Wednesday 1 October 2014

ಪ್ಯಾಲೆಸ್ಟೀನ್ ಬಗ್ಗೆ ಗಾಂಧಿ





‘ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ. ಆ ಸಮುದಾಯ ನೂರಾರು ವರ್ಷಗಳಿಂದ ಅನುಭವಿಸುತ್ತಿರುವ ಬವಣೆಯ ಬಗ್ಗೆ ಅವರಿಂದಲೇ ಕೇಳಿ ತಿಳಿದಿದ್ದೇನೆ. ಅವರು ಕ್ರಿಶ್ಚಿಯನ್ ಧರ್ಮದಲ್ಲಿ ಅಸ್ಪೃಶ್ಯರಿದ್ದಂತೆ. ಯಹೂದಿಗಳನ್ನು ಕ್ರಿಶ್ಚಿಯನ್ನರು ನಡೆಸಿಕೊಳ್ಳುತ್ತಿರುವ ರೀತಿಗೂ, ಹಿಂದೂ ಧರ್ಮ ಅಸ್ಪೃಶ್ಯರನ್ನು ನೋಡಿಕೊಳ್ಳುತ್ತಿರುವ ರೀತಿಗೂ ತುಂಬಾ ಸಾಮ್ಯವಿದೆ. ಎರಡೂ ಧರ್ಮಗಳು ತಾವು ನಡೆದುಕೊಳ್ಳುತ್ತಿರುವ ರೀತಿಗೆ ಧರ್ಮದ ಅನುಮೋದನೆ ಇದೆ ಎಂದು ತಿಳಿದುಕೊಂಡಿರುವುದು ದುರಾದೃಷ್ಟಕರವಾಗಿದೆ.

ಆದರೆ ನನಗೆ ಯಹೂದಿಗಳ ಬಗ್ಗೆ ಸಹಾನುಭೂತಿಯಿದೆ ಎಂದಾಕ್ಷಣ ಅವರ ಎಲ್ಲ ಬೇಡಿಕೆಗಳ ಬಗ್ಗೆ ಸಮ್ಮತಿಯಿದೆ ಎಂದರ್ಥವಲ್ಲ. ತಮಗೆ ಪ್ರತ್ಯೇಕ ರಾಷ್ಟ್ರ ಬೇಕೆನ್ನುವ ಅವರ ಬೇಡಿಕೆ ನನಗೆ ಎಂದೂ ಸರಿಯೆನಿಸುವುದಿಲ್ಲ. ಬೈಬಲ್ ಇತ್ಯಾದಿಯನ್ನು ಉದ್ಧರಿಸಿ ತಾವು ಪ್ಯಾಲೆಸ್ಟೀನಿಗೆ ಹಿಂದಿರುಗಬೇಕು ಎನ್ನುವ ಅವರ ವಾದ ಅರ್ಥವಿಲ್ಲದ್ದು. ಅದರ ಬದಲು ಉಳಿದವರಂತೆ ಯಹೂದಿಗಳು ಕೂಡ ತಾವು ಹುಟ್ಟಿ ಬೆಳೆದ ದೇಶವನ್ನೇ ತಮ್ಮದೆಂದು ಪರಿಗಣಿಸುವುದು ಅಗತ್ಯ.

ಪ್ಯಾಲೆಸ್ಟೀನ್ ಅರಬ್ಬರಿಗೆ ಸೇರಿದ್ದು. ಇಂಗ್ಲಿಷ್ ಜನಕ್ಕೆ ಇಂಗ್ಲೆಂಡ್ ಸೇರಿದ ಹಾಗೆ, ಫ್ರೆಂಚರಿಗೆ ಫ್ರಾನ್ಸ್ ಇದ್ದ ಹಾಗೆ. ಯಹೂದಿಗಳನ್ನು ಅರಬ್ಬರ ಮೇಲೆ ಹೇರುವುದು ತಪ್ಪು ಮತ್ತು ಅದು ಅಮಾನವೀಯ ಕೂಡ. ಪ್ಯಾಲೆಸ್ಟೀನಿನಲ್ಲಿ ಇವತ್ತು ಏನಾಗುತ್ತಿದೆಯೋ ಅದಕ್ಕೆ ಯಾವ ನೈತಿಕ ಬೆಂಬಲವೂ ಇಲ್ಲ. ಯಹೂದಿಗಳ ಒತ್ತಾಯದಂತೆ ಅವರಿಗೆ ಒಂದು ಪ್ರತ್ಯೇಕ ರಾಷ್ಟ್ರ ನಿರ್ಮಾಣವಾದರೆ ಎರಡು ರಾಷ್ಟ್ರಗಳನ್ನು ಹೊಂದಿದ ಸೌಲಭ್ಯ ಅವರದಾಗುತ್ತದೆ - ತಾವು ಹುಟ್ಟಿ ಬೆಳೆದ ನಾಡು ಮತ್ತು ಹೊಸ ರಾಷ್ಟ್ರ. ಎರಡೂ ಕಡೆ ಸವಲತ್ತು ಪಡೆಯುವ ಅವಕಾಶ ಅವರಿಗೆ ದಕ್ಕುತ್ತದೆ. ಇದು ಸರಿಯಾದ ಮಾರ್ಗವಲ್ಲ. ಇದರಿಂದ ಅರಬ್ - ಯಹೂದಿ ಸಮಸ್ಯೆ ಬಗೆಹರಿಯುವುದಿಲ್ಲ.’

೨೬-೧೧-೩೮ರ ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಿಂದ.

No comments:

Post a Comment