Saturday 29 June 2019

ರಾಹತ್ ಇಂದೋರಿ: ತಿರುಗಿ ಬೀಳುವವರಿದ್ದರೆ ..






ತಿರುಗಿ ಬೀಳುವವರಿದ್ದರೆ ಇರಲಿ ಬಿಡು, ಬದುಕಿನ ಕೊನೆಯಲ್ಲ ಇದೇನು
ಈ ಇರುಳು, ಬರಿ ಹೊಗೆಯಷ್ಟೇ, ಆಗಸವಲ್ಲ ಇದು

ಕಿಚ್ಚು ಹೊತ್ತಿದಲ್ಲಿ ಉರಿಯಲಿವೆ ಉಳಿದ ಮನೆಗಳೂ
ಇಲ್ಲಿರುವ ಮನೆಗಳೆಲ್ಲ ನನ್ನವೇನೂ ಅಲ್ಲ ಬಿಡು

ಬಾಯಿಂದ ಹೊರಬಿದ್ದ ನುಡಿಗಿದೆ ಸತ್ಯದ ತಾಕತ್ತು
ಆದರೆ ನೆನಪಿರಲಿ, ನನ್ನ ಬಾಯೊಳಗಿನ ನಾಲಿಗೆ ನಿನ್ನದಲ್ಲವೆಂದು

ಗೊತ್ತು ನನಗೆ, ಕಡಿಮೆಯವನೇನಲ್ಲ ನಮ್ಮ ಶತ್ರು
ಆದರೆ ನನ್ನಂತೆ ನಡೆಸುತಿರುವವನಲ್ಲ ಸುಲಭದ ಬದುಕು

ನಾಳೆಯಿರಲಾರರು ಇಂದಿನ ಈ ಸಿಂಹಾಸನದರಸರು
ಗದ್ದುಗೆ ಅವರ ಪವಿತ್ರ ಹಕ್ಕಲ್ಲ, ಬರಿಯ ಬಾಡಿಗೆದಾರರು

ಮಣ್ಣ ಕಣಕಣದಲಿ ಮಿಳಿತವಾಗಿವೆ ಎಲ್ಲರ ನೆತ್ತರ ಹನಿಗಳು
ಹಿಂದೂಸ್ತಾನ ನನ್ನದೂ ಹೌದು, ಯಾರಪ್ಪನ ಆಸ್ತಿಯಲ್ಲ ಇದು




ಉರ್ದು ಮೂಲ: ರಾಹತ್ ಇಂದೋರಿ
ಕನ್ನಡ ರೂಪ: ಎಚ್. ಎಸ್. ಅನುಪಮಾ



ಮಧ್ಯಪ್ರದೇಶದ ಪ್ರೊ. ರಾಹತ್ ಖುರೇಶಿ (೧೯೫೦) ಅವರು ‘ರಾಹತ್ ಇಂದೋರಿ’ ಎಂಬ ತಮ್ಮ ಕಾವ್ಯನಾಮದಿಂದ ಖ್ಯಾತರಾಗಿದ್ದಾರೆ. ತಮ್ಮ ಕವಿತೆಗಳಿಗೆ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನೂ, ಓದುಗರನ್ನೂ ಪಡೆದಿರುವ ವಿಶಿಷ್ಟ ಕವಿ ಅವರು. ಅವರು ಬಾಲಿವುಡ್ ಗೀತರಚನಕಾರರೂ ಹೌದು. ಹೆಚ್ಚು ಕಡಿಮೆ ಅರ್ಧ ಶತಮಾನದಿಂದ ಉರ್ದು ಭಾಷೆಯಲ್ಲಿ ಉನ್ನತ ವಿದ್ಯಾಭ್ಯಾಸ ಪೂರೈಸಿ, ಉರ್ದು ಮುಶಾಯರಾಗಳ ಕುರಿತು ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿರುವ ಅವರು ಇಂದೋರ್ ವಿಶ್ವವಿದ್ಯಾಲಯದ ಉರ್ದು ವಿಭಾಗದಲ್ಲಿ ಕೆಲಸ ಮಾಡಿದರು. ಉರ್ದು ಕವಿತೆ ಬರೆಯುತ್ತ, ಅಸಂಖ್ಯ ಕವಿ ಗೋಷ್ಠಿಗಳಲ್ಲಿ ತಮ್ಮ ಕವಿತೆ ಓದಿದ್ದಾರೆ. ಭಾರತದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಸೂಕ್ಷ್ಮ ಅಭಿವ್ಯಕ್ತಿಯ ಕವಿತೆಗಳನ್ನು ವ್ಯಂಗ್ಯಮಿಶ್ರಿತ ಧಾಟಿಯಲ್ಲಿ ಪ್ರಸ್ತುತಪಡಿಸುವ ಅವರ ಶೈಲಿ ಬಲು ಜನಪ್ರಿಯವಾಗಿದೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌದಿ ಅರೇಬಿಯಾ, ಸಿಂಗಾಪುರ, ಮಾರಿಷಸ್, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಕುವೈತ್, ಬಹರೇನ್, ಕತಾರ್, ಒಮನ್ ಮುಂತಾಗಿ ಹಲವಾರು ದೇಶಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿರುವ ಕವಿ, ಮಿಷನ್ ಕಾಶ್ಮೀರ್, ಮುನ್ನಾಭಾಯಿ ಎಂಬಿಬಿಎಸ್ ಸೇರಿದಂತೆ ಹತ್ತಾರು ಸಿನಿಮಾಗಳಿಗೆ ಗೀತರಚನೆಯನ್ನೂ ಮಾಡಿದ್ದಾರೆ. 

ಕವಿಯ ವಾಣಿ ಸಾರ್ವಕಾಲಿಕ. ನಿಜದ ಕವಿತೆ ಸದಾ ಪ್ರಸ್ತುತ. ಎದೆಯ ಮಾತುಗಳಿಗೆ ಎಕ್ಸ್‌ಪೈರಿ ದಿನಾಂಕ ಇರಲು ಸಾಧ್ಯವೇ? ಈ ಮಾತಿಗೆ ರಾಹತ್ ಇಂದೋರಿ ಅಂದೆಂದೋ ಬರೆದ, ಇತ್ತೀಚೆಗೆ ತೃಣಮೂಲ ಸಂಸದೆ ಸಂಸತ್ತಿನಲ್ಲಿ ನೆನಪಿಸಿಕೊಂಡ ಕವಿತೆ ಸಾಲುಗಳೇ ಸಾಕ್ಷಿ.)

2 comments: