Saturday 29 September 2018

ಗಾಂಧಿ ಚಿಂತನೆ: ಋಣಭಾರ





Image result for gandhi at iisc




ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿ ‘ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್’ (ಓIಖಈ) ಇತ್ತೀಚೆಗೆ ಬಿಡುಗಡೆಯಾಯಿತು. ಅಲ್ಲಿ ಪರಿಗಣಿಸಲ್ಪಟ್ಟ ೪೦೦೦ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥಾನದಲ್ಲಿದೆ. (ದೆಹಲಿಯ ಜೆಎನ್ಯು ಎರಡನೆಯ ಸ್ಥಾನ, ಬನಾರಸ್ ಹಿಂದೂ ವಿವಿ ಮೂರನೆಯ ಸ್ಥಾನ, ಅಣ್ಣಾ ವಿವಿ ಚೆನ್ನೈ ನಾಲ್ಕನೆಯ ಸ್ಥಾನ, ಕರ್ನಾಟಕದ ಕುವೆಂಪು ವಿವಿ ೭೮ನೇ ಸ್ಥಾನ, ಮೈಸೂರು ವಿವಿ ೧೨೬ ಹಾಗೂ ವಿಟಿಯು ೧೪೮ನೇ ಸ್ಥಾನದಲ್ಲಿವೆ.)

ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ಭಾರತದಲ್ಲಿದೆ. ಸ್ವತಂತ್ರ ಬಂದ ತರುವಾಯ ೧೯೫೦-೫೧ರ ವೇಳೆಗೆ ಭಾರತದಲ್ಲಿ ೩೦ ವಿಶ್ವವಿದ್ಯಾಲಯಗಳು ಮತ್ತು ೬೯೫ ಕಾಲೇಜುಗಳಿದ್ದರೆ, ೨೦೧೩-೧೪ರ ವೇಳೆಗೆ ೭೦೦ ವಿಶ್ವವಿದ್ಯಾಲಯಗಳು, ೩೫,೫೩೯ ಕಾಲೇಜುಗಳು ಭಾರತದಲ್ಲಿವೆ. ಇದರಲ್ಲಿ ೭೩% ಕಾಲೇಜು, ೪೦% ವಿಶ್ವವಿದ್ಯಾಲಯಗಳು ಖಾಸಗಿ ವಲಯದ್ದು. ಶಿಕ್ಷಣಸಂಸ್ಥೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತ ಈಗ ಇನ್ನೂ ಹೆಚ್ಚಾಗಿರಬಹುದು. ಆದರೂ ಜನಸಂಖ್ಯಾ ಏರಿಕೆಯ ಪ್ರಮಾಣಕ್ಕೆ ಇದು ತುಂಬ ಕಡಿಮೆಯೇ.

ಭಾರತ ಎಂಥ ವೈರುಧ್ಯಗಳ ದೇಶ ನೋಡಿ: ಒಂದೆಡೆ ಹಣ-ಸಂಪನ್ಮೂಲ-ಬದ್ಧತೆಯ ಕೊರತೆಯಿಂದ ಮೂಲಭೂತ ಶಿಕ್ಷಣ ಒದಗಿಸುವುದು ಅಸಾಧ್ಯವಾಗಿದ್ದರೆ, ಮತ್ತೊಂದೆಡೆ ಯುಜಿಸಿ, ಎಂಎಚ್‌ಆರ್‌ಡಿಗಳು ಉನ್ನತ ಶಿಕ್ಷಣಕ್ಕಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದ್ದರೂ ಗುಣಮಟ್ಟದ ಶಿಕ್ಷಣ-ಸಂಶೋಧನೆ ಸಾಧ್ಯವಾಗದೇ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಒಂದೆಡೆ ಸಾಕಷ್ಟು ಸಂಖ್ಯೆಯ ಅರ್ಹ ಯುವಜನತೆ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗಾವಕಾಶ ಇಲ್ಲದೇ ನಿರುದ್ಯೋಗ ಎದುರಿಸುತ್ತಿದ್ದರೆ ಮತ್ತೊಂದೆಡೆ ವಿಶ್ವವಿದ್ಯಾಲಯಗಳು ತೀವ್ರವಾಗಿ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಉನ್ನತ ಶಿಕ್ಷಣದ ವೆಚ್ಚ ಏರುತ್ತಿದ್ದು ಎಷ್ಟೋ ಆಸಕ್ತ ತರುಣ ಜನತೆಗೆ ಅದಿನ್ನೂ ನಿಲುಕದ ನಕ್ಷತ್ರವಾಗತೊಡಗಿದೆ. ಜಾತಿ, ಧರ್ಮ, ಭಾಷೆ, ಪ್ರಾಂತೀಯತೆ ಮೊದಲಾಗಿ ಮನುಷ್ಯ ಪ್ರಜ್ಞೆಯನ್ನು ಸಂಕುಚಿತಗೊಳಿಸುವ ವಿಷಯಗಳು ವಿಶ್ವವಿದ್ಯಾಲಯಗಳನ್ನು ಆಳುತ್ತ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವುದು ಕಷ್ಟವಾಗಿದೆ. ಅಕ್ಷರವಂತರ ಸಂಖ್ಯೆ ಏರುತ್ತಲೇ ಇದ್ದರೂ ಸಾಮಾಜಿಕ ಅನಿಷ್ಟಗಳು ಇಳಿಮುಖವಾಗಿಲ್ಲದಿರುವುದು; ಮೌಢ್ಯ, ದೌರ್ಜನ್ಯಗಳು ಸಂಭವಿಸುತ್ತಲೇ ಇರುವುದು ಮತ್ತು ಅದರಲ್ಲಿ ಅಕ್ಷರವಂತರೂ ಪಾಲುದಾರರಾಗಿರುವುದು ವಿಷಾದಕರವಾಗಿದೆ.

ಇದೇಕೆ ಹೀಗಾಗಿದೆ? ಮೊದಲೆಲ್ಲ ಶಿಕ್ಷಣವೇ ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಮದ್ದು ಎಂದು ಭಾವಿಸಿದ್ದೆವು. ಈಗ ಸಾಕ್ಷರತೆ ಹೆಚ್ಚುತ್ತಿದ್ದರೂ ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತ ಹೋಗಿರುವುದೇಕೆ? ಆಧುನಿಕ ಶಿಕ್ಷಣ ಸಮಾಜಮುಖಿ ಮೌಲ್ಯವ್ಯವಸ್ಥೆ ರೂಪಿಸಲು ವಿಫಲವಾಗುತ್ತಿದೆಯೆ? ಈ ಪ್ರಶ್ನೆಗೆ ಉತ್ತರ ಬಯಸುವುದಾದರೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಅನುಮಾನದಿಂದ ನೋಡುತ್ತಿದ್ದ ಗಾಂಧಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್-ಐಐಎಸ್‌ಸಿ)ಗೆ ಭೇಟಿಕೊಟ್ಟಾಗ ವ್ಯಕ್ತಪಡಿಸಿದ ಅಭಿಪ್ರಾಯ ಗಮನಿಸುವಂತಿದೆ.

ಭಾರತದ ಅತ್ಯುಚ್ಛ ಸಂಶೋಧನಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ಗೆ ೧೯೨೭ರಲ್ಲಿ ಬಂದಿದ್ದ ಗಾಂಧಿ ಅಲ್ಲಿನ ವಿಭಾಗಗಳ ಪರಿಚಯ ಮಾಡಿಕೊಂಡರು. ಮೌನವಾಗಿದ್ದ ಅವರ ಭಾವನೆಗಳೇನೆಂಬುದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದಾಗ ಸ್ಪಷ್ಟವಾಗಿತ್ತು.


‘ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬೇಕಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ; ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಈ ಸಂಸ್ಥೆ ಕಟ್ಟಲು ನೀಡಲ್ಪಟ್ಟ ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನಸಹಾಯವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.

ಹಳ್ಳಿಯ ಜನರನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದುಕೊಟ್ಟ ಹಣವನ್ನು ಈ ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರೆ ಅವರಿಗೆ ಅರ್ಥವಾದೀತೇ? ಅವರು ಬೆನ್ನು ತಿರುಗಿಸಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.

... ಈ ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರರರು ನನಗೆ ಹೇಳಿದರು. ಆದರೆ ನಮ್ಮ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ. ‘ನಮ್ಮ ಕೈಲಾದ್ದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ’ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು. ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.’

ಹೀಗೆ ಹೇಳಿದ ಗಾಂಧಿ ವಿಜ್ಞಾನ ವಿರೋಧಿಯಾಗಿರಲಿಲ್ಲ. ಸಮಾಜ-ವಿಜ್ಞಾನ ಜ್ಞಾನಶಿಸ್ತುಗಳು ಪರಸ್ಪರ ಪೂರಕವಾಗಿರಬೇಕು; ವಿಜ್ಞಾನಿ ಸಮಾಜದ ಸಂಕಷ್ಟಗಳ ಅರಿವಿನಲ್ಲಿ ಸಂಶೋಧನೆ ನಡೆಸಬೇಕು ಎನ್ನುವುದು ಅವರ ಇಂಗಿತವಾಗಿತ್ತು. ‘ಪ್ರತಿ ಮನುಷ್ಯನೊಳಗು ಒಳ್ಳೆಯತನ ಬೆಳೆಸುವುದೇ ಶಿಕ್ಷಣ. ಒಳ್ಳೆಯತನವೆಂದರೆ ತನ್ನ ಸುತ್ತಮುತ್ತಲ ಬಗೆಗೆ ಅರಿವಿಟ್ಟುಕೊಂಡು ಸ್ಪಂದಿಸುವುದು. ಒಳ್ಳೆಯ ರಾಜಕೀಯ ವ್ಯವಸ್ಥೆ ಬರಬೇಕಾದರೆ ಸಮಾಜದ ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಬೆಳೆಯಬೇಕು’ ಎಂದು ಗಾಂಧಿ ಭಾವಿಸಿದ್ದರು.

೧೯೩೬ರಲ್ಲಿ ವೈದ್ಯರ ಸಲಹೆಯಂತೆ ಸಂಪೂರ್ಣ ವಿಶ್ರಾಂತಿ ಪಡೆಯಲು ಗಾಂಧಿ ಬೆಂಗಳೂರು ಬಳಿಯ ನಂದಿ ಹಿಲ್ಸ್‌ಗೆ ಬಂದಿದ್ದರು. ಗಾಂಧಿ ಅಭಿಮಾನಿಯೂ, ಸಂಸ್ಥೆಯ ನಿರ್ದೇಶಕರೂ ಆಗಿದ್ದ ಸಿ. ವಿ. ರಾಮನ್ ತಮ್ಮ ಹೆಂಡತಿ ಲೋಕಸುಂದರಿ ಅವರೊಡನೆ ಗಾಂಧೀಜಿಯವರನ್ನು ಭೇಟಿಯಾಗಿ ಐಐಎಸ್ಸಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಎರಡನೆಯ ಭೇಟಿಯಲ್ಲಿ ಗಾಂಧಿ ಯುವವಿಜ್ಞಾನಿಗಳ ಬಳಿ ಮಾತನಾಡುತ್ತ ತಂತ್ರಜ್ಞಾನದ ಬಗೆಗೆ ತಮ್ಮ ಭಿನ್ನಾಭಿಪ್ರಾಯ ತಿಳಿಸಿದ್ದರು. ಅವರು ವಿಜ್ಞಾನವನ್ನು ಒಪ್ಪಿದರೂ ತಂತ್ರಜ್ಞಾನ ಮತ್ತು ಉಪಕರಣಗಳು ಮನುಷ್ಯರ ಕೆಲಸ ಕದಿಯುತ್ತವೆ ಎಂದೇ ಭಾವಿಸಿದ್ದರು. ಗಾಂಧಿಯ ತಂತ್ರಜ್ಞಾನ ವಿರೋಧ ಮತ್ತು ಅಹಿಂಸಾ ತತ್ವದ ಬಗೆಗೆ ಸಿ. ವಿ. ರಾಮನ್ ಭಿನ್ನಮತ ಹೊಂದಿದ್ದರೂ, ಗಾಂಧಿತತ್ವಗಳ ಬಗೆಗೆ ಅಪಾರ ಗೌರವ ಹೊಂದಿದ್ದರು. ಎಂದೇ ಯುವ ವಿಜ್ಞಾನಿಗಳಿಗೆ ಕಿವಿಮಾತು ಹೇಳಲು ಅವರನ್ನು ಕರೆತಂದಿದ್ದರು.

Image result for gandhi at iisc

***

‘ಸಾಮ್ರಾಜ್ಯಶಾಹಿ ವಂಚಕನ ಅಗತ್ಯಗಳಿಗಿಂತ ಹೆಚ್ಚು ಹಳ್ಳಿಗರ ಅಗತ್ಯಗಳಿಗೆ ತಕ್ಕಂತೆ ವಿದ್ಯೆಯನ್ನು ಕ್ರಾಂತಿಕಾರಕಗೊಳಿಸಬೇಕು. ಬಡವರು, ಅಂಚಿನಲ್ಲಿರುವವರ ಸಮಸ್ಯೆ ವಿಜ್ಞಾನ ಸಂಶೋಧನೆಯ ಕೇಂದ್ರಬಿಂದುವಾಗಿರಬೇಕು’ ಎಂದು ಗಾಂಧಿ ಕನಸು ಕಂಡಿದ್ದರು. ಆದರೆ ತಾರತಮ್ಯವನ್ನೇ ಉಸಿರಾಡುವ ಭಾರತೀಯ ಸಮಾಜದ ಶಿಕ್ಷಣವ್ಯವಸ್ಥೆ ತಾರತಮ್ಯದ ಬುನಾದಿ ಮೇಲೇ ನಿಂತಿರುವುದರಿಂದ ಶಿಕ್ಷಣ ವ್ಯವಸ್ಥೆ ಕುರಿತ ಗಾಂಧೀಜಿ ಕನಸು ಇವತ್ತು ಹೇಗೆ ಹುಸಿ ಹೋಗಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ.

ಗಾಂಧಿ ಹುಟ್ಟಿ ಒಂದೂವರೆ ಶತಮಾನ ಸಂದ ಈ ಸಂದರ್ಭದಲ್ಲಿ ಅವರೆತ್ತಿದ ಋಣಭಾರದ ಪ್ರಶ್ನೆಯನ್ನು ಆಳವಾಗಿ ಪರಿಗಣಿಸಬೇಕಾಗಿದೆ. ದೇಶದ ಸಂಪನ್ಮೂಲವನ್ನು ಇಡಿಯ ಜನತೆಗೆ ಹಂಚಿದಾಗ ಬರುವ ನಮ್ಮ ತಲಾವಾರು ಪಾಲಿಗಿಂತ ಹೆಚ್ಚು ಪಾಲು ಸಂಪತ್ತನ್ನು ನಾವು ಅನುಭವಿಸುತ್ತಿದ್ದರೆ ಅದು ಋಣಭಾರ. ಸದಾ ಈ ಋಣಭಾರದ ನೆನಪಿಟ್ಟುಕೊಳ್ಳುವುದು ಅವಶ್ಯವಾಗಿದೆ. ಇದು ಎಲ್ಲರೂ ಹಾದುಹೋಗಬೇಕಾದ ಒಳಗಣ ಅಗ್ನಿಪರೀಕ್ಷೆ. ಪ್ರತಿ ವಿದ್ಯಾರ್ಥಿಯೂ ‘ನನ್ನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡುವಾಗ ಯಾವ ಬೆಲೆ ತೆತ್ತು, ಯಾರ ಬೆಲೆ ತೆತ್ತು ನಾನಿಲ್ಲಿ ಇರುವೆ’ನೆಂದು ಕೇಳಿಕೊಳ್ಳಬೇಕು. ಪಡೆಯುವವರೆಗೆ ಶಿಕ್ಷಣ ನಮ್ಮ ಮೂಲಭೂತ ಹಕ್ಕು. ಪಡೆದ ನಂತರ ಜನಹಿತಕಾರಿಯಾಗಬೇಕಾದದ್ದು ವಿದ್ಯಾವಂತರ ಜವಾಬ್ದಾರಿ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಮುಗಿಸಿ ಹೊರಬರಲು ಬಡವರ ಭಾರತ ಸರ್ಕಾರ ೩೦ ಲಕ್ಷ ರೂಪಾಯಿಗಳನ್ನು ಮೂಲಸೌಕರ್ಯ, ಸಿಬ್ಬಂದಿ ವೇತನ ವಗೈರೆಗಳಿಗೆ ಖರ್ಚು ಮಾಡುತ್ತದೆ. ಅದರಿಂದ ಈ ದೇಶಕ್ಕೇನು ಉಪಯೋಗವಿದೆ? ಎಂಬಿಬಿಎಸ್ ಇರಲಿ, ಕನಿಷ್ಠ ಆರೋಗ್ಯ ಸೇವೆಯೂ ದೊರಕದ ಕೋಟ್ಯಂತರ ಬಡವರ ಈ ದೇಶದಲ್ಲಿ ಒಬ್ಬ ವಿದ್ಯಾರ್ಥಿ ಡಾಕ್ಟರ್ ಆಗುವುದೆಂದರೆ ಆರೋಗ್ಯ ವಂಚಿತರಿಗೆ ಸೌಲಭ್ಯ ಒದಗಿಸಲೇಬೇಕಾದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿದೆ.

ಈ ಹಿನ್ನೆಲೆಯಲ್ಲಿ ‘ವಿಶ್ವವಿದ್ಯಾಲಯ ಶಿಕ್ಷಣದ ನಿಜವಾದ ಗುರಿ ದೇಶದ ಸ್ವಾತಂತ್ರ್ಯಕ್ಕಾಗಿ ಸಾವು-ಬದುಕು ಎರಡಕ್ಕೂ ಸಿದ್ಧವಾಗಿರುವ ಸೇವಕರನ್ನು ರೂಪಿಸುವುದು’ ಎಂದ ಗಾಂಧಿಯ ಮಾತು ಉನ್ನತ ಶಿಕ್ಷಣ ಪಡೆದಿರುವ ನಾವೆಲ್ಲ ನೆನಪಿಡಬೇಕಾದ ಎಚ್ಚರದ ಮಾತು. ಉಚ್ಛಶಿಕ್ಷಣ ಪಡೆದವರೆಲ್ಲ ಅಂಥ ಬದ್ಧತೆಯ ಜನಸೇವಕರಾದ ದಿನ ಮಲದ ಗುಂಡಿಯಲ್ಲಿ ಪೌರಕಾರ್ಮಿಕರು ಸಾವನ್ನಪ್ಪುವುದು; ಬಿಲಗಳಂತಹ ಕಲ್ಲಿದ್ದಲು ಗಣಿಗಳಲ್ಲಿ ಬಾಲಕಾರ್ಮಿಕರು ಉಸಿರುಗಟ್ಟಿ ಸಾಯುವುದು, ಅಪೌಷ್ಟಿಕತೆಯಿಂದ ತಾಯಿ-ಹಸುಗೂಸುಗಳು ಮರಣಹೊಂದುವುದನ್ನು ತಡೆಯಬಹುದಾಗಿದೆ.

ಅಂತರಾತ್ಮನ ಸಂಶೋಧನೆ ಎಂದರೆ ಇದೇ. ದೇಶಭಕ್ತಿ ಎಂದರೂ ಇದೇ. ಗಾಂಧೀಜಿ ನೆನಪಿನಲ್ಲಿ ನಾವೆಲ್ಲ ತೋರಿಸಬೇಕಿರುವ ದೇಶಭಕ್ತಿಯ ಅಸಲಿಯತ್ತು ಇದೇ ಆಗಿದೆ.


No comments:

Post a Comment