Bhoomibalaga
Thursday, 3 July 2025
ವೈಟಮೊ: ಬೆಳಕಿನ ಹುಳಗಳ ವಿಸ್ಮಯ ಲೋಕ
Tuesday, 10 June 2025
ಮನೋಜ್ ಬೊಗಾಟಿ: ಕವಿಗೆ, ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ?
(ಇತ್ತೀಚೆಗೆ ಮೇ ೧೭, ೧೮ರಂದು ಸಿಂಧನೂರಿನ ಸತ್ಯಾ ಗಾರ್ಡನ್ನಿನಲ್ಲಿ ನಡೆದ ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯ ಆಶಯ ಮಾತುಗಳನ್ನಾಡಲು ಡಾರ್ಜಿಲಿಂಗಿನ ಕವಿ ಮನೋಜ ಬೊಗಾಟಿ ಬಂದಿದ್ದರು. ಎದೆಯ ದನಿಯನ್ನು ಮಾತಾಗಿಸುವ ಕವಿಯನ್ನು ೨೨೬೦ ಕಿಲೋಮೀಟರ್ ದೂರದಿಂದ ಸಿಂಧನೂರಿಗೆ ಕರೆಸಿಕೊಂಡದ್ದೇ ಒಂದು ಕಥನವಾಗಬಲ್ಲದು. ಗಡಿಯಾರದ ಹಿಂದೋಡುವ ಗುಣವೇ ಇಲ್ಲದ ಈತ ಕಳಿಸಿದ್ದು ನೋಡಿರುವುದೂ ಇಲ್ಲ, ಮಾಹಿತಿ-ಸೂಚನೆ ಕೇಳಿರುವುದೂ ಇಲ್ಲ, ಕವಿಗೋಷ್ಟಿಯ ಆಶಯ ಎಂದು ದಿರಿಸಿನಲ್ಲಿ ತಯಾರಾಗುವುದೂ ಇಲ್ಲ. ಸದಾ ತನ್ನದೇ ಅಕ್ಷರ ಲೋಕದ ಸೃಷ್ಟಿಕ್ರಿಯೆಯ ಗುಂಗಿನಲ್ಲಿ ಮುಳುಗಿರುವಂತೆ ಕಾಣುವ ಬರಹಗಾರ ಮನೋಜ್, ಹೇಗಿದ್ದರೋ ಹಾಗೇ ಬಂದು ವೇದಿಕೆಯೇರಿದರು. ಸರಳ ವ್ಯಕ್ತಿತ್ವದ, ಬೆಟ್ಟ ಪ್ರದೇಶ ಡಾರ್ಜಿಲಿಂಗಿನ ಕೆಳವರ್ಗದಿಂದ ಬಂದ ಕವಿ ತಮ್ಮ ಸಾಂದ್ರ ಅನುಭವದ ಮಾತು, ಕವಿತೆ, ಕ್ರಾಂತಿಕಾರಿ ಹುಮ್ಮಸ್ಸಿನ ಮಾತುಗಳಿಂದ ನೆರೆದವರ ಗಮನ ಸೆಳೆದರು.
46 ವರ್ಷದ ಮನೋಜ್ ಡಾರ್ಜಿಲಿಂಗಿನ ಡಾಲ್ಗಾಂವ್ ಪ್ರಾಂತ್ಯದ ರೊಂಗೊದವರು. ಅವರು ಪಡೆದ ಔಪಚಾರಿಕ ಶಿಕ್ಷಣ ಕಡಿಮೆ. ಶೈಕ್ಷಣಿಕ, ಸಾಹಿತ್ಯಿಕ ಹಿನ್ನೆಲೆಯದಲ್ಲದ ಶ್ರಮಿಕ ಕುಟುಂಬದಿಂದ ಬಂದ ಅವರಿಗೆ ನಿಯತಕಾಲಿಕಗಳ ಓದು ಮತ್ತು ಒಡನಾಟದಿಂದ ಸಾಹಿತ್ಯದ ಒಲವು ಬೆಳೆಯಿತು. ಸೂಕ್ಷ್ಮ ಗ್ರಹಿಕೆ ಮತ್ತು ವಿಸ್ತೃತ ಓದು ಅವರನ್ನು ಕವಿ ಮತ್ತು ಪತ್ರಕರ್ತನನ್ನಾಗಿಸಿದವು. ಕ್ರಾಂತಿಕಾರಿ ಕವಿತೆ ಮತ್ತು ಬರಹಗಳಿಂದ ಕೆಳವರ್ಗದ ಜನರ ಧ್ವನಿಯಾದರು. ೨೦೦೮ರಲ್ಲಿ ‘ಬಿಂಬಗೋಷ್ಠಿ’ ಎಂಬ ಮೊದಲ ಕವನ ಸಂಕಲನ ಹೊರತಂದಿರುವ ಬೊಗಾಟಿ, ತಮ್ಮ ದೀರ್ಘ ಕವನಗಳ ಸಂಕಲನ ‘ಫೌಕ ರಂಗಾರು’ (‘ಬಣ್ಣಗಳ ಗಾಯಗಳು’)ವಿಗೆ 2012ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದಾರೆ. ಆರು ಕವನ ಸಂಕಲನಗಳಲ್ಲದೆ ಒಂದು ಕಥಾ ಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಒಂದು ಕೃತಿಯನ್ನು ಹಿಂದಿಯಿಂದ ನೇಪಾಳಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಕಾಲಿಂಪಾಂಗ್ನಲ್ಲಿ ಬಾಳಸಂಗಾತಿ ಭಕ್ತಿ ರೈ ಅವರೊಡನೆ ನೆಲೆಸಿರುವ ಮನೋಜ್ ಬುದ್ಧಾನುಯಾಯಿ. ಸಿಂಧನೂರಿನಲ್ಲಿ ಭಾವಾಭಿನಯದ ಏರಿಳಿತದೊಂದಿಗೆ ಹಿಂದಿಯಲ್ಲಿ ಅವರು ಮಾಡಿದ ಭಾಷಣ, ಅವರೊಡನೆ ಆಡಿದ ಮಾತುಕತೆಯ ಸಾರ ಇಲ್ಲಿದೆ.)
‘ನಾನು ಭಾಷಣಕಾರ ಅಲ್ಲ. ಆಡುವುದನ್ನೆಲ್ಲ ಕವಿತೆಯಲ್ಲೇ ಆಡುವವನು. ಅಷ್ಟೆಲ್ಲ ಮಾತಾಡಲಿಕ್ಕೆ ಬರಲ್ಲ. ನನ್ನ ಮಾತೃಭಾಷೆ ನೇಪಾಳಿ. ಕನ್ನಡ ವಾತಾವರಣದ ನನಗಿಲ್ಲಿ ನಿಮ್ಮ ಭಾಷೆಯಲ್ಲಿ ಮಾತನಾಡುವಂತಿದ್ದರೆ ಅನಿಸಿದೆ. ಎಲ್ಲ ಅಪರಿಚಿತವೇ ಆದರೂ ಕುತೂಹಲ ಸೆಳೆಯುತ್ತಿದೆ. ನಿನ್ನೆಯ ಕವಿಗೋಷ್ಟಿ ಕೇಳಿಸಿಕೊಂಡೆ. ಅರೆ, ನಾವು ಬಳಸುವ ಎಷ್ಟೊಂದು ಪದಗಳನ್ನು ಇವರೂ ಬಳಸುವರಲ್ಲ ಎನಿಸಿತು. ಅರ್ಥವಾಗದಿದ್ದರೂ ಅವರ ಲಯ, ದೇಹದ ಭಾಷೆಯಿಂದ ಒಂದಷ್ಟು ಅರ್ಥವಾಯಿತು. ಕವಿತೆ ಎಂದರೆ ಹಾಗೇ, ಅಲ್ಲವೇ?
ಬಗದಾದಿನ ಕವಿ ಸಿನಾನ್ ಅಂತೋನ್ ಬರೆದ ಕವಿತೆ ಇದು:
‘ರಕ್ತದಲ್ಲದ್ದಿದ ಕುಂಚದಿಂದ
ಗೋಡೆಯ ಮೇಲೆ ಬರೆದೆ,
ಅಲ್ಲೊಂದು ಕಿಟಕಿ ಮೂಡಿತು.
ಕಂಡದ್ದು ಎರಡು ದೃಶ್ಯಗಳು:
ಯುದ್ಧ ಮತ್ತು ಅವ್ವ.
ಅವದವ ತನ್ನ ಗರ್ಭಸ್ಥ ಮಗುವಿನ
ಶವದ ಬಟ್ಟೆ ಅರಸುತ್ತಿದ್ದಳು..’
ಈಗ ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ ಎಲ್ಲ ಕಡೆಯೂ ನಾವಂದುಕೊಂಡ ಹಾಗೆ ಏನೂ ಆಗದಂತೆ ಆಗಿದೆ. ನಾವು ಒಂದು ತರಹ ಯಂತ್ರಗಳಂತಾಗಿದೇವಾ ಅನಿಸುತ್ತಿದೆ. ನಮ್ಮಲ್ಲೂ ಯುದ್ಧ ಶುರು ಆಗೇ ಬಿಡ್ತು ಅಂದರು. ಆಮೇಲೆ ಈಗೇನೋ ವ್ಯಾಪಾರದ ಧಮಕಿ ಹಾಕಿ ಯುದ್ಧ ನಿಲ್ಲಿಸಿದೀವಿ ಅಂತಿದ್ದಾರೆ. ಎಲ್ಲರಲ್ಲೂ ಯಾರೋ ನಮ್ಮನ್ನು ನಿಯಂತ್ರಿಸುತ್ತಿರುವ ಭಾವನೆ ಇದೆ.
ಈಗ ಮನುಷ್ಯರು ಕಣ್ಣಿನಿಂದ, ಮನಸ್ಸಿನಿಂದ ನೋಡುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಕೇಳುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಯೋಚಿಸುವುದನ್ನು ನಿಲಿಸಿದ್ದಾರೆ. ತಮ್ಮ ಕಣ್ಣಿನಿಂದ ಕಣ್ಣೀರು ಸುರಿಸಿ ಅಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಮನುಷ್ಯರು ಯಂತ್ರ, ರೊಬಾಟ್ ಆಗಿದಾರೆ. ಯಾಕೆ ಹೀಗಾಯ್ತು? ಏನು ಮಾಡುವುದು? ಈ ಸಮಯದಲ್ಲಿ ನಾನೇನು ಮಾಡಲಿ? ದೋಸ್ತೋ, ಈ ಸಂಕಟದ ಸಮಯದಲ್ಲಿ ನಾನು ಕವಿತೆಯ ಜೊತೆ ಇರಲು ಇಷ್ಟಪಡುತ್ತೇನೆ.
ಸಂಕಟದಲ್ಲಿ ನಮ್ಮ ಜೊತೆ ಇರುವುದು ಕವಿತೆ. ನಮ್ಮ ಚೇತನಕ್ಕೆ ಅವಿನಾಭಾವ ಅಂತ ಜೊತೆಯಿರುವುದು ಕವಿತೆ ಮಾತ್ರವೇ. ಜೀವನದಿಂದ ವಿಮುಖರಾದಾಗ ಮತ್ತೆ ಬದುಕಿನ ವಿವೇಕ ಮರಳುವಂತೆ ಮಾಡುವುದು ಕವಿತೆ. ಕುರುಡು ಕಣ್ಣಿಗೆ ದಿಟ್ಟಿ ಮರಳಿಸುವುದು ಕವಿತೆ. ಇದೆಲ್ಲ ಕವಿತೆಗೆ ಮಾತ್ರ ಸಾಧ್ಯವಿದೆ. ಅದಕ್ಕೇ ಕವಿಯಾಗುವುದು, ಕವಿತೆ ಬರೆಯುವುದು ಎಂದರೆ ಸುಮ್ಮನಲ್ಲ, ಅದು ದೊಡ್ಡ ಜವಾಬ್ದಾರಿ.
ನನಗೀಗ ನಲವತ್ತಾರು ವರ್ಷ. ಈ ಲೋಕವನ್ನು ನೋಡುವುದು ಹೇಗೆ ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರಕೃತಿ-ಮನುಷ್ಯರು, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಏನು ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರೇಮ ಎಂದರೇನು ಎನ್ನುವುದನ್ನು ಕವಿತೆಯೇ ಕಲಿಸಿತು. ನನ್ನ ನಾನು ನೋಡಿಕೊಳ್ಳುವುದನ್ನೂ ಕವಿತೆಯೇ ಕಲಿಸಿತು. ಅದಕ್ಕೇ ಇವತ್ತು ಯಾವುದೋ ದೂರದ ಗುಡ್ಡಗಾಡಿನ ಮೂಲೆಯ ನಾನು ಇಲ್ಲಿ ನಿಮ್ಮ ನಡುವೆ ಬಂದು ನಿಂತಿದ್ದೇನೆ.
ನಾನು ಯಾರು? ಎಲ್ಲಿಂದ ಬಂದಿದೀನಿ? ನಮ್ಮ ಪ್ರದೇಶ, ಗುರುತುಗಳು ಸಂಕಟಗಳು ಏನು ಅಂತ 99% ಜನರಿಗೆ ಗೊತ್ತಿಲ್ಲ. ಭಾರತೀಯರಿಗಂತೂ ಗೊತ್ತೇ ಇಲ್ಲ. ನಮ್ಮ ಬಗೆಗೆ ದೇಶ ಏನಂದುಕೊಂಡಿದೆ? ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣೆಕ್ ಶಾ ಅವರ ಒಂದು ಹೇಳಿಕೆ ಇದೆ: ‘ಯಾರಾದರೂ ನನಗೆ ಸಾಯಕ್ಕೆ ಭಯ ಇಲ್ಲ ಅಂದ್ರೆ ಒಂದೋ ಅವರು ಸುಳ್ಳು ಹೇಳ್ತಿದಾರೆ ಅಥವಾ ಅವರು ಗೂರ್ಖಾ ಆಗಿದಾರೆ ಅಂತ ಅರ್ಥ.’ ನೋಡಿದಿರಾ ಡಾರ್ಜಿಲಿಂಗಿನ ಗೂರ್ಖಾಗಳ ಬಗೆಗಿನ ತಿಳುವಳಿಕೆ? ಇಲ್ಲ, ಯುದ್ಧ ಎಂದರೆ ಧೈರ್ಯದಿಂದ ಎದೆ ಕೊಟ್ಟು ನಿಲ್ಲುವ ನಮಗೂ ಉಳಿದ ಮನುಷ್ಯರಂತೆ ಹೆದರಿಕೆಯಿದೆ, ಸಂಕಟಗಳಿವೆ. ಅಂದರೆ ಮಾಣೆಕ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದೇ? ಇದರರ್ಥ ಏನು? ಇದರರ್ಥ ಯಾರಿಗೂ ಗೂರ್ಖಾಗಳ ಪರಿಸ್ಥಿತಿ, ಸಂಕಟ ಗೊತ್ತಿಲ್ಲ ಅಂತ. ಅದಕ್ಕೇ ನನ್ನ ನೆಲ ಡಾರ್ಜಿಲಿಂಗ್, ಜಾತಿ ಗೂರ್ಖಾ, ಭಾಷೆ ನೇಪಾಳಿ, ಅಲ್ಲಿಯ ಅಸಮಾನತೆ ಸಂಕಟಗಳ ಬಗೆಗೇ ಮಾತನಾಡಲು ಬಯಸುತ್ತೇನೆ.
ಈ ತಿಂಗಳ 25ಕ್ಕೆ ನಮ್ಮೂರಿನಲ್ಲಿ ಒಂದು ಕವಿಗೋಷ್ಟಿ ಇದೆ. ಅಲ್ಲಿ ಹೇಳುತ್ತಾರೆ, ಅಯ್ಯೋ, ಕವಿಗೋಷ್ಟಿಗೆ ಜನರೇ ಬರಲ್ಲ ಅಂತ. ತುಂಬ ಅಭಿವೃದ್ಧಿ ಆದ ಊರು ಅದು. ಆದರೆ ಕವಿಗೋಷ್ಟಿಗಳೇ ಆಗುತ್ತಿಲ್ಲ. ಆದರೂ ಕಷ್ಟಪಟ್ಟು ನನ್ನ ಗೆಳೆಯರು ಕವಿಗೋಷ್ಟಿ ಆಯೋಜನೆ ಮಾಡಿದ್ದಾರೆ. ಅವತ್ತು ನಾನು ‘ಸಾಹೇಬರಿಗೆ ಜೀವಂತ ಮನುಷ್ಯರೆಂದರೆ ಇಷ್ಟವಿಲ್ಲ’ (ಸಾಹೇಬ್ ಕೊ ಜಿಂದಾ ಇನ್ಸಾನ್ ಪಸಂದ್ ನಹೀಂ) ಎಂಬ ಕವಿತೆ ಓದಲಿದ್ದೇನೆ. ಈ ಕವಿತೆ ಓದದಂತೆ ಸಾಹೇಬ್ ನನ್ನನ್ನು ಹೆದರಿಸಬಹುದು. ಆದರೆ ಅದನ್ನೇ ಓದುತ್ತೇನೆ ಮತ್ತು ಕವಿತೆ ಕೇಳಲು ನೀವು ಮುದ್ದಾಂ ಬರಲೇಬೇಕು.
ಆಯೋಜಕರು ನನಗೆ ಫೋನ್ ಮಾಡಿ ಹೇಳಿದರು: ನಿಮ್ಮ ಮಾತು, ಕವಿತೆಗಳಲ್ಲಿ ಸ್ವಲ್ಪ ಪಾಲಿಟಿಕ್ಸ್ ಇದೆಯಲ್ಲ? ಕವಿತೆಗೇಕೆ ರಾಜಕಾರಣ? ಅದನ್ನೆಲ್ಲ ತೆಗೆದುಬಿಡಬಹುದಲ್ಲ? ಕಾರ್ಯಕ್ರಮದಲ್ಲಿ ಕವಿತೆ ಬಗ್ಗೆ ಮಾತ್ರ ಮಾತಾಡಿ ಎಂದರು. ಆಯೋಜಕರ ಪರಿಸ್ಥಿತಿ ನನಗರ್ಥವಾಗುತ್ತದೆ. ಆದರೂ ಕೇಳಿದೆ: ಅರೆ ಭಾಯ್, ಕವಿಗೆ ರಾಜಕಾರಣ ಗೊತ್ತಿಲ್ಲ ಅಂದರೆ ಸಮಾಜಕ್ಕೆ ಸರಿಯಾದ ದಿಕ್ಕು ದಾರಿ ತೋರಿಸುವುದಾದರೂ ಹೇಗೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆಡಳಿತ ಎಲ್ಲ ಸೇರಿ ಡಾರ್ಜಿಲಿಂಗನ್ನು ನಾಶ ಮಾಡಿದರು. ಆದರೂ ಕವಿ ರಾಜಕಾರಣದ ಮಾತಾಡಬಾರದೇ? ಕೇಂದ್ರ ಸರ್ಕಾರ ರಾಜಕಾರಣ ಮಾಡಿದರೆ ಅದು ಸರಿ ಎನ್ನುವಿರಿ. ರಾಜ್ಯ ಸರ್ಕಾರ ರಾಜಕಾರಣ ಮಾಡಿದರೆ ಅದೂ ಸರಿ ಎನ್ನುವಿರಿ. ಸ್ಥಳೀಯ ಆಡಳಿತ ರಾಜಕಾರಣ ಮಾಡಿದರೂ ಸರಿ ಎನ್ನುವಿರಿ. ಎಲ್ಲರೂ ಪಾಲಿಟಿಕ್ಸ್ ಮಾಡಬಹುದಂತೆ. ಕವಿ ಮಾತ್ರ ಮಾಡಬಾರದು ಅಂದ್ರೆ ಹೇಗೆ? ಯಾರು ಹೇಳಿದ್ದು ಹಾಗೆ? ಸಂವಿಧಾನದಲ್ಲಿ ಹಾಗಂತ ಬರೆದಿದಾರಾ? ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ? ಮತ್ತೇನು ಗೊತ್ತಿದೆ?
ಹೀಗೆ ಆಳುವವರು ಮತ್ತು ಸಮಾಜ ಕವಿಯನ್ನು ಭಯಪಡಿಸುತ್ತಾರೆ. ಕವಿತೆಯನ್ನು ಭಯಪಡಿಸುತ್ತಾರೆ. ಡಾರ್ಜಿಲಿಂಗಿನಲ್ಲಿ ಈಗ ಲೋಕತಂತ್ರದ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಾಧಾರಣ ಕಾರ್ಯಕ್ರಮವನ್ನೂ ನಮ್ಮಿಷ್ಟದಂತೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಕೇಳುವ ನಾವಂತೂ ಏನನ್ನೂ ಮಾಡಲು ಸುಲಭವಿಲ್ಲ. ಅಧಿಕಾರಿಗಳು ಎಲ್ಲಿ, ಯಾವಾಗ, ಏನು ಅಪ್ಪಣೆ ಮಾಡುತ್ತಾರೋ ಎನ್ನುವ ಭಯದಲ್ಲೇ ಮಾಡಬೇಕು, ಪರಿಸ್ಥಿತಿ ಹಾಗಿದೆ.
ಆದರೆ ಗೆಳೆಯರೇ ನೆನಪಿಡಿ, ಭಯಗ್ರಸ್ತ ಕವಿಗಳು ಸಮಾಜವನ್ನು ಪುಕ್ಕಲು ಮಾಡುತ್ತಾರೆ. ತಾವು ಪುಕ್ಕಲರಾಗಿ ಕ್ರಾಂತಿಕಾರಿ ಕವಿತೆ ಬರೆದರೆ ಅಂತಹ ಕವಿ ಪಾಖಂಡಿ, ವಂಚಕರಾಗಬಹುದೇ ಹೊರತು ಕವಿ ಆಗಲಾರರು. ಅಂತಹ ಕವಿ ತನ್ನನ್ನು ತಾನು ಕೊಂದುಕೊಳ್ಳುವುದಷ್ಟೇ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ, ಸಂಘಟನಾತ್ಮಕವಾದ ಎಲ್ಲವನ್ನೂ ಕೊಲ್ಲುತ್ತಾರೆ. ಆದರೆ ಯಾವ ಕವಿತೆಯ ಮೇಲೆ ವಿಶ್ವಾಸ ಇಟ್ಟಿರುವಿರೋ ಅದನ್ನು ಬರೆದ ಕವಿ ಪಾಖಂಡಿಯಾಗಿದ್ದರೆ? ಪಾಖಂಡಿ ಕವಿಯ ಕವಿತೆ ಏನಾಗುವುದು? ನಾನು ಕವಿತೆಯ ಮೇಲೆ ವಿಶ್ವಾಸ ಇಡುತ್ತೇನೆ. ಕವಿ ತಾನು ಹೆದರಿದ್ದರೂ ಕವಿತೆ ಹೆದರಬೇಡಿ ಎನ್ನುತ್ತಿರುತ್ತದೆ. ಅದು ಪಾಖಂಡಿ ಆಗಲಾರದು. ಕವಿತೆ ಹೇಗಾದರೂ ಕವಿಯ ಪಾಖಂಡಿತನವನ್ನು ತಿಳಿಸಿಬಿಡುವುದು. ಹೀಗೆ ಸಮಾಜ ನಾಶವಾಗುವುದನ್ನು ತಪ್ಪಿಸುವುದು ಕವಿತೆಯೇ ಆಗಿದೆ. ಅದಕ್ಕೇ ಪ್ರಪಂಚದಲ್ಲಿ ಎಲ್ಲರೂ ಕವಿತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
ನಾನು ೧೯೯೬ರಿಂದ ಮೂವತ್ತು ವರ್ಷಗಳಿಂದ ಬರೆಯುತ್ತ ಇದ್ದೇನೆ. ಸಾವಿರಾರು ಕಷ್ಟಗಳ ಜೊತೆ, ಕನಸುಗಳ ಜೊತೆ, ದುಃಖದ ಜೊತೆ ನನ್ನ ಸಮುದಾಯದ ಕತೆ ಬರೆಯುತ್ತ ಇದ್ದೇನೆ. ಕವಿತೆ ಅಂದರೆ ಬರಿಯ ಟೈಂ ಪಾಸ್, ಮನರಂಜನೆ ಅಲ್ಲ. ಈ ದೇಶ ನಮ್ಮಂತಹ ಸಣ್ಣ ಸಮುದಾಯಗಳಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಅಸುರಕ್ಷಿತ. ಅದಕ್ಕೇ ನಾವು ಕವಿತೆ ಬರೆಯಬೇಕಿದೆ, ಹೋರಾಡಬೇಕಿದೆ. ಯಾರೋ ಅರ್ನೆಸ್ಟ್ ಹೆಮಿಂಗ್ವೇ ಹತ್ತಿರ ಬಂದು ಕೇಳಿದರಂತೆ: ‘ನಾನೂ ನಿಮ್ಮಂತೆ ಬರೆಯಬೇಕಲ್ಲ, ಹೇಗೆ?’ ಎಂದು. ಹೆಮಿಂಗ್ವೆ ಅದಕ್ಕೆ, ‘ನಿನ್ನ ಹತ್ರ ಗಾಯ ಇವೆಯಾ? ಇದ್ದರೆ ನೀನು ಬರೆಯಬಲ್ಲೆ.’ ಎಂದರು. ಕವಿಗೆ ಒಳಗಿನಿಂದ ಏನೋ ಆಗಬೇಕು, ಕುದಿಯಬೇಕು, ಉರಿಯಬೇಕು, ಭಾವನೆಗಳು ಹುಟ್ಟಬೇಕು. ಆಗ ಕವಿತೆ ಹುಟ್ಟುತ್ತದೆ.
ನಾನು ಮೊದಲು ‘ಸಪನ’ ಎಂಬ ಕತೆ ಬರೆದೆ, ಪ್ರಕಟವಾಯಿತು. ಬಳಿಕ ನನ್ನ ಮೊದಲ ಕವಿತೆ ‘ಘರ್ ಫರ್ಕನಲೈ’ (ಮನೆಗೆ ಮರಳಲು) ಪ್ರಕಟವಾಯಿತು. ಆಗ ಭೂತಾನಿನಲ್ಲಿ ಒಂದು ರಾಷ್ಟ್ರ, ಒಂದು ನೀತಿ ತತ್ವದಡಿ ಒಂದು ಲಕ್ಷ ಎಂಟು ಸಾವಿರ ನೇಪಾಳಿ ಮಾತಾಡುವ ಗೂರ್ಖಾ ಜನರನ್ನು ಹೊರಹಾಕಿದ್ದರು. ಯಾಕೆ? ಅವರು ಕೇಳಿದ್ದೇನು? ತಮ್ಮ ಭಾಷೆಗೆ ಮಾನ್ಯತೆ ಸಿಗಲಿ, ತಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಯಲಿ ಎಂದು. ಆದದ್ದೇನು? ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಯುಎನ್ಎಚ್ಆರ್ಸಿ ಮಧ್ಯ ಪ್ರವೇಶಿಸಿ ಭೂತಾನ್ ಹೊರದಬ್ಬಿದ ನೇಪಾಳಿ ಭಾಷಿಕ ಗೂರ್ಖಾಗಳನ್ನು ಅಮೆರಿಕ, ಕೆನಡ, ಡೆನ್ಮಾರ್ಕ್, ನಾರ್ವೆ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾಗಿ ಎಲ್ಲೆಲ್ಲಿಗೋ ಕಳಿಸಿದರು. ಯಾವ ಜನ ತಮ್ಮ ಭಾಷೆ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದರೋ ಅವರು ಹೋದಲ್ಲೆಲ್ಲ ಅಲ್ಲಲ್ಲೆ ಕಳೆದು ಹೋದರು. ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡರು. ನೆದರ್ಲೆಂಡಿನಲ್ಲಿ ನೇಪಾಳಿ ನಡೆಯುತ್ತಾ? ಅಮೆರಿಕದಲ್ಲಿ ನೇಪಾಳಿ ನಡೆಯುತ್ತಾ? ವಿದೇಶದಲ್ಲಿ ನಿಮ್ಮ ಮಾತೃಭಾಷೆ ನಡೆಯುತ್ತಾ? ಇಲ್ಲ. ಅವರು ಹೋರಾಡಿದ್ದು ತಮ್ಮ ಭಾಷೆಗಾಗಿ, ಸಂಸ್ಕೃತಿಗಾಗಿ. ಎಲ್ಲ ಸತ್ವನಾಶವಾಯಿತು. ಹಾಗೆ ಹೋದವರಲ್ಲಿ ನನ್ನ ಆಪ್ತ ಬಳಗದವರೂ ಕೆಲವರಿದ್ದರು. ಅವರ ಸಂಕಟ ಕೇಳಿ ನನ್ನ ಮೊದಲ ಕವಿತೆ ‘ಮನೆಗೆ ಹಿಂತಿರುಗಲು..’ ಬರೆದೆ. ಅವರಿನ್ನೂ ಹಿಂತಿರುಗಿಲ್ಲ. ಲಡಾಯಿ ಜಾರಿಯಲ್ಲಿದೆ.
ಈ ದೇಶದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ನೆಲೆಯಾಗಲು ಕಷ್ಟವಿದೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ನಮ್ಮ ಮುಖಚಹರೆ ಬೇರೆಯಿದೆ. ನಮ್ಮನ್ನು ನೋಡಿದರೆ ಸಾಕು, ಚಿಂಗಿ, ಮಿಂಗಿ, ಮೊಮೊ, ಕೊರೊನಾ ಮುಂತಾಗಿ ಏನೇನೋ ಕರೆಯುತ್ತಾರೆ. ಗೂರ್ಖಾಗಳನ್ನು ನೇಪಾಳದಿಂದ ಬಂದ ವಲಸಿಗರು, ಆತಂಕವಾದಿಗಳು, ನುಸುಳುಕೋರರು ಎಂದು ಭಾವಿಸುತ್ತಾರೆ. ಯಾಕೆಂದರೆ ನಾವು ನೇಪಾಳಿ ಭಾಷೆ ಮಾತಾಡುತ್ತೇವೆ. ಬಂಗಾಳಿ ಭಾಷೆಯನ್ನು ಬಾಂಗ್ಲಾ ದೇಶದಲ್ಲೂ, ಪಶ್ಚಿಮ ಬಂಗಾಳದಲ್ಲೂ ಮಾತಾಡ್ತಾರೆ. ಬಂಗಾಳಿ ಭಾಷಿಕರನ್ನು ಬಾಂಗ್ಲಾ ದೇಶೀಯರು ಎನ್ನುವುದಿಲ್ಲ. ಆದರೆ ನೇಪಾಳಿ ಭಾಷೆಯನ್ನು ಮಾತನಾಡುವ ಭಾರತೀಯ ಗೂರ್ಖಾಗಳನ್ನು ಮಾತ್ರ ನೇಪಾಳದ ನುಸುಳುಕೋರರು ಎಂದೇ ಭಾವಿಸುತ್ತಾರೆ. ಇದೆಷ್ಟು ಸರಿ? ನನ್ನನ್ನು ಪರಿಚಯಿಸುವಾಗ ಹಲವರು ನೇಪಾಳಿ ಕವಿ ಎನ್ನುತ್ತಾರೆ. ನಾನು ನೇಪಾಳಿ ಭಾಷೆಯ ಭಾರತೀಯ ಗೂರ್ಖಾ ಕವಿ. ನಮ್ಮ ನೆಲವನ್ನು ಭಾರತ, ನೇಪಾಳ, ಭೂತಾನ, ಚೀನಾ ಎಲ್ಲ ದೇಶಗಳೂ ಕಬಳಿಸಿವೆ. ಭಾರತ ಸ್ವತಂತ್ರವಾದರೂ ನಾವು ಸ್ವತಂತ್ರ ದೇಶದೊಳಗಣ ಮೂಲೆಯ ಸಮುದಾಯವಾಗಿಯೇ ಉಳಿದಿದ್ದೇವೆ. ಇಂಥ ಹತ್ತು ಹಲವು ತಪ್ಪು ಕಲ್ಪನೆಗಳು, ಐಡೆಂಟಿಟಿಯ ಸಂಕಟಗಳು ನಮ್ಮನ್ನು ಅಂಚಿಗೆ ತಳ್ಳಿವೆ. ನೀವು ಅಂಚಿಗೆ ದೂಡಲ್ಪಟ್ಟಾಗ ಸಭ್ಯತೆಯ ಸೋಗು ಹಾಕಲಾರಿರಿ, ಆಕ್ರಮಣಕಾರಿಯಾಗಿಯೇ ಇರಬೇಕಾಗುತ್ತದೆ. ನಿಮ್ಮ ಸಮಾಜವನ್ನು ಅಂಚಿಗೆ ದೂಡಿದಾಗ ಅದು ಸಭ್ಯವಾಗಿರುವುದಿಲ್ಲ, ಉದ್ರೇಕಕಾರಿಯಾಗಿರುತ್ತದೆ. ಎಂದೇ ನನ್ನ ಬರಹ ಆವೇಗ, ಉದ್ವೇಗದಿಂದ ತುಂಬಿದೆ. ಅದು ನಮಗೆ ಸಹಜವಾಗಿಬಿಟ್ಟಿದೆ.
ಡಾರ್ಜಿಲಿಂಗ್ ಈಗ ಪಶ್ಚಿಮ ಬಂಗಾಳದಲ್ಲಿದೆ. ನಮ್ಮ ರಾಜ್ಯ ಭಾಷೆ ಬಂಗಾಳಿ. ನಾವು ಮಾತನಾಡುವುದು ನೇಪಾಳಿ. ಆದರೆ ನಮ್ಮ ಊರಿನಲ್ಲಿ ನಮ್ಮನ್ನು ಆಳುವವರಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಅದರ ಬದಲು ನಾವು ಬಂಗಾಳಿ, ಹಿಂದಿ, ಇಂಗ್ಲಿಷ್ ತ್ರಿಭಾಷೆ ಕಲಿತು ನಮ್ಮ ಭಾಷೆ ಮರೆಯುವಂತಾಗಿದೆ. ಇದು ದಬ್ಬಾಳಿಕೆಯ ಆಳ್ವಿಕೆಗೆ ಕಾರಣವಾಗಿದೆ. ನಮಗಾಗಿ ಮಾಡುವ ಕಾನೂನು, ಯೋಜನೆಗಳು ನಮಗರ್ಥವಾಗದೇ ಹೋಗಿವೆ. ಈ ಭಾಷೆಯ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಗಿಂತ ಹಳೆಯದು. ಸದ್ಯ ನಮ್ಮ ಹೋರಾಟಕ್ಕೆ ಒಂದು ಜಯ ಸಂದಿದೆ. ಮೊದಲು ಬಂಗಾಳಿಯನ್ನೇ ಕಲಿಯಬೇಕಿತ್ತು. ಆದರೆ ಸಾಂವಿಧಾನಿಕ ಭಾಷೆಯಾಗಿ ನೇಪಾಳಿ ಇರುವಾಗ ಅದನ್ನೇ ಮೊದಲ ಭಾಷೆಯಾಗಿ ಮಾಡಬೇಕೆಂದು ಪಟ್ಟುಹಿಡಿದು ವಿಜಯಿಗಳಾಗಿದ್ದೇವೆ. ಆದರೆ ಹೋರಾಟ ಚಾಲ್ತಿಯಲ್ಲಿದೆ. ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಅದಕ್ಕೆ ಆಕ್ರೋಶದ ದನಿ ಕೇಳಿ ಬರುತ್ತದೆ. ಅಲ್ಲಿ ನಾನೊಬ್ಬನೇ ಅಲ್ಲ, ನೀವು ಯಾರನ್ನು ಮಾತನಾಡಿಸಿದರೂ ಹೀಗೇ ಮಾತಾಡುತ್ತ್ತಾರೆ. ಅಂಚಿಗೆ ನಿಂತವರ ದನಿ ಗಡುಸಾಗಿಯೇ ಕೇಳುತ್ತದೆ.
200 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಮ್ಮ ಹಿರೀಕರು ಡಾರ್ಜಿಲಿಂಗಿನಲ್ಲಿದ್ದಾರೆ. ಬ್ರಿಟಿಷರು ಬಂದರು. ಆಡಳಿತದ ಅನುಕೂಲಕ್ಕಾಗಿ ನಮ್ಮನ್ನು ಬಂಗಾಳದಲ್ಲಿ ಸೇರಿಸಿದರು. ಹೋದರು. ಅವರು ಹೋದರೂ ನಾವಿನ್ನೂ ಇಲ್ಲಿಯೇ, ಮೊದಲಿದ್ದ ಹಾಗೆಯೇ ಯಾರವರೂ ಅಲ್ಲದೇ ಉಳಿದಿದ್ದೇವೆ. ಮೊದಲಿನಿಂದ ಇದು ಸಂಕೀರ್ಣ ಸಮಸ್ಯೆಗಳನ್ನುಳ್ಳ ಪ್ರದೇಶ. ೧೯೫೪ರಲ್ಲೇ ಅದನ್ನೊಂದು ಪ್ರತ್ಯೇಕ ಪ್ರದೇಶವಾಗಿ ಕಾಯಿದೆ ತಂದರು. ಆದರೆ ಈಗಲೂ ಅದು ಸಂಕೀರ್ಣ ಸಮಸ್ಯೆಗಳ ಪ್ರದೇಶವಾಗಿಯೇ ಮುಂದುವರೆದಿದೆ. ಹೋರಾಟ ತೀವ್ರವಾದಾಗ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾಡಿದರು. ಪ್ರಾಧಿಕರಣ ಮಾಡ್ತೀವಿ, ರಾಜ್ಯ ಕೊಡಕ್ಕೆ ಆಗಲ್ಲ ಅಂದರು. ನಾಲ್ಕು ದೇಶಗಳು ಸುತ್ತುವರೆದ ಆಯಕಟ್ಟಿನ ಭೂಭಾಗ ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮನ್ನು ಸದಾ ಬಡವರನ್ನಾಗಿಟ್ಟು ಆಳಲು ನೋಡುತ್ತಿದ್ದಾರೆ. ಅಲ್ಲಿನ 70% ಜನ ಕೂಲಿ ಕಾರ್ಮಿಕರು. ಪ್ರತಿ ದಿನ 250 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ. ಅವರು ದುಡಿದಿದ್ದು ದಿನಕ್ಕೆ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವಾಗಿದ್ದರೂ ಅವರಿಗೆ ದೊರೆಯುವುದು ಬರೀ ಇನ್ನೂರೈವತ್ತು ರೂಪಾಯಿ. ಪ್ರಪಂಚದಲ್ಲಿ ಎಂಟು ಔಷಧೀಯ ಸಸ್ಯಗಳ ಪ್ರಮುಖ ತಾಣಗಳಿವೆ. ಅದರಲ್ಲಿ ಡಾರ್ಜಿಲಿಂಗ್ ಅರಣ್ಯ ಪ್ರದೇಶವೂ ಒಂದು. ಅಲ್ಲಿನ ಚಹಾ, ಔಷಧೀಯ ಸಸ್ಯ, ಮರಮುಟ್ಟುಗಳು ತುಂಬ ದುಡ್ಡು ತಂದುಕೊಡುವ ಸಂಪನ್ಮೂಲಗಳು. ಅಲ್ಲಿನ ನದಿ, ಕಾಡು, ಬೆಟ್ಟ, ಮಣ್ಣು, ಮರ ಎಲ್ಲವೂ ಭಾರೀ ಸಂಪನ್ಮೂಲಗಳು. ಒಂದು ಪ್ರತ್ಯೇಕ ರಾಜ್ಯವಾದರೂ ನಮ್ಮನ್ನು ಸುಸ್ಥಿರವಾಗಿಡಬಲ್ಲ ಸಂಪನ್ಮೂಲಗಳು ಅಲ್ಲಿವೆ. ಆದರೆ ಯಾವುದೂ ಸಂಪನ್ಮೂಲವಾಗಿ ನಮಗೆ ಸಿಗದಂತಾಗಿದೆ. ಯಾಕೆ ಈ ತರಹದ ಆರ್ಥಿಕ ದಮನ ಮಾಡುತ್ತಿದ್ದಾರೆ? ಚೀನಾ, ಭೂತಾನ, ಬಾಂಗ್ಲಾ, ನೇಪಾಳ ಎಂಬ ನಾಲ್ಕು ದೇಶಗಳಿಂದ ಸುತ್ತುವರೆದ ಅಪಾಯಕರ ಪ್ರದೇಶದಲ್ಲಿ ನಾವಿದ್ದೇವೆ. ಏನಾದರೂ ಚಕಮಕಿ ಆದರೆ ಹೋರಾಡಲು ಸಾವಿಗೆ ಹೆದರದ ಗೂರ್ಖಾ ಜನರು ಬೇಕಾಗಿದ್ದೇವೆ.
ಇವೆಲ್ಲ ಇಷ್ಯೂ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಬೇಕೆಂಬ ಹೋರಾಟ ರೂಪಿಸಿದೆವು. ಅದನ್ನು ದಮನಿಸಲು ಎಲ್ಲಾ ಪ್ರಯತ್ನ ನಡೆಯಿತು. ಸಂಘಟನೆಗಳನ್ನು ಒಡೆಯಲಾಯಿತು. ಸಂಘಟನೆಯ ಕೆಲವು ವ್ಯಕ್ತಿಗಳಿಗೆ ಆಮಿಷವೊಡ್ಡಲಾಯಿತು. ಬಂಧನ, ಪ್ರಕರಣ, ಕೋರ್ಟು, ಅಲೆದಾಟ, ಎಲ್ಲ ಆಯಿತು ಆಗುತ್ತಲೇ ಇದೆ. ಹೋರಾಟ ಚಾಲ್ತಿಯಲ್ಲಿದೆ. ಕೊನೆಗೆ ಪ್ರತಿಯೊಬ್ಬರಿಗೂ ಐದು ಡೆಸಿಮಲ್ ಭೂಮಿ ಕೊಡೋದು ಅಂತ ಆಯಿತು. ಹೊರಗಿನಿಂದ ಬಂದು ನೆಲೆಸಿದ ಭಾರೀ ಪ್ಲಾಂಟರುಗಳಿಗೆ ಸಾವಿರಾರು ಎಕರೆ ಜಮೀನು. ಅಲ್ಲಿನವರೇ ಆದ ನಮಗೆ ಐದು ಡೆಸಿಮಲ್ ಜಮೀನು. ಇದು ತಂದಿಡುವ ಡೆಮಾಗ್ರಫಿಕ್, ಎಕನಾಮಿಕಲ್ ಬದಲಾವಣೆಯನ್ನು ಊಹಿಸಿ. ಇದರ ವಿರುದ್ಧ ಹೋರಾಡದೇ ಇರುವುದಾದರೂ ಹೇಗೆ? ಕವಿ ಆಗಿ ಇದನ್ನು ನೋಡಿ ಹೇಗೆ ಸುಮ್ಮನಿರಲಿ? ನನ್ನ ನೆಲ, ನನ್ನ ಜಮೀನು, ನನ್ನ ಪರ್ವತ ಪ್ರದೇಶದ ಕಾಡು, ಬೆಟ್ಟಗುಡ್ಡ, ನದಿಗಳೆಲ್ಲ ಸಿರಿವಂತರ ಎಸ್ಟೇಟುಗಳಾಗಿ, ರೆಸಾರ್ಟುಗಳಾಗಿ, ವಿಹಾರಧಾಮಗಳಾಗಿರುವಾಗ ನಾನು ಮಾತ್ರ ಐದು ಡೆಸಿಮಲ್ ಜಾಗಕ್ಕೆ ತೃಪ್ತಿ ಹೊಂದಬೇಕೇ?
ನಾನು ಇದುವರೆಗೆ ಆರು ಕವನ ಸಂಕಲನ ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಸಣ್ಣ ಊರಿನ ಪತ್ರಕರ್ತನಾಗಿ ಖಬರ್ ಮತ್ತು ಕಾಂತಿಪುರ ಎಂಬ ಎರಡು ಪತ್ರಿಕೆ ನಡೆಸುತ್ತಿರುವೆ. ಅದರಲ್ಲಿ ನನ್ನ ಜನರ ಸಂಕಟ ಕುರಿತೇ ಬರೆಯುತ್ತೇನೆ. ೨೦೨೩ರಲ್ಲಿ ಸಿಕ್ಕಿಂನಲ್ಲಿ ತೀಸ್ತಾ ಡ್ಯಾಂ ಒಡೆಯಿತು. ಸಾವಿರಾರು ಜನ ಬಾಧೆಗೊಳಗಾದರು. ಜಮೀನು ಮುಳುಗಿತು. ಊರು ಮನೆ ಮುಳುಗಿದವು. ಪುನರ್ವಸತಿ ಆಗಬೇಕಲ್ಲ. ಈ ವಿಚಾರವಾಗಿ ಬರೆದೆ. ಆದರೆ ಅದು ಪ್ರಾಕೃತಿಕ ವಿಪತ್ತು ಎಂದು ಪರಿಗಣಿತವಾಗಲೇ ಇಲ್ಲ. ರಾಷ್ಟ್ರೀಯ ವಿಕೋಪ ಎಂದೂ ಪರಿಗಣನೆಗೆ ಬರಲಿಲ್ಲ. ಎಂದೇ ಯಾವ ಸಹಾಯ, ಹಣವೂ ಬರಲಿಲ್ಲ. ಅದರ ವಿರುದ್ಧ ಬರೆದೆ, ದನಿಯೆತ್ತಿದೆ. ನನ್ನ ಮೇಲೆ ಆಕ್ರಮಣವಾಯಿತು. ಪ್ರಾಣಾಪಾಯ ಆಗುವಷ್ಟು ಗೂಂಡಾಗಳಿಂದ ಹಲ್ಲೆ ಆಯಿತು.
ಪಶ್ಚಿಮ ಬಂಗಾಳದಲ್ಲಿ ೨೩ ಜಿಲ್ಲೆಗಳಿವೆ. ಅದರ ೩೦% ರೆವಿನ್ಯೂ ಡಾರ್ಜಿಲಿಂಗಿನಿಂದ ಬರುತ್ತಿದೆ. ಅಲ್ಲಿ ಏನಿಲ್ಲ? ಎಲ್ಲ ಇದೆ. ಆದರೆ ನನ್ನ ಜನರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಇದನ್ನು ಕೇಳಿದರೆ ನನ್ನ ಮೇಲೆ ಆಕ್ರಮಣವಾಗುತ್ತದೆ. ಕೇಸು ಹಾಕುತ್ತಾರೆ. ಇದುವರೆಗೆ ನನ್ನ ಮೇಲೆ 17 ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಡ ಕವಿ, ಪತ್ರಕರ್ತ ಏನು ಮಾಡಬಹುದು? ಒಂದು ಪ್ರಕರಣಕ್ಕೆ ಎಷ್ಟು ಖರ್ಚಾಗುತ್ತದೆ ನಿಮಗೆ ಗೊತ್ತು. ಬಾಯಿ ಮುಚ್ಚಲಿ ಎಂದು ಪ್ರಕರಣದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಡಾರ್ಜಿಲಿಂಗಿನಲ್ಲಿ ಇರುವವರು ಜೀವಂತ ಇದ್ದಾರೆ. ನನ್ನ ಜನ ನನಗಾಗಿ ಕೆಲಸ ಮಾಡುತ್ತಾರೆ. ನೀವು ಭಯಪಡದೆ ದನಿಯೆತ್ತುವವರಾಗಿದ್ದರೆ ನಿಮ್ಮ ಪರವಾಗಿ ನಿಲ್ಲುವವರು ಇದ್ದೇ ಇರುತ್ತಾರೆ. ಜನ ನಿಮಗಾಗಿ ಬರುತ್ತಾರೆ. ಅದಕ್ಕೇ ಹೇಳಬೇಕಾದ್ದನ್ನು ಭಯವಿಲ್ಲದೆ ಹೇಳಬೇಕು, ಬರೆಯಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತ ಹೋಗಬಹುದು, ಹೋಗಲಿ. ಅದರಿಂದಲೇ ಈ ನಾನು ಆಗಿದೀನಿ ಅಲ್ವಾ? ನನಗೆ ನಾನೇ ರೂಪುಗೊಳ್ಳಲು ಸಾಧ್ಯವಿಲ್ಲ, ನನ್ನ ಭಾಷೆಯಿಂದ, ಜನರಿಂದ ನಾನಾಗಿದ್ದೇನೆ. ನಾನು ನನಗಾಗಿ ಬದುಕುವೆನೋ ಜನರಿಗಾಗಿ ಬದುಕುವೆನೋ? ಎಂದು ನಿರ್ಧರಿಸುವುದು ನನ್ನ ಕೈಯಲ್ಲೇ ಇದೆ. ಬಹಳಷ್ಟು ಜನ ಸುರಕ್ಷತೆ, ಸಂಸಾರ ಸುಖ ಎಲ್ಲ ಸಿಗುತ್ತದೆ ಅಂತ ತಮಗಾಗಿ ಮಾತ್ರ ಬದುಕುತ್ತಾರೆ. ನಾನು ನನ್ನ ಬದುಕು ಸಮಾಜಕ್ಕೆ, ಜನರಿಗೆ ಅಂತ ನಿರ್ಧರಿಸಿದ್ದೇನೆ.
ನಿಮಗನಿಸಬಹುದು, ಇವ ಕವಿ. ಕವಿತೆ ಬಿಟ್ಟು ಇದೇನು ಮಾತಾಡ್ತಿದಾನೆ ಅಂತ. ಇದೇನು ಪಾಲಿಟಿಕ್ಸ್ ಮಾತಾಡುತ್ತಿದಾನಲ್ಲ ಅಂತ. ನಾನು ಅಂಟುನಂಟು ಹೊಂದಿರುವ ನನ್ನ ನೆಲ ನನ್ನದಲ್ಲದಿದ್ದರೆ ಕವಿತೆ ಹೇಗೆ ಬರೆಯಲಿ? ನನ್ನ ಜನರ ಕಷ್ಟ ಅರ್ಥವಾಗದಿದ್ದರೆ ಕವಿತೆ ಯಾಕೆ ಬರೆಯಲಿ? ನಾವು ಏನೋ ಅದನ್ನೇ ಕವಿತೆಯಾಗಿ ಬರೆಯಬೇಕು. ನಮಗೇನಾಗುತ್ತಿದೆಯೋ ಅದನ್ನೇ ಬರೆಯಬೇಕು. ಆದ್ದರಿಂದ ನಾನು ಈ ತರಹದ ಕವಿತೆ ಬರೆಯುತ್ತಿದ್ದೇನೆ. ಅದರಿಂದ ಹೊರಬರಲಾರದವನಾಗಿದ್ದೇನೆ. ಯಾಕೆಂದರೆ ನನಗೆ ಕಾಲ್ಪನಿಕವಾದದ್ದು ಬರೆಯಲು ಗೊತ್ತಿಲ್ಲ. ನನಗೆ ನನ್ನದು ಗೊತ್ತು. ನನ್ನ ಸುತ್ತಮುತ್ತಿನದು ಗೊತ್ತು. ಮತ್ತು ನಾನು ಅದನ್ನೇ ಬರೆಯುವವನು. ಕಾಲ್ಪನಿಕವಾದದ್ದನ್ನು ಬರೆದರೆ ನನ್ನ ಜನರಿಗೇನು ಸಿಗುತ್ತದೆ? ನನಗೇನು ಸಿಗುತ್ತದೆ? ಕವಿಯೂ ಒಂದು ಮನುಷ್ಯ ಜೀವಿ. ಅವರಿಗೆ ಸಂವೇದನೆ ಇರಬೇಕು. ಸುತ್ತ ನಡೆಯುವುದು ಏನೂ ಕಾಣುತ್ತಿಲ್ಲ ಅಂದರೆ ಅಂತಹವರು ಸತ್ತ ಮನುಷ್ಯರು. ಮಿಡಿಯುವ ಹೃದಯ ಇಲ್ಲದಿದ್ದರೆ ಜೀವವಿಲ್ಲದ ಶವದಂತೆ ಆ ಬದುಕು. ಕವಿಗಳಿಗಿದು ಗೊತ್ತಿರಬೇಕು: ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ನಮ್ಮನ್ನು ಜೀವಂತವಾಗಿಡಲು ಕೇವಲ ಕವಿತೆ ಸಾಕು. ಜಿಂದಾ ರಖನೆ ಕೇ ಲಿಯೆ ಪೊಯೆಟ್ರಿ ಕಾಫೀ ಹೈ. ನಾನು ಇದನ್ನೇ ಮಾಡುತ್ತಿದ್ದೇನೆ.
ಧನ್ಯವಾದ. ನಿಮ್ಮ ಪ್ರೀತಿ ನನ್ನಲ್ಲಿ ಕಣ್ಣೀರು ತುಂಬಿಸುತ್ತಿದೆ. ನಮಸ್ಕಾರ.
Thursday, 22 May 2025
ಬೋಧ ಗಯಾ ಬೌದ್ಧರದು
ಬಣ್ಣಗಳೆಲ್ಲ ಪತಾಕೆಗಳಾಗಿ ಹಾರುತ್ತಿವೆಯೋ ಎನ್ನುವಂತಿದ್ದ ತಾಣದಲ್ಲಿ ಈ ವರ್ಷದ ಹೋಳಿಹುಣ್ಣಿಮೆಯ ದಿನ ಕಳೆದೆವು. ಒಂದೆಡೆ ಪಶ್ಚಿಮ ದಿಗಂತದಲ್ಲಿ ಸೂರ್ಯ ಕೆಳಗಿಳಿಯುತ್ತಿದ್ದ ಹಾಗೆ ಪೂರ್ವದಲ್ಲಿ ಚಂದಿರ ನಾ ಬಂದೆನೆಂದು ತೋರಿಸಿಕೊಳ್ಳಲು ಹವಣಿಸುತ್ತಿತ್ತು. ಮಹಾಬೋಧಿ ದೇವಾಲಯದ ಆವರಣವು ಭಿಕ್ಕುಗಳಿಂದ, ದೇಶ ವಿದೇಶಗಳ ಉಪಾಸಕ, ಉಪಾಸಿಕೆಯರಿಂದ, ಪ್ರವಾಸಿಗಳಿಂದ ತುಂಬಿ ತುಳುಕುತ್ತಿತ್ತು. ಕೆಲವು ಭಿಕ್ಕುಗಳು ಹೊರಗಣ ಯಾವ ಗದ್ದಲವೂ ತಮ್ಮನ್ನು ತಾಗದಷ್ಟು ಆಳ ಧ್ಯಾನದಲ್ಲಿ ಮುಳುಗಿದ್ದರು. ಮತ್ತೆ ಕೆಲವರದು ಪಠಣ. ಇನ್ನು ಹಲವರು ಗುಂಪಾಗಿ ವ್ಯಾಯಾಮದಂತಹ ಚಲನೆಯ ಮೂಲಕ ನಮಸ್ಕರಿಸುತ್ತ ಏಳುತ್ತ ಇದ್ದರು. ಗಂಟೆ, ಜಾಗಟೆ ಮುಂತಾಗಿ ಯಾವ ಸದ್ದೂ ಇಲ್ಲದ ಮಹಾ ಮೌನ. ಸದ್ದಿಲ್ಲದೆ ನಡೆದು ದೇವಾಲಯದ ಆವರಣಕ್ಕೊಂದು ಸುತ್ತು ಹಾಕಿ ಬುದ್ಧನ ಮೂರ್ತಿಯೆದುರು ನಿಂತೆವು.
ನೆಲದ ಸಾಕ್ಷಿಯಾಗಿ ಲೋಕದರಿವು ಕಂಡುಕೊಂಡ ಗುರುವೇ, ಭೂಮಿ ಮೇಲಣ ಆಗುಹೋಗುಗಳ ಸಮ್ಮಾದಿಟ್ಟಿಯಲಿ ನೋಡುವ ಮಾರ್ಗ ತಿಳಿಸಿಕೊಡು, ವಂದನೆ.
ಬೋಧಗಯಾ. ಬುದ್ಧಾನುಯಾಯಿಗಳು ನೋಡಲೇಬೇಕೆಂದು ಬಯಸುವ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದು. ಕ್ರಿ.ಪೂ. ೬೨೩ರ ಸುಮಾರು ನೇರಂಜಾರ ನದಿಯ ದಡದಲ್ಲಿ ಬೋಧಿ ವೃಕ್ಷ(ಅರಳಿ ಮರ)ದಡಿ ಶಾಕ್ಯಮುನಿ ಗೌತಮನು ಜ್ಞಾನೋದಯ ಹೊಂದಿದ್ದು; ಪರಿವ್ರಾಜಕನಾದ ಆರು ವರ್ಷಗಳ ಬಳಿಕ ಲೋಕವನ್ನು ಅದಿರುವಂತೆ ಅರಿಯಲು ಪ್ರಜ್ಞಾ, ಕರುಣಾ, ಮೈತ್ರಿ ಭಾವಗಳಿಂದ ಜೀವರೆಲ್ಲ ನೆಮ್ಮದಿಯಿಂದ ಬಾಳಬಹುದಾದ ಮಾರ್ಗವನ್ನು ಕಂಡುಕೊಂಡು ಬುದ್ಧನಾದದ್ದು ಅಲ್ಲಿಯೇ. ಬುದ್ಧ ಕುಳಿತ ತಾಣವೆಂದು ಗುರುತಿಸಲಾದ ಒಂದು ವೃಕ್ಷ, ಆಸನ ಅಲ್ಲಿದೆ. ಭೂಮಿಸ್ಪರ್ಶ ಮುದ್ರೆಯ ಬುದ್ಧನ ಮೂರ್ತಿಯಿರುವ ಮಹಾಬೋಧಿ ದೇವಾಲಯವಿದೆ.
ಜ್ಞಾನೋದಯದ ಬಳಿಕ ಬುದ್ಧ ಅಲ್ಲಿ ಏಳು ವಾರ ಕಳೆದನೆಂದು ಬೌದ್ಧ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಬೋಧಿ ಮರದ ಕೆಳಗೆ ಕುಳಿತು ಮೊದಲ ವಾರ ಕಳೆದ. ಅನತಿ ದೂರದಲ್ಲಿ ಅನಿಮೇಷಲೋಚನನಾಗಿ (ಕಣ್ರೆಪ್ಪೆ ಮಿಟುಕಿಸದೆ) ಬೋಧಿವೃಕ್ಷ ನೋಡುತ್ತ ಎರಡನೆಯ ವಾರ ನಿಂತ. ಅಲ್ಲಿ ಅನಿಮೇಷಲೋಚನ ಬುದ್ಧ ಶಿಲ್ಪವಿದೆ. ಬೋಧಿವೃಕ್ಷದ ಒಂದು ಪಕ್ಕ ಹಿಂದೆಮುಂದೆ ನಡೆಯುತ್ತ (ಚಂಕಮಾನ) ಮನನ, ಧ್ಯಾನ ಮಾಡುತ್ತ ಮೂರನೆಯ ವಾರ ಕಳೆದ. ಅದನ್ನು ಪ್ರತಿನಿಧಿಸುವಂತೆ ಎತ್ತರದ ಕಟ್ಟೆಯ ಮೇಲೆ ಹದಿನೆಂಟು ಪದ್ಮಶಿಲ್ಪಗಳಿವೆ. (ಇದು ಒಂದನೆಯ ಶತಮಾನದಲ್ಲಿ ನಿರ್ಮಾಣವಾಗಿದೆ.) ನಾಲ್ಕನೆಯ ವಾರ ಆಳಧ್ಯಾನದಲ್ಲಿ ನಿರತನಾದ ಅವನ ಮೈಯಿಂದ ಏಳು ಬಣ್ಣಗಳು ಹೊರಬಿದ್ದುವೆಂದು ‘ರತ್ನಘರ ಚೈತ್ಯ’ ನಿರ್ಮಿಸಿದ್ದಾರೆ. ಸೂರಿಲ್ಲದ ಪುಟ್ಟ ಗುಡಿ ಅಲ್ಲಿದೆ. ಐದನೆಯ ವಾರ ಕುರಿಗಾಹಿಗಳು ಬಂದು ತಂಗುತ್ತಿದ್ದ ಆಲದ ಮರ ‘ಅಜಪಾಲ ನಿಗ್ರೋಧ’ದ ಅಡಿ ಕಳೆದ. ಅಲ್ಲಿಯೇ ಒಬ್ಬ ಬ್ರಾಹ್ಮಣನಿಗೆ, ‘ಜನ್ಮದಿಂದ ಯಾರೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ; ಕ್ರಿಯೆಯಿಂದ ಆಗಬಹುದು’ ಎಂದು ಹೇಳಿದ. ಈಗ ಮರವಿದ್ದ ತಾಣದಲ್ಲಿ ಒಂದು ಸ್ತಂಭವಿದೆ. ಆರನೆಯ ವಾರ ಭಾರೀ ಬಿರುಗಾಳಿ ಮಳೆ ಶುರುವಾದರೂ ಗಮನಿಸದೆ ಒಂದೆಡೆ ಕುಳಿತ ಬುದ್ಧನಿಗೆ ಸರ್ಪರಾಜ ಮುಚುಲಿಂದ ಆಶ್ರಯ ನೀಡಿದನೆಂದು ಗುರುತಿಸುವ ತಾಣವಿದೆ. ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾದ ಒಂದು ಕೊಳ ಅಲ್ಲಿದೆ. ಏಳನೆಯ ವಾರ ರಾಜಾಯತನ ಮರದ ಬಳಿಯಿರುವಾಗ ಬರ್ಮಾದ ವ್ಯಾಪಾರಿಗಳಾದ ತಪುಸ್ಸ ಮತ್ತು ಭಲ್ಲಿಕಾ ಬುದ್ಧನನ್ನು ಕಂಡು ನುಚ್ಚನ್ನ ಮತ್ತು ಜೇನುತುಪ್ಪಗಳನ್ನು ಬೆರೆಸಿ ಮಾಡಿದ ಆಹಾರ ನೀಡಿದರು. ಬುದ್ಧನ ನಡೆಗೆ, ನುಡಿಗೆ ಮಾರು ಹೋಗಿ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಎಂದರು. ಮುಂದೆ ಅದೇ ಧಮ್ಮವನ್ನು ಸ್ವೀಕರಿಸಿದ ಕುರುಹಾಗಿ ಹೇಳುವ ಉದ್ಘೋಷವಾಯಿತು. ಅವರು ಹಿಂತಿರುಗುವಾಗ ಬುದ್ಧನ ತಲೆಗೂದಲನ್ನು ತಮ್ಮ ದೇಶಕ್ಕೆ ಒಯ್ದರು. ಯಾಂಗೂನಿನ ಶ್ವೆದಗನ್ ಪಗೋಡದಲ್ಲಿರುವುದು ಅದೇ ಕೂದಲು ಎಂದು ನಂಬಲಾಗಿದೆ.
Buddha Statue
Chankamana
Maha Bodhi Tree
ಸಾಮ್ರಾಟ ಅಶೋಕನ ಮಕ್ಕಳಾದ ಮಹಿಂದ ಮತ್ತು ಸಂಘಮಿತ್ರೆ ಧರ್ಮ ಪ್ರಚಾರಕ್ಕೆ ಶ್ರೀಲಂಕೆಗೆ ಹೋಗುವಾಗ ಗಯಾದ ಬೋಧಿವೃಕ್ಷದ ಸಸಿ ಒಯ್ದಿದ್ದರು. ಮೂಲ ವೃಕ್ಷದ ಐದನೆಯ ತಲೆಮಾರಿನ ಸಸಿಯನ್ನು ಶ್ರೀಲಂಕಾದ ಅನುರಾಧಪುರದಿಂದ ಮತ್ತೆ ತಂದು ಬೋಧಗಯಾದಲ್ಲಿ ನೆಡಲಾಯಿತು. ಅದೀಗ ವೃಕ್ಷವಾಗಿ ಬೆಳೆದು ನಿಂತಿದೆ.
ಮಹಾಬೋಧಿ ವಿಹಾರದಲ್ಲಿ ಐದು ಅಡಿ ಎತ್ತರದ ಭೂಮಿಸ್ಪರ್ಶ ಮುದ್ರೆಯಲ್ಲಿ ಕುಳಿತ ಬುದ್ಧ ಮೂರ್ತಿಯಿದೆ. ಅದಕ್ಕೆ ಬಂಗಾರದ ಕವಚ ಹೊದಿಸಲಾಗಿದೆ. ಹೊರಾವರಣದಲ್ಲಿ ಅಶೋಕ ಸ್ತಂಭವಿದೆ. ಮುಖ್ಯ ವಿಹಾರದ ಸುತ್ತಮುತ್ತ ಬೇರೆಬೇರೆ ಕಾಲಮಾನದಲ್ಲಿ ಬೇರೆಬೇರೆಯವರು ನಿರ್ಮಿಸಿದ ನೂರಾರು ಸಣ್ಣಪುಟ್ಟ ಸ್ತೂಪಗಳೂ, ಬುದ್ಧ ಶಿಲ್ಪಗಳೂ ಇವೆ. ಶ್ರೀಲಂಕಾ, ವಿಯೆಟ್ನಾಂ, ಥೈಲ್ಯಾಂಡ್, ಬಾಂಗ್ಲಾ, ಬರ್ಮಾ, ಕಾಂಬೋಡಿಯಾ, ಭೂತಾನ್, ನೇಪಾಳ, ಚೀನಾ ಮುಂತಾಗಿ ವಿಶ್ವದ ಬಹುತೇಕ ಬೌದ್ಧ ದೇಶಗಳ ವಿಹಾರಗಳು ಮಹಾಬೋಧಿ ದೇವಾಲಯದ ಸುತ್ತಮುತ್ತ ಇವೆ.
ಈಗ ಮಹಾಬೋಧಿ ವಿಹಾರದಲ್ಲಿ ನಾವು ನೋಡುವುದು ಇಷ್ಟು. ಇಲ್ಲಿ ದೊರೆತ ಹಲವು ವಸ್ತುಗಳನ್ನು ಜತನದಿಂದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಷ್ಟನ್ನು ಹೀಗೆ ನೋಡಲು ಹಲವರ ಶ್ರಮ, ಬದ್ಧತೆ, ಹೋರಾಟ, ಇತಿಹಾಸದ ಅರಿವು ಕಾರಣವಾಗಿದೆ.
ಬುದ್ಧನ ಮಹಾಪರಿನಿರ್ವಾಣದ ೨೧೮ ವರ್ಷಗಳ ಬಳಿಕ ಜ್ಞಾನೋದಯವಾದ ತಾಣವನ್ನು ಮೊದಲು ಗುರುತಿಸಿದ ಸಾಮ್ರಾಟ ಅಶೋಕನು ತುದಿಯಲ್ಲಿ ನಿಂತ ಆನೆಯಿರುವ ಸ್ತಂಭವನ್ನು ನಿಲ್ಲಿಸಿದ. ಬೋಧಿವೃಕ್ಷದ ಸುತ್ತಲೂ ಕೆಂಪುಕಲ್ಲಿನ ಆವಾರ ನಿರ್ಮಿಸಿದ. ಬುದ್ಧ ಕುಳಿತ ತಾಣದ ಕಲ್ಲುಹಾಸನ್ನಲಂಕರಿಸಿ, ‘ವಜ್ರಾಸನ’ವೆಂದು ಗುರುತಿಸಿ, ಅದು ‘ಭೂಮಿಯ ನಾಭಿ’ ಎಂದು ಕರೆದ. ಒಂದರಿಂದ ಆರನೆಯ ಶತಮಾನದ ಒಳಗೆ ಮಹಾಬೋಧಿ ದೇವಾಲಯ ನಿರ್ಮಾಣವಾಯಿತು. ಬುದ್ಧ ಮೂರ್ತಿಯನ್ನು ೧೧ನೆಯ ಶತಮಾನದ ಪಾಲ ವಂಶಸ್ಥರು ನಿರ್ಮಿಸಿದರು. ವಿಶ್ವದ ಬಹುದೇಶಗಳ ಉಪಾಸಕರು, ರಾಜರು ದೇವಾಲಯಕ್ಕೆ ತಮ್ಮ ಸಂಪತ್ತು, ದಾನ ಧಾರೆಯೆರೆದರು.
ಹುಟ್ಟಿದ ನೆಲದಲ್ಲಿ ವೈದಿಕ ಧರ್ಮದ ಪುರೋಹಿತಶಾಹಿಗಳಿಂದ, ೬೨ ‘ಅನ್ಯ ತೀರ್ಥೀಯ’ ಪರಂಪರೆಗಳಿಂದ ಬೌದ್ಧ ಧಮ್ಮವು ಸಂಚು-ಸ್ಪರ್ಧೆ ಎದುರಿಸಿತು. ಪರಕೀಯರ ಆಕ್ರಮಣ, ಸ್ವಮತ ರಕ್ಷಣೆ-ಅನ್ಯಮತ ನಾಶದ ಉನ್ಮಾದವೇ ಮೊದಲಾದ ಕಾರಣಗಳಿಂದ ಏಳುಬೀಳುಗಳನ್ನು ಕಂಡಿತು. ೧೯ನೆಯ ಶತಮಾನದ ವೇಳೆಗೆ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರ ಆಸಕ್ತಿ, ಕೆಲಸಗಳಿಂದ ಬೌದ್ಧತಾಣಗಳು ಮರುಜೀವ ಪಡೆದವು. ಇಂದಿನ ಭಾರತ, ಪಾಕಿಸ್ತಾನ, ಆಫ್ಘನಿಸ್ತಾನ, ಬರ್ಮಾ, ಶ್ರೀಲಂಕಾಗಳ ಬೌದ್ಧ ತಾಣಗಳ ಸಂರಕ್ಷಣೆ, ದುರಸ್ತಿ ಮತ್ತು ಪುನರುಜ್ಜೀವನಕ್ಕೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಮತ್ತವರಂತಹ ಅಧಿಕಾರಿಗಳ ಕೊಡುಗೆ ಸ್ಮರಣೀಯವಾದುದು. ೨೦೧೩ರಲ್ಲಿ ಥೈಲ್ಯಾಂಡಿನ ರಾಜಪ್ರಭುತ್ವ ಮತ್ತು ಪ್ರಜೆಗಳು ಬುದ್ಧ ಜಯಂತಿಯ ೨೬೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾಬೋಧಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿದ್ದಾರೆ. ಬೌದ್ಧ ಉಪಾಸಕರ ಮನೆಮನೆಗಳಿಂದ ಚಿನ್ನ ಸಂಗ್ರಹಿಸಿ, ಕರಗಿಸಿ ೨೮೯ ಕೆಜಿ ಚಿನ್ನದ ರೇಕನ್ನು ಭಾರತಕ್ಕೆ ತಂದು ಮಹಾಬೋಧಿ ದೇವಾಲಯ ಗೋಪುರದ ತುತ್ತತುದಿಗೆ, ಎರಡು ಮೀಟರ್ ಅಗಲ ನಾಲ್ಕೂವರೆ ಮೀಟರ್ ಎತ್ತರದ ಚಿನ್ನದ ಕಲಶ ಹೊದಿಸಿದ್ದಾರೆ.
ಬುದ್ಧ ಭಾರತದ ಏಳುಬೀಳಿನ ಕತೆ
ಬೌದ್ಧ ಜೀವನಕ್ರಮದಲ್ಲಿ ಯಾವುದೇ ಆಚರಣೆಗಳಿರಲಿಲ್ಲ. ಪುರೋಹಿತರಿಗೆ ಸ್ಥಾನವೇ ಇರಲಿಲ್ಲ. ಬೌದ್ಧ ಸಾಮ್ರಾಟರಾಗಿದ್ದ ಮೌರ್ಯರ ನಂತರ ಬಂದ ಶುಂಗರು ಬ್ರಾಹ್ಮಣಧರ್ಮವನ್ನು ಲಿಖಿತ ಶಾಸ್ತ್ರವಾಗಿಸಿದರು. ವರ್ಣಾಶ್ರಮವನ್ನು ಜಾತಿಪದ್ಧತಿಯಾಗಿ ಗಟ್ಟಿಗೊಳಿಸಿ ಭಾರತೀಯ ಸಮಾಜವನ್ನು ಖಾಯಂ ಶ್ರೇಣೀಕರಣಕ್ಕೊಳಪಡಿಸಿದ ಮನುಸ್ಮೃತಿ ಬಂದದ್ದು ಪುಷ್ಯಮಿತ್ರ ಶುಂಗನ ಕಾಲದಲ್ಲಿ. ಶ್ರೇಣಿಯ ಅಗ್ರಸ್ಥಾನದಲ್ಲಿದ್ದ ಬ್ರಾಹ್ಮಣರು ಸಕಲ ಸವಲತ್ತುಗಳನ್ನು ಅನುಭವಿಸುತ್ತ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ದಾನದಕ್ಷಿಣೆಮನ್ನಣೆ ಪಡೆಯುತ್ತಾ, ಸ್ಥಳೀಯ ಉತ್ಪಾದನೆ, ವಿತರಣೆಯ ಮೇಲೆ ಅಲಿಖಿತ ಹಿಡಿತ ಸಾಧಿಸಿದ್ದೇ ಅಲ್ಲದೆ ದೇವರ ಜೊತೆ ನೇರ ಸಂವಾದ ಸಾಧ್ಯವೆಂಬ ಭ್ರಮೆ ಸೃಷ್ಟಿಸಿದರು. ಯಜ್ಞಯಾಗ, ಬಲಿ, ಭಜನೆಗಳಲ್ಲಿ ಜನಸಾಮಾನ್ಯರು ಆಚರಣೆಯೇ ಧರ್ಮವೆಂದು ಬಗೆದರು.
ಅದೇವೇಳೆಗೆ ಐದರಿಂದ ಎಂಟನೇ ಶತಮಾನದ ಅವಧಿಯಲ್ಲಿ ಮಧ್ಯ ಏಷ್ಯಾ ಕಡೆಯಿಂದ ಆಕ್ರಮಣ ಮಾಡಿದ ಅಲೆಮಾರಿ ಬಿಳಿಯ ಹೂಣರು ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಭಾರತದ ಗುಪ್ತ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಕೊಟ್ಟರು. ಭಾರತದ ವಾಯವ್ಯ ಹೆಬ್ಬಾಗಿಲನ್ನು ಆಕ್ರಮಿಸಿ, ರೋಮನ್ನರೊಡನೆ ವ್ಯಾಪಾರ ನಿಲ್ಲಿಸಿ, ಚೀನಾ ಮತ್ತು ಅರಬ್ಬರ ವ್ಯಾಪಾರಕ್ಕೆ ಬಾಗಿಲು ತೆರೆದರು. ಹೂಣರು ಹಿಂದೂ ಶೈವರಾದ ಬಳಿಕ ಬೌದ್ಧ ಸ್ಮಾರಕ, ಮಠಗಳನ್ನು ನಾಶಮಾಡಿದರು. ಅನ್ಯಮತದ ಆಳ್ವಿಕರು, ಸ್ಥಳೀಯ ಪುರೋಹಿತಶಾಹಿಗಳ ಕೈಗೆ ಸಿಲುಕಿ ಬೌದ್ಧ ಧರ್ಮದ ಸಾಂಸ್ಥಿಕ ಚಹರೆಗಳು ವಿರೂಪಗೊಂಡವು, ನಾಶವಾಗತೊಡಗಿದವು.
ಭಾರತಕ್ಕೆ ಬಂದ ಅಲ್ ಬೈರೂನಿ, ಫಾಹೀನ್, ಹ್ಯೂಯೆನ್ ತ್ಸಾಂಗರಂತಹ ವಿದೇಶಿ ಯಾತ್ರಿಕ ಪ್ರವಾಸಿಗಳು ಕುಂದುತ್ತಿರುವ, ನಾಶವಾಗುತ್ತಿರುವ ಬೌದ್ಧಸಂಘಗಳ ಬಗೆಗೆ ಬರೆದಿದ್ದಾರೆ. ಬೌದ್ಧಶಾಸ್ತ್ರ ಗ್ರಂಥಗಳನ್ನು ಅದರ ಮೂಲಸ್ವರೂಪದಲ್ಲಿ ಹುಡುಕುತ್ತ ಹದಿನೇಳು ವರ್ಷ ಭಾರತದಲ್ಲಿ ಅಲೆದಾಡಿದ ಭಿಕ್ಕು ಹ್ಯೂಯೆನ್ ತ್ಸಾಂಗ್, ವಾಯವ್ಯ ಭಾರತದ ಲಕ್ಷಾಂತರ ಬೌದ್ಧಮಠಗಳು ನಾಶವಾದವು ಎಂದು ದಾಖಲಿಸಿದ್ದಾನೆ. ಅವ ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೌದ್ಧಧರ್ಮವು ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತ್ತು. ಸಂಘ, ವಿಹಾರ, ಸ್ತೂಪಗಳನ್ನು ನಡೆಸಲು ನಂಬಿದ್ದ ಧನಮೂಲಗಳು ಕ್ಷೀಣಗೊಳ್ಳತೊಡಗಿದ್ದವು. ಅರಬ್ ವ್ಯಾಪಾರಸ್ಥರ ಪ್ರಭಾವ ಹೆಚ್ಚುತ್ತ ಹೋದಂತೆ ಇಸ್ಲಾಂ ಮತ್ತು ಹಿಂದೂ ವ್ಯಾಪಾರಸ್ಥರನ್ನು ಬೌದ್ಧಸಂಘಗಳು ನೆಚ್ಚಬೇಕಾದ ಪರಿಸ್ಥಿತಿಯಿತ್ತು. ಮೊದಲ ಸಹಸ್ರಮಾನದ ಕೊನೆಯ ವೇಳೆಗೆ ಬ್ರಾಹ್ಮಣ ಧರ್ಮ ಹಾಗೂ ಸ್ಥಳೀಯ ಕುಲ/ಮತಗಳು ಮೇಲುಗೈ ಪಡೆಯುತ್ತ ಹೋದಂತೆ ದಕ್ಷಿಣೋತ್ತರ ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾಯಿತು. ಹನ್ನೆರಡನೆಯ ಶತಮಾನದಲ್ಲಿ ಬೌದ್ಧ ಪಾಲ ವಂಶವು ಹಿಂದೂ ಸೇನಾ ವಂಶಕ್ಕೆ ಸೋತಿತು. ಆಕ್ರಮಣಕಾರಿ ಮುಸ್ಲಿಂ ರಾಜರ ಆಳ್ವಿಕೆ ಶುರುವಾಯಿತು. ಅದು ಬೌದ್ಧ ಧರ್ಮ ಸಂಪೂರ್ಣ ಹಿನ್ನೆಲೆಗೆ ಸರಿದ ಅವಧಿ. ಕ್ರಿ.ಶ.೧೨೩೦ರ ಹೊತ್ತಿಗೆ ಮಹಾಬೋಧಿ ದೇವಾಲಯವು ಶೈವ ಆರಾಧನಾ ಸ್ಥಳವಾಗಿ ಮಾರ್ಪಟ್ಟಿತು. ಆದರೂ ಅಲ್ಲಿ ಹದಿನಾರನೆಯ ಶತಮಾನದವರೆಗೂ ಧ್ಯಾನ, ಪಠಣಗಳಂತಹ ಬೌದ್ಧ ಆಚರಣೆಗಳು ಯಾತ್ರಾರ್ಥಿಗಳ ದಾನದಿಂದ ನಡೆಯುತ್ತಿದ್ದವು. ಭಾರತ, ಭೂತಾನ್, ಬರ್ಮಾ, ನೇಪಾಳ, ಶ್ರೀಲಂಕಾ, ಟಿಬೆಟ್ ಮುಂತಾದ ದೇಶಗಳಿಂದ ಯಾತ್ರಿಕರು ಬರುತ್ತಿದ್ದರು. ೧೯ನೆಯ ಶತಮಾನವು ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಗೊಳ್ಳಲು ಪೂರಕವಾದ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ೧೮೭೪ರಲ್ಲಿ ಬರ್ಮಾದ ಆಳ್ವಿಕರು ಮಹಾಬೋಧಿ ದೇವಾಲಯದ ದುಃಸ್ಥಿತಿಗೆ ಮರುಗಿ ದುರಸ್ತಿ ಕಾರ್ಯ ನಡೆಸಿದರು. ೧೮೮೪ರ ವೇಳೆಗೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಉತ್ಖನನ ಕಾರ್ಯ ಕೈಗೊಂಡು ದೇವಾಲಯಕ್ಕೆ ಈಗಿರುವ ರೂಪ ಕೊಟ್ಟನು.
ಹಿಂದೂ ದೇವರನ್ನಿಟ್ಟು ಪೂಜಿಸುತ್ತಿದ್ದ ಮಹಾಂತರು ತಮ್ಮದೆಂದು ಸಾಧಿಸುತ್ತಿದ್ದ ಮಹಾಬೋಧಿ ದೇವಾಲಯವು ಬೌದ್ಧರಿಗೆ ಸೇರಬೇಕೆಂದು ೧೮೯೧ರಲ್ಲಿ ಕಾನೂನು ಹೋರಾಟ ಶುರು ಮಾಡಿದವರು ಶ್ರೀಲಂಕಾದ ಭಿಕ್ಕು ಅನಾಗಾರಿಕ ಧರ್ಮಪಾಲ. ಅದಕ್ಕೆ ಭಾಗಶಃ ಜಯ ಸಿಕ್ಕಿದ್ದು ಅವರ ಮರಣದ ೧೬ ವರ್ಷಗಳ ನಂತರ ೧೯೪೯ರಲ್ಲಿ. ಮಹಾಬೋಧಿ ದೇವಸ್ಥಾನ ಕಾಯ್ದೆ ಜಾರಿಯಾಯಿತು. ಅದುವರೆಗೆ ಕೇವಲ ಹಿಂದೂಗಳೇ ಇದ್ದ ಸಮಿತಿಯಲ್ಲಿ ಬೌದ್ಧರಿಗೂ ಸ್ಥಾನ ದೊರೆಯಿತು. ವಿವಾದ ಶಮನಗೊಳಿಸಲು ತಾತ್ಕಾಲಿಕವಾಗಿ ಬೋಧಗಯಾ ಟೆಂಪಲ್ ಆಕ್ಟ್-೧೯೪೯ ಜಾರಿಯಾಯಿತು.
ಆ ಕಾಯ್ದೆಯ ಪ್ರಕಾರ ಬಿಹಾರ ರಾಜ್ಯ ಸರ್ಕಾರ ರಚಿಸುವ ‘ಮಹಾಬೋಧಿ ದೇವಾಲಯದ ಆಡಳಿತ ಮತ್ತು ಆಸ್ತಿ ನಿರ್ವಹಣಾ ಸಮಿತಿ’ಯು ಅದರ ಮೇಲ್ವಿಚಾರಣೆ ವಹಿಸಿಕೊಳ್ಳುವುದು. ರಾಜ್ಯಸರ್ಕಾರವು ಸಮಿತಿಗೆ ನೇಮಿಸುವ ಎಂಟು ಸದಸ್ಯರಲ್ಲಿ ನಾಲ್ಕು ಜನ ಹಿಂದೂಗಳಿರಬೇಕು. ಮೂರು ವರ್ಷದ ಅವಧಿಯ ಒಂಭತ್ತು ಜನರ ಆಡಳಿತ ಮಂಡಳಿಯಲ್ಲಿ ಬಿಹಾರ ಸರ್ಕಾರದ ಪರವಾಗಿ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಎಕ್ಸ್ ಅಫಿಶಿಯೊ ಅಧ್ಯಕ್ಷರು. ಅವರು ಹಿಂದೂ ಅಲ್ಲದಿದ್ದರೆ ರಾಜ್ಯ ಸರ್ಕಾರ ಹಿಂದೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳುತ್ತದೆ. ಅಲ್ಲಿಯ ಶಂಕರಾಚಾರ್ಯ ಮಠದ ಸ್ವಾಮಿ ಸಹ ಮತ್ತೊಬ್ಬ ಎಕ್ಸ್ ಅಫಿಶಿಯೊ ಸದಸ್ಯರು. ಆದರೆ ಹಳೆಯ ಕಾಯ್ದೆ ಹಾಗೆಯೇ ಮುಂದುವರೆಯಿತೇ ಹೊರತು ಬೌದ್ಧರಿಗೆ ನ್ಯಾಯಯುತ ಪ್ರಾತಿನಿಧ್ಯ, ಹಕ್ಕುಗಳು ದಶಕಗಳು ಕಳೆದರೂ ದೊರೆಯಲಿಲ್ಲ. ಸಾಕಷ್ಟು ಸಂಘರ್ಷದ ಬಳಿಕ ೨೦೧೩ರಲ್ಲಿ ಹಿಂದೂಯೇತರರು ಅಧ್ಯಕ್ಷರಾಗಬಹುದೆಂದು ಕಾನೂನು ಬದಲಾಯಿತು. ಆದರೆ ಅದೇ ೨೦೧೩ರಲ್ಲಿ ಮಹಾಬೋಧಿ ದೇವಸ್ಥಾನದ ಮೇಲೆ ಬಾಂಬ್ ದಾಳಿಯಾಯಿತು. ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ಗಳೇ ಹೊತ್ತುಕೊಂಡರೆಂಬ ವರದಿ ಬಂತು. ಬುದ್ಧ ಕುಳಿತು ಸಾಕ್ಷಾತ್ಕಾರ ಪಡೆದ ವೃಕ್ಷದ ಟೊಂಗೆಗಳನ್ನು ಅಕ್ರಮವಾಗಿ ಕಡಿದು ವಿದೇಶೀ ಬೌದ್ಧರಿಗೆ ಮಾರಿ ಹಣ ಗಳಿಸಿದ ಆರೋಪವಿರುವ ಇನ್ನೂ ಒಂದು ವಿವಾದ ತಲೆದೋರಿತು. ಅಲ್ಲಿನ ಮುಖ್ಯ ಅರ್ಚಕರನ್ನು ಬಂಧಿಸಲಾಯಿತು.
ಮಹಾಬೋಧಿ ದೇವಾಲಯ ಆಡಳಿತ ಸಮಿತಿ ಕುರಿತ ನ್ಯಾಯಾಲಯದ ವ್ಯಾಜ್ಯ ರಾಮಜನ್ಮಭೂಮಿ ವಿವಾದದಷ್ಟೇ ಹಳೆಯದು. ಆದರೆ ಭಾರತದಲ್ಲಿ ಪುರಾಣದ ಕತೆಗಳಿಗೆ ಐತಿಹಾಸಿಕ ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯ ಕೊಡುವಷ್ಟು ಸುಲಭವಾಗಿ ಕಣ್ಣೆದುರು ರಾಚುವ ಐತಿಹಾಸಿಕ ವಾಸ್ತವಗಳಿಗೆ ನ್ಯಾಯ ಸಿಗಲಾರದು. ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಹಚ್ಚಿ ನಿಲ್ಲಿsಸಿರುವುದರಿಂದಲೇ ೨೦೦೨ರಲ್ಲಿ ಯುನೆಸ್ಕೊದಿಂದ ‘ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಲ್ಪಟ್ಟ ಮಹಾಬೋಧಿ ದೇವಾಲಯವು ೨೦೨೫ನೆಯ ಇಸವಿಯಲ್ಲೂ ಬೌದ್ಧರ ನಿಯಂತ್ರಣಕ್ಕೆ ಸಿಗದಂತೆ ಆಗಿದೆ. ದೇಶಭಾಷೆ ಮರೆತು ಬೌದ್ಧರೆಲ್ಲ ಸೇರಿ ನಡೆಸುತ್ತಿರುವ ಹೋರಾಟವು ಹಿಂದುತ್ವವನ್ನು ಎಲ್ಲರ ಮೇಲೆ ಹೇರುತ್ತಿರುವ ಆಳ್ವಿಕರಿಂದ ದಮನಕ್ಕೊಳಗಾಗಿದೆ.
‘ಮೂಲನಿವಾಸಿ’ಗಳ ಮಾತು
ಬೇಸಿಗೆ ಕಾಲಿಡದ ಮಾರ್ಚ್ ತಿಂಗಳ ತಂಪು ಮುಂಜಾನೆ. ಬೆಳಿಗ್ಗೆ ಆರಕ್ಕಾಗಲೇ ಬೋಧಗಯಾದ ಬೀದಿಗಳಲ್ಲಿ ರಿಕ್ಷಾಗಳು ಓಡಾಡುತ್ತಿದ್ದವು. ತಂತಮ್ಮ ದೇಶದ ಸಂಘಾರಾಮಗಳಲ್ಲಿ ಭಿಕ್ಕುಗಳು ಚಟುವಟಿಕೆ ಆರಂಭಿಸಿದ್ದರು. ಹೊರಡುವ ಮುನ್ನ ಮತ್ತೆ ಸ್ವಲ್ಪ ತಿರುಗಿ ಬರೋಣವೆಂದು ಅಂದು ಬೇಗನೆದ್ದು ಸರ್ಕೀಟ್ ಹೊರಟೆವು. ಒಂದಷ್ಟು ದೂರ ನಡೆದೇ ತಿರುಗಿದೆವು. ಬಳಿಕ ಸ್ಥಳೀಯರೊಡನೆ ಸಂಪರ್ಕ ಆದಂತಾಗುವುದೆಂದು ಸೈಕಲ್ ಆಟೋ ಹುಡುಕಿದೆವು. ಅಲ್ಲೆಲ್ಲ ಮೂರು ಚಕ್ರದ, ಸೌರ ಶಕ್ತಿ ಬಳಸುವ ತೆರೆದ ಆಟೋಗಳಿರುತ್ತವೆ. ತ್ರಿಚಕ್ರದ ಬೈಕಿಗೆ ಬಾಡಿ ಕಟ್ಟಿದಂತಿದ್ದು ಅಗಲ ಕಡಿಮೆಯಿರುವುದರಿಂದ ಸಣ್ಣಗಲ್ಲಿಗಳಲ್ಲೂ ಆರೇಳು ಜನರನ್ನು ಒಯ್ಯಬಲ್ಲವು. ಒಬ್ಬ ಆಟೋ ಅಣ್ಣನನ್ನು ಹಿಡಿದೆವು. ಅವರು ವಿನಯ್. ಲೋಕಾಭಿರಾಮ ಮಾತಿಗೆಳೆದಾಗ ನಡುನಡುವೆ ‘ಮೂಲ್ನಿವಾಸಿ’ ಪದವನ್ನು ಒಂದೆರೆಡು ಸಲ ಬಳಸಿದರು. ನನ್ನ ಊಹೆ ಸರಿಯಾಗಿತ್ತು, ಅವರು ಬಾಮ್ಸೆಫ್ನವರು. ಹೌದಾ ಎಂದು ಕೇಳಿದ ಒಂದು ಪ್ರಶ್ನೆ ನಮ್ಮನ್ನು ಎಷ್ಟು ಆಪ್ತವಾಗಿಸಿತೆಂದರೆ ಸಾಕುಸಾಕೆಂದರೂ ಬಿಡದೇ ಎಲ್ಲೆಲ್ಲೋ ಒಯ್ದು ಎಲ್ಲವನ್ನು ತೋರಿಸಿ ಕರೆತಂದರು.
ಕೆಲವು ಮೊನಾಸ್ಟರಿಗಳು ಇನ್ನೂ ಬಾಗಿಲು ತೆರೆದಿರಲಿಲ್ಲ. ಜಪಾನಿನದು ಮಾತ್ರ ತೆರೆದಿತ್ತು. ಮೆಟ್ಟಿಲುಗಳ ಹತ್ತಿ ವಿಶಾಲ ಆವರಣ ಪ್ರವೇಶಿಸಿದರೆ ಸೂಜಿಮೊನೆ ಬಿದ್ದರೂ ಕೇಳುವಂತಹ ನಿಶ್ಶಬ್ದ. ಒಬ್ಬ ಉಪಾಸಕರು ಧ್ಯಾನದಲ್ಲಿ ತೊಡಗಿದ್ದರು. ಅಲ್ಲಿಂದ ನೇರಂಜಾರ ನದಿ ದಂಡೆಗೆ ಹೋದೆವು. ಇದೇನಾ ಸುಜಾತ ಘನಪಾಯಸ ನೀಡಿದ, ಉರುವೆಲ-ಗಯೆ-ನದಿ ಎಂಬ ಕಶ್ಯಪ ಸೋದರರ ಭೇಟಿಯಾದ, ಘನಪಾಯಸ ಸೇವಿಸಿದ ಬಳಿಕ ಶಕ್ತನಾಗಿ ಗೌತಮನು ದಾಟಿದ ನದಿ? ಸಂಪೂರ್ಣ ಒಣಗಿ ನಿಂತಿದ್ದ ನದಿಯ ತಳದ ಮರಳ ಬಯಲು, ಅತಿಕ್ರಮಣಕ್ಕೆ ಒಳಗಾಗಿ ಹೋಟೆಲು, ರೆಸಾರ್ಟು, ರಸ್ತೆಗಳಿಗೆ ಜಾಗ ಮಾಡಿಕೊಟ್ಟಿರುವ ನದಿಯ ಹರಹು ವಿಷಾದ ಹುಟ್ಟಿಸಿತು. ಅಲ್ಲಿ ಹೆಚ್ಚು ನಿಲ್ಲಲಾಗದೇ ಹೊರಟು ಬಿಳಿಯ ಬುದ್ಧನ ಕಂಡೆವು. ಮಲಗಿದ ಬುದ್ಧನ ನೋಡಿದೆವು. ಥೈಲ್ಯಾಂಡಿನವರು ನಿರ್ಮಿಸಿದ ಎಂಬತ್ತು ಅಡಿ ಎತ್ತರದ ಬುದ್ಧ ಪ್ರತಿಮೆಯ ಬಳಿಗೆ ಹೋದೆವು. ದೂರದಿಂದಲೇ ಭವ್ಯ ಮೂರ್ತಿ ಕಾಣಿಸುತ್ತಿತ್ತು. ಒಬ್ಬ ವ್ಯಕ್ತಿ ಇಬ್ಬರು ಮಕ್ಕಳೊಂದಿಗೆ ಮೂರ್ತಿಯೆದುರು ಕುಳಿತಿದ್ದರು. ಮಕ್ಕಳು ಪ್ರಶ್ನೆ ಕೇಳುತ್ತ ಅವರ ತಲೆಮೇಲೆ, ತೊಡೆ ಮೇಲೆ ಹತ್ತಿಳಿಯುತ್ತಿದ್ದವು. ಅವರು ಸಾವಧಾನವಾಗಿ ಆನಂದನ ಕತೆ ಹೇಳುತ್ತಿದ್ದರು. ಅವರು ಸುರೇಂದರ್. ಮಾತನಾಡಿಸಿದಾಗ ಅವರೂ ಬಾಮ್ಸೆಫ್ನವರು ಎಂದು ತಿಳಿದುಬಂತು. ಚಾಮರಾಜನಗರದ ಬಿಎಸ್ಪಿ ಬಳಗದಲ್ಲಿ ಅವರಿಗೆ ಪರಿಚಿತರಿದ್ದರು. ಹೊರಗೆ ನಿಂತಿದ್ದ ಆಟೋ ಅಣ್ಣ ವಿನಯ್ ಅವರ ಪರಿಚಯಸ್ಥರು. ಸಿಕ್ಕ ಕೆಲವೇ ಸಮಯದಲ್ಲಿ ಚುರುಕಾದ ಮಾತುಕತೆಯಾಯಿತು. ಮಹಾಬೋಧಿ ದೇವಾಲಯವನ್ನು ಸಂಪೂರ್ಣವಾಗಿ ಬೌದ್ಧರ ನಿಯಂತ್ರಣಕ್ಕೆ ಕೊಡಬೇಕು ಎಂದು ಭಂತೇಜಿಗಳು, ಉಪಾಸಕರು ಸರದಿ ಉಪವಾಸ ಕುಳಿತಿರುವ ಬಗೆಗೆ ಮಾತು ಹರಿಯಿತು. ದೇಶದ ಎಲ್ಲ ಕಡೆಯಿಂದ ಬೌದ್ಧ ಜನ ಬೆಂಬಲಿಸಿ ಬರುತ್ತಿದ್ದಾರೆ; ಆದರೆ ಭಂತೇಜಿಗಳನ್ನು ದೇವಾಲಯದ ಆವರಣದಿಂದ ಮೂರೂವರೆ ಕಿಲೋಮೀಟರ್ ದೂರದ ಸ್ಥಳಕ್ಕೆ ಕಳಿಸಲಾಗಿದೆ ಎಂದು ಆರೋಪಿಸಿದರು. ಬೀಳ್ಕೊಂಡ ಬಳಿಕವೂ ಭೂತಾನ್, ಕಾಂಬೋಡಿಯಾ ವಿಹಾರಗಳ ನೋಡಿ ಹೊರಬರುವಾಗ ಮತ್ತೆ ಸಿಕ್ಕರು. ಅವರೊಂದಿಗೆ, ಮಕ್ಕಳೊಂದಿಗೆ ಪಟ ತೆಗೆಸಿಕೊಂಡದ್ದಾಯಿತು. ಇಬ್ಬರು ಬೌದ್ಧಾನುಯಾಯಿಗಳನ್ನು ಭೇಟಿ ಮಾಡಿ ಬೋಧಗಯಾದ ಪ್ರಯಾಣ ಸಫಲವಾಯಿತೆನಿಸಿತು. ಅವರಿಬ್ಬರೊಡನೆ ನಡೆಸಿದ ಮಾತುಕತೆಯ ಸಾರಾಂಶವಿದು:
‘ತಮ್ಮ ಪೂಜಾ ಸ್ಥಾನಗಳಲ್ಲಿ ಸರ್ವಾಧಿಕಾರ ಚಲಾಯಿಸುತ್ತ ಬೇರೆ ಧರ್ಮದವರು ಬರಬೇಡಿ; ಮಹಿಳೆಯರು ಬರಬೇಡಿ; ಇಂತಿಂಥ ಜಾತಿಯವರು ಇಂತಿಂಥಲ್ಲಿ ಇರಿ ಎಂದು ಬೋರ್ಡು ಹಾಕುವಷ್ಟು ಅಸಾಂವಿಧಾನಿಕ ನೀತಿನಿಯಮ ರೂಪಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತ ಬೌದ್ಧ ಧರ್ಮದ ಮೇಲೆ ದಬ್ಬಾಳಿಕೆ ಹೇರುತ್ತಿದ್ದಾರೆ.’
‘ಪ್ರಪಂಚದಲ್ಲಿ ಯಾವ ಧಾರ್ಮಿಕ ಸ್ಥಳವೂ ಅನ್ಯ ಧರ್ಮದವರ ಆಡಳಿತದಲ್ಲಿಲ್ಲ. ಆದರೆ ಭಾರತ ಮಾತ್ರ ಬುದ್ಧನ, ಬೌದ್ಧರ ವಿಷಯದಲ್ಲಿ ಹೀಗೆ ನಡೆದುಕೊಂಡು ಬಂದಿದೆ. ಈಗ ಅದೇ ಮುಂದುವರೆಯುತ್ತಿದೆ. ವ್ಯಾಟಿಕನ್ ಅನ್ನು ಕ್ರಿಶ್ಚಿಯನ್ನರು, ಮೆಕ್ಕಾವನ್ನು ಮುಸ್ಲಿಮರು, ಗ್ರಂಥ ಸಾಹೀಬ್ ಅನ್ನು ಸಿಖ್ಖರು, ಕಾಶಿ-ತಿರುಪತಿಗಳಂತಹ ಅಸಂಖ್ಯ ಕ್ಷೇತ್ರಗಳನ್ನು ಹಿಂದೂಗಳು ನಿರ್ವಹಿಸುವರಾದರೆ ಮಹಾಬೋಧಿ ದೇವಾಲಯವನ್ನು ಬೌದ್ಧರಲ್ಲದೆ ಬ್ರಾಹ್ಮಣರೇಕೆ ನಿರ್ವಹಿಸಬೇಕು?’
‘ಬೌದ್ಧರು ಶಾಂತಿಪ್ರಿಯರು. ನಾವು ಯಾವುದೇ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ಯಾವುದು ನಮ್ಮದೋ ಅದು ನಮಗೆ ಸಿಗಬೇಕು ಅಷ್ಟೇ.’
‘ಭಾರತದ ಎಷ್ಟೋ ಗುಡಿಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ. ಬುದ್ಧನ ಮೂರ್ತಿಗೆ ಬಟ್ಟೆ, ಬಂಗಾರಗಳಿಂದ ಅಲಂಕಾರ ಮಾಡಿ ಹಿಂದೂ ದೇವರುಗಳ ಹೆಸರಿಡಲಾಗಿದೆ. ಅವೆಲ್ಲವನ್ನು ನಮಗೆ ಕೊಡಿ ಎಂದು ನ್ಯಾಯದ ಜಗಳಕ್ಕಿಳಿದರೆ ದೇಶದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ ನಾವೇನೂ ಹಾಗೆ ಕೇಳುತ್ತಿಲ್ಲ. ಮಹಾಬೋಧಿಯಂತಹ ಬೌದ್ಧರ ಪವಿತ್ರ ತಾಣದ ಮೇಲ್ವಿಚಾರಣೆ, ಆಡಳಿತಗಳನ್ನು ಬೌದ್ಧರಿಗೇ ಕೊಡಿ ಎನ್ನುತ್ತಿದ್ದೇವೆ. ಇದು ನ್ಯಾಯಯುತವಾದದ್ದು, ಆಗಲೇಬೇಕಾದದ್ದು.’
‘ಬುದ್ಧ ಮತ್ತು ಧಮ್ಮ ಲೋಕಕ್ಕೇ ಸೇರಿದ್ದು ನಿಜ. ಅದನ್ನು ಓದಲು, ತಿಳಿಯಲು, ಅನುಸರಿಸಲು ಜಾತಿ, ವರ್ಣ, ವರ್ಗ ಮುಂತಾಗಿ ಯಾವುದೇ ಭೇದವಿಲ್ಲ. ಆದರೆ ಧಮ್ಮದ ಅನುಯಾಯಿಗಳಿಗೆ ಮಹಾಬೋಧಿ ವೃಕ್ಷ, ದೇವಾಲಯ ಅತ್ಯಂತ ಪವಿತ್ರವಾದವು. ಅವು ಬೌದ್ಧಾನುಯಾಯಿಗಳ ಸುಪರ್ದಿನಲ್ಲೇ ಇರಬೇಕು. ನೋಡಿ, ಮಹಾಬೋಧಿ ದೇವಾಲಯದ ಪಕ್ಕದಲ್ಲೇ ಹಿಂದೂ ದೇವರ ಗುಡಿ ಮಾಡಿದ್ದಾರೆ. ರಾಮ, ಲಕ್ಷ್ಮಣ, ಹನುಮನನ್ನಿಟ್ಟಿದ್ದಾರೆ. ಹೀಗೇ ಮುಂದುವರೆದರೆ ಬೌದ್ಧ ಧರ್ಮವನ್ನು ಒಡೆದು ಸ್ವರ್ಗನರಕ, ಪುನರ್ಜನ್ಮಗಳ ತುರುಕಿ ಬುದ್ಧನನ್ನು ಅವತಾರ ಪುರುಷನೆಂದು ಮಾಡಿದ ವೈದಿಕ ಪುರೋಹಿತಶಾಹಿಗಳು ಸದ್ಯವೇ ಬುದ್ಧನ ಹೆಸರಿನಲ್ಲಿ ಕುಂಕುಮಾರ್ಚನೆ, ಹಣ್ಣುಕಾಯಿ, ಹೋಮಹವನಗಳನ್ನು ಮಹಾಬೋಧಿ ಗುಡಿಯ ಆವರಣದಲ್ಲಿ ಆರಂಭಿಸುತ್ತಾರೆ.’
‘ವಿಶ್ವದ ಎಲ್ಲಾ ಬೌದ್ಧ ದೇಶದವರು ಕಟ್ಟಿರೋ ಮೊನಾಸ್ಟರಿ ಇಲ್ಲಿದಾವೆ. ಅವುಗಳ ಆಚೀಚೆ ನೋಡಿ. ಕಸ, ಗಲೀಜು ರಾಶಿ. ಇಂಟರ್ನ್ಯಾಷನಲ್ ಟೂರಿಸ್ಟ್ ಬರೋ ಜಾಗದ ತರಹ ಇದೆಯಾ ಇದು? ಇದನ್ನು ಹಾಳುಗೆಡವಬೇಕಂತನೇ ಹೀಗಿಟ್ಟಿರೋದು.’
‘೨೦೧೩ರಲ್ಲಿ ಒಂದು ಬಾಂಬ್ ಸ್ಫೋಟ ಆಯ್ತು. ಈಗ ಯಾರೂ ಫೋಟೋ ತೆಗೆಯುವಂತಿಲ್ಲ. ಸಮಾಜದೆದುರು ಸಾಕ್ಷ್ಯ ಸಮೇತ ಹೇಳಲು ಆಗುತ್ತಿಲ್ಲ. ವಿದೇಶಗಳಿಂದ ಬರುವ ಯಾತ್ರಿಕರಿಗೆ, ಪ್ರವಾಸಿಗಳಿಗೆ ಗೈಡ್ಗಳು ಮತ್ತು ವ್ಯಾಪಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬುದ್ಧನ ಜೊತೆಗೆ ಅದು ರಾಮನ, ಪಂಚಪಾಂಡವರ ತಾಣ; ಬುದ್ಧನು ವಿಷ್ಣುವಿನ ಅವತಾರ; ಪಂಚವರ್ಗೀಯ ಭಿಕ್ಕುಗಳೆಂದರೆ ಪಂಚ ಪಾಂಡವರು ಅಂತೆಲ್ಲ ಸುಳ್ಳು ಕತೆ ಹೇಳುತ್ತಿದ್ದಾರೆ. ಉದುರಿದ ಅರಳಿ ಮರದೆಲೆಗಳನ್ನು ಇಟ್ಟುಕೊಂಡು ಇಲ್ಲಿಯ ಬೋಧಿ ವೃಕ್ಷದ್ದೆಂದು ವ್ಯಾಪಾರ ಮಾಡುತ್ತಾರೆ. ಅದಕ್ಕೆಲ್ಲ ಸಮಿತಿಯವರು ಆಸ್ಪದ ನೀಡಿದ್ದಾರೆ. ಸಮಿತಿಯೊಳಗಿರುವ ಬ್ರಾಹ್ಮಣ ಪುರೋಹಿತರು ಹಿಂದೂ ಆಚರಣೆಗಳನ್ನು ಬೌದ್ಧ ದೇವಾಲಯದೊಳಗೆ ತುರುಕುತ್ತಿದ್ದಾರೆ’
ಅವರು ಹೇಳಿದ್ದು ನಿಜ. ಹಿಂದಿನ ದಿನ ಮಹಾಬೋಧಿ ದೇವಾಲಯದ ಆವರಣದಲ್ಲಿ ಸುತ್ತಾಡುವಾಗ ನಾವದನ್ನು ಗಮನಿಸಿದ್ದೆವು. ಸಹಿಷ್ಣುತೆ, ಮೈತ್ರಿ ಭಾವವನ್ನು ಹೀಗೆ ದುರುಪಯೋಗಪಡಿಸಿಕೊಳ್ಳಬಹುದೇ ಎಂದು ದಿಗ್ಭ್ರಮೆಗೊಳ್ಳುವಷ್ಟು ಹಿಂದೂಗಳು (ಅದರಲ್ಲೂ ಬ್ರಾಹ್ಮಣರು) ಅಲ್ಲಿ ಮೂಗು ತೂರಿಸಿದ್ದಾರೆ. ಇದಕ್ಕೆ ಶತಮಾನಗಳಿಂದಲೂ ವಿರೋಧ ಬಂದಿದೆ. ಅನಾಗಾರಿಕ ಧಮ್ಮಪಾಲ ೧೮೯೧ರಲ್ಲಿ ಈ ಬಗೆಗೆ ದನಿಯೆತ್ತಿದ್ದರು. ೧೯೯೨ರಲ್ಲಿ ಒಮ್ಮೆ, ನಂತರ ೨೦೦೨-೦೩ರಲ್ಲೂ ಇದು ಮುನ್ನೆಲೆಗೆ ಬಂದಿತ್ತು. ೨೦೦೭ರಲ್ಲಿ ಜಪಾನಿನ ಭಿಕ್ಕು ಭದಂತ ನಾಗಾರ್ಜುನ ಸಹಾ ಹೋರಾಡಿದ್ದರು. ೨೦೧೭ರಲ್ಲಿ ಅಖಿಲ ಭಾರತ ಭಿಕ್ಕು ಮಹಾಸಂಘದ ಅಧ್ಯಕ್ಷರೂ, ಬೋಧಗಯಾ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷರೂ ಆಗಿದ್ದ ಭಂತೆ ಆನಂದ ಮತ್ತೆ ಅಖಿಲ ಭಾರತ ಮಟ್ಟದಲ್ಲಿ ಅದನ್ನೊಂದು ಮುಖ್ಯ ವಿಷಯವನ್ನಾಗಿಸಿ ಹೋರಾಟ ರೂಪಿಸಿದ್ದರು. ದಲೈ ಲಾಮಾ ಈ ವಿಷಯದ ಬಗೆಗೆ ವಹಿಸಿದ ಮೌನವನ್ನು ಪ್ರಶ್ನಿಸಿದ್ದ ಭಂತೆ ಆನಂದ, ಅವರು ಬೌದ್ಧರ ನಾಯಕರಲ್ಲ ಎಂಬ ಕಟು ವಿಮರ್ಶೆಗೂ ಮುಂದಾಗಿದ್ದರು. ಈಗ ಅಖಿಲ ಭಾರತ ಬೌದ್ಧ ಭಿಕ್ಕುಗಳ ಸಮಿತಿಯು ೧೯೪೯ರ ಕಾಯ್ದೆಯ ಬಗೆಗೇ ತಕರಾರು ಎತ್ತಿದೆ. ಅದು ರದ್ದಾಗಿ ಹೊಸ ಕಾಯ್ದೆ ಬರಬೇಕೆಂದು ಹೇಳುತ್ತಿದೆ. ಹಳೆಯ ಕಾಯ್ದೆ ಬದಲಿಸದಿರುವುದರಲ್ಲಿ ಪುರೋಹಿತಶಾಹಿ ಹುನ್ನಾರವಿದೆ ಎಂದು ವಂಚಿತ್ ಬಹುಜನ್ ಅಘಾಡಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮೊದಲಾದ ಸಂಘಟನೆಗಳು ಆರೋಪಿಸುತ್ತಿವೆ. ಶಾಂತಿಯುತವಾಗಿ ಉಪವಾಸ ಕುಳಿತಿದ್ದ ಭಿಕ್ಕುಗಳನ್ನು ಪೊಲೀಸರು ಎಳೆದಾಡಿ, ಅವರನ್ನು ದೇವಾಲಯದ ಆವರಣದಿಂದ ದೂರದ ತಾಣಕ್ಕೆ ಸ್ಥಳಾಂತರಿಸಿದ ದೌರ್ಜನ್ಯದ ಬಗೆಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.
ಭಾರತ ಬಹುತ್ವದ, ವೈವಿಧ್ಯತೆಯ ದೇಶವಾಗಬೇಕು ನಿಜ. ಆದರೆ ಐತಿಹಾಸಿಕವಾಗಿ ಧೃಢಪಟ್ಟಿರುವಂತೆ ಧಾರ್ಮಿಕ ಕ್ಷೇತ್ರವೊಂದು ಆಡಳಿತಾತ್ಮಕವಾಗಿ ಆಯಾ ಧರ್ಮದ ಉಪಾಸಕ, ಉಪಾಸಕಿಯರ ಮೇಲ್ವಿಚಾರಣೆಯಲ್ಲೇ ಇರಬೇಕು. ಇತಿಹಾಸ, ಪುರಾತತ್ವ, ವಿದೇಶಿ ಯಾತ್ರಿಕರ ನೆನಪು, ಸಾಹಿತ್ಯಿಕ ಗ್ರಂಥಗಳ ಉಲ್ಲೇಖ, ವಿದೇಶಕ್ಕೆ ಹೋದ ಬೌದ್ಧ ಧರ್ಮದ ಪಠ್ಯಗಳ ದಾಖಲೆಗಳನ್ನೆಲ್ಲ ನೋಡಿದರೆ ಮಹಾಬೋಧಿ ದೇವಾಲಯವು ಬುದ್ಧ ಸಾಕ್ಷಾತ್ಕಾರ ಹೊಂದಿದ ತಾಣವೆನ್ನುವುದು ಖಚಿತವಾಗಿದೆ. ಅದು ಬೌದ್ಧರ ನಿಯಂತ್ರಣಕ್ಕೆ, ಆಡಳಿತಕ್ಕೆ ಒಳಪಡಬೇಕೆನ್ನುವುದು ನ್ಯಾಯವೇ ಆಗಿದೆ.
ಹೊರಡುವ ದಿನ ಬೆಳಿಗ್ಗೆ..
ದೂರದಲ್ಲಿ ಮಹಾಬೋಧಿ ದೇವಾಲಯದ ಚಿನ್ನದ ಕಳಶ ಹೊಳೆಯುತ್ತಿತ್ತು. ಎಲೆ ಉದುರಿಸಿ ಬೋಳಾದ ಅರಳಿಮರಗಳ ಗೆಲ್ಲುಗೆಲ್ಲುಗಳಲ್ಲಿ ಜ್ವಾಲೆಯಂತೆ ಕಾಣುವ ಕೆಂದಳಿರು ಮೇಲೇಳುತ್ತಿದ್ದವು. ಗಲ್ಲಿಮೂಲೆ, ಚರಂಡಿ, ಕೊಳ, ನದಿ, ಸಂದಿಗೊಂದಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್, ಕಸ ಚೆಲ್ಲಾಡಿ ಬಿದ್ದಿತ್ತು. ಬೌದ್ಧ ತಾಣಗಳಲ್ಲೇ ಅತಿ ಪವಿತ್ರ ಎನಿಸಿಕೊಂಡ ತಾಣದಲ್ಲಿ ನದಿ ಒಣಗಿ, ನೆಲದ ಮೇಲೆಲ್ಲ ಕಸಕೊಳೆಗಳೇ ಎದ್ದು ಕಾಣುತ್ತಿದ್ದವು. ಮಹಾಬೋಧಿ ದೇವಾಲಯದ ಹೊರಾವರಣದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಹಿರಿಯ ಜೀವಗಳನ್ನು ಒಂದೆಡೆ ಸೇರಿಸಿ ಒಬ್ಬ ಭಿಕ್ಕುಣಿ ಏನೋ ಹೇಳಿಕೊಡುತ್ತಿದ್ದರು. ನಿನ್ನೆ ಸಂಜೆ ದೇವಾಲಯದಿಂದ ಹೊರಬೀಳುವ ದ್ವಾರದಲ್ಲಿ ನಮ್ಮನ್ನು ಬೀಳ್ಕೊಡುವವರಂತೆ ಸಾಲಾಗಿ ಭಿಕ್ಷೆ ಕೇಳುತ್ತ, ಸಂಕಟ ಹುಟ್ಟಿಸುವಂತೆ ಯಾಚನೆಯ ನೋಟ ಬೀರುತ್ತ ಕುಳಿತವರು ಇವರೇನೇ?
ಬದಲಾವಣೆಯ ಚಕ್ರ ಒಳಿತಿನೆಡೆಗೆ ಉರುಳುವಂತೆ ಹರಸು ಬೋಧಿಯೇ.
ಡಾ. ಎಚ್. ಎಸ್. ಅನುಪಮಾ
Monday, 12 May 2025
ನೇರಂಜಾರ: ಒಂದು ಒಣಗಿದ ನದಿಯ ಕತೆ
೧
ಒಂದು ಕಲ್ಲನ್ನು ನೀರಿನೊಳಗೆ ಹಾಕಿದರೆ? ತಕ್ಷಣ ಶಂಕೆಯಿಲ್ಲದೆ ನೀರ ತಳ ಸೇರುತ್ತದೆ. ಆಳದ ಮೌನದಲ್ಲಿ ಹುದುಗಿ ನೆಲೆಯಾಗಿಬಿಡುತ್ತದೆ. ಅಲ್ಲಿ, ಓ ಅಲ್ಲಿ, ಅಂದು ಸಂಜೆ, ಬೋಧಗಯಾದ ಮಹಾಬೋಧಿ ವಿಹಾರದ ಸುತ್ತಲ ಆವರಣದಲ್ಲಿ ಕಣ್ಣುಮುಚ್ಚಿ ನಿಶ್ಚಲವಾಗಿ, ಮೌನವಾಗಿ ಕುಳಿತ ಭಿಕ್ಕುಗಳು ನೀರ ತಳದ ಕಲ್ಲಿನಂತೆ ಕಂಡುಬಂದರು. ಹೊರಗಣ ನೆರೆದ ಸಂತೆಗೆ ಒಳಗಣ ಮೌನವು ಕಸಿವಿಸಿ ಹುಟ್ಟಿಸದಿರಲಿ ಎಂಬಂತೆ ಆಗೀಗ ಕೇಳುವ ಹಕ್ಕಿಗಳ ಸದ್ದು. ಯಾವ ಬೋಧಿವೃಕ್ಷದಡಿ ಕುಳಿತು ಬುದ್ಧಗುರು ಲೋಕದರಿವ ಪಡೆದುಕೊಂಡನೋ, ಅದರ ಆಸುಪಾಸಿನಲ್ಲಿ ನೂರಾರು ಭಿಕ್ಕು ಭಿಕ್ಕುಣಿಯರು, ಉಪಾಸಕ ಉಪಾಸಿಕೆಯರು ಆಳ ಧ್ಯಾನದಲ್ಲಿದ್ದರು. ಸುತ್ತ ನೆರೆದಿರುವುದು, ನಡೆಯುತ್ತಿರುವುದು ಗಮನಕ್ಕೇ ಬರದಂತಹ ಮಗ್ನತೆ. ಭಾರೀ ಗೋಪುರದ ಕೆಳಗೆ ಮಹಾಬೋಧಿ ದೇವಾಲಯದ ಸುತ್ತ ಹಾಸಿರುವ ಮೌನದ ರತ್ನಗಂಬಳಿ ಮೇಲೆ ಹೆಜ್ಜೆ ಸಪ್ಪಳವಾಗದಂತೆ ನಾವು ನಡೆಯುತ್ತಿದ್ದೆವು.
ಬಣ್ಣಗಳೆಲ್ಲ ಬೀದಿಗೆ ಬಂದು ಓಲಾಡಿದ ದಿನ, ಚಳಿಯ ಹವೆಯಿನ್ನೂ ಪೂರ್ತಿ ನೀಗದ ಫಾಲ್ಗುಣದ ಮಾರ್ಚ್ ತಿಂಗಳಲ್ಲಿ ಬೋಧಗಯಾದಲ್ಲಿದ್ದೆವು. ಅದು ಶಾಕ್ಯಮುನಿ ಗೌತಮನು ಸಂಬೋಧಿಯನ್ನು ಪಡೆದು ಬುದ್ಧನಾದ ನೆಲ. ನಾವಿಳಿದುಕೊಂಡ ಹೋಟೆಲ್ ರೂಮಿನ ಕಿಟಕಿಯಿಂದ ಮಹಾಬೋಧಿ ವಿಹಾರದ ಚಿನ್ನದ ಕಳಶ ಹೊಳೆಹೊಳೆಯುತ್ತ ಕಾಣುತ್ತಿತ್ತು. ಧೀರೋದಾತ್ತವಾಗಿ ಮುಗಿಲೆಡೆಗೆ ಚಾಚಿ ನಿಂತ ಗೋಪುರ ಕರೆದ ಭಾಸವಾಗುತ್ತಿತ್ತು. ಬಂದವರೇ ಬುದ್ಧ ಬುದ್ಧನಾದ ತಾವಿನೆಡೆಗೆ ಹೊರಟಿದ್ದೆವು. ವಿವಿಧ ವರ್ಣ ಛಾಯೆಯ ಚೀವರ ಧರಿಸಿದ ಅನೇಕ ದೇಶಗಳ ಭಿಕ್ಕುಗಳು ಅಲ್ಲಿದ್ದರು. ಕೆಲವರು ವ್ಯಾಯಾಮದಂತಹ ದೀರ್ಘದಂಡ ನಮಸ್ಕಾರವನ್ನು ಗುಂಪಾಗಿ, ಸಾಲಾಗಿ ಮಾಡುತ್ತಿದ್ದರು. ಕೆಲವರು ಅನತಿ ದೂರದಲ್ಲಿ ಗುಂಪಾಗಿ ಕುಳಿತು ಹಕ್ಕಿಯುಲಿದಷ್ಟೇ ಮೆಲುವಾಗಿ ಏನನ್ನೋ ಪಠಿಸುತ್ತಿದ್ದರು. ಬೇರೆಬೇರೆ ದೇಶಗಳ ಜನರು ಒಂದೇ ಮರದಡಿ ಕುಳಿತು ಒಟ್ಟಿಗೇ ಧ್ಯಾನಿಸುವುದನ್ನು, ಒಟ್ಟಿಗೇ ನೆರೆದು ಪಠಿಸುವುದನ್ನು ಸಾಧ್ಯ ಮಾಡಿದ ಬುದ್ಧ ಎಲ್ಲ ಲೋಹಗಳ ಕರಗಿಸುವ ಕುಲುಮೆಯಂತೆ ಕಾಣಿಸಿದ.
ಪರಿಕ್ರಮಣದ ಬಳಿಕ ಗರ್ಭಗುಡಿಯೊಳಗಣ ಮೂರ್ತಿಯೆದುರು ನಿಂತೆವು. ‘ಗಂಗಾ, ಯಮುನಾ, ಅಚಿರಾವತಿ, ಮಾಹಿ, ಸರಯೂ ಮುಂತಾದ ನದಿಗಳು ಸಮುದ್ರ ಸೇರಿದ ಮೇಲೆ ಗುರುತು ಕಳೆದುಕೊಳ್ಳುವ ಹಾಗೆ ಧಮ್ಮ ಮಾರ್ಗಕ್ಕೆ ಬಂದವರಿಗೆ ಭೇದದ ಗುರುತುಗಳಿಲ್ಲ. ಎಲ್ಲರೂ ಒಂದೇ’ ಎಂದವನೆದುರು; ಪ್ರಜ್ಞಾ, ಕರುಣಾ, ಮತ್ತು ಮೈತ್ರಿಗಳ ಮೂಲಕ ಸಮತೆಯ ಹಾದಿ ಹಿಡಿಯಿರಿ ಎಂದ ಬುದ್ಧ ಗುರುವಿನೆದುರು ನತಮಸ್ತಕರಾಗಿ ನಿಂತಿದ್ದೆವು. ಐದಡಿ ಎತ್ತರದ ಮೂರ್ತಿಯ ಅರೆನಿಮೀಲಿತ ನೇತ್ರ ಮತ್ತು ಮಂದಸ್ಮಿತಗಳು ‘ನಾನು’ ನೇಯ್ದುಕೊಂಡ ಹುಸಿ ದುಕೂಲವ ಕಳಚುತ್ತಿರುವಂತೆ, ಸುಳಿಯೊಂದರತ್ತ ಸೆಳೆದುಕೊಳ್ಳುತ್ತಿರುವಂತೆ ಭಾಸವಾಯಿತು.
‘ಹಾಗೆಂದು ಸದಾ ಧ್ಯಾನಸ್ಥನಲ್ಲ ನಾನು’ ಎಂದ ಅವನು. ಸ್ವ ನಿಯಂತ್ರಣ, ಮಗ್ನತೆ ಮತ್ತು ಧೃಢತೆಯನ್ನು ಸಾಧಿಸಿದ ಕುರುಹಾಗಿ ಜ್ಞಾನೋದಯದ ಬಳಿಕ ಕಣ್ಣು ರೆಪ್ಪೆ ಮಿಟುಕಿಸದೆ ಒಂದು ವಾರ ಕಾಲ ಬೋಧಿವೃಕ್ಷ ನೋಡುತ್ತ ಅನಿಮೇಷಲೋಚನನಾದ. ಆ ತಾಣ ಗುರುತಿಸುವ ಸಲುವಾಗಿ ಸ್ವಲ್ಪ ಆಚೆ ಅನಿಮೇಷನ ಲೋಚನ ಮಂದಿರವಿದೆ. ದೇವಾಲಯದ ಸುತ್ತಲೂ ಸಾವಿರಾರು ಸಣ್ಣ, ದೊಡ್ಡ ಸ್ತೂಪಗಳೂ, ಬುದ್ಧ ಮೂರ್ತಿಗಳೂ ಇವೆ.
೨
ಆ ಹರಿವಿಗೆ ನೇರಂಜಾರ ಅಥವಾ ಲೀಲಾಜನ ಅಥವಾ ನೀಲಾಂಜನ ಅಥವಾ ನಿರಂಜನಾ ಎಂಬ ಹೆಸರು. ಇದೇ ನೇರಂಜಾರ ತೀರದಲ್ಲಿ ಸಿದ್ಧಾರ್ಥ ಗೌತಮನು ಮೂರು ವಸ್ತುಗಳನ್ನು ನೋಡಿದನು: ಒಂದು ನೀರಿನಲ್ಲಿ ತೇಲುತ್ತಿದ್ದ ಹಸಿ ಮರದ ದಿಮ್ಮಿ. ಮತ್ತೊಂದು ದಂಡೆಯಲ್ಲಿ ಬಿದ್ದಿದ್ದ ಹಸಿ ಮರದ ದಿಮ್ಮಿ. ಮಗದೊಂದು ಅಡವಿಯಲ್ಲಿ ಒಣ ಕೊರಡಿನಂತೆ ಬಿದ್ದ ಮರದ ದಿಮ್ಮಿ. ಬುದ್ಧನಿಗೆನಿಸುತ್ತದೆ: ‘ಸಂಸಾರಿಗರ ಸ್ಥಿತಿ ನದಿಯಲ್ಲಿ ತೇಲುತ್ತಿರುವ ಹಸಿ ದಿಮ್ಮಿಯಂತಹುದು. ಜ್ಞಾನವುಂಟಾದರೂ ಅರಿವಿನ ಬೆಂಕಿ ಹೊತ್ತಲಾರದಷ್ಟು ಮುಳುಗಿ ಒದ್ದೆಯಾಗಿರುವಂತಹುದು. ನದಿದಂಡೆಯಲ್ಲಿ ಬಿದ್ದುಕೊಂಡ ದಿಮ್ಮಿಯೂ ನದಿಯನ್ನು ತೊರೆದರೂ ಹಸಿತನವ ಬಿಟ್ಟುಕೊಡಲಾರದ ಕಾರಣ ಉರಿಯಲಾರದು. ಹುಸಿ ಆಚರಣೆಗಳ ಬೆನ್ನು ಹಿಡಿದ ಆಶ್ರಮವಾಸಿ ಋಷಿಮುನಿಗಳಂತೆ ಅದು. ಆದರೆ ಎಲ್ಲ ಬಂಧಗಳಿಂದ ಕಳಚಿಕೊಂಡು ಅಡವಿಯಲ್ಲಿ ಬಿದ್ದಿರುವ ಒಣಗಿದ ಕೊರಡು ಮಾತ್ರ ಹೊತ್ತಲು, ಉರಿಯಲು ಸಿದ್ಧವಾಗಿರುವುದು. ನಾನು ಅದರಂತೆ ಆಗಬೇಕು’.
ಅಂತಹ ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು ಹರಿದ ಹರಿವು ಮರಳ ಬಯಲಿನಲ್ಲಿ ನಿಧಾನ ಹರಿಯತೊಡಗುತ್ತದೆ. ಗಯೆಯಿಂದ ಹತ್ತು ಕಿಮೀ ಮುಂದೆ ಮೋಹನಾ ನದಿಯೊಡನೆ ಸೇರಿದ ಬಳಿಕ ಫಲ್ಗುಣಿ ಎನಿಸಿಕೊಳ್ಳುತ್ತದೆ. ಆದರೆ ಈಗ ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಕಣ್ಣಿಗೆ ರಾಚುವುದು ಮರಳು ತುಂಬಿದ ನೀರೊಣಗಿದ ನದಿ ಬಯಲು. ಕಡುಬಿಸಿಲು ಸೂಸುವ ಇದೇ ಋತುವಿನಲ್ಲಿ ನದಿ ಅಂದು ಹರಿಯುತ್ತಿತ್ತು. ಶಾಕ್ಯಮುನಿ ಗೌತಮ ಅದನ್ನು ದಾಟಿದ್ದ. ಆದರೆ ನದಿ ಈಗ ಬತ್ತಿ ಹೋಗಿದೆ. ಅಂದಲ್ಲಿ ನಮಗೆ ಸಿಕ್ಕ ಸಾರಥಿ ‘ಮೂಲನಿವಾಸಿ’ ವಿನಯ್ ಪ್ರಕಾರ ನದಿ ತುಂಬಿ ಹರಿದಿದ್ದನ್ನು ಅವರು ಜೀವಮಾನದಲ್ಲಿ ಒಂದೋ ಎರಡೋ ಸಲ ನೋಡಿದ್ದಾರೆ ಅಷ್ಟೇ!
ಏರತೊಡಗಿದ ಬಿಸಿಲು. ಕಣ್ಣೆದುರು ರಣರಣ ಎನ್ನುವ ಒಣಗಿದ ನದಿ ಬಯಲು. ನೋಡುವ ಎಂದು ಕಾಲಿಟ್ಟರೆ ಮುಳ್ಳುಜಡ್ಡು ಚುಚ್ಚಿ ಸ್ವಾಗತಿಸುತ್ತಿದೆ. ನದಿಯ ಬಯಲನ್ನೇ ನುಂಗಿ ಭಾರೀ ಆಕರ್ಷಕ ಹೆಸರುಗಳ ರೆಸಾರ್ಟು, ಹೋಟೆಲುಗಳು ದಂಡೆಯ ಆಚೀಚೆ ತಲೆಯೆತ್ತಿವೆ. ಊರ ಕಸ, ಕಲ್ಮಶವನ್ನೆಲ್ಲ ಒಣಗಿದ ನದಿಯೊಡಲಿಗೆ ತಂದು ತುಂಬಲಾಗುತ್ತಿದೆ.
ನೀರ ತಳದ ಸವೆದ ಬಿಳಿಗಲ್ಲುಗಳು ಮೌನ ಧ್ಯಾನದಲ್ಲಿ ಮುಳುಗಿದ ಬುದ್ಧ ಮಾರ್ಗಿಗಳಂತೆ ಕಂಡವು. ಒಣಗಿದ ಹರಿವಿನ, ಬಿರು ಬಿಸಿಲಿನ, ಅರಿವಿನ ನೂರೊಂದು ಕತೆ ಹೇಳುತ್ತಲಿದ್ದವು.
೩
ಬುದ್ಧ ಜ್ಞಾನೋದಯ ಪಡೆದ ತಾಣದಲ್ಲಿ ನೆಲೆಯಾದ ಎಲ್ಲರೂ ಅರಿವುಗೊಳ್ಳುವರೆಂದು ಹೇಳಲಾಗದು. ಮಹಾಬೋಧಿಯ ಬಳಿ ಒಣಗಿ ಉದುರಿದ ಅರಳಿ ಎಲೆಯ ಕೈಯಲ್ಲಿ ಹಿಡಿದು ಕಣ್ಣಲ್ಲೇ ಸನ್ನೆ ಮಾಡಿ ಕರೆವ ವ್ಯಾಪಾರಿಗಳಿದ್ದರು. ಪುಟ್ಟ ಎಲೆತಟ್ಟೆಯಲ್ಲಿ ಹೂವಿಟ್ಟು ಶಾಕ್ಯಮುನಿಗೆ ಕೊಂಡು ಹೋಗಿ ಎಂದು ಒತ್ತಾಯಿಸುವವರಿದ್ದರು. ಯಾವುದು ಅವನಲ್ಲವೋ ಅದೇ ಅವನೆಂದು ಸಾರುವ ಗೈಡುಗಳಿದ್ದರು. ಅವನನ್ನರಿಯದೆ ಎತ್ತೆತ್ತಲೋ ಹೆಜ್ಜೆಯಿಟ್ಟು ತಾವು ಅನುಯಾಯಿಯೆಂದುಕೊಂಡವರ ಸಂಕುಲವೂ ಅಲ್ಲಿತ್ತು. ಬುದ್ಧನ ಬಳಿಯೇ ಜಗನ್ನಾಥನೂ ಗುಡಿ ಕಟ್ಟಿಸಿಕೊಂಡು ಕುಳಿತಿದ್ದ.
ಬದಲಾಗದ ಯಾವುದೂ ಲೋಕದಲ್ಲಿ ಇಲ್ಲ ಎಂದವನಲ್ಲವೇ ಅವ? ಈ ಎರಡೂವರೆ ಸಾವಿರ ವರ್ಷಗಳಲ್ಲಿ ಬುದ್ಧ ದಾಟಿದ ನದಿಯ ಜಾಡಿನಲ್ಲಿ ಅದೆಷ್ಟೋ ನೀರು ಬಂದು ಹೋಗಿದೆ. ಒಳಿತಿನೆಡೆಗೆ ಹರಿವನ್ನು ತಿರುಗಿಸುವುದೂ, ಸುಮ್ಮನಿರುವುದೂ ನಮ್ಮ ಕೈಯಲ್ಲೇ ಇದೆ.
ಬುದ್ಧನೊಡನೆ ನಡೆಯುವುದು ಎಂದರೆ ಏಕಕಾಲಕ್ಕೆ ಭೂತ ಮತ್ತು ವರ್ತಮಾನಗಳಲ್ಲಿ ಬದುಕುತ್ತ ಭವಿಷ್ಯದೆಡೆಗೆ ನಡೆಯುವುದು. ಬುದ್ಧ ಗುರುವಿನೊಡನೆ ಸಂವಾದಿಸುವುದು ಎಂದರೆ ‘ಸ್ವ’ ಅರಿವನ್ನೂ, ಲೋಕದರಿವನ್ನೂ ಒಟ್ಟೊಟ್ಟಿಗೆ ಪಡೆದುಕೊಳ್ಳುವುದು.
ಹರಸು ಭಂತೇ.
ಡಾ. ಎಚ್. ಎಸ್. ಅನುಪಮಾ
Friday, 28 February 2025
ಝಕಿಯಾ ಸೋಮನ್: ‘ಧರ್ಮದಾವರಣದೊಳಗಿದ್ದು ಆಂತರಿಕ ವಿಮರ್ಶೆ ಮಾಡುವುದೂ ಮುಖ್ಯ
-
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾರ್ಚ್ ೭, ೮ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ೧೩ನೇ ಸಮಾವೇಶದ ಹಕ್ಕೊತ್ತಾಯ ಜಾಥಾದಲ್ಲಿ ಲೇಖಕಿ, ಬರಹಗಾರ್ತಿ, ಸಂಘಟಕಿ ಝಕಿಯಾ ಸೋಮನ್ ಪಾಲ್ಗೊಳ್ಳಲಿದ್ದಾರೆ. ಗುಜರಾತಿನ ಅಹಮದಾಬಾದಿನ ಝಕಿಯಾ ೨೦೦೨ರಲ್ಲಿ ಗುಜರಾತನ್ನು ಬಾಧಿಸಿದ ಕೋಮುದಳ್ಳುರಿಯ ಸಮಯದಲ್ಲಿ ಕ್ರಿಯಾಶೀಲರಾದರು. ಬಡ, ಅಧಿಕಾರಹೀನ, ಅನಕ್ಷರಸ್ಥ ಮುಸ್ಲಿಂ ಮಹಿಳೆಯರೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವುದನ್ನು ನೋಡಿ ಹಿಂಸಾತ್ಮಕವಾಗಿದ್ದ ತನ್ನ ವಿವಾಹ ಬಂಧನದಿಂದ ಹೊರಬಂದರು. ಮಗ ಅರಸ್ತುವಿನೊಡನೆ ಏಕಾಂಗಿಯಾಗಿ ಹೊಸ ಬದುಕು ಕಟ್ಟಿಕೊಂಡರು. ಸಾಮಾಜಿಕ ಹೋರಾಟದ ಬದುಕಿಗೆ ತೆರೆದುಕೊಂಡರು. ಬೋಧನೆಯ ಕೆಲಸ ಬಿಟ್ಟು ಪೂರ್ಣಕಾಲಿಕ ಹೋರಾಟಗಾರ್ತಿಯಾದರು. ಕೋಮುಗಲಭೆಯ ಸಂತ್ರಸ್ತರ ಪರಿಹಾರ, ಪುನರ್ವಸತಿಗಾಗಿ, ನ್ಯಾಯಕ್ಕಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ, ಮುಸ್ಲಿಂ ಮಹಿಳೆಯರ ಸಮಾನ ಹಕ್ಕುಗಳ ಹೋರಾಟಕ್ಕಾಗಿ ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ವನ್ನು (ಬಿಎಂಎಂಎ) ಸಹಭಾಗಿಗಳೊಂದಿಗೆ ಆರಂಭಿಸಿದರು. ಮುಂಬೈಯ ಪ್ರಸಿದ್ಧ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧ ತೆರವುಗೊಳಿಸಲು ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ ೨೦೧೬ರಲ್ಲಿ ಪ್ರವೇಶಾವಕಾಶದ ತೀರ್ಪು ಪಡೆದರು. ತ್ರಿವಳಿ ತಲಾಖ್ನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಅರ್ಜಿದಾರರಲ್ಲಿ ಅವರೂ ಒಬ್ಬರು. ಸಂಘಟಿತ ಹೋರಾಟದ ಫಲವಾಗಿ ೨೦೧೭ರಲ್ಲಿ ನ್ಯಾಯಾಲಯವು ತ್ರಿವಳಿ ತಲಾಖನ್ನು ಅಮಾನ್ಯ ಮಾಡಿತು. ಪ್ರಸ್ತುತ ೫೦ ಸಾವಿರ ಸದಸ್ಯರಿರುವ ಬಿಎಂಎಂಎ, ಸೂಕ್ತ ಧಾರ್ಮಿಕ ಶಿಕ್ಷಣ ನೀಡಿ ೩೦ ಮಹಿಳಾ ಖಾಜಿಗಳನ್ನು ರೂಪಿಸಿದೆ.
ಪ್ರಸ್ತುತ ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳು, ಕೋಮುಸೌಹಾರ್ದದ ಸಲುವಾಗಿ ವಿಭಿನ್ನ ನೆಲೆಗಳಲ್ಲಿ ಸಂಘಟನೆ, ವ್ಯಕ್ತಿಗಳೊಡನೆ ಕೆಲಸ ಮಾಡುತ್ತಿದ್ದಾರೆ. ‘ಸೆಂಟರ್ ಫಾರ್ ಪೀಸ್ ಸ್ಟಡೀಸ್ (ಸಿಪಿಎಸ್) ಆರಂಭಿಸಿದ್ದಾರೆ. ದಕ್ಷಿಣ ಏಷ್ಯಾ ಬಡತನ ನಿರ್ಮೂಲನಾ ಮೈತ್ರಿ ಕೂಟದ ಭಾರತ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ಫ್ರಂಟ್ಲೈನ್ ಮುಂತಾದ ಪತ್ರಿಕೆ, ನಿಯತಕಾಲಿಕ, ಸಾಮಾಜಿಕ ಜಾಲತಾಣಗಳಲ್ಲಿ ಅಂಕಣಕಾರ್ತಿಯಾಗಿದ್ದಾರೆ. ಡಾ. ನೂರ್ಜಹಾನ್ ಸಫಿಯಾ ನಿಯಾಜರೊಡನೆ ಸಮುದಾಯ ಮಟ್ಟದ ಸಂಶೋಧನಾತ್ಮಕ ಅಧ್ಯಯನ ನಡೆಸಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಅವರಿಬ್ಬರೂ ಪ್ರಕಟಿಸಿರುವ ಸಂಶೋಧನಾತ್ಮಕ ಪುಸ್ತಕಗಳಿವು:
೧. ರಿಕ್ಲೇಮಿಂಗ್ ಸೇಕ್ರೆಡ್ ಪ್ಲೇಸಸ್: ಮುಸ್ಲಿಂ ವಿಮೆನ್ಸ್ ಸ್ಟ್ರಗಲ್ ಫಾರ್ ಎಂಟ್ರಿ ಇನ್ ಟು ಹಾಜಿ ಅಲಿ ದರ್ಗಾ. (೨೦೧೭).
೨. ಇಂಡಿಯನ್ ಮುಸ್ಲಿಂ ವಿಮೆನ್ಸ್ ಮೂವ್ಮೆಂಟ್: ಫಾರ್ ಜಂಡರ್ ಜಸ್ಟಿಸ್ ಅಂಡ್ ಈಕ್ವಲ್ ಸಿಟಿಜನ್ಶಿಪ್. ೨೦೨೦.
೩. ಕರೇಜ್ ಅನ್ಲಾಕಡ್: ೨೦೨೧.
೪. ಸ್ಟೇಟಸ್ ಆಫ್ ವಿಮೆನ್ ಇನ್ ಪಾಲಿಗೆಮಸ್ ಮ್ಯಾರೇಜಸ್ ಅಂಡ್ ನೀಡ್ ಫಾರ್ ಲೀಗಲ್ ಪ್ರೊಟೆಕ್ಷನ್. (೨೦೨೨).
೫. ಸೀಕಿಂಗ್ ಜಸ್ಟಿಸ್ ವಿದಿನ್ ಫ್ಯಾಮಿಲಿ: ಎ ನ್ಯಾಷನಲ್ ಸ್ಟಡಿ ಆನ್ ಮುಸ್ಲಿಂ ವಿಮೆನ್ಸ್ ವ್ಯೂಸ್ ಆನ್ ರಿಫಾರ್ಮ್ಸ್ ಇನ್ ಮುಸ್ಲಿಂ ಪರ್ಸನಲ್ ಲಾ. (೨೦೨೩).
ಝಕಿಯಾ ಅವರೊಡನೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ:
ನಿಮ್ಮ ಬಾಲ್ಯ, ಕುಟುಂಬ, ವಿದ್ಯಾಭ್ಯಾಸ, ವಿವಾಹ..
ತಂದೆಮನೆಯ ಅಜ್ಜ ಬಟ್ಟೆಗಿರಣಿಯ ನೌಕರರಾಗಿದ್ದರು. ತಾಯಿಮನೆಯವರದು ಎಜುಕೇಶನಿಸ್ಟ್ಸ್ ಕುಟುಂಬ. ಮುತ್ತಜ್ಜಿ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಅಜ್ಜ, ಅಜ್ಜಿಯರೂ ಶಿಕ್ಷಕವೃತ್ತಿಯಲ್ಲಿದ್ದರು. ತಂದೆ ಕಾಲೇಜೊಂದರ ಪ್ರಾಂಶುಪಾಲರಾಗಿದ್ದರು. ಅಮ್ಮ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ನಾಲ್ಕು ಮಕ್ಕಳಲ್ಲಿ ನಾನು ಹಿರಿಯವಳು. ಅತಿ ಸಾಂಪ್ರದಾಯಿಕವಲ್ಲದ, ಆಧುನಿಕತೆಗೆ ತೆರೆದುಕೊಂಡ ಕುಟುಂಬ ನಮ್ಮದು. ಗುಜರಾತಿ ಮಾಧ್ಯಮದಲ್ಲಿ ಓದಿದೆ. ಬಳಿಕ ಇಂಗ್ಲಿಷ್ ಮೇಜರ್ ತೆಗೆದುಕೊಂಡೆ. ಗುಜರಾತ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬೋಧಿಸತೊಡಗಿದೆ. ಮೇಲ್ವರ್ಗದ ವ್ಯಕ್ತಿಯೊಂದಿಗೆ ಮದುವೆಯಾಯಿತು. ಅವಮಾನ, ಹೀಗಳಿಕೆ, ಹಿಂಸೆ, ಭಯೋತ್ಪಾದನೆಯ ನರಕಸದೃಶ ಬದುಕನ್ನು ಕುಟುಂಬ ಮರ್ಯಾದೆ ಕಾಪಾಡಲು ಹಲ್ಲುಕಚ್ಚಿ ಸಹಿಸಿದೆ. ಹೊರಬರುವುದೂ ಸುಲಭವಿರಲಿಲ್ಲ. ಸಮಾಜ, ಸಂಸ್ಕೃತಿ, ಪರಂಪರೆ, ಧರ್ಮ ಎಲ್ಲವೂ ಹೆಣ್ಣು ಮೌನವಾಗಿರಲು, ಇರುವುದನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತವೆ. ಆ ವಿಷವರ್ತುಲದಿಂದ ಹೊರಬರಲು ಹದಿನಾರು ವರ್ಷ ಹಿಡಿಯಿತು. ಬದುಕಿನ ಅಮೂಲ್ಯ ಭಾಗ, ಅರಸ್ತುವಿನ ಸಂಪೂರ್ಣ ಬಾಲ್ಯ ಹಿಂಸೆ, ಭಯದ ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆದುಹೋಯಿತು.
೨೦೦೨ರಲ್ಲಿ ಗುಜರಾತ್ ಕೋಮುಗಲಭೆ ಸಂಭವಿಸಿದಾಗ ನೂರಾರು ಅತ್ಯಂತ ಬಡ, ಅಸಹಾಯಕ ಮಹಿಳೆಯರು ನನ್ನ ಬಳಿ ಬಂದರು. ಅವರಿಗಾಗಿ ಕೆಲಸ ಮಾಡುತ್ತ ಒಳಗಿನಿಂದ ಧೈರ್ಯ ಎದ್ದುಬಂತು. ನೊಂದ ಮಹಿಳೆಯರ ಹೋರಾಟದ ಕೆಚ್ಚು ನನ್ನನ್ನು ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಯಿಸಿತು. ಲೋಕದೆದುರು ಭ್ರಮೆಯ ‘ಸುಖೀ ಕುಟುಂಬದ ಬದುಕನ್ನು ತೋರಿಸಲು ಕೌಟುಂಬಿಕ ದೌರ್ಜನ್ಯ ಸಹಿಸಿ ಮೌನವಾಗಿರುವುದು ಅಸಾಧ್ಯವೆನಿಸಿತು. ಹಿಂಸಾತ್ಮಕ ವಿವಾಹ ಬಂಧನದಿಂದ ಹೊರಬರಲು ನಿರ್ಧರಿಸಿದೆ. ೨೦೦೩ರಲ್ಲಿ ವಿಚ್ಛೇದನೆ ಪಡೆದೆ. ಬಳಿಕ ಕೇರಳ ಮೂಲದ ಸೋಮನ್ ನಂಬಿಯಾರರ ಭೇಟಿಯಾಯಿತು. ನಾನೇನಾಗಬೇಕೆಂದು, ಮಾಡಬೇಕೆಂದು ಬಯಸುವೆನೋ ಅದೆಲ್ಲಕ್ಕೂ ಬೇಷರತ್ ಬೆಂಬಲ ನೀಡುವ, ನನ್ನನ್ನು ಅರ್ಥ ಮಾಡಿಕೊಂಡ ಬಾಳಸಂಗಾತಿ ದೊರಕಿದರು. ಹದಿನೆಂಟು ವರ್ಷಗಳಿಂದ ಖುಷಿಯಿಂದ ಜೊತೆಗಿದ್ದೇವೆ. ನನ್ನ ಮಗ, ಅವರ ಮಗಳು ನಮಗಿಬ್ಬರು ಮಕ್ಕಳು. ಮಗನಿಗೆ ಹೆಸರಿನಿಂದಲೇ ಜಾತಿ ಗುರುತಿಸಲಾಗದಂತಹ ಹೆಸರಿಟ್ಟಿದ್ದೆ. ಅರಿಸ್ಟಾಟಲನ ಪೌರ್ವಾತ್ಯ ಹೆಸರು ಅರಸ್ತು. ವಿಚ್ಛೇದನದ ಬಳಿಕ ಕಾನೂನು ಹೋರಾಟ ಮಾಡಿ ನನ್ನ ಹೆಸರನ್ನು ತನ್ನ ಹೆಸರಿನ ಮುಂದೆ ಹಾಕಿಕೊಂಡ. ಒಂದು ಮೊಮ್ಮಗು ಬಂದಿದೆ. ಇನ್ನೊಂದು ಬರುವ ಹಾದಿಯಲ್ಲಿದೆ. ಕುಟುಂಬದವರು ನನ್ನಿಂದ ಯಾವ ಸೇವೆಯನ್ನೂ, ಕೆಲಸವನ್ನೂ ನಿರೀಕ್ಷಿಸುವುದಿಲ್ಲ. ಊಟತಿಂಡಿ, ಮನೆಯ ಒಪ್ಪಓರಣ, ಹಬ್ಬ, ನೆಂಟರ ಉಪಚಾರ, ಯಾತ್ರೆ ಮುಂತಾದ ಯಾವ ಜವಾಬ್ದಾರಿ, ನಿರೀಕ್ಷೆಗಳೂ ಇಲ್ಲ. ನಾನೇ ಕೆಲವೊಮ್ಮೆ ಹೋರಾಟದ, ಸಂಘಟನೆಯ ಹಾದಿಯಲ್ಲಿ ಕುಟುಂಬಕ್ಕೆ ಸಮಯ ಕೊಡಲಾಗುತ್ತಿಲ್ಲವಲ್ಲ ಎಂದು ಆತಂಕಗೊಳ್ಳುವುದಿದೆ. ‘ನೀವು ಮಾಡುತ್ತಿರುವ ಕೆಲಸ ತುಂಬ ಮುಖ್ಯವಾದದ್ದು. ಇದೆಲ್ಲದರ ಬಗೆಗೆ ತಲೆ ಕೆಡಿಸಿಕೊಳ್ಳಬೇಡಿ, ಮುಂದುವರೆಯಿರಿ ಎಂದು ನನ್ನ ಸಂಗಾತಿ ಮತ್ತು ಮಗ-ಸೊಸೆ ಒತ್ತಾಸೆಯಾಗಿ ನಿಲ್ಲುತ್ತಾರೆ. ಇಂತಹ ಅಪೂರ್ವ ಬೆಂಬಲ ಹೋರಾಟಗಾರ್ತಿಯರಿಗೆ ಸಿಗುವುದು ಬಲುವಿರಳ.
ನಿಜ ಹೇಳಬೇಕೆಂದರೆ ನೀವಿಂದು ಕಾಣುವ ಝಕಿಯಾ ಹುಟ್ಟಿದ್ದು ೨೦೦೩ರಲ್ಲಿ. ವಿಚ್ಛೇದನೆ ಪಡೆದ ದಿನವನ್ನು ಹುಟ್ಟಿದ ದಿನವೆಂದು ಭಾವಿಸಿರುವೆ. ನನಗೀಗ ೨೨ ವರ್ಷ ಅಷ್ಟೇ, ಇನ್ನೂ ಯುವತಿ ಅನಿಸುತ್ತಿದೆ. (ನಗು). ಮನೆಗೆಲಸದವಳಂತಿದ್ದ ಹಿಂದಿನ ಬದುಕಿಗಿಂತ ಈ ಬದುಕು ಸಂಪೂರ್ಣ ಭಿನ್ನವಾಗಿದೆ.
ನಿಮ್ಮ ಹೋರಾಟ, ಸಂಘಟನೆಗೆ ಆದರ್ಶ, ಸ್ಫೂರ್ತಿ ಯಾರು?
ಮೌನ ಮುರಿದು ದೌರ್ಜನ್ಯದ ವಿರುದ್ಧ ಎದ್ದು ನಿಲ್ಲುವವರೆಲ್ಲರೂ ನನ್ನ ಸ್ಫೂರ್ತಿಯಾಗಿದ್ದಾರೆ. ಒಮ್ಮೆ ಒಂದು ಮಹಿಳೆಯರ ಗುಂಪಿನೊಡನೆ ಮಾತನಾಡುವಾಗ, ‘ನೀ ಕಲಿತಾಕಿ ನಮ್ಮಂತೋರಿಗೆಲ್ಲ ಏನಾರಾ ಸಹಾಯ ಆಗಂತದು ಮಾಡಬೇಕು ಎಂದೊಬ್ಬಾಕೆ ಸೂಚಿಸಿದಳು. ಆ ಕ್ಷಣವೇ ನಾನು ಬದಲಾದೆ.
ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಹೋರಾಟಕ್ಕೆ ಭಾರತದ ಸಂವಿಧಾನ ಮತ್ತು ಕುರಾನ್ ಸ್ಫೂರ್ತಿ ಮೂಲಗಳು. ವಿಶ್ವಭ್ರಾತೃತ್ವವನ್ನು ಪ್ರತಿಪಾದಿಸಿದ ಗಾಂಧಿ (ಈಗಾಗಿದ್ದರೆ ವಿಶ್ವ ಸೋದರಿತ್ವ ಎನ್ನುತ್ತಿದ್ದರೇನೋ, ಅಷ್ಟು ಹೆಣ್ಣು ಗುಣ ಅವರಲ್ಲಿತ್ತು) ನಮಗೆ ತುಂಬ ಇಷ್ಟ. ನಮ್ಮ ಹೋರಾಟಕ್ಕೊಂದು ನೆಲೆಗಟ್ಟನ್ನೊದಗಿಸಿರುವ ಬಾಬಾಸಾಹೇಬರಿಗೆ ಆಲ್ ಸಾಲ್ಯೂಟ್ಸ್. ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ನ್ಯಾಯಕ್ಕಾಗಿ ಹೋರಾಡುತ್ತಿರುವವರು ನಮ್ಮ ಸ್ಫೂರ್ತಿ. ನಮ್ಮ ವಿಷನ್: ಹೋರಾಡುವ ಗುಂಪುಗಳೊಡಗೂಡಿ ಕೆಲಸ ಮಾಡುವುದು.
ಗುಜರಾತಿನ ಜನಪರ/ಸ್ತ್ರೀವಾದಿ ಮತ್ತಿತರ ಚಳವಳಿ, ಹೋರಾಟಗಳ ಬಗೆಗೆ.
ಅಭಿವ್ಯಕ್ತಿ ಸ್ವಾತಂತ್ರ್ಯ ತೀರಾ ಹತ್ತಿಕ್ಕಲ್ಪಟ್ಟ, ದಮನ ಮುಚ್ಚಿಡಲ್ಪಟ್ಟ ರಾಜ್ಯ ಗುಜರಾತ್. ಇಲ್ಲಿ ಜನಚಳುವಳಿ ಕಟ್ಟುವುದು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ವರ್ಷಗಟ್ಟಲೆಯಿಂದ ಸೆ. ೧೪೪ ಚಾಲ್ತಿಯಲ್ಲಿದೆ. ಸಾರ್ವಜನಿಕವಾಗಿ ಏನನ್ನೂ ಮಾಡುವುದು ಕಷ್ಟ. ಇದು ಚಳವಳಿ, ಹೋರಾಟದ ಬಲವನ್ನು ಹೊಸಕಿ ಹಾಕಿದೆ. ಪ್ರತಿರೋಧದ ವಿವಿಧ ಮಾರ್ಗಗಳನ್ನು, ಸತ್ಯಾಗ್ರಹವನ್ನು ರೂಪಿಸಿದ ಗಾಂಧಿ ಹುಟ್ಟಿದ ರಾಜ್ಯ ಹೀಗಾಗಿರುವುದು ವರ್ತಮಾನದ ವ್ಯಂಗ್ಯವೆನ್ನಬಹುದು. ಆದರೆ ಇದರ ನಡುವೆಯೂ ಕೆಲವರು ದಿಟ್ಟ ಪ್ರತಿರೋಧ ತೋರಿಸುತ್ತಿದ್ದಾರೆ. ಜೈಲು ಪಾಲಾಗುತ್ತಿದ್ದಾರೆ. ಅವರಿಗೆ ಸಾವಿರದ ಸಲಾಮು.
ಗುಜರಾತ್ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಎನ್ನುತ್ತಾರೆ, ನಿಜವೇ?
ಹೌದು. ಇದು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ರಾಜ್ಯ. ನಡುರಾತ್ರಿ ಹೊತ್ತಿನಲ್ಲೂ ನೀವು ಆರಾಮವಾಗಿ ಯಾವ ಹೆದರಿಕೆಯಿಲ್ಲದೆ ಹೊರಗೆ ಬೈಕಿನಲ್ಲಿ, ಸ್ಕೂಟಿಯಲ್ಲಿ, ನಡೆದುಕೊಂಡು ಓಡಾಡಬಹುದು. ನೀವು ಮುಸ್ಲಿಂ ಅಲ್ಲದಿದ್ದರೆ, ಪ್ರಶ್ನಿಸುವವರಲ್ಲದಿದ್ದರೆ ಮಹಿಳೆಯರಿಗಿದು ಸುರಕ್ಷಿತ ನೆಲವಾಗಿದೆ.
ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಧರ್ಮದ ಆಧಾರದಲ್ಲಿ ಸಂಘಟನೆಯಾಗತೊಡಗಿದರೆ, ‘ಹಿಂದೂ ಫೆಮಿನಿಸ್ಟ್, ‘ಮುಸ್ಲಿಂ ಫೆಮಿನಿಸ್ಟ್, ‘ಕ್ರಿಶ್ಚಿಯನ್ ಫೆಮಿನಿಸ್ಟ್ ಎಂದುಕೊಂಡರೆ ಅದು ಸೋದರಿತ್ವವನ್ನು ಒಡೆಯುವ ಭಯವಿಲ್ಲವೆ?
ನಾನು ನನ್ನನ್ನು ಇಸ್ಲಾಮಿಕ್ ಫೆಮಿನಿಸ್ಟ್ ಎಂದು ಕರೆದುಕೊಳ್ಳಬಯಸುವುದಿಲ್ಲ. ನಾನು ಮಹಿಳಾ ಸಮಾನತೆಯನ್ನು ನಂಬುವಂತೆಯೇ ಮಾನವ ಸಮಾನತೆಯನ್ನೂ ನಂಬುತ್ತೇನೆ.
ಕೆಲವು ಸ್ತ್ರೀವಾದಿ ಹೋರಾಟಗಾರರು ಯಾಕೆ ಕುರಾನ್, ಷರಿಯ ಅಂತೀರಿ? ಅದರಾಚೆ ಬನ್ನಿ ಎನ್ನುತ್ತಾರೆ. ನಾನದನ್ನು ಒಪ್ಪುವುದಿಲ್ಲ. ನ್ಯಾಯಕ್ಕಾಗಿ ಹೋರಾಡುವ ಎಷ್ಟೊಂದು ಸಂಘಟನೆ, ಗುಂಪುಗಳಿದ್ದಾಗ್ಯೂ ಮಹಿಳೆಯರಿಗೆಂದೇ ಬೇರೆ ಯಾಕೆ ಬೇಕು? ಅದೇ ಕಾರಣಕ್ಕೆ ಮುಸ್ಲಿಂ ಮಹಿಳೆಯರಿಗೂ ಬೇರೆ ಸಂಘಟನೆ ಬೇಕು. ಸಂವಿಧಾನವೇ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿರುವಾಗ ನಂನಮ್ಮ ಧರ್ಮ ಅನುಸರಿಸುತ್ತಲೇ ಅದರೊಳಗಿರುವ ಸಮಾನತೆ, ಹಕ್ಕುಗಳನ್ನು ಕೇಳಬಹುದು. ಧರ್ಮದ ಆವರಣ ಪ್ರವೇಶಿಸಿ ನಿಮ್ಮ ಹಕ್ಕುಗಳನ್ನು ಕೇಳುವುದು ಸುಲಭವಿಲ್ಲ. ಮೋಸ್ಟ್ ಚಾಲೆಂಜಿಂಗ್ ಅದು. ಫೆಮಿನಿಸ್ಟ್ ಗ್ರೂಪ್ಸ್ ಹ್ಯಾವ್ ಶೈಡ್ ಅವೇ ಫ್ರಂ ದಿಸ್. ಇದು ಧರ್ಮದ ಆವರಣದೊಳಗೆ ಸ್ತ್ರೀವಾದಿ ಚಿಂತನೆಗಳಿರದ ಹಾಗೆ, ದಿಟ್ಟ ಮಹಿಳೆಯರಿರದ ಹಾಗೆ ಮಾಡಿದೆ. ಈ ಖಾಲಿ ಬಳಸಿಕೊಂಡು ಪ್ರತಿ ಧರ್ಮವೂ ಮಹಿಳೆಯರನ್ನು ದಾಳದಂತೆ ಬಳಸಿಕೊಳ್ಳುತ್ತಿದೆ. ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ಕೊಟ್ಟ ಧರ್ಮ ಇಸ್ಲಾಂ. ಆದರೆ ಸಂಪ್ರದಾಯವಾದಿ ಪುರುಷರ ನೆರಳಿನಲ್ಲಿ ಅರಳುವ ಧಾರ್ಮಿಕ ಸಂಘಟನೆಗಳ ಮಹಿಳೆಯರು ಪುರುಷರ ಭಾಷೆಯನ್ನೇ ಮಾತಾಡುತ್ತಾರೆ. ಬೇರೆ ಯೋಚನೆಗಳೇ ಅವರಿಗೆ ಬರುವುದಿಲ್ಲ. ಸ್ವತಂತ್ರವಾಗಿ ಮಾತನಾಡುವಷ್ಟು, ತಮ್ಮದೇ ಅಭಿಪ್ರಾಯ ಹೇಳುವಷ್ಟು, ಪ್ರಶ್ನಿಸುವಷ್ಟು ಮುಂದಾಳ್ತಿಯರಾಗುವ ಅವಕಾಶ ಸಿಗುವುದೇ ಇಲ್ಲ. ಸೂಕ್ಷ್ಮ ಸಂವೇದನೆ, ಅನುಭವ ಪ್ರಾಮಾಣ್ಯ, ಭಾವುಕತೆ, ಸೋದರಿತ್ವಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಮೌನವಾಗಿ, ಹೌದಮ್ಮಗಳಾಗಿ ‘ಉತ್ತಮ ಮಹಿಳೆಯರಾಗಿದ್ದಾರೆ. ಎಲ್ಲ ಧರ್ಮಗಳ ವ್ಯವಸ್ಥೆಯೊಳಗೆ ಸಂಘಟಿತರಾದ ಮಹಿಳೆಯರ ಸ್ಥಿತಿ ಹೀಗೆಯೇ ಇದೆ. ಹಾಗಾಗದಿರಲು ಸ್ಟ್ರಾಟೆಜಿಕ್ ಆಗಿ ನಾವು ಧರ್ಮದ ಅಸ್ಮಿತೆಯನ್ನು ಬಳಸಿಕೊಂಡು ಒಳ ಹೊಕ್ಕಬೇಕು.
ನಾನು ನಾಸ್ತಿಕಳೋ, ಆಜ್ಞೇಯವಾದಿಯೋ ಆಗಿರಬಹುದು. ಆದರೆ ಧರ್ಮ-ದೇವರನ್ನು ನಂಬುವ ಅಸಂಖ್ಯ ಸಾಮಾನ್ಯ ಮಹಿಳೆಯರಿದ್ದಾರೆ. ತಮ್ಮನ್ನು ಪುರುಷರಿಗೆ ಸಮನಾಗಿ ಸೃಷ್ಟಿ ಮಾಡಲಾಗಿದೆ ಮತ್ತು ದೇವರು ತಾರತಮ್ಯ ಎಸಗಲು ಸಾಧ್ಯವೇ ಇಲ್ಲ ಎಂದವರು ಧೃಢವಾಗಿ ನಂಬಿದ್ದಾರೆ. ಬಹುತೇಕ ಬಡ, ಅನಕ್ಷರಸ್ಥ, ಅಧಿಕಾರವಂಚಿತ ಮುಸ್ಲಿಂ ಮಹಿಳೆಯರ ನಂಬಲರ್ಹ ಬಂಧು, ಶಕ್ತಿ ಅಲ್ಲಾ ಮಾತ್ರ. ದೇವರ ಜೊತೆಗಿನ ಅವರ ಸಂಬಂಧ ವೈಯಕ್ತಿಕ ನೆಲೆಯದು ಮತ್ತು ಅಧ್ಯಾತ್ಮಿಕವಾದದ್ದು. ಒಬ್ಬ ಫೆಮಿನಿಸ್ಟ್, ಸೆಕ್ಯುಲರ್ ವ್ಯಕ್ತಿಯಾಗಿ ನಾನು ಅವರ ಈ ನಿಲುವನ್ನು ಗೌರವಿಸುತ್ತೇನೆ. ನನ್ನ ಪ್ರಕಾರ ಮಿಕ್ಕವರ ವಿಶ್ವಾಸವನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯಿಂದ ಬದುಕುವುದೇ ಸೆಕ್ಯುಲರಿಸಂನ ನಿಜವಾದ ಅರ್ಥ. ಸಂವಿಧಾನ ಹೇಳುವುದೂ ಅದನ್ನೇ. ದೇಶ ಧರ್ಮನಿರಪೇಕ್ಷವಾಗಿದೆ. ಯಾವುದೇ ಒಂದು ಧರ್ಮಕ್ಕೂ ವಿಶೇಷ ಸ್ಥಾನಮಾನವಿಲ್ಲ, ಯಾವುದೂ ಸರ್ಕಾರವನ್ನು ಪ್ರಭಾವಿಸುವಂತಿಲ್ಲ. ಆದರೆ ದೇಶದ ಪ್ರತಿ ವ್ಯಕ್ತಿಗೂ ವೈಯಕ್ತಿಕವಾಗಿ ತನಗಿಷ್ಟ ಬಂದ ಧರ್ಮವನ್ನು ಆಯ್ಕೆ ಮಾಡಿಕೊಂಡು ಬದುಕುವ ಸ್ವಾತಂತ್ರ್ಯವಿದೆ.
ನಾವು ಭಾರತದ ಪ್ರಜೆಗಳು. ಅದು ನಮ್ಮ ಮೊದಲ ಅಸ್ಮಿತೆ. ಸಂವಿಧಾನ ಹಕ್ಕುಗಳನ್ನು ಕೊಟ್ಟಿದೆ. ಅದನ್ನು ಪಡೆದು, ಧಾರ್ಮಿಕ ಚೌಕಟ್ಟಿನೊಳಗೂ ನಮ್ಮ ಹಕ್ಕುಗಳನ್ನು ಪಡೆಯೋಣ, ಕರ್ತವ್ಯಗಳನ್ನು ನಿಭಾಯಿಸೋಣ; ಅಲ್ಪಸಂಖ್ಯಾತ ಅಸ್ಮಿತೆಯನ್ನು ದಮನಿತ ಅಸ್ಮಿತೆಯಾಗಿ ಮಾತ್ರ ಮಾಡಿಕೊಳ್ಳದೆ ಹಕ್ಕುಜಾಗೃತಿಯ ಅಸ್ಮಿತೆಯನ್ನಾಗಿ ರೂಪಿಸಿಕೊಳ್ಳೋಣ ಎನ್ನುವುದು ಬಿಎಂಎಂಎ ನಿಲುವು. ಎಂದೇ ನಮ್ಮ ಸಂಘಟನೆಯ ಮುಸ್ಲಿಂ ಐಡೆಂಟಿಟಿಯು ಧರ್ಮದ ಆಧಾರದಲ್ಲಿ ಮಹಿಳೆಯರನ್ನು ಪ್ರತ್ಯೇಕಿಸಲೆಂದು ಅಲ್ಲ, ಕಾರ್ಯತಂತ್ರದ ಭಾಗವಾಗಿ ಅಡಕವಾಗಿದೆ. ಧರ್ಮದೊಳಗಿನ ಆವರಣದ ಅನ್ಯಾಯವನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯ ಮಾಡಿದೆ. ಪಾವ್ಲೋ ಫ್ರೇರೆ ಹೇಳುವಂತೆ ದಮನಿತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ತಾವೇ ಎದ್ದು ನಿಲ್ಲುವಷ್ಟು ಬಿಡುಗಡೆ ಪಡೆಯದಿದ್ದರೆ ಬದಲಾವಣೆಯ ಯಾವುದೇ ಭರವಸೆಯಿಡಲು ಸಾಧ್ಯವಿಲ್ಲ. ಎಂದೇ ನಮ್ಮ ಧಾರ್ಮಿಕ ಅಸ್ಮಿತೆಯು ಸಂಘಟಿಸಲು, ವಿಶೇಷ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಲು ಮುಖ್ಯವಾಗಿದೆ.
ಅದೇ ಹೊತ್ತಿಗೆ ಮುಸ್ಲಿಂ ಮಹಿಳೆಯರಲ್ಲದೆ ಮುಸ್ಲಿಮೇತರ ಮಹಿಳೆಯರ ಕಷ್ಟಗಳಿಗೂ ದನಿಗೂಡಿಸಲು ಅದು ಸಿದ್ಧವಾಗಿದೆ. ನಿಮಗೆ ಅಚ್ಚರಿಯಾಗಬಹುದು ಅನುಪಮಾ, ನಾವು ಮಾಡುವ ‘ಔರತೋಂಕಿ ಷರಿಯತ್ ಅದಾಲತ್ನಲ್ಲಿ ೨೦% ಹಿಂದೂ ಮಹಿಳೆಯರೂ ಭಾಗವಹಿಸಿ ಕಾನೂನು ಸಲಹೆ ಪಡೆಯುತ್ತಾರೆ.
ನೀವು ಮತ್ತು ನಿಮ್ಮ ಸಂಘಟನೆ ಎದುರಿಸಿದ ದೊಡ್ಡ ಸವಾಲು.
ಸಾಕಷ್ಟು ಸವಾಲು ಎದುರಿಸಿದ್ದೇವೆ. ಮುಸ್ಲಿಮರದು ಮೊದಲಿನಿಂದಲೂ ಅತಿಕಷ್ಟದ ಬದುಕನ್ನು ಕಟ್ಟಿಕೊಂಡ ಸಮುದಾಯ. ಇಂಡೋನೇಷ್ಯಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವುದು ಭಾರತದಲ್ಲಿ. ಆದರೆ ಶಿಕ್ಷಣ, ಆದಾಯ, ರಾಜಕೀಯ ಪ್ರಾತಿನಿಧ್ಯ, ಉದ್ಯೋಗ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅಂಚಿಗೆ ಸರಿಸಲ್ಪಟ್ಟ ಸಮುದಾಯ. ಅತ್ಯಂತ ಸಾಂಪ್ರದಾಯಿಕ ಮನಸ್ಥಿತಿ ಇದಕ್ಕೆ ಕಾರಣವೂ, ಪರಿಣಾಮವೂ ಆಗಿದೆ. ಸಮುದಾಯದ ಆಲೋಚನೆಯಲ್ಲಿ ಪ್ರಜಾಪ್ರಭುತ್ವ, ಲಿಂಗಸಮಾನತೆ, ಮಹಿಳಾ ಹಕ್ಕುಗಳ ಅರಿವುಗಳನ್ನು ತರುವುದೇ ಕಷ್ಟವಾಗಿದೆ. ಸಮುದಾಯದ ನಾಯಕತ್ವವಾದರೂ ಎಂತಹದು? ಒಂದೋ ಸಂಪ್ರದಾಯವಾದಿ ಧಾರ್ಮಿಕ ವಲಯದ್ದು ಅಥವಾ ಸ್ವಾರ್ಥಿ ರಾಜಕಾರಣಿಗಳದು. ಅವರಿಬ್ಬರೂ ಒಂದೇ, ಸಮಾನ ಅಪಾಯಕಾರಿಗಳವರು. ಇಲ್ಲಿ ಸೆಕ್ಯುಲರ್ ಲೀಡರ್ಶಿಪ್ ಇಲ್ಲ. ಎಲ್ಲ ವರ್ಗದ ಮುಸ್ಲಿಮರು, ಅದೂ ಪುರುಷರು ಒಟ್ಟು ಸೇರುವುದು ಮಸೀದಿಯಲ್ಲಿ ಮಾತ್ರ. ಬೇರೆಕಡೆ ಸೆಕ್ಯುಲರ್ ಸ್ಪೇಸ್ನಲ್ಲಿ ಅವರು ಸೇರುವುದೇ ಇಲ್ಲ. ಇದು ಅವರನ್ನು ಸಂಘಟಿಸಲು ದೊಡ್ಡ ಸವಾಲಾಗಿದೆ.
ತ್ರಿವಳಿ ತಲಾಖ್ ಸಮಯದಲ್ಲಿ ಅದು ಹೇಗೋ ಇದನ್ನು ದಾಟಿದೆವು. ಸಾವಿರಾರು ಸಭೆ, ಸೆಮಿನಾರು, ಕಾರ್ಯಾಗಾರ, ಚರ್ಚೆ ನಡೆಸಿದೆವು. ಇರುವ ವಿಷಯ ತಿಳಿಸಿದೆವು. ಮಹಿಳೆಯರಿಂದ ಅಗಾಧ ಬೆಂಬಲ ಬಂತು. ಪುರುಷರೂ ಕೈಜೋಡಿಸಿದರು. ತ್ರಿವಳಿ ತಲಾಖನ್ನು ಕುರಾನಿನಲ್ಲಿ ಹೇಳಿಲ್ಲ; ಇಸ್ಲಾಮಿಕ್ ದೇಶಗಳಾದ ಬಾಂಗ್ಲಾ-ಪಾಕಿಸ್ತಾನದಲ್ಲೂ ಇಲ್ಲ; ಭಾರತದಲ್ಲಿ ಮಾತ್ರ ಇಟ್ಟುಕೊಂಡಿದ್ದೇವೆಂದು ಜನರಿಗೆ ತಿಳಿಸಿ ಹೇಳಿದೆವು.
ದುರಂತವೆಂದರೆ ಸಾಂಪ್ರದಾಯಿಕ ಶಕ್ತಿಗಳಷ್ಟೇ ಮುಸ್ಲಿಂ ಗಣ್ಯವರ್ಗದಿಂದಲೂ ಬಿಎಂಎಂಎಯನ್ನು ಮೂಲೆಗೊತ್ತುವ, ಅಪಖ್ಯಾತಿಗೊಳಿಸುವ ಯತ್ನ ನಡೆಯಿತು. ನಾವೊಂದು ಅಧ್ಯಯನ ನಡೆಸಿ ೧೨೦ ತ್ರಿವಳಿ ತಲಾಖ್ ಪ್ರಕರಣಗಳನ್ನು ಪರಿಶೀಲಿಸಿ ಬರೆದಿದ್ದೆವು. ಅದಕ್ಕೆ, ‘ಬರೀ ೧೨೦ ಜನ ತ್ರಿವಳಿ ತಲಾಖ್ ತೆಗೆದುಕೊಂಡದ್ದಕ್ಕೆ ಷರಿಯ ಬದಲಿಸಬೇಕೇ? ಎಂದು ಬರೆದರು. ೧೨೦ ಎನ್ನುವುದು ನಾವು ತೆಗೆದುಕೊಂಡ ಸ್ಯಾಂಪಲ್ ಆಗಿತ್ತಷ್ಟೇ. ಇನ್ನೆಷ್ಟೋ ಸಾವಿರಾರು ಮಹಿಳೆಯರು ಅದರಿಂದ ನೊಂದಿದ್ದರು. ಇಂತಹ ವಾಸ್ತವಗಳ ಪರಿಚಯವಿರದ ಪರಿಚಿತ, ಕುಲೀನ ಮುಸ್ಲಿಂ ಮಹಿಳೆಯೊಬ್ಬರು, ‘ನೀವು ಇಸ್ಲಾಮನ್ನು ಕಟಕಟೆಗೆ ತಂದು ನಿಲ್ಲಿಸಿದಿರಿ ಎಂದು ಮೂದಲಿಸಿದರು.
ಈಗ ಸಿಎಎ, ಬುಲ್ಡೋಜರ್ ಧ್ವಂಸ, ಹಿಜಾಬ್-ನಮಾಜ್-ಅಜಾನ್-ಗೋಮಾಂಸ ಎಲ್ಲವೂ ಇಷ್ಯೂಗಳೇ ಆಗಿರುವಾಗ ಮಹಿಳೆಯರನ್ನು ಸಂಘಟನೆ ಮಾಡುವುದು ತುಂಬ ಕಷ್ಟವಾಗಿದೆ. ಮುಸ್ಲಿಂದ್ವೇಷದ ವಾತಾವರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ನಮ್ಮ ಬಹುಪತ್ನಿತ್ವ ನಿಷೇಧ ಅರ್ಜಿಯು ಮುಂದೆ ಹೋಗಲು ಅಥವಾ ಅದಕ್ಕಾಗಿ ಜನರನ್ನು ಒಟ್ಟುಗೂಡಿಸಿ ಹೋರಾಡಲು ಅಸಾಧ್ಯವಾಗಿದೆ. ಯಾವುದೇ ಪ್ರಶ್ನೆಯು ಇಸ್ಲಾಂ ವಿರೋಧದಂತೆ, ವಿದ್ರೋಹದಂತೆಯೇ ಕೇಳಿಸುತ್ತ ಸುಧಾರಣೆ ಕಷ್ಟಸಾಧ್ಯವಾಗಿದೆ.
ಸಂವಿಧಾನಾತ್ಮಕ ಹಕ್ಕುಗಳು ಮತ್ತು ಕುರಾನಿನ ಹಕ್ಕುಗಳು ಇವೆರೆಡನ್ನು ಒಗ್ಗೂಡಿಸಿ ಸಾಧಿಸಿಕೊಳ್ಳುವ ಬಗೆ ಹೇಗೆ?
ನಮ್ಮ ಸಂವಿಧಾನದ ಅನನ್ಯತೆ ಎಂದರೆ ಅದು ಧರ್ಮನಿರಪೇಕ್ಷವಾಗಿರುತ್ತಲೇ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಈ ಅಂಶವು ನಾಗರಿಕರಾಗಿರುವ ಮಹಿಳೆಯರನ್ನು ತಂತಮ್ಮ ಧರ್ಮದಡಿ ನ್ಯಾಯಕ್ಕೆ ಅರ್ಹರನ್ನಾಗಿ ಮಾಡುತ್ತದೆ. ಮಹಿಳೆಯರು ಎರಡೂ ಮೂಲಗಳಿಂದ ಉಪಯೋಗ ಪಡೆಯಬಹುದಾಗಿದೆ. ಆದರೆ ಪುರುಷ ಪ್ರಾಧಾನ್ಯ ಮತ್ತು ರಾಜಕಾರಣಗಳು ಈ ಎರಡೂ ನೆಲೆಗಳಲ್ಲೂ ನ್ಯಾಯ ಸಿಗದಂತೆ ಮಾಡಿವೆ.
ನಾನು ಸಮಾನ ನಾಗರಿಕ ಸಂಹಿತೆಯನ್ನು ಸ್ವಾಗತಿಸುತ್ತೇನೆ. ಹೀಗೆಂದ ಕೂಡಲೇ ಯಾವ ಬಿರುದು ಸಿಗಲಿದೆಯೆಂಬ ಅರಿವಿದೆ. ಸ್ವಾತಂತ್ರ್ಯ ಹೋರಾಟಗಾರರು, ಬಾಬಾಸಾಹೇಬರು ಎಲ್ಲರೂ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಈಗ ಆ ಮಾತೆತ್ತುವುದೇ ಕಷ್ಟವೆನ್ನುವಂತೆ ರಾಜಕೀಕರಣಗೊಂಡುಬಿಟ್ಟಿದೆ. ಹಾಗೆ ನೋಡಿದರೆ ಭಾರತದ ಎಲ್ಲ ಮಹಿಳೆಯರಿಗೂ ನ್ಯಾಯಯುತ ಬದುಕು ನಡೆಸಲು ಸಮಾನ ನಾಗರಿಕ ಸಂಹಿತೆ ಬರಲೇಬೇಕಾಗಿದೆ. ಆದರೆ ಅದನ್ನು ತರಲು ಪಟ್ಟು ಹಿಡಿದು ಪ್ರಯತ್ನಿಸುತ್ತಿರುವವರಾರು? ನಮ್ಮ ವಿರೋಧಿ ಪಕ್ಷ. ದುರಾದೃಷ್ಟ, ಆದರೆ ವಾಸ್ತವ.
ಆದರ್ಶಮಯ ಪರಿಸರದಲ್ಲಿ ಧರ್ಮನಿರಪೇಕ್ಷ ಕಾನೂನುಗಳೇ ಅತ್ಯುತ್ತಮ. ಆದರೆ ನಾವೀಗ ಆ ವಾಸ್ತವದಿಂದ ತುಂಬ ದೂರವಿದ್ದೇವೆ. ನನ್ನ ಜೀವಿತಾವಧಿಯಲ್ಲಂತೂ ಕಾಣಲು ಸಾಧ್ಯವಿಲ್ಲದಷ್ಟು ಅದು ದೂರವಿದೆ. ಏಕರೂಪ ನಾಗರಿಕ ಸಂಹಿತೆ ಎನ್ನುವುದನ್ನು ಅತಿ ರಾಜಕೀಕರಣಗೊಳಿಸಿದ್ದಾರೆ. ಹೀಗಿರುತ್ತ ಕುರಾನಿನಲ್ಲಿ ಕೊಡಲ್ಪಟ್ಟ ಮಹಿಳೆಯರ ಹಕ್ಕುಗಳು ಭಾರತದ ಕಾನೂನಾಗಿ ಪರಿಗಣಿತವಾಗಿ ಮಹಿಳೆಯರಿಗೆ ಹಕ್ಕುಗಳು ಸಿಗುವುದು ಅನಿವಾರ್ಯವಾಗಿದೆ.
ಧರ್ಮದೊಳಗೆ ಹಕ್ಕು ಕೇಳುತ್ತ ನಡೆಸುವ ಹೋರಾಟವು ಧರ್ಮದ ಸಂಕಷ್ಟ ಕಾಲದಲ್ಲಿ ಎಸಗುವ ದ್ರೋಹದಂತೆ ಕೇಳುವುದಿಲ್ಲವೆ? ಸ್ತ್ರೀಪುರುಷರನ್ನು ಒಡೆಯಲು ಎದುರಾಳಿ ನಡೆಸುವ ತಂತ್ರದಿಂದ ಬೆಂಬಲ ಪಡೆಯುವುದಿಲ್ಲವೆ? ಇವೆರೆಡನ್ನು ಹೇಗೆ ನಿಭಾಯಿಸುತ್ತಿರುವಿರಿ?
ನಮ್ಮ ವಿರೋಧಿ ಪಕ್ಷದ ಸರ್ಕಾರವಿರುವಾಗ ತ್ರಿವಳಿ ತಲಾಖ್ ವಿರುದ್ಧ ಮಾತನಾಡಿದೆವೆಂದು ನಮ್ಮ ವಿರುದ್ಧ ಟೀಕೆಗಳಿದ್ದವು. ಆದರೆ ಅನ್ಯಾಯ ನಿರಂತರವಾಗಿ ಸಂಭವಿಸುತ್ತಲೇ ಇರುವಾಗ ನ್ಯಾಯ ಮತ್ತು ಸಮಾನತೆಯನ್ನು ಪಡೆದುಕೊಳ್ಳಲು ‘ಸೂಕ್ತ ಸಮಯ ಅಂತ ಯಾವುದೂ ಇಲ್ಲ. ಕೇವಲ ಷರಿಯತ್ ಇಸ್ಲಾಮಿಕ್ ಕಾನೂನು ಆಗಲಾರದು. ಅದನ್ನು ಸೂಕ್ತವಾಗಿ ಕ್ರೋಢೀಕರಿಸಬೇಕು. ಎಲ್ಲ ಮುಸ್ಲಿಂ ದೇಶಗಳೂ ಮುಸ್ಲಿಂ ವೈಯಕ್ತಿಕ ಕಾನೂನನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿವೆ. ವಿವಾಹ-ಒಪ್ಪಿಗೆ-ಮದುವೆ ವಯಸ್ಸು-ಆಸ್ತಿ-ವಿಚ್ಛೇದನೆ-ಜೀವನಾಂಶ ಇತ್ಯಾದಿಗಳ ಬಗೆಗೆ ಸ್ಪಷ್ಟವಾದ, ಈ ಕಾಲಕ್ಕೂ ಅನ್ವಯವಾಗಬಲ್ಲಂತಹ ಕಾನೂನುಗಳನ್ನು ರೂಪಿಸಿವೆ. ಆದರೆ ಭಾರತದಲ್ಲಿ ಏನೂ ಮಾಡಿಲ್ಲ. ನೋಡಿ: ಇಸ್ಲಾಮಿನಲ್ಲಿ ಮದುವೆ ಎನ್ನುವುದು ಒಂದು ಸಾಮಾಜಿಕ ಒಪ್ಪಂದ. ಒಪ್ಪಂದ ಮಾಡಿಕೊಳ್ಳುವಾಗ ವಧುವಿನ ಸಮ್ಮತಿ ಅತ್ಯಗತ್ಯ. ಆದರೆ ಸಾಮಾಜಿಕ ಒಪ್ಪಂದವನ್ನು ಅರ್ಥ ಮಾಡಿಕೊಂಡು ಮದುವೆಗೆ ಅನುಮತಿ ಕೊಡಲು ಒಂದು ಹೆಣ್ಣುಮಗುವಿಗೆ ಹೇಗೆ ಸಾಧ್ಯ? ಎಂದರೆ ಇಸ್ಲಾಮಿನಲ್ಲಿ ಬಾಲ್ಯವಿವಾಹ ಮಾಡುವ ಹಾಗೆಯೇ ಇಲ್ಲ. ಆದರೂ ಬಾಲ್ಯವಿವಾಹ ನಡೆಯುತ್ತಿದೆ. ಇಸ್ಲಾಂ ಹುಟ್ಟಿದ ಸಮಯದಲ್ಲಿ ಯುದ್ಧ, ಜಗಳ, ದಂಗೆಗಳು ನಡೆದು ಬಹುತೇಕ ಗಂಡಸರು ಹತರಾಗುತ್ತಿದ್ದರು. ಹೆಣ್ಣುಗಳು ಹೆಚ್ಚುವರಿಯಾಗಿದ್ದರು. ಆ ಕಾರಣದಿಂದ ಬಹುಪತ್ನಿತ್ವವನ್ನು ಮಾನ್ಯ ಮಾಡಿದ್ದರು. ಆದರೆ ಪ್ರೋತ್ಸಾಹಿಸಲಿಲ್ಲ. ಒಂದಕ್ಕಿಂತ ಹೆಚ್ಚು ಮಹಿಳೆಯರು ಪತ್ನಿಯರಾದರೆ ಅವರಿಗೆ ಎಲ್ಲವನ್ನು ಸಮಾನವಾಗಿ ಹಂಚಬೇಕು; ಐಹಿಕ ಸಂಪತ್ತುಗಳನ್ನು ಸಮಾನವಾಗಿ ಹಂಚಿದಂತೆ ಪ್ರೀತಿಯನ್ನು, ಕಾಳಜಿ ಗೌರವಗಳನ್ನು ಹಂಚುವುದು ಕಷ್ಟವೆಂದು ಪ್ರವಾದಿಯವರೇ ಹೇಳಿದ್ದಾರೆ. ಈಗವರಿದ್ದಿದ್ದರೆ ಏಕಪತ್ನಿ ವಿವಾಹವನ್ನೇ ಕಡ್ಡಾಯಗೊಳಿಸುತ್ತಿದ್ದರು. ಆದರೆ ನಮ್ಮ ಪುರುಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆಗಳನ್ನು ತಿರುಚಿದರು. ಈಗಲೂ ಬಹುಪತ್ನಿತ್ವ ಚಾಲ್ತಿಯಲ್ಲಿದೆ.
ಈಗ ಕಂಡುಬರುತ್ತಿರುವ ‘ವಹಾಬಿ ಶುದ್ಧ ಇಸ್ಲಾಮಿನ ವರಸೆಯಲ್ಲಿ ‘ಇದಿಲ್ಲ, ಅದಿಲ್ಲ, ಹೀಗಿಲ್ಲ, ಹಾಗಿಲ್ಲ, ಹೀಗೆ ಮಾಡಬೇಡ, ಹಾಗೆ ಇರಬೇಡ ಎಂಬ ನೋನೋಗಳೇ ತುಂಬಿಹೋಗಿವೆ. ತೈಲದೇಶಗಳ ಡ್ರೆಸ್ಕೋಡ್ ಸೇರಿದಂತೆ ಎಲ್ಲವನ್ನೂ ಹೇರುತ್ತಿದ್ದಾರೆ. ಎಂತಹ ಬಟ್ಟೆ, ಎಲ್ಲಿ, ಯಾವಾಗ ಧರಿಸಬೇಕು? ಕೂದಲು ಹೇಗೆ ಬಿಡಬೇಕು? ದೇಹ ಹೇಗೆ ಮುಚ್ಚಬೇಕು? ಮುಂತಾದ ಅಮುಖ್ಯ ವಿಷಯಗಳ ಬಗೆಗೆ, ಸಂಕೇತಗಳ ಬಗೆಗೆ ಎಂದೂ ಬದಲಾಗದ ಕಠೋರ ನಿಯಮಗಳ ರೂಪಿಸಿ, ವ್ಯಕ್ತಿತ್ವ ತಂತಾನೇ ಸಹಜವಾಗಿ ಅರಳುವ ಅವಕಾಶವನ್ನೇ ಕೊಡದೆ ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ. ಇಸ್ಲಾಂ ವ್ಯಕ್ತಿತ್ವ ಅರಳಬೇಕು (ಇವಾಲ್ವ್ ಆಗಬೇಕು) ಎನ್ನುವ ಧರ್ಮ. ಕರುಣೆ, ಅನುಭೂತಿ, ನ್ಯಾಯ, ವಿವೇಕಗಳು ಇಸ್ಲಾಮಿನ ತಳಹದಿಗಳು. ಎಂದರೆ ಕಾಲಕ್ಕೆ ತಕ್ಕಂತೆ ಮಹಿಳೆಯರಿಗೂ ಪುರುಷರಿಗಿರುವ ಎಲ್ಲ ಹಕ್ಕುಗಳನ್ನು ಕೊಡಬೇಕಿತ್ತು. ಮಹಿಳೆಯರಿಗೆ ಅಲ್ಲಾ ಕೊಟ್ಟದ್ದನ್ನು ಪುರುಷರು ಕಿತ್ತುಕೊಂಡರು. ಮಹಿಳೆಯರಿಗೆ ಹಕ್ಕುಗಳ ಅರಿವೇ ಇಲ್ಲದಂತೆ ಮಾಡಿದರು. ಸಮುದಾಯದ ಪುರುಷರು, ಧಾರ್ಮಿಕ ಮುಖಂಡರು ಕುರಾನಿನಲ್ಲಿ ಹೇಳಿದಂತೆ ನಡೆಯದೆ ಅಪ್ರಾಮಾಣಿಕತೆ ತೋರಿಸಿದರು. ಅದಕ್ಕಾಗಿ ಇವರು ಕಿತ್ತುಕೊಂಡದ್ದನ್ನು ಅವರ ವಿರೋಧಿಗಳೇ ಬಾಣ ಮಾಡಿ ಎಸೆಯುವಂತಾಗಿದೆ. ಇದೊಂದು ಅಬರೆಷನ್ ಹೌದು, ಆದರೆ ಬದಲಾವಣೆ ಸ್ವಾಗತಾರ್ಹವಾದುದೆನ್ನದೇ ವಿಧಿಯಿಲ್ಲ. ದುರಾದೃಷ್ಟವೆಂದರೆ ನಮ್ಮ ಹೋರಾಟದಲ್ಲಿ ಕಾಂಗ್ರೆಸ್ನಂತಹ ಸೆಕ್ಯುಲರ್ ಪಕ್ಷಗಳು ಮೌನವಾಗುಳಿದವು. ಆ ಮೌನವು ಸುಧಾರಣೆಯ ಎಲ್ಲ ಯಶಸ್ಸನ್ನು ಬಿಜೆಪಿ ತೆಗೆದುಕೊಳ್ಳುವಂತೆ ಮಾಡಿತು. ನಾವು ಸದಾ ವಿರೋಧಿಸುತ್ತ ಬಂದ, ದಾರುಣ ಸ್ಥಿತಿಗೆ ನಮ್ಮನ್ನು ದೂಡಿದ ಪಕ್ಷ ನಮ್ಮ ದಾರಿಯನ್ನು ಸುಗಮಗೊಳಿಸಿರುವುದು ವಿಪರ್ಯಾಸವಾದರೂ ಸತ್ಯವಾಗಿದೆ.
ನಿಮ್ಮ ಅಭಿಪ್ರಾಯ ಸೆಕ್ಯುಲರ್, ಡೆಮಾಕ್ರೆಟಿಕ್ ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಸುಧಾರಣೆಯ ಅವಕಾಶಗಳು ಹೆಚ್ಚು ಇವೆಯೆಂದೇ?
ಹೌದು. ಬಹುಧರ್ಮಗಳ ಸೆಕ್ಯುಲರ್ ಪ್ರಜಾಪ್ರಭುತ್ವವಿರುವ ಭಾರತದಲ್ಲಿ ನ್ಯಾಯಯುತ ಧಾರ್ಮಿಕ ಸಮಾಜ ಹೇಗಿರಬಹುದೆಂಬ ಮಾದರಿಯಾಗಿ ಇಸ್ಲಾಮನ್ನು ರೂಪಿಸುವ ಎಲ್ಲ ಅವಕಾಶಗಳಿದ್ದವು. ಹಾಗೆ ಮಾಡಲಿಲ್ಲ.
ಇಸ್ಲಾಂ ಮಹಿಳೆಯರಿಗೆ ನ್ಯಾಯ, ಸಮಾನತೆ ಕೊಟ್ಟಿರುವ ಧರ್ಮ. ಆದರೆ ಮುಸ್ಲಿಂ ಮಹಿಳೆ ಸದಾ ಒಬ್ಬರಲ್ಲ ಒಬ್ಬ ಪುರುಷನಿಗೆ ಅಧೀನಳಾಗಿಯೇ ಇರಬೇಕಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಕಾಲಕ್ಕೆ ತಕ್ಕಂತೆ ಸುಧಾರಣೆಗೊಳ್ಳದೇ ಮುಸ್ಲಿಂ ಮಹಿಳೆ ಹೆಚ್ಚು ತಾರತಮ್ಯ ಎದುರಿಸುವಂತಾಗಿದೆ. ಹಿಂದೂ, ಸಿಖ್, ಕ್ರೈಸ್ತ ಮಹಿಳೆಯರು ಭಾರತ ಸಂವಿಧಾನದ ಪ್ರಕಾರ ಮದುವೆ, ವಿಚ್ಛೇದನೆ, ಆಸ್ತಿ ಹಕ್ಕು, ಪೋಷಕತ್ವ, ಪಾಲಕತನದ ಹಕ್ಕುಗಳನ್ನು ಪಡೆದಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರಿಗೆ ಸುಧಾರಿತ ಕಾನೂನು ಸವಲತ್ತು ಸಿಗಲಿಲ್ಲ. ಭಾರತ ವಿಭಜನೆ ಮತ್ತು ಸ್ವಾತಂತ್ರ್ಯದ ಬಳಿಕ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಸರಿಪಡಿಸುವ ಪ್ರಯತ್ನಗಳಿಗೆ ಒಂದು ಹಿಂಜರಿಕೆ ಅಥವಾ ಅದಕ್ಕೆ ‘ಧಾರ್ಮಿಕ ಭಾವನೆ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂಬ ನೆಪ ಸಿಕ್ಕಿಬಿಟ್ಟಿತು. ಸುಧಾರಣೆಯ ಮಾತು ಬಂದದ್ದೇ ಧಾರ್ಮಿಕ ನಾಯಕರು ತಮ್ಮ ಧಾರ್ಮಿಕ ನಂಬಿಕೆಯೊಳಗೆ ಕೈಹಾಕಬೇಡಿ ಎಂದು ಕೂಗೆಬ್ಬಿಸಿದರು. ಈಗ ಹಿಂದೂ ಬಹುಸಂಖ್ಯಾತ ರಾಷ್ಟ್ರೀಯತೆಯ ಮಾತು ಮೇಲೆ ಬಂದಿರುವಾಗ ಮುಸ್ಲಿಂ ಸಮುದಾಯ ಅಂಚಿಗೆ ದೂಡಲ್ಪಟ್ಟಿರುವಾಗ ಮುಸ್ಲಿಂ ಮಹಿಳೆ ಎಲ್ಲ ದಿಕ್ಕಿನಿಂದಲೂ ಒತ್ತಡ ಎದುರಿಸುವಂತಾಗಿದೆ. ಪಿತೃಪ್ರಾಧಾನ್ಯ ಮತ್ತು ರಾಜಕಾರಣಗಳು ಮುಸ್ಲಿಂ ಮಹಿಳೆಯರಿಗೆ ಧರ್ಮದ ಒಳಗೂ, ಹೊರಗೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಾಗದಂತೆ ಮಾಡಿವೆ.
ಭಾರತದ ಅರ್ಧಭಾಗ ಜನಸಂಖ್ಯೆ ಮಹಿಳೆಯರಿದ್ದೇವೆ. ಆದರೆ ಒಡೆದುಹೋಗಿದ್ದೇವೆ. ನಮ್ಮ ರಾಜಕಾರಣಿಗಳು, ಪುರೋಹಿತಶಾಹಿ-ಅಧಿಕಾರಶಾಹಿಗಳಲ್ಲಿ ಪುರುಷ ಪ್ರಾಧಾನ್ಯ, ಸಾಂಪ್ರದಾಯಿಕತೆ, ಸ್ತ್ರೀದ್ವೇಷ ತುಂಬಿಹೋಗಿದೆ. ಇಂಥ ಕಾಲದಲ್ಲಿ ಮಹಿಳೆಯರು ಸಂವಿಧಾನವನ್ನು ಎದೆಗೊತ್ತಿ ಹಿಡಿಯಬೇಕು. ಅದನ್ನು ರಕ್ಷಿಸುತ್ತ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು.
ಸಮುದಾಯ ಎದುರಿಸುವ ಬಿಕ್ಕಟ್ಟುಗಳಿಗೆ ಹೊರದಾರಿಗಳೇನು?
ಹೆಣ್ಣುಮಕ್ಕಳ ಭವಿಷ್ಯ ನೆನೆದರೆ ಒಮ್ಮೊಮ್ಮೆ ಭಯವೆನಿಸುತ್ತದೆ. ಆದರೆ ಈ ತಲೆಮಾರೇ ಹೊರಬರುವ ದಾರಿ ಕಂಡುಕೊಳ್ಳಬೇಕು. ನನಗನಿಸುವ ಮಟ್ಟಿಗೆ ಯುವಜನರು ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಾರೆ. ಬದಲಾವಣೆಗೆ ಸಿದ್ಧವಾಗಿದ್ದಾರೆ. ಅವರ ಮೇಲೆ ಹಿಡಿತ ಹೊಂದಿರುವ ಸಾಂಪ್ರದಾಯಿಕ ಹಳೆಯ ತಲೆಮಾರು ಬದಲಾವಣೆಯ ಅವಕಾಶ ಕೊಡುತ್ತಿಲ್ಲ. ಯುವಜನರ ನಡುವೆ ಒಂದು ನಾಯಕತ್ವ ಮೂಡಬೇಕು. ಸ್ವಾರ್ಥವಿಲ್ಲದ ಸೆಕ್ಯುಲರ್ ವ್ಯಕ್ತಿಗಳಿಗೆ ರಾಜಕೀಯ ನಾಯಕತ್ವ ದೊರೆಯಬೇಕು. ಆಗ ಜಡಗೊಂಡಿರುವವೆಲ್ಲ ಬದಲಾವಣೆ ಆಗಿಯೇ ಆಗುತ್ತವೆ. ಅದನ್ನು ನಮಗೇ ಮಾಡಲು ಆಗುತ್ತದೆಂದಲ್ಲ. ನಾವಿಷ್ಟು ಮಾಡಿದೆವು. ಮುಂದೆ ಯಾರೋ ಬರುತ್ತಾರೆ, ಮತ್ತೆರೆಡು ಹೆಜ್ಜೆ ಮುಂದೊಯ್ಯುತ್ತಾರೆ. ಅದು ಆಗೇ ಆಗುತ್ತದೆ. ನಾಗರಿಕ ಹಕ್ಕು ಹೋರಾಟಗಾರರು, ಸ್ತ್ರೀವಾದಿಗಳು, ಕಲಾವಿದರು, ಮಾಧ್ಯಮ, ಅಧಿಕಾರಿವರ್ಗ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ.
ಸಂದರ್ಶನ ಮತ್ತು ಅನುವಾದ: ಡಾ. ಎಚ್. ಎಸ್. ಅನುಪಮಾ