Monday 2 March 2015

ಐಕ್ಯತೆ: ಮಹಿಳಾ ಮಾರ್ಗದ ತುರ್ತು




(ಚಿತ್ರ: ಕೃಷ್ಣ ಗಿಳಿಯಾರು)
ಮಹಿಳಾ ಸಮಾನತೆಗಿರುವ ತಡೆಗೋಡೆಗಳು

ಪ್ರೇಮ ಈ ಜಗತ್ತನ್ನು ಸೃಷ್ಟಿಸಿದೆ, ಆದರೆ ಆಳುತ್ತಿರುವುದು ಹಿಂಸೆಯೆ? ಹೀಗೊಂದು ಅನುಮಾನ ಸೂಕ್ಷ್ಮ ಮನಸುಗಳನ್ನು ಕಾಡುವಂತೆ ವರ್ತಮಾನದ ಸನ್ನಿವೇಶವಿದೆ. ಹಿಂಸೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಹಿಂಸೆ ಹಿಂಸೆಯೆಂದೇ ಅನ್ನಿಸದಷ್ಟು ಮಾನವ ಮನಸು ಜಡ್ಡುಗಟ್ಟಿದೆ. ಗೋಚರ-ಅಗೋಚರ ಸ್ವರೂಪಗಳ ಹಿಂಸೆ ನಮ್ಮ ಮಿದುಳನ್ನಾಳುತ್ತಿರುವಾಗ ಜಾತಿ/ಧರ್ಮ/ರಾಷ್ಟ್ರ/ಭಾಷೆಗಳ ಮೇಲಿನ ಸಿಟ್ಟನ್ನು ಪುರುಷ ಜಗತ್ತು ಹೆಣ್ಣಿನ ಮೇಲೆ ತೀರಿಸಿಕೊಳ್ಳುವುದು ದಿನ ಕಳೆದಂತೆ ಹೆಚ್ಚಾಗುತ್ತಿದೆ. ವೈಯಕ್ತಿಕ ದೌರ್ಬಲ್ಯವಿರಲಿ, ಬದಲಾಗುತ್ತಿರುವ ಸಮಾಜದ ಆದ್ಯತೆಗಳಿರಲಿ, ಮಾರುಕಟ್ಟೆಯ ಬೆಳವಣಿಗೆಯಿರಲಿ, ವಿಜ್ಞಾನ-ತಂತ್ರಜ್ಞಾನದ ಓಟವಿರಲಿ - ಎಲ್ಲವೂ ಮಹಿಳಾ ಘನತೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಸ್ವಾತಂತ್ರ್ಯಹರಣದ ಉಪಕರಣಗಳಾಗಿರುವ ವಿಪರ್ಯಾಸ ಆಧುನಿಕ ಸಮಾಜದ್ದಾಗಿದೆ.

ಮಹಿಳೆಯ ಮೇಲೆ ದೌರ್ಜನ್ಯ ಎಸಗುವುದರಲ್ಲಿ ಕೇವಲ ವ್ಯಕ್ತಿಗಳಷ್ಟೇ ಅಲ್ಲ, ವ್ಯವಸ್ಥೆಯೂ ಶಾಮೀಲಾಗಿದೆ. ಲಿಂಗತಾರತಮ್ಯದ ಆತ್ಯಂತಿಕ ದುಷ್ಟತನ ಹೆಣ್ಣು ಭ್ರೂಣಹತ್ಯೆ ಮತ್ತು ಅದು ಸೃಷ್ಟಿಸಿರುವ ಲಿಂಗಾನುಪಾತ ಇಳಿಕೆಯಾಗಿ ಕಾಣಿಸಿಕೊಂಡು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಅಧಿಕಾರ ವಂಚನೆ; ಕುಲಗೌರವ-ಪರಂಪರೆ-ಸಂಸ್ಕೃತಿಯ ಹೆಸರಿನ ದೌರ್ಜನ್ಯಗಳು; ಕುಟುಂಬಯೋಜನೆ ಹಕ್ಕುಗಳ ನಿರಾಕರಣೆ; ಬಲವಂತದ ವೇಶ್ಯಾವಾಟಿಕೆಗೆ ದೂಡುವುದು; ಮಾನವ ಕಳ್ಳಸಾಗಾಣಿಕೆ ಮತ್ತು ಲೈಂಗಿಕ ಗುಲಾಮರಂತೆ ನಡೆಸಿಕೊಳ್ಳುವುದು; ಮಾಟಗಾತಿ, ವ್ಯಭಿಚಾರಿಯ ಪಟ್ಟ ಕಟ್ಟಿ ಕೊಲ್ಲುವುದು - ಇಂಥವೆಲ್ಲ ಸಮಾಜದ ಲಿಂಗ ನಿರ್ಮಿತಿಯಿಂದಲೇ ಹುಟ್ಟಿಕೊಂಡ ದೌರ್ಜನ್ಯಗಳು. ಅಷ್ಟೇ ಅಲ್ಲ; ಚಕಮಕಿ ನಡೆಯುವ ಗಡಿಭಾಗಗಳು, ನಾಗರಿಕ ಅಶಾಂತಿಯಿರುವ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಅಧಿಕಾರವೂ ಸೇರಿದಂತೆ ನಾಗರಿಕರನ್ನು ಕಾಯುವ ವ್ಯವಸ್ಥೆಯೂ ಮಹಿಳಾ ದೌರ್ಜನ್ಯದ ಪಾಲುದಾರನಾಗಿದೆ.

ವಿಶ್ವಾದ್ಯಂತ ನಿರಂತರ ಸಂಭವಿಸುತ್ತಿರುವ ಮಹಿಳೆಯರ ದೌರ್ಜನ್ಯಕ್ಕೆ ಇರುವ ಕಾರಣ ಎಂದಿನಿಂದಲೂ ಇರುವ ಲಿಂಗತಾರತಮ್ಯ. ಪುರುಷ ಪ್ರಧಾನ ಸಮಾಜ ಸೃಷ್ಟಿಸಿದ ಅಸಮಾನ ಬಯಲಿನಲ್ಲಿ ನಿರಂತರ ಅಧಿಕಾರ ಹಂಚಿಕೆಯ ಮೋಸಕ್ಕೊಳಗಾದವಳು ಹೆಣ್ಣು. ದೌರ್ಜನ್ಯದ ಉದ್ದೇಶ ಹೆಣ್ಣನ್ನು ಸದಾ ಶರಣಾಗತ ಮನಸ್ಥಿತಿಯಲ್ಲಿಡುವುದಾಗಿದೆ. ಅವಳನ್ನು ಆಸ್ತಿಯೆಂದು ಪರಿಗಣಿಸಿ ಹಾಗೂ ಒಂದು ನಿರ್ದಿಷ್ಟ ಪಾತ್ರವನ್ನು ಆರೋಪಿಸಿ ವಿಧಿಸಲಾಗಿರುವ ನೀತಿ ನಿಯಮಾವಳಿಗಳೂ ದೌರ್ಜನ್ಯದ ಕಾರಣವಾಗಿವೆ.

ಪ್ರಪಂಚದ ಯಾವುದೇ ದೇಶ, ಯಾವುದೇ ಸಂಸ್ಕೃತಿಯೂ ಹೆಣ್ಣನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಸನಾತನ ಭಾರತದ ಮಾತು ಬಿಡಿ, ೧೯ನೇ ಶತಮಾನದ ಕೊನೆ ಭಾಗದ ತನಕ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ದೇಶಗಳೂ ಕೂಡ ಹೆಂಗಸು ಕರ್ತವ್ಯದ ಗೆರೆ ದಾಟಿದರೆ ಅವಳಿಗೆ ‘ಸ್ವಲ್ಪ’ ಶಿಕ್ಷೆ ಕೊಡುವ ಹಕ್ಕು ಗಂಡಸಿಗಿದೆ ಎಂಬ ಕಾನೂನನ್ನು ಎತ್ತಿ ಹಿಡಿದಿದ್ದವು. ರಾಜಕೀಯ ಅಧಿಕಾರ ಮತ್ತು ಹೆಣ್ಣು ವಿರುದ್ಧ ಪದಗಳಾಗಿದ್ದವು.

ಯಾಕಾದರೂ ಮಾನವಕುಲ ಲಿಂಗತಾರತಮ್ಯ ರೂಢಿಸಿಕೊಂಡಿತು? ಕೇವಲ ಮಾನವರಂತೆ ಗಂಡುಹೆಣ್ಣು ಜೊತೆ ಸಾಗಬೇಕಾದರೆ ಏನು ಮಾಡಬೇಕು? ದೌರ್ಜನ್ಯಕ್ಕೆ ಮಹಿಳೆಯ ಪ್ರತಿರೋಧ ಇರಲಿಲ್ಲವೇ? ಇದ್ದರೆ ಯಾವ ಸ್ವರೂಪದ್ದಾಗಿತ್ತು?

ಮಹಿಳಾ ಚಳುವಳಿ ಮತ್ತು ಸಂಘಟನೆ 

ವೈಯಕ್ತಿಕ ನೆಲೆಯ ಹಾಗೂ ಧಾರ್ಮಿಕ ನೆಲೆಯ ಸುಧಾರಣಾ ಪ್ರಯತ್ನಗಳು ಅಲ್ಲಿಲ್ಲಿ ಸಂಭವಿಸಿದರೂ ಸಂಘಟಿತ ಹೋರಾಟ ಕಂಡುಕೊಳ್ಳಲು ಮಹಿಳಾ ಸಮೂಹ ೧೯ನೇ ಶತಮಾನದ ತನಕ ಕಾಯಬೇಕಾಯಿತು. ೧೯ನೇ ಶತಮಾನದ ಉತ್ತರಾರ್ಧ ಹಾಗೂ ೨೦ನೇ ಶತಮಾನದ ಮೊದಲ ಭಾಗದಲ್ಲಿ ಮಹಿಳೆಯರ ಸಂಘಟಿತ ದನಿ ಕೇಳಿಬಂತು. ಆದರೂ ಮೊದಲ ಮಹಿಳಾ ಚಳುವಳಿಯು ಸಮಾನ ಅವಕಾಶ, ಸಮಾನ ವೇತನ, ಸಮಾನ ನಾಗರಿಕ ಹಕ್ಕುಗಳಿಗಾಗಿಯೇ ಹೋರಾಟ ನಡೆಸಿತು. ಮೊದಲಿಗೆ ಮಹಿಳೆಯರ ಮೇಲಿನ ಹಿಂಸೆಯನ್ನು ಆರೋಗ್ಯ ಸಮಸ್ಯೆ ಎಂಬಂತೆ ನೋಡಲಾಗುತ್ತಿತ್ತು. ಎರಡು ಮಹಾಯುದ್ಧಗಳ ನಂತರ ೧೯೬೦-೭೦ರ ದಶಕದ ಮಹಿಳಾ ಬರಹ-ಚಳುವಳಿಗಳು ಕೊಂಚ ತೀವ್ರಗಾಮಿ ಸ್ವರೂಪ ಪಡೆದುಕೊಂಡವು. ಅವು ಆ ಕಾಲದಲ್ಲಿ ನಡೆದ ಉಳಿದ ಪ್ರಗತಿಪರ ಚಳುವಳಿಗಳ ಪ್ರಭಾವ ಮತ್ತು ಒತ್ತಾಸೆ ಪಡೆದಿದ್ದವು. ಮನೆಯ ಒಳಗೆ ಮತ್ತು ಹೊರಗೆ ಸಮಾನ ಗೌರವ; ಪ್ರಜನನ ಮತ್ತಿತರೆ ಹಕ್ಕುಗಳಿಗಾಗಿ ಪ್ರತಿಪಾದಿಸಿ ಹೋರಾಡುತ್ತ ವಿಮೋಚನೆಯ ಮಾತುಗಳನ್ನಾಡಿದವು.

೧೯೯೦ರಿಂದೀಚೆಗೆ ಮಹಿಳಾ ದೌರ್ಜನ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಗುರುತಿಸಲಾಯಿತು. ತಾಂತ್ರಿಕ ಪರಿಣತಿಯ ಹಾಗೂ ಜಾಗತೀಕರಣಗೊಂಡ ವಿಶ್ವದಲ್ಲಿ ಮೂರನೇ ಅಲೆಯ ಮಹಿಳಾ ಚಳುವಳಿಯು ಲಿಂಗ ಅಸ್ಮಿತೆಯ ರಾಜಕಾರಣ, ದೇಹ ರಾಜಕಾರಣ ಹಾಗೂ ದೌರ್ಜನ್ಯವನ್ನು ಗುರುತಿಸಿತು. ಜೊತೆಗೆ ವರ್ಗ, ಲಿಂಗ, ಜನಾಂಗ ಹಾಗೂ ವಯೋಮಾನ ಆಧಾರಿತ ದೌರ್ಜನ್ಯಗಳನ್ನು, ಹೆಣ್ಣಿನ ವಿರುದ್ಧ ಚಾಲ್ತಿಯಲ್ಲಿರುವ ಹೊಸಬಗೆಯ ಯುದ್ಧನೀತಿಗಳನ್ನು ಗುರುತಿಸಿ ಗಡಿಗೆರೆಗಳಿಂದ ಮಹಿಳೆಯನ್ನು ಕಟ್ಟಿಹಾಕದಂತೆ ಮಹಿಳಾ ಸಮಸ್ಯೆಗಳನ್ನು ಅಂತರರಾಷ್ಟ್ರೀಕರಣಗೊಳಿಸುತ್ತ ಬಂತು. ಸೋದರಿತ್ವದ ಮಾತನಾಡತೊಡಗಿತು. ಈಗ ಜಾಗೃತ ಮಹಿಳಾ ಪ್ರಜ್ಞೆಯು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಪ್ರಭುತ್ವ ಮತ್ತು ಸಾಮಾಜಿಕ ಹಿಂಸೆಯ ಬದಲಾದ ಸ್ವರೂಪಗಳನ್ನು ಪ್ರಶ್ನಿಸುತ್ತಿದೆ. ನಂಬಿಕೆ-ಆಚರಣೆಗಳನ್ನು, ಮೂಲ ಕುಟುಂಬ ವ್ಯವಸ್ಥೆಯಲ್ಲೇ ಅಡಗಿರುವ ಲಿಂಗತಾರತಮ್ಯವನ್ನು ಗುರುತಿಸಿ ಪ್ರಶ್ನಿಸುತ್ತದೆ.

ರಾಜಕೀಯ ಪಕ್ಷಗಳು ಹಾಗೂ ಮುಖ್ಯವಾಹಿನಿ ರಾಜಕಾರಣವು ಮಹಿಳೆಯ ಸ್ಥಾನಮಾನ ಹೆಚ್ಚಿಸುವುದನ್ನು ಎಂದೂ ತಮ್ಮ ಆದ್ಯತೆಯನ್ನಾಗಿ ಮಾಡಿಕೊಳ್ಳಲಿಲ್ಲ. ರಾಜಕಾರಣದ ಬಯಲು ಪುರುಷ ಪ್ರಧಾನವಾಗಿರುವ ಕಾರಣದಿಂದ ಸರ್ಕಾರೇತರ ಸಂಘ-ಸಂಸ್ಥೆಗಳಾಗಿ ಮಹಿಳಾ ಸಂಘಟನೆಗಳು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಹೀಗೆ ಸ್ವಾಯತ್ತ ಸಂಘಟನೆಗಳು ಪ್ರತಿ ಅಲೆಯ ಮಹಿಳಾ ಚಳುವಳಿಯ ಹೊತ್ತಿನಲ್ಲೂ ಹುಟ್ಟಿಕೊಂಡವು. ತಮ್ಮ ಆದ್ಯತೆಗಳನ್ನು ಗುರುತಿಸಿಕೊಂಡು ಕೆಲಸ ಮಾಡತೊಡಗಿದವು. ಸ್ಥಳೀಯವಾಗಿ ಮಹಿಳಾ ಜಾಗೃತಿ/ಸಂಘಟನೆಗೆ ಯತ್ನಿಸುವುದು ಹಾಗೂ ತನ್ಮೂಲಕ ಸಮಾಜ ಮಹಿಳಾ ಸ್ನೇಹಿಯಾಗುವಂತಹ ಸಾಂಸ್ಥಿಕ ಬದಲಾವಣೆಗೆ ಒತ್ತಡ ತರುವುದು ಅಂಥ ಸಂಘಟನೆಗಳ ಉದ್ದೇಶ. ಸ್ಪಷ್ಟವಾದ ಆದರೆ ನೇರ ಮತ್ತು ಗಟ್ಟಿಯಾದ ಧ್ವನಿಯಲ್ಲಿ ಅವು ಹಕ್ಕೊತ್ತಾಯ ತರತೊಡಗಿದವು. ಗಡಿಯ ಹಂಗು ತೊರೆದ ಸಂಘಟನೆಗಳಿರುವಂತೆಯೇ ಒಂದೊಂದು ಪ್ರದೇಶಕ್ಕೆ, ಗುರಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡ ಅಸಂಖ್ಯ ಸಂಘಟನೆಗಳೂ ಹುಟ್ಟಿದವು.

ಎಲ್ಲದರ ಉದ್ದೇಶ ಒಂದೇ: ಮಹಿಳಾ ಸಮಾನತೆ, ಸಮಾನ ಗೌರವ ಹಾಗೂ ದೌರ್ಜನ್ಯ ತಡೆ.

ಇದು ಜಾಗತಿಕ ವಿದ್ಯಮಾನವಾದರೆ ಕರ್ನಾಟಕದಲ್ಲಿ ನಡೆದ ಎಲ್ಲ ಚಳುವಳಿಗಳಲ್ಲಿ ಮಹಿಳೆಯರೂ ಮುನ್ನೆಲೆಗೆ ಬಂದರು. ಮಹಿಳಾ ಚಳುವಳಿ ಸ್ಪಷ್ಟವಾಗಿ, ವಿಸ್ತೃತ ನೆಲೆಯಲ್ಲಿ ಬಹುಕಾಲ ನಿಲ್ಲಲಾಗಲಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿದ್ದರೂ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಬಂಡಾಯ ಸಂಘಟನೆ, ಎಡಪಂಥೀಯ ಸಂಘಟನೆಗಳ ಮಹಿಳಾ ಘಟಕಗಳಲ್ಲಿ ಆಯಾ ಸೈದ್ಧಾಂತಿಕ-ವಲಯ ಚೌಕಟ್ಟಿನಲ್ಲೇ ಹಲವು ಮಹಿಳೆಯರು ಕ್ರಿಯಾಶೀಲವಾಗಿ ತೊಡಗಿಕೊಂಡರು. ಹಲವಾರು ಸಂಘಟನೆಗಳು ಮಹಿಳಾ ಪರ ಉದ್ದೇಶವಿಟ್ಟುಕೊಂಡು ಸ್ವಾಯತ್ತ ಸಂಘಟನೆಯಾಗಿ, ಸರ್ಕಾರೇತರ ಸಂಸ್ಥೆಯಾಗಿ, ವೇದಿಕೆಗಳಾಗಿ ಕೆಲಸ ಮಾಡುತ್ತಿವೆ. ಜೊತೆಗೆ ಕಾರ್ಮಿಕ ವಲಯದ ಮಹಿಳೆಯರಿಗಾಗಿಯೂ ಸಂಘಟನೆಗಳಿವೆ. ಬಹುಪಾಲು ಎಲ್ಲವೂ ಸ್ಥಳೀಯವಾಗಿ ಹೋರಾಡುತ್ತಿವೆ; ಒಂದು ನಿರ್ದಿಷ್ಟ ತಾತ್ವಿಕತೆ/ಗುರಿಯನ್ನಿಟ್ಟುಕೊಂಡು ಹೋರಾಡುತ್ತಿವೆ ಹಾಗೂ ಜನಜಾಗೃತಿಗೂ ಶ್ರಮಿಸುತ್ತಿವೆ. ಸಾಮಾಜಿಕವಾಗಿ, ಸ್ಥಳೀಯವಾಗಿ ಮಹಿಳೆಯನ್ನು ಗ್ರಹಿಸುವ ಹಾಗೂ ದೌರ್ಜನ್ಯ ತಡೆಗೆ ಸಮಾಜ ಮುಂದಾಗಲೆಂಬ ಆಶಯವನ್ನಿಟ್ಟುಕೊಂಡೇ ಎಲ್ಲವೂ ಕೆಲಸ ಮಾಡುತ್ತಿವೆ.

ಆದರೆ ಮಹಿಳೆಯರ ಸಂಘಟನೆ-ಹೋರಾಟಗಳನ್ನು, ಸಂಘಟಿತ ಪ್ರಯತ್ನಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಹಾಗೂ ಸಮಾಜ ಇತ್ತೀಚಿನವರೆಗೂ ಗುರುತಿಸಲಿಲ್ಲ. ಸಂಘಟಿತ ಪ್ರಯತ್ನಗಳು ಅಗೋಚರವಾಗುಳಿದರೂ ಅದರ ಪ್ರತಿಫಲವನ್ನು ದೌರ್ಜನ್ಯ ವಿರೋಧಿ ಕಾನೂನು, ಮೀಸಲಾತಿ, ಪ್ರಾತಿನಿಧ್ಯ, ಬದಲಾದ ನ್ಯಾಯದ ಪರಿಕಲ್ಪನೆಗಳಲ್ಲಿ ಕಾಣಬಹುದಾಗಿದೆ. ಇವತ್ತು ಮಹಿಳಾ ಸಂಘಟನೆಗಳಷ್ಟೇ ಅಲ್ಲ, ಮಾನವ ಪರ ಮನಸುಗಳೆಲ್ಲ ಮಹಿಳಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ; ಮಹಿಳಾ ದೌರ್ಜನ್ಯವು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತಿದ್ದರೆ ಅದರ ಹಿಂದೆ ಸಮಾಜ ಗುರುತಿಸದ ಮಹಿಳಾ ಹೋರಾಟದ ಹೆಜ್ಜೆಗಳಿವೆ.


ಸಮಾನತೆಯತ್ತ: ಕೆಲವು ಸವಾಲು, ಸಲಹೆ..

ಮಹಿಳಾ ಸಂಘಟನೆ ಮತ್ತು ಜಾಗೃತಿಯು ಆಂತರ್ಯದಲ್ಲೆ ಕೆಲವು ಸವಾಲುಗಳನ್ನು ಹೊಂದಿದೆ:


  • ನಮ್ಮ ಸಂವಿಧಾನ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ನೋಡುತ್ತದೆ. ಆದರೆ ಧರ್ಮ ಬೇರೆಯೇ ಚೌಕಟ್ಟು ವಿಧಿಸುತ್ತದೆ. ಸಂವಿಧಾನ ಧರ್ಮದ ಕುರಿತು ಮಾತನಾಡುವುದಿಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ ಎನ್ನಲಾಗಿದೆ. ಇದು ಮಹಿಳೆಯ ಸ್ವಂತ ವ್ಯಕ್ತಿತ್ವ, ಅಭಿಪ್ರಾಯ ರೂಪುಗೊಳಿಸುವಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಏಕೆಂದರೆ ಲಿಖಿತ ಕಾನೂನು ಎಲ್ಲರೂ ಸಮಾನ ಎನ್ನುತ್ತದೆ. ಆದರೆ ಸಮಾಜ, ಧರ್ಮದ ಕಟ್ಟಳೆಗಳು ಹೊರಿಸುವ ಜವಾಬ್ದಾರಿಗಳಾದರೋ ಸಮಾನತೆಯ ಪದದ ಅರ್ಥವನ್ನೇ ಮೂಲೆಗೆಸೆದುಬಿಟ್ಟಿವೆ. ಜೊತೆಗೆ ಮಹಿಳೆಯು ತನ್ನ ಜಾತಿ/ಧರ್ಮದ ಸಂಘಟನೆಯ ಭಾಗವಾದರೆ ಅವಳ ಮಾತು, ಚಿಂತನೆ, ಕ್ರಿಯೆಯಲ್ಲಿ ಒಂದು ಮಿತಿ ತಂತಾನೇ ಒದಗಿಬಿಡುತ್ತದೆ. ಅಂಥ ಸಂಘಟನೆಯ ಭಾಗವಾಗಬೇಕಾದಾಗಲೂ ಸೋದರಿತ್ವದ ಆಶಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಂಘಟನೆಯು ತನ್ನ ಚೇತನವನ್ನು ಮಿತಿಗೊಳಿಸದಂತೆ ತನ್ನ ಪಾತ್ರ ಏನಿರಬೇಕೆಂದು ಸ್ಪಷ್ಟಗೊಳಿಸಿಕೊಳ್ಳಬೇಕಾಗಿದೆ.
  • ಮಹಿಳೆಯರಿಗೆ ಜಾಗೃತಿ-ರಾಜಕೀಯ ಪ್ರಜ್ಞೆ ಬಂದರೆ ಚಳುವಳಿ-ಸಂಘಟನೆಗಳ ದಿಕ್ಕೇ ಬದಲಾಗಿಹೋಗುತ್ತದೆ. ಒಂದು ಶತಮಾನದಷ್ಟು ಹಿಂದೆ ಅಂಬೇಡ್ಕರ್, ಗಾಂಧಿ ನಂತರ ಲೋಹಿಯಾ ಕೂಡಾ ಇದನ್ನೇ ಹೇಳಿದ್ದು. ರಾಜಕೀಯ ಪ್ರಜ್ಞೆ ಎಂದರೆ ತನಗೇನು ಆಗುತ್ತಿದೆ? ಸುತ್ತಮುತ್ತ ಏನು ನಡೆಯುತ್ತಿದೆ? ಎಲ್ಲಿ ಬದಲಾವಣೆ ಅವಶ್ಯವಿದೆ? ಅದಕ್ಕಿರುವ ಮಾರ್ಗವೇನು ಎಂಬ ಅರಿವು. ದೇಶದ ಅರ್ಧದಷ್ಟು ಜನಸಂಖ್ಯೆಯ ಮಹಿಳೆಯರು ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಜಾಗೃತಗೊಂಡರೆ ಸಮಾಜದ ಒಟ್ಟಂದವೇ ಬದಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅದು ಸುಲಭದ ಮಾತಲ್ಲ. ಏಕೆಂದು ಈ ದೇಶದ ಸಮಾಜ, ಸಮಾಜ ರಚನೆಯನ್ನು ಗಮನಿಸಿದರೆ ತಿಳಿಯುತ್ತದೆ: ಸಂಘಟನೆ ಎಲ್ಲ ಕಾಲದಲ್ಲೂ ಮಹಿಳೆಗೆ ಕಷ್ಟವೇ ಆಗಿದೆ. ಕೌಟುಂಬಿಕ ಜವಾಬ್ದಾರಿ, ವೃತ್ತಿ ಹಾಗೂ ಮನೆಯ ಹೆಚ್ಚುವರಿ ಕೆಲಸಗಳು ಮಹಿಳೆಗೆ ತನಗಾಗಿ ಸಮಯ ಮೀಸಲಿಟ್ಟುಕೊಳ್ಳುವುದನ್ನು ಊಹಿಸದಂತೆ ಮಾಡಿವೆ. ನಾನು, ನನ್ನ ಸಮಯ ಎಂದರೆ ಅದು ಸ್ವಾರ್ಥದ ಮಾತಾಗಿ ಕೇಳುವಂತಹ ಮೌಲ್ಯ ವ್ಯವಸ್ಥೆಯನ್ನು ಸಮಾಜ ಹೆಣ್ಣಿಗೆ ಬಳುವಳಿ ನೀಡಿದೆ. ಅದರ ನಡುವೆ ಸಂಘಟನೆಯ ಅವಶ್ಯಕತೆ ಇದೆಯೆಂದು ಹೆಣ್ಣಿಗೆ ಅನಿಸಬೇಕು; ಸಂಘಟಿತವಾಗಿ ಪ್ರಯತ್ನಿಸಬೇಕೆಂದು, ಪರಿಹಾರ ಕಂಡುಕೊಳ್ಳಬಹುದೆಂದು ಭರವಸೆಯಿಡಬೇಕು. ಇದು ಹೆಣ್ಣುಕುಲ ದಾಟಬೇಕಾದ ದೊಡ್ಡ ಅಂತರಂಗದ ಮಿತಿ ಎನ್ನಬಹುದು.
  • ಎಲ್ಲರೂ ಬೀದಿಗಿಳಿದು ಪ್ರತಿಭಟಿಸಲು ಸಾಧ್ಯವಾಗದೇ ಇರಬಹುದು. ಕಣ್ಣೆದುರು ಕಂಡಿದ್ದನ್ನು ನೋಡುತ್ತ ಸುಮ್ಮನಿರದೇ, ಅಂಥ ತಪ್ಪಿನಲ್ಲಿ ತಾವು ಭಾಗಿಯಾಗದೇ ಜಾಗೃತ ಪ್ರಜ್ಞೆಯನ್ನಿಟ್ಟುಕೊಳ್ಳುವುದೂ ಹೋರಾಟವೇ. ಬರಹದಲ್ಲಿ ವ್ಯಕ್ತಪಡಿಸುವುದೂ ಹೋರಾಟವೇ. ಅಂಥವರನ್ನೆಲ್ಲ ಒಳಗೊಳ್ಳುವುದು ಮಹಿಳಾ ಸಂಘಟನೆಗಳಿಗೆ ಸಾಧ್ಯವಾಗಬೇಕು. 
  • ಮಹಿಳಾ ಚಳುವಳಿಯೆಂಬ ಪ್ರತ್ಯೇಕ ಚಳುವಳಿ ಸಾಧುವೆ? ಸಾಧ್ಯವೇ? ಎಂಬ ಪ್ರಶ್ನೆಯೂ ಇದೆ. ಹಾಗೆ ನೋಡಿದರೆ ಎಲ್ಲ ವಿಷಯಗಳೂ ಮಹಿಳೆಗೆ ಸಂಬಂಧಪಟ್ಟವೇ. ಬೆಲೆ ಏರಿಕೆ, ಎಸ್‌ಇಝಡ್, ಕೋಮುವಾದ, ಪರಿಸರ ನಾಶ, ಗಣಿ, ಭ್ರಷ್ಟಾಚಾರ - ಇದರಲ್ಲಿ ಯಾವುದು ಮಹಿಳೆಗೆ ಸಂಬಂಧಿಸಿದ್ದಲ್ಲ? ಈ ಎಲ್ಲ ಹೋರಾಟಗಳ ತಾತ್ವಿಕತೆಯೊಟ್ಟಿಗೆ ಮಹಿಳೆ ಬೆರೆತುಕೊಳ್ಳಬೇಕು. ಅದೇ ವೇಳೆಗೆ ಎಲ್ಲ ಜನಪರ ಹೋರಾಟಗಳೂ ಮಹಿಳಾ ಇಶ್ಯೂಗಳನ್ನು ಎತ್ತಬೇಕು. ಜಾಗತೀಕರಣದ ಈ ದಿನಗಳಲ್ಲಿ ಚಳುವಳಿಗಳನ್ನಾಗಲೀ, ಅದರ ದಾರಿ-ಗುರಿಗಳನ್ನಾಗಲೀ ತುಂಡುತುಂಡಾಗಿ ನೋಡುವುದರಿಂದ ಒಟ್ಟಾರೆ ಸಾಮಾಜಿಕ ಬದಲಾವಣೆ ಸಾಧ್ಯವಾಗದೇ ಹೋದೀತು. ಹಾಗಾಗಿ ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು. ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು. ಅದು ನಿಜವಾದ ಮಹಿಳಾ ಸಬಲೀಕರಣದ ದಾರಿ.
  • ಮಹಿಳಾ ಚಳುವಳಿ ಮೊದಲು ಹೊಟ್ಟೆ ತುಂಬಿದವರ ಚಳುವಳಿ ಎಂಬ ಅಪಹಾಸ್ಯಕ್ಕೆ ಈಡಾಗಿತ್ತು. ಅದು ಜಾತಿಯು ಮಹಿಳೆಯನ್ನು ಹೇಗೆ ಬಾಧಿಸುತ್ತದೆ ಎಂಬ ವಿಷಯವನ್ನು ಪರಿಗಣಿಸುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಸ್ವಲ್ಪಮಟ್ಟಿಗೆ ಅದು ನಿಜವೂ ಆಗಿತ್ತು. ಜಾತಿ-ವರ್ಗಗಳನ್ನು ಪರಿಗಣಿಸಿದಾಗ ಮಹಿಳೆಯ ಕಷ್ಟಗಳು ಬೇರೆಬೇರೆ ಎನ್ನುವುದು ನಿಜವಾದರೂ ಮಹಿಳಾ ಚಳುವಳಿ ದಲಿತ-ಅಲ್ಪಸಂಖ್ಯಾತ ಅಥವಾ ಇನ್ನಿತರ ಗುಂಪುಗಳ ಮಹಿಳೆಯರ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸುತ್ತಲೇ ಸಮನ್ವಯಗೊಳ್ಳುವುದು ಅವಶ್ಯವಾಗಿದೆ. ಸೈದ್ಧಾಂತಿಕ ಸಂಬಂಧ ಸಾಧ್ಯವಾಗಿ ಸಮಾನ ನೆಲೆಯ ಹೋರಾಟ ರೂಪುಗೊಳ್ಳಬೇಕಾಗಿದೆ. ಸಮಾಜ ಜಾತಿ-ಧರ್ಮ-ಭಾಷೆಗಳಿಂದ ಛಿದ್ರವಾಗಿರುವಾಗ ತನ್ನನ್ನು ಎಲ್ಲಿ ಹೇಗೆ ಗುರುತಿಸಿಕೊಳ್ಳಬೇಕೆಂಬ ಬಗೆಗೆ ಆಕೆ ಸ್ಪಷ್ಟತೆ ಹೊಂದಬೇಕಿದೆ. 


***

ಭಾರತದಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ, ಸಮರ್ಥ ಮಹಿಳಾ ನಾಯಕತ್ವ ಬಂದಿಲ್ಲ. ಕಾರಣವೇನು? ನಾಯಕತ್ವಕ್ಕೆ ಬೇಕಾದ ತ್ಯಾಗ ಮತ್ತು ಅರಿವು ಹೆಣ್ಣಿಗೆ ಸಾಧ್ಯವಾಗಲಿಕ್ಕಿಲ್ಲ ಎಂದೇ ಅನುಮಾನಿಸಲಾಗುತ್ತದೆ. ನಾಯಕತ್ವ ರೂಪುಗೊಳ್ಳದೇ ಇರುವುದರ ಮೂಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿದೆ. ಇದನ್ನು ಎದುರಿಸಿ ಮಹಿಳೆ ನಿಲ್ಲಬೇಕಾದರೆ ಸ್ವ ಬಿಡುಗಡೆ ಅತಿ ಮುಖ್ಯ ಘಟ್ಟವಾಗುತ್ತದೆ. ಇದು ಕತ್ತಿಯಂಚಿನ ದಾರಿ. ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ - ಇದು ಮಹಿಳಾ ಘೋಷವಾಕ್ಯವಾಗಬೇಕು.

ಮಹಿಳೆ ಪ್ರಾಥಮಿಕ ಅಡೆತಡೆಗಳನ್ನು ದಾಟಿಕೊಂಡು ಹೊರಬಂದರೆ ನಂತರವೂ ಚಳುವಳಿ ಸಂಘಟನಾತ್ಮಕವಾಗಿ ಹಲವು ಗೊಂದಲಗಳನ್ನು ಎದುರಿಸಬೇಕಿದೆ. ಚಳುವಳಿಗಳಿಗೆ ಸಿದ್ಧಾಂತ ಮತ್ತು ಆಚರಣೆ ಎಂಬ ಎರಡು ಆಯಾಮಗಳಿರುತ್ತವೆ. ಚಳುವಳಿಯೊಂದು ಪ್ರಬುದ್ಧಾವಸ್ಥೆ ತಲುಪುವವರೆಗೆ ಕೇವಲ ಆಲೋಚನೆಗಳಿರುತ್ತವೆ. ಆಲೋಚನೆಗಳು ಆಚರಣೆಗಳನ್ನು ರೂಪಿಸುತ್ತವೆ. ಆಲೋಚನೆಗಳ ಆಚರಣಾತ್ಮಕ ಪರಿಪಕ್ವತೆಯಲ್ಲಿ ಸಿದ್ಧಾಂತ ರೂಪುಗೊಳ್ಳುತ್ತದೆ. ಮಹಿಳಾ ಚಳುವಳಿ ಆಲೋಚನೆಗಳ ಮಟ್ಟದಲ್ಲೇ ಇದ್ದು ಗಟ್ಟಿಗೊಳ್ಳುವುದು ಅವಶ್ಯವಿದೆ. ಎಲ್ಲ ಚಳುವಳಿಗಳು ತಾತ್ಕಾಲಿಕ ಹಿನ್ನಡೆ ಕಂಡಿರುವ ಸಮಯದಲ್ಲಿ ಹೊಸದಾಗಿ ರೂಪುಗೊಳ್ಳುವತ್ತ ಭಿನ್ನ ಧಾರೆಗಳು ಒಟ್ಟಾಗಿ ಕುಳಿತು ಚಿಂತಿಸಬೇಕಿದೆ.

ಹೀಗೆ ಜಾಗೃತಗೊಂಡ ಮಹಿಳೆ ತನ್ನನ್ನು ತಾನು ಸಮಸ್ಯೆಯಾಗಿ ಗ್ರಹಿಸಿಕೊಳ್ಳದೇ ಇಡೀ ವಿಶ್ವದ ವಿದ್ಯಮಾನಗಳ ಭಾಗವಾಗಿ ತನ್ನತನವನ್ನು ಗುರುತಿಸಿಕೊಳ್ಳಬೇಕು.  ಸ್ಥಾಪಿತ ವ್ಯವಸ್ಥೆಯ ಮೇಲೆ ಒತ್ತಡ ಹಾಕುವ ನೈತಿಕ ಶಕ್ತಿಯಾಗಬೇಕು. ಧಾರ್ಮಿಕ ಮೂಲಭೂತವಾದ, ಮಾರುಕಟ್ಟೆ ಮತ್ತು ಕೋಮುವಾದಿ ರಾಜಕಾರಣದ ದಾಳವಾಗದಂತೆ ಎಚ್ಚರ ಕಾಯ್ದುಕೊಳ್ಳಬೇಕು. ವಿಫಲಗೊಂಡ ನ್ಯಾಯವ್ಯವಸ್ಥೆಯನ್ನು ಹಾಗೂ ಮಲಿನಗೊಂಡ ರಾಜಕಾರಣವನ್ನು ಸರಿಪಡಿಸಬೇಕಲ್ಲದೆ, ನಿಷ್ಪಕ್ಷಪಾತ ನ್ಯಾಯ ಹಾಗೂ ಶಿಕ್ಷಾ ವ್ಯವಸ್ಥೆಗೆ ನಾಂದಿ ಹಾಡಬೇಕು. ಹೆಣ್ಣನ್ನು ಕುರಿತ ಆರೋಗ್ಯಕರ ಮನೋಭಾವನೆ ಬೆಳೆಸುವುದು, ಮಾನವಜೀವಿಯಾಗಿ ಆಕೆಯನ್ನು ಹಾಗೂ ಆಕೆಯ ದುಡಿಮೆಯನ್ನು ಗೌರವಿಸುವುದು; ಮಹಿಳೆಯರನ್ನು ಶೋಷಿಸುವ, ಹಿಂಸಿಸುವ, ಕೀಳಾಗಿ ಕಾಣುವ ಎಲ್ಲಾ ಮೂಢಾಚರಣೆಗಳನ್ನು ನಿಷೇಧಿಸುವುದು; ಇವೆಲ್ಲದರ ಕುರಿತೂ ಕೆಲಸ ಮಾಡಬೇಕು.

ಮಹಿಳಾ ಸಂಘಟನೆಗಳ ಐಕ್ಯತೆಯ ಚಾರಿತ್ರಿಕ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಶಾಲೆಗೆ ಹೋಗುವ ಮಗುವಿನಿಂದ ಹಿಡಿದು ವೃದ್ಧೆಯವರೆಗೆ ಹೆಣ್ಣು ಲೈಂಗಿಕ ಆಟದ ಆಟಿಕೆಯಾಗಿ ಬಳಸಲ್ಪಡುತ್ತಿದ್ದಾಳೆ. ಇಂತಹ ವಿಷಮ ಸಮಯದಲ್ಲಿ ನಾಗರಿಕ ಸಮಾಜ, ಮಾರುಕಟ್ಟೆ, ಮಾಧ್ಯಮ, ಸಂಘಟನೆಗಳು, ಸರ್ಕಾರ, ಯುವ ಸಮೂಹ ಎಲ್ಲರೂ ಲಿಂಗಸೂಕ್ಷ್ಮತೆ ಹೊಂದುವಂತೆ, ದೌರ್ಜನ್ಯದ ವಿರುದ್ಧ ದನಿಯೆತ್ತುವಂತೆ ಮಾಡಬೇಕಾದರೆ; ಮಹಿಳಾ ದನಿ ಕೇಳುವಂತಾಗಬೇಕಾದರೆ ಎಲ್ಲ ಮಹಿಳಾ ಸಂಘಟನೆಗಳು ಒಂದುಗೂಡಲೇಬೇಕು.

ಈ ಕಾರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡು ಹಂಚಿ ಹೋಗಿರುವ ಮಹಿಳೆಯರು, ಮಹಿಳಾಪರ ಮನಸುಗಳು ಒಂದೆಡೆ ಕಲೆಯಬೇಕು; ಪರಸ್ಪರ ಸಂಪರ್ಕ ಜಾಲ ಏರ್ಪಡಬೇಕು; ಅವಶ್ಯ ಬಿದ್ದರೆ ದೊಡ್ಡ ಸಂಖ್ಯೆಯಲ್ಲಿ ಹಾಗೂ ವಿಸ್ತೃತ ಮಟ್ಟದಲ್ಲಿ ಮಹಿಳೆಯರು ಒಟ್ಟುಗೂಡಬಲ್ಲರೆಂಬ ಸಂದೇಶ ರಾಜಕೀಯ ಪಕ್ಷಗಳಿಗೂ ಹಾಗೂ ಪುರುಷ ಪ್ರಧಾನ ಮನಸ್ಸುಗಳಿಗೂ ರವಾನೆಯಾಗಬೇಕು. ಎಂದೇ ಜಾಗೃತ ಮಹಿಳೆಯರೆಲ್ಲ ಈಗ ಮಾಡಬೇಕಿರುವುದು ನಮ್ಮ ಎಲ್ಲ ಸೋದರಿಯರನ್ನೂ ಒಂದೇ ವರ್ತುಲದೊಳಗೆ ತಂದುಕೊಳ್ಳುವ ಬಾಧಿತ ಐಡೆಂಟಿಟಿಯನ್ನು ಕಟ್ಟಿಕೊಳ್ಳುವುದು. ಆಗ ದೊರೆಯುವ ಒಗ್ಗಟ್ಟಿನ ದನಿ ಮಾತ್ರ ಮಹಿಳಾ ಸಮಾನತೆಗಿರುವ ತಡೆಗೋಡೆಗಳ ಒಡೆದು ಕ್ಷಿತಿಜದಂಚಿನ ಕನಸನ್ನು ನೆಲದ ಮೇಲೆ ಸಾಕಾರಗೊಳಿಸಬಲ್ಲದು.










No comments:

Post a Comment