕ್ಷಿಯಾಗಿರುವ ಕೋಟೆಗೆ ಚರಮಗೀತೆ ಬರೆಯುವಂತೆ ಕಾಣುತ್ತವೆ. 

ಮಸೀದಿಯ ಅಡಿ ಲಿಂಗವನ್ನೂ, ಅದರ ಅಡಿ ಮತ್ತೊಂದನ್ನೂ ಹುಡುಕುತ್ತ ಹೊರಟ ಆಳುವವರ ವಿಧ್ವಂಸಕ ಬುದ್ಧಿಯನ್ನು, ವಿಪರೀತ ಆಕಾಂಕ್ಷೆಗಳನ್ನೂ ಅರಿತುಕೊಳ್ಳಲು ಇಂತಹ ಐತಿಹಾಸಿಕ ತಾಣಗಳು ಕಣ್ಣೆದುರು ಇರಬೇಕಿದೆ. ಗತದ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು, ವಿಸ್ಮೃತಿಯನ್ನು ತೊಡೆದು ಹಾಕುವ ಸಲುವಾಗಿ ಮಿರ್ಜಾನ್ ಕೋಟೆಯಂತಹ ಸಂಕೇತಗಳು ಅಗತ್ಯವಾಗಿವೆ. ಅವನ್ನು ಉಳಿಸಿ, ಅರಿತುಕೊಳ್ಳುವ ಗಂಭೀರ ಪ್ರಯತ್ನಗಳನ್ನು ಶಾಲಾಕಾಲೇಜಿನಿಂದಲೇ ಆರಂಭಿಸಬೇಕಿದೆ.

ಡಾ. ಎಚ್. ಎಸ್. ಅನುಪಮಾ

No comments:

Post a Comment