Thursday 18 December 2014

‘ನಾನು ಪೇಶಾವರ ಹತ್ಯಾಕಾಂಡ ನೋಡಿದೆ’





೧೨ ವರ್ಷದ ಅಲಿ, ಪೇಶಾವರ ಶಾಲಾ ಮಕ್ಕಳ ಹತ್ಯಾಕಾಂಡದಲ್ಲಿ ಬದುಕುಳಿದವ, ಪತ್ರಕರ್ತ ಕಿರಣ್ ನಾಜಿಶ್‌ಗೆ ಹೇಳಿದ ಮಾತುಗಳು ಇವು:

ಪರಮ ದಯಾಳುವೂ, ಕರುಣಾಳುವೂ ಆದ ದೇವರ ಹೆಸರಿನಲ್ಲಿ,

ನಮಸ್ತೆ. ನನ್ನ ಹೆಸರು ಅಲಿ. ೧೨ ವರ್ಷ.

ನಮ್ಮ ಮೊದಲ ಪೀರಿಯಡ್. ಪಾಠ ಕೇಳ್ತ ಕೂತಿದ್ವಿ. ಇದ್ದಕ್ಕಿದ್ದಂತೆ ಗುಂಡು ಸಿಡಿದ ಶಬ್ದ ಆಯ್ತು. ಅದು ಭಯಾನಕ ಶಬ್ದ. ಅದೇನಿರಬೋದು ಅಂತ ಊಹೆ ಮಾಡಕ್ಕೂ ಟೈಮಿರ್ಲಿಲ್ಲ.

ಆ ಶಬ್ದ ನಮ್ಮ ಕ್ಲಾಸ್ ಹತ್ರತ್ರನೇ ಬಂದಂಗೆ ನಮ್ಮ ಟೀಚರ್ ಬೆಂಚಿನ ಅಡಿ ಅಡಕ್ಕಳಿ ಅಂದ್ರು.

‘ಬೇಗ, ಬೇಗ, ನಿಮ್ಮ ಡೆಸ್ಕಿನಡಿ ತೂರಿಕೊಳ್ಳಿ.’ ಅವರು ಹೇಳಿದ್ರು. ಕೆಲವರು ಅಡಗಿದ್ವಿ. ಉಳ್ದ ಕೆಲವರು ಹೆದ್ರಿಕೆ, ಗೊಂದಲ ಆಗಿ ಏನು ಮಾಡದಂತ ತಿಳಿದೇ ಕಂಗಾಲಾಗಿ ನಿಂತ್ರು. ಇಡೀ ಕ್ಲಾಸು ಟೀಚರನ್ನು ‘ಏನಾಯ್ತು ಟೀಚರ್’ ಅಂತ ಕೇಳ್ತನೇ ಇತ್ತು.

ಪಕ್ಕದ ಕ್ಲಾಸಿನಿಂದ ಮಕ್ಕಳು ಕೂಗುವುದು, ಕಿರುಚುವುದು ಕೇಳ್ಸಕ್ ಶುರು ಆಯ್ತು. ನಂಗಂತೂ ಎಷ್ಟು ಹೆದರಿಕೆ ಆಯ್ತು ಅಂದ್ರೆ ಕಿರುಚಕ್ಕೆ ಹೋದ್ರೆ ಧ್ವನಿನೇ ಬರ್ಲಿಲ್ಲ.

ನಂ ಟೀಚರ್ರು ಇನ್ನೇನು ಬಾಗ್ಲು ಹಾಕ್ಬೇಕು ಅಂತಿದ್ರು, ಅಷ್ಟೊತ್ಗೆ ಮೂರ‍್ಜನ ಧಢಾರ್ ಅಂತ ಬಾಗ್ಲು ದಬ್ಬಿ ಬಂದೇ ಬಿಟ್ರು.

ಅವ್ರು ಗುಂಡು ಹಾರಿಸ್ತನೇ ಬಂದ್ರು. ನಂ ಟೀಚರ್ ಮತ್ತೆ ಫ್ರೆಂಡ್ಸಿಗೆ ಪೆಟ್ಟಾಗಿದ್ದನ್ನ ನೋಡ್ದೆ. ಹೊಡತ ತಿಂದು ನನ್ ಕೆಲ ಫ್ರೆಂಡ್ಸ್ ಕೆಳಗ್ ಬಿದ್ರು. ತುಂಬ ಜನ ಟೇಬಲ್ ಕೆಳಗೆ ಅಡಕ್ಕಂಡ್ವಿ.

ನಾನ್ ಸತ್ತೋಗ್ತಿನಿ ಅಂತ ಗೊತ್ತಾಯ್ತು. ಅಳಕ್ಕೆ ಶುರುಮಾಡ್ದೆ. ಎಲ್ಲರು ಅಳ್ತಿದ್ರು, ಆದ್ರೆ ಯಾರೂ ಓಡಿ ಹೊರಗೋಗೋ ಧೈರ್ಯ ಮಾಡ್ಲಿಲ್ಲ.

ನಂ ಫ್ರೆಂಡ್ಸ್‌ನ ತಲೆ, ಎದೆ, ಹೊಟ್ಟೆ, ಕೈಯಿ, ಕಾಲು ಹಿಂಗೆ ಎಲ್ಲೆಲ್ಲೋ ಹೊಡದ್ರು. ಎಲ್ರು ನೆಲದ ಮೇಲೆ ಬಿದ್ರು. ಅವ್ರಿಗೆ ಗೊತ್ತಾಯ್ತು. ಇವ್ರಲ್ಲಿ ಒಂದಷ್ಟ್ ಜನ ಬದುಕಿದಾರೆ ಅಂತ, ನೇರ ತಲೆಗೇ ಗುರಿಯಿಟ್ಟು ಗುಂಡು ಹಾರ‍್ಸಕ್ ಶುರುಮಾಡಿದ್ರು.

ನಂ ತಲೆಮೇಲೇ ಗುಂಡು ಹಾರೋದ್ವು. ನನ್ ಬೆಸ್ಟ್ ಫ್ರೆಂಡು ಮತ್ತೆ ಬೆಂಚ್ ಮೇಟ್ ಇರ್ಫಾನುಲ್ಲಾ ಹೇಳ್ದ,

‘ಸತ್ತೋರಂಗೆ ನಾಟ್ಕ ಮಾಡೋಲೋ’. ನಾನು ಹೆದ್ರಿ ಥರಥರ ಅಂತಿದ್ದೆ. ನಂ ಕ್ಲಾಸಲ್ಲಿ ನಮ್ದೆ ಕೊನೇ ಬೆಂಚು.

‘ಅಲ್ಲಾಡ್ದೆ ಮಲ್ಕ ಅಲಿ, ಅಲ್ಲಾಡ್ದೆ ಮಲಗು’ ಅವ್ನು ಪಿಸುಗುಟ್ಟಿದ. ನಾನು ಮಕಾಡೆ ಮಲಕ್ಕಂಡೆ. ಎಲ್ಲ ಸರಸರ ನಡದೋಯ್ತು. ನಂಗೊತ್ತಿತ್ತು ಅವ್ರು ಟೆರರಿಸ್ಟ್ ಅಂತ. ನಂಗೊತ್ತಿತ್ತು ಅವ್ರು ತಾಲಿಬಾನಿನೋರು ಅಂತ.

ನನ್ ಫ್ರೆಂಡ್ ಇರ್ಫಾನಿಗೂ ಗುಂಡು ತಾಕಿ ಗಾಯ ಆಯ್ತು. ಅವ್ನಿಗೆ ಎಲ್ಲಿ ತಾಗ್ತು ಅಂತ ಗೊತ್ತಾಗ್ಲಿಲ್ಲ. ಆದ್ರೆ ಅವ್ನು ಉಸಿರಾಡಿದ್ದು ನಂಗೆ ಕೇಳಿಸ್ತಿತ್ತು.

ಒಬ್ಬ ಟೆರರಿಸ್ಟ್ ಮತ್ತೊಬ್ಬನಿಗೆ ಕೂಗ್ದ: ‘ಅವ್ನು ಸತ್ನಾ ನೋಡು?’ ನಂತ್ರ ಗುಂಡಿನ ಶಬ್ದ ಮತ್ತಷ್ಟು ಕೇಳಿಸ್ತು. ನಂಗಂತೂ ನಾನು ಸತ್ತೋಗಿದೀನಿ ಅಂತ್ಲೇ ಅನಿಸ್ತು.

ಅವ್ರು ಪಾಶ್ತೋ ಮಾತಾಡ್ತಿದ್ರು. ಸಲ್ವಾರ್ ಕಮೀಜ್ ಹಾಕಿದ್ರು. ಎಲ್ರಿಗೂ ಉದ್ದ ಗಡ್ಡ ಇತ್ತು.

ಅವ್ರು ರೂಮಿಂದ ಹೊರಗೋದಾಗ ಇರ್ಫಾನನ್ನ ಕರದೆ. ಅವ್ನು ಉತ್ತರ ಕೊಡ್ಲಿಲ್ಲ. ಅವ್ನು ಇನ್ನೂ ಸತ್ತೋರಂಗೆ ನಾಟ್ಕ ಮಾಡ್ತಿದಾನೆ ಅನಿಸ್ತು. ನಾನು ಸತ್ತೋನಂಗೇ ಮಲ್ಕಂಡೆ.

ಅವ್ರು ಬಂದ್ಬಿಡ್ತಾರೆ ಅಂತ ನಂಗೆ ತುಂಬ ಭಯ ಆಗ್ತಿತ್ತು. ನನ್ ಫ್ರೆಂಡ್ ಯಾವಾಗ ಸತ್ನೋ ನಂಗೆ ಗೊತ್ತೇ ಆಗ್ಲಿಲ್ಲ. ಅವ್ನೇ ನನ್ ಜೀವ ಉಳ್ಸಿದ್ದು.

ನಾನೂ ಸತ್ತೋಗಿದೀನಿ ಅಂತನೇ ತಿಳ್ಕಂಡಿದ್ದೆ. ಎದೆ ಡಬಡಬ ಹೊಡ್ಕತಾ ಇತ್ತು. ನಂಗೆ ಅಲ್ಲಾಡಕ್ಕೂ ಆಗ್ತಿರಲಿಲ್ಲ.

ಎಷ್ಟೋ ತಾಸು ಹಿಂಗೇ ಸತ್ತೋರಂಗೇ ಇದ್ದೆ. ಆಮೇಲೆ ಯಾವಾಗ್ಲೋ ಮಿಲಿಟ್ರಿಯೋರು ಬಂದ್ರು. ಅವ್ರು ಬಂದ್ರೂ ನಾನು ಅಲ್ಲಾಡ್ದೆ ಸುಮ್ನೆ ಮಲಗೇ ಇದ್ದೆ. ಅವ್ರು ನಿಜವಾದ ಸೈನಿಕ್ರು ಹೌದೋ ಅಲ್ವೋ ನಂಗೆ ಗೊತ್ತಿರ್ಲಿಲ್ಲ. ನಂಗೆ ಮಾತಾಡಕ್ಕೂ ಆಗ್ಲಿಲ್ಲ. ತುಂಬ ಭಯ ಆಯ್ತು.

ನಂ ಕ್ಲಾಸ್ ಹೊರ‍್ಗೆ ಗುಂಡಿನ ಶಬ್ದ ಕೇಳ್ತನೇ ಇತ್ತು. ಆದ್ರೆ ನಂಗೆ ಕಣ್ ಬಿಡಕ್ಕೂ ಶಕ್ತಿ ಇರ್ಲಿಲ್ಲ. ತುಂಬ ದೊಡ್ದಾಗಿ ಢಮಾರ್ ಅಂತ ಎಂಥದೋ ಸಿಡೀತು. ಜೋರು ಅಂದ್ರೆ ಜೋರಾಗಿ. ನಾನು ಇಡೀ ಪ್ರಪಂಚನೇ ಇವತ್ತು ಸಿಡಿದು ಹೋಗುತ್ತೆ ಅಂದ್ಕಂಡೆ.

ಯಾರೋ ಬಂದು ನನ್ನ ಎತ್ತಿದ್ರು. ಆಗ್ಲೂ ನಾನು ಕಣ್ಣು ಮುಚ್ಕಂಡೇ ಇದ್ದೆ. ಅವ್ರು ಸೈನಿಕರು.

ನಾನು ಅಳಕ್ ಶುರು ಮಾಡ್ದೆ. ನನ್ನ ಅಮ್ಮ, ಅಪ್ಪನತ್ರ ಕರ‍್ಕಂಡೋಗಿ ಬಿಟ್ರು.

ನಾನೀಗ ಆಸ್ಪತ್ರೇಲಿದೀನಿ. ನನ್ನ ಎಷ್ಟೊಂದು ಫ್ರೆಂಡ್ಸ್ ಇಲ್ಲಿದಾರೆ ಗೊತ್ತ? ಅವ್ರಿಗೆ ರಕ್ತ ಕಮ್ಮಿಯಾಗಿದೆಯಂತೆ. ನಾನು ನನ್ನ ರಕ್ತ ಕೊಡ್ತಾ ಇದೀನಿ.


ನಮ್ಮಪ್ಪ ಅಮ್ಮ ಮನೆಗೋಗಣ ಅಂದ್ರು. ಅವ್ರಿಗೆ ನನ್ ಬಗ್ಗೆ ಚಿಂತೆ ಆಗ್ಬಿಟ್ಟಿದೆ. ಅವ್ರಿಗೆ ದುಃಖ ಆಗಿದೆ. ಅವ್ರಿಗೆ ಭಯ ಆಗಿದೆ. ನಂಗೂ ಭಯ ಆಗಿದೆ. ಆದ್ರೆ ಆಸ್ಪತ್ರೇಲಿದಾರಲ್ಲ, ನಮ್ಮ ಅಣ್ಣತಮ್ಮಂದ್ರು, ಅಕ್ಕತಂಗೀರು ಅವ್ರ ಬಗ್ಗೆನೂ ನಂಗೆ ಚಿಂತೆ ಆಗ್ತಿದೆ.

ಈ ತಾಲಿಬಾನ್ ದುಷ್ಟ.

ನಾ ಬದುಕಿದಿನಿ ಅಂತ ನಂಬಕ್ಕೇ ಆಗ್ತಿಲ್ಲ.

ನಂ ದೇಶ ಬೇಕು ಅಂತಂದ್ರೆ ನಾನು ಪ್ರಾಣ ಬೇಕಾದ್ರೂ ಕೊಟ್ಬಿಡ್ತೀನಿ.

ನನ್ ಫ್ರೆಂಡ್ಸ್‌ನ ಕೊಂದ ಈ ಟೆರರಿಸ್ಟ್ ವಿರುದ್ಧ ನಾನು ಹೋರಾಡೇ ಹೋರಾಡ್ತಿನಿ. ಅವ್ರನ್ನ ನಾನು ಯಾವತ್ತೂ ಕ್ಷಮಿಸಲ್ಲ. ಯಾವತ್ತೂ ಕ್ಷಮಿಸಲ್ಲ.

ದೇವ್ರು ನೋಡ್ತಾ ಇದಾನೆ.



No comments:

Post a Comment