Friday, 11 September 2015

ಎಂ. ಎಂ. ಕಲಬುರ್ಗಿ: ಪೂರ್ವಭಾಷಿಗೆ ಶರಣು..




ಕವಿರಾಜಮಾರ್ಗಕಾರ ಬಣ್ಣಿಸಿದ ಕಾಲದ ಕನ್ನಡ ಜನಪದಲ್ಲಿ ನ್ಯಾಯಯುತ ಹಕ್ಕು ಪ್ರತಿಪಾದಿಸಿದವರ ಕೈ ಕಡಿಯುವುದು, ಪ್ರತಿಭಟಿಸುವವರ ಹತ್ಯೆಗೈಯುವುದು, ಪ್ರಶ್ನಿಸುವವರ ಮುಖಕ್ಕೆ ಮಸಿ, ಸಗಣಿ ಬಳಿಯುವುದು ಇತ್ತೋ ಇಲ್ಲವೋ, ಆದರೆ ಈಗ ಕನ್ನಡ ನುಡಿಯಂತೇ ಕನ್ನಡ ಜನಪದವೂ ಆತಂಕ, ಅಭದ್ರತೆಯನ್ನೆದುರಿಸುತ್ತಿದೆ. ಕವಿರಾಜಮಾರ್ಗಕಾರನ ಕಾಲ ಕುರಿತು ಅಧ್ಯಯನ ನಡೆಸಿದ ಕನ್ನಡ ದನಿಯೊಂದನ್ನು ಬಲವಂತದ ಮೌನಕ್ಕೆ ದೂಡಲಾಗಿದೆ.

ಹೌದು. ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಬಸವಣ್ಣನ ಕೊಲೆಗಾರರೆಂದು ಮಠ-ಗುರುಗಳನ್ನು ಟೀಕಿಸುತ್ತಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಇದುವರೆಗೆ ಅಲ್ಲೆಲ್ಲೆಲ್ಲೋ ಸಂಭವಿಸುತ್ತಿದ್ದದ್ದು ಇಂದು ನಮ್ಮಂಗಳದಲ್ಲೇ ಸಂಭವಿಸಿ ಪ್ರಜ್ಞಾವಂತರು ದಿಗ್ಭ್ರಮೆಗೊಂಡರು. ಅವರ ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿದರು. ಚಂಪಾ, ಕನ್ನಡದ ಆರು ಉದಯೋನ್ಮುಖ ಕವಿಗಳು, ಹಿಂದಿ ಲೇಖಕ ಉದಯಪ್ರಕಾಶ್ ಸೇರಿದಂತೆ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು. ಅತಿದುಃಖದ, ಅತಿ ಆಕ್ರೋಶದ ಪ್ರತಿಕ್ರಿಯೆಗಳು ಕೇಳಿಬಂದ ಬೆನ್ನಲ್ಲೇ ‘ಎಲ್ಲ ಅತಿಯಾಯಿತು, ಸುಮ್ಮನಿರಿ’ ಎಂಬ ಧಾಟಿಯ ಅತಿ ನ್ಯೂಟ್ರಲ್ ಪ್ರತಿಕ್ರಿಯೆಗಳೂ ಕೇಳಿಬಂದವು. ಯಾವ ಪುರೋಹಿತಶಾಹಿಯನ್ನು ಕಲಬುರ್ಗಿ ಟೀಕಿಸುತ್ತಿದ್ದರೋ ಅದರ ಮುಂದುವರೆದ ಕೊಂಡಿಗಳಂತಿದ್ದ ಮಠ, ಟ್ರಸ್ಟ್, ಸಂಸ್ಥೆಗಳೊಂದಿಗೆ ಅವರಿಗಿದ್ದ ಸೌಹಾರ್ದ ಸಂಬಂಧ-ಒಡನಾಟವನ್ನು ನೆನೆಸಿಕೊಂಡು ಕೆಲ ಮನಸುಗಳು ಕಸಿವಿಸಿಗೊಂಡವು. ಒಟ್ಟಾರೆ ಅವರವರ ಭಾವ, ಭಕುತಿಗೆ ತಕ್ಕಂತೆ ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು.

ಆದರೆ ಎಲ್ಲಕ್ಕಿಂತ ವಿಲಕ್ಷಣವಾಗಿ ಕರಾವಳಿ ಮತ್ತಿತರ ಕಡೆಗಳಲ್ಲಿ ಅವರು ಬರೆದ ಒಂದಕ್ಷರವನ್ನೂ ಓದಿರದ ಧರ್ಮಾಂಧರಿಂದ ಸಂಭ್ರಮದ ಪ್ರತಿಕ್ರಿಯೆ ವ್ಯಕ್ತವಾಯಿತು! ಧರ್ಮದ್ರೋಹಿಗೆ ತಕ್ಕ ಶಾಸ್ತಿಯಾಯಿತು ಎಂದು ಜಾಲತಾಣಗಳಲ್ಲಿ ಕಮೆಂಟುಗಳು ಬಂದವು. ಮುಂದಿನ ಸರದಿ ಯಾರದು ಎಂದೂ ಹಿಟ್‌ಲಿಸ್ಟ್ ಬಿಡುಗಡೆ ಮಾಡಲಾಯಿತು. ಅದರ ಆಧಾರದ ಮೇಲೆ ಕೆಲವರ ಬಂಧನ, ಬಿಡುಗಡೆಯೂ ಆಯಿತು.

ಅಂತರ್ಜಾಲದಲ್ಲಿ ಹಿಟ್‌ಲಿಸ್ಟ್?! ನಿಜ. ಇವತ್ತು ಸ್ಥಳೀಯ, ಅಂತಾರಾಷ್ಟ್ರೀಯ ಘಟನೆ ತೀವ್ರಗಾಮಿ ಮನಸುಗಳಲ್ಲಿ ಯಾವ ತೆರನ ಪ್ರತಿಕ್ರಿಯೆ ಹುಟ್ಟುಹಾಕುತ್ತದೆ ಎಂದು ನೋಡಲು ಅಂತರ್ಜಾಲ ಗಮನಿಸಬೇಕು. ಅಂತರ್ಜಾಲವು ಕಲಿತ, ತರುಣ ಪೀಳಿಗೆಯ, ಒಂದು ವರ್ಗದ ಮನಸ್ಥಿತಿಯ ಪ್ರತಿಬಿಂಬವಾಗಿದ್ದು ಶಿಷ್ಟರೆಂದುಕೊಂಡವರ ದುಷ್ಟತನವನ್ನು ಅನಾವರಣಗೊಳಿಸುವ ಮಾಧ್ಯಮವಾಗಿದೆ. ಕೆರಳಿದ ಹಾಗೂ ಅಸಹನೆಯ ಸಮಾಜ ಸೃಷ್ಟಿಸುವಲ್ಲಿ ಮಾಧ್ಯಮ ಮತ್ತು ಅಂತರ್ಜಾಲದ ಮಹತ್ವದ ಪಾತ್ರವಿದೆ. ಭಾರತದಲ್ಲಂತೂ ಅಂತರ್ಜಾಲದ ಕಮೆಂಟಿಗರ ಪಡೆಯೇ ಸೃಷ್ಟಿಯಾಗಿದ್ದು ಮುಕ್ತ ವಿಚಾರಗಳನ್ನು, ಅದರ ಪ್ರತಿಪಾದಕರನ್ನು ‘ಬುಜೀ’ (ಬುದ್ಧಿಜೀವಿ) ಗಳೆಂದು ಅದು ಮನಬಂದಂತೆ ಹಣಿಯುತ್ತದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆ, ಟೀಕೆಯೂ ಸಮಾಜದಲ್ಲಿ ಎಂತೋ ಅಂತೆಯೇ ಜಾಲದಲ್ಲೂ ಅತಿವೇಗದ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕುತ್ತಿದೆ. ಅಂತರ್ಜಾಲಿಗರ ಉಗ್ರ ಗುಂಪು ಒಂದು ಆರೋಗ್ಯಕರ ಚರ್ಚೆ ನಡೆಯುವುದೇ ಸಾಧ್ಯವಾಗದಂತೆ ಮಾಡುತ್ತ ಬೀದಿಹೋರಾಟದಷ್ಟೆ ಭರಾಟೆಯಿಂದ ಜಾಲಿಗರ ಕಾಳಗ ನಡೆಸುತ್ತದೆ.

ಇವತ್ತು ಎಲ್ಲ ದೇಶ, ಧರ್ಮಗಳಲ್ಲೂ ಈ ಉನ್ಮಾದದ ಮನಸ್ಥಿತಿ ಇದೆ. ಇದು ಇದ್ದಕ್ಕಿದ್ದಂತೆ ಸೃಷ್ಟಿಯಾದದ್ದಲ್ಲ. ಅದಕ್ಕೆ ಪ್ರಸಕ್ತ ರಾಜಕೀಯ ಹುಟ್ಟುಹಾಕುವ ಸಾಮಾಜಿಕ ಹಾಗೂ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ. ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಅದು ಸೃಷ್ಟಿಸುತ್ತದೆ. ಇದು ಕಲಬುರ್ಗಿ ಹಂತಕರನ್ನಷ್ಟೇ ಅಲ್ಲ; ಪೆರುಮಾಳ್ ಮುರುಗನ್, ಶಿರೀನ್ ದಳವಿ, ಬಿನಾಯಕ್ ಸೇನ್, ತೀಸ್ತಾ, ಸಂಜೀವ ಭಟ್ ಮುಂತಾದ ಎಷ್ಟೋ ಸಂವೇದನಾಶೀಲರ ಕೊಲೆಗಾರರನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿದೆ. ಒಟ್ಟಾರೆ ಹೇಳುವುದಾದರೆ ಕಲಬುರ್ಗಿಯವರ ಹತ್ಯೆಗೆ ಕಾರಣ ಮತ್ತು ಸುಳುಹುಗಳು ಅಂತರ್ಜಾಲದಲ್ಲೇ ದೊರೆಯುತ್ತವೆ.

ಈ ಹತ್ಯೆ ಮತ್ತದರ ಕುರಿತು ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಕೆಲ ಅಂಶಗಳನ್ನು ಗಮನಿಸಬಹುದು:


  • ಕಲಬುರ್ಗಿ ಅವರ ಹತ್ಯೆ ಇಂಥವರಿಂದಲೇ ಆಯಿತೆನ್ನಲು ಇನ್ನೂ ಯಾವ ಸುಳುಹೂ ದೊರೆತಿಲ್ಲ. ಆದರೆ ಇದು ವಿಚಾರ ವಿರೋಧಿಗಳ ಕೃತ್ಯ ಎನ್ನುವುದು ಓಪನ್ ಸೀಕ್ರೆಟ್. ಕಲಬುರ್ಗಿಯವರ ಸಮಕಾಲೀನರೂ, ಸಹವರ್ತಿಗಳೂ ಆಗಿದ್ದ, ಅವರಂತೇ ಮಠ-ಪೀಠ ವ್ಯವಸ್ಥೆಗಳನ್ನು ಟೀಕಿಸುತ್ತಿದ್ದ ಲಿಂಗಣ್ಣ ಸತ್ಯಂಪೇಟೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ದರು. ಕಲಬುರ್ಗಿಯವರಿಗೂ ಪ್ರಾಣ ಬೆದರಿಕೆಯ ಕರೆಗಳು ಬಂದು ಕೆಲವು ದಿನ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು. ಪೊಲೀಸ್ ರಕ್ಷಣೆ ಬೇಡವೆಂದು ಅವರೇ ನಿರಾಕರಿಸಿದ ಮೇಲೆ ಹತ್ಯೆ ಸಂಭವಿಸಿದೆ. ಅದು ಮೂಲಭೂತವಾದಿಗಳಿಂದಲೇ ಆದದ್ದು ಎಂದುಕೊಳ್ಳುವುದಾದರೆ ಅವರು ಬಹಳ ಸಾಫ್ಟ್ ಟಾರ್ಗೆಟ್ ಆಗಿದ್ದರು. ಅವರಿಗಿಂತ ಖಂಡತುಂಡ ಮಾತುಗಳಲ್ಲಿ ಯಾವುದೇ ಅನುಮಾನ, ಭಯವಿರದೆ ಮೂಲಭೂತವಾದದ ಎಲ್ಲ ಒಳಮಗ್ಗುಲು, ಆಯಾಮಗಳನ್ನು ಬರಹ-ಪುಸ್ತಕ ರೂಪದಲ್ಲಿ ಹೊರ ಹಾಕುವ ಹತ್ತಾರು ಚಿಂತಕರು, ಹೋರಾಟಗಾರರು ಕನ್ನಡದಲ್ಲಿದ್ದಾರೆ. ಆದರೂ ಅವರನ್ನೇ ಏಕೆ ಆಯ್ದುಕೊಳ್ಳಲಾಯಿತು? ಇದು ಅಪರಾಧ ಸಂಹಿತೆಯ ಒಳಸೂಕ್ಷ್ಮಗಳಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಯಾವಾಗಲೂ ವ್ಯವಸ್ಥೆಗೆ ಒಳಗಿದ್ದು ವಿರುದ್ಧ ಮಾತನಾಡುವ ‘ಕ್ರಿಟಿಕಲ್ ಇನ್‌ಸೈಡರ‍್ಸ್’ ಮೇಲೆ ಹೆಚ್ಚು ಸಿಟ್ಟಿರುತ್ತದೆ. ಉದಾಹರಣೆಗೆ ನಾನು ಹಿಂದೂ ಎಂದು ಅದರ ಒಳಹುಳುಕುಗಳ ಕುರಿತು ಹೇಳುವ ಗಾಂಧಿ ಹಿಂದೂ ಉಗ್ರಗಾಮಿಗಳಿಂದ ಕೊಲ್ಲಲ್ಪಡುತ್ತಾರೆ. ಹಂತಕ ವ್ಯವಸ್ಥೆ ಉಳಿದವರನ್ನು ಭಯಗೊಳಿಸುವ ಸಲುವಾಗಿ ಇಂಥ ಸಾಫ್ಟ್ ಟಾರ್ಗೆಟ್‌ಗಳನ್ನೇ ಆಯ್ದುಕೊಳ್ಳುತ್ತದೆ. 
  • ಇವತ್ತು ಕಾಲ ನಾವು ತಿಳಿದಷ್ಟು ಅಮಾಯಕವಾಗಿಲ್ಲ. ಮೂಲಭೂತವಾದದ ಹುನ್ನಾರಗಳಿಗೆ ಕವಿ, ಚಿಂತಕರ ಅಂತರಂಗದ ಮಾತು, ಸ್ಪಷ್ಟತೆ, ನಿರ್ಭಯ ಸ್ವತಂತ್ರ ಪ್ರವೃತ್ತಿಗಳೆಲ್ಲ ಬಲಿಯಾಗುತ್ತಿರುವ ಸೂಚನೆ ಕಾಣತೊಡಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹಿರಿಕಿರಿಯರೆನ್ನದೆ ನಾವೆಲ್ಲ ಮಾತನಾಡುತ್ತೇವೆ. ಆದರೆ ಯಾವ ಮೂಲಭೂತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆಯೊ ಅದರ ಸಾಂಸ್ಕೃತಿಕ ಮುಖವಾಡ ಕಿತ್ತೆಸೆದು ನೋಡಲು, ಅದರ ನಾನಾವೇಷಗಳನ್ನು ಗುರುತಿಸಲು, ಸಂತಾನ ಅರಿಯಲು ನಾವು ವಿಫಲರಾಗಿದ್ದೇವೆ. ಕಲಬುರ್ಗಿಯವರಂಥ ಹಿರಿಯ ಚಿಂತಕ, ಸಾಹಿತಿಗಳೂ ಇದರಿಂದ ಹೊರತಲ್ಲ. ಕೆಲ ಚಿಂತಕರು ಸಂಘಟಕರ ಥಳಕುಬಳುಕು, ಶಿಸ್ತು, ಸಿರಿಗಳಿಗೆ ಮಾರುಹೋಗಿ ಜನವಿದ್ದಲ್ಲೆಲ್ಲ ಜಾತ್ರೆ ಎಂದುಕೊಂಡು ಹೋಗುತ್ತಿದ್ದಾರೆ. ಆದರೆ ಸಿರಿ ಪ್ರದರ್ಶನದ ಜಾತ್ರೆಯಲ್ಲಿ ನಮ್ಮ ಮನೆದೇವರಾದ ಕಲ್ಲುದೈವಗಳಿರುವುದಿಲ್ಲ; ಬರಿ ಉತ್ಸವ ಮೂರ್ತಿಗಳೇ ಇರುತ್ತವೆ. ಅಷ್ಟೇ ಅಲ್ಲ, ಹಂಗಿನರಮನೆಯು ತನ್ನಲ್ಲಿ ಬಂದುಹೋದವರ ಹೆಸರನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದೂ ಚಿಂತಕರಿಗೆ ತಿಳಿಯದೇ ಹೋಗಿದೆ. ಈ ಹತ್ಯೆಯ ನಂತರವಾದರೂ ಮೂಲಭೂತವಾದಿ ಪಕ್ಷ-ಸಂಘಗಳೊಂದಿಗೆ ಸಂಬಂಧವಿರುವ ಯಾವುದೇ ಸಭೆಸೆಮಿನಾರುಗಳಲ್ಲಿ ಭಾವಹಿಸುವ ಕುರಿತು ನಾವು ಮರು ಯೋಚಿಸಬೇಕಿದೆ. 
  • ಕಲಬುರ್ಗಿ ಹತ್ಯೆ ಖಂಡಿಸಿ ರಾಜಧಾನಿಯಲ್ಲಿ ಹಾಗೂ ಧಾರವಾಡ-ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆ, ಖಂಡನೆ ವ್ಯಕ್ತವಾಗುತ್ತಿದೆ. ಧಾರವಾಡ ಕೇಂದ್ರಿತ ಆಗುಹೋಗುಗಳು ತನಿಖಾ ವ್ಯವಸ್ಥೆ ಚುರುಕಾಗುವಂತೆ ಒತ್ತಡ ಸೃಷ್ಟಿಸುತ್ತಿವೆ. ಕಲಬುರ್ಗಿಯವರೊಡನೆ ನಿತ್ಯ ಒಡನಾಡಿದವರು ಸದ್ಯದ ಆಘಾತ ಹಾಗೂ ನಾಳೆಯ ಜವಾಬ್ದಾರಿಗಳೆರಡರ ಸಮತೋಲ ಕಾಯ್ದುಕೊಳ್ಳುತ್ತ ಪ್ರತಿನಿತ್ಯ ಒಟ್ಟಾಗಿ ಚರ್ಚಿಸುತ್ತ ಜಾಗೃತರಾಗಿ, ಒಗ್ಗಟ್ಟಾಗಿರಬೇಕಾದ ಅವಶ್ಯಕತೆ ಕುರಿತು ಸ್ಪಷ್ಟವಾಗತೊಡಗಿದ್ದಾರೆ. ಹತ್ಯೆ ವಿರೋಧಿ ಸಮಿತಿ ರಚನೆಯಾಗಿ ನ್ಯಾಯದ ಆಗ್ರಹಕ್ಕೆ ಹೋರಾಟದ ಸ್ವರೂಪ ನೀಡುತ್ತಿದೆ.


ಇದಕ್ಕಿಂತ ಭಿನ್ನವಾಗಿ ಗುಟ್ಟಾಗಿ ಚೆಡ್ಡಿ ತೊಟ್ಟ ಚಿಂತಕರ ಪಡೆ ಪ್ರಪಂಚದ ಬೇರಾವುದೇ ದೇಶದಲ್ಲಿಲ್ಲದಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದಲ್ಲಿದೆ; ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎನ್ನುವುದೆಲ್ಲ ಬುದ್ಧಿಜೀವಿಗಳ ಅನಗತ್ಯ ಬೊಗಳೆ ಎಂದು ಬೆನ್ನು ನೀವಿಕೊಳ್ಳುತ್ತಿದೆ. ಅದು ಅವರ ಅನುಭವವಾಗಿ ನಿಜವಿರಬಹುದು. ಯಾಕೆಂದರೆ ವ್ಯವಸ್ಥೆಯ/ಧರ್ಮ-ಜಾತಿಯ ಪರವಾಗಿ ನೀವಿರುವುದಾದರೆ ಭಾರತದಲ್ಲಿ ಹೇರಳ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಯಥಾಸ್ಥಿತಿಯನ್ನು ಒಪ್ಪದೆ ಹೊಸವಿಚಾರ ಪ್ರತಿಪಾದಿಸುವವರಿಗಷ್ಟೆ ಆ ಸ್ವಾತಂತ್ರ್ಯದ ಇತಿಮಿತಿಗಳೇನೆಂದು ಸ್ಪಷ್ಟವಾಗಿ ಅರಿವಾಗುತ್ತಿದೆ.



  • ಯಾವುದೇ ಸರ್ಕಾರವಿರಲಿ, ಎಂಥ ಗಹನ ಅಪರಾಧವೇ ಇರಲಿ, ಅದು ಪ್ರಭಾವೀ ಧರ್ಮ/ಜಾತಿ/ಪಕ್ಷದ ವ್ಯಕ್ತಿಗೆ ಸಂಬಂಧಿಸಿದ್ದಾದರೆ ಹೇಗೆ ಮುಚ್ಚಿ ಹೋಗುತ್ತಿದೆಯೆಂದು ನಾವು ನೋಡುತ್ತಿದ್ದೇವೆ. ಯಾವುದೇ ಜಾತಿಯ, ಪಂಥದ ಸ್ವಾಮಿಯಲ್ಲದ ನಿತ್ಯಾನಂದನನ್ನೇನೋ ಹಿಡಿದು ಹಾಕಿದರು. ಆದರೆ ಸ್ವಾಮಿಯೊಬ್ಬ ತಮ್ಮನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆ ಕುಲದ ಹೆಣ್ಮಕ್ಕಳು ಪದೇಪದೇ ದೂರು ಕೊಟ್ಟರೂ ವ್ಯವಸ್ಥೆಯೇ ಭೇದಿಸಲಾಗದ ಕೋಟೆ ಕಟ್ಟಿ ಆತನನ್ನು ರಕ್ಷಿಸುತ್ತಿದೆ. 


ನಮ್ಮ ತನಿಖಾ ತಂಡದ ನಾಯಿಗಳಾದರೋ ವಾಸನೆ ಮೂಸುತ್ತ ಮೂಸುತ್ತ ಒಂದು ಸರ್ಕಲಿನಲ್ಲೋ, ಬಸ್‌ಸ್ಟ್ಯಾಂಡ್-ರೈಲ್ವೆ ಸ್ಟೇಷನಿನಲ್ಲೊ ನಿಂತುಬಿಡುತ್ತವೆ. ಅಲ್ಲಿಂದ ಮುಂದೆ ವಿಶಾಲ ಬಯಲೂ, ಅದರ ತುಂಬ ಗವಿ-ಬಿಲ-ಗುಹೆಗಳೂ ಇದ್ದು ಅಲ್ಲಿ ಸಾಕ್ಷಿಯೆಂಬ ಇರುವೆಯನ್ನು ಹುಡುಕುವುದೇ ಕಷ್ಟವಾಗಿದೆ. ಗುಂಡು ಹಾರಿಸಿದ ಶಾರ್ಪ್ ಶೂಟರುಗಳ ಸುಳಿವು ದೊರೆತೀತು. ಅವರಿಗೆ ಕಾಸು ಕೊಟ್ಟ ರೌಡಿಯ ಸುಳಿವು ದೊರೆತೀತು. ಆದರೆ ಆ ರೌಡಿಯನ್ನು ಸಾಕಿಕೊಂಡ ಅಪ್ಪಅಮ್ಮಗಳ ಬಗೆಗೆ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ದೊರೆತರೂ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಪ್ರಭಾವೀ ವ್ಯಕ್ತಿಯವರೆಗೆ ಬಂದುನಿಂತು ತನಿಖೆ ‘ಇಲ್ಲಿಗೀ ಕತೆ ಮುಗಿಯಿತು’ ಎಂದು ಅಪೂರ್ಣಗೊಳ್ಳುವುದೇ ಜಾಸ್ತಿಯಾಗಿದೆ. ಲಿಂಗಣ್ಣ ಸತ್ಯಂಪೇಟೆ ಅವರ ಶವ ಚರಂಡಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿ; ನರೇಂದ್ರ ಧಾಬೋಲ್ಕರ್, ಪನ್ಸಾರೆ ಹತ್ಯೆಯಾಗಿ ವರ್ಷಗಳೇ ಉರುಳಿದರೂ ಹಂತಕರ ಸುಳಿವು ಸಿಗದಿರುವುದು ನಮ್ಮ ಕಣ್ಣೆದುರಿಗಿದೆ.





ಹೀಗಿರುತ್ತ ಹತ್ಯೆ ಖಂಡಿಸಿ ಹಂತಕರನ್ನು ಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸುವುದು; ಹಲವೆಡೆ ಬರಹಗಾರರು, ಚಿಂತಕರು ಸಭೆ ನಡೆಸಿ, ತಮಗೆ ದೊರಕಿದ ಪ್ರಶಸ್ತಿ ಸಮ್ಮಾನಗಳನ್ನು ನಿರಾಕರಿಸಿರುವುದು ಮುಂತಾದ ಸಾಂಕೇತಿಕ ಹಾಗೂ ಸೃಜನಶೀಲ ಕ್ರಮಗಳೆಲ್ಲ ತನಿಖೆ ಚುರುಕುಗೊಳ್ಳುವಂತೆ ಒತ್ತಡ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಬಹುಪಾಲು ಅಪರಾಧ ತನಿಖೆಗಳೆಲ್ಲ ನಾನಾ ಕಾರಣಗಳಿಗಾಗಿ ಹಳ್ಳ ಹಿಡಿಯುತ್ತಿರುವಾಗ ಜಡಭರತ ವ್ಯವಸ್ಥೆಯ ಮೇಲೆ ಒತ್ತಡ ತರುವ ಸಲುವಾಗಿ ನಿರಂತರ ಹೋರಾಟ, ನ್ಯಾಯ ದೊರೆಯುವವರೆಗೆ ಹೋರಾಟ ಅಗತ್ಯವಾಗಿದೆ. ಎಂದೇ ಕಲಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ ಹಿರಿಕಿರಿಯರು ಭಿನ್ನಭೇದ ಮರೆತು ಒಟ್ಟಾಗಿ ಸೆ. ೧೪ರಂದು ಧಾರವಾಡದಲ್ಲಿ ಬೃಹತ್ ರ‍್ಯಾಲಿ ಮತ್ತು ಸಮಾವೇಶದಲ್ಲಿ ಒಗ್ಗೂಡಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಮಾನ ಮನಸ್ಕರ ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಂತಕರನ್ನು ಗುರುತಿಸುವಂತೆ; ಹಂತಕ ವ್ಯವಸ್ಥೆಯ ಬೇರುಗಳನ್ನು ಬುಡಮಟ್ಟ ಕಿತ್ತುಹಾಕುವಂತೆ ಒತ್ತಾಯಿಸಿದರು. ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ; ಹತ್ಯೆ ಹೇಡಿಗಳ ಕೆಲಸ ಎಂಬ ಅಭಿಪ್ರಾಯ ಕೇಳಿಬಂತು. ಒಟ್ಟಾರೆ ಕೋಮುವಾದವನ್ನೂ, ಅದು ಸೃಷ್ಟಿಸುವ ಅಸಹನೆಯನ್ನೂ ತೊಡೆಯಲು ಕಲಬುರ್ಗಿ ಹತ್ಯೆಯನ್ನು ಮುಂದಿಟ್ಟುಕೊಂಡು ಶ್ರಮಿಸಬೇಕು; ಎಳೆಯ ಮನಸುಗಳಲ್ಲಿ ಆರೋಗ್ಯಕರ ಧಾರ್ಮಿಕತೆ ಬೆಳೆಸಬೇಕು; ಜಿಲ್ಲಾ ಕೇಂದ್ರಗಳಲ್ಲೂ ಸರಣಿ ಹೋರಾಟಗಳಾಗಬೇಕು ಎಂದು ನಿರ್ಧರಿಸಲಾಯಿತು.

ಜೀವಮಾನವಿಡೀ ಕಲಬುರ್ಗಿಯವರು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಅವರ ಮರಣವೂ ಜಾಗ್ರತ ಗುಂಪೊಂದು ಕ್ರಿಯಾಶೀಲವಾಗುವಂತೆ ಮಾಡಿರುವುದು ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂಬ ಮಾತು ನಿಜಗೊಳ್ಳುವಂತೆ ಮಾಡಿದೆ. ಕಲಬುರಗಿಯವರನ್ನು ಮೌನವಾಗಿಸಿರುವೆವೆಂದು ಯಾರೂ ಬೀಗದಿರಲಿ, ಇದುವರೆಗೆ ಬಾಯಿಗೆ ಬೀಗ ಹಾಕಿಕೊಂಡವರ ನಾಲಿಗೆಗಳಲ್ಲೂ ಕಲಬುರ್ಗಿ ನುಡಿಯತೊಡಗಿದ್ದಾರೆ!

***

ಈ ದುರ್ಘಟನೆಯ ಬಳಿಕ ಅವರ ಆಪ್ತೇಷ್ಟರು, ಶಿಷ್ಯರು ಕಲಬುರ್ಗಿಯವರ ಗೆಯ್ಮೆ ಗರಿಮೆಗಳನ್ನು, ಅವರ ಮಾತು-ಚಿಂತನೆ-ವ್ಯಕ್ತಿತ್ವವನ್ನು ನೆನಪಿಸಿಕೊಂಡು ಎಲ್ಲೆಲ್ಲೂ ಬರೆಯುತ್ತ, ಮಾತನಾಡುತ್ತಿರುವಾಗ ಅವರನ್ನು ಎಂದೂ ಭೇಟಿಯಾಗದ, ಫೋನಿನಲ್ಲಿ ಮಾತನಾಡದ, ಅವರ ಒಂದೂ ಭಾಷಣ-ಪಾಠ ಕೇಳದ, ಅಷ್ಟಾಗಿ ಓದಿಕೊಂಡಿಲ್ಲದ ನಾನು ಏನು ಬರೆಯುವುದು ಎಂದುಕೊಳ್ಳುತ್ತಿದ್ದೆ. ಆದರೆ ಒಳದನಿ ಏಕೆ ಅವರು ನಿನ್ನ ಅಕ್ಷರ ಬಂಧುವಲ್ಲವೆ ಎಂದು ಪ್ರಶ್ನಿಸುತ್ತಿದೆ. ಈ ಸಾವಿನ ಕುರಿತು ಬರೆಯಬೇಕಾದ ಒತ್ತಡ ಸೃಷ್ಟಿಸಿದೆ.

ಮನುಷ್ಯ ದೇಹ ಅಮರವಲ್ಲ. ಅವನ ಚೇತನ ಕಾಲದ ಸರಪಳಿಯಲ್ಲಿ ಭಾಷೆಯ ಒಂದು ಕೊಂಡಿ. ಒಬ್ಬ ಬರಹಗಾರನ ಸಾವು ಕೇವಲ ಒಂದು ಮಾನವ ಜೀವದ ಇಲ್ಲವಾಗುವಿಕೆಯಲ್ಲ. ಅದು ಒಂದು ಭಾಷೆಯ ಒಂದು ಸಂವೇದನೆಯ ಸಾವು. ಬರಹಗಾರನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ದೇಹವಲ್ಲ, ಆತ ಅವನಂತೆ ಯೋಚಿಸುವ ಒಂದು ಸಮುದಾಯದ, ಒಂದು ತಲೆಮಾರಿನ ಪ್ರತಿನಿಧಿ. ಬರವಣಿಗೆ ಎಂದರೆ ಆಡದವರ ಮಾತು, ಕಾಣದವರ ಕಣ್ಣು. ವಾಲ್ಮೀಕಿ ರಾಮನ ಕುರಿತು ಹೇಳುವಂತೆ ಬರಹಗಾರ ‘ಪೂರ್ವಭಾಷಿ’. ಎದುರಿರುವವರು ಆಡಲಾರದ, ಅನುಭವಿಸಲಾರದ ಸಂಕಟಗಳಿಗೆ ಮಾತಿನ ರೂಪ ಕೊಟ್ಟು ಅವರಿಗಿಂತ ಮೊದಲೇ ಆಡುವವ. ಅದರಲ್ಲೂ ಸಂಶೋಧಕನ ಸ್ಥಾನ ಕವಿಗಿಂತ, ಬರಹಗಾರನಿಗಿಂತ ವಿಭಿನ್ನ ಹಾಗೂ ವಿಶಿಷ್ಟ. ಸತ್ಯನಿಷ್ಠುರಿಯಾಗಿ ಚರಿತ್ರೆ ತಿಳಿಯಬೇಕಾದ, ತಿಳಿಸಬೇಕಾದ ಜವಾಬ್ದಾರಿ ಸಂಶೋಧಕರ ಹೆಗಲ ಮೇಲಿರುತ್ತದೆ. ಎಂದೇ ದಿಟ್ಟವಾಗಿ, ವಿಶಿಷ್ಟವಾಗಿ ಚರಿತ್ರೆಯ ಮೂಲ ಆಕರಗಳನ್ನೇ ಶೋಧಿಸುತ್ತ ನಡೆದಿದ್ದ; ನಾನೆಂದೂ ನೋಡಿರದ, ಮಾತನಾಡಿರದ, ಕಲಬುರ್ಗಿಯವರ ಸಾವು ಒಳಗೊಂದು ತಂತಿ ಕಡಿದ ಅನುಭವ ಹುಟ್ಟಿಸುತ್ತಿದೆ.

ಅಳಿವಿರದ ಚೇತನವೇ, ಇಡುವ ಹೆಜ್ಜೆಗಳಲಿಷ್ಟು ಸತ್ಯದ ಕಸುವು ತುಂಬು, ನಮಸ್ಕಾರ..




Sunday, 6 September 2015

ವೈದ್ಯಶಿಕ್ಷಣ ಮತ್ತು ಲಿಂಗರಾಜಕಾರಣ: ಪ್ಯಾಂಡೊರಾ ಪೆಟ್ಟಿಗೆ





ಇವತ್ತು ಎಷ್ಟೋ ಮಹಿಳೆಯರು ವೈದ್ಯ ವೃತ್ತಿಯಲ್ಲಿದ್ದಾರೆ. ಈಗ ಪ್ರತಿವರ್ಷ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ, ರ‍್ಯಾಂಕ್ ಪಡೆದವರ ಪಟ್ಟಿಯಲ್ಲಿ ವಿದ್ಯಾರ್ಥಿನಿಯರದೇ ಮೇಲುಗೈಯಾಗಿರುತ್ತದೆ. ವೈದ್ಯ ಕಾಲೇಜುಗಳಲ್ಲೂ ಬಿಳಿ ಏಪ್ರನ್ ತೊಟ್ಟ ಎಳೆಯ ವೈದ್ಯೆಯರು ಸಾಕಷ್ಟು ಕಾಣುತ್ತಾರೆ. ಇತ್ತೀಚೆಗೆ ಓದಿದ ವರದಿಯಂತೆ ಪಾಕಿಸ್ತಾನದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ವೈದ್ಯರಿದ್ದಾರೆ! ಇವತ್ತು ಹೆಣ್ಣುಮಕ್ಕಳು ಇಷ್ಟು ಸುಲಭದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಗಿಟ್ಟಿಸುತ್ತಿರುವುದರ ಹಿಂದೆ ಈ ಹಾದಿಯನ್ನು ತೆರವುಗೊಳಿಸಿದ ಪೂರ್ವ ಮಾತೆಯರ ಹೋರಾಟದ ದೊಡ್ಡ ಚರಿತ್ರೆಯೇ ಇದೆ. ಅದನ್ನು ತೆರೆದರೆ ‘ಪ್ಯಾಂಡೋರಾ’ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ.

ಗ್ರೀಕ್ ಪುರಾಣದ ಪ್ರಕಾರ ಭೂಮಿ ಮೇಲೆ ಹುಟ್ಟಿದ ಮೊದಲ ಹೆಣ್ಣು ಪ್ಯಾಂಡೊರಾ. ದೇವಾನುದೇವತೆಗಳು ಅವಳಿಗೆ ಸೌಂದರ್ಯ, ವಸ್ತ್ರ, ಸಂಗೀತ, ಮಾತು ಇತ್ಯಾದಿ ಎಲ್ಲ ಜಾಣ್ಮೆಯ ಕಾಣಿಕೆಯನ್ನೇನೋ ನೀಡಿದರು. ಆದರೆ ಸ್ವರ್ಗದಿಂದ ಬೆಂಕಿಯನ್ನು ಪ್ರೊಮಿಥಿಯಸ್ ಎಂಬ ನರನು ಅಪಹರಿಸಿ ತಂದಾಗ ಸರ್ವೇಶ ಜೀಯಸ್ಸನು ಅವನ ತಮ್ಮನಿಗೆ ಪ್ಯಾಂಡೊರಾಳನ್ನು ಒಂದು ಪೆಟ್ಟಿಗೆ ಸಮೇತ ನೀಡಿಬಿಟ್ಟ. ಬೆಂಕಿಯ ಜೊತೆಗೆ ಪ್ಯಾಂಡೊರಾಳೂ, ಅವಳ ಪೆಟ್ಟಿಗೆಯೂ ಸ್ವರ್ಗದಿಂದ ಭೂಮಿಗೆ ಬಂದವು. ಆ ಪೆಟ್ಟಿಗೆಯಲ್ಲಿ ಸಾವು, ರೋಗರುಜಿನ, ದುಃಖಗಳೂ ಸೇರಿದಂತೆ ಎಲ್ಲ ಕೆಡುಕುಗಳೂ ಇದ್ದವು. ಅದು ತಿಳಿಯದ ಪ್ಯಾಂಡೊರಾ ಕುತೂಹಲ ತಡೆಯಲಾಗದೆ ಭೂಮಿ ಮೇಲೆ ಬಂದವಳೇ ಆ ಪೆಟ್ಟಿಗೆ ತೆರೆದುಬಿಟ್ಟಳು. ಅಗೋ, ಅದರಲ್ಲಿದ್ದ ಎಲ್ಲ ಕೆಡುಕುಗಳೂ ಹೊರಬಂದೇಬಿಟ್ಟವು. ಅವಳೆಷ್ಟೇ ಅದರ ಮುಚ್ಚಳ ಹಾಕಲು ಯತ್ನಿಸಿ ಪೆಟ್ಟಿಗೆ ಮೇಲೇ ಹತ್ತಿ ಕೂತರೂ ಹೊರಬರುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗವಳು ಅದರ ಮುಚ್ಚಳ ಹಾಕುವಾಗ ತಳದಲ್ಲಿ ಒಂದೇ ಒಂದು ಉಳಿದಿತ್ತು: ಅದು ‘ಭರವಸೆ’! (ಹೋಪ್).


(source: internet)
ಈಗ ಹೆಣ್ಣುಮಕ್ಕಳೂ ತಮ್ಮ ಮುಚ್ಚಿಟ್ಟ ಗಾಯಗಳ ತೆರೆದು ತೋರಿಸತೊಡಗಿದರೆ ಪ್ಯಾಂಡೊರಾ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ. ಆದರೂ ತಳದಲ್ಲಿ ಉಳಿದಿರುವ ಹನಿ ಭರವಸೆ, ಆ ಧೈರ್ಯದಿಂದ ಪೆಟ್ಟಿಗೆಯಿಂದ ಹೊರಬಂದವನ್ನು ಆವಾಗೀವಾಗ ಪಟ್ಟಿ ಮಾಡಿ ನೋಡಬೇಕಾಗುತ್ತದೆ!

ಅನಾದಿಯಿಂದ ಅಕ್ಷರದ ಬೆಳಕನ್ನು ನಿರಾಕರಿಸಲ್ಪಟ್ಟವರು ಮಹಿಳೆಯರು. ಪೂರ್ವಪಶ್ಚಿಮಉತ್ತರದಕ್ಷಿಣಗಳ ಭೇದವಿಲ್ಲದೆ ಎಲ್ಲ ದೇಶಗಳೂ ಅವರನ್ನು ಜ್ಞಾನ ವಂಚಿತರನ್ನಾಗಿಸಿವೆ. ಅದರಲ್ಲೂ ವಿಜ್ಞಾನ, ವೈದ್ಯ ವಿಜ್ಞಾನ ಮಹಿಳೆಯ ಜ್ಞಾನವನ್ನು ಮನೆಮದ್ದಿಗಷ್ಟೇ ಸೀಮಿತಗೊಳಿಸಿತ್ತು. ವಿಶ್ವಾದ್ಯಂತ ಸಾರ್ವಜನಿಕರಿಗೆ ಲಭ್ಯವಾಗುವಂತೆ ವೈದ್ಯ ವೃತ್ತಿಯಲ್ಲಿ ತೊಡಗಿದ ಯಾವುದೇ ಪ್ರಕಾರದ ಮಹಿಳಾ ವೈದ್ಯರೂ ಇರಲಿಲ್ಲ. ಇಸ್ಲಾಮಿಕ್ ಮಧ್ಯಪ್ರಾಚ್ಯದಲ್ಲಿ, ಪ್ರಾಚೀನ ಭಾರತದ ಆಯುರ್ವೇದದಲ್ಲಿ, ಚೀನಾದ ವೈದ್ಯ ಪದ್ಧತಿಯಲ್ಲಿ, ಗ್ರೀಸಿನಲ್ಲಿ ವೈದ್ಯ ಮಹಿಳೆಯರಿರಲಿಲ್ಲ. ಪುರುಷ ವೈದ್ಯರಿಗೆ ಸಹಾಯಕರಾಗಿ ಹಲವರು ಇದ್ದರು. ಅವರನ್ನು ರೋಗಿಯ ಸೇವೆ ಮಾಡುವ ‘ದಾದಿ’, ‘ದಾಯಿ’ ಕೆಲಸಗಳಿಗೆ ನೇಮಿಸಲಾಗುತ್ತಿತ್ತೇ ವಿನಹ ವೈದ್ಯರ ಕೆಲಸಕ್ಕೆ ನೇಮಕ ಮಾಡಿದ್ದು ಇಲ್ಲವೆನ್ನುವಷ್ಟು ಕಡಿಮೆ. ಈ ಮಾತು ಇವತ್ತಿಗೂ ನಿಜ. ಒಂದು ಅಂಕಿಅಂಶದ ಪ್ರಕಾರ ಭಾರತದ ೯೪.೬ % ನರ್ಸುಗಳು ಮಹಿಳೆಯರು. ಅದೇ ಭಾರತದ ೮.೫ ಲಕ್ಷ ಅಲೋಪತಿ ವೈದ್ಯರಲ್ಲಿ ೧೭% ಮಾತ್ರ ಹೆಣ್ಣುಮಕ್ಕಳು. ಗ್ರಾಮೀಣ ಭಾಗದ ವೈದ್ಯರಲ್ಲಿ ೮% ಮಾತ್ರ ಮಹಿಳೆಯರು. ೨೦೦೦ ಜನಸಂಖ್ಯೆಗೆ ಒಬ್ಬ ಪುರುಷ ವೈದ್ಯನಿದ್ದರೆ, ಮಹಿಳಾ ವೈದ್ಯೆ ೧೧,೦೦೦ ಜನಸಂಖ್ಯೆಗೆ ಒಬ್ಬರಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನ ಹೀಗಿರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಲಿಂಗ ರಾಜಕಾರಣವು ಸ್ತ್ರೀಗುಣ/ಸ್ವಭಾವವೆಂದು ಇಲ್ಲದ ಗುಣಗಳನ್ನು, ಮನುಷ್ಯ ಅಸಹಜ ಮೌಲ್ಯಗಳನ್ನು ಆರೋಪಿಸಿ ಹೆಣ್ಣು ಅದನ್ನೇ ನಂಬುವಂತೆ ಮಾಡಿದ್ದು. ಮಹಿಳಾ ಮಾದರಿಗಳು, ವ್ಯಾಖ್ಯಾನಗಳು ಹುಟ್ಟಿದ್ದು ಅವಳ ನಿಯಂತ್ರಣಕ್ಕೆ ಹಾಗೂ ಸದಾ ಅವನೆಂಬ ಯಜಮಾನನ ಅಧೀನದಲ್ಲಿದ್ದರಷ್ಟೇ ಇವಳು ಸುರಕ್ಷಿತ ಎಂದು ತಿಳಿಸುವುದಕ್ಕೆ. ಭಾರತದ ಜಾತಿಪದ್ಧತಿ ತನ್ನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರತಿ ಶ್ರೇಣಿಯಲ್ಲೂ ಕೆಳಹಂತವನ್ನೇ ನೀಡಿದ ಕಾರಣ ಈ ನೆಲದ ಮಹಿಳೆ ಸದಾ ಹಕ್ಕುಗಳಿಂದ ವಂಚಿತಳಾಗಿ ಎರಡನೆಯ ದರ್ಜೆ ಪ್ರಜೆಯಾಗಿ ಬದುಕಿದಳು. ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲೇ ಲಿಂಗತಾರತಮ್ಯವನ್ನೂ, ಲಿಂಗ ಅಸಮಾನತೆಯ ಬೇರುಗಳನ್ನೂ ಹೊಂದಿರುವುದರಿಂದ ಮಹಿಳೆಯ ಪಾತ್ರವನ್ನು ಒಂದೋ ನಗಣ್ಯಗೊಳಿಸುವುದು ಅಥವಾ ಪಾರಂಪರಿಕ ನೆಲೆಗೆ ಕಟ್ಟಿಹಾಕಿ ಅವಳ ಪಾತ್ರವನ್ನು ಮಿತಿಗೊಳಿಸುವುದು ನಿರಂತರ ನಡೆದೇ ಇತ್ತು. ಹೀಗಿರುತ್ತ ವೈದ್ಯಕೀಯವೂ ಲಿಂಗರಾಜಕಾರಣದಿಂದ ತಪ್ಪಿಸಿಕೊಳ್ಳಲಿಲ್ಲ. ಮಹಿಳೆ ತಲೆಮೇಲೆತ್ತಿ ತನ್ನ ಎಲ್ಲ ಹಕ್ಕುಗಳ ಪ್ರತಿಪಾದಿಸತೊಡಗಿದ ಮೇಲಷ್ಟೇ ವೈದ್ಯಕೀಯವೂ ಹೆಣ್ಣಿನ ಅನನ್ಯತೆಗಳ ಬಗೆಗೆ, ಅನನ್ಯ ಸಮಸ್ಯೆಗಳ ಬಗೆಗೆ ಗಮನ ಹರಿಸಿತೆಂದು ಹೇಳಬಹುದು.

ಸೀತೆಯರಿಗದೆಷ್ಟು ಲಕ್ಷ್ಮಣ ರೇಖೆಗಳು? 


ಭಾರತದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ೧೮೩೫ರಲ್ಲಿ ಸ್ಥಾಪನೆಯಾಯಿತು. ಮೊದಲ ಬಾರಿ ಹೆಣ್ಣುಮಕ್ಕಳನ್ನು - ಅದರಲ್ಲೂ ಬ್ರಿಟಿಷ್ ಹೆಣ್ಣುಮಕ್ಕಳನ್ನು - ವೈದ್ಯ ಕೋರ್ಸಿಗೆ ಸೇರಿಸಿಕೊಂಡಿದ್ದು ೧೮೭೫ರಲ್ಲಿ. ಅವರ ಜೊತೆ ಭಾರತೀಯ ಕ್ರೈಸ್ತ ಅಥವಾ ಆಂಗ್ಲೋಸಾಕ್ಸನ್ ಮೂಲದವರಿಗಷ್ಟೇ ಪ್ರವೇಶವಿತ್ತು. ಆ ಕಾಲೇಜಿನ ಮೊದಲ ವಿದ್ಯಾರ್ಥಿನಿ ಮೇರಿ ಆನ್ ಪ್ರವೇಶಕ್ಕೆ ಎಷ್ಟು ಕಷ್ಟ ಪಟ್ಟಳೋ, ಅಷ್ಟೇ ಪ್ರತಿರೋಧ ನಂತರವೂ ಎದುರಿಸಿದಳು. ಕಾಲೇಜಿಗೆ ಹೋಗತೊಡಗಿದ ಮೇಲೂ ಪಾಠ ಹೇಳಿಕೊಡುವವರಿಲ್ಲದೆ ಹಲವು ತಿಂಗಳು ಕೈಕೈ ಹೊಸೆಯುತ್ತ ಕಾಲ ಕಳೆಯಬೇಕಾಯಿತು. ಏಕೆಂದರೆ ಅಲ್ಲಿನ ಡೈರೆಕ್ಟರ್ ಮಹಾಶಯನಿಗೆ (ಆತನೂ ಬ್ರಿಟಿಷ್) ಹೆಣ್ಮಕ್ಕಳಿಗೆ ಬೋಧಿಸಲು ಇಷ್ಟವಿರಲಿಲ್ಲ. ‘ನೀನು ವಾರ್ಡಿನಲ್ಲಿ ತಿರುಗಾಡು, ಆದರೆ ನಾನು ನಿನಗೆ ಪಾಠ ಹೇಳುವುದಿಲ್ಲ’ ಎಂದು ಆತ ಬೋಧಿಸಲು ನಿರಾಕರಿಸಿದ. ಆದರೆ ಮೇರಿ ಉಳಿದ ಪ್ರೊಫೆಸರುಗಳ ಸಹಾಯದಿಂದ ಪದವಿ ಪಡೆದಳು. ಅಬಲಾ ದಾಸ್ (ಜಗದೀಶಚಂದ್ರ ಬೋಸ್ ಹೆಂಡತಿ) ೧೮೮೧ರಲ್ಲಿ ಪ್ರವೇಶ ಪರೀಕ್ಷೆ ಪಾಸು ಮಾಡಿದ್ದರೂ ಹೆಣ್ಣು ಎಂಬ ಕಾರಣಕ್ಕೆ ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಕ್ರೈಸ್ತೇತರರಿಗೆ ಪ್ರವೇಶವಿರದ ಕಾರಣ ಭಾರತದ ಮೊದಲ ವೈದ್ಯೆ ಆನಂದಿ ಬಾಯಿ ಜೋಷಿ ೧೮೮೬ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ಕಾಲೇಜಿನಲ್ಲಿ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಪಡೆದು ಪದವಿ ಗಳಿಸಬೇಕಾಯಿತು.

ಆದರೆ ಭಾರತದಲ್ಲಷ್ಟೇ ಹೀಗೆಂದು ಭಾವಿಸಿದರೆ ತಪ್ಪಾದೀತು. ಎಲ್ಲ ಕಡೆಯೂ ಭೂಮಿ ಗುಂಡಗಿದೆ, ಆದರೂ ಚಪ್ಪಟೆಯಾಗಿಯೇ ಅನುಭವಕ್ಕೆ ದಕ್ಕುತ್ತದೆ. ಅಮೆರಿಕದಲ್ಲಿ ‘ಹೈಯರ್ ಎಜುಕೇಷನ್ ಅಮೆಂಡ್‌ಮೆಂಟ್ ಆಕ್ಟ್ ೧೯೭೨’ ಹಾಗೂ ‘ಪಬ್ಲಿಕ್ ಹೆಲ್ತ್ ಸರ್ವೀಸ್ ಆಕ್ಟ್ ೧೯೭೫’ ಜಾರಿಯಾಗುವವರೆಗೆ ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸೇವೆಯ ಮೇಲೆ ನಿರ್ಬಂಧವಿತ್ತು. ಅಮೆರಿಕವಷ್ಟೇ ಅಲ್ಲ, ವಿಶ್ವಾದ್ಯಂತ ಮಹಿಳೆಯರನ್ನು ವೈದ್ಯವೃತ್ತಿಯಿಂದ ದೂರವಿಟ್ಟ ದೊಡ್ಡ ಇತಿಹಾಸವಿದೆ.

೧೫೪೦ರಲ್ಲಿ ದೊರೆ ಎಂಟನೇ ಹೆನ್ರಿಯು ‘ಬಾರ್ಬರ್ ಸರ್ಜನ್’ಗಳ ಗುಂಪನ್ನು ಸೇವೆಗಾಗಿ ನೇಮಿಸಿಕೊಂಡು ವೈದ್ಯಕೀಯವನ್ನು ವೃತ್ತಿಯಾಗಿ ಪರಿಗಣಿಸಿದ ಮೊದಲ ದೊರೆಯಾದ. ಆದರೆ ಆ ಕೆಲಸಕ್ಕೆ ಹೆಣ್ಣುಮಕ್ಕಳ ನೇಮಕವನ್ನು ನಿರ್ಬಂಧಿಸಲಾಗಿತ್ತು. ನಂತರ ಕೆಲ ಶತಮಾನಗಳವರೆಗೆ ವೈದ್ಯಕೀಯ ಸೇವೆ ವೃತ್ತಿ ರೂಪ ಪಡೆದುಕೊಳ್ಳುತ್ತಿರುವಾಗಲೂ ಮಹಿಳೆಯರಿಗೆ ಅದು ನಿಲುಕದೇ ಇತ್ತು. ಮಹಿಳಾ ವೈದ್ಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ೧೯-೨೦ನೇ ಶತಮಾನದವರೆಗೂ ಕಾಯಬೇಕಾಯಿತು.

ಕೇವಲ ೨೦೦ ವರ್ಷ ಕೆಳಗೆ ಗಂಡಸಿನ ವೇಷದಲ್ಲಿ ಹೆಣ್ಣು ವೈದ್ಯವೃತ್ತಿ ನಡೆಸಬೇಕಾದ ಪರಿಸ್ಥಿತಿ ಇತ್ತು!


(ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ - ಮಾರ್ಗರೆಟ್ ಆನ್ ಬಲ್ಕ್‌ಲಿ)

ನಿಜ. ಮಾರ್ಗರೆಟ್ ಆನ್ ಬಲ್ಕ್‌ಲಿ ಎಂಬ ಮಹಿಳೆಯ ವೃತ್ತಾಂತ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಹೆಣ್ಣು ಎಂದು ಗೊತ್ತಾದರೆ ಕಲಿಯುವ, ಪ್ರಾಕ್ಟೀಸ್ ಮಾಡುವ ಅವಕಾಶ ಸಿಗುವುದಿಲ್ಲವೆಂದು ಇಂಗ್ಲೆಂಡಿನ ಮಾರ್ಗರೆಟ್ ಬಲ್ಕ್‌ಲಿ ತನ್ನ ಹೆಸರನ್ನು ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ (೧೭೮೯-೧೮೬೫) ಎಂದು ಬದಲಿಸಿಕೊಂಡು ವೈದ್ಯಕೀಯ ಸೇರಿದಳು. ಗಂಡಿನ ವೇಷದಲ್ಲಿ ಎಡಿನ್‌ಬರೋ ಮೆಡಿಕಲ್ ಕಾಲೇಜಿನಿಂದ ಮೆಡಿಕಲ್ ಪದವಿ ಪೂರೈಸಿ, ರಾಯಲ್ ಕಾಲೇಜಿನಲ್ಲಿ ಮಾಸ್ಟರ್ ಡಿಗ್ರಿಯೂ ಆಯಿತು. ಕೊನೆಗೆ ಬ್ರಿಟಿಷ್ ಸೈನ್ಯದಲ್ಲಿ ಸರ್ಜನ್ ಆಗಿ ಮಾರ್ಗರೆಟ್ ಯಾನೆ ಜೇಮ್ಸ್ ಸ್ಟುವರ್ಟ್ ಸೇವೆ ಸಲ್ಲಿಸಿದಳು. ಭಾರತ, ದ. ಆಫ್ರಿಕಾ, ಮಾಲ್ಟಾ, ಜಮೈಕಾ, ಮಾರಿಷಿಯಸ್ ಮುಂತಾದ ಹಲವಾರು ಕಡೆ ಬ್ರಿಟಿಷ್ ಕಾಲನಿಗಳಿರುವಲ್ಲೆಲ್ಲ ಕೆಲಸ ಮಾಡಿದಳು. ಆಫ್ರಿಕಾದ ಮೊತ್ತಮೊದಲ ಯಶಸ್ವಿ ಸಿಸೇರಿಯನ್, ಎಂದರೆ ತಾಯಿ ಮಗು ಇಬ್ಬರೂ ಬದುಕುಳಿವಂತೆ ಸಿಸೇರಿಯನ್ ಮಾಡಿದ ಖ್ಯಾತಿ ಅವಳದೇ. ಹೋದಲ್ಲೆಲ್ಲ ಸ್ಥಳೀಯರ ಆರೋಗ್ಯ, ಸ್ವಚ್ಛತೆ ಹಾಗೂ ಸಾಮಾಜಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಿದ ಜೇಮ್ಸ್ ಯಾನೆ ಮಾರ್ಗರೆಟ್‌ಗೆ ಬ್ರಿಟಿಷ್ ಸೈನ್ಯದಲ್ಲಿ ಇನ್‌ಸ್ಪೆಕ್ಟರ್ ಜನರಲ್ ಹುದ್ದೆಯ ತನಕ ಬಡ್ತಿ ಸಿಕ್ಕಿತು. ಬದುಕಿಡೀ ಏಕಾಂಗಿಯಾಗಿಯೇ ಇದ್ದ ಜೇಮ್ಸ್‌ಗೆ ಸಾಕು ನಾಯಿ ಹಾಗೂ ಜಮೈಕಾದ ಸಹಾಯಕ ಜಾನ್ ಅವರೇ ಸಂಗಾತಿಗಳು.

೧೮೬೫ರಲ್ಲಿ ಜೇಮ್ಸ್ ತೀರಿಕೊಂಡಾಗ ಮೃತದೇಹವನ್ನು ಸ್ನಾನಕ್ಕೆ ಒಯ್ದರು. ಆಗ ನೋಡುತ್ತಾರೆ, ಸರ್ಜನನ ದೇಹ ಹೆಣ್ಣಿನದು! ಹೆಣ್ಣಿನ ಎಲ್ಲ ಅಂಗಾಂಗಗಳೂ ಇವೆ, ಹೊಟ್ಟೆ ಮತ್ತು ಜನನಾಂಗಗಳು ಮಗು ಹೆತ್ತ ಲಕ್ಷಣ ತೋರಿಸುತ್ತವೆ ಎಂದು ಮೃತದೇಹಕ್ಕೆ ಸ್ನಾನ ಮಾಡಿಸಿದಾಕೆ ಹೇಳಿದಳು. ಎಲ್ಲರೂ ಬೆಚ್ಚಿಬಿದ್ದರು. ತನಿಖೆ ಶುರುವಾಯಿತು. ಪತ್ರ ವ್ಯವಹಾರಗಳನ್ನು ನೋಡಿದ ಮೇಲೆ ಅದು ಹೆಸರು ಬದಲಿಸಿಕೊಂಡಿದ್ದ, ಗಂಡಸೆಂದು ಹೇಳಿ ಬದುಕಿದ್ದ ಮಾರ್ಗರೆಟ್ ಬಲ್ಕ್‌ಲಿ ಎಂಬ ಮಹಿಳೆಯೆಂದು ಗೊತ್ತಾಯಿತು!

ಆ ಸರ್ಜನ್ ವಿಚಿತ್ರ, ವಿಕ್ಷಿಪ್ತ ನಡವಳಿಕೆಯವನಾಗಿದ್ದನೆಂದು ಎಲ್ಲ ತಮ್ಮ ಅನುಭವ ಹೇಳಿಕೊಂಡರು. ಫ್ಲಾರೆನ್ಸ್ ನೈಟಿಂಗೇಲ್ ಸಹಾ ಈ ಸರ್ಜನನ ಕಿರುಕುಳದ ನಡವಳಿಕೆಯ ಬಗೆಗೆ ಕಸಿವಿಸಿಯ ಪ್ರತಿಕ್ರಿಯೆಯನ್ನು ತನ್ನ ಡೈರಿಯಲ್ಲಿ ದಾಖಲಿಸಿದ್ದಾಳೆ. ಬಹುಶಃ ಬದಲಾದ ಲಿಂಗ ಅಸ್ಮಿತೆಯೊಂದಿಗೆ ಹೊರಜಗದೊಡನೆ ವ್ಯವಹರಿಸಬೇಕಾದ ಅಗತ್ಯ, ತನ್ನ ಕೀರಲು ದನಿಗಾಗಿ ಬೆನ್ನಹಿಂದೆ ಆಡಿಕೊಳ್ಳುತ್ತಿದ್ದ ವ್ಯಂಗ್ಯದ ಮಾತುಗಳು, ಸಾಯುವವರೆಗೆ ಜೊತೆಯಲ್ಲಿದ್ದ ಜಮೈಕಾದ ಸಹಾಯಕ ಜಾನ್‌ನೊಂದಿಗಿದ್ದ ಗುಟ್ಟಾದ ಸಂಬಂಧ ಇವೆಲ್ಲವೂ ಅಂಥ ನಡತೆಗೆ ಕಾರಣವಾಗಿದ್ದವೇ? ಯಾರು ಬಲ್ಲರು?



ಒಂದು ಹೆಣ್ಣು ವೈದ್ಯವೃತ್ತಿ ನಡೆಸಲು ಇಷ್ಟಪಟ್ಟರೆ ಜೀವಮಾನ ಪೂರ್ತಿ ಗಂಡುವೇಷದಲ್ಲಿಯೇ ಬದುಕಬೇಕಾಗಿತ್ತು ಎನ್ನುವುದಷ್ಟೇ ಈ ಘಟನೆಯ ನಂತರ ಹೊರಜಗತ್ತಿಗೆ ಗೊತ್ತಾಯಿತು.

ಮೊದಲ ವೈದ್ಯೆ: ಹೆಜ್ಜೆಯ ಬೆನ್ನಿಗೆ ಮಹಿಳಾ ಚಳುವಳಿ

ಮಹಿಳಾ ಚಳುವಳಿಯ ಮೊದಲ ದನಿಗಳು ಕೇಳಿಬರತೊಡಗಿದ ಮೇಲೆ ೧೮೫೦ರ ಸುಮಾರು ಲಂಡನ್, ಪೆನ್ಸಿಲ್ವೇನಿಯಾ, ಸೇಂಟ್ ಪೀಟರ‍್ಸ್‌ಬರ್ಗ್, ಎಡಿನ್‌ಬರೋ, ಟೋಕಿಯೋ, ಗ್ವಾಂಗ್ಜುಗಳಲ್ಲಿ ಮಹಿಳಾ ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದವು. ಪ್ಯಾರಿಸ್ ಮೆಡಿಕಲ್ ಕಾಲೇಜಿನಲ್ಲಿ ವಿಶ್ವದ ಎಲ್ಲ ಭಾಗಗಳ ವೈದ್ಯ ವಿದ್ಯಾರ್ಥಿನಿಯರು ಬೆರಳೆಣಿಕೆಯಷ್ಟು ಇದ್ದರು. ಆದರೆ ಅಲ್ಲಿ ಫ್ರೆಂಚ್ ವಿದ್ಯಾರ್ಥಿನಿಯರಿರಲಿಲ್ಲ. ಆ ಕಾಲೇಜಿನಲ್ಲಿ ೧೮೭೫ರಲ್ಲಿ ಪದವಿ ಪಡೆದ ಮೆಡೆಲಿನ್ ಬ್ರೆಸ್ ಮೊದಲ ಫ್ರೆಂಚ್ ವೈದ್ಯೆ.

ಪ್ಯಾರಿಸ್ ಮೆಡಿಕಲ್ ಕಾಲೇಜು ಪ್ರವೇಶ ಕೋರಿ ಮಹಿಳೆಯರು ದೊಡ್ಡ ಹೋರಾಟ ನಡೆಸಿದ್ದಾರೆ. ೧೮೬೭ರಲ್ಲಿ ಅಮೆರಿಕಾದ ಮೇರಿ ಪುಟ್ನಾಮ್ ಅಲ್ಲಿ ಪ್ರವೇಶ ಬಯಸಿದಾಗ ಆಡಳಿತ ಮಂಡಳಿ ಅಡ್ಮಿಷನ್ ನಿರ್ಬಂಧಿಸಿತು. ಹೆಣ್ಣುಮಕ್ಕಳ ಪ್ರವೇಶವು ಸಮಾಜದ ಮತ್ತು ವೃತ್ತಿಯ ನೈತಿಕತೆ ಕಡಿಮೆ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. ಆಗ ಮದುವೆಯಾದ ಮೇಲೆ ಕಾನೂನಾತ್ಮಕವಾಗಿ ಮಹಿಳೆಯರನ್ನು ಮೈನರ್‌ಗಳೆಂದು ಪರಿಗಣಿಸಲಾಗುತ್ತಿತ್ತು. ಅದರಿಂದ ವೈದ್ಯಕೀಯ ಸೇವೆ ಮತ್ತು ವೃತ್ತಿಗೆ ತೊಂದರೆಯಾಗಬಹುದು ಎಂದು ಸೀಟು ನಿರಾಕರಿಸಲಾಯಿತು. ನಂತರ ಈ ವಿಷಯ ರಾಜಕುಮಾರಿ ಯೂಜೆನಿಯ ಬಳಿ ಹೋಯಿತು. ಪ್ರವೇಶ ಕೊಡುವುದೋ ಬೇಡವೋ ಎಂಬ ಬಗ್ಗೆ ಸಮಿತಿ ರಚಿಸಲಾಯಿತು. ರಾಜಕುಮಾರಿಯ ಒತ್ತಾಸೆಯಿಂದ ಪ್ರವೇಶ ಸಿಕ್ಕಿತು. ಹಾಗೆ ಪ್ರವೇಶ ಪಡೆದು, ೧೮೭೦ರಲ್ಲಿ ಪ್ಯಾರಿಸ್ ಮೆಡಿಕಲ್ ಸ್ಕೂಲಿನಿಂದ ಪಾಶ್ಚಾತ್ಯ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಮೊದಲ ಮಹಿಳೆ ಇಂಗ್ಲೆಂಡಿನ ಎಲಿಜಬೆತ್ ಗ್ಯಾರೆಟ್. ಮೇರಿ ಪುಟ್ನಾಮ್ ೧೮೭೧ರಲ್ಲಿ ಪದವಿ ಪಡೆದಳು.

ಪ್ರವೇಶವೇನೋ ಸಿಕ್ಕಿತು, ನಂತರ ವೈದ್ಯಶಿಕ್ಷಣ ಪಡೆಯುವಾಗ ಮೊದಲ ವೈದ್ಯೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಲೈಬ್ರರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೂತ್ ರಚಿಸಲಾಗಿತ್ತು. ಒಬ್ಬ ಸಿವಿಲ್ ಲಾ ಪ್ರೊಫೆಸರ್ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತ, ‘ಈ ವಿದ್ಯಾರ್ಥಿನಿಯನ್ನು ಸೇರಿಸಿಕೊಳ್ಳುವಾಗ ಕ್ಲಾಸ್‌ರೂಮಿನಲ್ಲಿ ಪೊಲೀಸರನ್ನಿಟ್ಟುಕೊಳ್ಳಬೇಕೆಂದು ಹೆದರಿದ್ದೆವು. ಆದರೆ ಹಾಗಾಗಲಿಲ್ಲ. ಅದಕ್ಕೆ ಉಳಿದ ಹುಡುಗರನ್ನು ಅಭಿನಂದಿಸುತ್ತೇನೆ’ ಎಂದರು.

ಹಾಗೆ ನೋಡಿದರೆ ಪ್ರೊಫೆಸರರಿಗಿಂತ ಹುಡುಗರು ಹುಡುಗಿಯರನ್ನು ಮುಕ್ತವಾಗಿ ನಡೆಸಿಕೊಂಡಿದ್ದರು. ಮೇರಿ ಪುಟ್ನಾಮ್‌ನಿಂದ ಹಿಡಿದು ಹಲವರು ತಾವು ಮಂಡಿಸಿದ ಪ್ರಬಂಧಗಳಲ್ಲಿ ತಮ್ಮ ಸಹಪಾಠಿ ಹುಡುಗರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ‘ಸ್ವಾತಂತ್ರ್ಯ, ಸಮಾನತೆ, ಸೋದರತೆಗಳು ಗೋಡೆ ಮೇಲೆ ಬರೆದ ಘೋಷಣೆಗಳಾಗದಂತೆ ನೋಡಿಕೊಂಡ ಸ್ನೇಹಿತರಿಗೆ’ ಮಟಿಲ್ಡಾ ಅಯರ್ಟನ್ ತನ್ನ ಪ್ರಬಂಧ ಅರ್ಪಿಸಿದ್ದಾಳೆ. ಕೆಲ ಹುಡುಗಿಯರು ತಮ್ಮ ಅನುಭವಗಳನ್ನು ಡೈರಿಯಲ್ಲಿ ದಾಖಲಿಸಿದ್ದಾರೆ:

‘ಹುಡುಗಿ ಆಸ್ಪತ್ರೆ ಅಥವಾ ಕ್ಲಾಸ್ ರೂಂ ಪ್ರವೇಶಿಸಿದ ಕೂಡಲೇ ಹುಡುಗರು ಬೂ ಎಂದು ಕೂಗಲು ಶುರು ಮಾಡುತ್ತಿದ್ದರು. ಹುಡುಗಿಯರು ಪ್ರೊಫೆಸರರೊಟ್ಟಿಗೇ ಕೋಣೆ ಪ್ರವೇಶಿಸಬೇಕು. ಮೊದಲ ಸಾಲಿನಲ್ಲೇ ಕೂರಬೇಕು. ಒಂದು ದಿನ ಎಷ್ಟೊತ್ತಾದರೂ ಪ್ರೊಫೆಸರ್ ಬರಲಿಲ್ಲವೆಂದು ನಿಂತು ನಿಂತು ಸಾಕಾಗಿ ಹುಡುಗಿಯರು ಕ್ಲಾಸ್‌ರೂಮಿನೊಳಗೆ ಹೋಗಿ ಮೊದಲ ಸಾಲಿನಲ್ಲಲ್ಲ, ಹುಡುಗರ ನಡುವೆ ಇದ್ದ ಜಾಗದಲ್ಲೇ ಕೂತುಬಿಟ್ಟೆವು. ಅವರ ಜೋಕುಗಳು ಆಗ ನಿಂತವು’ ಎಂದು ಒಬ್ಬಾಕೆ ಡೈರಿಯಲ್ಲಿ ದಾಖಲಿಸಿದ್ದಾಳೆ.

ಯಾಕೆ ವಿರೋಧ?

೧೮೮೮ರಲ್ಲಿ ಕ್ಯಾರೊಲಿನ್ ಷುಲ್ಟ್ಜ್ ಎಂಬ ವೈದ್ಯ ವಿದ್ಯಾರ್ಥಿನಿಯ ಥೀಸಿಸ್ ಮೌಲ್ಯಮಾಪನ ಮಾಡಿ ಪ್ರೊ. ಚಾರ್ಕಾಟ್ ಎಂಬ ಖ್ಯಾತ ಸರ್ಜನ್ ಬರೆದ ಟಿಪ್ಪಣಿಗಳು ಒಟ್ಟಾರೆ ಸಮಾಜ ಮಹಿಳೆಯನ್ನು ಹೇಗೆ ಗ್ರಹಿಸಿತ್ತು ಎಂದು ತಿಳಿಸುತ್ತವೆ. ಥೀಸಿಸ್ ಅನ್ನು ಮೆಚ್ಚಿಕೊಳ್ಳುತ್ತಲೇ ಆಕೆ ವೈದ್ಯೆಯಾಗಲು ಏಕೆ ಅನುಮತಿ ಕೊಡಬಾರದೆಂದು ಆತ ನಾಲ್ಕು ಷರಾ ಬರೆದ:


  1. ಅವರ ದೈಹಿಕ ನ್ಯೂನತೆ, ದೌರ್ಬಲ್ಯದ ಕಾರಣದಿಂದಲೇ ಹುಡುಗಿಯರಿಗೆ ರೋಗಿಗಳನ್ನು ಎತ್ತುವುದು ಅಸಾಧ್ಯವಾಗಿದೆ. 
  2. ತಿಂಗಳಲ್ಲಿ ಒಂದು ವಾರ ಅವರ ದೈಹಿಕ ಶಕ್ತಿ ಕುಂದಿರುತ್ತದೆ. ಋತುಸ್ರಾವದ ಅವಧಿಯಲ್ಲಿ ತನ್ನ ಕಾಳಜಿ ವಹಿಸುವುದು ಬಿಟ್ಟು ಬೇರಾರೋ ರೋಗಿಯ ಕಾಳಜಿಯನ್ನು ವಹಿಸಲು ಸಾಧ್ಯವಾಗುವುದಿಲ್ಲ. 
  3. ನೈಸರ್ಗಿಕವಾದ ಅವರ ರಚನೆ, ಬಾಗುಬಳುಕುಗಳ ಸೂಕ್ಷ್ಮ ದೇಹ ರೋಗಿಗಳ ಕೊಳಕು ಹಾಗೂ ಒರಟು ದೇಹಗಳ ಜೊತೆ ಒಡನಾಡುವುದಕ್ಕೆ ಸೂಕ್ತವಲ್ಲ. ಹೆಣ್ಮಕ್ಕಳ ಸೂಕ್ಷ್ಮ ಪ್ರವೃತ್ತಿಯೂ ಈ ವೃತ್ತಿಗೆ ಮತ್ತೊಂದು ಅಡೆತಡೆ. ರಕ್ತ, ಕೀವು, ಮಾಂಸಮಜ್ಜೆ ಅವರ ವ್ಯಕ್ತಿತ್ವದ ಸೂಕ್ಷ್ಮತೆಯನ್ನು ನಾಶ ಮಾಡುತ್ತದೆ. 
  4. ನೈಸರ್ಗಿಕ ಗುಣ ಸ್ವಭಾವಗಳೇ ಅವರು ವೈದ್ಯ ವೃತ್ತಿ ಮಾಡದಂತೆ ತಡೆಯುತ್ತವೆ. ಅವರು ಅತೀವ ಹೆಮ್ಮೆಯ, ಮಹಾತ್ವಾಕಾಂಕ್ಷೆಯ ಪ್ರವೃತ್ತಿಯವರು. ಅದರಿಂದಾಗಿ ಅವರು ಯಾರಿಗೂ ಎರಡನೆಯವರಾಗಿರಲು ಬಯಸುವುದಿಲ್ಲ. ಸೇವೆ ಮಾಡುವುದೇ ಮುಖ್ಯವಾಗಿದ್ದರೆ ಅವರು ಮಿಡ್‌ವೈಫುಗಳಾಗಿಯೋ, ನರ್ಸುಗಳಾಗಿಯೋ ಸೇವೆ ಮಾಡಿಕೊಂಡಿರಬಹುದಿತ್ತಲ್ಲವೆ? ವೈದ್ಯೆಯರೇ ಆಗಬೇಕೆಂದೇನಿತ್ತು?


ಚಾರ್ಕಾಟ್ ಅಷ್ಟೇ ಅಲ್ಲ, ಉಳಿದವರ ಅನಿಸಿಕೆಗಳೂ ಹೆಚ್ಚುಕಮ್ಮಿ ಇವೇ ಆಗಿದ್ದವು. ‘ಹೆಣ್ಣು ಗುಣ’ಗಳು ವೈದ್ಯವೃತ್ತಿಗೆ ಅಡೆತಡೆ ಎಂದೇ ಎಲ್ಲರೂ - ಹೆಣ್ಮಕ್ಕಳೂ ಕೂಡಾ, ಭಾವಿಸಿದ್ದರು. ಅಗಸ್ಟಿನೆ ಗೆರಾಲ್ಟ್ ೧೮೬೮ರಲ್ಲಿ, ‘ಮಹಿಳೆಗೆ ವೈದ್ಯ ಪದವಿ ಪಡೆಯುವ ಎಲ್ಲ ಹಕ್ಕಿದೆ. ಗುಣಪಡಿಸುವುದು ಅವಳ ಪ್ರಕೃತಿ ದತ್ತ ಗುಣವಾಗಿದೆ. ಎಷ್ಟೋ ನರ್ಸ್‌ಗಳು, ಮಿಡ್ವೈಫ್‌ಗಳು ಅದನ್ನು ಖಚಿತಪಡಿಸಿದ್ದಾರೆ. ಆದರೆ ನೈಸರ್ಗಿಕವಾಗಿ ಹೆರುವುದು, ಮಕ್ಕಳನ್ನು ಬೆಳೆಸುವುದು ಅವಳ ಕರ್ತವ್ಯವಾಗಿದೆ. ಆದ್ದರಿಂದ ಕೆಲವೇ ಕೆಲವು ವಿಶೇಷ ಮಹಿಳೆಯರಿಗಷ್ಟೇ ವೈದ್ಯಕೀಯ ಓದು, ಉದ್ಯೋಗದ ಅನುಮತಿ ನೀಡಬೇಕು’ ಎಂದು ಬರೆದಳು.

ಆ ಕಾಲದ ವೈಜ್ಞಾನಿಕ ಮತ್ತು ವೈದ್ಯಕೀಯ ಪತ್ರಿಕೆಗಳು ಎಲಿಜಬೆತ್ ಗ್ಯಾರೆಟ್‌ಗೆ ಮೊದಲ ಮಹಿಳಾ ವೈದ್ಯ ಪದವಿ ನೀಡಿದಾಗ ೧೮೭೦ರಲ್ಲಿ ಹೀಗೆ ಬರೆದವು:


(ಎಲಿಜಬೆತ್ ಗ್ಯಾರೆಟ್‌)
‘ಕಠಿಣ ಕೆಲಸ, ಗಾಯ, ರಕ್ತದ ಕಲೆ, ರೋಗ, ಗಲೀಜು ಈ ಎಲ್ಲವನ್ನೂ ನೋಡುತ್ತ ಹೆಣ್ಣು ತನ್ನ ಹೆಣ್ತನದ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಾಳೆ. ಅವರು ಹೆಣ್ಣೂ ಅಲ್ಲ, ಗಂಡೂ ಅಲ್ಲದಂತಾಗುತ್ತಾರೆ. ಬಸುರಾದಾಗ ಹೊಟ್ಟೆ ಮುಂದೆ ಮಾಡಿಕೊಂಡು ಹೇಗೆ ರೋಗಿಗಳನ್ನು ನೋಡುತ್ತಾರೆ? ಉತ್ತಮ ವೈದ್ಯನಾಗಲು ಮುಕ್ತ ಮತ್ತು ಗಟ್ಟಿ ಮನಸ್ಸು ಬೇಕು. ವಿಶಾಲ ಬುದ್ಧಿ ಮತ್ತು ಅನುಭವ ಬೇಕು. ತನ್ನ ಭಾವನೆಗಳ ಮೇಲೆ ನಿಯಂತ್ರಣವಿರುವ ಗಟ್ಟಿ ವ್ಯಕ್ತಿತ್ವ, ಗಂಭೀರ ಸ್ವಭಾವ, ಸಹಿಷ್ಣುತೆ, ನೈತಿಕತೆ ಮತ್ತು ಮಾಂಸಖಂಡದ ಶಕ್ತಿ ಎಲ್ಲ ಬೇಕು. ಹೆಣ್ಣಿನ ಗುಣಗಳು ಇವಕ್ಕೆ ವಿರುದ್ಧವಿಲ್ಲವೆ?’

ವೈದ್ಯಕೀಯ ನಿಯತಕಾಲಿಕಗಳು ೧೮೭೫ರಲ್ಲಿ ಹೀಗೆ ಬರೆದವು:

‘ಉಳಿದೆಲ್ಲ ಕಾರಣಗಳು ಏನೇ ಇರಲಿ, ಹೆಣ್ಣು ವೈದ್ಯಳಾಗುವುದು ಸಾಧ್ಯವಿಲ್ಲ, ಸರಿಯಲ್ಲ. ವೈದ್ಯಳಾದರೆ ಅವಳು ತನ್ನ ಹೆಣ್ತನ ಕಳೆದುಕೊಳ್ಳುತ್ತಾಳೆ. ಸೂಕ್ಷ್ಮತೆ ಕಳೆದುಕೊಳ್ಳುತ್ತಾಳೆ. ಅವರ ನೈತಿಕ ವ್ಯಕ್ತಿತ್ವ ಸಂಪೂರ್ಣ ಬದಲಾಗುತ್ತದೆ. ಅವರ ಹೃದಯ ಮಿಡಿಯುವುದನ್ನು ನಿಲಿಸುತ್ತದೆ. ಮದುವೆಯಲ್ಲಿ, ಕುಟುಂಬದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೊರಗಿನಿಂದ ಅವರು ಹೆಣ್ಣಿನಂತಿದ್ದರೂ ಹೆಣ್ತನವನ್ನು ಹೊಂದಿರುವುದಿಲ್ಲ. ಹೆಣ್ಣಾಗಿರಬೇಕೆಂದರೆ ವೈದ್ಯರಾಗಲು ಸಾಧ್ಯವಿಲ್ಲ. ವೈದ್ಯೆಯಾದ ಹೆಣ್ಣು ಅರೆಲಿಂಗಿಯಾಗಬಹುದು ಅಥವಾ ದೆವ್ವವಾಗಬಹುದು. ಈ ವಿಶೇಷಣಗಳನ್ನು ಒಪ್ಪಿಕೊಳ್ಳುವವರು ವೈದ್ಯೆಯರಾಗಲು ತೊಂದರೆಯಿಲ್ಲ. ಜೊತೆಗೆ ಇದನ್ನೂ ನೆನಪಿಡಬೇಕು, ವೈದ್ಯರಾಗಿ ಹೆಂಗಸರು ದಾರುಣವಾಗಿ ಸೋಲುವುದಂತೂ ಖಚಿತ.’

ಎಂಥ ಭವಿಷ್ಯವಾಣಿ ಮತ್ತು ಹಾರೈಕೆ! ಇಂಥದನ್ನು ಕೇಳಿಯೂ ಕಂಗೆಡದೆ ಓದಿ ವೈದ್ಯೆಯರಾದವರು ನಿಜಕ್ಕೂ ಗಟ್ಟಿ ವ್ಯಕ್ತಿತ್ವದವರೇ ಆಗಿರಬೇಕು. ಆದರೆ ಯಾಕೆ ಮಹಿಳೆ ವೈದ್ಯವೃತ್ತಿ ನಡೆಸಲು ಈ ಪರಿಯ ಪ್ರತಿರೋಧವಿತ್ತು?

೧೮೮೪ರಲ್ಲಿ ಮಹಿಳಾ ವೈದ್ಯರಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್‌ಗೆ ಪ್ರವೇಶ ದೊರಕಿದಾಗ ಅದನ್ನು ಪುರುಷರಿಗೊದಗಿದ ಸ್ಪರ್ಧೆ ಎಂದು ಹೇಳಲಾಯಿತು! ಹೆಣ್ಮಕ್ಕಳನ್ನು ತತ್ಸಮಾನ ಅಧಿಕಾರದ, ಹಣಗಳಿಕೆಯ ಜಾಗಗಳಲ್ಲಿ ಬಿಟ್ಟುಕೊಳ್ಳದೇ ಇರಲು ಸ್ಪರ್ಧೆ ಮುಖ್ಯ ಕಾರಣವಾಗಿತ್ತು.

‘ಹೆಣ್ಮಕ್ಕಳನ್ನು ಆಸ್ಪತ್ರೆಗಳಿಗೆ ನೂಕಿ ಅವರನ್ನು ವೈದ್ಯರಾಗಿಸುವ ಪ್ರಯತ್ನ ನಡೆದಿದೆ. ಮೊದಲು ನಮ್ಮ ಗೌರವಾನ್ವಿತ ರಾಜಕುಮಾರಿ ಯೂಜೀನ್ ಟರ್ಕಿಯ ಮಹಿಳೆಯರಿಗೆ ಅವಕಾಶ ನೀಡಿದರು. ನಂತರ ಅಲ್ಜೀರಿಯಾದವರಿಗೆ ಇವರು ವಿಸ್ತರಿಸಿದರು. ಆ ದೇಶಗಳಲ್ಲಿ ಸದ್ಯಕ್ಕೆ ಮಹಿಳಾ ವೈದ್ಯರ ಅವಶ್ಯಕತೆ ಇರಬಹುದು. ಆದರೆ ಫ್ರಾನ್ಸ್‌ನಲ್ಲಿ ಆ ಸ್ಥಿತಿ ಇಲ್ಲ. ಈಗ ನೋಡಿದರೆ ಇದೇ ನೀತಿಯನ್ನು ಇಡೀ ಜಗತ್ತಿಗೆ ವಿಸ್ತರಿಸುವಂತೆ ಕಾಣುತ್ತದೆ. ಹೆಣ್ಮಕ್ಕಳು ವೈದ್ಯಕೀಯ ವಿದ್ಯಾಲಯದಲ್ಲಿ ಓದಿದರೂ ವಿಶ್ವವಿದ್ಯಾಲಯದ ಪದವಿ ನೀಡಲಾಗುತ್ತಿದೆ. ಎಂದರೆ ಅವರು ಈ ಕಾಲನಿಗಳಲ್ಲಷ್ಟೇ ಅಲ್ಲ, ಪ್ರಪಂಚದ ಯಾವ ಭಾಗದಲ್ಲಾದರೂ ವೃತ್ತಿ ಕೈಗೊಳ್ಳಬಹುದು. ಇದು ವೃತ್ತಿ ಮತ್ತು ಶಿಕ್ಷಣ ಎರಡನ್ನೂ ಹೆಣ್ಮಕ್ಕಳ ಪಾಲಿಗೆ ಸುಲಭಗೊಳಿಸಿದಂತೆ. ಇದು ಸರಿಯಲ್ಲ.’

ಈ ಸುಮಾರಿಗೇ ಮನೋವಿಶ್ಲೇಷಣೆ ಹಾಗೂ ಕನಸುಗಳ ವಿಶ್ಲೇಷಣೆ ಮಾಡಿದ ಮನೋವೈದ್ಯ ಫ್ರಾಯ್ಡ್‌ನ ಹೆಣ್ಣಿನ ಮಾದರಿ ಗಾಬರಿ ಹುಟ್ಟಿಸುವಂತಿದೆ. ಅವನು ತನಗಿರದ ಯಾವುದೋ ಒಂದು ಅಂಗ ಗಂಡಸಿಗಿದೆ; ಎಂದೇ ಅವಳಿಗೆ ತನ್ನ ಮೇಲೆ ಕೀಳರಿಮೆ ಹಾಗೂ ಗಂಡಿನ ಮೇಲೆ ದ್ವೇಷ ಎಂದು ‘ಶಿಶ್ನದ್ವೇಷ’ವನ್ನು ಪ್ರತಿಪಾದಿಸಿದ. ಮಾನಸಿಕ ಸ್ತರದಲ್ಲಿ ದ್ವೇಷ ಮನೆ ಮಾಡಿರುವುದರಿಂದಲೇ ಹೆಣ್ಣಿಗೆ ನ್ಯಾಯದ ಪರಿಕಲ್ಪನೆ ಅಷ್ಟಾಗಿರುವುದಿಲ್ಲ; ಗಂಡಸು ಹೇಳಿದಂತೆ ಕೇಳುವ ವಸ್ತುವಾಗದಿದ್ದರೆ ಅವಳಿಗೆ ಸುಖ ಸಿಗುವುದಿಲ್ಲ; ಹುಟ್ಟಿನಿಂದ ಅವನಿಗಿಂತ ತಾನು ಕಡಿಮೆ ಎಂದು ಒಪ್ಪಿಕೊಂಡರಷ್ಟೇ ಲೈಂಗಿಕ ಸಂತೃಪ್ತಿ ದೊರೆಯಲು ಸಾಧ್ಯ ಎಂದೂ ಫ್ರಾಯ್ಡ್ ಪ್ರತಿಪಾದಿಸಿದ. ನಿಷ್ಕ್ರಿಯತೆಯನ್ನು ಹೆಣ್ಣುತನಕ್ಕೂ, ಕ್ರಿಯಾಶೀಲತೆಯನ್ನು ಗಂಡುತನಕ್ಕೂ ಅವನ ಅನುಯಾಯಿಗಳು ಸಮೀಕರಿಸಿದರು.

ಈಗ 

ಇಂತಹ ಪರಿಸ್ಥಿತಿಯ ನಡುವೆಯೇ ಅಂದು ಸಾಕಷ್ಟು ಮಹಿಳೆಯರು ವೈದ್ಯ ಪದವಿ ಪಡೆದರು. ಆದರೆ ಈಗ ವೈದ್ಯಕೀಯ ವಿದ್ಯಾಲಯ ಪ್ರವೇಶಕ್ಕೆ ಲಿಂಗ ನಿರ್ಬಂಧ ಇಲ್ಲ. ಆದರೆ ಕೆಳಹಂತದ ಕೆಲಸಗಳಲ್ಲಿಯೇ ವೈದ್ಯೆಯರು ಹೆಚ್ಚು ಕಾಣುತ್ತಾರೆ. ಪ್ರಾಕ್ಟೀಸಿನಲ್ಲಿ, ಮೇಲಿನ ಹಂತಗಳಿಗೆ ಹೋದಹಾಗೆ ಅವರ ಸಂಖ್ಯೆ ಇಳಿಮುಖವಾಗಿದೆ. ಮೆಡಿಕಲ್ ಕಾಲೇಜಿನ ಅಧಿಕಾರದ ಹುದ್ದೆಗಳು, ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷಾಧಿಪತ್ಯವೇ ಮೇಲುಗೈ ಪಡೆದಿದೆ. ಯಾವುದೋ ಗಹನ ಸಂಶೋಧನೆ, ಗೌರವ-ಗುರುತಿಸುವಿಕೆ ಮಹಿಳೆಗೆ ಕಷ್ಟವೇ. ಫ್ಯಾಕಲ್ಟಿ ಸದಸ್ಯರಾಗಿ, ಎಚ್‌ಒಡಿಗಳಾಗಿ, ಅಸೋಸಿಯೇಷನ್ ಮುಖ್ಯಸ್ಥರಾಗಿ, ಡೀನ್ ಆಗಿ, ಡೈರೆಕ್ಟರಾಗಿ ಹೆಣ್ಣುಮಕ್ಕಳ ಸಂಖ್ಯೆ ತುಂಬ ಕಡಿಮೆ. ಅವರ ಪ್ರೊಮೋಷನ್ ನಿಧಾನ. ೧೯೨೮ರಲ್ಲಿ ಡಾ. ಬಿ.ಸಿ.ರಾಯ್ ಅವರಿಂದ ಶುರುವಾದ ಭಾರತೀಯ ವೈದ್ಯಕೀಯ ಸಂಘದಲ್ಲಿ ೧,೭೮,೦೦೦ ಸದಸ್ಯ ವೈದ್ಯರಿದ್ದು ಇದುವರೆಗೆ ವರ್ಷಕ್ಕೊಬ್ಬರಂತೆ ೮೫ ವೈದ್ಯರು ಐಎಂಎ ಅಧ್ಯಕ್ಷರಾಗಿಹೋಗಿದ್ದಾರೆ. ಅವರಲ್ಲಿ ೧೯೮೪-೮೫ರಲ್ಲಿ ಮುಂಬಯಿಯ ಡಾ. ಲಲಿತಾ ರಾವ್ ಎಂಬ ಮಹಿಳೆಯನ್ನು ಬಿಟ್ಟರೆ ಮತ್ಯಾವ ಮಹಿಳೆಯೂ ಇದುವರೆಗೆ ಅಧ್ಯಕ್ಷ ಪದವಿಗೇರಲಾಗಿಲ್ಲ.

ತಜ್ಞತೆಯಲ್ಲೂ ಲಿಂಗಾಧಾರಿತ ವ್ಯತ್ಯಾಸ ಕಾಣಬಹುದು. ಹೆಣ್ಮಕ್ಕಳಿಗೆ ಸ್ತ್ರೀರೋಗ, ಮಕ್ಕಳ ರೋಗ, ಚರ್ಮರೋಗ, ಅನಸ್ತೇಷಿಯಾ, ರೇಡಿಯಾಲಜಿ ಹಾಗೂ ನಾನ್‌ಕ್ಲಿನಿಕಲ್ ಹುದ್ದೆಗಳು ಕಾದಿರುತ್ತವೆ. ಆದರೆ ಎಲುಬು ಕೀಲು, ಫೋರೆನ್ಸಿಕ್ ಮೆಡಿಸಿನ್, ಸರ್ಜರಿ ಇತ್ಯಾದಿ ವಿಭಾಗಗಳಲ್ಲಿ ಹಾಗೂ ಸೂಪರ್ ಸ್ಪೆಷಾಲಿಟಿ ಕೇರ್‌ನಲ್ಲಿ ಪುರುಷರೇ ಅಧಿಕ.

ಇದಕ್ಕೆ ಕಾರಣ ಅವಕಾಶ ನಿರಾಕರಣೆಯಲ್ಲ. ಹಾಗೆ ನೋಡಿದರೆ ಹೆಣ್ಮಕ್ಕಳ ಶಿಕ್ಷಣಕ್ಕೆ ಇವತ್ತು ಹೆಚ್ಚು ಉತ್ತೇಜನವಿದೆ. ಆದರೆ ಹೆಣ್ಣಿನ ಬದುಕು ಮದುವೆ-ಮಕ್ಕಳ ಸಲುವಾಗಿ ಯೋಜಿಸಲ್ಪಡುವಂತೆ, ಪ್ಲಾನ್ಡ್ ಆಗಿರುವಂತೆ ವೃತ್ತಿಯ ಸಲುವಾಗಿ ಹೆಚ್ಚು ಪ್ಲಾನ್‌ಗಳನ್ನು ಹೊಂದಿರುವುದಿಲ್ಲ. ತನ್ನನ್ನು ತಾನು ಅರಿವ ಮೊದಲೇ, ತನ್ನ ಆದ್ಯತೆಗಳ ಅರಿವ ಮೊದಲೇ ಅವಳು ತನ್ನ ಲಿಂಗಾಧಾರಿತ ಪಾತ್ರ ನಿರ್ವಹಿಸಲು ಸಿದ್ಧವಾಗಬೇಕಾಗುತ್ತದೆ. ಮಹಿಳೆಯರೆದುರು ಎರಡು ಸಮನಾದ ಆದರೆ ಘನತರವಾದ ಕಾರ್ಯಗಳಿರುತ್ತವೆ: ಒಳ್ಳೆಯ ವೈದ್ಯೆಯಾಗಿ ರೋಗಿಗಳಿಗೆ ಉತ್ತಮ ಸರ್ವೀಸ್ ಕೊಡಬೇಕು; ಅದೇ ವೇಳೆ ಒಳ್ಳೆಯ ಅಮ್ಮ-ಹೆಂಡತಿಯಾಗಿ ಸಂಸಾರವನ್ನೂ ನಿಭಾಯಿಸಬೇಕು. ಈ ಇಬ್ಬಗೆಯ ಒತ್ತಡಗಳಲ್ಲಿ ಈಜಿ ದಡ ಸೇರಲು ಕುಟುಂಬಕ್ಕಾಗಿ ವೃತ್ತಿಯ ಕೆಲವಂಶವನ್ನು, ವೃತ್ತಿಗಾಗಿ ಕುಟುಂಬದ ಕೆಲ ಹಿತಗಳನ್ನು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಇದೆ.

ದುಡಿಯುವ ಹೆಣ್ಣು ಇವತ್ತು ಜೈವಿಕ ಮಹಿಳೆ, ಸಾಮಾಜಿಕ ಮಹಿಳೆ ಎಂಬ ಎರಡು ಪಾತ್ರಗಳು ಒಡ್ಡುವ ಸವಾಲುಗಳ ದಾಟಿ ಬದುಕಬೇಕಿದೆ. ಇವೆರೆಡೂ ಒಂದರೊಳಗೊಂದು ಮಿಳಿತಗೊಳ್ಳದ ಹಾಗೆ ವಿರುದ್ಧ ಸಾಮಾಜಿಕ ವ್ಯವಸ್ಥೆಯಿದೆ. ಅವೆರೆಡೂ ಪೂರಕವಾದರೆ ಸಂಪೂರ್ಣ ಮಹಿಳೆ ಜನ್ಮ ತಳೆದಾಳು. ಸಮಾಜದ ಎಷ್ಟೋ ಮೌಲ್ಯಗಳು, ಜೀವನಶೈಲಿ, ಸಂಬಂಧಗಳ ಸ್ವರೂಪ, ಆಚರಣೆಗಳು ಆಧುನಿಕ ತಂತ್ರಜ್ಞಾನದ ಕಾರಣವಾಗಿ ಬದಲಾವಣೆ ಕಂಡಿವೆ. ಆದರೆ ಬದಲಾಗದೇ ಇರುವುದು ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಪಾತ್ರಕ್ಕಿರುವ ಜವಾಬ್ದಾರಿ. ಬಹುಶಃ ಈ ಜವಾಬ್ದಾರಿ ಎಷ್ಟು ಗುರುತರವಾದದ್ದೆಂದರೆ ಅದನ್ನು ಸಮನಾಗಿ ಹಂಚಿಕೊಳ್ಳಲು ಹೆಗಲೆಣೆಯಾಗಿ ಗಂಡಿನ ಸಹಕಾರ ಸಿಗದೇ ಹೋದರೆ ವೈದ್ಯೆಯರಷ್ಟೇ ಅಲ್ಲ, ಹೊರಗೆ ದುಡಿಯುವ ಎಲ್ಲ ಮಹಿಳೆಯರು ಸಂಕಷ್ಟ ಅನುಭವಿಸಲೇಬೇಕಾಗುತ್ತದೆ.

ದುಡಿಯುವ ಎಲ್ಲ ಹೆಣ್ಮಕ್ಕಳೂ ಜೈವಿಕ ಸಾಮರ್ಥ್ಯದ ಜೊತೆಗೆ ಮನುಷ್ಯರಾಗಿ ತಮ್ಮೆಲ್ಲ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕಾದರೆ ದಾರಿ ಒಂದೆ: ಲಿಂಗಾಧಾರಿತ ಜವಾಬ್ದಾರಿಗಳ ಹೊರೆ ಕಡಿಮೆ ಮಾಡುವುದು; ಮನೆವಾಳ್ತೆ ಕೆಲಸಗಳನ್ನು ಕುಟುಂಬದ ಇತರ ಸದಸ್ಯರು ಹಂಚಿಕೊಳ್ಳುವುದು. ಆಗ ಗಂಡು ತನ್ನವಳಾಗಿಸಿಕೊಂಡ ಹೆಣ್ಣು ಬೇರೆಯೇ ಆಗಿರುತ್ತಾಳೆ.

ಕವಿ ಇಮ್ರೋಜ್ (ಅಮೃತಾ ಪ್ರೀತಂ ಸಂಗಾತಿ) ಹೇಳುವಂತೆ,

ಸಂಪೂರ್ಣ ಹೆಣ್ಣು ದೇಹಕ್ಕಿಂತ ಮಿಗಿಲಾದವಳು
ಹೆಣ್ಣಿನ ದೇಹದೊಂದಿಗೆ ಮಲಗಬಹುದು
ಆದರೆ ಕೇವಲ ದೇಹದೊಂದಿಗೆ ಎಚ್ಚರಗೊಳ್ಳಲು ಸಾಧ್ಯವಿಲ್ಲ
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು ಎಚ್ಚರಗೊಂಡವನಿಗೆ ಮಾತ್ರ..

ದೇಹವಷ್ಟೆ ಅಲ್ಲದೆ ನಿಜದ ಹೆಣ್ಣಿಗಾಗಿ ಗಂಡು ಬಯಸತೊಡಗಿದರೆ ಆಗ ಅವಳ ಬಹುತೇಕ ಆಲಾಪ, ವಿಲಾಪ, ಸಂಕಷ್ಟಗಳೂ ಕೊನೆಯಾಗುತ್ತವೆ.




Friday, 28 August 2015

ಖುರೇಶಿಗಳು: ವ್ಯಾಘ್ರ ಸೇನೆಯ ಗೋ ಭಕ್ತಿಗೆ ನಲುಗಿದವರು..






ಎಲ್ಲೋ ಹಿಂಡಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಒತ್ತಿದರೆ ಇನ್ನೆಲ್ಲೋ ತೆರೆಯುತ್ತದೆ. ಬಹುಸಮುದಾಯಗಳ ವೈವಿಧ್ಯಮಯ ಭಾರತದಲ್ಲಿ ಕೈಗೊಳ್ಳುವ ಯಾವುದೇ ಕ್ರಿಯೆಯೂ ಹೀಗೇ ಕೊನೆಯಾಗುವಾಗ ಒಂದು ಸಮುದಾಯವನ್ನೇ ಗುರಿಯಾಗಿಸಿ ತೆಗೆದುಕೊಳ್ಳುವ ಕ್ರಮಗಳು ಹಲವು ದುಸ್ಸಾಧ್ಯತೆಗಳನ್ನು ಸಹಜವಾಗೇ ಹೊಂದಿರುತ್ತವೆ. ಅದರಲ್ಲೂ ಆಹಾರ, ವರ್ತನೆ, ಉಡುಪುಗಳಂತಹ ದೈನಂದಿನ ಆಗುಹೋಗುಗಳು ಕಾಯ್ದೆಕಾನೂನಿಗೊಳಪಟ್ಟರೆ ಹೆಸರಿಡಲಾಗದ ಹಲವು ಸಂಕಟಗಳು ಭುಗಿಲೇಳುತ್ತವೆ.

ನಮ್ಮಲ್ಲಿ ಆಹಾರ ಕುರಿತ ಚರ್ಚೆ, ವಿವಾದ ಆಗೀಗ ಶುರುವಾಗುತ್ತ ಇರುತ್ತದೆ. ಒಂದೆಡೆ ಕೋಟ್ಯಂತರ ಮಕ್ಕಳು, ಜನರು ಹಸಿವು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಇನ್ನೊಂದೆಡೆ ಹೊಟ್ಟೆತುಂಬಿದವರ ಖಯಾಲಿಗೆ ಸಿಕ್ಕ ಪಶುಪಕ್ಷಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಜೊತೆಗೆ ತಿನ್ನುವುದು ಹೇಗಿರಬೇಕು? ಯಾವುದಿರಬೇಕು? ಎಂಬ ಪ್ರಶ್ನೆಗಳು ಧಾರ್ಮಿಕ ಆಯಾಮ ಪಡೆದು ಜೀವನ್ಮರಣದ ಪ್ರಶ್ನೆಗಳೋ ಎಂಬಂತೆ ಭಾವಿಸಲ್ಪಡುತ್ತಿವೆ. ಅದರಲ್ಲೂ ಗೋವು, ಗೋಮಾಂಸ ಕುರಿತಂತೆ ಕೊನೆ ಮೊದಲಿಲ್ಲದ ಚರ್ಚೆ ನಡೆದಿದೆ. ಒಂದು ವರ್ಗ ಗೋಹತ್ಯೆ ಮಾಡಬೇಡಿ, ಮುದಿ ಎತ್ತುದನಗಳ ಮಾರಲೂಬೇಡಿ, ಅದರ ಬದಲು ಗೋಮೂತ್ರ, ಸಗಣಿ ಸಂಗ್ರಹಿಸಿ ಶುದ್ಧೀಕರಿಸಿ ಮಾರಾಟ ಮಾಡಿ; ಅದು ಹಲವು ಕಾಯಿಲೆಗಳಿಗೆ ದಿವ್ಯೌಷಧ ಎನ್ನುತ್ತಿದೆ. ಅವರ ಅಬ್ಬರದಲ್ಲಿ ‘ಗೋಮಾತೆಯೆಂಬ ಕಲ್ಪನೆಯೇನೋ ಸುಂದರವಾಗಿದೆ; ಆದರೆ ಅದು ವ್ಯಾವಹಾರಿಕವಲ್ಲ’ ಎಂಬ ಕಹಿಸತ್ಯ ಹೇಳುವುದೂ ಧರ್ಮದ್ರೋಹ ಎನಿಸಿಕೊಂಡಿದೆ.

ಬಹುಸಂಖ್ಯಾತರ ಧಾರ್ಮಿಕತೆಯ ಭಾಗವೆಂದು ಗೋಹತ್ಯಾ ನಿಷೇಧ ಕಾಯ್ದೆ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಆದರೆ ಅದರಿಂದ ಮಹಾರಾಷ್ಟ್ರದಾದ್ಯಂತ ಎಲ್ಲ ಧರ್ಮಗಳಿಗೆ ಸೇರಿದ ಸುಮಾರು ಹತ್ತು ಲಕ್ಷ ಜನರ ಉದ್ಯೋಗ, ವ್ಯಾಪಾರಕ್ಕೆ ಸಂಚಕಾರ ಒದಗಿದೆ. ಪ್ರಖ್ಯಾತ ಕೊಲ್ಲಾಪುರ ಚಪ್ಪಲಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಹಳೆ ಎತ್ತುಗಳ ಮಾರಲಾರದೆ ಹೊಸ ಜೋಡಿ ಕೊಳ್ಳಲು ಸಾಧ್ಯವಾಗದೇ ಸಣ್ಣ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಒಂದಿಡೀ ಸಮುದಾಯ ತನ್ನ ಜೀವನಾಧಾರವಾದ ವೃತ್ತಿಗೆ ಒದಗಿದ ಕಂಟಕದಿಂದ ಹಿನ್ನಡೆ ಅನುಭವಿಸುತ್ತಿದೆ.

ಆ ಸಮುದಾಯವೇ ಮಹಾರಾಷ್ಟ್ರದ ಖುರೇಶಿಗಳು.

ನಿಸರ್ಗದ ಅಪಾಯದಂಚಿನಲ್ಲಿರುವ ತಳಿಯ ಪಶುಪಕ್ಷಿಗಳನ್ನು ಬೇಟೆಯಾಡಿ ಹಸಿವೆ ತಣಿಸಿಕೊಳ್ಳುವುದು ಅಪರಾಧ. ಅವುಗಳ ಉಳಿವಿಗೆ ಕಾಯ್ದೆಯ ಬೆಂಬಲ ಅಗತ್ಯ. ಆದರೆ ಸಾವಿರಾರು ವರ್ಷಗಳಿಂದಲೂ ಮಾಂಸ, ಹಾಲುಹೈನಕ್ಕೆಂದೇ ಸಾಕಲ್ಪಟ್ಟ; ವಿಶ್ವಾದ್ಯಂತ ಅರ್ಧ ಜನರ ಆಹಾರವಾಗಿರುವ ಗೋವಿಗೆ ಕಾಯ್ದೆಯ ರಕ್ಷಣೆ ಅವಶ್ಯವಿದೆಯೆ? ಗೋವಿನ ರಕ್ಷಣೆಗೆ ಕಾಯ್ದೆ ಖಂಡಿತಾ ಬೇಕಿರಲಿಲ್ಲ, ಅದು ಬೇಕಾದದ್ದು ಜನರ ಮತಗಳ ಮೇಲೆ ಕಣ್ಣಿಟ್ಟ ವ್ಯಾಘ್ರಸೇನೆಯ ಪಟ್ಟಭದ್ರತೆಗೆ. ದೇಶಾದ್ಯಂತ ಹಿಂದೂತ್ವ ಪ್ರತಿಪಾದಿಸುವ ಗೋಸುತರು ಅಧಿಕಾರಕ್ಕೆ ಬಂದು, ಮಹಾರಾಷ್ಟ್ರದಲ್ಲೂ ಕಳೆದ ಚುನಾವಣೆಯ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದಾಗ ಇದುವರೆಗೆ ನಾನಾ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ‘ಮಹಾರಾಷ್ಟ್ರ ಅನಿಮಲ್ ಪ್ರಿಸರ್ವೇಷನ್ ಅಮೆಂಡ್‌ಮೆಂಟ್ ಆಕ್ಟ್’ ಜಾರಿಗೆ ಬಂತು. ಈ ಕಾಯ್ದೆಯ ವಿರುದ್ಧ ಕೆಲವರು ಹೈಕೋರ್ಟಿಗೆ ಹೋದಾಗ ಮುಂಬೈ ಹೈಕೋರ್ಟು ಗೋಹತ್ಯಾ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯಿತು. ದನಕರು ಕಡಿಯುವುದಷ್ಟೆ ಅಲ್ಲ, ಅದರ ವ್ಯಾಪಾರ ಹಾಗೂ ದನದ ಮಾಂಸ ಹೊಂದಿರುವುದೂ ಅಪರಾಧವಾಗಿ ಐದು ವರ್ಷ ಜೈಲುವಾಸದವರೆಗೆ ಶಿಕ್ಷೆ ನಿಗದಿಯಾಯಿತು.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲೇ ಅತಿ ಕಡಿಮೆ ಮಾಂಸ ಸೇವಿಸುವ; ಮೂರನೇ ಒಂದು ಭಾಗ ಜನ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವ ದೇಶ ಭಾರತ. ೮೦% ಹಿಂದೂಗಳು ದನದ ಮಾಂಸ ತಿನ್ನುವುದಿಲ್ಲವೆಂದೇ ಲೆಕ್ಕ. ಆದರೆ ಇದು ವಿಶ್ವದಲ್ಲೇ ಅತಿ ದೊಡ್ಡ ಜಾನುವಾರು ಮಾಂಸದ ಉತ್ಪಾದಕ ದೇಶ. ಭಾರತದ ಖ್ಯಾತ ರಫ್ತು ಬಾಸ್ಮತಿ ಅಕ್ಕಿಯಲ್ಲ, ಎಮ್ಮೆ ಮಾಂಸ! ಅರಬ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಭಾರತದ ಎಮ್ಮೆ ಮಾಂಸ ಬಹು ಜನಪ್ರಿಯವಾಗಿದೆ. ಕಳೆದ ವರ್ಷ ೪.೩ ಬಿಲಿಯನ್ ಡಾಲರ್ ಮೌಲ್ಯದ ಎಮ್ಮೆ ಮಾಂಸ ರಫ್ತಾಗಿದೆ. ಎಮ್ಮೆ ಪೂಜೆ ಮಾಡದ ಗೋಸುತರ ಕಾಲದಲ್ಲಿ ಎಮ್ಮೆ ಮಾಂಸ ರಫ್ತು ಕಳೆದ ವರ್ಷಕ್ಕಿಂತ ೧೬% ಹೆಚ್ಚಾಗಿದೆ! ಗೋಹತ್ಯೆ ನಿಷೇಧದ ಬಳಿಕ ಎಮ್ಮೆ ಮಾಂಸ ವ್ಯಾಪಾರ ಸ್ಥಳೀಯವಾಗಿಯೂ ಹೆಚ್ಚಾಗಿದ್ದು ಮುಂಬಯಿಯ ದೇವನಾರ್‌ನಲ್ಲೆ ಮೊದಲು ದಿನಕ್ಕೆ ೯೦ ಎಮ್ಮೆ ಕಡಿಯುತ್ತಿದ್ದರೆ ಈಗ ೩೦೦ ಎಮ್ಮೆ ಕಡಿಯಲಾಗುತ್ತಿದೆ.

ಮಹಾರಾಷ್ಟ್ರದ ಖುರೇಶಿಗಳು ಭಾರತದ ಜಾತಿವ್ಯವಸ್ಥೆಯ ಉದ್ಯೋಗ-ಜಾತಿ ಸಂಬಂಧದ ಸಿಕ್ಕುಗಳಲ್ಲಿ ಮಾಂಸ ಮಾರಾಟ, ಚರ್ಮ ಮಾರಾಟ, ಪ್ರಾಣಿಗಳ ಕೊಳ್ಳುವ ವ್ಯವಹಾರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡ ಸಮುದಾಯವಾಗಿದ್ದಾರೆ. ದನದ ಮಾಂಸ ತಿನ್ನುವವರೇನೋ ತಮ್ಮ ಆಯ್ಕೆಯಲ್ಲಿ ನಾಲಿಗೆ ರುಚಿಯಲ್ಲಿ ಕೊಂಚ ಹೆಚ್ಚು ಕಡಿಮೆ ಮಾಡಿಕೊಂಡಾರು. ಆದರೆ ಮಾಂಸ ವ್ಯಾಪಾರವನ್ನೇ ಉದ್ಯೋಗವಾಗಿ ನಂಬಿದ ಈ ಸಮುದಾಯದ ಎದುರಿನ ಆಯ್ಕೆಗಳು ಅಷ್ಟು ಸುಲಭವಾಗಿ ಬದಲಾಗಲಾರವು. ಈಗ ಖುರೇಶಿಗಳು ಎಮ್ಮೆ ಮಾಂಸದ ವ್ಯಾಪಾರದಲ್ಲಿ ತೊಡಗಿದ್ದರೂ ಭಾರತದ ಎಮ್ಮೆಗಳ ಸಂಖ್ಯೆ (೧೩ ಕೋಟಿ) ದನಕ್ಕೆ ಹೋಲಿಸಿದರೆ (೨೮.೩ ಕೋಟಿ) ಕಡಿಮೆಯಿರುವುದರಿಂದ ವಹಿವಾಟು ಕಡಿಮೆಯಾಗಿದೆ.


ಯಾರೀ ಖುರೇಶಿಗಳು?


ಮಾಂಸ ವ್ಯಾಪಾರದ ಒಳಹೊರಗು ಅರಿತ ಸುನ್ನಿ ಮುಸ್ಲಿಮರ ಸಮುದಾಯ ಖುರೇಶಿಗಳದು. ಅವರಿಗೆ ಅವರದೇ ಜಾತಿಯ ಜಮಾತೆಯಿದ್ದು ಇದು ಭಾರತದ ಅತಿ ಹಳೆಯ ಜಮಾತೆಗಳಲ್ಲಿ ಒಂದಾಗಿದೆ. ಕಸಾಯ್ ಎಂದರೆ ಉರ್ದುವಿನಲ್ಲಿ ಕಡಿಯುವವ. (ಗಸಾಬ್ (ಅರೆಬಿಕ್) - ಕಟುಕ, ಸೀಳುವವ) ಮಾಂಸ ಕಡಿಯುವ ಕೆಲಸ ಮಾಡುವವರದು ಕಸ್ಸಾಬ್ ಪಂಗಡ. ಅವರ ಸಾಮಾನ್ಯ ಸರ್‌ನೇಮ್ ಖುರೇಶಿ. ಆದರೆ ಎಲ್ಲ ಖುರೇಶಿಗಳೂ ಕಸ್ಸಾಬ್‌ಗಳಲ್ಲ. ಅದೊಂದು ಅರಬ್ ಬುಡಕಟ್ಟು. ಪ್ರವಾದಿ ಮಹಮದರ ಅಜ್ಜ ಈ ಬುಡಕಟ್ಟು ಗುಂಪಿನ ಮುಖ್ಯಸ್ಥರೇ ಆಗಿದ್ದರು. ಭಾರತದ ಖುರೇಶಿಗಳು ದೆಹಲಿ ಸುಲ್ತಾನರ ಕಾಲದಲ್ಲಿ ವಲಸೆ ಬಂದು ಇಲ್ಲಿ ನೆಲೆಯಾದವರು. ಈಗ ಹಲವು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಅವರಲ್ಲಿ ಕೆಲ ಮತಾಂತರಗೊಂಡ ಸಮುದಾಯಗಳೂ ಇವೆ. ಅವರು ಉರ್ದು ಜೊತೆಗೆ ಸ್ಥಳೀಯ ಭಾಷೆ ಮಾತನಾಡುತ್ತಾರೆ. ಅವರಲ್ಲಿ ಕೋಳಿಕುರಿ ಕಡಿಯುವ ಚಿಕ್ವಾಗಳು (ಉತ್ತರ ಪ್ರದೇಶ), ಎಮ್ಮೆದನ ಕಡಿವ ಕಸ್ಸಾಬ್‌ಗಳು ಹಾಗೂ ವೃತ್ತಿಪರ ಅಡುಗೆಯವರಾಗಿರುವ ಬಾವರ್ಚಿ (ಲಕ್ನೊ, ಗುಜರಾತ್) ಗಳೆಂಬ ಮೂರು ಪಂಗಡಗಳಿವೆ. ಅವಧಿ ಅಡಿಗೆಯ ದಮ್ ಬಿರಿಯಾನಿ, ರುಮಾಲೆ ರೋಟಿಗಳ ಗರಿಮೆಯಲ್ಲಿ ಬಾವರ್ಚಿಗಳ ಶ್ರಮವಿದೆ. ಭಾರತದ ಖುರೇಶಿಗಳ ಒಟ್ಟೂ ಜನಸಂಖ್ಯೆ ೯.೩ ಲಕ್ಷ. ಪಾಕಿಸ್ತಾನದಲ್ಲೂ ಕಸ್ಸಾಬ್‌ಗಳಿದ್ದು ಅವರ ಮೂಲ ರಾಜಸ್ಥಾನದ ರಜಪೂತ ಬುಡಕಟ್ಟುಗಳಾಗಿವೆ. ಅವರು ಮುಖ್ಯವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದ್ದಾರೆ. ಅವರಲ್ಲೇ ಒಂದು ಉಪಸಮುದಾಯವಾದ ‘ಪೆಂಜಾ’ ಹತ್ತಿ ಬಿಡಿಸುವ, ಮಾರುವ ವ್ಯವಹಾರದಲ್ಲೂ ತೊಡಗಿಕೊಂಡಿದೆ. ಜಮ್ಮುಕಾಶ್ಮೀರದಲ್ಲಿ ಅವರದು ಮೇಲ್ಜಾತಿ ಮುಸ್ಲಿಂ ಸಮುದಾಯ. ಮಸೂದಿ, ಬುಖಾರಿ, ಖುರೇಶಿ ಎಂಬ ಮೂರು ಸರ್‌ನೇಮ್‌ಗಳಿವೆ.

ಮಹಾರಾಷ್ಟ್ರದ ಖುರೇಶಿಗಳು ಹೈದರಾಬಾದಿನ ನಿಜಾಂ ಸೈನ್ಯದಲ್ಲಿದ್ದವರು ಅಮರಾವತಿಗೆ ಬಂದು ಮಹಾರಾಷ್ಟ್ರದಲ್ಲಿ ನೆಲೆಯಾದವರು. ಉಳಿದೆಲ್ಲ ಕಡೆಗಳಲ್ಲಿ ಹೇಗೋ ಹಾಗೆ ಇಲ್ಲಿಯೂ ಗಾಯ್ ಕಸಾಯ್ (ದನ ಕಡಿಯುವವರು) ಹಾಗೂ ಛೋಟಾ ಕಸಾಯ್ (ಕುರಿಮೇಕೆಕೋಳಿ ಕಡಿಯುವವರು) ಎಂದು ಎರಡು ಪಂಗಡಗಳಿವೆ. ಚೌಧರಿ, ಸೌದಾಗರ್, ಸಿಕ್ಕು ಎಂಬ ಸರ್‌ನೇಮ್‌ಗಳಿವೆ.

ಗೋಮಾಂಸ ಸೇವನೆ ಮತ್ತು ಭಾರತೀಯತೆ 

ಗೋಮಾಂಸ ಸೇವನೆ, ಗೋವಧೆ ಮುಸ್ಲಿಂ ದಾಳಿಕಾರರು ಭಾರತವನ್ನು ಆಕ್ರಮಿಸಿದ ಮೇಲೆ ಶುರುವಾಯಿತೆಂಬ ಜನಪ್ರಿಯ ಕಟ್ಟುಕತೆ ಚಾಲ್ತಿಯಲ್ಲಿದೆ. ಆದರೆ ಅರಬ್ಬರಿಗೆ ಗೋಮಾಂಸ ಗೊತ್ತೇ ಇರಲಿಲ್ಲ. ಅವರದು ಕುರಿ, ಆಡು ಅಥವಾ ಒಂಟೆ ಮಾಂಸದ ಆಹಾರ. ಭಾರತಕ್ಕೆ ಬಂದ ಮೇಲೆಯೇ ಅರಬ್ಬರು ಗೋಮಾಂಸ ರೂಢಿಸಿಕೊಂಡದ್ದು. ಮೊಘಲ್ ದೊರೆಗಳೂ ಗೋವಧೆ ನಿಷೇಧಿಸಿದ್ದರು. ಬಾಬರ್ ತನ್ನ ಮಗನಿಗೆ ಬರೆದಿಟ್ಟ ಸಲಹಾರೂಪದ ಉಯಿಲಿನಲ್ಲಿ ಹಿಂದೂಸ್ತಾನದ ಜನರ ಮನಸ್ಸನ್ನು ಅವರವರ ರೂಢಿ, ಧರ್ಮಗಳ ಆಚರಣೆ ಗೌರವಿಸುವ ಮೂಲಕ ಗೆಲ್ಲಬೇಕೆಂದೂ; ವಿಶೇಷವಾಗಿ ಗೋಹತ್ಯೆ ನಿಷೇಧ ಮಾಡಬೇಕೆಂದೂ ಸೂಚಿಸಿದ್ದ. ಮೈಸೂರಿನ ಹೈದರ್ ಅಲಿ ಗೋವಧೆ ಮಾಡಿದವರ ಕೈಕಡಿಯುವ ಶಿಕ್ಷೆ ನೀಡುತ್ತಿದ್ದ. ಅಕ್ಬರ್, ಜಹಾಂಗೀರ್, ಅಹ್ಮದ್ ಷಾ ಕೂಡಾ ಕೆಲಮಟ್ಟಿಗೆ ಗೋಹತ್ಯೆ ನಿಷೇಧ ಚಾಲ್ತಿಯಲ್ಲಿಟ್ಟಿದ್ದರು.  

ಪಶುಸಂಗೋಪನೆ ಮತ್ತು ಕೃಷಿಯನ್ನು ಜೀವನಾಧಾರ ಕಸುಬಾಗಿ ಹೊಂದಿದ ಭಾರತ ಉಪಖಂಡದ ನಾಗರಿಕತೆ ಮೊದಲಿನಿಂದ ಗೋಮಾಂಸ ಬಳಸಿದೆ. ಪಶುಸಂಗೋಪನೆಯೇ ಮುಖ್ಯ ಕಸುಬಾಗಿದ್ದ ಆರ್ಯಕುಲಗಳು ಗೋವಧೆಗೆ ಖ್ಯಾತವಾಗಿದ್ದವು. ದೇವರಿಗೆ ಯಜ್ಞಯಾಗಗಳ ಬಲಿಯಾಗಿ ಗೋವು ಮತ್ತು ಕುದುರೆಗಳನ್ನು ವಧಿಸಿ ಅರ್ಪಿಸಲಾಗುತ್ತಿತ್ತು. ಯಾಗದ ನಂತರ ಪುರೋಹಿತರೂ ಸೇರಿದಂತೆ ಯಾರ‍್ಯಾರು ಮಾಂಸದ ಯಾವ್ಯಾವ ಭಾಗ ಹಂಚಿಕೊಳ್ಳಬೇಕೆಂದು ಶಾಸ್ತ್ರಗ್ರಂಥಗಳಲ್ಲಿ ವಿವರಿಸಲಾಗಿತ್ತು. ಗೋಮಾಂಸ ತಳಸಮುದಾಯಗಳಿಗೆ ದುರ್ಲಭವಾಗಿದ್ದರೂ ಪುರೋಹಿತ ವರ್ಗಕ್ಕೆ ಮಾತ್ರ ಒಂದಲ್ಲ ಒಂದು ಪೂಜೆ, ಯಜ್ಞದ ನೆಪದಲ್ಲಿ ಸಿಗುತ್ತಿತ್ತು. ಕ್ರಿಸ್ತಪೂರ್ವ ಕಾಲದ ಭಾರತದಲ್ಲಿ ಗೋವಧೆ ಯಾವ ಮಟ್ಟಿಗಿತ್ತು ಎಂದರೆ ಅತಿಥಿ ಬಂದರೆ ಒಂದು ಗೋವು ಕಡಿಯುವುದೇ. ಅದಕ್ಕೇ ಅತಿಥಿಯನ್ನು ‘ಗೋಘ್ನ’ನೆಂದು ಕರೆಯುತ್ತಿದ್ದರು.

ಆಗ ಯಜ್ಞಯಾಗಾದಿಗಳ ನೆಪದಲ್ಲಿ ಅಮಾಯಕ ಗೋ ಹತ್ಯೆ ನಡೆಯುವುದು ಕಂಡು ಕೆಲ ಜೀವಗಳು ಸಂಕಟಪಟ್ಟವು. ಅಮಾನವೀಯ ವಧೆಯನ್ನು ನಿಲ್ಲಿಸಬೇಕೆಂದು ಜನರ ಮನವೊಲಿಸಿದರು. ಅವರೇ ಬುದ್ಧ, ಜಿನರಾದರು. ಪೂಜೆ, ಯಾಗಗಳಿಂದ ಬೇಸತ್ತ ಜನ ಅಹಿಂಸೆ ಬೋಧಿಸುವ, ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಬೌದ್ಧ, ಜೈನ ತತ್ವಗಳೆಡೆ ಆಕರ್ಷಿತರಾದರು. ಆಗ ಎಚ್ಚೆತ್ತ ಪುರೋಹಿತವರ್ಗ ಗೋಸುತರಾಗಿ, ಸಸ್ಯಾಹಾರಿಯಾಗಿ, ಅದೇ ತನ್ನ ಶ್ರೇಷ್ಠತೆಯೆಂದು ಸಾರತೊಡಗಿತು. ಅಂದು ಗೋಮಾಂಸ ತಿನ್ನುವುದಷ್ಟೇ ಅಲ್ಲ, ಎಲ್ಲ ರೀತಿಯ ಮಾಂಸಾಹಾರ ತ್ಯಜಿಸಿದವರೇ ಇಂದು ಗೋವು ಮಾತೆ, ಅದರ ರೋಮರೋಮಗಳಲ್ಲೂ ದೇವರಿದ್ದಾನೆ, ಭಾರತವೆಂಬ ಹಿಂದೂ ಮೆಜಾರಿಟಿ ದೇಶದಲ್ಲಿ ಜನ ಗೋಮೂತ್ರ ಕುಡಿಯಬೇಕೇ ಹೊರತು ಗೋಮಾಂಸ ತಿನ್ನಬಾರದು ಎಂಬ ಒತ್ತಾಯ ಹೇರುತ್ತಿದ್ದಾರೆ.

ದನ ಸಾಕುವಿಕೆ ಒಂದು ವ್ಯವಹಾರ. ಸಾಕಿದ ದನವನ್ನು ಪ್ರೀತಿಸಬಹುದೇ ಹೊರತು ಗೋಮಾತೆ ಎಂಬ ಭಕ್ತಿಯಿಂದ ಯಾರೂ ದನ ಸಾಕಲಾರರು. ಹಿಂಡಿ, ಬೂಸಾ, ಗೊಬ್ಬರ, ಸಗಣಿಗಳ ಲಾಭ ನಷ್ಟ ಲೆಕ್ಕಾಚಾರಗಳು ವ್ಯವಹಾರಸ್ಥ ರೈತರಿಗೆ ಗೊತ್ತಿದೆ. ಅದರಲ್ಲೂ ಬರನೆರೆಗಳಿಂದ ಕಂಗೆಟ್ಟು ತನ್ನ ಕೂಳು ತಾನು ಬೆಳೆದುಕೊಳ್ಳಲಾಗದ ರೈತನಿಗೆ ರಾಸುಗಳಿಗೆ ಮೇವೊದಗಿಸುವ, ನೀರುಣಿಸಿ ಕಾಳಜಿ ಮಾಡುವ ಕಷ್ಟ ಗೊತ್ತಿದೆ. ಹಿಂದೂಮುಸ್ಲಿಮರೆನ್ನದೆ ವಯಸ್ಸಾದ ಎತ್ತು-ದನ-ಗೊಡ್ಡು ದನಗಳನ್ನು ಮಧ್ಯವರ್ತಿಗಳಿಗೆ ಮಾರಿ ಹೊಸ ದನ, ಎತ್ತು ಕೊಳ್ಳುವುದು ಎಂದಿನಿಂದ ನಡೆದುಬಂದ ರೂಢಿಯಾಗಿದೆ. ಗೋಮಾತೆಯನ್ನು ಪೂಜಿಸುವ ಹಿಂದೂಗಳೇ ಮುದಿಯಾದ, ಗೊಡ್ಡಾದ, ಕೈಕಾಲು ಮುರಿದು ಉಪಯೋಗಕ್ಕೆ ಬಾರದ ರಾಸುಗಳನ್ನು ಸಾಕಲು ಸಾಧ್ಯವಿಲ್ಲವೆಂದು ಮಾರಿದ್ದಾರೆ. ಮಾರಿದ ದನ ಎಲ್ಲಿಹೋಗಿ ಏನಾಗುವುದೆನ್ನುವುದು ಓಪನ್ ಸೀಕ್ರೆಟ್. ಆದರೆ ಗೋವು ಸಾಕಿ ಗೊತ್ತಿಲ್ಲದ ಅತಿಭಾವುಕ ಗೋಪೂಜಕರ ತಲೆಬುಡವಿಲ್ಲದ ಗೋ ಭಕ್ತಿಗೆ ಮುದಿ ಜಾನುವಾರು ವಿಲೇವಾರಿ ಮಾಡಲಾಗದೆ; ಹೊಸ ಎತ್ತಿನ ಜೋಡಿ ಕೊಳ್ಳಲಾಗದೆ ರೈತರು ಕಂಗಾಲಾಗುತ್ತಿದ್ದಾರೆ..

ಹೊಸದಲ್ಲ

ಗೋಹತ್ಯಾ ನಿಷೇಧ ಹಿಂದುತ್ವ ಪ್ರತಿಪಾದಿಸುವವರ ಇವತ್ತಿನ ಹುನ್ನಾರವಷ್ಟೆ ಅಲ್ಲ. ಈ ನಿಷೇಧ ತರುವಲ್ಲಿ ಮಹಾರಾಷ್ಟ್ರ ಮೊದಲಿನದೂ ಅಲ್ಲ. ಸಂಪೂರ್ಣ ನಿಷೇಧ ತಂದ ಹನ್ನೊಂದನೆಯ ರಾಜ್ಯ ಅದು. ಹರ‍್ಯಾಣ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ೧೯೪೭ರಿಂದಲೂ ಈ ಕಾಯ್ದೆ ಚಾಲ್ತಿಯಲ್ಲಿದೆ. ಕೇರಳ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಒಟ್ಟು ೨೪ ರಾಜ್ಯಗಳು ಬೇರೆಬೇರೆ ರೀತಿಯ ಗೋಹತ್ಯಾ ನಿಷೇಧ ಕಾನೂನನ್ನು ಹೊಂದಿವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ವರ್ಷದವರೆಗೆ ವಿವಿಧ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಹೋರಾಟಗಾರರು ಈ ಕಾಯ್ದೆಯನ್ನು ಬುಗುರಿಯಂತೆ ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ತಿರುಗಿಸಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಿನೋಬಾ ಭಾವೆ ಯಾರೂ ಹೊರತಲ್ಲ. ೧೯೬೬ರಲ್ಲಿ ವಿಶ್ವಹಿಂದೂ ಪರಿಷದ್ ಗೋಹತ್ಯಾ ನಿಷೇಧ ಕಾಯ್ದೆ ತರಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಎಲ್ಲ ಒತ್ತಡಗಳ ನಡುವೆ ಇಂದಿರಾ ಕಾಯ್ದೆ ತರಲು ಸಾಧ್ಯವಿಲ್ಲವೆಂದರು. ಹತ್ತು ಸಾವಿರ ಜನ ಕಾಯ್ದೆ ಪರವಿದ್ದ ವಕೀಲರು ಸಂಸತ್ ಭವನವನ್ನು ಸುತ್ತುವರೆಯಲು ಯತ್ನಿಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಗೃಹಮಂತ್ರಿ ಗುಲ್ಜಾರಿಲಾಲ್ ನಂದಾ ರಾಜೀನಾಮೆಯಿತ್ತರು. ಆಂತರಿಕ ಮತ್ತು ಬಾಹ್ಯ ಒತ್ತಡಗಳ ಕಾರಣವಾಗಿ ಹಲವು ರಾಜ್ಯಗಳು ನಿಷೇಧ ಕಾನೂನನ್ನು ಜಾರಿಮಾಡಿದವು.

ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಜಾನುವಾರು ಹತ್ಯೆ ನಿಷೇಧಿಸಿ, ತಳಿಯನ್ನು ರಕ್ಷಿಸಲು ರಾಜ್ಯಗಳಿಗೆ ಕಾಯ್ದೆ ರೂಪಿಸುವ ಅಧಿಕಾರ ನೀಡಲಾಗಿದೆ. ಅದು ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ’ಯಲ್ಲಿ ಸೇರಿದೆ. ಕೃಷಿ ಮತ್ತು ಪಶುಸಂಗೋಪನೆಯನ್ನು ಅಭಿವೃದ್ಧಿಗೊಳಿಸಿ ಜಾನುವಾರು ತಳಿ ರಕ್ಷಿಸಲು ರಾಜ್ಯಗಳಿಗಿರುವ ನಿರಪೇಕ್ಷ ಅಧಿಕಾರವನ್ನೇ ದಾಳವಾಗಿಟ್ಟುಕೊಂಡು ಹಿಂದುತ್ವ ಸಂಘಟನೆ-ಪಕ್ಷಗಳು ಚದುರಂಗ ಆಡುತ್ತಿವೆ. ಅವರ ತಾಳಕ್ಕೆ ತಕ್ಕಂತೆ ಗೋಹತ್ಯಾ ನಿಷೇಧ ಕಾಯ್ದೆಗಳು ಸಾಂವಿಧಾನಿಕವಾಗಿ ಸಿಂಧು ಎಂದು ೨೦೦೫ರಲ್ಲಿ ಸುಪ್ರೀಂಕೋರ್ಟೂ ಹೇಳಿದೆ. ಕೆಲ ರಾಜ್ಯಗಳು ‘ಹತ್ಯೆ ಮಾಡಲ್ಪಡಬಹುದಾದ’ ಗೋವು (ವಯಸ್ಸಾದ, ದುಡಿಯದ) ಎಂದು ಪ್ರಮಾಣಪತ್ರ ಪಡೆದ ಗೋವುಗಳನ್ನು ಕಡಿಯಲು ಅನುಮತಿ ನೀಡಿದರೆ ಮತ್ತೆ ಕೆಲವು ಸಂಪೂರ್ಣ ನಿಷೇಧಗೊಳಿಸಿವೆ.

ಸಂಪೂರ್ಣ ಗೋಹತ್ಯೆ ನಿಷೇಧದಿಂದ ಇದುವರೆಗೆ ಸಾಧಿಸಿರುವುದಾದರೂ ಏನು? ರಾಜಕೀಯ ಪಕ್ಷವೊಂದರ ಹಿಂದುತ್ವ ಟ್ರಂಪ್ ಕಾರ್ಡನ್ನು ಆಗಾಗ ಚಲಾವಣೆ ಮಾಡಲು; ಅಲ್ಪಸಂಖ್ಯಾತರನ್ನು ಹೆದರಿಸಿ ‘ಹದ್ದುಬಸ್ತಿನಲ್ಲಿಡಲು’ ಅಗತ್ಯ ಹತಾರವೊಂದು ಈ ಕಾಯ್ದೆಯ ರೂಪದಲ್ಲಿ ಒದಗಿದಂತಾಗಿದೆ. ಜೊತೆಗೆ ಹಿಂದೂ, ಹಿಂದೂಯೇತರರ ಗೋಮಾಂಸ ತಿನ್ನುವ ‘ಆಹಾರ ಅಲ್ಪಸಂಖ್ಯಾತ’ ಸಮುದಾಯ ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವಂತಾಗಿದೆ. ಹಲವು ಕಡೆ ಗೋವನ್ನು ಕದ್ದು ಸಾಗಿಸಿ ಕಡಿಯಲಾಗುತ್ತಿದೆ. ಅನುಮತಿಯಿಲ್ಲದ ಕಾನೂನು ಬಾಹಿರ ಕಸಾಯಿಖಾನೆಗಳೂ, ಗೋಶಾಲೆಗಳೂ ಹೆಚ್ಚಾಗಿವೆ.


ಯಾವುದೇ ಮಾಂಸವನ್ನೂ ತಿನ್ನಲಾರೆ ಎಂಬ ಸಸ್ಯಾಹಾರಿಗಳ ಅತಿ ಅಹಿಂಸೆಯನ್ನಾದರೂ ರುಚಿಮೀಮಾಂಸೆಯೆಂದು ಅರ್ಥಮಾಡಿಕೊಳ್ಳಬಹುದು. ಆದರೆ ದನ ತಿನ್ನಬೇಡಿ, ಹಂದಿ ತಿನ್ನಬೇಡಿ, ನಾಯಿ ತಿನ್ನಬೇಡಿ ಎಂಬಂತಹ ರುಚಿ ಮತ್ತು ಭಕ್ತಿಯ ಧಾರ್ಮಿಕ ಹೇರಿಕೆಗಳನ್ನು ಈ ಕಾಲದಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು? ಮಸೀದಿಮಿನಾರುಗಳು, ಬುದ್ಧಮೂರ್ತಿಗಳು, ಪ್ರಾಚ್ಯ ದೇಗುಲಗಳು ಯಾವ ನಂಬಿಕೆಯ ಹೆಸರಿನಲ್ಲಿ ವಿಶ್ವಾದ್ಯಂತ ಉದುರಿಬೀಳುತ್ತಿವೆಯೋ ಅದೇ ನಂಬಿಕೆಯ ಅತಿಯೇ ಆಹಾರ ಆಯ್ಕೆ ವಿಷಯದಲ್ಲೂ ನಿರ್ಬಂಧ ಹೇರುತ್ತಿವೆ. ಹೀಗಿರುತ್ತ ಯಾವುದನ್ನು ಬೆಂಬಲಿಸುವುದು? ದುಷ್ಟ ಮಾನವರ ದುಷ್ಟತನಗಳಿಗೊಂದು ಸಮರ್ಥನೆಯಾಗಿ ಒದಗತೊಡಗಿರುವ ಧರ್ಮಗಳನ್ನು, ಧರ್ಮಾಚರಣೆಗಳನ್ನೂ ಯಾವ ಮಾಪನದಲ್ಲಿ ಅಳೆಯುವುದು?

ಗೊತ್ತಿಲ್ಲ. ಆದರೆ ಸ್ವರ್ಗವೋ, ಜನ್ನತೋ, ಪ್ಯಾರಡೈಸೋ ಎಂಬುದೊಂದು ನಿಜವಾಗಿ ಇದ್ದರೆ ಖಂಡಿತವಾಗಿ ನಾವು ದೇವರಿಗಲ್ಲ, ಶ್ರೇಷ್ಠಕನಿಷ್ಠವರ್ಜ್ಯವೆಂದು ವಿಂಗಡಿಸಲ್ಪಟ್ಟ ಪ್ರಾಣಿಗಳಿಗೆ ಉತ್ತರಿಸಬೇಕಾಗುತ್ತದೆ. ಈ ಭೂಮಿಯಿಡೀ, ಅದರ ಮೇಲಿನ ಜೀವಸಂಕುಲವಿಡೀ ನನ್ನ ಹೊಟ್ಟೆಗೇ ಎಂದು ಭಾವಿಸಿದ ಮಾನವ ನಾಲಿಗೆಯ ಹಪಾಹಪಿಗೆ ಕಾರಣ ಕೊಡಬೇಕಾಗುತ್ತದೆ..

ತಿನ್ನುವವರ, ತಿನ್ನದವರ ಮಧ್ಯೆ ಗೋಡೆಯೊಂದು ಗೋವಿನ ರೂಪದಲ್ಲಿ ಬೆಳೆಯುತ್ತಿರುವಾಗ ಆರೋಗ್ಯಕರ ನಿಲುವು ಯಾವುದು ಎಂದು ಮನಸು ಯೋಚಿಸುತ್ತಿದೆ. ರೂಸೋ ಮಾತುಗಳನ್ನು ಅನುಸರಿಸಿ ಹೇಳುವುದಾದರೆ, ‘ನಿನ್ನ ಆಹಾರ ಆಯ್ಕೆ ನನ್ನದೂ ಆಗಿರಬೇಕಿಲ್ಲ. ಆದರೆ ನಿನ್ನ ಆಹಾರ ಆಯ್ಕೆ ನಿನ್ನ ಹಕ್ಕು ಎನ್ನುವುದನ್ನು ನಾನು ಕೊನೆತನಕ ಎತ್ತಿಹಿಡಿಯುತ್ತೇನೆ. ಎಲ್ಲ ತೆರನ ಹೇರಿಕೆಯನ್ನು ವಿರೋಧಿಸುತ್ತೇನೆ..’ ಎನ್ನುವುದು ಸೌಹಾರ್ದದ ಸಹಬಾಳ್ವೆಯ ಬೀಜಮಂತ್ರ ಎನಿಸುತ್ತಿದೆ..
















Thursday, 20 August 2015

ಮಹಿಳಾ ಚಳುವಳಿ: ಬಿಕ್ಕಟ್ಟು ಮತ್ತು ಹೊರ ದಾರಿಗಳು







(ಆ. ೧೫, ೧೬ರಂದು ದಾವಣಗೆರೆಯಲ್ಲಿ ನೂರ್ ಶ್ರೀಧರ್ ಮತ್ತು ಸಂಗಾತಿಗಳು ವಿವಿಧ ಸೈದ್ಧಾಂತಿಕ ಧಾರೆಯ ಜನಪರ ಸಂಘಟನೆಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ‘ಸಮಾನತೆಗಾಗಿ ಜನಾಂದೋಲನ’ ಸಂಘಟಿಸಿ ಎರಡು ದಿನದ ಐಕ್ಯತಾ ಸಮಾವೇಶ ನಡೆಸಿದರು. ಮೊದಲ ದಿನ ‘ವಿವಿಧ ಧಾರೆಯ ಚಳುವಳಿಗಳು ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕೂಡಿ ಕಂಡುಕೊಳ್ಳಬೇಕಾದ ಪರಿಹಾರಗಳು’ ಎಂಬ ಗೋಷ್ಠಿಯಲ್ಲಿ ಮಹಿಳಾ ಚಳುವಳಿ ಕುರಿತು ಆಡಿದ ಮಾತುಗಳ ಬರಹ ರೂಪವಿದು.)

ಕರ್ನಾಟಕದಲ್ಲಿ ಒಂದು ಸ್ವಾಯತ್ತ ಮಹಿಳಾ ಚಳುವಳಿ ಚಾಲ್ತಿಯಲ್ಲಿದೆಯೇ? ಹಲವು ಸೈದ್ಧಾಂತಿಕ ಸಂಘಟನೆಗಳಲ್ಲಿ, ಜನಪರ ಗುಂಪುಗಳಲ್ಲಿ, ಜಾತಿ ಗುಂಪುಗಳಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಮಹಿಳಾ ಹಿತಾಸಕ್ತಿ ಹಾಗೂ ಕ್ರಿಯಾಶೀಲ ಸಂಪನ್ಮೂಲ ಹರಿದು ಹಂಚಿ ಹೋಗಿರುವಾಗ ಮಹಿಳಾ ಹಿತಾಸಕ್ತಿಗೇ ಮೀಸಲಾದ ಮಹಿಳಾ ಚಳುವಳಿ ಇದೆಯೇ? ಎಂಬ ಪ್ರಶ್ನೆಗಳಿವೆ. ಹೌದು, ಸ್ವಾಯತ್ತ ಮಹಿಳಾ ಚಳುವಳಿ ಇಲ್ಲ. ಆದರೆ ಹಲವು ಸಂಘಟನೆಗಳಲ್ಲಿ ಹಂಚಿಹೋದ ಕ್ರಿಯಾಶೀಲ ಹೆಣ್ಣುಜೀವಗಳನ್ನೆಲ್ಲ ಒಂದೆಡೆ ಸೇರಿಸಿ ಸಂಘಟನೆಗಳ ಜಾಲ ಹೆಣೆಯುವ ಕನಸು ಕಂಡು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಅಸ್ತಿತ್ವಕ್ಕೆ ಬಂದಿತು. ನೂರಾರು ಸಂಘಸಂಸ್ಥೆಗಳು ಭಾಗೀದಾರರಾಗಿ ಮೂರು ಬಾರಿ ಎಲ್ಲ ಒಂದೆಡೆ ಕಲೆತು ಸಮಾವೇಶ ಸಂಘಟಿಸಿದೆವು. ಸಮಾನ ಮನಸ್ಕ ಸಂಘಟನೆಗಳ ಜಾಲವಾಗಿ ಅದನ್ನು ರೂಪಿಸಬೇಕೆಂದು ಕನಸಿದೆವು. ಅದರ ಲೋಪದೋಷ ಹಾಗೂ ಆಗಬೇಕಾದ ಮಾರ್ಪಾಟುಗಳು ಸಾಕಷ್ಟಿದ್ದರೂ ‘ಐಕ್ಯ ಮಹಿಳಾ ಒಕ್ಕೂಟ’ದ ಅನುಭವದ ಹಿನ್ನೆಲೆಯಲ್ಲಿ ಮಹಿಳಾ ಚಳುವಳಿ ಎದುರಿಸುತ್ತಿರುವ ಬಿಕ್ಕಟ್ಟುಗಳು ಮತ್ತು ಚಳುವಳಿಯಲ್ಲಿರುವ ಮಹಿಳೆಯರ ಬಿಕ್ಕಟ್ಟುಗಳ ಸುತ್ತ ನನ್ನ ಮಾತುಗಳಿವೆ.

ಕಾಲ್ತೊಡಕುಗಳು: 

೧. ಒಂದು ತಲೆ, ಇಪ್ಪತ್ತು ಕೈಯ ಮಹಿಳೆಗಿರುವ ಎಲ್ಲ ಮಿತಿಗಳು ಮಹಿಳಾ ಚಳುವಳಿಗೂ ಇವೆ. ಒಂದೇ ಮಿದುಳು ಬಳಸಿ ೨೦ ಕೈಗಳಲ್ಲಿ ಅವಳು ಕೆಲಸ ಮಾಡಬೇಕು: ಆಯುಧ ಹಿಡಿಯಬೇಕು, ಹೂಮಾಲೆ ಹಾಕಬೇಕು, ಧಾನ್ಯವನ್ನೂ ಸುರಿಸಬೇಕು, ಅಂಕುಶ ಬಳಸಬೇಕು, ಬಾವುಟ ಹಿಡಿದೆತ್ತಬೇಕು, ಎಲ್ಲದರ ಜೊತೆಗೆ ಒಂದು ಹಸ್ತ ಅಭಯವನ್ನೂ ಸೂಚಿಸಬೇಕು. ಹಲವು ಕೆಲಸಗಳ ಒಮ್ಮೆಗೆ ಒಬ್ಬರೆ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಏನಿದೆಯೋ ಅದು ಮಲ್ಟಿ ಟಾಸ್ಕಿಂಗ್ ಎಂಬ ಬಹುದೊಡ್ಡ ಬಿರುದಿಗೆ ಪಾತ್ರವಾಗಿ ಅದೇ ಮಹಿಳೆಯ ದೊಡ್ಡ ಮಿತಿಯಾಗಿದೆ. ಸಾಮಾನ್ಯ ಮಹಿಳೆಯರಿಗೆ ನಿತ್ಯದ ಜವಾಬ್ದಾರಿ, ಜಂಜಡಗಳ ಹೊರತಾಗಿ ತನಗಾಗಿ ತಾನು ಒಂದು ತಾಸು, ಒಂದು ದಿನ ಕಳೆಯುವುದೇ ದೊಡ್ಡ ಲಕ್ಷುರಿಯಾಗಿರುವಂತೆ ಚಳುವಳಿಯೊಳಗೆ ತೊಡಗಿಕೊಂಡಿರುವ ಮಹಿಳೆಯರಿಗೂ ನಿರ್ವಹಿಸಲು ಅಸಾಧ್ಯವೆನ್ನುವಷ್ಟು ಜವಾಬ್ದಾರಿಗಳು ಹೆಗಲೇರಿವೆ.

ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಮೌಲ್ಡ್ ಮಾಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ದುರಂತವೆಂದರೆ ತಾನು ಕಳೆದುಕೊಂಡಿರುವುದೇನೆಂದೇ ತಿಳಿದಿಲ್ಲದವರು ಅವರು. ಅಂಥವರನ್ನು ಹೋರಾಡಿ ಪಡೆಯೋಣವೆಂದು ಸಂಘಟಿಸುವುದು ಹೇಗೆ? ಮುಳುಗಿದ ಅರಿವೇ ಇಲ್ಲದವರನ್ನು ಮೇಲೆತ್ತುವುದು ಹೇಗೆ?

ಅಮೆರಿಕನ್ ಆಫ್ರಿಕನ್ ಬರಹಗಾರ್ತಿ ಗ್ರಾಡಾ ಕಿಲೋಂಬಾ ತಮ್ಮ ಒಂದು ಲೇಖನದಲ್ಲಿ ಅವರ ಹಿರಿಯರಾದ ಕರಿಯ ಗುಲಾಮರು ತಮ್ಮ ನೆನಪಿನಿಂದ ಹೇಳುತ್ತಿದ್ದ ಸಂಕಟವನ್ನು ಪ್ರಸ್ತಾಪಿಸಿದ್ದಾರೆ. ಅಮೆರಿಕದ ಬಿಳಿಯ ಮಾಲೀಕರು ತಮ್ಮ ಎಸ್ಟೇಟು, ತೋಟ, ಮನೆಗಳಲ್ಲಿ ಕೆಲಸ ಮಾಡುವ ಕರಿಯ ಗುಲಾಮರ ಬಾಯಿಯಲ್ಲಿ ದವಡೆಗಳ ನಡುವೆ ಒಂದು ಕಬ್ಬಿಣದ ಕಚ್ಚುಕಂಬಿಯನ್ನಿಡುತ್ತಿದ್ದರು. ಗುಲಾಮರು ಪರಸ್ಪರ ಮಾತನಾಡುತ್ತ ಕಾಲ ವ್ಯಯಿಸಬಾರದು ಹಾಗೂ ಕಬ್ಬು, ಕಾಫಿ-ಕೋಕೋ ಬೀಜಗಳ ಅವರು ತಿನ್ನಬಾರದು ಎನ್ನುವುದು ಕಚ್ಚುಕಂಬಿಯ ಉದ್ದೇಶ. ಈ ಪದ್ಧತಿ ಸುಮಾರು ೩೦೦ ವರ್ಷ ಚಾಲ್ತಿಯಲ್ಲಿತ್ತು. ಅದು ಸೊಲ್ಲಡಗಿಸುವ, ಬಲವಂತದ ಮೌನ ಹೇರುವ ಕ್ರಮ. ಜನಸಮುದಾಯದ ಹಕ್ಕಿನ ನಿರಾಕರಣೆ. ಕರಿಯ ಗುಲಾಮರಂತೆ ಮಹಿಳೆಯರೂ ಸಾವಿರಾರು ವರ್ಷಗಳಿಂದ ಅದೃಶ್ಯ ಕಚ್ಚುಕಂಬಿಯನ್ನು ತಮ್ಮ ಬಾಯಲ್ಲಿಟ್ಟುಕೊಂಡೇ ಬದುಕಿದ್ದಾರೆ. ಅದನ್ನು ತೆಗೆಯಲಾಗಿದ್ದರೂ ಅದೃಶ್ಯವಾದದ್ದನ್ನು ಊಹಿಸಿಕೊಂಡೇ ಮೌನವಾಗಿದ್ದಾರೆ. ಹೀಗೆ ಹಲ್ಲು ಕಚ್ಚಿ ಸಹಿಸಿಕೊಂಡಿರುವವರ ಬಾಯಿ ಬಿಚ್ಚಿಸುವುದಕ್ಕೆ ಇರುವ ಸವಾಲುಗಳೇ ಮಹಿಳಾ ಚಳುವಳಿ ಕಟ್ಟಲು ಇರುವ ಮೊದಲ ತೊಡಕುಗಳಾಗಿವೆ.
. ಸಮಾನತೆಗಾಗಿ ಎಷ್ಟೋ ಆಂದೋಲನಗಳು ನಡೆದವು. ಅದರಲ್ಲೆಲ್ಲ ಹೆಣ್ಮಕ್ಕಳಿದ್ದರು. ಭಕ್ತಿ ಚಳುವಳಿ, ವಚನ ಚಳಿವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸುಧಾರಣಾ ಚಳುವಳಿಗಳಲ್ಲಿ ಕ್ರಿಯಾಶೀಲರಾದ ಮಹಿಳೆಯರಿರಲಿಲ್ಲವೆ? ಅಂಬೇಡ್ಕರ್ ಹುಟ್ಟುಹಾಕಿದ ದಲಿತ ಚಳುವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸ್ವಾತಂತ್ರ್ಯ ಚಳುವಳಿಯಲ್ಲಿ, ಕಾರ್ಮಿಕ ಚಳುವಳಿಯ ಕಾರ್ಯಕರ್ತರಾಗಿ, ಪರಿಸರ ಚಳುವಳಿಗಳಲ್ಲಿ ಮಹಿಳೆಯರಿರಲಿಲ್ಲವೆ? ಅವರೆಲ್ಲ ಏನಾದರು? ಎಲ್ಲಿ ಹೋದರು? ಇಷ್ಟೆಲ್ಲ ಚಳುವಳಿಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯು ಒಂದು ಮಹಿಳಾ ಚಳುವಳಿಯನ್ನು ಕಟ್ಟಿ ಮುನ್ನಡೆಸಬಲ್ಲ ನಾಯಕತ್ವ ಸೃಷ್ಟಿಸಿತೆ? ಏಕೆ ಹೀಗಾಯಿತು?

ಏಕೆಂದರೆ ಮಹಿಳೆಯರೇನೋ ಎಲ್ಲ ಕಡೆ ಇದ್ದರು, ನಂತರ ಅದೃಶ್ಯವಾದರು. ಅವರ ಇಲ್ಲದಿರುವಿಕೆ ಯಾರನ್ನೂ ಕಾಡಲೇ ಇಲ್ಲ. ಮಹಿಳೆಯ ಇಲ್ಲದಿರುವಿಕೆ ಒಂದು ಪಕ್ಷ, ಸಂಘಟನೆ, ವೇದಿಕೆ, ನಾಯಕರುಗಳಿಗೆ ಕಾಡದೇ ಇರುವುದು ಮಹಿಳಾ ಚಳುವಳಿ ಮತ್ತು ಚಳುವಳಿಯ ಮಹಿಳೆಯರು ಎದುರಿಸುತ್ತಿರುವ ಬಿಕ್ಕಟ್ಟು ಎನ್ನಬಹುದಾಗಿದೆ.

೩. ಈ ಅಸಮಾನ ನೆಲದಲ್ಲಿ ಬೆಳೆಕಳೆಯ ಕೃಷಿ ಹೇಗಿದೆ? ಕಳೆಗಿಡಗಳು ಮರಗಳಾಗಿ ಬೆಳೆದು ಬೆಳೆಯನ್ನೆಲ್ಲ ಆವರಿಸಿ ಕಳೆ ಯಾವುದು, ಬೆಳೆ ಯಾವುದು ತಿಳಿಯದಂತಾಗಿದೆ. ಸುಲಿಯುವವ ಮಹಾದಾನಿಯಂತೆ, ಕೊಲ್ಲುವವ ಜೀವರಕ್ಷಕನಂತೆ ವೇಷ ತೊಟ್ಟಿದ್ದಾನೆ. ಹೀಗೆ ಕಳೆಯು ಮರವಾಗಿ ಬೆಳೆಯುತ್ತ ಚಿಗುರುತ್ತ ಹೋಗಿರುವಾಗ ಚಿಗುರು ಚಿಗುಟುವುದೇ ಕಳೆನಾಶ ಎಂದು ಒಂದು ವರ್ಗ ಭಾವಿಸಿದೆ. ಎಲ್ಲೆಲ್ಲಿಂದ, ಯಾರಿಂದ ಎಂಬ ತರತಮ ಭೇಧವಿಲ್ಲದೆ ದುಡ್ಡು ತಂದು, ಚಿಗುರು ಚಿವುಟಿ, ರಾಶಿ ಹಾಕಿ, ಫೋಟೊ ತೆಗೆದು, ವರದಿ ಕಳಿಸಿ ಮತ್ತೆ ಎಲ್ಲೆಲ್ಲಿಂದಲೋ ಹಣ ಪಡೆದು.. ಈಗ ಇದೇ ಚಳುವಳಿ ಅನಿಸಿಕೊಂಡುಬಿಟ್ಟಿದೆ.

ಹೌದು, ನಾನು ಎನ್‌ಜಿಒಗಳ ಬಗೆಗೆ ಮಾತನಾಡುತ್ತಿದ್ದೇನೆ. ಹೊಸತಲೆಮಾರು ಚಳುವಳಿಯ ಕಡೆಗೆ ಆಕರ್ಷಿತರಾಗದಿರಲು ಒಂದು ಕಾರಣ ಫಂಡೆಡ್ ಸಮಾಜಸೇವೆ ಮಾಡುವ ಎನ್‌ಜಿಒಗಳು. ಸಮಾಜಸೇವೆಯನ್ನು ಹೇಗೆ ಮಾಡಬೇಕೆಂದು ಕಲಿಸುವ ಎಂಎಸ್‌ಡಬ್ಲ್ಯು ಪದವಿ ಪಡೆದ ವಿದ್ಯಾರ್ಥಿಗಳು ಎಷ್ಟು ಕಾಲೇಜುಗಳಿಂದ ಹೊರಬರುತ್ತಿದ್ದಾರೆ? ಅವರೆಲ್ಲ ಚಳುವಳಿಯ ಮುಂದುವರಿಕೆಯ ಕೊಂಡಿಗಳಾಗಿ ಏಕೆ ಬರುತ್ತಿಲ್ಲ? ಕಾರಣ ಅವರನ್ನೆಲ್ಲ ಸೆಳೆದಿರುವ ಎನ್‌ಜಿಒಗಳು.

ನೈಜ ಬದ್ಧತೆಯಿಂದ ಕೆಲಸ ಮಾಡುವ ಕೈಬೆರಳೆಣಿಕೆಯಷ್ಟು ಎನ್‌ಜಿಒಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಎಲ್ಲೆಲ್ಲಿಂದಲೋ ಹರಿದು ಬರುವ ಧನಸಹಾಯದಿಂದ ಕೆಲಸ ಮಾಡುತ್ತವೆ. ಭೂಮಿ ಮೇಲಿನ ಎಲ್ಲ ವಿಷಯಗಳ ಬಗೆಗೆ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳಿವೆ. ಅವು ಕೈಗೆತ್ತಿಕೊಳ್ಳದ ವಿಷಯಗಳೇ ಇಲ್ಲ. ಯುವ ಮನಸ್ಸುಗಳ ಶಕ್ತಿ, ಸಮಯ, ಸಂಪನ್ಮೂಲ, ಸಂವೇದನೆಯನ್ನೆಲ್ಲ ಬಾಡಿಗೆ ಪಡೆವ ಎನ್‌ಜಿಒಗಳು ಪ್ರತಿಫಲವಿಲ್ಲದೆ ಸಮಾಜಸೇವೆಯಿಲ್ಲ ಎನ್ನುವಂತೆ ಮಾಡುತ್ತಿವೆ. ಸಮಾಜಸೇವೆಯೂ ಒಂದು ಜೀವನಾಧಾರ ಕಸುಬು, ಢಾಳಾದ ಸಾರ್ವಜನಿಕತೆ ಹಾಗೂ ಪ್ರಸಿದ್ಧಿ ತರುವಂಥದು ಎನ್ನುವ ಧೋರಣೆ ಹುಟ್ಟಿಸಿವೆ. ತರುಣ ಪೀಳಿಗೆಯ ಸೂಕ್ಷ ಮನಸುಗಳು ವ್ಯವಸ್ಥಿತವಾಗಿ ಎನ್‌ಜಿಒ ಜಾಲಕ್ಕೆ ಬಿದ್ದು ಸಂಘಟನಾ ಶಕ್ತಿ ಹಿನ್ನಡೆ ಕಂಡಿದೆ.

ರಾತ್ರಿ ಹಗಲೆನ್ನದೆ ಹಾದಿಬೀದಿ ಅಲೆದಾಡಿ, ಪೋಸ್ಟರು ಅಂಟಿಸಿ, ಸಭೆ-ಮೆರವಣಿಗೆ ಮಾಡಿ, ಯಾವ ಆಮಿಷ, ಕಂಫರ್ಟ್‌ಗೂ ಬಲಿಯಾಗದೇ ಕೆಲಸ ಮಾಡುವ ಬದ್ಧತೆಯ ಕಾರ್ಯಕರ್ತರನ್ನು ಎನ್‌ಜಿಒ ಸೃಷ್ಟಿಸುವುದಿಲ್ಲ. ಆ ಮನಸ್ಥಿತಿಯ ಅಪಾಯವೆಂದರೆ ತಮಗೆ ಪೂರಕವಾದ ವಿಷಯವನ್ನಷ್ಟೆ ಅವು ಗಮನಿಸುತ್ತವೆ. ದುಡ್ಡು ಬರುವಷ್ಟು ದಿನ ಸಮಾಜಸೇವೆ ಮಾಡುತ್ತವೆ. ಸುಂದರ ವಾರ್ಷಿಕ ವರದಿಗಾಗಿ ಇರುವುದನ್ನೆಲ್ಲ ತಿರುಚಿ ಬರೆದರೂ ಆಶ್ಚರ್ಯವಿಲ್ಲ. ಸಾಮಾಜಿಕ ಸಮಸ್ಯೆಗಳ ಮೂಲ ಕುರಿತು ತಲಸ್ಪರ್ಶಿ ಹೋರಾಟ ಕಟ್ಟುವ ಗೋಜಿಗೇ ಹೋಗುವುದಿಲ್ಲ. ಸಮಸ್ಯೆಯನ್ನು ಸಮಗ್ರವಾಗಿ ಗ್ರಹಿಸದ, ಸಮಸ್ಯೆಯ ಪರಿಹಾರ ತನ್ನ ಆದ್ಯತೆಯಲ್ಲದ, ದುಃಖಿತನ ದುಃಖಕ್ಕೂ ಹಪಾಹಪಿತನದಲ್ಲಿ ಬೆಲೆ ನಿಗದಿಗೊಳಿಸುವ ಎನ್‌ಜಿಒಗಳು ಭವಿಷ್ಯದ ಚಳುವಳಿಯ ದೊಡ್ಡ ಅಡ್ಡಗೋಡೆಗಳು. ಅದರ ಹಿಡಿತದಿಂದ ಸಮಸ್ಯೆಗಳನ್ನೂ, ಬಾಧಿತರನ್ನೂ, ಸೂಕ್ಷ್ಮ ಮನಸುಗಳನ್ನೂ ಹೊರತರುವುದು ವಿಶಾಲ ನೆಲೆಯ ಹೋರಾಟ ಕಟ್ಟಲು ಅವಶ್ಯವಾಗಿವೆ. ಅದರಲ್ಲಿರುವ ನಮ್ಮದೆ ಬಂಧುಗಳಿಗೆ ‘ನೀವು ಬರಿ ಚಿಗುರನ್ನಷ್ಟೆ ಚಿವುಟುತ್ತಿದ್ದೀರಿ. ಅದರಿಂದ ಆ ಹೆಮ್ಮರ ನಾಶ ಆಗುವುದಿಲ್ಲ. ಕಾಂಡ ಕತ್ತರಿಸೋಣ ಬನ್ನಿ, ಬೇರು ಹರಡೋಣ ಬನ್ನಿ. ಅದಾಗದಿದ್ದರೆ ಕನಿಷ್ಟ ಪಕ್ಷ ಕಾಯಿ ಕೊರಕ ಹುಳ, ಕಾಂಡ ಕೊರೆವ ಹುಳು, ಬೇರು ಶಿಥಿಲಗೊಳಿಸುವ ಗೆದ್ದಲಾದರೂ ಆಗುವ ಬನ್ನಿ’ ಎಂದು ಕರೆಯಬೇಕಾಗಿದೆ.

. ಎಲ್ಲ ಒಟ್ಟು ಹೋಗೋಣ ಅಂದುಕೊಳ್ಳುವುದು ಸುಲಭ; ಎಲ್ಲರ ಒಟ್ಟುಹಾಕುವುದು ಅಷ್ಟು ಸುಲಭವಲ್ಲ. ಉಪ್ಪು ನೀರಿನಲ್ಲಿ ಕರಗುತ್ತದೆ. ಸಕ್ಕರೆ ನೀರಿನಲ್ಲಿ ಕರಗುತ್ತದೆ. ಆದರೂ ಕರಗಿಸಿಕೊಂಡ ತೊಟ್ಟು ನೀರನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಅದರ ಉಪ್ಪುತನ, ಸಕ್ಕರೆತನ ಬಯಲಾಗಿ ಕರಗಿರುವುದು ಅರಿವಾಗುತ್ತದೆ. ಅದೇ ನೀರು-ಎಣ್ಣೆ? ಎಣ್ಣೆ-ಉಪ್ಪು? ಉಪ್ಪು-ಸಕ್ಕರೆ? ಅವು ಎಂದೆಂದಿಗೂ ವಿಲೀನವಾಗಲಾರವು. ಇವತ್ತು ನಮ್ಮ ಸಂಘ, ಸಂಘಟನೆ, ಸಂಸ್ಥೆಗಳು ಉಪ್ಪಿನ ಹಾಗೆ, ಸಕ್ಕರೆ ಹಾಗೆ, ಒಳ್ಳೆಣ್ಣೆ ಹಾಗೆ, ಹರಳೆಣ್ಣೆ ಹಾಗೆ, ಶಿಲೆಯ ಹಾಗೆ, ಶಿಲಾರಸದ ಹಾಗೆ ತಮ್ಮ ಸ್ವರೂಪ, ಉದ್ದೇಶ, ಗುರಿ, ಸ್ಥಿತಿಗಳಲ್ಲಿ ನಿಶ್ಚಿತವಾದ ಚೌಕಟ್ಟುಗಳಲ್ಲಿ ಮೌಲ್ಡ್ ಆಗಿರುವುದರಿಂದ ಐಕ್ಯತೆ ಕಷ್ಟವಾಗಿದೆ. ಕರಗಿಬಿಡುವ, ಕರಗಿಸಿಬಿಡುವ; ಕರಗಿ, ಕರಗಿಸಿಯೂ ಅನನ್ಯತೆಯ ಗುರುತು ಉಳಿಸಿಕೊಳ್ಳುವ ದ್ರಾವಣ - ದ್ರಾವಕದಂತಹ ಸ್ಥಿತಿ ಬಂದಾಗಲಷ್ಟೆ ನಿಜವಾದ ಐಕ್ಯ ಹೋರಾಟ ಸಾಧ್ಯವಾಗುತ್ತದೆ. ಕರಗಲು ಯಾರೂ ಸಿದ್ಧವಿರದ ಐಡೆಂಟಿಟಿ ಪ್ರಜ್ಞೆಯ ಕಾಲಮಾನವೇ ಐಕ್ಯ ಹೋರಾಟಕ್ಕಿರುವ ದೊಡ್ಡ ಬಿಕ್ಕಟ್ಟಾಗಿದೆ.

೫. ಅಂತೂ ಇಷ್ಟೆಲ್ಲ ಅಡ್ಡಿಆತಂಕಗಳ ನಡುವೆಯೇ ಎರಡು ಹೆಜ್ಜೆ ಹೇಗೋ ಮುಂದಿಟ್ಟೇಬಿಟ್ಟೆವು ಅಂತ ಭಾವಿಸಿ. ಇಟ್ಟ ಹೆಜ್ಜೆ ಹಿಂದೆಳೆಯುವಂತಹ ಎರಡು ದೊಡ್ಡ ಆತಂಕಗಳು ನಮ್ಮೆದುರಿಗಿವೆ. ಮೊದಲನೆಯದು ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ, ಅದಕ್ಕೆ ಶೋಷಿತರನ್ನು ದಾಳವಾಗಿ ಬಳಸಿಕೊಳ್ಳುವ ಕೋಮುವಾದ. ಅದು ತಲೆಯಲ್ಲಿ ತುಂಬುವ ವಿಷ ಎಷ್ಟು ತೀಕ್ಷ್ಣವಾದದ್ದೆಂದರೆ ಅದನ್ನು ಖಾಲಿ ಮಾಡಿ ತೊಳೆಯಲು ಸಾಧಾರಣ ಡಿಟರ್ಜೆಂಟ್‌ಗಳ ಕೈಲಿ ಸಾಧ್ಯವಿಲ್ಲ. ಎರಡನೆಯ ತೊಡಕು ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎಂದು ಮನುಷ್ಯ ಭಾವಿಸುವಂತೆ ಮಾಡಿರುವ ಮಾರುಕಟ್ಟೆ ಆರ್ಥಿಕತೆ. ಇವೆರೆಡೂ ಬದಲಾವಣೆಗೆ ತುಡಿವ ಪ್ರತಿಯೊಬ್ಬರ ಶತ್ರುಗಳಾಗಿವೆ. ದಮನಿತರನ್ನು ಪ್ರಶ್ನೆಗಳೂ ಹುಟ್ಟದ ಸನಾತನ ಮನಸ್ಥಿತಿಗೆ ದೂಡಲು ಇವೆರೆಡೂ ಹವಣಿಸುತ್ತವೆ. ಮನುಷ್ಯರನ್ನು ಮನಸನ್ನು ಅನಗತ್ಯ ದ್ವಂದ್ವಗಳಲ್ಲಿ ಮಗ್ನಗೊಳಿಸುವ ಅವು ಚಳುವಳಿಗಳನ್ನು ಚಿವುಟುತ್ತ, ಒಡೆಯುತ್ತ ಅಡ್ಡಗಾಲಾಗಿವೆ.

೬. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದಾದಮೇಲೆ ಮತ್ತೇಕೆ ಹೋರಾಟ ಎನ್ನುತ್ತ ಚಳುವಳಿ, ಹೋರಾಟಗಳನ್ನು ಕಾನೂನು ವಿರೋಧಿ ಕ್ರಿಯೆಯೆಂದೂ, ಅದು ಶಾಂತಿ ಸುವ್ಯವಸ್ಥೆ ಕಾಪಾಡಲು ದೊಡ್ಡ ತೊಂದರೆಯೆಂದೂ ಆಳುವ ವರ್ಗ ಹಾಗೂ ‘ಗಣ್ಯ’ರು ದೂಷಿಸುವುದನ್ನು ಕೇಳುತ್ತೇವೆ. ಆದರೆ ಚಳುವಳಿ ಪ್ರಜಾಪ್ರಭುತ್ವ ವಿರೋಧಿಯಲ್ಲ, ಅದು ಪ್ರಜಾಪ್ರಭುತ್ವಕ್ಕೆ ಪೂರಕ. ಹಾಗೆ ನೋಡಿದರೆ ಪ್ರಜಾಪ್ರಭುತ್ವ ಜೀವಂತ ಇದೆ ಎನ್ನಲು ಒಂದು ಲಕ್ಷಣ ಚಳುವಳಿ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಬರಬರುತ್ತ ಚಳುವಳಿಗಳು ದುರ್ಬಲಗೊಳ್ಳುವಂತೆ, ಒಡೆಯುವಂತೆ, ಅವಸಾನವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಮುಕ್ತ ಅವಕಾಶ, ಚಲನೆ ಕಡಿಮೆಯಾಗುತ್ತಿದೆ. ಮುಕ್ತವಾಗಿ ಆಡುವ, ಬರೆಯುವ ಅವಕಾಶಗಳನ್ನು ಪ್ರಜಾಪ್ರಭುತ್ವದ ಹೆಸರಿನಲ್ಲೇ ಕಿತ್ತುಕೊಳ್ಳಲಾಗಿದೆ. ಅಷ್ಟೆ ಅಲ್ಲ, ಎಲೈಟ್ ವರ್ಗ ಆಕ್ಟಿವಿಸ್ಟ್‌ಗಳನ್ನು ಲೇವಡಿಯ ವಸ್ತುಗಳಂತೆ ನೋಡುತ್ತದೆ. ಚಳುವಳಿಗಾರರನ್ನು ಭಯೋತ್ಪಾದಕರೆನ್ನುವಂತೆ, ಕಾನೂನು ಭಂಜಕರೆಂಬಂತೆ ನೋಡುವುದನ್ನೂ ಗಮನಿಸಬಹುದಾಗಿದೆ. ಇಂಥ ಹಿತಾಸಕ್ತಿಗಳೇ ಹೋರಾಟ, ಚಳುವಳಿಗಳು ಸಾಂಕೇತಿಕಗೊಳ್ಳುವಂತೆ ಮಾಡುತ್ತಿವೆ. ಹೋರಾಟ ಸಾಂಕೇತಿಕವಾದರಷ್ಟೆ ಸಹಿಸುತ್ತೇವೆ, ಇಲ್ಲವಾದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂಬ ಸಂದೇಶವನ್ನು ಆಳುವವರು ನೀಡಿದ್ದು ಎಲ್ಲ ಚಳುವಳಿಗಳೂ ಕ್ಷೀಣಗೊಳ್ಳಲು ಇದೊಂದು ಕಾರಣವಾಗಿದೆ.

ಕೂಡಿ ಕಂಡುಕೊಳ್ಳಬೇಕಾದ ದಾರಿಗಳು:


ಚಳುವಳಿ ಆಯಾ ಕಾಲಕಾಲಕ್ಕೆ ತಕ್ಕಂತೆ ಪುನರ್‌ನವೀಕರಣಗೊಳ್ಳಲೇಬೇಕು. ವ್ಯಕ್ತಿ ಅಥವಾ ವಿಷಯಾಧಾರಿತ ಚಳುವಳಿಗಳು ಕಾಲಾನಂತರ ಸ್ಥಗಿತಗೊಳ್ಳಬಹುದು ಅಥವಾ ನಿಲ್ಲಬಹುದು. ಆದರೆ ಶೋಷಣೆ, ದಮನಗಳು ಅನಾದಿಯಿಂದ ಸಂಭವಿಸುತ್ತಲೇ ಇದ್ದು ಈಗಲೂ ಮುಂದುವರೆದಿವೆ. ಹಾಗಾಗಿ ಜನ ಚಳುವಳಿ ಶಿಥಿಲಗೊಳ್ಳಲು ನಾನಾ ಕಾರಣಗಳಿದ್ದರೂ ಚಳುವಳಿಯ ನಿನ್ನೆಯನ್ನು ಗೌರವಪೂರ್ವಕವಾಗಿ ಅವಲೋಕಿಸುತ್ತಲೇ ವರ್ತಮಾನಕ್ಕೆ ಹೊಸಹಾದಿ ಕಟ್ಟಿಕೊಳ್ಳುವುದು ಅವಶ್ಯವಾಗಿದೆ. ಮಾಹಿತಿ ಕ್ರಾಂತಿಯ ಈ ಯುಗದಲ್ಲಿಯೂ ಧರ್ಮ/ಜಾತಿಯಂತಹ ಭಾವುಕ ವಿಷಯಗಳ ಹೊರತಾಗಿ ಜನರನ್ನು ಸಂಘಟಿಸಿ ಚಳುವಳಿ ಕಟ್ಟುವುದು ಕಷ್ಟವೆನಿಸಿದೆ. ಹಾಗಿರುವಾಗ ಕೇವಲ ಮಹಿಳಾ ಚಳುವಳಿಯಷ್ಟೇ ಅಲ್ಲ, ಎಲ್ಲ ಧಾರೆಗಳ ಕೂಡಿಸಿದ ಐಕ್ಯ ಚಳುವಳಿ ಕಟ್ಟುವ ದಾರಿ ಯಾವುದು?


  • ಅದಕ್ಕಾಗಿ ನಾವು ಎರೆಹುಳದಂತೆ ಕೆಲಸ ಮಾಡಬೇಕು. ನೆಲ ಆರ್ದ್ರಗೊಂಡದ್ದೇ ಅದನ್ನು ಸಡಿಲಗೊಳಿಸಿ ಮಣ್ಣೊಳಗೆ ಗಾಳಿ ನುಸುಳಬಿಡುವ ಎರೆಹುಳುವಿನಂತೆ ನಮ್ಮನಮ್ಮ ಊರಿನಲ್ಲಿ ಕೆಲಸ ಮಾಡಬೇಕು. ಎರೆಹುಳುವಿನದು ಬದಲಾವಣೆ ಪ್ರಕ್ರಿಯೆಯ ಮೂಲಹಂತ, ಕೆಳಹಂತ. ಅದನ್ನು ನಿರ್ಲಕ್ಷಿಸದೆ ಊರು, ಕೇರಿ, ಬಡಾವಣೆಯ ಜನರನ್ನು ಕಣ್ಗಾವಲು ಸಮಿತಿಗಳೆಂದು ಸಂಘಟಿಸಬಹುದು. ಯಾವುದೇ ಸಿದ್ಧಾಂತದ ಹೆಸರೆತ್ತದೆ ಅವರ ಬೇಡಿಕೆ, ಅವಶ್ಯಕತೆಗಳನ್ನೇ ಮೂಲಾಧಾರವಾಗಿಟ್ಟುಕೊಂಡು ಜನರನ್ನು ಗುಂಪುಗೂಡಿಸಬಹುದು. ನಂತರವೂ ಜನಸಂಪರ್ಕ ಪರಸ್ಪರ ಉಳಿಯುವಂತೆ ಬುಡಮಟ್ಟದ ಕೆಲಸ ಮಾಡಬಹುದು. ಇವತ್ತು ಕಟ್ಟಲಿರುವ ಹೊಸ ಚಳುವಳಿಗೆ ನಾಯಕರಲ್ಲ, ಎರೆಹುಳದಂತೆ ಕೆಲಸ ಗೇಯಬಲ್ಲ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದ್ದು ಅವರ ತಯಾರಿಸುವುದು ಮೊದಲ ಆದ್ಯತೆಯಾಗಿದೆ. 
  • ಚಳುವಳಿಯು ಡೆಮಾಕ್ರಸಿ ಎಂಬ ಒಪ್ಪಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅದನ್ನು ಅರ್ಥಪೂರ್ಣವಾಗುವಂತೆ ಮಾಡಬೇಕು. ಜನಾಭಿಪ್ರಾಯ ರೂಪಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿ ಜನ ರಾಜಕೀಯ ಪ್ರಜ್ಞೆ ಹೊಂದುವಂತೆ, ಕ್ರಿಯಾಶೀಲವಾಗಿ ಸಮಾಜದ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. 
  • ಪ್ರಬಲ ಮಹಿಳಾ ಧ್ವನಿ ನಮ್ಮಲ್ಲಿನ್ನೂ ಹೊಮ್ಮಬೇಕಿದೆ. ಚಳುವಳಿಯ ಹೊರಗೆ ದೊಡ್ಡಸಂಖ್ಯೆಯ ಮಹಿಳೆಯರಿದ್ದು ಅವರನ್ನು ಎಚ್ಚರಿಸುವ, ಚಳುವಳಿಯೊಳತರುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ. ಪ್ರಾಥಮಿಕ ಹಂತದಲ್ಲಿರುವ ಮಹಿಳಾ ಚಳುವಳಿಯನ್ನು ರಿವೈವ್ ಮಾಡುವಲ್ಲಿ ಉಳಿದವರೆಲ್ಲ ಶ್ರಮವಹಿಸಬೇಕು. ಈಗಿರುವ ಎಲ್ಲ ಚಳುವಳಿ, ಹೋರಾಟಗಳೂ ಸೂಕ್ತ ಮಹಿಳಾ ಪಾಲುದಾರಿಕೆಯನ್ನು ಹೊಂದದಿದ್ದಲ್ಲಿ, ಮಹಿಳಾ ವಿಷಯಗಳನ್ನು ಪರಿಗಣಿಸದಿದ್ದಲ್ಲಿ ಯಾವ ಬದಲಾವಣೆಯನ್ನೂ ಕನಸುವಂತಿಲ್ಲ. ರಾಜಕಾರಣವೇ ಇರಲಿ ಅಥವಾ ಕೋಮುವಾದ ವಿರೋಧ, ಜಾತಿ ವಿನಾಶ, ಪರಿಸರ/ಬುಡಕಟ್ಟು ಹೋರಾಟದಂತಹ ಮತ್ತಿನ್ಯಾವುದೇ ಹೋರಾಟವಿರಲಿ, ಅಲ್ಲಿ ಸಶಕ್ತ ಮಹಿಳಾ ಧ್ವನಿ ಕೇಳುತ್ತಿಲ್ಲವೆಂದರೆ ಅದು ಚಳುವಳಿಯ ಸೋಲೆಂದೇ ಭಾವಿಸಬೇಕು.
  • ಚಳುವಳಿಯಲ್ಲಿದ್ದವರ ವೈಯಕ್ತಿಕ ದೋಷದಿಂದ ಅಥವಾ ಸಂಘಟನಾತ್ಮಕ ಲೋಪದಿಂದ ಹೋರಾಟ, ಚಳುವಳಿಗಳು ವಿಭಿನ್ನ ಗುಂಪು-ವ್ಯಕ್ತಿ-ಹಿತಾಸಕ್ತಿ-ಸಿದ್ಧಾಂತದಲ್ಲಿ ಒಡೆದು ದೊಡ್ಡ ಪ್ರಮಾಣದ ಬದಲಾವಣೆ ಸಾಧ್ಯವಾಗದೇ ಹೋಗಿದೆ. ಎಂದೇ ಐಕ್ಯ ಹೋರಾಟ ಇವತ್ತಿನ ತುರ್ತಾಗಿದೆ. ಭಿನ್ನ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಯ ಜನರನ್ನು ಒಂದುಗೂಡಿಸುವ ದುಸ್ತರವಾದ ಆದರೆ ತುರ್ತಾದ ಆಶಯವನ್ನಿಟ್ಟುಕೊಂಡೇ ಕೆಲಸ ಮಾಡಬೇಕಿದೆ. 


  • ಅದಕ್ಕೆ ನಾವು ಖೋಖೋ ತಂಡ ಆಡುವಂತೆ ಕೆಲಸ ಮಾಡಬೇಕು. ಸಾಮೂಹಿಕ ಜವಾಬ್ದಾರಿ, ಸಾಮೂಹಿಕ ಗೆಲುವುಸೋಲು, ಅವಶ್ಯವಿರುವಾಗ ಅವಶ್ಯವಿರುವವರ ಚಲನೆ. ಆದರೆ ಪರಸ್ಪರ ಪೂರಕ ಚಲನೆ. ಹೀಗಿರಲು ಸಾಧ್ಯವಾಗಬೇಕಾದರೆ ಸಂಘಟನೆಗಳು ಅಸ್ತಿತ್ವದ ಭಯ ಬಿಡಬೇಕು. ನನ್ನ ಆಸ್ಪತ್ರೆ ಪಕ್ಕ ಮತ್ತೊಂದು ಶುರುವಾದರೆ ಎಲ್ಲಿ ರೋಗಿಗಳು ಕಮ್ಮಿಯಾದಾರೋ ಎಂದು ಹೆದರದೆ ಒಟ್ಟಾರೆ ಜನರ ಆರೋಗ್ಯ ಕಾಪಾಡಲು ಇನ್ನೊಂದು ಕೈಸೇರಿತಲ್ಲ ಎಂದುಕೊಂಡು ಪ್ರಾಮಾಣಿಕವಾಗಿ ನನ್ನ ಕೆಲಸ ನಾನು ಮಾಡಬೇಕು. 


ಕೊನೆಗೂ ಹೋರಾಟದ ಎಲ್ಲ ನದಿಗಳೂ ಹರಿಯಬೇಕಿರುವುದು ಸಮಾನತೆಯ ಕಡಲ ಕಡೆಗೆ ತಾನೇ ಎಂದು ಅರಿಯಬೇಕು.

ಇದಾವುದೂ ಸಾಧ್ಯವಿಲ್ಲವಾದರೆ ಮುಂದಿನ ಪೀಳಿಗೆಗೆ ಕನಿಷ್ಟ ಪಕ್ಷ ನಮ್ಮ ಪೂರ್ವಗ್ರಹಗಳನ್ನಾದರೂ ದಾಟಿಸದಿರೋಣ. ಎಲ್ಲವೂ ವಿಸರ್ಜನೆಯಾಗಲಿ. ಆಗಲಾದರೂ ಹೊಸತು ಹುಟ್ಟಬಹುದು. ತೆಲುಗು ಕವಿ ನಗ್ನಮುನಿ ಹೇಳುವಂತಾಗಬಹುದು:

‘ನನಗೆ ರಾಕೆಟ್ ಬೇಡ,
ಚಂದ್ರನಂಗಳದ ಮೇಲಿಳಿಯುವುದೂ ಬೇಡ.
ಏರೋಪ್ಲೇನುಗಳು ಬೇಡ,
ಜನಬದುಕನ್ನು, ಕಾಲವನ್ನು ನಾಶ ಮಾಡುವ
ರಾಜಕಾರಣವೂ ಬೇಡ.
ರೈಲು ಬೇಡ, ಬಸ್ಸು ಬೇಡ,
ಈ ನಾಗರಿಕತೆಯ ಯಾವ ಗಡಿಬಿಡಿಯೂ ಬೇಡ.
ಶಿಲಾಯುಗದ ಹತಾರುಗಳ ಹಿಡಿದು
ಚರಿತ್ರೆಯ ಗುಹೆಯೊಳಗೆ ಹೋಗುತ್ತೇನೆ.
ಈ ಮನುಷ್ಯ ಪಶುಪಕ್ಷಿಗಳ ಮೃತದೇಹಗಳನ್ನು
ನನ್ನೊಳಗೆ ಹುಗಿಯುತ್ತೇನೆ.
ವ್ಯವಸ್ಥೆಯೆಂಬ ಮರಗುದುರೆಯ ಸುಟ್ಟು ಬೂದಿ ಮಾಡುವ
ಇಂಧನವೊಂದ ಹುಡುಕುತ್ತೇನೆ.

ಹೊಸ ಆಸೆ, ಹೊಸ ಬದುಕು, ಕನಸುಗಳೊಂದಿಗೆ
ಹೊಸಬಟ್ಟೆ ನೇಯುತ್ತೇನೆ.
ದಿಗಂಬರನಾಗಿ ದಿಕ್ಕುಗಳ ನಡುವೆ
ದಿಕ್ಕಿಲ್ಲದೇ ಬಿದ್ದಿರುವ ಮನುಷ್ಯನಿಗೆ
ಹೊಸಬಟ್ಟೆ ಹೊದಿಸುತ್ತೇನೆ..’

***


ರಾಜಕೀಯವಾಗಿ ಅಹಿಂದ ಎನ್ನುತ್ತೇವೆ, ಬಹುಜನ ಸಮಾಜ ಎನ್ನುತ್ತೇವೆ. ಆ ರಾಜಕೀಯ ಪದಗಳು ವಾಸ್ತವದ ಗುಂಪುಗಳಾಗಿ ಅನುವಾದಗೊಳ್ಳಬೇಕಾದರೆ, ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬೇಕಾದರೆ ಇರುವುದು ಒಂದೇ ದಾರಿ - ಐಕ್ಯ ಚಳುವಳಿ. ಮಹಿಳೆಯರೂ ಸೇರಿದಂತೆ ಎಲ್ಲ ಜನಪರ ಗುಂಪುಗಳೂ ತಂತಮ್ಮ ಚಳುವಳಿಗಳ ಬಲಪಡಿಸುತ್ತಲೇ ಒಗ್ಗಟ್ಟಾಗಿ ಮುನ್ನಡೆಯುವುದಷ್ಟೇ ಪ್ರಸಕ್ತ ಕಾಲಮಾನ ನಮ್ಮಿಂದ ಬಯಸುವ ಹೆಜ್ಜೆಯೆನಿಸುತ್ತಿದೆ..





Monday, 17 August 2015

ಉಳುವ ಯೋಗಿ: ಒಂದು ಬಿನ್ನಹ..





ಕಳೆದ ತಿಂಗಳು ಇನ್ನೇನು ವಿಧಾನಸಭೆ ಅಧಿವೇಶನ ಶುರುವಾಗಬೇಕೆನ್ನುವ ಹೊತ್ತಿಗೆ ಯಾವುದೋ ಪಿಡುಗು ಇದ್ದಕ್ಕಿದ್ದಂತೆ ಬಂದೆರಗಿತೆಂಬಂತೆ ಪತ್ರಿಕೆಗಳಲ್ಲಿ ಪ್ರತಿದಿನ ರೈತ ಆತ್ಮಹತ್ಯೆಯ ವರದಿಗಳು ಬರತೊಡಗಿ ಪೀಪ್ಲಿ ಲೈವ್ ಸಿನಿಮಾ ನೆನಪಾಯಿತು..

೨೦೧೦ರಲ್ಲಿ ರೈತ ಆತ್ಮಹತ್ಯೆಯನ್ನು ವಸ್ತುವಾಗುಳ್ಳ ಪೀಪ್ಲಿ ಲೈವ್ ಎಂಬ ಚಿತ್ರ ಜನಪ್ರಿಯವಾಯಿತು. ಕೊಂಚ ಸೋಮಾರಿ ಮತ್ತು ಕುಡುಕ ರೈತ ನತ್ಥಾ ಮಾತಾಡುತ್ತ ಕುಳಿತಿದ್ದ ಹಳ್ಳಿಯ ಮುಖ್ಯರಿಗೆ ಸಾಲಸೋಲದಿಂದ ಪಾರಾಗಲು ಸಹಾಯ ಮಾಡಿ ಎಂದು ಕೇಳಲು ಹೋದಾಗ ಅವರು, ‘ಆತ್ಮಹತ್ಯೆ ಮಾಡಿಕೊ, ಸಾಲ ಮನ್ನಾ ಆಗಿ, ದುಡ್ಡು ಬಂದು ಮನೆಯವರೂ ಉದ್ಧಾರ ಆಗ್ತಾರೆ’ ಎಂದು ಲಘುವಾಗಿ ಉತ್ತರಿಸುತ್ತಾರೆ. ಅದನ್ನವ ಚಹಾದಂಗಡಿಯಲ್ಲಿ ತನ್ನ ಸೋದರನೊಂದಿಗೆ ಮಾತನಾಡುತ್ತ ಹೇಳುವುದನ್ನು ಸ್ಥಳೀಯ ಪತ್ರಕರ್ತನೊಬ್ಬ ಕೇಳಿಸಿಕೊಂಡು ಇನ್ನೇನು ಆತ್ಮಹತ್ಯೆಗೊಳಗಾಗುತ್ತಿರುವ ರೈತನ ಕೊನೆಯ ಕ್ಷಣಗಳ ಲೈವ್ ಕವರೇಜ್ ಮಾಡಿ ಸೆನ್ಸೇಷನಲ್ ಸ್ಟೋರಿ ಮಾಡಲು ಸಿದ್ಧನಾಗುತ್ತಾನೆ. ಇದರ ವಾಸನೆ ಗ್ರಹಿಸಿದ್ದೇ ಪ್ರತಿಸ್ಪರ್ಧಿ ಚಾನೆಲ್ಲುಗಳು, ಆಡಳಿತ ಪಕ್ಷ-ವಿರೋಧ ಪಕ್ಷದವರು, ಬೇರೆಬೇರೆ ಸಂಘಟನೆಗಳ ಜನರು ಪೀಪ್ಲಿಗೆ ಬಂದು ಇನ್ನೇನು ಸಾವಿಗೆ ಶರಣಾಗಲಿರುವ ರೈತನ ಮನೆಯೆದುರು ಠಿಕಾಣಿ ಹೂಡುತ್ತಾರೆ. ನತ್ಥ ಹೆದರಿ ಅಡಗುತ್ತಾನೆ. ಕೊನೆಗೆ ನತ್ಥನನ್ನು ಅಪಹರಿಸಿ ದವಸದ ಉಗ್ರಾಣದಲ್ಲಿಡಲಾಗುತ್ತದೆ. ಬೆಂಕಿ ಆಕಸ್ಮಿಕದಲ್ಲಿ ಉಗ್ರಾಣ ಸುಟ್ಟು, ಟಿವಿ ವರದಿಗಾರ ಸಾಯುತ್ತಾನೆ. ಆದರೆ ಸುಟ್ಟುಹೋದ ವ್ಯಕ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದ ನತ್ಥ ಎಂದು ಗುರುತಿಸುತ್ತಾರೆ. ನತ್ಥನದು ಆತ್ಮಹತ್ಯೆಯಲ್ಲದ ಕಾರಣ ಪರಿಹಾರವೂ ಬರುವುದಿಲ್ಲ. ಇತ್ತ ಬ್ಯಾಂಕ್ ಅಧಿಕಾರಿಗಳು ಲಿಲಾವು ಕೂಗಿ ಅವನ ಆಸ್ತಿ, ಮನೆ ಹರಾಜಾಗುತ್ತಿದ್ದರೆ ಅತ್ತ ಅವರೆಲ್ಲರಿಂದ ತಪ್ಪಿಸಿಕೊಂಡು ಮೊದಲೇ ಊರು ಬಿಟ್ಟಿದ್ದ ನತ್ಥ ಗುರ್‌ಗಾಂವ್‌ನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುತ್ತಾನೆ..!

ರೈತ ಆತ್ಮಹತ್ಯೆ ವಸ್ತುವನ್ನು ಆ ಸಿನಿಮಾ ನಿಭಾಯಿಸಿದ ಬಗೆಗೆ ಹಲವು ಪ್ರಶ್ನೆಗಳಿವೆ. ಆದರೆ ಅನ್ನ ಬೆಳೆವವನ ಆತ್ಮಹತ್ಯೆ ಎಂಬ ಅತಿಸೂಕ್ಷ್ಮ ವಿಷಯವನ್ನು ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂದು ವಿಡಂಬನಾತ್ಮಕವಾಗಿ ಪೀಪ್ಲಿ ಲೈವ್ ಹೇಳಿತ್ತು. ಈಗ ಸಮೃದ್ಧ ಕೃಷಿ ಪ್ರದೇಶವೆನ್ನದೆ, ಬರಗಾಲದ ಊರೆನ್ನದೆ ಎಲ್ಲೆಡೆಯಿಂದ ರೈತ ಆತ್ಮಹತ್ಯೆ ವರದಿಗಳು ಬರುತ್ತಿರುವಾಗ, ಉಳುವ ಯೋಗಿಗೆ ಬದುಕು ಭಾರವಾಗುವ ಪರಿಸ್ಥಿತಿ, ಮನಸ್ಥಿತಿ ಏಕೆ ಬಂತು? ರೈತ ಆತ್ಮಹತ್ಯೆಗಳು ಅತಿ ಹೆಚ್ಚು ಎಲ್ಲಿ ಸಂಭವಿಸಿವೆ? ಯಾವ ಕಾರಣಕ್ಕೆ ಸಂಭವಿಸಿವೆ? ಯಾವ ಬೆಳೆ ಬೆಳೆವ ರೈತರು ಹೆಚ್ಚು ಆತ್ಮಹತ್ಯೆಗೊಳಗಾಗಿದ್ದಾರೆ? ಒಟ್ಟೂ ಸಮಾಜದ ಆತ್ಮಹತ್ಯೆ ಪ್ರಮಾಣ ಹಾಗೂ ರೈತ ಆತ್ಮಹತ್ಯೆ ಪ್ರಮಾಣದ ಸಂಬಂಧ ಎಂತಹುದು? ಈ ವಿಷಯಗಳ ಕುರಿತ ಕೆಲವು ಸಂಶಯರೂಪಿ ಆಲೋಚನೆಗಳನ್ನು ಹಂಚಿಕೊಳ್ಳಬೇಕಾಗಿದೆ..

ಆತ್ಮಹತ್ಯೆ ಏಕೆ?



ರೈತ ಆತ್ಮಹತ್ಯೆ ಇಂದು ನಿನ್ನಿನ ವಿದ್ಯಮಾನವಲ್ಲ. ಮನುಷ್ಯ ಒಂದೆಡೆ ನೆಲೆ ನಿಂತು ನೆಲಕ್ಕೆ ಹಕ್ಕುದಾರನಾದ ಕ್ಷಣದಿಂದಲೇ ನೆಲದ ಆಗುಹೋಗುಗಳು ಜೀವನ್ಮರಣದ ಪ್ರಶ್ನೆಗಳಾಗಿ ಪರಿಗಣಿಸಲ್ಪಟ್ಟವು. ರಾಜ್ಯಸಾಮ್ರಾಜ್ಯಗಳ ಕೋಶ ತುಂಬುತ್ತಿದ್ದಿದ್ದೇ ರೈತ ಬೆಳೆದ ಫಸಲಿನಿಂದ. ಹಾಗಾಗಿ ಬರವೋ ನೆರೆಯೋ ರೈತನನ್ನು ಎಲ್ಲ ಆಳುವವರೂ ಶಕ್ತ್ಯಾನುಸಾರ ಸುಲಿದಿದ್ದಾರೆ. ಆದರೆ ಭಾರತದ ರೈತರ ನಿಜವಾದ ಸಂಕಷ್ಟಗಳು ಎದುರಾದದ್ದು ವಸಾಹತುಶಾಹಿ ಆಡಳಿತದಲ್ಲಿ. ತಮಗೆ ಅವಶ್ಯವಿದ್ದ ಹತ್ತಿ, ಕಬ್ಬು, ತಂಬಾಕಿನಂತಹ ವಾಣಿಜ್ಯ ಬೆಳೆಗಳನ್ನು ರೈತ ಬೆಳೆಯುವಂತೆ ಒತ್ತಾಯಿಸಲು ಅದನ್ನು ಬೆಳೆಯದವರಿಗೆ ಭಾರೀ ತೆರಿಗೆ ಹೇರಿದರು. ಇಂತಹ ಸುಲಿಗೆಕೋರ ಬ್ರಿಟಿಷರು ಒಂದುಕಡೆಯಿದ್ದರೆ, ಬಡ್ಡಿಗಾಗಿ ಅಕ್ಷರಶಃ ರೈತರನ್ನು ಸುಲಿವ ಲೇವಾದೇವಿಗಾರರು ಇನ್ನೊಂದೆಡೆ ನಿಂತು ೧೮-೧೯ನೇ ಶತಮಾನದ ಭಾರತದ ರೈತರನ್ನು ದಂಗೆಯೇಳುವಂತೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಸ್ವಾತಂತ್ರ್ಯಾನಂತರ ಭೂಹೀನರಿಗೆ ಭೂಮಿ ಹಂಚುವ ಬದಲು ಅಭಿವೃದ್ಧಿ ಯೋಜನೆಗಳಿಗೆಂದು ಸರ್ಕಾರವೇ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿ ರೈತರ ಕೃಷಿಭೂಮಿ ಕಸಿಯುತ್ತಿದೆ. ಬೃಹತ್ ಬಂಡವಾಳಗಾರರು ಕೃಷಿಕ್ಷೇತ್ರಕ್ಕೆ ಕಾಲಿಟ್ಟು, ಜಾಗತಿಕ ಮಾರುಕಟ್ಟೆ ವ್ಯವಸ್ಥೆಯನ್ನು ದೇಶ ಒಪ್ಪಿಕೊಂಡ ಕಾರಣ ರೈತ ಬದುಕು ಅತಂತ್ರವಾಗುತ್ತ, ರೈತ ಆತ್ಮಹತ್ಯೆ ಹೆಚ್ಚುತ್ತ ಹೋಗಿದೆ.

ಈ ಘನತೆವೆತ್ತ ನಾಗರಿಕತೆಯ ಐರನಿ ಎಂದರೆ ಒಂದೆಡೆ ಬೆಳೆದ ಬೆಳೆಗೆ ದರ ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ; ಮತ್ತೊಂದು ಕಡೆ ಆಹಾರ ಧಾನ್ಯಗಳ ವಿಪರೀತ ಬೆಲೆಯಿಂದ ಹಸಿವು, ಅಪೌಷ್ಟಿಕತೆಗೀಡಾಗಿ ಜನ ಸಾಯುತ್ತಿದ್ದಾರೆ. ಕೃಷಿ ಮಾರುಕಟ್ಟೆ ವ್ಯವಸ್ಥೆ ಅಸಂಖ್ಯ ದಲ್ಲಾಳಿಗಳು ಹಾಗೂ ಮಧ್ಯಮಹಂತದ ಮಾರಾಟಗಾರರಿಂದ ತುಂಬಿಹೋಗಿ ದವಸಧಾನ್ಯಗಳು ಕೊಳ್ಳುವವನಿಗೆ ತುಟ್ಟಿಯಾಗಿವೆ, ಮಾರುವವನಿಗೆ ಅಗ್ಗವಾಗಿ ನಷ್ಟ ತರುತ್ತಿವೆ. ಹರಿಸಿದ ಬೆವರಿಗೆ ತಕ್ಕ ಗಳಿಕೆ ಇಲ್ಲದಿರುವುದು ಸಾಲ-ಬಡತನ-ಆತ್ಮಹತ್ಯೆಯ ವಿಷವರ್ತುಲಕ್ಕೆ ರೈತರನ್ನು ದೂಡುತ್ತಿದೆ.

ಯಾವುದೇ ಆತ್ಮಹತ್ಯೆಯಂತೆ ರೈತ ಆತ್ಮಹತ್ಯೆಗೂ ಒಂದೇ ಕಾರಣವಿಲ್ಲ. ಈ ಕುರಿತು ನಡೆದ ಹಲವಾರು ಅಧ್ಯಯನಗಳಲ್ಲಿ ಮೃತ ವ್ಯಕ್ತಿಯ ಕುಟುಂಬದವರು ತಿಳಿಸಿದಂತೆ ಆತ್ಮಹತ್ಯೆಯ ಕಾರಣಗಳು ಒಂದಕ್ಕಿಂತ ಹೆಚ್ಚಿವೆ. ವಾಣಿಜ್ಯ ಬೆಳೆ ಬೆಳೆಯುವಲ್ಲಿ, ಅದರಲ್ಲೂ ಹತ್ತಿ ಮತ್ತು ಕಾಫಿ ಪ್ರದೇಶಗಳಲ್ಲಿ ಅತಿ ಹೆಚ್ಚು ರೈತ ಆತ್ಮಹತ್ಯೆಗಳಾಗಿವೆ. ಅಲ್ಲದೆ ಒಂದು ಹೆಕ್ಟೇರಿಗಿಂತ ಕಡಿಮೆ ಭೂಮಿಯಿರುವವರು; ೩೦೦ಕ್ಕಿಂತ ಹೆಚ್ಚು ರೂಪಾಯಿ ಸಾಲವಿರುವವರು ಆತ್ಮಹತ್ಯೆಗೆಳಸಿದ್ದು ಹೆಚ್ಚು. ಈಗ ನೀರಾವರಿಯಿರುವ ಕಬ್ಬು ಬೆಳೆ ಪ್ರದೇಶಕ್ಕೂ ಇದು ವ್ಯಾಪಿಸಿದೆ. ಕುಡಿತ/ಜೂಜು ಮತ್ತಿತರ ಚಟಗಳು; ಬೆಳೆ ನಾಶ; ತೊಡಗಿಸಿದ ಹಣ ಬಾರದಿರುವುದು; ಕೌಟುಂಬಿಕ ಸಮಸ್ಯೆ; ಕಾಯಿಲೆ; ಹೆಣ್ಣು ಮಕ್ಕಳ ಮದುವೆ ಸಾಲ; ಮನೆ ಖರ್ಚು; ಸಾಲಬಾಧೆ - ಹೀಗೆ ಆತ್ಮಹತ್ಯೆಯ ಕಾರಣಗಳು ಏನೇ ಇದ್ದರೂ ಇವೆಲ್ಲದರ ಮೂಲ ಇವತ್ತಿನ ಆರ್ಥಿಕತೆಯಿಂದ ಜೀವನಶೈಲಿ-ಬದುಕು-ಧೋರಣೆಗಳಲ್ಲಿ ಆಗಿರುವ ಬದಲಾವಣೆಯಲ್ಲಿದೆ.

ಕೃಷಿ ಭಾರತದ ಎಲ್ಲೆಡೆ ಒಂದೇ ತೆರನಾಗಿಲ್ಲ, ಹಾಗೇ ಕೃಷಿಕರ ಧೋರಣೆಗಳೂ ಸಹಾ. ಎರಡು ತಲೆಮಾರುಗಳ ಹಿಂದಿನ ಜೀವನ ಕ್ರಮಕ್ಕೂ ಇವತ್ತಿನದಕ್ಕೂ ಹೇಗೆ ಅಜಗಜಾಂತರ ವ್ಯತ್ಯಾಸವಿದೆಯೋ ಹಾಗೆಯೇ ಕೃಷಿಯಲ್ಲೂ, ಬೆಳೆಯ ವೈವಿಧ್ಯ-ಆದ್ಯತೆಯಲ್ಲೂ ಬದಲಾವಣೆಗಳಾಗಿವೆ. ತರಹೇವಾರಿ ದವಸಧಾನ್ಯಗಳ ಜಾಗವನ್ನು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ರೈತಾಪಿ ಕುಟುಂಬಗಳ ಇವತ್ತಿನ ಪೀಳಿಗೆಯ ಉದ್ಯೋಗ ಆದ್ಯತೆಗಳನ್ನು ಗಮನಿಸಿದರೆ ಗದ್ದೆತೋಟಹೊಲದ ಕೆಲಸ ಬೇಡ ಎಂದು ಯಾವುದೇ ಕೆಲಸವಾದರೂ ಸರಿ, ನಗರಗಳಿಗೆ ವಲಸೆ ಹೋಗುವ ಒಲವು ಕಾಣಿಸುತ್ತಿದೆ. ಅವರಿಗೆ ಹೀಗೆ ಯಾಕನಿಸಿತು? ಕೈಯಿಂದ ಮಾಡುವ ಕೆಲಸಕ್ಕಿಂತ ಯಂತ್ರದ ಜೊತೆ ಮಾಡುವ ಕೆಲಸ ಉಚ್ಚ ಎಂಬ ಭಾವನೆ ಹೇಗೆ ಬೆಳೆಯಿತು? ಸುಭಾಷ್ ಪಾಲೇಕರ್, ಫುಕುವೋಕಾರ ಶೂನ್ಯಕೃಷಿಗಿಂತ ಹೆಚ್ಚು ಮೊನಸಾಂಟೋ ಬಣ್ಣದ ಮಾತು ಏಕೆ ಆಪ್ಯಾಯಮಾನವೆನಿಸಿತು?

ಏಕೆಂದರೆ ಬದಲಾದ ಜೀವನಕ್ರಮವು ಯಾವುದನ್ನು ಮಾದರಿ ಎಂದು ಬಿಂಬಿಸುವುದೋ, ಅದು ರೈತ ವಿರೋಧಿಯಾಗಿದೆ. ಶ್ರಮ ಮತ್ತು ರೈತಾಪಿ ಕೆಲಸದ ಸಾಮಾಜಿಕ ಮೌಲ್ಯ ದಿನಗಳೆದಂತೆ ಇಳಿಯುತ್ತಿದೆ. ಅಭಿವೃದ್ಧಿ, ಖಾಸಗೀಕರಣದ ಕಾರಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿರುವ ಬೃಹತ್ ಬಂಡವಾಳವು ಅಂಚಿನಲ್ಲಿರುವ ರೈತರ ಬದುಕನ್ನು ಇನ್ನಷ್ಟು ಅಂಚಿಗೆ ಸರಿಸುತ್ತಿದೆ. ಸರ್ಕಾರ ಕೈಯೆತ್ತಿ ರೈತನ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುತ್ತಿದೆ. ಈ ಕಾರಣಕ್ಕೇ ಆತ್ಮಹತ್ಯೆಗೂ ಅಭಿವೃದ್ಧಿಗೂ ಸಂಬಂಧ ಕಂಡುಬರುತ್ತದೆ. ಇದನ್ನು ಅಂಕಿಅಂಶಗಳು ಧೃಢಪಡಿಸುತ್ತವೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಂಕಿಅಂಶಗಳ ಪ್ರಕಾರ ದಕ್ಷಿಣದ ಐದು ರಾಜ್ಯಗಳಲ್ಲಿ (ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಕೇರಳ) ರೈತ ಆತ್ಮಹತ್ಯೆ ಪ್ರಮಾಣ ಅತಿ ಹೆಚ್ಚು. ಇಡೀ ದೇಶದ ಮುಕ್ಕಾಲು ಭಾಗ ರೈತ ಆತ್ಮಹತ್ಯೆ ಈ ಐದು ರಾಜ್ಯಗಳಲ್ಲಿ ಸಂಭವಿಸುತ್ತದೆ. ಒಟ್ಟು ಆತ್ಮಹತ್ಯೆಯ ಕಾಲುಭಾಗ ಮಹಾರಾಷ್ಟ್ರವೊಂದರಲ್ಲೇ ಸಂಭವಿಸುತ್ತದೆ. ಅತಿ ಬಡರಾಜ್ಯಗಳೂ, ಅತಿ ಜನ ಬಾಹುಳ್ಯವಿರುವ ರಾಜ್ಯಗಳೂ ಆದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ, ಕೃಷಿ ಪ್ರಧಾನ ರಾಜ್ಯಗಳಾದ ಹರ‍್ಯಾಣಾ, ಪಂಜಾಬುಗಳಲ್ಲಿ ರೈತ ಆತ್ಮಹತ್ಯೆ ಕಡಿಮೆಯಿದೆ.

೨೦೧೨ರ ಒಂದು ವರ್ಷ ಅವಧಿಯ ಅಂಕಿಅಂಶ ನೋಡಿದರೆ:

ದೇಶಾದ್ಯಂತ ಒಟ್ಟೂ - ೧.೩೫ ಲಕ್ಷ ಆತ್ಮಹತ್ಯೆ ಸಂಭವಿಸಿದೆ.

ಅದರಲ್ಲಿ ರೈತ ಆತ್ಮಹತ್ಯೆ - ೧೩,೭೫೪
ಮಹಾರಾಷ್ಟ್ರ - ೩,೭೮೬
ಆಂಧ್ರ ಪ್ರದೇಶ - ೨,೫೭೨
ಕರ್ನಾಟಕ  - ೧,೮೭೫
ಮಧ್ಯಪ್ರದೇಶ  - ೧,೧೭೨
ಕೇರಳ      - ೧,೦೮೧
ಉತ್ತರ ಪ್ರದೇಶ - ೭೪೫
ಗುಜರಾತ್ - ೫೬೪
ಅಸ್ಸಾಂ - ೩೪೪
ತಮಿಳುನಾಡು - ೪೯೯
ಹರ‍್ಯಾಣಾ - ೨೭೬
ರಾಜಸ್ಥಾನ್ - ೨೭೦
ಪಂಜಾಬ್ - ೭೫
ಬಿಹಾರ - ೬೮..



ಸಾಮಾಜಿಕ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ದಕ್ಷಿಣದ ರಾಜ್ಯಗಳಲ್ಲಿ ಆತ್ಮಹತ್ಯೆ ಹೆಚ್ಚು, ರೈತ ಆತ್ಮಹತ್ಯೆಯೂ ಹೆಚ್ಚು. ಇದನ್ನು ಹೇಗೆ ವಿವರಿಸುವುದು? ವ್ಯಕ್ತಿಯ ಅಪರಿಹಾರ್ಯ ಕಷ್ಟಗಳ ನೀಗುವ ಮಾರ್ಗ ಆತ್ಮಹತ್ಯೆ ಎಂದು ಸಾಂಸ್ಕೃತಿಕವಾಗಿ ಈ ಪ್ರದೇಶ ಒಪ್ಪಿಕೊಂಡಿದೆಯೇ? ಅಭಿವೃದ್ಧಿ ಹುಟ್ಟಿಸಿದ ಆತಂಕ, ಆಧುನಿಕ ಬದುಕಿನ ಹುಸಿ ಮಾದರಿಗಳು ರೈತರನ್ನು ಹತಾಶೆಗೆ ನೂಕಿದೆಯೆ?

ರೈತ ಬದುಕು ಮತ್ತು ಗ್ರಾಮೀಣ ಬದುಕು ಅತ್ಯಂತ ಶಾಂತಿಯುತ, ಆರೋಗ್ಯಯುತ, ಆದರ್ಶ ಬದುಕು ಎಂದು ಹಲವರು ಭಾವಿಸುತ್ತಾರೆ. ಆದರೆ ಅಪಾಯದಂಚಿನಲ್ಲಿರುವ ವೃತ್ತಿ ಮತ್ತು ಜೀವಿ ಎಂದರೆ ರೈತನೇ. ಭಾರತವಷ್ಟೇ ಅಲ್ಲ, ರೈತ ಆತ್ಮಹತ್ಯೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಶ್ರೀಲಂಕಾ, ಕೆನಡಾ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ರೈತರ ಆತ್ಮಹತ್ಯೆ ಸಂಭವಿಸುತ್ತದ. ಉಳಿದ ಸಾಮಾಜಿಕ, ಆರ್ಥಿಕ, ರಾಜಕೀಯ ಅಂಶಗಳ ಜೊತೆಗೆ ರೈತರ ಆತ್ಮಹತ್ಯೆಗೆ ಕಾರಣವೆಂದು ಕೆಲವು ಅಂಶಗಳನ್ನು ಗುರುತಿಸಲಾಗಿದೆ:


  • ಕೃಷಿಗೆ ನಿವೃತ್ತಿ ವಯಸ್ಸು ಇಲ್ಲ, ಇದು ದಣಿವಿಗೆ, ಏಕತಾನತೆಗೆ ಹತಾಶೆಗೆ ಕಾರಣವಾಗಬಹುದಾಗಿದೆ. 
  • ಉಳಿದ ವೃತ್ತಿಗಳ ಮಕ್ಕಳಿಗಿಂತ ಕೃಷಿಕರ ಮಕ್ಕಳು ನಡುವಯಸ್ಸಾದರೂ ಹಿರಿಯರ ನಿಯಂತ್ರಣದಲ್ಲೇ ಇರಬೇಕಾಗುತ್ತದೆ. ಇದು ತರುಣ ಪೀಳಿಗೆಗೆ ಸ್ಟ್ರೆಸ್ ಹುಟ್ಟಿಸುತ್ತದೆ. ಕೌಟುಂಬಿಕ ಅಶಾಂತಿ, ಕುಡಿತದ ಚಟಕ್ಕೆ; ಬಹುತೇಕ ಆತ್ಮಹತ್ಯೆಗಳು ೪೦ರ ಆಸುಪಾಸು ಸಂಭವಿಸುವುದಕ್ಕೆ ಇದೂ ಕಾರಣವಾಗಿದೆ.
  • ಕರ್ನಾಟಕ ಮತ್ತು ಆಂಧ್ರಗಳಲ್ಲಿ ನಡೆದ ಅಧ್ಯಯನದ ಪ್ರಕಾರ ೪೦% ರೈತರು ಕೃಷಿಯನ್ನು ಬಿಡಲು ಬಯಸುತ್ತಾರೆ. ಅನಿವಾರ್ಯವೆಂದಷ್ಟೆ ಅದಕ್ಕೆ ಅಂಟಿಕೊಂಡಿದ್ದಾರೆ. ಮನಸ್ಸಿಲ್ಲದ ಕೆಲಸ ಖುಷಿ ಕೊಡುವುದಿಲ್ಲ. ಮಾರುಕಟ್ಟೆಯ ಬೇಡಿಕೆ, ಹವಾಮಾನ ಮತ್ತು ಆಳುವವರ ನಿಯಂತ್ರಣಗಳ ಜೊತೆಗೆ ಆಡುವ ಜೂಜು ಕೃಷಿ. ಅಲ್ಲಿ ಎಲ್ಲ ಅನಿಶ್ಚಿತ. ಎಂದೇ ಅದು ಅತಿ ಹೆಚ್ಚು ಆತಂಕ ಸೃಷ್ಟಿಸುವ ವೃತ್ತಿಯೂ ಹೌದು. ಆತಂಕ, ಅನಿಶ್ಚಿತತೆ, ಅಸುರಕ್ಷಿತತೆಗಳು ರೈತರಿಗೆ ಚಟ ಅಂಟಿಸುವ ಕಾರಣಗಳೂ ಆಗಿದ್ದು ಖಿನ್ನತೆಗೆ, ಆತ್ಮಹತ್ಯೆಗೆ ಇದೇ ಕಾರಣವಾಗಿದೆ.



ಸಾಲ ಶೂಲ

ಈಗ ರೈತಪರ ಮಾತನಾಡುವವರು ಸಾಲಮನ್ನಾ ಒಂದೇ ಆತ್ಮಹತ್ಯೆ ತಡೆಯಲು ಪರಿಹಾರ ಎನ್ನುವಂತೆ ಮಾತನಾಡುವುದು ಕೇಳಿಬರುತ್ತಿದೆ. ಆದರೆ ನೋಡಿ: ೨೦೦೬ರಲ್ಲಿ ಹತ್ತಿ ಮತ್ತು ಕಿತ್ತಳೆ ಬೆಳೆಗೆ ಪ್ರಸಿದ್ಧವಾದ ಮಧ್ಯ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ವಿದರ್ಭ (ನಾಗ್ಪುರ ಮತ್ತು ಅಮರಾವತಿ ವಿಭಾಗಗಳನ್ನೊಳಗೊಂಡ ಮೊದಲಿನ ಬೇರಾರ್ ಪ್ರಾಂತ್ಯ) ದೇಶಾದ್ಯಂತ ಸರಣಿ ರೈತ ಆತ್ಮಹತ್ಯೆಗಳಿಂದ ಗಮನ ಸೆಳೆಯಿತು. ಆತ್ಮಹತ್ಯೆಯ ವರದಿಗಳು ಬಂದ ಕೂಡಲೇ ಕೇಂದ್ರ ಸರ್ಕಾರ ೧೧,೦೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿತು. ಇದುವರೆಗೂ ಸತ್ತ ರೈತ ಕುಟುಂಬಗಳಿಗೆ ತಲಾ ಒಂದು ಲಕ್ಷ; ೭೧೨ ಕೋಟಿ ಬಡ್ಡಿ ಮನ್ನಾ; ಸುಧಾರಿತ ಸಾಲ ಸೌಲಭ್ಯ; ನೀರಾವರಿ ಉತ್ತಮಪಡಿಸುವುದು; ತಜ್ಞರಿಂದ ಸಲಹೆ; ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆಯೇ ಮೊದಲಾದ ಇತರ ಉತ್ಪಾದನಾ ಮಾರ್ಗಗಳನ್ನು ಜೊತೆಜೊತೆಗೇ ಪ್ರೋತ್ಸಾಹಿಸುವುದು ಇತ್ಯಾದಿ ಕ್ರಮಗಳನ್ನು ಆ ಪ್ಯಾಕೇಜಿನಲ್ಲಿ ಗುರುತಿಸಲಾಗಿತ್ತು. ಅದೇ ವರ್ಷ ದಕ್ಷಿಣದ ಐದು ರಾಜ್ಯಗಳ ೩೧ ಜಿಲ್ಲೆಗಳನ್ನೂ ಗುರುತಿಸಿ ವಿಶೇಷ ಯೋಜನೆ ಘೋಷಿಸಲಾಯಿತು. ಆದರೆ ಉದ್ದೇಶಿತ ಯೋಜನೆಗಳಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಸಾಲ ನೀಡುವಿಕೆ, ಸಾಲಮನ್ನಾ, ಬಡ್ಡಿಮನ್ನಾದಂತಹ ಆರ್ಥಿಕ ಸಂಗತಿಗಳೇ ಹೊರತು ಕೃಷಿ ವಿಧಾನ, ಬೆಳೆ, ಪರ್ಯಾಯ ಆರ್ಥಿಕತೆ ಕುರಿತ ಸಲಹೆ-ಯೋಜನೆಗಳು ಕಾಗದದಿಂದ ನೆಲಕ್ಕಿಳಿಯಲಿಲ್ಲ.

೨೦೦೬ರಲ್ಲಿ ದೇಶದಲ್ಲಿ ೧೭,೦೬೦ ರೈತ ಆತ್ಮಹತ್ಯೆ ಸಂಭವಿಸಿತ್ತು. ನಂತರದ ವರ್ಷಗಳ ಅಂಕಿ ಅಂಶ ಹೀಗಿದೆ:

೨೦೦೭ - ೧೬,೬೩೨
೨೦೦೮ - ೧೬, ೭೯೬
೨೦೦೯ - ೧೭, ೩೬೮
೨೦೧೦ - ೧೫, ೯೬೪
೨೦೧೧ - ೧೪,೦೨೭
೨೦೧೨ - ೧೩, ೭೫೪
೨೦೧೩- ೧೧, ೭೭೨
೨೦೧೪ - ೧೨,೩೬೦

ಎಲ್ಲ ಪ್ಯಾಕೇಜುಗಳ ನಂತರವೂ ಈ ಒಂಭತ್ತು ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳು ನಿರಂತರ ಸಂಭವಿಸುತ್ತಿವೆ. ಮಹಾರಾಷ್ಟ್ರ ಅತಿ ಹೆಚ್ಚು ರೈತ ಆತ್ಮಹತ್ಯೆ ಸಂಭವಿಸುವ ರಾಜ್ಯವಾಗಿ ಮುಂದುವರೆದಿದೆ. ಏಕೆ ಹೀಗೆ?

ಸಾಲ ಮನ್ನಾ, ಬಡ್ಡಿ ಮನ್ನಾದಂತಹ ಜನಪ್ರಿಯ ಘೋಷಣೆಗಳು, ಕ್ರಮಗಳು ರೈತರ ಬವಣೆಯನ್ನು ಸದ್ಯಕ್ಕೆ ನೀಗುತ್ತವೆ. ಆದರೆ ಸಮಸ್ಯೆ ಹಾಗೆಯೇ ಮುಂದಾಟುತ್ತದೆ. ಜೊತೆಗೆ ಸರ್ಕಾರಿ ಸಾಲವೇನೋ ಮನ್ನಾ ಆಗಬಹುದು, ಆದರೆ ‘ಕಿಬ್ಬದಿಯ ಕೀಲು ಮುರಿವ’ ಲೇವಾದೇವಿಗಾರರ ಸಾಲ, ಕೈಸಾಲಗಳು ಹೇಗೆ ಮನ್ನಾ ಆದಾವು? ೨೪-೫೦% ತನಕ ದುಬಾರಿ ಬಡ್ಡಿ ವಿಧಿಸುವ ಖಾಸಗಿ ಲೇವಾದೇವಿಗಾರರಿಂದ ಹೊಲಮನೆ ಅಡವಿಟ್ಟು ಮಾಡುವ ಸಾಲಗಳ ತೀರಿಸುವವರಾರು? ಬಡ್ಡಿಚಕ್ರಬಡ್ಡಿಗಳ ಸುಳಿಗೆ ಸಿಕ್ಕು ಸೋತು ಆತ್ಮಹತ್ಯೆಗೆ ಶರಣಾಗುವ ರೈತನಿಗೆ ಭಾರೀ ಮರಣೋತ್ತರ ಪರಿಹಾರ ಸಿಕ್ಕರೆ ಅದು ದುರ್ಬಲ ಮನಸಿನವರಿಗೆ ಸಾಯುವ ಅಪೇಕ್ಷೆ ಹುಟ್ಟಿಸುವುದಿಲ್ಲವೆ? ಆತ್ಮಹತ್ಯೆಗೆ ಸಾಮಾಜಿಕ ಸಮಸ್ಯೆಗಳೂ ಕಾರಣವಾಗಿರುವಾಗ ಕೇವಲ ಹಣ ಕೊಟ್ಟುಬಿಟ್ಟರೆ ರೈತ ಸಮಸ್ಯೆಗಳೆಲ್ಲ ಮಾಯವಾಗಿಬಿಡುವವೇ? ಅನ್ನದಾತನನ್ನು ಇಕೋ ತಕೋ ಸಾಲವೆಂದು ಸಾಲಗಾರನನ್ನಾಗಿಸಿ ಘನತೆ ಕುಗ್ಗಿಸಿದ ಪಾಪಕ್ಕೆ ಶಿಕ್ಷೆ ಅನುಭವಿಸಬೇಕಾಗುವುದು ಯಾರು? ಸಾಲವಿಲ್ಲದೆ ಕೃಷಿ ಸಾಧ್ಯವಿಲ್ಲವೆ?



ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಿಕೊಂಡು ದೀರ್ಘಾವಧಿ ಬಾಳಿಕೆ ಬರುವ ಕಾರ್ಯಕ್ರಮ ಜಾರಿಯಾಗುವಂತೆ ನೋಡಿಕೊಳ್ಳಬೇಕು. ರೈತರು ಎಲ್ಲಕ್ಕೂ ಸಾಲವನ್ನೇ ನೆಚ್ಚಿಕೊಂಡು ಮುಂದುವರೆಯುವ ಮನಸ್ಥಿತಿ ತಲುಪದಂತೆ ಎಚ್ಚರಿಸಬೇಕು. ಸಾಲವನ್ನು ಅಧಿಕೃತ ಬ್ಯಾಂಕುಗಳಿಂದ, ಉತ್ಪನ್ನ ಹೆಚ್ಚಿಸುವ ಉದ್ದೇಶಗಳಿಗಾಗಿ ಮಾತ್ರ ಮಾಡಬೇಕೆಂದು ರೈತರ ಮನವೊಲಿಸಬೇಕು. ಏಕೆಂದರೆ ಸಾಲ ಕೊಡುವುದು ಕಷ್ಟವಲ್ಲ. ಆದರೆ ಅದು ಪಡೆದವ ತಲೆಯೆತ್ತಿ ನಿಲ್ಲಲು ಸಹಾಯ ಮಾಡಿದರಷ್ಟೇ ಅದಕ್ಕೊಂದು ಅರ್ಥವಿದೆ. ಈಗ ಸಾಲ ಶೂಲದಂತೆ ರೈತರ ಆತ್ಮನಾಶ ಮಾಡುತ್ತಿರುವಾಗ ಭಿನ್ನವಾಗಿ ಯೋಚಿಸಬೇಕಾದದ್ದು ಅನಿವಾರ್ಯವಾಗಿದೆ.

ರೈತರಿಗಷ್ಟೇ ಅಲ್ಲ, ಪ್ರತಿಯೊಬ್ಬನನ್ನೂ ಬಿಕ್ಕಟ್ಟುಗಳ ನಡುವೆ ಉಸಿರಾಡುವಂತೆ ಮಾಡಬಲ್ಲ ಸುಸ್ಥಿರ ಜೀವನವಿಧಾನವು ಸರಳ ಬದುಕಿನಲ್ಲಿದೆ. ಅದನ್ನು ವಿಶಾಲ ಸಮಾಜವೂ ಅರಿತು ಅದರಂತೆ ಬದುಕಲು ಕಲಿಯಬೇಕು..

ರೈತ ಮಹಿಳೆಯ ವಿಸ್ಮೃತಿ



ನೆಲದ ಒಡತಿಯೋ, ಕೂಲಿಯೋ - ಅಂತೂ ನೆಲದಲ್ಲಿ ಕೈಯಾಡಿಸುವವರಲ್ಲಿ ಮಹಿಳೆಯದು ಸಿಂಹಪಾಲು. ದವಸಧಾನ್ಯಗಳ ಬಿತ್ತಿ, ಕುಯ್ದು, ಬಡಿದು, ತೂರಿ, ಒಪ್ಪ ಓರಣ ಸಂಗ್ರಹ ಮಾಡುವ ಬಹುಪಾಲು ಕೆಲಸಗಳು ಅವರ ಪಾಲಿನವು. ರೈತ ಆತ್ಮಹತ್ಯೆಗಳಲ್ಲಿ ಹೆಣ್ಣುಮಕ್ಕಳ ಕತೆ ಏನಿರಬಹುದು ನೋಡಹೊರಟರೆ ಒಟ್ಟೂ ಜನಸಂಖ್ಯೆಯ ಆತ್ಮಹತ್ಯೆಯ ಪ್ರಮಾಣದಲ್ಲಿ ಹೇಗೋ ಹಾಗೆ ರೈತ ಆತ್ಮಹತ್ಯೆಗಳಲ್ಲೂ ಪುರುಷರದೇ ಮೇಲುಗೈ. (ಪ್ರತಿ ಲಕ್ಷ ರೈತರಿಗೆ ೧೬. ೨ ಪುರುಷ ರೈತರು, ಲಕ್ಷ ರೈತ ಮಹಿಳೆಯರಲ್ಲಿ ೬.೨ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಾರೆ.) ಬಹುಶಃ ಹೊಲಮನೆ ಎರಡೂ ಕಡೆ ಹೆಗಲಿಗೇರುವ ಜವಾಬ್ದಾರಿಯ ಹೊರೆಗಳು ರೈತಮಹಿಳೆಯ ಆತಂಕ, ಖಿನ್ನತೆಗೆ ಕಾರಣವಾಗಿರಬಹುದಾಗಿದೆ.

ಒಂದು ಕತೆ ನೆನಪಾಗುತ್ತಿದೆ:

ಭೂಮಿ ಮೇಲೆ ಜನಸಂಖ್ಯೆ ಹೆಚ್ಚಾಯಿತು. ಎಲ್ಲೆಲ್ಲೂ ಹಾಹಾಕಾರ. ತಿನ್ನಲು, ಕುಡಿಯಲು ಸಿಗದೆ ಬರ. ಹುಟ್ಟಿಸಿದವ ಹುಲ್ಲು ಮೇಯಿಸನೇ? ಅವ ಭೂಮಿ ಮೇಲಿರುವವರನ್ನು ದೋ..ಡ್ಡದೊಂದು ವ್ಯೋಮನೌಕೆಯಲ್ಲಿ ಮಂಗಳ ಗ್ರಹದ ಮೇಲಿಳಿಸಿ ಮಂಗಳವಾಗಲಿ ಎಂದ. ಭೂಮಿ ಮೇಲಿಂದ ಹೋದವರು ಅಲ್ಲಿ ತಾವು ಕೊಂಡು ಹೋದ ದವಸ ದಾನ್ಯ ತಿಂದುಂಡು ಆರಾಮ ಅಲೆದರು. ತಂದದ್ದು ಖರ್ಚಾಯಿತು. ಆಗ ಕಾಡುಮೇಡು ತಿರುಗಿದರು. ಹಣ್ಣುಹಂಪಲು ಬೇರು ಗೆಡ್ಡೆಗೆಣಸು ಚಿಗುರು ತಿಂದರು. ಅದೂ ಖಾಲಿಯಾಯಿತು. ಈಗ ಕೂಗಿ ಕರೆದರು.

‘ತಂದೇ..’
ತಂದೆ ಬಂದ. ಅವನಿಗೆ ಅವರು ಹೇಳದೆ ಎಲ್ಲ ಅರಿವಾಯಿತು. ಅವನೆಂದ,
‘ತಂದದ್ದು ಇದ್ದದ್ದು ಖಾಲಿಯಾಯಿತೇ? ಹಾಗಾದರಿನ್ನು ನೀವು ಬೆಳೆಯಬೇಕು..’
‘ಹೌದೇ? ಆದರೆ ಹೇಗೆ?’
‘ಉತ್ತಿರಿ, ಬಿತ್ತಿರಿ.’
‘ಉತ್ತಿ ಬಿತ್ತುವುದೆ? ಬೀಜ ಎಲ್ಲಿ?’
‘ತರಲಿಲ್ಲವೆ? ಕೇಳಿ ನೋಡಿ’

ಯಾರ ಬಳಿಯಿದೆ ಬೀಜ? ಅರಸ ಮಂತ್ರಿಯ ಕೇಳಿದ. ಮಂತ್ರಿ ಆಪ್ತ ಸಹಾಯಕನ ಕೇಳಿದ. ಅವ ವ್ಯಾಪಾರಿ ಬಳಿ. ವ್ಯಾಪಾರಿ ದಲ್ಲಾಳಿ ಬಳಿ. ದಲ್ಲಾಳಿ ರೈತನ ಬಳಿ. ರೈತ ಜೀತದವನ ಬಳಿ. ಊಂಹ್ಞೂಂ, ಯಾರ ಬಳಿಯೂ ಬೀಜ ಇಲ್ಲ.

ಪರಸ್ಪರ ಮೂದಲಿಕೆ, ಗುದ್ದಾಟ ಶುರುವಾಯಿತು. ಏಕೆ ಗದ್ದಲವಾಗುತ್ತಿದೆಯೆಂದು ನೋಡಲು ರೈತನ ಹೆಂಡತಿ ಹೊರಬಂದಳು. ಕೊನೆಗೆ ಎಲ್ಲ ಗದ್ದಲ ಬೀಜ ಇಲ್ಲದ್ದಕ್ಕೆ ಎಂದು ತಿಳಿಯಿತು. ಕೂಡಲೆ ಗಂಡನ  ಕರೆದಳು. ಬೀಜ ನಮ್ಮಲ್ಲಿದೆ ಎಂದಳು. ಅವನಿಗೆ ತನ್ನ ಹೆಂಡತಿ ಹೇಳಿದ್ದು ಕೇಳಿ ಇವಳಿಷ್ಟು ಜಾಣೆ ಎಂದು ತನಗೆ ಗೊತ್ತೇ ಇರಲಿಲ್ಲವಲ್ಲ ಎಂದು ಆಶ್ಚರ್ಯವಾಯಿತು. ಅವಳು ಭೂಮಿಯಿಂದ ಬರುತ್ತ ಯಾವುದಕ್ಕೂ ಇರಲಿ ಅಂದು ಪಾವು ಬೀಜವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬಂದಿದ್ದಳು. ಬಂದವಳೇ ಮಡಕೆಯಲ್ಲಿಟ್ಟು ಹೂತಿದ್ದಳು! ಅವಳಷ್ಟೆ ಅಲ್ಲ, ಸೆರಗಿನ ಮರೆಯಲ್ಲಿ ಎಲ್ಲ ಹೆಂಗಸರೂ ಹೀಗೇ ಏನೋ ಒಂದನ್ನು ಕಟ್ಟಿಕೊಂಡು, ಗುಟ್ಟಾಗಿ ತಂದು ಹುಗಿದಿದ್ದರು!

ಇದು ಕತೆ. ಆದರೆ ವಾಸ್ತವದಲ್ಲಿ ಬೀಜ ಕಂಪನಿಗಳು ರೈತನ ಹೆಂಡತಿಯನ್ನು ಎಂಥ ವಿಸ್ಮೃತಿಗೊಳಪಡಿಸಿವೆಯೆಂದರೆ ಅವಳು ಸೆರಗಲ್ಲಿ ಮುಂಜಾಗರೂಕತೆಯಾಗಿ ಬೀಜ ಕಟ್ಟಿಕೊಳ್ಳುವುದನ್ನೇ ಮರೆಸಲು ಅವರು ಯಶಸ್ವಿಯಾಗಿದ್ದಾರೆ! ಕೃಷಿಯ ಬಿಕ್ಕಟ್ಟುಗಳ ಬೀಜ ಬಿತ್ತನೆ ಬೀಜ ಮತ್ತಿತರ ರೈತ ಅವಶ್ಯಕ ವಸ್ತುಗಳ ವ್ಯಾಪಾರೀಕರಣದಲ್ಲಿ ಅಡಗಿದೆ.

ನಾವೆಲ್ಲಿ ತಪ್ಪಿದೆವು?



ಮನುಷ್ಯನ ನೆಲದ ಸಂಬಂಧ ಆರೆಂಟು ಸಾವಿರ ವರ್ಷಗಳದ್ದು. ನಾಗರಿಕತೆ ಬೆಳೆದಿದ್ದೇ ಕೃಷಿ ಶುರುವಾದ ನಂತರ. ನೆಲತಾಯಿಯ ಸಂಬಂಧ, ನೆಲವೆಂಬ ಸಂಪನ್ಮೂಲ ಅಂತಿಂಥವಲ್ಲ. ನೆಲದ ನಂಟಿನ ಕಾರಣವಾಗಿ ರೈತ ಗಳಿಸಿಕೊಂಡ ಜ್ಞಾನವೂ ಅಸಾಮಾನ್ಯವಾದದ್ದು. ಅಲ್ಲಿ ತೊಡಗಿಸಬೇಕಾದ ಶ್ರಮವೆಂಬ ಬಂಡವಾಳ ಯಾರೂ ಹೇಳಿಕೊಡದ ಪಾಠವನ್ನು ನೆಲ ಮುಟ್ಟುವವರಿಗೆ ಹೇಳಿಕೊಡುತ್ತದೆ. ಯಾವ ನೆಲದಲ್ಲಿ, ಯಾವ ಬೆಳೆಯನ್ನು, ವರ್ಷಕ್ಕೆ ಎಷ್ಟು ಬೆಳೆಯನ್ನು ಬೆಳೆಯಬೇಕು? ಬಿತ್ತನೆ ವಿಧಾನ, ನೆಲದ ತಯಾರಿ, ಕಳೆಕೀಟಪ್ರಾಣಿಗಳ ನಿರ್ವಹಣೆ, ಬೀಜ ಸಂಗ್ರಹ, ಬೆಳೆಯ ಸಂಗ್ರಹ-ವಿನಿಮಯ-ವಿನಿಯೋಗ ಹೇಗೆ ಎನ್ನುವುದನ್ನೆಲ್ಲ ನೆಲ ಮನುಷ್ಯನಿಗೆ ಹೇಳಿಕೊಟ್ಟಿದೆ. ಮಳೆ ಕಡಿಮೆಯಿರುವ ಬರದ ನಾಡಿನಲ್ಲೂ, ಹಿಮಾಲಯದಲ್ಲೂ, ಮಲೆನಾಡಿನಲ್ಲೂ, ಕರಾವಳಿಯಲ್ಲೂ, ಉಷ್ಣಸಮಶೀತೋಷ್ಣ ವಲಯದ ಬಯಲುಗಳಲ್ಲೂ, ಬೆಟ್ಟಗುಡ್ಡಗಳ ಕಡಿದಾದ ಇಳಿಜಾರಿನಲ್ಲೂ, ನದಿ ಬಯಲಿನಲ್ಲೂ, ದ್ವೀಪದಲ್ಲೂ, ಜ್ವಾಲಾಮುಖಿಯ ಸಖ್ಯದಲ್ಲೂ - ಒಟ್ಟಾರೆ ಮನುಷ್ಯರು ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲಿನ ನೆಲದ ಗುಣ ಅರಿತು ಸಾಗುವಳಿ ಮಾಡಿ ಬರನೆರೆಗಳ ದಾಟಿ ಬದುಕಿ ಬಂದಿದ್ದಾರೆ. ಸಾವಿರಾರು ವರ್ಷಗಳಿಂದ ತಿನ್ನಲು ತಮಗೆಷ್ಟು ಬೇಕೋ ಅಷ್ಟು ಮಾತ್ರವಲ್ಲದೆ, ಭೂಮಿ ಮೇಲಿರುವ ನೆಲಹೀನರ, ಬೆವರು ಹರಿಸದವರ ಪರವಾಗಿಯೂ ಬೆಳೆ ಬೆಳೆದಿದ್ದಾರೆ.

ಹೀಗಿರುತ್ತ ರೈತರ ಅತಂತ್ರ ಬದುಕು, ಬೆಳೆಯ ವಿಫಲತೆ, ಆತ್ಮಹತ್ಯೆ, ಸಾಲ ಬಾಕಿ ಇತ್ಯಾದಿ ಎಲ್ಲ ಅಂದರೆ ಎಲ್ಲಕ್ಕೂ ಪ್ರಭುತ್ವವೇ ಕಾರಣವೆಂದು ನಾವು ಹೇಳಿದರೆ ಅದು ರೈತರ ಪಾರಂಪರಿಕ ಜ್ಞಾನಕ್ಕೆ ಮಾಡುವ ಅಪಚಾರವಾಗುತ್ತದೆ. ಇವತ್ತಿನ ರೈತರು ಆತ್ಮಹತ್ಯೆಯನ್ನು ಪರಿಹಾರವಾಗಿ ಕಾಣುತ್ತಿರುವುದರ ಹಿಂದೆ ಪ್ರಭುತ್ವದ ಪಾಲು ಎಷ್ಟು ಇದೆಯೋ ಅಷ್ಟೇ ಕೃಷಿಗೆ ಸಂಬಂಧಿಸಿದ ಮೂಲಾಧಾರಗಳೆಲ್ಲ ಹಿಂದಿರುಗಲಾರದಷ್ಟು ಬದಲಾಗಲು ಬಿಟ್ಟ ನಮ್ಮ ಪಾಲೂ ಇದೆ. ರೈತರ ಸಾವು ಬದುಕುಗಳನ್ನು ಇಡಿಇಡಿಯಾಗಿ ಪ್ರಭುತ್ವದ ಕೈಗೆ ಕೊಟ್ಟವರು ಯಾರು? ಆಗ ನಾವೇನು ಮಾಡುತ್ತಿದ್ದೆವು? ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕ, ಉಪಕರಣಗಳಿಗೆಲ್ಲ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸತೊಡಗಿದ ರೈತರನ್ನು ಸಾವಯವ ಕೃಷಿ, ಪರ್ಯಾಯ ಕೃಷಿ, ಶೂನ್ಯ ಕೃಷಿಯ ಬಳಕೆಗೆ ಮನವೊಲಿಸುವಲ್ಲಿ ನಾವು ಸೋತೆವು. ತಂತಮ್ಮ ನೆಲದ ಸತ್ವ, ನೀರಿನ ಲಭ್ಯತೆ ಮೇಲೆ ಮಳೆ ಆಧಾರಿತ ಕೃಷಿ ಮಾಡುತ್ತಿದ್ದ ರೈತರು ಕೊಳವೆ ಬಾವಿ ಕೊರೆದು, ನೀರಾವರಿಯಲ್ಲೂ ವಾಣಿಜ್ಯ ಬೆಳೆ ಬೆಳೆಯತೊಡಗಿದಾಗ ಅದರ ಅಪಾಯ ಗುರುತಿಸಿ ಹೇಳುವಲ್ಲಿ ವಿಫಲವಾದೆವು. ರಸಾತಳಕ್ಕಿಳಿದ ಅಂತರ್ಜಲ ಹುಡುಕಲು ಒಂದಾದ ಮೇಲೊಂದು ಕೊಳವೆಬಾವಿ ಕೊರೆವಾಗ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆವೇ ಹೊರತು ಭೂ ತಾಪಮಾನ ಏರಿಕೆ, ಮಳೆ ನೀರು-ಚಾವಣಿ ನೀರು ಸಂಗ್ರಹದಂತಹ ವಿಜ್ಞಾನಿ-ಪರಿಸರವಾದಿಗಳ ಸಲಹೆಗಳನ್ನೆಲ್ಲ ಬೊಗಳೆ ಮಾತುಗಳೆಂದು ಅತ್ತ ಸರಿಸಿದೆವು. ಕೂಲಿಕಾರ್ಮಿಕರೂ ಸಿಗದ ನಷ್ಟದಾಯಕ ಕೃಷಿಗೆ ಬೇಸತ್ತು ರೈತರೇ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪರಭಾರೆ ಮಾಡಿ ನಗರ ಸೇರುವ ಒಲವು ತೋರಿದಾಗ ಬಹುರಾಷ್ಟ್ರೀಯ ಕಂಪನಿಗಳನ್ನು, ಪ್ರಭುತ್ವವನ್ನು ದೂರಿದೆವು. ರೈತ ಬದುಕು, ಸಮಸ್ಯೆ, ಒಲವು ನಿಲುವು, ನಂಬಿಕೆ-ಮೂಢನಂಬಿಕೆಗಳನ್ನು ಸಮಗ್ರವಾಗಿ ಗ್ರಹಿಸಲು ವಿಫಲವಾಗಿ ರೈತರೆಂದರೆ ಬೀಜ, ಸಾಲ, ಎಂಎನ್‌ಸಿ, ಆತ್ಮಹತ್ಯೆ ಎಂದು ಭಾವಿಸಿ ಅವರನ್ನು ರಕ್ಷಿಸಹೊರಟೆವು.

ಹೀಗಿರುತ್ತ ಪ್ರಜ್ಞಾವಂತರ ಜವಾಬ್ದಾರಿ ರೈತರೊಡನೆ ಸಂವಾದ, ರೈತಸ್ನೇಹಿ ಬದುಕು, ಬದಲಾವಣೆಗೆ ವ್ಯಕ್ತಿಗತ ಹಾಗೂ ಪ್ರಭುತ್ವದ ನೆಲೆಯಲ್ಲಿ ಒತ್ತಾಯ ತರುವುದು.. ಇತ್ಯಾದಿ ಬಹುಸ್ತರಗಳದು ಎಂದು ಅರಿಯಲು ವಿಫಲವಾದದ್ದು ಕೃಷಿಕರಲ್ಲದ ನಮ್ಮಂಥವರ ದೊಡ್ಡ ಲೋಪವಾಗಿದೆ.

ಹಾಗಾದರೆ ಏನು ಮಾಡಬೇಕು?


  • ಪ್ರತಿ ರೈತನೂ ತನ್ನ ಕುಟುಂಬಕ್ಕೆ ಕನಿಷ್ಠ ಆಹಾರ ಭದ್ರತೆ ಒದಗಿಸುವಷ್ಟು ಆಹಾರ ಧಾನ್ಯವನ್ನು ಬೆಳೆದುಕೊಂಡು ಸುಸ್ಥಿರ, ಸರಳ ಬದುಕನ್ನು ಕಲ್ಪಿಸಿಕೊಳ್ಳಬೇಕು.
  • ಭಾರತದಂತಹ ಸಣ್ಣ-ಅತಿಸಣ್ಣ ಹಿಡುವಳಿಗಳ ದೇಶದಲ್ಲಿ ಕೃಷಿ ಬದುಕಿನ ಮೂಲ ಅವಶ್ಯಕತೆಗಳನಷ್ಟೆ ತೀರಿಸಬಲ್ಲುದೇ ಹೊರತು ಲಾಭ ಮಾಡಿಕೊಡುವಂಥದಲ್ಲ. ಆದ್ದರಿಂದ ರೈತರು ಕೇವಲ ಕೃಷಿಯನ್ನೇ, ಒಂದೇ ಬೆಳೆಯನ್ನೇ ನೆಚ್ಚದೆ ಪರ್ಯಾಯ ಆರ್ಥಿಕ ದಾರಿಗಳನ್ನು ಕಂಡುಕೊಳ್ಳಬೇಕು. ಪೂರಕ ಉದ್ಯಮವಾಗಿ ಹೈನುಗಾರಿಕೆ, ತೋಟದ ಬೆಳೆ, ಮಿಶ್ರ ಬೆಳೆ, ಕಡಿಮೆ ಅವಧಿಯ ವಾಣಿಜ್ಯ ಬೆಳೆಗಳನ್ನೂ ಬೆಳೆಯುವಂತೆ ಸಲಹೆ ನೀಡಬೇಕು. ಭಾರತದ ೮೦% ಕೃಷಿ ಇವತ್ತಿಗೂ ಮಳೆಯಾಧಾರಿತವಾಗಿರುವುದರಿಂದ ಬರನೆರೆಗಳು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಹೆಚ್ಚು. ಎಂದೇ ಜಾನುವಾರು ಸಾಕಾಣಿಕೆಯು ರಾಸಾಯನಿಕ ಬಳಕೆಯ ಅವಲಂಬನೆ ತಪ್ಪಿಸಿ ಹೈನುಗಾರಿಕೆಯ ಲಾಭವನ್ನೂ ಕೊಡಬಹುದು.
  • ಭೂಮಿಯಿರುವವರ ಕಷ್ಟ ಒಂದು ತೆರನದಾದರೆ ಭೂಹೀನರ ಕಷ್ಟ ಮತ್ತೊಂದು ತೆರನದು. ಒಟ್ಟಾರೆ ಭೂಹೀನ ಕೃಷಿಕೂಲಿಕಾರ್ಮಿಕರಿಗೆ ತಕ್ಕ ಕೂಲಿ ಸಿಗಬೇಕು. ಹಾಗಾಗಲು ಬೆಳೆವವನಿಗೆ ತಕ್ಕ ಬೆಲೆ ದೊರೆಯಬೇಕು. ಆದರೆ ಕೊಳ್ಳುವವನಿಗೆ ದವಸಧಾನ್ಯಗಳ ಬೆಲೆ ಕೈಗೆಟುಕುವಂತೆಯೂ ಇರಬೇಕು. ಪರಸ್ಪರ ವಿರುದ್ಧವೆನಿಸುವಂತಿರುವ ಈ ಮೂರೂ ಸಂಗತಿಗಳು ಸಾಕಾರಗೊಳ್ಳಲು ಏನು ಮಾಡಬೇಕು? ಅದಕ್ಕೆ ಕೃಷಿಉತ್ಪನ್ನ ಮಾರಾಟ ವ್ಯವಸ್ಥೆ ಆಮೂಲಾಗ್ರ ಬದಲಾಗಬೇಕು. ಏಕೆಂದರೆ ಎಲ್ಲ ಸಮಸ್ಯೆಗಳ ತಾಯಿಬೇರು ತಪ್ಪು ಮಾರಾಟ ವ್ಯವಸ್ಥೆಯಲ್ಲಿ ಅಡಗಿದೆ. ಸ್ಥಳೀಯವಾದದ್ದು ಸ್ಥಳೀಯರಿಗೆ ನೇರವಾಗಿ ತಕ್ಕ ಬೆಲೆಯಲ್ಲಿ ದೊರಕುವಂತಹ ಸಹಕಾರಿ ಮಾರಾಟ ವ್ಯವಸ್ಥೆಯ ಕಡೆಗೆ ತುರ್ತು ಗಮನ ಹರಿಸಬೇಕು. ತಜ್ಞರ ತಂಡವು ಆದ್ಯತೆಯ ಮೇರೆಗೆ ಇದನ್ನು ಕೈಗೆತ್ತಿಕೊಳ್ಳಬೇಕು.
  • ಮುಕ್ತ ಆರ್ಥಿಕತೆಯ ನೆಪದಲ್ಲಿ ವಿದೇಶೀ ವ್ಯಾಪಾರಿಗಳು, ಸ್ವದೇಶಿ ಬಿಲಿಯನೇರುಗಳು ತರಕಾರಿ-ಹಣ್ಣಿನ ಅಂಗಡಿ ತೆರೆದರೆ ಗ್ರಾಹಕನಿಗೆ ನಯಾಪೈಸೆ ಲಾಭ ಆಗಬಹುದು. ಆದರೆ ರೈತನಿಗೆ ಹನ್ನೆರೆಡಾಣೆ ನಷ್ಟದ ಬಾಬತ್ತೇ ಆಗುತ್ತದೆ. ಜಾಗತಿಕ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹೀಗೇ ಮುಂದುವರೆದಲ್ಲಿ ಭಾರತದ ಕೃಷಿಕ್ಷೇತ್ರವಷ್ಟೇ ಅಲ್ಲ, ದೇಶವೇ ದಿವಾಳಿಯಾಗಿ ಇನ್ನೊಂದು ಗ್ರೀಸ್ ಆಗಲಿದೆ. ವಿಶ್ವಬ್ಯಾಂಕ್ ಮತ್ತು ಜಾಗತೀಕರಣದ ಹಿಂದಿನ ಮಾರುಕಟ್ಟೆ ಶಕ್ತಿಗಳು ಗ್ರೀಸ್ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣರಾಗಿದ್ದಾರೆ. ಎಗ್ಗಿಲ್ಲದೆ ತಕ್ಕಡಿ ಥೈಲಿ ಹಿಡಿದು ಬರುವವರಿಗೆಲ್ಲ ರತ್ನಗಂಬಳಿ ಹಾಕಿ ಸ್ವಾಗತಿಸುವ ನಮ್ಮ ಸರ್ಕಾರ ಗ್ರೀಸ್‌ನಿಂದ ಪಾಠ ಕಲಿಯಬೇಕಿದೆ. ಇದು ಸಾಲಮನ್ನಾಗಿಂತ ತುರ್ತಿನ ಕ್ರಮವಾಗಿದೆ.  
  • ಪ್ರತಿಯೊಬ್ಬರೂ ತಮ್ಮ ಊಟದ ತಟ್ಟೆಯಲ್ಲಿ, ಬದುಕಿನಲ್ಲಿ ಸ್ಥಳೀಯತೆಯನ್ನು ಬೆಂಬಲಿಸುವ, ಸರಳವಾಗಿರುವ ಆಹಾರ ಕ್ರಮ ರೂಢಿಸಿಕೊಳ್ಳಬೇಕು.
  • ನಮ್ಮ ಸಮೀಪದ ರೈತರೊಡನೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ಅವರಿಂದ ನೇರ ಖರೀದಿ ಮಾಡಬೇಕು. ಗ್ರಾಮೀಣ ಭಾಗದ ವೈದ್ಯರು ರೈತರೊಡನೆ ಆಪ್ತ ಸಂವಾದ ನಡೆಸಿ ಆತಂಕದ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಮನೋಸ್ಥೈರ್ಯ ಬೆಳೆಸಿಕೊಳ್ಳುವಂತಹ ಮಾರ್ಗಗಳ ಸೂಚಿಸಬೇಕು.




ಕಳೆ ಬೆಳೆ ಗುರುತಿಸಿ ಕಳೆ ಕಿತ್ತುಹಾಕುವ ಕೆಲಸವನ್ನು ರೈತಬಂಧು ಇಡಿಯ ಸಮಾಜಕ್ಕೆ ಹೇಳಿಕೊಡುವವನು. ಆದರೆ ಭಾರತದಲ್ಲಿ ಪ್ರತಿ ೩೨ ನಿಮಿಷಕ್ಕೊಬ್ಬ ರೈತ ಸಾವನ್ನಪ್ಪುತ್ತಾನೆ.

ಹಾಗೆಯೇ ಪ್ರತಿ ೧೮ ನಿಮಿಷಕ್ಕೊಂದು ದಲಿತ ದೌರ್ಜನ್ಯ ಸಂಭವಿಸುತ್ತದೆ. ಪ್ರತಿ ೬ ನಿಮಿಷಕ್ಕೊಬ್ಬಳು ತಾಯಿ ಹೆರಿಗೆಯ ವೇಳೆ ಸಾಯುತ್ತಾಳೆ. ಪ್ರತಿ ೨೦ ನಿಮಿಷಕ್ಕೊಬ್ಬ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಾಳೆ. ಹೀಗೆ ಸಾಯುವವರ ಲೆಕ್ಕ ಹೇಳಿದಾಗಲಷ್ಟೇ ಬೆಚ್ಚಿ ಎಚ್ಚೆತ್ತುಕೊಳ್ಳುವ ಜಡತನವನ್ನು ವ್ಯವಸ್ಥೆಯೂ, ನಾವೂ ನೀಗಿಕೊಳ್ಳಬೇಕು. ಅಂಥ ಒಂದು ದಿನ ರೈತ ಆತ್ಮಹತ್ಯೆಯಷ್ಟೇ ಅಲ್ಲ, ಯಾವ ಸಾಮಾಜಿಕ ಸಮಸ್ಯೆಯ ಕುರಿತೂ ಹೀಗೆಲ್ಲ ಗಮನ ಸೆಳೆವ ಅವಶ್ಯಕತೆಯೇ ಬಾರದಿರಬಹುದು..


Sunday, 19 July 2015

ಬರೆದಕ್ಕರವನಳಿಪ ಅಗ್ಗಳಿಕೆ..




ಭಾರತದಲ್ಲಿ ‘ಅಶ್ಲೀಲ, ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ, ಸಮುದಾಯದ ಭಾವನೆಗಳಿಗೆ ಧಕ್ಕೆ’ ಎಂಬ ಪದಪುಂಜಗಳ ಬೆಂಬಲಕ್ಕಿರುವ ಕಾನೂನುಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಪದೇಪದೇ ಹರಣಗೊಳ್ಳುತ್ತಿದೆ ಎಂಬ ಮಾತು ಕೇಳಿಬರುವಾಗಲೇ ೩೦ ವರ್ಷ ಹಿಂದೆ ಬರೆದ ಕವಿತೆಯೊಂದು ಇವತ್ತು ಹಲವು ಕಾರಣಗಳಿಂದ ಸುಪ್ರೀಂಕೋರ್ಟಿನ ಅಪರಾಧಿ ಕಟಕಟೆಯಲ್ಲಿ ಕವಿಯೊಡನೆ ನಿಲ್ಲಬೇಕಾದ ಕಾಲ ಬಂದಿದೆ. ಅದನ್ನು ಬರೆದದ್ದಕ್ಕಾಗಿ ಕವಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಪ್ರತಿವಾದಿಗಳು ಪಟ್ಟು ಹಿಡಿದಿದ್ದಾರೆ. ಕವಿ ಅದನ್ನು ಖಡಾಖಂಡಿತ ನಿರಾಕರಿಸಿದ್ದಾರೆ. ಆ ಕವಿ ಮಹಾರಾಷ್ಟ್ರದ ವಸಂತ ದತ್ತಾತ್ರೇಯ ಗುರ್ಜರ್. ಕವಿತೆ ‘ಗಾಂಧಿ ಮಲಾ ಭೇಟಲಾ..’

ಈ ಕವಿತೆ ಬರೆದದ್ದು ೧೯೮೩ರಲ್ಲಿ. ಆಗ ತುರ್ತು ಪರಿಸ್ಥಿತಿ ಮುಗಿದಿತ್ತು. ಜೆಪಿ ಒಂದು ಚಳುವಳಿ ಮುನ್ನಡೆಸುತ್ತಿದ್ದರು. ಜನತಾ ಸರ್ಕಾರದೆದುರಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದವು. ಗಾಂಧಿಯ ಹೆಸರನ್ನು ಯಾರ‍್ಯಾರು ಎಲ್ಲೆಲ್ಲಿ ದುರ್ಬಳಕೆ ಮಾಡುತ್ತಿದ್ದಾರೆಂದು ವ್ಯಂಗ್ಯವಾಗಿ ಸೂಚಿಸುತ್ತ ಈ ಕವಿತೆ ಬರೆಯಲ್ಪಟ್ಟಿತು. ಇದು ಹಲವು ಬಾರಿ ಎಲ್ಲೆಲ್ಲೊ ಪ್ರಕಟವಾಯಿತು. ಮರಾಠಿ, ಹಿಂದಿಯ ಕವಿ, ಬರಹಗಾರರಿಂದ ಶ್ಲಾಘನೆಗೂ ಒಳಗಾಯ್ತು. ಬಾಲಚಂದ್ರ ನೆಮಾಡೆ ಸಂಪಾದಿತ ಸಾಹಿತ್ಯ ಅಕಾಡೆಮಿಯ ಮರಾಠಿ ಸಾಹಿತ್ಯ ಸಂಪುಟದಲ್ಲಿ ಗಾಂಧಿ ಕುರಿತ ಅತ್ಯುತ್ತಮ ಕವಿತೆಗಳಲ್ಲೊಂದು ಎಂದು ಇದು ಸದ್ಯವೆ ಸೇರಲಿದೆ.

ಅಷ್ಟು ಅಶ್ಲೀಲವಾದದ್ದು, ಗಾಂಧಿಗೆ ಅಪಮಾನಕರವಾದದ್ದು, ಅಸಹ್ಯಕರವಾದದ್ದು ಕವಿತೆಯಲ್ಲೇನಿದೆ? ಅಂತರ್ಜಾಲ ಜಾಲಾಡಿದರೆ ಅನುವಾದದ ಹಲವು ವರ್ಷನ್‌ಗಳು ನಿಮಗೆ ಸಿಗುತ್ತವೆ. ವಾಚಾಳಿಯಾದ, ದೀರ್ಘವಾದ, ಸಡಿಲ ಬಂಧದ, ಪುನರಾವರ್ತಿತ ರೂಪಕಗಳಿರುವ ‘ಗಾಂಧಿ ಮಲಾ..’ ಕವಿತೆಯಾಗಿ ಅಷ್ಟೇನೂ ಸಫಲ ರಚನೆಯಲ್ಲ. ಆದರೂ ಕವಿ ಎದುರಿಸುತ್ತಿರುವ ನ್ಯಾಯಾಲಯದ ಪ್ರಕರಣ ಮತ್ತು ಅದರ ಹಿಂದಿರುವ ಹಿತಾಸಕ್ತಿಗಳ ಸಂಚನ್ನು ಅರಿಯಲು ಈ ಕವಿತೆ ಓದುವುದು ಅವಶ್ಯವಾಗಿದೆ.

ಗಾಂಧಿಯನ್ನು ನಾನು ಸಂಧಿಸಿದೆ..’ ಎಂಬ ಕವಿತೆ ಹೀಗೆ ಶುರುವಾಗುತ್ತದೆ..

ವಸಂತ ಡಿ. ಗುರ್ಜರನ ಹತ್ತೂ ಇಂಟು ಹನ್ನೆರೆಡಡಿ ರೂಮಲ್ಲಿ
ಗಾಂಧಿ ನನ್ನ ಭೇಟಿಯಾದ
ಭಾರತೀಯರ ಬಗ್ಗೆ ಮಾತಾಡ್ತಾ ಆಡ್ತಾ 
‘ಸತ್ಯ ಸೌಂದರ್ಯಕಿಂತ ಬೇರೆ ಅಲ್ಲ. ಸತ್ಯವೇ ಸೌಂದರ್ಯ.
ನಾನು ಸೌಂದರ್ಯಾನ ಸತ್ಯದ ದಾರೀಲಿ ಕಾಣ್ತೀನಿ.
ಸತ್ಯಕ್ಕೆ ಜೋತುಬಿದ್ರೆ ಸೌಂದರ್ಯಾನೂ ಕಾಣುತ್ತೆ.
ಸಂಧಾನದ ಬೆಲೆನೂ ಗೊತ್ತಾಗುತ್ತೆ.’ ಅಂದ.

ನಿಜ. ಸತ್ಯ ವಜ್ರಕಿಂತ ಗಡಸು, ಹೂವಿಗಿಂತ ಮೃದು..

ಮುಂಬೈ ಆಕಾಶವಾಣಿ ೫೩೭.೬ ಕಿಲೋ ಸೈಕಲ್ ತರಂಗಾಂತರದಲ್ಲಿ ಪ್ರಸಾರ ಮಾಡೋ
ಗಾಂಧಿವಂದನ ಕಾರ್ಯಕ್ರಮದಲ್ಲಿ ಗಾಂಧಿ ಭೆಟ್ಟಿಯಾದ:
‘ಮಹಾತ್ಮನ ಪದಗಳ್ನೂ ಜ್ಞಾನದ ತಕ್ಕಡೀಲಿ ಅಳೀಬೇಕು
ಅವನ ಪದಗಳೇನಾದ್ರೂ ಫೇಲಾದ್ರೆ ಅವನನ್ನೂ ಬಿಟ್ಟುಬಿಡಬೇಕು..’
ಆಕಾಶವಾಣಿಯ ಅನೌನ್ಸರ್ ಹೇಳಿದ್ಲು:
‘ತಾಂತ್ರಿಕ ಕಾರಣಗಳಿಂದಾಗಿ ಗಾಂಧಿ ವಂದನ ಕಾರ್ಯಕ್ರಮದಲ್ಲಿ
ಆರು ಗಂಟೆ ಐವತ್ತೈದು ನಿಮಿಷದಿಂದ ಆರು ಗಂಟೆ ಎರಡು ನಿಮಿಷದವರೆಗೆ ವ್ಯತ್ಯಯವುಂಟಾಯಿತು.
ಅಡಚಣೆಗಾಗಿ ವಿಷಾದಿಸುತ್ತೇವೆ..’

ಗಾಂಧಿ ಗುಡಿ ಒಂದರಲ್ಲಿ ಭೇಟಿಯಾದ, ದುಡ್ಡೆಣಿಸ್ತಾ, ಪಕ್ಕಾ ವ್ಯಾಪಾರಿ ಥರ. 
(ಸುತ್ತಮುತ್ತ ನೋಡಿ ಯಾರಿಲ್ಲ ಅಂತ ಆದದ್ದೇ ನೀಲಿ ನೋಟನ್ನ ಸೊಂಟಕ್ಕೆ ಸಿಗಿಸ್ದ)
ಗಾಂಧಿ ಬೌದ್ಧಮಠದಲ್ಲಿ ಸಿಕ್ಕಾಗ ಚಿಲ್ಲಿ ಬೀಫ್ ತಿಂತಿದ್ದ
ಚರ್ಚಿನಲ್ಲಿ ನೋಡಿದಾಗ ವಾರವಾರವೂ ಕ್ಷಮಿಸೋ ಏಸು ಮುಂದೆ ಮಂಡಿಯೂರಿ ಪ್ರಾರ್ಥನೆ ಮಾಡ್ತಿದ್ದ
ಬೆತ್ತಲೆ ಫಕೀರನಂಥಾ ಗಾಂಧಿ ಮಸೀದೀಲಿ ಸಿಕ್ಕಾಗ ಮತಾಂತರಗೊಳ್ಳತಾ ಇದ್ದ

ಬಾಬಾಸಾಹೇಬರ ಜಾಗೃತ ಭಾರತದಲ್ಲಿ ಭೇಟಿಯಾಗಿ ಹೇಳ್ದ:
‘ಹರಿಜನೋದ್ಧಾರ ನನ್ನ ಉಳಿವಿನ ಇನ್‌ಸ್ಟಿಂಕ್ಟ್. ನಂಗೆ ಮತ್ತೆ ಹುಟ್ಟೋ ಆಸೆಯಿಲ್ಲ 
ಮತ್ತೆ ಹುಟ್ಟೋದೇ ಹೌದಾದ್ರೆ ಅಸ್ಪೃಶ್ಯನಾಗಿ ಹುಟ್ತೀನಿ 
ಅವರ ದುಃಖ ಅವಮಾನ ಯಾತನೆನ ಅನುಭವಿಸೇ ತಿಳೀತಿನಿ.
ಅಸ್ಪೃಶ್ಯತೆ ಹಿಂಗೇ ಉಳಿಯೋದಾದ್ರೆ ಅದಕ್ಕಿಂತ ಹಿಂದೂಯಿಸಂ ನಾಶವಾಗಲಿ.’
ಹೇಳಹೇಳ್ತ ಗಾಂಧಿ ಭಾರತಾಂಬೆ ಗುಡೀಲಿ ಮಿಂದು ಗಂಗಾನದೀಲಿ ಕಾಲಿಳಿಬಿಟ್ಟ

.. ..

ಹೀಗೆ ಕವಿತೆ ಮುಂದುವರೆಯುತ್ತದೆ. ಗಾಂಧಿ ಎಂದು ಕವಿ ಭೇಟಿಯಾಗುವುದು ಗಾಂಧಿಯ ವೇಷಧಾರಿ ಗೋಸುಂಬೆಗಳನ್ನು. ಕಂಡಕಂಡಲ್ಲಿ ಗಾಂಧಿ ಮಂತ್ರ ಜಪಿಸುವ ನಕಲಿ ಗಾಂಧಿಗಳ ಅಸಲಿ ಮುಖಗಳು ಕವಿಗೆ ಒಂದಾಮೇಲೊಂದು ಕಡೆ ಅನಾವರಣಗೊಳ್ಳುತ್ತ ಹೋಗುತ್ತವೆ. ಮುಂದುವರೆದು ಕವಿತೆ ಹೀಗೆ ಸಾಗುತ್ತದೆ:

ಜನನಿಬಿಡ ರಸ್ತೇಲಿ ಹೇಮಾಮಾಲಿನಿ ನೆನಪಲ್ಲಿ ಹಸ್ತಮೈಥುನದಲ್ಲಿ ತೊಡಗಿದ್ದ ಗಾಂಧಿ ಕಂಡ
ಅದು ದೇಶದ ಮೊದಲ್ನೆ ಬೀದಿ ನಾಟಕ
ಅಹಿಂಸೆಯ ಇನ್ನೊಂದು ಪ್ರಯೋಗ
ಟ್ಯಾಗೋರರ ಗೀತಾಂಜಲೀಲಿ ಗಾಂಧಿ ಸಿಕ್ಕ
ಗೋಲಪೀಠ ಕುರಿತು ಕವಿತೆ ಬರೀತಿದ್ದ
ಬಾಬಾ ಅಮ್ಟೆಯ, ಅಂಗವಿಕರ ಏಕಾತ್ಮ ಭಾರತ್ ಕಾರ್ಯಕ್ರಮದಲ್ಲಿ 
‘ಭಿಕ್ಷೆಗಾಗಿ ಕೈಚಾಚಬಾರ‍್ದು. ದಾನ ಮನ್ಶನ್ನ ದುರ್ಬಲನನ್ನಾಗಿಸುತ್ತೆ..’
ಅನ್ನುತ್ತ ಅಮೆರಿಕನ್ ಡಾಲರುಗಳಲ್ಲಿ ಬರೆದ ಚೆಕ್ಕನ್ನ ತಗೊಂಡ

ಗಾಂಧಿ ಭೆಟ್ಟಿಯಾದ, 
ಕಾರ್ಲ್ ಮಾರ್ಕ್ಸ್‌ನ ಟೊಯೊಟಾ ಡ್ರೈವ್ ಇನ್ ಥಿಯೇಟರಿನಲ್ಲಿ
‘ಜಗದ ಶ್ರಮಿಕರೇ, ಒಂದಾಗಿ’ ಸಿನಿಮಾ ನೋಡಿ ಕಾಲಹರಣ ಮಾಡ್ತಿದ್ದಾಗ..

ಗಾಂಧಿ ಸಿಕ್ಕ, 
ಮಾವೋನ ಲಾಂಗ್ ಮಾರ್ಚ್‌ನಲ್ಲಿ
ರೈತನ ವೇಷ ಹಾಕ್ಕಂಡ್
ಹೊಲ ಬಿಟ್ಟು ಪಟ್ಣದ ಕಡೆ ಹೋಗ್ತಿದ್ದ

ಹೀಗೆ 
ಗಾಂಧಿ ಎಲ್ಲೆಲ್ಲೊ ಸಿಕ್ಕ
‘ಜೈ ಬಿರ್ಲಾ’ ಘೋಷಣೆ ಕೂಗ್ತ ಬಟ್ಟೆ ಗಿರಣಿ ಕಂಪೌಂಡ್ ಏರ‍್ತ ಇರೋವಾಗ
ಕಪ್ಪು ಗಾಂಧಿಯ ಕ್ಲಿನಿಕ್ಕಿನಲ್ಲಿ ಸಾವರ್ಕರ್ ಸ್ಯಾಂಪಲ್ ಬಾಟ್ಳಿ ಮಾರ‍್ತಾ ಇರೋವಾಗ
ಅಟಲ ಬಿಹಾರಿ ವಾಜಪೇಯಿ ಗಾಂಧಿಯನ್ ಸಮಾಜವಾದ ಹೊಗಳ್ತ ಪ್ರಧಾನಿಯಾಗಿದ್ದಾಗ

ಗಾಂಧಿ ಭೇಟಿಯಾದ
ಚಾರು ಮುಜುಂದಾರನ ನಕ್ಸಲ್ ಬರಿಯಲ್ಲಿ
ಅವ ಘೋಷಣೆ ಕೂಗ್ತಿದ್ದ:
‘ನಮ್ಮ ಬಾರಿ, ನಿಮ್ಮ ಬಾರಿ, ಎಲ್ಲರ ಬಾರಿ - ನಕ್ಸಲ್ ಬಾರಿ
ಭಾರತ ಕೆಂಪಾಗ್ತ ಇದೆ ಕೆಂಪುಕೋಟೆ ಮೇಲೆ, ಇದು ಕೆಂಪಿನ ಬಾರಿ..’

ಹೀಗೆ ಗಾಂಧಿ ಎಲ್ಲಿರಲು ಅಸಾಧ್ಯ ಎಂದು ಗಾಂಧಿ ಅಭಿಮಾನಿ-ಅನುಯಾಯಿಗಳು ಭಾವಿಸುತ್ತಾರೋ ಅಲ್ಲೆಲ್ಲ ಗಾಂಧಿ ವೇಷ ತೊಟ್ಟವರು ಕವಿಗೆ ಕಾಣಿಸುತ್ತಾರೆ. ಆದರೆ ಇದೇನು, ಗಾಂಧಿಯ ಬಾಯಲ್ಲಿ ಆತ ಆಡಲಾಗದ ಮಾತುಗಳನ್ನೆಲ್ಲ ಹೊರಡಿಸಲಾಗುತ್ತಿದೆ, ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾಗುತ್ತಿದೆ ಎಂದು ಅಚ್ಚರಿಗೊಳ್ಳುವ ಕವಿಗೆ ಕೊನೆಗೆ ಗಾಂಧಿ ಕಂಡದ್ದೆಲ್ಲಿ?

ಛತ್ರಪತಿ ಶಿವಾಜಿ ಬೀಡಿ ಸೇದುತ್ತ 
ಫೋರಾಸ್ ರಸ್ತೆಯ ರೂಂ ನಂ.೮೦ರಲ್ಲಿ 
ಜನತಂತ್ರವೆಂಬ ವೇಶ್ಯೆ ಜೊತೆ ಕಂಡ.
ಅವಳಂದ್ಲು:
ನಂಗೇನು ಚಿಕಿತ್ಸೆ ಕೊಡಿಸ್ತಿ ನೀನು?
ನನ್ಮೇಲೆ ಯಾವ ಪ್ರಯೋಗ ಮಾಡೋನಿದ್ದಿ ನೀನು?
ಘೋರ ಕತ್ತಲಿಗೆ ಯಾವ ಬೆಳಕು ಚೆಲ್ಲೋನಿದ್ದಿ?

ಜಮಾತೆ ಇಸ್ಲಾಮಿಯ ಗೋಘರಿ ಮೊಹಲ್ಲಾದಲ್ಲಿ ಗಾಂಧಿ ಸಿಕ್ಕ
ಪೆಟ್ರೋಡಾಲರಿನ ಥ್ರೀ ಇನ್ ಒನ್‌ನಲ್ಲಿ 
ಇಂಡ್ಯಾ ಪಾಕಿಸ್ತಾನ ಕ್ರಿಕೆಟ್ ಕಾಮೆಂಟ್ರಿ ಕೇಳ್ತಿದ್ದ
ಪಾಕಿಸ್ತಾನ ಇಂಡ್ಯಾನ ಎರಡು ವಿಕೆಟ್ಟಿಂದ ಸೋಲಿಸ್ದಾಗ
ಗಾಂಧಿ ನಮಾಜು ಸಲ್ಲಿಸಿದ, 
ಮೊಹಲ್ಲಾದ ಹಸಿರು ಬೋರ್ಡುಗಳಿಗೆಲ್ಲ ಹಾರ ಹಾಕ್ದ

ಸದಾಶಿವ ಪೇಟೆಯ ಎನ್. ಜಿ. ಗೋರೆ ವಾಡೆಲೊಂದ್ಸಲ ಗಾಂಧಿ ಸಿಕ್ಕ
‘ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಾದ್ರೂ ಭಾರತ ನನ್ನ ದೇಶ
ಎಲ್ಲ ಭಾರತೀಯರು ನನ್ನ ಸೋದರಸೋದರೀರು ಅಂತ ಆಣೆ ಇಡಬೇಕಾಗಿದೆ
ನನ್ನ ದೇಶ ಅಂದ್ರೆ ನಂಗೆ ಪ್ರೀತಿ, 
ಅದರ ವೈವಿಧ್ಯಮಯ ಸಂಸ್ಕೃತಿ ಬಗ್ಗೆ ಹೆಮ್ಮೆ
ಅದ್ರ ಯೋಗ್ಯತೆಗೆ ತಕ್ಕಂತೆ ಇರ‍್ಲಿಕ್ಕೆ ಸದಾ ಪ್ರಯತ್ತ ಪಡ್ತಿನಿ 
ನನ್ನ ಪಾಲಕರು, ಗುರುಹಿರಿಯರ ಗೌರವಿಸಿ ಉದಾರವಾಗಿ ನಡಕೋತೀನಿ 
ನನ್ನ ದೇಶ, ನನ್ನ ಜನಕ್ಕೆ ನನ್ನ ಬಾಳೇ ಮೀಸಲು
ಇದು ನಾಚಿಕೆ ವಿಷಯ, ಆದ್ರೂ ಹೇಳ್ತೇನೆ,
ನಂಗೀ ಯೋಚ್ನೆ ಬಂದದ್ದು ಲಂಡನ್ನಿನ ಥೇಮ್ಸ್ ನದಿ ದಂಡೆ ಮೇಲೆ..’

ಇರ‍್ವಿನ್ನನ ವೈಸರಾಯ್ ಹೌಸಲ್ಲಿ ಗಾಂಧಿ ಇದ್ದ
ಸ್ವಾತಂತ್ರ್ಯ ಹೋರಾಟಗಾರ ಅಂತ ಕೊಡೊ ಪಿಂಚಣಿ ರೊಕ್ಕ ಎಣಿಸ್ತಿದ್ದ
ಸ್ವಘೋಷಿತ ನೇತಾ ರಾಜ್ ನಾರಾಯಣ್ ಕುಟುಂಬ ಕಲ್ಯಾಣ ಕೇಂದ್ರದಲ್ಲೊಮ್ಮೆ ಸಿಕ್ಕ
ಬೆತ್ತಲೆ ಎದೆ ಬಿಟ್ಕಂಡು ಹಾಸಿಗೆ ಮೇಲೆ ಹೊರಳಾಡ್ತ 
ಪಿಸ್ತ ಬಾದಾಮಿ ತಿಂತ ಮಸಾಜ್ ಮಾಡುಸ್ಕತಿದ್ದ 

ಗಾಂಧಿನ ಆಲ್ ಇಂಡಿಯಾ ಹಿಜ್ರಾ ಕಾನ್ಫರೆನ್ಸಲ್ಲಿ ನೋಡ್ದೆ
ಕುಟುಂಬ ಯೋಜನೆ ಬಗ್ಗೆ ಭಾಷಣ ಕೊರೀತಿದ್ದ
.. ..

ಬಹುಶಃ ಈ ಮೇಲಿನ ಕವಿತೆಯ ಭಾಗಗಳನ್ನು ಕವಿತೆಯಾಗಲ್ಲದೆ ಗಾಂಧಿ ಕುರಿತ ವಸಂತ ಗುರ್ಜರರ ಲೇಖನ ಅಥವಾ ಗಾಂಧೀಜಿಯ ಜೀವನ ಚರಿತ್ರೆ ಎಂದು ಭಾವಿಸಿದರೆ ಕವಿತೆಯ ಪ್ರತಿವಾದಿಗಳಾದ ಪುಣೆಯ ‘ಪತಿತ ಪಾವನರ ಸಂಘ’ಕ್ಕೆ ಹುಟ್ಟಿದ ತಕರಾರುಗಳು ಹಲವರಿಗೆ ಹುಟ್ಟಿಯಾವು. ಆದರೆ ಕವಿತೆಯನ್ನು ಕವಿತೆಯಂತೇ ನಡೆಸಿಕೊಳ್ಳಬೇಕು. ಮುಂದಿನ ಭಾಗದಲ್ಲಿ ಗಾಂಧಿ ತನ್ನ ಅರೆಬೆತ್ತಲೆ ಮೈ ಸುತ್ತಿದ್ದ ಪಂಚೆಯನ್ನೂ ಬಿಸುಟು ನಗ್ನವಾಗಿರುವುದನ್ನು ಕಂಡು ಕವಿ ದಂಗಾಗುತ್ತಾನೆ. ಕೊನೆಗೆ ಅಷ್ಟಕ್ಕೂ ತಾನು ಗಾಂಧಿ ಪಂಚೆಗೆ ಮರುಳಾಗಿದ್ದಲ್ಲ; ಸತ್ಯದ ಜೊತೆ ಪ್ರಯೋಗ ನಡೆಸುವುದಾದರೆ ಕವಿತೆ ಮೂಲಕವೂ ನಡೆಸಬಹುದು ಎಂದು ತನ್ನನ್ನೇ ಸಂತೈಸಿಕೊಳ್ಳುತ್ತಾನೆ.

ಹಾಜಿ ಮಸ್ತಾನನ ಆಳ್ವಿಕೇಲಿ ಗಾಂಧಿ ಸಿಕ್ಕ
ಪಂಚೆನೂ ಬಿಚ್ಚಾಕಿ ತನ್ನ ಮಾನಮರ್ಯಾದೆ ಕಳಕೊಂಡು.
ಅವನ ಪಂಚೆಗೆ ನಾನೇನೂ ಮರುಳಾಗಿರ‍್ಲಿಲ್ಲ ಬಿಡಿ
ಪಂಚೆಯೋ ಧೋತಿಯೊ ಪ್ಯಾಂಟೊ
ಸತ್ಯದೊಡನೆ ಪ್ರಯೋಗ ಹೇಗಾದ್ರೂ ಮಾಡಬೋದು 
ಕವಿತೆ ಮೂಲಕನಾದ್ರೂ 

ಬಾಟಾ ಫ್ಯಾಕ್ಟರೀಲಿ ಚಪ್ಪಲಿ ಹೊಲಿತಾ ಗಾಂಧಿ ಕಂಡ
ಒಬ್ಬ ಚಮಾರ ಯಾವತ್ತೂ ಈ ದೇಶದ ಪ್ರಧಾನಿಯಾಗಕ್ಕಾಗಲ್ಲ ಅಂತ 
ಬಾಬೂಜಿ ಅವನಿಗೆ ಹೇಳ್ತಿದ್ರು 

ಮೊರಾರ್ಜಿಯ ಓಶಿಯಾನಾದಲ್ಲಿ ಗಾಂಧಿ ಸಿಕ್ಕ
ಸ್ವಮೂತ್ರಪಾನದಿಂದ ಮತ್ತೇರಿ ಪಿಸುಗುಟ್ಟಿದ:
‘ಹೆಂಗಸರೆಲ್ಲ ಮೂರ್ಖರು, ವಿವೇಕ ಇಲ್ದಿರೋರು
ನಾನು ಯಾರ ಬಗ್ಗೆ ಹೇಳ್ತಿದಿನಿ ಅಂತ ತಿಳೀತು ತಾನೆ?’

ನೆಹರುವಿನ ತೀನ್ ಮೂರ್ತಿಲಿ ಗಾಂಧಿ ಸಿಕ್ಕಿದ
ಭವಿಷ್ಯ ಹೇಳೋರ ತರ ಸನ್ನೆ ಮಾಡ್ದ:
‘ಜವಾಹರ್, ನೀನು ನಂಬಿಕಸ್ಥ, ನನ್ನ ಮಾನಸ ಪುತ್ರ
ಗದ್ದುಗೇನ ನಿನ್ನ ನಂತ್ರ ಇಂದಿರಾಗೇ ಬಿಟ್ಕೊಡು.’

ಗಾಂಧಿ ರತನ್ ಖಾತ್ರಿಯ ಅಡ್ಡಾದಲ್ಲಿ ಕಂಡ
ರಾಷ್ಟ್ರೀಯ ಏಕತೆಯ ಮೂರು ಕಾರ್ಡುಗಳನ್ನ 
ಮಟ್ಕಾದಲ್ಲಿ ಎಳೀತಿದ್ದ

ವಿನೋಬನ ಧಾರಾವೀಲಿ ಗಾಂಧಿ ಸಿಕ್ಕಿದ
ಎಲ್ಲ ಭೂಮಿನೂ ಗೋಪಾಲನದು ಅಂಬೊ ಪಠಣ 
ಕಂಚಿನ ಕಲಶ ಹಿಡಿದು ಹೆದ್ದಾರಿ ಬದಿ ಸಾಲಾಗಿ ನಿಂತು
ಕ್ರುಶ್ಚೇವನಿಗೆ ಗೌರವ ವಂದನೆ ಸಲ್ಲಿಸಕ್ಕೆ ಕಾಯ್ತಿದ್ರು ಮಹಾತ್ಮರು. 

ಇಂದಿರಾ ಗಾಂಧಿಯ ನಂ.೧, ಸಫ್ದರ್ ಜಂಗ್ ರಸ್ತೆ ಮನೇಲಿ ಗಾಂಧಿ ಭೆಟ್ಟಿಯಾದ
ಪಿತೂರಿ ಮಾಡಿ ಅವಳ ಭಟ್ಟಂಗಿಗಳು ಅವನ ಒದ್ದೋಡಿಸಿದರು
ಗಾಂಧಿ ಕೂಗಿದ:
‘ರಾಷ್ಟ್ರನೇತಾ - ಇಂದ್ರಾ ಗಾಂಧಿ
ಯುವ ನೇತಾ - ಸಂಜಯ್ ಗಾಂಧಿ
ಮಕ್ಕಳ ನೇತಾ - ವರುಣ್ ಗಾಂಧಿ
ಧಿಕ್ಕಾರ - ಮಹಾತ್ಮಾ ಗಾಂಧಿ..’

ಗಾಂಧಿ ಅಜಿತನಾಥ ರೇನ ಕೋರ್ಟ್ ರೂಮಲ್ಲಿ ಸಿಕ್ಕಿದ
ಅಪರಾಧಿಯ ಕಟಕಟೇಲಿ ನಿಂತಿದ್ದ
ಸತ್ಯದೊಡನೆ ಪ್ರಯೋಗ ನಡೆಸಿ ದೇಶಕ್ಕೆ ಅಪಾಯ ಒಡ್ಡಿದೋನು ಅಂತ ವಿಚಾರಣೆ ನಡೀತಿತ್ತು. 
ದೇಶದ್ರೋಹದ ಆಪಾದನೆ ಸಾಬೀತಾಗಿ ಗಲ್ಲು ಶಿಕ್ಷೆ ಖಾತ್ರಿಯಾಯ್ತು.

‘ನಾನು ಗಾಂಧಿಯನ್ನು ಸಂಧಿಸಿದೆ’ ಎಂದು ಹಲವು ವೇಷಧಾರಿಗಳನ್ನು ಸಂಧಿಸುವ ಕವಿ ಕೊನೆಗೆ ರಾಜಘಾಟಿಗೆ ಬಂದರೆ ಗಾಂಧಿ ಸಮಾಧಿ ಎದುರು ಗಾಂಧಿ ಕವಿಯ ಹೆಗಲ ಮೇಲೆ ಕೈಹಾಕಿ ನಿಲ್ತಾನೆ!

ರಾಜಘಾಟಿನಲ್ಲಿ 
ತನ್ನ ಕೈನ ವಸಂತ ಡಿ. ಗುರ್ಜರನ ಹೆಗಲ ಮೇಲಿಟ್ಟ
ಗಾಂಧಿ ಹೇಳಿದ:
‘ದೇವರು ಸತ್ತಿದಾನೆ, ಒಬ್ಬ ಒಳ್ಳೆ ಮನ್ಶ ಸಹಾ
ಸೈತಾನನ ಈ ಲೋಕದಿಂದ
ಸತ್ತ ದೇವರು ಪಾರಾಗೋ ಹಾಗೇ ಇಲ್ಲ
ಒಳ್ಳೇ ಮನ್ಶನೂ ಪಾರಾಗೋ ಹಂಗಿಲ್ಲ..’
ಹೀಗೆ ಹೇಳ್ತ ಹೇಳ್ತ ಕ್ಷಣಾರ್ಧದಲ್ಲಿ ಅವ 
ತನ್ನ ಸಮಾಧಿಯೊಳಗೆ ಹೊಕ್ಕಂಡುಬಿಟ್ಟ!

(ಇಂಗ್ಲಿಷ್ ಮೂಲ: ಕಾಮಯಾನಿ ಬಾಲಿ)



ಹೆಚ್ಚುಕಮ್ಮಿ ಸಾವಿರ ಪದಗಳ ಈ ಕವಿತೆ ಬರೆದವರು ಮೂರು ಸಂಕಲನ ಪ್ರಕಟಿಸಿ ನಾಲ್ಕನೆಯದನ್ನು ಹೊರತರುತ್ತಿರುವ ಕವಿ ವಸಂತ ದತ್ತಾತ್ರೇಯ ಗುರ್ಜರ್. ಮುಂಬೈ ಹಡಗುಕಟ್ಟೆಯ ತೃತೀಯ ದರ್ಜೆ ನೌಕರರಾಗಿ ೨೦೦೧ರಲ್ಲಿ ನಿವೃತ್ತರಾಗಿರುವ ಅವರ ಈ ಕವಿತೆ ಮೊದಲು ಪ್ರಕಟವಾಗಿದ್ದು ೧೯೮೪ರಲ್ಲಿ. ಇದನ್ನು ಅಶೋಕ್ ಶಹಾನೆ ಪ್ರಕಟಿಸಿದ್ದರು. ೧೯೮೬ರಲ್ಲಿ ಒಂದು ಕವಿಗೋಷ್ಠಿಯಲ್ಲಿ ಓದಿಯೂ ಇದ್ದರು. ನಂತರ ೧೯೯೪ರಲ್ಲಿ ಸಿಪಿಐ ಬೆಂಬಲಿತ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ನೇತಾರ ದೇವಿದಾಸ ರಾಮಚಂದ್ರ ತುಳಜಾಪುರಕರ್ ಲಾತೂರಿನಿಂದ ಹೊರಡುವ ತಮ್ಮ ಸಂಘಟನೆಯ ಮ್ಯಾಗಜೀನ್‌ನಲ್ಲಿ ಇದನ್ನು ಮತ್ತೆ ಪ್ರಕಟಿಸಿದರು. ಆಗ ಆರೆಸ್ಸೆಸ್ ಬೆಂಬಲಿತ ಪುಣೆಯ ‘ಪತಿತ ಪಾವನ ಸಂಘಟನಾ’ ರಾಷ್ಟ್ರಪಿತನ ಇಮೇಜನ್ನು ಹೀನಗೊಳಿಸುವಂತೆ ಅಶ್ಲೀಲ ಹಾಗೂ ಅಸಹ್ಯ ಪದಗಳನ್ನು ಬಳಸಿ ಬರೆದ ಕವಿತೆಯ ವಿರುದ್ಧ ಪ್ರಕರಣ ದಾಖಲು ಮಾಡಿತು. ಕವಿ, ಮೊದಲ ಮುದ್ರಕ, ಪ್ರಕಾಶಕ, ಸಂಪಾದಕರನ್ನು ಸೇರಿಸಿ ೪ ಜನರ ಮೇಲೆ ಐಪಿಸಿ ಸೆಕ್ಷನ್ ೧೫೩ಎ, ೧೫೩ಬಿ, ೨೯೨(೩) ಅಡಿಯಲ್ಲಿ ಕೇಸ್ ದಾಖಲಾಯಿತು. ಕೆಳಕೋರ್ಟುಗಳು ಹಾಗೂ ಮುಂಬೈ ಹೈಕೋರ್ಟಿನಲ್ಲಿ ಪ್ರಕರಣದ ವಿವಿಧ ಹಂತದ ವಿಚಾರಣೆ ನಡೆದು ೧೫೩ಎ ಮತ್ತು ಬಿ ಸೆಕ್ಷನ್ನಿನ ಅಡಿಯ ಎರಡು ಆಪಾದನೆಗಳು (ಸಮುದಾಯಗಳ ನಡುವೆ ವೈರ ಹರಡುವುದು ಹಾಗೂ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವುದು) ಖುಲಾಸೆಯಾದವು. ಆದರೆ ಅಶ್ಲೀಲ ಕ್ರಿಯೆಯಲ್ಲಿ ತೊಡಗಿರುವಂತೆ ಚಾರಿತ್ರಿಕ ವ್ಯಕ್ತಿಗಳನ್ನು ಚಿತ್ರಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆ ಎನ್ನುವ ಕುರಿತು ಸುಪ್ರೀಂಕೋರ್ಟಿನಲ್ಲಿ ದಾವೆ ಮುಂದುವರೆಯುತ್ತಿದೆ.

ಹಿಂದೂ ಸಾಧುಸಂತರು ಒಬ್ಬರಾದ ಮೇಲೊಬ್ಬರು ಲೈಂಗಿಕ ಹಗರಣಗಳಲ್ಲಿ ಸಿಲುಕುತ್ತಿರುವಾಗ ಸುಮ್ಮನಿರುವ; ಗಾಂಧಿದ್ವೇಷಿಯಾಗಿರುವ ಬಲಪಂಥೀಯ ಹಿಂದೂ ರಾಜಕಾರಣಕ್ಕೆ ಈ ಕವಿತೆಯಲ್ಲಿ ಗಾಂಧಿಗೆ ಅವಮಾನವಾಗಿದೆಯೆಂದು ಅನಿಸಿ ಅವರ ಮೇಲೆ ಇದ್ದಕ್ಕಿದ್ದಂತೆ ಇಷ್ಟು ಗೌರವ, ಪ್ರೀತಿ ಉಕ್ಕಿದ್ದು ಏಕೆ? ಈ ಪ್ರಶ್ನೆಗೆ ಉತ್ತರ ಪಡೆಯಲು ಈ ಕತೆಗೆ ಉಪಕತೆಯಾಗಿ ಅದನ್ನು ಪ್ರಕಟಿಸಿದ ತುಳಜಾಪುರಕರ್ ವಿಷಯ ತಿಳಿಯಬೇಕು.

ತುಳಜಾಪುರಕರ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ಉದ್ಯೋಗಿ. ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ೫ ವರ್ಷ ಕೆಲಸ ಮಾಡಿದವರು. ೨೦೧೨ರಲ್ಲಿ ತುಳಜಾಪುರಕರ್ ಜನರಲ್ ಸೆಕ್ರೆಟರಿಯಾಗಿರುವ ಅಖಿಲ ಭಾರತ ಬ್ಯಾಂಕ್ ಆಫ್ ಮಹಾರಾಷ್ಟ್ರ ನೌಕರರ ಸಂಘವು ರಿಸರ್ವ್ ಬ್ಯಾಂಕಿಗೆ ಒಂದು ಪತ್ರ ಬರೆದು ತಮ್ಮ ಬ್ಯಾಂಕಿನಲ್ಲಿ ೪೦ ಕೋಟಿ ಸಾಲ ಬಾಕಿಯಿದ್ದ ವಿಜಯ ಮಲ್ಯರಂತಹ ಉದ್ಯಮಿಗಳಿಗೆ ಮತ್ತೆ ೧೫೦ ಕೋಟಿ ರೂ. ಸಾಲವನ್ನು ನಿಯಮಬಾಹಿರವಾಗಿ ನೀಡಿದ್ದೂ ಸೇರಿದಂತೆ ಹಲವು ಆರ್ಥಿಕ ಅವ್ಯವಹಾರಗಳು ನಡೆಯುತ್ತಿವೆಯೆಂದು ಆರೋಪಿಸಿತು. ರೈತರು, ಪಿಂಚಣಿದಾರರು ಹಾಗೂ ಮಧ್ಯಮವರ್ಗದವರನ್ನೇ ಪ್ರಧಾನ ಗ್ರಾಹಕರಾಗಿ ಹೊಂದಿದ ಆ ಬ್ಯಾಂಕ್ ಉದ್ಯಮಪತಿಗಳಿಗೆ ಬೃಹತ್ ಸಾಲ ಕೊಡುವುದೇ ಅಲ್ಲದೆ ಬಾಕಿಯುಳಿಸಿಕೊಂಡಿರುವ ಉದ್ಯಮಪತಿಗಳನ್ನು ಓಲೈಸುವುದು ಬ್ಯಾಂಕ್ ಹಿತಾಸಕ್ತಿಗೆ ಮಾರಕ ಎಂದು ನೌಕರರ ಸಂಘ ವಾದಿಸಿತು. ಆದರೆ ಬ್ಯಾಂಕ್ ಆಡಳಿತವು ತನ್ನನ್ನು ತಿದ್ದಿಕೊಳ್ಳುವ ಬದಲು ರಿಸರ್ವ್ ಬ್ಯಾಂಕಿಗೆ ಪತ್ರ ಬರೆದವರಾರೆನ್ನುವ ಶೋಧಕಾರ್ಯದಲ್ಲಿ ತೊಡಗಿತು. ತುಳಜಾಪುರಕರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಯಿತು. ಅವರನ್ನು ಸಿಕ್ಕಿಹಾಕಿಸಲು ಅವರ ಮೇಲಿದ್ದ ಈ ಕವಿತೆಗೆ ಸಂಬಂಧಪಟ್ಟ ಹಳೆಯ ಕೇಸನ್ನು ಜೀವಂತಗೊಳಿಸಲಾಯಿತು.

ಕೊನೆಗೆ ೨೦೧೩ರಲ್ಲಿ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಶುರುವಾಯಿತು. ಬ್ಯಾಂಕ್ ಮ್ಯಾಗಜೀನಿನಲ್ಲಿ ಕವಿತೆ ಪ್ರಕಟವಾದ ಮರು ಆವೃತ್ತಿಯಲ್ಲೆ, ಎಫ್‌ಐಆರ್ ದಾಖಲಾಗುವ ಮೊದಲೆ ವಿರೋಧದ ಅಭಿಪ್ರಾಯಗಳು ವ್ಯಕ್ತವಾದ ಕಾರಣ ತುಳಜಾಪುರಕರ್ ಕ್ಷಮೆ ಯಾಚಿಸಿದ್ದರು. ಎಂದೇ ತುಳಜಾಪುರಕರ್ ಹಾಗೂ ಬ್ಯಾಂಕ್ ಮ್ಯಾಗಜೀನಿನ ಪ್ರಕಾಶಕರನ್ನು ಪ್ರಕರಣದಿಂದ ಕೈಬಿಡಲಾಯಿತು. ಆಗ ಮೊದಲ ಪ್ರಕಾಶಕ ಅಶೋಕ ಶಹಾನೆ ಹಾಗೂ ಕವಿ ತಮ್ಮ ಮೇಲಿನ ಪ್ರಕರಣವನ್ನೂ ರದ್ದು ಮಾಡುವಂತೆ ಕೋರಿದರು. ಆದರೆ ಪತಿತ ಪಾವನ ಸಂಘಟನಾ ಇದಕ್ಕೊಪ್ಪದೆ ಪ್ರಕರಣ ಮುಂದುವರೆಯಿತು.

೨೦೧೫ರಲ್ಲಿ ವಾದ ಆಲಿಸಿದ ಸುಪ್ರೀಂ ಕೋರ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ಅನಿರ್ಬಂಧಿತ ಅಲ್ಲ; ಅಶ್ಲೀಲ ಪದಗಳ ಬಳಕೆಗಾಗಿ ಕವಿ ವಿಚಾರಣೆ ಎದುರಿಸಲೇಬೇಕು ಎಂದು ಹೇಳಿತು. ಮಹಾತ್ಮಾ ಗಾಂಧಿಯಂತಹ ಹೆಸರು, ಸಂಕೇತದ ಜೊತೆಗೆ ಕವಿ ಅಶ್ಲೀಲವೆನಿಸಿಕೊಂಡ ಪದಗಳನ್ನು ಯಾಕೆ, ಯಾವ ಸಂದರ್ಭವನ್ನು ವಿವರಿಸಲು ಬಳಸಿಕೊಂಡರು ಎಂದು ಹೇಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಲು ಕೋರ್ಟು ನಿರಾಕರಿಸಿತು. ‘ಭಾರತೀಯ ಕಾನೂನಿನ ಅಡಿ ಮಹಾತ್ಮಾಗಾಂಧಿಯಂತಹ ಚಾರಿತ್ರಿಕ ವ್ಯಕ್ತಿಗಳ ಹೆಸರು/ಪದ/ಸಂಕೇತ ಬಳಸಿ ಓದುಗನಿಗೆ ಅಶ್ಲೀಲ ಎನಿಸುವಂತಿರುವ ಕವಿತೆ ರಚಿಸಲು ಕವಿಗೆ ‘ಪೊಯೆಟಿಕ್ ಲೈಸೆನ್ಸ್’ ಇದೆಯೆ?’ ಎಂದು ಕೇಳಿರುವ ಸರ್ವೋಚ್ಛ ನ್ಯಾಯಾಲಯ ಚಾರಿತ್ರಿಕ ವ್ಯಕ್ತಿಗಳನ್ನು ಅಳೆಯಲು ಬೇರೆಯದೇ ಅಳತೆಗೋಲು ಬೇಕು ಎಂದಿತು.

ಈಗ ನ್ಯಾಯಾಲಯವು ಅಮಿಕಸ್ ಕ್ಯೂರಿ ಆಗಿ ಫಾಲಿ ಎಸ್. ನಾರಿಮನ್ ಅವರನ್ನು ಈ ವಿಷಯದಲ್ಲಿ ಸಲಹೆ ನೀಡುವಂತೆ ಕೇಳಿದೆ. ‘ಗಾಂಧಿಯಂಥ ಚಾರಿತ್ರಿಕ ವ್ಯಕ್ತಿಗಳನ್ನು ಗೌರವಿಸುವುದು ರಾಷ್ಟ್ರದ ಸಾಮೂಹಿಕ ಜವಾಬ್ದಾರಿಯಲ್ಲವೆ? ಒಂದು ಆದರ್ಶವನ್ನು ಗೌರವಿಸಿ ಆ ಆದರ್ಶ ನೀಡಿದ ವ್ಯಕ್ತಿಯನ್ನು ಕಲೆಯ ಸ್ವಾತಂತ್ರ್ಯದ ನೆಪದಲ್ಲಿ ಅಶ್ಲೀಲವಾಗಿ ಚಿತ್ರಿಸಬಹುದೆ? ಇಲ್ಲಿ ಭಾಷಾಬಳಕೆಯ ಸ್ವಾತಂತ್ರ್ಯದ ಸಮಸ್ಯೆಯಿಲ್ಲ. ಆದರೆ ಆ ಸ್ವಾತಂತ್ರ್ಯ ಬಳಸಿಕೊಂಡು ಮಹಾತ್ಮಾ ಗಾಂಧಿ ಕುರಿತು ಅನುಚಿತವಾದದ್ದನ್ನು ಹೇಳಿರುವುದು ಸಮಸ್ಯೆ. ಇದು ಕಲಾಕಾರನ ವೈಯಕ್ತಿಕ ಹಿತಕ್ಕಿಂತ ಕಾನೂನು ಮತ್ತು ಸಾಂವಿಧಾನಿಕ ಹಿತದ ಪ್ರಶ್ನೆಯಾಗಿದೆ. ೧೯(೧) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗು ನೀಡಲ್ಪಟ್ಟಿದೆ ಹಾಗೂ ೧೯(೨)ರ ಪ್ರಕಾರ ಅದು ನಿರಪೇಕ್ಷ ಅಲ್ಲ ಎಂದೂ ಹೇಳಲಾಗಿದೆ. ಈ ಹಕ್ಕು ಬಹು ಅಮೂಲ್ಯವಾದ ಹಕ್ಕು. ಕಾಲ ಕಳೆದಂತೆ, ಸಂಸ್ಕೃತಿ ಬೆಳವಣಿಗೆಯಾಗುತ್ತ ಹೋದಂತೆ ಅದು ಉನ್ನತೀಕರಣಗೊಳ್ಳಬೇಕೇ ಹೊರತು ಅದನ್ನು ಅನಿರ್ಬಂಧಿತ, ನಿರಪೇಕ್ಷ ಎಂಬ ಕೋಣೆಯಲ್ಲಿ ಬಂಧಿಸಲಾಗದು. ಈ ಹಕ್ಕಿಗೆ ಸಾಂವಿಧಾನಿಕ ಮಿತಿಗಳಿವೆ ಎಂದು ನೆನಪಿಡಬೇಕು. ಮಹಾತ್ಮಾ ಗಾಂಧಿಯಂತಹ ವ್ಯಕ್ತಿತ್ವ, ಸಂಕೇತವನ್ನು ಬಳಸಿಕೊಂಡಾಗ ಅದು ಯಾವ ‘ಮಟ್ಟ’ದವರೆಗೆ ಬಳಕೆಯಾಗಿದೆ ಎಂದು ನೋಡಬೇಕಾಗುತ್ತದೆ. ಎಂದರೆ ಅಭಿವ್ಯಕ್ತಿಸುವ ಹಕ್ಕನ್ನು ಸಮಕಾಲೀನ ಸಮಾಜದ ಅಳತೆಗೋಲುಗಳಿಂದಲೇ ನಿರ್ಧರಿಸಬೇಕಾಗುತ್ತದೆ’ ಎಂದೂ ಹೇಳಿದೆ.



ಆದರೆ ಕವಿ ‘ಇದು ಗಾಂಧಿ ಕುರಿತ ವ್ಯಂಗ್ಯವಲ್ಲ. ಗಾಂಧಿ ಮೌಲ್ಯಗಳನ್ನು ಹೇಗೆ ನಾವು ನಾಶಪಡಿಸಿದ್ದೇವೆ; ಹೇಗೆ ಗಾಂಧಿವಾದಿಗಳು, ರಾಜಕಾರಣಿಗಳು ಗಾಂಧಿ ಪ್ರತಿಪಾದಿಸಿದ ಮೌಲ್ಯಗಳಿಗೆ ತಿಲಾಂಜಲಿಯಿತ್ತೂ ಗಾಂಧಿವಾದಿ ಎಂದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಗಿ, ಹರಿತವಾಗಿ ಕವಿತೆ ಹೇಳಲೆತ್ನಿಸುತ್ತದೆ’ ಎನ್ನುತ್ತಾರೆ. ಗಾಂಧಿಯ ಮರಿಮೊಮ್ಮಗ ತುಷಾರ್ ಗಾಂಧಿ ಕವಿತೆಯ ಪರ ಇದ್ದಾರೆ. ಮಹಾರಾಷ್ಟ್ರದ ಪರಂಪರೆಯೇ ಆಗಿರುವ ಕ್ರಾಂತಿಕಾರಿ ಸಾಹಿತ್ಯದ ಒಂದು ತುಣುಕು ಈ ಕವಿತೆ; ಗಾಂಧಿ ಕನಸಿದ ಸ್ವರಾಜ್ಯ ಈಗ ಯಾವ ಸ್ಥಿತಿಯಲ್ಲಿದೆ ಎಂದು ಕವಿತೆ ತೋರಿಸಿಕೊಡುತ್ತದೆ ಎಂದು ಭಾವಿಸುವ ಅವರು ಇದರಲ್ಲಿ ಗಾಂಧಿಗೆ ಅವಮಾನವಾಗುವಂಥದೇನೂ ಇಲ್ಲವೆಂದು ಹೇಳುತ್ತಾರೆ.



ಗಾಂಧಿ ಸಂತನಲ್ಲ, ದೇವರಲ್ಲ, ನಮ್ಮ ನಡುವೆ ಓಡಾಡಿಕೊಂಡಿದ್ದ ನಮ್ಮಂತಹುದೇ ಮನುಷ್ಯ. ಐನ್‌ಸ್ಟೀನ್ ‘ಬರಲಿರುವ ತಲೆಮಾರುಗಳು ಇಂತಹ ಒಬ್ಬ ರಕ್ತಮಾಂಸ ತುಂಬಿದ ವ್ಯಕ್ತಿ ಈ ನೆಲದ ಮೇಲೆ ನಡೆದಾಡಿದ್ದ ಎಂದು ನಂಬುವುದು ಕಷ್ಟವಾಗುತ್ತದೆ’ ಎಂದು ಹೇಳಿದ್ದರೂ ಗಾಂಧಿಯಲ್ಲಿ ತುಂಬಿದ ರಕ್ತಮಾಂಸ ಎಷ್ಟು ಮತ್ತು ಎಂಥದು ಎಂದು ಪದೇಪದೇ ಹೊರಗೆಳೆದು ಪರೀಕ್ಷಿಸಲಾಗಿದೆ. ನಿಜ ಹೇಳಬೇಕೆಂದರೆ ತನ್ನ ಲೈಂಗಿಕತೆ, ಪ್ರಾಮಾಣಿಕತೆಯನ್ನು ಪರೀಕ್ಷಿಸಿಕೊಳ್ಳಲು ಹಲವು ಪ್ರಯೋಗ ನಡೆಸಿದ್ದ ವ್ಯಕ್ತಿ ಗಾಂಧಿ. ಆತ ಚಿಲ್ಲಿ ಬೀಫ್ ತಿನ್ನುವುದನ್ನು, ಹಸ್ತಮೈಥುನ ಮಾಡಿಕೊಳ್ಳುವುದನ್ನು, ಲೈಂಗಿಕತೆಯೆ ಎಲ್ಲ ತೃಪ್ತಿಯ ಸಾಧನ ಎಂದು ರಜನೀಶ್ ಆಶ್ರಮದಲ್ಲಿ ಹೇಳುವುದನ್ನು ಕಲ್ಪಿಸಿಕೊಳ್ಳಲು ತೊಂದರೆ ಕೊಡುವುದು ನಮ್ಮ ಮಡಿತನ ಹಾಗೂ ನಮ್ಮೊಳಗೆ ಪ್ರತಿಷ್ಠಾಪಿಸಲ್ಪಟ್ಟ ಗಾಂಧಿ ಎಂಬ ಮೂರ್ತಿಗೆ ನಾವು ಕೊಟ್ಟಿರುವ ಸ್ಥಾನಬೆಲೆ. ಹಾಗೆ ನೋಡಿದರೆ ವೃದ್ಧ ಗಾಂಧಿ ಎಳೆ ಹುಡುಗಿಯರ ಜೊತೆಗೆ ಬೆತ್ತಲೆ ಮಲಗಿ ತನ್ನ ಬ್ರಹ್ಮಚರ್ಯವನ್ನು ಪರೀಕ್ಷೆಗೊಡ್ಡುವ ಬದಲು ತಾವೊಬ್ಬರೇ ಇರುವಾಗ ಹಸ್ತಮೈಥುನ ಮಾಡಿಕೊಳ್ಳುವುದು ಹೆಚ್ಚು ಆರೋಗ್ಯಕರ ಲೈಂಗಿಕತೆ. ಆದರೆ ಆಷಾಢಭೂತಿ ಲೈಂಗಿಕತೆಯ ದೇಶವಾದ ಭಾರತದಲ್ಲಿ ಇಬ್ಬಗೆಯ ಮೌಲ್ಯ/ನೀತಿಗಳು ಬದುಕಿರುವವರನ್ನೂ, ಸತ್ತಿರುವವರನ್ನೂ ನಾನಾ ರೂಪಗಳಲ್ಲಿ ವಿಮರ್ಶಿಸುತ್ತ, ಹಿಂಸಿಸುತ್ತಲೇ ಇವೆ.

ಇತ್ತೀಚೆಗೆ ಅಂತರ್ಜಾಲ ಬಳಕೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ತೀರ್ಪಿನಲ್ಲಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟು ಇಲ್ಲಿ ಗಾಂಧಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಸ್ತುವಾಗಲು ವಿನಾಯಿತಿ ನೀಡಬಯಸಿರುವುದು ಸುಸ್ಪಷ್ಟ ಮತ್ತು ಆಶ್ಚರ್ಯಕರ. ಮೊದಲೇ ಯಾವ ಮೌಲ್ಯಗಳನ್ನು ಪ್ರತಿನಿಧಿಸುವರೆಂದು ಭಾವಿಸಿದ್ದೇವೋ ಅವುಗಳನ್ನು ಗಾಂಧಿ ಹೆಸರಲ್ಲಿ ಫ್ರೀಜ್ ಮಾಡಿಟ್ಟಿದ್ದೇವೆ. ಇನ್ನು ಈ ಕವಿತೆ, ವಿವಾದ, ತೀರ್ಪುಗಳ ನೆಪದಲ್ಲಿ ಕೋರ್ಟೂ ಸಹ ಗಾಂಧಿಯನ್ನು ಮತ್ತಷ್ಟು ಗೋಡೆಗೆ ಮೊಳೆ ಹೊಡೆದು ನೇತುಬಿಡುವ ಚಿತ್ರಪಟವಾಗಿಸ ಹೊರಟಂತೆ ಕಾಣಿಸುತ್ತಿದೆ.

ಒಟ್ಟಾರೆ ತೀರ್ಪು ಏನೇ ಬಂದರೂ ಅದನ್ನು ಪ್ರತಿಗಾಮಿಗಳು ತಮ್ಮ ಹಿತಕ್ಕೆ ಬಳಸಿಕೊಳ್ಳುವುದು ಖಚಿತ. ಇನ್ನಷ್ಟು ರಾಷ್ಟ್ರೀಯ ನಾಯಕರು, ಹೀರೋಗಳು, ಧಾರ್ಮಿಕ ವ್ಯಕ್ತಿ/ಸಂಸ್ಥೆಗಳು ತಮಗೂ ಗಾಂಧಿಗೆ ಕೊಟ್ಟಂತಹ ವಿನಾಯ್ತಿ ಬೇಕೆಂದು ಕೇಳುವುದೂ ಖಂಡಿತ. ಏಕೆಂದರೆ ಎಲ್ಲರೂ ಗಾಂಧಿಯ ಜಾಡಿನಲ್ಲಿ ನಡೆಯುತ್ತ ಝಾಡೂ ಹಿಡಿಯತೊಡಗಿರುವವರಲ್ಲವೆ?

ಆದರೆ ಕೆಲವು ಪ್ರಶ್ನೆಗಳೊಂದಿಗೇ ಮಾತು ಮುಗಿಸಬೇಕಾಗಿದೆ: ನಾವು ಹುಸೇನರ ಕಲಾಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದೆವು. ಅದೇ   ಚಾರ್ಲಿ ಹೆಬ್ಡೊ ಪ್ರವಾದಿ, ಇಸ್ಲಾಂ ಕುರಿತ ಕೀಳು ಅಭಿರುಚಿಯ ಚಿತ್ರ ಪ್ರಕಟಿಸಿದ್ದಕ್ಕೆ ಪ್ರತಿಭಟಿಸಿದೆವು. ಶಂಕರ‍್ಸ್ ವೀಕ್ಲಿಯ ಅಂಬೇಡ್ಕರ್ ಕಾರ್ಟೂನ್ ಬಗ್ಗೆ ಎದ್ದ ವಿವಾದದಲ್ಲಿ ಒಂದೊ ಪ್ರತಿಭಟಿಸಿದೆವು ಅಥವಾ ಸುಮ್ಮನಾದೆವು. ಹೀಗಿರುತ್ತ ಗಾಂಧಿ ಕುರಿತ ಈ  ಕವಿತೆಯ ಬಗ್ಗೆ ನಾವು ಯಾವ ನಿಲುವು ತಳೆಯಬಹುದು? ನ್ಯಾಯಾಲಯ ಹೇಳಿದಂತೆ ಸಮಕಾಲೀನ ಸಮಾಜದ ವಾಸ್ತವಗಳಿಗೆ ತಕ್ಕಂತೆ ನಮ್ಮ ಅಳತೆಗೋಲು, ಮಾನದಂಡಗಳು ಒಬ್ಬರಿಂದ ಇನ್ನೊಬ್ಬರಿಗೆ ಬೇರೆಯಾಗುತ್ತ, ಗಾಂಧಿ, ಅಂಬೇಡ್ಕರ್, ಪ್ರವಾದಿ ಮಹಮದ್, ಕ್ರಿಸ್ತನೇ ಮೊದಲಾದ ವ್ಯಕ್ತಿಗಳಿಗೆ ಭಿನ್ನ ಮಾನದಂಡ ಇಟ್ಟುಕೊಳ್ಳಬೇಕೆ? ಹೌದಾದರೆ ಹಾಗೆಂದು ಸಮರ್ಥಿಸಿಕೊಳ್ಳುವುದು ಹೇಗೆ ಮತ್ತು ಎಷ್ಟು ಸರಿ?

ಉತ್ತರ ನನ್ನಲ್ಲಿ ಅಸ್ಪಷ್ಟ. ನಿಮ್ಮ ಮನದಲ್ಲಿ ಮಥಿಸಲೆಂದೇ ಈ ಬರಹ..