Saturday 24 February 2024

ಎ. ಅರುಳ್ ಮೌಳಿ, ಚೆನ್ನೈ

 



ಮದರಾಸು ಉಚ್ಚ ನ್ಯಾಯಾಲಯದಲ್ಲಿ 1988ರಿಂದ ನ್ಯಾಯವಾದಿಯಾಗಿರುವ ಎ. ಅರುಳ್ ಮೌಳಿ ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ಮತ್ತು ವಾಗ್ಮಿ. ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಳ್, ಸಾಮಾಜಿಕ ಚಿಂತನೆಗಳ ಕೌಟುಂಬಿಕ ಹಿನ್ನೆಲೆಯವರು. ಅವರ ತಂದೆ ತಮಿಳು ಭಾಷಾ ಪಂಡಿತರು. ತಾಯಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರಿಬ್ಬರೂ ಪೆರಿಯಾರ್ ಅವರ ಕಟ್ಟಾ ಅನುಯಾಯಿಗಳು. ತಮಿಳ್ ನಾಡನ್ ಎನ್ನುವವರು ತಮಿಳಿಗೆ ಅನುವಾದಿಸಿದ್ದ ಮನುಸ್ಮೃತಿಯನ್ನು ಪ್ರಕಟಿಸಿದ್ದರು. 

1968ರಲ್ಲಿ ನಾಲ್ಕು ವರ್ಷವಾಗಿದ್ದಾಗಲೇ ಸೇಲಂನಲ್ಲಿ ನಡೆದ ದ್ರಾವಿಡ ಕಳಗಂ ಸಭೆಯಲ್ಲಿ ಪೆರಿಯಾರರ ಎದುರು ಬಾಲೆ ಅರುಳ್ ಭಾಷಣ ಮಾಡಿದ್ದರು. 1978ರ ನಂತರ, 14 ವರ್ಷ ತುಂಬಿದ ಹುಡುಗಿಯಿರುವಾಗಲಿಂದ ದ್ರಾವಿಡ ಕಳಗಂ ಸಭೆಗಳಲ್ಲಿ ಅವರು ಮಾತನಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಸಮಾನ ಮನಸ್ಕರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಚರ್ಚೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರಸ್ತುತ ದ್ರಾವಿಡ ಕಳಗಂ ವಕ್ತಾರರಾಗಿ ಮಾಧ್ಯಮದ ಡಿಬೇಟುಗಳಲ್ಲೂ ಪಾಲ್ಗೊಳ್ಳುವ ಅರುಳ್, ಲಿಂಗಸೂಕ್ಷ್ಮತೆ, ಸ್ತ್ರೀವಾದಿ ಚಿಂತನೆ, ದ್ರಾವಿಡ ಚಿಂತನೆಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಈಗ ದ್ರಾವಿಡ ಕಳಗಂನ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯ ಕುರಿತು ನಡೆಯುವ ಹಲವಾರು ಸಭೆ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರಗಳಿಗೂ ಇದೇ ಉದ್ದೇಶಗಳಿಗೆ ಭೇಟಿ ನೀಡಿದ್ದಾರೆ. 

ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ತಮಿಳಿನಲ್ಲೇ ವಾದಿಸಬಯಸುವ ಅರುಳ್, ರಿಟ್, ಸೇವಾ ವಿಷಯಗಳು, ಸಿವಿಲ್ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಪ್ರಕರಣವು ಸಾಮಾಜಿಕವಾಗಿ ಪ್ರಮುಖವೆನಿಸಿದರೆ ಅದನ್ನು ತೆಗೆದುಕೊಂಡು ವಾದಿಸುತ್ತಾರೆ. 

ಸಮಾಜದಲ್ಲಿ ಎಲ್ಲ ತರಹದ ಅಸಮಾನತೆ ಅಳಿಯಲು, ಲಿಂಗ ಸಮಾನತೆ ನೆಲೆಯಾಗಲು, ಕಂಪ್ಯೂಟರ್ ಬಂದರೂ ಅದರಲ್ಲೂ ಜಾತಕ ನೋಡುವ ಮೌಢ್ಯ ಅಳಿಯಲು ಪೆರಿಯಾರ್ ಚಿಂತನೆಗಳು ಅತ್ಯಗತ್ಯ; ಬದುಕಿಗೆ ಬೇಕಿರುವುದು ಶಿಸ್ತೇ ಹೊರತು ಭಕ್ತಿಯಲ್ಲ ಎಂದು ನಂಬಿರುವ ಅರುಳ್ ಮೌಳಿ, ಇದೇ ಮಾರ್ಚ್ 8ರಂದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಮಹಿಳಾ ಚೈತನ್ಯ ದಿನ’ದ ಭಾಗವಾಗಿ ನಡೆಯಲಿರುವ ‘ಮಹಿಳಾ ಪ್ರಾತಿನಿಧ್ಯ: ಆಶಯ, ವಾಸ್ತವ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲು ಚೆನ್ನೈನಿಂದ ಬರಲಿದ್ದಾರೆ. 

ಬನ್ನಿ, ಅವರ ದನಿಗೆ ದನಿಗೂಡಿಸೋಣ.


No comments:

Post a Comment