Friday 13 March 2015

ತದಡಿ: ಯಾರಿಗೆ ಬೇಕು? ಏಕೆ ಬೇಡ?





(ಕಲೆ: ಕೃಷ್ಣ ಗಿಳಿಯಾರ್)

ಮಾಡುವವರಿಗೆ ಬೇಡ, ನೋಡುವವರಿಗೆ ಬೇಕು..

ಯಾಕೋ ಇತ್ತೀಚೆಗೆ ನಾವು ಗಟ್ಟಿಯಾಗಿ ಆಡಿಕೊಳ್ಳಬೇಕಾದ ಅಂತರಂಗದ ಮಾತುಗಳು ಹೆಚ್ಚು ಇವೆಯೇನೋ ಎನಿಸುತ್ತಿದೆ. ‘ನಾನೆಷ್ಟು ಪ್ರಯತ್ನಪಟ್ಟರೂ ಈ ಬದುಕು ನನ್ನನ್ನು ಬದುಕಲು ಬಿಡುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ತನ್ನ ನೋವಿನ, ಸಾವಿನ ಸಣ್ಣ ಸುಳಿವನ್ನೂ ಕೊಡದೆ ಇದ್ದಕ್ಕಿದ್ದಂತೆ ಬದುಕನ್ನು ಕೊನೆಗೊಳಿಸಿದ ಗೆಳತಿಯ ನೆನಪಾಗುತ್ತಿದೆ. ತನ್ನ ಮನೋಕ್ಲೇಶಗಳೇನಿದ್ದರೂ ಅದನ್ನು ಹೊರತೋರದೆ ದುಡಿದವಳು ಕೊನೆಗೆ ಬದುಕೇ ಸಾಕೆಂದು ನಡೆದು ಹೋದಳು. ಅವಳಲ್ಲಿ ಸೋತಭಾವ ಹುಟ್ಟಿಸಿದ್ದು ಯಾವುದು? ಸಂಘಟನೆ? ಕುಟುಂಬ? ಹೆಚ್ಚುತ್ತಲೇ ಹೋದ ಹೆಗಲ ಮೇಲಿನ ಜವಾಬ್ದಾರಿ?

ಹೀಗೊಂದು ವಿಷಾದ ಸುಳಿಯುವಾಗಲೇ ಗ್ರೆಗರಿ ಪತ್ರಾವೋ ಅವರು ನ್ಯಾಯಕ್ಕಾಗಿ ನಡೆಸಿದ ಐದು ವರ್ಷಗಳ ಕೋರ್ಟು ಹೋರಾಟ ಕೊನೆಗೊಂಡು ಅವರ ಕುಟುಂಬವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪತ್ರಾವೋ ಕೊನೆಯ ದಿನಗಳಲ್ಲಿ ಹೋರಾಟದಲ್ಲಿ ಏಕಾಂಗಿಯಾಗುವಂತಾಯಿತೇಕೆ ಎಂಬ ಆತಂಕದ ಪ್ರಶ್ನೆ ಸುಳಿವ ಹೊತ್ತಿನಲ್ಲೇ ‘ಜನಪರ’ ಎಂದುಕೊಂಡವರ ಜನಪರತೆಯನ್ನು ಜನರು ಉದ್ದೇಶಪೂರ್ವಕ ಹರಾಜು ಹಾಕಿದ ಪ್ರಸಂಗ ಗೋಕರ್ಣ ಬಳಿಯ ತದಡಿಯಿಂದ ವರದಿಯಾಗಿದೆ. ಆ ಘಟನೆಯಷ್ಟೇ ಅಲ್ಲ, ಹಲವಾರು ಹೋರಾಟಗಳ ಸಂದರ್ಭದಲ್ಲಿ ಯಾರ ಪರವಾಗಿ ದನಿಯೆತ್ತಲಾಗುವುದೋ ಆ ಜನರೇ ಚಳುವಳಿಕಾರರ ಅನಿಸಿಕೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಯೋಚಿಸುವುದು ಕಂಡುಬರುತ್ತಿದೆ. ಅದರಲ್ಲೂ ಅಭಿವೃದ್ಧಿಯ ಫಲಗಳು ಜನಸಾಮಾನ್ಯರನ್ನು ಹೇಗೆ ಆಮಿಷ-ದುರಾಸೆಗೆ ದೂಡುತ್ತಿವೆ ಎಂದರೆ ‘ಅಭಿವೃದ್ಧಿ’ಯನ್ನು ಪ್ರಶ್ನಿಸುವ ಪರಿಸರವಾದಿ, ಜನಪರ ಚಳುವಳಿಕಾರರನ್ನೇ ಅನುಮಾನದಿಂದ ನೋಡಲಾಗುತ್ತಿದೆ. 

ಕೃಷಿ, ಮೀನುಗಾರಿಕೆ, ಪಾರಂಪರಿಕ ಕಸುಬು, ಗ್ರಾಮೀಣ ಬದುಕು - ಇವೆಲ್ಲವೂ ಅದನ್ನು ಅನುಭವಿಸುವವರಿಗೆ, ಮಾಡುವವರಿಗೆ ಲಾಭರಹಿತ ಕಷ್ಟದ ಉದ್ಯಮವೆನಿಸಿ ಬೇಡವೆನಿಸತೊಡಗಿದೆ. ಆದರೆ ಅದರ ಕುರಿತು ಚಿಂತಿಸುವವರಿಗೆ, ನೋಡುವವರಿಗೆ ಎಲ್ಲವೂ ಹಾಗೆಯೇ ಪವಿತ್ರವಾಗಿರಲಿ ಎನಿಸುತ್ತಿದೆ. ಈ ವೈರುಧ್ಯವನ್ನು ಬೇರೆಬೇರೆ ಹಿತಾಸಕ್ತಿಯ ಜನರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುಃಖದ ವಿಷಯವಷ್ಟೇ ಅಲ್ಲ, ನಮ್ಮನ್ನು ನಾವು ಮುಟ್ಟಿ ನೋಡಿಕೊಳ್ಳಬೇಕಾದ ಕಾರಣವೂ ಹೌದು. 

ಈಚೆಗೆ ಉತ್ತರಕನ್ನಡ ಜಿಲ್ಲೆಯ ತದಡಿಯಲ್ಲಿ ಬೃಹತ್ ಬಂದರು ಅಭಿವೃದ್ಧಿಪಡಿಸುವ ಕುರಿತ ಪ್ರಸ್ತಾಪಗಳು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ಮತ್ತೆ ಕೇಳಿಬಂದವು. ತದಡಿ ಎಂಬ ನೈಸರ್ಗಿಕ ಬಂದರನ್ನು ವಾಣಿಜ್ಯ ಬಂದರನ್ನಾಗಿಸುವ ಉದ್ದೇಶ ಹೊತ್ತು ೧೯೭೦ರಲ್ಲೇ ೧೪೧೫ ಎಕರೆ ರೈತರ ಕೃಷಿಭೂಮಿ ಭೂಸ್ವಾಧೀನವಾಗಿದೆ. ತದಡಿ ಸುತ್ತಮುತ್ತಲ ಪರಿಸರದಲ್ಲಿ ೨೮% ಅರಣ್ಯಭೂಮಿ, ೩೩% ಪಾಳುಭೂಮಿ, ೮% ನೀರಾವರಿ ಭೂಮಿಯಿದ್ದು ನೂರಾರು ವಿಶಿಷ್ಟ ಜೀವಪ್ರಭೇದಗಳಿವೆ. ೬೮,೩೯೦ ಜನಸಂಖ್ಯೆಯ ೩೦% ಕೂಲಿಕಾರ್ಮಿಕರೇ ಇದ್ದಾರೆ. ೧೩೧೦೦ ಕುಟುಂಬಗಳಿದ್ದು ಅವು ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಬಹುವಾಗಿ ನೆಚ್ಚಿಕೊಂಡಿವೆ. ಈ ಎಲ್ಲ ಕಾರಣಗಳಿಂದ ಪರಿಸರ ಹೋರಾಟಗಾರರು ಹಾಗೂ ಜನರ ವಿರೋಧದ ನಡುವೆ ತದಡಿ ಬಂದರು ಯೋಜನೆ ನೆನೆಗುದಿಗೆ ಬಿದ್ದಿತ್ತು. ೧೯೯೩ರಲ್ಲಿ ಬಾರ್ಜ್ ಮೌಂಟೆಡ್ ಯೋಜನೆಯ ಪ್ರಸ್ತಾಪ ಬಂದು ಅದೂ ನಿಂತುಹೋಯಿತು. ಉದ್ದೇಶಿತ ಉಷ್ಣವಿದ್ಯುತ್ ಸ್ಥಾವರ ವಿರೋಧಿಸಿ ಬೃಹತ್ ಹೋರಾಟ ರೂಪುಗೊಂಡಿತ್ತು. ಹೋರಾಟಕ್ಕೆ ಪೂರಕವಾಗಿ ಕೇಸರಿ ಹರವೂ ಸಾಕ್ಷ್ಯಚಿತ್ರ ನಿರ್ಮಿಸಿದ್ದರು.

೧೯೭೦. ಅದಾಗಿ ಈಗ ೪೫ ವರ್ಷ ಸಂದಿದೆ. ಅವತ್ತು ಭೂಮಿ ಕಳೆದುಕೊಂಡ ರೈತರು ಹಾಗೂ ಅದರಿಂದ ತೊಂದರೆ ಅನುಭವಿಸಬಹುದಾದ ಮೀನುಗಾರರ ತಲೆಮಾರು ಹಿನ್ನೆಲೆಗೆ ಸರಿದಿದೆ. ಈಗ ತದಡಿ ಬಂದರು, ಹುಬ್ಳಿ ಅಂಕೋಲಾ ರೈಲು ಮಾರ್ಗ, ಉಷ್ಣಸ್ಥಾವರ ಎಲ್ಲವೂ ದಾಪುಗಾಲಿಡುತ್ತ ಬರುವ ಸೂಚನೆಗಳಿವೆ. ಸಂಸತ್ತು ಅಂಗೀಕರಿಸಿದ ಸುಗ್ರೀವಾಜ್ಞೆಯ ನಂತರ ಇಂಥ ಯೋಜನೆಗಳಿಗಿನ್ನು ಯಾವ ತಡೆಯೂ ಇಲ್ಲವಾಗಿದೆ. ಹೀಗಿರುತ್ತ ಮತ್ತೆ ಬಂದ ಬೃಹತ್ ಬಂದರು ನಿರ್ಮಾಣ ಯೋಜನೆಯಿಂದ ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಆತಂಕಗೊಂಡು ತದಡಿ ಮತ್ತು ಅದರ ಸುತ್ತಮುತ್ತಲ ಊರುಗಳಲ್ಲಿ ಜನಜಾಗೃತಿ ಸಭೆ ಕರೆದರು. 




ಪಶ್ಚಿಮ ಘಟ್ಟಗಳ ನದಿಗಳಲ್ಲೇ ಅಣೆಕಟ್ಟು ಕಟ್ಟದ ಏಕೈಕ ನದಿ ಅಘನಾಶಿನಿ. ಅದು ತದಡಿಯಲ್ಲಿ ಸಮುದ್ರ ಸೇರುವ ಜಾಗದಲ್ಲಿ ೧೮೦೦ ಹೆಕ್ಟೇರ್ ಅಳಿವೆ ಪ್ರದೇಶ ಸೃಷ್ಟಿಯಾಗಿದ್ದು ಅದು ಅತ್ಯಂತ ಜೀವವೈವಿಧ್ಯದ ಪ್ರದೇಶವಾಗಿದೆ. ಅಲ್ಲಿನ ಉಪ್ಪಿನಾಗರಗಳನ್ನು ೮೦೦ ಕುಟುಂಬಗಳು ನೆಚ್ಚಿಕೊಂಡಿವೆ. ಬಂದರು ನಿರ್ಮಾಣವಾದರೆ ಅದು ನಿಷೇಧಿತ ಪ್ರದೇಶವಾಗಲಿದೆ. ಮೀನುಗಾರಿಕೆಗೆ ಬೇರೆಯೇ ಬಂದರು ನಿರ್ಮಾಣ ಮಾಡಬೇಕಾಗುತ್ತದೆ. ಜೆಟ್ಟಿಯಲ್ಲಿ ಕನಿಷ್ಟ ೭ ಹಡಗು ನಿಲ್ಲುವ ವ್ಯವಸ್ಥೆ ಮಾಡಲು ಸಮುದ್ರದಾಳದ ಹೂಳು ತೆಗೆಯಲಾಗುತ್ತದೆ. ೮೦ ಅಡಿ ಆಳದವರೆಗೂ ಮರಳು ತೆಗೆಯಲಾಗುತ್ತದೆ. ಪ್ರತಿ ಹಡಗು ಒಂದು ಲಕ್ಷ ಟನ್ ಸರಕು ಸಾಗಣೆ ಮಾಡುತ್ತದೆ. ಎರಡು ಹಡಗು ಕಬ್ಬಿಣದ ಅದಿರನ್ನು ಒಯ್ಯುತ್ತವೆ. ಎರಡು ಕಲ್ಲಿದ್ದಲನ್ನು ಹೊತ್ತು ತರಲಿವೆ. ಬಂದರು ನಿರ್ಮಾಣ, ಹಡಗುಗಳ ತೈಲ ಹಾಗೂ ತ್ಯಾಜ್ಯ ಸೋರಿಕೆಯಿಂದ ಮೀನುಗಳಿಗೆ, ಆಳ ಸಮುದ್ರ ಜೀವಿಗಳಿಗೆ ಹಾನಿಯಾಗಲಿದೆ. ಚಿಪ್ಪಿಕಲ್ಲು ತೆಗೆಯುವುದು ನಿಲ್ಲುತ್ತದೆ. ಸಾಣಿಕಟ್ಟಾ ಮತ್ತು ನಾಗರಬೈಲಿನ ಉಪ್ಪಿನ ಆಗರಗಳು ಮುಚ್ಚಿಹೋಗಲಿವೆ. ಹೊರಗಿನ ಕಾರ್ಮಿಕರು ಹೆಚ್ಚಲಿದ್ದಾರೆ. ಅತ್ಯಧಿಕ ವಾಹನ, ಜನದಟ್ಟಣೆಯಾಗಿ ಭೌಗೋಳಿಕ ಸ್ವರೂಪವೇ ಬದಲಾಗುತ್ತದೆ. ಜನಜಾಗೃತಿ ಸಮಿತಿಯವರು ಇದನ್ನೆಲ್ಲ ಎಳೆಎಳೆಯಾಗಿ ಸಭೆಯಲ್ಲಿ ಬಿಡಿಸಿ ಹೇಳಿದರು.

ಆದರೆ ಅಲ್ಲಿಯ ಯುವಕರ ಅಭಿಪ್ರಾಯ ಮೊದಲಿನವರಿಗಿಂತ ಬೇರೆಯೇ ಇದೆ. ಇದು ಜನಜಾಗೃತಿ ಸಮಿತಿ ಎದುರು ಅವರು ವ್ಯಕ್ತಪಡಿಸಿದ ವಿರೋಧ ಹಾಗೂ ಆಕ್ರೋಶದಲ್ಲಿ ವ್ಯಕ್ತವಾಗಿದೆ. ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಹೋದಲ್ಲೆಲ್ಲ ತದಡಿ ಯುವಕರೂ ಹೋದರು. ‘ಢೋಂಗಿ ಪರಿಸರವಾದಿಗಳಿಗೆ ಧಿಕ್ಕಾರ’ ಎಂದು ಕೂಗಿದರು. 

‘ಅಡಿಕೆ ತೋಟ ಮಾಡಿಕೊಂಡು ಆರಾಮ ಇದ್ದವರು ನಮಗಿಲ್ಲಿ ಬಂದು ತೊಂದ್ರೆ ಕೊಡ್ತಾರೆ’ 
‘ನಿಮ್ಮನೆ ಹತ್ರ ಕಾರು ಹೋಗಲು ರಸ್ತೆ ಮಾಡಿದರೆ ಪರಿಸರ ಹಾಳಾಗಲ್ಲ, ತದಡಿಯಲ್ಲಿ ಮಾತ್ರ ಪರಿಸರ ಹಾಳಾಗುತ್ತಾ?’ 
‘ಅವತ್ತು ಖಾಲಿ ಹಾಳೆ ಮೇಲೆ ಸಹಿ ತಗೊಂಡ್ ಹೋಗಿದ್ರಿ? ಇಷ್ಟ್ ದಿನ ಎಲ್ಲಿದ್ರಿ? ಈಗ ಮತ್ತೆ ಬಂದು ನಾಟ್ಕ ಆಡ್ತೀರಾ’
‘ಯಾವ ಯೋಜನೆ ಬಂದ್ರೂ ಬೇಡಾಂತ ವಿರೋಧ ಮಾಡ್ತೀರಿ. ವಿರೋಧ ಮಾಡುದೇ ನಿಮ್ಕೆಲಸ ಆಗಿದೆ.’
‘ಯೋಜನೆ ಬಗ್ಗೆ ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆನೇ ಇಲ್ಲ, ನೀವೆ ಎಲ್ಲ ಸೇರಿ ಬೇಡ ಅಂದ್ಬಿಡ್ತೀರಿ’, 
‘ಮಂಗ್ಳೂರಲ್ಲಿ ಬಂದರು ಇದೆ, ಅಲ್ಲಿನ ಜನರ ಜೀವನ ನರಕ ಕೂಪ ಆಗಿದೆಯಾ?’ 
‘ಬರೀ ಹಾನಿ ಕುರಿತೇ ಮಾತಾಡ್ತೀರಿ, ಯೋಜನೆಯಿಂದ ಆಗೋ ಲಾಭದ ಕುರಿತು ಯಾಕೆ ಏನೂ ಮಾತಾಡಲ್ಲ ನೀವು’ ‘ಮೀನುಗಾರ‍್ಕೆ ನಿಂತ್ರೆ ನಿಲ್ಲಲಿ. ನಮ್ಗೆ ವಿದ್ಯಾಭ್ಯಾಸ ಬೇಡ್ವಾ? ನಂ ಮಕ್ಕಳೂ ಯಾಕೆ ಇದೇ ದಂಧೆ ಮಾಡ್ಬೇಕು?’ 

ಎಂಬಿತ್ಯಾದಿಯಾಗಿ ತರುಣ ಪಡೆಯಿಂದ ಏರುದನಿಯ ಆರೋಪಗಳ ಸುರಿಮಳೆಯಾಗಿ ಜನಜಾಗೃತಿಗಾಗಿ ಬಂದವರನ್ನು ತಬ್ಬಿಬ್ಬುಗೊಳಿಸಿದರು.

ವಿಜ್ಞಾನಿ-ಪರಿಸರವಾದಿಗಳ ಯಾವ ಮಾತಿಗೂ ಯುವಕರ ತಂಡ ಕಿವಿಗೊಡಲಿಲ್ಲ. ಹೊರಗಿನವರು ಬಂದು ಈಗಾಗಲೇ ಚಿಪ್ಪಿಕಲ್ಲು ಲೂಟಿ ಮಾಡಿ ಹೋಗಿರುವುದರಿಂದ ಅದೂ ಸಿಗುತ್ತಿಲ್ಲ. ವಿಶಾಖಪಟ್ಟಣದಿಂದ ಚಿಪ್ಪಿಕಲ್ಲು ಬರುವಂತಾಗಿದೆ. ಮತ್ಸ್ಯಕ್ಷಾಮವಿದೆ. ಬಂದರು ಅಭಿವೃದ್ಧಿಯಾದರೆ ಉದ್ಯೋಗಾವಕಾಶ ಹೆಚ್ಚುತ್ತದೆ. ಅದಕ್ಕೆ ಪರಿಸರವಾದಿಗಳೇಕೆ ಕಲ್ಲು ಹಾಕುತ್ತೀರಿ? ನಮಗೆ ಉದ್ಯೋಗವಿಲ್ಲ, ನೀವು ಉದ್ಯೋಗಾವಕಾಶ ಮಾಡಿಕೊಡುವುದಾದರೆ ನಾವು ನಿಮ್ಮ ಹಿಂದೇ ಬರುತ್ತೇವೆ; ಇಲ್ಲದಿದ್ದರೆ ನಮಗೆ ಬಂದರು ಯೋಜನೆ ಬರಲೇಬೇಕೆಂದು ಪಟ್ಟುಹಿಡಿಯುತ್ತೇವೆ ಎಂದು ಕೂಗಾಡಿದರು.


ಮತ್ಸ್ಯಕ್ಷಾಮ, ಅದು ಹುಟ್ಟಿಸಿರುವ ನಿರುದ್ಯೋಗ ಸಮಸ್ಯೆ, ಪರ್ಯಾಯ ಉದ್ಯೋಗಾವಕಾಶಗಳ ಕೊರತೆ, ಬಂಡವಾಳ ಹೂಡಲು ಸಾಧ್ಯವಿಲ್ಲದವರಿಗೆ ಕಡಿಮೆಯಾಗಿರುವ ಅವಕಾಶ, ಬಂದ ಯೋಜನೆಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದು, ಬರಲಿರುವ ಯೋಜನೆಗಳು ಪರಿಸರದ ಕಾರಣದಿಂದ ನೆನೆಗುದಿಗೆ ಬಿದ್ದಿರುವುದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸಣ್ಣಪುಟ್ಟ ಅಂಗಡಿಗಳು ಮುಚ್ಚುವಂತಾಗಿರುವುದು, ‘ಪಶ್ಚಿಮಘಟ್ಟ ಪಾರಂಪರಿಕ ತಾಣ’ ಘೋಷಣೆಯಿಂದ ಬೃಹತ್ ಕೈಗಾರಿಕೆಗಳು ಶುರುವಾಗದೆ ಇರುವುದು, ಯುವಕರು ಗೋವಾ, ಮುಂಬಯಿ, ರತ್ನಗಿರಿ, ಮಂಗಳೂರು, ಬೆಂಗಳೂರುಗಳತ್ತ ವಲಸೆ ಹೋಗುತ್ತಿರುವುದು - ಇವೆಲ್ಲ ಸಂಕಟಗಳನ್ನು ದಿನನಿತ್ಯ ಅರಗಿಸಿಕೊಂಡು ಅವರಲ್ಲಿ ಆಕ್ರೋಶ ಹುಟ್ಟಿರಬಹುದು. ಪರಿಸರವಾದಿಗಳು ತಮ್ಮ ಊಟದ ತಟ್ಟೆಯಲ್ಲಿ ಕಲ್ಲು ಹಾಕುವವರಂತೆ ಕಂಡಿರಬಹುದು.


ಬೇಕು - ಬೇಡ

ಕರ್ನಾಟಕದ ಕಡಲ ತೀರವು ಒಂದು ದೊಡ್ಡ ಬಂದರನ್ನು - ನವ ಮಂಗಳೂರು ಬಂದರು - ಹೊಂದಿದೆ. ಮಂಗಳೂರು ಬಂದರಿನಲ್ಲಿ ದ್ರವ ರೂಪದ ವಸ್ತು ಸಾಗಾಟ ಹೆಚ್ಚು ನಡೆಯುವುದರಿಂದ ಉತ್ತರ ಕರ್ನಾಟಕದ ಅದಿರನ್ನು ಸಾಗಿಸಲು ಕಾರವಾರ ಮತ್ತು ಬೇಲೇಕೇರಿ ಎಂಬ ಎರಡು ಸಣ್ಣ ಬಂದರುಗಳಷ್ಟೇ ಇವೆ. ಬಹುಪಾಲು ಅದಿರು ಎಣ್ಣೂರು, ಮರ್ಮಗೋವಾ ಹಾಗೂ ಕೃಷ್ಣಪಟ್ಣಂ ಬಂದರುಗಳನ್ನು ನೆಚ್ಚಿಕೊಂಡಿವೆ. ಹೀಗಿರುತ್ತ ಅಘನಾಶಿನಿ ಅಳಿವೆಯ ವಿಶಾಲತೆಯ ಕಾರಣದಿಂದಾಗಿಯೇ ಸರ್ವಋತು, ನೈಸರ್ಗಿಕ ಬಂದರನ್ನು ನಿರ್ಮಿಸಲು ತದಡಿ ಅತ್ಯಂತ ಸೂಕ್ತ ಪ್ರದೇಶವೆಂದು ಗುರುತಿಸಲ್ಪಟ್ಟಿತು. ಮುಂಬೈ ಬಂದರಿನ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದ್ದು ಮೀನುಗಾರಿಕೆಗೆ ತೊಂದರೆಯಾಗುವುದಿಲ್ಲವೆಂದು ಹೇಳಲಾಯಿತು. 


ಉತ್ತರಕನ್ನಡದ ಮಟ್ಟಿಗೆ ಅರಣ್ಯ ನಾಶವಿಲ್ಲದೆ ಯಾವ ಯೋಜನೆಯೂ, ಅಭಿವೃದ್ಧಿಯೂ ಬರುವುದು ಸಾಧ್ಯವಿಲ್ಲ. ರೈಲುಮಾರ್ಗ ನಿರ್ಮಿಸಲೂ ಅರಣ್ಯ ನಾಶವಾಗುತ್ತದೆ. ರಸ್ತೆ ಅಗಲೀಕರಣಕ್ಕಾಗಿ ಸಾವಿರಾರು ಮರಗಳು ನೆಲಕ್ಕೊರಗಿವೆ. ಕೈಗಾ ಅಣುಸ್ಥಾವರ, ಸೀ ಬರ್ಡ್ ಯೋಜನೆ, ಬೇಡ್ತಿ, ಶರಾವತಿ ಟೇಲ್‌ರೇಸ್, ಕೊಂಕಣ ರೈಲ್ವೇ - ಹೀಗೇ ತದಡಿ ಯೋಜನೆಯೊಂದನ್ನು ಹೊರತುಪಡಿಸಿದರೆ ಮತ್ತೆಲ್ಲ ಯೋಜನೆಗಳೂ ಪರಿಸರಹಾನಿಯ ಕಾರಣಕ್ಕೇ ತೀವ್ರ ವಿರೋಧ ಎದುರಿಸಿವೆ. ಆದರೂ, ಎಲ್ಲ ಯೋಜನೆಗಳೂ ನಂತರ ಒಳನುಸುಳಿ ಬಂದಿವೆ. 

ಅದಕ್ಕೆ ಕಾರಣಗಳೇನೇ ಇರಲಿ, ಒಂದು ಯೋಜನೆ ಬೇಕೆಂದ ಕೂಡಲೇ ಉಳಿದವೂ ಅದರ ಹಿಂದೇ ದಾಂಗುಡಿಯಿಟ್ಟಿವೆ. ಉದಾ:ಗೆ ಘಟ್ಟದ ರಸ್ತೆಗಳು ಸಾಗಣೆ ವಾಹನಗಳ ಭರಾಟೆಯಲ್ಲಿ ಎಷ್ಟು ಹಾಳಾಗುತ್ತವೆಂದರೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಬೇಕೇಬೇಕೆನ್ನುವುದು ಎಲ್ಲರ ಕೂಗಾಗಿದೆ. ಆದರೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ, ಉಷ್ಣ ಸ್ಥಾವರ, ತದಡಿ ಬಂದರು - ಇವು ಪರಸ್ಪರ ಸಂಬಂಧವುಳ್ಳ ಯೋಜನೆಗಳು. ಒಂದು ಬೇಕೆಂದರೆ ಉಳಿದವೂ ಜೊತೆಯೇ ಬರುತ್ತವೆ. 

ಯಾವುದು ಬೇಕು? ಯಾವುದು ಬೇಡ? ಬೇಕುಬೇಡಗಳ ನಡುವೆ ಗೊಂದಲದ ದೊಡ್ಡ ಮೈದಾನವಿದೆ.

ಪರಿಸರ ಉಳಿಯಬೇಕು, ನಿಜ. ಜನರಿಗೆ ಘನತೆಯ ಬದುಕಿನ ಅವಕಾಶಗಳು ದಕ್ಕಬೇಕು, ಅದೂ ನಿಜ. ಆದರೆ ಈ ಎರಡು ನಿಜಗಳ ನಡುವೆ ಯಾವುದನ್ನು ಅರಗಿಸಿಕೊಳ್ಳುವುದು? ಯಾವುದನ್ನು ಕೈಜಾರಿ ಸೋರಿಹೋಗಲು ಬಿಟ್ಟುಬಿಡುವುದು? ಮೊದಲೆಲ್ಲ ಜನರು ಪರಿಸರವಾದಿಗಳ ಜೊತೆ ಕೈಜೋಡಿಸಿದ್ದವರು ಈಗ ಬದಲಾಗಿರುವುದು ಯಾವುದರ ಸೂಚನೆಯಿರಬಹುದು? ಎತ್ತಂಗಡಿ, ಪುನರ್ವಸತಿಯಿಂದ ಪಲ್ಲಟಗೊಳ್ಳಲಿರುವ ಬದುಕಿನ ಚಿತ್ರಣ ಅವರ ಕಲ್ಪನೆಯಲ್ಲಿಲ್ಲ ಎಂದಲ್ಲ. ಏನಾದರೂ ಪರವಾಗಿಲ್ಲ, ಬದಲಾವಣೆ ಬೇಕೆಂದು ಏಕೆ ಅನಿಸಿತು? ಜನರ ದಿನನಿತ್ಯದ ಸಂಕಟಗಳಿಗೆ ದಿವ್ಯಮೌನ ವಹಿಸಿ, ಅವರ ಬದುಕಿನ ಕಷ್ಟಗಳಿಗೆ ಕಾರಣವಾದ ಮತ್ಯಾವುದರ ಬಗ್ಗೆಯೂ ಮಾತೇ ಆಡದೆ; ಕೇವಲ ಗಿಡಮರ, ಪರಿಸರ ಹಾಳಾಗುತ್ತಿದೆ ಎಂದಾಗ ಮಾತ್ರ ಅವರ ಪರವಾಗಿ ವಾದಿಸಲು ಹೋಗುವುದರಿಂದ ಹೀಗಾಯಿತೇ? ಅಥವಾ ಜನರ ಆಕ್ರೋಶದ ಹಿಂದೆ ಬಂದರು ಮಾಫಿಯಾದ ಕೈವಾಡವಿದೆಯೆ? ಹಾಗಾದರೆ ಜನರ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯಗಳನ್ನು ಗೌರವಿಸುತ್ತಲೇ ಬಂದರು ಯೋಜನೆ ಕುರಿತು ಏನು ಮಾಡಬಹುದು? 

ತದಡಿ ಕೇವಲ ತದಡಿಯವರದಷ್ಟೇ ಅಲ್ಲ, ಅಲ್ಲಿನ ಜನರ ಹಿತ-ನೋವು-ನಲಿವು ಅವರ ಜವಾಬ್ದಾರಿಯಷ್ಟೇ ಅಲ್ಲ ಎಂಬ ಅರಿವನ್ನು ಸದಾ ಕಾಲ ಇಟ್ಟುಕೊಂಡು ಅಲ್ಲಿನವರೊಡನೆ ಒಡನಾಡಬೇಕು; ಸ್ಥಳೀಯರಿಗೆ ಸಾಧಕ-ಬಾಧಕಗಳ ಬಗೆಗೆ ಸಂಯಮದಿಂದ ತಿಳುವಳಿಕೆ ನೀಡಬೇಕು; ಬಂಡವಾಳಿಗ-ಕಂಟ್ರಾಕ್ಟುದಾರ-ರಾಜಕಾರಣದ ಹಿತಾಸಕ್ತಿಗೆ ಅವರು ಬಲಿಯಾಗದಂತೆ ಎಚ್ಚರಿಸಬೇಕು; ಅಷ್ಟಕ್ಕೂ ಯೋಜನೆ ಬರುವುದೇ ಹೌದಾದರೆ ಸ್ಥಳೀಯ ಜನಬದುಕಿಗೆ ಆದಷ್ಟು ಹಾನಿಯಾಗದಂತೆ, ಅವರಿಗೆ ಉಪಯೋಗಿಯಾಗುವಂತೆ ಪ್ರಯತ್ನಿಸಬೇಕು. ಇದು ಕೇವಲ ಪರಿಸರವಾದಿ, ವಿಜ್ಞಾನಿಗಳ ಹೊಣೆಯಲ್ಲ; ಜನಪರ ಕಾಳಜಿಯಿರುವವರೆಲ್ಲರ ಜವಾಬ್ದಾರಿ ಎಂದು ವ್ಯವಸ್ಥೆಗೆ ತಿಳಿಸಿ ಹೇಳಬೇಕು. 

No comments:

Post a Comment