Monday 9 March 2015

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ - ಆಶಯ, ಧ್ಯೇಯ






ಹಲವು ಹೆಜ್ಜೆಗಳು ಒಂದೇ ದಾರಿಯಲ್ಲಿ ನಡೆದ ಸದ್ದು..

ಇವತ್ತು ಮೂರೂವರೆ ಕಿಲೋಮೀಟರು ದೂರ, ಸಾವಿರಾರು ಹೆಜ್ಜೆ ನಡೆದು ಬಂದಾಗ ನಿಮಗೆ ಕೇಳಿಸಿದ್ದು ಏನು? ಹಲವು ಹೆಜ್ಜೆಗಳ ಸದ್ದು. ಏಕಕಾಲಕ್ಕೆ ತಾನೂ ಚಲಿಸುತ್ತ, ಅಕ್ಕಪಕ್ಕ ಇರುವವರನ್ನೂ ತನ್ನ ಜೊತೆ ಸೆಳೆದುಕೊಳ್ಳುತ್ತ ಹಲವು ಹೆಜ್ಜೆಗಳು ಒಂದೇ ದಾರಿಯಲ್ಲಿ ನಡೆದ ಸದ್ದು.

ಮನುಷ್ಯನೆಂಬ ಪ್ರಾಣಿಯನ್ನು ಒಡೆಯಲು ಮೊತ್ತಮೊದಲು ಹೆಣ್ಣುಗಂಡೆಂಬ ಲಿಂಗಭೇಧವಿದೆ. ನಂತರ ತೊಗಲ ಬಣ್ಣದಿಂದ ಹಿಡಿದು ಜಾತಿ/ಧರ್ಮ/ಪಕ್ಷ/ಸಂಘಟನೆ/ಸಿದ್ಧಾಂತ ಇತ್ಯಾದಿ ನಾನಾ ನೆಲೆಗಳಿವೆ. ದಮನಿತ ದನಿಯ ಹೋರಾಟಕ್ಕೆ, ಸಂಘಟನೆಗೆ ಜಾತಿ/ಧರ್ಮ/ಪಕ್ಷ/ಸಂಘಟನೆ/ಸಿದ್ಧಾಂತಗಳು ಕೊಡಮಾಡುವ ಅಸ್ಮಿತೆ ಕೊಂಚ ಬಲ ನೀಡಬಹುದು. ಕರ್ನಾಟಕದ ಎಲ್ಲ ಭಾಗಗಳ ಕ್ರಿಯಾಶೀಲ ಜೀವಗಳನ್ನೊಮ್ಮೆ ನೆನೆದು ನಿಮ್ಮ ಕಣ್ಮುಂದೆ ತಂದುಕೊಂಡರೆ ನಮ್ಮಲ್ಲಿ ಇವತ್ತು ಮಹಿಳೆ, ಶಿಕ್ಷಣ, ಮಾನವಹಕ್ಕು, ಪರಿಸರ, ಸಾಮಾಜಿಕ/ರಾಜಕೀಯ ಸಮಸ್ಯೆಗಳನ್ನೆತ್ತಿಕೊಂಡು ಹೋರಾಟ ನಡೆಸುವ ಸಂಘಟನೆಗಳು, ಸಂಘಸಂಸ್ಥೆಗಳು ಕರ್ನಾಟಕದಾದ್ಯಂತ ನೂರಾರು ಇದ್ದು ಎಂದಿನಿಂದ ಅವಿರತವಾಗಿ ಕೆಲಸ ಮಾಡುತ್ತಿವೆ. ಆದರೆ ಸಂಘಟನೆಯೊಂದರ ಸದಸ್ಯತ್ವ ಬಲ ನೀಡಿದಂತೆಯೇ ಒಂದೊಂದು ಇಸಮುಗಳಿಗೆ ಕಟ್ಟಿ ಹಾಕಿ ಮನುಷ್ಯರನ್ನು ಒಡೆದಿರುವುದೂ ಅಷ್ಟೇ ನಿಜವಾಗಿದೆ.

ಹೀಗೆ ಹೆಣ್ಣು ಕುಲವನ್ನು, ಹೆಣ್ಣು ಮನಸುಗಳನ್ನು ಒಡೆಯಲು ನಾನಾ ನೆಪಗಳಿವೆ; ಆದರೆ ಒಗ್ಗೂಡಿಸಲು ಯಾವುದು ಇದೆ? ಎಲ್ಲ ಬೇಲಿ-ಗಡಿಗಳ ದಾಟಿಸುವಂಥದ್ದು ಏನಿದೆ?

ಈ ಪ್ರಶ್ನೆ ಎರಡು ವರ್ಷದ ಹಿಂದೆ ಕರ್ನಾಟಕದ ಕರಾವಳಿ-ಮಂಗಳೂರು ಧರ್ಮರಕ್ಷಕರ ದಿಕ್ತಟಗಳಲ್ಲಿ ಬೇಯುತ್ತಿರುವಾಗ; ದೆಹಲಿಯ ನಿರ್ಭಯಾ ಪ್ರಕರಣದ ಆಸುಪಾಸು ಯುವಜನತೆ ಬೀದಿಗಿಳಿದು ಪ್ರತಿಭಟಿಸುವಾಗ, ಕ್ರಿಯಾಶೀಲರಾಗಿ ಹಲವು ದಿಕ್ಕುಗಳಲ್ಲಿ ಹರಿದುಹೋದ ಹೆಣ್ಣುಮಕ್ಕಳ ಮನಸಿನಲ್ಲಿ ಹುಟ್ಟಿತು. ಎಲ್ಲ ಕೂಡಿ ಒಂದು ಧಾರೆಯಾಗಿ ಪ್ರವಹಿಸಬೇಕಾದ ಅವಶ್ಯಕತೆ ಇದೆ ಎನಿಸಿತು. ಆದರೆ ಕೂಡಿ ನಡೆಯಲು ಯಾವುದೇ ಸಿದ್ಧ ಮಾರ್ಗವಿಲ್ಲ. ನಡೆಯುತ್ತಲೇ ದಾರಿ, ನಡೆದದ್ದೇ ದಾರಿಯಾಯಿತು.

ಹೀಗೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರೂಪುಗೊಂಡಿತು. ಎಂದರೆ ನೂರು ಸಂಘಟನೆಗಳ ಜೊತೆ ನೂರಾಒಂದನೆಯದಾಗಿ ಇದು ಹುಟ್ಟಲಿಲ್ಲ. ನೂರು ರತ್ನಮಣಿಗಳ ನೇಯ್ದು ಒಂದು ಹಾರವಾಗಿಸುವ ದಾರವಾಗಿ ರೂಪುಗೊಂಡಿತು.

ಇದಕ್ಕಿನ್ನೂ ಪ್ರಣಾಳಿಕೆ ಬರೆಯಲಾಗಿಲ್ಲ. ಸಂಚಾಲಕ ಸಮಿತಿಯಿಲ್ಲ. ತಾಲೂಕು/ಜಿಲ್ಲಾವಾರು ಸಮಿತಿ, ಘಟಕಗಳಿಲ್ಲ. ಆದರೆ ನಮಗೆ ಯಾರನ್ನು ನಾವು ಪ್ರತಿನಿಧಿಸಬೇಕು; ಯಾರ ಪರವಾಗಿ ದನಿಯೆತ್ತಬೇಕು; ಕಾರ್ಯಚಟುವಟಿಕೆಗಳಿಗೆ ಯಾರಿಂದ ಹೇಗೆ ಹಣ ಸಂಗ್ರಹಿಸಬೇಕು ಎನ್ನುವುದರ ಬಗೆಗೆ ಸ್ಪಷ್ಟ ಅಭಿಪ್ರಾಯಗಳಿವೆ. ಏಕೈಕ ದೊಡ್ಡ ಪ್ರಾಯೋಜಕರಿಂದ, ಕಾರ್ಪೋರೇಟ್ ಕುಳಗಳಿಂದ, ಸರ್ಕಾರಿ ಇಲಾಖೆ-ಸಂಸ್ಥೆಗಳಿಂದ; ಪಕ್ಷ-ರಾಜಕಾರಣಿಗಳಿಂದ, ಕೋಮುದ್ವೇಷ ಹರಡುವವರಿಂದ ಪ್ರಾಯೋಜಕತ್ವ ಪಡೆಯಬಾರದು; ಅವರನ್ನು ಸಹಭಾಗಿಗಳಾಗಿ ಇಟ್ಟುಕೊಳ್ಳಬಾರದು ಎಂಬ ಅಲಿಖಿತ ಪ್ರಣಾಳಿಕೆ ಹೊಂದಿದ್ದೇವೆ. ಜನಸಾಮಾನ್ಯರಿಂದ ಕರಪತ್ರ, ಕರವಸ್ತ್ರ, ಪುಸ್ತಕ ಪ್ರಕಟಿಸಿ ಮಾರುವ ಮೂಲಕ ಹಣ ಸಂಗ್ರಹಿಸಿ ಜನಧನದಿಂದ ಕಾರ್ಯಕ್ರಮ ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಪ್ರಾಮಾಣಿಕವಾಗಿ ಮಿಡಿಯುವ ವ್ಯಕ್ತಿ/ಸಂಘಟನೆ/ಗುಂಪುಗಳು ಲಿಂಗಭೇದ ಮರೆತು ನಮ್ಮೊಡನಿವೆ. ಇಲ್ಲಿ ದಲಿತ, ಎಡಪಂಥೀಯ, ಮಹಿಳಾ, ಮಾನವಹಕ್ಕು, ರೈತ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳಿವೆ. ಮಹಿಳೆಗೆ ಬೇಕಿರುವುದು ಮೀಸಲಾತಿ ಅಲ್ಲ, ಬದಲಾಗಿ ಸಮಾನ ಗೌರವ ಮತ್ತು ಪ್ರಾತಿನಿಧ್ಯ. ಸ್ಥಾನದ ಜೊತೆ ಸ್ಥಾನಬೆಲೆಯನ್ನೂ ಪಡೆಯಲು ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು ಎಂದು ಭಾವಿಸುತ್ತ ಒಕ್ಕೂಟವು ತನ್ನ ಇರವಿಗೆ ಚೈತನ್ಯ ತುಂಬಿಕೊಳ್ಳಬಯಸುತ್ತದೆ. ಈ ನಂಬಿಕೆಗಳೊಡನೆ, ಕೆಲ ಲೋಪದೋಷ-ಮಿತಿಗಳ ನಡುವೆಯೂ ಕೆಲಸ ಮಾಡುತ್ತಿದೆ.

ಮೊದಲ ಹೆಜ್ಜೆಗಳನ್ನೇನೋ ಇಟ್ಟೆವು, ಈಗ ನಡೆಯಬೇಕಿರುವ ದಾರಿ ಕಡಿದಾಗಿದೆ, ಕೊನೆಯಿಲ್ಲದುದಾಗಿದೆ.

ಧರ್ಮ, ರಾಜಕಾರಣ ಮತ್ತು ಲೈಂಗಿಕತೆ ಎಂಬ ಪುರುಷ ಪಾರಮ್ಯ ಪಡೆದ ಮೂರು ಕ್ಷೇತ್ರಗಳು ಹೆಣ್ಣನ್ನು ಎಲ್ಲಿಟ್ಟಿವೆ, ಹೇಗೆ ಹಿಂಸಿಸುತ್ತಿವೆ ಎಂದು ನೋಡುತ್ತಿದ್ದೇವೆ. ಕೋಮು ಮತ್ತು ಜಾತಿ ದೌರ್ಜನ್ಯ ಸಂಭವಿಸಿದ ಕಡೆಗಳಲ್ಲಿ ಮಹಿಳೆಯರೂ ಹಿಂಸೆಗೆ ಕುಮ್ಮಕ್ಕು ನೀಡಿದ್ದಕ್ಕೆ ಪುರಾವೆಗಳಿವೆ. ಮೊನ್ನೆ ಈಚೆಗೆ ಸಾಧ್ವಿಯೆಂದು ಕರೆದುಕೊಂಡ ಮುದ್ದು ಬಾಲಿಕೆಯೊಬ್ಬಳು ತಲವಾರು ಹಿಡಿದು ಅನ್ಯಧರ್ಮೀಯರ ರುಂಡ ಚಂಡಾಡುವ ಮಾತನಾಡಿದಳು. ಈ ಕಾಲದಲ್ಲಿ ಸಾಧುಸಂತರು ತ್ರಿಶೂಲ ಹಿಡಿದು ಹೋರಾಡಬೇಕೆಂದು ಕರೆಕೊಟ್ಟಳು. ಇನ್ನೊಂದೆಡೆ ನೈಜೀರಿಯಾದ ಅಪಹೃತ ೧೦ ವರ್ಷದ ಹುಡುಗಿ, ಬೋಕೊ ಹರಾಂ ಗುಂಪಿನ ಸೂಸೈಡ್ ಬಾಂಬರ್ ಆಗಿ ಮಾರ್ಕೆಟ್ ಪ್ರದೇಶದ ಹಲವರ ಸಾವಿಗೆ ಕಾರಣಳಾದಳು. ಐಸಿಸ್ ಎಂಬ ಅತ್ಯುಗ್ರ ಸಂಘಟನೆಯ ಮುಖ್ಯಸ್ಥನ ಹೆಂಡತಿ, ಅವಳೂ ಆತ್ಮಹತ್ಯಾ ಬಾಂಬರ್ ಆಗಿದ್ದವಳು, ಜೋರ್ಡಾನಿನಿಂದ ಪ್ರತೀಕಾರ ಕ್ರಮವಾಗಿ ಮರಣದಂಡನೆಗೆ ಗುರಿಯಾದಳು.

ಇವೆಲ್ಲ ಧರ್ಮ ಸೃಜಿಸುವ ಹಿಂಸೆಗೆ ಹೆಣ್ಣು ದಾಳವಾಗುವ, ಗುರಿಯಾಗುತ್ತಿರುವ ಸಾಕ್ಷಿಗಳು. ಹೀಗಿರುತ್ತ ಸೆಕ್ಯುಲರ್ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವವರೆಲ್ಲ ಒಗ್ಗೂಡಬೇಕಾದ ಕಾಲ ಇವತ್ತಿನ ತುರ್ತು ಅವಶ್ಯಕತೆಯಾಗಿದೆ. ಎಲ್ಲ ಮಹಿಳೆಯರು ಒಂದಾಗಿ ಪರಸ್ಪರ ಚಿಂತನೆ-ಅನುಭವ-ಭಿನ್ನಮತ ಎಲ್ಲವನ್ನು ಹಂಚಿಕೊಳ್ಳುವುದು ಆರೋಗ್ಯಕರ ಸಮಾಜದ ಸಲುವಾಗಿ ಅನಿವಾರ್ಯವಾಗಿದೆ.

ನಾವು ನಂಬುವ ರಾಜಕಾರಣ ಇದೇ. ಇವತ್ತು ಬಲಪಂಥೀಯ ಕೋಮುವಾದ, ಬಹುಸಂಖ್ಯಾತರ ಕೋಮುವಾದ ಭಾರತವಷ್ಟೇ ಅಲ್ಲ, ಜಗತ್ತಿನ ಬಹುಪಾಲು ದೇಶಗಳ ಮನುಷ್ಯರನ್ನು ದ್ವೇಷದ ವಸ್ತುವಾಗಿ ಮಾರ್ಪಡಿಸುತ್ತಿರುವಾಗ ಪ್ರೀತಿ-ಸಹಬಾಳ್ವೆ-ಬದ್ಧತೆಗಳೆಂಬ ಮಹಿಳಾ ರಾಜಕಾರಣ ಮುನ್ನೆಲೆಗೆ ಬರಲೇಬೇಕು. ಈ ನಂಬಿಕೆಯೊಂದಿಗೆ ಮಹಿಳೆಯರು ಮತ್ತು ಸಮಾನ ಮನಸ್ಕರ ವಾರ್ಷಿಕ ಸಮಾವೇಶಗಳನ್ನು ಸಂಘಟಿಸಿದ್ದೇವೆ. ಕಳೆದೆರೆಡು ಸಮಾವೇಶಗಳು ಮಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ ನಡೆದಿವೆ. ಇಂಥ ಒಂದು ಬೃಹತ್ ಕಾರ್ಯಕ್ರಮವನ್ನು ಆಗಮಾಡುವುದರ ಹಿಂದೆ ೨-೩ ತಿಂಗಳು ಎಲ್ಲ ಮಹಿಳೆಯರು, ಸಮಾನಮನಸ್ಕರು ಪದೇಪದೇ ಸಭೆಸೇರಿ ಅವಿರತವಾಗಿ ಕೆಲಸ ಮಾಡುವುದು; ಹಲವು ಧಾರೆ-ಚಿಂತನೆ-ಹಿನ್ನೆಲೆಯ ಜೀವಗಳು ಒಂದೊಟ್ಟು ಸೇರಿ ಕೆಲಸ ಮಾಡುವುದೇ ಒಂದು ಅನುಭವ. ಆ ಜೀವಮಾನದ ಪಾಠವನ್ನು ಭಾಗಿಯಾದ ಯಾರೂ ಮರೆಯಲಾರರು.

ಸಹಭಾಗಿ ಸಂಘಟನೆ-ಸಂಸ್ಥೆಗಳ ಯಾದಿ ಹಾಗೂ ಒಕ್ಕೂಟದ ಲೋಗೋ - ಈ ಎರಡೇ ಸಾಕು ಇವತ್ತು ಇಲ್ಲಿ ಇಷ್ಟು ಜನರನ್ನು ಒಂದೆಡೆ ತರಲು ಕನಸುಗಾರರಾದ ಸರಸ್ವತಿ, ಸವಿತ, ಪುಷ್ಪ, ವಿಜಯಮ್ಮ, ಸಬಿಹಾ, ಮರ್ಲಿನ್, ಅಕೈ, ಅಖಿಲಾ, ಜ್ಯೋತಿ ಮತ್ತು ಅವರಂತಹ ಅಸಂಖ್ಯ ಜೀವಗಳು ರಾತ್ರಿ ಹಗಲೆನ್ನದೆ ಇಷ್ಟು ಶ್ರಮ ಹಾಕಿದ್ದರ ಹಿಂದಿನ ಆಶಯ ಏನು ಎನ್ನುವುದನ್ನು ಬಿಂಬಿಸುತ್ತವೆ. ಬೆಂಗಳೂರು ಸಮಾವೇಶದಲ್ಲಿ ಎಲ್ಲ ಸ್ತರದ ಸಂಘಟನೆಗಳೂ ಇವೆ. ಹಳೆಯ-ಹೊಸದರ ಸಂಗಮವೂ ಇದೆ. ದಮನಿತರ ಪರವಾಗಿ ಹೋರಾಡುವ ಸಂಘಟನೆಗಳನ್ನೆಲ್ಲ ಒಂದು ವೇದಿಕೆಯಡಿ, ಒಂದು ಜಾಲದಡಿ ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ  ಒಕ್ಕೂಟದ ಆಶಯವನ್ನು ಸಹಭಾಗಿಗಳ ಇರುವಿಕೆಯೇ ಹೇಳುತ್ತಿದೆ.

ಈ ವರ್ಷದ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ರಾಜಧಾನಿ ನಗರವಾಗಿಯಷ್ಟೇ ಅಲ್ಲ, ಚಾರಿತ್ರಿಕವಾಗಿಯೂ ಚಳುವಳಿಗಳನ್ನು, ಚಳುವಳಿಕಾರರನ್ನು ಕಂಡ ಊರು. ಇಲ್ಲಿ ಮಹಿಳಾ-ದಲಿತ-ಬಂಡಾಯ-ಭಾಷಾ-ರೈತ-ಕಾರ್ಮಿಕ-ಸಾಹಿತ್ಯ ಚಳುವಳಿಗಳು ನಡೆದ ಹೆಜ್ಜೆ ಗುರುತುಗಳಿವೆ. ಇದುವರೆಗೆ ಬೆಂಗಳೂರು ಕರ್ನಾಟಕಕ್ಕೆ ಹಲವು ಕ್ರಿಯಾಶೀಲ ಹೆಣ್ಣುಮಕ್ಕಳನ್ನು ನೀಡಿದೆ. ೧೯೧೦ರಲ್ಲಿ ಬೆಂಗಳೂರು ನಾಗರತ್ನಮ್ಮ ತೆಲುಗಿನ ಮುದ್ದು ಪಳನಿಯ ರಾಧಿಕಾ ಸಾಂತ್ವನ ಎಂಬ ಹೆಚ್ಚುಕಮ್ಮಿ ನಿಷೇಧಿತ ಪುಸ್ತಕ ಪ್ರಕಟಿಸಿರುವುದನ್ನು ಮೊದಲು ನೆನಪಿಸಿಕೊಳ್ಳಬೇಕು. ಅಲ್ಲಿಂದ ಹಿಡಿದು ದಲಿತ, ಬಂಡಾಯ, ಬಂಡಾಯೋತ್ತರ ಕಾಲಘಟ್ಟದ ತನಕ ಕರ್ನಾಟಕದ ಎಲ್ಲೆಡೆಯ ಬಂಡಾಯಗಾರರನ್ನು ಬೆಂಗಳೂರು ಸೆಳೆದಿಟ್ಟುಕೊಂಡಿದೆ. ವಿಮೋಚನಾ/ಮಾನಸ/ಮಾನಿನಿ/ವಿಮೆನ್ಸ್ ವಾಯ್ಸ್/ಎಐಎಂಎಸ್‌ಎಸ್ ಇನ್ನಿತರ ಮಹಿಳಾ ಸಂಘಟನೆಗಳ ಹೋರಾಟವನ್ನು; ಹುಣಸೀಕೋಟೆ ಅನಸೂಯಮ್ಮನವರ ದೌರ್ಜನ್ಯ ವಿರುದ್ಧ ದಲಿತ ಚಳುವಳಿ; ಬೂಸಾ ಚಳುವಳಿ; ೮೦-೯೦ರ ದಶಕಗಳ ಬೃಹತ್ ಕಾರ್ಮಿಕ ಚಳುವಳಿ; ಕೆಎಫ್‌ಸಿ ವಿರುದ್ಧ ಹೋರಾಟವನ್ನು ಉತ್ತುಂಗಕ್ಕೊಯ್ದ ಪ್ರೊ. ನಂಜುಂಡಸ್ವಾಮಿಯವರ ರೈತಸಂಘದ ಚಳವಳಿ; ಗೋಕಾಕ್ ವರದಿ ಜಾರಿಗೆ ಒತ್ತಾಯಿಸಿ ನಡೆದ ಭಾಷಾ ಚಳುವಳಿ - ಈ ಎಲ್ಲವನ್ನೂ ಬೆಂಗಳೂರು ಕಂಡಿದೆ. ಆಗ ಸಕ್ರಿಯವಾಗಿ ತೊಡಗಿಸಿಕೊಂಡ ಹಲವು ಜೀವಗಳು ಈಗ ನಮ್ಮ ಕಣ್ಣೆದುರಿಗಿವೆ.

ಪೌರಕಾರ್ಮಿಕರು ಬರಬೇಕಿದ್ದ ವೇತನ ಹೆಚ್ಚಳದ ಅರಿಯರ‍್ಸ್ ಅನ್ನು ಚೆಕ್ ರೂಪದಲ್ಲಿ ಪಡೆದು ತಮ್ಮ ಹೋರಾಟಕ್ಕೆ ಜಯ ಪಡೆದಿರುವುದು ಬೆಂಗಳೂರಿನಲ್ಲಿ. ಲೈಂಗಿಕ/ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಸೆಕ್ಸ್ ವರ್ಕರ್‌ಗಳು ಅತ್ಯಂತ ವ್ಯವಸ್ಥಿತವಾಗಿ ಸಂಘಟಿತವಾಗಿರುವ ನಗರ ಬೆಂಗಳೂರು. ಬೀದಿಬದಿ ವ್ಯಾಪಾರಿಗಳ ಸಂಘಟನೆ/ಬಸ್ ಪ್ರಯಾಣಿಕರ ವೇದಿಕೆಗಳು ಸುಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿಯೇ. ಸ್ಲಂನವರಿಗಾಗಿ ಸ್ಲಂ ಜನಾಂದೋಲನ ಸಮಿತಿ, ಜನಸಹಯೋಗಗಳು ಇಲ್ಲಿವೆ. ಇಂಥ ಕಡೆ ಒಕ್ಕೂಟದ ಮೂರನೆಯ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಜೊತೆಗೆ ಈ ಸಮಾವೇಶದ ಕೆಲ ವಿಶೇಷತೆಗಳನ್ನೂ ಗುರುತಿಸಬೇಕಿದೆ:


  • ನೂರು ವರ್ಷ ಕೆಳಗೆ ಗಾರ್ಮೆಂಟ್ ಕಾರ್ಮಿಕರು ಸಮಾನ ವೇತನಕ್ಕಾಗಿ ಆಗ್ರಹಿಸಿ ಕ್ಲಾರಾ ಜೆಟ್ಕಿನ್ ನೇತೃತ್ವದಲ್ಲಿ ಸಂಘಟಿತರಾದರು. ಗಾರ್ಮೆಂಟ್ ಕೆಲಸಗಾರರ ಸಂಘಟನೆಗಳೇ ನಮಗೆ ಈ ವರ್ಷ ೫೦೦೦ ಕರವಸ್ತ್ರ ಹೊಲಿದುಕೊಟ್ಟು ಅವುಗಳ ಮಾರಾಟದಿಂದ ಸರಿ ಸುಮಾರು ಒಂದು ಲಕ್ಷ ಧನ ಸಂಗ್ರಹವಾಗಲು ಕಾರಣವಾಗಿದ್ದಾರೆ.
  • ಇವತ್ತು ಬೆಂಗಳೂರು ಮತ್ತು ಸುತ್ತಮುತ್ತಲ ಶಾಲೆಗಳಲ್ಲಿ ಎಳೆಯ ಮಕ್ಕಳ ಮೇಲೆ ದೌರ್ಜನ್ಯ ವರದಿಯಾಗುತ್ತಿರುವಾಗ, ತನ್ನ ಬಾಲ್ಯವಿವಾಹ ನಿಲ್ಲಿಸಿ ಎಂದು ೯ನೇ ತರಗತಿಯ ಹುಡುಗಿಯೊಬ್ಬಳು ಶಾಲಾ ಕಾರ್ಯಕ್ರಮಕ್ಕೆ ಬಂದ ನ್ಯಾಯಾಧೀಶರೊಬ್ಬರ ಬಳಿ ಅಲವತ್ತುಕೊಂಡಿರುವಾಗ; ಹುಡುಗಿಯರ ನಾಲಿಗೆಯ ಮೇಲೆ ಅಕ್ಷರಗಳ ಬರೆದ, ಜಾಗೃತಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಸಾವಿತ್ರಿಬಾಯಿ ಫುಲೆ ಅವರಿಗೆ ಈ ವರ್ಷದ ಇಡೀ ಸಮಾವೇಶ ಅರ್ಪಿತವಾಗಿರುವುದು ವಿಶೇಷವಾಗಿದೆ.
  • ಬೆಂಗಳೂರು ನಗರವು ಅಭಿವೃದ್ಧಿ ಎಂಬ ಮಾಯೆಯಲ್ಲಿ ಮುಳುಗಿ, ಕರಗಿ, ಅರಳಿ, ನರಳಿ ಹೊರಳಾಡುತ್ತಿದೆ. ಆದರೆ ಈ ಸುಂದರ ಬೆಂಗಳೂರನ್ನು ಕಟ್ಟಲು ಬೇಕಾದವರೇ ಕಟ್ಟುವುದು ಮುಗಿದಾದ ಮೇಲೆ ನಗರ ಸೌಂದರ್ಯದ ನೆಪದಲ್ಲಿ ಊರಾಚೆ ಬಿಸಾಡಲ್ಪಡುತ್ತಾರೆ. ಸ್ಲಂಗಳು ಬೆಳೆಯುತ್ತ ಹೋಗಿರುವುದೇ ಇದಕ್ಕೆ ಸಾಕ್ಷಿ. ಹೀಗಿರುತ್ತ ಬೆಂಗಳೂರು ನಮ್ಮ ಬೆಂಗಳೂರು ಆಗಬೇಕಾದರೆ; ಮೆಟ್ರೋ ನಮ್ಮ ಮೆಟ್ರೋ ಆಗಬೇಕಾದರೆ ಊರಾಚೆ ಎಸೆಯಲ್ಪಟ್ಟವರನ್ನೂ ಒಳಗೊಳ್ಳಬೇಕಿದೆ. ಸ್ವಚ್ಛ ಬೆಂಗಳೂರು ಸಾಕಾರವಾಗಬೇಕಾದರೆ ಪೌರಕಾರ್ಮಿಕರ ಅಮೂಲ್ಯ ಶ್ರಮವನ್ನು ಗುರುತಿಸಬೇಕಿದೆ. ಎಂದೇ ಈ ಒಕ್ಕೂಟವು ಸ್ಲಂವಾಸಿ/ಪೌರಕಾರ್ಮಿಕರು/ಬೀದಿಬದಿ ವ್ಯಾಪಾರಿ/ಚಿಂದಿ ಆಯುವವರ ಜೊತೆ ಕೆಲಸ ಮಾಡುವ ವ್ಯಕ್ತಿ/ಸಂಘಟನೆಗಳನ್ನು ಸಹಭಾಗಿಯಾಗಿ ಹೊಂದಿದೆ. 
  • ನಾವು ಬದನೆ ಬೀಜ ನೀಡಲಿದ್ದೇವೆ. ರ‍್ಯಾಲಿ ಉದ್ಘಾಟಕರು ನೀರುಣಿಸಿದ ಬೇವಿನ ಗಿಡಗಳನ್ನು ಮಹಾರಾಣೀಸ್ ಕಾಲೇಜಿನ ಆವರಣದಲ್ಲಿ ನೆಡಲಿದ್ದೇವೆ. ಎಲ್ಲ ರೋಗಗಳಿಗೂ ಮದ್ದು ನಾವು ಮಾರಿಕೊಳ್ಳಲಿರುವ ಪೇಟೆಂಟ್ ಹಕ್ಕಿನ ರೂಪದಲ್ಲಿದೆ. ಕಾಪಿರೈಟ್ ಮತ್ತು ಪೇಟೆಂಟ್ ಹಕ್ಕುಗಳೆಂಬ ಜೀವ ವಿರೋಧಿ ಕಾನೂನುಗಳನ್ನು ಸಾರಾಸಗಟಾಗಿ ವಿರೋಧಿಸಲು ಹೆಜ್ಜೆಯಿಡಬೇಕಾದ ಅನಿವಾರ್ಯತೆ ನಮ್ಮೆಲ್ಲರದು ಎಂದು ನಾವು ಪ್ರತಿಪಾದಿಸುತ್ತಿದ್ದೇವೆ.
  • ಹಲವು ತಲೆಮಾರಿನ/ಭಾಷಿಕರ/ಸೈದ್ಧಾಂತಿಕ ಸಂಘಟನೆಗಳ ಸಂಗಮ ಈ ಒಕ್ಕೂಟ. ಕನ್ನಡವೇ ಬರದ ಎಷ್ಟೋ ಜನ ನಮ್ಮೊಡನೆ ಕೆಲಸ ಮಾಡಿದ್ದಾರೆ. ನಮ್ಮ ಕರಪತ್ರವು ಇಂಗ್ಲಿಷ್‌ಗೆ ಅನುವಾದಗೊಂಡಿರುವುದು ಇದಕ್ಕೆ ಸಾಕ್ಷಿ. ಇದೂ ಒಂದು ವಿಶೇಷವೇ.
  • ಭೋಪಾಲಿನ ಇಬ್ಬರು ಮಹಿಳೆಯರು - ರಶೀದಾಬಿ ಮತ್ತು ಚಂಪಾದೇವಿ ಶುಕ್ಲಾ - ಅತಿಥಿಗಳಾಗಿ ನಮ್ಮೊಂದಿಗಿದ್ದಾರೆ. ಮೂರು ದಶಕಗಳ ಹೋರಾಟದ ಬಳಿಕ ಯೂನಿಯನ್ ಕಾರ್ಬೈಡ್ ವಿರುದ್ಧ ಸಂತ್ರಸ್ತರಿಗೆ ಜಯ ಸಿಕ್ಕಿತೋ ಇಲ್ಲವೋ, ಆದರೆ ಮತ್ತಷ್ಟು ಭೋಪಾಲ್‌ನಂತಹ ದುರಂತಗಳು ವಿಶ್ವದಲ್ಲಿ ಸಂಭವಿಸದೇ ಇರಲಿ ಎಂದು ಅಲ್ಲಿನ ಮಹಿಳೆಯರು ದುರಂತದ ನೆನಪುಗಳನ್ನು ಜೀವಂತ ಇಟ್ಟು ಹೋರಾಟದ ಸ್ಫೂರ್ತಿಯಾಗಿದ್ದಾರೆ. ಮೊನ್ನೆ ಬಂದ ರೈತ ವಿರೋಧಿ ಸುಗ್ರೀವಾಜ್ಞೆಯಂತಹ ಕಂಡ-ಕಾಣದ ಹತ್ತುಹಲವು ಕಾನೂನುಗಳು ಈ ನೆಲದ ಸಾಮಾನ್ಯನ ಹಕ್ಕುಗಳನ್ನು ಕಿತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಷರತ್ತಾಗಿ ಕೊಡಹೊರಟಿರುವಾಗ ಭೋಪಾಲ್ ಸಂತ್ರಸ್ತರ ಪರವಾಗಿ ಕೆಲಸ ಮಾಡುವವರ ಅನುಭವ, ಅಭಿಪ್ರಾಯಗಳು ಅಮೂಲ್ಯವಾಗಿವೆ. 
  • ಹೆಣ್ಣು ಎನ್ನುವುದು ಒಂದು ವ್ಯಕ್ತಿ. ಹೆಣ್ತನ ವ್ಯಕ್ತಿತ್ವದ ಒಂದು ಭಾಗ. ಎಂದೇ ಒಕ್ಕೂಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳೂ ಸಹಭಾಗಿಗಳಾಗಿವೆ.


***

ನಮ್ಮನ್ನು ಕನಸುಗಾರರೆಂದಾದರೂ ಕರೆಯಿರಿ, ಅವಾಸ್ತವವಾದಿಗಳೆಂದಾದರೂ ಕರೆಯಿರಿ, ಕೆಲಸವಿಲ್ಲದವರೆಂದಾದರೂ ಜರೆಯಿರಿ ಬೇಸರವಿಲ್ಲ, ಈ ಅನುಭವ ಮಂಟಪದಲ್ಲಿ ನಾವು ಸೇರಿದ್ದೇವೆ. ಕಳೆದ ವರ್ಷ ಅವಿರತವಾಗಿ ಒಕ್ಕೂಟಕ್ಕೆ ದುಡಿದಿದ್ದ ವೀಣಾ, ನೆಚ್ಚಿನ ವಸು ಹಾಗೂ ಅವರಂಥ ಪ್ರಿಯ ಚೇತನಗಳು ನಮ್ಮ ನಡುವೆ ಇವತ್ತು ಇಲ್ಲ. ಆದರೆ ಅಗಲಿದ ಸಂಗಾತಿಗಳ ಉಸಿರಿನ ನೆನಪಿನಲ್ಲಿ ಇಷ್ಟು ಮಾತ್ರ ಧೃಢವಾಗಿ ಹೇಳೋಣ:

ವಿ ಆರ್ ದ ಪೀಪಲ್ ವಿದೌಟ್ ಬಾರ್ಡರ‍್ಸ್. 
ವಿ ಆರ್ ಮೇಕಿಂಗ್ ಹಿಸ್ಟರಿ. 
ವಿ ಆಲ್ಸೋ ಮೇಕ್ ಹಿಸ್ಟರಿ.

No comments:

Post a Comment