Monday, 15 September 2025

ಮಿಲ್‌ಫೋರ್ಡ್ ಸೌಂಡ್ ಪಿಯೊಪಿಯೊ ತಾಹಿ

 



ನ್ಯೂಜಿಲ್ಯಾಂಡ್ ದೇಶವನ್ನು, ಅದರಲ್ಲೂ ಮಿಲ್‌ಫೋರ್ಡ್ ಸೌಂಡನ್ನು ನೋಡಿದ ಮೇಲೆ ಬೇರೇನನ್ನಾದರೂ ನೋಡಬೇಕು ಎಂಬ ಹಂಬಲವೇ ಮರೆಯಾಗಿಹೋಯಿತು. ಅಷ್ಟು ಗಾಢವಾಗಿ ಕಣ್ಮನಗಳನ್ನು ತುಂಬಿಕೊಂಡಿರುವ ತಾವು ಅದು. ರುಡ್ಯಾರ್ಡ್ ಕಿಪ್ಲಿಂಗ್ ಎಂಟನೆಯ ಅದ್ಭುತ ಎಂದು ಕರೆದ ಈ ತಾಣವು ನ್ಯೂಜಿಲೆಂಡಿನ ದಕ್ಷಿಣ ದ್ವೀಪದ ನೈರುತ್ಯ ತೀರದಗುಂಟ ಹರಡಿಕೊಂಡಿದೆ. ಉನ್ನತವಾದ ದಕ್ಷಿಣ ಆಲ್ಪ್ಸ್ ಪರ್ವತ ಶ್ರೇಣಿಯ ಶಿಖರಗಳಿಂದ ಟಾಸ್ಮನ್ ಕಡಲನ್ನು ಸೇರುತ್ತಿದ್ದ ಹಿಮನದಿಗಳು ಕೋಟಿಗಟ್ಟಲೆ ವರ್ಷ ಚಲಿಸಿ ಆಳವಾದ, ವಿಸ್ತಾರವಾದ ಕಣಿವೆಗಳನ್ನು ರೂಪಿಸಿದವು. ಹಿಮಯುಗದ ಕೊನೆಗೆ ಕಣಿವೆಗಳಲ್ಲಿ ಕಡಲ ನೀರು ಒಳನುಗ್ಗಿ ‘ಫೋರ್ಡ್‌ಲ್ಯಾಂಡ್ ರೂಪುಗೊಂಡಿತು. ನ್ಯೂಜಿಲ್ಯಾಂಡ್ ದೇಶ ಅದನ್ನು ‘ಫೋರ್ಡ್‌ಲ್ಯಾಂಡ್ ನ್ಯಾಷನಲ್ ಪಾರ್ಕ್ ಎಂದು ಕರೆದಿದೆ. ಮನುಷ್ಯರೇ ಇರದ ರಮ್ಯ, ನಿರ್ಜನ ತಾಣದ ಹೃದಯ ಭಾಗದಲ್ಲಿರುವುದು ಮಿಲ್‌ಫೋರ್ಡ್ ಸೌಂಡ್. ಹೋಗಿಬಂದು ವರ್ಷಗಳೇ ಕಳೆದರೂ ಈಗಲೂ ಕಣ್ಮುಚ್ಚಿ ನೆನೆದರೆ ಅಲ್ಲಿನ ರಮ್ಯ ಪ್ರಕೃತಿ, ತಾಜಾ ಹವೆಯ ಆಹ್ಲಾದ, ಮೈ ಕೊರೆಯುವ ಹಿಮ, ಬಿರುಮಳೆ, ದುರ್ಗಮ ಕಾಡು, ಭಾರೀ ಪರ್ವತ ಸಾಲು, ಜಲಪಾತಗಳು ಮನಸ್ಸನ್ನು ಆವರಿಸಿ ಹಿತಾನುಭವ ನೀಡುತ್ತವೆ.

ವಿಸ್ತಾರವಾದ ಫೋರ್ಡ್‌ಲ್ಯಾಂಡ್ ಪ್ರದೇಶದಲ್ಲಿ ರಸ್ತೆಯ ಮೂಲಕ ಮನುಷ್ಯರು ತಲುಪಲು ಸಾಧ್ಯವಿರುವ ಏಕೈಕ ತಾಣ ಮಿಲ್‌ಫೋರ್ಡ್ ಸೌಂಡ್. ೨೫ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಅದು ನಿಜವಾಗಿ ಸೌಂಡ್ ಅಲ್ಲ. ನದಿ ಕಣಿವೆಯಲ್ಲಿ ಕಡಲ ನೀರು ನುಗ್ಗಿ ಆವರಿಸಿರುವುದು ಸೌಂಡ್. ಹಿಮನದಿ (ಗ್ಲೇಸಿಯರ್) ಕೊರೆದು ಮಾಡಿದ ಆಳ ಕಣಿವೆಗಳಲ್ಲಿ ಕಡಲ ನೀರು ಹೊಕ್ಕು ರೂಪುಗೊಂಡಿರುವುದು ಫೋರ್ಡ್. ೧೮೨೩ರಲ್ಲಿ ಮೊದಲು ಇಲ್ಲಿಗೆ ಬಂದವನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿದ್ದ ಸಮುದ್ರಯಾನ ಸಾಹಸಿ ಜಾನ್ ಗ್ರೋನೋ. ಇಂಗ್ಲೆಂಡಿನ ವೇಲ್ಸ್‌ನಲ್ಲಿರುವ ಪ್ರಾಕೃತಿಕ ಬಂದರು ಮಿಲ್‌ಫೋರ್ಡ್ ಹೆಸರನ್ನೇ ಇದಕ್ಕೂ ಇಟ್ಟು ಸೌಂಡ್ ಎಂದು ಅವನು ಕರೆದದ್ದು ಹಾಗೆಯೇ ಮುಂದುವರೆದಿದೆ.

ಮಾವೊರಿ ಭಾಷೆಯಲ್ಲಿ ಇರುವ ಕತೆಯೊಂದರ ಪ್ರಕಾರ ಮನುಷ್ಯ ಕುಲಕ್ಕೆ ಅಮರತ್ವ ದೊರಕಿಸಿಕೊಡಲು ಮೌಯಿ ಎಂಬ ಅವರ ಕುಲದ ವೀರನು ಈ ಪ್ರದೇಶಕ್ಕೆ ಏಕಾಂಗಿಯಾಗಿ ಬಂದ. ಆದರೆ ಹಿಂತಿರುಗಲಿಲ್ಲ. ಅವನ ಮರಣವನ್ನು ದುಃಖಿಸುತ್ತ ಪಿಯೊಪಿಯೊ ಹೆಸರಿನ ಹಕ್ಕಿ ಇಲ್ಲಿಗೆ ಹಾರಿ ಬಂದಿತಂತೆ. (ನ್ಯೂಜಿಲ್ಯಾಂಡಿನಲ್ಲಿ ಈಗ ಅದು ಅಳಿದ ಪಕ್ಷಿ.) ‘ಒಂದು ಪಿಯೊಪಿಯೊ ಎನ್ನುವ ಅರ್ಥದ ಪಿಯೊಪಿಯೊತಾಹಿ ಹೆಸರನ್ನೇ ಈ ತಾವಿಗೂ ಇಟ್ಟಿದ್ದಾರೆ. ಮೂಲನಿವಾಸಿ ಮಾವೊರಿಗಳಿಗೂ, ವಸಾಹತುಶಾಹಿ ಬ್ರಿಟಿಷರಿಗೂ ಈ ತಾವಿನ ಅಧಿಪತ್ಯಕ್ಕಾಗಿ ದೀರ್ಘ ಸಂಘರ್ಷ ನಡೆದಿದೆ. ೧೯೯೮ರಲ್ಲಿ ಆದ ವೈತಂಗಿ ಒಪ್ಪಂದದ ಬಳಿಕ ಹೆಸರನ್ನು ಮಿಲ್‌ಫೋರ್ಡ್ ಸೌಂಡ್ ಪಿಯೊಪಿಯೊತಾಹಿ ಎಂದು ಬದಲಿಸಲಾಗಿದೆ. ಅವು ಎರಡು ಹೆಸರುಗಳಲ್ಲ. ಅದಲುಬದಲು ಮಾಡಬಹುದಾದ ಹೆಸರುಗಳಲ್ಲ. ಪರ್ಯಾಯ ಹೆಸರುಗಳೂ ಅಲ್ಲ. ಅವೆರೆಡೂ ಸೇರಿ ಒಂದೇ ಹೆಸರಾಗಿದೆ.








ಎರಡು ಕಿಲೋಮೀಟರ್ ಅಗಲ, ೧೫ ಕಿಲೋಮೀಟರ್ ಉದ್ದ, ಸಾವಿರಾರು ಅಡಿ ಆಳದ ಕಣಿವೆ ತುಂಬಿದ ಜಲರಾಶಿ ಪಿಯೊಪಿಯೊತಾಹಿ. ೨೦ ಲಕ್ಷ ವರ್ಷ ಕಾಲ ಕಿಲೋಮೀಟರುಗಟ್ಟಲೆ ಅಗಲದ ಹಿಮನದಿಗಳು ದಕ್ಷಿಣ ಆಲ್ಪ್ಸ್ ಪರ್ವತಗಳಿಂದ ಕಡಲ ಕಡೆಗೆ ನಡೆದವು. ಭೂ ತಾಪಮಾನ ಏರುತ್ತ ಹೋದಂತೆ ಹಿಮ ಕರಗಿ ನಿಂತು ಭಾರೀ ಸರೋವರಗಳನ್ನೂ, ಫೋರ್ಡ್‌ಗಳನ್ನೂ ಸೃಷ್ಟಿಸಿತು. ಪರ್ವತಗಳಿಂದ ಇಳಿಯುತ್ತ ಹಿಮನದಿ ಹೊತ್ತು ತಂದ ಭಾರದ ಕಲ್ಲು-ಬಂಡೆಗಳ ರಾಶಿಯು ಟಾಸ್ಮನ್ ಕಡಲನ್ನು ಹಿಮನದಿಯು ಸೇರುವ ‘ಬಾಯಿಯ ಬಳಿ ಗುಡ್ಡೆ ಹಾಕಿತು. ಹಾಗಾಗಿ ಅಲ್ಲಿ ಸೌಂಡಿನ ಆಳ ೨೯ ಮೀಟರ್ ಇದ್ದರೆ ಉಳಿದೆಡೆ ೩೦೦, ೪೦೦ ಮೀಟರು (೧೩೧೨ ಅಡಿ)ಗಳವರೆಗೂ ಇದೆ. ಎಂದೇ ಕಡಲಿನೊಡನೆ ಸಂಪರ್ಕ ಹೊಂದಿದ್ದರೂ ಭರತ ಇಳಿತ ಸೌಂಡ್ ಅನ್ನು ಬಾಧಿಸುವುದಿಲ್ಲ. ನೀರು ಹೊಯ್ದಾಡುವುದಿಲ್ಲ.


ವರ್ಷವಿಡೀ ಬೀಳುವ ಮಳೆನೀರು ಹಾಗೂ ಫೋರ್ಡನ್ನು ಸೇರುವ ನದಿಗಳ ನೀರು ಮೇಲ್ಮೈನಿಂದ ಆರು ಮೀಟರ್ ಆಳದವರೆಗೆ ನೀರು ಸಿಹಿಯಿರುವಂತೆ ಮಾಡಿವೆ. ಕೆಳಗೆ ಕಡಲ ಉಪ್ಪು ನೀರು ಇದೆ. ಪರ್ವತ, ದಟ್ಟಕಾಡುಗಳನ್ನು ದಾಟಿ ಬರುವ ನೀರಿನಲ್ಲಿ ಟ್ಯಾನಿನ್ ಇದ್ದು ಫೋರ್ಡಿಗೆ ಕಪ್ಪು ಬಣ್ಣ ತಂದು ಕೊಟ್ಟಿದೆ.


ವರ್ಷಕ್ಕೆ ೬೪೧೨ ಮಿಮೀ (೨೫೨ ಇಂಚು) ಮಳೆ ಬೀಳುವ ಪಿಯೊಪಿಯೊತಾಹಿ ಅತಿ ಹೆಚ್ಚು ಮಳೆ ಬೀಳುವ ಮನುಷ್ಯರ ವಾಸಸ್ಥಳಗಳಲ್ಲಿ ಒಂದು. ಇದು ಕರಾವಳಿಯ ಮಳೆಯೂರು ನಮ್ಮ ಹೊನ್ನಾವರದಲ್ಲಿ ಆಗುವ ಮಳೆಗಿಂತ ಎರಡು ಪಟ್ಟು ಹೆಚ್ಚು. ಕೆಲವೊಮ್ಮೆ ಒಂದೇ ದಿನ ೨೫೦ ಮಿ.ಮೀ. (೧೦ ಇಂಚು) ಮಳೆ ಬೀಳುತ್ತದೆ. ಸೆಪ್ಟೆಂಬರಿನಿಂದ ಡಿಸೆಂಬರ್‌ವರೆಗೆ ಅತ್ಯಧಿಕ ಮಳೆಯಾಗುತ್ತದೆ. ವರ್ಷದ ಎಲ್ಲ ತಿಂಗಳಿನಲ್ಲೂ, ಸರಾಸರಿ ೧೮೨ ದಿನ ಮಳೆ ಬೀಳುತ್ತದೆ. ಈ ಮಳೆಯು ಕೋಡುಗಲ್ಲುಗಳ ತುದಿಯಿಂದ ಧುಮ್ಮಿಕ್ಕುವ ಅಸಂಖ್ಯ ಜಲಪಾತಗಳನ್ನು ಸೃಷ್ಟಿಸಿದೆ. ಸಣ್ಣಪುಟ್ಟ ನೀರಧಾರೆಗಳು ತಳ ಮುಟ್ಟದೇ ಗಾಳಿಯಲ್ಲಿ ಹನಿಹನಿಗಳಾಗಿ ಚದುರಿ ಹೋಗುವುದೂ ಕಾಣುತ್ತದೆ. ಅತಿ ಮಳೆಯ ಕಾರಣದಿಂದ ಭೂ ಕುಸಿತ ಸರ್ವೇ ಸಾಮಾನ್ಯ. ಒಂದುವೇಳೆ ಭೂಕಂಪದಿಂದ ಇಬ್ಬದಿಯ ಪರ್ವತಗಳು ಕುಸಿದು ನೀರಿಗೆ ಬಿದ್ದರೆ ಸುನಾಮಿ ಪರಿಣಾಮವುಂಟಾಗುವ ಸಾಧ್ಯತೆಯಿದೆ. ಸನಿಹದಲ್ಲೇ ಇರುವ ವೈಟ್ ಐಲ್ಯಾಂಡಿನ ಜೀವಂತ ಜ್ವಾಲಾಮುಖಿಯ ಸ್ಫೋಟ, ಭೂಕಂಪ ಮುಂತಾದ ಪ್ರಕೃತಿ ವಿಕೋಪದ ಸಾಧ್ಯತೆಗಳು ದಟ್ಟವಾಗಿವೆ. ಆದರೂ ಪ್ರತಿ ವರ್ಷ ಹತ್ತು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.


ಅವಿಸ್ಮರಣೀಯ ಪಯಣ



ಮಿಲ್‌ಫೋರ್ಡ್ ಸೌಂಡ್‌ಗೆ ಹೋಗಲು ಪ್ರಾಚೀನ ದಾರಿಗಳಾವುವೂ ಇಲ್ಲ. ಅನಾದಿಯಿಂದ ಅದು ನಿರ್ಜನ ಪ್ರದೇಶವಾಗಿತ್ತು. ಈಗಲೂ ಜನವಸತಿಯಾಗಲೀ, ಹಳ್ಳಿಪಟ್ಟಣಗಳಾಗಲೀ ಇಲ್ಲದ ದುರ್ಗಮ ಪ್ರದೇಶವೇ ಆಗಿದೆ. ಅಲ್ಲಿಗೆ ಹೋಗಲು ರಸ್ತೆ ಮಾಡಿದ್ದೇ ಒಂದು ಸಾಹಸಗಾಥೆ. ಕಡಿದಾದ ಬಂಡೆಗಳ ಒಡೆದು, ಸುರಂಗ ಕೊರೆದು, ನದಿಗಳಿಗೆ ಸೇತುವೆ ಕಟ್ಟಿ, ಸರೋವರಗಳ ಬಳಸಿ ಅತ್ಯಂತ ಶ್ರಮದಾಯಕವಾದ, ಅಪಾಯಕರ ಸನ್ನಿವೇಶದಲ್ಲಿ ರಸ್ತೆ ಮಾಡುತ್ತ ಹೋಗಬೇಕಿತ್ತು. ಕ್ವೀನ್ಸ್‌ಟೌನಿನಿಂದ ೭೦ ಕಿಲೋಮೀಟರ್ ದೂರ ಇರುವ ಸೌಂಡಿಗೆ ೨೭೦ ಕಿಲೊಮೀಟರಿನ ಸುತ್ತುಬಳಸು ರಸ್ತೆ ಮಾಡಬೇಕಾಯಿತು. (ಕ್ವೀನ್ಸ್‌ಟೌನಿನಿಂದ ಹೆಲಿಕಾಪ್ಟರ್‌ನಲ್ಲಿ ಮುಕ್ಕಾಲುಗಂಟೆಯಲ್ಲಿ ತಲುಪಬಹುದು.)


 




ನಾವು ಕ್ವೀನ್ಸ್‌ಟೌನಿನಲ್ಲಿ ತಂಗಿದ್ದೆವು. ದಕ್ಷಿಣ ಧ್ರುವ ಹತ್ತಿರ ಇರುವ ಕಾರಣವಾಗಿ ಇಡಿಯ ನ್ಯೂಜಿಲ್ಯಾಂಡ್ ತಂಪು ಹವೆ ಹೊಂದಿದೆ. ಕ್ವೀನ್ಸ್‌ಟೌನಿನಲ್ಲಿ ಮಳೆ ಮತ್ತು ಹಿಮ ಎರಡೂ ಸೇರಿ ಇನ್ನೂ ಹೆಚ್ಚು ಚಳಿ ಅನುಭವಕ್ಕೆ ಬರುತ್ತದೆ. ನಾವು ಹೋದ ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿ ಬೆಳಗಿನ ತಾಪಮಾನ ೨ ಡಿಗ್ರಿ ಸೆಂಟಿಗ್ರೇಡ್ ಇರುತ್ತಿತ್ತು! ವಾಕಾಟಿಪು ಎಂಬ ಭಾರೀ ಸರೋವರದ ದಂಡೆಯಲ್ಲಿರುವ, ಹಿಮಾಚ್ಛಾದಿತ ಆಲ್ಪ್ಸ್ ಸೆರಗಿನಲ್ಲಿರುವ, ಸಾಹಸ ಕ್ರೀಡೆ ಮತ್ತು ಪ್ರವಾಸೋದ್ಯಮವೇ ಮೈದುಂಬಿಕೊಂಡ ಪ್ರವಾಸಿಗರ ಸ್ವರ್ಗ ಕ್ವೀನ್ಸ್‌ಟೌನ್. ಇಂಗ್ಲಿಷಿನ ಝಡ್ ಅಕ್ಷರದ ಆಕಾರದಲ್ಲಿರುವ, ೮೦ ಕಿಲೋಮೀಟರ್ ಉದ್ದ, ೫ ಕಿಲೋಮೀಟರ್ ಅಗಲದ, ಕೆಲವೆಡೆ ಒಂದೂವರೆ ಸಾವಿರ ಅಡಿ ಆಳವಿರುವಂಥ ವಾಕಾಟಿಪು ಸರೋವರದ ದಂಡೆಯ ಒಂದು ಭಾಗದಲ್ಲಿ ಕ್ವೀನ್ಸ್‌ಟೌನ್ ನಗರ ಹರಡಿಕೊಂಡಿದೆ.


 ಬಹಳಷ್ಟು ಪ್ರವಾಸಿಗರು ಕ್ವೀನ್ಸ್‌ಟೌನಿನಿಂದ ಮಿಲ್‌ಫೋರ್ಡ್ ಸೌಂಡಿಗೆ ಹೋಗುತ್ತಾರೆ. ಅದು ನ್ಯೂಜಿಲೆಂಡಿನ ಅತ್ಯಂತ ಸುಂದರ, ಅತ್ಯಂತ ಅಪಾಯಕರ ರಸ್ತೆ. ಪಯಣ ಅವಿಸ್ಮರಣೀಯ. ಹೆಚ್ಚಿನವರು ಟೂರಿಸ್ಟ್ ಬಸ್ಸುಗಳಲ್ಲಿ ಹೋಗುತ್ತಾರೆ. ಬೈಕ್, ಕಾರುಗಳನ್ನು ತಾವೇ ಚಲಾಯಿಸಿಕೊಂಡು ಹೋಗಿ ನೋಡುವವರು; ಟ್ರೆಕಿಂಗ್ ಟ್ರ್ಯಾಕುಗಳಲ್ಲಿ ತಂಡವಾಗಿ ಪರ್ವತಗಳ ಹಾಯುತ್ತ ನಡೆದು ತಲುಪುವವರು; ನಡುನಡುವೆ ಸರೋವರಗಳನ್ನು ದೋಣಿಯಲ್ಲಿ ದಾಟಿ ಮುಟ್ಟುವವರು; ಹೆಲಿಕಾಪ್ಟರ್/ವಿಮಾನದಲ್ಲಿ ಹೋಗಿ ನೋಡುವವರೂ ಇದ್ದಾರೆ.


 ನಾವು ಬೆಳಕು ಹರಿಯುವ ಮೊದಲೇ ಹೊರಟೆವು. ಸಮಯಕ್ಕೆ ಸರಿಯಾಗಿ ಬಂದು ನಿಂತ ಬಸ್ಸಿನೊಳಗೆ ಎಪ್ಪತ್ತು ದಾಟಿದ ಭಾರೀ ಆಳ್ತನದ ಹಿರಿಯರೊಬ್ಬರು ಬರಮಾಡಿಕೊಂಡರು. ಗೈಡ್ ಆಗಿ ಜೊತೆಯಾದ ಅವರು ಇತಿಹಾಸ, ಮಾನವಶಾಸ್ತ್ರ, ಜಿಯಾಲಜಿ, ಬಾಟನಿಗಳಲ್ಲೆಲ್ಲ ಅಪಾರ ತಿಳುವಳಿಕೆಯಿರುವ ನಿವೃತ್ತ ಪ್ರೊಫೆಸರರು ಎಂದು ನಂತರ ತಿಳಿಯಿತು. ೨೭೦ ಕಿಲೋಮೀಟರ್ ದೂರವನ್ನು ನಾಲ್ಕೂವರೆಯಿಂದ ಐದು ತಾಸು ಕ್ರಮಿಸಬೇಕು. ನಡುನಡುವೆ ಕಾಡಿನೊಳಹೊಕ್ಕು ಓಡಾಡಲು, ನದಿ ಪಕ್ಕ ನಡೆಯಲು, ಸುರಂಗದ ಬಳಿ ಕಾಯಲು ಒಂದಷ್ಟು ನಿಲುದಾಣಗಳಿವೆ. ರಭಸದ ಮಳೆ ಪಯಣವನ್ನು ನಿಧಾನಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆಂದು ಪ್ರವಾಸದ ಆಯೋಜಕರು ೧೦-೧೫% ಹೆಚ್ಚುವರಿ ಸಮಯ ಇಟ್ಟಿರುತ್ತಾರೆ ಎಂದು ಗೈಡ್ ಹೇಳಿದರು.




ಕ್ವೀನ್ಸ್‌ಟೌನ್ ಬಿಟ್ಟು ಹೆಚ್ಚುಕಡಿಮೆ ಒಂದು ತಾಸು ಕಳೆಯುವವರೆಗೆ ವಾಕಾಟಿಪು ಸರೋವರ ನಮ್ಮೊಡನಿತ್ತು. ಒಂದೆಡೆ ಸರೋವರ, ಮತ್ತೊಂದೆಡೆ ಹಿಮಾಚ್ಛಾದಿತ ಆಲ್ಪ್ಸ್. ನಿಸರ್ಗದ ಸೊಬಗು ತುಂಬಿಕೊಳ್ಳಲು ಎರಡು ಕಣ್ಣು ಸಾಲವು. ಬಳಿಕ ಒಂದಲ್ಲ ಒಂದು ಸರೋವರ ಅಥವಾ ನದಿ ನಮ್ಮ ಜೊತೆಯಿದ್ದವು. ನೀರತಳ ಕಾಣುವ ಪಾರದರ್ಶಕ ಹರಿವು ನೋಡುತ್ತ ಆಹ್ಲಾದಕರ ಪಯಣ ಸಾಗಿತು.


ಒಂದಷ್ಟು ದೂರ ಕ್ರಮಿಸಿದ ಬಳಿಕ ಮಿರರ್ ಲೇಕ್ಸ್ ಇರುವ ತಾಣದಲ್ಲಿ ವಾಹನ ನಿಂತಿತು. ರಸ್ತೆಯ ಪಕ್ಕದಿಂದ ಹತ್ತು ನಿಮಿಷ ನಡೆದರೆ ಸರೋವರ ಕಾಣುತ್ತದೆ. ಅಲ್ಲಿ ಅಂತಹ ಹಲವು ಸರೋವರಗಳಿವೆ. ಅಲ್ಲಿನ ನೀರು ಎಷ್ಟು ತಿಳಿ, ನಿಶ್ಚಲ ಮತ್ತು ಶುದ್ಧ ಎಂದರೆ ಪರ್ವತ, ಆಗಸಗಳ ಪ್ರತಿಬಿಂಬ ಸ್ಪಷ್ಟವಾಗಿ ನೀರಿನಲ್ಲಿ ಕಾಣಿಸುತ್ತದೆ.


ನಮ್ಮ ಗೈಡ್ ತನ್ನ ದೇಶದ ವಿಶಿಷ್ಟ ವಸ್ತುವೊಂದರ ಬಗೆಗೆ ಗಮನ ಸೆಳೆದರು. ಅದು ಮನೂಕ ಜೇನು. ಮನೂಕ ಎಂಬ ಮಾವೊರಿ ಹೆಸರಿನ ಪೊದೆಗಿಡದ ಹೂವಿನಿಂದ ಜೇನುಹುಳುಗಳು ತಯಾರಿಸುವ ಜೇನು ವಿಶ್ವ ಪ್ರಸಿದ್ಧವಂತೆ. ಅದು ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮಾತ್ರ ತಯಾರಾಗುವ ಜೇನಂತೆ. ಜೋನಿಬೆಲ್ಲದಷ್ಟು ದಪ್ಪಗಿರುವ, ಮಣ್ಣಿನ ಪರಿಮಳವನ್ನೂ, ವನಸ್ಪತಿಯ ತಿಳಿ ಘಾಟನ್ನೂ ಹೊಂದಿರುವ ಅದು ಭಾರೀ ಬೇಡಿಕೆಯ ವಸ್ತುವಂತೆ. ಅದಕ್ಕಿರುವ ಔಷಧೀಯ ಗುಣಗಳು, ಸೌಂದರ್ಯವರ್ಧಕವಾಗಿ ಬಳಕೆ, ಮಾರುಕಟ್ಟೆ ಸೃಷ್ಟಿಸಿದ ಹಗೆತನ, ಸ್ಪರ್ಧೆ, ಶುದ್ಧತೆ ನೋಡಲು ರೂಪಿಸಿರುವ ಐದು ಮಾನದಂಡಗಳು, ಆದರೂ ನಡೆಯುವ ಕಲಬೆರಕೆಗಳ ಬಗೆಗೆ ಗೈಡ್ ವಿವರವಾಗಿ ಹೇಳಿದರು. ನಾವು ಹೋದದ್ದು ಮನೂಕ ಹೂ ಋತುವಲ್ಲ. ಅದಾಗಲೇ ಜನವರಿಗೇ ಮುಗಿದು ಹೋಗಿತ್ತು. ಗಾಳಿ ಬೀಸಿದ ದಿಕ್ಕಿಗೆ ಸರಿಯಾಗಿ ತಮ್ಮ ಇಡಿಯ ಕಾಂಡವನ್ನು ವಾಲಿಸಿ ನಿಂತ ಮನೂಕ ಗಿಡಗಳನ್ನಷ್ಟೇ ನೋಡಲು ಸಾಧ್ಯವಾಯಿತು. ಅವು ಬಳ್ಳಾರಿ ಜಾಲಿಯನ್ನು ನೆನಪಿಸಿದವು.


ಅರ್ಧ ದಾರಿ ಸವೆಸಿದಾಗ ಟೆ ಆನಾ ಊರು, ಅದೇ ಹೆಸರಿನ ಸರೋವರ ಬಂದವು. ಊರು ದಾಟಿದ ಮೇಲೆ ನಮ್ಮ ಬಸ್ಸು ಶುಭ್ರ ನೀರಿನ ನದಿಯ ಪಕ್ಕ ಸರಿದು ಹೋಗತೊಡಗಿತು. ಅದು ವಾಕಾಟಿಪು ಕಾ ಟುಕಾ ಅಥವಾ ಹಾಲಿಫೋರ್ಡ್ ನದಿ.






ಕಡಿದಾದ ಪರ್ವತಗಳ ಸೆರಗಿನಲ್ಲಿ ಹಾವಿನಂತೆ ಹರಿದು ಹೋಗುವ ರಸ್ತೆಯಲ್ಲಿ ಹತ್ತಿಳಿಯುತ್ತಿದ್ದೆವು. ಕಡಿದಾದ ಪರ್ವತ ಶ್ರೇಣಿಗಳು ಎದುರು ಹಾದವು. ಸೌಂಡಿಗೆ ತಲುಪುವ ಈ ಕೊನೆಯ ಭಾಗದ ಮಾರ್ಗ ನಿರ್ಮಾಣ ಎಂತಹ ಸವಾಲಿನದಾಗಿತ್ತು ಎಂದು ಗೈಡ್ ಶತಮಾನ ಹಿಂದಿನ ಕತೆ ಹೇಳತೊಡಗಿದರು. ಸಾವಿರಾರು ಅಡಿ ಎತ್ತರದ ಪರ್ವತಗಳು ಅಡ್ಡಗೋಡೆಯಂತೆ ನಿಂತ ಕಾರಣ ಮಿಲ್‌ಫೋರ್ಡನ್ನು ತಲುಪುವುದೇ ಅಸಾಧ್ಯವೆನ್ನುವಂತಾಗಿತ್ತು. ೧೮೮೯ರಲ್ಲಿ ವಿಲಿಯಂ ಹೋಮರ್ ಎಂಬಾತನಿಗೆ ಲಾಳಾಕಾರದ ಪರ್ವತದ ಕಣಿವೆಯಿರುವಲ್ಲಿ ಸುರಂಗ ಕೊರೆದರೆ ಹ್ಯಾಲಿಫೋರ್ಡ್ ನದಿ ಕಣಿವೆಯಿಂದ ಕ್ಲೆಡ್ಡಾ ನದಿ ಕಣಿವೆ ತಲುಪಿ ಮಿಲ್‌ಫೋರ್ಡ್ ಸೌಂಡ್ ಮುಟ್ಟಬಹುದೆಂದು ಅಂದಾಜಾಯಿತು. ಅದು ಹತ್ತಿರದ, ನೇರ ಮಾರ್ಗವೇನೋ ಹೌದು, ಆದರೆ ಸುರಂಗ ಕೊರೆಯುವುದು ಹೇಗೆ? ವರ್ಷದ ಅರ್ಧ ದಿನಗಳಲ್ಲಿ ಸೂರ್ಯನ ಬೆಳಕೇ ಬೀಳದಷ್ಟು ಎತ್ತರೆತ್ತರದ ಪರ್ವತಗಳ ನಡುವಿನ ಪ್ರದೇಶದಲ್ಲಿ ಸುರಂಗ ಕೊರೆಯುವುದು, ರಸ್ತೆ ಮಾಡುವುದು ಸುಲಭವಿರಲಿಲ್ಲ. ಮೊದಲಿಗೆ ಟೆಂಟುಗಳಲ್ಲಿ ನೆಲೆಸಿ ಹಾರೆ ಪಿಕಾಸಿ ಡ್ರಿಲ್ಲುಗಳ ನೆರವಿನಿಂದ ಕೆಲಸ ಆರಂಭಿಸಿದರು. ಏಳುಬೀಳಿನೊಡನೆ ಕೆಲಸ ಸಾಗುತ್ತ ಹೋಯಿತು. ನಡೆಯಿತು, ನಿಂತಿತು, ಮತ್ತೆ ಆರಂಭವಾಯಿತು. ಬಂಡೆ ಒಡೆದ ಹಾಗೂ ಹಿಮ ಕರಗಿ ನೀರು ತುಂಬುತ್ತಿತ್ತು. ಕೊನೆಗೆ ಪಕ್ಕದಲ್ಲೇ ಹರಿವ ಹಾಲಿಫೋರ್ಡ್ ನದಿಗೆ ಸಣ್ಣ ಕಟ್ಟೆ ಕಟ್ಟಿ, ವಿದ್ಯುತ್ ತಯಾರಿಸಿ ಗಂಟೆಗೆ ನಲವತ್ತು ಸಾವಿರ ಲೀಟರ್ ನೀರು ಖಾಲಿ ಮಾಡುತ್ತ ಸುರಂಗ, ರಸ್ತೆಯ ಕೆಲಸ ನಡೆಸಿದರು. ಭೂ ಕುಸಿತಕ್ಕೆ ಕೆಲವರು ಬಲಿಯಾದರು. ಮತ್ತೊಂದು ಭೂಕುಸಿತದಲ್ಲಿ ತೋಡಿದ ಸುರಂಗ ಅರ್ಧಕ್ಕರ್ಧ ಮುಚ್ಚಿ ಹೋಯಿತು. ಅಂತೂ ೧೯ ವರ್ಷಗಳ ಬಳಿಕ ೧೯೪೦ರ ವೇಳೆಗೆ ಸುರಂಗ ಮತ್ತೊಂದು ತುದಿ ತಲುಪಿಯೇ ಬಿಟ್ಟಿತು. ಮಹಾಯುದ್ದದ ಕಾಲವಾಗಿದ್ದರಿಂದ ವಿಳಂಬಗೊಂಡು ೧೯೫೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ಇವತ್ತಿಗೂ ೧.೨ ಕಿಲೋಮೀಟರ್ ಉದ್ದದ ಆ ಹೋಮರ್ ಸುರಂಗದಲ್ಲಿಯೇ ಎಲ್ಲರೂ ಹಾದು ಹೋಗಬೇಕು.


ಸುರಂಗವು ಏಕಮುಖ ಸಂಚಾರ ಹೊಂದಿದೆ. ಎದುರುಬದುರಾದರೆ ಎರಡು ಕಾರುಗಳು ಚಲಿಸಬಹುದು, ಆದರೆ ಎರಡು ಬಸ್ಸುಗಳು ಚಲಿಸಲಾರವು. ಸಂಜೆ ಆರರಿಂದ ಬೆಳಿಗ್ಗೆ ಒಂಬತ್ತರವರೆಗೆ ಮುಚ್ಚಿರುತ್ತದೆ. ಈಗ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಏರುತ್ತಿರುವ ಪ್ರವಾಸಿಗರ ಕಾರಣವಾಗಿ ಸುರಂಗ ಅಗಲ ಮಾಡುವ ಪ್ರಯತ್ನಗಳು ನಡೆದರೂ ಅದು ಸುರಕ್ಷಿತವಲ್ಲ ಮತ್ತು ಅತ್ಯಂತ ಖರ್ಚಿನ ಬಾಬತ್ತು ಎಂದು ಕೈ ಬಿಟ್ಟಿದ್ದಾರೆ.

ನಮ್ಮ ಗೈಡ್ ಹೇಳುತ್ತಿದ್ದ ಸುರಂಗದ ಕತೆ ಕೇಳುತ್ತ ಕೇಳುತ್ತ ಅದರ ಬಾಯಿಯ ಬಳಿ ಬಸ್ಸು ನಿಂತಿತು. ಟ್ರಾಫಿಕ್ ಹೆಚ್ಚಿತ್ತು. ಈ ಕಡೆಯಿಂದ ಹೊರಟವರು ಆಚೆ ತಲುಪಿದ ಮೇಲೆಯೇ ಮತ್ತೊಂದು ತಂಡ ಆಚೆಯಿಂದ ಈಚೆ ಬರುತ್ತಿತ್ತು. ಏಕಮುಖ ಸಂಚಾರವನ್ನು ಸಿಗ್ನಲ್‌ಗಳೇ ನಿರ್ವಹಿಸುತ್ತಿದ್ದವು. ನಾವು ಹೆಚ್ಚುಕಡಿಮೆ ಒಂದು ಗಂಟೆ ಕಾಲ ಕಾದೆವು. ಆದರೂ ಬೋರೆನಿಸುವಂತೆಯೇ ಇಲ್ಲ, ಕಾರಣ ಹೊರಗಣದ ಸೌಂದರ್ಯ. ಕಿಟಕಿಯೊಳಗಿನಿಂದಲೇ ಕಣ್ತುಂಬಿಕೊಳ್ಳುತ್ತಿದ್ದೆವು. ಸಂಪೂರ್ಣ ತಲೆಯೆತ್ತಿ ನೋಡಿದರೂ ತುದಿ ಕಾಣದಷ್ಟು ಎತ್ತರದ ಪರ್ವತಗಳಿಂದ ಜಲಧಾರೆ ಬೀಳುತ್ತಿತ್ತು. ಮಳೆ ಒಂದೇಸಮ ಸುರಿಯುತ್ತಿತ್ತು. ಅಲ್ಲೇನಾದರೂ ಭೂ ಕುಸಿತ ಸಂಭವಿಸಿದರೆ, ಭಾರೀ ಹಿಮಪಾತವಾದರೆ ನಾವು ಇದ್ದಲ್ಲೇ ಇಲ್ಲವಾಗುತ್ತೇವೆ ಎಂದು ಗೈಡ್ ಹೇಳುವಾಗ ಕೆಲವರು ಹೌದೇ ಎಂದು ಭಯಪಟ್ಟರು.


ನನ್ನಾಳದಲ್ಲಿ ನೆಲೆಗೊಂಡಿದ್ದ ವಿಶಿಷ್ಟ ಶಾಂತಿಯು ಹಾಗಾಗುವುದಾದರೆ ಆಗಲಿ; ಇಂಥ ಪ್ರಕೃತಿಯಲ್ಲಿ ಲೀನವಾಗುವುದಕ್ಕಿಂತ ಹೆಚ್ಚಿನ ಸಂತಸ ಬೇರೆ ಇನ್ನೇನಿದೆ ಎಂದು ಹೇಳುತ್ತಿತ್ತು.


ಪಿಯೊಪಿಯೊ ತಾಹಿ



ಕೊನೆಗಂತೂ ಬಿಸಿಲುಮಳೆ ಬೀಳುತ್ತಿರುವ ಹೊತ್ತಿಗೆ ಪಿಯೊಪಿಯೊತಾಹಿ ತಲುಪಿದೆವು. ಅನುಭವದಿಂದ ಮಾತ್ರ ವೇದ್ಯವಾಗುವ ಆ ಅಪರಿಮಿತಾನಂದವನ್ನು ಏನೆಂದು ವರ್ಣಿಸುವುದು? ಹಿಂದೆಂದೂ ಕಾಣದಂತಹ ಚೆಲುವಿನ ಪ್ರಕೃತಿಯ ಮಡಿಲಿನಲ್ಲಿರುವ ಆನಂದವೋ, ಉದ್ವೇಗವೋ, ಚಳಿಯೋ ಅಂತೂ ಒಳಗಿನಿಂದ ನಗು ಮತ್ತು ನಡುಕ ಎದ್ದೆದ್ದು ಬಂದು ಗದಗುಡುವಂತಾಗುತ್ತಿತ್ತು. ಅದರ ನಡುವೆಯೇ ಟಿಕೆಟ್ ಪಡೆದೆವು. ಎಷ್ಟು ಗಂಟೆಯೊಳಗೆ ಎಲ್ಲಿ ಬಂದು ಬಸ್ ಹತ್ತಬೇಕು ಎಂದು ತಿಳಿಸಿ ಗೈಡ್ ಹಿಂದೆ ಉಳಿದರು. ಮೂರಂತಸ್ತಿನ ಯಾಂತ್ರಿಕ ದೋಣಿಯಲ್ಲಿ ಸುರಕ್ಷತೆಯ ದಿರಿಸು ಧರಿಸಿ ಪಯಣ ಆರಂಭಿಸಿದೆವು.

ಈಗ ಬಿಸಿಲು ಈಗ ಮೋಡ. ನಡುನಡುವೆ ಮಳೆ. ಮೋಡದ ನಾಡಿನ ಬಾಗಿಲಿಗೆ ಕಮಾನು ಕಟ್ಟಿದ ಕಾಮನಬಿಲ್ಲು!


 


ವಿಶಾಲ ಕಣಿವೆ ತುಂಬಿದ ಜಲರಾಶಿ, ಎರಡೂ ಕಡೆ ನೀರಿನಿಂದ ಲಂಬವಾಗಿ ಮೇಲೆದ್ದು ಆಗಸ ಸೀಳುವಂತೆ ಕಾಣುವ ನಾಲ್ಕೈದು ಸಾವಿರ ಅಡಿ ಎತ್ತರದ ಪರ್ವತಗಳು. ಹೆಬ್ಬಂಡೆಗಳನ್ನೂ, ಅದರ ನಡುವೆ ಸುರಿಯುತ್ತಿರುವ ಜಲಪಾತಗಳನ್ನೂ, ನೆತ್ತಿ ಮೇಲೇ ಹಾದು ಹೋಗುವ ಹಿಂಜಿದ ಹತ್ತಿಯಂತಹ ಬಿಳಿ ಮೋಡಗಳನ್ನೂ ನೋಡುತ್ತ ಸಾಗಿದೆವು. ಒಂದು ಭಾರೀ ಜಲಪಾತ ದೂರದಿಂದ ಕಾಣಿಸತೊಡಗಿತು, ಕೇಳಿಸತೊಡಗಿತು. ಅದು ಸ್ಟರ್ಲಿಂಗ್ ಜಲಪಾತ. ಹತ್ತಿರ ಹೋಗುತ್ತ ಹೋಗುತ್ತ ಅರೆರೆ! ಜಲಪಾತದ ನೀರಿನಡಿಯೇ ನಮ್ಮ ಬೋಟು ಹೀಗೆ ಹೋಗಿ ಹಾಗೆ ಹೊರಬಂತು!! ಕೆಲವರು ಒದ್ದೆಯಾಗಲೆಂದು ಕೊರೆವ ನೀರ ಧಾರೆಯಡಿ ನಿಂತು ಕೇಕೆ ಹಾಕಿದರು. ನಾವು ಒಳಗೆ ನಿಂತರೂ ಎರಚುವ ಹನಿಗಳು ತೋಯಿಸಿ ಗದಗುಡಿಸಿದವು. ರುದ್ರರಮಣೀಯತೆಯನ್ನು ಅನುಭವಿಸುವ ಚಪ್ಪಾಳೆ, ನಗು, ಕೂಗು, ಹಾಡು, ನರ್ತನ ದೋಣಿಯನ್ನು ತುಂಬಿಕೊಂಡಿತು.


 


ಒಂದಷ್ಟು ದೂರ ಹೋಗುವುದರಲ್ಲಿ ಅಗೋ ಅಲ್ಲಿ ದೂರದಲ್ಲಿ ಎವರೆಸ್ಟಿನಂತೆ ಕಾಣಿಸುವ ಹಿಮಾವೃತ ಭಾರೀ ಶಿಖರ ಕಣ್ಮುಂದೆ ಬಂತು. ಅದು ಮಿತ್ರೆ ಶಿಖರ. ೧೬೯೨ ಮೀಟರ್ ಎತ್ತರವಿದೆ. ಹಿಂಜಿದ ಮೋಡಗಳು ಶಿಖರದ ಸುತ್ತ ಕಣ್ಣುಮುಚ್ಚಾಲೆಯಾಡುತ್ತಿದ್ದವು. ‘ವಾವ್, ‘ಗ್ರೇಟ್, ‘ಕಾಂಟ್ ಬಿಲೀವ್, ‘ಇನ್‌ಕ್ರೆಡಿಬಲ್, ‘ಅಯ್ಯಬ್ಬಾಗಳ ನಡುವೆ ದೋಣಿ ಚಲಿಸತೊಡಗಿತ್ತು. ಎಲ್ಲರ ಕ್ಯಾಮೆರಾಗಳೂ ಪುರುಸೊತ್ತಿಲ್ಲದೆ ಕಂಡ ದೃಶ್ಯವನ್ನು ಚಿತ್ರವಾಗಿ ಒಳಗಿಳಿಸಿಕೊಳ್ಳಲು ಹೆಣಗುತ್ತಿದ್ದವು. ಅಷ್ಟು ದೂರ ಹೋಗುತ್ತಿದ್ದಂತೆ ಬಂಡೆಗಳ ಮೇಲೆ ಮೈ ಒಣಗಿಸಿಕೊಳ್ಳುತ್ತ ಮಲಗಿದ್ದ ಸೀಲ್‌ಗಳು ಕಂಡವು. ಒಂದು ಡಾಲ್ಫಿನ್ ಹಾರಿ ಎಲ್ಲರನ್ನು ರೋಮಾಂಚನಗೊಳಿಸಿ ಮರೆಯಾಯಿತು. ಮತ್ತೆ ಕಾದದ್ದೇ ಬಂತು, ಮೇಲೆ ಬರಲಿಲ್ಲ. ಅಲ್ಲಿಯ ಬಂಡೆಗಳ ಕಂಡು ಒಬ್ಬರು, ‘ಮಾವೊರಿಗಳು ಆಭರಣವಾಗಿ ಧರಿಸುವ ಪೌನಾಮು ಎಂಬ ಹಸಿರು ಮಣಿಯ ಕಲ್ಲುಗಳು ಈ ಬಂಡೆಗಳೇ ಅಂತೆ. ಇವು ಜೇಡ್ ಬಂಡೆಗಳೇ ಇರಬಹುದು ಎಂಬ ಭಾರೀ ಊಹೆಯನ್ನು ಹರಿಯಬಿಡುತ್ತಿದ್ದರು.

 


ಹೇಗೆ ಕಳೆಯಿತೋ ಕಾಲ! ಬೋಟ್ ರೈಡ್ ಮುಗಿದು ಹೋಯಿತು. ಎಷ್ಟು ಸಾಧ್ಯವೋ ಅಷ್ಟನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತ, ಚಣವೂ ವ್ಯರ್ಥವಾಗದಂತೆ ನೋಡಿದೆವು. ಮತ್ತೆಂದಾದರೂ ಈ ಚೆಲುವ ನಾಡಿಗೆ, ಶಾಂತಿ ಸೂಸುವ ಬೀಡಿಗೆ ಬರುವೆವೋ ಇಲ್ಲವೋ ಎಂಬ ಸಂಕಟದ ಮುಳ್ಳು ಆಡುತ್ತಿರಲು ಹಿಂತಿರುಗಿ ಹೊರಟೆವು.

ಎಲ್ಲವನ್ನು ಎಷ್ಟು ತುಂಬಿಕೊಂಡಿದ್ದೆವೆಂದರೆ ಹಿಂತಿರುಗಿ ಬರುವಾಗ ನಮ್ಮ ವಾಹನದೊಳಗೆ ಗಾಢ ನಿಶ್ಶಬ್ದ ಆವರಿಸಿತು. ಕಂಡದ್ದನ್ನು ಅರಗಿಸಿಕೊಳ್ಳಲು ಯತ್ನಿಸುತ್ತ ಸೀಟಿಗೊರಗಿ ಹೊರಗೆ ದಿಟ್ಟಿಸುತ್ತ ಪ್ರಶಾಂತವಾಗಿ ಕುಳಿತಿದ್ದೆವು. ನಮ್ಮ ಮಾರ್ಗದರ್ಶಿಯೂ ಮೌನಕ್ಕೆ ಜಾರಿದ್ದರು.

 ಈಗಲೂ ಕಣ್ಣುಮುಚ್ಚಿ ನೆನೆದರೆ, ಪಿಯೊಪಿಯೊತಾಹಿ ಧುತ್ತನೆ ಎದುರು ಬಂದು ಆಹ್ಲಾದ ಸೃಷ್ಟಿಸುತ್ತದೆ. ಆ ತಾಣದ ಚೆಲುವು, ಗಾಂಭೀರ್ಯ, ರಮಣೀಯತೆ, ಪ್ರಶಾಂತತೆಯ ತರಂಗಗಳು ಇವತ್ತಿಗೂ ನಮ್ಮೆದೆಗಳನ್ನು ಮೀಟುತ್ತಲೇ ಇವೆ.

 ಧನ್ಯರಾದೆವು ಹೇ ಬುವಿಯೇ, ಧನ್ಯವಾದ ನಿನಗೆ.


 


ಡಾ. ಎಚ್. ಎಸ್. ಅನುಪಮಾ


(ಸುಧಾ, ಸೆ. ೨೫, ೨೦೨೫ ಸಂಚಿಕೆ)

Thursday, 3 July 2025

ವೈಟಮೊ: ಬೆಳಕಿನ ಹುಳಗಳ ವಿಸ್ಮಯ ಲೋಕ






ಅಯೊಟೆಅರೊವಾ ನ್ಯೂ ಜಿಲ್ಯಾಂಡಿಯಾ ಆದದ್ದು 

 ಅಂಥ ಕೆಲವು ತಾಣಗಳಿರುತ್ತವೆ, ನೆನಪಿನ ಬಾವಿಯಿಂದ ಸಜೀವವಾಗಿ ಎದ್ದು ಬಂದು ನೆನೆದಾಗಲೆಲ್ಲ ಅಲ್ಲಿ ಹೋಗಿ ನಿಂತು ನೋಡುತ್ತಿರುವ ಭಾವ ಹುಟ್ಟಿಸಿಬಿಡುತ್ತವೆ. ನ್ಯೂಜಿಲೆಂಡ್ ಎಂಬ ದ್ವೀಪ ದೇಶಕ್ಕೆ ಹೋಗಿ ಬಂದು ಕೆಲಕಾಲವಾಗಿದೆ. ಆದರೆ ಅಲ್ಲಿಯ ವೈಟಮೊ ಗುಹೆಗಳು ಮತ್ತು ಮಿಲ್‌ಫೋರ್ಡ್ ಸೌಂಡ್ ಇವತ್ತಿಗೂ ನೆನಪಿನಲ್ಲಿ ಸಜೀವವಾಗಿವೆ. 

 ಉತ್ತರ ದ್ವೀಪ ಮತ್ತು ದಕ್ಷಿಣ ದ್ವೀಪ ಎಂಬ ಎರಡು ದೊಡ್ಡ ದ್ವೀಪಗಳು ಹಾಗೂ ಆರುನೂರು ಸಣ್ಣಪುಟ್ಟ ದ್ವೀಪಗಳು ಸೇರಿ ಆದ ದೇಶ ನ್ಯೂಜಿಲ್ಯಾಂಡ್. ಸ್ಥಳೀಯ ಮೂಲನಿವಾಸಿ ಮಾವೋರಿಗಳ ಭಾಷೆಯಲ್ಲಿ ಅದು ಅಯೊಟೆಅರೊವಾ. ವೈಟಮೊ ಎನ್ನುವುದು ನ್ಯೂಜಿಲೆಂಡ್ ದೇಶದ ಉತ್ತರ ದ್ವೀಪದಲ್ಲಿರುವ ಒಂದು ಸಣ್ಣ ಊರು. ವಾಣಿಜ್ಯ ನಗರಿ ಆಕ್ಲೆಂಡಿನಿಂದ ದಕ್ಷಿಣಕ್ಕೆ ಎರಡು ತಾಸು ಚಲಿಸಿದರೆ ವೈಟಮೊ ಸಿಗುತ್ತದೆ. ಆ ಊರು ತಲುಪುವ ದಾರಿಯೇ ನಯನ ಮನೋಹರ ಭೂದೃಶ್ಯಗಳಿಂದ ತುಂಬಿ ಮನಸೂರೆಗೊಳ್ಳುವಂತಿದೆ. ಪೋಸ್ಟರುಗಳಲ್ಲಿ ನೋಡುವ ರಮ್ಯ ಪ್ರಕೃತಿಯ ಚಿತ್ರಗಳೇ ಮೈವೆತ್ತು ಎದುರಿರುವಂತೆ ಕಾಣಿಸುತ್ತವೆ. ನ್ಯೂಜಿಲೆಂಡಿನ ಹಳ್ಳಿಗಾಡಿನ ಚೆಲುವು, ಶಿಸ್ತು, ಅಚ್ಚುಕಟ್ಟು, ಶುಭ್ರ ಪರಿಸರ, ಹಸಿರು ಮನದುಂಬುತ್ತವೆ. ಹಿಮಾಚ್ಛಾದಿತ ಗುಡ್ಡಬೆಟ್ಟಗಳು, ಹಚ್ಚಹಸಿರು ಹೊದ್ದ ದಿಬ್ಬಗಳು, ಸ್ವಚ್ಛ ಊರುಗಳು, ಶುಭ್ರ ನೀರಿನ ತೊರೆಗಳು, ಸರೋವರಗಳು, ಹಸಿರಿರುವಲ್ಲೆಲ್ಲ ನೆಲ ನೋಡುತ್ತ ಮೇಯುವ ದನ, ಕುರಿ, ಕುದುರೆಗಳ ಹಿಂಡು, ಬೆಟ್ಟದ ಇಳಿಜಾರ ಸೆರಗಿನಲ್ಲಿ ಅಲ್ಲೊಂದು ಇಲ್ಲೊಂದು ಮರದ ಹಲಗೆಯ ಬೇಲಿಯೊಳಗೆ ರೈತರ ಸರಳ ಸುಂದರ ವರ್ಣರಂಜಿತ ಮನೆಗಳು, ಹೂಗಿಡ ಬಳ್ಳಿಗಳು ಪ್ರಕೃತಿಯ ಮಡಿಲಲ್ಲಿರುವ ನಿಜ ಭಾವವನ್ನುಕ್ಕಿಸುತ್ತವೆ. 

 ಸರಿಸುಮಾರು ಐವತ್ತು ಕೋಟಿ ವರ್ಷ ಕೆಳಗೆ ಪೆಸಿಫಿಕ್ ಕಡಲ ತಳದ ಜ್ವಾಲಾಮುಖಿ ಚಟುವಟಿಕೆಯಿಂದ ರೂಪುಗೊಂಡ ದೇಶ ನ್ಯೂಜಿಲೆಂಡ್. ಐವತ್ತು ಕೋಟಿ ವರ್ಷಗಳಿಂದೀಚೆಗೆ ಕಡಲಾಳದ ಭೂ ಹಲಗೆಗಳ ಚಲನೆ ಮತ್ತು ಜ್ವಾಲಾಮುಖಿ ಚಟುವಟಿಕೆಯಿಂದ ಜೀಲಾಂಡಿಯ ಭೂಭಾಗವು ಸಮುದ್ರದಿಂದ ಮೇಲೆದ್ದು ಕೊನೆಗೆ ನ್ಯೂ ಜಿಲ್ಯಾಂಡಿಯಾ ದೇಶವಾಗಿ ರೂಪುಗೊಂಡಿತು. ಅದು ನಾಗರಿಕಗೊಂಡ ಮನುಷ್ಯರು ವಾಸ ಮಾಡಲು ಹುಡುಕಿಕೊಂಡ ಕೊನೆಯ ನೆಲ-ನೆಲೆ ಎನ್ನಬಹುದು. ಉಳಿದ ಭೂಖಂಡಗಳಿಗಿಂದ ದೂರವಾಗಿದ್ದದ್ದರಿಂದಲೋ ಏನೋ ಮನುಷ್ಯ ಇತಿಹಾಸ ಆ ಖಂಡದ ಮಟ್ಟಿಗೆ ಇತ್ತೀಚಿನದು. 

 ಅಲ್ಲಿಗೆ ಮೊದಲು ಹೋದವರು ಆಗ್ನೇಯ ಏಷ್ಯಾದ ಪಾಲಿನೇಷಿಯನ್ ಕುಲದವರು. ಕ್ರಿ. ಶ. ೧೨ನೇ ಶತಮಾನದಲ್ಲಿ ಕುಪೆ ಎಂಬ ಅವರ ಪೌರಾಣಿಕ-ಐತಿಹಾಸಿಕ ನಾಯಕನು ಹಾವೈಕಿ ದ್ವೀಪದಿಂದ ಭಾರೀ ಆಕ್ಟೋಪಸ್ ಅನ್ನು ಹುಡುಕಿ ನಾಶ ಮಾಡಲು ಸಮುದ್ರ ಮಾರ್ಗದಲ್ಲಿ ಚಲಿಸಿ ಇವತ್ತಿನ ನ್ಯೂಜಿಲ್ಯಾಂಡಿಗೆ ಬಂದನಂತೆ. ಅನಂತರ ಸುತ್ತಮುತ್ತಲ ದ್ವೀಪಗಳಲ್ಲಿದ್ದ ಪಾಲಿನೇಷಿಯನ್ನರು ದಶಕಗಳ ಕಾಲ ವಲಸೆ ನಡೆಸಿ ಅಲ್ಲಿಲ್ಲಿ ನೆಲೆಯಾದರು. ವಿವಿಧ ಹಂತದಲ್ಲಿ ವಲಸೆ ಬಂದವರು ಭಿನ್ನ ಒಳಗುಂಪುಗಳ ಸೃಷ್ಟಿಗೆ ಕಾರಣರಾದರು. ಮೂರ್ನಾಲ್ಕು ಶತಮಾನಗಳ ಬಳಿಕ ೧೬೪೨ರಲ್ಲಿ ಡಚ್ ಸಂಶೋಧಕ ಏಬೆಲ್ ಟಾಸ್ಮನ್ ಸಮುದ್ರಯಾನ ಮಾಡುತ್ತ ಈ ದ್ವೀಪಗಳ ಇರವು ಪತ್ತೆ ಹಚ್ಚಿದ. ನಂತರ ೧೭೬೮ರಲ್ಲಿ ಬ್ರಿಟನ್ನಿನ ಅನ್ವೇಷಕ ಕ್ಯಾಪ್ಟನ್ ಜೇಮ್ಸ್ ಕುಕ್ ಆ ನೆಲದಲ್ಲಿಳಿದು, ಕೆಲಕಾಲ ನಿಂತು, ಸಮುದ್ರದ ದಂಡೆಗುಂಟ ಚಲಿಸಿ ದ್ವೀಪಗಳ ಭೂಪಟ ತಯಾರಿಸಿದ. ಯೂರೋಪಿಯನ್ನರ ಬಂದುಹೋಗುವಿಕೆ ಮುಂದುವರೆದು ವ್ಯಾಪಾರ, ವ್ಯವಹಾರ ಏರುಗತಿಯಲ್ಲಿ ಬೆಳೆಯಿತು. ಒಳಿತು ಮತ್ತು ಕೇಡುಗಳು ಜೊತೆಜೊತೆಯಾಗಿ ಬಂದವು. ಹೊರಗಿನಿಂದ ಬಂದ ಆಲೂಗೆಡ್ಡೆ ಬಲು ಜನಪ್ರಿಯವಾಯಿತು. ವಿಪುಲವಾಗಿ ಬೆಳೆದು ಆಹಾರ ಸಮೃದ್ಧಿ ತಂದಿತು. ಮತ್ತೊಂದೆಡೆ ಯೂರೋಪಿಯನ್ ವ್ಯಾಪಾರಿಗಳು ಪೂರೈಸಿದ ಬಂದೂಕುಗಳು (ಮಸ್ಕೆಟ್) ಕೇವಲ ೪೦ ವರ್ಷಗಳಲ್ಲಿ (೧೮೦೦-೧೮೪೦) ಸಾವಿರಾರು ಅಂತರ್ಯುದ್ಧಗಳಿಗೆ ಕಾರಣವಾಗಿ ಮೂವತ್ತರಿಂದ ನಲವತ್ತು ಸಾವಿರ ಮಾವೊರಿಗಳು ಹತರಾಗಲು ಕಾರಣವಾಯಿತು. ೧೮೪೦ರಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಯು ಸ್ಥಳೀಯ ಮಾವೋರಿ ನಾಯಕನೊಡನೆ ವೈತಂಗಿ ಒಪ್ಪಂದ ಮಾಡಿಕೊಂಡಿತು. ಮರುವರ್ಷವೇ ನ್ಯೂಜಿಲ್ಯಾಂಡ್ ತನ್ನ ವಸಾಹತುವೆಂದು ಬ್ರಿಟನ್ ಘೋಷಿಸಿತು. ಇವತ್ತಿಗೂ ಅಲ್ಲಿನ ಮೂಲನಿವಾಸಿಗಳಿಗೂ, ಈ ಎರಡು ಶತಮಾನಗಳಲ್ಲಿ ವಲಸೆ ಹೋಗಿ ನೆಲೆಯಾಗಿ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿರುವ ಯೂರೋಪಿಯನ್ನರಿಗೂ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ತಮ್ಮ ನೆಲದಲ್ಲೇ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಬಹುಸಂಖ್ಯಾತ ಯೂರೋಪಿಯನ್ ಮೂಲದ ನ್ಯೂಜಿಲ್ಯಾಂಡಿಗರು ಈಗಲೂ ಬ್ರಿಟನ್ನಿನ ರಾಜರಾಣಿಯರನ್ನು ತಮ್ಮ ಪರಮೋಚ್ಛ ಆಳ್ವಿಕರೆಂದೇ ಭಾವಿಸಿದ್ದಾರೆ. 

 ವೈಟಮೊ ಗುಹಾಲೋಕ 

 ನೆಲದ ಮೇಲಣ ಎಲ್ಲ ಸಂಘರ್ಷಗಳ ಸಾಕ್ಷಿಯಾಗಿ ಅಲ್ಲಿನ ರಮ್ಯ ಪ್ರಕೃತಿಯಿದೆ. ಮೂರು ಕೋಟಿ ವರುಷ ಕೆಳಗೆ ರೂಪುಗೊಂಡ ವೈಟಮೊ ಗುಹೆಗಳ ಅಧಿಪತ್ಯಕ್ಕೂ ಮಾವೊರಿಗಳು ಮತ್ತು ಬ್ರಿಟಿಷರ ನಡುವೆ ದೀರ್ಘ ಸಂಘರ್ಷ ನಡೆದ ಚರಿತ್ರೆಯಿದೆ.

 ಗುಹೆಗಳನ್ನು ನೋಡಲೆಂದು ನಾವು ಆಕ್ಲೆಂಡಿನಿಂದ ಹೊರಟೆವು. ಭಾರೀ ಟೂರಿಸ್ಟ್ ಬಸ್ಸುಗಳಲ್ಲಿ ನಮ್ಮನ್ನು ತುಂಬಿಕೊಂಡು ಮೂರು ತಾಸು ಪಯಣದ ಬಳಿಕ ಒಂದು ಪುಟ್ಟ ಗುಡ್ಡದ ಸೆರಗಿನಲ್ಲಿ ಇಳಿಸಿದರು. ಏಪ್ರಿಲ್ ತಿಂಗಳ ನಡುಹಗಲಾದರೇನು, ಸ್ವೆಟರು ಧರಿಸಿದ್ದೆವು. ಅಷ್ಟು ತಂಪುಹವೆಯ ಪ್ರದೇಶ ಅದು. ಎತ್ತರದ ಮರಗಳಿಂದಾವೃತವಾದ ಪುಟ್ಟ ಗುಡ್ಡ. ಮರ ನೋಡಲು ಕತ್ತೆತ್ತಿದರೆ ನೀಲ ನಿರಭ್ರ ಆಗಸ. ನೆಲ ಮುಗಿಲ ಬೆರಗಿನಲ್ಲಿ ಮುಳುಗಿಹೋಗಿದ್ದ ನಮಗೆ ಗುಡ್ಡದ ಅಡಿ ಎಂತಹ ಅದ್ಭುತ ಇದೆಯೆನ್ನುವುದು ಒಳಹೊಗುವ ತನಕ ಊಹೆಗೆ ದಕ್ಕಿರಲಿಲ್ಲ. 

 ಆ ಪ್ರದೇಶದ ಮೂಲನಿವಾಸಿಗಳಾದ ಮಾವೋರಿ ಸಮುದಾಯದ ಒಂದು ಕುಟುಂಬದ ಸುಪರ್ದಿನಲ್ಲಿ ಭಾಗಶಃ ಇರುವ ವೈಟಮೊ ಗುಹೆಯ ಬಾಯಿಯ ತನಕ ನಡೆದು ಹೋದೆವು. ಅಲ್ಲಿ ಫುಟ್ಬಾಲ್ ತಾರೆ ಡಿಯಗೊ ಮರಡೋನಾನ ತಮ್ಮನಂತೆ ಕಾಣುವ ವ್ಯಕ್ತಿ ಕೈಯಲ್ಲಿ ಬ್ಯಾಟರಿ ಹಿಡಿದು ಎದುರಾದ. ತನ್ನ ಹಿಂದೆ ನಾವು ಬರಬೇಕು ಎಂದ. ಅವನ ಕಂಚಿನ ಕಂಠ, ಸ್ಪಷ್ಟ ಉಚ್ಛಾರ, ಚಟುವಟಿಕೆಯಲ್ಲಿ ಚಲಿಸುವ ಆನೆಯಂತಹ ದೇಹವನ್ನು ಗಮನಿಸುತ್ತ ವಿವರಗಳ ಕೇಳುತ್ತ ನಡೆದೆವು. ಮುಟ್ಟುವುದು, ಮಾತನಾಡುವುದು, ಫೋಟೋ/ವೀಡಿಯೋ ತೆಗೆಯುವುದು ಮತ್ತು ಧೂಮಪಾನ - ಇವು ಸಂಪೂರ್ಣ ನಿಷಿದ್ಧ ಎಂದು ಪದೇಪದೇ ಹೇಳಿದ. ಮೂರು ಹಂತಗಳಲ್ಲಿರುವ ಒಂದೂವರೆ ಕಿಲೋಮೀಟರಿನಷ್ಟು ದೂರದ ಗುಹೆಯನ್ನು ಕ್ರಮಿಸತೊಡಗಿದೆವು. 



 ವೈ ಎಂದರೆ ನೀರು, ಟಮೊ ಎಂದರೆ ತೂತು. ವೈಟಮೊ ಎಂದರೆ ಜಲದ ಕಂಡಿ. ಅಲ್ಲಿ ವಾಸಿಸುತ್ತಿದ್ದ ಮಾವೊರಿ ಜನರಿಗೆ ಗುಹೆಗಳ ಇರುವಿಕೆಯ ಬಗೆಗೆ ಮೊದಲಿನಿಂದ ಗೊತ್ತಿತ್ತು. ಆದರೆ ಒಳಹೊಕ್ಕಿರಲಿಲ್ಲ. ನ್ಯೂಜಿಲೆಂಡನ್ನು ವಸಾಹತುವನ್ನಾಗಿಸಿಕೊಂಡಿದ್ದ ಬ್ರಿಟಿಷ್ ಅರಸೊತ್ತಿಗೆಯ ಅಧಿಕಾರಿಗಳು ಆ ಪ್ರದೇಶವನ್ನು ಸರ್ವೇ ಮಾಡಲು ೧೮೮೩ರಲ್ಲಿ ಬಂದಾಗ ಸ್ಥಳೀಯ ಮಾವೋರಿ ಕುಲದ ನಾಯಕ ಟಾನೆ ಟಿನೊರಾವು ಮತ್ತು ಅವನ ಪತ್ನಿ ಹುಟಿ ತಮ್ಮ ಒಡೆತನದ ಜಾಗದಲ್ಲಿ ವೈಟಮೊ ನದಿ ಹರಿವಿನ ಪಾತ್ರದಲ್ಲಿ ಇರುವ ಗುಹೆಗಳ ಬಗೆಗೆ ತಿಳಿಸಿದರು. ಗುಹೆಯ ಒಳಹೊಕ್ಕ ಬ್ರಿಟಿಷ್ ಅಧಿಕಾರಿಗಳು ಅಚ್ಚರಿಗೊಂಡು ನಿಂತುಬಿಟ್ಟರು. ಯಾವ ಶಿಲ್ಪಿ ಕಡೆದು ನಿಲ್ಲಿಸಿದ ಶಿಲ್ಪಗಳೋ ಎನ್ನುವಂತೆ ವಿಸ್ಮಯಕರ ಸುಣ್ಣಕಲ್ಲಿನ ರಚನೆಗಳು ಅಲ್ಲಿದ್ದವು. ಒಂದು ಗುಹಾಭಾಗದ ಸೂರಂತೂ ಪುಟ್ಟ ಹಣತೆಗಳಿಂದ ಕಿಕ್ಕಿರಿದು ತಂತಾನೇ ಬೆಳಗುತ್ತಿತ್ತು! ಮೂಕವಿಸ್ಮಿತರಾದ ಅಧಿಕಾರಿಗಳು ಒಬ್ಬರಾದ ಮೇಲೊಬ್ಬರನ್ನು ಬಂದರು, ಮೋಂಬತ್ತಿ ಬೆಳಕಿನಲ್ಲಿ ವಿಸ್ತೃತವಾಗಿ ಶೋಧಿಸಿ ವರದಿ ಸಲ್ಲಿಸಿದರು. 

ಗುಹೆಗಳ ಪ್ರಾಮುಖ್ಯತೆ ಅರಿತ ಟಾನೆ ಮತ್ತು ಹುಟಿ ೧೮೮೯ರಿಂದ ತಂಡತಂಡವಾಗಿ ಗುಹೆಗೆ ಪ್ರವಾಸಿಗಳನ್ನು ಕರೆತಂದು ತೋರಿಸತೊಡಗಿದರು. ರೈಲು ರಸ್ತೆ ನಿರ್ಮಾಣವಾಯಿತು. ಇದುವರೆಗೆ ನಿರ್ಜನವಾಗಿದ್ದ ಗುಹೆಗಳಿಗೆ ವರ್ಷಕ್ಕೆ ಐದುನೂರು ಜನ ಭೇಟಿ ನೀಡತೊಡಗಿದರು. ಬಂದವರು ಸುಮ್ಮನೆ ಹೋಗಲಿಲ್ಲ, ಗೋಡೆಗಳ ಮೇಲೆ ತಮ್ಮ ಹೆಸರು, ಸಂದೇಶ ಕೆತ್ತಿದರು. ೧೯೦೫ರಲ್ಲಿ ಗುಹೆಯ ಗೋಡೆಗಳ ಮೇಲೆ ಭಿತ್ತಿ ಬರಹ ನಡೆಸಿದ್ದನ್ನು ಗಮನಿಸಿದ ಅಧಿಕಾರಿಗಳು ಆ ನೆಪ ಹೂಡಿ ೬೨೫ ಪೌಂಡುಗಳಿಗೆ ಗುಹೆಗಳನ್ನು ಸರ್ಕಾರದ ಸುಪರ್ದಿಗೆ ಪಡೆದರು. ಗುಹೆಗಳ ಸ್ವಾಮ್ಯದ ಬಗೆಗೆ ಸಾಕಷ್ಟು ಸಂಘರ್ಷ ನಡೆಯಿತು. ನಂತರ ಒಬ್ಬರಾದ ಮೇಲೊಬ್ಬರ ಕೈಗೆ ಚಲಿಸಿದ ಗುಹೆಯು ೧೯೮೯ರಿಂದ ಟಾನೆ-ಹುಟಿ ದಂಪತಿಗಳ ವಂಶಸ್ಥರ ಭಾಗಶಃ ಸುಪರ್ದಿಗೆ ಬಂದಿತು. ಅವರೀಗ ಪ್ರವಾಸಿಗಳನ್ನು ಒಳಗೊಯ್ದು ವಿವರಿಸಿ, ತೋರಿಸಿ, ಕರೆತರುವುದಲ್ಲದೆ ಭೇಟಿ ಮಾಡುವವರಿಂದ ಬರುವ ಹಣದಲ್ಲಿ ಪಾಲು ಪಡೆಯುತ್ತಾರೆ. ಗುಹೆಗಳ ಅಭಿವೃದ್ಧಿ-ನಿರ್ವಹಣೆಯ ಪಾಲುದಾರರೂ ಆಗಿದ್ದಾರೆ. 

 ನಮ್ಮ ಜೊತೆ ಬಂದ ‘ಮರಡೋನಾ’ ಟಾನೆ-ಹುಟಿ ವಂಶಸ್ಥನಂತೆ! ಗುಹೆಗಳ ಉಷ್ಣತೆ, ಕಲ್ಲುಗಳ-ನೀರಿನ ಉಷ್ಣತೆ, ಕಾರ್ಬನ್ ಡೈ ಆಕ್ಸೈಡ್ ಮಟ್ಟ, ತೇವಾಂಶ ಎಲ್ಲವನ್ನು ಕಾಲಕಾಲಕ್ಕೆ ಅಳೆಯುವ ತಜ್ಞರ ಸಮಿತಿಯಲ್ಲೂ ಅವನಿರುವನಂತೆ. 

 ಅವನ ಹಿಂದೆ ತಲೆತಗ್ಗಿಸಿ ನಡೆಯುತ್ತ ಗುಹೆಯ ಮೊದಲ ಹಂತ ಪ್ರವೇಶಿಸಿದೆವು. ಗುಹೆಗಳು ಮೊದಲು ಕಡಲಾಳದಲ್ಲಿದ್ದದ್ದಕ್ಕೆ ಸಾಕ್ಷಿಯಾಗಿ ಕಪ್ಪೆಚಿಪ್ಪು, ಹವಳ ಜೀವಿ, ಮೀನಿನ ಮೂಳೆ ಮೊದಲಾದ ಕಡಲಜೀವಿಗಳ ಪಳೆಯುಳಿಕೆಗಳು ಗೋಡೆ, ಸೂರಿನ ಮೇಲೆ ಕಂಡವು. ಅಲ್ಲಿ ಅಂತಹ ಮುನ್ನೂರು ಗುಹೆಗಳಿವೆ ಎಂದವನು ಸಾದ್ಯಂತ ವಿವರಿಸುವಾಗ ಅವನ ದನಿಯಲ್ಲಿ ಎಷ್ಟು ನೈಪುಣ್ಯ, ಖಚಿತತೆ ಇತ್ತು ಎಂದರೆ ಅದು ರೂಪುಗೊಂಡದ್ದ ಅವ ಕಂಡಿರುವನೇನೋ ಎನಿಸಿತು. 






 ಗುಹೆಯ ನಾನಾಭಾಗಗಳಿಗೆ ಚರ್ಚಿನ ಹೆಸರುಗಳನ್ನು ಇಟ್ಟಿದ್ದಾರೆ. ಮೊದಲು ಕೆಟಕೋಂಬ್ ನೋಡಿದೆವು. ಆನಂತರ ಬಾಂಕ್ವೆಟ್ ಚೇಂಬರ್ ಪ್ರವೇಶಿಸಿದೆವು. ಮೇಲಿನಿಂದ ಕೆಳಗೆ ತೊಟ್ಟಿಕ್ಕುವ ನೀರಿನ ಗುಂಟ ಸುಣ್ಣಕಲ್ಲಿನ ಕಂಬಕೋಲು ರೂಪುಗೊಂಡಿವೆ. ಮೇಲಿನಿಂದ ಬಿಳಲಿನಂತೆ ಇಳಿವ, ಕೆಳಗಿನಿಂತ ಹುತ್ತದಂತೆ ಮೇಲೆ ಹೋಗಿರುವ ರಚನೆಗಳು ಒಂದನ್ನೊಂದು ಸಂಧಿಸಿ ಕೆಲವೆಡೆ ಬೃಹತ್ ಸ್ಥಂಭ ರೂಪುಗೊಂಡಿದೆ. ಅದು ಕ್ಯಾಥೆಡ್ರಲ್. ಅಲ್ಲಿ ೧೬ ಮೀ ಎತ್ತರದ ಒಂದು ಸ್ಥಂಭವಿದೆ! ಆ ಭಾಗವು ಉತ್ತಮ ಪ್ರತಿಧ್ವನಿ ಸಾಮರ್ಥ್ಯವನ್ನು ಹೊಂದಿದೆ. ಕ್ಯಾರಲ್ ಹಾಡಬಹುದು ಎಂದು ಮರಡೋನಾ ಸೂಚಿಸಿದ. ಹಲವು ಖ್ಯಾತನಾಮರು ಅಲ್ಲಿ ಹಾಡಿ ಹೋಗಿದ್ದಾರೆಂದ. ನಮ್ಮ ಗುಂಪಿನ ಕೆಲವರು ಒಗ್ಗೂಡಿ ಕ್ಯಾರಲ್ ಹಾಡಿದರು. ನನ್ನ ನೆಚ್ಚಿನ ಕವಿ ಮೂಡ್ನಾಕೂಡು ಅವರ ಹಾಡು ಹಾಡಲು ಹೋದೆ. ಜೊತೆಗೂಡುವವರಿಲ್ಲದೆ ಪ್ರತಿಧ್ವನಿ ಕೇಳಿಬರಲಿಲ್ಲ. 

 ಈ ಗುಹೆ, ಅದರ ಪ್ರತಿ ರಚನೆ ಈಗಲೂ ಬೆಳೆಯುತ್ತಿವೆಯಂತೆ. ಒಂದು ಚದರ ಸೆಂಟಿಮೀಟರ್ ಬೆಳೆಯಲು ಸುಣ್ಣಕಲ್ಲಿಗೆ ೧೦೦ ವರ್ಷ ಬೇಕಂತೆ! ಎಂದರೆ ಹುಲುಮಾನವರಾದ ನಾವು ಸುಣ್ಣಕಲ್ಲಿನ ಲೆಕ್ಕದಲ್ಲಿ ಒಂದು ಸೆಂಟಿಮೀಟರ್ ಕೂಡ ಬೆಳೆಯಲಾರದ ಕುಬ್ಜರು! ಹಾಗಿರುತ್ತ ಹದಿನಾರು ಮೀಟರ್ ಎತ್ತರದ ಸ್ತಂಭ, ಇಷ್ಟೊಂದು ಸುಂದರ ಕಲಾಕೃತಿಗಳು ರೂಪುಗೊಂಡಿರುವ ಮೂರು ಕೋಟಿ ವರ್ಷಗಳ ದೀರ್ಘ ಕಾಲಮಾನ! ಅದನ್ನು ಬೆಳಗುವ ಬರಿಯ ಹನ್ನೊಂದು ತಿಂಗಳ ಆಯಸ್ಸಿನ ಬೆಳಕಿನ ಹುಳ! 

 ಮೂಕವಾಗಿದೆ ಕಾಲವಿಲ್ಲಿ!! 

 ಬೆಳಕಿನ ಬೀಜಗಳು ನಾವು, ನಮಗೆಲ್ಲಿಯ ಸಾವು? 

 ಮೆಟ್ಟಿಲಿಳಿದು ಇಳಿದು ಮುಂದೆ ಹೋದೆವು. ಏನೇನೂ ಕಾಣದ ಕಗ್ಗತ್ತಲು. ಕಂಬಿ ಹಿಡಿದು ತನ್ನ ಹೆಜ್ಜೆಸದ್ದುಗಳ ಅನುಸರಿಸಿ ಮೆಲ್ಲ ಹಿಂಬಾಲಿಸುವಂತೆ ಮರಡೋನಾ ಮೊದಲೇ ತಿಳಿಸಿದ್ದ. ಇದು ನಮಗೆ ಸಂಪೂರ್ಣ ಹೊಸ ಅನುಭವ. ಕುರುಡಾಗುವುದು ಎಂದರೇನು ಎಂದು ಒಮ್ಮೆಲೇ ಅರಿವಿಗೆ ಬಂತು. 

 ಕಗ್ಗತ್ತಲು, ನಿಶ್ಶಬ್ದವನ್ನು ಸೀಳಿ ಸಳಸಳ ನೀರು ಸರಿಸುತ್ತ ಮರಡೋನಾ ಮುನ್ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ನಿಂತ ಅವ ಒಮ್ಮೆ ಕ್ಷೀಣ ಬೆಳಕು ಹರಿಸಿದ. ದೂರದಲ್ಲಿ ಒಂದು ದೋಣಿ ನಿಂತಿತ್ತು. ಬ್ಯಾಟರಿ ಬೆಳಕು ಬಿಡುತ್ತ ಆರಿಸುತ್ತ ಒಬ್ಬೊಬ್ಬರನ್ನೇ ಅದರಲ್ಲಿ ಕೂರಿಸಿದ. ತನ್ನ ತಲೆ ಮೇಲಿದ್ದ ಹಗ್ಗ ಹಿಡಿದು ನಿಂತು ಕಾಲೊತ್ತುತ್ತ ಸಮತೋಲ ಮಾಡುತ್ತ ನಿಧಾನ ದೋಣಿ ಚಲಾಯಿಸತೊಡಗಿದ. 

ಭೂಮಿಯಾಳದ ಗುಹೆ. ಅಗಾಧ ನಿಶ್ಶಬ್ದ. ಹಕ್ಕಿ ಕೂಗಿಲ್ಲ, ಜೀರುಂಡೆ ದನಿಯಿಲ್ಲ, ಮರ-ಎಲೆಗಳ ಮರ್ಮರವವಿಲ್ಲ, ಗಾಳಿ ಮಳೆಯ ಹುಯ್ಯಲು ಶಬ್ದವೂ ಇಲ್ಲ. ಸಂಪೂರ್ಣ ನಿಶ್ಶಬ್ದ. ನಮ್ಮ ಉಸಿರೂ ಕೇಳುತ್ತಿದೆ ಎನ್ನುವ ಹಾಗೆ. ಟಪ ಟಪ ಟಪ.. ಅಲ್ಲೆಲ್ಲೊ ನೀರು ತೊಟ್ಟಿಕ್ಕುವ ಸದ್ದು ಕೇಳುತ್ತಿದೆ. ಗುರಿಕಾರ ಹಗ್ಗ ಜಗ್ಗುತ್ತ, ಕೂತು, ಎದ್ದು ತನ್ನ ಮೈಯ ಚಲನೆಯಿಂದಲೇ ಸಮತೋಲಗೊಳಿಸುತ್ತ ಹುಟ್ಟಿಲ್ಲದೆ ದೋಣಿ ನಡೆಸುತ್ತಿದ್ದಾನೆ. ಮೇಲೆ, ಕೆಳಗೆ, ಆಚೆ, ಈಚೆ ಎಂಥದೂ ಇಲ್ಲದ ಅಗಾಧ ಕಗ್ಗತ್ತಲು. ಕಣ್ಮುಚ್ಚಬೇಕೆನಿಸಿತು. ಕೆಲವರು ಕತ್ತಲಿಗೆ ಹೊಂದಿಕೊಳ್ಳಲಾಗದೇ ಪಿಸಿಪಿಸಿ ಎನ್ನುತ್ತಿದ್ದರು. 




ಓ! ಮೈ!! ಇದ್ದಕ್ಕಿದ್ದಂತೆ ಆಶ್ಚರ್ಯೋದ್ಗಾರಗಳು ಕೇಳಿ ಬಂದವು. ಕಣ್ಣುಬಿಟ್ಟರೆ ಆಗಸದಲ್ಲಿ ಸಾವಿರಾರು ನಕ್ಷತ್ರಗಳು ಮಿನುಗುತ್ತಿವೆಯೋ ಎಂಬ ಹಾಗೆ ಮೇಲೆ ಬೆಳಕಿನ ಬೀಜಗಳು ಗೋಚರಿಸಿದವು. ಗುಹೆಯೊಳಗೆ ಹೊಳೆಯುತ್ತಿದ್ದ ರತ್ನಮಣಿಗಳ ಕಥೆ ನೆನಪಾಯಿತು. ಅಕ್ಕ, ಅಲ್ಲಮರಿಗೆ ಇಂಥ ಕತ್ತಲ ಗುಹೆಗಳಲ್ಲೆ ಬೆಳಕು ಕಂಡಿದ್ದಲ್ಲವೆ? ಅವೆಷ್ಟು ಎತ್ತರದಲ್ಲಿವೆಯೋ, ನಾವೆಷ್ಟು ಆಳದಲ್ಲಿರುವೆವೋ ಒಂದೂ ಅಂದಾಜಾಗಲಿಲ್ಲ. ಈಗಲೋ ಇನ್ನೊಂದು ಚಣಕ್ಕೋ ತನ್ನ ಬೆಳಕಿಗೆ ಮರುಳಾಗಿ ಬರಲಿರುವ ಬಲಿಗಾಗಿ ರತ್ನದೆಳೆಗಳ ಇಳಿಸಿಕೊಂಡು ಅದರೊಳಗೆ ಅತ್ತಿತ್ತ ಮಿಸುಗುತ್ತ, ಬೆಳಕು ಹೆಚ್ಚು ಕಡಿಮೆ ಮಾಡುತ್ತ ನಿಶ್ಚವಾಗಿದ್ದ ಜ್ಯೋತಿಬಿಂದುಗಳು ಕಾಣಿಸಿದವು. ಸೂರಿನಿಂದ ಇಳಿಬಿದ್ದ ಹೊಳೆವ ಸೇವಿಗೆ ಎಳೆಗಳ ನಡುವೆ ಹೊಳೆಹೊಳೆವ ಬೆಳಕಿನುಂಡೆಗಳು. ನರಮನುಷ್ಯರ ಉಗಮವಾಗುವುದಕ್ಕಿಂತ ಕೋಟ್ಯಂತರ ವರ್ಷಗಳ ಮುಂಚೆಯೇ ಈ ಭೂಮಿ ಮೇಲೆ ಬಂದ ಮೊಟ್ಟೆ-ಲಾರ್ವಾ-ಕೋಶಜೀವಿ-ಕೀಟವೆಂಬ ಜೀವನ ಚಕ್ರದ ಹುಳಗಳನ್ನು ಕತ್ತು ಮೇಲೆತ್ತಿ ಕಣ್ಣು ತಣಿವಷ್ಟು, ಮನ ತಣಿವಷ್ಟು ನೋಡಿದೆವು. ಆರ್ತರಾಗಿ ನೋಡಿದೆವು. ಕಣ್ತುಂಬಿಕೊಂಡೆವು. ಏನನ್ನು ಕಂಡು ಮುದಗೊಳ್ಳುವುದೋ ಮಗು ಅದರೆಡೆಗೆ ಕೈಚಾಚುತ್ತದೆ. ವೈಟಮೊ ಬೆಳಕಿನ ಹುಳಗಳ ಕಂಡಾಗ ನಮ್ಮೊಳಗಿನ ಮಗುತನ ಎಚ್ಚೆತ್ತು ಅವುಗಳತ್ತ ಕೈ ಚಾಚತೊಡಗಿತ್ತು. 

 ಮೆಲ್ಲ ಚಲಿಸುತ್ತಿದ್ದ ನಾವೆಯ ಕತ್ತಲಯಾನ ಕೆಲಸಮಯ ಮುಂದುವರೆಯಿತು. ಕೊನೆಗೆ ಅಗೋ ಅಷ್ಟು ದೂರದಲ್ಲಿ ಗುಹೆಯ ಬಾಯಲ್ಲಿ ಬೆಳಕು ಕಾಣತೊಡಗಿತು. ಕತ್ತಲು ಆಪ್ಯಾಯಮಾನವೆನಿಸಿದ ಕಾರಣ ಅಯ್ಯೋ, ಬೆಳಕು ಬರುವುದೇ ಬೇಡವಾಗಿತ್ತು ಎನಿಸಿದ್ದು ಸಹಜವೇ ಆಗಿತ್ತು. 

 ಬೆಳಕಿನ ಹುಳವೆಂಬ ಬೆರಗು! 

 ಎರಡು ರೆಕ್ಕೆಗಳ ಕೀಟ ಅರ‍್ಯಾಕ್ನೊಕ್ಯಾಂಪಾ ಲ್ಯುಮಿನೋಸಾ. ಅದರ ಲಾರ್ವಾ ಹಂತವೇ ಬೆಳಕಿನ ಹುಳ. ಅದು ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಕತ್ತಲಿರುವ, ಒದ್ದೆಯಿರುವ, ಚಪ್ಪಟೆ ಸೂರು ಹೊಂದಿರುವ, ಬಿಸಿಲು ಗಾಳಿ ಬೀಳದ ಪ್ರದೇಶದಲ್ಲಷ್ಟೆ ಅದು ಬದುಕಲು ಸಾಧ್ಯವಿದೆ. ವೈಟಮೊ ನದಿಯ ಬಳಿ ಸಮೃದ್ಧ ಕ್ರಿಮಿಕೀಟಗಳಿರುವ ಪ್ರದೇಶದ ಕತ್ತಲ ಗುಹೆಗಳು ಅವಕ್ಕೆ ಅತ್ಯಂತ ಸೂಕ್ತ ವಾಸಸ್ಥಾನವಾಗಿವೆ. 

 ಒಟ್ಟೂ ೧೧ ತಿಂಗಳ ಜೀವಿತ ಕಾಲಾವಧಿಯ ಕೀಟದ ಅಮ್ಮನು ಸುಮಾರು ೧೦೦-೧೨೦ ಮೊಟ್ಟೆಗಳನ್ನು ಸೂರಿನಲ್ಲಿ ಒಂದರ ಪಕ್ಕ ಒಂದು ಇಟ್ಟು ಸಾಯುತ್ತದೆ. ಇಪ್ಪತ್ತು ದಿನಗಳಲ್ಲಿ ಮೊಟ್ಟೆಯೊಡೆದು ಹೊರಬರುವ ೩ ಮಿಮೀ ಉದ್ದದ ಪುಟ್ಟ ಲಾರ್ವಾಗಳು ಚದುರುತ್ತವೆ. ಜಿಗುಟು ಅಂಟಿನ ಎಳೆಗಳನ್ನು ವಾಂತಿ ಮಾಡಿ (ಅದು ತ್ಯಾಜ್ಯವೂ ಹೌದಂತೆ!), ಇಳಿಬಿಟ್ಟು, ಬಳಿಕ ಬೆಳಕು ಸೂಸಲು ಶುರು ಮಾಡುತ್ತವೆ. ಜೋತಾಡುವ ಬೆಳಕಿನ ಎಳೆಗಳನ್ನು ತಯಾರಿಸುವುದೇಕೆ? ತನ್ನ ಆಹಾರವಾಗಿ ಕ್ರಿಮಿಕೀಟಗಳ ಆಕರ್ಷಿಸಲು, ತನ್ನ ದೇಹ ಹೊರಸೂಸುವ ತ್ಯಾಜ್ಯಗಳ ‘ಉರಿ’ಸಲು, ಉಳಿದವರು ಬೆಳಕಿಗೆ ಹೆದರಿ ತನ್ನ ತಿನ್ನದಂತೆ ರಕ್ಷಿಸಿಕೊಳ್ಳಲು, ಬೆಳಕಿಗೆ ಆಕರ್ಷಿತರಾದವರು ತನ್ನ ಬಾಯಿಗೆ ಬಂದು ಬೀಳಲು! 

 ಎಲ ಎಲಾ ಹುಳವೇ! 

 ಹೀಗೆ ಒಂಬತ್ತು ತಿಂಗಳ ತನಕ ಬೆಂಕಿಕಡ್ಡಿಯಷ್ಟು ಉದ್ದದವರೆಗೆ ಬೆಳೆಯುವ ಬೆಳಕಿನ ಹುಳದ ದೇಹದ ಕೊನೆಯ ಭಾಗ ರಾಸಾಯನಿಕಗಳನ್ನು ಹೊರಸೂಸುತ್ತದೆ. ಅವು ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಬೆಳಕು ಬೀರುತ್ತವೆ. ಪುಟ್ಟ ಹುಳವು ಆಮ್ಲಜನಕದ ಪೂರೈಕೆ ಹೆಚ್ಚು ಕಡಿಮೆ ಮಾಡುವ ಮೂಲಕ ಬೆಳಕನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳುತ್ತದೆ. ಜಿಗುಟು ಅಂಟಿನ ಎಳೆಗೆ ಸಿಕ್ಕಿದ ಕ್ರಿಮಿಕೀಟಗಳನ್ನು ಬಾಯಿಗೆಳೆದುಕೊಳ್ಳುತ್ತದೆ. ನಂತರ ತನ್ನ ಸುತ್ತ ಕೋಶ ನೇಯ್ದುಕೊಂಡು ಸೂರಿಗೆ ಇಳಿಬಿದ್ದು ಹದಿಮೂರು ದಿನಗಳಲ್ಲಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಕೀಟವು ನೋಡಲು ದೊಡ್ಡ ಸೊಳ್ಳೆಯಷ್ಟಿರುತ್ತದೆ. ಅದಕ್ಕೆ ಬಾಯಿರುವುದಿಲ್ಲ, ಜೀರ್ಣಾಂಗ ವ್ಯೂಹವಿರುವುದಿಲ್ಲ. ಉಂಡು ತಿನ್ನುವ ಕೆಲಸವೇ ಇಲ್ಲ. ಏನಿದ್ದರೂ ವಂಶಾಭಿವೃದ್ಧಿಯೊಂದೇ ಗುರಿ. ಗಂಡುಕೀಟ ಕೋಶಗಳ ಬಳಿಯೇ ಸುಳಿದಾಡುತ್ತ ಹೆಣ್ಣುಕೀಟ ಹೊರಬರುವುದನ್ನೇ ಕಾಯುತ್ತಿರುತ್ತದೆ. ಹೆಣ್ಣನ್ನು ಕಂಡದ್ದೇ ಮಿಲನಕ್ರಿಯೆ ನಡೆಸಿ, ಮತ್ತಷ್ಟು ಹೆಣ್ಣುಗಳ ಹುಡುಕಿ ಹೊರಡುತ್ತದೆ. ಹೆಣ್ಣು ಹುಡುಕುತ್ತ ಹಾರುವ ಗಂಡುಗಳು ಎಷ್ಟೋ ಸಲ ಲಾರ್ವಾಗಳು ಇಳಿಬಿಟ್ಟ ಜಿಗುಟು ಎಳೆಗೆ ಸಿಲುಕಿ ಸಾಯುವುದೂ ಇದೆ. ಮಿಲನದ ಬಳಿಕ ಮೂರ‍್ನಾಲ್ಕು ದಿನಗಳಲ್ಲಿ ಫಲಿತ ಮೊಟ್ಟೆಗಳನ್ನಿಟ್ಟು ಹೆಣ್ಣು ಸಾಯುತ್ತದೆ. ಬೆಳಕಿನ ಹುಳದ ಲಾರ್ವಾಗಳಷ್ಟೆ ಬೆಳಕು ಬೀರುವುದು. ನಂತರ ಕೋಶ ಕಟ್ಟಿ, ಕೀಟವಾದ ಅವಸ್ಥೆಯಲ್ಲಿ ಬೆಳಕೂ ಇಲ್ಲ, ಬಾಯಿಯೂ ಇಲ್ಲ. 

 ಮಿಂಚುಹುಳಗಳು ನಮಗೆ ಹೊಸವಲ್ಲ. ಮಳೆರಾತ್ರಿಗಳಲ್ಲಿ ಒಂದು ಮರಕ್ಕೆ ಮರವನ್ನೇ ಅಡರಿಕೊಂಡು ಹೊತ್ತಿ ಆರುವ ಬೆಳಕಿನ ಕುಡಿಗಳನ್ನು ಕಂಡಿದ್ದೇವೆ. ಅಂಗೈಯಲ್ಲಿ ಮಿಂಚುಹುಳವನ್ನು ಮುಚ್ಚಿ ತೆರೆದು ಅದು ಬೀರುವ ಬೆಳಕನ್ನು ಅನುಭವಿಸಿದ್ದೇವೆ. ಇದು ಅದಕ್ಕಿಂತ ತುಂಬಾ ಭಿನ್ನ ಅನುಭವ. ನೆಲದಾಳದ ಗುಹೆಯ ಸೌಂದರ್ಯ, ನಿಶ್ಶಬ್ದ, ಕತ್ತಲು, ನೀರು, ಉಗಮದ ಕತೆ ಮತ್ತವೆಲ್ಲದರ ಜೊತೆಗೆ ಥಟ್ಟನೆ ಪ್ರತ್ಯಕ್ಷವಾಗುವ ಬೆಳಕು - ಇಡಿಯ ಪ್ರವಾಸದಲ್ಲಿ ದೊರೆತ ವಿಶಿಷ್ಟ ಅನುಭವ ಸ್ಮರಣಿಕೆಯಂತೆ ಭಾಸವಾಗುತ್ತವೆ. ನೆನಪಿಗೆ ಒಂದೂ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೇನು, ಆ ಇಡಿಯ ಗುಹಾ ದೃಶ್ಯ ಇಂದಿಗೂ ನಮ್ಮ ನೆನಪಿನ ಕೋಶಗಳಲ್ಲಿ ಭದ್ರವಾಗಿವೆ. 

 ಪ್ರಕೃತಿ ಎಂದರೆ ಅನಂತ ವಿಸ್ಮಯ. ಪ್ರಶ್ನೆಗಳೇ ಇರದ ಉತ್ತರ. ಅರಿತಷ್ಟೂ ನಿಗೂಢ. ಕಲಿತಷ್ಟೂ ಮುಗಿಯದ ಪಾಠ. ಅಲ್ಲವೇ? 

 ಡಾ. ಎಚ್. ಎಸ್. ಅನುಪಮಾ
(ಈ ವಾರದ `ಸುಧಾ'ದಲ್ಲಿ ಪ್ರಕಟ)

Tuesday, 10 June 2025

ಮನೋಜ್ ಬೊಗಾಟಿ: ಕವಿಗೆ, ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ?

 




(ಇತ್ತೀಚೆಗೆ ಮೇ ೧೭, ೧೮ರಂದು ಸಿಂಧನೂರಿನ ಸತ್ಯಾ ಗಾರ್ಡನ್ನಿನಲ್ಲಿ ನಡೆದ ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯ ಆಶಯ ಮಾತುಗಳನ್ನಾಡಲು ಡಾರ್ಜಿಲಿಂಗಿನ ಕವಿ ಮನೋಜ ಬೊಗಾಟಿ ಬಂದಿದ್ದರು. ಎದೆಯ ದನಿಯನ್ನು ಮಾತಾಗಿಸುವ ಕವಿಯನ್ನು ೨೨೬೦ ಕಿಲೋಮೀಟರ್ ದೂರದಿಂದ ಸಿಂಧನೂರಿಗೆ ಕರೆಸಿಕೊಂಡದ್ದೇ ಒಂದು ಕಥನವಾಗಬಲ್ಲದು. ಗಡಿಯಾರದ ಹಿಂದೋಡುವ ಗುಣವೇ ಇಲ್ಲದ ಈತ ಕಳಿಸಿದ್ದು ನೋಡಿರುವುದೂ ಇಲ್ಲ, ಮಾಹಿತಿ-ಸೂಚನೆ ಕೇಳಿರುವುದೂ ಇಲ್ಲ, ಕವಿಗೋಷ್ಟಿಯ ಆಶಯ ಎಂದು ದಿರಿಸಿನಲ್ಲಿ ತಯಾರಾಗುವುದೂ ಇಲ್ಲ. ಸದಾ ತನ್ನದೇ ಅಕ್ಷರ ಲೋಕದ ಸೃಷ್ಟಿಕ್ರಿಯೆಯ ಗುಂಗಿನಲ್ಲಿ ಮುಳುಗಿರುವಂತೆ ಕಾಣುವ ಬರಹಗಾರ ಮನೋಜ್, ಹೇಗಿದ್ದರೋ ಹಾಗೇ ಬಂದು ವೇದಿಕೆಯೇರಿದರು. ಸರಳ ವ್ಯಕ್ತಿತ್ವದ, ಬೆಟ್ಟ ಪ್ರದೇಶ ಡಾರ್ಜಿಲಿಂಗಿನ ಕೆಳವರ್ಗದಿಂದ ಬಂದ ಕವಿ ತಮ್ಮ ಸಾಂದ್ರ ಅನುಭವದ ಮಾತು, ಕವಿತೆ, ಕ್ರಾಂತಿಕಾರಿ ಹುಮ್ಮಸ್ಸಿನ ಮಾತುಗಳಿಂದ ನೆರೆದವರ ಗಮನ ಸೆಳೆದರು.

46 ವರ್ಷದ ಮನೋಜ್ ಡಾರ್ಜಿಲಿಂಗಿನ ಡಾಲ್ಗಾಂವ್ ಪ್ರಾಂತ್ಯದ ರೊಂಗೊದವರು. ಅವರು ಪಡೆದ ಔಪಚಾರಿಕ ಶಿಕ್ಷಣ ಕಡಿಮೆ. ಶೈಕ್ಷಣಿಕ, ಸಾಹಿತ್ಯಿಕ ಹಿನ್ನೆಲೆಯದಲ್ಲದ ಶ್ರಮಿಕ ಕುಟುಂಬದಿಂದ ಬಂದ ಅವರಿಗೆ ನಿಯತಕಾಲಿಕಗಳ ಓದು ಮತ್ತು ಒಡನಾಟದಿಂದ ಸಾಹಿತ್ಯದ ಒಲವು ಬೆಳೆಯಿತು. ಸೂಕ್ಷ್ಮ ಗ್ರಹಿಕೆ ಮತ್ತು ವಿಸ್ತೃತ ಓದು ಅವರನ್ನು ಕವಿ ಮತ್ತು ಪತ್ರಕರ್ತನನ್ನಾಗಿಸಿದವು. ಕ್ರಾಂತಿಕಾರಿ ಕವಿತೆ ಮತ್ತು ಬರಹಗಳಿಂದ ಕೆಳವರ್ಗದ ಜನರ ಧ್ವನಿಯಾದರು. ೨೦೦೮ರಲ್ಲಿ ‘ಬಿಂಬಗೋಷ್ಠಿ’ ಎಂಬ ಮೊದಲ ಕವನ ಸಂಕಲನ ಹೊರತಂದಿರುವ ಬೊಗಾಟಿ, ತಮ್ಮ ದೀರ್ಘ ಕವನಗಳ ಸಂಕಲನ ‘ಫೌಕ ರಂಗಾರು’ (‘ಬಣ್ಣಗಳ ಗಾಯಗಳು’)ವಿಗೆ 2012ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದಾರೆ. ಆರು ಕವನ ಸಂಕಲನಗಳಲ್ಲದೆ ಒಂದು ಕಥಾ ಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಒಂದು ಕೃತಿಯನ್ನು ಹಿಂದಿಯಿಂದ ನೇಪಾಳಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಕಾಲಿಂಪಾಂಗ್‌ನಲ್ಲಿ ಬಾಳಸಂಗಾತಿ ಭಕ್ತಿ ರೈ ಅವರೊಡನೆ ನೆಲೆಸಿರುವ ಮನೋಜ್ ಬುದ್ಧಾನುಯಾಯಿ. ಸಿಂಧನೂರಿನಲ್ಲಿ ಭಾವಾಭಿನಯದ ಏರಿಳಿತದೊಂದಿಗೆ ಹಿಂದಿಯಲ್ಲಿ ಅವರು ಮಾಡಿದ ಭಾಷಣ, ಅವರೊಡನೆ ಆಡಿದ ಮಾತುಕತೆಯ ಸಾರ ಇಲ್ಲಿದೆ.)

‘ನಾನು ಭಾಷಣಕಾರ ಅಲ್ಲ. ಆಡುವುದನ್ನೆಲ್ಲ ಕವಿತೆಯಲ್ಲೇ ಆಡುವವನು. ಅಷ್ಟೆಲ್ಲ ಮಾತಾಡಲಿಕ್ಕೆ ಬರಲ್ಲ. ನನ್ನ ಮಾತೃಭಾಷೆ ನೇಪಾಳಿ. ಕನ್ನಡ ವಾತಾವರಣದ ನನಗಿಲ್ಲಿ ನಿಮ್ಮ ಭಾಷೆಯಲ್ಲಿ ಮಾತನಾಡುವಂತಿದ್ದರೆ ಅನಿಸಿದೆ. ಎಲ್ಲ ಅಪರಿಚಿತವೇ ಆದರೂ ಕುತೂಹಲ ಸೆಳೆಯುತ್ತಿದೆ. ನಿನ್ನೆಯ ಕವಿಗೋಷ್ಟಿ ಕೇಳಿಸಿಕೊಂಡೆ. ಅರೆ, ನಾವು ಬಳಸುವ ಎಷ್ಟೊಂದು ಪದಗಳನ್ನು ಇವರೂ ಬಳಸುವರಲ್ಲ ಎನಿಸಿತು. ಅರ್ಥವಾಗದಿದ್ದರೂ ಅವರ ಲಯ, ದೇಹದ ಭಾಷೆಯಿಂದ ಒಂದಷ್ಟು ಅರ್ಥವಾಯಿತು. ಕವಿತೆ ಎಂದರೆ ಹಾಗೇ, ಅಲ್ಲವೇ?

ಬಗದಾದಿನ ಕವಿ ಸಿನಾನ್ ಅಂತೋನ್ ಬರೆದ ಕವಿತೆ ಇದು:

‘ರಕ್ತದಲ್ಲದ್ದಿದ ಕುಂಚದಿಂದ
ಗೋಡೆಯ ಮೇಲೆ ಬರೆದೆ,
ಅಲ್ಲೊಂದು ಕಿಟಕಿ ಮೂಡಿತು.
ಕಂಡದ್ದು ಎರಡು ದೃಶ್ಯಗಳು:
ಯುದ್ಧ ಮತ್ತು ಅವ್ವ.
ಅವದವ ತನ್ನ ಗರ್ಭಸ್ಥ ಮಗುವಿನ
ಶವದ ಬಟ್ಟೆ ಅರಸುತ್ತಿದ್ದಳು..’


ಈಗ ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ ಎಲ್ಲ ಕಡೆಯೂ ನಾವಂದುಕೊಂಡ ಹಾಗೆ ಏನೂ ಆಗದಂತೆ ಆಗಿದೆ. ನಾವು ಒಂದು ತರಹ ಯಂತ್ರಗಳಂತಾಗಿದೇವಾ ಅನಿಸುತ್ತಿದೆ. ನಮ್ಮಲ್ಲೂ ಯುದ್ಧ ಶುರು ಆಗೇ ಬಿಡ್ತು ಅಂದರು. ಆಮೇಲೆ ಈಗೇನೋ ವ್ಯಾಪಾರದ ಧಮಕಿ ಹಾಕಿ ಯುದ್ಧ ನಿಲ್ಲಿಸಿದೀವಿ ಅಂತಿದ್ದಾರೆ. ಎಲ್ಲರಲ್ಲೂ ಯಾರೋ ನಮ್ಮನ್ನು ನಿಯಂತ್ರಿಸುತ್ತಿರುವ ಭಾವನೆ ಇದೆ.

ಈಗ ಮನುಷ್ಯರು ಕಣ್ಣಿನಿಂದ, ಮನಸ್ಸಿನಿಂದ ನೋಡುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಕೇಳುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಯೋಚಿಸುವುದನ್ನು ನಿಲಿಸಿದ್ದಾರೆ. ತಮ್ಮ ಕಣ್ಣಿನಿಂದ ಕಣ್ಣೀರು ಸುರಿಸಿ ಅಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಮನುಷ್ಯರು ಯಂತ್ರ, ರೊಬಾಟ್ ಆಗಿದಾರೆ. ಯಾಕೆ ಹೀಗಾಯ್ತು? ಏನು ಮಾಡುವುದು? ಈ ಸಮಯದಲ್ಲಿ ನಾನೇನು ಮಾಡಲಿ? ದೋಸ್ತೋ, ಈ ಸಂಕಟದ ಸಮಯದಲ್ಲಿ ನಾನು ಕವಿತೆಯ ಜೊತೆ ಇರಲು ಇಷ್ಟಪಡುತ್ತೇನೆ.

ಸಂಕಟದಲ್ಲಿ ನಮ್ಮ ಜೊತೆ ಇರುವುದು ಕವಿತೆ. ನಮ್ಮ ಚೇತನಕ್ಕೆ ಅವಿನಾಭಾವ ಅಂತ ಜೊತೆಯಿರುವುದು ಕವಿತೆ ಮಾತ್ರವೇ. ಜೀವನದಿಂದ ವಿಮುಖರಾದಾಗ ಮತ್ತೆ ಬದುಕಿನ ವಿವೇಕ ಮರಳುವಂತೆ ಮಾಡುವುದು ಕವಿತೆ. ಕುರುಡು ಕಣ್ಣಿಗೆ ದಿಟ್ಟಿ ಮರಳಿಸುವುದು ಕವಿತೆ. ಇದೆಲ್ಲ ಕವಿತೆಗೆ ಮಾತ್ರ ಸಾಧ್ಯವಿದೆ. ಅದಕ್ಕೇ ಕವಿಯಾಗುವುದು, ಕವಿತೆ ಬರೆಯುವುದು ಎಂದರೆ ಸುಮ್ಮನಲ್ಲ, ಅದು ದೊಡ್ಡ ಜವಾಬ್ದಾರಿ.

ನನಗೀಗ ನಲವತ್ತಾರು ವರ್ಷ. ಈ ಲೋಕವನ್ನು ನೋಡುವುದು ಹೇಗೆ ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರಕೃತಿ-ಮನುಷ್ಯರು, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಏನು ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರೇಮ ಎಂದರೇನು ಎನ್ನುವುದನ್ನು ಕವಿತೆಯೇ ಕಲಿಸಿತು. ನನ್ನ ನಾನು ನೋಡಿಕೊಳ್ಳುವುದನ್ನೂ ಕವಿತೆಯೇ ಕಲಿಸಿತು. ಅದಕ್ಕೇ ಇವತ್ತು ಯಾವುದೋ ದೂರದ ಗುಡ್ಡಗಾಡಿನ ಮೂಲೆಯ ನಾನು ಇಲ್ಲಿ ನಿಮ್ಮ ನಡುವೆ ಬಂದು ನಿಂತಿದ್ದೇನೆ.

ನಾನು ಯಾರು? ಎಲ್ಲಿಂದ ಬಂದಿದೀನಿ? ನಮ್ಮ ಪ್ರದೇಶ, ಗುರುತುಗಳು ಸಂಕಟಗಳು ಏನು ಅಂತ 99% ಜನರಿಗೆ ಗೊತ್ತಿಲ್ಲ. ಭಾರತೀಯರಿಗಂತೂ ಗೊತ್ತೇ ಇಲ್ಲ. ನಮ್ಮ ಬಗೆಗೆ ದೇಶ ಏನಂದುಕೊಂಡಿದೆ? ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣೆಕ್ ಶಾ ಅವರ ಒಂದು ಹೇಳಿಕೆ ಇದೆ: ‘ಯಾರಾದರೂ ನನಗೆ ಸಾಯಕ್ಕೆ ಭಯ ಇಲ್ಲ ಅಂದ್ರೆ ಒಂದೋ ಅವರು ಸುಳ್ಳು ಹೇಳ್ತಿದಾರೆ ಅಥವಾ ಅವರು ಗೂರ್ಖಾ ಆಗಿದಾರೆ ಅಂತ ಅರ್ಥ.’ ನೋಡಿದಿರಾ ಡಾರ್ಜಿಲಿಂಗಿನ ಗೂರ್ಖಾಗಳ ಬಗೆಗಿನ ತಿಳುವಳಿಕೆ? ಇಲ್ಲ, ಯುದ್ಧ ಎಂದರೆ ಧೈರ್ಯದಿಂದ ಎದೆ ಕೊಟ್ಟು ನಿಲ್ಲುವ ನಮಗೂ ಉಳಿದ ಮನುಷ್ಯರಂತೆ ಹೆದರಿಕೆಯಿದೆ, ಸಂಕಟಗಳಿವೆ. ಅಂದರೆ ಮಾಣೆಕ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದೇ? ಇದರರ್ಥ ಏನು? ಇದರರ್ಥ ಯಾರಿಗೂ ಗೂರ್ಖಾಗಳ ಪರಿಸ್ಥಿತಿ, ಸಂಕಟ ಗೊತ್ತಿಲ್ಲ ಅಂತ. ಅದಕ್ಕೇ ನನ್ನ ನೆಲ ಡಾರ್ಜಿಲಿಂಗ್, ಜಾತಿ ಗೂರ್ಖಾ, ಭಾಷೆ ನೇಪಾಳಿ, ಅಲ್ಲಿಯ ಅಸಮಾನತೆ ಸಂಕಟಗಳ ಬಗೆಗೇ ಮಾತನಾಡಲು ಬಯಸುತ್ತೇನೆ.

ಈ ತಿಂಗಳ 25ಕ್ಕೆ ನಮ್ಮೂರಿನಲ್ಲಿ ಒಂದು ಕವಿಗೋಷ್ಟಿ ಇದೆ. ಅಲ್ಲಿ ಹೇಳುತ್ತಾರೆ, ಅಯ್ಯೋ, ಕವಿಗೋಷ್ಟಿಗೆ ಜನರೇ ಬರಲ್ಲ ಅಂತ. ತುಂಬ ಅಭಿವೃದ್ಧಿ ಆದ ಊರು ಅದು. ಆದರೆ ಕವಿಗೋಷ್ಟಿಗಳೇ ಆಗುತ್ತಿಲ್ಲ. ಆದರೂ ಕಷ್ಟಪಟ್ಟು ನನ್ನ ಗೆಳೆಯರು ಕವಿಗೋಷ್ಟಿ ಆಯೋಜನೆ ಮಾಡಿದ್ದಾರೆ. ಅವತ್ತು ನಾನು ‘ಸಾಹೇಬರಿಗೆ ಜೀವಂತ ಮನುಷ್ಯರೆಂದರೆ ಇಷ್ಟವಿಲ್ಲ’ (ಸಾಹೇಬ್ ಕೊ ಜಿಂದಾ ಇನ್ಸಾನ್ ಪಸಂದ್ ನಹೀಂ) ಎಂಬ ಕವಿತೆ ಓದಲಿದ್ದೇನೆ. ಈ ಕವಿತೆ ಓದದಂತೆ ಸಾಹೇಬ್ ನನ್ನನ್ನು ಹೆದರಿಸಬಹುದು. ಆದರೆ ಅದನ್ನೇ ಓದುತ್ತೇನೆ ಮತ್ತು ಕವಿತೆ ಕೇಳಲು ನೀವು ಮುದ್ದಾಂ ಬರಲೇಬೇಕು.

ಆಯೋಜಕರು ನನಗೆ ಫೋನ್ ಮಾಡಿ ಹೇಳಿದರು: ನಿಮ್ಮ ಮಾತು, ಕವಿತೆಗಳಲ್ಲಿ ಸ್ವಲ್ಪ ಪಾಲಿಟಿಕ್ಸ್ ಇದೆಯಲ್ಲ? ಕವಿತೆಗೇಕೆ ರಾಜಕಾರಣ? ಅದನ್ನೆಲ್ಲ ತೆಗೆದುಬಿಡಬಹುದಲ್ಲ? ಕಾರ್ಯಕ್ರಮದಲ್ಲಿ ಕವಿತೆ ಬಗ್ಗೆ ಮಾತ್ರ ಮಾತಾಡಿ ಎಂದರು. ಆಯೋಜಕರ ಪರಿಸ್ಥಿತಿ ನನಗರ್ಥವಾಗುತ್ತದೆ. ಆದರೂ ಕೇಳಿದೆ: ಅರೆ ಭಾಯ್, ಕವಿಗೆ ರಾಜಕಾರಣ ಗೊತ್ತಿಲ್ಲ ಅಂದರೆ ಸಮಾಜಕ್ಕೆ ಸರಿಯಾದ ದಿಕ್ಕು ದಾರಿ ತೋರಿಸುವುದಾದರೂ ಹೇಗೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆಡಳಿತ ಎಲ್ಲ ಸೇರಿ ಡಾರ್ಜಿಲಿಂಗನ್ನು ನಾಶ ಮಾಡಿದರು. ಆದರೂ ಕವಿ ರಾಜಕಾರಣದ ಮಾತಾಡಬಾರದೇ? ಕೇಂದ್ರ ಸರ್ಕಾರ ರಾಜಕಾರಣ ಮಾಡಿದರೆ ಅದು ಸರಿ ಎನ್ನುವಿರಿ. ರಾಜ್ಯ ಸರ್ಕಾರ ರಾಜಕಾರಣ ಮಾಡಿದರೆ ಅದೂ ಸರಿ ಎನ್ನುವಿರಿ. ಸ್ಥಳೀಯ ಆಡಳಿತ ರಾಜಕಾರಣ ಮಾಡಿದರೂ ಸರಿ ಎನ್ನುವಿರಿ. ಎಲ್ಲರೂ ಪಾಲಿಟಿಕ್ಸ್ ಮಾಡಬಹುದಂತೆ. ಕವಿ ಮಾತ್ರ ಮಾಡಬಾರದು ಅಂದ್ರೆ ಹೇಗೆ? ಯಾರು ಹೇಳಿದ್ದು ಹಾಗೆ? ಸಂವಿಧಾನದಲ್ಲಿ ಹಾಗಂತ ಬರೆದಿದಾರಾ? ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ? ಮತ್ತೇನು ಗೊತ್ತಿದೆ?

ಹೀಗೆ ಆಳುವವರು ಮತ್ತು ಸಮಾಜ ಕವಿಯನ್ನು ಭಯಪಡಿಸುತ್ತಾರೆ. ಕವಿತೆಯನ್ನು ಭಯಪಡಿಸುತ್ತಾರೆ. ಡಾರ್ಜಿಲಿಂಗಿನಲ್ಲಿ ಈಗ ಲೋಕತಂತ್ರದ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಾಧಾರಣ ಕಾರ್ಯಕ್ರಮವನ್ನೂ ನಮ್ಮಿಷ್ಟದಂತೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಕೇಳುವ ನಾವಂತೂ ಏನನ್ನೂ ಮಾಡಲು ಸುಲಭವಿಲ್ಲ. ಅಧಿಕಾರಿಗಳು ಎಲ್ಲಿ, ಯಾವಾಗ, ಏನು ಅಪ್ಪಣೆ ಮಾಡುತ್ತಾರೋ ಎನ್ನುವ ಭಯದಲ್ಲೇ ಮಾಡಬೇಕು, ಪರಿಸ್ಥಿತಿ ಹಾಗಿದೆ.

ಆದರೆ ಗೆಳೆಯರೇ ನೆನಪಿಡಿ, ಭಯಗ್ರಸ್ತ ಕವಿಗಳು ಸಮಾಜವನ್ನು ಪುಕ್ಕಲು ಮಾಡುತ್ತಾರೆ. ತಾವು ಪುಕ್ಕಲರಾಗಿ ಕ್ರಾಂತಿಕಾರಿ ಕವಿತೆ ಬರೆದರೆ ಅಂತಹ ಕವಿ ಪಾಖಂಡಿ, ವಂಚಕರಾಗಬಹುದೇ ಹೊರತು ಕವಿ ಆಗಲಾರರು. ಅಂತಹ ಕವಿ ತನ್ನನ್ನು ತಾನು ಕೊಂದುಕೊಳ್ಳುವುದಷ್ಟೇ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ, ಸಂಘಟನಾತ್ಮಕವಾದ ಎಲ್ಲವನ್ನೂ ಕೊಲ್ಲುತ್ತಾರೆ. ಆದರೆ ಯಾವ ಕವಿತೆಯ ಮೇಲೆ ವಿಶ್ವಾಸ ಇಟ್ಟಿರುವಿರೋ ಅದನ್ನು ಬರೆದ ಕವಿ ಪಾಖಂಡಿಯಾಗಿದ್ದರೆ? ಪಾಖಂಡಿ ಕವಿಯ ಕವಿತೆ ಏನಾಗುವುದು? ನಾನು ಕವಿತೆಯ ಮೇಲೆ ವಿಶ್ವಾಸ ಇಡುತ್ತೇನೆ. ಕವಿ ತಾನು ಹೆದರಿದ್ದರೂ ಕವಿತೆ ಹೆದರಬೇಡಿ ಎನ್ನುತ್ತಿರುತ್ತದೆ. ಅದು ಪಾಖಂಡಿ ಆಗಲಾರದು. ಕವಿತೆ ಹೇಗಾದರೂ ಕವಿಯ ಪಾಖಂಡಿತನವನ್ನು ತಿಳಿಸಿಬಿಡುವುದು. ಹೀಗೆ ಸಮಾಜ ನಾಶವಾಗುವುದನ್ನು ತಪ್ಪಿಸುವುದು ಕವಿತೆಯೇ ಆಗಿದೆ. ಅದಕ್ಕೇ ಪ್ರಪಂಚದಲ್ಲಿ ಎಲ್ಲರೂ ಕವಿತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ನಾನು ೧೯೯೬ರಿಂದ ಮೂವತ್ತು ವರ್ಷಗಳಿಂದ ಬರೆಯುತ್ತ ಇದ್ದೇನೆ. ಸಾವಿರಾರು ಕಷ್ಟಗಳ ಜೊತೆ, ಕನಸುಗಳ ಜೊತೆ, ದುಃಖದ ಜೊತೆ ನನ್ನ ಸಮುದಾಯದ ಕತೆ ಬರೆಯುತ್ತ ಇದ್ದೇನೆ. ಕವಿತೆ ಅಂದರೆ ಬರಿಯ ಟೈಂ ಪಾಸ್, ಮನರಂಜನೆ ಅಲ್ಲ. ಈ ದೇಶ ನಮ್ಮಂತಹ ಸಣ್ಣ ಸಮುದಾಯಗಳಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಅಸುರಕ್ಷಿತ. ಅದಕ್ಕೇ ನಾವು ಕವಿತೆ ಬರೆಯಬೇಕಿದೆ, ಹೋರಾಡಬೇಕಿದೆ. ಯಾರೋ ಅರ್ನೆಸ್ಟ್ ಹೆಮಿಂಗ್ವೇ ಹತ್ತಿರ ಬಂದು ಕೇಳಿದರಂತೆ: ‘ನಾನೂ ನಿಮ್ಮಂತೆ ಬರೆಯಬೇಕಲ್ಲ, ಹೇಗೆ?’ ಎಂದು. ಹೆಮಿಂಗ್ವೆ ಅದಕ್ಕೆ, ‘ನಿನ್ನ ಹತ್ರ ಗಾಯ ಇವೆಯಾ? ಇದ್ದರೆ ನೀನು ಬರೆಯಬಲ್ಲೆ.’ ಎಂದರು. ಕವಿಗೆ ಒಳಗಿನಿಂದ ಏನೋ ಆಗಬೇಕು, ಕುದಿಯಬೇಕು, ಉರಿಯಬೇಕು, ಭಾವನೆಗಳು ಹುಟ್ಟಬೇಕು. ಆಗ ಕವಿತೆ ಹುಟ್ಟುತ್ತದೆ.

ನಾನು ಮೊದಲು ‘ಸಪನ’ ಎಂಬ ಕತೆ ಬರೆದೆ, ಪ್ರಕಟವಾಯಿತು. ಬಳಿಕ ನನ್ನ ಮೊದಲ ಕವಿತೆ ‘ಘರ್ ಫರ್ಕನಲೈ’ (ಮನೆಗೆ ಮರಳಲು) ಪ್ರಕಟವಾಯಿತು. ಆಗ ಭೂತಾನಿನಲ್ಲಿ ಒಂದು ರಾಷ್ಟ್ರ, ಒಂದು ನೀತಿ ತತ್ವದಡಿ ಒಂದು ಲಕ್ಷ ಎಂಟು ಸಾವಿರ ನೇಪಾಳಿ ಮಾತಾಡುವ ಗೂರ್ಖಾ ಜನರನ್ನು ಹೊರಹಾಕಿದ್ದರು. ಯಾಕೆ? ಅವರು ಕೇಳಿದ್ದೇನು? ತಮ್ಮ ಭಾಷೆಗೆ ಮಾನ್ಯತೆ ಸಿಗಲಿ, ತಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಯಲಿ ಎಂದು. ಆದದ್ದೇನು? ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಯುಎನ್‌ಎಚ್‌ಆರ್‌ಸಿ ಮಧ್ಯ ಪ್ರವೇಶಿಸಿ ಭೂತಾನ್ ಹೊರದಬ್ಬಿದ ನೇಪಾಳಿ ಭಾಷಿಕ ಗೂರ್ಖಾಗಳನ್ನು ಅಮೆರಿಕ, ಕೆನಡ, ಡೆನ್ಮಾರ್ಕ್, ನಾರ್ವೆ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾಗಿ ಎಲ್ಲೆಲ್ಲಿಗೋ ಕಳಿಸಿದರು. ಯಾವ ಜನ ತಮ್ಮ ಭಾಷೆ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದರೋ ಅವರು ಹೋದಲ್ಲೆಲ್ಲ ಅಲ್ಲಲ್ಲೆ ಕಳೆದು ಹೋದರು. ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡರು. ನೆದರ್ಲೆಂಡಿನಲ್ಲಿ ನೇಪಾಳಿ ನಡೆಯುತ್ತಾ? ಅಮೆರಿಕದಲ್ಲಿ ನೇಪಾಳಿ ನಡೆಯುತ್ತಾ? ವಿದೇಶದಲ್ಲಿ ನಿಮ್ಮ ಮಾತೃಭಾಷೆ ನಡೆಯುತ್ತಾ? ಇಲ್ಲ. ಅವರು ಹೋರಾಡಿದ್ದು ತಮ್ಮ ಭಾಷೆಗಾಗಿ, ಸಂಸ್ಕೃತಿಗಾಗಿ. ಎಲ್ಲ ಸತ್ವನಾಶವಾಯಿತು. ಹಾಗೆ ಹೋದವರಲ್ಲಿ ನನ್ನ ಆಪ್ತ ಬಳಗದವರೂ ಕೆಲವರಿದ್ದರು. ಅವರ ಸಂಕಟ ಕೇಳಿ ನನ್ನ ಮೊದಲ ಕವಿತೆ ‘ಮನೆಗೆ ಹಿಂತಿರುಗಲು..’ ಬರೆದೆ. ಅವರಿನ್ನೂ ಹಿಂತಿರುಗಿಲ್ಲ. ಲಡಾಯಿ ಜಾರಿಯಲ್ಲಿದೆ.

ಈ ದೇಶದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ನೆಲೆಯಾಗಲು ಕಷ್ಟವಿದೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ನಮ್ಮ ಮುಖಚಹರೆ ಬೇರೆಯಿದೆ. ನಮ್ಮನ್ನು ನೋಡಿದರೆ ಸಾಕು, ಚಿಂಗಿ, ಮಿಂಗಿ, ಮೊಮೊ, ಕೊರೊನಾ ಮುಂತಾಗಿ ಏನೇನೋ ಕರೆಯುತ್ತಾರೆ. ಗೂರ್ಖಾಗಳನ್ನು ನೇಪಾಳದಿಂದ ಬಂದ ವಲಸಿಗರು, ಆತಂಕವಾದಿಗಳು, ನುಸುಳುಕೋರರು ಎಂದು ಭಾವಿಸುತ್ತಾರೆ. ಯಾಕೆಂದರೆ ನಾವು ನೇಪಾಳಿ ಭಾಷೆ ಮಾತಾಡುತ್ತೇವೆ. ಬಂಗಾಳಿ ಭಾಷೆಯನ್ನು ಬಾಂಗ್ಲಾ ದೇಶದಲ್ಲೂ, ಪಶ್ಚಿಮ ಬಂಗಾಳದಲ್ಲೂ ಮಾತಾಡ್ತಾರೆ. ಬಂಗಾಳಿ ಭಾಷಿಕರನ್ನು ಬಾಂಗ್ಲಾ ದೇಶೀಯರು ಎನ್ನುವುದಿಲ್ಲ. ಆದರೆ ನೇಪಾಳಿ ಭಾಷೆಯನ್ನು ಮಾತನಾಡುವ ಭಾರತೀಯ ಗೂರ್ಖಾಗಳನ್ನು ಮಾತ್ರ ನೇಪಾಳದ ನುಸುಳುಕೋರರು ಎಂದೇ ಭಾವಿಸುತ್ತಾರೆ. ಇದೆಷ್ಟು ಸರಿ? ನನ್ನನ್ನು ಪರಿಚಯಿಸುವಾಗ ಹಲವರು ನೇಪಾಳಿ ಕವಿ ಎನ್ನುತ್ತಾರೆ. ನಾನು ನೇಪಾಳಿ ಭಾಷೆಯ ಭಾರತೀಯ ಗೂರ್ಖಾ ಕವಿ. ನಮ್ಮ ನೆಲವನ್ನು ಭಾರತ, ನೇಪಾಳ, ಭೂತಾನ, ಚೀನಾ ಎಲ್ಲ ದೇಶಗಳೂ ಕಬಳಿಸಿವೆ. ಭಾರತ ಸ್ವತಂತ್ರವಾದರೂ ನಾವು ಸ್ವತಂತ್ರ ದೇಶದೊಳಗಣ ಮೂಲೆಯ ಸಮುದಾಯವಾಗಿಯೇ ಉಳಿದಿದ್ದೇವೆ. ಇಂಥ ಹತ್ತು ಹಲವು ತಪ್ಪು ಕಲ್ಪನೆಗಳು, ಐಡೆಂಟಿಟಿಯ ಸಂಕಟಗಳು ನಮ್ಮನ್ನು ಅಂಚಿಗೆ ತಳ್ಳಿವೆ. ನೀವು ಅಂಚಿಗೆ ದೂಡಲ್ಪಟ್ಟಾಗ ಸಭ್ಯತೆಯ ಸೋಗು ಹಾಕಲಾರಿರಿ, ಆಕ್ರಮಣಕಾರಿಯಾಗಿಯೇ ಇರಬೇಕಾಗುತ್ತದೆ. ನಿಮ್ಮ ಸಮಾಜವನ್ನು ಅಂಚಿಗೆ ದೂಡಿದಾಗ ಅದು ಸಭ್ಯವಾಗಿರುವುದಿಲ್ಲ, ಉದ್ರೇಕಕಾರಿಯಾಗಿರುತ್ತದೆ. ಎಂದೇ ನನ್ನ ಬರಹ ಆವೇಗ, ಉದ್ವೇಗದಿಂದ ತುಂಬಿದೆ. ಅದು ನಮಗೆ ಸಹಜವಾಗಿಬಿಟ್ಟಿದೆ.

ಡಾರ್ಜಿಲಿಂಗ್ ಈಗ ಪಶ್ಚಿಮ ಬಂಗಾಳದಲ್ಲಿದೆ. ನಮ್ಮ ರಾಜ್ಯ ಭಾಷೆ ಬಂಗಾಳಿ. ನಾವು ಮಾತನಾಡುವುದು ನೇಪಾಳಿ. ಆದರೆ ನಮ್ಮ ಊರಿನಲ್ಲಿ ನಮ್ಮನ್ನು ಆಳುವವರಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಅದರ ಬದಲು ನಾವು ಬಂಗಾಳಿ, ಹಿಂದಿ, ಇಂಗ್ಲಿಷ್ ತ್ರಿಭಾಷೆ ಕಲಿತು ನಮ್ಮ ಭಾಷೆ ಮರೆಯುವಂತಾಗಿದೆ. ಇದು ದಬ್ಬಾಳಿಕೆಯ ಆಳ್ವಿಕೆಗೆ ಕಾರಣವಾಗಿದೆ. ನಮಗಾಗಿ ಮಾಡುವ ಕಾನೂನು, ಯೋಜನೆಗಳು ನಮಗರ್ಥವಾಗದೇ ಹೋಗಿವೆ. ಈ ಭಾಷೆಯ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಗಿಂತ ಹಳೆಯದು. ಸದ್ಯ ನಮ್ಮ ಹೋರಾಟಕ್ಕೆ ಒಂದು ಜಯ ಸಂದಿದೆ. ಮೊದಲು ಬಂಗಾಳಿಯನ್ನೇ ಕಲಿಯಬೇಕಿತ್ತು. ಆದರೆ ಸಾಂವಿಧಾನಿಕ ಭಾಷೆಯಾಗಿ ನೇಪಾಳಿ ಇರುವಾಗ ಅದನ್ನೇ ಮೊದಲ ಭಾಷೆಯಾಗಿ ಮಾಡಬೇಕೆಂದು ಪಟ್ಟುಹಿಡಿದು ವಿಜಯಿಗಳಾಗಿದ್ದೇವೆ. ಆದರೆ ಹೋರಾಟ ಚಾಲ್ತಿಯಲ್ಲಿದೆ. ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಅದಕ್ಕೆ ಆಕ್ರೋಶದ ದನಿ ಕೇಳಿ ಬರುತ್ತದೆ. ಅಲ್ಲಿ ನಾನೊಬ್ಬನೇ ಅಲ್ಲ, ನೀವು ಯಾರನ್ನು ಮಾತನಾಡಿಸಿದರೂ ಹೀಗೇ ಮಾತಾಡುತ್ತ್ತಾರೆ. ಅಂಚಿಗೆ ನಿಂತವರ ದನಿ ಗಡುಸಾಗಿಯೇ ಕೇಳುತ್ತದೆ.

200 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಮ್ಮ ಹಿರೀಕರು ಡಾರ್ಜಿಲಿಂಗಿನಲ್ಲಿದ್ದಾರೆ. ಬ್ರಿಟಿಷರು ಬಂದರು. ಆಡಳಿತದ ಅನುಕೂಲಕ್ಕಾಗಿ ನಮ್ಮನ್ನು ಬಂಗಾಳದಲ್ಲಿ ಸೇರಿಸಿದರು. ಹೋದರು. ಅವರು ಹೋದರೂ ನಾವಿನ್ನೂ ಇಲ್ಲಿಯೇ, ಮೊದಲಿದ್ದ ಹಾಗೆಯೇ ಯಾರವರೂ ಅಲ್ಲದೇ ಉಳಿದಿದ್ದೇವೆ. ಮೊದಲಿನಿಂದ ಇದು ಸಂಕೀರ್ಣ ಸಮಸ್ಯೆಗಳನ್ನುಳ್ಳ ಪ್ರದೇಶ. ೧೯೫೪ರಲ್ಲೇ ಅದನ್ನೊಂದು ಪ್ರತ್ಯೇಕ ಪ್ರದೇಶವಾಗಿ ಕಾಯಿದೆ ತಂದರು. ಆದರೆ ಈಗಲೂ ಅದು ಸಂಕೀರ್ಣ ಸಮಸ್ಯೆಗಳ ಪ್ರದೇಶವಾಗಿಯೇ ಮುಂದುವರೆದಿದೆ. ಹೋರಾಟ ತೀವ್ರವಾದಾಗ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾಡಿದರು. ಪ್ರಾಧಿಕರಣ ಮಾಡ್ತೀವಿ, ರಾಜ್ಯ ಕೊಡಕ್ಕೆ ಆಗಲ್ಲ ಅಂದರು. ನಾಲ್ಕು ದೇಶಗಳು ಸುತ್ತುವರೆದ ಆಯಕಟ್ಟಿನ ಭೂಭಾಗ ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮನ್ನು ಸದಾ ಬಡವರನ್ನಾಗಿಟ್ಟು ಆಳಲು ನೋಡುತ್ತಿದ್ದಾರೆ. ಅಲ್ಲಿನ 70% ಜನ ಕೂಲಿ ಕಾರ್ಮಿಕರು. ಪ್ರತಿ ದಿನ 250 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ. ಅವರು ದುಡಿದಿದ್ದು ದಿನಕ್ಕೆ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವಾಗಿದ್ದರೂ ಅವರಿಗೆ ದೊರೆಯುವುದು ಬರೀ ಇನ್ನೂರೈವತ್ತು ರೂಪಾಯಿ. ಪ್ರಪಂಚದಲ್ಲಿ ಎಂಟು ಔಷಧೀಯ ಸಸ್ಯಗಳ ಪ್ರಮುಖ ತಾಣಗಳಿವೆ. ಅದರಲ್ಲಿ ಡಾರ್ಜಿಲಿಂಗ್ ಅರಣ್ಯ ಪ್ರದೇಶವೂ ಒಂದು. ಅಲ್ಲಿನ ಚಹಾ, ಔಷಧೀಯ ಸಸ್ಯ, ಮರಮುಟ್ಟುಗಳು ತುಂಬ ದುಡ್ಡು ತಂದುಕೊಡುವ ಸಂಪನ್ಮೂಲಗಳು. ಅಲ್ಲಿನ ನದಿ, ಕಾಡು, ಬೆಟ್ಟ, ಮಣ್ಣು, ಮರ ಎಲ್ಲವೂ ಭಾರೀ ಸಂಪನ್ಮೂಲಗಳು. ಒಂದು ಪ್ರತ್ಯೇಕ ರಾಜ್ಯವಾದರೂ ನಮ್ಮನ್ನು ಸುಸ್ಥಿರವಾಗಿಡಬಲ್ಲ ಸಂಪನ್ಮೂಲಗಳು ಅಲ್ಲಿವೆ. ಆದರೆ ಯಾವುದೂ ಸಂಪನ್ಮೂಲವಾಗಿ ನಮಗೆ ಸಿಗದಂತಾಗಿದೆ. ಯಾಕೆ ಈ ತರಹದ ಆರ್ಥಿಕ ದಮನ ಮಾಡುತ್ತಿದ್ದಾರೆ? ಚೀನಾ, ಭೂತಾನ, ಬಾಂಗ್ಲಾ, ನೇಪಾಳ ಎಂಬ ನಾಲ್ಕು ದೇಶಗಳಿಂದ ಸುತ್ತುವರೆದ ಅಪಾಯಕರ ಪ್ರದೇಶದಲ್ಲಿ ನಾವಿದ್ದೇವೆ. ಏನಾದರೂ ಚಕಮಕಿ ಆದರೆ ಹೋರಾಡಲು ಸಾವಿಗೆ ಹೆದರದ ಗೂರ್ಖಾ ಜನರು ಬೇಕಾಗಿದ್ದೇವೆ.

ಇವೆಲ್ಲ ಇಷ್ಯೂ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಬೇಕೆಂಬ ಹೋರಾಟ ರೂಪಿಸಿದೆವು. ಅದನ್ನು ದಮನಿಸಲು ಎಲ್ಲಾ ಪ್ರಯತ್ನ ನಡೆಯಿತು. ಸಂಘಟನೆಗಳನ್ನು ಒಡೆಯಲಾಯಿತು. ಸಂಘಟನೆಯ ಕೆಲವು ವ್ಯಕ್ತಿಗಳಿಗೆ ಆಮಿಷವೊಡ್ಡಲಾಯಿತು. ಬಂಧನ, ಪ್ರಕರಣ, ಕೋರ್ಟು, ಅಲೆದಾಟ, ಎಲ್ಲ ಆಯಿತು ಆಗುತ್ತಲೇ ಇದೆ. ಹೋರಾಟ ಚಾಲ್ತಿಯಲ್ಲಿದೆ. ಕೊನೆಗೆ ಪ್ರತಿಯೊಬ್ಬರಿಗೂ ಐದು ಡೆಸಿಮಲ್ ಭೂಮಿ ಕೊಡೋದು ಅಂತ ಆಯಿತು. ಹೊರಗಿನಿಂದ ಬಂದು ನೆಲೆಸಿದ ಭಾರೀ ಪ್ಲಾಂಟರುಗಳಿಗೆ ಸಾವಿರಾರು ಎಕರೆ ಜಮೀನು. ಅಲ್ಲಿನವರೇ ಆದ ನಮಗೆ ಐದು ಡೆಸಿಮಲ್ ಜಮೀನು. ಇದು ತಂದಿಡುವ ಡೆಮಾಗ್ರಫಿಕ್, ಎಕನಾಮಿಕಲ್ ಬದಲಾವಣೆಯನ್ನು ಊಹಿಸಿ. ಇದರ ವಿರುದ್ಧ ಹೋರಾಡದೇ ಇರುವುದಾದರೂ ಹೇಗೆ? ಕವಿ ಆಗಿ ಇದನ್ನು ನೋಡಿ ಹೇಗೆ ಸುಮ್ಮನಿರಲಿ? ನನ್ನ ನೆಲ, ನನ್ನ ಜಮೀನು, ನನ್ನ ಪರ್ವತ ಪ್ರದೇಶದ ಕಾಡು, ಬೆಟ್ಟಗುಡ್ಡ, ನದಿಗಳೆಲ್ಲ ಸಿರಿವಂತರ ಎಸ್ಟೇಟುಗಳಾಗಿ, ರೆಸಾರ್ಟುಗಳಾಗಿ, ವಿಹಾರಧಾಮಗಳಾಗಿರುವಾಗ ನಾನು ಮಾತ್ರ ಐದು ಡೆಸಿಮಲ್ ಜಾಗಕ್ಕೆ ತೃಪ್ತಿ ಹೊಂದಬೇಕೇ?

ನಾನು ಇದುವರೆಗೆ ಆರು ಕವನ ಸಂಕಲನ ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಸಣ್ಣ ಊರಿನ ಪತ್ರಕರ್ತನಾಗಿ ಖಬರ್ ಮತ್ತು ಕಾಂತಿಪುರ ಎಂಬ ಎರಡು ಪತ್ರಿಕೆ ನಡೆಸುತ್ತಿರುವೆ. ಅದರಲ್ಲಿ ನನ್ನ ಜನರ ಸಂಕಟ ಕುರಿತೇ ಬರೆಯುತ್ತೇನೆ. ೨೦೨೩ರಲ್ಲಿ ಸಿಕ್ಕಿಂನಲ್ಲಿ ತೀಸ್ತಾ ಡ್ಯಾಂ ಒಡೆಯಿತು. ಸಾವಿರಾರು ಜನ ಬಾಧೆಗೊಳಗಾದರು. ಜಮೀನು ಮುಳುಗಿತು. ಊರು ಮನೆ ಮುಳುಗಿದವು. ಪುನರ್ವಸತಿ ಆಗಬೇಕಲ್ಲ. ಈ ವಿಚಾರವಾಗಿ ಬರೆದೆ. ಆದರೆ ಅದು ಪ್ರಾಕೃತಿಕ ವಿಪತ್ತು ಎಂದು ಪರಿಗಣಿತವಾಗಲೇ ಇಲ್ಲ. ರಾಷ್ಟ್ರೀಯ ವಿಕೋಪ ಎಂದೂ ಪರಿಗಣನೆಗೆ ಬರಲಿಲ್ಲ. ಎಂದೇ ಯಾವ ಸಹಾಯ, ಹಣವೂ ಬರಲಿಲ್ಲ. ಅದರ ವಿರುದ್ಧ ಬರೆದೆ, ದನಿಯೆತ್ತಿದೆ. ನನ್ನ ಮೇಲೆ ಆಕ್ರಮಣವಾಯಿತು. ಪ್ರಾಣಾಪಾಯ ಆಗುವಷ್ಟು ಗೂಂಡಾಗಳಿಂದ ಹಲ್ಲೆ ಆಯಿತು.

ಪಶ್ಚಿಮ ಬಂಗಾಳದಲ್ಲಿ ೨೩ ಜಿಲ್ಲೆಗಳಿವೆ. ಅದರ ೩೦% ರೆವಿನ್ಯೂ ಡಾರ್ಜಿಲಿಂಗಿನಿಂದ ಬರುತ್ತಿದೆ. ಅಲ್ಲಿ ಏನಿಲ್ಲ? ಎಲ್ಲ ಇದೆ. ಆದರೆ ನನ್ನ ಜನರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಇದನ್ನು ಕೇಳಿದರೆ ನನ್ನ ಮೇಲೆ ಆಕ್ರಮಣವಾಗುತ್ತದೆ. ಕೇಸು ಹಾಕುತ್ತಾರೆ. ಇದುವರೆಗೆ ನನ್ನ ಮೇಲೆ 17 ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಡ ಕವಿ, ಪತ್ರಕರ್ತ ಏನು ಮಾಡಬಹುದು? ಒಂದು ಪ್ರಕರಣಕ್ಕೆ ಎಷ್ಟು ಖರ್ಚಾಗುತ್ತದೆ ನಿಮಗೆ ಗೊತ್ತು. ಬಾಯಿ ಮುಚ್ಚಲಿ ಎಂದು ಪ್ರಕರಣದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಡಾರ್ಜಿಲಿಂಗಿನಲ್ಲಿ ಇರುವವರು ಜೀವಂತ ಇದ್ದಾರೆ. ನನ್ನ ಜನ ನನಗಾಗಿ ಕೆಲಸ ಮಾಡುತ್ತಾರೆ. ನೀವು ಭಯಪಡದೆ ದನಿಯೆತ್ತುವವರಾಗಿದ್ದರೆ ನಿಮ್ಮ ಪರವಾಗಿ ನಿಲ್ಲುವವರು ಇದ್ದೇ ಇರುತ್ತಾರೆ. ಜನ ನಿಮಗಾಗಿ ಬರುತ್ತಾರೆ. ಅದಕ್ಕೇ ಹೇಳಬೇಕಾದ್ದನ್ನು ಭಯವಿಲ್ಲದೆ ಹೇಳಬೇಕು, ಬರೆಯಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತ ಹೋಗಬಹುದು, ಹೋಗಲಿ. ಅದರಿಂದಲೇ ಈ ನಾನು ಆಗಿದೀನಿ ಅಲ್ವಾ? ನನಗೆ ನಾನೇ ರೂಪುಗೊಳ್ಳಲು ಸಾಧ್ಯವಿಲ್ಲ, ನನ್ನ ಭಾಷೆಯಿಂದ, ಜನರಿಂದ ನಾನಾಗಿದ್ದೇನೆ. ನಾನು ನನಗಾಗಿ ಬದುಕುವೆನೋ ಜನರಿಗಾಗಿ ಬದುಕುವೆನೋ? ಎಂದು ನಿರ್ಧರಿಸುವುದು ನನ್ನ ಕೈಯಲ್ಲೇ ಇದೆ. ಬಹಳಷ್ಟು ಜನ ಸುರಕ್ಷತೆ, ಸಂಸಾರ ಸುಖ ಎಲ್ಲ ಸಿಗುತ್ತದೆ ಅಂತ ತಮಗಾಗಿ ಮಾತ್ರ ಬದುಕುತ್ತಾರೆ. ನಾನು ನನ್ನ ಬದುಕು ಸಮಾಜಕ್ಕೆ, ಜನರಿಗೆ ಅಂತ ನಿರ್ಧರಿಸಿದ್ದೇನೆ.

ನಿಮಗನಿಸಬಹುದು, ಇವ ಕವಿ. ಕವಿತೆ ಬಿಟ್ಟು ಇದೇನು ಮಾತಾಡ್ತಿದಾನೆ ಅಂತ. ಇದೇನು ಪಾಲಿಟಿಕ್ಸ್ ಮಾತಾಡುತ್ತಿದಾನಲ್ಲ ಅಂತ. ನಾನು ಅಂಟುನಂಟು ಹೊಂದಿರುವ ನನ್ನ ನೆಲ ನನ್ನದಲ್ಲದಿದ್ದರೆ ಕವಿತೆ ಹೇಗೆ ಬರೆಯಲಿ? ನನ್ನ ಜನರ ಕಷ್ಟ ಅರ್ಥವಾಗದಿದ್ದರೆ ಕವಿತೆ ಯಾಕೆ ಬರೆಯಲಿ? ನಾವು ಏನೋ ಅದನ್ನೇ ಕವಿತೆಯಾಗಿ ಬರೆಯಬೇಕು. ನಮಗೇನಾಗುತ್ತಿದೆಯೋ ಅದನ್ನೇ ಬರೆಯಬೇಕು. ಆದ್ದರಿಂದ ನಾನು ಈ ತರಹದ ಕವಿತೆ ಬರೆಯುತ್ತಿದ್ದೇನೆ. ಅದರಿಂದ ಹೊರಬರಲಾರದವನಾಗಿದ್ದೇನೆ. ಯಾಕೆಂದರೆ ನನಗೆ ಕಾಲ್ಪನಿಕವಾದದ್ದು ಬರೆಯಲು ಗೊತ್ತಿಲ್ಲ. ನನಗೆ ನನ್ನದು ಗೊತ್ತು. ನನ್ನ ಸುತ್ತಮುತ್ತಿನದು ಗೊತ್ತು. ಮತ್ತು ನಾನು ಅದನ್ನೇ ಬರೆಯುವವನು. ಕಾಲ್ಪನಿಕವಾದದ್ದನ್ನು ಬರೆದರೆ ನನ್ನ ಜನರಿಗೇನು ಸಿಗುತ್ತದೆ? ನನಗೇನು ಸಿಗುತ್ತದೆ? ಕವಿಯೂ ಒಂದು ಮನುಷ್ಯ ಜೀವಿ. ಅವರಿಗೆ ಸಂವೇದನೆ ಇರಬೇಕು. ಸುತ್ತ ನಡೆಯುವುದು ಏನೂ ಕಾಣುತ್ತಿಲ್ಲ ಅಂದರೆ ಅಂತಹವರು ಸತ್ತ ಮನುಷ್ಯರು. ಮಿಡಿಯುವ ಹೃದಯ ಇಲ್ಲದಿದ್ದರೆ ಜೀವವಿಲ್ಲದ ಶವದಂತೆ ಆ ಬದುಕು. ಕವಿಗಳಿಗಿದು ಗೊತ್ತಿರಬೇಕು: ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ನಮ್ಮನ್ನು ಜೀವಂತವಾಗಿಡಲು ಕೇವಲ ಕವಿತೆ ಸಾಕು. ಜಿಂದಾ ರಖನೆ ಕೇ ಲಿಯೆ ಪೊಯೆಟ್ರಿ ಕಾಫೀ ಹೈ. ನಾನು ಇದನ್ನೇ ಮಾಡುತ್ತಿದ್ದೇನೆ.

ಧನ್ಯವಾದ. ನಿಮ್ಮ ಪ್ರೀತಿ ನನ್ನಲ್ಲಿ ಕಣ್ಣೀರು ತುಂಬಿಸುತ್ತಿದೆ. ನಮಸ್ಕಾರ.




ಮನೋಜ್ ಬೊಗಾಟಿ, ಡಾರ್ಜಿಲಿಂಗ್.
(ಕನ್ನಡ ರೂಪ: ಡಾ. ಎಚ್. ಎಸ್. ಅನುಪಮಾ)

Thursday, 22 May 2025

ಬೋಧ ಗಯಾ ಬೌದ್ಧರದು

 


ಬಣ್ಣಗಳೆಲ್ಲ ಪತಾಕೆಗಳಾಗಿ ಹಾರುತ್ತಿವೆಯೋ ಎನ್ನುವಂತಿದ್ದ ತಾಣದಲ್ಲಿ ಈ ವರ್ಷದ ಹೋಳಿಹುಣ್ಣಿಮೆಯ ದಿನ ಕಳೆದೆವು. ಒಂದೆಡೆ ಪಶ್ಚಿಮ ದಿಗಂತದಲ್ಲಿ ಸೂರ್ಯ ಕೆಳಗಿಳಿಯುತ್ತಿದ್ದ ಹಾಗೆ ಪೂರ್ವದಲ್ಲಿ ಚಂದಿರ ನಾ ಬಂದೆನೆಂದು ತೋರಿಸಿಕೊಳ್ಳಲು ಹವಣಿಸುತ್ತಿತ್ತು. ಮಹಾಬೋಧಿ ದೇವಾಲಯದ ಆವರಣವು ಭಿಕ್ಕುಗಳಿಂದ, ದೇಶ ವಿದೇಶಗಳ ಉಪಾಸಕ, ಉಪಾಸಿಕೆಯರಿಂದ, ಪ್ರವಾಸಿಗಳಿಂದ ತುಂಬಿ ತುಳುಕುತ್ತಿತ್ತು. ಕೆಲವು ಭಿಕ್ಕುಗಳು ಹೊರಗಣ ಯಾವ ಗದ್ದಲವೂ ತಮ್ಮನ್ನು ತಾಗದಷ್ಟು ಆಳ ಧ್ಯಾನದಲ್ಲಿ ಮುಳುಗಿದ್ದರು. ಮತ್ತೆ ಕೆಲವರದು ಪಠಣ. ಇನ್ನು ಹಲವರು ಗುಂಪಾಗಿ ವ್ಯಾಯಾಮದಂತಹ ಚಲನೆಯ ಮೂಲಕ ನಮಸ್ಕರಿಸುತ್ತ ಏಳುತ್ತ ಇದ್ದರು. ಗಂಟೆ, ಜಾಗಟೆ ಮುಂತಾಗಿ ಯಾವ ಸದ್ದೂ ಇಲ್ಲದ ಮಹಾ ಮೌನ. ಸದ್ದಿಲ್ಲದೆ ನಡೆದು ದೇವಾಲಯದ ಆವರಣಕ್ಕೊಂದು ಸುತ್ತು ಹಾಕಿ ಬುದ್ಧನ ಮೂರ್ತಿಯೆದುರು ನಿಂತೆವು. 

ನೆಲದ ಸಾಕ್ಷಿಯಾಗಿ ಲೋಕದರಿವು ಕಂಡುಕೊಂಡ ಗುರುವೇ, ಭೂಮಿ ಮೇಲಣ ಆಗುಹೋಗುಗಳ ಸಮ್ಮಾದಿಟ್ಟಿಯಲಿ ನೋಡುವ ಮಾರ್ಗ ತಿಳಿಸಿಕೊಡು, ವಂದನೆ.




ಬೋಧಗಯಾ. ಬುದ್ಧಾನುಯಾಯಿಗಳು ನೋಡಲೇಬೇಕೆಂದು ಬಯಸುವ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದು. ಕ್ರಿ.ಪೂ. ೬೨೩ರ ಸುಮಾರು ನೇರಂಜಾರ ನದಿಯ ದಡದಲ್ಲಿ ಬೋಧಿ ವೃಕ್ಷ(ಅರಳಿ ಮರ)ದಡಿ ಶಾಕ್ಯಮುನಿ ಗೌತಮನು ಜ್ಞಾನೋದಯ ಹೊಂದಿದ್ದು; ಪರಿವ್ರಾಜಕನಾದ ಆರು ವರ್ಷಗಳ ಬಳಿಕ ಲೋಕವನ್ನು ಅದಿರುವಂತೆ ಅರಿಯಲು ಪ್ರಜ್ಞಾ, ಕರುಣಾ, ಮೈತ್ರಿ ಭಾವಗಳಿಂದ ಜೀವರೆಲ್ಲ ನೆಮ್ಮದಿಯಿಂದ ಬಾಳಬಹುದಾದ ಮಾರ್ಗವನ್ನು ಕಂಡುಕೊಂಡು ಬುದ್ಧನಾದದ್ದು ಅಲ್ಲಿಯೇ. ಬುದ್ಧ ಕುಳಿತ ತಾಣವೆಂದು ಗುರುತಿಸಲಾದ ಒಂದು ವೃಕ್ಷ, ಆಸನ ಅಲ್ಲಿದೆ. ಭೂಮಿಸ್ಪರ್ಶ ಮುದ್ರೆಯ ಬುದ್ಧನ ಮೂರ್ತಿಯಿರುವ ಮಹಾಬೋಧಿ ದೇವಾಲಯವಿದೆ.

ಜ್ಞಾನೋದಯದ ಬಳಿಕ ಬುದ್ಧ ಅಲ್ಲಿ ಏಳು ವಾರ ಕಳೆದನೆಂದು ಬೌದ್ಧ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಬೋಧಿ ಮರದ ಕೆಳಗೆ ಕುಳಿತು ಮೊದಲ ವಾರ ಕಳೆದ. ಅನತಿ ದೂರದಲ್ಲಿ ಅನಿಮೇಷಲೋಚನನಾಗಿ (ಕಣ್ರೆಪ್ಪೆ ಮಿಟುಕಿಸದೆ) ಬೋಧಿವೃಕ್ಷ ನೋಡುತ್ತ ಎರಡನೆಯ ವಾರ ನಿಂತ. ಅಲ್ಲಿ ಅನಿಮೇಷಲೋಚನ ಬುದ್ಧ ಶಿಲ್ಪವಿದೆ. ಬೋಧಿವೃಕ್ಷದ ಒಂದು ಪಕ್ಕ ಹಿಂದೆಮುಂದೆ ನಡೆಯುತ್ತ (ಚಂಕಮಾನ) ಮನನ, ಧ್ಯಾನ ಮಾಡುತ್ತ ಮೂರನೆಯ ವಾರ ಕಳೆದ. ಅದನ್ನು ಪ್ರತಿನಿಧಿಸುವಂತೆ ಎತ್ತರದ ಕಟ್ಟೆಯ ಮೇಲೆ ಹದಿನೆಂಟು ಪದ್ಮಶಿಲ್ಪಗಳಿವೆ. (ಇದು ಒಂದನೆಯ ಶತಮಾನದಲ್ಲಿ ನಿರ್ಮಾಣವಾಗಿದೆ.) ನಾಲ್ಕನೆಯ ವಾರ ಆಳಧ್ಯಾನದಲ್ಲಿ ನಿರತನಾದ ಅವನ ಮೈಯಿಂದ ಏಳು ಬಣ್ಣಗಳು ಹೊರಬಿದ್ದುವೆಂದು ‘ರತ್ನಘರ ಚೈತ್ಯ’ ನಿರ್ಮಿಸಿದ್ದಾರೆ. ಸೂರಿಲ್ಲದ ಪುಟ್ಟ ಗುಡಿ ಅಲ್ಲಿದೆ. ಐದನೆಯ ವಾರ ಕುರಿಗಾಹಿಗಳು ಬಂದು ತಂಗುತ್ತಿದ್ದ ಆಲದ ಮರ ‘ಅಜಪಾಲ ನಿಗ್ರೋಧ’ದ ಅಡಿ ಕಳೆದ. ಅಲ್ಲಿಯೇ ಒಬ್ಬ ಬ್ರಾಹ್ಮಣನಿಗೆ, ‘ಜನ್ಮದಿಂದ ಯಾರೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ; ಕ್ರಿಯೆಯಿಂದ ಆಗಬಹುದು’ ಎಂದು ಹೇಳಿದ. ಈಗ ಮರವಿದ್ದ ತಾಣದಲ್ಲಿ ಒಂದು ಸ್ತಂಭವಿದೆ. ಆರನೆಯ ವಾರ ಭಾರೀ ಬಿರುಗಾಳಿ ಮಳೆ ಶುರುವಾದರೂ ಗಮನಿಸದೆ ಒಂದೆಡೆ ಕುಳಿತ ಬುದ್ಧನಿಗೆ ಸರ್ಪರಾಜ ಮುಚುಲಿಂದ ಆಶ್ರಯ ನೀಡಿದನೆಂದು ಗುರುತಿಸುವ ತಾಣವಿದೆ. ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾದ ಒಂದು ಕೊಳ ಅಲ್ಲಿದೆ. ಏಳನೆಯ ವಾರ ರಾಜಾಯತನ ಮರದ ಬಳಿಯಿರುವಾಗ ಬರ್ಮಾದ ವ್ಯಾಪಾರಿಗಳಾದ ತಪುಸ್ಸ ಮತ್ತು ಭಲ್ಲಿಕಾ ಬುದ್ಧನನ್ನು ಕಂಡು ನುಚ್ಚನ್ನ ಮತ್ತು ಜೇನುತುಪ್ಪಗಳನ್ನು ಬೆರೆಸಿ ಮಾಡಿದ ಆಹಾರ ನೀಡಿದರು. ಬುದ್ಧನ ನಡೆಗೆ, ನುಡಿಗೆ ಮಾರು ಹೋಗಿ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಎಂದರು. ಮುಂದೆ ಅದೇ ಧಮ್ಮವನ್ನು ಸ್ವೀಕರಿಸಿದ ಕುರುಹಾಗಿ ಹೇಳುವ ಉದ್ಘೋಷವಾಯಿತು. ಅವರು ಹಿಂತಿರುಗುವಾಗ ಬುದ್ಧನ ತಲೆಗೂದಲನ್ನು ತಮ್ಮ ದೇಶಕ್ಕೆ ಒಯ್ದರು. ಯಾಂಗೂನಿನ ಶ್ವೆದಗನ್ ಪಗೋಡದಲ್ಲಿರುವುದು ಅದೇ ಕೂದಲು ಎಂದು ನಂಬಲಾಗಿದೆ. 



vajrasana


Buddha Statue



Chankamana



Maha Bodhi Tree

ಸಾಮ್ರಾಟ ಅಶೋಕನ ಮಕ್ಕಳಾದ ಮಹಿಂದ ಮತ್ತು ಸಂಘಮಿತ್ರೆ ಧರ್ಮ ಪ್ರಚಾರಕ್ಕೆ ಶ್ರೀಲಂಕೆಗೆ ಹೋಗುವಾಗ ಗಯಾದ ಬೋಧಿವೃಕ್ಷದ ಸಸಿ ಒಯ್ದಿದ್ದರು. ಮೂಲ ವೃಕ್ಷದ ಐದನೆಯ ತಲೆಮಾರಿನ ಸಸಿಯನ್ನು ಶ್ರೀಲಂಕಾದ ಅನುರಾಧಪುರದಿಂದ ಮತ್ತೆ ತಂದು ಬೋಧಗಯಾದಲ್ಲಿ ನೆಡಲಾಯಿತು. ಅದೀಗ ವೃಕ್ಷವಾಗಿ ಬೆಳೆದು ನಿಂತಿದೆ.

ಮಹಾಬೋಧಿ ವಿಹಾರದಲ್ಲಿ ಐದು ಅಡಿ ಎತ್ತರದ ಭೂಮಿಸ್ಪರ್ಶ ಮುದ್ರೆಯಲ್ಲಿ ಕುಳಿತ ಬುದ್ಧ ಮೂರ್ತಿಯಿದೆ. ಅದಕ್ಕೆ ಬಂಗಾರದ ಕವಚ ಹೊದಿಸಲಾಗಿದೆ. ಹೊರಾವರಣದಲ್ಲಿ ಅಶೋಕ ಸ್ತಂಭವಿದೆ. ಮುಖ್ಯ ವಿಹಾರದ ಸುತ್ತಮುತ್ತ ಬೇರೆಬೇರೆ ಕಾಲಮಾನದಲ್ಲಿ ಬೇರೆಬೇರೆಯವರು ನಿರ್ಮಿಸಿದ ನೂರಾರು ಸಣ್ಣಪುಟ್ಟ ಸ್ತೂಪಗಳೂ, ಬುದ್ಧ ಶಿಲ್ಪಗಳೂ ಇವೆ. ಶ್ರೀಲಂಕಾ, ವಿಯೆಟ್ನಾಂ, ಥೈಲ್ಯಾಂಡ್, ಬಾಂಗ್ಲಾ, ಬರ್ಮಾ, ಕಾಂಬೋಡಿಯಾ, ಭೂತಾನ್, ನೇಪಾಳ, ಚೀನಾ ಮುಂತಾಗಿ ವಿಶ್ವದ ಬಹುತೇಕ ಬೌದ್ಧ ದೇಶಗಳ ವಿಹಾರಗಳು ಮಹಾಬೋಧಿ ದೇವಾಲಯದ ಸುತ್ತಮುತ್ತ ಇವೆ. 

ಈಗ ಮಹಾಬೋಧಿ ವಿಹಾರದಲ್ಲಿ ನಾವು ನೋಡುವುದು ಇಷ್ಟು. ಇಲ್ಲಿ ದೊರೆತ ಹಲವು ವಸ್ತುಗಳನ್ನು ಜತನದಿಂದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಷ್ಟನ್ನು ಹೀಗೆ ನೋಡಲು ಹಲವರ ಶ್ರಮ, ಬದ್ಧತೆ, ಹೋರಾಟ, ಇತಿಹಾಸದ ಅರಿವು ಕಾರಣವಾಗಿದೆ. 

ಬುದ್ಧನ ಮಹಾಪರಿನಿರ್ವಾಣದ ೨೧೮ ವರ್ಷಗಳ ಬಳಿಕ ಜ್ಞಾನೋದಯವಾದ ತಾಣವನ್ನು ಮೊದಲು ಗುರುತಿಸಿದ ಸಾಮ್ರಾಟ ಅಶೋಕನು ತುದಿಯಲ್ಲಿ ನಿಂತ ಆನೆಯಿರುವ ಸ್ತಂಭವನ್ನು ನಿಲ್ಲಿಸಿದ. ಬೋಧಿವೃಕ್ಷದ ಸುತ್ತಲೂ ಕೆಂಪುಕಲ್ಲಿನ ಆವಾರ ನಿರ್ಮಿಸಿದ. ಬುದ್ಧ ಕುಳಿತ ತಾಣದ ಕಲ್ಲುಹಾಸನ್ನಲಂಕರಿಸಿ, ‘ವಜ್ರಾಸನ’ವೆಂದು ಗುರುತಿಸಿ, ಅದು ‘ಭೂಮಿಯ ನಾಭಿ’ ಎಂದು ಕರೆದ. ಒಂದರಿಂದ ಆರನೆಯ ಶತಮಾನದ ಒಳಗೆ ಮಹಾಬೋಧಿ ದೇವಾಲಯ ನಿರ್ಮಾಣವಾಯಿತು. ಬುದ್ಧ ಮೂರ್ತಿಯನ್ನು ೧೧ನೆಯ ಶತಮಾನದ ಪಾಲ ವಂಶಸ್ಥರು ನಿರ್ಮಿಸಿದರು. ವಿಶ್ವದ ಬಹುದೇಶಗಳ ಉಪಾಸಕರು, ರಾಜರು ದೇವಾಲಯಕ್ಕೆ ತಮ್ಮ ಸಂಪತ್ತು, ದಾನ ಧಾರೆಯೆರೆದರು. 

ಹುಟ್ಟಿದ ನೆಲದಲ್ಲಿ ವೈದಿಕ ಧರ್ಮದ ಪುರೋಹಿತಶಾಹಿಗಳಿಂದ, ೬೨ ‘ಅನ್ಯ ತೀರ್ಥೀಯ’ ಪರಂಪರೆಗಳಿಂದ ಬೌದ್ಧ ಧಮ್ಮವು ಸಂಚು-ಸ್ಪರ್ಧೆ ಎದುರಿಸಿತು. ಪರಕೀಯರ ಆಕ್ರಮಣ, ಸ್ವಮತ ರಕ್ಷಣೆ-ಅನ್ಯಮತ ನಾಶದ ಉನ್ಮಾದವೇ ಮೊದಲಾದ ಕಾರಣಗಳಿಂದ ಏಳುಬೀಳುಗಳನ್ನು ಕಂಡಿತು. ೧೯ನೆಯ ಶತಮಾನದ ವೇಳೆಗೆ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರ ಆಸಕ್ತಿ, ಕೆಲಸಗಳಿಂದ ಬೌದ್ಧತಾಣಗಳು ಮರುಜೀವ ಪಡೆದವು. ಇಂದಿನ ಭಾರತ, ಪಾಕಿಸ್ತಾನ, ಆಫ್ಘನಿಸ್ತಾನ, ಬರ್ಮಾ, ಶ್ರೀಲಂಕಾಗಳ ಬೌದ್ಧ ತಾಣಗಳ ಸಂರಕ್ಷಣೆ, ದುರಸ್ತಿ ಮತ್ತು ಪುನರುಜ್ಜೀವನಕ್ಕೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಮತ್ತವರಂತಹ ಅಧಿಕಾರಿಗಳ ಕೊಡುಗೆ ಸ್ಮರಣೀಯವಾದುದು. ೨೦೧೩ರಲ್ಲಿ ಥೈಲ್ಯಾಂಡಿನ ರಾಜಪ್ರಭುತ್ವ ಮತ್ತು ಪ್ರಜೆಗಳು ಬುದ್ಧ ಜಯಂತಿಯ ೨೬೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾಬೋಧಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿದ್ದಾರೆ. ಬೌದ್ಧ ಉಪಾಸಕರ ಮನೆಮನೆಗಳಿಂದ ಚಿನ್ನ ಸಂಗ್ರಹಿಸಿ, ಕರಗಿಸಿ ೨೮೯ ಕೆಜಿ ಚಿನ್ನದ ರೇಕನ್ನು ಭಾರತಕ್ಕೆ ತಂದು ಮಹಾಬೋಧಿ ದೇವಾಲಯ ಗೋಪುರದ ತುತ್ತತುದಿಗೆ, ಎರಡು ಮೀಟರ್ ಅಗಲ ನಾಲ್ಕೂವರೆ ಮೀಟರ್ ಎತ್ತರದ ಚಿನ್ನದ ಕಲಶ ಹೊದಿಸಿದ್ದಾರೆ.


ಬುದ್ಧ ಭಾರತದ ಏಳುಬೀಳಿನ ಕತೆ

ಬೌದ್ಧ ಜೀವನಕ್ರಮದಲ್ಲಿ ಯಾವುದೇ ಆಚರಣೆಗಳಿರಲಿಲ್ಲ. ಪುರೋಹಿತರಿಗೆ ಸ್ಥಾನವೇ ಇರಲಿಲ್ಲ. ಬೌದ್ಧ ಸಾಮ್ರಾಟರಾಗಿದ್ದ ಮೌರ್ಯರ ನಂತರ ಬಂದ ಶುಂಗರು ಬ್ರಾಹ್ಮಣಧರ್ಮವನ್ನು ಲಿಖಿತ ಶಾಸ್ತ್ರವಾಗಿಸಿದರು. ವರ್ಣಾಶ್ರಮವನ್ನು ಜಾತಿಪದ್ಧತಿಯಾಗಿ ಗಟ್ಟಿಗೊಳಿಸಿ ಭಾರತೀಯ ಸಮಾಜವನ್ನು ಖಾಯಂ ಶ್ರೇಣೀಕರಣಕ್ಕೊಳಪಡಿಸಿದ ಮನುಸ್ಮೃತಿ ಬಂದದ್ದು ಪುಷ್ಯಮಿತ್ರ ಶುಂಗನ ಕಾಲದಲ್ಲಿ. ಶ್ರೇಣಿಯ ಅಗ್ರಸ್ಥಾನದಲ್ಲಿದ್ದ ಬ್ರಾಹ್ಮಣರು ಸಕಲ ಸವಲತ್ತುಗಳನ್ನು ಅನುಭವಿಸುತ್ತ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ದಾನದಕ್ಷಿಣೆಮನ್ನಣೆ ಪಡೆಯುತ್ತಾ, ಸ್ಥಳೀಯ ಉತ್ಪಾದನೆ, ವಿತರಣೆಯ ಮೇಲೆ ಅಲಿಖಿತ ಹಿಡಿತ ಸಾಧಿಸಿದ್ದೇ ಅಲ್ಲದೆ ದೇವರ ಜೊತೆ ನೇರ ಸಂವಾದ ಸಾಧ್ಯವೆಂಬ ಭ್ರಮೆ ಸೃಷ್ಟಿಸಿದರು. ಯಜ್ಞಯಾಗ, ಬಲಿ, ಭಜನೆಗಳಲ್ಲಿ ಜನಸಾಮಾನ್ಯರು ಆಚರಣೆಯೇ ಧರ್ಮವೆಂದು ಬಗೆದರು. 

ಅದೇವೇಳೆಗೆ ಐದರಿಂದ ಎಂಟನೇ ಶತಮಾನದ ಅವಧಿಯಲ್ಲಿ ಮಧ್ಯ ಏಷ್ಯಾ ಕಡೆಯಿಂದ ಆಕ್ರಮಣ ಮಾಡಿದ ಅಲೆಮಾರಿ ಬಿಳಿಯ ಹೂಣರು ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಭಾರತದ ಗುಪ್ತ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಕೊಟ್ಟರು. ಭಾರತದ ವಾಯವ್ಯ ಹೆಬ್ಬಾಗಿಲನ್ನು ಆಕ್ರಮಿಸಿ, ರೋಮನ್ನರೊಡನೆ ವ್ಯಾಪಾರ ನಿಲ್ಲಿಸಿ, ಚೀನಾ ಮತ್ತು ಅರಬ್ಬರ ವ್ಯಾಪಾರಕ್ಕೆ ಬಾಗಿಲು ತೆರೆದರು. ಹೂಣರು ಹಿಂದೂ ಶೈವರಾದ ಬಳಿಕ ಬೌದ್ಧ ಸ್ಮಾರಕ, ಮಠಗಳನ್ನು ನಾಶಮಾಡಿದರು. ಅನ್ಯಮತದ ಆಳ್ವಿಕರು, ಸ್ಥಳೀಯ ಪುರೋಹಿತಶಾಹಿಗಳ ಕೈಗೆ ಸಿಲುಕಿ ಬೌದ್ಧ ಧರ್ಮದ ಸಾಂಸ್ಥಿಕ ಚಹರೆಗಳು ವಿರೂಪಗೊಂಡವು, ನಾಶವಾಗತೊಡಗಿದವು. 



ಭಾರತಕ್ಕೆ ಬಂದ ಅಲ್ ಬೈರೂನಿ, ಫಾಹೀನ್, ಹ್ಯೂಯೆನ್ ತ್ಸಾಂಗರಂತಹ ವಿದೇಶಿ ಯಾತ್ರಿಕ ಪ್ರವಾಸಿಗಳು ಕುಂದುತ್ತಿರುವ, ನಾಶವಾಗುತ್ತಿರುವ ಬೌದ್ಧಸಂಘಗಳ ಬಗೆಗೆ ಬರೆದಿದ್ದಾರೆ. ಬೌದ್ಧಶಾಸ್ತ್ರ ಗ್ರಂಥಗಳನ್ನು ಅದರ ಮೂಲಸ್ವರೂಪದಲ್ಲಿ ಹುಡುಕುತ್ತ ಹದಿನೇಳು ವರ್ಷ ಭಾರತದಲ್ಲಿ ಅಲೆದಾಡಿದ ಭಿಕ್ಕು ಹ್ಯೂಯೆನ್ ತ್ಸಾಂಗ್, ವಾಯವ್ಯ ಭಾರತದ ಲಕ್ಷಾಂತರ ಬೌದ್ಧಮಠಗಳು ನಾಶವಾದವು ಎಂದು ದಾಖಲಿಸಿದ್ದಾನೆ. ಅವ ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೌದ್ಧಧರ್ಮವು ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತ್ತು. ಸಂಘ, ವಿಹಾರ, ಸ್ತೂಪಗಳನ್ನು ನಡೆಸಲು ನಂಬಿದ್ದ ಧನಮೂಲಗಳು ಕ್ಷೀಣಗೊಳ್ಳತೊಡಗಿದ್ದವು. ಅರಬ್ ವ್ಯಾಪಾರಸ್ಥರ ಪ್ರಭಾವ ಹೆಚ್ಚುತ್ತ ಹೋದಂತೆ ಇಸ್ಲಾಂ ಮತ್ತು ಹಿಂದೂ ವ್ಯಾಪಾರಸ್ಥರನ್ನು ಬೌದ್ಧಸಂಘಗಳು ನೆಚ್ಚಬೇಕಾದ ಪರಿಸ್ಥಿತಿಯಿತ್ತು. ಮೊದಲ ಸಹಸ್ರಮಾನದ ಕೊನೆಯ ವೇಳೆಗೆ ಬ್ರಾಹ್ಮಣ ಧರ್ಮ ಹಾಗೂ ಸ್ಥಳೀಯ ಕುಲ/ಮತಗಳು ಮೇಲುಗೈ ಪಡೆಯುತ್ತ ಹೋದಂತೆ ದಕ್ಷಿಣೋತ್ತರ ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾಯಿತು. ಹನ್ನೆರಡನೆಯ ಶತಮಾನದಲ್ಲಿ ಬೌದ್ಧ ಪಾಲ ವಂಶವು ಹಿಂದೂ ಸೇನಾ ವಂಶಕ್ಕೆ ಸೋತಿತು. ಆಕ್ರಮಣಕಾರಿ ಮುಸ್ಲಿಂ ರಾಜರ ಆಳ್ವಿಕೆ ಶುರುವಾಯಿತು. ಅದು ಬೌದ್ಧ ಧರ್ಮ ಸಂಪೂರ್ಣ ಹಿನ್ನೆಲೆಗೆ ಸರಿದ ಅವಧಿ. ಕ್ರಿ.ಶ.೧೨೩೦ರ ಹೊತ್ತಿಗೆ ಮಹಾಬೋಧಿ ದೇವಾಲಯವು ಶೈವ ಆರಾಧನಾ ಸ್ಥಳವಾಗಿ ಮಾರ್ಪಟ್ಟಿತು. ಆದರೂ ಅಲ್ಲಿ ಹದಿನಾರನೆಯ ಶತಮಾನದವರೆಗೂ ಧ್ಯಾನ, ಪಠಣಗಳಂತಹ ಬೌದ್ಧ ಆಚರಣೆಗಳು ಯಾತ್ರಾರ್ಥಿಗಳ ದಾನದಿಂದ ನಡೆಯುತ್ತಿದ್ದವು. ಭಾರತ, ಭೂತಾನ್, ಬರ್ಮಾ, ನೇಪಾಳ, ಶ್ರೀಲಂಕಾ, ಟಿಬೆಟ್ ಮುಂತಾದ ದೇಶಗಳಿಂದ ಯಾತ್ರಿಕರು ಬರುತ್ತಿದ್ದರು. ೧೯ನೆಯ ಶತಮಾನವು ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಗೊಳ್ಳಲು ಪೂರಕವಾದ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ೧೮೭೪ರಲ್ಲಿ ಬರ್ಮಾದ ಆಳ್ವಿಕರು ಮಹಾಬೋಧಿ ದೇವಾಲಯದ ದುಃಸ್ಥಿತಿಗೆ ಮರುಗಿ ದುರಸ್ತಿ ಕಾರ್ಯ ನಡೆಸಿದರು. ೧೮೮೪ರ ವೇಳೆಗೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಉತ್ಖನನ ಕಾರ್ಯ ಕೈಗೊಂಡು ದೇವಾಲಯಕ್ಕೆ ಈಗಿರುವ ರೂಪ ಕೊಟ್ಟನು. 



ಹಿಂದೂ ದೇವರನ್ನಿಟ್ಟು ಪೂಜಿಸುತ್ತಿದ್ದ ಮಹಾಂತರು ತಮ್ಮದೆಂದು ಸಾಧಿಸುತ್ತಿದ್ದ ಮಹಾಬೋಧಿ ದೇವಾಲಯವು ಬೌದ್ಧರಿಗೆ ಸೇರಬೇಕೆಂದು ೧೮೯೧ರಲ್ಲಿ ಕಾನೂನು ಹೋರಾಟ ಶುರು ಮಾಡಿದವರು ಶ್ರೀಲಂಕಾದ ಭಿಕ್ಕು ಅನಾಗಾರಿಕ ಧರ್ಮಪಾಲ. ಅದಕ್ಕೆ ಭಾಗಶಃ ಜಯ ಸಿಕ್ಕಿದ್ದು ಅವರ ಮರಣದ ೧೬ ವರ್ಷಗಳ ನಂತರ ೧೯೪೯ರಲ್ಲಿ. ಮಹಾಬೋಧಿ ದೇವಸ್ಥಾನ ಕಾಯ್ದೆ ಜಾರಿಯಾಯಿತು. ಅದುವರೆಗೆ ಕೇವಲ ಹಿಂದೂಗಳೇ ಇದ್ದ ಸಮಿತಿಯಲ್ಲಿ ಬೌದ್ಧರಿಗೂ ಸ್ಥಾನ ದೊರೆಯಿತು. ವಿವಾದ ಶಮನಗೊಳಿಸಲು ತಾತ್ಕಾಲಿಕವಾಗಿ ಬೋಧಗಯಾ ಟೆಂಪಲ್ ಆಕ್ಟ್-೧೯೪೯ ಜಾರಿಯಾಯಿತು. 

ಆ ಕಾಯ್ದೆಯ ಪ್ರಕಾರ ಬಿಹಾರ ರಾಜ್ಯ ಸರ್ಕಾರ ರಚಿಸುವ ‘ಮಹಾಬೋಧಿ ದೇವಾಲಯದ ಆಡಳಿತ ಮತ್ತು ಆಸ್ತಿ ನಿರ್ವಹಣಾ ಸಮಿತಿ’ಯು ಅದರ ಮೇಲ್ವಿಚಾರಣೆ ವಹಿಸಿಕೊಳ್ಳುವುದು. ರಾಜ್ಯಸರ್ಕಾರವು ಸಮಿತಿಗೆ ನೇಮಿಸುವ ಎಂಟು ಸದಸ್ಯರಲ್ಲಿ ನಾಲ್ಕು ಜನ ಹಿಂದೂಗಳಿರಬೇಕು. ಮೂರು ವರ್ಷದ ಅವಧಿಯ ಒಂಭತ್ತು ಜನರ ಆಡಳಿತ ಮಂಡಳಿಯಲ್ಲಿ ಬಿಹಾರ ಸರ್ಕಾರದ ಪರವಾಗಿ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಎಕ್ಸ್ ಅಫಿಶಿಯೊ ಅಧ್ಯಕ್ಷರು. ಅವರು ಹಿಂದೂ ಅಲ್ಲದಿದ್ದರೆ ರಾಜ್ಯ ಸರ್ಕಾರ ಹಿಂದೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳುತ್ತದೆ. ಅಲ್ಲಿಯ ಶಂಕರಾಚಾರ್ಯ ಮಠದ ಸ್ವಾಮಿ ಸಹ ಮತ್ತೊಬ್ಬ ಎಕ್ಸ್ ಅಫಿಶಿಯೊ ಸದಸ್ಯರು. ಆದರೆ ಹಳೆಯ ಕಾಯ್ದೆ ಹಾಗೆಯೇ ಮುಂದುವರೆಯಿತೇ ಹೊರತು ಬೌದ್ಧರಿಗೆ ನ್ಯಾಯಯುತ ಪ್ರಾತಿನಿಧ್ಯ, ಹಕ್ಕುಗಳು ದಶಕಗಳು ಕಳೆದರೂ ದೊರೆಯಲಿಲ್ಲ. ಸಾಕಷ್ಟು ಸಂಘರ್ಷದ ಬಳಿಕ ೨೦೧೩ರಲ್ಲಿ ಹಿಂದೂಯೇತರರು ಅಧ್ಯಕ್ಷರಾಗಬಹುದೆಂದು ಕಾನೂನು ಬದಲಾಯಿತು. ಆದರೆ ಅದೇ ೨೦೧೩ರಲ್ಲಿ ಮಹಾಬೋಧಿ ದೇವಸ್ಥಾನದ ಮೇಲೆ ಬಾಂಬ್ ದಾಳಿಯಾಯಿತು. ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದೀನ್‌ಗಳೇ ಹೊತ್ತುಕೊಂಡರೆಂಬ ವರದಿ ಬಂತು. ಬುದ್ಧ ಕುಳಿತು ಸಾಕ್ಷಾತ್ಕಾರ ಪಡೆದ ವೃಕ್ಷದ ಟೊಂಗೆಗಳನ್ನು ಅಕ್ರಮವಾಗಿ ಕಡಿದು ವಿದೇಶೀ ಬೌದ್ಧರಿಗೆ ಮಾರಿ ಹಣ ಗಳಿಸಿದ ಆರೋಪವಿರುವ ಇನ್ನೂ ಒಂದು ವಿವಾದ ತಲೆದೋರಿತು. ಅಲ್ಲಿನ ಮುಖ್ಯ ಅರ್ಚಕರನ್ನು ಬಂಧಿಸಲಾಯಿತು. 

ಮಹಾಬೋಧಿ ದೇವಾಲಯ ಆಡಳಿತ ಸಮಿತಿ ಕುರಿತ ನ್ಯಾಯಾಲಯದ ವ್ಯಾಜ್ಯ ರಾಮಜನ್ಮಭೂಮಿ ವಿವಾದದಷ್ಟೇ ಹಳೆಯದು. ಆದರೆ ಭಾರತದಲ್ಲಿ ಪುರಾಣದ ಕತೆಗಳಿಗೆ ಐತಿಹಾಸಿಕ ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯ ಕೊಡುವಷ್ಟು ಸುಲಭವಾಗಿ ಕಣ್ಣೆದುರು ರಾಚುವ ಐತಿಹಾಸಿಕ ವಾಸ್ತವಗಳಿಗೆ ನ್ಯಾಯ ಸಿಗಲಾರದು. ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಹಚ್ಚಿ ನಿಲ್ಲಿsಸಿರುವುದರಿಂದಲೇ ೨೦೦೨ರಲ್ಲಿ ಯುನೆಸ್ಕೊದಿಂದ ‘ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಲ್ಪಟ್ಟ ಮಹಾಬೋಧಿ ದೇವಾಲಯವು ೨೦೨೫ನೆಯ ಇಸವಿಯಲ್ಲೂ ಬೌದ್ಧರ ನಿಯಂತ್ರಣಕ್ಕೆ ಸಿಗದಂತೆ ಆಗಿದೆ. ದೇಶಭಾಷೆ ಮರೆತು ಬೌದ್ಧರೆಲ್ಲ ಸೇರಿ ನಡೆಸುತ್ತಿರುವ ಹೋರಾಟವು ಹಿಂದುತ್ವವನ್ನು ಎಲ್ಲರ ಮೇಲೆ ಹೇರುತ್ತಿರುವ ಆಳ್ವಿಕರಿಂದ ದಮನಕ್ಕೊಳಗಾಗಿದೆ. 


‘ಮೂಲನಿವಾಸಿ’ಗಳ ಮಾತು

ಬೇಸಿಗೆ ಕಾಲಿಡದ ಮಾರ್ಚ್ ತಿಂಗಳ ತಂಪು ಮುಂಜಾನೆ. ಬೆಳಿಗ್ಗೆ ಆರಕ್ಕಾಗಲೇ ಬೋಧಗಯಾದ ಬೀದಿಗಳಲ್ಲಿ ರಿಕ್ಷಾಗಳು ಓಡಾಡುತ್ತಿದ್ದವು. ತಂತಮ್ಮ ದೇಶದ ಸಂಘಾರಾಮಗಳಲ್ಲಿ ಭಿಕ್ಕುಗಳು ಚಟುವಟಿಕೆ ಆರಂಭಿಸಿದ್ದರು. ಹೊರಡುವ ಮುನ್ನ ಮತ್ತೆ ಸ್ವಲ್ಪ ತಿರುಗಿ ಬರೋಣವೆಂದು ಅಂದು ಬೇಗನೆದ್ದು ಸರ್ಕೀಟ್ ಹೊರಟೆವು. ಒಂದಷ್ಟು ದೂರ ನಡೆದೇ ತಿರುಗಿದೆವು. ಬಳಿಕ ಸ್ಥಳೀಯರೊಡನೆ ಸಂಪರ್ಕ ಆದಂತಾಗುವುದೆಂದು ಸೈಕಲ್ ಆಟೋ ಹುಡುಕಿದೆವು. ಅಲ್ಲೆಲ್ಲ ಮೂರು ಚಕ್ರದ, ಸೌರ ಶಕ್ತಿ ಬಳಸುವ ತೆರೆದ ಆಟೋಗಳಿರುತ್ತವೆ. ತ್ರಿಚಕ್ರದ ಬೈಕಿಗೆ ಬಾಡಿ ಕಟ್ಟಿದಂತಿದ್ದು ಅಗಲ ಕಡಿಮೆಯಿರುವುದರಿಂದ ಸಣ್ಣಗಲ್ಲಿಗಳಲ್ಲೂ ಆರೇಳು ಜನರನ್ನು ಒಯ್ಯಬಲ್ಲವು. ಒಬ್ಬ ಆಟೋ ಅಣ್ಣನನ್ನು ಹಿಡಿದೆವು. ಅವರು ವಿನಯ್. ಲೋಕಾಭಿರಾಮ ಮಾತಿಗೆಳೆದಾಗ ನಡುನಡುವೆ ‘ಮೂಲ್‌ನಿವಾಸಿ’ ಪದವನ್ನು ಒಂದೆರೆಡು ಸಲ ಬಳಸಿದರು. ನನ್ನ ಊಹೆ ಸರಿಯಾಗಿತ್ತು, ಅವರು ಬಾಮ್ಸೆಫ್‌ನವರು. ಹೌದಾ ಎಂದು ಕೇಳಿದ ಒಂದು ಪ್ರಶ್ನೆ ನಮ್ಮನ್ನು ಎಷ್ಟು ಆಪ್ತವಾಗಿಸಿತೆಂದರೆ ಸಾಕುಸಾಕೆಂದರೂ ಬಿಡದೇ ಎಲ್ಲೆಲ್ಲೋ ಒಯ್ದು ಎಲ್ಲವನ್ನು ತೋರಿಸಿ ಕರೆತಂದರು. 


  Srilankan Monk Anagarika Dhammapala Bust


Sleeping Buddha Statue


Great Buddha Statue


Japan Monastery


Srilakan Monastery


Metta Buddha Mandir

ಕೆಲವು ಮೊನಾಸ್ಟರಿಗಳು ಇನ್ನೂ ಬಾಗಿಲು ತೆರೆದಿರಲಿಲ್ಲ. ಜಪಾನಿನದು ಮಾತ್ರ ತೆರೆದಿತ್ತು. ಮೆಟ್ಟಿಲುಗಳ ಹತ್ತಿ ವಿಶಾಲ ಆವರಣ ಪ್ರವೇಶಿಸಿದರೆ ಸೂಜಿಮೊನೆ ಬಿದ್ದರೂ ಕೇಳುವಂತಹ ನಿಶ್ಶಬ್ದ. ಒಬ್ಬ ಉಪಾಸಕರು ಧ್ಯಾನದಲ್ಲಿ ತೊಡಗಿದ್ದರು. ಅಲ್ಲಿಂದ ನೇರಂಜಾರ ನದಿ ದಂಡೆಗೆ ಹೋದೆವು. ಇದೇನಾ ಸುಜಾತ ಘನಪಾಯಸ ನೀಡಿದ, ಉರುವೆಲ-ಗಯೆ-ನದಿ ಎಂಬ ಕಶ್ಯಪ ಸೋದರರ ಭೇಟಿಯಾದ, ಘನಪಾಯಸ ಸೇವಿಸಿದ ಬಳಿಕ ಶಕ್ತನಾಗಿ ಗೌತಮನು ದಾಟಿದ ನದಿ? ಸಂಪೂರ್ಣ ಒಣಗಿ ನಿಂತಿದ್ದ ನದಿಯ ತಳದ ಮರಳ ಬಯಲು, ಅತಿಕ್ರಮಣಕ್ಕೆ ಒಳಗಾಗಿ ಹೋಟೆಲು, ರೆಸಾರ್ಟು, ರಸ್ತೆಗಳಿಗೆ ಜಾಗ ಮಾಡಿಕೊಟ್ಟಿರುವ ನದಿಯ ಹರಹು ವಿಷಾದ ಹುಟ್ಟಿಸಿತು. ಅಲ್ಲಿ ಹೆಚ್ಚು ನಿಲ್ಲಲಾಗದೇ ಹೊರಟು ಬಿಳಿಯ ಬುದ್ಧನ ಕಂಡೆವು. ಮಲಗಿದ ಬುದ್ಧನ ನೋಡಿದೆವು. ಥೈಲ್ಯಾಂಡಿನವರು ನಿರ್ಮಿಸಿದ ಎಂಬತ್ತು ಅಡಿ ಎತ್ತರದ ಬುದ್ಧ ಪ್ರತಿಮೆಯ ಬಳಿಗೆ ಹೋದೆವು. ದೂರದಿಂದಲೇ ಭವ್ಯ ಮೂರ್ತಿ ಕಾಣಿಸುತ್ತಿತ್ತು. ಒಬ್ಬ ವ್ಯಕ್ತಿ ಇಬ್ಬರು ಮಕ್ಕಳೊಂದಿಗೆ ಮೂರ್ತಿಯೆದುರು ಕುಳಿತಿದ್ದರು. ಮಕ್ಕಳು ಪ್ರಶ್ನೆ ಕೇಳುತ್ತ ಅವರ ತಲೆಮೇಲೆ, ತೊಡೆ ಮೇಲೆ ಹತ್ತಿಳಿಯುತ್ತಿದ್ದವು. ಅವರು ಸಾವಧಾನವಾಗಿ ಆನಂದನ ಕತೆ ಹೇಳುತ್ತಿದ್ದರು. ಅವರು ಸುರೇಂದರ್. ಮಾತನಾಡಿಸಿದಾಗ ಅವರೂ ಬಾಮ್ಸೆಫ್‌ನವರು ಎಂದು ತಿಳಿದುಬಂತು. ಚಾಮರಾಜನಗರದ ಬಿಎಸ್ಪಿ ಬಳಗದಲ್ಲಿ ಅವರಿಗೆ ಪರಿಚಿತರಿದ್ದರು. ಹೊರಗೆ ನಿಂತಿದ್ದ ಆಟೋ ಅಣ್ಣ ವಿನಯ್ ಅವರ ಪರಿಚಯಸ್ಥರು. ಸಿಕ್ಕ ಕೆಲವೇ ಸಮಯದಲ್ಲಿ ಚುರುಕಾದ ಮಾತುಕತೆಯಾಯಿತು. ಮಹಾಬೋಧಿ ದೇವಾಲಯವನ್ನು ಸಂಪೂರ್ಣವಾಗಿ ಬೌದ್ಧರ ನಿಯಂತ್ರಣಕ್ಕೆ ಕೊಡಬೇಕು ಎಂದು ಭಂತೇಜಿಗಳು, ಉಪಾಸಕರು ಸರದಿ ಉಪವಾಸ ಕುಳಿತಿರುವ ಬಗೆಗೆ ಮಾತು ಹರಿಯಿತು. ದೇಶದ ಎಲ್ಲ ಕಡೆಯಿಂದ ಬೌದ್ಧ ಜನ ಬೆಂಬಲಿಸಿ ಬರುತ್ತಿದ್ದಾರೆ; ಆದರೆ ಭಂತೇಜಿಗಳನ್ನು ದೇವಾಲಯದ ಆವರಣದಿಂದ ಮೂರೂವರೆ ಕಿಲೋಮೀಟರ್ ದೂರದ ಸ್ಥಳಕ್ಕೆ ಕಳಿಸಲಾಗಿದೆ ಎಂದು ಆರೋಪಿಸಿದರು. ಬೀಳ್ಕೊಂಡ ಬಳಿಕವೂ ಭೂತಾನ್, ಕಾಂಬೋಡಿಯಾ ವಿಹಾರಗಳ ನೋಡಿ ಹೊರಬರುವಾಗ ಮತ್ತೆ ಸಿಕ್ಕರು. ಅವರೊಂದಿಗೆ, ಮಕ್ಕಳೊಂದಿಗೆ ಪಟ ತೆಗೆಸಿಕೊಂಡದ್ದಾಯಿತು. ಇಬ್ಬರು ಬೌದ್ಧಾನುಯಾಯಿಗಳನ್ನು ಭೇಟಿ ಮಾಡಿ ಬೋಧಗಯಾದ ಪ್ರಯಾಣ ಸಫಲವಾಯಿತೆನಿಸಿತು. ಅವರಿಬ್ಬರೊಡನೆ ನಡೆಸಿದ ಮಾತುಕತೆಯ ಸಾರಾಂಶವಿದು: 


With Bamcef`s Surendar, Kids and Vinod

‘ತಮ್ಮ ಪೂಜಾ ಸ್ಥಾನಗಳಲ್ಲಿ ಸರ್ವಾಧಿಕಾರ ಚಲಾಯಿಸುತ್ತ ಬೇರೆ ಧರ್ಮದವರು ಬರಬೇಡಿ; ಮಹಿಳೆಯರು ಬರಬೇಡಿ; ಇಂತಿಂಥ ಜಾತಿಯವರು ಇಂತಿಂಥಲ್ಲಿ ಇರಿ ಎಂದು ಬೋರ್ಡು ಹಾಕುವಷ್ಟು ಅಸಾಂವಿಧಾನಿಕ ನೀತಿನಿಯಮ ರೂಪಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತ ಬೌದ್ಧ ಧರ್ಮದ ಮೇಲೆ ದಬ್ಬಾಳಿಕೆ ಹೇರುತ್ತಿದ್ದಾರೆ.’ 

‘ಪ್ರಪಂಚದಲ್ಲಿ ಯಾವ ಧಾರ್ಮಿಕ ಸ್ಥಳವೂ ಅನ್ಯ ಧರ್ಮದವರ ಆಡಳಿತದಲ್ಲಿಲ್ಲ. ಆದರೆ ಭಾರತ ಮಾತ್ರ ಬುದ್ಧನ, ಬೌದ್ಧರ ವಿಷಯದಲ್ಲಿ ಹೀಗೆ ನಡೆದುಕೊಂಡು ಬಂದಿದೆ. ಈಗ ಅದೇ ಮುಂದುವರೆಯುತ್ತಿದೆ. ವ್ಯಾಟಿಕನ್ ಅನ್ನು ಕ್ರಿಶ್ಚಿಯನ್ನರು, ಮೆಕ್ಕಾವನ್ನು ಮುಸ್ಲಿಮರು, ಗ್ರಂಥ ಸಾಹೀಬ್ ಅನ್ನು ಸಿಖ್ಖರು, ಕಾಶಿ-ತಿರುಪತಿಗಳಂತಹ ಅಸಂಖ್ಯ ಕ್ಷೇತ್ರಗಳನ್ನು ಹಿಂದೂಗಳು ನಿರ್ವಹಿಸುವರಾದರೆ ಮಹಾಬೋಧಿ ದೇವಾಲಯವನ್ನು ಬೌದ್ಧರಲ್ಲದೆ ಬ್ರಾಹ್ಮಣರೇಕೆ ನಿರ್ವಹಿಸಬೇಕು?’ 

‘ಬೌದ್ಧರು ಶಾಂತಿಪ್ರಿಯರು. ನಾವು ಯಾವುದೇ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ಯಾವುದು ನಮ್ಮದೋ ಅದು ನಮಗೆ ಸಿಗಬೇಕು ಅಷ್ಟೇ.’  

‘ಭಾರತದ ಎಷ್ಟೋ ಗುಡಿಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ. ಬುದ್ಧನ ಮೂರ್ತಿಗೆ ಬಟ್ಟೆ, ಬಂಗಾರಗಳಿಂದ ಅಲಂಕಾರ ಮಾಡಿ ಹಿಂದೂ ದೇವರುಗಳ ಹೆಸರಿಡಲಾಗಿದೆ. ಅವೆಲ್ಲವನ್ನು ನಮಗೆ ಕೊಡಿ ಎಂದು ನ್ಯಾಯದ ಜಗಳಕ್ಕಿಳಿದರೆ ದೇಶದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ ನಾವೇನೂ ಹಾಗೆ ಕೇಳುತ್ತಿಲ್ಲ. ಮಹಾಬೋಧಿಯಂತಹ ಬೌದ್ಧರ ಪವಿತ್ರ ತಾಣದ ಮೇಲ್ವಿಚಾರಣೆ, ಆಡಳಿತಗಳನ್ನು ಬೌದ್ಧರಿಗೇ ಕೊಡಿ ಎನ್ನುತ್ತಿದ್ದೇವೆ. ಇದು ನ್ಯಾಯಯುತವಾದದ್ದು, ಆಗಲೇಬೇಕಾದದ್ದು.’

‘ಬುದ್ಧ ಮತ್ತು ಧಮ್ಮ ಲೋಕಕ್ಕೇ ಸೇರಿದ್ದು ನಿಜ. ಅದನ್ನು ಓದಲು, ತಿಳಿಯಲು, ಅನುಸರಿಸಲು ಜಾತಿ, ವರ್ಣ, ವರ್ಗ ಮುಂತಾಗಿ ಯಾವುದೇ ಭೇದವಿಲ್ಲ. ಆದರೆ ಧಮ್ಮದ ಅನುಯಾಯಿಗಳಿಗೆ ಮಹಾಬೋಧಿ ವೃಕ್ಷ, ದೇವಾಲಯ ಅತ್ಯಂತ ಪವಿತ್ರವಾದವು. ಅವು ಬೌದ್ಧಾನುಯಾಯಿಗಳ ಸುಪರ್ದಿನಲ್ಲೇ ಇರಬೇಕು. ನೋಡಿ, ಮಹಾಬೋಧಿ ದೇವಾಲಯದ ಪಕ್ಕದಲ್ಲೇ ಹಿಂದೂ ದೇವರ ಗುಡಿ ಮಾಡಿದ್ದಾರೆ. ರಾಮ, ಲಕ್ಷ್ಮಣ, ಹನುಮನನ್ನಿಟ್ಟಿದ್ದಾರೆ. ಹೀಗೇ ಮುಂದುವರೆದರೆ ಬೌದ್ಧ ಧರ್ಮವನ್ನು ಒಡೆದು ಸ್ವರ್ಗನರಕ, ಪುನರ್ಜನ್ಮಗಳ ತುರುಕಿ ಬುದ್ಧನನ್ನು ಅವತಾರ ಪುರುಷನೆಂದು ಮಾಡಿದ ವೈದಿಕ ಪುರೋಹಿತಶಾಹಿಗಳು ಸದ್ಯವೇ ಬುದ್ಧನ ಹೆಸರಿನಲ್ಲಿ ಕುಂಕುಮಾರ್ಚನೆ, ಹಣ್ಣುಕಾಯಿ, ಹೋಮಹವನಗಳನ್ನು ಮಹಾಬೋಧಿ ಗುಡಿಯ ಆವರಣದಲ್ಲಿ ಆರಂಭಿಸುತ್ತಾರೆ.’ 

‘ವಿಶ್ವದ ಎಲ್ಲಾ ಬೌದ್ಧ ದೇಶದವರು ಕಟ್ಟಿರೋ ಮೊನಾಸ್ಟರಿ ಇಲ್ಲಿದಾವೆ. ಅವುಗಳ ಆಚೀಚೆ ನೋಡಿ. ಕಸ, ಗಲೀಜು ರಾಶಿ. ಇಂಟರ್‌ನ್ಯಾಷನಲ್ ಟೂರಿಸ್ಟ್ ಬರೋ ಜಾಗದ ತರಹ ಇದೆಯಾ ಇದು? ಇದನ್ನು ಹಾಳುಗೆಡವಬೇಕಂತನೇ ಹೀಗಿಟ್ಟಿರೋದು.’

‘೨೦೧೩ರಲ್ಲಿ ಒಂದು ಬಾಂಬ್ ಸ್ಫೋಟ ಆಯ್ತು. ಈಗ ಯಾರೂ ಫೋಟೋ ತೆಗೆಯುವಂತಿಲ್ಲ. ಸಮಾಜದೆದುರು ಸಾಕ್ಷ್ಯ ಸಮೇತ ಹೇಳಲು ಆಗುತ್ತಿಲ್ಲ. ವಿದೇಶಗಳಿಂದ ಬರುವ ಯಾತ್ರಿಕರಿಗೆ, ಪ್ರವಾಸಿಗಳಿಗೆ ಗೈಡ್‌ಗಳು ಮತ್ತು ವ್ಯಾಪಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬುದ್ಧನ ಜೊತೆಗೆ ಅದು ರಾಮನ, ಪಂಚಪಾಂಡವರ ತಾಣ; ಬುದ್ಧನು ವಿಷ್ಣುವಿನ ಅವತಾರ; ಪಂಚವರ್ಗೀಯ ಭಿಕ್ಕುಗಳೆಂದರೆ ಪಂಚ ಪಾಂಡವರು ಅಂತೆಲ್ಲ ಸುಳ್ಳು ಕತೆ ಹೇಳುತ್ತಿದ್ದಾರೆ. ಉದುರಿದ ಅರಳಿ ಮರದೆಲೆಗಳನ್ನು ಇಟ್ಟುಕೊಂಡು ಇಲ್ಲಿಯ ಬೋಧಿ ವೃಕ್ಷದ್ದೆಂದು ವ್ಯಾಪಾರ ಮಾಡುತ್ತಾರೆ. ಅದಕ್ಕೆಲ್ಲ ಸಮಿತಿಯವರು ಆಸ್ಪದ ನೀಡಿದ್ದಾರೆ. ಸಮಿತಿಯೊಳಗಿರುವ ಬ್ರಾಹ್ಮಣ ಪುರೋಹಿತರು ಹಿಂದೂ ಆಚರಣೆಗಳನ್ನು ಬೌದ್ಧ ದೇವಾಲಯದೊಳಗೆ ತುರುಕುತ್ತಿದ್ದಾರೆ’

ಅವರು ಹೇಳಿದ್ದು ನಿಜ. ಹಿಂದಿನ ದಿನ ಮಹಾಬೋಧಿ ದೇವಾಲಯದ ಆವರಣದಲ್ಲಿ ಸುತ್ತಾಡುವಾಗ ನಾವದನ್ನು ಗಮನಿಸಿದ್ದೆವು. ಸಹಿಷ್ಣುತೆ, ಮೈತ್ರಿ ಭಾವವನ್ನು ಹೀಗೆ ದುರುಪಯೋಗಪಡಿಸಿಕೊಳ್ಳಬಹುದೇ ಎಂದು ದಿಗ್ಭ್ರಮೆಗೊಳ್ಳುವಷ್ಟು ಹಿಂದೂಗಳು (ಅದರಲ್ಲೂ ಬ್ರಾಹ್ಮಣರು) ಅಲ್ಲಿ ಮೂಗು ತೂರಿಸಿದ್ದಾರೆ. ಇದಕ್ಕೆ ಶತಮಾನಗಳಿಂದಲೂ ವಿರೋಧ ಬಂದಿದೆ. ಅನಾಗಾರಿಕ ಧಮ್ಮಪಾಲ ೧೮೯೧ರಲ್ಲಿ ಈ ಬಗೆಗೆ ದನಿಯೆತ್ತಿದ್ದರು. ೧೯೯೨ರಲ್ಲಿ ಒಮ್ಮೆ, ನಂತರ ೨೦೦೨-೦೩ರಲ್ಲೂ ಇದು ಮುನ್ನೆಲೆಗೆ ಬಂದಿತ್ತು. ೨೦೦೭ರಲ್ಲಿ ಜಪಾನಿನ ಭಿಕ್ಕು ಭದಂತ ನಾಗಾರ್ಜುನ ಸಹಾ ಹೋರಾಡಿದ್ದರು. ೨೦೧೭ರಲ್ಲಿ ಅಖಿಲ ಭಾರತ ಭಿಕ್ಕು ಮಹಾಸಂಘದ ಅಧ್ಯಕ್ಷರೂ, ಬೋಧಗಯಾ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷರೂ ಆಗಿದ್ದ ಭಂತೆ ಆನಂದ ಮತ್ತೆ ಅಖಿಲ ಭಾರತ ಮಟ್ಟದಲ್ಲಿ ಅದನ್ನೊಂದು ಮುಖ್ಯ ವಿಷಯವನ್ನಾಗಿಸಿ ಹೋರಾಟ ರೂಪಿಸಿದ್ದರು. ದಲೈ ಲಾಮಾ ಈ ವಿಷಯದ ಬಗೆಗೆ ವಹಿಸಿದ ಮೌನವನ್ನು ಪ್ರಶ್ನಿಸಿದ್ದ ಭಂತೆ ಆನಂದ, ಅವರು ಬೌದ್ಧರ ನಾಯಕರಲ್ಲ ಎಂಬ ಕಟು ವಿಮರ್ಶೆಗೂ ಮುಂದಾಗಿದ್ದರು. ಈಗ ಅಖಿಲ ಭಾರತ ಬೌದ್ಧ ಭಿಕ್ಕುಗಳ ಸಮಿತಿಯು ೧೯೪೯ರ ಕಾಯ್ದೆಯ ಬಗೆಗೇ ತಕರಾರು ಎತ್ತಿದೆ. ಅದು ರದ್ದಾಗಿ ಹೊಸ ಕಾಯ್ದೆ ಬರಬೇಕೆಂದು ಹೇಳುತ್ತಿದೆ. ಹಳೆಯ ಕಾಯ್ದೆ ಬದಲಿಸದಿರುವುದರಲ್ಲಿ ಪುರೋಹಿತಶಾಹಿ ಹುನ್ನಾರವಿದೆ ಎಂದು ವಂಚಿತ್ ಬಹುಜನ್ ಅಘಾಡಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮೊದಲಾದ ಸಂಘಟನೆಗಳು ಆರೋಪಿಸುತ್ತಿವೆ. ಶಾಂತಿಯುತವಾಗಿ ಉಪವಾಸ ಕುಳಿತಿದ್ದ ಭಿಕ್ಕುಗಳನ್ನು ಪೊಲೀಸರು ಎಳೆದಾಡಿ, ಅವರನ್ನು ದೇವಾಲಯದ ಆವರಣದಿಂದ ದೂರದ ತಾಣಕ್ಕೆ ಸ್ಥಳಾಂತರಿಸಿದ ದೌರ್ಜನ್ಯದ ಬಗೆಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.

ಭಾರತ ಬಹುತ್ವದ, ವೈವಿಧ್ಯತೆಯ ದೇಶವಾಗಬೇಕು ನಿಜ. ಆದರೆ ಐತಿಹಾಸಿಕವಾಗಿ ಧೃಢಪಟ್ಟಿರುವಂತೆ ಧಾರ್ಮಿಕ ಕ್ಷೇತ್ರವೊಂದು ಆಡಳಿತಾತ್ಮಕವಾಗಿ ಆಯಾ ಧರ್ಮದ ಉಪಾಸಕ, ಉಪಾಸಕಿಯರ ಮೇಲ್ವಿಚಾರಣೆಯಲ್ಲೇ ಇರಬೇಕು. ಇತಿಹಾಸ, ಪುರಾತತ್ವ, ವಿದೇಶಿ ಯಾತ್ರಿಕರ ನೆನಪು, ಸಾಹಿತ್ಯಿಕ ಗ್ರಂಥಗಳ ಉಲ್ಲೇಖ, ವಿದೇಶಕ್ಕೆ ಹೋದ ಬೌದ್ಧ ಧರ್ಮದ ಪಠ್ಯಗಳ ದಾಖಲೆಗಳನ್ನೆಲ್ಲ ನೋಡಿದರೆ ಮಹಾಬೋಧಿ ದೇವಾಲಯವು ಬುದ್ಧ ಸಾಕ್ಷಾತ್ಕಾರ ಹೊಂದಿದ ತಾಣವೆನ್ನುವುದು ಖಚಿತವಾಗಿದೆ. ಅದು ಬೌದ್ಧರ ನಿಯಂತ್ರಣಕ್ಕೆ, ಆಡಳಿತಕ್ಕೆ ಒಳಪಡಬೇಕೆನ್ನುವುದು ನ್ಯಾಯವೇ ಆಗಿದೆ. 



ಹೊರಡುವ ದಿನ ಬೆಳಿಗ್ಗೆ..

ದೂರದಲ್ಲಿ ಮಹಾಬೋಧಿ ದೇವಾಲಯದ ಚಿನ್ನದ ಕಳಶ ಹೊಳೆಯುತ್ತಿತ್ತು. ಎಲೆ ಉದುರಿಸಿ ಬೋಳಾದ ಅರಳಿಮರಗಳ ಗೆಲ್ಲುಗೆಲ್ಲುಗಳಲ್ಲಿ ಜ್ವಾಲೆಯಂತೆ ಕಾಣುವ ಕೆಂದಳಿರು ಮೇಲೇಳುತ್ತಿದ್ದವು. ಗಲ್ಲಿಮೂಲೆ, ಚರಂಡಿ, ಕೊಳ, ನದಿ, ಸಂದಿಗೊಂದಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್, ಕಸ ಚೆಲ್ಲಾಡಿ ಬಿದ್ದಿತ್ತು. ಬೌದ್ಧ ತಾಣಗಳಲ್ಲೇ ಅತಿ ಪವಿತ್ರ ಎನಿಸಿಕೊಂಡ ತಾಣದಲ್ಲಿ ನದಿ ಒಣಗಿ, ನೆಲದ ಮೇಲೆಲ್ಲ ಕಸಕೊಳೆಗಳೇ ಎದ್ದು ಕಾಣುತ್ತಿದ್ದವು. ಮಹಾಬೋಧಿ ದೇವಾಲಯದ ಹೊರಾವರಣದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಹಿರಿಯ ಜೀವಗಳನ್ನು ಒಂದೆಡೆ ಸೇರಿಸಿ ಒಬ್ಬ ಭಿಕ್ಕುಣಿ ಏನೋ ಹೇಳಿಕೊಡುತ್ತಿದ್ದರು. ನಿನ್ನೆ ಸಂಜೆ ದೇವಾಲಯದಿಂದ ಹೊರಬೀಳುವ ದ್ವಾರದಲ್ಲಿ ನಮ್ಮನ್ನು ಬೀಳ್ಕೊಡುವವರಂತೆ ಸಾಲಾಗಿ ಭಿಕ್ಷೆ ಕೇಳುತ್ತ, ಸಂಕಟ ಹುಟ್ಟಿಸುವಂತೆ ಯಾಚನೆಯ ನೋಟ ಬೀರುತ್ತ ಕುಳಿತವರು ಇವರೇನೇ? 

ಬದಲಾವಣೆಯ ಚಕ್ರ ಒಳಿತಿನೆಡೆಗೆ ಉರುಳುವಂತೆ ಹರಸು ಬೋಧಿಯೇ. 

                                                                                                    ಡಾ. ಎಚ್. ಎಸ್. ಅನುಪಮಾ