Wednesday 8 June 2016

ಥಾಮಸ್ ಪೇಯ್ನ್ (೧೭೩೭-೧೮೦೯) - ಹಲವು ನಾಡು ಕಟ್ಟಿದ ಮಹನೀಯ





  
ಭಾರತದಲ್ಲಿ ಬ್ರಿಟಿಷರು ಇಂಗ್ಲಿಷ್ ಶಿಕ್ಷಣ ಪದ್ಧತಿ ಶುರು ಮಾಡಿದ ನಂತರ ಹಲವು ಪಾಶ್ಚಾತ್ಯ ಸಾಹಿತಿ, ಚಿಂತಕರು ಇಲ್ಲಿನ ತರುಣ ಮನಸ್ಸುಗಳನ್ನು ಪ್ರಭಾವಿಸಿದರು. ಸನಾತನ ಚಿಂತನೆಯ ನೆರಳಿನಲ್ಲಿ ಸ್ಥಗಿತಗೊಂಡಿದ್ದ ಭಾರತೀಯ ವೈಚಾರಿಕತೆ ಮತ್ತು ಮುಕ್ತ ಚಿಂತನೆ ಪಾಶ್ಚಾತ್ಯ ಚಿಂತಕರ ಬರಹಗಳಿಂದ ಹೊಸ ಹೊಳಹನ್ನು, ಹೊರಳನ್ನು ಪಡೆದುಕೊಂಡಿತು. ಅಂಥ ಸಾಲಿನಲ್ಲಿ ಭಾರತದ ಸಾಮಾಜಿಕ-ರಾಜಕೀಯ ಸುಧಾರಣೆಗಳನ್ನು ಪ್ರಭಾವಿಸಿದ ಇಂಗ್ಲಿಷ್ ಅಮೆರಿಕನ್ ರಾಜಕೀಯ ಚಿಂತಕ, ತತ್ವಜ್ಞಾನಿ, ರಾಜಕೀಯ ತತ್ವವೇತ್ತ ಹಾಗೂ ಕ್ರಾಂತಿಕಾರಿ ಥಾಮಸ್ ಪೇಯ್ನ್ ಪ್ರಮುಖನೆನ್ನಬಹುದು. ಆತ ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲಪುರುಷರಲ್ಲೊಬ್ಬ. ಅಮೆರಿಕನ್, ಫ್ರೆಂಚ್ ಕ್ರಾಂತಿಯ ಚಿಂತಕ ರೂವಾರಿಗಳಲ್ಲೊಬ್ಬ. ಮುಕ್ತಸಂವೇದನೆಯನ್ನು ಪ್ರತಿಪಾದಿಸುವವರೆಲ್ಲರ ಒಡನಾಡಿ.

ಪ್ರಜಾಪ್ರಭುತ್ವ ಎಂಬ ಕನಸನ್ನು ಮೊದಲು ಕಂಡ ಚಿಂತಕನೂ ಆದ ಪೇಯ್ನ್, ಜೋತಿಬಾ ಫುಲೆ, ಎಂ. ಜಿ. ರಾನಡೆ, ಭಗತ್ ಸಿಂಗ್, ಬಿ. ಆರ್. ಅಂಬೇಡ್ಕರ್ ಮೊದಲಾದ ಭಾರತದ ಮೇಧಾವಿ ಮನಸುಗಳನ್ನು ಆಳವಾಗಿ ಪ್ರಭಾವಿಸಿದ ಚಿಂತಕ. ಅದರಲ್ಲೂ ಭಾರತದ ಮೊತ್ತಮೊದಲ ಧಾರ್ಮಿಕ-ಸಾಮಾಜಿಕ-ರಾಜಕೀಯ ಕ್ರಾಂತಿಕಾರಿ ಜೋತಿಬಾ ಫುಲೆ ಹಾಗೂ ದಮನಿತರ ನಡುವಿನಿಂದ ಎದ್ದುಬಂದ ಅಕಳಂಕಿತ ನ್ಯಾಯಪ್ರಜ್ಞೆಯ ದನಿ ಬಿ. ಆರ್. ಅಂಬೇಡ್ಕರ್ ಅವರ ಬರಹ ಮತ್ತು ಚಿಂತನೆಗಳ ಮೇಲೆ ಪೇಯ್ನನ ಗಾಢ ಪ್ರಭಾವವಿದೆ. ಅಮೆರಿಕನ್ ಮಿಷನ್ನಿನ ಪ್ರಚಾರಕರ ದೆಸೆಯಿಂದ ಜೋತಿಬಾ ಫುಲೆ ಮತ್ತವರ ಗೆಳೆಯರಿಗೆ ಎಳವೆಯಲ್ಲೆ ಓದಲು ದೊರೆತ ಪೇಯ್ನ್ ಬರೆದ ‘ರೈಟ್ಸ್ ಆಫ್ ಮ್ಯಾನ್' ಎಂಬ ಪುಸ್ತಕ ಆ ತರುಣರ ಯೋಚನಾ ಧಾಟಿಯನ್ನೇ ಬದಲಿಸಿತು. ಭಾರತದಂತೆಯೇ ಜಾಗತಿಕವಾಗಿಯೂ ಹಲವು ಚಿಂತಕರು, ಬರಹಗಾರರು, ಜನನಾಯಕರನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿ ಪೇಯ್ನ್.

ಮುಕ್ತ ಚಿಂತನೆಯನ್ನು ಕೊನೆತನಕ ಎತ್ತಿಹಿಡಿದ ಆತನ ಬದುಕೇ ಒಂದು ಓದಲೇಬೇಕಾದ ಪಾಠದಂತಿದೆ..

ಗ್ರಾಮೀಣ ಇಂಗ್ಲೆಂಡಿನಲ್ಲಿ ಜನಿಸಿದ ಪೇಯ್ನ್ ಶಿಕ್ಷಣದ ಕಲ್ಪನೆಯೇ ಸರಿಯಾಗಿ ಇರದಿದ್ದ ಕಾಲದಲ್ಲಿ ಗ್ರಾಮರ್ ಶಾಲೆಗೆ ಹೋಗಿ ಶಿಕ್ಷಣ ಪಡೆದ. ಅವರ ತಂದೆ ಹಡಗುಗಳಿಗೆ ಹಗ್ಗ ಹೊಸೆದು ಮಾರುವ ವ್ಯಕ್ತಿಯಾಗಿದ್ದರು. ಆರಂಭಿಕ ಶಿಕ್ಷಣದ ನಂತರ ತಂದೆಯ ಉದ್ಯೋಗದಲ್ಲಿ ಸಹಾಯಕನಾಗಿ, ಒಂದಾದಮೇಲೊಂದು ಹತ್ತಾರು ತಾತ್ಕಾಲಿಕ, ಕಡಿಮೆ ಸಂಬಳದ ಉದ್ಯೋಗ ಮಾಡಿದ ತರುಣ ಪೇಯ್ನ್ ಸಾಕಷ್ಟು ಏಳುಬೀಳುಗಳನ್ನು ಕಂಡು ನಿರುದ್ಯೋಗದ ಕಹಿಯನ್ನೂ ಅನುಭವಿಸಿದ. ಕೈಗೊಂಡ ಉದ್ಯೋಗಗಳೆಲ್ಲ ಒಂದಲ್ಲ ಒಂದು ಕಾರಣಕ್ಕೆ ಕೈ ಸುಟ್ಟು ದಿವಾಳಿಯಾದ ಹೊತ್ತಿನಲ್ಲಿ ಬಸುರಿ ಹೆಂಡತಿ ದಿನ ತುಂಬುವ ಮೊದಲೆ ಹೆತ್ತು, ಮಗುವಿನೊಂದಿಗೆ ತೀರಿಕೊಂಡಳು. ನಿರಂತರ ಉದ್ಯೋಗ ಹುಡುಕುತ್ತ ಅಲೆದಲೆದು ಕೊನೆಗೆ ಲಂಡನ್ ತಲುಪಿ ೧೭೭೩ರಲ್ಲಿ ಅಬಕಾರಿ ಇಲಾಖೆಯ ನೌಕರಿಗೆ ಸೇರಿದ. ಅಬಕಾರಿ ನೌಕರರಿಗೆ ಉತ್ತಮ ಸಂಬಳ ಮತ್ತು ಸೂಕ್ತ ಉದ್ಯೋಗ ಸುರಕ್ಷೆ ಒದಗಿಸಬೇಕೆಂದು ಪಾರ್ಲಿಮೆಂಟಿಗೆ ಪತ್ರ ಬರೆದದ್ದು ಅವನನ್ನು ನೌಕರರ ನಾಯಕನಾಗುವಂತೆ ಮಾಡಿತು. ಅದೇವೇಳೆ ಲಂಡನ್ನಿಗೆ ಬಂದ ಅಮೆರಿಕದ ರಾಜಕಾರಣಿ ಬೆಂಜಮಿನ್ ಫ್ರಾಂಕ್ಲಿನ್ ಪರಿಚಯವಾಯಿತು. ಆ ಪರಿಚಯ ಹಾಗೂ ಚರ್ಚೆ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು.

ಪೇಯ್ನ್ ಬ್ರಿಟನ್ ತೊರೆಯಲು ನಿರ್ಧರಿಸಿ ೧೭೭೪ರಲ್ಲಿ ಅಮೆರಿಕದ ಫಿಲಡೆಲ್ಫಿಯಾ ಹಡಗು ಹತ್ತಿದ. ಆದರೆ ನೌಕಾಯಾನ ಮುಗಿಯುವುದರಲ್ಲಿ ಟೈಫಾಯ್ಡ್‌ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪೇಯ್ನ್, ಅಮೆರಿಕದಲ್ಲಿಳಿದ ಕೂಡಲೆ ಫ್ರಾಂಕ್ಲಿನ್‌ನ ವೈದ್ಯರಲ್ಲಿ ಚಿಕಿತ್ಸೆ ಪಡೆದ. ಗುಣಮುಖನಾದದ್ದೇ ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡ. ಎಲ್ಲರಲ್ಲಿ ಸ್ಫೂರ್ತಿ ತುಂಬುವ ಅತ್ಯಂತ ಪ್ರಭಾವಶಾಲಿಯಾದ ಎರಡು ಕರಪತ್ರ ‘ಕಾಮನ್ ಸೆನ್ಸ್ ಮತ್ತು ‘ಅಮೆರಿಕನ್ ಕ್ರೈಸಿಸ್ ಬರೆದು ಪ್ರಕಟಿಸಿದ. ಹೆಚ್ಚುಕಡಿಮೆ ಪ್ರತಿ ಕ್ರಾಂತಿಕಾರಿಯೂ ‘ಕಾಮನ್ ಸೆನ್ಸ್ ಓದಿದ. ಅದರಲ್ಲಿ ಬ್ರಿಟನ್ ರಾಜಸತ್ತೆಯ ವೈಫಲ್ಯ, ಅಮೆರಿಕದ ರಾಜ್ಯಗಳಿಗೆ ಸ್ವಾತಂತ್ರ್ಯದ ಅವಶ್ಯಕತೆ ಕುರಿತು ವಿವರವಾಗಿ ಬರೆಯಲಾಗಿತ್ತು. ಪೇಯ್ನ್ ಪ್ರತಿಪಾದಿಸುತ್ತಿದ್ದ ‘ಮುಕ್ತ ಚಿಂತನೆ ಮತ್ತು ಪ್ರಜಾತಂತ್ರವಾದಿ ಧೋರಣೆ ತುಂಬಿದ್ದ ಬರಹ ಅದು. ಆ ಕಾಲಕ್ಕೆ ಬಹು ವಿನೂತನ ಪ್ರತಿಪಾದನೆಯ ಬರವಣಿಗೆಯಾಗಿ ಗಮನ ಸೆಳೆದು ಲಕ್ಞಾಂತರ ಪ್ರತಿ ಮಾರಾಟವಾಯಿತು.


ಆದರೆ ಹಲವು ರಾಜಭಕ್ತರು ಅವನ ವಿರುದ್ಧ ಕಿಡಿಕಾರಿದರು. ‘ರಾಜಸತ್ತೆ ಇಲ್ಲದಿದ್ದರೆ ಸಮಾಜ ಕೊನೆಗೆ ಪ್ರಜಾಪ್ರಭುತ್ವದಲ್ಲಿ ನಾಶವಾಗಿಹೋಗುತ್ತದೆ' ಎಂದು ಎಚ್ಚರಿಸಿದರು! ೧೭೭೬ರಲ್ಲಿ ಬರೆದ ‘ಅಮೆರಿಕನ್ ಕ್ರೈಸಿಸ್' ಕೂಡ ಕ್ರಾಂತಿಗೆ ಪೂರಕವಾಗಿಯೇ ಇತ್ತು. ಬರಹಗಾರ ಇಂಗರ್‌ಸಾಲ್ ವರ್ಣಿಸಿರುವಂತೆ, ‘ಕಾಮನ್ ಸೆನ್ಸ್' ಪ್ರಬಂಧ ಬರೆಯದಿದ್ದರೆ ಜಾರ್ಜ್ ವಾಷಿಂಗ್ಟನ್ ಕತ್ತಿ ಹಿರಿದಿದ್ದು ವ್ಯರ್ಥವಾಗಿ ಹೋಗುತ್ತಿತ್ತು.

ನಂತರ ೧೭೯೦ರ ಸುಮಾರಿಗೆ ಪೇಯ್ನ್ ಪ್ಯಾರಿಸಿಗೆ ಹೋದ. ಅಲ್ಲಿ ತನ್ನನ್ನು ಫ್ರೆಂಚ್ ಕ್ರಾಂತಿಯಲ್ಲಿ ಗಾಢವಾಗಿ ತೊಡಗಿಸಿಕೊಂಡು ಫ್ರೆಂಚ್ ಸಂವಿಧಾನ ಸಮಿತಿಯಲ್ಲಿ ಕೆಲಸ ಮಾಡಿದ. ಕಿಂಗ್ ಲೂಯಿಗೆ ಮರಣದಂಡನೆ ವಿಧಿಸಬಾರದು, ಬೇಕಾದರೆ ಅಮೆರಿಕಕ್ಕೆ ಗಡೀಪಾರು ಮಾಡಬಹುದು ಎಂದು ಕ್ರಾಂತಿಕಾರಿಗಳ ಬಳಿ ವಾದಿಸಿದ. ಆಗಲೇ ಆತ ‘ರೈಟ್ಸ್ ಆಫ್ ಮ್ಯಾನ್' (೧೭೯೧) ಬರೆದದ್ದು.

‘ರೈಟ್ಸ್ ಆಫ್ ಮ್ಯಾನ್' ಬಹಳಷ್ಟು ಸೂಕ್ಷ್ಮಜ್ಞರನ್ನು ವಿಶ್ವಾದ್ಯಂತ ಗಾಢವಾಗಿ ಪ್ರಭಾವಿಸಿದ ಕೃತಿ. ಅದನ್ನು ಓದಿದ ನೆಪೋಲಿಯನ್ ತಾನು ದಿಂಬಿನಡಿ ‘ರೈಟ್ಸ್ ಆಫ್ ಮ್ಯಾನ್' ಇಟ್ಟುಕೊಂಡು ಮಲಗುವುದಾಗಿಯೂ, ಯಾರಾದರೂ ಬಂಗಾರದ ಪುತ್ಥಳಿ ಮಾಡಿ ನಿಲ್ಲಿಸಲು ಗೌರವಿಸಲು ಯೋಗ್ಯ ವ್ಯಕ್ತಿ ಇದ್ದರೆ ಅದು ಪೇಯ್ನ್ ಮಾತ್ರ ಎಂದೂ ಹೇಳಿದ. (ಆದರೆ ನಂತರ ನೆಪೋಲಿಯನ್ ಸರ್ವಾಧಿಕಾರಿಯಾದಾಗ ಪೇಯ್ನ್ ಕಟುಪದಗಳಲ್ಲಿ ಅವನನ್ನು ಟೀಕಿಸಿದ.) ಫ್ರೆಂಚ್ ಭಾಷೆ ಬರದಿದ್ದರೂ ಫ್ರೆಂಚ್ ನ್ಯಾಷನಲ್ ಕನ್ವೆನ್ಶನ್‌ಗೆ ಆಯ್ಕೆಯಾದ. ಬ್ರಿಟಿಷ್ ಬರಹಗಾರ ಎಡ್ಮಂಡ್ ಬರ್ಕ್ ಫ್ರೆಂಚ್ ಕ್ರಾಂತಿಯ ವಿರುದ್ಧ ಬರೆದಾಗ ಅವನನ್ನು ಕಟುವಾಗಿ ಟೀಕಿಸಿದ. ದೇಶಬಾಂಧವನನ್ನು ಟೀಕಿಸಿದ್ದಕ್ಕಾಗಿ ಪೇಯ್ನ್ ಅನುಪಸ್ಥಿತಿಯಲ್ಲಿ ಬ್ರಿಟನ್ನಿನಲ್ಲಿ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಯಿತು.



 (ಎಡ್ಮಂಡ್ ಬರ್ಕ್ ಮತ್ತು ಪೇಯ್ನ್,  ಬ್ರಿಟನ್ನಿನ ೊಂದು ವ್ಯಂಗ್ಯ ಚಿತ್ರದಲ್ಲಿ)
ಇತ್ತ ಪ್ಯಾರಿಸಿನಲ್ಲಿ ಕ್ರಾಂತಿಕಾರರ ವಿರುದ್ಧ ಇದ್ದ ಆಳುವ ಪಕ್ಷದವರು ಫ್ರೆಂಚ್ ಸಭೆ, ಸಮಿತಿಗಳಲ್ಲಿ ವಿದೇಶೀಯರು ಇರಬಾರದೆಂಬ ನೀತಿ ರೂಪಿಸಿ ಪೇಯ್ನ್‌ನ್ನು ಬಂಧಿಸಿ ಜೈಲಿಗೆ ಕಳಿಸಿದರು. ಜೈಲಿನಲ್ಲಿ ಆತ ‘ಏಜ್ ಆಫ್ ರೀಸನ್' (೧೭೯೩) ಬರೆದ. ಫ್ರಾನ್ಸಿನಲ್ಲಿ ಪೇಯ್ನ್ ಬಂಧನಕ್ಕೊಳಗಾಗಿದ್ದು ಅಮೆರಿಕದಲ್ಲಿ ಹಾಹಾಕಾರವೆಬ್ಬಿಸಿತು. ಭಾವೀ ಅಧ್ಯಕ್ಷ ಜೇಮ್ಸ್ ಮನ್ರೊ ತನ್ನೆಲ್ಲ ಪ್ರಭಾವ ಬಳಸಿ ಅವನನ್ನು ಬಿಡುಗಡೆಗೊಳಿಸಿದ.

೧೭೯೭ರಲ್ಲಿ ಅಗ್ರೇರಿಯನ್ ಜಸ್ಟಿಸ್ (ಕೃಷಿ ನ್ಯಾಯ) ಬಗೆಗೆ ಬರೆದ ಪೇಯ್ನ್ ವೈಯಕ್ತಿಕ ಆಸ್ತಿ ಕಲ್ಪನೆ ಬಗೆಗೆ ಚರ್ಚಿಸಿದ. ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜೀವನವನ್ನು ಸಮತೋಲಗೊಳಿಸಿ ಬದುಕಬೇಕಾದ ಅವಶ್ಯಕತೆ ಕುರಿತು ಬರೆದ. ಕನಿಷ್ಠ ಆದಾಯ, ಪಿಂಚಣಿಯನ್ನು ಸರ್ಕಾರ ಎಲ್ಲರಿಗು ನೀಡಬೇಕೆನ್ನುವುದು ಅದರ ಪ್ರತಿಪಾದನೆಯಾಗಿತ್ತು. ಪೇಯ್ನ್ ಬರೆದ ಕೊನೆಯ ಕರಪತ್ರ ‘ಅಗ್ರೇರಿಯನ್ ಜಸ್ಟಿಸ್, ಅಪೋಸ್ಡ್ ಟು ಅಗ್ರೇರಿಯನ್ ಲಾ ಅಂಡ್ ಟು ಅಗ್ರೇರಿಯನ್ ಮೊನಾಪಲಿ'. ಅದು ರೈಟ್ಸ್ ಆಫ್ ಮ್ಯಾನ್ ಮುಂದುವರಿಕೆಯಂತೆ ವಿಸ್ತರಣೆಯಂತೆ ಇದೆ. ಹೇಗೆ ಬಹುಸಂಖ್ಯೆಯ ಜನರು ಸಹಜ, ಸ್ವತಂತ್ರ ಬದುಕುವ ಹಕ್ಕುಗಳನ್ನು ಭೂಮಾಲೀಕತ್ವದ ಕಾರಣವಾಗಿ ಕಳೆದುಕೊಂಡಿದ್ದಾರೆ ಎಂದು ಅದು ವಿವರಿಸುತ್ತದೆ. ನಂತರ ಅಮೆರಿಕದಲ್ಲಿ ವೃದ್ಧಾಪ್ಯ ವೇತನ, ಕನಿಷ್ಠ ಆದಾಯ ಯೋಜನೆ ಜಾರಿಗೆ ಬರಲು ಈ ಪ್ರಬಂಧವೇ ಪ್ರೇರಣೆಯಾಗಿದೆ. ಪೇಯ್ನ್ ಪ್ರಕಾರ ಸರ್ಕಾರ ಒಂದು ರಾಷ್ಟ್ರೀಯ ನಿಧಿಯನ್ನು ರೂಪಿಸಬೇಕು. ಭೂ ಮಾಲೀಕತ್ವ, ಆಸ್ತಿಹಕ್ಕು ಮೊದಲಾದ ಸಿರಿವಂತ ಸ್ನೇಹಿ ಆಳ್ವಿಕರ ಕ್ರಮಗಳಿಂದ ಯಾರು ತಮ್ಮ ಸಹಜ ಮತ್ತು ಸ್ವತಂತ್ರ ಬದುಕುವ ಹಕ್ಕುಗಳನ್ನು ಕಳೆದುಕೊಂಡು ಬಡವರಾಗಿರುತ್ತಾರೋ ಅಂಥ ಎಲ್ಲ ಭೂಹೀನರಿಗೆ ವಾರ್ಷಿಕ ೧೫ ಪೌಂಡ್ ಸ್ಟರ್ಲಿಂಗ್ ಪರಿಹಾರ ಕೊಡಬೇಕು. ಹಾಗೆಯೇ ೫೦ ವರ್ಷ ದಾಟಿದ ಅಂಥ ಪ್ರತಿಯೊಬ್ಬರಿಗೂ ವಾರ್ಷಿಕ ೧೦ ಪೌಂಡ್ ಸ್ಟರ್ಲಿಂಗ್ ಹಣ ಕೊಡಬೇಕು. ಇದು ಸರ್ಕಾರ ಬಡವರಿಗೆ ಕೊಡುವ ದಾನವಲ್ಲ, ಇದು ಅವರ ಹಕ್ಕು. (ಅಂದಿನ ೧೦ ಪೌಂಡ್ ಎಂದರೆ ಈಗಿನ ಲೆಕ್ಕಾಚಾರದ ಪ್ರಕಾರ ೮೪ ಸಾವಿರ ರೂಪಾಯಿ, ೧೫ ಪೌಂಡ್ ಎಂದರೆ ೧.೪ ಲಕ್ಷ ರೂಪಾಯಿ.) ಸಮಾನತೆ ಹಾಗೂ ಸ್ವಾತಂತ್ರ್ಯದ ಸಲುವಾಗಿ ಖಾಸಗಿ ಭೂಮಾಲಿಕರ ಜವಾಬ್ದಾರಿಯನ್ನೂ ಪೇಯ್ನ್ ನೆನಪಿಸುತ್ತಾನೆ.

ಆತ ಅಜ್ಞಾತ ಹೆಸರಿನಲ್ಲಿ ಗುಲಾಮಗಿರಿಯ ವಿರುದ್ಧವೂ ಬರೆದ.

ನಂತರ ಬಂದದ್ದು ‘ಏಜ್ ಆಫ್ ರೀಸನ್' ಎಂಬ ಕೃತಿ. ಅದರಲ್ಲಿ ಪ್ರಕೃತಿಧರ್ಮ ಅಥವಾ ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದ ಹಾಗೂ ಕ್ರೈಸ್ತ ಧರ್ಮವೂ ಸೇರಿದಂತೆ ಸಾಂಸ್ಥಿಕ ಧರ್ಮದ ಅಪಾಯಗಳ ಕುರಿತು ಹೇಳಿದ್ದ. ಪೇಯ್ನ್ ತಾಯಿ ಆಂಗ್ಲಿಕನ್ ಚರ್ಚಿನವಳಾದರೂ ತಂದೆ ಕ್ವೇಕರ್ ಎಂಬ ಕ್ರಿಸ್ತೀಯ ಗೆಳೆಯರ ಸಂಘದ ಪಂಥದವರು. ಆ ಪಂಥದವರು ಚರ್ಚ್ ಅನ್ನು ನಂಬಿದವರಲ್ಲ. ಬಹುಶಃ ಇದು ಪೇಯ್ನ್ ಧಾರ್ಮಿಕತೆಯ ಮೇಲೆ ಪ್ರಭಾವ ಬೀರಿರಬಹುದು. ‘ನನಗೆ ರೋಮನ್, ಗ್ರೀಕ್, ಟರ್ಕಿಶ್, ಜ್ಯೂಯಿಷ್ ಯಾವ ಚರ್ಚಿನ ಮೇಲೂ ನಂಬಿಕೆಯಿಲ್ಲ. ನನಗೆ ಒಬ್ಬನೇ ದೇವರು, ಹೆಚ್ಚಿಲ್ಲ. ನನ್ನ ಮನಸೇ ನನ್ನ ಚರ್ಚ್. ಅಧಿಕಾರ ಮತ್ತು ಲಾಭದ ಆಸೆಗೆ ಮನುಷ್ಯ ಸೃಷ್ಟಿಸಿದ ಸಂಸ್ಥೆಗಳಿಗಿಂತ ಈಗಿರುವ ಚರ್ಚುಗಳು ಬೇರೆ ಎಂದು ನನಗನಿಸಿಲ್ಲ. ಬೈಬಲ್ ಮತ್ತು ಟೆಸ್ಟ್‌ಮೆಂಟ್‌ಗಳು ಜನರ ಬೌದ್ಧಿಕತೆಯ ಮೇಲಿನ ಹೇರಿಕೆಗಳು. ಮನುಷ್ಯನ ಅವನತಿ, ಜೀಸಸ್ ಎಂಬ ದೇವಸುತನ ಅವತಾರ, ದೇವರ ಕೋಪ ತಣಿಸಲು ಅವನ ಸಾವು, ಪುನರುತ್ಥಾನ  ಇವೆಲ್ಲ ಅದ್ಭುತ ಕಟ್ಟುಕತೆಗಳು. ದೇವರ ಜ್ಞಾನ ಮತ್ತು ಶಕ್ತಿಗೆ ಅವಮಾನ ಎಸಗುವಂತಹ ಸೃಷ್ಟಿಗಳು. ನಿಜವಾದ ಧರ್ಮ ಪ್ರಕೃತಿ ಧರ್ಮ, ಏಕೇಶ್ವರ ಧರ್ಮ. ಒಂದು ದೇವರ ನಂಬುವುದು ಮತ್ತು ತನ್ನ ನೈತಿಕ ಮೌಲ್ಯ-ಗುಣಗಳನ್ನು ನಂಬಿ ದೇವರ ಮೇಲೆ ಭಾರ ಹಾಕಿ ಬದುಕುವುದು, ಇದು ಪ್ರಕೃತಿ ಧರ್ಮ.. ಎಂದು ಪ್ರತಿಪಾದಿಸಿದ.

ಪೇಯ್ನ್ ಪ್ರತಿಪಾದನೆಗಳಲ್ಲಿ ಕೆಲವು ಹೀಗಿವೆ:

v  ‘ಈ ಜಗತ್ತೇ ನನ್ನ ದೇಶ. ಒಳಿತುಂಟು ಮಾಡುವುದೇ ನನ್ನ ಧರ್ಮ'.

v  ‘ತನ್ನ ಅತ್ಯುತ್ಕೃಷ್ಟ ಸ್ವರೂಪದಲ್ಲಿಯೂ ಸಹಾ ಸರ್ಕಾರ ಎನ್ನುವುದು ಒಂದು ಅವಶ್ಯ ಕೇಡು. ತನ್ನ ದುಷ್ಟ ಸ್ವರೂಪದಲ್ಲಿ ಅದು ಅಸಹನೀಯ ಕೇಡು.'

v  ‘ಒಬ್ಬ ಮನುಷ್ಯ ಸಂತೋಷವಾಗಿರಲು ತನಗೆ ತಾನು ಮಾನಸಿಕವಾಗಿ ವಿಧೇಯನಾಗಿರಬೇಕಾದ್ದು ಅಗತ್ಯ. ಅದು ದ್ರೋಹ, ನಂಬಿಕೆ, ಅಪನಂಬಿಕೆಗಳ ಪ್ರಶ್ನೆಯಲ್ಲ. ದ್ರೋಹ ಎಂದರೆ ನಾನು ನಂಬದಿರುವುದನ್ನು ಪ್ರತಿಪಾದಿಸುವುದು.'

v  ‘ಆಧುನಿಕ ವಿಶ್ವದ ಧಾರ್ಮಿಕ ಬಣ್ಣ ಹೀಗಿರಲು ಕಾರಣ ಜೆರುಸಲೇಮಿನಲ್ಲಿ ಒಂದು ಹುಚ್ಚಾಸ್ಪತ್ರೆ ಇಲ್ಲದಿರುವುದು.'

v  ‘ಯಾವುದೇ ಧಾರ್ಮಿಕ ವ್ಯವಸ್ಥೆ ಮಗುವನ್ನು ದಿಗ್ಭ್ರಮೆಗೆ ಒಳಪಡಿಸುವಂಥದೇನನ್ನಾದರೂ ಹೊಂದಿದ್ದರೆ ಅದು ಸತ್ಯವಾಗಿರಲು ಸಾಧ್ಯವಿಲ್ಲ'.

v  ‘ಯಾವುದೇ ಸಂಗತಿಯನ್ನು ಅದು ತಪ್ಪು ಎಂದು ವಿಶ್ಲೇಷಿಸದೆ ದೀರ್ಘಕಾಲ ಹಾಗೇ ಇದ್ದರೆ ಕ್ರಮೇಣ ಮೇಲ್ನೋಟಕ್ಕೆ ಅದು ಸರಿ ಎನಿಸತೊಡಗುತ್ತದೆ.'

v  ಸಹಿಷ್ಣುತೆ ಎನ್ನುವುದು ಅಸಹಿಷ್ಣುತೆಯ ವಿರುದ್ಧ ಪದವಲ್ಲ, ಅದರ ನಕಲಿ ರೂಪ. ಎರಡೂ ಸರ್ವಾಧಿಕಾರವೇ ಒಂದು ಮುಕ್ತಚಿಂತನೆಯನ್ನು ಒತ್ತಿ ಹಿಡಿಯುವ ಹಕ್ಕು ತನ್ನದೆಂದು ಊಹಿಸಿಕೊಳ್ಳುತ್ತದೆ, ಮತ್ತೊಂದು ಮುಕ್ತಚಿಂತನೆಯನ್ನು ಎತ್ತಿ ಹಿಡಿಯುವ ಹಕ್ಕು ತನ್ನದೆಂದು ಭಾವಿಸುತ್ತದೆ.'

v  ತನ್ನ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವವನು ತನ್ನ ಶತ್ರುವು ದಮನಗೊಳ್ಳುವುದರ ವಿರುದ್ಧವೂ ಹೋರಾಡಬೇಕಾಗುತ್ತದೆ.'

v  ತರ್ಕ ಜ್ಞಾನ ಕಳೆದುಕೊಂಡವನ ಜೊತೆ ವಾದ ಮಾಡುವುದೆಂದರೆ ಶವಕ್ಕೆ ಚಿಕಿತ್ಸೆ ನೀಡಿದಂತೆ.'

ಆದರೆ ಯಾವಾಗ ‘ಏಜ್ ಆಫ್ ರೀಸನ್' ಬರೆದು ಕ್ರೈಸ್ತ ಧರ್ಮವನ್ನು ಟೀಕಿಸಿದನೋ ಆಗ ಪೇಯ್ನ್ ಕುಖ್ಯಾತನಾಗತೊಡಗಿದ. ಇಲ್ಲಸಲ್ಲದ ಆಪಾದನೆ, ಗೂಢಚರ್ಯೆಯ ಶಂಕೆ ಅವನನ್ನು ಸುತ್ತುವರಿದವು. ಬಹಳಷ್ಟು ಜನ ಅವನಿಂದ ದೂರ ಸರಿದರು. ಧರ್ಮ ಕುರಿತ ಕಟುಟೀಕೆ ಜನಪ್ರಿಯತೆಯನ್ನು ಜೀವಿತ ಕಾಲದಲ್ಲೇ ಕುಗ್ಗಿಸತೊಡಗಿತು. ತೀವ್ರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡು ಅಮೆರಿಕ, ಫ್ರಾನ್ಸ್, ಬ್ರಿಟನ್, ನೆದರ್ಲೆಂಡ್ಸ್ ಮುಂತಾದ ದೇಶಗಳ ತಿರುಗುತ್ತ ಮುಕ್ತವಾಗಿ ಟೀಕಿಸುತ್ತ, ಮುಕ್ತಚಿಂತನೆಯನ್ನು ಬೆಂಬಲಿಸುತ್ತ, ದೈತ್ಯರನ್ನು ಬೀಳಿಸಿ, ನಿಸ್ವಾರ್ಥಿ ಜನನಾಯಕರ ಮೇಲೆತ್ತಿ ಕಟ್ಟಿದ ಪೇಯ್ನ್ ಗಡಿ, ದೇಶ, ಭಾಷೆಗಳ ಹಂಗಿಲ್ಲದೆ ಮಾನವಹಕ್ಕುಗಳ ಪ್ರತಿಪಾದಿಸಿದ್ದ. ಆದರೆ ಈಗ ಯಾವ ಕಾರಣಗಳಿಗೆ ಪ್ರಸಿದ್ಧನೋ ಆಗ ಅದೇ ಕಾರಣಕ್ಕೆ ಕುಖ್ಯಾತನೂ ಆಗಬೇಕಾಯಿತು. ಶತ್ರುಗಳನ್ನೂ ಪ್ರೀತಿಸಬೇಕೆನ್ನುವವರು ತಮ್ಮ ಮಿತ್ರನಾಗಿದ್ದ ಆತನನ್ನು ದ್ವೇಷಿಸಿದರು. ಅವನ ಸಾವಿಗಾಗಿ ಉಳಿದವರು ಅಸಹನೆಯಿಂದ ಕಾದರು. ಆತನ ಸೇವೆ ಮರೆತರು. ಟೀಕೆ, ಸ್ವವಿಮರ್ಶೆ ಎಂಬ ಮೌಲ್ಯಗಳನ್ನು ದುಷ್ಟತನ, ದ್ರೋಹವೆಂದು ಭಾವಿಸಿದರು. ೧೮೦೨ರಲ್ಲಿ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ತನ್ನ ಜನಪ್ರಿಯತೆ ಕುಂದುತ್ತ ಸಾಗಿದ್ದನ್ನು ಪೇಯ್ನ್ ಗಮನಿಸಿದ. ಅನಾರೋಗ್ಯದಲ್ಲಿಯೂ ಏಕಾಂಗಿಯಾಗಿ ೧೮೦೯ರಲ್ಲಿ ತೀರಿಕೊಂಡ.


ಪೇಯ್ನ್ ತೀರಿಕೊಂಡಾಗ ಸಾವು ಅವನ ಏಕೈಕ ಆಪ್ತ ಗೆಳೆಯನಾಗಿತ್ತು..

ಕೇವಲ ಆರು ಜನ ಅವನ ಶವಯಾತ್ರೆಯಲ್ಲಿದ್ದರು. ಒಂದು ವಾಹನ, ಅದರ ಚಾಲಕ, ಅದರಲ್ಲಿ ವೃತ್ತಿಪರ ದುಃಖಿಸುವ ಮಹಿಳೆ ಮತ್ತವಳ ಮಗು, ಇಬ್ಬರು ಬರಿಗಾಲಿನ ನೀಗ್ರೋಗಳು ಮತ್ತು ಒಬ್ಬ ಕ್ವೇಕರ್ ಪಂಥದವನು. ಪೇಯ್ನ್ ಇಚ್ಛೆಯಂತೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನವೇ ಸಿಗದೇ ಹೋದಾಗ ಬಯಲಿನಲ್ಲಿದ್ದ ಒಂದು ವಾಲ್ನಟ್ ಮರದ ಕೆಳಗೆ ಶವವನ್ನು ಹೂಳಲಾಯಿತು.

ನ್ಯೂಯಾರ್ಕ್ ಪತ್ರಿಕೆಯಲ್ಲಿ ಪ್ರಕಟವಾದ ಬಹುಪಾಲು ಶ್ರದ್ಧಾಂಜಲಿಗಳು ‘ಥಾಮಸ್ ಪೇಯ್ನ್, ದೀರ್ಘ ಕಾಲ ಬಾಳಿದ. ಸ್ವಲ್ಪ ಒಳಿತನ್ನೂ, ಬಹಳ ಕೆಡುಕನ್ನೂ ಮಾಡಿ ತೀರಿಕೊಂಡ' ಎಂದಿದ್ದವು! ೧೮೧೯ರಲ್ಲಿ ಇಂಗ್ಲಿಷ್ ಪತ್ರಕರ್ತ ವಿಲಿಯಂ ಕಾರ್ಬೆಟ್ ಪೇಯ್ನ್‌ಗೆ ವೀರೋಚಿತ ಸಂಸ್ಕಾರವಾಗಬೇಕೆಂದು ಭಾವಿಸಿ ಅವನ ಮೂಳೆಗಳ ಇಂಗ್ಲೆಂಡಿಗೆ ಒಯ್ದ. ಆದರೆ ಇಂಗ್ಲೆಂಡಿನ ರಾಜಮನೆತನ, ರಾಜಕಾರಣಿಗಳು, ಧಾರ್ಮಿಕ-ಸಾಹಿತ್ಯಿಕ ಪ್ರಭಾವಿ ವ್ಯಕ್ತಿಗಳ ನಿರಂತರ ವಿರೋಧದಿಂದ ೨೦ ವರ್ಷ ಸರಿದರೂ, ಮೂಳೆ ಹೊತ್ತು ತಂದ ಕಾರ್ಬೆಟ್ ಸತ್ತರೂ ಪೇಯ್ನ್ ಮೂಳೆಗಳಿಗೆ ಗೌರವಾನ್ವಿತ ಜಾಗ ಸಿಗಲಿಲ್ಲ. ಆಮೇಲೆ ಅವು ಏನಾದವೋ ಯಾರಿಗೂ ಗೊತ್ತಿಲ್ಲ.


ದೇಹದ ಅವಶೇಷಗಳು ಏನಾದರೂ ಆಗಿರಲಿ, ಆದರೆ ಪೇಯ್ನ್ ಚಿಂತನೆಗಳು ಇವತ್ತಿಗೂ ಜಗತ್ತಿನ ಎಲ್ಲೆಡೆ ಹಲವು ದೇಶಗಳ ಕ್ರಾಂತಿ, ಹೋರಾಟ, ದಂಗೆಗಳ ಸ್ಫೂರ್ತಿಯಾಗಿ ಜೀವಂತವಾಗಿವೆ. ಸಮಾನತೆಯ ಸಮಾಜ, ಗಣರಾಜ್ಯ ಕಲ್ಪನೆ, ಮುಕ್ತ ಚಿಂತನೆ, ಪ್ರಕೃತಿ ಧರ್ಮೋಪಾಸನೆ  ಇವೆಲ್ಲ ಅವತ್ತಿಗೆ ಕ್ರಾಂತಿಕಾರಕ, ನವನವೀನ ವಿಚಾರಗಳಾಗಿದ್ದವು. ಪ್ರಜಾತಂತ್ರವಾದಿ ಚಿಂತನೆಗಳನ್ನು, ಸಮಾನತೆಯ ಆಧಾರದ ಸಮಾಜ ನಿರ್ಮಾಣದ ಕನಸನ್ನು ಮೊತ್ತಮೊದಲು ವ್ಯವಸ್ಥಿತವಾಗಿ ಪ್ರತಿಪಾದಿಸಿದ್ದು ಪೇಯ್ನ್. ಅವನ ಚಿಂತನೆಗಳಿಂದ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಗಾಢವಾಗಿ ಪ್ರಭಾವಿತನಾಗಿ ಗುಲಾಮಗಿರಿಯನ್ನು ರದ್ದು ಮಾಡಿದ. ಅವನ ಚಿಂತನೆಗಳಿಂದ ಥಾಮಸ್ ಆಲ್ವಾ ಎಡಿಸನ್, ಬೆಂಜಮಿನ್ ಫ್ರಾಂಕ್ಲಿನ್, ಬರ್ಟ್ರಂಡ್ ರಸೆಲ್, ಇಂಗರ್‌ಸಾಲ್ ಸೇರಿದಂತೆ ಹಲವು ಅಮೆರಿಕನ್, ಬ್ರಿಟಿಷ್ ಬರಹಗಾರರು-ತತ್ವವೇತ್ತರು, ದ. ಅಮೆರಿಕದ ಕ್ರಾಂತಿಕಾರಿಗಳು ಸ್ಫೂರ್ತಿ ಪಡೆದರು. ಸಾಂಸ್ಥಿಕ ಧರ್ಮದ ಕುರಿತ ಆತನ ನೇರನುಡಿ ಹಾಗೂ ವೈಚಾರಿಕತೆ ಹಲವರನ್ನು ಪ್ರಭಾವಿಸಿತು. ಪೇಯ್ನ್ ಬರಹಗಳು ೧೮೧೧ರ ವೇಳೆಗೆ ಸ್ಪ್ಯಾನಿಶ್‌ಗೆ ಅನುವಾದಗೊಂಡು ಲ್ಯಾಟಿನ್ ಅಮೆರಿಕಾದ ಸ್ವಾತಂತ್ರ್ಯಪ್ರಿಯ ಕ್ರಾಂತಿಕಾರಿಗಳ ಬೈಬಲ್ ಆಯಿತು. ಉರುಗ್ವೆಯ ಸಂವಿಧಾನದಂತಿದೆ ಎಂದು ಕರೆಸಿಕೊಂಡ ಜೋಸ್ ಆರ್ಟಿಗಾಸ್‌ನ ಒಂದು ಬರಹ ಪೇಯ್ನ್ ವಿಚಾರಗಳಿಂದ ಗಾಢ ಪ್ರಭಾವಕ್ಕೊಳಗಾಗಿದೆ. ಭಾರತದಲ್ಲಿಯೂ ಪೇಯ್ನ್ ವಿಚಾರಗಳ ಗಾಢಪ್ರಭಾವವಿದೆ.

ಎಂದೇ ಇವತ್ತಿಗೂ ‘ಹಲವು ಹೊಸ ನಾಡುಗಳ ಕಟ್ಟಿದ ಮಹನೀಯ'ನೆಂದೇ ಪೇಯ್ನ್ ಗೌರವಿಸಲ್ಪಟ್ಟಿದ್ದಾನೆ.                 





No comments:

Post a Comment